|
ಬೇಡ ಹೇರಿಕೆ - ಬೇಕು ಸಮನ್ವಯ
ಪ್ರಸ್ತುತ ಕಾಲಘಟ್ಟದಲ್ಲಿರುವ ಭಾರತೀಯ ಭಾಷೆಗಳ ಪರಿಸ್ಥಿತಿ , ಭಾಷಾ ಜಗತ್ತಿನಲ್ಲಿ ತಂತ್ರಜ್ಞಾನದ ಪ್ರವೇಶ , ಯಾಂತ್ರಿಕ ಅನುವಾದ ಸಾಧ್ಯತೆ ಮುಂತಾದ ಯಾವ ಸಂಗತಿಗಳನ್ನು ಪರಿಗಣಿಸದೆ ಕೇಂದ್ರ ಸರ್ಕಾರ ಹೊರಡಿಸಿರುವ ಹಿಂದಿ ಸುತ್ತೋಲೆ ದೀರ್ಘ ದೃಷ್ಟಿಕೋನದ ಕೊರತೆಯೊಂದಿಗೆ ಅಪ್ರಸ್ತುತವೂ ಆಗಿದೆ. ಜಗತ್ತಿನ ಭಾಷೆಗಳಲ್ಲಿ ಜರುಗುತ್ತಿರುವ ತವಕ , ತಲ್ಲಣ ಅದರೊಂದಿಗೆ ಭಾಷಾ ಜಗತ್ತಿನಲ್ಲಿ ತಂತ್ರಜ್ಞಾನ ತಂದಿರುವ ಹೊಸ ಸಾಧ್ಯತೆಗಳತ್ತ ಕುರುಡಾಗಿದ್ದರೆ ಮಾತ್ರ ಇಂತಹ ಸುತ್ತೋಲೆ ಬರಲು ಸಾಧ್ಯ. ಭಾರತದಂತಹ ಹಲವು ಭಾಷೆಗಳ ದೇಶದಲ್ಲಿ ಯಾವುದಾದರೊಂದು ಸಂಪರ್ಕ ಭಾಷೆ-ಹಿಂದಿ/ಇಂಗ್ಲಿಷ್-ಇರಲೇಬೇಕು ಎನ್ನುವುದು ನಿರ್ವಿವಾದ. ಈ ನಿಟ್ಟಿನಲ್ಲಿ ಪರಕೀಯವಾದ ಇಂಗ್ಲಿಷ್ ಬದಲು ಭಾರತೀಯವೇ ಆದ ೪೦ % ಜನ ಬಳಸುವ ಹಿಂದಿ ಏಕೆ ಇರಬಾರದು ಎನ್ನುವ ವಾದ ಸ್ಥೂಲ ನೋಟಕ್ಕೆ ಸರಿಯೆನಿಸಿದರೂ ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿರುವ ಹುಳುಕುಗಳು ಕಾಣುತ್ತವೆ. ಹಿಂದಿಯೇತರ ಭಾಷಿಕರು (೬೦ %) ತಮ್ಮ ದೈನಂದಿನ ಜೀವನದಲ್ಲಿ ತಮ್ಮ ರಾಜ್ಯದ ಭಾಷೆಗಳಿಗೆ ಮೊರೆಹೋಗುತ್ತಿದ್ದಾರೆ. ಸರ್ಕಾರಗಳ ನಡುವೆ ನಡೆಯುವ ಸಂವಹನ ಇಂಗ್ಲಿಷ್’ನಲ್ಲಿದೆ. ಆದ್ದರಿಂದಲೇ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಬಳಕೆ ಇಲ್ಲವೆನ್ನಬಹುದು. ಹಾಗಾದರೆ ಸಂಪರ್ಕ ಭಾಷೆಯಾಗಿ ಹಿಂದಿ ಬರಬಾರದೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಸಾಂಪ್ರದಾಯಿಕ ಉತ್ತರ ನೀಡುವುದಾದರೆ ಎಲ್ಲ ಭಾರತೀಯರನ್ನು ಹಿಂದಿ ಭಾಷಿಕರನ್ನಾಗಿಸಬೇಕಾಗುತ್ತದೆ. ಇದು ಅಸಂಭವವೇ ಸರಿ. ನಮ್ಮ ಸಂವಿಧಾನದ ರಚನೆಯ ಸಂದರ್ಭದಲ್ಲಿ ಇಲ್ಲದಿದ್ದ ಸಮನ್ವಯದ ಮಾರ್ಗ ನಮಗೆ ಈಗ ಲಭ್ಯವಿದೆ. ಗಣಕ ಯುಗ ಪ್ರಾರಂಭವಾದ ನಂತರ- ಕಳೆದ ಮೂರು ದಶಕಗಳು- ಯಂತ್ರಾನುವಾದ (Machine Translation – MT ) ಕುರಿತಾಗಿ ತೀವ್ರ ಸಂಶೋಧನೆಗಳು ಜರುಗುತ್ತಿವೆ. ಯುರೋಪಿನಲ್ಲಿ ಯಂತ್ರಾನುವಾದ ಸಾಕಷ್ಟು ವ್ಯಾಪಕ ಹಾಗೂ ಜನಪ್ರಿಯವಾಗುತ್ತಿದೆ. ಗೂಗಲ್’ನಂತಹ ಕಂಪೆನಿಗಳು ಭಾರತೀಯ ಭಾಷೆಗಳಿಗೂ ಯಂತ್ರಾನುವಾದ ಸೌಕರ್ಯ ಕಲ್ಪಿಸಿವೆ. ಈ ಅನುವಾದ ಸದ್ಯದ ಪರಿಸ್ಥಿತಿಯಲ್ಲಿ ತೃಪ್ತಿದಾಯಕವಾಗಿಲ್ಲವಾದರೂ ಮುಂದಿನ ದಿನಗಳಲ್ಲಿ ಸರಿಹೊಂದುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ದಿನದಿಂದ ದಿನಕ್ಕೆ ಮಾನವನ ಎಲ್ಲ ಸಂವಹನ , ಆಡಳಿತ ಗಣಕ ಆಧಾರಿತವಾಗಿರುತ್ತದೆ. ಆದ್ದರಿಂದ ಯಂತ್ರಾನುವಾದದ ಈ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ಮಾಡಬೇಕಾದ ಕೆಲಸಗಳಿವು. (೧) ಎಲ್ಲ ಭಾರತೀಯ ಭಾಷೆಗಳು ಸಮಾನ ಎಂದು ಸಾರುವುದು. (೨) ಎಲ್ಲ ಭಾರತೀಯ ಭಾಷೆಗಳ ನಡುವೆ ಯಂತ್ರಾನುವಾದ ಸಾಧ್ಯವಾಗಿಸುವ ಕ್ರಮವಿಧಿಗಳನ್ನು (Software) ರೂಪಿಸುವುದು. (೩) ಎಲ್ಲ ಭಾರತೀಯ ಭಾಷೆಗಳಲ್ಲಿ ಧ್ವನಿ-ಬರಹ-ದೃಶ್ಯ-ಅನುವಾದದ ಕ್ರಿಯೆಗಳನ್ನು ಸಂಪೂರ್ಣವಾಗಿ ಒಂದೇ ಚೌಕಟ್ಟಿಗೆ ಬೆಸೆಯುವಂತಹ ಯಂತ್ರಾನುವಾದ/ಕ್ರಮವಿಧಿಗಳನ್ನು ರೂಪಿಸುವುದು. ಈ ಮೂರು ಗುರಿಗಳನ್ನು ಸಾಧಿಸಿದ್ದೇ ಆದರೆ ಭಾರತ ಸರ್ಕಾರ/ರಾಜ್ಯ ಸರ್ಕಾರಗಳ ಆಡಳಿತ ಯಾವ ಭಾಷೆಯಲ್ಲೇ ಇರಲಿ ಅದನ್ನು ಬೇಕಾದ ಭಾರತೀಯ ಭಾಷೆಯಲ್ಲಿ ಅನುವಾದ ರೂಪದಲ್ಲಿ , ಧ್ವನಿಯಾಗಿ ರೂಪಾಂತರಗೊಳಿಸಿ ಪಡೆಯಲು ಸಾಧ್ಯ. ಇದು ಭಾರತೀಯ ಭಾಷೆಗಳನ್ನು ಒಗ್ಗೂಡಿಸುವುದಲ್ಲದೆ ಭಾಷಾ ಕಂದಕವನ್ನು ದಾಟಲು ನೆರವಾಗಿ ಒಂದು ಬಗೆಯ ‘ಭಾಷಾ ಅಖಂಡತೆ’ಗೆ ಕಾರಣವಾಗಬಲ್ಲದು. ಭಾರತೀಯ ಭಾಷಾ ಕುಟುಂಬಗಳಲ್ಲಿ (ಇಂಡೋ-ಆರ್ಯುನ್ ,ದ್ರಾವಿಡ , ಮುಂಡಾ ) ಪದ ಸಂಪತ್ತು , ವಾಕ್ಯ ರಚನೆ , ವಿಭಕ್ತಿಗಳ ಪ್ರಯೋಗ ಮುಂತಾದವು ಒಂದೇ ಬಗೆಯಲ್ಲಿ ಇರುವುದರಿಂದ ಗಣಕ ಆಧಾರಿತ ಯಂತ್ರಾನುವಾದವನ್ನು ಮುಂದಿನ ೧೦ ವರ್ಷಗಳಲ್ಲಿ ಯಶಸ್ವಿಯಾಗಿಸುವುದು ಸಾಧ್ಯ. ಇದಕ್ಕಾಗಿ ಗಟ್ಟಿ ನಿರ್ಧಾರ ಹಾಗೂ ಪರಿಶ್ರಮಗಳು ಬೇಕಷ್ಟೇ. ಅಚ್ಚರಿಯೆನಿಸಿದರೂ ಈಗ ಮಧ್ಯಮ ವರ್ಗ ಆರಾಧಿಸುತ್ತಿರುವ ಇಂಗ್ಲಿಷ್ ಮುಂದಿನ ೫೦ ವರ್ಷಗಳಲ್ಲಿ ತಂತ್ರಜ್ಞಾನದ ಬಿರುಗಾಳಿಗೆ ಸಿಲುಕಿ ತನ್ನ ಉಚ್ಛಸ್ಥಾನದಿಂದ ಕೆಳಗಿಳಿಯಲಿದೆ. ಆಗ ಭಾರತೀಯರಿಗೆ ಇಂಗ್ಲಿಷ್ ದೇವಭಾಷೆಯಾಗಿರುವುದಿಲ್ಲ. ಮುಂದೆ ಬರಲಿರುವುದು ಏಕ ಭಾಷೆಯ ಚಕ್ರಾಧಿಪತ್ಯದ ಯುಗವಲ್ಲ. ಹಲವು ಭಾಷೆಗಳ ಸಮನ್ವಯ , ಅನುಸಂಧಾನದ ಯುಗ. |
Comment Box is loading comments...