|
'ಭಗವದ್ಗೀತೆ ಬೆಳಕು ನೀಡುವುದೇ'
ಲೇಖಕರು - ಎನ್.ಶಂಕರಪ್ಪ ತೋರಣಗಲ್ಲು ಮುನ್ನುಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಶುದ್ಧ ವೈಚಾರಿಕ ಸಾಹಿತ್ಯ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಶ್ರೀ ಎನ್. ಶಂಕರಪ್ಪ ತೋರಣಗಲ್ಲು ಅವರು ಬರೆದಿರುವ ‘ಭಗವದ್ಗೀತೆ –ಬೆಳಕು ನೀಡುವುದೇ ?’ ಎಂಬ ಪುಸ್ತಿಕೆಯನ್ನು ಓದಿ ಸಂತೋಷವಾಯಿತು. ಚರ್ವಿತಚರ್ವಣವಾಗುತ್ತಿದ್ದ ಕನ್ನಡ ವಿಚಾರ ಸಾಹಿತ್ಯದ ಸಾಂಪ್ರದಾಯಿಕ ಜಾಡಿನಿಂದ ಹೊರಗೆ ಬಂದು ವೈಜ್ಞಾನಿಕ ವಿಶ್ಲೇಷಣೆಯ , ತೌಲನಿಕ ಅಧ್ಯಯನದ ಹಾಗೂ ಮುಕ್ತ ಮನಸ್ಸಿನ ಶುದ್ಧ ವೈಚಾರಿಕ ಕೃತಿಯೊಂದನ್ನು ಶ್ರೀಯುತರು ಕನ್ನಡಿಗರಿಗೆ ನೀಡಿರುವುದು ಸಮಾಧಾನವೆನಿಸಿತು. ಧರ್ಮ ಸಂಬಂಧಿತ ವೈಚಾರಿಕ ಕೃತಿಗಳೇ ವಿಜೃಂಭಿಸುತ್ತಿರುವ ನಮ್ಮ ಕಾಲಘಟ್ಟದಲ್ಲಿ ಶುದ್ಧ ವೈಚಾರಿಕ ಕೃತಿಗಳ ರಚನೆ ಹಾಗೂ ಪ್ರಕಟಣೆಗೆ ಹಿನ್ನಡೆಯಾಗಿದೆ. ಈ ಹಿಂದಿನ ಉತ್ತಮ ವೈಚಾರಿಕ ಕೃತಿಗಳು ಅವಗಣನೆಗೆ ಗುರಿಯಾಗಿವೆ. ಇಂಥ ಸಂದರ್ಭದಲ್ಲಿ ವಿಚಾರ ಪ್ರಚೋದಕವಾದ ಈ ಕೃತಿಯನ್ನು ರಚಿಸಿ , ಕನ್ನಡದ ಶ್ರೀಮಂತ ಸತ್ತ್ವಶಾಲಿ ವೈಚಾರಿಕ ಪರಂಪರೆಯನ್ನ ಮುಂದುವರೆಸಲು ಬಯಸಿರುವ ಶಂಕರಪ್ಪನವರ ಈ ಪ್ರಾಮಾಣಿಕ ಪ್ರಯತ್ನ ನಿಜಕ್ಕೂ ಅಭಿನಂದಾರ್ಹ. ಲೇಖಕರು ಇಲ್ಲಿ ಪ್ರಸ್ತಾಪಿಸಿರುವ ವಿಮರ್ಶೆ,ವಿಶ್ಲೇಷಣೆಗೆ ಒಳಪಡಿಸಿರುವ ವಿಷಯಗಳು ನಮ್ಮ ವಿಚಾರ ಪರಂಪರೆಗೆ ಹೊಸತಲ್ಲವಾದರೂ ಆ ವಿಷಯಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಒರೆಗೆ ಹಚ್ಚಿರುವುದರಲ್ಲಿ , ವಿಚಾರಗಳನ್ನು ಮಂಡಿಸಿರುವ ರೀತಿಯಲ್ಲಿ ಹೊಸತನವಿದೆ. ಹಲವೆಡೆ ಹೊಸ ಹೊಳಹುಗಳು ಮಿಂಚಿವೆ. ಸಂಪ್ರದಾಯನಿಷ್ಠರಿಗೆ ಅವರ ನಂಬಿಕೆಗಳನ್ನು ಮರುಚಿಂತನೆಗೆ ಹಚ್ಚಲು ಪ್ರೇರೇಪಿಸುವಂತಿದ್ದರೆ , ವಿಚಾರನಿಷ್ಠರಿಗೆ ವಿಶ್ವಾಸವನ್ನು ಹೆಚ್ಚಿಸುವಂತಿವೆ. ಆರಂಭದಲ್ಲಿ ಧರ್ಮವು ನಂಬಿಕೆ , ಆಚರಣೆಗಳ ಜತೆ ಅಧ್ಯಾತ್ಮವನ್ನು ಒಳಗೊಂಡಿದ್ದಿತು. ಬರಬರುತ್ತಾ ಧರ್ಮ ಸಂಪೂರ್ಣ ಧಾರ್ಮಿಕ ವಿಧಿಗಳಿಗೆ ಸೀಮಿತವಾಯಿತು. ಅದ್ದೂರಿ ಆಡಂಬರ ಕಂದಾಚಾರಗಳ ರಕ್ಷಣೆ ಪಡೆಯುತ್ತಾ ಹೋದಂತೆ ಧರ್ಮದ ಅಂತರಂಗದ ಸಾಧನೆ ಹುಸಿಯಾಯಿತು. ಕ್ರಮೇಣ ಧರ್ಮವನ್ನು ಮನುಷ್ಯನ ಭೇದ , ಅಸಮಾನತೆ , ಕುತಂತ್ರಗಳನ್ನು ಪೋಷಿಸಲು ಬಳಸಲಾಯಿತು. ಧರ್ಮ ಅಸಮಾನತೆಯನ್ನು ಹೋಗಲಾಡಿಸದಿದ್ದಾಗ ಅಧ್ಯಾತ್ಮ ಬಂದಿತು. ಆತ್ಮ ಶೋಧನೆಯ ಮೂಲಕ ಅಸಮಾನತೆಯ ನಿವಾರಣೆಗ ಅಧ್ಯಾತ್ಮ ಮೊದಲಾಯಿತು. ಧರ್ಮ ಎಲ್ಲ ಭೇದಗಳನ್ನು ಒಪ್ಪಿಕೊಂಡರೆ ಅಧ್ಯಾತ್ಮ ಎಲ್ಲ ಭೇದಗಳನ್ನು ನಿರಾಕರಿಸಿತು. ಕ್ರಮೇಣ ಅಧ್ಯಾತ್ಮವೂ ಮಲಿನವಾಯಿತು. ಧರ್ಮದ ದಾರಿಯಲ್ಲೇ ಅಧ್ಯಾತ್ಮವು ಹೋಗಬೇಕು ಎಂಬ ಭಾವನೆ ಬೆಳೆಯಿತು. ಅಧ್ಯಾತ್ಮವೆಂಬುದು ಒಂದು ಸಾಮಾನ್ಯ ಧರ್ಮವಾಗಲಿಲ್ಲ. ಯಾವಾಗ ಅಧ್ಯಾತ್ಮವು ಮಲಿನವಾಯಿತೋ ಆಗ ಅನುಭಾವ ಬಂದಿತು. ಇದು ಕೂಡ ಲೌಕಿಕ ಭೇದಗಳನ್ನು , ಮಾನಸಿಕ ಭೇದಗಳನ್ನು ನಿರಾಕರಿಸಿತು. ಅನುಭಾವದಲ್ಲಿ ದೇವರ ನಂಬಿಕೆ ಅನಿವಾರ್ಯವೇನಲ್ಲ. ಆಸ್ತಿಕನಂತೆ ನಾಸ್ತಿಕನೂ ಕೂಡ ಅನುಭಾವಿಯಾಗಬಲ್ಲ. ದ್ವಂದ್ವಗಳನ್ನು ಮೀರುತ್ತ , ಭೇದಗಳನ್ನು ಮೀರುತ್ತ ಆನಂದದ ಅನ್ವೇಷಣೆಗೆ ಅನುಭಾವ ತೊಡಗಿತು. ಒಂದು ನಂಬಿಕೆಯನ್ನು ಆಧರಿಸಿ ಸೃಷ್ಟಿಯಾಗಿರುವ ಜೀವನ ಕ್ರಮ ಧರ್ಮವಾದರೆ,. ಆ ಧರ್ಮವನ್ನು ಹೇಗೆ ಅರ್ಥೈಸಬೇಕು ? ಹೇಗೆ ಆಚರಿಸಬೇಕು ಎಂಬುದನ್ನು ಮತ ಹೇಳುತ್ತದೆ. ಒಂದು ಧರ್ಮದಲ್ಲಿ ಹಲವು ಜಿಜ್ಞಾಸೆಗಳಿದ್ದಾಗ ಹಲವು ಮತಗಳು ಏರ್ಪಡುತ್ತವೆ. ಈ ಮತಗಳಲ್ಲಿ ಅಭಿಪ್ರಾಯ ಭೇದ ಸಾಮಾನ್ಯ. ಹಿಂದೂಧರ್ಮದಲ್ಲಿ ಅದ್ವೈತ , ವಿಶಿಷ್ಟಾದ್ವೈತ , ದ್ವೈತ ಮತಗಳಿದ್ದರೆ , ಜೈನ ಧರ್ಮದಲ್ಲಿ ದಿಗಂಬರ , ಶ್ವೇತಾಂಬರ , ಬೌದ್ಧಧರ್ಮದಲ್ಲಿ ಹೀನಯಾನ , ಮಹಾಯಾನ, ವಜ್ರಯಾನ ಮತಗಳಿವೆ. ವೀರಶೈವರಲ್ಲಿ ಗುರು, ವಿರಕ್ತ ಎಂಬ ಮತಗಳಿದ್ದರೆ , ಸಿಖ್ ಧರ್ಮದಲ್ಲಿಯೂ ಮತಭೇದಗಳಿವೆ. ಯಹೂದಿ ಧರ್ಮದಲ್ಲಿ ಹಸೀದಿಗಳಿದ್ದರೆ ಕ್ರೈಸ್ತಧರ್ಮದಲ್ಲಿ ಕ್ಯಾಥೋಲಿಕ್ , ಪ್ರಾಟೆಸ್ಟೆಂಟ್ , ಬ್ಯಾಪ್ಟಿಸ್ಟ್ ಮೊದಲಾದವರಿದ್ದಾರೆ. ಇಸ್ಲಾಂನಲ್ಲಿ ಷಿಯಾ, ಸುನ್ನಿ , ಹನಫಿ , ವಹಾಬಿ , ಸೂಫಿಗಳಿದ್ದಾರೆ. ಮನುಷ್ಯನನ್ನು ಮಾನವೀಯಗೊಳಿಸುವುದು ಧರ್ಮದ ನಿಜವಾದ ಉದ್ದೇಶ. ಜೀವಕಾರುಣ್ಯ ಧರ್ಮದ ಜೀವಾಳ. ಆತ್ಮದ ಹೆಚ್ಚುಗಾರಿಕೆಯೇ ಅಧ್ಯಾತ್ಮ. ಮನುಷ್ಯನ ಅಂತರಂಗದ ವಿಕಾಸವನ್ನು , ಪ್ರಕಾಶವನ್ನು ಸಾಧಿಸುವುದು ಅಧ್ಯಾತ್ಮದ ಉದ್ದೇಶ. ಮನುಷ್ಯನನ್ನು ಎಲ್ಲ ಭೇದಗಳಿಂದ , ದ್ವಂದ್ವಗಳಿಂದ ಮುಕ್ತವಾಗಿಸುವುದು ಅನುಭಾವದ ಉದ್ದೇಶ. ಇದೊಂದು ಮನಃಸ್ಥಿತಿ. ಉಪನಿಷತ್ಕಾರರು ಆಶ್ರಮವಾಸಿಗಳಾಗಿ , ಅಧ್ಯಾತ್ಮದ ಉನ್ನತ ನೆಲೆಯನ್ನು ತಲುಪಿದರು. ಶರಣ-ಶರಣೆಯರು ಕಾಯಕದ ಅನುಭವದಿಂದಲೇ ಅನುಭಾವದ ಉಚ್ಛ ನೆಲೆಗೆ ಏರಿದರು. ಸಂಸಾದಲ್ಲಿದ್ದುಕೊಂಡು ಕೆಲವರು , ಸಂನ್ಯಾಸದಲ್ಲಿದ್ದುಕೊಂಡು ಕೆಲವರು , ಎರಡರಿಂದಲೂ ದೂರ ಉಳಿದು ಕೆಲವರು ಈ ಮನಃಸ್ಥಿತಿಯನ್ನು ಪಡೆದರು. ಈ ಕಾಲದ ಅಗತ್ಯ ಮತವೂ ಅಲ್ಲ, ಧರ್ಮವೂ ಅಲ್ಲ ; ಅಧ್ಯಾತ್ಮ ಮಾತ್ರ.. ಜನರನ್ನು ಮತ, ಧರ್ಮಗಳಿಂದ ಮೇಲೆತ್ತಿ ಅಧ್ಯಾತ್ಮದ ಏಕತೆಯ ಕಡೆ ಕರೆದೊಯ್ಯಬೇಕಾಗಿದೆ. ನಮ್ಮ ಜನರ ಮನಸ್ಸು ಉದಾತ್ತವಾಗಬೇಕಾಗಿದೆ. ಜನರ ಮನಃಸ್ಥಿತಿಯನ್ನು ಆರೋಗ್ಯಪೂರ್ಣವಾಗಿಸಲು ಅಧ್ಯಾತ್ಮ ಸಹಕಾರಿಯಾಗುವುದಾದರೆ ಅದನ್ನು ನಿರಾಕರಿಸುವ ಅಗತ್ಯವಿಲ್ಲ. ಎಲ್ಲಕ್ಕೂ ಮಾನವೀಯತೆಯೇ ಶ್ರೇಷ್ಠ ಎಂದು ನಂಬಿ ನಡೆಯುವವರಿಗೆ ಯಾವುದರ ಹಂಗೂ ಇರುವುದಿಲ್ಲ. ಅನುಭವದಿಂದ ಪರೀಕ್ಷಿಸಿ ಅದರ ಆಧಾರದ ಮೇಲೆ ಚಿಂತಿಸುವಂಥದ್ದು , ತೀರ್ಮಾನಿಸುವಂಥದ್ದು ವೈಚಾರಿಕತೆ. ವೈಚಾರಿಕತೆ ಕಂದಾಚಾರಕ್ಕೆ ವಿರುದ್ಧವಾದುದು. ಕಂದಾಚಾರವೆಂದರೆ ಅನ್ಯ ಪ್ರಮಾಣದ ಮೇಲೆ ನಿಂತಿರುವುದು. ಅದಕ್ಕಾಗಿ ಶ್ರಮಣರು , ಭಕ್ತಿ ಮತ್ತು ಅನುಭಾವ ಪಂಥದವರು ಶಾಸ್ತ್ರ ಪ್ರಮಾಣವನ್ನು ವಿರೋಧಿಸಿದರು. ಕಂದಾಚಾರಗಳ ವಿರುದ್ಧ ಇರುವ ವೈಚಾರಿಕ ಪ್ರಜ್ಞೆ ವೇದಗಳ ಕಾಲದಿಂದ ಅಸ್ತಿತ್ವದಲ್ಲಿ ಇತ್ತು. ವ್ರಾತ್ಯರು ವೈದಿಕರನ್ನು ಒಪ್ಪುತ್ತಿರಲಿಲ್ಲ. ವೈದಿಕರು ವ್ರಾತ್ಯರನ್ನು ತುಚ್ಛವಾಗಿ ನೋಡುತ್ತಿದ್ದರು.; ಅಲ್ಲದೆ ಅವರನ್ನು ಭ್ರಷ್ಟರೆಂದು ಪರಿಗಣಿಸಿದ್ದರು. ಉಪನಿಷತ್ತುಗಳು ವೇದಗಳ ಕರ್ಮಕಾಂಡವನ್ನು ವಿರೋಧಿಸಿ ಜ್ಞಾನಕಾಂಡವನ್ನು ಪ್ರಸ್ತಾಪಿಸಿದವು. ಸಾಧು, ಸಿದ್ಧ ಪರಂಪರೆ ವೈದಿಕ ಕಂದಾಚಾರವನ್ನು ವಿರೋಧಿಸಿತು. ಆಗಮ ಪರಂಪರೆಯ ಅನೇಕ ಆಚಾರ್ಯರು ಅವರು ಬ್ರಾಹ್ಮಣರಾಗಿದ್ದರೂ ವೈದಿಕ ಧರ್ಮದ ಕಂದಾಚಾರಗಳನ್ನು ಹಾಗೂ ವರ್ಣ-ಜಾತಿ ಪದ್ಧತಿಗಳನ್ನು ವಿರೋಧಿಸಿದರು. ವೈಚಾರಿಕ ಪ್ರಜ್ಞೆ -ಮನುವಾದಿ ಆಧಾರಿತ ವೈದಿಕ ಧರ್ಮ ಬಿಟ್ಟರೆ- ಉಳಿದೆಲ್ಲ ಧರ್ಮ , ದರ್ಶನಗಳಲ್ಲಿ ವ್ಯಕ್ತವಾಗಿದೆ, ಮುಂದೆ ವೈಚಾರಿಕ ಧರ್ಮಗಳೂ ಸಹ ಕಂದಾಚಾರಿ ಧರ್ಮಗಳಾಗಿ ಪರಿವರ್ತಿತವಾದ ಉದಾಹರಣೆಗಳಿವೆ. ಭೌತಿಕವಾದವೇ ವೈಚಾರಿಕತೆ ಎಂಬುದು ತಪ್ಪು ಕಲ್ಪನೆ. ನಮ್ಮಲ್ಲಿ ಬಹಳಷ್ಟು ಜನ ಚಿಂತಕರು , ವಿದ್ವಾಂಸರು ಇಂಥ ತಪ್ಪು ಕಲ್ಪನೆಗೆ ಒಳಗಾಗಿದ್ದಾರೆ. ಬುದ್ಧನೂ ಕೂಡ ವೈಚಾರಿಕನೆ. ಶೈವಧರ್ಮದಲ್ಲೂ ವೈಚಾರಿಕತೆಯಿದೆ. ಮಧ್ಯಯುಗದ ಭಕ್ತಿಪಂಥಗಳಲ್ಲಿ ವೈಚಾರಿಕತೆಯಿದೆ. ಷಟ್ ದರ್ಶನಗಳು ಬಂದದ್ದು ವೈಚಾರಿಕತೆ ಬಂದ ಮೇಲೆ. ಈ ಷಟ್ ದರ್ಶನಗಳಲ್ಲಿ ಆದಿ ಮತ್ತು ಅಂತ್ಯದ ಬಗೆಗಿನ ಮತಭೇದಗಳನ್ನು ಕಾಣುತ್ತೇವೆ. ಸಾಂಖ್ಯ ಮೂಲತಃ ಭೌತಿಕವಾದಿ ದರ್ಶನವಾಗಿದ್ದಿತು. ನಂತರ ಪತಂಜಲಿಗಳು ಸೇಶ್ವರವಾದವನ್ನು ಅದಕ್ಕೆ ಸೇರಿಸಿದರು. ಅತ್ಯಂತ ಪ್ರಾಚೀನ ಕಾಲದಲ್ಲಿ ಬುಡಕಟ್ಟಿನ ಒಬ್ಬ ನಾಯಕ ವಿಶಿಷ್ಟ ವ್ಯಕ್ತಿಯಾಗಿ ದಿವ್ಯವಾಣಿಯ ಮಾಧ್ಯಮವಾಗುತ್ತಿದ್ದ, ಆವೇಶದ ಸ್ಥಿತಿಯಲ್ಲಿ ಅವನು ನುಡಿದದ್ದು ಪ್ರಾಮಾಣಿಕ ಮತ್ತು ಅಧಿಕೃತ ಎಂದು ಜನ ಭಾವಿಸುತ್ತಿದ್ದರು. ಅದು ಮೌಖಿಕ ಪರಂಪರೆಯಲ್ಲಿ ಉಳಿದುಬಂದಿತು. ದೈವದ ಶಕ್ತಿ , ಪವಾಡಗಳು ಮಾನವನ ಭಯವನ್ನು ಹೋಗಲಾಡಿಸುವುದಕ್ಕೆ . ಮೌಖಿಕವಾಗಿದ್ದ ಈ ದಿವ್ಯವಾಣಿ ಮಾಧ್ಯಮವಾಗಿ ನಡೆದುಬಂದಿತು. ಇದಕ್ಕೆ ಯಾವ ಪ್ರಾಚೀನ ಗ್ರಂಥಗಳೂ ಹೊರತಲ್ಲ. ಹಾಗಾಗಿಯೇ ಪ್ರಾಚೀನ ಗ್ರಂಥಗಳನ್ನು ‘ದೈವವಾಣಿ’ ಎಂದು ಕರೆಯಲಾಯಿತು. ‘ಅಪೌರುಷೇಯ’ ಎಂದು ಕರೆದಿದ್ದರ ಮೂಲ ಉದ್ದೇಶ ಅದು ಅಧಿಕೃತವಾದದ್ದು ಅದನ್ನು ಯಾರೂ ಪ್ರಶ್ನಿಸಬಾರದು ಹಾಗೂ ಎಲ್ಲರೂ ಅದನ್ನು ಪಾಲಿಸಬೇಕು ಎಂಬುದಾಗಿತ್ತು. ಒಂದು ಗುಂಪು ಇದು ದೈವವಾಣಿ ಎಂದು ವಾದಿಸಿದರೆ ಅದಕ್ಕೆ ಪ್ರತಿವಾದಗಳು ಹುಟ್ಟಿಕೊಂಡವು. ಆದರೆ ‘ದೈವವಾಣಿ’ ‘ಅಪೌರುಷೇಯ’ ಎನ್ನಲಾಗುವ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಅದು ಮಾನವನ ಭಾಷೆಗೆ ಹೊರತಾದುದಲ್ಲ ಎನಿಸುತ್ತದೆ. ‘ಅಪೌರುಷೇಯ’ ಎನ್ನುವುದರ ಬಗ್ಗೆಯೇ ಸಂಶಯ ಮೂಡುತ್ತದೆ. ಅಪೌರುಷೇಯ ಗ್ರಂಥಗಳ ಮೇಲೆ ಬಂದಂಥ ವ್ಯಾಖ್ಯಾನಗಳನ್ನು ಪರಿಶೀಲಿಸಿದರೆ ಅಲ್ಲಿ ಅಪೌರುಷವಾಣಿಯ ಸ್ಪರ್ಶ ಕಂಡುಬರುವುದಿಲ್ಲ. ವ್ಯಾಖ್ಯಾನಗಳೆಲ್ಲವೂ ಮಾನವೀಯ ಅಕ್ಷರಗಳ ಚೌಕಟ್ಟಿಗೆ ಒಳಪಟ್ಟಿರುವುದು ಕಂಡುಬರುತ್ತದೆ. ಈ ವ್ಯಾಖ್ಯಾನಗಳು ಕ್ರಮೇಣ ಒಂದು ಗುಂಪಿನ ಗುತ್ತಿಗೆಯಾಗಿ ಇಡೀ ಮಾನವ ಸಮುದಾಯದ ಮೇಲೆ ಹೇರಲ್ಪಟ್ಟಿರುವುದು ತಿಳಿಯುತ್ತದೆ. ವೇದಗಳನ್ನು ಅಪೌರುಷೇಯ ಎನ್ನುತ್ತಾರೆ. ಆದರೆ ಅಲ್ಲಿ ಕಂಡುಬರುವುದು ಕರ್ಮಕಾಂಡಗಳು-ಯಜ್ಞಯಾಗಾದಿಗಳ ವಿಧಿವಿಧಾನಗಳ ವಿವರಣೆ. ಮನುಷ್ಯನ ಇಷ್ಟಾರ್ಥ ಸಿದ್ಧಿಗೆ ಯಜ್ಞಯಾಗಾದಿಗಳನ್ನು ನಡೆಸುವುದು , ದೇವತೆಗಳನ್ನು ತೃಪ್ತಿಪಡಿಸುವುದು , ಹವಿಸ್ಸಿನ ಅರ್ಪಣೆ ಅದರಿಂದ ಮಳೆ ಬೆಳೆಗಳು ಉಂಟಾಗುವುದು. ಹೀಗಿರುವಾಗ ವೇದಗಳನ್ನು ಅಪೌರುಷೇಯ ಎಂದು ಹೇಳಲು ಬರುವುದಿಲ್ಲ. ಅನಂತರ ಜ್ಞಾನಕಾಂಡದ ಪ್ರಾರಂಭದಲ್ಲಿ ಉಪನಿಷತ್ತುಗಳು ರಚಿತವಾದುವು. ಅನಂತರ ಬ್ರಹ್ಮಸೂತ್ರ , ಭಗವದ್ಗೀತೆಗಳನ್ನು ಸೇರಿಸಿ ಪ್ರಸ್ಥಾನತ್ರಯಗಳೆಂದು ಘೋಷಿಸಿ ವೈದಿಕರು ಜ್ಞಾನಕ್ಕೆ ಆಧಾರ ಗ್ರಂಥಗಳನ್ನಾಗಿ ಮಾಡಿದರು. ಪ್ರಸ್ಥಾನತ್ರಯದ ಮೇಲೆ ಬಂದಂಥ ಆಚಾರ್ಯತ್ರಯರ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತಗಳೇ ಸನಾತನ ಸಂಪ್ರದಾಯವಾಗಿ ಪರಿಗಣಿಸಲ್ಪಟ್ಟು ಭಿನ್ನಮಾರ್ಗಗಳು ಅಸ್ತಿತ್ವಕ್ಕೆ ಬಂದವು. ಶಂಕರಾಚಾರ್ಯರ ಅದ್ವೈತ , ವೇದಾಂತ ಪರವಾದ ಪ್ರಮುಖವಾದ/ಪ್ರಬಲವಾದ ಸಿದ್ಧಾಂತ. ಆದರೆ ಬ್ರಹ್ಮ ಸತ್ಯ ಜಗನ್ಮಿಥ್ಯಾ ಎನ್ನುವ ಅವರ ಮಾತು ಸಾರ್ವತ್ರಿಕ ಒಪ್ಪಿಗೆಯನ್ನು ಪಡೆಯಲಿಲ್ಲ. ರಾಮಾನುಜಾಚಾರ್ಯರು ಹಾಗು ಮಧ್ವಾಚಾರ್ಯರು ಭಿನ್ನ ಮಾರ್ಗ ಹಿಡಿದರು. ಇವರಿಬ್ಬರೂ ಭಕ್ತಿಮಾರ್ಗವನ್ನು ಅನುಸರಿಸಿದರು ಮತ್ತು ಜಗತ್ತು ಸತ್ಯ ಎಂಬುದನ್ನು ಪ್ರತಿಪಾದಿಸಿದರು. ಮಧ್ವಾಚಾರ್ಯರಾದರೊ ಜಗತ್ತು ಸತ್ಯ ಎನ್ನುತ್ತಲೇ ಪಂಚಭೇದಗಳನ್ನು ಪ್ರತಿಪಾದಿಸಿದರು. ರಾಮಾನುಜಾಚಾರ್ಯರು ಪ್ರಪತ್ತಿ ತತ್ತ್ವದ ಪ್ರತಿಪಾದಕರಾದರು. ಶಂಕರಾಚಾರ್ಯರು ಪಂಚಾಯನ ತತ್ತ್ವವನ್ನು ಬೋಧಿಸಿದರು. ಈ ಆಚಾರ್ಯತ್ರಯರ ಪ್ರತಿಪಾದನೆಗೆ ಚಾತುರ್ವರ್ಣ್ಯವೇ ಹಿನ್ನೆಲೆಯ ಭಿತ್ತಿಯಾಯಿತು. ಆದ್ದರಿಂದ ಬ್ರಾಹ್ಮಣ ಅನುಶ್ರೇಣಿಯೇ ಪ್ರಮುಖ ಸಾಮಾಜಿಕ ವರ್ಗವಾಗಿ ಮುಂದುವರೆಯಿತು. ಬ್ರಹ್ಮಜ್ಞಾನ ಪಡೆದವರನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತಿತ್ತು. ಬ್ರಹ್ಮಜ್ಞಾನ ಉಪಾಸನೆಗೆ ಒಂದು ಗುಂಪು ಮೀಸಲಾಯಿತು. ಕ್ರಮೇಣ ಲೌಕಿಕ ಬ್ರಾಹ್ಮಣರೆಲ್ಲರೂ ಬ್ರಹ್ಮಜ್ಞಾನಿಗಳೆನ್ನುವ ಭ್ರಮಾತ್ಮಕ ಸಂಪ್ರದಾಯ ಬಲಿಯಿತು. ಬ್ರಹ್ಮ ಎನ್ನುವುದು ತಮ್ಮದೇ ಗುತ್ತಿಗೆ ಎಂಬಂತೆ ಇವರು ಭ್ರಮಿಸಿದರು. ಬ್ರಾಹ್ಮಣ ಅನುಶ್ರೇಣಿಗೆ ವಿರುದ್ಧವಾಗಿ ಕ್ಷತ್ರಿಯ ಅನುಶ್ರೇಣಿ ಅಸ್ತಿತ್ವಕ್ಕೆ ಬಂದಿತು. ಬ್ರಾಹ್ಮಣ ಅನುಶ್ರೇಣಿಗಿಂತ ಕ್ಷತ್ರಿಯ ಅನುಶ್ರೇಣಿಯ ಪ್ರತಿಪಾದಕರು ಬುದ್ಧಿವಂತರೂ , ಉದಾರಿಗಳು ಆಗಿದ್ದರು. ಆದರೆ ಈ ಪ್ರತಿಪಾದಕರು ನಾಸ್ತಿಕರಾಗಿದ್ದರಿಂದ ಜನಪ್ರಿಯತೆ ಪಡೆಯಲಿಲ್ಲ. ವರ್ತಕರು ಕ್ಷತ್ರಿಯ ಅನುಶ್ರೇಣಿಯನ್ನು ಒಪ್ಪಿದರು. ಕ್ರಮೇಣ ಬ್ರಾಹ್ಮಣರು ಪ್ರಬಲರಾಗಿ , ಕ್ಷತ್ರಿಯರು ಸ್ಥಾಪಿಸಿದ್ದ ಧರ್ಮಗಳಿಗೆ ಮತಾಂತರಗೊಂಡು ಅವನ್ನು ದುರ್ಬಲಗೊಳಿಸಿದರು. ಗೀತೆ ಅಂದಿನ ವೈರುಧ್ಯಗಳನ್ನು ಮತ್ತು ವೈಷಮ್ಯಗಳನ್ನು ಸಾಮರಸ್ಯಗೊಳಿಸುವ ಗ್ರಂಥವೆಂದು ಕೆಲವರು ಭಾವಿಸುತ್ತಾರೆ. ಆದರೆ ಗೀತೆ ಜ್ಞಾನ-ಕರ್ಮ-ಭಕ್ತಿಯನ್ನು ಸಂಯುಕ್ತಗೊಳಿಸುವ , ಸಾಮರಸ್ಯಗೊಳಿಸುವ ಪ್ರಯತ್ನ ಯಶಸ್ವಿಯಾಗಲಿಲ್ಲ. ಗೀತೆಯ ಈ ಸಾಮರಸ್ಯ ಹಾಲು ಸಕ್ಕರೆ ಬೆರೆತಂತಾಗಲಿಲ್ಲ. ಎಣ್ಣೆ ಉಪ್ಪು ಮಿಶ್ರಣವಾದಂತಾಯಿತು. ಗೀತೆ ಒಂದು ಕೌದಿ ಇದ್ದಂತೆ-ಹಳೆಯ ಬಟ್ಟೆಗಳಿಂದ ಹರಿದ ತುಣುಕುಗಳನ್ನು ಜೋಡಿಸಿ ಹೊಲಿದ ಕೌದಿಯಿದ್ದಂತೆ. ಕೌದಿಯ ಆಕರ್ಷಣೆ , ಸೀಮಿತ ಉಪಯುಕ್ತತೆ ಗೀತೆಗೂ ಇರುವುದು ನಿಜ. ಅದಕ್ಕೆ ತನ್ನದು ಎಂಬ ರೂಪವಿಲ್ಲದಿದ್ದರೂ ವಿಶ್ವರೂಪವನ್ನು ತೋರಿಸುವ ಅಹಮಿಕೆಯ ಕೃತಿ. ಜ್ಞಾನವನ್ನು ಸಮರ್ಥಿಸುತ್ತಲೆ ಅಜ್ಞಾನವನ್ನು ಪೋಷಿಸುವ , ಯೋಗವನ್ನು ಹೇಳುತ್ತಲೆ ಭೋಗವನ್ನು ಎತ್ತಿಹಿಡಿಯುವ, ಅಹಿಂಸೆಯ ಬಗ್ಗೆ ಮಾತನಾಡುತ್ತಲೇ ಹಿಂಸೆಯನ್ನು ಪ್ರಚೋದಿಸುವ , ಸಮತೆಯನ್ನು ಪ್ರಶಂಸಿಸುತ್ತಲೇ ಅಸಮತೆಯನ್ನು ಶಾಶ್ವತವಾಗಿ ನಿಲ್ಲಿಸುವ , ನಿಜವನ್ನು ಅರಿಯಲು ಪ್ರೇರೇಪಿಸುತ್ತಲೆ ಸುಳ್ಳುಗಳ ಬಲೆಯನ್ನು ಹೆಣೆಯುವ , ಸ್ಥಿತಪ್ರಜ್ಞೆಯನ್ನು ಕೊಂಡಾಡುತ್ತಲೆ ಭಾವ, ಭಾವನೆಗಳನ್ನು ಅಸ್ಥಿರಗೊಳಿಸುವ , ಅಂತರಂಗದ ವಿಕಾಸವನ್ನು ಹೇಳುತ್ತಲೆ ಸಂಕೋಲೆಗಳನ್ನು ತೊಡಿಸುವ , ವಿರಾಗವನ್ನು ಕೀರ್ತಿಸುತ್ತಲೇ ಸ್ವಾರ್ಥದ ಅನುರಾಗವನ್ನು ಸಾಧಿಸುವ ದ್ವಂದ್ವಗಳಿಂದ ಕಿಕ್ಕಿರಿದಿರುವ ದ್ವಂದ್ವಾಚಾರ್ಯ ಕೃತಿ. ಮೂಲತಃ ಗೀತೆಯಲ್ಲಿ ಈ ತೆರನ ವೈರುಧ್ಯಗಳು ಇದ್ದವೇ ? ಅಥವಾ ಕಾಲಕ್ರಮೇಣ ಈ ವೈರುಧ್ಯಗಳನ್ನು ತುಂಬಲಾಯಿತೇ ? ನಮ್ಮಲ್ಲಿ ಚಾರಿತ್ರಿಕ ಪ್ರಜ್ಞೆ ಇಲ್ಲದ್ದರಿಂದ ನಿಖರವಾದ ಚರಿತ್ರೆ ಎಂಬುದು ಬೆಳೆದು ಬರಲಿಲ್ಲ. ಹಿಂದಣ ನಮ್ಮ ಚರಿತ್ರೆ ಊಹಾತ್ಮಕವೇ ಹೊರತು ನಿಜ ಚರಿತ್ರೆ ಅಲ್ಲ. ಹೀಗಿರುವಾಗ ಯಾರು ಯಾವಾಗ ಏನು ಬೇಕಾದರೂ ಸೇರಿಸಬಹುದಾಗಿತ್ತು; ಏನು ಬೇಕಾದರೂ ಕೈ ಬಿಡಬಹುದಾಗಿತ್ತು. ಆಯಾ ಕಾಲಘಟ್ಟಗಳಲ್ಲಿ ಆಗುವಂಥ ಸಾಮಾಜಿಕ , ಧಾರ್ಮಿಕ , ರಾಜಕೀಯ , ಆರ್ಥಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಸೇರಿಸುವ , ಕೈ ಬಿಡುವ ಕೈವಾಡಗಳು ನಿರಂತರವಾಗಿ ನಡೆದುಬಂದವು. ಹಾಗಾಗಿ ಅಸಲಿ ಯಾವುದು ? ನಕಲಿ ಯಾವುದು ? ಎಂದು ಬೇರ್ಪಡಿಸುವುದು ಇಂದಿಗೂ ಅತ್ಯಂತ ಕಷ್ಟದ ವಿಷಯ. ವೇದ , ಆಗಮ ಉಪನಿಷತ್ತುಗಳಿಂದ ಹಿಡಿದು , ಸ್ಮೃತಿ ,ಮಹಾಕಾವ್ಯಗಳು , ಪುರಾಣಗಳು ಇನ್ನಿತರ ಪ್ರಮುಖ ಗ್ರಂಥಗಳೆಲ್ಲವೂ ಕಾಲಕಾಲಕ್ಕೆ ಈ ಪ್ರಕ್ಷಿಪ್ತದ ಆಕ್ರಮಣಕ್ಕೆ ಒಳಗಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಒಂದು ಕೃತಿ ಅಧಿಕೃತ ಮನ್ನಣೆ ಪಡೆದು ಜನಪ್ರಿಯತೆ ಹೆಚ್ಚಿದಂತೆ ಈ ಪ್ರಕ್ಷಿಪ್ತದ ಹಾವಳಿಯೂ ಹೆಚ್ಚು. ಇದು ಕೇವಲ ಸಂಸ್ಕೃತ ಭಾಷೆಗಷ್ಟೇ ಸೀಮಿತವಾಗಿರದೆ ಹಲವು ದೇಶೀ ಭಾಷೆಗಳಲ್ಲಿಯೂ ನಡೆದಿದೆ. ಕನ್ನಡದ ಸಂದರ್ಭದಲ್ಲಿ ತೆಗೆದುಕೊಂಡರೂ ಹನ್ನೆರಡನೆಯ ಶತಮಾನದ ಶಿವಶರಣ ಶರಣೆಯರಿಂದ ಹಿಡಿದು, ಸರ್ವಜ್ಞನ ರಚನೆಗಳವರೆಗೂ ಈ ಆಕ್ರಮಣ ನಡೆದಿದೆ. ಇದು ಆಧುನಿಕ ಕಾಲದಲ್ಲಿಯೂ ತನ್ನ ಬಾಹುಗಳನ್ನು ವಿಸ್ತರಿಸಿಕೊಂಡಿದೆ. ‘ಸ್ವಾಮಿ ವಿವೇಕಾನಂದರ ಪತ್ರಮಾಲೆ’ಯಲ್ಲಿ ಕಂಡುಬರುವ ವಿವೇಕಾನಂದರಿಗೂ ಅನ್ಯರು ಸಂಪಾದಿಸಿರುವ , ರಚಿಸಿರುವ ಕೃತಿಗಳಲ್ಲಿ ಕಂಡು ಬರುವ ವಿವೇಕಾನಂದರಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂಬುದನ್ನು ನಾವು ಪರಿಶೀಲಿಸಬಹುದು. ಕಾಲಕಾಲಕ್ಕೆ ಇಂಥ ಪ್ರಕ್ಷಿಪ್ತದ ಹಾವಳಿಗೆ ಈಡಾಗಿದ್ದರಿಂದ ಗೀತೆಯೂ ಆಷ್ಟೇ ವೈರುಧ್ಯಗಳಿಗೆ ಪಕ್ಕಾಯಿತು. ವೇದಗಳ ಕಾಲದಲ್ಲೂ ಚತುರ್ವರ್ಣ ಸಂಪೂರ್ಣ ಸ್ಪಷ್ಟ ಸ್ವರೂಪ ಪಡೆಯದಿರುವುದು ಕಂಡುಬರುವಾಗ ಪುರುಷ ಸೂಕ್ತವೂ ಪ್ರಕ್ಷಿಪ್ತವಾಗಿರುವ ಸಾಧ್ಯತೆ ಹೆಚ್ಚಿದೆ. ಎಲ್ಲ ಮತಧರ್ಮಗಳಲ್ಲಿಯೂ ಸ್ವಾರ್ಥಿಗಳಾದ ಪಂಡಿತರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು , ತಮ್ಮ ಹಕ್ಕು ಬಾಧ್ಯತೆಗಳಿಗೆ ಪ್ರಾಚೀನತೆಯ ಗರ್ವ ತಂದುಕೊಡಲು ನಿರಂತರವಾಗಿ ಈ ಪ್ರಕ್ಷಿಪ್ತದ ಕಳಂಕಿತ ಕಾರ್ಯವನ್ನು ನಡೆಸುತ್ತಾ ಬಂದಿದ್ದಾರೆ. ಇದರ ಪರಿಣಾಮವಾಗಿ ನಮ್ಮ ದೇಶದಲ್ಲಿ ಹಲವು ಅನರ್ಥಗಳು ಸಂಭವಿಸಿದವು. ಗೀತೆ ಮೂಲತಃ ಅವೈದಿಕ ಸಾಂಖ್ಯ ತತ್ತ್ವಕ್ಕೆ ಬದ್ಧವಾದುದು. ಕ್ಷತ್ರಿಯ ಮೌಲ್ಯಗಳಿಂದ ಸ್ಫೂರ್ತಿಗೊಂಡದ್ದು. ಇದು ವೈದಿಕ-ಬ್ರಾಹ್ಮಣ ವಿರೋಧಿ ಮೌಲ್ಯಗಳಿಂದ ಕೂಡಿದ್ದುದರಿಂದ ಜನಪ್ರಿಯತೆ ಪಡೆದಿತ್ತು. ಬ್ರಾಹ್ಮಣರು ಅನಿವಾರ್ಯವಾಗಿ ಗೀತೆಯನ್ನು ಒಪ್ಪಿಕೊಳ್ಳಬೇಕಾಯಿತು. ಅಂದರೆ ವೈದಿಕ ವಿರೋಧಿಯಾದ ಗೀತೆಯನ್ನು ವೈದಿಕ ಮೌಲ್ಯಗಳ ರಕ್ಷಣೆಗೆ ಪರಿವರ್ತಿಸುವ ಮೂಲಕ ಒಪ್ಪಿಕೊಂಡರು. ಇದು ‘ಕಾಲಿಗೆ ಬಿದ್ದು ಕಾಲುಂಗುರ ಬಿಚ್ಚಿಕೊಳ್ಳುವ’ ತಂತ್ರಗಾರಿಕೆ. ಹಾಗಾಗಿ ಒಂದೇ ಮೂಲದವರಾಗಿದ್ದರೂ ತ್ರಿಮತಸ್ಥರು ಈ ಕೃತಿಯ ಮೂಲಕವಾಗಿ ತಮ್ಮ ಸ್ಥಾನಮಾನಗಳನ್ನು ಭದ್ರಪಡಿಸಿಕೊಂಡರು. ವ್ಯಾವಹಾರಿಕ ಜಾಣ್ಮೆಯಿಂದ ಸಮನ್ವಯತೆಯ ಪ್ರತಿಪಾದಕರಾಗಿ ಅವೈದಿಕ ಸಮಾಜ, ಸಂಸ್ಕೃತಿಗಳ ಮೇಲೆ ತಮ್ಮ ಹಿಡಿತವನ್ನು ಸಾಧಿಸಿದರು. ವೈದಿಕರೇ ಅಧ್ಯಯನದ ಸರ್ವಾಧಿಕಾರಿಗಳಾಗಿದ್ದರಿಂದ ಕಾಲ ಕಾಲದಲ್ಲಿ ತಮ್ಮ ಲೋಪ ದೋಷಗಳನ್ನು ಮುಚ್ಚಿಕೊಂಡು ತಮ್ಮ ವರ್ಗದ ಪ್ರಾಶಸ್ತ್ಯವನ್ನು ಎತ್ತಿ ಹಿಡಿದರು. ಹಾಗಾಗಿ ಗೀತೆಯಿರಲಿ ಮತ್ತಾವುದೇ ಸಾಂಪ್ರದಾಯಿಕ ಕೃತಿಗಳೇ ಇರಲಿ- ಈ ಗ್ರಂಥಗಳು ಮೂಲ ಸ್ವರೂಪದಲ್ಲಿ ಇವೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉಪನಿಷತ್ತಿನ ಶಕ್ತಿಗೆ ಬ್ರಾಹ್ಮಣರು ಮಣಿದು ಅವನ್ನು ತಮ್ಮಂತೆ ಮಾಡಿಕೊಂಡ ರೀತಿಯಲ್ಲೇ ಗೀತೆಯ ಶಕ್ತಿಗೆ ಸೋತು ಅದನ್ನು ವೈದಿಕೀಕರಣಗೊಳಿಸಿದರು. ನಾವೇನು ಕಡಿಮೆ ಎಂಬಂತೆ ಮೂಲತಃ ಅವೈದಿಕ ಪರಂಪರೆಗೆ ಸೇರಿದ ಶಕ್ತಿವಿಶಿಷ್ಟಾದ್ವೈತದ ಪ್ರತಿಪಾದಕರು ಪ್ರಸ್ಥಾನತ್ರಯದ ಒಪ್ಪಿಗೆ ಪಡೆದುಕೊಳ್ಳಲು ಕಸರತ್ತು ನಡೆಸಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಭಾರತದಲ್ಲಿ ವೈದಿಕ-ಅವೈದಿಕ ಸಂಘರ್ಷ ನಿರಂತರ ನಡೆದು ಬಂದಿರುವಂತೆ, ಬ್ರಾಹ್ಮಣ-ಕ್ಷತ್ರಿಯರ ಶೀತಲ ಸಮರ ಇತಿಹಾಸದುದ್ದಕ್ಕೂ ನಡೆದುಬಂದಿದೆ. ಗೀತೆ ಉಪನಿಷತ್ತಿನ ಸಾರವೆಂದು ತಿಳಿಸಲಾಗಿದೆ. ಉಪನಿಷತ್ತುಗಳು ಕ್ಷತ್ರಿಯರ ರಚನೆಗಳು. ಕ್ರಮೇಣ ಕ್ಷತ್ರಿಯರು ಬ್ರಾಹ್ಮಣರು ಹೊಂದಾಣಿಕೆ ಸಾಧಿಸಿದರು. ಈ ಹೊಂದಾಣಿಕೆಯ ಫಲವೇ ಗೀತೆಯ ಮರುಹುಟ್ಟು. ಇದರಿಂದ ಬ್ರಾಹ್ಮಣರಿಗೆ ಗುರುಸ್ಥಾನ , ಕ್ಷತ್ರಿಯರಿಗೆ ಅಧಿಕಾರಸ್ಥಾನ ಗಟ್ಟಿಗೊಂಡಿತು. ಕ್ಷತ್ರಿಯರಿಂದಲೇ ವೈದಿಕ ಧರ್ಮದ ರಕ್ಷಣೆ ಮಾಡಿಸುವಲ್ಲಿ ಬ್ರಾಹ್ಮಣರು ಯಶಸ್ವಿಯಾದರು. ಪುರೋಹಿತರ ಗೋತ್ರ ಸೂತ್ರ ಪ್ರವರಗಳೇ ಕ್ಷತ್ರಿಯರ ಗೋತ್ರ, ಸೂತ್ರ , ಪ್ರವರಗಳಾಗಿರುವುದನ್ನು ನೋಡಿದಾಗ ಕ್ಷತ್ರಿಯರಿಗೆ ಬ್ರಾಹ್ಮಣ ಅನಿವಾರ್ಯವಾಗುವ ಹಾಗೆ ಮಾಡಿರುವುದು ತಿಳಿದುಬರುತ್ತದೆ. ಭಾರತದಲ್ಲಿ ವೈದಿಕ ಸಂಸ್ಕೃತಿಗಿಂತಲೂ ಪ್ರಾಚೀನವಾದ ಹಾಗು ಉದಾರವಾದ ಅವೈದಿಕ ಪರಂಪರೆಯೊಂದಿದೆ. ಭಾರತದ ಬಹುಮುಖ್ಯ ಸಾಂಸ್ಕೃತಿಕ –ಅಧ್ಯಾತ್ಮಿಕ ನಾಯಕ, ನಾಯಕಿಯರಲ್ಲಿ ಅವೈದಿಕರಿದ್ದಾರೆ. ಅಬ್ರಾಹ್ಮಣರಿದ್ದಾರೆ. ಉದಾಹರಣೆಗೆ ರುದ್ರ , ಕಾಳಿ , ಶಿವ , ಪಾರ್ವತಿ , ವೀರಭದ್ರ , ಭದ್ರಕಾಳಿ , ಗಣಪತಿ , ಷಣ್ಮುಖ , ಕೃಷ್ಣ , ಉಪನಿಷತ್ತುಗಳ ರಚಕರು , ಚಾರ್ವಾಕರು , ಶ್ರಮಣರು , ಭಕ್ತಿ ಮತ್ತು ಅನುಭಾವಿ ಪಂಥಗಳ ದಾರ್ಶನಿಕರು. ಮತ್ತು ಆಧುನಿಕ ಭಾರತದ ಕ್ರಾಂತಿಕಾರಿಗಳಲ್ಲಿ ಬಹುತೇಕರು. ಇವರೆಲ್ಲರ ಕೊಡುಗೆ ಹಿರಿದಾದುದು. ಆದರೂ ವೈದಿಕ ನಾಯಕರಿಗೆ ಸಿಕ್ಕಷ್ಟು ಮನ್ನಣೆ ಇವರಿಗೆ ಸಿಗಲಿಲ್ಲ. ವೈದಿಕ ಸಂಸ್ಕೃತಿಯ ನೇತಾರರು ಅವೈದಿಕ ಸಂಸ್ಕೃತಿಗಳನ್ನು , ನಾಯಕರನ್ನು , ಜನರನ್ನು ನಿರಂತರ ಕೀಳಾಗಿ ಕಾಣುತ್ತಾ ದಮನ ಮಾಡುತ್ತಾ ಬಂದರು. ವೈದಿಕರ ಆಕ್ರಮಣಶೀಲ ಗುಣದಿಂದಾಗಿ ಅವೈದಿಕ ವಿಚಾರಧಾರೆ ಅವಜ್ಞೆಗೆ , ಅಪಖ್ಯಾತಿಗೆ ಒಳಗಾಯಿತು. ಕೃಷ್ಣನೂ ಕೂಡ ಭಾರತದ ಅವೈದಿಕ ಸಂಸ್ಕೃತಿಯ ಮಹಾನ್ ನಾಯಕರಲ್ಲಿ ಒಬ್ಬ. ಅವನೊಬ್ಬ ಕ್ರಾಂತಿದೂತನೂ ಹೌದು; ಶಾಂತಿದೂತನೂ ಹೌದು. ಮಹಾಭಾರತದಲ್ಲಿ ಬ್ರಾಹ್ಮಣರೆಲ್ಲ ಕೌರವರ ಕಡೆ ಇದ್ದರೆ , ಕೃಷ್ಣ ಮಾತ್ರ ಪಾಂಡವರ ಜತೆಗಿದ್ದ. ಕೃಷ್ಣ ಬ್ರಾಹ್ಮಣ ವಿರೋಧಿ ಆದರ್ಶಗಳನ್ನು ಆಚರಣೆಗೆ ತಂದು ಬ್ರಾಹ್ಮಣ ರಾಜಕಾರಣವನ್ನು ಯಶಸ್ವಿಯಾಗಿ ಧ್ವಂಸ ಮಾಡಿದ. ಇದು ನಿಜವಾದ ಕೃಷ್ಣಪ್ರಜ್ಞೆ. ಇಂಥ ಅವೈದಿಕ ಪ್ರಜ್ಞೆಯ ಧೀರೋದಾತ್ತ ನಾಯಕರನ್ನು ವೈದಿಕ ಪರಂಪರೆ ತನ್ನೆಲ್ಲ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ತನ್ನ ರಕ್ಷಾಕವಚವಾಗಿ ಬಳಸಿಕೊಂಡಿತು. ವೈದಿಕರದ್ದು ವಾತಾಪಿ ಗರ್ಭ. ತನ್ನ ವಿರೋಧಿಗಳನ್ನು ತನ್ನೊಳಗೆ ಸೇರಿಸಿಕೊಳ್ಳುವ ದೈತ್ಯಶಕ್ತಿ. ವೈದಿಕ ಪ್ರಜ್ಞೆ ಮೊದಲು ವಿರೋಧಿಸುತ್ತದೆ. ಆಗದಿದ್ದಾಗ ಸ್ವಾಹ ಮಾಡುತ್ತದೆ. ಅದೂ ಆಗದಿದ್ದಾಗ ನಿರ್ನಾಮ ಮಾಡುತ್ತದ. ಶಿವ , ಕೃಷ್ಣ , ಮಹಾವೀರ , ಬುದ್ಧ ಇವರನ್ನೆಲ್ಲ ಸ್ವಾಹ ಮಾಡಿತು. ಲೋಕಾಯತರನ್ನು ನಿರ್ನಾಮ ಮಾಡಿತು. ಸಾಂಖ್ಯವು ಭಾರತದ ಪ್ರಾಚೀನ ದರ್ಶನವಾಗಿದ್ದು ಮೂಲತಃ ಪುರುಷ-ಪ್ರಕೃತಿ ತತ್ತ್ವ ಪ್ರತಿಪಾದಕವಾಗಿತ್ತು. ಲೌಕಿಕ ತತ್ತ್ವವನ್ನು ಕೇಂದ್ರೀಕರಿಸಿಕೊಂಡಿತ್ತು. ದೇವರ ಕಲ್ಪನೆಯನ್ನು ನಿರಾಕರಿಸಿತ್ತು. ವೈದಿಕರು ಕ್ರಮೇಣ ಈ ಸಾರ್ವತ್ರಿಕವಾದ ಸಾಂಖ್ಯ ತತ್ತ್ವವನ್ನು ಭಗವದ್ಗೀತೆ ಆಧರಿಸಿತ್ತು. ಕ್ರಮೇಣ ವೈದಿಕರು ಈ ಕೃತಿಗೆ ಮನಸೋತು ವೈದಿಕಪರವಾದ . ಕೃತಿಯನ್ನಾಗಿ ಪರಿವರ್ತಿಸಿದರು. ಎಲ್ಲ ಆಚಾರ್ಯರು ಸಾಂಖ್ಯ ತತ್ತ್ವಕ್ಕೆ ದೈವವನ್ನು ಸೇರಿಸುವ ಮೂಲಕ ಸಾಂಖ್ಯವನ್ನು ಒಪ್ಪಿಕೊಂಡರು. ಬ್ರಾಹ್ಮಣರ ಶ್ರೇಷ್ಟತ್ವದ ಪ್ರತಿಪಾದನೆಯೇ ತ್ರಿಮತಗಳ ಮೂಲಸ್ವರ. ಹಾಗಾಗಿ ಅವು ಹುಟ್ಟಿನಿಂದಲೇ ವರ್ಣವ್ಯವಸ್ಥೆಯನ್ನು-ಜಾತಿ ಭೇದವನ್ನು ಪ್ರಬಲವಾಗಿ ಸಮರ್ಥಿಸುತ್ತವೆ. ಶಂಕರಾಚಾರ್ಯರು ಅದ್ವೈತ ಅಧ್ಯಾತ್ಮದ ಹಂತದಲ್ಲಿ ಸಮಾನತೆಯನ್ನು ಪ್ರತಿಪಾದಿಸಿತು. ಅದು ಎಂದಿಗೂ ಸಾಮಾಜಿಕ , ಧಾರ್ಮಿಕ ನೆಲೆಯಲ್ಲಿ ಆಚರಣೆಗೆ ಬರಲಿಲ್ಲ. ಮಾಧ್ವ ಸಿದ್ಧಾಂತವಂತೂ ‘ನಿತ್ಯ ನಾರಕಿ’ಗಳನ್ನೇ ಸೃಷ್ಟಿಸಿಬಿಟ್ಟಿತು. ಇದು ಅಧ್ಯಾತ್ಮದ ಹಂತದಲ್ಲಿಯೂ ಸಮಾನತೆಯನ್ನು ಮಾನ್ಯ ಮಾಡಲಿಲ್ಲ. ನಮ್ಮ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ‘ವ್ಯಾಸಕೂಟ’ ದಾಸಕೂಟ’ಗಳು ಏರ್ಪಟ್ಟಿದ್ದನ್ನು ಇಲ್ಲಿ ಗಮನಿಸಬಹುದು. ರಾಮಾನುಜಾಚಾರ್ಯರಾದರೋ ಮನುಷ್ಯನನ್ನು ಬ್ರಾಹ್ಮಣನನ್ನಾಗಿಸಲು ಹೊರಟರು. ಬ್ರಾಹ್ಮಣ್ಯವನ್ನು ಒಪ್ಪಿಕೊಂಡವನು ಮನುಷ್ಯತ್ವದ ಬಗ್ಗೆ , ಮಾನವ ಘನತೆಯ ಬಗ್ಗೆ ನಂಬಿಕೆ ಹೊಂದಿರಲು ಅಸಾಧ್ಯ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ತ್ರಿಮತಾಚಾರ್ಯರ ಭಾಷ್ಯಗಳ ವೈಚಾರಿಕ ಅಧ್ಯಯನ ಈವರೆಗೂ ನಡೆದಿರಲಿಲ್ಲ. ಶ್ರೀ ಎನ್. ಶಂಕರಪ್ಪನವರು ತಮ್ಮ ಈ ಕೃತಿಯ ಮೂಲಕ ಈ ಕೊರತೆಯನ್ನು ಇಲ್ಲವಾಗಿಸಿದ್ದಾರೆ. ಭಗವದ್ಗೀತೆಯನ್ನು ಸೂಕ್ಷ್ಮ ಅಧ್ಯಯನಕ್ಕೆ ಪರಿಶೀಲನೆಗೆ ಒಳಪಡಿಸಿರುವುದಲ್ಲದೆ ತ್ರಿಮತಾಚಾರ್ಯರ ವಿಚಾರಗಳು ಹೇಗೆ ಮನುಷ್ಯ ವಿರೋಧಿಯಾಗಿವೆ , ವಂಚನೆಯಿಂದ ಕೂಡಿವೆ ಎಂಬುದನ್ನು ಸಮರ್ಥವಾಗಿ ಅನಾವರಣಗೊಳಿಸಿದ್ದಾರೆ. ಭಾರತದ ಚರಿತ್ರೆಯುದ್ದಕ್ಕೂ ನಮ್ಮ ಜನರಲ್ಲಿ ಪರಾವಲಂಬಿತನ ಬೆಳೆದು ಬಂದಿರುವುದನ್ನು ನೋಡುತ್ತೇವೆ. ನಮ್ಮನ್ನು ಉದ್ಧರಿಸಲಿಕ್ಕೆ ಅವತಾರಗಳಿಗಾಗಿ ಕಾದಿದ್ದೇವೆ. ನಮ್ಮನ್ನು ಉದ್ಧರಿಸುವ ಆಚಾರ್ಯರು , ಯೋಗಿ, ಬಾಬಾಗಳು , ಸ್ವಾಮಿ , ಸಂನ್ಯಾಸಿಗಳಿಗಾಗಿ ಕಾದಿದ್ದೇವೆ. ರಾಜಕಾರಣಿಗಳು , ಅಧಿಕಾರಿಗಳು ನಮ್ಮನ್ನು ಉದ್ಧರಿಸುತ್ತಾರೆ ಎಂದು ನಂಬಿದ್ದೇವೆ. ಆದರೆ ಇವರಾರು ನಮ್ಮನ್ನು ಉದ್ಧರಿಸಲಿಲ್ಲ. ಬದಲಿಗೆ ನಮ್ಮ ಜನರನ್ನು ಇನ್ನಷ್ಟು ಅವನತಿಗೆ ದೂಡಿದ್ದಾರೆ. ನಮ್ಮನ್ನು ನಾವು ನಂಬಿ ಮುನ್ನಡೆಯುವ ಅಂತಃಶಕ್ತಿಯನ್ನು ನಾವು ಬೆಳೆಸಿಕೊಳ್ಳಲಿಲ್ಲ. ನಮ್ಮ ಜನರ ಇಂಥದೊಂದು ಮನಃಸ್ಥಿತಿಗೆ ಗೀತೆಯ ಕೊಡುಗೆಯೂ ಬಹಳಷ್ಟಿದೆ. ಗೀತೆ ಪ್ರತಿಪಾದಿಸಿದ ಮುಖ್ಯತತ್ತ್ವಗಳಲ್ಲಿ ಕರ್ಮಫಲತ್ಯಾಗವೂ ಒಂದು. ಆದರೆ ಈ ಕರ್ಮಫಲ ತ್ಯಾಗವನ್ನು ಮೇಲಿನ ಮೂರು ವರ್ಣಗಳಿಗೆ ಅನ್ವಯಿಸದೆ ಶ್ರಮಜೀವಿಗಳಿಗೆ (ಶೂದ್ರರಿಗೆ) ಮಾತ್ರ ಅನ್ವಯವಾಗುವಂತೆ ನೋಡಿಕೊಂಡಿತು. ಇದು ಗೀತೆ ದುಡಿಯುವ ವರ್ಗದ ಜನರಿಗೆ ಮಾಡಿದ ಬಹು ದೊಡ್ಡ ವಂಚನೆ. ಧರ್ಮವನ್ನು ಶೋಷಣೆಗೆ ಬಳಸಿಕೊಳ್ಳುವುದಕ್ಕೆ ಗೀತೆ ತಾತ್ತ್ವಿಕ ನೆಲೆಗಟ್ಟೊಂದನ್ನು ಸೃಷ್ಟಿಸಿತು. ಗೀತೆ ಪ್ರತಿಪಾದಿಸಿದ ಚಾತುರ್ವರ್ಣ್ಯ ವ್ಯವಸ್ಥೆ ಬ್ರಾಹ್ಮಣರು , ಕ್ಷತ್ರಿಯರು ತಮ್ಮ ಸಾಂಪ್ರದಾಯಿಕ ಸ್ಥಾನಮಾನಗಳನ್ನು ಬಳಸಿಕೊಂಡು ಸುಖಸೌಲಭ್ಯಗಳನ್ನು ಅನುಭವಿಸಲು ಭದ್ರವಾದ ಬುನಾದಿಯನು ಹಾಕಿತು. ಇದರಿಂದ ಸಾಮಾನ್ಯ ಜನರ ಸಂಕಷ್ಟಗಳು ಹೆಚ್ಚಿ , ಅವರು ನಿರಂತರ ಶೋಷಣೆಗೆ ಒಳಗಾಗ ಬೇಕಾಯಿತು. ಈ ವರ್ಣವ್ಯವಸ್ಥೆ ನಮ್ಮ ಜನರ ಭೌತಿಕ ಪ್ರಗತಿಗೆ ಕಂಟಕವಾಗಿ ಪರಿಣಮಿಸಿತು. ಸ್ಪರ್ಧಾತ್ಮಕ ಮನೋಭಾವ ಇಲ್ಲವಾಯಿತು. ಸಮಾಜ ಚೇತನವೇ ಜಡಗೊಂಡು ದೇಶ ಸಾವಿರಾರು ವರ್ಷಗಳ ಕಾಲ ಗುಲಾಮಗಿರಿಯಲ್ಲಿ ನರಳಬೇಕಾಯಿತು. ಗೀತೆಯು ಕರ್ಮಸಿದ್ಧಾಂತದ ಪರವಾಗಿ ನಿಂತದ್ದರಿಂದ ನಮ್ಮ ಜನರಿಗೆ ವಿಗತಿಯೇ ಗತಿಯಾಯಿತು. ಬಡತನ , ನೋವು , ಸಂಕಟಗಳಲ್ಲಿ ನರಳುವಂತಾಯಿತು. ಸಾಮಾನ್ಯ ಜನರ ಜೀವಿತಕ್ಕೆ ಹಾಗು ಮನುಷ್ಯ ಪ್ರಯತ್ನಕ್ಕೆ ಬೆಲೆಯೇ ಇಲ್ಲವಾಯಿತು. ಸಾಮಾನ್ಯ ಜನರ ಸಂಕಷ್ಟಕ್ಕೆ ಹಿಂದಿನ ಜನ್ಮದ ಪಾಪದ ಫಲವೇ ಕಾರಣವೆಂದು ವೈದಿಕರು ಭಾವಿಸಿ , ಸ್ವಹಿತಾಸಕ್ತಿ ತಾಳಲು ಈ ಕರ್ಮಸಿಧ್ಧಾಂತ ನೆರವಿಗೆ ನಿಂತಿತು. ಗೀತೆಯು ಕರ್ಮಕಾಂದಕ್ಕೆ ಕೊಟ್ಟ ಮನ್ನಣೆಯಿಂದ ವೈದಿಕ ಪುರೋಹಿತಶಾಹಿ ಇನ್ನಷ್ಟು ಪ್ರಬಲವಾಗಿ ಬೆಳೆದು ಜನರ ಶೋಷಣೆಗೆ ತೊಡಗಿತು. ಈ ಕರ್ಮಕಾಂಡದಿಂದ ಭಾರತದ ಸಾಂಸ್ಕೃತಿಕ ವಲಯವೇ ಹಾಳಾಯಿತು. ಈ ಹೊತ್ತಿಗೂ ಈ ಜಡವಾದ ಕರ್ಮಕಾಂದಕ್ಕೆ ಜೋತುಬಿದ್ದು ಪೂಜಾರಿ , ಪುರೋಹಿತರು , ಸ್ವಾಮಿ , ಸನ್ಯಾಸಿ, ದೈವಜ್ಞರು ನಮ್ಮ ಜನರನ್ನು ಕರ್ಮಕಾಂಡದ ಗುಲಾಮರನ್ನಾಗಿ ಮಾಡಿದ್ದಾರೆ. ಯಜ್ಞ , ಯಾಗ, ಹೋಮ, ಹವನ ಪೂಜೆ , ಪುರಸ್ಕಾರ , ಜ್ಯೋತಿಷ್ಯ , ವಾಸ್ತುಗಳನ್ನು ವೈಭವೀಕರಿಸುತ್ತಾ ಮೂಢನಂಬಿಕೆಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಲೋಕಕಲ್ಯಾಣ-ಸಮಾಜ ಕಲ್ಯಾಣದ ಹೆಸರಿನಲ್ಲಿ ಈ ಪುಜಾರಿ , ಪುರೋಹಿತ ವರ್ಗ ತನ್ನ ಕಲ್ಯಾಣವನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುತ್ತಿದೆ. ಬೆಂಕಿಯಲ್ಲಿ ಜೀವನೋಪಯೋಗಿಯಾದ ವಸ್ತುಗಳನ್ನು ಸುಟ್ಟು ಬೂದಿಮಾಡಿದರೆ , ಪೂಜೆಯ ಹೆಸರಲ್ಲಿ ಜೀವನಾವಶ್ಯಕ ವಸ್ತುಗಳನ್ನು ನೀರಿಗೆ ಹಾಕಿದರೆ ಲೋಕಕಲ್ಯಾಣ ಸಾಧ್ಯವಾಗುತ್ತದೆಯೇ ? ಎಂದು ಕೇಳುವ ಶಕ್ತಿ ನಮ್ಮ ಜನರಿಗೆ ಇಲ್ಲ. ಪೂಜೆ, ಪ್ರಾರ್ಥನೆ , ಭಜನೆ , ಧ್ಯಾನಗಳಿಂದ ಹೆಚ್ಚೆಂದರೆ ವ್ಯಕ್ತಿಗೆ ಒಂದಷ್ಟು ಮಾನಸಿಕ , ಶಾಂತಿ ಸಮಾಧಾನ ದೊರಯಬಹುದು. ಅದರಾಚೆಗೆ ಮತ್ತಾವ ಪ್ರಯೋಜನವೂ ಇಲ್ಲ ಎಂಬುದನ್ನು ನಮ್ಮ ಜನ ಅರ್ಥಮಾಡಿಕೊಳ್ಳುವುದು ಸಾಧ್ಯವಾದರೆ ಈ ಸುಲಿಗೆ ವ್ಯವಸ್ಥೆಯಿಂದ ಪಾರಾಗಬಲ್ಲರು. ತಪಸ್ಸು , ವೈರಾಗ್ಯ , ಯೋಗ ಸಾಧನೆ , ಸಿದ್ಧಿಗಳನ್ನು ವೈಭವೀಕರಿಸುತ್ತ ಬರಲಾಗಿದೆ. ಇವುಗಳಿಂದ ನಾಗರಿಕತೆ . ಸಂಸ್ಕೃತಿಯ ಬೆಳವಣಿಗೆಗೆ ಎಷ್ಟು ಸಹಾಯವಾಗಿದೆ ? ತಪಸ್ಸು ಮಾಡದೆ ಪಾಶ್ಚಾತ್ಯರು ಮಾನವ ಹಕ್ಕುಗಳನ್ನು, ಸ್ತ್ರೀ ಸ್ವಾತಂತ್ರ್ಯವನ್ನು ಸಾಧಿಸಿಲ್ಲವೇ ? ಯೋಗ ಸಾಧನೆ ಮಾಡದೆ ಅಭೂತಪೂರ್ವವಾದ ವೈಜ್ಞಾನಿಕ ಸಾಧನೆಗಳನ್ನು ಮಾಡಿಲ್ಲವೇ ? ಕಲೆ , ಸಾಹಿತ್ಯ, ಸಂಗೀತ , ಸಂಸ್ಕೃತಿಯ ನೆಲೆಯಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿಲ್ಲವೇ ? ಇಡೀ ಮಾನವಕುಲಕ್ಕೆ –ಜೀವ ಸಂಕುಲಕ್ಕೆ ಉಪಕಾರಕವಾದ ಸಂಶೋಧನೆಗಳನ್ನು ಕೈಗೊಂಡಿಲ್ಲವೇ ? ಈ ಸಂಶೋಧನೆಗಳ ಫಲವನ್ನು ಇಡೀ ಮಾನವಕುಲ ಬಳಸುತ್ತಿಲ್ಲವೇ ?ನಮ್ಮವರು ತಪಸ್ಸು ಮಾಡಿ ಯಾವ ಕಾರ್ಯಗಳನ್ನು ಸಾಧಿಸಿದ್ದಾರೆ ? ಜನರು ಬದುಕಲು ಮಾಡುವ ಹೋರಾಟಗಳು ತಪಸ್ಸಲ್ಲವೇ ? ಮಾನವ ಕುಲದ ಉಳಿವಿಗಾಗಿ , ಏಳಿಗೆಗಾಗಿ ನಡೆದಂಥ ಹೋರಾಟಗಳಲ್ಲಿ ಎಷ್ಟೊಂದು ಜನ ಪ್ರಾಣ ತೆತ್ತಿದ್ದಾರೆ. ಇದು ತಪಸ್ಸಲ್ಲವೇ ?ಜನರ ಏಳಿಗೆಗಾಗಿ ಪ್ರಾಣ ತೆತ್ತ ಇಂಥ ಧೀರೋದಾತ್ತನಿಗೆ ಧ್ಯಾನದ ಮನಸ್ಸು ಇರಲಿಲ್ಲ ಎನ್ನಲಿಕ್ಕೆ ಆಗುತ್ತದೆಯೇ ? ಅಷ್ಟಸಿದ್ಧಿಗಳಿಂದ ಮನುಷ್ಯ ಅಮಾನುಷ ಶಕ್ತಿಯನ್ನು ಗಳಿಸಬಹುದೇ ಇಲ್ಲವೇ ? ಅಥವಾ ಮನುಷ್ಯನ ಶರೀರದಲ್ಲಿಯೇ ಅದ್ಭುತವಾದ ಶಕ್ತಿಯಿದೆಯೇ ? ವಿಶಿಷ್ಟ ಸಂದರ್ಭಗಳಲ್ಲಿ ವಿಶೇಷವಾದ ಅನುಭವಗಳಾಗುತ್ತವೆಯೇ ? ವಿಶಿಷ್ಟ ಶಕ್ತಿಗಳು ಜೈವಿಕವಾಗಿ ಬರುವಂತಹುವೇ ? ಅವನ್ನೇ ಪವಾಡಗಳೆಂದು ಕರೆಯಲಾಯಿತೇ ? ಇಂಥ ಎಷ್ಟೇ ಸಿದ್ಧಿ-ಶಕ್ತಿಗಳಿದ್ದರೂ ಇದನ್ನು ಮೀರಿದಾಗಲೇ ನಿಜದ ನೆಲೆ ಅರಿಯಲು ಸಾಧ್ಯವೆಂದು ಅನುಭಾವಿಗಳು ಪ್ರತಿಪಾದಿಸಿರುವುದನ್ನು ಕಾಣುತ್ತೇವೆ. ಕೆಲವರು ಸಿದ್ಧ ಪುರುಷರು ಹುಟ್ಟಿದ್ದಾರೆ ಎಂಬ ನಂಬಿಕೆ ಇದೆ. ಅಂಥವರನ್ನು ಯಾರೂ ನೋಡಿಲ್ಲ. ಸಾಧನೆಯಿಂದ ಸಿದ್ಧಿ ಪಡೆದವರ ಸಂಖ್ಯೆ ವಿರಳವೆಂದೇ ಹೇಳಬೇಕು. ಯೋಗದಲ್ಲಾಗಲಿ , ತಂತ್ರದಲ್ಲಾಗಲಿ , ಅಧ್ಯಾತ್ಮ ಸಾಧನೆಯಲ್ಲಾಗಲಿ ರಹಸ್ಯವೆಂಬುದಿಲ್ಲ. ಇವುಗಳ ಸಾಧನೆ ಲೌಕಿಕ. ಫಲವೂ ಲೌಕಿಕ. ಅಲೌಕಿಕವೆಂಬುದೆಲ್ಲ ಕಟ್ಟು ಕಥೆಗಳು ಮಾತ್ರ. ಇದನ್ನು ಲೇಖಕರು ಸರಿಯಾಗಿಯೇ ವಿಮರ್ಶಿಸಿದ್ದಾರೆ. ಅಧ್ಯಾತ್ಮದಲ್ಲಿ ಗೂಢತೆಯ ಅನ್ವೇಷಣೆ ಇರುವಂತೆ ವಿಜ್ಞಾನದಲ್ಲೂ ಗೂಢತೆಯ ಅನ್ವೇಷಣೆ ಇದೆ. ಈ ಅನ್ವೇಷಣೆಯಲ್ಲಿ ಎಲ್ಲ ಜ್ಞಾನಗಳು ತೊಡಗಿವೆ. ಆದರೂ ಮಾನವನಿಗೆ ಇನ್ನೂ ಪರಿಪೂರ್ಣವಾದ ಜ್ಞಾನ ದೊರೆತಿಲ್ಲ. ವಿಜ್ಞಾನ ಪ್ರಯೋಗದಿಂದ ಸಾಧಿಸುವುದನ್ನು ಧರ್ಮ ಊಹೆಯಿಂದ ಸಾಧಿಸುತ್ತದೆ. ಆದ್ದರಿಂದ ಧರ್ಮದ್ದು ವಸ್ತುನಿಷ್ಠವಾದ ಜ್ಞಾನವಲ್ಲ. ಅದು ಭಾವನಿಷ್ಠವಾದುದು. ಶರೀರ ತ್ರಯಗಳಿಗೆ (ಸ್ಥೂಲ –ಸೂಕ್ಷ್ಮ-ಕಾರಣ) ಆಧಾರ ಎಲ್ಲಿದೆ ? ಷಟ್ ಚಕ್ರಗಳ ಬಗ್ಗೆ ಟನ್ ಗಟ್ಟಲೆ ಸಾಹಿತ್ಯ ರಚನೆಯಾಗಿದೆ. ಕುಂಡಲಿನಿಯನ್ನು ಕಂಡವರು ಯಾರಿದ್ದಾರೆ ? ಸಹಸ್ರಾರವನ್ನು ತಲುಪಿದವರು ಯಾರಿದ್ದಾರೆ ? ಅಣಿಮಾದಿ ಅಷ್ಟಸಿದ್ಧಿಗಳನ್ನು ಪಡೆದವರು ಯಾರಿದ್ದಾರೆ ? ಅಂಥವರನ್ನು ನೋಡಿದವರು ಯಾರಿದ್ದಾರೆ ? ಇವೆಲ್ಲವೂ ಊಹಾತ್ಮಕ. ಪೀಳಿಗೆಯಿಂದ ಪೀಳಿಗೆಗೆ ನಂಬಿಕೆಯ ಮೂಲಕ ಇವು ಉಳಿದುಕೊಂಡು ಬಂದಿರುವುದು ತಿಳಿಯುತ್ತದೆಯೇ ವಿನಾ ಇವುಗಳ ಅಸ್ತಿತ್ವಕ್ಕೆ ಯಾವುದೇ ಆಧಾರಗಳಿಲ್ಲ. ಬ್ರಹ್ಮಜ್ಞಾನ ದೊರಕಿದೆ , ಸಾಕ್ಷಾತ್ಕಾರ ಆಗಿದೆ ಎಂದರೆ ಅದನ್ನು ತಿಳಿಯುವುದು ಹೇಗೆ ? ಏನೂ ತಿಳಿಯದವನು ಮೌನಿ ಆಗಿರಬಹುದು. ಎಲ್ಲ ತಿಳಿದವನು ಮೌನಿಯಾಗಿರಬಹುದು. ಇದನ್ನು ಅಳೆಯುವುದಕ್ಕೆ ಯಾವ ಮಾನದಂಡವಿದೆ ? ಸ್ಥಿರವಾದ ತತ್ತ್ವದ (ಬ್ರಹ್ಮ-ಭಗವಂತ) ಬಗ್ಗೆ ಹೇಳುತ್ತಲೇ ಬಂದಿದ್ದಾರೆ. ಇದನ್ನು ತೋರಿಸಲು ಸಾಧ್ಯವೇ ? ಪರೀಕ್ಷಿಸಲು ಸಾಧ್ಯವೇ ? ಇದನ್ನೆಲ್ಲಾ ನೋಡಿದಾಗ ಧರ್ಮಕ್ಕಿಂತ ವಿಜ್ಞಾನ ಹೆಚ್ಚು ಸಮ್ಮತಾರ್ಹ. ಏಕೆಂದರೆ ಅದು ಕಾರ್ಯ-ಕಾರಣ ತತ್ತ್ವವನ್ನು ಅವಲಂಬಿಸಿದೆ. ಧರ್ಮದಲ್ಲಿರುವ ಕಾರ್ಯ-ಕಾರಣ ಸಿದ್ಧಾಂತ ಕಾಲ್ಪನಿಕವಾಗಿದೆ. ಆದ್ದರಿಂದ ಧರ್ಮವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಸ್ವೀಕರಿಸಬೇಕಾದ ಅಗತ್ಯತೆ ಇದೆ. ಅದರ ಕಡೆ ಲೇಖಕರು ಗಮನ ಸೆಳೆದಿದ್ದಾರೆ. ‘ ಅಧ್ಯಾತ್ಮದ ಅರಿವು ವ್ಯಕ್ತಿಗತ. ಮಾತಿಗೆ ಮೀರಿದ್ದು ಎನ್ನುವ ಸಿದ್ಧ ಉತ್ತರಗಳನ್ನು ತೊರೆದು ಹೊರಬಂದು ವಸ್ತುನಿಷ್ಠತೆಯಿಂದ ಮುಖಾಮುಖಿಯಾಗುವ ಹೊಣೆ ಅಧ್ಯಾತ್ಮಕ್ಕೆ ಅನಿವಾರ್ಯವಾಗಿದೆ’ ಎಂಬ ಲೇಖಕರ ಮಾತಿಗೆ ಓದುಗರು ದನಿಗೂಡಿಸುವುದು ಅನಿವಾರ್ಯವಾಗುತ್ತದೆ. ‘ ವಸ್ತುನಿಷ್ಠ ಜ್ಞಾನ ಮತ್ತು ಅಧ್ಯಾತ್ಮಶಾಸ್ತ್ರದ ನಡುವೆ ಸಮನ್ವಯತೆ ತರಬೇಕೆಂದರೆ ನಾವು ಅಧ್ಯಾತ್ಮಶಾಸ್ರ್ತವನ್ನು ತಿದ್ದಿ ಬರೆಯಬೇಕು. ವಸ್ತುನಿಷ್ಠ ಜ್ಞಾನಕ್ಕೆ ಹೊರತಾದ ತತ್ತ್ವಶಾಸ್ತ್ರದ ಅಂಶಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯಬೇಕು ?‘ ಎಂಬುದು ಲೇಖಕರ ದೃಢವಾದ ನಿಲುವು. ಈ ಸಮನ್ವಯತೆಯ ಆಶಯ ಮಾನವ ಸಮಾಜಕ್ಕೆ ಉಪಕಾರಿಯಾಗಿದ್ದು , ಅದು ಸಾಧ್ಯವಾಗುವುದಾದರೆ ಹೊಸ ಮನುಷ್ಯನನ್ನು ನೋಡಲು ಸಾಧ್ಯ. ಆದರೆ ಈ ಕಾರ್ಯಕ್ಕೆ ಯಾರು ಸಿದ್ಧರಿದ್ದಾರೆ ? ಯಾರು ತಿದ್ದಬೇಕು ? ಎಷ್ಟು ತಿದ್ದಬೇಕು ? ಅದನ್ನು ನಿರ್ಧರಿಸುವವರು ಯಾರು ? ಸ್ವತಃ ಅರಿತು ಆಚರಣೆಗೆ ತಂದಿರುವ ಅನುಭಾವಿಗಳು ಈ ಕಾರ್ಯವನ್ನು ಮಾಡಲು ಸಮರ್ಥರೆಂಬುದು ನಿಜವಾದರೂ ಅಂಥವರನ್ನು ಹುಡುಕುವುದು ಹೇಗೆ ? ಯಾಕೆಂದರೆ ಯಾವ ಧರ್ಮದಲ್ಲಿಯೂ ಧರ್ಮಪಾಲನೆ ಸರಿಯಾಗಿ ಉಳಿದಿಲ್ಲ. ಎಲ್ಲ ಧರ್ಮಗಳಲ್ಲೂ ಮೂಢನಂಬಿಕೆಗಳು ,ಕಂದಾಚಾರಗಳು ಆಳವಾಗಿ ಬೇರು ಬಿಟ್ಟಿವೆ. ಎಲ್ಲ ಧರ್ಮಗಳಲ್ಲಿಯೂ ಆಚಾರವಂತರು , ನಿಷ್ಠಾವಂತರು ಗಣನೀಯವಾಗಿ ಕಡಿಮೆಯಾಗಿದ್ದಾರೆ. ಬೂಟಾಟಿಕೆ . ಡಂಭಾಚಾರ , ಅದ್ದೂರಿ ಆಡಂಬರತನವೇ ವಿಜೃಂಭಿಸುತ್ತಿವೆ. ಸೃಷ್ಟಿ ಮೂಲವನ್ನು ಅದರ ರಹಸ್ಯಗಳನ್ನು ಪೂರ್ಣವಾಗಿ ತಿಳಿಯಲು ಯಾವ ಜ್ಞಾನ , ವಿಜ್ಞಾನ , ಮಹಾಜ್ಞಾನಗಳಿಗೂ ಈವರೆಗೆ ಸಾಧ್ಯವಾಗಿಲ್ಲ. ಅರಿವಿಗೆ ಬಂದಿರುವುದು ಅಲ್ಪ ; ಬಾರದಿರುವುದು ಅಗಾಧ. ಗೂಢವನ್ನು ಗೋಚರವಾಗಿಸಲು ನಾನಾ ಪ್ರಯತ್ನಗಳು ನಡೆದಿರುವುದು ನಿಜ. ಅದರಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗಿಲ್ಲವಾದರೂ ಅರಿವಿಗೆ ನಿಲುಕದಿರುವ ಜೀವದ ಶಕ್ತಿ , ನಿಸರ್ಗದ ಶಕ್ತಿ/ ವಿಶ್ವದ ಶಕ್ತಿಯನ್ನು ಅರಿವಿನ ಆಶ್ರಯಕ್ಕೆ ತರುವ ಪ್ರಯತ್ನಗಳು ಶ್ಲಾಘನೀಯ. ಅದಕ್ಕೆ ಧರ್ಮ , ಅಧ್ಯಾತ್ಮಗಳು ತಮ್ಮದೇ ದಾರಿ ಕಂಡುಕೊಂಡಿವೆ. ಜ್ಞಾನ , ವಿಜ್ಞಾನಗಳು ತಮ್ಮದೇ ದಾರಿಯಲ್ಲಿ ಪರಿಶ್ರಮಿಸುತ್ತಿವೆ. ಈ ಶೋಧನೆಯ ಹಾದಿ ಸರಳವಲ್ಲ. ವಿಜ್ಞಾನವೂ ಭೌತಿಕವಾದ ವಸ್ತುವಿಗಿಂತ ಹೆಚ್ಚಾಗಿ ವಸ್ತುವನ್ನು ನೋಡುವ ದೃಷ್ಟಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬ ಭಾವನೆ ವಿಜ್ಞಾನದಲ್ಲಿ ಮೂಡಿ ಬರುತ್ತಿದೆ. ಮೂಢನಂಬಿಕೆಗಳು ಅಧ್ಯಾತ್ಮಕ್ಕೂ , ಅನುಭಾವಕ್ಕೂ ವಿರೋಧ; ವಿಜ್ಞಾನಕ್ಕೂ ವಿರೋಧ. ಸಾಚಾ ಅಧ್ಯಾತ್ಮವಾದಿಗಳು –ಅನುಭಾವಿಗಳು ನೀನು ಕಂಡುಕೊಳ್ಳುವವರೆಗೂ ಅದು ನಿನ್ನದಾಗುವುದಿಲ್ಲ ಎನ್ನುತ್ತಾರೆ. ವಿಜ್ಞಾನಿಗಳೂ ಕೂಡ ಪ್ರಯೋಗ ಮಾಡಿ ತೀರ್ಮಾನಕ್ಕೆ ಬರಬೇಕೆಂದು ಹೇಳುತ್ತಾರೆ. ಪರಸ್ಪರ ವಿರುದ್ಧವೆನಿಸುವ ಎಷ್ಟೋ ವಿಚಾರಗಳು ವಿಜ್ಞಾನದಲ್ಲಿವೆ. ವಿಜ್ಞಾನದಲ್ಲಿ ಸ್ಥಿರತೆಯಿದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ನಿರ್ದುಷ್ಟವಾದ ವಿಜ್ಞಾನ ಎಂಬುದಿಲ್ಲ. ವೈಜ್ಞಾನಿಕ ಪದ್ಧತಿಯಿದೆ. ವಿಜ್ಞಾನದ ತೀರ್ಮಾನಗಳು ಕಾಲಾಧೀನವಾದುವು (Tentative) . ಹೊಸ ವಿಚಾರಗಳು ಬಂದಾಗ ಹೊಸ ಸಂಶೋಧನೆಗಳು ನಡೆದಾಗ ಹಿಂದಿನ ತೀರ್ಮಾನಗಳು ಬದಲಾಗುತ್ತಿರುತ್ತವೆ. ಸೃಷ್ಟಿಯೇ ಆಗಿಲ್ಲ ಎನ್ನುವ ವಾದವೂ ಇದೆ. ಹೀಗಿರುವಾಗ ವಿಜ್ಞಾನವನ್ನಾಗಲಿ , ಧರ್ಮವನ್ನಾಗಲಿ ಪರಮ ಪ್ರಮಾಣವೆಂದು ನಾವು ಭಾವಿಸಬೇಕಿಲ್ಲ. ವಿಜ್ಞಾನಿಗಳು ತಾವು ಹೇಳುವುದೇ ಪರಮ ಪ್ರಮಾಣವೆಂದು ಹೇಳುವುದಿಲ್ಲ. ಧರ್ಮವೊಂದೇ ಪರಮ ಪ್ರಮಾಣವೆಂದು ಅನುಭಾವಿಗಳು ಹೇಳುವುದಿಲ್ಲ. ನಿಜ ಅಧ್ಯಾತ್ಮ-ಅನುಭಾವಗಳು ಪರೀಕ್ಷೆ ,ಪ್ರಯೋಗಗಳಿಗೆ ಯಾವತ್ತೂ ವಿರೋಧವಿಲ್ಲ. ಬಹಿರಂಗದ ಅನ್ವೇಷಣೆ ವಿಜ್ಞಾನದ್ದಾದರೆ ಅಂತರಂಗದ ಅನ್ವೇಷಣೆ ಅಧ್ಯಾತ್ಮ ಅಥವಾ ತತ್ತ್ವಶಾಸ್ತ್ರದ್ದು. ಬಾಹ್ಯ ಪ್ರಪಂಚದ ಪ್ರಗತಿಗೆ ವಿಜ್ಞಾನದ ಆವಶ್ಯಕತೆ ಇರುವ ಹಾಗೆ ಅಂತರಂಗದ ಪ್ರಗತಿಗೆ ಅಧ್ಯಾತ್ಮದ ಆವಶ್ಯಕತೆಯಿದೆ. ಮಾನವನ ಜೀವನಕ್ಕೆ ಅಂತರಂಗ ಶುದ್ಧಿಯೂ ಬೇಕು. ಬಹಿರಂಗ ಸಿದ್ಧಿಯೂ ಬೇಕು. ಧರ್ಮದಿಂದ ಮಾನವನ ಪ್ರಗತಿಯೂ ಆಗಿದೆ. ವಿಗತಿಯೂ ಒದಗಿದೆ. ಹಾಗೆಯೆ ವಿಜ್ಞಾನದಿಂದ ಮಾನವನ ಪ್ರಗತಿಯೂ ಆಗಿದೆ ವಿಗತಿಗೆ ಮನ್ನಣೆ ಸಿಕ್ಕಿದೆ. ಧರ್ಮದಲ್ಲಿ ಕೆಡುಕುಗಳನ್ನು ದೂರಮಾಡಿ ಒಳಿತನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಗುವುದಾದರೆ ಧರ್ಮ ಪೊಷಕ ತತ್ತ್ವವಾಗಬಲ್ಲದು. ಹಾಗೆಯೇ ವಿಜ್ಞಾನದಿಂದಾಗುವ ಒಳಿತನ್ನು ಉಳಿಸಿಕೊಂಡು ಅದರಿಂದ ಉದ್ಭವಿಸುವ ವಿನಾಶಕಾರಕ ಫಲಿತಗಳನ್ನು ದೂರವಿಟ್ಟರೆ ವಿಜ್ಞಾನ ಮನುಕುಲದ ಏಳಿಗೆಗೆ ಪೂರಕವಾಗಿ ನಿಲ್ಲಬಲ್ಲದು.. ಮಾನವ ಕುಲದ ಸ್ವಾಸ್ಥ್ಯಕ್ಕೆ ಧರ್ಮ ಮತ್ತು ವಿಜ್ಞಾನದ ಸಕಾರಾತ್ಮಕ ಸಾಂಗತ್ಯ ಇಂದು ಅತ್ಯಂತ ಅವಶ್ಯ. ಈ ಆಶಯಕ್ಕೆ ಪೂರಕವಾದ ಸ್ಪಂದನೆ ಈ ಕೃತಿಯಲ್ಲಿ ವ್ಯಕ್ತವಾಗಿರುವುದು ಲೇಖಕರ ಪ್ರಬುದ್ಧ ಮನಃಸ್ಥಿತಿಯನ್ನು ಸೂಚಿಸುತ್ತದೆ. ಕೆಲವು ತಿಂಗಳ ಹಿಂದೆ ಮಠಾಧೀಶರೊಬ್ಬರು ‘ಗೀತಾ ಅಭಿಯಾನ’ವನ್ನು ಕೈಗೊಂಡಿದ್ದರು. ಈ ಅಭಿಯಾನದ ಅಭಿಮಾನಿಯೊಬ್ಬರು ಲೇಖಕರಿಗೆ ಸವಾಲು ಹಾಕಿದ ಪರಿಣಾಮವಾಗಿ , ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ ಲೇಖಕರು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬೇಕಾಯಿತು. ಇದು ಬರಿಯ ಸ್ಪಂದನೆ ಅಲ್ಲ. ಜಟ್ಟಿಯೊಬ್ಬ ಕುಸ್ತಿಕಾಳಗದಲ್ಲಿ ತೋಳುತೊಡೆಯನ್ನು ತಟ್ಟಿನಿಂತು ಎದುರಾಳಿಯನ್ನು ನೆಲಕ್ಕೆ ಕುಕ್ಕುವ ರೀತಿಯ ಧೀಶಕ್ತಿಯ ಸಾಹಸ. ಇದು ಲೇಖಕರು ವೈಚಾರಿಕತೆಯಲ್ಲಿ , ವಿಜ್ಞಾನದಲ್ಲಿ ಇಟ್ಟಿರುವ ಅಪರಿಮಿತ ವಿಶ್ವಾಸ. ‘ಗೀತಾ ಅಭಿಯಾನ’ ಮಠಗಳ ಅಂಗಳದಿಂದ ಹೊರಬಂದು ರಾಜ್ಯದ ಶಾಲೆಗಳನ್ನು ಸುತ್ತಿಕೊಂಡಿದ್ದಕ್ಕೆ ಕಾರಣ , ಇದು ಈಗಿನ ಬಿಜೆಪಿ ಸರ್ಕಾರ ಪ್ರಾಯೋಜಿಸಿದ ಕಾರ್ಯಕ್ರಮವಾಗಿತ್ತು. ಬಿಜೆಪಿಯ ಬೌದ್ಧಿಕ ಜೀವಾಳವಾಗಿರುವ ವೈದಿಕರು , ಶಿಕ್ಷಣವನ್ನು ಕೇಸರೀಕರಣಗೊಳಿಸುವ ಗುಪ್ತ ಕಾರ್ಯಸೂಚಿಯ ಭಾಗವಾಗಿ ಈ ಗೀತಾ ಅಭಿಯಾನ ನಡೆಯಿತು. ಧಾರ್ಮಿಕ ಕೃತಿಯೊಂದನ್ನು ಶಾಲಾಮಕ್ಕಳಿಗೆ ಬೋಧಿಸಿ , ಮಕ್ಕಳ ಮನಸ್ಸನ್ನು ಮಲಿನವಾಗಿಸುವ ಈ ಕಾರ್ಯಕ್ಕೆ ಹಲವು ನೆಲೆಗಳಿಂದ ವಿರೋಧ ಬಂದಿತಾದರೂ ಸರಕಾರ ಆ ವಿರೋಧಕ್ಕೆ ಕಿವಿಗೊಡದೆ ಈ ಗೀತಾ ಅಭಿಯಾನಕ್ಕೆ ಎಲ್ಲ ಬಗೆಯ ಪ್ರೋತ್ಸಾಹವನ್ನು ನೀಡಿತು. ಧರ್ಮ ನಿರಪೇಕ್ಷವಾದ (Secular) ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಒಪ್ಪಿಕೊಂಡಿರುವಾಗ ಒಮ್ದು ಧರ್ಮಕ್ಕೆ ಸೀಮಿತವಾದ ಗೀತಾ ಅಭಿಯಾನಕ್ಕೆ ಸರಕಾರ ಪ್ರಾಯೋಜಕತ್ವ ವಹಿಸಿದ್ದು ಸರಿಯೇ ? ಇದು ವೈದಿಕ ಯಾಜಮಾನ್ಯ ಸಂಸ್ಕೃತಿಯನ್ನು ಸರ್ವ ಸಮಾಜಗಳ ಮೇಲೆ ಬಲವಂತವಾಗಿ ಹೇರಿದಂತಾಗಲಿಲ್ಲವೇ ? ಒಂದು ವೇಳೆ ಬೌದ್ಧರು , ಜೈನರು , ಲಿಂಗಾಯತರು, ಸಿಕ್ಖರು , ಕ್ರಿಶ್ಚಿಯನ್ನರು , ಮುಸ್ಲಿಂ ಸಮಾಜದವರು ತಮ್ಮ ಧರ್ಮವನ್ನು ಆಧರಿಸಿ ಇಂಥ ಕಾರ್ಯವನ್ನು ಕೈಗೊಂಡಿದ್ದರೆ ಸರ್ಕಾರ ಅಷ್ಟೇ ಸೌಮನಸ್ಸಿನಿಂದ , ಉತ್ಸಾಹದಿಂದ ಅವರನ್ನು ಪ್ರೋತ್ಸಾಹಿಸುತ್ತಿತ್ತೇ ? ಗೀತಾ ಅಭಿಯಾನವನ್ನು ಪ್ರೋತ್ಸಾಹಿಸುವ ಮೂಲಕ ಸರಕಾರ ಕರ್ನಾತಕದಲ್ಲಿ ಸಾಂಸ್ಕೃತಿಕ ವಿಷವನ್ನು ಹರಡಿತು. ಎಲ್ಲ ವಿಷಗಳಿಗಿಂತಲೂ ಅತ್ಯಂತ ಅಪಾಯಕಾರಿಯಾದ ವಿಷವೆಂದರೆ ಈ ಸಾಂಸ್ಕೃತಿಕ ವಿಷ. ಇದು ಸರಕಾರದ ಮಟ್ಟದಲ್ಲಿ ಹಲವು ರೂಪದಲ್ಲಿ ಸ್ವಚ್ಛಂದವಾಗಿ ನಡೆಯುತ್ತಲೇ ಇದೆ. ಗಂಗಾನದಿಯ ನೀರನ್ನು ತರಿಸಿ ದೇವಾಲಯಗಳಲ್ಲಿ ಅಭಿಷೇಕ ಮಾಡುವುದು , ತಿರುಪತಿಯಿಂದ ಲಡ್ಡುಗಳನ್ನು ತರಿಸಿ ಪ್ರಸಾದವಾಗಿ ಹಂಚುವುದು , ಮಳೆಗಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡುವುದು , ಮಠಾಧೀಶರ ಆಶೀರ್ವಾದ ಬೇಡುವುದು ಇತ್ಯಾದಿ. ಧರ್ಮ ಮತ್ತು ರಾಜಕಾರಣದ ಈ ಅನೈತಿಕ ಸಂಬಂಧ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುವಂಥದ್ದು. ಇಂಥ ಸ್ವಹಿತಾಸಕ್ತಿಯ ಕುತಂತ್ರ ರಾಜಕಾರಣದಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಜನರ ಜೀವನದ ಮೌಲ್ಯಗಳನ್ನು ನಾಶಮಾಡುತ್ತಿರುವ ಈ ಅಪಾಯಕಾರಿ ಸನ್ನಿವೇಶದಲ್ಲಿ ಶಂಕರಪ್ಪನವರ ಈ ಕೃತಿ ಸಕಾಲಿಕ ಎಚ್ಚರಿಕೆಯ ಕರೆಗಂಟೆಯಾಗಿ ಹೊರಹೊಮ್ಮಿದೆ. ಭಗವದ್ಗೀತೆಯನ್ನು ಜಾತ್ಯಾತೀತವಾದ ಧರ್ಮಗ್ರಂಥವೆಂದು , ಜಾಗತಿಕ ಪಠ್ಯವೆಂದು ಪ್ರಚಾರಮಾಡಲಾಗುತ್ತಿದೆ. ಕೃತಿಯ ಆಂತರ್ಯ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಗೀತೆ ಸ್ಪಷ್ಟವಾಗಿ ವರ್ಣನಿಷ್ಠ , ಜಾತಿನಿಷ್ಠ , ಕರ್ಮಕಾಂಡ ನಿಷ್ಠವಾದ ಕೃತಿ. ಗೀತೆಯಲ್ಲಿ ಕೆಲವು ಕಡೆ ಮನುಷ್ಯನ ಅಂತರಂಗದ ವಿಕಾಸಕ್ಕೆ , ಭೌತಿಕ ಬದುಕಿನ ಒಳಿತಿಗೆ ಪ್ರಸ್ತುತವಾಗಬಹುದಾದ ವಿಚಾರಗಳಿದ್ದರೂ , ಚಾತುರ್ವರ್ಣ್ಯ ವ್ಯವಸ್ಥೆ , ಪ್ರತಿಫಲಾಪೇಕ್ಷೆಯಿಲ್ಲದೆ ಕರ್ಮ ಮಾಡುವುದು ಮುಂತಾದ ಎಷ್ಟೋ ವಿಚಾರಗಳು ಮಾನವ ವಿರೋಧಿಯಾಗಿವೆ. ಅದು ದುಡಿಯುವ ವರ್ಗದ ಜನರನ್ನು , ಸ್ತ್ರೀಯರನ್ನು ನಿಕೃಷ್ಟವಾಗಿ ಕಾಣುತ್ತದೆ. ಅದು ಸಾಮಾನ್ಯ ಜನರ ಚಿಂತನೆಗಳನ್ನು ಅವರ ಆಶೋತ್ತರಗಳನ್ನು , ಅವರ ಜೀವನ ಮೌಲ್ಯಗಳನ್ನು ಪರಿಗಣಿಸಿಲ್ಲ. ಹಾಗಾಗಿ ಇದು ಕೇವಲ ಮೇಲ್ವರ್ಗದ ಹಿತಾಸಕ್ತಿಗಳನ್ನು ಮಾತ್ರ ಕಾಪಾಡುವ ಉಳಿದೆಲ್ಲ ಜನವರ್ಗಗಳ ಹಿತವನ್ನು ದಮನ ಮಾಡುವ ಕೃತಿ. ಇಂಥ ಪ್ರತಿಗಾಮಿ ಕೃತಿಯನ್ನು ಜಾತ್ಯಾತೀತ ಧರ್ಮಗ್ರಂಥವೆಂದು , ಜಾಗತಿಕ ಪಠ್ಯವೆಂದು ವೈದಿಕರು ಪ್ರಚಾರ ಮಾಡುತ್ತಿರುವುದು ನಮ್ಮ ಜನರನ್ನು ಬೌದ್ಧಿಕ ಗುಲಾಮಗಿರಿಯಲ್ಲಿ ಶಾಶ್ವತವಾಗ ಬಂಧಿಸುವ ವೈದಿಕ ರಾಜಕಾರಣದ ಕುತಂತ್ರವೇ ಆಗಿದೆ. ವೈದಿಕ ಮೌಲ್ಯಗಳನ್ನು ಎಲ್ಲ ಸಮಾಜಗಳ ಆದರ್ಶವಾಗಿ ಪ್ರಚಾರ ಮಾಡುತ್ತಿದ್ದಾರೆ. ಯಾವ ವರ್ಣಾಶ್ರಮ ಧರ್ಮವನ್ನು , ವೇದ , ಪುರಾಣಗಳ ಪಾವಿತ್ರ್ಯವನ್ನು ಹೊಗಳುತ್ತಿರುವರೋ ಅದನ್ನು ಭಾರತದ ಬಹು ದೊಡ್ಡ ಸಂತರು , ಶರಣರು , ಅನುಭಾವಿಗಳು ವಿರೋಧಿಸಿದ್ದಾರೆ. ಈ ದೇಶಕ್ಕೆ ಅಂಥ ಸಂತ ಪರಂಪರೆಯೇ ಹೊಸ ಸಿದ್ಧಾಂತ –ಹೊಸ ಜೀವನ ದರ್ಶನವನ್ನು ಕೊಟ್ಟಿರುವುದು. ಅಂಥ ಸಂತರ ತತ್ತ್ವಗಳನ್ನು ಒಪ್ಪಿಕೊಳ್ಳದ ಧರ್ಮ , ನಿಜವಾದ ಧರ್ಮವಾಗಲು ಸಾಧ್ಯವಿಲ್ಲ. ಅದು ಕೇವಲ ಬ್ರಾಹ್ಮಣ ಧರ್ಮ ಮಾತ್ರವಾಗಬಲ್ಲದು. ವೈದಿಕವಾದಕ್ಕೂ , ಬ್ರಾಹ್ಮಣವಾದಕ್ಕೂ , ಹಿಂದುತ್ವವಾದಕ್ಕೂ ವ್ಯತ್ಯಾಸಗಳೇನಿಲ್ಲ. ಪ್ರಾಚೀನ ರೂಪವಾದ ವೈದಿಕತ್ವವೇ ಮಧ್ಯಯುಗದಲ್ಲಿ ಬ್ರಾಹ್ಮಣ ರೂಪ ಪಡೆದು , ಆಧುನಿಕ ಕಾಲದಲ್ಲಿ ಹಿಂದೂತ್ವದ ರೂಪವನ್ನು ಪಡೆದಿದೆ. ನಮಗೆ ಸ್ಪಷ್ಟವಾಗಿ ತಿಳಿಯಬೇಕಾಗಿರುವುದು ಬ್ರಾಹ್ಮಣವಾದಕ್ಕೆ , ಹಿಂದುತ್ವದ ಮುಖವಾಡವನ್ನು ಹಾಕಲಾಗಿದೆ ಎಂಬುದು.. ಆದ್ದರಿಂದ ಬ್ರಾಹ್ಮಣ ಧರ್ಮ , ಹಿಂದೂಧರ್ಮ ಬೇರೆಯಲ್ಲ. ವೈದಿಕ ಸಂಸ್ಕೃತಿಗೆ ವಿರುದ್ಧವಾಗಿ ಹುಟ್ಟಿಕೊಂಡ ಅವೈದಿಕ ಸಂಸ್ಕೃತಿಯ ಹೋರಾಟಗಳನ್ನು-ದರ್ಶನವನ್ನು ನಿರಂತರ ದಮನ ಮಾಡುತ್ತಾ ಬಂದಿರುವ ಈ ಬ್ರಾಹ್ಮಣಶಾಹಿತ್ವದ ಹುನ್ನಾರಗಳನ್ನ ನಮ್ಮ ಜನರು ಇನ್ನಾದರೂ ಅರ್ಥಮಾಡಿಕೊಂಡು ತಮ್ಮ ತಮ್ಮ ಪರ್ಯಾಯಗಳನ್ನು ಬಲಪಡಿಸಬೇಕಾಗಿದ. ಇದಾಗದಿದ್ದರೆ ಜನರು ಬ್ರಾಹ್ಮಣಶಾಹಿತ್ವದ ಗುಲಾಮಗಿರಿಯಲ್ಲೇ ನಿರಂತರ ನರಳಬೇಕಾಗುತ್ತದೆ. ಆದ್ದರಿಂದ ವಿದ್ವಾಂಸರು , ವಿಮರ್ಶಕರು , ಪ್ರಜ್ಞಾವಂತರು , ಬ್ರಾಹ್ಮಣಶಾಹಿತ್ವದ ಪ್ರತಿಗಾಮಿತನ, ಜನವಿರೋಧಿತನ ಮತ್ತ ಶೋಷಣೆಯ ವ್ಯವಸ್ಥೆ ಬದಲಿಗೆ. ಅವೈದಿಕ ಸಂಸ್ಕೃತಿಯ-ದರ್ಶನಗಳ ಪ್ರಗತಿಪರ , ಜನಪರ ಚಿಂತನೆ ಮೌಲ್ಯಗಳ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆಯನ್ನು ಕೈಗೊಂಡು , ವಾಸ್ತವಾಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಇಂಥ ಕಾರ್ಯವನ್ನು ಮಾಡಲು ಶಂಕರಪ್ಪನವರು ಹೆಚ್ಚು ಸಮರ್ಥರಿದ್ದಾರೆ ಎಂಬುದು ನನ್ನ ನಂಬಿಕೆ. ಭಗವದ್ಗೀತೆ-ಬೆಳಕು ನೀಡುವುದೇ : ಕೃತಿಯ ಮೂಲಕ ಕನ್ನಡಕ್ಕೆ ಪ್ರಜ್ಞಾವಂತ ಲೇಖರೊಬ್ಬರು ದೊರೆತಿದ್ದಾರೆ. ಶಂಕರಪ್ಪನವರ ಈ ಕೃತಿಯನ್ನು ಓದಿದಾಗ ಇವರು ಈ ಬಗ್ಗೆ ಇನ್ನಷ್ಟು ಬರೆದಿದ್ದರೆ ಚೆನ್ನಾಗಿತ್ತು ಎನಿಸುತ್ತದೆ. ಜ್ಞಾನ ವಿಜ್ಞಾನಗಳ ಬಗ್ಗೆ ಆಸಕ್ತಿ , ಪರಿಶ್ರಮ ನಮ್ಮ ಸಮಾಜದ ಬಗ್ಗೆ ನೈಜ ಕಾಳಜಿ , ತಾವು ನಂಬಿರುವ ಜೀವನ ದೃಷ್ಟಿಯ ಬಗ್ಗೆ ಬದ್ಧತೆ ಹೊಂದಿರುವ ಈ ಲೇಖಕರು ಕನ್ನಡ ವಿಚಾರ ಸಾಹಿತ್ಯವನ್ನು ಮತ್ತಷ್ಟು ಸೂಕ್ಷ್ಮ ಸಂವೇದನಾಶೀಲವಾಗಿಸಬಲ್ಲರು. ವಿಸ್ತರಿಸಬಲ್ಲರು ಎಂಬ ಭರವಸೆಯನ್ನು ಮೂಡಿಸಿದ್ದಾರೆ. ನೂರಾರು ಹುಸಿಮೌಲ್ಯಗಳು ನಮ್ಮ ಸಮಾಜ , ಜೀವನವನ್ನು ಆಕ್ರಮಿಸಿಕೊಂಡು ನಮ್ಮನ್ನಾಳುತ್ತಿರುವ ಸಂದರ್ಭದಲ್ಲಿ ಇಂಥ ಪ್ರತಿಭಾವಂತ ಚಿಂತಕರು ಸಮಗ್ರ ದೃಷ್ಟಿಯೊಂದಿಗೆ ತೌಲನಿಕ ಅಧ್ಯಯನದ ಮೂಲಕ ನಮ್ಮ ಜನರನ್ನು ಜಾಗೃತಿಗೊಳಿಸಲು ಮುಂದಾದರೆ ಆ ಕಾರ್ಯಕ್ಕೆ ವಿಶೇಷ ಮೌಲಿಕತೆ ದೊರೆಯುತ್ತದೆ ಎಂಬ ಭಾವನೆ ನನ್ನದು. ಸತ್ಯಾನ್ವೇಷಣೆಯನ್ನು ಪ್ರೇರೇಪಿಸಬಲ್ಲ ಇಂಥ ಸತ್ಕೃತಿಯನ್ನು ಕನ್ನಡಿಗರಿಗೆ ನೀಡಿರುವುದಕ್ಕಾಗಿ ಶ್ರೀ ಎನ್. ಶಂಕರಪ್ಪ ತೋರಣಗಲ್ಲು ಇವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಕೃತಿಯನ್ನು ವಿಚಾರನಿಷ್ಠ ಕನ್ನಡಿಗರು ತಮ್ಮದಾಗಿಸಿಕೊಳ್ಳುವರಂದು ಭಾವಿಸುತ್ತೇನೆ. |
Comment Box is loading comments...