ವೈಭವೀಕರಣದ ಚರಿತ್ರೆ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ )
ಸ್ವಾಮಿಗಳ ವೈಭವೀಕರಣ ಹೇಗೆ ಪ್ರಾರಂಭವಾಯಿತು-ಅದಕ್ಕೆ ಯಾರು ಕೊಡುಗೆ ನೀಡಿದರು ಎನ್ನುವ ಚಿತ್ರಣ ಮುಂದಿದೆ.
ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್’ನಲ್ಲಿ ನೂರಾರು ಕಾರ್ಯಕ್ರಮಗಳಿದ್ದು ಅವುಗಳ ಪಟ್ಟಿ ೧೬೦ ಪುಟಗಳಷ್ಟಿದ್ದಿತು. ವರ್ಲ್ಡ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್’ಗೆ ಸಂಬಂಧಿಸಿದ ಪ್ರದರ್ಶನಗಳು ಷಿಕಾಗೋ ನಗರ ಕೇಂದ್ರದಿಂದ ೧೩ ಕಿ.ಮೀ ದೂರದ ಜಾಕ್’ಸನ್ ಪಾರ್ಕ್ ಮತ್ತು ಮಿಡ್’ವೇ ಪ್ಲೇಸ್ಯಾನ್ಸ್’ನಲ್ಲಿ ನಡೆದರೆ , ಷಿಕಾಗೊ ನಗರದ ಕೇಂದ್ರಭಾಗದ ಮಿಷಿಗನ್ ಅವೆನ್ಯೂನಲ್ಲಿ ಹೊಸದಾಗಿ ಕಟ್ಟಲಾದ ಆರ್ಟ್ ಇನ್ಸ್ಟಿಟ್ಯೂಟ್’ನಲ್ಲಿ ವಿಶ್ವ ಧರ್ಮ ಸಂಸತ್ತಿನ ಸಭೆಗಳನ್ನು ಯೋಜಿಸಲಾಗಿದ್ದಿತು. ಆರ್ಟ್ ಇನ್ಸ್ಟಿಟ್ಯೂಟ್’ನಲ್ಲಿ ಉತ್ತರದಲ್ಲಿ ಹಾಲ್ ಆಫ್ ಕೊಲಂಬಸ್ ಮತ್ತು ದಕ್ಷಿಣದಲ್ಲಿ ಹಾಲ್ ಆಫ್ ವಾಷಿಂಗ್ಟನ್ ಎನ್ನುವ ೩೦೦೦ ಆಸನಗಳ ಸಾಮರ್ಥ್ಯದ ಎರಡು ದೊಡ್ದ ಸಭಾಂಗಣಗಳಿದ್ದವು. ಇವಲ್ಲದೆ ಇನ್ನೂ ಕೆಲವು ಸಣ್ಣ ಗಾತ್ರದ ಹಲವು ಸಭಾಂಗಣಗಳಿದ್ದವು.
ನಿಗದಿಯಾಗಿದ್ದಂತೆ ೧೧/೯/೧೮೯೩ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯಾಯಿತು. ಅದರ ಸುದೀರ್ಘ ವರದಿ ೨೯/೧೦/೧೮೯೩ ರ ‘ ಭಾರತದ ‘ದಿ ಮರಾಠ’ ಪತ್ರಿಕೆಯಲ್ಲಿ ಹೀಗೆ ವರದಿಯಾಯಿತು
ಸುದ್ದಿ ಪತ್ರ – ವರದಿಗಾರನಿಂದ –ಷಿಕಾಗೊ-ಯು.ಎಸ್.ಎ- ೧೮ ಸೆಪ್ಟೆಂಬರ್ ೧೮೯೩
ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆ.
ಷಿಕಾಗೊ ಈಗ ಜಗತ್ತಿನ ಆಕರ್ಷಣೆಯ ಕೇಂದ್ರ ಬಿಂದು. ಜಾಗತಿಕ ಜಾತ್ರೆ ಈ ಕಾಲದ ಮಹತ್ತರ ಘಟನೆ ಮತ್ತು ಈ ಮಹಾನ್ ಜಾತ್ರೆಯೊಂದಿಗೆ ಏರ್ಪಡಿಸಲಾಗಿರುವ ವಿಶ್ವ ಧರ್ಮಗಳ ಸಂಸತ್ ಬಹು ಮಖ್ಯ ಸಂಗತಿ. ಘೋಷಣೆಯಾದ ದಿನದಿಂದಲೂ ಜಗತ್ತಿನ ವಿವಿಧ ಭಾಗಗಳಿಂದ ಕಾತರದಿಂದ ಗಮನಿಸಲ್ಪಡುತ್ತಿರುವ ಜಗತ್ತಿನ ಇತಿಹಾಸದಲ್ಲಿಯೇ ಅನನ್ಯವಾದ ಘಟನೆ. ೧೧ ಸೆಪ್ಟೆಂಬರ್ ೧೮೯೩ ರಂದು ಸೋಮವಾರ ಕಾಂಗ್ರೆಸ್ ಆಫ್ ರಿಲಿಜನ್ಸ್ ಎನ್ನುವ ಇನ್ನೊಂದು ಹೆಸರಿನಲ್ಲಿಯೂ ಗುರುತಿಸಲ್ಪಡುವ ವಿಶ್ವ ಧರ್ಮಗಳ ಸಂಸತ್ತಿನ ಉದ್ಘಾಟನೆಯಾಯಿತು. ಬೆಳಿಗ್ಗೆ ೮ ಗಂಟೆಯಿಂದಲೂ ಧರ್ಮ ಸಂಸತ್ತಿಗಾಗಿಯೇ ಕಟ್ಟಲಾಗಿರುವ ಕೊಲಂಬಸ್ ಹಾಲ್’ನ ಮಹಾ ಸಭಾಂಗಣದಲ್ಲಿ ಅಸಾಧಾರಣ ಹುರುಪು , ಹುಮ್ಮಸ್ಸುಗಳು ತುಂಬಿದ್ದವು. ದೀರ್ಘ ಅಂಡಾಕೃತಿಯಲ್ಲಿರುವ ಈ ಕಟ್ಟಡದ ಮೂರು ಭಾಗಗಳಲ್ಲಿ ವಿಶಾಲ ಗ್ಯಾಲರಿಗಳಿವೆ. ಸಭಾಂಗಣ ಮತ್ತು ಗ್ಯಾಲರಿಗಳಲ್ಲಿ ೪೦೦೦ ಕ್ಕೂ ಅಧಿಕ ಜನ ಕುಳಿತುಕೊಳ್ಳಬಹುದು. ಹತ್ತು ಗಂಟೆ ನಿಗದಿತ ಸಮಯವಾಗಿದ್ದರೂ ೯ ಗಂಟೆಗೆ ಮೊದಲೇ ಸಭಾಂಗಣ, ಗ್ಯಾಲರಿಗಳು ತುಂಬತೊಡಗಿದವು. ೧೦ ಗಂಟೆಯ ವೇಳೆಗೆ ಒಬ್ಬ ವ್ಯಕ್ತಿ ನಿಲ್ಲಲೂ ಜಾಗವಿಲ್ಲದಂತಾಯಿತು. ೧೦.೩೦ ಗಂಟೆಗೆ ಸರಿಯಾಗಿ (ಷಿಕಾಗೊ ಪತ್ರಿಕೆಗಳು ೧೦ ಗಂಟೆ ಎಂದಿವೆ) ಧರ್ಮ ಸಂಸತ್ತಿನ ಅಧ್ಯಕ್ಷ್ಗ (ಕಾರ್ಯದರ್ಶಿ) ಜೆ.ಎಚ್ ಬರೋಸ್ ವಿವಿಧ ಧರ್ಮಗಳ ಪ್ರತಿನಿಧಿಗಳನ್ನು ಸಭಾಂಗಣದೊಳಕ್ಕೆ ಕರೆತರುತ್ತಿದ್ದಂತೆಯೆ ಇಬ್ಬಿಬ್ಬರಂತೆ ಅವರು ವೇದಿಕೆ ಹತ್ತಿ ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ನೆರೆದಿದ್ದ ಬೃಹತ್ ಜನ ಸಮೂಹ ಅವರೆಲ್ಲರೂ ಕುಳಿತುಕೊಳ್ಳುವವರೆಗೆ ಚಪ್ಪಾಳೆ ಮತ್ತು ಹರ್ಷೋದ್ಗಾರಗಳನ್ನು ಮಾಡಿತು. ಅದೊಂದು ಅದ್ಭುತ ದೃಶ್ಯವಾಗಿದ್ದಿತು.
ಬೃಹತ್ ಸಭಾಂಗಣ ಧ್ವಜ , ತೋರಣಗಳಿಂದ ಸದಭಿರುಚಿಯಲ್ಲಿ ಆಲಂಕರಿಸಲ್ಪಟ್ಟಿದ್ದು ವಿಶಾಲ ವೇದಿಕೆಯ ಮೇಲೆ ಜಗತ್ತಿನ ಬಹುದೂರದ ಪ್ರದೇಶಗಳ ಪಂಥ , ಧರ್ಮಗಳನ್ನು ಪ್ರತಿನಿಧಿಸುತ್ತಿದ್ದ ಪುರುಷ , ಮಹಿಳೆಯರಿದ್ದರು. ಯುರೋಪಿನ ಬಹುತೇಕ ಎಲ್ಲ ದೇಶಗಳ ಪ್ರತಿನಿಧಿಗಳಿದ್ದರು-ಈಜಿಪ್ಟ್ , ಏಷ್ಯಾ ಮೈನರ್ , ಚೀನಾ , ಜಪಾನ್ ,ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ , ಆಫ್ರಿಕ ಮತ್ತು ನಮ್ಮ ಭಾರತದದವರಿದ್ದರು. ಭಾರತವನ್ನು ಪ್ರತಿನಿಧಿಸುವ ಈ ಮುಂದಿನವರು ವೇದಿಕೆಯ ಮೇಲಿದ್ದರು. ಕಲ್ಕತ್ತದ ಬ್ರಾಹ್ಮ ಸಮಾಜದ ಶ್ರೀ ಪ್ರತಾಪಚಂದ್ರ ಮಜುಂದಾರ್ , ಬಾಂಬೆ ಬ್ರಾಹ್ಮ ಸಮಾಜದ ಬಲವಂತ ಭಾವು ನಗರ್ಕರ್ , ಬಾಂಬೆಯ ಜೈನ ವೀರಚಂದ ಗಾಂಧಿ , ಅಲಹಾಬಾದ್ ಬ್ರಾಹ್ಮ ಸಮಾಜದ ಜಿ.ಎನ್.ಚಕ್ರವರ್ತಿ , ಬಂಗಾಳದ ಪ್ರಗತಿಪರ ಬ್ರಾಹ್ಮಣ ಸ್ವಾಮಿ ವಿವೇಕಾನಂದ , ಕೊಲಂಬೊ, ಸಿಲೋನಿನ ಬೌದ್ಧ ಧರ್ಮಪಾಲ ಹಾಗೂ ನನ್ನಿಂದ ಹೆಸರು ಪತ್ತೆ ಹಚ್ಚಲಾಗದ ಇನ್ನು ಕೆಲವರು. ಭಾರತ ಪ್ರಬಲವಾಗಿ ಪ್ರತಿನಿಧಿಸಲ್ಪಟ್ಟಿದೆ ಎನ್ನುವುದು ಸಮಾಧಾನದ ವಿಷಯವಾಗಿದ್ದು , ಪತ್ರಿಕೆಗಳ ವರದಿಗಳನ್ನು ಗಮನಿಸಿದರೆ ಭಾರತ ಜಗತ್ತಿನ ಇತರ ದೇಶಗಳಿಗಿಂತ ಎತ್ತರದ ಸ್ಥಾನದಲ್ಲಿರುವುದು ಸ್ಪಷ್ಟವಾಗುತ್ತಿದ್ದಿತು. ಕ್ರೈಸ್ತರು ಮತ್ತು ಮುಸ್ಲಿಮರು , ಯಹೂದಿಗಳು ಮತ್ತು ಜೆಂಟೈಲರು , ಹಿಂದೂಗಳು ಮತ್ತು ಪಾರ್ಸಿಗಳು , ಬೌದ್ಧರು ಮತ್ತು ಬ್ರಾಹ್ಮಣರು , ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರು , ಮಹಾ ಸನಾತನವಾದಿಗಳು ಮತ್ತು ವೈಚಾರಿಕರು ಭುಜಕ್ಕೆ ಭುಜ ಒತ್ತಿ ಒಂದೇ ವೇದಿಕೆಯ ಮೇಲೆ ಕುಳಿತಿದ್ದರು. ಜಗತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಾಮಾಣಿಕತೆ , ವಿಶ್ವಾಸ ಮತ್ತು ಪ್ರಜ್ಞಾಪೂರ್ವಕವಾಗಿ ಜಗತ್ತಿನ ಪಂಥ , ಧರ್ಮಗಳ ಬೇರಿನಲ್ಲಿರುವ ಅವ್ಯಯ , ಶಾಶ್ವತ ತತ್ತ್ವಗಳನ್ನು ಸಾರಲು ಸೇರಿದ್ದ ಶಾಂತಿಯುತ ಸಭೆ ಅದಾಗಿದ್ದಿತು. ತಮ್ಮ ರಾಷ್ಟ್ಟ್ರೀಯ ಉಡುಗೆಗಳನ್ನುಟ್ಟು ಅಲ್ಲಿ ಕುಳಿತಿದ್ದವರ ಮುಖದಲ್ಲಿ ಪ್ರಾಮಾಣಿಕತೆ ಮತ್ತು ಕಾಳಜಿಗಳು ತುಂಬಿದ್ದು ಬಹು ದಿನಗಳಿಂದ ನಿರೀಕ್ಷಿಸಿದ್ದ ಮಾನವರ ನಡುವಿನ ಶಾಂತಿ ಮತ್ತು ಸಾಮರಸ್ಯದ ದಿನದಂತೆ ಭಾಸವಾಯಿತು. ಜಗತ್ತಿನ ಧರ್ಮಗಳ ಚರಿತ್ರೆಯಲ್ಲಿ ಇದು ಸಂಪೂರ್ಣ ಹೊಸಯುಗದ ಪ್ರಾರಂಭ ಎನ್ನುವುದರಲ್ಲಿ ಸಂಶಯವಿಲ್ಲವಾದರೂ ಪರೋಕ್ಷವಾಗಿ ಇದು ಮುಂದೆ ದೇಶ ದೇಶಗಳ ನಡುವಿನ ಸಂಬಂಧದ ಮೇಲೂ ಪ್ರಭಾವ ಬೀರುತ್ತದೆ. ಎಲ್ಲರೂ ಕುಳಿತಾದ ಮೇಲೆ ಪ್ರತಿಯೊಂದು ಧರ್ಮದ ಗೌರವಾರ್ಥವಾಗಿ ಗಂಟೆಯಿಂದ ನೂರು ಗಂಭೀರ ಧ್ವನಿಗಳನ್ನು ಹೊರಡಿಸಲಾಯಿತು. (೧೦ ಧ್ವನಿಗಳು-ಜಗತ್ತಿನ ಪ್ರಮುಖ ೧೦ ಧರ್ಮಗಳ ಸಂಕೇತ ) . ಗಂಟೆ ಪ್ರತಿಯೊಂದು ಸಲ ಬಡಿದಾಗಲೂ ಅದರ ದನಿ ಸುದೀರ್ಘ ಗಂಭೀರವಾಗಿದ್ದು ಅದರ ಧ್ವನಿ , ಪ್ರತಿಧ್ವನಿ ಸಭಾಂಗಣದಲ್ಲಿ ಮಾರ್ದನಿಸಿದಾಗ ಅಲ್ಲಿ ನೆರೆದಿದ್ದ ೫೦೦೦ ಜನ ಮಂತ್ರಮುಗ್ದರಾಗಿ ಕುಳಿತಿದ್ದರು. ಗಂಟೆಯ ನಿನಾದ ಧರ್ಮದ ಹೆಸರಿನಲ್ಲಿ ನಡೆಯುವ ಎಲ್ಲ ಬಗೆಯ ಧರ್ಮಾಂಧತೆ , ದೌರ್ಜನ್ಯ , ಸರ್ವಾಧಿಕಾರ, ಅಸಹನೆ ,ಮತ್ತು ಭೇದಭಾವಗಳ ಶವಪೆಟ್ಟಿಗೆಗೆ ಹೊಡೆದ ಮೊಳೆಯೋ ಎನ್ನುವಂತೆ ಭಾಸವಾಗುತ್ತಿದ್ದಿತು. ಸಭೆಯ ನಡಾವಳಿಗಳು ಅಲ್ಲಿದ ಪ್ರತಿಯೊಬ್ಬರ ಹೃದಯವನ್ನು ತಟ್ಟಿ ಗಂಭೀರವಾಗಿಸಿದವು. ಗಂಟೆಯ ಕೊನೆಯ ದನಿ ಕ್ಷೀಣವಾಗಿ ಇಲ್ಲವಾಗುತ್ತಿದ್ದಂತೆಯೇ ಇಡೀ ಸಭೆ ಎದ್ದು ನಿಂತು ಮಹಾ ಗಾನವನ್ನು ಹಾಡಿತು. ಆ ಹಾಡು ಹೀಗಿದೆ. (ಹಾಡಿನ ಸಾಲಗಳು)
ಗಂಭೀರವಾಗಿ ಹಿನ್ನೆಲೆಯಲ್ಲಿ ವಾದ್ಯಗಳು ಮೊಳಗುತ್ತಿರಲು ಇಡೀ ಮಾನವ ಕುಟುಂಬವೇ ಒಕ್ಕೊರಲಿನಿಂದ ಹಾಡಿತೆಂಬಂತೆ ಸಭೆ ದನಿಗೂಡಿಸಿತು. ಇದಾದ ನಂತರ ಸ್ವರ್ಗದಲ್ಲಿರುವ ನಮ್ಮ ತಂದೆಯೇ ಎನ್ನುವ ವಿಶ್ವಗಾನ ಮೂಡಿಬಂದಿತು. ಹಾಡಿನ ನಂತರ ಸಭಿಕರು ಮತ್ತು ಪ್ರತಿನಿಧಿಗಳು ಕುಳಿತರು. ಆಗ ಮೃದು ಮತ್ತು ಸೌಮ್ಯ ಸ್ವಭಾವದ ವಿಶ್ವ ಧರ್ಮ ಸಂಸತ್ತಿನ ಅಧ್ಯಕ್ಷ (ಕಾರ್ಯದರ್ಶಿ) ಎದ್ದು ನಿಂತು ಹೃದಯಾಂತರಾಳದ ಭಾಷಣದ ಮೂಲಕ ಪ್ರತಿನಿಧಿಗಳಿಗೆ ಹಾರ್ದಿಕ ಸ್ವಾಗತ ಕೋರಿದರು. ಅವರ ಭಾಷಣ ಚುಟುಕಾಗಿದ್ದಿತು – ಅವರು ದೀರ್ಘ ಭಾಷಣ ಮಾಡಲಿಲ್ಲ ಅದಕ್ಕೆ ಅವರು ಸಮರ್ಥರಲ್ಲ ಎನ್ನುವುದಕ್ಕಿಂತ ಭಾವನೆಗಳು ಉಕ್ಕಿಬಂದು ಅವರಗೆ ಮಾತನಾಡಲಾಗಲಿಲ್ಲ. ಪ್ರೆಸ್’ಬೈಟೇರೀಯನ್ ಚರ್ಚ್ ಮಿನಿಸ್ಟರ್ ಆಗಿರುವ ಡಾ. ಜಾನ್ ಬರೋಸ್ ವಿಶಾಲ ದೃಷ್ಟಿಕೋನ ಮತ್ತು ಉದಾರ ಹೃದಯದ ಗಣ್ಯ ವ್ಯಕ್ತಿ. ಅವರು ಕೂಡ ಸಮಿತಿಯ ಅಧ್ಯಕ್ಷರು (ಕಾರ್ಯದರ್ಶಿ). ಧರ್ಮ ಸಂಸತ್ತಿನ ಮೂಲ ಕಲ್ಪನೆ ಅವರದೇ. ಉಜ್ವಲ ಮಾತುಗಳಲ್ಲಿ ಅವರು ಧರ್ಮ ಸಂಸತ್ತಿನ ಆರಂಭ ,ಬೆಳವಣಿಗೆ , ಸಂಘಟಕರು ಎದುರಿಸಿದ ಸಮಸ್ಯೆಗಳ ಸಂಕ್ಷಿಪ್ತ ವಿವರ ನೀಡಿದರು. ಅವರ ಮಾತುಗಳಲ್ಲಿ ಹುಮ್ಮಸ್ಸು ಮತ್ತು ಪ್ರಾಮಾಣಿಕತೆ ತುಂಬಿದ್ದವು. ಅವರ ನಡವಳಿಕೆ ಮತ್ತು ಪ್ರಸ್ತುತಿ ಗೆಲುವಿನದಾಗಿದ್ದು ,ಅವರಿಗೆ ಅವರೇ ಬೆಳೆಸಿಕೊಂಡು ಬಂದ ಗಂಭೀರ ವಾಣಿಯಾಗಿದ್ದಿತು. ಅವರು ಮಾತನಾಡುತ್ತಿರುವಾಗ ಅವರ ಮೂಗು ತೀವ್ರ ಭಾವನೆಗಳಿಂದ ಕಂಪಿಸುತ್ತಿರುವಂತೆ ಭಾಸವಾಗುತ್ತಿದ್ದಿತು; ಅದು ಆಳ ಅನುಕಂಪಿತವಾಗಿದ್ದಿತು. ಈ ಸ್ವಾಗತ ನುಡಿಗಳ ನಂತರ ಅಮೆರಿಕದ ಹಲವು ಗಣ್ಯರು ಕಿರು ಸ್ವಾಗತ ಭಾಷಣಗಳನ್ನು ಮಾಡಿದರು. ಅವರಲ್ಲಿ ರೆ. ಆಗಸ್ಟ್ ಚಾಪನ್ ಡಿ.ಡಿ , ಆರ್ಚ್ ಬಿಷಪ್ ಪಿ.ಎ. ಪಿಹ್ಯಾನ್ , ಮೆವ್ ಅಲೆಕ್ ಮೆಕಿಂಜಿ , ವಿಶ್ವ ಕೊಲಂಬಿಯನ್ ಎಕ್’ಪೊಸಿಷನ್ ಅಧ್ಯಕ್ಷ ಆನರಬಲ್ ಹಾರ್ಲೊ ಎನ್. ಹಿಗ್ಗಿನ್ ಬಾಥಮ್ ಅತಿ ಗಣ್ಯರು. ಇವರಲ್ಲಿ ವಿಶ್ವ ಕೊಲಂಬಿಯನ್ ಎಕ್’ಪೊಸಿಷನ್ ಅಧ್ಯಕ್ಷ ಅತಿ ಮುಖ್ಯ ವ್ಯಕ್ತಿ. ಆದರದ ಸ್ವಾಗತ ಭಾಷಣಕ್ಕೆ ಕೆಲ ಪ್ರತಿಧಿಗಳು ಉತ್ತರ ನೀಡಿದರು. ಅತ್ಯಂತ ವಿಭಿನ್ನ ಧಾರ್ಮಿಕ ಶ್ರದ್ಧೆಯ ವ್ಯಕ್ತಿಗಳನ್ನು ಕೆಲದಿನದ ಮಟ್ಟಿಗಾದರೂ ಒಂದೇ ವೇದಿಕೆಯ ಮೇಲೆ ತಂದು ಮನುಷ್ಯರೆಲ್ಲರೂ ಒಬ್ಬನೇ ತಂದೆಯ ಮಕ್ಕಳೆಂದು ಒಪ್ಪಿ , ವಿಭಿನ್ನ ಧರ್ಮಗಳಲ್ಲಿರುವ ಸಾಮಾನ್ಯ ತತ್ತ್ವಗಳನ್ನು ಗುರುತಿಸುವ ಸಂಗತಿಯೇ ಈ ಅತಿಶಯ ಕ್ಯಾಥೊಲಿಕ್ ಮತ್ತು ಜಾಗತಿಕ ಸಭೆಯ ಅತ್ಯಂತ ಆಸಕ್ತಿದಾಯಕ ಲಕ್ಷಣವಾಗಿದೆ. ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಚೀನಾ, ಜಪಾನ್, ರಷ್ಯಾ , ಅರ್ಮೇನಿಯಾ, ಸ್ವೀಡನ್ , ಈಜಿಪ್ತ್ ಹಾಗೂ ಅಂತಹ ಹಲವು ದೂರದ ದೇಶಗಳಿಂದ ಬಂದಿದ್ದ ಪ್ರತಿನಿಧಿಗಳಿಂದ ಸಮರ್ಥವಾದ , ಹುಮ್ಮಸ್ಸಿನಿಂದ ತುಂಬಿದ ಪ್ರತಿಕ್ರಿಯೆಗಳು ಬಂದವು. ಮೊದಲ ದಿನ ಮಾತನಾಡಿದ ಭಾರತದ ಪ್ರತಿನಿಧಿಗಳೆಂದರೆ ಪಿ.ಸಿ.ಮಜುಂದಾರ್, ಬಿ.ಬಿ ನಗರ್ಕರ್ ಹಾಗೂ ಶ್ರೀ ಜಿ.ಎನ್ ಚಕ್ರವರ್ತಿ. ಪಿ.ಸಿ ಮಜುಂದಾರರು ಮಾಡಿದ ಭಾಷಣ ಅತ್ಯಂತ ನಿರರ್ಗಳ ಮತ್ತು ಖಡಾಖಂಡಿತವಾಗಿದ್ದಿತು. ಅದು ಸಭೆಯ ಮೇಲೆ ಭಾರಿ ಪರಿಣಾಮ ಬೀರಿ ಭಾರತದ ಬಗ್ಗೆ ಉನ್ನತ ಗೌರವಾದರಗಳನ್ನು ಮೂಡಿಸಿತು. ಘನತೆಯೆತ್ತ ಈ ಬಂಗಾಳಿಯ ಭಾಷಣ ಇತರ ಭಾರತೀಯರಿಗೆ ಒಂದು ದಾರಿಯನ್ನು ಹಾಕಿಕೊಟ್ಟಿತು. ಈ ಮುಂದೆ ಪಿ.ಸಿ ಮಜುಂದಾರರು ಮಾಡಿದ ಭಾಷಣದ ಕಿರು ಸಾರಾಂಶ ಕೊಡಲಾಗಿದೆ. (ಷಿಕಾಗೊ ಹೆರಾಲ್ಡ್ ಪತ್ರಿಕೆ ವರದಿಯ ಆಯ್ದ ದೀರ್ಘ ಭಾಗ ನೀಡಲಾಗಿದೆ). ಬಿ.ಬಿ ನಗರ್ಕರ್ ಮಾಡಿದ ಭಾಷಣದ ಸಾರಾಂಶ (ಷಿಕಾಗೊ ಹೆರಾಲ್ಡ್ ಪತ್ರಿಕೆ ವರದಿಯ ಆಯ್ದ ದೀರ್ಘ ಭಾಗ ನೀಡಲಾಗಿದೆ).
.ಹಿಂದೂ ,ಬೌದ್ಧ, ಬ್ರಾಹ್ಮ ಧರ್ಮಗಳು ಭಾರಿ ಗಮನ ಸೆಳೆದಿದ್ದು ಕಾತರ ಮತ್ತು ನಿರೀಕ್ಷೆಯಲ್ಲಿರುವ ಕೇಳುಗರು ಭಾರತದ ಪ್ರತಿನಿಧಿಗಳು ಹೇಳುವ ಪ್ರತಿಯೊಂದು ಮಾತನ್ನು ಜಾಗರೂಕತೆಯಿಂದ ಕೇಳುತ್ತಾರೆ. ಜನರ ಆಸಕ್ತಿ ಇಲ್ಲಿಗೇ ನಿಲ್ಲುವುದಿಲ್ಲ. ಊಟದ ವಿರಾಮ ಮತ್ತು ಚಹಾದ ಬಿಡುವಿನ ವೇಳೆಯಲ್ಲಿ ಕೇಳುಗರು ವಿದೇಶಿ ಪ್ರತಿನಿಧಿಗಳ ಸುತ್ತ –ವಿಶೇಷವಾಗಿ ಭಾರತೀಯ ಪ್ರತಿನಿಧಿಗಳ ಸುತ್ತ – ನೆರೆದು ಪ್ರಶ್ನೆಗಳ ನಂತರ ಪ್ರಶ್ನೆಯನ್ನು ಕೇಳುತ್ತಾರೆ. ಭಾರತೀಯರನ್ನು ಅವರ ಲಕ್ಷಣಗಳಿಂದ ಗುರುತಿಸುವ ಅವರು ಎಲ್ಲೆಂದರಲ್ಲಿ , ಯಾವಾಗೆಂದರೆ ಆವಾಗ , ಅವಕಾಶ ಸಿಕ್ಕಾಗಲೆಲ್ಲ ಅವರನ್ನು ಸರಪಳಿಯಂತೆ ಸುತ್ತವರೆದು ಕಠಿಣ ಪ್ರಶ್ನೆಗಳನ್ನು ಎಸೆಯುತ್ತಾರೆ. ನಿಜ ಹೇಳಬೇಕೆಂದರೆ ಉತ್ತರಿಸಲು ಬಹು ಕಠಿಣವಾದ ಪ್ರಶ್ನೆಗಳವು. ಈ ಜನರು ಅಣಕಿಸುವರಾಗಲಿ , ತುಚ್ಛವಾಗಿ , ಕುಹಕದಿಂದ ಕಾಣುವವರಾಗಲಿ ಅಲ್ಲ. ಅವರಲ್ಲಿ ವಿಚಾರಣೆಯ ಪ್ರಾಮಾಣಿಕ ಹುಮ್ಮಸ್ಸು ತುಂಬಿದ್ದು ಶೋಧನೆಯಲ್ಲಿ ಪ್ರಾಮಾಣಿಕತೆಯದೆ. ಇವರು ನಾವು ಭಾರತದಲ್ಲಿ ನೋಡುವ ಧರ್ಮಾಂಧ ಕ್ರೈಸ್ತರಂತಲ್ಲ. ಬದಲಾಗಿ ಧರ್ಮಾಂಧತೆ ಮತ್ತು ಕ್ಷುಲ್ಲಕ ಮನೋಭಾವವನ್ನು ವಿರೋಧಿಸುವವರು!
ಪ್ರತಿಯೊಬ್ಬ ಭಾಷಣಕಾರನು ಯಾವುದೇ ಧರ್ಮ , ಪಂಥಕ್ಕೆ ಸೇರಿರಲಿ ಇತರ ಧರ್ಮಗಳನ್ನು ಅತ್ಯಂತ ಗೌರವದಿಂದ ನೋಡುತ್ತಾನೆ. ಒಮ್ಮೆ ಮಿಷನರಿ ಕೆಲಸದ ಮೇಲೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಭಾಷಣಕಾರ ಜೋಸೆಫ್ ಕುಕ್ ಹೊರತಾಗಿ ಈವರೆಗೆ ಯಾರೂ ಕೀಳು ಮಾತುಗಳನ್ನಾಡಿಲ್ಲ. ಕುಕ್ ಸಾಂಪ್ರದಾಯಿಕ ಕ್ರೈಸ್ತ ಚರ್ಚ್ ಪ್ರತಿನಿಧಿ. ಆತ ಎಲ್ಲರನ್ನೂ ತೀವ್ರವಾಗಿ ಹೊರಗಿಡುವ ಸ್ವಭಾವದಾತ. ಅಮೆರಿಕದಲ್ಲಿ ಆತನನ್ನು ಯಾವುದಕ್ಕೂ ಬಾರದ , ಬಗ್ಗದ ಗಟ್ಟಿ ಕಲ್ಲಿನಂತೆ ಪರಿಗಣಿಸುತ್ತಾರೆ. ಈತನೊಬ್ಬನೇ ಏಕೈಕ ಅಪವಾದ; ಅದೃಷ್ಟವೆಂದರೆ ಒಬ್ಬನಿಗಿಂತ ಹೆಚ್ಚಿನ ಕುಕ್ ಇಲ್ಲಿಲ್ಲ. ಆದ್ದರಿಂದ ಅಹಿತಕರವಾದುದು ಏನೂ ಜರುಗದು. ತಾಳ್ಮೆ ಮತ್ತು ತೀವ್ರ ಅನುಗಮನ ಕೇಳುಗರ ಲಹರಿಯಾಗಿವೆ. ಒಂದು ದೃಷ್ಟಿಯಲ್ಲಿ ಅಲ್ಲಿರುವರೆಲ್ಲರೂ ವಿಭಿನ್ನ. ಜಾಗತಿಕ ಮಹಾಜಾತ್ರೆ ಅವರನ್ನು ಅಮೆರಿಕ , ಯುರೋಪ್’ನ ಬಹು ದೂರಗಳಿಂದ –ಬಹುಶಃ ಜಗತ್ತಿನ ಎಲ್ಲ ಕಡೆಯಿಂದ ಒಗ್ಗೂಡಿಸಿದೆ. ಅವರೆಲ್ಲರೂ ವಿಭಿನ್ನ ತರಬೇತಿ ಪಡೆದಿದ್ದರೂ ೪೦೦೦ ಜನರ ಸಮುದ್ರದಂತಹ ಸಭೆಯಲ್ಲಿ ಒಟ್ಟಾಗಿ ಕುಳಿತಾಗಿ ಪರಿಪೂರ್ಣ ಶಾಂತರಾಗಿ , ಸಾವಧಾನದಿಂದ ಇರುತ್ತಾರೆ. ವೇದಿಕೆಯ ಮೇಲಿರುವ ಭಾಷಣಕಾರ ಮತ್ತು ಕೇಳುಗರ ನಡುವೆ ಸಂಪೂರ್ಣ ಸಾಮರಸ್ಯವಿದೆ. ಆತ ಏನು ಹೇಳುತ್ತಾನೊ ಅದನ್ನು ಕ್ಷೋಭೆಗೊಳ್ಳದೆ ಸಮಚಿತ್ತದಿಂದ ಕೇಳುತ್ತಾರೆ ಮತ್ತು ಆತ ಅವರ ಉನ್ನತ ಭಾವನೆಗಳನ್ನು ಉದ್ದೀಪನಗೊಳಿಸುವಂತಹುದು ಏನನ್ನಾದರೂ ಹೇಳಿದರೆ ಚಪ್ಪಾಳೆಯಿಂದ ಮೆಚ್ಚುಗೆ ಸೂಚಿಸುತ್ತಾರೆ.
೨೧ ಸೆಪ್ಟೆಂಬರ್ ೧೮೯೩
ಧರ್ಮ ಸಂಸತ್ತಿನ ಸಭೆಗಳು ಹೆಚ್ಚಿನ ಜನರನ್ನು ಸೆಳೆಯುತ್ತಿವೆ. ಆಸಕ್ತಿ ಸ್ವಲ್ಪವೂ ಕುಂದಿಲ್ಲ. ನಿನ್ನೆ ಮೊದಲ ಬಾರಿ ಕೇಳುಗರು ಭಾಷಣಕಾರನೊಬ್ಬನ ದೃಷ್ಟಿಕೋನವನ್ನು ಅನುಮೋದಿಸಲಿಲ್ಲ. ಈತ ಹೊಸದಾಗಿ ಇಸ್ಲಾಂಗೆ ಮತಾಂತರವಾಗಿರುವ ಅಮೆರಿಕದ ರಸೆಲ್ ಅಲೆಕ್ಸಾಂಡರ್ ವೆಬ್. ಇಸ್ಲಾಂ ತತ್ತ್ವಗಳನ್ನು ಕುರಿತು ಮಾತನಾಡುತ್ತ ಬಹುಪತ್ನಿತ್ವವನ್ನು ಸಮರ್ಥಿಸತೊಡಗುತ್ತಿದ್ದಂತೆಯೇ ಗೊಣಗಾಟ , ಕೀರಲು ದನಿಗಳು ಹೊರಬರುತ್ತ ‘ನಾಚಿಕೆಗೇಡು, ನಾಚಿಕೆಗೇಡು’ ಎನ್ನುವ ಕೂಗು ಹಾಗೂ ಅಸಮ್ಮತಿ ಸಭಿಕರ ಕಡೆಯಿಂದ ಬಂದಿತು. ಮತಾಂತಗೊಂಡಿರುವ ಈ ಯಾಂಕಿ ತನ್ನ ಮಾತು ಕೇಳಿಸುವಂತೆ ಗಟ್ಟಿದನಿಯಲ್ಲಿ ಮುಂದುವರೆದನು ; ಆದರೆ ಸಭಿಕರ ಗದ್ದಲ ಹೆಚ್ಚಿ ಆತನ ಮಾತುಗಳು ಕೇಳದಂತಾದವು. ಕೊನೆಗೆ ಈ ವಿಷಯ ಬಿಟ್ಟು ಇಸ್ಲಾಂನ ಇತರ ತತ್ತ್ವಗಳತ್ತ ಸಾಗಬೇಕಾಯಿತು. ಧರ್ಮ ಸಂಸತ್ತಿನ ಇದೇ ಮೊದಲ ಬಾರಿಗೆ ಸಭಿಕರಿಂದ ನಿರ್ಣಯಕಾರಿ ಅಸಮ್ಮತಿಯ ಸೂಚನೆಗಳು ಹೊರಬಂದವು. ಕ್ರೈಸ್ತ , ಹಿಂದೂ , ಬೌದ್ಧ , ಬ್ರಾಹ್ಮ , ಪಾರ್ಸಿ , ಜೈನ .ಷಿಂಟೊ ಹೀಗೆಲ್ಲರೂ ತಮ್ಮ ಧಾರ್ಮಿಕ ತತ್ತ್ವಗಳನ್ನು ಮೆಚ್ಚುಗೆಯ ಚಪ್ಪಾಳೆಯ ಹೊರತು ಯಾವುದೇ ಅಡಚಣೆಯಿಲ್ಲದೆ ಮಂಡಿಸಿದರು. ಅಸಮ್ಮತಿ , ಪ್ರತಿಭಟನೆ ಇಸ್ಲಾಂಗೆ ಮತಾಂತರವಾಗಿ ತನ್ನನ್ನು ಮಹಮ್ಮದ್ ವೆಬ್ ಎಂದು ಕರೆದುಕೊಳ್ಳುತ್ತಿರುವ ಆತನಿಗೆ ಮಾತ್ರ ಮೀಸಲಾಗಿದ್ದವು. ಇವೆರಡು ಸನ್ನಿವೇಶಗಳು ಎರಡು ಮುಖ್ಯ ಅಂಶಗಳನ್ನು ಸೂಚಿಸುತ್ತವೆ. ಮಹಮ್ಮದ್ ವೆಬ್ ಹೇಳಿಕೆಗಳು ಇಸ್ಲಾಂ ತತ್ತ್ವಗಳಿಗೆ ಅನುಗುಣವಾಗಿದ್ದರೂ ಸಭಿಕರ ಸಿಡಿದೇಳುವಿಕೆ ಅಮೆರಿಕದ ಜನರ ಮನಸ್ಥಿತಿಯನ್ನು ತೋರಿಸುತ್ತದೆ. ಸಭಿಕರ ಅಸಮಾಧಾನ ತಾತ್ಕಾಲಿಕವಾಗಿದ್ದಿತು. ವೆಬ್ ತನ್ನ ವಾದವನ್ನು ಬದಲಿಸಿ , ಕೆರಳಿಸುವುದನ್ನು ನಿಲ್ಲಿಸಿದ ತಕ್ಷಣ ಎಲ್ಲವೂ ಶಾಂತವಾಗಿ ಮೊದಲಿನಂತೆ ಸರಾಗವಾಗಿ ನಡೆಯತೊಡಗಿತು.
ನಿನ್ನೆ ಬೆಳಿಗ್ಗೆ ಪಿ.ಸಿ ಮಜುಂದಾರ್ ಬ್ರಾಹ್ಮ ಸಮಾಜದ ಧ್ಯೇಯೋದ್ಧೇಶಗಳನ್ನು ಕುರಿತಾಗಿ ವಾಷಿಂಗ್ಟನ್ ಹಾಲ್’ನಲ್ಲಿ ನೆರೆದಿದ್ದ ಯೂನಿಟೇರಿಯನ್ ಮತ್ತು ಫ್ರೀ ರಿಲಿಜಿಯಸ್ ಅಸೋಸಿಯೇಷನ್ ಜನರಿಗೆ ಆಸಕ್ತಿಕರ ಭಾಷಣ ಮಾಡಿದರು. ರಾತ್ರಿ ಫ್ರೀ ರಿಲಿಜಿಯಸ್ ಅಸೊಸಿಯೇಷನ್ ಬ್ಯಾಕೆಟ್’ನಲ್ಲಿ ಬಿ.ಬಿ ನಗರ್ಕರ್ ‘ದಿ ಪ್ರಾಬ್ಲಮ್ಸ್ ಆಫ್ ಇಂಡಿಯನ್ ಸೋಷಿಯಲ್ ಲೈಫ್ ‘ ಎನ್ನುವ ಭಾಷಣ ಮಾಡಿದರು. ಈ ಎರಡು ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯ ಕೇಳುಗರು ನೆರೆದಿದ್ದು ಭಾಷಣಕಾರರನ್ನು ಹುಮ್ಮಸ್ಸಿನಿಂದ ಒಪ್ಪಿದರು.
೨೯/೧೦/೧೮೯೩- ದಿ ಮರಾಠ ಪತ್ರಿಕೆಯಲ್ಲಿ ಬಂದ ಈ ಸಹಜ ವರದಿಯಲ್ಲಿ ಸ್ವಾಮಿಯವರನ್ನು ಕುರಿತಾಗಿ ಏನೂ ಹೇಳಿಲ್ಲ ಎಂದು ಶಂಕರಿ ಪ್ರಸಾದ್ ಬಸು ಅಸಮಾಧಾನಗೊಂಡಿದ್ದಾರೆ.ಆದರೆ ಈಗ ಭಾರತದಲ್ಲಿ ಜನಜನಿತವಾಗಿರುವಂತೆ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳ ಭಾಷಣ ಮತ್ತು ಪ್ರಭಾವ ಅಸಾಧಾರಾಣವಾಗಿರದೆ ಸಾಮಾನ್ಯ ಮಟ್ಟದ್ದಾಗಿದ್ದಿತು ಎನ್ನುವುದೇ ನಿಜ.
**********************************
ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯ ದಿನ ಮಾಡಿದ ಮೊದಲ ಭಾಷಣದಲ್ಲಿ ‘ ಅಮೆರಿಕದ ಅಣ್ಣ ತಮ್ಮಂದಿರೇ , ಅಕ್ಕ ತಂಗಿಯರೇ’ ಎನ್ನುವುದರ ಮೂಲಕ ಅವರು ಅಮೆರಿಕವನ್ನು ಗೆದ್ದರು , ವಿಶ್ವವಿಜೇತರಾದರು ಎನ್ನುವ ಕಟ್ಟು ಕಥೆ ಕಳೆದ ನೂರು ಇಪ್ಪತ್ತು ವರ್ಷಗಳಿಂದ ಭಾರತದಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿದೆ. ಆದರೆ ಆ ದಿನದ ಪತ್ರಿಕಾ ವರದಿಗಳಿಂದ ಹಲವು ಭಾಷಣಗಳಲ್ಲಿ ಅದೂ ಕೂಡ ಒಂದಾಗಿದ್ದಿತೆನ್ನುವುದು ಸ್ಪಷ್ಟ. ಅವರು ಮೊದಲ ದಿನ ಮಾಡಿದ ಈ ಭಾಷಣವನ್ನು ಅಮೆರಿಕದ ಯಾವ ಪತ್ರಿಕೆಯೂ ಪೂರ್ಣವಾಗಿ ಮುದ್ರಿಸಿಲ್ಲ. ಈಗ ಲಭ್ಯವಿರುವ ಭಾಷಣ ‘ಷಿಕಾಗೊ ಟ್ರಿಬ್ಯೂನ್ ‘ ‘ ಷಿಕಾಗೊ ಹೆರಾಲ್ಡ್’ , ಷಿಕಾಗೊ ಡೈಲಿ ಇಂಟರ್ ಓಷನ್ ಮತ್ತು ಷಿಕಾಗೊ ರೆಕಾರ್ಡ್ ಈ ನಾಲ್ಕು ಪತ್ರಿಕೆಗಳಲ್ಲಿ ಬಂದ ಸುದ್ದಿಯ ಜೋಡಣೆ ಮಾತ್ರ. (8)
ವಿಶ್ವ ಧರ್ಮ ಸಮ್ಮೇಳನದ ದಾಖಲೆಗಳು ಭಾರತದಿಂದ ಭಾಗವಹಿಸಿದ್ದವರಲ್ಲಿ ಯಾರು ಮೊದಲು ಮಾತನಾಡಿದರು, ಯಾರು ಎಷ್ಟು ಹೊತ್ತು ಮಾತನಾಡಿದರು, ಅವರು ತಮ್ಮ ಧರ್ಮವನ್ನು ಸರಿಯಾಗಿ ಪ್ರತಿನಿಧಿಸಿದರೆ ಎನ್ನುವ ಪ್ರಶ್ನೆಗಳು ಏಳಬಹುದಾದರೂ ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿಲ್ಲ. ಏಕೆಂದರೆ ಭಾರತದ ಜೈನ ಪ್ರತಿನಿಧಿಗಿಂತಲೂ ವೈಷ್ಣವ ಪ್ರತಿನಿಧಿ , ವೈಷ್ಣವ ಪ್ರತಿನಿಧಿಗಿಂತಲೂ ವೇದಾಂತದ ಪ್ರತಿನಿಧಿ ಚೆನ್ನಾಗಿ ವಿಷಯ ಮಂಡನೆ ಮಾಡಿದರೆಂದು ಹೋಲಿಸಿ ನೋಡಲಾಗದು. ಹಾಗೆ ನೋಡಲು ಹೋಗುವ ಪ್ರತಿಯೊಬ್ಬರೂ ಮಾನಸಿಕವಾಗಿ ಒಂದಲ್ಲ ಒಂದು ಬಗೆಯಲ್ಲಿ ಪೂರ್ವಗ್ರಹ ಪೀಡಿತರಾಗಿರುತ್ತಾರೆ. ಅದರ ಬದಲು ವಸ್ತುನಿಷ್ಠವಾಗಿ ಅಳೆಯುವ ಬೇರೆಯ ವಿಧಾನಗಳನ್ನು ಹುಡುಕಬೇಕು. ಅವುಗಳೆಂದರೆ ವಿಶ್ವಧರ್ಮ ಸಮ್ಮೇಳನದ ವರದಿ ಮಾಡುತ್ತಿದ್ದ ಷಿಕಾಗೊ ಪತ್ರಿಕೆಗಳು ಯಾರಿಗೆ ಎಷ್ಟು ಪ್ರಾಮುಖ್ಯತೆ ಕೊಟ್ಟವು , ಯಾರ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಸಿಕ್ಕಿತು , ಯಾರು ಎಷ್ಟು ಸಲ ಯಾವ ಪತ್ರಿಕೆಯಲ್ಲಿ ವರದಿಯಾಗಿದ್ದಾರೆ ಎಂದು ನೋಡಬಹುದು.
ಷಿಕಾಗೊ ವಿಶ್ವ ಧರ್ಮ ಸಂಸತ್ತಿನ ವರದಿ ಮಾಡಿದ ಮುಖ್ಯ ಪತ್ರಿಕೆಗಳೆಂದರೆ (೧) ಷಿಕಾಗೊ ಡೈಲಿ ಟ್ರಿಬ್ಯೂನ್ (೨) ಷಿಕಾಗೊ ಹೆರಾಲ್ಡ್ (೩) ಷಿಕಾಗೊ ಡೈಲಿ ಇಂಟರ್ ಓಷನ್ (೪) ದಿ ನ್ಯೂಯಾರ್ಕ್ ಟೈಮ್ಸ್ (೫) ದಿ ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್ (೬) ದಿ ಬೋಸ್ಟನ್ ಈವೆನಂಗ್ ಟ್ರಾನ್ಸ್’ಸ್ಕ್ರಿಪ್ಟ್ (೭) ದಿ ನ್ಯೂಯಾರ್ಕ್ ಕ್ರಿಟಿಕ್ (೮) ದಿ ನ್ಯೂಯಾರ್ಕ್ ಹೆರಾಲ್ಡ್ . ವಿಶ್ವ ಧರ್ಮ ಸಂಸತ್ತಿನ ದೈನಂದಿನ ಕಾರ್ಯಕ್ರಮಗಳು ,ನಡೆದ ಚರ್ಚೆ , ಭಾಗವಹಿಸಿದ ಜನ , ಭಾಷಣಕಾರರು ಮತ್ತು ಭಾಷಣಕಾರರಿಗೆ ಸಭಿಕರಿಂದ ಸಿಕ್ಕ ಪ್ರತಿಕ್ರಿಯೆಗಳನ್ನು ವಸ್ತುನಿಷ್ಠ ದೃಷ್ಟಿಯಿಂದ ಈ ಪತ್ರಿಕೆಗಳ ವರದಿಗಳ ಮೂಲಕ ಪಡೆಯಬಹುದು. (ಈ ವರದಿಗಳು ಸಂಚಿಕೆ ಪ್ರಕಟವಾದ ಹಿಂದಿನ ದಿನ ನಡೆದ ಸಂಗತಿಗಳನ್ನು ತಿಳಿಸುತ್ತವೆ).
(ಸಂಪೂರ್ಣ ವಿವರಗಳು ಪ್ರಕಟಿತ ಪುಸ್ತಕದಲ್ಲಿವೆ)
*************************
ಮಳೆ ನಿಂತ ಮೇಲೆ ಮರದ ಹನಿ ಬಿಡದಂತೆ ವಿಶ್ವ ಧರ್ಮ ಸಂಸತ್ತು ಮುಗಿದ ನಂತರವೂ ಅದನ್ನು ಕುರಿತಾಗಿ ಲೇಖನ , ವಿಮರ್ಶೆಗಳನ್ನು ಕೆಲವು ದಿನ ಮತ್ತು ವಾರ ಪತ್ರಿಕೆಗಳು ಪ್ರಕಟಿಸಿದವು.
ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್ ಪತ್ರಿಕೆ ೩೦/೯/೧೮೯೩ ರಂದು ವಿಶ್ವ ಧರ್ಮ ಸಂಸತ್ತನ್ನು ಕುರಿತಾಗಿ ಫ್ರಾನ್ಸಿಸ್ ಎ. ಡೌಟಿ ಬರೆದ ಸುದೀರ್ಘ ವರದಿ ಪ್ರಕಟಿಸಿತು. ಈ ವರದಿಯನ್ನು ಅಂಶಿಕವಾಗಿ ಭಾರತದ ‘ದಿ ಸ್ಟೇಟ್ಸ್’ಮನ್ -೯/೧೧/೧೮೯೩ ರ ಸಂಚಿಕೆಯಲ್ಲಿ ಪ್ರಕಟಿಸಿತು. ದಿ ನ್ಯೂಯಾರ್ಕ್ ಕ್ರಿಟಿಕ್’ ಪತ್ರಿಕೆಯಲ್ಲಿ ೭/೧೦/೧೮೯೩ ರಂದು ಲೂಸಿ ಮನ್ರೋ ಧರ್ಮ ಸಂಸತ್ತನ್ನು ಕುರಿತಾಗಿ ಬರೆದ ದೀರ್ಘ ಲೇಖನ ಪ್ರಕಟಿಸಿತು. ನಂತರದ ದಿನಗಳಲ್ಲಿ ಈ ಪತ್ರಿಕೆಗಳ ಮೂಲ ವರದಿಗಳಲ್ಲಿ ಇತರ ಭಾರತೀಯರನ್ನು ಕುರಿತಾಗಿ ಇದ್ದ ಭಾಗವನ್ನು ಕತ್ತರಿಸಿ ಸ್ವಾಮಿಗಳ ಬಗ್ಗೆ ಇರುವ ಭಾಗವನ್ನು ಮಾತ್ರ ಪ್ರಕಟಿಸುವ ಕೆಟ್ಟ ಪರಂಪರೆ ಹುಟ್ಟಿತು. ‘ಮುಂದಿನ ದಿನಗಳಲ್ಲಿ ಷಿಕಾಗೊ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳ ಯಶಸ್ಸನ್ನು ಬಿಂಬಿಸುವ ಹಲವಾರು ಉತ್ಪ್ರೇಕ್ಷಿತ ಕಥೆಗಳು ಹೊರಬರತೊಡಗಿದವು. ಅವುಗಳಲ್ಲಿ ಕೆಲವನ್ನು ವಿಶ್ಲೇಷಣೆಯೊಂದಿಗೆ ಮುಂದೆ ದಾಖಲಿಸಲಾಗಿದೆ.
ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್ – ಶನಿವಾರ – ಸೆಪ್ಟೆಂಬರ್ ೩೦ , ೧೮೯೩ – ದಿ ಹಿಂದೂಸ್ ಅಟ್ ದಿ ಫೇರ್ –ಸಂ ಇಂಟೆರೆಸ್ಟಿಂಗ್ ಪರ್ಸನಾಲಿಟೀಸ್ ಅಟ್ ದಿ ಪಾಲಿಮೆಂಟ್ ಆಫ್ ರಿಲಿಜನ್ಸ್- ಪ್ಲೇನ್ ಟಾಕ್ ಆಫ್ ದಿ ಲೀಡಿಂಗ್ ಹೀದೆನ್ಸ್ – ವಿಶೇಷ ವರದಿಗಾರ.
ಆರ್ಟ್ ಪ್ಯಾಲೆಸ್’ನ ಪ್ರವೇಶ ದ್ವಾರದ ಎಡಗಡೆ ‘ನಂ.-೧ ದೂರವಿರಿ’ ಎಂದು ಬರೆದ ಫಲಕ ಹೊತ್ತ ಕೋಣೆಯಿದೆ. ವಿಶ್ವ ಧರ್ಮ ಸಂಸತ್ತಿಗೆ ಬಂದ ಪ್ರತಿನಿಧಿಗಳೆಲ್ಲರು ಇಲ್ಲಿಗೆ ಪರಸ್ಪರ ಮಾತನಾಡಲೋ ಅಥವಾ ಈ ಅಪಾರ್ಟ್’ಮೆಂಟ್’ನ ಒಂದು ಮೂಲೆಯಲ್ಲಿರುವ ಅಧ್ಯಕ್ಷ ಬೋನಿಯ ಖಾಸಗಿ ಕಚೇರಿಗೆ ಆತನನ್ನು ಕಾಣಲೋ ಒಂದಲ್ಲ ಒಂದು ಬಾರಿ ಬರುತ್ತಾರೆ. ಮಡಿಸಿ ಮುಚ್ಚಬಲ್ಲ ಈ ಬಾಗಿಲುಗಳಲ್ಲಿ ಕಾವಲಿರಿಸಿ ಸಾರ್ವಜನಿಕರನ್ನು ಇಣುಕಿ ನೋಡದಷ್ಟು ದೂರವಿರಿಸಲಾಗಿದೆ. ಪ್ರತಿನಿಧಿಗಳು ಮಾತ್ರ ಈ ಪವಿತ್ರ ಪ್ರದೇಶವನ್ನು ಹಾದು ಹೋಗಬಲ್ಲರಾದರೂ ‘ಬಾಗಿಲು ತೆರೆಯೇ ಸೇಸಮೆ’ ಮಂತ್ರದಿಂದ ಒಳಹೊಕ್ಕು ಕೊಲಂಬಸ್ ಸಭಾಂಗಣದ ವೇದಿಕೆಯ ಮೇಲಿದ್ದವರನ್ನು ಅಲ್ಪ ಕಾಲ ಸನಿಹದಿಂದ ನೋಡಿ ಅರಿಯುವುದು ಸಾದ್ಯ.
ಈ ಕೋಣೆಯಲ್ಲಿ ಎದ್ದು ಕಾಣುವ ವ್ಯಕ್ತಿಯೆಂದರೆ ಬ್ರಾಹ್ಮಣ ಸಂನ್ಯಾಸಿ ಸ್ವಾಮಿ ವಿವೇಕಾನಂದ. ಆತ ಎತ್ತರದ ನಿಲುವಿನ ಧೃಢಕಾಯ , ನುಣ್ಣಗೆ ಕ್ಷೌರ ಮಾಡಿಕೊಂಡಿರುವ ಆತನ ಚಚ್ಚೌಕ ಮುಖ, ಬಿಳಿಯ ಹಲ್ಲುಗಳನ್ನು ಹೊಂದಿರುವ ಆತನ ಚೆನ್ನಾಗಿ ಕೆತ್ತಿದಂತಿರುವ ತುಟಿಗಳು ನಗುತ್ತ ಮಾತನಾಡುತ್ತಿರುವಾಗ ತೆರೆದುಕೊಳ್ಳುತ್ತವೆ. ಸಮತೋಲನದಲ್ಲಿರುವ ಆತನ ತಲೆಯ ಮೇಲೆ ನಿಂಬೆ ಅಥವಾ ಕಿತ್ತಳೆ ಬಣ್ಣದ ಮುಂಡಾಸು ಸದಾ ಇರುತ್ತದೆ. ಆತ ಉಟ್ಟಿರುವ ಬಟ್ಟೆ ಕಡು ಕಿತ್ತಳೆ ಮತ್ತು ನಸುಗೆಂಪಿನದಾಗಿದ್ದು ಸೊಂಟಕ್ಕೆ ಪಟ್ಟಿಯಿಂದ ಬಿಗಿಯಲ್ಪಟ್ಟಿರುತ್ತದೆ. ಆತ ಅತ್ಯುತ್ತಮ ಇಂಗ್ಲಿಷ್ ಮಾತನಾಡುತ್ತಾನಲ್ಲದೆ ಪ್ರಾಮಾಣಿಕವಾಗಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾನೆ. ಆತ ಹೆಂಗಸರೊಂದಿಗೆ ಮಾತನಾಡುವಾಗ ಸರಳತೆಯೊಂದಿಗೆ ವೈಯಕ್ತಿಕ ಪೂಜ್ಯಭಾವ ತುಂಬಿದ್ದು ಆತ ಪಾಲಿಸುವ ವ್ರತಕ್ಕೆ ಅನುಗುಣವಾಗಿದೆ. ಆತನ ಪಂಥದ ಬಗ್ಗೆ ಕೇಳಿದಾಗ ‘ನಾನು ಏನು ಬೇಕಾದರೂ ಮಾಡಲು ಸ್ವತ್ರಂತ್ರ. ಕೆಲವೊಮ್ಮೆ ನಾನು ಹಿಮಾಲಯ ಪರ್ವತದಲ್ಲಿ ಇನ್ನು ಕೆಲವು ಸಲ ನಗರಗಳ ಬೀದಿಗಳಲ್ಲಿ ವಾಸಿಸುತ್ತೇನೆ. ನನಗೆ ಮುಂದಿನ ಊಟ ಎಲ್ಲಿ ಸಿಗುತ್ತದೆಯೆಂದು ಎಂದಿಗೂ ಗೊತ್ತಿರುವುದಿಲ್ಲ. ನಾನು ಎಂದಿಗೂ ಹಣವನ್ನು ಇರಿಸಿಕೊಳ್ಳುವುದಿಲ್ಲ. ಜನರ ಚಂದಾದಿಂದ ಇಲ್ಲಿಗೆ ಬಂದಿದ್ದೇನೆ. ‘ ಎಂದನು. ತನ್ನ ಬಳಿ ಆಕಸ್ಮಾತ್ತಾಗಿ ನಿಂತಿದ್ದ ದೇಶೀಯರನ್ನು ನೋಡಿ ‘ಇವರೆಲ್ಲ ನನ್ನನ್ನು ನೋಡಿಕೊಳ್ಳುತ್ತಾರೆ ‘ ಎಂದನು. ಎಂದರೆ ಷಿಕಾಗೊದಲ್ಲಿ ಆತನ ಊಟದ ವೆಚ್ಚವನ್ನು ಇತರರು ಭರಿಸುತ್ತಾರೆ. ಉಟ್ಟಿರುವ ಬಟ್ಟೆ ಸಂನ್ಯಾಸಿಗಳದ್ದೇ ಎಂದು ಕೇಳಿದಾಗ ‘ ಇದು ಒಳ್ಳೆಯ ಪೊಷಾಕು ; ನಮ್ಮ ದೇಶದಲ್ಲಿರುವಾಗ ನಾನು ಚಿಂದಿಯುಟ್ಟು , ಬರಿಗಾಲಲ್ಲಿರುತ್ತೇನೆ. ನಾನು ಜಾತಿಯನ್ನು ನಂಬುತ್ತೇನೆಯೇ ? ಜಾತಿ ಒಂದು ಸಾಮಾಜಿಕ ಪದ್ದತಿ; ಧರ್ಮಕ್ಕೂ ಅದಕ್ಕೂ ಸಂಬಂಧವಿಲ್ಲ ;ಎಲ್ಲ ಜಾತಿಗಳು ನನ್ನೊಂದಿಗೆ ಸಂಪರ್ಕದಲ್ಲಿವೆ ಎಂದನು.
ಆತನ ನಡವಳಿಕೆ ಮತ್ತು ಲಕ್ಷಣಗಳನ್ನು ನೋಡಿದರೆ ಆತ ಉಚ್ಛ ಜಾತಿಗೆ ಸೇರಿದ್ದು ಆತನಾಗಿಯೇ ಆರಿಸಿಕೊಂಡಿರುವ ಬಡತನ ಮತ್ತು ನಿರ್ಗತಿಕತೆ ಆತನ ಸಭ್ಯತೆಯನ್ನೇನೂ ಕುಂದಿಸಿಲ್ಲ; ಆತನ ಮನೆತನದ ಹೆಸರು ಗೊತ್ತಿಲ್ಲ ; ಧಾರ್ಮಿಕ ವ್ರತವನ್ನು ಆಯ್ದುಕೊಂಡು ಸ್ವಾಮಿ ವಿವೇಕಾನಂದ ಎನ್ನುವ ಹೆಸರನ್ನು ಹೊಂದಿದ್ದಾನಷ್ಟೇ. ಸ್ವಾಮಿ ಎನ್ನುವುದು ಆತನಿಗೆ ಗೌರವಪೂರ್ವಕವಾಗಿ ಕರೆಯುವ ಮಾತು ಮಾತ್ರ. ಆತನ ವಯಸ್ಸು ಮೂವತ್ತರ ನಂತರ ಹೆಚ್ಚಿಗೆ ಸಾಗಿಲ್ಲವಾದರೂ ಈ ಜೀವನವನ್ನು ಫಲಪ್ರದಗೊಳಿಸಿಕೊಂಡವನಂತೆ , ಉಳಿದ ಜೀವನವನ್ನು ಧ್ಯಾನಕ್ಕೆ ಇರಿಸಿಕೊಂಡವನಂತೆ ಕಾಣುತ್ತಾನೆ. ಆತನ ಈ ಜೀವನ ತಿರುವಿಗೆ ಕಾರಣ ಏನಿರಬಹುದೆನ್ನುವುದು ಸೋಜಿಗದ ವಿಚಾರವಾಗಿದೆ. ಎಲ್ಲವನ್ನೂ ತ್ಯಜಿಸಿ ಸಂನ್ಯಾಸಿ ಆದ್ದದ್ದೇಕೆ ಎನ್ನುವ ಪ್ರಶ್ನೆಗೆ ‘ನಾನೇಕೆ ಮದುವೆಯಾಗಬೇಕು ? ಎಂದು ಅವಸರದ ಪ್ರತಿಕ್ರಿಯೆ ನೀಡುತ್ತಾನೆ. ‘ನಾನು ಎಲ್ಲ ಹೆಂಗಸರಲ್ಲಿ ಪವಿತ್ರ ತಾಯಿಯನ್ನು ಮಾತ್ರ ಕಾಣುತ್ತೇನೆ. ನಾನೇಕೆ ಇಂತಹ ತ್ಯಾಗಗಳನ್ನು ಮಾಡುತ್ತೇನೆ ? ಎಲ್ಲ ಲೌಕಿಕ ಬಂಧನಗಳನ್ನು ಕಳಚಿಕೊಂಡು ಮರುಹುಟ್ಟು ಪಡೆಯದಂತಿರಲು. ನಾನು ಸತ್ತಾಗ ದೇವರೊಂದಿಗೆ , ದಿವ್ಯದೊಂದಿಗೆ ಒಂದಾಗುತ್ತೇನೆ. ಬುದ್ಧನಾಗುತ್ತೇನೆ ಎನ್ನುತ್ತಾನೆ. ಹಾಗೆಂದ ಮಾತ್ರಕ್ಕೆ ಸ್ವಾಮಿ ವಿವೇಕಾನಂದ ಬೌದ್ಧನಲ್ಲ. ಯಾವುದೇ ಮತ , ಧರ್ಮ ಆತನದಲ್ಲ. ಆತ ಉನ್ನತ ಬ್ರಾಹ್ಮಣ್ಯದ, ಸ್ವಪ್ನಶೀಲ ಚೇತನದ , ಸ್ವಯಂ ನಿರಾಕರಣೆಯ ಸಂನ್ಯಾಸಿ ಅಥವಾ ಪವಿತ್ರ ವ್ಯಕ್ತಿ. ತನ್ನ ಸಾವಿನ ನಂತರ ತನ್ನ ಅನುಯಾಯಿಗಳು ಸಂನ್ಯಾಸಿಗಳಾಗಬೇಕೆಂದು ಬಯಸಿದ್ದ ತನ್ನ ಗುರು ರಾಮಕೃಷ್ಣ ಪರಮಹಂಸ ಎನ್ನುವ ಹಿಂದೂ ಭಕ್ತನನ್ನು ಕುರಿತಾದ ಕೆಲ ಕರಪತ್ರಗಳನ್ನು ಆತ ಹಂಚುತ್ತಾನೆ. ಪಿ.ಸಿ ಮಜುಂದಾರನು ಕೂಡ ಈತನ ಗುರುವನ್ನು ತನ್ನ ಗುರುವೆಂದು ಭಾವಿಸುತ್ತಾನಾದರೂ ಆತ ಜೀಸಸ್ ಉಪದೇಶಿಸಿದಂತೆ ಜಗತ್ತಿನ ಪವಿತ್ರತೆಗೆ ಶ್ರಮಿಸುತ್ತಾನೆ.
ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದ ಮಾಡಿದ ಭಾಷಣದಲ್ಲಿ ಪ್ರತಿಪಾದಿಸಿದ್ದು ನಮ್ಮ ತಲೆಯ ಮೇಲಿನ ಬಾನಿನಷ್ಟು ವಿಶಾಲವಾಗಿದ್ದು , ಎಲ್ಲ ಧರ್ಮಗಳ ಉತ್ತಮ ತತ್ತ್ವಗಳನ್ನು ಒಳಗೊಂಡಿದ್ದು ಮಾನವರೆಲ್ಲರ ಕಲ್ಯಾಣ , ಶಿಕ್ಷೆಯ ಭಯ ಅಥವಾ ಬಯಕೆ ಆಶೆಗಳನ್ನು ಮೀರಿದ ದೇವರ ಪ್ರೀತಿಗಾಗಿಯೇ ಒಳ್ಳೆಯ ಕೆಲಸ ಮಾಡಬೇಕೆನ್ನುವ ವಿಶ್ವದ ಅಂತಿಮ ಧರ್ಮವಾಗಿದೆ. ಭಾವನೆಗಳ ವಿಜೃಂಭಣೆ ಮತ್ತು ನೋಟ ಎರಡರಿಂದಲೂ ಆತ ಧರ್ಮ ಸಂಸತ್ತಿನ ಕಣ್ಮಣಿಯಾಗಿದ್ದನು. ಆತ ವೇದಿಕೆ ಹತ್ತುತ್ತಿರುಂತೆಯೇ ಸಾವಿರಾರು ಜನ ಚಪ್ಪಾಳೆಯಿಂದ ಅನುಮೋದಿಸುತ್ತಾರೆ. ಅದನ್ನು ಆತ ಯಾವ ಕಪಟವೂ ಇಲ್ಲದ ಮುಗ್ದ ಬಾಲಕನಂತೆ ಸ್ವೀಕರಿಸುತ್ತಾನೆ. ದಾರಿದ್ಯ್ರ ಮತ್ತು ಸ್ವಯಂ ನಿಯಂತ್ರಣದ ಜೀವನದಿಂದ ಸಮೃದ್ಧಿ ಮತ್ತು ಹೆಗ್ಗಳಿಕೆಯ ಕಡೆಗಿನ ಈ ಬದಲಾವಣೆ ಆತನಿಗೆ ವಿಚಿತ್ರ ಅನುಭಗಳನ್ನು ತಂದಿರಬೇಕು. ಥಿಯೊಸೊಫಿಸ್ಟರು ನಂಬುವಂತಹವರು (ಯೋಗಿಗಳು) ಹಿಮಾಲಯದಲ್ಲಿ ಇರುವರೇ ಎಂದು ಕೇಳಿದಾಗ ‘ನಾನು ಅಂತಹವರನ್ನು ಎಂದೂ ಭೇಟಿಯಾಗಿಲ್ಲ. ಅಂತಹವರು ಇರಬಹುದು ಆದರೆ ನಾನು ಈವರೆಗೆ ಕಂಡಿಲ್ಲ ಎಂದು ಸರಳವಾಗಿ ಉತ್ತರಿಸಿದನು.
ಈ ಕೋಣೆಯ ಮಧ್ಯದಲ್ಲಿರುವ ಮೇಜಿನ ಮೇಲೆ ಶೋಭಾಯಮಾನವಾಗಿ ಒರಗಿ ಕುಳಿತುಕೊಳ್ಳುವ ಹಿಂದೂ ಧರ್ಮದ ಅಷ್ಟೊಂದು ಪ್ರಾಚೀನವಲ್ಲದ ವೈಷ್ಣವ ಪಂಥವನ್ನು ಪ್ರತಿನಿಧಿಸುತ್ತಿರುವ ಮತ್ತೊಬ್ಬ ಬ್ರಾಹ್ಮಣ ಆಗಾಗ್ಗೆ ಕಾಣಿಸುತ್ತಾನೆ. ಆತನ ಉಜ್ವಲ ಬಾಲಮುಖ ಬೆಳಗುತ್ತಿರುವಂತೆ ಭಾರತೀಯ ಮತ್ತು ನಮ್ಮ ಸಂಸ್ಕೃತಿಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ. ಈತನ ಬಟ್ಟೆ ಯಾವಾಗಲೂ ಬಿಳಿಯದಾಗಿದ್ದು ದೊಡ್ದ ರುಮಾಲನ್ನು ಯಾವಾಗಲೂ ತೊಟ್ಟಿರುತ್ತಾನೆ. ತನ್ನನ್ನು ಮದ್ರಾಸಿನ ಸಂಚಾರಿ ಹಿಂದೂ ಎಂದು ಕರೆದುಕೊಳ್ಳುವ ಈತನ ಹೆಸರು ನರಸಿಂಹಾಚಾರಿ. ಒಂದು ಸಂಜೆ ಲಾಹೋರಿನ ಬ್ಯಾರಿಸ್ಟರ್ ಲಕ್ಷೀನಾರಾಯಣ ಮತ್ತು ವಾಷಿಂಗ್ಟನ್ ಡಿ.ಸಿಯ ಮೆರ್ವಿನ್ ಸ್ನೆಲ್ ಜೊತೆಯಿರುವಾಗ ನರಸಿಂಹನೊಂದಿಗೆ ರಂಜನೀಯ ಸಂವಾದ ನಡೆಸಿದೆನು. ‘ನಾನು ಎಲ್ಲದರಿಂದ ದಣಿದಿದ್ದೇನೆ. ಯಾವುದೇ ಹೊಸ ಸಂವೇದನೆ ನನಗೆ ಸಾಧ್ಯವಿಲ್ಲ. ಈ ಜಗತ್ತಿನ ಜೀವನದ ಬಗ್ಗೆಯೇ ನನಗೆ ಜಿಗುಪ್ಸೆಯಾಗಿದೆ. ಈವರೆಗೆ ನಾನು ಮಾಡಿರುವುದಕ್ಕೆ ವಿರುದ್ಧವಾದುದನ್ನು ನಾನು ಮಾಡಬೇಕೆಂದಿದ್ದೇನೆ. ಅದಕ್ಕಾಗಿ ಕಾಡಿಗೆ ಹೋಗುತ್ತೇನೆ. ಇಂದ್ರಿಯಗಳನ್ನು ಹತ್ತಿಕ್ಕಿ ನನ್ನನ್ನು ನಾನು ಗೆಲ್ಲಬೇಕು. ಅದು ಕಷ್ಟವೆಂದು ನನಗೆ ಗೊತ್ತು. ಅದೇ ಈಗಿರುವ ಅಡಚಣೆ. ನಾನು ಒಂದು ವಾರದೊಪ್ಪತ್ತಿನಲ್ಲಿ ಎಲ್ಲವನ್ನೂ ಬಿಟ್ಟುಕೊಡಬೇಕೆಂದು ನೀನು ಹೇಳುವೆ. ಅದರೆ ನಾನು ಆಮೇಲೆ ಪ್ರಯತ್ನ ಮಾಡುತ್ತೇನೆ. ಎಲ್ಲವನೂ ಬಿಟ್ಟುಕೊಡಲು ನಾನು ಮಹಾತ್ಮನಾಗಬೇಕೆಂದಿದ್ದೇನೆ’ ಎಂದು ದಿಟ್ಟತನದಿಂದ ಹೇಳಿದನು. ‘ಇದರಿಂದ ಯಾರಿಗೆ ಒಳಿತಾಗುತ್ತದೆ ?’ ಎಂದಾಗ ‘ಇದು ಬಹು ಮುಖ್ಯವಾದ ಪ್ರಶ್ನೆ. ಪ್ರತಿಯೊಬ್ಬ ಮನುಷ್ಯನು ತಾನೇ ಮೇಲಕ್ಕೇರಬೇಕು. ಬೇರೆ ಯಾರೂ ಅವನನ್ನು ಮೇಲೇರಿಸಲಾರರು. ಒಳ್ಳೆಯದು ಕೆಟ್ಟದ್ದು ಮಾತ್ರವಲ್ಲ ಎಲ್ಲ ಲೌಕಿಕ ವಿಚಾರಗಳ ಬಗ್ಗೆ ನಿರ್ಭಾವುಕನಾಗಬೇಕೆಂದಿದ್ದೇನೆ ಎಂದನು. ಸಕ್ರಿಯವಾದ ಒಳ್ಳೆಯ ಕೆಲಸ ಮತ್ತು ಇತರರ ಒಳಿತಿಗಾಗಿ ಕೆಲಸ ಮಾಡುವುದು ಮಾನಸಿಕ ಕ್ಷೋಭೆಗೆ ಪರಿಹಾರವಾಗಬಹುದು ಎಂದು ಸೂಚಿಸಿದಾಗ ಎಲ್ಲವುಗಳ ಬಗ್ಗೆ ಅನಾಸಕ್ತಿಯೇ ನಿಜವಾದ ಹಿಂದೂ ಆದರ್ಶ ಎನ್ನುವ ಉತ್ತರ ನೀಡಿದನು.
‘ಇಲ್ಲಿಂದ ನಾನು ಸೀದಾ ಕಾಡಿನೊಳಕ್ಕೆ ಹೋಗಬೇಕೆಂದಿರುವೆ. ಆದರೆ ಷಿಕಾಗೊದಲ್ಲಿ ಬಹಳ ಚಳಿ. ಇನ್ನೂ ದಕ್ಷಿಣಕ್ಕೆ ಮಧ್ಯ ಅಮೆರಿಕದಲ್ಲಿ ಪ್ರಯತ್ನಿಸಬಹುದು’ ಎಂದನು. ಏಕಾಂತದಲ್ಲಿರುವಾಗ ಅಲ್ಲಿ ಕಾಡು ಪ್ರಾಣಿಗಳು ಎದುರಾಗಬಹುದು ಎಂದರೆ ‘ನನ್ನ ಬಂದೂಕು ಒಯ್ಯುತ್ತೇನೆ’ ಎಂದು ಉತ್ತರಿಸಿದನು. ‘ಎಂದರೆ ನೀನು ಪ್ರಾಣಿಗಳನ್ನು ಕೊಲ್ಲುತ್ತೀಯಾ’ ಎಂದದ್ದಕ್ಕೆ ‘ಹೌದು ಅವು ಹತ್ತಿರಕ್ಕೆ ಬಂದಾಗ ಆತ್ಮರಕ್ಷಣೆಗಾಗಿ ಕೊಲ್ಲಲು ಹಿಂಜರಿಯಬಾರದು. ಮಾಂಸ ತಿನ್ನಲಲ್ಲ’ ಎಂದು ಉತ್ತರಿಸಿ ‘ಇಲ್ಲಿಗೆ ಬಂದ ಮೇಲೆ ನಾನು ಕೆಲವು ಸಲ ಮಾಂಸ ತಿಂದಿದ್ದೇನೆ. ಮೊದಲ ಸಲ ನನಗೆ ಉಬ್ಬಳಿಕೆ ಬಂದು ನನ್ನ ಒಳ್ಳೆಯ ಬಟ್ಟೆಗಳು ಹಾಳಾದವು. ಇಲ್ಲಿಗೆ ಬಂದ ಮೆಲೆ ನನ್ನ ಜಾತಿ ಹೋಗಿದೆ. ಭಾರತಕ್ಕೆ ಹಿಂದಿರುಗಿದ ಮೇಲೆ ನಾನು ಅದನ್ನು ಸುಲಭವಾಗಿ ಮರಳಿ ಪಡೆಯುತ್ತೇನೆ. ಅದಿಲ್ಲದಿದ್ದರೆ ಏನು ಮಜಾ ಇದೆ. ನಾನು ಅಮೆರಿಕಕ್ಕೆ ಬಂದಾಗ ನನ್ನ ಹಣೆಯ ಮೇಲೆ ಜಾತಿಯ ನಾಮ ಮತ್ತು ಬ್ರಾಹ್ಮಣರ ದಾರ ಇದ್ದಿತು. ಈಗ ಅದು ಹರಿದು ಹೋಗಿದೆ. ಅಂತಹುದು ಇನ್ನೊಂದು ಎಲ್ಲಿ ಸಿಗುವುದೋ ತಿಳಿಯದು. ನಮಗಿಂತಲೂ ಹೊಲಸಾದ ಜಾತಿ ಪದ್ದತಿ ನಿಮ್ಮಲ್ಲಿದೆ. ಅದು ಹಣದ ಜಾತಿ. ಒಂದಲ್ಲ ಒಂದು ರೀತಿಯಲ್ಲಿ ಜಾತಿಯಿರದ ಜಾಗಕ್ಕೆ ನಾನು ಈವರೆಗೆ ಹೋಗಿಲ್ಲ ಎಂದನು.
ನರಸಿಂಹನ ನಡವಳಿಕೆ ಸರಳ ಮತ್ತು ಆಹ್ಲಾದಕರವಾಗಿದ್ದವಾದರೂ ವಿಧವೆಯರನ್ನು ಕುರಿತಾದ ಆತನ ನಿಲುವು ಪಂಡಿತ ರಮಾಬಾಯಿಯ ದೃಷ್ಟಿಗೆ ವಿರುದ್ಧವಾಗಿದ್ದಿತು. ‘ಅವರೇ ಬಯಸಿ ಸುಟ್ಟುಕೊಂಡರೆ ತಪ್ಪೆಲ್ಲಿದೆ ? ನನ್ನನ್ನು ಕೇಳಿದರೆ ಅದನ್ನು ಇಂಗ್ಲಿಷರು ನಿಲ್ಲಿಸುವುದು ಬೇಕಿರಲಿಲ್ಲ. ಏಕೆಂದರೆ (ಹಾಗೆ ಸುಟ್ಟುಕೊಳ್ಳುವಂತಿದ್ದರೆ ) ಭಾರತದಲ್ಲಿ ಆಷ್ಟೊಂದು ವಿಧವೆಯರು ಇರುತ್ತಿರಲಿಲ್ಲ. ಒಬ್ಬ ಹೆಂಗಸು ಗಂಡನೊಂದಿಗೆ ಚಿತೆ ಏರುವುದರಿಂದ ತನಗೆ ಮತ್ತು ಆತನಿಗೆ ಶಾಶ್ವತ ಆನಂದ ದಕ್ಕುತ್ತದೆ ಎಂದು ಭಾವಿಸುವುದಾದರೆ ಅದನ್ನು ನಿಲ್ಲಿಸುವ ಅಗತ್ಯವಿಲ್ಲ ಎಂದು ನನಗೆನಿಸುತ್ತದೆ’ ಎಂದನು. ಲಾಹೋರಿನ ಲಕ್ಷ್ಮೀನಾರಾಯಣ ಮತ್ತು ವಾಷಿಂಗ್ಟನ್‘ನ ಮೆರ್ವಿನ್ ಸ್ನೆಲ್ ಇಬ್ಬರೂ ತಮ್ಮನ್ನು ಧರ್ಮಗಳ ತೌಲನಿಕ ಅಧ್ಯಯನದ ತಟಸ್ಥ ವಿದ್ಯಾರ್ಥಿಗಳೆಂದು ಭಾವಿಸುತ್ತಾರೆ. ಇವರಿಬ್ಬರೂ ಒಬ್ಬ ವ್ಯಕ್ತಿ ತನಗೆ ಗೊತ್ತಿದ್ದು ತಾನಾಗಿಯೆ ಹಾನಿಮಾಡಿಕೊಳ್ಳುವುದನ್ನು ತಡೆಯುವುದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವ ಸೋಜಿಗದ ವಾದ ಮಂಡಿಸುತ್ತಾರೆ. ‘ವಿಧವೆಯನ್ನು ಚಿತೆಗೇರುವಂತೆ ಯಾರೂ ಒತ್ತಾಯಿಸಬಾರದು ಮತ್ತು ಆಕೆಗೆ ಅಂತಹ ಒತ್ತಾಯ ಎಂದಿಗೂ ಇರಲಿಲ್ಲ. ಅದು ಸಂಪೂರ್ಣ ಸ್ವಯಂ ಪ್ರೇರಿತ ನಿರ್ಧಾರವಾಗಿದ್ದಿತು. ಚಿತೆಯೇರುವ ನಿರ್ಧಾರ ತಳೆದು ಬೆಂಕಿಯ ಮೊದಲ ಉರಿ ತಾಗಿದ ತಕ್ಷಣ ಅದರಿಂದ ಹಿಂಜರಿಯುತ್ತಿದ್ದ ಹೇಡಿಗಳನ್ನು ಹೊರತಾಗಿ ಸಹಗಮನಕ್ಕೆ ಒಪ್ಪದ ಹೆಂಗಸರನ್ನು ಎಂದಿಗೂ ದಂಡಿಸಲಾಗುತ್ತಿರಲಿಲ್ಲ. ಅದು ಅಷ್ಟೊಂದು ಯಾತನಾಮಯವಾಗಿರುತ್ತಿದ್ದಿಲ್ಲ. ಅಲ್ಪ ಹೊತ್ತಿನಲ್ಲಿ ಉಸಿರುಕಟ್ಟುತ್ತಿದ್ದಿತು’ ಎಂದು ನರಸಿಂಹ ಅದಕ್ಕೆ ದನಿಗೂಡಿಸುತ್ತಾನೆ. ಆತ ಭುಜಗಳನ್ನು ಕುಣಿಸುತ್ತ ‘ಚಿತೆಗೇರಿದ ಯಾರನ್ನು ನಾನು ಯಾವಾಗಾಗಲಿ , ಎಲ್ಲಿಯಾಗಲಿ ಹೊರಗೆಳೆಯುವುದಿಲ್ಲ’ ಎನ್ನುತ್ತಾನೆ.
‘ನಿಮ್ಮ ಹೆಂಡತಿಯೊಂದಿಗೆ ನಿಮ್ಮನ್ನು ಚಿತೆಗೇರಿಸಿದರೆ ಹೇಗೆ’ ಎಂದು ಹಿಂದೆಯೇ ಬಂದ ಸಹಜ ಪ್ರಶ್ನೆಗೆ ಆತ ‘ಈ ನಿಯಮ ಇಬ್ಬರಿಗೂ ಸಲ್ಲುತ್ತದೆ. ಗಂಡು , ಹೆಣ್ಣು ಇಬ್ಬರ ಹಕ್ಕುಗಳು ಒಂದೇ. ಆದರೆ ಗಂಡಸರು ಚಿತೆಗೇರಲು ಬಯಸರು ಆದರೆ ಹೆಂಗಸರು ಬಯಸುತ್ತಾರೆ’ ಎಂದನು. ಭಾರತದಲ್ಲಿ ವಿಧವೆಯರಿಗೆ ಒಪ್ಪೊತ್ತಿನ ಊಟ ಮಾತ್ರ ಕೊಡಲಾಗುತ್ತದೆ ಇದು ನಿಜವೇ ಎಂದಾಗ ‘ ನನಗೆ ದಿನಕ್ಕೆ ಮೂರು ಬಾರಿ ಉಣ್ಣುವ ನೂರಾರು ವಿಧವೆಯರು ಗೊತ್ತು. ಅವರಿಗೆ ಬೇಕಿದ್ದರೆ ಒಂದು ಸಲವಲ್ಲ , ಎರಡು ,ಮೂರು ,ಐದು ಸಲವು ಉಣಬಹುದು ; ವಿದೇಶಿಯರು ಜಾರಿಯಲ್ಲಿರುವ ಪದ್ದತಿ, ಸಂಪ್ರದಾಯಗಳನ್ನು ಅರಿಯದೆ ಎಂದೋ ಸತ್ತು ಹೋಗಿರುವ ನಿಯಮಗಳನ್ನು ವರದಿ ಮಾಡಬಹುದು’ ಎಂದನು. ಇದನ್ನು ಖಚಿತಪಡಿಸಿಕೊಳ್ಳಲು ಲಾಹೊರಿನ ಸಜ್ಜನರನ್ನು ಕೇಳಿದಾಗ ಅವರು ಅದಕ್ಕೆ ಉತ್ತರ ಭಾರತದಲ್ಲಿ ವಿಧವೆಯರು ಒಪ್ಪೊತ್ತಿನ ಊಟ ಮಾಡುವ ನಿಯಮ ಕಠಿಣವಾಗಿ ಜಾರಿಯಲ್ಲಿದೆ ಎಂದನು. ‘ನಾವು ಬಾರತದ ಹೆಂಗಸರ ಸ್ಥಿತಿಗತಿಗಳ ಬಗ್ಗೆ ಬಹಳ ಕೇಳುತ್ತೇವೆ. ಅದೆಲ್ಲ ಅಸಂಬದ್ಧ . ಜಗತ್ತಿನ ಬೇರೆ ಕಡೆ ಇರುವಷ್ಟೇ ‘ಅಮ್ಮಾವ್ರ ಗಂಡ’ರನ್ನು ನಾನು ಭಾರತದಲ್ಲಿ ಕಂಡಿದ್ದೇನೆ ಎಂದು ನರಸಿಂಹ ಹೇಳಿದನು. ನಾಗರಿಕತೆಯ ವಿಶ್ವಸ್ತ ಸಾಮಾನ್ಯ ಲಕ್ಷಣವಾಗಿರುವ ‘ಅಮ್ಮಾವ್ರ ಗಂಡ’ರ ಬಗ್ಗೆ ಕೇಳಿ ನಾವೆಲ್ಲ ನಕ್ಕೆವು. ಹೀಗೆ ಮಾತಿಗೆ ಮಾತು ಸೇರುತ್ತ ಹೋದಾಗ ಹೆಣ್ಣಿನೊಂದಿಗೆ ಗಂಭೀರವಾದ ಸಂಬಂಧ ಈಗಿನ ಮನಸ್ಥಿತಿಗೆ ಪರಿಹಾರ ಒದಗಿಸಿ ಕಾಡಿಗೆ ಹೋಗುವ ಚಿಂತನೆ ತಹಬದಿಗೆ ಬರಬಹುದು ಎಂದು ಯಾರೋ ಸೂಚಿಸಿದರು. ‘ಓಹ್ ಅದು ಎಲ್ಲವನ್ನು ಹಾಳುಗೆಡವುತ್ತದೆ’ ಎಂದು ಮೈಕುಣಿಸುತ್ತ ಹೇಳಿದನು.
ಇವೆಲ್ಲರಿಗಿಂತ ಬಹು ಭಿನ್ನವಾದ ವ್ಯಕ್ತಿತ್ವ ಭಾರತದ ಅತ್ಯಂತ ಪ್ರಾಚೀನ ಧರ್ಮವನ್ನು ಪ್ರತಿನಿಧಿಸಲು ಬಂದಿರುವ ಜೈನ ಸಂಘದ ಕಾರ್ಯದರ್ಶಿಯದು. ವೀರಚಂದ ಗಾಂಧಿ ಉಡುಗೆ ಪಾಶ್ಚಾತ್ಯವಾದರೂ ಟೋಪಿಯ ಬದಲು ಮುಂಡಾಸು ಧರಿಸಿ ತನ್ನ ರಾಷ್ಟ್ರೀಯತೆಯನ್ನು ತೋರಿಸುತ್ತಾನೆ. ಆತನಿಗೆ ಸುಸಂಸ್ಕೃತ , ಬುದ್ಧಿವಂತ ಲಕ್ಷಣಗಳ ಮುಖಚರ್ಯೆ, ಹೊಳೆಯುವ ಕಣ್ಣುಗಳಿದ್ದು ನಡವಳಿಕೆಯಲ್ಲಿ ಜಾಗತಿಕ ವೈಶಾಲ್ಯತೆ ಇರುವಂತಿದೆ. ಜೈನರಲ್ಲಿ ಹಿಂದೂಗಳಿಗಿರುವಷ್ಟು ಕಡಿಮೆ ಸಾಮಾಜಿಕ ನಿಬಂಧನೆಗಳಿರುವುದು ಇದಕ್ಕೆ ಕಾರಣವಿರಬಹುದು. ವೀರಚಂದ ಗಾಂಧಿ ‘ಜೈನ ಮಹಿಳೆಯರು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರು. ನಾನು ಭಾರತದಲ್ಲಿರುವಾಗ ನನ್ನ ಹೆಂಡತಿ ನನ್ನ ಜೊತೆ ಎಲ್ಲ ಕಡೆ ಬರುತ್ತಾಳೆ ‘ ಎನ್ನುತ್ತ ‘ನಿಮ್ಮಲ್ಲಿರುವಂತೆ ಮಹಿಳೆಯರ ಮತದಾನದ ಹಕ್ಕಿಗೆ ಬಂದಾಗ, ಸ್ವಾತಂತ್ರವನ್ನು ಬಹಳ ಹಿಗ್ಗಿಸಿದಂತೆ ಭಾಸವಾಗುತ್ತದೆ’ ಎನ್ನುವುದನ್ನು ಸೇರಿಸುತ್ತಾನೆ. ಈ ವ್ಯಕ್ತಿಯೂ ಸಂಪೂರ್ಣ ಶಾಖಾಹಾರಿ. ‘ನನ್ನ ಜೀವನದಲ್ಲಿ ಎಂದೂ ಮಾಂಸ ಮುಟ್ಟಿಲ್ಲ. ಮಾಂಸ ತಿನ್ನುವರೊಟ್ಟಿಗೆ ಕುಳಿತುಕೊಳ್ಳುವುದು ನನ್ನಿಂದಾಗದು. ಡಾ. ಬರೋಸ್ ನನಗೆ ಸಸ್ಯಾಹಾರ ಒದಗಿಸುತ್ತಿದ್ದಾರೆ. ಅಮೆರಿಕಕ್ಕೆ ಬಂದ ನಂತರ ಯಾವುದೇ ಒಂದು ಆಹಾರ ಪದ್ದತಿ ಎಲ್ಲರಿಗೂ ಸಮಾಧಾನ ನೀಡಲಾರದು ಎಂದು ನನಗೆ ತಿಳಿಯಿತು. ಮಾನವ ವಿಶ್ವ ಧರ್ಮವನ್ನು ಒಪ್ಪುವ ಮೊದಲು ಇದು ಆಗುತ್ತದೆ ಎನಿಸುತ್ತದೆ’ ಎಂದನು. ಜೈನ ಧರ್ಮ ಕಾರಣ ಮತ್ತು ಪರಿಣಾಮಗಳನ್ನು ಬೋಧಿಸುತ್ತದೆ. ದೇವರ ಅಸ್ತಿತ್ವಕ್ಕೆ ಯಾವುದೇ ಕಾರಣವಿಲ್ಲ. ಸತ್ತ ಆತ್ಮೀಯರನ್ನು ಮುಂದೊಂದು ದಿನ ಸಂಧಿಸಬಹುದೆ ಎಂದು ಪ್ರಶ್ನಿಸಿದಾಗ ಆಳ ಚಿಂತನೆಯಲ್ಲಿ ಮುಳುಗಿರುವುದನ್ನು ಆತನ ಮುಖ ಸೂಚಿಸಿತು. ಜಗತ್ತಿನ ಎಲ್ಲ ಕಾಲದ ಎಲ್ಲ ಜನರನ್ನು ಕಾಡುವ ಈ ಪ್ರಶ್ನೆಗೆ ‘ಅವರನ್ನು ನಾವು ಸಂಧಿಸಬೇಕು . ಆದರೆ ನಾವು ವೈಯಕ್ತಿಕ ಪ್ರೀತಿ ಮತ್ತು ತೃಪ್ತಿಯಾಚೆಗೆ ನೋಡಬೇಕು’ ಎಂದು ಚಿಂತಿಸಿ ಹೇಳಿದನು.
ವಿಶ್ವ ಧರ್ಮ ಸಂಸತ್ತಿನ ಮೂರನೇ ದಿನ ವಿದೇಶಗಳಲ್ಲಿ ಹರಡುತ್ತಿರುವ ಹುಸಿ ಕ್ರೈಸ್ತ ಧರ್ಮ ಪ್ರಚಾರಗಳನ್ನು ವಿರೋಧಿಸಿ ಸಂಚಲನೆಯನ್ನುಂಟು ಮಾಡಿದ ಬೌದ್ಧ ಸಂನ್ಯಾಸಿ , ಜಪಾನಿ ವಾಗ್ಮಿ ಕಿಂಝೆ ರಿಂಜೆ ಹೆರಾಯ್ ಸನಿಹ ಪರಿಚಯದಿಂದ ಆತ ಧರ್ಮ ಸಂಸತ್ತಿಗೆ ಬಂದ ಪ್ರತಿನಿಧಿಗಳಲ್ಲಿ ಅತ್ಯಂತ ಶ್ರೇಷ್ಟರಲ್ಲಿ ಒಬ್ಬನೆಂದು ಮನದಟ್ಟಾಯಿತು ; ಆತನಲ್ಲಿ ವ್ಯಂಗ್ಯವಾಗಲಿ , ಹೀಯಾಳಿಕೆಯಾಗಲಿ , ಕಪಟತನವಾಗಲಿ ಇಲ್ಲ. ಸ್ವಾಗತ ಕೋಣೆಯಲ್ಲಿ ಭೇಟಿಯಾಗುವವರಿಗೆ ತನ್ನ ಧರ್ಮ , ಜಪಾನಿ ಸಂಪ್ರದಾಯಗಳ ಬಗ್ಗೆ ಸವಿವರ ಪರಿಚಯ ಮಾಡಿಕೊಡಲು ಸದಾ ಸಿದ್ಧನಿರುತ್ತಾನೆ. ಪ್ರತಿ ಮಧ್ಯಾಹ್ನ ಈ ವಿಶೇಷ ಕೆಲಸಕ್ಕಾಗಿ ಮೊದಲ ಮಹಡಿಗೆ ಹೋಗುತ್ತಾನೆ. ತಕ್ಷಣವೇ ಆತನ ಸುತ್ತ ಒಂದು ದೊಡ್ದ ಗುಂಪು ಸೇರುತ್ತದೆ. ಇದನ್ನು ಸಹನಶೀಲ , ಔದಾರ್ಯ ಸ್ವಭಾವದ ಪೌರಾತ್ಯ ಮಾತ್ರ ತಾಳಿಕೊಳ್ಳಬಲ್ಲ. ಆತನ ಸೌಜನ್ಯ ಅಭೇದ್ಯವಾಗಿದ್ದು ಯಾವುದೇ ವಾದ ಆತನನ್ನು ಕೆರಳಿಸಲಾರದು ; ನಮ್ಮ ಕೆಲ ಧಾರ್ಮಿಕ ನಾಯಕರು-ಇಲ್ಲ ಅವರನ್ನು ಧರ್ಮ ಬೋಧಕರೆನ್ನುವುದು ಸರಿ – ಈತನಿಂದ ಒಂದೆರಡು ಪಾಠಗಳನ್ನು ಕಲಿಯದಿರುವುದು ದುಃಖಕರ ವಿಷಯವಾಗಿದೆ. ಈ ವಾರದ ಒಂದು ಮಧ್ಯಾಹ್ನ ಜನ ಕೋಟೆಯಂತೆ ಆತನನ್ನು ಸುತ್ತುವರೆದು , ಎಲ್ಲ ಬಗೆಯ ಪ್ರಶ್ನೆಗಳನ್ನು ತೂರುತ್ತಿದ್ದರು. ಅವರಲ್ಲಿ ಗುಮಾಸ್ತನ ಕಂಠಪಟ್ಟಿಗಳನ್ನು ಬಿಗಿದುಕೊಂಡು ತಲೆಯನ್ನು ಮುಂದಕ್ಕೆ ತಂದ ಒಬ್ಬಾತ ಎತ್ತರಿಸಿ ವಿರೋಧದ ಧ್ವನಿಯಲ್ಲಿ ಪ್ರಾಯಶ್ಚಿತ್ತ , ಸ್ವರ್ಗ , ನರಕ ಮುಂತಾದ ಕ್ರೈಸ್ತ ಧರ್ಮದ ಪರಿಕಲ್ಪನೆಗಳನ್ನು ಎಳೆದು ತಂದು ಆತನನ್ನು ಕೆಣಕಿದನು. ಕೊನೆಗೆ ಆ ತರುಣ ಸಂನ್ಯಾಸಿ ತನ್ನೆಲ್ಲ ಇಂಗ್ಲಿಷ್ ಜ್ಞಾನವನ್ನು ಬಳಸಿ ಮತಾಂಧ ಪಂಥೀಯನನ್ನು ಸಮಾಧಾನಗೊಳಿಸಿದನು. ಅದಕ್ಕೆ ಆತ ‘ಓ ನೀನು ಏನು ಮಾತನಾಡುತ್ತಿರುವೆ ಎಂದು ನಿನಗೆ ಗೊತ್ತಿಲ ’ ಎಂದು ಕೂಗುತ್ತ ‘ ನಿನ್ನ ಬಗ್ಗೆ ನನಗೆ ಅನುಕಂಪವಿದೆ. ನನ್ನ ಆತ್ಮವನ್ನು ಹೇಗೆ ರಕ್ಷಿಸಿಕೊಳ್ಳಲಿ . ಅದಕ್ಕೆ ನಾನು ಏನು ಮಾಡಬೇಕು’ ಎಂದು ಕೂಗಿದಾಗ ಸುತ್ತಲಿದ್ದ ಹೆಂಗಸರು ನಗಲಿಲ್ಲ. ‘ನಿನ್ನ ದೇವರು ಎಂತಹವನು ‘ ಮುಂತಾಗಿ ಆತ ಕೂಗಿದನು’. ಇನ್ನು ಹೆಚ್ಚಿನದು ಈಗ ಪೂರ್ತಿ ನೆನಪಿಲ್ಲ. ಆ ಸಂನ್ಯಾಸಿ ‘ನೀನು ನನ್ನ ಮನಸ್ಸನ್ನು ಅರ್ಥಮಾಡಿಕೊಂಡಿಲ್ಲ’ ಎಂದು ತಾಳ್ಮೆಯಿಂದ ನಗುತ್ತ ಹೇಳಿದ ಉತ್ತರವೇ ಆತನಿಗೆ ಮಾಡಿದ ಲೇವಡಿಯಾಗಿತ್ತು. ನಂತರ ಆತ ಅನಂತ, ಅಖಂಡ, ಅವ್ಯಯವಾದ ಎಲ್ಲ ಚರಾಚರ ವಸ್ತುಗಳಲ್ಲಿರುವ ಸತ್ಯವೇ ಬೌದ್ಧರ ದೇವರೆಂದು ತಿಳಿಸಿದನು. ಆಗ ತೀವ್ರವಾಗಿ ಪ್ರಶ್ನಿಸುತ್ತಿದ್ದ ಸಾಂಪ್ರದಾಯಿಕ ಕ್ರೈಸ್ತ ಮಿನಿಸ್ಟರ್ ಹೊರ ನಡೆದನು. ಇದು ಸತತವಾಗಿ ಎರಡು ಗಂಟೆಗಳ ಕಾಲ ನಡೆಯಿತು.
ಕಿಂಝೆ ರಿಂಜೆ ಹೆರಾಯ್ ನಿಜವಾದ ಕ್ರೈಸ್ತ ಧರ್ಮವನ್ನಾಗಲಿ ಅದು ತಮ್ಮ ಜನರಿಗೆ ಒಳಿತನ್ನು ಉಂಟು ಮಾಡುವಂತಿದ್ದರೆ ಅದನ್ನು ಒಪ್ಪಿಕೊಳ್ಳುವುದನ್ನಾಗಲಿ ಎಂದೂ ತಾವು ವಿರೋಧಿಸಿಲ್ಲ ; ಜಪಾನಿನ ರಾಷ್ಟ್ರೀಯ ಜೀವನ ಮತ್ತು ಪದ್ದತಿಗಳಿಗೆ ಎದುರಾಗದ ಹೆಚ್ಚು ಉದಾರಿ ಕ್ರೈಸ್ತ ಧರ್ಮ ಬರಲಿ ಎನ್ನುತ್ತಾನೆ . ಧರ್ಮ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಈತ ಧರಿಸಿದ್ದ ಕಪ್ಪು , ಕಂದು ಬಣ್ಣದ ಉಡುಗೆ ಈತನ ಧಾರ್ಮಿಕ ಉಡುಗೆಯಲ್ಲ. ಅದು ಹೆಚ್ಚು ಗಾಢಬಣ್ಣದಲ್ಲಿದ್ದು , ತುಟ್ಟಿ ವಸ್ತುಗಳಿಂದಾಗಿರುತ್ತದೆ. ಅಮೆರಿಕದ ಉಡುಗೆ ಮಿತವ್ಯಯಕಾರಿಯಾದುದರಿಂದ ಜಪಾನಿಯರು ಅದನ್ನು ಬಳಸುತ್ತಾರೆ ಎನ್ನುತ್ತಾನೆ. ಆತ ದೇವಾಲಯದಲ್ಲಿ ಸೇವೆ ಮಾಡುವಾಗ ಕುಟುಂಬದಿಂದ ದೂರ ಇರುವುದಿಲ್ಲ ಹಾಗೂ ಕುಟುಂಬವನ್ನು ತೊರೆಯಬೇಕಾಗಿಲ್ಲ ಎಂದು ತಿಳಿದು ನಮಗೆ ಸಂತೋಷವಾಯಿತು. ನನ್ನ ತಂದೆ, ತಾಯಿಗಳು ಇನ್ನೂ ಬದುಕಿದ್ದಾರೆ. ಅವರನ್ನು ನಾನು ಭೇಟಿ ಮಾಡಬೇಕು ಎಂದನು. ಜಪಾನಿನಲ್ಲಿ ಮಗ ಮಾಡುವ ಕರ್ತವ್ಯಕ್ಕಿಂತ ದೊಡ್ದ ಧರ್ಮವಿಲ್ಲ.
ಎಚ್. ಧರ್ಮಪಾಲ ಏಷ್ಯನ್ನರಲ್ಲಿ ಎದ್ದು ಕಾಣುವಂತಹವರಲ್ಲಿ ಒಬ್ಬಾತ. ಆತನ ನಿಲುವು ಅದೆಷ್ಟು ನೇರ , ಬಟ್ಟೆಗಳು ಅದೆಷ್ಟು ಬಿಳಿಯಾಗಿದ್ದು ಲಾಲಿತ್ಯದಿಂದ ಉಡಲಾಗಿದೆ ; ಆತನ ಕಪ್ಪು ಮುಖದಲ್ಲಿ ಪರಿಶುದ್ಧತೆ ಮತ್ತು ಒಳ್ಳೆಯತನಗಳು ಸಹಜವಾಗಿವೆ. ಆತನ ಬಳಿ ಬುದ್ಧನ ವಿಗ್ರಹವಿದೆ. ಧರ್ಮ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಬದಿಯ ಆಸನದಲ್ಲಿ ಅದನ್ನು ಇರಿಸಿರುತ್ತಾನೆ. ಬೋನಿಯ ಖಾಸಗಿ ಜಾಗದಲ್ಲಿರುವ ಅದನ್ನು ಬೆರಳಿನಿಂದ ತೋರಿಸುತ್ತ ‘ ಆ ಪವಿತ್ರ ವಿಗ್ರಹ ಅಲ್ಲಿದೆ. ಅದೆಂತಹ ಅದ್ಭುತ ಅಭಿವ್ಯಕ್ತಿ ’ ಎಂದನು. ಇಲ್ಲಿ ಒಂದು ವಿಶೇಷ ವಿಚಾರವನ್ನು ಹೇಳಬೇಕು. ಸಿಲೋನಿನ ಧರ್ಮಪಾಲ ವಿಗ್ರಹಾರಾಧಕನಲ್ಲ. ಆತ ತನ್ನ ಆಚಾರ್ಯಯನ ವಿಗ್ರಹವನ್ನು ರೋಮನ್ನರು ಮತ್ತು ಕ್ಯಾಥೊಲಿಕರು ಶಿಲುಬೆ ಮತ್ತು ಚಿತ್ರಗಳನ್ನು ಬಳಸುವಂತೆ ಬಳಸುತ್ತಾನೆ. ಎಲ್ಲ ಪೌರಾತ್ಯರು ಸಂಬಳ ಪಡೆದು ಧರ್ಮ ಬೋಧಿಸುವ ಕಲ್ಪನೆಯಿಂತ ವಿಚಲಿತರಾಗುತ್ತಾರೆ.
ಉದ್ದ ಕೂದಲಿನ ತಲೆಯಲ್ಲಿ ನಡುವೆ ಬೈತಲೆ ತೆಗೆದಿರುವ ಸಡಿಲ ಉದ್ದನೆಯ ನಿಲುವಂಗಿ ಉಟ್ಟು ನಮ್ಮ ಮುಂದೆ ಸಾಗಿದ ಸಿರಿಯಾದ ಆರ್ಕಿಮ್ಯಾಂಡ್ರೈಟ್ ಈ ಜಾಗದಲ್ಲಿ ಆಗಾಗ್ಗೆ ಸುಳಿದಾಡುವ ಮತ್ತೊಬ್ಬ ವ್ಯಕ್ತಿ. ಈತ. ಈ ಕ್ರೈಸ್ತ ಪಾದ್ರಿ . ಹಣವನ್ನು ಎಂದಿಗೂ ಬಳಸುವುದಿಲ್ಲ.
ಹಿಂದೂಗಳಂತೆ ಜಪಾನಿಯರು ಕೂಡ ಧರ್ಮ , ದೇವರು, ನೈತಿಕ ಕ್ರಮ , ಕಾರ್ಯ-ಕಾರಣ ಕುರಿತಾದಂತಹ ನಮ್ಮ ಯಾವ ಕಲ್ಪನೆಗಳನ್ನೂ ಒಪ್ಪುವುದಿಲ್ಲ. ತಮ್ಮಲ್ಲಿ ಈಗಾಗಲೆ ಬೇಕಾದಷ್ಟು ಮತ, ಧರ್ಮಗಳಿವೆ ಎನ್ನುತ್ತಾರೆ. ನಮ್ಮ ಸಂಘಟನಾ ಸಾಮರ್ಥ್ಯ , ಶಿಸ್ತು , ಕೆಲಸ ಮತ್ತು ಕಾರ್ಮಿಕರನ್ನು ಕುರಿತಾಗಿ ಇರುವ ಕಾರ್ಯಕ್ರಮಗಳು , ಲೌಕಿಕ ಸಾಧನೆಗಳನ್ನು ಮೆಚ್ಚುವರಲ್ಲದೆ ಅವುಗಳನ್ನು ಕಲಿಯಲು ಉತ್ಸುಕರಾಗಿದ್ದಾರೆ. ಸಂಸತ್ತಿನಲ್ಲಿ ಕಂಡುಬಂದ ಹುರುಪಿನಿಂದ ಅವರು ನಮ್ಮ ನಿರ್ದಿಷ್ಟ ಹರಳುಗಟ್ಟಿದ ಸಿದ್ಧಾಂತಗಳನ್ನು ಒಪ್ಪುವುದಕ್ಕಿಂತ ನಾವು ಅವರ ವಿಶಾಲವಾದ ದೈವತ್ವದ ಚಿಂತನೆ , ಮನುಷ್ಯನ ಪವಿತ್ರತೆಯ ತತ್ತ್ವಗಳನ್ನು ಸ್ವೀಕರಿಸಲು ಹೆಚ್ಚು ಸಿದ್ಧರಿದ್ದೇವೆನ್ನುವುದು ಖಚಿತವಾಗುತ್ತದೆ. ಹಲವು ಮತ , ಪಂಥಗಳ ವೈವಿಧ್ಯಮಯವಾದ ಅರ್ಥೈಸಿಕೆಯ ಅವರ ಧರ್ಮಗಳನ್ನು ಒಪ್ಪಿ , ಅವರ ಪರಂಪರೆಯನ್ನು ಕೀಳಲು ಯತ್ನಿಸದಿದ್ದರೆ ಅಲ್ಲಿ ಕ್ರೈಸ್ತ ಧರ್ಮಕ್ಕೂ ಸಾಕಷ್ಟು ಅವಕಾಶ ಇರುವಂತಿದೆ. ವಾಷಿಂಗ್ಟನ್ ಕ್ಯಾಥೊಲಿಕ್ ವಿಶ್ವವಿದ್ಯಾಲಯದ ರೆಕ್ಟರ್ ಬಿಷಪ್ ಕಿಯಾನೆ ಕ್ರೈಸ್ತರು ತಮ್ಮ ಜನರನ್ನು ಮತಾಂತರಗೊಳಿಸಲು ಅನುಸರಿಸುತ್ತಿರುವ ಮಾರ್ಗಗಳನ್ನು ಟೀಕಿಸಿದ ಅವರಿಗೆ ಸಾರ್ವಜನಿಕವಾಗಿ ಧನ್ಯವಾದ ಹೇಳಿದರಲ್ಲದೆ. ಹಸಿದವರನ್ನು , ಅಂತ್ಯಜರನ್ನು ಪರಕೀಯ ಧರ್ಮ ಒಪ್ಪುವಂತೆ ಮಾಡುವುದನ್ನು ತೀವ್ರವಾಗಿ ವಿರೋಧಿಸಿದರು. ಟೀಕಾಕಾರರು ಟೀಕೆಗಳನ್ನು ಮುಂದುವರೆಸಿ , ಕುಟುಕಿ ನಾವು ಹೇಳಿದ್ದನ್ನು ಆಚರಿಸುವಂತೆ ಮಾಡಿ ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎನ್ನುವುದನ್ನು ನಾವಾಗಿಯೇ ನೋಡಿಕೊಳ್ಳುವಂತೆ ಮಾಡುತ್ತಾರೆ ಎಂದರು.
ನಿನ್ನೆ ಮಧ್ಯಾಹ್ನದ ಕಲಾಪ ಬಹಳ ಮಹತ್ವಪೂರ್ಣವಾದ ವಿದೇಶಿ ಧರ್ಮ ಪ್ರಚಾರ ಕುರಿತಾಗಿದ್ದು ವೇದಿಕೆಯ ಖ್ಯಾತರಾದ ಹಲವು ಮಿಷನರಿಗಳಿದ್ದರು. ಧರ್ಮಪಾಲ ಮತ್ತು ನರಸಿಂಹ ಈ ಇಬ್ಬರು ಹಿಂದೂಗಳು (ಧರ್ಮಪಾಲ ಹಿಂದೂ ಅಲ್ಲ-ವರದಿಗಾರ ಹಾಗೆ ಹೇಳಿದ್ದಾನೆ). ವೇದಿಕೆಯ ಮೇಲಿದ್ದವರಿಗೆ ಮತ್ತು ಸಭಿಕರಿಗೆ ತಮ್ಮ ಅಭಿಪ್ರಾಯದಲ್ಲಿ ಕ್ರೈಸ್ತ ಧರ್ಮ ಪ್ರಚಾರ ವಿದೇಶಿ ನೆಲದಲ್ಲಿ ಏಕೆ ಯಶಸ್ವಿಯಾಗಿಲ್ಲವೆಂದು ನೇರವಾದ ಮಾತುಗಳಲ್ಲಿ ಹೇಳಿದರು. ಅವರ ಅಭಿಪ್ರಾಯದಂತೆ ಜನಕ್ಕೆ ಉಣ್ಣಲು ಬೇಕೆ ಹೊರತು ಧರ್ಮ ಬೋಧನೆಯಲ್ಲ. ಇಂಗ್ಲೆಂಡ್ ಮಾಡುತ್ತಿರುವಂತೆ ಒಂದು ಕೈಯಲ್ಲಿ ಕತ್ತಿ , ಇನ್ನೊಂದು ಕೈಯಲ್ಲಿ ಬೈಬಲ್ ಬೇಕಿಲ್ಲ. ಜಾತಿಯಲ್ಲಿ ಮೂಗು ತೂರಿಸುವುದು ಮತ್ತು ಮಾಂಸಾಹಾರದ ಒತ್ತಾಯ ಸಲ್ಲದು. ಮಿಷನರಿಗಳು ಪೂರ್ವದಲ್ಲಿ ಕ್ರೈಸ್ತ ಧರ್ಮವನ್ನು ಒಂದು ಶಕ್ತಿಯಾಗಿಸಬೇಕೆಂದರೆ ಅವರು ನಜರೆತ್ತಿನ ಪ್ರೇಮಮೂರ್ತಿ ಯೇಸುವಿನ ರೂಪದಲ್ಲಿ ಬರುವುದಕ್ಕೆ ಯಾವಾಗಲೂ ಸ್ವಾಗತವಿದೆ ಎಂದು ಯಾರೂ ಎದುರಾಡಲಾಗದ ವಾಗ್ವೈಖರಿಯಲ್ಲಿ ತಿಳಿಸಿದರು. ನರಸಿಂಹ ಕ್ರೈಸ್ತ ಧರ್ಮದ ಹರಡಿಕೆಗೆ ತಡೆಯಾಗಿರುವ ಇನ್ನಿತರ ಕಾರಣಗಳನ್ನು ಗುರುತಿಸಿ ಪಶ್ಚಾತ್ತಾಪದ ಕಲ್ಪನೆ ಹಿಂದೂ ಮನಸ್ಸಿಗೆ ಅರ್ಥರಹಿತವಾಗಿದ್ದು ಎಂದಿಗೂ ಅಡಚಣೆಯಾಗಿ ಉಳಿಯುತ್ತದೆ ಎಂದನು. ಕೊನೆಯಲ್ಲಿ ಮಿಷನರಿಗಳು ತಮ್ಮ ಪ್ರತಿವಾದವನ್ನು ಸಮರ್ಥವಾಗಿ ಮಂಡಿಸಿದರು. ಇಂತಹ ಪರಸ್ಪರ ವಿರುದ್ಧ ನಿಲುವಿನ ಚಿಂತನೆಗಳನ್ನು ಶಾಂತಿಯುತವಾಗಿ ವೇದಿಕೆಯ ಮೇಲೆ ತಂದಿದ್ದು ಚರಿತ್ರಾರ್ಹ ಸಂಗತಿಯಾಗಿದೆ.
ಹಿಂದಿನ ದಿನ ಮಹಮ್ಮದ್ ರಸೆಲ್ ಅಲೆಕ್ಸಾಂಡರ್ ವೆಬ್ ಇಸ್ಲಾಂ ಧರ್ಮ ಪ್ರತಿಪಾದಿಸುವ ನೈತಿಕ ತತ್ತ್ವಗಳು ಬೇರೆ ಯಾವುದೇ ಧರ್ಮಕ್ಕೆ ಸಮ ಎಂದು ನೀಡಿದ ಹೇಳಿಕೆಯನ್ನು ಸಿರಿಯಾ ದೇಶದ ಬೈರೂತ್’ನ ಜಾರ್ಜ್ ಪೋಸ್ಟ್ ಕುರಾನ್’ನಲ್ಲಿರುವ ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಆಯ್ದ ಭಾಗಗಳನ್ನು ಓದಿ ಅಲ್ಲಗಳೆದರಲ್ಲದೆ ಷಿಕಾಗೊ ಮತ್ತು ನ್ಯೂಯಾರ್ಕ್ ಕೊಳೆಗೇರಿವಾಸಿಗಳು ಆಚರಣೆಯಲ್ಲಿ ತರದಿದ್ದರೂ ಇದಕ್ಕಿಂತಹ ಉನ್ನತ ನೈತಿಕ ಮೌಲ್ಯಗಳನ್ನು ಹೊಂದಿದ್ದಾರೆಂದು ತಿಳಿಸಿದನು. ಹೊಸದಾಗಿ ಇಸ್ಲಾಂ ಧರ್ಮಕ್ಕೆ ಸೇರಿರುವ ಮಹಮ್ಮದ್ ರಸೆಲ್ ಅಲೆಕ್ಸಾಂಡರ್ ವೆಬ್ ಬಹುಪತ್ನಿತ್ವ ಅಮೆರಿಕಕ್ಕೆ ಶಾಪವಾಗಿರಬಹುದು ಆದರೆ ಕೆಲ ಸಂದರ್ಭಗಳಲ್ಲಿ ಕೆಲ ಸಮಾಜಗಳಿಗೆ ಅದು ಅನುಕೂಲಕರವಾಗಿದ್ದಿರಬಹುದು ಎಂದು ನೀಡಿದ ಹೇಳಿಕೆಗೆ ಬಂದ ವಿರೋಧವನ್ನು ತಲೆ ಬರಹಗಳನ್ನು ರೋಚಕಗೊಳಿಸಲು ಕೆಲ ಷಿಕಾಗೊ ಪತ್ರಿಕೆಗಳು ಉತ್ಪ್ರೇಕ್ಷೆಗೊಳಿಸಿವೆ. ವೆಬ್ ಹೇಳಿಕೆ ಅಸಾಧಾರಣದ್ದಾಗಿದ್ದು ಎಲ್ಲ ಸಭಿಕರು ಆ ಬಗ್ಗೆ ಸಹಾನುಭೂತಿ ಇಲ್ಲದವರಾಗಿದ್ದರು. ‘ತಪ್ಪು’ ‘ನಾಚಿಕೆಗೇಡು’ ಎನ್ನುವ ಕೂಗಿಗೆ ಪ್ರತಿಧ್ವನಿಗಳೂ ಇದ್ದವು. ರೆ. ಜೋಸೆಫ್ ಕುಕ್ ಮತ್ತಿತರರು ವೆಬ್ ಅವರನ್ನು ಅವರ ಅಭಿಪ್ರಾಯಗಳನ್ನು ತಿಳಿಸಲು ಆಹ್ವಾನಿಸಿದೆಯೇ ಹೊರತು ಅವಮಾನಿಸಲಲ್ಲ ಎಂದರು. ಡಾ. ಬರೋಸ್ ಇಸ್ಲಾಂ ಧರ್ಮ ಮೊದಲ ಬಾರಿಗೆ ಅಮೆರಿಕ ಜನರ ಮುಂದೆ ಒಬ್ಬ ಪ್ರಾಧ್ಯಾಪಕರಿಂದ ಮಂಡಿಸಲ್ಪಡುತ್ತಿದೆ. ಒಬ್ಬ ಮನುಷ್ಯ ತನ್ನ ಹೃದಯಕ್ಕೆ ಹತ್ತಿರವೆನಿಸುವ ಧರ್ಮವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಅವಕಾಶ ಬಂದಿರುವುದೇ ತಮಗೆ ಆನಂದ ತಂದಿದೆ ಎಂದು ಆತನನ್ನು ( ಮಹಮ್ಮದ್ ರಸೆಲ್ ಅಲೆಕ್ಸಾಂಡರ್ ವೆಬ್) ಪರಿಚಯಿಸಿದರು. ಅದು ವೆಬ್ ಹೃದಯಕ್ಕೆ ಹತ್ತಿರವಾದ ಧರ್ಮವಾಗಿದ್ದು ಪ್ರಸ್ತುತ ಅದರ ಅನುಷ್ಠಾನವನ್ನು ಯಾರು ಒಪ್ಪುತ್ತಾರೆ ಎನ್ನುವುದಲ್ಲ. ಆತನಿಗೆ ದಾರ್ಶನಿಕನ ಹುಮ್ಮಸ್ಸಿನ ಮುಖವಿದೆ ; ಮುಂದೊಂದು ದಿನ ಇಸ್ಲಾಂ ಅಮೆರಿಕದ ರಾಷ್ಟ್ರೀಯ ಧರ್ಮವಾಗುತ್ತದೆ ಎಂದಾಗ ಸಮತೋಲನ ತಪ್ಪಿದಂತಾಗಿದೆ. ಸದಾ ಚಟುವಟಿಕೆ , ವ್ಯಾಪಾರ, ವ್ಯವಹಾರಗಳಲ್ಲಿ ಮುಳುಗಿರುವ ನಮ್ಮ ಜನ ಸ್ಟಾಕ್ ಮಾರುಕಟ್ಟೆಯಲ್ಲೋ ಮತ್ತೆಲ್ಲೋ ಇರುವಾಗ , ಅದರಲ್ಲೂ ಒಂದು ಸಲ ಸೂರ್ಯೋದಯದ ಸಮಯದಲ್ಲಿ ಸೇರಿದಂತೆ ಒಟ್ಟು ಐದು ಸಲ ಮಂಡಿಯೂರಿ ಕುಳಿತು ಬಗ್ಗಿ ಏಳುವುದು ಒಂದು ಕಲ್ಪನಾ ಲಹರಿ ಎನಿಸುತ್ತದೆ. ಆತ ಹೇಳುವಂತೆ ದಿನಕ್ಕೆ ಐದು ಬಾರಿ ದೇಹ ಶುದ್ದಿ ಮಾಡಿಕೊಳ್ಳುವುದು ಭಾರಿ ಕೊಳಕರಿಗೆ ಒಳ್ಳೆಯದಾಗಬಹುದು. ಬಹು ಪತ್ನಿತ್ವ ಮೂಲ ಇಸ್ಲಾಂ ಧರ್ಮದಲ್ಲಿಲ್ಲ ಎಂದು ಮಹಮ್ಮದ್ ವೆಬ್ ಹೇಳುವರಾದರೂ ಅದು ಅವರಿಗೆ ಮಾತ್ರ ಸೂಕ್ತವಾಗಬಹುದೇನೋ.
ಧರ್ಮ ಸಂಸತ್ತಿನ ಎಲ್ಲ ಕವಲುಗಳು , ಸಭೆಯಲ್ಲಿ ನಡೆದ ಭಾಷಣಗಳು , ಪಕ್ಕದ ಕೋಣೆಗಳಲ್ಲಿ ನಡೆದ ಚರ್ಚೆಗಳು , ವಸತಿ ನಿಲಯಗಳಲ್ಲಿ ಆದ ಪರಿಚಯಗಳು , ರಹಸ್ಯವೆನಿಸಿದ್ದ ವಿದೇಶಿ ಜೀವನದ ಮೇಲೆ ಚೆಲ್ಲಿದ ಬೆಳಕು ಎಂದಿಗೂ ಮುದ್ರಣದಲ್ಲಿ ಕಾಣಿಸಿಕೊಳ್ಳದು. ದೈನಂದಿನ ಸಭೆಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತ , ಸಮಾಪ್ತಿಯ ದಿನ ಸಮೀಸುತ್ತಿರುವಂತೆಯೇ ಜನ ಸಂದಣಿ ಹೆಚ್ಚುತ್ತಿದೆ. ಮುಂದಿನ ವಾರ ಇದೆಲ್ಲವದೂ ಹಿಂದಿನ ಒಂದು ಕನಸಾಗಿರುತ್ತದೆ. ಮುಂದಿನ ಭವಿಷ್ಯ ಮತ್ತು ದೈನಂದಿನ ಜೀವನಕ್ಕಾಗಿ ನಾವು ಧರ್ಮ ಸಂಸತ್ತಿನಿಂದ ತಿಳಿಯುವುದೇನೆಂದರೆ ನಂಬಿಕೆ ಮತ್ತು ಅಪೇಕ್ಷೆಗಳು ಒಬ್ಬ ದೇವನಿರುವ ಪರ್ವತದತ್ತ ದಾರಿ ತೋರುತ್ತವೆ. ಆ ಪರ್ವತ ಹತ್ತಿದವರೆಲ್ಲರಿಗೂ ಒಬ್ಬನೇ ಚಂದ್ರ ಕಾಣಿಸಿತ್ತಾನೆ. – (ವರದಿಗಾರ) ಫ್ರಾನ್ಸಿ ಆಲ್ಬರ್ಟ್ ಡೌಟಿ
ದಿ ಸ್ಟೇಟ್ಸ್’ಮನ್ ಪತ್ರಿಕೆ ಈ ವರದಿಯ ಆಯ್ದ ಅರ್ಧದಷ್ಟು ಭಾಗವನ್ನು ಪ್ರಕಟಿಸಿದರೆ , ಬಸು-ಘೋಷ್ ಪ್ರಕಟಿಸಿರುವ ‘ವಿವೇಕಾನಂದ ಇನ್ ಇಂಡಿಯನ್ ನ್ಯೂಸ್ ಪೇಪರ್ಸ್ ೧೮೯೩-೧೯೦೨’ ರಲ್ಲಿ ಇದಕ್ಕಿಂತಲೂ ಕಡಿಮೆ ಆಯ್ದ ಭಾಗಗಳನ್ನು ಪ್ರಕಟಿಸಿದ್ದಾರೆ , ಮಾರಿ ಲೂಯಿ ಬರ್ಕೆ ‘ಸ್ವಾಮಿ ವಿವೇಕಾನಂದ : ನ್ಯೂ ಡಿಸ್ಕವರೀಸ್’ನಲ್ಲಿ ಇದರ ೨೦ % ಮಾತ್ರ ಪ್ರಕಟವಾಗಿದೆ. ಹೀಗೆ ಅಂಶಿಕವಾಗಿ ಪ್ರಕಟಗೊಂಡಿರುವ ಈ ವರದಿ ಮುಂದಿನ ದಿನಗಳಲ್ಲಿ ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನವನ್ನು ಗೆದ್ದ ಏಕೈಕ ನಾಯಕ , ಅವರು ಜಗತ್ತಿಗೆ ವಿಶ್ವ ಧರ್ಮವನ್ನು ನೀಡಿದವರು ಎಂದು ಉತ್ಪ್ರೇಕ್ಷಿಸಿ ಬಿಂಬಿಸಲು ನೆರವಾಯಿತು.
ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಅದರೆ ಸಮಗ್ರ ವರದಿ (೧) ದಿ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ –ರೆ. ಜಾನ್ ಎಚ್. ಬರೋಸ್ – ದಿ ಪಾಲಿಮೆಂಟ್ ಪಬ್ಲಿಷಿಂಗ್ ಕಂಪೆನಿ -೧೮೯೩ (೨) ದಿ ವರ್ಲ್ಡ್ಸ್ ಕಾಂಗೆಸ್ ಆಫ್ ರಿಲಿಜನ್ಸ್ ಅಟ್ ದಿ ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್ – ಜೆ. ಡಬ್ಲ್ಯು ಜಾನ್ಸನ್ - ಡಬ್ಲ್ಯು. ಬಿ ಕಾನ್ ಕೀ ಕಂಪೆನಿ , ಷಿಕಾಗೊ- ೧೮೯೪ (೩) ದಿ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ ಅಂಡ್ ದಿ ರಿಲಿಜಿಯಸ್ ಕಾಂಗ್ರೆಸ್ ಅಟ್ ದಿ ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್ –ವಾಲ್ಟರ್ ಆರ್ ಹೌಟನ್-ಫ್ರಾಂಕ್ ಟೆನಿಸನ್ ನೀಲಿ - ಷಿಕಾಗೊ ೧೮೯೩ (೪) ರಿವ್ಯೂ ಆಫ್ ವರ್ಲ್ಡ್ಸ್ ರಿಲಿಜಿಯಸ್ ಕಾಂಗ್ರೆಸ್ –ಎಲ್.ಪಿ ಮರ್ಸರ್ , ರ್ಯಾಂಡ್ -, ಮೆಕ್.ನಲ್ಲಿ ಅಂಡ್ ಕಂ. ಷಿಕಾಗೊ ೧೮೯೩ (೫) ಎ ಖೋರಸ್ ಆಫ್ ಫೇಥ್-ಜೆಂಕಿನ್ ಲಾಯ್ಡ್ ಜೋನ್ಸ್ –ದಿ ಯೂನಿವರ್ಸಿಟಿ ಪಬ್ಲಿಷಿಂಗ್ ಕಂ. ಷಿಕಾಗೊ (೬) ವರ್ಲ್ಡ್ಸ್ ಕಾಂಗೆಸ್ ಅಡ್ರೆಸಸ್ – ಚಾರ್ಲ್ಸ್ ಕರೋಲ್ ಬೊನ್ನಿ –ದಿ ಓಪನ್ ಕೋರ್ಟ್ ಪಬ್ಲಿಷಿಂಗ್ ಕಂ –ಷಿಕಾಗೊ (೭) ದಿ ವರ್ಲ್ಡ್ಸ್ ಕಾಂಗ್ರೆಸ್ ಆಫ್ ರಿಲಿಜನ್ಸ್ – ಅರೆನಾ ಪಬ್ಲಿಷಿಂಗ್ ಕಂಪೆನಿ , ಬೋಸ್ಟನ್ , ೧೮೯೩ ಕೃತಿಗಳಲ್ಲಿ ಸಿಗುತ್ತದೆ. ಈ ಕೃತಿಗಳಲ್ಲಿರುವ ವರದಿಗಳು ವಾಸ್ತವಕ್ಕೆ ಸನಿಹ ಮತ್ತು ಅಧಿಕೃತವಾಗಿದ್ದು ವಿಶ್ವ ಧರ್ಮ ಸಂಸತ್ತಿನ ನಿಜವಾದ ಚಿತ್ರಣ ಕೊಡುತ್ತವೆ. ವ್ಯಕ್ತಿಗಳ ಭಾವುಕ ಹೇಳಿಕೆಗಳಿಗಿಂತ ಇಂತಹ ವರದಿಗಳನ್ನು ಅವಲಂಬಿಸುವುದು ಸರಿಯಾದ ಮಾರ್ಗ.
****************************
ವಿಶ್ವ ಧರ್ಮ ಸಂಸತ್ತಿನಲ್ಲಿ ಏನು ನಡೆಯಿತು , ಜನ ಅದನ್ನು ಹೇಗೆ ಸ್ವೀಕರಿಸಿದರು, ಯಾರನ್ನು ಗುರುತಿಸಿದರು ಎನ್ನುವುದು ಪತ್ರಿಕೆಗಳ ವರದಿಯಿಂದ ಸ್ಪಷ್ಟವಾಗುತ್ತದೆ. ಧರ್ಮ ಸಂಸತ್ತು ನಡೆಯುತ್ತಿದ್ದ ದಿನಗಳಲ್ಲಿ ಸ್ವಾಮಿಗಳನ್ನು ಇತರ ಪ್ರಭಾವಿ ಪ್ರತಿನಿಧಿಗಳಲ್ಲಿ ಒಬ್ಬರಂತೆ ಪರಿಗಣಿಸಲಾಗಿದ್ದಿತು. ಅವರಿಗೆ ಸಲ್ಲಬೇಕಾದ ಗೌರವವನ್ನು ಪತ್ರಿಕೆಗಳು ಕೊಟ್ಟಿದ್ದವು. ವಿಶ್ವ ಧರ್ಮ ಸಂಸತ್ತಿನ ಕೇಂದ್ರ ಅವರೇ ಎಂದಾಗಲಿ , ಅವರಿಂದಲೇ ಅದು ಯಶಸ್ವಿಯಾಯಿತು , ಅವರೊಬ್ಬರೇ ಅದರ ನಾಯಕ , ಅವರು ಪ್ರತಿಪಾದಿಸಿದ ಹಿಂದೂ ಧರ್ಮದ ಮುಂದೆ ಉಳಿದವೆಲ್ಲ ಮಂಕಾದವು ಎನ್ನುವಂತಹವೆಲ್ಲ ನಂತರ ಕಾಲದಲ್ಲಿ ಕ್ರಮೇಣವಾಗಿ ಬಿತ್ತಿ , ಬೆಳೆಸಿದಂತಹ ಮಿಥ್ಯೆಗಳು. ಸ್ವಾಮಿಗಳು ಇತರರಿಗಿಂತ ಶ್ರೇಷ್ಟ ಎಂದು ಸಾಧಿಸಲು ಒಡ್ಡಲಾಗಿರುವ ವಾದ ಸರಣಿಗಳತ್ತ ಒಮ್ಮೆ ಕಣ್ಣಾಡಿಸಬಹುದು.
(೧) ಕ್ರಿಶ್ಚಿಯನ್ ಧರ್ಮವನ್ನು ಎತ್ತಿಹಿಡಿಯಲು ವಿಶ್ವ ಧರ್ಮ ಸಂಸತ್ತನ್ನು ನಿಯೋಜಿಸಲಾಗಿದ್ದಿತು .ಅದರಲ್ಲಿ ಭಾಗವಹಿಸಿದ ೧೭೦ ಜನರಲ್ಲಿ ೧೦೦ ಕ್ರೈಸ್ತ ಧರ್ಮಕ್ಕೆ ಸೇರಿದ್ದರು ಎಂದು ನಿವೇದಿತಾ ಹೇಳಿದ್ದಾರೆ. ಈ ಅಂಕಿ-ಅಂಶ ನಿಜವಾದರೂ ಪ್ರತಿನಿಧಿಗಳ ಸಂಖ್ಯೆಗಿಂತಲೂ ಕ್ರೈಸ್ತೇತರ ಧರ್ಮಗಳ ಪ್ರತಿನಿಧಿಗಳಿಗೆ ಎಷ್ಟು ಕಾಲಾವಕಾಶ ಒದಗಿಸಲಾಗಿದ್ದಿತು ಎನ್ನುವುದು ಮುಖ್ಯ. ಭಾರತದಲ್ಲಿ ವಿಶ್ವ ಧರ್ಮ ಸಮ್ಮೇಳನ ನಡೆದರೆ ಇತರ ಧರ್ಮದವರಿಗೆ ಹೋಲಿಸಿದರೆ ಇದೇ ಪ್ರಮಾಣದಲ್ಲಿ ಹಿಂದೂಗಳು ಇರುತ್ತಾರೆ. ಆದರೆ ಕ್ರಿಶ್ಚಿಯನ್ ಪ್ರತಿನಿಧಿಗಳಿಗೆ ಒಂದು ಅವಕಾಶ ಕೊಟ್ಟರೆ ಇತರ ಧರ್ಮದ ಪ್ರತಿನಿಧಿಗಳಿಗೆ ಹಲವು ಅವಕಾಶಗಳನ್ನು ನೀಡಲಾಗಿದ್ದಿತು. ಪಿ.ಸಿ ಮಜುಂದಾರ್, ಸ್ವಾಮಿ ವಿವೇಕಾನಂದ ಮತ್ತು ಧರ್ಮಪಾಲರಿಗೆ ಮಾತನಾಡಲು ಹಲವು ಅವಕಾಶಗಳನ್ನು ನೀಡಲಾಗಿದ್ದಿತು. ಜೆ.ಎಚ್. ಬರೋಸ್ ಮತ್ತು ಇತರ ಲೇಖಕರು ವಿಶ್ವ ಧರ್ಮ ಸಂಸತ್ತನ್ನು ಕುರಿತಾಗಿ ಪ್ರಕಟಿಸಿರುವ ಪುಸ್ತಕ ಧರ್ಮ ಸಂಸತ್ತಿನ ಬಗ್ಗೆ ಇದ್ದ ಈ ಬಗೆಯ ತಪ್ಪು ತಿಳಿವಳಿಕೆಗಳನ್ನು ನಿವಾರಿಸುತ್ತದೆ.
ವಿಶ್ವ ಧರ್ಮ ಸಂಸತ್ತಿನಲ್ಲಿ ಕ್ರೈಸ್ತ ಪಾದ್ರಿಗಳು ಉದಾರ ನಿಲುವನ್ನು ತಳೆದಿರಲಿಲ್ಲ. ಅವರು ಇತರ ಧರ್ಮಗಳನ್ನು ಕೀಳಾಗಿ ಕಾಣುತ್ತಿದ್ದರು ಎನ್ನುವ ನಂಬಿಕೆ ಪ್ರಚಲಿತವಿದೆ. ಹೆಚ್ಚಿನ ಭಾಷಣಗಳು ಧಾರ್ಮಿಕ ಸಾಮರಸ್ಯ , ಮಾನವನ ಏಕತೆಯ ಬಗ್ಗೆ ಕೇಂದ್ರೀಕೃತವಾಗಿದ್ದವು. ಉದಾರ ತತ್ತ್ವಗಳನ್ನು ಪ್ರತಿಪಾದಿಸುತ್ತಿದ್ದ ಎಲ್ಲ ಪ್ರತಿನಿಧಿಗಳಿಗೆ ಜನ ಚಪ್ಪಾಳೆಯ ಮೂಲಕ ಮತ್ತು ಸ್ಥಳೀಯ ಪತ್ರಿಕೆಗಳು ಹೊಗಳಿಕೆಯ ಮೂಲಕ ಬೆಂಬಲ ನೀಡುತ್ತಿದ್ದವು. ಬೇರೆ ಧರ್ಮದ ಪ್ರತಿನಿಧಿಗಳು ಕ್ರೈಸ್ತ ಧರ್ಮ , ಪಾದ್ರಿಗಳ ನಡವಳಿಕೆಯ ಬಗ್ಗೆ ಕಟುವಾಗಿ ಟೀಕಿಸಿದಾಗಲೂ ಜನ ಒಪ್ಪುತ್ತಿದ್ದರು. ಸಹನೆಯಿಂದ ಕೇಳಿ ಅದನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಸೆಪ್ಟೆಂಬರ್ ೧೩ ರಂದು ಜಪಾನಿನ ಕಿಂಝಾ ಹಿರಾಯಿಯನ್ನು ಜನ ಭಾರಿ ಚಪ್ಪಾಳೆಯೊಂದಿಗೆ ಮೆಚ್ಚುಗೆ ಸೂಚಿಸಿದರು. ಬರೋಸ್ ಆತ್ಮೀಯತೆಯಿಂದ ಅವರ ಕೈಹಿಡಿದರೆ , ಜೆಂಕಿನ್ ಲಾಯ್ಡ್ ಜೋನ್ಸ್ ಅವರನ್ನು ಸಾರ್ವಜನಿಕವಾಗಿ ತಬ್ಬಿಕೊಂಡರು. ಜೋಸೆಫ್ ಕುಕ್’ನಂತಹ ಸಂಕುಚಿತ ಮನೋಭಾವದ ಕ್ರೈಸ್ತ ಪಾದ್ರಿಗಳ ನಿಲುವನ್ನು ಪತ್ರಿಕೆಗಳು ಖಂಡಿಸಿದವು. ಧರ್ಮಪಾಲರು ನಮ್ಮ ಬಗ್ಗೆ ತೀರ್ಮಾನ ನೀಡಲು ನಿಮಗೆಷ್ಟ ಧೈರ್ಯ ಎಂದು ಕೇಳಿದ್ದಕ್ಕೆ ಉತ್ತರವಾಗಿ ಬಿಷಪ್ ಜೆ.ಪಿ ನ್ಯೂಮನ್ ನೀಡಿದ ಉತ್ತರಕ್ಕೆ ಅಸಮಾಧಾನ ,ಅಸಮ್ಮತಿ ಮತ್ತು ಟೀಕೆ ಪತ್ರಿಕೆಗಳ ಮೂಲಕ ಬಂದಿತು.
(೨) ಸ್ವಾಮಿ ವಿವೇಕಾನಂದ ಅಂಡ್ ಹಿಸ್ ವರ್ಕ್-೧೯೨೪ ಎನ್ನುವ ಪುಸ್ತಕವನ್ನು ಅಭೇದಾನಂದರು ಬರೆದಿದ್ದಾರೆ. ಇದು ಅವರು ೮/೩/೧೯೦೩ ರಲ್ಲಿ ಕಾರ್ನೆಗಿ ಲೈಸಿಯಂ, ನ್ಯೂಯಾರ್ಕ್’ನಲ್ಲಿ ಕೊಟ್ಟ ಭಾಷಣದ ಮುದ್ರಿತ ರೂಪ. ಈ ಪುಸ್ತಕದಲ್ಲಿ ‘ಮೊದಲ ಬಾರಿಗೆ ಆಧುನಿಕ ಭಾರತದ ಚರಿತ್ರೆಯಲ್ಲಿ ಹಾಗೆಯೇ ಅಮೆರಿಕದ ಧಾರ್ಮಿಕ ಚರಿತ್ರೆಯಲ್ಲಿ ಸರ್ಕಾರದ ನೆರವಿಲ್ಲದೆ, ಆಹ್ವಾನವಿಲ್ಲದೆ , ಧಾರ್ಮಿಕ ಸಂಸ್ಥೆಗಳ ಬೆಂಬಲವಿಲ್ಲದೆ ಅಮೆರಿಕ ಮತ್ತು ಭಾರತವನ್ನು ಬೇರ್ಪಡಿಸಿರುವ ಅಗಾಧ ಅಳದ ಕಡಲನ್ನು ದಾಟಿ ಪೂರ್ವದಿಂದ ಬಂದ ಒಬ್ಬ ವ್ಯಕ್ತಿ ಧಾರ್ಮಿಕ ಸಂಸತ್ತಿನಲ್ಲಿ ಕಂಡುಬಂದ ಧಾರ್ಮಿಕ ಅಸಹನೆ , ವೈಷ್ಯಮ್ಯ , ಹೋರಾಟ ತುಂಬಿದ ಎದೆಗಳೊಳಗೆ ಶಾಂತಿ , ಸಾಮರಸ್ಯದ ಸಂದೇಶ ತಂದನು’ ಎಂದಿದ್ದಾರೆ. ಧಾರ್ಮಿಕ ಸಂಸತ್ತಿಗೆ ಬಂದವರಲ್ಲಿ ಚೀನಾದ ಪ್ರತಿನಿಧಿ ಹೊರತಾಗಿ ಬೇರೆ ಯಾರಿಗೂ ಸರ್ಕಾರಗಳ ಬೆಂಬಲವಿರಲಿಲ್ಲ. ಅದೆಷ್ಟೋ ಜನರಿಗೆ ಧಾರ್ಮಿಕ ಸಂಸ್ಥೆಗಳ ನೆರವಿರಲಿಲ್ಲ. ಕೆಲವರು ಆಹ್ವಾನ ಇಲ್ಲದೆ ಬಂದಿದ್ದರು ಎನ್ನುವುದು ದಾಖಲೆಗಳಿಂದ ಸ್ಪಷ್ಟ. ಸ್ವಾಮಿಗಳು ಹಣವನ್ನಾದರೂ ಒಯ್ದಿದ್ದರು. ವಿಶ್ವ ಧರ್ಮ ಸಂಸತ್ತಿನಲ್ಲಿ ಗಮನ ಸೆಳೆದಿದ್ದ ಸಿರಿಯಾದ ಆರ್ಕಿಮ್ಯಾಂಡ್ರೈಟ್ ಹಣವನ್ನು ಎಂದಿಗೂ ಮುಟ್ಟುತ್ತಿರಲಿಲ್ಲ ಮತ್ತು ಬಳಸುತ್ತಿರಲಿಲ್ಲ. ವಿಶ್ವ ಧರ್ಮ ಸಂಸತ್ತಿನ ದಾಖಲೆ ಮತ್ತು ಪತ್ರಿಕಾ ವರದಿಗಳನ್ನು ನೋಡಿದರೆ ಅಲ್ಲಿ ಬಂದಿದ್ದ ಎಲ್ಲ ಪ್ರತಿನಿಧಿಗಳು ಉತ್ತಮ ಶಿಕ್ಷಣ ಪಡೆದವರಾಗಿದ್ದರಲ್ಲದೆ ಧೃಡ ಮಾತುಗಳಲ್ಲಿ ಮತಾಂಧತೆಯನ್ನು ಖಂಡಿಸಿದ್ದರು. ಧಾರ್ಮಿಕ ಸಾಮರಸ್ಯಕ್ಕೆ ಕರೆ ಕೊಟ್ಟಿದ್ದರು. ಷಿಕಾಗೊ ಟ್ರಿಬ್ಯೂನ್ ಸೆಪ್ಟೆಂಬರ್ ೧೨ ರ ಸಂಚಿಕೆಯಲ್ಲಿ ‘ಆಲ್ ಬ್ರಿಂಗ್ ದಿ ಸೇಮ್ ಮೆಸೇಜ್ ‘ ತಲೆಬರಹದಲ್ಲಿ ಎಲ್ಲ ಸ್ವಾಗತ ಭಾಷಣಗಳ ರಾಗ ಸ್ಪಷ್ಟವಾಗಿ ‘ಒಬ್ಬ ತಂದೆ ಮತ್ತು ಮಾನವ ಸೋದರತ್ವ’ವಾಗಿದ್ದಿತು ಎಂದು ಒಂದೇ ಮಾತಿನಲ್ಲಿ ವಿಶ್ವ ಧರ್ಮ ಸಂಸತ್ತಿನ ಪ್ರತಿನಿಧಿಗಳ ಆಶಯವನ್ನು ವ್ಯಕ್ತಪಡಿಸಿತು.
ಧರ್ಮ ಸಂಸತ್ತಿನಲ್ಲಿ ಭಾಷಣ ಮಾಡುವವರೆಗೆ ಸ್ವಾಮಿಗಳು ಎಲ್ಲಿಯೂ ಸಾರ್ವಜನಿಕ ಭಾಷಣ ಮಾಡಿರಲಿಲ್ಲ ಎನ್ನುತ್ತಾರೆ ಅಭೇದಾನಂದರು. ಸ್ವಾಮಿ ವಿವೇಕಾನಂದರು ಮದ್ರಾಸಿನ ತಿರುವಳ್ಳುಕೇಣಿಯ ಟ್ರಿಪ್ಲಿಕೇನ್ ಲಿಟರೆರಿ ಸೊಸೈಟಿಯಲ್ಲಿ (ಇಂಡಿಯನ್ ಸೋಷಿಯಲ್ಲ್ ರಿಫಾರ್ಮರ್-೨೧/೧/೧೮೯೩) ಮತ್ತು ೧೩/೨/೧೮೯೩ ರಂದು ಫೆಬ್ರವರಿಯಂದು ಮಹಬೂಬ್ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ಜನ ಜನರ ಮುಂದೆ ಸ್ವಾಮಿಗಳು ಭಾಷಣ ಮಾಡಿದ್ದರೆಂದು ‘ದಿ ಲೈಫ್-೧೯೧೪’ ತಿಳಿಸುತ್ತದೆ. ಇದಲ್ಲದೆ ಅಮೆರಿಕ ತಲುಪಿದ ನಂತರ ವಿಶ್ವ ಧರ್ಮ ಸಂಸತ್ತು ಪ್ರಾರಂಭವಾಗುವ ಮೊದಲು ಅವರು ಹಲವು ಕ್ಲಬ್ ಮತ್ತು ಸಂಘ ಸಂಸ್ಥೆಗಳ ಮುಂದೆ ಭಾಷಣ ಮಾಡಿರುವುದು ಸ್ಪಷ್ಟ.
(೩) ದಿ ಲೈಫ್ ಆಫ್ ವಿವೇಕಾನಂದ ಅಂಡ್ ದಿ ಯೂನಿವರ್ಸಲ್ ಗಾಸ್ಪೆಲ್ ಬರೆದಿರುವ ರೊಮ್ಯಾಂಡ್ ರೋಲಾ ‘೧೮೯೩ ರಲ್ಲಿ ಧರ್ಮ ಸಂಸತ್ತಿನ ಉದ್ಘಾಟನೆಯ ದಿನ ಸ್ವಾಮಿಗಳ ಧೀರ ಗಾಂಭೀರ್ಯದ ಅಸ್ತಿತ್ವದಿಂದ ಉಳಿದವರ ಇರುವಿಕೆಯೇ ಅರಿವಿಗೆ ಬರುತ್ತಿರಲಿಲ್ಲ ಎಂದಿದ್ದಾರೆ. ಇದು ಒಬ್ಬ ವ್ಯಕ್ತಿಯ ಕಲ್ಪನೆಯ ತುತ್ತತುದಿ. ಧರ್ಮ ಸಂಸತ್ತಿಗೆ ಬಂದವರಲ್ಲಿ ಬಹುತೇಕರಿಗೆ ಅಲ್ಲಿ ಸಾವಿರಾರು ಜನ ಸೇರಿರುತ್ತಾರೆ, ಜಗತ್ತಿನ ಮೂಲೆ ಮೂಲೆಗಳಿಂದ ವಿದ್ವಾಂಸರು ಬಂದಿರುತ್ತಾರೆ. ಅವರ ಎದುರು ತಮ್ಮ ಧರ್ಮದ ಸಾರವನ್ನು ದಿಟ್ಟವಾಗಿ , ಸ್ಪಷ್ಟವಾಗಿ ಮುಂದಿರಿಸಬೇಕೆಂದು ತಿಳಿದಿದ್ದಿತು. ಹಾಗೆ ತಿಳಿದಿದ್ದೇ ಅವರು ಆ ಸವಾಲನ್ನು ಎದುರಿಸಲು ಬಂದಿದ್ದರು. ಸಭೆಗೆ ಬಂದಿದ್ದ ವಿದ್ಯಾವಂತರಿಗೆ ವಿವಿಧ ವ್ಯಕ್ತಿಗಳು ಮತ್ತು ಅವರು ಪ್ರತಿಪಾದಿಸುವ ತತ್ತ್ವಗಳನ್ನು ಹೋಲಿಸಿ ನೋಡುವ ಪ್ರಬುದ್ಧತೆ ಇದ್ದಿತು. ಇಂತಹ ಸನ್ನಿವೇಶದಲ್ಲಿ ಯಾರೊಬ್ಬರಾಗಲಿ ನಾಯಕರಾಗುವುದು , ಕೇಂದ್ರಬಿಂದುವಾಗುವುದು ಅಸಾದ್ಯ. ವಿವಿಧ ಪತ್ರಿಕೆಯ ವರದಿಗಳಿಂದ , ಡಾ. ಜೆ.ಎಚ್ ಬರೋಸ್ ಮತ್ತು ಇತರ ಲೇಖಕರು ಸಂಪಾದಿಸಿರುವ ವಿಶ್ವ ಧರ್ಮ ಸಂಸತ್ತಿನ ಕಲಾಪಗಳ ವಿವರಗಳಿಂದ ಸ್ವಾಮಿಗಳಿಗಿಂತ ಚೆನ್ನಾಗಿ ಭಾಷಣ ಮಾಡಿದವರು , ಸಭಿಕರ ಮೆಚ್ಚುಗೆ ಗಳಿಸಿದವರು ಅದೆಷ್ಟೋ ಜನ ಇದ್ದರು, ಅವರಲ್ಲಿ ಹಲವು ಭಾರತೀಯರು ಸೇರಿದರು ಎನ್ನುವುದು ಸ್ಪಷ್ಟ.
(೪) ಸ್ವಾಮಿಗಳು ಧರ್ಮ ಸಂಸತ್ತಿನ ಉದ್ಘಾಟನೆಯ ದಿನ ೧೧/೯/೧೮೯೩ ರಂದು ಒಂದಾದರ ನಂತರ ಒಂದು ಘಂಟೆಗಳಂತೆ ದಿನದ ಕೊನೆಯವರೆಗೂ ತಮ್ಮ ಭಾಷಣದ ಸರದಿಗಾಗಿ ಕಾದರು ಎಂದು ರೋಮಾಂಡ್ ರೋಲಾ ಹೇಳುತ್ತಾರೆ. ಇದು ನಿಜವಲ್ಲ. ಸ್ವಾಮಿಗಳು ೨/೧೦/೧೮೯೩ ರಂದು ಜಾನ್ ಹೆನ್ರಿ ರೈಟ್’ಗೆ ಬರೆದಿರುವ ಪತ್ರದಲ್ಲಿ ‘ ಮೊದಲನೆಯದಾಗಿ ನಾನು ಕಟ್ಟ ಕಡೆಯಲ್ಲಿ ಕಾಂಗ್ರೆಸ್ ತಲುಪಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಲು ನಾನು ಮೊದಲೇ ಸಿದ್ಧತೆ ನಡೆಸಿರಲಿಲ್ಲ. ಈ ಸಿದ್ಧತೆಯಲ್ಲಿಯೇ ಸಮಯವೆಲ್ಲ ಕಳೆಯುತ್ತಿದ್ದಿತು….. ಪ್ರಿಯ ಸಹೋದರನೇ , ಜಗತ್ತಿನ ನಾನಾ ಕಡೆಗಳಿಂದ ಬಂದ ಶ್ರೇಷ್ಟ ವಾಗ್ಮಿಗಳು , ಮೇಧಾವಿಗಳ ಮಧ್ಯದಲ್ಲಿ ನಿಂತು ಮಾತಾಡಲು ನನಗೆ ಅಂಜಿಕೆಯಾಯಿತು. ಭಗವಂತ ನನಗೆ ಶಕ್ತಿಯನ್ನು ಅನುಗ್ರಹಿಸಿದ. ನಾನು ಹೆಚ್ಚು ಕಡಿಮೆ ಪ್ರತಿ ದಿನ ವೇದಿಕೆಯ ಮೇಲೆ ಜನರನ್ನು ಧೈರ್ಯವಾಗಿ ಎದುರಿಸಿದೆ……….ಭರತಖಂಡದ ಕೆಲವು ಒಳ್ಳೆಯ ವ್ಯಕ್ತಿಗಳು ಇಲ್ಲಿರುವರು. ಮೃದು ಹೃದಯದ ಬೌದ್ಧ ಭಿಕ್ಷು ಧರ್ಮಪಾಲ , ವಾಗ್ಮಿ ಮಜುಂದಾರ ಇರುವರು. ದೂರದಲ್ಲಿರುವ ದರಿದ್ರ ಭರತಖಂಡದಲ್ಲಿಯೂ ಇಂತಹ ಶ್ರೀಮಂತವಾದ , ಬಲಾಢ್ಯವಾದ ದೇಶದಲ್ಲಿ ಹುಟ್ಟಿ ಬೆಳೆದವರೊಂದಿಗೆ ಸೌಹಾರ್ದ ಭಾವನೆಗಳನ್ನು ತೋರುವ ಹೃದಯಗಳಿವೆ ಎನ್ನುವುದನ್ನು ಗಮನಿಸಿ ‘ ಎಂದು ಬರೆದರು.
೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’’ಗೆ ಬರೆದ ಪತ್ರದಲ್ಲಿ ‘ ….ಕೆಳಗೆ ದೊಡ್ದ ಪ್ರಾಂಗಣ. ಮೇಲೆ ದೊಡ್ದ ಗ್ಯಾಲರಿ. ನೀವೇ ಕಲ್ಪನೆ ಮಾಡಿಕೊಳ್ಳಿ ೬-೭ ಸಾವಿರ ಮಂದಿ ಅತ್ಯಂತ ಸುಸಂಸ್ಕೃತರಾದ ಗಂಡಸರು , ಹೆಂಗಸರು ಕಿಕ್ಕಿರಿದು ನೆರೆದಿರುವರು. ವೇದಿಕೆಯ ಮೇಲೆ ಜಗತ್ತಿನಲ್ಲಿರುವ ಎಲ್ಲ ದೇಶಗಳ ವಿದ್ಯಾವಂತರು ನೆರೆದಿದ್ದಾರೆ. ಹುಟ್ಟಿದಂದಿನಿಂದ ಬಹಿರಂಗ ಸಭೆಯಲ್ಲಿ ಮಾತನಾಡದ ನಾನು ಈ ವಿದ್ವತ್ ಸಭೆಯೆದುರು ಭಾಷಣ ಮಾಡುವುದೆಂದರೇನು ?............ಅವರಲ್ಲಿ ಒಬ್ಬೊಬ್ಬರು ಮುಂದೆ ಬಂದು ಭಾಷಣ ಮಾಡಿದರು. ನನ್ನ ಎದೆ ನಡುಗುತ್ತಿದ್ದಿತು. ನಾಲಿಗೆ ಒಣಗಿತು. ನನಗೇನೋ ಅಂಜಿಕೆಯಾಯಿತು. ಬೆಳಿಗ್ಗೆ ಮಾತನಾಡಲು ಧೈರ್ಯ ಬರಲಿಲ್ಲ. ಮಜುಂದಾರರು ಸೊಗಸಾಗಿ ಮಾತನಾಡಿದರು. ಚಕ್ರವರ್ತಿಯವರದು ಅದಕ್ಕಿಂತ ಸೊಗಸಾಗಿದ್ದಿತು. ಕೇಳುಗರು ಅವರನ್ನು ಕೊಂಡಾಡಿದರು. ……. ನಾನು ಸಣ್ಣ ಭಾಷಣ ಮಾಡಿದೆ. ಅಮೆರಿಕದ ಸೋದರರೇ , ಸೋದರಿಯರೇ ಎಂದು ಸಂಬೋಧಿಸಿದೆ. ಕಿವಿ ಕಿವುಡಾಗುವಂತೆ ಎರಡು ನಿಮಿಷ ಚಪ್ಪಾಳೆಯಾಯಿತು. ಇದು ನಿಂತ ಮೇಲೆ ನನ್ನ ಭಾಷಣ ಮೊದಲಾಯಿತು. ಅದು ಮುಗಿದ ಮೇಲೆ ಉದ್ವೇಗದಿಂದ ದಣಿವಾಗಿ ಕುಳಿತುಬಿಟ್ಟೆ. ಮಾರನೆಯ ದಿನ ಎಲ್ಲ ಪತ್ರಿಕೆಗಳು ನನ್ನ ಭಾಷಣವೇ ಎಲ್ಲಕ್ಕಿಂತ ಉತ್ತಮವಾದುದು ಎಂದು ಕೊಂಡಾಡಿದವು. ನಾನು ಇಡೀ ಅಮೆರಿಕ ದೇಶಕ್ಕೆ ಪರಿಚಿತನಾದೆ….......ನಾನು ಹಿಂದೂ ಧರ್ಮದ ಮೇಲಿನ ಲೇಖನ ಓದಿದ ದಿನ ಹಿಂದೆಂದೂ ಇಲ್ಲದಷ್ಟು ಜನ ನೆರೆದಿದ್ದರು…… ನಿನ್ನ ಮಾವನ ಲೇಖನ ನಾನು ನೋಡಿದುದರಲ್ಲಿ ಬಹಳ ವಿಚಿತ್ರವಾದುದು. ಅದು ವ್ಯಾಪಾರದ ಸರಕಿನ ಪಟ್ಟಿಯಂತಿದ್ದು ಸಭೆಯ ಮುಂದೆ ಓದಲು ಯೋಗ್ಯವಾಗಿರಲಿಲ್ಲ. ಅದಕ್ಕೇನೆ ನರಸಿಂಹ ಪಕ್ಕದ ಕೋಣೆಯಲ್ಲಿ ಲೇಖನದಿಂದ ಕೆಲವು ಭಾಗಗಳನ್ನು ಓದಿದನು. ಯಾರಿಗೂ ಒಂದಕ್ಷರವೂ ಗೊತ್ತಾಗಲಿಲ್ಲ. ಅವನಿಗೆ ಇದನ್ನು ಹೇಳಬೇಡ. ಹೆಚ್ಚು ಭಾವಗಳನ್ನು ಸಾದ್ಯವಾದಷ್ಟು ಕಡಿಮೆ ಪದಗಳಲ್ಲಿ ಅಡಗಿಸುವುದು ಒಂದು ಕುಶಲ ವಿದ್ಯೆ. ಮಣಿಲಾಲ ದ್ವಿವೇದಿಯವರ ಲೇಖನವನ್ನು ಕೂಡ ಕಡಿಮೆ ಮಾಡಬೇಕಾಯಿತು, ಅಂತಹ ಹುಚ್ಚು ಕೂಗಾಟಕ್ಕೆ ಕೊನೆಯೆಲ್ಲಿ. …………. ಸಿಂಹಳದ ಧರ್ಮಪಾಲರು ಸಭೆಯ ಆದರಣೆಗೆ ಪಾತ್ರರಾದವರಲ್ಲಿ ಒಬ್ಬರು. ಆದರೆ ಅವರು ಅಷ್ಟು ಚೆನ್ನಾಗಿ ಮಾತನಾಡುವವರಲ್ಲ. ಅವರು ಕೇವಲ ಮ್ಯಾಕ್ಸ್ ಮುಲ್ಲರ್ , ರೀಸ್ ಡೇವಿಡ್ ಅವರ ಹೇಳಿಕೆಗಳನ್ನು ಉದ್ದರಿಸುತ್ತಾರೆ…’..ಎಂದು ಹೇಳಿದ್ದಾರೆ.
ಸ್ವಾಮಿಗಳ ಮೇಲಿನ ಹೇಳಿಕೆಯಲ್ಲಿ ನಿಜಾಂಶಗಳೊಂದಿಗೆ ಉತ್ಪ್ರೇಕ್ಷೆ ಮತ್ತು ಅತ್ಮಪ್ರಶಂಸೆಗಳು ಹಾಸುಹೊಕ್ಕಾಗಿವೆ. ಸ್ವಾಮಿಗಳಿಗಿಂತ ಮೊದಲು ಪಿ.ಸಿ ಮಜುಂದಾರ ಮತ್ತು ಜ್ಞಾನೇಂದ್ರ ಚಕ್ರವರ್ತಿ ಮಾತನಾಡಿದ್ದರು. ಅವರಿಬ್ಬರನ್ನು ಕೇಳುಗರು ಚಪ್ಪಾಳೆಯೊಂದಿಗೆ ಅನುಮೋದಿಸಿದ್ದರು. ರಿವ್ಯೂ ಆಫ್ ವರ್ಲ್ಡ್ಸ್ ರಿಲಿಜಿಯಸ್ ಕಾಂಗ್ರೆಸ್’ ಕೃತಿಯಲ್ಲಿ ಎಲ್.ಪಿ ಮರ್ಸರ್ ಮಜುಂದಾರರಿಗೆ ಊಹಿಸಲಾಗದಂತಹ ಮಹಾ ಚಪ್ಪಾಳೆ ಬಂದವು ಎಂದು ದಾಖಲಿಸಿದ್ದಾನೆ. (9) ಮಜುಂದಾರ ಮತ್ತು ಜ್ಞಾನೇಂದ್ರ ಚಕ್ರವರ್ತಿಯವರ ಭಾಷಣಗಳನ್ನು ಜನ ಮೆಚ್ಚಿದ್ದರು , ಇದನ್ನು ಸ್ವಾಮಿಗಳು ತಮ್ಮ ಪತ್ರದಲ್ಲಿಯೇ ತಿಳಿಸಿದ್ದಾರೆ. ಪಿ.ಸಿ ಮಜುಂದಾರ ಅನುಭವಿ ಮಾತುಗಾರ ಅವರಿಗೆ ಮಹಾಸಭೆಯನ್ನು ಎದುರಿಸುವುದು ಕಷ್ಟವಾಗಲಿಲ್ಲ ಎಂದು ಹೇಳಬಹುದು. ಅದರೆ ಜ್ಞಾನೇಂದ್ರ ಚಕ್ರವರ್ತಿಗೆ ಸ್ವಾಮಿಗಳಂತೆಯೇ ಇದು ಮೊದಲ ಮಹಾ ಸಭೆಯಾಗಿದ್ದಿತು. ಆತ ಅದಕ್ಕೇನೂ ಹೆದರದೆ ದಿಟ್ಟನಾಗಿ ಮಾತನಾಡಿ ಕೇಳುಗರ ಚಪ್ಪಾಳೆಯ ಮನ್ನಣೆಯನ್ನು ಪಡೆದಿದ್ದನೆಂದು ಪತ್ರಿಕೆಗಳ ವರದಿಗಳು ತಿಳಿಸುತ್ತವೆ. ಸ್ವಾಮಿಗಳು ಅಷ್ಟು ದೊಡ್ದ ಸಭೆಯಲ್ಲಿ ಮಾತನಾಡಲು ತಮಗಾದ ಹೆದರಿಕೆಯನ್ನು ಅವರೇ ಹೇಳಿಕೊಂಡಿದ್ದಾರೆ. ಅದರ ಬಗ್ಗೆ ಎರಡು ಮಾತುಗಳಿರಲಾರವು. ಕೊಲಂಬಸ್ ಸಭಾಂಗಣದಲ್ಲಿ ೩೦೦೦ ಜನರಿಗೆ ಕುಳಿತುಕೊಳ್ಳಲು ಇನ್ನೂ ೧೦೦೦ ಜನ ನಿಂತುಕೊಳ್ಳಲು ಅವಕಾಶವಿದ್ದಿತು. ಅದರಲ್ಲಿ ೬-೭ ಸಾವಿರ ಜನ ಹಿಡಿಸುವುದು ಸಾದ್ಯವಿರಲಿಲ್ಲ. ಸೇರಿದ್ದ ಜನ ಸಂಖ್ಯೆಯನ್ನು ಅಂದಾಜು ಮಾಡುವಲ್ಲಿ ಸ್ವಾಮಿಗಳು ತಪ್ಪಿರಬಹುದು. ಆದರೆ ಮರುದಿನ ಎಲ್ಲ ಪತ್ರಿಕೆಗಳು ನನ್ನ ಭಾಷಣವೇ ಉತ್ತಮ ಎಂದು ಕೊಂಡಾಡಿದವು ಎನ್ನುವುದು ಸುಳ್ಳು. ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯ ದಿನದ ವರದಿ ಮಾಡಿದ್ದ ಷಿಕಾಗೊ ಡೈಲಿ ಟ್ರಿಬ್ಯೂನ್ , ಷಿಕಾಗೊ ಹೆರಾಲ್ಡ್ , ಷಿಕಾಗೊ ಡೈಲಿ ಇಂಟರ್ ಓಷನ್ ಕ್ರಿಟಿಕ್ , ದಿ ನ್ಯೂಯಾರ್ಕ್ ಹೆರಾಲ್ಡ್ , ದಿ ಬೋಸ್ಟನ್ ಈವೆನಂಗ್ ಟ್ರಾನ್ಸ್’ಸ್ಕ್ರಿಪ್ಟ್ ಈ ಯಾವ ಪತ್ರಿಕೆಗಳು ಸ್ವಾಮಿಗಳ ಭಾಷಣ ಅತ್ಯುತ್ತಮ ಎಂದು ಬರೆದಿರಲಿಲ್ಲ.
ಸ್ವಾಮಿಗಳು ‘ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕ ‘ ಎಂದ ತಕ್ಷಣ ಚಪ್ಪಾಳೆ ಹರ್ಷೋದ್ಗಾರಗಳು ಬಂದವು. ಇದು ಸ್ವಾಮಿಯವರಿಂದ ಬಂದ ಮಾತುಗಳಲ್ಲ. ಅವು ಯಾವುದೋ ಒಂದು ಅಂತಶ್ಯಕ್ತಿಯಿಂದ ಬಂದುದು ಎಂದು ಮಾರಿ ಲೂಯಿ ಬರ್ಕೆ ಅಭಿಪ್ರಾಯ ಪಟ್ಟಿದ್ದಾಳೆ. ಜೆ.ಎಚ್. ಬರೋಸ್ ಸ್ವಾಮಿಗಳ ಮೊದಲ ಈ ಐದು ಶಬ್ದಗಳ ನಂತರ ಕೆಲ ನಿಮಿಷಗಳ ಚಪ್ಪಾಳೆ ಹಿಂಬಾಲಿಸಿತು ಎನ್ನುತ್ತಾರೆ. ಇದಕ್ಕೆ ಕಾರಣ ಕೊಡುವುದಕ್ಕೆ ಆತ ಹೋಗುವುದಿಲ್ಲ. ಸ್ವಾಮಿ ವಿವೇಕಾನಂದರು ಸಭೆಯನ್ನು ಉದ್ದೇಶಿಸಿದ ಹೊಸತನಕ್ಕಾಗಿ ಮತ್ತು ಆಕರ್ಷಕ ವ್ಯಕ್ತಿತ್ವಕ್ಕಾಗಿ ಚಪ್ಪಾಳೆ ಬಂದಿತೆಂದು ಮರ್ಸೆರ್ ತಿಳಿಸುತ್ತಾನೆ. ಹೌಟ್ಟನ್ ಚಪ್ಪಾಳೆ ಮತ್ತು ಹರ್ಷೋದ್ಗಾರಗಳ ಬಗ್ಗೆ ಹೇಳುವುದಿಲ್ಲ. ಆತ ಅವು ಮುಖ್ಯವಲ್ಲವೆಂದು ಭಾವಿಸಿರಬಹುದು ಅಥವಾ ಚಪ್ಪಾಳೆ ಬೇರೆ ಪ್ರತಿನಿಧಿಗಳಿಗೂ ಬಂದಿದ್ದು ಅದರಲ್ಲಿ ಅಂತಹ ವಿಶೇಷವೇನಿಲ್ಲ ಎಂದು ದಾಖಲಿಸದೆ ಬಿಟ್ಟಿರಬಹುದು. ಸ್ವಾಮಿಗಳು ಮರುದಿನ ನಾನು ಇಡೀ ಅಮೆರಿಕಕ್ಕೆ ಪರಿಚಿತನಾದೆ ಎನ್ನುವುದರಲ್ಲಿ ಹುರುಳಿಲ್ಲ. ಷಿಕಾಗೊ ಮೂಲಕ ಪತ್ರಿಕೆಗಳು ಇತರ ಪ್ರತಿನಿಧಿಗಳಂತೆ ಸ್ವಾಮಿಗಳನ್ನು ಕುರಿತಾಗಿ ಬರೆದಿದ್ದವು. ನ್ಯೂಯಾರ್ಕ್ ಪತ್ರಿಕೆಗಳಲ್ಲಿ ಸ್ವಾಮಿಗಳ ಹೆಸರಿರಲಿಲ್ಲ ಮತ್ತು ವಿಶ್ವ ಧರ್ಮ ಸಂಸತ್ತಿಗೆ ಅವು ಮೀಸಲಿಟ್ಟಿದ್ದ ಜಾಗವೂ ಹೇಳಿಕೊಳ್ಳುವಂತಿರಲಿಲ್ಲ. ಸ್ವಾಮಿಗಳು ನಾನು ಹಿಂದೂ ಧರ್ಮದ ಬಗ್ಗೆ ಓದಿದ ದಿನ (೧೯/೯/೧೮೯೩) ಹಿಂದೆಂದೂ ಇರದಷ್ಟು ಜನ ಇದ್ದರೆಂದು ಹೇಳಿದ್ದಾರೆ. ಪತ್ರಿಕೆಗಳ ವರದಿಗಳು ಇದನ್ನು ಸಮರ್ಥಿಸುವುದಿಲ್ಲ. ಉದ್ಘಾಟನೆ ಮತ್ತು ಸಮಾರೋಪದ ದಿನ ಅತಿ ಹೆಚ್ಚು ಜನ ನೆರೆದಿದ್ದರು. ತಮ್ಮ ಪ್ರಾಶಸ್ತ್ಯ ಹೆಚ್ಚಿಸಿಕೊಳ್ಳಲು ಸ್ವಾಮಿಗಳು ಇತರ ಭಾರತೀಯರ ಪಾತ್ರವನ್ನು ತಗ್ಗಿಸಿದ್ದರು. ಕಾಯಸ್ಥ ಸಂಘದ ಕಾರ್ಯದರ್ಶಿ ಲಾಹೋರ್’ನ ಲಕ್ಷ್ಮೀನಾರಾಯಣ ಬಗ್ಗೆಯೂ ಸ್ವಾಮಿಗಳು ಒಂದು ಮಾತನ್ನೂ ಹೇಳಿಲ್ಲ. ಅಳಸಿಂಗ ಪೆರುಮಾಳರ ಮಾವ ಪಾರ್ಥಸಾರಥಿ ಅಯ್ಯಂಗಾರ್ ಬರೆದ ಲೇಖನ ಸರಿಯಿರಲಿಲ್ಲ. ಅದನ್ನು ಮುಖ್ಯ ಸಭಾಂಗಣದ ಪಕ್ಕದ ಸಭೆಯಲ್ಲಿ ನರಸಿಂಹಾಚಾರಿ ಓದಿದನು ಎಂದಿದ್ದಾರೆ. ೨೨/೯/೧೮೯೩ ರ ಬೆಳಿಗ್ಗೆ ಸ್ವಾಮಿಗಳು ‘ಕಾನ್ಫರೆನ್ಸ್ ಆನ್ ದಿ ಆರ್ಥೊಡಾಕ್ಸ್ ಹಿಂದೂಯಿಸಂ ಅಂಡ್ ದಿ ವೇದಾಂತ ಫಿಲಾಸಫಿ’ ಭಾಷಣವನ್ನು ಈ ಪಕ್ಕದ ಸಭಾಂಗಣದಲ್ಲಿಯೇ ಮಾಡಿದ್ದರು. ಮಣಿಲಾಲ ದ್ವಿವೇದಿಯವರ ಲೇಖನವನ್ನು , ಧರ್ಮಪಾಲರ ಭಾಷಣಗಳನ್ನು ಜನ ಮೆಚ್ಚಿದ್ದರೆಂದು ಪತ್ರಿಕೆಗಳು , ಸಂಸತ್ತಿನ ವರದಿಗಳು ತಿಳಿಸಿದರೆ ಸ್ವಾಮಿಗಳು ಧರ್ಮಪಾಲ ಉತ್ತಮ ಮಾತುಗಾರ ಅಲ್ಲ ಎಂದಿದ್ದಾರೆ.
(೫) ಶ್ರೀಮತಿ ಎಸ್.ಕೆ ಬ್ಲಾಡ್’ಗೆಟ್ ‘ಆ ತರುಣ ಮಾತನಾಡಲು ಎದ್ದು ನಿಂತು ಅಮೆರಿಕದ ಸಹೋದರ , ಸಹೋದರಿಯರೇ ಎಂದಾಗ ತಮಗೆ ತಿಳಿಯದ ಯಾವುದಕ್ಕೋ ಕಾಣಿಕೆ ಸಲ್ಲಿಸಲೋ ಎನ್ನುವಂತೆ ಏಳು ಸಾವಿರ ಜನ ಎದ್ದು ನಿಂತರು. ಅದಾದ ( ಸಭೆ ಮುಗಿದ ಬಳಿಕ) ನಂತರ ನೂರಾರು ಹೆಂಗಸರು ಬೆಂಚುಗಳ ಮೇಲೆ ಹತ್ತಿ ನಡೆದು ಆತನನ್ನು ಸಮೀಪಿಸಲು ಯತ್ನಿಸಿದರು . ಆಗ ನಾನು ಮಗುವೇ ಈ ಹೊಡೆತವನ್ನು ನೀನು ಸಹಿಸಬಲ್ಲೆಯಾದರೆ ನಿಜವಾಗಿಯೂ ನೀನೊಬ್ಬ ದೇವತೆ ಎಂದು ನನ್ನಲ್ಲೇ ಹೇಳಿಕೊಂಡೆ’ ಎಂದು ತಿಳಿಸಿದ್ದಾರೆ. ಇದನ್ನು ಸ್ವಾಮಿಗಳ ಅಭಿಮಾನಿಗಳು ಮೇಲಿಂದ ಮೇಲೆ ತಿಳಿಸುತ್ತಾರೆ. ಕುತೂಹಲಕರ ವಿಷಯವೆಂದರೆ ‘ರೆಮಿನಿಸೆನ್ಸಸ್ ಆಫ್ ವಿವೇಕಾನಂದ-೧೯೬೧ ಕೃತಿಯಲ್ಲಿ ಎಸ್.ಕೆ ಬ್ಲಾಡ್’ಗೆಟ್ ೨/೯/೧೯೦೨ ರಂದು ಜೊಸೆಫಿನ್ ಮೆಕ್ಲಿಯಾಡ್’ಗೆ ಬರೆದ ಪತ್ರವಿದೆ. ಇದು ಸ್ವಾಮಿಗಳು ತೀರಿಕೊಂಡ ೫೮ ದಿನಗಳ ನಂತರ ಎಸ್.ಕೆ ಬ್ಲಾಡ್’ಗೆಟ್ ಸ್ವಾಮಿಗಳೊಂದಿಗಿದ್ದ ಹಳೆಯ ನೆನಪುಗಳನ್ನು ಗೆಳತಿಯೊಂದಿಗೆ ಹಂಚಿಕೊಂಡಿರುವ ಪತ್ರವಿದು. ಇದರಲ್ಲಿ ಹೆಂಗಸರು ಸ್ವಾಮಿಗಳತ್ತ ನುಗ್ಗುತ್ತಿದ್ದ ವಿಷಯವಿಲ್ಲ. ಈ ಸಂಗತಿಯನ್ನು ಮಾರಿ ಲೂಯಿ ಬರ್ಕೆ ೧೯೫೭ ರ ಸ್ವಾಮಿ ವಿವೇಕಾನಂದ ಇನ್ ದಿ ವೆಸ್ಟ್ –ನ್ಯೂ ಡಿಸ್ಕವರೀಸ್’: ಭಾಗ-೧ ರಲ್ಲಿ ಮೊದಲ ಬಾರಿಗೆ ಬರೆದರು. (10) ಇದನ್ನು ಪ್ರವ್ರಾಜಿಕಾ ಆನಂದಪ್ರಾಣ ತಮ್ಮ ವೇದಾಂತ ಅಂಡ್ ದಿ ವೆಸ್ಟ್ -೧೯೬೨ ಪುಸ್ತಕದಲ್ಲಿ ಪುನರುಚ್ಚರಿಸಿದರು. ಇದು ಜುಲೈ ೧೯೬೩ ರ ಪ್ರಬುದ್ಧ ಭಾರತದ ಮೂಲಕ ಹೆಚ್ಚಿನ ಪ್ರಚಾರ ಪಡೆಯಿತು. ಸ್ವಾಮಿಗಳತ್ತ ಹೆಂಗಸರು ಮುನ್ನುಗ್ಗುತ್ತಿದ್ದ ಕಥೆಯನ್ನು ಧರ್ಮ ಸಂಸತ್ತು ನಡೆದ ೬೪ ವರ್ಷಗಳ ನಂತರ ಹೊಸೆಯಲಾಯಿತು. ೧೨/೯/೧೮೯೩ ರ ಷಿಕಾಗೊ ಟ್ರಿಬ್ಯೂನ್ ಪತ್ರಿಕೆಯ ವರದಿಯಿಂದ ವಿಶ್ವ ಧರ್ಮ ಸಂಸತ್ತಿನ ಭಾಷಣಗಳಿಗೆ ಹಾಜರಾಗಿದ್ದ ಜನ ಅಪರಿಚಿತರನ್ನು ನೋಡಲು ಕಾತರರಾಗಿದ್ದರೇ ಹೊರತು ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಅಲ್ಲ ಎನ್ನುವುದು ಸ್ಪಷ್ಟ.
(೬) ಸ್ವಾಮಿಗಳ ಭಾಷಣಗಳನ್ನು ಕೇಳಲು ಸಭಿಕರು ಮುಗಿಬೀಳುತ್ತಿದ್ದರು. ಅವರ ಭಾಷಣ ಕಲಾಪದ ಆರಂಭದಲ್ಲಿ ಮುಗಿದರೆ ಸಭಿಕರು ಎದ್ದು ಹೊರನಡೆಯುತ್ತಾರೆ ಎನ್ನುವುದು ಸಂಘಟಕರಿಗೆ ತಿಳಿದಿದ್ದಿತು. ಆದ್ದರಿಂದ ಅವರು ಸ್ವಾಮಿಗಳ ಭಾಷಣಗಳನ್ನು ದಿನದ ಕೊನೆಗೆ ಇರಿಸುತ್ತಿದ್ದರು. ಸಭಿಕರು ಸ್ವಾಮಿಗಳ ಕೊನೆ ೧೫-೨೦ ನಿಮಿಷಗಳ ಭಾಷಣ ಕೇಳಲು ಇತರರ ಹಲವಾರು ಗಂಟೆಗಳ ನೀರಸ ಭಾಷಣ ಮತ್ತು ಕಲಾಪವನ್ನು ಸಹಿಸಿಕೊಂಡಿರುತ್ತಿದ್ದರು ಎನ್ನುವ ‘ದಿ ಲೈಫ್-೧೯೧೪’ ಹೇಳಿಕೆ ವ್ಯಾಪಕವಾಗಿ ಜನಪ್ರಿಯವಾಗಿದೆ. ಈ ನಂಬಿಕೆಗೆ ೨೦/೯/೧೮೯೩ ರ ಸಂಚಿಕೆಯಲ್ಲಿ ‘ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಕ್ರಿಪ್ಟ್ ’ಕಿತ್ತಳೆ ಬಣ್ಣದ ಉಡುಪಿನ ಈ ಪೌರಾತ್ಯ ಸಾಯಂಕಾಲ ೫ ಗಂಟೆಗೆ ಭಾಷಣಕ್ಕೆ ಎದ್ದಾಗ ದೊರೆತ ಚಪ್ಪಾಳೆಯಿಂದ ಈತನ ಭಾಷಣವನ್ನು ಕೊನೆಗಲ್ಲದೆ ಮೊದಲೇ ಮಾಡಿದ್ದರೆ ಸಭಾಂಗಣದಲ್ಲಿ ನೆರಿದಿದ್ದ ಸಭಿಕರಲ್ಲಿ ಕೆಲವರು ಕೊನೆಯವರೆಗೂ ಕಾಯುತ್ತಿರಲಿಲ್ಲ.’ ಎಂದು ಮಾಡಿದ ವರದಿಯೇ ಆಧಾರವಾಗಿದೆ. ಇದಕ್ಕೆ ಪೂರಕವಾಗಿ ಸ್ವಾಮಿಗಳು ೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’’ಗೆ ಬರೆದ ಪತ್ರದಲ್ಲಿ ‘ ಪ್ರತಿಯೊಂದು ಸ್ಥಳದಲ್ಲಿಯೂ , ಪ್ರತಿಯೊಂದು ಮೂಲೆಯಲ್ಲಿಯೂ ಹೆಂಗಸರು! ಹೆಂಗಸರು! ಮುಂಚೆ ಮಾಡಿದ ಭಾಷಣವನ್ನೆಲ್ಲ ಸಹನೆಯಿಂದ ಕೇಳುತ್ತಿದ್ದರು- ಕೊನೆಗೆ ವಿವೇಕಾನಂದನ ಮಾತುಗಳನ್ನು ಕೇಳುವುದಕ್ಕೆ ಮುಂತಾಗಿ ವರ್ತಮಾನ ಪತ್ರಿಕೆಗಳು ನನ್ನ ಬಗ್ಗೆ ಬರೆದಿರುವುದನ್ನು ನಿನಗೆ ಕತ್ತರಿಸಿ ಕಳಿಸಿದರೆ ನೀನು ಸೋಜಿಗ ಪಡಬಹುದು. ನಾನು ಕೀರ್ತಿ ದ್ವೇಷಿ ಎನ್ನುವುದು ನಿನಗೆ ಗೊತ್ತಿದೆ. ಇಷ್ಟು ಹೇಳಿದರೆ ಸಾಕು. ನಾನು ಯಾವಾಗ ವೇದಿಕೆಯ ಮೇಲೆ ಮಾತನಾಡುವುದಕ್ಕೆ ಹೋದರೂ ನನಗೋಸುಗ ಕಿವಿ ಕಿವುಡಾಗುವಂತೆ ದೊಡ್ಡ ಚಪ್ಪಾಳೆಯಾಗುತ್ತಿದ್ದಿತು. ಹೆಚ್ಚು ಕಡಿಮೆ ಎಲ್ಲ ಪತ್ರಿಕೆಗಳು ನನ್ನನ್ನು ಪ್ರಶಂಸೆ ಮಾಡಿದವು. ಅತಿ ಮತಾಂಧ ಪತ್ರಿಕೆಗಳೂ ಕೂಡ ‘ಸುಂದರ ಮುಖ, ಚಿತ್ತಾಕರ್ಷಕ ವರ್ಚಸ್ಸು , ಅಮೋಘ ವಾಕ್ಚಾತುರ್ಯದ ಈ ವ್ಯಕ್ತಿ ಸಭೆಯಲ್ಲಿ ಅಗ್ರಗಣ್ಯ ಎನ್ನುವುದನ್ನು ಒಪ್ಪಬೇಕಾಯಿತು.…… ಸಾಧಾರಣ ಎಲ್ಲರಿಗೆ ಕೊಡುವ ಅರ್ಧ ಗಂಟೆಗಿಂತ ನನಗೆ ಹೆಚ್ಚು ಕೊಟ್ಟಿದ್ದರು. ಸಭಿಕರನ್ನು ಕೊನೆಯವರೆಗೂ ಕೂಡಿಸುವುದಕ್ಕೆ ಮನೋರಂಜಕವಾಗಿ ಮಾತನಾಡುವರನ್ನು ಕೊನೆಗೆ ಇರಿಸುತ್ತಿದ್ದರು…… ’ ಎಂದು ಬರೆದಿರುವುದು ಆಧಾರಗಳಾಗಿವೆ. ಹೀಗೆ ಬರೆದ ಸ್ವಾಮಿಗಳು ಪತ್ರಿಕೆಯ ಯಾವ ಮೂಲ ತುಣುಕುಗಳನ್ನೂ ಕಳಿಸಲಿಲ್ಲ. ಏಕೆಂದರೆ ಅಂತಹ ಸುದ್ದಿಯೇ ಇರಲಿಲ್ಲ.
ವಿಶ್ವ ಧರ್ಮ ಸಂಸತ್ತಿನ ಸಭೆಗಳನ್ನು ಮೂರು ಕಲಾಪಗಳಲ್ಲಿ (ಬೆಳಿಗ್ಗೆ-ಮಧ್ಯಾಹ್ನ-ಸಾಯಂಕಾಲ) ಕೊಲಂಬಸ್ ಮುಖ್ಯ ಸಭಾಂಗಣ ಮತ್ತು ಸಭಾಂಗಣ-೩ ರಲ್ಲಿ (ಡಿನೋಮಿನೇಷನಲ್ ಕಾಂಗೆಸ್-ಸೈಂಟಿಫಿಕ್ ಸೆಕ್ಷನ್) ಸಮಾಂತರದಲ್ಲಿ ಸಾಗುತ್ತಿದ್ದವು. ಕೊಲಂಬಸ್ ಸಭಾಂಗಣದಲ್ಲಿ ೧೮ ದಿನಗಳಲ್ಲಿ ಬೆಳಿಗ್ಗೆ ೫೮ , ಮಧ್ಯಾಹ್ನ ೬೬ , ಸಾಯಂಕಾಲ ೩೧ ಒಟ್ಟು ೧೫೫ ಭಾಷಣಗಳು ,ಸೈಂಟಫಿಕ್ ಸೆಕ್ಷನ್’ನಲ್ಲಿ ಒಟ್ಟು ೨೫ ಭಾಷಣಗಳು ಜರುಗಿದವು. ಎರಡು ಕಡೆ ಸೇರಿ ೧೮೦ ಉಪನ್ಯಾಸಗಳಿದ್ದವು. ಇವುಗಳಲ್ಲಿ ಕೊಲಂಬಸ್ ಹಾಲ್’ನಲ್ಲಿ ಜರುಗಿದ ೨೦/೯/೧೮೯೩ ರ ಮಧ್ಯಾಹ್ನದ ಉಪನ್ಯಾಸ , ಅದೇ ದಿನದ ಸಾಯಂಕಾಲದ ಕೊನೆಯಲ್ಲಿ ಬೌದ್ಧ ಧರ್ಮ ಕುರಿತಾಗಿ ಧರ್ಮಪಾಲ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ , ೨೬/೯/೧೮೯೩ ರ ಸಾಯಂಕಾಲದ ಉಪನ್ಯಾಸ ೨೫/೯/೧೮೯೩ ರ ಸೈಂಟಿಫಿಕ್ ಸೆಕ್ಷನ್’ನ ಉಪನ್ಯಾಸಗಳಲ್ಲಿ ಮಾತ್ರ ಸ್ವಾಮಿಗಳು ಕೊನೆಗೆ ಭಾಷಣ ಮಾಡಿದರು. ಎಂದರೆ ೧೮೦ ಉಪನ್ಯಾಸಗಳಲ್ಲಿ ೪ ಉಪನ್ಯಾಸಗಳಲ್ಲಿ ಮಾತ್ರ ಅವರಿಗೆ ಕೊನೆಯ ಅವಕಾಶ ದಕ್ಕಿದ್ದಿತು. ಆದ್ದರಿಂದ ಸಂಘಟಕರು ಸಭಿಕರನ್ನು ಸೆಳೆಯಲು ಸ್ವಾಮಿಗಳ ಭಾಷಣಗಳನ್ನು ಕೊನೆಗೆ ಇರಿಸುತ್ತಿದ್ದರು ಎನ್ನುವುದು ಸುಳ್ಳು. . ‘ನಾನು ಯಾವಾಗ ವೇದಿಕೆಯ ಮೇಲೆ ಮಾತನಾಡುವುದಕ್ಕೆ ಹೋದರೂ ನನಗೋಸುಗ ಕಿವಿ ಕಿವುಡಾಗುವಂತೆ ದೊಡ್ಡ ಚಪ್ಪಾಳೆಯಾಗುತ್ತಿದ್ದಿತು’ ಎಂದು ಸ್ವಾಮಿಗಳು ಬಡಾಯಿ ಕೊಚ್ಚಿಕೊಂಡಿದ್ದಾರೆ. ಯಾವುದೇ ಪತ್ರಿಕೆ ಅಥವಾ ನಂತರ ಬಂದ ಸಂಸತ್ತಿನ ಅಧಿಕೃತ ದಾಖಲೆಗಳು ಇದಕ್ಕೆ ಸಮರ್ಥನೆಯನು ಒದಗಿಸುವುದಿಲ್ಲ.
೫/೪/೧೮೯೪ ಬೊಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್ ಮತ್ತು ೧೧/೪/೧೮೯೪ ನಾರ್ಥಾಂಫ್ಟನ್ ಡೈಲಿ ಹೆರಾಲ್ಡ್ ಪತ್ರಿಕೆಗಳು ‘ (ಧರ್ಮ ಸಂಸತ್ತಿನಲ್ಲಿ) ಕೊಲಂಬಸ್ ಹಾಲ್’ನಲ್ಲಿ ನೆರೆಯುತ್ತಿದ್ದ ೪೦೦೦ ಕ್ಕೂ ಅಧಿಕ ಸಂಖ್ಯೆಯ ಜನ ಮುಗುಳ್ನಗ್ಗುತ್ತ ಈ ವ್ಯಕ್ತಿಯ ಹದಿನೈದು ನಿಮಿಷಗಳ ಭಾಷಣ ಕೇಳುವ ನಿರೀಕ್ಷೆಯಲ್ಲಿ ಎರಡು ಮೂರು ಗಂಟೆಗಳ ಕಾಲ ಕಾದಿರುತ್ತಿದ್ದರು’ ಎಂದು ಬರೆದವು. ಧರ್ಮ ಸಂಸತ್ತಿನಲ್ಲಿ ಭಾಷಣಗಳ ಸರದಿಯಲ್ಲಿ ಸ್ವಾಮಿಗಳು ಇದ್ದ ಸ್ಥಾನ ಈ ಹೇಳಿಕೆಗಳಿಗೆ ಪೂರಕವಾಗಿಲ್ಲ. ವಿಶ್ವ ಧರ್ಮ ಸಂಸತ್ತ ಮುಗಿದ್ ೭ ತಿಂಗಳಿನ ನಂತರ ಅಂತಹ ವರದಿ ಬಂದಿರುವುದನ್ನು ಸ್ವಲ್ಪ ಬಿಡಿಸಿ ನೋಡಿದರೆ ಸ್ವಾಮಿಗಳ ಭಾಷಣಗಳನ್ನು ಏರ್ಪಡಿಸಲು ಒಪ್ಪಂದ ಮಾಡಿಕೊಂಡಿದ್ದ ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊ ಸಂಸ್ಥೆ ವ್ಯಾವಹಾರಿಕ ಕಾರಣಗಳಿಗಾಗಿ ಮಾಡುತ್ತಿದ್ದ ಇಂತಹ ಪ್ರಚಾರಗಳನ್ನು ಇತರ ಪತ್ರಿಕೆಗಳು ಮುಂದುವರೆಸತೊಡಗಿದವು. ಆದ್ದರಿಂದಲೇ ಈ ಎರಡು ವರದಿಗಳ ಭಾಷೆ , ವಾಕ್ಯ ರಚನೆ ಒಂದೇ ಆಗಿವೆ ಎಂದು ಗೊತ್ತಾಗುತ್ತದೆ.
ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳ ಭಾಷಣದ ಸಮಯವನ್ನು ತಿಳಿದುಕೊಂಡು ಅದೇ ವೇಳೆಗೆ ಹಾಜರಿರಲು ಜನರಿಗೆ ಮುಕ್ತ ಅವಕಾಶವಿದ್ದಿತು. ಅದಕ್ಕಾಗಿ ಅವರು ಹಲವು ಗಂಟೆಗಳ ಕಾಲ ಬೇರೆಯವರ ನೀರಸ ಭಾಷಣಗಳನ್ನು ಕೇಳುವ ಅನಿವಾರ್ಯತೆಯಿರಲಿಲ್ಲ. ಸಾವಿರಾರು ಜನ ಸ್ವಾಮಿಗಳ ಭಾಷಣವನ್ನು ಕೇಳಲಿಕ್ಕಾಗಿಯೇ ಬರುತ್ತಿದ್ದರೆಂದರೆ ಅವರು ಸಂಘಟಕರನ್ನು ಒತ್ತಾಯಿಸಿ ಅವರ ಭಾಷಣವನ್ನು ಮೊದಲಿರಿಸುವಂತೆ ಮಾಡುತ್ತಿದ್ದರು. ಕೊಲಂಬಸ್ ಹಾಲ್’ನಲ್ಲಿದ್ದ ಜನ ಬೇರೆ ಯಾವ ಪ್ರತಿನಿಧಿ ಮಾಡುವ ಭಾಷಣ ಕೇಳುವ ಅಗತ್ಯವಿಲ್ಲ ,ಸ್ವಾಮಿಗಳ ಭಾಷಣ ಒಂದೇ ಸಾಕು ಎಂದು ಭಾವಿಸಿದ್ದರು ಎನ್ನುವುದಾದರೆ ಅವರ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಸಂಶಯಿಸಬೇಕಾಗುತ್ತದೆ. ಧರ್ಮ ಸಂಸತ್ತಿಗೆ ಭಾಷಣ ಕೇಳಲು ಸುಶಿಕ್ಷಿತರೇ ಬರುತ್ತಿದ್ದರು. ಅವರಿಗೆ ಆಕರ್ಷಕ ಭಾಷಣ ಮತ್ತು ಅಂತಸತ್ತ್ವದ ಭಾಷಣಗಳ ನಡುವಿನ ವ್ಯತ್ಯಾಸ ಗೊತ್ತಾಗುತ್ತಿದ್ದಿತು. ಸ್ವಾಮಿಗಳ ಭಾಷಣದಷ್ಟೇ ಆಕರ್ಷಣೆ ಮತ್ತು ಅಂತಸತ್ತ್ವವಿರುವ ಭಾಷಣಗಳು ಧರ್ಮ ಸಂಸತ್ತಿನ ವರದಿಯಲ್ಲಿ ಇರುವುದನ್ನು ಗಮನಿಸಬೇಕು.
ಆಂಟ್ ಹನ್ನಾ ತನ್ನ ಕವಿತೆಯಲ್ಲಿ ಸ್ವಾಮಿಗಳ ಭಾಷಣವನ್ನು ‘ಅನುಮೋದಿಸುವ ಗರ್ಜನೆ’ಗಳು ಬರುತ್ತಿದ್ದವೆಂದು ಹಾಡಿದ್ದಾಳೆ. ಇದು ನಿಜವೆಂದು ವಿಲಿಯಂ ಅರ್ನೆಸ್ಟ್ ಹಾಕಿಂಗ್ ೧೯೬೩ರಲ್ಲಿ ಪ್ರಕಟಗೊಂದ ‘ವೇದಾಂತ ಅಂಡ್ ದಿ ವೆಸ್ಟ್’ ಕೃತಿಯಲ್ಲಿ ಬೆಂಬಲಿಸಿದ್ದಾನೆ. ಅಧಿಕೃತ ದಾಖಲೆಗಳು ಇಂತಹ ಸನ್ನಿವೇಶಗಳನ್ನು ಹೇಳುವುದೇ ಇಲ್ಲ. ಹಾಕಿಂಗ್ ೧೮೯೬ ರಲ್ಲಿ ಸ್ವಾಮಿಗಳು ಕೇಂಬ್ರಿಜ್ , ಮೆಸಾಷುಸೆಟ್ಸ್’ನಲ್ಲಿ ಭಾಷಣ ಕೇಳಿದ್ದರೇ ಹೊರತು ಧರ್ಮ ಸಂಸತ್ತಿಗೆ ಹೋಗಿರಲಿಲ್ಲ. ಕೇಂಬ್ರಿಜ್ , ಮೆಸಾಷುಸೆಟ್ಸ್ ಭಾಷಣಗಳ ವರದಿಗಳು ವಿವಿಧ ಪತ್ರಿಕೆಗಳ ಮೂಲಕ ಲಭ್ಯವಿವೆ. ಅವುಗಳಲ್ಲಿ ಇಂತಹ ಮಾಹಿತಿಯಿಲ್ಲ.
(೭) ಹಿರಾಂ ಮ್ಯಾಕ್ಸಿಂ ಎನ್ನುವವರು ‘ಲಿ ಹುವಾಂಗ್ ಚಾಂಗ್ಸ್ ಸ್ಕ್ರಾಪ್ ಬುಕ್ ‘ ಎನ್ನುವ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಅವರು ‘ಸ್ವಾಮಿಗಳ ಪ್ರತಿಯೊಂದು ಶಬ್ದವನ್ನು ವರದಿಗಾರರು ಬಿಡದಂತೆ ಬರೆದುಕೊಂಡು ದೇಶಾದ್ಯಂತ ತಂತಿಯ ಮೂಲಕ ಕಳಿಸುತ್ತಿದ್ದು ಅದು ಸಾವಿರಾರು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಿತು. ವಿವೇಕಾನಂದರು ಆ ದಿನದ ಸಿಂಹವಾದರು. ಅಲ್ಪ ಕಾಲದಲ್ಲಿಯೇ ಅವರಿಗೆ ಅಸಂಖ್ಯಾತ ಜನ ಹಿಂಬಾಲಕರಾದರು ಎಂದಿದ್ದಾರೆ. ಇಂತಹ ಉತ್ಪ್ರೇಕ್ಷಿತ ವರದಿಗಳು ಮುಂದೆ ಬಣ್ಣ ಬಣ್ಣದಲ್ಲಿ ಸ್ವಾಮಿಗಳ ಚರಿತ್ರೆಯಲ್ಲಿ ಸೇರಿದವು. ಹಿರಾಂ ಮ್ಯಾಕ್ಸಿಂ ‘ಮೈ ಲೈಫ್ ‘ ಹೆಸರಿನಲ್ಲಿ ತಮ್ಮ ಆತ್ಮಚರಿತ್ರೆ ಬರೆದುಕೊಂಡಿದ್ದಾರೆ. ಅದರ ಪ್ರಕಾರ ಅವರು ಆಗಸ್ಟ್ ೧೮೮೧ ರಲ್ಲಿ ಅಮೆರಿಕ ತೊರೆದು ಇಂಗ್ಲೆಂಡ್’ಗೆ ಹೋಗಿ ೧೮೮೪ ರಲ್ಲಿ ಅಲ್ಲಿ ಗನ್ (ಬಂದೂಕು) ಕಂಪೆನಿ ಸ್ಥಾಪಿಸಿದನು. ಈ ನಡುವೆ ಆತ ಅಮೆರಿಕಕ್ಕೆ ಬಂದಿರಲಿಲ್ಲ ಮತ್ತು ಅತನಿಗೆ ಧರ್ಮ ಸಂಸತ್ತಿನ ಬಗ್ಗೆ ಏನೂ ತಿಳಿದಿರಲಿಲ್ಲ. ಸ್ವಾಮಿಗಳು ೨೨/೧೦/೧೯೦೦ ರಂದು ಸಾರಾ ಬುಲ್’ಗೆ ರೋಂನಿಂದ ಬರೆದ ಪತ್ರದಲ್ಲಿ ‘ ಬಂದೂಕದ ಮ್ಯಾಕಿಂ ನನ್ನ ಬಗ್ಗೆ ಬಹಳ ಆಸಕ್ತರಾಗಿದ್ದಾನೆ. ಚೈನಾ ಮತ್ತು ಚೀನಿಯರು ಎಂಬ ಅವರ ಪುಸ್ತಕದಲ್ಲಿ ನಾನು ಅಮೆರಿಕದಲ್ಲಿ ಮಾಡಿರುವ ಕೆಲಸದ ಬಗ್ಗೆ ಬರೆಯಬೇಕೆಂದಿರುವರು. ನನ್ನ ಬಳಿ ಯಾವ ದಾಖಲೆಯೂ ಇಲ್ಲ. ನಿಮ್ಮಲ್ಲಿ ಇದ್ದರೆ ದಯವಿಟ್ಟು ಕೊಡಿ’ ಎಂದು ಕೋರಿದ್ದಾರೆ. ಆದ್ದರಿಂದ ಹಿರಾಂ ಮ್ಯಾಕ್ಸಿಗೆ ವಿಶ್ವ ಧರ್ಮ ಸಂಸತ್ತಿನಲ್ಲಿ ನಿಜವಾಗಿಯೂ ಏನು ನಡೆಯಿತೆಂದು ಗೊತ್ತಿರಲಿಲ್ಲ. ಸ್ವಾಮಿಗಳು ಯುರೋಪ್ ಪ್ರವಾಸದಲ್ಲಿದ್ದಾಗ ಪ್ಯಾರಿಸ್’ನಲ್ಲಿ ಇವರಿಬ್ಬರ ಭೇಟಿಯಾಗಿದ್ದಿತು. ಹಿರಾ ಮ್ಯಾಕ್ಸಿಂ ಸ್ವಾಮಿಗಳನ್ನು ಕುರಿತು ಹೇಳಿದ್ದೆಲ್ಲವೂ ಪ್ಯಾರಿಸ್’ನಲ್ಲಿ ಸ್ವಾಮಿಗಳಿಂದ ಕೇಳಿದ್ದೇ ಆಗಿದ್ದಿತು. ಹಿರಾಂ ಮ್ಯಾಕ್ಸಿಂ ಹೇಳುವಂತೆ ಸ್ವಾಮಿಗಳನ್ನು ಧರ್ಮ ಸಂಸತ್ತಿಗೆ ಭಾರತದ ಶ್ರೀಮಂತ ವ್ಯಾಪಾರಿಗಳು ಕಳಿಸಿರಲಿಲ್ಲ ಮತ್ತು ಅಮೆರಿಕದಲ್ಲಿ ಅವರ ಭಾಷಣಗಳನ್ನು ಕುತೂಹಲದಿಂದ ಜನ ಕೇಳಿದ್ದರು ಮತ್ತು ಅವರ ಬಗ್ಗೆ ಕೆಲವರು ಅಭಿಮಾನ ಹೊಂದಿದ್ದರೇ ಹೊರತು ಅಸಂಖ್ಯಾತ ಜನ ಹಿಂಬಾಲಕರಿರಲಿಲ್ಲ. ಆದ್ದರಿಂದ ಹಿರಾಂ ಮ್ಯಾಕ್ಸಿ ಸ್ವಾಮಿಗಳು ಷಿಕಾಗೊದಲ್ಲಿ ಪಡೆದ ಯಶಸ್ಸಿನ ಬಗ್ಗೆ ಹೇಳಿರುವುದೆಲ್ಲವೂ ಸ್ವಾಮಿಗಳು ತಮಗೆ ತಾವೇ ಮಾಡಿಕೊಂಡಿದ್ದ ಪ್ರಶಂಸೆ ಎನ್ನಬಹುದು. ಸ್ವಾಮಿಗಳು ತಮ್ಮ ‘ಪರಿವ್ರಾಜಕ’ ಲೇಖನದಲ್ಲಿ ಮ್ಯಾಕ್ಸಿಂ ಭಾರತ ಮತ್ತು ಚೀನಾಗಳನ್ನು ಪ್ರೀತಿಸುತ್ತಾನೆ. ..ಆತನ ಆಪ್ತಮಿತ್ರ ಹುವಾಂಗ್ ಚಾಂಗ್ … ಆತನ ನಿಷ್ಠೆಯೆಲ್ಲ ಕನ್’ಫ್ಯೂಷಿಯಸ್ ಧರ್ಮಕ್ಕೆ….ಕ್ರೈಸ್ತ ಮಿಷನರಿಗಳು ಚೀನಾ ದೇಶದಲ್ಲಿ ತಮ್ಮ ಧರ್ಮವನ್ನು ಬೋಧಿಸುವದನ್ನು ಈತ ಸಹಿಸಲಾರ! ಆತನ ಹೆಂಡತಿಯೂ ಚೀನಾ ಪ್ರೀತಿ , ಕ್ರೈಸ್ತ ದ್ವೇಷದಲ್ಲಿ ಗಂಡನಂತೆಯೇ ‘ ಎಂದು ಬರೆದಿದ್ದಾರೆ. ಇಂತಹ ಹಿರಾಂ ಮ್ಯಾಕ್ಸಿಂ ಕ್ರೈಸ್ತರ ನಾಡಿನಲ್ಲಿ ಕ್ರೈಸ್ತರಲ್ಲದ ಸ್ವಾಮಿಗಳ ‘ವಿಜಯ’ವನ್ನು ವೈಭವೀಕರಿಸಲು ಹಿಂಜರಿದಿಲ್ಲ ಎಂದು ಖಚಿತವಾಗಿ ಹೇಳಬಹುದು.
(೮) ಉದ್ಘಾಟನೆ ದಿನದ ರಾತ್ರಿ ಸ್ವಾಮಿಗಳಿಗೆ ಶ್ರೀಮಂತ ಅತಿಥಿಯ ಮನೆಯಲ್ಲಿ ವಸತಿಯನ್ನು ಕಲ್ಪಿಸಲಾಗಿದ್ದಿತು. ಅಲ್ಲಿ ಅವರಿಗೆ ಸುಖದ ಸುಪ್ಪತ್ತಿಗೆಯನ್ನು ಒದಗಿಸಲಾಗಿದ್ದಿತು. ತನ್ನ ದೇಶದ ಜನರ ದುಸ್ಥಿತಿಯನ್ನು ನೆನೆದು ಕಣ್ಣೀರಿಡುತ್ತ ಸ್ವಾಮಿಗಳು ನೆಲದ ಮೇಲೆ ಮಲಗಿದರು ಎಂದು ‘ದಿ ಲೈಫ್-೧೯೧೪ ‘ ತಿಳಿಸುತ್ತದ್ದೆ. ಇದಕ್ಕೆ ಅಧಾರಗಳೇನೆಂದು ಗೊತ್ತಿಲ್ಲ. ಸ್ವಾಮಿಗಳಿಗೆ ಎಂತಹ ದೇಶಪ್ರೇಮ ಇದ್ದಿತು ಎಂದು ತೋರಿಸಲು ಹೊಸೆದ ಇನ್ನೊಂದು ಪ್ರಸಂಗವಿದು. ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯ ದಿನದಿಂದ ಅದು ಕೊನೆಗೊಳ್ಳುವವರೆಗೆ ಜಾನ್ ಬಿ. ಲೈಯಾನ್ಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆಗ ಜಾನ್ ಬಿ; ಲೈಯಾನ್ಸ್ ಮೊಮ್ಮಗಳು ಕಾರ್ನೇಲಿಯಾ ಕಾಂಗರ್ ೬ ವರ್ಷದ ಹುಡುಗಿ. ಈಕೆ ಬರೆದ ಸ್ವಾಮಿಗಳ ನೆನಪುಗಳನ್ನು ಮೇ , ೧೯೫೬ ಪ್ರಬುದ್ಧ ಭಾರತದ ಸಂಚಿಕೆಯಲ್ಲಿ ಪ್ರಕಟಿಸಲಾಯಿತು. ನಡು ರಾತ್ರಿಯ ನಂತರದಲ್ಲಿ ಆಕರ್ಷಕ ವ್ಯಕ್ತಿತ್ವದ ಸ್ವಾಮಿಗಳು ನಮ್ಮ ಮನೆಗೆ ಬಂದರು. ಅವರನ್ನು ನನ್ನ ಅಜ್ಜಿ ಸ್ವಾಗತಿಸಿದಳು ಎಂದಷ್ಟೇ ಹೇಳಿದ್ದಾಳೆ. (11) ಇನ್ನು ಉಳಿದಂತೆ ಕಾರ್ನೇಲಿಯಾ ಕಾಂಗರ್ ಬರೆದಿರುವುದೆಲ್ಲವದೂ ೬ ವರ್ಷದ ಹುಡುಗಿಯ ತಿಳಿವಳಿಕೆಗೆ ಮೀರಿದ್ದು. ರಾಮಕೃಷ್ಣ ಮಠದ ಸ್ವಾಮಿ ಶಂಕರಾನಂದರ ಪ್ರೇರೇಪಣೆ ಮತ್ತು ಒತ್ತಾಯಕ್ಕೆ ಮಣಿದು ತನ್ನ ೬೮ ನೇ ವಯಸ್ಸಿನಲ್ಲಿ ಬರೆದಿರುವಂತಹುದು. ರಾಮಕೃಷ್ಣ ಮಠದವರು ಕಲ್ಪನೆಯಲ್ಲಿಯೇ ಸ್ವಾಮಿಗಳನ್ನು ಸುಪ್ಪತ್ತಿಗೆಯಿಂದ ಇಳಿಸಿ, ನೆಲದ ಮೇಲೆ ಮಲಗಿಸಿ ಅಳಿಸಿದ್ದಾರೆ. ಅದನ್ನು ಇಡೀ ಭಾರತ ನಂಬಿದೆ ! ಸ್ವಾಮಿಗಳು ಷಿಕಾಗೊ ತಲುಪಿದ ನಂತರ ಹಲವು ದಿನ ಅನುಕೂಲಕರವಾದ ವಸತಿ ಗೃಹಗಳಲ್ಲಿಯೇ ಉಳಿದುಕೊಂಡಿರುವದು ಇಂತಹ ಕಥೆಗಳಿಗೆ ಅಡಚಣೆಯಾಗಿದೆ.
(೯) ಸ್ವಾಮಿಗಳಿಂದ ಧರ್ಮ ಸಂಸತ್ತಿಗೆ ತಿರುವು ಬಂದಿತು ಎನ್ನುವ ಅಭಿಮಾನಿಗಳು ಅದು ಹೇಗೆ , ಎಂದು , ಯಾವ ರೀತಿ ಎಂದು ತಿಳಿಸುವಲ್ಲಿ ಸೋತಿದ್ದಾರೆ. ಧರ್ಮ ಸಂಸತ್ತು ಆರಂಭದಲ್ಲಿ ಇರಿಸಿಕೊಂಡಿದ್ದ ೧೦ ಅಂಶಗಳ ಗುರಿಯಿಂದ ಎಂದಿಗೂ ವಿಚಲಿತವಾಗಿರಲಿಲ್ಲ ಎನ್ನುವುದನ್ನು ದಾಖಲೆಗಳು ಸ್ಪಷ್ಟಪಡಿಸುತ್ತವೆ.
(೧೦) ವಸ್ತುನಿಷ್ಟವಾಗಿ ಅಮೆರಿಕದ ಪತ್ರಿಕೆಗಳನ್ನು ಅದರಲ್ಲೂ ಷಿಕಾಗೊದ ಅತ್ಯಂತ ಜನಪ್ರಿಯ ,ಪ್ರಬಲ ದಿನಪತ್ರಿಕೆ ‘ಷಿಕಾಗೊ ಡೈಲಿ ಟ್ರಿಬ್ಯೂನ್’ ಗಮನಿಸಿದರೆ ಅಧಿಕೃತ ವರದಿ ಮತ್ತು ವಿಸ್ತೃತತೆಯಲ್ಲಿ ಭಾರತದ ೨೦ ಪ್ರತಿನಿಧಿಗಳಲ್ಲಿ ಹೇವಿತರಣೆ ಧರ್ಮಪಾಲ (ಆನಾಗರಿಕ ಧರ್ಮಪಾಲ) ಮೊದಲು ಬರುತ್ತಾರೆ. ಸ್ವಾಮಿ ವಿವೇಕಾನಂದರಿಗಿಂತಲೂ ಪಿ.ಸಿ. ಮಜುಂದಾರ್ ಮತ್ತು ಬಿ.ಬಿ.ನಗರ್ಕರ್ ಹೆಚ್ಚು ಗಮನ ಸೆಳೆದಿದ್ದಾರೆ. ಅಮೆರಿಕದ ಪತ್ರಿಕೆಗಳು ಹಲವು ಭಾರತೀಯ ಪ್ರತಿನಿಧಿಗಳನ್ನು ಹೊಗಳಿ ಬರೆದಿವೆ. ಹಾಗಾದರೆ ಭಾರತದಲ್ಲಿ ಇವರಿಗಿಂತಲೂ ಸ್ವಾಮಿ ವಿವೇಕಾನಂದರು ಹೇಗೆ ಹೆಚ್ಚು ಪ್ರಸಿದ್ದಿಗೆ ಬಂದರು ಎನ್ನುವ ಪ್ರಶ್ನೆ ಉಳಿಯುತ್ತದೆ. ಜಾಣತನದ ಪ್ರಚಾರ ತಂತ್ರ. ರಾಮಕೃಷ್ಣ ಮಠದ, ಗುರುಭಾಯಿಗಳ ಅತಿರಂಜಿತ ಕಥೆಗಳು ಮತ್ತು ಮಾರಿ ಲೂಯಿ ಬರ್ಕೆಯ ಪರಿಶ್ರಮಗಳೇ ಅದಕ್ಕೆ ಕಾರಣ ಎಂದು ಗೊತ್ತಾಗುತ್ತದೆ. ಧರ್ಮ ಸಂಸತ್ತಿಗೆ ಬಂದಿದ್ದ ಜನ ಸ್ವಾಮಿಗಳನ್ನು ತಮ್ಮ ನಾಯಕನಂದು ಪರಿಗಣಿಸಿದ್ದರೆಂದು ಮೌರಿಸ್ ಬರ್ಕೆ ಬರೆಯುತ್ತಾರೆ. ಇದಕ್ಕೆ ಸಮಕಾಲೀನ ಪತ್ರಿಕೆಯ ವರದಿಗಳು , ದಾಖಲೆಗಳು ಬೆಂಬಲ ನೀಡುವುದಿಲ್ಲ.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ )
ಸ್ವಾಮಿಗಳ ವೈಭವೀಕರಣ ಹೇಗೆ ಪ್ರಾರಂಭವಾಯಿತು-ಅದಕ್ಕೆ ಯಾರು ಕೊಡುಗೆ ನೀಡಿದರು ಎನ್ನುವ ಚಿತ್ರಣ ಮುಂದಿದೆ.
ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್’ನಲ್ಲಿ ನೂರಾರು ಕಾರ್ಯಕ್ರಮಗಳಿದ್ದು ಅವುಗಳ ಪಟ್ಟಿ ೧೬೦ ಪುಟಗಳಷ್ಟಿದ್ದಿತು. ವರ್ಲ್ಡ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್’ಗೆ ಸಂಬಂಧಿಸಿದ ಪ್ರದರ್ಶನಗಳು ಷಿಕಾಗೋ ನಗರ ಕೇಂದ್ರದಿಂದ ೧೩ ಕಿ.ಮೀ ದೂರದ ಜಾಕ್’ಸನ್ ಪಾರ್ಕ್ ಮತ್ತು ಮಿಡ್’ವೇ ಪ್ಲೇಸ್ಯಾನ್ಸ್’ನಲ್ಲಿ ನಡೆದರೆ , ಷಿಕಾಗೊ ನಗರದ ಕೇಂದ್ರಭಾಗದ ಮಿಷಿಗನ್ ಅವೆನ್ಯೂನಲ್ಲಿ ಹೊಸದಾಗಿ ಕಟ್ಟಲಾದ ಆರ್ಟ್ ಇನ್ಸ್ಟಿಟ್ಯೂಟ್’ನಲ್ಲಿ ವಿಶ್ವ ಧರ್ಮ ಸಂಸತ್ತಿನ ಸಭೆಗಳನ್ನು ಯೋಜಿಸಲಾಗಿದ್ದಿತು. ಆರ್ಟ್ ಇನ್ಸ್ಟಿಟ್ಯೂಟ್’ನಲ್ಲಿ ಉತ್ತರದಲ್ಲಿ ಹಾಲ್ ಆಫ್ ಕೊಲಂಬಸ್ ಮತ್ತು ದಕ್ಷಿಣದಲ್ಲಿ ಹಾಲ್ ಆಫ್ ವಾಷಿಂಗ್ಟನ್ ಎನ್ನುವ ೩೦೦೦ ಆಸನಗಳ ಸಾಮರ್ಥ್ಯದ ಎರಡು ದೊಡ್ದ ಸಭಾಂಗಣಗಳಿದ್ದವು. ಇವಲ್ಲದೆ ಇನ್ನೂ ಕೆಲವು ಸಣ್ಣ ಗಾತ್ರದ ಹಲವು ಸಭಾಂಗಣಗಳಿದ್ದವು.
ನಿಗದಿಯಾಗಿದ್ದಂತೆ ೧೧/೯/೧೮೯೩ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯಾಯಿತು. ಅದರ ಸುದೀರ್ಘ ವರದಿ ೨೯/೧೦/೧೮೯೩ ರ ‘ ಭಾರತದ ‘ದಿ ಮರಾಠ’ ಪತ್ರಿಕೆಯಲ್ಲಿ ಹೀಗೆ ವರದಿಯಾಯಿತು
ಸುದ್ದಿ ಪತ್ರ – ವರದಿಗಾರನಿಂದ –ಷಿಕಾಗೊ-ಯು.ಎಸ್.ಎ- ೧೮ ಸೆಪ್ಟೆಂಬರ್ ೧೮೯೩
ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆ.
ಷಿಕಾಗೊ ಈಗ ಜಗತ್ತಿನ ಆಕರ್ಷಣೆಯ ಕೇಂದ್ರ ಬಿಂದು. ಜಾಗತಿಕ ಜಾತ್ರೆ ಈ ಕಾಲದ ಮಹತ್ತರ ಘಟನೆ ಮತ್ತು ಈ ಮಹಾನ್ ಜಾತ್ರೆಯೊಂದಿಗೆ ಏರ್ಪಡಿಸಲಾಗಿರುವ ವಿಶ್ವ ಧರ್ಮಗಳ ಸಂಸತ್ ಬಹು ಮಖ್ಯ ಸಂಗತಿ. ಘೋಷಣೆಯಾದ ದಿನದಿಂದಲೂ ಜಗತ್ತಿನ ವಿವಿಧ ಭಾಗಗಳಿಂದ ಕಾತರದಿಂದ ಗಮನಿಸಲ್ಪಡುತ್ತಿರುವ ಜಗತ್ತಿನ ಇತಿಹಾಸದಲ್ಲಿಯೇ ಅನನ್ಯವಾದ ಘಟನೆ. ೧೧ ಸೆಪ್ಟೆಂಬರ್ ೧೮೯೩ ರಂದು ಸೋಮವಾರ ಕಾಂಗ್ರೆಸ್ ಆಫ್ ರಿಲಿಜನ್ಸ್ ಎನ್ನುವ ಇನ್ನೊಂದು ಹೆಸರಿನಲ್ಲಿಯೂ ಗುರುತಿಸಲ್ಪಡುವ ವಿಶ್ವ ಧರ್ಮಗಳ ಸಂಸತ್ತಿನ ಉದ್ಘಾಟನೆಯಾಯಿತು. ಬೆಳಿಗ್ಗೆ ೮ ಗಂಟೆಯಿಂದಲೂ ಧರ್ಮ ಸಂಸತ್ತಿಗಾಗಿಯೇ ಕಟ್ಟಲಾಗಿರುವ ಕೊಲಂಬಸ್ ಹಾಲ್’ನ ಮಹಾ ಸಭಾಂಗಣದಲ್ಲಿ ಅಸಾಧಾರಣ ಹುರುಪು , ಹುಮ್ಮಸ್ಸುಗಳು ತುಂಬಿದ್ದವು. ದೀರ್ಘ ಅಂಡಾಕೃತಿಯಲ್ಲಿರುವ ಈ ಕಟ್ಟಡದ ಮೂರು ಭಾಗಗಳಲ್ಲಿ ವಿಶಾಲ ಗ್ಯಾಲರಿಗಳಿವೆ. ಸಭಾಂಗಣ ಮತ್ತು ಗ್ಯಾಲರಿಗಳಲ್ಲಿ ೪೦೦೦ ಕ್ಕೂ ಅಧಿಕ ಜನ ಕುಳಿತುಕೊಳ್ಳಬಹುದು. ಹತ್ತು ಗಂಟೆ ನಿಗದಿತ ಸಮಯವಾಗಿದ್ದರೂ ೯ ಗಂಟೆಗೆ ಮೊದಲೇ ಸಭಾಂಗಣ, ಗ್ಯಾಲರಿಗಳು ತುಂಬತೊಡಗಿದವು. ೧೦ ಗಂಟೆಯ ವೇಳೆಗೆ ಒಬ್ಬ ವ್ಯಕ್ತಿ ನಿಲ್ಲಲೂ ಜಾಗವಿಲ್ಲದಂತಾಯಿತು. ೧೦.೩೦ ಗಂಟೆಗೆ ಸರಿಯಾಗಿ (ಷಿಕಾಗೊ ಪತ್ರಿಕೆಗಳು ೧೦ ಗಂಟೆ ಎಂದಿವೆ) ಧರ್ಮ ಸಂಸತ್ತಿನ ಅಧ್ಯಕ್ಷ್ಗ (ಕಾರ್ಯದರ್ಶಿ) ಜೆ.ಎಚ್ ಬರೋಸ್ ವಿವಿಧ ಧರ್ಮಗಳ ಪ್ರತಿನಿಧಿಗಳನ್ನು ಸಭಾಂಗಣದೊಳಕ್ಕೆ ಕರೆತರುತ್ತಿದ್ದಂತೆಯೆ ಇಬ್ಬಿಬ್ಬರಂತೆ ಅವರು ವೇದಿಕೆ ಹತ್ತಿ ನಿಗದಿತ ಆಸನಗಳಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ನೆರೆದಿದ್ದ ಬೃಹತ್ ಜನ ಸಮೂಹ ಅವರೆಲ್ಲರೂ ಕುಳಿತುಕೊಳ್ಳುವವರೆಗೆ ಚಪ್ಪಾಳೆ ಮತ್ತು ಹರ್ಷೋದ್ಗಾರಗಳನ್ನು ಮಾಡಿತು. ಅದೊಂದು ಅದ್ಭುತ ದೃಶ್ಯವಾಗಿದ್ದಿತು.
ಬೃಹತ್ ಸಭಾಂಗಣ ಧ್ವಜ , ತೋರಣಗಳಿಂದ ಸದಭಿರುಚಿಯಲ್ಲಿ ಆಲಂಕರಿಸಲ್ಪಟ್ಟಿದ್ದು ವಿಶಾಲ ವೇದಿಕೆಯ ಮೇಲೆ ಜಗತ್ತಿನ ಬಹುದೂರದ ಪ್ರದೇಶಗಳ ಪಂಥ , ಧರ್ಮಗಳನ್ನು ಪ್ರತಿನಿಧಿಸುತ್ತಿದ್ದ ಪುರುಷ , ಮಹಿಳೆಯರಿದ್ದರು. ಯುರೋಪಿನ ಬಹುತೇಕ ಎಲ್ಲ ದೇಶಗಳ ಪ್ರತಿನಿಧಿಗಳಿದ್ದರು-ಈಜಿಪ್ಟ್ , ಏಷ್ಯಾ ಮೈನರ್ , ಚೀನಾ , ಜಪಾನ್ ,ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ , ಆಫ್ರಿಕ ಮತ್ತು ನಮ್ಮ ಭಾರತದದವರಿದ್ದರು. ಭಾರತವನ್ನು ಪ್ರತಿನಿಧಿಸುವ ಈ ಮುಂದಿನವರು ವೇದಿಕೆಯ ಮೇಲಿದ್ದರು. ಕಲ್ಕತ್ತದ ಬ್ರಾಹ್ಮ ಸಮಾಜದ ಶ್ರೀ ಪ್ರತಾಪಚಂದ್ರ ಮಜುಂದಾರ್ , ಬಾಂಬೆ ಬ್ರಾಹ್ಮ ಸಮಾಜದ ಬಲವಂತ ಭಾವು ನಗರ್ಕರ್ , ಬಾಂಬೆಯ ಜೈನ ವೀರಚಂದ ಗಾಂಧಿ , ಅಲಹಾಬಾದ್ ಬ್ರಾಹ್ಮ ಸಮಾಜದ ಜಿ.ಎನ್.ಚಕ್ರವರ್ತಿ , ಬಂಗಾಳದ ಪ್ರಗತಿಪರ ಬ್ರಾಹ್ಮಣ ಸ್ವಾಮಿ ವಿವೇಕಾನಂದ , ಕೊಲಂಬೊ, ಸಿಲೋನಿನ ಬೌದ್ಧ ಧರ್ಮಪಾಲ ಹಾಗೂ ನನ್ನಿಂದ ಹೆಸರು ಪತ್ತೆ ಹಚ್ಚಲಾಗದ ಇನ್ನು ಕೆಲವರು. ಭಾರತ ಪ್ರಬಲವಾಗಿ ಪ್ರತಿನಿಧಿಸಲ್ಪಟ್ಟಿದೆ ಎನ್ನುವುದು ಸಮಾಧಾನದ ವಿಷಯವಾಗಿದ್ದು , ಪತ್ರಿಕೆಗಳ ವರದಿಗಳನ್ನು ಗಮನಿಸಿದರೆ ಭಾರತ ಜಗತ್ತಿನ ಇತರ ದೇಶಗಳಿಗಿಂತ ಎತ್ತರದ ಸ್ಥಾನದಲ್ಲಿರುವುದು ಸ್ಪಷ್ಟವಾಗುತ್ತಿದ್ದಿತು. ಕ್ರೈಸ್ತರು ಮತ್ತು ಮುಸ್ಲಿಮರು , ಯಹೂದಿಗಳು ಮತ್ತು ಜೆಂಟೈಲರು , ಹಿಂದೂಗಳು ಮತ್ತು ಪಾರ್ಸಿಗಳು , ಬೌದ್ಧರು ಮತ್ತು ಬ್ರಾಹ್ಮಣರು , ಕ್ಯಾಥೊಲಿಕರು ಮತ್ತು ಪ್ರಾಟೆಸ್ಟೆಂಟರು , ಮಹಾ ಸನಾತನವಾದಿಗಳು ಮತ್ತು ವೈಚಾರಿಕರು ಭುಜಕ್ಕೆ ಭುಜ ಒತ್ತಿ ಒಂದೇ ವೇದಿಕೆಯ ಮೇಲೆ ಕುಳಿತಿದ್ದರು. ಜಗತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಾಮಾಣಿಕತೆ , ವಿಶ್ವಾಸ ಮತ್ತು ಪ್ರಜ್ಞಾಪೂರ್ವಕವಾಗಿ ಜಗತ್ತಿನ ಪಂಥ , ಧರ್ಮಗಳ ಬೇರಿನಲ್ಲಿರುವ ಅವ್ಯಯ , ಶಾಶ್ವತ ತತ್ತ್ವಗಳನ್ನು ಸಾರಲು ಸೇರಿದ್ದ ಶಾಂತಿಯುತ ಸಭೆ ಅದಾಗಿದ್ದಿತು. ತಮ್ಮ ರಾಷ್ಟ್ಟ್ರೀಯ ಉಡುಗೆಗಳನ್ನುಟ್ಟು ಅಲ್ಲಿ ಕುಳಿತಿದ್ದವರ ಮುಖದಲ್ಲಿ ಪ್ರಾಮಾಣಿಕತೆ ಮತ್ತು ಕಾಳಜಿಗಳು ತುಂಬಿದ್ದು ಬಹು ದಿನಗಳಿಂದ ನಿರೀಕ್ಷಿಸಿದ್ದ ಮಾನವರ ನಡುವಿನ ಶಾಂತಿ ಮತ್ತು ಸಾಮರಸ್ಯದ ದಿನದಂತೆ ಭಾಸವಾಯಿತು. ಜಗತ್ತಿನ ಧರ್ಮಗಳ ಚರಿತ್ರೆಯಲ್ಲಿ ಇದು ಸಂಪೂರ್ಣ ಹೊಸಯುಗದ ಪ್ರಾರಂಭ ಎನ್ನುವುದರಲ್ಲಿ ಸಂಶಯವಿಲ್ಲವಾದರೂ ಪರೋಕ್ಷವಾಗಿ ಇದು ಮುಂದೆ ದೇಶ ದೇಶಗಳ ನಡುವಿನ ಸಂಬಂಧದ ಮೇಲೂ ಪ್ರಭಾವ ಬೀರುತ್ತದೆ. ಎಲ್ಲರೂ ಕುಳಿತಾದ ಮೇಲೆ ಪ್ರತಿಯೊಂದು ಧರ್ಮದ ಗೌರವಾರ್ಥವಾಗಿ ಗಂಟೆಯಿಂದ ನೂರು ಗಂಭೀರ ಧ್ವನಿಗಳನ್ನು ಹೊರಡಿಸಲಾಯಿತು. (೧೦ ಧ್ವನಿಗಳು-ಜಗತ್ತಿನ ಪ್ರಮುಖ ೧೦ ಧರ್ಮಗಳ ಸಂಕೇತ ) . ಗಂಟೆ ಪ್ರತಿಯೊಂದು ಸಲ ಬಡಿದಾಗಲೂ ಅದರ ದನಿ ಸುದೀರ್ಘ ಗಂಭೀರವಾಗಿದ್ದು ಅದರ ಧ್ವನಿ , ಪ್ರತಿಧ್ವನಿ ಸಭಾಂಗಣದಲ್ಲಿ ಮಾರ್ದನಿಸಿದಾಗ ಅಲ್ಲಿ ನೆರೆದಿದ್ದ ೫೦೦೦ ಜನ ಮಂತ್ರಮುಗ್ದರಾಗಿ ಕುಳಿತಿದ್ದರು. ಗಂಟೆಯ ನಿನಾದ ಧರ್ಮದ ಹೆಸರಿನಲ್ಲಿ ನಡೆಯುವ ಎಲ್ಲ ಬಗೆಯ ಧರ್ಮಾಂಧತೆ , ದೌರ್ಜನ್ಯ , ಸರ್ವಾಧಿಕಾರ, ಅಸಹನೆ ,ಮತ್ತು ಭೇದಭಾವಗಳ ಶವಪೆಟ್ಟಿಗೆಗೆ ಹೊಡೆದ ಮೊಳೆಯೋ ಎನ್ನುವಂತೆ ಭಾಸವಾಗುತ್ತಿದ್ದಿತು. ಸಭೆಯ ನಡಾವಳಿಗಳು ಅಲ್ಲಿದ ಪ್ರತಿಯೊಬ್ಬರ ಹೃದಯವನ್ನು ತಟ್ಟಿ ಗಂಭೀರವಾಗಿಸಿದವು. ಗಂಟೆಯ ಕೊನೆಯ ದನಿ ಕ್ಷೀಣವಾಗಿ ಇಲ್ಲವಾಗುತ್ತಿದ್ದಂತೆಯೇ ಇಡೀ ಸಭೆ ಎದ್ದು ನಿಂತು ಮಹಾ ಗಾನವನ್ನು ಹಾಡಿತು. ಆ ಹಾಡು ಹೀಗಿದೆ. (ಹಾಡಿನ ಸಾಲಗಳು)
ಗಂಭೀರವಾಗಿ ಹಿನ್ನೆಲೆಯಲ್ಲಿ ವಾದ್ಯಗಳು ಮೊಳಗುತ್ತಿರಲು ಇಡೀ ಮಾನವ ಕುಟುಂಬವೇ ಒಕ್ಕೊರಲಿನಿಂದ ಹಾಡಿತೆಂಬಂತೆ ಸಭೆ ದನಿಗೂಡಿಸಿತು. ಇದಾದ ನಂತರ ಸ್ವರ್ಗದಲ್ಲಿರುವ ನಮ್ಮ ತಂದೆಯೇ ಎನ್ನುವ ವಿಶ್ವಗಾನ ಮೂಡಿಬಂದಿತು. ಹಾಡಿನ ನಂತರ ಸಭಿಕರು ಮತ್ತು ಪ್ರತಿನಿಧಿಗಳು ಕುಳಿತರು. ಆಗ ಮೃದು ಮತ್ತು ಸೌಮ್ಯ ಸ್ವಭಾವದ ವಿಶ್ವ ಧರ್ಮ ಸಂಸತ್ತಿನ ಅಧ್ಯಕ್ಷ (ಕಾರ್ಯದರ್ಶಿ) ಎದ್ದು ನಿಂತು ಹೃದಯಾಂತರಾಳದ ಭಾಷಣದ ಮೂಲಕ ಪ್ರತಿನಿಧಿಗಳಿಗೆ ಹಾರ್ದಿಕ ಸ್ವಾಗತ ಕೋರಿದರು. ಅವರ ಭಾಷಣ ಚುಟುಕಾಗಿದ್ದಿತು – ಅವರು ದೀರ್ಘ ಭಾಷಣ ಮಾಡಲಿಲ್ಲ ಅದಕ್ಕೆ ಅವರು ಸಮರ್ಥರಲ್ಲ ಎನ್ನುವುದಕ್ಕಿಂತ ಭಾವನೆಗಳು ಉಕ್ಕಿಬಂದು ಅವರಗೆ ಮಾತನಾಡಲಾಗಲಿಲ್ಲ. ಪ್ರೆಸ್’ಬೈಟೇರೀಯನ್ ಚರ್ಚ್ ಮಿನಿಸ್ಟರ್ ಆಗಿರುವ ಡಾ. ಜಾನ್ ಬರೋಸ್ ವಿಶಾಲ ದೃಷ್ಟಿಕೋನ ಮತ್ತು ಉದಾರ ಹೃದಯದ ಗಣ್ಯ ವ್ಯಕ್ತಿ. ಅವರು ಕೂಡ ಸಮಿತಿಯ ಅಧ್ಯಕ್ಷರು (ಕಾರ್ಯದರ್ಶಿ). ಧರ್ಮ ಸಂಸತ್ತಿನ ಮೂಲ ಕಲ್ಪನೆ ಅವರದೇ. ಉಜ್ವಲ ಮಾತುಗಳಲ್ಲಿ ಅವರು ಧರ್ಮ ಸಂಸತ್ತಿನ ಆರಂಭ ,ಬೆಳವಣಿಗೆ , ಸಂಘಟಕರು ಎದುರಿಸಿದ ಸಮಸ್ಯೆಗಳ ಸಂಕ್ಷಿಪ್ತ ವಿವರ ನೀಡಿದರು. ಅವರ ಮಾತುಗಳಲ್ಲಿ ಹುಮ್ಮಸ್ಸು ಮತ್ತು ಪ್ರಾಮಾಣಿಕತೆ ತುಂಬಿದ್ದವು. ಅವರ ನಡವಳಿಕೆ ಮತ್ತು ಪ್ರಸ್ತುತಿ ಗೆಲುವಿನದಾಗಿದ್ದು ,ಅವರಿಗೆ ಅವರೇ ಬೆಳೆಸಿಕೊಂಡು ಬಂದ ಗಂಭೀರ ವಾಣಿಯಾಗಿದ್ದಿತು. ಅವರು ಮಾತನಾಡುತ್ತಿರುವಾಗ ಅವರ ಮೂಗು ತೀವ್ರ ಭಾವನೆಗಳಿಂದ ಕಂಪಿಸುತ್ತಿರುವಂತೆ ಭಾಸವಾಗುತ್ತಿದ್ದಿತು; ಅದು ಆಳ ಅನುಕಂಪಿತವಾಗಿದ್ದಿತು. ಈ ಸ್ವಾಗತ ನುಡಿಗಳ ನಂತರ ಅಮೆರಿಕದ ಹಲವು ಗಣ್ಯರು ಕಿರು ಸ್ವಾಗತ ಭಾಷಣಗಳನ್ನು ಮಾಡಿದರು. ಅವರಲ್ಲಿ ರೆ. ಆಗಸ್ಟ್ ಚಾಪನ್ ಡಿ.ಡಿ , ಆರ್ಚ್ ಬಿಷಪ್ ಪಿ.ಎ. ಪಿಹ್ಯಾನ್ , ಮೆವ್ ಅಲೆಕ್ ಮೆಕಿಂಜಿ , ವಿಶ್ವ ಕೊಲಂಬಿಯನ್ ಎಕ್’ಪೊಸಿಷನ್ ಅಧ್ಯಕ್ಷ ಆನರಬಲ್ ಹಾರ್ಲೊ ಎನ್. ಹಿಗ್ಗಿನ್ ಬಾಥಮ್ ಅತಿ ಗಣ್ಯರು. ಇವರಲ್ಲಿ ವಿಶ್ವ ಕೊಲಂಬಿಯನ್ ಎಕ್’ಪೊಸಿಷನ್ ಅಧ್ಯಕ್ಷ ಅತಿ ಮುಖ್ಯ ವ್ಯಕ್ತಿ. ಆದರದ ಸ್ವಾಗತ ಭಾಷಣಕ್ಕೆ ಕೆಲ ಪ್ರತಿಧಿಗಳು ಉತ್ತರ ನೀಡಿದರು. ಅತ್ಯಂತ ವಿಭಿನ್ನ ಧಾರ್ಮಿಕ ಶ್ರದ್ಧೆಯ ವ್ಯಕ್ತಿಗಳನ್ನು ಕೆಲದಿನದ ಮಟ್ಟಿಗಾದರೂ ಒಂದೇ ವೇದಿಕೆಯ ಮೇಲೆ ತಂದು ಮನುಷ್ಯರೆಲ್ಲರೂ ಒಬ್ಬನೇ ತಂದೆಯ ಮಕ್ಕಳೆಂದು ಒಪ್ಪಿ , ವಿಭಿನ್ನ ಧರ್ಮಗಳಲ್ಲಿರುವ ಸಾಮಾನ್ಯ ತತ್ತ್ವಗಳನ್ನು ಗುರುತಿಸುವ ಸಂಗತಿಯೇ ಈ ಅತಿಶಯ ಕ್ಯಾಥೊಲಿಕ್ ಮತ್ತು ಜಾಗತಿಕ ಸಭೆಯ ಅತ್ಯಂತ ಆಸಕ್ತಿದಾಯಕ ಲಕ್ಷಣವಾಗಿದೆ. ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಚೀನಾ, ಜಪಾನ್, ರಷ್ಯಾ , ಅರ್ಮೇನಿಯಾ, ಸ್ವೀಡನ್ , ಈಜಿಪ್ತ್ ಹಾಗೂ ಅಂತಹ ಹಲವು ದೂರದ ದೇಶಗಳಿಂದ ಬಂದಿದ್ದ ಪ್ರತಿನಿಧಿಗಳಿಂದ ಸಮರ್ಥವಾದ , ಹುಮ್ಮಸ್ಸಿನಿಂದ ತುಂಬಿದ ಪ್ರತಿಕ್ರಿಯೆಗಳು ಬಂದವು. ಮೊದಲ ದಿನ ಮಾತನಾಡಿದ ಭಾರತದ ಪ್ರತಿನಿಧಿಗಳೆಂದರೆ ಪಿ.ಸಿ.ಮಜುಂದಾರ್, ಬಿ.ಬಿ ನಗರ್ಕರ್ ಹಾಗೂ ಶ್ರೀ ಜಿ.ಎನ್ ಚಕ್ರವರ್ತಿ. ಪಿ.ಸಿ ಮಜುಂದಾರರು ಮಾಡಿದ ಭಾಷಣ ಅತ್ಯಂತ ನಿರರ್ಗಳ ಮತ್ತು ಖಡಾಖಂಡಿತವಾಗಿದ್ದಿತು. ಅದು ಸಭೆಯ ಮೇಲೆ ಭಾರಿ ಪರಿಣಾಮ ಬೀರಿ ಭಾರತದ ಬಗ್ಗೆ ಉನ್ನತ ಗೌರವಾದರಗಳನ್ನು ಮೂಡಿಸಿತು. ಘನತೆಯೆತ್ತ ಈ ಬಂಗಾಳಿಯ ಭಾಷಣ ಇತರ ಭಾರತೀಯರಿಗೆ ಒಂದು ದಾರಿಯನ್ನು ಹಾಕಿಕೊಟ್ಟಿತು. ಈ ಮುಂದೆ ಪಿ.ಸಿ ಮಜುಂದಾರರು ಮಾಡಿದ ಭಾಷಣದ ಕಿರು ಸಾರಾಂಶ ಕೊಡಲಾಗಿದೆ. (ಷಿಕಾಗೊ ಹೆರಾಲ್ಡ್ ಪತ್ರಿಕೆ ವರದಿಯ ಆಯ್ದ ದೀರ್ಘ ಭಾಗ ನೀಡಲಾಗಿದೆ). ಬಿ.ಬಿ ನಗರ್ಕರ್ ಮಾಡಿದ ಭಾಷಣದ ಸಾರಾಂಶ (ಷಿಕಾಗೊ ಹೆರಾಲ್ಡ್ ಪತ್ರಿಕೆ ವರದಿಯ ಆಯ್ದ ದೀರ್ಘ ಭಾಗ ನೀಡಲಾಗಿದೆ).
.ಹಿಂದೂ ,ಬೌದ್ಧ, ಬ್ರಾಹ್ಮ ಧರ್ಮಗಳು ಭಾರಿ ಗಮನ ಸೆಳೆದಿದ್ದು ಕಾತರ ಮತ್ತು ನಿರೀಕ್ಷೆಯಲ್ಲಿರುವ ಕೇಳುಗರು ಭಾರತದ ಪ್ರತಿನಿಧಿಗಳು ಹೇಳುವ ಪ್ರತಿಯೊಂದು ಮಾತನ್ನು ಜಾಗರೂಕತೆಯಿಂದ ಕೇಳುತ್ತಾರೆ. ಜನರ ಆಸಕ್ತಿ ಇಲ್ಲಿಗೇ ನಿಲ್ಲುವುದಿಲ್ಲ. ಊಟದ ವಿರಾಮ ಮತ್ತು ಚಹಾದ ಬಿಡುವಿನ ವೇಳೆಯಲ್ಲಿ ಕೇಳುಗರು ವಿದೇಶಿ ಪ್ರತಿನಿಧಿಗಳ ಸುತ್ತ –ವಿಶೇಷವಾಗಿ ಭಾರತೀಯ ಪ್ರತಿನಿಧಿಗಳ ಸುತ್ತ – ನೆರೆದು ಪ್ರಶ್ನೆಗಳ ನಂತರ ಪ್ರಶ್ನೆಯನ್ನು ಕೇಳುತ್ತಾರೆ. ಭಾರತೀಯರನ್ನು ಅವರ ಲಕ್ಷಣಗಳಿಂದ ಗುರುತಿಸುವ ಅವರು ಎಲ್ಲೆಂದರಲ್ಲಿ , ಯಾವಾಗೆಂದರೆ ಆವಾಗ , ಅವಕಾಶ ಸಿಕ್ಕಾಗಲೆಲ್ಲ ಅವರನ್ನು ಸರಪಳಿಯಂತೆ ಸುತ್ತವರೆದು ಕಠಿಣ ಪ್ರಶ್ನೆಗಳನ್ನು ಎಸೆಯುತ್ತಾರೆ. ನಿಜ ಹೇಳಬೇಕೆಂದರೆ ಉತ್ತರಿಸಲು ಬಹು ಕಠಿಣವಾದ ಪ್ರಶ್ನೆಗಳವು. ಈ ಜನರು ಅಣಕಿಸುವರಾಗಲಿ , ತುಚ್ಛವಾಗಿ , ಕುಹಕದಿಂದ ಕಾಣುವವರಾಗಲಿ ಅಲ್ಲ. ಅವರಲ್ಲಿ ವಿಚಾರಣೆಯ ಪ್ರಾಮಾಣಿಕ ಹುಮ್ಮಸ್ಸು ತುಂಬಿದ್ದು ಶೋಧನೆಯಲ್ಲಿ ಪ್ರಾಮಾಣಿಕತೆಯದೆ. ಇವರು ನಾವು ಭಾರತದಲ್ಲಿ ನೋಡುವ ಧರ್ಮಾಂಧ ಕ್ರೈಸ್ತರಂತಲ್ಲ. ಬದಲಾಗಿ ಧರ್ಮಾಂಧತೆ ಮತ್ತು ಕ್ಷುಲ್ಲಕ ಮನೋಭಾವವನ್ನು ವಿರೋಧಿಸುವವರು!
ಪ್ರತಿಯೊಬ್ಬ ಭಾಷಣಕಾರನು ಯಾವುದೇ ಧರ್ಮ , ಪಂಥಕ್ಕೆ ಸೇರಿರಲಿ ಇತರ ಧರ್ಮಗಳನ್ನು ಅತ್ಯಂತ ಗೌರವದಿಂದ ನೋಡುತ್ತಾನೆ. ಒಮ್ಮೆ ಮಿಷನರಿ ಕೆಲಸದ ಮೇಲೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಭಾಷಣಕಾರ ಜೋಸೆಫ್ ಕುಕ್ ಹೊರತಾಗಿ ಈವರೆಗೆ ಯಾರೂ ಕೀಳು ಮಾತುಗಳನ್ನಾಡಿಲ್ಲ. ಕುಕ್ ಸಾಂಪ್ರದಾಯಿಕ ಕ್ರೈಸ್ತ ಚರ್ಚ್ ಪ್ರತಿನಿಧಿ. ಆತ ಎಲ್ಲರನ್ನೂ ತೀವ್ರವಾಗಿ ಹೊರಗಿಡುವ ಸ್ವಭಾವದಾತ. ಅಮೆರಿಕದಲ್ಲಿ ಆತನನ್ನು ಯಾವುದಕ್ಕೂ ಬಾರದ , ಬಗ್ಗದ ಗಟ್ಟಿ ಕಲ್ಲಿನಂತೆ ಪರಿಗಣಿಸುತ್ತಾರೆ. ಈತನೊಬ್ಬನೇ ಏಕೈಕ ಅಪವಾದ; ಅದೃಷ್ಟವೆಂದರೆ ಒಬ್ಬನಿಗಿಂತ ಹೆಚ್ಚಿನ ಕುಕ್ ಇಲ್ಲಿಲ್ಲ. ಆದ್ದರಿಂದ ಅಹಿತಕರವಾದುದು ಏನೂ ಜರುಗದು. ತಾಳ್ಮೆ ಮತ್ತು ತೀವ್ರ ಅನುಗಮನ ಕೇಳುಗರ ಲಹರಿಯಾಗಿವೆ. ಒಂದು ದೃಷ್ಟಿಯಲ್ಲಿ ಅಲ್ಲಿರುವರೆಲ್ಲರೂ ವಿಭಿನ್ನ. ಜಾಗತಿಕ ಮಹಾಜಾತ್ರೆ ಅವರನ್ನು ಅಮೆರಿಕ , ಯುರೋಪ್’ನ ಬಹು ದೂರಗಳಿಂದ –ಬಹುಶಃ ಜಗತ್ತಿನ ಎಲ್ಲ ಕಡೆಯಿಂದ ಒಗ್ಗೂಡಿಸಿದೆ. ಅವರೆಲ್ಲರೂ ವಿಭಿನ್ನ ತರಬೇತಿ ಪಡೆದಿದ್ದರೂ ೪೦೦೦ ಜನರ ಸಮುದ್ರದಂತಹ ಸಭೆಯಲ್ಲಿ ಒಟ್ಟಾಗಿ ಕುಳಿತಾಗಿ ಪರಿಪೂರ್ಣ ಶಾಂತರಾಗಿ , ಸಾವಧಾನದಿಂದ ಇರುತ್ತಾರೆ. ವೇದಿಕೆಯ ಮೇಲಿರುವ ಭಾಷಣಕಾರ ಮತ್ತು ಕೇಳುಗರ ನಡುವೆ ಸಂಪೂರ್ಣ ಸಾಮರಸ್ಯವಿದೆ. ಆತ ಏನು ಹೇಳುತ್ತಾನೊ ಅದನ್ನು ಕ್ಷೋಭೆಗೊಳ್ಳದೆ ಸಮಚಿತ್ತದಿಂದ ಕೇಳುತ್ತಾರೆ ಮತ್ತು ಆತ ಅವರ ಉನ್ನತ ಭಾವನೆಗಳನ್ನು ಉದ್ದೀಪನಗೊಳಿಸುವಂತಹುದು ಏನನ್ನಾದರೂ ಹೇಳಿದರೆ ಚಪ್ಪಾಳೆಯಿಂದ ಮೆಚ್ಚುಗೆ ಸೂಚಿಸುತ್ತಾರೆ.
೨೧ ಸೆಪ್ಟೆಂಬರ್ ೧೮೯೩
ಧರ್ಮ ಸಂಸತ್ತಿನ ಸಭೆಗಳು ಹೆಚ್ಚಿನ ಜನರನ್ನು ಸೆಳೆಯುತ್ತಿವೆ. ಆಸಕ್ತಿ ಸ್ವಲ್ಪವೂ ಕುಂದಿಲ್ಲ. ನಿನ್ನೆ ಮೊದಲ ಬಾರಿ ಕೇಳುಗರು ಭಾಷಣಕಾರನೊಬ್ಬನ ದೃಷ್ಟಿಕೋನವನ್ನು ಅನುಮೋದಿಸಲಿಲ್ಲ. ಈತ ಹೊಸದಾಗಿ ಇಸ್ಲಾಂಗೆ ಮತಾಂತರವಾಗಿರುವ ಅಮೆರಿಕದ ರಸೆಲ್ ಅಲೆಕ್ಸಾಂಡರ್ ವೆಬ್. ಇಸ್ಲಾಂ ತತ್ತ್ವಗಳನ್ನು ಕುರಿತು ಮಾತನಾಡುತ್ತ ಬಹುಪತ್ನಿತ್ವವನ್ನು ಸಮರ್ಥಿಸತೊಡಗುತ್ತಿದ್ದಂತೆಯೇ ಗೊಣಗಾಟ , ಕೀರಲು ದನಿಗಳು ಹೊರಬರುತ್ತ ‘ನಾಚಿಕೆಗೇಡು, ನಾಚಿಕೆಗೇಡು’ ಎನ್ನುವ ಕೂಗು ಹಾಗೂ ಅಸಮ್ಮತಿ ಸಭಿಕರ ಕಡೆಯಿಂದ ಬಂದಿತು. ಮತಾಂತಗೊಂಡಿರುವ ಈ ಯಾಂಕಿ ತನ್ನ ಮಾತು ಕೇಳಿಸುವಂತೆ ಗಟ್ಟಿದನಿಯಲ್ಲಿ ಮುಂದುವರೆದನು ; ಆದರೆ ಸಭಿಕರ ಗದ್ದಲ ಹೆಚ್ಚಿ ಆತನ ಮಾತುಗಳು ಕೇಳದಂತಾದವು. ಕೊನೆಗೆ ಈ ವಿಷಯ ಬಿಟ್ಟು ಇಸ್ಲಾಂನ ಇತರ ತತ್ತ್ವಗಳತ್ತ ಸಾಗಬೇಕಾಯಿತು. ಧರ್ಮ ಸಂಸತ್ತಿನ ಇದೇ ಮೊದಲ ಬಾರಿಗೆ ಸಭಿಕರಿಂದ ನಿರ್ಣಯಕಾರಿ ಅಸಮ್ಮತಿಯ ಸೂಚನೆಗಳು ಹೊರಬಂದವು. ಕ್ರೈಸ್ತ , ಹಿಂದೂ , ಬೌದ್ಧ , ಬ್ರಾಹ್ಮ , ಪಾರ್ಸಿ , ಜೈನ .ಷಿಂಟೊ ಹೀಗೆಲ್ಲರೂ ತಮ್ಮ ಧಾರ್ಮಿಕ ತತ್ತ್ವಗಳನ್ನು ಮೆಚ್ಚುಗೆಯ ಚಪ್ಪಾಳೆಯ ಹೊರತು ಯಾವುದೇ ಅಡಚಣೆಯಿಲ್ಲದೆ ಮಂಡಿಸಿದರು. ಅಸಮ್ಮತಿ , ಪ್ರತಿಭಟನೆ ಇಸ್ಲಾಂಗೆ ಮತಾಂತರವಾಗಿ ತನ್ನನ್ನು ಮಹಮ್ಮದ್ ವೆಬ್ ಎಂದು ಕರೆದುಕೊಳ್ಳುತ್ತಿರುವ ಆತನಿಗೆ ಮಾತ್ರ ಮೀಸಲಾಗಿದ್ದವು. ಇವೆರಡು ಸನ್ನಿವೇಶಗಳು ಎರಡು ಮುಖ್ಯ ಅಂಶಗಳನ್ನು ಸೂಚಿಸುತ್ತವೆ. ಮಹಮ್ಮದ್ ವೆಬ್ ಹೇಳಿಕೆಗಳು ಇಸ್ಲಾಂ ತತ್ತ್ವಗಳಿಗೆ ಅನುಗುಣವಾಗಿದ್ದರೂ ಸಭಿಕರ ಸಿಡಿದೇಳುವಿಕೆ ಅಮೆರಿಕದ ಜನರ ಮನಸ್ಥಿತಿಯನ್ನು ತೋರಿಸುತ್ತದೆ. ಸಭಿಕರ ಅಸಮಾಧಾನ ತಾತ್ಕಾಲಿಕವಾಗಿದ್ದಿತು. ವೆಬ್ ತನ್ನ ವಾದವನ್ನು ಬದಲಿಸಿ , ಕೆರಳಿಸುವುದನ್ನು ನಿಲ್ಲಿಸಿದ ತಕ್ಷಣ ಎಲ್ಲವೂ ಶಾಂತವಾಗಿ ಮೊದಲಿನಂತೆ ಸರಾಗವಾಗಿ ನಡೆಯತೊಡಗಿತು.
ನಿನ್ನೆ ಬೆಳಿಗ್ಗೆ ಪಿ.ಸಿ ಮಜುಂದಾರ್ ಬ್ರಾಹ್ಮ ಸಮಾಜದ ಧ್ಯೇಯೋದ್ಧೇಶಗಳನ್ನು ಕುರಿತಾಗಿ ವಾಷಿಂಗ್ಟನ್ ಹಾಲ್’ನಲ್ಲಿ ನೆರೆದಿದ್ದ ಯೂನಿಟೇರಿಯನ್ ಮತ್ತು ಫ್ರೀ ರಿಲಿಜಿಯಸ್ ಅಸೋಸಿಯೇಷನ್ ಜನರಿಗೆ ಆಸಕ್ತಿಕರ ಭಾಷಣ ಮಾಡಿದರು. ರಾತ್ರಿ ಫ್ರೀ ರಿಲಿಜಿಯಸ್ ಅಸೊಸಿಯೇಷನ್ ಬ್ಯಾಕೆಟ್’ನಲ್ಲಿ ಬಿ.ಬಿ ನಗರ್ಕರ್ ‘ದಿ ಪ್ರಾಬ್ಲಮ್ಸ್ ಆಫ್ ಇಂಡಿಯನ್ ಸೋಷಿಯಲ್ ಲೈಫ್ ‘ ಎನ್ನುವ ಭಾಷಣ ಮಾಡಿದರು. ಈ ಎರಡು ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯ ಕೇಳುಗರು ನೆರೆದಿದ್ದು ಭಾಷಣಕಾರರನ್ನು ಹುಮ್ಮಸ್ಸಿನಿಂದ ಒಪ್ಪಿದರು.
೨೯/೧೦/೧೮೯೩- ದಿ ಮರಾಠ ಪತ್ರಿಕೆಯಲ್ಲಿ ಬಂದ ಈ ಸಹಜ ವರದಿಯಲ್ಲಿ ಸ್ವಾಮಿಯವರನ್ನು ಕುರಿತಾಗಿ ಏನೂ ಹೇಳಿಲ್ಲ ಎಂದು ಶಂಕರಿ ಪ್ರಸಾದ್ ಬಸು ಅಸಮಾಧಾನಗೊಂಡಿದ್ದಾರೆ.ಆದರೆ ಈಗ ಭಾರತದಲ್ಲಿ ಜನಜನಿತವಾಗಿರುವಂತೆ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳ ಭಾಷಣ ಮತ್ತು ಪ್ರಭಾವ ಅಸಾಧಾರಾಣವಾಗಿರದೆ ಸಾಮಾನ್ಯ ಮಟ್ಟದ್ದಾಗಿದ್ದಿತು ಎನ್ನುವುದೇ ನಿಜ.
**********************************
ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯ ದಿನ ಮಾಡಿದ ಮೊದಲ ಭಾಷಣದಲ್ಲಿ ‘ ಅಮೆರಿಕದ ಅಣ್ಣ ತಮ್ಮಂದಿರೇ , ಅಕ್ಕ ತಂಗಿಯರೇ’ ಎನ್ನುವುದರ ಮೂಲಕ ಅವರು ಅಮೆರಿಕವನ್ನು ಗೆದ್ದರು , ವಿಶ್ವವಿಜೇತರಾದರು ಎನ್ನುವ ಕಟ್ಟು ಕಥೆ ಕಳೆದ ನೂರು ಇಪ್ಪತ್ತು ವರ್ಷಗಳಿಂದ ಭಾರತದಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿದೆ. ಆದರೆ ಆ ದಿನದ ಪತ್ರಿಕಾ ವರದಿಗಳಿಂದ ಹಲವು ಭಾಷಣಗಳಲ್ಲಿ ಅದೂ ಕೂಡ ಒಂದಾಗಿದ್ದಿತೆನ್ನುವುದು ಸ್ಪಷ್ಟ. ಅವರು ಮೊದಲ ದಿನ ಮಾಡಿದ ಈ ಭಾಷಣವನ್ನು ಅಮೆರಿಕದ ಯಾವ ಪತ್ರಿಕೆಯೂ ಪೂರ್ಣವಾಗಿ ಮುದ್ರಿಸಿಲ್ಲ. ಈಗ ಲಭ್ಯವಿರುವ ಭಾಷಣ ‘ಷಿಕಾಗೊ ಟ್ರಿಬ್ಯೂನ್ ‘ ‘ ಷಿಕಾಗೊ ಹೆರಾಲ್ಡ್’ , ಷಿಕಾಗೊ ಡೈಲಿ ಇಂಟರ್ ಓಷನ್ ಮತ್ತು ಷಿಕಾಗೊ ರೆಕಾರ್ಡ್ ಈ ನಾಲ್ಕು ಪತ್ರಿಕೆಗಳಲ್ಲಿ ಬಂದ ಸುದ್ದಿಯ ಜೋಡಣೆ ಮಾತ್ರ. (8)
ವಿಶ್ವ ಧರ್ಮ ಸಮ್ಮೇಳನದ ದಾಖಲೆಗಳು ಭಾರತದಿಂದ ಭಾಗವಹಿಸಿದ್ದವರಲ್ಲಿ ಯಾರು ಮೊದಲು ಮಾತನಾಡಿದರು, ಯಾರು ಎಷ್ಟು ಹೊತ್ತು ಮಾತನಾಡಿದರು, ಅವರು ತಮ್ಮ ಧರ್ಮವನ್ನು ಸರಿಯಾಗಿ ಪ್ರತಿನಿಧಿಸಿದರೆ ಎನ್ನುವ ಪ್ರಶ್ನೆಗಳು ಏಳಬಹುದಾದರೂ ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿಲ್ಲ. ಏಕೆಂದರೆ ಭಾರತದ ಜೈನ ಪ್ರತಿನಿಧಿಗಿಂತಲೂ ವೈಷ್ಣವ ಪ್ರತಿನಿಧಿ , ವೈಷ್ಣವ ಪ್ರತಿನಿಧಿಗಿಂತಲೂ ವೇದಾಂತದ ಪ್ರತಿನಿಧಿ ಚೆನ್ನಾಗಿ ವಿಷಯ ಮಂಡನೆ ಮಾಡಿದರೆಂದು ಹೋಲಿಸಿ ನೋಡಲಾಗದು. ಹಾಗೆ ನೋಡಲು ಹೋಗುವ ಪ್ರತಿಯೊಬ್ಬರೂ ಮಾನಸಿಕವಾಗಿ ಒಂದಲ್ಲ ಒಂದು ಬಗೆಯಲ್ಲಿ ಪೂರ್ವಗ್ರಹ ಪೀಡಿತರಾಗಿರುತ್ತಾರೆ. ಅದರ ಬದಲು ವಸ್ತುನಿಷ್ಠವಾಗಿ ಅಳೆಯುವ ಬೇರೆಯ ವಿಧಾನಗಳನ್ನು ಹುಡುಕಬೇಕು. ಅವುಗಳೆಂದರೆ ವಿಶ್ವಧರ್ಮ ಸಮ್ಮೇಳನದ ವರದಿ ಮಾಡುತ್ತಿದ್ದ ಷಿಕಾಗೊ ಪತ್ರಿಕೆಗಳು ಯಾರಿಗೆ ಎಷ್ಟು ಪ್ರಾಮುಖ್ಯತೆ ಕೊಟ್ಟವು , ಯಾರ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಸಿಕ್ಕಿತು , ಯಾರು ಎಷ್ಟು ಸಲ ಯಾವ ಪತ್ರಿಕೆಯಲ್ಲಿ ವರದಿಯಾಗಿದ್ದಾರೆ ಎಂದು ನೋಡಬಹುದು.
ಷಿಕಾಗೊ ವಿಶ್ವ ಧರ್ಮ ಸಂಸತ್ತಿನ ವರದಿ ಮಾಡಿದ ಮುಖ್ಯ ಪತ್ರಿಕೆಗಳೆಂದರೆ (೧) ಷಿಕಾಗೊ ಡೈಲಿ ಟ್ರಿಬ್ಯೂನ್ (೨) ಷಿಕಾಗೊ ಹೆರಾಲ್ಡ್ (೩) ಷಿಕಾಗೊ ಡೈಲಿ ಇಂಟರ್ ಓಷನ್ (೪) ದಿ ನ್ಯೂಯಾರ್ಕ್ ಟೈಮ್ಸ್ (೫) ದಿ ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್ (೬) ದಿ ಬೋಸ್ಟನ್ ಈವೆನಂಗ್ ಟ್ರಾನ್ಸ್’ಸ್ಕ್ರಿಪ್ಟ್ (೭) ದಿ ನ್ಯೂಯಾರ್ಕ್ ಕ್ರಿಟಿಕ್ (೮) ದಿ ನ್ಯೂಯಾರ್ಕ್ ಹೆರಾಲ್ಡ್ . ವಿಶ್ವ ಧರ್ಮ ಸಂಸತ್ತಿನ ದೈನಂದಿನ ಕಾರ್ಯಕ್ರಮಗಳು ,ನಡೆದ ಚರ್ಚೆ , ಭಾಗವಹಿಸಿದ ಜನ , ಭಾಷಣಕಾರರು ಮತ್ತು ಭಾಷಣಕಾರರಿಗೆ ಸಭಿಕರಿಂದ ಸಿಕ್ಕ ಪ್ರತಿಕ್ರಿಯೆಗಳನ್ನು ವಸ್ತುನಿಷ್ಠ ದೃಷ್ಟಿಯಿಂದ ಈ ಪತ್ರಿಕೆಗಳ ವರದಿಗಳ ಮೂಲಕ ಪಡೆಯಬಹುದು. (ಈ ವರದಿಗಳು ಸಂಚಿಕೆ ಪ್ರಕಟವಾದ ಹಿಂದಿನ ದಿನ ನಡೆದ ಸಂಗತಿಗಳನ್ನು ತಿಳಿಸುತ್ತವೆ).
(ಸಂಪೂರ್ಣ ವಿವರಗಳು ಪ್ರಕಟಿತ ಪುಸ್ತಕದಲ್ಲಿವೆ)
*************************
ಮಳೆ ನಿಂತ ಮೇಲೆ ಮರದ ಹನಿ ಬಿಡದಂತೆ ವಿಶ್ವ ಧರ್ಮ ಸಂಸತ್ತು ಮುಗಿದ ನಂತರವೂ ಅದನ್ನು ಕುರಿತಾಗಿ ಲೇಖನ , ವಿಮರ್ಶೆಗಳನ್ನು ಕೆಲವು ದಿನ ಮತ್ತು ವಾರ ಪತ್ರಿಕೆಗಳು ಪ್ರಕಟಿಸಿದವು.
ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್ ಪತ್ರಿಕೆ ೩೦/೯/೧೮೯೩ ರಂದು ವಿಶ್ವ ಧರ್ಮ ಸಂಸತ್ತನ್ನು ಕುರಿತಾಗಿ ಫ್ರಾನ್ಸಿಸ್ ಎ. ಡೌಟಿ ಬರೆದ ಸುದೀರ್ಘ ವರದಿ ಪ್ರಕಟಿಸಿತು. ಈ ವರದಿಯನ್ನು ಅಂಶಿಕವಾಗಿ ಭಾರತದ ‘ದಿ ಸ್ಟೇಟ್ಸ್’ಮನ್ -೯/೧೧/೧೮೯೩ ರ ಸಂಚಿಕೆಯಲ್ಲಿ ಪ್ರಕಟಿಸಿತು. ದಿ ನ್ಯೂಯಾರ್ಕ್ ಕ್ರಿಟಿಕ್’ ಪತ್ರಿಕೆಯಲ್ಲಿ ೭/೧೦/೧೮೯೩ ರಂದು ಲೂಸಿ ಮನ್ರೋ ಧರ್ಮ ಸಂಸತ್ತನ್ನು ಕುರಿತಾಗಿ ಬರೆದ ದೀರ್ಘ ಲೇಖನ ಪ್ರಕಟಿಸಿತು. ನಂತರದ ದಿನಗಳಲ್ಲಿ ಈ ಪತ್ರಿಕೆಗಳ ಮೂಲ ವರದಿಗಳಲ್ಲಿ ಇತರ ಭಾರತೀಯರನ್ನು ಕುರಿತಾಗಿ ಇದ್ದ ಭಾಗವನ್ನು ಕತ್ತರಿಸಿ ಸ್ವಾಮಿಗಳ ಬಗ್ಗೆ ಇರುವ ಭಾಗವನ್ನು ಮಾತ್ರ ಪ್ರಕಟಿಸುವ ಕೆಟ್ಟ ಪರಂಪರೆ ಹುಟ್ಟಿತು. ‘ಮುಂದಿನ ದಿನಗಳಲ್ಲಿ ಷಿಕಾಗೊ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳ ಯಶಸ್ಸನ್ನು ಬಿಂಬಿಸುವ ಹಲವಾರು ಉತ್ಪ್ರೇಕ್ಷಿತ ಕಥೆಗಳು ಹೊರಬರತೊಡಗಿದವು. ಅವುಗಳಲ್ಲಿ ಕೆಲವನ್ನು ವಿಶ್ಲೇಷಣೆಯೊಂದಿಗೆ ಮುಂದೆ ದಾಖಲಿಸಲಾಗಿದೆ.
ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್ – ಶನಿವಾರ – ಸೆಪ್ಟೆಂಬರ್ ೩೦ , ೧೮೯೩ – ದಿ ಹಿಂದೂಸ್ ಅಟ್ ದಿ ಫೇರ್ –ಸಂ ಇಂಟೆರೆಸ್ಟಿಂಗ್ ಪರ್ಸನಾಲಿಟೀಸ್ ಅಟ್ ದಿ ಪಾಲಿಮೆಂಟ್ ಆಫ್ ರಿಲಿಜನ್ಸ್- ಪ್ಲೇನ್ ಟಾಕ್ ಆಫ್ ದಿ ಲೀಡಿಂಗ್ ಹೀದೆನ್ಸ್ – ವಿಶೇಷ ವರದಿಗಾರ.
ಆರ್ಟ್ ಪ್ಯಾಲೆಸ್’ನ ಪ್ರವೇಶ ದ್ವಾರದ ಎಡಗಡೆ ‘ನಂ.-೧ ದೂರವಿರಿ’ ಎಂದು ಬರೆದ ಫಲಕ ಹೊತ್ತ ಕೋಣೆಯಿದೆ. ವಿಶ್ವ ಧರ್ಮ ಸಂಸತ್ತಿಗೆ ಬಂದ ಪ್ರತಿನಿಧಿಗಳೆಲ್ಲರು ಇಲ್ಲಿಗೆ ಪರಸ್ಪರ ಮಾತನಾಡಲೋ ಅಥವಾ ಈ ಅಪಾರ್ಟ್’ಮೆಂಟ್’ನ ಒಂದು ಮೂಲೆಯಲ್ಲಿರುವ ಅಧ್ಯಕ್ಷ ಬೋನಿಯ ಖಾಸಗಿ ಕಚೇರಿಗೆ ಆತನನ್ನು ಕಾಣಲೋ ಒಂದಲ್ಲ ಒಂದು ಬಾರಿ ಬರುತ್ತಾರೆ. ಮಡಿಸಿ ಮುಚ್ಚಬಲ್ಲ ಈ ಬಾಗಿಲುಗಳಲ್ಲಿ ಕಾವಲಿರಿಸಿ ಸಾರ್ವಜನಿಕರನ್ನು ಇಣುಕಿ ನೋಡದಷ್ಟು ದೂರವಿರಿಸಲಾಗಿದೆ. ಪ್ರತಿನಿಧಿಗಳು ಮಾತ್ರ ಈ ಪವಿತ್ರ ಪ್ರದೇಶವನ್ನು ಹಾದು ಹೋಗಬಲ್ಲರಾದರೂ ‘ಬಾಗಿಲು ತೆರೆಯೇ ಸೇಸಮೆ’ ಮಂತ್ರದಿಂದ ಒಳಹೊಕ್ಕು ಕೊಲಂಬಸ್ ಸಭಾಂಗಣದ ವೇದಿಕೆಯ ಮೇಲಿದ್ದವರನ್ನು ಅಲ್ಪ ಕಾಲ ಸನಿಹದಿಂದ ನೋಡಿ ಅರಿಯುವುದು ಸಾದ್ಯ.
ಈ ಕೋಣೆಯಲ್ಲಿ ಎದ್ದು ಕಾಣುವ ವ್ಯಕ್ತಿಯೆಂದರೆ ಬ್ರಾಹ್ಮಣ ಸಂನ್ಯಾಸಿ ಸ್ವಾಮಿ ವಿವೇಕಾನಂದ. ಆತ ಎತ್ತರದ ನಿಲುವಿನ ಧೃಢಕಾಯ , ನುಣ್ಣಗೆ ಕ್ಷೌರ ಮಾಡಿಕೊಂಡಿರುವ ಆತನ ಚಚ್ಚೌಕ ಮುಖ, ಬಿಳಿಯ ಹಲ್ಲುಗಳನ್ನು ಹೊಂದಿರುವ ಆತನ ಚೆನ್ನಾಗಿ ಕೆತ್ತಿದಂತಿರುವ ತುಟಿಗಳು ನಗುತ್ತ ಮಾತನಾಡುತ್ತಿರುವಾಗ ತೆರೆದುಕೊಳ್ಳುತ್ತವೆ. ಸಮತೋಲನದಲ್ಲಿರುವ ಆತನ ತಲೆಯ ಮೇಲೆ ನಿಂಬೆ ಅಥವಾ ಕಿತ್ತಳೆ ಬಣ್ಣದ ಮುಂಡಾಸು ಸದಾ ಇರುತ್ತದೆ. ಆತ ಉಟ್ಟಿರುವ ಬಟ್ಟೆ ಕಡು ಕಿತ್ತಳೆ ಮತ್ತು ನಸುಗೆಂಪಿನದಾಗಿದ್ದು ಸೊಂಟಕ್ಕೆ ಪಟ್ಟಿಯಿಂದ ಬಿಗಿಯಲ್ಪಟ್ಟಿರುತ್ತದೆ. ಆತ ಅತ್ಯುತ್ತಮ ಇಂಗ್ಲಿಷ್ ಮಾತನಾಡುತ್ತಾನಲ್ಲದೆ ಪ್ರಾಮಾಣಿಕವಾಗಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾನೆ. ಆತ ಹೆಂಗಸರೊಂದಿಗೆ ಮಾತನಾಡುವಾಗ ಸರಳತೆಯೊಂದಿಗೆ ವೈಯಕ್ತಿಕ ಪೂಜ್ಯಭಾವ ತುಂಬಿದ್ದು ಆತ ಪಾಲಿಸುವ ವ್ರತಕ್ಕೆ ಅನುಗುಣವಾಗಿದೆ. ಆತನ ಪಂಥದ ಬಗ್ಗೆ ಕೇಳಿದಾಗ ‘ನಾನು ಏನು ಬೇಕಾದರೂ ಮಾಡಲು ಸ್ವತ್ರಂತ್ರ. ಕೆಲವೊಮ್ಮೆ ನಾನು ಹಿಮಾಲಯ ಪರ್ವತದಲ್ಲಿ ಇನ್ನು ಕೆಲವು ಸಲ ನಗರಗಳ ಬೀದಿಗಳಲ್ಲಿ ವಾಸಿಸುತ್ತೇನೆ. ನನಗೆ ಮುಂದಿನ ಊಟ ಎಲ್ಲಿ ಸಿಗುತ್ತದೆಯೆಂದು ಎಂದಿಗೂ ಗೊತ್ತಿರುವುದಿಲ್ಲ. ನಾನು ಎಂದಿಗೂ ಹಣವನ್ನು ಇರಿಸಿಕೊಳ್ಳುವುದಿಲ್ಲ. ಜನರ ಚಂದಾದಿಂದ ಇಲ್ಲಿಗೆ ಬಂದಿದ್ದೇನೆ. ‘ ಎಂದನು. ತನ್ನ ಬಳಿ ಆಕಸ್ಮಾತ್ತಾಗಿ ನಿಂತಿದ್ದ ದೇಶೀಯರನ್ನು ನೋಡಿ ‘ಇವರೆಲ್ಲ ನನ್ನನ್ನು ನೋಡಿಕೊಳ್ಳುತ್ತಾರೆ ‘ ಎಂದನು. ಎಂದರೆ ಷಿಕಾಗೊದಲ್ಲಿ ಆತನ ಊಟದ ವೆಚ್ಚವನ್ನು ಇತರರು ಭರಿಸುತ್ತಾರೆ. ಉಟ್ಟಿರುವ ಬಟ್ಟೆ ಸಂನ್ಯಾಸಿಗಳದ್ದೇ ಎಂದು ಕೇಳಿದಾಗ ‘ ಇದು ಒಳ್ಳೆಯ ಪೊಷಾಕು ; ನಮ್ಮ ದೇಶದಲ್ಲಿರುವಾಗ ನಾನು ಚಿಂದಿಯುಟ್ಟು , ಬರಿಗಾಲಲ್ಲಿರುತ್ತೇನೆ. ನಾನು ಜಾತಿಯನ್ನು ನಂಬುತ್ತೇನೆಯೇ ? ಜಾತಿ ಒಂದು ಸಾಮಾಜಿಕ ಪದ್ದತಿ; ಧರ್ಮಕ್ಕೂ ಅದಕ್ಕೂ ಸಂಬಂಧವಿಲ್ಲ ;ಎಲ್ಲ ಜಾತಿಗಳು ನನ್ನೊಂದಿಗೆ ಸಂಪರ್ಕದಲ್ಲಿವೆ ಎಂದನು.
ಆತನ ನಡವಳಿಕೆ ಮತ್ತು ಲಕ್ಷಣಗಳನ್ನು ನೋಡಿದರೆ ಆತ ಉಚ್ಛ ಜಾತಿಗೆ ಸೇರಿದ್ದು ಆತನಾಗಿಯೇ ಆರಿಸಿಕೊಂಡಿರುವ ಬಡತನ ಮತ್ತು ನಿರ್ಗತಿಕತೆ ಆತನ ಸಭ್ಯತೆಯನ್ನೇನೂ ಕುಂದಿಸಿಲ್ಲ; ಆತನ ಮನೆತನದ ಹೆಸರು ಗೊತ್ತಿಲ್ಲ ; ಧಾರ್ಮಿಕ ವ್ರತವನ್ನು ಆಯ್ದುಕೊಂಡು ಸ್ವಾಮಿ ವಿವೇಕಾನಂದ ಎನ್ನುವ ಹೆಸರನ್ನು ಹೊಂದಿದ್ದಾನಷ್ಟೇ. ಸ್ವಾಮಿ ಎನ್ನುವುದು ಆತನಿಗೆ ಗೌರವಪೂರ್ವಕವಾಗಿ ಕರೆಯುವ ಮಾತು ಮಾತ್ರ. ಆತನ ವಯಸ್ಸು ಮೂವತ್ತರ ನಂತರ ಹೆಚ್ಚಿಗೆ ಸಾಗಿಲ್ಲವಾದರೂ ಈ ಜೀವನವನ್ನು ಫಲಪ್ರದಗೊಳಿಸಿಕೊಂಡವನಂತೆ , ಉಳಿದ ಜೀವನವನ್ನು ಧ್ಯಾನಕ್ಕೆ ಇರಿಸಿಕೊಂಡವನಂತೆ ಕಾಣುತ್ತಾನೆ. ಆತನ ಈ ಜೀವನ ತಿರುವಿಗೆ ಕಾರಣ ಏನಿರಬಹುದೆನ್ನುವುದು ಸೋಜಿಗದ ವಿಚಾರವಾಗಿದೆ. ಎಲ್ಲವನ್ನೂ ತ್ಯಜಿಸಿ ಸಂನ್ಯಾಸಿ ಆದ್ದದ್ದೇಕೆ ಎನ್ನುವ ಪ್ರಶ್ನೆಗೆ ‘ನಾನೇಕೆ ಮದುವೆಯಾಗಬೇಕು ? ಎಂದು ಅವಸರದ ಪ್ರತಿಕ್ರಿಯೆ ನೀಡುತ್ತಾನೆ. ‘ನಾನು ಎಲ್ಲ ಹೆಂಗಸರಲ್ಲಿ ಪವಿತ್ರ ತಾಯಿಯನ್ನು ಮಾತ್ರ ಕಾಣುತ್ತೇನೆ. ನಾನೇಕೆ ಇಂತಹ ತ್ಯಾಗಗಳನ್ನು ಮಾಡುತ್ತೇನೆ ? ಎಲ್ಲ ಲೌಕಿಕ ಬಂಧನಗಳನ್ನು ಕಳಚಿಕೊಂಡು ಮರುಹುಟ್ಟು ಪಡೆಯದಂತಿರಲು. ನಾನು ಸತ್ತಾಗ ದೇವರೊಂದಿಗೆ , ದಿವ್ಯದೊಂದಿಗೆ ಒಂದಾಗುತ್ತೇನೆ. ಬುದ್ಧನಾಗುತ್ತೇನೆ ಎನ್ನುತ್ತಾನೆ. ಹಾಗೆಂದ ಮಾತ್ರಕ್ಕೆ ಸ್ವಾಮಿ ವಿವೇಕಾನಂದ ಬೌದ್ಧನಲ್ಲ. ಯಾವುದೇ ಮತ , ಧರ್ಮ ಆತನದಲ್ಲ. ಆತ ಉನ್ನತ ಬ್ರಾಹ್ಮಣ್ಯದ, ಸ್ವಪ್ನಶೀಲ ಚೇತನದ , ಸ್ವಯಂ ನಿರಾಕರಣೆಯ ಸಂನ್ಯಾಸಿ ಅಥವಾ ಪವಿತ್ರ ವ್ಯಕ್ತಿ. ತನ್ನ ಸಾವಿನ ನಂತರ ತನ್ನ ಅನುಯಾಯಿಗಳು ಸಂನ್ಯಾಸಿಗಳಾಗಬೇಕೆಂದು ಬಯಸಿದ್ದ ತನ್ನ ಗುರು ರಾಮಕೃಷ್ಣ ಪರಮಹಂಸ ಎನ್ನುವ ಹಿಂದೂ ಭಕ್ತನನ್ನು ಕುರಿತಾದ ಕೆಲ ಕರಪತ್ರಗಳನ್ನು ಆತ ಹಂಚುತ್ತಾನೆ. ಪಿ.ಸಿ ಮಜುಂದಾರನು ಕೂಡ ಈತನ ಗುರುವನ್ನು ತನ್ನ ಗುರುವೆಂದು ಭಾವಿಸುತ್ತಾನಾದರೂ ಆತ ಜೀಸಸ್ ಉಪದೇಶಿಸಿದಂತೆ ಜಗತ್ತಿನ ಪವಿತ್ರತೆಗೆ ಶ್ರಮಿಸುತ್ತಾನೆ.
ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದ ಮಾಡಿದ ಭಾಷಣದಲ್ಲಿ ಪ್ರತಿಪಾದಿಸಿದ್ದು ನಮ್ಮ ತಲೆಯ ಮೇಲಿನ ಬಾನಿನಷ್ಟು ವಿಶಾಲವಾಗಿದ್ದು , ಎಲ್ಲ ಧರ್ಮಗಳ ಉತ್ತಮ ತತ್ತ್ವಗಳನ್ನು ಒಳಗೊಂಡಿದ್ದು ಮಾನವರೆಲ್ಲರ ಕಲ್ಯಾಣ , ಶಿಕ್ಷೆಯ ಭಯ ಅಥವಾ ಬಯಕೆ ಆಶೆಗಳನ್ನು ಮೀರಿದ ದೇವರ ಪ್ರೀತಿಗಾಗಿಯೇ ಒಳ್ಳೆಯ ಕೆಲಸ ಮಾಡಬೇಕೆನ್ನುವ ವಿಶ್ವದ ಅಂತಿಮ ಧರ್ಮವಾಗಿದೆ. ಭಾವನೆಗಳ ವಿಜೃಂಭಣೆ ಮತ್ತು ನೋಟ ಎರಡರಿಂದಲೂ ಆತ ಧರ್ಮ ಸಂಸತ್ತಿನ ಕಣ್ಮಣಿಯಾಗಿದ್ದನು. ಆತ ವೇದಿಕೆ ಹತ್ತುತ್ತಿರುಂತೆಯೇ ಸಾವಿರಾರು ಜನ ಚಪ್ಪಾಳೆಯಿಂದ ಅನುಮೋದಿಸುತ್ತಾರೆ. ಅದನ್ನು ಆತ ಯಾವ ಕಪಟವೂ ಇಲ್ಲದ ಮುಗ್ದ ಬಾಲಕನಂತೆ ಸ್ವೀಕರಿಸುತ್ತಾನೆ. ದಾರಿದ್ಯ್ರ ಮತ್ತು ಸ್ವಯಂ ನಿಯಂತ್ರಣದ ಜೀವನದಿಂದ ಸಮೃದ್ಧಿ ಮತ್ತು ಹೆಗ್ಗಳಿಕೆಯ ಕಡೆಗಿನ ಈ ಬದಲಾವಣೆ ಆತನಿಗೆ ವಿಚಿತ್ರ ಅನುಭಗಳನ್ನು ತಂದಿರಬೇಕು. ಥಿಯೊಸೊಫಿಸ್ಟರು ನಂಬುವಂತಹವರು (ಯೋಗಿಗಳು) ಹಿಮಾಲಯದಲ್ಲಿ ಇರುವರೇ ಎಂದು ಕೇಳಿದಾಗ ‘ನಾನು ಅಂತಹವರನ್ನು ಎಂದೂ ಭೇಟಿಯಾಗಿಲ್ಲ. ಅಂತಹವರು ಇರಬಹುದು ಆದರೆ ನಾನು ಈವರೆಗೆ ಕಂಡಿಲ್ಲ ಎಂದು ಸರಳವಾಗಿ ಉತ್ತರಿಸಿದನು.
ಈ ಕೋಣೆಯ ಮಧ್ಯದಲ್ಲಿರುವ ಮೇಜಿನ ಮೇಲೆ ಶೋಭಾಯಮಾನವಾಗಿ ಒರಗಿ ಕುಳಿತುಕೊಳ್ಳುವ ಹಿಂದೂ ಧರ್ಮದ ಅಷ್ಟೊಂದು ಪ್ರಾಚೀನವಲ್ಲದ ವೈಷ್ಣವ ಪಂಥವನ್ನು ಪ್ರತಿನಿಧಿಸುತ್ತಿರುವ ಮತ್ತೊಬ್ಬ ಬ್ರಾಹ್ಮಣ ಆಗಾಗ್ಗೆ ಕಾಣಿಸುತ್ತಾನೆ. ಆತನ ಉಜ್ವಲ ಬಾಲಮುಖ ಬೆಳಗುತ್ತಿರುವಂತೆ ಭಾರತೀಯ ಮತ್ತು ನಮ್ಮ ಸಂಸ್ಕೃತಿಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ. ಈತನ ಬಟ್ಟೆ ಯಾವಾಗಲೂ ಬಿಳಿಯದಾಗಿದ್ದು ದೊಡ್ದ ರುಮಾಲನ್ನು ಯಾವಾಗಲೂ ತೊಟ್ಟಿರುತ್ತಾನೆ. ತನ್ನನ್ನು ಮದ್ರಾಸಿನ ಸಂಚಾರಿ ಹಿಂದೂ ಎಂದು ಕರೆದುಕೊಳ್ಳುವ ಈತನ ಹೆಸರು ನರಸಿಂಹಾಚಾರಿ. ಒಂದು ಸಂಜೆ ಲಾಹೋರಿನ ಬ್ಯಾರಿಸ್ಟರ್ ಲಕ್ಷೀನಾರಾಯಣ ಮತ್ತು ವಾಷಿಂಗ್ಟನ್ ಡಿ.ಸಿಯ ಮೆರ್ವಿನ್ ಸ್ನೆಲ್ ಜೊತೆಯಿರುವಾಗ ನರಸಿಂಹನೊಂದಿಗೆ ರಂಜನೀಯ ಸಂವಾದ ನಡೆಸಿದೆನು. ‘ನಾನು ಎಲ್ಲದರಿಂದ ದಣಿದಿದ್ದೇನೆ. ಯಾವುದೇ ಹೊಸ ಸಂವೇದನೆ ನನಗೆ ಸಾಧ್ಯವಿಲ್ಲ. ಈ ಜಗತ್ತಿನ ಜೀವನದ ಬಗ್ಗೆಯೇ ನನಗೆ ಜಿಗುಪ್ಸೆಯಾಗಿದೆ. ಈವರೆಗೆ ನಾನು ಮಾಡಿರುವುದಕ್ಕೆ ವಿರುದ್ಧವಾದುದನ್ನು ನಾನು ಮಾಡಬೇಕೆಂದಿದ್ದೇನೆ. ಅದಕ್ಕಾಗಿ ಕಾಡಿಗೆ ಹೋಗುತ್ತೇನೆ. ಇಂದ್ರಿಯಗಳನ್ನು ಹತ್ತಿಕ್ಕಿ ನನ್ನನ್ನು ನಾನು ಗೆಲ್ಲಬೇಕು. ಅದು ಕಷ್ಟವೆಂದು ನನಗೆ ಗೊತ್ತು. ಅದೇ ಈಗಿರುವ ಅಡಚಣೆ. ನಾನು ಒಂದು ವಾರದೊಪ್ಪತ್ತಿನಲ್ಲಿ ಎಲ್ಲವನ್ನೂ ಬಿಟ್ಟುಕೊಡಬೇಕೆಂದು ನೀನು ಹೇಳುವೆ. ಅದರೆ ನಾನು ಆಮೇಲೆ ಪ್ರಯತ್ನ ಮಾಡುತ್ತೇನೆ. ಎಲ್ಲವನೂ ಬಿಟ್ಟುಕೊಡಲು ನಾನು ಮಹಾತ್ಮನಾಗಬೇಕೆಂದಿದ್ದೇನೆ’ ಎಂದು ದಿಟ್ಟತನದಿಂದ ಹೇಳಿದನು. ‘ಇದರಿಂದ ಯಾರಿಗೆ ಒಳಿತಾಗುತ್ತದೆ ?’ ಎಂದಾಗ ‘ಇದು ಬಹು ಮುಖ್ಯವಾದ ಪ್ರಶ್ನೆ. ಪ್ರತಿಯೊಬ್ಬ ಮನುಷ್ಯನು ತಾನೇ ಮೇಲಕ್ಕೇರಬೇಕು. ಬೇರೆ ಯಾರೂ ಅವನನ್ನು ಮೇಲೇರಿಸಲಾರರು. ಒಳ್ಳೆಯದು ಕೆಟ್ಟದ್ದು ಮಾತ್ರವಲ್ಲ ಎಲ್ಲ ಲೌಕಿಕ ವಿಚಾರಗಳ ಬಗ್ಗೆ ನಿರ್ಭಾವುಕನಾಗಬೇಕೆಂದಿದ್ದೇನೆ ಎಂದನು. ಸಕ್ರಿಯವಾದ ಒಳ್ಳೆಯ ಕೆಲಸ ಮತ್ತು ಇತರರ ಒಳಿತಿಗಾಗಿ ಕೆಲಸ ಮಾಡುವುದು ಮಾನಸಿಕ ಕ್ಷೋಭೆಗೆ ಪರಿಹಾರವಾಗಬಹುದು ಎಂದು ಸೂಚಿಸಿದಾಗ ಎಲ್ಲವುಗಳ ಬಗ್ಗೆ ಅನಾಸಕ್ತಿಯೇ ನಿಜವಾದ ಹಿಂದೂ ಆದರ್ಶ ಎನ್ನುವ ಉತ್ತರ ನೀಡಿದನು.
‘ಇಲ್ಲಿಂದ ನಾನು ಸೀದಾ ಕಾಡಿನೊಳಕ್ಕೆ ಹೋಗಬೇಕೆಂದಿರುವೆ. ಆದರೆ ಷಿಕಾಗೊದಲ್ಲಿ ಬಹಳ ಚಳಿ. ಇನ್ನೂ ದಕ್ಷಿಣಕ್ಕೆ ಮಧ್ಯ ಅಮೆರಿಕದಲ್ಲಿ ಪ್ರಯತ್ನಿಸಬಹುದು’ ಎಂದನು. ಏಕಾಂತದಲ್ಲಿರುವಾಗ ಅಲ್ಲಿ ಕಾಡು ಪ್ರಾಣಿಗಳು ಎದುರಾಗಬಹುದು ಎಂದರೆ ‘ನನ್ನ ಬಂದೂಕು ಒಯ್ಯುತ್ತೇನೆ’ ಎಂದು ಉತ್ತರಿಸಿದನು. ‘ಎಂದರೆ ನೀನು ಪ್ರಾಣಿಗಳನ್ನು ಕೊಲ್ಲುತ್ತೀಯಾ’ ಎಂದದ್ದಕ್ಕೆ ‘ಹೌದು ಅವು ಹತ್ತಿರಕ್ಕೆ ಬಂದಾಗ ಆತ್ಮರಕ್ಷಣೆಗಾಗಿ ಕೊಲ್ಲಲು ಹಿಂಜರಿಯಬಾರದು. ಮಾಂಸ ತಿನ್ನಲಲ್ಲ’ ಎಂದು ಉತ್ತರಿಸಿ ‘ಇಲ್ಲಿಗೆ ಬಂದ ಮೇಲೆ ನಾನು ಕೆಲವು ಸಲ ಮಾಂಸ ತಿಂದಿದ್ದೇನೆ. ಮೊದಲ ಸಲ ನನಗೆ ಉಬ್ಬಳಿಕೆ ಬಂದು ನನ್ನ ಒಳ್ಳೆಯ ಬಟ್ಟೆಗಳು ಹಾಳಾದವು. ಇಲ್ಲಿಗೆ ಬಂದ ಮೆಲೆ ನನ್ನ ಜಾತಿ ಹೋಗಿದೆ. ಭಾರತಕ್ಕೆ ಹಿಂದಿರುಗಿದ ಮೇಲೆ ನಾನು ಅದನ್ನು ಸುಲಭವಾಗಿ ಮರಳಿ ಪಡೆಯುತ್ತೇನೆ. ಅದಿಲ್ಲದಿದ್ದರೆ ಏನು ಮಜಾ ಇದೆ. ನಾನು ಅಮೆರಿಕಕ್ಕೆ ಬಂದಾಗ ನನ್ನ ಹಣೆಯ ಮೇಲೆ ಜಾತಿಯ ನಾಮ ಮತ್ತು ಬ್ರಾಹ್ಮಣರ ದಾರ ಇದ್ದಿತು. ಈಗ ಅದು ಹರಿದು ಹೋಗಿದೆ. ಅಂತಹುದು ಇನ್ನೊಂದು ಎಲ್ಲಿ ಸಿಗುವುದೋ ತಿಳಿಯದು. ನಮಗಿಂತಲೂ ಹೊಲಸಾದ ಜಾತಿ ಪದ್ದತಿ ನಿಮ್ಮಲ್ಲಿದೆ. ಅದು ಹಣದ ಜಾತಿ. ಒಂದಲ್ಲ ಒಂದು ರೀತಿಯಲ್ಲಿ ಜಾತಿಯಿರದ ಜಾಗಕ್ಕೆ ನಾನು ಈವರೆಗೆ ಹೋಗಿಲ್ಲ ಎಂದನು.
ನರಸಿಂಹನ ನಡವಳಿಕೆ ಸರಳ ಮತ್ತು ಆಹ್ಲಾದಕರವಾಗಿದ್ದವಾದರೂ ವಿಧವೆಯರನ್ನು ಕುರಿತಾದ ಆತನ ನಿಲುವು ಪಂಡಿತ ರಮಾಬಾಯಿಯ ದೃಷ್ಟಿಗೆ ವಿರುದ್ಧವಾಗಿದ್ದಿತು. ‘ಅವರೇ ಬಯಸಿ ಸುಟ್ಟುಕೊಂಡರೆ ತಪ್ಪೆಲ್ಲಿದೆ ? ನನ್ನನ್ನು ಕೇಳಿದರೆ ಅದನ್ನು ಇಂಗ್ಲಿಷರು ನಿಲ್ಲಿಸುವುದು ಬೇಕಿರಲಿಲ್ಲ. ಏಕೆಂದರೆ (ಹಾಗೆ ಸುಟ್ಟುಕೊಳ್ಳುವಂತಿದ್ದರೆ ) ಭಾರತದಲ್ಲಿ ಆಷ್ಟೊಂದು ವಿಧವೆಯರು ಇರುತ್ತಿರಲಿಲ್ಲ. ಒಬ್ಬ ಹೆಂಗಸು ಗಂಡನೊಂದಿಗೆ ಚಿತೆ ಏರುವುದರಿಂದ ತನಗೆ ಮತ್ತು ಆತನಿಗೆ ಶಾಶ್ವತ ಆನಂದ ದಕ್ಕುತ್ತದೆ ಎಂದು ಭಾವಿಸುವುದಾದರೆ ಅದನ್ನು ನಿಲ್ಲಿಸುವ ಅಗತ್ಯವಿಲ್ಲ ಎಂದು ನನಗೆನಿಸುತ್ತದೆ’ ಎಂದನು. ಲಾಹೋರಿನ ಲಕ್ಷ್ಮೀನಾರಾಯಣ ಮತ್ತು ವಾಷಿಂಗ್ಟನ್‘ನ ಮೆರ್ವಿನ್ ಸ್ನೆಲ್ ಇಬ್ಬರೂ ತಮ್ಮನ್ನು ಧರ್ಮಗಳ ತೌಲನಿಕ ಅಧ್ಯಯನದ ತಟಸ್ಥ ವಿದ್ಯಾರ್ಥಿಗಳೆಂದು ಭಾವಿಸುತ್ತಾರೆ. ಇವರಿಬ್ಬರೂ ಒಬ್ಬ ವ್ಯಕ್ತಿ ತನಗೆ ಗೊತ್ತಿದ್ದು ತಾನಾಗಿಯೆ ಹಾನಿಮಾಡಿಕೊಳ್ಳುವುದನ್ನು ತಡೆಯುವುದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವ ಸೋಜಿಗದ ವಾದ ಮಂಡಿಸುತ್ತಾರೆ. ‘ವಿಧವೆಯನ್ನು ಚಿತೆಗೇರುವಂತೆ ಯಾರೂ ಒತ್ತಾಯಿಸಬಾರದು ಮತ್ತು ಆಕೆಗೆ ಅಂತಹ ಒತ್ತಾಯ ಎಂದಿಗೂ ಇರಲಿಲ್ಲ. ಅದು ಸಂಪೂರ್ಣ ಸ್ವಯಂ ಪ್ರೇರಿತ ನಿರ್ಧಾರವಾಗಿದ್ದಿತು. ಚಿತೆಯೇರುವ ನಿರ್ಧಾರ ತಳೆದು ಬೆಂಕಿಯ ಮೊದಲ ಉರಿ ತಾಗಿದ ತಕ್ಷಣ ಅದರಿಂದ ಹಿಂಜರಿಯುತ್ತಿದ್ದ ಹೇಡಿಗಳನ್ನು ಹೊರತಾಗಿ ಸಹಗಮನಕ್ಕೆ ಒಪ್ಪದ ಹೆಂಗಸರನ್ನು ಎಂದಿಗೂ ದಂಡಿಸಲಾಗುತ್ತಿರಲಿಲ್ಲ. ಅದು ಅಷ್ಟೊಂದು ಯಾತನಾಮಯವಾಗಿರುತ್ತಿದ್ದಿಲ್ಲ. ಅಲ್ಪ ಹೊತ್ತಿನಲ್ಲಿ ಉಸಿರುಕಟ್ಟುತ್ತಿದ್ದಿತು’ ಎಂದು ನರಸಿಂಹ ಅದಕ್ಕೆ ದನಿಗೂಡಿಸುತ್ತಾನೆ. ಆತ ಭುಜಗಳನ್ನು ಕುಣಿಸುತ್ತ ‘ಚಿತೆಗೇರಿದ ಯಾರನ್ನು ನಾನು ಯಾವಾಗಾಗಲಿ , ಎಲ್ಲಿಯಾಗಲಿ ಹೊರಗೆಳೆಯುವುದಿಲ್ಲ’ ಎನ್ನುತ್ತಾನೆ.
‘ನಿಮ್ಮ ಹೆಂಡತಿಯೊಂದಿಗೆ ನಿಮ್ಮನ್ನು ಚಿತೆಗೇರಿಸಿದರೆ ಹೇಗೆ’ ಎಂದು ಹಿಂದೆಯೇ ಬಂದ ಸಹಜ ಪ್ರಶ್ನೆಗೆ ಆತ ‘ಈ ನಿಯಮ ಇಬ್ಬರಿಗೂ ಸಲ್ಲುತ್ತದೆ. ಗಂಡು , ಹೆಣ್ಣು ಇಬ್ಬರ ಹಕ್ಕುಗಳು ಒಂದೇ. ಆದರೆ ಗಂಡಸರು ಚಿತೆಗೇರಲು ಬಯಸರು ಆದರೆ ಹೆಂಗಸರು ಬಯಸುತ್ತಾರೆ’ ಎಂದನು. ಭಾರತದಲ್ಲಿ ವಿಧವೆಯರಿಗೆ ಒಪ್ಪೊತ್ತಿನ ಊಟ ಮಾತ್ರ ಕೊಡಲಾಗುತ್ತದೆ ಇದು ನಿಜವೇ ಎಂದಾಗ ‘ ನನಗೆ ದಿನಕ್ಕೆ ಮೂರು ಬಾರಿ ಉಣ್ಣುವ ನೂರಾರು ವಿಧವೆಯರು ಗೊತ್ತು. ಅವರಿಗೆ ಬೇಕಿದ್ದರೆ ಒಂದು ಸಲವಲ್ಲ , ಎರಡು ,ಮೂರು ,ಐದು ಸಲವು ಉಣಬಹುದು ; ವಿದೇಶಿಯರು ಜಾರಿಯಲ್ಲಿರುವ ಪದ್ದತಿ, ಸಂಪ್ರದಾಯಗಳನ್ನು ಅರಿಯದೆ ಎಂದೋ ಸತ್ತು ಹೋಗಿರುವ ನಿಯಮಗಳನ್ನು ವರದಿ ಮಾಡಬಹುದು’ ಎಂದನು. ಇದನ್ನು ಖಚಿತಪಡಿಸಿಕೊಳ್ಳಲು ಲಾಹೊರಿನ ಸಜ್ಜನರನ್ನು ಕೇಳಿದಾಗ ಅವರು ಅದಕ್ಕೆ ಉತ್ತರ ಭಾರತದಲ್ಲಿ ವಿಧವೆಯರು ಒಪ್ಪೊತ್ತಿನ ಊಟ ಮಾಡುವ ನಿಯಮ ಕಠಿಣವಾಗಿ ಜಾರಿಯಲ್ಲಿದೆ ಎಂದನು. ‘ನಾವು ಬಾರತದ ಹೆಂಗಸರ ಸ್ಥಿತಿಗತಿಗಳ ಬಗ್ಗೆ ಬಹಳ ಕೇಳುತ್ತೇವೆ. ಅದೆಲ್ಲ ಅಸಂಬದ್ಧ . ಜಗತ್ತಿನ ಬೇರೆ ಕಡೆ ಇರುವಷ್ಟೇ ‘ಅಮ್ಮಾವ್ರ ಗಂಡ’ರನ್ನು ನಾನು ಭಾರತದಲ್ಲಿ ಕಂಡಿದ್ದೇನೆ ಎಂದು ನರಸಿಂಹ ಹೇಳಿದನು. ನಾಗರಿಕತೆಯ ವಿಶ್ವಸ್ತ ಸಾಮಾನ್ಯ ಲಕ್ಷಣವಾಗಿರುವ ‘ಅಮ್ಮಾವ್ರ ಗಂಡ’ರ ಬಗ್ಗೆ ಕೇಳಿ ನಾವೆಲ್ಲ ನಕ್ಕೆವು. ಹೀಗೆ ಮಾತಿಗೆ ಮಾತು ಸೇರುತ್ತ ಹೋದಾಗ ಹೆಣ್ಣಿನೊಂದಿಗೆ ಗಂಭೀರವಾದ ಸಂಬಂಧ ಈಗಿನ ಮನಸ್ಥಿತಿಗೆ ಪರಿಹಾರ ಒದಗಿಸಿ ಕಾಡಿಗೆ ಹೋಗುವ ಚಿಂತನೆ ತಹಬದಿಗೆ ಬರಬಹುದು ಎಂದು ಯಾರೋ ಸೂಚಿಸಿದರು. ‘ಓಹ್ ಅದು ಎಲ್ಲವನ್ನು ಹಾಳುಗೆಡವುತ್ತದೆ’ ಎಂದು ಮೈಕುಣಿಸುತ್ತ ಹೇಳಿದನು.
ಇವೆಲ್ಲರಿಗಿಂತ ಬಹು ಭಿನ್ನವಾದ ವ್ಯಕ್ತಿತ್ವ ಭಾರತದ ಅತ್ಯಂತ ಪ್ರಾಚೀನ ಧರ್ಮವನ್ನು ಪ್ರತಿನಿಧಿಸಲು ಬಂದಿರುವ ಜೈನ ಸಂಘದ ಕಾರ್ಯದರ್ಶಿಯದು. ವೀರಚಂದ ಗಾಂಧಿ ಉಡುಗೆ ಪಾಶ್ಚಾತ್ಯವಾದರೂ ಟೋಪಿಯ ಬದಲು ಮುಂಡಾಸು ಧರಿಸಿ ತನ್ನ ರಾಷ್ಟ್ರೀಯತೆಯನ್ನು ತೋರಿಸುತ್ತಾನೆ. ಆತನಿಗೆ ಸುಸಂಸ್ಕೃತ , ಬುದ್ಧಿವಂತ ಲಕ್ಷಣಗಳ ಮುಖಚರ್ಯೆ, ಹೊಳೆಯುವ ಕಣ್ಣುಗಳಿದ್ದು ನಡವಳಿಕೆಯಲ್ಲಿ ಜಾಗತಿಕ ವೈಶಾಲ್ಯತೆ ಇರುವಂತಿದೆ. ಜೈನರಲ್ಲಿ ಹಿಂದೂಗಳಿಗಿರುವಷ್ಟು ಕಡಿಮೆ ಸಾಮಾಜಿಕ ನಿಬಂಧನೆಗಳಿರುವುದು ಇದಕ್ಕೆ ಕಾರಣವಿರಬಹುದು. ವೀರಚಂದ ಗಾಂಧಿ ‘ಜೈನ ಮಹಿಳೆಯರು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರು. ನಾನು ಭಾರತದಲ್ಲಿರುವಾಗ ನನ್ನ ಹೆಂಡತಿ ನನ್ನ ಜೊತೆ ಎಲ್ಲ ಕಡೆ ಬರುತ್ತಾಳೆ ‘ ಎನ್ನುತ್ತ ‘ನಿಮ್ಮಲ್ಲಿರುವಂತೆ ಮಹಿಳೆಯರ ಮತದಾನದ ಹಕ್ಕಿಗೆ ಬಂದಾಗ, ಸ್ವಾತಂತ್ರವನ್ನು ಬಹಳ ಹಿಗ್ಗಿಸಿದಂತೆ ಭಾಸವಾಗುತ್ತದೆ’ ಎನ್ನುವುದನ್ನು ಸೇರಿಸುತ್ತಾನೆ. ಈ ವ್ಯಕ್ತಿಯೂ ಸಂಪೂರ್ಣ ಶಾಖಾಹಾರಿ. ‘ನನ್ನ ಜೀವನದಲ್ಲಿ ಎಂದೂ ಮಾಂಸ ಮುಟ್ಟಿಲ್ಲ. ಮಾಂಸ ತಿನ್ನುವರೊಟ್ಟಿಗೆ ಕುಳಿತುಕೊಳ್ಳುವುದು ನನ್ನಿಂದಾಗದು. ಡಾ. ಬರೋಸ್ ನನಗೆ ಸಸ್ಯಾಹಾರ ಒದಗಿಸುತ್ತಿದ್ದಾರೆ. ಅಮೆರಿಕಕ್ಕೆ ಬಂದ ನಂತರ ಯಾವುದೇ ಒಂದು ಆಹಾರ ಪದ್ದತಿ ಎಲ್ಲರಿಗೂ ಸಮಾಧಾನ ನೀಡಲಾರದು ಎಂದು ನನಗೆ ತಿಳಿಯಿತು. ಮಾನವ ವಿಶ್ವ ಧರ್ಮವನ್ನು ಒಪ್ಪುವ ಮೊದಲು ಇದು ಆಗುತ್ತದೆ ಎನಿಸುತ್ತದೆ’ ಎಂದನು. ಜೈನ ಧರ್ಮ ಕಾರಣ ಮತ್ತು ಪರಿಣಾಮಗಳನ್ನು ಬೋಧಿಸುತ್ತದೆ. ದೇವರ ಅಸ್ತಿತ್ವಕ್ಕೆ ಯಾವುದೇ ಕಾರಣವಿಲ್ಲ. ಸತ್ತ ಆತ್ಮೀಯರನ್ನು ಮುಂದೊಂದು ದಿನ ಸಂಧಿಸಬಹುದೆ ಎಂದು ಪ್ರಶ್ನಿಸಿದಾಗ ಆಳ ಚಿಂತನೆಯಲ್ಲಿ ಮುಳುಗಿರುವುದನ್ನು ಆತನ ಮುಖ ಸೂಚಿಸಿತು. ಜಗತ್ತಿನ ಎಲ್ಲ ಕಾಲದ ಎಲ್ಲ ಜನರನ್ನು ಕಾಡುವ ಈ ಪ್ರಶ್ನೆಗೆ ‘ಅವರನ್ನು ನಾವು ಸಂಧಿಸಬೇಕು . ಆದರೆ ನಾವು ವೈಯಕ್ತಿಕ ಪ್ರೀತಿ ಮತ್ತು ತೃಪ್ತಿಯಾಚೆಗೆ ನೋಡಬೇಕು’ ಎಂದು ಚಿಂತಿಸಿ ಹೇಳಿದನು.
ವಿಶ್ವ ಧರ್ಮ ಸಂಸತ್ತಿನ ಮೂರನೇ ದಿನ ವಿದೇಶಗಳಲ್ಲಿ ಹರಡುತ್ತಿರುವ ಹುಸಿ ಕ್ರೈಸ್ತ ಧರ್ಮ ಪ್ರಚಾರಗಳನ್ನು ವಿರೋಧಿಸಿ ಸಂಚಲನೆಯನ್ನುಂಟು ಮಾಡಿದ ಬೌದ್ಧ ಸಂನ್ಯಾಸಿ , ಜಪಾನಿ ವಾಗ್ಮಿ ಕಿಂಝೆ ರಿಂಜೆ ಹೆರಾಯ್ ಸನಿಹ ಪರಿಚಯದಿಂದ ಆತ ಧರ್ಮ ಸಂಸತ್ತಿಗೆ ಬಂದ ಪ್ರತಿನಿಧಿಗಳಲ್ಲಿ ಅತ್ಯಂತ ಶ್ರೇಷ್ಟರಲ್ಲಿ ಒಬ್ಬನೆಂದು ಮನದಟ್ಟಾಯಿತು ; ಆತನಲ್ಲಿ ವ್ಯಂಗ್ಯವಾಗಲಿ , ಹೀಯಾಳಿಕೆಯಾಗಲಿ , ಕಪಟತನವಾಗಲಿ ಇಲ್ಲ. ಸ್ವಾಗತ ಕೋಣೆಯಲ್ಲಿ ಭೇಟಿಯಾಗುವವರಿಗೆ ತನ್ನ ಧರ್ಮ , ಜಪಾನಿ ಸಂಪ್ರದಾಯಗಳ ಬಗ್ಗೆ ಸವಿವರ ಪರಿಚಯ ಮಾಡಿಕೊಡಲು ಸದಾ ಸಿದ್ಧನಿರುತ್ತಾನೆ. ಪ್ರತಿ ಮಧ್ಯಾಹ್ನ ಈ ವಿಶೇಷ ಕೆಲಸಕ್ಕಾಗಿ ಮೊದಲ ಮಹಡಿಗೆ ಹೋಗುತ್ತಾನೆ. ತಕ್ಷಣವೇ ಆತನ ಸುತ್ತ ಒಂದು ದೊಡ್ದ ಗುಂಪು ಸೇರುತ್ತದೆ. ಇದನ್ನು ಸಹನಶೀಲ , ಔದಾರ್ಯ ಸ್ವಭಾವದ ಪೌರಾತ್ಯ ಮಾತ್ರ ತಾಳಿಕೊಳ್ಳಬಲ್ಲ. ಆತನ ಸೌಜನ್ಯ ಅಭೇದ್ಯವಾಗಿದ್ದು ಯಾವುದೇ ವಾದ ಆತನನ್ನು ಕೆರಳಿಸಲಾರದು ; ನಮ್ಮ ಕೆಲ ಧಾರ್ಮಿಕ ನಾಯಕರು-ಇಲ್ಲ ಅವರನ್ನು ಧರ್ಮ ಬೋಧಕರೆನ್ನುವುದು ಸರಿ – ಈತನಿಂದ ಒಂದೆರಡು ಪಾಠಗಳನ್ನು ಕಲಿಯದಿರುವುದು ದುಃಖಕರ ವಿಷಯವಾಗಿದೆ. ಈ ವಾರದ ಒಂದು ಮಧ್ಯಾಹ್ನ ಜನ ಕೋಟೆಯಂತೆ ಆತನನ್ನು ಸುತ್ತುವರೆದು , ಎಲ್ಲ ಬಗೆಯ ಪ್ರಶ್ನೆಗಳನ್ನು ತೂರುತ್ತಿದ್ದರು. ಅವರಲ್ಲಿ ಗುಮಾಸ್ತನ ಕಂಠಪಟ್ಟಿಗಳನ್ನು ಬಿಗಿದುಕೊಂಡು ತಲೆಯನ್ನು ಮುಂದಕ್ಕೆ ತಂದ ಒಬ್ಬಾತ ಎತ್ತರಿಸಿ ವಿರೋಧದ ಧ್ವನಿಯಲ್ಲಿ ಪ್ರಾಯಶ್ಚಿತ್ತ , ಸ್ವರ್ಗ , ನರಕ ಮುಂತಾದ ಕ್ರೈಸ್ತ ಧರ್ಮದ ಪರಿಕಲ್ಪನೆಗಳನ್ನು ಎಳೆದು ತಂದು ಆತನನ್ನು ಕೆಣಕಿದನು. ಕೊನೆಗೆ ಆ ತರುಣ ಸಂನ್ಯಾಸಿ ತನ್ನೆಲ್ಲ ಇಂಗ್ಲಿಷ್ ಜ್ಞಾನವನ್ನು ಬಳಸಿ ಮತಾಂಧ ಪಂಥೀಯನನ್ನು ಸಮಾಧಾನಗೊಳಿಸಿದನು. ಅದಕ್ಕೆ ಆತ ‘ಓ ನೀನು ಏನು ಮಾತನಾಡುತ್ತಿರುವೆ ಎಂದು ನಿನಗೆ ಗೊತ್ತಿಲ ’ ಎಂದು ಕೂಗುತ್ತ ‘ ನಿನ್ನ ಬಗ್ಗೆ ನನಗೆ ಅನುಕಂಪವಿದೆ. ನನ್ನ ಆತ್ಮವನ್ನು ಹೇಗೆ ರಕ್ಷಿಸಿಕೊಳ್ಳಲಿ . ಅದಕ್ಕೆ ನಾನು ಏನು ಮಾಡಬೇಕು’ ಎಂದು ಕೂಗಿದಾಗ ಸುತ್ತಲಿದ್ದ ಹೆಂಗಸರು ನಗಲಿಲ್ಲ. ‘ನಿನ್ನ ದೇವರು ಎಂತಹವನು ‘ ಮುಂತಾಗಿ ಆತ ಕೂಗಿದನು’. ಇನ್ನು ಹೆಚ್ಚಿನದು ಈಗ ಪೂರ್ತಿ ನೆನಪಿಲ್ಲ. ಆ ಸಂನ್ಯಾಸಿ ‘ನೀನು ನನ್ನ ಮನಸ್ಸನ್ನು ಅರ್ಥಮಾಡಿಕೊಂಡಿಲ್ಲ’ ಎಂದು ತಾಳ್ಮೆಯಿಂದ ನಗುತ್ತ ಹೇಳಿದ ಉತ್ತರವೇ ಆತನಿಗೆ ಮಾಡಿದ ಲೇವಡಿಯಾಗಿತ್ತು. ನಂತರ ಆತ ಅನಂತ, ಅಖಂಡ, ಅವ್ಯಯವಾದ ಎಲ್ಲ ಚರಾಚರ ವಸ್ತುಗಳಲ್ಲಿರುವ ಸತ್ಯವೇ ಬೌದ್ಧರ ದೇವರೆಂದು ತಿಳಿಸಿದನು. ಆಗ ತೀವ್ರವಾಗಿ ಪ್ರಶ್ನಿಸುತ್ತಿದ್ದ ಸಾಂಪ್ರದಾಯಿಕ ಕ್ರೈಸ್ತ ಮಿನಿಸ್ಟರ್ ಹೊರ ನಡೆದನು. ಇದು ಸತತವಾಗಿ ಎರಡು ಗಂಟೆಗಳ ಕಾಲ ನಡೆಯಿತು.
ಕಿಂಝೆ ರಿಂಜೆ ಹೆರಾಯ್ ನಿಜವಾದ ಕ್ರೈಸ್ತ ಧರ್ಮವನ್ನಾಗಲಿ ಅದು ತಮ್ಮ ಜನರಿಗೆ ಒಳಿತನ್ನು ಉಂಟು ಮಾಡುವಂತಿದ್ದರೆ ಅದನ್ನು ಒಪ್ಪಿಕೊಳ್ಳುವುದನ್ನಾಗಲಿ ಎಂದೂ ತಾವು ವಿರೋಧಿಸಿಲ್ಲ ; ಜಪಾನಿನ ರಾಷ್ಟ್ರೀಯ ಜೀವನ ಮತ್ತು ಪದ್ದತಿಗಳಿಗೆ ಎದುರಾಗದ ಹೆಚ್ಚು ಉದಾರಿ ಕ್ರೈಸ್ತ ಧರ್ಮ ಬರಲಿ ಎನ್ನುತ್ತಾನೆ . ಧರ್ಮ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಈತ ಧರಿಸಿದ್ದ ಕಪ್ಪು , ಕಂದು ಬಣ್ಣದ ಉಡುಗೆ ಈತನ ಧಾರ್ಮಿಕ ಉಡುಗೆಯಲ್ಲ. ಅದು ಹೆಚ್ಚು ಗಾಢಬಣ್ಣದಲ್ಲಿದ್ದು , ತುಟ್ಟಿ ವಸ್ತುಗಳಿಂದಾಗಿರುತ್ತದೆ. ಅಮೆರಿಕದ ಉಡುಗೆ ಮಿತವ್ಯಯಕಾರಿಯಾದುದರಿಂದ ಜಪಾನಿಯರು ಅದನ್ನು ಬಳಸುತ್ತಾರೆ ಎನ್ನುತ್ತಾನೆ. ಆತ ದೇವಾಲಯದಲ್ಲಿ ಸೇವೆ ಮಾಡುವಾಗ ಕುಟುಂಬದಿಂದ ದೂರ ಇರುವುದಿಲ್ಲ ಹಾಗೂ ಕುಟುಂಬವನ್ನು ತೊರೆಯಬೇಕಾಗಿಲ್ಲ ಎಂದು ತಿಳಿದು ನಮಗೆ ಸಂತೋಷವಾಯಿತು. ನನ್ನ ತಂದೆ, ತಾಯಿಗಳು ಇನ್ನೂ ಬದುಕಿದ್ದಾರೆ. ಅವರನ್ನು ನಾನು ಭೇಟಿ ಮಾಡಬೇಕು ಎಂದನು. ಜಪಾನಿನಲ್ಲಿ ಮಗ ಮಾಡುವ ಕರ್ತವ್ಯಕ್ಕಿಂತ ದೊಡ್ದ ಧರ್ಮವಿಲ್ಲ.
ಎಚ್. ಧರ್ಮಪಾಲ ಏಷ್ಯನ್ನರಲ್ಲಿ ಎದ್ದು ಕಾಣುವಂತಹವರಲ್ಲಿ ಒಬ್ಬಾತ. ಆತನ ನಿಲುವು ಅದೆಷ್ಟು ನೇರ , ಬಟ್ಟೆಗಳು ಅದೆಷ್ಟು ಬಿಳಿಯಾಗಿದ್ದು ಲಾಲಿತ್ಯದಿಂದ ಉಡಲಾಗಿದೆ ; ಆತನ ಕಪ್ಪು ಮುಖದಲ್ಲಿ ಪರಿಶುದ್ಧತೆ ಮತ್ತು ಒಳ್ಳೆಯತನಗಳು ಸಹಜವಾಗಿವೆ. ಆತನ ಬಳಿ ಬುದ್ಧನ ವಿಗ್ರಹವಿದೆ. ಧರ್ಮ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಬದಿಯ ಆಸನದಲ್ಲಿ ಅದನ್ನು ಇರಿಸಿರುತ್ತಾನೆ. ಬೋನಿಯ ಖಾಸಗಿ ಜಾಗದಲ್ಲಿರುವ ಅದನ್ನು ಬೆರಳಿನಿಂದ ತೋರಿಸುತ್ತ ‘ ಆ ಪವಿತ್ರ ವಿಗ್ರಹ ಅಲ್ಲಿದೆ. ಅದೆಂತಹ ಅದ್ಭುತ ಅಭಿವ್ಯಕ್ತಿ ’ ಎಂದನು. ಇಲ್ಲಿ ಒಂದು ವಿಶೇಷ ವಿಚಾರವನ್ನು ಹೇಳಬೇಕು. ಸಿಲೋನಿನ ಧರ್ಮಪಾಲ ವಿಗ್ರಹಾರಾಧಕನಲ್ಲ. ಆತ ತನ್ನ ಆಚಾರ್ಯಯನ ವಿಗ್ರಹವನ್ನು ರೋಮನ್ನರು ಮತ್ತು ಕ್ಯಾಥೊಲಿಕರು ಶಿಲುಬೆ ಮತ್ತು ಚಿತ್ರಗಳನ್ನು ಬಳಸುವಂತೆ ಬಳಸುತ್ತಾನೆ. ಎಲ್ಲ ಪೌರಾತ್ಯರು ಸಂಬಳ ಪಡೆದು ಧರ್ಮ ಬೋಧಿಸುವ ಕಲ್ಪನೆಯಿಂತ ವಿಚಲಿತರಾಗುತ್ತಾರೆ.
ಉದ್ದ ಕೂದಲಿನ ತಲೆಯಲ್ಲಿ ನಡುವೆ ಬೈತಲೆ ತೆಗೆದಿರುವ ಸಡಿಲ ಉದ್ದನೆಯ ನಿಲುವಂಗಿ ಉಟ್ಟು ನಮ್ಮ ಮುಂದೆ ಸಾಗಿದ ಸಿರಿಯಾದ ಆರ್ಕಿಮ್ಯಾಂಡ್ರೈಟ್ ಈ ಜಾಗದಲ್ಲಿ ಆಗಾಗ್ಗೆ ಸುಳಿದಾಡುವ ಮತ್ತೊಬ್ಬ ವ್ಯಕ್ತಿ. ಈತ. ಈ ಕ್ರೈಸ್ತ ಪಾದ್ರಿ . ಹಣವನ್ನು ಎಂದಿಗೂ ಬಳಸುವುದಿಲ್ಲ.
ಹಿಂದೂಗಳಂತೆ ಜಪಾನಿಯರು ಕೂಡ ಧರ್ಮ , ದೇವರು, ನೈತಿಕ ಕ್ರಮ , ಕಾರ್ಯ-ಕಾರಣ ಕುರಿತಾದಂತಹ ನಮ್ಮ ಯಾವ ಕಲ್ಪನೆಗಳನ್ನೂ ಒಪ್ಪುವುದಿಲ್ಲ. ತಮ್ಮಲ್ಲಿ ಈಗಾಗಲೆ ಬೇಕಾದಷ್ಟು ಮತ, ಧರ್ಮಗಳಿವೆ ಎನ್ನುತ್ತಾರೆ. ನಮ್ಮ ಸಂಘಟನಾ ಸಾಮರ್ಥ್ಯ , ಶಿಸ್ತು , ಕೆಲಸ ಮತ್ತು ಕಾರ್ಮಿಕರನ್ನು ಕುರಿತಾಗಿ ಇರುವ ಕಾರ್ಯಕ್ರಮಗಳು , ಲೌಕಿಕ ಸಾಧನೆಗಳನ್ನು ಮೆಚ್ಚುವರಲ್ಲದೆ ಅವುಗಳನ್ನು ಕಲಿಯಲು ಉತ್ಸುಕರಾಗಿದ್ದಾರೆ. ಸಂಸತ್ತಿನಲ್ಲಿ ಕಂಡುಬಂದ ಹುರುಪಿನಿಂದ ಅವರು ನಮ್ಮ ನಿರ್ದಿಷ್ಟ ಹರಳುಗಟ್ಟಿದ ಸಿದ್ಧಾಂತಗಳನ್ನು ಒಪ್ಪುವುದಕ್ಕಿಂತ ನಾವು ಅವರ ವಿಶಾಲವಾದ ದೈವತ್ವದ ಚಿಂತನೆ , ಮನುಷ್ಯನ ಪವಿತ್ರತೆಯ ತತ್ತ್ವಗಳನ್ನು ಸ್ವೀಕರಿಸಲು ಹೆಚ್ಚು ಸಿದ್ಧರಿದ್ದೇವೆನ್ನುವುದು ಖಚಿತವಾಗುತ್ತದೆ. ಹಲವು ಮತ , ಪಂಥಗಳ ವೈವಿಧ್ಯಮಯವಾದ ಅರ್ಥೈಸಿಕೆಯ ಅವರ ಧರ್ಮಗಳನ್ನು ಒಪ್ಪಿ , ಅವರ ಪರಂಪರೆಯನ್ನು ಕೀಳಲು ಯತ್ನಿಸದಿದ್ದರೆ ಅಲ್ಲಿ ಕ್ರೈಸ್ತ ಧರ್ಮಕ್ಕೂ ಸಾಕಷ್ಟು ಅವಕಾಶ ಇರುವಂತಿದೆ. ವಾಷಿಂಗ್ಟನ್ ಕ್ಯಾಥೊಲಿಕ್ ವಿಶ್ವವಿದ್ಯಾಲಯದ ರೆಕ್ಟರ್ ಬಿಷಪ್ ಕಿಯಾನೆ ಕ್ರೈಸ್ತರು ತಮ್ಮ ಜನರನ್ನು ಮತಾಂತರಗೊಳಿಸಲು ಅನುಸರಿಸುತ್ತಿರುವ ಮಾರ್ಗಗಳನ್ನು ಟೀಕಿಸಿದ ಅವರಿಗೆ ಸಾರ್ವಜನಿಕವಾಗಿ ಧನ್ಯವಾದ ಹೇಳಿದರಲ್ಲದೆ. ಹಸಿದವರನ್ನು , ಅಂತ್ಯಜರನ್ನು ಪರಕೀಯ ಧರ್ಮ ಒಪ್ಪುವಂತೆ ಮಾಡುವುದನ್ನು ತೀವ್ರವಾಗಿ ವಿರೋಧಿಸಿದರು. ಟೀಕಾಕಾರರು ಟೀಕೆಗಳನ್ನು ಮುಂದುವರೆಸಿ , ಕುಟುಕಿ ನಾವು ಹೇಳಿದ್ದನ್ನು ಆಚರಿಸುವಂತೆ ಮಾಡಿ ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎನ್ನುವುದನ್ನು ನಾವಾಗಿಯೇ ನೋಡಿಕೊಳ್ಳುವಂತೆ ಮಾಡುತ್ತಾರೆ ಎಂದರು.
ನಿನ್ನೆ ಮಧ್ಯಾಹ್ನದ ಕಲಾಪ ಬಹಳ ಮಹತ್ವಪೂರ್ಣವಾದ ವಿದೇಶಿ ಧರ್ಮ ಪ್ರಚಾರ ಕುರಿತಾಗಿದ್ದು ವೇದಿಕೆಯ ಖ್ಯಾತರಾದ ಹಲವು ಮಿಷನರಿಗಳಿದ್ದರು. ಧರ್ಮಪಾಲ ಮತ್ತು ನರಸಿಂಹ ಈ ಇಬ್ಬರು ಹಿಂದೂಗಳು (ಧರ್ಮಪಾಲ ಹಿಂದೂ ಅಲ್ಲ-ವರದಿಗಾರ ಹಾಗೆ ಹೇಳಿದ್ದಾನೆ). ವೇದಿಕೆಯ ಮೇಲಿದ್ದವರಿಗೆ ಮತ್ತು ಸಭಿಕರಿಗೆ ತಮ್ಮ ಅಭಿಪ್ರಾಯದಲ್ಲಿ ಕ್ರೈಸ್ತ ಧರ್ಮ ಪ್ರಚಾರ ವಿದೇಶಿ ನೆಲದಲ್ಲಿ ಏಕೆ ಯಶಸ್ವಿಯಾಗಿಲ್ಲವೆಂದು ನೇರವಾದ ಮಾತುಗಳಲ್ಲಿ ಹೇಳಿದರು. ಅವರ ಅಭಿಪ್ರಾಯದಂತೆ ಜನಕ್ಕೆ ಉಣ್ಣಲು ಬೇಕೆ ಹೊರತು ಧರ್ಮ ಬೋಧನೆಯಲ್ಲ. ಇಂಗ್ಲೆಂಡ್ ಮಾಡುತ್ತಿರುವಂತೆ ಒಂದು ಕೈಯಲ್ಲಿ ಕತ್ತಿ , ಇನ್ನೊಂದು ಕೈಯಲ್ಲಿ ಬೈಬಲ್ ಬೇಕಿಲ್ಲ. ಜಾತಿಯಲ್ಲಿ ಮೂಗು ತೂರಿಸುವುದು ಮತ್ತು ಮಾಂಸಾಹಾರದ ಒತ್ತಾಯ ಸಲ್ಲದು. ಮಿಷನರಿಗಳು ಪೂರ್ವದಲ್ಲಿ ಕ್ರೈಸ್ತ ಧರ್ಮವನ್ನು ಒಂದು ಶಕ್ತಿಯಾಗಿಸಬೇಕೆಂದರೆ ಅವರು ನಜರೆತ್ತಿನ ಪ್ರೇಮಮೂರ್ತಿ ಯೇಸುವಿನ ರೂಪದಲ್ಲಿ ಬರುವುದಕ್ಕೆ ಯಾವಾಗಲೂ ಸ್ವಾಗತವಿದೆ ಎಂದು ಯಾರೂ ಎದುರಾಡಲಾಗದ ವಾಗ್ವೈಖರಿಯಲ್ಲಿ ತಿಳಿಸಿದರು. ನರಸಿಂಹ ಕ್ರೈಸ್ತ ಧರ್ಮದ ಹರಡಿಕೆಗೆ ತಡೆಯಾಗಿರುವ ಇನ್ನಿತರ ಕಾರಣಗಳನ್ನು ಗುರುತಿಸಿ ಪಶ್ಚಾತ್ತಾಪದ ಕಲ್ಪನೆ ಹಿಂದೂ ಮನಸ್ಸಿಗೆ ಅರ್ಥರಹಿತವಾಗಿದ್ದು ಎಂದಿಗೂ ಅಡಚಣೆಯಾಗಿ ಉಳಿಯುತ್ತದೆ ಎಂದನು. ಕೊನೆಯಲ್ಲಿ ಮಿಷನರಿಗಳು ತಮ್ಮ ಪ್ರತಿವಾದವನ್ನು ಸಮರ್ಥವಾಗಿ ಮಂಡಿಸಿದರು. ಇಂತಹ ಪರಸ್ಪರ ವಿರುದ್ಧ ನಿಲುವಿನ ಚಿಂತನೆಗಳನ್ನು ಶಾಂತಿಯುತವಾಗಿ ವೇದಿಕೆಯ ಮೇಲೆ ತಂದಿದ್ದು ಚರಿತ್ರಾರ್ಹ ಸಂಗತಿಯಾಗಿದೆ.
ಹಿಂದಿನ ದಿನ ಮಹಮ್ಮದ್ ರಸೆಲ್ ಅಲೆಕ್ಸಾಂಡರ್ ವೆಬ್ ಇಸ್ಲಾಂ ಧರ್ಮ ಪ್ರತಿಪಾದಿಸುವ ನೈತಿಕ ತತ್ತ್ವಗಳು ಬೇರೆ ಯಾವುದೇ ಧರ್ಮಕ್ಕೆ ಸಮ ಎಂದು ನೀಡಿದ ಹೇಳಿಕೆಯನ್ನು ಸಿರಿಯಾ ದೇಶದ ಬೈರೂತ್’ನ ಜಾರ್ಜ್ ಪೋಸ್ಟ್ ಕುರಾನ್’ನಲ್ಲಿರುವ ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಆಯ್ದ ಭಾಗಗಳನ್ನು ಓದಿ ಅಲ್ಲಗಳೆದರಲ್ಲದೆ ಷಿಕಾಗೊ ಮತ್ತು ನ್ಯೂಯಾರ್ಕ್ ಕೊಳೆಗೇರಿವಾಸಿಗಳು ಆಚರಣೆಯಲ್ಲಿ ತರದಿದ್ದರೂ ಇದಕ್ಕಿಂತಹ ಉನ್ನತ ನೈತಿಕ ಮೌಲ್ಯಗಳನ್ನು ಹೊಂದಿದ್ದಾರೆಂದು ತಿಳಿಸಿದನು. ಹೊಸದಾಗಿ ಇಸ್ಲಾಂ ಧರ್ಮಕ್ಕೆ ಸೇರಿರುವ ಮಹಮ್ಮದ್ ರಸೆಲ್ ಅಲೆಕ್ಸಾಂಡರ್ ವೆಬ್ ಬಹುಪತ್ನಿತ್ವ ಅಮೆರಿಕಕ್ಕೆ ಶಾಪವಾಗಿರಬಹುದು ಆದರೆ ಕೆಲ ಸಂದರ್ಭಗಳಲ್ಲಿ ಕೆಲ ಸಮಾಜಗಳಿಗೆ ಅದು ಅನುಕೂಲಕರವಾಗಿದ್ದಿರಬಹುದು ಎಂದು ನೀಡಿದ ಹೇಳಿಕೆಗೆ ಬಂದ ವಿರೋಧವನ್ನು ತಲೆ ಬರಹಗಳನ್ನು ರೋಚಕಗೊಳಿಸಲು ಕೆಲ ಷಿಕಾಗೊ ಪತ್ರಿಕೆಗಳು ಉತ್ಪ್ರೇಕ್ಷೆಗೊಳಿಸಿವೆ. ವೆಬ್ ಹೇಳಿಕೆ ಅಸಾಧಾರಣದ್ದಾಗಿದ್ದು ಎಲ್ಲ ಸಭಿಕರು ಆ ಬಗ್ಗೆ ಸಹಾನುಭೂತಿ ಇಲ್ಲದವರಾಗಿದ್ದರು. ‘ತಪ್ಪು’ ‘ನಾಚಿಕೆಗೇಡು’ ಎನ್ನುವ ಕೂಗಿಗೆ ಪ್ರತಿಧ್ವನಿಗಳೂ ಇದ್ದವು. ರೆ. ಜೋಸೆಫ್ ಕುಕ್ ಮತ್ತಿತರರು ವೆಬ್ ಅವರನ್ನು ಅವರ ಅಭಿಪ್ರಾಯಗಳನ್ನು ತಿಳಿಸಲು ಆಹ್ವಾನಿಸಿದೆಯೇ ಹೊರತು ಅವಮಾನಿಸಲಲ್ಲ ಎಂದರು. ಡಾ. ಬರೋಸ್ ಇಸ್ಲಾಂ ಧರ್ಮ ಮೊದಲ ಬಾರಿಗೆ ಅಮೆರಿಕ ಜನರ ಮುಂದೆ ಒಬ್ಬ ಪ್ರಾಧ್ಯಾಪಕರಿಂದ ಮಂಡಿಸಲ್ಪಡುತ್ತಿದೆ. ಒಬ್ಬ ಮನುಷ್ಯ ತನ್ನ ಹೃದಯಕ್ಕೆ ಹತ್ತಿರವೆನಿಸುವ ಧರ್ಮವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಅವಕಾಶ ಬಂದಿರುವುದೇ ತಮಗೆ ಆನಂದ ತಂದಿದೆ ಎಂದು ಆತನನ್ನು ( ಮಹಮ್ಮದ್ ರಸೆಲ್ ಅಲೆಕ್ಸಾಂಡರ್ ವೆಬ್) ಪರಿಚಯಿಸಿದರು. ಅದು ವೆಬ್ ಹೃದಯಕ್ಕೆ ಹತ್ತಿರವಾದ ಧರ್ಮವಾಗಿದ್ದು ಪ್ರಸ್ತುತ ಅದರ ಅನುಷ್ಠಾನವನ್ನು ಯಾರು ಒಪ್ಪುತ್ತಾರೆ ಎನ್ನುವುದಲ್ಲ. ಆತನಿಗೆ ದಾರ್ಶನಿಕನ ಹುಮ್ಮಸ್ಸಿನ ಮುಖವಿದೆ ; ಮುಂದೊಂದು ದಿನ ಇಸ್ಲಾಂ ಅಮೆರಿಕದ ರಾಷ್ಟ್ರೀಯ ಧರ್ಮವಾಗುತ್ತದೆ ಎಂದಾಗ ಸಮತೋಲನ ತಪ್ಪಿದಂತಾಗಿದೆ. ಸದಾ ಚಟುವಟಿಕೆ , ವ್ಯಾಪಾರ, ವ್ಯವಹಾರಗಳಲ್ಲಿ ಮುಳುಗಿರುವ ನಮ್ಮ ಜನ ಸ್ಟಾಕ್ ಮಾರುಕಟ್ಟೆಯಲ್ಲೋ ಮತ್ತೆಲ್ಲೋ ಇರುವಾಗ , ಅದರಲ್ಲೂ ಒಂದು ಸಲ ಸೂರ್ಯೋದಯದ ಸಮಯದಲ್ಲಿ ಸೇರಿದಂತೆ ಒಟ್ಟು ಐದು ಸಲ ಮಂಡಿಯೂರಿ ಕುಳಿತು ಬಗ್ಗಿ ಏಳುವುದು ಒಂದು ಕಲ್ಪನಾ ಲಹರಿ ಎನಿಸುತ್ತದೆ. ಆತ ಹೇಳುವಂತೆ ದಿನಕ್ಕೆ ಐದು ಬಾರಿ ದೇಹ ಶುದ್ದಿ ಮಾಡಿಕೊಳ್ಳುವುದು ಭಾರಿ ಕೊಳಕರಿಗೆ ಒಳ್ಳೆಯದಾಗಬಹುದು. ಬಹು ಪತ್ನಿತ್ವ ಮೂಲ ಇಸ್ಲಾಂ ಧರ್ಮದಲ್ಲಿಲ್ಲ ಎಂದು ಮಹಮ್ಮದ್ ವೆಬ್ ಹೇಳುವರಾದರೂ ಅದು ಅವರಿಗೆ ಮಾತ್ರ ಸೂಕ್ತವಾಗಬಹುದೇನೋ.
ಧರ್ಮ ಸಂಸತ್ತಿನ ಎಲ್ಲ ಕವಲುಗಳು , ಸಭೆಯಲ್ಲಿ ನಡೆದ ಭಾಷಣಗಳು , ಪಕ್ಕದ ಕೋಣೆಗಳಲ್ಲಿ ನಡೆದ ಚರ್ಚೆಗಳು , ವಸತಿ ನಿಲಯಗಳಲ್ಲಿ ಆದ ಪರಿಚಯಗಳು , ರಹಸ್ಯವೆನಿಸಿದ್ದ ವಿದೇಶಿ ಜೀವನದ ಮೇಲೆ ಚೆಲ್ಲಿದ ಬೆಳಕು ಎಂದಿಗೂ ಮುದ್ರಣದಲ್ಲಿ ಕಾಣಿಸಿಕೊಳ್ಳದು. ದೈನಂದಿನ ಸಭೆಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತ , ಸಮಾಪ್ತಿಯ ದಿನ ಸಮೀಸುತ್ತಿರುವಂತೆಯೇ ಜನ ಸಂದಣಿ ಹೆಚ್ಚುತ್ತಿದೆ. ಮುಂದಿನ ವಾರ ಇದೆಲ್ಲವದೂ ಹಿಂದಿನ ಒಂದು ಕನಸಾಗಿರುತ್ತದೆ. ಮುಂದಿನ ಭವಿಷ್ಯ ಮತ್ತು ದೈನಂದಿನ ಜೀವನಕ್ಕಾಗಿ ನಾವು ಧರ್ಮ ಸಂಸತ್ತಿನಿಂದ ತಿಳಿಯುವುದೇನೆಂದರೆ ನಂಬಿಕೆ ಮತ್ತು ಅಪೇಕ್ಷೆಗಳು ಒಬ್ಬ ದೇವನಿರುವ ಪರ್ವತದತ್ತ ದಾರಿ ತೋರುತ್ತವೆ. ಆ ಪರ್ವತ ಹತ್ತಿದವರೆಲ್ಲರಿಗೂ ಒಬ್ಬನೇ ಚಂದ್ರ ಕಾಣಿಸಿತ್ತಾನೆ. – (ವರದಿಗಾರ) ಫ್ರಾನ್ಸಿ ಆಲ್ಬರ್ಟ್ ಡೌಟಿ
ದಿ ಸ್ಟೇಟ್ಸ್’ಮನ್ ಪತ್ರಿಕೆ ಈ ವರದಿಯ ಆಯ್ದ ಅರ್ಧದಷ್ಟು ಭಾಗವನ್ನು ಪ್ರಕಟಿಸಿದರೆ , ಬಸು-ಘೋಷ್ ಪ್ರಕಟಿಸಿರುವ ‘ವಿವೇಕಾನಂದ ಇನ್ ಇಂಡಿಯನ್ ನ್ಯೂಸ್ ಪೇಪರ್ಸ್ ೧೮೯೩-೧೯೦೨’ ರಲ್ಲಿ ಇದಕ್ಕಿಂತಲೂ ಕಡಿಮೆ ಆಯ್ದ ಭಾಗಗಳನ್ನು ಪ್ರಕಟಿಸಿದ್ದಾರೆ , ಮಾರಿ ಲೂಯಿ ಬರ್ಕೆ ‘ಸ್ವಾಮಿ ವಿವೇಕಾನಂದ : ನ್ಯೂ ಡಿಸ್ಕವರೀಸ್’ನಲ್ಲಿ ಇದರ ೨೦ % ಮಾತ್ರ ಪ್ರಕಟವಾಗಿದೆ. ಹೀಗೆ ಅಂಶಿಕವಾಗಿ ಪ್ರಕಟಗೊಂಡಿರುವ ಈ ವರದಿ ಮುಂದಿನ ದಿನಗಳಲ್ಲಿ ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನವನ್ನು ಗೆದ್ದ ಏಕೈಕ ನಾಯಕ , ಅವರು ಜಗತ್ತಿಗೆ ವಿಶ್ವ ಧರ್ಮವನ್ನು ನೀಡಿದವರು ಎಂದು ಉತ್ಪ್ರೇಕ್ಷಿಸಿ ಬಿಂಬಿಸಲು ನೆರವಾಯಿತು.
ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಅದರೆ ಸಮಗ್ರ ವರದಿ (೧) ದಿ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ –ರೆ. ಜಾನ್ ಎಚ್. ಬರೋಸ್ – ದಿ ಪಾಲಿಮೆಂಟ್ ಪಬ್ಲಿಷಿಂಗ್ ಕಂಪೆನಿ -೧೮೯೩ (೨) ದಿ ವರ್ಲ್ಡ್ಸ್ ಕಾಂಗೆಸ್ ಆಫ್ ರಿಲಿಜನ್ಸ್ ಅಟ್ ದಿ ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್ – ಜೆ. ಡಬ್ಲ್ಯು ಜಾನ್ಸನ್ - ಡಬ್ಲ್ಯು. ಬಿ ಕಾನ್ ಕೀ ಕಂಪೆನಿ , ಷಿಕಾಗೊ- ೧೮೯೪ (೩) ದಿ ಪಾರ್ಲಿಮೆಂಟ್ ಆಫ್ ರಿಲಿಜನ್ಸ್ ಅಂಡ್ ದಿ ರಿಲಿಜಿಯಸ್ ಕಾಂಗ್ರೆಸ್ ಅಟ್ ದಿ ವರ್ಲ್ದ್ಸ್ ಕೊಲಂಬಿಯನ್ ಎಕ್ಸ್’ಪೊಸಿಷನ್ –ವಾಲ್ಟರ್ ಆರ್ ಹೌಟನ್-ಫ್ರಾಂಕ್ ಟೆನಿಸನ್ ನೀಲಿ - ಷಿಕಾಗೊ ೧೮೯೩ (೪) ರಿವ್ಯೂ ಆಫ್ ವರ್ಲ್ಡ್ಸ್ ರಿಲಿಜಿಯಸ್ ಕಾಂಗ್ರೆಸ್ –ಎಲ್.ಪಿ ಮರ್ಸರ್ , ರ್ಯಾಂಡ್ -, ಮೆಕ್.ನಲ್ಲಿ ಅಂಡ್ ಕಂ. ಷಿಕಾಗೊ ೧೮೯೩ (೫) ಎ ಖೋರಸ್ ಆಫ್ ಫೇಥ್-ಜೆಂಕಿನ್ ಲಾಯ್ಡ್ ಜೋನ್ಸ್ –ದಿ ಯೂನಿವರ್ಸಿಟಿ ಪಬ್ಲಿಷಿಂಗ್ ಕಂ. ಷಿಕಾಗೊ (೬) ವರ್ಲ್ಡ್ಸ್ ಕಾಂಗೆಸ್ ಅಡ್ರೆಸಸ್ – ಚಾರ್ಲ್ಸ್ ಕರೋಲ್ ಬೊನ್ನಿ –ದಿ ಓಪನ್ ಕೋರ್ಟ್ ಪಬ್ಲಿಷಿಂಗ್ ಕಂ –ಷಿಕಾಗೊ (೭) ದಿ ವರ್ಲ್ಡ್ಸ್ ಕಾಂಗ್ರೆಸ್ ಆಫ್ ರಿಲಿಜನ್ಸ್ – ಅರೆನಾ ಪಬ್ಲಿಷಿಂಗ್ ಕಂಪೆನಿ , ಬೋಸ್ಟನ್ , ೧೮೯೩ ಕೃತಿಗಳಲ್ಲಿ ಸಿಗುತ್ತದೆ. ಈ ಕೃತಿಗಳಲ್ಲಿರುವ ವರದಿಗಳು ವಾಸ್ತವಕ್ಕೆ ಸನಿಹ ಮತ್ತು ಅಧಿಕೃತವಾಗಿದ್ದು ವಿಶ್ವ ಧರ್ಮ ಸಂಸತ್ತಿನ ನಿಜವಾದ ಚಿತ್ರಣ ಕೊಡುತ್ತವೆ. ವ್ಯಕ್ತಿಗಳ ಭಾವುಕ ಹೇಳಿಕೆಗಳಿಗಿಂತ ಇಂತಹ ವರದಿಗಳನ್ನು ಅವಲಂಬಿಸುವುದು ಸರಿಯಾದ ಮಾರ್ಗ.
****************************
ವಿಶ್ವ ಧರ್ಮ ಸಂಸತ್ತಿನಲ್ಲಿ ಏನು ನಡೆಯಿತು , ಜನ ಅದನ್ನು ಹೇಗೆ ಸ್ವೀಕರಿಸಿದರು, ಯಾರನ್ನು ಗುರುತಿಸಿದರು ಎನ್ನುವುದು ಪತ್ರಿಕೆಗಳ ವರದಿಯಿಂದ ಸ್ಪಷ್ಟವಾಗುತ್ತದೆ. ಧರ್ಮ ಸಂಸತ್ತು ನಡೆಯುತ್ತಿದ್ದ ದಿನಗಳಲ್ಲಿ ಸ್ವಾಮಿಗಳನ್ನು ಇತರ ಪ್ರಭಾವಿ ಪ್ರತಿನಿಧಿಗಳಲ್ಲಿ ಒಬ್ಬರಂತೆ ಪರಿಗಣಿಸಲಾಗಿದ್ದಿತು. ಅವರಿಗೆ ಸಲ್ಲಬೇಕಾದ ಗೌರವವನ್ನು ಪತ್ರಿಕೆಗಳು ಕೊಟ್ಟಿದ್ದವು. ವಿಶ್ವ ಧರ್ಮ ಸಂಸತ್ತಿನ ಕೇಂದ್ರ ಅವರೇ ಎಂದಾಗಲಿ , ಅವರಿಂದಲೇ ಅದು ಯಶಸ್ವಿಯಾಯಿತು , ಅವರೊಬ್ಬರೇ ಅದರ ನಾಯಕ , ಅವರು ಪ್ರತಿಪಾದಿಸಿದ ಹಿಂದೂ ಧರ್ಮದ ಮುಂದೆ ಉಳಿದವೆಲ್ಲ ಮಂಕಾದವು ಎನ್ನುವಂತಹವೆಲ್ಲ ನಂತರ ಕಾಲದಲ್ಲಿ ಕ್ರಮೇಣವಾಗಿ ಬಿತ್ತಿ , ಬೆಳೆಸಿದಂತಹ ಮಿಥ್ಯೆಗಳು. ಸ್ವಾಮಿಗಳು ಇತರರಿಗಿಂತ ಶ್ರೇಷ್ಟ ಎಂದು ಸಾಧಿಸಲು ಒಡ್ಡಲಾಗಿರುವ ವಾದ ಸರಣಿಗಳತ್ತ ಒಮ್ಮೆ ಕಣ್ಣಾಡಿಸಬಹುದು.
(೧) ಕ್ರಿಶ್ಚಿಯನ್ ಧರ್ಮವನ್ನು ಎತ್ತಿಹಿಡಿಯಲು ವಿಶ್ವ ಧರ್ಮ ಸಂಸತ್ತನ್ನು ನಿಯೋಜಿಸಲಾಗಿದ್ದಿತು .ಅದರಲ್ಲಿ ಭಾಗವಹಿಸಿದ ೧೭೦ ಜನರಲ್ಲಿ ೧೦೦ ಕ್ರೈಸ್ತ ಧರ್ಮಕ್ಕೆ ಸೇರಿದ್ದರು ಎಂದು ನಿವೇದಿತಾ ಹೇಳಿದ್ದಾರೆ. ಈ ಅಂಕಿ-ಅಂಶ ನಿಜವಾದರೂ ಪ್ರತಿನಿಧಿಗಳ ಸಂಖ್ಯೆಗಿಂತಲೂ ಕ್ರೈಸ್ತೇತರ ಧರ್ಮಗಳ ಪ್ರತಿನಿಧಿಗಳಿಗೆ ಎಷ್ಟು ಕಾಲಾವಕಾಶ ಒದಗಿಸಲಾಗಿದ್ದಿತು ಎನ್ನುವುದು ಮುಖ್ಯ. ಭಾರತದಲ್ಲಿ ವಿಶ್ವ ಧರ್ಮ ಸಮ್ಮೇಳನ ನಡೆದರೆ ಇತರ ಧರ್ಮದವರಿಗೆ ಹೋಲಿಸಿದರೆ ಇದೇ ಪ್ರಮಾಣದಲ್ಲಿ ಹಿಂದೂಗಳು ಇರುತ್ತಾರೆ. ಆದರೆ ಕ್ರಿಶ್ಚಿಯನ್ ಪ್ರತಿನಿಧಿಗಳಿಗೆ ಒಂದು ಅವಕಾಶ ಕೊಟ್ಟರೆ ಇತರ ಧರ್ಮದ ಪ್ರತಿನಿಧಿಗಳಿಗೆ ಹಲವು ಅವಕಾಶಗಳನ್ನು ನೀಡಲಾಗಿದ್ದಿತು. ಪಿ.ಸಿ ಮಜುಂದಾರ್, ಸ್ವಾಮಿ ವಿವೇಕಾನಂದ ಮತ್ತು ಧರ್ಮಪಾಲರಿಗೆ ಮಾತನಾಡಲು ಹಲವು ಅವಕಾಶಗಳನ್ನು ನೀಡಲಾಗಿದ್ದಿತು. ಜೆ.ಎಚ್. ಬರೋಸ್ ಮತ್ತು ಇತರ ಲೇಖಕರು ವಿಶ್ವ ಧರ್ಮ ಸಂಸತ್ತನ್ನು ಕುರಿತಾಗಿ ಪ್ರಕಟಿಸಿರುವ ಪುಸ್ತಕ ಧರ್ಮ ಸಂಸತ್ತಿನ ಬಗ್ಗೆ ಇದ್ದ ಈ ಬಗೆಯ ತಪ್ಪು ತಿಳಿವಳಿಕೆಗಳನ್ನು ನಿವಾರಿಸುತ್ತದೆ.
ವಿಶ್ವ ಧರ್ಮ ಸಂಸತ್ತಿನಲ್ಲಿ ಕ್ರೈಸ್ತ ಪಾದ್ರಿಗಳು ಉದಾರ ನಿಲುವನ್ನು ತಳೆದಿರಲಿಲ್ಲ. ಅವರು ಇತರ ಧರ್ಮಗಳನ್ನು ಕೀಳಾಗಿ ಕಾಣುತ್ತಿದ್ದರು ಎನ್ನುವ ನಂಬಿಕೆ ಪ್ರಚಲಿತವಿದೆ. ಹೆಚ್ಚಿನ ಭಾಷಣಗಳು ಧಾರ್ಮಿಕ ಸಾಮರಸ್ಯ , ಮಾನವನ ಏಕತೆಯ ಬಗ್ಗೆ ಕೇಂದ್ರೀಕೃತವಾಗಿದ್ದವು. ಉದಾರ ತತ್ತ್ವಗಳನ್ನು ಪ್ರತಿಪಾದಿಸುತ್ತಿದ್ದ ಎಲ್ಲ ಪ್ರತಿನಿಧಿಗಳಿಗೆ ಜನ ಚಪ್ಪಾಳೆಯ ಮೂಲಕ ಮತ್ತು ಸ್ಥಳೀಯ ಪತ್ರಿಕೆಗಳು ಹೊಗಳಿಕೆಯ ಮೂಲಕ ಬೆಂಬಲ ನೀಡುತ್ತಿದ್ದವು. ಬೇರೆ ಧರ್ಮದ ಪ್ರತಿನಿಧಿಗಳು ಕ್ರೈಸ್ತ ಧರ್ಮ , ಪಾದ್ರಿಗಳ ನಡವಳಿಕೆಯ ಬಗ್ಗೆ ಕಟುವಾಗಿ ಟೀಕಿಸಿದಾಗಲೂ ಜನ ಒಪ್ಪುತ್ತಿದ್ದರು. ಸಹನೆಯಿಂದ ಕೇಳಿ ಅದನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಸೆಪ್ಟೆಂಬರ್ ೧೩ ರಂದು ಜಪಾನಿನ ಕಿಂಝಾ ಹಿರಾಯಿಯನ್ನು ಜನ ಭಾರಿ ಚಪ್ಪಾಳೆಯೊಂದಿಗೆ ಮೆಚ್ಚುಗೆ ಸೂಚಿಸಿದರು. ಬರೋಸ್ ಆತ್ಮೀಯತೆಯಿಂದ ಅವರ ಕೈಹಿಡಿದರೆ , ಜೆಂಕಿನ್ ಲಾಯ್ಡ್ ಜೋನ್ಸ್ ಅವರನ್ನು ಸಾರ್ವಜನಿಕವಾಗಿ ತಬ್ಬಿಕೊಂಡರು. ಜೋಸೆಫ್ ಕುಕ್’ನಂತಹ ಸಂಕುಚಿತ ಮನೋಭಾವದ ಕ್ರೈಸ್ತ ಪಾದ್ರಿಗಳ ನಿಲುವನ್ನು ಪತ್ರಿಕೆಗಳು ಖಂಡಿಸಿದವು. ಧರ್ಮಪಾಲರು ನಮ್ಮ ಬಗ್ಗೆ ತೀರ್ಮಾನ ನೀಡಲು ನಿಮಗೆಷ್ಟ ಧೈರ್ಯ ಎಂದು ಕೇಳಿದ್ದಕ್ಕೆ ಉತ್ತರವಾಗಿ ಬಿಷಪ್ ಜೆ.ಪಿ ನ್ಯೂಮನ್ ನೀಡಿದ ಉತ್ತರಕ್ಕೆ ಅಸಮಾಧಾನ ,ಅಸಮ್ಮತಿ ಮತ್ತು ಟೀಕೆ ಪತ್ರಿಕೆಗಳ ಮೂಲಕ ಬಂದಿತು.
(೨) ಸ್ವಾಮಿ ವಿವೇಕಾನಂದ ಅಂಡ್ ಹಿಸ್ ವರ್ಕ್-೧೯೨೪ ಎನ್ನುವ ಪುಸ್ತಕವನ್ನು ಅಭೇದಾನಂದರು ಬರೆದಿದ್ದಾರೆ. ಇದು ಅವರು ೮/೩/೧೯೦೩ ರಲ್ಲಿ ಕಾರ್ನೆಗಿ ಲೈಸಿಯಂ, ನ್ಯೂಯಾರ್ಕ್’ನಲ್ಲಿ ಕೊಟ್ಟ ಭಾಷಣದ ಮುದ್ರಿತ ರೂಪ. ಈ ಪುಸ್ತಕದಲ್ಲಿ ‘ಮೊದಲ ಬಾರಿಗೆ ಆಧುನಿಕ ಭಾರತದ ಚರಿತ್ರೆಯಲ್ಲಿ ಹಾಗೆಯೇ ಅಮೆರಿಕದ ಧಾರ್ಮಿಕ ಚರಿತ್ರೆಯಲ್ಲಿ ಸರ್ಕಾರದ ನೆರವಿಲ್ಲದೆ, ಆಹ್ವಾನವಿಲ್ಲದೆ , ಧಾರ್ಮಿಕ ಸಂಸ್ಥೆಗಳ ಬೆಂಬಲವಿಲ್ಲದೆ ಅಮೆರಿಕ ಮತ್ತು ಭಾರತವನ್ನು ಬೇರ್ಪಡಿಸಿರುವ ಅಗಾಧ ಅಳದ ಕಡಲನ್ನು ದಾಟಿ ಪೂರ್ವದಿಂದ ಬಂದ ಒಬ್ಬ ವ್ಯಕ್ತಿ ಧಾರ್ಮಿಕ ಸಂಸತ್ತಿನಲ್ಲಿ ಕಂಡುಬಂದ ಧಾರ್ಮಿಕ ಅಸಹನೆ , ವೈಷ್ಯಮ್ಯ , ಹೋರಾಟ ತುಂಬಿದ ಎದೆಗಳೊಳಗೆ ಶಾಂತಿ , ಸಾಮರಸ್ಯದ ಸಂದೇಶ ತಂದನು’ ಎಂದಿದ್ದಾರೆ. ಧಾರ್ಮಿಕ ಸಂಸತ್ತಿಗೆ ಬಂದವರಲ್ಲಿ ಚೀನಾದ ಪ್ರತಿನಿಧಿ ಹೊರತಾಗಿ ಬೇರೆ ಯಾರಿಗೂ ಸರ್ಕಾರಗಳ ಬೆಂಬಲವಿರಲಿಲ್ಲ. ಅದೆಷ್ಟೋ ಜನರಿಗೆ ಧಾರ್ಮಿಕ ಸಂಸ್ಥೆಗಳ ನೆರವಿರಲಿಲ್ಲ. ಕೆಲವರು ಆಹ್ವಾನ ಇಲ್ಲದೆ ಬಂದಿದ್ದರು ಎನ್ನುವುದು ದಾಖಲೆಗಳಿಂದ ಸ್ಪಷ್ಟ. ಸ್ವಾಮಿಗಳು ಹಣವನ್ನಾದರೂ ಒಯ್ದಿದ್ದರು. ವಿಶ್ವ ಧರ್ಮ ಸಂಸತ್ತಿನಲ್ಲಿ ಗಮನ ಸೆಳೆದಿದ್ದ ಸಿರಿಯಾದ ಆರ್ಕಿಮ್ಯಾಂಡ್ರೈಟ್ ಹಣವನ್ನು ಎಂದಿಗೂ ಮುಟ್ಟುತ್ತಿರಲಿಲ್ಲ ಮತ್ತು ಬಳಸುತ್ತಿರಲಿಲ್ಲ. ವಿಶ್ವ ಧರ್ಮ ಸಂಸತ್ತಿನ ದಾಖಲೆ ಮತ್ತು ಪತ್ರಿಕಾ ವರದಿಗಳನ್ನು ನೋಡಿದರೆ ಅಲ್ಲಿ ಬಂದಿದ್ದ ಎಲ್ಲ ಪ್ರತಿನಿಧಿಗಳು ಉತ್ತಮ ಶಿಕ್ಷಣ ಪಡೆದವರಾಗಿದ್ದರಲ್ಲದೆ ಧೃಡ ಮಾತುಗಳಲ್ಲಿ ಮತಾಂಧತೆಯನ್ನು ಖಂಡಿಸಿದ್ದರು. ಧಾರ್ಮಿಕ ಸಾಮರಸ್ಯಕ್ಕೆ ಕರೆ ಕೊಟ್ಟಿದ್ದರು. ಷಿಕಾಗೊ ಟ್ರಿಬ್ಯೂನ್ ಸೆಪ್ಟೆಂಬರ್ ೧೨ ರ ಸಂಚಿಕೆಯಲ್ಲಿ ‘ಆಲ್ ಬ್ರಿಂಗ್ ದಿ ಸೇಮ್ ಮೆಸೇಜ್ ‘ ತಲೆಬರಹದಲ್ಲಿ ಎಲ್ಲ ಸ್ವಾಗತ ಭಾಷಣಗಳ ರಾಗ ಸ್ಪಷ್ಟವಾಗಿ ‘ಒಬ್ಬ ತಂದೆ ಮತ್ತು ಮಾನವ ಸೋದರತ್ವ’ವಾಗಿದ್ದಿತು ಎಂದು ಒಂದೇ ಮಾತಿನಲ್ಲಿ ವಿಶ್ವ ಧರ್ಮ ಸಂಸತ್ತಿನ ಪ್ರತಿನಿಧಿಗಳ ಆಶಯವನ್ನು ವ್ಯಕ್ತಪಡಿಸಿತು.
ಧರ್ಮ ಸಂಸತ್ತಿನಲ್ಲಿ ಭಾಷಣ ಮಾಡುವವರೆಗೆ ಸ್ವಾಮಿಗಳು ಎಲ್ಲಿಯೂ ಸಾರ್ವಜನಿಕ ಭಾಷಣ ಮಾಡಿರಲಿಲ್ಲ ಎನ್ನುತ್ತಾರೆ ಅಭೇದಾನಂದರು. ಸ್ವಾಮಿ ವಿವೇಕಾನಂದರು ಮದ್ರಾಸಿನ ತಿರುವಳ್ಳುಕೇಣಿಯ ಟ್ರಿಪ್ಲಿಕೇನ್ ಲಿಟರೆರಿ ಸೊಸೈಟಿಯಲ್ಲಿ (ಇಂಡಿಯನ್ ಸೋಷಿಯಲ್ಲ್ ರಿಫಾರ್ಮರ್-೨೧/೧/೧೮೯೩) ಮತ್ತು ೧೩/೨/೧೮೯೩ ರಂದು ಫೆಬ್ರವರಿಯಂದು ಮಹಬೂಬ್ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ಜನ ಜನರ ಮುಂದೆ ಸ್ವಾಮಿಗಳು ಭಾಷಣ ಮಾಡಿದ್ದರೆಂದು ‘ದಿ ಲೈಫ್-೧೯೧೪’ ತಿಳಿಸುತ್ತದೆ. ಇದಲ್ಲದೆ ಅಮೆರಿಕ ತಲುಪಿದ ನಂತರ ವಿಶ್ವ ಧರ್ಮ ಸಂಸತ್ತು ಪ್ರಾರಂಭವಾಗುವ ಮೊದಲು ಅವರು ಹಲವು ಕ್ಲಬ್ ಮತ್ತು ಸಂಘ ಸಂಸ್ಥೆಗಳ ಮುಂದೆ ಭಾಷಣ ಮಾಡಿರುವುದು ಸ್ಪಷ್ಟ.
(೩) ದಿ ಲೈಫ್ ಆಫ್ ವಿವೇಕಾನಂದ ಅಂಡ್ ದಿ ಯೂನಿವರ್ಸಲ್ ಗಾಸ್ಪೆಲ್ ಬರೆದಿರುವ ರೊಮ್ಯಾಂಡ್ ರೋಲಾ ‘೧೮೯೩ ರಲ್ಲಿ ಧರ್ಮ ಸಂಸತ್ತಿನ ಉದ್ಘಾಟನೆಯ ದಿನ ಸ್ವಾಮಿಗಳ ಧೀರ ಗಾಂಭೀರ್ಯದ ಅಸ್ತಿತ್ವದಿಂದ ಉಳಿದವರ ಇರುವಿಕೆಯೇ ಅರಿವಿಗೆ ಬರುತ್ತಿರಲಿಲ್ಲ ಎಂದಿದ್ದಾರೆ. ಇದು ಒಬ್ಬ ವ್ಯಕ್ತಿಯ ಕಲ್ಪನೆಯ ತುತ್ತತುದಿ. ಧರ್ಮ ಸಂಸತ್ತಿಗೆ ಬಂದವರಲ್ಲಿ ಬಹುತೇಕರಿಗೆ ಅಲ್ಲಿ ಸಾವಿರಾರು ಜನ ಸೇರಿರುತ್ತಾರೆ, ಜಗತ್ತಿನ ಮೂಲೆ ಮೂಲೆಗಳಿಂದ ವಿದ್ವಾಂಸರು ಬಂದಿರುತ್ತಾರೆ. ಅವರ ಎದುರು ತಮ್ಮ ಧರ್ಮದ ಸಾರವನ್ನು ದಿಟ್ಟವಾಗಿ , ಸ್ಪಷ್ಟವಾಗಿ ಮುಂದಿರಿಸಬೇಕೆಂದು ತಿಳಿದಿದ್ದಿತು. ಹಾಗೆ ತಿಳಿದಿದ್ದೇ ಅವರು ಆ ಸವಾಲನ್ನು ಎದುರಿಸಲು ಬಂದಿದ್ದರು. ಸಭೆಗೆ ಬಂದಿದ್ದ ವಿದ್ಯಾವಂತರಿಗೆ ವಿವಿಧ ವ್ಯಕ್ತಿಗಳು ಮತ್ತು ಅವರು ಪ್ರತಿಪಾದಿಸುವ ತತ್ತ್ವಗಳನ್ನು ಹೋಲಿಸಿ ನೋಡುವ ಪ್ರಬುದ್ಧತೆ ಇದ್ದಿತು. ಇಂತಹ ಸನ್ನಿವೇಶದಲ್ಲಿ ಯಾರೊಬ್ಬರಾಗಲಿ ನಾಯಕರಾಗುವುದು , ಕೇಂದ್ರಬಿಂದುವಾಗುವುದು ಅಸಾದ್ಯ. ವಿವಿಧ ಪತ್ರಿಕೆಯ ವರದಿಗಳಿಂದ , ಡಾ. ಜೆ.ಎಚ್ ಬರೋಸ್ ಮತ್ತು ಇತರ ಲೇಖಕರು ಸಂಪಾದಿಸಿರುವ ವಿಶ್ವ ಧರ್ಮ ಸಂಸತ್ತಿನ ಕಲಾಪಗಳ ವಿವರಗಳಿಂದ ಸ್ವಾಮಿಗಳಿಗಿಂತ ಚೆನ್ನಾಗಿ ಭಾಷಣ ಮಾಡಿದವರು , ಸಭಿಕರ ಮೆಚ್ಚುಗೆ ಗಳಿಸಿದವರು ಅದೆಷ್ಟೋ ಜನ ಇದ್ದರು, ಅವರಲ್ಲಿ ಹಲವು ಭಾರತೀಯರು ಸೇರಿದರು ಎನ್ನುವುದು ಸ್ಪಷ್ಟ.
(೪) ಸ್ವಾಮಿಗಳು ಧರ್ಮ ಸಂಸತ್ತಿನ ಉದ್ಘಾಟನೆಯ ದಿನ ೧೧/೯/೧೮೯೩ ರಂದು ಒಂದಾದರ ನಂತರ ಒಂದು ಘಂಟೆಗಳಂತೆ ದಿನದ ಕೊನೆಯವರೆಗೂ ತಮ್ಮ ಭಾಷಣದ ಸರದಿಗಾಗಿ ಕಾದರು ಎಂದು ರೋಮಾಂಡ್ ರೋಲಾ ಹೇಳುತ್ತಾರೆ. ಇದು ನಿಜವಲ್ಲ. ಸ್ವಾಮಿಗಳು ೨/೧೦/೧೮೯೩ ರಂದು ಜಾನ್ ಹೆನ್ರಿ ರೈಟ್’ಗೆ ಬರೆದಿರುವ ಪತ್ರದಲ್ಲಿ ‘ ಮೊದಲನೆಯದಾಗಿ ನಾನು ಕಟ್ಟ ಕಡೆಯಲ್ಲಿ ಕಾಂಗ್ರೆಸ್ ತಲುಪಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಲು ನಾನು ಮೊದಲೇ ಸಿದ್ಧತೆ ನಡೆಸಿರಲಿಲ್ಲ. ಈ ಸಿದ್ಧತೆಯಲ್ಲಿಯೇ ಸಮಯವೆಲ್ಲ ಕಳೆಯುತ್ತಿದ್ದಿತು….. ಪ್ರಿಯ ಸಹೋದರನೇ , ಜಗತ್ತಿನ ನಾನಾ ಕಡೆಗಳಿಂದ ಬಂದ ಶ್ರೇಷ್ಟ ವಾಗ್ಮಿಗಳು , ಮೇಧಾವಿಗಳ ಮಧ್ಯದಲ್ಲಿ ನಿಂತು ಮಾತಾಡಲು ನನಗೆ ಅಂಜಿಕೆಯಾಯಿತು. ಭಗವಂತ ನನಗೆ ಶಕ್ತಿಯನ್ನು ಅನುಗ್ರಹಿಸಿದ. ನಾನು ಹೆಚ್ಚು ಕಡಿಮೆ ಪ್ರತಿ ದಿನ ವೇದಿಕೆಯ ಮೇಲೆ ಜನರನ್ನು ಧೈರ್ಯವಾಗಿ ಎದುರಿಸಿದೆ……….ಭರತಖಂಡದ ಕೆಲವು ಒಳ್ಳೆಯ ವ್ಯಕ್ತಿಗಳು ಇಲ್ಲಿರುವರು. ಮೃದು ಹೃದಯದ ಬೌದ್ಧ ಭಿಕ್ಷು ಧರ್ಮಪಾಲ , ವಾಗ್ಮಿ ಮಜುಂದಾರ ಇರುವರು. ದೂರದಲ್ಲಿರುವ ದರಿದ್ರ ಭರತಖಂಡದಲ್ಲಿಯೂ ಇಂತಹ ಶ್ರೀಮಂತವಾದ , ಬಲಾಢ್ಯವಾದ ದೇಶದಲ್ಲಿ ಹುಟ್ಟಿ ಬೆಳೆದವರೊಂದಿಗೆ ಸೌಹಾರ್ದ ಭಾವನೆಗಳನ್ನು ತೋರುವ ಹೃದಯಗಳಿವೆ ಎನ್ನುವುದನ್ನು ಗಮನಿಸಿ ‘ ಎಂದು ಬರೆದರು.
೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’’ಗೆ ಬರೆದ ಪತ್ರದಲ್ಲಿ ‘ ….ಕೆಳಗೆ ದೊಡ್ದ ಪ್ರಾಂಗಣ. ಮೇಲೆ ದೊಡ್ದ ಗ್ಯಾಲರಿ. ನೀವೇ ಕಲ್ಪನೆ ಮಾಡಿಕೊಳ್ಳಿ ೬-೭ ಸಾವಿರ ಮಂದಿ ಅತ್ಯಂತ ಸುಸಂಸ್ಕೃತರಾದ ಗಂಡಸರು , ಹೆಂಗಸರು ಕಿಕ್ಕಿರಿದು ನೆರೆದಿರುವರು. ವೇದಿಕೆಯ ಮೇಲೆ ಜಗತ್ತಿನಲ್ಲಿರುವ ಎಲ್ಲ ದೇಶಗಳ ವಿದ್ಯಾವಂತರು ನೆರೆದಿದ್ದಾರೆ. ಹುಟ್ಟಿದಂದಿನಿಂದ ಬಹಿರಂಗ ಸಭೆಯಲ್ಲಿ ಮಾತನಾಡದ ನಾನು ಈ ವಿದ್ವತ್ ಸಭೆಯೆದುರು ಭಾಷಣ ಮಾಡುವುದೆಂದರೇನು ?............ಅವರಲ್ಲಿ ಒಬ್ಬೊಬ್ಬರು ಮುಂದೆ ಬಂದು ಭಾಷಣ ಮಾಡಿದರು. ನನ್ನ ಎದೆ ನಡುಗುತ್ತಿದ್ದಿತು. ನಾಲಿಗೆ ಒಣಗಿತು. ನನಗೇನೋ ಅಂಜಿಕೆಯಾಯಿತು. ಬೆಳಿಗ್ಗೆ ಮಾತನಾಡಲು ಧೈರ್ಯ ಬರಲಿಲ್ಲ. ಮಜುಂದಾರರು ಸೊಗಸಾಗಿ ಮಾತನಾಡಿದರು. ಚಕ್ರವರ್ತಿಯವರದು ಅದಕ್ಕಿಂತ ಸೊಗಸಾಗಿದ್ದಿತು. ಕೇಳುಗರು ಅವರನ್ನು ಕೊಂಡಾಡಿದರು. ……. ನಾನು ಸಣ್ಣ ಭಾಷಣ ಮಾಡಿದೆ. ಅಮೆರಿಕದ ಸೋದರರೇ , ಸೋದರಿಯರೇ ಎಂದು ಸಂಬೋಧಿಸಿದೆ. ಕಿವಿ ಕಿವುಡಾಗುವಂತೆ ಎರಡು ನಿಮಿಷ ಚಪ್ಪಾಳೆಯಾಯಿತು. ಇದು ನಿಂತ ಮೇಲೆ ನನ್ನ ಭಾಷಣ ಮೊದಲಾಯಿತು. ಅದು ಮುಗಿದ ಮೇಲೆ ಉದ್ವೇಗದಿಂದ ದಣಿವಾಗಿ ಕುಳಿತುಬಿಟ್ಟೆ. ಮಾರನೆಯ ದಿನ ಎಲ್ಲ ಪತ್ರಿಕೆಗಳು ನನ್ನ ಭಾಷಣವೇ ಎಲ್ಲಕ್ಕಿಂತ ಉತ್ತಮವಾದುದು ಎಂದು ಕೊಂಡಾಡಿದವು. ನಾನು ಇಡೀ ಅಮೆರಿಕ ದೇಶಕ್ಕೆ ಪರಿಚಿತನಾದೆ….......ನಾನು ಹಿಂದೂ ಧರ್ಮದ ಮೇಲಿನ ಲೇಖನ ಓದಿದ ದಿನ ಹಿಂದೆಂದೂ ಇಲ್ಲದಷ್ಟು ಜನ ನೆರೆದಿದ್ದರು…… ನಿನ್ನ ಮಾವನ ಲೇಖನ ನಾನು ನೋಡಿದುದರಲ್ಲಿ ಬಹಳ ವಿಚಿತ್ರವಾದುದು. ಅದು ವ್ಯಾಪಾರದ ಸರಕಿನ ಪಟ್ಟಿಯಂತಿದ್ದು ಸಭೆಯ ಮುಂದೆ ಓದಲು ಯೋಗ್ಯವಾಗಿರಲಿಲ್ಲ. ಅದಕ್ಕೇನೆ ನರಸಿಂಹ ಪಕ್ಕದ ಕೋಣೆಯಲ್ಲಿ ಲೇಖನದಿಂದ ಕೆಲವು ಭಾಗಗಳನ್ನು ಓದಿದನು. ಯಾರಿಗೂ ಒಂದಕ್ಷರವೂ ಗೊತ್ತಾಗಲಿಲ್ಲ. ಅವನಿಗೆ ಇದನ್ನು ಹೇಳಬೇಡ. ಹೆಚ್ಚು ಭಾವಗಳನ್ನು ಸಾದ್ಯವಾದಷ್ಟು ಕಡಿಮೆ ಪದಗಳಲ್ಲಿ ಅಡಗಿಸುವುದು ಒಂದು ಕುಶಲ ವಿದ್ಯೆ. ಮಣಿಲಾಲ ದ್ವಿವೇದಿಯವರ ಲೇಖನವನ್ನು ಕೂಡ ಕಡಿಮೆ ಮಾಡಬೇಕಾಯಿತು, ಅಂತಹ ಹುಚ್ಚು ಕೂಗಾಟಕ್ಕೆ ಕೊನೆಯೆಲ್ಲಿ. …………. ಸಿಂಹಳದ ಧರ್ಮಪಾಲರು ಸಭೆಯ ಆದರಣೆಗೆ ಪಾತ್ರರಾದವರಲ್ಲಿ ಒಬ್ಬರು. ಆದರೆ ಅವರು ಅಷ್ಟು ಚೆನ್ನಾಗಿ ಮಾತನಾಡುವವರಲ್ಲ. ಅವರು ಕೇವಲ ಮ್ಯಾಕ್ಸ್ ಮುಲ್ಲರ್ , ರೀಸ್ ಡೇವಿಡ್ ಅವರ ಹೇಳಿಕೆಗಳನ್ನು ಉದ್ದರಿಸುತ್ತಾರೆ…’..ಎಂದು ಹೇಳಿದ್ದಾರೆ.
ಸ್ವಾಮಿಗಳ ಮೇಲಿನ ಹೇಳಿಕೆಯಲ್ಲಿ ನಿಜಾಂಶಗಳೊಂದಿಗೆ ಉತ್ಪ್ರೇಕ್ಷೆ ಮತ್ತು ಅತ್ಮಪ್ರಶಂಸೆಗಳು ಹಾಸುಹೊಕ್ಕಾಗಿವೆ. ಸ್ವಾಮಿಗಳಿಗಿಂತ ಮೊದಲು ಪಿ.ಸಿ ಮಜುಂದಾರ ಮತ್ತು ಜ್ಞಾನೇಂದ್ರ ಚಕ್ರವರ್ತಿ ಮಾತನಾಡಿದ್ದರು. ಅವರಿಬ್ಬರನ್ನು ಕೇಳುಗರು ಚಪ್ಪಾಳೆಯೊಂದಿಗೆ ಅನುಮೋದಿಸಿದ್ದರು. ರಿವ್ಯೂ ಆಫ್ ವರ್ಲ್ಡ್ಸ್ ರಿಲಿಜಿಯಸ್ ಕಾಂಗ್ರೆಸ್’ ಕೃತಿಯಲ್ಲಿ ಎಲ್.ಪಿ ಮರ್ಸರ್ ಮಜುಂದಾರರಿಗೆ ಊಹಿಸಲಾಗದಂತಹ ಮಹಾ ಚಪ್ಪಾಳೆ ಬಂದವು ಎಂದು ದಾಖಲಿಸಿದ್ದಾನೆ. (9) ಮಜುಂದಾರ ಮತ್ತು ಜ್ಞಾನೇಂದ್ರ ಚಕ್ರವರ್ತಿಯವರ ಭಾಷಣಗಳನ್ನು ಜನ ಮೆಚ್ಚಿದ್ದರು , ಇದನ್ನು ಸ್ವಾಮಿಗಳು ತಮ್ಮ ಪತ್ರದಲ್ಲಿಯೇ ತಿಳಿಸಿದ್ದಾರೆ. ಪಿ.ಸಿ ಮಜುಂದಾರ ಅನುಭವಿ ಮಾತುಗಾರ ಅವರಿಗೆ ಮಹಾಸಭೆಯನ್ನು ಎದುರಿಸುವುದು ಕಷ್ಟವಾಗಲಿಲ್ಲ ಎಂದು ಹೇಳಬಹುದು. ಅದರೆ ಜ್ಞಾನೇಂದ್ರ ಚಕ್ರವರ್ತಿಗೆ ಸ್ವಾಮಿಗಳಂತೆಯೇ ಇದು ಮೊದಲ ಮಹಾ ಸಭೆಯಾಗಿದ್ದಿತು. ಆತ ಅದಕ್ಕೇನೂ ಹೆದರದೆ ದಿಟ್ಟನಾಗಿ ಮಾತನಾಡಿ ಕೇಳುಗರ ಚಪ್ಪಾಳೆಯ ಮನ್ನಣೆಯನ್ನು ಪಡೆದಿದ್ದನೆಂದು ಪತ್ರಿಕೆಗಳ ವರದಿಗಳು ತಿಳಿಸುತ್ತವೆ. ಸ್ವಾಮಿಗಳು ಅಷ್ಟು ದೊಡ್ದ ಸಭೆಯಲ್ಲಿ ಮಾತನಾಡಲು ತಮಗಾದ ಹೆದರಿಕೆಯನ್ನು ಅವರೇ ಹೇಳಿಕೊಂಡಿದ್ದಾರೆ. ಅದರ ಬಗ್ಗೆ ಎರಡು ಮಾತುಗಳಿರಲಾರವು. ಕೊಲಂಬಸ್ ಸಭಾಂಗಣದಲ್ಲಿ ೩೦೦೦ ಜನರಿಗೆ ಕುಳಿತುಕೊಳ್ಳಲು ಇನ್ನೂ ೧೦೦೦ ಜನ ನಿಂತುಕೊಳ್ಳಲು ಅವಕಾಶವಿದ್ದಿತು. ಅದರಲ್ಲಿ ೬-೭ ಸಾವಿರ ಜನ ಹಿಡಿಸುವುದು ಸಾದ್ಯವಿರಲಿಲ್ಲ. ಸೇರಿದ್ದ ಜನ ಸಂಖ್ಯೆಯನ್ನು ಅಂದಾಜು ಮಾಡುವಲ್ಲಿ ಸ್ವಾಮಿಗಳು ತಪ್ಪಿರಬಹುದು. ಆದರೆ ಮರುದಿನ ಎಲ್ಲ ಪತ್ರಿಕೆಗಳು ನನ್ನ ಭಾಷಣವೇ ಉತ್ತಮ ಎಂದು ಕೊಂಡಾಡಿದವು ಎನ್ನುವುದು ಸುಳ್ಳು. ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯ ದಿನದ ವರದಿ ಮಾಡಿದ್ದ ಷಿಕಾಗೊ ಡೈಲಿ ಟ್ರಿಬ್ಯೂನ್ , ಷಿಕಾಗೊ ಹೆರಾಲ್ಡ್ , ಷಿಕಾಗೊ ಡೈಲಿ ಇಂಟರ್ ಓಷನ್ ಕ್ರಿಟಿಕ್ , ದಿ ನ್ಯೂಯಾರ್ಕ್ ಹೆರಾಲ್ಡ್ , ದಿ ಬೋಸ್ಟನ್ ಈವೆನಂಗ್ ಟ್ರಾನ್ಸ್’ಸ್ಕ್ರಿಪ್ಟ್ ಈ ಯಾವ ಪತ್ರಿಕೆಗಳು ಸ್ವಾಮಿಗಳ ಭಾಷಣ ಅತ್ಯುತ್ತಮ ಎಂದು ಬರೆದಿರಲಿಲ್ಲ.
ಸ್ವಾಮಿಗಳು ‘ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕ ‘ ಎಂದ ತಕ್ಷಣ ಚಪ್ಪಾಳೆ ಹರ್ಷೋದ್ಗಾರಗಳು ಬಂದವು. ಇದು ಸ್ವಾಮಿಯವರಿಂದ ಬಂದ ಮಾತುಗಳಲ್ಲ. ಅವು ಯಾವುದೋ ಒಂದು ಅಂತಶ್ಯಕ್ತಿಯಿಂದ ಬಂದುದು ಎಂದು ಮಾರಿ ಲೂಯಿ ಬರ್ಕೆ ಅಭಿಪ್ರಾಯ ಪಟ್ಟಿದ್ದಾಳೆ. ಜೆ.ಎಚ್. ಬರೋಸ್ ಸ್ವಾಮಿಗಳ ಮೊದಲ ಈ ಐದು ಶಬ್ದಗಳ ನಂತರ ಕೆಲ ನಿಮಿಷಗಳ ಚಪ್ಪಾಳೆ ಹಿಂಬಾಲಿಸಿತು ಎನ್ನುತ್ತಾರೆ. ಇದಕ್ಕೆ ಕಾರಣ ಕೊಡುವುದಕ್ಕೆ ಆತ ಹೋಗುವುದಿಲ್ಲ. ಸ್ವಾಮಿ ವಿವೇಕಾನಂದರು ಸಭೆಯನ್ನು ಉದ್ದೇಶಿಸಿದ ಹೊಸತನಕ್ಕಾಗಿ ಮತ್ತು ಆಕರ್ಷಕ ವ್ಯಕ್ತಿತ್ವಕ್ಕಾಗಿ ಚಪ್ಪಾಳೆ ಬಂದಿತೆಂದು ಮರ್ಸೆರ್ ತಿಳಿಸುತ್ತಾನೆ. ಹೌಟ್ಟನ್ ಚಪ್ಪಾಳೆ ಮತ್ತು ಹರ್ಷೋದ್ಗಾರಗಳ ಬಗ್ಗೆ ಹೇಳುವುದಿಲ್ಲ. ಆತ ಅವು ಮುಖ್ಯವಲ್ಲವೆಂದು ಭಾವಿಸಿರಬಹುದು ಅಥವಾ ಚಪ್ಪಾಳೆ ಬೇರೆ ಪ್ರತಿನಿಧಿಗಳಿಗೂ ಬಂದಿದ್ದು ಅದರಲ್ಲಿ ಅಂತಹ ವಿಶೇಷವೇನಿಲ್ಲ ಎಂದು ದಾಖಲಿಸದೆ ಬಿಟ್ಟಿರಬಹುದು. ಸ್ವಾಮಿಗಳು ಮರುದಿನ ನಾನು ಇಡೀ ಅಮೆರಿಕಕ್ಕೆ ಪರಿಚಿತನಾದೆ ಎನ್ನುವುದರಲ್ಲಿ ಹುರುಳಿಲ್ಲ. ಷಿಕಾಗೊ ಮೂಲಕ ಪತ್ರಿಕೆಗಳು ಇತರ ಪ್ರತಿನಿಧಿಗಳಂತೆ ಸ್ವಾಮಿಗಳನ್ನು ಕುರಿತಾಗಿ ಬರೆದಿದ್ದವು. ನ್ಯೂಯಾರ್ಕ್ ಪತ್ರಿಕೆಗಳಲ್ಲಿ ಸ್ವಾಮಿಗಳ ಹೆಸರಿರಲಿಲ್ಲ ಮತ್ತು ವಿಶ್ವ ಧರ್ಮ ಸಂಸತ್ತಿಗೆ ಅವು ಮೀಸಲಿಟ್ಟಿದ್ದ ಜಾಗವೂ ಹೇಳಿಕೊಳ್ಳುವಂತಿರಲಿಲ್ಲ. ಸ್ವಾಮಿಗಳು ನಾನು ಹಿಂದೂ ಧರ್ಮದ ಬಗ್ಗೆ ಓದಿದ ದಿನ (೧೯/೯/೧೮೯೩) ಹಿಂದೆಂದೂ ಇರದಷ್ಟು ಜನ ಇದ್ದರೆಂದು ಹೇಳಿದ್ದಾರೆ. ಪತ್ರಿಕೆಗಳ ವರದಿಗಳು ಇದನ್ನು ಸಮರ್ಥಿಸುವುದಿಲ್ಲ. ಉದ್ಘಾಟನೆ ಮತ್ತು ಸಮಾರೋಪದ ದಿನ ಅತಿ ಹೆಚ್ಚು ಜನ ನೆರೆದಿದ್ದರು. ತಮ್ಮ ಪ್ರಾಶಸ್ತ್ಯ ಹೆಚ್ಚಿಸಿಕೊಳ್ಳಲು ಸ್ವಾಮಿಗಳು ಇತರ ಭಾರತೀಯರ ಪಾತ್ರವನ್ನು ತಗ್ಗಿಸಿದ್ದರು. ಕಾಯಸ್ಥ ಸಂಘದ ಕಾರ್ಯದರ್ಶಿ ಲಾಹೋರ್’ನ ಲಕ್ಷ್ಮೀನಾರಾಯಣ ಬಗ್ಗೆಯೂ ಸ್ವಾಮಿಗಳು ಒಂದು ಮಾತನ್ನೂ ಹೇಳಿಲ್ಲ. ಅಳಸಿಂಗ ಪೆರುಮಾಳರ ಮಾವ ಪಾರ್ಥಸಾರಥಿ ಅಯ್ಯಂಗಾರ್ ಬರೆದ ಲೇಖನ ಸರಿಯಿರಲಿಲ್ಲ. ಅದನ್ನು ಮುಖ್ಯ ಸಭಾಂಗಣದ ಪಕ್ಕದ ಸಭೆಯಲ್ಲಿ ನರಸಿಂಹಾಚಾರಿ ಓದಿದನು ಎಂದಿದ್ದಾರೆ. ೨೨/೯/೧೮೯೩ ರ ಬೆಳಿಗ್ಗೆ ಸ್ವಾಮಿಗಳು ‘ಕಾನ್ಫರೆನ್ಸ್ ಆನ್ ದಿ ಆರ್ಥೊಡಾಕ್ಸ್ ಹಿಂದೂಯಿಸಂ ಅಂಡ್ ದಿ ವೇದಾಂತ ಫಿಲಾಸಫಿ’ ಭಾಷಣವನ್ನು ಈ ಪಕ್ಕದ ಸಭಾಂಗಣದಲ್ಲಿಯೇ ಮಾಡಿದ್ದರು. ಮಣಿಲಾಲ ದ್ವಿವೇದಿಯವರ ಲೇಖನವನ್ನು , ಧರ್ಮಪಾಲರ ಭಾಷಣಗಳನ್ನು ಜನ ಮೆಚ್ಚಿದ್ದರೆಂದು ಪತ್ರಿಕೆಗಳು , ಸಂಸತ್ತಿನ ವರದಿಗಳು ತಿಳಿಸಿದರೆ ಸ್ವಾಮಿಗಳು ಧರ್ಮಪಾಲ ಉತ್ತಮ ಮಾತುಗಾರ ಅಲ್ಲ ಎಂದಿದ್ದಾರೆ.
(೫) ಶ್ರೀಮತಿ ಎಸ್.ಕೆ ಬ್ಲಾಡ್’ಗೆಟ್ ‘ಆ ತರುಣ ಮಾತನಾಡಲು ಎದ್ದು ನಿಂತು ಅಮೆರಿಕದ ಸಹೋದರ , ಸಹೋದರಿಯರೇ ಎಂದಾಗ ತಮಗೆ ತಿಳಿಯದ ಯಾವುದಕ್ಕೋ ಕಾಣಿಕೆ ಸಲ್ಲಿಸಲೋ ಎನ್ನುವಂತೆ ಏಳು ಸಾವಿರ ಜನ ಎದ್ದು ನಿಂತರು. ಅದಾದ ( ಸಭೆ ಮುಗಿದ ಬಳಿಕ) ನಂತರ ನೂರಾರು ಹೆಂಗಸರು ಬೆಂಚುಗಳ ಮೇಲೆ ಹತ್ತಿ ನಡೆದು ಆತನನ್ನು ಸಮೀಪಿಸಲು ಯತ್ನಿಸಿದರು . ಆಗ ನಾನು ಮಗುವೇ ಈ ಹೊಡೆತವನ್ನು ನೀನು ಸಹಿಸಬಲ್ಲೆಯಾದರೆ ನಿಜವಾಗಿಯೂ ನೀನೊಬ್ಬ ದೇವತೆ ಎಂದು ನನ್ನಲ್ಲೇ ಹೇಳಿಕೊಂಡೆ’ ಎಂದು ತಿಳಿಸಿದ್ದಾರೆ. ಇದನ್ನು ಸ್ವಾಮಿಗಳ ಅಭಿಮಾನಿಗಳು ಮೇಲಿಂದ ಮೇಲೆ ತಿಳಿಸುತ್ತಾರೆ. ಕುತೂಹಲಕರ ವಿಷಯವೆಂದರೆ ‘ರೆಮಿನಿಸೆನ್ಸಸ್ ಆಫ್ ವಿವೇಕಾನಂದ-೧೯೬೧ ಕೃತಿಯಲ್ಲಿ ಎಸ್.ಕೆ ಬ್ಲಾಡ್’ಗೆಟ್ ೨/೯/೧೯೦೨ ರಂದು ಜೊಸೆಫಿನ್ ಮೆಕ್ಲಿಯಾಡ್’ಗೆ ಬರೆದ ಪತ್ರವಿದೆ. ಇದು ಸ್ವಾಮಿಗಳು ತೀರಿಕೊಂಡ ೫೮ ದಿನಗಳ ನಂತರ ಎಸ್.ಕೆ ಬ್ಲಾಡ್’ಗೆಟ್ ಸ್ವಾಮಿಗಳೊಂದಿಗಿದ್ದ ಹಳೆಯ ನೆನಪುಗಳನ್ನು ಗೆಳತಿಯೊಂದಿಗೆ ಹಂಚಿಕೊಂಡಿರುವ ಪತ್ರವಿದು. ಇದರಲ್ಲಿ ಹೆಂಗಸರು ಸ್ವಾಮಿಗಳತ್ತ ನುಗ್ಗುತ್ತಿದ್ದ ವಿಷಯವಿಲ್ಲ. ಈ ಸಂಗತಿಯನ್ನು ಮಾರಿ ಲೂಯಿ ಬರ್ಕೆ ೧೯೫೭ ರ ಸ್ವಾಮಿ ವಿವೇಕಾನಂದ ಇನ್ ದಿ ವೆಸ್ಟ್ –ನ್ಯೂ ಡಿಸ್ಕವರೀಸ್’: ಭಾಗ-೧ ರಲ್ಲಿ ಮೊದಲ ಬಾರಿಗೆ ಬರೆದರು. (10) ಇದನ್ನು ಪ್ರವ್ರಾಜಿಕಾ ಆನಂದಪ್ರಾಣ ತಮ್ಮ ವೇದಾಂತ ಅಂಡ್ ದಿ ವೆಸ್ಟ್ -೧೯೬೨ ಪುಸ್ತಕದಲ್ಲಿ ಪುನರುಚ್ಚರಿಸಿದರು. ಇದು ಜುಲೈ ೧೯೬೩ ರ ಪ್ರಬುದ್ಧ ಭಾರತದ ಮೂಲಕ ಹೆಚ್ಚಿನ ಪ್ರಚಾರ ಪಡೆಯಿತು. ಸ್ವಾಮಿಗಳತ್ತ ಹೆಂಗಸರು ಮುನ್ನುಗ್ಗುತ್ತಿದ್ದ ಕಥೆಯನ್ನು ಧರ್ಮ ಸಂಸತ್ತು ನಡೆದ ೬೪ ವರ್ಷಗಳ ನಂತರ ಹೊಸೆಯಲಾಯಿತು. ೧೨/೯/೧೮೯೩ ರ ಷಿಕಾಗೊ ಟ್ರಿಬ್ಯೂನ್ ಪತ್ರಿಕೆಯ ವರದಿಯಿಂದ ವಿಶ್ವ ಧರ್ಮ ಸಂಸತ್ತಿನ ಭಾಷಣಗಳಿಗೆ ಹಾಜರಾಗಿದ್ದ ಜನ ಅಪರಿಚಿತರನ್ನು ನೋಡಲು ಕಾತರರಾಗಿದ್ದರೇ ಹೊರತು ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಅಲ್ಲ ಎನ್ನುವುದು ಸ್ಪಷ್ಟ.
(೬) ಸ್ವಾಮಿಗಳ ಭಾಷಣಗಳನ್ನು ಕೇಳಲು ಸಭಿಕರು ಮುಗಿಬೀಳುತ್ತಿದ್ದರು. ಅವರ ಭಾಷಣ ಕಲಾಪದ ಆರಂಭದಲ್ಲಿ ಮುಗಿದರೆ ಸಭಿಕರು ಎದ್ದು ಹೊರನಡೆಯುತ್ತಾರೆ ಎನ್ನುವುದು ಸಂಘಟಕರಿಗೆ ತಿಳಿದಿದ್ದಿತು. ಆದ್ದರಿಂದ ಅವರು ಸ್ವಾಮಿಗಳ ಭಾಷಣಗಳನ್ನು ದಿನದ ಕೊನೆಗೆ ಇರಿಸುತ್ತಿದ್ದರು. ಸಭಿಕರು ಸ್ವಾಮಿಗಳ ಕೊನೆ ೧೫-೨೦ ನಿಮಿಷಗಳ ಭಾಷಣ ಕೇಳಲು ಇತರರ ಹಲವಾರು ಗಂಟೆಗಳ ನೀರಸ ಭಾಷಣ ಮತ್ತು ಕಲಾಪವನ್ನು ಸಹಿಸಿಕೊಂಡಿರುತ್ತಿದ್ದರು ಎನ್ನುವ ‘ದಿ ಲೈಫ್-೧೯೧೪’ ಹೇಳಿಕೆ ವ್ಯಾಪಕವಾಗಿ ಜನಪ್ರಿಯವಾಗಿದೆ. ಈ ನಂಬಿಕೆಗೆ ೨೦/೯/೧೮೯೩ ರ ಸಂಚಿಕೆಯಲ್ಲಿ ‘ಬೋಸ್ಟನ್ ಈವೆನಿಂಗ್ ಟ್ರಾನ್ಸ್’ಕ್ರಿಪ್ಟ್ ’ಕಿತ್ತಳೆ ಬಣ್ಣದ ಉಡುಪಿನ ಈ ಪೌರಾತ್ಯ ಸಾಯಂಕಾಲ ೫ ಗಂಟೆಗೆ ಭಾಷಣಕ್ಕೆ ಎದ್ದಾಗ ದೊರೆತ ಚಪ್ಪಾಳೆಯಿಂದ ಈತನ ಭಾಷಣವನ್ನು ಕೊನೆಗಲ್ಲದೆ ಮೊದಲೇ ಮಾಡಿದ್ದರೆ ಸಭಾಂಗಣದಲ್ಲಿ ನೆರಿದಿದ್ದ ಸಭಿಕರಲ್ಲಿ ಕೆಲವರು ಕೊನೆಯವರೆಗೂ ಕಾಯುತ್ತಿರಲಿಲ್ಲ.’ ಎಂದು ಮಾಡಿದ ವರದಿಯೇ ಆಧಾರವಾಗಿದೆ. ಇದಕ್ಕೆ ಪೂರಕವಾಗಿ ಸ್ವಾಮಿಗಳು ೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’’ಗೆ ಬರೆದ ಪತ್ರದಲ್ಲಿ ‘ ಪ್ರತಿಯೊಂದು ಸ್ಥಳದಲ್ಲಿಯೂ , ಪ್ರತಿಯೊಂದು ಮೂಲೆಯಲ್ಲಿಯೂ ಹೆಂಗಸರು! ಹೆಂಗಸರು! ಮುಂಚೆ ಮಾಡಿದ ಭಾಷಣವನ್ನೆಲ್ಲ ಸಹನೆಯಿಂದ ಕೇಳುತ್ತಿದ್ದರು- ಕೊನೆಗೆ ವಿವೇಕಾನಂದನ ಮಾತುಗಳನ್ನು ಕೇಳುವುದಕ್ಕೆ ಮುಂತಾಗಿ ವರ್ತಮಾನ ಪತ್ರಿಕೆಗಳು ನನ್ನ ಬಗ್ಗೆ ಬರೆದಿರುವುದನ್ನು ನಿನಗೆ ಕತ್ತರಿಸಿ ಕಳಿಸಿದರೆ ನೀನು ಸೋಜಿಗ ಪಡಬಹುದು. ನಾನು ಕೀರ್ತಿ ದ್ವೇಷಿ ಎನ್ನುವುದು ನಿನಗೆ ಗೊತ್ತಿದೆ. ಇಷ್ಟು ಹೇಳಿದರೆ ಸಾಕು. ನಾನು ಯಾವಾಗ ವೇದಿಕೆಯ ಮೇಲೆ ಮಾತನಾಡುವುದಕ್ಕೆ ಹೋದರೂ ನನಗೋಸುಗ ಕಿವಿ ಕಿವುಡಾಗುವಂತೆ ದೊಡ್ಡ ಚಪ್ಪಾಳೆಯಾಗುತ್ತಿದ್ದಿತು. ಹೆಚ್ಚು ಕಡಿಮೆ ಎಲ್ಲ ಪತ್ರಿಕೆಗಳು ನನ್ನನ್ನು ಪ್ರಶಂಸೆ ಮಾಡಿದವು. ಅತಿ ಮತಾಂಧ ಪತ್ರಿಕೆಗಳೂ ಕೂಡ ‘ಸುಂದರ ಮುಖ, ಚಿತ್ತಾಕರ್ಷಕ ವರ್ಚಸ್ಸು , ಅಮೋಘ ವಾಕ್ಚಾತುರ್ಯದ ಈ ವ್ಯಕ್ತಿ ಸಭೆಯಲ್ಲಿ ಅಗ್ರಗಣ್ಯ ಎನ್ನುವುದನ್ನು ಒಪ್ಪಬೇಕಾಯಿತು.…… ಸಾಧಾರಣ ಎಲ್ಲರಿಗೆ ಕೊಡುವ ಅರ್ಧ ಗಂಟೆಗಿಂತ ನನಗೆ ಹೆಚ್ಚು ಕೊಟ್ಟಿದ್ದರು. ಸಭಿಕರನ್ನು ಕೊನೆಯವರೆಗೂ ಕೂಡಿಸುವುದಕ್ಕೆ ಮನೋರಂಜಕವಾಗಿ ಮಾತನಾಡುವರನ್ನು ಕೊನೆಗೆ ಇರಿಸುತ್ತಿದ್ದರು…… ’ ಎಂದು ಬರೆದಿರುವುದು ಆಧಾರಗಳಾಗಿವೆ. ಹೀಗೆ ಬರೆದ ಸ್ವಾಮಿಗಳು ಪತ್ರಿಕೆಯ ಯಾವ ಮೂಲ ತುಣುಕುಗಳನ್ನೂ ಕಳಿಸಲಿಲ್ಲ. ಏಕೆಂದರೆ ಅಂತಹ ಸುದ್ದಿಯೇ ಇರಲಿಲ್ಲ.
ವಿಶ್ವ ಧರ್ಮ ಸಂಸತ್ತಿನ ಸಭೆಗಳನ್ನು ಮೂರು ಕಲಾಪಗಳಲ್ಲಿ (ಬೆಳಿಗ್ಗೆ-ಮಧ್ಯಾಹ್ನ-ಸಾಯಂಕಾಲ) ಕೊಲಂಬಸ್ ಮುಖ್ಯ ಸಭಾಂಗಣ ಮತ್ತು ಸಭಾಂಗಣ-೩ ರಲ್ಲಿ (ಡಿನೋಮಿನೇಷನಲ್ ಕಾಂಗೆಸ್-ಸೈಂಟಿಫಿಕ್ ಸೆಕ್ಷನ್) ಸಮಾಂತರದಲ್ಲಿ ಸಾಗುತ್ತಿದ್ದವು. ಕೊಲಂಬಸ್ ಸಭಾಂಗಣದಲ್ಲಿ ೧೮ ದಿನಗಳಲ್ಲಿ ಬೆಳಿಗ್ಗೆ ೫೮ , ಮಧ್ಯಾಹ್ನ ೬೬ , ಸಾಯಂಕಾಲ ೩೧ ಒಟ್ಟು ೧೫೫ ಭಾಷಣಗಳು ,ಸೈಂಟಫಿಕ್ ಸೆಕ್ಷನ್’ನಲ್ಲಿ ಒಟ್ಟು ೨೫ ಭಾಷಣಗಳು ಜರುಗಿದವು. ಎರಡು ಕಡೆ ಸೇರಿ ೧೮೦ ಉಪನ್ಯಾಸಗಳಿದ್ದವು. ಇವುಗಳಲ್ಲಿ ಕೊಲಂಬಸ್ ಹಾಲ್’ನಲ್ಲಿ ಜರುಗಿದ ೨೦/೯/೧೮೯೩ ರ ಮಧ್ಯಾಹ್ನದ ಉಪನ್ಯಾಸ , ಅದೇ ದಿನದ ಸಾಯಂಕಾಲದ ಕೊನೆಯಲ್ಲಿ ಬೌದ್ಧ ಧರ್ಮ ಕುರಿತಾಗಿ ಧರ್ಮಪಾಲ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ , ೨೬/೯/೧೮೯೩ ರ ಸಾಯಂಕಾಲದ ಉಪನ್ಯಾಸ ೨೫/೯/೧೮೯೩ ರ ಸೈಂಟಿಫಿಕ್ ಸೆಕ್ಷನ್’ನ ಉಪನ್ಯಾಸಗಳಲ್ಲಿ ಮಾತ್ರ ಸ್ವಾಮಿಗಳು ಕೊನೆಗೆ ಭಾಷಣ ಮಾಡಿದರು. ಎಂದರೆ ೧೮೦ ಉಪನ್ಯಾಸಗಳಲ್ಲಿ ೪ ಉಪನ್ಯಾಸಗಳಲ್ಲಿ ಮಾತ್ರ ಅವರಿಗೆ ಕೊನೆಯ ಅವಕಾಶ ದಕ್ಕಿದ್ದಿತು. ಆದ್ದರಿಂದ ಸಂಘಟಕರು ಸಭಿಕರನ್ನು ಸೆಳೆಯಲು ಸ್ವಾಮಿಗಳ ಭಾಷಣಗಳನ್ನು ಕೊನೆಗೆ ಇರಿಸುತ್ತಿದ್ದರು ಎನ್ನುವುದು ಸುಳ್ಳು. . ‘ನಾನು ಯಾವಾಗ ವೇದಿಕೆಯ ಮೇಲೆ ಮಾತನಾಡುವುದಕ್ಕೆ ಹೋದರೂ ನನಗೋಸುಗ ಕಿವಿ ಕಿವುಡಾಗುವಂತೆ ದೊಡ್ಡ ಚಪ್ಪಾಳೆಯಾಗುತ್ತಿದ್ದಿತು’ ಎಂದು ಸ್ವಾಮಿಗಳು ಬಡಾಯಿ ಕೊಚ್ಚಿಕೊಂಡಿದ್ದಾರೆ. ಯಾವುದೇ ಪತ್ರಿಕೆ ಅಥವಾ ನಂತರ ಬಂದ ಸಂಸತ್ತಿನ ಅಧಿಕೃತ ದಾಖಲೆಗಳು ಇದಕ್ಕೆ ಸಮರ್ಥನೆಯನು ಒದಗಿಸುವುದಿಲ್ಲ.
೫/೪/೧೮೯೪ ಬೊಸ್ಟನ್ ಈವೆನಿಂಗ್ ಟ್ರಾನ್ಸ್’ಸ್ಕ್ರಿಪ್ಟ್ ಮತ್ತು ೧೧/೪/೧೮೯೪ ನಾರ್ಥಾಂಫ್ಟನ್ ಡೈಲಿ ಹೆರಾಲ್ಡ್ ಪತ್ರಿಕೆಗಳು ‘ (ಧರ್ಮ ಸಂಸತ್ತಿನಲ್ಲಿ) ಕೊಲಂಬಸ್ ಹಾಲ್’ನಲ್ಲಿ ನೆರೆಯುತ್ತಿದ್ದ ೪೦೦೦ ಕ್ಕೂ ಅಧಿಕ ಸಂಖ್ಯೆಯ ಜನ ಮುಗುಳ್ನಗ್ಗುತ್ತ ಈ ವ್ಯಕ್ತಿಯ ಹದಿನೈದು ನಿಮಿಷಗಳ ಭಾಷಣ ಕೇಳುವ ನಿರೀಕ್ಷೆಯಲ್ಲಿ ಎರಡು ಮೂರು ಗಂಟೆಗಳ ಕಾಲ ಕಾದಿರುತ್ತಿದ್ದರು’ ಎಂದು ಬರೆದವು. ಧರ್ಮ ಸಂಸತ್ತಿನಲ್ಲಿ ಭಾಷಣಗಳ ಸರದಿಯಲ್ಲಿ ಸ್ವಾಮಿಗಳು ಇದ್ದ ಸ್ಥಾನ ಈ ಹೇಳಿಕೆಗಳಿಗೆ ಪೂರಕವಾಗಿಲ್ಲ. ವಿಶ್ವ ಧರ್ಮ ಸಂಸತ್ತ ಮುಗಿದ್ ೭ ತಿಂಗಳಿನ ನಂತರ ಅಂತಹ ವರದಿ ಬಂದಿರುವುದನ್ನು ಸ್ವಲ್ಪ ಬಿಡಿಸಿ ನೋಡಿದರೆ ಸ್ವಾಮಿಗಳ ಭಾಷಣಗಳನ್ನು ಏರ್ಪಡಿಸಲು ಒಪ್ಪಂದ ಮಾಡಿಕೊಂಡಿದ್ದ ಕ್ಲೇಟನ್ ಲೈಸಿಯಂ ಲೆಕ್ಚರ್ ಬ್ಯೂರೊ ಸಂಸ್ಥೆ ವ್ಯಾವಹಾರಿಕ ಕಾರಣಗಳಿಗಾಗಿ ಮಾಡುತ್ತಿದ್ದ ಇಂತಹ ಪ್ರಚಾರಗಳನ್ನು ಇತರ ಪತ್ರಿಕೆಗಳು ಮುಂದುವರೆಸತೊಡಗಿದವು. ಆದ್ದರಿಂದಲೇ ಈ ಎರಡು ವರದಿಗಳ ಭಾಷೆ , ವಾಕ್ಯ ರಚನೆ ಒಂದೇ ಆಗಿವೆ ಎಂದು ಗೊತ್ತಾಗುತ್ತದೆ.
ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳ ಭಾಷಣದ ಸಮಯವನ್ನು ತಿಳಿದುಕೊಂಡು ಅದೇ ವೇಳೆಗೆ ಹಾಜರಿರಲು ಜನರಿಗೆ ಮುಕ್ತ ಅವಕಾಶವಿದ್ದಿತು. ಅದಕ್ಕಾಗಿ ಅವರು ಹಲವು ಗಂಟೆಗಳ ಕಾಲ ಬೇರೆಯವರ ನೀರಸ ಭಾಷಣಗಳನ್ನು ಕೇಳುವ ಅನಿವಾರ್ಯತೆಯಿರಲಿಲ್ಲ. ಸಾವಿರಾರು ಜನ ಸ್ವಾಮಿಗಳ ಭಾಷಣವನ್ನು ಕೇಳಲಿಕ್ಕಾಗಿಯೇ ಬರುತ್ತಿದ್ದರೆಂದರೆ ಅವರು ಸಂಘಟಕರನ್ನು ಒತ್ತಾಯಿಸಿ ಅವರ ಭಾಷಣವನ್ನು ಮೊದಲಿರಿಸುವಂತೆ ಮಾಡುತ್ತಿದ್ದರು. ಕೊಲಂಬಸ್ ಹಾಲ್’ನಲ್ಲಿದ್ದ ಜನ ಬೇರೆ ಯಾವ ಪ್ರತಿನಿಧಿ ಮಾಡುವ ಭಾಷಣ ಕೇಳುವ ಅಗತ್ಯವಿಲ್ಲ ,ಸ್ವಾಮಿಗಳ ಭಾಷಣ ಒಂದೇ ಸಾಕು ಎಂದು ಭಾವಿಸಿದ್ದರು ಎನ್ನುವುದಾದರೆ ಅವರ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಸಂಶಯಿಸಬೇಕಾಗುತ್ತದೆ. ಧರ್ಮ ಸಂಸತ್ತಿಗೆ ಭಾಷಣ ಕೇಳಲು ಸುಶಿಕ್ಷಿತರೇ ಬರುತ್ತಿದ್ದರು. ಅವರಿಗೆ ಆಕರ್ಷಕ ಭಾಷಣ ಮತ್ತು ಅಂತಸತ್ತ್ವದ ಭಾಷಣಗಳ ನಡುವಿನ ವ್ಯತ್ಯಾಸ ಗೊತ್ತಾಗುತ್ತಿದ್ದಿತು. ಸ್ವಾಮಿಗಳ ಭಾಷಣದಷ್ಟೇ ಆಕರ್ಷಣೆ ಮತ್ತು ಅಂತಸತ್ತ್ವವಿರುವ ಭಾಷಣಗಳು ಧರ್ಮ ಸಂಸತ್ತಿನ ವರದಿಯಲ್ಲಿ ಇರುವುದನ್ನು ಗಮನಿಸಬೇಕು.
ಆಂಟ್ ಹನ್ನಾ ತನ್ನ ಕವಿತೆಯಲ್ಲಿ ಸ್ವಾಮಿಗಳ ಭಾಷಣವನ್ನು ‘ಅನುಮೋದಿಸುವ ಗರ್ಜನೆ’ಗಳು ಬರುತ್ತಿದ್ದವೆಂದು ಹಾಡಿದ್ದಾಳೆ. ಇದು ನಿಜವೆಂದು ವಿಲಿಯಂ ಅರ್ನೆಸ್ಟ್ ಹಾಕಿಂಗ್ ೧೯೬೩ರಲ್ಲಿ ಪ್ರಕಟಗೊಂದ ‘ವೇದಾಂತ ಅಂಡ್ ದಿ ವೆಸ್ಟ್’ ಕೃತಿಯಲ್ಲಿ ಬೆಂಬಲಿಸಿದ್ದಾನೆ. ಅಧಿಕೃತ ದಾಖಲೆಗಳು ಇಂತಹ ಸನ್ನಿವೇಶಗಳನ್ನು ಹೇಳುವುದೇ ಇಲ್ಲ. ಹಾಕಿಂಗ್ ೧೮೯೬ ರಲ್ಲಿ ಸ್ವಾಮಿಗಳು ಕೇಂಬ್ರಿಜ್ , ಮೆಸಾಷುಸೆಟ್ಸ್’ನಲ್ಲಿ ಭಾಷಣ ಕೇಳಿದ್ದರೇ ಹೊರತು ಧರ್ಮ ಸಂಸತ್ತಿಗೆ ಹೋಗಿರಲಿಲ್ಲ. ಕೇಂಬ್ರಿಜ್ , ಮೆಸಾಷುಸೆಟ್ಸ್ ಭಾಷಣಗಳ ವರದಿಗಳು ವಿವಿಧ ಪತ್ರಿಕೆಗಳ ಮೂಲಕ ಲಭ್ಯವಿವೆ. ಅವುಗಳಲ್ಲಿ ಇಂತಹ ಮಾಹಿತಿಯಿಲ್ಲ.
(೭) ಹಿರಾಂ ಮ್ಯಾಕ್ಸಿಂ ಎನ್ನುವವರು ‘ಲಿ ಹುವಾಂಗ್ ಚಾಂಗ್ಸ್ ಸ್ಕ್ರಾಪ್ ಬುಕ್ ‘ ಎನ್ನುವ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಅವರು ‘ಸ್ವಾಮಿಗಳ ಪ್ರತಿಯೊಂದು ಶಬ್ದವನ್ನು ವರದಿಗಾರರು ಬಿಡದಂತೆ ಬರೆದುಕೊಂಡು ದೇಶಾದ್ಯಂತ ತಂತಿಯ ಮೂಲಕ ಕಳಿಸುತ್ತಿದ್ದು ಅದು ಸಾವಿರಾರು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಿತು. ವಿವೇಕಾನಂದರು ಆ ದಿನದ ಸಿಂಹವಾದರು. ಅಲ್ಪ ಕಾಲದಲ್ಲಿಯೇ ಅವರಿಗೆ ಅಸಂಖ್ಯಾತ ಜನ ಹಿಂಬಾಲಕರಾದರು ಎಂದಿದ್ದಾರೆ. ಇಂತಹ ಉತ್ಪ್ರೇಕ್ಷಿತ ವರದಿಗಳು ಮುಂದೆ ಬಣ್ಣ ಬಣ್ಣದಲ್ಲಿ ಸ್ವಾಮಿಗಳ ಚರಿತ್ರೆಯಲ್ಲಿ ಸೇರಿದವು. ಹಿರಾಂ ಮ್ಯಾಕ್ಸಿಂ ‘ಮೈ ಲೈಫ್ ‘ ಹೆಸರಿನಲ್ಲಿ ತಮ್ಮ ಆತ್ಮಚರಿತ್ರೆ ಬರೆದುಕೊಂಡಿದ್ದಾರೆ. ಅದರ ಪ್ರಕಾರ ಅವರು ಆಗಸ್ಟ್ ೧೮೮೧ ರಲ್ಲಿ ಅಮೆರಿಕ ತೊರೆದು ಇಂಗ್ಲೆಂಡ್’ಗೆ ಹೋಗಿ ೧೮೮೪ ರಲ್ಲಿ ಅಲ್ಲಿ ಗನ್ (ಬಂದೂಕು) ಕಂಪೆನಿ ಸ್ಥಾಪಿಸಿದನು. ಈ ನಡುವೆ ಆತ ಅಮೆರಿಕಕ್ಕೆ ಬಂದಿರಲಿಲ್ಲ ಮತ್ತು ಅತನಿಗೆ ಧರ್ಮ ಸಂಸತ್ತಿನ ಬಗ್ಗೆ ಏನೂ ತಿಳಿದಿರಲಿಲ್ಲ. ಸ್ವಾಮಿಗಳು ೨೨/೧೦/೧೯೦೦ ರಂದು ಸಾರಾ ಬುಲ್’ಗೆ ರೋಂನಿಂದ ಬರೆದ ಪತ್ರದಲ್ಲಿ ‘ ಬಂದೂಕದ ಮ್ಯಾಕಿಂ ನನ್ನ ಬಗ್ಗೆ ಬಹಳ ಆಸಕ್ತರಾಗಿದ್ದಾನೆ. ಚೈನಾ ಮತ್ತು ಚೀನಿಯರು ಎಂಬ ಅವರ ಪುಸ್ತಕದಲ್ಲಿ ನಾನು ಅಮೆರಿಕದಲ್ಲಿ ಮಾಡಿರುವ ಕೆಲಸದ ಬಗ್ಗೆ ಬರೆಯಬೇಕೆಂದಿರುವರು. ನನ್ನ ಬಳಿ ಯಾವ ದಾಖಲೆಯೂ ಇಲ್ಲ. ನಿಮ್ಮಲ್ಲಿ ಇದ್ದರೆ ದಯವಿಟ್ಟು ಕೊಡಿ’ ಎಂದು ಕೋರಿದ್ದಾರೆ. ಆದ್ದರಿಂದ ಹಿರಾಂ ಮ್ಯಾಕ್ಸಿಗೆ ವಿಶ್ವ ಧರ್ಮ ಸಂಸತ್ತಿನಲ್ಲಿ ನಿಜವಾಗಿಯೂ ಏನು ನಡೆಯಿತೆಂದು ಗೊತ್ತಿರಲಿಲ್ಲ. ಸ್ವಾಮಿಗಳು ಯುರೋಪ್ ಪ್ರವಾಸದಲ್ಲಿದ್ದಾಗ ಪ್ಯಾರಿಸ್’ನಲ್ಲಿ ಇವರಿಬ್ಬರ ಭೇಟಿಯಾಗಿದ್ದಿತು. ಹಿರಾ ಮ್ಯಾಕ್ಸಿಂ ಸ್ವಾಮಿಗಳನ್ನು ಕುರಿತು ಹೇಳಿದ್ದೆಲ್ಲವೂ ಪ್ಯಾರಿಸ್’ನಲ್ಲಿ ಸ್ವಾಮಿಗಳಿಂದ ಕೇಳಿದ್ದೇ ಆಗಿದ್ದಿತು. ಹಿರಾಂ ಮ್ಯಾಕ್ಸಿಂ ಹೇಳುವಂತೆ ಸ್ವಾಮಿಗಳನ್ನು ಧರ್ಮ ಸಂಸತ್ತಿಗೆ ಭಾರತದ ಶ್ರೀಮಂತ ವ್ಯಾಪಾರಿಗಳು ಕಳಿಸಿರಲಿಲ್ಲ ಮತ್ತು ಅಮೆರಿಕದಲ್ಲಿ ಅವರ ಭಾಷಣಗಳನ್ನು ಕುತೂಹಲದಿಂದ ಜನ ಕೇಳಿದ್ದರು ಮತ್ತು ಅವರ ಬಗ್ಗೆ ಕೆಲವರು ಅಭಿಮಾನ ಹೊಂದಿದ್ದರೇ ಹೊರತು ಅಸಂಖ್ಯಾತ ಜನ ಹಿಂಬಾಲಕರಿರಲಿಲ್ಲ. ಆದ್ದರಿಂದ ಹಿರಾಂ ಮ್ಯಾಕ್ಸಿ ಸ್ವಾಮಿಗಳು ಷಿಕಾಗೊದಲ್ಲಿ ಪಡೆದ ಯಶಸ್ಸಿನ ಬಗ್ಗೆ ಹೇಳಿರುವುದೆಲ್ಲವೂ ಸ್ವಾಮಿಗಳು ತಮಗೆ ತಾವೇ ಮಾಡಿಕೊಂಡಿದ್ದ ಪ್ರಶಂಸೆ ಎನ್ನಬಹುದು. ಸ್ವಾಮಿಗಳು ತಮ್ಮ ‘ಪರಿವ್ರಾಜಕ’ ಲೇಖನದಲ್ಲಿ ಮ್ಯಾಕ್ಸಿಂ ಭಾರತ ಮತ್ತು ಚೀನಾಗಳನ್ನು ಪ್ರೀತಿಸುತ್ತಾನೆ. ..ಆತನ ಆಪ್ತಮಿತ್ರ ಹುವಾಂಗ್ ಚಾಂಗ್ … ಆತನ ನಿಷ್ಠೆಯೆಲ್ಲ ಕನ್’ಫ್ಯೂಷಿಯಸ್ ಧರ್ಮಕ್ಕೆ….ಕ್ರೈಸ್ತ ಮಿಷನರಿಗಳು ಚೀನಾ ದೇಶದಲ್ಲಿ ತಮ್ಮ ಧರ್ಮವನ್ನು ಬೋಧಿಸುವದನ್ನು ಈತ ಸಹಿಸಲಾರ! ಆತನ ಹೆಂಡತಿಯೂ ಚೀನಾ ಪ್ರೀತಿ , ಕ್ರೈಸ್ತ ದ್ವೇಷದಲ್ಲಿ ಗಂಡನಂತೆಯೇ ‘ ಎಂದು ಬರೆದಿದ್ದಾರೆ. ಇಂತಹ ಹಿರಾಂ ಮ್ಯಾಕ್ಸಿಂ ಕ್ರೈಸ್ತರ ನಾಡಿನಲ್ಲಿ ಕ್ರೈಸ್ತರಲ್ಲದ ಸ್ವಾಮಿಗಳ ‘ವಿಜಯ’ವನ್ನು ವೈಭವೀಕರಿಸಲು ಹಿಂಜರಿದಿಲ್ಲ ಎಂದು ಖಚಿತವಾಗಿ ಹೇಳಬಹುದು.
(೮) ಉದ್ಘಾಟನೆ ದಿನದ ರಾತ್ರಿ ಸ್ವಾಮಿಗಳಿಗೆ ಶ್ರೀಮಂತ ಅತಿಥಿಯ ಮನೆಯಲ್ಲಿ ವಸತಿಯನ್ನು ಕಲ್ಪಿಸಲಾಗಿದ್ದಿತು. ಅಲ್ಲಿ ಅವರಿಗೆ ಸುಖದ ಸುಪ್ಪತ್ತಿಗೆಯನ್ನು ಒದಗಿಸಲಾಗಿದ್ದಿತು. ತನ್ನ ದೇಶದ ಜನರ ದುಸ್ಥಿತಿಯನ್ನು ನೆನೆದು ಕಣ್ಣೀರಿಡುತ್ತ ಸ್ವಾಮಿಗಳು ನೆಲದ ಮೇಲೆ ಮಲಗಿದರು ಎಂದು ‘ದಿ ಲೈಫ್-೧೯೧೪ ‘ ತಿಳಿಸುತ್ತದ್ದೆ. ಇದಕ್ಕೆ ಅಧಾರಗಳೇನೆಂದು ಗೊತ್ತಿಲ್ಲ. ಸ್ವಾಮಿಗಳಿಗೆ ಎಂತಹ ದೇಶಪ್ರೇಮ ಇದ್ದಿತು ಎಂದು ತೋರಿಸಲು ಹೊಸೆದ ಇನ್ನೊಂದು ಪ್ರಸಂಗವಿದು. ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿನ ಉದ್ಘಾಟನೆಯ ದಿನದಿಂದ ಅದು ಕೊನೆಗೊಳ್ಳುವವರೆಗೆ ಜಾನ್ ಬಿ. ಲೈಯಾನ್ಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆಗ ಜಾನ್ ಬಿ; ಲೈಯಾನ್ಸ್ ಮೊಮ್ಮಗಳು ಕಾರ್ನೇಲಿಯಾ ಕಾಂಗರ್ ೬ ವರ್ಷದ ಹುಡುಗಿ. ಈಕೆ ಬರೆದ ಸ್ವಾಮಿಗಳ ನೆನಪುಗಳನ್ನು ಮೇ , ೧೯೫೬ ಪ್ರಬುದ್ಧ ಭಾರತದ ಸಂಚಿಕೆಯಲ್ಲಿ ಪ್ರಕಟಿಸಲಾಯಿತು. ನಡು ರಾತ್ರಿಯ ನಂತರದಲ್ಲಿ ಆಕರ್ಷಕ ವ್ಯಕ್ತಿತ್ವದ ಸ್ವಾಮಿಗಳು ನಮ್ಮ ಮನೆಗೆ ಬಂದರು. ಅವರನ್ನು ನನ್ನ ಅಜ್ಜಿ ಸ್ವಾಗತಿಸಿದಳು ಎಂದಷ್ಟೇ ಹೇಳಿದ್ದಾಳೆ. (11) ಇನ್ನು ಉಳಿದಂತೆ ಕಾರ್ನೇಲಿಯಾ ಕಾಂಗರ್ ಬರೆದಿರುವುದೆಲ್ಲವದೂ ೬ ವರ್ಷದ ಹುಡುಗಿಯ ತಿಳಿವಳಿಕೆಗೆ ಮೀರಿದ್ದು. ರಾಮಕೃಷ್ಣ ಮಠದ ಸ್ವಾಮಿ ಶಂಕರಾನಂದರ ಪ್ರೇರೇಪಣೆ ಮತ್ತು ಒತ್ತಾಯಕ್ಕೆ ಮಣಿದು ತನ್ನ ೬೮ ನೇ ವಯಸ್ಸಿನಲ್ಲಿ ಬರೆದಿರುವಂತಹುದು. ರಾಮಕೃಷ್ಣ ಮಠದವರು ಕಲ್ಪನೆಯಲ್ಲಿಯೇ ಸ್ವಾಮಿಗಳನ್ನು ಸುಪ್ಪತ್ತಿಗೆಯಿಂದ ಇಳಿಸಿ, ನೆಲದ ಮೇಲೆ ಮಲಗಿಸಿ ಅಳಿಸಿದ್ದಾರೆ. ಅದನ್ನು ಇಡೀ ಭಾರತ ನಂಬಿದೆ ! ಸ್ವಾಮಿಗಳು ಷಿಕಾಗೊ ತಲುಪಿದ ನಂತರ ಹಲವು ದಿನ ಅನುಕೂಲಕರವಾದ ವಸತಿ ಗೃಹಗಳಲ್ಲಿಯೇ ಉಳಿದುಕೊಂಡಿರುವದು ಇಂತಹ ಕಥೆಗಳಿಗೆ ಅಡಚಣೆಯಾಗಿದೆ.
(೯) ಸ್ವಾಮಿಗಳಿಂದ ಧರ್ಮ ಸಂಸತ್ತಿಗೆ ತಿರುವು ಬಂದಿತು ಎನ್ನುವ ಅಭಿಮಾನಿಗಳು ಅದು ಹೇಗೆ , ಎಂದು , ಯಾವ ರೀತಿ ಎಂದು ತಿಳಿಸುವಲ್ಲಿ ಸೋತಿದ್ದಾರೆ. ಧರ್ಮ ಸಂಸತ್ತು ಆರಂಭದಲ್ಲಿ ಇರಿಸಿಕೊಂಡಿದ್ದ ೧೦ ಅಂಶಗಳ ಗುರಿಯಿಂದ ಎಂದಿಗೂ ವಿಚಲಿತವಾಗಿರಲಿಲ್ಲ ಎನ್ನುವುದನ್ನು ದಾಖಲೆಗಳು ಸ್ಪಷ್ಟಪಡಿಸುತ್ತವೆ.
(೧೦) ವಸ್ತುನಿಷ್ಟವಾಗಿ ಅಮೆರಿಕದ ಪತ್ರಿಕೆಗಳನ್ನು ಅದರಲ್ಲೂ ಷಿಕಾಗೊದ ಅತ್ಯಂತ ಜನಪ್ರಿಯ ,ಪ್ರಬಲ ದಿನಪತ್ರಿಕೆ ‘ಷಿಕಾಗೊ ಡೈಲಿ ಟ್ರಿಬ್ಯೂನ್’ ಗಮನಿಸಿದರೆ ಅಧಿಕೃತ ವರದಿ ಮತ್ತು ವಿಸ್ತೃತತೆಯಲ್ಲಿ ಭಾರತದ ೨೦ ಪ್ರತಿನಿಧಿಗಳಲ್ಲಿ ಹೇವಿತರಣೆ ಧರ್ಮಪಾಲ (ಆನಾಗರಿಕ ಧರ್ಮಪಾಲ) ಮೊದಲು ಬರುತ್ತಾರೆ. ಸ್ವಾಮಿ ವಿವೇಕಾನಂದರಿಗಿಂತಲೂ ಪಿ.ಸಿ. ಮಜುಂದಾರ್ ಮತ್ತು ಬಿ.ಬಿ.ನಗರ್ಕರ್ ಹೆಚ್ಚು ಗಮನ ಸೆಳೆದಿದ್ದಾರೆ. ಅಮೆರಿಕದ ಪತ್ರಿಕೆಗಳು ಹಲವು ಭಾರತೀಯ ಪ್ರತಿನಿಧಿಗಳನ್ನು ಹೊಗಳಿ ಬರೆದಿವೆ. ಹಾಗಾದರೆ ಭಾರತದಲ್ಲಿ ಇವರಿಗಿಂತಲೂ ಸ್ವಾಮಿ ವಿವೇಕಾನಂದರು ಹೇಗೆ ಹೆಚ್ಚು ಪ್ರಸಿದ್ದಿಗೆ ಬಂದರು ಎನ್ನುವ ಪ್ರಶ್ನೆ ಉಳಿಯುತ್ತದೆ. ಜಾಣತನದ ಪ್ರಚಾರ ತಂತ್ರ. ರಾಮಕೃಷ್ಣ ಮಠದ, ಗುರುಭಾಯಿಗಳ ಅತಿರಂಜಿತ ಕಥೆಗಳು ಮತ್ತು ಮಾರಿ ಲೂಯಿ ಬರ್ಕೆಯ ಪರಿಶ್ರಮಗಳೇ ಅದಕ್ಕೆ ಕಾರಣ ಎಂದು ಗೊತ್ತಾಗುತ್ತದೆ. ಧರ್ಮ ಸಂಸತ್ತಿಗೆ ಬಂದಿದ್ದ ಜನ ಸ್ವಾಮಿಗಳನ್ನು ತಮ್ಮ ನಾಯಕನಂದು ಪರಿಗಣಿಸಿದ್ದರೆಂದು ಮೌರಿಸ್ ಬರ್ಕೆ ಬರೆಯುತ್ತಾರೆ. ಇದಕ್ಕೆ ಸಮಕಾಲೀನ ಪತ್ರಿಕೆಯ ವರದಿಗಳು , ದಾಖಲೆಗಳು ಬೆಂಬಲ ನೀಡುವುದಿಲ್ಲ.
Comment Box is loading comments...