ಮಿಸೆಸ್ ಅಮೆರಿಕ : ಮದರ್ ಇಂಡಿಯಾ
(ಸ್ವಾಮಿ ವಿವೇಕಾನಂದ: ಕಪ್ಪು-ಬಿಳುಪು ಅ ಆಯ್ದ ಭಾಗ)
ಭಾರತದ ಅಧ್ಯಾತ್ಮಿಕ/ಧಾರ್ಮಿಕ ಪರಂಪರೆಯಲ್ಲಿ ಹೆಣ್ಣು , ಹೊನ್ನು ಮತ್ತು ಮಣ್ಣಿನ ಬಗ್ಗೆ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿಗಳಷ್ಟು ಗೊಂದಲವನ್ನು ಉಂಟು ಮಾಡಿಕೊಂಡಿದ್ದ ಇನ್ನೊಬ್ಬ ವ್ಯಕ್ತಿಯಿಲ್ಲ, ರಾಮಕೃಷ್ಣರ ‘ಕಾಮಿನಿ-ಕಾಂಚನ’ದ ಗೋಜಲಿನ ವಿಶ್ಲೇಷಣೆ ಈ ಪುಸ್ತಕದ ವ್ಯಾಪ್ತಿ ಮೀರಿದ್ದು. ಸ್ವಾಮಿಗಳು ಹೆಂಗಸರ ಬಗ್ಗೆ ತಳೆದಿದ್ದ ನಿಲುವನ್ನು ಅರ್ಥ ಮಾಡಿಕೊಳ್ಳಲು ಅವರ ಬಾಲ್ಯ ಮತ್ತು ಆ ಕಾಲದ ಬಂಗಾಳಿ/ಭಾರತದ ಸಮಾಜದತ್ತ ಒಮ್ಮೆ ಗಮನ ಹರಿಸಬೇಕು. ಕೂಡು ಕುಟುಂಬದಲ್ಲಿ ಬೆಳೆಯತ್ತಿದ್ದ ಬಾಲಕ ನರೇಂದ್ರನಾಥದತ್ತನಿಗೆ ಮನೆಯಲ್ಲಿ ಆಗಿಂದಾಗ್ಗೆ ನಡೆಯುತ್ತಿದ್ದ ಚರ್ಚೆಗಳಿಂದ ತನ್ನ ತಾತ ದುರ್ಗಾದಾಸ ಸಂನ್ಯಾಸಿಯಾಗಿ ತನ್ನ ಅಜ್ಜಿಯನ್ನು ತೊರೆದು ಹೋಗಿರುವ ಸಂಗತಿ ಬಹಳ ಅಸ್ಪಷ್ಟವಾಗಿ ಗೊತ್ತಾಗಿದ್ದಿತು. ಸಂಸಾರ ಮತ್ತು ಸಂನ್ಯಾಸಗಳ ನಡುವಿನ ವ್ಯತ್ಯಾಸ ತಿಳಿಯಲು ಸಾಧ್ಯವೇ ಇಲ್ಲದ ವಯಸ್ಸು ಅದಾಗಿದ್ದಿತು. ವಿಶ್ವನಾಥದತ್ತ ಕುದುರೆ ಸಾರೋಟು ಹೊಂದಿದ್ದು ಅದನ್ನು ನೋಡಿಕೊಳ್ಳಲು ಕಾಸ್ತಾರನನ್ನು ನೇಮಿಸಿಕೊಂಡಿದ್ದನು. ನರೇಂದ್ರನಾಥನನ್ನು ಬಹಳ ಹಚ್ಚಿಕೊಂಡಿದ್ದ ಕಾಸ್ತಾರ ಆತನನ್ನು ಎತ್ತಿಕೊಂಡು ತಿರುಗಾಡುತ್ತಿದ್ದನು. ಕೆಲವೊಮ್ಮೆ ಕುದುರೆ ಸವಾರಿ ಮಾಡಿಸುತ್ತಿದ್ದ ಕಾಸ್ತಾರ ಬಾಲಕ ನರೇಂದ್ರನಾಥನಿಗೆ ಬಹಳ ಅಚ್ಚುಮೆಚ್ಚಿನವನಾಗಿದ್ದು ಆತನ ವೈವಾಹಿಕ ಜೀವನ ನೆಮ್ಮದಿಯಾಗಿರಲಿಲ್ಲ. (69) ಒಮ್ಮೆ ಆತ ಮದುವೆಯಲ್ಲಿ ಸುಖವಿಲ್ಲ. ಅದು ಅಸಮ್ಮತಿ , ಭಿನ್ನಾಭಿಪ್ರಾಯ , ಸಿಟ್ಟು , ಜಗಳ , ಜಟಾಪಟಿ , ಮಕ್ಕಳು , ಹೆಂಡತಿ ಮತ್ತು ಸಂಸಾರ ಎನ್ನುವ ಬಂಧನಕ್ಕೆ ಕಾರಣ ಎಂದು ಬಾಲಕ ನರೇಂದ್ರನಿಗೆ ಹೇಳಿದ್ದನು. ಇದರಿಂದ ತೀವ್ರವಾಗಿ ಪ್ರಭಾವಿತನಾಗಿ ತಾನು ಎಂದಿಗೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿ ಸೀತಾ-ರಾಮರ ವಿಗ್ರಹವನ್ನು ಹೊರಗೆಸೆದಿದ್ದನು. ಕಥೆಗಳಲ್ಲಿ ಕೇಳಿದ್ದ ರಾಮನ ಆದರ್ಶ ದಾಂಪತ್ಯ ಮತ್ತು ಕಾಸ್ತಾರನ ಅನುಭಗಳು ನರೇಂದ್ರನ ಎಳೆ ಮನಸ್ಸಿನಲ್ಲಿ ದ್ವಂದ್ವದ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಭುವನೇಶ್ವರಿದೇವಿಯ ಮೆಲು , ಸವಿ ಹಿತನುಡಿಗಳಿಂದಲೂ ನರೇದ್ರನಲ್ಲಿ ಮೂಡಿದ್ದ ಈ ದ್ವಂದ್ವ ನಿವಾರಣೆಯಾಗಲಿಲ್ಲ. ರಾಮನ ಬದಲು ಹಿಂದೂಧರ್ಮದಲ್ಲಿ ವಿರಾಗಿಯೆಂದು ಪರಿಗಣಿತನಾದ ಶಿವನ ವಿಗ್ರಹವನ್ನು ಬಾಲಕ ನರೇಂದ್ರ ತಂದಿರಿಸಿಕೊಂಡಿದ್ದನು. ನರೇಂದ್ರನ ಎಳೆ ಮನಸ್ಸಿಗೆ ಶಿವ ರಾಮನನ್ನು ಮೀರಿದ ಸಂಸಾರಿ, ಹೆಂಡತಿಯನ್ನು ಅವಮಾನಗೈದ ಮಾವನನ್ನೇ ಯಜ್ಞಕುಂಡದಲ್ಲಿ ಬಲಿಕೊಟ್ಟ ಹೆಣ್ಣು ಆರಾಧಕ. ಆನಂತರವೇ ಆತ ತಪೋವಿರಾಗಿ ಆದನೆಂಬ ಅಂಶದ ಸಂಕೀರ್ಣತೆ ಅರ್ಥವಾಗುವಂತಿರಲಿಲ್ಲ.
ಅಕ್ಕಂದಿರನ್ನು ಹೊರತಾಗಿ ಇತರ ಹುಡುಗಿಯರೊಂದಿಗೆ ನರೇಂದ್ರನಾಥ ದತ್ತ ಹೇಗೆ ವರ್ತಿಸುತ್ತಿದ್ದನೆಂದು ತಿಳಿಯುವುದಿಲ್ಲವಾದರೂ ಮಹೇಂದ್ರನಾಥ ದತ್ತನ ಮೂಲಕ ಎರಡು ಪ್ರಸಂಗಗಳು ತಿಳಿದುಬರುತ್ತವೆ. ನರೇಂದ್ರನಾಥ ದತ್ತ ನೆರೆ ಹೊರೆಯ ಹೆಂಗಸರನ್ನು ಅಕ್ಕ , ಚಿಕ್ಕಮ್ಮ, ಅಜ್ಜಿ , ಅತ್ತೆ ಎಂದು ಕರೆಯುತ್ತಿದ್ದನು. ಆ ಕಾಲದಲ್ಲಿ ಭಾರತದಲ್ಲಿ ಅನ್ಯ ಹೆಂಗಸರನ್ನು ಸಂಪರ್ಕಿಸುವ ರೀತಿಯೇ ಆದಾಗಿದ್ದಿತು. ಪಕ್ಕದ ಮನೆಯ ಬ್ರಾಹ್ಮಣ ಹೆಂಗಸೊಬ್ಬಳು ದತ್ತ ಕುಟುಂಬದೊಂದಿಗೆ ಯಾವುದೇ ರಕ್ತ ಸಂಬಂಧ ಹೊಂದದಿದ್ದರೂ ನರೇಂದ್ರನಾಥದತ್ತ ಆಕೆಯನ್ನು ಪೀಶಿ (ಸೋದರತ್ತೆ) ಎಂದು ಕರೆಯುತ್ತಿದ್ದನು. ಈಕೆಗೆ ನರೇಂದ್ರನಾಥದತ್ತನ ವಯಸ್ಸಿನ ಮಗಳಿದ್ದು ಆಕೆಯನ್ನು ‘ಯಮನ ಚಿಕ್ಕಮ್ಮ’ ಎಂದು ಕರೆಯುತ್ತಿದ್ದನು. ಒಮ್ಮೆ ಇವರ ಮನೆಗೆ ಹೋಗಿದ್ದ ನರೇಂದ್ರನಾಥ ದತ್ತ ಕಡ್ಡಿಪುಡಿ ತುಂಬಿದ್ದ ಎಲೆಯನು ಮೆಲ್ಲುತ್ತ ಆ ಹುಡುಗಿಗೆ ಹಾಡು ಹೇಳುವಂತೆ ಚುಡಾಯಿಸಿದನು. ಆಗ ಆಕೆ ಎರಡು ಸಾಲಿನ ಹಾಡಿನ ಮೂಲಕ ತನಗೆ ಹಾಡಲು ಬರುವುದಿಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದಳು. ನರೇಂದ್ರನಾಥ ದತ್ತ ಅವಳನ್ನು ಅಣಕಿಸಿ ಮತ್ತೊಮ್ಮೆ ಹಾಡಿದನು. ಪಾಶ್ಚಾತ್ಯ ಜಗತ್ತನ್ನು ಸುತ್ತಿ ಬಂದ ನಂತರ ಸ್ವಾಮಿಗಳು ಈ ಮನೆಗೆ ಮತ್ತೊಮ್ಮೆ ಭೇಟಿ ನೀಡಿದಾಗ ಹಿಂದಿನ ಈ ಘಟನೆಯನ್ನು ನೆನೆಸಿಕೊಂಡರು. ಖ್ಯಾತರಾದ ನಂತರವೂ ತಮ್ಮನ್ನು ಮರೆಯದಿದ್ದ ಸ್ವಾಮಿಗಳ ಗುಣಗಳನ್ನು ಕಂಡು ಬ್ರಾಹ್ಮಣ ಹೆಂಗಸು ಬಹಳ ಸಂತಸಪಟ್ಟಿದ್ದಳು. ನರೇಂದ್ರನಾಥನ ಮನೆಯ ಹತ್ತಿರ ಕಪ್ಪುಬಣ್ಣ , ಕೋಲುಮುಖ ಎತ್ತರಿಸಿದ ಹಣೆ, ಮೊಂಡ ಮೂಗು ಹೊಂದಿದ್ದ ಒಬ್ಬ ಹುಡುಗಿಯಿದ್ದಳು. ಈ ಹುಡುಗಿ ಸುಂದರಿಯಲ್ಲದಿದ್ದರೂ ನರೇಂದ್ರನಾಥನಿಗೆ ಆಕೆಯ ಬಗ್ಗೆ ಕಕ್ಕುಲತೆ ಇದ್ದಿತು. ಒಮ್ಮೆ ಆಕೆಗೆ ನಿನ್ನ ಮುಖ ಬಂಗಾಳಿ ಸಂಖ್ಯೆ ಐದರಂತೆ ಇದೆ. ನೀನು ಡೋಮರ ಬೀದಿಯ ಕಡೆ ಹೋಗಬೇಡ. ಅಲ್ಲಿಗೆ ಹೋದರೆ ಕಳೆದುಹೋಗುವೆ ಎಂದಿದ್ದನು. ಇದು ಕೆಳಜಾತಿಯಯವನ್ನು ಕುರೂಪದೊಂದಿಗೆ ಸಮೀಕರಿಸಿ ಹೀಗಳೆಯುವ ಮನೋಭಾವ ಸೂಚಿಸುತ್ತದೆ. (70)
ವಿಶ್ವನಾಥದತ್ತನ ಸ್ನೇಹಿತ ನಿಮಾಯ್’ಚಂದ್ರ ಬಸು ಹತ್ತಿರ ವಕೀಲಿಕೆ ಕಲಿಯಲು ನರೇಂದ್ರನಾಥ ಹೋಗುತ್ತಿದ್ದನು. (೩೮) ಇದೇ ಸಮಯದಲ್ಲಿ ಬಿ.ಎಲ್. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದನು. ಇದು ಅವರ ಕುಟುಂಬ ಪದ್ದತಿಗೆ ತಕ್ಕುದಾಗಿದ್ದಿತು. ೧೮೮೩ ರಲ್ಲಿ ಬಿ.ಎ ಪರೀಕ್ಷೆ ಮುಗಿದ ನಂತರ ತಂದೆ ಮತ್ತು ಚಿಕ್ಕಪ್ಪರ ಜೊತೆ ಉಚ್ಚ ನ್ಯಾಯಾಲಯಕ್ಕೆ ಹೋಗುತ್ತಿದ್ದನು. (71) ಈ ಕಾಲದಲ್ಲಿ ನಡೆದ ಘಟನೆಗಳನ್ನು ಭೂಪೇಂದ್ರನಾಥ ಗುಪ್ತ ಹೀಗೆ ಬರೆಯುತ್ತಾರೆ. ‘ ವಿಶ್ವನಾಥ ದತ್ತ ಬದುಕಿರುವಾಗಲೇ ನರೇಂದ್ರನಾಥನ ಮದುವೆ ಪ್ರಸ್ತಾಪಗಳಾಗಿದ್ದು ಹೆಣ್ಣು ಕೊಡಲು ಹಲವಾರು ಪ್ರತಿಷ್ಟರು ಮುಂದೆ ಬಂದಿದ್ದರು. ವಿಶ್ವನಾಥದತ್ತನ ಸಾವಿನ ನಂತರವೂ ಅಂತಹ ಪ್ರಸ್ತಾಪಗಳು ಬರುತ್ತಿದ್ದವು. ವಿಶ್ವನಾಥದತ್ತನ ಶಾಲಾ ದಿನಗಳ ಸಹಪಾಠಿ , ಮುಂದೆ ಉಚ್ಚ ನ್ಯಾಯಾಲಯದಲ್ಲಿ ವಕೀಲನಾಗಿ ವಿಶ್ವನಾಥದತ್ತನಲ್ಲಿ ಆಪ್ತತೆ ಬೆಳೆಸಿಕೊಂಡಿದ್ದ ಆತನ ಒಬ್ಬ ಸ್ನೇಹಿತ ನರೇಂದ್ರನಾಥ ತನ್ನ ಮೊಮ್ಮಗಳನ್ನು ಮದುವೆಯಾದರೆ ವಿಶ್ವನಾಥದತ್ತ ಪಿತ್ರಾರ್ಜಿತ ಆಸ್ತಿಗಾಗಿ ನಡೆಸುತ್ತಿರುವ ಕಾನೂನಿನ ಹೋರಾಟಕ್ಕೆ ತಗಲುವ ಎಲ್ಲ ವೆಚ್ಚವನ್ನು ಭರಿಸಲು ಮುಂದೆ ಬಂದಿದ್ದನು. ರಾಮಕೃಷ್ಣರ ಭಕ್ತರಲ್ಲಿಯೇ ಕೆಲವರು ನರೇಂದ್ರನಾಥನಿಗೆ ತಮ್ಮ ಕಡೆಯ ಹೆಣ್ಣುಗಳನ್ನು ಕೊಟ್ಟು ಮದುವೆ ಮಾಡಿಸಲು ಯತ್ನಿಸಿದ್ದರು. ಕಟಕ್’ನ ಶ್ರೀಮಂತ ಜಮೀನ್ದಾರ ಬಲರಾಮ ಬಸು ತನ್ನ ಮಗಳನ್ನು ನರೇಂದ್ರನಾಥನೊಂದಿಗೆ ಮದುವೆ ಮಾಡಿಸಲು ಇಚ್ಛಿಸಿದ್ದನು. ಕಲ್ಕತ್ತದ ಖ್ಯಾತ ಬ್ಯಾರಿಸ್ಟರ್ ಆರ್. ಮಿತ್ರನಿಗೂ ಈ ನಿಟ್ಟಿನಲ್ಲಿ ಆಸಕ್ತಿಯಿದ್ದಿತು. ಆದರೆ ಇವು ಯಾವುವನ್ನು ನರೇಂದ್ರನಾಥ ಕಿವಿಗೆ ಹಾಕಿಕೊಳ್ಳಲಿಲ್ಲ ಎಂದಿದ್ದಾರೆ. (72)
ಇದಕ್ಕೆ ‘ದಿ ಲೈಫ್-೧೯೧೪’ ಬೇರೆಯದೇ ಆದ ಕಾರಣಗಳನ್ನು ಗುರುತಿಸುತ್ತದೆ. ರಾಮಕೃಷ್ಣ ಪರಮಹಂಸರು ನರೇಂದ್ರನಾಥನಿಗೆ ಜೀವನ ಪರ್ಯಂತ ನೈಷ್ಟಿಕ ಬ್ರಹ್ಮಚರ್ಯವನ್ನು ಪಾಲಿಸಲು ಹೇಳುತ್ತಿರುವುದನ್ನು ಆತನ ಅಜ್ಜಿ ಕೇಳಿಸಿಕೊಂಡು ಹೆತ್ತವರ ಗಮನಕ್ಕೆ ತಂದಳು. ತನ್ನ ತಂದೆ, ತಾಯಿಗಳು ತನಗೆ ಹೆಣ್ಣು ನೋಡುತ್ತಿದ್ದರೂ ಅವುಗಳಲ್ಲಿ ಯಾವುವೂ ಕೈಗೂಡದಿರುವುದಕ್ಕೆ ರಾಮಕೃಷ್ಣ ಪರಮಹಂಸರ ಪ್ರಭಾವವೇ ಕಾರಣವೆಂದು ನರೇಂದ್ರನಾಥದತ್ತ ಭಾವಿಸಿದ್ದನು. (73) . ನಿರಂಜನ ಧರ್ ನರೇಂದ್ರನಾಥ ದತ್ತ ತನ್ನ ಮದುವೆಗೆ ತಂದೆ ತಾಯಿಗಳು ಪ್ರಯತ್ನಿಸುತ್ತಿರುವುದನ್ನು ಎಂದಿಗೂ ವಿರೋಧಿಸಿರಲಿಲ್ಲ. ಒಮ್ಮೆ ಕಪ್ಪು ಬಣ್ಣದ ಕನ್ಯೆಯೊಬ್ಬಳ ತಂದೆ ಕೈತುಂಬ ವರದಕ್ಷಿಣೆ ನೀಡಲು ಮುಂದೆ ಬಂದಿದ್ದನು. ಆಗ ನಡೆಯುತ್ತಿದ್ದ ಚೌಕಾಶಿ ಮತ್ತು ಕಪ್ಪು ಹುಡುಗಿಯನ್ನು ಒಲ್ಲೆ ಎಂದು ಆಕ್ಷೇಪವೆತ್ತಿದ್ದನು ಎಂದು ಬರೆದಿದ್ದಾರೆ.(74) ರಾಮಕೃಷ್ಣ ಪರಮಹಂಸ ಆಗಾಗ್ಗೆ ನರೇಂದ್ರನಾಥ ದತ್ತ ಇರುತ್ತಿದ್ದ ಆತನ ಅಜ್ಜಿಯ ಮನೆಗೆ ಬಂದು ಅಜೀವ ಬ್ರಹ್ಮಚರ್ಯ ಪಾಲಿಸಲು ಹೇಳುತ್ತಿದ್ದುದನ್ನು ಗಮನಿಸಿದರೆ ನರೇಂದ್ರನಾಥ ದತ್ತ ಮದುವೆಯಾಗಲು ಮುಂದಾಗಿದ್ದನೆಂದು ತಿಳಿಯಬಹುದು.
ಪೂರ್ವ ಜನ್ಮದ ಸಂಸ್ಕಾರಗಳಿಂದಾಗಿ ನರೇಂದ್ರನಾಥ ದತ್ತನಲ್ಲಿ ದೈವ ಸಾಕ್ಷಾತ್ಕಾರದ ತುಡಿತವಿದ್ದು ವೈರಾಗ್ಯ ತುಂಬಿದ್ದಿತು. ಮದುವೆಗೆ ಸಂಬಂಧಿಸಿದ ಬ್ರಾಹ್ಮ ಸಮಾಜದ ಯಾವುದೇ ಚಟುವಟಿಕೆಗಳಲ್ಲಿ ನರೇಂದ್ರನಾಥ ಭಾಗಿಯಾಗಿರಲಿಲ್ಲ ಎಂದು ಸಹ ಹೇಳಲಾಗಿದೆ. ಆದರೆ ರಾಜನಾರಾಯಣ ಬಸುಗಳ ನಾಲ್ಕನೇ ಮಗಳು ಲೀಲಾದೇವಿಯ ಮದುವೆಯಲ್ಲಿ ಸಾಧಾರಣ ಬ್ರಾಹ್ಮಸಮಾಜದಲ್ಲಿ ನಡೆಯಿತು. ಆ ಮದುವೆಯಲ್ಲಿ ಸಂದರ್ಭದಲ್ಲಿ ರವೀಂದ್ರನಾಥರು ನರೇಂದ್ರನಾಥದತ್ತನಿಗೆ ಮೂರು ಹಾಡುಗಳನ್ನು ಹಾಡಲು ತರಬೇತಿ ನೀಡಿದ್ದರು. (75) ಈ ಮೂರು ಹಾಡುಗಳು ಬಸಕ್’ರವರ ಸಂಗೀತ ಕಲ್ಪತರು ಪುಸ್ತಕದಲ್ಲಿ ಪ್ರಕಟಗೊಂಡಿದ್ದವು ಎಂದು ಅಭೇದಾನಂದರು ತಿಳಿಸುತ್ತಾರೆ.
ರಾಮಕೃಷ್ಣರ ಸಂನ್ಯಾಸಿ ಶಿಷ್ಯರಲ್ಲಿ ಬ್ರಹ್ಮಾನಂದ, ಶಿವಾನಂದ, ಯೋಗಾನಂದ ಮತ್ತು ಅದ್ವೈತಾನಂದ ಮದುವೆಯಾಗಿದ್ದರು. ಅವರು ತಮ್ಮ ಹೆಂಡಿರನ್ನು ತೊರೆದು ಬಂದು ಸಂನ್ಯಾಸಿಗಳಾಗಿದ್ದರು. ಬ್ರಹಾನಂದರಿಗೆ ಒಬ್ಬ ಮಗನೂ ಇದ್ದನು. ಹೆಣ್ಣಿನ ನಿಜವಾದ ಅನುಭವವೇ ಇಲ್ಲದ ಅವರ ಗುರು ರಾಮಕೃಷ್ಣ ಮತ್ತು ಅವರ ಭೀಮಶಿಷ್ಯ ಸ್ವಾಮಿ ವಿವೇಕಾನಂದ ಹೆಣ್ಣು-ಹೊನ್ನಿನ ಬಗ್ಗೆ ಉದ್ದುದ್ದ ಹಿತವಚನಗಳನ್ನು , ಹೆಣ್ಣು-ಹೊನ್ನು ದೈವ ಸಾಕ್ಷಾತ್ಕಾರಕ್ಕೆ ಅಡ್ಡಿ ಎನ್ನುವುದನ್ನು ಇವರು ಕೇಳಿದ್ದರು. ಇವರಿಗಿಂತ ಭಿನ್ನವಾಗಿ ಬಾಲಕ ನರೇಂದ್ರನಾಥದತ್ತ ಕಾಸ್ತಾರನಿಂದ ಕೇಳಿದ್ದ ಸಂಸಾರದ ತಾಪತ್ರಯಗಳು , ಯುವಕ ನರೇಂದ್ರನಾಥ ಎದುರಿಸಿದ ಕೌಟುಂಬಿಕ ಆಸ್ತಿ ವಿವಾದ, ದಕ್ಕದ ನೌಕರಿ ಮುಂತಾದ ಸಂಗತಿಗಳು ಆತನನ್ನು ವೈರಾಗ್ಯದತ್ತ ದೂಡಿದ್ದವು. ಸ್ವಾಮಿಗಳು ಮತ್ತು ಗುರುಭಾಯಿಗಳು ಬರಾನಗರ ಮಠದಲ್ಲಿರುವಾಗ ಹಿರಿಯ , ಕಿರಿಯ ಹೆಂಗಸರೆನ್ನುವ ಭೇದವಿಲ್ಲದೆ ಎಲ್ಲ ಹೆಂಗಸರನ್ನು ‘ಮಗಿ’ (ಸೂಳೆ) ಎಂದು ಕರೆಯುತ್ತಿದ್ದರು. ಲಂಗೋಟಿಯುಟ್ಟು ಬಹುತೇಕ ಬತ್ತಲೆಯಲ್ಲಿರುತ್ತಿದ್ದ ಈ ಯುವ ಸಂನ್ಯಾಸಿಗಳು ಹೆಂಗಸರು ಮಠದತ್ತ ಬರುವುದನ್ನು ಕಂಡ ತಕ್ಷಣ ‘ಮಗಿ ಬಂದಳು’ ಎಂದು ಕೂಗುತ್ತ ಓಡುತ್ತಿದ್ದರು. ನಂತರ ದಿನಗಳಲ್ಲಿ ‘ಮಗಿ’ ಬದಲು ಮೊಗಿ (ಬಂಗಾಳಿಯಲ್ಲಿ ಬರ್ಮಾ ದೇಶದಾಕೆ) ಎಂದು ಬದಲಿಸಿದರೆಂದು ಮಹೇಂದ್ರನಾಥದತ್ತ ತಿಳಿಸಿದ್ದಾರೆ. (76)
ಹತ್ತೊಂಬತ್ತನೇ ಶತಮಾನದ ಬಂಗಾಳಿ ಭದ್ರೆಲೋಕದಲ್ಲಿ ಹುಟ್ಟಿದ್ದ ಸ್ವಾಮಿಗಳು ವಯಸ್ಕರಾದ ನಂತರ ಹೆಣ್ಣನ್ನು ಸಹಜವಾಗಿ ಎದುರಿಸಿರಲಿಲ್ಲ. ಅವರು ಬಿ.ಎ ವಿದ್ಯಾಭ್ಯಾಸ ಮಾಡಿದ ಜನರಲ್ ಅಸೆಂಬ್ಲಿ ಇನ್’ಸ್ಟಿಟ್ಯೂಷನ್’ನಲ್ಲಿ ಹುಡುಗಿಯರಿಗೆ ಪ್ರವೇಶವಿರಲಿಲ್ಲ. ರಾಮಕೃಷ್ಣರ ಭಕ್ತರಲ್ಲಿ ಯುವತಿ , ತರುಣಿಯರಿರಲಿಲ್ಲ. ಆ ಕಾಲದ ಭಾರತೀಯ ಗಂಡಸು ಮದುವೆಯಾಗಿ ಹೆಣ್ಣಿಗೆ ಮುಖಾಮುಖಿಯಾಗುತ್ತಿದ್ದನು. ಸಂನ್ಯಾಸ ಸ್ವೀಕರಿಸಿದ್ದ ಸ್ವಾಮಿಗಳಿಗೆ ಆ ಅವಕಾಶ ಮತ್ತು ಅನುಭವಗಳು ದಕ್ಕಿರಲಿಲ್ಲ. ಹೆಣ್ಣು-ಹೊನ್ನು ಮಾಯೆ, ದೈವ ಸಾಕ್ಷಾತ್ಕಾರಕ್ಕೆ ಅಡ್ಡಿ ಎಂದು ಪ್ರತಿಪಾದಿಸುತ್ತ ಮದುವೆಯಾಗಿ ಹೆಂಡತಿಯಿಂದ ಎಲ್ಲ ಸೇವೆಗಳನ್ನು ಪಡೆಯುತ್ತ ಗಂಡನಾಗಿ ತನ್ನ ಕರ್ತವ್ಯಗಳನ್ನು ಕಳಚಿ ಎಸೆದಿದ್ದ ರಾಮಕೃಷ್ಣ ಪರಮಹಂಸರು ಅವರ ಮಾರ್ಗದರ್ಶಿಗಳಾಗಿದ್ದರು. ಪರಿವ್ರಾಜಕ ಜೀವನದಲ್ಲಿ ಒಂದೆರಡು ಅಪರೂಪದ ಸಂದರ್ಭಗಳನ್ನು ಬಿಟ್ಟರೆ ಭಾರತೀಯ ಹೆಂಗಸರ ಬಗ್ಗೆ ಅವರು ಗಳಿಸಿದ ತಿಳಿವಳಿಕೆ ಅಷ್ಟಕಷ್ಟೇ. ಬೆಳಗಾವಿಯಲ್ಲಿದ್ದ ಶಿಷ್ಯನ ಹೆಂಡತಿ ಇಂದುಮತಿ ಮಿತ್ರ , ಸ್ವಾಮಿಗಳಿಂದ ಕುಮಾರಿ ರೂಪದಲ್ಲಿ ಪೂಜಿಸಲ್ಪಟ್ಟ ಮನ್ಮಥನಾಥ ಭಟ್ಟಾಚಾರ್ಯನ ಮಗಳು , ಖೇತ್ರಿಯಲ್ಲಿದ್ದ ನರ್ತಕಿ , ಆಳ್ವಾರ್’ನಲ್ಲಿ ಚಪಾತಿ ಮಾಡಿಕೊಟ್ಟ ಮುದುಕಿ ಸ್ವಾಮಿಗಳ ಪ್ರವಾಸದಲ್ಲಿ ಅವರನ್ನು ಮುಖಾಮುಖಿಯಾದ ಹೆಂಗಸರು. ಅಮೆರಿಕ ತಲುಪಿದ ನಂತರ ಸ್ವಾಮಿಗಳಿಗೆ ಅಲ್ಲಿನ ಹೆಂಗಸರು ಎಸೆದ ಸವಾಲು ಬೆರಗು ಮತ್ತು ಭಯಗಳನ್ನು ತಂದಿದ್ದವು. ಬಾಲ್ಯ ವಿವಾಹದಿಂದ ಸಣ್ಣ ವಯಸ್ಸಿಗೆ ತಾಯಿಯಾಗಿ , ಕಂಕುಳಲ್ಲಿ ಒಂದು , ಹೊಟ್ಟೆಯಲ್ಲಿ ಇನ್ನೊಂದು ಕೂಸನ್ನು ಹೊತ್ತು ಗಂಡನ ಕಣ್ಸನ್ನೆ , ಅತ್ತೆ , ಮಾವಂದಿರ ಕೈಸನ್ನೆ , ಮೈದುನ, ನಾದಿನಿಯರ ಬಾಯಾದೇಶಗಳ ಹಂಗಿನಲ್ಲಿ ಬಾಳು ಸಾಗಿಸುತ್ತಿದ್ದ ಕೂಡು ಕುಟುಂಬದ ಸ್ವಂತ ವ್ಯಕ್ತಿತ್ವವಿಲ್ಲದ, ಮನೆಯ ಹೊಸಿಲಿನ ಹೊರಗೆ ಕಾಲಿರಿಸಲು ಅಳುಕುತ್ತಿದ್ದ ಬಂಗಾಳಿ ಭದ್ರಲೋಕದ ಹೆಣ್ಣಿನ ಚಿತ್ರ ಸ್ವಾಮಿಗಳ ಮನಸ್ಸಿನಲ್ಲಿ ಬಾಲ್ಯದಿಂದಲೂ ಅಚ್ಚೊತ್ತಿದ್ದಿತು. ಅಮೆರಿಕ ಪ್ರವೇಶ ಮಾಡುತ್ತಿದ್ದಂತೆಯೇ ಈ ಚಿತ್ರ ಅನೂಹ್ಯ ರೀತಿಯಲ್ಲಿ ಬದಲಾಯಿತು. ಅಲ್ಲಿನ ಹೆಂಗಸರ ಸ್ವಾತಂತ್ರ, ಶಿಕ್ಷಣ , ಸ್ವಂತಿಕೆಗಳು ಸ್ವಾಮಿಗಳ ಊಹೆಯ ಸೀಮೆಯ ಆಚೆಗಿದ್ದವು.
ಭಾರತೀಯ ಮತ್ತು ಅಮೆರಿಕ ಹೆಂಗಸರ ನಡುವಿನ ಈ ವೈದೃಶ್ಯ ತರುಣ ಸ್ವಾಮಿಗಳ ಚಿಂತನೆಗಳಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದವು. ಸ್ವಾಮಿಗಳು ಅಮೆರಿಕದಲ್ಲಿ ಕಾಲಿಟ್ಟು ಮೊದಲ ರೈಲಿನ ಪ್ರಯಾಣದಲ್ಲಿರುವಾಗ ಶ್ರೀಮತಿ ಕೇಟ್ ಸ್ಯಾನ್’ಬೋರ್ನ್ ಪರಿಚಯದಿಂದ ಪ್ರಾರಂಭವಾಗಿ , ಶ್ರೀಮತಿ ಜಾರ್ಜ್ ಹೇಲ್ ಅನುಕಂಪದ ಮೂಲಕ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗಿಯಾಗಿ , ಶ್ರೀಮತಿ ಪಾಮರ್’ರಂತಹವರ ಗಣ್ಯರ ಬೆಂಬಲ ದಕ್ಕಿ , ಶ್ರೀಮತಿ ಜಾನ್ ಜೆ ಬ್ಯಾಗ್ಲಿಯಂತಹ ಶ್ರೀಮಂತೆಯ ಆತಿಥ್ಯದ ಸವಿಯುಂಡು , ಶ್ರೀಮತಿ ಸಾರಾ ಬುಲ್’ರಂತಹ ಆಗರ್ಭ ಶ್ರೀಮಂತೆಯಿಂದ ಎಲ್ಲ ಬಗೆಯ ಲೌಕಿಕ ಆಸರೆಗಳನ್ನು ಪಡೆದು , ತನಗಿಂತ ಐದು ವರ್ಷ ದೊಡ್ದವಳಾಗಿದ್ದ ಜೊಸೆಫಿನ್ ಮೆಕ್ಲಿಯಾಡ್ ಮತ್ತು ಆಕೆಯ ಅಕ್ಕ ಬೆಟ್ಟಿ ಸ್ಟರ್ಜ್ಜಿಸ್’ರಿಂದ ಹೊಗಳಲ್ಪಟ್ಟು ,ಬೆಂಬಲ ಪಡೆದು ಸಾರಾ ಫಾರ್ಮರ್’ರಂತಹ ಸಾಮಾಜಿಕ ವ್ಯಕ್ತಿಗಳಿಂದ ಆಹ್ವಾನ ಪಡೆದು , ಎಮ್ಮಾ ಥರ್ಸ್’ಬಿಯಂತಹ ತಾರೆಗಳ ಗೌರವ ಪಡೆದು, ಮೇರಿ ಡಚರ್'ನಿಂದ ಅಧ್ಯಾತ್ಮ ಪ್ರವಾಚಕನಾದ ಸ್ವಾಮಿಗಳ ಮೇಲೆ ಅಮೆರಿಕದ ಹಲವಾರು ಹೆಂಗಸರ ಔದಾರ್ಯದ ಹೊರೆಯಿದ್ದಿತು. ಇವೆಲ್ಲವುಗಳ ಪರಿಣಾಮವಾಗಿ ಸ್ವಾಮಿಗಳು ಅಮೆರಿಕದ ಹೆಂಗಸರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳು ರೂಪಿಸಿಕೊಂಡರು.
ಹರಿಪದಮಿತ್ರರಿಗೆ ‘ ಇಲ್ಲಿಯ ಹೆಂಗಸರಷ್ಟು ವಿದ್ಯಾವಂತರನ್ನು , ಸುಸಂಸ್ಕೃತರನ್ನು ನಾನು ಬೇರೆಡೆ ನೋಡಿಲ್ಲ. ನಮ್ಮ ದೇಶದಲ್ಲಿ ವಿದ್ಯಾವಂತರೇನೋ ಇರುವರು. ಆದರೆ ಇಲ್ಲಿನ ಹೆಂಗಸರಂತಹವರನ್ನು ಕಾಣುವುದು ಅತಿ ವಿರಳ. ಸದ್ಗೃಹಸ್ಥರ ಮನೆಗಳಲ್ಲಿ ದೇವಿ ಲಕ್ಷ್ಮಿಯೇ ನೆಲೆಸಿರುತ್ತಾಳೆ ಎನ್ನುವುದು ನಿಜ. ಡಯಾನ ವಿಗ್ರಹದ ಮೇಲಿನ ಹಿಮದಷ್ಟು ಶುಭ್ರವಾಗಿರುವ , ನಿಷ್ಕಳಂಕ ಹೃದಯದ ನೂರಾರು ಹೆಂಗಸರನ್ನು ನಾನು ಇಲ್ಲಿ ನೋಡಿದ್ದೇನೆ ….. ನಾನು ಇಲ್ಲಿಗೆ ಬಂದಾಗಿನಿಂದ ಅವರ ಮನೆಗಳಲ್ಲಿ ನನ್ನನ್ನು ಸತ್ಕರಿಸಿರುವರು. ಅವರು ನನಗೆ ಆಹಾರ ಕೊಡುವರು, ಉಪನ್ಯಾಸಕ್ಕೆ ಅಣಿಮಾಡುವರು …ಅವರ ಋಣವನ್ನು ನಾನು ತೀರಿಸಲಾರೆ. …. ಇಲ್ಲಿ ಗಂಡಸರು ಸಾದ್ಯವಾದಷ್ಟು ಹೆಂಗಸರನ್ನು ಸನ್ಮಾನಿಸುವರು. ಅದಕ್ಕೆ ಅವರು ಅಷ್ಟು ಮುಂದುವರೆದಿರುವುದು ….ಪಾದ್ರಿಗಳು ನನ್ನನ್ನು ಅನುಮಾನಿಸಿದರೂ , ಪ್ರಚೋದಿಸಿದರೂ ಅಮೆರಿಕದ ಹೆಂಗಸರು ನನ್ನನ್ನು ಬಿಟ್ಟುಕೊಡಲಿಲ್ಲ. ಇಲ್ಲಿ ರೆಕ್ಕೆಯಿಲ್ಲದ ದೇವತೆಗಳು ವಾಸಿಸುತ್ತಿರುವರಾ ? ……. ಇಲ್ಲಿ ಗಂಡಸರು ಸಾದ್ಯವಾದಷ್ಟು ಹೆಂಗಸರನ್ನು ಸನ್ಮಾನಿಸುವರು. ಅದಕ್ಕೆ ಅವರು ಅಷ್ಟು ಮುಂದುವರೆದಿರುವುದು ಎಂದು ತಿಳಿಸಿದ್ದರು. (೨೮/೧೨/೧೮೯೩). ಅಳಸಿಂಗ ಪೆರುಮಾಳ್’ಗೆ ‘….ಇಲ್ಲಿಯ ಹೆಂಗಸರು ಜಗತ್ತಿನಲ್ಲಿಯೇ ಅತಿ ಮುಂದುವರೆದಿರುವವರು. ಸಾಧಾರಣ ಅಮೆರಿಕ ಹೆಂಗಸು ಗಂಡಿಗಿಂತ ಸುಸಂಸ್ಕೃತಳು. .. ಹೆಂಗಸರು ತಮ್ಮ ಏಳಿಗೆಗೆ ಒದಗುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವರು ‘ ಎನ್ನುತ್ತ ತಮ್ಮ ಹೊಸ ಆವಿಷ್ಕಾರವನ್ನು ಮುಂದಿಟ್ಟಿದ್ದರು. (೧೨/೧/೧೮೯೪). ಜಗತ್ತಿನಲ್ಲಿ ಯಾವ ಎಡೆಯಲ್ಲಿಯೂ ಹೆಂಗಸರು ಇಲ್ಲಿನಂತೆ ಇಲ್ಲ. ಎಷ್ಟು ಶುದ್ಧರು ! ಎಷ್ಟು ಸ್ವತಂತ್ರರು ! ಎಷ್ಟು ಆತ್ಮಾವಲಂಬಿಗಳು ! ಎಷ್ಟು ದಯಾಳುಗಳು ! ಈ ದೇಶದ ಜೀವಾಳ ಹೆಂಗಸರೇ . … ಪುಣ್ಯವಂತರ ಮನೆಗಳಲ್ಲಿ ಯಾರು ಲಕ್ಷ್ಮೀ ಸ್ವರೂಪಳಾಗಿರುವಳೋ ಎನ್ನುವ ಮಾತು ಇವರಿಗೆ ಸಲ್ಲುತ್ತದೆ. ಅಬ್ಬ , ದೇವರೇ ! ಅಮೆರಿಕದ ಹೆಂಗಸರನ್ನು ನೋಡಿ ನಾನು ವಿಸ್ಮಯದಿಂದ ಮೂಕನಾಗಿದ್ದೇನೆ. ತ್ವಂ ಶ್ರೀ , ತ್ವಂ ಈಶ್ವರಿ , ತ್ವಂ ಹ್ರೀಃ, ನೀನೇ ಲಕ್ಷ್ಮೀ, ನೀನೇ ಈಶ್ವರಿ , ನೀನೇ ಲಜ್ಜಾ ಸ್ವರೂಪಿಣಿ …ಅವೆಲ್ಲ ಇಲ್ಲಿಗೆ ಅನ್ವಯಿಸುತ್ತವೆ… ‘ಎಂದು ರಾಮಕೃಷ್ಣಾನಂದರಿಗೆ (೧೮/೩/೧೮೯೪) , ಈ ದೇಶದ ಹೆಂಗಸರನ್ನು ನೋಡಿ ನಾನು ಸ್ಥಂಭೀಭೂತನಾಗಿದ್ದೇನೆ. ಅವರು ಮಾಡುವ ಕೆಲ್ಸದಲ್ಲಿ ಹದಿನಾರರಲ್ಲಿ ಒಂದಾಣೆಯ ಕೆಲಸವನ್ನೂ ನಾನು ಮಾಡಲಾಗುವುದಿಲ್ಲ. ಅವರೇ ಜಗನ್ಮಯಿಯ ಅವತಾರ. ಅವರ ಆರಾಧನೆಯ ಮೂಲಕ ಯಾವ ಕೆಲಸದಲ್ಲಿಯಾದರೂ ಸಿದ್ಧಿಯನ್ನು ಪಡೆಯಬಹುದು…… ಎಂದು ೨೫/೯/೧೮೯೪ ರಂದು ಗುರುಭಾಯಿಗಳಿಗೆ ವರ್ಣಿಸಿದ್ದರು.
ಇದೇ ಸಮಯದಲ್ಲಿ ಖೇತ್ರಿ ಮಹಾರಾಜ ಅಜಿತ್ ಸಿಂಗ್’ಗೆ ಬರೆದ ಪತ್ರದಲ್ಲಿ ‘ ಅಮೆರಿಕದ ಗೃಹಿಣಿಯರ ವಿಚಾರವಾಗಿ ನಾನು ಅದೆಷ್ಟೋ ಕತೆಗಳನ್ನು ಕೇಳಿದ್ದೆ. ಅವರು ಸ್ವತಂತ್ರರು. ಸ್ವೇಚ್ಛಾಚಾರಿಗಳು, ತಮ್ಮ ಸ್ವಾತಂತ್ರ್ಯದ ಹುಚ್ಚು ಕುಣಿತದಲ್ಲಿ ಗಾಂಭೀರ್ಯವನ್ನು ಬಿಟ್ಟು ಮನೆಯ ಶಾಂತಿ , ಸೌಹಾರ್ದವನ್ನು ಹಾಳು ಮಾಡಿರುವರು ಮುಂತಾಗಿ.. ಒಂದು ವರ್ಷ ಅಮೆರಿಕ ಮನೆಗಳ ಮತ್ತು ಇಲ್ಲಿಯ ಹೆಂಗಸರ ಅನುಭವವಾದ ಮೇಲೆ ಇಂತಹ ಸಮಾಚಾರಗಳು ಸುಳ್ಳು ಎನ್ನುವುದು ಗೊತ್ತಾಗಿದೆ. ಅಮೆರಿಕದ ಹೆಂಗಸರೇ, ನಿಮಗೆ ನನ್ನ ಕೃತಜ್ಞತೆ ತೋರಿಸುವುದಕ್ಕೆ ನೂರು ಜನ್ಮಗಳು ಸಾಲವು, ಅದಕ್ಕೆ ಬೇಕಾದ ಪದ ಸಂಪತ್ತು ನನ್ನಲ್ಲಿಲ್ಲ, ಹಿಂದೂ ಸಾಗರ ಮಸಿಯಾಗಿ , ಹಿಮಾಲಯದ ಅತ್ಯುನ್ನತ ಶಿಖರವೇ ಲೇಖನಿಯಾಗಿ , ಭೂಗೋಳವೇ ಕಾಗದವಾಗಿ , ಕಾಲವೇ ಬರಹಗಾರನಾದರೂ ನನ್ನ ಕೃತಜ್ಞತೆಗಳನ್ನು ಅರ್ಪಿಸಲಾರೆ…… ಒಂದು ಸೇಬಿನ ಮರ ಮತ್ತು ಅದರ ಹಣ್ಣಿನ ರುಚಿಯನ್ನು ನೆಲದ ಮೆಲೆ ಬಿದ್ದಿರುವ ಕೊಳೆತ , ಹುಳು ತಿಂದ ಹಣ್ಣಿನ ಸವಿಯಿಂದ ಪರೀಕ್ಷಿಸುವಿರಾ? … ’ ಎಂದು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದರು. ‘ ಹಿಂದೂಗಳಿಗಿರುವಂತಹ ಪಾತಿವ್ಯತ್ಯ ಮತ್ತು ಪಾವಿವ್ರತ್ಯಗಳ ಆದರ್ಶವೇ ಪಾಶ್ಚಾತ್ಯ ದೇಶಗಳಲ್ಲಿದೆ ಎಂದು ನೀನು ತಿಳಿಯಕೂಡದು. ಅವುಗಳಿಗೆ ಸರಿಸಮಾನವಾದ ಶೀಲವೇ ಅವರಲ್ಲಿರುವ ಒಳ್ಳೆಯತನ ಮತ್ತು ಧೈರ್ಯ. ಜನಗಳು ನನ್ನನ್ನು ಈಗ ಮುತ್ತುತ್ತಿರುವರು. ತಮ್ಮ ದೇಹದ ಆಸೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಬಲ್ಲ ಮನುಷ್ಯರು ಇರುವರು ಎಂದು ನೂರಾರು ಜನರಿಗೆ ಈಗ ಸ್ಥಿರವಾಗಿ ಗೊತ್ತಾಗಿದೆ. ಈ ಮಹಾ ಆದರ್ಶಗಳಿಗೆ ಪೂಜ್ಯತೆ ಮತ್ತು ಗೌರವ ದಕ್ಕುತ್ತಿದೆ………..’ ಎಂದು ಉತ್ತರಿಸಿ ಪಾತಿವ್ರತ್ಯಕ್ಕೆ ಸಮನಾದ ಬೇರೊಂದು ಆದರ್ಶ ಅಮೆರಿಕ ಹೆಂಗಸರಲ್ಲಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. (೧೭/೨/೧೮೯೬-ಅಳಸಿಂಗ ಪೆರುಮಾಳ್)
ಸಾಧಾರಣ ಮೈಕಟ್ಟಿನ ಭಾರತೀಯ ಹೆಂಗಸರಿಗಿಂತ ಎತ್ತರದ ನಿಲುವು ಮತ್ತು ಬಲಿಷ್ಟ ಮೈಕಟ್ಟಿನ ಯುರೋಪಿನ ಹಲವು ರಕ್ತಗಳ ಕಲಬೆರೆಕೆಯಾಗಿದ್ದ ಬಿಳಿ ತೊಗಲಿನ ಅಮೆರಿಕನ್ ಹೆಂಗಸರು ಸ್ವಾಮಿಗಳನ್ನು ಮೋಡಿಗೊಳಿಸಿದ್ದರಲ್ಲಿ ಯಾವುದೇ ಸೋಜಿಗವಿರಲಿಲ್ಲ. ೫/೯/೧೮೯೪ ರಂದು ಮನ್ಮಥನಾಥ ಭಟ್ಟಾಚಾರ್ಯನಿಗೆ ಬರೆದ ಪತ್ರದಲ್ಲಿ ಸ್ವಾಮಿಗಳು ಅಮೆರಿಕನ್ ಹೆಂಗಸರ ಬಗ್ಗೆ ಹೊಂದಿದ್ದ ಅಂತರಂಗದ ಅಭಿಪ್ರಾಯಗಳು ಎದ್ದು ಕಾಣುತ್ತವೆ. ‘ ಈ ದೇಶದ ಹೆಂಗಸರ ಬಗ್ಗೆ ನನಗೆ ಬಹಳ ಆದರವಿದೆ. ಈವರೆಗೆ ಮದುವೆಯಾಗದ ಹುಡುಗಿಯರಲ್ಲಿ ಸಚ್ಛಾರಿತ್ರಳಲ್ಲದ ಒಬ್ಬ ಹುಡುಗಿಯನ್ನೂ ನಾನು ನೋಡಿಲ್ಲ. …….. ಅವರ ಪ್ರಣಯಾಸಕ್ತ ಸ್ವಭಾವ ಎನ್ನುವ ಸಣ್ಣ ದೋಷವನ್ನು ಬಿಟ್ಟರೆ ನಮ್ಮ ‘ಕೋತಿ’ಗಳು ಅವರ ಸನಿಹ ಬರಲು ಅರ್ಹರಲ್ಲ. ಸೊರಗಿರುವ ಒಣಗಿದ ಹಣ್ಣಿನಂತಿರುವ ಭಾರತದಲ್ಲಿ ನೀನು ಕಾಣುವ ಆ ಪಾಶ್ಚಾತ್ಯ ಹೆಂಗಸರು ಇಂಗ್ಲಿಷರು. ಯುರೋಪಿನಲ್ಲಿ ಇಂಗ್ಲಿಷರು ಕುರೂಪಿ ಜನಾಂಗ. ಅಮೆರಿಕದಲ್ಲಿ ಯುರೋಪಿನ ಅತ್ಯುತ್ತಮ ಜನಾಂಗಗಳ ರಕ್ತ ಬೆರೆತಿವೆ. ಆದ್ದರಿಂದ ಅಮೆರಿಕ ಹೆಂಗಸರು ಅಪ್ರತಿಮ ಸುಂದರಿಯರು. ಅಬ್ಬಾ ಅವರು ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ! ಹೆತ್ತ ನಂತರವೂ ಹೆಣ್ಣು ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಬಲ್ಲಳೇ ?........ ನಮ್ಮ ದೇಶದ ಅತ್ಯಂತ ಸುಂದರಿಯೂ ಇವರ ಮುಂದೆ ಕರಿಗೂಬೆಯಂತೆ ಕಾಣುತ್ತಾಳೆ. ಆದರೂ ಪಂಜಾಬಿನ ಹೆಣ್ಣುಗಳಿಗೆ ಅತ್ಯುತ್ತಮ ಮೈಮಾಟವಿದೆಯೆಂದು ಹೇಳಬಹುದು. …’ ಎಂದು ತಮಗಿರುವ ಹೆಂಗಸಿನ ಮೈಮಾಟದ ಜ್ಞಾನವನ್ನು ಬಿಚ್ಚಿಟ್ಟಿದ್ದರು. ಸ್ವಾಮಿಗಳ ಪತ್ರಗಳಲ್ಲಿರುವ ಅಮೆರಿಕದ ಹೆಂಗಸರ ಗುಣಗಾನ ಗುರುಭಾಯಿಗಳಲ್ಲಿ , ರಾಮಕೃಷ್ಣರ ಗೃಹಸ್ಥ ಭಕ್ತರಲ್ಲಿ ಅನುಮಾನದ ಕಾರ್ಮೋಡಗಳನ್ನೆಬ್ಬಿಸಿ ೧೮೯೪ರ ಮಾರ್ಚ್ ವೇಳೆಗೆ ಸ್ವಾಮಿಗಳು ತಮ್ಮ ಬ್ರಹ್ಮಚರ್ಯ ಕಳೆದುಕೊಳ್ಳುವರೇನೋ ಎನ್ನುವ ಭಯವಾಗಿ ಮಾರ್ಪಟ್ಟಿದ್ದಿತು.
ಸ್ವಾಮಿಗಳು ಅಮೆರಿಕಕ್ಕೆ ಹೋದ ಆರಂಭದಲ್ಲಿ ಮತ್ತು ಅವಕಾಶ ಒದಗಿ ಬಂದಾಗಲೆಲ್ಲ ಭಾರತೀಯ/ಹಿಂದೂಗಳ ಸಾಮಾಜಿಕ, ಧಾರ್ಮಿಕ ನೈತಿಕ ವಿಷಯಗಳ ಬಗ್ಗೆ ಭಾಷಣ ಮಾಡುತ್ತಿದ್ದರು. ಷಿಕಾಗೊ ವುಮೆನ್ಸ್ ಬಿಲ್ಡಿಂಗ್-ಕಂಡೀಷನ್ಸ್ ಆಫ್ ವುಮೆನ್ ಆಫ್ ಇಂಡಿಯಾ (೧೪/೯/೧೮೯೩) , ಡೆಟ್ರಾಯಿಟ್ ಯೂನಿಟೆರಿಯನ್ ಚರ್ಚ್ (೨೪/೩/೧೮೯೪) ಮತ್ತು ಕೇಂಬ್ರಿಜ್-‘ರಜಪೂತ್ ವುಮೆನ್ ಅಂಡ್ ಐಡಿಯಲ್ಸ್ ಆಫ್ ಮದರ್'ಹುಡ್ ಇನ್ ಇಂಡಿಯಾ’ (೧೭/೧೨/೧೮೯೪) , ನ್ಯೂಯಾರ್ಕ್, ಪೌಚ್ ಮ್ಯಾನ್ಷನ್- ಐಡಿಯಲ್ಸ್ ಆಫ್ ವುಮನ್'ಹುಡ್ (೨೦/೧/೧೮೯೫) , ಲಾಸ್ ಏಂಜೆಲೆಸ್’ , ಷೇಕ್ಸ್’ಪಿಯರ್ ಕ್ಲಬ್ ‘ವುಮೆನ್ ಆಫ್ ಇಂಡಿಯಾ’ (೧೮/೧/೧೯೦೦) ಭಾಷಣಗಳಲ್ಲಿ ಭಾರತದ ಹೆಂಗಸರ ಬಗ್ಗೆ ವಿಶೇಷವಾಗಿ ಮಾತನಾಡಿದ್ದರು. ಇದಲ್ಲದೆ ಮೆಟ್'ಕಾಫ್ (೨೨/೮/೧೮೯೩) , ಅನ್ನಿಸ್ಕ್ವಾಮ್’ನಲ್ಲಿ (೨೭/೮/೧೮೯೩) , ಸಲೆಂ (೨೮/೮/೧೮೯೩ , ೩/೯/೧೮೯೩) , ಸ್ಟ್ರೀಟರ್ (೭/೧೦/೧೮೯೩) , ಡೆ ಮೊಯಿನ್ಸ್ (೩೦/೧೧/೧೮೯೩) , ಮಿನ್ನೆಪೊಲಿಸ್ (೧೪/೧೨/೧೮೯೩) , ಮೆಂಫಿಸ್ (೨೦/೧/೧೮೯೪) , ಡೆಟ್ರಾಯಿಟ್ (೧೪/೨/೧೮೯೪) , ವಾಲ್’ಪರೈಸೊ (೨೭/೨/೧೮೯೪) , ನಾರ್ಥಂಪ್ಟನ್ (೧೪/೪/೧೮೯೪), ಲಿನ್ (೧೭/೪/೧೮೯೪) , ಬೋಸ್ಟನ್ (೧೪, ೧೫ /೫/೧೮೯೪) , ಮ್ಯಾಗ್ನೋಲಿಯ (೨೪/೮/೧೮೯೪) , ಮೆಲ್’ಸೋರ್ (೧/೧೦/೧೮೯೪) , ನ್ಯೂಯಾರ್ಕ್ (೭/೪/೧೮೯೫) , ಸ್ಯಾನ್ ಫ್ರಾನ್ಸಿಸ್ಕೊ (೧೯/೩/೧೯೦೦, ೨/೪/೧೯೦೦ ) ಪಟ್ಟಣ/ನಗರಗಳಲ್ಲಿ ಭಾರತೀಯ ಸಾಮಾಜಿಕ ವ್ಯವಸ್ಥೆ , ಆಚರಣೆ , ಆದರ್ಶಗಳನ್ನು ಕುರಿತಾಗಿ ವಿವಿಧ ಶೀರ್ಷಿಕೆಗಳಡಿಯಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಿದ್ದರು. ಇವುಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯ ಹೆಂಗಸರ ಪ್ರಸ್ತಾಪ ಇದ್ದೇ ಇರುತ್ತಿದ್ದಿತು. ಒಮ್ಮೆ ಭಾಷಣದಲ್ಲಿ ಭಾರತದಲ್ಲಿ ಹೆಂಗಸರಿಗೆ ಬಹಳ ಗೌರವ ಇರುವುದರಿಂದ ಅವರನ್ನು ಪ್ರತ್ಯೇಕವಾಗಿರಿಸಲಾಗಿದೆ. ಎಂದಿದ್ದರು. ಇನ್ನೊಮ್ಮ ಸತಿ ಪದ್ದತಿಯ ಬಗ್ಗೆ ಪ್ರತಿಕ್ರಿಯೆ ನೀಡುತ್ತ ಗಂಡನನ್ನು ಅತಿಶಯವಾಗಿ ಪ್ರೀತಿಸುತ್ತಿದ್ದುದರಿಂದ ಹೆಂಡತಿ ಆತನ ಸಾವಿನ ನಂತರ ಜೀವಿಸುವ ಆಸೆಯನ್ನು ಕಳೆದುಕೊಂಡು ಚಿತೆಯೇರುತ್ತಿದ್ದರು. ಮದುವೆಯಲ್ಲಿ ಒಂದಾದ ಅವರು ಸಾವಿನಲ್ಲಿಯೂ ಒಂದಾಗಿರುತ್ತಿದ್ದರು ಎನ್ನುವ ಸಮರ್ಥನೆ ನೀಡಿದ್ದರು
ಅಮೆರಿಕದ ಹೆಂಗಸರ ಮೋಡಿಗೆ ಒಳಗಾಗಿ ಲಕ್ಷ್ಮೀ , ಸರಸ್ವತಿ , ದೇವಿ ಎಂದು ಕರೆದಿದ್ದ ಸ್ವಾಮಿಗಳು ಅನಿವಾರ್ಯವಾಗಿ ಹಿಂದೂ ಧರ್ಮ ಮತ್ತು ಅದರಲ್ಲಿ ಹೆಂಗಸರ ಸ್ಥಾನವನ್ನು ಉದಾತ್ತಗೊಳಿಸಿ ವೈಭವೀಕರಿಸಬೇಕಾಗಿದ್ದಿತು. ಹಾಗಲ್ಲದೆ ಹೋಗಿದ್ದರೆ ಸ್ವಾಮಿಗಳು ಪ್ರತಿಪಾದಿಸುತ್ತಿದ್ದ ಹಿಂದೂಧರ್ಮ ಮತ್ತು ವೇದಾಂತ ಮತ್ತು ಅದರ ಫಲವಾದ ಸಾಮಾಜಿಕ ವ್ಯವಸ್ಥೆ ಹೆಂಗಸರನ್ನು ಎರಡನೇ ದರ್ಜೆಗೆ ಇಳಿಸಿವೆ ಎನ್ನುವುದನ್ನು ಒಪ್ಪಬೇಕಾಗುತ್ತಿದ್ದಿತು. ಒಂದು ಕಡೆ ಅಮೆರಿಕನ್ ಹೆಂಗಸರ ಚೆಲುವು , ಲಕ್ಷಣ , ಕ್ರಿಯಾಶೀಲತೆಯೊಂದಿಗೆ ಭಾರತದ ಹೆಂಗಸರನ್ನು ಹೋಲಿಸಿ ಕಾಗೆ .ಕರಿಗೂಬೆ ಎಂದು ಕರೆದಿದ್ದರು ಇನ್ನೊಂದು ಕಡೆ ಹೆಣ್ಣನ್ನು ಸಹಜವಾಗಿ ಕಾಣದೆ ತಾಯಿಯಂತೆ ದೇವಿಯಂತೆ ಕಾಣುವ ಅವರ ಗುರುವಿನ ಚಿಂತನೆ ಬಳುವಳಿಯಾಗಿ ಬಂದಿದ್ದಿತು. ಈ ಎರಡು ಪರಸ್ಪರ ವೈರುಧ್ಯಗಳಿಗೆ ಸಿಲುಕಿದ ಸ್ವಾಮಿಗಳಲ್ಲಿ ದ್ವಂದ್ವ ತುಂಬಿ ತುಳುಕುತ್ತಿದ್ದಿತು. ಅಮೆರಿಕ ಹೆಂಗಸರು ಸ್ವಾಮಿಗಳ ನಿಲುವು , ಮಾತು , ಮಾರ್ದವತೆ , ಶಿವೋಹಂ ಎನ್ನುವ ನಿಗೂಢ ಉದ್ಗಾರಗಳಿಗೆ ಮಾರುಹೋದಂತೆ ಸ್ವಾಮಿಗಳು ಅಮೆರಿಕದ ಹೆಂಗಸರ ಸ್ವತಂತ್ರ ಮನೋಭಾವ , ಕಾರ್ಯಸಿದ್ಧಿ , ದಿಟ್ಟತನಗಳಿಗೆ ಅದಕ್ಕಿಂತಲೂ ಹೆಚ್ಚು ಮಾರು ಹೋಗಿದ್ದರು. ಸ್ವಾಮಿಗಳು ಅಮೆರಿಕದ ಹೆಂಗಸರ ‘ನೆಚ್ಚಿನ ವ್ಯಕ್ತಿ’ಯಾಗಿದ್ದರು ಅದರಂತೆ ಅಮೆರಿಕನ್ ಹೆಂಗಸರನ್ನು ಅವರು ನೆಚ್ಚಿದ್ದರು.
ಹೆಣ್ಣು , ಹೆಣ್ತನದ ಬಗ್ಗೆ ಸ್ವಾಮಿಗಳ ಧೋರಣೆ ಆರಾಧನೆ , ಪೂಜ್ಯತೆಯಿಂದ ಪ್ರಾರಂಭವಾಗಿ ಸಂಪೂರ್ಣ ಅವಗಣನೆಗೆ ತಿರುಗಿ ನಿರ್ಲಕ್ಷ್ಯದವರೆಗೂ ಹರಡಿದ್ದಿತು. ಸ್ವಾಮಿಗಳು ಭಾರತೀಯ ಸ್ನೇಹಿತ , ಶಿಷ್ಯ , ಅಭಿಮಾನಿಗಳಿಗೆ ಬರೆದ ತಮ್ಮ ಹತ್ತಾರು ಪತ್ರಗಳಲ್ಲಿ ಅಮೆರಿಕದ ಹೆಣ್ಣನ್ನು ಹೊಗಳಿ, ಅಮೆರಿಕದಲ್ಲಿ ಮಾಡುತ್ತಿದ್ದ ಭಾಷಣಗಳಲ್ಲಿ ಭಾರತೀಯ ಹೆಂಗಸರ ಗುಣಗಳನ್ನು ಉತ್ಪ್ರೇಕ್ಷಿಸಿ , ತಾಯ್ತನವನ್ನು ಅಸಾಮಾನ್ಯಗೊಳಿಸಿ ಭೋರ್ಗರೆಯುತ್ತಿದ್ದರಾದರೂ ಹೆಣ್ಣನ್ನು ಕುರಿತಾಗಿ ಅವರ ಮನಸ್ಸು ತಾಕಲಾಟಗಳ ಮೈದಾನವಾಗಿದ್ದಿತು. ಅಲ್ಲಿ ಒಮ್ಮೆ ಅಮೆರಿಕನ್ ಹೆಣ್ಣಿನ ಕೈ (ಮಿಸೆಸ್ ಅಮೆರಿಕ) ಮೇಲಾದರೆ ಮತ್ತೊಮ್ಮೆ ಭಾರತೀಯ ತಾಯಿ (ಮದರ್ ಇಂಡಿಯಾ) ಗೆಲುವಿನ ನಗೆ ಬೀರುತ್ತಿದ್ದಳು. ಶ್ರೀಮತಿ ಪಾಟರ್ ಪಾಮರ್ ೧೪/೯/೧೮೯೩ ರಂದು ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಹಿಂದೂ ಹೆಂಗಸರು ಜಗತ್ತಿನ ಬೇರೆ ಯಾವುದೇ ಹೆಂಗಸರಿಗಿಂತ ಹೆಚ್ಚು ಅಧ್ಯಾತ್ಮದ ಒಲವುಳ್ಳವರು ಎಂದು ಘೋಷಿಸಿದ್ದರು (77). ಅಮೆರಿಕದಲ್ಲಿ ಭಾರತೀಯರ ಆದರ್ಶ ತಾಯಿ ಎಂದು ಕನಿಷ್ಟ ೨೦ ಸಾರ್ವಜನಿಕ ಭಾಷಣಗಳನ್ನು ಮಾಡಿದ್ದರು. ಹೆಣ್ಣು ಉತ್ತೇಜಿಸುವ ಹೆಂಡತಿಯಾದ ನಂತರವೇ ತಾಯಿಯಾಗಬಲ್ಲಳು ಎನ್ನುವ ವಾಸ್ತವಕ್ಕೆ ಕುರುಡಾಗಿದ್ದರು. ಅಮೆರಿಕನ್ನರು ಹೆಂಗಸರ ಸೌಂದರ್ಯವನ್ನು ಪ್ರೀತಿಸುತ್ತಾರೆಯೇ ಹೊರತು ಹೆಣ್ಣನ್ನಲ್ಲ ಎಂದು ಛೇಡಿಸುತ್ತ ಭಾರತೀಯ ಗಂಡಸರು ಹೆಣ್ಣನ್ನು ಆ ದೃಷ್ಟಿಯಲ್ಲಿ ನೋಡುವುದೇ ಇಲ್ಲ ಎಂದು ಪ್ರತಿಪಾದಿಸಲು ಯತ್ನಿಸುತ್ತ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದರು. ಮನ್ಮಥನಾಥ ಭಟ್ಟಾಚಾರ್ಯರಿಗೆ ಪತ್ರ ಬರೆಯುವದಕ್ಕಿಂತ ಕೆಲ ತಿಂಗಳ ಹಿಂದೆ ಡೆಟ್ರಾಯಿಟ್’ನಲ್ಲಿ ಹೊಲದಲ್ಲಿರುವ ಒಬ್ಬ ಹಿಂದೂ ಹೆಣ್ಣನ್ನು ನೋಡುವುದೆಂದರೆ ಒಮ್ಮೆ ಸ್ತಬ್ದವಾಗಿ ನಿಂತು ಅಂತಹ ಚೆಲುವನ್ನು ಸೃಜಿಸಿದ ದೇವರ ಚಳಕವನ್ನು ಮೆಚ್ಚುವುದಾಗಿದೆ‘ ಎಂದಿದ್ದರೆಂದು ಡೆಟ್ರಾಯಿಟ್ ಟ್ರಿಬ್ಯೂನ್–೧/೪/೧೮೯೪- ವರದಿ ಮಾಡಿತು. (78). ಸೆಪ್ಟೆಂಬರ್’ನಲ್ಲಿ ಮನ್ಮಥನಾಥ ಭಟ್ಟಾಚಾರ್ಯರಿಗೆ ಪತ್ರ ಬರೆಯುವ ವೇಳೆಗೆ ಅವರ ಚಿಂತನೆಗಳು ವಿರುದ್ಧ ದಿಕ್ಕಿಗೆ ತಿರುಗಿ ಭಾರತದ ಅಪ್ರತಿಮ ಸುಂದರಿಯೂ ಅಮೆರಿಕನ್ ಹೆಣ್ಣಿನ ಮುಂದೆ ಕರಿಗೂಬೆಯಾಗಿದ್ದಳು.
೧೭/೩/೧೮೯೪ ಡೆಟ್ರಾಯಿಟ್ ಟ್ರಿಬ್ಯೂನ್ ವರದಿಗಾರನಿಗೆ ನೀಡಿದ ಸಂದರ್ಶನದಲ್ಲಿ ಭಾರತದಲ್ಲಿ ವಂಶಪಾರಂಪರ್ಯ ವೇಶ್ಯಾಪದ್ದತಿಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತ ‘ಒಬ್ಬ ಹೆಂಗಸು ಸಚ್ಚಾರಿತ್ರ್ಯದವಳಲ್ಲ ಎಂದು ಗೊತ್ತಾದ ತಕ್ಷಣ ಆಕೆಯನ್ನು ಜಾತಿಯಿಂದ ಹೊರ ಹಾಕಲಾಗುತ್ತದೆ. ಆ ನಂತರ ಯಾರೊಬ್ಬರು ಆಕೆಯನ್ನು ಮುಟ್ಟುವಂತಿಲ್ಲ ಮತ್ತು ಮಾತನಾಡುವಂತಿಲ್ಲ…….. ಭಾರತೀಯ ಸಮಾಜದಲ್ಲಿ ಸಚ್ಛಾರಿತ್ರ್ಯ ಹೊಂದಿರದ ಹೆಂಗಸರೇ ಇಲ್ಲ ‘ ಧೃಢ ಮಾತಿನಲ್ಲಿ ಹೇಳಿದ್ದರು. (78) ರಾಮಕೃಷ್ಣರ ಜಯಂತಿ ಉತ್ಸವದಲ್ಲಿ ಕಲ್ಕತ್ತದ ಸೂಳೆಯರು ಭಾಗವಹಿಸಿದ್ದರು. ಹಾಗೆ ಭಾಗವಹಿಸಲು ಅವಕಾಶ ಕೊಟ್ಟಿದ್ದು ತಪ್ಪೇ ? ಹಾಗೆ ಮಾಡಿದ್ದೇ ಆದರೆ ಜನ ನಮ್ಮ ಬಗ್ಗೆ ಏನು ತಿಳಿಯುತ್ತಾರೆ ಎನ್ನುವ ಪ್ರಶ್ನೆಗಳನ್ನು ರಾಮಕೃಷ್ಣಾನಂದ ಎತ್ತಿದ್ದರು. ರಾಮಕೃಷ್ಣರ ಉತ್ಸವದಲ್ಲಿ ಭಾಗಿಗಳಾಗಲು ಎಲ್ಲರಿಗೂ ಅವಕಾಶವಿರಲಿ. ಕೆಲ ಸ್ವಯಂ ಸೇವಕರು ಎಲ್ಲಿಯೂ ಯಾರೂ ಅಸಭ್ಯ ನಡವಳಿಕೆ ತೋರದಂತೆ ಕಣ್ಗಾವಲಿಟ್ಟಿರಲಿ ಎನ್ನುವ ಪರಿಹಾರವನ್ನು ಸ್ವಾಮಿಗಳು ಸೂಚಿಸಿದರು. (೨೩/೮/೧೮೯೬). ಶಿಷ್ಯ ಶರಚ್ಚಂದ್ರ ಚಕ್ರವರ್ತಿಗೆ ಹೆಂಗಸರು ತಮ್ಮ ಭಾಷಣ ಕೇಳಿ ಲೈಂಗಿಕವಾಗಿ ಉದ್ರೇಕಗೊಳ್ಳುತ್ತಿದ್ದರೆಂದು ತಿಳಿಸಿದ್ದರು. (79) ಬೋಸ್ಟನ್ ಡೈಲಿ ಗ್ಲೋಬಲ್-೨೪/೩/೧೮೯೬- ಸಂದರ್ಶನದಲ್ಲಿ ಬೋಸ್ಟನ್ ಹೆಂಗಸರು ಕುತ್ಸಿತ ಬುದ್ದಿಯವರು , ಚಂಚಲರು ಮತ್ತು ಅಪ್ರಾಮಾಣಿಕರೆಂದು ಭಾಷಣದಲ್ಲಿ ಹೀಗಳೆದಿದ್ದರು. (80) ಬೋಸ್ಟನ್ ಹೆಂಗಸರು `ಸದಾ ಖಯಾಲಿ, ಚಂಚಲ ಮನಸ್ಸಿನವರಾಗಿದ್ದು ವಿಚಿತ್ರ ಮತ್ತು ಹೊಸದಾಗಿ ಕಾಣುವುದರ ಬೆನ್ನು ಹತ್ತುತ್ತಾರೆ ಎನ್ನುವ ತೀರ್ಮಾನ ನೀಡಿದ್ದರು. (81).
ಸ್ವಾಮಿಗಳು ಅಮೆರಿಕ ಹೆಂಗಸರ ಬಗ್ಗೆ ತಳೆದಿದ್ದ ಅಭಿಪ್ರಾಯ ಒಂದೇ ರೀತಿಯಾಗಿರದೆ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿದ್ದಿತು. ಅಮೆರಿಕದ ಹೆಂಗಸರು ಡಯಾನ ವಿಗ್ರಹದ ಮೇಲಿನ ಹಿಮಮಣಿಯಷ್ಟು ಪರಿಶುದ್ಧರೆನ್ನುವ ತಮ್ಮ ಹೇಳಿಕೆಯನ್ನು ಮರೆತು ಇನ್ನೊಮ್ಮೆ ಭೋಗವಾದಿಗಳೆಂದು ಕರೆದಿದ್ದರು. ಆವೇಶಭರಿತರಾಗಿ ಡೆಟ್ರಾಯಿಟ್ ಒಪೆರಾ ಹೌಸ್’ನಲ್ಲಿ ಮಾಡಿದ ಭಾಷಣದಲ್ಲಿ ‘ ಉತ್ತಮ ಉಡುಗೆ , ಸಂಪತ್ತು , ಶ್ರೀಮಂತ ಕೂಟ, ಒಪೆರಾ , ಕಾದಂಬರಿಗಳನ್ನು ಹೊರತಾಗಿ ಅಮೆರಿಕ ಹೆಂಗಸರಲ್ಲಿ ಹೇಳಿಕೊಳ್ಳುವಂತಹುದು ಏನಿದೆ ? ಅಮೆರಿಕನ್ ಹೆಂಗಸರಲ್ಲಿ ಒಂದು ಡಝನ್ ಅಧ್ಯಾತ್ಮಿಕ ವ್ಯಕ್ತಿಗಳನ್ನು ತೋರಿಸಿರಿ ಎನ್ನುವ ಸವಾಲನ್ನು ಎಸೆದು ಇವೆಲ್ಲವುಗಳೊಂದಿಗೆ ಅಧ್ಯಾತ್ಮಿಕತೆಯೂ ಇರಬೇಕು. ಪಾಶ್ಚಾತ್ಯ ದೇಶಗಳಲ್ಲಿ ಅದಿಲ್ಲ. ಅಂತಹ ಅಧ್ಯಾತ್ಮಿಕ ಹೆಂಗಸರು ಭಾರತದಲ್ಲಿ ವಾಸಿಸುತ್ತಾರೆ’ ಎಂದಿದ್ದರು. (82). ೧೮೯೬ ಫೆಬ್ರವರಿ-ಮಾರ್ಚ್’ನಲ್ಲಿ ಸ್ವಾಮಿಗಳು ಅಮೆರಿಕದ ಹೆಂಗಸರು ಖಯಾಲಿಗಳು , ಚಂಚಲರು , ವಿಚಿತ್ರ ಮತ್ತು ಹೊಸತರ ಬೆನ್ನು ಹತ್ತಿರುವವರು ಎಂದು ಹೇಳಿದ್ದಾರೆನ್ನುವ ವಿವಾದ ಎದ್ದಿದ್ದಿತು. ೨೪/೩/೧೮೯೬ ರಂದು ಬೋಸ್ಟನ್ ಡೈಲಿ ಗ್ಲೋಬಲ್’ಗೆ ನೀಡಿದ ಸಂದರ್ಶನದಲ್ಲಿ ಸ್ವಾಮಿಗಳು ‘ನಾನು ಹಾಗೆ ಹೇಳಿಲ್ಲ. ಅವರು ಜಾಣರು ಆದರೆ ಅವರಿಗೆ ಸ್ಥಿರಬುದ್ಧಿ , ಗಾಂಭೀರ್ಯ ಮತ್ತು ಪ್ರಾಮಾಣಿಕರಲ್ಲ ‘ ಎನ್ನುವ ಅಭಿಪ್ರಾಯ ತಿಳಿಸಿದ್ದೆ ಎಂದು ಉತ್ತರಿಸಿದರು. (83) ‘ ಅಮೆರಿಕ ಹೆಂಗಸರ ಸ್ವಭಾವ ಹರಟೆ ಮತ್ತು ಅಪಪ್ರಚಾರ . ಅವು ಇಂಗ್ಲೆಂಡ್’ನಲ್ಲಿ ಇಲ್ಲವೇ ಇಲ್ಲ ಎನ್ನಬಹುದು, ಇಂಗ್ಲಿಷ್ ಹೆಂಗಸರು ನಿಧಾನ , ಆದರೆ ಒಂದು ಕೆಲಸಕ್ಕೆ ಕೈ ಹಾಕಿದರೆ ಅದನ್ನು ಬಿಡುವುದಿಲ್ಲ ‘ ಎನ್ನುವ ಅಭಿಪ್ರಾಯ ಮೇರಿ ಹೇಲ್ ಮುಂದಿರಿಸಿದ್ದರು. (೬/೧/೧೮೯೬). ೨೯/೭/೧೮೯೭ ರಂದು ಭಾರತಕ್ಕೆ ಬರಲು ಮಾರ್ಗರೆಟ್ ನೊಬೆಲ್’ಗೆ ಒಪ್ಪಿಗೆ ನೀಡುತ್ತ ‘ನಿನಗೆ ಸ್ವಾಗತ ..ಭಾರತೀಯರಿಗೆ ಅದರಲ್ಲೂ ಹೆಂಗಸರಿಗೆ ಕೆಲಸ ಮಾಡಲು ಬೇಕಾಗಿರುವುದು ಗಂಡಲ್ಲ-ಹೆಣ್ಣು. ನೀನು ನಿಜವಾದ ಹೆಣ್ಣುಸಿಂಹ……..ಭರತಖಂಡ ಇನ್ನೂ ಮಹಾಮಹಿಳೆಯರನ್ನು ಹೆತ್ತಿಲ್ಲ. ಬೇರೆ ದೇಶಗಳಿಂದ ಅವರನ್ನು ಎರವಲು ಪಡೆಯಬೇಕಾಗಿದೆ. ನಿನ್ನ ವಿದ್ಯೆ , ನಿಷ್ಕಾಪಟ್ಯ, ಪಾವಿತ್ರ್ಯತೆ , ಅನಂತ ಪ್ರೀತಿ , ಸ್ಥಿರ ಸಂಕಲ್ಪ , ಎಲ್ಲಿಕ್ಕಿಂತ ಹೆಚ್ಚಾಗಿ ನಿನ್ನಲ್ಲಿ ಹರಿಯುತ್ತಿರುವ ಸೆಲ್ಟ್ ಜನಾಂಗದ ರಕ್ತ –ಇವು ನಿನ್ನನ್ನು ನಮಗೆ ಬೇಕಾದ ಮಹಿಳೆಯನ್ನಾಗಿ ಮಾಡಿವೆ ‘ ಎನ್ನುತ್ತ ತಾವೇ ಹಾಡಿ ಹೊಗಳುತ್ತಿದ್ದ ಯಾಜ್ಞವಲ್ಕ್ಯನ ಹೆಂಡತಿ ಮೈತ್ರೇಯಿ , ಲೀಲಾವತಿ , ಮೀರಾ ಬಾಯಿಯರನ್ನು ಬದಿಗೆ ಸರಿಸಿದರು.
ಬಂಗಾಳಿ ಭದ್ರಲೋಕದಲ್ಲಿ ಹೆಣ್ಣನ್ನು ತ್ಯಾಗಮಯಿ ತಾಯಿ ಅಥವಾ ಭೋಗಾಸಕ್ತ ಕಾಮಿನಿ ಎನ್ನುವ ಎರಡು ಅತಿರೇಕಗಳಲ್ಲಿ ಕಾಣುವುದು ಸಹಜವಾಗಿದ್ದಿತು. ಸ್ವಾಮಿಗಳ ನಂಬಿಕೆಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ. ಈ ಎರಡು ವಿರುದ್ಧ ಧೃವಗಳ ನಡುವೆ ಓಲಾಡುತ್ತಿದ್ದ ಸ್ವಾಮಿಗಳಲ್ಲಿ ಪವಿತ್ರರು , ಪುರುಷರು ಸಾಧಿಸಬೇಕಾದ ಅಧ್ಯಾತ್ಮ ಗುರಿಗೆ ಹೆಣ್ಣು ಅಡ್ದಿ ಎನ್ನುವ ನಂಬಿಕೆ ಬೆಳೆದಿದ್ದಿತು. ರಾಮಕೃಷ್ಣಾನಂದರಿಗೆ ..ಬಿಳಿಗಿರಿಗೆ ಇಬ್ಬರು ವಿಧವೆ ಮಕ್ಕಳಿದ್ದಾರೆ. ಅವರನ್ನು ವಿದ್ಯಾವಂತರನ್ನಾಗಿ ಮಾಡು. ಅವರಿಂದ ಇತರ ವಿಧವೆಯರಿಗೆ ನಮ್ಮ ಧರ್ಮದ ಪರಿಚಯವಾಗಲಿ. ಆದರೆ ಈ ಕೆಲಸಗಳನ್ನೆಲ್ಲ ಬಹಳ ದೂರದಿಂದ ಮಾಡಬೇಕು. ಯುವತಿಯರ ಹತ್ತಿರ ಜಾಗರೂಕರಾಗಿರಬೇಕು. ನೀನೊಮ್ಮೆ ಭ್ರಷ್ಟನಾದರೆ ಬೇರೆ ದಾರಿಯೇ ಇಲ್ಲ. ಈ ಪಾಪ ಅಕ್ಷಮ್ಯ. ರಾಧಾಕೃಷ್ಣರ ದಿವ್ಯ ಪ್ರೇಮ ಬೋಧಿಸುವ ಅವಶ್ಯಕತೆಯಿಲ್ಲ ಎಂದು ಎಚ್ಚರಿಸಿದ್ದರು. (೨೦/೪/೧೮೯೭). ಕಾಮನೆಗಳಿಂದ ಮುಕ್ತಳಾದಾಕೆ ತಾಯಿ , ಕಾಮನೆಗಳಿರುವಾಕೆ ಮಾಯಾವಿ ಎನ್ನುವ ಅಸಹಜ ವರ್ಗೀಕರಣ ಸ್ವಾಮಿಗಳ ಮನಸ್ಸಿನಲ್ಲಿ ಬೇರೂರಿದ್ದಿತು. ಪರಿಶುದ್ಧ ಚಿಂತನೆ ಪಾತಿವ್ರತ್ಯದ ಫಲ-ಅದರಂತೆ ಎಲ್ಲ ಹೆಂಗಸರನ್ನು ತಾಯಿಯಂತೆ ಕಾಣುವ ದೃಷ್ಟಿ ಎಂದು ಸ್ಯಾನ್’ಫ್ರಾನ್ಸಿಸ್ಕೊದ ತುಂಬಿದ ಸಭೆಗಳಲ್ಲಿ ಘೋಷಿಸಿದ್ದರು. (84)
ಸ್ವಾಮಿಗಳು ಅಮೆರಿಕದಲ್ಲಿ ಭಾರತದ ಹೆಂಗಸರನ್ನು ಕುರಿತಾಗಿ ಭಾಷಣಗಳನ್ನು ಮಾಡುವಾಗ, ತಾಯಿ , ಅಕ್ಕ ,ತಂಗಿಯರ ರೂಪದಲ್ಲಿ ನನಗೆ ಹೆಣ್ಣಿನ ಅನುಭವವಿದೆ. ನಾನು ಸಂನ್ಯಾಸಿಯಾಗಿರುವುದರಿಂದ ಹೆಂಡತಿಯ ರೂಪದಲ್ಲಿ ಆಕೆಯ ಅನುಭವ ನನಗಿಲ್ಲ ಎನ್ನುತ್ತಿದ್ದರು. ೧೮/೧/೧೯೦೦ ರಂದು ಪಸಡೆನಾದ ಷೇಕ್ಸ್’ಸ್ಪಿಯರ್ ಕ್ಲಬ್’ನಲ್ಲಿ ಭಾರತದ ಹೆಣ್ಣನ್ನು ಕುರಿತಾಗಿ ಮಾಡಿದ’ ‘ವುಮೆನ್ ಆಫ್ ಇಂಡಿಯಾ’ ಭಾಷಣದ ಬಹುಭಾಗ ವಾಸ್ತವಗಳಿಗಿಂತ ದೂರದಲ್ಲಿದ್ದ ಸಂನ್ಯಾಸಿಯೊಬ್ಬನ ಬಡಬಡಿಕೆಯಾಗಿದ್ದಿತು. ಈ ಭಾಷಣದಲ್ಲಿ ತಾಯ್ತನದ ಆದರ್ಶವನ್ನು ಹೊಗಳಿದರು. ಪರೋಕ್ಷವಾಗಿ ಬಾಲ್ಯ ವಿವಾಹವನ್ನು ಸಮರ್ಥಿಸಿದರು. ‘ಭಾರತದಲ್ಲಿ ಯಾವ ಹೆಣ್ಣು ತನ್ನ ಮೈಯನ್ನು ಯಾರಿಗೂ ಅರ್ಪಿಸುವುದಿಲ್ಲ. ದೇಹ ಆಕೆಯದು. ಬ್ರಿಟಿಷರು ಭಾರತದಲ್ಲಿ ದಾಂಪತ್ಯ ಹಕ್ಕಿನ ಕಾನೂನನ್ನು ತಂದಿದ್ದಾರೆ. ಅದನ್ನು ಯಾವ ಭಾರತೀಯನೂ ಕೇಳಿರಲಿಲ್ಲ ….ಗಂಡ ತನ್ನ ಹೆಂಡತಿಯ ದೇಹ ಸಂಬಂಧ ಬಯಸುವಾಗ ಆಕೆ ಪ್ರಾರ್ಥನೆ , ವ್ರತ , ನಿಯಮಗಳ ಮೂಲಕ ಆ ಸಮಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುತ್ತಾಳೆ. ಏಕೆಂದರೆ ಯಾವುದು ಸಂತಾನಕ್ಕೆ ಕಾರಣವಾಗುವುದೋ ಅದು ಭಗವಂತನ ಪವಿತ್ರ ಕುರುಹು. ಒಳ್ಳೆಯದಕ್ಕೋ, ಕೆಟ್ಟದ್ದಕ್ಕೊ ಅದ್ಭುತ ಶಕ್ತಿಯಿಂದ ಸನ್ನದವಾಗಿ ಬರುವ ಮತ್ತೊಂದು ಜೀವಿಯ ಬರುವಿಕೆಗೆ ಗಂಡು-ಹೆಣ್ಣು ಮಾಡುವ ಪರಮ ಪ್ರಾರ್ಥನೆ ಅದು. ಇದೇನು ತಮಾಷೆಯೇ ? ಇದು ಮೈತಣಿಸುವ ಪಾಶವೀ ತೃಪ್ತಿ ಮಾತ್ರವೇ ? ಇಲ್ಲ ಸಾವಿರ ವೇಳೆ ಹಿಂದೂ ಇಲ್ಲವೆಂದು ಸಾರುವನು…..’ಎಂದು ಆವೇಶಭರಿತರಾಗಿ ಘೋಷಿಸಿದರು. ಭಾಷಣಕ್ಕೆ ಬಂದಿದ್ದ ಹೆಂಗಸರನ್ನು ಉದ್ದೇಶಿಸಿ ‘ ನೀವೆಲ್ಲ ಮಕ್ಕಳ ಹುಟ್ಟಿಗಾಗಿ ಪ್ರಾರ್ಥಿಸುವಿರೇನು ? ತಾಯಿಯಾಗಲು ನಿಮಗೆ ಸಂತೋಷ ಇಲ್ಲವೇ ? ತಾಯ್ತನದಿಂದ ನೀವು ಪವಿತ್ರರಾದೆವೆಂದು ಭಾವಿಸುವಿರೋ ಇಲ್ಲವೋ ? ಈ ಪ್ರಶ್ನೆಯನ್ನು ನೀವೇ ಹಾಕಿಕೊಳ್ಳಿ. ಹಾಗಿಲ್ಲದಿದ್ದರೆ ನಿಮ್ಮ ಮದುವೆ ಸುಳ್ಳು, ನಿಮ್ಮ ಹೆಣ್ತನ ಸುಳ್ಳು , ನಿಮ್ಮ ವಿದ್ಯೆ ಕೇವಲ ಕುರುಡು ನಂಬಿಕೆ. ಪ್ರಾರ್ಥನೆಯಿಲ್ಲದೆ ನಿಮ್ಮ ಮಕ್ಕಳು ಜಗತ್ತಿಗೆ ಬಂದರೆ ಅದು ಮಾನವಕೋಟಗೆ ಕೊಟ್ಟ ಒಂದು ಮಹಾ ಶಾಪ ‘ ಎನ್ನುತ್ತ ತಮ್ಮ ಕಾಲ್ಪನಿಕ ಆದರ್ಶದ ಅಳತೆಗೋಲಿನಲ್ಲಿ ಇಡೀ ಜಗತ್ತಿನ ಜನರೆಲ್ಲ ಶಾಪದ ಫಲವೇನೋ ಎನ್ನುವ ಅತಿರೇಕಕ್ಕೆ ಹೋದರು. (85)
ಇದೇ ಭಾಷಣದಲ್ಲಿ ‘ ಭಾರತದ ಆದರ್ಶ ಹೆಣ್ಣು ತಾಯಿ., ಆಕೆಯೇ ಮೊದಲು , ತಾಯ್ತನವೇ ಕೊನೆ . ಹೆಣ್ಣು ಎಂದಾಕ್ಷಣ ಭಾರತೀಯನ ಮನಸ್ಸಿಗೆ ಬರುವುದು ತಾಯಿಯೇ . ತಾಯಿ ಪೂಜ್ಯಾರ್ಹಳು ಏಕೆಂದರೆ ಮಗುವನ್ನು ಜಗತ್ತಿಗೆ ತರುವ ಸಂತಳು. ಮಗುವಿನ ನಿರೀಕ್ಷಣೆಯಲ್ಲಿ ಆಕೆಯ ಮೈ ಶುದ್ಧ , ಮನ ಶುದ್ಧ , ಊಟ ಶುದ್ಧ , ಬಟ್ಟೆ ಶುದ್ಧ , ಕಲ್ಪನೆಗಳು ಶುದ್ಧ ಎಂದಿದ್ದರು. ಅದೇ ಭಾಷಣದಲ್ಲಿ ಇನ್ನೊಂದು ಕಡೆ ‘ ಹೆಣ್ಣು ಎನ್ನುವ ಪದ ರಕ್ತ ಮಾಂಸಗಳ ಭೌತಿಕ ಮೂರ್ತ ರೂಪಕ್ಕೆ ಮಾತ್ರ ಅನ್ವಯಿಸಬೇಕೇನು ? ಎಂದು ನೆರೆದಿದ್ದ ಸಭಿಕರನ್ನು ಪ್ರಶ್ನಿಸಿದ್ದ ಸ್ವಾಮಿಗಳು ಮುಂದುವರೆದು ‘ ಓ ! ಹಿಂದೂ ಮನಸ್ಸು ಹೆಣ್ಣು ರಕ್ತ ಮಾಂಸಗಳಿಗೆ ಲಗತ್ತಾಗಬೇಕೆನ್ನುವ ಎಲ್ಲ ಪರಿಕಲ್ಪನೆಗಳಿಗೆ ಬೆದರುತ್ತದೆ. ಇಲ್ಲ, ಇಲ್ಲ , ಹೆಣ್ಣೇ ರಕ್ತ ಮಾಂಸದೊಂದಿಗೆ ಸಂಬಂಧಿಸದ ಯಾವುದರೊಂದಿಗೂ ನಿನ್ನನ್ನು ಸಂಬಂಧಿಸಲಾಗದು. ಒಮ್ಮೆ ಪವಿತ್ರ ಎಂದು ಕರೆದಾದ ಮೇಲೆ ‘ತಾಯಿ’ ಎನ್ನುವ ಒಂದು ಶಬ್ದದ ಹೊರತಾಗಿ ಆ ಹೆಸರನ್ನು ಯಾವ ಪ್ರಲೋಭನೆಯ ಕಲ್ಪನೆಯೂ ಸಮೀಪಿಸದು , ಯಾವ ಭೋಗವೂ ಸನಿಹ ಸುಳಿಯಲಾರದು ಎಂದು ಉದ್ಗರಿಸಿದ್ದರು (85). ಶಿವ-ಶಕ್ತಿಯ ಬಗ್ಗೆ ಆವೇಶಭರಿತರಾಗಿ ವಿವರಿಸುತ್ತ ಶಿವ -ಈಗ ಭಾರತದಲ್ಲಿ ಎಲ್ಲರ ತಾಯಿಯಾಗಿರುವ-ತನ್ನ ಹೆಂಡತಿ ಶಕ್ತಿಗೆ ಶರಣಾಗಿರುವ ವಿಷಯ ತಿಳಿಸುತ್ತ, ಶಕ್ತಿಯ ಪೂಜೆ ಭಾರತದಲ್ಲಿ ಯಾವ ಮಟ್ಟಿಗೆ ಇದೆಯೆಂದರೆ ಯಾವುದೇ ಹೆಣ್ಣು ಪ್ರಾಣಿಯನ್ನೂ ಕೊಲ್ಲುವಂತಿಲ್ಲ ಎನ್ನುತ್ತ ಮುಕ್ತವಾಗಿ ಸಂಸ್ಕೃತದಲ್ಲಿ ಅದನ್ನು ಹೇಳುತ್ತ ಭಾಷಾಂತರಿಸಿದರು. ಹೀಗೆ ತಾಯಿ ಎಂದು ಕರೆದು ಹೆಂಗಸಿಗೆ ಶರಣಾಗುವ , ಕಾಳಿಗೆ ಉನ್ಮತ್ತನಾಗಿ ಅಡಿಯಾಗುವ ಮನೋಭಾವದ ಸ್ವಾಮಿಗಳು ಹೆಣ್ಣನ್ನು ಗಂಡಿನಂತೆ ವಾಸ್ತವಿಕ ಸತ್ಯವಾಗಿ ಪರಿಗಣಿಸುತ್ತಿರುವ ಎಲ್ಲ ಅನುಭವಗಳನ್ನು ಅಲ್ಲಗಳೆದಿದ್ದರು. (85 ,86). ರೋಡ್’ಹ್ಯಾಮೆಲ್ ಕನ್ಯೆ ಮೇರಿ ಮಗುವನ್ನು ಹೆತ್ತ ಬಗ್ಗೆ ಅಭಿಪ್ರಾಯ ಕೇಳಿದಾಗ ದೇವರ ಲೀಲೆ ಬಲ್ಲವರಾರು ಎನ್ನುವ ನುಣಚಿಕೊಳ್ಳುವ ಉತ್ತರ ನೀಡಿದ್ದರು. (87)
ಈ ಭಾಷಣ ಮುಗಿದ ಮೇಲೆ ಪ್ರಶ್ನೋತ್ತರ ಸಾಗಿತು. ಆಗ ಸ್ವಾಮಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಪಾಶ್ಚಾತ್ಯರಂತೆ ಭಾರತದಲ್ಲಿ ಮದುವೆಯ ಗುರಿ ದೈಹಿಕ ಸುಖವಾಗಿರದೆ ಬೇರೆಯಾಗಿದೆ ಎಂದು ಮದುವೆಯಾದ ಅನುಭವಿಯಂತೆ ಬಡಾಯಿ ಕೊಚ್ಚಿದರು. ಆಗ ಒಬ್ಬಾಕೆ ಈ ವಿಷಯದ ಬಗ್ಗೆ ಹೆಚ್ಚಿನ ಸ್ಪಷ್ಟನೆ ಬಯಸಿದಳು. ಇದರಿಂದ ಕೆರಳಿ ಕೆಂಡವಾದ ಸ್ವಾಮಿಗಳು ಆವೇಶಭರಿತರಾಗಿ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುತ್ತ ಬೆರಳ ಗೆಣಿಕೆಗಳು ಮುರಿದುಹೋಗುವಂತೆ ಗಟ್ಟಿಯಾಗಿ ಮೇಜಿಗೆ ಕುಟ್ಟಿ ‘ ಇಲ್ಲ ಮ್ಯಾಡಂ ರಾತ್ರಿಯ ಕಗ್ಗತ್ತಲಿನೊಳಗಿಂದ ಮಕ್ಕಳು ಹುಟ್ಟುವಂತಹ ಗಂಡ-ಹೆಂಡತಿ ಸಂಬಂಧ ಭಾರತದಲ್ಲಿಲ್ಲ ‘ ಎಂದು ಘರ್ಜಿಸಿದರು. ಪ್ರಶ್ನೆ ಕೇಳಿದ ಹೆಂಗಸು ಎದ್ದು ನಿಂತು ‘ಮಹಾ ಸುಳ್ಳ ‘ ಎಂದಳು. ಆಗ ಸ್ವಾಮಿಗಳು ‘ಭಾರತದ ಬಗ್ಗೆ ನನಗಿಂತ ನಿನಗೇ ಹೆಚ್ಚು ಗೊತ್ತಿದೆ. ನೀನೇ ವೇದಿಕೆಯ ಮೇಲೆ ಬಂದು ಭಾಷಣ ಮಾಡು ‘ ಎಂದು ಚೀತ್ಕರಿಸುತ್ತ ವೇದಿಕೆಯಿಂದ ಇಳಿದು ಸರಸರನೆ ಹೊರನಡೆಯತೊಡಗಿದರು. ಕೆಲ ಹೆಂಗಸರು ಅವರ ದಾರಿಗೆ ಅಡ್ಡಲಾಗಿ ನಿಂತು ಪ್ರಶ್ನೆಗಳ ಸುರಿಮಳೆಗರೆದರು. ಅವೆಲ್ಲವುಗಳಿಗೆ ‘ನೀವೇ ವೇದಿಕೆ ಹತ್ತಿ ಮಾತನಾಡಿ’ ಎನ್ನುವುದೊಂದೇ ಸ್ವಾಮಿಗಳ ಉತ್ತರವಾಗಿದ್ದಿತು. ಸ್ವಾಮಿಗಳ ಬೆಂಗಾವಲಿಗಿದ್ದ ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ’ಗೆ ಅಲ್ಲಿದ್ದ ಒಬ್ಬಾಕೆ ‘ಏ ಮೂರ್ಖಳೇ ಆತ ನಿನ್ನನ್ನೇ ದ್ವೇಷಿಸುತ್ತಿರುವುದು’ ಎಂದು ತಿಳಿಸಿದಳು, (88)
ಭಾರತೀಯ ಕಲ್ಪನೆಯ ತಾಯ್ತನವನ್ನು ಸಾರ್ವತ್ರೀಕರಿಸಲು ಸಮಕಾಲೀನ ಯುರೋಪಿನ ಉದಾಹರಣೆಯನ್ನು ಸ್ವಾಮಿಗಳು ಕೊಟ್ಟಿದ್ದರು. ಪ್ರಾಚ್ಯ ಮತ್ತು ಪಾಶ್ಚಾತ್ಯ ಲೇಖನದಲ್ಲಿ ತ್ರಿಮೂರ್ತಿಗಳ ಕಲ್ಪನೆಯಲ್ಲಿ ಜೆಹೊವಾ , ಯೇಸು ಪರಿಗಣನೆಯಲ್ಲಿ ಎರಡನೆಯವರು. ತೋಳುಗಳಲ್ಲಿ ಮಗು ಯೇಸುವನ್ನು ಹಿಡಿದಿರುವ ಮೇರಿಯೇ ಮೊದಲು. ಚಕ್ರವರ್ತಿ ‘ಅಮ್ಮಾ’ ಎನ್ನುತ್ತಾನೆ , ಯುದ್ಧ ಭೂಮಿಯಲ್ಲಿ ಸೇನಾಪತಿ ‘ಅಮ್ಮಾ’ ಎನ್ನುತ್ತಾನೆ , ಬಲೆ ಹರಡಿರುವ ಮೀನುಗಾರ ‘ಅಮ್ಮಾ’ ಎಂದಂತೆ ದಾರಿಯಲ್ಲಿ ಅಲೆಯುವ ಭಿಕ್ಷುಕನೂ ‘ಅಮ್ಮಾ’ ಎಂದು ಕಿರುಚುತ್ತಾನೆ ! ಕೋಟಿ ಧ್ವನಿಗಳು , ಕೋಟಿ ಸ್ಥಳಗಳಲ್ಲಿ . ಕೋಟ್ಯಂತರ ವಿಧಗಳಲ್ಲಿ , ಹಳ್ಳಿಯ ಗುಡಿಸಿಲಿನಿಂದ ಪ್ರಾರಂಭಿಸಿ ಚರ್ಚ್ ವೇದಿಕೆ ಸೇರಿದಂತೆ ಹಗಲಿರುಳು ‘ಅಮ್ಮಾ , ಅಮ್ಮಾ’ ಎನ್ನುವ ಧ್ವನಿ ಬರುತ್ತದೆ. ಎಲ್ಲೆಲ್ಲೂ ಹಗಲಿರುಳೂ ‘ಅವೆ ಮರಿಯಾ’ ಅವೆ ಮರಿಯಾ’ ಎನ್ನುವ ಕೂಗು’ ಎಂದು ಬರೆದರು. (89) ಇದೇ ಆಧಾರದ ಮೇಲೆ ರಾಮಕೃಷ್ಣರ ಸಂನ್ಯಾಸಿ ಹಾಗೂ ಸಂಸಾರಿ ಭಕ್ತರಿಬ್ಬರಿಗೂ ಶಾರದಾಮಣಿ ಸಾಮಾನ್ಯ ಹೆಣ್ಣಲ್ಲ. ಆಕೆ ಯಾರೊಬ್ಬರ ಹೆಂಡತಿಯಾಗಿರುವುದೂ ಸಾಧ್ಯವಿಲ್ಲ. ಸಾವಿರಾರು ಅಧ್ಯಾತ್ಮ ಶಿಶುಗಳ ತಾಯಿಯಾಕೆ , ಜಗನ್ಮಯಿ, ಜಗದಂಬೆ . ಸಾಮಾನ್ಯ ಹೆಣ್ಣು ಹೆತ್ತು ತಾಯಿಯಾಗುತ್ತಾಳೆ. ಅದರ ಹಿನ್ನೆಲೆಯಲ್ಲಿ ಅಲ್ಪ ಕಾಮವಾದರೂ ಇದೆ. ಅಂತಹ ದೋಷ ಶಾರದಾಮಣಿಯನ್ನು ತಲುಪಲಾರದು. ಆದ್ದರಿಂದ ಆಕೆ ಹೆರದೆ ಜಗದಂಬೆ ಎನ್ನುವುದು ರಾಮಕೃಷ್ಣರ ಭಕ್ತರ ಸಮರ್ಥನೆ. ಅಮ್ಮಾ , ಸಾವಿರ ಮಕ್ಕಳ ತಾಯಿಯಾದ ನೀನು ಒಬ್ಬ ಸಾಮಾನ್ಯ ತಾಯಿಯಾಗಲು ನಾಯಿ , ನರಿಗಳ ಸ್ಥಿತಿಗೆ ಇಳಿಯಬೇಕೆ ಎಂದು ರಾಮದತ್ತ ಉದ್ಗರಿಸಿದ್ದನು. (90). ಸ್ವಾಮಿಗಳ ಅಭಿಪ್ರಾಯವೂ ಇದೇ ಆಗಿದ್ದಿತು. ಇದನ್ನೆಲ್ಲ ನೋಡಿ ತಾಯ್ತನದ ಬಗ್ಗೆ ಸ್ವಾಮಿಗಳಿಗೆ ಎಂತಹ ಪೂಜ್ಯ ಭಾವನೆಯಿದ್ದಿತು ಎಂದು ಭಾವುಕರಾಗುವಂತಿಲ್ಲ. ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋಕ್’ ತನ್ನ ನಾಲ್ಕು ವರ್ಷದ ಮಗಳ ಬಗ್ಗೆ ಬಹಳ ಕಾಳಜಿ , ವಾತ್ಸಲ್ಯ ಬೆಳೆಸಿಕೊಂಡಿದ್ದಳು . ಇದನ್ನು ಗಮನಿಸಿದ ಸ್ವಾಮಿಗಳು ‘ ನೀನು ನನ್ನ ಮಗುವನ್ನು ಪ್ರೀತಿಸುತ್ತಿದ್ದೇನೆ ಎಂದು ಭಾವಿಸುತ್ತಿರುವೆ. ಇದು ಪ್ರೀತಿಯೇ ಅಲ್ಲ ! ಇದು ಕೋಳಿ ತನ್ನ ಪಿಳ್ಳೆಗಳಿಗೆ ಹೊಂದಿರುವಂತಹ ಒಲವು ಮಾತ್ರ.; ಕೋಳಿ ತನ್ನ ಮರಿಗಳಿಗಾಗಿ ದಿನವೆಲ್ಲಾ ತಿಪ್ಪೆ ಕೆದರುತ್ತದೆ , ಆದರೆ ಬೇರೊಂದು ಮರಿ ಬಂದರೆ ಏನು ಮಾಡುತ್ತದೆ ‘ ಎಂದು ಪ್ರಶ್ನಿಸಿದ್ದರು. (91) ಆದೇ ವೇಳೆಗೆ ತಮ್ಮ ತಾಯಿ ಭುವನೇಶ್ವರಿ ದೇವಿಯ ಮಾತೃ ಪ್ರೇಮ ಅಸದೃಶ್ಯವಾಗಿದ್ದಿತು ! ಎಂತಹ ಉದಾತ್ತ ಚಿಂತನೆ !
ತಂಗಿ ಯೋಗೇಂದ್ರಬಾಲಾಳ ಆತ್ಮಹತ್ಯೆ ಮತ್ತು ಅಮೆರಿಕದ ಹೆಂಗಸರ ದಿಟ್ಟತನದ ನಡುವಿನ ಹೋಲಿಕೆಗಳು ಸ್ವಾಮಿಗಳನ್ನು ಕೆಣಕಿದ್ದವು.(೧೨/೧೨/೧೮೯೯- ಸಾರಾ ಬುಲ್) ಬೇಲೂರು ಮಠಕ್ಕೆ ಬಂದಿದ್ದ ಒಬ್ಬ ಭಕ್ತನಲ್ಲಿ ‘ಬಾಬಾ ನೀವು ಸತಿ ಹೋಗುವುದರ ಬಗ್ಗೆ ಸಾಕಷ್ಟು ಹುಯಿಲೆಬ್ಬಿಸಿ ವಿಧವೆಯರನ್ನು ಸುಟ್ಟಿದ್ದೀರಿ. ಬಿದಿರಿನ ಉರಿಯುವ ಚಿತೆಯೇರಿದ ಪ್ರತಿಯೊಬ್ಬ ವಿಧವೆ ಕಾಮ , ಭೋಗಗಳಿಂದ ಕಳಂಕಿತಳೇ ? …ನೀವು ತಳಮಟ್ಟದವರೆಗೆ ಆಷಾಢಭೂತಿಗಳು…… ಜಗದಂಬೆಯರನ್ನು ಹಂಗಿಸುವುದನ್ನು ಬಿಡಿ . ಆಗ ಭಾರತ ಹೇಗೆ ಉದ್ಧಾರವಾಗುತ್ತದೆ ಎನ್ನುವುದನ್ನು ಕಾಣುತ್ತೀರಿ ಎಂದಿದ್ದರು. (92) ಈ ಮಾತುಗಳಿಂದ ಸ್ವಾಮಿಗಳನ್ನು ಹೆಂಗಸರ ಉದ್ಧಾರಕ ಎನ್ನುವಂತಿಲ್ಲ. ಸ್ವಾಮಿಗಳು ಹೆಂಗಸರು ಆಧುನಿಕ ಶಿಕ್ಷಣಕ್ಕೆ ಅರ್ಹರಲ್ಲ ಎನ್ನುವ ಅಭಿಪ್ರಾಯವನ್ನೂ ತಳೆದಿದ್ದರು. ‘ ಹಿಂದಿದ್ದ ಹಿಂದೂ ಹೆಂಗಸರು ಅಧ್ಯಾತ್ಮಿಕ ಪ್ರತಿಭೆಗಳು , ಸ್ಥಿರ ಮನಸ್ಸಿನವರು ಈಗಿನವರು ಕೆಳ ಇಳಿದವರಾಗಿದ್ದು ‘ ಉಣ್ಣುವುದು , ಕುಡಿಯುವುದು , ಸುದ್ದಿ ಹಬ್ಬಿಸುವುದು , ಹಗರಣಗಳನ್ನು ಹುಟ್ಟಿಸುವುದಕ್ಕೆ ಮಾತ್ರ ಸೀಮಿತ ‘ ಎಂದಿದ್ದರು. (93) ವಿದ್ಯಾವತಿಯರಾದ ಯಾವ ಭಾರತೀಯ /ಬಂಗಾಳಿ ಹೆಣ್ಣನ್ನೂ ಸರಿಯಾಗಿ ಅರಿಯದ, ಯಾವ ಹೆಂಗಸರ ಸಂಘ, ಸಂಸ್ಥೆ ಕೂಟಗಳೊಂದಿಗೆ ಸಂಪರ್ಕ ಇರದೆ ಸ್ವಾಮಿಗಳು ಮಾಡಿದ ಇಂತಹ ಆರೋಪಗಳು ಅವರ ನಂಬಿಕೆಗಳಾಗಿದ್ದವೇ ಹೊರತು ವಾಸ್ತವಿಕ ಸತ್ಯಗಳಾಗಿರಲಿಲ್ಲ (93) ‘ಓ ಭಾರತ ! ಮರೆಯದಿರು ಸೀತಾ, ಸಾವಿತ್ರಿ , ದಮಯಂತಿಯರೇ ನಿನ್ನ ಹೆಣ್ತನದ ಆದರ್ಶವೆಂಬುದನ್ನು ‘ ಎಂದು ಭಾರತೀಯ ಹೆಂಗಸರು ಸೀತೆಯ ಹೆಜ್ಜೆಯಲ್ಲಿ ಸಾಗಬೇಕೆಂದು ಸ್ವಾಮಿಗಳು ಕರೆ ನೀಡಿದ್ದರು. (94) ಸ್ವಾಮಿಗಳ ದೃಷ್ಟಿಯಲ್ಲಿ ಹೆಂಗಸರ ಶಿಕ್ಷಣದ ಗುರಿ ‘ ಸಂಘಮಿತ್ರ , ಲೀಲಾ, ಅಹಲ್ಯಾಬಾಯಿ , ಮೀರಾಬಾಯಿಯಂತಹ ವೀರರ ತಾಯಂದಿರಾಗುವುದು. ಸ್ವಾಮಿಗಳು ಪ್ರತಿಪಾದಿಸಿದ ಇಂತಹ ಹೆಣ್ತನವನ್ನು ತರುವ ಶಿಕ್ಷಣ ಹೇಗಿರಬಹುದೆಂದು ನಾವು ಊಹಿಸಬಹುದು. ಹೆಣ್ಣಿಗೆ ಹಳೆಯ ಕಾಲದಲ್ಲಿದ್ದಂತೆ ಪಾತಿವ್ರತ್ಯ ಮತ್ತು ಗಂಡನಲ್ಲಿ ನಿಷ್ಠೆ ನೀಡುವುದೇ ನಿಜವಾದ ಶಿಕ್ಷಣ. ಇಂತಹ ಹೆಂಗಸರನ್ನು ಸಿದ್ಧಪಡಿಸುವ ಶಿಕ್ಷಣ ಸ್ವಾಮಿಗಳ ಆಶಯವಾಗಿದ್ದಿತು.
ಸ್ವಾಮಿಗಳು ಪರಮ ವಿರಾಗಿಗಳಾಗಿದ್ದು ಎಲ್ಲ ಹೆಂಗಸರಲ್ಲಿ ತಾಯಿಯನ್ನು ಕಾಣುತ್ತಿದ್ದರು ಎಂದು ಭಕ್ತರು ನಂಬುತ್ತಾರಾದರೂ ಅವರಿಗೆ ತಾಯಿ , ಅಕ್ಕ , ತಂಗಿಯರಲ್ಲದ ಬೇರೆ ರೀತಿಯಲ್ಲಿಯೂ ಯುವ ಸಹಜ ದೃಷ್ಟಿಗೆ ಕಾಣುವಂತೆ ಹೆಂಗಸರು ಕಾಣುತ್ತಿದ್ದರೆಂದು ಅವರ ಬರೆದ ಪತ್ರಗಳು ಸಾಕ್ಷಿ ನುಡಿಯುತ್ತವೆ.
ಅಮೆರಿಕನ್ ಹೆಂಗಸರು ವೀರೋಚನ (ಟೈಟಾನ್ಸ್) ತಳಿಗೆ ಸೇರಿದ್ದು ತಮ್ಮ ದೇಹ ಸೌಂದರ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆಂದು , ಅದಕ್ಕಾಗಿ ಸದಾ ದೇಹವನ್ನು ಶುದ್ಧವಾಗಿಡಲು ಯತ್ನಿಸುವರೆಂದು ೨೫/೯/೧೮೯೪ ರಂದು ಗುರುಭಾಯಿಗೆ (ರಾಮಕೃಷ್ಣಾನಂದ) ಬರೆದ ಪತ್ರದಲ್ಲಿ ತಿಳಿಸಿದ್ದರು. ಪಶ್ಚಿಮದಲ್ಲಿ ೪೦ ವರ್ಷದ ಗಂಡಸು , ೫೦ ವರ್ಷದ ಹೆಂಗಸು ತರುಣರಂತೆ ಕಾಣುತಾರೆ. ಇದರ ರಹಸ್ಯವೆಂದರೆ ಅವರು ಬೇಗ ಮದುವೆಯಾಗದಿರುವುದು ಎಂದು ಗುರುತಿಸಿದ್ದರು. ಮೇಲ್ವರ್ಗದ ಹೆಂಗಸರು ಅಕರ್ಷಕವಾಗಿ ಕಾಣಲು ನಡುವನ್ನು ಕುಗ್ಗಿಸಿ , ಬೆನ್ನೆಲುಬನ್ನು ಬಾಗಿಸಿ , ಮೂತ್ರಪಿಂಡ ಮತ್ತು ಗುಲ್ಮಗಳನ್ನು ಸರಿಸಿ ಎಂತಹ ಬಾಧೆಯನ್ನೂ ತಾಳಲು ಸಿದ್ಧ ಎನ್ನುವುದನ್ನು ತಿಳಿಸುತ್ತಾರೆ. ಪ್ಯಾರಿಸ್ ಫ್ಯಾಷನ್ ಅನುಸರಿಸದ ಕಾರಣ ಇಂಗ್ಲಿಷ್ ಮತ್ತು ಜರ್ಮನ್ ಹೆಂಗಸರ ಉಡುಗೆ ಆಕರ್ಷಕವಾಗಿಲ್ಲ ಎನ್ನುವುದು ಅವರಿಗೆ ಕಂಡಿದ್ದಿತು. ಯುರೋಪಿಯನ್ ಹೆಂಗಸರು ಭುಜ , ದೇಹದ ಮೇಲ್ಭಾಗ ಫೂರಾ ಕಾಣುವಂತೆ ನರ್ತಿಸುತ್ತಾರೆ ‘ ಎನ್ನುತ್ತ ಹೆಣ್ಣಿನ ದೇಹ ಸೂಕ್ಷ್ಮಗಳನ್ನು ಗಮನಿಸಿದ್ದರು. (95) ‘ಯುವಕರ ಅಶ್ಲೀಲ ಕಣ್ಣುಗಳಿಗೆ ದೇಹದ ಮೇಲರ್ಧ ಭಾಗ ಕಾಣಿಸುವ ಅಮೆರಿಕನ್ ಹೆಂಗಸರಂತೆ ಇರುವ ಸಂದರ್ಭ ಎದುರಾದರೆ ಭಾರತೀಯ ಹೆಂಗಸರು ಸತ್ತೇ ಹೋಗುತ್ತಾರೆ ಎಂದಿದ್ದರು ಸ್ವಾಮಿಗಳು (96) ಆದರೆ ಅಮೆರಿಕನ್ ಹೆಂಗಸರ ‘ತೋರಿಕೆ’ಯ ಬಗ್ಗೆ ಅವರ ಅಕ್ಷೇಪಗಳಿರಲಿಲ್ಲ. ನಿವೇದಿತಾಗೆ ಅವರು ‘ ಮೈದುಂಬಿದ ನನ್’ಗಳು ಚೆನ್ನಾಗಿರುತ್ತಾರೆ-ಸಣಕರಲ್ಲ ‘ ಎನ್ನುವ ಅಭಿಪ್ರಾಯ ತಿಳಿಸಿದ್ದರು. (97) ಹಾರ್ವರ್ಡ್ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ ಮನೆಯಲ್ಲಿ ಒಮ್ಮೆ ಅನೌಪಚಾರಿಕವಾಗಿ ಮಾತನಾಡುತ್ತ ‘ಕೆಲ ಸಮಯದ ಹಿಂದೆ ಇಂಗ್ಲಿಷರು ಕಾಡು ಜನವಾಗಿದ್ದರು. ಅವರ ಹೆಂಗಸರ ಎದೆ ಕಂಚುಕದ ಮೇಲೆ ಹುಳುಗಳಾಡುತ್ತಿದ್ದವು ಎಂದಿದ್ದರು. (98) ಮ್ಯಾಗ್ನೋಲಿಯಾ ಕಡಲಿನಲ್ಲಿ ಸ್ವಚ್ಛಂದವಾಗಿ ಈಜುತ್ತಿದ್ದ ಹೆಂಗಸರು ಸ್ವಾಮಿಗಳ ಗಮನ ಸೆಳೆದಿದ್ದರು.
೧೮೯೪ ರಲ್ಲಿ ಶ್ರೀಮತಿ ಹೇಲ್’ಗೆ ಆಗಸ್ಟ್ ೨೪ ಮತ್ತು ೨೭ ರ ನಡುವೆ ಬರೆದ ದಿನಾಂಕವಿಲ್ಲದ ಪತ್ರದಲ್ಲಿ ‘……ಸೋಜಿಗವೆಂದರೆ ಹೆಂಗಸರು ಸ್ನಾನ ಮಾಡುವಾಗಲೂ ಅವರ ಲೋಹದ ಕವಚವನ್ನು ತೆಗೆದಿಡುವುದಿಲ್ಲ. ಆದ್ದರಿಂದ ಈ ಕವಚಧಾರಿ ಸ್ತ್ರೀ ಯೋಧರು ಪುರುಷರಿಗೆ ಮೇಲುಗೈಯಾಗಿರುವರು. ನಮ್ಮ ಸಂಸ್ಕೃತ ಕವಿಗಳು ಹೆಂಗಸರ ಮೃದು ಶರೀರದ ಬಗ್ಗೆ ತಮ್ಮೆಲ್ಲ ವರ್ಣನಾ ಸಾಮರ್ಥ್ಯವನ್ನು ಬಳಸಿರುವರು. ಹೆಂಗಸು ಎನ್ನುವುದಕ್ಕ ಸಂಸ್ಕೃತ ಶಬ್ದ ಕೋಮಲಾ. ಆದರೆ ಲೋಹ ಕವಚವನ್ನು ಧರಿಸಿದ ಈ ಹೆಂಗಸರು ಮೂಳೆಯ ಪಟ್ಟಿಗಳರುವ ಆರ್ಮಡಿಲಾ ಪ್ರಾಣಿಗಳಂತೆ ತೋರುವರು. ಇದನ್ನು ನೋಡಿರದ ವಿದೇಶಿಯರಿಗೆ ಇದೆಷ್ಟು ನಗೆಪಾಟಲಾಗಿರುವುದೆನ್ನುವುದನ್ನು ನೀವು ಊಹಿಸಲಾರಿರಿ. ಶಿವ.!..ಶಿವ!! …….ಸಮುದ್ರ ತೀರದಲ್ಲಿ , ಸ್ನಾನ ಮಾಡುವ ಸ್ಥಳಗಳಲ್ಲಿ ನಾನು ಯಾವ ಅಶ್ಲೀಲತೆಯನ್ನೂ ಕಾಣಲಿಲ್ಲ , ಬದಲು ಜಂಭವನ್ನು ಮಾತ್ರ-ಬಿಗಿ ಒಳ ಉಡುಪಗಳೊಂದಿಗೆ ನೀರಿಗೆ ಬೀಳುತ್ತದ್ದವರಲ್ಲಿ ಅಷ್ಟೇ…’ ಎನ್ನುವ ಸ್ವಾಮಿಗಳು ಇತರ ಸಂನ್ಯಾಸಿಗಳಂತೆ ಗೊಡ್ಡು ವೇದಾಂತಿಯಾಗಿರಲಿಲ್ಲ. ಗಹನ ವೇದಾಂತದ ಬೋಧನೆ ಮಾಡುತ್ತ , ಸ್ವಾಂಪ್’ಸ್ಕಾಟ್, ಗ್ರೀನೆಕರ್’ಗಳಲ್ಲಿ ಕೋರಾ ಸ್ಟಾಕ್’ಹೋಂ ಹೊಲಿಸಿಕೊಟ್ಟ ಈಜುಡುಗೆ ತೊಟ್ಟು ಸಮುದ್ರ ಸ್ನಾನವನ್ನು ಆನಂದಿಸಿ , ಆತ್ಮಾನುಭೂತಿ ಪಡೆಯುವ , ತಮ್ಮ ಚಿತ್ರಕ್ಕೆ ತಾವೇ ರೂಪದರ್ಶಿಯಾಗಿ ಹೆಣ್ಣು ಚಿತ್ರಕಾರಳ ಎದುರು ಅಲುಗದೆ ಹಲವು ಗಂಟೆಗಳ ಕಾಲ ಕುಳಿತುಕೊಳ್ಳುವ ರಸಋಷಿಗಳಾಗಿದ್ದರು. (೨೦/೮/೧೮೯೪-ಇಸಾಬೆಲ್ಲಾ ಮೆಕೆಂಡ್ಲಿ). ಈಜುವಾಗಲೂ ಬಟ್ಟೆ ಬಿಚ್ಚದ ಮ್ಯಾಗ್ನೊಲಿಯಾದ ಕೋಮಲೆಯರನ್ನು ಕುರಿತಾಗಿ ಬರೆಯಬಲ್ಲವರಾಗಿದ್ದರು. ಆ ಕಾಲದಲ್ಲಿ ಅಮೆರಿಕದ ಮಹಿಳೆಯರು ಈಗಿನಂತೆ ಬೀಚ್’ಗಳಲ್ಲಿ ತುಂಡುಡುಗೆ ಉಟ್ಟು ನೀರಿಗೆ ಧುಮುಕುತ್ತಿರಲಿಲ್ಲ. ಹಾಗಾಗಿ ಅವರ ಮೆದು ಕೋಮಲ ಶರೀರ ಕಾಣಿಸವುದಿಲ್ಲ ಎನ್ನುವುದನ್ನು ಸ್ವಾಮಿಗಳು ಗುರುತಿಸಿದ್ದರು. ಮೇರಿ ಹೇಲ್ ತನಗಿಂತ ೩೩ ವರ್ಷ ಹಿರಿಯನಾಗಿದ್ದ ಕಾರ್ಲೊ ಗಯ್ಸಪ್ಪೆ ಮ್ಯಾಟಿನಿ ಎನ್ನುವ ಇಟೆಲಿ ಮೂಲದ ಶ್ರೀಮಂತ ವಿಧುರನ ಪ್ರೇಮಪಾಶಕ್ಕೆ ಸಿಲುಕಿದ್ದಳು. ಈ ಬಗ್ಗೆ ಪತ್ರ ಬರೆಯುತ್ತ ಸ್ವಾಮಿಗಳು ‘ ನೀನೀಗ ವೆನಿಸ್ ಆನಂದಿಸುತ್ತಿರುವೆ. ಮುದುಕ ರುಚಿಕರವಾಗಿರಬಹುದು ; ವೆನಿಸ್ ಶ್ರೀಮಂತ ಮುದುಕ ಷೈಲಾಕ್ ನೆಲೆಯಲ್ಲವೇ ? ಕಾಳಜಿ ವಹಿಸು ಮೇರಿ ನಿನ್ನ ಇಟಾಲಿಯನ್ ಪುರಾತನ ವಸ್ತುವಿನಲ್ಲಿ ಭಾರಿ ಅನುರಕ್ತಳಾಗದಿರು’ ಎಂದು ೫/೭/೧೯೦೧ ರಲ್ಲಿ ಬರೆದು ಸ್ವಲ್ಪ ಸಭ್ಯತೆಯ ಎಲ್ಲೆ ದಾಟಿದ್ದರು.
ಸ್ವಾಮಿಗಳು ಲಿಂಗ ತಟಸ್ಥರಾಗಿರದೆ ಹಲವು ಬಾರಿ ತಾರತಮ್ಯ ತೋರಿಸುತ್ತಿದ್ದರು. ಹೆಣ್ತನವನ್ನು ಬಹಳ ಸಲ ಹೇಡಿತನವೆಂದು ಪರಿಗಣಿಸುತ್ತಿದ್ದರು. ಸುರೇಂದ್ರನಾಥ ಸೇನರೊಂದಿಗೆ ಒಮ್ಮೆ ಚರ್ಚಿಸುತ್ತ ಒರಿಸ್ಸಾ ಮತ್ತು ಬಂಗಾಳದ ವೈಷ್ಣವರ ರಾಧಾ-ಕೃಷ್ಣರ ಪ್ರೇಮವನ್ನು ಟೀಕಿಸುತ್ತ ‘ ಈ ದೇಶವನ್ನು ನೋಡು ಈ ಪ್ರೇಮ ಪ್ರಚಾರದಿಂದ ಇಡೀ ದೇಶವೇ ಹೇಡಿಗಳ ಪೀಳಿಗೆಯಾಗಿದೆ.! ಕಳೆದ ನಾಲ್ಕು ನೂರು ವರ್ಷಗಳಿಂದ ಇಡೀ ಒರಿಸ್ಸಾ ಹೇಡಿಗಳದ್ದಾಗಿದೆ, ಬಂಗಾಳ ರಾಧಾ-ಕೃಷ್ಣರ ಪ್ರೇಮದ ಹಿಂದೆ ಬಿದ್ದು ಹೇಡಿಗಳ ನೆಲೆಯಾಗಿ ಗಂಡಸುತನವನ್ನೇ ಕಳೆದುಕೊಂಡಿದೆ ಎಂದು ಸುರೇಂದ್ರನಾಥ ಸೇನರ ಮುಂದೆ ರೋಷ ತಾಳಿದ್ದರು. (99) ಆಲ್ಮೋರಾದಲ್ಲಿ ಜೂನ್ ೧೮೯೭ ರಲ್ಲಿ ಭೇಟಿಯಾಗಲು ಬಂದವರಲ್ಲಿ ಒಬ್ಬರಿಗೆ ಉದ್ರೇಕದ (ವೈಷ್ಣವ) ರಾಧಾ-ಕೃಷ್ಣ ಭಕ್ತಿಗೆ ಚಾಟಿಯಿಂದ ಎಡ-ಬಲ ಜಡಿಯಲು ಕರೆಕೊಟ್ಟಿದ್ದರು. (100) ಸ್ವಾಮಿಗಳ ದೃಷ್ಟಿಯಲ್ಲಿ ಹೆಣ್ತನ ಭಾರತದ ಅವಸಾನಕ್ಕೆ ಕಾರಣವಾಗಿದ್ದಿತು. ರಾಧಾ-ಕೃಷ್ಣರ ಪ್ರೇಮ ಕಥೆಯ ಹಿಂದೆ ಬಿದ್ದಿರುವವರನ್ನು ಛೇಡಿಸುವುದರಲಿಯೂ ಸ್ವಾಮಿಗಳಲ್ಲಿ ನಿಷ್ಪಕ್ಷಪಾತವಿರಲಿಲ್ಲ.‘ ಹೆಂಗಸರ ಸ್ಥಿತಿ ಉತ್ತಮಗೊಳ್ಳದೆ ಜಗತ್ತು ಉದ್ದಾರವಾಗುವುದು ಸಾಧ್ಯವಿಲ್ಲ. ಒಂದೇ ರೆಕ್ಕೆಯ ಬಲದಿಂದ ಹಕ್ಕಿ ಹಾರಲಾರದು. ಅದಕ್ಕೋಸ್ಕರವೇ ರಾಮಕೃಷ್ಣರು ತಮ್ಮ ಅವತಾರದಲ್ಲಿ ಹೆಂಗಸನ್ನು ಗುರುವಾಗಿ ಸ್ವೀಕರಿಸಿದರು. ಅದಕ್ಕೋಸ್ಕರವೇ ಅವರು ಹೆಣ್ಣು ವೇಷದಲ್ಲಿ , ಹೆಣ್ಣು ಭಾವದಲ್ಲಿ ದೇವರನ್ನು ಪೂಜಿಸಿದರು. ಹೆಂಗಸರ ತಾಯ್ತನದ ಆದರ್ಶವನ್ನು ಅವರು ಜಗನ್ಮಯಿಯ ಪ್ರತಿನಿಧಿ ಎಂದು ಉಪದೇಶಿಸಿದರು- ಇದು ೩೧/೧೨/೧೮೯೫ ರಂದು ರಾಮಕೃಷ್ಣಾನಂದರಿಗೆ ಬರೆದ ಪತ್ರದಲ್ಲಿದೆ. ಎಂದರೆ ರಾಧಾ-ಕೃಷ್ಣರ ಮಧುರಭಾವದ ಆರಾಧಕರಾದ ಒರಿಸ್ಸಾ , ಬಂಗಾಳಿಗಳದ್ದು ಹೇಡಿತನವಾಗಿದ್ದು , ರಾಣಿ ರಾಸಮಣಿಯ ಅಳಿಯ ಮಥುರಾನಾಥ ಬಿಶ್ವಾಸನ ಅಂತಃಪುರ ಸೇರಿ , ಆತ ಕೊಡಿಸಿದ ಸೀರೆಯುಟ್ಟು ಹೊಲಿಸಿದ ಕುಪ್ಪಸ ತೊಟ್ಟಿದ್ದ ರಾಮಕೃಷ್ಣರದ್ದು ಮಧುರ ಭಾವದ ಅಧ್ಯಾತ್ಮಿಕ ಸಾಧನೆಯಾಗಿದ್ದಿತು !
‘ಅಖಂಡಾನಂದರ ಮುಂದೆ ‘ನಾನು ಹೋರಾಟಗಾರ. ಕಾರ್ಯಕ್ಷೇತ್ರದಲ್ಲಿ ಪ್ರಾಣ ಬಿಡುವೆನು. ಜನಾನ ಹೆಂಗಸರಂತೆ ಗಿರಿಧಾಮದಲ್ಲಿ ಕುಳಿತಿರಲಾರೆ, ಬೇಸಿಗೆ ಕಳೆದ ತಕ್ಷಣ ಕೆಲಸಕ್ಕೆ ಬಯಲುಸೀಮೆಗೆ ಇಳಿಯುತ್ತೇನೆ’ ಎನ್ನುವ ಸಂಕಲ್ಪ ತೊಟ್ಟಿದ್ದರು (೧೫/೬/೧೮೯೭). ನಮ್ಮ ದೇಶದಲ್ಲಿ ಗಂಡಸರು ಇರುವರೆಂದು ತಿಳಿದುಕೊಂಡಿರುವೆಯೇನು? ಅದು ಹೇಡಿಗಳ ಬೀಡು’ ಎಂದು ಬ್ರಹ್ಮಾನಂದರಿಗೆ ೨೧/೧೨/೧೮೯೫ ರ ಪತ್ರದಲ್ಲಿ ಛೇಡಿಸಿದ್ದರು. ತಮ್ಮ ಬಗ್ಗೆ ಮಿಷನರಿಗಳು ಮಾಡಿದ ಟೀಕೆಗೆ ಉತ್ತರ ನೀಡಿಲ್ಲ ಎಂದು ರೇಗಿದ್ದ ಸ್ವಾಮಿಗಳು ‘ ಮಗೂ (ಮಗನೇ ) ನನಗೆ ಗೊತ್ತು. ನಾನು ಅಲ್ಲಿಗೆ ಬಂದು ನಿಮ್ಮಿಂದ ಒಬ್ಬ ಗಂಡಸನ್ನು ತಯಾರು ಮಾಡಬೇಕು. ಭಾರತ ಹೆಂಗಸರು ಮತ್ತು ಷಂಡರಿಂದ ತುಂಬಿದೆ ಎಂದು ನನಗೆ ಗೊತ್ತು ಎಂದು ಅಳಸಿಂಗ ಪೆರುಮಾಳ್’ಗೆ ಬರೆದಿದ್ದರು. ಬೋಸ್ಟನ್’ನಲ್ಲಿ ಭಾರತದ ಹೆಂಗಸರನ್ನು ಕುರಿತಾಗಿ ಮಾತನಾಡುತ್ತ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಶೌರ್ಯವನ್ನು ಹೊಗಳುತ್ತ ಆಕೆ ರಣರಂಗದಲ್ಲಿ ವೀರ ಪುರುಷನಂತೆ ಬಿದ್ದಳು’ ಎಂದರು. (101) ಹೆಂಗಸರಿಗೆ ಮಾಗಿದ ನಡವಳಿಕೆ ಇರಲಾರದೆಂದು ಸ್ವಾಮಿಗಳ ನಂಬಿಕೆಯಾಗಿದ್ದಿತು. ಮದ್ರಾಸಿನಲ್ಲಿ ‘ ಹಲವು ಶತಮಾನಗಳ ಪರದಾಸ್ಯದಿಂದ ನಮ್ಮದು ಹೆಂಗಸರ ದೇಶವಾಗಿದೆ. ಈ ದೇಶದಲ್ಲಾಗಲಿ ಮತ್ತೊಂದು ದೇಶದಲ್ಲಾಗಲಿ ಮೂವರು ಹೆಂಗಸರನ್ನು ಐದು ನಿಮಿಷ ಒಗ್ಗಟ್ಟಿನಲ್ಲಿರಿಸಲು ಸಾಧ್ಯವಿಲ್ಲ. ಅವರು ಜಗಳವಾಡುತ್ತಾರೆ. ಯುರೋಪ್ ದೇಶಗಳಲ್ಲಿ ಹೆಂಗಸರು ದೊಡ್ಡ ಕೂಟಗಳನ್ನು ಕಟ್ಟುತ್ತಾರೆ., ಹೆಂಗಸರ ಶಕ್ತಿಯ ಬಗ್ಗೆ ಭಾರಿ ಘೋಷಣೆಗಳನ್ನು ಹೊರಡಿಸುತ್ತಾರೆ , ನಂತರ ಜಗಳವಾಡುತ್ತಾರೆ. ಆಗ ಯಾರಾದರೊಬ್ಬ ಗಂಡಸು ಬಂದು ಅವರೆಲ್ಲರನ್ನೂ ಆಳುತ್ತಾನೆ. ಹೆಂಗಸರು ಜಗಳಗಂಟಿಯರು ಮಾತ್ರವಲ್ಲ , ಮೂಗು ತೂರಿಸುವವರು ಹೌದು ಎಂದು ಭಾಷಣ ಮಾಡಿದ್ದರು. (102) ಇನ್ನೊಮ್ಮೆ ‘ಹೆಂಗಸಿನಂತೆ ನಾನು ಯಾವಾಗಲೂ ಇತರರ ತೊಂದರೆಗಳನ್ನು ನನ್ನ ಮೇಲೆಳೆದುಕೊಳ್ಳುತ್ತೇನೆ ಎಂದು ಮೇರಿ ಹಾಲ್ ಬಾಯಿಸ್ಟರ್ ಮುಂದೆ ಅಲವತ್ತುಕೊಂಡಿದ್ದರು. (೨೫/೭/೧೮೯೭). ಇವು ಸ್ವಾಮಿಗಳು ಹೆಂಗಸರ ಬಗ್ಗೆ ಸಾಂದರ್ಭಿಕವಾಗಿ ತಳೆದ ನಿಲುವುಗಳಾಗಿದ್ದವು.
ಗುರುಕುಲಕ್ಕೆ ಸೇರಿದ ವಿದ್ಯಾರ್ಥಿಗಳು ಅಭ್ಯಾಸದಿಂದ ವಿಮುಖರಾಗಬಾರದೆಂದು ಬ್ರಹ್ಮಚರ್ಯ ವ್ರತ ಪಾಲಿಸುತ್ತಿದ್ದರು. ಬ್ರಹ್ಮನಲ್ಲಿ ಚರಿಸುವವನೇ ಬ್ರಹ್ಮಚಾರಿ ಎನ್ನುವ ಅರ್ಥವಿದ್ದರೂ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮುಗಿದ ನಂತರ ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದರು. ಸ್ವಾಮಿಗಳು ಈ ಬ್ರಹ್ಮಚರ್ಯ ವ್ರತ ಎಂದರೆ ಎಂದೆಂದಿಗೂ ಲೈಂಗಿಕವಾಗಿ ದೂರವಿರುವುದು ಎನ್ನುವ ಅರ್ಥ ಬರುವಂತೆ ಮಾಡಿದರು. ಮದುವೆ ಮತ್ತು ಬ್ರಹ್ಮಚರ್ಯಗಳ ಬಗ್ಗೆಯೂ ಸ್ವಾಮಿಗಳಲ್ಲಿ ಎಡಬಿಡಂಗಿತನ ತುಂಬಿದ್ದಿತು. ಭಾರತದ ಒಬ್ಬ ಯುವಕ ಇಂದ್ರಿಯನಿಗ್ರಹದ ಅತಿರೇಕಕ್ಕೆ ಒಳಗಾಗಿ ಹುಚ್ಚನಂತೆ ವರ್ತಿಸುತ್ತಿದ್ದನು. ಇದಕ್ಕೆ ಪರಿಹಾರವಾಗಿ ಅಮೆರಿಕದ ಮನಶಾಸ್ತ್ರಜ್ಞರೊಬ್ಬರು ಹೆಣ್ಣಿನ ಸಂಗ ಮಾಡುವಂತೆ ಸೂಚಿಸಿದ್ದರು. ಇದು ಸ್ವಾಮಿಗಳ ಕಿವಿಗೆ ಬಿದ್ದಿದ್ದಿತು. ‘ ನೀವು ಅಮೆರಿಕ ವೈದ್ಯರು ಬ್ರಹ್ಮಚರ್ಯ ನಿಸರ್ಗಕ್ಕೆ ವಿರುದ್ಧವಾದದ್ದು ಎನ್ನುತ್ತೀರಿ.,….ನೀವು ಏನು ಹೇಳುತ್ತಿರುವಿರಿ ಎನ್ನುವ ಪ್ರಜ್ಞೆ ನಿಮಗಿದೆಯೇ ? ನಿಮಗೆ ಪರಿಶುದ್ಧತೆ ಎಂದರೇನೆಂದು ತಿಳಿದಿಲ್ಲ. ಈ ವಿಷಯದ ಬಗ್ಗೆ ನೀವು ಇದನ್ನೇ ಹೇಳುವಿರಾದರೆ ನೀವು ಪಶುಗಳು ! ಪಶುಗಳು ! ಎಂದು ಘರ್ಜಿಸಿದ್ದರು. ಹೀಗೆ ವೈದ್ಯರ ಮೇಲೆ ಸ್ವಾಮಿಗಳು ಗುಡುಗುತಲಿದ್ದಾಗ ಆ ಸಭೆಯಲ್ಲಿದ್ದ ಹಲವು ಡಾಕ್ಟರ್’ಗಳಿದ್ದರೂ ಸುಮ್ಮನಿದ್ದರೆಂದು ದಾಖಲಾಗಿದೆ. (103) ಅತ್ಯಂತ ಮೋಜಿನ ಸಂಗತಿಯೆಂದರೆ ಕಲ್ಕತ್ತದ ಗಂಗಾತೀರದಲ್ಲಿ ‘ಅಮ್ಮಾ , ಅಮ್ಮಾ’ ಎಂದು ಹೊರಳಾಡುತ್ತಿದ್ದ , ತಾಯಿಯ ಹೆಸರಿನ ಉತ್ಕಟತೆಯಿಂದ ಉನ್ಮತ್ತನಾಗಿದ್ದ ೨೧ ವರ್ಷದ ಯುವಕ ರಾಮಕೃಷ್ಣನಿಗೆ ಮದುವೆ ಮಾಡಿದರೆ ಈ ಹುಚ್ಚು ಹೋಗುತ್ತದೆಯೆಂದು ಆತನ ಮನೆಯವರು , ಹಿತೈಷಿಗಳು ನಿರ್ಧರಿಸಿ, ಆತನಿಗಿಂತ ಮೂರು ವರ್ಷ ಚಿಕ್ಕವಳಾಗಿದ್ದ ಜಯರಾಮಬಾಟಿಯ ಶ್ಯಾಮಸುಂದರಿ ದೇವಿ ಮತ್ತು ರಾಮಚಂದ್ರ ಮುಖರ್ಜಿಯ ಮಗಳು ೫ ವರ್ಷದ ಕುಂಟುಬಿಲ್ಲೆ ಆಡುವ ಹುಡುಗಿ ಶಾರದಾಮಣಿಯನ್ನು ಗಂಟು ಹಾಕಿದ್ದರು.
ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಸ್ಯಾನ್’ಫ್ರಾನ್ಸಿಸ್ಕೊದಲ್ಲಿ ಯೋಗ ತರಬೇತಿ ಅವಧಿಯಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾಳೆ. ಒಮ್ಮೆ ಸ್ವಾಮಿಗಳು ವೈರಾಗ್ಯ , ಸಂನ್ಯಾಸ, ಸಂಸಾರ ತ್ಯಾಗದ ಬಗ್ಗೆ ಹುಮ್ಮಸ್ಸಿನಲ್ಲಿ ಹೇಳುತ್ತಿದ್ದರು. ಇದನ್ನು ಕೇಳುತ್ತಿದ್ದ ಒಬ್ಬ ಹೆಂಗಸು ‘ಸ್ವಾಮಿಗಳೇ ನೀವು ಹೇಳುವಂತೆ ಜಗತ್ತಿನಲ್ಲಿ ಇರುವವರೆಲ್ಲ ವೈರಾಗ್ಯ ತಾಳುತ್ತಾ ಹೋದರೆ ಮುಂದೆ ಏನಾಗಬಹುದು’ ಎಂದು ಪ್ರಶ್ನಿಸಿದಳು. (104) ಆಕೆ ಕೇಳಿದ ಪ್ರಶ್ನೆ ವಸ್ತುನಿಷ್ಠವೂ , ಸ್ವಾಮಿಗಳ ಸಂನ್ಯಾಸ, ತ್ಯಾಗ, ವೈರಾಗ್ಯ ಮುಂತಾದ ಹುಸಿ ಗುಳ್ಳೆಗಳನ್ನು ಒಡೆಯುವ ಸೂಜಿಯಂತೆಯೂ ಇದ್ದಿತು. ಸ್ವಾಮಿಗಳು ಆಕೆಗೆ ‘ ಮ್ಯಾಡಂ ತುಟಿಯ ಮೇಲೆ ಸುಳ್ಳನ್ನು ಇರಿಸಿಕೊಂಡು ನನ್ನಲ್ಲಿಗೆ ಏಕೆ ಬರುತ್ತಿರಿ ? ಎಂದು ಉತ್ತರಿಸಿದರು. ಎಳ್ಳು ಕಾಳಿನಷ್ಟು ವೈರಾಗ್ಯವಿರದ ಸಾಂಸಾರಿಕ , ಲೌಕಿಕ ಜಂಜಾಟಗಳಲ್ಲಿ ಮುಳುಗಿದ್ದ ಜನರೇ ಸ್ವಾಮಿಗಳ ತ್ಯಾಗ , ವೈರಾಗ್ಯದ ಭಾಷಣ ಮತ್ತು ಜೀವನದ ಆಧಾರವಾಗಿದ್ದರು. ಅಂತಹವರ ವಂತಿಗೆ , ಔದಾರ್ಯದಿಂದಲೆ ಸ್ವಾಮಿಗಳು ಅಮೆರಿಕದಲ್ಲಿ ಭಾಷಣ ಮಾಡಲು , ರಾಮಕೃಷ್ಣ ಮಠ ಕಟ್ಟಲು , ತಾಯಿ , ತಮ್ಮ , ಸೋದರತ್ತೆಯ ಮಗಳಿಗೆ ಹಣ ಸಂಗ್ರಹಿಸಲು ಸಾಧ್ಯವಾಗಿದ್ದಿತು. ಹೀಗೆ ಸಂಸಾರಿಗಳ ಹಂಗಿನಲ್ಲಿದ್ದ ಸ್ವಾಮಿಗಳಿಗೆ ಹೆಂಗಸು ಎತ್ತಿದ ಪ್ರಶ್ನೆಗ ನಿಜವಾದ ಉತ್ತರ ಗೊತ್ತಿರಲಿಲ್ಲ. ಆದ್ದರಿಂದ ಆಕೆಯನ್ನು ಸುಳ್ಳಿಯೆಂದು ಕರೆದು ಪ್ರಶ್ನೆಯನ್ನು ಚಾಪೆಯ ಕೆಳಗೆ ಸರಿಸಲು ಯತ್ನಿಸಿದ್ದರು. ಸ್ವಾಮಿಗಳು ಉತ್ತರ ಕೊಟ್ಟಿದ್ದರೆ ಆ ಹೆಂಗಸು ಮತ್ತೊಂದು ತೊಡಕಿನ ಪ್ರಶ್ನೆಯನ್ನು ಎಸೆಯುತ್ತಿದ್ದಳು. ಇದು ಚರ್ಚೆ, ಸಂವಾದ ಮತ್ತು ಸ್ವಾಮಿಗಳ ಪ್ರತಿಪಾದನೆಯ ಇತಿಮಿತಿಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದಿತು. ಸ್ವಾಮಿಗಳಿಗೆ ಇದು ಬೇಕಿರಲಿಲ್ಲ.
ಸ್ವಾಮಿಗಳು ಹೇಲ್ ಸೋದರಿಯರಲ್ಲಿ ಜಾಣೆಯೂ, ಚೆಲುವೆಯೂ ಆಗಿದ್ದ ಮೇರಿ ಹೇಲ್’ ಮದುವೆಯಾಗದಂತೆ ಪ್ರೇರೇಪಿಸಲು ೩೦/೫/೧೮೯೬ ಮತ್ತು ೧೭/೯/೧೮೯೬ ರ ಪತ್ರಗಳಲ್ಲಿ ಯತ್ನಿಸಿದ್ದರು. ಸ್ವಾಮಿಗಳು ನನ್ನ ಪ್ರಭಾವದಿಂದಾಗಿ ಹೇಲ್ ಸೋದರಿಯರು ಮದುವೆಯಾಗುವುದಿಲ್ಲ ಎಂದು ರಾಮಕೃಷ್ಣಾನಂದರಿಗೆ ತಿಳಿಸಿದ್ದರು.(೨೫/೯/೧೮೯೪). ಇದನ್ನು ಹುಸಿಗೊಳಿಸಲೋ ಎಂಬಂತೆ ಹ್ಯಾರಿಯೆಟ್ ಹೇಲ್ ಮದುವೆಯಾಗಿ ಈ ಸುದ್ದಿಯನ್ನು ಸ್ವಾಮಿಗಳಿಗೆ ತಿಳಿಸಿದ್ದಳು. ‘… ಕಡೆಗೊಮ್ಮೆ ನೀನು ವೃದ್ಧ ಕನ್ಯೆಯರ ಆಲಯದ ಔಚಿತ್ಯದ ಬಗ್ಗೆ ನಿನ್ನ ಮನಸ್ಸನ್ನು ಬದಲಾಯಿಸಿರುವುದನ್ನು ತಿಳಿದು ಸಂತೋಷವಾಯಿತು. ಈಗ ನೀನು ಮಾಡಿರುವುದು ಸಂಪೂರ್ಣ ಸಮಂಜಸ. ೯೯ % ಮಂದಿಗೆ ಮದುವೆವೇ ಪರಮ ಗುರಿ. …. ನಾನು ನಿನ್ನನ್ನು ತಿಳಿದಿರುವ ಮಟ್ಟಿಗೆ ನಿನಗೆ ತಾಳ್ಮೆಯಿದೆ. ಅದರಿಂದ ಸಹನೆ ಜೊತೆಗಿದೆ. ಆದ್ದರಿಂದ ನಿನ್ನ ವೈವಾಹಿಕ ಜೀವನ ಬಹಳ ಸುಖಮಯವಾಗಿರುವುದೆಂದು ನಾನು ನಿಸ್ಸಂದೇಹವಾಗಿ ಭವಿಷ್ಯ ನುಡಿಯಬಲ್ಲೆ. …ನೀನು ಉಮೆಯಂತೆ ಜೀವನಾದ್ಯಂತ ಪವಿತ್ರಳಾಗಿ ಪರಿಶುದ್ಧಳಾಗಿರು. ಯಾರ ಪ್ರಾಣವೇ ಉಮೆಯಲ್ಲಿತ್ತೋ ಆ ಶಿವನಂತೆ ನಿನ್ನ ಗಂಡ ಇರಲಿ..’ ಎಂದು ಆಶೀರ್ವದಿಸಿದರು.
ಅದೇ ದಿನ ಇನ್ನೊಂದು ಪತ್ರದಲ್ಲಿ ಮೇರಿ ಹೇಲ್’ಗೆ ‘….ನನ್ನ ಪ್ರಿಯ ಮೇರಿ , ನಾನು ಈ ಜೀವನದಲ್ಲಿ ಕಲಿತ ಒಂದು ದೊಡ್ದ ಪಾಠವೆಂದರೆ ನಿನ್ನ ಆದರ್ಶ ಎತ್ತರವಾದಷ್ಟೂ ನೀನು ಹೆಚ್ಚು ವ್ಯಥಿತಳಾಗುವೆ. ಏಕೆಂದರೆ ಆದರ್ಶವೆಂಬ ವಸ್ತುವನ್ನು ಈ ಜಗತ್ತಿನಲ್ಲಿ ಪಡೆಯಲಾಗುವುದಿಲ್ಲ. …..ಹ್ಯಾರಿಯೆಟ್’ಳಲ್ಲಿ ತನ್ನನ್ನು ತಾನೇ ಮೂರ್ಖಳನ್ನಾಗಿ ಮಾಡಿಕೊಳ್ಳುವಷ್ಟು ಭಾವುಕತೆ ಇಲ್ಲ. ಆದ್ದರಿಂದ ಆಕೆಯ ವೈವಾಹಿಕ ಜೀವನ ಸುಖಕರವಾಗುವುದು….? ಹ್ಯಾರಿಯೆಟ್ ಮೆಕೆಂಡ್ಲಿ ಈ ವಿಷಯದಲ್ಲಿ , ಇನ್ನೂ ಉತ್ತಮ ಗೃಹಿಣಿಯಾಗುವುದರಲ್ಲಿ ಸಂಶಯವಿಲ್ಲ. ..ಆದರೆ ನಿನ್ನ ಮತ್ತು ಇಸಾಬೆಲ್ಲಾಳ ವಿಚಾರದಲ್ಲಿ ನನ್ನ ಮಾತುಗಳ ಅತಿ ಸ್ಪಷ್ಟವಾದುವು….ಮೇರಿ ನೀನು ಕಟ್ಟುಮಸ್ತಾದ ಕುದುರೆಯಂತಿರುವೆ. ದೈಹಿಕ ಮಾನಸಿಕವಾಗಿ ನಿನೊಬ್ಬ ತೇಜಸ್ವಿ ರಾಣಿಯಾಗಲು ಅರ್ಹಳು. ಆಡಂಬರದ ಕೆಚ್ಚೆದೆಯ ವೀರನೊಡನೆ ನೀನು ಶೋಭಿಸುವೆ. ..ಆದರೆ ಪ್ರಿಯ ಸೋದರಿ ವೈವಾಹಿಕ ಗೃಹಿಣಿಯ .ಜೀವನದಲ್ಲಿ ನಿನಗೆ ಸಂಪೂರ್ಣ ಅಪಜಯವೇ ಸಿಗುವುದು…… ನೀನು ನಿನ್ನ ಆದರ್ಶಗಳನ್ನು ಕೊಂಚ ವಾಸ್ತವಿಕ ಮಟ್ಟಕ್ಕೆ ಇಳಿಸದೆ ಖಂಡಿತವಾಗಿ ಮದುವೆಯಾಗಬಾರದು…ಸೋದರಿ ಇಸಾಬೆಲ್ಲಾಳಲ್ಲೂ ನಿನ್ನ ಗುಣವೇ ಇದೆ. ಶಿಶುವಿಹಾರ ನಡೆಸುತ್ತಿರುವುದರಿಂದ ಆಕೆಗೆ ತಾಳ್ಮೆ ಮತ್ತು ಸಹನೆ ಇದೆ. ಬಹುಶಃ ಅವಳೂ ಒಳ್ಳೆಯ ಗೃಹಿಣಿಯಾಗುವಳು… ಕುಡಿಯುವುದು , ತಿನ್ನುವುದು , ಸಮಾಜದಲ್ಲಿ ಗುರುತಿಸಿಕೊಳ್ಳುವುದು ಜೀವನದ ಗುರಿಯಲ್ಲ ಮೇರಿ. ಇದನ್ನು ನಿನಗೆ ವಿಶೇಷವಾಗಿ ಹೇಳುತ್ತೇನೆ. ನೀನು ಮದುವೆಯಾಗಿಯೂ ಸುಖವಾಗಿ ಇರುವೆಯಾದರೆ ನಾನು ಅತೀವ ಸಂತೋಷ ಪಡುತ್ತೇನೆ ’ ಎಂದು ಬುದ್ಧಿವಾದ ಹೇಳಿ ಭವಿಷ್ಯ ನುಡಿದರು. (೧೭/೯/೧೮೯೬). ಮುಂದಿನ ದಿನಗಳಲ್ಲಿ ಹ್ಯಾರಿಯೆಟ್ ಹೇಲ್ ಗಂಡ ಕ್ಲಾರೆನ್ಸ್ ವೂಲಿಯಿಂದ ವಿಚ್ಚೇದನ ಪಡೆದರೆ , ಮೇರಿ ಹೇಲ್ ತನಗಿಂತ ೩೩ ವರ್ಷ ಹಿರಿಯನಾಗಿದ್ದ ಶ್ರೀಮಂತನನ್ನು ಮದುವೆಯಾಗಿ , ಕೊನೆಯವರೆಗೂ ಆತನೊಂದಿಗೆ ಉಳಿದಳು. ಹೇಲ್ ಸೋದರಿಯರಿಬ್ಬರೂ ಸ್ವಾಮಿಗಳು ನುಡಿದಿದ್ದ ಭವಿಷ್ಯವನ್ನು ಸುಳ್ಳು ಮಾಡಿದರು.
ಭಾರತಕ್ಕೆ ಮರಳಿದ ನಂತರ -೧೮೯೭- ಒಬ್ಬ ಯುರೋಪಿಯನ್ ಮಹಿಳೆ ಕೇಳಿದ ಪ್ರಶ್ನೆ ಮತ್ತು ಸ್ವಾಮಿಗಳು ನೀಡಿದ ಉತ್ತರವನ್ನು ಶ್ರೀನಿವಾಸ ಪೈ ನೆನಪಿಸಿಕೊಂಡಿದ್ದಾರೆ. ಒಂದು ದಿನ ಬೆಳಿಗ್ಗೆ ಯುರೋಪಿಯನ್ ಮಹಿಳೆ ಬಂದು ಸಹಜ ಮತ್ತು ನೀತಿಯುತವಾದ ಕಾಮವನ್ನು ನಿಗ್ರಹಿಸಿ ಬ್ರಹ್ಮಚರ್ಯ ಆಚರಿಸಿ, ಸಂನ್ಯಾಸಿಯಾಗುವುದರಲ್ಲಿ ಅರ್ಥವಿಲ್ಲ. ಅದರಲ್ಲಿ ಹಲವು ತೊಂದರೆಗಳಿವೆ ಎಂದು ಹೇಳಿದಳು. ಅದಕ್ಕೆ ಸ್ವಾಮಿಯವರ ಸಂನ್ಯಾಸಿ ಏಕೆ ಬ್ರಹ್ಮಚಾರಿಯಾಗಿರಬೇಕು ಎನ್ನುವುದಕ್ಕೆ ಮಾನಸಿಕ , ತಾತ್ತ್ವಿಕ ಕಾರಣಗಳನ್ನು ನೀಡಿದರು. ಆ ಉತ್ತರಗಳು ಆಕೆಗೆ ತೃಪ್ತಿ ನೀಡಲಿಲ್ಲ. ಆಗ ಸ್ವಾಮಿಗಳು ಅರೆಹಾಸ್ಯದ ಧ್ವನಿಯಲ್ಲಿ ನಿಮ್ಮ ದೇಶದಲ್ಲಿ ಬ್ರಹ್ಮಚಾರಿಯನ್ನು ಕಂಡರೆ ಹೆದರುತ್ತಾರೆ. ಆದರೆ ಜನರಿಂದ ಪೂಜಿತವಾಗಿರುವ ಬ್ರಹ್ಮಚಾರಿ ನನ್ನನ್ನು ನೋಡಿ’ ಎಂದರು. (105) ಇದಾದ ನಂತರ ಅವರು ಖಾಸಗಿಯಾಗಿ ನನಗೀಗ ೩೦ ( ೩೪ ಆಗಿದ್ದಿತು) ಆದರೆ ನನಗೆ ಹೆಣ್ಣಿನ ಬಗ್ಗೆ ಏನೂ ಗೊತ್ತಿಲ್ಲ ‘ ಎಂದು ವಿಷಾದ ಬೆರೆತ ಛಾಯೆಯಲ್ಲಿ ನನಗೆ ತಿಳಿಸಿದರು ಎಂದು ಶ್ರೀನಿವಾಸ ಪೈ ದಾಖಲಿಸಿದ್ದಾರೆ.
‘ಮದುವೆ ಪವಿತ್ರ ಮತ್ತು ಅದು ವಿಚ್ಛೇದನಕ್ಕೆ ಆಸ್ಪದವಿಲ್ಲದಿರುವುದು ಎನ್ನುವುದನ್ನು ಹಾಗೂ ತಾಯ್ತನಕ್ಕೆ ಹೆಚ್ಚು ಗೌರವ ಕೊಡುವುದನ್ನು ಕಲಿಯಬೇಕು. ಆ ನಂತರವೇ ನನ್ನ ದೃಷ್ಟಿಯಲ್ಲಿ ಒಂದು ಜನಾಂಗವು ಸಂಪೂರ್ಣ ಬ್ರಹ್ಮಚರ್ಯ ಆದರ್ಶವನ್ನು ಪಡೆಯಲು ಸಾದ್ಯ…… ರೋಮನ್ ಕ್ಯಾಥೊಲಿಕ್ ಮತ್ತು ಹಿಂದೂಗಳು ಮದುವೆ ಪವಿತ್ರವಾದುದೆಂದು ತಿಳಿದದ್ದರಿಂದ ವಿಶೇಷ ಶಕ್ತಿಯ ಸಂಯಮಿ ಗಂಡಸರು ಮತ್ತು ಹೆಂಗಸರಿಗೆ ಜನ್ಮವಿತ್ತಿದ್ದಾರೆ’ ಇದು ಸ್ವಾಮಿಗಳು ಸಾರಾ ಬುಲ್’’ಗೆ ಪ್ರತಿಪಾದಿಸಿದ ನೀತಿಯಾಗಿದ್ದಿತು. (೪/೬/೧೯೦೨) ಹೆಣ್ಣಿನ ಸ್ವಾಭಾವಿಕ ಮಾರ್ಗವ ಮದುವೆಯ ಮೂಲಕ ಒಬ್ಬನನ್ನು ಆಶ್ರಯಿಸಿಕೊಂಡು ಹಬ್ಬುವುದು. ಆದರೆ ಅಂತಹ ಕಾಲಗಳೆಲ್ಲ ಆಗಿ ಹೋದವು. ನೀನು ಯಾವ ಮನುಷ್ಯನ ಸಹಾಯವಿಲ್ಲದೆ ನೀನಿರುವಂತೆ ಸರಳವಾಗಿ ಒಬ್ಬ ದೊಡ್ದ ವ್ಯಕ್ತಿಯಾಗುವೆ-ಪ್ರಿಯ ಜೋ ಜೋ (೧೪/೬/೧೯೦೧) ಇದು ಸ್ವಾಮಿಗಳಿಗಿಂತ ಐದು ವರ್ಷ ದೊಡ್ದವಳಾಗಿದ್ದ ಜೊಸೆಫಿನ್ ಮೆಕ್ಲಿಯಾಡ್’ ಮದುವೆಯಾಗದೆ ಉಳಿದಿದ್ದಕ್ಕೆ ನೀಡಿದ ಸಮರ್ಥನೆಯಾಗಿದ್ದಿತು.
ಮದುವೆ ಪವಿತ್ರ , ತಾಯ್ತನ ಶ್ರೇಷ್ಟ ಎನ್ನುತ್ತಿದ್ದ ಸ್ವಾಮಿಗಳಿಗೆ ವೈಕುಂಠನಾಥ ಸನ್ಯಾಲ್ ತನ್ನ ಮಗಳಿಗೆ ಗಂಡನ್ನು ಹುಡುಕುತ್ತಿರುವುದರ ಬಗ್ಗೆ ಬಹಳ ಅಸಮಾಧಾನವಿದ್ದಿತು ಇದಕ್ಕೆ ಬಾಲ್ಯವಿವಾಹ ಒಂದು ಕಾರಣವಾದರೆ , ಮದುವೆಯ ಬಗ್ಗೆ ಸ್ವಾಮಿಗಳಿಗಿದ್ದ ದೃಷ್ಟಿಕೋನ ಇನ್ನೊಂದು ಕಾರಣವಾಗಿದ್ದಿತು. ಬೋಸ್ಟನ್’ (೨೦/೫/೧೮೯೪) ಮತ್ತು ನ್ಯೂಯಾರ್ಕ್’ನಿಂದ (೨೩/೧೨/೧೮೯೫) ಶಾರದಾನಂದರಿಗೆ ‘ ಮದುವೆ ಎನ್ನುವುದನ್ನೇ ನಾನು ದ್ವೇಷಿಸುವೆ…ಸನ್ಯಾಲ್ ಮಗಳ ಮದುವೆಗೆ ಅಷ್ಟೊಂದು ಏಕೆ ಹೆಣಗುತ್ತಿದ್ದಾನೆ ಎನ್ನುವುದು ನನಗೆ ತಿಳಿಯದು. ಯಾವ ಸಂಸಾರ ಪಾಶದಿಂದ ತಾನು ಪಾರಾಗಬೇಕೆಂದಿರುವನೋ ಅದಕ್ಕೆ ತನ್ನ ಮಗಳನ್ನು ಕೆಡವುತ್ತಿದ್ದಾನೆ ! ಆ ವಿಷಯದಲ್ಲಿ ನನ್ನ ಅಭಿಪ್ರಾಯ ಖಂಡನೆ ಮಾತ್ರ. ಒಬ್ಬ ಹುಡುಗ ಅಥವಾ ಹುಡುಗಿ ವಿಚಾರದಲ್ಲಿ ಮದುವೆ ಎನ್ನುವ ಶಬ್ದವನ್ನೇ ನಾನು ದ್ವೇಷಿಸುವೆ. ಮೂರ್ಖ ! ಇನ್ನೊಬ್ಬರನ್ನು ಬಂಧನಕ್ಕೀಡು ಮಾಡಲು ನೆರವಾಗಲು ಹೇಳುವೆಯಾ ! ನನ್ನ ತಮ್ಮ ಮೊಹಿನ್ (ಮಹೆಂದ್ರನಾಥ ದತ್ತ) ಮದುವೆಯಾದರೆ ನಾನವನನ್ನು ಹೊರಗೆ ಹಾಕುತ್ತೇನೆ. ಆ ವಿಷಯದಲ್ಲಿ ನನ್ನದು ಇದೇ ನಿರ್ವಿವಾದ ತೀರ್ಮಾನ ‘ ಎಂದು ಗುಟರು ಹಾಕಿದ್ದರು. ೧೮೯೬ ರಲ್ಲಿ ಲಂಡನ್’ನಿಂದ ಅಳಸಿಂಗ್ ಪೆರುಮಾಳ್’ಗೆ ‘ ಮದ್ರಾಸಿನವರಿಗೆ ಮುಂದುವರೆಯುವ ಶಕ್ತಿಯಿದೆ , ಸ್ಥಿರ ಬುದ್ಧಿಯಿದೆ. ಆದರೆ ಪ್ರತಿಯೊಬ್ಬ ಮೂರ್ಖನೂ ಮದುವೆಯಾಗಿರುವನು. ಅವರು ನಿಸ್ಸಂಗಿಯಾದ ಗೃಹಸ್ಥರಾಗಲು ಯತ್ನಿಸುತ್ತಿರುವುದು ಒಳ್ಳೆಯದು. ನನಗ ಮದ್ರಾಸಿನಲ್ಲಿ ಸಧ್ಯಕ್ಕೆ ಬೇಕಾಗಿರುವವರು ಅವರಲ್ಲ, ಮದುವೆಯಾಗದಿರುವವರು’ ಎಂದು ಸ್ಪಷ್ಟಪಡಿಸಿದ್ದರು. ಸ್ವಾಮಿಗಳು ಇದಾದ ಮೂರುವರೆ ವರ್ಷದ ನಂತರ ೨೨/೧೧/೧೮೯೮ ರಂದು ಖೇತ್ರಿ ರಾಜ ಅಜಿತ್ ಸಿಂಗ್’ಗೆ ‘ ..ನಾನು ನನ್ನ ತಾಯಿಯೊಂದಿಗೆ ಇದ್ದು ವಂಶ ನಾಶವಾಗದಂತೆ ನನ್ನ ತಮ್ಮನಿಗೆ ಮದುವೆ ಮಾಡಿಸಬೇಕೆಂದಿದ್ದೇನೆ. (ಆಗ ಭೂಪೇಂದ್ರನಾಥದತ್ತನಿಗೆ ೧೮ರ ಹರಯ-ಜನನ ೧೮೮೦) ಇದು ಖಂಡಿತವಾಗಿಯೂ ಕೊನೆಯ ದಿನಗಳಲ್ಲಿ ನನ್ನ ತಾಯಿಗೆ ನೆಮ್ಮದಿ ತರುವುದು…..ನಾನೀಗ ನನ್ನ ತಾಯಿಗೆ ಸಣ್ಣದಾದ ಚೊಕ್ಕ ಮನೆಯನ್ನು ಕಟ್ಟಿ ಅದರಲ್ಲಿರಲು ಕಿರಿಯ ತಮ್ಮನಿಗೂ ಒಂದು ಜಾಗ ಒದಗಿಸಬೇಕೆಂದಿರುವೆ.. ಏಕೆಂದರೆ ಅವನು ಹಣ ಸಂಪಾದನೆಯಲ್ಲಿ ಯಶಸ್ವಿಯಾಗುವುದು ಸಂಶಯ…. ‘ ಎಂದು ತಿಳಿಸಿದ್ದ ಧೀರ ಸಂನ್ಯಾಸಿ ‘ಮಾಯೆಯ ಅಶಾಶ್ವತ’ ಜಗತ್ತಿನಲ್ಲಿ ದತ್ತ ವಂಶ ಮಂದುವರೆಯಬೇಕೆಂಬ ಬಯಕೆ ಹೊಂದಿದ್ದರು. ಇತರರ ವಂಶ ಏನಾದರಾಗಲಿ ಅವರು ಧೀರ ಸಂನ್ಯಾಸಿಗಳಾಗಲಿ , ನಮ್ಮ ವಂಶ ಮುಂದುವರೆಯಲಿ ಎಂದು ಬಯಸಿದ್ದರು.
ಮೇರಿ ಹೇಲ್’ಗೆ ಮದುವೆಯ ಸೀಮಿತತೆ , ನಿರರ್ಥಕತೆ ಬೋಧಿಸಿದ , ಮಿಸ್ ಜೊಸೆಫಿನ್ ಮೆಕ್ಲಿಯಾಡ್ ಮದುವೆಯಾಗದೆ ಉಳಿದಿರುವುದನ್ನು ಸಮರ್ಥಿಸಿದ , ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ , ಸಾರಾ ಎಲೆನ್ ವಾಲ್ಡೊ ಮುಂತಾದವರಿಗೆ ಬ್ರಹ್ಮಚರ್ಯದ ದೀಕ್ಷೆ ನೀಡಿದ , ಬ್ರಹ್ಮಚರ್ಯವೇ ಜೀವನದ ಸಾರ ಎಂದು ಅಮೆರಿಕದ ವೇದಿಕೆಗಳಿಂದ ಘರ್ಜಿಸಿದ , ಮದುವೆ ಎನ್ನುವುದನ್ನೇ ದ್ವೇಷಿಸುವೆ ಎಂದು ಶಾರದಾನಂದರಿಗೆ ತಿಳಿಸಿದ ಸ್ವಾಮಿಗಳು ಮದುವೆಯ ಬಗ್ಗೆ ತಳೆದಿರುವ ನಿಲುವುಗಳು ಬಹಳ ವಿಚಿತ್ರವಾಗಿವೆ. ಸಂನ್ಯಾಸಿಯಾಗಿ ಮನೆ ಹೊಂದುವುದು ನಿಷಿದ್ಧವಾಗಿರುವುದಲ್ಲದೆ. ಸ್ವಂತ ಮನೆಯೇ ಇಲ್ಲದ ಸ್ವಾಮಿಗಳು ಮದುವೆಯಾದರೆ ಮಹೇಂದ್ರನಾಥದತ್ತನನ್ನು ಹೊರಗೆ ಹಾಕುವುದಾಗಿ ತಿಳಿಸಿದ್ದಾರೆ. ತನ್ನದಾದ ಏನೊಂದೂ ಇಲ್ಲದ ಸಂನ್ಯಾಸಿ ಯಾರನ್ನು , ಎಲ್ಲಿಂದ ಹೊರಹಾಕುವುದು ಸಾಧ್ಯ? ಭೂಪೇಂದ್ರನಾಥ ದತ್ತನಿಗೆ ಮದುವೆಯಾಗುವ ಬಯಕೆ ಇದೆಯೋ ಇಲ್ಲವೋ ಬಲ್ಲವರಾರು ? ಸ್ವಾಮಿಗಳು ಕಾಲಕಾಲಕ್ಕೆ ಬದಲಾಗುವ ತಮ್ಮ ಅಭಿಲಾಷೆಗೆ ತಕ್ಕಂತೆ ಇತರರು ಬದಲಾಗಬೇಕೆಂದು ಬಯಸುತ್ತಿದ್ದರು. ಮದುವೆಯನ್ನು ಹೀಗಳೆಯುತ್ತಲೇ ೧೬ ವರ್ಷಗಳ ಮಗಳು ಮತ್ತು ೧೪ ವರ್ಷದ ಮಗನಿದ್ದ ಎರಡನೆಯ ಮದುವೆಗೆ ಭರದಿಂದ ಸಿದ್ದಳಾಗುತ್ತಿದ್ದ ಬೆಟ್ಟಿ ಸ್ಟರ್ಜಿಸ್ ಮತ್ತು ಆಕೆಯ ಪ್ರಿಯಕರ ಶ್ರೀಮಂತ ಫ್ರಾನ್ಸಿಸ್ ಲೆಗೆಟ್’ಗೆ ಮದುವೆಯ ನಿರರ್ಥಕತೆ ಬೋಧಿಸಲಿಲ್ಲ. ಪ್ಯಾರಿಸ್’ನಲ್ಲಿ ನಡೆದ ಅವರ ಮದುವೆಗೆ ಉತ್ಸಾಹದಿಂದಲೇ ಹೋಗಿದ್ದರು.
೨೫/೨/೧೮೮೫ ರಲ್ಲಿ ಗಿರೀಶ್ ಚಂದ್ರ ಘೋಷ್’ಗೆ ರಾಮಕೃಷ್ಣರು ಹೆಣ್ಣು-ಹೊನ್ನು , ಬ್ರಹ್ಮಚರ್ಯ ಬಗ್ಗೆ ಮಾತನಾಡುತ್ತ ಸಂನ್ಯಾಸಿಗಳು ಆಚರಿಸಬೇಕಾದ ಕಠಿಣ ನಿಯಮಗಳನ್ನು ಹೀಗೆ ಹೇಳಿದ್ದರು. ‘ ಲೌಕಿಕ ಸುಖಗಳಲ್ಲಿ ಹಲವು ವಿಧ- ಹಣ, ಸಂಪತ್ತು, ಕೀರ್ತಿ ಮತ್ತು ಇಂದ್ರಿಯ ಸುಖ. ಮಹಿಳಾ ಭಕ್ತರೊಂದಿಗೆ ಸಂನ್ಯಾಸಿ ಕುಳಿತುಕೊಳ್ಳುವುದಾಗಲಿ ಆಕೆಯೊಂದಿಗೆ ಮಾತನಾಡುವುದಾಗಲಿ ಒಳ್ಳೆಯದಲ್ಲ. ಅದು ಆತನನ್ನು ಮತ್ತು ಇತರರನ್ನು ಘಾಸಿಗೊಳಿಸುತ್ತದೆ. ಆಗ ಇತರರು ಅವನಿಂದ ಕಲಿಯಲಾರರು; ಆತ ಸಮಾಜಕ್ಕೆ ಮಾದರಿಯಾಗಲಾರ. ಮಾನವಕೋಟಿಗೆ ಬೋಧಿಸಲು ಸಂನ್ಯಾಸಿ ತನ್ನ ದೇಹವನ್ನು ಪಾಲಿಸುತ್ತಾನೆ. ಹೆಂಗಸಿನೊಂದಿಗೆ ಕುಳಿತುಕೊಳ್ಳುವುದು ಮತ್ತು ದೀರ್ಘ ಕಾಲ ಮಾತನಾಡುವುದು ಒಂದು ಬಗೆಯ ಲೈಂಗಿಕ ಕೂಡಿಕೆಯೇ. ಅವು ಎಂಟು ಬಗೆ. ಹೆಣ್ಣಿನೊಂದಿಗೆ ಕುಳಿತುಕೊಳ್ಳುವುದು ಆಕೆಯ ಸಂಭಾಷಣೆಯನ್ನು ಆಸ್ವಾದಿಸುವುದು ಮೊದಲನೆಯದು. ಹೆಣ್ಣಿನ ಬಗ್ಗೆ ಮಾತನಾಡುವುದು ಎರಡನೆಯದು. ಖಾಸಗಿಯಲ್ಲಿ ಆಕೆಯಲ್ಲಿ ಪಿಸುಗುಟ್ಟುವುದು ಮೂರನೆಯದು. ಹೆಣ್ಣಿಗೆ ಸಂಬಂಧಿಸಿದ ವಸ್ತುವನ್ನು ಬಳಿಯಿರಿಸಿಕೊಂಡು ಆನಂದಿಸುವುದು ನಾಲ್ಕನೆಯದು. ಆಕೆಯನ್ನು ಮುಟ್ಟುವುದು ಐದನೆಯದು. ಆದ್ದರಿಂದ ಸಂನ್ಯಾಸಿ ತನ್ನ ಗುರುವಿನ ಕಿರಿಯ ವಯಸ್ಸಿನ ಹೆಂಡತಿಯ ಪಾದವನ್ನು ಮುಟ್ಟಿ ನಮಸ್ಕರಿಸಬಾರದು…. ಇವು ಸಂನ್ಯಾಸಿ ಪಾಲಿಸಬೇಕಾದ ನಿಯಮಗಳು. (106)
ಅಮೆರಿಕದಲ್ಲಿ ನದಿ ತೀರದ ಮೇಲಿನ ಗುಡಿಸಲಿನಲ್ಲಾಗಲಿ , ಮರದ ಕೆಳಗೆ ಬದುಕುವ ಅವಕಾಶವಾಗಲಿ ಇರಲಿಲ್ಲವಾದರೂ ಸಂಘ, ಸಂಸ್ಥೆಗಳ ಕೊಠಡಿ , ಧಾರ್ಮಿಕ ಹಾಸ್ಟೆಲ್, ಚರ್ಚ್ ಕೋಣೆಗಳಲ್ಲಿ ವಾಸಿಸುವುದು ಸಾದ್ಯವಿದ್ದಿತು. ಸ್ವಾಮಿಗಳು ತಮ್ಮ ಗುರುಗಳು ಹಾಕಿದ ಸಂನ್ಯಾಸಿ ನಿಯಮಗಳನ್ನು ಅನಿವಾರ್ಯವಾದ ಸ್ಥಿತಿ ಇಲ್ಲದಿದ್ದಾಗಲೂ ಮುರಿಯುತ್ತಿದ್ದರು. ಆರಂಭದಲ್ಲಿ ಮಾತ್ರವಲ್ಲ ನಂತರದ ದಿನಗಳಲ್ಲೂ ಸ್ವಾಮಿಗಳು ನಾಲ್ಕ ಜನ ಯುವತಿಯರಿದ್ದ ಹೇಲ್ ಮನೆಯಲ್ಲಿ ವಾಸಿಸುವುದನ್ನು ಬಿಡಲಿಲ್ಲ, ೧೮೯೪ ಜೂನ್ ತಿಂಗಳಲ್ಲಿ ಶ್ರೀಮತಿ ಮತ್ತು ಶ್ರೀ ಜಾರ್ಜ್ ಹೇಲ್ ಪ್ರವಾಸಕ್ಕೆ ಹೋಗಿದ್ದಾಗ ಹೇಲ್ , ಮೆಕೆಂಡ್ಲಿ ಸೋದರಿರರೊಂದಿಗೆ ಸ್ವಾಮಿಗಳ ಅವರ ಮನೆಯಲ್ಲಿ ಉಳಿದಿದ್ದರು. ಹರೆಯದ ವಯಸ್ಸಿನ ಹೆಣ್ಣು ಮಕ್ಕಳಿದ್ದ ಶ್ರೀಮತಿ ಸಾರಾ ಬುಲ್ ಮತ್ತು ಶ್ರೀಮತಿ ಜಾನ್ ಬ್ಯಾಗ್ಲಿಯ ಮನೆಯಲ್ಲಿರುತ್ತಿದ್ದರು. ಅನ್ನಿಸ್ಕ್ವಾಮ್’ನಲ್ಲಿ ಬ್ರಾಡ್ಲಿಯವರ ಹೆಂಡತಿಯ ತಂಗಿ ಚಿತ್ರ ಬರೆಯುವಾಗ ಸ್ವಾಮಿಗಳು ರೂಪದರ್ಶಿಯಾಗಿ ಹಲವು ದಿನ ಆಕೆಯ ಎದುರು ಕುಳಿತಿದ್ದರು. (೨೦/೮/೧೮೯೪) , ೧೮೯೪ ರ ಕ್ರಿಸ್ಮಸ್ ಹಬ್ಬದ ಸಮಯವನ್ನು ಸಾರಾ ಬುಲ್ ಮನೆಯಲ್ಲಿ ಆಕೆಯ ಸ್ನೇಹಿತೆಯರೊಂದಿಗೆ ಬೆಂಕಿಯ ಒಲೆಯ ಮುಂದೆ ಕುಳಿತು ಧೈರ್ಯ ಮತ್ತು ಶಕ್ತಿಯನ್ನು ಉದ್ದೀಪಿಸುವ ಕೆಲ ಸಂಸ್ಕೃತ ಶ್ಲೋಕ , ಮಂತ್ರಗಳನ್ನು ಹೇಳುತ್ತ, ನೆರೆದಿದ್ದ ಹೆಂಗಸರನ್ನು ರಂಜಿಸುತ್ತ ಸ್ವಾಮಿಗಳು ಕಳೆದಿದ್ದರು. (107) ಪೆರ್ಸಿಯಲ್ಲಿದ್ದ ವೈಟ್ ಬರ್ಚ್ ಲಾಜ್’ನಲ್ಲಿ ೧೮೯೫ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ವಾರ ಫ್ರಾನ್ಸಿಸ್ ಲೆಗೆಟ್ ಹಾಗೂ ಮೆಕ್ಲಿಯಾಡ್ ಸೋದರಿಯರೊಂದಿಗಿದ್ದರು. ೧೮೯೯ ರಲ್ಲಿ ಸ್ಟೋನ್ ರಿಜ್ –ರೀಡ್ಜ್’ಲಿ ಮ್ಯಾನೊರ್ ಎನ್ನುವ ಐಷಾರಾಮಿ ರಿಸಾರ್ಟ್’ನಲ್ಲಿ ಶ್ರೀಮತಿ ಬೆಟ್ಟಿ ಲೆಗೆಟ್ , ಮಿಸ್ ಜೊಸೆಫಿನ್ ಮೆಕ್ಲಿಯಾಡ್ , ಮುಂತಾದವರೊಂದಿಗೆ ೭೧ ದಿನ ತಮ್ಮ ಆರೋಗ್ಯ ಸುಧಾರಿಸಿಕೊಂಡರು. ೧೯೦೦, ಜನವರಿ-ಫೆಬ್ರವರಿಯಲ್ಲಿ ೨೭ ದಿನ ಮೀಡ್ ಸೋದರಿಯರ ಮನೆಯಲ್ಲಿದ್ದರು. ಇದೇ ಸಮಯದಲ್ಲಿ ಮೆಕ್ಲಿಯಾಡ್ ಸೋದರಿಯರೊಂದಿಗೆ ‘ಮೌಂಟ್ ಲೋ ಸಮ್ಮಿಟ್’ಗೆ ಪ್ರವಾಸ ಕೈಗೊಂಡಿದ್ದರು. ಪಸಡೆನದಲ್ಲಿ ಬಹುತೇಕ ಹೆಂಗಸರೇ ಇದ್ದ ಗುಂಪಿನಲ್ಲಿ ಹಲವು ಸಲ ಬೆಟ್ಟದ ಮೇಲಿನ ಹೊರಸಂಚಾರಕ್ಕೆ ಹೋಗಿದ್ದರು. ೧೯೦೦ , ಮಾರ್ಚ್ ತಿಂಗಳಿನಲ್ಲಿ ಸ್ಯಾನ್’ಫ್ರಾನ್ಸಿಸ್ಕೊ, ಟರ್ಕ್ ಸ್ಟ್ರೀಟ್’ನಲ್ಲಿದ್ದ ಅಪಾರ್ಟ್’ಮೆಂಟ್’ನಲ್ಲಿ ೪೮ ದಿನ ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಮತ್ತು ಶ್ರೀಮತಿ ಎಮಿಲಿ ಆಸ್ಪಿನಾಲ್ ಜೊತೆಗಿದ್ದರು. ಸ್ವಾಮಿಗಳೊಂದಿಗೆ ಹೆಂಗಸರು ವಾಸಿಸುವುದು ಶ್ರೀ ಆಸ್ಪಿನಾಲ್’ಗೆ ಸರಿ ಕಂಡಿರಿರಲಿಲ್ಲವಾದರೂ ಹೆಂಡತಿಯ ಒತ್ತಾಯಕ್ಕೆ ಆತ ಮಣಿದಿದ್ದನು.
ಸ್ವಾಮಿ ವಿವೇಕಾನಂದರು ಲಂಡನ್’ನಲ್ಲಿದ್ದಾಗ ತಮ್ಮ ಮಹೇಂದ್ರನಾಥದತ್ತನಿಗೆ ಹೇಳಿದ ಒಂದು ಪ್ರಸಂಗ ಹೀಗಿದೆ. (೫೪) ‘ಶ್ರೀಮತಿ ಹೇಲ್’ಗೆ ಇಬ್ಬರು ಹೆಣ್ಣುಮಕ್ಕಳು. ಅವರು ಸ್ವಾಮಿಯವರನ್ನು ಸೋದರನಂತೆ ಪರಿಗಣಿಸಿದ್ದರು. ಒಮ್ಮೆ ಸ್ವಾಮಿಯವರು ಕತ್ತರಿ ಕೊಡುವಂತೆ ಅವರನ್ನು ಕೇಳಿದರು. ಆಗ ಅವರು ಆಶ್ಚರ್ಯದಿಂದ ಏತಕ್ಕೆ ಎಂದು ಕೇಳಿದರು. ಆಗ ಹೇಲ್ ಸೋದರಿಯರಲ್ಲಿ ಒಬ್ಬಾಕೆ ಉಗುರು ಕತ್ತರಿಯನ್ನು ತಂದು , ಚಾಪೆಯ ಮೇಲೆ ಅಂಬೆಗಾಲಿಕ್ಕುವ ಮಗು ಮಂಡಿಗಳನ್ನೂರಿ ಕೂರುವಂತೆ ಕೂತು , ಸ್ವಾಮಿಗಳ ಬೂಟುಗಳನ್ನು , ಕಾಲ್ಚೀಲವನ್ನು ಎಚ್ಚರಿಕೆಯಿಂದ ಬಿಚ್ಚಿ , ನಯವಾಗಿ ಉಗುರು ಕತ್ತರಿಸತೊಡಗಿದಳು. ಉಗುರು ಕತ್ತರಿಸುವಾಗ ಕೆಲವೊಮ್ಮೆ ಸ್ವಾಮಿಗಳ ಕಾಲನ್ನು ತನ್ನ ತೊಡೆಯ ಮೇಲಿರಿಸಿಕೊಂಡು , ಕೆಲವು ಸಲ ಪಾದಗಳತ್ತ ಕುತ್ತಿಗೆ ಬಗ್ಗಿಸಿ ಬಹು ದೀರ್ಘ ಕಾಲ ಉಗುರುಗಳನ್ನು ಕತ್ತರಿಸಿದಳು. ಸ್ವಾಮಿ ವಿವೇಕಾನಂದರು ಮಹೇಂದ್ರನಾಥ ದತ್ತನಿಗೆ ‘ಹೀಗೆ ಉಗುರು ಕತ್ತರಿಸುವಾಗ ನಾನು ಕುತ್ತಿಗೆ ಮಟ್ಟದ ಬಂಧನದಲ್ಲಿದ್ದೆ. ಅದು ಮುಗಿಯುತ್ತಿದ್ದಂತೆಯೇ ನಿರಾಳವಾದೆ’ ಎಂದು ಹೇಳಿದರು. ಉಗುರು ಕತ್ತರಿಸಿದ ಮೇಲೆ ಮಿಸ್ ಹೇಲ್ ನಾವು ಅಮೆರಿಕನ್ನರು ಯಾವ ಕೆಲಸವನ್ನೂ ಪುಕ್ಕಟೆ ಮಾಡುವುದಿಲ್ಲ. ಹಜಾಮರ ಅಂಗಡಿಗೆ ಹೋಗಿದ್ದರೆ ಉಗುರು ಕತ್ತರಿಸಲು ಹಣ ಕೊಡಬೇಕಾಗುತ್ತಿದ್ದಿತು. ಈಗ ನನಗೆ ಹಣ ಕೊಡಿ ‘ ಎಂದು ಪೀಡಿಸತೊಡಗಿದಳು. ಅದಕ್ಕೆ ಗುರುಗಳು ನನ್ನ ಪಾದವನ್ನು ಮುಟ್ಟುವ ಅವಕಾಶವನ್ನು ಕೊಟ್ಟಿದ್ದೇನೆ. ಪೋಪರ ಪಾದವನ್ನು ಮುಟ್ಟಲು ಸಾಮಾನ್ಯ ಜನರಿಗೆ ಅವಕಾಶವಿಲ್ಲ. ನಾನೇಕೆ ಹಣ ಕೊಡಲಿ ಎಂದು ಕಿಚಾಯಿಸಿದರು. (108)
ಸ್ವಾಮಿಗಳು ಖ್ಯಾತರಾದ ನಂತರ ಅವರ ಶಿಷ್ಯರು , ಗುರುಭಾಯಿಗಳು ಅವರ ವೈರಾಗ್ಯದ ತೀವ್ರತೆಯ ಬಗ್ಗೆ ಹೇಳತೊಡಗಿದರು. ಸ್ವಾಮಿ ತುರೀಯಾನಂದರು ೧೯೦೦ ರಲ್ಲಿ ಪ್ಯಾರಿಸ್ ಎಕ್ಸಿಬಿಷನ್’ನಲ್ಲಿ ನಡೆದ ಒಂದು ಘಟನೆಯನ್ನು ಉದ್ಭೋಧನದಲ್ಲಿ ದಾಖಲಿಸಿದ್ದಾರೆ. ಒಂದು ದಿನ ಸ್ವಾಮಿಗಳು ಪ್ರದರ್ಶನದ ಮೈದಾನದಲ್ಲಿ ಹೋಗುತ್ತಿರುವಾಗ ಸೆಳೆದಿಡುವ ಚೆಲುವಿನ ತರುಣಿಯೊಬ್ಬಳನ್ನು ಸ್ವಾಮಿಗಳು ನೋಡಿದರು. ಮೆಚ್ಚುಗೆಯಿಂದ ಆಕೆಯನ್ನು ಮತ್ತೊಮ್ಮೆ ನೋಡಲು ಕುತ್ತಿಗೆಯನ್ನು ಹಿಂದಿಕ್ಕೆ ಹೊರಳಿಸಿದಾಗ ಆಕೆ ಎಷ್ಟು ಮನಮೋಹಕವಾಗಿದ್ದಳೋ ಅಷ್ಟೇ ಅಸಹ್ಯರೀತಿಯ ಗಂಟುಮೋರೆಯ ಕೋತಿಯಾಗಿ ಪರಿವರ್ತಿತವಾಗಿ ಕಂಡಳು’ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನು ಮಾರಿ ಲೂಯಿ ಬರ್ಕೆ ಯಾವುದೇ ಪ್ರಶ್ನೆಗಳಿಲ್ಲದೆ ಒಪ್ಪಿಕೊಂಡಿದ್ದಾಳೆ. (109) ಇಲ್ಲಿ ಮೊದಲ ನೋಟದಲ್ಲಿ ಸ್ವಾಮಿಗಳು ಹಿಂದಿರುಗಿ ನೋಡಿದ ಸಂಗತಿಯಲ್ಲಿಯೇ ಸತ್ಯ ಅಡಕವಾಗಿದೆ.
ಇದಕ್ಕೆ ಪೂರಕವಾಗಿ ಕ್ಯಾಂಪ್ ಟೇಲರ್’ನಲ್ಲಿರುವಾಗ ನಾನು ವಿಶ್ವ ಧರ್ಮ ಸಂಸತ್ತಿನಲ್ಲಿ ‘ ಅಮೆರಿಕದ ಅಣ್ಣ ತಮ್ಮಂದಿರೆ , ಅಕ್ಕ ತಂಗಿಯರೇ’ ಎಂದಾಗ ಇಡೀ ಸಭಾಂಗಣ ತುದಿಗಾಲಿನಲ್ಲಿ ಎದ್ದು ನಿಂತಿತು. ಅಂತಹ ಶಕ್ತಿ ನನ್ನಲ್ಲಿ ಏನಿದೆ ಎಂದು ನೀವು ಸೋಜಿಗಪದಬಹುದು. ನನಗೊಂದು ಶಕ್ತಿಯಿದೆ-ನನ್ನ ಜೀವನದಲ್ಲಿ ಒಮ್ಮೆಯೂ ನನಗೆ ಕಾಮದ ಚಿಂತನೆ ಬಂದಿಲ್ಲ. ನನ್ನ ಮನಸ್ಸನ್ನು ಯಾವಾಗಲೂ ಉನ್ನತ ಪ್ರಜ್ಞೆಯಲ್ಲಿರುವಂತೆ ತರಬೇತೊಗೊಳಿಸಿಕೊಂಡಿದ್ದೇನೆ’ ಎಂದು ತಿಳಿಸಿದರು. (110) ಸ್ವಾಮಿಗಳ ಕಟ್ಟ ಅಭಿಮಾನಿಗಳು ಏನೇ ಭಾವಿಸಲಿ ಸ್ವಾಮಿಗಳ ಈ ಹೇಳಿಕೆಯಿಂದ ಚರ್ಚೆಯನ್ನು ಮುಕ್ತಾಯಗೊಳಿಸಬಹುದು- ‘ಗೃಹಸ್ಥ ಜೀವನ ಮದುವೆ ಮುಂತಾದುವುಗಳ ಛಾಯೆ ನನ್ನ ಮನಸ್ಸಿನಲ್ಲಿಯೂ ಆಗಾಗ್ಗೆ ಬಂದುಹೊಗುತ್ತಿರುತ್ತದೆ. ಮನೆ , ಮದುವೆ ಯೋಚನೆಯ ನೆರಳು ಒಮ್ಮೊಮ್ಮೆ ಮನಸ್ಸಿನಲ್ಲಿ ಹಾದು ಹೋದರೆ ನೀನು ಚಿಂತಿಸುವ ಅಗತ್ಯವಿಲ್ಲ’ (111) ಎಂದು ಸ್ವಾಮಿಗಳು ಶಿಷ್ಯನಿಗೆ ತಿಳಿಸಿರುವ ವಿಷಯಕ್ಕೆ ಅದರದೇ ಆದ ಮಹತ್ವವಿದ್ದು ಅದು ಸ್ವಾಮಿಗಳ ವ್ಯಕ್ತಿತ್ವವನ್ನು ಅರಿತುಕೊಳ್ಳಲು ನೆರವಾಗುತ್ತದೆಯಾದರೂ ಜೀವನ ಚರಿತ್ರೆಗಳು ಇಂತಹ ಹೇಳಿಕೆಗಳನ್ನು ಮೈಲಿಗೆಯಂತೆ ಹೊರಗಿರಿಸಿವೆ.
(ಸ್ವಾಮಿ ವಿವೇಕಾನಂದ: ಕಪ್ಪು-ಬಿಳುಪು ಅ ಆಯ್ದ ಭಾಗ)
ಭಾರತದ ಅಧ್ಯಾತ್ಮಿಕ/ಧಾರ್ಮಿಕ ಪರಂಪರೆಯಲ್ಲಿ ಹೆಣ್ಣು , ಹೊನ್ನು ಮತ್ತು ಮಣ್ಣಿನ ಬಗ್ಗೆ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿಗಳಷ್ಟು ಗೊಂದಲವನ್ನು ಉಂಟು ಮಾಡಿಕೊಂಡಿದ್ದ ಇನ್ನೊಬ್ಬ ವ್ಯಕ್ತಿಯಿಲ್ಲ, ರಾಮಕೃಷ್ಣರ ‘ಕಾಮಿನಿ-ಕಾಂಚನ’ದ ಗೋಜಲಿನ ವಿಶ್ಲೇಷಣೆ ಈ ಪುಸ್ತಕದ ವ್ಯಾಪ್ತಿ ಮೀರಿದ್ದು. ಸ್ವಾಮಿಗಳು ಹೆಂಗಸರ ಬಗ್ಗೆ ತಳೆದಿದ್ದ ನಿಲುವನ್ನು ಅರ್ಥ ಮಾಡಿಕೊಳ್ಳಲು ಅವರ ಬಾಲ್ಯ ಮತ್ತು ಆ ಕಾಲದ ಬಂಗಾಳಿ/ಭಾರತದ ಸಮಾಜದತ್ತ ಒಮ್ಮೆ ಗಮನ ಹರಿಸಬೇಕು. ಕೂಡು ಕುಟುಂಬದಲ್ಲಿ ಬೆಳೆಯತ್ತಿದ್ದ ಬಾಲಕ ನರೇಂದ್ರನಾಥದತ್ತನಿಗೆ ಮನೆಯಲ್ಲಿ ಆಗಿಂದಾಗ್ಗೆ ನಡೆಯುತ್ತಿದ್ದ ಚರ್ಚೆಗಳಿಂದ ತನ್ನ ತಾತ ದುರ್ಗಾದಾಸ ಸಂನ್ಯಾಸಿಯಾಗಿ ತನ್ನ ಅಜ್ಜಿಯನ್ನು ತೊರೆದು ಹೋಗಿರುವ ಸಂಗತಿ ಬಹಳ ಅಸ್ಪಷ್ಟವಾಗಿ ಗೊತ್ತಾಗಿದ್ದಿತು. ಸಂಸಾರ ಮತ್ತು ಸಂನ್ಯಾಸಗಳ ನಡುವಿನ ವ್ಯತ್ಯಾಸ ತಿಳಿಯಲು ಸಾಧ್ಯವೇ ಇಲ್ಲದ ವಯಸ್ಸು ಅದಾಗಿದ್ದಿತು. ವಿಶ್ವನಾಥದತ್ತ ಕುದುರೆ ಸಾರೋಟು ಹೊಂದಿದ್ದು ಅದನ್ನು ನೋಡಿಕೊಳ್ಳಲು ಕಾಸ್ತಾರನನ್ನು ನೇಮಿಸಿಕೊಂಡಿದ್ದನು. ನರೇಂದ್ರನಾಥನನ್ನು ಬಹಳ ಹಚ್ಚಿಕೊಂಡಿದ್ದ ಕಾಸ್ತಾರ ಆತನನ್ನು ಎತ್ತಿಕೊಂಡು ತಿರುಗಾಡುತ್ತಿದ್ದನು. ಕೆಲವೊಮ್ಮೆ ಕುದುರೆ ಸವಾರಿ ಮಾಡಿಸುತ್ತಿದ್ದ ಕಾಸ್ತಾರ ಬಾಲಕ ನರೇಂದ್ರನಾಥನಿಗೆ ಬಹಳ ಅಚ್ಚುಮೆಚ್ಚಿನವನಾಗಿದ್ದು ಆತನ ವೈವಾಹಿಕ ಜೀವನ ನೆಮ್ಮದಿಯಾಗಿರಲಿಲ್ಲ. (69) ಒಮ್ಮೆ ಆತ ಮದುವೆಯಲ್ಲಿ ಸುಖವಿಲ್ಲ. ಅದು ಅಸಮ್ಮತಿ , ಭಿನ್ನಾಭಿಪ್ರಾಯ , ಸಿಟ್ಟು , ಜಗಳ , ಜಟಾಪಟಿ , ಮಕ್ಕಳು , ಹೆಂಡತಿ ಮತ್ತು ಸಂಸಾರ ಎನ್ನುವ ಬಂಧನಕ್ಕೆ ಕಾರಣ ಎಂದು ಬಾಲಕ ನರೇಂದ್ರನಿಗೆ ಹೇಳಿದ್ದನು. ಇದರಿಂದ ತೀವ್ರವಾಗಿ ಪ್ರಭಾವಿತನಾಗಿ ತಾನು ಎಂದಿಗೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿ ಸೀತಾ-ರಾಮರ ವಿಗ್ರಹವನ್ನು ಹೊರಗೆಸೆದಿದ್ದನು. ಕಥೆಗಳಲ್ಲಿ ಕೇಳಿದ್ದ ರಾಮನ ಆದರ್ಶ ದಾಂಪತ್ಯ ಮತ್ತು ಕಾಸ್ತಾರನ ಅನುಭಗಳು ನರೇಂದ್ರನ ಎಳೆ ಮನಸ್ಸಿನಲ್ಲಿ ದ್ವಂದ್ವದ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಭುವನೇಶ್ವರಿದೇವಿಯ ಮೆಲು , ಸವಿ ಹಿತನುಡಿಗಳಿಂದಲೂ ನರೇದ್ರನಲ್ಲಿ ಮೂಡಿದ್ದ ಈ ದ್ವಂದ್ವ ನಿವಾರಣೆಯಾಗಲಿಲ್ಲ. ರಾಮನ ಬದಲು ಹಿಂದೂಧರ್ಮದಲ್ಲಿ ವಿರಾಗಿಯೆಂದು ಪರಿಗಣಿತನಾದ ಶಿವನ ವಿಗ್ರಹವನ್ನು ಬಾಲಕ ನರೇಂದ್ರ ತಂದಿರಿಸಿಕೊಂಡಿದ್ದನು. ನರೇಂದ್ರನ ಎಳೆ ಮನಸ್ಸಿಗೆ ಶಿವ ರಾಮನನ್ನು ಮೀರಿದ ಸಂಸಾರಿ, ಹೆಂಡತಿಯನ್ನು ಅವಮಾನಗೈದ ಮಾವನನ್ನೇ ಯಜ್ಞಕುಂಡದಲ್ಲಿ ಬಲಿಕೊಟ್ಟ ಹೆಣ್ಣು ಆರಾಧಕ. ಆನಂತರವೇ ಆತ ತಪೋವಿರಾಗಿ ಆದನೆಂಬ ಅಂಶದ ಸಂಕೀರ್ಣತೆ ಅರ್ಥವಾಗುವಂತಿರಲಿಲ್ಲ.
ಅಕ್ಕಂದಿರನ್ನು ಹೊರತಾಗಿ ಇತರ ಹುಡುಗಿಯರೊಂದಿಗೆ ನರೇಂದ್ರನಾಥ ದತ್ತ ಹೇಗೆ ವರ್ತಿಸುತ್ತಿದ್ದನೆಂದು ತಿಳಿಯುವುದಿಲ್ಲವಾದರೂ ಮಹೇಂದ್ರನಾಥ ದತ್ತನ ಮೂಲಕ ಎರಡು ಪ್ರಸಂಗಗಳು ತಿಳಿದುಬರುತ್ತವೆ. ನರೇಂದ್ರನಾಥ ದತ್ತ ನೆರೆ ಹೊರೆಯ ಹೆಂಗಸರನ್ನು ಅಕ್ಕ , ಚಿಕ್ಕಮ್ಮ, ಅಜ್ಜಿ , ಅತ್ತೆ ಎಂದು ಕರೆಯುತ್ತಿದ್ದನು. ಆ ಕಾಲದಲ್ಲಿ ಭಾರತದಲ್ಲಿ ಅನ್ಯ ಹೆಂಗಸರನ್ನು ಸಂಪರ್ಕಿಸುವ ರೀತಿಯೇ ಆದಾಗಿದ್ದಿತು. ಪಕ್ಕದ ಮನೆಯ ಬ್ರಾಹ್ಮಣ ಹೆಂಗಸೊಬ್ಬಳು ದತ್ತ ಕುಟುಂಬದೊಂದಿಗೆ ಯಾವುದೇ ರಕ್ತ ಸಂಬಂಧ ಹೊಂದದಿದ್ದರೂ ನರೇಂದ್ರನಾಥದತ್ತ ಆಕೆಯನ್ನು ಪೀಶಿ (ಸೋದರತ್ತೆ) ಎಂದು ಕರೆಯುತ್ತಿದ್ದನು. ಈಕೆಗೆ ನರೇಂದ್ರನಾಥದತ್ತನ ವಯಸ್ಸಿನ ಮಗಳಿದ್ದು ಆಕೆಯನ್ನು ‘ಯಮನ ಚಿಕ್ಕಮ್ಮ’ ಎಂದು ಕರೆಯುತ್ತಿದ್ದನು. ಒಮ್ಮೆ ಇವರ ಮನೆಗೆ ಹೋಗಿದ್ದ ನರೇಂದ್ರನಾಥ ದತ್ತ ಕಡ್ಡಿಪುಡಿ ತುಂಬಿದ್ದ ಎಲೆಯನು ಮೆಲ್ಲುತ್ತ ಆ ಹುಡುಗಿಗೆ ಹಾಡು ಹೇಳುವಂತೆ ಚುಡಾಯಿಸಿದನು. ಆಗ ಆಕೆ ಎರಡು ಸಾಲಿನ ಹಾಡಿನ ಮೂಲಕ ತನಗೆ ಹಾಡಲು ಬರುವುದಿಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದಳು. ನರೇಂದ್ರನಾಥ ದತ್ತ ಅವಳನ್ನು ಅಣಕಿಸಿ ಮತ್ತೊಮ್ಮೆ ಹಾಡಿದನು. ಪಾಶ್ಚಾತ್ಯ ಜಗತ್ತನ್ನು ಸುತ್ತಿ ಬಂದ ನಂತರ ಸ್ವಾಮಿಗಳು ಈ ಮನೆಗೆ ಮತ್ತೊಮ್ಮೆ ಭೇಟಿ ನೀಡಿದಾಗ ಹಿಂದಿನ ಈ ಘಟನೆಯನ್ನು ನೆನೆಸಿಕೊಂಡರು. ಖ್ಯಾತರಾದ ನಂತರವೂ ತಮ್ಮನ್ನು ಮರೆಯದಿದ್ದ ಸ್ವಾಮಿಗಳ ಗುಣಗಳನ್ನು ಕಂಡು ಬ್ರಾಹ್ಮಣ ಹೆಂಗಸು ಬಹಳ ಸಂತಸಪಟ್ಟಿದ್ದಳು. ನರೇಂದ್ರನಾಥನ ಮನೆಯ ಹತ್ತಿರ ಕಪ್ಪುಬಣ್ಣ , ಕೋಲುಮುಖ ಎತ್ತರಿಸಿದ ಹಣೆ, ಮೊಂಡ ಮೂಗು ಹೊಂದಿದ್ದ ಒಬ್ಬ ಹುಡುಗಿಯಿದ್ದಳು. ಈ ಹುಡುಗಿ ಸುಂದರಿಯಲ್ಲದಿದ್ದರೂ ನರೇಂದ್ರನಾಥನಿಗೆ ಆಕೆಯ ಬಗ್ಗೆ ಕಕ್ಕುಲತೆ ಇದ್ದಿತು. ಒಮ್ಮೆ ಆಕೆಗೆ ನಿನ್ನ ಮುಖ ಬಂಗಾಳಿ ಸಂಖ್ಯೆ ಐದರಂತೆ ಇದೆ. ನೀನು ಡೋಮರ ಬೀದಿಯ ಕಡೆ ಹೋಗಬೇಡ. ಅಲ್ಲಿಗೆ ಹೋದರೆ ಕಳೆದುಹೋಗುವೆ ಎಂದಿದ್ದನು. ಇದು ಕೆಳಜಾತಿಯಯವನ್ನು ಕುರೂಪದೊಂದಿಗೆ ಸಮೀಕರಿಸಿ ಹೀಗಳೆಯುವ ಮನೋಭಾವ ಸೂಚಿಸುತ್ತದೆ. (70)
ವಿಶ್ವನಾಥದತ್ತನ ಸ್ನೇಹಿತ ನಿಮಾಯ್’ಚಂದ್ರ ಬಸು ಹತ್ತಿರ ವಕೀಲಿಕೆ ಕಲಿಯಲು ನರೇಂದ್ರನಾಥ ಹೋಗುತ್ತಿದ್ದನು. (೩೮) ಇದೇ ಸಮಯದಲ್ಲಿ ಬಿ.ಎಲ್. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದನು. ಇದು ಅವರ ಕುಟುಂಬ ಪದ್ದತಿಗೆ ತಕ್ಕುದಾಗಿದ್ದಿತು. ೧೮೮೩ ರಲ್ಲಿ ಬಿ.ಎ ಪರೀಕ್ಷೆ ಮುಗಿದ ನಂತರ ತಂದೆ ಮತ್ತು ಚಿಕ್ಕಪ್ಪರ ಜೊತೆ ಉಚ್ಚ ನ್ಯಾಯಾಲಯಕ್ಕೆ ಹೋಗುತ್ತಿದ್ದನು. (71) ಈ ಕಾಲದಲ್ಲಿ ನಡೆದ ಘಟನೆಗಳನ್ನು ಭೂಪೇಂದ್ರನಾಥ ಗುಪ್ತ ಹೀಗೆ ಬರೆಯುತ್ತಾರೆ. ‘ ವಿಶ್ವನಾಥ ದತ್ತ ಬದುಕಿರುವಾಗಲೇ ನರೇಂದ್ರನಾಥನ ಮದುವೆ ಪ್ರಸ್ತಾಪಗಳಾಗಿದ್ದು ಹೆಣ್ಣು ಕೊಡಲು ಹಲವಾರು ಪ್ರತಿಷ್ಟರು ಮುಂದೆ ಬಂದಿದ್ದರು. ವಿಶ್ವನಾಥದತ್ತನ ಸಾವಿನ ನಂತರವೂ ಅಂತಹ ಪ್ರಸ್ತಾಪಗಳು ಬರುತ್ತಿದ್ದವು. ವಿಶ್ವನಾಥದತ್ತನ ಶಾಲಾ ದಿನಗಳ ಸಹಪಾಠಿ , ಮುಂದೆ ಉಚ್ಚ ನ್ಯಾಯಾಲಯದಲ್ಲಿ ವಕೀಲನಾಗಿ ವಿಶ್ವನಾಥದತ್ತನಲ್ಲಿ ಆಪ್ತತೆ ಬೆಳೆಸಿಕೊಂಡಿದ್ದ ಆತನ ಒಬ್ಬ ಸ್ನೇಹಿತ ನರೇಂದ್ರನಾಥ ತನ್ನ ಮೊಮ್ಮಗಳನ್ನು ಮದುವೆಯಾದರೆ ವಿಶ್ವನಾಥದತ್ತ ಪಿತ್ರಾರ್ಜಿತ ಆಸ್ತಿಗಾಗಿ ನಡೆಸುತ್ತಿರುವ ಕಾನೂನಿನ ಹೋರಾಟಕ್ಕೆ ತಗಲುವ ಎಲ್ಲ ವೆಚ್ಚವನ್ನು ಭರಿಸಲು ಮುಂದೆ ಬಂದಿದ್ದನು. ರಾಮಕೃಷ್ಣರ ಭಕ್ತರಲ್ಲಿಯೇ ಕೆಲವರು ನರೇಂದ್ರನಾಥನಿಗೆ ತಮ್ಮ ಕಡೆಯ ಹೆಣ್ಣುಗಳನ್ನು ಕೊಟ್ಟು ಮದುವೆ ಮಾಡಿಸಲು ಯತ್ನಿಸಿದ್ದರು. ಕಟಕ್’ನ ಶ್ರೀಮಂತ ಜಮೀನ್ದಾರ ಬಲರಾಮ ಬಸು ತನ್ನ ಮಗಳನ್ನು ನರೇಂದ್ರನಾಥನೊಂದಿಗೆ ಮದುವೆ ಮಾಡಿಸಲು ಇಚ್ಛಿಸಿದ್ದನು. ಕಲ್ಕತ್ತದ ಖ್ಯಾತ ಬ್ಯಾರಿಸ್ಟರ್ ಆರ್. ಮಿತ್ರನಿಗೂ ಈ ನಿಟ್ಟಿನಲ್ಲಿ ಆಸಕ್ತಿಯಿದ್ದಿತು. ಆದರೆ ಇವು ಯಾವುವನ್ನು ನರೇಂದ್ರನಾಥ ಕಿವಿಗೆ ಹಾಕಿಕೊಳ್ಳಲಿಲ್ಲ ಎಂದಿದ್ದಾರೆ. (72)
ಇದಕ್ಕೆ ‘ದಿ ಲೈಫ್-೧೯೧೪’ ಬೇರೆಯದೇ ಆದ ಕಾರಣಗಳನ್ನು ಗುರುತಿಸುತ್ತದೆ. ರಾಮಕೃಷ್ಣ ಪರಮಹಂಸರು ನರೇಂದ್ರನಾಥನಿಗೆ ಜೀವನ ಪರ್ಯಂತ ನೈಷ್ಟಿಕ ಬ್ರಹ್ಮಚರ್ಯವನ್ನು ಪಾಲಿಸಲು ಹೇಳುತ್ತಿರುವುದನ್ನು ಆತನ ಅಜ್ಜಿ ಕೇಳಿಸಿಕೊಂಡು ಹೆತ್ತವರ ಗಮನಕ್ಕೆ ತಂದಳು. ತನ್ನ ತಂದೆ, ತಾಯಿಗಳು ತನಗೆ ಹೆಣ್ಣು ನೋಡುತ್ತಿದ್ದರೂ ಅವುಗಳಲ್ಲಿ ಯಾವುವೂ ಕೈಗೂಡದಿರುವುದಕ್ಕೆ ರಾಮಕೃಷ್ಣ ಪರಮಹಂಸರ ಪ್ರಭಾವವೇ ಕಾರಣವೆಂದು ನರೇಂದ್ರನಾಥದತ್ತ ಭಾವಿಸಿದ್ದನು. (73) . ನಿರಂಜನ ಧರ್ ನರೇಂದ್ರನಾಥ ದತ್ತ ತನ್ನ ಮದುವೆಗೆ ತಂದೆ ತಾಯಿಗಳು ಪ್ರಯತ್ನಿಸುತ್ತಿರುವುದನ್ನು ಎಂದಿಗೂ ವಿರೋಧಿಸಿರಲಿಲ್ಲ. ಒಮ್ಮೆ ಕಪ್ಪು ಬಣ್ಣದ ಕನ್ಯೆಯೊಬ್ಬಳ ತಂದೆ ಕೈತುಂಬ ವರದಕ್ಷಿಣೆ ನೀಡಲು ಮುಂದೆ ಬಂದಿದ್ದನು. ಆಗ ನಡೆಯುತ್ತಿದ್ದ ಚೌಕಾಶಿ ಮತ್ತು ಕಪ್ಪು ಹುಡುಗಿಯನ್ನು ಒಲ್ಲೆ ಎಂದು ಆಕ್ಷೇಪವೆತ್ತಿದ್ದನು ಎಂದು ಬರೆದಿದ್ದಾರೆ.(74) ರಾಮಕೃಷ್ಣ ಪರಮಹಂಸ ಆಗಾಗ್ಗೆ ನರೇಂದ್ರನಾಥ ದತ್ತ ಇರುತ್ತಿದ್ದ ಆತನ ಅಜ್ಜಿಯ ಮನೆಗೆ ಬಂದು ಅಜೀವ ಬ್ರಹ್ಮಚರ್ಯ ಪಾಲಿಸಲು ಹೇಳುತ್ತಿದ್ದುದನ್ನು ಗಮನಿಸಿದರೆ ನರೇಂದ್ರನಾಥ ದತ್ತ ಮದುವೆಯಾಗಲು ಮುಂದಾಗಿದ್ದನೆಂದು ತಿಳಿಯಬಹುದು.
ಪೂರ್ವ ಜನ್ಮದ ಸಂಸ್ಕಾರಗಳಿಂದಾಗಿ ನರೇಂದ್ರನಾಥ ದತ್ತನಲ್ಲಿ ದೈವ ಸಾಕ್ಷಾತ್ಕಾರದ ತುಡಿತವಿದ್ದು ವೈರಾಗ್ಯ ತುಂಬಿದ್ದಿತು. ಮದುವೆಗೆ ಸಂಬಂಧಿಸಿದ ಬ್ರಾಹ್ಮ ಸಮಾಜದ ಯಾವುದೇ ಚಟುವಟಿಕೆಗಳಲ್ಲಿ ನರೇಂದ್ರನಾಥ ಭಾಗಿಯಾಗಿರಲಿಲ್ಲ ಎಂದು ಸಹ ಹೇಳಲಾಗಿದೆ. ಆದರೆ ರಾಜನಾರಾಯಣ ಬಸುಗಳ ನಾಲ್ಕನೇ ಮಗಳು ಲೀಲಾದೇವಿಯ ಮದುವೆಯಲ್ಲಿ ಸಾಧಾರಣ ಬ್ರಾಹ್ಮಸಮಾಜದಲ್ಲಿ ನಡೆಯಿತು. ಆ ಮದುವೆಯಲ್ಲಿ ಸಂದರ್ಭದಲ್ಲಿ ರವೀಂದ್ರನಾಥರು ನರೇಂದ್ರನಾಥದತ್ತನಿಗೆ ಮೂರು ಹಾಡುಗಳನ್ನು ಹಾಡಲು ತರಬೇತಿ ನೀಡಿದ್ದರು. (75) ಈ ಮೂರು ಹಾಡುಗಳು ಬಸಕ್’ರವರ ಸಂಗೀತ ಕಲ್ಪತರು ಪುಸ್ತಕದಲ್ಲಿ ಪ್ರಕಟಗೊಂಡಿದ್ದವು ಎಂದು ಅಭೇದಾನಂದರು ತಿಳಿಸುತ್ತಾರೆ.
ರಾಮಕೃಷ್ಣರ ಸಂನ್ಯಾಸಿ ಶಿಷ್ಯರಲ್ಲಿ ಬ್ರಹ್ಮಾನಂದ, ಶಿವಾನಂದ, ಯೋಗಾನಂದ ಮತ್ತು ಅದ್ವೈತಾನಂದ ಮದುವೆಯಾಗಿದ್ದರು. ಅವರು ತಮ್ಮ ಹೆಂಡಿರನ್ನು ತೊರೆದು ಬಂದು ಸಂನ್ಯಾಸಿಗಳಾಗಿದ್ದರು. ಬ್ರಹಾನಂದರಿಗೆ ಒಬ್ಬ ಮಗನೂ ಇದ್ದನು. ಹೆಣ್ಣಿನ ನಿಜವಾದ ಅನುಭವವೇ ಇಲ್ಲದ ಅವರ ಗುರು ರಾಮಕೃಷ್ಣ ಮತ್ತು ಅವರ ಭೀಮಶಿಷ್ಯ ಸ್ವಾಮಿ ವಿವೇಕಾನಂದ ಹೆಣ್ಣು-ಹೊನ್ನಿನ ಬಗ್ಗೆ ಉದ್ದುದ್ದ ಹಿತವಚನಗಳನ್ನು , ಹೆಣ್ಣು-ಹೊನ್ನು ದೈವ ಸಾಕ್ಷಾತ್ಕಾರಕ್ಕೆ ಅಡ್ಡಿ ಎನ್ನುವುದನ್ನು ಇವರು ಕೇಳಿದ್ದರು. ಇವರಿಗಿಂತ ಭಿನ್ನವಾಗಿ ಬಾಲಕ ನರೇಂದ್ರನಾಥದತ್ತ ಕಾಸ್ತಾರನಿಂದ ಕೇಳಿದ್ದ ಸಂಸಾರದ ತಾಪತ್ರಯಗಳು , ಯುವಕ ನರೇಂದ್ರನಾಥ ಎದುರಿಸಿದ ಕೌಟುಂಬಿಕ ಆಸ್ತಿ ವಿವಾದ, ದಕ್ಕದ ನೌಕರಿ ಮುಂತಾದ ಸಂಗತಿಗಳು ಆತನನ್ನು ವೈರಾಗ್ಯದತ್ತ ದೂಡಿದ್ದವು. ಸ್ವಾಮಿಗಳು ಮತ್ತು ಗುರುಭಾಯಿಗಳು ಬರಾನಗರ ಮಠದಲ್ಲಿರುವಾಗ ಹಿರಿಯ , ಕಿರಿಯ ಹೆಂಗಸರೆನ್ನುವ ಭೇದವಿಲ್ಲದೆ ಎಲ್ಲ ಹೆಂಗಸರನ್ನು ‘ಮಗಿ’ (ಸೂಳೆ) ಎಂದು ಕರೆಯುತ್ತಿದ್ದರು. ಲಂಗೋಟಿಯುಟ್ಟು ಬಹುತೇಕ ಬತ್ತಲೆಯಲ್ಲಿರುತ್ತಿದ್ದ ಈ ಯುವ ಸಂನ್ಯಾಸಿಗಳು ಹೆಂಗಸರು ಮಠದತ್ತ ಬರುವುದನ್ನು ಕಂಡ ತಕ್ಷಣ ‘ಮಗಿ ಬಂದಳು’ ಎಂದು ಕೂಗುತ್ತ ಓಡುತ್ತಿದ್ದರು. ನಂತರ ದಿನಗಳಲ್ಲಿ ‘ಮಗಿ’ ಬದಲು ಮೊಗಿ (ಬಂಗಾಳಿಯಲ್ಲಿ ಬರ್ಮಾ ದೇಶದಾಕೆ) ಎಂದು ಬದಲಿಸಿದರೆಂದು ಮಹೇಂದ್ರನಾಥದತ್ತ ತಿಳಿಸಿದ್ದಾರೆ. (76)
ಹತ್ತೊಂಬತ್ತನೇ ಶತಮಾನದ ಬಂಗಾಳಿ ಭದ್ರೆಲೋಕದಲ್ಲಿ ಹುಟ್ಟಿದ್ದ ಸ್ವಾಮಿಗಳು ವಯಸ್ಕರಾದ ನಂತರ ಹೆಣ್ಣನ್ನು ಸಹಜವಾಗಿ ಎದುರಿಸಿರಲಿಲ್ಲ. ಅವರು ಬಿ.ಎ ವಿದ್ಯಾಭ್ಯಾಸ ಮಾಡಿದ ಜನರಲ್ ಅಸೆಂಬ್ಲಿ ಇನ್’ಸ್ಟಿಟ್ಯೂಷನ್’ನಲ್ಲಿ ಹುಡುಗಿಯರಿಗೆ ಪ್ರವೇಶವಿರಲಿಲ್ಲ. ರಾಮಕೃಷ್ಣರ ಭಕ್ತರಲ್ಲಿ ಯುವತಿ , ತರುಣಿಯರಿರಲಿಲ್ಲ. ಆ ಕಾಲದ ಭಾರತೀಯ ಗಂಡಸು ಮದುವೆಯಾಗಿ ಹೆಣ್ಣಿಗೆ ಮುಖಾಮುಖಿಯಾಗುತ್ತಿದ್ದನು. ಸಂನ್ಯಾಸ ಸ್ವೀಕರಿಸಿದ್ದ ಸ್ವಾಮಿಗಳಿಗೆ ಆ ಅವಕಾಶ ಮತ್ತು ಅನುಭವಗಳು ದಕ್ಕಿರಲಿಲ್ಲ. ಹೆಣ್ಣು-ಹೊನ್ನು ಮಾಯೆ, ದೈವ ಸಾಕ್ಷಾತ್ಕಾರಕ್ಕೆ ಅಡ್ಡಿ ಎಂದು ಪ್ರತಿಪಾದಿಸುತ್ತ ಮದುವೆಯಾಗಿ ಹೆಂಡತಿಯಿಂದ ಎಲ್ಲ ಸೇವೆಗಳನ್ನು ಪಡೆಯುತ್ತ ಗಂಡನಾಗಿ ತನ್ನ ಕರ್ತವ್ಯಗಳನ್ನು ಕಳಚಿ ಎಸೆದಿದ್ದ ರಾಮಕೃಷ್ಣ ಪರಮಹಂಸರು ಅವರ ಮಾರ್ಗದರ್ಶಿಗಳಾಗಿದ್ದರು. ಪರಿವ್ರಾಜಕ ಜೀವನದಲ್ಲಿ ಒಂದೆರಡು ಅಪರೂಪದ ಸಂದರ್ಭಗಳನ್ನು ಬಿಟ್ಟರೆ ಭಾರತೀಯ ಹೆಂಗಸರ ಬಗ್ಗೆ ಅವರು ಗಳಿಸಿದ ತಿಳಿವಳಿಕೆ ಅಷ್ಟಕಷ್ಟೇ. ಬೆಳಗಾವಿಯಲ್ಲಿದ್ದ ಶಿಷ್ಯನ ಹೆಂಡತಿ ಇಂದುಮತಿ ಮಿತ್ರ , ಸ್ವಾಮಿಗಳಿಂದ ಕುಮಾರಿ ರೂಪದಲ್ಲಿ ಪೂಜಿಸಲ್ಪಟ್ಟ ಮನ್ಮಥನಾಥ ಭಟ್ಟಾಚಾರ್ಯನ ಮಗಳು , ಖೇತ್ರಿಯಲ್ಲಿದ್ದ ನರ್ತಕಿ , ಆಳ್ವಾರ್’ನಲ್ಲಿ ಚಪಾತಿ ಮಾಡಿಕೊಟ್ಟ ಮುದುಕಿ ಸ್ವಾಮಿಗಳ ಪ್ರವಾಸದಲ್ಲಿ ಅವರನ್ನು ಮುಖಾಮುಖಿಯಾದ ಹೆಂಗಸರು. ಅಮೆರಿಕ ತಲುಪಿದ ನಂತರ ಸ್ವಾಮಿಗಳಿಗೆ ಅಲ್ಲಿನ ಹೆಂಗಸರು ಎಸೆದ ಸವಾಲು ಬೆರಗು ಮತ್ತು ಭಯಗಳನ್ನು ತಂದಿದ್ದವು. ಬಾಲ್ಯ ವಿವಾಹದಿಂದ ಸಣ್ಣ ವಯಸ್ಸಿಗೆ ತಾಯಿಯಾಗಿ , ಕಂಕುಳಲ್ಲಿ ಒಂದು , ಹೊಟ್ಟೆಯಲ್ಲಿ ಇನ್ನೊಂದು ಕೂಸನ್ನು ಹೊತ್ತು ಗಂಡನ ಕಣ್ಸನ್ನೆ , ಅತ್ತೆ , ಮಾವಂದಿರ ಕೈಸನ್ನೆ , ಮೈದುನ, ನಾದಿನಿಯರ ಬಾಯಾದೇಶಗಳ ಹಂಗಿನಲ್ಲಿ ಬಾಳು ಸಾಗಿಸುತ್ತಿದ್ದ ಕೂಡು ಕುಟುಂಬದ ಸ್ವಂತ ವ್ಯಕ್ತಿತ್ವವಿಲ್ಲದ, ಮನೆಯ ಹೊಸಿಲಿನ ಹೊರಗೆ ಕಾಲಿರಿಸಲು ಅಳುಕುತ್ತಿದ್ದ ಬಂಗಾಳಿ ಭದ್ರಲೋಕದ ಹೆಣ್ಣಿನ ಚಿತ್ರ ಸ್ವಾಮಿಗಳ ಮನಸ್ಸಿನಲ್ಲಿ ಬಾಲ್ಯದಿಂದಲೂ ಅಚ್ಚೊತ್ತಿದ್ದಿತು. ಅಮೆರಿಕ ಪ್ರವೇಶ ಮಾಡುತ್ತಿದ್ದಂತೆಯೇ ಈ ಚಿತ್ರ ಅನೂಹ್ಯ ರೀತಿಯಲ್ಲಿ ಬದಲಾಯಿತು. ಅಲ್ಲಿನ ಹೆಂಗಸರ ಸ್ವಾತಂತ್ರ, ಶಿಕ್ಷಣ , ಸ್ವಂತಿಕೆಗಳು ಸ್ವಾಮಿಗಳ ಊಹೆಯ ಸೀಮೆಯ ಆಚೆಗಿದ್ದವು.
ಭಾರತೀಯ ಮತ್ತು ಅಮೆರಿಕ ಹೆಂಗಸರ ನಡುವಿನ ಈ ವೈದೃಶ್ಯ ತರುಣ ಸ್ವಾಮಿಗಳ ಚಿಂತನೆಗಳಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದವು. ಸ್ವಾಮಿಗಳು ಅಮೆರಿಕದಲ್ಲಿ ಕಾಲಿಟ್ಟು ಮೊದಲ ರೈಲಿನ ಪ್ರಯಾಣದಲ್ಲಿರುವಾಗ ಶ್ರೀಮತಿ ಕೇಟ್ ಸ್ಯಾನ್’ಬೋರ್ನ್ ಪರಿಚಯದಿಂದ ಪ್ರಾರಂಭವಾಗಿ , ಶ್ರೀಮತಿ ಜಾರ್ಜ್ ಹೇಲ್ ಅನುಕಂಪದ ಮೂಲಕ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗಿಯಾಗಿ , ಶ್ರೀಮತಿ ಪಾಮರ್’ರಂತಹವರ ಗಣ್ಯರ ಬೆಂಬಲ ದಕ್ಕಿ , ಶ್ರೀಮತಿ ಜಾನ್ ಜೆ ಬ್ಯಾಗ್ಲಿಯಂತಹ ಶ್ರೀಮಂತೆಯ ಆತಿಥ್ಯದ ಸವಿಯುಂಡು , ಶ್ರೀಮತಿ ಸಾರಾ ಬುಲ್’ರಂತಹ ಆಗರ್ಭ ಶ್ರೀಮಂತೆಯಿಂದ ಎಲ್ಲ ಬಗೆಯ ಲೌಕಿಕ ಆಸರೆಗಳನ್ನು ಪಡೆದು , ತನಗಿಂತ ಐದು ವರ್ಷ ದೊಡ್ದವಳಾಗಿದ್ದ ಜೊಸೆಫಿನ್ ಮೆಕ್ಲಿಯಾಡ್ ಮತ್ತು ಆಕೆಯ ಅಕ್ಕ ಬೆಟ್ಟಿ ಸ್ಟರ್ಜ್ಜಿಸ್’ರಿಂದ ಹೊಗಳಲ್ಪಟ್ಟು ,ಬೆಂಬಲ ಪಡೆದು ಸಾರಾ ಫಾರ್ಮರ್’ರಂತಹ ಸಾಮಾಜಿಕ ವ್ಯಕ್ತಿಗಳಿಂದ ಆಹ್ವಾನ ಪಡೆದು , ಎಮ್ಮಾ ಥರ್ಸ್’ಬಿಯಂತಹ ತಾರೆಗಳ ಗೌರವ ಪಡೆದು, ಮೇರಿ ಡಚರ್'ನಿಂದ ಅಧ್ಯಾತ್ಮ ಪ್ರವಾಚಕನಾದ ಸ್ವಾಮಿಗಳ ಮೇಲೆ ಅಮೆರಿಕದ ಹಲವಾರು ಹೆಂಗಸರ ಔದಾರ್ಯದ ಹೊರೆಯಿದ್ದಿತು. ಇವೆಲ್ಲವುಗಳ ಪರಿಣಾಮವಾಗಿ ಸ್ವಾಮಿಗಳು ಅಮೆರಿಕದ ಹೆಂಗಸರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳು ರೂಪಿಸಿಕೊಂಡರು.
ಹರಿಪದಮಿತ್ರರಿಗೆ ‘ ಇಲ್ಲಿಯ ಹೆಂಗಸರಷ್ಟು ವಿದ್ಯಾವಂತರನ್ನು , ಸುಸಂಸ್ಕೃತರನ್ನು ನಾನು ಬೇರೆಡೆ ನೋಡಿಲ್ಲ. ನಮ್ಮ ದೇಶದಲ್ಲಿ ವಿದ್ಯಾವಂತರೇನೋ ಇರುವರು. ಆದರೆ ಇಲ್ಲಿನ ಹೆಂಗಸರಂತಹವರನ್ನು ಕಾಣುವುದು ಅತಿ ವಿರಳ. ಸದ್ಗೃಹಸ್ಥರ ಮನೆಗಳಲ್ಲಿ ದೇವಿ ಲಕ್ಷ್ಮಿಯೇ ನೆಲೆಸಿರುತ್ತಾಳೆ ಎನ್ನುವುದು ನಿಜ. ಡಯಾನ ವಿಗ್ರಹದ ಮೇಲಿನ ಹಿಮದಷ್ಟು ಶುಭ್ರವಾಗಿರುವ , ನಿಷ್ಕಳಂಕ ಹೃದಯದ ನೂರಾರು ಹೆಂಗಸರನ್ನು ನಾನು ಇಲ್ಲಿ ನೋಡಿದ್ದೇನೆ ….. ನಾನು ಇಲ್ಲಿಗೆ ಬಂದಾಗಿನಿಂದ ಅವರ ಮನೆಗಳಲ್ಲಿ ನನ್ನನ್ನು ಸತ್ಕರಿಸಿರುವರು. ಅವರು ನನಗೆ ಆಹಾರ ಕೊಡುವರು, ಉಪನ್ಯಾಸಕ್ಕೆ ಅಣಿಮಾಡುವರು …ಅವರ ಋಣವನ್ನು ನಾನು ತೀರಿಸಲಾರೆ. …. ಇಲ್ಲಿ ಗಂಡಸರು ಸಾದ್ಯವಾದಷ್ಟು ಹೆಂಗಸರನ್ನು ಸನ್ಮಾನಿಸುವರು. ಅದಕ್ಕೆ ಅವರು ಅಷ್ಟು ಮುಂದುವರೆದಿರುವುದು ….ಪಾದ್ರಿಗಳು ನನ್ನನ್ನು ಅನುಮಾನಿಸಿದರೂ , ಪ್ರಚೋದಿಸಿದರೂ ಅಮೆರಿಕದ ಹೆಂಗಸರು ನನ್ನನ್ನು ಬಿಟ್ಟುಕೊಡಲಿಲ್ಲ. ಇಲ್ಲಿ ರೆಕ್ಕೆಯಿಲ್ಲದ ದೇವತೆಗಳು ವಾಸಿಸುತ್ತಿರುವರಾ ? ……. ಇಲ್ಲಿ ಗಂಡಸರು ಸಾದ್ಯವಾದಷ್ಟು ಹೆಂಗಸರನ್ನು ಸನ್ಮಾನಿಸುವರು. ಅದಕ್ಕೆ ಅವರು ಅಷ್ಟು ಮುಂದುವರೆದಿರುವುದು ಎಂದು ತಿಳಿಸಿದ್ದರು. (೨೮/೧೨/೧೮೯೩). ಅಳಸಿಂಗ ಪೆರುಮಾಳ್’ಗೆ ‘….ಇಲ್ಲಿಯ ಹೆಂಗಸರು ಜಗತ್ತಿನಲ್ಲಿಯೇ ಅತಿ ಮುಂದುವರೆದಿರುವವರು. ಸಾಧಾರಣ ಅಮೆರಿಕ ಹೆಂಗಸು ಗಂಡಿಗಿಂತ ಸುಸಂಸ್ಕೃತಳು. .. ಹೆಂಗಸರು ತಮ್ಮ ಏಳಿಗೆಗೆ ಒದಗುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವರು ‘ ಎನ್ನುತ್ತ ತಮ್ಮ ಹೊಸ ಆವಿಷ್ಕಾರವನ್ನು ಮುಂದಿಟ್ಟಿದ್ದರು. (೧೨/೧/೧೮೯೪). ಜಗತ್ತಿನಲ್ಲಿ ಯಾವ ಎಡೆಯಲ್ಲಿಯೂ ಹೆಂಗಸರು ಇಲ್ಲಿನಂತೆ ಇಲ್ಲ. ಎಷ್ಟು ಶುದ್ಧರು ! ಎಷ್ಟು ಸ್ವತಂತ್ರರು ! ಎಷ್ಟು ಆತ್ಮಾವಲಂಬಿಗಳು ! ಎಷ್ಟು ದಯಾಳುಗಳು ! ಈ ದೇಶದ ಜೀವಾಳ ಹೆಂಗಸರೇ . … ಪುಣ್ಯವಂತರ ಮನೆಗಳಲ್ಲಿ ಯಾರು ಲಕ್ಷ್ಮೀ ಸ್ವರೂಪಳಾಗಿರುವಳೋ ಎನ್ನುವ ಮಾತು ಇವರಿಗೆ ಸಲ್ಲುತ್ತದೆ. ಅಬ್ಬ , ದೇವರೇ ! ಅಮೆರಿಕದ ಹೆಂಗಸರನ್ನು ನೋಡಿ ನಾನು ವಿಸ್ಮಯದಿಂದ ಮೂಕನಾಗಿದ್ದೇನೆ. ತ್ವಂ ಶ್ರೀ , ತ್ವಂ ಈಶ್ವರಿ , ತ್ವಂ ಹ್ರೀಃ, ನೀನೇ ಲಕ್ಷ್ಮೀ, ನೀನೇ ಈಶ್ವರಿ , ನೀನೇ ಲಜ್ಜಾ ಸ್ವರೂಪಿಣಿ …ಅವೆಲ್ಲ ಇಲ್ಲಿಗೆ ಅನ್ವಯಿಸುತ್ತವೆ… ‘ಎಂದು ರಾಮಕೃಷ್ಣಾನಂದರಿಗೆ (೧೮/೩/೧೮೯೪) , ಈ ದೇಶದ ಹೆಂಗಸರನ್ನು ನೋಡಿ ನಾನು ಸ್ಥಂಭೀಭೂತನಾಗಿದ್ದೇನೆ. ಅವರು ಮಾಡುವ ಕೆಲ್ಸದಲ್ಲಿ ಹದಿನಾರರಲ್ಲಿ ಒಂದಾಣೆಯ ಕೆಲಸವನ್ನೂ ನಾನು ಮಾಡಲಾಗುವುದಿಲ್ಲ. ಅವರೇ ಜಗನ್ಮಯಿಯ ಅವತಾರ. ಅವರ ಆರಾಧನೆಯ ಮೂಲಕ ಯಾವ ಕೆಲಸದಲ್ಲಿಯಾದರೂ ಸಿದ್ಧಿಯನ್ನು ಪಡೆಯಬಹುದು…… ಎಂದು ೨೫/೯/೧೮೯೪ ರಂದು ಗುರುಭಾಯಿಗಳಿಗೆ ವರ್ಣಿಸಿದ್ದರು.
ಇದೇ ಸಮಯದಲ್ಲಿ ಖೇತ್ರಿ ಮಹಾರಾಜ ಅಜಿತ್ ಸಿಂಗ್’ಗೆ ಬರೆದ ಪತ್ರದಲ್ಲಿ ‘ ಅಮೆರಿಕದ ಗೃಹಿಣಿಯರ ವಿಚಾರವಾಗಿ ನಾನು ಅದೆಷ್ಟೋ ಕತೆಗಳನ್ನು ಕೇಳಿದ್ದೆ. ಅವರು ಸ್ವತಂತ್ರರು. ಸ್ವೇಚ್ಛಾಚಾರಿಗಳು, ತಮ್ಮ ಸ್ವಾತಂತ್ರ್ಯದ ಹುಚ್ಚು ಕುಣಿತದಲ್ಲಿ ಗಾಂಭೀರ್ಯವನ್ನು ಬಿಟ್ಟು ಮನೆಯ ಶಾಂತಿ , ಸೌಹಾರ್ದವನ್ನು ಹಾಳು ಮಾಡಿರುವರು ಮುಂತಾಗಿ.. ಒಂದು ವರ್ಷ ಅಮೆರಿಕ ಮನೆಗಳ ಮತ್ತು ಇಲ್ಲಿಯ ಹೆಂಗಸರ ಅನುಭವವಾದ ಮೇಲೆ ಇಂತಹ ಸಮಾಚಾರಗಳು ಸುಳ್ಳು ಎನ್ನುವುದು ಗೊತ್ತಾಗಿದೆ. ಅಮೆರಿಕದ ಹೆಂಗಸರೇ, ನಿಮಗೆ ನನ್ನ ಕೃತಜ್ಞತೆ ತೋರಿಸುವುದಕ್ಕೆ ನೂರು ಜನ್ಮಗಳು ಸಾಲವು, ಅದಕ್ಕೆ ಬೇಕಾದ ಪದ ಸಂಪತ್ತು ನನ್ನಲ್ಲಿಲ್ಲ, ಹಿಂದೂ ಸಾಗರ ಮಸಿಯಾಗಿ , ಹಿಮಾಲಯದ ಅತ್ಯುನ್ನತ ಶಿಖರವೇ ಲೇಖನಿಯಾಗಿ , ಭೂಗೋಳವೇ ಕಾಗದವಾಗಿ , ಕಾಲವೇ ಬರಹಗಾರನಾದರೂ ನನ್ನ ಕೃತಜ್ಞತೆಗಳನ್ನು ಅರ್ಪಿಸಲಾರೆ…… ಒಂದು ಸೇಬಿನ ಮರ ಮತ್ತು ಅದರ ಹಣ್ಣಿನ ರುಚಿಯನ್ನು ನೆಲದ ಮೆಲೆ ಬಿದ್ದಿರುವ ಕೊಳೆತ , ಹುಳು ತಿಂದ ಹಣ್ಣಿನ ಸವಿಯಿಂದ ಪರೀಕ್ಷಿಸುವಿರಾ? … ’ ಎಂದು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದರು. ‘ ಹಿಂದೂಗಳಿಗಿರುವಂತಹ ಪಾತಿವ್ಯತ್ಯ ಮತ್ತು ಪಾವಿವ್ರತ್ಯಗಳ ಆದರ್ಶವೇ ಪಾಶ್ಚಾತ್ಯ ದೇಶಗಳಲ್ಲಿದೆ ಎಂದು ನೀನು ತಿಳಿಯಕೂಡದು. ಅವುಗಳಿಗೆ ಸರಿಸಮಾನವಾದ ಶೀಲವೇ ಅವರಲ್ಲಿರುವ ಒಳ್ಳೆಯತನ ಮತ್ತು ಧೈರ್ಯ. ಜನಗಳು ನನ್ನನ್ನು ಈಗ ಮುತ್ತುತ್ತಿರುವರು. ತಮ್ಮ ದೇಹದ ಆಸೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಬಲ್ಲ ಮನುಷ್ಯರು ಇರುವರು ಎಂದು ನೂರಾರು ಜನರಿಗೆ ಈಗ ಸ್ಥಿರವಾಗಿ ಗೊತ್ತಾಗಿದೆ. ಈ ಮಹಾ ಆದರ್ಶಗಳಿಗೆ ಪೂಜ್ಯತೆ ಮತ್ತು ಗೌರವ ದಕ್ಕುತ್ತಿದೆ………..’ ಎಂದು ಉತ್ತರಿಸಿ ಪಾತಿವ್ರತ್ಯಕ್ಕೆ ಸಮನಾದ ಬೇರೊಂದು ಆದರ್ಶ ಅಮೆರಿಕ ಹೆಂಗಸರಲ್ಲಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. (೧೭/೨/೧೮೯೬-ಅಳಸಿಂಗ ಪೆರುಮಾಳ್)
ಸಾಧಾರಣ ಮೈಕಟ್ಟಿನ ಭಾರತೀಯ ಹೆಂಗಸರಿಗಿಂತ ಎತ್ತರದ ನಿಲುವು ಮತ್ತು ಬಲಿಷ್ಟ ಮೈಕಟ್ಟಿನ ಯುರೋಪಿನ ಹಲವು ರಕ್ತಗಳ ಕಲಬೆರೆಕೆಯಾಗಿದ್ದ ಬಿಳಿ ತೊಗಲಿನ ಅಮೆರಿಕನ್ ಹೆಂಗಸರು ಸ್ವಾಮಿಗಳನ್ನು ಮೋಡಿಗೊಳಿಸಿದ್ದರಲ್ಲಿ ಯಾವುದೇ ಸೋಜಿಗವಿರಲಿಲ್ಲ. ೫/೯/೧೮೯೪ ರಂದು ಮನ್ಮಥನಾಥ ಭಟ್ಟಾಚಾರ್ಯನಿಗೆ ಬರೆದ ಪತ್ರದಲ್ಲಿ ಸ್ವಾಮಿಗಳು ಅಮೆರಿಕನ್ ಹೆಂಗಸರ ಬಗ್ಗೆ ಹೊಂದಿದ್ದ ಅಂತರಂಗದ ಅಭಿಪ್ರಾಯಗಳು ಎದ್ದು ಕಾಣುತ್ತವೆ. ‘ ಈ ದೇಶದ ಹೆಂಗಸರ ಬಗ್ಗೆ ನನಗೆ ಬಹಳ ಆದರವಿದೆ. ಈವರೆಗೆ ಮದುವೆಯಾಗದ ಹುಡುಗಿಯರಲ್ಲಿ ಸಚ್ಛಾರಿತ್ರಳಲ್ಲದ ಒಬ್ಬ ಹುಡುಗಿಯನ್ನೂ ನಾನು ನೋಡಿಲ್ಲ. …….. ಅವರ ಪ್ರಣಯಾಸಕ್ತ ಸ್ವಭಾವ ಎನ್ನುವ ಸಣ್ಣ ದೋಷವನ್ನು ಬಿಟ್ಟರೆ ನಮ್ಮ ‘ಕೋತಿ’ಗಳು ಅವರ ಸನಿಹ ಬರಲು ಅರ್ಹರಲ್ಲ. ಸೊರಗಿರುವ ಒಣಗಿದ ಹಣ್ಣಿನಂತಿರುವ ಭಾರತದಲ್ಲಿ ನೀನು ಕಾಣುವ ಆ ಪಾಶ್ಚಾತ್ಯ ಹೆಂಗಸರು ಇಂಗ್ಲಿಷರು. ಯುರೋಪಿನಲ್ಲಿ ಇಂಗ್ಲಿಷರು ಕುರೂಪಿ ಜನಾಂಗ. ಅಮೆರಿಕದಲ್ಲಿ ಯುರೋಪಿನ ಅತ್ಯುತ್ತಮ ಜನಾಂಗಗಳ ರಕ್ತ ಬೆರೆತಿವೆ. ಆದ್ದರಿಂದ ಅಮೆರಿಕ ಹೆಂಗಸರು ಅಪ್ರತಿಮ ಸುಂದರಿಯರು. ಅಬ್ಬಾ ಅವರು ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ! ಹೆತ್ತ ನಂತರವೂ ಹೆಣ್ಣು ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಬಲ್ಲಳೇ ?........ ನಮ್ಮ ದೇಶದ ಅತ್ಯಂತ ಸುಂದರಿಯೂ ಇವರ ಮುಂದೆ ಕರಿಗೂಬೆಯಂತೆ ಕಾಣುತ್ತಾಳೆ. ಆದರೂ ಪಂಜಾಬಿನ ಹೆಣ್ಣುಗಳಿಗೆ ಅತ್ಯುತ್ತಮ ಮೈಮಾಟವಿದೆಯೆಂದು ಹೇಳಬಹುದು. …’ ಎಂದು ತಮಗಿರುವ ಹೆಂಗಸಿನ ಮೈಮಾಟದ ಜ್ಞಾನವನ್ನು ಬಿಚ್ಚಿಟ್ಟಿದ್ದರು. ಸ್ವಾಮಿಗಳ ಪತ್ರಗಳಲ್ಲಿರುವ ಅಮೆರಿಕದ ಹೆಂಗಸರ ಗುಣಗಾನ ಗುರುಭಾಯಿಗಳಲ್ಲಿ , ರಾಮಕೃಷ್ಣರ ಗೃಹಸ್ಥ ಭಕ್ತರಲ್ಲಿ ಅನುಮಾನದ ಕಾರ್ಮೋಡಗಳನ್ನೆಬ್ಬಿಸಿ ೧೮೯೪ರ ಮಾರ್ಚ್ ವೇಳೆಗೆ ಸ್ವಾಮಿಗಳು ತಮ್ಮ ಬ್ರಹ್ಮಚರ್ಯ ಕಳೆದುಕೊಳ್ಳುವರೇನೋ ಎನ್ನುವ ಭಯವಾಗಿ ಮಾರ್ಪಟ್ಟಿದ್ದಿತು.
ಸ್ವಾಮಿಗಳು ಅಮೆರಿಕಕ್ಕೆ ಹೋದ ಆರಂಭದಲ್ಲಿ ಮತ್ತು ಅವಕಾಶ ಒದಗಿ ಬಂದಾಗಲೆಲ್ಲ ಭಾರತೀಯ/ಹಿಂದೂಗಳ ಸಾಮಾಜಿಕ, ಧಾರ್ಮಿಕ ನೈತಿಕ ವಿಷಯಗಳ ಬಗ್ಗೆ ಭಾಷಣ ಮಾಡುತ್ತಿದ್ದರು. ಷಿಕಾಗೊ ವುಮೆನ್ಸ್ ಬಿಲ್ಡಿಂಗ್-ಕಂಡೀಷನ್ಸ್ ಆಫ್ ವುಮೆನ್ ಆಫ್ ಇಂಡಿಯಾ (೧೪/೯/೧೮೯೩) , ಡೆಟ್ರಾಯಿಟ್ ಯೂನಿಟೆರಿಯನ್ ಚರ್ಚ್ (೨೪/೩/೧೮೯೪) ಮತ್ತು ಕೇಂಬ್ರಿಜ್-‘ರಜಪೂತ್ ವುಮೆನ್ ಅಂಡ್ ಐಡಿಯಲ್ಸ್ ಆಫ್ ಮದರ್'ಹುಡ್ ಇನ್ ಇಂಡಿಯಾ’ (೧೭/೧೨/೧೮೯೪) , ನ್ಯೂಯಾರ್ಕ್, ಪೌಚ್ ಮ್ಯಾನ್ಷನ್- ಐಡಿಯಲ್ಸ್ ಆಫ್ ವುಮನ್'ಹುಡ್ (೨೦/೧/೧೮೯೫) , ಲಾಸ್ ಏಂಜೆಲೆಸ್’ , ಷೇಕ್ಸ್’ಪಿಯರ್ ಕ್ಲಬ್ ‘ವುಮೆನ್ ಆಫ್ ಇಂಡಿಯಾ’ (೧೮/೧/೧೯೦೦) ಭಾಷಣಗಳಲ್ಲಿ ಭಾರತದ ಹೆಂಗಸರ ಬಗ್ಗೆ ವಿಶೇಷವಾಗಿ ಮಾತನಾಡಿದ್ದರು. ಇದಲ್ಲದೆ ಮೆಟ್'ಕಾಫ್ (೨೨/೮/೧೮೯೩) , ಅನ್ನಿಸ್ಕ್ವಾಮ್’ನಲ್ಲಿ (೨೭/೮/೧೮೯೩) , ಸಲೆಂ (೨೮/೮/೧೮೯೩ , ೩/೯/೧೮೯೩) , ಸ್ಟ್ರೀಟರ್ (೭/೧೦/೧೮೯೩) , ಡೆ ಮೊಯಿನ್ಸ್ (೩೦/೧೧/೧೮೯೩) , ಮಿನ್ನೆಪೊಲಿಸ್ (೧೪/೧೨/೧೮೯೩) , ಮೆಂಫಿಸ್ (೨೦/೧/೧೮೯೪) , ಡೆಟ್ರಾಯಿಟ್ (೧೪/೨/೧೮೯೪) , ವಾಲ್’ಪರೈಸೊ (೨೭/೨/೧೮೯೪) , ನಾರ್ಥಂಪ್ಟನ್ (೧೪/೪/೧೮೯೪), ಲಿನ್ (೧೭/೪/೧೮೯೪) , ಬೋಸ್ಟನ್ (೧೪, ೧೫ /೫/೧೮೯೪) , ಮ್ಯಾಗ್ನೋಲಿಯ (೨೪/೮/೧೮೯೪) , ಮೆಲ್’ಸೋರ್ (೧/೧೦/೧೮೯೪) , ನ್ಯೂಯಾರ್ಕ್ (೭/೪/೧೮೯೫) , ಸ್ಯಾನ್ ಫ್ರಾನ್ಸಿಸ್ಕೊ (೧೯/೩/೧೯೦೦, ೨/೪/೧೯೦೦ ) ಪಟ್ಟಣ/ನಗರಗಳಲ್ಲಿ ಭಾರತೀಯ ಸಾಮಾಜಿಕ ವ್ಯವಸ್ಥೆ , ಆಚರಣೆ , ಆದರ್ಶಗಳನ್ನು ಕುರಿತಾಗಿ ವಿವಿಧ ಶೀರ್ಷಿಕೆಗಳಡಿಯಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಿದ್ದರು. ಇವುಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯ ಹೆಂಗಸರ ಪ್ರಸ್ತಾಪ ಇದ್ದೇ ಇರುತ್ತಿದ್ದಿತು. ಒಮ್ಮೆ ಭಾಷಣದಲ್ಲಿ ಭಾರತದಲ್ಲಿ ಹೆಂಗಸರಿಗೆ ಬಹಳ ಗೌರವ ಇರುವುದರಿಂದ ಅವರನ್ನು ಪ್ರತ್ಯೇಕವಾಗಿರಿಸಲಾಗಿದೆ. ಎಂದಿದ್ದರು. ಇನ್ನೊಮ್ಮ ಸತಿ ಪದ್ದತಿಯ ಬಗ್ಗೆ ಪ್ರತಿಕ್ರಿಯೆ ನೀಡುತ್ತ ಗಂಡನನ್ನು ಅತಿಶಯವಾಗಿ ಪ್ರೀತಿಸುತ್ತಿದ್ದುದರಿಂದ ಹೆಂಡತಿ ಆತನ ಸಾವಿನ ನಂತರ ಜೀವಿಸುವ ಆಸೆಯನ್ನು ಕಳೆದುಕೊಂಡು ಚಿತೆಯೇರುತ್ತಿದ್ದರು. ಮದುವೆಯಲ್ಲಿ ಒಂದಾದ ಅವರು ಸಾವಿನಲ್ಲಿಯೂ ಒಂದಾಗಿರುತ್ತಿದ್ದರು ಎನ್ನುವ ಸಮರ್ಥನೆ ನೀಡಿದ್ದರು
ಅಮೆರಿಕದ ಹೆಂಗಸರ ಮೋಡಿಗೆ ಒಳಗಾಗಿ ಲಕ್ಷ್ಮೀ , ಸರಸ್ವತಿ , ದೇವಿ ಎಂದು ಕರೆದಿದ್ದ ಸ್ವಾಮಿಗಳು ಅನಿವಾರ್ಯವಾಗಿ ಹಿಂದೂ ಧರ್ಮ ಮತ್ತು ಅದರಲ್ಲಿ ಹೆಂಗಸರ ಸ್ಥಾನವನ್ನು ಉದಾತ್ತಗೊಳಿಸಿ ವೈಭವೀಕರಿಸಬೇಕಾಗಿದ್ದಿತು. ಹಾಗಲ್ಲದೆ ಹೋಗಿದ್ದರೆ ಸ್ವಾಮಿಗಳು ಪ್ರತಿಪಾದಿಸುತ್ತಿದ್ದ ಹಿಂದೂಧರ್ಮ ಮತ್ತು ವೇದಾಂತ ಮತ್ತು ಅದರ ಫಲವಾದ ಸಾಮಾಜಿಕ ವ್ಯವಸ್ಥೆ ಹೆಂಗಸರನ್ನು ಎರಡನೇ ದರ್ಜೆಗೆ ಇಳಿಸಿವೆ ಎನ್ನುವುದನ್ನು ಒಪ್ಪಬೇಕಾಗುತ್ತಿದ್ದಿತು. ಒಂದು ಕಡೆ ಅಮೆರಿಕನ್ ಹೆಂಗಸರ ಚೆಲುವು , ಲಕ್ಷಣ , ಕ್ರಿಯಾಶೀಲತೆಯೊಂದಿಗೆ ಭಾರತದ ಹೆಂಗಸರನ್ನು ಹೋಲಿಸಿ ಕಾಗೆ .ಕರಿಗೂಬೆ ಎಂದು ಕರೆದಿದ್ದರು ಇನ್ನೊಂದು ಕಡೆ ಹೆಣ್ಣನ್ನು ಸಹಜವಾಗಿ ಕಾಣದೆ ತಾಯಿಯಂತೆ ದೇವಿಯಂತೆ ಕಾಣುವ ಅವರ ಗುರುವಿನ ಚಿಂತನೆ ಬಳುವಳಿಯಾಗಿ ಬಂದಿದ್ದಿತು. ಈ ಎರಡು ಪರಸ್ಪರ ವೈರುಧ್ಯಗಳಿಗೆ ಸಿಲುಕಿದ ಸ್ವಾಮಿಗಳಲ್ಲಿ ದ್ವಂದ್ವ ತುಂಬಿ ತುಳುಕುತ್ತಿದ್ದಿತು. ಅಮೆರಿಕ ಹೆಂಗಸರು ಸ್ವಾಮಿಗಳ ನಿಲುವು , ಮಾತು , ಮಾರ್ದವತೆ , ಶಿವೋಹಂ ಎನ್ನುವ ನಿಗೂಢ ಉದ್ಗಾರಗಳಿಗೆ ಮಾರುಹೋದಂತೆ ಸ್ವಾಮಿಗಳು ಅಮೆರಿಕದ ಹೆಂಗಸರ ಸ್ವತಂತ್ರ ಮನೋಭಾವ , ಕಾರ್ಯಸಿದ್ಧಿ , ದಿಟ್ಟತನಗಳಿಗೆ ಅದಕ್ಕಿಂತಲೂ ಹೆಚ್ಚು ಮಾರು ಹೋಗಿದ್ದರು. ಸ್ವಾಮಿಗಳು ಅಮೆರಿಕದ ಹೆಂಗಸರ ‘ನೆಚ್ಚಿನ ವ್ಯಕ್ತಿ’ಯಾಗಿದ್ದರು ಅದರಂತೆ ಅಮೆರಿಕನ್ ಹೆಂಗಸರನ್ನು ಅವರು ನೆಚ್ಚಿದ್ದರು.
ಹೆಣ್ಣು , ಹೆಣ್ತನದ ಬಗ್ಗೆ ಸ್ವಾಮಿಗಳ ಧೋರಣೆ ಆರಾಧನೆ , ಪೂಜ್ಯತೆಯಿಂದ ಪ್ರಾರಂಭವಾಗಿ ಸಂಪೂರ್ಣ ಅವಗಣನೆಗೆ ತಿರುಗಿ ನಿರ್ಲಕ್ಷ್ಯದವರೆಗೂ ಹರಡಿದ್ದಿತು. ಸ್ವಾಮಿಗಳು ಭಾರತೀಯ ಸ್ನೇಹಿತ , ಶಿಷ್ಯ , ಅಭಿಮಾನಿಗಳಿಗೆ ಬರೆದ ತಮ್ಮ ಹತ್ತಾರು ಪತ್ರಗಳಲ್ಲಿ ಅಮೆರಿಕದ ಹೆಣ್ಣನ್ನು ಹೊಗಳಿ, ಅಮೆರಿಕದಲ್ಲಿ ಮಾಡುತ್ತಿದ್ದ ಭಾಷಣಗಳಲ್ಲಿ ಭಾರತೀಯ ಹೆಂಗಸರ ಗುಣಗಳನ್ನು ಉತ್ಪ್ರೇಕ್ಷಿಸಿ , ತಾಯ್ತನವನ್ನು ಅಸಾಮಾನ್ಯಗೊಳಿಸಿ ಭೋರ್ಗರೆಯುತ್ತಿದ್ದರಾದರೂ ಹೆಣ್ಣನ್ನು ಕುರಿತಾಗಿ ಅವರ ಮನಸ್ಸು ತಾಕಲಾಟಗಳ ಮೈದಾನವಾಗಿದ್ದಿತು. ಅಲ್ಲಿ ಒಮ್ಮೆ ಅಮೆರಿಕನ್ ಹೆಣ್ಣಿನ ಕೈ (ಮಿಸೆಸ್ ಅಮೆರಿಕ) ಮೇಲಾದರೆ ಮತ್ತೊಮ್ಮೆ ಭಾರತೀಯ ತಾಯಿ (ಮದರ್ ಇಂಡಿಯಾ) ಗೆಲುವಿನ ನಗೆ ಬೀರುತ್ತಿದ್ದಳು. ಶ್ರೀಮತಿ ಪಾಟರ್ ಪಾಮರ್ ೧೪/೯/೧೮೯೩ ರಂದು ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಹಿಂದೂ ಹೆಂಗಸರು ಜಗತ್ತಿನ ಬೇರೆ ಯಾವುದೇ ಹೆಂಗಸರಿಗಿಂತ ಹೆಚ್ಚು ಅಧ್ಯಾತ್ಮದ ಒಲವುಳ್ಳವರು ಎಂದು ಘೋಷಿಸಿದ್ದರು (77). ಅಮೆರಿಕದಲ್ಲಿ ಭಾರತೀಯರ ಆದರ್ಶ ತಾಯಿ ಎಂದು ಕನಿಷ್ಟ ೨೦ ಸಾರ್ವಜನಿಕ ಭಾಷಣಗಳನ್ನು ಮಾಡಿದ್ದರು. ಹೆಣ್ಣು ಉತ್ತೇಜಿಸುವ ಹೆಂಡತಿಯಾದ ನಂತರವೇ ತಾಯಿಯಾಗಬಲ್ಲಳು ಎನ್ನುವ ವಾಸ್ತವಕ್ಕೆ ಕುರುಡಾಗಿದ್ದರು. ಅಮೆರಿಕನ್ನರು ಹೆಂಗಸರ ಸೌಂದರ್ಯವನ್ನು ಪ್ರೀತಿಸುತ್ತಾರೆಯೇ ಹೊರತು ಹೆಣ್ಣನ್ನಲ್ಲ ಎಂದು ಛೇಡಿಸುತ್ತ ಭಾರತೀಯ ಗಂಡಸರು ಹೆಣ್ಣನ್ನು ಆ ದೃಷ್ಟಿಯಲ್ಲಿ ನೋಡುವುದೇ ಇಲ್ಲ ಎಂದು ಪ್ರತಿಪಾದಿಸಲು ಯತ್ನಿಸುತ್ತ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದರು. ಮನ್ಮಥನಾಥ ಭಟ್ಟಾಚಾರ್ಯರಿಗೆ ಪತ್ರ ಬರೆಯುವದಕ್ಕಿಂತ ಕೆಲ ತಿಂಗಳ ಹಿಂದೆ ಡೆಟ್ರಾಯಿಟ್’ನಲ್ಲಿ ಹೊಲದಲ್ಲಿರುವ ಒಬ್ಬ ಹಿಂದೂ ಹೆಣ್ಣನ್ನು ನೋಡುವುದೆಂದರೆ ಒಮ್ಮೆ ಸ್ತಬ್ದವಾಗಿ ನಿಂತು ಅಂತಹ ಚೆಲುವನ್ನು ಸೃಜಿಸಿದ ದೇವರ ಚಳಕವನ್ನು ಮೆಚ್ಚುವುದಾಗಿದೆ‘ ಎಂದಿದ್ದರೆಂದು ಡೆಟ್ರಾಯಿಟ್ ಟ್ರಿಬ್ಯೂನ್–೧/೪/೧೮೯೪- ವರದಿ ಮಾಡಿತು. (78). ಸೆಪ್ಟೆಂಬರ್’ನಲ್ಲಿ ಮನ್ಮಥನಾಥ ಭಟ್ಟಾಚಾರ್ಯರಿಗೆ ಪತ್ರ ಬರೆಯುವ ವೇಳೆಗೆ ಅವರ ಚಿಂತನೆಗಳು ವಿರುದ್ಧ ದಿಕ್ಕಿಗೆ ತಿರುಗಿ ಭಾರತದ ಅಪ್ರತಿಮ ಸುಂದರಿಯೂ ಅಮೆರಿಕನ್ ಹೆಣ್ಣಿನ ಮುಂದೆ ಕರಿಗೂಬೆಯಾಗಿದ್ದಳು.
೧೭/೩/೧೮೯೪ ಡೆಟ್ರಾಯಿಟ್ ಟ್ರಿಬ್ಯೂನ್ ವರದಿಗಾರನಿಗೆ ನೀಡಿದ ಸಂದರ್ಶನದಲ್ಲಿ ಭಾರತದಲ್ಲಿ ವಂಶಪಾರಂಪರ್ಯ ವೇಶ್ಯಾಪದ್ದತಿಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತ ‘ಒಬ್ಬ ಹೆಂಗಸು ಸಚ್ಚಾರಿತ್ರ್ಯದವಳಲ್ಲ ಎಂದು ಗೊತ್ತಾದ ತಕ್ಷಣ ಆಕೆಯನ್ನು ಜಾತಿಯಿಂದ ಹೊರ ಹಾಕಲಾಗುತ್ತದೆ. ಆ ನಂತರ ಯಾರೊಬ್ಬರು ಆಕೆಯನ್ನು ಮುಟ್ಟುವಂತಿಲ್ಲ ಮತ್ತು ಮಾತನಾಡುವಂತಿಲ್ಲ…….. ಭಾರತೀಯ ಸಮಾಜದಲ್ಲಿ ಸಚ್ಛಾರಿತ್ರ್ಯ ಹೊಂದಿರದ ಹೆಂಗಸರೇ ಇಲ್ಲ ‘ ಧೃಢ ಮಾತಿನಲ್ಲಿ ಹೇಳಿದ್ದರು. (78) ರಾಮಕೃಷ್ಣರ ಜಯಂತಿ ಉತ್ಸವದಲ್ಲಿ ಕಲ್ಕತ್ತದ ಸೂಳೆಯರು ಭಾಗವಹಿಸಿದ್ದರು. ಹಾಗೆ ಭಾಗವಹಿಸಲು ಅವಕಾಶ ಕೊಟ್ಟಿದ್ದು ತಪ್ಪೇ ? ಹಾಗೆ ಮಾಡಿದ್ದೇ ಆದರೆ ಜನ ನಮ್ಮ ಬಗ್ಗೆ ಏನು ತಿಳಿಯುತ್ತಾರೆ ಎನ್ನುವ ಪ್ರಶ್ನೆಗಳನ್ನು ರಾಮಕೃಷ್ಣಾನಂದ ಎತ್ತಿದ್ದರು. ರಾಮಕೃಷ್ಣರ ಉತ್ಸವದಲ್ಲಿ ಭಾಗಿಗಳಾಗಲು ಎಲ್ಲರಿಗೂ ಅವಕಾಶವಿರಲಿ. ಕೆಲ ಸ್ವಯಂ ಸೇವಕರು ಎಲ್ಲಿಯೂ ಯಾರೂ ಅಸಭ್ಯ ನಡವಳಿಕೆ ತೋರದಂತೆ ಕಣ್ಗಾವಲಿಟ್ಟಿರಲಿ ಎನ್ನುವ ಪರಿಹಾರವನ್ನು ಸ್ವಾಮಿಗಳು ಸೂಚಿಸಿದರು. (೨೩/೮/೧೮೯೬). ಶಿಷ್ಯ ಶರಚ್ಚಂದ್ರ ಚಕ್ರವರ್ತಿಗೆ ಹೆಂಗಸರು ತಮ್ಮ ಭಾಷಣ ಕೇಳಿ ಲೈಂಗಿಕವಾಗಿ ಉದ್ರೇಕಗೊಳ್ಳುತ್ತಿದ್ದರೆಂದು ತಿಳಿಸಿದ್ದರು. (79) ಬೋಸ್ಟನ್ ಡೈಲಿ ಗ್ಲೋಬಲ್-೨೪/೩/೧೮೯೬- ಸಂದರ್ಶನದಲ್ಲಿ ಬೋಸ್ಟನ್ ಹೆಂಗಸರು ಕುತ್ಸಿತ ಬುದ್ದಿಯವರು , ಚಂಚಲರು ಮತ್ತು ಅಪ್ರಾಮಾಣಿಕರೆಂದು ಭಾಷಣದಲ್ಲಿ ಹೀಗಳೆದಿದ್ದರು. (80) ಬೋಸ್ಟನ್ ಹೆಂಗಸರು `ಸದಾ ಖಯಾಲಿ, ಚಂಚಲ ಮನಸ್ಸಿನವರಾಗಿದ್ದು ವಿಚಿತ್ರ ಮತ್ತು ಹೊಸದಾಗಿ ಕಾಣುವುದರ ಬೆನ್ನು ಹತ್ತುತ್ತಾರೆ ಎನ್ನುವ ತೀರ್ಮಾನ ನೀಡಿದ್ದರು. (81).
ಸ್ವಾಮಿಗಳು ಅಮೆರಿಕ ಹೆಂಗಸರ ಬಗ್ಗೆ ತಳೆದಿದ್ದ ಅಭಿಪ್ರಾಯ ಒಂದೇ ರೀತಿಯಾಗಿರದೆ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿದ್ದಿತು. ಅಮೆರಿಕದ ಹೆಂಗಸರು ಡಯಾನ ವಿಗ್ರಹದ ಮೇಲಿನ ಹಿಮಮಣಿಯಷ್ಟು ಪರಿಶುದ್ಧರೆನ್ನುವ ತಮ್ಮ ಹೇಳಿಕೆಯನ್ನು ಮರೆತು ಇನ್ನೊಮ್ಮೆ ಭೋಗವಾದಿಗಳೆಂದು ಕರೆದಿದ್ದರು. ಆವೇಶಭರಿತರಾಗಿ ಡೆಟ್ರಾಯಿಟ್ ಒಪೆರಾ ಹೌಸ್’ನಲ್ಲಿ ಮಾಡಿದ ಭಾಷಣದಲ್ಲಿ ‘ ಉತ್ತಮ ಉಡುಗೆ , ಸಂಪತ್ತು , ಶ್ರೀಮಂತ ಕೂಟ, ಒಪೆರಾ , ಕಾದಂಬರಿಗಳನ್ನು ಹೊರತಾಗಿ ಅಮೆರಿಕ ಹೆಂಗಸರಲ್ಲಿ ಹೇಳಿಕೊಳ್ಳುವಂತಹುದು ಏನಿದೆ ? ಅಮೆರಿಕನ್ ಹೆಂಗಸರಲ್ಲಿ ಒಂದು ಡಝನ್ ಅಧ್ಯಾತ್ಮಿಕ ವ್ಯಕ್ತಿಗಳನ್ನು ತೋರಿಸಿರಿ ಎನ್ನುವ ಸವಾಲನ್ನು ಎಸೆದು ಇವೆಲ್ಲವುಗಳೊಂದಿಗೆ ಅಧ್ಯಾತ್ಮಿಕತೆಯೂ ಇರಬೇಕು. ಪಾಶ್ಚಾತ್ಯ ದೇಶಗಳಲ್ಲಿ ಅದಿಲ್ಲ. ಅಂತಹ ಅಧ್ಯಾತ್ಮಿಕ ಹೆಂಗಸರು ಭಾರತದಲ್ಲಿ ವಾಸಿಸುತ್ತಾರೆ’ ಎಂದಿದ್ದರು. (82). ೧೮೯೬ ಫೆಬ್ರವರಿ-ಮಾರ್ಚ್’ನಲ್ಲಿ ಸ್ವಾಮಿಗಳು ಅಮೆರಿಕದ ಹೆಂಗಸರು ಖಯಾಲಿಗಳು , ಚಂಚಲರು , ವಿಚಿತ್ರ ಮತ್ತು ಹೊಸತರ ಬೆನ್ನು ಹತ್ತಿರುವವರು ಎಂದು ಹೇಳಿದ್ದಾರೆನ್ನುವ ವಿವಾದ ಎದ್ದಿದ್ದಿತು. ೨೪/೩/೧೮೯೬ ರಂದು ಬೋಸ್ಟನ್ ಡೈಲಿ ಗ್ಲೋಬಲ್’ಗೆ ನೀಡಿದ ಸಂದರ್ಶನದಲ್ಲಿ ಸ್ವಾಮಿಗಳು ‘ನಾನು ಹಾಗೆ ಹೇಳಿಲ್ಲ. ಅವರು ಜಾಣರು ಆದರೆ ಅವರಿಗೆ ಸ್ಥಿರಬುದ್ಧಿ , ಗಾಂಭೀರ್ಯ ಮತ್ತು ಪ್ರಾಮಾಣಿಕರಲ್ಲ ‘ ಎನ್ನುವ ಅಭಿಪ್ರಾಯ ತಿಳಿಸಿದ್ದೆ ಎಂದು ಉತ್ತರಿಸಿದರು. (83) ‘ ಅಮೆರಿಕ ಹೆಂಗಸರ ಸ್ವಭಾವ ಹರಟೆ ಮತ್ತು ಅಪಪ್ರಚಾರ . ಅವು ಇಂಗ್ಲೆಂಡ್’ನಲ್ಲಿ ಇಲ್ಲವೇ ಇಲ್ಲ ಎನ್ನಬಹುದು, ಇಂಗ್ಲಿಷ್ ಹೆಂಗಸರು ನಿಧಾನ , ಆದರೆ ಒಂದು ಕೆಲಸಕ್ಕೆ ಕೈ ಹಾಕಿದರೆ ಅದನ್ನು ಬಿಡುವುದಿಲ್ಲ ‘ ಎನ್ನುವ ಅಭಿಪ್ರಾಯ ಮೇರಿ ಹೇಲ್ ಮುಂದಿರಿಸಿದ್ದರು. (೬/೧/೧೮೯೬). ೨೯/೭/೧೮೯೭ ರಂದು ಭಾರತಕ್ಕೆ ಬರಲು ಮಾರ್ಗರೆಟ್ ನೊಬೆಲ್’ಗೆ ಒಪ್ಪಿಗೆ ನೀಡುತ್ತ ‘ನಿನಗೆ ಸ್ವಾಗತ ..ಭಾರತೀಯರಿಗೆ ಅದರಲ್ಲೂ ಹೆಂಗಸರಿಗೆ ಕೆಲಸ ಮಾಡಲು ಬೇಕಾಗಿರುವುದು ಗಂಡಲ್ಲ-ಹೆಣ್ಣು. ನೀನು ನಿಜವಾದ ಹೆಣ್ಣುಸಿಂಹ……..ಭರತಖಂಡ ಇನ್ನೂ ಮಹಾಮಹಿಳೆಯರನ್ನು ಹೆತ್ತಿಲ್ಲ. ಬೇರೆ ದೇಶಗಳಿಂದ ಅವರನ್ನು ಎರವಲು ಪಡೆಯಬೇಕಾಗಿದೆ. ನಿನ್ನ ವಿದ್ಯೆ , ನಿಷ್ಕಾಪಟ್ಯ, ಪಾವಿತ್ರ್ಯತೆ , ಅನಂತ ಪ್ರೀತಿ , ಸ್ಥಿರ ಸಂಕಲ್ಪ , ಎಲ್ಲಿಕ್ಕಿಂತ ಹೆಚ್ಚಾಗಿ ನಿನ್ನಲ್ಲಿ ಹರಿಯುತ್ತಿರುವ ಸೆಲ್ಟ್ ಜನಾಂಗದ ರಕ್ತ –ಇವು ನಿನ್ನನ್ನು ನಮಗೆ ಬೇಕಾದ ಮಹಿಳೆಯನ್ನಾಗಿ ಮಾಡಿವೆ ‘ ಎನ್ನುತ್ತ ತಾವೇ ಹಾಡಿ ಹೊಗಳುತ್ತಿದ್ದ ಯಾಜ್ಞವಲ್ಕ್ಯನ ಹೆಂಡತಿ ಮೈತ್ರೇಯಿ , ಲೀಲಾವತಿ , ಮೀರಾ ಬಾಯಿಯರನ್ನು ಬದಿಗೆ ಸರಿಸಿದರು.
ಬಂಗಾಳಿ ಭದ್ರಲೋಕದಲ್ಲಿ ಹೆಣ್ಣನ್ನು ತ್ಯಾಗಮಯಿ ತಾಯಿ ಅಥವಾ ಭೋಗಾಸಕ್ತ ಕಾಮಿನಿ ಎನ್ನುವ ಎರಡು ಅತಿರೇಕಗಳಲ್ಲಿ ಕಾಣುವುದು ಸಹಜವಾಗಿದ್ದಿತು. ಸ್ವಾಮಿಗಳ ನಂಬಿಕೆಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ. ಈ ಎರಡು ವಿರುದ್ಧ ಧೃವಗಳ ನಡುವೆ ಓಲಾಡುತ್ತಿದ್ದ ಸ್ವಾಮಿಗಳಲ್ಲಿ ಪವಿತ್ರರು , ಪುರುಷರು ಸಾಧಿಸಬೇಕಾದ ಅಧ್ಯಾತ್ಮ ಗುರಿಗೆ ಹೆಣ್ಣು ಅಡ್ದಿ ಎನ್ನುವ ನಂಬಿಕೆ ಬೆಳೆದಿದ್ದಿತು. ರಾಮಕೃಷ್ಣಾನಂದರಿಗೆ ..ಬಿಳಿಗಿರಿಗೆ ಇಬ್ಬರು ವಿಧವೆ ಮಕ್ಕಳಿದ್ದಾರೆ. ಅವರನ್ನು ವಿದ್ಯಾವಂತರನ್ನಾಗಿ ಮಾಡು. ಅವರಿಂದ ಇತರ ವಿಧವೆಯರಿಗೆ ನಮ್ಮ ಧರ್ಮದ ಪರಿಚಯವಾಗಲಿ. ಆದರೆ ಈ ಕೆಲಸಗಳನ್ನೆಲ್ಲ ಬಹಳ ದೂರದಿಂದ ಮಾಡಬೇಕು. ಯುವತಿಯರ ಹತ್ತಿರ ಜಾಗರೂಕರಾಗಿರಬೇಕು. ನೀನೊಮ್ಮೆ ಭ್ರಷ್ಟನಾದರೆ ಬೇರೆ ದಾರಿಯೇ ಇಲ್ಲ. ಈ ಪಾಪ ಅಕ್ಷಮ್ಯ. ರಾಧಾಕೃಷ್ಣರ ದಿವ್ಯ ಪ್ರೇಮ ಬೋಧಿಸುವ ಅವಶ್ಯಕತೆಯಿಲ್ಲ ಎಂದು ಎಚ್ಚರಿಸಿದ್ದರು. (೨೦/೪/೧೮೯೭). ಕಾಮನೆಗಳಿಂದ ಮುಕ್ತಳಾದಾಕೆ ತಾಯಿ , ಕಾಮನೆಗಳಿರುವಾಕೆ ಮಾಯಾವಿ ಎನ್ನುವ ಅಸಹಜ ವರ್ಗೀಕರಣ ಸ್ವಾಮಿಗಳ ಮನಸ್ಸಿನಲ್ಲಿ ಬೇರೂರಿದ್ದಿತು. ಪರಿಶುದ್ಧ ಚಿಂತನೆ ಪಾತಿವ್ರತ್ಯದ ಫಲ-ಅದರಂತೆ ಎಲ್ಲ ಹೆಂಗಸರನ್ನು ತಾಯಿಯಂತೆ ಕಾಣುವ ದೃಷ್ಟಿ ಎಂದು ಸ್ಯಾನ್’ಫ್ರಾನ್ಸಿಸ್ಕೊದ ತುಂಬಿದ ಸಭೆಗಳಲ್ಲಿ ಘೋಷಿಸಿದ್ದರು. (84)
ಸ್ವಾಮಿಗಳು ಅಮೆರಿಕದಲ್ಲಿ ಭಾರತದ ಹೆಂಗಸರನ್ನು ಕುರಿತಾಗಿ ಭಾಷಣಗಳನ್ನು ಮಾಡುವಾಗ, ತಾಯಿ , ಅಕ್ಕ ,ತಂಗಿಯರ ರೂಪದಲ್ಲಿ ನನಗೆ ಹೆಣ್ಣಿನ ಅನುಭವವಿದೆ. ನಾನು ಸಂನ್ಯಾಸಿಯಾಗಿರುವುದರಿಂದ ಹೆಂಡತಿಯ ರೂಪದಲ್ಲಿ ಆಕೆಯ ಅನುಭವ ನನಗಿಲ್ಲ ಎನ್ನುತ್ತಿದ್ದರು. ೧೮/೧/೧೯೦೦ ರಂದು ಪಸಡೆನಾದ ಷೇಕ್ಸ್’ಸ್ಪಿಯರ್ ಕ್ಲಬ್’ನಲ್ಲಿ ಭಾರತದ ಹೆಣ್ಣನ್ನು ಕುರಿತಾಗಿ ಮಾಡಿದ’ ‘ವುಮೆನ್ ಆಫ್ ಇಂಡಿಯಾ’ ಭಾಷಣದ ಬಹುಭಾಗ ವಾಸ್ತವಗಳಿಗಿಂತ ದೂರದಲ್ಲಿದ್ದ ಸಂನ್ಯಾಸಿಯೊಬ್ಬನ ಬಡಬಡಿಕೆಯಾಗಿದ್ದಿತು. ಈ ಭಾಷಣದಲ್ಲಿ ತಾಯ್ತನದ ಆದರ್ಶವನ್ನು ಹೊಗಳಿದರು. ಪರೋಕ್ಷವಾಗಿ ಬಾಲ್ಯ ವಿವಾಹವನ್ನು ಸಮರ್ಥಿಸಿದರು. ‘ಭಾರತದಲ್ಲಿ ಯಾವ ಹೆಣ್ಣು ತನ್ನ ಮೈಯನ್ನು ಯಾರಿಗೂ ಅರ್ಪಿಸುವುದಿಲ್ಲ. ದೇಹ ಆಕೆಯದು. ಬ್ರಿಟಿಷರು ಭಾರತದಲ್ಲಿ ದಾಂಪತ್ಯ ಹಕ್ಕಿನ ಕಾನೂನನ್ನು ತಂದಿದ್ದಾರೆ. ಅದನ್ನು ಯಾವ ಭಾರತೀಯನೂ ಕೇಳಿರಲಿಲ್ಲ ….ಗಂಡ ತನ್ನ ಹೆಂಡತಿಯ ದೇಹ ಸಂಬಂಧ ಬಯಸುವಾಗ ಆಕೆ ಪ್ರಾರ್ಥನೆ , ವ್ರತ , ನಿಯಮಗಳ ಮೂಲಕ ಆ ಸಮಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುತ್ತಾಳೆ. ಏಕೆಂದರೆ ಯಾವುದು ಸಂತಾನಕ್ಕೆ ಕಾರಣವಾಗುವುದೋ ಅದು ಭಗವಂತನ ಪವಿತ್ರ ಕುರುಹು. ಒಳ್ಳೆಯದಕ್ಕೋ, ಕೆಟ್ಟದ್ದಕ್ಕೊ ಅದ್ಭುತ ಶಕ್ತಿಯಿಂದ ಸನ್ನದವಾಗಿ ಬರುವ ಮತ್ತೊಂದು ಜೀವಿಯ ಬರುವಿಕೆಗೆ ಗಂಡು-ಹೆಣ್ಣು ಮಾಡುವ ಪರಮ ಪ್ರಾರ್ಥನೆ ಅದು. ಇದೇನು ತಮಾಷೆಯೇ ? ಇದು ಮೈತಣಿಸುವ ಪಾಶವೀ ತೃಪ್ತಿ ಮಾತ್ರವೇ ? ಇಲ್ಲ ಸಾವಿರ ವೇಳೆ ಹಿಂದೂ ಇಲ್ಲವೆಂದು ಸಾರುವನು…..’ಎಂದು ಆವೇಶಭರಿತರಾಗಿ ಘೋಷಿಸಿದರು. ಭಾಷಣಕ್ಕೆ ಬಂದಿದ್ದ ಹೆಂಗಸರನ್ನು ಉದ್ದೇಶಿಸಿ ‘ ನೀವೆಲ್ಲ ಮಕ್ಕಳ ಹುಟ್ಟಿಗಾಗಿ ಪ್ರಾರ್ಥಿಸುವಿರೇನು ? ತಾಯಿಯಾಗಲು ನಿಮಗೆ ಸಂತೋಷ ಇಲ್ಲವೇ ? ತಾಯ್ತನದಿಂದ ನೀವು ಪವಿತ್ರರಾದೆವೆಂದು ಭಾವಿಸುವಿರೋ ಇಲ್ಲವೋ ? ಈ ಪ್ರಶ್ನೆಯನ್ನು ನೀವೇ ಹಾಕಿಕೊಳ್ಳಿ. ಹಾಗಿಲ್ಲದಿದ್ದರೆ ನಿಮ್ಮ ಮದುವೆ ಸುಳ್ಳು, ನಿಮ್ಮ ಹೆಣ್ತನ ಸುಳ್ಳು , ನಿಮ್ಮ ವಿದ್ಯೆ ಕೇವಲ ಕುರುಡು ನಂಬಿಕೆ. ಪ್ರಾರ್ಥನೆಯಿಲ್ಲದೆ ನಿಮ್ಮ ಮಕ್ಕಳು ಜಗತ್ತಿಗೆ ಬಂದರೆ ಅದು ಮಾನವಕೋಟಗೆ ಕೊಟ್ಟ ಒಂದು ಮಹಾ ಶಾಪ ‘ ಎನ್ನುತ್ತ ತಮ್ಮ ಕಾಲ್ಪನಿಕ ಆದರ್ಶದ ಅಳತೆಗೋಲಿನಲ್ಲಿ ಇಡೀ ಜಗತ್ತಿನ ಜನರೆಲ್ಲ ಶಾಪದ ಫಲವೇನೋ ಎನ್ನುವ ಅತಿರೇಕಕ್ಕೆ ಹೋದರು. (85)
ಇದೇ ಭಾಷಣದಲ್ಲಿ ‘ ಭಾರತದ ಆದರ್ಶ ಹೆಣ್ಣು ತಾಯಿ., ಆಕೆಯೇ ಮೊದಲು , ತಾಯ್ತನವೇ ಕೊನೆ . ಹೆಣ್ಣು ಎಂದಾಕ್ಷಣ ಭಾರತೀಯನ ಮನಸ್ಸಿಗೆ ಬರುವುದು ತಾಯಿಯೇ . ತಾಯಿ ಪೂಜ್ಯಾರ್ಹಳು ಏಕೆಂದರೆ ಮಗುವನ್ನು ಜಗತ್ತಿಗೆ ತರುವ ಸಂತಳು. ಮಗುವಿನ ನಿರೀಕ್ಷಣೆಯಲ್ಲಿ ಆಕೆಯ ಮೈ ಶುದ್ಧ , ಮನ ಶುದ್ಧ , ಊಟ ಶುದ್ಧ , ಬಟ್ಟೆ ಶುದ್ಧ , ಕಲ್ಪನೆಗಳು ಶುದ್ಧ ಎಂದಿದ್ದರು. ಅದೇ ಭಾಷಣದಲ್ಲಿ ಇನ್ನೊಂದು ಕಡೆ ‘ ಹೆಣ್ಣು ಎನ್ನುವ ಪದ ರಕ್ತ ಮಾಂಸಗಳ ಭೌತಿಕ ಮೂರ್ತ ರೂಪಕ್ಕೆ ಮಾತ್ರ ಅನ್ವಯಿಸಬೇಕೇನು ? ಎಂದು ನೆರೆದಿದ್ದ ಸಭಿಕರನ್ನು ಪ್ರಶ್ನಿಸಿದ್ದ ಸ್ವಾಮಿಗಳು ಮುಂದುವರೆದು ‘ ಓ ! ಹಿಂದೂ ಮನಸ್ಸು ಹೆಣ್ಣು ರಕ್ತ ಮಾಂಸಗಳಿಗೆ ಲಗತ್ತಾಗಬೇಕೆನ್ನುವ ಎಲ್ಲ ಪರಿಕಲ್ಪನೆಗಳಿಗೆ ಬೆದರುತ್ತದೆ. ಇಲ್ಲ, ಇಲ್ಲ , ಹೆಣ್ಣೇ ರಕ್ತ ಮಾಂಸದೊಂದಿಗೆ ಸಂಬಂಧಿಸದ ಯಾವುದರೊಂದಿಗೂ ನಿನ್ನನ್ನು ಸಂಬಂಧಿಸಲಾಗದು. ಒಮ್ಮೆ ಪವಿತ್ರ ಎಂದು ಕರೆದಾದ ಮೇಲೆ ‘ತಾಯಿ’ ಎನ್ನುವ ಒಂದು ಶಬ್ದದ ಹೊರತಾಗಿ ಆ ಹೆಸರನ್ನು ಯಾವ ಪ್ರಲೋಭನೆಯ ಕಲ್ಪನೆಯೂ ಸಮೀಪಿಸದು , ಯಾವ ಭೋಗವೂ ಸನಿಹ ಸುಳಿಯಲಾರದು ಎಂದು ಉದ್ಗರಿಸಿದ್ದರು (85). ಶಿವ-ಶಕ್ತಿಯ ಬಗ್ಗೆ ಆವೇಶಭರಿತರಾಗಿ ವಿವರಿಸುತ್ತ ಶಿವ -ಈಗ ಭಾರತದಲ್ಲಿ ಎಲ್ಲರ ತಾಯಿಯಾಗಿರುವ-ತನ್ನ ಹೆಂಡತಿ ಶಕ್ತಿಗೆ ಶರಣಾಗಿರುವ ವಿಷಯ ತಿಳಿಸುತ್ತ, ಶಕ್ತಿಯ ಪೂಜೆ ಭಾರತದಲ್ಲಿ ಯಾವ ಮಟ್ಟಿಗೆ ಇದೆಯೆಂದರೆ ಯಾವುದೇ ಹೆಣ್ಣು ಪ್ರಾಣಿಯನ್ನೂ ಕೊಲ್ಲುವಂತಿಲ್ಲ ಎನ್ನುತ್ತ ಮುಕ್ತವಾಗಿ ಸಂಸ್ಕೃತದಲ್ಲಿ ಅದನ್ನು ಹೇಳುತ್ತ ಭಾಷಾಂತರಿಸಿದರು. ಹೀಗೆ ತಾಯಿ ಎಂದು ಕರೆದು ಹೆಂಗಸಿಗೆ ಶರಣಾಗುವ , ಕಾಳಿಗೆ ಉನ್ಮತ್ತನಾಗಿ ಅಡಿಯಾಗುವ ಮನೋಭಾವದ ಸ್ವಾಮಿಗಳು ಹೆಣ್ಣನ್ನು ಗಂಡಿನಂತೆ ವಾಸ್ತವಿಕ ಸತ್ಯವಾಗಿ ಪರಿಗಣಿಸುತ್ತಿರುವ ಎಲ್ಲ ಅನುಭವಗಳನ್ನು ಅಲ್ಲಗಳೆದಿದ್ದರು. (85 ,86). ರೋಡ್’ಹ್ಯಾಮೆಲ್ ಕನ್ಯೆ ಮೇರಿ ಮಗುವನ್ನು ಹೆತ್ತ ಬಗ್ಗೆ ಅಭಿಪ್ರಾಯ ಕೇಳಿದಾಗ ದೇವರ ಲೀಲೆ ಬಲ್ಲವರಾರು ಎನ್ನುವ ನುಣಚಿಕೊಳ್ಳುವ ಉತ್ತರ ನೀಡಿದ್ದರು. (87)
ಈ ಭಾಷಣ ಮುಗಿದ ಮೇಲೆ ಪ್ರಶ್ನೋತ್ತರ ಸಾಗಿತು. ಆಗ ಸ್ವಾಮಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಪಾಶ್ಚಾತ್ಯರಂತೆ ಭಾರತದಲ್ಲಿ ಮದುವೆಯ ಗುರಿ ದೈಹಿಕ ಸುಖವಾಗಿರದೆ ಬೇರೆಯಾಗಿದೆ ಎಂದು ಮದುವೆಯಾದ ಅನುಭವಿಯಂತೆ ಬಡಾಯಿ ಕೊಚ್ಚಿದರು. ಆಗ ಒಬ್ಬಾಕೆ ಈ ವಿಷಯದ ಬಗ್ಗೆ ಹೆಚ್ಚಿನ ಸ್ಪಷ್ಟನೆ ಬಯಸಿದಳು. ಇದರಿಂದ ಕೆರಳಿ ಕೆಂಡವಾದ ಸ್ವಾಮಿಗಳು ಆವೇಶಭರಿತರಾಗಿ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುತ್ತ ಬೆರಳ ಗೆಣಿಕೆಗಳು ಮುರಿದುಹೋಗುವಂತೆ ಗಟ್ಟಿಯಾಗಿ ಮೇಜಿಗೆ ಕುಟ್ಟಿ ‘ ಇಲ್ಲ ಮ್ಯಾಡಂ ರಾತ್ರಿಯ ಕಗ್ಗತ್ತಲಿನೊಳಗಿಂದ ಮಕ್ಕಳು ಹುಟ್ಟುವಂತಹ ಗಂಡ-ಹೆಂಡತಿ ಸಂಬಂಧ ಭಾರತದಲ್ಲಿಲ್ಲ ‘ ಎಂದು ಘರ್ಜಿಸಿದರು. ಪ್ರಶ್ನೆ ಕೇಳಿದ ಹೆಂಗಸು ಎದ್ದು ನಿಂತು ‘ಮಹಾ ಸುಳ್ಳ ‘ ಎಂದಳು. ಆಗ ಸ್ವಾಮಿಗಳು ‘ಭಾರತದ ಬಗ್ಗೆ ನನಗಿಂತ ನಿನಗೇ ಹೆಚ್ಚು ಗೊತ್ತಿದೆ. ನೀನೇ ವೇದಿಕೆಯ ಮೇಲೆ ಬಂದು ಭಾಷಣ ಮಾಡು ‘ ಎಂದು ಚೀತ್ಕರಿಸುತ್ತ ವೇದಿಕೆಯಿಂದ ಇಳಿದು ಸರಸರನೆ ಹೊರನಡೆಯತೊಡಗಿದರು. ಕೆಲ ಹೆಂಗಸರು ಅವರ ದಾರಿಗೆ ಅಡ್ಡಲಾಗಿ ನಿಂತು ಪ್ರಶ್ನೆಗಳ ಸುರಿಮಳೆಗರೆದರು. ಅವೆಲ್ಲವುಗಳಿಗೆ ‘ನೀವೇ ವೇದಿಕೆ ಹತ್ತಿ ಮಾತನಾಡಿ’ ಎನ್ನುವುದೊಂದೇ ಸ್ವಾಮಿಗಳ ಉತ್ತರವಾಗಿದ್ದಿತು. ಸ್ವಾಮಿಗಳ ಬೆಂಗಾವಲಿಗಿದ್ದ ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ’ಗೆ ಅಲ್ಲಿದ್ದ ಒಬ್ಬಾಕೆ ‘ಏ ಮೂರ್ಖಳೇ ಆತ ನಿನ್ನನ್ನೇ ದ್ವೇಷಿಸುತ್ತಿರುವುದು’ ಎಂದು ತಿಳಿಸಿದಳು, (88)
ಭಾರತೀಯ ಕಲ್ಪನೆಯ ತಾಯ್ತನವನ್ನು ಸಾರ್ವತ್ರೀಕರಿಸಲು ಸಮಕಾಲೀನ ಯುರೋಪಿನ ಉದಾಹರಣೆಯನ್ನು ಸ್ವಾಮಿಗಳು ಕೊಟ್ಟಿದ್ದರು. ಪ್ರಾಚ್ಯ ಮತ್ತು ಪಾಶ್ಚಾತ್ಯ ಲೇಖನದಲ್ಲಿ ತ್ರಿಮೂರ್ತಿಗಳ ಕಲ್ಪನೆಯಲ್ಲಿ ಜೆಹೊವಾ , ಯೇಸು ಪರಿಗಣನೆಯಲ್ಲಿ ಎರಡನೆಯವರು. ತೋಳುಗಳಲ್ಲಿ ಮಗು ಯೇಸುವನ್ನು ಹಿಡಿದಿರುವ ಮೇರಿಯೇ ಮೊದಲು. ಚಕ್ರವರ್ತಿ ‘ಅಮ್ಮಾ’ ಎನ್ನುತ್ತಾನೆ , ಯುದ್ಧ ಭೂಮಿಯಲ್ಲಿ ಸೇನಾಪತಿ ‘ಅಮ್ಮಾ’ ಎನ್ನುತ್ತಾನೆ , ಬಲೆ ಹರಡಿರುವ ಮೀನುಗಾರ ‘ಅಮ್ಮಾ’ ಎಂದಂತೆ ದಾರಿಯಲ್ಲಿ ಅಲೆಯುವ ಭಿಕ್ಷುಕನೂ ‘ಅಮ್ಮಾ’ ಎಂದು ಕಿರುಚುತ್ತಾನೆ ! ಕೋಟಿ ಧ್ವನಿಗಳು , ಕೋಟಿ ಸ್ಥಳಗಳಲ್ಲಿ . ಕೋಟ್ಯಂತರ ವಿಧಗಳಲ್ಲಿ , ಹಳ್ಳಿಯ ಗುಡಿಸಿಲಿನಿಂದ ಪ್ರಾರಂಭಿಸಿ ಚರ್ಚ್ ವೇದಿಕೆ ಸೇರಿದಂತೆ ಹಗಲಿರುಳು ‘ಅಮ್ಮಾ , ಅಮ್ಮಾ’ ಎನ್ನುವ ಧ್ವನಿ ಬರುತ್ತದೆ. ಎಲ್ಲೆಲ್ಲೂ ಹಗಲಿರುಳೂ ‘ಅವೆ ಮರಿಯಾ’ ಅವೆ ಮರಿಯಾ’ ಎನ್ನುವ ಕೂಗು’ ಎಂದು ಬರೆದರು. (89) ಇದೇ ಆಧಾರದ ಮೇಲೆ ರಾಮಕೃಷ್ಣರ ಸಂನ್ಯಾಸಿ ಹಾಗೂ ಸಂಸಾರಿ ಭಕ್ತರಿಬ್ಬರಿಗೂ ಶಾರದಾಮಣಿ ಸಾಮಾನ್ಯ ಹೆಣ್ಣಲ್ಲ. ಆಕೆ ಯಾರೊಬ್ಬರ ಹೆಂಡತಿಯಾಗಿರುವುದೂ ಸಾಧ್ಯವಿಲ್ಲ. ಸಾವಿರಾರು ಅಧ್ಯಾತ್ಮ ಶಿಶುಗಳ ತಾಯಿಯಾಕೆ , ಜಗನ್ಮಯಿ, ಜಗದಂಬೆ . ಸಾಮಾನ್ಯ ಹೆಣ್ಣು ಹೆತ್ತು ತಾಯಿಯಾಗುತ್ತಾಳೆ. ಅದರ ಹಿನ್ನೆಲೆಯಲ್ಲಿ ಅಲ್ಪ ಕಾಮವಾದರೂ ಇದೆ. ಅಂತಹ ದೋಷ ಶಾರದಾಮಣಿಯನ್ನು ತಲುಪಲಾರದು. ಆದ್ದರಿಂದ ಆಕೆ ಹೆರದೆ ಜಗದಂಬೆ ಎನ್ನುವುದು ರಾಮಕೃಷ್ಣರ ಭಕ್ತರ ಸಮರ್ಥನೆ. ಅಮ್ಮಾ , ಸಾವಿರ ಮಕ್ಕಳ ತಾಯಿಯಾದ ನೀನು ಒಬ್ಬ ಸಾಮಾನ್ಯ ತಾಯಿಯಾಗಲು ನಾಯಿ , ನರಿಗಳ ಸ್ಥಿತಿಗೆ ಇಳಿಯಬೇಕೆ ಎಂದು ರಾಮದತ್ತ ಉದ್ಗರಿಸಿದ್ದನು. (90). ಸ್ವಾಮಿಗಳ ಅಭಿಪ್ರಾಯವೂ ಇದೇ ಆಗಿದ್ದಿತು. ಇದನ್ನೆಲ್ಲ ನೋಡಿ ತಾಯ್ತನದ ಬಗ್ಗೆ ಸ್ವಾಮಿಗಳಿಗೆ ಎಂತಹ ಪೂಜ್ಯ ಭಾವನೆಯಿದ್ದಿತು ಎಂದು ಭಾವುಕರಾಗುವಂತಿಲ್ಲ. ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋಕ್’ ತನ್ನ ನಾಲ್ಕು ವರ್ಷದ ಮಗಳ ಬಗ್ಗೆ ಬಹಳ ಕಾಳಜಿ , ವಾತ್ಸಲ್ಯ ಬೆಳೆಸಿಕೊಂಡಿದ್ದಳು . ಇದನ್ನು ಗಮನಿಸಿದ ಸ್ವಾಮಿಗಳು ‘ ನೀನು ನನ್ನ ಮಗುವನ್ನು ಪ್ರೀತಿಸುತ್ತಿದ್ದೇನೆ ಎಂದು ಭಾವಿಸುತ್ತಿರುವೆ. ಇದು ಪ್ರೀತಿಯೇ ಅಲ್ಲ ! ಇದು ಕೋಳಿ ತನ್ನ ಪಿಳ್ಳೆಗಳಿಗೆ ಹೊಂದಿರುವಂತಹ ಒಲವು ಮಾತ್ರ.; ಕೋಳಿ ತನ್ನ ಮರಿಗಳಿಗಾಗಿ ದಿನವೆಲ್ಲಾ ತಿಪ್ಪೆ ಕೆದರುತ್ತದೆ , ಆದರೆ ಬೇರೊಂದು ಮರಿ ಬಂದರೆ ಏನು ಮಾಡುತ್ತದೆ ‘ ಎಂದು ಪ್ರಶ್ನಿಸಿದ್ದರು. (91) ಆದೇ ವೇಳೆಗೆ ತಮ್ಮ ತಾಯಿ ಭುವನೇಶ್ವರಿ ದೇವಿಯ ಮಾತೃ ಪ್ರೇಮ ಅಸದೃಶ್ಯವಾಗಿದ್ದಿತು ! ಎಂತಹ ಉದಾತ್ತ ಚಿಂತನೆ !
ತಂಗಿ ಯೋಗೇಂದ್ರಬಾಲಾಳ ಆತ್ಮಹತ್ಯೆ ಮತ್ತು ಅಮೆರಿಕದ ಹೆಂಗಸರ ದಿಟ್ಟತನದ ನಡುವಿನ ಹೋಲಿಕೆಗಳು ಸ್ವಾಮಿಗಳನ್ನು ಕೆಣಕಿದ್ದವು.(೧೨/೧೨/೧೮೯೯- ಸಾರಾ ಬುಲ್) ಬೇಲೂರು ಮಠಕ್ಕೆ ಬಂದಿದ್ದ ಒಬ್ಬ ಭಕ್ತನಲ್ಲಿ ‘ಬಾಬಾ ನೀವು ಸತಿ ಹೋಗುವುದರ ಬಗ್ಗೆ ಸಾಕಷ್ಟು ಹುಯಿಲೆಬ್ಬಿಸಿ ವಿಧವೆಯರನ್ನು ಸುಟ್ಟಿದ್ದೀರಿ. ಬಿದಿರಿನ ಉರಿಯುವ ಚಿತೆಯೇರಿದ ಪ್ರತಿಯೊಬ್ಬ ವಿಧವೆ ಕಾಮ , ಭೋಗಗಳಿಂದ ಕಳಂಕಿತಳೇ ? …ನೀವು ತಳಮಟ್ಟದವರೆಗೆ ಆಷಾಢಭೂತಿಗಳು…… ಜಗದಂಬೆಯರನ್ನು ಹಂಗಿಸುವುದನ್ನು ಬಿಡಿ . ಆಗ ಭಾರತ ಹೇಗೆ ಉದ್ಧಾರವಾಗುತ್ತದೆ ಎನ್ನುವುದನ್ನು ಕಾಣುತ್ತೀರಿ ಎಂದಿದ್ದರು. (92) ಈ ಮಾತುಗಳಿಂದ ಸ್ವಾಮಿಗಳನ್ನು ಹೆಂಗಸರ ಉದ್ಧಾರಕ ಎನ್ನುವಂತಿಲ್ಲ. ಸ್ವಾಮಿಗಳು ಹೆಂಗಸರು ಆಧುನಿಕ ಶಿಕ್ಷಣಕ್ಕೆ ಅರ್ಹರಲ್ಲ ಎನ್ನುವ ಅಭಿಪ್ರಾಯವನ್ನೂ ತಳೆದಿದ್ದರು. ‘ ಹಿಂದಿದ್ದ ಹಿಂದೂ ಹೆಂಗಸರು ಅಧ್ಯಾತ್ಮಿಕ ಪ್ರತಿಭೆಗಳು , ಸ್ಥಿರ ಮನಸ್ಸಿನವರು ಈಗಿನವರು ಕೆಳ ಇಳಿದವರಾಗಿದ್ದು ‘ ಉಣ್ಣುವುದು , ಕುಡಿಯುವುದು , ಸುದ್ದಿ ಹಬ್ಬಿಸುವುದು , ಹಗರಣಗಳನ್ನು ಹುಟ್ಟಿಸುವುದಕ್ಕೆ ಮಾತ್ರ ಸೀಮಿತ ‘ ಎಂದಿದ್ದರು. (93) ವಿದ್ಯಾವತಿಯರಾದ ಯಾವ ಭಾರತೀಯ /ಬಂಗಾಳಿ ಹೆಣ್ಣನ್ನೂ ಸರಿಯಾಗಿ ಅರಿಯದ, ಯಾವ ಹೆಂಗಸರ ಸಂಘ, ಸಂಸ್ಥೆ ಕೂಟಗಳೊಂದಿಗೆ ಸಂಪರ್ಕ ಇರದೆ ಸ್ವಾಮಿಗಳು ಮಾಡಿದ ಇಂತಹ ಆರೋಪಗಳು ಅವರ ನಂಬಿಕೆಗಳಾಗಿದ್ದವೇ ಹೊರತು ವಾಸ್ತವಿಕ ಸತ್ಯಗಳಾಗಿರಲಿಲ್ಲ (93) ‘ಓ ಭಾರತ ! ಮರೆಯದಿರು ಸೀತಾ, ಸಾವಿತ್ರಿ , ದಮಯಂತಿಯರೇ ನಿನ್ನ ಹೆಣ್ತನದ ಆದರ್ಶವೆಂಬುದನ್ನು ‘ ಎಂದು ಭಾರತೀಯ ಹೆಂಗಸರು ಸೀತೆಯ ಹೆಜ್ಜೆಯಲ್ಲಿ ಸಾಗಬೇಕೆಂದು ಸ್ವಾಮಿಗಳು ಕರೆ ನೀಡಿದ್ದರು. (94) ಸ್ವಾಮಿಗಳ ದೃಷ್ಟಿಯಲ್ಲಿ ಹೆಂಗಸರ ಶಿಕ್ಷಣದ ಗುರಿ ‘ ಸಂಘಮಿತ್ರ , ಲೀಲಾ, ಅಹಲ್ಯಾಬಾಯಿ , ಮೀರಾಬಾಯಿಯಂತಹ ವೀರರ ತಾಯಂದಿರಾಗುವುದು. ಸ್ವಾಮಿಗಳು ಪ್ರತಿಪಾದಿಸಿದ ಇಂತಹ ಹೆಣ್ತನವನ್ನು ತರುವ ಶಿಕ್ಷಣ ಹೇಗಿರಬಹುದೆಂದು ನಾವು ಊಹಿಸಬಹುದು. ಹೆಣ್ಣಿಗೆ ಹಳೆಯ ಕಾಲದಲ್ಲಿದ್ದಂತೆ ಪಾತಿವ್ರತ್ಯ ಮತ್ತು ಗಂಡನಲ್ಲಿ ನಿಷ್ಠೆ ನೀಡುವುದೇ ನಿಜವಾದ ಶಿಕ್ಷಣ. ಇಂತಹ ಹೆಂಗಸರನ್ನು ಸಿದ್ಧಪಡಿಸುವ ಶಿಕ್ಷಣ ಸ್ವಾಮಿಗಳ ಆಶಯವಾಗಿದ್ದಿತು.
ಸ್ವಾಮಿಗಳು ಪರಮ ವಿರಾಗಿಗಳಾಗಿದ್ದು ಎಲ್ಲ ಹೆಂಗಸರಲ್ಲಿ ತಾಯಿಯನ್ನು ಕಾಣುತ್ತಿದ್ದರು ಎಂದು ಭಕ್ತರು ನಂಬುತ್ತಾರಾದರೂ ಅವರಿಗೆ ತಾಯಿ , ಅಕ್ಕ , ತಂಗಿಯರಲ್ಲದ ಬೇರೆ ರೀತಿಯಲ್ಲಿಯೂ ಯುವ ಸಹಜ ದೃಷ್ಟಿಗೆ ಕಾಣುವಂತೆ ಹೆಂಗಸರು ಕಾಣುತ್ತಿದ್ದರೆಂದು ಅವರ ಬರೆದ ಪತ್ರಗಳು ಸಾಕ್ಷಿ ನುಡಿಯುತ್ತವೆ.
ಅಮೆರಿಕನ್ ಹೆಂಗಸರು ವೀರೋಚನ (ಟೈಟಾನ್ಸ್) ತಳಿಗೆ ಸೇರಿದ್ದು ತಮ್ಮ ದೇಹ ಸೌಂದರ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆಂದು , ಅದಕ್ಕಾಗಿ ಸದಾ ದೇಹವನ್ನು ಶುದ್ಧವಾಗಿಡಲು ಯತ್ನಿಸುವರೆಂದು ೨೫/೯/೧೮೯೪ ರಂದು ಗುರುಭಾಯಿಗೆ (ರಾಮಕೃಷ್ಣಾನಂದ) ಬರೆದ ಪತ್ರದಲ್ಲಿ ತಿಳಿಸಿದ್ದರು. ಪಶ್ಚಿಮದಲ್ಲಿ ೪೦ ವರ್ಷದ ಗಂಡಸು , ೫೦ ವರ್ಷದ ಹೆಂಗಸು ತರುಣರಂತೆ ಕಾಣುತಾರೆ. ಇದರ ರಹಸ್ಯವೆಂದರೆ ಅವರು ಬೇಗ ಮದುವೆಯಾಗದಿರುವುದು ಎಂದು ಗುರುತಿಸಿದ್ದರು. ಮೇಲ್ವರ್ಗದ ಹೆಂಗಸರು ಅಕರ್ಷಕವಾಗಿ ಕಾಣಲು ನಡುವನ್ನು ಕುಗ್ಗಿಸಿ , ಬೆನ್ನೆಲುಬನ್ನು ಬಾಗಿಸಿ , ಮೂತ್ರಪಿಂಡ ಮತ್ತು ಗುಲ್ಮಗಳನ್ನು ಸರಿಸಿ ಎಂತಹ ಬಾಧೆಯನ್ನೂ ತಾಳಲು ಸಿದ್ಧ ಎನ್ನುವುದನ್ನು ತಿಳಿಸುತ್ತಾರೆ. ಪ್ಯಾರಿಸ್ ಫ್ಯಾಷನ್ ಅನುಸರಿಸದ ಕಾರಣ ಇಂಗ್ಲಿಷ್ ಮತ್ತು ಜರ್ಮನ್ ಹೆಂಗಸರ ಉಡುಗೆ ಆಕರ್ಷಕವಾಗಿಲ್ಲ ಎನ್ನುವುದು ಅವರಿಗೆ ಕಂಡಿದ್ದಿತು. ಯುರೋಪಿಯನ್ ಹೆಂಗಸರು ಭುಜ , ದೇಹದ ಮೇಲ್ಭಾಗ ಫೂರಾ ಕಾಣುವಂತೆ ನರ್ತಿಸುತ್ತಾರೆ ‘ ಎನ್ನುತ್ತ ಹೆಣ್ಣಿನ ದೇಹ ಸೂಕ್ಷ್ಮಗಳನ್ನು ಗಮನಿಸಿದ್ದರು. (95) ‘ಯುವಕರ ಅಶ್ಲೀಲ ಕಣ್ಣುಗಳಿಗೆ ದೇಹದ ಮೇಲರ್ಧ ಭಾಗ ಕಾಣಿಸುವ ಅಮೆರಿಕನ್ ಹೆಂಗಸರಂತೆ ಇರುವ ಸಂದರ್ಭ ಎದುರಾದರೆ ಭಾರತೀಯ ಹೆಂಗಸರು ಸತ್ತೇ ಹೋಗುತ್ತಾರೆ ಎಂದಿದ್ದರು ಸ್ವಾಮಿಗಳು (96) ಆದರೆ ಅಮೆರಿಕನ್ ಹೆಂಗಸರ ‘ತೋರಿಕೆ’ಯ ಬಗ್ಗೆ ಅವರ ಅಕ್ಷೇಪಗಳಿರಲಿಲ್ಲ. ನಿವೇದಿತಾಗೆ ಅವರು ‘ ಮೈದುಂಬಿದ ನನ್’ಗಳು ಚೆನ್ನಾಗಿರುತ್ತಾರೆ-ಸಣಕರಲ್ಲ ‘ ಎನ್ನುವ ಅಭಿಪ್ರಾಯ ತಿಳಿಸಿದ್ದರು. (97) ಹಾರ್ವರ್ಡ್ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ ಮನೆಯಲ್ಲಿ ಒಮ್ಮೆ ಅನೌಪಚಾರಿಕವಾಗಿ ಮಾತನಾಡುತ್ತ ‘ಕೆಲ ಸಮಯದ ಹಿಂದೆ ಇಂಗ್ಲಿಷರು ಕಾಡು ಜನವಾಗಿದ್ದರು. ಅವರ ಹೆಂಗಸರ ಎದೆ ಕಂಚುಕದ ಮೇಲೆ ಹುಳುಗಳಾಡುತ್ತಿದ್ದವು ಎಂದಿದ್ದರು. (98) ಮ್ಯಾಗ್ನೋಲಿಯಾ ಕಡಲಿನಲ್ಲಿ ಸ್ವಚ್ಛಂದವಾಗಿ ಈಜುತ್ತಿದ್ದ ಹೆಂಗಸರು ಸ್ವಾಮಿಗಳ ಗಮನ ಸೆಳೆದಿದ್ದರು.
೧೮೯೪ ರಲ್ಲಿ ಶ್ರೀಮತಿ ಹೇಲ್’ಗೆ ಆಗಸ್ಟ್ ೨೪ ಮತ್ತು ೨೭ ರ ನಡುವೆ ಬರೆದ ದಿನಾಂಕವಿಲ್ಲದ ಪತ್ರದಲ್ಲಿ ‘……ಸೋಜಿಗವೆಂದರೆ ಹೆಂಗಸರು ಸ್ನಾನ ಮಾಡುವಾಗಲೂ ಅವರ ಲೋಹದ ಕವಚವನ್ನು ತೆಗೆದಿಡುವುದಿಲ್ಲ. ಆದ್ದರಿಂದ ಈ ಕವಚಧಾರಿ ಸ್ತ್ರೀ ಯೋಧರು ಪುರುಷರಿಗೆ ಮೇಲುಗೈಯಾಗಿರುವರು. ನಮ್ಮ ಸಂಸ್ಕೃತ ಕವಿಗಳು ಹೆಂಗಸರ ಮೃದು ಶರೀರದ ಬಗ್ಗೆ ತಮ್ಮೆಲ್ಲ ವರ್ಣನಾ ಸಾಮರ್ಥ್ಯವನ್ನು ಬಳಸಿರುವರು. ಹೆಂಗಸು ಎನ್ನುವುದಕ್ಕ ಸಂಸ್ಕೃತ ಶಬ್ದ ಕೋಮಲಾ. ಆದರೆ ಲೋಹ ಕವಚವನ್ನು ಧರಿಸಿದ ಈ ಹೆಂಗಸರು ಮೂಳೆಯ ಪಟ್ಟಿಗಳರುವ ಆರ್ಮಡಿಲಾ ಪ್ರಾಣಿಗಳಂತೆ ತೋರುವರು. ಇದನ್ನು ನೋಡಿರದ ವಿದೇಶಿಯರಿಗೆ ಇದೆಷ್ಟು ನಗೆಪಾಟಲಾಗಿರುವುದೆನ್ನುವುದನ್ನು ನೀವು ಊಹಿಸಲಾರಿರಿ. ಶಿವ.!..ಶಿವ!! …….ಸಮುದ್ರ ತೀರದಲ್ಲಿ , ಸ್ನಾನ ಮಾಡುವ ಸ್ಥಳಗಳಲ್ಲಿ ನಾನು ಯಾವ ಅಶ್ಲೀಲತೆಯನ್ನೂ ಕಾಣಲಿಲ್ಲ , ಬದಲು ಜಂಭವನ್ನು ಮಾತ್ರ-ಬಿಗಿ ಒಳ ಉಡುಪಗಳೊಂದಿಗೆ ನೀರಿಗೆ ಬೀಳುತ್ತದ್ದವರಲ್ಲಿ ಅಷ್ಟೇ…’ ಎನ್ನುವ ಸ್ವಾಮಿಗಳು ಇತರ ಸಂನ್ಯಾಸಿಗಳಂತೆ ಗೊಡ್ಡು ವೇದಾಂತಿಯಾಗಿರಲಿಲ್ಲ. ಗಹನ ವೇದಾಂತದ ಬೋಧನೆ ಮಾಡುತ್ತ , ಸ್ವಾಂಪ್’ಸ್ಕಾಟ್, ಗ್ರೀನೆಕರ್’ಗಳಲ್ಲಿ ಕೋರಾ ಸ್ಟಾಕ್’ಹೋಂ ಹೊಲಿಸಿಕೊಟ್ಟ ಈಜುಡುಗೆ ತೊಟ್ಟು ಸಮುದ್ರ ಸ್ನಾನವನ್ನು ಆನಂದಿಸಿ , ಆತ್ಮಾನುಭೂತಿ ಪಡೆಯುವ , ತಮ್ಮ ಚಿತ್ರಕ್ಕೆ ತಾವೇ ರೂಪದರ್ಶಿಯಾಗಿ ಹೆಣ್ಣು ಚಿತ್ರಕಾರಳ ಎದುರು ಅಲುಗದೆ ಹಲವು ಗಂಟೆಗಳ ಕಾಲ ಕುಳಿತುಕೊಳ್ಳುವ ರಸಋಷಿಗಳಾಗಿದ್ದರು. (೨೦/೮/೧೮೯೪-ಇಸಾಬೆಲ್ಲಾ ಮೆಕೆಂಡ್ಲಿ). ಈಜುವಾಗಲೂ ಬಟ್ಟೆ ಬಿಚ್ಚದ ಮ್ಯಾಗ್ನೊಲಿಯಾದ ಕೋಮಲೆಯರನ್ನು ಕುರಿತಾಗಿ ಬರೆಯಬಲ್ಲವರಾಗಿದ್ದರು. ಆ ಕಾಲದಲ್ಲಿ ಅಮೆರಿಕದ ಮಹಿಳೆಯರು ಈಗಿನಂತೆ ಬೀಚ್’ಗಳಲ್ಲಿ ತುಂಡುಡುಗೆ ಉಟ್ಟು ನೀರಿಗೆ ಧುಮುಕುತ್ತಿರಲಿಲ್ಲ. ಹಾಗಾಗಿ ಅವರ ಮೆದು ಕೋಮಲ ಶರೀರ ಕಾಣಿಸವುದಿಲ್ಲ ಎನ್ನುವುದನ್ನು ಸ್ವಾಮಿಗಳು ಗುರುತಿಸಿದ್ದರು. ಮೇರಿ ಹೇಲ್ ತನಗಿಂತ ೩೩ ವರ್ಷ ಹಿರಿಯನಾಗಿದ್ದ ಕಾರ್ಲೊ ಗಯ್ಸಪ್ಪೆ ಮ್ಯಾಟಿನಿ ಎನ್ನುವ ಇಟೆಲಿ ಮೂಲದ ಶ್ರೀಮಂತ ವಿಧುರನ ಪ್ರೇಮಪಾಶಕ್ಕೆ ಸಿಲುಕಿದ್ದಳು. ಈ ಬಗ್ಗೆ ಪತ್ರ ಬರೆಯುತ್ತ ಸ್ವಾಮಿಗಳು ‘ ನೀನೀಗ ವೆನಿಸ್ ಆನಂದಿಸುತ್ತಿರುವೆ. ಮುದುಕ ರುಚಿಕರವಾಗಿರಬಹುದು ; ವೆನಿಸ್ ಶ್ರೀಮಂತ ಮುದುಕ ಷೈಲಾಕ್ ನೆಲೆಯಲ್ಲವೇ ? ಕಾಳಜಿ ವಹಿಸು ಮೇರಿ ನಿನ್ನ ಇಟಾಲಿಯನ್ ಪುರಾತನ ವಸ್ತುವಿನಲ್ಲಿ ಭಾರಿ ಅನುರಕ್ತಳಾಗದಿರು’ ಎಂದು ೫/೭/೧೯೦೧ ರಲ್ಲಿ ಬರೆದು ಸ್ವಲ್ಪ ಸಭ್ಯತೆಯ ಎಲ್ಲೆ ದಾಟಿದ್ದರು.
ಸ್ವಾಮಿಗಳು ಲಿಂಗ ತಟಸ್ಥರಾಗಿರದೆ ಹಲವು ಬಾರಿ ತಾರತಮ್ಯ ತೋರಿಸುತ್ತಿದ್ದರು. ಹೆಣ್ತನವನ್ನು ಬಹಳ ಸಲ ಹೇಡಿತನವೆಂದು ಪರಿಗಣಿಸುತ್ತಿದ್ದರು. ಸುರೇಂದ್ರನಾಥ ಸೇನರೊಂದಿಗೆ ಒಮ್ಮೆ ಚರ್ಚಿಸುತ್ತ ಒರಿಸ್ಸಾ ಮತ್ತು ಬಂಗಾಳದ ವೈಷ್ಣವರ ರಾಧಾ-ಕೃಷ್ಣರ ಪ್ರೇಮವನ್ನು ಟೀಕಿಸುತ್ತ ‘ ಈ ದೇಶವನ್ನು ನೋಡು ಈ ಪ್ರೇಮ ಪ್ರಚಾರದಿಂದ ಇಡೀ ದೇಶವೇ ಹೇಡಿಗಳ ಪೀಳಿಗೆಯಾಗಿದೆ.! ಕಳೆದ ನಾಲ್ಕು ನೂರು ವರ್ಷಗಳಿಂದ ಇಡೀ ಒರಿಸ್ಸಾ ಹೇಡಿಗಳದ್ದಾಗಿದೆ, ಬಂಗಾಳ ರಾಧಾ-ಕೃಷ್ಣರ ಪ್ರೇಮದ ಹಿಂದೆ ಬಿದ್ದು ಹೇಡಿಗಳ ನೆಲೆಯಾಗಿ ಗಂಡಸುತನವನ್ನೇ ಕಳೆದುಕೊಂಡಿದೆ ಎಂದು ಸುರೇಂದ್ರನಾಥ ಸೇನರ ಮುಂದೆ ರೋಷ ತಾಳಿದ್ದರು. (99) ಆಲ್ಮೋರಾದಲ್ಲಿ ಜೂನ್ ೧೮೯೭ ರಲ್ಲಿ ಭೇಟಿಯಾಗಲು ಬಂದವರಲ್ಲಿ ಒಬ್ಬರಿಗೆ ಉದ್ರೇಕದ (ವೈಷ್ಣವ) ರಾಧಾ-ಕೃಷ್ಣ ಭಕ್ತಿಗೆ ಚಾಟಿಯಿಂದ ಎಡ-ಬಲ ಜಡಿಯಲು ಕರೆಕೊಟ್ಟಿದ್ದರು. (100) ಸ್ವಾಮಿಗಳ ದೃಷ್ಟಿಯಲ್ಲಿ ಹೆಣ್ತನ ಭಾರತದ ಅವಸಾನಕ್ಕೆ ಕಾರಣವಾಗಿದ್ದಿತು. ರಾಧಾ-ಕೃಷ್ಣರ ಪ್ರೇಮ ಕಥೆಯ ಹಿಂದೆ ಬಿದ್ದಿರುವವರನ್ನು ಛೇಡಿಸುವುದರಲಿಯೂ ಸ್ವಾಮಿಗಳಲ್ಲಿ ನಿಷ್ಪಕ್ಷಪಾತವಿರಲಿಲ್ಲ.‘ ಹೆಂಗಸರ ಸ್ಥಿತಿ ಉತ್ತಮಗೊಳ್ಳದೆ ಜಗತ್ತು ಉದ್ದಾರವಾಗುವುದು ಸಾಧ್ಯವಿಲ್ಲ. ಒಂದೇ ರೆಕ್ಕೆಯ ಬಲದಿಂದ ಹಕ್ಕಿ ಹಾರಲಾರದು. ಅದಕ್ಕೋಸ್ಕರವೇ ರಾಮಕೃಷ್ಣರು ತಮ್ಮ ಅವತಾರದಲ್ಲಿ ಹೆಂಗಸನ್ನು ಗುರುವಾಗಿ ಸ್ವೀಕರಿಸಿದರು. ಅದಕ್ಕೋಸ್ಕರವೇ ಅವರು ಹೆಣ್ಣು ವೇಷದಲ್ಲಿ , ಹೆಣ್ಣು ಭಾವದಲ್ಲಿ ದೇವರನ್ನು ಪೂಜಿಸಿದರು. ಹೆಂಗಸರ ತಾಯ್ತನದ ಆದರ್ಶವನ್ನು ಅವರು ಜಗನ್ಮಯಿಯ ಪ್ರತಿನಿಧಿ ಎಂದು ಉಪದೇಶಿಸಿದರು- ಇದು ೩೧/೧೨/೧೮೯೫ ರಂದು ರಾಮಕೃಷ್ಣಾನಂದರಿಗೆ ಬರೆದ ಪತ್ರದಲ್ಲಿದೆ. ಎಂದರೆ ರಾಧಾ-ಕೃಷ್ಣರ ಮಧುರಭಾವದ ಆರಾಧಕರಾದ ಒರಿಸ್ಸಾ , ಬಂಗಾಳಿಗಳದ್ದು ಹೇಡಿತನವಾಗಿದ್ದು , ರಾಣಿ ರಾಸಮಣಿಯ ಅಳಿಯ ಮಥುರಾನಾಥ ಬಿಶ್ವಾಸನ ಅಂತಃಪುರ ಸೇರಿ , ಆತ ಕೊಡಿಸಿದ ಸೀರೆಯುಟ್ಟು ಹೊಲಿಸಿದ ಕುಪ್ಪಸ ತೊಟ್ಟಿದ್ದ ರಾಮಕೃಷ್ಣರದ್ದು ಮಧುರ ಭಾವದ ಅಧ್ಯಾತ್ಮಿಕ ಸಾಧನೆಯಾಗಿದ್ದಿತು !
‘ಅಖಂಡಾನಂದರ ಮುಂದೆ ‘ನಾನು ಹೋರಾಟಗಾರ. ಕಾರ್ಯಕ್ಷೇತ್ರದಲ್ಲಿ ಪ್ರಾಣ ಬಿಡುವೆನು. ಜನಾನ ಹೆಂಗಸರಂತೆ ಗಿರಿಧಾಮದಲ್ಲಿ ಕುಳಿತಿರಲಾರೆ, ಬೇಸಿಗೆ ಕಳೆದ ತಕ್ಷಣ ಕೆಲಸಕ್ಕೆ ಬಯಲುಸೀಮೆಗೆ ಇಳಿಯುತ್ತೇನೆ’ ಎನ್ನುವ ಸಂಕಲ್ಪ ತೊಟ್ಟಿದ್ದರು (೧೫/೬/೧೮೯೭). ನಮ್ಮ ದೇಶದಲ್ಲಿ ಗಂಡಸರು ಇರುವರೆಂದು ತಿಳಿದುಕೊಂಡಿರುವೆಯೇನು? ಅದು ಹೇಡಿಗಳ ಬೀಡು’ ಎಂದು ಬ್ರಹ್ಮಾನಂದರಿಗೆ ೨೧/೧೨/೧೮೯೫ ರ ಪತ್ರದಲ್ಲಿ ಛೇಡಿಸಿದ್ದರು. ತಮ್ಮ ಬಗ್ಗೆ ಮಿಷನರಿಗಳು ಮಾಡಿದ ಟೀಕೆಗೆ ಉತ್ತರ ನೀಡಿಲ್ಲ ಎಂದು ರೇಗಿದ್ದ ಸ್ವಾಮಿಗಳು ‘ ಮಗೂ (ಮಗನೇ ) ನನಗೆ ಗೊತ್ತು. ನಾನು ಅಲ್ಲಿಗೆ ಬಂದು ನಿಮ್ಮಿಂದ ಒಬ್ಬ ಗಂಡಸನ್ನು ತಯಾರು ಮಾಡಬೇಕು. ಭಾರತ ಹೆಂಗಸರು ಮತ್ತು ಷಂಡರಿಂದ ತುಂಬಿದೆ ಎಂದು ನನಗೆ ಗೊತ್ತು ಎಂದು ಅಳಸಿಂಗ ಪೆರುಮಾಳ್’ಗೆ ಬರೆದಿದ್ದರು. ಬೋಸ್ಟನ್’ನಲ್ಲಿ ಭಾರತದ ಹೆಂಗಸರನ್ನು ಕುರಿತಾಗಿ ಮಾತನಾಡುತ್ತ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಶೌರ್ಯವನ್ನು ಹೊಗಳುತ್ತ ಆಕೆ ರಣರಂಗದಲ್ಲಿ ವೀರ ಪುರುಷನಂತೆ ಬಿದ್ದಳು’ ಎಂದರು. (101) ಹೆಂಗಸರಿಗೆ ಮಾಗಿದ ನಡವಳಿಕೆ ಇರಲಾರದೆಂದು ಸ್ವಾಮಿಗಳ ನಂಬಿಕೆಯಾಗಿದ್ದಿತು. ಮದ್ರಾಸಿನಲ್ಲಿ ‘ ಹಲವು ಶತಮಾನಗಳ ಪರದಾಸ್ಯದಿಂದ ನಮ್ಮದು ಹೆಂಗಸರ ದೇಶವಾಗಿದೆ. ಈ ದೇಶದಲ್ಲಾಗಲಿ ಮತ್ತೊಂದು ದೇಶದಲ್ಲಾಗಲಿ ಮೂವರು ಹೆಂಗಸರನ್ನು ಐದು ನಿಮಿಷ ಒಗ್ಗಟ್ಟಿನಲ್ಲಿರಿಸಲು ಸಾಧ್ಯವಿಲ್ಲ. ಅವರು ಜಗಳವಾಡುತ್ತಾರೆ. ಯುರೋಪ್ ದೇಶಗಳಲ್ಲಿ ಹೆಂಗಸರು ದೊಡ್ಡ ಕೂಟಗಳನ್ನು ಕಟ್ಟುತ್ತಾರೆ., ಹೆಂಗಸರ ಶಕ್ತಿಯ ಬಗ್ಗೆ ಭಾರಿ ಘೋಷಣೆಗಳನ್ನು ಹೊರಡಿಸುತ್ತಾರೆ , ನಂತರ ಜಗಳವಾಡುತ್ತಾರೆ. ಆಗ ಯಾರಾದರೊಬ್ಬ ಗಂಡಸು ಬಂದು ಅವರೆಲ್ಲರನ್ನೂ ಆಳುತ್ತಾನೆ. ಹೆಂಗಸರು ಜಗಳಗಂಟಿಯರು ಮಾತ್ರವಲ್ಲ , ಮೂಗು ತೂರಿಸುವವರು ಹೌದು ಎಂದು ಭಾಷಣ ಮಾಡಿದ್ದರು. (102) ಇನ್ನೊಮ್ಮೆ ‘ಹೆಂಗಸಿನಂತೆ ನಾನು ಯಾವಾಗಲೂ ಇತರರ ತೊಂದರೆಗಳನ್ನು ನನ್ನ ಮೇಲೆಳೆದುಕೊಳ್ಳುತ್ತೇನೆ ಎಂದು ಮೇರಿ ಹಾಲ್ ಬಾಯಿಸ್ಟರ್ ಮುಂದೆ ಅಲವತ್ತುಕೊಂಡಿದ್ದರು. (೨೫/೭/೧೮೯೭). ಇವು ಸ್ವಾಮಿಗಳು ಹೆಂಗಸರ ಬಗ್ಗೆ ಸಾಂದರ್ಭಿಕವಾಗಿ ತಳೆದ ನಿಲುವುಗಳಾಗಿದ್ದವು.
ಗುರುಕುಲಕ್ಕೆ ಸೇರಿದ ವಿದ್ಯಾರ್ಥಿಗಳು ಅಭ್ಯಾಸದಿಂದ ವಿಮುಖರಾಗಬಾರದೆಂದು ಬ್ರಹ್ಮಚರ್ಯ ವ್ರತ ಪಾಲಿಸುತ್ತಿದ್ದರು. ಬ್ರಹ್ಮನಲ್ಲಿ ಚರಿಸುವವನೇ ಬ್ರಹ್ಮಚಾರಿ ಎನ್ನುವ ಅರ್ಥವಿದ್ದರೂ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮುಗಿದ ನಂತರ ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದರು. ಸ್ವಾಮಿಗಳು ಈ ಬ್ರಹ್ಮಚರ್ಯ ವ್ರತ ಎಂದರೆ ಎಂದೆಂದಿಗೂ ಲೈಂಗಿಕವಾಗಿ ದೂರವಿರುವುದು ಎನ್ನುವ ಅರ್ಥ ಬರುವಂತೆ ಮಾಡಿದರು. ಮದುವೆ ಮತ್ತು ಬ್ರಹ್ಮಚರ್ಯಗಳ ಬಗ್ಗೆಯೂ ಸ್ವಾಮಿಗಳಲ್ಲಿ ಎಡಬಿಡಂಗಿತನ ತುಂಬಿದ್ದಿತು. ಭಾರತದ ಒಬ್ಬ ಯುವಕ ಇಂದ್ರಿಯನಿಗ್ರಹದ ಅತಿರೇಕಕ್ಕೆ ಒಳಗಾಗಿ ಹುಚ್ಚನಂತೆ ವರ್ತಿಸುತ್ತಿದ್ದನು. ಇದಕ್ಕೆ ಪರಿಹಾರವಾಗಿ ಅಮೆರಿಕದ ಮನಶಾಸ್ತ್ರಜ್ಞರೊಬ್ಬರು ಹೆಣ್ಣಿನ ಸಂಗ ಮಾಡುವಂತೆ ಸೂಚಿಸಿದ್ದರು. ಇದು ಸ್ವಾಮಿಗಳ ಕಿವಿಗೆ ಬಿದ್ದಿದ್ದಿತು. ‘ ನೀವು ಅಮೆರಿಕ ವೈದ್ಯರು ಬ್ರಹ್ಮಚರ್ಯ ನಿಸರ್ಗಕ್ಕೆ ವಿರುದ್ಧವಾದದ್ದು ಎನ್ನುತ್ತೀರಿ.,….ನೀವು ಏನು ಹೇಳುತ್ತಿರುವಿರಿ ಎನ್ನುವ ಪ್ರಜ್ಞೆ ನಿಮಗಿದೆಯೇ ? ನಿಮಗೆ ಪರಿಶುದ್ಧತೆ ಎಂದರೇನೆಂದು ತಿಳಿದಿಲ್ಲ. ಈ ವಿಷಯದ ಬಗ್ಗೆ ನೀವು ಇದನ್ನೇ ಹೇಳುವಿರಾದರೆ ನೀವು ಪಶುಗಳು ! ಪಶುಗಳು ! ಎಂದು ಘರ್ಜಿಸಿದ್ದರು. ಹೀಗೆ ವೈದ್ಯರ ಮೇಲೆ ಸ್ವಾಮಿಗಳು ಗುಡುಗುತಲಿದ್ದಾಗ ಆ ಸಭೆಯಲ್ಲಿದ್ದ ಹಲವು ಡಾಕ್ಟರ್’ಗಳಿದ್ದರೂ ಸುಮ್ಮನಿದ್ದರೆಂದು ದಾಖಲಾಗಿದೆ. (103) ಅತ್ಯಂತ ಮೋಜಿನ ಸಂಗತಿಯೆಂದರೆ ಕಲ್ಕತ್ತದ ಗಂಗಾತೀರದಲ್ಲಿ ‘ಅಮ್ಮಾ , ಅಮ್ಮಾ’ ಎಂದು ಹೊರಳಾಡುತ್ತಿದ್ದ , ತಾಯಿಯ ಹೆಸರಿನ ಉತ್ಕಟತೆಯಿಂದ ಉನ್ಮತ್ತನಾಗಿದ್ದ ೨೧ ವರ್ಷದ ಯುವಕ ರಾಮಕೃಷ್ಣನಿಗೆ ಮದುವೆ ಮಾಡಿದರೆ ಈ ಹುಚ್ಚು ಹೋಗುತ್ತದೆಯೆಂದು ಆತನ ಮನೆಯವರು , ಹಿತೈಷಿಗಳು ನಿರ್ಧರಿಸಿ, ಆತನಿಗಿಂತ ಮೂರು ವರ್ಷ ಚಿಕ್ಕವಳಾಗಿದ್ದ ಜಯರಾಮಬಾಟಿಯ ಶ್ಯಾಮಸುಂದರಿ ದೇವಿ ಮತ್ತು ರಾಮಚಂದ್ರ ಮುಖರ್ಜಿಯ ಮಗಳು ೫ ವರ್ಷದ ಕುಂಟುಬಿಲ್ಲೆ ಆಡುವ ಹುಡುಗಿ ಶಾರದಾಮಣಿಯನ್ನು ಗಂಟು ಹಾಕಿದ್ದರು.
ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಸ್ಯಾನ್’ಫ್ರಾನ್ಸಿಸ್ಕೊದಲ್ಲಿ ಯೋಗ ತರಬೇತಿ ಅವಧಿಯಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾಳೆ. ಒಮ್ಮೆ ಸ್ವಾಮಿಗಳು ವೈರಾಗ್ಯ , ಸಂನ್ಯಾಸ, ಸಂಸಾರ ತ್ಯಾಗದ ಬಗ್ಗೆ ಹುಮ್ಮಸ್ಸಿನಲ್ಲಿ ಹೇಳುತ್ತಿದ್ದರು. ಇದನ್ನು ಕೇಳುತ್ತಿದ್ದ ಒಬ್ಬ ಹೆಂಗಸು ‘ಸ್ವಾಮಿಗಳೇ ನೀವು ಹೇಳುವಂತೆ ಜಗತ್ತಿನಲ್ಲಿ ಇರುವವರೆಲ್ಲ ವೈರಾಗ್ಯ ತಾಳುತ್ತಾ ಹೋದರೆ ಮುಂದೆ ಏನಾಗಬಹುದು’ ಎಂದು ಪ್ರಶ್ನಿಸಿದಳು. (104) ಆಕೆ ಕೇಳಿದ ಪ್ರಶ್ನೆ ವಸ್ತುನಿಷ್ಠವೂ , ಸ್ವಾಮಿಗಳ ಸಂನ್ಯಾಸ, ತ್ಯಾಗ, ವೈರಾಗ್ಯ ಮುಂತಾದ ಹುಸಿ ಗುಳ್ಳೆಗಳನ್ನು ಒಡೆಯುವ ಸೂಜಿಯಂತೆಯೂ ಇದ್ದಿತು. ಸ್ವಾಮಿಗಳು ಆಕೆಗೆ ‘ ಮ್ಯಾಡಂ ತುಟಿಯ ಮೇಲೆ ಸುಳ್ಳನ್ನು ಇರಿಸಿಕೊಂಡು ನನ್ನಲ್ಲಿಗೆ ಏಕೆ ಬರುತ್ತಿರಿ ? ಎಂದು ಉತ್ತರಿಸಿದರು. ಎಳ್ಳು ಕಾಳಿನಷ್ಟು ವೈರಾಗ್ಯವಿರದ ಸಾಂಸಾರಿಕ , ಲೌಕಿಕ ಜಂಜಾಟಗಳಲ್ಲಿ ಮುಳುಗಿದ್ದ ಜನರೇ ಸ್ವಾಮಿಗಳ ತ್ಯಾಗ , ವೈರಾಗ್ಯದ ಭಾಷಣ ಮತ್ತು ಜೀವನದ ಆಧಾರವಾಗಿದ್ದರು. ಅಂತಹವರ ವಂತಿಗೆ , ಔದಾರ್ಯದಿಂದಲೆ ಸ್ವಾಮಿಗಳು ಅಮೆರಿಕದಲ್ಲಿ ಭಾಷಣ ಮಾಡಲು , ರಾಮಕೃಷ್ಣ ಮಠ ಕಟ್ಟಲು , ತಾಯಿ , ತಮ್ಮ , ಸೋದರತ್ತೆಯ ಮಗಳಿಗೆ ಹಣ ಸಂಗ್ರಹಿಸಲು ಸಾಧ್ಯವಾಗಿದ್ದಿತು. ಹೀಗೆ ಸಂಸಾರಿಗಳ ಹಂಗಿನಲ್ಲಿದ್ದ ಸ್ವಾಮಿಗಳಿಗೆ ಹೆಂಗಸು ಎತ್ತಿದ ಪ್ರಶ್ನೆಗ ನಿಜವಾದ ಉತ್ತರ ಗೊತ್ತಿರಲಿಲ್ಲ. ಆದ್ದರಿಂದ ಆಕೆಯನ್ನು ಸುಳ್ಳಿಯೆಂದು ಕರೆದು ಪ್ರಶ್ನೆಯನ್ನು ಚಾಪೆಯ ಕೆಳಗೆ ಸರಿಸಲು ಯತ್ನಿಸಿದ್ದರು. ಸ್ವಾಮಿಗಳು ಉತ್ತರ ಕೊಟ್ಟಿದ್ದರೆ ಆ ಹೆಂಗಸು ಮತ್ತೊಂದು ತೊಡಕಿನ ಪ್ರಶ್ನೆಯನ್ನು ಎಸೆಯುತ್ತಿದ್ದಳು. ಇದು ಚರ್ಚೆ, ಸಂವಾದ ಮತ್ತು ಸ್ವಾಮಿಗಳ ಪ್ರತಿಪಾದನೆಯ ಇತಿಮಿತಿಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದಿತು. ಸ್ವಾಮಿಗಳಿಗೆ ಇದು ಬೇಕಿರಲಿಲ್ಲ.
ಸ್ವಾಮಿಗಳು ಹೇಲ್ ಸೋದರಿಯರಲ್ಲಿ ಜಾಣೆಯೂ, ಚೆಲುವೆಯೂ ಆಗಿದ್ದ ಮೇರಿ ಹೇಲ್’ ಮದುವೆಯಾಗದಂತೆ ಪ್ರೇರೇಪಿಸಲು ೩೦/೫/೧೮೯೬ ಮತ್ತು ೧೭/೯/೧೮೯೬ ರ ಪತ್ರಗಳಲ್ಲಿ ಯತ್ನಿಸಿದ್ದರು. ಸ್ವಾಮಿಗಳು ನನ್ನ ಪ್ರಭಾವದಿಂದಾಗಿ ಹೇಲ್ ಸೋದರಿಯರು ಮದುವೆಯಾಗುವುದಿಲ್ಲ ಎಂದು ರಾಮಕೃಷ್ಣಾನಂದರಿಗೆ ತಿಳಿಸಿದ್ದರು.(೨೫/೯/೧೮೯೪). ಇದನ್ನು ಹುಸಿಗೊಳಿಸಲೋ ಎಂಬಂತೆ ಹ್ಯಾರಿಯೆಟ್ ಹೇಲ್ ಮದುವೆಯಾಗಿ ಈ ಸುದ್ದಿಯನ್ನು ಸ್ವಾಮಿಗಳಿಗೆ ತಿಳಿಸಿದ್ದಳು. ‘… ಕಡೆಗೊಮ್ಮೆ ನೀನು ವೃದ್ಧ ಕನ್ಯೆಯರ ಆಲಯದ ಔಚಿತ್ಯದ ಬಗ್ಗೆ ನಿನ್ನ ಮನಸ್ಸನ್ನು ಬದಲಾಯಿಸಿರುವುದನ್ನು ತಿಳಿದು ಸಂತೋಷವಾಯಿತು. ಈಗ ನೀನು ಮಾಡಿರುವುದು ಸಂಪೂರ್ಣ ಸಮಂಜಸ. ೯೯ % ಮಂದಿಗೆ ಮದುವೆವೇ ಪರಮ ಗುರಿ. …. ನಾನು ನಿನ್ನನ್ನು ತಿಳಿದಿರುವ ಮಟ್ಟಿಗೆ ನಿನಗೆ ತಾಳ್ಮೆಯಿದೆ. ಅದರಿಂದ ಸಹನೆ ಜೊತೆಗಿದೆ. ಆದ್ದರಿಂದ ನಿನ್ನ ವೈವಾಹಿಕ ಜೀವನ ಬಹಳ ಸುಖಮಯವಾಗಿರುವುದೆಂದು ನಾನು ನಿಸ್ಸಂದೇಹವಾಗಿ ಭವಿಷ್ಯ ನುಡಿಯಬಲ್ಲೆ. …ನೀನು ಉಮೆಯಂತೆ ಜೀವನಾದ್ಯಂತ ಪವಿತ್ರಳಾಗಿ ಪರಿಶುದ್ಧಳಾಗಿರು. ಯಾರ ಪ್ರಾಣವೇ ಉಮೆಯಲ್ಲಿತ್ತೋ ಆ ಶಿವನಂತೆ ನಿನ್ನ ಗಂಡ ಇರಲಿ..’ ಎಂದು ಆಶೀರ್ವದಿಸಿದರು.
ಅದೇ ದಿನ ಇನ್ನೊಂದು ಪತ್ರದಲ್ಲಿ ಮೇರಿ ಹೇಲ್’ಗೆ ‘….ನನ್ನ ಪ್ರಿಯ ಮೇರಿ , ನಾನು ಈ ಜೀವನದಲ್ಲಿ ಕಲಿತ ಒಂದು ದೊಡ್ದ ಪಾಠವೆಂದರೆ ನಿನ್ನ ಆದರ್ಶ ಎತ್ತರವಾದಷ್ಟೂ ನೀನು ಹೆಚ್ಚು ವ್ಯಥಿತಳಾಗುವೆ. ಏಕೆಂದರೆ ಆದರ್ಶವೆಂಬ ವಸ್ತುವನ್ನು ಈ ಜಗತ್ತಿನಲ್ಲಿ ಪಡೆಯಲಾಗುವುದಿಲ್ಲ. …..ಹ್ಯಾರಿಯೆಟ್’ಳಲ್ಲಿ ತನ್ನನ್ನು ತಾನೇ ಮೂರ್ಖಳನ್ನಾಗಿ ಮಾಡಿಕೊಳ್ಳುವಷ್ಟು ಭಾವುಕತೆ ಇಲ್ಲ. ಆದ್ದರಿಂದ ಆಕೆಯ ವೈವಾಹಿಕ ಜೀವನ ಸುಖಕರವಾಗುವುದು….? ಹ್ಯಾರಿಯೆಟ್ ಮೆಕೆಂಡ್ಲಿ ಈ ವಿಷಯದಲ್ಲಿ , ಇನ್ನೂ ಉತ್ತಮ ಗೃಹಿಣಿಯಾಗುವುದರಲ್ಲಿ ಸಂಶಯವಿಲ್ಲ. ..ಆದರೆ ನಿನ್ನ ಮತ್ತು ಇಸಾಬೆಲ್ಲಾಳ ವಿಚಾರದಲ್ಲಿ ನನ್ನ ಮಾತುಗಳ ಅತಿ ಸ್ಪಷ್ಟವಾದುವು….ಮೇರಿ ನೀನು ಕಟ್ಟುಮಸ್ತಾದ ಕುದುರೆಯಂತಿರುವೆ. ದೈಹಿಕ ಮಾನಸಿಕವಾಗಿ ನಿನೊಬ್ಬ ತೇಜಸ್ವಿ ರಾಣಿಯಾಗಲು ಅರ್ಹಳು. ಆಡಂಬರದ ಕೆಚ್ಚೆದೆಯ ವೀರನೊಡನೆ ನೀನು ಶೋಭಿಸುವೆ. ..ಆದರೆ ಪ್ರಿಯ ಸೋದರಿ ವೈವಾಹಿಕ ಗೃಹಿಣಿಯ .ಜೀವನದಲ್ಲಿ ನಿನಗೆ ಸಂಪೂರ್ಣ ಅಪಜಯವೇ ಸಿಗುವುದು…… ನೀನು ನಿನ್ನ ಆದರ್ಶಗಳನ್ನು ಕೊಂಚ ವಾಸ್ತವಿಕ ಮಟ್ಟಕ್ಕೆ ಇಳಿಸದೆ ಖಂಡಿತವಾಗಿ ಮದುವೆಯಾಗಬಾರದು…ಸೋದರಿ ಇಸಾಬೆಲ್ಲಾಳಲ್ಲೂ ನಿನ್ನ ಗುಣವೇ ಇದೆ. ಶಿಶುವಿಹಾರ ನಡೆಸುತ್ತಿರುವುದರಿಂದ ಆಕೆಗೆ ತಾಳ್ಮೆ ಮತ್ತು ಸಹನೆ ಇದೆ. ಬಹುಶಃ ಅವಳೂ ಒಳ್ಳೆಯ ಗೃಹಿಣಿಯಾಗುವಳು… ಕುಡಿಯುವುದು , ತಿನ್ನುವುದು , ಸಮಾಜದಲ್ಲಿ ಗುರುತಿಸಿಕೊಳ್ಳುವುದು ಜೀವನದ ಗುರಿಯಲ್ಲ ಮೇರಿ. ಇದನ್ನು ನಿನಗೆ ವಿಶೇಷವಾಗಿ ಹೇಳುತ್ತೇನೆ. ನೀನು ಮದುವೆಯಾಗಿಯೂ ಸುಖವಾಗಿ ಇರುವೆಯಾದರೆ ನಾನು ಅತೀವ ಸಂತೋಷ ಪಡುತ್ತೇನೆ ’ ಎಂದು ಬುದ್ಧಿವಾದ ಹೇಳಿ ಭವಿಷ್ಯ ನುಡಿದರು. (೧೭/೯/೧೮೯೬). ಮುಂದಿನ ದಿನಗಳಲ್ಲಿ ಹ್ಯಾರಿಯೆಟ್ ಹೇಲ್ ಗಂಡ ಕ್ಲಾರೆನ್ಸ್ ವೂಲಿಯಿಂದ ವಿಚ್ಚೇದನ ಪಡೆದರೆ , ಮೇರಿ ಹೇಲ್ ತನಗಿಂತ ೩೩ ವರ್ಷ ಹಿರಿಯನಾಗಿದ್ದ ಶ್ರೀಮಂತನನ್ನು ಮದುವೆಯಾಗಿ , ಕೊನೆಯವರೆಗೂ ಆತನೊಂದಿಗೆ ಉಳಿದಳು. ಹೇಲ್ ಸೋದರಿಯರಿಬ್ಬರೂ ಸ್ವಾಮಿಗಳು ನುಡಿದಿದ್ದ ಭವಿಷ್ಯವನ್ನು ಸುಳ್ಳು ಮಾಡಿದರು.
ಭಾರತಕ್ಕೆ ಮರಳಿದ ನಂತರ -೧೮೯೭- ಒಬ್ಬ ಯುರೋಪಿಯನ್ ಮಹಿಳೆ ಕೇಳಿದ ಪ್ರಶ್ನೆ ಮತ್ತು ಸ್ವಾಮಿಗಳು ನೀಡಿದ ಉತ್ತರವನ್ನು ಶ್ರೀನಿವಾಸ ಪೈ ನೆನಪಿಸಿಕೊಂಡಿದ್ದಾರೆ. ಒಂದು ದಿನ ಬೆಳಿಗ್ಗೆ ಯುರೋಪಿಯನ್ ಮಹಿಳೆ ಬಂದು ಸಹಜ ಮತ್ತು ನೀತಿಯುತವಾದ ಕಾಮವನ್ನು ನಿಗ್ರಹಿಸಿ ಬ್ರಹ್ಮಚರ್ಯ ಆಚರಿಸಿ, ಸಂನ್ಯಾಸಿಯಾಗುವುದರಲ್ಲಿ ಅರ್ಥವಿಲ್ಲ. ಅದರಲ್ಲಿ ಹಲವು ತೊಂದರೆಗಳಿವೆ ಎಂದು ಹೇಳಿದಳು. ಅದಕ್ಕೆ ಸ್ವಾಮಿಯವರ ಸಂನ್ಯಾಸಿ ಏಕೆ ಬ್ರಹ್ಮಚಾರಿಯಾಗಿರಬೇಕು ಎನ್ನುವುದಕ್ಕೆ ಮಾನಸಿಕ , ತಾತ್ತ್ವಿಕ ಕಾರಣಗಳನ್ನು ನೀಡಿದರು. ಆ ಉತ್ತರಗಳು ಆಕೆಗೆ ತೃಪ್ತಿ ನೀಡಲಿಲ್ಲ. ಆಗ ಸ್ವಾಮಿಗಳು ಅರೆಹಾಸ್ಯದ ಧ್ವನಿಯಲ್ಲಿ ನಿಮ್ಮ ದೇಶದಲ್ಲಿ ಬ್ರಹ್ಮಚಾರಿಯನ್ನು ಕಂಡರೆ ಹೆದರುತ್ತಾರೆ. ಆದರೆ ಜನರಿಂದ ಪೂಜಿತವಾಗಿರುವ ಬ್ರಹ್ಮಚಾರಿ ನನ್ನನ್ನು ನೋಡಿ’ ಎಂದರು. (105) ಇದಾದ ನಂತರ ಅವರು ಖಾಸಗಿಯಾಗಿ ನನಗೀಗ ೩೦ ( ೩೪ ಆಗಿದ್ದಿತು) ಆದರೆ ನನಗೆ ಹೆಣ್ಣಿನ ಬಗ್ಗೆ ಏನೂ ಗೊತ್ತಿಲ್ಲ ‘ ಎಂದು ವಿಷಾದ ಬೆರೆತ ಛಾಯೆಯಲ್ಲಿ ನನಗೆ ತಿಳಿಸಿದರು ಎಂದು ಶ್ರೀನಿವಾಸ ಪೈ ದಾಖಲಿಸಿದ್ದಾರೆ.
‘ಮದುವೆ ಪವಿತ್ರ ಮತ್ತು ಅದು ವಿಚ್ಛೇದನಕ್ಕೆ ಆಸ್ಪದವಿಲ್ಲದಿರುವುದು ಎನ್ನುವುದನ್ನು ಹಾಗೂ ತಾಯ್ತನಕ್ಕೆ ಹೆಚ್ಚು ಗೌರವ ಕೊಡುವುದನ್ನು ಕಲಿಯಬೇಕು. ಆ ನಂತರವೇ ನನ್ನ ದೃಷ್ಟಿಯಲ್ಲಿ ಒಂದು ಜನಾಂಗವು ಸಂಪೂರ್ಣ ಬ್ರಹ್ಮಚರ್ಯ ಆದರ್ಶವನ್ನು ಪಡೆಯಲು ಸಾದ್ಯ…… ರೋಮನ್ ಕ್ಯಾಥೊಲಿಕ್ ಮತ್ತು ಹಿಂದೂಗಳು ಮದುವೆ ಪವಿತ್ರವಾದುದೆಂದು ತಿಳಿದದ್ದರಿಂದ ವಿಶೇಷ ಶಕ್ತಿಯ ಸಂಯಮಿ ಗಂಡಸರು ಮತ್ತು ಹೆಂಗಸರಿಗೆ ಜನ್ಮವಿತ್ತಿದ್ದಾರೆ’ ಇದು ಸ್ವಾಮಿಗಳು ಸಾರಾ ಬುಲ್’’ಗೆ ಪ್ರತಿಪಾದಿಸಿದ ನೀತಿಯಾಗಿದ್ದಿತು. (೪/೬/೧೯೦೨) ಹೆಣ್ಣಿನ ಸ್ವಾಭಾವಿಕ ಮಾರ್ಗವ ಮದುವೆಯ ಮೂಲಕ ಒಬ್ಬನನ್ನು ಆಶ್ರಯಿಸಿಕೊಂಡು ಹಬ್ಬುವುದು. ಆದರೆ ಅಂತಹ ಕಾಲಗಳೆಲ್ಲ ಆಗಿ ಹೋದವು. ನೀನು ಯಾವ ಮನುಷ್ಯನ ಸಹಾಯವಿಲ್ಲದೆ ನೀನಿರುವಂತೆ ಸರಳವಾಗಿ ಒಬ್ಬ ದೊಡ್ದ ವ್ಯಕ್ತಿಯಾಗುವೆ-ಪ್ರಿಯ ಜೋ ಜೋ (೧೪/೬/೧೯೦೧) ಇದು ಸ್ವಾಮಿಗಳಿಗಿಂತ ಐದು ವರ್ಷ ದೊಡ್ದವಳಾಗಿದ್ದ ಜೊಸೆಫಿನ್ ಮೆಕ್ಲಿಯಾಡ್’ ಮದುವೆಯಾಗದೆ ಉಳಿದಿದ್ದಕ್ಕೆ ನೀಡಿದ ಸಮರ್ಥನೆಯಾಗಿದ್ದಿತು.
ಮದುವೆ ಪವಿತ್ರ , ತಾಯ್ತನ ಶ್ರೇಷ್ಟ ಎನ್ನುತ್ತಿದ್ದ ಸ್ವಾಮಿಗಳಿಗೆ ವೈಕುಂಠನಾಥ ಸನ್ಯಾಲ್ ತನ್ನ ಮಗಳಿಗೆ ಗಂಡನ್ನು ಹುಡುಕುತ್ತಿರುವುದರ ಬಗ್ಗೆ ಬಹಳ ಅಸಮಾಧಾನವಿದ್ದಿತು ಇದಕ್ಕೆ ಬಾಲ್ಯವಿವಾಹ ಒಂದು ಕಾರಣವಾದರೆ , ಮದುವೆಯ ಬಗ್ಗೆ ಸ್ವಾಮಿಗಳಿಗಿದ್ದ ದೃಷ್ಟಿಕೋನ ಇನ್ನೊಂದು ಕಾರಣವಾಗಿದ್ದಿತು. ಬೋಸ್ಟನ್’ (೨೦/೫/೧೮೯೪) ಮತ್ತು ನ್ಯೂಯಾರ್ಕ್’ನಿಂದ (೨೩/೧೨/೧೮೯೫) ಶಾರದಾನಂದರಿಗೆ ‘ ಮದುವೆ ಎನ್ನುವುದನ್ನೇ ನಾನು ದ್ವೇಷಿಸುವೆ…ಸನ್ಯಾಲ್ ಮಗಳ ಮದುವೆಗೆ ಅಷ್ಟೊಂದು ಏಕೆ ಹೆಣಗುತ್ತಿದ್ದಾನೆ ಎನ್ನುವುದು ನನಗೆ ತಿಳಿಯದು. ಯಾವ ಸಂಸಾರ ಪಾಶದಿಂದ ತಾನು ಪಾರಾಗಬೇಕೆಂದಿರುವನೋ ಅದಕ್ಕೆ ತನ್ನ ಮಗಳನ್ನು ಕೆಡವುತ್ತಿದ್ದಾನೆ ! ಆ ವಿಷಯದಲ್ಲಿ ನನ್ನ ಅಭಿಪ್ರಾಯ ಖಂಡನೆ ಮಾತ್ರ. ಒಬ್ಬ ಹುಡುಗ ಅಥವಾ ಹುಡುಗಿ ವಿಚಾರದಲ್ಲಿ ಮದುವೆ ಎನ್ನುವ ಶಬ್ದವನ್ನೇ ನಾನು ದ್ವೇಷಿಸುವೆ. ಮೂರ್ಖ ! ಇನ್ನೊಬ್ಬರನ್ನು ಬಂಧನಕ್ಕೀಡು ಮಾಡಲು ನೆರವಾಗಲು ಹೇಳುವೆಯಾ ! ನನ್ನ ತಮ್ಮ ಮೊಹಿನ್ (ಮಹೆಂದ್ರನಾಥ ದತ್ತ) ಮದುವೆಯಾದರೆ ನಾನವನನ್ನು ಹೊರಗೆ ಹಾಕುತ್ತೇನೆ. ಆ ವಿಷಯದಲ್ಲಿ ನನ್ನದು ಇದೇ ನಿರ್ವಿವಾದ ತೀರ್ಮಾನ ‘ ಎಂದು ಗುಟರು ಹಾಕಿದ್ದರು. ೧೮೯೬ ರಲ್ಲಿ ಲಂಡನ್’ನಿಂದ ಅಳಸಿಂಗ್ ಪೆರುಮಾಳ್’ಗೆ ‘ ಮದ್ರಾಸಿನವರಿಗೆ ಮುಂದುವರೆಯುವ ಶಕ್ತಿಯಿದೆ , ಸ್ಥಿರ ಬುದ್ಧಿಯಿದೆ. ಆದರೆ ಪ್ರತಿಯೊಬ್ಬ ಮೂರ್ಖನೂ ಮದುವೆಯಾಗಿರುವನು. ಅವರು ನಿಸ್ಸಂಗಿಯಾದ ಗೃಹಸ್ಥರಾಗಲು ಯತ್ನಿಸುತ್ತಿರುವುದು ಒಳ್ಳೆಯದು. ನನಗ ಮದ್ರಾಸಿನಲ್ಲಿ ಸಧ್ಯಕ್ಕೆ ಬೇಕಾಗಿರುವವರು ಅವರಲ್ಲ, ಮದುವೆಯಾಗದಿರುವವರು’ ಎಂದು ಸ್ಪಷ್ಟಪಡಿಸಿದ್ದರು. ಸ್ವಾಮಿಗಳು ಇದಾದ ಮೂರುವರೆ ವರ್ಷದ ನಂತರ ೨೨/೧೧/೧೮೯೮ ರಂದು ಖೇತ್ರಿ ರಾಜ ಅಜಿತ್ ಸಿಂಗ್’ಗೆ ‘ ..ನಾನು ನನ್ನ ತಾಯಿಯೊಂದಿಗೆ ಇದ್ದು ವಂಶ ನಾಶವಾಗದಂತೆ ನನ್ನ ತಮ್ಮನಿಗೆ ಮದುವೆ ಮಾಡಿಸಬೇಕೆಂದಿದ್ದೇನೆ. (ಆಗ ಭೂಪೇಂದ್ರನಾಥದತ್ತನಿಗೆ ೧೮ರ ಹರಯ-ಜನನ ೧೮೮೦) ಇದು ಖಂಡಿತವಾಗಿಯೂ ಕೊನೆಯ ದಿನಗಳಲ್ಲಿ ನನ್ನ ತಾಯಿಗೆ ನೆಮ್ಮದಿ ತರುವುದು…..ನಾನೀಗ ನನ್ನ ತಾಯಿಗೆ ಸಣ್ಣದಾದ ಚೊಕ್ಕ ಮನೆಯನ್ನು ಕಟ್ಟಿ ಅದರಲ್ಲಿರಲು ಕಿರಿಯ ತಮ್ಮನಿಗೂ ಒಂದು ಜಾಗ ಒದಗಿಸಬೇಕೆಂದಿರುವೆ.. ಏಕೆಂದರೆ ಅವನು ಹಣ ಸಂಪಾದನೆಯಲ್ಲಿ ಯಶಸ್ವಿಯಾಗುವುದು ಸಂಶಯ…. ‘ ಎಂದು ತಿಳಿಸಿದ್ದ ಧೀರ ಸಂನ್ಯಾಸಿ ‘ಮಾಯೆಯ ಅಶಾಶ್ವತ’ ಜಗತ್ತಿನಲ್ಲಿ ದತ್ತ ವಂಶ ಮಂದುವರೆಯಬೇಕೆಂಬ ಬಯಕೆ ಹೊಂದಿದ್ದರು. ಇತರರ ವಂಶ ಏನಾದರಾಗಲಿ ಅವರು ಧೀರ ಸಂನ್ಯಾಸಿಗಳಾಗಲಿ , ನಮ್ಮ ವಂಶ ಮುಂದುವರೆಯಲಿ ಎಂದು ಬಯಸಿದ್ದರು.
ಮೇರಿ ಹೇಲ್’ಗೆ ಮದುವೆಯ ಸೀಮಿತತೆ , ನಿರರ್ಥಕತೆ ಬೋಧಿಸಿದ , ಮಿಸ್ ಜೊಸೆಫಿನ್ ಮೆಕ್ಲಿಯಾಡ್ ಮದುವೆಯಾಗದೆ ಉಳಿದಿರುವುದನ್ನು ಸಮರ್ಥಿಸಿದ , ಕ್ರಿಸ್ಟೈನಾ ಗ್ರೀನ್’ಸ್ಟೈಡಲ್ , ಸಾರಾ ಎಲೆನ್ ವಾಲ್ಡೊ ಮುಂತಾದವರಿಗೆ ಬ್ರಹ್ಮಚರ್ಯದ ದೀಕ್ಷೆ ನೀಡಿದ , ಬ್ರಹ್ಮಚರ್ಯವೇ ಜೀವನದ ಸಾರ ಎಂದು ಅಮೆರಿಕದ ವೇದಿಕೆಗಳಿಂದ ಘರ್ಜಿಸಿದ , ಮದುವೆ ಎನ್ನುವುದನ್ನೇ ದ್ವೇಷಿಸುವೆ ಎಂದು ಶಾರದಾನಂದರಿಗೆ ತಿಳಿಸಿದ ಸ್ವಾಮಿಗಳು ಮದುವೆಯ ಬಗ್ಗೆ ತಳೆದಿರುವ ನಿಲುವುಗಳು ಬಹಳ ವಿಚಿತ್ರವಾಗಿವೆ. ಸಂನ್ಯಾಸಿಯಾಗಿ ಮನೆ ಹೊಂದುವುದು ನಿಷಿದ್ಧವಾಗಿರುವುದಲ್ಲದೆ. ಸ್ವಂತ ಮನೆಯೇ ಇಲ್ಲದ ಸ್ವಾಮಿಗಳು ಮದುವೆಯಾದರೆ ಮಹೇಂದ್ರನಾಥದತ್ತನನ್ನು ಹೊರಗೆ ಹಾಕುವುದಾಗಿ ತಿಳಿಸಿದ್ದಾರೆ. ತನ್ನದಾದ ಏನೊಂದೂ ಇಲ್ಲದ ಸಂನ್ಯಾಸಿ ಯಾರನ್ನು , ಎಲ್ಲಿಂದ ಹೊರಹಾಕುವುದು ಸಾಧ್ಯ? ಭೂಪೇಂದ್ರನಾಥ ದತ್ತನಿಗೆ ಮದುವೆಯಾಗುವ ಬಯಕೆ ಇದೆಯೋ ಇಲ್ಲವೋ ಬಲ್ಲವರಾರು ? ಸ್ವಾಮಿಗಳು ಕಾಲಕಾಲಕ್ಕೆ ಬದಲಾಗುವ ತಮ್ಮ ಅಭಿಲಾಷೆಗೆ ತಕ್ಕಂತೆ ಇತರರು ಬದಲಾಗಬೇಕೆಂದು ಬಯಸುತ್ತಿದ್ದರು. ಮದುವೆಯನ್ನು ಹೀಗಳೆಯುತ್ತಲೇ ೧೬ ವರ್ಷಗಳ ಮಗಳು ಮತ್ತು ೧೪ ವರ್ಷದ ಮಗನಿದ್ದ ಎರಡನೆಯ ಮದುವೆಗೆ ಭರದಿಂದ ಸಿದ್ದಳಾಗುತ್ತಿದ್ದ ಬೆಟ್ಟಿ ಸ್ಟರ್ಜಿಸ್ ಮತ್ತು ಆಕೆಯ ಪ್ರಿಯಕರ ಶ್ರೀಮಂತ ಫ್ರಾನ್ಸಿಸ್ ಲೆಗೆಟ್’ಗೆ ಮದುವೆಯ ನಿರರ್ಥಕತೆ ಬೋಧಿಸಲಿಲ್ಲ. ಪ್ಯಾರಿಸ್’ನಲ್ಲಿ ನಡೆದ ಅವರ ಮದುವೆಗೆ ಉತ್ಸಾಹದಿಂದಲೇ ಹೋಗಿದ್ದರು.
೨೫/೨/೧೮೮೫ ರಲ್ಲಿ ಗಿರೀಶ್ ಚಂದ್ರ ಘೋಷ್’ಗೆ ರಾಮಕೃಷ್ಣರು ಹೆಣ್ಣು-ಹೊನ್ನು , ಬ್ರಹ್ಮಚರ್ಯ ಬಗ್ಗೆ ಮಾತನಾಡುತ್ತ ಸಂನ್ಯಾಸಿಗಳು ಆಚರಿಸಬೇಕಾದ ಕಠಿಣ ನಿಯಮಗಳನ್ನು ಹೀಗೆ ಹೇಳಿದ್ದರು. ‘ ಲೌಕಿಕ ಸುಖಗಳಲ್ಲಿ ಹಲವು ವಿಧ- ಹಣ, ಸಂಪತ್ತು, ಕೀರ್ತಿ ಮತ್ತು ಇಂದ್ರಿಯ ಸುಖ. ಮಹಿಳಾ ಭಕ್ತರೊಂದಿಗೆ ಸಂನ್ಯಾಸಿ ಕುಳಿತುಕೊಳ್ಳುವುದಾಗಲಿ ಆಕೆಯೊಂದಿಗೆ ಮಾತನಾಡುವುದಾಗಲಿ ಒಳ್ಳೆಯದಲ್ಲ. ಅದು ಆತನನ್ನು ಮತ್ತು ಇತರರನ್ನು ಘಾಸಿಗೊಳಿಸುತ್ತದೆ. ಆಗ ಇತರರು ಅವನಿಂದ ಕಲಿಯಲಾರರು; ಆತ ಸಮಾಜಕ್ಕೆ ಮಾದರಿಯಾಗಲಾರ. ಮಾನವಕೋಟಿಗೆ ಬೋಧಿಸಲು ಸಂನ್ಯಾಸಿ ತನ್ನ ದೇಹವನ್ನು ಪಾಲಿಸುತ್ತಾನೆ. ಹೆಂಗಸಿನೊಂದಿಗೆ ಕುಳಿತುಕೊಳ್ಳುವುದು ಮತ್ತು ದೀರ್ಘ ಕಾಲ ಮಾತನಾಡುವುದು ಒಂದು ಬಗೆಯ ಲೈಂಗಿಕ ಕೂಡಿಕೆಯೇ. ಅವು ಎಂಟು ಬಗೆ. ಹೆಣ್ಣಿನೊಂದಿಗೆ ಕುಳಿತುಕೊಳ್ಳುವುದು ಆಕೆಯ ಸಂಭಾಷಣೆಯನ್ನು ಆಸ್ವಾದಿಸುವುದು ಮೊದಲನೆಯದು. ಹೆಣ್ಣಿನ ಬಗ್ಗೆ ಮಾತನಾಡುವುದು ಎರಡನೆಯದು. ಖಾಸಗಿಯಲ್ಲಿ ಆಕೆಯಲ್ಲಿ ಪಿಸುಗುಟ್ಟುವುದು ಮೂರನೆಯದು. ಹೆಣ್ಣಿಗೆ ಸಂಬಂಧಿಸಿದ ವಸ್ತುವನ್ನು ಬಳಿಯಿರಿಸಿಕೊಂಡು ಆನಂದಿಸುವುದು ನಾಲ್ಕನೆಯದು. ಆಕೆಯನ್ನು ಮುಟ್ಟುವುದು ಐದನೆಯದು. ಆದ್ದರಿಂದ ಸಂನ್ಯಾಸಿ ತನ್ನ ಗುರುವಿನ ಕಿರಿಯ ವಯಸ್ಸಿನ ಹೆಂಡತಿಯ ಪಾದವನ್ನು ಮುಟ್ಟಿ ನಮಸ್ಕರಿಸಬಾರದು…. ಇವು ಸಂನ್ಯಾಸಿ ಪಾಲಿಸಬೇಕಾದ ನಿಯಮಗಳು. (106)
ಅಮೆರಿಕದಲ್ಲಿ ನದಿ ತೀರದ ಮೇಲಿನ ಗುಡಿಸಲಿನಲ್ಲಾಗಲಿ , ಮರದ ಕೆಳಗೆ ಬದುಕುವ ಅವಕಾಶವಾಗಲಿ ಇರಲಿಲ್ಲವಾದರೂ ಸಂಘ, ಸಂಸ್ಥೆಗಳ ಕೊಠಡಿ , ಧಾರ್ಮಿಕ ಹಾಸ್ಟೆಲ್, ಚರ್ಚ್ ಕೋಣೆಗಳಲ್ಲಿ ವಾಸಿಸುವುದು ಸಾದ್ಯವಿದ್ದಿತು. ಸ್ವಾಮಿಗಳು ತಮ್ಮ ಗುರುಗಳು ಹಾಕಿದ ಸಂನ್ಯಾಸಿ ನಿಯಮಗಳನ್ನು ಅನಿವಾರ್ಯವಾದ ಸ್ಥಿತಿ ಇಲ್ಲದಿದ್ದಾಗಲೂ ಮುರಿಯುತ್ತಿದ್ದರು. ಆರಂಭದಲ್ಲಿ ಮಾತ್ರವಲ್ಲ ನಂತರದ ದಿನಗಳಲ್ಲೂ ಸ್ವಾಮಿಗಳು ನಾಲ್ಕ ಜನ ಯುವತಿಯರಿದ್ದ ಹೇಲ್ ಮನೆಯಲ್ಲಿ ವಾಸಿಸುವುದನ್ನು ಬಿಡಲಿಲ್ಲ, ೧೮೯೪ ಜೂನ್ ತಿಂಗಳಲ್ಲಿ ಶ್ರೀಮತಿ ಮತ್ತು ಶ್ರೀ ಜಾರ್ಜ್ ಹೇಲ್ ಪ್ರವಾಸಕ್ಕೆ ಹೋಗಿದ್ದಾಗ ಹೇಲ್ , ಮೆಕೆಂಡ್ಲಿ ಸೋದರಿರರೊಂದಿಗೆ ಸ್ವಾಮಿಗಳ ಅವರ ಮನೆಯಲ್ಲಿ ಉಳಿದಿದ್ದರು. ಹರೆಯದ ವಯಸ್ಸಿನ ಹೆಣ್ಣು ಮಕ್ಕಳಿದ್ದ ಶ್ರೀಮತಿ ಸಾರಾ ಬುಲ್ ಮತ್ತು ಶ್ರೀಮತಿ ಜಾನ್ ಬ್ಯಾಗ್ಲಿಯ ಮನೆಯಲ್ಲಿರುತ್ತಿದ್ದರು. ಅನ್ನಿಸ್ಕ್ವಾಮ್’ನಲ್ಲಿ ಬ್ರಾಡ್ಲಿಯವರ ಹೆಂಡತಿಯ ತಂಗಿ ಚಿತ್ರ ಬರೆಯುವಾಗ ಸ್ವಾಮಿಗಳು ರೂಪದರ್ಶಿಯಾಗಿ ಹಲವು ದಿನ ಆಕೆಯ ಎದುರು ಕುಳಿತಿದ್ದರು. (೨೦/೮/೧೮೯೪) , ೧೮೯೪ ರ ಕ್ರಿಸ್ಮಸ್ ಹಬ್ಬದ ಸಮಯವನ್ನು ಸಾರಾ ಬುಲ್ ಮನೆಯಲ್ಲಿ ಆಕೆಯ ಸ್ನೇಹಿತೆಯರೊಂದಿಗೆ ಬೆಂಕಿಯ ಒಲೆಯ ಮುಂದೆ ಕುಳಿತು ಧೈರ್ಯ ಮತ್ತು ಶಕ್ತಿಯನ್ನು ಉದ್ದೀಪಿಸುವ ಕೆಲ ಸಂಸ್ಕೃತ ಶ್ಲೋಕ , ಮಂತ್ರಗಳನ್ನು ಹೇಳುತ್ತ, ನೆರೆದಿದ್ದ ಹೆಂಗಸರನ್ನು ರಂಜಿಸುತ್ತ ಸ್ವಾಮಿಗಳು ಕಳೆದಿದ್ದರು. (107) ಪೆರ್ಸಿಯಲ್ಲಿದ್ದ ವೈಟ್ ಬರ್ಚ್ ಲಾಜ್’ನಲ್ಲಿ ೧೮೯೫ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ವಾರ ಫ್ರಾನ್ಸಿಸ್ ಲೆಗೆಟ್ ಹಾಗೂ ಮೆಕ್ಲಿಯಾಡ್ ಸೋದರಿಯರೊಂದಿಗಿದ್ದರು. ೧೮೯೯ ರಲ್ಲಿ ಸ್ಟೋನ್ ರಿಜ್ –ರೀಡ್ಜ್’ಲಿ ಮ್ಯಾನೊರ್ ಎನ್ನುವ ಐಷಾರಾಮಿ ರಿಸಾರ್ಟ್’ನಲ್ಲಿ ಶ್ರೀಮತಿ ಬೆಟ್ಟಿ ಲೆಗೆಟ್ , ಮಿಸ್ ಜೊಸೆಫಿನ್ ಮೆಕ್ಲಿಯಾಡ್ , ಮುಂತಾದವರೊಂದಿಗೆ ೭೧ ದಿನ ತಮ್ಮ ಆರೋಗ್ಯ ಸುಧಾರಿಸಿಕೊಂಡರು. ೧೯೦೦, ಜನವರಿ-ಫೆಬ್ರವರಿಯಲ್ಲಿ ೨೭ ದಿನ ಮೀಡ್ ಸೋದರಿಯರ ಮನೆಯಲ್ಲಿದ್ದರು. ಇದೇ ಸಮಯದಲ್ಲಿ ಮೆಕ್ಲಿಯಾಡ್ ಸೋದರಿಯರೊಂದಿಗೆ ‘ಮೌಂಟ್ ಲೋ ಸಮ್ಮಿಟ್’ಗೆ ಪ್ರವಾಸ ಕೈಗೊಂಡಿದ್ದರು. ಪಸಡೆನದಲ್ಲಿ ಬಹುತೇಕ ಹೆಂಗಸರೇ ಇದ್ದ ಗುಂಪಿನಲ್ಲಿ ಹಲವು ಸಲ ಬೆಟ್ಟದ ಮೇಲಿನ ಹೊರಸಂಚಾರಕ್ಕೆ ಹೋಗಿದ್ದರು. ೧೯೦೦ , ಮಾರ್ಚ್ ತಿಂಗಳಿನಲ್ಲಿ ಸ್ಯಾನ್’ಫ್ರಾನ್ಸಿಸ್ಕೊ, ಟರ್ಕ್ ಸ್ಟ್ರೀಟ್’ನಲ್ಲಿದ್ದ ಅಪಾರ್ಟ್’ಮೆಂಟ್’ನಲ್ಲಿ ೪೮ ದಿನ ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಮತ್ತು ಶ್ರೀಮತಿ ಎಮಿಲಿ ಆಸ್ಪಿನಾಲ್ ಜೊತೆಗಿದ್ದರು. ಸ್ವಾಮಿಗಳೊಂದಿಗೆ ಹೆಂಗಸರು ವಾಸಿಸುವುದು ಶ್ರೀ ಆಸ್ಪಿನಾಲ್’ಗೆ ಸರಿ ಕಂಡಿರಿರಲಿಲ್ಲವಾದರೂ ಹೆಂಡತಿಯ ಒತ್ತಾಯಕ್ಕೆ ಆತ ಮಣಿದಿದ್ದನು.
ಸ್ವಾಮಿ ವಿವೇಕಾನಂದರು ಲಂಡನ್’ನಲ್ಲಿದ್ದಾಗ ತಮ್ಮ ಮಹೇಂದ್ರನಾಥದತ್ತನಿಗೆ ಹೇಳಿದ ಒಂದು ಪ್ರಸಂಗ ಹೀಗಿದೆ. (೫೪) ‘ಶ್ರೀಮತಿ ಹೇಲ್’ಗೆ ಇಬ್ಬರು ಹೆಣ್ಣುಮಕ್ಕಳು. ಅವರು ಸ್ವಾಮಿಯವರನ್ನು ಸೋದರನಂತೆ ಪರಿಗಣಿಸಿದ್ದರು. ಒಮ್ಮೆ ಸ್ವಾಮಿಯವರು ಕತ್ತರಿ ಕೊಡುವಂತೆ ಅವರನ್ನು ಕೇಳಿದರು. ಆಗ ಅವರು ಆಶ್ಚರ್ಯದಿಂದ ಏತಕ್ಕೆ ಎಂದು ಕೇಳಿದರು. ಆಗ ಹೇಲ್ ಸೋದರಿಯರಲ್ಲಿ ಒಬ್ಬಾಕೆ ಉಗುರು ಕತ್ತರಿಯನ್ನು ತಂದು , ಚಾಪೆಯ ಮೇಲೆ ಅಂಬೆಗಾಲಿಕ್ಕುವ ಮಗು ಮಂಡಿಗಳನ್ನೂರಿ ಕೂರುವಂತೆ ಕೂತು , ಸ್ವಾಮಿಗಳ ಬೂಟುಗಳನ್ನು , ಕಾಲ್ಚೀಲವನ್ನು ಎಚ್ಚರಿಕೆಯಿಂದ ಬಿಚ್ಚಿ , ನಯವಾಗಿ ಉಗುರು ಕತ್ತರಿಸತೊಡಗಿದಳು. ಉಗುರು ಕತ್ತರಿಸುವಾಗ ಕೆಲವೊಮ್ಮೆ ಸ್ವಾಮಿಗಳ ಕಾಲನ್ನು ತನ್ನ ತೊಡೆಯ ಮೇಲಿರಿಸಿಕೊಂಡು , ಕೆಲವು ಸಲ ಪಾದಗಳತ್ತ ಕುತ್ತಿಗೆ ಬಗ್ಗಿಸಿ ಬಹು ದೀರ್ಘ ಕಾಲ ಉಗುರುಗಳನ್ನು ಕತ್ತರಿಸಿದಳು. ಸ್ವಾಮಿ ವಿವೇಕಾನಂದರು ಮಹೇಂದ್ರನಾಥ ದತ್ತನಿಗೆ ‘ಹೀಗೆ ಉಗುರು ಕತ್ತರಿಸುವಾಗ ನಾನು ಕುತ್ತಿಗೆ ಮಟ್ಟದ ಬಂಧನದಲ್ಲಿದ್ದೆ. ಅದು ಮುಗಿಯುತ್ತಿದ್ದಂತೆಯೇ ನಿರಾಳವಾದೆ’ ಎಂದು ಹೇಳಿದರು. ಉಗುರು ಕತ್ತರಿಸಿದ ಮೇಲೆ ಮಿಸ್ ಹೇಲ್ ನಾವು ಅಮೆರಿಕನ್ನರು ಯಾವ ಕೆಲಸವನ್ನೂ ಪುಕ್ಕಟೆ ಮಾಡುವುದಿಲ್ಲ. ಹಜಾಮರ ಅಂಗಡಿಗೆ ಹೋಗಿದ್ದರೆ ಉಗುರು ಕತ್ತರಿಸಲು ಹಣ ಕೊಡಬೇಕಾಗುತ್ತಿದ್ದಿತು. ಈಗ ನನಗೆ ಹಣ ಕೊಡಿ ‘ ಎಂದು ಪೀಡಿಸತೊಡಗಿದಳು. ಅದಕ್ಕೆ ಗುರುಗಳು ನನ್ನ ಪಾದವನ್ನು ಮುಟ್ಟುವ ಅವಕಾಶವನ್ನು ಕೊಟ್ಟಿದ್ದೇನೆ. ಪೋಪರ ಪಾದವನ್ನು ಮುಟ್ಟಲು ಸಾಮಾನ್ಯ ಜನರಿಗೆ ಅವಕಾಶವಿಲ್ಲ. ನಾನೇಕೆ ಹಣ ಕೊಡಲಿ ಎಂದು ಕಿಚಾಯಿಸಿದರು. (108)
ಸ್ವಾಮಿಗಳು ಖ್ಯಾತರಾದ ನಂತರ ಅವರ ಶಿಷ್ಯರು , ಗುರುಭಾಯಿಗಳು ಅವರ ವೈರಾಗ್ಯದ ತೀವ್ರತೆಯ ಬಗ್ಗೆ ಹೇಳತೊಡಗಿದರು. ಸ್ವಾಮಿ ತುರೀಯಾನಂದರು ೧೯೦೦ ರಲ್ಲಿ ಪ್ಯಾರಿಸ್ ಎಕ್ಸಿಬಿಷನ್’ನಲ್ಲಿ ನಡೆದ ಒಂದು ಘಟನೆಯನ್ನು ಉದ್ಭೋಧನದಲ್ಲಿ ದಾಖಲಿಸಿದ್ದಾರೆ. ಒಂದು ದಿನ ಸ್ವಾಮಿಗಳು ಪ್ರದರ್ಶನದ ಮೈದಾನದಲ್ಲಿ ಹೋಗುತ್ತಿರುವಾಗ ಸೆಳೆದಿಡುವ ಚೆಲುವಿನ ತರುಣಿಯೊಬ್ಬಳನ್ನು ಸ್ವಾಮಿಗಳು ನೋಡಿದರು. ಮೆಚ್ಚುಗೆಯಿಂದ ಆಕೆಯನ್ನು ಮತ್ತೊಮ್ಮೆ ನೋಡಲು ಕುತ್ತಿಗೆಯನ್ನು ಹಿಂದಿಕ್ಕೆ ಹೊರಳಿಸಿದಾಗ ಆಕೆ ಎಷ್ಟು ಮನಮೋಹಕವಾಗಿದ್ದಳೋ ಅಷ್ಟೇ ಅಸಹ್ಯರೀತಿಯ ಗಂಟುಮೋರೆಯ ಕೋತಿಯಾಗಿ ಪರಿವರ್ತಿತವಾಗಿ ಕಂಡಳು’ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನು ಮಾರಿ ಲೂಯಿ ಬರ್ಕೆ ಯಾವುದೇ ಪ್ರಶ್ನೆಗಳಿಲ್ಲದೆ ಒಪ್ಪಿಕೊಂಡಿದ್ದಾಳೆ. (109) ಇಲ್ಲಿ ಮೊದಲ ನೋಟದಲ್ಲಿ ಸ್ವಾಮಿಗಳು ಹಿಂದಿರುಗಿ ನೋಡಿದ ಸಂಗತಿಯಲ್ಲಿಯೇ ಸತ್ಯ ಅಡಕವಾಗಿದೆ.
ಇದಕ್ಕೆ ಪೂರಕವಾಗಿ ಕ್ಯಾಂಪ್ ಟೇಲರ್’ನಲ್ಲಿರುವಾಗ ನಾನು ವಿಶ್ವ ಧರ್ಮ ಸಂಸತ್ತಿನಲ್ಲಿ ‘ ಅಮೆರಿಕದ ಅಣ್ಣ ತಮ್ಮಂದಿರೆ , ಅಕ್ಕ ತಂಗಿಯರೇ’ ಎಂದಾಗ ಇಡೀ ಸಭಾಂಗಣ ತುದಿಗಾಲಿನಲ್ಲಿ ಎದ್ದು ನಿಂತಿತು. ಅಂತಹ ಶಕ್ತಿ ನನ್ನಲ್ಲಿ ಏನಿದೆ ಎಂದು ನೀವು ಸೋಜಿಗಪದಬಹುದು. ನನಗೊಂದು ಶಕ್ತಿಯಿದೆ-ನನ್ನ ಜೀವನದಲ್ಲಿ ಒಮ್ಮೆಯೂ ನನಗೆ ಕಾಮದ ಚಿಂತನೆ ಬಂದಿಲ್ಲ. ನನ್ನ ಮನಸ್ಸನ್ನು ಯಾವಾಗಲೂ ಉನ್ನತ ಪ್ರಜ್ಞೆಯಲ್ಲಿರುವಂತೆ ತರಬೇತೊಗೊಳಿಸಿಕೊಂಡಿದ್ದೇನೆ’ ಎಂದು ತಿಳಿಸಿದರು. (110) ಸ್ವಾಮಿಗಳ ಕಟ್ಟ ಅಭಿಮಾನಿಗಳು ಏನೇ ಭಾವಿಸಲಿ ಸ್ವಾಮಿಗಳ ಈ ಹೇಳಿಕೆಯಿಂದ ಚರ್ಚೆಯನ್ನು ಮುಕ್ತಾಯಗೊಳಿಸಬಹುದು- ‘ಗೃಹಸ್ಥ ಜೀವನ ಮದುವೆ ಮುಂತಾದುವುಗಳ ಛಾಯೆ ನನ್ನ ಮನಸ್ಸಿನಲ್ಲಿಯೂ ಆಗಾಗ್ಗೆ ಬಂದುಹೊಗುತ್ತಿರುತ್ತದೆ. ಮನೆ , ಮದುವೆ ಯೋಚನೆಯ ನೆರಳು ಒಮ್ಮೊಮ್ಮೆ ಮನಸ್ಸಿನಲ್ಲಿ ಹಾದು ಹೋದರೆ ನೀನು ಚಿಂತಿಸುವ ಅಗತ್ಯವಿಲ್ಲ’ (111) ಎಂದು ಸ್ವಾಮಿಗಳು ಶಿಷ್ಯನಿಗೆ ತಿಳಿಸಿರುವ ವಿಷಯಕ್ಕೆ ಅದರದೇ ಆದ ಮಹತ್ವವಿದ್ದು ಅದು ಸ್ವಾಮಿಗಳ ವ್ಯಕ್ತಿತ್ವವನ್ನು ಅರಿತುಕೊಳ್ಳಲು ನೆರವಾಗುತ್ತದೆಯಾದರೂ ಜೀವನ ಚರಿತ್ರೆಗಳು ಇಂತಹ ಹೇಳಿಕೆಗಳನ್ನು ಮೈಲಿಗೆಯಂತೆ ಹೊರಗಿರಿಸಿವೆ.
Comment Box is loading comments...