|
ಸಂಗಂ ಸಾಹಿತ್ಯ
(ತಮಿಳಗಂ –ಸಂಗಂ : ಎಷ್ಟು ಪ್ರಾಚೀನ ಕೃತಿಯ ಆಯ್ದ ಭಾಗ) See at end for : SANGAM LTERATURE - FACTS OVER MYTHS) ಪ್ರ.ಶ 1-3 ನೇ ಶತಮಾನದ ಅವಧಿಯಲ್ಲಿ ತಮಿಳಗಂನಲ್ಲಿ ಹಲವಾರು ಸ್ಥಳೀಯ ನಾಯಕರುಗಳು ತಮ್ಮ ಅಧಿಪತ್ಯ ಸ್ಥಾಪನೆಗಾಗಿ ಹೆಣಗುತ್ತಿದ್ದರು. ಇವರಲ್ಲಿ ಪ್ರಬಲರಾದವರೆಂದರೆ ಚೇರ,ಚೋಳ ಮತ್ತು ಪಾಂಡ್ಯರು. ಈ ಕಾಲದಲ್ಲಿ ಪಾಣಾರ್ ಎಂಬ ವೃತ್ತಿ ಗಾಯಕರ ಪರಂಪರೆಯಿದ್ದಿತು. ಈ ವೃತ್ತಿಪರ ಗಾಯಕರ ಮೌಖಿಕ ಕಾವ್ಯವೇ ಸಂಗಂ ಸಾಹಿತ್ಯ. ತಮಿಳಗಂನ ರಾಜರು, ವೇಳೀರ್’ಗಳಿಂದ ಈ ಗಾಯಕರುಗಳಿಗೆ ಪೋಷಣೆ ದಕ್ಕಿತು. ಪಲ್ಲವರ ಸಾಮ್ರಾಜ್ಯ ಸ್ಥಾಪನೆಯ ವೇಳೆಗೆ ಈ ಮೌಖಿಕ ಸಾಹಿತ್ಯ ಸ್ಥಗಿತಗೊಂಡು ಹಿನ್ನೆಲೆಗೆ ಸರಿದಿದ್ದಿತು. ಮೌಖಿಕವಾಗಿದ್ದ ಈ ಸಾಹಿತ್ಯ ಪ್ರ.ಶ. 7-8ನೇ ಶತಮಾನದಲ್ಲಿ ಲಿಪಿಕರಣಗೊಂಡಿತು. ಲಿಪಿಕರಣಗೊಂಡ ಸಾಹಿತ್ಯದ ಆಧಾರದ ಮೇಲೆ ತೊಲ್ಕಾಪ್ಪಿಯಂ ಲಕ್ಷಣ ಗ್ರಂಥ ಕಾಣಿಸಿಕೊಂಡಿತು. ನಂತರ 13-14 ನೇ ಶತಮಾನದಲ್ಲಿ ಈ ಸಾಹಿತ್ಯ ವರ್ಗೀಕೃತಗೊಂಡಿರುವ ಸಾಧ್ಯತೆಗಳಿವೆ. ಆದ್ದರಿಂದ ಇದಾದ ನಂತರವೇ ಸಂಗಂ ಸಾಹಿತ್ಯದ ಮೇಲಿನ ಭಾಷ್ಯಗಳು ದಕ್ಕುತ್ತವೆ. ತಮಿಳು-ಬ್ರಾಹ್ಮಿ,ಗ್ರಂಥ,ವಟ್ಟೆಳ್ಳುತ್ತುಗಳ ಪ್ರಾಯೋಗಿಕ ಹಂತ ಮೀರಿ ತಮಿಳು ಲಿಪಿ ಬಳಕೆಗೆ ಬಂದು ಧೃಡ ಸ್ಥಾನ ಗಳಿಸಿದ ಕಾಲವಿದು. ಲಿಪಿಕರಣಗೊಂಡ ಸರಿ ಸುಮಾರು ಸಾವಿರ ವರ್ಷಗಳ ಕಾಲ ಜನ ಮಾನಸದಿಂದ ದೂರವಾಗಿ ತೆರೆಮರೆಗೆ ಸರಿದಿದ್ದ ಈ ಸಾಹಿತ್ಯ ಪ್ರ.ಶ 19 ನೇ ಶತಮಾನದ ಅಂತ್ಯದ ವೇಳೆಗೆ ಪ್ರಾಚೀನ ಹಸ್ತಪ್ರತಿಗಳ ಸಂಗ್ರಹದ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿತೆಂದು ಹೇಳಲಾಗುತ್ತಿದೆ. ಎಂ.ಜಿ.ಎಸ್ ನಾರಾಯಣನ್ನಂತಹ ವಿದ್ವಾಂಸರು ಎಲ್ಲ ಕಾಲದಲ್ಲು ತಮಿಳಗಂನಲ್ಲಿ ಈ ಸಾಹಿತ್ಯದ ಅಸ್ತಿತ್ವದ ಅರಿವಿದ್ದಿತೆಂದು ವಾದಿಸಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶಗಳು, ದೇಶ , ಭಾಷಾಪ್ರೇಮಗಳ ಹಿನ್ನೆಲೆಯಲ್ಲಿ ಇದರ ವೈಶಿಷ್ಟ್ಯತೆಯನ್ನು ಗುರುತಿಸತೊಡಗಲಾಯಿತು. ಸಂಗಂಗಳ ಕಲ್ಪನೆ, ತೊಲ್ಕಾಪ್ಪಿಯಂನ ಪ್ರಾಚೀನತೆಗಳಿಗೆ ಪ್ರಾಧಾನ್ಯತೆ ದೊರೆಯತೊಡಗಿ ತಮಿಳುನಾಡಿನ ಚರಿತ್ರೆಯನ್ನು ಕ್ರಿ.ಪೂ ಸಾವಿರಾರು ವರ್ಷಗಳ ಹಿಂದಕ್ಕೊಯ್ಯುವ ಪರಿಪಾಠ ಬೆಳೆಯಲಾರಂಭಿಸಿ ಇದು ಇಪ್ಪತ್ತನೇ ಶತಮಾನದಲ್ಲಿ ತೀವ್ರತೆ ಪಡೆಯಿತು. ಇಂತಹ ಸಂದರ್ಭದಲ್ಲಿ ಸಂಗಂ ಸಾಹಿತ್ಯಕ್ಕೆ ತಮಿಳಗಂ ಇತಿಹಾಸದಲ್ಲಿ ಹಿಂದೆದೂ ಇಲ್ಲದಂತಹ ಮಾನ್ಯತೆ,ಶ್ರೇಷ್ಟತೆಗಳು ದಕ್ಕತೊಡಗಿದವು. ಬೇರೆ ಭಾಷೆಗಳಲ್ಲು ಈ ಬಗೆಯ ಜಾನಪದೀಯವೆನಿಸುವ ಸಾಹಿತ್ಯ ರಚನೆಯಿದ್ದು ಶಿಷ್ಟ ಸಂಪ್ರದಾಯ ಪ್ರಬಲವಾದಂತೆ ಇವುಗಳನ್ನು ತಮಿಳಿನಂತೆ ಲಿಪಿಗೊಳಿಸುವ , ಸಂಗ್ರಹಗೊಳಿಸುವ ಯತ್ನಕ್ಕೆ ಕೈಹಾಕದಿರುವ ಸಾಧ್ಯತೆಗಳಿವೆ. ಪರಿಚಯ ಭಾರತದಲ್ಲಿನ ಸಾಹಿತ್ಯದ ಚರಿತ್ರೆ ಮತ್ತು ಶ್ರೇಷ್ಟತೆಯ ಚರ್ಚೆ ಬಂದಾಗಲೆಲ್ಲ ಸಂಸ್ಕೃತದೊಂದಿಗೆ ತಮಿಳಿನ ಸಂಗಂ ಸಾಹಿತ್ಯ ಸ್ಥಾನ ಗಳಿಸಿಕೊಂಡಿರುತ್ತದೆ. ಸಂಗಂ ಸಾಹಿತ್ಯ ಬೇರೆಲ್ಲ ಸಾಹಿತ್ಯಗಳಿಗಿಂತ ಬಹು ಪುರಾತನವಾದುದು ಮತ್ತು ತಮಿಳು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆಯೆಂದು ಹೇಳಲಾಗುತ್ತಿದೆ. ಇದರೊಂದಿಗೆ ಇದಕ್ಕೆ ಅನನ್ಯ ಪ್ರಾಚೀನತೆಯೂ ದಕ್ಕಿದೆ. ತಮಿಳು ಸಾಹಿತ್ಯ ಬಹಳ ಪ್ರಾಚೀನವಾದುದು. ಇದು ಪಾಂಡ್ಯರಿಂದ ಸ್ಥಾಪಿಸಲ್ಪಟ್ಟ ಮೂರು ಸಂಘಗಳ ಅಶ್ರಯದಲ್ಲಿ ಬೆಳೆಯಿತೆಂಬ ಐತಿಹ್ಯವಿದೆ. ಈ ಸಾಹಿತ್ಯವನ್ನು ಅನುಕೂಲಕ್ಕಾಗಿ ಸಂಗಂ ಸಾಹಿತ್ಯ ಎಂದು ಕರೆಯಲಾಗುತ್ತಿದೆ. ವಿದ್ವಾಂಸರಲ್ಲಿ ಈ ನಾಮಕರಣದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ರೂಢಿಯ ದೃಷ್ಟಿಯಿಂದ ಇದು ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದನ್ನು ಸಹಜ ಸಾಹಿತ್ಯದ ಕಾಲವೆಂದು ವಿದ್ವಾಂಸರು ಗುರುತಿಸಿದ್ದಾರೆ. ತಮಿಳಗಂನ ಅರುಣೋದಯದ ಕಾಲದಲ್ಲಿ ಸಂಗಂ ಸಾಹಿತ್ಯದ ಉಗಮವಾಯಿತು. ಇದನ್ನು ಪೋಷಿಸಿದವರು ಆದಿ ಚೇರ, ಚೋಳ,ಪಾಂಡ್ಯರು. ತೊಲ್ಕಾಪ್ಪಿಯಂ ಗ್ರಂಥ ತಮಿಳಿನ ಸಂಗಂ ಸಾಹಿತ್ಯ ನಿರ್ಮಾಣಕ್ಕೆ ಒಂದು ಖಚಿತ ಮಾರ್ಗವನ್ನು ಒದಗಿಸಿತೆಂದು , ಇದರಿಂದ ತಮಿಳಗಂನ ಕವಿಗಳು ಅಕಂ (ಅಹಂ=ಒಳಗೆ=ಪ್ರಣಯ) ಮತ್ತು ಪುರಂ(ಪೆÇರ=ಹೊರಗೆ=ವೀರ) ಎಂಬ ಎರಡು ಪ್ರಭೇಧಗಳಲ್ಲಿ ಕಾವ್ಯ ರಚನೆ ಮಾಡಿದರೆಂದು ಭಾವಿಸಲಾಗಿದೆ. ತಮಿಳಿನ ಆರಂಭಿಕ ಸಾಹಿತ್ಯ ಎಟ್ಟುತ್ತೊಕ್ಕೈ (ಎಂಟು ಸಂಗ್ರಹಗಳು) ಹಾಗೂ ಪತ್ತುಪ್ಪಾಟ್ಟು (ಹತ್ತು ಹಾಡುಗಳು) ಒಳಗೊಂಡಿರುವ ಪದಿನೇಣ್ ಮೇಲ್ಕಣಕ್ಕುಗಳಲ್ಲಿ (ಹದಿನೆಂಟು ಮೇಲ್ ಗಣಗಳು) ನಿರೂಪಿತವಾಗಿದೆ. ಇದರ ಪಟ್ಟಿ ಹೀಗಿದೆ. ಅ ಅಗತ್ತಿಯಂ ಮತ್ತು ತೊಲ್ಕಾಪ್ಪಿಯಂ ವ್ಯಾಕರಣ ಗ್ರಂಥಗಳು. ಆ. ಪದಿನೇಣ್ ಮೇಲ್ಕಣಕ್ಕು (ಹದಿನೆಂಟು ಮೇಲ್ಗಣಗಳು ) = ಎಟ್ಟುತ್ತೊಕ್ಕೈ (8) + ಪತ್ತುಪ್ಪಾಟ್ಟು(10) ಎಟ್ಟುತ್ತೊಕೈ (ಎಂಟು ಸಂಗ್ರಹ) (೧) ನಟ್ಟಿಣೈ - ನಲ್ ತಿಣೈ(ಗಳ ಕವನ ಸಂಗ್ರಹ) (೨) ಕುರುಂತೊಗೈ- ಕಿರು(ಕವನಗಳ) ಸಂಗ್ರಹ (೩) ಐನ್ಕುರುನೂರು-ಐನೂರು ಕಿರು ಪದ್ಯಗಳು (೪) ಪದಿರುಪ್ಪತ್ತು-ಹತ್ತರಹತ್ತು (೫) ಪರಿಪಾಡಲ್- ಪರಿ(ಛಂದಸ್ಸಿನ) ಹಾಡುಗಳು (೬) ಕಲಿತ್ತೊಗೈ-ಕಲಿ (ಛಂದಸ್ಸಿನ) ಸಂಗ್ರಹ (೭) ಅಹನಾನೂರು ಅಥವಾ ನೆಡುಂತೊಕೈ – ಅಹಂ ನಾನೂರು (ಕವನಗಳು) ಅಥವಾ ದೀರ್ಘ(ಕವನಗಳ) ಸಂಗ್ರಹ (೮) ಪುರನಾನೂರು-ಪುರ ನಾನೂರು (ಕವಿತೆಗಳು) ಪತ್ತುಪ್ಪಾಟ್ಟು (ಹತ್ತು ಹಾಡುಗಳು) (೧) ತಿರುಮುರುಗಾರ್ರುಪ್ಪಾಟ್ಟೈ(ತಿರುಮುರುಗಾಟ್ಟುಪ್ಪಾಡೈ)-ತಿರುಮುರುಗನೆಡೆಗೆ ಮಾರ್ಗಸರ್ಶನ (ನಕ್ಕೀರಾರ್) (೨) ಪುರನಾರಾರ್ರುಪ್ಪಾಟ್ಟೈ(ಪುರನಾರಾರುಪ್ಪಾಡೈ)- ಪುರಂ (ಗಾಯಕರಿಗೆ) ಮಾರ್ಗದರ್ಶನ (ಮುತ್ತಂಕಣ್ಣಿಯಾರ್) (೩) ಚಿರುಪಾಣಾರ್ರುಪ್ಪಾಟ್ಟೈ(ಚಿರುಪ್ಪಾಣಾರ್ರುಪ್ಪಾಡೈ)- ಕಿರಿಯ ಪಾಣಾರ್’ಗಳಿಗೆ ಮಾರ್ಗದರ್ಶನ (ನತ್ತಣ್ತನಾರ್) (೪) ಪೆರುಂಪಾಣಾರ್ರುಪ್ಪಾಟ್ಟೈ (ಪೆರುಂಪಾಣಾರ್ರುಪ್ಪಾಡೈ)-ಹಿರಿಯ ಪಾಣಾರ್’ಗಳಿಗೆ ಮಾರ್ಗದರ್ಶನ (ಉರುತಿರಂಕಣ್ಣನಾರ್) (೫) ಮುಲ್ಲೈಪ್ಪಾಟ್ಟು-ಕಾಡಿನ ಹಾಡು (ನಾಪೋತ್ತನಾರ್) (೬) ಮಧುರೈಕಾಂಚಿ-ಮಧುರೈಪ್ರತಿಬಿಂಬ (ಮಾನ್ಮುಡಿ ಮರುದನಾರ್) (೭) ನೆಟುನಳವಾಟೈ(ನೆಡುನಳವಾಡೈ)- ನಿಡಿದಾದ ಒಳ್ಳೆಯ ಬಡಗುಗಾಳಿ (ನಕ್ಕೀರಾರ್) (೮) ಕುರಿಂಚಿಪ್ಪಾಟ್ಟು-ಕುರಿಂಜಿ ಹಾಡು (ಕಪಿಲಾರ್) (೯) ಪತ್ತಿನ ಪಾಳೈ-ಪಟ್ಟಣದ ಪಾಳು (ವಿರಹ) (ಉರುತ್ತಿರಂ ಕಣ್ಣನಾರ್) (೧೦) ಮಲೈಪಾಟ್ಟುಕಟುಂ(ಮಲೈಪಾಟ್ಟುಕಡಂ)-ಮಲೆಯ ಹಾಡಿನ (ಸದ್ದು ? )(ಪೆರುಂ ಕೌಶಿಕನಾರ್) ಇ. ಪದಿನೇಣ್ ಕೀಳ್ಕಣಕ್ಕು ( ಹದಿನೆಂಟು ಸಣ್ಣ ಕೃತಿಗಳು) (೧) ಕಳವಳಿ ನಾಳ್ಪ ದು-ಕಾಳಗದ ನಾನೂರು (ಪದ್ಯಗಳು) (೨) ಕಾರ್’ನಾಳ್ಪದು-ಮಳೆಯ ನಾನೂರು (ಪದ್ಯಗಳು) (೩) ಐನ್ತಿಣೈ ಎಳುಪುದು -ಐದು ತಿಣೈಗಳ ಎಪ್ಪತ್ತು (ಪದ್ಯಗಳು) (೪) ಐನ್ತಿಣೈ ಐಂಬದು -ಐದು ತಿಣೈಗಳ ಐವತ್ತು (ಪದ್ಯಗಳು) (೫) ತಿಣೈಮೊಳಿ ಐಂಬದು –ತಿಣೈನುಡಿಯ ಐವತ್ತು (ಪದ್ಯಗಳು) (೬) ತಿಣೈಮಾಲೈ ನೂಟ್ರೈಂಬದು –ತಿಣೈಮಾಲೆಯ ನೂರ ಐವತ್ತು (ಪದ್ಯಗಳು) (೭) ಇನ್ನಿಲೈ(ಕೈನಿಲ್ಲೈ)-ನಡವಳಿಕೆಗಳು ಐದು (೮) ತಿರಿಕಡಿಗಂ-ಮೂರು ಕಟುಕುಗಳು(3 ಸೂಕ್ತಿಗಳ ಕಟ್ಟಿನ 101 ಚೌಪದಿಗಳು ) (೯) ನಾನ್ಮಣಿಕ್ಕಡಿಗೈ-ನಾಲ್ಕುಮಣಿಕಟುಕುಗಳು (4 ಸೂಕ್ತಿಗಳ ಕಟ್ಟಿನ 104 ಚೌಪದಿಗಳು ) (೧೦) ಚಿರುಪಂಚಮೂಲಂ-ಸಣ್ಣ ಐದುಮೂಲಗಳು ( 5 ಸೂಕ್ತಿಗಳ ಕಟ್ಟಿನ 98 ಪದ್ಯಗಳು) (೧೧) ಏಲಾದಿ-ಏಲಕ್ಕಿ ಮತ್ತು ಇತರ (6 ಅಂಶಗಳ ಕಟ್ಟಿನ 82 ಚೌಪದಿಗಳು) (೧೨) ಮುದುಮೊ¿ôಕಾಂಚಿ-ಹಿರಿಯ ನುಡಿಗಳ ಪ್ರತಿಬಿಂಬ (10 ಸೂಕ್ತಿಗಳ ಕಟ್ಟಿನ 10 ಪ್ರಕರಣಗಳು) (೧೩) ಇನ್ನಾ ನಾಳ್ಪದು –ಅಹಿತದ ನಲವತ್ತು (ಚೌಪದಿಗಳು) (೧೪) ಇನ್ನಿವಯ್ ನಾಳ್ಪದು – ಇನಿದಾದ ನಲವತ್ತು (ಚೌಪದಿಗಳು) (೧೫) ಆಚಾರಕ್ಕೋವೈ-ಆಚಾರ ಸಂಹಿತೆ ( ನೂರು ಪದ್ಯಗಳು) (೧೬) ಪಳಮೊಳಿ ನಾನೂರು-ಹಳೆನುಡಿಗಳು ನಾನೂರು ( ಒಂದು ಗಾದೆಯಿರುವ 400 ಚೌಪದಿಗಳು) (೧೭) ನಾಲಡಿಯಾರ್-ನಾಲ್ಕರ ಕವಿತೆಗಳು (400 ಚೌಪದಿಗಳು) (೧೮) ಶ್ರೀ ಕುರುಳು (1330 ದ್ವಿಪದಿಗಳು) ಮತ್ತು ಈ. ಶಿಲಪ್ಪದಿಗಾರಂ(ಶಿಲಪ್ಪಧಿಕಾರಂ) ಮತ್ತು ಮಣಿಮೇಗಲೈ (ಮಣಿಮೆಖಲೆ) ಕಾವ್ಯಗಳು ಐತಿಹ್ಯ ಇರೈಯನಾರ್ ಅಗಪ್ಪೊರುಳ್ ಅಥವಾ ಕಳವಿಯಲ್ (ಕಳವು ಇಯಲ್ = ಕಳ್ಳ ಪ್ರೀತಿ) ಎಂಬ ಹೆಸರಿನ ಕೃತಿಗೆ ಪ್ರ.ಶ 8-10 ನೇ ಶತಮಾನದಲ್ಲಿ ನಕ್ಕೀರಾರ್ ರಚಿಸಿದ ಭಾಷ್ಯ ಗ್ರಂಥದಲ್ಲಿ ಮೊದಲ ಬಾರಿಗೆ ತಮಿಳು ಸಂಗಂಗಳು ಉಲ್ಲೇಖಗೊಂಡಿವೆ. ಈ ಕೃತಿ ಮೂರು ಸಂಗಂಗಳ ವಿವರವನ್ನು ತಿಳಿಸುತ್ತದೆ. ಮುತಲ್ ಚಂಕಂ (ಮೊದಲ ಸಂಗಂ) : ಶ್ರೀಲಂಕಾದ ದಕ್ಷಿಣ ತುದಿಯಾಚೆಗಿದ್ದ ತೆನ್ಮಧುರೈಯಲ್ಲಿ ಪಾಂಡ್ಯರಾಜನು ಮೊದ¯ ಸಂಗಂ ಸ್ಥಾಪಿಸಿದನು. ಇದು 89 ಪಾಂಡ್ಯರಾಜರಿಂದ ಪೋಷಿಸಲ್ಪಟ್ಟು 4449 ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದಿತು. ಏಳು ರಾಜರು, ಶಿವ,ಮುರುಗ ದೇವತೆಗಳು ಮತ್ತು ಋಷಿ ಅಗಸ್ತ್ಯ ಸೇರಿದಂತೆ ಒಟ್ಟು 4449 ಜನ ಕವಿಗಳು ಈ ಸಂಗಂನ ಸದಸ್ಯರಾಗಿ ಬೃಹತ್ ಪ್ರಮಾಣದ ಸಾಹಿತ್ಯ ಸೃಷ್ಟಿಸಿದರು. ಸಮುದ್ರದ ಉಕ್ಕಿ (ಕಡಲ್ಕೊಳ್) ಅದರ ಆಟಾಟೋಪಕ್ಕೆ ಸಿಲುಕಿ ಈ ಸಾಹಿತ್ಯ ನಾಶವಾಯಿತು. ಇಟ್ಟೆಚಂಗಂ (ಎರಡನೇ ಸಂಗಂ): ತೆನ್ಮಧುರೈ ಸಮುದ್ರದ ಪಾಲಾದ ನಂತರ ವಾಲ್ಮೀಕಿ ರಾಮಾಯಣದ ಕಿಷ್ಕಿಂಧಾ ಖಾಂಡದಲ್ಲಿ ಉಲ್ಲೇಖಗೊಂಡಿರುವ ಕಪಡಾಪುರಂನಲ್ಲಿ ಎರಡನೇ ಸಂಗಂ ಸ್ಥಾಪಿಸಿ ಪಾಂಡ್ಯರಾಜ ಅದನ್ನು ತನ್ನ ರಾಜಧಾನಿಯಾಗಿಸಿಕೊಂಡನು. ಈ ನಗರದಲ್ಲಿ ಸ್ಥಾಪಿಸಲ್ಪಟ್ಟ ಸಂಗಂ 59 ಪಾಂಡ್ಯ ರಾಜರಿಂದ ಪೋಷಿಸಲ್ಪಟ್ಟು 3200 ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದು 3200 ಕವಿಗಳನ್ನು ಹೊಂದಿದ್ದಿತು. ಅಗಸ್ತ್ಯ ಮತ್ತು ತೊಲ್ಕಾಪ್ಪಿಯನಾರ್ ಈ ಸಂಗಂಗೆ ಸೇರಿದವರು. ಎರಡನೇ ಬಾರಿಯ ಸಮುದ್ರ ವಿಕೋಪದಿಂದ ಈ ಸಂಗಂನ ಸಾಹಿತ್ಯವೂ ನಾಶವಾಯಿತು. ಕಟೈ ಚಂಕಂ (ಮೂರನೇ ಅಥವಾ ಕಡೆಯ ಸಂಗಂ) : ಎರಡು ಸಂಗಂಗಳ ವಿನಾಶದ ನಂತರ ಪಾಂಡ್ಯ ರಾಜರು ಮೂರನೇ ಸಂಗಂನ್ನು ಮಣಲೂರಿನಲ್ಲಿ ಪ್ರಾರಂಭಿಸಿದರು. ಇದು ಸಹ ಕಡಲ ಪಾಲಾದ ನಂತರ ವೈಗೈ ನದಿ ತೀರದ ಮಧುರೈ ನಗರಕ್ಕೆ ಸ್ಥಳಾಂತರಿಸಲಾಯಿತು. 1850 ವರ್ಷಗಳ ಅವಧಿಯಲ್ಲಿ 49 ಜನ ರಾಜರ ಆಶ್ರಯದಲ್ಲಿ ಕಾರ್ಯನಿರ್ವಹಿಸಿದ ಇದರಲ್ಲಿ 473 ಜನ ಕವಿ-ಕವಿಯತ್ರಿಯರಿದ್ದು ಇವರಲ್ಲಿ 102 ಜನ ಅಜ್ಞಾತ ಕವಿಗಳು. ಈ ಅವಧಿಯಲ್ಲಿ 2381 ಕವನಗಳು ರಚಿತಗೊಂಡು ಉಳಿದುಕೊಂಡವು. ಹನ್ನೆರಡು ವರ್ಷಗಳ ಕಾಲ ಕ್ಷಾಮ ತಲೆದೋರಿದ್ದರಿಂದ ಪಾಂಡ್ಯರಾಜನು ಮೂರನೇ ಸಂಗಂನ್ನು ವಿಸರ್ಜಿಸಿದನು. ಈಗ ಲಭ್ಯವಿರುವ ಸಂಗಂ ಸಾಹಿತ್ಯ ಮೂರನೇ ಸಂಗಂಗೆ ಸೇರಿದ್ದೆಂದು ಇರೈಯನಾರ್ ಅಹಪೊರುಳ್ ಹೇಳಲಾಗುತ್ತಿದೆ. ಸಾಹಿತ್ಯದ ಸ್ವರೂಪ ಸಂಗಂ ಸಾಹಿತ್ಯ ಅಹಂ ಮತ್ತು ಪುರಂ ಎಂಬ ಎರಡು ಪರಿಕಲ್ಪನೆಗಳಲ್ಲಿ ರಚಿತವಾಗಿದೆ. ಅಹಂ ಮಾನವನ ಪ್ರೀತಿ,ಪ್ರಣಯ,ಭಯ,ಹತಾಶೆಗಳಂತಹ ಆಂತರಿಕ ಭಾವನೆಗಳಿಗೆ ವಾಹಕವಾದರೆ ಪುರಂ ಸಮಾಜ,ಸಂಸ್ಕೃತಿ,ರಾಜಕೀಯ ಸ್ಥಿತಿಗತಿಗಳನ್ನು ಕುರಿತಾಗಿದೆ. ಸಂಗಂ ಸಾಹಿತ್ಯ 75% ಅಹಂ ಮತ್ತು ಉಳಿದ 25% ಪುರಂ ಮಾರ್ಗಗಳಲ್ಲಿ ಹಂಚಿಕೆಯಾಗಿದೆ. ಅಹಂ ಸಾಹಿತ್ಯದಲ್ಲಿ ತಲೈವನ್/ಕಿಳವನ್(ನಾಯಕ), ತಲೈವಿ/ಕಿಳಟ್ಟಿ (ನಾಯಕಿ) ,ಪಾಂಗನ್ (ನಾಯಕನ ಜೊತೆಗಾರ), ತೊಲಿ/ಪಾಂಕಿ (ನಾಯಕಿಯ ಜೊತೆಗಾತಿ) ,ನಾರ್ರ (ತಾಯಿ/ಮಲತಾಯಿ), ಪಾರಟ್ಟೈ/ಕಿಳಟ್ಟಿ (ಸಭಿಕ/ಕೇಳುಗ) ಪ್ರಧಾನ ಭೂಮಿಕೆಯಲ್ಲಿರುತ್ತಾರೆ. ನಾಯಕ/ನಾಯಕಿ ಸ್ವಗತದಲ್ಲಿ ಕೇಳುಗರಿಗೆ ತಮ್ಮ ಭಾವನೆಗಳನ್ನು ತಿಳಿಸುತ್ತಾರೆ. ನಿರ್ದಿಷ್ಟ ತಿಣೈ ಮತ್ತು ಸಂದರ್ಭಗಳು ಒಂದು ಕವಿತೆ ಯಾವ ಪ್ರಣಯ ಪ್ರಕಾರಕ್ಕೆ ಸೇರಿದ್ದೆಂದು ಸೂಚಿಸುತ್ತದೆ. ಸಂಗಂ ಸಾಹಿತ್ಯದ ಕಾಲದಲ್ಲಿ ವೃತ್ತಿ ಗಾಯಕರುಗಳ ಕಾವ್ಯ ಪರಂಪರೆ ಮತ್ತು ಕಲಿಕೆ ಮೌಖಿಕವಾಗಿದ್ದು ಶ್ರವಣ, ಮನನಗಳಿಗೆ ಆದ್ಯತೆಯಿದ್ದಿತು. ಕೇಳುವುದು ಮತ್ತು ಅನುಕರಣೆ ವೃತ್ತಿಗಾಯನದ ಪ್ರಮುಖ ಅಂಗಗಳಾಗಿದ್ದವು. ಸಂಗಂ ಸಾಹಿತ್ಯದ ಸೃಜನೆಯಲ್ಲಿ ಕಮ್ಮಾರ, ಚಮ್ಮಾರ,ಬಡಗಿಯಂತಹ ಸಾಮಾನ್ಯರು,ರಾಜರುಗಳು, ಪ್ರತಿಷ್ಟಿತರು ಸೇರಿದ್ದಾರೆ. ಆ ಕಾಲದ ಈ ವೃತ್ತಿಗಾಯಕ ಕವಿಗಳಿಗೆ ವೃತ್ತಿ ತರಬೇತಿ ಲಭ್ಯವಾಗುತ್ತಿದ್ದು ಅವರಲ್ಲಿ ಎರಡು ಪಂಗಡಗಳಿದ್ದವೆಂದು ಭಾವಿಸಬಹುದು. ಇವರು ಸಾಕಷ್ಟು ವೃತ್ತಿ ನೈಪುಣ್ಯ ಗಳಿಸಿದ ನಂತರ ಆಶ್ರಯದಾತರನ್ನು ಅರಸಿ ಅಲೆದಾಡಿರುವ ಸಾಧ್ಯತೆಗಳಿವೆ. ಇವರಲ್ಲಿ ಬಡವರು ದಲಿತರು ಸಾಮಾನ್ಯರು ಇದ್ದಂತೆ ಸಾಕಷ್ಟು ಪ್ರಭಾವಶಾಲಿಗಳು ಇದ್ದುದಕ್ಕೆ ಕುರುಹುಗಳಿವೆ. ಸಂಗಂ ಸಾಹಿತ್ಯದಲ್ಲಿ ದೈನಂದಿನ ಆಗುಹೋಗುಗಳಲ್ಲಿ ,ಮಾನವನ ಜೀವನಗತಿಯಲ್ಲಿ ಅಲೌಕಿಕ ಶಕ್ತಿಗಳ ಪ್ರಭಾವ ಇಲ್ಲವೇ ಇಲ್ಲ. ಇಲ್ಲಿ ಅಗೋಚರ ಶಕ್ತಿ,ದೇವತೆಗಳಿಗೆ ಸ್ಥಾನವಿಲ್ಲ. ಇಲ್ಲಿ ಧರ್ಮ,ಅರ್ಥ,ಕಾಮಗಳನ್ನು ನಿರೂಪಿಸುವ ಚಿಂತನೆಗಳಿಲ್ಲ. ತಮಿಳಿನ ಆರಂಭಿಕ ಸಾಹಿತ್ಯ ಜನಸಾಮಾನ್ಯರಿಂದ ಸೃಜಿತಗೊಂಡಿರುವ ಎಲ್ಲಾ ವರ್ಗಗಳ ಪ್ರಾತಿನಿಧಿಕ ಸಾಹಿತ್ಯ. ಈ ಸಾಹಿತ್ಯದ ಮೇಲೆ ಆಳುವ ಪ್ರಭುಗಳ ,ಧಾರ್ಮಿಕ ನೀತಿ-ತತ್ವಗಳ ಅಥವಾ ಸುಸಂಸ್ಕೃತ ನಾಗರಿಕನ ಪ್ರಭಾವಗಳು ನಗಣ್ಯ. ತಮಿಳಿನ ಆರಂಭಿಕ ಸಾಹಿತ್ಯದ ಕಾಲದಲ್ಲಿ ಆರು ಬಗೆಯ ಗಾಯಕ/ಕವಿಗಳಿದ್ದುದು ಸಂಗಂ ಸಾಹಿತ್ಯದಿಂದ ತಿಳಿದು ಬರುತ್ತದೆ. ಪಾಣಾರ್ : ಪಾಣ್ ಎಂದರೆ ಹಾಡು-ಮಾಧುರ್ಯ ಎಂಬ ಅರ್ಥವಿದೆ. ಪಾಣಾರರು ಯಾಳ್ ವಾದ್ಯ ಬಳಸುತ್ತಿದ್ದರು.ಮಧ್ಯಕಾಲೀನ ಕೃತಿಗಳು ಇವರನ್ನು ಕೆಳವರ್ಗದ ಜನರೆಂದು ಗುರುತಿಸಿವೆ. ಕುಟ್ಟರ್: ಇವರು ನರ್ತಿಸುವ ಹಾಗೂ ಗುಂಪಾಗಿ ಪ್ರದರ್ಶಕ ಕಲೆಗಳನ್ನು ನೀಡುವ ಜನ. ಹಬ್ಬ,ಹರಿದಿನ,ಜಾತ್ರೆಗಳಲ್ಲಿ ಜನರಂಜನೆ ಇವರ ಕಸುಬು. ಕಾಲಾನುಕ್ರಮದಲ್ಲಿ ಕುಟ್ಟಿ ಎಂದರೆ ಸೂಳೆ ಎಂಬ ಅರ್ಥ ಬಂದಿತು. ಪೊರುನಾರ್ : ಇವರು ತತ್ತರಿ ಹಾಗೂ ಕಿಣೈನಂತಹ ಚರ್ಮವಾದ್ಯ ಬಳಸುತ್ತಿದ್ದು ಪಾಳೆಯಗಾರರಿಗೆ, ಪ್ರಮುಖರಿಗೆ ಹತ್ತಿರವಾಗಿದ್ದವರೆಂದು ಭಾವಿಸಲಾಗಿದೆ. ಅಗವುನಾರ್,ಅಗವಳರ್,ಅಗವರ್ – ಇವರು ಘೋಷಿಸುವ, ಕರೆಯುವ ವರ್ಗದವರು. ಇವರಲ್ಲಿ ಸ್ತ್ರಿಯರು ಸಹ ಸೇರಿದ್ದರು. ವಿರಾಳಿಯರ್ : ಇವರು ಆರಂಭದಲ್ಲಿ ಗೌರವಾನ್ವಿತ ಸ್ಥಾನ ಪಡೆದಿದ್ದು ನೃತ್ಯ,ಸಂಗೀತಗಳಲ್ಲಿ ಪರಿಣಿತಿ ಹೊಂದಿದ್ದ ಮಹಿಳೆಯರು. ಕಾಲಾನುಕ್ರಮದಲ್ಲಿ ಜೈನ,ಬೌದ್ಧ ಪ್ರಭಾವದಿಂದ ಇವರನ್ನು ಅನೈತಿಕತೆಯ ಕುರುಹಿನಂತೆ ಭಾವಿಸಲಾಯಿತು. ಪುಲವರ್ : ಕಲಿತವರೆಂದು ಬಹು ಗೌರವ ಪಡೆದಿದ್ದ ಜನ. ಇವರು ಸಂಗಂ ಸಾಹಿತ್ಯವನ್ನು ಲಿಖಿತಗೊಳಿಸಿದವರೆಂದು ಜಾರ್ಜ್ ಹಾರ್ಟ್ ಪರಿಗಣಿಸಿದ್ದಾರೆ. ತಮಿಳಿನಲ್ಲಿರುವ ಅತ್ಯಂತ ಪ್ರಾಚೀನ ಛಂದಸ್ಸಿನ ಹೆಸರು ಅಗವಳ್(=ಆಶಿರಿಯಂ<ಆಚಾರ್ಯ). ಇದರ ಅರ್ಥವೆಂದರೆ ನವಿಲಿನಂತೆ ಕರೆಯುವುದು. ದೊರೆಯನ್ನು ಏಳಿಸುವ ವೃತ್ತಿಗಾಯಕರುಗಳಿಗೆ ಅಗವಳರ್ ಎಂಬ ಹೆಸರಿದ್ದಿತು. ತಮಿಳು ಸಾಹಿತ್ಯದಲ್ಲಿ ತಿಣೈ(ಭೂಪ್ರದೇಶ) ಕಲ್ಪನೆಗೆ ಬಹು ಮಹತ್ವವಿದೆ. ಪ್ರೀತಿ,ಪ್ರಣಯಗಳನ್ನು ಐದು ವರ್ಗಗಳಲ್ಲಿ ಪರಿಗಣಿಸಿ ಪ್ರತಿಯೊಂದು ವರ್ಗಕ್ಕೂ ಒಂದು ತಿಣೈಯನ್ನು (ಕುರಿಂಜಿ,ನೆಯ್ದಿಲ್,ಪಾಳೈ,ಮುಲ್ಲೈ,ಮರುದಂ) ಕಲ್ಪಿಸಲಾಗಿದೆ. ಅಹಂ ಅಥವಾ ಪುರಂ ಸಾಹಿತ್ಯ ರಚಿಸುವ ಕವಿ ತನಗೆ ಬೇಕಾದ ಪ್ರೀತಿಯ ಭಾವಕ್ಕೆ ಲಗತ್ತಾದ ತಿಣೈಯನ್ನು , ಅದಕ್ಕೆ ನಿಗದಿತವಾದ ಕಾಲ ಮತ್ತು ಕಲ್ಪನೆಯನ್ನು ಆಯ್ದುಕೊಂಡು ಸಾಹಿತ್ಯ ರಚನೆಗೆ ಮುಂದಾಗುತ್ತಿದ್ದನು. ಕುರಿಂಜಿ ಮತ್ತು ನೆಯ್ದಿಲ್ : ಪ್ರಥಮ ಸಮಾಗಮ / ರಹಸ್ಯ ಭೇಟಿ , ಪಾಳೈ : ಪಲಾಯನ , ಬೇರ್ಪಡಿಕೆ , ವಿರಹ ಮುಲ್ಲೈ : ಆಗಮನದ ನಿರೀಕ್ಷೆ ,ಕಳವು – ವಿವಾಹ ಪೂರ್ವ ಪ್ರೀತಿ /ಕಳ್ಳ ಪ್ರೀತಿ ; ಕರ್ಪು – ವೈವಾಹಿಕ ಪ್ರೀತಿ ಉದಾಹರಣೆಗೆ ಪ್ರಥಮ ಸಮಾಗಮ/ರಹಸ್ಯ ಭೇಟಿ (ಕಳವು) ಕುರಿತು ಹಾಡಬೇಕೆಂದಿದ್ದ ಪಾಣಾರ್ ಗುಡ್ಡ,ಬೆಟ್ಟಗಳ ಪರಿಸರದಲ್ಲಿ ತಂಪುಕಾಲದಲ್ಲಿ, ಬಿದಿರು , ಹಲಸಿನಂತಹ ಮರಗಳ ಹಿನ್ನೆಲೆಯಲ್ಲಿ ನವಿಲು , ಆನೆ,ಹುಲಿಯಂತಹ ಪ್ರಾಣಿರೂಪಕಗಳಿಗೆ ಮೊರೆಹೋಗುತ್ತ ಸಾಂದರ್ಭಿಕವಾಗಿ ಜಲಪಾತದಂತಹ ವರ್ಣನೆಗಳನ್ನು ಬಳಸುತ್ತಿದ್ದನು. ಅಹಂ ಕವಿತೆಗಳಲ್ಲಿನ ನಾಯಕ,ನಾಯಕಿಯರು ಅಜ್ಞಾತರಾಗಿದ್ದಾರೆ. ಇಲ್ಲಿ ಅವರ ಅಂತಸ್ತು,ಜಾತಿ,ವರ್ಗಗಳಿಗೆ ಅವಕಾಶವಿಲ್ಲ. ಹಾಗಾಗಿ ಇದು ಜನಸಾಮಾನ್ಯರ ಜೀವನನ್ನು ಪ್ರತಿನಿಧಿಸುತ್ತದೆ0ಯೆಂದು ಹೇಳಬಹುದಾದರೂ ನಿರ್ದಿಷ್ಟವಾಗಿ ಸಾಕಷ್ಟು ವಿರಾಮದ ವೇಳೆ ಹೊಂದಿರುವ ಅಂತಸ್ತಿನವರಾಗಿದ್ದರು. ವ್ಯಕ್ತಿಗತವಾದ ಪ್ರೀತಿ ಪ್ರಣಯಗಳ ಅಭಿವ್ಯಕ್ತಿ ಸಾಹಿತ್ಯದಲ್ಲಿ ಆತನ ವೈಯುಕ್ತಿಕ ಅನುಭವ ಮೀರಿ ಸಾಮಾನ್ಯಗೊಳಿಸಲಾಗಿದೆ. ಅಹಂನಲ್ಲಿ ಪ್ರತಿಬಿಂಬಿತವಾಗಿರುವ ಜನಸಾಮನ್ಯರು ನಂತರದ ಸಾಹಿತ್ಯದಲ್ಲಿನ ಚೇಟಿ, ದಾಸಿ ಸೇವಕರಂತಹ ಪಾತ್ರಗಳಾಗಿರದೆ ಪರಿಚಿತ ಪ್ರಣಯಾರಾಧಕರಾದ ಸುಸಂಸ್ಕೃತರಂತೆ ಸಾಕಷ್ಟು ಉನ್ನತ ವರ್ಗದವರಾಗಿದ್ದಾರೆ. ಇಲ್ಲಿ ನಾಯಕ ದೊಡ್ಡಮನೆ ಹೊಂದಿದ್ದು , ಮಡಿವಾಳನಿಂದ ಶುಭ್ರಗೊಂಡ ಬಿಳಿ ಅಂಗಿ ಧರಿಸುತ್ತಾನೆ. ಹೂಮಾಲೆ ಕೊರಳೊಳಗಿರುತ್ತದೆ. ಈತ ಅಸಮಬಲ ಮತ್ತು ಏಕಾಂಗಿ ವೀರ. ಕಾದಿ ವೀರ ಸ್ವರ್ಗ ಹೊಂದಿದವನಿಗೆ ಪೆರುಂಪೆಯರ್ ವಾಸಿಸುವ ಸ್ವರ್ಗ ದೊರೆಯುತ್ತದೆ. ಅಲ್ಲಿ ಅಕಳಂಕಿತ ಸ್ತ್ರೀ ಸೌಖ್ಯ ಲಭ್ಯ. ಅಹಂ ಸಾಹಿತ್ಯಕ್ಕಿರುವಂತೆ ಪುರಂ ಸಾಹಿತ್ಯದಲ್ಲಿ ಅದರದೇ ಆದ ತಿಣೈ(ಭೂಪ್ರದೇಶ) ಮತ್ತು ತುರೈಗಳಿವೆ. (ಸಂದರ್ಭ) ಪುರಂನಲ್ಲಿ ವೆಚ್ಚಿ (ದನಗಳನ್ನು ಕದ್ದು ಯುದ್ದ ಪ್ರಾರಂಭಿಸುವುದು) ,ಕರಂತೈ(ದನಗಳನ್ನು ಕದಿಯುವುದನ್ನು ತಪ್ಪಿಸುವುದು),ವಂಚಿ(ಶತ್ರು ಪ್ರದೇಶದ ಅತಿಕ್ರಮಣ),ಕಂಚಿ(ಯುದ್ದದ ಹಿನ್ನೆಲೆಯಲ್ಲಿ ಬದುಕಿನ ತಾಕಲಾಟ ಮತ್ತು ಹೋರಾಟ),ಉಳಿಂಗೈ(ಕೋಟೆಯ ಮುತ್ತಿಗೆ),ನಾಚ್ಚಿ(ಕೋಟೆಯ ರಕ್ಷಣೆ),ತುಂಪೈ (ಕದನೋತ್ಸಾಹ),ವಾಕೈ(ಯುದ್ದದಲ್ಲಿ ಗೆಲುವು), ಪಾಡಾನ್(ದೊರೆಯ ಶೌರ್ಯದ ಗುಣಗಾನ , ಉಡುಗೊರೆಗಳ ಬೇಡಿಕೆ),ಪೆÇರುವಿಯಲ್(ಶೌರ್ಯ, ನಾಯಕನ ಗುಣಗಾನ),ಕೈಕ್ಕಿಳ್ಳೈ (ಒಮ್ಮುಖ ಪ್ರಣಯ),ಪೆರುಂತಿಣೈ(ಅಸಮರ್ಪಕ ಪ್ರಣಯ) ಎಂಬ ಸಂದರ್ಭಗಳಿವೆ. ಇವುಗಳಲ್ಲಿ ಕೈಕ್ಕಿಳೈ ಮತ್ತು ಪೆರುಂತಿಣೈಗಳನ್ನು ಅಹಂ ಪ್ರಕಾರಕ್ಕೆ ಸೇರಿದವೆಂದು ಹೇಳಲಾಗಿದೆ. ತೊಲ್ಕಾಪ್ಪಿಯಮ್ ಮೇಲಿನ ಎಲ್ಲ ತಿಣೈಗಳನ್ನು ಸೂಚಿಸುವುದಿಲ್ಲ ಹಾಗೂ ತೊಲ್ಕಾಪ್ಪಿಯಂನಲ್ಲಿ ಸೂಚಿತವಾಗಿರುವ ಊಳಿಗೈ ಪರಿಕಲ್ಪನೆ ಪುರನಾನೂರಿನಲ್ಲಿಲ್ಲ. ಪುರನಾನೂರು ಪದ್ಯಗಳಿಂದ ನೇರವಾಗಿ ಐತಿಹಾಸಿಕವೆನಿಸಬಹುದಾದ ಹೆಚ್ಚಿನ ಮಾಹಿತಿ ದಕ್ಕುವುದಿಲ್ಲ. ಈ ಪದ್ಯಗಳಿಗೆ ಕಾಲಾಂತರದಲ್ಲಿ 10-12ನೇ ಶತಮಾನದ ಮಧ್ಯಕಾಲೀನ ಭಾಷ್ಯಕಾರರು ನೀಡಿರುವ ಅಡಿಟಿಪ್ಪಣಿಗಳಿಂದ ಪದ್ಯದ ನಾಯಕ , ಸನ್ನಿವೇಶ , ಆತನು ಪೋಷಿಸಿದ ಕವಿಯ ವಿವರ , ಆತನ ಹೆಗ್ಗಳಿಕೆ , ಸಾಧನೆಗಳ ವಿವರಗಳು ದಕ್ಕುತ್ತವೆ. ಈ ಅಡಿಟಿಪ್ಪಣಿಗಳ ಆಧಾರಗಳ ಮೇಲಿಂದ ಚಾರಿತ್ರಿಕ ಅಂಶಗಳನ್ನು ಗುರುತಿಸಲಾಗಿದೆ. ಈ ಅಡಿಟಿಪ್ಪಣಿಗಳನ್ನು ಕಾಲಾಂತರದಲ್ಲಿ ಭಾಷ್ಯಕಾರರು ಸೇರಿಸಿರುವುದರಿಂದ ಚಾರಿತ್ರಿಕ ಹುಡುಕಾಟಕ್ಕೆ ಇವು ಅನರ್ಹವೆಂಬ ನಿಲುವನ್ನು ಕೆಲ ಇತಿಹಾಸಕಾರರು ತಳೆದಿದ್ದಾರೆ. ಹೆಸರು ಸೂಚಿಸುವಂತೆ ಪುರನಾನೂರು 400 ಪದ್ಯಗಳನ್ನು ಅಗವಳ್ ಮತ್ತು ವಂಚಿ ಛಂದಸ್ಸಿನಲ್ಲಿ ಹೊಂದಿದೆ. ಇದು ಐತಿಹಾಸಿಕ ಮಾಹಿತಿಗಳ ಆಕರವೆನಿಸಿದೆ. ಇದರಲ್ಲಿ 150ಕ್ಕೂ ಹೆಚ್ಚು ಕವಿಗಳಿದ್ದಾರೆ. ಇವುಗಳ ಸಂಗ್ರಹಕಾರರು ಯಾರೆಂದು ಗೊತ್ತಿಲ್ಲ. ಪುರನಾನೂರು ಕುರಿತಾಗಿ ಲಭ್ಯವಾದ ಅತ್ಯಂತ ಹಳೆಯ ಗ್ರಂಥದಲ್ಲಿ 266 ಪದ್ಯಗಳಿಗೆ ವಿವರಣೆಗಳು ದಕ್ಕಿವೆ. 12ನೇ ಶತಮಾನದಲ್ಲಿದ್ದ ನಾಚ್ಚಿಣ್ಣಾರ್ಕ್ಕಿಣಿಯಾರ್ ಎಲ್ಲಾ ಪದ್ಯಗಳಿಗೂ ವಿಸ್ತೃತ ವಿವರಣೆಯನ್ನು ನೀಡಿದ್ದಾನೆ. ಇದರಲ್ಲಿನ ಅಡಿಟಿಪ್ಪಣಿಗಳಲ್ಲಿ 157 ಜನ ಕವಿಗಳ ಹೆಸರಿದೆ. 14 ಪದ್ಯಗಳ ಕರ್ತೃಗಳು ಗೊತ್ತಿಲ್ಲ. ಇದರಲ್ಲಿ 14 ಜನ ರಾಜರುಗಳು, ವೇಳೀರ್ಗಳು ಸಹ ಕೃತಿರಚನೆ ಮಾಡಿದ್ದಾರೆ. ಇದರಲ್ಲಿರುವ 15 ಜನ ಕವಯತ್ರಿಗಳಲ್ಲಿ 33 ಪದ್ಯಗಳನ್ನು ಬರೆದ ಅವ್ವೈಯಾರ್ ಖ್ಯಾತಳಾಗಿದ್ದಾಳೆ. ಇರುಂಪಿತರತಲೈಯಾರ್ ,ಕೋಕೈಕೋಳಿಯಾರ್ ಎನ್ನುವಂತಹ ವಿಚಿತ್ರ ಹೆಸರಿನ ಕವಿಗಳು ಸಹ ಇದ್ದಾರೆ. ಇದರಲ್ಲಿ 27 ಕವಿತೆಗಳು 18 ಚೇರ , 74 ಕವಿತೆಗಳು 13 ಚೋಳ , 37 ಕವಿತೆಗಳು 12 ಪಾಂಡ್ಯ , 141 ಕವಿತೆಗಳು ಇತರ 48 ವೇಳೀರ್, ಕೀಳಾರ್ಗಳನ್ನು ಕುರಿತಾಗಿ ಹಾಡಲ್ಪಟ್ಟಿವೆ. ಪದಿರುಪ್ಪತ್ತು ಅತ್ಯಂತ ಹೆಚ್ಚು ಐತಿಹಾಸಿಕ ಮಾಹಿತಿಯುಳ್ಳ ಸಂಗ್ರಹ. ಇದರಲ್ಲಿ 10 ಚೇರ ದೊರೆಗಳನ್ನು ,ಪ್ರತಿಯೊಬ್ಬರಿಗೂ 10 ಕವಿತೆಗಳಂತೆ 10 ಜನ ಪಾಣಾರ್ಗಳು ಹಾಡಿದ್ದಾರೆ. ಇದರ ಪ್ರತಿಯೊಂದು ಭಾಗಕ್ಕೂ ಅಡಿಟಿಪ್ಪಣಿ ಲಭ್ಯವಿದೆ. ಇದರ ಮೊದಲ ಮತ್ತು ಕೊನೆಯ ಅವಧಿಯ ಕವನಗಳು ಲಭ್ಯವಿಲ್ಲ. ಪ್ರ.ಶ 13 ನೇ ಶತಮಾನದಲ್ಲಿ ಇದರ ಮೇಲಿನ ಮೊದಲ ಭಾಷ್ಯ ಮೂಡಿಬಂದಿತು. ಪುರನಾನೂರು ಮೊದಲ ಭಾಗದಲ್ಲಿ ಚೇರ,ಚೋಳ,ಪಾಂಡ್ಯರನ್ನು , ಮಧ್ಯಭಾಗದಲ್ಲಿ ಇವರ ಅಧೀನರಾದ ವೇಳೀರ್ಗಳನ್ನು ,ಕೊನೆಯ ಭಾಗದಲ್ಲಿ ಯುದ್ಧ ದೃಶ್ಯ,ಯುದ್ಧದ ಪರಿಣಾಮಗಳನ್ನು ಕುರಿತಾದ ಪದ್ಯಗಳಿಂದ ಸಂಕಲಿತಗೊಂಡಿದೆ. ಕಾಲ್ಪನಿಕ ಸಂಗತಿಗಳು ಪ್ರ.ಶ 8-11 ಶತಮಾನದಲ್ಲಿ ಇರೈಯನಾರ್(ಶಿವ,ನಾಯಕ) ಅಹಪೆÇ್ಪರುಳ್(ಅಹ=ಪ್ರೀತಿ, ಪೊರುಳ್==ಹುರುಳು,ಸಾರ, ಲೌಕಿಕ ವಿಷಯ) ಕೃತಿಗೆ ಬರೆದ ಟೀಕೆಯಲ್ಲಿ ನಕ್ಕಿರಾರ್ ಸಂಗಂಗಳ ಅಸ್ತಿತ್ವವನ್ನು ಹೇಳುವುನಾದರೂ ಅದು ಆತನಿಗೆ ತಿಳಿದುಬಂದುದಾದರೂ ಹೇಗೆ? ಮೌಖಿಕ ಸಂಪ್ರದಾಯದಿಂದಲೋ ಅಥವಾ ಯವುದಾದರೂ ಪ್ರಾಚೀನ ಕೃತಿಯ ಮೂಲಕವೋ ಎಂಬುದು ರಹಸ್ಯವಾಗಿ ಉಳಿದಿದೆ. ಇರೈಯನಾರ್ ಅಹಪ್ಪೊಪರುಳ್ ಭಾಷ್ಯಕಾರ ಸಂಗಂಗಳ ಕಾಲದ ಸಾಹಿತ್ಯದ ಬಗೆಗೆ ಹೇಳುತ್ತಾನಾದರೂ ಅದಕ್ಕಿಂತ ಹಿಂದಿದ್ದ ಸಾಹಿತ್ಯದ ಸ್ಥಿತಿಗತಿಗಳ ಬಗ್ಗೆ ಚಕಾರವೆತ್ತುವುದಿಲ್ಲ ಮತ್ತು ಸಂಗಂಗೆ ಪ್ರೇರಣೆ ನೀಡಿದ ಸಾಂದರ್ಭಿಕತೆಯ ಸಮೀಕ್ಷೆ ನಡೆಸಿಲ್ಲ. ಸಂಗಂನಲ್ಲಿರುವ ದೇವ ದೇವತೆಗಳು,ಪೌರಾಣಿಕ ಸಂಗತಿಗಳು ಸಂಸ್ಕೃತೀಕರಣವನ್ನು ಪ್ರತಿಫಲಿಸುತ್ತವೇ ಹೊರತು ಸಂಗಂ ಸಾಹಿತ್ಯ ನಿರೂಪಿಸಿದಂತಹುದಲ್ಲ. ನಕ್ಕೀರಾರ್ ಕೃತಿ ನೀಡುವ ರಾಜರುಗಳ ಸಂಖ್ಯೆ, ಅವರ ಕಾಲ ವಿವರ, ಅವರೊಂದಿಗಿದ್ದ ಕವಿಗಳ ಸಂಖ್ಯೆ ಅದು ಜನಜನಿತವಾಗಿ ಬಂದಿರದೆ ಕೃತ್ರಿಮ ಸೃಷ್ಟಿಯಂತೆ ಭಾಸವಾಗುತ್ತದೆ. ಮೂರು ಸಂಗಂಗಳ ಅವಧಿ 9900 ವರ್ಷಗಳು. ಇವುಗಳು 197 ಪಾಂಡ್ಯ ರಾಜರುಗಳಿಂದ ಪೋಷಿತವಾಗಿವೆ. ಇದು ತಲೆಮಾರಿಗೆ ಸರಾಸರಿ 50 ವರ್ಷಗಳನ್ನು ನೀಡುತ್ತದೆ. ಇದು ಮಾನವ ಚರಿತ್ರೆಯಲ್ಲಿ ಅನೂಹ್ಯ ಸಂಗತಿ. ಸಾಮಾನ್ಯವಾಗಿ ಒಂದು ತಲೆಮಾರಿಗೆ 25 ವರ್ಷಗಳು. ಪೌರಾಣಿಕ ಹೊರತಾಗಿ ಜಗತ್ತಿನ ಚರಿತ್ರೆಯಲ್ಲಿ ಇಷ್ಟು ಸುದೀರ್ಘ ನಾಗರಿಕ ಜೀವನದ ಉಲ್ಲೇಖ ಎಲ್ಲೂ ಇಲ್ಲ. ಈ ಸುದೀರ್ಘಾವಧಿ ಆಧುನಿಕ ಇತಿಹಾಸ ಸಾರುವ ಶಿಲಾಯುಗ,ತಾಮ್ರಯುಗ ಮತ್ತು ಕಬ್ಬಿಣದ ಯುಗಗಳ ಅಸ್ತಿತ್ವ ಮತ್ತು ಮಾನವ ನಾಗರಿಕತೆಯ ವಿಕಾಸಕ್ಕೆ ವಿರುದ್ಧವಾದುದು. ಸಂಸ್ಕೃತದ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ, ಇವುಗಳನ್ನು ಸಂಪ್ರದಾಯದಲ್ಲಿ ವಿದ್ಯಾಧಿದೇವತೆ0iÉುಂದು ಪರಿಗಣಿಸುತ್ತಾರೆ. ಈ ಆಧಾರದ ಮೇಲೆ ಕೊನೆ ಸಂಗಂ ಪೆÇೀಷಿಸಿದ ರಾಜರುಗಳ ಸಂಖ್ಯೆ0iÀiನ್ನು 49ಕ್ಕೆ ನಿರ್ದಿಷ್ಟಗೊಳಿಸಿರುವ ಸಾಧ್ಯತೆಗಳಿವೆ. ತಮಿಳಗಂನಲ್ಲಿ ಅಂತರ್ಗತವಾಗಿದ್ದೆಂದು ಹೇಳಲಾಗಿರುವ 49 ನಾಡುಗಳು , ವೇಳಿರರು ತಮ್ಮ ಪೂರ್ವಿಕರು ದ್ವಾರಕೆಯಲ್ಲಿ 49 ತಲೆಮಾರುಗಳಲ್ಲಿ ಹರಿದು ಬಂದಿದ್ದಾರೆಂದು ವರ್ಣಿಸುವ ಸಂಪ್ರದಾಯ ಗಮನಾರ್ಹವಾದುದು. ಎರಡು ಜಲಪ್ರಳಯಗಳಿಗೆ ಬೇರೆ ಯಾವುದೇ ಬಾಹ್ಯ ಸಾಕ್ಷಿಗಳಿಲ್ಲ. ಪೆರುಂಪರಿಪಾಡಲ್,ಪೆರುಂಕಲಿತ್ತೊಗೈ ಹಾಗೂ ಅಗತ್ತಿಯಂನಂತಹ ಕಾಲ್ಪನಿಕ ಕೃತಿಗಳನ್ನು ಉಲ್ಲೇಖಿಸಿ ತೊಲ್ಕಾಪ್ಪಿಯಂನಂತಹ ನೈಜ ಕೃತಿಗಳನ್ನು ಹಿನ್ನೂಕಲಾಗಿದೆ. ಮೊದಲ ಸಂಗಂ ದಕ್ಷಿಣ ಮಧುರೈಯಲ್ಲಿದ್ದಿತು. ನಂತರ ಇದನ್ನು ಕಪಡಾಪುರಕ್ಕೆ ಸ್ಥಳಾಂತರಿಸಿ ಎರಡನೇ ಸಂಗಂ ಕಟ್ಟಲಾಯಿತು. ಕಪಡಾಪುರಂ ಜಲಪ್ರಳಯಕ್ಕೊಳಗಾಗಿ ಬಹುತೇಕ ಕೃತಿಗಳು ನಿರ್ನಾಮಗೊಂಡವು. ಇದಾದ ನಂತರ ಈಗಿರುವ ಮಧುರೈನಲ್ಲಿ ಮೂರನೇ ಸಂಗಂ ಸ್ಥಾಪಿಸಲಾಯಿತು. ಆದರೆ ಲಭ್ಯವಿರುವ ಮೂರನೇ ಸಂಗಂಗೆ ಸೇರಿದ್ದೆಂದು ಹೇಳಲಾಗುವ ಸಾಹಿತ್ಯದಲ್ಲಿ ಮೊದಲೆರಡು ಸಂಗಂಗಳಿದ್ದ ನಗರಗಳ ಬಗೆಗೆ ಯಾವುದೇ ಉಲ್ಲೇಖಗಳಿಲ್ಲ. ಸಂಗಂ ಕಲ್ಪನೆ ಅಸ್ತಿತ್ವದ ಹಿನ್ನೆಲೆಯಲ್ಲಿ ರೂಪುಗೊಂಡಿರದೆ ಪುರೋಹಿತಷಾಹಿ ತನ್ನ ಅನುಕೂಲಕ್ಕಾಗಿ ಸೃಜಿಸಿರುವಂತಹುದು. ಸಂಗಂ ಕುರಿತಾದ ಸಂಗತಿಗಳು , ಘಟನೆಗಳು ಬಹು ಕೃತ್ರಿಮವಾಗಿದ್ದು ಚಾರಿತ್ರಿಕ ಹುರುಳಿಲ್ಲದಂತಹವು. ಮಾನವರ ಚರಿತ್ರೆಯಲ್ಲಿ ಅಥವಾ ನೈಸರ್ಗಿಕ ವಿಕಸನದಲ್ಲಿ ಆರಂಭದಲ್ಲಿ ರೂಕ್ಷ ಹಾಗೂ ಅಸ್ಪಷ್ಟವಾದುದು ಕಾಲಕಳೆದಂತೆ ಸೂಕ್ಷ್ಮ ಹಾಗೂ ಸುಧಾರಿತವಾಗುತ್ತದೆ. ಆದರೆ ಸಂಗಂನ ಪ್ರಕರಣದಲ್ಲಿ ಆದಿಸಂಗಂಗಿಂತಲೂ ಮಧ್ಯಸಂಗಂ ,ಮಧ್ಯ ಸಂಗಂಗಿಂತಲೂ ಕಡೆಸಂಗಮ ಉತ್ಕೃಷ್ಟತೆಯಲ್ಲಿ ಕೆಳಗಿಳಿದಂತೆ ಹೇಳಲಾಗಿದೆ. ಮೊದಲ ಸಂಗಮ ಸ್ವರ್ಣಯುಗದಂತೆ ರೂಪಿತಗೊಂಡಿದ್ದರೆ ಕಡೆ ಸಂಗಮ ಕಬ್ಬಿಣಯುಗದಂತೆ ಚಿತ್ರಿತವಾಗಿದೆ. ಇದು ಸಾಹಿತ್ಯದ ಸಹಜ ವಿಕಸನ ತತ್ವಕ್ಕೆ ವಿರುದ್ಧವಾದುದು. ಮೇಲ್ಗೈ ಸಾಧಿಸಲು ಸದಾ ಹೆಣಗಾಡುತ್ತಿದ್ದ ಪಾಂಡ್ಯರ ಶತ್ರುಗಳಾದ ಚೇರ , ಚೋಳರನ್ನು ಕುರಿತಾದಂತಹ ಪದ್ಯಗಳನ್ನು ಮತ್ತು ಅವರಿಂದ ಪೋಷಿತರಾದ ಕವಿಗಳನ್ನು ತಮ್ಮ ಆಸ್ಥಾನಕ್ಕೆ ಕರೆಸಿ , ಅವರ ಸಾಹಿತ್ಯಕ ಕೃತಿಗಳನ್ನು ವಿಮರ್ಶಿಸಿ ಅವುಗಳ ಗುಣಾವಗುಣಗಳ ಚರ್ಚೆಯನ್ನು ಪಾಂಡ್ಯರು ಮಾಡುತ್ತಿದ್ದರೆಂಬುದು ರಾಜಕೀಯ ಮತ್ತು ಸಾಹಿತ್ಯಕ ದೃಷ್ಟಿಯಿಂದ ಅಸಂಭವ. ಪೆಹನ್ , ಪಾರಿ, ಕಾರಿ , ಅಯಿ , ಅದಿಗಮಾನ್ , ನಳ್ಳಿ , ಒರಿಯಂತಹ ನೂರಾರು ವೇಳೀರ್,ಚಿರ್ರರಸರುಗಳು ಸಹ ಪಾಣಾರ್ ಗಾಯಕರುಗಳಿಗೆ ಪೋಷಕರಾಗಿದ್ದು ಕೊಡುಗೈ ದಾನಿಗಳಾಗಿದ್ದರೆಂದು ಸಂಗಂ ಸಾಹಿತ್ಯದಿಂದ ತಿಳಿದು ಬರುತ್ತದೆ. ಇದರಿಂದ ಪಾಂಡ್ಯರಿಂದ ಸಂಗಂ ಪೆÇೀಷಿತವಾಯಿತು ಎನ್ನುವುದು ಮಧ್ಯಕಾಲೀನ ಪಾಂಡ್ಯರ ಆಸ್ಥಾನದಲ್ಲಿದ್ದ ಕವಿ ತನ್ನ ದೊರೆಗಳನ್ನು ಮೆಚ್ಚಿಸಲು ಹಮ್ಮಿಕೊಂಡ ಕಾಲ್ಪನಿಕ ರಮ್ಯ ಕಥೆಯಂತೆ ಭಾಸವಾಗುತ್ತದೆ. ಸಾಕ್ಷ್ಯಗಳು -ಸಾಹಿತ್ಯದಲ್ಲಿ * ಸಂಗಂಗಳ ಅಸ್ತಿತ್ವವನ್ನು ತಿಳಿಸುವ ಮೊದಲ ಗ್ರಂಥ ಇರೈಯನಾರ್ ಅಗಪ್ಪೊರುಳ್ ಅಥವಾ ಕಳವಿಯಲ್ ಎಂಬ ಹೆಸರಿನ ಕೃತಿಗೆ ಪ್ರ.ಶ 8-10 ನೇ ಶತಮಾನದಲ್ಲಿ ನಕ್ಕೀರಾರ್ ರಚಿಸಿದ ಟೀಕಾ ಗ್ರಂಥ. * ಸಂಗಂ ಸಾಹಿತ್ಯದಲ್ಲಿನ ಯಾವುದೇ ಕೃತಿಗಳು ಸಂಗಂ ಅಸ್ತಿತ್ವದ ಯಾವುದೇ ಅತ್ಯಲ್ಪ ಕುರುಹನ್ನು ತೋರುವುದಿಲ್ಲ. ಸಂಗಂ ಕೃತಿಗಳಲ್ಲಿ ನಿರೂಪಿತವಾಗಿರುವ ಸಾಹಿತ್ಯ ನೀಡುವ ಸಾಂಸ್ಕೃತಿಕ,ರಾಜಕೀಯ,ಸಾಮಾಜಿಕ ಸ್ಥಿತಿಗತಿಗಳು ಸಂಗಂನಂತಹ ಯಾವುದೇ ಸಾಂಘಿಕ ಅಸ್ತಿತ್ವವನ್ನು ಪೋಷಿಸುವ ಮುಂದುವರೆದ ನಾಗರಿಕತೆಯನ್ನು ಪ್ಸೋಷಿಸಿದಂತೆ ಕಾಣುವುದಿಲ್ಲ. * ಸಂಗಂ ಸಾಹಿತ್ಯದ ಕಾಲವನ್ನು ಕ್ರಿ,ಶ. 1 ರಿಂದ 3 ನೇ ಶತಮಾನವೆಂದು ಭಾವಿಸಲಾಗಿದೆ. ಆದರೆ ಸಂಗಂ ಕುರಿತಾದ ಉಲ್ಲೇಖಗಳೆಲ್ಲವೂ 8-10 ನೇ ಶತಮಾನದಿಂದ ಬಂದಿವೆ. * ಪ್ರ.ಶ. 300-600 ರ ಪಲ್ಲವಪೂರ್ವ ಮತ್ತು ಪಲ್ಲವ ಕಾಲದ ಸಾಹಿತ್ಯದಲ್ಲಿ ಸಂಗಂಗಳ ಅಸ್ತಿತ್ವದ ಯಾವುದೇ ಕುರುಹುಗಳು ದಕ್ಕುವುದಿಲ್ಲ. * ಪ್ರ.ಶ. 10 ರಿಂದ 13 ನೇ ಶತಮಾನದ ಅವಧಿಯಲ್ಲಿದ್ದ ಶೇಕ್ಕಿಳಾರ್, ಅಂಡಾಳ್,ಅವ್ವೆಯಾರ್ ಮತ್ತು ಕಂಬರ್ ಸಂಗಂ ಮತ್ತು ಮಧುರೈ ಸಂಬಂಧಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಇದು ಆರಂಭಿಕ ಕಾಲದ ಸಂಬಂಧವನ್ನು ಸೂಚಿಸುವುದಿಲ್ಲ. * ಸಂಗಂ ಸಾಹಿತ್ಯದ ಆಧಾರದ ಮೇಲೆ ತಮಿಳಗಂನ ಚರಿತ್ರೆಯನ್ನು ಅರಿಯುವಲ್ಲಿ ಯಾವುದೇ ಗಮನಾರ್ಹ ಯಶಸ್ಸು ದಕ್ಕಿಲ್ಲ. ಸಂಗಂ ಸಾಹಿತ್ಯದಲ್ಲಿ ನಿರೂಪಿತವಾಗಿರುವ ಘಟನಾವಳಿಗಳಿಗೆ ಚಾರಿತ್ರಿಕ ಸಂಶೋಧನೆಯ ಬೆಂಬಲ ಒದಗಿಸಲು ನಡೆಸಿರುವ ಪ್ರಯತ್ನಗಳಿಗೆ ತೀರ ನಗಣ್ಯವಾದ ಯಶಸ್ಸು ದಕ್ಕಿದೆ. ಇದರಿಂದಾಗಿ ಸಂಗಂ ಸಾಹಿತ್ಯದ ಹಿನ್ನೆಲೆಯಲ್ಲಿ ನಡೆಸುವ ಚಾರಿತ್ರಿಕ ಅಂಶಗಳನ್ನು ಕುರಿತಾಗಿ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಇದು ಹಲವಾರು ವಿವಾದಗಳಿಗೆ ಎಡೆಗೊಟ್ಟಿದೆ. * ಕ್ರಿ.ಪೂ 2-ಪ್ರ.ಶ 4 ರ ಅವಧಿಯ ತಮಿಳು ಬ್ರಾಹ್ಮಿ ಬರಹಗಳಲ್ಲಿ ಪ್ರಾಕೃತದ ಅಧಿಪತ್ಯ ದಾಖಲಾಗಿದೆ. ಈ ಬರಹಗಳಲ್ಲಿ ಪ್ರಾಕೃತದ ನಡುವೆ ಅಲ್ಲಲ್ಲಿ ತಮಿಳು ಶಬ್ಧಗಳು ಕಾಣಿಸಿಕೊಂಡಿವೆ. ಇದೇ ಕಾಲದ ಸಂಗಂ ಸಾಹಿತ್ಯದ ಮೇಲೆ ಪ್ರಾಕೃತದ ಪ್ರಭಾವಗಳನ್ನು ಗುರುತಿಸಿಲ್ಲ. ಪ್ರ.ಶ 5 ನೇ ಶತಮಾನದವರೆಗೆ ತಮಿಳು ಬ್ರಾಹ್ಮಿ ಶಿಲಾಶಾಸನಗಳು ದಕ್ಕಿವೆ. ಇಡೀ ಭಾರತದಲ್ಲಿ ಪ್ರಾಕೃತ ಹಿಂಜರಿದ ನಂತರವೇ ಸಂಸ್ಕೃತ ಬಳಕೆಗೆ ಬಂದಿತೆನ್ನುವುದು ನಿರ್ವಿವಾದವಾಗಿದೆ. ಇದು ಸಂಗಂ ಸಾಹಿತ್ಯದ ಕಾಲ ,ತಮಿಳು-ಬ್ರಾಹ್ಮಿಯಲ್ಲಿ ಬರೆದವರ ಗುರುತಿಸಿಕೆ ಹಾಗೂ ಅವರ ಮೂಲ, ಸಂಗಂ ಕಾಲದೊಂದಿಗಿನ ಸಮಕಾಲೀನತೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಲು ಒತ್ತಾಯಿಸುತ್ತದೆ. ಕನ್ನಡದ ಮೇಲೆ ಪ್ರಾಕೃತದ ಪ್ರಭಾವ ಸುಪ್ರಸಿದ್ಧವಾಗಿದೆ. ತಮಿಳು ಬರಹಗಳಲ್ಲಿನ ಪ್ರಾಕೃತ , ಸಂಗಂ ಕಾಲದ ಬೆನ್ನಲ್ಲೇ ಬಂದ ಪಲ್ಲವರ, ಕದಂಬರು ಪ್ರಾಕೃತಕ್ಕೆ ನೀಡಿದ ಪ್ರಾಶಸ್ತ್ಯಗಳನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡಬೇಕಾಗಿದೆ. ಸಾಕ್ಷ್ಯಗಳು-ಇತಿಹಾಸದಲ್ಲಿ * ಭಾರತದ ಅಥವಾ ಶ್ರೀಲಂಕಾದ ಭಾಗದಲ್ಲಿ ಯಾವುದೇ ಭೂಭಾಗಗಳು ಸಮುದ್ರ ಪಾಲಾಗಿರುವುದು ಆಧುನಿಕ ಪ್ರಾಕ್ತನ ಸಂಶೋಧನೆಗಳಿಂದ ರುಜುವಾತಾಗಿಲ್ಲ. * ತಮಿಳಗಂನಲ್ಲಿ ನಡೆಸಿರುವ ಉತ್ಖನನಗಳಿಂದ ಉತ್ತರದ ಲೋಥಾಲ್, ಹರಪ್ಪ ಮೊಹೆಂಜದಾರೊ ಅಥವಾ ದ್ವಾರಕಾಗಳನ್ನು ಹೋಲುವಂತಹ ಯಾವುದೇ ಗಮನಾರ್ಹ ನೆಲೆಗಳನ್ನಾಗಲಿ ಅಥವಾ ಅಲ್ಲಿ ಕಂಡು ಬಂದಂತಹ ಸುಸಂಬದ್ಧ ನಗರ ಯೋಜನೆ, ನೈರ್ಮಲ್ಯ ವ್ಯವಸ್ಥೆ, ಆಡಳಿತ ವ್ಯವಸ್ಥೆಯಂತಹ ಅಸ್ತಿತ್ವವನ್ನಾಗಲಿ ಸೂಚಿಸುವಂತಹ ಸಾಕ್ಷ್ಯಗಳು ದಕ್ಕಿಲ್ಲ. * ತಮಿಳುನಾಡಿನಲ್ಲಿ ನಡೆಸಿದ ಉತ್ಖನನಗಳು ಕ್ರಿ.ಪೂ. 400-1000 ರ ಅವಧಿಯನ್ನು ಮಹಾಶಿಲಾಯುಗವೆಂದು ಖಚಿತಪಡಿಸಿವೆ. ಅಲ್ಲದೆ ಕ್ರಿ.ಪೂ 1000-3000 ರ ಅವಧಿ ನವಶಿಲಾಯುಗಕ್ಕೊಯ್ಯುತ್ತದೆ. ಉತ್ಖನನದಿಂದ ಚಾರಿತ್ರಿಕ ಪೂರ್ವ ಕಾಲಗಳಲ್ಲಿ ತಮಿಳುನಾಡಿನಲ್ಲಿ ಯಾವುದೇ ಮುಂದುವರೆದ ನಾಗರಿಕತೆಗಳು ಇದ್ದುದಕ್ಕೆ ಹಾಗೂ ಪ್ರ.ಶ. ಮೊದಲ ಶತಮಾನಗಳ ಆರಂಭಿಕ ನಾಗರಿಕತೆಯ ಮೇಲೆ ಇವು ಪರಿಣಾಮ ಬೀರಿದುದಕ್ಕೆ ಯಾವ ಸಾಕ್ಷ್ಯಗಳು ದಕ್ಕಿಲ್ಲ. * ಪ್ರ.ಶ 1 ನೇ ಶತಮಾನದಲ್ಲಿದ್ದ ಕುಂದಕುಂದಾಚಾರ್ಯ ಜೈನರ ಮೂಲ ಸಂಘವನ್ನು ಸ್ಥಾಪಿಸಿದನು. ಪ್ರ.ಶ. 5 ನೇ ಶತಮಾನದಿಂದ ಈ ಮೂಲ ಸಂಘ ಹಲವಾರು ಗಣ,ಗಚ್ಛ,ಸಂಘಗಳಾಗಿ ಕವಲೊಡೆಯತೊಡಗಿತು. ಇವುಗಳಲ್ಲಿ ನಂದಿ ಗಣ,ಸರಸ್ವತಿ ಗಚ್ಛ, ನಂದಿ ಸಂಘ, ಮಯೂರ ಸಂಗ, ಕಿತ್ತೂರು ಸಂಘ, ಸೇನ ಗಣ, ಬಳ್ಳಿಗಾಮೆ,ಬನವಾಸಿ,ಕರ್ನಾಟಕಗಳನ್ನೊಳಗೊಂಡ ಬಲತ್ಕಾರ ಗಣ ಪ್ರಮುಖವಾದುವು. ಕರ್ನಾಟಕದ ಕನ್ನಡ ಶಾಸನಗಳು ದ್ರಾವಿಡ ಸಂಘಗಳ ಅಸ್ತಿತ್ವವನ್ನು ಸಾರುತ್ತವೆ. * ಕರ್ನಾಟಕದಲ್ಲಿದ್ದ ಜೈನಮುನಿ ದೇವನಂದಿ ಪೂಜ್ಯಪಾದನ ಶಿಷ್ಯನಾಗಿದ್ದ ವಜ್ರನಂದಿ ಜಿನೇಂದ್ರ ಎಂಬ ವ್ಯಾಕರಣ ಮೀಮಾಂಸ ಕೃತಿ ರಚಿಸಿದ್ದಾನೆ. ಇದು ಸಂಸ್ಕೃತದ ಪ್ರಮುಖ ಎಂಟು ವ್ಯಾಕರಣಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಈ ವಜ್ರನಂದಿ ಮಧುರೆಯಲ್ಲಿ ಜೈನಧರ್ಮ ಅಧ್ಯಯನಕ್ಕಾಗಿ ಪ್ರ.ಶ. 468-469 ರಲ್ಲಿ ಜೈನಸಂಘ ಸ್ಥಾಪಿಸಿದನೆಂದು ಪ್ರ.ಶ. 853ರಲ್ಲಿ ದೇವಸೇನನಿಂದ ರಚಿತವಾದ ದರ್ಶನಸಾರ ಎಂಬ ಪ್ರಾಕೃತದ ಗ್ರಂಥದಲ್ಲಿ ದಾಖಲಾಗಿದೆ. ಜೈನ ಹಾಗೂ ಬೌದ್ಧ ಸಂಪ್ರದಾಯಗಳಲ್ಲಿ ಸಂಘಗಳಿಗೆ ಬಹು ಮಹತ್ವವಿದೆ. ಬೌದ್ಧರು ಬುದ್ಧ, ಧರ್ಮ,ಸಂಘಗಳೆಂಬ ಮೂರು ರತ್ನಗಳನ್ನು ಪರಿಗಣಿಸುತ್ತಾರೆ. ಹತ್ತನೆಯ ಶತಮಾನದ ವೇಳೆಗೆ ಈ ಸಂಘಗಳು ಜನಜನಿತವಾಗಿದ್ದು ಇವುಗಳ ಕಲ್ಪನೆಯ ಮೇಲೆ 8-10 ನೇ ಶತಮಾನದಲ್ಲಿದ್ದ ನಕ್ಕೀರಾರ್ ಸಂಗಂ ಕಥೆಯನ್ನು ಹೆಣೆದಿರುವ ಸಾಧ್ಯತೆಗಳಿವೆ. * ಮಧುರೈ ನಗರವನ್ನು ಸಂಗಂನೊಂದಿಗೆ ಗುರುತಿಸುವ ಮೊತ್ತಮೊದಲ ಐತಿಹಾಸಿಕ ದಾಖಲೆಯೆಂದರೆ ಹತ್ತನೇ ಶತಮಾನದ ಪಾಂಡ್ಯರ ಚಿನ್ನಮನೂರು ಶಾಸನ. ಸಾಹಿತ್ಯದ ಕಾಲ ಸಂಗಂ ಸಾಹಿತ್ಯದ ಕೆಳ ನೀಡಿರುವಂತೆ ಹಲವಾರು ಹಂತಗಳಲ್ಲಿ ಹರಿದುಬಂದಿದೆಯೆಂಬುದು ಕಮಿಲ್ ಝ್ವೆಲೆಬಿಲ್ರವರ ಅಭಿಪ್ರಾಯ. ಮೌಖಿಕವಾದ ಸಾಹಿತ್ಯ ಸಂಯೋಜನೆ. ಮೌಖಿಕ ಸಾಹಿತ್ಯದ ಪ್ರಚಾರ. ಸಾಹಿತ್ಯದ ಲಿಪಿಕರಣ ಲಿಪಿಕರಣಗೊಳಿಸಿದ ಸಾಹಿತ್ಯದ ವರ್ಗೀಕರಣ ಮತ್ತು ಸಂಪಾದನೆ ಸಾಹಿತ್ಯದ ಮೇಲೆ ಟೀಕೆ,ವಿಮರ್ಶೆ,ವಿಮರ್ಶೆಯ ಮೇಲೆ ವಿಮರ್ಶೆ. ಮೌಖಿಕ ಸಂಯೋಜನೆ ಮತ್ತು ಪ್ರಚಾರದ ಕಾಲ : ಸಂಗಂ ಸಾಹಿತ್ಯದ ಕಾಲ ನಿರ್ಣಯದಲ್ಲಿ ಬಹು ತೊಡಕಿನ ಕೆಲಸವೆಂದರೆ ಒಂದೇ ಹೆಸರಿನ ಹಲವಾರು ಕವಿಗಳ ಅಸ್ತಿತ್ವ. ಸಂಗಂ ಸಾಹಿತ್ಯದ ಸಂಗ್ರಹಕಾರರು ಹಾಗೂ ಭಾಷ್ಯಕಾರರು ಇವರನ್ನು ಒಬ್ಬ ವ್ಯಕ್ತಿಯಂತೆ ಭಾವಿಸಿ ಗೋಜಲನ್ನುಂಟು ಮಾಡಿದ್ದಾರೆ. ವಿವಿಧ ಕಾಲಘಟ್ಟಗಳ, ಹಲವಾರು ಶತಮಾನಗಳ ಅಂತರದ ಒಂದೇ ಹೆಸರಿನ ಕವಿಗಳನ್ನು ಒಬ್ಬರೆಂದೇ ಕಾಣಲಾಗಿದೆ. ಕಪಿಲರ್ ಹೆಸರಿನವರು,ಅವ್ವೈಯಾರ್ ಹೆಸರಿನವರು ಹಲವರಿರಿವುದು ಸ್ಪಷ್ಟ. ಇರೈಯನಾರ್ ಅಗಪ್ಪೊಪರುಳ್ಗೆ ಭಾಷ್ಯ ಬರೆದ ನಕ್ಕೀರಾರ್,ಸಂಗಂ ಸಾಹಿತ್ಯದಲ್ಲಿನ ನಕ್ಕೀರಾರ್ ಹಾಗೂ ನೆಡುನೆಳುವಾಡೈ ಬರೆದ ನಕ್ಕೀರಾರ್ ವಿಭಿನ್ನ ವ್ಯಕ್ತಿಗಳು. ಸಂಗಂ ಸಾಹಿತ್ಯದಲ್ಲಿನ ಸಂಸ್ಕೃತದ ಅತ್ಯಲ್ಪ ಅಸ್ತಿತ್ವ, ಅಪರೂಪದ ವ್ಯಾಕರಣ ರೂಪಗಳು, ವಿಶಿಷ್ಟರೀತಿಯ ಸಂರಚನೆ, ವಸ್ತು ಮತ್ತು ವಿಷಯ, ವಿಚಿತ್ರ ಹೆಸರುಗಳು, ಸಾಹಿತ್ಯ ಪರಂಪರೆಯ ಅನಸ್ತಿತ್ವ ,ಅಭಿವೃದ್ಧಿಗೊಂಡ ಜಾತಿಗಳು ಇಲ್ಲದಿರುವುದು,ದನಗಳ ಕಳ್ಳತನ,ಮೃತರ ದೇಹಗಳನ್ನು ಮಡಕೆ ಮತ್ತು ಶಿಲಾಪೆಟ್ಟಿಗೆಗಳಲ್ಲಿಡುವ ಸಂಪ್ರದಾಯಗಳ ವಿವರಣೆಗಳಿಂದ ಸಂಗಂ ಸಾಹಿತ್ಯ ಪ್ರ.ಶ 5ನೇ ಶತಮಾನಕ್ಕಿಂತಲೂ ಮುಂಚಿನದಾಗಿದ್ದು, ಪ್ರ.ಶ. 1ರಿಂದ 3 ನೇ ಶತಮಾನಗಳಿಗೆ ಸೇರಿರುವ ಸಾಧ್ಯತೆ ಅಧಿಕವಾಗಿದೆ. ಸಂಗಂ ಸಾಹಿತ್ಯದಲ್ಲಿ ಕವಿಗಳು ನಿರೂಪಿಸಿದ ರಾಜರುಗಳು ಸಮಕಾಲೀನರೋ ಅಥವಾ ಹಿಂದೆ ಆಗಿ ಹೋದವರೋ ಎಂದು ನಿರ್ಧರಿಸುವುದು ಬಹು ಕಠಿಣವಾಗಿದೆ. ಹಳೆ ತಮಿಳಿನಲ್ಲಿ ಕ್ರಿಯಾಪದಗಳು ಕಾಲವನ್ನು ಅಸ್ಪಷ್ಟ ರೀತಿಯಲ್ಲಿ ವ್ಯಕ್ತಗೊಳಿಸುತ್ತಿದ್ದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿವೆ. ಸಂಗಂ ಕಾಲದ ಕವಿಗಳು ತಮ್ಮ ಆಶ್ರಯದಾತರ ಹಂಗಿನಲ್ಲಿದ್ದುದರಿಂದ ಅವರ ಹೆಸರುಗಳನ್ನು ನೇರವಾಗಿ ಹೇಳದೆ ಅವರನ್ನು ಅವರ ಸಾಧನೆಗಳ ಗುಣವಾಚಕಗಳಿಂದ ಸಂಬೋಧಿಸುತ್ತಿದ್ದರು. ಪಾಲ್ಸಾಲೈ ಮುದುಕುಡುಮಿ ಪೆರವಾಳುಡಿ, ತಲೈಯಾಲಂಕಣಟ್ಟು ಚೇರುವನ್, ಶೆರುಪ್ಪಾಳಿ ಎರಿಂದ ಇಳೈಸೆಂತಿಸೆನ್ನಿ (ಪಾಳಿ ಕೋಟೆಯನ್ನು ಕೆಡವಿದ ಎಳೆಯ ಚೋಳ),ರಾಜಸೂಯಂ ವೆಟ್ಟ ಪೆರುನಾರ್ ಕಿಳ್ಳಿ ( ರಾಜಸೂಯ ಯಾಗ ಮಾಡಿದ ಮಹಾ ಕಿಳ್ಳಿ) ಇತ್ಯಾದಿ., ಆದ್ದರಿಂದ ಈ ನಿಜವಾದ ಹೆಸರುಗಳನ್ನು ನಿರ್ಧರಿಸುವುದು ಕಷ್ಟ. 5-6ನೇ ಶತಮಾನದಲ್ಲಿದ್ದ ಪಲ್ಲವರ ಉಲ್ಲೇಖ ಸಂಗಂ ಸಾಹಿತ್ಯದಲ್ಲಿ ಇಲ್ಲದೇ ಇರುವುದು ಇದು 5ನೇ ಶತಮಾನಕ್ಕಿಂತ ಮುಂಚಿನದೆಂಬ ಖಚಿತ ತೀರ್ಮಾನಕ್ಕೆ ಬರಲು ಕಾರಣವಾಗುತ್ತದೆ. ಪಲ್ಲವರು ಪ್ರ.ಶ. 250ರಲ್ಲಿ ಕಂಚಿಯನ್ನು ವಶಪಡಿಸಿಕೊಂಡರು ಹಾಗೂ ಶಿವವರ್ಮನ್-1 ಪ್ರ.ಶ. 315-45 ರಲ್ಲಿ ಹಾಕಿಸಿದ ಪ್ರಾಕೃತದಲ್ಲಿನ ಶಿಲಾಶಾಸನವೇ ಮೊಟ್ಟಮೊದಲನೆಯದು. ಆದರೆ ಪಲ್ಲವರ ಯಾವುದೇ ಶಿಲಾಶಾಸನಗಳಲ್ಲಿ, ಆ ಕಾಲದ ಸಾಹಿತ್ಯಗಳಲ್ಲಿ ಸಂಗಂ ಸಾಹಿತ್ಯದ, ಅದು ಅಸ್ತಿತ್ವದಲ್ಲಿದ್ದ ಕುರುಹುಗಳು ದಕ್ಕಿಲ್ಲ. ಆದ್ದರಿಂದ ಸಂಗಂ ಸಾಹಿತ್ಯ ಇದಕ್ಕಿಂತಲೂ ಮುಂಚಿನದಾಗಿದ್ದು ಮೌಖಿಕ ರೂಪದಲ್ಲಿ ಅಸ್ತಿತ್ವದಲ್ಲಿದ್ದಿತು. (ಕೃ:3-ಪು.40) ಸಂಸ್ಕೃತ ಸಾಹಿತ್ಯದಲ್ಲಿ ಖಚಿತವಾಗಿ ಸ್ತಾಪಿತವಾಗಿರುವ ಕಾಲಾವಧಿಯೆಂದರೆ ಪುಷ್ಯಮಿತ್ರ ಸುಂಗ ಮತ್ತು ಪತಂಜಲಿಯ ಸಮಕಾಲೀನತೆ. (ಕ್ರಿ. ಪೂ 176-140/181-151/184-148) ತಮಿಳಗಂನ ಚರಿತ್ರೆಯಲ್ಲಿ ಯಾವುದೇ ಸಂಶಯಗಳಿಗೆಡೆಗೊಡದೆ ಸಂಸ್ಥಾಪಿತವಾಗಿರುವ ಮೊದಲ ಚಾರಿತ್ರಿಕ ಸಂಗತಿಯೆಂದರೆ ಪ್ರ.ಶ. 642ರಲ್ಲಿ ಪಲ್ಲವರ ದಂಡಾಧಿಪತಿಯಾದ ಚಿರುತ್ತೋಂಟನಾರ್ ಅಧಿಪತ್ಯದಲ್ಲಾದ ವಾತಾಪಿಯ ಪತನ. ಜ್ಞಾನಸಂಬಂಧರ್ ಚಿರುತ್ತೋಂಟಾನಾರ್ನ ಸಮಕಾಲೀನ ಹಾಗೂ ಭಕ್ತಿಯುಗದ ಆರಂಭಿಕ ಶೈವ ಸಂತಕವಿಗಳಲ್ಲೊಬ್ಬ. ಜ್ಞಾನಸಂಬಂಧರ್ ಚಾರುತ್ತೊಟ್ಟಾರ್ ಸ್ಥಳವನ್ನು ಸಂದರ್ಶಿಸಿದಾಗ ರಚಿಸಿದ ಸ್ತೋತ್ರ ಲಭ್ಯವಿದೆ. ಈತನ ಕಾಲಗಣನೆಯಿಂದ ಸಂಗಂ ಸಾಹಿತ್ಯದ ಕಾಲ ನಿರ್ಧಾರ ಸಾಧ್ಯ. ಈತನ ತೇವಾರಂಗಳಲ್ಲಿನ ತಮಿಳು ಭಾಷೆಗಿಂತ ಸಂಗಂ ಕಾಲದ ಭಾಷೆ ಹೆಚ್ಚು ಹಳೆಯರೂಪದಲ್ಲಿದೆ. ಕೋಚೆಂಗಣ್ಣನ್ನೊಂದಿಗೆ ತಮಿಳಗಂನ ಆದಿವಂಶಗಳ ಅವಧಿ ಕೊನೆಗೊಳ್ಳುತ್ತದೆ. ಕೋಚೆಂಗಣ್ಣನ್ನನ್ನು ನಾಯಕನನ್ನಾಗಿಸಿ ರಚಿಸಲಾದ ಕಳವಳಿ ಕೃತಿ ಖ್ಯಾತವಾಗಿದೆ. ಜ್ಞಾನಸಂಬಂಧರ್ ಕುಂಭಕೋಣಂ ಸನಿಹದಲ್ಲಿ ವೈಗೈ ನದಿ ತೀರದ ಮೇಲೆ ಆ ಹಿಂದೆ ಕೋಚೆಂಗಣ್ಣನ್ ನಿರ್ಮಿಸಿದ ಶಿವ ದೇವಾಲಯವನ್ನು ಹಲವಾರು ಬಾರಿ ಸ್ಮರಿಸಿದ್ದಾನೆ. ಸಂಗಂ ಸಾಹಿತ್ಯ ಮತ್ತು ಜ್ಞಾನ ಸಂಬಂಧರ್ ಮಧ್ಯೆ ಸುಮಾರು 400 ವರ್ಷಗಳ ಅಂತರವಿದೆ. ಆದ್ದರಿಂದ ಇವರಿಬ್ಬರ ಕಾಲದ ನಿರ್ಧಾರ ಹಾಗೂ ಅದಕ್ಕೆ ಲಗತ್ತಾಗಿರುವ ಸಂಗಂ ಅವಧಿಯ ನಿರ್ಧಾರವಿನ್ನು ಖಚಿತವಾಗಿಲ್ಲ. ಅಲ್ಲದೆ 400 ವರ್ಷಗಳಷ್ಟು ದೀರ್ಘಕಾಲ ಉಳಿಯುವಂತಹ ದೇವಾಲಯಗಳು ಸಂಗಂ ಕಾಲದಲ್ಲಿ ನಿರ್ಮಾಣಗೊಂಡಿದ್ದವೇ ಎನ್ನುವ ಪ್ರಶ್ನೆಗಾಗಲಿ ಅಥವಾ ಸಂಗಂ ಕಾಲದಲ್ಲಿ ದೇವಾಲಯ ಕಟ್ಟುವ ಸಂಸ್ಕೃತಿಯಾಗಲಿ ಇದ್ದಿತೆ ಎಂಬುದು ತೆರೆದ ಪ್ರಶ್ನೆಯಾಗಿಯೇ ಉಳಿದಿದೆ. ಜಿ.ಕೆ. ಶೇಷಗಿರಿ ಅಯ್ಯರ್ ಸಂಗಂ ಸಾಹಿತ್ಯದಲ್ಲಿ ದಕ್ಕುವ ಖಗೋಳೀಯ ಘಟನೆಗಳ ಆಧಾರದ ಮೇಲೆ ಅದರ ಕಾಲವನ್ನು ಪ್ರ.ಶ. 2ನೇ ಶತಮಾನವೆಂದು ಮಧುರೈ ಪಟ್ಟಣ ಪ್ರ.ಶ. 171ರಲ್ಲಿ ಬೆಂಕಿಗಾಹುತಿಯಾಯಿತೆಂದು ನಿರ್ಧರಿಸಿದ್ದಾರೆ. ಕೆ.ಎ. ನೀಲಕಂಠಶಾಸ್ತ್ರಿ ಹಾಗೂ ಎಸ್. ವಯ್ಯಾಪುರಿಪಿಳ್ಳೈಯವರು ಸಂಗಂ ಸಾಹಿತ್ಯದ ಬಹುತೇಕ ಭಾಗ ಪ್ರ.ಶ 100-250ರ ಅವಧಿಯದೆಂದು ನಿರ್ಧರಿಸಿದ್ದಾರೆ. ಬೇರೆ ವಿದ್ವಾಂಸರಿಗಿಂತಲೂ ಇವರ ಕಾಲ ನಿರ್ಣಯ ಹೆಚ್ಚು ಮನ್ನಣೆ ಪಡೆದಿದೆ. ಶಿವರಾಜ ಪಿಳ್ಳೆಯವರ ಅಧ್ಯಯನಗಳು ಸಹ ಇದನ್ನು ಅನುಮೋದಿಸಿವೆ. ಸ್ವಾಮಿಕಣ್ಣು ಪಿಳ್ಳೈಯವರು ಸಂಗಂ ಸಾಹಿತ್ಯದಲ್ಲಿ ದೊರೆಯುವ ಖಗೋಳೀಯ ಮಾಹಿತಿ ಆಧರಿಸಿ ಕಾಲನಿರ್ಣಯಕ್ಕೆ ಯತ್ನಿಸಿದ್ದು ಕ್ರಿ. ಶ. 756ರಲ್ಲಿ ಶಿಲಪ್ಪದಿಗಾರಂ ರಚಿತವಾಗಿದೆ ಹಾಗೂ ಪರಿಪಾಡಲ್ ಪ್ರ.ಶ 634 ರ ಅವಧಿಯದೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಸಂಗಂ ಸಾಹಿತ್ಯದ ಭಾಷೆ 7-8ನೇ ಶತಮಾನದಲ್ಲಿದ್ದ ರಾಜಕೀಯ ಪರಿಸರ,ಧಾರ್ಮಿಕ ಒಲವು ನಿಲುವುಗಳು ಈ ನಿರ್ಣಯವನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಮಾಡುತ್ತವೆ. ಪ್ರಾಚೀನ ತಮಿಳಗಂನಲ್ಲಿ ಬರಹದ ವ್ಯಾಪ್ತಿ ಮತ್ತು ಉದ್ದೇಶ ಏನಾಗಿರಬಹುದು ? ಅದು ಯಾವ ಮಟ್ಟಿಗೆ ಸಾಹಿತ್ಯ ರಚನೆಯಲ್ಲಿ ಬಳಕೆಯಾಗಿರಬಹ್ಮದೆಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರವಾಗಿ ಮೂಲತಃ ವೃತ್ತಿಗಾಯಕರ ಕವಿತೆಗಳು ಆರಂಭದಲ್ಲಿ ಮೌಖಿಕವಾಗಿದ್ದು ಪ್ರಾಚೀನ ಛಂದಸ್ಸುಗಳಲ್ಲಿದ್ದು ಕಾಲಾನುಕ್ರಮದಲ್ಲಿ ಲಿಪಿಗೊಂಡಿರುವ ಸಾಧ್ಯತೆಗಳು ದಟ್ಟವಾಗಿವೆ. ತಮಿಳಗಂನ ಆರಂಭಿಕ ಶಿಲಾಶಾಸನಗಳನ್ನು ಗಮನಿಸಿದಾಗ ಬರವಣಿಗೆ ವಾಣಿಜ್ಯ ಹಾಗೂ ಆಡಳಿತದಲ್ಲಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ಬಳಕೆಯಾಗಿದ್ದು, ಸಾಹಿತ್ಯ ಮತ್ತು ವಿಸ್ತೃತ ಸಾಹಿತ್ಯಕ ಚಟುವಟಿಕೆಗಳಿಗೆ ಬಳಕೆಯಾಗಿರಲಿಲ್ಲವೆಂದು ಭಾವಿಸಬಹುದು. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ತಮಿಳಗಂನ ಆರಂಭ ಕಾಲದ ಚರಿತ್ರೆಯನ್ನು ಸಂಗಂ ಸಾಹಿತ್ಯದ ಆಧಾರದ ಮೇಲೆ ರಚಿಸಲಾಯಿತು. ಈ ಸಂದರ್ಭದಲ್ಲಿ ಸಂಗಂ ಸಾಹಿತ್ಯದ ಮೂಲ, ಅದರ ಬರವಣಿಗೆಯ ಸ್ವರೂಪದ ಬಗೆಗೆ ಯಾವುದೇ ಒಳನೋಟಗಳಿಗೆ ಅವಕಾಶಗಳಾಗಲಿಲ್ಲ. ಆದರೆ ಕೆ.ಕೈಲಾಸಪತಿಯವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಗಂ ಸಾಹಿತ್ಯದಲ್ಲಿನ ಸಿದ್ದ ಮಾದರಿ , ಸಿದ್ದಗೊಂಡ ವರ್ಣನೆ, ಪರಿಕಲ್ಪನೆಗಳ ಪುನರುಕ್ತಿಗಳನ್ನು ಪರಿಗಣಿಸಿ ಅದು ಮೌಖಿಕ ಪರಂಪರೆಯದೆಂದು ಖಚಿತವಾಗಿ ಸಾರಿದರು. ಪದಿರುಪ್ಪತ್ತು ಹಾಗೂ ಎಟ್ಟುತ್ತೊಕೈ ತಮಿಳಗಂನ ಸಹಜ ಕಾಲಕ್ಕೆ ಸೇರಿದವಾಗಿವೆ. ಈ ಕೃತಿಗಳಲ್ಲಿನ ಕವಿತೆಗಳು ವಿಭಿನ್ನ ಕವಿಗಳಿಂದ,ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಕಾರಣಗಳಿಂದ,ವಿಭಿನ್ನ ರಾಜರ ಸಾಮಂತರ ಆಶ್ರಯದಲ್ಲಿ ರೂಪುಗೊಂಡಿವೆ. ಇಲ್ಲಿರುವ ಸಾಹಿತ್ಯ ಸಮಕಾಲೀನವಾದುದಾಗಿರದೆ ಹಲವಾರು ತಲೆಮಾರುಗಳಲ್ಲಿ ಹರಿದು ಬಂದಿದೆ. ರಾಜರ,ಆಶ್ರಯದಾತರ ಎದುರಿನಲ್ಲಿ ಹಾಡುವ ಮೌಖಿಕ ಸಂಪ್ರದಾಯವಿರಬಹುದು. ನಂತರ ಇವನ್ನು ಲಿಪಿಗೊಳಿಸಿರಬಹುದು. ಆದರೆ ಮೊದಲಿಗೆ ಇವುಗಳನ್ನು ಯಾರು ಲಿಪಿಗೊಳಿಸಿದರೆಂದು ತಿಳಿಯದು. ಸಂಗಂ ಸಾಹಿತ್ಯದ ಕಾಲವನ್ನು ಬಾಹ್ಯ ಸಾಕ್ಷ್ಯಗಳಿಂದ ನಿರ್ಧರಿಸಲು ಸಾಧ್ಯವಾಗದ ಕಾರಣ ಅದರ ಆಂತರಿಕ ಮೂಲಗಳಿಂದ ಶೋಧಿಸಲು ಯತ್ನಿಸಿಲಾಗಿದೆ. ಅಂತಹ ಯತ್ನದಲ್ಲಿ ಮುಂಚೂಣಿಯಲ್ಲಿದ್ದವರು ಕೆ.ಎ. ನೀಲಕಂಠಶಾಸ್ತ್ರಿ. ಬೇರೆಲ್ಲ ಕೃತಿಗಳಿಗಿಂತ ಪದಿರುಪ್ಪತ್ತುವಿನಲ್ಲಿ ಕಾಲಾನುಕ್ರಮಣಿಕೆ ಹೆಚ್ಚು ಸ್ಪಷ್ಟ. ಇದನ್ನು ಬಳಸಿಕೊಂಡು ತಮಿಳಗಂನ ರಾಜರ ಅವರೊಂದಿಗಿದ್ದ ಕವಿಗಳ, ಕವಿ-ಕವಿಗಳ ಮಧ್ಯದ ಸಂಬಂಧದ ನಿಷ್ಕರ್ಷೆಯಿಂದ ತಮಿಳಗಂನ ಆರಂಭ ಕಾಲವನ್ನು ನಿರ್ಧರಿಸಲು ನೀಲಕಂಠಶಾಸ್ತ್ರಿಗಳು ಯತ್ನಿಸಿ ಈ ನಿರ್ದಿಷ್ಟ ಕೃತಿ ನಾಲ್ಕು ಐದು ತಲೆಮಾರುಗಳ ಕಾಲಾವಧಿ ಒಳಗೊಂಡಿದೆಯೆಂಬ ತೀರ್ಮಾನಕ್ಕೆ ಬಂದರು. ಈ ಕಾ¯ದ ಖಚಿತತೆಯ ನಿರ್ಧಾರಕ್ಕೆ ಗಜಬಾಹು ಸಮಕಾಲೀನತೆಯ ತಂತ್ರವನ್ನು ಬಳಸಿದರು. ಪ್ರತಿ ತಲೆಮಾರಿಗೆ 25 ವರ್ಷಗಳ ಅವಧಿಯನ್ನು ನಿಗದಿಗೊಳಿಸಿ ಹಲವಾರು ಯತ್ನ,ಮರುಯತ್ನಗಳ ನಂತರ ಚೇರ ದೊರೆ ಸೆಂಗುಟ್ಟವನ್ ಕಾಲವನ್ನು ಪ್ರ.ಶ. 180 ಎಂದು ನಿರ್ಧರಿಸಿದರು. ಇದಕ್ಕಾಗಿ ನೀಲಕಂಠಶಾಸ್ತ್ರಿಗಳು ತುರೈ ಮತ್ತು ಪತಿಕಂಗಳನ್ನು ಬಳಸಿಕೊಂಡರು. ಸಂಗಂ ಸಾಹಿತ್ಯದ ಕಾಲ ನಿರ್ಧಾರಕ್ಕೆ 19ನೇ ಶತಮಾನದಲ್ಲಿ ತಮಿಳು ವಿದ್ವಾಂಸರು ಬಳಸಿದ ಮತ್ತೊಂದು ಮಹತ್ತರವಾದ-ವಿವಾದಕ್ಕೀಡಾಗಿರುವ- ತಂತ್ರವೆಂದರೆ ಗಜಬಾಹು ಸಮಕಾಲೀನತೆ. ( ನೋಡಿರಿ : ಶಿಲಪ್ಪದಿಗಾರಂ ಮತ್ತು ಮಣಿಮೇಖಲೈ) ಸಾಹಿತ್ಯದ ಸಂಗ್ರಹ , ಲಿಪಿಕರಣ, ಸಂಕಲನ ಮತ್ತು ವರ್ಗೀಕರಣದ ಕಾಲ ಜಗತ್ತಿನಾದ್ಯಂತ ಮೌಖಿಕ ಸಾಹಿತ್ಯ ಸಂಪ್ರದಾಯದ ಸಾಹಿತ್ಯದಲ್ಲಿ ಒಂದೇ ಬಗೆಯ ಎದ್ದು ಕಾಣುವ ಅಂಶಗಳು ದಾಖಲಾಗಿವೆ. ಸಿದ್ಧ ವಾಕ್ಯಗಳು,ವಿವರಣೆಗಳು, ವಚನಗಳ ಪುನರುಕ್ತಿ, ನೆನಪಿಡಲು ಅನುಕೂಲವಾಗುವಂತಹ ಜೋಡಣೆ ಮೌಖಿಕ ಸಂಪ್ರದಾಯದ ಕುರುಹು. ಪುರಂ ಕವಿತೆಗಳಲ್ಲಿ ಇವೆಲ್ಲವು ಮೇಳೈಸಿದ್ದು ಅದು ಮೌಖಿಕ ಗಾಯಕ ಸಂಪ್ರದಾಯವೆಂದು ಖಚಿತವಾಗುತ್ತದೆ. ಸಂಗಂ ಸಾಹಿತ್ಯದ ಕವಿಗಳು ಸಿದ್ಧ ಮಾದರಿಗಳನ್ನು ಯಥೇಚ್ಚವಾಗಿ ಬಳಸಿದ್ದಾರೆ. ಆದರೂ ಇದರಲ್ಲಿ ವೈಯುಕ್ತಿಕ ಪ್ರತಿಭೆ , ಸಾಮಥ್ರ್ಯಕ್ಕೂ ಅವಕಾಶ ದಕ್ಕಿದೆ. ಅಹಂ ಸಾಹಿತ್ಯದಲ್ಲಿ ಬಳಸಿದ ಆಚಿರಿಯಂ ಛಂದಸ್ಸು ಮತ್ತು ಭಾಷೆಯಲ್ಲಿ ಆಂತರಿಕ ಏಕರೂಪತೆ ಎದ್ದು ಕಾಣುತ್ತದೆ. ಪುರಂ ಸಾಹಿತ್ಯದಲ್ಲಿ ಪದ್ಯ ಮತ್ತು ಗದ್ಯಗಳ ಮಿಶ್ರಣವಿದ್ದು ವಂಜಿ, ಆಚಿರಿಯಂ ಛಂದಸ್ಸುಗಳು ಎದ್ದು ಕಾಣುತ್ತವೆ. ಮೌಖಿಕವಾದ ಸಾಹಿತ್ಯವನ್ನು ಲಿಪಿಗೊಳಿಸಹೊರಟಾಗ ಎದ್ದ ಕೊರತೆಯನ್ನು ತುಂಬಿಸಿಕೊಳ್ಳಲು ಈ ತಂತ್ರಕ್ಕೆ ಮೊರೆಹೋಗಿರುವ ಸಾಧ್ಯತೆಗಳಿವೆ. ಹಲವಾರು ಕವಿಗಳಿಂದ ವಿಭಿನ್ನ ಕಾಲದೇಶದಲ್ಲಿ ರಚಿತವಾದ ಕೃತಿಗಳು ನೂರರ ಸಂಖ್ಯೆಯಲ್ಲಿ ಸಂಪಾದಿಸಲ್ಪಟ್ಟಿವೆ. ಕೆಲಸಂಗ್ರಹಗಳಲ್ಲಿನ ಕವಿತೆಗಳು ನೂರರ ಗಡಿ ತಲುಪದಿದ್ದಾಗ ಸಂಕಲನಕಾರರು ಉಳಿದ ಕವಿತೆಗಳನ್ನು ರಚಿಸಿ,ಸೇರಿಸಿ ನೂರರ ಎಣಿಕೆಗೆ ಸರಿಮಾಡಿರುವ ಸಾಧ್ಯತೆಗಳಿವೆ. ಉನ್ಪೆಯೇಟಿಪಸುಂ,ಕುಡೈಯಾರ್,ಇಡುಂಪಿಡರ್ತಲೈವಾರ್,ಕಳತ್ತಲೈವಾರ್,ಕಳೈತಿನಿಯಾಣಯರ್,ಕಾಕ್ಕೈಪಾಟಿನಿಯಾರ್,ಕುಂಟುಕಪಾಲಿಯಾತನ್,ನರಿವೆರುತ್ತಲೈವಾರ್,ನಳ್ಳಿ,ಕಿಳ್ಳಿ,ಪಾರಿ,ಕಾರಿ,ಎಳಿನಿ,ಎವ್ವಿ,ಅವನ್,ಅಲಿಸಿ,ಕಂಕನ್,ಕಿತ್ತಿ,ಚೆಂಪುಲಪ್ಪೆಯನೀರಾರ್ (ಕೆಂಪು ಮಣ್ಣು ಮಳೆ ನೀರಿನವನು), ಅಣಿಲಾಡು ಮುನ್ರಿಲಾರ್ (ಅಣಿಲಾಡುವ ಮನೆಯವನು) ,ಕಲ್ಪೋರುಚಿರುನೂರೈಯರ್(ಕಲ್ಲಿನಕೆನೆಯವನು), ನೆಡುವೆಣ್ಣಿಲವಿನಾರ್(ದೀರ್ಘ ಬೆಳದಿಂಗಳಿನವನು), ವಿಟ್ಟಕುದುರೈಯನಾರ್(ಬಿಟ್ಟ ಕುದುರೆಯವನು), ಉರೈಯೂರು ಮುದುಕೊರ್ರನ್( ಉರೈಯೂರಿನ ಮುದಿಗಾರೆಯವನು), ಓಟನಾಣಿ(ಓದುವ ಕುಶಲಿ), ಪಾಳೈಪಾಟಿಯಪೆರುಮಕಡುಂಗೋ(ಪಾಳೈ ಹಾಡಿದ ದೊಡ್ಡ ರಾಜ), ಪೆರುಂತಲೈ ಚಾತ್ತನಾರ್(ದೊಡ್ಡತಲೆ ಚಾತ), ಪುರಿಗಣ್ಣನ್(ಹಸಿರುಗಣ್ಣಿನವನು) , ಕಾವಪೆಣ್ಣು(ಕಾವಲಿನ ಹೆಂಗಸು), ಕಾಮಕ್ಕಣ್ಣಿಯಾರ್(ಬಯಕೆಗಣ್ಣಿನವಳು-ಕಾಮಾಕ್ಷಿ)ಯಂತಹ ವಿಚಿತ್ರ ಹೆಸರಿನ ಕವಿಗಳು ಸಂಗಂ ಸಾಹಿತ್ಯದಲ್ಲಿದ್ದಾರೆ. ಮೌಖಿಕರೂಪದಲ್ಲಿ ದಕ್ಕಿದ ಕವಿತೆಗಳ ಮೂಲ ಕೃತಿಕಾರರು ತಿಳಿಯದಿದ್ದಾಗ ಸಂಕಲನಕಾರರು ಇಂತಹ ವಿಚಿತ್ರ ಹೆಸರುಗಳಿಗೆ ಮೊರೆಹೋಗಿರುವ ಸಾಧ್ಯತೆಗಳಿವೆ. ಚೆಂಪುಲಪ್ಪೆಯನೀರಾರ್ ಬರೆದ ಕವಿತೆ ಚೆಂಪುಲಪ್ಪೆಯನೀರ್ ಎಂಬ ಶಬ್ಧದೊಂದಿಗೆ ಪ್ರಾರಂಭವಾಗುತ್ತದೆ. ಅದರಂತೆ ಅಣಿಲಾಡು ಮುನ್ರಿಲ್ ಎಂದು ಪ್ರಾರಂಭವಾಗುವ ಕವಿತೆಯನ್ನು ಬರೆದವನು ಅಣಿಲಾಡು ಮುನ್ರಿಲಾರ್ ಎಂದು ಹೇಳಲಾಗಿದೆ. ಇವುಗಳನ್ನು ಗಮನಿಸಿದ ಪ್ಯಾರಿಸ್ನಲ್ಲಿದ್ದ ಖ್ಯಾತ ತಮಿಳು ವಿದ್ವಾಂಸ ಜೂಲಿಯನ್ ವಿನ್ಸನ್ ಇಡೀ ಸಂಗಂ ಸಾಹಿತ್ಯ ಕೃತ್ರಿಮವೆಂದು ತಿರಸ್ಕರಿಸಿದ್ದನು. ಕೃತಿ ಅಥವಾ ಕೃತಿಗಾರನ ಹೆಸರು ತಿಳಿಯದಿದ್ದಾಗ ಅದನ್ನು ಅಜ್ಞಾತವೆಂದು ಕರೆಯುವ ವಾಡಿಕೆಯಿದೆ. ಆದರೆ ಕೃತಿಯ ಹೆಸರು ತಿಳಿಯದಿದ್ದಾಗ ಅದನ್ನು ಕೃತಿಗಾರನ ಹೆಸರಿನಲ್ಲು , ಕೃತಿಗಾರನ ಹೆಸರು ತಿಳಿಯದಿದ್ದಾಗ ಕೃತಿಯ ಹೆಸರಿನಿಂದಲು ಗುರುತಿಸುವ ಸಂಪ್ರದಾಯ ತಮಿಳಿನಲ್ಲಿ ಇರುವಂತೆ ಕಾಣುತ್ತದೆ. ಕಲಿತ್ತೊಗೈಯನ್ನು ಪರಿಷ್ಕರಿಸಿ ಪ್ರಕಟಿಸಿದ ಸಿ.ಡಬ್ಲು. ದಾಮೋದರ ಪಿಳ್ಳೈಯವರು ಈ ಕೃತಿಯ ತಂತ್ರ,ಭಾವ, ರಸಾವೇಶಗಳನ್ನು ಅಭ್ಯಸಿಸಿ ಇದು ನಲ್ಲಂತುವನಾರ್ ಎಂಬ ಏಕವ್ಯಕ್ತಿಯಿಂದ ರಚಿತವಾಗಿದೆಯೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಪರಿಪಾಡಲ್ ಮತ್ತು ಕಲಿತ್ತೊಗೈ ಪ್ರ.ಶ 4-6 ಶತಮಾನದ ಅವಧಿಯದೆಂದು ಕಮಿಲ್ ಝ್ವೆಲೆಬಿಲ್ ಅಭಿಪ್ರಾಯ ಪಟ್ಟಿದ್ದಾರೆ. ಇದು ಸಂಗಂ ಸಾಹಿತ್ಯವನ್ನು ಕಳಭ್ರರ ಕಾಲಕ್ಕೆ ತಂದು ನಿಲ್ಲಿಸುತ್ತದೆ. ಸಂಗಂ ಸಾಹಿತ್ಯದ ಏಕರೂಪತೆ ಮತ್ತು ಅದರ ಸ್ವರೂಪದ ಸಾಮಾನ್ಯತೆ ಭಾಷೆಯ ಏಕರೂಪತೆಗೂ ಕಾರಣವಾಗಿದೆ. ಸಂಗಂ ಸಾಹಿತ್ಯದ ಮೂಲದಲ್ಲಿದ್ದ ವೃತ್ತಿಗಾಯಕ ಕಾವ್ಯದ ಭಾಷಾಸ್ವರೂಪವನ್ನು ಲಿಪಿಕರಣ ಮತ್ತು ಸಂಕಲನದ ಕಾಲದಲ್ಲಿ ಶಿಷ್ಟಗೊಳಿಸಲಾಗಿದ್ದು ಸಾಂಪ್ರದಾಯಿಕ ಭಾಷೆ ಹಾಗೂ ಸೂತ್ರಬದ್ಧತೆ ಸಾಮಾನ್ಯೀಕೃತ ಚೌಕಟ್ಟಿಗೆ ಒಳಪಡಿಸಲಾಗಿದೆ. ಸಂಗಂ ಸಾಹಿತ್ಯ ಕ್ರಿ,ಶ. ಆದಿಯಿಂದ ಪ್ರ.ಶ 4ನೇ ಶತಮಾನದ ಅವಧಿಯಲ್ಲಿ ಸೃಜಿತಗೊಂಡಿದ್ದು ಮೌಖಿಕ ಪರಂಪರೆಯಲ್ಲಿ ಅಸ್ತಿತ್ವದಲ್ಲಿದ್ದು ಹಲವಾರು ಶತಮಾನಗಳ ನಂತರ ಲಿಪಿಗೊಳಿಸಿ,ಸಂಗ್ರಹಿಸಿ ನಂತರ ವರ್ಗೀಕರಣಗೊಳಿಸಲಾಗಿದೆ. ಈ ಕಾರ್ಯದಲ್ಲಿ ವಿವಿಧ ಸ್ತರ ಕಾಲದಲ್ಲಿದ್ದ ಕವಿತೆಗಳು ಒಂದೇ ಇಡುಗಂಟಿನಲ್ಲಿರುವುದರಿಂದ ಇವುಗಳಲ್ಲಿ ಭಾಷಾವಿಕಸನದ ಹುಡುಕಾಟಕ್ಕೆ ಹೆಚ್ಚಿನ ಆಸ್ಪದಗಳಿಲ್ಲ. ಇರೈಯನಾರ್ ಅಹಪೆಪ್ಪೊರುಳ್(ಇರೈನಾರ್ ಕಳವಿಯಲ್) 7-8 ನೇ ಶತಮಾನದಲ್ಲಿ ರಚಿತವಾಗಿರುವ ಸಾಧ್ಯತೆಗಳಿದ್ದು ಇದು ಅಗಂ(ಹಂ) ಮತ್ತು ಪುರಂ ಸಾಹಿತ್ಯಗಳಿಗೆ ಸೈದ್ಧಾಂತಿಕ ನಿಲುವನ್ನು ಒದಗಿಸುವ ಅತ್ಯಂತ ಪ್ರಾಚೀನ ಕೃತಿಯಾಗಿದೆ. ಇದು ತೊಲ್ಕಾಪ್ಪಿಯಂನ ಪೊರುಳಾದಿಗಾರಂಗಿಂತ ಹಿಂದಿನದು. ಇರೈಯಾರ್ನಿಂದ ಮೌಖಿಕವಾಗಿ ಹರಿದುಬಂದುದನ್ನು ಮುಶಿರಿಯ ನೀಲಕಂಠನ್ ಲಿಖಿತಗೊಳಿಸಿದುದನ್ನು ಹಾಗೂ ಅದರ ಮೇಲೆ ನಕ್ಕೀರಾರ್ ಟೀಕೆ ಬರೆದನೆಂದು ಸಂಪ್ರದಾಯ ಹೇಳುತ್ತದೆ. ಇದು ಕಾವ್ಯ ಸೃಜಿತಗೊಂಡ ಹಾಗೂ ಲಿಖಿತಗೊಂಡ ಕಾಲದ ಸೂಚನೆಯಾಗಿದೆ. ಪ್ರ.ಶ. 8-10 ನೇ ಶತಮಾನದಲ್ಲಿದ್ದ ಇರೈನಾರ್ನ ಅಹಪ್ಪೊರುಳ್ಗೆ ಟೀಕೆ ಬರೆದ ನಕ್ಕೀರಾರ್ ಮೂರು ಸಂಗಂಗಳ ಐತಿಹ್ಯದ ಬಗೆಗೆ ಸುದೀರ್ಘ ವಿವರಣೆ ನೀಡುತ್ತಾನಾದರೂ ತನ್ನ ಕೃತಿಯಲ್ಲಿ ಎಲ್ಲಿಯೂ ಕವನ ಸಂಗ್ರಹಗಳ ಬಗೆಗೆ ಉಲ್ಲೇಖಿಸುವುದಿಲ್ಲ. ಇದರಿಂದ ಈ ಕಾಲದ ನಂತರವೇ ಸಂಗ್ರಹಗೊಂಡ ಮೌಖಿಕ ಸಾಹಿತ್ಯ ವಿವಿಧ ತೊಗೈಗಳಲ್ಲಿ ವರ್ಗೀಕೃತಗೊಂಡಿದೆ. ವಿಎಸ್ಸಿ ಪಿಳ್ಳೈಯವರು ನಕ್ಕೀರಾರ್ ಇರೈನಾರ್ನ ಅಗಪ್ಪೊರುಳ್ನ ಮೇಲಿನ ಟೀಕೆಯ ಮುಖ್ಯ ಚೌಕಟ್ಟನ್ನು ನೀಡಿರಬಹುದು. ಅದು ಮೌಖಿಕವಾಗಿ ಹರಿದುಬಂದು 10 ನೇ ಶತಮಾನದಲ್ಲಿ ನೀಲಕಂಠರಾರ್ನಿಂದ ವಿಸ್ತೃತಗೊಂಡು ಲಿಪಿಗೊಂಡಿರಬಹುದೆಂದು ಭಾವಿಸುತ್ತಾರೆ. ವಿಶ್ಲೇಷಣೆ * ಸಂಗಂ ಕೃತಿಗಳ ಆಂತರಿಕ ಸಾಕ್ಷ್ಯಗಳಿಂದ ಪಾರತಂ ಪಾಟಿನ ಪೆರುಂತೇವನಾರ್ (ಭಾರತ ಹಾಡಿದ ಪೆರುಂದೇವನಾರ್) ಎಂದು ಖ್ಯಾತನಾದ, ತಮಿಳಿನಲ್ಲಿ ಮೊದಲಿಗೆ ಮಹಾಭಾರತವನ್ನು ಬರೆದ ಒಂಬತ್ತನೇ ಶತಮಾನದ ಪಲ್ಲವರಾಜ ಪೆÇಟ್ಟರಸನ (ನಂದಿವರ್ಮ-3) ಆಸ್ಥಾನದ ಪೆರುಂದೇವನಾರ್ ಎಟ್ಟುತ್ತೊಕ್ಕೈನ ಮೊದಲ ಆರು ಸಂಗ್ರಹಗಳಾದ ಅಹನಾನೂರು, ಐನ್ಕುರುನೂರು,ಕುರುಂತೊಗೈ,ನಟ್ಟಿಣೈ ಹಾಗೂ ಪುರನಾನೂರುಗಳಿಗೆ ಪ್ರಸ್ತಾವನಾ ಪದ್ಯಗಳನ್ನು ಬರೆದಿರುವುದು ಸ್ಪಷ್ಟವಾಗುತ್ತದೆ. ಈ ಸಂಗ್ರಹದಲ್ಲಿ ಈತನೇ ರಚಿಸಿದ ಭಾರತ ವೆಂಬಾದ ಸಾಲುಗಳಿವೆ. ಇದು ಲಿಪಿಕರಣಗೊಂಡ ಮೌಖಿಕ ಸಾಹಿತ್ಯ ವರ್ಗೀಕೃತಗೊಳ್ಳುತ್ತಿರುವ ಕಾಲವನ್ನು ಸೂಚಿಸುತ್ತದೆ. ಕೆಲ ವಿದ್ವಾಂಸರು ಈಗ ಲಭ್ಯವಿರದ ಈತನಿಗಿಂತಲೂ ಹಿಂದೆ ಇದ್ದ ಮತ್ತೊಬ್ಬ ಪೆರುಂದೇವನಾರ್ ಇದ್ದಿರಬಹುದೆಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅಂತಹ ಪ್ರಬಲ ಅಧಾರಗಳಿಲ್ಲ. ಇದು 9-11 ನೇ ಶತಮಾನದ ಅವಧಿಯಲ್ಲಿ ಸಂಗಂ ಸಾಹಿತ್ಯದ ಲಿಪಿಕರಣಗೊಡು , ಕವನ ಸಂಗ್ರಹಗಳ ರೂಪತಾಳುತ್ತಿದ್ದುದಕ್ಕೆ ಸಾಕ್ಷಿಯಾಗಿದೆ. ಇದಾದ ನಂತರವೇ ಇದರಲ್ಲಿನ ಸಾಹಿತ್ಯವನ್ನು ಲಕ್ಷ್ಯವಾಗಿಸಿಕೊಂಡು ತೊಲ್ಕಾಪ್ಪಿಯಂ ಲಕ್ಷಣ ಗ್ರಂಥ ರಚಿತವಾಗಿದೆ. * ಇರೈಯನಾರ್ ಅಹಪ್ಪೊರುಳ್ ಕೃತಿಗೆ ಭಾಷ್ಯ ಬರೆದ ನಕ್ಕೀರಾರ್ (ಪ್ರ.ಶ 8-12) ಸಂಗಂ ಸಾಹಿತ್ಯ , ಸಂಗಂ ಕಲ್ಪನೆಗಳನ್ನು ವಿವರವಾಗಿ ಹೇಳುತ್ತಾನಾದರೂ ಕವನ ಸಂಗ್ರಹಗಳ ಬಗ್ಗೆ ಮತ್ತು ಕವನ ಸಂಗ್ರಹಗಳ ಸಮಷ್ಟಿ ಸಂಪಾದನೆಗಳಾದ ಎಟ್ಟುತ್ತೊಕ್ಕೈ’ ಮತ್ತು ‘ಪತ್ತುಪ್ಪಾಟ್ಟುಗಳ ಬಗ್ಗೆ ಮೌನವಾಗಿದ್ದಾನೆ. * ಪತ್ತುಪ್ಪಾಟ್ಟು ಸಂಗ್ರಹಕ್ಕೆ ಸೇರಿದ ತಿರುಮುರುಗಾರುಪ್ಪಾಟ್ಟೈ ಪ್ರ.ಶ 7-8 ನೇ ಶತಮಾನಕ್ಕೆ ಸೇರಿದೆಯೆಂದು ಕಮಿಲ್ ಝ್ವೆಲೆಬಿಲ್ ಅಭಿಪ್ರಾಯಪಟ್ಟರೆ , ಎಸ್. ಪದ್ಮನಾಭನ್ ಮತ್ತು ವಯ್ಯಾಪುರಿ ಪಿಳ್ಳೆಯವರು 10ನೇ ಶತಮಾನದ ಕೃತಿಯೆಂದು ತೀರ್ಮಾನಿಸಿದ್ದಾರೆ. ಇದರಿಂದ ಪರೋಕ್ಷವಾಗಿ 10 ನೇ ಶತಮಾನದ ನಂತರವೇ ಸಂಗಂ ಸಾಹಿತ್ಯದ ವರ್ಗೀಕರಣವಾಗಿದೆಯೆಂದು ತಿಳಿದುಬರುತ್ತದೆ. * ತೊಲ್ಕಾಪ್ಪಿಯಂ ಮೇಲೆ ಮೊಟ್ಟಮೊದಲ ಭಾಷ್ಯ ಬರೆದಾತ ಇಳಂಪೂರಣಾರ್(ಪ್ರ.ಶ 11-12 ಶತಮಾನ) ಈತ ಉರೈ ಆಶಿರಿಯಾರ್(ಉರೈ=ಒರೆ, ಭಾಷ್ಯ/ಟೀಕೆ , ಆಶಿರಿಯಾರ್=ಆಚಾರ್ಯ) ಎಂದೇ ಖ್ಯಾತ. ಈತ ಸಮಷ್ಟಿ ಸಂಪಾದನೆಗಳನ್ನು ಹೆಸರಿಸಿಲ್ಲ . ಪೆರಾಶಿಯಾರ್(ಪ್ರ.ಶ 12-13 ಶತಮಾನ) ,ಮಯಿಲೈನಾತರ್ (ಪ್ರ.ಶ 13 ನೇ ಶತಮಾನ) ನಾಚ್ಚಿಣಾರ್ಕ್ಕಿಣಿಯಾರ್ ಈ ಮೂವರು ತಮ್ಮ ಭಾಷ್ಯಗಳಲ್ಲಿ ಸಮಷ್ಟಿ ಸಂಪಾದನೆಗಳನ್ನು (ಎಟ್ಟುತ್ತೊಕೈ + ಪತ್ತುಪ್ಪಾಟ್ಟು) ಹೆಸರಿಸಿದ್ದಾರೆ. ಇದು 12-13ನೇ ಶತಮಾನದ ಮಧ್ಯದಲ್ಲಿ ಸಂಗಂ ಸಾಹಿತ್ಯದ ವರ್ಗೀಕರಣ ಪೂರ್ಣಗೊಂಡು ಸಮಷ್ಟಿ ಸಂಪಾದನೆಯಾಗಿ ಅಧ್ಯಯನಾರ್ಹ ರೂಪ ತಳೆದ ಕಾಲವನ್ನು ಸೂಚಿಸಿತ್ತದೆ. * ತಿರುಕ್ಕೋಯಿಲೂರಿನಲ್ಲಿ ಪ್ರ.ಶ. 1012 ರ ರಾಜರಾಜ ಚೋಳನ ಶಿಲಾಶಾಸನವಿದೆ. ಇದು ದೇವಸ್ಥಾನದ ತಳದಲ್ಲಿ 230 ಸಾಲುಗಳ ಸಂಗಂ ಕಾಲದ ಆಚಿರಿಯಂ(ಅಗವಳ್) ಛಂದಸ್ಸಿನ ಕವನ ರೂಪದಲ್ಲಿದೆ. ಇದರಲ್ಲಿ ಸಂಗಂ ಕಾಲದ ಕವಿ ಕಪಿಲನ್ ತನ್ನ ಪೋಷಕನಾದ ವೇಳೀರ್ ಪಾರಿಯೊಂದಿಗೆ ಹೊಂದಿದ್ದ ಸ್ನೇಹ, ಪಾರಿಯ ಸಾವಿನ ನಂತರ ಆತನ ಮಗಳನ್ನು ಮಲೈಮಾನ್ನೊಂದಿಗೆ ಮದುವೆ ಮಾಡಲು ಪಟ್ಟ ಶ್ರಮ , ನಂತರ ಸ್ವರ್ಗವಾಸಿಯಾಗಲು ಅಗ್ನಿಪ್ರವೇಶ ಮಾಡಿದುದನ್ನು ವಿವರಿಸುತ್ತದೆ. ಇದನ್ನು ಪರಿಗಣಿಸಿದ ಆರ್.ನಾಗಸ್ವಾಮಿಯವರು ಸಾವಿರ ವರ್ಷಗಳ ನಂತರವೂ ಸಂಗಂ ಸಾಹಿತ್ಯ ಜನಪ್ರಿಯವಾಗಿದ್ದಿತೆಂದು ಹೇಳಿದ್ದಾರೆ. ಇದು ಪರೋಕ್ಷವಾಗಿ ಸಂಗಂ ಸಾಹಿತ್ಯ ಲಿಪಿಕರಣದ ಹಂತದಲ್ಲಿರುವುದಕ್ಕೆ ಸಾಕ್ಷಿಯಾಗಿದೆ. * ಪ್ರ.ಶ 9ನೇ ಶತಮಾನದ ಎರುಕ್ಕನ್ಕುಡಿ ಶಿಲಾಶಾಸನ ಸಂಗಂ ಕಾಲದ ಪ್ರಾಚೀನವೆಂದು ಪರಿಗಣಿಸಲಾದ ಅಗವಳ್ ಛಂದಸ್ಸಿನಲ್ಲಿದೆ. ಇದರಲ್ಲಿ ಎಟ್ಟಿಚ್ಚಾತನ್ ಎಂಬಾತನ ಪೂರ್ವಿಕನೊಬ್ಬ ಸಂಗಂ ಪೀಠದ ಮೇಲೆ ಕುಳಿತಿದ್ದನೆಂದು ತಿಳಿಸುತ್ತದೆ. ಇದು ಅಗವಳ್ ಛಂದಸ್ಸು 9 ನೇ ಶತಮಾನದಲ್ಲೂ ಬಳಕೆಯಲ್ಲಿತ್ತು ಎಂಬುದರ ಸೂಚಕವಾಗಿರುವುದರೊಂದಿಗೆ ಸಂಗಂ ಕಲ್ಪನೆ ರೂಪುಗೊಂಡು ಜನಪ್ರಿಯವಾಗುತ್ತಿದ್ದ ಕಾಲದಂತೆಯೂ ಕಾಣುತ್ತದೆ. * ಮೇಲಿನ ಅಂಶಗಳಿಂದ ಜಾನಪದ ಮೌಖಿಕ ಸಂಪ್ರದಾಯದಲ್ಲಿದ್ದ ಸಂಗಂ ಸಾಹಿತ್ಯ ಪ್ರ.ಶ 7-8 ಶತಮಾನದಿಂದ ಲಿಪಿಕರಣಗೊಂಡು , ಪ್ರ.ಶ 8-11 ಶತಮಾನಗಳ ಅವಧಿಯಲ್ಲಿ ವಿವಿಧ ಸಂಗ್ರಹಗಳಲ್ಲಿ ವರ್ಗೀಕೃತವಾಗುತ್ತ ಪ್ರ.ಶ 11-13 ಶತಮಾನದ ಅವಧಿಯಲ್ಲಿ ಸಮಷ್ಟಿ ಸಂಪಾದನೆಯಲ್ಲಿ ಕೊನೆಗೊಂಡಿತೆಂದು ಸ್ಪಷ್ಟವಾಗುತ್ತದೆ. ತಮಿಳಿನ ಮೊದಲ ಕೃತಿ ಯಾವುದು ? ಪದಿನೇಣ್ ಮೇಲ್ಕಣಕ್ಕುಗಳು (ಎಟ್ಟುತ್ತೊಕ್ಕೈ ಮತ್ತು ಪತ್ತುಪ್ಪಾಟ್ಟು) ಕ್ರಿ.ಶ 1-4 ಶತಮಾನದ ಮೌಖಿಕ ಸಾಹಿತ್ಯವೆಂದು (ಸಂಗಂ ಸಾಹಿತ್ಯ) ಇದು ಮುಂದೆ ಲಿಪಿಕರಣಗೊಂಡು , ಸಂಪಾದಿಸಲ್ಪಟ್ಟು ,ಸಂಗ್ರಹಗಳಲ್ಲಿ ಗುರುತಿಸಲಾಯಿತೆಂದು ವಿದ್ವಾಂಸರು ಸೂಚಿಸಿರುವುದನ್ನು ಮತ್ತು ತೊಲ್ಕಾಪ್ಪಿಯಂ ರಚನೆಯ ಅವಧಿಯ ಹಿಂದಿರುವ ವಿವಾದಗಳನ್ನು ನೋಡಿದ ಮೇಲೆ ಈಗ ಲಭ್ಯವಿರುವ ತಮಿಳಿನ ಮೊದಲ ಕೃತಿ ಯಾವುದು ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಯಾವ ವಿದ್ವಾಂಸರು ನೇರ ಉತ್ತರ ನೀಡಿದಂತೆ ಕಾಣುವುದಿಲ್ಲ. ಆದರೆ ಪದಿನೇಣ್ ಕೀಳ್ಕಣ್ಣಕ್ಕುಗಳು ಲಿಖಿತ ರೂಪದಲ್ಲಿ ಮೂಡಿಬಂದ ತಮಿಳಿನ ಪ್ರಾಚೀನ ಸಾಹಿತ್ಯದ ಪ್ರಾತಿನಿಧಿಕ ರೂಪಗಳೆಂದು ಪರಿಗಣಿಸಲಾಗಿದೆ. ಈ ಕೃತಿಗಳ ರಚನೆಯ ಕಾಲವನ್ನು ಕುರಿತಾಗಿ ತಿಳಿದುಬಂದ ವಿವರಗಳು ಮುಂದಿವೆ. ತಮಿಳು ಸಾಹಿತ್ಯ ಚರಿತ್ರೆಯಲ್ಲಿ ಚಾರಿತ್ರಿಕ ದಾಖಲೆ ದೊರಕುವ ಘಟ್ಟವೆಂದರೆ ಸರಿಸುಮಾರು ಕ್ರಿ.ಶ 7 ನೇ ಶತಮಾನದಿಂದ ಪ್ರಾರಂಭವಾಗುವ ಭಕ್ತಿಯುಗ. ಕ್ರಿ.ಶ 3–ಕ್ರಿ.ಶ 6 ನೇ ಶತಮಾನಗಳ ನಡುವಿನ ಸುಮಾರು ಮುನ್ನೂರು ವರ್ಷಗಳ ಅವಧಿ ಕಳಭ್ರರ ಅಂಧಯುಗವೆಂದು ತಮಿಳು ಚರಿತ್ರೆಯಲ್ಲಿ ಖ್ಯಾತ (ನೋಡಿರಿ : ಕಳಭ್ರರು ). ಈ ಅವಧಿಯಲ್ಲಿ ಪದಿನೇಣ್ ಕೀಳ್ಕಣಕ್ಕು (ಹದಿನೆಂಟು ಕೆಳಗಣಗಳು) ಹೆಸರಿನಡಿಯಲ್ಲಿರುವ 18 ಸಣ್ಣ ಕೃತಿಗಳು, ಶಿಲಪ್ಪದಿಗಾರಂ ಮತ್ತು ಮಣಿಮೇಖಲೈ ಎಂಬ ಯಮಳ ಕಾವ್ಯಗಳು ರಚಿತವಾಗಿವೆ0iÉುಂದು ಭಾವಿಸಲಾಗಿದೆ. ಈ ಕೃತಿಗಳ ರಚನೆಯ ಕಾಲ ಕುರಿತಾಗಿ ವಿಭಿನ್ನ ವಿದ್ವಾಂಸರು ತಳೆದಿರುವ ನಿಲುವುಗಳನ್ನು ನೋಡಬಹುದು. ಪತ್ತುಪ್ಪಾಟ್ಟು ಸಂಗ್ರಹಕ್ಕೆ ಸೇರಿದ ತಿರುಮುರುಗಾರುಪ್ಪಾಟ್ಟೈ ಕ್ರಿ.ಶ 7-8 ನೇ ಶತಮಾನಕ್ಕೆ ಸೇರಿದೆ0iÉುಂದು ಕಮಿಲ್ ಝ್ವೆಲೆಬಿಲ್ ಅಭಿಪ್ರಾಯಪಟ್ಟರೆ , ಎಸ್. ಪದ್ಮನಾಭನ್ ಮತ್ತು ವಯ್ಯಾಪುರಿ ಪಿಳ್ಳೆಯವರು 10ನೇ ಶತಮಾನದ ಕೃತಿಯೆಂದು ತೀರ್ಮಾನಿಸಿದ್ದಾರೆ. ಶಿಲಪ್ಪದಿಕಾರಂ,ಮಣಿಮೇಗಲೈ ಕಾವೇರಿ ಪೂಪಟ್ಟಿನಂನಲ್ಲಿದ್ದ ಶ್ರೀಮಂತ ವ್ಯಾಪಾರಿಯ ಮಗ ಕೋವಲನ್ ಮತ್ತು ಆತನ ಪತ್ನಿ ಕನ್ನಗಿ. ನರ್ತಕಿ ಮಾಧವಿಗೆ ಮನಸೋತು ಪತ್ನಿಯನ್ನು ಕಡೆಗಣಿಸಿ , ಆಕೆಯ ದೆಸೆಯಿಂದ ನಿರ್ಗತಿಕನಾಗಿ ಮತ್ತೊಮ್ಮೆ ಪತ್ನಿಯ ಆಸರೆಗೆ ಮೊರೆಹೋಗುವ ಕೋವಲನ್, ಹೊಸ ಜೀವನ ಸಾಗಿಸಲು ಮಧುರೈಗೆ ಬರುತ್ತಾನೆ. ಇಲ್ಲಿ ಜೀವನ ಸಾಗಿಸಲು ಪತ್ನಿಯ ಕಾಲ್ಗಡವನ್ನು (ಸಿಲಂಬು) ಮಾರಲು ಹೋಗುತ್ತಾನೆ. ಪಾಂಡ್ಯನ ರಾಣಿಯ ಆಭರಣ ಕದ್ದ ವ್ಯಾಪಾರಿಯ ಕುತಂತ್ರದಿಂದ ಕಳ್ಳತನದ ಆರೋಪ ಹೊತ್ತ ಕೋವಲನ್ ಮರಣ ದಂಡನೆಗೆ ಒಳಗಾಗುತ್ತಾನೆ. ಇದನ್ನು ತಿಳಿದ ಕನ್ನಗಿ ರಾಜನೆದುರು ತನ್ನ ಗಂಡ ನಿರಪರಾಧಿಯೆಂದು ಸಾಧಿಸುತ್ತಾಳೆ. ಇದರ ಪರಿಣಾಮವಾಗಿ ರಾಜ ಮತ್ತು ರಾಣಿ ಪ್ರಾಣ ತ್ಯಾಗ ಮಾಡುತ್ತಾರೆ. ನಂತರ ಮದುರೈನ್ನು ಶಾಪದಿಂದ ಸುಟ್ಟ ಕನ್ನಗಿ ಗಂಡನೊಡನೆ ಸ್ವರ್ಗಾರೋಹಣ ಮಾಡಿ ತಮಿಳುನಾಡಿನಲ್ಲಿ ಪತ್ತಿನಿ (ಪತ್ನಿ) ಸಂಪ್ರದಾಯಕ್ಕೆ ಕಾರಣಳಾಗುತ್ತಾಳೆ. ಇದು ಶಿಲಪ್ಪದಿಗಾರಂ ಕಥೆಯಾದರೆ ಆಕೆಯ ಮಗಳಾದ ಮಣಿಮೇಗಲೈ ಕಥೆ ಅದೇ ಹೆಸರಿನ ಇನ್ನೊಂದು ಕಾವ್ಯ. ಚಂಪೂ ಶೈಲಿಯಲ್ಲಿ ಮೊದಲಿಗೆ ರಚಿತವಾದ ತಮಿಳು ಕಾವ್ಯಗಳಿವು. ಇವೆರಡು ಕಾವ್ಯಗಳ ಕಾಲ ಕ್ರಿ.ಶ 2-10 ಶತಮಾನದ ನಡುವೆ 800 ವರ್ಷಗಳ ವಿಸ್ತೃತ ಕಾಲಾವಧಿಯಲ್ಲಿ ತೂಗುಯ್ಯಾಲೆಡುತ್ತಿದೆ. ಇದರ ವಿವರಗಳು ಮುಂದಿವೆ. ಗಜಬಾಹು ( ಕಚಬಾಕು) ಸಮಕಾಲೀನತೆ ಸಂಗಂ ಕಾಲವನ್ನು ನಿರ್ಧರಿಸಲು ಶಿಲಪ್ಪದಿಗಾರಂನಲ್ಲಿ ದಕ್ಕುವ ‘ಕಚವಾಕು (ಗಜಬಾಹು) ಹೆಸರನ್ನು ಮಹಾವಂಶದಲ್ಲಿರುವ ಗಜಬಾಹುವಿಗೆ ಸಮೀಕರಿಸಿಕೊಂಡು ‘ಗಜಬಾಹು ಸಮಕಾಲೀನತೆಯ ತಂತ್ರವನ್ನು ತಮಿಳು ವಿದ್ವಾಂಸರು ರೂಪಿಸಿದರು. ಇದರ ಪ್ರಕಾರ ಶಿಲಪ್ಪದಿಕಾರಂ ರಚನೆಯ ಕಾಲವನ್ನು ಕ್ರಿ.ಶ 2ನೇ ಶತಮಾನವೆಂದು ನಿರ್ಧರಿಸಿದರು. ಇದರಲ್ಲಿ ಚೇರ ದೊರೆ ಸೆಂಗುಟ್ಟವನ್ , ಶ್ರೀಲಂಕಾದ ಮಹಾವಂಶದಲ್ಲಿ ಬರುವ ಗಜಬಾಹು ಮತ್ತು ಶಿಲಪ್ಪದಿಗಾರಂ ಕೃತಿಗಾರ ಇಳಂಗೋ ಅಡಿಗಳ್ ಒಂದೇ ಕಾಲದವರಾಗಿದ್ದು ಕನ್ನಗಿ ದೇವಿಯ ಮೂರ್ತಿ ಸ್ಥಾಪನೆಯಲ್ಲಿ ಭಾಗವಹಿಸಿದ್ದರು. ಶಿಲಪ್ಪದಿಗಾರಂನ ಸರ್ಗ 30:ವಚನ 160ರಲ್ಲಿ “ಜಗತ್ತಿನ ಚಕ್ರವರ್ತಿ ದೇವಾಲಯವನ್ನು ಮೂರುಬಾರಿ ಪ್ರದಕ್ಷಿಸಿ ತನ್ನ ಗೌರವ ಸಲ್ಲಿಸುತ್ತ ನಿಂತನು. ಈತನ ಎದುರು ಬಂಧನದಿಂದ ಬಿಡುಗಡೆಯಾದ ಆರ್ಯ ದೊರೆಗಳು , ಕೇಂದ್ರ ಕಾರಾಗೃಹದಿಂದ ಹೊರ ತಂದ ರಾಜರು,ಕೊಡಗಿನ ಕೊಂಗು ದೊರೆ, ಮಾಳವ ದೊರೆ ಹಾಗೂ ಸಮುದ್ರ ಸುತ್ತಿರುವ ಶ್ರೀಲಂಕಾ ದೊರೆ ಕಾಯವಾಕು (ಕಡಲ್ಚೂಳ್ ಇಲಂಕೈ ಕಾಯವಾಕು ವೆಂಟನ್) ಪೂಜ್ಯಭಾವದಿಂದ ದೇವಿಗೆ ಪ್ರಾರ್ಥಿಸಿದರು” ಎಂದಿದೆ. ಇಲ್ಲಿ ಉಲ್ಲೇಖವಾಗಿರುವ ಕಾಯವಾಕು ಶ್ರೀಲಂಕಾದ ಮೊದಲನೇ ಗಜಬಾಹು ಎಂದು ಮೊದಲ ಬಾರಿಗೆ ಎಸ್. ಶಾಸ್ತ್ರಿಯವರು ಎಸ್ಸೆನ್ಸ್ ಆಫ್ ತಮಿಳ್ ಲಿಟರೇಚರ್ನಲ್ಲಿ ಸೂಚಿಸಿದರು. ಇದನ್ನು ಅನುಸರಿಸಿ ಕನಕಸಭಾ ಪಿಳ್ಳೆಯ ನೀಡಿದ ವಾದ ಹೀಗಿದೆ: ಶ್ರೀಲಂಕಾದ ವಂಶಾವಳಿ ನೀಡುವ ಮಹಾವಂಶದಲ್ಲಿ ಗಜಬಾಹು ಹೆಸರಿನ ಇಬ್ಬರು ರಾಜರುಗಳಿದ್ದಾರೆ. ಗಜಬಾಹು ಹೆಸರಿನ ಮೊದಲನೆಯಾತ ಕ್ರಿ.ಶ. 2ನೇ ಶತಮಾನದ ಆರಂಭ ಕಾಲದಲ್ಲಿದ್ದನು. ಇದೇ ಹೆಸರಿನ ಎರಡನೆಯಾತ ಹನ್ನೊಂದನೇ ಶತಮಾನದಲ್ಲಿದ್ದನು. ಇಮಯವರಂಬನ್ ಗಜಬಾಹುವಿನ ಸಮಕಾಲೀನ. ಈತನ ತಾತ ಕರಿಕಾಲ ಚೋಳ. ಶಿಲಪ್ಪದಿಗಾರಂನಲ್ಲಿನ ಗಜಬಾಹು ಹನ್ನೊಂದನೇ ಶತಮಾನದವನಾಗಿದ್ದರೆ ಇಮಯವರಂಬನ್ ಕಾಲ ಹನ್ನೊಂದು ಅಥವಾ ಹನ್ನೆರಡನೇ ಶತಮಾನವಾಗುತ್ತದೆ. ಆದರೆ ಚೋಳರ ದತ್ತಿ ದಾನಗಳನ್ನು ವಿವರಿಸುವ ಹತ್ತು ಮತ್ತು ಹನ್ನೊಂದನೇ ಶತಮಾನದ ತಮಿಳು ಶಿಲಾಶಾಸನ, ತಾಮ್ರಪಟಗಳು ಕರಿಕಾಲ ಚೋಳನನ್ನು ತಮ್ಮ ವಂಶದ ಪುರಾತನರಲ್ಲಿ ಒಬ್ಬನೆಂದು ಹೇಳುತ್ತವೆ. ಆದ್ದರಿಂದ ಶಿಲಪ್ಪದಿಗಾರಂನಲ್ಲಿನ ಗಜಬಾಹು ಕ್ರಿ.ಶ. 113-125 ರಲ್ಲಿದ್ದ ಮಹಾವಂಶದ ವ್ಯಕ್ತಿಯಲ್ಲದೇ ಬೇರೆಯಲ್ಲ.” ಇದರೊಂದಿಗೆ ಶಿಲಪ್ಪದಿಗಾರಂನಲ್ಲಿ ಚೇರ ದೊರೆ , ಮಗಧ ರಾಜ ಮತ್ತು ನೂರುವನ್ ಕಣ್ಣರ್ ಭೇಟಿಯಾದರೆಂದು ಹೇಳಿದ ಸಂಗತಿಯನ್ನು ಪರಿಗಣಿಸಿದರು. ಶಿಲಪ್ಪದಿಗಾರಂನಲ್ಲಿನ ನೂರುವನ್ ಕಣ್ಣರ್ ಶಾತವಾಹನ ಅಥವಾ ಶಾತಕರ್ಣಿಗೆ ಅನ್ವಯಿಸುವುದೆಂಬ ತೀರ್ಮಾನಕ್ಕೆ ಬಂದರು. ಕನಕಸಭಾ ಪಿಳ್ಳೆಯವರ ಈ ತೀರ್ಮಾನವನ್ನು ಆನಂದ ಕುಮಾರಸ್ವಾಮಿಯವರು ಒಪ್ಪಿದರು. ಆದರೆ ಹುಲ್ಷ್ನಂತಹ ವಿದ್ವಾಂಸರು ಒಪ್ಪಲಿಲ್ಲ. ಸಂಗಂ ಸಾಹಿತ್ಯದ ಕಾಲವನ್ನು ನಿರ್ಧರಿಸಲು ಬಳಸಿರುವ ಅತ್ಯಂತ ಪ್ರಮುಖ ಆಧಾರವೆನಿಸಿದ ಇದು ಅತ್ಯಂತ ದುರ್ಬಲವಾಗಿದೆ ಮತ್ತು ಶಿಲಪ್ಪದಿಗಾರಂ ರಚನೆಯ ಕಾಲವನ್ನು ಕನಿಷ್ಟ 600 ವರ್ಷಗಳಷ್ಟು ಹಿಂದಕ್ಕೊಯ್ದಿದೆ. ವಿಶ್ಲೇಷಣೆ * ಕೆ.ಎ.ಎನ್ ಶಾಸ್ತ್ರಿಯವರು ಶಿಲಪ್ಪದಿಗಾರಂ ಮತ್ತು ಮಣಿಮೇಖಲೈ 8 ನೇ ಶತಮಾನದಲ್ಲಿದ್ದ ಅನಾಮಿಕ ಕೃತಿಗಾರರು ಸೆಂಗುಟ್ಟವನ್ ಸಮಕಾಲೀನರಾಗಿದ್ದು ತಾವೇ ಇಡೀ ಪ್ರಕರಣವನ್ನು ಕಣ್ಣಾರೆ ಕಂಡಿರುವವರಂತೆ ಚಿತ್ರಿಸಿರುವ ಸಾಹಿತ್ಯಕ ಕಪಟ ಕೃತಿಯೆಂದು ಹೇಳಿದ್ದಾರೆ. * ಎಸ್.ವಿ ಸ್ವಾಮಿಕಣ್ಣು ಪಿಳ್ಳೆಯವರು ಶಿಲಪ್ಪದಿಕಾರಂನಲ್ಲಿ ಕೋವಲನ್ ಮತ್ತು ಕನ್ನಗಿ ಮಧುರೆ ಬಿಡುವಾಗ ಸೂಚಿತವಾಗಿರುವ ಖಗೋಳೀಯ ವಿವರಗಳ ಆಧಾರದ ಮೇಲೆ ಅದರ ರಚನೆಯ ಕಾಲವನ್ನು ಕ್ರಿ.ಶ 756 ಎಂದು ನಿರ್ಧರಿಸಿದ್ದರೆ , ಇವೇ ಅಧಾರಗಳ ಮೇಲೆ ಎಂ.ರಾಜಾರಾವ್ ಈ ಕಾಲ ಕ್ರಿ.ಶ 146 , ಕ್ರಿ.ಶ 587 ಆಗಿರುವ ಸಾಧ್ಯತೆಗಳತ್ತ ಗಮನ ಸೆಳೆದಿದ್ದಾರೆ. * ವಯ್ಯಾಪುರಿ ಪಿಳ್ಳೆಯವರು ಆಂತರಿಕ ಸಾಕ್ಷ್ಯಗಳ ಆಧಾರದ ಮೇಲೆ ಶಿಲಪ್ಪದಿಕಾರಂ ಕ್ರಿ.ಶ 828 ರ ನಂತರದ ಅವಧಿಯದೆಂದು ಮತ್ತು ಮಣಿಮೇಖಲೈ ಇದೇ ಕಾಲದ್ದೆಂದು ಹೇಳಿದ್ದಾರೆ. * ಆರ್.ನಾಗಸ್ವಾಮಿ ಮತ್ತು ಗಿಫ್ಟ್ ಶಿರೋಮಣಿಯವರು ಗುಹಾ ಶಿಲಾಬರಹಗಳ ಹಿನ್ನೆಲೆಯಲ್ಲಿ ಶಿಲಪ್ಪದಿಗಾರಂ ಕಾಲ ಕ್ರಿ.ಶ 2 ನೇ ಶತಮಾನಕ್ಕಿಂತಲೂ ಹಿಂದಕ್ಕೆ ಸರಿಯಬೇಕೆಂದು ಹೇಳಿದ್ದಾರೆ. ಇದು ಬೇರೆ ಬಗೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. (ನೋಡಿರಿ : ತಮಿಳು ಬ್ರಾಹ್ಮಿ) * ಕಮಿಲ್ ಝ್ವೆಲೆಬಿಲ್ ಮೇಲಿನವರ ವಾದಗಳನ್ನು ಗಮನಿಸಿ ಶಿಲಪ್ಪದಿಗಾರಂ ಮತ್ತು ಮಣಿಮೇಖಲೈ ಒಂದೇ ಕಾಲದವೆಂಬ ನಿರ್ಧಾರಕ್ಕೆ ಬಂದು ಕ್ರಿ.ಶ 450 ರ ಅವಧಿಯವೆಂದು ಹೇಳಿದ್ದಾರೆ. ಆದರೆ ಶಿಲಪ್ಪದಿಗಾರಂನಲ್ಲಿ ಬರುವ ತಿರುಪತಿಯ,ಚಾಲುಕ್ಯರ,ಗುರ್ಜರರ ಉಲ್ಲೇಖಗಳು ಕ್ರಿ.ಶ. 7 ನೇ ಶತಮಾನದ ನಂತರದವು ಎಂದು ಹೇಳಿದ ಬೇರೆಯವರ ವಾದವನ್ನು ಅವರು ಪರಿಗಣಿಸಿದಂತೆ ಕಾಣುವುದಿಲ್ಲ. * ಶಿಲಪ್ಪದಿಗಾರಂನಲ್ಲಿ ಗಂಗರ , ಆಳುಪರ , ಗುರ್ಜರರ ,ವೇಂಗಡದ ಉಲ್ಲೇಖಗಳಿವೆ. ಈ ಕಾವ್ಯದಲ್ಲಿ ಬಿಂಬಿತವಾಗಿರುವ ರಾಜಕೀಯ , ಆಡಳಿತ ವ್ಯವಸ್ಥೆಗಳಾದ ಐನ್ಕುಳು, ಎಣ್ಪೇರಯಂ ನಂತರದ ಕಾಲದ ಮುಂದುವರೆದ ಪದ್ಧತಿಗಳು. ಕೂಡಕ್ಕೂಟು ಮತ್ತು ಕುಡೈಕ್ಕುಟ್ಟುವಿನಂತಹ ನರ್ತನಗಳು ಪರಿಷ್ಕೃತ ರೂಪದಲ್ಲಿ ವರ್ಣಿಸಲ್ಪಟ್ಟಿವೆ. ಇವೆಲ್ಲವುಗಳಿಗೆ ಮಿಗಿಲಾಗಿ ಇಳಂಗೋ ಅಡಿಗಳ್ ತಾನು ಕಾವ್ಯವನ್ನು ಕೋಡುಂಗಲ್ಲು ಸಮೀಪದ ಕುಣವಾಯಿಲ್ ಕೊಟ್ಟಂನಲ್ಲಿ (ಆಶ್ರಮ) ರಚಿಸಿದೆನೆಂದು ಹೇಳಿಕೊಂಡಿದ್ದಾನೆ. ಇದನ್ನು ಈಗಿನ ತ್ರಿಕ್ಕನಮದಿಲಗಂ ಎಂದು ಗುರುತಿಸಲಾಗಿದೆ. 8ನೇ ಶತಮಾನದ ನಂತರದ ಶಿಲಾಶಾಸನಗಳಲ್ಲಿ ಕುಣವಾಯಿಲ್ಕೊಟ್ಟಂ ಕಾಣಿಸಿಕೊಳ್ಳುತ್ತದೆ. ಇವು ಶಿಲಪ್ಪದಿಗಾರಂ ಮತ್ತು ಮಣಿಮೇಗಲೈ 8-10 ಶತಮಾನದ ಅವಧಿಯವೆಂದು ಸಾರುವ ಪ್ರಬಲ ಸಾಕ್ಷ್ಯಗಳಾಗಿವೆ. * ಶಿಲಪ್ಪದಿಗಾರಂ ಮೇಲಿನ ಮೊದಲ ಭಾಷ್ಯ ಕ್ರಿ.ಶ 13 ನೇ ಶತಮಾನದಲ್ಲಿ ಅಟಿಯಾರ್ ಕುನಲ್ಲಾರ್ನಿಂದ ರಚಿತವಾಯಿತು. ಇದು ಅಪೂರ್ಣವಾದುದು. ಇದಕ್ಕೆ ಹಿಂದೆ ಸರಳವಾದ ‘ಅರುಂಪುತವಿರೈ’ ಹೆಸರಿನ ಭಾಷ್ಯವಿದ್ದಿತೆಂದು ಭಾವಿಸಲಾಗಿದೆ. * ಸಿರಿ ಪಾಡ್ದನ ತುಳು ಭಾಷೆಯಲ್ಲಿ ಖ್ಯಾತವಾಗಿರುವ ಜಾನಪದ ಮೌಖಿಕ ಮಹಾಕಾವ್ಯ. ಈ ಕಾವ್ಯದಲ್ಲಿ ಬರುವ ಹಲವಾರು ಹೆಸರುಗಳು (ಸೊನ್ನೆ ,ಮಾಯಗೆ,ಅಬ್ಬಗೆ,ದಾರುಗೆ) ಪಾಳಿ ಭಾಷೆಯಲ್ಲಿದ್ದು ಬೌದ್ಧ ಧರ್ಮದ ಹಿನ್ನೆಲೆ ಎದ್ದು ಕಾಣುತ್ತದೆ. ಶಿಲಪ್ಪದಿಗಾರಂನಲ್ಲಿಯೂ ಬೌದ್ಧ ಧರ್ಮದ ಹಿನ್ನೆಲೆಯಿದೆ. ಖ್ಯಾತ ಜಾನಪದ ಸಾಹಿತ್ಯ ತಜ್ಞ ಪೀಟರ್ ಕ್ಲೌಸ್ ಸಿರಿ ಪಾಡ್ದನ ಮತ್ತು ಶಿಲಪ್ಪದ್ದಿಗಾರಂಗಳ ಚೌಕಟ್ಟು ಮತ್ತು ಅವುಗಳು ಪ್ರಚುರಪಡಿಸುವ ಪತ್ತಿನಿ ಹಾಗೂ ಸಿರಿ ಸಂಪ್ರದಾಯಗಳ ನಡುವೆ ಬಹುತೇಕ ಸಾಮ್ಯಗಳಿವೆ. ಹೂರಣದಲ್ಲಿ ಶಿಲಪ್ಪದಿಗಾರಂನ ಕನ್ನಗಿ ಮತ್ತು ಪಾಡ್ದನದ ಸಿರಿ ಬೇರೆಯಲ್ಲ. ಆದ್ದರಿಂದ ಸಿರಿ ಪಾಡ್ದನ ಶಿಲಪ್ಪದಿಗಾರಂ ಕಾಲಕ್ಕೆ ಸೇರಿದುದೆಂದು ನಿಶ್ಚಯವಾಗಿ ಹೇಳಬಹುದು. ಶಿಲಪ್ಪದಿಗಾರಂನಲ್ಲಿ ತುಳು ಮೂಲದ ಶಬ್ಧಗಳು ದಕ್ಕುತ್ತವೆ. ಸಿರಿ ಪಾಡ್ದನ ಮತ್ತು ಶಿಲಪ್ಪದಿಗಾರಂ ಒಂದೇ ಮೂಲ ಕಥೆಯ ಮೇಲೆ ಕಟ್ಟಿದ ಎರಡು ವಿಭಿನ್ನ ಪ್ರಾದೇಶಿಕ ಜಾನಪದ ಮೌಖಿಕ ರೂಪಗಳು ಎಂದು ಸಾರಿದ್ದಾನೆ. * ಇಳಂಗೋ ಅಡಿಗಳ್ ಶಿಲಪ್ಪದಿಗಾರಂನ ಕರ್ತೃವೆಂದು ಈತ ಚೇರ ದೊರೆ ಸೆಂಗುಟ್ಟವನ್ನ ಸೋದರನೆಂದು ಭಾವಿಸಲಾಗಿದೆ. ಸಂಗಂ ಸಾಹಿತ್ಯದಲ್ಲಿ ಸಾಕಷ್ಟು ಬಾರಿ ಸೆಂಗುಟ್ಟವನ್ ಕಾಣಿಸುವನಾದರು ಒಮ್ಮೆಯೂ ಇಳಂಗೋ ಅಡಿಗಳ್ ಪ್ರಸ್ತಾಪ ದಕ್ಕುವುದಿಲ್ಲ. ಸೆಂಗುಟ್ಟವನ್ ಕುರಿತಾಗಿ ಪದಿರುಪ್ಪತ್ತುವಿನಲ್ಲಿ ಹಾಡಿರುವ ಪರನಾರ್, ಇಳಂಗೋ ಬಗ್ಗೆ ಒಂದು ಮಾತನ್ನು ಸಹ ಹೇಳಿಲ್ಲ. ನಂತರದ ಕಾಲದಲ್ಲಿ ಬರೆದ ಪತಿಕಂ(ಹಾಡಿಗೆ ವಿವರಣೆ ನೀಡುವ ಅಡಿಬರಹಗಳು)ಈತನ ಬಗ್ಗೆ ಮೌನ ತಾಳಿವೆ. ಶಿಲಪ್ಪದಿಗಾರಂನ ಮುಂದುವರಿಕೆಯಂತಿರುವ ಮಣಿಮೇಗಲೈ ಬರೆದಾತ ಚಾತ್ತನಾರ್. ತಮಿಳು ಪರಂಪರೆ ಈತನನ್ನು ಇಳಂಗೋ ಅಡಿಗಳ್ ಸಮಕಾಲೀನನಂತೆ ಭಾವಿಸುತ್ತದೆ. * ಶಿಲಪ್ಪದಿಗಾರಂನ ಮುಂದುವರೆದ ಕಥೆಯಾಗಿ ಮಣಿಮೇಕಲೈ ರಚಿತವಾಗಿದೆ. ಅಟಿಯಾರ್ಕುನಲ್ಲಾರ್ ಶಿಲಪ್ಪದಿಗಾರಂಗೆ ಬರೆದ ಪ್ರಸ್ತಾವನಾ ಪದ್ಯದಲ್ಲಿ (ಉರೈಪ್ಪಾಯಿರಂ) ಮಣಿಮೇಕಲೈ ಶಿಲಪ್ಪದಿಕಾರಂಗಿಂತ ಮೊದಲಿನದೆಂದು ಹೇಳಿದ್ದಾನೆ. ಶಿಲಪ್ಪದಿಗಾರಂನ ಕೃತಿಗಾರ ಯಾರೆಂಬುದು ಖಚಿತವಾಗಿಲ್ಲ ಆದರೆ ಶಿಲಪ್ಪದಿಗಾರಂ ಕೃತಿಗೆ ಬರೆದ ಪ್ರಸ್ತಾವನಾ ಪದ್ಯದಲ್ಲಿ ಮೊದಲ ಬಾರಿಗೆ ಇಳಂಗೋ ಅಡಿಗಳ್ ಕಾಣಿಸಿಕೊಳ್ಳುತ್ತಾನೆ. * ಮಣಿಮೇಗಲೈನಲ್ಲಿ 5ನೇಶತಮಾನದಲ್ಲಿದ್ದ ದಿಜ್ಞಾಗನಿಂದ ರಚಿತವಾದ ನ್ಯಾಯಪ್ರವೇಶದಲ್ಲಿನ ತರ್ಕದ ಅಂಗಗಳು , ಗುರ್ಜರರ ಉಲ್ಲೇಖಗಳು ಕಾಣಿಸಿಕೊಂಡಿವೆ. ಇಂತಹ ಆಧಾರಗಳನ್ನು ಪರಿಗಣಿಸಿ ಶಿಲಪ್ಪದಿಗಾರಂ ಕ್ರಿ.ಶ 5-9 ಶತಮಾನದ್ದಿರಬಹುದೆಂದು ಅಂದಾಜಿಸಲಾಗಿದೆ. * ವಾಲ್ಮೀಕಿ , ವ್ಯಾಸ, ಕಾಳಿದಾಸರಂತೆ ಇಳಂಗೋ ಅಡಿಗಳ್ ಸಂಗಂ ಕಾಲದ ಜಾನಪದ ಮೂಲದ ಮೌಖಿಕ ಸ್ವರೂಪದ ಕಥೆಯನ್ನು ಶಿಲಪ್ಪದಿಗಾರಮ್ ಕಾವ್ಯ ರಚನೆಗೆ ಬಳಸಿಕೊಂಡಿದ್ದಾನೆ. ಹಿಂದೆ ಅಳಿದುಹೋದ ಪುಂಪುಹಾರ್ ಬಂದರು ತನ್ನ ಕಾಲದಲ್ಲಿದ್ದ ಮಧುರೈ ಮತ್ತು ವಂಚಿ ಹೆಸರಿನ್ನು ಬಳಕೆಯಲ್ಲಿದ್ದ ಚೇರ ರಾಜಧಾನಿ ಈಗಿನ ಕರುವೂರು ಮೂರನ್ನು ಒಂದೇ ಕಾಲದಲ್ಲಿ ಎರಕಹೊಯ್ದು ಇಳಂಗೋ ಅಡಿಗಳ್ 8ನೇ ಶತಮಾನದಲ್ಲಿ ಶಿಲಪ್ಪದಿಗಾರಂ ಕೃತಿ ರಚಿಸಿದ್ದಾನೆ. ಇಳಂಗೋ ಅಡಿಗಳ್ ತನಗಿಂತಲೂ ಹಲವಾರು ಶತಮಾನಗಳ ಹಿಂದೆ ನಡೆಯಿತೆನ್ನಲಾದ ಘಟನೆಯನ್ನು ನಿರೂಪಿಸುವಾಗ ಹಲವಾರು ಕಾವ್ಯಾತ್ಮಕ, ಘಟನಾತ್ಮಕ ಉತ್ಪ್ರೇಕ್ಷೆಗಳನ್ನು ಬಳಸಿದ್ದಾನೆ. ಸೆಂಗುಟ್ಟವನ್ ಹಿಮಾಲಯವನ್ನು ಜಯಿಸಿದನೆಂದು ಸಹ ಹೇಳಲಾಗಿದೆ. ಇದಕ್ಕೆ ಯಾವುದೇ ಚಾರಿತ್ರಿಕ ಪುರಾವೆಗಳಿಲ್ಲ. ಮಹಾವಂಶದಲ್ಲಿ ಗಜಬಾಹು ಕುರಿತಾಗಿ ಸಾಕಷ್ಟು ಬೇರೆ ಮಾಹಿತಿಗಳು ಸಿಗುತ್ತವೆಯಾದರೂ ಆತ ಚೇರನಾಡಿಗೆ ಬಂದ ಉಲ್ಲೇಖಗಳಿಲ್ಲ. * ಸಮಗ್ರ ಸಾಹಿತ್ಯದಲ್ಲಿ ಒಮ್ಮೆ ಮಾತ್ರ ಉಲ್ಲೇಖಗೊಂಡಿರುವ ಗಜಬಾಹು ಮತ್ತು ನೂರುವನ್ ಕಣ್ಣನ್ರನ್ನು ಗಜಬಾಹು ಮತ್ತು ಶಾತಕರ್ಣಿಯೊಂದಿಗೆ ಸಮೀಕರಿಸಿ ಸಂಗ ಮತ್ತು ಶಿಲಪ್ಪದಿಗಾರಂ ರಚನೆಯ ಕಾಲವನ್ನು ನಿರ್ಧರಿಸಲಾಗಿದೆ.ಇದನ್ನು ಖಚಿತಪಡಿಸಲು ಬಾಹ್ಯ ಸಾಕ್ಷ್ಯಗಳಿಲ್ಲ. * ಶಿಲಪ್ಪದಿಗಾರಂನ ನಾಯಕಿ ಕನ್ನಗಿ ಮಧುರೈನ್ನು ಸುಟ್ಟು , ಹುತಾತ್ಮಳಾಗಿ ಪತ್ತಿನಿ(ಪತ್ನಿ) ಸಂಪ್ರದಾಯಕ್ಕೆ ಕಾರಣಳಾಗುತ್ತಾಳೆ. ಶಿಲಪ್ಪದಿಗಾರಂ ಹೇಳುವಂತೆ ಚೇರ ದೊರೆ ಸೆಂಗುಟ್ಟವನ್, ಶ್ರೀಲಂಕಾದ ಗಜಬಾಹು ಮತ್ತು ಮಾಳವದ ರಾಜ ಪತ್ತಿನಿ ಪ್ರತಿಮೆ ಸ್ಥಾಪಿಸುವಾಗ ಉಪಸ್ಥಿತರಿದ್ದು ತಮ್ಮ ಗೌರವವನ್ನು ಸಲ್ಲಿಸುತ್ತಾರೆ. ಆದರೆ ಶ್ರೀಲಂಕಾದಲ್ಲಿ ಪತ್ತಿನಿ ಸಂಪ್ರದಾಯ ಮೊದಲ ಬಾರಿಗೆ 16 ನೇ ಶತಮಾನದಲ್ಲಿ ಕಾಣಿಸಿಕೊಂಡಿತೆಂದು ರಾಜಾವಳಿ ಕೃತಿಯಿಂದ ತಿಳಿದು ಬರುತ್ತದೆ. * ಬುದ್ಧಗೋಷನ ಸಮಕಾಲೀನನಾದ ಬುದ್ಧದತ್ತ ಚೋಳನಾಡಿನಲ್ಲಿ ‘ವಿನಯ ವಿನಿಚ್ಛಯ’ ಗ್ರಂಥ ರಚಿಸಿದನು. ಇದರ ಪರಿಸಮಾಪ್ತಿಯಲ್ಲಿ ಕಲಭ್ರ ಕುಲದ ಅಚ್ಯುತ ವಿಕ್ಕಂತ ಆಳುತ್ತಿದ್ದನೆಂದು ಹೇಳಿದ್ದಾನೆ. ಐದನೇ ಶತಮಾನದಲ್ಲಿದ್ದ ಬುದ್ಧದತ್ತ ಕಾವೇರಿ ಪೂಪಟ್ಟಿನಂ ಜನ,ಧನ,ಧಾನ್ಯ ಸಮೃದ್ಧವಾಗಿದ್ದ ನಗರವಾಗಿತ್ತೆಂದು ವರ್ಣಿಸಿದ್ದಾನೆ. ಮಣಿಮೇಖಲೈ ಕಾವೇರಿ ಪೂ ಪಟ್ಟಿನಂ ಸಮುದ್ರಕ್ಕೆ ಆಹುತಿಯಾಗಿ ಜನ ಅದನ್ನು ತೊರೆದು ಹೋದರೆಂದು ತಿಳಿಸುತ್ತದೆ. ಇದರಿಂದ ಮಣಿಮೇಖಲೈ ಕಾಲ್ಪನಿಕ ಕೃತಿ ಅಥವಾ ಕಾವೇರಿ ಪೂಪಟ್ಟಿನಂ 5 ನೇ ಶತಮಾನದ ನಂತರದಲ್ಲಿ ಸಮುದ್ರಕ್ಕೆ ಆಹುತಿಯಾಗಿರಬಹುದೆಂಬ ನಿಲುವು ತಾಳುವಂತೆ ಮಾಡುತ್ತದೆ. * ಕನ್ನಡ ಭಾಷೆಯ ಪ್ರಾಚೀನತೆಯನ್ನು ಸ್ಥಾಪಿಸಲು ಹಲವಾರು ಕನ್ನಡ ವಿದ್ವಾಂಸರು ಶಿಲಪ್ಪದಿಗಾರಂನಲ್ಲಿ ಸೆಂಗುಟ್ಟವನ್ ಸಾಗುವ ದಾರಿಯಲ್ಲಿ ಕನ್ನಡಿಗ ನರ್ತಕಿಯರು ತಮ್ಮ ಕಲೆಯನ್ನು ಪ್ರದರ್ಶಿಸಿದ ಸಂದರ್ಭವನ್ನು ಉಲ್ಲೇಖಿಸಿದ್ದಾರೆ. ಇದು ಕನಕಸಭಾಪಿಳ್ಳೆಯವರು ಗಜಬಾಹು ಸಮಕಾಲೀನತೆಯ ಅಧಾರದ ಮೇಲೆ ನಿರ್ಧರಿಸಿದ ಕಾಲವೇ ಹೊರತು ಇತರ ಐತಿಹಾಸಿಕ ಆಧಾರಗಳಿಂದ ಮೂಡಿಬಂದುದಲ್ಲ. ತಿರುಕ್ಕುರುಳ್ ತಿರುಕ್ಕುರುಳ್ ಬರೆದ ತಿರುವಳ್ಳುವರ್ನ ಹೆಸರು,ದೇಶ , ಕಾಲ, ಮತ ಕುರಿತಾಗಿ ಯಾವ ಮಾಹಿತಿಗಳು ಲಭ್ಯವಿಲ್ಲ. ಕೆಲವರು ಈತನನ್ನು ತೊಲ್ಕಾಪ್ಪಿಯನಾರ್ಗಿಂತಲೂ ಹಿಂದಿನವನೆಂದು ಪರಿಗಣಿಸಿದ್ದಾರೆ. ಈತ ನೇಕಾರ, ಅಂತ್ಯಜ, ಬ್ರಾಹ್ಮಣ, ಜೈನ, ಬೌದ್ಧ, ಕ್ರಿಶ್ಚಿಯನ್ನನೆಂದು , ಚೆನ್ನೈ ಸಮೀಪದ ಮೈಲಾಪುರ, ಮಧುರೈಯವನೆಂದು, ವಲ್ಲುವನಾಡಿನವನೆಂದು ಹಲವಾರು ವಿದ್ವಾಂಸರು ವಿಧವಿಧವಾಗಿ ಆತನ ಮತ ಮತ್ತು ಸ್ಥಳ ಕುರಿತಾಗಿ ನಿರ್ಧರಿಸಿದ್ದಾರೆ. ಈ ಗ್ರಂಥದಲ್ಲಿ 133 ಅದಿಗಾರಂಗಳಿದ್ದು (ಅಧಿಕರಣ) , ಒಂದೊಂದರಲ್ಲಿ 10 ಕುರುಳ್ಗಳಿದ್ದು ಒಟ್ಟು 1330 ನೀತಿ ವಚನಗಳಿವೆ. ತಿರುಕ್ಕುರುಳ್ ಅರಂ (ಧರ್ಮ-38 ಅದಿಗಾರಂ), ಪೊರುಳ್ (ಸಾರ/ಅರ್ಥ-70 ಅದಿಗಾರಂ) ಮತ್ತು ಕಾಮಂ (ಕಾಮ-25 ಅದಿಗಾರಂ) ವಿಷಯಗಳಲ್ಲಿ ನಿರೂಪಿತವಾಗಿದೆ. ಎಸ್.ಚೋಮಸುಂತಿರಂ ಪಾರತಿಯಾರ್(ಸೋಮಸುಂದರ ಭಾರತಿಯಾರ್) ಮತ್ತು ಎಂ.ರಾಜಮಾಣಿಕ್ಕಿಯಂ ತಿರುಕ್ಕುರುಳ್ ಕ್ರಿ.ಪೂ 30 ರಲ್ಲಿ ರಚಿತವಾಯಿತೆಂದು ಸಾರಿ ಆ ನೆನಪಿಗೆ ತಿರುವಳ್ಳುವರ್ ಶಕೆ ಆರಂಭಿಸಬೇಕೆಂದು ಕರೆಯಿತ್ತಿದ್ದರು. (ಕೃ:3-ಪು.124). ಇದನ್ನು ಪರಿಗಣಿಸಿದ ತಮಿಳುನಾಡು ಸರ್ಕಾರ 2008 ರಲ್ಲಿ 60 ಸಂವತ್ಸರಗಳ (ಪ್ರಭವ, ವಿಭವ ಇತ್ಯಾದಿ) ಸಾಂಪ್ರದಾಯಿಕ ಕಾಲ ಗಣನೆಯನ್ನು ಕೈಬಿಟ್ಟು ತಿರುವಳ್ಳುವರ್ ಶಕೆಯನ್ನು ಪ್ರಾರಂಭಿಸಿದೆ. ಇದರ ಪ್ರಕಾರ ಕ್ರಿ. ಶ 2008 , ತಿರುವಳ್ಳುವರ್ 2039 ವರ್ಷಕ್ಕೆ ಸಮ. ಬೆಂಗಳೂರಿನಲ್ಲಿ 09/08/2009 ರಂದು ನಡೆದ ತಿರುಕ್ಕುರುಳ್ ವಿಗ್ರಹ ಅನಾವರಣ ಸಮಾರಂಭದಲ್ಲಿ ತಮಿಳರ ಪದ್ದತಿಯಂತೆ ತಿರುವಳ್ಳುವರ್ ಕಾಲವನ್ನು ಕ್ರಿ.ಶ ಆದಿಗೆ ಒಯ್ಯಲಾಗಿದೆ. ಈ ಸಂದರ್ಭದಲ್ಲಿ ಮೂಡಿಬಂದ ಕನ್ನಡ ಪತ್ರಿಕೆಗಳಲ್ಲಿನ ಎಲ್ಲ ಲೇಖನಗಳು ಇದೇ ಕಾಲವನ್ನು ಅನುಸರಿಸಿವೆ. ಇದು ತಿರುವಳ್ಳುವರನನ್ನು ಸಂಗಂ ಕಾಲಕ್ಕೊಯ್ಯುತ್ತದೆ. ಸಂಗಂ ಕಾಲದ ಸಮಾಜ ನಾವು ಈಗಾಗಲೇ ನೋಡಿದಂತೆ ಧರ್ಮ, ಅರ್ಥ , ಕಾಮ , ರಾಜನೀತಿ, ಪಾತಿವ್ರತ್ಯ, ವಿದ್ಯಾಭ್ಯಾಸ , ಸರಿ-ತಪ್ಪು ನೀತಿಗಳನ್ನು ಉನ್ನತ ಮಟ್ಟದಲ್ಲಿ ವಿವೇಚಿಸುವಂತಹ, ತಿರುಕ್ಕುರುಳ್ ಪ್ರತಿಪಾದಿಸುವ ಕೊಲ್ಲಮಯ್ (ಅಹಿಂಸೆ) ತತ್ವವನ್ನು ಚರ್ಚಿಸುವಷ್ಟು, ಪೋಷಿಸುವಷ್ಟು ಮುಂದುವರೆದುದಾಗಿರಲಿಲ್ಲ. * ಕುರುಳ್ ತೊಲ್ಕಾಪ್ಪಿಯಂ ವ್ಯಾಕರಣ ಸೂತ್ರಗಳಿಗೆ ಅನುಗುಣವಾಗಿಲ್ಲದಿರುವುದರಿಂದ ಅದಕ್ಕಿಂತಲೂ ಹಿಂದನದೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. * ತಿರುಕ್ಕುರುಳ್ ಕ್ರಿ.ಶ 650 ರ ಅವಧಿಯದೆಂಬ ಅಭಿಪ್ರಾಯವನ್ನು ವಯ್ಯಾಪುರಿ ಪಿಳ್ಳೆಯವರು ತಾಳಿದ್ದಾರೆ. * ತಮಿಳು ವಿದ್ವಾಂಸರಾದ ಕೆ.ಕೆ.ಪಿಳ್ಳೆ ,ಮೇಲಿನವರ ದೃಷ್ಟಿಯನ್ನು ಒಪ್ಪದೆ ತಿರುಕ್ಕುರುಳ್ ಕ್ರಿ.ಶ 4 ನೇ ಶತಮಾನದ್ದೆಂಬ ತೀರ್ಮಾನಕ್ಕೆ ಬಂದಿದ್ದಾರೆ. * ಕಮಿಲ್ ಝ್ವೆಲೆಬಿಲ್ ತಿರುಕ್ಕುರುಳ್ ಕ್ರಿ.ಶ 4-5 ಶತಮಾನದ್ದಾಗಿರಬಹುದೆಂಬ ನಿಲುವು ತಾಳಿದ್ದಾರಾದರೂ ಅದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಿಲ್ಲ. * ಶಿಲಪ್ಪದಿಗಾರಂ ಮತ್ತು ಮಣಿಮೇಗಲೈಗಳಲ್ಲಿ ತಿರುಕ್ಕುರುಳಿನ ಸಾಲುಗಳಿರುವುದರಿಂದ ಇವೆರಡಕ್ಕಿಂತಲೂ ಇದು ಹಿಂದಿನದೆಂದು ಹೇಳಲಾಗುತ್ತಿದೆ. ಆದರೆ ಶಿಲಪ್ಪದಿಗಾರಂ ಕಾಲ ಕ್ರಿ.ಶ 2-10 ಶತಮಾನಗಳ ನಡುವೆ ತೂಗುಯ್ಯಾಲೆಯಾಡುತ್ತಿದ್ದು ಈ ಮೂರು ಖ್ಯಾತ ಕೃತಿಗಳ ರಚನೆಯ ಕಾಲ ಸಹ ಅನಿರ್ಧಾರಿತವಾಗಿದ್ದು ನಾನಾ ಬಗೆಯ ವಿವಾದಗಳ ಗೂಡಾಗಿದೆ. * 14 ನೇ ಶತಮಾನಕ್ಕೆ ಸೇರಿದ ಪರಿಮೇಲಳಗರ್ ‘ಪರಿಮೇಲಳಗಿಯರ್ ವಿರುತ್ತಂ’ ತಿರುಕ್ಕುರುಳ್ ಮೇಲೆ ಮೂಡಿಬಂದ ಮೊದಲ ಭಾಷ್ಯ. ಪದಿನೇಣ್ ಕೀಳ್ಕಣಕ್ಕು ( ಹದಿನೆಂಟು ಸಣ್ಣ ಕೃತಿಗಳು) (1) ಕಳವಳಿ ನಾರ್ಪತ್ತು (2) ಕಾರ್ನಾರ್ಪತ್ತು (3) ಐನ್ತಿಣೈಏಳುಪ್ಪತ್ತು (4) ಐನ್ತಿಣೈಐಂಪತ್ತು (5) ತಿಣೈಮೊಳಿ ಐಂಪತ್ತು (6) ತಿಣೈಮಾಲೈ ನೂರು ಐಂಪತ್ತು ಮತ್ತು (7) ಕೈನ್ನಿಲೈ (11) ಏಳಡಿ ಈ ರಚನೆಗಳು ಕಲಿತ್ತೊಕೈ ಮತ್ತು ತಿರುಕ್ಕುರುಳ್ ನಂತರದ ಅವಧಿಯವಾಗಿದ್ದು ಕ್ರಿ.ಶ 9 ನೇ ಶತಮಾನದ ಮೊದಲಾರ್ಧದಲ್ಲಿ ರಚಿತವಾಗಿವೆಯೆಂದು ವಯ್ಯಾಪುರಿ ಪಿಳ್ಳೆಯವರು ನಿರ್ಧರಿಸಿದ್ದರೆ ಕಮಿಲ್ ಝ್ವೆಲೆಬಿಲ್ ವಯ್ಯಾಪುರಿ ಪಿಳ್ಳೆಯವರು ಸೂಚಿಸುವ ಕಾಲ ನಂತರದ್ದೆಂದು ತೋರುತ್ತದೆ ನಿಜವಾದ ಕಾಲ ಕ್ರಿ.ಶ 6-7 ಶತಮಾನ ಆಗಿರುವ ಸಾಧ್ಯತೆಗಳಿವೆ ಎಂದಿದ್ದಾರೆ. (8) ತಿರಿಕಾಟುಕಂ (9) ನಾಣ್ಮಣಿಕ್ಕಟಿಕ್ಕೈ (10) ಚಿರುಪಂಚಮೂಲಂ (12) ಮುದುಮೊಳಿಕಂಚಿ (13)ಇಣ್ಣಾ ನಾರ್ಪತ್ತು (14) ಇಣಿಯಾವೈ ನಾರ್ಪತ್ತು (15) ಆಚಾರಕ್ಕೋವೈ ಇವುಗಳ ಕಾಲವನ್ನು ಕ್ರಿ.ಶ 750-850 ಅವಧಿ0iÉುಂದು ವಯ್ಯಾಪುರಿ ಪಿಳ್ಳೆ ನಿರ್ಧಸಿದ್ದರೆ ಕಮಿಲ್ ಝ್ವೆಲೆಬಿಲ್ ಇದನ್ನು ಬಹುತೇಕ ಅನುಮೋದಿಸಿದ್ದಾರೆ. (16) ಪಳಮೊಳಿ ನಾನೂರು ಮತ್ತು (17) ನಾಲಡಿಯಾರ್ ಕ್ರಿ.ಶ 650-750 ರ ಅವಧಿಯದಿರಬಹುದೆಂದು ಕಮಿಲ್ ಝ್ವೆಲೆಬಿಲ್ ಸೂಚಿಸಿದ್ದಾರೆ. ಕಾವ್ಯಗಳು-ವ್ಯಾಕರಣ/ಲಕ್ಷಣ ಗ್ರಂಥಗಳು-ಭಾಷ್ಯಗಳು-ನಿಘಂಟುಗಳು ಭಾಷೆ ಪ್ರಬುದ್ಧ ಸ್ಥಿತಿ ಗಳಿಸಿದ ಕುರುಹಾಗಿ ವ್ಯಾಕರಣ/ಲಕ್ಷಣ ಗ್ರಂಥಗಳು, ಭಾಷ್ಯಗಳು ಮತ್ತು ನಿಘಂಟುಗಳು ಕಾಣಿಸಿಕೊಳ್ಳುತ್ತವೆ. ಕ್ರಿ.ಶ 10-13 ಶತಮಾನದ ಅವಧಿ ತಮಿಳಿನಲ್ಲಿ ಈ ಬಗೆಯ ಸಾಹಿತ್ಯ ಸೃಷ್ಟಿಯ ಕಾಲವಾಗಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮೇಲಿನ ಅವಧಿಯ ಮುಖ್ಯವಾದ ಕಾವ್ಯ/ಕೃತಿಗಳೆಂದರೆ ಪೆರುಂತೇವನಾರನ ಚಂಪೂ ಶೈಲಿಯ ಮಹಾಭಾರತ ಆಧಾರಿತ ‘ಪಾರತ ವೆಂಬಾ’(~850) , ಗಂಗ ದೊರೆ ದುರ್ವಿನೀತನ ಬೃಹತ್ಕಥೆ ಆಧಾರಿತ ಕೊಂಕುವೇಳೀರನ ‘ಪೆರುಂಗತೈ’(~800-900) ,ಜೈನ ಕಾವ್ಯ ‘ ಚೀವಕ ಚಿಂತಾಮಣಿ’(~900-1300), ವಳೈಯಾಪತಿ-ಲಭ್ಯವಿಲ್ಲ ( ~950) ,ಉತಿಯನ್ ಚರಿತಂ (~970-1050) , ನಾಕಕುಮಾರ ಚರಿತೈ(ನಾಗಕುಮಾರ ಚರಿತೆ), ಯಶೋತರ ಚರಿತೈ , ಚೀವ ಸಂಬೋಧಿನಿ,ಕುಂತಲಕೇಶಿ (~ 1000-1100) , ಕಂಬನ್ನ ‘ಇರಾಮವತಾರಂ (1180) , ಜಯಗೊಂಡಾರನ ‘ಕಲಿಗಂತ್ತು ಪರಣಿ (~1100) , ಮತ್ತು ಹಲವಾರು ‘ಪರಣಿ’ (ಭರಣಿ) ಹಾಗೂ ‘ಕಲಂಪಾಕಂ’ ಮಾದರಿಯ ರಚನೆಗಳು. ತಮಿಳಿನ ಶಬ್ಧ ಭಂಡಾರ ಸಂಸ್ಕೃತದಿಂದ ಸಾಹಿತ್ಯದ ವಿಶ್ಲೇಷಣಗೆ ಬೇಕಾದ ತಾಂತ್ರಿಕ ಪರಿಭಾಷೆಯನ್ನು ಸ್ವೀಕರಿಸುತ್ತ ವೈವಿಧ್ಯತೆಯನ್ನು ಗಳಿಸಿಕೊಂಡ ಕಾಲವಿದು. ಈ ಅವಧಿಯಲ್ಲಿ ವ್ಯಾಕರಣ,ಲಕ್ಷಣ ಮತ್ತು ಭಾಷ್ಯಗಳು ಸಾಕಷ್ಟು ಮೂಡಿಬಂದವು. ಈ ಅವಧಿಯಲ್ಲಿ ಸಾಹಿತ್ಯದ ಸಂಗ್ರಹ ಮತ್ತು ಸಂಪಾದನೆ ಪೂರ್ಣಗೊಡವು. ಈ ಅವಧಿಯ ವ್ಯಾಕರಣಗಳು: ಅಮಿತ ಚಾಗರರ್ (ಅಮಿತ ಸಾಗರ)+ಕುಣಚಾಕರರ್ (ಗುಣಸಾಗರ್)ರ ‘ಯಾಪ್ಪುರುಂಕುಲಂ’ ಮತ್ತು ‘ಯಾಪುರುಂಗುಲಕಾರಿಕೈ’ (~980-1020), ಪುತ್ತಮಿತ್ತಿರನ (ಬುದ್ಧಮಿತ್ರ) ‘ವೀರಚೋಳಿಯಂ’(1066), ದಂಡಿಯ ಕಾವ್ಯಾದರ್ಶ ಆಧಾರಿತ ತಂಟಿಯಾಲಂಕಾರಂ(ದಂಡಿಯಾಲಂಕಾರಂ~1100), ಕುಣವೀರಪಂಟಿತರನ (ಗುಣವೀರಪಂಡಿತ) ‘ನೇಮಿನಾತಂ (~1200), ಪವನಂತಿಯ(ಭವನಂದಿ) ‘ನನ್ನೂಲು’ (~1200) ,ದಿವಾಕರ ಮತ್ತು ಅವನ ಮಗನದೆಂದು ಹೇಳಲಾಗುವ ’ದಿವಾಕರಂ’+ಪಿಂಗಳಂತೈ ಅಥವಾ ಪಿಂಗಳ ನಿಘಂಟು (~900-1000). ಭಾಷ್ಯಗಳು : ಇರೈನಾರ್ ಅಗಪ್ಪೊಪರುಳ್ ಮೇಲೆ ನಕ್ಕೀರಾರ್ ಭಾಷ್ಯ (~800-1200) (ಕೃ2:ಪು:33) , ತೊಲ್ಕಾಪ್ಪಿಯಂ ಮೇಲೆ ಇಳಂಪೂರಣಾರ್ (~1100-1200) , ಚೇನವರೈಯರ್ (~1200-1300), ಪೆರಾಶಿಯಾರ್ (~1200-1300) ಮತ್ತು ವೀರಚೋಳಿಯಂ ಮೇಲೆ ಮಯಿಲನಾತರ್ (~1300-1400) ಭಾಷ್ಯಗಳು. * ಮೌಖಿಕ ರೂಪದ ಸಂಗಂ ಸಾಹಿತ್ಯ ಕ್ರಿ.ಶ 1-3 ಶತಮಾನದ ಅವಧಿಯದೆಂದು ಬಹುತೇಕ ತೀರ್ಮಾನವಾಗಿದೆ. ಅದರೆ ಪ್ರಾಚೀನವೆಂದು ಭಾವಿಸಲಾದ ತಮಿಳು ಕೃತಿಗಳ ಕಾಲ ನಿರ್ಧಾರ ವಿವಿಧ ವಿದ್ವಾಂಸರ ದೃಷ್ಟಿಯಲ್ಲಿ ಕ್ರಿ.ಶ 6-10 ಶತಮಾನದ ನಡುವೆ ತೂಗುಯ್ಯಾಲೆಯಾಡುತ್ತಿವೆ. ತೌಲನಿಕ ಕೋಷ್ಟಕ ಭಾರತದ ಪ್ರಮುಖ ಭಾಷೆಗಳ ಸಾಹಿತ್ಯಕ ಪ್ರಾಚೀನತೆಯನ್ನು ಸೂಚಿಸುತ್ತಿದ್ದು ಆ ಭಾಷೆಗಳ ಶಿಲಾಶಾಸನಗಳ ಆರಂಭ ಮತ್ತು ಹರಡುವಿಕೆಯ ಕಾಲದೊಂದಿಗೆ ತಾಳೆಯಾಗುತ್ತಿರುವು ಗಮನಾರ್ಹವಾಗಿದೆ. SANGAM LTERATURE - FACTS OVER MYTHS # No work supposedly believed to belong to sangam literature show any remote possibility of existence of literary body called SANGAM. The nature of society , political system , cultural back ground that depicted in Sangam literature does not support the advanced cultural society which can foster oraganised literary activities. # The Sangam period is considerd to existed between 1.0 C.E to 3.0. C.E . But all the statements regarding Sangam appear from 8-10 C.E . There is no even scant indication of Sangam era in Pallava period which flourished between 3.0 C.E to 7.0 C.E # No considerable success has been got in understanding the early history of Tamilagam from Sangam literature. The effort to establish the sangam period on firm historical evidences has become almost unsuccessful. # From Tamil-Brahmi inscriptions the dominance of Prakrit over written Tamil until 5.0 C.E is well established. But no evidence of this is known from Sangam literature. The Pallavas of Tamilnadu and Kadambas of Karnataka gave prime importance to Prakrit during their initial three centuries spanning between 3.0 C.E to 5.0 C.E. Why pallavas did not consider tamil which contributed great sangam literature before their establishmenet as offical language remains a enigma. This demands deeper research comprising the sangam period , recognision of the people who wrote Tamil-Brahmi inscriptions and the reason for not indicating sangam literature until 8-10 C.E. # Oceanographic explorations/surveys done does not confirm any submergence of land by sea in India and Sri Lanka area. # The archeological excavations done in Tamil Nadu have not yielded any results which confirm to advanced civilization , cities , forts etc., in the first few centuries of C.E such as those found in Lothal , Harappa , Mohenjadaro etc., # From the internal evidences it is clear that the Perundevanar who wrote Bharata Venba -the first epic in Tamil and who was in the court of Pallava king Pottarasa (Nandivarma-3) has written introductory verses to five of eight collections in Ettuttokai Viz., Ahananuru , Ainkurunuru , Kuruntokkai , Nattinai and Purananuru. A few lines of his Bharata Venba have been traced in these collections. This clearly indicates that during 900-1100 C.E period oral Sangam literature was fixed in writing and classification of them was completed. With this as reference Poruladigaram of Tolkappiam has been written. # Nakkirar who wrote commentary to Iraiyanar Ahapporul (800-1000 C.E) , elaborates the myth of Tamil Sangams but no where he talks about Ettuttokkai and Pattuppattu. This supports the fact mentioned above # The first commentary on Tolkappiam was written by Ilampuranar (1100-1200 C.E). He is called as Uarai Asiriyar (Master Commentor). He has not mentioned Ettuttokkai and Pattuppattu. Pearasiyar (1200-1300 C.E) , Mayilainathar (1300 C.E) , Nacchinarkkiniyar (1300-1400 C.E) has mentioned Ettuttokkai and Pattuppattu. This clearly indicates the period during which completion of classification of written oral Sangam literature was achieved. # There is a inscription of 230 lines at the plinth of Temple in Tirukkoyilur issued by RajaRaja Chola in 1012 C.E. which is in Agaval metre. In this inscription the life of Kapilar the poet of Sangam age , his friendship with Pari –Velir of Sangam age is given in detail. The great pains taken by Kapilar after death of Pari to get the marriage of his daughters with Malaiman and after fulfilling this entering the fire to achieve heaven has been described. By this we can interpret that the agaval metre was in use during 11th century as well as the oral Sangam literature was in process of writing and classification. # An inscription of 900-1000 C. in Agaval meter has been found at Erakkanakudi. In this, Sangam Chair over which ancestor of Ettichhattan sat has been been mentioned. By this it can be said that during 900-1000 C.E Agaval meter was in use and popular as well as myth of Sangam Literature was emerging out to full scale. # By observation of the above facts it can be concluded that (1) During 700-800 C.E. Sangam literature which was in oral form was written (2) During 900-1100 C.E the written literature was classified into individual collections Viz., Ahananuru , purananuru,kuruntokkai etc., (3) During 1100-1300 C.E the complete classification was achieved with Ettuttokkai and Pattuppattu. |
Comment Box is loading comments...