|
ಅಂಬಿತಮೆ-ಸರಸ್ವತಿ
(ಆರ್ಯರಿಗಾಗಿ ಹುಡುಕಾಟ : ಹೊರಗೆ-ಒಳಗೆ ಪುಸ್ತಕದ ಆಯ್ದ ಭಾಗ) ಋಗ್ವೈದಿಕರು ತಮಗೆ ನೆಮ್ಮದಿಯ ಜೀವನ ಕಲ್ಪಿಸಿದ ನದಿಗಳನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ತಾವು ಸಪ್ತ ಸಿಂಧೂವಿನಲ್ಲಿ (ಸಿಂಧೂ=ನದಿ) ನೆಲೆಸಿದುದಾಗಿ ತಮ್ಮ ಮಂತ್ರಗಳಲ್ಲಿ ಹೇಳಿಕೊಂಡಿದ್ದಾರೆ. ಋಗ್ವೇದದಲ್ಲಿ ಇಪ್ಪತ್ತಕ್ಕೂ ಹೆಚ್ಚು ನದಿಗಳ ಉಲ್ಲೇಖಗಳಿವೆ. ಈ ಎಲ್ಲ ನದಿಗಳ ಪೈಕಿ ಅವರು ಸರಸ್ವತಿಯ ಬಗ್ಗೆ ಅತ್ಯಂತ ಭಾವುಕರಾಗಿದ್ದಾರೆ. ಆ ನದಿಯನ್ನು ‘ಅಂಬಿತಮೆ-ನದೀತಮೆ-ದೇವಿತಮೆ’ (ಶ್ರೇಷ್ಟಳಾದ ತಾಯಿ, ನದಿ ಮತ್ತು ದೇವಿ) ಎಂದು ಹಾಡಿದ್ದಾರೆ. ಋಗ್ವೈದಿಕರು ಹೆಸರಿಸಿದ ಎಲ್ಲ ನದಿಗಳು ಇಂದು ಅಸ್ತಿತ್ವದಲ್ಲಿದ್ದು ಸರಸ್ವತಿ ಮಾತ್ರ ಅಸ್ತಿತ್ವದಲ್ಲಿಲ್ಲ. ಪುರಾಣಗಳು ಗಂಗಾ-ಯಮುನಾ ನದಿಗಳು ಸೇರುವಲ್ಲಿಯೇ ನೆಲದ ಒಳಗಿನಿಂದ ಹರಿದು ಬರುವ ಗುಪ್ತಗಾಮಿನಿಯಾದ ಸರಸ್ವತಿ ಪ್ರಯಾಗದಲ್ಲಿ (ಅಲಹಾಬಾದ್) ಕೂಡಿಕೊಂಡು ತ್ರಿವೇಣಿ ಸಂಗಮವಾಗುತ್ತದೆ ಎಂದು ಹೇಳುತ್ತವೆ. ಜನ ಈ ಪೌರಾಣಿಕ ಹೇಳಿಕೆಗಳನ್ನು ನಂಬಿದ್ದಾರೆ. ಆದರೆ ಇದರಿಂದ ಋಗ್ವೈದಿಕ ಕಾಲದ ಸರಸ್ವತಿ ನದಿಯ ಸಮಸ್ಯೆ ಬಗೆಹರಿದಂತಾಗಲಿಲ್ಲ. ಏಕೆಂದರೆ ಋಗ್ವೇದದಲ್ಲಿ ಬರುವ ಸರಸ್ವತಿ ವಾಯುವ್ಯ ಭಾರತದ ಸಪ್ತಸಿಂಧುಗಳಲ್ಲಿ ಒಂದಾಗಿದ್ದಿತು. ಅದಕ್ಕೆ ಗಂಗಾ-ಯಮುನಾ ನದಿಗಳೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಋಗ್ವೇದದಲ್ಲಿ ಗಂಗಾ-ಯಮುನಾ ನದಿಗಳ ಉಲ್ಲೇಖ ನಂತರದ ಕಾಲದ ಮಂಡಲಗಳಲ್ಲಿ ಒಮ್ಮೆ ಮಾತ್ರ ಬಂದಿದ್ದು ಅವುಗಳಿಗೆ ಪ್ರಾಶಸ್ತ್ಯ ದಕ್ಕಿಲ್ಲ. ಆದ್ದರಿಂದ (1) ಋಗ್ವೇದದ ಸರಸ್ವತಿ ಹೆಸರಿನ ನದಿ ನಿಜವಾಗಿಯೂ ಇದ್ದಿತೆ ? (2) ಇದ್ದಿದ್ದೇ ಆದರೆ ಅದರ ಭೌಗೋಳಿಕ ಸ್ಥಾನ ಯಾವುದು ಮತ್ತು ಅದು ಎಲ್ಲಿ ಉಗಮಿಸುತ್ತಿದ್ದಿತು. (3) ಅದಕ್ಕೆ ಉಪನದಿಗಳು ಇದ್ದುವೇ? ಇದ್ದುದಾದರೆ ಅವು ಯಾವುವು ? (4) ಅದು ಸಮುದ್ರ ಸೇರುತ್ತಿದ್ದರೆ , ಆ ಸೇರುವ ಸ್ಥಳ ಯಾವುದು ? (5) ಅದು ಯಾವಾಗ , ಹೇಗೆ ಮತ್ತು ಏಕೆ ಕಣ್ಮರೆಯಾಯಿತು? ಮುಂತಾದ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಸರಸ್ವತಿಯನ್ನು ಕುರಿತಾಗಿ ಏಳುವ ಮೇಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಮೊದಲಿಗೆ ವೈದಿಕ ಸಾಹಿತ್ಯದಲ್ಲಿ ನಂತರ ಭೌಗೋಳಿಕ ನೆಲೆಯಲ್ಲಿ ಹುಡುಕಲು ಹಲವರು ಪ್ರಯತ್ನಿಸಿದ್ದಾರೆ. ಸರಸ್ವತಿ ಕುರಿತಾಗಿ ಋಗ್ವೇದದ ಹೇಳಿಕೆಗಳಿಗೆ ಅತ್ಯಂತ ಮಹತ್ವವಿದೆ. ಏಕೆಂದರೆ ಆ ನದಿಯ ಬಗ್ಗೆ ತಿಳಿಸುವ ಅತ್ಯಂತ ಪ್ರಾಚೀನ ಆಕರವೇ ಅದು. ಋಗ್ವೇದದಲ್ಲಿ ಸರಸ್ವತಿ ಕುರಿತಾಗಿ ಹೀಗೆ ಹಾಡಲಾಗಿದೆ. ‘ಅಂಬಿತಮೆ-ನದೀತಮೆ-ದೇವಿತಮೆ’ (ಶ್ರೇಷ್ಟಳಾದ ತಾಯಿ, ನದಿ ಮತ್ತು ದೇವಿ) ಸರಸ್ವತಿಯೇ ನಾವು ಹೇಳಹೆಸರಿಲ್ಲದವರು ನಮಗೆ ಕೀರ್ತಿಯನ್ನು ನೀಡು (ಋ.ವೇ 2/41/16) ತಾವರೆಯ ದಂಟನ್ನು ಅಗೆಯುವಂತೆ ಪ್ರಬಲಳಾದ ಸರಸ್ವತಿ ಬಲವಾದ ಅಲೆಗಳಿಂದ ಬೆಟ್ಟದ ಮೊಗಳುಗಳನ್ನು ಘಟ್ಟಿಸುತ್ತಾಳೆ. ಪರ್ವತಗಳನ್ನು ಹಣಿಯುವ ಆ ಸರಸ್ವತಿಯನ್ನು ನಾವು ಹಾಡು ಮತ್ತು ಪವಿತ್ರ ಮಂತ್ರಗಳಿಂದ ಕರೆಯೋಣ. ದೇವತೆಗಳಿಗೆ ಎದುರಾದ , ಮಾಯಾವಿಯಾದ ಪ್ರತಿಯೊಬ್ಬ ಬೃಷಯನನ್ನು ಸರಸ್ವತಿಯೇ ಹೊಡೆದುರುಳಿಸು. ಕುಲಗಳ ಜನರಿಗಾಗಿ ಸಂಪತ್ಕರವಾದ ನೀರನ್ನು ಹುಡುಕಿಕೊಟ್ಟು ವಿಷವನ್ನು ದೂರ ಮಾಡಿದೆ ನೀನು. ಸಂಪದ್ಭರಿತಳಾದ ಸರಸ್ವತಿ ನಮ್ಮನ್ನು ರಕ್ಷಿಸಲಿ. ನಮ್ಮೆಲ್ಲ ಚಿಂತನೆಗಳಿಗೆ ಶಕ್ತಿ ತುಂಬಲಿ. ಪವಿತ್ರ ಸರಸ್ವತಿಯೇ ನಿನ್ನನ್ನು ಕರೆಯುತ್ತಿದ್ದೇವೆ. ಇಂದ್ರ ಹಗೆಗಳನ್ನು ಹಣಿದಾಗ ಸಿಗುವಂತಹ ಬಹುಮಾನ ನಮಗೆ ಸಿಗಲಿ. ಸಂಪತ್ತು ಮತ್ತು ಬಲದಲ್ಲಿ ಸಮೃದ್ಧಳಾದ ಸರಸ್ವತಿಯೇ ,ಪೂಷನ್ ಸಂಪತ್ತನ್ನು ಕೊಟ್ಟು ನೆರವಾಗುವಂತೆ ನಮಗೆ ನೆರವಾಗು. ಈ ದಿವ್ಯ ಸರಸ್ವತಿ ತನ್ನ ಭೀಷಣ ಸ್ವರ್ಣ ಪಥದಲ್ಲಿ ಶತ್ರು ಹಂತಕಳಾಗಿ ನಮ್ಮ ಸ್ತುತಿ ಪಾತ್ರಳಾಗಿದ್ದಾಳೆ, ಆಕೆಯ ವೇಗವಾಗಿ ಹರಿಯುವ ಎಡೆಬಿಡದ ಪ್ರವಾಹಗಳು ರಭಸವಾಗಿ ಗರ್ಜಿಸುತ್ತ ಸಾಗುತ್ತಿವೆ. ಸೂರ್ಯ ಬೆಳಗಿನಲ್ಲಿ ಎಲ್ಲ ಕಡೆ ಹರಡುವಂತೆ ಆಕೆ ಎಲ್ಲ ಶತ್ರುಗಳ ಗಡಿಗಳನ್ನು ಮೀರಿ , ತನ್ನ ಸೋದರಿಯರನ್ನು ದಾಟಿ ವ್ಯಾಪಿಸಿದ್ದಾಳೆ. ಏಳು ಸೋದರಿಯರಲ್ಲಿ ಆಕೆ ಎಲ್ಲರಿಗಿಂತ ನಮಗೆ ಪ್ರಿಯಳು. ಆಕೆ ನಮ್ಮ ಸ್ತುತಿಗೆ ಪಾತ್ರಳು. ಭೂಮಿಯನ್ನು ವ್ಯಾಪಿಸಿರುವ ಸರಸ್ವತಿಯೇ , ವಿಶಾಲ ಪ್ರದೇಶದಲ್ಲಿರುವವಳೇ ನಮ್ಮನ್ನು ರಕ್ಷಿಸು. ಸಪ್ತ ಸೋದರಿಯರನ್ನು ಹೊಂದಿರುವವಳೇ, ಮೂರು ಆಕರಗಳಿಂದ ಉಗಮಿಸಿದವಳೇ , ಐದು ಕುಲಗಳಿಗೆ ಸಂಪತ್ತನ್ನು ನೀಡಿದವಳಾದ ನಿನ್ನನ್ನು ಪ್ರತಿಯೊಂದು ಕಾರ್ಯಕ್ಕೆ ಅಹ್ವಾನಿಸುತ್ತೇವೆ. ತಾಯಿ ಸರಸ್ವತಿಯೇ , ವೈಭವದ ಸಂಪತ್ತಿನೆಡೆಗೆ ನಮಗೆ ದಾರಿ ತೋರು. ನಿನ್ನ ಹಾಲನ್ನು ನಮಗೆ ನಿರಾಕರಿಸದಿರು, ನಮ್ಮನ್ನು ದೂರ ತಳ್ಳದಿರು , ನಮ್ಮ ಸನಿಹ ಮತ್ತು ವಿಧೇಯತೆಯನ್ನು ಒಪ್ಪು. ನಾವು ನಿನ್ನನ್ನು ತೊರೆದು ದೂರದ ಪ್ರದೇಶಕ್ಕೆ ಹೋಗದಂತಾಗಲಿ. (6/61/1-14) ಭಾರತಿ ತನ್ನ ಸೋದರಿಯರೊಂದಿಗೆ , ಇಳಾ ದೇವತೆಗಳೊಂದಿಗೆ , ಅಗ್ನಿ ಮರ್ತ್ಯರೊಂದಿಗೆ , ಸರಸ್ವತಿ ತನ್ನೆಲ್ಲ ತೊರೆಗಳೊಂದಿಗೆ ಈ ಹುಲ್ಲುಹಾಸಿಗೆ ಬರಲಿ. ಈ ಮೂರು ದೇವಿಯರು ಆಸೀನರಾಗಲಿ (ಋ.ವೇ. 7/2/8) ಭೋರ್ಗರೆಯುತ್ತ ಸಾಗಿ ಬರುವವಳೇ , ಕೀರ್ತಿವಂತಳೇ , ಏಳನೆಯವಳೇ, ನೆರೆಗಳ ತಾಯಿ ಸರಸ್ವತಿಯೇ , ಯಥೇಚ್ಛ ಹಾಲು ಹರಿಸುವವಳೇ , ತಿಳಿನೀರಿನ ತೊರೆಗಳನ್ನು ಉಳ್ಳವಳೇ , ಉಕ್ಕುತ್ತ ನೀರಿನಿಂದ ತುಂಬಿ ಹರಿಯುತ್ತಿರುವವಳೇ ನಮ್ಮನ್ನು ಕರುಣಿಸು. (ಋ.ವೇ 7/36/6) , ಈ ಸರಸ್ವತಿ ನೆರೆಗೆಳಿಗೆ ಆಶ್ರಯ ನೀಡುತ್ತಾ ಬರುತ್ತಾಳೆ. ರಥದ ಮೇಲೆ ಗಾಂಭೀರ್ಯದಿಂದ ಸಾಗುವಂತೆ ಎಲ್ಲ ನದಿಗಳನ್ನು ಮೀರಿ ಹರಿಯುತ್ತಾಳೆ. ಪರ್ವತದಿಂದ ಸಮುದ್ರದವರೆಗೆ ತಿಳಿಯಾಗಿ ಹರಿಯುವ ಆಕೆ ಸಂಪತ್ತು ಮತ್ತು ಜೀವಿಗಳ ಅಸ್ತಿತ್ತ್ವಕ್ಕಾಗಿ ನಮಗೆ ಓಗೊಟ್ಟವಳು , ನಹುಷನಿಗೆ ಹಾಲು , ತುಪ್ಪದ ಹೊಳೆ ಹರಿಸಿದಳು. ಈ ಪವಿತ್ರ ಸರಸ್ವತಿ ನಮ್ಮ ಪ್ರಾರ್ಥನೆ ಮತ್ತು ಬಲಿಗಳಿಂದ ಸಂತುಷ್ಟಳಾಗಿ ನಮ್ಮ ಹೊಗಳಿಕೆ ಕೇಳಿಸಿಕೊಳ್ಳಲಿ , ಮಂಡಿಯೂರಿ ಕುಳಿತು ಗೌರವದಿಂದ ನಾವು ಬೇಡಿದಾಗ , ತನ್ನ ಪ್ರೀತಿಪಾತ್ರರ ಮೇಲೆ ಅನುಕಂಪವುಳ್ಳ ಆಕೆ ಸಂಪತ್ತನ್ನು ಕರುಣಿಸಲಿ. ಓ ಸರಸ್ವತಿಯೇ ಪೂಜ್ಯಭಾವದಿಂದ ಮಾಡಿದ ಈ ನಿವೇದನೆಗಳನ್ನು , ನಮ್ಮ ಸ್ತುತಿಗಳನ್ನು ಸ್ವೀಕರಿಸು. ನಿನ್ನ ಆಶ್ರಯದಲ್ಲಿ ನಮ್ಮನ್ನು ರಕ್ಷಿಸು. ನೆರಳಿಗಾಗಿ ಮರದತ್ತ ಸಾಗುವಂತೆ ನಿನ್ನತ್ತ ನಾವು ಬರುತ್ತೇವೆ. ಓ ಸರಸ್ವತಿಯೇ ಆಶೀರ್ವದಿಸು. ನಿನಗಾಗಿಯೇ ವಶಿಷ್ಟ ಪವಿತ್ರ ಬಾಗಿಲುಗಳನ್ನು ತೆರೆದಿದ್ದಾನೆ. ಬೆಳಗು ಸರಸ್ವತಿಯೇ , ನಿನ್ನನ್ನು ಹೊಗಳುವಾತನಿಗೆ ಬಲ ನೀಡು. ನಿನ್ನ ಆಶೀರ್ವಾದಗಳೊಂದಿಗ ನಮ್ಮನ್ನು ಎಂದಿಗೂ ಕಾಪಾಡು. (ಋ,ವೇ 7/95/1-6) ಎಲ್ಲ ದೊಡ್ದ ನದಿಗಳು ಸಿಂಧು, ಸರಸ್ವತಿ , ಸರಯು ಸೇರಿ ದೊಡ್ದ ಅಲೆಗಳೊಂದಿಗೆ ತಮ್ಮ ನೆರವಿನೊಂದಿಗೆ ಇಲ್ಲಿಗೆ ಬರಲಿ , ನೆರೆಗಳ ತಾಯಂದಿರೇ ಎಲ್ಲರಿಗೆ ಜೀವ ತುಂಬುತ್ತ , ಕೆನೆಭರಿತ ಸಮೃದ್ಧ ನೀರಿನೊಂದಿಗೆ ನಮ್ಮಲಿಗೆ ಬನ್ನಿರಿ. (ಋ.ವೇ 10-64-9) ‘ಓ ಗಂಗಾ , ಯಮುನಾ , ಓ ಶುತದ್ರಿ , ಪರುಷ್ಣಿ ಹಾಗೂ ಸರಸ್ವತಿಯರೇ ಜೊತೆಗೆ ಅಸಿಕ್ನಿ , ವಿತಸ್ತ , ಓ ಮರುದ್ವ್ರಧ , ಸುಸೊಮನೊಂದಿಗೆ ಓ ಆರ್ಜಿಕಿಯ ನನ್ನ ಕರೆ ಕೇಳಿರಿ. ಹರಿಯಲು ಮೊದಲು ಅನುವಾಗಿರುವ ತೃಷ್ಟಮ , ರಾಸ ,ಶುಸತೃ , ಶ್ವೇತ್ಯ ಬನ್ನಿರಿ . ಕುಭಾ, ಸಿಂಧು , ಮೆಹತ್ನು, ಕೃಮು ಹಾಗೂ ಗೋಮತಿಯರೇ ನಿಮ್ಮ ಮಾರ್ಗ ನೀವಾಗಿ ಹುಡುಕುವಿರಿ. ಚುರುಕಿನಲ್ಲಿ ಚುರುಕಿನವಳಾದ ಸಿಂಧೂ ಅಡೆತಡೆಯಿಲ್ಲದ ಹೆಣ್ಣು ಕುದುರೆಯಂತೆ ಮಿಂಚುತ್ತ ಗಾಂಭೀರ್ಯದಿಂದ ಬಿಳಿ ನೊರೆ ಎಬ್ಬಿಸುತ್ತ ತನ್ನ ಅಪಾರ ಜಲರಾಶಿಯೊಂದಿಗೆ ಸಾಗುತ್ತಾಳೆ. ಒಳ್ಳೆಯ ಕುದುರೆ , ರಥ , ಬಟ್ಟೆ , ಬಂಗಾರವಿರುವ ಸುಸಂಸ್ಕೃತಳಾದ ಆಕೆ ಸಂಪತ್ತಿನ ಆಗರ. ಶಿಲಮಾವತಿ , ತರುಣಿಯಾದ ಊರ್ಣವತಿಯರಿಗೆ ಸಂಪತ್ತಿನ ಭಂಡಾರಗಳನ್ನು ವಿನಿಯೋಜಿಸುತ್ತಾರೆ. ಸಿಂಧೂ ಹಗುರವಾಗಿ ಸಾಗುವ ರಥದ ನೊಗಕ್ಕೆ ಕುದುರೆಗಳನ್ನು ಹೂಡಿದ್ದಾಳೆ. ಈ ರಥದಿಂದ ಈ ಕದನದಲ್ಲಿ ಆಕೆಗೆ ಸಂಪದ್ಭರಿತ ಕೊಳ್ಳೆ ಸಿಗಲಿ. ಹರಿಯುತ್ತಿರುವಂತೆ ಘರ್ಜಿಸುವ ಯಾವುದೇ ತಡೆಯಿಲ್ಲದ ಆಕೆಯ ವೈಭವವನ್ನು ನಾನು ಹೊಗಳುತ್ತೇನೆ. (ಋ.ವೇ10-75-5) [1] ಋಗ್ವೇದದಲ್ಲಿ ಸಿಂಧೂ , ಸರಸ್ವತಿ , ವಿತಸ್ತ (ಝೀಲಂ) , ಅಸಿಕ್ನಿ (ಚೀನಾಬ್) , ಪರುಷ್ಣಿ (ರಾವಿ) , ವಿಪಾಸ (ಬಿಯಾಸ್) , ಶುತದ್ರಿ (ಸಟ್ಲೆಜ್) , ಗಂಗಾ , ಯಮುನಾ , ಮರುದ್ವ್ರಧ (ಜಮ್ಮು-ಕಾಶ್ಮೀರ) , ಸುಶೋಮ (ರಾವಲ್ಪಿಂಡಿ-ಪಾಕಿಸ್ತಾನ), ಆರ್ಜಿಕಿಯ , ರಸ , ಕುಭಾ (ಕಾಬೂಲ್-ಅಪಘಾನಿಸ್ತಾನ) , ಮೆಹತ್ನು , ಕೃಮು (ಕುಕ್ರಂ) , ಸುವಾಸ್ತು (ಸ್ವಾತ್-ಅಪಘಾನಿಸ್ತಾನ) , ಗೋಮತಿ (ಗೋಮಲ್-ಅಪಘಾನಿಸ್ತಾನ) ನದಿಗಳ ಉಲ್ಲೇಖಗಳಿವೆ. ಇವುಗಳಲ್ಲಿ ಸಿಂಧೂ , ವಿತಸ್ತ , ಅಸಿಕ್ನಿ , ಪರುಷ್ಣಿ ,ವಿಪಾಸ , ಶುತದ್ರಿ ಸರಸ್ವತಿಗಳನ್ನು ಸಪ್ತ ಸಿಂಧುಗಳೆಂದು ಕರೆಯಲಾಗಿದೆ. ಇನ್ನುಳಿದ ನದಿಗಳಲ್ಲಿ ಕೆಲವನ್ನು ಗುರುತಿಸಬಹುದಾದರೆ ಉಳಿದವು ಯಾವುವೆಂದು ಸ್ಪಷ್ಟವಾಗಿ ಗುರುತಿಸಲು ಆಗುವುದಿಲ್ಲ. ಋಗ್ವೇದದ ಭೌಗೋಳಿಕ ವ್ಯಾಪ್ತಿ ಬಹುತೇಕ ಸಪ್ತಸಿಂದುವಿಗೆ ಸೇರಿರುವುದು ಸ್ಪಷ್ಟ. (ಚಿತ್ರ : ವಾಯುವ್ಯ ಭಾರತದ ನದಿಗಳು : ಋಗ್ವೈದಿಕ ಮತ್ತ ಅವೆಸ್ತಾ) ಭೌಗೋಳಿಕವಾಗಿ ಈಗ ಅಸ್ತಿತ್ವದಲ್ಲಿರುವಂತೆಯೇ ಋಗ್ವೇದದಲ್ಲಿ ಸಪ್ತಸಿಂಧುಗಳನ್ನು ಹೆಸರಿಸಲಾಗಿದೆ. ಈ ನದಿಗಳಲ್ಲಿ ಸರಸ್ವತಿ ಹೊರತಾಗಿ ಉಳಿದೆಲ್ಲ ನದಿಗಳು ಇಂದಿಗೂ ಹರಿಯುತ್ತಿವೆ. ಎಂದರೆ ಋಗ್ವೇದದಲ್ಲಿನ ಸರಸ್ವತಿ ಆ ಕಾಲದಲ್ಲಿ ನಿಜವಾಗಿಯೂ ಅದು ಸೂಚಿತವಾದ ಭೌಗೊಳಿಕ ಸ್ಥಾನದಲ್ಲಿ ಹರಿಯುತ್ತಿದ್ದಿರಬೇಕು. ನಂತರದ ಕಾಲದಲ್ಲಿ ಕಣ್ಮರೆಯಾಗಿರಬೇಕು. ಋಗ್ವೇದ ಸರಸ್ವತಿಯ ಭೌಗೋಳಿಕ ಸ್ಥಾನವನ್ನು ಮತ್ತು ಅದು ಕಣ್ಮರೆಯಾಗಿರುವ ಅವಧಿಯನ್ನು ಕಂಡುಹಿಡಿದರೆ ಆರ್ಯರ ಮೂಲ ನೆಲೆಯ ಹುಡುಕಾಟಕ್ಕೆ ಒಂದು ಖಚಿತ ಮಾರ್ಗ ದಕ್ಕಿದಂತಾಗುತ್ತದೆ. ಋಗ್ವೇದದಲ್ಲಿ ಸೂಚಿತವಾಗಿರುವ ಸರಸ್ವತಿಯ ಭೌಗೋಳಿಕ ಸ್ಥಾನ ಹರಪ್ಪಾ-ಮೊಹೆಂಜದಾರೊ ನಗರಗಳಿದ್ದ ಪ್ರದೇಶದ ಪೂರ್ವ ಭಾಗಕ್ಕೆ – ಸಿಂಧೂ ನದಿಯ ಪೂರ್ವಕ್ಕೆ- ಸೇರುತ್ತದೆ. ಈ ಪೂರ್ವದ ಪ್ರದೇಶದಲ್ಲಿ ಸಾವಿರಾರು ವಸತಿ ನೆಲೆಗಳು ಕಂಡಬಂದಿವೆ. ಇವು ಋಗ್ವೇದದಲ್ಲಿರುವ ಸರಸ್ವತಿ ನದಿ ತೀರದ ಮೇಲಿನ ನೆಲೆಗಳಾಗಿರುವ ಸಾಧ್ಯತೆಗಳಿವೆ. ಹರಪ್ಪಾ-ಮೊಹೆಂಜದಾರೊಗಳ ನಗರ ಸಂಸ್ಕೃತಿ ಪ್ರಬುದ್ಧ ಹಂತ ತಲುಪಿ , ಪ್ರ.ಶ.ಪೂ1900 ರ ವೇಳೆಗೆ ಅವನತಿಯತ್ತ ಸಾಗಿ, ಜನ ಅಲ್ಲಿನ ನೆಲೆಗಳನ್ನು ತೊರೆದು ಹೊರಕ್ಕೆ ವಲಸೆ ಹೋಗಿರುವುದು ಇಂಗಾಲ-14 ಹಾಗೂ ಇನ್ನಿತರ ಪುರಾತತ್ತ್ವ ಶೋಧನೆಗಳಿಂದ ದೃಢಪಟ್ಟಿದೆ. ನಗರಗಳ ಅವನತಿಯ ಕಾಲಕ್ಕೆ ಅಲ್ಲಿನ ನದಿಮೂಲಗಳು ಬತ್ತಿ ಹೋಗಿರುವುದು ಸ್ಪಷ್ಟ. ಋಗ್ವೇದದಿಂದ ಸರಸ್ವತಿ ತುಂಬಿ ಹರಿಯುತ್ತಿದ್ದ , ಭೋರ್ಗರೆಯುತ್ತಿದ್ದ ನದಿಯೆಂದು ತಿಳಿದುಬರುತ್ತದೆ. ಬ್ರಾಹ್ಮಣ ಹಾಗೂ ಸೂತ್ರಗಳು ಸರ್ವಋತು ಸರಸ್ವತಿಯನ್ನು ವರ್ಣಿಸುತ್ತವೆ. ಸರಸ್ವತಿ ಪ್ರ.ಶ.ಪೂ 1900ಕ್ಕಿಂತ ಮೊದಲೇ ಬತ್ತಿಹೋಯಿತೆಂದು ತಿಳಿದಿದೆ. ಆದ್ದರಿಂದ ಬ್ರಾಹ್ಮಣ ಸೂತ್ರಗಳ ಕಾಲ ಪ್ರ.ಶ.ಪೂ 1900ಕ್ಕಿಂತ ಹಿಂದಿನದಾಗಿರಬೇಕು. ವೇದಗಳು ಇವುಗಳಿಗಿಂತ ಹಿಂದಿನವು . ಆದ್ದರಿಂದ ಸರಸ್ವತಿ ಭೋರ್ಗರೆಯುತ್ತಿದ್ದ ಕಾಲ ಸೈಂಧವ ಸಂಸ್ಕೃತಿಗಿಂತ ಹಿಂದಿನದಾಗಿರಬೇಕು. ಈ ಅಂಶವನ್ನು ಪರಿಗಣಿಸಿದರೆ ಋಗ್ವೇದದ ಕಾಲ ಪ್ರ.ಶ.ಪೂ1900ಕ್ಕಿಂತ ಹಿಂದಕ್ಕೆ ಸರಿಯಬೇಕು . ಆಗ ಭಾಷೆಗಳ ಸಾಮ್ಯತೆಯ ಆಧಾರದ ಮೇಲೆ ಪ್ರ.ಶ.ಪೂ 1500ರ ಅವಧಿಯಲ್ಲಿ ಆರ್ಯರು ವಾಯುವ್ಯ ಗಡಿಗಳ ಮೂಲಕ ಸಪ್ತಸಿಂಧೂವನ್ನು ಪ್ರವೇಶಿಸಿದರು , ಪ್ರ,ಶ.ಪೂ 1300 ರ ಸುಮಾರಿಗೆ ಅವರು ಋಗ್ವೇದದ ಮಂತ್ರಗಳನ್ನು ರಚಿಸಿದರೆಂಬ ವಾದ ತಪ್ಪಾಗುತ್ತದೆ. ಪಾಶ್ಚಾತ್ಯ ವಿದ್ವಾಂಸರು ನಿರ್ಧರಿಸಿದ್ದಕ್ಕಿಂತಲೂ ಋಗ್ವೇದದ ಕಾಲ ಪ್ರಾಚೀನತೆಯತ್ತ ಸಾಗಿ ಅವರ ಕಾಲ ಹರಪ್ಪಾ-ಮೊಹೆಂಜದಾರೊಗಳ ನಗರ ಸಂಸ್ಕೃತಿಯ ಹಿನ್ನೆಲೆಯಾಗಿ ಕಾಣುತ್ತದೆ. ಇದರ ಆಧಾರದ ಮೇಲೆ ಋಗ್ವೈದಿಕರೇ ಸೈಂಧವ ಸಂಸ್ಕೃತಿಯ ಪ್ರವರ್ತಕರು, ಅದಕ್ಕೆ ಸರಸ್ವತಿಯೇ ಪ್ರಮಾಣ ಎಂಬ ವಾದವನ್ನು ಮುಂದೊಡ್ದಲಾಗಿದೆ. ಹೊರನೋಟಕ್ಕೆ ಇದು ನಿಜವೆನಿಸಿದರೂ ಒಳಹೊಕ್ಕು ನೋಡಿದಂತೆ ಬೇರೆಯದೇ ಆದ ಎಡರು-ತೊಡರುಗಳು ಎದುರಾಗುತ್ತವೆ. ಇವುಗಳ ಸ್ಪಷ್ಟತೆಗಾಗಿ ನಾವು ಸರಸ್ವತಿ ನದಿಯನ್ನು ಹುಡುಕುವ ಪ್ರಯತ್ನಗಳನ್ನು ಮೊದಲು ತಿಳಿಯಬೇಕಾಗುತ್ತದೆ. ಋಗ್ವೇದದ ಸರಸ್ವತಿಯನ್ನು ಹುಡುಕುವ ಮೊದಲು ಭಾರತದ ವಾಯುವ್ಯ ಪ್ರದೇಶದಲ್ಲಿ ಈಗಿರುವ ನದಿಗಳ ಸ್ಥಿತಿ-ಗತಿಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ಋಗ್ವೇದದ ಸಿಂಧೂನದಿ ಪಾರಹಿಮಾಲಯಗಳ ಕೆಳಭಾಗದಲ್ಲಿ ಉಗಮಗೊಂಡು ದಕ್ಷಿಣದತ್ತ ಹರಿದು ಅರಬ್ಬಿ ಸಮುದ್ರವನ್ನು ಸೇರಿಕೊಳ್ಳುತ್ತದೆ. ವಿತಸ್ತ (ಝೀಲಂ) ಮತ್ತು ಅಸಿಕ್ನಿ (ಚೀನಾಬ್) ನದಿಗಳು ಸಿಂಧೂನದಿಯ ಉಗಮದ ಸಮಾಂತರ ಪ್ರದೇಶದಲ್ಲಿ ಹುಟ್ಟಿ , ಮುಂದೆ ಸಂಗಮಿಸಿ ಒಂದೇ ನದಿಯಾಗಿ ದಕ್ಷಿಣದತ್ತ ಸಾಗುತ್ತವೆ. ಕೂಡಿ ಪಶ್ಚಿಮದತ್ತ ಸಾಗುವ ಈ ನದಿಗಳನ್ನು ಕೆಳಭಾಗದಲ್ಲಿ ಪರುಷ್ಣಿ (ರಾವಿ) ಸೇರುತ್ತದೆ. ಇದರಂತೆಯೇ ವಿಪಾಸ (ಬಿಯಾಸ್) ಮತ್ತು ಶುತದ್ರಿ (ಸಟ್ಲೆಜ್) ನದಿಗಳು ಸೇರಿ ದಕ್ಷಿಣಕ್ಕೆ ಹರಿದು ಮೊದಲೇ ಸಂಗಮಿಸಿದ್ದ ವಿತಸ್ತ (ಝೀಲಂ) , ಅಸಿಕ್ನಿ (ಚೀನಾಬ್) , ಪರುಷ್ಣಿ (ರಾವಿ) ನದಿಗಳ ಒಟ್ಟು ಹರಿವಿನೊಂದಿಗೆ ಒಂದಾಗುತ್ತವೆ. ಈ ಐದು ನದಿಗಳು ಸಿಂಧೂ ನದಿಯ ಉಪನದಿಗಳಾಗಿವೆ. ಋಗ್ವೇದದ ಸಪ್ತ ಸಿಂದುಗಳಲ್ಲಿ 6 ನದಿಗಳು ಒಂದೇ ಸಮಗ್ರ ಜಲಾನಯನ ಹೊಂದಿವೆ. ಇನ್ನು ಉಳಿದಿರುವುದು ಸರಸ್ವತಿ ಮಾತ್ರ. ಈಗ ಸರಸ್ವತಿ ಹೆಸರಿನ ಯಾವ ದೊಡ್ದ ನದಿಯೂ ಇಲ್ಲ. ಅದರ ಬದಲಿಗೆ ಘಾಗರ್-ಹಕ್ರಾ (ಘಾಗರ್ ನದಿಯ ಕೆಳಭಾಗವನ್ನು ರಾಜಸ್ಥಾನದಲ್ಲಿ ಹಕ್ರಾ ಎಂದು ಕರೆಯುತ್ತಾರೆ) ಹೆಸರಿನ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಸಾಧಾರಣ ಗಾತ್ರದ ನದಿಯಿದೆ. ಈ ನದಿ ರಾಜಸ್ಥಾನದಲ್ಲಿ ಥಾರ್ ಮರುಭೂಮಿಯನ್ನು ಪ್ರವೇಶಿಸಿ ಮರಳಿನಲ್ಲಿ ಕಣ್ಮರೆಯಾಗುತ್ತದೆ. ಇದೇ ನದಿಯ ಹರಿಗಾಲುವೆಗಳು ನೆಲದಡಿಯೂ ಸಾಗಿವೆ. ಭಾರತದ ಗಡಿಯಾಚೆಗಿರುವ ಮರುಭೂಮಿಯನ್ನು ಖೊಲಿಸ್ತಾನ್ ಮರುಭೂಮಿಯೆಂದು ಕರೆಯಲಾಗುತ್ತದೆ. ಖೊಲಿಸ್ತಾನ್ ಮರುಭೂಮಿಯಲ್ಲಿ ಹರಿಯುವ ಘಾಗರ್-ಹಕ್ರಾ ನದಿಯ ಮುಂದುವರಿಕೆಯನ್ನು ನಾರಾ ಎಂದು ಕರೆಯಲಾಗುತ್ತದೆ. ನಾರಾ ನದಿ ಅರಬ್ಬಿ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. ಋಗ್ವೈದಿಕ ಕಾಲದ ನದಿಗಳಲ್ಲಿ ಪತ್ತೆಯಾಗದಿರುವುದು ಸರಸ್ವತಿಯೊಂದೇ. ಆದರ ಬದಲು ಈಗ ಘಾಗರ್-ಹಕ್ರಾ-ನಾರಾ ನದಿ ಅಸ್ತಿತ್ವದಲ್ಲಿದೆ. ಇದು ಸರಸ್ವತಿ ಏಕಾಗಿರಬಾರದು ಎಂಬ ಸಂಶಯ ಸಹಜವಾಗಿ ಮೂಡುತ್ತದೆ. [1] ಋಗ್ವೇದಲ್ಲಿ ಹೇಳಲಾಗಿರುವ ಏಳು ನದಿಗಳು-ಸಪ್ತ ಸಿಂಧವಃ- ಯಾವುವು ಎನ್ನುವ ಬಗ್ಗೆ ಒಮ್ಮತವಿಲ್ಲ. ಮ್ಯಾಕ್ಸ್ ಮುಲ್ಲರ್ ಸಿಂಧೂ,ಸರಸ್ವತಿ, ವಿತಸ್ತಾ , ಅಸಿಕ್ನಿ, ಪರುಷ್ಣಿ , ವಿಪಾಶ , ಶುತದ್ರಿಗಳನ್ನು ಪರಿಗಣಿಸಿದರೆ , ಲುಡ್ವಿಗ್ , ಲಾಸನ್ , ವಿಟ್ನಿ ಸರಸ್ವತಿಯ ಬದಲು ಕುಭಾವನ್ನು ಪರಿಗಣಿಸಿ ಸಪ್ತ ಸಿಂಧೂಗಳಲ್ಲಿ ಆಕ್ಸಸ್ ಸೇರಿದ್ದಿತು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ನದಿ ಸೂಕ್ತದಲ್ಲಿ (ಋ.ವೇ10/75) ವಿಪಾಶ ನದಿಯನ್ನು ಬಿಟ್ಟು ಅಸಿಕ್ನಿ ಮತ್ತು ವಿತಸ್ತಾಗಳ ನಡುವೆ ಮರುಧ್ವ್ರಧಾ ನದಿಯನ್ನು ಹೆಸರಿಸಲಾಗಿದೆ. ವಿಪಾಶ ನದಿ ಋಗ್ವೇದದಲ್ಲಿ ಎರಡು ಋಚೆಗಳಲ್ಲಿ ಮಾತ್ರ ಉಲ್ಲೇಖಿಸಲಾಗಿದೆ. ಆದ್ದರಿಂದ ಸಪ್ತ ಸಿಂಧುಗಳು ಯಾವುವು ಎನ್ನುವ ಸಂಶಯ ಉಳಿಯುತ್ತದೆ. ಯಾಸ್ಕ ನದಿ ಸ್ತುತಿಯಲ್ಲಿ ವಿತಸ್ತಾ ನಂತರ ಬಂದಿರುವ ಅರ್ಜಿಕಿಯ ಮತ್ತು ಸುಷೋಮ ನದಿಗಳನ್ನು ವಿಪಾಶ ಮತ್ತು ಸಿಂಧೂ ಎಂದು ಗುರುತಿಸಿದ್ದಾನೆ. ಇಂತಹ ಸಂಶಯ18 ನೇ ಶತಮಾನದಿಂದಲೇ ಕೆಲವರನ್ನು ಕಾಡಿದ್ದಿತು. ಶಿವಾಲಿಕ ಪರ್ವತ ಶ್ರೇಣಿಯಲ್ಲಿ ಉಗಮಿಸುವ ಘಾಗರ್ ನದಿಯ ಒಂದು ಉಪನದಿಯ ಹೆಸರು ಸರಸ್ವತಿ ಎನ್ನುವುದನ್ನು ಗುರುತಿಸಿದ್ದ ಬ್ರಿಟಿಷರು ಪ್ರ,ಶ 1788 ರಲ್ಲಿ ಅದನ್ನು ತಮ್ಮ ನಕಾಶೆಗಳಲ್ಲಿ ತೋರಿಸಿದ್ದರು. ಪ್ರ,ಶ 1855ರಲ್ಲಿ ಘಾಗರ್-ಹಕ್ರಾ ನದಿಯ ಪ್ರದೇಶದಲ್ಲಿ ಸಂಚರಿಸಿದ್ದ ಫ್ರೆಂಚ್ ಭೂವಿಜ್ಞಾನಿ ವಿವಿಯೆನ್ ಡೆ ಸೇಂಟ್ ಮಾರ್ಟಿನ್ ಇದು ಋಗ್ವೇದ ಕಾಲದ ಸರಸ್ವತಿಯಾಗಿರಬೇಕೆಂದು ಸೂಚಿಸಿದ್ದನು. ಪ್ರ.ಶ 1893ರಲ್ಲಿ ಬ್ರಿಟಿಷ್ ಭೂವಿಜ್ಞಾನಿ ಸಿ.ಎಫ್. ಓಲ್ಡ್’ಹ್ಯಾಂ ರಾಜಸ್ಥಾನದಲ್ಲಿರುವ ಬತ್ತಿ ಹೋದ ವಿಶಾಲವಾದ ಘಾಗರ್-ಹಕ್ರಾ ನದಿಯ ದಡದ ಮೇಲೆ ಕುದುರೆ ಹತ್ತಿ ಸಾಗಿದನು. ಹಾಗೆ ಸಾಗಿದಾಗ ಹಲವಾರು ಅಂಶಗಳನ್ನು ಗಮನಿಸಿದ್ದನು. ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಘಾಗರ್-ಹಕ್ರಾ ಮಾನ್ಸೂನ್ ವೇಳೆಯಲ್ಲಿ ತುಂಬಿ ಹರಿಯುತ್ತಿರುವಾಗಲೂ ಸಾಧಾರಣ ನದಿಯಾಗಿದ್ದಿತು. ಆದರೆ ಕೆಲವು ಕಡೆ ಈ ನದಿಯ ಪಾತ್ರ 3 ರಿಂದ 5 ಕಿ.ಮೀ ಅಗಲ ಹರಡಿದ್ದಿತು. ಹಕ್ರಾ ನದಿಯ ಕೆಳಭಾಗ ಹಾಗೂ ಸಿಂಧೂ ನದಿಯ ನಡುವಿನ ಪ್ರದೇಶದಲ್ಲಿ ಮರಳಿನಿಂದ ಆವೃತವಾದ ವಿಶಾಲ ಮರಳು ಪ್ರದೇಶವಿದೆ. ದೇದಾವರ್ ಕೋಟೆಯ ಸನಿಹ, ಪಾಕಿಸ್ತಾನದ ಖಾನಪುರ್’ನ ಪೂರ್ವಕ್ಕೆ ಮರಳು ದಿಣ್ಣೆಗಳಿವೆ. ಹಿಂದೆಂದೋ ಈ ನದಿ ದೊಡ್ಡದಾಗಿರದ ಹೊರತು, ಇಂತಹ ನದಿ ಪಾತ್ರ ಇರಲು ಸಾಧ್ಯವಿಲ್ಲ ಎಂದು ಊಹಿಸಿದ ಓಲ್ಡ್‘ಹ್ಯಾಂ ಋಗ್ವೇದದಲ್ಲಿರುವ ಸರಸ್ವತಿಯೇ ಇದಾಗಿರಬಹುದೆಂದು ಸೂಚಿಸಿದನು. ಪ್ರ.ಶ 1917ರಲ್ಲಿ ಖ್ಯಾತ ಪುರಾತತ್ತ್ವ ಶಾಸ್ತ್ರಜ್ಞ ಮತ್ತು ಸಂಸ್ಕೃತ ಪಂಡಿತ ಮಾರ್ಕ್ ಔರೆಲ್’ಸ್ಟೀನ್ ’ರಿವರ್ ನೇಮ್ಸ್ ಇನ್ ಋಗ್ವೇದ “ ಲೇಖನದಲ್ಲಿ ಉಳಿದ ನದಿಗಳೊಂದಿಗೆ ಸರಸ್ವತಿಯ ಸ್ಥಾನವನ್ನು ಇದೇ ಜಾಗದಲ್ಲಿ ಗುರುತಿಸಿ ಶುತದ್ರಿ (ಸಟ್ಲೇಜ್) ಮತ್ತು ಯಮುನಾ ಒಂದು ಕಾಲದಲ್ಲಿ ಘಾಗರ್-ಹಕ್ರಾ ನದಿಯ ಉಪನದಿಗಳಾಗಿರಬಹುದೆಂದು ಸೂಚಿಸಿದ್ದನು. ಋಗ್ವೇದದಲ್ಲಿರುವ ಸರಸ್ವತಿಯ ಸ್ಥಾನ ಈಗಿರುವ ಘಾಗರ್-ಹಕ್ರಾ ನದಿಗೆ ಹೊಂದಾಣಿಕೆಯಾಗುತ್ತದೆ ಎಂದು ತಿಳಿಯುತ್ತಿದ್ದಂತೆಯೇ ಪ್ರಾಚೀನ ಸರಸ್ವತಿಯ ಚಿತ್ರಣವನ್ನು ಹಲವರು ಅಂದಾಜಿಸಿದರು. ಈ ಅಂದಾಜಿನಂತೆ ಘಾಗರ್ ನದಿ ಪಾತ್ರ ಕೆಲವು ಕಡೆ 3 ರಿಂದ 5 ಕಿ.ಮೀ ಅಗಲವಿದೆ. ಈ ಹಿಂದೆ ನಿಜವಾಗಿಯೂ ಭಾರಿ ನದಿಯಾಗಿದ್ದ ಸರಸ್ವತಿಯ ಕುರುಹುಗಳಿವು. ಸರಸ್ವತಿ ಕೈಲಾಸ-ಮಾನಸ ಸರೋವರದ ‘ಪ್ಲಾಕ್ಷ ಪ್ರಸವಣ’ ಎನ್ನುವ ಹಿಮನದಿಗಳಲ್ಲಿ ಉಗಮಿಸಿ , ಶಿವಾಲಿಕ ಪರ್ವತ ಸ್ತೋಮಗಳ ಅಡಿಯ ತಪ್ಪಲಿನ ಪ್ರದೇಶಗಳಲ್ಲಿ ಬಯಲನ್ನು ಸೇರಿ, ಘಾಗರ್ ಕಣಿವೆಯ ಮೂಲಕ ಹರಿಯಾಣದಲ್ಲಿ ಹರಿಯುತ್ತಿದ್ದಿತು. ಅದಕ್ಕೆ ಕೈಲಾಸ ಪರ್ವತದಲ್ಲಿ ಉಗಮಿಸುವ ಶುತದ್ರಿ (ಸಟ್ಲೆಜ್) ಶಿವಾಲಿಕ ಪರ್ವತ ಶ್ರೇಣಿಗಳಲ್ಲಿ ಉಗಮಿಸುವ ದೃಷ್ಟದ್ವತಿ ಹಾಗೂ ಈಗ ಗಂಗಾ ನದಿಯತ್ತ ಸಾಗುತ್ತಿರುವ ಯಮುನಾ ಉಪನದಿಗಳಾಗಿದ್ದವು. ಇವೆಲ್ಲ ನದಿಗಳ ನೀರಿನಿಂದ ತುಂಬಿ ತುಳುಕುತ್ತಿದ್ದ ಸರಸ್ವತಿ ರಾಜಸ್ಥಾನ ಪ್ರವೇಶಿಸಿ, ಹಕ್ರಾ ನದಿ ಸೇರಿ ಪಾಕಿಸ್ತಾನದ ಖೊಲಿಸ್ತಾನ್ ಮರುಭೂಮಿಯಲ್ಲಿ ಸಾಗಿ ನಾರಾ ಕಣಿವೆಯ ಮೂಲಕ ಕಛ್’ನ ರಣವನ್ನು ಸೇರಿ ಸಮುದ್ರ ಸೇರುತ್ತಿದ್ದಿತು ಎಂದು ಊಹಿಸಿದರು. ಪ್ರಾಚೀನ ಸರಸ್ವತಿಯ ಸ್ಥಾನ ಮತ್ತು ಅದು ಸಾಗಿದ ಮಾರ್ಗವನ್ನು ಅಂದಾಜಿಸಿದಂತೆ ಸುಲಭವಾಗಿ ಅದು ಎಂದು ಬತ್ತಿಹೋಯಿತೆಂದು ಊಹಿಸಲಾಗುವುದಿಲ್ಲ. ಈ ಪ್ರಶ್ನೆಗೆ ಉತ್ತರ ಹುಡುಕಲು ವಿದ್ವಾಂಸರು ಯತ್ನಿಸತೊಡಗಿ ಭೌಗೋಳಿಕ ಲಕ್ಷಣಗಳಲ್ಲಿ ಆದ ಬದಲಾವಣೆ , ನದಿಯ ಪಾತ್ರದಲ್ಲಿ ಆದ ವ್ಯತ್ಯಾಸಗಳನ್ನು ಪ್ರಾಚೀನ ಸಾಹಿತ್ಯ ಮತ್ತು , ಭೂವಿಜ್ಞಾನಗಳ ಮೂಲಕ ಗುರುತಿಸಲು ಯತ್ನಿಸತೊಡಗಿದರು. ಶುತದ್ರಿ (ಸಟ್ಲೆಜ್) ಮತ್ತು ಯಮುನಾ ಒಂದು ಕಾಲದಲ್ಲಿ ಸರಸ್ವತಿ ನದಿಯ ಉಪನದಿಗಳಾಗಿರಬಹುದೆಂಬ ಸೂಚನೆಯನ್ನು ಪರಿಗಣಿಸಿ ಸರಸ್ವತಿ ಹೆಸರಿನ ನದಿ ಘಾಗರ್-ಶುತದ್ರಿ(ಸಟ್ಲೆಜ್)-ಯಮುನಾ ನದಿಗಳ ಪ್ರದೇಶದಲ್ಲಿ ಎಲ್ಲಿಯಾದರೂ ತನ್ನ ಮೂಲ ಹೆಸರನ್ನು ಉಳಿಸಿಕೊಂಡಿದೆಯೇ ಎಂದು ಹುಡುಕಿದಾಗ ಸರಸ್ವತಿ ಹೆಸರಿನ 5 ನದಿಗಳು ಅಸ್ತಿತ್ವದಲ್ಲಿರುವುದು ಕಂಡು ಬಂದಿತು. ಅವುಗಳೆಂದರೆ (1) ಕಲ್ಕಾದಿಂದ ಪ್ರಾರಂಭಿಸಿ ರೂಪಾರ್’ಗಿಂತ ಮೊದಲು ಶುತದ್ರಿ (ಸಟ್ಲೆಜ್) ಸೇರುವ ಸಿರ್ಸಾ ಹೆಸರಿನ ನದಿ (2) ಪುಷ್ಕರದ ಮೇಲ್ಭಾಗದಲ್ಲಿ ಹರಿಯುವ ಲೂನಿ ನದಿಯನ್ನು ಸಹ ಸರಸ್ವತಿ ಎಂದು ಕರೆಯಲಾಗುತ್ತದೆ. (3) ಗುಜರಾತ್’ನಲ್ಲಿ ಅರಾವಳಿಯಿಂದ ಕಚ್’ನ ರಣದವರೆಗೆ ಹರಿಯುವ ಒಂದು ನದಿ. (4) ಗುಜರಾತ್ ಸೌರಾಷ್ಟ್ರದ ಪ್ರಭಾಸ ಪಟ್ಟಣದ ಬಳಿ ಇನ್ನೆರಡು ನದಿಗಳನ್ನು ಸೇರುವ ಕಿರುನದಿಗೆ ಸಹ ಸರಸ್ವತಿ ಎಂಬ ಹೆಸರಿದೆ. ಇದನ್ನು ಗಮನಿಸಿದಾಗ ಋಗ್ವೇದದ ಸರಸ್ವತಿ ಇವುಗಳಲ್ಲಿ ಯಾವುದಾಗಿದ್ದಿತು ? ಘಾಗರ್-ಹಕ್ರಾ ನದಿಯೇ ಸರಸ್ವತಿಯಾಗಿದ್ದರೆ ಅದನ್ನು ಬಿಟ್ಟು ಉಳಿದ ಇತರ ಸಣ್ಣ, ಪುಟ್ಟ ನದಿಗಳಿಗೆ ಸರಸ್ವತಿ ಎಂಬ ಹೆಸರು ಏಕೆ ಉಳಿಯಿತು ಎನ್ನುವ ಪ್ರಶ್ನೆಗಳು ಎದುರಾಗತ್ತಲೇ ಋಗ್ವೈದಿಕ ಸರಸ್ವತಿ ಯಾವುದು ? ಅದು ಎಂದು ಬತ್ತಿತು ಎನ್ನುವ ಮೂಲ ಪ್ರಶ್ನೆಗಳು ಮೊದಲಿನಂತೆಯೇ ಉಳಿದವು. ಘಾಗರ್-ಹಕ್ರಾ ನದಿಯೇ ಋಗ್ವೇದದ ಸರಸ್ವತಿಯೆಂದು ದೃಢವಾಗಿ ನಂಬಿದವರಿದ್ದರು. ಆದರೆ ಅದು ಏಕೆ , ಹೇಗೆ ಮತ್ತು ಎಂದು ಬತ್ತಿಹೋಯಿತೆಂದು ವಿವರಣೆ ನೀಡುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಅವರು ವೇದ ,ಪುರಾಣ , ಐತಿಹ್ಯಗಳ ರಾಮಾಯಣ, ಮಹಾಭಾರತ ಮುಂತಾದುವುಗಳ ಮೊರೆಹೊಕ್ಕರು. ಋಗ್ವೇದದ ಕಾಲದಲ್ಲಿ ಸರಸ್ವತಿ ಏಳು ಸೋದರಿಯರಲ್ಲಿ ಒಬ್ಬಳಾಗಿದ್ದಳು , ಯಜುರ್ವೇದದ ಕಾಲದಲ್ಲಿ ಸಪ್ತ ಸೋದರಿಯರ ಪರಿಕಲ್ಪನೆ ಮರೆಯಾಗಿ ಐದು ನದಿಗಳು ಉಳಿದಿದ್ದವು. ಯಜುರ್ವೇದ ದೃಷ್ಟದ್ವತಿ ,ಶತದ್ರು (ಶುತದ್ರಿ-ಸಟ್ಲೆಜ್)– ಚಂದ್ರಭಾಗ (ಚೀನಾಬ್) , ವಿಪಾಸ (ವ್ಯಾಸ) , ಇರಾವತಿ (ರಾವಿ) ಸರಸ್ವತಿಯನ್ನು ನದಿಯನ್ನು ಸೇರುತ್ತಿದ್ದವೆಂದು ತಿಳಿಸುತ್ತದೆ. ಈ ಐದು ನದಿಗಳನ್ನು ಸ್ಕಂದಪುರಾಣದಲ್ಲಿ ಹರಿಣಿ, ವಜ್ರನಿ ,ಹ್ಯುಂಕ್ ,ಕಪಿಲ, ಸರಸ್ವತಿ ಎಂದು ಕರೆಯಲಾಗಿದೆ. ನಂತರ ಕಾಲದ ಲಾಟ್ಯಾಯನ ಶ್ರೌತ ಸೂತ್ರ (ಲಾ.ಶೌ.ಸೂ 10/15/110/17/1,2,10,11) ಸರಸ್ವತಿ ಸದಾ ನೀರು ತುಂಬಿ ಹರಿಯುವ ನದಿಯೆಂದು ಹೇಳುತ್ತದೆ. ತಾಂಡ್ಯ ಬ್ರಾಹ್ಮಣ (25/1/0/10) ಸರಸ್ವತಿ ಉಗಮದಿಂದ ಬತ್ತುವ ಪ್ರದೇಶದವರೆಗೆ ಕುದುರೆಯ ಮೇಲೆ ಒಂದು ತಿಂಗಳ ಅವಧಿಯ ಪ್ರಮಾಣದಷ್ಟು ಉದ್ದವಿದೆ ಎನ್ನುತ್ತದೆ. ದಕ್ಷಿಣದಲ್ಲಿ ದೃಷ್ಟದ್ವತಿ ಪೂರ್ವದಲ್ಲಿ ಸಿಂಧೂ ನದಿಗಳನ್ನು ಗಡಿಯಾಗಿ ಹೊಂದಿದ ಪ್ರದೇಶವನ್ನು ಋಗ್ವೈದಿಕ ನಂತರ ಕಾಲದ ವೈದಿಕ ಮೂಲಗಳು ಬ್ರಹ್ಮಾವರ್ತ ಎಂದು ಗುರುತಿಸಿವೆ. ಮಹಾಭಾರತ ಒಂದು ಕಡೆ ಸರಸ್ವತಿಗೆ ಏಳು ಹೆಸರುಗಳಿರುವುದಾಗಿ ತಿಳಿಸುತ್ತದೆ. ಶಲ್ಯ ಪರ್ವದಲ್ಲಿ ಬಲರಾಮ ಸರಸ್ವತಿ ನದಿಯಗುಂಟ ದ್ವಾರಕದಿಂದ ಯುಮುನೋತ್ರಿಗೆ ಹೋದ ವಿವರಗಳಿವೆ. ಪುರಾಣಗಳ ಐತಿಹ್ಯದಂತೆ ಸರಸ್ವತಿ ತೀರದಲ್ಲಿ 1400 ತೀರ್ಧಕ್ಷೇತ್ರಗಳಿದ್ದವು. ಮಹಾಭಾರತದಲ್ಲಿ (ಮ.ಭಾ 3/80/118 , 9/36/1) ಸರಸ್ವತಿ ನದಿ ನಿಷಾಧ ಪ್ರದೇಶವನ್ನು ಪ್ರವೇಶಿಸಿದ ನಂತರ ಕೆಳಜಾತಿಯವರ ನೆಲೆ ಹೊಕ್ಕ ಜಿಗುಪ್ಸೆಯಿಂದ ಮರುಸ್ಥಳಿ ಎನ್ನುವಲ್ಲಿ ಅಂತರ್ಗತಳಾಗಿ ಹೂತ ಮರಳಿನ ಕೆಳಗೆ ಹರಿದು ನಂತರ ಮತ್ತೆ ಕಾಣಿಸಿಕೊಳ್ಳುವುದರಿಂದ ಆಕೆಗೆ ವಿನಾಶನ ಎಂಬ ಹೆಸರು ಇದೆಯೆಂದು ಹೇಳಲಾಗಿದೆ. ನಿಷಾಧರ ನೆಲೆ ದಾಟಿದ ನಂತರ ಮರಳಿ ಕಾಣಿಸಿಕೊಳ್ಳುವ ಸರಸ್ವತಿಯ ಕವಲುಗಳನ್ನು ಬ್ರಹ್ಮಸರ, ಜ್ಯೋತಿಸರ, ಕಾಳೇಸರ (ಹರಿಯಾಣ) ಕಟಸರ, ಪಾಂಡುಸರ, ರವಿಸರ (ರಾಜಸ್ಥಾನ) ಎಂದು ಕರೆಯಲಾಗುತ್ತಿದ್ದಿತು. ಮಹಾಭಾರತದಲ್ಲಿ ಮತ್ತೊಂದು ಕಡೆ (ಮ.ಭಾ 3/81/115) ಸರಸ್ವತಿಯ ದಕ್ಷಿಣಕ್ಕೆ ದೃಷ್ಟದ್ವತಿ, ಉತ್ತರಕ್ಕೆ ಕುರುಕ್ಷೇತ್ರ ಇದ್ದಿತೆಂದು ತಿಳಿಸುತ್ತದೆ. ಸರಸ್ವತಿ ನದಿಯನ್ನು ಪುರಾಣ ಹಾಗೂ ಪ್ರಾಚೀನ ಗ್ರಂಥಗಳಲ್ಲಿ ಮಾರ್ಕಂಡ , ಹಕ್ರ, ಸುಪ್ರಭಾ, ಕಾಂಚನಾಕ್ಷಿ, ವಿಶಾಲ, ಮನೋರಮಾ ಮುಂತಾದ ಹೆಸರಗಳಿಂದ ಕರೆಯಲಾಗಿದೆ. ಚ್ಯವನ , ಕಪಿಲ , ವಶಿಷ್ಟ , ಮಾರ್ಕಂಡೇಯ , ಯಾಜ್ಞವಲ್ಕ್ಯ , ವಿಶ್ವಾಮಿತ್ರ ಋಷಿಗಳು ಸರಸ್ವತಿ ತೀರದಲ್ಲಿದ್ದ ಚಂಡಿ , ಶ್ರಿಕೋಲಯತ್ಯ , ಪೃಧುದಾಕ, ಮಾರ್ಕಂಡ , ಜಾಗೇರಿ(ಬಿಕಾನೇರ್-ರಾಜಸ್ಥಾನ) , ವಿಪಾಶ ಹೆಸರಿನ ಸರಸ್ವತಿ ನದಿ ತೀರದ ಆಶ್ರಮಗಳಲ್ಲಿ ಇದ್ದರೆಂದು ಪುರಾಣಗಳು ತಿಳಿಸುತ್ತವೆ. ಸ್ಕಂದ ಪುರಾಣದ ಪ್ರಕಾರ ಸರಸ್ವತಿ ನದಿ ಬ್ರಹ್ಮನ ಕಮಂಡಲುವಿನಿಂದ ಉಗಮಗೊಂಡು (ಸ್ಕ.ಪು1/11/56,13/311) ಹಿಮಾಲಯದ ಪ್ಲಾಕ್ಷದಿಂದ ಇಳಿದು ಕೇದಾರದತ್ತ ಸಾಗಿ ಕೇದಾರದಲ್ಲಿ ಪಶ್ಚಿಮದತ್ತ ತಿರುಗಿ ಹರಿಯುತ್ತದೆ. ಪಾಪಭೂಮಿ ತಲುಪಿದಾಗ ಗುಪ್ತಗಾಮಿನಿಯಾಗಿ ನೆಲದೊಳಗೆ ಕ್ರಮಿಸಿ ನಂತರ ಮೇಲೆದ್ದು ಹರಿದು ಗಂಧರ್ವ ಕೂಪ ತಲುಪಿ ಇನ್ನು ಪಶ್ವಿಮಕ್ಕೆ ಮುಂದುವರೆದು ಭೂತೀಶ್ವರ , ರುದ್ರಕೋಟಿಗಳ ಮೂಲಕ ಸಾಗಿ ಶ್ರೀಕಂಠ ದೇಶ ಪ್ರದೇಶದಲ್ಲಿ ಹರಿದು (ಸ್ಥಾಣೇಶವರ ಇದರ ರಾಜಧಾನಿ) ಅಲ್ಲಿಂದ ಕುರುಕ್ಷೇತ್ರ, ವಿರಾಟನಗರ, ಗೋಪಿನಗರ, ದೇವಿಕ್ಷೇತ್ರಗಳನ್ನು ತಲುಪುತ್ತದೆ. ದೇವೀಕ್ಷೇತ್ರದಿಂದ ಪಶ್ಚಿಮಕ್ಕೆ ಸಾಗಿ ಖರ್ಜೂರವನದಲ್ಲಿ ನಂದಾ ಹೆಸರು ಹೊಂದುತ್ತದೆ. ಮಾರ್ಕಂಡಾಶ್ರಮ, ಅರ್ಬುದಾರಣ್ಯ, ವಟವನ, ವಂಶಸ್ತಂಭ , ಕಾಕಾತೀರ್ಥ, ಧಾರೇಶ್ವರ, ಪುಂಡಲೀಕ, ಮಾತೃತೀರ್ಥ, ಅನಾರಕ, ಸಂಗಮೇಶ್ವರ ಕೋಟೀಶ್ವರ, ಸಿದ್ದೇಶ್ವರಗಳನ್ನು ತಲುಪಿ ಅಲ್ಲಿಂದ ಪಶ್ಚಿಮಕ್ಕೆ ಸಾಗರದಲ್ಲಿ ಲೀನವಾಗುತ್ತಾಳೆ. ಈಕೆಯೇ ಪ್ರಾಚಿ ಸರಸ್ವತಿ, ಈಕೆಯೇ ಸಾವಿತ್ರಿ, ವೇದಮಾತಾ ಎಂದು ಹೇಳಲಾಗಿದೆ. (11) ಪುರಾಣ,ಐತಿಹ್ಯ,ಊಹೆಗಳಿಂದ ಒದಗಿಸಿದ ಈ ಸಾಕ್ಷ್ಯಗಳು ಯಾವುದೇ ನಿರ್ದಿಷ್ಟ ತೀರ್ಮಾನಗಳಿಗೆ ಬರಲು ನೆರವಾಗುವುದಿಲ್ಲವಾದುದರಿಂದ ಇಂತಹ ವಾದಗಳು ವಿದ್ವಾಂಸರ ಮನ್ನಣೆ ಗಳಿಸುವಲ್ಲಿ ಸೋತವು. ಪ್ರ,ಶ 1970ರ ನಂತರ ವಿಜ್ಞಾನ-ತಂತ್ರಜ್ಞಾನದ ಮೂಲಕ ದಕ್ಕಿದ ಹೊಸ ಪರಿಕರಗಳು ಸರಸ್ವತಿ ನದಿಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಹುಡುಕುವ ಅವಕಾಶವನ್ನು ಒದಗಿಸಿದವು. ಪ್ರ,ಶ 1952ರಲ್ಲಿ ಸೋವಿಯೆತ್ ರಷ್ಯಾ ಸ್ಪುತ್ನಿಕ್ ಉಪಗ್ರಹವನ್ನು ಹಾರಿಸುವುರೊಂದಿಗೆ ಅಂತರಿಕ್ಷ ಯುಗ ಕಾಲಿಟ್ಟಿತು. ಆ ಮೊದಲು ವಿಮಾನದ ಮೂಲಕ ಮನುಷ್ಯ ಎತ್ತರದಿಂದ ವಿಶಾಲವಾದ ಪ್ರದೇಶಗಳನ್ನು ನೋಡಲು ಸಾಧ್ಯವಾಗಿತ್ತಾದರೂ ಅವುಗಳ ಖಚಿತ ವಿವರಗಳನ್ನು ಕಲೆಹಾಕಲು ಸಾಧ್ಯವಾಗಿರಲಿಲ್ಲ. ಅಂತರಿಕ್ಷ ಯುಗ ಪ್ರಾರಂಭವಾದ ನಂತರ ಹಾರಿಸಿದ ಉಪಗ್ರಹಗಳು ಬಹು ಎತ್ತರದಿಂದ ಭೂಮಿಯನ್ನು ಸುತ್ತುತ್ತ , ದೂರಸಂವೇದಿ ತಂತ್ರಗಳ ಮೂಲಕ ಭೂಮಿಯ ಮೇಲ್ಮೈ ವಿವರಣೆಗಳನ್ನು ಖಚಿತವಾಗಿ ಒದಗಿಸತೊಡಗಿದವು. ಪ್ರ.ಶ 1970ರಲ್ಲಿ ಅಸಂಸಂ ಪಡೆದ ದೂರಸಂವೇದಿ ಉಪಗ್ರಹ ಚಿತ್ರಗಳು ಸಾರ್ವಜನಿಕವಾಗಿ ಲಭ್ಯವಾಗತೊಡಗಿದವು. ಉಪಗ್ರಹದಿಂದ ದಕ್ಕಿದ ಬಿಂಬಗಳನ್ನು ಬಳಸಿ ಕಾದ ಹಂಚಿನಂತಾಗಿ ನೀರಿಲ್ಲದೆ ಬಸವಳಿದಿರುವ ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ನೀರಿನ ಮೂಲಗಳನ್ನು ಹುಡುಕುವ ಯತ್ನ ಜರುಗಿತು. ಇದರ ಫಲವಾಗಿ ವಾಯುವ್ಯ ಭಾರತದಲ್ಲಿ ಹಲವಾರು ಸಣ್ಣ ಮತ್ತು ದೊಡ್ಡ ನದಿಗಳ ಬತ್ತಿದ ವಿಶಾಲ ನೆಲೆಗಳು ಉಪಗ್ರಹ ಬಿಂಬಗಳಲ್ಲಿ ಕಂಡು ಬಂದವು. ಸಿಂಧೂ ,ಗಂಗಾ ಬಯಲು ಪ್ರದೇಶ ಪ್ರಾಚೀನ ನಾಗರಿಕತೆ, ಸಂಸ್ಕೃತಿಗಳ ತವರಾಗಿದ್ದು ಯಾವಾಗಲೂ ಇತಿಹಾಸಕಾರರ , ಪುರಾತತ್ತ್ವಶಾಸ್ತ್ರಜ್ಞರ ಗಮನ ಸೆಳೆದಿದ್ದವು. . ಇತಿಹಾಸದ ಬಗ್ಗೆ ಆಸಕ್ತಿಯಿದ್ದ ಕೆಲವರಿಗೆ ಉಪಗ್ರಹದ ಬಿಂಬಗಳು ಹೊಸ ವಿಚಾರ, ವಿಶ್ಲೇಷಣೆಗೆ ದಾರಿ ಮೂಡಿಕೊಡತೊಡಗಿದವು. ಉತ್ಸುಕರಾದ ಕೆಲವರು ಈ ಕುರುಹುಗಳಲ್ಲಿ ಕಣ್ಮರೆಯಾದ ಸರಸ್ವತಿಯನ್ನು ಕಾಣತೊಡಗಿದರು. ಅವರು ಉಪಗ್ರಹ ಬಿಂಬಗಳಲ್ಲಿ ಕಂಡುಬರುವ ವಿಶಾಲವಾದ ಬತ್ತಿ ಹೋದ ನೀರಿನ ಸೆಲೆಗಳು ಋಗ್ವೇದ ಕಾಲದ ಸರಸ್ವತಿಯೆಂದು ಗುರುತಿಸಿ ಋಗ್ವೇದದ ವರ್ಣನೆಗಳು ಕಾಲ್ಪನಿಕವಲ್ಲ ಸಾಧಿತ ಸತ್ಯಗಳೆಂದು ಹೇಳಿದರು. ಆಧುನಿಕ ತಂತ್ರಜ್ಞಾನದ ನೆರವಿನಿಂದ ಋಗ್ವೇದದ ಸರಸ್ವತಿಯನ್ನು ಹುಡುಕಹೊರಟ ಇವರು ಹೊಸ ವಾದಗಳನ್ನು ಮುಂದೊಡ್ದತೊಡಗಿದರು. ಹೊಸ ಸಂಗತಿ ಮತ್ತು ಸಾಕ್ಷ್ಯಾಧಾರಗಳನ್ನು ಹಳೆಯ ವಿಧಾನಗಳಿಂದ ಪರಿಶೀಲಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಅದಕ್ಕೆ ಹೊಸದಾದ ಮಾದರಿಗಳೇ ಬೇಕು. ಸರಸ್ವತಿಯ ಅಸ್ತಿತ್ವವನ್ನು ಸಾಧಿಸುವ ಉಪಗ್ರಹ ಬಿಂಬಗಳನ್ನು ಭಾಷಾಶಾಸ್ರದ ಆಧಾರದ ಮೇಲೆ ವಿಮರ್ಶಿಸಲಾಗುವುದಿಲ್ಲ. ಋಗ್ವೇದದಲ್ಲಿ ವರ್ಣಿಸಿರುವಂತೆ ಸರಸ್ವತಿಯನ್ನು ಹಿಂದೆ ಗುರುತಿಸಲಾಗಿರಲಿಲ್ಲ. ಆದ್ದರಿಂದ ವಿದ್ವಾಂಸರು ಅದನ್ನು ಉತ್ಪ್ರೇಕ್ಷಿತ ಕಲ್ಪನೆ ಎಂದು ಭಾವಿಸಿದ್ದರು. ಈಗ ಉಪಗ್ರಹ ಬಿಂಬಗಳಿಂದ ಅದು ತಪ್ಪೆಂದು ತಿಳಿದು ಬಂದಿದೆ. ಈ ಬಿಂಬಗಳ ಆಧಾರದ ಮೇಲೆ ನಡೆಸಿದ ಕ್ಷೇತ್ರ ಕಾರ್ಯಗಳಿಂದ ಅಂತಹ ಮಹಾನ್ ನದಿ ಇದ್ದುದು ಖಚಿತವಾಗಿದೆ. ಆದ್ದರಿಂದ ಹೊಸ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ನಾವು ಇತಿಹಾಸ ರಚಿಸಬೇಕೆ ಹೊರತು ಕಾಲ್ಪನಿಕ ಸಂಗತಿಗಳ ಮೇಲಲ್ಲ ಎಂದು ಸಾರಿದರು. ಸರಸ್ವತಿಯನ್ನು ಹುಡುಕುವ ಈ ಉತ್ಸಾಹ ಸಾಂಘಿಕ ಸ್ವರೂಪ ತಾಳಿ ಪ್ರ.ಶ 1980ರ ದಶಕದಲ್ಲಿ ಬಾಬಾ ಸಾಹೇಬ್ ಆಪ್ಟೆ ಸ್ಮಾರಕ ಸಮಿತಿ ( ಆಪ್ಟೆ ವಿಶ್ವ ಹಿಂದೂ ಪರಿಷತ್ ಸ್ಥಾಪಕರಲ್ಲಿ ಒಬ್ಬರು) ಮತ್ತು ಭಾರತೀಯ ಇತಿಹಾಸ ಸಂಕಲನ ಸಮಿತಿ ಆರ್ಯರ ಆಗಮನದ ಸಮಸ್ಯೆಯನ್ನು ಬಗೆಹರಿಸಲು ಸ್ಥಾಪನೆಗೊಂಡವು. ಈ ಸಂಸ್ಥೆಗಳು ಪ್ರ.ಶ 1983ರಲ್ಲಿ ಸರಸ್ವತಿ ಹುಡುಕಾಟ ನಡೆಸಲು ನಿರ್ಧರಿಸಿದವು. ಋಗ್ವೇದ ಹಾಗೂ ಸೈಂಧವ ಸಂಸ್ಕೃತಿ ಒಂದೇ ಎನ್ನುವ ಪರಿಕಲ್ಪನೆ ಇದರ ಹಿನ್ನೆಲೆಯಲ್ಲಿದ್ದಿತು. ಪ್ರ.ಶ 1995ರಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರ ರಾಜಸ್ಥಾನದ ಮರುಭೂಮಿಯಲ್ಲಿ 50-60 ಮೀ ಆಳದಲ್ಲಿ ನೀರಿನ ಸೆಲೆ ಇರುವುದನ್ನು ಗುರುತಿಸಿತು. ಈ ನೆಲೆಗಳ ಅಧ್ಯಯನ ನಡೆಸಿ ವಿಕಿರಣಶೀಲ ಜಾಡಕಗಳ (Radio active tracer) ಪರೀಕ್ಷೆಯಿಂದ ಹರಿಯಾಣದಲ್ಲಿರುವ ಸರಸ್ವತಿಯ (ಘಾಗರ್-ಹಕ್ರಾ) ಅಂತರ್ಜಲ ವೇಗವಾಗಿದ್ದರೆ ರಾಜಸ್ಥಾನದಲ್ಲಿ ಅದು ವರ್ಷದಲ್ಲಿ ಕೆಲವೇ ಕೆಲವು ಸೆಂ.ಮೀ ಮಾತ್ರ ಹರಿಯುತ್ತಿದ್ದು ಬಹುತೇಕ ನಿಂತ ನೀರಾಗಿದ್ದು , ಈ ನೀರನ್ನು ಮುಂದೆ ತಳ್ಳಲು ಹೊಸ ನೀರು ಬರುತ್ತಿಲ್ಲವೆಂದು ನಿರ್ಧರಿಸಿತು. ಮುಂದಿನ ದಿನಗಳಲ್ಲಿ ಜೋಧಪುರದಲ್ಲಿರುವ ಕೇಂದ್ರೀಯ ಒಣವಲಯ ಸಂಶೋಧನಾ ಸಂಸ್ಥೆ ( CAZRI - The Centeral Arid Zone Research Institute ) ಉಪಗ್ರಹದ ಚಿತ್ರಗಳ ಆಧಾರದ ಮೇಲೆ ಮರುಭೂಮಿಯ ನದಿಜಾಡಿನ ನೆಲೆಗಳ ಜಾಡಿನಲ್ಲಿ ಕ್ಷೇತ್ರ ಕಾರ್ಯ ನಡೆಸಿತು. ಪ್ರ.ಶ 1996ರಲ್ಲಿ ಡಾ.ವಾಕಂಕರ್’ರವರು, ಮೋರೋಪಂತ ಪಿಂಗಳೆಯವರೊಂದಿಗೆ ಸೇರಿಕೊಂಡು ‘ವೇದೀಯ ಸರಸ್ವತಿ ನದಿಶೋಧ ಪ್ರತಿಷ್ಟಾನ’ವನ್ನು ಪ್ರಾರಂಭಿಸಿದರು. ಈ ಸಂಸ್ಥೆ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO), ಜೋಧಪುರದ ಪ್ರಾಂತೀಯ ದೂರಸಂವೇದಿ ಸೇವಾ ಕೇಂದ್ರಗಳ (RRSSC,-ರೀಜನಲ್ ರಿಮೋಟ್ ಸೆನ್ಸಿಂಗ್ ಸರ್ವೀಸಸ್ ಸೆಂಟರ್ ) ನೆರವು ಪಡೆದು ಸರಸ್ವತಿ ಹುಡುಕಾಟಕ್ಕೆ (IRS-1) ಉಪಗ್ರಹದ ಚಿತ್ರಗಳ ಅಧ್ಯಯನ ನಡೆಸಿತು. ಉಪಗ್ರಹ ಬಿಂಬಗಳಿಂದ ಬಹು ಹಿಂದೆಂದೋ ಖಚಿತವಾಗದ ಕಾಲಘಟ್ಟದಲ್ಲಿ ಶುತದ್ರಿ (ಸಟ್ಲೇಜ್) ನದಿ ದಕ್ಷಿಣಕ್ಕೆ ಹರಿಯುತ್ತಿದ್ದು, ಯಮುನಾ ವಾಯುವ್ಯಕ್ಕೆ ಸಾಗಿ ಪಾಟಿಯಾಲದಿಂದ 60 ಕಿ.ಮೀ ದಕ್ಷಿಣಕ್ಕಿರುವ ಶತ್ರಾನದ ಬಳಿ ಘಾಗರ್ ನದಿಯನ್ನು ಸೇರುತ್ತಿದ್ದ ಸಾಧ್ಯತೆಗಳು ಗೋಚರಿಸಿದವು. ಈ ಸಾಧ್ಯತೆಯನ್ನು ಹಾಗೂ ಈ ಹಿಂದೆ ವಿವಿಯೆನ್ ಡೆ ಸೇಂಟ್ ಮಾರ್ಟಿನ್ ಮತ್ತು ಸಿ.ಎಫ್. ಓಲ್ಡ್’ಹ್ಯಾಂ ಮಾಡಿದ್ದ ಊಹೆಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಈಗಿನ ಘಾಗರ್-ಹಕ್ರಾ ನದಿಯೇ ಋಗ್ವೈದಿಕ ಕಾಲದ ಸರಸ್ವತಿಯೆಂದು ಅದು ಪ್ರ,ಶ.ಪೂ 2000 ಅವಧಿಯಲ್ಲಿ ಬತ್ತಿತೆಂಬ ನಿರ್ಣಯಕ್ಕೆ ಬಂದಿತು. ಸರಸ್ವತಿ ಹೇಗೆ ಬತ್ತಿತು ಎನ್ನುವುದಕ್ಕೆ ತನ್ನದೇ ಆದ ವಿವರಣೆಗಳನ್ನು ಒದಗಿಸಿತು. ಪ್ರ.ಶ 1997ರಲ್ಲಿ ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ ಮತ್ತು ವಡೋದರದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ ಜಂಟಿ ಸಹಭಾಗಿತ್ವದಲ್ಲಿ ಸರಸ್ವತಿ ನದಿ ಕುರಿತಾಗಿ ಸಮ್ಮೇಳನ ಸಹ ಏರ್ಪಟ್ಟಿತು. ಇದರಲ್ಲಿ ಭಾವಹಿಸಿದವರಲ್ಲಿ ಹೆಚ್ಚಿನವರು ಸರಸ್ವತಿ ನದಿಯನ್ನು ಗುರುತಿಸಲಾಗಿದೆಯೆಂದು ಒಪ್ಪಿದರು. ನಂತರ ಈ ಸಮ್ಮೇಳನದಲ್ಲಿ ಮಂಡಿಸಲಾದ ಲೇಖನಗಳನ್ನು ಇನ್ನಿತರ ಲೇಖನಗಳೊಂದಿಗೆ ಸೇರಿ ಪ್ರಕಟಿಸಿಲಾಯಿತು. ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿ ಬಿ.ಪಿ.ರಾಧಾಕೃಷ್ಣ ಮತ್ತು ಎಸ್.ಎಸ್.ಮೆಹ್ತಾ ಇದರ ಸಂಪಾದಕರು. ಇವರು ’ಮಾನವರಿಗೆ ಲಭ್ಯವಾಗಿರುವ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳನ್ನು ನಾವು ನೋಡುವ ದೃಷ್ಟಿ ಬದಲಾಗಬೇಕು. ಅವುಗಳನ್ನು ಐತಿಹ್ಯ, ಧಾರ್ಮಿಕ ಆಕರಗಳಾಗಿ ಯಾವುದೇ ಒಂದು ಧರ್ಮದ ಮುಖವಾಣಿಗಳೆಂದು ಭಾವಿಸದೆ ಭೂವಿಜ್ಞಾನ ಮತ್ತು ಇತಿಹಾಸದ ದಾಖಲೆಗಳೆಂದು ಪರಿಗಣಿಸಬೇಕು ಎಂದು ದಾಖಲಿಸಿದರು. ಇಲ್ಲಿ ಸರಸ್ವತಿ ನದಿಯ ಹುಡುಕಾಟದ ಹಿಂರಿರಬೇಕಾದ ಕುತೂಹಲ, ವೈಜ್ಞಾನಿಕ ಹಸಿವಿಗಿಂತಲೂ ಹೆಚ್ಚಿನ ಇನ್ನೇನೋ ಹಿನ್ನೆಲೆಯಲ್ಲಿ ಇರುವಂತೆ ಭಾಸವಾಗುತ್ತಿದ್ದಿತು. ಸಂಪಾದಿತ ಕೃತಿಯಲ್ಲಿನ ಲೇಖನಗಳನ್ನು ಕುರಿತಾಗಿ ಆರ್.ಎಸ್.ಎಸ್.ಮುಖವಾಣಿಯೆಂದೇ ಭಾವಿಸಲಾಗಿರುವ ‘ಮಂಥನ’ ಲೇಖನವೊಂದನ್ನು ಪ್ರಕಟಿಸಿತು. ಮೇ11,1998ರಂದು ಅತುಲ್ ಬಿಹಾರಿ ವಾಜಪೇಯಿ ಮುಂದಾಳತ್ವದ ರಾಷ್ಟ್ರೀಯ ಪ್ರಜಾಪ್ರತ್ವ ಒಕ್ಕೂಟದ ಸರ್ಕಾರ (ಎನ್.ಡಿ.ಎ) ಫೋಖ್ರಾನ್’ನಲ್ಲಿ ಪರಮಾಣು ಸ್ಪೋಟ ನಡೆಸಿತು. ಇದಾದ ನಂತರ ಈ ಪರೀಕ್ಷಾ ಸ್ಫೋಟದಿಂದ ಅಂತರ್ಜಲದಲ್ಲಿ ವಿಕಿರಣ ಸೋರಿಕೆಯಾಗಿದೆಯೇ ಎಂದು ತಿಳಿಯಲು ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯ ಸಮಸ್ಥಾನಿ (ಐಸೋಟೋಪ್) ವಿಭಾಗ ಪೋಖ್ರಾನ್’ನ 250 ಕಿ ಮೀ ವ್ಯಾಪ್ತಿಯಲ್ಲಿ 800ಕ್ಕೂ ಅಧಿಕ ಆಳ ಬಾವಿಗಳನ್ನು ತೆಗೆದು ಪರೀಕ್ಷೆಗಾಗಿ ನೀರನ್ನು ಸಂಗ್ರಹಿಸಿತು. ಈ ನೀರಿನ ಪರೀಕ್ಷೆಯಿಂದ ಪೋಖ್ರಾನ್ ಪರೀಕ್ಷೆಯಿಂದ ಅಂತರ್ಜಲ ವಿಕಿರಣಯುಕ್ತವಾಗಿಲ್ಲವೆಂದು ಖಚಿತವಾಯಿತಾದರೂ , ಇನ್ನಿತರ ಹೊಸ ಸಂಗತಿಗಳನ್ನು ಸಹ ಬಯಲಿಗೆಳೆದು ತಂದಿತು. ರಾಜಸ್ಥಾನದ ಮರುಭೂಮಿಯಲ್ಲಿ ಕೊರೆದ ಬಾವಿಗಳಲ್ಲಿ ಸಂಗ್ರಹಿಸಿದ ನೀರು (1) ಕುಡಿಯಲು ಯೋಗ್ಯ (2) ಈ ನೀರಿನ ಮೂಲ ಹಿಮಾಲಯದ ನೀರ್ಗಲ್ಲುಗಳು (3) ಈ ನೀರು 8000-14000 ವರ್ಷ ಹಳೆಯದು (4) ಅಂತರ್ಜಲದ ಸೆಲೆಗಳು ಉತ್ತರದಿಂದ ಹರಿಯುವ ಯಾವುದೋ ನೆಲದೊಳಗಿನ ಸೆಲೆಯಿಂದ ಮರುಪೂರಣಗೊಳ್ಳುತ್ತವೆ. (5) ರಾಜಸ್ಥಾನದ ಮರುಭೂಮಿಯ ’ಮರುಸ್ಥಳಿ’ಯಂತಹ ಅತ್ಯಂತ ಅಲ್ಪ ಮಳೆಯ ಪ್ರದೇಶದಲ್ಲೂ ಸಹ ನೆಲದೊಳಗಿನ ಹರಿವಿನಿಂದ ಬಾವಿಗಳು ಮರುಪೂರಣವಾಗುತ್ತವೆ. ಇದೇ ವೇಳೆಗೆ ಸಮಾಂತರದಲ್ಲಿ ಪಾಕಿಸ್ತಾನ ಭಾರತದ ನಡುವಿನ ಗಡಿರೇಖೆಯ ಸನಿಹ ರಾಜಸ್ಥಾನದ ಮರಳುಗಾಡಿನಲ್ಲಿ ಬೃಹತ್ ಕೊರೆವ ಯಂತ್ರಗಳನ್ನು ಬಳಸಿ ಅಲ್ಲಿನ ಬತ್ತಿದ ನದಿ ಪಾತ್ರದ ವಿವಿಧ ಆಳಗಳಲ್ಲಿನ ಮಣ್ಣು ಮತ್ತು ನೀರಿನ ಪ್ರತಿಚಯಗಳನ್ನು ಪಡೆಯಲಾಯಿತು. ಇಲ್ಲಿ ಸಂಗ್ರಹಿಸಿದ ನೀರನ್ನು ಇಂಗಾಲ-14 ಪರೀಕ್ಷೆಗೆ ಒಳಪಡಿಸಿದಾಗ ಅದರ ಕಾಲ ಪ್ರ ಶ.ವೂ 2000 ಎಂದು ಅಂದಾಜಿಸಲಾಯಿತು. ಇಂತಹ ಶೋಧನೆಗಳಿಂದ ಉತ್ತೇಜಿತರಾದ ಕೇಂದ್ರಿಯ ಅಂತರ್ಜಾಲ ಪ್ರಾಧಿಕಾರದ ಕಾರ್ಯದರ್ಶಿ ಡಾ.ಡಿ.ಕೆ.ಛಡ್ಡಾ ಮೇಲಿನ ಸಂಶೋಧನೆಯನ್ನು ಅನುಮೋದಿಸಿ ರಾಜಸ್ಥಾನದ ಮರುಭೂಮಿಯಲ್ಲಿ 50-60,ಮೀ ಆಳದಲ್ಲಿ ಕುಡಿಯುವ ನೀರು ಲಭ್ಯವೆಂದು ತಿಳಿಸಿ ಬತ್ತಿಹೋದ ಸರಸ್ವತಿಯ ಜಾಡಿನಲ್ಲಿ ಕೊಳವೆ ಬಾವಿಗಳನ್ನು ಕೊರೆದು ನೀರನ್ನು ಪಡೆಯುವ ಯೋಜನೆಗೆ 5 ಕೋಟಿ ರೂಗಳ ಅನುವೋದನೆ ಪಡೆದರು. ದೂರಸಂವೇದಿ ನಕ್ಷೆಗಳ ಮೂಲಕ ರಾಜಸ್ಥಾನದ ಮರುಭೂಮಿಯಲ್ಲಿ ಗುರುತಿಸಲಾದ ಪ್ರಾಚೀನ ಕಾಲದಲ್ಲಿ ನೀರು ಹರಿದಿರುವ ಕಾಲುವೆಗಳು , ಭಾಭಾ ಪರಮಾಣು ಸಂಶೋಧನಾ ಸಂಸ್ಥ ಅಂತರ್ಜಲ ಕುರಿತಾಗಿ ನೀಡಿದ ವರದಿಗಳು ಸರಸ್ವತಿ ನದಿಯ ಹುಡುಕಾಟದಲ್ಲಿದ್ದವರಿಗೆ, ಘಾಗರ್-ಹಕ್ರಾ ನದಿಯೇ ಋಗ್ವೇದದ ಸರಸ್ವತಿಯೆಂದು ವಾದಿಸುತ್ತಿದ್ದವರಿಗೆ ಹೊಸ ಹುರುಪನ್ನು ತುಂಬಿದವು. ಇದರ ಬೆನ್ನ ಹಿಂದೆಯೇ ಘಾಗರ್-ಹಕ್ರಾ ನದಿಯೇ ಪ್ರಾಚೀನ ಸರಸ್ವತಿ ಎಂದು ಸಾಕ್ಷ್ಯ ಒದಗಿಸುವ ಇನ್ನಿತರ ಸಂಶೋಧನೆಗಳು ಸಹ ಬೆಳಕು ಕಂಡವು. ಇವೆಲ್ಲವುಗಳ ಹಿನ್ನೆಲೆಯಲ್ಲಿ ಪ್ರ.ಶ 2002ರಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟದ ಸರ್ಕಾರ (ಎನ್ ಡಿ.ಎ) ಆಡಳಿತವಿರುವಾಗ ಸಂಸ್ಕೃತಿ ಸಚಿವ ಜಗಮೋಹನ್ ಬತ್ತಿ ಹೋದ ಸರಸ್ವತಿಯ ಶೋಧನೆಗಾಗಿ ನಾಲ್ಕು ಜನ ಪರಿಣಿತರ ತಂಡವೊಂದನ್ನು ರಚಿಸಿದರು. ಮಾರ್ಕ್ಸ್ವಾದಿಗಳು ನಮಗೆ ಒಂದು ನಿರ್ದಿಷ್ಟ ಬಗೆಯ ಇತಿಹಾಸವನ್ನು ಉಣಿಸಿದ್ದಾರೆ. ನಾವು ಇದಕ್ಕೆ ಪರ್ಯಾಯವಾದ ಐತಿಹಾಸಿಕ ಸಾಧ್ಯತೆಗಳ ಆಯ್ಕೆಗಳ ಬಗ್ಗೆ ಕಣ್ಣು ಮುಚ್ಚಿರಬೇಕಾಗಿಲ್ಲ ಎಂದು ಸಾರಿದ ಅವರು ವೇದಕಾಲಿನ ಸರಸ್ವತಿಯ ಕುರುಹುಗಳು ದಕ್ಕಿದರೆ ನಾವು ಸಂಶೋಧನೆಯನ್ನು ಮುಂದುವರೆಸುತ್ತೇವೆ ಎಂದು ಘೋಷಿಸಿ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ (ISRO) ಬಲದೇವ್ ಸಾಹ್ನಿ, ಎಸ್. ಕಲ್ಯಾಣರಾಮನ್, ಹಿಮಶಿಲಾತಜ್ಞ ಡಾ.ವಿಜಯಮೋಹನ್ ಪುರಿ , ಜಲಸಂಪನ್ಮೂಲ ತಜ್ಞ ಮಾಧವ ಚಾಟ್ಲೆ ಯವರನ್ನೊಳಗೊಂದ ತಜ್ಞರ ಸಮಿತಿಯನ್ನು ರಚಿಸಿದರು. ಈ ಸಮಿತಿಗೆ ಬತ್ತಿದ ಸರಸ್ವತಿ ನದಿಯ ಜಾಡನ್ನು ಹುಡುಕುವುದರೊಂದಿಗೆ ಪಾಂಡವರು ಮಿಂದರೆಂದು ಹೇಳಲಾಗುವ ಕಪಾಳಮೋಚನ, ಮತ್ತು ರಣಮೋಚನ, ಸರೋವರಗಳ ಹೂಳುತೆಗೆಯುವ ಹೊಣೆಯನ್ನು ಸಹ ಹೊರಿಸಲಾಯಿತು. ಕುರುಕ್ಷೇತ್ರದಿಂದ ಕೆಲವು ಕಿ.ಮೀ ದೂರವಿರುವ ಹಿಂದೊಮ್ಮೆ ಹರ್ಷವರ್ಧನನ ರಾಜಧಾನಿಯಾಗಿದ್ದ ಸ್ಥಾಣೇಶ್ವರದಲ್ಲೂ ಸರಸ್ವತಿಯ ಜಾಡಿನ ಶೋಧವನ್ನು ಪರಿಗಣಿಸಲಾಯಿತು. ಇದರೊಂದಿಗೆ ಸೈಂಧವ ಪೂರ್ವ ಕಾಲದ ನೆಲೆಗಳೆಂದು ಭಾವಿಸಲಾದ ರಾಖಿಘಡಿಯಲ್ಲೂ ಅಗೆಯುವ ಯೋಜನೆಯನ್ನು ಸಚಿವರು ಅನುಮೋದಿಸಿದರು. ಇದೇ ವೇಳೆಗೆ ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಬಿ.ಲಾಲ್ ಪ್ರ.ಶ 2002ರಲ್ಲಿ ’ ದಿ ಸರಸ್ವತಿ ಫ್ಲೋಸ್ ಆನ್ –ದಿ ಕಂಟಿನ್ಯುಯಿಟಿ ಆಫ್ ಇಂಡಿಯನ್ ಕಲ್ಚರ್ ’ ಎಂಬ ಕೃತಿ ಹೊರ ತಂದರು. ಇದರಲ್ಲಿ ಅವರು ಹರಿಯಾಣ ಪಂಜಾಬ್’ಗಳಲ್ಲಿ ಹರಿದು ಸಿರ್ಸಾ ಬಳಿ ಬತ್ತಿ ಹೋಗಿರುವ ’ಸರಸ್ವತಿ- ಘಾಗರ್ ಜೋಡಿ ನದಿಗಳೇ ವೇದ ಕಾಲದ ಸರಸ್ವತಿ ನದಿ ಎಂದರು. ಪ್ರ.ಶ 2003-2004ರಲ್ಲಿ ಭಾರತದ ಪುರಾತತ್ತ್ವ ಇಲಾಖೆ ಆದಿಬದರಿಯಲ್ಲಿ ಮೂರು ಪ್ರಾಚೀನ ನಿವೇಶನ ಮತ್ತು ಬೌದ್ಧ ವಿಹಾರಗಳನ್ನು ಪತ್ತೆ ಹಚ್ಚಿತು. ಅದೇ ಸಂದರ್ಭದಲ್ಲಿ ಆದಿಬದರಿಯ ನದಿಪಾತ್ರದ ದಡದ ಸೋಪಾನಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಹಿಮಾಲಯದ ಶಿಲೆಗಳಲ್ಲಿ ಪರಿಣಿತರಾದ ಡಾ.ವಿಜಯಮೋಹನ್ ಪುರಿಯವರು ಹಿಮನದಿಗಳಿಂದ ಹಿಮಾಲಯದ ಶಿಲೆಗಳು ಕೊರೆಯಲ್ಪಟ್ಟು ಅವುಗಳ ಹೂಳು ಕೆಳಭಾಗಕ್ಕೆ ಸಾಗಿಬಂದು ಸೋಪಾನಗಳ ರೂಪದಲ್ಲಿ ರೂಪಾಂತರಿತ ಶಿಲೆಯಾಗಿಯಾಗಿ ಮಾರ್ಪಟ್ಟಿದೆಯೆಂದು ಖಚಿತಪಡಿಸಿದರು. ಇದರಿಂದ ಸರಸ್ವತಿ ಹಿಮಾಲಯದ ಪರ್ವತ ಪ್ರದೇಶಗಳಿಂದ ಇಳಿದು ಆದಿಬದರಿಯಲ್ಲಿ ಬಯಲು ನಾಡನ್ನು ಪ್ರವೇಶಿಸುತ್ತಿದ್ದಿತೆಂದು ಒಪ್ಪಲಾಯಿತು. ಆದಿಬದರಿ ಯಮುನಾನಗರದಿಂದ (ಜಗಧಾರಿ) 20 ಕಿ.ಮೀ ಡೆಹ್ರಾಡೂನ್’ನಿಂದ 70 ಕಿ.ಮೀ ದೂರದಲ್ಲಿದೆ. ಇನ್ನು ಮುಂದುವರೆದು ಡಾ. ವಿಜಯ್’ಕುಮಾರ್ ಪುರಿಯವರು ಡೆಹ್ರಾಡೂನಿನ ಉತ್ತರಕ್ಕಿರುವ ಸ್ವರ್ಗಾರೋಹಿಣಿ ಹಿಮಪರ್ವತದ ರೂಪಿನ್-ಸೂಪಿನ್ ಹಿಮನದಿಗಳೇ ಸರಸ್ವತಿಯ ಮೂಲ. ಕಾಲಾಂತರದಲ್ಲಿ ಜರುಗಿದ ಭೂಫಲಕಗಳ ಜರುಗಿಕೆ ಹಾಗೂ ಸ್ಥಾನಾಂತರಗಳಿಂದ ಶಿವಾಲಿಕ ಪರ್ವತಶ್ರೇಣಿಗಳು ಪಲ್ಲಟಗೊಂಡು ಮೊದಲು ಪಶ್ಚಿಮಕ್ಕೆ ಹರಿಯುತ್ತಿದ್ದ , ಸರಸ್ವತಿಯ ಉಪನದಿಯಾಗಿದ್ದ ಯಮುನಾ ಪೂರ್ವಕ್ಕೆ ತಿರುಗಿತೆಂದು ಪ್ರತಿಪಾದಿಸಿದರು. ಇದರಿಂದ ಸರಸ್ವತಿ ನದಿಗೆ ಯಮುನಾ ನದಿಯ ಕಾಣಿಕೆಯಾಗಿ ದಕ್ಕುತ್ತಿದ್ದ ಬೃಹತ್ ಜಲರಾಶಿ ಗಂಗಾ ನದಿಯ ಪಾಲಾಯಿತೆಂದೂ, ಗಂಗಾ-ಯಮುನಾ ನದಿಗಳ ಸಂಗಮ ಹಳೆಯ ನೆನಪಿನಲ್ಲಿ ಗಂಗಾ-ಯಮುನಾ- ಸರಸ್ವತಿ ಮೂರು ನದಿಗಳ ತ್ರಿವೇಣಿ ಸಂಗಮವೆಂದು ಹೆಸರಾಯಿತೆಂದು ಪ್ರತಿಪಾದಿಸಿದರು. ಇಂತಹ ಪ್ರತಿಪಾದನೆಗಳ ಹಿನ್ನೆಲೆಯಲ್ಲಿ ಪ್ರಕಟಗೊಂಡ ‘ವೇದಿಕ್ ಸರಸ್ವತಿ’ ಪುಸ್ತಕದ ಐದು ಲೇಖನಗಳಲ್ಲಿ ಸರಸ್ವತಿ ನದಿಯನ್ನು ಐದು ವಿಭಿನ್ನ ಸ್ಥಾನಗಳಲ್ಲಿ ತೋರಿಸಲಾಗಿದೆ. ಇದನ್ನು ಸಂಪಾದಿಸಿದ ಬಿ.ಪಿ ರಾಧಾಕೃಷ್ಣರಂತಹ ಭೂ ವಿಜ್ಞಾನಿಗಳು ಸಹ ಇವುಗಳಲ್ಲಿ ಏಕೆ ಒಮ್ಮತವಿಲ್ಲ. ಎಂದು ವಿಚಾರಿಸಲು ಹೊರಟಿಲ್ಲ. ಸರಸ್ವತಿ ಬತ್ತಿ ಹೋದುದಕ್ಕೆ ಒಬ್ಬೊಬ್ಬ ಲೇಖಕನೂ ಒಂದೊಂದು ಕಾರಣ ನೀಡಿದ್ದಾನೆ.(5) ಬತ್ತಿದ ಕಥೆ ಈವರೆಗೆ ತಿಳಿಸಿರುವ ಸಂಗತಿಗಳ ಆಧಾರದ ಮೇಲೆ ಘಾಗರ್-ಹಕ್ರಾ ನದಿಯೇ ಸರಸ್ವತಿ ಎಂದು ನಿರ್ಣಯಕ್ಕೆ ಬಂದಿರುವವರು ಒದಗಿಸಿರುವ ಸ್ಥೂಲ ವಿವರಣೆಯ ಚೌಕಟ್ಟು ಹೀಗಿದೆ. ಭೂಮಿ ರೂಪಗೊಂಡಾಗಿನಿಂದ ಈವರೆಗೆ ಜರುಗಿದ ಬದಲಾವಣೆಗಳನ್ನು ಕ್ರಮಬದ್ದವಾಗಿ ಗುರುತಿಸಿ ಅಧ್ಯಯನ ಮಾಡಲು ಭೂವಿಜ್ಞಾನಿಗಳು ಮಹಾಯುಗ (ಇಯಾನ್) , ಯುಗ(ಎರ) , ಅವಧಿ (ಪೀರಿಯಡ್) , ಕಲ್ಪ(ಎಪೋಚ್) ಎಂಬ ಕಾಲ ವಿಭಜನೆ ಮಾಡಿಕೊಂಡಿದ್ದಾರೆ, ಈ ವಿಭಜನೆಯ ಪ್ರತಿಯೊಂದು ಹಂತದಲ್ಲೂ ಹೆಚ್ಚಿನ ಉಪವಿಭಜನೆಗಳಿವೆ. ಪ್ರತಿಯೊಂದು ಕಾಲ ವಿಭಜನೆಯೂ ಭೂಮಿಯಲ್ಲಿ ಜರುಗಿದ ಭೌತಿಕ ಹಾಗೂ ಜೈವರಾಶಿಕ ಬದಲಾವಣೆಗಳನ್ನು ಸೂಚಿಸುತ್ತದೆ. ನಾವೀಗ ಸೆನೆಝೊಯಿಕ್ ಯುಗದ (ಸೆನೆಝೊಯಿಕ್=-ಹೊಸ ಜೀವ) ಕ್ವಾರ್ಟೆನರಿ ಅವಧಿಯಲ್ಲಿದ್ದೇವೆ. ಕ್ವಾರ್ಟೆನರಿ ಅವಧಿ ಸರಿಸುಮಾರು 26 ಲಕ್ಷ ವರ್ಷಗಳ ಹಿಂದೆ ಪ್ರಾರಂಭವಾಗಿದ್ದು ಇದರಲ್ಲಿ16 ಲಕ್ಷ ವರ್ಷಗಳ ಹಿಂದೆ ಪ್ರಾರಂಭವಾದ ಪ್ಲಿಸ್ಟೊಸೀನ್ ( ಪ್ಲಿಸ್ಟೊಸಿನ್ = ಇತ್ತೀಚಿನ ಹೊಸದು) ಹಿಮಕಲ್ಪ ಜರುಗುತ್ತಿದೆ. ಸರಿಸುಮಾರು ಹನ್ನೆರಡು ಸಾವಿರ ವರ್ಷಗಳ ಹಿಂದೆ ಈ ಪ್ಲಿಸ್ಟೊಸಿನ್ ಕಲ್ಪದಲ್ಲಿಯೇ ಪ್ರಾರಂಭವಾದ ಹೊಲೊಸಿನ್ (ಹೊಲೊಸಿನ್=ಸಂಪೂರ್ಣ ಹೊಸದು) ಉಪಕಲ್ಪದಲ್ಲಿ ನಾವಿದ್ದೇವೆ. ಓರೆಯಾಗಿರುವ ಭೂಮಿಯ ಅಕ್ಷ , ಸೂರ್ಯ-ಚಂದ್ರರ ಗುರುತ್ವ ಬಲಗಳ ಪ್ರಭಾವದಿಂದ 2೬500 ವರ್ಷಗಳಿಗೊಮ್ಮೆ ಒಂದು ಸುತ್ತು ಓಲಾಡುವ ಭೂಮಿಯ ಅಕ್ಷ ಮತ್ತಿತರ ಖಗೋಳೀಯ ಕಾರಣಗಳಿಂದ ಬೇಸಗೆ ಹಾಗೂ ಚಳಿಗಾಲದಲ್ಲಿ ಇರುವ ಸರಾಸರಿ ತಾಪಮಾನಗಳು ಬದಲಾಗುತ್ತವೆ. ಸಾಮಾನ್ಯ ಸರಾಸರಿ ತಾಪಮಾನವಿರುವಾಗ ಚಳಿಗಾಲದಲ್ಲಿ ಸಂಚಯವಾಗುವ ಹಿಮ , ಬೇಸಗೆಯಲ್ಲಿ ಕರಗಿ ಹರಿಯುತ್ತದೆ. ಲಕ್ಷಾಂತರ ವರ್ಷಗಳ ದೀರ್ಘಾವಧಿಯಲ್ಲಿ ಬೇಸಗೆಯ ತಾಪಮಾನ ಸಾಮಾನ್ಯ ಸರಾಸರಿ ತಾಪಮಾನಕ್ಕಿಂತ ಕಡಿಮೆಯಾಗುತ್ತದೆ. ಆಗ ಚಳಿಗಾಲದಲ್ಲಿ ಸಂಚಯಗೊಂಡ ಹಿಮ ಸಂಪೂರ್ಣ ಕರಗದೆ ಉಳಿಯುತ್ತದೆ. ಇದು ಹಿಮಯುಗಕ್ಕೆ ನಾಂದಿಹಾಡುತ್ತದೆ. ಭೂಮಿಯ ಮೇಲೆ ಹಿಮ ಆವರಿಸುತ್ತ ಧೃವ ಪ್ರದೇಶಗಳಿಂದ ಭೂಮಧ್ಯ ರೇಖೆಯ ಪ್ರದೇಶಗಳತ್ತ ಸರಿಯುತ್ತದೆ, ಹಿಮ ಒಂದೇ ರೀತಿಯಲ್ಲಿ ಭೂಮಿಯ ಮೇಲೆ ಹರಡುತ್ತ ಹೋಗದೆ ಮಧ್ಯದಲ್ಲಿ ಸಾವಿರಾರು ವರ್ಷಗಳ ಕಾಲ ನಿಲುಗಡೆ ಅಥವಾ ಹಿಂಜರಿತವನ್ನು ಕಾಣಬಹುದು. ಇಂತಹ ಕಲ್ಪವನ್ನು ಹಿಮಯುಗ ಮಧ್ಯಕಲ್ಪ ಎಂದು ಕರೆಯುತ್ತಾರೆ. ಇಂತಹ ಹಿಮಯುಗ ಮಧ್ಯ ಕಲ್ಪ-ಹೊಲೊಸಿನ್ ಈಗ ನಡೆಯುತ್ತದೆ. ಪ್ಲಿಸ್ಟೊಸಿನ್ ಆರಂಭದಲ್ಲಿ ತಾಪಮಾನ ಕುಂಠಿತವಾಗಿ ಹಿಮಾಲಯ ಪರ್ವತಗಳು ಹಿಮನದಿಗಳಿಂದ ಮುಚ್ಚಿದ್ದವು. ಆಗ ಹಿಮಾಲಯಗಳು ಯುರೋ ಖಂಡಕ್ಕೆ ಒತ್ತಿದ್ದರಿಂದ ಸಿರ್ಮೂರ್ ಮತ್ತು ಶಿವಾಲಿಕ್ ಪರ್ವತ ಶ್ರೇಣಿ ವಲಯದಲ್ಲಿ ಭಾರಿ ಭೂ ಕಂಪನಗಳುಂಟಾಗಿ, ಭೂಕುಸಿತಗಳು ಜರುಗಿದವೆಂದು ಭೂ ವೈಜ್ಞಾನಿಕ ಸಾಕ್ಷ್ಯಗಳಿಂದ ತಿಳಿದು ಬಂದಿದೆ. ಪ್ಲಿಸ್ಟೊಸಿನ್ ಕಲ್ಪದ ಆರಂಭದಲ್ಲಿ ನೀರು ಹಿಮರೂಪದಲ್ಲಿ ಭೂಮಿಯ ಎತ್ತರದ ಪ್ರದೇಶಗಳಲ್ಲಿ ಸಂಚಯವಾಗಿದ್ದರಿಂದ , ಪ್ರ,ಶ 17000 ವರ್ಷಗಳ ಹಿಂದೆ ಹೊಲೊಸಿನ್ ಉಪಕಲ್ಪ ಪ್ರಾರಂಭವಾಗುವಾಗ ಸಮುದ್ರದ ನೀರಿನ ಮಟ್ಟ ಈಗಿನ ಮಟ್ಟಕ್ಕೆ ಹೋಲಿಸಿದಂತೆ 12 ಮೀ ಕೆಳಗಿದ್ದಿತು. ಸಮುದ್ರ ಮಟ್ಟ ಕುಸಿದಾಗ ಭಾರತದ ಪಶ್ಚಿಮ ಭಾಗದ ಕರಾವಳಿಯಲ್ಲಿ 1-2 ಲಕ್ಷ ಚದರ ಕಿ.ಮೀ ಭೂಭಾಗ ಹೆಚ್ಚುವರಿಯಾಗಿ ಸಿಗುತ್ತಿದ್ದಿತು. ಸಮುದ್ರದ ಎತ್ತರ ಹೀಗೆ ಏರಿಳಿತದಲ್ಲಿರುವಾಗ ಭೂಭಾಗಗಳು ಮುಳುಗುವುದು ಏಳುವುದು ಸಾಮಾನ್ಯ. ಹೊಲೊಸಿನ್ ಉಪಕಲ್ಪ ಮುಂದುವರೆದು ಬಿಸಿ ಹೆಚ್ಚಿದಂತೆ ಪ್ರ.ಶ.ಪೂ 4500 ವರ್ಷಗಳ ಹಿಂದೆ ಸಮುದ್ರ ಮಟ್ಟ ಈಗಿನ ಮಟ್ಟಕ್ಕಿಂತ 5 ಮೀ ಕೆಳಗಿದ್ದಿತು. ಹೊಲೊಸಿನ್ ಕಾಲ ಪ್ರಾರಂಭವಾದಾಗ ಭೂಮಿಯ ತಾಪಮಾನ ಹೆಚ್ಚತೊಡಗಿ ಪ್ರ.ಶ.ಪೂ 5000-3000 ಕಾಲದಲ್ಲಿ ಹಿಮಶಿಲೆಗಳು ಕರಗಿ ಹಲವಾರು ನದಿಗಳು ಉಗಮಗೊಂಡವು. ಈ ನದಿಗಳಲ್ಲಿ ಪ್ರವಾಹ ಉಂಟಾಗಿ, ಹಿಮಾಲಯ ಪರ್ವತದ ಇಳಿಜಾರು, ಮುಂಚಾಚು ಪ್ರದೇಶಗಳ ಮುಳುಗಡೆಯಾದವಲ್ಲದೆ ಮಳೆಯ ಪ್ರಮಾಣ ಹೆಚ್ಚಿ ‘ಹಸಿಕಾಲ’ ಪ್ರಾರಂಭವಾಯಿತು. (23). [1] ಈ ಹಸಿಕಾಲದಲ್ಲಿ ಸಪ್ತ ಸಿಂಧೂಗಳು ಉಕ್ಕಿ ಹರಿಯತೊಡಗಿದವು. ಉತ್ತರಾಂಚಲದ ಹರ್-ಕಿ-ದುನ್ ಸನಿಹದ ಹಿಮಶಿಲೆಗಳಿಂದ ಉಗಮಿಸುವ ಸರಸ್ವತಿ ಶಿವಾಲಿಕ ಪರ್ವತದ ತಪ್ಪಲಿನಲ್ಲಿನಲ್ಲಿರುವ ಆದಿಬದರಿಯಲ್ಲಿ ಮೈದಾನವನ್ನು ಪ್ರವೇಶ ಮಾಡುತ್ತಿದ್ದು ಹಿಮಮೂಲದ ಶುತದ್ರಿ ಮತ್ತು ಯಮುನಾ ನದಿಗಳು ಸೇರಿದ ನಂತರ ಇನ್ನೂ ಹೆಚ್ಚು ನೀರನ್ನು ಪಡೆದ ಸರಸ್ವತಿ ಭೋರ್ಗರೆದು ಉಕ್ಕಿ ಹರಿಯುತ್ತಿದ್ದಿತು. ಪ್ರ.ಶ.ಪೂ 5000 ವರ್ಷಗಳ ಹಿಂದೆ ಇದೇ ಸರಸ್ವತಿ ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್ ರಾಜಸ್ಥಾನ , ಗುಜರಾತ್ ರಾಜ್ಯಗಳ ಮೂಲಕ 1600 ಕಿ,ಮೀಗೂ ಅಧಿಕ ದೂರ ಕ್ರಮಿಸಿ ಗುಜರಾತ್’ನ ಪ್ರಭಾಸದ (ಸೋಮನಾಥ) ಬಳಿ ಸಮುದ್ರವನ್ನು ಸೇರುತ್ತಿದ್ದಿತು. ಸರಸ್ವತಿ ಪಂಜಾಬ್, ರಾಜಸ್ಥಾನ, ಗುಜರಾತ್’ನ ಬಯಲುಗಳಿಗೆ ಫಲವತ್ತಾದ, ಮೆಕ್ಕಲು ಮಣ್ಣು ತಂದಿತು. ಇಂತಹ ಮಣ್ಣಿನಿಂದ ತುಂಬಿದ ನೆಲೆಗಳು ಭೂಮಿಯ ಸ್ವರ್ಗಗಳಾಗಿ ಬದಲಾದವು. ಈ ಕಾಲದಲ್ಲೇ ಸರಸ್ವತಿ ತೀರದ ಅರಣ್ಯಗಳಲ್ಲಿ ಋಷಿಗಳ ಆಶ್ರಮಗಳು ನೆಲೆ ನಿಂತವು. ಕೃಷಿ ಆಧಾರಿತ ಸುಸ್ಥಿರ ಜೀವನ ನೆಲೆಸಿತು. ಇಲ್ಲಿಯೇ ಆರ್ಯರ ವೇದ ಸಂಸ್ಕೃತಿ ಮತ್ತು ನಗರ ನಾಗರಿಕತೆ ಅರಳತೊಡಗಿತು. ಸರಸ್ವತಿ ಲುಕರ್ನರ್ ಸಾರ್, ದಿದ್ವಾನ, ಸಂಬಾರ್ ಪ್ರದೇಶಗಳಲ್ಲಿ ಮತ್ತು ಜೈಸಲ್ಮೇರ್ ರಣದಲ್ಲಿದ್ದ ತಗ್ಗುಗಳನ್ನು ತುಂಬಿ ಸಿಹಿನೀರಿನ ಬಹುದೊಡ್ದ ಸರೋವರಗಳನ್ನು ನಿರ್ಮಿಸಿದ್ದಿತು. ದೊಡ್ಡ ಸರೋವರಗಳಿಗೆ ಜೀವದಾತೆಯಾದುದರಿಂದ ಅದನ್ನು ‘ಸರಸ್-ವತಿ’ ಎಂದು ಕರೆಯಲಾಯಿತು. ಸಮಾಂತರದಲ್ಲಿ ಪಂಜಾಬ್’ನ ಪಶ್ಚಿಮ ಭಾಗದಲ್ಲಿ ಸಿಂಧೂ ನಾಗರಿಕತೆ ಪ್ರಾರಂಭವಾಯಿತು. ಇಂತಹ ಪವಿತ್ರ ಸರಸ್ವತಿಯ ದಡದಲ್ಲಿ ಋಗ್ವೈದಿಕರು ಸೈಂಧವ ನಾಗರಿಕತೆಯ ಬೀಜಗಳನ್ನು ಬಿತ್ತಿದರು. (23) (ಚಿತ್ರ : ಪಥ ಬದಲಿಸಿದ ನದಿಗಳು) ಪ್ರ.ಶ.ವೂ 3000 ವರ್ಷಗಳ ಹಿಂದೆ ಏಷ್ಯಾದ ಭೂಫಲಕ ಯೂರೋ ಭೂಫಲಕವನ್ನು ಒತ್ತತೊಡಗಿ ಭೂಕಂಪವಾಗಿ ಭೂಶಿಲೆಗಳು ಪಲ್ಲಟಗೊಂಡು ಸರಸ್ವತಿ ನದಿಯ ನೀರಿನ ಮೂಲಗಳಾದ ಯಮುನಾ ಮತ್ತು ಶುತದ್ರಿಗಳು (ಸಟ್ಲೆಜ್) ಪಥ ಬದಲಿಸಿದವು. ಪೂರ್ವಕ್ಕೆ ಹರಿಯುತ್ತಿದ್ದ ಶುತದ್ರಿ ನದಿ ರೂಪಾರ್ ಬಳಿ ಭೂಪಲ್ಲಟದಿಂದಾಗಿ– 90 ಡಿಗ್ರಿ ತಿರುಗಿ ಪಶ್ಚಿಮಾಭಿಮುಖಿಯಾಗಿ ಹರಿದು ಸಿಂಧೂನದಿಗೆ ಸೇರಿತು. ಯಮುನಾ ಪೂರ್ವದತ್ತ ಹರಿಯಿತು. ಹಿಮನದಿಗಳಿಂದ ನೀರನ್ನು ಪಡೆದು ಸೇರುತ್ತಿದ್ದ ಶುತದ್ರಿ ಮತ್ತು ಯಮುನಾ ನದಿಗಳನ್ನು ಸಿಂಧೂ ಮತ್ತು ಗಂಗಾ ನದಿಗಳಿಗೆ ಬಿಟ್ಟುಕೊಟ್ಟ ಸರಸ್ವತಿ ನೀರಿಲ್ಲದೆ ಬಡವಾಯಿತು. ಅದರ ಮೂಲ ಹೆಸರೇ ಮರೆಯಾಗಿ ಗುರುತಿಸಲಾಗದ ಘಾಗರ್-ಹಕ್ರಾ ಹೆಸರು ಉಳಿಯಿತು. [2] ಹೀಗೆ ಋಗ್ವೇದ ಕಾಲದಲ್ಲಿದ್ದ ಬೃಹತ್ ಸರಸ್ವತಿಯ ಅಸ್ತಿತ್ವವನ್ನು ಪ್ರತಿಪಾದಿಸಲಾಗಿದೆ. ರಾಜಸ್ಥಾನ, ಗುಜರಾತ್’ಗಳಲ್ಲಿ ವಿವಿಧ ಪಕ್ಷಗಳ ಸರ್ಕಾರಗಳು ನೀರಾವರಿಗೆ ಆದ್ಯತೆ ನೀಡಿ ಹಲವಾರು ಯೋಜನೆಗಳನ್ನು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿವೆ. ಇವೆಲ್ಲವುಗಳನ್ನು ಕಳೆದು ಹೋದ ಋಗ್ವೇದದ ಸರಸ್ವತಿಯ ಹುಡುಕಾಟದ ಮತ್ತು ಪುನಶ್ಚೇತನದ ಭಾಗವೆಂದು ಸಾರುವಲ್ಲಿ ಯಶಸ್ಸು ದಕ್ಕಿ ನೀರಾವರಿ ಯೋಜನೆಗಳ ನಡುವೆಯೇ ‘ಪರಂಪರೆಯ ತಾಣ’ ಯಾತ್ರಾ ಸ್ಥಾನಗಳನ್ನು ಪ್ರಾಶಸ್ತ್ಯಗಳಿಸತೊಡಗಿದವು. ಋಗ್ವೇದದ ಸರಸ್ವತಿ ನದಿಯನ್ನು ಹೀಗೆ ಗುರುತಿಸಿದ ನಂತರ ಭಾರತದ ಇತಿಹಾಸವನ್ನು ನೋಡಬೇಕಾದ ದೃಷ್ಟಿಕೋನ ಬದಲಾಗಬೇಕೆಂಬ ಕೂಗೆದ್ದಿತು. ಸರಸ್ವತಿ ನದಿ ಶೋಧ ಪ್ರಕಲ್ಫ’ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್.ಕಲ್ಯಾಣರಾಮನ್ ಈಗ ಗುರುತಿಸಲಾಗಿರುವ ಹಾಗೂ ಸಿಂಧೂ ಸಂಸ್ಕೃತಿಯವೆಂದು ಕರೆಯಲಾಗುತ್ತಿರುವ ಪ್ರಾಚೀನ ನೆಲೆಗಳಲ್ಲಿ 2000ಕ್ಕೂ ಅಧಿಕ ತಾಣಗಳು ಸರಸ್ವತಿ ನದಿ ದಂಡೆಯ ಮೇಲಿದ್ದರೆ, ಕೇವಲ 600 ಮಾತ್ರ ಸಿಂಧೂ ನದಿ ತೀರದಲ್ಲಿವೆ. ಆದ್ದರಿಂದ ಇದು ನಿಜವಾಗಿಯೂ ಸರಸ್ವತಿ ಸಂಸ್ಕೃತಿ. ಹಾಗಾಗಿ ಇದನ್ನು ಸಿಂಧೂ-ಸರಸ್ವತಿ ಸಂಸ್ಕೃತಿ ಎನ್ನುವುದೇ ಸೂಕ್ತ ಎಂದು ವಾದಿಸಿ ಅದನ್ನು ಜನಪ್ರಿಯಗೊಳಿಸಲು ಯತ್ನಿಸಿದರು. ಇದೇ ರೀತಿಯಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಸಿಂಧೂ ಲಿಪಿಯನ್ನು ಬಿಡಿಸಿ ವಿವಾದಕ್ಕೊಳಗಾಗಿದ್ದ ಎನ್.ಎಸ್. ರಾಜಾರಾಂ ಹರಪ್ಪಾ-ಮೊಹೆಂಜದಾರೊಗಳನ್ನೊಳಗೊಂಡ ಸಂಸ್ಕೃತಿಯನ್ನು ಸರಸ್ವತಿ ಸಂಸ್ಕೃತಿ ಎಂದು ಕರೆದರು. ಅಂಬಿತಮೆ ಅಪಘಾನಿಸ್ತಾನದಲ್ಲಿ ? ಆರ್ಯರು ಅಪಘಾನಿಸ್ತಾನದ ಮೂಲಕ ಸಪ್ತಸಿಂಧೂ ಪ್ರದೇಶವನ್ನು ಪ್ರವೇಶಿಸಿದರು. ಆವರು ಋಗ್ವೇದದಲ್ಲಿ ಹಾಡಿ ಹೊಗಳಿರುವ ಸರಸ್ವತಿ ಮತ್ತು ಸಪ್ತಸಿಂಧೂಗಳು ಭಾರತ-ಪಾಕಿಸ್ತಾನಗಳ ಪಂಜಾಬ್ ಪ್ರಾಂತದಲ್ಲಿರದೆ ಅಪಘಾನಿಸ್ತಾನದಲ್ಲಿವೆ. ಅಲ್ಲಿಂದ ಭಾರತದ ವಾಯುವ್ಯ ಪ್ರದೇಶಕ್ಕೆ ಬಂದ ಆರ್ಯರು ತಾವು ಹೊಸದಾಗಿ ಕಂಡ ನದಿಗಳನ್ನು ತಾವು ಹಿಂದೆ ನೆಲೆಸಿದ್ದ ನದಿಗಳ ಹೆಸರಿನಿಂದಲೇ ಕರೆದರು. ಒಂದು ಪ್ರದೇಶದಲ್ಲಿರುವ ನದಿಯ ಹೆಸರುಗಳನ್ನು ಮತ್ತೊಂದು ಪ್ರದೇಶದ ನದಿಗಳಿಗೂ ವರ್ಗಾಂತರಿಸಿದರು ಎಂದು ವಾದಿಸಿರುವ ಕೆಲವರು ಋಗ್ವೇದದ ಆರಂಭಿಕ ಮಂಡಲಗಳಲ್ಲಿ ಬರುವ ಸರಸ್ವತಿ ಅಪಘಾನಿಸ್ತಾನದಲ್ಲಿದ್ದರೆ ನಂತರದ ಮಂಡಲಗಳಲ್ಲಿ ಬರುವ ಸರಸ್ವತಿಯೇ ಘಾಗರ್-ಹಕ್ರಾಕ್ಕೆ ಸೇರುವ ಉಪನದಿ ಸರ್ಸುತಿ ಎನ್ನುತ್ತಾರೆ. ಋಗ್ವೇದ ಸಿಂಧೂ, ಅದರ ಪೂರ್ವ-ಪಶ್ಚಿಮಕ್ಕಿರುವ ಉಪನದಿಗಳನ್ನು ಸರಸ್ವತಿ ಹಾಗೂ ಇನ್ನಿತರ ನದಿಗಳನ್ನು ಹೆಸರಿಸುತ್ತದೆ. ಅದರಲ್ಲಿ ಬರುವ ಕೆಲ ನದಿಗಳ ಭೌಗೋಳಿಕ ಸ್ಥಾನ ನಿರ್ಧರಿಸಲು ಯಾವುದೇ ಕುರುಹುಗಳು ದಕ್ಕುವುದಿಲ್ಲ. ಆದ್ದರಿಂದ ಋಗ್ವೇದದ ಸರಸ್ವತಿ ಯಾವುದೆಂದು ಖಚಿತವಾಗಿ ಹೇಳಲಾಗದು. ಋಗ್ವೇದದ ಆರಂಭಿಕ ಮಂಡಲಗಳಲ್ಲಿ ಸರಸ್ವತಿಯನ್ನು ಹೊಗಳಲು ಒಂದು ಸಂಪೂರ್ಣ ಸೂಕ್ತ ಬಳಕೆಯಾಗಿದೆ. (ಋ.ವೇ 6/61/1-14). ಋಗ್ವೇದದ ವಿವಿಧ ಮಂಡಲಗಳಲ್ಲಿ ಸರಸ್ವತಿಯನ್ನು ‘ನದಿತಮೆ-ಅಂಬಿತಮೆ-ದೇವಿತಮೆ (ಋ.ವೇ 2/41/6) , ಎಲ್ಲ ನದಿಗಳಿಗಿಂತಲೂ ದೊಡ್ದದು ಮತ್ತು ಗಾಂಭೀರ್ಯ ಹೊಂದಿರುವುದು (ಋ.ವೇ. 7/95/2) , ಅಬ್ಬರಿಸುತ್ತ ಸಾಗುವುದು (ಋ.ವೇ 6/62/7), ಬೇರೆ ನದಿಗಳಿಗಿಂತ ರಭಸವಾಗಿರುವುದು ( ಋ.ವೇ 6/61/13) , ಭೋರ್ಗರೆಯುತ್ತ ಘರ್ಜಿಸುವುದು ( ಋ.ವೇ 6/61/8) , ಮೂರು ಮೂಲಗಳಿಂದ ನೀರು ಪಡೆಯುವಂತಹುದು (ಋ.ವೇ 6/61/12) , ಪರ್ವತದಲ್ಲಿರುವುದು (ಋ.ವೇ 7/95/2) , (ಉದ್ದವಿರುವುದರಿಂದ) ಹಲವಾರು ರಾಜರುಗಳಿಗೆ (ಋ.ವೇ 9/21/18) ಮತ್ತು ಐದು ಕುಲಗಳಿಗೆ (ಋ,ವೇ 6/61/12) ನೆಲೆ ಒದಗಿಸಿರುವುದು , ಸಿಂಧು ಮಾತಾ -ಹಲವು ನದಿಗಳ ತಾಯಿ (ಋ,ವೇ 7/36/6) , ನದಿಗಳಿದ ನೀರು ಪಡೆದು ಉಕ್ಕುವಂತಹುದು (ಋ.ವೇ 6/52/6) , ಏಳು ಸಂಖ್ಯೆಯಲ್ಲಿರುವುದು ( ಋ.ವೇ 6/61/12) ಮತ್ತು ಅವುಗಳಲ್ಲಿ ಏಳನೆಯದು (ಋ.ವೇ 7/36/6) , ಏಳು ಸೋದರಿಯರನ್ನು ಉಳ್ಳದ್ದು (ಋ.ವೇ 6/61/10) ಎಂದು ಹಾಡಲಾಗಿದೆ. ಒಂದು ಋಚೆಯಲ್ಲಿ ಸರಸ್ವತಿ ಮತ್ತು ಏಳು ನದಿಗಳನ್ನು ಹೇಳಲಾಗಿದೆ (ಋ.ವೇ 8/54/4) . ದೃಷ್ಟದ್ವತಿ ಮತ್ತು ಅಪಯ ನದಿಗಳನ್ನು ಸರಸ್ವತಿಯೊಂದಿಗೆ ಹೆಸರಿಸಲಾಗಿದೆ (ಋ.ವೇ 3/23/4) . ಸಮುದ್ರವನ್ನು ಅರಸುವ ಏಳು ದೊಡ್ದ ನದಿಗಳನ್ನು (ಋ.ವೇ1/71/7) ಸಹ ಹೇಳಲಾಗಿದೆ. ಋಗ್ವೇದದಲ್ಲಿ ಬರುವ ಈ ಎಲ್ಲ ವಿವರಣೆಗಳಿಂದ ಸರಸ್ವತಿ ನದಿ ಭಾಗಶಃ ಪರ್ವತ ಪ್ರದೇಶದಲ್ಲಿ ಹರಿದು , ಹಲವಾರು ಉಪನದಿಗಳಿಂದ ನೀರನ್ನು ಪಡೆದು ಸಮುದ್ರದತ್ತ ಸಾಗುತ್ತಿದ್ದ, ಸಾಕಷ್ಟು ನೀರಿದ್ದ , ಉದ್ದವಾಗಿದ್ದ ನದಿಯಾಗಿದ್ದು , ಅದರೊಂದಿಗೆ ಇತರ ಸ್ವತಂತ್ರ ನದಿಗಳು ಸಹ ಅಸ್ತಿತ್ವದಲ್ಲಿ ಇದ್ದವೆಂದು ಖಚಿತವಾಗುತ್ತದೆ. ಋಗ್ವೇದ ಹೊರತಾದ ಇತರ ಎರಡನೇ ಹಂತದ ವೈದಿಕ ಆಕರಗಳಲ್ಲಿಯೂ ಸರಸ್ವತಿಯ ಬಗ್ಗೆ ಇನ್ನಿತರ ವಿವರಗಳು ಸಿಗುತ್ತವೆ. ಈ ಆಕರಗಳು ನಂತರ ಕಾಲದ್ದಾದರೂ ಅವುಗಳಲ್ಲಿ ಹಿಂದಿನ ಕಾಲಕ್ಕೆ ಸೇರಿದ ವಿಷಯಗಳಿವೆ. ಇವುಗಳ ಪ್ರಕಾರ ಕುರುಕ್ಷೇತ್ರ ಪ್ರದೇಶದಲ್ಲಿ ಸರಸ್ವತಿ , ದೃಷ್ಟದ್ವತಿ , ಅಪಯ ನದಿಗಳು ಹರಿಯುತ್ತಿದ್ದವು. ಈ ಪ್ರದೇಶದಲ್ಲಿ ಸರಣ್ಯವಂತ ಮತ್ತು ಅರ್ಜಿಕ್ಯ ಎಂಬ ಪ್ರಾಂತಗಳು ಮತ್ತು ಸರಣ್ಯವಂತ ಎಂಬ ಸರೋವರ ಸಹ ಇದ್ದವೆಂದು ಪಂಚವಿಂಶತಿ ಬ್ರಾಹ್ಮಣದಿಂದ (ಪಂ.ಬ್ರಾ 25/10) ತಿಳಿದುಬರುತ್ತದೆ. ಶತಪಥ ಬ್ರಾಹ್ಮಣ ಕುರುಕ್ಷೇತ್ರದಲ್ಲಿ ಅನ್ಯಥಾ-ಪ್ಲಾಕ್ಷ ಎಂಬ ಇನ್ನೊಂದು ಸರೋವರ ಇರುವುದನ್ನು ಹೊರಗೆಡವುತ್ತದೆ. (ಶ.ಬ್ರಾ11/51/4) .ಅರ್ಜಿಕ್ಯ ಪ್ರಾಂತ ಋಗ್ವೇದದಲ್ಲಿ ಸಹ ಉಲ್ಲೇಖಗೊಂಡಿದೆ (ಋ.ವೇ1/84/14) (46) ಕುರುಕ್ಷೇತ್ರದಲ್ಲಿ ವಿಶಾವತಿ ಹೆಸರಿನ ಸರೋವರ ಹಾಗೂ ವಿಶಾವತಿ ಮತ್ತು ಔಸನಾಸಸ್ ಹೆಸರಿನ ಪರ್ವತಗಳಿವೆ. ಎಂದು ಬೌಧಾಯನ ಶ್ರೌತಸೂತ್ರ (ಬೌ.ಶ್ರೌ.ಸೂ–18/4/5) ಪ್ಲಾಕ್ಷ ಪ್ರಸವಣದಲ್ಲಿ ಸರಸ್ವತಿ ಉಗಮಿಸುತ್ತದೆಯೆಂದು ಅಶ್ವಲಾಯನ (ಅ.ಶ್ರೌ.ಸೂ12/6/1) ಮತ್ತು ಶಾಂಖಾಯನ ಶ್ರೌತಸೂತ್ರಗಳು (ಶಾಂಶ್ರೌ.ಸೂ13/29/24), -ಪರ್ವತರನ್ನು ಸರಸ್ವತಿ ಕೊಂದಳು ಎಂದು ಋಗ್ವೇದ (ಋ.ವೇ 6/61/1) ಪರ್ವತರು ಯಮುನಾ ನದಿಯ ದಡದಲ್ಲಿದ್ದರು ಎಂದು ಪಂಚವಿಂಶ ಬ್ರಾಹ್ಮಣ (ಪಂ.ಬ್ರಾ 9/4/11) , ದೃಷ್ಟದ್ವತಿಯ ದಕ್ಷಿಣ ತೀರದ ಮೇಲೆ ಸಾಗಿ, ಅರ್ಮ ತಲುಪಿ ದೃಷ್ಟದ್ವತಿ ಉಗಮಿಸುವಲ್ಲಿ ನೈವೇದ್ಯಗಳನ್ನು ಅರ್ಪಿಸಿ ತ್ರಿಪ್ಲಾಕ್ಷ ಪ್ರಸವಣ ಎನ್ನುವುದರ ಸನಿಹ ಯಮುನಾ ನದಿಯಲ್ಲಿ ಇಳಿಯಬೇಕು ಎಂದು ಲಾಟ್ಯಾಯನ ಶ್ರೌತಸೂತ್ರ (ಲಾ.ಶ್ರೌ.ಸೂ 10/19/8-9) ತಿಳಿಸುತ್ತವೆ. ಇದರಿಂದ ಸರಸ್ವತಿ ಮತ್ತು ದೃಷ್ಟದ್ವತಿ ಪರ್ವತ ಪ್ರದೇಶದಲ್ಲಿ ಉಗಮಿಸುತ್ತಿದ್ದು, ಯಮುನಾ ಸರಸ್ವತಿಯ ಉಪನದಿಯಾಗಿತ್ತೆಂದು ತಿಳಿದುಬರುತ್ತದೆ. ದುಷ್ಯಂತನ ಮಗನಾದ ಭರತ ಸರಸ್ವತಿ ನದಿ ದಡ ಮೇಲೆ ವಿಜಯ ಸಂಪಾದಿಸಿದನೆಂದು ಐತರೇಯ ಬ್ರಾಹ್ಮಣ (ಐ.ಬ್ರಾ 8/23) ಆತ ಗಂಗಾ-ಯಮುನಾ ದಡದ ಮೇಲೆ ವಿಜಯ ಗಳಿಸಿದನೆಂದು ಶತಪಥ ಬ್ರಾಹ್ಮಣ (ಶ.ಬ್ರಾ13/5/4-11) ತಿಳಿಸುತ್ತವೆ. ಇದರಿಂದ ಗಂಗಾ-ಯಮುನಾ-ಸರಸ್ವತಿ-ದೃಷ್ಟವತಿ ನದಿಗಳ ಸಮೂಹ ಕಂಡುಬರುತ್ತದೆ. ಋಗ್ವೇದದ ವರ್ಣನೆಗಳ ಪ್ರಕಾರ ಸರಸ್ವತಿ , ಗಂಗಾ, ಯಮುನಾ ನದಿಗಳ ನಡುವೆ ಯಾವುದೇ ಸಂಬಂಧಗಳಿಲ್ಲ. ಪಂಚವಿಂಶ ಬ್ರಾಹ್ಮಣ (ಪಂ.ಬ್ರಾ 25/10/1) , ಜೈಮಿನೀಯ ಉಪನಿಷತ್ ಬ್ರಾಹ್ಮಣ ( ಜೈ.ಉ.ಬ್ರಾ 4/26/12) ಮತ್ತು ಇವುಗಳಿಗೆ ಸಂಬಂಧಿಸಿದ ಶ್ರೌತ ಸೂತ್ರಗಳಲ್ಲಿ ಸರಸ್ವತಿ ಮರಳುಗಾಡಿನಲ್ಲಿ ‘ವಿನಾಶನ’ ಎಂಬ ಸ್ಥಳದಲ್ಲಿ ಕಣ್ಮರೆಯಾಯಿತೆಂದು ತಿಳಿಸುತ್ತವೆ. (46) ಋಗ್ವೇದ ಶುತದ್ರಿ (ಸಟ್ಲೆಜ್) ಮತ್ತು ಬಿಯಾಸ್(ವಿಪಾಶನ) ನದಿಗಳ ಸಂಗವವನ್ನು ಕುರಿತಾಗಿ ಹೇಳುತ್ತದೆಯೇ ಹೊರತು ಎಲ್ಲಿಯೂ ಯಮುನಾ ಮತ್ತು ಸಟ್ಲೆಜ್ ಸರಸ್ವತಿಯನ್ನು ಸೇರುತ್ತಿದ್ದವೆಂದು ಹೇಳಿಲ್ಲ. ನಂತದ ವೈದಿಕ ಆಕರಗಳು ಸಹ ಇಂತಹ ಸ್ಥಿತಿಯನ್ನು ಸೂಚಿಸುವುದಿಲ್ಲ. ಮೇಲಿನ ಸಂಗತಿಗಳನ್ನು ಗಮನಿಸಿದರೆ ಋಗ್ವೇದ ‘ನದಿತಮೆ ಸರಸ್ವತಿ’ ವೇದೋತ್ತರ ಕಾಲದ ‘ವಿನಾಶನ ಸರಸ್ವತಿ’ಗೆ (ಘಾಗರ್-ಹಕ್ರಾ) ಹೊಂದಾಣಿಕೆಯಾಗದೆ ಬೇರೆಯೇ ಆಗಿರುವಂತೆ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ವಾಯುವ್ಯ ಭಾರತದ ನದಿ ಬಯಲಿನಲ್ಲಿ ಸಾವಿರಾರು ವರ್ಷಗಳಿಂದ ಮೆಕ್ಕಲು ಮಣ್ಣಿನಲ್ಲಿ ಕೃತಕ ಕಾಲುವೆಗಳನ್ನು ಮಾಡಿ ನೀರನ್ನು ಸಾಗಿಸಿರುವುದರಿಂದ ‘ನದಿತಮೆ ಸರಸ್ವತಿ ಹಾಗೂ ವಿನಾಶನ ಸರಸ್ವತಿ (=ಘಾಗರ್-ಹಕ್ರಾ) ಒಂದೇ ಆಗಿದ್ದವೇ ಅಥವಾ ಬೇರೆಯವೇ ಎಂದು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಡಾಂಗ್ರಿ , ಮಾರ್ಕಂಡ , ಸರ್ಸುತಿ ಮತ್ತು ಚೌತಾಂಗ್ ವಿನಾಶನ ಸರಸ್ವತಿಯ (ಘಾಗರ್-ಹಕ್ರಾ) ಉಪನದಿಗಳಾಗಿವೆ. ಶಿವಾಲಿಕ್ ಪರ್ವತ ಪ್ರದೇಶದಲ್ಲಿ ಹುಟ್ಟುವ ಮಳೆಯ ಮೂಲದಿಂದ ನೀರನ್ನು ಪಡೆಯುವ ತೊರೆಗಳೇ ಈ ನದಿಗಳ ಜೀವಾಳ. ಈ ತೊರೆಗಳ ಒಟ್ಟು ನೀರು ಉಪನದಿಗಳ ಮೂಲಕ ವಿನಾಶನ ಸರಸ್ವತಿಯನ್ನು (ಘಾಗರ್-ಹಕ್ರಾ) ಸೇರುತ್ತದೆ. ನೀರಿನ ಪ್ರಮಾಣ ಅಧಿಕವಾಗಿರದೆ , ಮರುಭೂಮಿಯನ್ನು ಸೀಳಿ ಸಮುದ್ರದವರೆಗೆ ಹರಿಯುವ ಸಾಮರ್ಥ್ಯವಿಲ್ಲವಾದುದರಿಂದ ವಿನಾಶನ ಸರಸ್ವತಿ ಮರಳುಗಾಡಿನಲ್ಲಿ ಬತ್ತಿಹೋಗುತ್ತದೆ. ಈಗ ಇದು ಮಳೆಗಾಲದ ನದಿ. ಪರ್ವತದಿಂದ ಹುಟ್ಟಿ , ಉಪನದಿಗಳಿಂದ ನೀರನ್ನು ಪಡೆದು , ಸಮುದ್ರದವರೆಗೆ ಹರಿಯುವ ಯಾವುದೇ ನದಿಯನ್ನು ‘ಸರಸ್ವತಿ’ ಎಂದು ಗುರುತಿಸಲು ಸಾಧ್ಯ. ಇದಕ್ಕೆ ‘ವಿನಾಶನ ಸರಸ್ವತಿ’ (ಘಾಗರ್-ಹಕ್ರಾ) ಹೊರತಲ್ಲ. ಕೆಲವು ವಿದ್ವಾಂಸರು ಋಗ್ವೇದದಲ್ಲಿ ಹಲವು ಕಡೆ ಸಿಂಧೂ ನದಿಯನ್ನು ಸಹ ಸರಸ್ವತಿ ಎಂದು ಕರೆಯಲಾಗಿದೆ ಎಂದು ತೋರಿಸುತ್ತಾರೆ. ಯಮುನಾ ಮತ್ತು ಶುತದ್ರಿ (ಸಟ್ಲೆಜ್) ನದಿಗಳು ಸರಸ್ವತಿಯನ್ನು (ಘಾಗರ್-ಹಕ್ರಾ) ಸೇರುತ್ತಿದವೆಂದು ಒಪ್ಪಿದರೂ , ಸರಸ್ವತಿಯ ಉಗಮದಿಂದ ಈ ನದಿಗಳ ಸಂಗಮದವರೆಗೆ ಯಾವುದೇ ಬದಲಾವಣೆಗಳು ಆಗಿಲ್ಲವೆನ್ನುವುದು ಸ್ಪಷ್ಟ. ಸರಸ್ವತಿ ತನ್ನ ಮೇಲ್ಭಾಗದಲ್ಲಿ (ಘಾಗರ್ ಹೆಸರಿರುವ ಭಾಗದಲ್ಲಿ) 1300 ಮೀ ಗರಿಷ್ಟ ಎತ್ತರದ ಶಿವಾಲಿಕ ಪರ್ವತಗಳ ತೊರೆಗಳಿಂದ ಮಳೆಮೂಲದ ನೀರನ್ನು ಈಗಿನಂತೆಯೇ ಹಿಂದೆಯೂ ಪಡೆಯುತ್ತಿದ್ದುದನ್ನು ನಿರಾಕರಿಸಲಾಗದು. ಈಗ ಸರಸ್ವತಿಯ ಮೇಲ್ಭಾಗ (ಘಾಗರ್) ಋಗ್ವೇದದ ವರ್ಣಿಸುವಂತೆ ಪರ್ವತಗಳನ್ನು ಕತ್ತರಿಸುತ್ತ ಹರಿಯುತ್ತಿಲ್ಲ. ಶಿವಾಲಿಕ ಪರ್ವತ ಪ್ರದೇಶಗಳಿಂದ ವಿನಾಶನ ಸರಸ್ವತಿಯನ್ನು (ಘಾಗರ್) ಹೋಲುವಂತಹ ಹಲವಾರು ಅದೇ ಗಾತ್ರದ ನದಿಗಳು ಉಗಮಿಸುತ್ತವೆ. ಅದರಲ್ಲಿ ಘಾಗರ್ ಮಾತ್ರ ಭೋರ್ಗರೆಯುವ ಋಗ್ವೇದದ ಸರಸ್ವತಿ ಹೇಗಾಯಿತೆಂದು ವಿವರಿಸಲಾಗದು. ಸರಸ್ವತಿಯನ್ನು ಘಾಗರ್-ಹಕ್ರಾಕ್ಕೆ ಸಮೀಕರಿಸಿರುವಂತೆಯೇ ದೃಷ್ಟದ್ವತಿಯನ್ನು ಚೌತಾಂಗ್ ನದಿಯೆಂದು ಊಹಿಸಲಾಗಿದೆ. . ದೃಷ್ಟದ್ವತಿಯ ಉಗಮ ಜಾಗಕ್ಕೆ ತಲುಪಿ ಅಲ್ಲಿಂದ ಸುಲಭವಾಗಿ ಯಮುನಾ ನದಿ ತಲುಪಬಹುದೆನ್ನುವ ಲಾಟ್ಯಾಯನ ಶ್ರೌತಸೂತ್ರದ ವಿವರ ಘಾಗರ್-ಹಕ್ರಾ ಮತ್ತು ಚೌತಾಂಗ್ ನದಿಗಳ ಸ್ಥಾನಗಳಿಗೆ ಸರಿಹೊಂದುವುದಿಲ್ಲ. ಯಮನಾ ನದಿ ಮಧ್ಯ ಹಿಮಾಲಯದ ಬಂಡಾರ್-ಪಂಚ್ ಹಿಮನದಿಗಳಿಂದ ಉಗಮಿಸುತ್ತಿದ್ದು ಅದು ಚೌತಾಂಗ್’ನಿಂದ ನಡೆದು ಸಾಗುವಷ್ಟು ಸನಿಹದಲ್ಲಿಲ್ಲ. ಯಮುನಾ , ಸಟ್ಲೆಜ್ ನದಿಗಳು ವಿನಾಶನ ಸರಸ್ವತಿಯನ್ನು (ಘಾಗರ್-ಹಕ್ರಾ) ಸೇರುತ್ತಿದ್ದ ಕಾಲದಲ್ಲಿ ದೃಷ್ಟದ್ವತಿ (ಚೌತಾಂಗ್) ಈಗಿರುವ ಸ್ಥಿತಿಯಲ್ಲೇ ಇದ್ದಿತೆಂದು ಪರಿಗಣಿಸಲಾಗಿದೆ. ಸರ್ಸುತಿ ಮತ್ತು ಚೌತಾಂಗ್ ನದಿಗಳೆರಡೂ ಬಹು ಹಿಂದೆ ಪರಿತ್ಯಕ್ತವಾದ ಯಮುನಾ ಕಣಿವೆಯಲ್ಲಿ ಹರಿಯುತ್ತಿದ್ದವೆಂದು ಪ್ರಾಚೀನ ಕಾಲುವೆಗಳ ಅಸ್ತಿತ್ವದಿಂದ ತಿಳಿದುಬರುತ್ತದೆ. ಎಂದರೆ ಯಮುನಾ ಈ ಕಾಲುವೆಗಳಲ್ಲಿ ಹರಿಯುತ್ತಿರುವಾಗ ಸರ್ಸುತಿ , ಚೌತಾಂಗ್ ಅಸ್ತಿದಲ್ಲೇ ಇರಲಿಲ್ಲ ಅಥವಾ ಸ್ವತಂತ್ರವಾಗಿ ಸರಸ್ವತಿಯನ್ನು (ಘಾಗರ್-ಹಕ್ರಾ) ಸೇರುತ್ತಿರಲಿಲ್ಲ. ಋಗ್ವೇದದಲ್ಲಿ ಸರಸ್ವತಿಯೊಂದಿಗಿದ್ದ ಇತರ ಏಳು ನದಿಗಳು ಸ್ವತಂತ್ರವಾಗಿ ಸಮುದ್ರದತ್ತ ಹರಿಯುತ್ತಿದ್ದವೆಂದು ಹೇಳಲಾಗಿದೆ. ಇದಕ್ಕೆ ಅಪವಾದವಾಗಿ ಸರಸ್ವತಿಯ (ಘಾಗರ್-ಹಕ್ರಾ) ಪೂರ್ವಕ್ಕಿರುವ ನದಿಗಳು ಗಂಗಾದತ್ತ ಹರಿದರೆ ಪಶ್ಚಿಮಕ್ಕಿರುವ ನದಿಗಳು ಸಿಂಧೂವಿನತ್ತ ಹರಿದು ಬೇರೆ ಬಗೆಯದೇ ಆದ ಸನ್ನಿವೇಶಗಳನ್ನು ಸೃಷ್ಟಿಸುತ್ತಿವೆ. ಸರಸ್ವತಿಗೆ ಸೇರಿದ್ದ ಕುರುಕ್ಷೇತ್ರ ಪ್ರದೇಶ ಬಹು ವಿಸ್ತಾರವಾಗಿದ್ದು ಅಲ್ಲಿ ಹಲವಾರು ಸರೋವರಗಳು . ಅಪಯ , ದೃಷ್ಟದ್ವತಿ ನದಿಗಳು , ಪರ್ವತಗಳು ಇದ್ದವೆಂದು ಹೇಳಲಾಗಿದೆ. ಘಾಗರ್-ಹಕ್ರಾದ ಈ ಪ್ರದೇಶ ಅಷ್ಟೊಂದು ವಿಶಾಲವಾಗಿರದೆ ಯಾವ ಸರೋವರಗಳು ಅವುಗಳ ಕುರುಹುಗಳು ಅಸ್ತಿತ್ವದಲ್ಲಿಲ್ಲ. ಋಗ್ವೇದ ಪರ್ವತದಿಂದ ಸಮುದ್ರದವರೆಗೆ ಹರಿಯುವ ಸರಸ್ವತಿಯನ್ನು ಕಂಡಿದ್ದರೆ ನಂತರದ ವೈದಿಕ ಆಕರಗಳು ಅದು ಆರ್ಯಾವರ್ತದ ಪಶ್ಚಿಮ ಗಡಿಯ ಮರುಭೂಮಿಯಲ್ಲಿ ಮರೆಯಾಗುವ ಬಗ್ಗೆ ಹೇಳುತ್ತವೆ ಹಾಗೂ ಹಿಂದೆ ಭೋರ್ಗರೆದು ಹರಿಯುತ್ತಿದ್ದ ಸರಸ್ವತಿ ಬತ್ತಿದ್ದರಿಂದ ಅದರ ಕೆಳಗಿನ ಯಾವ ಭಾಗಗಳು ಪಾಳುಬಿದ್ದವು , ಅಲ್ಲಿದ್ದ ಜನ ಎಲ್ಲಿ ಹೋದರು ಎಂಬ ಬಗ್ಗೆ ಮೌನ ತಾಳಿವೆ. ಋಗ್ವೇದದಲ್ಲಿರುವ ಸರಸ್ವತಿ ಸೂಕ್ತಗಳು ಸಿಂಧೂ ಸೂಕ್ತಗಳಿಗಿಂತ ಪ್ರಾಚೀನವಾದುವು ಎನ್ನಲಾಗುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಪುರಾತತ್ತ್ವ ಶೋಧನೆಗಳಿಂದ ಸಿಂಧೂವಿನ ಪಶ್ಚಿಮಕ್ಕಿರುವ ನೆಲೆಗಳು ವಿನಾಶನ ಸರಸ್ವತಿ (ಘಾಗರ್-ಹಕ್ರಾ) ನೆಲೆಗಳಿಗಿಂತ ಪ್ರಾಚೀನವೆಂದು ಅತಿ ಪ್ರಾಚೀನ ನೆಲೆಗಳು ಬಲೊಚಿಸ್ತಾನದ ಮೆಹರ್’ಘರ್’ನಲ್ಲಿಯೆಯೆಂದು ಸ್ಪಷ್ಟಪಡಿಸಿವೆ. ಋಗ್ವೈದಿಕ ಮತ್ತು ನಂತರದ ವೈದಿಕ ಪರಂಪರೆಗಳಲ್ಲಿ ಸಾತತ್ಯವಿದೆ ಎಂದು ವಾದಿಸಲಾಗಿದೆ. ಹೀಗಿದ್ದರೂ ನದಿತಮೆಯಾದ ಸರಸ್ವತಿ ಬತ್ತುತ್ತಿರುವ ವಿಷಯ ಅದು ಬತ್ತುತ್ತಿರುವ ಹಂತಗಳು ಎಲ್ಲಿಯೂ ದಾಖಲಾಗದೆ ಒಮ್ಮೆಲೆ ಬತ್ತಿದ ಸರಸ್ವತಿ ಕಾಣಿಸಿಕೊಳ್ಳುವುದು ಸೋಜಿಗವಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರಾಚೀನತಮ ನೆಲೆಗಳಿರುವ ಸಿಂಧೂನದಿಯ ಪಶ್ಚಿಮದ ಪ್ರದೇಶದಲ್ಲಿ ಮತ್ತೊಂದು ಸರಸ್ವತಿಯಿರಬಹುದೇ ಮತ್ತು ಅದು ಋಗ್ವೇದದ ನದಿತಮೆಯಾಗಿರುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕಾಗಿ ಋಗ್ವೇದದ ಸರಸ್ವತಿಯನ್ನು ಹೋಲುವ ನದಿ ಸಮೂಹಗಳನ್ನು ಸಿಂಧೂ ನದಿಯ ಪಶ್ಚಿಮ ಭಾಗದಲ್ಲಿ ಹುಡುಕಲು ಯತ್ನಿಸಲಾಗಿದೆ. ಋಗ್ವೈದಿಕರ ಎಲ್ಲ ಆಚರಣೆಗಳು ಪಾರ್ಸಿಗಳಲ್ಲಿ ಅವೆಸ್ತಾದ ಮೂಲಕ ಕಾಣಿಸಿಕೊಂಡಿವೆ. ಋಗ್ವೇದ ಮತ್ತು ಅವೆಸ್ತಾ ಒಂದಕ್ಕಿಂತ ಇನ್ನೊಂದು ಭಿನ್ನವಲ್ಲವೇನೋ ಎನ್ನುವಷ್ಟು ಹೋಲಿಕೆಯಲ್ಲಿವೆ.. ಅವೆಸ್ತಾದಲ್ಲಿ ‘ಹರಕ್ಸ್ವತಿ’ ಎಂಬ ನದಿಯ ಹಾಗೂ ಸಪ್ತಸಿಂಧೂವಿನ ಉಲ್ಲೇಖಗಳಿವೆ. ‘ಹರಕ್ಸ್ವತಿ’ ‘ಎಟಿಮ್ಯಾಂಡರ್’ ಹೆಸರಿನಲ್ಲಿ ಗ್ರೀಕರಿಗೆ ತಿಳಿದಿದ್ದಿತು. ಈಗ ಅದಕ್ಕೆ ‘ಅರ್ಘಝಂದಾಬ್’ ಎಂಬ ಹೆಸರಿದೆ. ಇದು ಹೆಲ್ಮಂಡ್ ನದಿಯ ಮುಖ್ಯ ಉಪನದಿ. ಭೌಗೊಳಿಕ ಲಕ್ಷಣ , ವರ್ಣನೆಯ ಹಿನ್ನೆಲೆಗಳಲ್ಲಿ ಹೆಲ್ಮಂಡ್ ನದಿ ಋಗ್ವೇದದ ಸರಸ್ವತಿಯಾಗಿರುವ ಸಾಧ್ಯತೆಗಳಿವೆ. ಹೆಲ್ಮಂಡ್ ನದಿಯನ್ನು ಅವೆಸ್ತಾದಲ್ಲಿ ಹೈತುಮಂತ ಎಂದು ಕರೆಯಲಾಗಿದೆ. ಹರಕ್ಸ್ವತಿ ಎಂಬ ಹೆಸರು ಹೆಲ್ಮಂಡ್ ನದಿಯ ಉಪನದಿಗೆ ಇರುವಾಗ ಅದನ್ನು ಬಿಟ್ಟು ಹೆಲ್ಮಂಡ್ ನದಿಯನ್ನು ಸರಸ್ವತಿ ಎಂದು ಗುರುತಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಸಮಾಧಾನವನ್ನು ನೀಡಲು ಸಾಧ್ಯ ಮುಖ್ಯ ನದಿಯ ಹೆಸರು ಅದರ ಉಪನದಿಗೆ ವರ್ಗಾಂತರವಾಗಿರುವ ಹಲವಾರು ಉದಾಹರಣೆಗಳಿವೆ. ವಕ್ಷು (ಈ ಹೆಸರು ಋಗ್ವೇದದಲ್ಲಿಲ್ಲ) ನದಿಯನ್ನು ಗ್ರೀಕರು ಆಕ್ಸಸ್ ಎಂದು ಕರೆದಿದ್ದರು. ಈಗ ಅದರ ಹೆಸರು ಅಮುದರಿಯ ರೂಪ ತಾಳಿದೆ. ಅದರ ಉಪನದಿಯನ್ನು ‘ವಕ್ಷ್’ ಎಂದು ಕರೆಯಲಾಗುತ್ತಿದೆ. ಇಲ್ಲಿಯೂ ಸಹ ಮುಖ್ಯ ನದಿಯ ಹೆಸರು ಬದಲಾಗಿ ಅದರ ಮೂಲ ಹೆಸರು ಅದರ ಮುಖ್ಯ ಉಪನದಿಗೆ ಬಂದಿದೆ. ಹೆಲ್ಮಂಡ್ ಹಾಗೂ ಅದರ ಮುಖ್ಯ ಉಪನದಿಯಾದ ಅರ್ಘಝಂದಾಬ್’ ಅಪಘಾನಿಸ್ತಾನದ ಕಾಬೂಲಿನಿಂದ 80 ಕಿ,ಮೀ ಪಶ್ಚಿಮದಲ್ಲಿರುವ ಹಿಂದೂಖುಷ್’ನ ಕೋಹ್-ಎ-ಬಾಬ ಪರ್ವತಶ್ರೇಣಿಗಳ ಕೊರಕಲುಗಳಲ್ಲಿ ಉಗಮಿಸುತ್ತವೆ. ಕಾಬೂಲ್ (ಕುಭಾ) ಮತ್ತು ಹರಿ-ರುದ್ ನದಿಗಳು ಉಗಮವೂ ಇದೇ ಶ್ರೇಣಿಗಳಲ್ಲಾಗುತ್ತದೆ. ಹೆಲ್ಮಂಡ್ ಮತ್ತು ಕಾಬೂಲ್ ನದಿಗಳ ನಡುವೆ 50 ಕಿ.ಮೀಗಳಷ್ಟು ಮಾತ್ರ ಅಂತರವಿದೆ. ಋಗ್ವೈದಿಕರಿಗೆ ಕುಭಾದ ಪರಿಚಯವಿರುವುದು ಸ್ಪಷ್ಟವಿರುವುದರಿಂದ ಯಾವ ಅನುಮಾನಗಳಿಲ್ಲದೆ ಅವರಿಗೆ ಹೆಲ್ಮಂಡ್ ಸಹ ಗೊತ್ತಿದ್ದಿತೆಂದು ಹೇಳಬಹುದು. ಪರ್ವತ ಪ್ರದೇಶದ ಕೊರಕಲುಗಳಲ್ಲಿ ಹೆಲ್ಮಂಡ್ ಸುಮಾರು 65 ಕಿ.ಮೀ ಗಳಷ್ಟು ದೂರ ರಭಸವಾಗಿ ಹರಿದು ಬಯಲು ಪ್ರದೇಶಕ್ಕೆ ಬರುತ್ತದೆ, ಇರಾನ್ ಗಡಿ ಸನಿಹ ಉತ್ತರಕ್ಕೆ ತಿರುಗಿ ಸಿಸ್ಟಾನ್ ಪ್ರಾಂತದ ಹಮುನ್-ಎ-ಸಬರಿ ಎಂಬ ಸರೋವರಗಳಲ್ಲಿ ಕೊನೆಗೊಳ್ಳುತ್ತದೆ. ಕಾಜ್-ರುಡ್, ರುಡ್-ಎ-ಮೂಸ, ಗಾಲ , ಮುಂತಾದ ಹಲವು ಕಿರುನದಿಗಳು ಹೆಲ್ಮಂಡ್ ನದಿಯನ್ನು ಸೇರುತ್ತವೆಯಾದರೂ 560 ಕಿ.ಮೀ ಸಾಗುವ ಅರ್ಘಝಂದಾಬ್ ಅದರ ಪ್ರಮುಖ ಉಪನದಿ. (1) ಖಷ್ಕ್-ಎ-ನೌಖಡ್ , ಗರ್ಮ್ ಅಬ್ ಎಂಬ ನದಿಗಳು ಉತ್ತರದಿಂದ ಹರಿದುಬಂದು ಅರ್ಘಝಂದಾಬ್ ನದಿಯನ್ನು ಸೇರುತ್ತವೆ. (2) ಲೋರಾ-1 ,ಖಷ್ಕ್-ಎ-ರುಡ್ ನದಿಗಳು ಅರ್ಘಸ್ಥಾನ ನದಿಯನ್ನು ಸೇರುತ್ತವೆ. ಅರ್ಘಸ್ಥಾನ ದೋರಿಯಲ್ಲಿ ಸಂಗಮವಾಗುತ್ತದ. ದೋರಿ ಮುಂದಕ್ಕೆ ಸಾಗಿ ಅರ್ಘಝಂದಾಬ್ ಸೇರುತ್ತದೆ. (3) ಅರ್ಘಝಂದಾಬ್ ಮತ್ತು ಅರ್ಘಸ್ತಾನ್ ನದಿಗಳ ನಡುವೆ ಹರಿಯುವ 320 ಕಿ.ಮೀ ಉದ್ದದ ತಾರ್ನಾಕ್ ದೋರಿಯನ್ನು ಸೇರುತ್ತದೆ. ಆಣೆಕಟ್ಟುಗಳನ್ನು ಕಟ್ಟುವ ಮೊದಲು ಹೆಲ್ಮಂಡ್ ಮಳೆಗಾಲದಲ್ಲಿ ಈ ಎಲ್ಲ ನದಿಗಳಿಂದ ಮತ್ತು ಬೇಸಗೆಯಲ್ಲಿ ಕರಗುವ ಹಿಮನದಿಗಳಿಂದ ನೀರನ್ನು ಪಡೆದು ತುಂಬಿ ಹರಿಯುವ ನದಿಯಾಗಿದ್ದಿತು. (ಚಿತ್ರ : ಹೆಲ್ಮಂಡ್ ನದಿ ಜಾಲ) ಋಗ್ವೇದ ಮತ್ತು ಅವೆಸ್ತಾದಲ್ಲಿ ಬರುವ ಪರ್ವತ ಪ್ರದೇಶ , ಉಕ್ಕಿ ರಭಸದಿಂದ ಹರಿಯುವ ಸರಸ್ವತಿಯ ವರ್ಣನೆಗಳು ವಿನಾಶನ ಸರಸ್ವತಿಗಿಂತ (ಘಾಗರ್-ಹಕ್ರಾ) ಹೆಲ್ಮಂಡ್’ಗೆ ಹೆಚ್ಚು ಹೊಂದಾಣಿಕೆಯಾಗುತ್ತವೆ. ಅರ್ಘಝಂದಾಬ್ ಮತ್ತು ತಾರ್ನಾಕ್ ದೃಷ್ಟದ್ವತಿ ಮತ್ತು ಅಪಾಯಗಳಾಗುತ್ತವೆ. ಹೆಲ್ಮಂಡ್ ಸಿಂಧೂಮಾತಾ ಅದರೆ ಫರ್-ರುಡ್, ಖುಷ್-ರುಡ್ ಮತ್ತಿತರ ನದಿಗಳು ಅದರ ಸೋದರಿಗಳಾಗುತ್ತವೆ. ಋಗ್ವೇದದ ಅರ್ಜಿಕ್ಯ ಅರ್ಘಸ್ತಾನವಾಗುತ್ತದೆ. ಸರಣ್ಯವಂತ , ಅನ್ಯಥಾ ಪ್ಲಾಕ್ಷ ಹೆಲ್ಮಂಡ್’ನ ಉಗಮ ಸ್ಥಾನಗಳು. ಗಿರಿಷ ‘ಗಿರಿ’ ಶಬ್ದದ ಅಪಭ್ರಂಶ . ಋಗ್ವೇದದ ‘ಗಿರಿಕ್ಷಿತ್’ ಈ ಪ್ರದೇಶಕ್ಕೆ ಸೇರಿದಾತ. ಗಂಗಾ-ಯಮುನಾ ನದಿಗಳು ಹೆಲ್ಮಂಡ್ ಮತ್ತು ಅರ್ಘಝಂದಾಬ್ ನಡುವಿರುವ ಉಪನದಿಗಳು. ಪರ್ವತರು ಟಾಲೆಮಿ ಹೆಸರಿಸಿರುವ ಈ ಪ್ರದೇಶದ ಪರುಯೇತೈ’ ಜನ. (46) ಹೆಲ್ಮಂಡ್ ನದಿ ಜಾಲದಲ್ಲಿದ್ದ ಋಗ್ವೈದಿಕರು ಅಲ್ಲಿನ ಎಲ್ಲ ನದಿಗಳಿಗೆ ಹೆಸರಿಸಿದ್ದರು. ಅವರು ಪೂರ್ವಕ್ಕೆ ಬಂದಾಗ ಅವರಿಗೆ ಮತ್ತೊಂದು ದೊಡ್ದ ನದಿ ಎದುರಾಯಿತು. ಆದರ ಹೆಸರರಿಯದ ಅವರು ಅದನ್ನು ಸಿಂಧೂ (= ನದಿ) ಎಂದರು. ಸಿಂಧೂ ದಾಟಿ ಮುಂದೆ ಬಂದಾಗ ವಿಪಾಶ-ಶುತದ್ರಿ (ಬಿಯಾಸ್-ಸಟ್ಲೆಜ್) ಸಂಗಮ ಕಂಡರು. (46) ವಿನಾಶನ ಸರಸ್ವತಿ (ಘಾಗರ್-ಹಕ್ರಾ) ಬಹುತೇಕ ಈಗಿರುವ ಸ್ಥಿತಿಯಲ್ಲೇ ಇದ್ದು ಕಛ್ ರಣದಲ್ಲಿ ಭಹವಲ್’ಪುರದ ದೇಶಾವರ್ ಕೋಟೆಯ ಹತ್ತಿರದ ಕೊನೆಗೊಂಡು ಮಳೆಗಾಲದಲ್ಲಿ ಸರೋವರಗಳನ್ನು ನಿರ್ಮಿಸುತ್ತಿದ್ದಿತು. ಅಪಘಾನಿಸ್ತಾನದ ಹೆಲ್ಮಂಡ್ ನದಿಯ ಕೊನೆಯಲ್ಲಿರುವ ಸರೋವರಗಳು ಇದೇ ಬಗೆಯವು. ಆದ್ದರಿಂದ ಅದು ಹರಕ್ಸ್ವತಿ. ಇದು ಸರಸ್ವತಿ. ವಶಿಷ್ಟನ ಪ್ರಾರ್ಥನೆ ತಿಳಿಸುವಂತೆ (ಋ.ವೇ 7/95/5). ಸರಸ್ವತಿ (ಘಾಗರ್-ಹಕ್ರಾ) ಮೇಲ್ಭಾಗ ಇಂದಿಗೂ ಒಣಗಿಲ್ಲ. ಹೆಲ್ಮಂಡ್ ಸರೋವರ ನಿರ್ಮಿಸಿರುವ ಇರಾನ್ ಗಡಿ ಮೂಲದಿಂದ ಕಡೆಯಿಂದ ಬಂದ ವಶಿಷ್ಟನಿಗೆ ಹೆಲ್ಮಂಡ್ ನದಿ ನಿರ್ಮಿಸಿರುವ ಸರೋವರ (=ಸಮುದ್ರ) ನೆನಪಾಗಿರಬಹುದು. ( 37) ಹಾಗಾಗಿ ಆದಕ್ಕೆ ಸೇರುತ್ತಿದ್ದ ಒಂದು ನದಿಯನ್ನು ‘ಸರಸ್ವತಿ’ ಎಂದರು. ಇನ್ನೂ ಪೂರ್ವಕ್ಕೆ ಸಾಗಿದಾಗ ಕಂಡ ನದಿಗಳನ್ನು ಗಂಗಾ-ಯಮುನಾ ಎಂದು ಕರೆದರು. ಈ ಕಾಲದಲ್ಲಿಯೇ ಋಗ್ವೇದದ 10 ನೇ ಮಂಡಲದಲ್ಲಿರುವ (ಋ.ವೇ10/75/6) ಸೂಕ್ತ ರಚಿತವಾಯಿತು. ಈ ಸೂಕ್ತದಲ್ಲಿ ಹೊಸ ಪ್ರದೇಶದ ನದಿಗಳು ಆದರೆ ಹಿಂದಿದ್ದ ಪ್ರದೇಶದಲ್ಲಿದ್ದ ನದಿಗಳ ಹೆಸರುಗಳ ವರ್ಗಾವಣೆ ಪೂರ್ಣಗೊಂಡಿತು. ಆರ್ಯರು ಮೊದಲಿಗೆ ಯಮುನಾ ನದಿ ದಾಟಿದರಾದರೂ ಅದಕ್ಕೆ ಹೆಸರಿಸಿರಲಿಲ್ಲ. ಅದರ ಪೂರ್ವಕ್ಕಿರುವ ನದಿಗೆ ಸ್ಥಳೀಯರ ಗಂಗಾ ಎಂದು ಕರೆಯುತ್ತಿದ್ದರು. ಅದಕ್ಕೆ ಸೇರುತ್ತಿದ್ದ ತಾವು ಮೊದಲೇ ಕಂಡಿದ್ದ ನದಿಗೆ ಯಮುನಾ (=ಜೋಡಿ=ಉಪನದಿ) ಎಂದು ಹೆಸರಿಸಿದರು. ಹಳೆಯ ನೆನಪುಗಳ ಹಳಹಳಿಕೆಯಲ್ಲಿ ಇವೆರಡೂ ನದಿಗಳನ್ನು ಸರಸ್ವತಿ ಸೇರುತ್ತವೆಯೆಂದು ಕಲ್ಪಿಸಿಕೊಂಡು ಗುಪ್ತಗಾಮಿನಿಯ ಐತಿಹ್ಯ ಹೆಣೆದರು. (46)[3] ವಿನಾಶನ ಸರಸ್ವತಿ (ಘಾಗರ್-ಹಕ್ರಾ) ಬತ್ತಿದ ನಂತರ ಅದನ್ನು ಅವಲಂಬಿಸಿದ ಜನ ಪೂರ್ವದತ್ತ ಸಾಗಿದರೇ ಹೊರತು ಹಿಮಾಲಯ ಮೂಲದಿಂದ ನೀರು ಪಡೆಯುವ ಶುತದ್ರಿ(ಸಟ್ಲೆಜ್)-ಯಮುನಾ ನದಿಗಳನ್ನು ಹೋಲುವ ಸಿಂಧೂನದಿಯ ಪೂರ್ವ ದಿಕ್ಕಿನ ಉಪನದಿಗಳತ್ತ ಸಾಗಲಿಲ್ಲ. ಏಕೆಂದರೆ ಅವರಿಗೆ ಹಿಮಕರಗಿ ಉಕ್ಕಿ ಹರಿಯುವ ನದಿಗಳು ಪ್ರಶಸ್ತವಾಗಿರದೆ ಮಳೆಯಿಂದ ನೀರು ತರುವ ಸಾಧಾರಣ ನದಿಗಳೇ ಅನುಕೂಲಕರವಾಗಿದ್ದವು. ಕಂಚಿನ ಯುಗದಲ್ಲಿ ಭಾರಿ ನದಿಗಳ ಸನಿಹದ ಕಾಡುಗಳನ್ನು ಕಡಿದು ನೆಲೆಗಳನ್ನು ವಿಸ್ತರಿಸುವುದು ಸಾಧ್ಯವಿರಲಿಲ್ಲ. ಋಗ್ವೇದದಲ್ಲಿ ಬರುವ ಗಂಗಾ ತೀರದ ಪೂರ್ವದಲ್ಲಿರುವ ‘ಗೋಮತಿ ; ಸರಯೂ ನದಿಗಳು ಸಹ ಬಲೊಚಿಸ್ತಾನ, ಅಪಘಾನಿಸ್ತಾನಕ್ಕೆ ಸೇರಿರುವ ಗೋಮಲ್ ಮತ್ತು ಹರಿ-ರುದ್ ನದಿಗಳೇ ಹೊರತು ಈಗಿನ ಉತ್ತರಪ್ರದೇಶದ ನದಿಗಳಲ್ಲ. ಹರಿಯಾಣದ ಸರ್ಸುತಿ ಮತ್ತು ಪೂರ್ವ ಉತ್ತರಪ್ರದೇಶದ ಸರಯೂ ನದಿಗಳೆರಡೂ ಘಾಗರ್ ನದಿಗಳನ್ನು ಸೇರುತ್ತಿರುವುದನ್ನು ಗಮನಿಸಿದರೆ, ಆರ್ಯರು ತಮ್ಮ ಹಿಂದಿನ ನೆಲೆಯ ಹೆಸರುಗಳನ್ನು ಹೊಸದಾಗಿ ಎದುರಾಗುತ್ತಿದ್ದ ನದಿಗಳಿಗೂ ಇಡುತ್ತಿದ್ದರೆಂದು ಭಾವಿಸಬಹುದು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಋಗ್ವೈದಿಕರು ಪಂಜಾಬಿಗೆ ಬರುವ ಮೊದಲು ಅಪಘಾನಿಸ್ಥಾನದ ಹೆಲ್ಮಂಡ್ ತೀರದಲ್ಲಿ ನೆಲೆಸಿದ್ದರು. ಅದೇ ಅವರ ನದೀತಮೆ ಸರಸ್ವತಿಯೆಂದು ಹೇಳಬಹುದು. (46) ಸರಸ್ವತಿಯನ್ನು ಘಾಗರ್-ಹಕ್ರಾದಲ್ಲಿ ಗುರುತಿಸಿದವರು ಋಗ್ವೇದದ ಸರಸ್ವತಿ ಅಪಘಾನಿಸ್ತಾನದ ಹೆಲ್ಮೆಂಡ್ ಎನ್ನುವುದನ್ನು ಒಪ್ಪುದೇ ತಮ್ಮದೇ ಆದ ಪುರಾವೆಗಳನ್ನು ನೀಡಲು ಯತ್ನಿಸಿದ್ದಾರೆ. ಋಗ್ವೇದದಲ್ಲಿ 6 (ಆರು) ಅತ್ಯಂತ ಹಳೆಯ ಮಂಡಲ. ಇದರಲ್ಲಿ ಗಂಗಾ – ಯಮುನಾ – ಸರಸ್ವತಿಗಳ ಉಲ್ಲೇಖಗಳಿವೆ. (ಋ.ವೇ 6/49/7) . ಅವೆಸ್ತಾದ ಅತ್ಯಂತ ಪ್ರಾಚೀನ ಕಾಂಡಗಳಲ್ಲಿ “ಹರಕ್ಸ್ವತಿ”ಯ ಉಲ್ಲೇಖವಿಲ್ಲ. ನಂತರದ ಭಾಗಗಳಲ್ಲಿ ಮೊದಲ ಬಾರಿಗೆ ನದಿ ದೇವತೆ ’ಹರಕ್ಸ್ವತಿ” ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸಪ್ತಸಿಂಧೂವಿನಿಂದ ಪಶ್ಚಿಮದತ್ತ ಸಾಗಿದ ಋಗ್ವೈದಿಕರು ಅಫಘಾನಿಸ್ತಾನದ ನದಿಗೆ ’ಹರಕ್ಸ್ವತಿ’ ಎಂದು ಹೆಸರಿಸಿದರು. ವಾಜಸನೇಯ ಸಂಹಿತೆ (ವಾ.ಸಂ. 34/11) ಸರಸ್ವತಿಯ ಐದು ಉಪನದಿಗಳನ್ನು ಹೆಸರಿಸುತ್ತದೆ. ಹೆಲ್ಮಂಡ್ ನದಿಗೆ ಇದಕ್ಕಿಂತ ಹೆಚ್ಚು ಉಪನದಿಗಳಿರುವುದಾದರೂ, ಕೇವಲ ದೊಡ್ಡ ಗಾತ್ರದ ಐದನ್ನು ಪರಿಗಣಿಸಿದರೆ ಸರಸ್ವತಿ–ಹೆಲ್ಮಂಡ್ ನಡುವೆ ವ್ಯತ್ಯಾಸಗಳಿರುವುದಿಲ್ಲ. ಈಗ ಬತ್ತಿ ಹೋಗಿರುವ ಸರಸ್ವತಿಯ (ಘಾಗರ್-ಹಕ್ರಾ) ಐದು ಮುಖಗಳನ್ನು ಜೈಸಲ್ಮೇರ್ –ಬಡ್ಮೇರ್ ಸನಿಹ ಗುರುತಿಸಬಹುದು. ಈ ಜಾಗವನ್ನು ಪಂಚಭದ್ರ ಎಂದು ಕರೆದಿರುವುದು ಈ ಕಾರಣಕ್ಕಾಗಿಯೇ. ಇಲ್ಲಿ ಲೂನಿ, ಗುಹ್ಯ, ಜೋಜಾರಿ, ಲಿಕ್ ಮತ್ತು ದಭಾರಿಯಾ ನದಿಗಳು ನಿರ್ದಿಷ್ಟ ಪವಿತ್ರ ಜಾಗದಲ್ಲಿ ಸೇರುತ್ತವೆ ಎಂದಾಯಿತು ಹಾಗಾಗಿ ಋಗ್ವೈದಿಕ ಸರಸ್ವತಿ ಹೆಲ್ಮಂಡ್ ಅಲ್ಲ. (14) ತೈತ್ತಿರೀಯ ಬ್ರಾಹ್ಮಣದಲ್ಲಿ (ತೈ. ಬ್ರಾ 2/5/8/6 ) ಸರಸ್ವತಿಯನ್ನು “ ವೈಶಂಭಾಲ್ಯ” ಎಂದು ಕರೆಯಲಾಗಿದೆ. ಇದು ಆಸ್ಟೋ – ಏಷಿಯಾಟಿಕ್ ಮೂಲದ ಪದ . ಮೂಲ ನಿವಾಸಿಗಳು ಆ ನದಿಗೆ ಇಟ್ಟ ಹೆಸರು. ಋಗ್ವೈದಿಕರು ಈ ಮೂಲ ಹೆಸರಿನ ಬದಲು ಅದಕ್ಕೆ ತಮ್ಮದೇ ಆದ ಹಳೆಯ ಸರಸ್ವತಿ ಎಂಬ ಹೆಸರನ್ನು ಇಟ್ಟರು ಎಂಬ ಮತ್ತೊಂದು ವಾದವೂ ಇದೆ. ಸರಸ್ವತಿಗೆ ವೈಶಂಭಾಲ್ಯ ಎಂಬ ಹೆಸರು ಏಕೆ ಬಂದಿತೆಂದು ಭಟ್ಟ ಭಾಸ್ಕರನ ‘ಜ್ಞಾನ ಯಜ್ಞ ಭಾಷ್ಯ ‘ದಲ್ಲಿ ವಿವರಿಸಲಾಗಿದೆ . ಅದು ಸಂಸ್ಕೃತದ ಶಬ್ದ . ಆದ್ದರಿಂದ ಘಾಗರ್-ಹಕ್ರಾ ಋಗ್ವೈದಿಕ ಸರಸ್ವತಿಗಿಂತ ಬೇರೆಯಲ್ಲ (13) ಹೀಗೆ ವಾದ-ಪ್ರತಿವಾದಗಳು ಸಾಗಿವೆ. [1] ಹಿಮಯುಗದಲ್ಲಿ ಹಿಮ ಸಂಚಯವಾಗಿದ್ದರಿಂದ ಸಮುದ್ರಗಳ ಮಟ್ಟ ಕೆಳಗಿಳಿದಿದ್ದಿತು. ಆಗ ಸಮುದ್ರದ ಮಟ್ಟ ಈಗಿನ ಮಟ್ಟಕ್ಕಿಂತ 100 ಮೀ ಕೆಳಗಿದ್ದಿತು. ಪ್ರ.ಶ.ಪೂ 16000 ವರ್ಷಗಳ ಹಿಂದೆ ಹಿಮಯುಗ ಉತ್ತುಂಗದಲ್ಲಿರುವಾಗ ಬ್ರಿಟನ್ ಹಾಗೂ ಫ್ರಾನ್ಸ್ ನಡುವಿನ ಸಮುದ್ರ 40 ಮೀ ಕೆಳಗಿದ್ದು ಜನ ದಾಟುವಂತಿದ್ದಿತು. ಪ್ರ.ಶ.ಪೂ 7000 ವರ್ಷಗಳ ಹಿಂದೆ ಹಿಮ ಕರಗತೊಡಗಿ ಸಮುದ್ರಗಳು ಮೇಲೇರತೊಡಗಿದವು. ಆಗ ಕಡಲ ತೀರದಲ್ಲಿ ನೆಲೆಸಿದ್ದ ಜನಾಂಗಗಳು ಎತ್ತರದ ಪ್ರದೇಶಗಳಿಗೆ ಸಾಗತೊಡಗಿದರು. ಇದೇ ಜಗತ್ತಿನಾದ್ಯಂತ ಜಲಪ್ರಳಯದ ಕಥೆಯ ಮೂಲ. ಅಟ್ಲಾಂಟಿಕ್ ಮಹಾ ಸಂಸ್ಕೃತ ಸಾಗರದಲ್ಲಿ ಮುಳುಗಿದ ಐತಿಹ್ಯ ಈ ಕಾಲಕ್ಕೆ ಸೇರಿರುವ ಸಾಧ್ಯತೆಗಳಿವೆ. [2] ಭೂಮಿಯ ಸುದೀರ್ಘ ಚರಿತ್ರೆಯಲ್ಲಿ ಹೊಸ ನದಿಗಳು ಹುಟ್ಟುವುದು, ಸೊಕ್ಕಿ ಮೆರೆಯುತ್ತಿದ್ದ ನದಿಗಳು ಬತ್ತಿ ಕಣ್ಮರೆಯಾಗುವುದು, ಒಂದು ನದಿಯನ್ನು ಇನ್ನೊಂದು ನದಿ ಅಪಹರಿಸುವುದು ಅಸಹಜವೇನಲ್ಲ. ಇಂತಹ ಸಾವಿರಾರು ಉದಾಹರಣೆಗಳು ಲಭ್ಯ. ಮಧ್ಯಏಪ್ಯಾದ ಆಕ್ಸನ್ ನದಿ ಕಣ್ಮರೆಯಾಗಿದೆ. ಜೋರ್ಡಾನ್ ನದಿ ಈಗ ಜೋರ್ಡಾನ್ ಮೂಲಕ ಹರಿಯುತ್ತಿಲ್ಲ. ಜೋರ್ಡನ್ ಸೇರುವ ಮೊದಲೇ ಅದು ಬತ್ತಿ ಮರೆಯಾಗುತ್ತದೆ. ಪ್ರ.ಶ 1552-55 ರ ಅವಧಿಯಲ್ಲಿ ಝೀಲಂ ನದಿ ತನ್ನ ಮಾರ್ಗ ಬದಲಿಸಿದರೆ, ಪ್ರ.ಶ1996 ರಲ್ಲಿ ಮಿಂಚು ನೆರೆಯಿಂದಾಗಿ (Flash flood) ತನ್ನ ಪಥ ಬದಲಿಸಿದ್ದಿತು. [3] ಭಾರತದಲ್ಲಿ ಈಗ ಒಂದೇ ಹೆಸರಿನ ಹಲವಾರು ನದಿಗಳು ಸಿಗುತ್ತವೆ. ತಮಗೆ ತಿಳಿದಿದ್ದ ಹೆಸರನ್ನು ಹೊಸದಾಗಿ ಕಂಡ ನದಿಗೆ ಇಡುವ ಪದ್ಧತಿ ಇಂಡೋ-ಆರ್ಯರಲ್ಲಿ ಮೊದಲಿನಿಂದಲೂ ಇದ್ದಿರಬಹುದು. ಈಗ ಭಾರತದಲ್ಲಿ ಗಂಗಾ ಹೆಸರಿನ 27 ಕ್ಕೂ ಅಧಿಕ ನದಿಗಳಿವೆ. ನದಿಗಳ ಸ್ಥಳೀಯ ಹೆಸರುಗಳನ್ನು ಬದಲಿಸಿ ‘ಸುವರ್ಣ’ ‘ಹಿರಣ್ಯ’ ಹೇಮ’ ಮುಂತಾದ ಒಂದೇ ಅರ್ಥ ನೀಡುವ ಹೆಸರುಗಳನ್ನು ನದಿಗಳಿಗೆ ಇಡಲಾಗಿದೆ. (ಲೇ) ಉಕ್ಕದ ಸರಸ್ವತಿ ಅಪಘಾನಿಸ್ತಾನದಲ್ಲಿಯೂ ಸಪ್ತ ಸಿಂಧೂಗಳಿವೆ ಅಲ್ಲಿಯೂ ಸರಸ್ವತಿ ಇದೆ. ಅಲ್ಲಿರುವ ಸರಸ್ವತಿಯ ದಡದಲ್ಲಿಯೇ ಋಗ್ವೇದ ರಚನೆಯಾಯಿತೆಂಬ ವಾದಗಳನ್ನು ಒಪ್ಪದೇ ಉಪಗ್ರಹ ಬಿಂಬಗಳಲ್ಲಿ ಕಾಣುತ್ತಿರುವ ಘಾಗರ್-ಹಕ್ರಾ ನದಿಯೇ ಪ್ರಾಚೀನ ಸರಸ್ವತಿ. ಅದು ಋಗ್ವೇದದಲ್ಲಿ ದಕ್ಕುವ ವರ್ಣನೆಗಳಂತೆ ಪರ್ವತದಲ್ಲಿ ಹುಟ್ಟಿ , ಶುತದ್ರಿ , ಯಮುನಾ ನದಿಗಳ ನೀರಿನಿಂದ ಸಮೃದ್ಧವಾಗಿ ತುಂಬಿ ಹರಿದು ಸಮುದ್ರ ಸೇರುತ್ತಿದ್ದಿತು. ಭೂಲಕ್ಷಣಗಳ ಬದಲಾವಣೆಗಳಿಂದಾಗಿ ಅದು ಹರಪ್ಪಾ ನಾಗರಿಕತೆಯ ಪ್ರಬುದ್ಧ ಕಾಲದ ವೇಳೆಗೆ (ಪ್ರ,ಶ.ಪೂ1900) ಬತ್ತಿಹೋಗಿದ್ದಿತು. ಆರ್ಯರು ಸರಸ್ವತಿ ನದಿ ತುಂಬಿ ಹರಿಯುತ್ತಿರುವಾಗಲೇ ಸಪ್ತಸಿಂಧುವಿನ ನಿವಾಸಿಗಳಾಗಿದ್ದರು. ಆದ್ದರಿಂದ ಸೈಂಧವ ಸಂಸ್ಕೃತಿಯ ಜನ ಮತ್ತು ಆರ್ಯರು ಬೇರೆಯಲ್ಲ ಎಂಬ ವಾದವನ್ನು ಒಪ್ಪಿಕೊಂಡು ಆರ್ಯರು ಹೊರಗಿನಿಂದ ಬಂದವರಲ್ಲ . ಆರ್ಯರ ಆಗಮನ/ಆಕ್ರಮಣ ವಾದ ಒಂದು ಕಟ್ಟು ಕಥೆ ಎಂದು ತೀರ್ಮಾನಿಸೋಣವೇ ? ಹಾಗೆ ತೀರ್ಮಾನಿಸುವುದು ಸಾಧ್ಯವೇ ?ಎಂದು ವಿಚಾರಿಸಿದಾಗ ಇದಕ್ಕೆ ಅಡ್ಡಿಯಾಗುವಂತಹ ಅಂಶಗಳು ಬೆಳಕಿಗೆ ಬರುತ್ತವೆ. ಋಗ್ವೇದದಿಂದ ಯಾವುದೇ ನಿರ್ದಿಷ್ಟ ನದಿಯನ್ನು ಸರಸ್ವತಿ ಎಂದು ಗುರುತಿಸಲು ಸಾಧ್ಯವಿಲ್ಲ. ಋಗ್ವೇದದಲ್ಲಿರುವ ಸರಸ್ವತಿ ಯಾವಾಗಲೂ ಒಂದೇ ನದಿಯನ್ನು ಕುರಿತಾಗಿರಲಿಲ್ಲ. ಶುತದ್ರಿ (ಸಟ್ಲೇಜ್) ಮತ್ತು ಯಮುನಾ ನದಿಗಳು ವೇದಕಾಲದಲ್ಲಿ ಸರಸ್ವತಿಯ ಉಪನದಿಗಳಾಗಿದ್ದವೆನ್ನುವ ವಾದಕ್ಕೆ ವಿರುದ್ಧವಾದ ಹೇಳಿಕೆಗಳು ಋಗ್ವೇದದಲ್ಲಿಯೇ ದಕ್ಕುತ್ತವೆ. ಸರಸ್ವತಿಯನ್ನು ಕುರಿತಾಗಿ ಹೇಳುವ ಋಗ್ವೇದದಲ್ಲಾಗಲಿ , ಇತರ ವೇದ , ಬ್ರಾಹ್ಮಣಗಳಲ್ಲಾಗಲಿ ಸರಸ್ವತಿಗೆ ಶುತದ್ರಿ ಮತ್ತು, ಯಮುನಾ ನದಿಗಳು ಸೇರುತ್ತಿದ್ದ ಭೂಲಕ್ಷಣದಲ್ಲಿ ಪರಿವರ್ತನೆಗಳಾಗಿ ಅವು ಪಥ ಬದಲಿಸಿ ಸಿಂಧೂ ಮತ್ತು ಗಂಗಾ ನದಿಗಳತ್ತ ತಿರುಗಿದ ಪುರಾವೆಗಳು ಸಿಗುವುದಿಲ್ಲ. ಸರಸ್ವತಿ ಪರ್ವತದಿಂದ ಸಮುದ್ರದವರೆಗೆ ತುಂಬು ರಭಸದಿಂದ ಹರಿಯುತ್ತಿತ್ತೆನ್ನುವ ಸ್ಥೂಲ ಹೇಳಿಕೆಯ ಹೊರತಾಗಿ ಅದು ಹುಟ್ಟುತ್ತಿದ್ದ ಪರ್ವತ ಮತ್ತು ಸಮುದ್ರ ಸೇರುತ್ತಿದ್ದ ಜಾಗ ಯಾವುವೆಂದು ಸ್ಪಷ್ಟವಾಗುವುದಿಲ್ಲ. ಋಗ್ವೇದದಲ್ಲಿರುವ ಸರಸ್ವತಿಯ ಜಾಗದಲ್ಲಿಯೇ ಘಾಗರ್-ಹಕ್ರಾ ನದಿ ಇರುವುದಾದರೂ ಅದೇ ಋಗ್ವೇದದ ಸರಸ್ವತಿಯೆಂದು ಹೇಳಲು ಋಗ್ವೇದದ ಮತ್ತು ಇತರ ವೈದಿಕ ಸಾಹಿತ್ಯದ ಆಂತರಿಕ ವಿಶ್ಲೇಷಣೆ , ಭೂವಿಜ್ಞಾನ , ಪ್ರಾಚೀನ ಭೂಪರಿಸರದ ಸ್ಥಿತಿಗತಿಗಳು ಅಡ್ಡಿಬರುತ್ತವೆ. ‘ಹಿಡಿದ ಲಗಾಮನ್ನು ಸಡಿಲಿಸಿದಾಗ ಧಾವಿಸುವ ಹೆಣ್ಣು ಕುದುರೆಗಳಂತೆ ಇವೆರಡು ನದಿಗಳು ಪರ್ವತದಿಂದ ಇಳಿಯುತ್ತಿವೆ. ಕರುವನ್ನು ವಾತ್ಸಲ್ಯದಿಂದ ನೆಕ್ಕಲು ಓಡುವ ಹಸುಗಳಂತೆ ವಿಪಾಸ ಮತ್ತು ಶುತದ್ರಿಗಳು ಕೆಳಗಿಳಿಯುತ್ತಿವೆ. ಇಂದ್ರನಿಂದ ಪ್ರೇರಿತರಾದ ನಾವು ಸಮುದ್ರದತ್ತ ನೀವು ನಿಮ್ಮ ರಥಗಳಲ್ಲಿ ಸಾಗಿರೆಂದು ಬೇಡುತ್ತೇವೆ. ಜೊತೆಗೆ ಹರಿಯುತ್ತ , ಉಕ್ಕುತ್ತ ಸಾಗುವ ಓ ನದಿಗಳೇ ಒಬ್ಬರು ಮತ್ತೊಬ್ಬರತ್ತ ಸಂಗಮಿಸಲು ಧಾವಿಸುತ್ತಿರುವಿರಿ. ಕರುವನ್ನು ನೆಕ್ಕಲು ಧಾವಿಸುವ ಹಸುಗಳಂತೆ ಅವು ತಮ್ಮಿಬ್ಬರಿಗಿರುವ ಒಂದೇ ಮನೆಯತ್ತ ಸಾಗುತ್ತಿವೆ (ಋ.ವೇ 3/33/2-3). ಋಗ್ವೇದದ ಈ ಮಂತ್ರ ಶುತದ್ರಿ (ಸಟ್ಲೆಜ್) ಮತ್ತು ವಿಪಾಸ (ಬಿಯಾಸ್) ನದಿಗಳ ಸಂಗಮವನ್ನು ಹೇಳುತ್ತದೆ. ಇದು ಈಗಿರುವ ಪರಿಸ್ಥಿತಿ. ವಾದಕ್ಕಾಗಿ ಭೂಪಲ್ಲಟಗಳಿಂದ ಶುತದ್ರಿ ಮತ್ತು ಯಮುನಾ ತಮ್ಮ ದಿಕ್ಕುಗಳನ್ನು ಬದಲಿಸಿದವೆಂದು ಒಪ್ಪಿದರೂ ಅದು ಋಗ್ವೇದದ ಕಾಲಕ್ಕಿಂತ ಮೊದಲೇ ಘಟಿಸಿರಬೇಕು. ಏಕೆಂದರೆ ಋಗ್ವೈದಿಕರು ಈ ಮಂತ್ರವನ್ನು ಹಾಡುತ್ತಿರುವಾಗ ಶುತದ್ರಿ ಸರಸ್ವತಿಯನ್ನು ಸೇರುತ್ತಿರಲಿಲ್ಲ ಮತ್ತು ಸರಸ್ವತಿಗೆ (ಘಾಗರ್- ಹಕ್ರಾ) ಅದರ ಕೊಡುಗೆಯಿರಲಿಲ್ಲ. ಋಗ್ವೇದದ ಆರ್ಯರಿಗೆ ಈಗ ಸರಸ್ವತಿಯೆಂದು ಊಹಿಸಲಾಗುತ್ತಿರುವ ’ಘಾಗರ್ –ಹಕ್ರಾ’ ನದಿಗೆ ಶುತದ್ರಿ ಮತ್ತು ಯಮುನಾಗಳ ಕೊಡುಗೆ ತಪ್ಪಿದ ಅದರ ಪ್ರಾಚೀನ ಹರಿಗಾಲುವೆಗಳು ಸಹ ಗೊತ್ತಿರಲಿಲ್ಲ. ಎಂದರೆ ಋಗ್ವೇದದ ಋಷಿಗಳು ಹಾಡಿರುವ ಸರಸ್ವತಿ ಘಾಗರ್-ಹಕ್ರಾ ಆಗಿರಲಾರದು. ಘಾಗರ್-ಹಕ್ರಾ ನದಿಯೇ ಋಗ್ವೇದದ ಸರಸ್ವತಿಯಾಗಿರಬಹುದೆಂಬ ಸೂಚನೆ ನೀಡಿದ ಸಿ.ಎಫ್.ಓಲ್ಡ್ ಹ್ಯಾಂ ಶುತದ್ರಿ (ಸಟ್ಲೇಜ್) ಯಮುನಾ ನದಿಗಳ ನಡುವಿನ ಹಿಮಾಲಯ ಪ್ರದೇಶದಲ್ಲಿ ದೊಡ್ಡ ನದಿ ಹರಿದು ಬಯಲು ಸೇರುವಂತೆ ಅನುಕೂಲ ಮಾಡಿಕೊಡುವಂತಹ ಕಣಿವೆ ಮಾರ್ಗಗಳಿಲ್ಲ ಎಂದು ಸಹ ದಾಖಲಿಸಿದ್ದಾನೆ. ಈ ಪರಿಸ್ಥಿತಿ ಋಗ್ವೇದದ ಶುತದ್ರಿ ಮತ್ತು ವಿಪಾಸಗಳ ಸಂಗಮವನ್ನು ಹಾಗೂ ಘಾಗರ್-ಹಕ್ರಾ ಋಗ್ವೈದಿಕ ಸರಸ್ವತಿಯಲ್ಲ ಎಂಬ ವಾದವನ್ನು ಸಮರ್ಥಿಸುವಂತಿದೆ. ಈ ಮೇಲಿನ ವಾದವನ್ನು ಒಪ್ಪದವರು ಋಗ್ವೇದದ (ಋ.ವೇ 3/33/2-3) ಹೇಳಿಕೆ ಶುತದ್ರಿ ಮತ್ತು ವಿಪಾಸಗಳ ಸಂಗಮವನ್ನು ಸೂಚಿಸುವುದೇ ಹೊರತು ಶುತದ್ರಿ ಸರಸ್ವತಿಯನ್ನು ಸೇರುತ್ತಿರಲಿಲ್ಲ ಎಂದು ಎಲ್ಲಿಯೂ ಹೇಳುವುದಿಲ್ಲ ಎಂದರೆ ಇನ್ನೂ ಕೆಲವರು ಶುತದ್ರಿ-ವಿಪಾಸಗಳು ಸಂಗಮಿಸತ್ತಿದ್ದ ಬಗ್ಗೆ ಸಂಶಯ ತಾಳಿದ್ದಾರೆ. ಈ ಋಚೆಯಲ್ಲಿ ಕುಶಿಕನ ಮಗನಾದ ಕೌಶಿಕ (=ವಿಶ್ವಾಮಿತ್ರ-ಸುದಾಸನ ಪುರೋಹಿತ) ಕೆಲ ಕ್ಷಣ ರಭಸವನ್ನು ಕಡಿಮೆಗೊಳಿಸಿ ತಾನು ನದಿ ದಾಟಲು ಅನುಕೂಲ ಮಾಡಿಕೊಡಬೇಕೆಂದು ನದಿಗಳನ್ನು ಬೇಡಿದ್ದಾನೆ. ಯಾರಾದರೂ ನದಿಯನ್ನು ಸುಲಭವಾಗಿ ದಾಟಬೇಕೆಂದಿದ್ದರೆ ನದಿಯ ಉಗಮದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವಲ್ಲಿ ಅಥವ ಕೆಳಭಾಗದಲ್ಲಿ ನೀರಿನ ರಭಸ ಕಡಿಮೆ ಇರುವಲ್ಲಿ ದಾಟುತ್ತಾರೆ. ಎರಡು ನದಿಗಳು ಸೇರುವ ಸಂಗಮದಲ್ಲಿ ನೀರಿನ ಪ್ರಮಾಣ ಹಾಗೂ ರಭಸಗಳೆರಡೂ ಸೇರಿರುತ್ತವೆ. ಆದ್ದರಿಂದ ನದಿ ದಾಟಲು ಅದು ಪ್ರಶಸ್ತ ಸ್ಥಳವಲ್ಲ. ಆದ್ದರಿಂದ ಈ ಋಚೆಯಲ್ಲಿರುವ ‘ಸಮಾವಣ’ ಪದ ಎರಡು ನದಿಗಳ ಸಂಗಮವನ್ನು ಸೂಚಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ ಎಂದು ವಾದಿಸಿದ್ದಾರೆ. ಋಗ್ವೇದದ ಕಾಲದಲ್ಲಿ ರೂಪಾರ್ ಬಳಿ ಬೆಟ್ಟಗಳಿಂದ ಕೆಳಕ್ಕಿಳಿದು ಬರುತ್ತಿದ್ದ ವಿಪಾಸದ ಉಪನದಿಯನ್ನು ಶುತದ್ರಿ ಎಂದು ಕರೆಯಲಾಗುತ್ತಿದ್ದಿತು. ಇದರಂತೆಯೇ ಮತ್ತೊಂದು ನದಿ ಸಮಾಂತರದಲ್ಲಿ ಹರಿದು ಬಂದು ಸರಸ್ವತಿಯತ್ತ (ಘಾಗರ್-ಹಕ್ರಾ) ಹರಿದು ಶತ್ರಾನದ ಬಳಿ ಸಂಗಮವಾಗುತ್ತಿದ್ದಿತು. ಶುತದ್ರಿ ನದಿ ಆಳವಾದ ಕೊರಕಲಿನ ಪಾತ್ರ ಹೊಂದಿದ್ದು ಹಿಮಾಲಯದಿಂದ ಬರುತ್ತಿದ್ದ ಸಮಾಂತರದಲ್ಲಿ ಸಾಗುತ್ತಿದ್ದ ನದಿಯನ್ನು ಸೆಳೆದುಕೊಂಡಿತು. ಹೀಗೆ ಆದ ನಂತರವೂ ಆ ನದಿ ಸಂಪೂರ್ಣ ಬದಲಾವಣೆ ಹೊಂದಲಿಲ್ಲ. ಅದರ ಹಳೆಯ ಕಾಲುವೆಗಳು ಮುಚ್ಚಿ ಹೋಗಿರಲಿಲ್ಲ. ಹೀಗೆ ಸೆಳೆಯಲ್ಪಟ್ಟ ಈ ನದಿ ನಂತರದ ಅವಧಿಯಲ್ಲಿ ಹಳೆಯ ಕಾಲುವೆಗಳ ಮೂಲಕ ಮತ್ತೊಮ್ಮೆ ಸರಸ್ವತಿಯತ್ತ (ಘಾಗರ್-ಹಕ್ರಾ) ಹರಿದಿರುವ ಸಾಧ್ಯತೆಗಳಿವೆ. ಈ ಭಾಗದ ನದಿಗಳು ಹೀಗೆ ತಮ್ಮ ಪಥ ಬದಲಿಸುವದು ಅಸಹಜ ವಿದ್ಯಾಮಾನವೇನಲ್ಲ. ಈಗ ವಿಪಾಸ (ಬಿಯಾಸ್) ಮತ್ತು ಶುತದ್ರಿ (ಸಟ್ಲೇಜ್) ಜಲಂಧರ್ ಸಮೀಪದ ಹರಿಕೆಯ ಬಳಿ ಸಂಗಮಿಸುತ್ತವೆ. ನದಿಗಳು ಇವೆರಡರ ಈ ಸಂಗಮ ಪ್ರ.ಶ 1796ರ ನಂತರ ಆಗಿರುವಂತಹುದು. ಇದಕ್ಕೂ ಮೊದಲು ಈ ನದಿಗಳು ಫಜಿಲ್ಕಾದ ಕೆಳಭಾಗದಲ್ಲಿ ಸೇರಿ ನಂತರ ನಾಲ್ಕು ಕವಲುಗಳಾಗಿ ಒಡೆದು ಮತ್ತೊಮ್ಮೆ ಈ ಕವಲುಗಳು ಕೆಳಭಾಗದಲ್ಲಿ ಸಂಧಿಸುತ್ತಿದ್ದವು. ‘ಇಂಪೀರಿಯಲ್ ಗೆಝೆಟಿಯರ್ ಆಫ್ ಇಂಡಿಯಾ’ದಲ್ಲಿ ಗ್ರೀಕ್ ಇತಿಹಾಸಕಾರರು ಕಂಡತೆ ಇದ್ದ ಈ ನದಿಗಳ ಸ್ವರೂಪವನ್ನು ದಾಖಲಿಸಿದೆ. ಇದರ ಪ್ರಕಾರ ಅಲೆಗ್ಸಾಂಡರ್’’ನೊಂದಿಗೆ ಬಂದಿದ್ದ ಭೂಗೋಳ ತಜ್ಞರು ಶುತದ್ರಿ-ವಿಪಾಸ-ಪರುಷ್ಣಿ (ಸಟ್ಲೆಜ್– ಬಿಯಾಸ್– ರಾವಿ) ಸ್ವತಂತ್ರ ನದಿಗಳಾಗಿ ಮೂರು ಕವಲುಗಳಲ್ಲಿ ಸಿಂಧೂ ನದಿಯನ್ನು ಸೇರುತ್ತಿದ್ದುದನ್ನು ದಾಖಲಿಸಿದ್ದಾರೆ. ಎಂ.ಎಲ್ ಭಾರ್ಗವ ಸಾಹಿತ್ಯಕ ಆಕರಗಳ ಅಧ್ಯಯನ ಮತ್ತು ಭೂಪ್ರದೇಶದ ಸಮೀಕ್ಷೆ ನಡೆಸಿ ಋಗ್ವೇದದ ಕಾಲದಲ್ಲಿ ರಾವಿ, ಬಿಯಾಸ್ ಎರಡೂ ನದಿಗಳು ಸಟ್ಲೆಜ್ ಸೇರುತ್ತಿದ್ದ ಸಾಧ್ಯತೆಗಳನ್ನು ಗುರುತಿಸಿದ್ದಾರೆ. ಈಗ ರಾವಿ, ಚಿನಾಬ್ ಸಂಗಮಿಸುತ್ತವೆ. ಮಧ್ಯ ಕಾಲದಲ್ಲಿ ಬಿಯಾಸ್ ಸಟ್ಲೆಜ್ ಬದಲಾಗಿ ನೇರವಾಗಿ ರಾವಿ ನದಿಯನ್ನು ಸೇರುತ್ತಿದ್ದಿತು. ವಿಲ್’ಹೆಲ್ಮ್ ರಾವಿ ಮತ್ತು ಬಿಯಾಸ್ ಭಾವಲ್ಪುರದ ನೈರುತ್ಯದಲ್ಲಿರುವ ನದಿ ಸೇರುತ್ತಿದ್ದರೆ, ಸಟ್ಲೆಜ್ ಘಜಿಲ್ಯಾದ ಹತ್ತಿರ ಸರಸ್ವತಿಯನ್ನು ಸೇರುತ್ತಿದ್ದಿತೆಂದು ಸೂಚಿಸಿದ್ದಾನೆ. ಕಳೆದ 2000 ವರ್ಷಗಳಿಂದ ಸಟ್ಲೆಜ್ ಕೆಲವೊಮ್ಮೆ ಬಿಯಾಸ್ ಮತ್ತು ಕೆಲವೊಮ್ಮೆ ಸರಸ್ವತಿ (ಘಾಗರ್-ಹಕ್ರಾ) ಅಥವಾ ನಾರದೊಂದಿಗೆ ಸೇರುತ್ತಿದ್ದಿತು. ಇನ್ನು ಕೆಲವು ಕಾಲ ಸಟ್ಲೆಜ್ ಬಿಯಾಸ್ ಜೊತೆ ಸಂಗಮಿಸಿ ನಂತರ ಸರಸ್ವತಿಯನ್ನು ಸೇರುತ್ತಿದ್ದಿತು. ಆದ್ದರಿಂದ ಬಿಯಾಸ್ ಸಟ್ಲೆಜ್ ಸಂಗಮ ಸರಸ್ವತಿ (ಘಾಗರ್-ಹಕ್ರಾ) ಬತ್ತಿರುವುದರ ಕುರುಹಲ್ಲ. ಏಕೆಂದರ ಇವೆರಡೂ ನದಿಗಳು ಸೇರಿ ನಂತರ ಕೆಳಭಾಗದಲ್ಲಿ ಸರಸ್ವತಿಯನ್ನು ಸೇರಿರುವ ಸಾಧ್ಯತೆಗಳಿವೆ. ಹೀಗಿದ್ದರೂ ಆ ಕಾಲದಲ್ಲಿ ಸರಸ್ವತಿ ಮೇಲ್ಭಾಗದಲ್ಲಿ ದೃಷ್ಟದ್ವತಿ ಮತ್ತು ಅಪಯ ನದಿಗಳಿಂದ ನೀರನ್ನು ಪಡೆಯುತ್ತಿದ್ದಿತು. ಆದ್ದರಿಂದ ಋಗ್ವೇದದ ಘಾಗರ್-ಹಕ್ರಾವೇ ಋಗ್ವೇದದ ಸರಸ್ವತಿ . (౧౩) ಬಹವಲ್ಪುರದರ ಬಳಿ ಹರಿಯುವ ಹಕ್ರಾ ಮತ್ತು ಸಿಂಧ್ ಬಳಿಯ ಹರಿಯುವ ನಾರ ಒಂದೇ ನದಿಯ ಬತ್ತಿಹೋದ ಮಾರ್ಗ ಎಂದು ಹೇಳಲಾಗುತ್ತದೆ. ಆದರೆ ಈಗಿರುವ ಮರಳು ದಿಬ್ಬಗಳನ್ನು ದಾಟಿ ಅವೆರಡರ ನಡುವೆ ಸಂಪರ್ಕವಿದ್ದಿತೆಂದು ಖಚಿತವಾಗಿಲ್ಲ . ಆದರೆ ಸಿಂಧ್’ನಲ್ಲಿ ಈಗಲೂ ಜನ ನಾರಾವನ್ನು ಸರಸ್ವತಿ ಅದರ ಬತ್ತಿದ ಬಯಲನ್ನು ಸರಸ್ವತಿಯೆಂತಲೂ ಕರೆಯುತ್ತಾರೆ. ಆದ್ದರಿಂದ ಘಾಗರ್-ಹಾಕ್ರಾ-ನಾರ ಸರಸ್ವತಿಯ ಒಂದೇ ನದಿಯ ಮಾರ್ಗಗಳಲ್ಲ ಮತ್ತು ಈ ನದಿ ಎಂದಿಗೂ ಸಮುದ್ರ ಸೇರುತ್ತಿರಲಿಲ್ಲ.(13) ಋಗ್ವೇದದಲ್ಲಿ (ಋ.ವೇ 10/75/5 ) ಗಂಗಾದಿಂದ ಪ್ರಾರಂಭಿಸಿ ಸಿಂಧ್’ವರೆಗಿನ ನದಿಗಳ ಉಲ್ಲೇಖ ಅನುಕ್ರಮವಾಗಿ ಬಂದಿದೆ. ಆದರೆ ಬಿಯಾಸ್ ಹೆಸರಿಲ್ಲ. ಬಿಯಾಸ್ ಸಟ್ಲೆಜ್ ನದಿಯನ್ನು ಸೇರುತ್ತಿದ್ದಿತು ಆದ್ದರಿಂದ ಬಿಯಾಸ್ ಬದಲಿಗೆ ಅದಕ್ಕಿಂತ ದೊಡ್ಡದಾದ ಸಟ್ಲೆಜ್ ನದಿಯನ್ನು ಹೆಸರಿಸಲಾಗಿದೆ ಎಂಬ ವಿವರಣೆ ಲಭ್ಯವಿದೆ (13) ಈ ವಿವರಣೆಯನ್ನು ಒಪ್ಪದವರು ಋಗ್ವೇದದ ಋಷಿಗೆ (ಋ.ವೇ10/75/5) ಸಿಂಧೂ ನದಿಯ ಮಹತ್ವವನ್ನು ಮನಗಾಣಿಸುವ ಅವಶ್ಯಕತೆಯಿದ್ದಿತು. ಅದಕ್ಕಾಗಿ ಆತ ಸಿಂಧೂನದಿಗೆ ಸೇರುವ ಎಲ್ಲ ಉಪನದಿಗಳನ್ನು ಹೆಸರಿಸಿ, ಮೊದಲ ವರ್ಗದಲ್ಲಿ ಪರಿಗಣಿಸಿ ಉಳಿದ ನದಿಗಳನ್ನು ಸೇರುವ ಅಥವಾ ಬತ್ತಿ ಹೋಗುವ ನದಿಗಳನ್ನು ಮತ್ತೊಂದು ವರ್ಗಕ್ಕೆ ಸೇರಿಸಿದ್ದಾನೆ. ಆದ್ದರಿಂದ ಮೊದಲನೇ ವರ್ಗದ ಚಿನಾಬ್ ಅದರ ಉಪನದು ಮರುಧ್ವ್ರಧ . ಝೀಲಂ ಮತ್ತು ಅದರ ಉಪನದಿಗಳಾದ ಅರ್ಜಿಕ , ಕ್ರುಮು ಸೇರಿಸಿ ಎರಡನೇ ವರ್ಗದಲ್ಲಿ ಸರಸ್ವತಿ ನದಿಯತ್ತ ಹರಿಯವ ಅಪಯ ಮತ್ತು ದೃಷ್ಟದ್ವತಿ, ಸರಯೂ ಮತ್ತು ರಸ ನದಿಗಳನ್ನು ಸಹ ಕೈಬಿಡಲಾಗಿದೆ. ಹಾಗಾಗಿ ಘಾಗರ್-ಹಾಕ್ರಾ ಸರಸ್ವತಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಲಾಗದು ಎನ್ನುತ್ತಾರೆ. (13) ಘಗ್ಗರ್ರ್-ಹಕ್ರಾ ಋಗ್ವೇದದ ಸರಸ್ವತಿ ಆಗಿದ್ದಿತೇ ಅಲ್ಲ್ಲವೇ ಎಂಬ ಇಂತಹ ವಾದ–ಪ್ರತಿವಾದಗಳನ್ನು ಗಮನಿಸಿದ ನಂತರ ಋಗ್ವೇದದಲ್ಲಿರುವ ವರ್ಣನೆಗಳು ಸಮಗ್ರವೇ ? ಅವುಗಳಲ್ಲಿ ಎಷ್ಟು ವಾಸ್ತವಿಕವಾಗಿದ್ದವು ಅಥವಾ ಕೇವಲ ಅಂಶಿಕ ವಿವರಗಳನ್ನು ಸಾಮಾನ್ಯ ರೀತಿಯಲ್ಲಿ ನೀಡುತ್ತಿದ್ದವೇ ? ಅವು ಕೇವಲ ಕಾವ್ಯಾತ್ಮಕ ಉತ್ಪ್ರೇಕ್ಷೆಗಳೇ ? ಸರಸ್ವತಿ ಬೃಹತ್ ನದಿಯಾಗಿರಲಿಲ್ಲವೇ ? ಉಪನದಿಗಳ ಪ್ರವಾಹಗಳನ್ನು ಕೂಡಿಕೊಂಡು , ಸೊಕ್ಕಿ ಭೋರ್ಗರೆದು ಉಕ್ಕುತ್ತ ಸಮುದ್ರದತ್ತ ಹರಿಯುತ್ತಿರಲಿಲ್ಲವೆ ? ಎನ್ನುವ ಪ್ರಶ್ನೆಗಳಿಗೆ ಸಾಹಿತ್ಯಕ ಮೂಲದ ಆಕರಗಳು ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಒದಗಿಸಬಲ್ಲವೇ ಹೊರತು ಉತ್ತರಗಳನ್ನಲ್ಲ. ಆದ್ದರಿಂದ ವೈದಿಕ , ಸಾಹಿತ್ಯಕ ಆಕರಗಳನ್ನು ಮೀರಿದ ಬೇರೆಯದೇ ಬಗೆಯದಾದ ಸಾಕ್ಷ್ಯಗಳ ಮೂಲಕ ಮಾತ್ರ ಸರಸ್ವತಿಯ ಅಸ್ತಿತ್ವವನ್ನು ಸಾಬೀತು ಪಡಿಸಬೇಕಾಗುತ್ತದೆ. ಘಾಗರ್-ಹಕ್ರಾ ಸರಸ್ವತಿಯಾಗಿರುವ ಸಾಧ್ಯತೆಗಳಿರಲಿಲ್ಲ ಎನ್ನುವುದಕ್ಕೆ ಅಂತಹ ಹಲವಾರು ಬೇರೆ ಸಕಾರಣಗಳಿವೆ ಅವುಗಳನ್ನು ಮುಂದಿನಂತೆ ವಿವರಿಸಬಹುದು. ನದಿಗಳು ತಮ್ಮ ಪಾತ್ರವನ್ನು ಬದಲಿಸುವುದು ಸಹಜ.ಸರಸ್ವತಿಗೂ ಹೀಗಾಗಿರಬಹುದು, ಇದನ್ನೇ ಮರುಭೂಮಿಯಲ್ಲಿ ಕಣ್ಮರೆಯಾಯಿತು ಎನ್ನಬಹುದೇ ? ಸರಸ್ವತಿಯಂತಹ ದೊಡ್ಡ ನದಿ ಪಾತ್ರ ಬದಲಿಸಿ ಬತ್ತಿ ಹೋಗಿ ವಿನಾಶಗೊಳ್ಳಲು ಭಾರಿ ಭೂಪಲ್ಲಟ ಜರುಗಿರಬೇಕು. ಅಂತಹ ಭಾರಿ ಪಲ್ಲಟ ಸರಸ್ವತಿಗೆ ಮಾತ್ರ ಸೀಮಿತವೇ ? ವಾಯುವ್ಯ ಭಾರತದ ಇಡೀ ನದಿ ಜಾಲವೇ ಇಂತಹ ಪಲ್ಲಟಗಳಿಗೆ ತುತ್ತಾಗಬೇಕಿತ್ತಲ್ಲವೇ ? ಬೃಹತ್ ನದಿಯನ್ನು ಬದಲಿಸುವಂತಹ ಭೂಪಲ್ಲಟ ಕಳೆದ 10000 ವರ್ಷಗಳಲ್ಲಿ ಜರುಗಿದೆಯೇ ? ಅದಕ್ಕೆ ಖಚಿತ ಪುರಾವೆಗಳಿವೆಯೇ ? ಅಂತಹ ಪುರಾವೆಗಳಿದ್ದರೆ ಅದರ ಕಾಲಾವಧಿಯನ್ನು ನಿರ್ಧರಿಸಲಾಗಿದೆಯೇ ? ಎಂದು ಪ್ರಶ್ನಿಸಲಾಗಿದೆ. ಮಾನವನ ನಾಗರಿಕತೆಯ ಉಗಮ ಮತ್ತು ವಿಕಾಸಕ್ಕೆ ನೀರು ಅವಶ್ಯಕವಾದರೂ ಅದಕ್ಕೆ ಉಕ್ಕಿ , ವಿಶಾಲ ಪ್ರದೇಶದಲ್ಲಿ ಹರಡಿ ಹರಿಯುವ ಬೃಹತ್ ನದಿದಂಡೆಗಳು ಪ್ರಶಸ್ತವಾದುವಲ್ಲ. ನಾಗರಿಕತೆಯ ವಿಕಸನಕ್ಕೆ ಹೆಚ್ಚಿನ ಪರಿಶ್ರಮವಿಲ್ಲದೆ ಯಾವುದೇ ರೂಪದಲ್ಲಿ ನೀರಿನ ಲಭ್ಯತೆಯೇ ಮುಖ್ಯ. ಜನಾಂಗೀಯ ಪುರಾತತ್ವ ಅಧ್ಯಯನದಿಂದ ಅರೆಶುಷ್ಕ ವಲಯದಲ್ಲಿಯೂ ಹೇಗೆ ಜನ ಜೀವಿಸಬಲ್ಲರು, ಹೇಗೆ ನಾಗರಿಕತೆಗಳು ವಿಕಸಿಸಬಲ್ಲವು ಎಂದು ವಿವರಿಸುವುದು ಸಾಧ್ಯವಾಗುತ್ತದೆ. ಅರೆಶುಷ್ಕ ಪ್ರದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ನೈಸರ್ಗಿಕವಾದ ಕೆರೆ, ಕುಂಟೆ, ಬಾವಿ, ಹೊಕ್ರಾಣಿಗಳು ಅಸ್ತಿತ್ವದಲ್ಲಿವೆ. ಬಹು ಪ್ರಾಚೀನ ಕಾಲದಿಂದಲೂ ಇಲ್ಲಿನ ಜನ ಇವುಗಳಲ್ಲಿ ಸಂಗ್ರಹವಾದ ಮಳೆ ನೀರನ್ನು ಇವುಗಳಲ್ಲಿ ಉಳಿಸಿ ಬಳಸಿಕೊಳ್ಳುವ ತಂತ್ರಗಳನ್ನು ರೂಢಿಸಿಕೊಂಡಿದ್ದಾರೆ. ಜನ ವಸತಿಗಳು ತೋಡಿದ ಬಾವಿ ,ಕೆರೆ, ಕುಂಟೆಗಳ ಸನಿಹದಲ್ಲಿರುತ್ತಿದ್ದವು. ಇವುಗಳಲ್ಲಿ ಸಂಗ್ರಹಗೊಂಡ ನೀರು ಬಾವಿಗಳತ್ತ ಹರಿಯುತ್ತಿದ್ದಿತು. ಬಾವಿಯಲ್ಲಿರುವ ರಾಡಿ ನೀರನ್ನು ಹೊರತೆಗೆದು ಸೋಸಿ ಬಳಸುತ್ತಿದ್ದರು. ಇಂತಹ ನೈಸರ್ಗಿಕ ನೀರಿನ ಮೂಲದ ಕೆಳಪ್ರದೇಶಗಳಲ್ಲಿ ಸಣ್ಣ ಒಡ್ಡುಗಳನ್ನು ಕಟ್ಟಿ , ನೀರನ್ನು ನಿಲ್ಲಿಸಿ ಒಕ್ಕಲುತನ ಮಾಡುತ್ತಿದ್ದರು. ಆದ್ದರಿಂದ ಜನಜೀವನ ನೇರವಾಗಿ ಅಪಾಯಕಾರಿಯಾದ ನದಿಯ ದಡದ ಮೇಲಿರುವ ಬರಲು ನೀರು ಲಭ್ಯವಿರುವ ನೆಲೆಗಳಲ್ಲಿ ಇರುತ್ತಿದ್ದಿತು. (2) ಸಿಂಧೂ ನಗರ ಸಂಸ್ಕೃತಿಯ ಆರಂಭಿಕ ನೆಲೆಗಳು ನದಿಯ ದಡದ ಮೇಲಿರದೆ , ಅವುಗಳಿಂದ ದೂರವಿರುವ ಆದರೆ ಮೇಲೆ ತಿಳಿಸಿದಂತಹ ನೀರಿನ ಲಭ್ಯತೆಯಿರುವ ಮೆಹರ್’ಘರ್ ಪ್ರದೇಶದಲ್ಲಿ ಕಂಡುಬಂದಿವೆ. ಆದ್ದರಿಂದ ನಾಗರಿಕತೆಗಳ ಉಗಮ ಮತ್ತು ವಿಕಾಸಕ್ಕೆ ದೊಡ್ಡ ನದಿಗಳ ದಂಡೆಗಳೇ ಆಧಾರ ಎನ್ನುವುದು ತಪ್ಪು. ಸರಸ್ವತಿ ನದಿ ಋಗ್ವೇದದ ಹಿಮಮೂಲದ ನದಿಯಾಗಿದ್ದರೆ , ಬೇಸಿಗೆಯಲ್ಲಿ ಹಿಮಕರಗಿ ಉಳಿದ ಸಮಯದಲ್ಲಿ ಮಳೆನೀರಿನಿಂದಾಗಿ ಹರಿಯುವ ಸರ್ವಋತು ನದಿಯಾಗಿರಬೇಕು. ಸರ್ವಋತು ನದಿಗಳಿಗೆ ಅವುಗಳದೇ ಆದ ವೈಶಿಷ್ಟ್ಯಗಳಿರುತ್ತವೆ. ಉದಾಹರಣೆಗೆ ಯಮುನಾ ನದಿಯನ್ನೇ ಪರಿಗಣಿಸಬಹುದು. ಸರ್ವಋತು ನದಿಗಳಲ್ಲಿ ’ ಮೇಲ್ಮೈ ಮತ್ತು ಒಳಮೈ ಖಚಿತವಾಗಿರುತ್ತವೆ. ಮೇಲ್ಮೈಯಲ್ಲಿ ಮರಳಿನ ಸಂಚಯವಿದ್ದರೆ ಒಳಮೈಯಲ್ಲಿ ನೀರಿನ ಸೆಲೆಯಿರುತ್ತದೆ. ಸತತವಾಗಿ ಹರಿಯುವ ನೀರಿನಿಂದಾಗಿ ಅದರ ಎಡ-ಬಲದ ವಿಶಾಲ ಪ್ರವಾಹದ ಬಯಲಿನಲ್ಲಿ ಅಂತರ್ಜಲ ಸಂಗ್ರಹವಾಗಿರುತ್ತದೆ. ಯಮುನಾ ನದಿಯ ದಂಡೆಯ ನೆರೆ ಬಯಲಿನಲ್ಲಿ ನೀರನ್ನು ಸತತವಾಗಿ ಹೊರತೆಗೆಯುತ್ತಿದ್ದರೂ ಅದು ಮರುಪೂರಣಗೊಳ್ಳುತ್ತಲೇ ಇರುತ್ತದೆ. ನದಿ ದೊಡ್ಡದಾಗಿದ್ದರೆ ಮಾತ್ರ ಇದು ಸಾಧ್ಯ. ಆದರೆ ಸರಸ್ವತಿ (ಘಗ್ಗರ-ಹಕ್ರಾ) ನದಿಪಾತ್ರದಲ್ಲಿ ಇವೆರಡೂ ವಿದ್ಯಾಮಾನಗಳು ಜರುಗಿದಂತೆ ಕಾಣುವುದಿಲ್ಲ. ಅಂತಹ ವಿದ್ಯಾಮಾನ ಜರುಗಿದ್ದೇ ಆಗಿದ್ದರೆ ನದಿ ಎಡ-ಬಲದ 10-20 ಕಿ,ಮೀ,ವರೆಗೂ ಈ ಪ್ರಭಾವ ಸ್ಪಷ್ಟವಾಗಿ ಗುರುತಿಸುವಂತಿರಬೇಕು. ಸರಸ್ವತಿ ನದಿ (ಘಾಗರ್-ಹಕ್ರಾ) ಪಾತ್ರದಲ್ಲಿ ಇದು ಸಾಧ್ಯವಾಗಿಲ್ಲ. ಮರಳಿನ ಸಂಚಯದ ಪ್ರಮಾಣ, ಅವುಗಳ ದಿಬ್ಬದ ಗಾತ್ರ ಸಹ ಒಂದು ನದಿ ಸರ್ವಋತು ಹೌದೇ ಅಲ್ಲವೇ ಅದು ಮಹಾನದಿಯಾಗಿದ್ದಿತೇ ಎಂದು ಸೂಚಿಸುತ್ತದೆ. ಒಂದು ವೇಳೆ ನದಿ ಜಾಡಿನಲ್ಲಿ ಎಲ್ಲಾದರೂ ಮರಳಿನ ಸಂಚಯ ಕಂಡ ಮಾತ್ರಕ್ಕೆ ಅದೇ ಸರಸ್ವತಿ ಎಂದು ಹೇಳಲಾಗದು. ಹರಿಯಾಣದ ಬಹುತೇಕ ಕಡೆ ಅಂತರ್ಜಲದ ಕುರುಹುಗಳಿಲ್ಲ. ನೀರು ಸಹ ಶುದ್ದವಾದುದಲ್ಲ. ಕರ್ನಾಲ್, ಕುರುಕ್ಷೇತ್ರ ಅಂಬಾಲದಲ್ಲಿ ದಕ್ಕಿದ ನೀರು ಮಾತ್ರ ಶುದ್ದವಾಗಿದೆ. ಇಲ್ಲಿ ತೆಗೆದ ಬಹುತೇಕ ಬಾವಿಗಳು ಆಳವಾಗಿಲ್ಲ ಮತ್ತು ನೀರು ದಕ್ಕಿರುವ ಬಾವಿಗಳ ಪ್ರದೇಶದಲ್ಲಿ ಕಾಲುವೆಗಳು ಸಾಗಿವೆ. ಈ ಪ್ರದೇಶ ಪ್ರಾಚೀನ ಕಾಲದಿಂದಲೂ ಅಸ್ತವ್ಯಸ್ತ ಮಳೆಯನ್ನೇ ಕಂಡಿದೆ. ಮಾನವರು ಎಂದಿಗೂ ಬೃಹತ್ ನದಿಗಳ ದಂಡೆಗಳ ಮೇಲೆ ವಾಸಿಸುತ್ತಿರಲಿಲ್ಲ. ಏಕೆಂದರೆ ಅವು ಯಾವಾಗ ಉಕ್ಕಿ, ಭೋರ್ಗರೆದು ತಮ್ಮ ಪ್ರವಾಹದ ಬಯಲುಗಳನ್ನು ಮುಳುಗಿಸಿಬಿಡುವುವೆಂಬ ಭಯ ಅವರನ್ನು ಕಾಡುತ್ತಿದ್ದಿತು. ಆದ್ದರಿಂದ ಋಗ್ವೇದದ ಭೊರ್ಗರೆದು ಹರಿಯುತ್ತಿದ್ದ ಸರಸ್ವತಿ ಕಾಲಕ್ಕೆ ಸೇರಿದುದು ಎನ್ನುವುದು ಒಂದು ರಂಜಿತ ಕಲ್ಪನೆಯಾಗಬಲ್ಲುದೇ ಹೊರತು ವಾಸ್ತವ ಸಂಗತಿಯಾಗಿರಲಾರದು. ಪ್ರ,ಶ 1980ರ ದಶಕದ ನಡುವಿನಲ್ಲಿ ಭಾರತೀಯ ಪುರಾತತ್ತ್ವ ಇಲಾಖೆ ಮತ್ತು ಫ್ರೆಂಚ್ ಸರ್ಕಾರ ಜಂಟಿ ಸಂಶೋಧನೆ ನಡೆಸಿ ಸಿಂಧೂ ಸಂಸ್ಕೃತಿಯ ನೆಲೆಗಳ ವಿಕಸನದಲ್ಲಿ ನೀರಿನ ಪ್ರಭಾವ ದೊಡ್ದಮಟ್ಟದಲ್ಲಿ ಇರಲಿಲ್ಲ ಎಂದು ತಿಳಿಸಿವೆ. ಹಾಗಾದರೆ ಸರಸ್ವತಿ (ಘಾಗರ್-ಹಕ್ರಾ) ನದಿ ತೀರದಲ್ಲಿ ಸಾವಿರಾರು ನೆಲೆಗಳೇಕಿವೆ ಈ ಬಗ್ಗೆ ಏನು ವಿವರಣೆ ಕೂಡಬಹುದೇ ಎಂಬ ಪ್ರಶ್ನೆ ಎದುರಾಗುತ್ತದೆ. ಸಿಂಧೂ ಸಂಸ್ಕೃತಿಯ ಆರಂಭಿಕ ಕಾಲದಲ್ಲಿದ್ದ ಒಟ್ಟು ನೆಲೆ ಹಾಗೂ ಪ್ರಬುದ್ಧ ಸ್ಥಿತಿಯಲ್ಲಿದ್ದ ಒಟ್ಟು ನೆಲೆಗಳ ಸಂಖ್ಯೆಯಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದ್ದರಿಂದ ಸರಸ್ವತಿ ನದಿ (ಘಾಗರ್-ಹಕ್ರಾ) ಆರಂಭಿಕ, ಪ್ರಬುದ್ಧ ಯಾವುದೇ ಹಂತದಲ್ಲಾಗಲಿ ಸಿಂಧೂ ಸಂಸ್ಕೃತಿಯ ಉಗಮ, ವಿಕಾಸದ ಮೇಲೆ ಗಣನೀಯ ಪ್ರಭಾವ ಬೀರಿಲ್ಲ. ಸೈಂಧವ ನಾಗರಿಕತೆಯ ಕಾಲದಲ್ಲಿ ಉತ್ತರ ರಾಜಸ್ಥಾನದ ಕಾಲಿಬಂಗನ್ ಬಳಿ ಈಗಿನ ಘಾಗರ್–ಹಕ್ರಾ ದಂಡೆಯಿರುವಲ್ಲಿ ಯಾವುದೇ ದೊಡ್ಡ ನದಿ ಹರಿಯುತ್ತಿರಲಿಲ್ಲ. ಘಾಗರ್ ನದಿ ಹತ್ತು ಸಾವಿರ ವರ್ಷಗಳ ಹಿಂದೆಯೇ ಬತ್ತಿ ಹೋಗಿದ್ದಿತು. ಘಾಗರ್ ನದಿಯ ಎಡ ಬಲದ ಮರಳಿನ ದಿಬ್ಬಗಳು ಮೊದಲೇ ರೂಪುಗೊಂಡಿದ್ದವು ಎಂದು ಕೆಲ ಅಧ್ಯಯನಗಳು ಸ್ಪಷ್ಟಪಡಿಸಿವೆ. (16) ಸೈಂಧವ ನಾಗರಿಕತೆಯ ಹೆಚ್ಚಿನ ಆರಂಭಿಕ ನೆಲೆಗಳು ನದಿಪಾತ್ರದ ಮೇಲಿರುವ ಉಪ್ಪು ನೀರಿನ ನೆಲೆಯಿಂದ ದೂರವಿರುವ ಪ್ರದೇಶಗಳಲ್ಲಿವೆ. ಸರಸ್ವತಿ (ಘಾಗರ್-ಹಕ್ರಾ) ನದಿಯ ಮೇಲಿರುವ ಸಿಂಧೂ ನಾಗರಿಕತೆಯ ನೆಲೆಗಳು ಆರಂಭಿಕ ಅಥವಾ ಪ್ರಬುದ್ಧ ಸ್ಥಿತಿಗೆ ಸೇರಿದವಾಗಿರದೆ ಅಂತಿಮ ವಿನಾಶದ ಸ್ಥಿತಿಗೆ ಸೇರಿದವಾಗಿವೆ. ಆದ್ದರಿಂದ ಸರಸ್ವತಿ ನದಿ (ಘಾಗರ್-ಹಕ್ರಾ) ನಾಗರಿಕತೆಯನ್ನು ಪ್ರೇರೇಪಿಸಿ , ಪೋಷಿಸುವಂತೆ ಕ್ರಿಯಾಶೀಲವಾಗಿರಲಿಲ್ಲ. ಋಗ್ವೇದ ಸರಸ್ವತಿಯನ್ನು ಮಾತ್ರವಲ್ಲ ಇತರ ನದಿಗಳನ್ನು ಹೆಸರಿಸುತ್ತದೆ. ಆದರೆ ಸರಸ್ವತಿಗೆ ಮಾತ್ರ ಅತಿ ಹೆಚ್ಚಿನ ಪ್ರಾಶಸ್ತ್ಯ ಏಕೆ ? ಆದ್ದರಿಂದ ಭೋರ್ಗರೆಯುತ್ತಿದ್ದ ಸರಸ್ವತಿ ನದಿಯ ತೀರದ ಮೇಲೆ ಋಗ್ವೇದ ರಚಿತವಾಯಿತು ಎನ್ನುವುದು ಒಪ್ಪಲಾಗದು. ಅರೆಶುಷ್ಕ ಪ್ರದೇಶಗಳಲ್ಲಿ ವ್ಯವಸಾಯದೊಂದಿಗೆ ಜಾನುವಾರು ಸಾಕಾಣಿಕೆಗೆ ಕೃಷಿಗಿಂತಲೂ ಕಡಿಮೆ ನೀರಿದ್ದರೆ ಸಾಕು. ಐತಿಹಾಸಿಕ ಕಾಲದಿಂದಲೂ ಈ ಪ್ರದೇಶದಲ್ಲಿ ಇದೇ ಸ್ಥಿತಿ ಮುಂದುವರೆದಿದೆ. ದನಗಾಹಿಗಳಿಗೆ ಈಗ ಕಲ್ಪಿಸಿಕೊಂಡಿರುವಂತಹ ಸರಸ್ವತಿಯಂತಹ ಬೃಹತ್ ನದಿಯ ನಿಯಂತ್ರಣ ಮತ್ತು ಬಳಕೆ ಅಸಾಧ್ಯವಾಗಿದ್ದಿತು. ಸಿಂಧೂ ಕೊಳ್ಳದ ನಾಗರಿಕ ನೆಲೆಗಳು ವಾಯುವ್ಯ ಭಾರತದಾದ್ಯಂತ ಹರಡಿವೆ. ಇವುಗಳಲ್ಲಿ 75% ಘಾಗರ್ ಹಕ್ರಾ ನದಿಯ ಎಡ ಬಲ ದಂಡೆಗಳಲ್ಲಿರುವುದು ನಿಜ. ಪುರಾತತ್ತ್ವ ಶಾಸ್ತ್ರಜ್ಞರು ಕಬ್ಬಿಣಯುಗದ ಮೊದಲಿನ ಎಲ್ಲ ನಾಗರಿಕತೆಗಳೂ ಇದೇ ರೀತಿ ವಿಕಸಿಸಿರುವುದತ್ತ ಗಮನ ಸೆಳೆಯುತ್ತಾರೆ. ದೊಡ್ಡ ನದಿಗಳ ಎಡಬಲದ ದಡಗಳಲ್ಲಿ ಸತತ ನೀರು ದಕ್ಕುರುವುದರಿಂದ ದೊಡ್ಡ ಕಾಡುಗಳು ಬೆಳೆದಿರುತ್ತವೆ. ಈ ಕಾಡನ್ನು ಕಡಿದು ಮಾನವ ವಸತಿಗೆ ಪರಿವರ್ತಿಸುವುದು ಕಂಚಿನ ಯುಗದಲ್ಲಿ ಸಾಧ್ಯವಿರಲಿಲ್ಲ. ಕಬ್ಬಿಣಯುಗದ ನಂತರವೇ ಕೊಡಲಿ ಆವಿಷ್ಕಾರವಾಗಿ ಕಾಡನ್ನು ಕಡಿದು ನಾಡನ್ನು ನಿರ್ಮಿಸುವ ಸಾಧ್ಯತೆ ಉಂಟಾಯಿತು. ಸಿಂಧೂ ನಾಗರಿಕತೆಯಲ್ಲಿ ಕಬ್ಬಿಣವಿರಲಿಲ್ಲ. ಅವರು ತಾಮ್ರ-ಕಂಚಿನ ಯುಗದವರು. ಅವರಿಗೆ ದಟ್ಟ ಕಾಡಿರುವ ಸಿಂಧೂ ನದಿಯ ದಡದಿಂದ ದೂರವಾಗಿ, ನೀರಿರುವ ಆದರೆ ಸುಲಭವಾಗಿ ವಸತಿ ನಿರ್ಮಿಸಿಕೊಳ್ಳಬಲ್ಲ ನದಿ ದಡಗಳೇ ಪ್ರಶಸ್ತವಾಗಿದ್ದವು. ಭಾರತದಲ್ಲಿ ಕಬ್ಬಿಣಯುಗ ಪ್ರ.ಶ.ಪೂ1400ರಲ್ಲಿ ಪ್ರಾರಂಭವಾಯಿತು. ಆದ್ದರಿಂದ ಸೈಂಧವ ನಾಗರಿಕತೆ ಸುಲಭವಾದ ‘ಘಾಗರ್- ಹಕ್ರಾ’ ನದಿಯನ್ನು ಆಯ್ದುಕೊಂಡಿತೇ ಹೊರತು ಭೋರ್ಗರೆವ, ಕಾಡಿನಿಂದ ಕಂಗೊಳಿಸುತ್ತಿರುವ ಸಿಂಧೂ ದಡಗಳನ್ನಲ್ಲ. ಆದ್ದರಿಂದ ಋಗ್ವೇದದ ಸಮಯದಲ್ಲಿ ಹಿಮನದಿಗಳಿಂದ ನೀರನ್ನು ಪಡೆಯುತ್ತಿದ್ದ ಸರಸ್ವತಿ (ಘಾಗರ್-ಹಕ್ರಾ) ಇರಲಿಲ್ಲ. ಘಾಗರ್-ಹಕ್ರಾ ಋಗ್ವೇದದ ಭೋರ್ಗರೆವ ಸರಸ್ವತಿಯಾಗಿದ್ದರೆ ಅಲ್ಲಿ ಕಬ್ಬಿಣ ಪೂರ್ವ ಯುಗದ ಅತ್ಯಲ್ಪ ಸಂಖ್ಯೆಯ ನೆಲೆಗಳಿರಬೇಕು. ಏಕೆಂದರೆ ಇಂತಹ ನೆಲೆಗಳಲ್ಲಿ ನೆಲೆಸುವುದು ಕಂಚಿನಯುಗದಲ್ಲಿ ಸಾಧ್ಯವಿರಲಿಲ್ಲ. ಈ ನೆಲೆಗಳು ಋಗ್ವೇದದ ಆರ್ಯರವೇ ಆಗಿದ್ದರೆ ಆಗ ಘಾಗರ್-ಹಕ್ರಾ ಈಗಿರುವ ಸ್ಥಿತಿಯಲೇ ಇದ್ದಿರಬೇಕಾಗುತ್ತದೆ. ಎಂದರೆ ಅಲ್ಲಿ ಭೋರ್ಗೆರೆವ ನದಿತಮೆ ಸರಸ್ವತಿ ಇರಲಾರಳು. ಸರಸ್ವತಿ ಭೋರ್ಗರೆಯುತ್ತಿದ್ದಳೆಂದು ಹೇಳಿದರೆ ಆಕೆ ಘಾಗರ್-ಹಕ್ರಾ ಆಗಿರಲಾರಳು. ಘಾಗರ್-ಹಕ್ರಾ ನದಿ ದಡದ ನಾಗರಿಕತೆ ಋಗ್ವೇದದ ನಾಗರಿಕತೆ, ಆ ನದಿಯೇ ಸರಸ್ವತಿ ಎನ್ನುವುದರಲ್ಲಿ ಚಕ್ರವಾದದ ದೋಷ ಸೇರಿಕೊಂಡಿದೆ. ‘ಇವು ಋಗ್ವೇದದ ನೆಲೆಗಳೆಂದು ಹೇಗೆ ಹೇಳುತ್ತೀರಿ’ ಎಂದರೆ ‘ಅವು ಸರಸ್ವತಿ ನದಿಯ ದಡದ ಮೇಲಿವೆ ‘ ಎನ್ನುತ್ತಾರೆ. ‘ಇದೇ ಸರಸ್ವತಿ ಎಂದು ಹೇಗೆ ಹೇಳುತ್ತೀರಿ; ಎಂದರೆ ‘ಏಕೆಂದರೆ ಅಲ್ಲಿ ಅಷ್ಟೊಂದು ವೈದಿಕ ನೆಲೆಗಳಿವೆ’ಎಂದು ಉತ್ತರಿಸುತ್ತಾರೆ. ಇವೆರಡನ್ನು ಸಮರ್ಥಿಸುವ ಬಾಹ್ಯ ಸಾಕ್ಷ್ಯಗಳು ಅತ್ಯಗತ್ಯ. ಘಾಗರ್-ಹಕ್ರಾ ಋಗ್ವೇದ ವರ್ಣಿಸುವ ಸರಸ್ವತಿಯಲ್ಲ ಎಂದು ಹೇಳುವವರು ಹಲವಾರು ಕುತೂಹಲಕರ ಅಂಶಗಳನ್ನು ಸಹ ಮುಂದೊಡ್ಡಿದ್ದಾರೆ. ಅವರು ಆರ್ಯರು ಮೊದಲಿಗೆ ಎಲ್ಲಿದ್ದರು ಎಂದು ತಿಳಿಯಲು ಸರಸ್ವತಿ ನದಿಗಾಗಿ ಹುಡುಕಾಡುವುದು ಸರಿ. ಅದಕ್ಕಾಗಿ ಯಾವ ಸಂಶಯಗಳೂ ಬಾರದಂತೆ ಋಗ್ವೇದದ ಸರಸ್ವತಿಯನ್ನು ಗುರುತಿಸಬೇಕಾಗುತ್ತದೆ ಎನ್ನುತ್ತಾ ಮುಂದಿನ ಅಂಶಗಳನ್ನು ಗಮನಕ್ಕೆ ತರುತ್ತಾರೆ. - ಋಗ್ವೇದದ ಕಾಲದಲ್ಲಿ ತುಂಬಿದ ನದಿಯಾಗಿದ್ದ ಸರಸ್ವತಿ ಮುಂದಿನ ದಿನಗಳಲ್ಲಿ ಒಮ್ಮೆಲೆ ಬತ್ತಿಹೋಗದೆ ಸಾಕಷ್ಟು ಸುದೀರ್ಘ ಕಾಲದಲ್ಲಿ ಹಂತಹಂತವಾಗಿ ಇಳಿಮುಖವಾಗಿರಬೇಕು. ಋಗ್ವೇದ ನಂತರದ ವೈದಿಕ ಪಠ್ಯಗಳಲ್ಲಿ ಎಲ್ಲಿಯೂ ತಮ್ಮನ್ನು ಸಾಕಿ ಸಲಹಿದ ಅಂಬಿತಮೆ ಸರಸ್ವತಿ ಕ್ರಮೇಣ ರಭಸ ಕಳೆದುಕೊಂಡು ಸೊರಗಿ ಮರೆಯಾಗತ್ತಿರುವುದು ದಾಖಲಾಗಿಲ್ಲ . ವೈದಿಕರು ಸೊರಗುತ್ತಿರುವ ತಾಯಿ ಸರಸ್ವತಿಯನ್ನು ಕಂಡು ಮರುಗಿಲ್ಲ, ಕಂಬನಿ ತುಂಬಿ ಹಾಡಿಲ್ಲ. ಎಂದರೆ ಅವರು ಹೊಗಳುತ್ತಿದ್ದ ಸರಸ್ವತಿಯಲ್ಲಿ ಹೆಚ್ಚಿನ ಬದಲಾವಣೆಗಳು ಆಗಲಿಲ್ಲ ಎಂದೇ ಅರ್ಥ. ಇದರಿಂದ ಸಾಧಾರಣ ಗಾತ್ರದ ಮಳೆಗಾಲದ ಸರಸ್ವತಿಯನ್ನು ಅವರು ಉತ್ಪ್ರೇಕ್ಷಿಸುತ್ತಿದ್ದರೆಂದು ಭಾವಿಸಬಹುದು. -ಘಾಗರ್-ಹಕ್ರಾ ನದಿ ಹಲವಾರು ಬಾರಿ ತನ್ನ ಮಾರ್ಗ ಬದಲಿಸಿದೆ , ಹಲವಾರು ಹಂತಗಳಲ್ಲಿ ಬತ್ತಿಹೋಗಿದೆ. ಹೀಗೆ ಬತ್ತಿಹೋಗುವಾಗ ಮಧ್ಯದಲ್ಲಿ ಅದು ಹಲವಾರು ಬಾರಿ ಪುನರುಜ್ಜೀವನ ಸಹ ಹೊಂದುತ್ತಿದ್ದಿತು. ಆದ್ದರಿಂದ ಈ ನದಿ ಯಾವಾಗ ಒಣಗಿತು. ಯಾವಾಗ ಮಾರ್ಗ ಬದಲಿಸಿತು. ಎಂದು ಹೇಳುವುದು ಕಷ್ಟ. ಪ್ರ.ಶ.ಪೂ1900ರ ವೇಳೆಗೆ ಸರಸ್ವತಿ ನದಿ ಸಂಪೂರ್ಣ ಬತ್ತಿ ಹೋಗಿದ್ದಿತು. ಯಾವುದೇ ನದಿ ಯಾವಾಗ ಕ್ರಿಯಾಶೀಲವಾಗಿದ್ದಿತು, ಯಾವಾಗ ಒಣಗಿತು ಎಂದು ನಿರ್ಧರಿಸಲು ಭೂವೈಜ್ಞಾನಿಕ ಮಾರ್ಗ ಮತ್ತು ತಂತ್ರಗಳು ಲಭ್ಯವಿದೆ. ಇಂತಹ ಯಾವುದೇ ಅಧ್ಯಯನವನ್ನು ಘಾಗರ್-ಹಕ್ರಾ ನದಿಯ ಮೇಲೆ ನಡೆಸಿಲ್ಲ. ಈ ನದಿ ಕಛ್ ಪ್ರದೇಶದಲ್ಲಿ 5000 ವರ್ಷಗಳ ಹಿಂದೆ ಹರಿದು ಸಮುದ್ರ ಸೇರುತ್ತಿದ್ದಿತೆಂದು ವೈಜ್ಞಾನಿಕ ಮಾರ್ಗಗಳಿಂದ ಸಾಬೀತುಪಡಿಸಲಾಗಿಲ್ಲ. - ಘಾಗರ್-ಹಕ್ರಾ ನದಿಯೇ ಋಗ್ವೇದದ ಸರಸ್ವತಿ ಎಂದು ವಾದಕಾಗಿ ಪರಿಗಣಿಸೋಣ. ಸರಸ್ವತಿ ಬತ್ತಿ ಹೋಗಿದ್ದು ನಿಜವೇ ಆಗಿರಲಿ. ಆದರೆ ಘಾಗರ್– ಹಕ್ರಾ ಎನ್ನುವ ಹೆಸರೇ ಒಂದು ಸವಾಲಿನಂತೆ ಕಾಣುತ್ತದೆ. ವೈದಿಕರು ಮಂತ್ರಗಳನ್ನು ಚಾಚೂ ತಪ್ಪದೆ ಸ್ವರ, ಉಚ್ಛಾರ ಸಹಿತವಾಗಿ ಪರಿಗಣಿಸುವುದರಲ್ಲಿ, ನೆನಪಿಟ್ಟುಕೊಳ್ಳುವುದರಲ್ಲಿ ಜಗದ್ವಿಖ್ಯಾತರು. ತಮ್ಮ ವಾಜ್ಞಯ , ಮೂಲದಿಂದ ಸ್ವಲ್ಪವೂ ಬದಲಾಗದಂತೆ ಎಚ್ಚರವಹಿಸಿ ಮೂರು ಸಾವಿರ ವರ್ಷಗಳಿಗೂ ಮಿಗಿಲಾದ ಕಂಠಸ್ಥ ಸಂಪ್ರದಾಯಬದ್ದರು. ಬರಹ, ದಾಖಲೆಗಳಿಗಿಂತಲೂ, ಬಾಯಿಪಾಠವನ್ನೇ ನಂಬಿದವರು. ಇಂದಿಗೂ, ತಮ್ಮ ಗೋತ್ರ, ಕುಲ ನಾಮಗಳನ್ನು, ಭರತಖಂಡ, ಜಂಬೂದ್ವೀಪ ಎನ್ನುವಂತಹ ಹೆಸರುಗಳನ್ನು ಬಿಟ್ಟುಕೊಡದವರು. ಇಂತಹ ಋಗ್ವೇದದ ಪರಂಪರೆಯ ಋಷಿಗಳು ತಮ್ಮನ್ನು ಸಾಕಿಸಲುಹಿದ ಸಂಸ್ಕೃತಿ ಮತ್ತು ನಾಗರಿಕತೆಗಳ ತೂಗು ತೊಟ್ಟಿಲಾದ ಅಂಬಿತಮೆ-ನದಿತಮೆ-ದೇವಿತಮೆಯಾದ ಸರಸ್ವತಿಯ ಹೆಸರನ್ನು ಮರೆತರೆ ? ಆಕೆಯ ಹೆಸರನ್ನು ಘಾಗರ್-ಹಕ್ರಾ ಎನ್ನುವ ಅನಾಕರ್ಷಕ ದೇಶ ಭಾಷೆಗೆ ಇಳಿಸಿದರೆ ? ಇಂತಹುದು ಸಾಧ್ಯವೇ ? ಇದನ್ನು ನಂಬಬಹುದೇ ? ಭಾರದಾದ್ಯಂತ ವೈದಿಕರು ಸ್ಥಳೀಯ ಹೆಸರುಗಳನ್ನು ಸಂಸ್ಕೃತೀಕರಣಗೊಳಿಸಿರುವುದು ಯಾವ ಸಂಶಯಗಳಿಗೂ ಎಡೆಗೊಡಂತೆ ಎದ್ದು ಕಾಣುತ್ತದೆ. ಸಂಸ್ಕೃತ ಮೂಲದ ಹೆಸರನ್ನು ದೇಶ ಭಾಷೆಗೆ ಬದಲಾಯಿಸಿದ – ಅದು ಗುರುತಿಸಲಾಗದಂತಹ ಹೆಸರು ನೀಡಿದ ಉದಾಹರಣೆಗಳಿಲ್ಲ. ಆದ್ದರಿಂದ ಋಗ್ವೇದದ “ಸರಸ್ವತಿ” ಘಾಗರ್-ಹಕ್ರಾ ಆಗಿದ್ದು ಎಂದು, ಅದು ಹೇಗಾಯಿತು ? ಏಕಾಯಿತು ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ. ಇದರೊಂದಿಗೆ ಘಾಗರ್-ಹಕ್ರಾ ಸರಸ್ವತಿ ಅಲ್ಲವೆನ್ನುವ ಸಂಶಯವೂ ಮೊಳಕೆಯೊಡೆಯುತ್ತದೆ. [1] - ಸಿಂಧೂ, ಶುತದ್ರಿ, ಯಮುನಾ, ಗಂಗಾ ಎನ್ನುವ ಯಾವ ಋಗ್ವೇದ ಕಾಲದ ಹೆಸರುಗಳು ಸಹ ಮೂಲ ಗುರುತಿಸಲಾಗದಂತೆ ಬದಲಾಗಲಿಲ್ಲ. ಆದರೆ ನದೀತಮೆಯಾದ ಸರಸ್ವತಿಯ ಹೆಸರು ಮಾತ್ರ. “ಘಾಗರ್ “ ಏಕಾಯಿತು ? ಮೂಲ ನದಿಯಾದ ‘ ಸರಸ್ವತಿ’ ಬದಲು ಅದರ ಉಪನದಿಯಾದ ಘಾಗರ್ ಹೆಸರು ಏಕೆ ಉಳಿದುಕೊಂಡಿತು. ವೈದಿಕರು ಭಾರತದಾದ್ಯಂತ ತಾವು ಹೋದ ಕಡೆಯಲ್ಲೆಲ್ಲಾ ‘ಗಂಗಾ’ ‘ ಸರಸ್ವತಿ” ಎನ್ನುವ ಹೆಸರುಗಳನ್ನು ಸಣ್ಣ ಪುಟ್ಟ ನದಿ, ತೊರೆಗಳಿಗೆ ಇಟ್ಟಿದ್ದಾರೆ. ಆದರೆ ಅವರು ಮೂಲದಲ್ಲಿದ್ದ ಸರಸ್ವತಿಯ ಹೆಸರನ್ನೇ ಕೈಬಿಟ್ಟರೆ ? ಅಥವಾ ಬತ್ತಿದ ಸರಸ್ವತಿಗೆ ಅನಾದರ ತೋರಿ ಆಕೆಯನ್ನು “ಘಾಗರ್ “ ಎಂದು ಕರೆದರೆ ? ಅಥವಾ ಘಾಗರ್ ಋಗ್ವೇದದ ಸರಸ್ವತಿ ಅಲ್ಲವೇ ? - ಸಿಂಧೂ (=ನದಿ) ಇರುವಂತೆ ಸರಸ್ವತಿ ಎನ್ನುವುದು ಯಾವುದೇ ನಿರ್ದಿಷ್ಟ ನದಿಯ ಹೆಸರಲ್ಲದಿರಬಹುದು. ಅದೊಂದು ಗುಣವಾಚಕವಾಗಿರಬಹುದು. ಋಗ್ವೈದಿಕರಿಗೆ ರಭಸದಿಂದ ಹರಿಯುವುದೆಲ್ಲವೂ ಸರಸ್ವತಿಯೇ ಆಗಿದ್ದಿತು. ಸರಸ್+ವತಿ- ಎಂದರೆ ನೀರಿನಿಂದ ತುಂಬಿರುವವಳು , ಸರೋವರಗಳನ್ನು ಹೊಂದಿರುವವಳು ಎಂದೇ ಅರ್ಥ. ಆದ್ದರಿಂದ ಅವರು ಯಾವುದೇ ನದಿಯನ್ನು , ಸಾಂದರ್ಭಿಕವಾಗಿ ಸಿಂಧೂ ನದಿಯನ್ನೇ ಸರಸ್ವತಿ ಎಂದು ಕರೆದಿರಬಹುದು. ಅವರು ತಮ್ಮ ನೆಲೆ ತೊರೆದು ಪೂರ್ವಕ್ಕೆ ಸಾಗಿದಂತೆ ಗಂಗಾ-ಯಮುನಾ ಬಯಲುಗಳಲ್ಲಿ ನೆಲೆ ನಿಂತ ನಂತರವೂ ಸಿಂಧೂವಿನ ನೆನಪಿನಿಂದ ಹೊರಬರಲಾರದೆ ಹೊಸ ನದಿಗಳನ್ನು ಸಹ ಸರಸ್ವತಿಗಳೆಂದು ಕರೆದಿರಬಹುದು. ಇದು ಮುಂದೆ ನಾಮಪದವಾಗಿ ಗಂಗಾ- ಯಮುನಾ- ಸರಸ್ವತಿಗಳೆಂದು ತ್ರೀವೇಣಿ ಸಂಗಮದ ಐತಿಹ್ಯಕ್ಕೆ ಕಾರಣವಾಗಿರಬಹುದು. [1] ಸಾಗರ ಪದದ ಅಪಭ್ರಂಶ ’ಹಕ್ರಾ’ ಆಗಿರಬಹುದು . ಇದಕ್ಕೆ ’ ಸಕ್ರ’ ಎನ್ನುವ ಇನ್ನೊಂದು ಹೆಸರು ಸಹ ಇದೆ. ಸಂಸ್ಕೃತದಲ್ಲಿ ‘ಹ’ ಮತ್ತು ‘ಸ’ ಗಳು ಪರಸ್ಪರ ಬದಲಾಗಬಲ್ಲವು. ಆದರೆ ‘ಸ’ ಬದಲಾಗಿ ‘ಘ’ ಆಗಿರುವುದು ಕಾಣಸಿಗದು. ಇಂತಹ ಬದಲಾವಣೆಯ ಸಾಧ್ಯತೆಯನ್ನು ಸಾಗರ್=ಘಾಗರ್ , ಸಾಗರ್=ಹಾಗರ್>ಹಕ್ರ ಎಂದಾಗಿರಬಹುದಾದ ಸಾಧ್ಯತೆಯನ್ನು ಒಪ್ಪಿದರೆ ಘಾಗರ್-ಹಕ್ರಾ ಪದಗಳಲ್ಲಿ ದ್ವಿರುಕ್ತಿ ಬಂದಂತಾಗುತ್ತದೆ. ನಾದಿರ್ ಷಾ ಹಾಗೂ ಮಹಮ್ಮದ್ ಷಾ ನಡುವಿನ ಒಪ್ಪಂದದಲ್ಲಿ ಇದನ್ನು ಸಂಕಘಡ ಎಂದು ಕರೆಯಲಾಗಿದೆ. ಗಂಗಾನದಿಯ ಅತ್ಯಂತ ದೊಡ್ದ ಉಪನದಿಯ ಹೆಸರು ಘಾಗರ್. ಇದು ಪಾಟ್ನಾದ ಬಳಿ ಗಂಗಾನದಿಯನ್ನು ಸೇರುತ್ತದೆ. ಹಿಮಾಲಯಗಳಿಂದ ಹೆಚ್ಚಿನ ನೀರನ್ನು ತರುವುದರಿಂದ ಇದನ್ನು ಘಾಗರ್ (=ಸಾಗರ್) ಎಂದಿರುವ ಸಾಧ್ಯತೆಗಳಿವೆ. ಇದೇ ರೀತಿಯಲ್ಲಿ ಸರಸ್ವತಿಯನ್ನು ಈಗ ಘಾಗರ್ ಎಂದು ಕರೆದಿರಬಹುದು ಎನ್ನುವುದಕ್ಕೆ ಹೆಚ್ಚಿನ ಪುರಾವೆಗಳು ಬೇಕು. ವೈಜ್ಞಾನಿಕ ಸಂಶೋಧನೆಗಳ ಹಿನ್ನೆಲೆಯಲ್ಲಿ ಉಪಗ್ರಹ ಬಿಂಬ ಮತ್ತು ಪುರಾತತ್ತ್ವ ಶೋಧನೆಗಳಿಂದ ಬತ್ತಿ ಹೋದ ಘಾಗರ್-ಹಕ್ರಾ ನದಿಯ ದಡದಲ್ಲಿ ನೀರಿನ ಪಸೆಯಿದೆ ಮತ್ತು ಅಲ್ಲಿ ಸಹಸ್ರಾರು ಜನವಸತಿ ನೆಲೆಗಳಿದ್ದವು ಎಂದು ಹೇಳಬಹುದಾದರೂ ಅದೇ ಋಗ್ವೇದದ ಸರಸ್ವತಿ ಎಂದು ಸಾಧಿಸಲಾಗುವುದಿಲ್ಲ. ಘಾಗರ್-ಹಕ್ರಾ ನದಿಯೇ ಸರಸ್ವತಿ, ಅದು ಋಗ್ವೈದಿಕ ಸಂಸ್ಕೃತಿಯ ತೊಟ್ಟಿಲು. ಆ ತೊಟ್ಟಿಲಿನಿಂದಲೇ ಸಿಂಧೂ ನಗರ ನಾಗರಿಕತೆ ಬೆಳೆಯಿತು ಎನ್ನುವ ವಾದವನ್ನು ಅಲ್ಲಗೆಳೆಯಲು ಮಂಡಿಸಿದ ವಿಚಾರ ಸರಣಿಯನ್ನು ನಾವೀಗಾಗಲೆ ತಿಳಿದಿದ್ದೇವೆ. ಘಾಗರ್-ಹಕ್ರಾ ನದಿಯೇ ಸರಸ್ವತಿ ಎಂದು ಹೇಳುವವರು ಮತ್ತು ಅದನ್ನು ಅಲ್ಲಗಳೆಯುವವರು ಬೇರೆ ಬಗೆಯ ಪುರಾವೆಗಳನ್ನು ಹೊಂದಿದ್ದಾರೆಯೇ ಅವುಗಳನ್ನು ಎಷ್ಟರಮಟ್ಟಿಗೆ ಒಪ್ಪಬಹುದೆಂದು ಮುಂದೆ ಚರ್ಚಿಸಲಾಗಿದೆ. ಯಾವುದಾದರೊಂದು ಸಂಗತಿಯನ್ನು ವೈಜ್ಞಾನಿಕವಾಗಿ ಸ್ಥಾಪಿಸಬೇಕೆಂದರೆ ಮೊದಲಿಗೆ ಆ ಸಂಗತಿಯ ಬಗ್ಗೆ ಲಭ್ಯವಿರುವ ಎಲ್ಲ ಅಂಶಗಳನ್ನು ಕ್ರೋಡೀಕರಿಸಿ ನಂತರ ಅದನ್ನು ತರ್ಕಬದ್ಧವಾಗಿ ಅರ್ಥೈಸಬೇಕಾಗುತ್ತದೆ. ಘಾಗರ್-ಹಕ್ರಾ ನದಿಯೇ ಸರಸ್ವತಿ ಎಂದು ಹೇಳುವ ಎಲ್ಲರಿಗೂ ಋಗ್ವೇದವೇ ಆಕರವಾಗಿದೆ., ಅವರೆಲ್ಲರೂ ಇದೇ ಸರಸ್ವತಿ ಎನ್ನುತ್ತಾರೆ. ಈ ಆಕರವನ್ನು ಹೊರತುಪಡಿಸಿ ಹೊರಗಿನಿಂದ ಲಭ್ಯವಿರುವ ಎಲ್ಲ ಸಂಗತಿಗಳ ಮೂಲಕ ಯಾವ ನಿರ್ಧಾರಕ್ಕೆ ಬರಬಹುದೆಂದು ನೋಡೋಣ. ಹೊಲೊಸಿನ್ ಉಪಕಲ್ಪದ ಮಧ್ಯದ ಅವಧಿಯಲ್ಲಿ (ಪ್ರ,ಶ.ಪೂ 4000-3500) ಕಂಚಿನ ಯುಗ ಪ್ರಾರಂಭವಾಯಿತೆನ್ನುವ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತವಿದೆ. ಭಾರತದಲ್ಲಿ ಕಬ್ಬಿಣದ ಯುಗ ಪ್ರ.ಶ.ಪೂ1400ರ ನಂತರ ಕಾಣಿಸಿಕೊಳ್ಳುತ್ತದೆಯೆಂದು ಸಹ ಒಟ್ಟಾರೆಯಾಗಿ ಒಪ್ಪಲಾಗಿದೆ. ಸೈಂಧವ ಅವನತಿ ಕಾಲಕ್ಕಾಗಲೇ (ಪ್ರ.ಶ.ಪೂ1900) ಋಗ್ವೇದದ ಸರಸ್ವತಿ (ಘಾಗರ್-ಹಕ್ರಾ) ಬತ್ತಿಹೊಗಿದ್ದಿತು. ಆದ್ದರಿಂದ ಉಕ್ಕಿ ಹರಿಯುತ್ತಿದ್ದ ಋಗ್ವೇದದ ಸರಸ್ವತಿ ಕಂಚಿನ ಯುಗಕ್ಕೆ ಸೇರಿರಬೇಕು. ಈ ಅವಧಿಯಲ್ಲಿ ವಾಯುವ್ಯ ಭಾರತದಲ್ಲಿದ್ದ ವಾತಾವರಣ , ಮಳೆಗಾಲದ ಅವಧಿ , ನದಿಗಳು ತಂದು ದಡಗಳಲ್ಲಿ ಸಂಚಯಿಸಬಹುದಾದ ಹೂಳಿನ ವೈಜ್ಞಾನಿಕ ವಿಶ್ಲೇಷಣೆ ಮಾಡಿ ಸರಸ್ವತಿಯ ಸ್ವರೂಪವನ್ನು ನಿರ್ಧರಿಸಲು ಹಲವರು ಯತ್ನಿಸಲಾಗಿದೆ. ಈಗ ಮಂಡಿಸಲಾಗಿರುವ ವಾದಗಳ ಪ್ರಕಾರ ರಾಜಸ್ಥಾನ , ಗುಜರಾತ್, ಮಹಾರಾಷ್ಟ್ರ ಪ್ರದೇಶಗಳಲ್ಲಿ ನಡೆಸಿದ ಅಧ್ಯಯನಗಳಿಂದ ಅಂತಿಮಪ್ಲಿಸ್ಟೊಸಿನ್ ಮತ್ತು ಹೊಲೊಸಿನ್ ಅವಧಿಯಲ್ಲಿದ್ದ ವಾಯುವ್ಯ ಭಾರತದ ವಾತಾವರಣದ ಸ್ಥಿತಿಗತಿಗಳ ಬಗ್ಗೆ ಸಾಕಷ್ಟು ವಿವರಗಳು ಸಿಕ್ಕಿವೆ. ಕೊನೆಯ ಗರಿಷ್ಟ ಹಿಮಯುಗದ (Last Glacial Maximum) ನಂತರ ಪ್ರ,ಶ,ಪೂ17000-12000 ನಡುವಿನ ಸುಮಾರು ಐದು ಸಾವಿರ ವರ್ಷಗಳ ದೀರ್ಘ ಅವಧಿಯಲ್ಲಿ ವಾಯುವ್ಯ ಭಾರತದಲ್ಲಿ ಮುಂಗಾರು ಮಳೆ ತೂಗುಯ್ಯಾಲೆಯಾಡಿದೆ. ಇದರಿಂದ ಒಣ ಹಾಗೂ ಹಸಿ ವಾತಾವರಣಗಳು ಒಂದರ ನಂತರ ಒಂದರಂತೆ ಗಿರಿಗಿಟ್ಟಲೆಯಾಡಿವೆ. ಈ ಅವಧಿಯಲ್ಲಿ ಮಳೆಯಿಂದ ನೀರನ್ನು ಪಡೆದು ಹರಿಯುತ್ತಿದ್ದ ನದಿಗಳು ಉಕ್ಕುವ-ಬತ್ತುವ ಚಕ್ರದಲ್ಲಿ ಸಿಲುಕಿವೆ. ಸರಸ್ವತಿ (ಘಾಗರ್-ಹಕ್ರಾ) ಸಹ ಅಂತಹ ಚಕ್ರದಲ್ಲಿ ಸಿಲುಕಿರುವ ಮತ್ತೊಂದು ನದಿ. ಕೆಲವು ಅಧ್ಯಯನಗಳಿಂದ ಸರಸ್ವತಿ (ಘಾಗರ್-ಹಕ್ರಾ) ಹೊಲೊಸಿನ್ ಆರಂಭದ ತಡ ಪ್ಲಿಸ್ಟೊಸಿನ್ ಕಾಲದಲ್ಲೇ ಎಂದರೆ ಪ್ರ.ಶ.ಪೂ 10000-12000 ವರ್ಷಗಳ ಹಿಂದೆಯೇ ಬತ್ತಿಹೋಗಿದೆಯೆಂದು ತಿಳಿದುಬಂದಿದೆ. ಇದು ನಿಜವೇ ಆಗಿದ್ದರೆ ಋಗ್ವೇದದ ಕಾಲದಲ್ಲಿ ಯಮುನಾ ಮತ್ತು ಸಟ್ಲೆಜ್ ಸರಸ್ವತಿಯನ್ನು ಸೇರುತ್ತಿದ್ದವು. ಎನ್ನುವ ವಾದ ಕುಸಿದು ಬೀಳುತ್ತದೆ. ಏಕೆಂದರೆ ಹಿಮನದಿಗಳಿಂದ ನೀರು ಪಡೆಯುವ ಸರಸ್ವತಿ (ಘಾಗರ್-ಹಕ್ರಾ) ಮಧ್ಯ ಹೊಲೊಸಿನ್ ಅವಧಿಯಲ್ಲಿ ಬತ್ತಿ ಹೋಗಲು ಸಾಧ್ಯವಿಲ್ಲ. ಏಕೆಂದರೆ ಹಿಮಮೂಲಗಳಿಂದ ನೀರನ್ನು ಪಡೆಯುವ ಯಮುನಾ ಮತ್ತು ಸಟ್ಲೆಜ್ ಅದರ ಉಪನದಿಗಳಾಗಿದ್ದವು.(6) . ಪ್ರ.ಶ. ಪೂ 2500-1800ರ ಹೊಲೊಸಿನ್ ಅವಧಿಯಲ್ಲಿ ಯಮುನಾ ಮತ್ತು ಸಟ್ಲೆಜ್ ತಮ್ಮ ಮಾರ್ಗ ಬದಲಿಸಿದ ಪರಿಣಾಮವಾಗಿ ಸರಸ್ವತಿ ಬತ್ತುತ್ತಾ ಹೋಯಿತು ಎನ್ನುವ ಹೇಳಿಕೆಗೆ ಪೂರಕವಾಗಿ ಯಾವುದೇ ಭೂಲಕ್ಷಣಗಳು ಸಿಗುವುದಿಲ್ಲ ರೂಪಾರ್ ಬಳಿ ಸಟ್ಲೆಜ್ ಹಠಾತ್ ಪಶ್ಚಿಮದತ್ತ ತಿರುಗಿ ಸಿಂಧೂ ನದಿಯತ್ತ ಸಾಗುತ್ತದೆ. ಹೀಗೆ ಅದು ತಿರುಗುವ ಮೊದಲು ಸರಸ್ವತಿಯನ್ನು (ಘಾಗರ್-ಹಕ್ರಾ) ಸೇರುತ್ತಿತೆಂದು ಭಾವಿಸಲಾದ ವಿಶಾಲವಾದ ಬಯಲಿನ ಪ್ರದೇಶವನ್ನು ಸೂಚಿಸಲಾಗಿದೆಯಾದರೂ ಹಾಗೆ ಹರಿದು ಬಂದುದರ ಕುರುಹಾಗಿ ಹರಿಯಾಣದಲ್ಲಿ ಅಂತಹ ಯಾವ ಕಾಲುವೆ-ಕೊಳ್ಳಗಳು ಅಸ್ತಿತ್ವದಲಿಲ್ಲ. ಸರಸ್ವತಿ ಬತ್ತಿದ ಕಾಲದಲ್ಲಾದ ವಾತಾವರಣ ಬದಲಾವಣೆ, ನದಿಗಳ ಪಾತ್ರ ಪಲ್ಲಟದ ಬಗ್ಗೆ ವಿವರಣೆಗಳು ಸಹ ಲಭ್ಯವಿಲ್ಲ. ಆದ್ದರಿಂದ ಸರಸ್ವತಿ ಮಧ್ಯ ಹೊಲೊಸಿನ್ ಅವಧಿಗೆ ಸೇರಿದ ಸಿಂಧೂ ನಾಗರಿಕತೆಯ ಜೀವನಾಡಿಯಾಗಿರುವ ಸಾಧ್ಯತೆಗಳಿಲ್ಲ. ಆದ್ದರಿಂದ ಘಾಗರ್-ಹಕ್ರಾ ಉಕ್ಕಿ ಹರಿಯುವ ಋಗ್ವೇದದ ಸರಸ್ವತಿಯಲ್ಲ. ಹೊಲೊಸಿನ್ ಮಧ್ಯಾವಧಿಯ ಪ್ರಾರಂಭದಲ್ಲಿ ವಾಯುವ್ಯ ಭಾರತದಲ್ಲಿ ಮುಂಗಾರು ಸುಸ್ಥಿರವಾಗಿದ್ದು ಹಸಿಕಾಲವಿದ್ದಿತು. ಈ ಕಾಲದಲ್ಲಿ ಸಪ್ತ ಸಿಂಧೂಗಳಲ್ಲಿ ಸಾಕಷ್ಟು ನೀರಿದ್ದಿತು. ಈ ಕಾಲದಲ್ಲೇ ಸಿಂಧೂ ಸಂಸ್ಕೃತಿ ವಿಕಸಿಸಿ , ಪ್ರಬುದ್ಧ ಸ್ಥಿತೆಗೆ ತಲುಪಿತು. ಈ ಸ್ಥಿತಿ ತಲುಪುವ ವೇಳೆಗೆ ಮತ್ತೊಮ್ಮೆ ಒಣ ವಾತಾವರಣ ಕಾಣಿಸಿಕೊಂಡು ನದಿಗಳು ಬತ್ತತೊಡಗಿ ಸಿಂಧೂ ನಾಗರಿಕತೆಯ ಅವನತಿಗೆ ಮುನ್ನುಡಿ ಬರೆಯತೊಡಗಿದವು. (6) ಮೇಲಿನ ಸಂಗತಿಗಳ ಹಿನ್ನೆಲೆಯಲ್ಲಿ ಉಪಗ್ರಹ ಬಿಂಬಗಳಲ್ಲಿ ಕಂಡುಬರುವ ಸಟ್ಲೆಜ್-ಯಮನಾ- ಸರಸ್ವತಿ (ಘಾಗರ್-ಹಕ್ರಾ) ನಡುವಿನ ಪ್ರಾಚೀನ ಹರಿಗಾಲುವೆಗಳಿಗೆ ವಿವರಣೆ ನಡುವುದು ಸಾಧ್ಯ. ಬಹು ಹಿಂದೆ ಸಟ್ಲೆಜ್ ಮತ್ತು ಯಮುನಾ ಸರಸ್ವತಿಯ ಉಪನದಿಗಳಾಗಿದ್ದವು. ಎನ್ನುವ ವಾದಕ್ಕೆ ಭೂಪರಿವರ್ತನೆ (Geomorphological) ಮತ್ತು ಶಿಲಾಶಾಸ್ತ್ರದ (petrological) ಸಾಕ್ಷ್ಯಗಳು ಲಭ್ಯವಿದೆ. ಯಮುನಾ ಅಥವಾ ಯಮುನಾಕ್ಕೆ ನೀರೂಡುತ್ತಿದ್ದ ತೊರೆಗಳು ಘಾಗರ್’ಗೆ ಸೇರುತ್ತಿದ್ದವು ಎನ್ನುವುದನ್ನು ಶಿಲಾಶಾಸ್ತ್ರದ (petrology) ಮೇಲೆ ಅಂದಾಜಿಸಬಹುದು. ಸಟ್ಲೆಜ್ ಮತ್ತು ಯಮುನಾ ಸರಸ್ವತಿಗೆ (ಘಾಗರ್-ಹಕ್ರಾ) ನೀರನ್ನು ಪೂರೈಸುತ್ತಿದ್ದವಾದರೂ, ಅವುಗಳ ಮೂಲ ಹಿಮನದಿಗಳಾಗಿರದೆ ಮುಂಗಾರು ಮಳೆಯಾಗಿದ್ದಿತು. ಅವುಗಳಿಗೆ ಹಿಮನದಿಗಳ ಕೊಡುಗೆಯಿರಲಿಲ್ಲ. ಮುಂಗಾರು ಮಳೆಯನ್ನು ಅವಲಂಬಿಸಿ ಸರಸ್ವತಿ (ಘಾಗರ್-ಹಕ್ರಾ) ಹರಿಯುವ, ಬತ್ತುವ ಸ್ಥಿತಿಗಳಲ್ಲಿರುತ್ತಿದ್ದಿತು. ಸಟ್ಲೆಜ್ ಯಮುನಾ ನದಿಗಳು ತಮ್ಮ ದಿಕ್ಕನ್ನು ಬದಲಿಸಿದ್ದರಿಂದಲೇ ಸರಸ್ವತಿ (ಘಾಗರ್-ಹಕ್ರಾ) ಒಣಗಿ ಹೋಯಿತು. ಎನ್ನುವ ವಾದ ಹೊಲೊಸಿನ್ ಮಧ್ಯಾವಧಿಗೆ ಸರಿ ಹೊಂದುವುದಿಲ್ಲ. ಏಕೆಂದರೆ ಸಟ್ಲೆಜ್ ಮತ್ತು ಯಮುನಾ ಪ್ರ.ಶ.ಪೂ14000 ಸರಿ ಸುಮಾರಿಗೆ ತಮ್ಮ ದಿಕ್ಕು ಬದಲಿಸಿದ ಸಾಧ್ಯತೆಗಳೇ ಅಧಿಕ. ತೊಡಕುಗಳು-ಹುಡುಕಾಟಗಳು ಹೊಲೊಸಿನ್ ಮಧ್ಯದಾವಧಿಯಲ್ಲಿದ್ದ ವಾತಾವರಣದ ಆಧಾರದ ಮೇಲೆ ಸರಸ್ವತಿ (ಘಾಗರ್-ಹಕ್ರಾ) ನದಿಗೆ ಹಿಂದೆಂದೂ ಹಿಮಮೂಲಗಳಿಂದ ನೀರು ಬರುತ್ತಿರಲಿಲ್ಲವೆಂದು ಘೋಷಿಸುವ ಮೊದಲು ಮಾರ್ಕಂಡೇಯ ನದಿ ಒಡ್ಡಿರುವ ಸವಾಲಿಗೆ ಉತ್ತರ ಹುಡುಕಬೇಕಾಗುತ್ತದೆ. ಮಾರ್ಕಂಡೇಯ ಸರಸ್ವತಿಯ (ಘಾಗರ್-ಹಕ್ರಾ) ಒಂದು ಉಪನದಿ. ಇದು ಶಿವಾಲಿಕ ಪರ್ವತ ಶ್ರೇಣಿಗಳ ಪಾಂಟೋಬ ಕೊಳ್ಳದ ಪಶ್ಚಿಮದಲ್ಲಿ ಹುಟ್ಟುತ್ತದೆ. ಈ ನದಿಯಗುಂಟ ಹಲವಾರು ಸೋಪಾನದ ರೀತಿಯ -ಈಗ ನೀರು ಹರಿಯದ- ಹಲವಾರು ಭೂರಚನೆಗಳಿವೆ. ಇದರಿಂದ ಹಿಂದೊಮ್ಮೆ ಇಲ್ಲಿ ನದಿ ಹರಿಯುತ್ತಿದ್ದು ಶಿಲೆಯನ್ನು ಕತ್ತರಿಸಿ, ಬಳಸಿ ಸಾಗಿರುವುದು ಸ್ಪಷ್ಟವಾಗುತ್ತದೆ. ಈ ಸೋಪಾನಗಳಲ್ಲಿ ಅತ್ಯಂತ ಪ್ರಾಚೀನವಾದವುಗಳು ಪ್ರ.ಶ.ಪೂ 3000 ಅವಧಿಗೆ ಸೇರುತ್ತವೆ. ನೀರು ಹರಿಯದ ಈ ಜಾಡಿನ ಸೋಪಾನಗಳಲ್ಲಿ ಕ್ವಾರ್ಟಟೈಜ್ ದುಂಡುಗಲ್ಲುಗಳು ಮತ್ತು ರೂಪಾಂತರ ಶಿಲೆಗಳಿವೆ. ಈಗ ಮಾರ್ಕಂಡೇಯ ನದಿ ಹರಿವು ಇಳಿಕೆಯಾಗಿದ್ದು ಅದು ಈಗ ಹರಿಯುತ್ತಿರುವುದು ಹೂಳು ಕುಳಿತ (sedimented) ಪ್ರದೇಶವಾಗಿದೆ. ಈ ಪಾತ್ರದಲ್ಲಿ ಕೆಳದರ್ಜೆಯ ರೂಪಾಂತರ ಶಿಲೆಗಳಿದ್ದು ಹಳೆಯ ಸೋಪಾನಗಳಲ್ಲಿ ಇರುವಂತಹ ರೂಪಾಂತರ ಶಿಲೆಯ ಗುಂಡುಗಳಿಲ್ಲ. ಇದರಿಂದ ಪ್ರ.ಶ.ಪೂ 3000 ವರ್ಷಗಳ ಹಿಂದೆ ಮಾರ್ಕಂಡೇಯ ನದಿ ರೂಪಾಂತರ ಶಿಲೆಯಿರುವ ಮೂಲಗಳಿಂದ ನೀರನ್ನು ಪಡೆಯುತ್ತಿತ್ತೆನ್ನುವುದು ಸ್ಪಷ್ಟ. ಈಗಿನ ಮಾರ್ಕಂಡೇಯ ನದಿಗೆ ಈ ನೀರಿನ ಆಕರ ಇಲ್ಲದಿರುವುದರಿಂದ ಈಗಿನ ಪಾತ್ರದಲ್ಲಿ ಹಳೆಯ ಸೋಪಾನಗಳಲ್ಲಿ ಇರುವಂತಹ ರೂಪಾಂತರಿತ ಶಿಲೆಯ ಅವಸಾದಗಳ ಕುರುಹುಗಳಿಲ್ಲ,(7) ಯಮುನಾ ನದಿಯ ಉಪನದಿಗಳು ಇಂತಹ ರೂಪಾಂತರಿತ ಶಿಲೆಯನ್ನು ಹೊಂದಿರುವ ಎತ್ತರದ ಹಿಮಾಲಯಗಳಿಂದ ನೀರನ್ನು ಪಡೆಯುತ್ತವೆ. ಇವು ಮೊದಲಿಗೆ ಮಾರ್ಕಂಡೇಯ ನದಿಗೆ ಸೇರುತ್ತಿದ್ದು , ಕಾಲಾಂತರದಲ್ಲಿ ಯಮುನಾ ನದಿಯತ್ತ ತಿರುಗಿದವು. ಇದಾದ ನಂತರ ಮಾರ್ಕಂಡೇಯ ನದಿಗೆ ಇವುಗಳಿಂದ ಬರುತ್ತಿದ್ದ ರೂಪಾಂತರ ಶಿಲೆಯ ಹೂಳು ಸರಬರಾಜು ನಿಂತಿತು. ಇದರಿಂದ ಹಿಂದೊಮ್ಮೆ ಸರಸ್ವತಿಗೆ (ಘಾಗರ್-ಹಕ್ರಾ) ಹಿಮಮೂಲಗಳಿಂದ ನೀರಿನ ಪೂರೈಕೆ ಇದ್ದಿತೆಂದು ತಿಳಿಯುತ್ತದೆ. ಮಾರ್ಕಂಡೇಯ ನದಿಯಲ್ಲಿ ಇರುವಂತಹ ಹಿಮನೀರಿನ ಮೂಲದ ಹೂಳಿಗಾಗಿ ಸರಸ್ವತಿ (ಘಾಗರ್-ಹಕ್ರಾ) ಹೂಳಿನ ಮೇಲೆ ಭೂರಾಸಾಯನಿಕ (geochemistory) ಪರೀಕ್ಷೆಗಳನ್ನು ನಡೆಸಿದಾಗ ಋಣಾತ್ಮಕ ಫಲಿತಾಂಶಗಳು ಬಂದಿವೆ. ಅದರ ವಿವರಗಳು ಮುಂದಿವೆ. ಈ ಅಧ್ಯಯನದಲ್ಲಿ ಸರಸ್ವತಿ (ಘಾಗರ್-ಹಕ್ರಾ) ಹೂಳಿನಲ್ಲಿರುವ ಸ್ಟ್ರಾಂಷಿಯಂ– ನಿಯೋಡೈಮಿಯಂ ಸಮಸ್ಥಾನಿಗಳನ್ನು ಅಳೆದು ಅವುಗಳ ಮೂಲವನ್ನು ಹುಡುಕಲು ಯತ್ನಿಸಲಾಗಿದೆ. ಎಲ್ಲ ಶಿಲೆಗಳು ಭೂತೊಗಟೆ (Crust) ಮತ್ತು ಕವಚ (Mantle) ಮೂಲದಿಂದ ಬಂದಿರುತ್ತವೆ. ಈ ಶಿಲೆಗಳಲ್ಲಿ ಸ್ಟ್ರಾನ್ಷಿಯಂ ಮತ್ತು ನಿಯೋಡೈಮಿಯಂ ಎಂಬ ವಿಕಿರಣಜನ್ಯ (Radiogeneric) ಧಾತುಗಳಿರುತ್ತವೆ. ಶಿಲೆಯ ಮೂಲವನ್ನು ಅನುಸರಿಸಿ ಈ ವಿಕಿರಣಜನ್ಯ ಧಾತುಗಳ ಪ್ರಮಾಣದಲ್ಲಿ ಅಪಾರ ವ್ಯತ್ಯಾಸವಿರುತ್ತದೆ. ತೊಗಟೆ ಮೂಲದ ಶಿಲೆಗಳಲ್ಲಿ ವಿಕಿರಣಜನ್ಯ ಸ್ಟ್ರಾನ್ಷಿಯಂ ಸಂಪನ್ನವಾಗಿದ್ದರೆ , ಕವಚ ಮೂಲದ ಶಿಲೆಗಳಲ್ಲಿ ಇದರ ಪ್ರಮಾಣ ಕಡಿಮೆಯಿದ್ದು ನಿಯೋಡೈಮಿಯಂ ಹೆಚ್ಚಿರುತ್ತದೆ. ಗ್ರಾನೈಟ್ ಕಲ್ಲುಗಳು ಅವುಗಳ ಸವಕಳಿಯಿಂದ ಬಂದ ಹೂಳು ತೊಗಟೆ ಮೂಲದ್ದಾದರೆ ಅವುಗಳಲ್ಲಿ ಸ್ಟ್ರಾನ್ಷಿಯಂ ಪ್ರಮಾಣ ಹೆಚ್ಚಿರುತ್ತದೆ. ಉತ್ತರ ಹಿಮಾಲಯದ ಎಲ್ಲ ಹಿಮನದಿಗಳು (Glacier) ತೊಗಟೆ ಮೂಲದ ಶಿಲಾರಚನೆ ಹೊಂದಿವೆ. ನದಿಯೊಂದರಲ್ಲಿ ಸಂಗ್ರಹವಾದ ಹೂಳನ್ನು ಸಂಗ್ರಹಿಸಿ ಅದರಲ್ಲಿ ಸ್ಟ್ರಾನ್ಷಿಯಂ ,ನಿಯೋಡೈಮಿಯಂಗಳಲ್ಲಿ ಯಾವುದು ಅಧಿಕ ಪ್ರಮಾಣದಲ್ಲಿದೆಯೆಂದು ಕಂಡು ಹಿಡಿಯಬಹುದು. ತೊಗಟೆ ಅಥವಾ ಕವಚ ಮೂಲದಿಂದ ಬಂದ ರೂಪಾಂತರಿತ ಶಿಲೆಗಳ ಹೂಳಿನಲ್ಲಿಯೂ ಸ್ಟ್ರಾನ್ಷಿಯಂ, ನಿಯೋಡೈಮಿಯಂ ಹುಡುಕಬಹುದು. ಇದರಿಂದ ನದಿಯ ಮೂಲ ಎಂತಹ ಶಿಲೆಗಳಿರುವ ಪ್ರದೇಶಕ್ಕೆ ಸೇರಿದ್ದೆಂದು ನಿರ್ಧರಿಸಬಹುದು. (7) ಸರಸ್ವತಿ (ಘಾಗರ್-ಹಕ್ರಾ) ನದಿ ಪಾತ್ರದ ಹೂಳಿನಲ್ಲಿ ಕಳೆದ 20,000 ವರ್ಷಗಳ ಅವಧಿಯಲ್ಲಿ ಕುಳಿತ ಹೂಳನ್ನು ಸಂಗ್ರಹಿಸಿ ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಹೂಳಿನಲ್ಲಿ ಸ್ಟ್ರಾನ್ಷಿಯಂಗಿಂತಲೂ ನಿಯೋಡೈಮಿಯಂ ಪ್ರಮಾಣ ಹೆಚ್ಚಿರುವುದು ತಿಳಿದು ಬಂದಿದೆ. ಹಿಮನದಿಗಳಿಂದ ನೀರು ಪಡೆಯುವ ಗಂಗಾ-ಯಮುನಾ ನದಿಗಳ ಹೂಳಿನಲ್ಲಿ ಸರಸ್ವತಿಗಿಂತಲೂ (ಘಾಗರ್-ಹಕ್ರಾ) ಅಧಿಕ ಪ್ರಮಾಣದ ಸ್ಟ್ರಾನ್ಷಿಯಂ ಕಂಡುಬಂದಿದೆ. ಇದರಿಂದ ಸರಸ್ವತಿ (ಘಾಗರ್-ಹಕ್ರಾ) ಹಿಮಾಲಯದ ಹಿಮನದಿ ಮೂಲದ ನೀರನ್ನು ಪಡೆಯುತ್ತಿರಲಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಎಂದರೆ ಪ್ರ.ಶ.ಪೂ 3500ರ ಸುಮಾರಿನಲ್ಲಿ ಮಳೆ ಕೊರತೆಯಿಂದಾಗಿ ಸರಸ್ವತಿ (ಘಾಗರ್-ಹಕ್ರಾ) ಬತ್ತಿ ಹೋಯಿತೆಂದು ಒಪ್ಪಬೇಕಾಗುತ್ತದೆ. ಆದರೆ ಇದರಿಂದ ಮಾರ್ಕಂಡೇಯ ನದಿಯ ಸೋಪಾನಗಳಿಗೆ ವಿವರಣೆ ನೀಡಿದಂತಾಗುವುದಿಲ್ಲ. ಆದ್ದರಿಂದ ಹೆಚ್ಚಿನ ಅಧ್ಯಯನ ನಡೆಸಲು ಆಮ್ಲಜನಕ ಸಮಸ್ಥಾನಿಗಳ ಎಣಿಕೆಗೆ ಮೊರೆಹೋಗಲಾಗಿದೆ. (7) ಯಾವುದೇ ನೀರಿನಲ್ಲಿ ಆಮ್ಲಜನಕದ ಸಮಸ್ಥಾನಿಗಳಾದ o16 ಮತ್ತು o18 ಇರುತ್ತವೆ. ಇವೆರಡರಲ್ಲಿ o16 ಹಗುರವಾದುದು. ಸಾಮಾನ್ಯ ಎತ್ತರದಲ್ಲಿ ಇವುಗಳು 99% ಮತ್ತು1% ಪ್ರಮಾಣದಲ್ಲಿರುತ್ತವೆ. ಈ ಪ್ರಮಾಣ ಒಂದು ಪ್ರದೇಶದ ಎತ್ತರ ಬದಲಾದಂತೆ ಬದಲಾಗುತ್ತದೆ. ಯಾವುದೇ ಮಳೆಯ ನೀರಿನಲ್ಲಿರುವ ಆಮ್ಲಜನಕದ ಸಮಸ್ಥಾನಿಗಳ ಪ್ರಮಾಣ ಮಳೆ ಪ್ರದೇಶದ ಔನ್ಯತ್ಯದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ನಿರ್ದಿಷ್ಟ ಎತ್ತರದಲ್ಲಿ ನೀರಾವಿ ಸಾಂದ್ರೀಕರಣಗೊಂಡಂತೆ o18 ಉಳಿದುಕೊಂಡು , o18 ಕೊರತೆಯ ಮೋಡಗಳು ಮೇಲೇರುತ್ತವೆ. ಎತ್ತರದ ಪ್ರದೇಶದಿಂದ ನೀರು ಆವಿಯಾಗಿ ಮೇಲೇರಿ ಮಳೆಯಾದಾಗ ಅಂತಹ ನೀರಿನಲ್ಲಿ o16 ಪ್ರಮಾಣ ಹೆಚ್ಚಿದ್ದರೆ ಕೆಳ ಪ್ರದೇಶಗಳಿಂದ ಆವಿಯಾಗಿ ಬಂದ ನೀರಿನಲ್ಲಿ o18 ಹೆಚ್ಚಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಶಿವಾಲಿಕ ಪರ್ವತ ಪ್ರದೇಶಗಳ ನೀರಿನಲ್ಲಿ ಹಿಮ ಬೀಳುವ ಹಿಮಾಲಯದಲ್ಲಿರುವ ನೀರಿಗಿಂತಲೂ ಹೆಚ್ಚಿನ o18 ಇರುತ್ತದೆ. (7) ರಾಜಸ್ಥಾನದ ಜೈಸಲ್ಮೇರ್ ಸರಸ್ವತಿಯ (ಘಾಗರ್-ಹಕ್ರಾ) ಪಾತ್ರವೆಂದೇ ಪರಿಗಣಿಸಲಾಗಿದೆ. ಈ ಜಿಲ್ಲೆಯಲ್ಲಿ ಬಾವಿಗಳನ್ನು ಕೊರೆದು ಶುದ್ದ ನೀರನ್ನು ಸಂಗ್ರಹಿಸಿ ಅವುಗಳಲ್ಲಿರುವ ಸಮಸ್ಥಾನಿಗಳ ಸಂಯೋಜನೆಯ ಅಧ್ಯಯನ ನಡೆಸಲಾಗಿದೆ.ಈ ನೀರಿನಲ್ಲಿ 2H, 8O ,3H, 14C ಸಮಸ್ಥಾನಿಗಳನ್ನು ಪರಿಗಣಿಸಲಾಗಿದೆ. ಇಲ್ಲಿ ಸಂಗ್ರಹಿಸಿದ ನೀರು ಹಲವಾರು ಸಾವಿರ ವರ್ಷಗಳಷ್ಟು ಹಳೆಯದೆಂದು ಖಚಿತವಾಗಿದೆ. ಆದರೆ (O18/O16) ಪ್ರಮಾಣದಿಂದ ಸರಸ್ವತಿ (ಘಾಗರ್-ಹಕ್ರಾ) ನದಿಗೆ ಹಿಮನದಿಗಳ ಕೊಡುಗೆ ಇರಲಿಲ್ಲವೆಂದು ತೀರ್ಮಾನಕ್ಕೆ ಬರಲಾಗಿದೆ. ರಾಜಸ್ತಾನದ ಪ್ರಾಚೀನ ನೀರಿನ ವಿಶ್ಲೇಷಣೆಗಳಲ್ಲಿ ಹಿಮಾಲಯ ಮೂಲದ ನೀರಿಗಿಂತಲೂ o18 ಅಧಿಕ ಪ್ರಮಾಣದಲ್ಲಿರುವುದು ಕಂಡುಬಂದಿದೆ. ಇದರಿಂದ ಸರಸ್ವತಿ (ಘಾಗರ್-ಹಕ್ರಾ) ಯಾವಾಗಲೂ ಶಿವಾಲಿಕ ಪರ್ವತ ಶ್ರೇಣಿಗಳಿಂದ ನೀರನ್ನು ಪಡೆಯುತ್ತಿದ್ದು ಹಿಮಮೂಲದ ನೀರು ಅದಕ್ಕೆ ದಕ್ಕಿರಲಿಲ್ಲವೆಂದು ಹೇಳಬೇಕಾಗುತ್ತದೆ. (7) ಮಾರ್ಕಂಡೇಯ ನದಿಯ ಸೋಪಾನ ಮತ್ತು ಅಲ್ಲಿ ಹಿಮಾಲಯ ಮೂಲದ ಶಿಲೆಗಳ ಹೂಳಿರುವುದು , ಆ ನದಿ ಹಿಮಾಲಯದ ಮೂಲದ ಹಿಮ ನದಿಗಳಿಂದ ನೀರು ಪಡೆಯುತ್ತಿತ್ತು. ಎನ್ನುವುದಕ್ಕೆ ಸಾಕ್ಷಿಯಲ್ಲ ಎಂದು ಹಲವು ಭೂವಿಜ್ಞಾನಿಗಳು ವಾದಿಸಿದ್ದಾರೆ. ಕೆಳ ಹಿಮಾಲಯದಲ್ಲಿರುವ ಮಾರ್ಕಂಡೇಯದ ಪಾತ್ರದಲ್ಲಿರುವ ರೂಪಾಂತರಿತ ಶಿಲೆಗಳು ಕಳಪೆ ದರ್ಜೆಯವು. ಎತ್ತರದ ಹಿಮಾಲಯದ ರೂಪಾಂತರಿತ ಶಿಲೆಗಳು ಮಧ್ಯಮ ಮತ್ತು ಉತ್ತಮ ದರ್ಜೆಯವು. ಆದ್ದರಿಂದ ಮಾರ್ಕಂಡೇಯ ನದಿ ಪಾತ್ರದ ರೂಪಾಂತರಿತ ಶಿಲೆಗಳ ಹೂಳು ಹಿಮಾಲಯ ಮೂಲದ್ದೆಂದು ಹೇಳಲಾಗದು ಎಂದಿದ್ದಾರೆ. ಈವರೆಗೆ ಯಾರೂ ಹಿಮಾಲಯ ಹಾಗೂ ಮಾರ್ಕಂಡೇಯ ನದಿಪಾತ್ರದ ರೂಪಾಂತರಿತ ಶಿಲೆಗಳ ಹೂಳಿನ ತೌಲನಿಕ ಅಧ್ಯಯನ ನಡೆಸಿಲ್ಲ. ಒಂದು ವೇಳೆ ಮಾರ್ಕಂಡೇಯ ನದಿಯ ಹೂಳಿನಲ್ಲಿ ಉನ್ನತ ದರ್ಜೆಯ ರೂಪಾಂತರಿತ ಶಿಲೆಯನ್ನು ಗುರುತಿಸಿದರೂ, ಅದರ ನೀರಿನ ಮೂಲ ಹಿಮಾಲಯವಾಗಿದ್ದಿತೆಂದು ಹೇಳಲಾಗದು. ಮಾರ್ಕಂಡೇಯ ನದಿಪಾತ್ರದ ರೂಪಾಂತರಿತ ಶಿಲೆಯ ಹೂಳಿನ ದರ್ಜೆಯ, ಅದರ ಪ್ರಮಾಣ, ವಿತರಣೆ, ಕಣಗಾತ್ರ, ಖನಿಜ ಸಂಯೋಜನೆಗಳ , ಸಮಗ್ರ ಅಧ್ಯಯನದ ನಂತರವೇ ಮಾರ್ಕಂಡೇಯ ನದಿ ಪಾತ್ರದ ಹೂಳಿನ ಮೂಲದ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯ. (7) ಸಾರಾಂಶ ರೂಪದಲ್ಲಿ ಹೇಳುವುದಾದರೆ ಮಾರ್ಕಂಡೇಯ ನದಿಯ ಜಗಲಿಗಳಿಂದ ಹಿಂದೊಮ್ಮೆ ಸರಸ್ವತಿ (ಘಾಗರ್-ಹಕ್ರಾ) ಹಿಮ ನದಿಗಳಿಂದ ನೀರನ್ನು ಪಡೆಯುತ್ತಿದ್ದಿತೆಂದು ಹೇಳಬಹುದಾದರೂ ಸ್ಟ್ರಾನ್ಷಿಯಂ, ನಿಯೋಡೈನಿಯಂ, ಮತ್ತು ಆಮ್ಲಜನಕ ಸಮಸ್ಥಾನಿಗಳ ವಿಶ್ಲೇಷಣೆಗೆ ಇದಕ್ಕೆ ಪ್ರತಿಕೂಲವಾದ ಫಲಿತಾಂಶಗಳನ್ನು ನೀಡುತ್ತಿದೆ. ಈ ಕಗ್ಗಂಟನ್ನು ಬಿಡಿಸಲು, ಮಾರ್ಕಂಡೇಯ ನದಿಯ ಪ್ರಾಚೀನ ಹರಿವಿನ ವಿಶ್ಲೇಷಣೆ , ಹೂಳಿನ ಸಂಚಿತ ದಿಕ್ಕು, ಅವಧಿ ಪ್ರಮಾಣ, ಇತ್ಯಾದಿಗಳ ವ್ಯಾಪಕ ಅಧ್ಯಯನ ನಡೆಸಬೇಕಾಗಿದೆ. ಸರಸ್ವತಿಯ ಹೂಳಿನ ಸಂಚಯದ ಸ್ವರೂಪ ಮತ್ತು ಭೂರಾಸಾಯನಿಕಗಳ ಸಂಯೋಜನೆಯ ವಿಶ್ಲೇಷಣೆ ಅಂತಹ ಎರಡು ಗಮನ ಸೆಳೆಯುವ ಅಧ್ಯಯನಗಳಾಗಿವೆ. ಹೂಳಿನ ಹೇಳಿಕೆಗಳು ನದಿ ಬಯಲಿನಲ್ಲಿ ಸಂಚಯವಾಗುವ ಹೂಳು ಮತ್ತು ಮೆಕ್ಕಲಿನ ಲಕ್ಷಣದ ಮೇಲೆ ಆ ನದಿಯ ಸ್ಥೂಲ ಇತಿಹಾಸ ತಿಳಿಯುವುದು ಸಾಧ್ಯ. ನದಿ ತೀರಗಳ ಮೆಕ್ಕಲು ಮಣ್ಣಿನ ಸಂಚಯದ ಸ್ವರೂಪ. ಅವಧಿ ಮತ್ತು ಪರಿಣಾಮಗಳನ್ನು ಕುರಿತಾಗಿ ಬಹು ಶಾಸ್ತ್ರೀಯ (Multi Disciplinary) ವೈಜ್ಞಾನಿಕ ಅಧ್ಯಯನಗಳು ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಹಿಮಾಲಯ ಮೂಲ ಮತ್ತು ಮಳೆಯಿಂದ ನೀರು ಪಡೆದು ಹರಿಯುವ ನದಿಗಳು ತಮ್ಮದೇ ಆದ ರೀತಿಯ ಕೊಳ್ಳ/ಕಾಲುವೆಗಳಲ್ಲಿ ಹರಿದು , ನಿರ್ದಿಷ್ಟ ರೀತಿಯಲ್ಲಿ ಮೆಕ್ಕಲ ಮಣ್ಣನ್ನು ಸಂಚಯಿಸುತ್ತವೆ. ಹಿಮಾಲಯ ಮೂಲದಿಂದ ನೀರು ಪಡೆಯುವ ನದಿಗಳು ತಮ್ಮ ಪಾತ್ರವನ್ನು ನಿರ್ದಿಷ್ಟವಾಗಿ ಕೊರೆಯುತ್ತವೆ. ಇವುಗಳಿಗೆ ಮೇಲಿನ ಪಾತ್ರಗಳಲ್ಲಿ ಕಿರಿದಾದ ಹರಿವಿನ ಕಾಲುವೆಯಿದ್ದು ಅಲ್ಲಿ ನೀರು ರಭಸವಾಗಿ ಹರಿಯುತ್ತ ಹೂಳನ್ನು ಕೆಳಭಾಗಕ್ಕೆ ಸೆಳೆದೊಯ್ಯುತ್ತವೆ. ಇದರಿಂದ ಈ ನದಿಗಳ ಮೇಲ್ಭಾಗದಲ್ಲಿ ವಿಶಾಲವಾದ ಹೂಳು/ಮೆಕ್ಕಲು ಮಣ್ಣಿನ ಬಯಲುಗಳು ಇರುವುದಿಲ್ಲ. ಮಳೆಯಿಂದ ನೀರನ್ನು ಪಡೆಯುವ ನದಿಗಳ ಕಾಲುವೆ ಅಗಲವಾಗಿದ್ದು ಅವುಗಳು ಆರಂಭಿಕ ಹಂತದಲ್ಲಿ ಅಷ್ಟೊಂದು ರಭಸವಾಗಿ ಹರಿಯುವುದಿಲ್ಲ. ಇದರಿಂದಾಗಿ ಅವು ತರುವ ಹೂಳು ನದಿಯ ತಳ ಮತ್ತು ದಡಗಳಲ್ಲಿ ಸಂಗ್ರಹಗೊಂಡು ನದಿಯ ಕಾಲುವೆ ನೀರನ್ನು ಸಾಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ, ಹೆಚ್ಚಿನ ನೀರು ಬಂದಾಗ ಈ ನದಿಗಳು ದಡಗಳನ್ನು ಮೀರಿ ವಿಶಾಲವಾದ ಬಯಲಿನಲ್ಲಿ ಉಕ್ಕಿ ಹರಿಯುತ್ತವೆ. ವಾಯುವ್ಯ ಭಾರತದ ನದಿಗಳು. ಬೇಸಿಗೆಯ ನಂತರ ಅರೇಬಿಯಾ ಸಮುದ್ರದ ಕಡೆಯಿಂದ ಬರುವ ಮಳೆಗಾಲ ಮತ್ತು ಚಳಿಗಾಲದಲ್ಲಿ ಮೆಡಿಟರೇನಿಯನ್ ಸಮುದ್ರದ ಕಡೆಯಿಂದ ಬೀಸಲ್ಪಡುವ ತಂಪು ಹವೆಯ ಎರಡು ಬಗೆಯ ವಾತಾವರಣದಿಂದ ಪ್ರಭಾವಿಸಲ್ಪಟ್ಟಿವೆ. ಈ ನದಿಗಳ ಬಹುತೇಕ ಮೆಕ್ಕಲು ಹಿಮಾಲಯ ಪ್ರದೇಶಗಳಿಂದ ಬೇಸಿಗೆಯ ನಂತರ ಮಳೆಗಾಲದಲ್ಲಿ ತರಲ್ಪಡುತ್ತದೆ. ಹೊಲೊಸಿನ್ ಅವಧಿಯ ಆರಂಭಿಕ ಕಾಲ ಈ ನದಿಗಳು ನದಿಗಳು ಮೆಕ್ಕಲನ್ನು ಸಂಚಯಿಸುವ ಅವಧಿಯಾಗಿದ್ದಿತು. ಹೊಲೊಸಿನ್ ಮಧ್ಯಾವಧಿಯಲ್ಲಿ ಮಳೆ ದುರ್ಬಲವಾಗತೊಡಗಿತು. ಇದರಿಂದ ಈ ನದಿಗಳು ತರುವ ಮೆಕ್ಕಲಿನ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಯಿತು. ಇಂತಹ ಸ್ಥಿತಿಯಲ್ಲಿ ಚಳಿಗಾಲದಲ್ಲಿ ಬೀಳುವ ಹಿಮದಿಂದ ನದಿಗಳಲ್ಲಿ ನೀರು ಹರಿಯುತ್ತಿದ್ದವಾದರೂ ಮೆಕ್ಕಲು ಇರಲಿಲ್ಲ. ಈ ಸ್ಥಿತಿಯಲ್ಲಿ ಈ ನದಿಗಳು ಹಿಂದೆ ಪೇರಿಸಿದ್ದ ಬಯಲಿನಲ್ಲಿದ್ದ ಮೆಕ್ಕಲನ್ನು ಕತ್ತರಿಸುತ್ತಿದ್ದವು. ಹೊಲೊಸಿನ್ ಮಧ್ಯಾಂತರದ ಅವಧಿಯ ವೇಳೆಗೆ ತೀವ್ರ ಕೊರೆತಕ್ಕೊಳಗಾಗಿ ಈ ನದಿಗಳ ಪಾತ್ರದ ಆಕಾರ ಬದಲಾಗತೊಡಗಿತು. ಇದರಿಂದ ನದಿಗಳು ಹರಿವು ಹೆಚ್ಚಿ ಅವು ಬಯಲಿನ ಮೇಲೆ ವಿಶಾಲ ಪ್ರದೇಶದಲ್ಲಿ ಹರಡಿ ಸಾಗುವ ಪರಿಸ್ಥಿತಿ ಮರೆಯಾಯಿತು. ಇದರಿಂದ ಕೃಷಿ ಮಾಡಬಹುದಾಗಿದ್ದ ದಡದ ಪ್ರದೇಶ ಕುಗ್ಗಿತು. ಇದರೊಂದಿಗೆ ಮಳೆ ಇಳಿದು ನೀರಿನ ಇಳುವರಿಯಲ್ಲಿಯೂ ಸಾಕಷ್ಟು ಕೊರತೆಯಾಗಿದ್ದಿತು. ಈ ನದಿಗಳ ದಡದಲ್ಲಿದ್ದ ಜನರು ನದಿಗಳ ಈ ಬದಲಾವಣೆಗಳಿಗೆ ಹೊಂದಿಕೊಂಡಿದ್ದರು. ಹೊಲೊಸಿನ್ ಮಧ್ಯಾವಧಿಯ ಕೊನೆ ಕಾಲದಲ್ಲಿ ಒಣ ಹವೆ ಪ್ರಾರಂಭವಾಯಿತು. ಒಣ ಹವೆ ಬರುವುದಕ್ಕೆ ಮೊದಲು ಈ ನದಿಗಳು ಮಳೆಯಾಧಾರಿತವಾಗಿದ್ದರೂ, ವರ್ಷ ಪೂರ್ತಿ ನೀರನ್ನು ಒದಗಿಸಬಲ್ಲವಾಗಿದ್ದವು. ಆದರೆ ಒಣ ಹವೆ ಬಂದ ನಂತರ ನೀರಿನ ಕೊರತೆ ಕೃಷಿಗೆ ಯೋಗ್ಯವಾದ ಮೆಕ್ಕಲು ಮಣ್ಣಿರುವ ದಡ ಪ್ರದೇಶ ಇಲ್ಲದಂತಾಗಿ ಅವನತಿ ಪ್ರಾರಂಭವಾಗಿ ಸುಸ್ಥಿರ ಒಕ್ಕಲುತನಕ್ಕೆ ಪೆಟ್ಟು ಬಿದ್ದಿತು. ಆಗ ಜನರು ಹೆಚ್ಚು ಹಸಿ ವಾತಾವರಣವಿರುವ ಹಿಮಾಲಯದ ತಪ್ಪಲಿನತ್ತ ಸಾಗತೊಡಗಿದರು. (9) ಹರಿಯಾಣ , ಪಂಜಾಬ್’ನಲ್ಲಿರುವ ಸರಸ್ವತಿಯ (ಘಾಗರ್-ಹಕ್ರಾ) ಮೇಲ್ಭಾಗದಲ್ಲಿರುವ ಅಗಲವಾದ ಹರಿವಿನ ಕಾಲುವೆ , ವಿಶಾಲ ನದಿ ಬಯಲು, ಅಲ್ಲಿ ಸಂಚಯವಾಗಿರುವ ಹೂಳು , ಮರಳು ಮತ್ತು ಮೆಕ್ಕಲಿನ ಲಕ್ಷಣಗಳು ಅದು ಹೊಲೊಸಿನ್ ಅವಧಿಯಲ್ಲಿ ಮಳೆ ಆಧಾರಿತ ನದಿಯಾಗಿತ್ತೆಂದು ಸೂಚಿಸುತ್ತಿವಿಯೇ ಹೊರತು ಹಿಮಾಲಯ ಮೂಲದಿಂದ ನೀರನ್ನು ಪಡೆದ ಲಕ್ಷಣಗಳಿಲ್ಲ. ಝಿರ್ಕಾನ್ ಜಾಡಿನಲ್ಲಿ ಸರಸ್ವತಿ (ಘಾಗರ್-ಹಕ್ರಾ) ಹಿಮನದಿಗಳಿಂದ ನೀರನ್ನು ಪಡೆಯುತ್ತಿದ್ದಿತೇ ಇಲ್ಲವೇ ಎಂದು ನಿರ್ಧರಿಸಲು ನಡೆಸಿದ ಪರೀಕ್ಷೆಗಳನ್ನು ವಿಸ್ತರಿಸಿ ಈ ಪ್ರಶ್ನೆಗೆ ತಾತ್ತ್ವಿಕ ಮತ್ತು ತಾಂತ್ರಿಕ ಅಂತ್ಯ ಕಂಡುಕೊಳ್ಳಲು ಪೀಟರ್ ಕ್ಲಿಪ್ಟ್ ಹಾಗೂ ಸಂಗಡಿಗರು ಪರಿಕಲ್ಪನೆಯಲ್ಲಿ ಸರಳವಾದ ಆದರೆ ಅನುಷ್ಟಾನದಲ್ಲಿ ತಾಂತ್ರಿಕವಾಗಿ ಕಠಿಣವಾದ ಅಧ್ಯಯನವನ್ನು ಕೈಗೊಂಡರು. ಇದಕ್ಕಾಗಿ ಸರಸ್ವತಿಯ (ಘಾಗರ್-ಹಕ್ರಾ) ಪ್ರಾಚೀನ ಕಾಲುವೆ ಹಾಗೂ ಹಿಮಾಲಯದ ನೀರಿನ ಮೂಲಗಳ ಭೂರಾಸಾಯನಿಕಗಳ ಸಂಯೋಜನೆಯ ತೌಲನಿಕ ನಿರ್ಧಾರಕ್ಕಾಗಿ ಹರಪ್ಪಾ ನೆಲೆಗಳ ಸನಿಹ ಖೊಲಿಸ್ಥಾನ ಮರುಭೂಮಿಯಲ್ಲಿ 45 ಮೀ ಆಳದವರೆಗೆ ಕೊರೆದು , ಅರೆನೆಲೆಗಳ ಸಮೀಪದ ಮರಳಿನ ದಿಬ್ಬಗಳಲ್ಲಿ ಐದು ಮೀ ಆಳದವರೆಗೆ ಗುಂಡಿ ತೋಡಿ ಮಣ್ಣಿನ ಪ್ರತಿಚಯಗಳನ್ನು (Samples) ಪಡೆಯಲಾಯಿತು. ಇದರೊಂದಿಗೆ ಸಾವಯವ ಇಂಗಾಲವನ್ನು ಸಹ ಸಂಗ್ರಹಿಸಿ ವೇಗೋತ್ಕರ್ಷ ರಾಶಿ ರೋಹಿತಮಾಪನೆ (Accelerator Mass Spectrometry) ಪರೀಕ್ಷೆಗೆ ಒಳಪಡಿಸಲಾಯಿತು. ಸಾವಯವ ಇಂಗಾಲ ಲಭ್ಯವಾಗದ ಭಾಗಗಳಲ್ಲಿ ಹೂಳನ್ನು ಪಡೆದು ದೃಗ್ ಪ್ರಚೋದಿತ ದೀಪ್ತೀಕರಣ (Optically Stimalated Luminiscence) ವಿಧಾನದ ಮೂಲದ ಕಾಲ ನಿರ್ಧರಿಸಲಾಯಿತು. (19) ಈ ಅಧ್ಯಯನ ಹಾಗೂ ಅದರ ಹಿಂದಿರುವ ವೈಜ್ಞಾನಿಕ ತತ್ತ್ವಗಳು ಹೀಗಿವೆ. ಹಿಮಾಲಯದ ಪರ್ವತ ಶ್ರೇಣಿಗಳು ಒಂದೇ ಬಗೆ ಹಾಗೂ ಒಂದೇ ಕಾಲಕ್ಕೆ ಸೇರಿದವಲ್ಲ. ಇವುಗಳಲ್ಲಿ ಕಾರಕೋರಂ ಕೊಹಿಸ್ತಾನದ (ಪಾರ ಹಿಮಾಲಯ-ಟ್ರಾನ್ಸ್ ಹಿಮಾಲಯ) ವಲಯದ ವಯಸ್ಸು ಮೂವತ್ತು ಕೋಟಿ ವರ್ಷಗಳಿಗಿಂತಲೂ ಕಡಿಮೆ. ತೆಥಿಯನ್ ಹಿಮಾಲಯ 30-75 ಕೋಟಿ ವರ್ಷಗಳಷ್ಟು ಹಳೆಯದು. ಮಹಾ ಹಿಮಾಲಯ (Greater Himalaya) 75-125 ಕೋಟಿ ವರ್ಷಗಳಷ್ಟು , ಅಲ್ಪ ಹಿಮಾಲಯ (Lesser Himalaya)150-230 ಕೋಟಿ ವರ್ಷಗಳಷ್ಟು ಹಳೆಯವು. ಹಿಮಾಲಯದ ಈ ಶ್ರೇಣಿಗಳ ವಯಸ್ಸನ್ನು ವಿವಿಧ ಆಧುನಿಕ ತಂತ್ರಗಳ ಮೂಲಕ ಸಾಕಷ್ಟು ಖಚಿತವಾಗಿ ನಿರ್ಧರಿಸಲಾಗಿದೆ.(19,21) ಗ್ರಾನೈಟ್ ಮತ್ತು ರೂಪಾಂತರ ಶಿಲೆಗಳಲ್ಲಿ ಝಿರ್ಕಾನ್ ಧಾತು ಝಿರ್ಕಾನ್ ಸಿಲಿಕೇಟ್ ರೂಪದಲ್ಲಿರುತ್ತದೆ. ಹಿಮಾಲಯದ ಬಹುಭಾಗ ಶಿಲಾಶ್ರೇಣಿ ಈ ಕಲ್ಲುಗಳಿಂದಾಗಿದೆ. ಝಿರ್ಕಾನ್ ಸಿಲಿಕೇಟ್ ಕಠಿಣವಾದ ಸಂಯುಕ್ತವಾಗಿದ್ದು ಸಾಗಾಣಿಕೆಯಲ್ಲಿ ಆಗುವ ತಿಕ್ಕಾಟ, ಕುಟ್ಟುವಿಕೆ, ಬಡಿಯುವಿಕೆಯನ್ನು ತಾಳಿಕೊಳ್ಳುವ ಗುಣ ಹೊಂದಿದೆ. ಝಿರ್ಕಾನ್ ರಾಸಾಯನಿಕವಾಗಿ ಬಹು ಸ್ಥಿರವಾದುದು. ಇದು ರಾಸಾಯನಿಕವಾಗಿ ಸಡಿಲಗೊಳ್ಳುವ, ರೂಪಾಂತರವಾಗುವ, ಬದಲಾಗುವ ಅವಕಾಶಗಳು ಬಹಳ ಕಡಿಮೆ. ಝಿರ್ಕಾನ್ ಸಂಯುಕ್ತ ಯುರೇನಿಯಂ ಅಥವಾ ಸೀಸದ ಪರಮಾಣುಗಳು ಹೆಚ್ಚು ಸ್ಥಿರವಾಗಿರುತ್ತವೆ. ಝಿರ್ಕಾನ್ ಸಂಯುಕ್ತದಲ್ಲಿರುವ ಯುರೇನಿಯಂ ಶೈಥಿಲ್ಯ ಅದು ಸೀಸವಾಗಿ ರೂಪಾಂತರವಾಗಿರುವ ಪ್ರಮಾಣದ ಆಧಾರದ ಮೇಲೆ ಅದರ ವಯಸ್ಸು ಆ ಮೂಲಕ ಅದರ ಮೂಲವನ್ನು ಹುಡುಕುವುದು ಸಾಧ್ಯ. (19,21) ಝಿರ್ಕಾನನಲ್ಲಿರುವ ಯುರೇನಿಯಂ ಹಾಗೂ ಸೀಸದ ಪರಮಾಣುಗಳು ಅದರ ಉಗಮ ಮತ್ತು ವಯಸ್ಸನ್ನು ಎಣಿಸುವ ಗಡಿಯಾರದಂತೆ ಕೆಲಸ ಮಾಡುತ್ತವೆ. ಝಿರ್ಕಾನ್’ನಲ್ಲಿರುವ ಯುರೇನಿಯಂ U-235 ಶೈಥಿಲ್ಯವಾಗಿ (Decay) ಸೀಸ Pb-207 ಆಗಿ ಪರಿವರ್ತನೆ ಹೊಂದುತ್ತದೆ. ಇದೇ ರೀತಿ U-238 ಶೈಥಿಲ್ಯದಿಂದ ಸೀಸ Pb-206 ದಕ್ಕುತ್ತದೆ. ಎಂದರೆ ಝಿರ್ಕಾನ್ ಸಂಯುಕ್ತದಲ್ಲಿ ಎರಡು ಬಗೆಯ ಕಾಲಗಣನೆಯ ಗಡಿಯಾರಗಳಿವೆಯೆಂದು ಭಾವಿಸಬಹುದು. ಸರಸ್ವತಿ (ಘಾಗರ್- ಹಕ್ರಾ ) ನದಿಯ ಪ್ರಾಚೀನ ಕಾಲುವೆಗಳಲ್ಲಿನ ಹೂಳನ್ನು ಸಂಗ್ರಹಿಸಿ, ಅದರಲ್ಲಿನ ಝಿರ್ಕಾನ್ ಬೇರ್ಪಡಿಸಿ, ಝಿರ್ಕಾನ್’ನಲ್ಲಿರುವ ಯುರೇನಿಯಂ U-235.U-238 , ಸೀಸ Pb-207., Pb-206 ಪ್ರಮಾಣ ನಿರ್ಧರಿಸಬಹುದು. U-235 ಮತ್ತು Pb-207 ಒಂದು ಕಾಲ ಗಣನೆ ನೀಡಿದರೆ, U-238 ಮತ್ತು Pb-206 ಇನ್ನೊಂದು ಕಾಲದ ಗಣನೆ ನೀಡುತ್ತವೆ. ಇವೆರಡೂ ಕಾಲ ಗಣನೆಗಳನ್ನು ಹೋಲಿಸಿ ನೋಡಿ, ದಕ್ಕಿದ ಫಲಿತಾಂಶಗಳನ್ನು ಹೋಲಿಸಿ ನೋಡಬಹುದು. (19,21) ಒಂದೇ ರೀತಿಯ ಶಿಲಾಸ್ತರಗಳಿದ್ದ ಸಂದರ್ಭದಲ್ಲಿ ಅದರಲ್ಲಿರುವ ಖನಿಜಗಳನ್ನು ಹೋಲಿಸಿ ನೋಡಿ ಪರಸ್ಪರ ಸಂಬಂಧ ಹುಡುಕಬಹುದು. ಆದರೆ ಹಿಮಾಲಯಗಳು ವಿವಿಧ ಕಾಲಘಟ್ಟದ ಶಿಲಾಶ್ರೇಣಿಗಳಾಗಿರುವುದರಿಂದ ಅವುಗಳಿಗೆ ಝಿರ್ಕಾನ್ ಸೀಸದ ಗಡಿಯಾರವೇ ಸೂಕ್ತವಾದುದಾಗಿರುತ್ತದೆ. ಸರಸ್ವತಿ (ಘಾಗರ್-ಹಕ್ರಾ) , ಬಿಯಾಸ್, ಸಟ್ಲೆಜ್ ಮತ್ತು ಯಮುನಾ ನದಿ ತೀರಗಳಿಂದ ಹೂಳನ್ನು ತೆಗೆದು ಝಿರ್ಕಾನ್ ಬೇರ್ಪಡಿಸಿ ಅವುಗಳಲ್ಲಿನ (ಯುರೇನಿಯಂ-ಸೀಸ) U-Pb ಪ್ರಮಾಣ ನಿರ್ಧರಿಸಲಾಯಿತು. ಇದರಿಂದ ಈ ನದಿಗಳ ಭೂ ವಯೋಮಾನ (Geological age ) ನಿರ್ಧಾರ ಸಾಧ್ಯ. ಈ ಎಲ್ಲ ನದಿಗಳ ಆಕರಗಳು ವಿಭಿನ್ನ ಶಿಲಾಶ್ರೇಣಿಗಳಾಗಿದ್ದು, ಅವುಗಳ ಹೂಳು ಅವುಗಳ ಮೂಲವನ್ನು ಸೂಚಿಸುತ್ತದೆ. ಎನ್ನುವ ಪರಿಕಲ್ಪನೆ ಇದರ ಹಿಂದಿದೆ. ಇದಕ್ಕಾಗಿ ಸಂಖ್ಯಾಕಲನೀಯವಾಗಿ (Statistically) ಅಂಗೀಕಾರಾರ್ಹವಾಗುವಷ್ಟು ಪ್ರತಿಚಯಗಳ ಮೇಲೆ ಅಧ್ಯಯನ ನಡೆಸಬೇಕು.(19,21) ಪ್ರಯೋಗದ ಫಲಿತಾಂಶಗಳು ನೈಜ ಸ್ಥಿತಿ ಪ್ರತಿಬಿಂಬಿಸಲು ಪ್ರತಿ ಪ್ರತಿಚಯದಲ್ಲಿ ನೂರಕ್ಕೂ ಅಧಿಕ ಝಿರ್ಕಾನ್ ಕಣಗಳನ್ನು ಪರಿಗಣಿಸಲಾಯಿತು. ಹೀಗೆ ಪರಿಗಣಿಸಲಾದ ಝಿರ್ಕಾನ್ ಕಣಗಳನ್ನು ಲೇಸರ್ ಅಬ್ಸಾರ್ಪ್ಷನ್ ಇಂಡಕ್ಟಿವ್ಲಿ ಕಪಲ್ಡ್ ಪ್ಲಾಸ್ಮಾ ಮಾಸ್ ಸ್ಪೆಕ್ಟೋಮೀಟರ್’ನಲ್ಲಿ (ಲೇಸರ್ ಹೀರಿಕೆ ಅನುಪ್ರೇರಕ ಸಂಯುಗ್ಮ ಪ್ಲಾಸ್ಮಾ ರಾಶಿ ರೋಹಿತಮಾಪಕ) ವಿಶ್ಲೇಷಿಸಲಾಯಿತು. ಇದರಿಂದ ಲಭ್ಯವಾದ ಮಾಹಿತಿಗಳು ಕುತೂಹಲಕಾರಿಯಾಗಿದ್ದವು. ಪ್ರತಿಯೊಂದು ನದಿಯಲ್ಲಿನ ಝಿರ್ಕಾನ್ ವಿವಿಧ ಕಾಲಘಟ್ಟಗಳಿಗೆ ಸೇರಿದ್ದುದು ಖಚಿತವಾಯಿತು. ಬಿಯಾಸ್ ನದಿಯ ಝಿರ್ಕಾನ್ ಕಣಗಳು 30-75 ಕೋಟಿ ವರ್ಷಗಳಾಗಿದ್ದು ಅದರ ಮೂಲ ತೆಥಿಸ್ ಹಿಮಾಲಯವೆಂದು, ಯಮುನಾ ಹೂಳಿನ ಝಿರ್ಕಾನ್ ಮೂಲ187 ಕೋಟಿ ವರ್ಷದ್ದೆಂದು ಖಚಿತವಾಯಿತು. ಸಟ್ಲೆಜ್ ಹೂಳಿನ ಝಿರ್ಕಾನ್ ಮೂಲದಲ್ಲಿ ಎರಡು ಕಾಲಾವಧಿಗಳಿದ್ದವು. ಮೊದಲನೆಯದು 75-100 ಕೋಟಿ ವರ್ಷದ್ದಾಗಿದ್ದರೆ ಇನ್ನೊಂದು183 ಕೋಟಿ ವರ್ಷಗಳ ಹಿಂದಿನದಾಗಿದ್ದಿತು. (19,21) ಮುಂದಿನ ಹಂತದಲ್ಲಿ ಸರಸ್ವತಿ (ಘಾಗರ್-ಹಕ್ರಾ) ನದಿಯ ಪ್ರಾಚೀನ ಕಾಲುವೆಗಳಲ್ಲಿರುವ ಹೂಳು ತೆಗೆದು ಅದರಲ್ಲಿರುವ ಝಿರ್ಕಾನ್ನ್ನು ಸಹ ಇದೇ ಬಗೆಯ ಪರೀಕ್ಷೆಗೆ ಒಳಪಡಿಸಿ ಅದು ಯಾವ ಅವಧಿಗೆ ಸೇರಿದ್ದು ಅದರ ಮೂಲ ಯಾವುದೆಂದು ನಿರ್ಧರಿಸಿ, ಆ ಮೂಲಕ ಹಿಂದೆ ಸರಸ್ವತಿಗೆ (ಘಾಗರ್-ಹಕ್ರಾ)ಗೆ ನೀರುಣಿಸಿದ ನದಿ ಯಾವುದೆಂದು ನಿರ್ಧರಿಸಬಹುದು. ಇದರೊಂದಿಗೆ C-14 ಅಥವಾ ದೃಗ್ ಪ್ರಚೋದಿತ ಪ್ರದೀಪ್ತಿ (OSL-Optically Stimulated Luminiscenese) ಪರೀಕ್ಷೆಗೊಳಪಡಿಸಿ ನದಿಯ ಹರಿವಿನ ಕಾಲವನ್ನು ಪಡೆಯಬಹುದು. ಎಂದರೆ U-Pb ಪರೀಕ್ಷೆಯಲ್ಲಿ ನದಿಗಳ ಉಗಮದ ಮೂಲ C-14 ಮತ್ತು OSL ಪರೀಕ್ಷೆಯಲ್ಲಿ ಹೂಳು ತುಂಬಿದ ಕಾಲ ತಿಳಿಯುತ್ತವೆ. (19,21) ಥಾರ್ ಮರುಭೂಮಿಯ ಉತ್ತರದ ಅಂಚಿನ, ಸಿಂಧೂ ನಾಗರಿಕತೆಯ ನೆಲೆಗಳ ಸನಿಹದ ಹೂಳನ್ನು ಪಡೆಯಲಾಯಿತು. ಈ ಹೂಳಿನ ಮೇಲೆ C-14 ಮತ್ತು OSL ಪರೀಕ್ಷೆಗಳನ್ನು ಕೈಗೊಳ್ಳಲಾಯಿತು. ಈ ಮೂಲಕ ಈ ಹೂಳು ಸೂರ್ಯನ ಕಿರಣಕ್ಕೆ ಒಡ್ಡಿಕೊಂಡಿದ್ದ ಕೊನೆಯ ಅವಧಿಯನ್ನು ನಿರ್ಧರಿಸಲಾಯಿತು. ಹೀಗೆ ಎರಡು ಸಮಾಂತರ ಪರೀಕ್ಷೆ ವಿಶ್ಲೇಷಣೆಗಳಿಂದ ದಕ್ಕಿದ ಫಲಿತಾಂಶಗಳು ಕುತೂಹಲಕರವಾಗಿದ್ದವು.(19,21) ಈ ಹೂಳಿನಲ್ಲಿ ಯಮುನಾ ಸಟ್ಲೆಜ್ ಮತ್ತು ಬಿಯಾಸ್ ಮೂರು ನದಿಗಳ ಮೂಲಕ್ಕೆ ಸೇರಿದ ಶಿಲಾ ಅವಶೇಷಗಳಿರುವುದು U-Pb ಯಿಂದ ಖಚಿತವಾಯಿತು. ಎಂದರೆ ಬತ್ತಿದ್ದ ಸರಸ್ವತಿ (ಘಾಗರ್-ಹಕ್ರಾ) ನದಿ ಬಹು ಹಿಂದೆಂದೋ ಈ ಮೂರು ಮೂಲಗಳಿಂದ ನೀರನ್ನು ಪಡೆಯುತ್ತಿದ್ದುದು ದಿಟ. ಆದರೆ C-14 ಮತ್ತು OSL ವಿಶ್ಲೇಷಣೆಗಳಿಂದ 50,000 ವರ್ಷಗಳಿಗೂ ಹಿಂದೆ ಯಮುನಾ ನದಿ ಸರಸ್ವತಿಗೆ (ಘಾಗರ್-ಹಕ್ರಾ) ತನ್ನ ಪಾಲನ್ನು ನೀಡಿರುವುದು ಸ್ಪಷ್ಟವಾಯಿತು. ಬಿಯಾಸ್ ಮತ್ತು ಸಟ್ಲೇಜ್ ನದಿಗಳು 10,000 ವರ್ಷಗಳ ಹಿಂದೆ ಸರಸ್ವತಿಗೆ (ಘಾಗರ್-ಹಕ್ರಾ) ತಮ್ಮ ಕಾಣಿಕೆ ನೀಡುವುದನ್ನು ನಿಲ್ಲಿಸಿರುವುದು ಪತ್ತೆಯಾಯಿತು. ಇದರಿಂದ 50,000 ವರ್ಷಗಳ ಹಿಂದೆ ಪಶ್ಚಿಮಾಭಿಮುಖವಾಗಿ ಸಾಗುತ್ತಿದ್ದ ಯಮುನಾ ಪೂರ್ವಕ್ಕೆ ತಿರುಗಿ ಗಂಗಾದತ್ತ ಹರಿದರೆ, ಬಿಯಾಸ್ ಮತ್ತು ಸಟ್ಲೆಜ್ 10,000 ವರ್ಷಗಳ ಹಿಂದೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿ ಸರಸ್ವತಿ (ಘಾಗರ್-ಹಕ್ರಾ) ತೊರೆದು ಸಿಂಧೂವನ್ನು ಸೇರಿರುವುದು ಸ್ಪಷ್ಟವಾಯಿತು. (19,21) ಮೇಲೆ ನಡೆಸಿದ ಅಧ್ಯಯನಕ್ಕಾಗಿ ಸಂಗ್ರಹಿಸಲಾದ ಎಲ್ಲ ಹೂಳು ಪಾಕಿಸ್ತಾನದ ಖೊಲಿಸ್ತಾನ್ ಮರುಭೂಮಿಯಲ್ಲಿನ ಅಬ್ಬಾಸ್ ಬಂದರಿನ ಸನಿಹದ ಸರಸ್ವತಿಯ (ಘಾಗರ್-ಹಕ್ರಾ) ಪ್ರಾಚೀನ ಕಾಲುವೆಗಳಿಗೆ ಸೇರಿದೆ. ಕೆಲವು ಅಧ್ಯಯನಗಳು ಸರಸ್ವತಿ (ಘಾಗರ್-ಹಕ್ರಾ) ಮತ್ತು ಸಟ್ಲೆಜ್ ನದಿ ಸಂಗಮದ ಪ್ರಾಚೀನ ಕುರುಹುಗಳು ಹರಿಯಾಣದಲ್ಲಿ ಇವೆಯೆಂದು ತಿಳಿಸುತ್ತವೆ. ಇಲ್ಲಿನ ಪ್ರಾಚೀನ ಕಾಲುವೆಗಳಿಂದ ಹೂಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿಲ್ಲ. ಯಮುನಾ ಅಥವಾ ಸಟ್ಲೆಜ್ ಸರಸ್ವತಿಯನ್ನು (ಘಾಗರ್-ಹಕ್ರಾ) ಹಿಂದೆಂದೋ ಸೇರುತ್ತಿದ್ದರೆ ಅದರ ಕುರುಹುಗಳು ಇಂತಹ ಸಂಗಮದ ನೆಲೆಯಿಂದ ಮೇಲ್ಭಾಗದಲ್ಲಿ ಸಂಗ್ರಹಿಸಿದ ಅತ್ಯಂತ ಹಳೆಯ ಪದರದ -5,000 ವರ್ಷಗಳ ಹಿಂದಿನ- ಹೂಳಿನಲ್ಲಿ ಕಾಣಬೇಕಿತ್ತು. ಆದರೆ ಅಂತಹ ಕುರುಹುಗಳು ದಕ್ಕಿಲ್ಲ. ಈ ವಿಶ್ಲೇಷಣೆಯನ್ನು ವಾಯುವ್ಯ ಭಾರತದ ಎಲ್ಲ ಪ್ರಮುಖ ನದಿಗಳ ಮೇಲೆ ನಡೆಸಿ ಒಂದು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯ. ಆದರೆ ಈಗ ಸದ್ಯವಿರುವ ಫಲಿತಾಂಶಗಳಿಂದ ಸರಸ್ವತಿ (ಘಾಗರ್-ಹಕ್ರಾ) ನಂತರದ ಪ್ಲಿಸ್ಟೊಸಿನ್ ಕಾಲದಲ್ಲಿ ಬತ್ತಿ ಹೋಗಿರುವುದು ಮತ್ತು ಈ ಕಾಲ ಒಣಹವೆಯ ಹವಾಮಾನದ ಅವಧಿಗೆ ತಾಳೆಯಾಗುವುದು ಸ್ಪಷ್ಟವಾಗಿದೆ. ಪಾಕಿಸ್ತಾನದ ಪುರಾತತ್ತ್ವಶಾಸ್ತ್ರಜ್ಞ ರಫೀಕ್ ಮುಗಲ್ ಪ್ರ.ಶ.ಪೂ 2600ರ ಅವಧಿಯಲ್ಲಿ ಆರಂಭಿಕ ಹಾಗೂ ಪ್ರಬುದ್ಧ ನಾಗರಿಕ ಹಂತಗಳ ನಡುವೆ ವಸತಿ ನೆಲೆಗಳಲ್ಲಿ ಸಾತತ್ಯ ಭಂಗವಾಗಿರುವುದನ್ನು ಗುರುತಿಸಿದ್ದಾರೆ. ಈ ಸಾತತ್ಯ ಭಂಗ ಭಾರತ ಪಾಕಿಸ್ತಾನ ಗಡಿಯಿಂದ 10೦ ಕಿ.ಮೀ ಪಶ್ಚಿಮದಲ್ಲಿದೆ. ಇದರ ಆಧಾರದ ಮೇಲೆ ಘಾಗರ್-ಹಕ್ರಾ ಈ ವೇಳೆಗೆ ಬಡಕಲಾಗಿದ್ದು ಖೊಲಿಸ್ತಾನ್ ಮರುಭೂಮಿಯಲ್ಲಿ ಹರಿಯುತ್ತಿರಲಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ಜಾಗದಲ್ಲಿ ಜರ್ಮನಿ ವಿಜ್ಞಾನಿಗಳಾದ ಎಂ.ಎ.ಗೆಯಹ್ (M.A.Geyh) ಮತ್ತು ಡಿ.ಪ್ಲೊಥಿನ್ನರ್ (Ploethiner) ವಿಸ್ತಾರವಾದ ಆಳವಿಲ್ಲದ ಅಂತರ್ಗತವಾದ ಸಿಹಿನೀರಿನ ಸೆಲೆ ಪತ್ತೆ ಹಚ್ಚಿ , ಟ್ರೈಷಿಯಂ ಸಮಸ್ಥಾನಿ ಆಧಾರದ ಮೇಲೆ ಪ್ರಯೋಗ ನಡೆಸಿ ಅಲ್ಲಿರುವ ನೀರು ಪ್ರ.ಶ.ಪೂ12900-4700 ರ ಅವಧಿಗೆ ಸೇರಿದ್ದು, ಅತ್ಯಂತ ಇತ್ತೀಚಿನ ನೀರು ಪ್ರ.ಶ.ಪೂ 2700 ರ ಅವಧಿಗೆ ಸೇರಿದ್ದೆಂದು ತೀರ್ಮಾನಿಸಿದ್ದಾರೆ. ಇದು ರಫೀಕ್ ಮುಗಲ್ ವೀಕ್ಷಣೆಗೆ ಹೊಂದಾಣಿಕೆಯಾಗುತ್ತದೆ. (16) ಯಮುನಾ ಮತ್ತು ಚಂಬಲ್ ನದಿಯ ಹೂಳುಗಳ ಮೇಲೆ ನಡೆಸಿದ OSL ಪ್ರಯೋಗದ ಫಲಿತಾಂಶಗಳಿಂದ (ಸಿನ್ಹಾ ಮತ್ತು ಸಂಗಡಿಗರು ) ಯಮುನಾ ಈಗಿನ ಸ್ಥಿತಿಯಲ್ಲಿ ಹರಿಯಲು ಪ್ರಾರಂಭಿಸಿ 2000-3000 ವರ್ಷಗಳಾದವು. ಅದಕ್ಕೂ ಮೊದಲು ಅದು ಸರಸ್ವತಿ (ಘಾಗರ್-ಹಕ್ರಾ) ಕಡೆಗೆ ಹರಿಯುತ್ತಿದ್ದಿತು ಎಂದು ನಿರ್ಧರಿಸಲಾಗಿದೆ. ಇದರಿಂದ ಯಮುನಾ ನದಿ ಕೇವಲ 2000-3000 ಹಿಂದಷ್ಟೇ ಪೂರ್ವಕ್ಕೆ ತಿರುಗಿತೇ ? ಎನ್ನುವುದಕ್ಕೆ ಸಮಾಧಾನದ ಉತ್ತರ ಸಿಗದು ಇದಕ್ಕೆ ಇನ್ನಷ್ಟು ಅಧ್ಯಯನಗಳು ಅಗತ್ಯ. ಒಟ್ಟಾರೆಯಾಗಿ ಹೇಳಬೇಕೆಂದರೆ ಭೂಲಕ್ಷಣ , ಭೂಪಲ್ಲಟ, ಮಳೆಗಾಲ ಈ ನದಿಗಳ ಮೇಲೆ ಯಾವ ಪರಿಣಾಮ ಹಾಗೂ ಬದಲಾವಣೆಗಳನ್ನು ತಂದಿತೆಂದು ಸಮಗ್ರವಾಗಿ ಪರಿಶೀಲಿಸಿ ನೋಡಬೇಕು. ಈವರೆಗಿನ ನಡೆದಿರುವ ವೈಜ್ಞಾನಿಕ ಶೋಧನೆಗಳನ್ನು ಪರಿಗಣಿಸಿ ಸರಸ್ವತಿಯ ಚರಿತ್ರೆಯನ್ನು ಹೀಗೆ ಕಟ್ಟಿಕೊಡಬಹುದು. (19,21) ಹೊಲೊಸಿನ್ ಆರಂಭದ ಅವದಿಯಲ್ಲಿ ಸರಸ್ವತಿ (ಘಾಗರ್-ಹಕ್ರಾ) ಯಮುನಾ, ಸಟ್ಲೆಜ್’ನಿಂದ ಮಳೆಗಾಲದ ನೀರನ್ನು ಪಡೆಯುತ್ತಿದ್ದಿತು. ಇವೆರಡು ನದಿಗಳಿಗೂ ಹಿಮಮೂಲದ ನೀರು ಬರುತ್ತಿರಲಿಲ್ಲ. ಆ ಕಾಲದಲ್ಲಿ ಯಮನಾ ಮತ್ತು ಸಟ್ಲೆಜ್ ಸರಸ್ವತಿಯಿಂದ (ಘಾಗರ್-ಹಕ್ರಾ) ದೂರ ಸರಿದವು. , ಹೊಲೊಸಿನ್ ಮಧ್ಯಾವಧಿಯ ಮಳೆ ಯಥೇಚ್ಛವಾಗಿದ್ದ ಹಸಿಗಾಲದಲ್ಲಿ ಪ್ರ,ಶ.ಪೂ 2500-2000 ವರ್ಷಗಳ ಅವಧಿಯಲ್ಲಿ ಸಿಂಧೂ ನಾಗರಿಕತೆ ಹುಟ್ಟಿ ಬೆಳೆಯಿತು. ಬರುವ ಮಳೆಯ ನೀರಿನಿಂದ ಬೆಳೆಗಳನ್ನು ಪಡೆಯಲಾಗುತ್ತಿದಿತು. ಸರಸ್ವತಿಯ (ಘಾಗರ್-ಹಕ್ರಾ) ಆಸುಪಾಸಿನಲ್ಲಿ ಚಳಿಗಾಲದ ಬೆಳೆಯೇ ಪ್ರಾಶಸ್ತ್ಯ ಗಳಿಸಿದ್ದಿತು. ನೀಲಿನೈಲ್ ನದಿಯ ಬಯಲಿನಲ್ಲಿ ಮುಂಗಾರು ಮಳೆ ಗೋಧಿ , ಬಾರ್ಲಿ ಮುಂತಾದ ಬೆಳೆಗಳಿಗೆ ಪೋಷಕವಾಗಿದ್ದಿತು. ಮುಂಗಾರಿನ ಪ್ರವಾಹ ಇಳಿದ ನಂತರ ಹೊರತೆರೆದುಕೊಂಡ ಫಲವತ್ತಾದ ಪ್ರದೇಶಗಳಲ್ಲಿ ಅಕ್ಟೋಬರ್-ನವೆಂಬರ್’ನಲ್ಲಿ ಬಿತ್ತನೆ ಮಾಡಿ ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ಕಟಾವಿಗೆ ಸಿದ್ದವಾಗಿರುತ್ತಿದ್ದಿತು. ಇದೇ ಪದ್ಧತಿಯನ್ನು ಸೈಂಧವ ನಾಗರಿಕತೆಯಲ್ಲೂ ಅನುಸರಿಸಲಾಗಿದೆ. ಸೈಂಧವ ನಾಗರಿಕತೆಯ ಸಾಕಷ್ಟು ನೆಲೆಗಳು ಇಂತಹ ನೆರೆ ಇಳಿದ ಪ್ರದೇಶಗಳಲ್ಲಿರುವು ಗಮನಾರ್ಹ. ಕಾಲಾನುಕ್ರಮದಲ್ಲಿ ಈ ಮುಂಗಾರು ಕೈಕೊಡತೊಡಗಿದ್ದರಿಂದ ಕೃಷಿಗೆ ಮಳೆ ನೀರಿನ ಕೊರತೆಯುಂಟಾಗಿ ನಾಗರಿಕತೆ ಅಳಿವಿನಂಚಿಗೆ ಬಂದಿತು. ಈವರೆಗೆ ನಡೆದ ಅಧ್ಯಯನಗಳಲ್ಲಿ U-Pb ಅಧ್ಯಯನವೇ ಸಾಕಷ್ಟು ಭದ್ರ ತಳಹದಿ ಹೊಂದಿದೆ. ಇದಕ್ಕೂ ಮೊದಲು ನಡೆಸಿದ ಅಧ್ಯಯನಗಳಲ್ಲಿ ಉಪಗ್ರಹ ಬಿಂಬಗಳು, ಬತ್ತಿದ ಬಯಲು , ಒಣಗಿದ ನದಿ ದಡ ಮುಂತಾದುವುಗಳಿಗೆ ಪ್ರಬಲ ವೈಜ್ಞಾನಿಕ ಆಧಾರಗಳಿಗಿಂತ ವ್ಯಕ್ತಿಗತ ವಿವರಣೆಗಳೇ ಪ್ರಮುಖವಾಗಿದ್ದವು. ಇದರೆಲ್ಲದರ ಅರ್ಥವೆಂದರೆ ಋಗ್ವೇದಗಳು ರಚಿತವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೆ ಯಮುನಾ, ಸಟ್ಲೆಜ್, ಸರಸ್ವತಿಯತ್ತ (ಘಾಗರ್-ಹಕ್ರಾ) ಹರಿಯುವುದನ್ನು ನಿಲ್ಲಿಸಿದ್ದವು. ಪರ್ವತದಿಂದ ಸಮುದ್ರದವರೆಗೆ ಭೋರ್ಗರೆಯುತ್ತ ಹರಿಯುವ ದೊಡ್ಡ ನದಿ ಎನ್ನುವ ಒಂದೇ ಉಲ್ಲೇಖದ ಮೇಲೆ ಘಾಗರ್-ಹಕ್ರಾ ನದಿಯನ್ನು ಸರಸ್ವತಿ ಹಾಗೂ ಅದರ ನೀರಿನ ಮೂಲ ಹಿಮಾಲಯದ ಹಿಮನದಿಗಳೆಂದು ಪರಿಗಣಿಸಿ ಸೈಂಧವ ನಾಗರಿಕತೆಯ ಆರ್ಯರದು ಎಂದು ವಾದಿಸಲಾಗಿದೆ. ಹೆಚ್ಚಿನ ಜನ ವಿಮರ್ಶಾತ್ಮಕವಾಗಿ ನೋಡದೆ ಧರ್ಮ ಮತ್ತು ದೇಶಭಕ್ತಿಯ ಹಿನ್ನೆಲೆಯಲ್ಲಿ ಋಗ್ವೇದದ ಸರಸ್ವತಿ ಹಿಮಾಲಯದಿಂದ ಇಳಿದು ಸಮುದ್ರಕ್ಕೆ ಹರಿಯುವ ಸರ್ವಋತು ಸಲಿಲ ಧಾರೆಯಾಗಿದ್ದಳೆಂದು ಭಾವಿಸುತ್ತಾರೆ. ಆದರೆ ವಸ್ತುನಿಷ್ಠ ಸಂಗತಿಗಳು ಬೇರೆಯದೇ ಆಗಿವೆ. ಇವೆಲ್ಲ ವಿವರಗಳನ್ನು ನೋಡಿದರೆ ಆರ್ಯರ ಬರುವಿಕೆ- ನೆಲೆಸಿಕೆ, ಹಿಮನದಿಗಳಿಂದ ಭೋರ್ಗೆರೆವ ಸರಸ್ವತಿಯ ಮೇಲೆ ಅವಲಂಬಿತವಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಕಾವ್ಯಾತ್ಮಕ ವರ್ಣನೆ , ಹಿಗ್ಗಿಸಿ ಹೇಳುವುದು, ಸಣ್ಣದನ್ನು ಮಹತ್ತರವೆಂಬಂತೆ ವೈಭವೀಕರಿಸುವುದು ಸರ್ವೇ ಸಾಮಾನ್ಯ. ಇದು ಕಲ್ಪನೆಯ ಒಂದು ಅಂಗ. ಋಗ್ವೇದದ ಋಷಿಗಳು ಹೇಳಿದ ಪರ್ವತ ಶಿವಾಲಿಕ ಪರ್ವತ ಶ್ರೇಣಿಯಾಗಿರಬಹುದು. ಋಕ್’ಗಳಲ್ಲಿ ಸರಸ್ವತಿಯ ಗಾತ್ರವನ್ನು ವೈಭವೀಕರಿಸಿರಬಹುದು. ಭಾಷೆ ಸಂಸ್ಕೃತಿ ಪುರಾತತ್ತ್ವ ಶೋಧನೆ ವಸ್ತುನಿಷ್ಟ ಸಂಗತಿಗಳೆಲ್ಲವೂ ಒಂದೇ ದಿಕ್ಕಿನತ್ತ ಬೆರಳು ತೋರಿಸುತ್ತಿರಬೇಕು. ಆದರೆ ನದೀತಮೆ ಸರಸ್ವತಿಯ ಹುಡುಕಾಟದಲ್ಲಿ ಅದು ಜರುಗಿಲ್ಲ. ಹಿಮನದಿಗಳಿಂದ ನೀರು ಪಡೆಯುವ ಸರಸ್ವತಿಯನ್ನು ಯಾವ ಸಾಕ್ಷ್ಯಧಾರಗಳೂ ಇಲ್ಲದೆ ನೇರವಾಗಿ ಕಲ್ಪಿಸಿಕೊಳ್ಳಲಾಗಿದೆ. ಯಾವುದೋ ಒಂದು ಕಾಲದಲ್ಲಿ ಆರ್ಯಬುಡಕಟ್ಟುಗಳು ಸೈಂಧವ ನಾಗರಿಕತೆ ಮೆರೆದು ಮರೆಯಾದ ಜಾಗದಲ್ಲಿ ನೆಲೆಯೂರಿದ್ದರು. ಆ ಆಧಾರದ ಮೇಲೆ ನೂರಾರು ತಲೆಮಾರುಗಳ ನಂತರ ಅವರ ಉತ್ತರಾಧಿಕಾರಿಗಳೆಂದು ಭಾವಿಸುವವರು ಸೈಂಧವ ನಾಗರಿಕತೆಯನ್ನು ಅವರ ಪೂರ್ವಜರ ಖಾತೆಗೆ ವರ್ಗಾಯಿಸುವ ಹವಣಿಕೆಯಲ್ಲಿದ್ದಾರೆ. ಭಾರತದ ಇತಿಹಾಸ ರಚನೆಯಲ್ಲಿ ನೂರಾರು ಕಗ್ಗಂಟುಗಳಿವೆ. ಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಅದನ್ನು ಅರಿಯಲು ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇಲ್ಲಿ ಯಾವ ಸಮುದಾಯ ಏನನ್ನು ಸಾಧಿಸಿತು ಎಂದು ಸ್ಥಾಪಿಸುವುದು ಮುಖ್ಯವಲ್ಲ. ಭಾರತೀಯರ ಸಾಧನೆಗಳಲ್ಲಿ ಧರ್ಮವೂ ಒಂದು ಅಂಶವೇ ಹೊರತು ಸ್ವಾಮಿ ವಿವೇಕಾನಂದರು ಭಾವಿಸಿದಂತೆ ಅದೇ ಎಲ್ಲವೂ ಅಲ್ಲ. ವೈದಿಕ-ಅವೈದಿಕಗಳ ಕಲಬೆರಕೆಯಾದ ಭಾರತೀಯರ ಎಲ್ಲ ಸಾಧನೆಗಳನ್ನು ಧಾರ್ಮಿಕ ಕನ್ನಡಕದಿಂದ ನೋಡಿ ಇತಿಹಾಸ ರಚಿಸುವುದು ತಪ್ಪು. ಇದು ವೈವಿಧ್ಯತೆಯನ್ನು ತೆಗೆದು ಎಲ್ಲವನ್ನು ಸರಳೀಕಣಗೊಳಿಸುವ ಸಂಚು ಅಥವಾ ಎಲ್ಲ ಸಾಧನೆಗಳನ್ನು ಧರ್ಮದ ಏಕಚಕ್ರಾಧಿಪತ್ಯದಡಿ ತರುವ ಹುನ್ನಾರವಾಗುತ್ತದೆ. ಆದ್ದರಿಂದ ಇನ್ನೂ ಹೆಚ್ಚಿನ ವೈಜ್ಞಾನಿಕ ಆಧಾರಗಳು ಸಿಗುವವರೆಗೆ ಋಗ್ವೇದದ ಸರಸ್ವತಿ ಯಾವುದೆಂದು ನಿರ್ಧರಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಈ ನಿಲುವನ್ನು ಒಪ್ಪದೆ ಇತ್ತೀಚಿನ ಸಂಶೋಧನೆಗಳಿಗೆ ಮನ್ನಣೆ ಕೊಡದೆ ಈಗ ಅಸ್ತಿತ್ವದಲ್ಲಿರುವ ಎಲ್ಲ ನದಿಗಳ ಪೈಕಿ ಬತ್ತಿಹೋಗಿ ಕಣ್ಮರೆಯಾಗಿರುವುದು ಎಲ್ಲವುಗಳಿಗಿಂತ ದೊಡ್ಡದಾದ ಹೆಚ್ಚಿನ ನೀರನ್ನು ಒಯ್ಯುತ್ತಿದ್ದ ಸರಸ್ವತಿ ಮಾತ್ರ. ಆ ಸರಸ್ವತಿಯೇ ಈಗಿನ ಘಾಗರ್-ಹಕ್ರಾ ಎನ್ನುವ ನಿಲುವಿಗೆ ಅಂಟಿಕೊಂಡಿದ್ದೇ ಆದರೆ ಅಂಬಿತಮೆ ಸರಸ್ವತಿಯ ಅಸ್ತಿತ್ವ ಮೊದಲಿನಂತೆಯೆ ನಂಬಿಕೆಗಳ ಮೇಲಿರಿರುತ್ತದೆಯೇ ಹೊರತು ವಾಸ್ತವ ಸಂಗತಿಗಳ ಮೇಲಲ್ಲ, |
Comment Box is loading comments...