ಪ್ರಭಾವ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯದ ಭಾಗ)
ಸ್ವಾಮಿಗಳ ವೇದಾಂತ ದರ್ಶನಕ್ಕೆ ಮತ್ತು ಅವರ ಪ್ರಭಾವಕ್ಕೆ ಅಮೆರಿಕದ ತತ್ತ್ವಶಾಸ್ತ್ರಜ್ಞರು , ದಾರ್ಶನಿಕರು , ಚಿಂತಕರು , ವಿಜ್ಞಾನಿಗಳು, ರಾಜಕೀಯ ಧುರೀಣರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಒಳಗಾಗಿದ್ದರು ಎನ್ನುವ ಜನಪ್ರಿಯ ನಂಬಿಕೆ ಚಾಲ್ತಿಯಲ್ಲಿದೆ. ಇದನ್ನು ಸ್ವಲ್ಪ ಬಿಡಿಸಿ ನೋಡಬಹುದು. ಅಮೆರಿಕ , ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿ ಸ್ವಾಮಿಗಳು ಭೇಟಿ ಮಾಡಿದ/ ಪರಿಚಯ ಮಾಡಿಕೊಂಡ/ಒಡನಾಟ ಹೊಂದಿದ್ದ/ಪ್ರಭಾವಕ್ಕೆ ಒಳಗಾಗಿದ್ದ ಖ್ಯಾತರಾದ ವಿವಿಧ ವರ್ಗಗಳ ಜನರ ಪಟ್ಟಿ ಅನುಬಂಧದಲ್ಲಿದೆ. ಸ್ವಾಮಿಗಳು ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್’ನಲ್ಲಿರುವಾಗ ನಾನಾ ರಂಗ, ವೃತ್ತಿಗಳಲ್ಲಿರುವ ಹಲವಾರು ಜನರನ್ನು ಭೇಟಿಯಾಗಿದ್ದರು. ಅವರಲ್ಲಿ ಜನ ಸಾಮಾನ್ಯರಂತೆ ತಮ್ಮ ರಂಗಗಳಲ್ಲಿ ಹೆಸರು ಗಳಿಸಿದ್ದವರೂ ಇದ್ದರು. ಈಗ ಲಭ್ಯವಿರುವ ದಾಖಲೆಗಳಿಂದ ಸ್ವಾಮಿಗಳಿಗೆ ೩೬ ವಿದ್ವಾಂಸರು , ೩೨ ತತ್ತ್ವಶಾಸ್ತ್ರಜ್ಞರು , ೧೯ ವಿಜ್ಞಾನಿ-ತಂತ್ರಜ್ಞರು , ೨೪ ಕಲಾವಿದರು ,೧೫ ಜನ ರಾಜಕೀಯ ಮತ್ತು ಸಾರ್ವಜನಿಕ ಸೇವೆಯ ವ್ಯಕ್ತಿಗಳು , ೫೫ ಜನ ಧಾರ್ಮಿಕ ಮುಖಂಡರು , ೧೯ ಜನ ವ್ಯಾಪಾರಿ, ಉದ್ಯಮಿಗಳು , ಶಿಕ್ಷಣ ಕ್ಷೇತ್ರಕ್ಕೆ ಸೇರಿದ ೧೬ ಜನ , ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ೮ ಮತ್ತು ೫೭ ಜನ ಬರಹಕ್ಕೆ ಸಂಬಂಧಿಸಿದ ವೃತ್ತಿಯವರು ಪರಿಚಿತರಾಗಿದ್ದರು. ಸ್ವಾಮಿಗಳ ಭಾಷಣ ಮತ್ತು ತರಗತಿಗಳಿಗೆ ಬರುತ್ತಿದ್ದ ಸಾಮಾನ್ಯ ಜನ ಈ ಪಟ್ಟಿಯಲ್ಲಿಲ್ಲ. ಅವರನ್ನೂ ಪರಿಗಣಿಸಿದರೆ ಇನ್ನೂ ೧೦೦-೧೫೦ ಹೆಸರುಗಳು ದಕ್ಕಬಹುದು. ಪರಿಚಯ ಮೀರಿ ಸ್ವಾಮಿಗಳೊಂದಿಗೆ ಸ್ವಲ್ಪ ಹೆಚ್ಚಿನ ಒಡನಾಟ ಹೊಂದಿದ್ದ ಜನರ ಪಟ್ಟಿ ಕೆಳಗಿದೆ.
ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಹಾರ್ವರ್ಡ್’ನ ಗ್ರೀಕ್ ಪ್ರಾಧ್ಯಾಪಕ ಜಾನ್ ಹೆನ್ರಿ ರೈಟ್ಸ್ ತತ್ತ್ವಶಾಸ್ತ್ರಜ್ಞ ವಿಲಿಯಂ ಜೋನ್ಸ್ , ಇಂಜಿನಿಯರ್ ನಿಕೊಲಾಸ್ ಟೆಸ್ಲಾ ಸೇರಿದಂತೆ ಹಲವು ಬಗೆಯ ವಿದ್ವಾಂಸರನ್ನು ಭೇಟಿ ಮಾಡಿದ್ದರು. ಇವರಲ್ಲಿ ಯಾರೂ ವಿವೇಕಾನಂದರು ಬೋಧಿಸುತ್ತಿದ್ದ ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಿರಲಿಲ್ಲ. ಆದ್ದರಿಂದ ಅವರು ಅದನ್ನು ವಿದ್ಯಾರ್ಥಿಗಳಂತೆ ಕೇಳುತ್ತಿದ್ದರೇ ಹೊರತು ಆಳವಾಗಿ ಚರ್ಚಿಸುತ್ತಿರಲಿಲ್ಲ. ಸ್ವಾಮಿಗಳು ಮಾಡುತ್ತಿದ್ದ ವೇದಾಂತ , ಯೋಗ, ಭಾರತೀಯ ಧರ್ಮಗಳನ್ನು ಕುರಿತಾದ ಭಾಷಣಗಳು ಪರಿಣಿತರಲ್ಲದವರಿಗೆ ಆಕರ್ಷಕವಾಗಿರುತ್ತಿದ್ದವು. ವಿಷಯ ಪರಿಣಿತರು ಅವುಗಳನ್ನು ಹೇಗೆ ಪರಿಗಣಿಸುತ್ತಿದ್ದರು ಎನ್ನುವುದು ತಿಳಿಯುವುದಿಲ್ಲ. ಅದ್ವೈತವಾದಿಯಾಗಿದ್ದ ಜೋಸಯ್ಯ ರಾಯ್ಸ್ ಸ್ವಾಮಿಗಳೊಂದಿಗೆ ಯಾವುದೇ ಸ್ನೇಹವನ್ನು ಹೊಂದದಿರುವುದು , ಅದ್ವೈತ ತತ್ತ್ವಶಾಸ್ತ್ರ ಕುರಿತಾದ ಚರ್ಚೆ ನಡೆಸದಿರುವುದು ಸೋಜಿಗವನ್ನುಂಟು ಮಾಡುತ್ತದೆ. ಸ್ವಾಮಿಗಳು ಹಿಂದೂ ತತ್ತ್ವಶಾಸ್ತ್ರ ಅಧ್ಯಯನ ಮಾಡಿದವರನ್ನು ಮುಖಾಮುಖಿಯಾಗಿರಲಿಲ್ಲ. ತತ್ತ್ವಶಾಸ್ತ್ರದಲ್ಲಿ ಪಳಗಿದ ಭಾರತೀಯರೊಂದಿಗೆ ಅವರು ಭಾರತದ ದುರವಸ್ಥೆ , ಹತಾಶ ಸ್ಥಿತಿ, ಸಾಮಾಜಿಕ ಅನಿಷ್ಟಗಳತ್ತ ತಿರುಗುತ್ತಿದ್ದರೇ ಹೊರತು ತತ್ತ್ವಶಾಸ್ತ್ರದ ಆಳ ಚರ್ಚೆಗೆ ಇಳಿಯುತ್ತಿರಲಿಲ್ಲ. ಕೆಲವು ಕಲಾವಿದರನ್ನು ಹೊರತು ಪಡಿಸಿ ಸಾಂದರ್ಭಿಕ ಭೇಟಿ , ಮಾತುಕತೆ ಹೊರತಾಗಿ ಸ್ವಾಮಿಗಳು ಬೌದ್ಧಿಕ ವಲಯಕ್ಕೆ ಸೇರಿದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗೆ ಅದರಲ್ಲೂ ವಿಶೇಷವಾಗಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರೊಂದಿಗೆ ಅಥವಾ ಅಮೆರಿಕದ ಯಾವುದೇ ಚಿಂತಕ , ಸಮಾಜ ಸುಧಾರಕ , ತತ್ತ್ವಜ್ಞಾನಿ , ವಿಜ್ಞಾನಿ. ಮುತ್ಸದಿ ಯಾರೊಂದಿಗೂ ವಿಚಾರ ವಿನಿಮಯದ ಸಂವಹನವನ್ನು ನಡೆಸಿಲ್ಲ , ನಡೆಸಲು ಪ್ರಯತ್ನಿಸಿರಲಿಲ್ಲ ಎನ್ನುವುದು ಅವರ ಪತ್ರಗಳಿಂದ ಸ್ಪಷ್ಟ. ಆದ್ದರಿಂದ ಸ್ವಾಮಿಗಳು ಈ ಖ್ಯಾತರನ್ನು ಭೇಟಿಯಾದಾಗ ಅವರೊಂದಿಗೆ ಕೆಲ ವಿಷಯಗಳನ್ನು ಸಾಂದರ್ಭಿಕವಾಗಿ ಚರ್ಚಿಸಿರಬಹುದು. ಆದರೆ ಆ ಚರ್ಚೆಗಳು ಮುಂದುವರೆಯುವಷ್ಟು ಗಂಭೀರವಾಗಿರಲಿಲ್ಲ ಮತ್ತು ಆ ಖ್ಯಾತರು ಸ್ವಾಮಿಗಳಿಗೆ ತಾವಾಗಿಯೇ ಪತ್ರಗಳನ್ನು ಬರೆಯಲಿಲ್ಲ ಮತ್ತು ಸ್ವಾಮಿಗಳು ಅವುಗಳಿಗೆ ಉತ್ತರಿಸಲಿಲ್ಲ. ೧೩/೨/೧೮೯೬ ರಂದು ಸ್ವಾಮಿಗಳು ಎಡ್ವರ್ಡ್ ಸ್ಟರ್ಡಿಗೆ ಬರೆದ ಪತ್ರದಿಂದ ಅವರು ನಿಕೊಲಾಸ್ ಟೆಸ್ಲಾನೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಬೇಕೆಂದಿದ್ದರೆಂದು ಗೊತ್ತಾಗುವುದಾದರೂ ಸ್ವಾಮಿಗಳು ಮತ್ತು ನಿಕೊಲಾಸ್ ಟೆಸ್ಲಾನ ವೈಜ್ಞಾನಿಕ ಪರಿಕಲ್ಪನೆಗಳ ನಡುವೆ ಯಾವುದೇ ಹೊಂದಾಣಿಕೆಯಾಗದೆ ಅದು ಮುಂದುವರಿಯಲಿಲ್ಲ.
ವೇದಾಂತವನ್ನು ಪಾಶ್ಚಾತ್ಯರಿಗೆ ಕೊಟ್ಟು ಅದರ ಬದಲಿಗೆ ಅವರಿಂದ ಲೌಕಿಕ ವಿದ್ಯೆಗಳನ್ನು ತರುತ್ತೇನೆ ಎಂದು ತಮ್ಮ ಪತ್ರಗಳಲ್ಲಿ ಶಿಷ್ಯರಿಗೆ ತಿಳಿಸುತ್ತಿದ್ದ ಸ್ವಾಮಿಗಳು ಈ ಲೌಕಿಕ ವಿದ್ಯೆಗಳ ಬಗ್ಗೆ ಪಾಶ್ಚಾತ್ಯ ದೇಶದ ಪರಿಣಿತರೊಂದಿಗೆ ಯಾವುದೇ ಬಗೆಯ ವಿಷಯ , ವಿನಿಮಯ ನಡೆಸಿರುವುದಕ್ಕೆ ದಾಖಲೆಗಳಿಲ್ಲ. ಪಾಶ್ಚಾತ್ಯರಿಂದ ಸಂಘ, ಸಂಸ್ಥೆ, ಸಂಘಟನೆಗಳನ್ನು ಕಟ್ಟುವ ಬಗ್ಗೆ , ಅವುಗಳನ್ನು ನಿರ್ವಹಿಸುವ ಬಗ್ಗೆ , ಜನಸಾಮಾನ್ಯರಿಗ ಶಿಕ್ಷಣ ಕೊಡುವ ಮಾರ್ಗಗಳನ್ನು ಅರಿಯಲು ಸ್ವಾಮಿಗಳು ಮಾಡಿದ ಪ್ರಯತ್ನಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಶ್ರೀಮಂತ ಫ್ರಾನ್ಸಿಸ್ ಲೆಗೆಟ್’ಗೆ ತನ್ನ ರಿಸಾರ್ಟ್’ನಲ್ಲಿ ತನ್ನೊಂದಿಗೆ ಬಿಡುವಿನ ವೇಳೆ ಕಳೆಯಲು ಅಮೆರಿಕನ್ನರಿಗಿಂತ ಭಿನ್ನರಾಗಿದ್ದ ಪ್ರೇಯಸಿ/ಹೆಂಡತಿ ಮತ್ತು ನಾದಿನಿಯ ಮೂಲಕ ಪರಿಚಿತರಾಗಿದ್ದ ‘ಸ್ವಾಮಿಗಳು ‘ ಬೇಕಾಗಿದ್ದರಷ್ಟೇ. ನ್ಯೂಯಾರ್ಕ್ ವೇದಾಂತ ಸೊಸೈಟಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಆತನಿಗೆ ‘ವೇದಾಂತ’ದಲ್ಲಿ ಯಾವುದೇ ಆಸಕ್ತಿಯಿಲ್ಲ ಎನ್ನುವುದನ್ನು ಮಿಸ್ ಜೊಸೆಫನ್ ಮೆಕ್ಲಿಯಾಡ್’ಗೆ ಅಭೇದಾನಂದ ತಿಳಿಸಿದ್ದನು. (೨೦/೪/೧೯೦೦)
ಸ್ವಾಮಿಗಳು ರಾಕ್ ಫೆಲರ್ , ಹೆಲೆನ್ ಗೌಲ್ಡ್ , ಜೆಮ್’ಸೆಟ್’ಜಿ ನಸ್ಸರ್’ವಾಲ್’ಜಿ ಟಾಟಾ ಮುಂತಾದದ ಖ್ಯಾತ ಶ್ರೀಮಂತರ ಮೇಲೆ ಗಾಢ ಪ್ರಭಾವ ಬೀರಿ ಅವರ ಜೀವನ ದೃಷ್ಟಿಕೋನದಲ್ಲಿ ಭಾರಿ ಬದಲಾವಣೆ ತಂದು ಅವರು ಸಾಮಾಜಿಕ ಕಾರ್ಯದಲ್ಲಿ ಭಾಗಿಗಳಾಗುವಂತೆ ಮಾಡಿದರೆಂದು ಸ್ವಾಮಿಗಳ ಜೀವನ ಚರಿತ್ರೆಗಳು ತಿಳಿಸುತ್ತವೆ. ರಾಕ್’ಫೆಲರ್ ಮತ್ತು ಜೆಮ್’ಸೆಟ್’ಜಿ ನಸ್ಸರ್’ವಾಲ್’ಜಿ ಟಾಟಾ ಸ್ವಾಮಿಗಳನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದರು. ಜಾನ್ ಡಿ ರಾಕ್’ಫೆಲ್ಲರ್ ಸ್ವಾಮಿಗಳನ್ನು ಷಿಕಾಗೊದಲ್ಲಿ ಮಾರ್ಚ್/ಏಪ್ರಿಲ್ ೧೮೯೪ ರಲ್ಲಿ ಭೇಟಿಯಾದ ನಂತರ ಅವರ ಪ್ರಭಾವಕ್ಕೆ ಒಳಗಾಗಿ ದಾನ ಮಾಡಲು ಪ್ರಾರಂಭಿಸಿದರೆನ್ನುವ ಕಥೆಯಿದೆ. ೧೮೯೦ ರಲ್ಲಿಯೇ ರಾಕ್’ಫೆಲ್ಲರ್ ಷಿಕಾಗೊ ವಿಶ್ವವಿದ್ಯಾಲಯಕ್ಕೆ ೩ ಕೋಟಿ ಡಾಲರ್ ದೇಣಿಗೆ ನೀಡಿದ್ದರು. ೧೯೦೧ ರಲ್ಲಿ ರಾಕ್’ಫೆಲ್ಲರ್ ಇನ್’ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ , ೧೯೦೨ ರಲ್ಲಿ ಜನರಲ್ ಎಜುಕೆಷನ್ ಬೋರ್ಡ್’ಗೆ ಇನ್ನೂ ಹೆಚ್ಚಿನ ನೆರವನ್ನು ನೀಡಿದರು. ಇಷ್ಟೆಲ್ಲ ನೀಡಿದ ರಾಕ್’ಫೆಲರ್ ತಾನಾಗಲಿ , ತನ್ನ ಕುಟುಂಬದವರೇ ಆಗಲಿ ವ್ಯಯಮಾಡಿದ ಕೋಟ್ಯಂತರ ಡಾಲರ್’ಗಳಲ್ಲಿ ಕೆಲ ಸಾವಿರ ಡಾಲರ್’ಗಳನ್ನು ಸ್ವಾಮಿಗಳಿಗಾಗಲಿ , ಸ್ವಾಮಿಗಳ ಸಂಸ್ಥೆಗಾಗಲೆ ಏಕೆ ಕೊಡಲಿಲ್ಲ ? ತಂದೆಯಿಂದ ೫೦ ಕೋಟಿ ಡಾಲರ್ ಆಸ್ತಿ ಪಡೆದಿದ್ದ ಹೆಲೆನ್ ಗೌಲ್ಡ್ ಇಂದ್ರನ ಅಮರಾವತಿಯನ್ನು ನಾಚಿಸುವಂತಿದ್ದ ತನ್ನ ಐನೂರು ಎಕರೆ ವಿಸ್ತೀರ್ಣದ ತೋಟದಲ್ಲಿದ್ದ ಅರಮನೆಯೂ ಕಿರಿದೆನಿಸುವಂತಹ ಬಂಗಲೆಯಲ್ಲಿ ಸ್ವಾಮಿಗಳಿಗೆ ೧೮೯೪ ಏಪ್ರಿಲ್ ೭ ರಿಂದ ೯ ವರೆಗೆ ಮೂರು ದಿನ ಆತಿಥ್ಯ ನೀಡಿದ್ದಳು. ತನ್ನ ಜೀವನದುದ್ದಕ್ಕೂ ಧಾರ್ಮಿಕ ಮತ್ತು ಸೇವಾ ಸಂಸ್ಥೆಗಳಿಗೆ ಲಕ್ಷಾಂತರ ಡಾಲರ್ ದೇಣಿಗೆ ನೀಡಿದಳಾದರೂ ಸ್ವಾಮಿಗಳಿಗೆ ಒಂದು ಚಿಕ್ಕಾಸನ್ನೂ ನೀಡಲಿಲ್ಲ. ಜಾಮ್’ಶೇಟಜಿ ಟಾಟಾರಾಗಲಿ ರಾಕ್’ಫೆಲ್ಲರ್ ಆಗಲಿ ತಾವು ಯಾರ ಪ್ರೇರಣೆಯಿಂದ ದಾನ ಮಾಡಿದೆವೆಂದು ಹೇಳಿಲ್ಲ. ಅದು ಅವರ ಅಂತರಂಗದ ಪ್ರೇರಣೆ. ಇದನ್ನು ಅನುಕೂಲಕರವಾಗಿ ಸ್ವಾಮಿಗಳ ಪ್ರೇರಣೆ ಎಂದು ಬಿಂಬಿಸಲಾಗುತ್ತಿದೆ. ಜಾಮ್’ಸೇಟಜಿ ಟಾಟಾರವರ ಉದ್ಯಮಶೀಲತೆ , ದಾನ , ಸಾಹಸಗಳು ಅವರ ಹುಟ್ಟುಗುಣಗಳಾಗಿದ್ದವು. ಎಂದೋ ಒಂದು ದಿನ ಸ್ವಾಮಿಗಳ ಭೇಟಿಯಿಂದ ಅವು ಬಂದವಾಗಿರಲಿಲ್ಲ. ಹಾಗೆ ಬರುವುದೇ ಆಗಿದ್ದರೆ ಸ್ವಾಮಿಗಳನ್ನು ನೂರಾರು ಬಾರಿ ಭೇಟಿ ಮಾಡಿದ , ಅವರೊಂದಿಗೆ ಜೀವನ ನಡೆಸಿದ ಇತರರು ಇನ್ನೇನೋ ಆಗಬೇಕಾಗಿದ್ದಿತು. ಸ್ವಾಮಿಗಳು ಕಲ್ಕತ್ತದಲ್ಲಿ ಮಠ ಕಟ್ಟಲು ಸಾರಾ ಬುಲ್ , ಹೆನ್ರಿಯೆಟ್ಟಾ ಮುಲ್ಲರ್ ಮೊರೆ ಹೋಗುವ ಆವಶ್ಯಕತೆಯೇ ಇರುತ್ತಿರಲಿಲ್ಲ. ಸ್ವಾಮಿಗಳ ಮದ್ರಾಸ್ ಮತ್ತು ಕಲ್ಕತ್ತ ಶಿಷ್ಯ , ಪರಿಚಿತರಾಗಿದ್ದ ಹಲವು , ರಾಜ , ದಿವಾನರ ನೆರವಿನಿಂದ ಇದು ಹೂ ಎತ್ತಿದಷ್ಟು ಸುಲಭವಾಗಿರಬೇಕಾಗಿದ್ದಿತು.
ಒಮ್ಮೆ ಅಥವಾ ಅಲ್ಪ ಕಾಲ ಸ್ವಾಮಿಗಳ ಸಂಪರ್ಕಕ್ಕೆ ಬಂದಿದ್ದವರನ್ನು ಬದಿಗಿರಿಸಿ ದೀರ್ಘ ಸಂಪರ್ಕದಲ್ಲಿದ್ದ ಇತರರ ಮೇಲೆ ಸ್ವಾಮಿಗಳು ಯಾವ ಪ್ರಭಾವ ಬೀರಿದ್ದರೆನ್ನುವುದನ್ನು ನೋಡಬಹುದು. ಸ್ವಾಮಿಗಳೊಂದಿಗೆ ದೀರ್ಘ ಒಡನಾಡ ಹೊಂದಿದ್ದವರಲ್ಲಿ ಸಾರಾ ಬುಲ್ , ಫ್ರಾನ್ಸಿಸ್ ಲೆಗೆಟ್ , ಶ್ರೀಮತಿ ಪಾಮರ್ ,ಡಾ. ಎಗ್ಬರ್ಟ್ ಗೆರ್ನ್ಸೆ , ಎಡ್ವರ್ಡ್ ಸ್ಟರ್ಡಿ ಪ್ರಮುಖರು. ಸಾರಾ ಬುಲ್ ಸ್ವಾಮಿಗಳು ಕಲ್ಕತ್ತದಲ್ಲಿ ಮಠಕ್ಕೆ ಜಮೀನು ಖರೀದಿಸಲು ನೆರವಾದಳು. ಸ್ವಾಮಿಗಳು ಅಮೆರಿಕದಲ್ಲಿ ಸಾಕಷ್ಟು ದೀರ್ಘ ಕಾಲ ಫ್ರಾನ್ಸಿಸ್ ಲೆಗೆಟ್’ನ ಐಷಾರಾಮಿ ರಿಸಾರ್ಟ್ ಬಂಗಲೆಯಲ್ಲಿ ಆತನೊಂದಿಗಿದ್ದರು. ನನ್ನ ಭಾಷಣ ಕೇಳಿದ ಮೇಲೆ ಫ್ರಾನ್ಸಿಸ್ ಲೆಗೆಟ್ ಪ್ರತಿವರ್ಷ ಕ್ರೈಸ್ತ ಮಿಷನರಿಗಳಿಗೆ ಕೊಡುತ್ತಿದ್ದ ಹತ್ತು ಸಾವಿರ ಪೌಂಡ್ ದೇಣಿಗೆಯನ್ನು ನಿಲ್ಲಿಸಿದನು. ಆದರೆ ನನಗೇನೂ ಕೊಡಲಿಲ್ಲ ಎಂದು ಹೇಳಿ ಸ್ವಾಮಿಗಳು ನಗುತ್ತಿದ್ದರೆಂದು ಮಾರಿ ಲೂಯಿ ಬರ್ಕೆ ತಿಳಿಸಿದ್ದಾಳೆ. (37) ಸ್ವಾಮಿಗಳು ತಮ್ಮ ಭಾರತದ ಕೆಲಸಕ್ಕೆ ಆರ್ಥಿಕ ನೆರವು ಪಡೆಯಲು , ಹಣ ಸಂಗ್ರಹಿಸಲು ಅಮೆರಿಕದಲ್ಲಿ ಹೆಣಗುತ್ತಿದ್ದು ಫ್ರಾನ್ಸಿಸ್ ಲೆಗೆಟ್ ಮತ್ತು ಬೆಟ್ಟಿ ಸ್ಟರ್ಜಸ್ ಜೊತೆ ಫ್ರಾನ್ಸ್’ನಲ್ಲಿ ಅಲೆದಿದ್ದರು. ಹೀಗಿದ್ದೂ ಅವರಂತಹ ಸ್ನೇಹಿತನಿಂದ ಅವರ ಯೋಜನೆಗಳಿಗೆ ಹಣ ದಕ್ಕಲಿಲ್ಲ. ನ್ಯೂಯಾರ್ಕ್’ನಲ್ಲಿದ್ದ ಹದಿಹರೆಯದ ಮಗನನ್ನು ಕಳೆದುಕೊಂಡಿದ್ದ ಡಾ, ಎಗ್ಬರ್ಡ್ ಗೆರ್ನ್ಸೆ ಮತ್ತು ಆತನ ಹೆಂಡತಿ ಸ್ವಾಮಿಗಳನ್ನು ಮಗನಂತೆ ಕಾಣುತ್ತಿದ್ದು , ಸಹಾನುಭೂತಿ ಹೊಂದಿದ್ದು ವಸತಿ , ಊಟ, ಚಿಕಿತ್ಸೆ ಮುಂತಾದ ಎಲ್ಲ ಸೌಕರ್ಯಗಳನ್ನು ಒದಗಿಸುತ್ತಿದ್ದರಾದರೂ ಸ್ವಾಮಿಗಳ ಕೆಲಸಕ್ಕೆ ನೆರವು ನೀಡಲಿಲ್ಲ.
ಸ್ವಾಮಿಗಳು ಹೇಲ್ ಮತ್ತು ಮೆಕೆಂಡ್ಲಿ ಸೋದರಿಯರೊಂದಿಗೆ ಹಿರಿಯಣ್ಣನಂತಹ ದೀರ್ಘ ಒಡನಾಟ ಹೊಂದಿದ್ದರು. ೨೫/೯/೧೮೯೪ ರಂದು ರಾಮಕೃಷ್ಣಾನಂದರಿಗೆ ಬರೆದ ಪತ್ರದಲ್ಲಿ ಹೇಲ್ ಮತ್ತು ಮೆಕೆಂಡ್ಲಿ ಸೋದರಿಯರು ಬಹುಶಃ ಮದುವೆ ಮಾಡಿಕೊಳ್ಳುವುದೇ ಇಲ್ಲ ಎನಿಸುತ್ತಿದೆ. ನನ್ನ ಪರಿಚಯದಿಂದ ಅವರ ಮನಸ್ಸು ಈಗ ವೈರಾಗ್ಯದ ಕಡೆ ತಿರುಗಿದೆ. ಆತ್ಮ ವಿಚಾರಪರರಾಗಿರುವರು ಎಂದು ತಿಳಿಸಿದ್ದರು. ಹೇಲ್ ,ಮಕೆಂಡ್ಲಿ ಸೋದರಿಯರು ಸ್ವಾಮಿಗಳ ಧಾರ್ಮಿಕ ಚಿಂತನೆಗಳಿಗೆ ಮಾರು ಹೋಗಿರಲಿಲ್ಲ. ಸ್ವಾಮಿಗಳ ಭಾರತದ ಕೆಲಸಕ್ಕೆ ವರ್ಷಕ್ಕೆ ೧೦೦ ಡಾಲರ್ಗಳಂತೆ ೧೦ ವರ್ಷ ದೇಣಿಗೆ ನೀಡುವಂತೆ ಶ್ರೀಮತಿ ಬೆಟ್ಟಿ ಲೆಗೆಟ್ ಹಲವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಳು. ಈ ಪತ್ರದ ತಲುಪಿದ ನಂತರ ಶ್ರೀಮತಿ ಜಾರ್ಜ್ ಹೇಲ್ ಮೇರಿ ಹೇಲ್ ಮೂಲಕ ಅದು ಸಾದ್ಯವಿಲ್ಲ ಎಂದು ಲೇವಡಿ ಮಾಡಿ ಉತ್ತರಿಸಿ ಅದಕ್ಕೆ ಒಗ್ಗರಣೆ ಹಾಕುವಂತೆ ಇದರಿಂದ ಸ್ವಾಮಿಗಳ ಮೇಲಿನ ಪ್ರೀತಿ ಸ್ಪಲ್ಪವೂ ಕುಂದಿಲ್ಲ ಎಂದು ತಿಳಿಸಿದ್ದಳು (38).
ಮುಂದೆ ಮೇರಿ ಹೇಲ್ ಇಟೆಲಿಯ ಭಾರಿ ಶ್ರೀಮಂತ ವಿಧುರ ಕಾರ್ಲೊ ಗಯ್ಸಪ್ಪೆ ಮ್ಯಾಟಿನಿಯನ್ನು ಮದುವೆಯಾಗಿ ಕ್ರೈಸ್ತ ಧಾರ್ಮಿಕ ಸಂಸ್ಥೆಗಳಿಗೆ ಉದಾರ ನೆರವು ನೀಡಿದಳಾದರೂ ಸ್ವಾಮಿಗಳಿಗಾಗಲಿ , ರಾಮಕೃಷ್ಣ ಮಠಕ್ಕಾಗಲಿ ಹೇಳಿಕೊಳ್ಳುವಂತಹ ನೆರವು ನೀಡಲಿಲ್ಲ. ಡಿಸೆಂಬರ್ ೧೯೨೫ ರಲ್ಲಿ ಮಿಸ್ ಜೊಸೆಫಿನ್ ಮೆಕ್ಲಿಯಾಡ್ ತನ್ನ ಅಕ್ಕನ ಮಗಳು ಸ್ಟರ್ಜಿಸ್ ಆಲ್ಬರ್ಟಾಳಿಗೆ ಮೇರಿ ವೈಭವಯುತ ಜೀವನ ಸಾಗಿಸುತ್ತಿದ್ದಾಳೆ. ಆಕೆಗೆ ಆತನಿಗೆ (ಸ್ವಾಮಿಗಳಿಗೆ-ರಾಮಕೃಷ್ಣ ಮಠಕ್ಕೆ) ಕೆಲಸದಲ್ಲಿ ನೆರವಾಗುವ ಇಚ್ಛೆಯಿಲ್ಲ. ಹಾಗಿದ್ದರೂ ಮಠಕ್ಕಾಗಿ ೫ ಡಾಲರ್ ಮತ್ತು ಆತನ ಪುಸ್ತಕ ಕೊಳ್ಳಲು ೫ ಡಾಲರ್ ಕೊಟ್ಟಳು ಎಂದು ಬರೆದು ಮೇರಿ ಮತ್ತು ಆಕೆಯ ತಾಯಿ ಬೃಹತ್ ಬಂಗಲೆಯಲ್ಲಿ ವೈಭವೋಪೇತ ಜೀವನ ನಡೆಸುತ್ತಿರುವುದನ್ನು ತಿಳಿಸಿದ್ದಳು. ಮೇರಿ ಹೇಲ್ ಸ್ವಾಮಿಗಳು ಬದುಕಿರುವಾಗ ಅವರಿಗೆ ನೆರವು ನೀಡಲಿಲ್ಲ ಎನ್ನುವ ಮಾರಿಸ್ ಲೂಯಿ ಬರ್ಕೆ ತಕ್ಷಣವೇ ಕೊಟ್ಟಿಲ್ಲ ಎನ್ನಲಾಗದು ಎಂದಿದ್ದಾಳೆ. ನಂತರದ ದಿನಗಳಲ್ಲಿ ಸ್ವಾಮಿ ಶಿವಾನಂದರ ಮೂಲಕ ಮಠಕ್ಕೆ ೧೮೦೦೦ ರೂಪಾಯಿ ಕೊಟ್ಟಿರುವ ದಾಖಲೆಗಳಿವೆ ಎನ್ನುತ್ತಾಳೆ. (39) ಸ್ವಾಮಿಗಳು ರಿಡ್ಜ್’ಲಿ ಮ್ಯಾನೊರ್’ನಲ್ಲಿರುವಾಗ ಮಗನನ್ನು ಕಳೆದುಕೊಂಡಿದ್ದ ತಮ್ಮ ಮಹಾ ಪೋಷಕಳೂ , ಕಾಮಧೇನುವೂ , ಧೀರಮಾತೆಯೂ ಆಗಿದ್ದ ಸಾರಾ ಬುಲ್ ಮಗಳು ಓಲಿಯಾ ಬುಲ್’ಗೆ ಎರಡು ಗಂಟೆಗಳ ಕಾಲ ಸಮಾಧಾನ ಮಾಡಿದ್ದರು. ಸ್ವಾಮಿಗಳು ಸತ್ತ ನಂತರ ಸಾರಾ ಬುಲ್ ವೇದಾಂತ ಸೊಸೈಟಿಗೆ ನೀಡಿದ ದಾನದ ಅಧಿಕೃತತೆಯನ್ನು ಪ್ರಶ್ನಿಸಿ ಓಲಿಯಾ ಬುಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದಳಲ್ಲದೆ ತನ್ನ ತಾಯಿ ಹಿಂದೂ ಜಂಗಮ , ಸಂನ್ಯಾಸಿ , ತತ್ತ್ವಗಳಿಂದ ಪರವಶಳಾಗಿದ್ದು ಆಕೆಯ ಬುದ್ಧಿ ಸ್ಥಿಮಿತದಲ್ಲಿಲ್ಲದಾಗ ಮಾಡಿದ ಉಯಿಲೆಗೆ ಕಾನೂನಿನ ದೃಷ್ಟಿಯಲ್ಲಿ ಮಾನ್ಯತೆಯಿಲ್ಲ ಎಂದು ವಾದಿಸಿ ನ್ಯಾಯಾಲಯದ ಮೆಟ್ಟಿಲೇರಿ ಗೆದ್ದಳು. (40)
ಲಿಯಾನ್ ಲ್ಯಾಂಡ್ಸ್’ಬರ್ಗ್’ ಮತ್ತು ಮ್ಯಾಡಂ ಮಾರಿ ಲೂಯಿ ಜುಲೈ ೨೨ , ೧೮೯೫ ರಂದು ಥೌಸಂಡ್ ಐಲ್ಯಾಂಡ್ ಪಾರ್ಕ್’ನಲ್ಲಿ ಸ್ವಾಮಿಗಳಿಂದ ಸಂನ್ಯಾಸ ಸ್ವೀಕರಿಸಿ ಕೃಪಾನಂದ ಮತ್ತು ಅಭಯಾನಂದ ಎನ್ನುವ ಹೆಸರನ್ನು ತಳೆದರು. ಮುಂದಿನ ಕೆಲವೇ ತಿಂಗಳುಗಳಲ್ಲಿ ಕೃಪಾನಂದ ಮತ್ತು ಅಭಯಾನಂದರ ನಡುವೆ ವೇದಾಂತ ತರಗತಿಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ತೀವ್ರ ಪೈಪೊಟಿ ಬೆಳೆದು ವೈಮನಸ್ಯ ಮೂಡಿತು. ೧೮೯೬ ಆರಂಭದ ವೇಳೆಗೆ ಅಭಯಾನಂದ ತನ್ನ ಕೆಲಸಗಳಿಗೆ ಸಾಕಷ್ಟು ಹಣ ನೀಡದಿದ್ದರೆ ಮರಳಿ ಥಿಯೊಸೊಫಿಗೆ ಹೋಗುವುದಾಗಿ ತಿಳಿಸಿದಳು. ಕೃಪಾನಂದ ಮತ್ತು ಸ್ವಾಮಿಗಳ ಶಿಷ್ಯೆ ಸಾರಾ ಎಲೆನ್ ವಾಲ್ಡೋ ನಡುವೆ ವೈಯಕ್ತಿಕ ಪ್ರಾಶಸ್ತ್ಯದ ಹಿನ್ನೆಲೆಯಲ್ಲಿ ಭಾರಿ ಕಂದಕ ಉಂಟಾಯಿತು. ಸಂನ್ಯಾಸ ಸ್ವೀಕರಿಸಿದ ವರ್ಷದೊಳಗೆ ಕೃಪಾನಂದ ಸ್ವಾಮಿಗಳು ಮತ್ತು ಅವರ ಶಿಷ್ಯ. ಅನುಯಾಯಿಗಳಿಂದ ದೂರ ಸರಿದನು. ಜುಲೈ ೧೮೯೬ ರ ವೆಳೆಗೆ ಕೃಪಾನಂದ ಜೀವನ ನಿರ್ವಹಣೆಗೆ ‘ ಬಾರ್ ಟೆಂಡರ್’ ಕೆಲಸಕ್ಕೆ ಸೇರಲು ಸಿದ್ಧನಾದನು. ಸ್ವಾಮಿ ವಿವೇಕಾನಂದನ ಸಹವಾಸದಿಂದಾಗಿ ನಾನು ಒಬ್ಬ ಗುರುವಾಗಬೇಕೆಂಬ ಎಲ್ಲ ಯೋಜನೆಗಳು ವಿಫಲವಾದವು ಎಂದು ಸಾರಾ ಬುಲ್’ಗೆ ೧೭/೭/೧೮೯೬ ರಲ್ಲಿ ಬರೆದನು. ಇದಾದ ನಂತರ ಯಾವುದೇ ರೋಗವನ್ನು ಗುಣಪಡಿಸುವ , ಮನುಷ್ಯರನ್ನು ಸಮಾಧಿಗೇರಿಸುವ ಯಂತ್ರದ ಆವಿಷ್ಕಾರದಲ್ಲಿ ಮುಳುಗಿದನು. ತಂತ್ರ ಪದ್ದತಿಯ ತರಗತಿಗಳನ್ನು ನಡೆಸತೊಡಗಿದನು. ಇವೆಲ್ಲವುಗಳಿಂದಾಗಿ ಕೃಪಾನಂದ ಸ್ವಾಮಿಗಳ ತಂಡದಿಂದ ಹೊರದಬ್ಬಲ್ಪಟ್ಟನು. (41) ೧೮೯೮ ವೇಳೆಗೆ ಅಭಯಾನಂದ ಸ್ವಾಮಿಗಳ ’ವೇದಾಂತ’ವನ್ನು ಬಿಟ್ಟು ವೈಷ್ಣವ ಭಕ್ತಿ ಪಂಥಕ್ಕೆ ಸೇರಿ ಅದರ ಪ್ರಚಾರಕ್ಕೆ ಭಾರತಕ್ಕೆ ಬಂದಳಾದರೂ ಸ್ವಾಮಿಗಳನ್ನು ಕಾಣಲು ಬರಲಿಲ್ಲ. ತಾವೇ ಸಂನ್ಯಾಸ ನೀಡಿದ್ದ ಈ ಇಬ್ಬರೂ ಸಂನ್ಯಾಸಿಗಳ ಮೇಲೆ ಸ್ವಾಮಿಗಳು ಮೇಲೆ ಬೀರಿದ ಪ್ರಭಾವ –ವ್ಯಕ್ತಿತ್ವ ಬದಲಾವಣೆ, ನಿಷ್ಠೆ ಮತ್ತು ಸಂಯಮ- ಅತ್ಯಂತ ಸೀಮಿತವಾಗಿದ್ದಿತು.
೧೮೯೬ ರಲ್ಲಿ ಸ್ವಾಮಿಗಳು ಲಂಡನ್’ನಲ್ಲಿರುವಾಗ ಅವರಿಗೆ ವಸತಿ ಸೌಕರ್ಯ ಕಲ್ಪಿಸಿ , ಉಪನ್ಯಾಸ ತರಗತಿಗಳನ್ನು ಯೋಜಿಸಿ , ಪ್ರಚಾರಕ್ಕೆ ನೆರವಾಗಿದ್ದ ಎಡ್ವರ್ಡ್ ಸ್ಟರ್ಡಿ ೧೮೯೯ ರಲ್ಲಿ ಸ್ವಾಮಿಗಳು ಲಂಡನ್’ಗೆ ಬಂದಾಗ ಅವರಿಂದ ದೂರ ಸರಿದಿದ್ದನು. ಸ್ವಾಮಿಗಳ ಸಂನ್ಯಾಸ, ವೈರಾಗ್ಯವನ್ನು ಪ್ರಶ್ನಿಸಿ ದಾಳಿ ಮಾಡಿದ್ದನು. ಇದಕ್ಕೆ ಸ್ವಾಮಿಗಳು ತತ್ತರಿಸಿದ್ದರು. ಬೇಲೂರಿನಲ್ಲಿ ರಾಮಕೃಷ್ಣ ಮಠ ಸ್ಥಾಪನೆಗೆ ಹಣ ನೀಡಿದ್ದ ಮಿಸ್ ಹೆನ್ರಿಯೆಟ್ಟಾ ಮುಲ್ಲರ್ ಸ್ವಾಮಿಗಳ ನಡವಳಿಕೆಯನ್ನು ಪ್ರಶ್ನಿಸಿ ಅವರಿಂದ ದೂರ ಸರಿದು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಳು. ಸ್ವಾಮಿಗಳ ಭಾಷಣಗಳ ಶೀಘ್ರ ಲಿಪಿಕಾರ ಜೆ.ಜೆ ಗುಡ್ವಿನ್ ಅವರನ್ನು ಆರಾಧನೆಯ ದೃಷ್ಟಿಯಲ್ಲಿ ನೋಡುತ್ತ ಅವರು ವಹಿಸಿದ ಕೆಲಸಗಳನ್ನು ತಲೆಯ ಮೇಲೆ ಹೊತ್ತು ನಿರ್ವಹಿಸುತ್ತಿದ್ದನು, ಅದೇ ಹುಮ್ಮಸ್ಸಿನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಭಾರತಕ್ಕೆ ಬಂದನು. ಸ್ವಾಮಿಗಳು ೫/೩/೧೮೯೭ ರಂದು-ರಾಮಕೃಷ್ಣ ಜಯಂತಿ- ಜೆ.ಜೆ ಗುಡ್ವಿನ್’ಗೆ ಸಂನ್ಯಾಸ ದೀಕ್ಷೆ ಕೊಡಬೇಕೆಂದಿದ್ದರು. ಅದಕ್ಕೆ ಆತನೂ ಸಿದ್ಧವಿದ್ದನು. ಜನವರಿ ೧೮೯೭ ರಲ್ಲಿ ‘ ನಾನು ಸಂನ್ಯಾಸಿಯಾದರೂ ಯಾವ ಬದಲಾವಣೆಯಾಗದು. ನಾನು ಸ್ವಾಮಿಗಳ ಸೇವಕನಾಗಿರುತ್ತೇನೆ ಅಷ್ಟೇ. ಇಲ್ಲೊಬ್ಬ ಕಂಬಳಿ ಸ್ವಾಮಿ ಇದ್ದಾನೆ , ಇದರಂತಹ ನೂರಾರು ಸ್ವಾಮಿಗಳು. ನಾನು ಮೌನ ಸ್ವಾಮಿಯಾಗುತ್ತೇನೆ’ ಎಂದು ೧೬/೩/೧೮೯೭ ರಂದು ‘ನಾನೀಗ ಹಿಂದೂವಿನಂತೆ ಬದುಕುತ್ತಿದ್ದೇನೆ , ನೆಲದ ಮೇಲೆ ಕುಳಿತು ಕೈಯಿಂದ ಉಣ್ಣುತ್ತೇನೆ. ಇದರಿಂದ ನನಗೆ ನೂರಾರು ಜನ ಗೆಳೆಯರು ಸಿಕ್ಕರು ‘ ಎಂದು ಸಾರಾ ಬುಲ್’ಗೆ ಬರೆದಿದ್ದನು. ಇದಾದ ಒಂದೇ ವರ್ಷದಲ್ಲಿ ‘ನಾನು ೫೦ % ಅಮೆರಿಕನ್ , ಉಳಿದ ಭಾಗ ಇಂಗ್ಲಿಷ್ ( ಮತ್ತು ದಯವಿಟ್ಟು ಪಿಸುದನಿಯಲ್ಲಿ ಹಿಂದೂ ಅಲ್ಲ) ಎಂದು ಬರೆದನು. (42)
ಜೆ,ಜೆ ಗುಡ್ವಿನ್ ಡಾರ್ಜಿಲಿಂಗ್’ನಿಂದ ಸಾರಾ ಬುಲ್’ಗೆ ಬರೆದ ಪತ್ರ ಕುತೂಹಲಕಾರಿಯಾಗಿದೆ. ‘ ಸ್ವಾಮಿ ಇಲ್ಲಿ ಏನು ಮಾಡಲು ಬಂದಿದ್ದಾನೆ ಎಂದು ನಾನು ಹಲವು ಸಲ ಯೋಚಿಸಿದ್ದೇನೆ. ಕೆಲವೊಮ್ಮೆ ಆತ ಇಲ್ಲಿ ಹೆಚ್ಚೇನೂ ಮಾಡಲಾರ ಎನಿಸುತ್ತದೆ. ಆತನ ಮುಖ್ಯ ಅಸ್ತ್ರ ಪಾಶ್ಚಾತ್ಯದಲ್ಲಿ ಮಾಡಿದ ಕೆಲಸ. ಆತ ಅಲ್ಲಿ ಮಾಡಿದ ಕೆಲಸದ ಹತ್ತು ಪಟ್ಟು ಪರಿಣಾಮ ಇಲ್ಲಿ ಆಗಿದೆ–ಆದರೆ ಆತ ತನ್ನ ಜನರೊಂದಿಗಿರುವಾಗ , ಅವರಿಂದ ಪಡೆದ ಕ್ರಿಯಾತ್ಮಕ ನೆರವನ್ನು ಪರಿಗಣಿಸಿದಾಗ ‘ ಯಾವುದೇ ಪ್ರವಾದಿಗೆ ತನ್ನ ಊರಿನಲ್ಲಿ ಗೌರವವಿಲ್ಲ’ ಎನ್ನುವ ನಾಣ್ಣುಡಿ ನೆನಪಾಗುತ್ತದೆ. ಸಾವಿರಾರು ಜನ ‘ ಜೈ ವಿವೇಕಾನಂದ ‘ ಎನ್ನುತ್ತ ಅವರ ಹಿಂದೆ ಓಡುತ್ತಾರೆ , ಭಾರತದ ದೇವರು ಅಡುಗೆ ಮನೆಗೆ ಸೀಮಿತ ಎಂದಾಗ ಚಪ್ಪಾಳೆ ತಟ್ಟುತ್ತಾರೆ. ಆದರೆ ಅದೇ ಜನ ಮನೆಗೆ ಹೋಗಿ ತಮ್ಮ ಆಹಾರವನ್ನು ಯಾರಾದರೂ ನೋಡಿದರೆ ಮೈಲಿಗೆಯಾಯಿತೆಂದು ಹೊರಚೆಲ್ಲುತ್ತಾರೆ. ಇಲ್ಲಿ ಕೆಲವರು ದಿಟ್ಟರಿದ್ದಾರೆ ಆದರೆ ಹೆಚ್ಚಿನವರು ದುರ್ಬಲರು , ಅಡುಗೆ ಮನೆಯಾಚೆಗೆ ಧರ್ಮ ಇರುವುದೆಂದು ತಿಳಿಯಲಾರರು. ಇದು ಯುರೋಪಿಯನ್’ಗೆ ಸೋಜಿಗವೆನಿಸುತ್ತದೆ’ (43) ಭಾರತದಲ್ಲಿದ್ದ ಬ್ರಿಟಿಷರು ದೇಶೀಯರೊಂದಿಗಿರುವ , ಅವರನ್ನು ಬೆಂಬಲಿಸುವ ಅಂಗ್ಲನೆಂದು ಜೆ.ಜೆ ಗುಡ್ವಿನ್’ನನ್ನು ಹೊರಗಿಟ್ಟಿದ್ದರೆ , ಸ್ವಾಮಿಗಳ ಪ್ರಭಾವವಿರುವಲ್ಲಿ ಮೇಲ್ಜಾತಿಯ ಹಿಂದೂಗಳು ಆತನನ್ನು ಮಾರು ದೂರವಿರಿಸಿ ನಿಧಾನವಾಗಿ ಬೇಯಿಸುತ್ತಿದ್ದರು. ಇಂತಹ ಸ್ಥಿತಿ ತಿಳಿದಿದ್ದ ಸ್ವಾಮಿಗಳು ಭಾರತಕ್ಕೆ ಬರಲು ಉತ್ಸುಕಳಾಗಿದ್ದ ಸಾರಾ ಬುಲ್’ಗೆ ಇದನ್ನು ಎಚ್ಚರಿಸಿ ಪತ್ರ ಬರೆದಿದ್ದರು.
೫/೫/೧೮೯೮ ರಂದು ಜೊಸೆಫಿನ್ ಮೆಕ್ಲಿಯಾಡ್’ಗೆ ಜೆ.ಜೆ ಗುಡ್ವಿನ್ ಬರೆದ ಪತ್ರ ಹೀಗಿದೆ. ‘ ಭಾರತಕ್ಕೆ ಬಂದಾಗ ಸ್ವಾಮಿಗಳ ಬಗ್ಗೆ ನನಗೇನು ಅಭಿಪ್ರಾಯಗಳಿದ್ದವೆಂದು ತಿಳಿಸಬೇಕಾಗಿಲ್ಲ ; ನಾನು ಭಾರತಕ್ಕೆ ಬಂದು ೧೬ ತಿಂಗಳುಗಳಾಗಿದ್ದು ನಾನು ಒಂದು ಸುತ್ತು ಸುತ್ತಿ ನಿನ್ನ ದೃಷ್ಟಿಕೋನಕ್ಕೆ ಬಂದಿದ್ದೇನೆ. ಆತ (ಸ್ವಾಮಿಗಳು) ಬಯಸುತ್ತಾನೆ ಎನ್ನುವ ಒಂದೇ ಕಾರಣಕ್ಕೆ ಆತನಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ. ಈ ಕಾರಣದಿಂದಾಗಿಯೇ ನಾನೀಗ ಯಾವುದೇ ಕೆಲಸವಿಲ್ಲದೆ ಸುಮ್ಮನಿದ್ದೇನೆ. ಆತನಿಗೆ ನೆರವಾಗುವ ಯಾವ ಕೆಲಸವನ್ನೂ ನಾನು ಮಾಡಲಾರೆ ಎನ್ನುವುದು ಮದ್ರಾಸಿನಲ್ಲಿ ನಾನು ನಡೆಸಿದ ಯತ್ನಗಳಿಂದ ನನಗೆ ಮನದಟ್ಟಾಗಿದೆ. ಆತನ ಮೇಲೆ ಯಾವುದೇ ಹೊರೆ ಬೀಳಬಾರದೆಂದು ಮದ್ರಾಸ್ ಮೇಲ್ ಪತ್ರಿಕೆಯ ವರದಿಗಾರನ ಕೆಲಸಕ್ಕೆ ಸೇರಿದ್ದೇನೆ. ನನಗೆ ಕಾಶ್ಮೀರಕ್ಕೆ ಹೋಗುವ ತುಡಿತವಿದೆಯಾದರೂ ನಾನು ಹೋಗಲಾರೆ. ಇಲ್ಲಿಂದ ಹೋಗಿ ಒಂದು ತಿಂಗಳು ರಜೆ ಪಡೆಯುತ್ತೇನೆ ಆಗ ನನಗೆ ವಾರ ಅಥವಾ ಹತ್ತು ದಿನ ಕಾಶ್ಮೀರದಲ್ಲಿರಲು ಸಾಧ್ಯ. ಹಾಗೆಂದು ನನಗೆ ಭಾರಿ ಭರವಸೆಯೇನೂ ಇಲ್ಲ. ಕಳೆದ ನವೆಂಬರ್’ನಿಂದ ಈವರೆಗೆ ನಾನು ಸ್ವಾಮಿಯನ್ನು ನೋಡಿಲ್ಲ. …ದಿನ ಕಳೆದಂತೆ ನನಗೆ ಸ್ವಾಮಿ ಹಿಂದೂ ಅಲ್ಲವೆಂಬ ಭಾವನೆ ಬಲವತ್ತರವಾಗುತ್ತಿದೆ. ಏಕೆಂದರೆ ಎಲ್ಲವನ್ನೂ ಅದರ ಉಪ ಮೊತ್ತದಿಂದಲೇ ತೀರ್ಮಾನಿಸಬೇಕು. ಭಾರತದ ಉಪ ಮೊತ್ತ ನೀಚತನ , ಕ್ಷುಲ್ಲಕ ಸಂಚೇ ಹೊರತು ಧರ್ಮವಲ್ಲ. (44) ಸೀರೆಯ ಗುಣವನ್ನು ನೂಲಿನಿಂದ ತಿಳಿಯಬೇಕು. ಆದರೆ ನೂಲೇ ಕಳಪೆ ಎನ್ನುವುದು ಸ್ವಾಮಿಗಳ ಶಿಷ್ಯರನ್ನು , ಅನುಯಾಯಿಗಳನ್ನು ಕುರಿತಾಗಿ ಜೆ.ಜೆ ಗುಡ್ವಿನ್ ಅಭಿಪ್ರಾಯವಾಗಿದ್ದಿತು.೧೪/೧೧/೧೮೯೬ ರ ಪತ್ರದಲ್ಲಿ ಜೆ.ಎಜೆ ಗುಡ್ವಿನ್ ಜೊಸೆಫಿ ಮೆಕ್ಲಿಯಾಡ್’ಗೆ ‘ ಆತ(ಸ್ವಾಮಿಗಳು) ಪ್ರತಿದಿನ ದಿನ ತನ್ನ ಯೋಜನೆಗಳನ್ನು ಬದಲಿಸುತ್ತಾನೆ ; ಇದನ್ನೆಲ್ಲ ನೋಡಿದರೆ ಆತ ಭಾರತದಲ್ಲಿ ಆರು ತಿಂಗಳುಗಳಿಗಿಂತ ಹೆಚ್ಚಿರುವುದನ್ನು ನಾನು ಕಾಣೆ. ……’ ಎನ್ನುವ ಮಾತು ಸತ್ಯವಾಗಿದ್ದಿತು.(45) ಪಾಶ್ಚಾತ್ಯ ಜಗತ್ತಿನ ಶಿಷ್ತು , ಬದ್ದತೆಗಳನ್ನು ಕಂಡಿದ್ದ ಸ್ವಾಮಿಗಳಿಗೆ ತಾವು ಅಮೆರಿಕದಲ್ಲಿ ಘರ್ಜಿಸಿದಂತೆ ಸನಾತನ ಪರಂಪರೆಯಲ್ಲಿ ಮುಂದುವರೆಯಬೇಕೆ ಅಥವಾ ಪಾಶ್ಚಾತ್ಯರ ಆಧುಮಿಕತೆಯನ್ನು ಅಪ್ಪಬೇಕೇ ಎನ್ನುವ ದ್ವಂದ್ವದಲ್ಲಿದ್ದರು. ಅದಕ್ಕೆ ತಕ್ಕಂತೆ ಭಾರತೀಯರು ಸ್ವಾಮಿಗಳಿಗೆ ಜೈಕಾರ ಹಾಕಿದರಾದರೂ ಯಾವುದೇ ವ್ಯಾವಹಾರಿಕ ಬೆಂಬಲ ಕೊಡಲಿಲ್ಲ.
ಸ್ವಾಮಿಗಳು ಪ್ಯಾರಿಸ್’ನಲ್ಲಿ ಜೂಲ್ಸ್ ಬಾಯಿಸ್ ಕೋಣೆಯಲ್ಲಿದ್ದರು. ಮಾರ್ಚ್ ೧೯೨೭ , ಫೋರಂ ಪತ್ರಿಕೆಯಲ್ಲಿ ಜೂಲ್ಸ್ ಬಾಯಿಸ್ ಬರೆದ ‘ದಿ ನ್ಯೂ ರಿಲಿಜನ್ಸ್ ಆಫ್ ಅಮೆರಿಕ’ ಎನ್ನುವ ಸರಣಿ ಲೇಖನಗಳು ಪ್ರಕಟಗೊಂಡವು. ಅದರಲ್ಲಿ ಅತ ವಿಶ್ವ ಧರ್ಮ ಸಂಸತ್ತಿನಲಿ ‘ವಿಶ್ವ ಧರ್ಮ’ದ ಬಗ್ಗೆ ಹಿಂದೂ ತರುಣ ಸಂನ್ಯಾಸಿ ಕೊಟ್ಟ ಕರೆ ನನ್ನನ್ನು ಸೆಳೆದಿದ್ದಿತು . ಪ್ಯಾರಿಸ್’ನಲ್ಲಿ ಶ್ರೀಮಂತ ಅಮೆರಿಕನ್ ಪರಿಚಯಸ್ಥರ ಮೂಲಕ (ಶ್ರೀಮತಿ ಬೆಟ್ಟಿ ಸ್ಟರ್ಜಿಸ್) ಈತನ ಭೇಟಿಯಾಯಿತು ‘ ಎಂದು ನೆನಪಿಸಿಕೊಳ್ಳತ್ತ ಸ್ವಾಮಿಗಳು ಪ್ಯಾರಿಸ್’ನಲ್ಲಿ ಪೌರಾತ್ಯದ ಅತ್ಮನ್-ಬ್ರಹ್ಮನ್ ಮುಂತಾದ ತತ್ತ್ವಗಳನ್ನು ಹೇಗೆ ತಿಳಿಸಿ ಮಾಂತ್ರಿಕ ಲೋಕಕ್ಕೆ ಒಯ್ದರೆಂದು ತಿಳಿಸಿದ್ದಾನೆ. ಇದೇ ಲೇಖನದಲ್ಲಿ ಆತ ವೇದಾಂತದ ನಿರುಪಾಧಿಕ ಬ್ರಹ್ಮನ್ ಅರಿಯುವ ನಿರರ್ಥಕತೆ ಹಾಗೂ ಮಾನವ ತರ್ಕದ ಸೀಮಿತತೆ ನನಗೆ ಮನದಟ್ಟಾದವು …ಇವೆಲ್ಲವುಗಳಿಗಿಂತ ನನ್ನ ತಾಯಿ ಬಾಲ್ಯದಲ್ಲಿ ತಿಳಿಸಿದ ಪ್ರಾಯೋಗಿಕ ವಿವೇಕ , ಸರಳ ನಂಬಿಕೆ , ಪ್ರೀತಿ ಎನ್ನುವುದೇ ಎಲ್ಲ ಸಂತರ ನಿಲುವು ಎಂದು ಬರೆದಿದ್ದಾನೆ. ಈತ ಸ್ವಾಮಿಗಳ ವೇದಾಂತವನ್ನು ಹಾಡಿಹೊಗಳದಿರುವುದು ಸ್ವಾಮಿಗಳ ಭಕ್ತರಿಗೆ ಅಸಹನೀಯವೆನಿಸಿದೆ. (46)
ಇನ್ನು ಭಾರತೀಯರ ಮೇಲೆ ಸ್ವಾಮಿಗಳು ಎಂತಹ ಪ್ರಭಾವ ಬೀರಿದ್ದರು ಎನ್ನುವುದರತ್ತ ಒಂದು ನೋಟ ಹರಿಸಬಹುದು. ವ್ಯಕ್ತಿ ಪೂಜೆಯ ಪರಂಪರೆಯಿರುವ ಮದ್ರಾಸಿನಲ್ಲಿಯೇ ಸ್ವಾಮಿಗಳಿಗೆ ಮೊದಲ ಶಿಷ್ಯರು ಸಿಕ್ಕಿದ್ದು. ಅಳಸಿಂಗ ಪೆರುಮಾಳ್ , ಜಿ.ಜಿ. ನರಸಿಂಹಾಚಾರಿ , ನಂಜುಂಡ ರಾವ್ , ಬಾಲಾಜಿ ರಾವ್ , ಸುಂದರವೇಲು ಮೊದಲಿಯಾರ್ , ಬಿಳಿಗಿರಿ ಅಯ್ಯಂಗಾರ್ ಮುಂತಾದ ಏಳೆಂಟು ಜನ ಸ್ವಾಮಿಗಳ ಕಟ್ಟಾ ಅಭಿಮಾನಿ , ಅನುಯಾಯಿ ,ಶಿಷ್ಯಂದಿರಾಗಿದ್ದರು. ಸ್ವಾಮಿಗಳು ಏರುದನಿಯಲ್ಲಿ ಹಿಂದೂ ಧರ್ಮವನ್ನು ಹೆಗ್ಗಳಿಕೆಯಿಂದ ವರ್ಣಿಸುವಾಗ ಅದನ್ನು ಮೆಚ್ಚಿ ಅವರ ಅನುಯಾಯಿ , ಶಿಷ್ಯರಾಗುತ್ತಿದ್ದವರಲ್ಲಿ ಅದೆಷ್ಟೋ ಜನ ಹಿಂದೂಧರ್ಮ ಶ್ರೇಷ್ಟ ಎಂದು ಜಗತ್ತಿಗೆ ಮನದಟ್ಟಾಗಬೇಕು ಆದರೆ ಅದರ ವರ್ಣಾಶ್ರಮ ಪದ್ದತಿ ಯಥಾಸ್ಥಿತಿಯಲ್ಲಿಯೇ ಇರಬೇಕೆಂದು ಬಯಸುತ್ತಿದ್ದು ಸ್ವಾಮಿಗಳ ಚಿಂತನೆಗಳು ಅವರ ಮೇಲೆ ಪ್ರಭಾವ ಬೀರುವಲ್ಲಿ ಸೋತಿದ್ದವೆನ್ನುವುದರತ್ತ ಬೆರಳು ತೋರುತ್ತದೆ. ಸ್ವಾಮಿಗಳು ಮದ್ರಾಸಿನಲ್ಲಿ ತಮ್ಮನ್ನು ಸುತ್ತುವರೆದಿದ್ದ ಬ್ರಾಹ್ಮಣ ಅಭಿಮಾನಿಗಳಿಗಾಗಲಿ ಅಥವಾ ಕಲ್ಕತದ ತಮ್ಮದೇ ಜಾತಿಯವರಾದ ಕಾಯಸ್ಥರಿಗಾಗಲಿ ವರ್ಣಧರ್ಮವನ್ನು ನಿರಾಕರಿಸುವತ್ತ ಒಂದು ದಿಟ್ಟ ಹೆಜ್ಜೆ ಇಟ್ಟು ಮಾದರಿಯಾಗಬೇಕೆಂದು ಒತ್ತಾಯಿಸಿದ್ದರೆ , ಚಳವಳಿ ನಡೆಸಲು ಯತ್ನಿಸಿದ್ದರೆ ಅವರಲ್ಲಿ ಬಹುಪಾಲು ಜನ ಕ್ಷಣಾರ್ಧದಲ್ಲಿ ಸ್ವಾಮಿಗಳಿಂದ ದೂರವಾಗುತ್ತಿದ್ದರು ಎನ್ನುವುದರಲ್ಲಿ ಯಾವುದೇ ಸೋಜಿಗವಿಲ್ಲ. ಇದನ್ನೇ ಜೆ’ಜೆ ಗುಡ್ವಿನ್ ಸಾರಾ ಬುಲ್’ಗೆ ಬರೆದ ಪತ್ರದಲ್ಲಿ ಹೇಳಿದ್ದನು.
ಮದ್ರಾಸ್, ಕಲ್ಕತ್ತ, ಕುಂಬಕೋಣಂ , ಮದುರೈ , ಬೆಂಗಳೂರುಗಳಲ್ಲಿ ಸ್ವಾಮಿಗಳ ಪರ ಗೊತ್ತುವಳಿ ಮಂಡಿಸಿದ್ದ ವೇದಿಕೆಯ ಮೇಲಿದ್ದ ‘ಖ್ಯಾತ-ಗಣ್ಯ’ರಲ್ಲಿ ಯಾರೊಬ್ಬರೂ ಸ್ವಾಮಿಗಳು ಭಾರತಕ್ಕೆ ಮರಳಿದ ನಂತರ ಅವರನ್ನು ಕಂಡು ಅವರ ಕನಸಿನ ಹಿಂದೂ ಸಮಾಜವನ್ನು ಕಟ್ಟಲು ನೆರವಾಗಲು ಮುಂದಾಗಲಿಲ್ಲ. ಒಂದು ದಮ್ಮಡಿ ದುಡ್ಡನ್ನೂ ಕೊಡಲಿಲ್ಲ. ಅದರಂತೆ ಸ್ವಾಮಿಗಳು ಆ ಖ್ಯಾತ-ಗಣ್ಯರಲ್ಲಿ ಯಾರೊಬ್ಬರನ್ನೂ ಮತ್ತೊಮ್ಮೆ ಭೇಟಿಯಾಗಲಿಲ್ಲ, ಸ್ವಾಮಿಗಳ ಪರವಾಗಿ ಮಂಡಿಸಿದ್ದ ಯಾವ ಗೊತ್ತುವಳಿಗಳಿಗೂ ಸೈದ್ಧಾಂತಿಕ ಬದ್ಧತೆಯಿರಲಿಲ್ಲ. ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಕಂಕಣ ತೊಟ್ಟಿದ್ದ ಸ್ವಾಮಿಗಳು ಭಾಸ್ಕರ ಸೇತುಪತಿಯ ಚಿಂತನೆಗಳ ಮೇಲೆ ಎಂತಹ ಪ್ರಭಾವ ಬೀರಿದ್ದರು ಎನ್ನುವ ಬಗ್ಗೆ ‘ ದಿ ಲೈಫ್-೧೯೧೪’ ಯಾವ ಮಾಹಿತಿಯನ್ನೂ ಕೊಡುವುದಿಲ್ಲ. ಭಾಸ್ಕರ ಸೇತುಪತಿ ಕಾವಿನಮಿಗು ಮುಳ್ಳೈ ತಿರುನಗರದ ಮೀನಾಕ್ಷಿ ಸುಂದರಂ ದೇವಸ್ಥಾನದ ಪಾರಂಪರಿಕ ಪೋಷಕರಾಗಿದ್ದನು. ನಾಡಾರ್ ಜಾತಿಯವರಿಗೆ ಈ ದೇವಸ್ಥಾನದಲ್ಲಿ ಪ್ರವೇಶವಿರಲಿಲ್ಲ. ಸ್ವಾಮಿಗಳು ರಾಮನಾಡಿಗೆ ಭೇಟಿಯಿತ್ತ ಸುಮಾರು ನಾಲ್ಕು ತಿಂಗಳುಗಳ ನಂತರ ೧೪/೫/೧೮೯೭ ರಂದು ನಾಡರ್ ಜಾತಿಯ ಹದಿನೈದು ಜನ ಈ ದೇವಾಲಯವನ್ನು ಪ್ರವೇಶಿಸಿದರು. ಇವರ ಪ್ರವೇಶದಿಂದ ದೇವಾಲಯ ಅಶುದ್ಧವಾಗಿದ್ದು ಅದನ್ನು ಮೊದಲಿನಂತೆ ಪರಿಶುದ್ಧ ಸ್ಥಿತಿಗೆ ತರಬೇಕು. ಅದಕ್ಕೆ ತಗುಲುವ ಖರ್ಚನ್ನು ನಾಡಾರರು ಕೊಡಬೇಕು ಎಂದು ಭಾಸ್ಕರ ಸೇತುಪತಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದನು. ಈ ಪ್ರಸಂಗದ ಉಲ್ಲೇಖ ಏಕೆಂದರೆ ಭಾಸ್ಕರ ಸೇತುಪತಿ ಸ್ವಾಮಿಗಳನ್ನು ಪಲ್ಲಕ್ಕಿಯಲ್ಲಿ ಮೆರೆಸಿದ್ದನು, ಆದರೆ ಅವರ ತತ್ತ್ವಗಳನ್ನು ನೆಲಕ್ಕೆ ಹಾಕಿ ತುಳಿದಿದ್ದನು. ರಾಮಕೃಷ್ಣರ ತಪೋ ಭೂಮಿ ದಕ್ಷಿಣೇಶ್ವರದ ಸ್ಥಿತಿಯ ಇದೇ ಜಾಡು ಹಿಡಿದಿದ್ದಿತು. ‘ ನಾನು ಕಡಲು ಪ್ರಯಾಣ ಮಾಡಿದ್ದೇನೆಂದು ರಾಣಿ ರಾಸಮಣಿ ತೋಟದ ಮಾಲಿಕರು ನನ್ನನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ ! ಆದ್ದರಿಂದ ರಾಜಸ್ಥಾನದಲ್ಲಿರುವ ನನ್ನ ಕೆಲವು ಗೆಳೆಯರನ್ನು ಭೇಟಿ ಮಾಡಿ ಕಲ್ಕತ್ತೆಯಲ್ಲಿ ಒಂದು ಕೇಂದ್ರ ತೆರೆಯಲು ಶಕ್ತಿ ಮೀರಿ ಯತ್ನಿಸುತ್ತಿರುವೆ. ಇದೇ ನಾನು ಮಾಡಬೇಕಾದ ಮೊದಲ ಕೆಲಸ…..’ ಎಂದು ಸ್ವಾಮಿಗಳು ಪರಿತಪಿಸಿ ಶ್ರೀಮತಿ ಇಂದುಮತಿ ಮಿತ್ರರಿಗೆ ತಿಳಿಸಿದ್ದರು. (೧೫/೧೧/೧೮೯೭)
ಸ್ವಾಮಿಗಳು ಪರಿವ್ರಾಜಕ ದಿನಗಳಲ್ಲಿ ರಾಜಸ್ಥಾನ್ , ಗುಜರಾತ್, ಮಧ್ಯಪ್ರದೇಶದ ಹಲವು ರಾಜ ಸಂಸ್ಥಾನಗಳಿಗೆ ಭೇಟಿ ನೀಡಿದ್ದರು. ಹಲವು ರಾಜ , ದಿವಾನರನ್ನು ಬಲ್ಲವರಾಗಿದ್ದರು. ಸ್ವಾಮಿಗಳ ಅನುಗ್ರಹದಿಂದ ತನಗೆ ಮಗ ಹುಟ್ಟಿದ್ದಾನೆ ಎನ್ನುವ ನಂಬಿಕೆಯಿಟ್ಟಿದ್ದ ಖೇತ್ರಿ ರಾಜ ಅಜಿತ್ ಸಿಂಗ್ ಹೊರತಾಗಿ ಯಾವೊಬ್ಬ ರಾಜ್, ದಿವಾನ, ಅಧಿಕಾರಿಯಾಗಲಿ ಸ್ವಾಮಿಗಳು ಅಮೆರಿಕದಲ್ಲಿ ಏನು ಮಾಡಿದರು , ಭಾರತಕ್ಕೆ ಬಂದು ಏನು ಮಾಡಬೇಕೆಂದಿದ್ದಾರೆ ಎನ್ನುವುದನ್ನು ತಿಳಿಯಲಾಗಲಿ ಅವರಿಗೆ ನೆರವಾಗಲಾಗಲಿ ಯತ್ನಿಸಲಿಲ್ಲ. ರಾಜ , ದಿವಾನರುಗಳು ತಮ್ಮ ಮಾತು ಕೇಳುತ್ತಾರೆ ಎನ್ನುವ ಅಲ್ಪ ವಿಶ್ವಾಸವೂ ಸ್ವಾಮಿಗಳಿಗಿರಲಿಲ್ಲ. ‘ಬರೋಡಾ ರಾಜರನ್ನು ಭೇಟಿ ಮಾಡುವುದರಿಂದ ಬಹಳ ಸಹಾಯವಾಗುವುದಿದ್ದರೆ ನಾನು ಅಲ್ಲಿಗೆ ಬರಲು ಸಿದ್ಧ. ಇಲ್ಲದಿದ್ದರೆ ವೃಥಾ ಖರ್ಚು ಮತ್ತು ದೀರ್ಘ ಪ್ರಯಾನದ ಆಯಾಸವನ್ನು ನಾನು ಇಚ್ಛಿಸುವುದಿಲ್ಲ’ ಎನ್ನುವ ವಾಸ್ತವಿಕ ಚಿತ್ರಣ ಸ್ವರೂಪಾನಂದರಿಗೆ ಬರೆದ ಪತ್ರದ ಮೂಲಕ ದಕ್ಕುತ್ತದೆ (೧೫/೫/೧೯೦೧) ಸ್ವಾಮಿಗಳ ಅಭಿಮಾನಿಗಳು ಅಂತಹ ರಾಜ, ದಿವಾನರನ್ನು ‘ದೇಶ ದ್ರೋಹಿಗಳೆಂದು ಕರೆಯಬಹುದು. ಆದರೆ ಸ್ವಾಮಿಗಳ ಮೂಲ ಗುರಿ ಕಲ್ಕತ್ತದಲ್ಲಿ ರಾಮಕೃಷ್ಣ ಮಠ ಸ್ಥಾಪಿಸುವುದಾಗಿದ್ದಿತು. ಅದರೊಂದಿಗೆ ವೇದಾಂತ ಮತ್ತು ಲೌಕಿಕ ಶಿಕ್ಷಣ ಕೊಡುವ ಬಯಕೆ. ಭಾರತದಲ್ಲಿ ರಾಮಕೃಷ್ಣರಂತಹವರು ಸಾವಿರಾರು ಜನ ಸಂತರು ಆಗಿಹೋಗಿದ್ದರು. ಅವರ ಭಕ್ತರಿಗೆ ಮಾತ್ರ ಅವರು ಅವತಾರ ಪುರುಷನಾಗಿದ್ದರು. ಹಾಗಾಗಿ ಗುರುಗಳ ಆಶ್ರಮ , ಮಠ ಕಟ್ಟುವುದು ಶಿಷ್ಯರ ಹೊಣೆ ಅದರ ಭಾರ ನಮಗೇಕೆ ಎನ್ನುವುದು ಬಹುತೇಕರ ನಿಲುವಾಗಿದ್ದಿತು. ಜನ ಸಾಮಾನ್ಯರ ಶಿಕ್ಷಣಕ್ಕೆ ಸಂಬಂಧಿದಂತೆ ಸ್ವಾಮಿಗಳ ಸ್ಪೂರ್ತಿದಾಯಕ ಮಾತುಗಳಿದ್ದವ ಹೊರತು ಅನುಷ್ಠಾನಗೊಳಿಸಬಲ್ಲ ಕಾರ್ಯನೀತಿ ಇರಲಿಲ್ಲ. ನಂತರದ ದಿನಗಳಲ್ಲಿ ಸ್ವಾಮಿಗಳ ನಡವಳಿಕೆ , ಜೀವನಗಳಿಗಿಂತ ಅವರ ಭಾಷಣಗಳನ್ನು ಅಧರಿಸಿ ಅವರನ್ನು ಯುಗ ನಾಯಕನನ್ನಾಗಿಸಲಾಯಿತು.
Comment Box is loading comments...