ಯೋಗ - ಪ್ರಜ್ಞೆ - ಭ್ರಮೆ
ಗುರುಗಳು ಹತ್ತೊಂಬತ್ತನೇ ಶತಮಾನದಲ್ಲಿ ಜನಿಸಿ ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಖ್ಯಾತರಾದ ಆಧುನಿಕ ಭಾರತದ ವೇದಾಂತಿಗಳು , ಸಾಧಕರು , ಯೋಗಿಗಳು , ಕವಿಗಳು , ಕೃತಿಕಾರರು , ಚಿಂತಕರು , ಕಲಾವಿದರು. ಅವರ ಆಶ್ರಮ ದೇಶ ವಿದೇಶಗಳಲ್ಲಿ ಹೆಸರುವಾಸಿ. ಅತ್ಯುನ್ನತ ವಿದ್ಯಾಭ್ಯಾಸ ಹೊಂದಿದ ದೇಶ ವಿದೇಶದ ಹಲವಾರು ಹೆಸರುಗಳು ಅವರ ಶಿಷ್ಯರ ಪಟ್ಟಿಯಲ್ಲಿದ್ದವು. ಅದರಲ್ಲಿ ಕೆಲವು ವೈದ್ಯರು , ಶಸ್ತ್ರಚಿಕಿತ್ಸಕರು ಸಹ ಸೇರಿದ್ದರು. ಮನುಷ್ಯ ಯೌಗಿಕ ಸಾಧನೆಗಳಿಂದ ಪರಾಮಾನಸ ಪ್ರಜ್ಞೆಗೆ ಸಾಗಬಹುದು. ನಿರ್ವಾಣದಾಚೆಗೂ ಮೀರಿದುದು ಇದೆ. ಪರಾಮಾನಸಿಕ ಪ್ರಜ್ಞೆ ಉನ್ನತರಸ್ತರದಿಂದ ದ್ರವ್ಯಸ್ತರಕ್ಕೆ ಇಳಿದಾಗ ಸಾವಿನಿಂದ ಬಿಡುಗಡೆ ಹೊಂದಿ ದೇಹವನ್ನು ಅಮರಗೊಳಿಸಬಹುದೆಂದು ಗುರುಗಳು ಪ್ರತಿಪಾದಿಸಿದ್ದರು. ಇದನ್ನು ಒಂದು ಸಿದ್ಧಾಂತವಾಗಿ , ಭವಿಷ್ಯದ ಒಂದು ಸಾಧ್ಯತೆಯಾಗಿ ಶಿಷ್ಯಂದಿರು ಒಪ್ಪಿದ್ದರು. ೧೯೨೬ರಲ್ಲಿ ಗುರುಗಳು ಪರಾಮಾನಸಿಕ ಪ್ರಜ್ಞೆಯನ್ನು ದ್ರವ್ಯದ ಮಟ್ಟಕ್ಕೆ ಇಳಿಸಿ ದೈಹಿಕ ವಿನಾಶವನ್ನು , ಆ ಮೂಲಕ ಸಾವನ್ನು ಗೆದ್ದರೆಂದು ಆಶ್ರಮದಲ್ಲಿ ಸುದ್ದಿ ಹಬ್ಬಿತು. ಗುರುಗಳು ದೇಹವನ್ನು ಅಮರಗೊಳಿಸಿಕೊಂಡರೆಂಬ ಸುದ್ದಿ ಹೇಗೆ , ಯಾರಿಂದ ಪ್ರಾರಂಭವಾಯಿತೆಂದು ಖಚಿತವಾಗಿ ಗೊತ್ತಿಲ್ಲವಾದರೂ ಅದು ಅತ್ಯಲ್ಪ ಕಾಲದಲ್ಲಿ ಆಶ್ರಮವಾಸಿಗಳ ಮನಸ್ಸನ್ನು ಸೆಳೆಯಿತು. ಲಭ್ಯ ದಾಖಲೆಗಳ ಮೂಲಕ ನಮಗೆ ಈ ಕಲ್ಪನೆಯ ಬಗ್ಗೆ ಹಲವಾರು ಮಾಹಿತಿಗಳು ದಕ್ಕುತ್ತವೆ. ೨೪ ನವೆಂಬರ್ ೧೯೨೬ ರಂದು ಗುರುಗಳು ದೇಹದ ಅಮರತ್ವವನ್ನು ಸಾಧಿಸಿರುವರೆಂಬ ಮೊದಲ ಸುದ್ದಿ ಹೊರಬಂದಿತು. ಅಂದು ಪ್ರಜ್ಞೆಯ ಅಧಿದೈವವಾದ ಕೃಷ್ಣನ ದಿನ. ಆತ ಗುರುಗಳ ದೇಹದಲ್ಲಿ ಸ್ಥಿತನಾದ ಕ್ಷಣ. ಆ ದಿನ ೪೫ ನಿಮಿಷಗಳ ಕಾಲ ಧ್ಯಾನ ನಿರತರಾಗಿದ್ದ ಗುರುಗಳು ಎದ್ದು ಒಳ ಹೋದರು. ಅವರನ್ನು ಅವರ ಶಿಷ್ಯೆಯರಾದ ಅಮ್ಮನವರು ಹಿಂಬಾಲಿಸಿದರು. ಇದಾದ ಕೆಲ ಹೊತ್ತಿನ ನಂತರ ದತ್ತ ಎನ್ನುವ ಸಾಧಕರ ಭಕ್ತರು (ದೊರೋತಿ ಹಾಡ್ಗ್^ಸನ್) ಹೊರಬಂದು ‘’ಭಗವಂತ ಕೃಷ್ಣ ಬಂದಿದ್ದಾನೆ. ಆತ ಎಲ್ಲ ದುಃಖಗಳನ್ನು ನಿವಾರಿಸಿದ್ದಾನೆ. ಆತ ನೋವನ್ನು ಗೆದ್ದಿದ್ದಾನೆ. ಹಸಿವೆ , ನೀರಡಿಕೆಗಳನ್ನು ದೂರಗೊಳಿಸಿದ್ದಾನೆ , ಆತ ಸಾವನ್ನು ಗೆದ್ದಿದ್ದಾನೆ. ಆತ ಎಲ್ಲವನ್ನೂ ಗೆದ್ದಿದ್ದಾನೆ. ಆತ ಈ ರಾತ್ರಿ ಅಮರತ್ವ ಹಾಗೂ ಆಶೀರ್ವಾದಗಳನ್ನು ತಂದಿದ್ದಾನೆ’ ಎಂದು ಘೋಷಿಸಿದರು. ಇದನ್ನು ನೊಳಿನಿ ಕಾಂತ ಗುಪ್ತ , ರಜನಿ ಪಲಿತ್ , ರಾಜನಾಗಂ ಮುಂತಾದ ಆಶ್ರಮದ ಸಾಧಕ ಭಕ್ತರು ಸಹ ಕೇಳಿಸಿಕೊಂಡರು. ಇದಾದ ನಂತರ ೨೪ ನವೆಂಬರ್ ೧೯೨೬ನ್ನು ಆಶ್ರಮವಾಸಿಗಳಲ್ಲಿ ಮುಖ್ಯರಾದವರು ‘ಸಿದ್ಧಿ ದಿನ’ ಎಂದು ಗುರುತಿಸತೊಡಗಿದರು. ತಮ್ಮ ಗುರುವಿನ ದೇಹದಲ್ಲಿ ಕೃಷ್ಣ ಪರಮಾತ್ಮ ಆವಿರ್ಭವಿಸಿದನೆಂದು , ಆ ಮೂಲಕ ದಿವ್ಯ ವಿಶ್ವಪ್ರಜ್ಞೆ ಭೂಮಿಗೆ ಇಳಿಯಿತೆಂದು , ದೇಹಕ್ಕೆ ಅಮರತ್ವ ಪ್ರಾಪ್ತವಾಯಿತೆಂದು ತೀರ್ಮಾನಿಸಿದರು. ಇದಾದ ಎರಡು ದಿನಗಳ ನಂತರ ೨೬ ನವೆಂಬರ್ ೧೯೨೬ ರಂದು ಆಶ್ರಮದಲ್ಲಿ ಸಿದ್ಧಿ ದಿನವನ್ನು ಆಚರಿಸಲಾಯಿತು. ಈ ದಿನದ ಪ್ರಾಮುಖ್ಯತೆ ಕೆಲವೇ ಕೆಲವು ಪ್ರಮುಖರಿಗೆ ಮಾತ್ರ ತಿಳಿದಿದ್ದಿತು. ದತ್ತ , ಚಂಪಕಲಾಲ್ ಎನ್ನುವ ಇಬ್ಬರು ಪ್ರಮುಖ ಶಿಷ್ಯರ ಎದುರು ಅಮ್ಮನವರು ಆ ದಿನದ ಪ್ರಾಮುಖ್ಯತೆಯನ್ನು ವಿವರಿಸಿದರು. ಇದನ್ನು ಇನ್ನೊಬ್ಬ ಶಿಷ್ಯರಾದ ಕೆ.ಡಿ.ಸೇಥ್ನಾ (ಅಮಲ್ ಕಿರಣ್) ದಾಖಲಿಸಿದ್ದಾರೆ. ಅಂದು ಚಂಪಕಲಾಲ್ ಎಂಬ ಸಾಧಕ ಭಕ್ತರು ಅಮ್ಮನವರ ಕೋಣೆಯಲ್ಲಿ ಹೂವಿನಿಂದ ಸ್ವಸ್ತಿಕದ ಚಿಹ್ನೆ ಬರೆದರು. ಅಮರತ್ವದ ಸಂಕೇತವಾದ ಸ್ವಸ್ತಿಕ ಚಿಹ್ನೆ ರಚಿಸಿದ್ದಕ್ಕೆ ಅಮ್ಮನವರ ಮೆಚ್ಚುಗೆ ದೊರೆಯಿತು. ಅಂದು ಪ್ರಸಾದವನ್ನು ಸಿದ್ಧಪಡಿಸಲಾಗುತ್ತಿದ್ದ ಮೊಗಸಾಲೆಗೆ ಲಗತ್ತಾದ ಕೋಣೆಯಲ್ಲಿ ಅಮ್ಮನವರು ನೀರು ತುಂಬಿದ ಪಾತ್ರೆ ಮೇಲೆ ತಮ್ಮ ಅಂಗೈಗಳನ್ನು ಒಡ್ಡಿ ತಮ್ಮ ಆಧ್ಯಾತ್ಮಿಕ ಶಕ್ತಿ ಮತ್ತು ಪ್ರಜ್ಞೆಯನ್ನು ಅದಕ್ಕೆ ವರ್ಗಾಂತರಿಸುವಂತೆ ಕಂಡುಬರುತ್ತಿದ್ದಿತು. ಅಮ್ಮನವರು ಅತ್ಯಂತ ರಹಸ್ಯ ಮತ್ತು ಪವಿತ್ರವಾದ ಸಂಗತಿ ಜರುಗಿದೆಯೆಂದು ಹೇಳಿ ,ಪಾತ್ರೆಯಲ್ಲಿದ್ದ ಮಂತ್ರಿಸಿದ ನೀರನ್ನು ಹಲವಾರು ಸಣ್ಣ ಶೀಷೆಗಳಿಗೆ ಸುರಿದರು. ಅಂದು ಅಮ್ಮನವರು ಅಮರತ್ವದ ದಿವ್ಯ ತತ್ತ್ವ ಭೂಮಿಗೆ ಇಳಿದು ಬಂದಿದೆ ಎಂದು ಸೂಚಿಸಿದರು. ಇದರಿಂದ ಎರಡು ದಿನಗಳ ಹಿಂದೆ ನಡೆದಿದ್ದ ಘಟನೆಗೆ ಪೂರಕವಾಗಿ ಅಂದಿನ ಘಟನೆಗಳು ಜರುಗುತ್ತಿವೆಯೆಂದು , ದೇಹದ ದಿವ್ಯತೆ ಮತ್ತು ದೇಹದ ಅಮರತ್ವದ ಸಾಕ್ಷಾತ್ಕಾರ ಭೂಮಿಯ ಮೇಲೆ ಸಾಧ್ಯವಾಯಿತೆಂದು ಆ ಮೂಲಕ ಬ್ರಹ್ಮನಿರ್ವಾಣವನ್ನೂ ತಲುಪುವುದು ಖಚಿತವೆಂದು ಅಲ್ಲಿದ್ದ ಶಿಷ್ಯರು ಭಾವಿಸಿದರು. ಹಿಂದಿನ ಋಷಿಗಳು ಬ್ರಹ್ಮನಿರ್ವಾಣ ಮಾತ್ರ ಪಡೆದಿದ್ದರೆ ತಮ್ಮ ಗುರುಗಳು ವಿನಾಶವಾಗುವ ದೇಹವನ್ನೂ ಸಹ ಅಮರಗೊಳಿಸಿ ಹೊಸಯುಗಕ್ಕೆ ನಾಂದಿ ಹಾಡಿದರೆಂದು , ಮಾನವಕುಲ ಕಲ್ಪಾಂತರಗಳಿಂದ ಬಯಸಿ ಸಾಧ್ಯವಾಗದ್ದು ದಕ್ಕಿತೆಂದು ಆದ್ದರಿಂದಲೇ ಅಮ್ಮನವರು ಪವಿತ್ರ ಹಾಗೂ ನಿಗೂಢವಾದುದು ಘಟಿಸಿತೆಂದು ಸೂಚ್ಯವಾಗಿ ಹೇಳಿದರೆಂದು ಭಾವಿಸಿ ಶಿಷ್ಯರು ಸಂಭ್ರಮಿಸಿದರು. ಅಂದು ಆಶ್ರಮದಲ್ಲಿ ಜನಿಸಿದ ಬೆಕ್ಕಿಗೆ ಸಾಧಕ ಶಿಷ್ಯರು ‘’ಅಮರ್’ ಎಂದು ನಾಮಕರಣ ಮಾಡಿದರು. ನೆಟ್ಟ ಬೀಜ ಮೊಳಕೆಯೊಡೆದು , ಗಿಡವಾಗಿ , ಮರವಾಗಿ ಬೆಳೆಯುವಂತೆ ಗುರುಗಳ ದೇಹದ ಅಮರತ್ವದ ಸಾಧನೆಯ ಸುದ್ದಿ ಮತ್ತು ನಂಬಿಕೆ ಸಹ ತೀವ್ರಗತಿಯಲ್ಲಿ ಸಾಧಕ ಭಕ್ತರಲ್ಲಿ ಬೆಳೆಯತೊಡಗಿದವು . ಇಷ್ಟಕ್ಕೂ ಮೇಲಾಗಿ ಗುರುಗಳು ಪ್ರತಿಪಾದಿಸಿದ್ದ ಸಮಗ್ರ ಯೋಗ ದೇಹದ ಅಮರತ್ವವನ್ನೂ ಸಹ ಒಳಗೊಂಡಿರುವುದು ಶಿಷ್ಯರ ನಂಬಿಕೆಗಳಿಗೆ ಪೂರಕವಾಗಿದ್ದಿತು. ಹಿರಿಕಿರಿಯ ಸಾಧಕರಲ್ಲಿ ಯಾರಿಗೂ ಈ ಬಗ್ಗೆ ಸಂಶಯಗಳಿರಲಿಲ್ಲ. ಅವರಲ್ಲಿ ಅಮೃತ ಎನ್ನುವ ಹಿರಿಯ ಸಾಧಕರು ಸಹ ಹೊರತಾಗಿರಲಿಲ್ಲ. ಅದನ್ನು ದೃಢಪಡಿಸುವ ಸಂಗತಿಯೊಂದು ಜರುಗಿತು ಎಂದು ಅಮಲ್ ಕಿರಣ್ ಎನ್ನುವವರು ವಿವರಿಸಿದ್ದಾರೆ. ಒಮ್ಮೆ ರಸ್ತೆಯಲ್ಲಿ ಶವ ಸಂಸ್ಕಾರದ ಮೆರವಣಿಗೆ ಸಾಗುತ್ತಿದ್ದಿತು. ಆಗ ಅಮೃತ ಪಿಸುದನಿಯಲ್ಲಿ ಏನೋ ರಹಸ್ಯ ಹೇಳುವಂತೆ ಅಮಲ್ ಕಿರಣ್ ಕಿವಿಯಲ್ಲಿ ‘ಇದು ನನ್ನ ವಿಷಯದಲ್ಲಿ ನಿಜವಾಗುವುದಿಲ್ಲ’ ಎಂದು ಉಸುರಿದರು. ಗುರುಗಳ ಸಮಗ್ರ ಯೋಗದ ಅಂಗವಾದ ಅಮರತ್ವ ನಂಬಿದ್ದ ಅವರಿಗೆ ಅಂತಹ ಹೇಳಿಕೆ ವಿಲಕ್ಷಣ ಸಹ ಎನಿಸಿರಲಿಲ್ಲ. ಹೀಗಿರುವಾಗ ಮಾರ್ಚ್ ೧೯೩೫ರಲ್ಲಿ ಆಶ್ರಮವಾಸಿಯೊಬ್ಬರು ತೀರಿಕೊಂಡರು. ಆಗ ನಿರೋದ್^ಬರಣ್ ಎನ್ನುವ ವೈದ್ಯ ಶಿಷ್ಯರು ಗುರುಗಳಿಗೆ ಪತ್ರ ಬರೆದು ‘ನೀವು ನಿಮಗಾಗಿ ಮತ್ತು ಇತರರಿಗಾಗಿ ಸಾವನ್ನು ಗೆದ್ದಿರುವಿರಿ ಎಂದು ಜನಜನಿತವಾಗಿದೆಯಲ್ಲ ಎಂದು ಪ್ರಶ್ನಿಸಿದರು. ಆಗ ಗುರುಗಳು ‘ಹಾಗೆ ನಾನೆಂದು ಹೇಳಿದೆ. ನಾನು ಸಹ ಸಾವನ್ನು ಗೆದ್ದಿಲ್ಲ. ಸಾವನ್ನು ಗೆಲ್ಲುವುದೆಂದರೆ ನೋವನ್ನು , ರೋಗ ರುಜಿನಗಳನ್ನು , ದೇಹ ಮತ್ತು ಮನಸ್ಸು ಕೊನೆಗೊಳ್ಳಬೇಕಾದ ಅನಿವಾರ್ಯತೆಯನ್ನು ಗೆದ್ದಂತೆ. ಅಂತಹ ಸಾಧ್ಯತೆ ಯೋಗದ ಗುರಿಗಳಲ್ಲಿ ಒಂದು. ಪರಾಮಾನಸ ಪ್ರಜ್ಞಾ ತತ್ತ್ವ ದ್ರವ್ಯಪ್ರಪಂಚಕ್ಕೆ ಇಳಿದಾಗ ಅದು ಸಾಧ್ಯವಾಗುತ್ತದೆ. ಈವರೆಗೆ ಪರಾಮಾನಸ ಪ್ರಜ್ಞಾ ತತ್ತ್ವದ ಒಂದು ಭಾಗ ಕ್ರಿಯಾಶೀಲವಾಗಿ ಕ್ರಮೇಣವಾಗಿ ದ್ರವ್ಯದ ಮೇಲೂ ಸಹ ಹಿಡಿತ ಬಿಗಿಯಾಗುತ್ತಿದೆ. ಇದರಿಂದ ಸಾವನ್ನು ದೂರವಿರಿಸಬಹುದು. ಅದನ್ನೇ ಈಗ ಆಶ್ರಮದಲ್ಲಿ ಮಾಡಿರುವುದು. ಆದ್ದರಿಂದಲೇ ಬಹುದಿನಗಳಿಂದ ಆಶ್ರಮದಲ್ಲಿ ಸಾವುಗಳಾಗಿಲ್ಲ’ ಎಂದು ಉತ್ತರಿಸಿದರು. ಇಷ್ಟಕ್ಕೆ ಸುಮ್ಮನಾಗದ ಆ ಶಿ'ಷ್ಯರು ‘ ‘ನೀವು ನಾನು ಸಾವನ್ನು ಗೆದ್ದೆ ಎಂದು ಲಘು ದಾಟಿಯಲ್ಲಿ ಹೇಳಿದ್ದಿರೋ ಅಥವಾ ಗಂಭೀರವಾಗಿ ಹೇಳಿದ್ದರೋ ನನಗೆ ಗೊತ್ತಿಲ್ಲ. ಆದರೆ ನೀವು ಪರಾಮಾನಸ ಪ್ರಜ್ಞಾ ಸ್ತರ ತಲುಪಿದಾತ ಸಾವನ್ನು ಗೆಲ್ಲಬಹುದೆಂದು ಹೇಳಿದ್ದೀರಿ. ನೀವು ಪರಾಮಾನಸ ಪ್ರಜ್ಞಾ ಸ್ತರ ತಲುಪಿರುವಿರಿ. ಆದ್ದರಿಂದ ನೀವು ಸಾವನ್ನು ಗೆದ್ದಿರಲೇ ಬೇಕು ಎಂದು ಎದುರು ಪ್ರಶ್ನೆ ಹಾಕಿದರು. ಆಗ ಅದಕ್ಕೆ ಉತ್ತರವಾಗಿ ಗುರುಗಳು ‘ಪರಾಮಾನಸ ಪ್ರಜ್ಞಾ ಸ್ತರ ತಲುಪಿದವರು ಸಾವನ್ನು ಗೆಲ್ಲಬಹುದು ಎನ್ನುವ ನಿನ್ನ ಮೊದಲ ಹೇಳಿಕೆ ಸರಿ. ಆದರೆ ಗೆಲ್ಲಬಹುದು ಎನ್ನುವ ನನ್ನ ಹೇಳಿಕೆಯನ್ನು ಗುರುಗಳು ಗೆದ್ದಿದ್ದಾರೆ ಎಂದು ನೀನು ಅರ್ಥೈಸುತ್ತಿರುವುದು ತಪ್ಪು. ಗೆಲ್ಲಬಹುದು –ಗೆದ್ದಿದ್ದಾರೆ ಎರಡರ ನಡುವೆ ದೊಡ್ಡ ವ್ಯತ್ಯಾಸವಿದೆ’ ಎಂದರು. ಆಶ್ರಮದಲ್ಲಿ ಸಾಧಕ ಭಕ್ತರಾಗಿದ್ದ ತುಳಸಿ ಎನ್ನುವವರ ಪತ್ನಿ ದಾಹಿಲಕ್ಷ್ಮಿ ಎನ್ನುವವರು ಆಶ್ರಮದಲ್ಲಿ ತೀರಿಕೊಂಡರು. ಗುರುಗಳಿಂದಾಗಿ ಸಾವು ಆಶ್ರಮದಲ್ಲಿ ಪ್ರವೇಶಿಸಲಾರದು ಎನ್ನುವ ಹಲವು ಸಾಧಕರಲ್ಲಿ ತೀವ್ರ ಕೋಲಾಹಲ ಮೂಡಿಸಿತು. ಈ ಘಟನೆ ಕುರಿತಾಗಿ ಗುರುಗಳು ೧೮ ಅಕ್ಟೋಬರ್ ೧೯೩೬ ರಲ್ಲಿ ತಮ್ಮ ಶಿಷ್ಯ ದಿಲೀಪ್ ಕುಮಾರ್ ರಾಯ್ ಎನ್ನುವವರಿಗೆ ಬರೆದ ಪತ್ರದಲ್ಲಿ ‘ ಆಶ್ರಮದಲ್ಲಿರುವ ಪ್ರತಿಯೊಬ್ಬರಲ್ಲಿ ಸಾವನ್ನು ಕುರಿತಾಗಿ ಕೋಲಾಹಲ ಮೂಡಿದೆ. ಎಂದು ತಿಳಿಸಿದರು. ಇದಾದ ನಂತರ ನಿರೋದ್^ಬರಣ್ ಗುರುಗಳಿಗೆ ಮತ್ತೊಂದು ಪತ್ರವನ್ನು ಬರೆದರು. ಅದರಲ್ಲಿ ’ನಿಮ್ಮ ಪತ್ರದಲ್ಲಿದ್ದ ವಿಷಯದ ಆಧಾರದ ಮೇಲೆ ನೀವು ಸಾವನ್ನು ಗೆಲ್ಲುವ ಅಮರರಾಗುವ ಸಾಧ್ಯತೆ ಬಹುತೇಕ ಒಪ್ಪಿದಂತಿದೆ. ಆದರೆ ಈಗ ನೀವು ಅದಕ್ಕಿಂತಲೂ ಬೇರೆಯದಾದ ನಿಲುವನ್ನು ತಳೆದಿರುವಂತೆ ಭಾಸವಾಗುತ್ತದೆ. ನಿಮ್ಮ ಬದಲಾದ ನಿಲುವಿನಿಂದ (ಆಶ್ರಮವಾಸಿಗಳಲ್ಲಿ) ದೃಢತೆಯ ಕೊರತೆ ಇರುವುದೆಂದು ಭಾವಿಸಬಹುದಾಗಿದೆ ’ ಎಂದು ತಿಳಿಸಿದರು. ಇದಕ್ಕೆ ಪ್ರತ್ಯುತ್ತರ ಬರೆದ ಗುರುಗಳು ‘ ನನ್ನ ದೃಷ್ಟಿಯಲ್ಲಿ ಬದಲಾವಣೆಯಾಗಿದೆ ಎಂದರೆ ಏನರ್ಥ. ಎಂದಾದರೂ ನಾನು ಆಶ್ರಮವಾಸಿಗಳಿಗೆ ಸಾವಿಲ್ಲ ಎಂದು ಹೇಳಿದ್ದೇನೆಯೇ? ಹಾಗೆ ಹೇಳಬೇಕಾದರೆ ಉನ್ಮತ್ತ ಸ್ಥಿತಿಯಲ್ಲಿರಬೇಕಷ್ಟೇ . ಪರಾಮಾನಸಿಕ ಪ್ರಜ್ಞಾ ಸ್ತರ ತಲುಪಿದ ಮೇಲೆ ಕೊನೆಯ ಫಲಿತಾಂಶ ದೇಹದ ಅಮರತ್ವವೆಂದು ತಿಳಿಸಿರುವೇನೇ ಹೊರತು ಮೊದಲನೆಯದೆಂದು ಎಂದಿಗೂ ಹೇಳಿಲ್ಲ’ ಎಂಬ ಉತ್ತರ ಬರೆದರು. ನವೆಂಬರ್ ೧೯೩೮ ರ ರಾತ್ರಿ ಗುರುಗಳು ಎಡವಿ ಬಿದ್ದು ಕಾಲನ್ನು ಮುರಿದುಕೊಂಡರು. ಅಂದು ಅವರ ವೈದ್ಯ ಶಿಷ್ಯ ನಿರೋದ್^ಬರುಣ್ ಆಶ್ರಮದಲ್ಲಿದ್ದರು. ಈ ಹಿಂದೆ ಹಲವಾರು ಬಾರಿ ಗುರುಗಳು ತನಗೆ ಬರೆದ ಪತ್ರಗಳಲ್ಲಿ ತಾವು ರೋಗ , ಸಾವು , ಅಪಘಾತಗಳ ಮೇಲೆ ಸಾಕಷ್ಟು ಹತೋಟಿ ಹೊಂದಿರುವುದಾಗಿ ತಿಳಿಸಿರುವುದು ನೆನಪಾಯಿತು. ಬಹಿರಂಗ-ಅಂತರಗಳನ್ನು ಜಯಿಸಿದ ಯೋಗಿ ಎಡವಿ ಕಾಲು ಮುರಿದುಕೊಳ್ಳುವ ಸ್ಥಿತಿ ಬಂದಿತೆ ಎನ್ನುವ ಚಿಂತನೆ ಅವರನ್ನು ಕಾಡಿತು. ವೈದ್ಯ ಶಿಷ್ಯರಿಗೆ ಆಗಾಗ್ಗೆ ವೈದ್ಯಕೀಯದ ಬಗ್ಗೆ ಸಲಹೆ ನೀಡುತ್ತಿದ್ದ ಗುರುಗಳು ತಮ್ಮ ಮೇಲೆ ಮದ್ರಾಸಿನಿಂದ ಬಂದ ಪರಿಣಿತ ವೈದ್ಯರು ನಾನಾ ಪರೀಕ್ಷೆ ಮಾಡಿ , ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾಗ ನಿಸ್ಸಹಾಯಕರಾಗಿ ,ನಿರ್ಭಾವುಕರಾಗಿ ನೋಡುತ್ತಿದ್ದರು. ಈ ಹಿಂದೆ ಶಿಷ್ಯರು ಔಷಧಿಗಳನ್ನು ಕುಡಿಸಲು ಹೋದಾಗ ಗುರುಗಳು ಒಪ್ಪುತ್ತಿರಲಿಲ್ಲ. ಆವರೆಗೆ ಎಲ್ಲವನ್ನೂ ಆಧ್ಯಾತ್ಮಿಕ ಬಲದಿಂದ ವಾಸಿಪಡಿಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದರು. ಈಗಲೂ ಅದನ್ನು ಬಳಸಿ ಕಾಲನ್ನು ವಾಸಿಮಾಡಿಕೊಳ್ಳಿ ಎಂದು ಶಿಷ್ಯರು ಹೇಳಿದರೆ ಆ ಪ್ರಯತ್ನ ಮಾಡುತ್ತಿದ್ದೇನೆ ಆದರೆ ಆ ಭಾಗ ತಾಮಸಿಕ ಭಂಗಿಯಲ್ಲಿದ್ದು ಆಧ್ಯಾತ್ಮಿಕ ಬಲವನ್ನು ಸ್ವೀಕರಿಸುತ್ತಿಲ್ಲ ಎಂದು ಎಂದು ಹೇಳುತ್ತಿದ್ದರು. ನುರಿತ ವೈದ್ಯರ ಸಲಹೆಯ ಮೇರೆಗೆ ‘ಕಟ್ಟಿ ಹಾಕಿದ’ ಸ್ಥಿತಿಯಲ್ಲಿ ಸುಮಾರು ನಾಲ್ಕು ತಿಂಗಳು ಕಾಲ ಕಳೆದ ಗುರುಗಳು ಕೊನೆಗೂ ಮುರಿದ ಮೂಳೆ ಸೇರಿ ನಡೆದಾದುವಂತಾದರು. ಎಲ್ಲ ಜೀವಿಗಳ ಮೇಲೆ ಸದಾ ಕಣ್ಣಿಟ್ಟಿರುವ ಸಾವು ಆಶ್ರಮವನ್ನೇನೂ ಮರೆತಿರಲಿಲ್ಲ. ೧೯೩೯ ರಲ್ಲಿ ಗುರುಗಳ ಪ್ರಿಯಶಿಷ್ಯ ಹಾಗೂ ಶ್ರೇಷ್ಟ ಕವಿಯಾಗಿದ್ದ ಆರ್ಜವ ವೈದ್ಯಕೀಯ ಚಿಕಿತ್ಸೆಗಾಗಿ ರೈಲಿನಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ತೀರಿಕೊಂಡರು. ಆರ್ಜವನಿಗೆ ಸಾವು ಬಂದ ನಂತರ ಆಶ್ರಮವಾಸಿಗಳಿಗೆ ದೈಹಿಕ ಅಮರತ್ವದ ಬಗ್ಗೆ ಮೂಡಿದ್ದ ಒಂದೊಂದೇ ಭ್ರಮೆಗಳು ಕಳಚತೊಡಗಿದವು. ಏಪ್ರಿಲ್ ೧೯೪೨ರಲ್ಲಿ ಪ್ರಣಬ್ ಕುಮಾರ್ ಭಟ್ಟಾಚಾರ್ಯ ಎನ್ನುವವರು ಮೊದಲ ಬಾರಿ ಆಶ್ರಮಕ್ಕೆ ಭೇಟಿ ನೀಡಿದಾಗ ಆಶ್ರಮದ ಭಕ್ತರಾದ ಮದನಗೋಪಾಲ ಎನ್ನುವವರ ಪತ್ನಿಯ ಅಂತ್ಯ ಸಂಸ್ಕಾರದ ವಿಧಿಗಳ ಅಂಗವಾಗಿ ಸಿಹಿಯನ್ನು ಹಂಚುತ್ತಿದ್ದರು. ಆಗ ಭಟ್ಟಾಚಾರ್ಯ ಆಶ್ರಮದಲ್ಲಿಯು ಸಾವಿದೆಯೇ? ಎಂದು ಬೆರಗಾದರು. ನಂತರ ಮದನಗೋಪಾಲರ ಪತ್ನಿ ಆಶ್ರಮವಾಸಿಯಾಗಿರಲಿಲ್ಲವೆಂದು ತಿಳಿದು ಭಟ್ಟಾಚಾರ್ಯರಿಗೆ ಅದೆಷ್ಟೋ ನೆಮ್ಮದಿ ಮೂಡಿತು. ಆಶ್ರಮದಲ್ಲಿದ್ದರೆ ಸಾವು ಬರಲಾರದೆಂಬ ನಂಬಿಕೆ ಹಲವರಲ್ಲಿ ಇನ್ನು ದೂರವಾಗಿರಲಿಲ್ಲ. ೧೯೪೪ ರಲ್ಲಿ ನಿಷ್ಠಾ (ಮಾರ್ಗರೆಟ್ ವೂಡ್ರುವಿಲ್ಸನ್-ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರ ಮಗಳು) ಹೆಸರಿನ ಭಕ್ತೆ ತೀರಿಕೊಂಡಳು . ಆಕೆ ಆಶ್ರಮಕ್ಕೆ ಬರುವ ಮೊದಲೇ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದಳು. ಆದ್ದರಿಂದ ಆಶ್ರಮವಾಸಿಗಳಲ್ಲಿ ಆಕೆಯ ಸಾವು ಸಹಜವಾಗಿ ಕಂಡಿತು. ನವೆಂಬರ್ ೧೯೪೫ರಲ್ಲಿ ಚಂದೂಲಾಲ್ ಷಾ ಎನ್ನುವವರು ಕೊನೆಯುಸಿರೆಳೆದರು. ಅವರು ೧೯೨೮ರಲ್ಲಿ ತಮ್ಮ ಸೋದರಿಯೊಂದಿಗೆ ಆಶ್ರಮ ಸೇರಿ ಅದರ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗಿ ಗುರುಗಳು ಮತ್ತು ಅಮ್ಮನವರಿಗೆ ಬಹು ಸನಿಹದವರೆಂದು ಗುರುತಿಸಿಕೊಂಡಿದ್ದರು. ಹರ್ನಿಯಾ ಚಿಕಿತ್ಸೆಗೆ ಆಸ್ಪತ್ರೆ ಸೇರಿದ್ದ ಅವರು ಶಸ್ತ್ರಚಿಕಿತ್ಸೆ ಮುಗಿದ ಕೆಲ ದಿನಗಳಲ್ಲೇ ಕೊನೆಯುಸಿರೆಳೆದಿದ್ದರು. ಇದು ಆ ವೇಳೆಗೆ ಆಶ್ರಮವಾಸಿಯಾಗಿದ್ದ ಪ್ರಣಬ್ ಭಟ್ಟಾಚಾರ್ಯರ ನಂಬಿಕೆಯನ್ನೇ ಕೆಡವಿ ಹಾಕಿತು. ಪ್ರಣಬ್ ಭಟ್ಟಾಚಾರ್ಯನ ಮನದ ತಳಮಳ ನಿಲ್ಲಲಿಲ್ಲ. ಭಟ್ಟಾಚಾರ್ಯ ಅಮ್ಮನವರಲ್ಲಿಗೆ ಹೋಗಿ ಅವರು ಹಾಗೂ ಗುರುಗಳು ಪರಾಮಾನಸಿಕ ಪ್ರಜ್ಞಾ ಸ್ಥಿತಿ ತಲುಪಿರುವಿರೆ ? ಎಂದು ನೇರವಾಗಿ ಪ್ರಶ್ನಿಸಿದರು. ಅದಕ್ಕೆ ಉತ್ತರವಾಗಿ ಅಮ್ಮನವರು ‘ ಇಲ್ಲ . ಆ ಸ್ಥಿತಿ ಆಗ್ಗಾಗ್ಗೆ ಕಾಣಿಸಿಕೊಂಡು ಮರೆಯಾಗುತ್ತದೆ. ಅದಿನ್ನು ದೃಢವಾಗಿ ನೆಲೆಯೂರಿಲ್ಲ. ಅದರ ಬಾಲವನ್ನು ಹಿಡಿಯಲು ಸಾಧ್ಯವಾಗಿದೆ. ಇನ್ನೇನಿದ್ದರೂ ಅದನ್ನು ಪೂರ್ಣವಾಗಿ ಸೆಳೆದುಕೊಳ್ಳುವುದು ಬಾಕಿ. ಅದರ ಪ್ರಯತ್ನದಲ್ಲಿ ನಾನು ಮತ್ತು ಗುರುಗಳು ಶ್ರಮಿಸುತ್ತಿದ್ದೇವೆ’ ಎಂದು ಹೇಳಿದರು. ಗುರುಗಳಿಗೂ ಸಹ ಪರಾಮಾನಸಿಕ ಪ್ರಜ್ಞಾ ಸ್ಥಿತಿ ದಕ್ಕಿಲ್ಲವೆಂದು ತಿಳಿದು ಭಟ್ಟಾಚಾರ್ಯರಿಗೆ ತೀವ್ರ ಹತಾಶೆಯಾಯಿತು. ಬಹುದೀರ್ಘಕಾಲ ಆಶ್ರಮವಾಸಿಯಾಗಿದ್ದ ಚಂದೂಲಾಲ್ ಷಾ ಸಾವನ್ನು ಕುರಿತಾಗಿ ನಂತರದ ದಿನಗಳಲ್ಲಿ ಅಮ್ಮನವರು ಹೇಳಿದ್ದಿಷ್ಟು ‘ಆತ ತನ್ನ ದೇಹದಿಂದ ಹೊರಗೆ ಬಂದು ಸಂಚರಿಸಿ ಮತ್ತೆ ದೇಹಕ್ಕೆ ಮರಳುವುದನ್ನು ಕಲಿತಿದ್ದ. ಶಸ್ತ್ರಚಿತ್ಸೆಯ ನಂತರ ವೈದ್ಯರು ಆತನ ಬಗ್ಗೆ ಸರಿಯಾದ ಕಾಳಜಿ ವಹಿಸಲಿಲ್ಲ. ಎಂದಿನಂತೆ ದೇಹದಿಂದ ಹೊರಹೊರಟು ಆತ ನನ್ನ ಬಳಿ ಬಂದಿದ್ದ . ಆಗ ಆತ ಶಾಂತನಾಗಿಯೇ ಇದ್ದ. ಆ ವೇಳೆಯಲ್ಲಿ ಆಸ್ಪತ್ರೆಯ ವೈದ್ಯರು ಆತ ಸತ್ತಿರುವುದಾಗಿ ಘೋಷಿಸಿದರು. ಇದೆಲ್ಲ ತಿಳಿಯದವರು ಆತ ಸತ್ತಿರುವನೆಂದು ಭಾವಿಸಿ ಆತನ ದೇಹವನ್ನು ಸುಟ್ಟರು. ನನಗೆ ಅದು ಗೊತ್ತಿದ್ದರೆ ಇನ್ನು ಕೆಲಕಾಲ ಆತನ ದೇಹವನ್ನು ಹಾಗೆಯೇ ಕಾದಿರಿಸಬೇಕೆಂದು ಹೇಳುತ್ತಿದ್ದೆ. ಮರಳಿ ದೇಹಕ್ಕೆ ಸೇರಲು ಯತ್ನಿಸಿ ಹಿಂದಕ್ಕೆ ಹೋದ ಆತನಿಗೆ ತನ್ನ ದೇಹದ ಅಂತ್ಯಸಂಸ್ಕಾರವಾಗಿರುವುದು ತಿಳಿದು ನನ್ನಲ್ಲಿಗೆ ಮರಳಿ ಬಂದು ;ನಾನು ಸತ್ತಿರುವುದು ನನಗೆ ತಿಳಿದಿರಲಿಲ್ಲ. ನನ್ನ ದೇಹವನ್ನು ಈಗಾಗಲೇ ಸುಟ್ಟಿರುವರು ಎಂದು ಅಲವತ್ತು ಕೊಂಡ. ನಾನು ಆತನನ್ನು ಸಮಾಧಾನ ಮಾಡಿ ಇನ್ನೊಂದು ದೇಹವನ್ನು ಹುಡುಕುವುದಾಗಿ ಹೇಳಿದೆ. ಅಂದಿನಿಂದ ಆತ ನನ್ನ ಪ್ರಜ್ಞೆಯ ಸನಿಹವಿದ್ದಾನೆ. ನಂತರ ಆತನಿಗೆ ನಾನು ಮರುಜನ್ಮ ತಾಳುವುದನ್ನು ತಿಳಿಸಿಕೊಟ್ಟೆ’ಎಂದು ಹೇಳಿದ್ದಾರೆ. ಗುರುಗಳ ಆರೋಗ್ಯಕ್ಕೆ ಅಪಾಯ ಕಾದಿದೆಯೆಂದು ಕೆಲ ಜ್ಯೋತಿಷಿಗಳು ಎಚ್ಚರಿಸಿದ್ದರು. ಯೋಗಿಗಳು ತಮ್ಮ ವಿಧಿಯನ್ನು ತಾವೇ ನಿರ್ಣಯಿಸಿಕೊಳ್ಳಲು ಶಕ್ತರಾಗಿರುವುದರಿಂದ ಅವರ ಬಗೆಗಿನ ಜ್ಯೋತಿಷ್ಯದಲ್ಲಿ ನಿಖರತೆ ಇರುವುದಿಲ್ಲವೆಂದು ಗುರುಗಳು ಹೇಳಿದ್ದರು. ಹಿಂದೊಮ್ಮೆ ಕಲ್ಕತ್ತಾದ ಖ್ಯಾತ ಜ್ಯೋತಿಷಿ ಗುರುಗಳಿಗೆ ೬೩ನೆ ವಯಸ್ಸಿನಲ್ಲಿ ಗಂಡಾಂತರ ಇದೆಯೆಂದು ಎಚ್ಚರಿಸಿದ್ದರು. ಆ ಗಂಡಾಂತರವನ್ನು ತಮ್ಮ ಯೌಗಿಕ ಶಕ್ತಿಯಿಂದ ಮೀರಿರುವುದಾಗಿ , ಅದೇ ಶಕ್ತಿಯಿಂದ ತಾವು ಹಣ್ಣು , ಹಣ್ಣು ಮುದುಕರಾಗುವವರೆಗೆ ಬದುಕಲು ನಿರ್ಧರಿಸಿರುವುದಾಗಿ ಗುರುಗಳು ತಿಳಿಸಿದ್ದರು. ಮತ್ತೊಬ್ಬ ಜ್ಯೋತಿಷಿ ಅವರ ವಯಸ್ಸನ್ನು ೯೩ ವರ್ಷಗಳೆಂದು ನಿರ್ಧರಿಸಿದ್ದನು. ೧೯೪೫ರಲ್ಲಿ ಗುರುಗಳ ಕಣ್ಣುಗಳು ಮಂಜಾಗತೊಡಗಿದವು. ಓದು , ಬರಹ ಎಲ್ಲದಕ್ಕೂ ಅವರು ಶಿಷ್ಯರನ್ನು ಅವಲಂಬಿಸತೊಡಗಿದರು. ಯೋಗ ಸಿದ್ಧಿ ಪಡೆದ ಗುರುಗಳ ಆರೋಗ್ಯ ಆಗಾಗ್ಗೆ ಏರು ಪೇರಾಗುತ್ತಿದ್ದಿತು. ಗುರುಗಳು ಮೇಲಿಂದ ಮೇಲೆ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರು. ಶಿಷ್ಯರು ನಡೆಸಿದ ಮೂತ್ರ ಪರೀಕ್ಷೆ ಮಧುಮೇಹವನ್ನೂ ಸೂಚಿಸುತ್ತಿದ್ದಿತಾದರೂ ಮುಂದುವರೆದ ತಪಾಸಣೆಗಳಿಂದ ಅದು ಪ್ರೊಸ್ಟೇಟ್ ತೊಂದರೆಯೆಂದು ಅದಕ್ಕೆ ಶಸ್ತಚಿಕಿತ್ಸೆ ಅನಿವಾರ್ಯವೆಂದು ತಿಳಿದು ಬಂದಿತು. ಆದರೆ ಕೆಲದಿನಗಳ ನಂತರ ಗುರುಗಳು ತಮಗಿದ್ದ ತೊಂದರೆ ದೂರವಾಯಿತೆಂದು ಹೇಳಿದರು. ಆದರೆ ಕೆಲ ದಿನಗಳಲ್ಲೇ ಆದರೆ ಕೆಲದಿನಗಳಲ್ಲೇ ಈ ತೊಂದರೆ ಮತ್ತೊಮ್ಮೆ ಕಾಣಿಸಿಕೊಂಡು ಉಲ್ಬಣವಾಗತೊಡಗಿತು. ಮೂತ್ರ ವಿಸರ್ಜನೆ ಕಠಿಣವಾಗತಡಗಿತು. ಕೆಲ ದಿನಗಳಲ್ಲಿ ಮೂತ್ರ ಪಿಂಡವೂ ಸಹ ವಿಫಲವಾಗತೊಡಗಿತು. ನಂತರ ನಡೆಸಿದ ರಕ್ತ ಪರೀಕ್ಷೆಗಳಿಂದ ಮೂತ್ರಪಿಂಡ ಸಂಪೂರ್ಣ ಹಾಳಾಗಿದ್ದು ಏನನ್ನು ಮಾಡುವ ಸ್ಥಿತಿಯಲ್ಲಿ ಇಲ್ಲವೆಂದು ತಿಳಿದುಬಂದಿತು. ಇದರೊಂದಿಗೆ ಗುರುಗಳಿಗೆ ತೀವ್ರ ಉಸಿರಾಟದ ತೊಂದರೆಯು ಸಹ ಸೇರಿಕೊಂಡಿತು. ಗುರುಗಳೇ ನಿಮ್ಮ ಆಧ್ಯಾತ್ಮಿಕ ಬಲದಿಂದ ನೀವು ಏಕೆ ಚೇತರಿಸಿಕೊಳ್ಳುತ್ತಿಲ್ಲ ಎಂದು ಶಿಷ್ಯರು ಕೇಳಿದಾಗ ನನಗೆ ಅದು ಬೇಕಿಲ್ಲ ಎಂದು ಉತ್ತರಿಸುತ್ತಿದ್ದರು. ಸಾಯುವುದಕ್ಕೆ ಕೆಲವು ದಿನ ಮೊದಲು ಗುರುಗಳಿಗೆ ಸಂಪೂರ್ಣವಾಗಿ ಕಣ್ಣು ಕಾಣದಂತಾಯಿತು. ಅಮ್ಮನವರು ಕಿವಿಯಲ್ಲಿ ಉಸಿರಿದ್ದನ್ನು ಕೇಳಿಸಿಕೊಂಡು ಬಂದಿರುವ ವ್ಯಕ್ರಿ ಯಾರೆಂದು ತಿಳಿದು ಮುಗುಳ್ನಗೆ ಬೀರುತ್ತಿದ್ದರು. ೫ ಡಿಸೆಂಬರ್ ೧೯೫೦ ರಂದು ಮಧ್ಯಾಹ್ನ ೧.೨೬ ಕ್ಕೆ ಗುರುಗಳು ತಮ್ಮ ಅಂತರಂಗದ ಶಿಷ್ಯರ ಎದುರಿನಲ್ಲೇ ತಮ್ಮ ದೇಹವನ್ನು ತೊರೆದು ಪರಾಮಾನಸಿಕ ಪ್ರಜ್ಞಾ ಸ್ತರಕ್ಕೇರಿದರು. ಸಾವಿನ ಸಮಯದಲ್ಲಿ ಗುರುಗಳ ಜೊತೆಗಿದ್ದ ಗುರುಗಳ ಚಿಕಿತ್ಸೆಗಾಗಿ ಸತತವಾಗಿ ಪರಿಶ್ರಮಿಸಿದ್ದ ವೈದ್ಯಕೀಯ ಓದಿದ್ದ , ನಿರ್ಬೋದ^ಬರುಣ್ ಗುರುಗಳ ಪಾರ್ಥಿವ ಶರೀರವನ್ನು ನೋಡಿದ ನಂತರವೂ ಅವರು ಸತ್ತರೆಂದು ನಂಬಲಾಗಲಿಲ್ಲ. ‘ಅಮ್ಮ ಅವರು ಹಿಂದಿರುಗಿ ಬರಲಾರರೆ’ ಎಂದು ಮುಗ್ದನಾಗಿ ಕೇಳಿದಾಗ ಅಮ್ಮ ‘ಇಲ್ಲ’ ಎಂದು ಉತ್ತರಿಸಿದರು. ಅವರು ಹಿಂದಕ್ಕೆ ಬರಬೇಕೆಂದಿದ್ದರೆ ದೇಹವನ್ನು ತೊರೆಯುವ ನಿರ್ಧಾರ ಮಾಡುತ್ತಿರಲಿಲ್ಲ ಎಂದರು. ಬೆಳಕಿನ ಕಡೆ ತೋರಿಸುತ್ತ ಗುರುಗಳು ಪರಾಮಾನಸಿಕ ಪ್ರಜ್ಞಾ ಸ್ತರಕ್ಕೆ ಹೋಗಿದ್ದಾರೆ . ಏನೆಂದು ಹೇಳಲಾಗದು . ಏನೇ ಆಗಲಿ ದೇಹವನ್ನು ಗಾಜಿನ ಪೆಟ್ಟಿಗೆಯಲ್ಲಿರಿಸಿ ಕಾಯೋಣ ಎಂದರು. ಸಾಧಕ ಭಕ್ತರು , ಆಶ್ರಮವಾಸಿಗಳು ಗುರುಗಳು ಮರಳಿ ಬರಬಹುದೆಂದು ಆಶಿಸಿದರು. ಗುರುಗಳು ಪರಾಮಾನಸ ಪ್ರಜ್ಞಾ ಸ್ತರದಿಂದ ಕೆಳಗಿಳಿದು ಮರಳಿ ದೇಹಧಾರಿಗಳಾಗಿರಬಹುದೇನೋ ಎಂಬ ಆಶೆಯಲ್ಲಿ ಆಮ್ಮನವರು ದೇಹವಿರಿಸಿದ ಕೋಣೆಯೊಳಗೆ ಆಗಾಗ್ಗೆ ಹೋಗಿ ನೋಡಿ ಬರುತ್ತಿದ್ದರು. ನಾಲ್ಕು ದಿನ ಕಳೆದರೂ ಗುರುಗಳು ಹಿಂದಿರುಗಿ ಬರುವ ಲಕ್ಷಣಗಳು ಕಾಣಲಿಲ್ಲ. ಆದರೆ ಯಾವ ಯೌಗಿಕ ಶಕ್ತಿಯನ್ನೂ ಅರಿಯದ , ನಿಸರ್ಗದ ನಿಯಮಗಳನ್ನು ಎಂದಿಗೂ ಮುರಿಯದ ಸೂಕ್ಷ್ಮಜೀವಿಗಳು , ದೇಹದೊಳಗಿನ ರಾಸಾಯನಿಕಗಳು ಯೌಗಿಕ ಶಕ್ತಿಯಿಂದ ನಿಸರ್ಗ ನಿಯಮಗಳನ್ನು ದಾಟಿದ್ದ ಯೋಗಿಯ ದೇಹದ ಮೇಲೆ ಮೇಲುಗೈ ಸಾಧಿಸತೊಡಗಿದವು.. ಗುರುಗಳು ಸತ್ತ ನಾಲ್ಕನೆ ದಿನ ಡಿಸೆಂಬರ್ ೯, ೧೯೫೦ ರಂದು ಗುರುಗಳ ದೇಹದ ಬಣ್ಣ ಬದಲಾಗಿ ಕೊಳೆತು ನಾರತೊಡಗಿತು. ಅಂದು ಅಮ್ಮನವರು ಅಂತಿಮ ನಿರ್ಧಾರ ತಳೆದರು. ಬೀಟೆ ಮರದ ಪೆಟ್ಟಿಗೆಯನ್ನು ತರಿಸಿ ಅದರ ಒಳಭಾಗದಲ್ಲಿ ಬೆಳ್ಳಿಯ ತಗಡನ್ನು ಹೊದಿಸಲಾಯಿತು. ಕೆಳಗೆ ಮೆತ್ತನೆಯ ದಿಂಬುಗಳನ್ನು ಹಾಸಿ ಗುರುಗಳ ದೇಹವನ್ನು ಬಂಗಾರದ ಕಸೂತಿಯ ಬಟ್ಟೆಯಲ್ಲಿ ಸುತ್ತಿ ಮಲಗಿಸಿ , ಆಶ್ರಮದ ಆವರಣದಲ್ಲಿ ಅದಕ್ಕಾಗಿಯೇ ನಿರ್ಮಿಸಲಾಗಿದ್ದ ಕಾಂಕ್ರೀಟಿನ ಕೋಠಿಯಲ್ಲಿರಿಸಿ ಮುಚ್ಚಲಾಯಿತು. ಅಲ್ಲಿಗೆ ಆಧುನಿಕ ಭಾರತದ ಖ್ಯಾತ ಯೋಗಿಯ ಐಹಿಕ ಜೀವನದ ಅಂತ್ಯವಾಯಿತು. ನಾವು ಓದಿದ ಸಂಗತಿಗಳಲ್ಲಿ ಕಾಣಿಸಿಕೊಳ್ಳುವ ಗುರುಗಳು ಆಧುನಿಕ ಭಾರತದ ಖ್ಯಾತ ಯೋಗಿ , ವೇದಾಂತಿ ಅರವಿಂದ ಘೋಷ್. ********************************************************** ಮಾನವನ ಅಸ್ತಿತ್ವ ಕೇವಲ ಭೌತಿಕವಲ್ಲ. ಭೂಮಿಯ ಅಸ್ತಿತ್ವದ ಹಿನ್ನೆಲೆಯಲ್ಲಿ ಒಂದು ಉನ್ನತತರವಾದ ಪ್ರಜ್ಞೆ ಇದೆ. ಅದು ಸೂಕ್ಷ್ಮವಾದ ಮಾನಸಿಕ, ಅಧ್ಯಾತ್ಮಿಕ ವಿಶ್ವದಲ್ಲಿ ಹಲವು ಸ್ಥಿತಿ ಮತ್ತು ಸ್ತರಗಳಲ್ಲಿ ಕೂಡ ಅಸ್ತಿತ್ವದಲ್ಲಿರುತ್ತದೆ. ಈ ಸ್ತರಗಳಲ್ಲಿ ಮೇಲೇರುತ್ತಾ ಹೋದಂತೆ ಅಂತಿಮದಲ್ಲಿ ಪರಾ ಮಾನಸ ಪ್ರಜ್ಞೆ ತಲುಪಬಹುದು. ಆಗ ವಿಶ್ವಪ್ರಜ್ಞೆ ಎಚ್ಚರವಾಗುತ್ತದೆ. ಈ ವಿಶ್ವಪ್ರಜ್ಞೆ ಭೂಮಿಗೆ ಇಳಿದು ಅಮ್ಮನವರ ರೂಪದಲ್ಲಿ ಕಾಣಿಸಿಕೊಂಡಿದ್ದು ಭೂಮಿಯ ಭೌತಿಕ ಅಸ್ತಿತ್ವದ ಹಿಂದಿರುವ ಸೂಕ್ಷ್ಮ ಕಾರಣದ ಮೇಲೆ ತನ್ನ ಪ್ರಭಾವ ಬೀರುತ್ತಿದೆ. ತಾವು ಹಾಗೂ ಅಮ್ಮನವರು ಅನಾಯಾಸವಾಗಿ ಪ್ರಜ್ಞೆಯ ಹಲವು ಸ್ತರಗಳ ನಡುವೆ ಸಂಚರಿಸಬಲ್ಲೆವೆಂದು ಮತ್ತು ಇತರರ ಪ್ರಜ್ಞೆಯನ್ನು ಪ್ರಭಾವಿಸಬಲ್ಲೆವೆಂದು ತಿಳಿಸಿದ್ದರು. ಎರಡನೇ ಜಾಗತಿಕ ಯುದ್ಧ ಪ್ರಾರಂಭವಾದ ನಂತರ ಯುರೋಪ್ ದೇಶಗಳು ಬ್ರಿಟಿಷ್ ಮುಂದಾಳತ್ವದ ಮಿತ್ರ ಹಾಗೂ ಜರ್ಮನ್ ಮುಂದಾಳತ್ವದ ಶತ್ರು ಎಂಬ ಎರಡು ಬಣಗಳಲ್ಲಿ ಹಂಚಿಹೋಗಿದ್ದವು. ಹಿಟ್ಲರ್ ಮುಂದಾಳತ್ವದ ಜರ್ಮನಿಯ ನಾಝಿಗಳು ಮನುಕುಲದ ವಿನಾಶದ ಹಾದಿಗಳನ್ನು ತುಳಿದಿದ್ದರಿಂದ ಗುರುಗಳು ಮತ್ತು ಅಮ್ಮನವರು ಪರಾಮಾನಸ ಪ್ರಜ್ಞೆಯ ಮೂಲಕ ಮಿತ್ರ ಬಣಕ್ಕೆ ನೆರವಾಗಲು ಮುಂದಾದರು. ಹಾಗೆ ಮುಂದಾದಾಗ ನಡೆದ ಕೆಲ ಸಂಗತಿಗಳನ್ನು ಅಮ್ಮನವರು ಆಗಿಂದಾಗ್ಗೆ ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. ಅವುಗಳಲ್ಲಿ ಒಂದೆರಡು ಮುಂದಿವೆ. ಮಿತ್ರ ಬಣಗಳು ಡೆನ್’ಕಿರ್ಕ್ ಪ್ರದೇಶದಲ್ಲಿ ನೆಲೆಸಿದ್ದವು. ನಾಝಿ ಸೇನೆ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದೆ ಸಾಗಿತು. ಮಿತ್ರ ಬಣಗಳು ಆಗ ತುಂಬ ದುರ್ಬಲ ಸ್ಥಿತಿಯಲ್ಲಿದ್ದವು. ನಾಝಿ ಸೇನೆ ಡೆನ್’ಕಿರ್ಕ್ ತಲುಪಿದ್ದೇ ಆದರೆ ಮಿತ್ರಬಣಗಳಿಗೆ – ಆ ಮೂಲಕ ಮಾನವ ಕುಲಕ್ಕೆ- ಆಗಬಹುದಾದ ಹಾನಿ ಅನೂಹ್ಯವಾಗಿದ್ದಿತು. ಆದರೆ ಊಹಿಸಿದುದಕ್ಕಿಂತ ಸಂಪೂರ್ಣ ಭಿನ್ನವಾಗಿ , ಯಾವುದೇ ಕಾರಣಗಳಿಲ್ಲದೆ ನಾಝಿ ಸೇನೆ ಡೆನ್’ಕಿರ್ಕ್’ನತ್ತ ಸಾಗದೆ ಹಿಂದಿರುಗತೊಡಗಿತು. ಇದೇ ಸಂದರ್ಭ ಬಳಸಿಕೊಂಡು ಡೆನ್’ಕುರ್ಕ್’ನಲ್ಲಿದ್ದ ಮಿತ್ರ ಸೇನೆ ತನ್ನ ಶಿಬಿರವನ್ನು ತೆರವುಗೊಳಿಸಲು ತೊಡಗಿತು. ಹೀಗೆ ತೆರವುಗೊಳಿಸುತ್ತಿರುವುದು ನಾಝಿ ಸೇನೆಗೆ ಕಾಣದಂತೆ ದಟ್ಟವಾದ ಮಂಜು ಮುಸುಗಿದ್ದಿತು. ತಮ್ಮ ಉನ್ನತ ಪ್ರಜ್ಞೆಯ ಮೂಲಕ ಜರ್ಮನಿಯ ನಾಝಿ ಸೇನೆಯ ಮುಖ್ಯಸ್ತರ ಮೇಲೆ ಪ್ರಭಾವ ಬೀರಿ ಅವರು ಡೆನ್’ಕಿರ್ಕ್’ನಿಂದ ದೂರಹೋಗುವಂತೆ ಅದೇ ವೇಳೆಗೆ ಮಿತ್ರ ಬಣಗಳು ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಕಾಣದಂತೆ ಮಾಡಲು ಮಂಜು ಮುಸುಗುವಂತೆ ತಾವು ಮಾಡಿದೆವೆಂದು ಗುರುಗಳು ಹೇಳುತ್ತಿದ್ದರು. ಅದರಂತೆಯೇ ಅಮ್ಮನವರು ಕೂಡ ಉನ್ನತ ಪ್ರಜ್ಞೆಯ ಮೂಲಕ ಆಗಾಗ್ಗೆ ಮಿತ್ರ ಬಣಗಳಿಗೆ ನೆರವು ನೀಡುತ್ತಿದ್ದರು. ಯುದ್ಧ ಮತ್ತು ಅಶಾಂತಿಗೆ ಕಾರಣವಾಗಿರುವ ಅಸುರ ಪ್ರಜ್ಞೆಯೊಂದು ಮಿಂಚಿನ ರೂಪದಲ್ಲಿ ಬಂದು ಹಿಟ್ಲರ್’ಗೆ ಪ್ರೇರೇಪಣೆ ನೀಡುತ್ತಿರುವುದನ್ನು ಅಮ್ಮನವರು ಗಮನಿಸಿದ್ದರು. ಈ ಮಿಂಚು ಹಿಟ್ಲರ್’ನ ಎಲ್ಲ ಪಾಶವೀ ನಿರ್ಧಾರಗ್ಗಳಿಗೆ ಹಿನ್ನೆಲೆ ಕಾರಣವಾಗಿದ್ದಿತು. ಹಿಟ್ಲರ್’ ಕೆಟ್ಟ ದಾರಿ ತುಳಿಯಲು ಕಾರಣವಾದ ಆ ಮಿಂಚು ಕೆಲವೊಮ್ಮೆ ಅಮ್ಮನವರ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಿತು. ಉನ್ನತ ಪ್ರಜ್ಞೆಯಲ್ಲಿ ಈ ಮಿಂಚಿಗೆ ಎದುರಾಗಿ ಅದನ್ನು ದುರ್ಬಲಗೊಳಿಸಿ ಹಿಟ್ಲರ್ ವಿನಾಶಕಾರಿ ಯುದ್ಧದಿಂದ ಹಿಂದಕ್ಕೆ ಸರಿಯುವಂತೆ ಮಾಡಲು ಅಮ್ಮನವರು ಹಲವು ಪ್ರಯತ್ನಗಳನ್ನು ಮಾಡಿದರಾದರೂ ಅವು ಯಶಸ್ವಿಯಾಗಲಿಲ್ಲ. ಅದಕ್ಕಾಗಿ ಅವರು ಬೇರೆಯದೇ ಆದ್ದ ತಂತ್ರವನ್ನು ಮಾಡಿದರು. ಉನ್ನತ ಪ್ರಜ್ಞೆಯಲ್ಲಿ ಅಮ್ಮನವರು ತಾವೇ ಆ ಮಿಂಚಿನ ರೂಪ ತಳೆದು ಹಿಟ್ಲರ್ ರಷ್ಯಾವನ್ನು ಆಕ್ರಮಿಸುವಂತೆ ಪ್ರೇರೇಪಿಸಿದರು. ಇದು ಅಂತಿಮವಾಗಿ ಹಿಟ್ಲರ್ ಸೋಲು ಮತ್ತು ಮಿತ್ರ ಬಣಗಳ ವಿಜಯಕ್ಕೆ ಕಾರಣವಾಯಿತು. ಅಮ್ಮನವರು ಒಮ್ಮೆ ಉನ್ನತ ಪ್ರಜ್ಞೆಯಲ್ಲಿರುವಾಗ ಚೀನಾದ ಕೆಲವರು ಕಲ್ಕತ್ತಾ ತಲುಪಿ ಭಾರತಕ್ಕೆ ಕೆಡುಕನ್ನು ಉಂಟುಮಾಡಲು ಯತ್ನಿಸುತ್ತಿರುವುದನ್ನು ಗುರುತಿಸಿದರು. ಇನ್ನೊಂದು ಸಲ ಚೀನಾದ ಸೇನೆ ಭಾರತದ ಮೇಲೆ ದಾಳಿ ಮಾಡಲು ಭಾರತದ ಗಡಿಯ ಸನಿಹ ಬಂದಿದ್ದಿತು. ಇವೆರಡೂ ಸಂದರ್ಭದಲ್ಲಿಯೂ ಅಮ್ಮನವರು ತಮ್ಮ ಉನ್ನತ ಪ್ರಜ್ಞೆಯ ಮೂಲಕ ಚೀನಾದವರ ಮೇಲೆ ಪ್ರಭಾವ ಬೀರಿ ಅವರು ಭಾರತದಿಂದ ಹಿಂದೆ ಸರಿಯುವಂತೆ ಮಾಡಿದೆನೆಂದು ಹೇಳುತ್ತಿದ್ದರು. ಅಮ್ಮನವರು ಪರಾಮಾನಸಿಕ ಹಂತಕ್ಕೆ ತಲುಪಿದಾಗ ಅವರಿಗೆ ದುರ್ಗಾ ದೇವಿ ಕಾಣಿಸಿಕೊಳ್ಳುತ್ತಿದ್ದಳು. ಹೀಗೆ ಕಾಣಿಸಿಕೊಳ್ಳುವುದು ದುರ್ಗಾಪೂಜೆಯ ಸಮಯದಲ್ಲಿ ಅಧಿಕವಾಗಿರುತ್ತಿದ್ದಿತು. ಒಮ್ಮೆ ಅಮ್ಮನವರು ಉನ್ನತ ಪ್ರಜ್ಞೆಯಲ್ಲಿ ಇರುವಾಗ ಅವರಿಗೆ ದುರ್ಗಾ ದೇವಿ ಕಾಣಿಸಿಕೊಂಡಳು. ಆಗ ಅಮ್ಮನವರು ಪರಮ ತತ್ತ್ವಕ್ಕೆ ಶರಣಾಗುವುದು ಎಷ್ಟು ಮುಖ್ಯ ಎನ್ನುವುದನ್ನು ದುರ್ಗಾ ದೇವಿಗೆ ತಿಳಿಸಿದರು. ತಾನೇ ದೇವತೆಯಾಗಿರುವುದರಿಂದ ಇಂತಹ ಮುಖ್ಯ ವಿಚಾರದತ್ತ ತನ್ನ ಗಮನ ಹರಿದಿರಲಿಲ್ಲ ಎಂದು ದುರ್ಗಾ ದೇವಿ ಹೇಳಿದಳು. ಇದಾದ ನಂತರ ಅಮ್ಮನವರು ದುರ್ಗಾದೇವಿಗೆ ಪರಮ ತತ್ತ್ವಕ್ಕೆ ಶರಣಾಗುವುದು ಹೇಗೆ ಎನ್ನುವುದನ್ನು ತಿಳಿಸಿದರು. ಗುರುಗಳು ಮತ್ತು ಅಮ್ಮನವರು ತಾವು ಈ ಹಿಂದೆ ಹಲವು ಮಹಾಪುರುಷರಾಗಿ ಹುಟ್ಟಿದ್ದ ಸಂಗತಿಗಳನ್ನು ಶಿಷ್ಯರಿಗೆ ಹೇಳುತ್ತಿದ್ದರು. ಅಮ್ಮನವರು ಈ ಹಿಂದೆ ಗುರುಗಳು ಕೃಷ್ಣ, ಲಿಯೋನಾರ್ಡ್ ಡ ವಿಂಚಿ , ಮೈಖೆಲೆಂಜೆಲೊ ನೆಪೋಲಿಯನ್ ಆಗಿ ಜನ್ಮ ತಾಳಿದ್ದರು. ಇತಿಹಾಸದಲ್ಲಿರುವ ಹಲವು ಖ್ಯಾತ, ಪ್ರಸಿದ್ಧರೆಲ್ಲರೂ ಗುರುಗಳ ಹಿಂದಿನ ಜನ್ಮದಲ್ಲಿ ಆರಿಸಿಕೊಂಡ ಅಭಿವ್ಯಕ್ತಿಗಳೆನ್ನುತ್ತಿದ್ದರು. ಅಮ್ಮನವರು ತಾವು ಹಿಂದಿನ ಜನ್ಮದಲ್ಲಿ ಮೊಸೆಸ್ ತಾಯಿ , ೧೬ ನೇ ಶತಮಾನದಲ್ಲಿ ಹೆನ್ರಿ-೬ ಮತ್ತು ಅನೆ ಬೊಲೆಯ್ನ್ ಮಗಳಾಗಿ ಜನಿಸಿ ಮುಂದೆ ಹೆಸರಾದ ಎಲಿಜಬೆತ್ ರಾಣಿ ಮತ್ತು ರಷ್ಯಾದ ಕ್ಯಾಧರೀನ್ ರಾಣಿಯಾಗಿ ಹುಟ್ಟಿದೆನೆಂದು ಭಾವಿಸಿದ್ದರು. ನೆಪೋಲಿಯನ್ ಮತ್ತು ಗುರುಗಳು ಹುಟ್ಟಿದ ದಿನ ಭಾರತ ಸ್ವಾತಂತ್ರ ಗಳಿಸಿದ ದಿನ ಒಂದೇ ಆಗಿರುವುದು ಕೇವಲ ಕಾಕತಾಳೀಯವಾಗಿರದೆ ದೈವಶಕ್ತಿಯ ಉದ್ದೇಶ ಪೂರ್ವಕ ಬಯಕೆಯಾಗಿದೆಯೆಂದು ಗುರುಗಳು ಪ್ರಬಲವಾಗಿ ನಂಬಿದ್ದರು. ಒಮ್ಮೆ ಶಿಷ್ಯನೊಬ್ಬ ಮೊನಾಲಿಸಾ ಚಿತ್ರ ತೋರಿಸಿದಾಗ ಅದರಲ್ಲಿ ಇರುವುದು ನಾನು ಮತ್ತು ಅದನ್ನು ಬರೆದಿದ್ದು ಗುರುಗಳು ಎಂದು ಅಮ್ಮನವರು ಉದ್ಗರಿಸಿದರು. ಲಿಯೋನಾರ್ಡ್ ದ ವಿಂಚಿ ೧೪೫೨-೧೫೧೯ ಮತ್ತು ಮೈಖೆಲೆಂಜೆಲೊ ೧೪೭೫-೧೫೬೪ ರ ಅವಧಿಯಲ್ಲಿ ಜೀವಿಸಿದ್ದರು. ಎಂದರೆ ೧೪೭೫ ರಿಂದ ೧೫೧೯ ರವರೆಗೆ ಲಿಯೋನಾರ್ಡ್ ಡ ವಿಂಚಿ ಮತ್ತು ಮೈಖೆಲೆಂಜೆಲೊ ಸಮಕಾಲೀನರಾಗಿದ್ದರು. ಎಂದರೆ ಗುರುಗುಳು ಈ ೨೪ ವರ್ಷಗಳ ಅವಧಿಯಲ್ಲಿ ಒಮ್ಮೆಲೆ ಇಬ್ಬರಾಗಿ ಜನ್ಮ ತಾಳಿದ್ದರು!!!. ಇಂತಹ ಅಸಂಗತಗಳು ಗುರುಗಳನ್ನಾಗಲಿ , ಅಮ್ಮನವರನ್ನಾಗಲಿ ಅಥವಾ ಅವರ ಶಿಷ್ಯರನ್ನಾಗಲಿ ಎಂದಿಗೂ ಕಾಡಿರಲಿಲ್ಲ. ********************************************************** ಮೇಲಿನ ಸಂಗತಿಗಳನ್ನು ಗಮನಿಸಿದರೆ ಗುರುಗಳು ಹಾಗೂ ಅಮ್ಮನವರು ವಾಸ್ತವ ,ಭ್ರಮೆ ಮತ್ತು ಕಲ್ಪನೆಗಳ ನಡುವಿನ ವ್ಯತ್ಯಾಸಗಳನ್ನೇ ಅಳಿಸಿ ಹಾಕಿದ್ದರು. ಇಂತಹ ವ್ಯತ್ಯಾಸವನ್ನು ಅಳಿಸಿ ಹಾಕುವುದೇ ಯೌಗಿಕ ಸಾಧನೆ ಎಂಬ ಅಚಲ ನಂಬಿಕೆಯಲ್ಲಿ ಅವರ ಶಿಷ್ಯ ವರ್ಗವಿದ್ದಿತು ಎನ್ನುವುದು ಸ್ಪಷ್ಟ. Comment Box is loading comments...
|
|