ಭಾರತದ ದೇವಾಲಯಗಳ ನಿರ್ಮಾಣ ತಂತ್ರಗಳು
('ವಾಸ್ತು ಎಂಬ ವ್ಯಾಧಿ' ಪುಸ್ತಕದ ಆಯ್ದ ಅಂಶಿಕ ಭಾಗ) ಭಾರತೀಯರು ನಿರ್ಮಿಸಿದ ಭವ್ಯ ದೇವಾಲಯಗಳು ಅವುಗಳ ಹಿಂದಿರುವ ವಾಸ್ತುಶಾಸ್ತ್ರ ಮತ್ತು ನಿರ್ಮಾಣ ತಂತ್ರಜ್ಞಾನದ ಬಗ್ಗೆ ಎಗ್ಗಿಲ್ಲದ ಹೆಮ್ಮೆಯ ಮಾತುಗಳು ಹರಿದಾಡುತ್ತವೆ. ಈಜಿಪ್ತಿನ ಕಟ್ಟಡಗಳ ಪ್ರಾಚೀನತೆ ಮತ್ತು ಭವ್ಯತೆಯ ಮುಂದೆ ಭಾರತದ ಸಾಧನೆ ಸಪ್ಪೆಯಾಗಿ ಕಾಣುತ್ತದೆ. ಮಿನೋವನ್ , ಮೈಸೇನಿಯನ್ , ಬೆಬಿಲೋನಿಯಾ ,ಪಾರ್ಸಾ , ಚೀನಾದ ನಾಗರಿಕತೆಗಳು ಜಗತ್ತಿಗೆ ನೀಡಿದಂತಹ ಪ್ರಾಚೀನ , ಭವ್ಯ ಕಟ್ಟಡಗಳು ಭಾರತದಲ್ಲಿ ದೊರೆಯುವುದಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಭಾರತದ ಕಟ್ಟಡ ನಿರ್ಮಾಣ ತಂತ್ರಜ್ಞಾನ ಪ್ರತ್ಯೇಕವಾಗಿ ಪರಿಗಣಿಸಬೇಕಾದ ತಾಂತ್ರಿಕ ವಲಯದ ವಿಷಯ. ಆದರೆ ಸಾಮಾನ್ಯ ಓದುಗರಿಗೆ ಸ್ಥೂಲವಾಗಿ ಅರ್ಥವಾಗುವಂತೆ ಭವ್ಯ ದೇವಾಲಯಗಳ ಹಿಂದಿರವ ತಾಂತ್ರಿಕ ವಿವರಣೆಯನ್ನು ಮುಂದೆ ಸರಳ ರೂಪದಲ್ಲಿ ನೀಡಿದ್ದೇನೆ. ಇದು ವಾಸ್ತುಶಾಸ್ತ್ರದ ವಿಮರ್ಶೆಗೆ ಒಂದು ತಾತ್ವಿಕ ಪರಿಸಮಾಪ್ತಿಯನ್ನು ತರುತ್ತದೆ. ದೇವಾಲಯಗಳ ವಾಸ್ತುಶಿಲ್ಪ ಮತ್ತು ಕಲೆಯ ಬಗ್ಗೆ ನೂರಾರು ಅಧ್ಯನಗಳು ನಡೆದಿವೆ. ಆದರೆ ಅವುಗಳ ರಾಚನಿಕ ಸ್ವರೂಪದ ಬಗ್ಗೆ ಕೈಬೆರಳೆಣಿಕೆಯ ಅಧ್ಯಯನಗಳು ಮಾತ್ರ ಸಾಗಿವೆ. ಹಳೆಯ ದೇವಾಲಯಗಳ ರಾಚನಿಕ ವಿಶ್ಲೇಷಣೆ (Structural Analysis) ಮಾಡಲು ಅದರ ಗಾತ್ರ , ಬಳಸಿದ ಸಾಮಗ್ರಿ , ನಿರ್ಮಾಣದ ಹಂತ , ಗೋಡೆಗಳ ದಪ್ಪ , ತೊಲೆಗಳ ಅಳತೆ ಮತ್ತು ಸ್ಥಾನ ಮುಂತಾದ ವಿವರಗಳು ಬೇಕು. ಬಹುತೇಕ ವೇಳೆ ಈ ಎಲ್ಲ ವಿವರಗಳು ಕಲಾತ್ಮಕವಾದ ಭಿತ್ತಿಫಲಕ , ಮೂರ್ತಿ ಶಿಲ್ಪಗಳಿಂದ ಮುಚ್ಚಲ್ಪಟ್ಟು ಹೆಚ್ಚಿನ ವಿವರಗಳು ಮರೆಯಾಗಿರುತ್ತವೆ. ಪ್ರಸಿದ್ಧ ದೇವಾಲಯಗಳು ಸಂರಕ್ಷಿತ ಪ್ರದೇಶಗಳಾಗಿರುವುದರಿಂದ ಇವುಗಳ ರಾಚನಿಕ ಸ್ವರೂಪದ (Structural Features) ಬಗ್ಗೆ ಅಧ್ಯಯನ ನಡೆಸಲು ಅನುಮತಿ ಸಿಗುವುದು ದುಸ್ತರ. ಗರ್ಭಗುಡಿಗಳ ಒಳಗೆ ಪ್ರವೇಶ ನಿಷಿದ್ಧ. ಈ ಕೊರತೆಗಳ ನಡುವೆಯೂ ಲಭ್ಯವಿರುವ ಮಾಹಿತಿಗಳಿಂದ ಭಾರತದ ದೇವಾಲಯಗಳ ಇಂಜಿನಿಯರಿಂಗ್ ಮುಖದ ಪರಿಚಯ ಮಾಡಿಕೊಳ್ಳುವುದು ಸಾಧ್ಯ. ಭಾರತದಲ್ಲಿ ಮನೆ, ಅರಮನೆ , ದೇವಾಲಯ , ಗೋಪುರಗಳ ನಿರ್ಮಾಣ ತಂತ್ರಜ್ಞಾನ ಅತ್ಯಂತ ಸರಳ ತತ್ತ್ವಗಳನ್ನು ಅವಲಂಬಿಸಿದ್ದಿತು. ಇದಕ್ಕಾಗಿ ಅನುಸರಿಸಿದ ದಾರಿಯೆಂದರೆ, (1) ಹೊರೆ ಹೊರುವ ಸಾಮರ್ಥ್ಯ ಗಳಿಕೆಗಾಗಿ ಭಾರಿ/ಭೂರಿ ಗಾತ್ರದ ರಾಚನಿಕ ಸದಸ್ಯರ (Heavy/Massive Structural Members) ಬಳಕೆ. (2) ಸ್ಥಿರತೆಗಾಗಿ ವಿಶಾಲ ಬುನಾದಿಗಳ ಅಳವಡಿಕೆ ಮತ್ತು ಗುರುತ್ವ ಕೇಂದ್ರದ ಮೂಲಕ ಬಲರೇಖೆಗಳು ಹರಿಯುವಂತಹ ಜೋಡಣೆ. ಇದರಿಂದಾಗಿ ಒಣಕಲ್ಲು ಕಟ್ಟಡವೇ (Dry Masonry) ಭಾರತೀಯ ದೇವಾಲಯಗಳ ಮೂಲವಾಯಿತು. ಕಟ್ಟಡಗಳು ಸಂಯುಕ್ತ ನಿರ್ಮಾಣಗಳಾಗಿದ್ದವು. ಹೊರ-ಒಳ ಮೈಯಲ್ಲಿ ಕಲ್ಲಿನ ಕಟ್ಟಣೆಯಿದ್ದು ಅವುಗಳ ನಡುವಿನ ಜಾಗವನ್ನು ಇಟ್ಟಿಗೆ+ಸುಣ್ಣ , ಮಣ್ಣು ಮುದ್ದೆಯಿಂದ ತುಂಬುತ್ತಿದ್ದರು. ಕಲ್ಲುಗಳು 300-4500 ಮಿ.ಮೀ ಗಾತ್ರದಲ್ಲಿರುತ್ತಿದ್ದವು. ಗೋಡೆಯ ಸರಾಸರಿ ದಪ್ಪ 1000 ಮಿ.ಮೀ ಇರುತ್ತಿದ್ದಿತು. ಕಂಬಗಳು 450-1000 ಮಿ.ಮೀ ಅಡ್ದಳತೆ ಹೊಂದಿರುತ್ತಿದ್ದವು. ತೊಲೆಗಳ ಗಾತ್ರ ಅವು ಹೊರುವ ಭಾರ , ಚಾಚಿರುವ ಅಂಕಣಕ್ಕೆ (Span) ಹೋಲಿಸಿದಂತೆ ಹಲವು ಪಟ್ಟು ದೊಡ್ಡದಾಗಿರುತ್ತಿದ್ದವು. ಇದರ ಪರಿಣಾಮವಾಗಿ ಜಾರಿಗೆ ಬಂದ ತಂತ್ರಗಳೆಂದರೆ - (1) ಎತ್ತರಕ್ಕೆ ಹೋಲಿಸಿದಂತೆ ವಿಶಾಲವಾದ ತಳವಿನ್ಯಾಸ (2) ದೊಡ್ಡ ಗಾತ್ರದ ಗೋಡೆ ಮತ್ತು ಕಂಬಗಳು (3) ಚಾಚಿರಿಸಿಕೆ ( ಕದಳೀಕರಣ-Corbeliing ) (4) ಕಂಬ–ತೊಲೆ-ಚಪ್ಪಡಿಗಳ ಸರಳ ಆಧಾರಿತ ರಚನೆ (5) ಸಮಾಂಗೀಯತೆ Symmetry ಇಂತಹ ನಿರ್ಮಾಣಗಳಲ್ಲಿ ಕಟ್ಟಡದ ಎಲ್ಲ ಅಂಗಗಳು ಅದುಮಿಕೆಯಲ್ಲಿರುತ್ತವೆ (Compression)ಮತ್ತು ಅದುಮಿಕೆಯಲ್ಲಿ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ .ಕಲ್ಲು , ಇಟ್ಟಿಗೆಗಳು ಬಳಕೆಯಾಗಿರುತ್ತವೆ. ಇದರಿಂದ ದಕ್ಕುವ ಲಾಭಗಳೆಂದರೆ (1) ಕಟ್ಟಡದ ಹೊರೆ ಹೊರುವಂತೆ ಮಾಡಲು ಯಾವುದೇ ಸಿದ್ಧಾಂತಗಳ ತಿಳುವಳಿಕೆ ಬೇಕಿಲ್ಲದಿರುವುದು. (2) ಸಾಮಗ್ರಿಗಳ ಯಾಂತ್ರಿಕ ಗುಣಗಳ (Mechanical Properties) ಅರಿವಿಲ್ಲದೇ ಅವುಗಳನ್ನು ಯಶಸ್ವಿಯಾಗಿ ಬಳಸುವ ಅನುಕೂಲ (3) ಜಟಿಲವಾದ ಗಣಿತೀಯ ಲೆಕ್ಕಾಚಾರಗಳ ಅನಗತ್ಯತೆ. (4) ದೇಶಿಯ-ಸಾಂಪ್ರದಾಯಿಕ ನಿರ್ಮಾಣ ತಂತ್ರಗಳ ಬಳಕೆ. (5) ಕಟ್ಟಡದ ವಿವಿಧ ಅಂಗಗಳ ನಡುವೆ ರಾಚನಿಕ ಬಂಧ ಕಲ್ಪಿಸಲು ಯಾವುದೇ ಹೆಚ್ಚಿನ ತಾಂತ್ರಿಕ ತಿಳುವಳಿಕೆಯ ಅಗತ್ಯವಿಲ್ಲದಿರುವುದು. ಈ ಸರಳವಾದ ಅನುಕೂಲಗಳನ್ನು ಇಟ್ಟುಕೊಂಡು ಆಧುನಿಕ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಿಲ್ಲ. ಉದಾಹರಣೆಗೆ 6/6 ಅಡಿ ಗಾತ್ರದ 10 ಅಡಿ ಅಂತರರದಲ್ಲಿರುವ ಕಲ್ಲಿನ ಕಂಬಗಳನ್ನು ಬಳಸಿ ಹತ್ತು ಮಹಡಿಗಳ ಆಧುನಿಕ ಅಪಾರ್ಟ್ ಮೆಂಟ್ ಅಥವಾ ಕಛೇರಿ ಕಟ್ಟಲು ಸಾಧ್ಯವಿಲ್ಲ. ಹಳೆಯ ಕಾಲದ ತಂತ್ರಜ್ಞಾನದಿಂದ ಮಧ್ಯದಲ್ಲಿ ಅಡೆತಡೆ ಇಲ್ಲದ , ಕಂಬಗಳಿಂದ ಮುಕ್ತವಾದ ತೆರೆದ ಜಾಗ ಹೊಂದಿರುವ ಕಟ್ಟಡ ಕಟ್ಟಲು ಸಾಧ್ಯವಿರಲಿಲ್ಲ. ಪ್ರಾಚೀನ ಕಟ್ಟಡಗಳಲ್ಲಿ ಬಳಕೆಯ ಜಾಗದ ಪ್ರಮಾಣ ಆಧುನಿಕ ಕಟ್ಟಡಗಳಿಗೆ ಹೋಲಿಸಿದಂತೆ ಅತ್ಯಲ್ಪ. ಒಂದು ಕಟ್ಟಡದಲ್ಲಿ ರಚನೆಯ ಅಂಗಗಳಾದ ಕಂಬ , ಗೋಡೆಗಳು ಒಟ್ಟು ಆ ಕಟ್ಟಡದ ತಳವಿನ್ಯಾಸದಲ್ಲಿ ಆಕ್ರಮಿಸುವ ಜಾಗವನ್ನು ‘ರಾಚನಿಕ ಸಾಂದ್ರತೆ’ (Structural Density) ಎನ್ನಬಹುದು. ರಾಚನಿಕ ಸಾಂದ್ರತೆ ಹೆಚ್ಚಿದಷ್ಟು ಬಳಕೆಯ ಜಾಗ ಕಡಿಮೆಯಾಗುತ್ತದೆ. ಆಧುನಿಕ ಕಾಲದಲ್ಲಿ ರಾಚನಿಕ ಸಾಂದ್ರತೆಯನ್ನು ಆದಷ್ಟು ಕಡಿಮೆಗೊಳಿಸಲು ಅತಿ ಹೆಚ್ಚಿನ ಒತ್ತಡವಿದೆ. ಕೆಳಗಿನ ಕೋಷ್ಟಕ ಮತ್ತು ಚಿತ್ರಗಳು ಹಳೆಯ ಮತ್ತು ಆಧುನಿಕ ಕಟ್ಟಡಗ:ಳ ರಾಚನಿಕ ಸಾಂದ್ರತೆ ಮತ್ತು ಬಳಕೆಗ ಲಭ್ಯ ಜಾಗದ ಪ್ರಮಾಣವ್ನು ನೀಡುತ್ತದೆ. (ಮೇಲಿನ ಕೋಷ್ಟಕಗಳಲ್ಲಿ ಅಂದಾಜು ಅಳತೆಗಳನ್ನು ನೀಡಲಾಗಿದೆ. ಇವು ನೈಜ ಅಳತೆಗಳಿಗಿಂತ 5-8% ವ್ಯತ್ಯಾಸವಿರಬಹುದು) ಮೇಲಿನ ಕೋಷ್ಟಕ ಮತ್ತು ಲಭ್ಯವಿರುವ ಒಂದು ಸಮೀಕ್ಷೆಯಿಂದ ಸ್ಪಷ್ಟವಾಗುವ ಅಂಶಗಳೆಂದರೆ : -ಉತ್ತರ ಭಾರತದ ದೇವಾಲಯಗಳ ರಾಚನಿಕ ಸಾಂದ್ರತೆ 30-70 % ವ್ಯಾಪ್ತಿಯಲ್ಲಿದ್ದು ಸರಾಸರಿ 49.33 % -ದಕ್ಷಿಣ ಭಾರತದ ದೇವಾಲಯಗಳ ರಾಚನಿಕ ಸಾಂದ್ರತೆ 15-60 % ವ್ಯಾಪ್ತಿಯಲ್ಲಿದ್ದು ಸರಾಸರಿ 36.55 % -ಎತ್ತರದ ದೃಷ್ಟಿಯಲ್ಲಿ ನೋಡಿದರೆ ಪ್ರ.ಶ 5-6 ಶತಮಾನದಲ್ಲಿ 6-8 ಮೀ ಎತ್ತರವಿದ್ದ ದೇವಾಲಯಗಳು 11-12 ಶತಮಾನದ ವೇಳೆಗೆ 20-25 ಮೀಟರ ಎತ್ತರ ತಾಳಿದವು. ಈ ಏರಿಕೆ ಅನುಭವ ಗಳಿಸಿದಂತೆ ಹೆಚ್ಹುತ್ತಾ ಹೋಗ ಸಹಜ ಗತಿಯಲ್ಲಿದೆ. -ಉತ್ತರ ಭಾರತದ ದೇವಾಲಯಗಳ ಸರಾಸರಿ ಎತ್ತರ 15.79 ಮೀಟರ್ (5-20 ಮೀ ವ್ಯಾಪ್ತಿ) , -ದಕ್ಷಿಣ ಭಾರತದ ದೇವಾಲಯಗಳ ಎತ್ತರ ಸರಾಸರಿ 12.99 ಮೀಟರ್. -ಉತ್ತರ ಭಾರತದ ದೇವಾಲಯಗಳ ಸರಾಸರಿ ವಿಸ್ತೀರ್ಣ – 37.32 ಚ.ಮೀ -ದಕ್ಷಿಣ ಭಾರತದ ದೇವಾಲಯಗಳ ಸರಾಸರಿ ವಿಸ್ತೀರ್ಣ- 51.32 ಚ, ಮೀ -ಯುರೋಪಿನ ಕಲ್ಲು/ಇಟ್ಟಿಗೆ ಕಟ್ಟಡಗಳಿಗೆ ಹೋಲಿಸಿದರೆ ಭಾರತದ ದೇವಾಲಯಗಳ ಎತ್ತರ ಅಂತಹ ಹೆಚ್ಚಿನದಲ್ಲ. ಯುರೋಪ್ ನಲ್ಲಿ ಈ ಕಾಲದಲ್ಲಿ ಕೆಲವು 100 ಮೀ ಎತ್ತರಕ್ಕಿದ್ದ ನಿರ್ಮಾಣಗಳು ದಾಖಲಾಗಿವೆ. ಭಾರತದಲ್ಲಿಯೇ ಕುತುಬ್ ಮಿನಾರ್ 70 ಮೀ ಎತ್ತರವಿದೆ. ಇದಕ್ಕೆ ಹೋಲಿಸಿದರೆ ದೇವಾಲಯಗಳ ಶಿಖರಗಳ ಎತ್ತರ ಕಡಿಮೆಯೆಂದೇ ಹೇಳಬಹುದು. ರಾಚನಿಕ ಸಾಂದ್ರತೆಯ ಲೆಕ್ಕಾಚಾರಗಳನ್ನು ನೋಡಿದರೆ ಭಾರತದ ದೇವಾಲಯಗಳು ‘ ಭಾರವನ್ನು ಭಾರಿ ಗಾತ್ರದ ಸರಳ ನಡವಳಿಕೆಯ ರಾಚನಿಕ ಅಂಗಗಳಿಂದ ಹೊರುವ ( Carrying loads by massive structural elements under simple behaviour) ಸರಳ ತತ್ತ್ವದ ಮೇಲೆ ನಿರ್ಮಾಣಗೊಂಡಿರುವುದು ಸ್ಪಷ್ಟವಾಗುತ್ತದೆ. ಯುರೋಪಿನ ಹಳೆಯ ಚರ್ಚ್‘ಗಳಲ್ಲಿ ರಾಚನಿಕ ಸಾಂದ್ರತೆ 10-20 % ಇದ್ದರೆ , ಆಧುನಿಕ ಕಲ್ಲು ಮತ್ತು ಇಟ್ಟಿಗೆ ಕಟ್ಟಡಗಳಲ್ಲಿ ಇದು 5-8 % ಇರುತ್ತದೆ. ಆರ್.ಸಿ.ಸಿ (ಖಅಅ) ಬಳಸಿ ಕಟ್ಟುವ ಆಧುನಿಕ ನೂರು ಮಹಡಿಯ ಕಟ್ಟಡದಲ್ಲಿ ರಾಚನಿಕ ಸಾಂದ್ರತೆ 2-3 % ಇರುತ್ತದೆ. ಇಂತಹುದೇ ಕಟ್ಟಡವನ್ನು ಭಾರತೀಯ ದೇವಾಲಯಗಳನ್ನು ಬಳಸಲು ಕಟ್ಟಿದ ತಂತ್ರ ಬಳಸಿ ಕಟ್ಟಿದರೆ ಅದರ ರಾಚನಿಕ ಸಾಂದ್ರತೆ 85-90 % ಇರುತ್ತದೆ. ಎಂದರೆ ಅಲ್ಲಿ ಬಳಕೆ ಯೋಗ್ಯ ಜಾಗವೇ ಇರುವುದಿಲ್ಲ. ಈಜಿಪ್ತ್ ಪಿರಮಿಡ್ ಗಳ ರಾಚನಿಕ ಸಾಂದ್ರತ 98-99 % ಆಧುನಿಕ ಸಿವಿಲ್ ಇಂಜಿನಿಯರಿಂಗ್’ಗೂ ಮತ್ತು ಪಾರಂಪರಿಕ ನಿರ್ಮಾಣ ತಂತ್ರಕ್ಕೂ ಇರುವ ಮಹಾನ್ ವ್ಯತ್ಯಾಸವೇ ಇದು. ದೇವಾಲಯಗಳು ಮತ್ತು ಭೂಕಂಪ ಇತ್ತೀಚೆಗೆ ಕೆಲವರು ಪ್ರಾಚೀನ ವಾಸ್ತುಶಾಸ್ತ್ರದ ನಿರ್ಮಾಣ ತಂತ್ರಗಳನ್ನು ಬಳಸಿದರೆ , ವಾಸ್ತುಶಾಸ್ತ್ರ ಹೇಳಿದಂತೆ ಒಂದು ಆಳಿನ ಆಳಕ್ಕೆ ಬುನಾದಿ ತೋಡಿದರೆ ಭೂಕಂಪವನ್ನು ತಾಳಿಕೊಳ್ಳುವ ಕಟ್ಟಡಗಳ ನಿರ್ಮಾಣ ಸಾಧ್ಯ ಎಂದು ಹೇಳುತ್ತಿದ್ದಾರೆ. ಕಟ್ಟಡ ನಿರ್ಮಾಣದ ಯಾವುದೇ ತಿಳುವಳಿಕೆ ಇಲ್ಲದ ಇವರ ಹೇಳಿಕೆಗಳು ಪ್ರಾಚೀನ ಸಾಧನೆಗಳ ಬಗ್ಗೆ ಅಪಾರ ಹೆಮ್ಮೆ ತಾಳುವ ನಮಗೆ ರೋಮಾಂಚನ ತರುತ್ತದೆ. ಅತ್ಯಂತ ಜಟಿಲವಾದ , ಆಧುನಿಕ ಕಟ್ಟಡಗಳನ್ನು ಕಟ್ಟಿದ ಸಿವಿಲ್ ಇಂಜಿನಿಯರ್‘ಗಳು ಭಾರತದ ಕೆಲವು ಎತ್ತರದ ದೇವಾಲಗಳ ಮೇಲೆ ನಡೆಸಿದ ಕೆಲ ಅಧ್ಯಯನಗಳು ಈ ಬಗ್ಗೆ ಏನು ಹೇಳುತ್ತವೆ ಎನ್ನುವುದ ಸಂಕ್ಷಿಪ್ತವಾಗಿ ಮುಂದೆ ನೀಡಲಾಗಿದೆ. ಹನ್ನೆರಡನೇ ಶತಮಾನಕ್ಕೆ ಸೇರಿದ ಪುರಿಯ ಜಗನ್ನಾಥ ದೇವಾಲಯವನ್ನು ಸ್ಥಳೀಯವಾಗಿ ದೊರೆಯುವ ಖಾಂಡೋಲೈಟ್ ಮರಳು ಕಲ್ಲನ್ನು ಬಳಸಿ ನಿಟ್ಟುಗಳಲ್ಲಿ ಜೋಡಿಸಿ ಅಷ್ಲರ್ ಬಂಧದಲ್ಲಿ ಕಟ್ಟಲಾಗಿದೆ. ಎರಡು ಕಲ್ಲಿನ ನಿಟ್ಟುಗಳ (ಸ್ತರ) ನಡುವೆ ಬಂಧಕ್ಕಾಗಿ ಗಾರೆಯನ್ನು ಬಳಸಿಲ್ಲ. ಇದರ ಬದಲಾಗಿ ಅಕ್ಕ ಪಕ್ಕ ಮತ್ತು ನಿಟ್ಟುಗಳ ನಡುವಿನ ಬಂಧಕ್ಕಾಗಿ ಕಬ್ಬಿಣದ ಚಿಪ್ಪಳ (ClampClamp) ಮತ್ತು ಗೂಟಗಳನ್ನು ಬಳಸಲಾಗಿದೆ. ಇದೇ ತಂತ್ರವನ್ನು ನಾವು ಹೊಯ್ಸಳರ ನಿರ್ಮಾಣದಲ್ಲೂ ಕಾಣುತ್ತೇವೆ. ದೇವಾಸ್ಥಾನ ಮುಖ್ಯ ಗೋಪುರದ ಕಟ್ಟಡವನ್ನು ಪ್ರಾಚೀನ ಕಾಲದಿಂದಲೂ ಜಗತ್ತಿನಾದ್ಯಂತ ಬಳಕೆಯಲ್ಲಿರುವ ಚಾಚಿರಿಸಿಕೆ (ಕದಳೀಕರಣ Corbelling) ತಂತ್ರಜ್ಞಾನದಿಂದ ವಕ್ರ ಹೊರಮೈ ಬರುವಂತೆ ಪಿರಮಿಡ್ ಆಕಾರದ ತುದಿಛೇದಿತ ಪಿರಮಿಡ್ ಖಂಡದಂತೆ (Truncated Pyramid) ಏರಿಸಲಾಗಿದೆ. ಇದರಿಂದ ಕಟ್ಟಡದ ಕಲ್ಲುಗಳು ಸಂಪೂರ್ಣವಾಗಿ ಒತ್ತಿಕೆಯ ಬಲಗಳಲ್ಲಿ ಪ್ರೇರಿತವಾಗಿವೆ. ಮುಖ್ಯ ಗೋಪುರ 66 ಮೀಟರ್ ( 200 ಅಡಿ) ಎತ್ತರವಿದ್ದು ಕೆಳಭಾಗದಲ್ಲಿ ಅದರ ಗೋಡೆ 5.5 ಮೀಟರ್ ( 17 ಅಡಿ) ದಪ್ಪನಾಗಿದೆ. ಮೇಲಕ್ಕೆ ಏರಿದಂತೆ ಗೋಪುರವನ್ನು ಮೂರು ಹಂತಗಳಲ್ಲಿ ಚಾಚಿರಿಸಿಕೆ (Corbelling) ನಿರ್ಮಾಣ ತಂತ್ರದಿಂದ ಒಳಮುಖಕ್ಕೆ ಬಾಗಿಸಲಾಗಿದೆ. ಒಳಮುಖಕ್ಕೆ ಬಾಗುವ ಹಂತದಲ್ಲಿ 9 ಮೀಟರ್ ಚಾಚಿಕೆ/ಅಂಕಣವಿದ್ದು (SpanSpans) ಆಧಾರಕ್ಕಾಗಿ 25/25 ಸೆಂಟಿಮೀಟರ್ ಗಾತ್ರದ ರಾಟ್ ಕಬ್ಬಿಣದ ತೊಲೆಗಳನ್ನು ಬಳಸಲಾಗಿದೆ. ಗೋಪುರದ ರಚನೆಯ ನಿರ್ಮಾಣ ಮುಗಿದ ನಂತರ ಅದರ ಹೊರಮೈಗೆ 9 ಪದರಗಳಲ್ಲಿ 45 ಸೆಂ,ಮೀ ದಪ್ಪದ ಸುಣ್ಣದ ಗಾರೆ ಮಾದಲಾಗಿದೆ. ಒಳಮೈಯಲ್ಲಿ ಮೂರು ಮೀಟರ್ ಎತ್ತರದವರೆಗ ಮಾತ್ರ ತೆಳುವಾದ ಗಾರೆ ಮಾದಲಾಗಿದೆ. ಪುರಿಯ ಜಗನ್ನಾಥ ದೇವಾಲಯ ಭೂಕಂಪ ವಲಯ-3 ರ ಪ್ರದೇಶದಲ್ಲಿದೆ. ಸಧ್ಯದ ಲಭ್ಯ ದಾಖಲೆಗಳ ಪ್ರಕಾರ ಪುರಿಯಿಂದ 100 ಕಿ.ಮೀ ಅಗ್ನೇಯದಲ್ಲಿ ರಿಕ್ಟರ್ ಮಾಪಕದಲ್ಲಿ 5 ರ ಅಳತೆಯ ಗರಿಷ್ಟ ಭೂಕಂಪ ದಾಖಲಾಗಿದೆ. ರಚನೆಯ ಎಲ್ಲ ಘಟಕಗಳು ಸಂಪೂರ್ಣ ಬಂಧದಲ್ಲಿದ್ದು ಒಂದೇ ವಸ್ತುವಿನಂತೆ ವರ್ತಿಸುವ ಕಟ್ಟಡಗಳು ಭೂಕಂಪಕ್ಕೆ ಹೆಚ್ಛು ಪ್ರತಿಕ್ರಿಯಿಸಿದರೆ , ದೊಡ್ದ ಗಾತ್ರದ ಕಲ್ಲುಗಳನ್ನು ಬಳಸಿ ಅವುಗಳ ನಡುವೆ ಸಂಪೂರ್ಣ ಬಂಧವಿರದೆ ಪೂರ್ಣ ಅದುಮಿಕೆಯಲ್ಲಿ ಇರುವಂತೆ ಜೋಡಿಸಿ ಸರಳ ತಂತ್ರಜ್ಞಾನದಿಂದ ಕಟ್ಟಿದ ಕಟ್ಟಡಗಳು ಭೂಕಂಪಕ್ಕೆ ಹೆಚ್ಚು ಪ್ರತಿಕ್ರಿಯೆ ತೋರಿಸುವುದಿಲ್ಲ. ಜಗನ್ನಾಥ ದೇವಾಲಯ ಎರಡನೇ ವರ್ಗಕ್ಕೆ ಸೇರುತ್ತದೆ. ಖರಗಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದವರು ಜಗನ್ನಾಥ ದೇವಾಲಯದ ಭೂಕಂಪ ಪ್ರತಿಕ್ರಿಯೆಯ ಅಧ್ಯಯನ ನಡೆಸಿ ಅದು ರಿಕ್ಟರ್ ಮಾಪಕದಲ್ಲಿ 5 ರವರೆಗಿನ ಅಲುಗಾಟ ತಾಳಬಲ್ಲದೆಂದು ನಿರ್ಧರಿಸಿದ್ದಾರೆ. ಕಟ್ಟಡವೊಂದರ ತಳ ಮತ್ತು ಲಂಬಮಾನ ವಿನ್ಯಾಸ ಸಮಾಂಗೀಯವಾಗಿದ್ದರೆ (Plan & Elevation Symmetry) ಕಟ್ಟಡದ ತೂಕದ ಕೇಂದ್ರ ಮತ್ತು ತಳವಿನ್ಯಾಸದ ಕೇಂದ್ರ ಸನಿಹವಿರುತ್ತವೆ. (Mass Centre & Plan Centre) ಅಂತಹ ಕಟ್ಟಡಗಳು ಭೂಕಂಪಕ್ಕೆ ತುತ್ತಾದಾಗ ಅವುಗಳಲ್ಲಿ ತಿರುಚು ಬಲಗಳು/ಭ್ರಾಮ್ಯತೆಗಳು (Torsional Force/Momentss) ಅತ್ಯಲ್ಪವಾಗಿದ್ದು ಹೆಚ್ಚು ಸುರಕ್ಷಿತವಾಗಿರುತ್ತವೆ ಎಂದು ಆಧುನಿಕ ಸಿವಿಲ್ ಇಂಜಿನಿಯರಿಂಗ್ ತೋರಿಸಿಕೊಟ್ಟಿದೆ. ಇದನ್ನು ಆಧಾರವಾಗಿರಿಸಿಕೊಂಡು ಇತ್ತೀಚೆಗೆ ಕೆಲವರು ನಮ್ಮ ಪ್ರಾಚೀನ ಕಾಲದ ಋಷಿ-ಮುನಿಗಳಿಗೆ ಇದು ತಿಳಿದಿದ್ದಿತು ಆದ್ದರಿಂದಲೇ ಅವರು ಯೋಜಿಸಿದ ದೇವಾಲಯ , ಗೋಪುರ ಮುಂತಾದುವುಗಳ ತಳ ವಿನ್ಯಾಸ ಸಮಾಂಗೀಯವಾಗಿದ್ದಿತು ಎಂಬ ಹುಯಿಲೆಬ್ಬಿಸುತ್ತಿದ್ದಾರೆ. |
|
Comment Box is loading comments...