ಕನ್ಯಾಕುಮಾರಿ ಐತಿಹ್ಯ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ)
ಸ್ವಾಮಿಗಳು ಬಂಗಾಳಿ ಶೈಲಿಯಲ್ಲಿ ಹುರಿದ ಮೀನುಗಳನ್ನು ತಿನ್ನಲು ಮನ್ಮಥನಾಥ ಭಟ್ಟಾಚಾರ್ಯನ ಮನೆಗೆ ಹೋಗುತ್ತಿದ್ದುದರಿಂದ ಮತ್ತು ಕುಮಾರಿ ಪೂಜೆಯ ಅಂಗವಾಗಿ ಸ್ವಾಮಿಗಳು ಆತನ ಸಣ್ಣ ಮಗಳನ್ನು ಪೂಜಿಸಿದ್ದರು ಎನ್ನುವ ಸಂಗತಿಯಿಂದ ಮನ್ಮಥನಾಥ ಭಟ್ಟಾಚಾರ್ಯನ ಪತ್ನಿಯೊಂದಿಗೆ ತಿರುವನಂತಪುರಕ್ಕೆ ಬಂದಿದ್ದರೆಂದು ಊಹಿಸಬಹುದು. ಸ್ವಾಮಿಗಳು ಮನ್ಮಥನಾಥ ಭಟ್ಟಾಚಾರ್ಯನ ಜೊತೆ ಗಾಡಿಯಲ್ಲಿ ಪಯಣಿಸಿ ೨೩/೧೨/೧೮೯೨ ರಂದು ನಾಗರಕೋಯಿಲ್ ತಲುಪಿ ಅಲ್ಲಿ ಸಾಲ್ಟ್ ಕಲೆಕ್ಟರ್ ಹುದ್ದೆಯಲ್ಲಿದ್ದ ರತ್ನಸ್ವಾಮಿ ಅಯ್ಯರ್ ಮನೆಯಲ್ಲಿ ಉಳಿದಿದ್ದರು. ಮನ್ಮಥನಾಥ ಭಟ್ಟಾಚಾರ್ಯನ ಕುಟುಂಬದ ಜೊತೆ ಇಲ್ಲಿಂದ ಮುಂದೆ ೧೯ ಕಿ.ಮೀ ದೂರ ಪಯಣಿಸಿ ೨೪/೧೨/೧೮೯೪ ರಂದು ಸ್ವಾಮಿಗಳು ಕನ್ಯಾಕುಮಾರಿ ತಲುಪಿದರು. ಕನ್ಯಾಕುಮಾರಿ ಬಹು ಪ್ರಸಿದ್ಧವಾದ ದೇವಿಯ ಕ್ಷೇತ್ರ.ಭಾರತ ಮುಖ್ಯ ಭೂಭಾಗದ ದಕ್ಷಿಣ ತುದಿ. ಇಲ್ಲಿ ಮೂರು ಸಮುದ್ರಗಳು ಸೇರುತ್ತವೆ. ಮುಖ್ಯ ಭೂಮಿಯ ಕೊನೆಯ ತುದಿಯಿಂದ ೨೦೦ ಮೀ ದೂರದಲ್ಲಿ ಸಮುದ್ರದ ನಡುವಿನಿಂದ ಎರಡು ದೊಡ್ದ ಬಂಡೆಗಳು ಎದ್ದು ನಿಂತಿವೆ. ಈ ಬಂಡೆಯ ಮೇಲೆ ಕನ್ಯಾಕುಮಾರಿ ಶಿವನನ್ನು ಕುರಿತು ತಪಸ್ಸು ಮಾಡಿದಳೆಂದು ಪುರಾಣಗಳ ಅಭಿಮತ.
ಕನ್ಯಾಕುಮಾರಿಯಲ್ಲಿ ಮುಖ್ಯ ಭೂಭಾಗದಿಂದ ಸ್ವಲ್ಪ ದೂರವಿರುವ ಹೆಬ್ಬಂಡೆಯೊಂದರ ಮೇಲೆ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕ ಈಗ ತಲೆ ಎತ್ತಿ ನಿಂತಿದೆ. ಈ ಬಂಡೆಯ ಮೇಲೆ ಸ್ವಾಮಿಗಳು ಭಾರತದ ದುಸ್ಥಿತಿ , ಅದರ ಭವಿಷ್ಯವನ್ನು ಉಜ್ವಲಗೊಳಿಸಲು ಅನುಸರಿಸಬಹುದಾದ ಮಾರ್ಗಗಳನ್ನು ಕುರಿತಾಗಿ ೩ ದಿನಗಳ ಕಾಲ ಧ್ಯಾನ ಮಗ್ನರಾಗಿ ಚಿಂತಿಸಿದರೆಂದು ಜನಜನಿತವಾಗಿದೆ ಆದರೆ ಇದು ಯಾವುದೇ ಅಧಾರಗಳಿಲ್ಲದ ಕಟ್ಟು ಕಥೆ. ‘ದಿ ಲೈಫ್-೧೯೧೨-ಸಂಪುಟ ೨ ‘ ಕೃತಿಯ ಮೊದಲ ಆವೃತಿಯಲ್ಲಿ ‘ಮೆಡಿಟೇಷನ್ ಅಟ್ ಕನ್ಯಾಕುಮಾರಿ ಅಧ್ಯಾಯದಲ್ಲಿ ‘……….. When he arrived at Cape Camorin he had with him not even single paisa to pay for a seat in the ferry boat to the shrine. He plunged at once into the ocean and in spite of numerous sharks swam across to the temple , his mind eager as a child to see the mother. And reaching the shrine he fell prostrate in ecstacy before the image of the goddess …………… ‘ಅವರಿಗೆ (ಸ್ವಾಮಿಗಳಿಗೆ) ಟಿಬೆಟ್ ಒಳಗೆ ಚಾಚಿರುವ ಹಿಮಚ್ಛಾದಿತ ಶಿಖರಗಳ ತುದಿಯಿಂದ ಪ್ರಾರಂಭವಾದ ತಮ್ಮ ಮಹಾ ತೀರ್ಥಯಾತ್ರೆ ಕನ್ಯಾಕುಮಾರಿಯಲ್ಲಿ ಮುಕ್ತಾಯವಾಗುವಂತೆ ಭಾಸವಾಯಿತು. ಅವರು ಭರತವರ್ಷದ ಪವಿತ್ರತೆ , ಅಧ್ಯಾತ್ಮತೆಯನ್ನು ಮತ್ತೆ ಮತ್ತೆ ಆಳವಾಗಿ ನೆನೆದರು. ಬದರಿಕಾಶ್ರಮ ಮತ್ತು ಕನ್ಯಾಕುಮಾರಿ ಎರಡು ಅಧ್ಯಾತ್ಮಿಕ ಉತ್ತುಂಗಗಳಂತೆ ತೋರಿದವು. ಕಿಲುಬು ಕಾಸಿಲ್ಲದೆ ಅವರು ಕನ್ಯಾಕುಮಾರಿಯನ್ನು ತಲುಪಿದ್ದರು. ದೇವಿಯ ಗುಡಿಗೆ ಕರೆದೊಯ್ಯುವ ದೋಣಿಯ ಅಂಬಿಗನಿಗೆ ಕೊಡಲು ಚಿಕ್ಕಾಸು ಇರಲಿಲ್ಲ. ಕಾಸಿಲ್ಲದ್ದಿದ್ದರೇನಂತೇ ? ನೆರೆದಿದ್ದ ನೂರಾರು ಭಯಂಕರ ಮೀನುಗಳನ್ನು ಲೆಕ್ಕಿಸದೆ ಸ್ವಾಮಿಗಳು ಕಡಲಿಗೆ ಧುಮುಕಿ ತಾಯಿಯನ್ನು ಕಾಣಲು ಕಾತರಪಡುವ ಮಗು ಓಡುವಂತೆ ತಾಯಿಯ ದೇವಾಲಯದತ್ತ ಈಜಿದರು. ಗುಡಿಯೊಳಗಿನ ತಾಯಿಯ ವಿಗ್ರಹವನ್ನು ಕಾಣುತ್ತಲೇ ಪರವಶರಾಗಿ ಬಿದ್ದರು. ಎಚ್ಚೆತ್ತಾಗ ಅವರ ಮನಸ್ಸು ಆಲೋಚನೆಗಳ ಅಲೆಗಳಿಂದ ಭೋರ್ಗರೆಯುತ್ತಿದ್ದಿತು. ತಾಯ್ನಾಡಿನ ಭಾವನೆಗಳು ಒತ್ತರಿಸಿ ಉಕ್ಕಿದವು . ಕಡಲಿನ ಅಲೆಗಳನ್ನು ಭೋರ್ಗರೆಯುವಂತೆ ಮಾಡಿದ್ದ ಹೊರಗಿನ ಬಿರುಗಾಳಿಯನ್ನು ಮೀರುವಂತಹ ಭಾವನೆಗಳ ಬಿರುಗಾಳಿ ಅವರ ಮನಸ್ಸಿನಲ್ಲಿ ಎದ್ದಿದ್ದಿತು. ಭರತಖಂಡದ ದಕ್ಷಿಣ ತುದಿಯ ಆ ಮಹಾಬಂಡೆಯ ಮೇಲೆ ಕುಳಿತು ತಾಯ್ನಾಡಿನ ಹಿಂದಿದ್ದ, ಆಗಿರುವ, ಮುಂದಾಗಬೇಕಾದ ಪರಿಸ್ಥಿತಿಗಳ ಚಿಂತನೆಯ ಧ್ಯಾನದಲ್ಲಿ ಮುಳುಗಿಹೋದರು.’ ಎಂದು ಬರೆಯಿತು.
ಸ್ವಾಮಿಗಳನ್ನು ಆರಾಧಿಸುವ ಆವೇಶ ತುಂಬಿದ ‘ದಿ ಲೈಫ್-೧೯೧೪’ ಸಂಪಾದಕರು ವಾಸ್ತವ ಸಂಗತಿಗಳಿಗೆ ಬೆನ್ನು ತಿರುಗಿಸಿದ್ದರು. ಈ ಸಂಪಾದಕರಿಗೆ ಕನ್ಯಾಕುಮಾರಿ ದೇವಾಲಯವಿರುವ ಜಾಗ , ಸುತ್ತಲ ಪರಿಸರದ ಬಗ್ಗೆ ಏನೂ ಗೊತ್ತಿರಲಿಲ್ಲ. ಅವರು ಮುಖ್ಯ ಭೂಭಾಗದಿಂದ ೨೦೦ ಮೀ ದೂರದಲ್ಲಿರುವ ದ್ವೀಪದಂತಹ ಬಂಡೆಯ ಮೇಲೆ ಕನ್ಯಾಕುಮಾರಿ ದೇವಸ್ಥಾನ ಇದೆಯೆಂದು ಭ್ರಮಿಸಿದ್ದರು. ಇವರ ಈ ತಪ್ಪು ತಿಳಿವಳಿಕೆಗೆ ೧೯/೩/೧೮೯೪ ರಂದು ಷಿಕಾಗೊದಿಂದ ಸ್ವಾಮಿಯವರು ರಾಮಕೃಷ್ಣಾನಂದರಿಗೆ ಬಂಗಾಳಿಯಲ್ಲಿ ಬರೆದ ಪತ್ರವೇ ಮೂಲ ಆಧಾರ. ಸ್ವಾಮಿಗಳ ಪತ್ರಗಳ ಆಧಾರದ ಮಲೆ ಹಲವು ಸಂಗತಿಗಳನ್ನು ಊಹಿಸಿ , ‘ದಿ ಲೈಪ್-೧೯೧೪’ ರಚಿಸಿರುವ ಸಂಪಾದಕರು ಅಂತಹುದೇ ಮತ್ತೊಂದು ಊಹೆಯನ್ನು ಮಾಡಿದ್ದರು. ಆದರೆ ಈ ಊಹೆ ಬೇರೆಲ್ಲವುಗಳಿಗಿಂತ ಭಿನ್ನವಾಗಿದ್ದು ಸಂಪೂರ್ಣ ತಪ್ಪಾಗಿದ್ದಿತು. ೧೯/೩/೧೮೯೪ ರ ಪತ್ರದಲ್ಲಿ ಸ್ವಾಮಿಗಳು ತಾವು ಕನ್ಯಾಕುಮಾರಿಯ ದೇವಾಲಯದಲ್ಲಿ ಧ್ಯಾನ ಮಾಡಿದುದನ್ನು , ಮುಖ್ಯ ಭೂಭಾಗದ ಕೊನೆಯ ಬಂಡೆಯ ಮೇಲೆ ಕುಳಿತು ಆಲೋಚಿಸಿದುದನ್ನು ಬರೆದಿದ್ದಾರೆ. ಸ್ವಾಮಿಗಳು ಎಲ್ಲಿಯೂ ತಾವು ಕಡಲಿಗೆ ಜಿಗಿದು ಇನ್ನೂರು ಮೀಟರ್ ದೂರದಲ್ಲಿರುವ ಬಂಡೆಯತ್ತ ಈಜಿ ಅಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಆಲೋಚಿಸಿದ್ದಾಗಿ ಹೇಳಿಕೊಂಡಿಲ್ಲ. ಕನ್ಯಾಕುಮಾರಿಯ ಪರಿಸರದ ಪರಿಚಯ ಇರದವರು ನೀಡಿದ ಈ ವಿವರಣೆಯನ್ನು ಆಧರಿಸಿ ಧೀರ ಸಂನ್ಯಾಸಿ ಭವಸಾಗರವನ್ನು ಈಜುವಂತೆ ಸ್ವಾಮಿಗಳು ಕಡಲನ್ನು ಈಜಿ ಬಂಡೆಯತ್ತ ಸಾಗಿದರು ಎಂದು ಕುವೆಂಪುರವರು ತಮ್ಮ ಎಲ್ಲ ಕಲ್ಪನೆಗಳನ್ನು ತುಂಬಿ , ಕಾವ್ಯಾತ್ಮಕ ಭಾಷೆ ಬಳಸಿ ಸ್ವಾಮಿ ವಿವೇಕಾನಂದ ಕೃತಿಯ ‘ಯಾರಿವನು?’ ಹೆಸರಿನ ಮೊದಲ ಅಧ್ಯಾಯದಲ್ಲಿ ಬರೆದರು. ಪರಮಹಂಸ , ವಿವೇಕಾನಂದರ ಬಗ್ಗೆ ತರ್ಕಾತೀತ , ವಿಚಾರಾತೀತ , ವಿಶ್ಲೇಷಣಾತೀತವಾದ ಮಾನಸಿಕ ಮತ್ತು ಬೌದ್ಧಿಕ ಶರಣಾಗತಿಯ ಆರಾಧನಾ ಮನೋಭಾವ ಹೊಂದಿದ್ದ ಕುವೆಂಪುರವರ ಲೇಖನಿಗೆ ಇಂತಹ ಮಹೋತ್ತರ ಕಲ್ಪನೆ ಅಸಹಜವಾಗಿರಲಿಲ್ಲ-ಆದರೆ ಸ್ವಾಮಿಗಳು ಕಡಲಿನಲ್ಲಿ ಈಜಿದುದು ನಿಜವಾಗಿರಲಿಲ್ಲ. ನಿಜವಲ್ಲ ಎಂದು ಗೊತ್ತಾಗಿದ್ದರೂ ನಾನು ಪ್ರತಿಕೃತಿ ದೃಷ್ಟಿಯಿಂದ ಅದನ್ನು ಹೇಳಿಲ್ಲ ಪ್ರತಿಮಾ ದೃಷ್ಟಿಯಿಂದ ಹೇಳಿದ್ದೇನೆ ಎಂದು ಕುವೆಂಪುರವರು ಸಮರ್ಥಿಸಿಕೊಳ್ಳುತ್ತಿದ್ದರೇನೋ ?
‘ದಿ ಲೈಫ್-೧೯೧೪’ ಕೃತಿಯ ಮೊದಲನೇ ಆವೃತ್ತಿಯಲ್ಲಿ ಕನ್ಯಾಕುಮಾರಿ ದೇವಾಲಯ ಮುಖ್ಯ ಭೂಭಾಗದಿಂದ ಹೊರಗಿರುವ ದ್ವೀಪದಂತಹ ಬಂಡೆಯ ಮೇಲಿದೆ ಎನ್ನುವ ತಪ್ಪು ತಿಳಿವಳಿಕೆಯನ್ನು ಆ ಪರಿಸರ ಬಲ್ಲ ಓದುಗರು ಗುರುತಿಸಿದ್ದರು. ಕನ್ಯಾಕುಮಾರಿ ದೇವಾಲಯದ ಜಾಗವನ್ನು ಸರಿಯಾಗಿ ತಿಳಿಯದೇ ಸ್ವಾಮಿಗಳನ್ನು ಕಡಲಿಗೆ ಧುಮುಕಿಸಿದ ‘ದಿ ಲೈಫ್-೧೯೧೪’ ಕೃತಿಯ ಲೇಖಕರಲ್ಲಿ ಒಬ್ಬರು ಹಾಗೂ ಸಂಪಾದಕರೂ ಆಗಿದ್ದ ವಿರಜಾನಂದ ನಿಜ ತಿಳಿಯಲು ೧೯೧೯ ರಲ್ಲಿ ಕನ್ಯಾಕುಮಾರಿಗೆ ಭೇಟಿ ನೀಡಿದರು. ಈ ವೇಳೆಗಾಗಲೆ ಸ್ವಾಮಿಯವರು ಕಡಲಿನಲ್ಲಿ ಈಜಿ ಬಂಡೆ ತಲುಪಿದ ಕಥೆ ಅದೆಷ್ಟು ಜನಪ್ರಿಯವಾಗಿದ್ದಿತೆಂದರೆ ಸ್ವಾಮಿಗಳೇ ಬಂದು ನಾನು ಅಲ್ಲಿಗೆ ಈಜಿ ಹೋಗಿರಲಿಲ್ಲ ಎಂದರೆ ಜನ ನಂಬುವಂತಿರಲಿಲ್ಲ. ಕಥೆಗೆ ಪೂರಕವಾಗಿ ರಾಮಸುಬ್ಬ ಅಯ್ಯರ್ ಎನ್ನುವವರು ಸಮುದ್ರದಲ್ಲಿರುವ ಬಂಡೆಯ ಮೇಲೆ ಸ್ವಾಮಿಗಳು ಮೂರು ದಿನಗಳ ಕಾಲ ಕುಳಿತಿದ್ದನ್ನು ಖುದ್ದು ತಾವೇ ನೋಡಿದ್ದಾಗಿ ತಿಳಿಸಿದರು. ಇದಾದ ಒಂದೆರಡು ವರ್ಷಗಳ ನಂತರ ಸದಾಶಿವ ಪಿಳ್ಳೈ ಎನ್ನುವ ಇನ್ನೊಬ್ಬರು ನಾನು ಆ ಬಂಡೆಗೆ ಈಜಿ ಹೋಗಿದ್ದಾಗ ಅಲ್ಲಿ ಸ್ವಾಮಿಯವರು ಕುಳಿತಿದ್ದರು ; ನಾನು ಅವರಿಗೆ ಹಾಲು , ಹಣ್ಣುಗಳನ್ನು ಒಯ್ದು ಕೊಟ್ಟೆ ಎಂದು ತಿಳಿಸಿದರು. ಸ್ವಾಮಿಗಳು ಕನ್ಯಾಕುಮಾರಿಗೆ ಹೋಗಿದ್ದಾಗ ೧೪ ವರ್ಷದ ಬಾಲಕನಾಗಿದ್ದ, ತಿರುವನಂತಪುರದಲ್ಲೇ ಇದ್ದ ರಾಮಸುಂದರ ಅಯ್ಯರ್ ಮಗ ರಾಮಸ್ವಾಮಿ ಶಾಸ್ತ್ರಿ ೧೯೫೩ ರಲ್ಲಿ ಸ್ವಾಮಿಗಳು ಬಂಡೆಗೆ ಈಜಿ ತಲುಪಿದರು ಎಂದು ತಾವೇ ಕಂಡವರಂತೆ ಬರೆದರು. ನಂತರದ ದಿನಗಳಲ್ಲಿ ಸ್ವಾಮಿಯವರ ಜೀವನ ಚರಿತ್ರೆ ಬರೆದವರೆಲ್ಲರೂ ಅವರು ಕಡಲಿನಲ್ಲಿ ಈಜಿ ಹೋದ ಸಂಗತಿ ಕೈಬಿಟ್ಟರೆ ರೋಚಕತೆ ಇಲ್ಲದಂತಾಗುತ್ತದೆ ಎನ್ನುವುದನ್ನು ಮನಗಂಡು ಸ್ವಾಮಿಗಳು ಮೊದಲು ದೇವಿಯ ದರ್ಶನ ಪಡೆದು ನಂತರ ಕಡಲಿನಲ್ಲಿ ಈಜಿ ಬಂಡೆ ತಲುಪಿದರು ಎನ್ನತೊಡಗಿದರು. ಈ ಬದಲಾವಣೆ ‘ದಿ ಲೈಫ್-೧೯೩೩’ ಆವೃತ್ತಿಯಲ್ಲಿ ಮೊದಲ ಬಾರಿಗೆ ಬಂದಿತು. ಕುವೆಂಪುರವರು ಈ ಬದಲಾವಣೆಯನ್ನು ಬಳಸಿಕೊಂಡಿದ್ದಾರೆ. ಆದರೆ ಯಾರೊಬ್ಬರು ಸ್ವಾಮಿಗಳು ಅಲ್ಲಿಂದ ಹೇಗೆ ಹಿಂದಕ್ಕೆ ಬಂದರು ಎನ್ನುವುದನ್ನು ತಿಳಿಸುವುದಿಲ್ಲ. ದಿ ಲೈಫ್-೧೯೬೦ , ಆರನೇ ಆವೃತ್ತಿಯಲ್ಲಿ ಸ್ವಾಮಿಗಳ ಕನ್ಯಾಕುಮಾರಿ ಸಂದರ್ಶನವನ್ನು He was eager as a child to see the mother ; reaching the shrine fell prostate in the ecstacy before her image. Worship finished , he crossed to a rock which was separated from the main land ಎನ್ನುವ ಒಂದೆರಡು ವಾಕ್ಯಗಳಲ್ಲಿ ಮುಗಿಸಲಾಯಿತು. ಆದರೆ ೪೬ ವರ್ಷಗಳ ಹಿಂದೆ ಸ್ವಾಮಿಗಳನ್ನು ಕಡಲಿಗೆ ಧುಮುಕಿಸಿದ ಕಥೆ ಜನಮಾನಸದಲ್ಲಿ ಆಗಲೇ ಬೇರೂರಿದ್ದತು.
ಸ್ವಾಮಿಗಳು ಕನ್ಯಾಕುಮಾರಿ ತಲುಪಿದಾಗ ಅವರೊಂದಿಗೆ ಮನ್ಮಥನಾಥ ಭಟ್ಟಾಚಾರ್ಯ ಕುಟುಂಬ ಇದ್ದಿತು. ಸ್ವಾಮಿಯವರು ಅವರ ಮಗಳಿಗೆ ಕುಮಾರಿ ಪೂಜೆ ಮಾಡಿದ್ದರು. ಸ್ವಾಮಿಗಳು ಕಡಲಿನೊಳಗಿರುವ ಬಂಡೆಯತ್ತ ಹೋಗಲು ಬಯಸಿದ್ದರೆ ಮನ್ಮಥನಾಥ ಭಟ್ಟಾಚಾರ್ಯ ದೊಣಿಯನ್ನು ಗೊತ್ತುಪಡಿಸಿ , ಅಂಬಿಗರಿಗೆ ಹಣ ನೀಡಿ ಅವರನ್ನು ಅಲ್ಲಿಗೆ ಕಳಿಸುತ್ತಿದ್ದರು. ತಿರುವನಂತಪುರದಿಂದ ಮದ್ರಾಸಿಗೆ ಸ್ವಾಮಿಗಳ ಎಲ್ಲ ಖರ್ಚು,ವೆಚ್ಚಗಳನ್ನು ನೀಡಿದ್ದ ಆತನಿಗೆ ಅಂಬಿಗರಿಗೆ ಕಾಸು ಕೊಡಲಾಗುತ್ತಿರಲಿಲ್ಲ ಅಥವಾ ಕೊಡಲಿಲ್ಲ ಎನ್ನುವುದು ಊಹೆಯ ತುತ್ತತುದಿಯಾಗುತ್ತದೆ. ಸ್ವಾಮಿ ಕಡಲಿಗೆ ಧುಮುಕಿ ಈಜಬೇಕೆಂದರೆ ಮೇಲಂಗಿ ಮತ್ತು ಉಟ್ಟ ಪಂಚೆಯನ್ನು ಕಳಚಿ ಲಂಗೊಟಿಯನ್ನು ಮಾತ್ರ ಉಟ್ಟಿರಬೇಕು. ಅವರು ಯಾರ ಹತ್ತಿರ ತಮ್ಮ ಬಟ್ಟೆಗಳನ್ನು ಕೊಟ್ಟಿದ್ದರು ? ೨೪,೨೫/೧೨/೧೮೯೨ ಕಡಲಿನ ನೀರು ಕೊರೆಯುವ ಚಳಿಯಲ್ಲಿರುವ ದಿನಗಳು. ಆ ದಿನಗಳಲ್ಲಿ ಬಂಡೆಯ ರಾತ್ರಿಯ ತಾಪಮಾನ ೨೦ ಡಿಗ್ರಿಗಳಿಗಿಂತ ಕಡಿಮೆಯಿದ್ದು , ರಾತ್ರಿ ಹೊತ್ತಿನಲ್ಲಿ ಭರದಿಂದ ಬಿಸುವ ಬಿರುಗಾಳಿಗೆ ಎಂತಹವರೇ ಆಗಲಿ ತತ್ತರಿಸಿ ಹೋಗಬೇಕು. ಆದ್ದರಿಂದ ಸ್ವಾಮಿಗಳು ಕಡಲಿನಲ್ಲಿ ಈಜಿ ಬಂಡೆಯ ಮೇಲೆ ಕುಳಿತದ್ದು ನಂತರ ಕಾಲದಲ್ಲಿ ಸ್ವಾಮಿ ವಿವೇಕಾನಂದರ ಗುರುಭಾಯಿಗಳು ಮತ್ತು ಶಿಷ್ಯರು ಭಾರತಕ್ಕೆ ನೀಡಿದ ಒಂದು ರೋಚಕ ಕಥೆ.
ಸ್ವಾಮಿಗಳು ತಿರುವನಂತಪುರದಿಂದ ರಾಮೇಶ್ವರದತ್ತ ಕಾಲ್ನಡಿಗೆಯಲ್ಲಿ ಸಾಗಿದರು. ಮಧ್ಯದಲ್ಲಿ ಮದುರೈಗೆ ಭೇಟಿ ನೀಡಿದರು. ರಾಮನಾಡು ರಾಜ ಭಾಸ್ಕರ ಸೇತುಪತಿಯವರನ್ನು ಪರಿಚಯಿಸುವ ಪತ್ರವನ್ನು ಸ್ವಾಮಿಗಳು ಹೊಂದಿದ್ದು ಮದುರೈನಲ್ಲಿ ಅವರನ್ನು ಭೇಟಿಯಾದರು. ಸ್ವಾಮಿಗಳ ವಿದ್ವತ್ತಿಗೆ ಮನಸೋತು ಭಾಸ್ಕರ ಸೇತುಪತಿ ಅವರ ಶಿಷ್ಯನಾದರಲ್ಲದೆ ಹಿಂದೂಧರ್ಮದ ಔನ್ನತ್ಯವನ್ನು ಜಗತ್ತಿನ ಮುಂದೆ ಎತ್ತಿ ಹಿಡಿಯಲು ವಿಶ್ವ ಧರ್ಮ ಸಂಸತ್ತಿಗೆ ಹೋಗಬೇಕೆಂದು ಸೂಚಿಸಿದನು. ಅತ್ಯಂತ ಪವಿತ್ರ ತೀರ್ಥ ರಾಮೇಶ್ವರವನ್ನು ನೋಡುವ ತವಕದಲ್ಲಿದ್ದ ಸ್ವಾಮಿಗಳು ಭಾಸ್ಕರ ಸೇತುಪತಿಗೆ ವಿದಾಯ ಹೇಳಿ ರಾಮೇಶ್ವರಕ್ಕೆ ಹೋದರು. ಸ್ವಾಮಿಗಳು ರಾಮೇಶ್ವರದಲ್ಲಿ ದಂಡ , ಕಮಂಡಲಗಳನ್ನು ಹಿಡಿದು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಕಚೇರಿಯ ಕೆಲಸದ ಮೇಲೆ ಅಲ್ಲಿಗೆ ಬಂದಿದ್ದ ಮನ್ಮಥನಾಥ ಭಟ್ಟಾಚಾರ್ಯ ಗಮನಿಸಿದನು. ತಕ್ಷಣ ತಿರುವನಂತಪುರದಲ್ಲಿ ಭೇಟಿಯಾದ ಅದ್ಭುತ ಸಂನ್ಯಾಸಿ ಇಲ್ಲಿ ಏಕೆ ಅಲೆಯುತ್ತಿದ್ದಾರೆ ಎನ್ನುವುದನ್ನು ವಿಚಾರಿಸಿದನು. ಆಗ ಸ್ವಾಮಿಗಳು ತಾವು ಮದ್ರಾಸಿನತ್ತ ಹೋಗುತ್ತಿರುವುದಾಗಿ ತಿಳಿಸಿದರು. ಆಗ ಮನ್ಮಥನಾಥ ಭಟ್ಟಾಚಾರ್ಯ ಪಾಂಡಿಚೇರಿಯಲ್ಲಿ ನನ್ನ ಕಚೇರಿ ಕೆಲಸವಿದೆ , ನೀವು ನನ್ನೊಂದಿಗೆ ಏಕೆ ಮದ್ರಾಸಿಗೆ ಬರಬಾರದು. ನನ್ನ ಅತಿಥಿಯಾಗಿ ಏಕಿರಬಾರದು ಎಂದು ಕೇಳಿದನು. ಅದಕ್ಕೆ ಓಗೊಟ್ಟು ಸ್ವಾಮಿಗಳು ಆತನೊಂದಿಗೆ ಮದ್ರಾಸ್’ಗೆ ಹೊರಟರು ಎಂದು ‘ದಿ ಲೈಫ್-೧೯೧೪’ ತಿಳಿಸುತ್ತದೆ. ಆದರೆ ಸ್ವಾಮಿಗಳ ಪ್ರಯಾಣದ ವಿವರಗಳು ಇದಕ್ಕೆ ಸ್ವಲ್ಪವೂ ತಾಳೆಯಾಗುವುದಿಲ್ಲ. ಇದನ್ನು ಸ್ವಲ್ಪ ವಿವರವಾಗಿ ನೋಡಬಹುದು. (35)
ಕನ್ಯಾಕುಮಾರಿ-ಮದುರೈ (೨೫೦ ಕಿ.ಮೀ) , ಮದುರೈ-ರಾಮೇಶ್ವರಂ (೧೫೦ ಕಿ.ಮೀ) , ರಾಮೇಶ್ವರ-ಪಂಬಂ (೩೦ ಕಿ.ಮೀ) , ಪಂಬಂ-ಪಾಂಡಿಚೇರಿ (೩೦೦ ಕಿ.ಮೀ) ಹೀಗೆ ಒಟ್ಟು ೭೩೦ ಕಿ.ಮೀ ಪ್ರಯಾಣವನ್ನು ಕಾಲ್ನಡಿಗೆಯಲ್ಲಿ ಮಾಡಿದರು ಎಂದು ‘ದಿ ಲೈಫ್-೧೯೧೪’ ಸೂಚಿಸುತ್ತದೆ. ಕಾಲ್ನಡಿಗೆಯಲ್ಲಿ ದೀರ್ಘ ಪ್ರವಾಸ ಮಾಡುವವರು ದಿನಕ್ಕೆ ೨೫ ರಿಂದ ಗರಿಷ್ಟ ೩೦ ಕಿ.ಮೀ ಪ್ರಯಾಣ ಮಾಡುತ್ತಾರೆ. ಸ್ವಾಮಿಗಳು ದಿನಕ್ಕೆ ೩೦ ಕಿ.ಮೀ ನಡೆಯುತ್ತಿದ್ದರು ಎಂದು ಪರಿಗಣಿಸಿದರೂ ಅವರಿಗೆ ಈ ಪ್ರವಾಸಕ್ಕೆ ೨೪ ದಿನಗಳು ಬೇಕು. ಯಾವುದೇ ಪರಿವ್ರಾಜಕ ಸಂನ್ಯಾಸಿಗೆ ಕೇವಲ ದೂರವನ್ನು ಕ್ರಮಿಸುವುದೇ ಗುರಿಯಾಗಿರುವುದಿಲ್ಲ. ಆತ ಭೇಟಿ ಕೊಡುವ ಜಾಗಗಳಲ್ಲಿ ಕೆಲ ದಿನ ಉಳಿಯುತ್ತಾನೆ. ಇದರಿಂದ ಆ ತೀರ್ಥಕ್ಷೇತ್ರದಲ್ಲಿ ಇದ್ದು ಧಾರ್ಮಿಕ ಭಾವನೆಗಳನ್ನು ಸಂಚಯಿಸಿಕೊಳ್ಳುವುದಕ್ಕೂ ಮತ್ತು ಮುಂದಿನ ಕಾಲ್ನಡಿಗೆಯ ಪ್ರಯಾಣಕ್ಕೆ ಬೇಕಾದ ವಿಶ್ರಾಂತಿ ಪಡೆಯುವುದು ಸಾದ್ಯವಾಗುತ್ತದೆ. ಆದ್ದರಿಂದ್ದ ಮಧುರೈ ಮತ್ತು ರಾಮೇಶ್ವರದಲ್ಲಿ ಸ್ವಾಮಿಗಳು ಕೆಲ ದಿನ ತಂಗಿರಲೇ ಬೇಕು ಹಾಗೂ ಪಾಂಡಿಚೇರಿಯಿಂದ ಮದ್ರಾಸ್’ಗೆ ಹೋದ ನಂತರ ಅಲ್ಲಿ ಕೆಲ ದಿನ ವಿಶ್ರಾಂತಿ ಪಡೆದಿರಲೇಬೇಕು.
ಮದ್ರಾಸ್ ಮೇಲ್ ೨೮/೦೧/೧೮೯೩ ರ ಸಂಚಿಕೆಯಲ್ಲಿ ಸ್ವಾಮಿಗಳು ಮದ್ರಾಸಿನ ತಿರುವಳ್ಳುಕೇಣಿಯ ಲಿಟರೆರಿ ಸೊಸೈಟಿಯಲ್ಲಿ ನೂರಾರು ಜನರ ಸಮ್ಮುಖದಲ್ಲಿ ಮಾತನಾಡಿದರು ಎನ್ನುವ ಸುದ್ದಿ ಪ್ರಕಟಿಸಿತು. ಇದು ಮದ್ರಾಸ್ ಮೇಲ್’ನ ಸ್ವಂತ ಸುದ್ದಿಯಾಗಿರದೆ ಪ್ರತಿ ಶನಿವಾರ ಪ್ರಕಟಗೊಳ್ಳುತ್ತಿದ್ದ ೨೧/೧/೧೮೯೩ ರ ‘ಇಂಡಿಯನ್ ಸೋಷಿಯಲ್ ರಿಫಾರ್ಮರ್ ವಾರಪತ್ರಿಕೆಯ ಸುದ್ದಿ ಮರುಪ್ರಕಟಣೆಯಾಗಿದ್ದಿತು. (36) ಎಂದರೆ ೧೮೯೩ ಜನವರಿಯ ೧೫ ಮತ್ತು ೨೦ ದಿನಾಂಕಗಳ ನಡುವೆ ಯಾವುದಾದರೂ ಒಂದು ದಿನ ಸ್ವಾಮಿಗಳು ತಿರುವಳ್ಳುಕೇಣಿಯಲ್ಲಿ ಭಾಷಣ ಮಾಡಿರಬೇಕು. ೨೪/೧೨/೧೮೯೨ ರಲ್ಲಿ ಕನ್ಯಾಕುಮಾರಿಯಲ್ಲಿದ್ದ ಸ್ವಾಮಿಗಳು ಎಲ್ಲಿಯೂ ಒಂದು ದಿನವೂ ಉಳಿಯದೆ ಮದುರೈ, ರಾಮೇಶ್ವರಂ, ಪಾಂಡಿಚೇರಿಯತ್ತ ೭೩೦ ಕಿ.ಮೀ ಸುದೀರ್ಘ ಪ್ರಯಾಣ ಮಾಡಿದರೆಂದು ವಾದಕ್ಕೆ ಒಪ್ಪಿದರೂ ಜನವರಿ ೧೫ ಮತ್ತು ೨೦ ದಿನಾಂಕದ ನಡುವೆ ಅವರು ಮದ್ರಾಸ್’ನಲ್ಲಿ ಭಾಷಣ ಮಾಡಿದ ಕಾಲಕ್ಕೆ ಹೊಂದಾಣಿಕೆಯಾಗದು. ಆದ್ದರಿಂದ ಸ್ವಾಮಿಗಳು ಈ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಹೋಗದೆ ಮನ್ಮಥನಾಥ ಭಟ್ಟಾಚಾರ್ಯರ ಕುಟುಂಬದೊಂದಿಗೆ ಮದುರೈವರೆಗೆ ಕುದುರೆ ಗಾಡಿಯಲ್ಲಿ , ಮದುರೈಯಿಂದ ಮದ್ರಾಸಿಗೆ ರೈಲಿನಲ್ಲಿ ಪ್ರಯಾಣಿಸಿದರೆನ್ನುವ ತೀರ್ಮಾನಕ್ಕೆ ಬರಬಹುದು. ಆದ್ದರಿಂದ ಡಿಸೆಂಬರ್ ೨೫ ರಂದು ಕನ್ಯಾಕುಮಾರಿಯಿಂದ ಕುದುರೆ ಗಾಡಿಯಲ್ಲಿ ಪ್ರಯಾಣಿಸಿ ಮದುರೈ ಮೂಲಕ ಡಿಸೆಂಬರ್ ೨೯ ರಂದು ರಾಮನಾಡು ತಲುಪಿ ಅಲ್ಲಿಂದ ೧, ೨ ಜನವರಿ-೧೮೯೪ ರಲ್ಲಿ ರಾಮೇಶ್ವರಕ್ಕೆ ಭೇಟಿ ನೀಡಿ ಅಲ್ಲಿಂದ ಮನ್ಮಥನಾಥ ಭಟ್ಟಾಚಾರ್ಯನ ಜೊತೆ ಕುದುರೆಗಾಡಿಯಲ್ಲಿ ೫/೧/೧೮೯೩ ರಂದು ಮದುರೈಗೆ ಹಿಂದಕ್ಕೆ ಬಂದು , ಮದುರೈಯಿಂದ ರೈಲಿನಲ್ಲಿ ಪ್ರಯಾಣಿಸಿ ೭/೧/೧೮೯೩ ರಂದು ಪಾಂಡಿಚೇರಿ ತಲುಪಿ ಅಲ್ಲಿ ೩-೪ ದಿನಗಳ ಕಾಲ ಇದ್ದು ೧೩/೧/೧೮೯೩ ರಂದು ಮದ್ರಾಸ್ ತಲುಪಿದರು ಎನ್ನುವುದೇ ಸರಿಯಾದ ವಿವರಣೆ.
ಕನ್ಯಾಕುಮಾರಿಯಿಂದ ಮದ್ರಾಸ್ ವರೆಗಿನ ಸ್ವಾಮಿಗಳ ಪ್ರಯಾಣ ಹಾಗೂ ಪ್ರವಾಸ ಮನ್ಥಥನಾಥ ಭಟ್ಟಾಚಾರ್ಯರ ದಿನಚರಿಗೆ ತಕ್ಕಂತೆ ಹೊಂದಿಸಲ್ಪಟ್ಟಿದ್ದಿತು. ೧೯೦೬ರ ಬ್ರಹ್ಮವಾದಿನ್ ಪತ್ರಿಕೆಯಲ್ಲಿ ಜಿ.ಜಿ. ನರಸಿಂಹಾಚಾರ್ಯರು ….Mr. Bhattachyarya picked him up on his way to Rameshvaram as a beggarly sanyasi… ‘ ಎಂದು ಬರೆದಿದ್ದಾರೆ. ಮನ್ಮಥನಾಥ ಭಟ್ಟಾಚಾರ್ಯನೊಂದಿಗೆ ಸ್ವಾಮಿಗಳು ಹೋದರೆ ಅವರ ಪರಿಶ್ರಮಕ್ಕೆ ಕುಂದು ಉಂಟಾಗುತ್ತದೆಯೆಂದು ಭಾವಿಸಿ ‘ದಿ ಲೈಫ್-೧೯೧೪’ ಸಂಪಾದಕರು to ಎನ್ನುವುದನ್ನು from ಎಂದು ಬದಲಾಯಿಸಿದ್ದಾರೆ. ಇದರಿಂದ ಸ್ವಾಮಿಗಳನ್ನು ಕಾಲ್ನಡಿಗೆಯಲ್ಲಿ ೭೩೦ ಕಿ,ಮೀ ನಡೆಸಿದ್ದಾರೆ. ರಾಮನಾಡಿನಲ್ಲಿ ಮನ್ಮಥನಾಥ ಭಟ್ಟಾಚಾರ್ಯ ತನ್ನ ಅಧಿಕೃತ ಕೆಲಸದಲ್ಲಿ ನಿರತನಾಗಿದ್ದಾಗ ಸ್ವಾಮಿಗಳು ರಾಮನಾಡಿನ ರಾಜ ಭಾಸ್ಕರ ಸೇತುಪತಿಯನ್ನು ಜನವರಿ ಮೊದಲ ವಾರದಲ್ಲಿ ಭೇಟಿ ಮಾಡಿದರು. ಭಾಸ್ಕರ ಸೇತುಪತಿ ಸುಶಿಕ್ಷಿತ ಹಾಗೂ ಮುಕ್ತ ಮನಸ್ಕನಾಗಿದ್ದು ಸ್ವಾಮಿಯವರ ಪ್ರಗತಿಪರ ಧೋರಣೆಗಳನ್ನು , ಹಿಂದೂಧರ್ಮದ ಸುಧಾರಣೆಯ ಅಗತ್ಯವನ್ನು ಒಪ್ಪಿದ್ದನು. ಸ್ವಾಮಿಗಳ ವಿದ್ವತ್ತಿಗೆ ಮನಸೋತಿದ್ದ ಭಾಸ್ಕರ ಸೇತುಪತಿ ಸ್ವಾಮಿಯವರು ಷಿಕಾಗೊದ ಸರ್ವ ಧರ್ಮ ಸಮ್ಮೇಳನಕ್ಕೆ ಹೋಗಲು ತನ್ನ ಕಡೆಯಿಂದ ಸಾದ್ಯವಾದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದನು ಎಂದು ಊಹಿಸಬಹುದು.
ಮದ್ರಾಸ್ ತಲುಪುವುದಕ್ಕೆ ಸ್ವಲ್ಪ ಮುಂಚೆ ಮನ್ಮಥನಾಥ ಭಟ್ಟಾಚಾರ್ಯ ಗುಪ್ತವಾಗಿ ಸ್ವಾಮಿಯವರ ಪೂರ್ವಾಶ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದನು. ಇದನ್ನು ಧೃಡೀಕರಿಸಿಕೊಳ್ಳಲು ಕಲ್ಕತ್ತದ ಶ್ಯಾಮ ಬಜಾರ್’ನಲ್ಲಿದ್ದ ತನ್ನ ಸೋದರ ಮಣೀಂದ್ರ ಭಟ್ಟಾಚಾರ್ಯನಿಗೆ ಪತ್ರ ಬರೆದಿದ್ದನು. ಮಣೀಂದ್ರ ಭಟ್ಟಾಚಾರ್ಯ ಸ್ವಾಮಿಗಳ ಅಜ್ಜಿ ಮನೆಯಿದ್ದ ಕಲ್ಕತ್ತದ ರಾಮತನು ಓಣಿಗೆ ಭೇಟಿ ನೀಡಿ ಅವರ ತಮ್ಮ ಮಹೇಂದ್ರನಾಥ ದತ್ತನನ್ನು ಭೇಟಿಯಾಗಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಗುಟ್ಟಾಗಿ ಇಡಬೇಕೆಂದು ಮನವಿ ಮಾಡಿಕೊಂಡಿದ್ದನು ಎಂದು ಮಹೇಂದ್ರನಾಥ ದತ್ತ ತಿಳಿಸಿದ್ದಾರೆ. ಆದರೆ ಸುಂದರರಾಮ ಅಯ್ಯರ್ ಮನ್ಮಥನಾಥ ದತ್ತ ಸ್ವಾಮಿಯವರ ಗೆಳೆಯ ಅಥವಾ ಸಹಪಾಠಿ. ತಿರುವನಂತಪುರದಲ್ಲಿ ಸ್ವಾಮಿಯವರು ಸುಂದರರಾಮ ಅಯ್ಯರ್’ಗೆ ಮನ್ಮಥನಾಥನ ವಿಳಾಸ ಹುಡುಕಲು ಹೇಳಿದ್ದರು. ಅವರಿಬ್ಬರ ಮೊದಲ ಭೇಟಿ ಪರಸ್ಪರ ಪರಿಚಿತರ ಭೇಟಿಯಂತೆ ಇದ್ದಿತು ಎಂದಿದ್ದಾರೆ. ಇವರಿಬ್ಬರಲ್ಲಿ ಸುಂದರರಾಮ ಆಯ್ಯರ್ ಹೇಳಿಕೆ ಸತ್ಯಕ್ಕೆ ಹೆಚ್ಚು ಸಮೀಪವಿದೆ. ಮನ್ಮಥನಾಥ ಭಟ್ಟಾಚಾರ್ಯನ ಮೂಲಕ ಮಹೇಂದ್ರನಾಥ ದತ್ತ , ಶಾರದಾನಂದ ಮತ್ತು ವೈಕುಂಠನಾಥರಿಗೆ ಸ್ವಾಮಿಗಳು ಎಲ್ಲಿದ್ದಾರೆಂದು ತಿಳಿದು ಕಡಿದು ಹೋಗಿದ್ದ ಪತ್ರ ವ್ಯವಹಾರ ಮತ್ತೊಮ್ಮೆ ಪ್ರಾರಂಭವಾಯಿತು. ಅಲೆದಾಟದ ವೇಳೆಯಲ್ಲಿ ಸ್ವಾಮಿಗಳು ಮಹೇಂದ್ರನಾಥ ದತ್ತನಿಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದರಾದರೂ ಅವು ಈಗ ಲಭ್ಯವಿಲ್ಲ. ಅವು ಹಾಳಾಗಿರಬಹುದು ಅಥವಾ ನಾಶಪಡಿಸಿರಬಹುದು. (37) ಸ್ವಾಮಿಯವರ ರಾಜಪುತಾನ ಹಾಗೂ ಮದ್ರಾಸ್’ನಿಂದ ಬರೆದ ಪತ್ರಗಳ ಧಾಟಿ ಮತ್ತು ಧೋರಣೆಗಳ ನಡುವೆ ಗಮನಾರ್ಹ ಬದಲಾವಣೆ ಕಾಣುತ್ತದೆ. ರಾಜಪುತಾನದಿಂದ ಬರೆದ ಪತ್ರಗಳಲ್ಲಿ ಹತಾಶೆ, ಸಿಟ್ಟು, ಜುಗುಪ್ಸೆ ಎದ್ದು ಕಂಡರೆ ಮದ್ರಾಸ್’ನಿಂದ ಬರೆದ ಪತ್ರಗಳಲ್ಲಿ ಗತ್ತು ತುಂಬಿದ್ದು ಪ್ರತಿಯೊಬ್ಬರಿಗೂ ಆದೇಶಗಳನ್ನು ನೀಡುವ ಮನಸ್ಥಿತಿ ಎದ್ದು ಕಾಣುತ್ತದೆ. ಇದಕ್ಕೆ ಮನ್ಮಥನಾಥ ಭಟ್ಟಾಚಾರ್ಯ ನೀಡಿದ್ದ ಬೆಚ್ಚನೆಯ ಆತಿಥ್ಯ ಮತ್ತು ಅದರಿಂದ ಕುದುರಿದ್ದ ಆತ್ಮವಿಶ್ವಾಸ ಎನ್ನಬಹುದು.
ಮದ್ರಾಸ್’ನಲ್ಲಿರುವಾಗ ಸ್ವಾಮಿಯವರು ಬೀಚ್ ರಸ್ತೆ, ಸೇಂಟ್ ಥೋಮ ಪ್ರದೇಶದಲ್ಲಿದ್ದ ಮನ್ಮಥನಾಥ ಭಟ್ಟಾಚಾರ್ಯನ ‘ರಹಮತ್ ಬಾಗ್’ ಬಂಗಲೆಯಲ್ಲಿ ಉಳಿದಿದ್ದು ಸ್ವಾಮಿ ಸಚ್ಚಿದಾನಂದ ಎಂದು ಗುರುತಿಸಿಕೊಂಡಿದ್ದರು. ಈ ಮನೆ ಈಗ ದುರವಸ್ಥೆಯಲ್ಲಿದ್ದರೂ ಹೊಸ ವಿಳಾಸ ೨೨, ಸಾಂಥೋಮ್ ಹೈ ರೋಡ್’ನಲ್ಲಿ ಸಂಥೋಮ್ ಕ್ಯಾಥೆಡ್ರಲ್’ನಿಂದ ಮೂರು ನಾಲ್ಕು ಮನೆ ಆಚೆಗಿದೆ. ಕಡಲ ತೀರಕ್ಕೆ ಮುಖ ಮಾಡಿರುವ ದೊಡ್ದ ಸುಸಜ್ಜಿತ ಕೋಣೆಗಳನ್ನು ಸ್ವಾಮಿಗಳಿಗೆ ನೀಡಲಾಗಿದ್ದಿತು. ಮೈಸೂರು ಸ್ನೇಹಿತನ ಪತ್ರದಿಂದ ಸ್ವಾಮಿಗಳ ಬಗ್ಗೆ ಮುಂಚೆಯೇ ತಿಳಿದಿದ್ದ ಜಿ.ಜಿ.ನರಸಿಂಹಾಚಾರ್ಯರು ತಮ್ಮ ಸ್ನೇಹಿತರೊಂದಿಗೆ ಅವರನ್ನು ಕಾಣಲು ಹೋಗಿದ್ದರು. ಜಿ.ಜಿ ನರಸಿಂಹಾಚಾರ್ಯ ಸ್ವಾಮಿಗಳನ್ನು ‘ಟ್ರಿಪ್ಲಿಕೇನ್ ಲಿಟರೆರಿ ಸೊಸೈಟಿ’ಯ ಸದಸ್ಯರಿಗೆ ಪರಿಚಯಿಸಿದರು. ಧರ್ಮ, ಸಮಾಜ ಮುಂತಾದ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ ಸ್ವಾಮಿಗಳು ಟ್ರಿಪ್ಲಿಕೇನ್ ಲಿಟರೆರಿ ಸೊಸೈಟಿಯಲ್ಲಿ ನೆರೆದಿದ್ದವರಿಗೆ ಒಂದು ಸಾರ್ವಜನಿಕ ಭಾಷಣ ಮಾಡಿದರು. ಇದನ್ನು ಮೊದಲಿಗೆ ಇಂಡಿಯನ್ ಸೋಷಿಯಲ್ ರಿಫಾರ್ಮರ್ ಪತ್ರಿಕೆಯ ೨೧/೧/೧೮೯೩ ರ ಸಂಚಿಕೆಯಲ್ಲಿ ವರದಿ ಮಾಡಿದರೆ ಅದನ್ನು ‘ಮದ್ರಾಸ್ ಮೇಲ್’ ಅದನ್ನು ೨೮/೧/೧೮೯೩ ರಂದು ಎ ಬೆಂಗಾಲಿ ಸಾಧು ಆನ್ ಹಿಂದೂ ರಿಲಿಜನ್ ಅಂಡ್ ಸೊಷಿಯಾಲಜಿ’ ತಲೆಬರಹದಡಿಯಲ್ಲಿ ಮರುಪ್ರಕಟಿಸಿತು.
ಈ ವರದಿಯಲ್ಲಿ ‘ ಕಲ್ಕತ್ತ ವಿಶ್ವವಿದ್ಯಾಲಯದಿಂದ ಕಲೆಯಲ್ಲಿ ಪದವಿ ಪಡೆದ ಸರಿಸುಮಾರು ಮೂವತ್ತೆರಡು ವಯಸ್ಸಿನ ಬಂಗಾಳಿ ಸಾಧು ಟ್ರಿಪ್ಲಿಕೇನ್ ಲಿಟರೆರಿ ಸೊಸೈಟಿ’ ಸಭೆಯಲ್ಲಿ ನೆರೆದಿದ್ದ ನೂರಕ್ಕೂ ಅಧಿಕ ವಿದ್ಯಾವಂತರ ಮುಂದೆ ಭಾಷಣ ಮಾಡಿದನು. ಆ ಸಭೆಯಲ್ಲಿ ದಿವಾನ್ ಬಹದ್ದೂರ ರಘುನಾಥ ರಾವ್ ಹಾಜರಿದ್ದರು. ಈ ಭಾಷಣದ ಮುಖ್ಯಾಂಶವೇನೆಂದರೆ ‘ಹಿಂದೂ ಧರ್ಮ ಸನಾತನವಾದುದು. ಅದರಲ್ಲಿ ಶಾಶ್ವತ ಮತ್ತು ಆಚರಣೆಯ ಅಂಶಗಳಿವೆ. ಶಾಶ್ವತ ಅಂಶಗಳು ಎಂದಿಗೂ ಬದಲಾಗುವುದಿಲ್ಲ. ಕಾಲಕ್ಕೆ ತಕ್ಕಂತೆ ಆಚರಣೆಗಳು ಬದಲಾಗುತ್ತವೆ. ಬಹು ಹಿಂದಿನಿಂದಲೂ ಕಾಲಕ್ಕೆ ತಕ್ಕಂತೆ ಆಚರಣೆಗಳನ್ನು ಋಷಿಗಳು ಬದಲಿಸುತ್ತಿದ್ದರು. ಒಂದು ಕಾಲದಲ್ಲಿ ಬ್ರಾಹ್ಮಣರು ಹಸುವಿನ ಮಾಂಸ ತಿನ್ನುತ್ತಿದ್ದರು, ಶೂದ್ರರನ್ನು ಮದುವೆಯಾಗುತ್ತಿದ್ದರು. ಅತಿಥಿಯನ್ನು ಸತ್ಕರಿಸಲು ಹಸುವಿನ ಕರುವನ್ನು ವಧಿಸಲಾಗುತ್ತಿದ್ದಿತು. ಶೂದ್ರರು ಬ್ರಾಹ್ಮಣರಿಗೆ ಅಡಿಗೆ ಮಾಡುತ್ತಿದ್ದರು. ಬ್ರಾಹ್ಮಣ ಗಂಡಸು ಮಾಡಿದ ಅಡಿಗೆಯನ್ನು ಅಶುದ್ಧವೆಂದು ಪರಿಗಣಿಸಲಾಗುತ್ತಿದ್ದಿತು. ಆಚರಣೆಗಳು , ಸಾಮಾಜಿಕ ಬದಲಾವಣೆಗಳು ನಡೆಯುತ್ತಲೇ ಇವೆ. ಮನು ಈಗೇನಾದರೂ ಬಂದರೆ ಆತನ ಕಾಲದಲ್ಲಿ ಇದ್ದ ಜಾತಿ ಮೂಲದ ಯಾವ ಕಟ್ಟಳೆಗಳು ಇಲ್ಲದಿದ್ದರೂ ಆತ ಹಿಂದೂ ಧರ್ಮವನ್ನು ಗುರುತಿಸಿತ್ತಾನೆ. ಜಾತಿ ಒಂದು ಸಾಮಾಜಿಕ ವಿಭಜನೆಯೇ ಹೊರತು ಧಾರ್ಮಿಕವಾದುದಲ್ಲ. ಅದು ನೈಸರ್ಗಿಕ ವಿಕಸನದಿಂದ ಹೊರಹೊಮ್ಮಿದೆ. ಶೂದ್ರನೊಂದಿಗೆ ಊಟ ಮಾಡುವುದರಿಂದ ಜಾತಿ ಹೋಗುತ್ತದೆ ಎನ್ನುವುದು ತಪ್ಪು. ಒಬ್ಬ ಬ್ರಾಹ್ಮಣನ ಅಧ್ಯಾತ್ಮಿಕ ಸಂಪರ್ಕದಿಂದ ಸಾವಿರಾರು ಶೂದ್ರರು ಮೇಲ್ಮಟ್ಟಕ್ಕೆ ಏರಬಲ್ಲರು. ಶೂದ್ರನ ನೋಟದಿಂದಲೇ ಅಧ್ಯಾತ್ಮಿಕತೆ ಹೋಗುತ್ತದೆ ಎಂದಾದರೆ ಅಂತಹುದು ಇದ್ದಾದರೂ ಏನು ಪ್ರಯೋಜನ ಎಂದು ಕೇಳಿದರು ಎಂದು ಬರೆದು ಮುಂದಿನ ಭಾಗದಲ್ಲಿ ಶ್ರಾದ್ಧ ಮುಂತಾದ ಆಚರಣೆ , ಹಿಂದೂಗಳ ಸ್ವಾತಂತ್ರ, ಸ್ತ್ರೀ ವಿದ್ಯಾಭ್ಯಾಸ ಮುಂತಾದ ಸಂಗತಿಗಳ ಬಗ್ಗೆ ಬರೆಯಿತು.
ಸ್ವಾಮಿಗಳು ಮದ್ರಾಸ್’ನಲ್ಲಿದ್ದ ದಿನಗಳ ನೆನಪುಗಳನ್ನು ನಂತರ ಹಲವರು ಹಂಚಿಕೊಂಡಿದ್ದಾರೆ. ಇವೆಲ್ಲವೂ ಸ್ವಾಮಿಗಳು ಷಿಕಾಗೊ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿ ಭಾರತದ ಪತ್ರಿಕೆಗಳಲ್ಲಿ ಅವರ ಹೆಸರು ಪರಿಚಿತವಾದ ನಂತರ ಬರೆದವಾದ್ದರಿಂದ ಎಚ್ಚರಿಕೆಯಿಂದ ಅವುಗಳನ್ನು ಪರಿಗಣಿಸಬೇಕು.
ಸ್ವಾಮಿಗಳು ಷಿಕಾಗೊ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿದ ನಂತರ ಅವರ ಕೋರಿಕೆಯ ಮೇರೆಗೆ ಸಭೆಗಳನ್ನು ನಡೆಸಿ ಗೊತ್ತುವಳಿಗಳನ್ನು ಅಂಗೀಕರಿಸಿ ಅಮೆರಿಕದ ಪತ್ರಿಕೆಗಳಿಗೆ ಕಳಿಸಲು ಅವರ ಅಭಿಮಾನಿಗಳು ಮುಂದಾದರು. ಅಂತಹ ಒಂದು ಸಭೆ ೨೭/೮/೧೮೯೪ ರಂದು ಬೆಂಗಳೂರಿನಲ್ಲಿ ನಡೆಯಿತು. ಆ ಸಭೆಯಲ್ಲಿ ಜಿ.ಜಿ.ನರಸಿಂಹಾಚಾರ್ಯರು ‘ ‘ತರುಣ ಜನಾಂಗ ಪಾಶ್ಚಾತ್ಯ ಚಿಂತನೆಗೆ ಸಿಕ್ಕು ತಮ್ಮ ಜೀವನದ ಉದ್ದೇಶ ಮರೆತಂದಿದ್ದ ಸಮಯದಲ್ಲಿ ಸ್ವಾಮಿಯವರ ಭೇಟಿಯಾಯಿತು. ಅದರ ನಂತರ ಜೀವನದ ಉದ್ದೇಶ ಮತ್ತು ಗುರಿಗಳು ಏನೆಂದು ಮನದಟ್ಟಾದವು. ಅವರೊಂದಿಗಿನ ಸಂಪರ್ಕ ದೀರ್ಘವಲ್ಲದಿದ್ದರೂ ಭಾರಿ ಪರಿಣಾಮಕಾರಿಯಾಗಿದ್ದಿತು. ಸ್ವಾಮಿಯವರಲ್ಲಿ ಧಾರ್ಮಿಕ ಸಂಪ್ರದಾಯ , ಸಾಮಾಜಿಕ ಚಿಂತನೆ , ಪಾಶ್ಚಾತ್ಯ ಆಧುನಿಕತೆ , ಪೌರಾತ್ಯ ಅಧ್ಯಾತ್ಮ ಮೇಳೈಸಿದ್ದವು’ ಎಂದು ನೆನೆದಿರುವುದನ್ನು ‘ಬ್ಯಾಂಗಳೋರ್ ಸ್ಪೆಕ್ಟೇಟರ್’೨೭/೮/೧೮೯೪ ರಂದು ವರದಿ ಮಾಡಿತು. (38)
ಜಿ.ಜಿನರಸಿಂಹಾಚಾರ್ಯರು ಇನ್ನೊಂದು ನೆನಪಿನ ಸುರುಳಿಯನ್ನು ನವೆಂಬರ್-ಡಿಸೆಂಬರ್ ೧೯೦೬ ರ ‘ಬ್ರಹ್ಮವಾದಿನ್’ ಪತ್ರಿಕೆಯಲ್ಲಿ ಬಿಚ್ಚಿಟ್ಟರು. ಅದರಲ್ಲಿ ಅವರು ‘…… ಸ್ವಾಮಿಗಳನ್ನು ಭೇಟಿಯಾಗಲು ನಾನು ಮತ್ತು ಸ್ನೇಹಿತರು ಹೋಗಿದ್ದೆವು. ಹಾಗೆ ಹೋದವರಿಗೆ ಆಧುನಿಕ ಪಾಶ್ಚಾತ್ಯ ಸಮಾಜದ ತಿಳಿವಳಿಕೆಯಿದ್ದಿತು. ನಾವೆಲ್ಲ ಸ್ನೇಹಿತರಾಗಿದ್ದೆವು ಎನ್ನುವುದರಿಂದಲೇ ನಮಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಸಾಕಷ್ಟು ಜ್ಞಾನವಿದ್ದಿತು ಎನ್ನುವುದಕ್ಕೆ ಪುರಾವೆಯಾಗಿದ್ದಿತು. ಹೊಸಬಗೆಯ ಆಧುನಿಕ ಸಂನ್ಯಾಸಿಯನ್ನು ನೋಡಬೇಕೆನ್ನುವ ಕುತೂಹಲವೇ ನನಗೆ ತುಂಬಿದ್ದಿತು. ನಮ್ಮನ್ನು ಮನ್ಮಥನಾಥ ಭಟ್ಟಾಚಾರ್ಯರು ಸ್ವಾಗತಿಸಿ ಬೆಳಗುವ ಮುಗುಳ್ನಗೆಯ , ಮಿಂಚುತ್ತ ಸುತ್ತುವ ಅದ್ಭುತ ದೊಡ್ದ ಕಣ್ಣುಗಳ ಸ್ವಾಮಿಗಳೊಂದಿಗೆ ಮಾತನಾಡಲು ಬಿಟ್ಟು ಹೋದರು. ನನ್ನ ಸ್ನೇಹಿತರು ಪ್ರಶ್ನೆಗಳ ಮೂಲಕ ಸ್ವಾಮಿಗಳನ್ನು ಪರಿಚಯಿಸಿಕೊಂಡರು. ಆರಂಭದಲ್ಲಿ ಲೋಕಾಭಿರಾಮದಿಂದ ಮಾತು ಪ್ರಾರಂಭಿಸಿ ನಂತರ ಸಾಹಿತ್ಯ, ವಿಜ್ಞಾನ , ಧರ್ಮ, ಇತಿಹಾಸ , ಕಲೆ ಮುಂತಾದ ಎಲ್ಲ ಬಗೆಯ ಪ್ರಶ್ನೆಗಳನ್ನು ಅವರತ್ತ ತೂರತೊಡಗಿದರು. ಅವರೆಲ್ಲರಲ್ಲಿ ನಾನೇ ಎಲ್ಲರಿಗಿಂತ ಜಾಣ. ಅವರ ಸಂಭಾಷಣೆಯ ಫಲಗಳನ್ನು ಸವಿದಾತ. ಸ್ವಾಮಿಗಳ ಮಾಧುರ್ಯಮಯ ಮಿಂಚಿನಂತಹ ಉತ್ತರಗಳು ಅವರ ಪ್ರಶ್ನೆಗಳನ್ನು ಇಲ್ಲವಾಗಿಸುತ್ತಿದ್ದವು. ಪ್ರಾಚೀನ , ಆಧುನಿಕ , ಸಾಹಿತ್ಯಕ , ವೈಜ್ಞಾನಿಕ , ಅಧ್ಯಾತ್ಮಿಕ , ತಾರ್ಕಿಕ , ತತ್ತ್ವಶಾಸ್ತ್ರಿಯ ಹೀಗೆ ಎಲ್ಲ ಬಗೆಯ ಆಕರಗಳಿಂದ ನಿರರ್ಗಳವಾಗಿ ಉದ್ಧರಣೆಗಳು , ಉಲ್ಲೇಖಗಳು ಬರುತ್ತಿದ್ದವು. ಸಾಯಂಕಾಲ ಮನೆಗೆ ಮರಳಿದ ನಂತರ ಎಲ್ಲ ಸ್ನೇಹಿತರು ಈ ಸಂನ್ಯಾಸಿಯ ಜ್ಞಾನದ ಬಗ್ಗೆ ಹಲವಾರು ಊಹೆಗಳಲ್ಲಿ ತೊಡಗಿದ್ದರು. ಸ್ವಾಮಿಗಳು ಅಮೆರಿಕಾಕ್ಕೆ ತೆರಳುವವರೆಗೆ ಕಿರಿಯರೆನ್ನದೆ ಮದ್ರಾಸಿನ ಸುಶಿಕ್ಷಿತರು ಅವರನ್ನು ಕಾಣಲು ಹಿರಿಯ , ಎಡೆಬಿಡದೆ ಬರುತ್ತಿದ್ದರು…… ಎಂದು ನೆನೆದಿದ್ದಾರೆ. (39) .
ಸ್ವಾಮಿಯವರತ್ತ ಭಾರಿ ಸಂಖ್ಯೆಯ ವಿದ್ಯಾವಂತರು ಸೆಳೆಯಲ್ಪಟ್ಟಿದ್ದರು ಎನ್ನುವುದನ್ನು ಶ್ರೀನಿವಾಸ ಪೈ ಅಲ್ಲಗಳೆದಿದ್ದಾರೆ. ಸ್ವಾಮಿಯವರು ೧೮೯೩ ರಲ್ಲಿ ಮದ್ರಾಸಿನಲ್ಲಿದ್ದಾಗ ಹಿಂದೂ ಸಮಾಜದ ಗಣ್ಯರು ಅವರಲ್ಲಿಗೆ ಬರುತ್ತಿರಲಿಲ್ಲ. ಆಗ ವಿದ್ಯಾರ್ಥಿಗಳು , ಶಾಲಾ ಶಿಕ್ಷಕರು , ಎರಡನೆ ದರ್ಜೆ ಗುಮಾಸ್ತರು ಮತ್ತು ಕೆಲ ವಕೀಲರು ಬಂದು ಸಾಯಂಕಾಲ ೪ ರಿಂದ ರಾತ್ರಿ ೧೦ ರವರೆಗೆ ಅವರೊಂದಿಗೆ ಇರುತ್ತಿದ್ದರು. ಸ್ವಾಮಿಗಳ ಮಾತಿನ ಶೈಲಿ , ಅವರಿದ್ದ ಬಂಗಲೆಯ ಪಡಸಾಲೆ ಅವರನ್ನು ಸೆಳೆದಿದ್ದವು. ೧೮೯೭ ರಲ್ಲಿ ಸ್ವಾಮಿಗಳು ಅಮೆರಿಕದಿಂದ ಮರಳಿ ಬಂದ ನಂತರವಷ್ಟೇ ಗಣ್ಯರು ಅವರಲ್ಲಿ ಬಂದರು ಎನ್ನುತ್ತಾರೆ. (40) ಸ್ವಾಮಿಗಳು ಹಿಂದೂಧರ್ಮದ ಪ್ರಚಾರಕ್ಕೆ ಪಾಶ್ಚಾತ್ಯ ದೇಶಗಳಿಗೆ ಹೋಗುತ್ತೇನೆ ಎನ್ನುತ್ತಿದ್ದರು. ಈ ಮಾತುಗಳಿಂದ ಅವರನ್ನು ಸುತ್ತುವರೆದಿದ್ದವರು ರೋಮಾಂಚನಗೊಳ್ಳುತ್ತಿದ್ದರು.
ಜಿ.ಜಿ.ನರಸಿಂಹಾಚಾರ್ಯರು ಷಿಕಾಗೊ ವಿಶ್ವಧರ್ಮ ಸಮ್ಮೇಳನ ಇನ್ನೂ ಮೂರು ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ ಎನ್ನುವಾಗ ಸ್ವಾಮಿಗಳು ನಾನು ಅಮೆರಿಕಕ್ಕೆ ಹೋಗಿ ಹಿಂದೂಧರ್ಮವನ್ನು ಪ್ರಚಾರ ಮಾಡುತ್ತೇನೆ ಎನ್ನತೊಡಗಿದರು. ಅವರನ್ನು ಷಿಕಾಗೊಗೆ ಕಳಿಸಲು ವಂತಿಗೆ ಎತ್ತಲು ಪ್ರಾರಂಭವಾಯಿತು. ಆಗ ಒಬ್ಬ ಸಮಾಜ ಸೇವಕರೊಬ್ಬರು ರೂ ೫೦೦ ಕೊಟ್ಟರೆ ಅವರಿಗಿಂತ ಶ್ರೀಮಂತರಾಗಿದ್ದ ಇನ್ನೊಬ್ಬರು ಎಲ್ಲ ಸಾಧುಗಳ ಬಗ್ಗೆ ವಿಶೇಷವಾಗಿ ಸ್ವಾಮಿಗಳ ಬಗ್ಗೆ ಅನುಮಾನ ತಾಳಿದ್ದರಲ್ಲದೆ ಒಂದು ಪೈಸೆಯನ್ನು ಕೊಡಲು ಒಪ್ಪಲಿಲ್ಲ ಎಂದಿದ್ದಾರೆ. ಜುಲೈ ೨೬ , ೧೯೦೨ ರ ‘ಮದ್ರಾಸ್ ಮೇಲ್’ನಲ್ಲಿ ಪ್ರಕಟಗೊಂಡ ಸುದ್ದಿ ಹಾಗೂ ರಾಮಾನುಜಾಚಾರಿಯವರ ನೆನೆಪುಗಳಿಂದ ಹಲವು ವಿಷಯಗಳು ಹೊರಬರುತ್ತವೆ. ಮದ್ರಾಸಿನ ಥಿಯೋಸೋಫಿಕಲ್ ಸೊಸೈಟಿಯ ಆಧಾರ ಸ್ತಂಭವಾಗಿದ್ದ ಡಾ. ಸುಬ್ಯಮಣ್ಯ ಅಯ್ಯರ್ ಅವರನ್ನು ಕಾಣಲು ಸ್ವಾಮಿಗಳು ೨೦-೨೫ ಯುವಕರೊಂದಿಗೆ ಲುಝ್ ಚರ್ಚ್ ರಸ್ತೆಯ ಮೂಲಕ ಮೈಲಾಪುರದಲ್ಲಿದ್ದ ಅವರ ಮನೆಗೆ ಹೋದರು. ಸ್ವಾಮಿ ಮತ್ತು ಆಯ್ದ ಕೆಲವರನ್ನು ಹೊರತಾಗಿ ಉಳಿದವರನ್ನು ಅಯ್ಯರ್ ಮನೆಯೊಳಕ್ಕೆ ಬಿಡಲಿಲ್ಲ. ಸುಬ್ರಮಣ್ಯ ಅಯ್ಯರ್ ಮೊದಲ ವಂತಿಗೆಯನ್ನು ತಾವೇ ಕೊಟ್ಟು ಮನ್ಮಥನಾಥ ಭಟ್ಟಾಚಾರ್ಯ , ಅಳಸಿಂಗ ಪೆರುಮಾಳ್ , ಜಿ.ವೆಂಕಟರಂಗ ರಾವ್ , ಡಿ.ಆರ್ ಬಾಲಾಜಿ ರಾವ್, ಜಿ,ಜಿ, ನರಸಿಂಹಾಚಾರಿ ಹಾಗೂ ಸಿಂಗಾರವೇಲು ಮುದಲಿಯಾರ್ ಮುಂತಾದ ಯುವಕರು ಇನ್ನೂ ಹೆಚ್ಚಿನ ಹಣ ಕೂಡಿಸಲು ಹುರಿದುಂಬಿಸಿದರು ಎಂದು ತಿಳಿಸುತ್ತವೆ. ಇಂಡಿಯನ್ ಸೊಷಿಯಲ್ ರಿಫಾರ್ಮರ್ ಪತ್ರಿಕೆಯ ಸಂಪಾದಕರಾಗಿದ್ದ ಕಾಮಾಕ್ಷಿ ನಟರಾಜನ್ ಸ್ವಾಮಿಯವರನ್ನು ಷಿಕಾಗೊಗೆ ಕಳಿಸಿದ ಕೀರ್ತಿ ಮದ್ರಾಸಿಗರಿಗೆ ಸಲ್ಲಬೇಕೆಂದು ೧೯೨೦ ರಲ್ಲಿ ಬಾಂಬೆಯಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದರು. (41). ಜಿ.ಜಿ ನರಸಿಂಹಾಚಾರ್ಯರು ಹೇಳಿರುವ ಒಂದೂ ಪೈಸೆಯನ್ನೂ ಕೊಡದ ಶ್ರೀಮಂತರು ರಾಮನಾಡಿನ ಭಾಸ್ಕರ ಸೇತುಪತಿ. ಅವರು ಈ ಹಿಂದೆ ಸ್ವಾಮಿಗಳ ವಿದೇಶ ಪ್ರವಾಸಕ್ಕೆ ರೂ ೧೦,೦೦೦=೦೦ ಕೊಡುವ ಭರವಸೆ ನೀಡಿದ್ದರು. ೫೦೦ ರೂ ಕೊಟ್ಟ ಸಮಾಜ ಸೇವಕರು ಸುಬ್ರಮಣ್ಯ ಅಯ್ಯರ್. ಮೊದಲಿಗೆ ಭಾಸ್ಕರ ಸೇತುಪತಿ ಸ್ವಾಮಿಗಳಿಗೆ ಹಣ ನೀಡುವ ಭರವಸೆ ನೀಡಿದ್ದರು ಆಗ ಸ್ವಾಮಿಗಳು ಅದನ್ನು ತಿರಸ್ಕರಿಸಿದ್ದರು. ಆದರೆ ಮುಂದೆ ಭಾಸ್ಕರ ಸೇತುಪತಿ ನಂತರ ರೂ. ೫೦೦ ಕೊಟ್ಟರು.
ಭಾಸ್ಕರ ಸೇತುಪತಿಯಿಂದ ಅಮೆರಿಕಕ್ಕೆ ಹೋಗಲು ಯಾವುದೇ ನೆರವು ದಕ್ಕದ್ದೆಂದು ತಿಳಿದ ಸ್ವಾಮಿಯವರು ಉತ್ತರ ಭಾರತದ ಯಾವುದಾದರೂ ಒಬ್ಬ ಶ್ರೀಮಂತ ಅಥವಾ ರಾಜನಿಂದ ಹಣ ಪಡೆಯಲು ಯೋಚಿಸಿ ಹೈದರಾಬಾದಿಗೆ ಹೋದರು. ಮದ್ರಾಸ್’ನಿಂದ ರೈಲಿನಲ್ಲಿ ಹೊರಟು ಸ್ವಾಮಿಯವರು ೧೦/೨/೧೮೯೩ ರಂದು ಹೈದರಾಬಾದ್ ತಲುಪಿ ಮನ್ಮಥನಾಥ್ ಭಟ್ಟಾಚಾರ್ಯನ ಸ್ನೇಹಿತ ನಿಜಾಮ್ ಸಂಸ್ಥಾನದ ಅಧೀಕ್ಷಕ ಇಂಜಿನಿಯರ್ ಮಧುಸೂದನ ಚಟರ್ಜಿಯವರ ಮನೆಯಲ್ಲಿ ನೆಲೆಸಿದರು. ‘ದಿ ಲೈಫ್-೧೯೧೪ ಮತ್ತು ೧೯೬೦’ ಸ್ವಾಮಿಗಳು ಹೈದರಾಬಾದ್ ತಲುಪಿದಾಗ ಅವರನ್ನು ಎದುರುಗೊಳ್ಳಲು ೫೦೦ ಜನರ ಗುಂಪು , ಇಬ್ಬರು ರಾಜರು (ಮಾಹಾರಾಜ ರಂಭಾರಾವ್ ಬಹದ್ದೂರ್ , ರಾಜ ಶ್ರೀನಿವಾಸ ರಾವ್ ಬಹದ್ದೂರ್) , ನಾಲ್ಕು ಜನ ನವಾಬರು ( ನವಾಬ್ ಇಮಾದ್ ಜಂಗ್ ಬಹದ್ದೂರ್ , ನವಾಬ್ ದುಲಾಖಾನ್ ಬಹದ್ದೂರ್, ನವಾಬ್ ಇಮದ್ ನವಾಬ್ ಜಂಗ್ ಬಹದ್ದೂರ್ , ನವಾಬ್ ಸಿಕಂದರ್ ನವಾಬ್ ಜಂಗ್ ಬಹದ್ದೂರ್) ಹಾಗೂ ಹಲವಾರು ಗಣ್ಯರು ( ಪಂಡಿತ ರತನ್ ಲಾಲ್ , ಕ್ಯಾಪ್ಟನ್ ರಘುನಾಥ ,ಷಂಸ್ ಉಲ್ ಉಲೇಮಾ ,ಸೈಯದ್ ಆಲಿ ಬಿಲ್ಗ್ರಾಮಿ , ಎಚ್.ದೊರಾಬ್ಜಿ, ಎಫ್.ಎಸ್.ಮುಂಡನ್ , ರಾಯ್ ಹುಕುಂ ಚಂದ್ , ಬ್ಯಾಂಕರ್’ಗಳಾದ ಸೇಠ್ ಚತುರ್ಭುಜ್ ಮತ್ತು ಮೋತಿಲಾಲ್) ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು, ಫೆಬ್ರವರಿ ೧೧ ರಂದು ಸಿಕಂದರಬಾದಿನ ಸಮಿತಿಯೊಂದರ ೧೦೦ ಕ್ಕೂ ಹೆಚ್ಚು ಜನ ಸ್ವಾಮಿಯವರಲ್ಲಿಗೆ ಬಂದು ಭಾಷಣ ಮಾಡಬೇಕೆಂದು ಕೋರಿದರು. ಅದಕ್ಕೆ ಒಪ್ಪಿ ಸ್ವಾಮಿಯವರು ೧೩ ಫೆಬ್ರವರಿಯಂದು ಮಹಬೂಬ್ ಕಾಲೇಜಿನಲ್ಲಿ ಪಂಡಿತ್ ರತನ್ ಲಾಲ್ ಅಧ್ಯಕ್ಷತೆಯಲ್ಲಿ ಮಾಡಿದ ಭಾಷಣ ಕೇಳಲು ಸಾವಿರಕ್ಕೂ ಅಧಿಕ ಜನ ಸೇರಿದ್ದರು. ಅವರು ೧೭ ಫೆಬ್ರವರಿಯಂದು ಹೈದರಾಬಾದ್’ನಿಂದ ಮದ್ರಾಸಿಗೆ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಂದಾಗ ಅವರನ್ನು ಬೀಳ್ಕೊಡಲು ಸಾವಿರಕ್ಕೂ ಹೆಚ್ಚು ಜನ ಬಂದಿದ್ದರು ಎಂದು ಮಧುಸೂದನ ಚಟರ್ಜಿಯವರ ಮಗ ಕಾಳೀಚರಣ ಮುಖರ್ಜಿಯವರು ಕಟ್ಟಿರುವ ಆಕರ್ಷಕ ಕಥೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಪ್ರಕಟಿಸಿವೆ. (42) ಇಂತಹ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣ ಯಾವುದೇ ಪತ್ರಿಕೆಯಲ್ಲಿ ವರದಿಯಾಗಿಲ್ಲದಿರುವುದೇ ಅದು ನಿಜವಲ್ಲ ಎನ್ನುವುದನ್ನು ಸ್ಪಷ್ಟಗೊಳಿಸುತ್ತದೆ.
೨೧ ಫೆಬ್ರವರಿ ೧೮೯೩ ರಂದು ಸ್ವಾಮಿಗಳು ಹೈದರಾಬಾದ್’ನಿಂದ ಅಳಸಿಂಗ ಪೆರುಮಾಳ್’ಗೆ ಬರೆದ ಒಂದೇ ಒಂದು ಪತ್ರ ಇಂತಹ ಭಾರಿ ಸಂಗತಿಯ ಬಗ್ಗೆ ಮೌನವಾಗಿದೆ ಮಾತ್ರವಲ್ಲ ಕಾಳೀಚರಣ ಮುಖರ್ಜಿಯ ಕಟ್ಟು ಕಥೆಯನ್ನು ಹಂಗಿಸುತ್ತಿದೆ. (೧೧/೨/೧೮೯೩ ಪತ್ರದ ಸಾರಾಂಶ ನೋಡಿದರೆ ಈ ಪತ್ರದ ದಿನಾಂಕ ೧೧ ಅಲ್ಲ ೨೧ ಇರಬೇಕೆನ್ನುವುದು ಸ್ಪಷ್ಟವಾಗುತ್ತದೆ). ಈ ಪತ್ರದಲ್ಲಿ ಸ್ವಾಮಿಗಳು ‘ ನನ್ನ ಯೋಜನೆಗಳೆಲ್ಲ ಮಣ್ಣು ಪಾಲಾದವು. ಆದ್ದರಿಂದಲೇ ನಾನು ಮದ್ರಾಸ್’ನಿಂದ ಬೇಗೆ ಹೊರಡಬೇಕೆಂದಿದ್ದೆ. ಹಾಗೆ ಹೊರಟಿದ್ದರೆ ನನಗೆ ತಿಂಗಳುಗಟ್ಟಲೆ ಕಾಲಾವಕಾಶ ಇರುತ್ತಿದ್ದಿತು. ಉತ್ತರ ಭಾರತದ ರಾಜರುಗಳಲ್ಲಿ ಯಾರನ್ನಾದರು ನನ್ನನ್ನು ಅಮೆರಿಕಕ್ಕೆ ಕಳಿಸಲು ನೆರವು ನೀಡುವಂತೆ ಕೇಳಬಹುದಾಗಿದ್ದಿತು. ಅಯ್ಯೋ ಈಗೆಗಎಲ್ಲ ಮೀರಿಹೋಗಿದೆ. ಮೊದಲನೆಯದು ಈ ಧಗೆಯಲ್ಲಿ ನಾನು ಅಲೆದಾಡಲಾರೆ…’ ಎಂದು ಬರೆದಿದ್ದಾರೆ. ಇದರಿಂದ ಅಳಸಿಂಗ ಪೆರುಮಾಳ್ ಸ್ನೇಹಿತರು ಭಾಸ್ಕರ ಸೇತುಪತಿಯಿಂದ ಅಥವಾ ಬೇರೆ ಶ್ರೀಮಂತರಿಂದ ಹಣವನ್ನು ಕೂಡಿಸುವಲ್ಲಿ ಸೋತಿದ್ದಾರೆ. ಇದರಿಂದ ಹತಾಶರಾದ ಸ್ವಾಮಿಗಳು ಮದ್ರಾಸಿನವರ ಮೇಲೆ ಅಷ್ಟೊಂದು ಭರವಸೆ ಇಟ್ಟು ಅಲ್ಲಿಯೇ ಹೆಚ್ಚಿನ ಕಾಲ ಇರಬಾರದಿದ್ದಿತು ಎನ್ನುವ ಅಭಿಪ್ರಾಯ ತಳೆದಿದ್ದಾರೆ. ಇದಷ್ಟೇ ಅಲ್ಲ ಸ್ವಾಮಿಯವರನ್ನು ಸ್ವಾಗತಿಸಲು ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಆಷ್ಟೊಂದು ರಾಜ , ಮಹಾರಾಜ ,ನವಾಬ , ಗಣ್ಯ , ಉನ್ನತಾಧಿಕಾರಿಗಳು , ಅವರ ಭಾಷಣಗಳನ್ನು ಕೇಳಲು ನೆರೆದಿದ್ದ ಸಾವಿರಾರು ಜನರಿಂದ ಅಮೆರಿಕೆಯ ವಿಶ್ವ ಧರ್ಮ ಸಂಸತ್ತಿಗೆ ಹೋಗಲು ಬೇಕಾದ ಹಣವನ್ನು ವಂತಿಗ ಎತ್ತಲಾಗಲಿಲ್ಲವೇ ? ಸ್ವಾಮಿಗಳ ಅದ್ಭುತ ವ್ಯಕ್ತಿತ್ವಕ್ಕೆ ಆಕರ್ಷಕರಾಗಿದ್ದ ಅಷ್ಟೊಂದು ಜನರಲ್ಲಿ ಒಂದಿಬ್ಬರು ಸೇಠಜಿ , ದಿವಾನರಾಗಲಿ ಅವರ ನೆರವಿಗೆ ಬರಲಿಲ್ಲವೆ? ಇವೆಲ್ಲ ಸಂಗತಿಗಳನ್ನು ಗಮನಿಸಿದರ -ದಿ ಲೈಫ್-೧೯೧೪’ ನೀಡುವ ಸ್ವಾಮಿಗಳ ಹೈದರಾಬಾದ್ ಭೇಟಿಯ ವಿವರಗಳಲ್ಲಿ ಪುರಾಣ ಇದೆಯೇ ಹೊರತು ನಡೆದ ಸಂಗತಿಗಳಿಲ್ಲ ಎನ್ನುವುದು ಸ್ಪಷ್ಟ. ಸ್ವಾಮಿಯವರು ಹೈದರಾಬಾದ್’ನಿಂದ ಮೈಸೂರು ಮತ್ತು ಉದಕ ಮಂಡಲಕ್ಕೆ ಹೋಗಿದ್ದರು. ಚಾಮರಾಜೇಂದ್ರ ಒಡೆಯರ್ ಬಳಿ ಹಣ ಕೇಳಲು ಅವರು ಮೈಸೂರಿಗೆ ಹೋಗಿರಬಹುದು. ಸ್ವಾಮಿಗಳು ತಮ್ಮನ್ನು ವಿದೇಶಕ್ಕೆ ಕಳಿಸಲು ಸಂಗ್ರಹಿಸಿದ ಹಣವನ್ನು ಬಡವರಿಗೆ ಹಂಚಲು ತಿಳಿಸಿ ಭಗವಂತನ ಇಚ್ಚೆ ಇದ್ದಂತಾಗಲಿ ಎಂದರು ಎನ್ನುವ ಕಥೆಯನ್ನು ಹೆಣೆದು ಸ್ವಾಮಿಗಳು ಬಡವರಿಗೆ ಎಷ್ಟು ಕಾಳಜಿ ತೋರಿಸುತ್ತಿದ್ದರೆಂದು ವೈಭವೀಕರಿಸಲು ಹಲವರು ಯತ್ನಿಸಿದ್ದಾರೆ. ಆದರೆ ಸ್ವಾಮಿಗಳು ಈ ಸಮಯದಲ್ಲಿ ಬರೆದ ಯಾವ ಪತ್ರದಲ್ಲಿಯೂ ಅಂತಹ ಸುಳಿವಿಲ್ಲ.
ಈ ವೇಳೆಗಾಗಲೇ ಸ್ವಾಮಿಗಳಿಗೆ ಅಮೆರಿಕಕ್ಕೆ ಹೋಗಲೇಬೇಕೆನ್ನುವ ಚಿಂತೆ ಆವರಿಸಿದ್ದಿತು. ಅಳಸಿಂಗ್ ಪೆರುಮಾಳ್ ಮತ್ತು ಸ್ನೇಹಿತರು ಸ್ವಾಮಿಗಳ ಪ್ರವಾಸಕ್ಕೆ ವಂತಿಗೆ ಎತ್ತಲು ಮೈಸೂರು, ಮದ್ರಾಸ್, ಹೈದರಾಬಾದ್’ಗಳಲ್ಲಿ ಅಲೆದಾಡಿದರು. ಮೇ ೧೮೯೩ ರಲ್ಲಿ ಸ್ವಾಮಿಯವರು ಹರಿದಾಸ ವಿಹಾರಿದಾಸ ದೇಸಾಯಿಗೆ ಬರೆದ ಪತ್ರದಲ್ಲಿ ‘ ನಿಮಗೆ ಈ ಹಿಂದೆ ತಿಳಿಸಿದಂತೆ ನಾನು ಅಮೆರಿಕಕ್ಕೆ ಹೋಗಬೇಕೆಂದಿದ್ದೆ. ಮದ್ರಾಸಿನ ಸ್ನೇಹಿತರು , ರಾಮನಾಡಿನ ದೊರೆಗಳು , ಮೈಸೂರು ಮಹಾರಾಜರು ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ’ ಎಂದು ಬರೆದರು. (೨೨/೫/೧೮೯೩) . ಶಿವಾನಂದರು ೧೫/೨/೧೮೯೪ ರಂದು ಬರೆದ ಪತ್ರದಿಂದ ಮದ್ರಾಸ್ ಶಿಷ್ಯರು ೪೦೦೦ ರೂಪಾಯಿ ಕೂಡಿಸಿರುವುದು ತಿಳಿದುಬರುತ್ತದೆ. ೧೯೨೫ ರಲ್ಲಿ ಶಿವಾನಂದರು ಸುಬ್ರಮಣ್ಯ ಅಯ್ಯರ್ , ಮನ್ಮಥನಾಥ್ ಭಟ್ಟಾಚಾರ್ಯ ಹಾಗೂ ಆತನ ಮನವೊಲಿಕೆಯಿಂದ ಭಾಸ್ಕರ ಸೇತುಪತಿ ತಲಾ ರೂ ೫೦೦ ಮತ್ತು ಮೈಸೂರು ಮಹಾರಾಜರು ರೂ ೧೫೦೦ ಕೊಟ್ಟಿದ್ದರು ಎಂದು ತಿಳಿಸಿದ್ದಾರೆ. ಉಳಿದ ಮೊತ್ತವನ್ನು (ಅಂದಾಜು ರೂ . ೨೦೦೦) ಅಳಸಿಂಗ ಪೆರುಮಾಳ್ ಮತ್ತಿತರರು ಕೂಡಿಸಿಕೊಟ್ಟರು. ಈ ಮೊತ್ತದಲ್ಲಿ ರೂ ೧೨೦೦ ಅಮೆರಿಕಕ್ಕೆ ಹೋಗಲು ಟಿಕೆಟ್ ಖರೀದಿಗಾಗಿ ಬಳಕೆಯಾಗಿ ಉಳಿದ ರೂ ೨೮೦೦=೦೦ ಸ್ವಾಮಿಗಳ ಖರ್ಚಿಗೆ ಕೊಡಲಾಯಿತು. ಇದು ೧೮೭ ಪೌಂಡ್’ಗಳಿಗೆ ಸಮನಾಗಿದ್ದಿತು. ಆ ಕಾಲದಲ್ಲಿ ಪೌಂಡ್ ಮತ್ತು ರೂಪಾಯಿ ೧-೧೫ ವಿನಿಮಯ ಮೌಲ್ಯದಲ್ಲಿದ್ದವು. (43)
೧೮೯೧ ಅಕ್ಟೋಬರ್ ಕೊನೆಯ ದಿನಗಳಲ್ಲಿ ಸ್ವಾಮಿಗಳು ಖೇತ್ರಿ ಮಹಾರಾಜ ಅಜಿತ್ ಸಿಂಗ್ ಅತಿಥಿಗಳಾಗಿದ್ದರು. ಅಜಿತ್ ಸಿಂಗ್’ಗೆ ಸೂರ್ಯಕುಮಾರಿ (ಹುಟ್ಟು-೧೮೭೯) ಮತ್ತು ಚಂದ್ರಕುಮಾರಿ (ಹುಟ್ಟು-೧೮೮೮) ಎನ್ನುವ ಇಬ್ಬರು ಹೆಣ್ಣುಮಕ್ಕಳಿದ್ದು ಗಂಡು ಸಂತಾನ ಇಲ್ಲ ಎನ್ನುವ ಕೊರಗಿದ್ದಿತು. ಗಂಡು ಮಗನನ್ನು ಪಡೆಯುವಂತೆ ಆಶೀರ್ವದಿಸಬೇಕೆಂದು ಅಜಿತ್ ಸಿಂಗ್ ಸ್ವಾಮಿಯವರನ್ನು ಬೇಡಿದ್ದರು. ೨೬/೧/೧೮೯೩ ರಂದು ಅಜಿತ್ ಸಿಂಗ್’ಗೆ ಮಗ ಹುಟ್ಟಿದನು. ಇದರಿಂದ ಅವರಿಗೆ ಸ್ವಾಮಿಯವರಲ್ಲಿ ಅಧಿಕ ನಂಬಿಕೆ ಮತ್ತು ಭಕ್ತಿ ಮೂಡಿದ್ದಿತು. ಪುತ್ರೋತ್ಸವದ ಸಮಾರಂಭದ ಸಂಭ್ರಮದಲ್ಲಿ ಭಾಗವಹಿಸಲು ಸ್ವಾಮಿಗಳನ್ನು ಅಜಿತ್ ಸಿಂಗ್ ಆಹ್ವಾನಿಸಿದ್ದರು. ೧೮೯೩ ರ ಏಪ್ರಿಲ್’ನಲ್ಲಿ ಖೇತ್ರಿ ಸಂಸ್ಥಾನದ ಕಾರ್ಯದರ್ಶಿ ಮುನ್ಷಿ ಜಗಮೋಹನ ಲಾಲ್ ಸ್ವಾಮಿಯವರನ್ನು ಕಾಣಲು ಮದ್ರಾಸ್’ನಲ್ಲಿದ್ದ ಮನ್ಮಥನಾಥ ಭಟ್ಟಾಚಾರ್ಯನ ಮನೆಗೆ ಬಂದು ಖೇತ್ರಿಗೆ ಬಂದು ಅಜಿತ್ ಸಿಂಗ್ ರನ್ನು ಕಾಣುವಂತೆಯೂ ಅವರು ತಮ್ಮ ಸ್ವಂತ ಹಣವನ್ನು ಪ್ರವಾಸಕ್ಕೆ ಕೊಡಲು ಸಿದ್ಧರಾಗಿರುವುದಾಗಿಯೂ ತಿಳಿಸಿದನು. ಆರಂಭದಲ್ಲಿ ದೂರದ ಖೇತ್ರಿಗೆ ತಕ್ಷಣ ಹೋಗುವ ಮನಸ್ಸು ಸ್ವಾಮಿಗೆ ಇರಲಿಲ್ಲವಾದರೂ ಜಗಮೋಹನ ಲಾಲ್ ಒತ್ತಾಯಕ್ಕೆ ಮಣಿದು ೭/೪/೧೮೯೩ ರಂದು ಮದ್ರಾಸ್ ತೊರೆದು ಖೇತ್ರಿ ತಲುಪಿ ೨೧ ಏಪ್ರಿಲ್’ನಿಂದ ೧೦ ಮೇ ವರೆಗೆ ೨೦ ದಿನಗಳ ಕಾಲ ಖೇತ್ರಿಯಲ್ಲಿದ್ದರು. (44)
ಖೇತ್ರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಬಾಂಬೆಯಲ್ಲಿ ಸ್ವಾಮಿಯವರು ಪಂಡಿತನೊಬ್ಬನ ಮನೆಯಲ್ಲಿ ಉಳಿದಿದ್ದರಲ್ಲದೆ ವಾಪಿಂಗನ ಮತ್ತು ಜೈಪುರದಲ್ಲಿಯೂ ಉಳಿದಿದ್ದರು. ಅಲ್ಲಿ ಅವರು ಆಕಸ್ಮಿಕವಾಗಿ ತುರೀಯಾನಂದ ಮತ್ತು ಬ್ರಹ್ಮಾನಂದರನ್ನು ಭೇಟಿಯಾದರು. ಈ ಮೂವರು ಸೇರಿ ರಾಮಕೃಷ್ಣ ಪರಮಹಂಸರ ಭಕ್ತರಾಗಿದ್ದ ಕಾಳಿಪಾದ ಘೋಷ್ ಮನೆಯಲ್ಲಿ ಕೆಲಕಾಲ ಇದ್ದು ಅಬು ಪರ್ವತಕ್ಕೆ ರೈಲಿನಲ್ಲಿ ಹೊರಟರು. ಆಗ ಸ್ವಾಮಿಗಳು ತುರೀಯಾನಂದರಲ್ಲಿ ‘ಹರಿಭಾಯಿ ನಾನು ಅಧ್ಯಾತ್ಮದಲ್ಲಿ ಅದೆಷ್ಟು ಸಾಗಿದ್ದೇನೋ ಗೊತ್ತಿಲ್ಲ. ಆದರೆ ಎಲ್ಲರಿಗಾಗಿ ನನ್ನ ಹೃದಯ ತುಡಿಯುತ್ತಿದೆ ಎಂದಿದ್ದರು. ತುರೀಯಾನಂದರು ಇದು ಬುದ್ಧನಿಗೂ ಆಗಿತ್ತಲ್ಲವೇ ಎಂದು ಮನಸ್ಸಿನಲ್ಲಿಯೇ ಕೇಳಿಕೊಂಡಿದ್ದರು. ಸ್ವಾಮಿಯವರು ರೇವರಿಯ ಮೂಲಕ ಖೇತ್ರಿ ತಲುಪಿದಾಗ ಇಡೀ ಊರು ಸಿಂಗಾರಗೊಂಡು , ದೀಪಗಳಿಂದ ಬೆಳಗಿ , ಸಂಗೀತ ರವದಿಂದ ತುಂಬಿ ಹಬ್ಬದ ವಾತಾವರಣವಿದ್ದಿತು. ಖೇತ್ರಿಗೆ ಹಲವು ರಜಪೂತ ರಾಜರುಗಳನ್ನು ಅಹ್ವಾನಿಸಲಾಗಿದ್ದಿತು. ಅಜಿತ್ ಸಿಂಗ್ ದರ್ಬಾರ್ ಕರೆದು ಅವರನ್ನು ಸನ್ಮಾನಿಸಿ ಅವರೆಲ್ಲರಿಗೆ ಸ್ವಾಮಿಯವರನ್ನು ಪರಿಚಯಿಸಿ ಅವರ ಆಶೀರ್ವಾದದಿಂದ ತಮಗೆ ಮಗ ಹುಟ್ಟಿರುವನೆಂದು , ಸನಾತನ ಧರ್ಮವನ್ನು ಜಗತ್ತಿಗೆ ಸಾರಲು ಸ್ವಾಮಿಯವರು ಪಶ್ಚಿಮದ ದೇಶಗಳಿಗೆ ಹೋಗುತ್ತಿರುವರೆಂದು ತಿಳಿಸಿದರು. ಅದಕ್ಕೆ ಸಭೆಯಿಂದ ಹರ್ಷೋದ್ಗಾರಗಳಾದವು. ಇದೇ ದರ್ಬಾರಿನಲ್ಲಿ ಸ್ವಾಮಿ ವಿವೇಕಾನಂದ ಎನ್ನುವ ಮುಂದೆ ಶಾಶ್ವತವಾದ ಹೆಸರನ್ನು ಅಂಗೀಕರಿಸಲಾಯಿತು. ಖೇತ್ರಿ ಮಹಾರಾಜ ಅಜಿತ್ ಸಿಂಗ್ ಮೇ ೯ ರಂದು ಅಂತಪುರದೊಳಕ್ಕೆ ಸ್ವಾಮಿಯವರನ್ನು ಕರೆದೊಯ್ದು ನವಜಾತ ರಾಜಕುಮಾರನಿಗೆ ಆಶೀರ್ವಾದ ಮಾಡಿಸಿದರು. ಮೇ ೧೦ ರಂದು ಸ್ವಾಮಿಯವರು ಬಂಡಿಯಲ್ಲಿ ಖೇತ್ರಿ ತೊರೆದು ಜೈಪುರ ತಲುಪಿ ಅಲ್ಲಿಂದ ರೈಲಿನಲ್ಲಿ ಅಬು ರೋಡ್ ನಿಲ್ದಾಣದಲ್ಲಿ ಇಳಿದರು. ಅಬು ಪರ್ವತಕ್ಕೆ ಹೋಗಿದ್ದ ಬ್ರಹ್ಮಾನಂದ ಮತ್ತು ತುರೀಯಾನಂದ ಪಾಶ್ಚಾತ್ಯ ದೇಶಗಳಿಗೆ ತೆರಳಲಿರುವ ಗುರುಭಾಯಿಗೆ ಶುಭಾಶಯ ಹೇಳಲು ಅಬು ರೋಡ್ ನಿಲ್ದಾಣಕ್ಕೆ ಬಂದಿದ್ದರು.
ಖೇತ್ರಿ ಸಂಸ್ಥಾನದ ಕಾರ್ಯದರ್ಶಿ ಜಗಮೋಹನ ಲಾಲ್ ಬಾಂಬೆಯವರೆಗೆ ಸ್ವಾಮಿಯವರ ಜೊತೆಗಿದ್ದರು. ರಾಜ ಅಜಿತ್ ಸಿಂಗ್ ಆದೇಶದ ಮೇರೆಗೆ ಜಗಮೋಹನ ಲಾಲ್ ಬಾಂಬೆಯಲ್ಲಿ ಸ್ವಾಮಿಯವರಿಗೆ ಉತ್ತಮ ಪೋಷಾಕು ,ತುಟ್ಟಿ ರೇಷ್ಮೆ ಉಡುಗೆ, ಮುಂಡಾಸುಗಳನ್ನು ಖರೀದಿಸಿದರು. ಸ್ವಾಮಿಯವರ ಪ್ರಯಾಣಕ್ಕೆ ಜಪಾನ್’ಗೆ ಹೋಗುತ್ತಿದ್ದ ‘ಪಿ ಅಂಡ್ ಓ ಪೆನಿನ್ಸುಲಾರ್’ ಹಡಗಿನಲ್ಲಿ ಮೊದಲನೇ ದರ್ಜೆಯಲ್ಲಿ ಸ್ಥಳವನ್ನು ಕಾದಿರಿಸಲಾಗಿದ್ದಿತು. ಜಪಾನ್’ನಿಂದ ವ್ಯಾಂಕೋವರ್’ಗೆ ಇನ್ನೊಂದು ಹಡಗಿನಲ್ಲಿ ಸ್ವಾಮಿಗಳ ಪ್ರವಾಸ ನಿಗದಿಗೊಂಡಿದ್ದಿತು. ಜಗಮೋಹನ ಲಾಲ್ ಥಾಮಸ್ ಕುಕ್ ಕಂಪೆನಿಯ ಮೂಲಕ ಇದನ್ನು ಮಾಡಿದ್ದನು. ಮದ್ರಾಸಿನ ಸ್ನೇಹಿತರು ಮೊದಲಿಗೆ ಎರಡನೇ ದರ್ಜೆಯಲ್ಲಿ ಸ್ವಾಮಿಗಳಿಗೆ ಜಾಗ ಕಾದಿರಿಸಿದ್ದು ಅಜಿತ್ ಸಿಂಗ್ ಅಪ್ಪಣೆ ಮೇರೆಗೆ ಅದನ್ನು ಜಗಮೋಹನ ಲಾಲ್ ಮೊದಲ ದರ್ಜೆಗೆ ಬದಲಾಯಿಸಿದಂತೆ ಕಾಣುತ್ತದೆ. (45) ಇದಲ್ಲದೆ ಅಜಿತ್ ಸಿಂಗ್ ಸ್ವಾಮಿಯವರಿಗೆ ರೂ ೩೦೦೦ ಮೌಲ್ಯದ ಸರ್ಕ್ಯುಲೇಟರಿ ನೋಟ್’ಗಳನ್ನು ಕೊಟ್ಟಿದ್ದನು. (46) ಸ್ವಾಮಿಗಳು ವಿಶ್ವ ಧರ್ಮ ಸಂಸತ್ತಿಗಿಂತ ಸ್ವಲ್ಪ ಮುಂಚೆ ಈ ಹಣವನ್ನು ಕಳೆದುಕೊಂಡರು. ಇದನ್ನು ತಿಳಿದ ಅಜಿತ್ ಸಿಂಗ್ ತಂತಿಯ ಮೂಲಕ ಥಾಮಸ್ ಕುಕ್ ಏಜಂಟರಿಂದ ರೂ ೫೦೦ ನ್ನು ಸ್ವಾಮಿಗಳಿಗೆ ಕೊಡಿಸಿದನು. ಇದಲ್ಲದೆ ಅಜಿತ್ ಸಿಂಗ್ ತಾವು ಬದುಕಿರುವವರೆಗೆ ಸ್ವಾಮಿಗಳ ತಾಯಿಗೆ ತಿಂಗಳಿಗೆ ರೂ. ೧೦೦ ಕಳಿಸುತ್ತಿದ್ದರು. ೩೧ ಮೇ ೧೮೯೩ ರಂದು ನೌಕೆ ಮುಂಬಯಿ ತೀರವನ್ನು ಬಿಟ್ಟು ಹೊರಟಿತು. ಮದ್ರಾಸಿನಿಂದ ಬಂದಿದ್ದ ಅಳಸಿಂಗ ಪೆರುಮಾಳ್ ಮತ್ತು ಜಗಮೋಹನ ಲಾಲ್ ಇಬ್ಬರೂ ಶುಭಾಶಯ ಕೋರುತ್ತಿದ್ದಂತೆಯೇ ಸ್ವಾಮಿಯವರು ಭಾರತದಿಂದ ವ್ಯಾಂಕೋವರ್’ಗೆ ಪ್ರಯಾಣ ಮಾಡಿದರು.
ಅಲೆದಾಟದ ನೈಜ ಸ್ವರೂಪ
೧೮೮೫-೮೬ ರಲ್ಲಿ ಬುದ್ಧ ಗಯೆಗೆ ಹೋಗುವುದರ ಮೂಲಕ ಪ್ರಾರಂಭವಾದ ಸ್ವಾಮಿಗಳ ಭಾರತ ಪ್ರವಾಸ ೩೧ ಮೇ ೧೮೯೩ ರಂದು ಹಡಗನ್ನು ಹತ್ತುವುದರೊಂದಿಗೆ ಕೊನೆಗೊಂಡಿತು. ಈ ಸರಿಸುಮಾರು ೭ ವರ್ಷಗಳ ಈ ಪ್ರವಾಸವನ್ನು ಸ್ವಾಮಿಗಳ ಜೀವನ ಚರಿತ್ರೆಕಾರರು ಅವರು ಭಾರತವನ್ನು ಅರಿಯಲು ,ಅದರ ಸಂಕಷ್ಟಗಳಿಗೆ ಮುಖಾಮುಖಿಯಾಗಿ , ಅವುಗಳಲ್ಲಿ ನೇರವಾಗಿ ಭಾಗಿಯಾಗಿ ಅವುಗಳಿಗೆ ಸಮರ್ಪಕ ಪರಿಹಾರಗಳನ್ನು ಹುಡುಕಲು ಮಾಡಿದ ಪ್ರಯತ್ನಗಳೆಂದು ಚಿತ್ರಿಸಿದ್ದಾರೆ. ಸ್ವಾಮಿಗಳು ಪರಿವ್ರಾಜಕರಾಗಿ ದೇಶ ಸಂಚಾರ ಮಾಡಿದ ಘಟನೆಯನ್ನು ವಾಸ್ತವಕ್ಕಿಂತ ಭಿನ್ನವಾಗಿ ಚಿತ್ರಿಸುವ ಪರಂಪರೆ ಮೊದಲ ಮುದ್ರಣ ಕಂಡ ‘ದಿ ಲೈಫ್-೧೯೧೪’ ಪುಸ್ತಕದಿಂದ ಪ್ರಾರಂಭವಾಗುತ್ತದೆ. ಅದರಲ್ಲಿ ‘ಸ್ವಾಮಿಗಳ ಜೀವನದಲ್ಲಿ ಪರಿವ್ರಾಜಕ ಕಾಲ ಮಹತ್ತರವಾದುದು. ಅದು ಅಧ್ಯಾತ್ಮದ ಒಲವಿನಾಟ. ಪರಿವ್ರಾಜಕನಾಗಿ ಸ್ವಾಮಿಗಳು ಸಂನ್ಯಾಸಿಯ ವಿರಕ್ತ ತ್ಯಾಗಮಯ ಜೀವನವನ್ನು ಆರೋಪಿಸಿಕೊಂಡಿದ್ದರು. ಸಾಮಾನ್ಯ ಸಾಧುವಿನಂತೆ ಕಾಣಲು ತಮ್ಮ ಅಪರಿಮಿತ ಜ್ಞಾನ ಮತ್ತು ಇಂಗ್ಲಿಷ್ ಭಾಷಾಪ್ರಭುತ್ವವನ್ನು ಮುಚ್ಚಿಟ್ಟುಕೊಳ್ಳುತ್ತಿದ್ದರು. ಯಾರಲ್ಲಿಯೂ ಆಹಾರವನ್ನು ಬೇಡಬಾರದು. ಅದು ತಾನಾಗಿಯೇ ಸಿಗುವವರೆಗೆ ಕಾಯಬೇಕು ಎನ್ನುವ ವ್ರತವನ್ನು ಹಲವು ಸಲ ತೊಟ್ಟಿದ್ದರು. ಈ ವ್ರತದಲ್ಲಿ ಐದು ದಿನ ಊಟವಿಲ್ಲದೆ ಕಳೆದೆನೆಂದು ಸ್ವಾಮಿಯವರು ಕೆಲವರಲ್ಲಿ ಹೇಳಿದ್ದರು. ಬಹಳ ಸಲ ಅವರ ವಸತಿ ಕಾಡು ಅಥವಾ ಬೀದಿ ಬದಿಯ ಧರ್ಮಶಾಲೆಯಾಗಿರುತ್ತಿದ್ದಿತು. ಹಲವಾರು ಬಾರಿ ಏಕಾಂಗಿಯಾಗಿ ನಕ್ಷತ್ರ ತುಂಬಿದ ಕಗ್ಗತ್ತಲ ಆಕಾಶದ ಕೆಳಗೆ ಅಥವಾ ಸುರಿಯುತ್ತಿರುವ ಮಳೆಯಲ್ಲಿಯೂ ತಾಯ್ನಾಡಿನ ಬಗ್ಗೆ ಚಿಂತಿಸುತ್ತ , ಕನಸುಗಳನ್ನು ಕಾಣುತ್ತ ಬರಿಗಾಲಲ್ಲಿ ಸಾಗುತ್ತಿದ್ದರು. ‘ನಾರಾಯಣ ಹರಿ’ ಎನ್ನುತ್ತ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದರು. ಪ್ರವಾಸದಲ್ಲಿ ಹಣವನ್ನಾಗಲಿ ಅಥವಾ ಇತರ ವಸ್ತುಗಳನ್ನಾಗಲಿ ಮುಟ್ಟಬಾರದೆಂಬ ವ್ರತ ಹಿಡಿದಿದ್ದರು. ಕೆಲವೊಮ್ಮೆ ಸುಖ, ಕೆಲವೊಮ್ಮೆ ಕಷ್ಟಗಳು ಎದುರಾಗುತ್ತಿದ್ದವು. ಅವುಗಳೆಲ್ಲವಕ್ಕೂ ಅವರು ನಿರ್ಭಾವುಕರಾಗಿದ್ದರು’ ಎಂದು ಸ್ವಾಮಿಯವರ ಪರಿವ್ರಾಜಕ ಜೀವನವನ್ನು ಚಿತ್ರಿಸುತ್ತದೆ. (47) ತಮ್ಮ ಪ್ರವಾಸದಲ್ಲಿ ಹೋದೆಡೆಯಲ್ಲೆಲ್ಲಾ ಸ್ವಾಮಿಗಳು ಜನ ಸಾಮಾನ್ಯರೊಂದಿಗ ಬೆರೆಯುತ್ತಿದ್ದರು. ಒಮ್ಮೆ ಹೊಲೆಯನ ಗುಡಿಸಲು ಮರುದಿನವೇ ಮಹಾರಾಜನ ಅರಮನೆ’ ಎಂದು ಮುಮುಕ್ಷಾನಂದರು ಬರೆದಿದ್ದಾರೆ.
ಸ್ವಾಮಿಗಳು , ಸಂನ್ಯಾಸಿಗಳು ತೀರ್ಥಯಾತ್ರೆಯ ಹೆಸರಿನಲ್ಲಿ ಅಲೆಮಾರಿ ಜೀವನ ನಡೆಸುವುದಾಗಲಿ , ಧರ್ಮ ಜಾಗೃತಿ ತರಲು ದೇಶ ಸುತ್ತುವುದಾಗಲಿ ಭಾರತಕ್ಕೆ ಹೊಸದಲ್ಲ. ಸ್ವಾಮಿಗಳ ದೇಶ ಸಂಚಾರ ಅವರ ವೈಯಕ್ತಿಕ ಜ್ಞಾನವನ್ನು ಹೆಚ್ಚಿಸಲು ನೆರವಾಯಿತೆಂದು ಭಾವಿಸಬಹುದು. ಅಲೆಮಾರಿ ಸಂನ್ಯಾಸಿಗಳು ಭಾರತ ಪ್ರವಾಸದಲ್ಲಿ ಬದರಿ ಮತ್ತು ಪುರಿಯನ್ನು ಸಂದರ್ಶಿಸದೆ ಬಿಡುವುದಿಲ್ಲ. ನಾನಾ ಕಾರಣಗಳಿಂದ ಸ್ವಾಮಿಗಳಿಗೆ ಈ ಜಾಗಗಳಿಗೆ ಹೋಗುವುದು ಸಾದ್ಯವಾಗಲಿಲ್ಲ. ಮುಮುಕ್ಷಾನಂದರು ದೈವೀ ಕಾರಣಗಳಿಂದ ಸ್ವಾಮಿಗಳಿಗೆ ಬದರಿಗೆ ಹೋಗಲಾಗಲಿಲ್ಲ ಎನ್ನುತಾರೆ. ಸ್ವಾಮಿಗಳ ಆರೋಗ್ಯ ಹದಗೆಟ್ಟು ಅವರು ಚಳಿಯನ್ನು ತಡೆಯಲಾಗಲಿಲ್ಲ ಎನ್ನುವುದೇ ನಿಜವಾದ ಕಾರಣ.
೧೮೮೫-೧೮೯೩ ಅವಧಿಯಲ್ಲಿ ಸ್ವಾಮಿಗಳ ಪ್ರಯಾಣದ ವಿವರಗಳನ್ನು ಲಭ್ಯ ಆಕರಗಳಿಂದ ಪಡೆದು ಕಾಲಾನುಕ್ರಮಣಿಕೆಯಲ್ಲಿ ನೋಡಿದಾಗ ನಮಗೆ ‘ದಿ ಲೈಫ್-೧೯೧೪’ ಕಟ್ಟಿಕೊಡುವ ವೈಭವೀಕರಣದ , ಜನಪ್ರಿಯವಾದುದಕ್ಕಿಂತಲೂ ಭಿನ್ನವಾದ ಚಿತ್ರಣ ನಮಗೆ ದಕ್ಕುತ್ತದೆ.
ಸ್ವಾಮಿಯವರ ಆರಂಭಿಕ ಪ್ರವಾಸಗಳು ಕಠಿಣವಾಗಿದ್ದವು. ಯಾತ್ರಾ ಸ್ಥಳಗಳಲ್ಲಿ ಕೆಲವು ಸಲ ಅವರು ಭಿಕ್ಷೆ ಬೇಡುತ್ತ ಕೆಲಮೊಮ್ಮೆ ಧರ್ಮ ಛತ್ರಗಳಲ್ಲಿ ಹೊಟ್ಟೆ ಹೊರೆದಿದ್ದರು. ಆದರೆ ಇದು ಅತ್ಯಪರೂಪದ ಘಟನೆಗಳಾಗಿದ್ದವೇ ಹೊರತು ಸಾಮಾನ್ಯ ಸಂಗತಿಗಳಾಗಿರಲಿಲ್ಲ. ದೆಹಲಿ ಭೇಟಿಯ ನಂತರ ಸ್ವಾಮಿಯವರು ಸುಸ್ಥಿತಿಯಲ್ಲಿದ್ದ ಅತಿಥೇಯರ ಮನೆಯಲ್ಲಿಯೇ ಇರುತ್ತಿದ್ದರು. ಸ್ವಾಮಿಗಳ ಪ್ರವಾಸದ ಕೋಷ್ಟಕದಿಂದ ಅವರ ಭಾರತ ಪ್ರವಾಸದಲ್ಲಿ ರೈಲು ಪ್ರಯಾಣ ಮತ್ತು ಬಹುತೇಕ ವೇಳೆ ಪ್ರಥಮ ದರ್ಜೆಯ ಪ್ರಯಾಣ ಸಾಮಾನ್ಯವಾಗಿದ್ದವು ಎನ್ನುವುದು ಸ್ಪಷ್ಟವಾಗುತ್ತದೆ. ರೈಲು ಪ್ರಯಾಣದಲ್ಲಿ ಅವರು ಬ್ರಿಟಿಷ್’ರೊಂದಿಗೆ ನಡೆಸಿದ ಮುಖಾಮುಖಿಗಳು ಇದಕ್ಕೆ ಪರೋಕ್ಷ ಸಾಕ್ಷ್ಯಗಳನ್ನು ಒದಗಿಸುತ್ತವೆ. ಏಕೆಂದರೆ ಬ್ರಿಟಿಷರು ಯಾವಾಗಲೂ ಮೊದಲನೇ ದರ್ಜೆಯಲ್ಲಿಯೇ ಪ್ರಯಾಣಿಸುತ್ತಿದ್ದರು. ಇದಕ್ಕೆ ಶರತ್ ಚಂದ್ರ ಗುಪ್ತರ ಬಂಗಾಳಿ ಹಾಗೂ ನಾಗೇಂದ್ರನಾಥ ಗುಪ್ತರ ಇಂಗ್ಲಿಷ್ ಭಾಷೆಯಲ್ಲಿರುವ ನೆನಪುಗಳು ಇದಕ್ಕೆ ಸಮರ್ಥನೆ ಒದಗಿಸುತ್ತವೆ. ಇದಕ್ಕೆ ಅಪವಾದಗಳು ಇಲ್ಲವೆಂದಲ್ಲ. ೧೮೮೮ ರಲ್ಲಿ ಆಗ್ರಾದಿಂದ ವೃಂದಾವನ (೬೦ಕಿ.ಮೀ) ಮತ್ತು ಶಹರನ್’ಪುರದಿಂದ ಹೃಷಿಕೇಶಕ್ಕೆ ಮುಮ್ಮುಖ ಮತ್ತು ಹಿಮ್ಮುಖ ಪ್ರಯಾಣ ( ೫೦*೨=೧೦೦ ಕಿ.ಮೀ) ಕಾಲ್ನಡಿಗೆಯಲ್ಲಿ , ೧೮೯೦ ರಲ್ಲಿ ಒಟ್ಟು ೨೦೦ ಕಿ.ಮೀ ಕಾಲ್ನಡಿಗೆಯಲ್ಲಿ ಮತ್ತು ಅಖಂಡಾನಂದರ ಜೊತೆ ಕುದುರೆ ಹಾಗೂ ಢೋಲಿಯಲ್ಲಿ ಹಿಮಾಲಯಕ್ಕೆ ಹೋಗಿದ್ದರು. ಸ್ವಾಮಿಯವರು ಗುಜರಾತಿನಲ್ಲಿ ಪಾಂಡುಪೊಲ್’ನಿಂದ ಬೊಸವೆ (೬೦ ಕಿ.ಮೀ) ಕಾಲ್ನಡಿಗೆಯಲ್ಲಿ ಸಾಗಿದ್ದರು. ೧೯೪೭ ರ ವರೆಗೆ ಗುಜರಾತಿನ ಸಂಸ್ಥಾನಗಳು ಬ್ರಿಟಿಷ್ ಆಡಳಿತದಲ್ಲಿ ಇರದೆ ತಮ್ಮದೇ ಆದ ರೈಲ್ವೇ ವ್ಯವಸ್ಥೆ ಹೊಂದಿದ್ದವು. ರಾಜಪುತಾನ ಮತ್ತು ಕೇರಳದಲ್ಲಿ ಕೆಲವೊಮ್ಮೆ ಬಂಡಿಯಲ್ಲಿ ಹೋಗಿದ್ದರು. ಪ್ರೇಮಾನಂದರು ಸ್ವಾಮಿಯವರು ಅಮೆರಿಕಕ್ಕೆ ತೆರಳುವ ಮೊದಲು ಮಾಡುತ್ತಿದ್ದ ಪ್ರವಾಸಗಳಲ್ಲಿ ತಮ್ಮ ದಪ್ಪ ಕಂಬಳಿ ಹಾಗೂ ೨೦ ಕೆ.ಜಿಗೂ ಅಧಿಕ ಭಾರವಿರುವ ಪುಸ್ತಕಗಳನ್ನು ಒಯ್ಯುತ್ತಿದ್ದರೆಂದು ತಿಳಿಸಿದ್ದಾರೆ. ಇದರಿಂದ ಸ್ವಾಮಿಗಳ ಬಹುತೇಕ ಪ್ರಯಾಣ ರೈಲಿನಲ್ಲಿ ಸಾಗುತ್ತಿದ್ದಿತು ಮತ್ತು ಅವರು ಪ್ರಯಾಣದಲ್ಲಿ ಪುಸ್ತಕಗಳನ್ನು ಓದುತ್ತಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.
೧೮೮೬-೧೮೯೦ ರ ಅವಧಿಯ ಸ್ವಾಮಿಯವರ ಪ್ರವಾಸದ ವಿವರಗಳನ್ನು ನೋಡಿದರೆ ಒಂದು ಕುತೂಹಲಕರ ಅಂಶ ಹೊರಬರುತ್ತದೆ. ೧೮೯೦ ರಲ್ಲಿ ಆಲ್ಮೋರದಲ್ಲಿ ಸ್ವಾಮಿಗಳು ಲಾಲ್’ಬದ್ರಿ ಷಹಾ ಮತ್ತು ಡೆಹ್ರಾಡೂನ್’ನಲ್ಲಿ ಪಂಡಿತ ಆನಂದ ನಾರಾಯಣ್ ಅತಿಥಿಗಳಾಗಿದ್ದರು. ಇವರಿಬ್ಬರನ್ನು ಹೊರತು ಪಡಿಸಿ ಈ ಅವಧಿಯಲ್ಲಿ ಅವರ ಅತಿಥೇಯರೆಲ್ಲರೂ ಬಂಗಾಳಿಗಳೇ ಆಗಿದ್ದರು. ದೆಹಲಿ ತೊರೆದ ನಂತರ ೧೮೯೧-೧೮೯೩ ರ ಅವಧಿಯಲ್ಲಿ ಅವರಿಗೆ ಆಶ್ರಯ ನೀಡಿದವರೆಲ್ಲರೂ ಬಂಗಾಳಿಗಳಲ್ಲದೆ ಇತರರಾಗಿದ್ದರು. ಆಳ್ವಾರ್ , ಖಾಂಡ್ವಾ , ಬೆಳಗಾವಿ ,ಹೈದರಾಬಾದ್ , ತಿರುವನಂತಪುರ , ಮದ್ರಾಸ್ ಹಾಗೂ ಬಾಂಬೆಯಲ್ಲಿ ಅವರಿಗೆ ಸ್ಥಳೀಯರಂತೆಯೇ ಬಂಗಾಳಿ ಅತಿಥೇಯರು ಸಿಕ್ಕಿದ್ದರು. ಸ್ವಾಮಿಗಳು ರಾಜರು ,ದಿವಾನರು ಮತ್ತು ಶ್ರೀಮಂತ ಸೇಠರಲ್ಲಿ ಆಶ್ರಯ ಪಡೆದಾಗ ಅವರ ವಸತಿ , ಊಟಗಳು ಉನ್ನತ ಮಟ್ಟದಲ್ಲಿರುತ್ತಿದ್ದವು. ಸ್ವಾಮಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವಾಗ ಪರಿಚಯ ಪತ್ರಗಳನ್ನು ಒಯ್ಯುತ್ತಿದ್ದರು. ಉನ್ನತ ಮಟ್ಟದಿಂದ ಬಂದ ಪರಿಚಯ ಪತ್ರಗಳು ಆ ಮಟ್ಟದ ಜನರನ್ನೇ ಗುರುತಿಸುತ್ತಿದ್ದವು.
ತಿರುವನಂತಪುರದಿಂದ ಪ್ರಾರಂಭಿಸಿ ಮದ್ರಾಸ್ ಬಿಡುವವರೆಗ ಅವರು ಮನ್ಮಥನಾಥ ಭಟ್ಟಾಚಾರ್ಯನ ಹೆಂಡತಿ ಮಾಡುತ್ತಿದ್ದ ಬಂಗಾಳಿ ಅಡುಗೆಯನ್ನೇ ಉಣ್ಣುತ್ತಿದ್ದರು. ಮೈಸೂರು , ತಿರುವನಂತಪುರ , ಮದ್ರಾಸಿನಲ್ಲಿ ಅವರಿಗೆ ಪರಿಚಿತರಾದವರಲ್ಲಿ ಹೆಚ್ಚಿನವರು ಬ್ರಾಹ್ಮಣರಾಗಿದ್ದರು. ದಕ್ಷಿಣ ಭಾರತದ ಬ್ರಾಹ್ಮಣರು ಯಾವುದೇ ಬಗೆಯ ಮಾಂಸವನ್ನು ಮುಟ್ಟದಿರುವುದು ಮತ್ತು ಪರಿಶುದ್ಧ ಶಾಖಾಹಾರಿಗಳಾಗಿರುವುದು ಸ್ವಾಮಿಗಳು ಅವರ ಮನೆಗಳಲ್ಲಿ ದೀರ್ಘ ಕಾಲ ಊಟ ಮಾಡುವುದಕ್ಕೆ ಅಡ್ಡಿಯಾಗಿದ್ದವು. ಊಟ ಮಾತ್ರವಲ್ಲ ದಕ್ಷಿಣದವರ ಆಚಾರ, ವಿಚಾರ , ಜೀವನ ಪದ್ದತಿಗಳು ಬಂಗಾಳಿಗಳಿಗಿಂತ ಬಹಳ ಭಿನ್ನವಾಗಿದ್ದವು. ಇವೆಲ್ಲ ಕಾರಣಗಳಿಂದ ಸ್ವಾಮಿಗಳು ಎಲ್ಲಿಗೇ ಹೋಗಲಿ ಆದಷ್ಟು ಬಂಗಾಳಿಗಳನ್ನು ಹುಡುಕುತ್ತಿದ್ದರು. ಆ ಕಾಲದಲ್ಲಿ ಕಲ್ಕತ್ತ ಬ್ರಿಟಿಷ್ ಭಾರತದ ರಾಜಧಾನಿಯಾಗಿದ್ದರಿಂದಲೂ ಮತ್ತು ಅಲ್ಲಿ ಇಂಗ್ಲಿಷ್ ಶಿಕ್ಷಣ ಬೇರೆ ಕಡೆಗಿಂತ ಹೆಚ್ಚು ಇದ್ದುದರಿಂದಲೂ ಸರ್ಕಾರದ ಸೇವೆಯಲ್ಲಿ ಬಂಗಾಳಿಗಳು ಭಾರತದಾದ್ಯಂತ ಹೆಚ್ಚು ಕಂಡು ಬರುತ್ತಿದ್ದರು. ಇದು ಸ್ವಾಮಿಗಳ ಭಾರತದ ಅಲೆದಾಟದಲ್ಲಿ ಎದ್ದು ಕಾಣುತ್ತದೆ. ಸ್ವಾಮಿಗಳ ಎಲ್ಲ ಅತಿಥೇಯರ ಪೈಕಿ ಖೇತ್ರಿ ಮಹಾರಾಜ ಅಜಿತ್ ಸಿಂಗ್ ಮತ್ತು ಮನ್ಮಥನಾಥ ಭಟ್ಟಾಚಾರ್ಯರ ಸ್ನೇಹ ಸ್ವಾಮಿಯವರಿಗೆ ಆರ್ಥಿಕ ನೆರವು ಮತ್ತು ನಂತರದ ದಿನಗಳಲ್ಲಿ ಬೇರೆ ಬಗೆಯ ಬೆಂಬಲ ದೊರಕಿಸಿಕೊಡುವಲ್ಲಿ ನೆರವಾದವು. ವಾರಣಾಸಿಯಲ್ಲಿರುವಾಗ ಪ್ರಮದದಾಸ ಮಿತ್ರರೊಂದಿಗೆ ನಡೆಸಿದ ವೇದ , ಶಾಸ್ತ್ರಗಳನ್ನು ಕುರಿತಾದ ಚರ್ಚೆಗಳು ಮತ್ತು ಖೇತ್ರಿಯಲ್ಲಿ ಪಂಡಿತ ನಾರಾಯಣ ದಾಸರಿಂದ ಸಂಸ್ಕೃತ ವ್ಯಾಕರಣದಲ್ಲಿ ಪಡೆದ ಶಿಕ್ಷಣ ಮುಂದೆ ಅವರಿಗೆ ಬಹಳ ನೆರವಾದವು. ಪೋರಬಂದರಿನಲ್ಲಿ ಶಂಕರ ಪಾಂಡುರಂಗ , ಜುನಾಗಢದಲ್ಲಿ ಸೂರಜರಾಮ್ ತ್ರಿಪಾಠಿ , ಖೇತ್ರಿಯಲ್ಲಿ ಶಂಕರಲಾಲ್ ಮತ್ತು ಸುಂದರಲಾಲ್ ಮುಂತಾದ ಪಂಡಿತರೊಂದಿಗೆ ನಡೆಸಿದ ಚರ್ಚೆಗಳು, ಗಳಿಸಿದ ಜ್ಞಾನ ಪರಿಮಿತವಾಗಿದ್ದಿತು.
೧೮೯೦ಕ್ಕಿಂತ ಮುಂಚೆ ಸ್ವಾಮಿಗಳ ಪ್ರವಾಸ ಬಂಗಾಳ ಮತ್ತು ಉತ್ತರ ಭಾರತದ ಕೆಲ ಭಾಗಗಳ ೨-೩ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದ್ದಿತು. ಈ ಅವಧಿಯಲ್ಲಿ ಅನಿವಾರ್ಯವಾಗಿ ಅವರು ಕೆಲವು ಸಲ ಧರ್ಮ ಛತ್ರಗಳಲ್ಲಿದ್ದು ಸಾಮಾನ್ಯ ಜನರ , ಸಾಧು ಸಂತರೊಂದಿಗೆ ಅತ್ಯಲ್ಪ ಕಾಲದ ಸಂಪರ್ಕಕ್ಕೆ ಬಂದಿರುವ ಸಾದ್ಯತೆಗಳಿವೆ. ಇದು ಹೊರತಾಗಿ ಸ್ವಾಮಿಗಳು ತಾವಾಗಿಯೇ ಎಲ್ಲಿಯೂ ಕೆಳವರ್ಗದವರ ಸ್ನೇಹ ಮಾಡಿದ್ದಾಗಲಿ , ಅವರ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದ್ದಾಗಲಿ ಇಲ್ಲವೇ ಇಲ್ಲ. ಅವರು ಯಾವುದೇ ಹೊಲೆಯನೊಂದಿಗೆ ಮಾತನಾಡಿದ್ದಾಗಲಿ, ಬೆರೆತದ್ದಾಗಲಿ ದಾಖಲೆಯಲ್ಲಿಲ್ಲ. ಸ್ವಾಮಿಗಳು ಶಿಷ್ಯ ಶರತ್’ಚಂದ್ರ ಚಕ್ರವರ್ತಿಗೆ ಮಾತುಕತೆಯ ನಡುವೆ ಆಗ್ರಾದಿಂದ ಪೂನಾಕ್ಕೆ ಕಾಲ್ನಡಗೆಯಲ್ಲಿ ಹೋಗುತ್ತಿದ್ದೆ ಆಗ ಹೊಲೆಯನಿಂದ ಚುಟ್ಟ ಪಡೆದು ಸೇದಿದೆ ಎಂದ ಹೇಳಿರುವುದರ ಹೊರತು ಅವರು ಕೆಳಜಾತಿಯವರೊಂದಿಗೆ ಇದ್ದೆನೆಂದು ಎಲ್ಲಿಯೂ ಹೇಳಿಲ್ಲ. ಅದನ್ನು ‘ದಿ ಲೈಪ್-೧೯೧೪’ ಕಲ್ಪಿಸಿಕೊಂಡಿದೆ.
ಭಾರತದಲ್ಲಿ ಅಲೆಮಾರಿ ಸಂನ್ಯಾಸಿ ಕುರಿತಾದ ಒಂದು ಪಾರಂಪರಿಕ ಕಲ್ಪನೆಯಿದೆ. ಸೊಂಟಕ್ಕೆ ತುಂಡು ಬಟ್ಟೆ ಅಥವಾ ಪಂಚೆ, ಮೈಮೇಲೆ ತೆಳುವಾದ ವಸ್ತ್ರ , ಭುಜದ ಮೇಲೆ ಸಣ್ಣ ಬಟ್ಟೆ , ಒಂದು ಕೈಯಲ್ಲಿ ಕಮಂಡಲು , ಇನ್ನೊಂದು ಕೈಯಲ್ಲಿ ಹಿಡಿದಿರುವ ಊರುಗೋಲು ಅಥವಾ ಕೈಯಲ್ಲಿ ಹಿಡಿದು ಭುಜದ ಮೇಲಿರಿಸಿಕೊಳ್ಳುವ ಸಣ್ಣ ಕೋಲು , ಆ ಕೋಲಿನ ತುದಿಗೆ ಸಣ್ಣ ಬಟ್ಟೆಯ ಗಂಟು , ಅಲ್ಪ ಸ್ವಲ್ಪ ಆಹಾರ , ದಪ್ಪನೆಯ ಕಾಲ್ಮರೆ ಈ ಕಲ್ಪನೆಯ ಪೂರ್ಣ ಚಿತ್ರಣ ಒದಗಿಸುತ್ತದೆ. ಭಾರತದಲ್ಲಿ ಸಂನ್ಯಾಸಿಗಳು ಸಾಮಾನ್ಯವಾಗಿ ಹೊಲಿದ ಬಟ್ಟೆಗಳನ್ನು ಉಡುತ್ತಿರಲಿಲ್ಲ. ನಂತರ ಕಾಲದಲ್ಲಿ ಅದು ಬದಲಾಗಿ ಸಂನ್ಯಾಸಿಗಳು ಕಾವಿ ಪಂಚೆ ಮತ್ತು ತೆಳುವಾದ ಬನೀನ್’ನಂತಹ ಮೇಲಂಗಿ ಉಡತೊಡಗಿದರು. ತಿರುವನಂತಪುರದ ಸುಂದರರಾಮ ಅಯ್ಯರ್ ಮಗ ಕೆ.ಎಸ್ ರಾಮಸ್ವಾಮಿ ಶಾಸ್ತ್ರಿಗಳು ಸ್ವಾಮಿಯವರು ಆ ಕಾಲದ ಇತರ ಸಂನ್ಯಾಸಿಗಳಿಗಿಂತ ಭಿನ್ನವಾಗಿ ಕಿತ್ತಳೆ ಬಣ್ಣದ ಕೋಟ್ ಮತ್ತು ಮುಂಡಾಸು ಧರಿಸುತ್ತಿದ್ದರೆಂದು ಹೇಳಿದ್ದಾರೆ. ಈ ಉಡುಪನ್ನು ನೋಡಿಯೇ ೧೪ ವರ್ಷದವರಾಗಿದ್ದ ರಾಮಸ್ವಾಮಿ ಶಾಸ್ತ್ರಿಗಳು ತಮ್ಮ ತಂದೆಯ ಹತ್ತಿರಕ್ಕೆ ಓಡಿ ಹೋಗಿ ಮಹಾರಾಜರು ಬಂದಿದ್ದಾರೆಂದು ಹೇಳಿದ್ದರು. ರಾಮಸ್ವಾಮಿ ಶಾಸ್ತ್ರಿಯವರ ತಮ್ಮ ಅವರ ಉಡುಗೆ ನೊಡಿ ಅವರೊಬ್ಬ ಮುಸ್ಲಿಂ ಎಂದು ಭಾವಿಸಿದ್ದರು. ಜಿ.ಎಸ್ ಭಾಟೆಯಯವರು ಸ್ವಾಮಿಗಳು ಉಟ್ಟ ಬಟ್ಟೆಯ ಬಣ್ಣ ಕಾವಿಯಾಗಿದ್ದರೂ ಅದು ಸಂನ್ಯಾಸಿಗಳ ಉಡುಗೆಗಳಿಗಿಂತ ಭಿನ್ನವಾಗಿತ್ತು ಎಂದಿದ್ದಾರೆ. ಹರಿಪದ ಮಿತ್ರ ಬರೆದ ಪತ್ರದಲ್ಲಿ ಸ್ವಾಮಿಗಳು ಕಾವಿ ಬಟ್ಟೆಯುಟ್ಟು, ಅದೇ ಬಣ್ಣದ ಮುಂಡಾಸು ಧರಿಸಿದ್ದರು , ಮಹಾರಾಷ್ಟ್ರ ಶೈಲಿಯ ಚಪ್ಪಲಿ ಧರಿಸಿದ್ದರು ಎಂದಿದ್ದಾರೆ.
‘ದಿ ಲೈಫ್-೧೯೧೪’ ಒದಗಿಸುವ ಸ್ವಾಮಿಗಳ ಪರಿವ್ರಾಜಕ ಜೀವನದ ವರ್ಣನೆ ನೋಡಿದರೆ ಸ್ವಾಮಿಗಳ ಉಡುಗೆ, ತೊಡುಗೆ ಪಾರಂಪರಿಕವಾಗಿದ್ದಿತೆಂದು ಭಾಸವಾಗುತ್ತದೆ. ಆದರೆ ಸ್ವಾಮಿಗಳ ಈ ದಿನಗಳ ಫೋಟೊಗಳು ಬೇರೆಯದೇ ಆಗಿ ಕಾಣುತ್ತವೆ. ಸ್ವಾಮಿಯವರು ಪರಿವ್ರಾಜಕರಾಗಿದ್ದಾಗಿನ ಅವರ ೬ ಭಾವಚಿತ್ರಗಳು ಲಭ್ಯವಿವೆ. ಇವುಗಳಲ್ಲಿ ಮೂರರಲ್ಲಿ ಸ್ವಾಮಿಗಳು ಕೋಲು ಹಿಡಿದು ಸಂಚಾರಕ್ಕೆ ಹೊರಡುತ್ತಿರುವ ಸಂನ್ಯಾಸಿಯಂತೆ ಕಾಣಿಸಿಕೊಂಡಿದ್ದಾರೆ. ಇನ್ನು ಉಳಿದ ಮೂರು ಚಿತ್ರಗಳಲ್ಲಿ ಒಂದರಲ್ಲಿ ಅವರ ನಡುವಿನ ಭಾಗದವರೆಗಿನ ದೇಹ ಮಾತ್ರವಿದ್ದರೆ, ಎರಡನೆಯದರಲ್ಲಿ ಕುರ್ಚಿಯ ಮೇಲೆ ಕೋಟು ಧರಿಸಿ ಕುಳಿತಿದ್ದಾರೆ ಮತ್ತು ಮೂರನೆಯದರಲ್ಲಿ ಪದ್ಮಾಸನದಲ್ಲಿದ್ದಾರೆ. ಅವರ ನಡುವಿನ ಭಾಗದವರೆಗಿನ ಚಿತ್ರವನ್ನು ಡಿಸೆಂಬರ್ ೧೮೯೨ ರಲ್ಲಿ ಯುವರಾಜ ಮಾರ್ತಾಂಡ ವರ್ಮ ತಿರುವನಂತಪುರದಲ್ಲಿ ತೆಗೆದಿದ್ದರು. (48) ಅವರು ಕುಳಿತಿರುವ ಎರಡನೆಯ ಚಿತ್ರವನ್ನು ಅಕ್ಟೋಬರ್ ೧೮೯೨ ರಲ್ಲಿ ಬೆಳಗಾವಿಯ ಸ್ಟುಡಿಯೋ ಒಂದರಲ್ಲಿ ತೆಗೆಯಲಾಯಿತು. ನಿಂತಿರುವ ಮೂರು ಚಿತ್ರಗಳಲ್ಲಿ ಎರಡನ್ನು ಬೆಂಗಳೂರು ಮತ್ತು ಒಂದನ್ನು ಹೈದರಾಬಾದ್’ನಲ್ಲಿ ತೆಗೆಯಲಾಯಿತು. (49) ಹರಿಪದ ಮಿತ್ರರವರು ೧೮/೧೦/೧೮೯೨ ರಲ್ಲಿ ಬರೆದ ಪತ್ರದಲ್ಲಿ ತಾವು ನುಣ್ಣಗೆ ಮುಖ ಕ್ಷೌರ ಮಾಡಿಕೊಂಡಿದ್ದ ಸ್ವಾಮಿಯವರನ್ನು ಕಂಡಿದ್ದಾಗಿ ದಾಖಲಿಸಿದ್ದಾರೆ. ಬೆಳಗಾವಿಯಿಂದ ಸ್ವಾಮಿಗಳು ಒಂದೆರಡು ದಿನಗಳಲ್ಲಿಯೇ ಗೋವಾಕ್ಕೆ ಹೋದರು. ಕೆಲದಿನಗಳಲ್ಲೆ ಅಷ್ಟೊಂದು ಉದ್ದದ ಮೀಸೆ ಮತ್ತು ಗಡ್ಡ ಬೆಳೆದಿರಲು ಸಾದ್ಯವಿಲ್ಲ. ಆದ್ದರಿಂದ ಅವರ ಗಡ್ದ ಹೊಂದಿರುವ ಛಾಯಾಚಿತ್ರ ಮದ್ರಾಸ್ ಅಥವಾ ಹೈದರಾಬಾದ್’ನಲ್ಲಿ ತೆಗೆದಿರಬಹುದು.
‘ದಿ ಲೈಫ್-೧೯೧೪’ ಸ್ವಾಮಿಯವರು ಕೋಲು ಹಿಡಿದು ಪರಿವ್ರಾಜಕ ಭಂಗಿಯಲ್ಲಿ ನಿಂತಿರುವ ಫೋಟೊಗಳನ್ನು ಪ್ರಕಟಿಸಿದೆ. ಈ ಫೋಟೊಗಳ ಹಿನ್ನೆಲೆಯನ್ನು ಗಮನಿಸಿದರೆ ಸ್ಟುಡಿಯೋದಲ್ಲಿ ಸಜ್ಜಾಗಿ ಬಂದ ಸ್ವಾಮಿಯವರ ಎರಡು ಚಿತ್ರಗಳನ್ನು ಹಿಂಬದಿಯಲ್ಲಿ ಎರಡು ವಿಭಿನ್ನ ಪರದೆಗಳನ್ನು ಬಳಸಿ ತೆಗೆದಂತಿದೆ. ಅವು ಸ್ವಾಮಿಯವರು ನಿಜವಾಗಿಯೂ ಸಂಚಾರದಲ್ಲಿರುವಾಗ ಅಕಸ್ಮಾತ್ತಾಗಿ ತೆಗೆದ ಚಿತ್ರಗಳಲ್ಲವೆನ್ನುವುದು ಸ್ಪಷ್ಟ. ಸ್ವಾಮಿಗಳು ಸ್ಟುಡಿಯೋಕ್ಕೆ ಸಿದ್ಧರಾಗಿ ಹೋಗಿ ಛಾಯಾಚಿತ್ರ ತೆಗೆಸಿಕೊಂಡರು ಎನ್ನುವುದು ಮುಜುಗರಕ್ಕೆ ಕಾರಣವಾಗುವುದನ್ನು ಗಮನಿಸಿದ ಪ್ರಕಾಶಕರು ‘ದಿ ಲೈಫ್-೧೯೩೩’ ಎರಡನೇ ಆವೃತ್ತಿ ಬರುವ ವೇಳೆಗೆ ಸ್ಟುಡಿಯೂ ಹಿನ್ನೆಲೆಯನ್ನು ತಿದ್ದಿ , ಸ್ವಾಮಿಗಳು ಒರಟು ರಸ್ತೆಯಲ್ಲಿ ಹೋಗುತ್ತಿರುವಂತೆ ಬಿಂಬಿಸುವ ಫೋಟೊವನ್ನು ಪ್ರಕಟಿಸಿ ಸ್ವಾಮಿಗಳ ಜೀವನವನ್ನು ನೈಜವಾಗಿ ಅರಿಯುವಲ್ಲಿ ನೆರವಾಗುವ ಒಂದು ಮುಖ್ಯ ಕುರುಹನ್ನು ಮಾರ್ಪಡಿಸಿದ್ದಾರೆ.
ಸ್ವಾಮಿಗಳ ಪ್ರವಾಸದ ಉದ್ದೇಶ ಏನಾಗಿದ್ದಿತು ಎನ್ನುವುದಕ್ಕೆ ಈಗ ಭಾರತವನ್ನು ಜಾಗ್ರತಗೊಳಿಸುವುದ ಆಗಿದ್ದಿತು ಎನ್ನುವ ಒಕ್ಕೊರಲಿನ ಉತ್ತರ ಬರುತ್ತದೆ. ಸ್ವಾಮಿ ವಿವೇಕಾನಂದರ ‘ಕಂಪ್ಲೀಟ್ ವರ್ಕ್ಸ್’ ಕೃತಿಗಳಿಗೆ ಮೊದಲ ಸಂಪುಟದಲ್ಲಿ ಮುನ್ನುಡಿ ಬರೆದ ನಿವೇದಿತಾ ಸ್ವಾಮಿಗಳು ತಮ್ಮ ಪ್ರವಾಸದಿಂದ ಭಾರತದ ನೈಜ ಸ್ಥಿತಿಗತಿಗಳನ್ನು ಸನಿಹದಿಂದ ಕಂಡರು ಎಂದು ಬರೆದರು. ಇದನ್ನು ಅನುಸರಿಸಿ ಉಳಿದವರು ಸ್ವಾಮಿಯವರಿಗೆ ಭಾರತೀಯ ಸಮಾಜದ ಬಗ್ಗೆ ತಳಸ್ಪರ್ಶಿ ತಿಳಿವಳಿಕೆಯಿದ್ದೆತೆಂದು ಲಂಬಿಸಿ ಪ್ರಚಾರ ಮಾಡಿದರು. ಸ್ವಾಮಿಯವರು ಬಂಗಾಳಿಯಲ್ಲಿ ಬರೆದ ‘ಬರ್ತಮಾನ ಭಾರತ್ ‘ ಎನ್ನುವ ಲೇಖನ ಮೊದಲಿಗೆ ಉಧ್ಬೋಧನ ಪತ್ರಿಕೆಯ ಮಾರ್ಚ್ ೧೮೯೯ ರ ಸಂಚಿಕೆಯಲ್ಲಿ ಪ್ರಕಟಗೊಂಡಿತು. ಇದಲ್ಲದೆ ಸ್ವಾಮಿಯವರು ‘ಸ್ಕೆಚ್ ಆಫ್ ದಿ ಲೈಫ್ ಆಫ್ ಪವಹಾರಿ ಬಾಬಾ , ‘ ಆರ್ಯನ್ಸ್ ಅಂಡ್ ದಿ ತಮಿಳಿಯನ್ಸ್’ ಮತ್ತು ‘ಇಂಡಿಯಾಸ್ ಮೆಸೇಜ್ ಟು ದಿ ವರ್ಲ್ಡ್’ ಎನ್ನುವ ಇನ್ನಿತರ ಮೂರು ಲೇಖನಗಳನು ಬರೆದಿದ್ದಾರೆ. ಇವುಗಳನ್ನು ಹೊರತುಪಡಿಸಿದರೆ ಭಾರತದ ಬಗ್ಗೆ ಸ್ವಾಮಿಗಳಿಗಿದ್ದ ತಿಳಿವಳಿಕೆಯನ್ನು ಅವರ ಭಾಷಣ , ಪತ್ರ , ಚರ್ಚೆ, ಸಂಭಾಷಣೆಗಳ ತಿಳಿಯಬಹುದು. ಇವೆಲ್ಲ ಆಕರಗಳನ್ನು ಗಮನಿಸಿದರೆ ಸ್ವಾಮಿಗಳಿಗೆ ಭಾರತದ ಬಗ್ಗೆ ಸರಿಯಾದ ತಿಳಿವಳಿಕೆ ಇರಲಿಲ್ಲ ಮತ್ತು ಅವರು ಅದನ್ನು ತಿಳಿಯಲು ಪ್ರಯತ್ನಿಸಲಿಲ್ಲ ಎಂದು ಹೇಳಬಹುದು.
ಸ್ವಾಮಿ ತುರೀಯಾನಂದರು ‘ಸ್ಪಿರಿಚುಯಲ್ ಟಾಕ್’ನಲ್ಲಿ ಹೀಗೆ ಹೇಳುತ್ತಾರೆ –‘ಸ್ವಾಮಿಗಳು ಸಂನ್ಯಾಸ ಸ್ವೀಕರಿಸಿದಾಗ ಅವರ ಕುಟುಂಬ ಭಾರಿ ಸಂಕಷ್ಟದಲ್ಲಿದ್ದಿತು. ಆಗ ಬರಾನಗರ ಮಠದಲ್ಲಿದ್ದ ಅವರನ್ನು ಕಾಣಲು ಅವರ ಕಿರಿಯ ತಮ್ಮ ಬಂದಿದ್ದನು. ಸ್ವಾಮಿಗಳು ಆತನನ್ನು ತೀವ್ರವಾಗಿ ಬೈದು ಹೊರಗಟ್ಟಿದ್ದರು. ಪೆಚ್ಚಾಗಿ ಹೊರನಡೆಯುತ್ತಿದ್ದ ಆತನನ್ನು ಒಳ ಕರೆದು ನಾನು ಸಮಾಧಾನ ಪಡಿಸಿದೆ. ತಮ್ಮನನ್ನು ಏಕೆ ಹಾಗೆ ದಂಡಿಸಿದಿರೆಂದು ಪ್ರಶ್ನಿಸಿದಾಗ ಸ್ವಾಮಿಗಳು ನನಗೆ ಭಾವನೆಗಳಿಲ್ಲ, ಹೃದಯಹೀನನೆಂದು ಭಾವಿಸಿರುವೆಯಾ ? ಒಮ್ಮೆ ನಾನು ಕುಟುಂಬದವರಿಗೆ ಅನುಕಂಪ ತೋರಿದರೆ ಅವರೆಲ್ಲ ಇಲ್ಲಿಗೆ ಬಂದು ನನ್ನ ನೆಮ್ಮದಿ ಹಾಳುಗೆಡವುತ್ತಾರೆ. ನಾನು ಸಂನ್ಯಾಸಿಯಾದಾಗಲೇ ನನ್ನ ತಮ್ಮ , ತಂಗಿಯರು ಹಸಿವಿನಿಂದ ಸಾಯಲೆಂದೇ ಪರಿಗಣಿಸಿದ್ದೆ ಎಂದರು. ಸ್ವಾಮಿಗಳ ಈ ನಿಲುವು ಕಂಡು ನನಗೆ ಅವರ ಬಗ್ಗೆ ಹೆಚ್ಚಿನ ಅಭಿಮಾನ ಮೂಡಿತು ಎಂದಿದ್ದಾರೆ.
ಸ್ವಾಮಿಗಳ ಪ್ರವಾಸಕ್ಕೆ ಇನ್ನೊಂದು ಕಾರಣವೂ ಇದ್ದಿತು. ಹುಮ್ಮಸ್ಸಿನಿಂದ ಸಂನ್ಯಾಸ ಸ್ವೀಕರಿಸಿದ್ದ ಸ್ವಾಮಿಗಳು ಮತ್ತು ಅವರ ಗುರುಭಾಯಿಗಳ ಜೀವನೋಪಾಯಕ್ಕೆ ರಾಮಕೃಷ್ಣರ ಗೃಹಸ್ಥ ಭಕ್ತರೇ ಆಧಾರವಾಗಿದ್ದರು. ಬಲರಾಮ ಬಸು ಮತ್ತು ಸುರೇಂದ್ರನಾಥ ಮಿತ್ರ ಅವರಲ್ಲಿ ಪ್ರಮುಖರಾಗಿದ್ದರು. ಅವರಿಬ್ಬರೂ ೧೮೯೦ ರ ವೇಳೆಗೆ ತೀರಿಕೊಂಡರು. ಉಳಿದ ಗೃಹಸ್ಥ ಭಕ್ತರು ಈ ಸಂನ್ಯಾಸಿಗಳನ್ನು ಸಾಕುವ ಹೊಣೆಯನ್ನು ತಮ್ಮ ಸಂಸಾರ ಜಂಜಾಟಗಳ ನಡುವೆ ಬಹುಕಾಲ ಹೊರುವಷ್ಟು ಸಮರ್ಥರಿರಲಿಲ್ಲ . ಕಾಲಕ್ರಮೇಣ ಗೃಹಸ್ಥರ ಮೇಲಿದ್ದ ತಮ್ಮ ಹೊಣೆಯನ್ನು ಗುರುಭಾಯಿಗಳು ಕಡಿಮೆಗೊಳಿಸಲೇ ಬೇಕಿದ್ದಿತು. ರಾಮಕೃಷ್ಣರ ಕೊನೆಯ ಆಶೆಯಂತೆ ಸ್ವಾಮಿಗಳ ಮೇಲೆ ಮಠವೊಂದನ್ನು ಕಟ್ಟುವ ಹೊಣೆಗಾರಿಕೆಯಿದ್ದಿತು. ಇದಕ್ಕೆ ದಾನಿಗಳು ಬೇಕಾಗಿದ್ದರು. ಇದಕ್ಕಾಗಿ ದಾರಿಯೊಂದನ್ನು ಹುಡುಕುವ ಯತ್ನದಲ್ಲಿದ್ದರು. ಶಾಶ್ವತವಾಗಿ ನೆಲೆ ನಿಲ್ಲಲು ಮಠವೊಂದನ್ನು ಕಟ್ಟದೆ ಅಧ್ಯಾತ್ಮ ಸಾಧನೆಯನ್ನೇ ಗುರಿಯಾಗಿರಿಸಿಕೊಂಡರೆ ಭಾರತದ ಇತರ ಸಂನ್ಯಾಸಿಗಳಂತೆ ತಾವು ಬೀದಿ ಬಿಖಾರಿಗಳಾಗಿ ಅಲೆಯಬೇಕಾಗುತ್ತದೆ ಎನ್ನುವುದು ಅವರಿಗೆ ಮನದಟ್ಟಾಗಿದ್ದಿತು. ಪ್ರಮದದಾಸ ಮಿತ್ರರಂತಹವರಿಂದ ಮಠ ಕಟ್ಟಲು ವಂತಿಗೆ ಎತ್ತಲು ಯತ್ನಿಸಿ ಸೋತಿದ್ದರು. ಕಳ್ಳತನ , ದರೋಡೆ ಮಾಡಿಯಾದರೂ ರಾಮಕೃಷ್ಣರ ಹೆಸರಿನಲ್ಲಿ ಒಂದು ಮಠವನ್ನು ಕಟ್ಟುವಷ್ಟು ತುಡಿತವಿದ್ದಿತು. ತಮಗೆ ಮತ್ತು ಗುರುಭಾಯಿಗಳಿಗೆ ಶಾಶ್ವತ ನೆಲೆ ಕಲ್ಪಿಸಲೇ ಬೇಕಾಗಿದ್ದಿತು. ಇದರೊಂದಿಗೆ ಕೌಟುಂಬಿಕ ಕಾರ್ಪಣ್ಯಗಳು ಅಣಕಿಸುತ್ತಿದ್ದವು. ಇವೆಲ್ಲವುಗಳಿಗೆ ಪರಿಹಾರವಾಗಿ ಪ್ರವಾಸ , ತೀರ್ಥಯಾತ್ರೆ ಅವರಿಗೆ ಕಂಡುಬಂದಿದ್ದವು.
ಸ್ವಾಮಿಗಳ ಅಲೆದಾಟದಲ್ಲಿ ತೀರ್ಥಯಾತ್ರೆ, ಜ್ಞಾನ ಸಂಪಾದನೆ, ದೇಶ ಪರಿಚಯ , ಸಾಮಾಜಿಕ ಸುಧಾರಣೆ –ಇವುಗಳಲ್ಲಿ ಯಾವುದು ಅಥವಾ ಎಲ್ಲವೂ ಮೇಳೈಸಿದ್ದವೇ ? ಹೀಗೆನ್ನುವ ತೀರ್ಮಾನಕ್ಕೆ ಬರಬಹುದೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಅಸಾದ್ಯವೇನಿಲ್ಲ. ಸಂಸ್ಕೃತ ಮತ್ತು ಶಾಸ್ತ್ರಾಧ್ಯಯನಗಳೇ ಗುರಿಯಾಗಿದ್ದರೆ ಅವುಗಳನ್ನು ಕಲಿಸುವ , ಚರ್ಚಿಸುವ ಪಂಡಿತರು ಹುಡುಕಿದರೆ ಕಲ್ಕತ್ತದಲ್ಲಿಯೇ ಸಿಗುತ್ತಿದ್ದರು. ವೇದ, ಶಾಸ್ತ್ರಗಳ ಪಾಂಡಿತ್ಯ ಹೊಂದಿದ್ದ ಪ್ರಮದದಾಸ ಮಿತ್ರರು ವಾರಾಣಾಸಿಯಲ್ಲಿದ್ದರು. ಭಾರತದಲ್ಲಿರುವ ಬಡತನ , ಅನಕ್ಷರತೆ , ಸಾಮಾಜಿಕ ಪಿಡುಗಳನ್ನು ಅರಿಯಲು ಕಲ್ಕತ್ತದಂತಹ ಮಹಾನಗರವೇ ಸಾಕಾಗಿದ್ದಿತು. ಅದಕ್ಕೆ ದೇಶ ಸಂಚಾರ ಬೇಕಾಗಿರಲಿಲ್ಲ. ಅಲ್ಲದೆ ದೇಶ ಸಂಚಾರದಲ್ಲಿರುವಾಗ ಸ್ವಾಮಿಗಳು ಇಂತಹ ಯಾವ ವಿಷಯಗಳನ್ನು ಚರ್ಚಿಸಿಲ್ಲ ಮತ್ತು ವಿವಿಧ ಪ್ರದೇಶಗಳಲ್ಲಿರುವ ಸ್ಥಿತಿಗತಿಗಳನ್ನು ಬಿಡಿಸಿ ನೋಡಲು ಯತ್ನಿಸಿಲ್ಲ. ದೇಶ ಪರಿಚಯ , ಸಮಾಜ ಸುಧಾರಣೆ ಅವರ ಗುರಿಗಳಾಗಿದ್ದವೆಂದು ಹೇಳಲು ಅವರು ಪ್ರವಾಸದಲ್ಲಿ ಇದ್ದ ಜಾಗ , ಪರಿಚಯಿಸಿಕೊಂಡ ವ್ಯಕ್ತಿಗಳು ಅಡ್ಡಿ ಬರುತ್ತವೆ. ಆ ಕಾಲದಲ್ಲಿ ಭಾರತದಲ್ಲಿ ಸಮಾಜ ಸುಧಾರಣೆ ಮಾಡಲು ಯತ್ನಿಸುತ್ತಿದ್ದ ಹಲವು ಸಂಸ್ಥೆ, ಸಂಘಗಳು ಅಸ್ತಿತ್ವದಲ್ಲಿದ್ದವು. ಚಾರಿತ್ರಿಕವಾಗಿ ಸಾಮಾಜಿಕ ಅನಿಷ್ಟತೆಗಳ ವಿರುದ್ಧ ಸೆಣಸಿದ್ದ ಪಂಥಗಳಿದ್ದವು. ಸಾಮಾಜಿಕ ಪರಿಸರದಲ್ಲಿ ಕೆಲಸ ಮಾಡುತ್ತಿದ್ದ ಮಠ, ಮಾನ್ಯಗಳಿದ್ದವು. ಸ್ವಾಮಿಗಳು ಇಂತಹ ಯಾವುದೇ ವ್ಯಕ್ತಿ, ಸಂಘಗಳೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಅಧ್ಯಾತ್ಮ ,ಶಾಸ್ತ್ರ ಚರ್ಚೆ ಅವರ ಹುಡುಕಾಟದ ಗುರಿಯಾಗಿತ್ತು ಎಂದು ಹೇಳುವಂತಿಲ್ಲ. ಏಕೆಂದರೆ ಅವರು ಆಚಾರ್ಯತ್ರಯರ ಮೂಲದ ಯಾವುದೇ ಮಠಗಳಿಗೂ ಭೇಟಿ ಕೊಟ್ಟಿರಲಿಲ್ಲ ಮತ್ತು ಕಾಲಕ್ಕೆ ಅನುಗುಣವಾಗಿ ಶಾಸ್ತ್ರಗಳನ್ನು ಬದಲಿಸಬೇಕೆಂದು ಚರ್ಚಿಸಿರಲಿಲ್ಲ. ಸ್ವಾಮಿಗಳು ತಾವು ನಂಬಿದ್ದ ವೈದಿಕ ಮೂಲಗಳನ್ನೇ ಭಾರತೀಯ ಧರ್ಮಗಳೆಂದು ಭ್ರಮಿಸಿದ್ದರೇ ಹೊರತು ಅದನ್ನು ಒಪ್ಪದ ಆದರೆ ಹಿಂದೂ ಧರ್ಮದಲ್ಲಿಯೇ ಗುರುತಿಸಲ್ಪಡುತ್ತಿದ್ದ ಕರ್ನಾಟಕದ ಶರಣ ಚಳುವಳಿಯಂತಹ ಆಶಯಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಲಿಲ್ಲ. ದೇವಾಲಯದ ಆಡಳಿತ , ಅವುಗಳು ಆಚರಿಸುತ್ತಿದ್ದ ಜಾತಿ ತಾರತಮ್ಯ , ಜಾತಿಯ ಆಧಾರದ ಮೇಲೆ ಭಕ್ತರ ವರ್ಗೀಕರಣ ಮುಂತಾದ ಹಿಂದೂಧರ್ಮಕ್ಕೆ ಅವಹೇಳನದಂತಿರುವ ಸಂಪ್ರದಾಯಗಳನ್ನು ಅರಿಯಲಾಗಲಿ , ವಿರೋಧಿಸಲಾಗಲಿ , ಸುಧಾರಿಸಲಾಗಲಿ ಪ್ರಯತ್ನಿಸಲಿಲ್ಲ. ಹಾಗಾದರೆ ಸ್ವಾಮಿಗಳ ದೇಶ ಸಂಚಾರದ ಉದ್ದೇಶ ಏನಾಗಿದ್ದಿತು ಎಂದರೆ ತೀರ್ಥಯಾತ್ರೆ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು. ದಾಯಾದಿಗಳು ಹಾಕಿದ್ದ ವ್ಯಾಜ್ಯಗಳಿಂದ ಕಲ್ಕತ್ತೆಯಲ್ಲಿ ಅವರ ಕುಟುಂಬ ಅನುಭವಿಸುತ್ತಿದ್ದ ಕಿರುಕುಳ, ಹೊಟ್ಟೆಗಿಲ್ಲದ ಪರಿಸ್ಥಿತಿ , ಅವರ ತಾಯಿ , ತಮ್ಮ, ತಂಗಿಯರು ಕಂಗಾಲಾಗಿರುವ ನೆನಪುಗಳು ಸ್ವಾಮಿಯವರನ್ನು ಅಣಕಿಸುತ್ತಿದ್ದವು. ಇವೆಲ್ಲವುಗಳನ್ನು ಮರೆತು ದೂರವಾಗಿ , ಒಬ್ಬಂಟಿಯಾಗಿ ದೇಶ ಸಂಚಾರ ಮಾಡುವುದು ಅವರ ಏಕೈಕ ಉದ್ದೇಶವಾಗಿದ್ದಿತು. ಇದನ್ನು ಸ್ವಾಮಿಗಳು ೪/೭/೧೮೮೯ ರಂದು ಪ್ರಮದದಾಸ ಮಿತ್ರರಿಗೆ ಬರೆದ ಪತ್ರದಲ್ಲಿ ನೇರವಾಗಿಯೇ ತಿಳಿಸಿದ್ದಾರೆ.
ಸ್ವಾಮಿಗಳ ಕೆಲ ಅಭಿಮಾನಿಗಳು ಭಾರತದ ರಾಜರನ್ನು ಬ್ರಿಟಿಷ್ ಸರ್ಕಾರದ ವಿರುದ್ಧ ಒಗ್ಗೂಡಿಸಲು ಅವರ ಸಂಸ್ಥಾನಕ್ಕೆ ಹೋಗುತ್ತಿದ್ದರೆಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ಖೇತ್ರಿ ರಾಜ ಅಜಿತ್ ಸಿಂಗ್ ಸೇರಿದಂತೆ ಸ್ವಾಮಿಯವರು ಭೇಟಿ ಮಾಡಿದ್ದ ಹಲವು ಸಂಸ್ಥಾನಗಳ ರಾಜರು ೧೮೯೭ ರಲ್ಲಿ ನಡೆದ ವಿಕ್ಟೋರಿಯಾ ರಾಣಿ ಆಳ್ವಿಕೆಯ ಅಮೃತ ಮಹೋತ್ವವಕ್ಕೆ ಹೋಗಿದ್ದರು. ಅಲ್ಲಿ ಅಜಿತ್ ಸಿಂಗ್ ಸೇರಿದಂತೆ ಎಲ್ಲ ರಾಜರು ಬ್ರಿಟಿಷ್ ಸರ್ಕಾರಕ್ಕೆ ಅಡಿಯಾಳಾಗಿ ಇರುವ ಪ್ರತಿಜ್ಞೆ ಮಾಡಿ ಬಂದಿದ್ದರು. ಅಜಿತ್ ಸಿಂಗ್ ಇಂಗ್ಲೆಂಡ್’ನಿಂದ ಮರಳಿದ ನಂತರ ೧೮೯೭ ರಲ್ಲಿ ವಿಕ್ಟೋರಿಯಾ ರಾಣಿ ಅಮೃತ ಮಹೋತ್ವವದ ನೆನಪಿಗಾಗಿ ವಿಕ್ಟೋರಿಯಾ ಆಸ್ಪತ್ರೆ ಮತ್ತು ಜೂಬಿಲಿ ರಸ್ತೆ ನಿರ್ಮಿಸಿದರು. ಸ್ವಾಮಿಗಳು ರಾಮಕೃಷ್ಣ ಮಠ ಸ್ಥಾಪನೆಯ ನಿಯಮಗಳಲ್ಲಿ ಯಾವುದೇ ರಾಜಕೀಯ ನುಸುಳದಂತೆ ನಿಯಮಗಳನ್ನು ರೂಪಿಸಿದ್ದರು. ಅವರಿಗೆ ಬ್ರಿಟಿಷರನ್ನು ಎದುರಿ ಹಾಕಿಕೊಳ್ಳುವ ಇಚ್ಛೆಯಾಗಲಿ , ಧೈರ್ಯವಾಗಲಿ ಇರಲಿಲ್ಲ. ಅಮೆರಿಕದಿಂದ ಶಿಷ್ಯರಿಗೆ ಬರೆದ ಪತ್ರಗಳಲ್ಲಿ ನಾನು ರಾಜಕೀಯ ನಿಯೋಗಿ ಅಲ್ಲ ಎನ್ನುವುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿರಿ ಎಂದು ಕೋರಿದ್ದರು.
ಇನ್ನು ಕೆಲವರು ದುರಾಡಳಿತ , ವಿಲಾಸಿ ಜೀವನ ತೊರೆದು ಪ್ರಜಾಸೇವೆಯಲ್ಲಿ ರಾಜರನ್ನು ತೊಡಗಿಸುವ ಪ್ರಯತ್ನವಾಗಿ ಸ್ವಾಮಿಗಳು ಅವರಲ್ಲಿಗೆ ಹೋಗುತ್ತಿದ್ದರು ಎಂದಿದ್ದಾರೆ. ಅಜಿತ್ ಸಿಂಗ್ ಸ್ವಾಮಿಗಳಿಗೆ ಬಹಳ ಆಪ್ತರಾಗಿದ್ದ ಮಹಾರಾಜರಾಗಿದ್ದರು. ಸ್ವಾಮಿಗಳು ಅಮೆರಿಕದಿಂದ ಅಜಿತ್ ಸಿಂಗ್’ಗೆ ಕಳಿಸಿರುವ ಫೋನೋಗ್ರಾಫ್’ನಲ್ಲಿ ಶಿಕ್ಷಣಕ್ಕಾಗಿ ಶಾಲೆಗಳನ್ನು ತೆರೆಯಲು , ಬಡವರಿಗಾಗಿ ಆಸ್ಪತ್ರೆ ಕಟ್ಟಲು ಕರೆ ನೀಡಿರುವುದಾಗಿ ನಂಬಲಾಗಿದೆ. ಇದು ಅಜಿತ್ ಸಿಂಗ್ ಮೇಲೆ ಎಂತಹ ಪರಿಣಾಮ ಬೀರಿದ್ದಿತು ಎನ್ನುವುದು ಸ್ಪಷ್ಟವಿಲ್ಲವಾದರೂ ಒಂದು ಘಟನೆ ಇದಕ್ಕೆ ಬರೆದ ವಿಮರ್ಶೆಯಂತಿದೆ. ಜುಲೈ ೧೮೯೩ ರಲ್ಲಿ ಅಖಂಡಾನಂದ ಖೇತ್ರಿಯಲ್ಲಿ ಜೀತದಾಳುಗಳ ಮಕ್ಕಳಿಗಾಗಿ ಒಂದು ಶಾಲೆಯೊಂದನ್ನು ಕಟ್ಟಿ ಅವರನ್ನು ಬಿಡುಗಡೆಗೊಳಿಸಬೇಕೆಂದು ಬಯಸಿದ್ದರು. ಇದನ್ನು ತಿಳಿದ ಅಜಿತ್ ಸಿಂಗ್ ಮತ್ತು ಅಧಿಕಾರಿಗಳು ಬಹಳ ಸಿಟ್ಟಾಗಿದ್ದರು. ಅಖಂಡಾನಂದರ ಈ ಪ್ರಯತ್ನ ಮತ್ತು ನಡೆದ ಘಟನೆಗಳು ಅಮೆರಿಕಲ್ಲಿದ್ದ ಸ್ವಾಮಿಯವರ ಕಿವಿಗೆ ಬಿದ್ದಿದ್ದವು. ಆಗ ಸ್ವಾಮಿಯವರು ಅಖಂಡಾನಂದರಿಗೆ ಮಹಾರಾಜರ ದಾರಿಗೆ ಅಡ್ದಬರುವ ಉಸಾಬರಿಯೇಕೆ ? ಅವರು ರಾಜಕೀಯದಿಂದ ದೂರ ಉಳಿಯಬೇಕಾಗಿತ್ತು’ ಎನ್ನುವುದನ್ನು ಕೇಳಿಸಿಕೊಂಡಿರುವುದಾಗಿ ಮಹೇಂದ್ರನಾಥ ದತ್ತ ದಾಖಲಿಸಿದ್ದಾರೆ. (51)
ಖೇತ್ರಿ ಸಂಸ್ಥಾನ ಜೈಪುರ ರಾಜರ ಕೆಳಗಿದ್ದ ಸಂಸ್ಥಾನವಾಗಿದ್ದಿತು. ಅಜಿತ್ ಸಿಂಗ್ ಸರಿಯಾಗಿ ಆಡಳಿತ ನಡೆಸುತ್ತಿಲ್ಲ, ತನ್ನ ಕರ್ತವ್ಯ ನಿರ್ವಹಿಸುತ್ತಿಲ್ಲ ಆದ್ದರಿಂದ ಆತನನ್ನು ಕೆಳಗಿಳಿಸಿ ಆತನ ಮಗನಿಗೆ ಪಟ್ಟ ಕಟ್ಟಬೇಕೆಂದು ಜೈಪುರದಿಂದ ಸೂಚಿಸಲ್ಪಟ್ಟಿದ್ದಿತು. ಅಜಿತ್ ಸಿಂಗ್ ವಿಕ್ಟೋರಿಯ ರಾಣಿಯ ಅಮೃತ ಮಹೋತ್ವವದಲ್ಲಿ ಭಾಗವಹಿಸಲು ಇಂಗ್ಲೆಂಡ್’ಗೆ ಹೋದಾಗ ಅವರ ಸಂಸ್ಥಾನದ ನರೆಹರದಲ್ಲಿ ಜನ ದಂಗೆ ಎದ್ದರು. ಆ ದಂಗೆಯನ್ನು ಹತ್ತಿಕ್ಕಲು ೧೬/೮/೧೮೯೩ ರಂದು ಸೇನೆಯನ್ನು ಕರೆಸಲಾಯಿತು. ಇದಾದ ನಂತರ ಜೈಪುರದ ರಾಜ ಮತ್ತು ಅಜಿತ್ ಸಿಂಗ್ ನಡುವಿನ ಬಾಂಧವ್ಯದಲ್ಲಿ ಒಡಕು ಮೂಡಿತು. ೧೯೦೦ ರ ಕೊನೆಯಲ್ಲಿ ರೋಗದಿಂದ ಬಳಲಿ ಚೇತರಿಸಿಕೊಳ್ಳಲು ಆಗ್ರಾದಲ್ಲಿ ನೆಲೆಸಿದ್ದ ಅಜಿತ್ ಸಿಂಗ್’ರನ್ನು ಎಚ್ಚರಿಸಿ ಜೈಪುರದ ಮುಖ್ಯಮಂತ್ರಿ ಕಾಂತಿಚಂದ್ರ ಮುಖರ್ಜಿ ಕಟುವಾದ ಪತ್ರವೊಂದನ್ನು ಕಳಿಸಿದ್ದರು. ಇದಕ್ಕೆ ಪ್ರತಿಯಾಗಿ ಅಜಿತ್ ಸಿಂಗ್ ಮೋತಿಲಾಲ ನೆಹರುರವರನ್ನು ವಕೀಲರನ್ನಾಗಿ ನೇಮಿಸಿಕೊಂಡು ಪ್ರಭಾವಿ ಬ್ರಿಟಿಷ್ ವಲಯದಲ್ಲಿ ತಮ್ಮ ಪರ ಅಭಿಪ್ರಾಯ ಮೂಡಿಸಲು ಯತ್ನಿಸಿ ವಿಫಲರಾಗಿದ್ದರು. ಜನವರಿ ೧೯೦೧ ರಲ್ಲಿ ಅಜಿತ್ ಸಿಂಗ್ ಸಿಕಂದರ್’ನಲ್ಲಿರುವ ಅಕ್ಬರ್ ಸಮಾಧಿಯ ಗುಮ್ಮಟದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. (52)
ಸ್ವಾಮಿಯವರ ಪ್ರವಾಸದಿಂದ ಈ ವಿಷಯಗಳನ್ನು ಗುರುತಿಸಬಹುದು-
(೧) ಸ್ವಾಮಿಗಳ ೧೮೮೭-೧೮೯೩ ರ ಭಾರತದ ಪ್ರವಾಸ ಸಮಯದಲ್ಲಿ ಅವರು ಗುರುಭಾಯಿಗಳ ಸಂಪರ್ಕದಲ್ಲಿ ಇದ್ದಿರಲಿಲ್ಲ. ೬/೬/೧೮೯೦ ರಂದು ಶಾರದಾನಂದರಿಗೆ ಬರೆದ ಪತ್ರ ಹೊರತಾಗಿ ಬೇರೆ ಯಾವ ಪತ್ರವೂ ದೊರಕದೆ ಇರುವುದರಿಂದ ಸ್ವಾಮಿಗಳಿಗೆ ಈ ಅವಧಿಯಲ್ಲಿ ಉದ್ದೇಶಪೂರ್ವಕವಾಗಿ ಗುರುಭಾಯಿಗಳ ಸಂಪರ್ಕ ತಪ್ಪಿಸಿದ್ದರೆಂದು ತಿಳಿಯಬಹುದು. ಸ್ವಾಮಿಗಳು ಮತ್ತು ಗುರುಭಾಯಿಗಳಾದ ರಾಮಕೃಷ್ಣಾನಂದ , ಶಾರದಾನಂದ ಮತ್ತು ಪ್ರೇಮಾನಂದರ ನಡುವೆ ಸಂಪರ್ಕವೇ ಇರಲಿಲ್ಲ ಎನ್ನಬಹುದು. ಅಖಂಡಾನಂದ , ಬ್ರಹ್ಮಾನಂದ , ಅಭೇದಾನಂದ , ತುರೀಯಾನಂದ ಮತ್ತು ತ್ರಿಗುಣಾತೀತಾನಂದರೊಂದಿಗೆ ಸ್ವಾಮಿಗಳ ಭೇಟಿ ಯಾತ್ರೆಯ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಆಗಿದ್ದಿತು.
(೨) ಸ್ವಾಮೀಜಿಯವರು ಬಂಗಾಲದಿಂದ ಹೊರಗೆ ನೆಲೆಸಿರುವ ಉತ್ತಮ ಸ್ಥಿತಿಯಲ್ಲಿದ್ದ ಬಂಗಾಳಿಗಳನ್ನು ಅವಲಂಬಿಸಿದ್ದರು.
(೨) ರೈಲು ಸಂಪರ್ಕ ಇರದ ಅಲ್ಪ ದೂರದ ಊರುಗಳಿಗೆ ಸ್ವಾಮಿಗಳು ಕಾಲ್ನಡಿಗೆಯಲ್ಲಿ ಕೆಲವೊಮ್ಮೆ ಹೋಗಿದ್ದರು. ಭಾರತದ ಹಳ್ಳಿಗಳ , ಜೀವನದ ಚಿತ್ರಣ ಪಡೆಯುವುದು ಸ್ವಾಮಿಗಳ ಪ್ರವಾಸದ ಕೊನೆಯ ಗುರಿಯೂ ಆಗಿರಲಿಲ್ಲ.
(೩) ಸ್ವಾಮಿಯವರು ಸಂಸ್ಕೃತ ಮತ್ತು ಶಾಸ್ತ್ರ ಪಂಡಿತರನ್ನು ಭೇಟಿಯಾಗುತ್ತಿದ್ದರು ಈ ಸಂಪರ್ಕ ಒಂದೆರಡು ಗಂಟೆಗಳ ಕಾಲ ಹಲವು ವಿಷಯಗಳ ಸಂವಾದ ಮೀರಿ ಮುಂದೆ ಸಾಗುತ್ತಿರಲಿಲ್ಲ.
(೪) ಸ್ವಾಮಿಗಳು ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಜೀವನದ ವೈಶಿಷ್ಟ್ಯ , ಸಂಸ್ಕೃತಿ , ಚಿಂತನೆಗಳನ್ನು ತಿಳಿಯಲು ಪ್ರಯತ್ನಿಸುತ್ತಿರಲಿಲ್ಲ. ಕಲ್ಕತ್ತದಲ್ಲಿ ರಾಮಕೃಷ್ಣರಿಂದ ಕಲಿತದ್ದನ್ನು ಮತ್ತು ಪುಸ್ತಕಗಳನ್ನು ಓದಿ ತಿಳಿದಿದ್ದ ಉತ್ತರ ಭಾರತದ ಧಾರ್ಮಿಕ ತಿಳಿವಳಿಕೆಯನ್ನೇ ಹಿಂದೂ ಧರ್ಮದ ಸಾರ ಎಂದು ತಿಳಿದಿದ್ದರು. ಭಕ್ತಿ ಚಳವಳಿಗಳಿಗೆ ಸಾಮಾಜಿಕ ತಾರತಮ್ಯವೇ ಕಾರಣವಾಗಿದ್ದಿತು ಎಂದು ಅವರಿಗೆ ಗೊತ್ತಾಗಲಿಲ್ಲ. ಕರ್ನಾಟಕದ ಬೆಳಗಾವಿ , ಬೆಂಗಳೂರು ಮತ
Comment Box is loading comments...