|
ಕಡಲ್ಕೊಳ್
ಹತ್ತೊಂಬತ್ತನೇ ಶತಮಾನದ ಅಂತಿಮ ದಶಕಗಳಲ್ಲಿ ತಮಿಳಿನ ಪ್ರಾಚೀನ ಕೃತಿಗಳು ಲಭ್ಯವಾಗುವುದರ ಮೂಲಕ ತಮಿಳಿನ ಪುನರುಜ್ಜೀವನ ಯುಗ ಪ್ರಾರಂಭವಾಯಿತು. ಆ ಕಾಲದಲ್ಲಿ ಲಭ್ಯವಾದ ಸಂಗಂ ಸಾಹಿತ್ಯದ ಆಧಾರದ ಮೇಲೆ ತಮಿಳರು ತಮ್ಮ ಚರಿತ್ರೆ , ಪರಂಪರೆಗಳ ಬಗೆಗೆ ಹೆಮ್ಮೆ ತಾಳತೊಡಗಿದರು. ಈ ಸಂದರ್ಭದಲ್ಲಿ ತಮಿಳು ಸಂಗಂಗಳ ಕಲ್ಪನೆ ಮತ್ತು ಜಲಪ್ರಳಯಗಳ ಐತಿಹ್ಯ ಮಹತ್ವದ್ದಾಗಿ ಕಾಣಿಸತೊಡಗಿತು. ಹಿಂದೊಮ್ಮೆ ಭಾರತದ ದಕ್ಷಿಣ ತುದಿ ತೀರದಲ್ಲಿ ಶ್ರೀಲಂಕಾದಾಚೆಗೆ ಆಫಿû್ರಕಾದ ಸನಿಹದ ಮಡಗಾಸ್ಕರ್ನಿಂದ ಜಾವ,ಸುಮಾತ್ರಗಳವರೆಗೆ ಹರಡಿದ್ದ ಲೆಮೂರಿಯಾ ಎಂದು ಗುರುತಿಸಲ್ಪಟ್ಟ ವಿಶಾಲ ಭೂಪ್ರದೇಶ ಸಮುದ್ರದಲ್ಲಿ ಮುಳುಗಿಹೋಯಿತೆಂದು ಹತ್ತೊಂಬತ್ತನೆಯ ಶತಮಾನದ ಕೆಲವು ವಿಜ್ಞಾನಿಗಳು ಮಂಡಿಸಿದ ವಾದ ತಮಿಳರಿಗೆ ಅಪ್ಯಾಯಮಾನವಾಗಿ ಕಾಣಿಸತೊಡಗಿತು. ಈ ವಾದದ ಆಧಾರದ ಮೇಲೆ ಅವರು ತಮಿಳಗಂ ಚರಿತ್ರೆಯನ್ನು ಕ್ರಿ.ಪೂ ಒಂದು ಲಕ್ಷ ವರ್ಷಗಳ ಪ್ರಾಚೀನಕ್ಕೊಯ್ದರು. ಸಂಗಂ ಸಾಹಿತ್ಯವನ್ನು ನುಂಗಿದ ಕಡಲ್ಕೋಳ್ ಇದೆಂದು ವಾದಿಸಿದರು. ಸಂಸ್ಕೃತ ಪುರಾಣಗಳಲ್ಲಿ ಜನಪ್ರಿಯವಾಗಿದ್ದ ಕುಮಾರಿ ದ್ವೀಪ , ಕುಮಾರಿ ಖಂಡ ಎಂಬುದನ್ನು ಕುಮರಿಕ್ಕಂಡಂ ಎಂದು ತಮಿಳೀಕರಿಸಿ ಇಡೀ ಜಗತ್ತಿನ ಮೂಲ ತಮಿಳರೆಂದು ಸಾಧಿಸಲು ಹೊರಟರು. ವೈಜ್ಞಾನಿಕವಾಗಿ ಭೂಪ್ರದೇಶಗಳು ಮುಳುಗಿ ಹೋದುದಕ್ಕೆ ಯಾವುದೇ ಸಾಕ್ಷ್ಯಗಳು ದಕ್ಕಿಲ್ಲ. ಲೆಮೂರಿಯ ಹಿನ್ನೆಲೆ -ಭೂಗರ್ಭಶಾಸ್ತ್ರಜ್ಞರು ದಕ್ಷಿಣ ಭಾರತ (ಗೊಂಡ್ವಾನ ಪ್ರದೇಶ), ದಕ್ಷಿಣ ಆಫಿû್ರಕ ಮತ್ತು ದಕ್ಷಿಣ ಅಮೆರಿಕಾದಲ್ಲಿ 24.5 ರಿಂದ 28.6 ಕೋಟಿ ವರ್ಷಗಳ ಹಿಂದಿನ ಪರ್ಮಿಯನ್ ಯುಗದಲ್ಲಿ ರೂಪುಗೊಂಡ ಅವಸಾದಿತ ಶಿಲಾಸ್ತರಗಳು ಸರ್ವಸಾಮ್ಯತೆಯಲ್ಲಿರುವುದನ್ನು ಗಮನಿಸಿದ್ದರು. ಈ ಅವಸಾದಿತ ಶಿಲಾಸ್ತರಗಳಲ್ಲಿ (Sedimentary Rock Layers) ಕಂಡುಬಂದ ಭೂಸಸ್ಯ (ಕಾರ್ಡೆಲ್ಸ್) ಮತ್ತು ಭೂಪ್ರಾಣಿ (ಗ್ಲಾಸೋಪೈರಿಸ್) ಪಳೆಯುಳಿಕೆಗಳು ಸಹ ಸರ್ವ ಸಾಮ್ಯತೆ ಹೊಂದಿದ್ದವು. ಸಮುದ್ರದಿಂದ ಬೇರ್ಪಡಿಸಲ್ಪಟ್ಟ ಮೂರು ವಿಭಿನ್ನ ಖಂಡಗಳಲ್ಲಿ ಸರ್ವಸಾಮ್ಯದ ಶಿಲಾಸ್ತರ ಮತ್ತು ಪಳೆಯುಳಿಕೆಗಳು ಲಭ್ಯವಾದುದಕ್ಕೆ ವಿವರಣೆ ನೀಡುವ ಪ್ರಯತ್ನಗಳಾದವು. ಭೂ ಖಂಡಗಳು ಸ್ಥಿರವಾಗಿರುವುದರಿಂದ ಆ ಕಾಲದ ಸಸ್ಯ ಹಾಗೂ ಪ್ರಾಣಿಗಳು ಸಮುದ್ರ ದಾಟಿ ಉಳಿದ ಖಂಡಗಳಿಗೆ ಹಂಚಿಹೋಗಿರುವುದು ಅಸಾಧ್ಯವಾದುದರಿಂದ, ಈ ಪಳೆಯುಳಿಕೆಗಳನ್ನು ಪ್ರತಿನಿಧಿಸುವ ಸಸ್ಯ ಮತ್ತು ಪ್ರಾಣಿಗಳಿದ್ದ ಕಾಲದಲ್ಲಿ ಈ ಖಂಡಗಳನ್ನು ಬೆಸೆದಿದ್ದ ಭೂಖಂಡ/ಭೂಸೇತುವೆಗಳಿದ್ದವೆಂದು ಕಾಲಾನುಕ್ರಮದಲ್ಲಿ ಅವು ಸಮುದ್ರದ ಪಾಲಾಯಿತೆಂದು ವಿವರಿಸುವ ವಾದವನ್ನು ಮೊದಲಿಗೆ ವಿಲಿಯಮ್ ಟಿ ಬ್ರಾಂಡ್'ಫೋರ್ಡ್ ಮುಂದಿರಿಸಿದನು. ಭಾರತ ಮತ್ತು ಮಡಗಾಸ್ಕರಗಳಲ್ಲಿನ ಲೆಮೂರ್ ವಾನರಗಳ ಪಳೆಯುಳಿಕೆಗಳು ಆಫ್ರಿಕಾ ಮತ್ತು ಮಧ್ಯಪೂರ್ವದಲ್ಲಿ ಇರದಿರುವುದನ್ನು ಇಂಗ್ಲೀಷ್ ಜೀವಿಶಾಸ್ತ್ರಜ್ಞ ಫಿಲಿಫ್ ಲುಟ್ಲೆ ಸ್ಕಾಲ್ಟರ್ ಗಮನಿಸಿದನು. ಈ ಆಧಾರದ ಮೇಲೆ 1864ರಲ್ಲಿ ಭಾರತ ಮತ್ತು ಮಡಗಾಸ್ಕರ್ನ್ನು ಬೆಸೆದಿದ್ದ ಭೂಖಂಡವನ್ನು ಲೆಮೂರಿಯಾ ಎಂದು ಕರೆದನು. ಡಾರ್ವಿನ್ ವಿಕಾಸವಾದ ವಿಜ್ಞಾನಿಗಳಲ್ಲಿ ಮನ್ನಣೆ ಗಳಿಸಿದ್ದರಿಂದ ಮೂಲ ವಿಕಸನದ ಅಂಗವಾಗಿ ಸಸ್ಯ ಹಾಗೂ ಪ್ರಾಣಿಗಳು ಇತರ ಖಂಡಗಳತ್ತ ಸಾಗಿರಬಹುದೆಂದು ಒಪ್ಪಲಾಯಿತು. ಮೆಲ್ಷಿಯಾರ್ ನ್ಯೂವೈರ್ 1887 ರಲ್ಲಿ ‘ಎರ್ಟೆಷಿಕ್ಟೆ’ ಕೃತಿಯಲ್ಲಿ ಇಂತಹ ಹಲವಾರು ಮುಳುಗಡೆಯಾದ ಖಂಡಾಂತರ ಭೂ ಸೇತುವೆಗಳನ್ನು ವಿವರಿಸಿ ಜೀವಿಗಳ ಪ್ರಭೇದಗಳ ವಲಸೆ ಮತ್ತು ವಿಕಾಸವನ್ನು ವಿವರಿಸಲು ಯತ್ನಿಸಿದನು. ಡಾರ್ವಿನ್ ವಿಕಾಸವಾದದ ಹಿನ್ನೆಲೆಯಲ್ಲಿ ಸಸ್ಯಶಾಸ್ತ್ರದ ಅಧ್ಯಯನದ ಮುಂದಾಳುವಾಗಿದ್ದ ಜರ್ಮನ್ ಸಂಜಾತ ಎರ್ನ್ಸ್ಟ್ ಹಕೆಲ್ ಜೀವ ವಿಕಸನದ ಹಂತದಲ್ಲಿದ್ದ ಹಲವಾರು ಖಂಡಾಂತರ ಭೂಪ್ರದೇಶಗಳು ಈಗ ಸಮುದ್ರದಲ್ಲಿ ಮುಳುಗಡೆಯಾಗಿರುವುದರಿಂದ ಪಳೆಯುಳಿಕೆಗಳ ಮಧ್ಯದ ಕಳಚಿದ ಕೊಂಡಿಗಳು ಲಭ್ಯವಾಗುತ್ತಿಲ್ಲವೆಂದು ಹೇಳಿದನು. ಸಮುದ್ರದ ಪಾಲಾದ ಭೂಖಂಡ ಕಲ್ಪನೆ ಕೆಲ ಅತೀಂದ್ರಿಯ ವಾದಿಗಳನ್ನು ಸೆಳೆಯಿತು. ಇದರಲ್ಲಿ ಪ್ರಮುಖವಾದವಳು ಥಿಯೋಸೋಫಿಕಲ್ ಸೊಸೈಟಿ ಸ್ಥಾಪಕಳಾದ ಹೆಲೆನಾ ಪೆಟ್ರೋವ್ಸ್ಕಿ ಬ್ಲಾವಟ್ಸ್'ಕಿ. ಈಕೆಯದು ಬಹು ವರ್ಣರಂಜಿತ ಜೀವನ. ಮಿಠಾಯಿ ಅಂಗಡಿಯಲ್ಲಿ ಸಹಾಯಕಿಯಾಗಿ , ಸರ್ಕಸ್ನಲ್ಲಿ ಬತ್ತಲೆಗುದುರೆ ಓಡಿಸುವವಳಾಗಿ ಆರಂಭಿಕ ಜೀವನ ಸಾಗಿಸಿದಳು. ಸ್ಲೊವೇನಿಯಾ ಮೂಲದ ಸಂಗೀತಗಾರನ ಪ್ರೇಯಸಿಯಾಗಿ ಕೆಲಕಾಲ ಕಳೆದಳು. ಸುಲಭ ಜೀವನ ಸಾಗಿಸಬೇಕೆಂದಿದ್ದ ಈಕೆ 1875ರಲ್ಲಿ ಹೆನ್ರಿ ಸ್ಟೀಲ್ ಒಲ್ಕೋಟ್ (1832-1907) ಎಂಬ ನ್ಯೂಯಾರ್ಕ್ನ ವಕೀಲನೊಡನೆ ಥಿಯೋಸೊಫಿûಕಲ್ ಸೊಸೈಟಿ ಸ್ಥಾಪಿಸಿ ಭಾರತಕ್ಕೆ ಬಂದಳು. 1882 ರಲ್ಲಿ ಬ್ಲಾವಟ್ಸ್'ಕಿ ತನಗೆ ದಿವ್ಯಮೂಲದಿಂದ ಬಂದುದೆಂದು ಹೇಳಲಾದ ಪತ್ರಗಳನ್ನು ಪ್ರಕಟಣೆಗಾಗಿ ಪತ್ರಿಕೆಯೊಂದಕ್ಕೆ ಕಳಿಸಿದಳು. ಮುಂದೆ ಈ ಪತ್ರಗಳನ್ನು ಈಕೆಯೇ ಬರೆದಿದ್ದಳೆಂದು ಹಸ್ತಾಕ್ಷರ ತಜ್ಞರು ನಿರ್ಧರಿಸಿದರು. ಈ ಪತ್ರಗಳಲ್ಲಿ ಮಾನವ ಸಂತತಿ ವಿಕಸಿಸಿದ ಹಾದಿಯನ್ನು ಏಳು ಕುಲ ಸಂತತಿಗಳಲ್ಲಿ ವಿವರಿಸಲಾಗಿದ್ದಿತು. ಇದು ಪಾಶ್ಚಾತ್ಯ , ಪೌರಾತ್ಯ ನಂಬಿಕೆ , ವಾಮಾಚಾರ ಮತ್ತು ಅನುಭಾವಗಳ ಮಿಶ್ರಣವಾಗಿದ್ದಿತು. ಈ ಲೇಖನದ ಪ್ರಕಾರ ಮಾನವನಿಗೆ ಏಳು ಸ್ತರದ ಜೀವನವಿದ್ದು ,ಏಳು ಜೀವನ ಚಕ್ರಗಳಲ್ಲಿ ಸಾಗಿ,ಏಳು ಮೂಲ ಕುಲ ಸಂತತಿಗಳಲ್ಲಿ ವಿಕಸನ ಹೊಂದುತ್ತಾನೆ. ಈಕೆಯ ಕಪಟತೆ ಬ್ರಿಟೀಷ್ ಸರ್ಕಾರಕ್ಕೆ ಮನದಟ್ಟಾಯಿತು. ಆದ್ದರಿಂದ ಭಾರತದ ಕಾನೂನಿನ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಯುರೋಪಿಗೆ ಪಲಾಯನಗೈದು ತನ್ನ ಅತೀಂದ್ರಿಯ ವಾದವನ್ನು 1888ರಲ್ಲಿ ‘ದಿ ಸೀಕ್ರೆಟ್ ಡಾಕ್ಟ್ರಿನ್ಸ್ ‘ ಹೆಸರಿನಲ್ಲಿ ಪ್ರಕಟಿಸಿದಳು. ಹಿಂದೆ ಉಚ್ಚ್ರಾಯ ಸ್ಥಿತಿಯಲ್ಲಿ ಈಗ ಅಳಿದುಹೋಗಿರುವ ಅಟ್ಲಾಂಟಿಸ್ ನಾಗರಿಕತೆಯಲ್ಲಿ ಸೃಜಿತವಾದ ‘ದಿ ಸ್ಟಾಂಜಾಸ್ ಆ¥sóï ಝೈಯಾನ್’ ಕೃತಿಯಲ್ಲಿನ ಅಂಶಗಳು ತನಗೆ ಮಹಾತ್ಮರ ಕರುಣೆಯಿಂದ ದಿವ್ಯಾನುಭವದ ಮೂಲಕ ತಿಳಿದು ಬಂದವೆಂದು ಅವೇ ‘’ದಿ ಸೀಕ್ರೆಟ್ ಡಾಕ್ಟ್ರಿನ್ಸ್’ಗೆ ಮೂಲ ಆಕರಗಳೆಂದು ಸಾರಿದಳು. ಇದರ ಪ್ರಕಾರ ಮಾನವನ ಮೊದಲ ಮೂಲ ಕುಲ ಸಂತತಿ ಉತ್ತರ ಧೃವಗಳ ಶಾಶ್ವತ ನೆಲೆಯಲ್ಲಿದ್ದರೆ , ಎರಡನೇ ಮೂಲ ಕುಲ ಸಂತತಿ ಆಕ್ರ್ಟಿಕ್ ಪ್ರದೇಶದ ಹೈಪರ್ಬೊಲೆಯಲ್ಲಿದ್ದಿತು. ಹೈಪರ್ಬೊಲೆ ಭಗ್ನಗೊಂಡು ಆಕ್ರ್ಟಿಕ್ ಸಮುದ್ರದೊಳಗೆ ಮುಳುಗಿತು. ಮೂರನೆಯ ಮೂಲ ಕುಲ ಸಂತತಿ ಲೆಮೂರಿಯಾದಲ್ಲಿದ್ದಿತು. ಈ ಸಂತತಿ ಹನ್ನೆರಡು ಅಡಿ ಎತ್ತರವಿದ್ದು , ದ್ವಿಲಿಂಗಿಗಳಾಗಿ , ಸಂತಾನಕ್ಕಾಗಿ ಮೊಟ್ಟೆ ಇಡುತ್ತಿದ್ದರು. ಡೈನೋಸಾರಸ್ಗಳ ಸಮಕಾಲೀನರಾಗಿದ್ದ ಇವರು ಅವನ್ನು ಸಾಕುಪ್ರಾಣಿಗಳಾಗಿಸಿಕೊಂಡಿದ್ದರು. ಲೆಮೂರಿಯಾದ ಈ ಸಂತತಿಯ ಕೆಲವರು ಅಸಹಜ ಲೈಂಗಿಕ ಸಮಾಗಮ ಹೊಂದಿದರ ಫಲವಾಗಿ ಅಟ್ಲಾಂಟಿಸ್ನಲ್ಲಿ ಪೂರ್ಣ ಮಾನವ ಕುಲ ಸಂತತಿ ಉದಿಸಿತು. ಲೆಮೂರಿಯ ಜನರ ಅಸಹಜ ಲೈಂಗಿಕಾಸಕ್ತಿ ತೋರಿಸಿದುದರಿಂದ ಶಿಕ್ಷೆಯಾಗಿ ಲೆಮೂರಿಯಾ ಭೂಖಂಡ ಸಮುದ್ರದ ಪಾಲಾಯಿತು. ಈಗಿರುವ ಮಾನವರು ಐದನೇ ಮೂಲ ಕುಲ ಸಂತತಿಗೆ ಸೇರಿದವರು. ಮುಂದೆ ಆರನೇ ಮತ್ತು ಏಳನೇ ಮೂಲ ಕುಲ ಸಂತತಿಗಳು ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಾಣಿಸಿಕೊಳ್ಳಲಿವೆ. ಉತ್ತಮ ವಿದ್ಯಾಭ್ಯಾಸ ಹೊಂದಿದ್ದ ಹಲವಾರು ಜನ ಸಹ ಇಂತಹ ತಳಬುಡವಿಲ್ಲದ ಸಿದ್ಧಾಂತ ಹೊಂದಿದ ಪಂಥವನ್ನು ಅನುಸರಿಸಿದ್ದರೆಂಬುದೊಂದು ಸೋಜಿಗ. 1894 ರಲ್ಲಿ ಫ್ರೆಡರಿಕ್ ಸ್ಪೆನ್ಸರ್ ಆಲಿವರ್ ‘ಡ್ವೆಲರ್ ಅನ್ ದಿ ಪ್ಲಾನೆಟ್ಸ್’ ರಚಿಸಿದ ಕೃತಿಯಲ್ಲಿ ಲೆಮೂರಿಯಾ ಭೂಖಂಡ ಮುಳುಗಿದ ನಂತರ ಅದರಲ್ಲಿ ಅಳಿದುಳಿದವರು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕ್ಯಾಲಿಫೋ ರ್ನಿಯಾದ ಷಾಸ್ತಾ ಪರ್ವತಗಳೊಳಗೆ ಕೊರೆದ ಆಳ ಸುರಂಗಗಳಲ್ಲಿ ವಾಸಿಸಿತ್ತಿರುವರೆಂದು , ಅವರು ಆಗೊಮ್ಮೆ,ಈಗೊಮ್ಮೆ ಶುಭ್ರ ವಸ್ತ್ರಧಾರಿಗಳಾಗಿ ಹೊರಜಗತ್ತಿಗೆ ಬರುವರೆಂದು ಹೇಳಲಾಯಿತು. ಕುಮಾರಿ ಖಂಡ ತಮ್ಮ ದಕ್ಷಿಣಕ್ಕಿರುವ ಸಮುದ್ರ ಪಾಲಾದ ಲೆಮೂರಿಯಾ ತಮ್ಮದಲ್ಲದೆ ಬೇರೆ ಯಾರದಾಗಿರುವುದು ಸಾಧ್ಯವೆಂದು ಅದರ ವಾರಸುದಾರರು ತಾವೆಂದು ತಮಿಳರು ಭಾವಿಸಿದರು. ಇಲೈಮೂರಿಯಾ ಹೆಸರಿನಲ್ಲಿ ಮುಳುಗಡೆಯಾದ ಭೂಖಂಡ ಪ್ರಚಾರ ಗಿಟ್ಟಿಸಿತು. ತಮಿಳು ವಿದ್ವಾಂಸರು ಪ್ರಾಚೀನ ತಮಿಳು ಸಾಹಿತ್ಯ ತಿಳಿಸುವ ಕಡಲ್ಕೋಳ್ ಇದೆಂದು ಸಾರತೊಡಗಿದರು. ಇದರ ಆಧಾರದ ಮೇಲೆ ಮುಳುಗಡೆಯಾದ ಭೂನಕ್ಷೆಯನ್ನು ತಯಾರಿಸಿ ಅದನ್ನು ತಮಿಳಗಂನ ಭಾಗವಾಗಿಸಿದರು. ಚೆನ್ನೈ ಮೂಲದ ಮಹಾಲಿಂಗಂ ಇಂಟರ್ನ್ಯಾಷನಲ್ಸೊಸೈಟಿ ¥sóÁರ್ ಇನ್ವೆಸ್ಟಿಗೆಷನ್ ಆ¥sóï ಏನ್ಷಿ0iÉುಂಟ್ ಸಿವಿಲೈಸೆಷನ್ ಸಂಸ್ಥೆ ಕ್ರಿ.ಪೂ 3,00,000 ವರ್ಷಗಳ ಹಿಂದೆ ಮುಳುಗಿತೆಂದು ಹೇಳಲಾದ ತಮಿಳಗಂ ನಕ್ಷೆಯೊಂದನ್ನು ಪ್ರಕಟಿಸಿದೆ. ಈ ನಕ್ಷೆಯಲ್ಲಿ ಮುಳುಗಡೆಯಾದ ಪಾಂಡ್ಯ ಸಾಮ್ರಾಜ್ಯವನ್ನು ಕುಮಾರಿ, ಪೇರು , ಪಹ್ರುಳಿ ನದಿಗಳನ್ನು , ಮೊದಲ ಸಂಗಂನ ಸ್ಥಾನವಾಗಿದ್ದ ಪಾಂಡ್ಯರ ರಾಜಧಾನಿ ತೆನ್ಮಧುರೈಯನ್ನು ಕಾಣಬಹುದು. ಇಪ್ಪತ್ತನೇ ಶತಮಾನದಲ್ಲಿ ಕೆಲ ತಮಿಳು ವಿದ್ವಾಂಸರು ಜಲಾಂತರ್ಗತವಾದ ತಮಿಳಗಂನ ಪ್ರಮಾಣವನ್ನು ನಿರ್ಧರಿಸಲು ಯತ್ನಿಸಿದರು. ಈ ಅಂದಾಜು ಲಕ್ಷಾಂತರ ಚದರ ಕಿ.ಮೀನಿಂದ ಹಲವು ತಾಲುಕು/ಹಳ್ಳಿಗಳಷ್ಟು ವ್ಯತ್ಯಾಸದಲ್ಲಿದ್ದಿತು. 2004ರ ಸುನಾಮಿಯಂತಹ ಘಟನೆಯನ್ನು ತಮಿಳು ಪರಂಪರೆ ಕಡಲ್ಕೋಳ್ ಎಂದು ಕರೆದು ಸೂಚಿಸುತ್ತದೆಯೆಂದು ಕೆಲವರು ಭಾವಿಸುತ್ತಿದ್ದಾರೆ. ಇದನ್ನು ಸಕಾರಣವಾದ ಊಹೆಯೆಂದು ಒಪ್ಪಬಹುದೇ ಹೊರತು ಐತಿಹಾಸಿಕ ಸತ್ಯವೆಂದು ಭಾವಿಸಲು ದಾಖಲೆಗಳಿಲ್ಲ. 2004 ರ ಸುನಾಮಿಯಿಂದ ತೀರದಿಂದ ಎಷ್ಟು ಒಳಗೆ ಅಲೆಗಳು ನುಗ್ಗಬಹುದೆಂಬ ಅಂದಾಜು ದಕ್ಕಿದೆ. ಕಡಲ್ಕೋಳ್ : ಸಾಹಿತ್ಯದಲ್ಲಿ * ಶಿಲಪ್ಪದಿಗಾರಂನಲ್ಲಿ ಕುಮಾರಿಯ ಕೊನೆಯಲ್ಲಿದ್ದ ಭೂಮಿಯನ್ನು ಕಡಲು ನುಂಗಿತೆಂದು ಹೇಳಲಾಗಿದೆ. ಇಲ್ಲಿ ಇಳಂಗೋ ಅಡಿಗಳ್ ಪುಹಾರ್ (ಕಾವೇರಿ ಪಟ್ಟಣ) ಮುಳುಗಿತೆಂದು ಹೇಳಿದ್ದಾನೆ. ಇದೇ ಕೃತಿಯಲ್ಲಿ ಕಡಲ್ ವಡಿಂಪಲಂಬನಿಂದ್ರ ಪಾಂಡ್ಯನ್ ಸಮುದ್ರದೆಡೆಗೆ ಈಟಿಯನ್ನು ಎಸೆದುದರಿಂದ ಕುಪಿತಗೊಂಡ ಸಮುದ್ರ ಪೊಕ್ರುಳಿ ನದಿ ಮತ್ತು ಪಾಣ್ಮಲೈ ಅಡುಕ್ಕಂ ಸೇರಿದ ಭೂಭಾಗವನ್ನು ನುಂಗಿತೆಂದು ಹೇಳಲಾಗಿದೆ. ಮಣಿಮೇಗಲೈ ಕೃತಿಯಲ್ಲಿಯೂ ಇದೇ ಪುನರಾವರ್ತನೆಯಾಗಿದೆ. ಇವರಲ್ಲಿ ಯಾರೊಬ್ಬರು ಈ ಘಟನೆಯನ್ನು ಕಣ್ಣಾರೆ ಕಂಡವರಲ್ಲ. ಅಥವಾ ತಮಗೆ ಬಂದ ಮಾಹಿತಿಯನ್ನು ಪರೀಕ್ಷಿಸಿ ನೋಡುವ ಕಾಲಘಟ್ಟದವರಲ್ಲ. ಸಾಹಿತ್ಯ ಕೃತಿಗಳಲ್ಲಿ ಯಾವಾಗಲೂ ಉತ್ಪ್ರೇಕ್ಷೆಗಳಿಗೆ ಗಮನಾರ್ಹ ಸ್ಥಾನವಿದೆಯೆಂಬುದನ್ನು ಮರೆಯಬಾರದು. (ನೋಡಿರಿ : ಶಿಲಪ್ಪದಿಗಾರಂ ಮತ್ತು ಮಣಿಮೇಗಲೈ). * ಕಲಿತ್ತೊಗೈನಲ್ಲಿ ಪಾಂಡ್ಯನ ಕೆಲ ಭೂಭಾಗ ಕಡಲ ಪಾಲಾದಾಗ ಆತ ಅದಕ್ಕೆ ಹಿಂಜರಿಯದೆ ಚೇರ, ಚೋಳರ ಪ್ರದೇಶಗದತ್ತ ಮುನ್ನುಗ್ಗಿ ತನಗಾದ ನಷ್ಟವನ್ನು ಭರಿಸಿಕೊಂಡನೆಂದು ಹೇಳಲಾಗಿದೆ. * ಮಹಾವಂಶ ಕ್ರಿ.ಪೂ 326ರಲ್ಲಿ ಕಡಲಿನಿಂದ ಕೆಲ ಭೂಭಾಗ ಮುಳುಗಡೆಯಾಯಿತೆಂದು ತಿಳಿಸಿದೆ. ರಾಜಾವಳಿ ಕಥೆಯೂ ಇದನ್ನೆ ಉಲ್ಲೇಖಿಸುತ್ತದೆ. * ತಾವು ಕೇಳಿದ್ದನ್ನು, ಕಂಡಿದ್ದನ್ನು ಅತ್ಯಂತ್ಯ ಉತ್ಪ್ರೇಕ್ಷೆಯಿಂದ ಹೇಳುವ ಸಂಗಂ ಕಾಲದ ಪಾಣಾರ್ಗಳಿಗೆ ತಮ್ಮ ಹಿಂದಿನ ಪರಂಪರೆಯಿಂದ ಕಡಲ್ಕೋಳ್ನಂತಹ ಯಾವುದೇ ಮಾಹಿತಿ ದಕ್ಕದಂತೆ ಕಾಣುವುದಿಲ್ಲ. ಕಡಲ್ಕೋಳ್ : ವಿಜ್ಞಾನದಲ್ಲಿ * ಆಧುನಿಕ ಭೂವಿಜ್ಞಾನ ‘ಫಲಕ ಜರುಗಿಕೆ’ ( Tectonic Shift ) ಮತ್ತು ‘ಖಂಡಾಂತರ ಸರಿತ’ (ಅoಟಿಣiಟಿeಟಿಣಚಿಟ ಆಡಿiಜಿಣ) ಸಿದ್ಧಾಂತಗಳನ್ನು ಮಂಡಿಸಿದೆ. ಅತ್ಯಂತ ಸುಕ್ಲಿಷ್ಟ ಉಪಕರಣಗಳಿಂದ ಅಂತರಿಕ್ಷದಿಂದ ಮಾಡಿದ ಮಾಪನೆಗಳು ಈ ಸಿದ್ಧಾಂತಕ್ಕೆ ಖಚಿತ ಸಾಕ್ಷ್ಯಗಳನ್ನು ಒದಗಿಸಿವೆ. ಆದ್ದರಿಂದಾಗಿ ಈ ಸಿದ್ಧಾಂತ ಬಹುತೇಕ ಎಲ್ಲ ಆಧುನಿಕ ವಿಜ್ಞಾನಿಗಳ ಮನ್ನಣೆ ಗಳಿ¸ ಗಳಿಸಿ ಮುಳುಗಡೆಯಾದ ಲೆಮೂರಿಯಾ ಭೂಖಂಡವಾದ ಅವೈಜ್ಞಾನಿಕ ಮತ್ತು ಅಪ್ರಸ್ತುತವೆಂದು ಖಚಿತವಾಗಿದೆ. ಆಧುನಿಕ ವಿಜ್ಞಾನದ ಪ್ರಕಾರ ಭೂಖಂಡಗಳು ಸ್ಥಿರವಾದ ನೆಲೆಗಳಲ್ಲ. ಭೂಖಂಡಗಳು 15-25 ಕಿ.ಮೀ ದಪ್ಪದ ಶಿಲಾಫಲಕಗಳಾಗಿದ್ದು ಭೂಮಿಯೊಳಗೆ ಇನ್ನೂ ಗಟ್ಟಿಗೊಳ್ಳದ ಸ್ತರದ ಮೇಲೆ ಸರಿದಾಡುತ್ತಿವೆ. ಇಂತಹ ಸರಿದಾಟದಲ್ಲಿ ಒಂದನ್ನೊಂದು ತಳ್ಳಿದುದರಿಂದ ಹಿಮಾಲಯ ಪರ್ವತ ಶ್ರೇಣಿಗಳಂತಹ ಭೂಮೇಲ್ಮೈ ರೂಪುಗೊಂಡಿದೆ. ಮೊದಲಿಗೆ ಮಡಗಾಸ್ಕರ್ ಮತ್ತು ಭಾರತ ಒಂದೇ ಭೂಭಾಗದ ವಲಯಗಳಾಗಿದ್ದವು. ಆದರೆ ಭೂಫಲಕಗಳು ಸರಿದು ಮಡಗಾಸ್ಕರ್ ಭಾರತದಿಂದ ಬೇರ್ಪಟ್ಟು ಕಾಲಾನುಕ್ರಮದಲ್ಲಿ ಈಗಿನ ಸ್ಥಾನಕ್ಕೆ ಸರಿದಿದೆ. ಆದರೆ ಯಾವ ಭೂಭಾಗಗಳು ನೀರಿನೊಳಗೆ ಮುಳುಗಿಲ್ಲ. * 1999 ರಲ್ಲಿ ಜೊಯಿಡಸ್ ರೆಸೊಲ್ಯೂಷನ್ ನೌಕೆ ನಡೆಸಿದ ಸಂಶೋಧನೆಗಳಿಂದ 2 ಕೋಟಿ ವರ್ಷಗಳ ಹಿಂದೆ ಹಿಂದೂ ಮಹಾಸಾಗರದಲ್ಲಿ ಸಮುದ್ರ ಮಟ್ಟ ಏರಿದುದರ ಪರಿಣಾಮವಾಗಿ ಕೆರ್ಗುಯ್ಲೆನ್ ಪೀಠಭೂಮಿ ಮುಳುಗಿದೆಯೆಂದು ಖಚಿತಪಡಿಸಿದೆ. ಇಲ್ಲಿನ ಕೊರೆತಗಳಿಂದ ಪಡೆದ ಪ್ರತಿಚಯಗಳಲ್ಲಿ 9 ಕೋಟಿ ವರ್ಷಗಳ ಹಿಂದಿನ ಅವಸಾದಗಳು (Sediments) ಮತ್ತು ಸಸ್ಯದ ಪುಂಕೆಸರಗಳ ಕುರುಹುಗಳು ದಕ್ಕಿವೆ. ಇದು ಭೂಖಂಡಗಳು ಹೇಗೆ ಸರಿದವೆಂದು ವಿಜ್ಞಾನಿಗಳು ಸರಿಯಾಗಿ ಅರ್ಥಮಾಡಿಕೊಳ್ಳಲು ನೆರವಾಗುವುದೇ ಹೊರತು ಮುಳುಗಿದ ಭೂಖಂಡಗಳಿಗೆ ಸಮರ್ಥನೆ ಒದಗಿಸುವುದಿಲ್ಲ. |
Comment Box is loading comments...