|
ವಿಜಯನಗರ-ಕ್ರಿಯಾಶಕ್ತಿ-ವಿದ್ಯಾರಣ್ಯ
ಭಾರತದ ಇತಿಹಾಸದಲ್ಲಿ ಮೌರ್ಯ ಸಾಮ್ರಾಜ್ಯ ಸ್ಥಾಪನೆ, ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮತ್ತು ಆಧುನಿಕ ಪ್ರಜಾಪ್ರಭುತ್ವದ ಸ್ಥಾಪನೆ ಎನ್ನುವ ಮೂರು ಕ್ರಾಂತಿಕಾರಕ ತಿರುವುಗಳನ್ನು ಇತಿಹಾಸಕಾರರು ಗುರುತಿಸುತ್ತಾರೆ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮಾಧವ ಯತಿ ಪ್ರೇರಕರಾಗಿದ್ದರು. ಅವರು ಮುಂದೆ ವಿದ್ಯಾರಣ್ಯ ಹೆಸರಿನಲ್ಲಿ ಶೃಂಗೇರಿಯ ಪೀಠಾಧಿಪತಿಯಾಗಳಾದರು ಎನ್ನುವ ನಂಬಿಕೆ ಪ್ರಚಲಿತವಿದೆ. ಇದಕ್ಕೆ ಪೂರಕವಾಗಿ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗಾಗಿ ಹೊನ್ನಿನ ಮಳೆಯನ್ನು ಸುರಿಸಿ ಹಕ್ಕ-ಬುಕ್ಕರಿಗೆ ನೆರವಾದರೆನ್ನುವ ಜನಪ್ರಿಯ ಐತಿಹ್ಯವೂ ಚಲಾವಣೆಯಲ್ಲಿದೆ. ಶೃಂಗೇರಿ ಪೀಠದ ಯತಿ ವಿದ್ಯಾರಣ್ಯ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ವಹಿಸಿದ್ದ ಪಾತ್ರ ಕುರಿತಾಗಿ ವಿಜಯನಗರ ಸಾಮ್ರಾಜ್ಯದ ಆರಂಭಿಕ ದಾಖಲೆಗಳು ಮೌನವಾಗಿರುವುದಲ್ಲದೆ ಬೇರೆಯದೇ ಆದ ಚಿತ್ರಣ ನೀಡುತ್ತವೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಆರಂಭಿಕ ಕಾಲದಲ್ಲಿ ‘ಮಾಧವ’ ಹೆಸರಿನ ಮೂವರು ವ್ಯಕ್ತಿಗಳನ್ನು ಗುರುತಿಸಲಾಗಿದೆ. ಇವರಲ್ಲಿ ಒಬ್ಬಾತ ಮಾಧವ ಮಂತ್ರಿ ಪದವಿಯಲ್ಲಿದ್ದರೆ (=ಮಂತ್ರಿ ಮಾಧವ), ಇನ್ನೊಬ್ಬ ಮಾಧವ ಮುಂದೆ ವಿದ್ಯಾರಣ್ಯ ಹೆಸರಿನಲ್ಲಿ ಶೃಂಗೇರಿ ಪೀಠಾಧಿಪತಿಯಾದನು (ಯತಿ ವಿದ್ಯಾರಣ್ಯ). ಮತ್ತೊಬ್ಬ ಮಾಧವ (=ಎರಡನೆ ಮಾಧವ) ವಿದ್ಯಾರಣ್ಯನ ಸೋದರನಾಗಿದ್ದನು ಕೆಲಮೂಲಗಳು ಮಾಧವ ಮತ್ತು ಸೋಮನಾಥ ಎನ್ನುವ ಇಬ್ಬರು ಸೋದರರಿದ್ದರು. ಅವರು ಶೃಂಗೇರಿಗೆ ಹೋಗಿ ವಿದ್ಯಾರಣ್ಯ ಮತ್ತು ಭಾರತಿತೀರ್ಥ ಎನ್ನುವ ಹೆಸರಿನಲ್ಲಿ ವಿದ್ಯಾಶಂಕರರ ಶಿಷ್ಯರಾದರು. ಮುಂದೆ ಭಾರತಿತೀರ್ಥ ಶೃಂಗೇರಿ ಪೀಠಾಧಿಪತಿಯಾದನು. ಆತನ ನಂತರ ವಿದ್ಯಾರಣ್ಯ ಆ ಸ್ಥಾನಕ್ಕೆ ಏರಿದನು. ಇವರಿಗೆ ಮಾಧವ (ಎರಡನೆ ಮಾಧವ) , ಸಾಯಣ ಮತ್ತು ಬೋಗನಾಥ ಎನ್ನುವ ದಾಯಾದಿ ಸೋದರರು ಇದ್ದರು ಎನ್ನುತ್ತವೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಕಾಲದ ಐತಿಹಾಸಿಕ ದಾಖಲೆಗಳು ಮಾಧವರ ಬಗ್ಗೆ ( ಮಂತ್ರಿ, ಯತಿ, ಎರಡನೆ) ಏನು ಹೇಳುತ್ತವೆ ಎನ್ನುವುದು ಕುತೂಹಲಕಾರಿಯಾಗಿದೆ. (೧) ಮಾಧವ (ವಿದ್ಯಾರಣ್ಯ) ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಕಾಲದಲ್ಲಿ ಯತಿಗಳಾಗಿದ್ದು ಶೃಂಗೇರಿಯಲ್ಲಿದ್ದ ಶೈವ ಮಠದ ಮುಖ್ಯಸ್ಥರಾಗಿದ್ದರೇ ಹೊರತು ಶೃಂಗೇರಿ ಮಠದ ಪೀಠಾಧಿಪತಿಗಳು ಆಗಿರಲಿಲ್ಲವೆಂದು ಪರಂಪರೆ ತಿಳಿಸುತ್ತದೆ. (೨) ೧೩೪೬ ರಲ್ಲಿ ಮೊದಲನೆ ಹರಿಹರ ತನ್ನ ನಾಲ್ಕು ತಮ್ಮಂದಿರು , ಭಾವಮೈದುನನೊಂದಿಗೆ ಶೃಂಗೇರಿಗೆ ಭೇಟಿ ನೀಡಿದಾಗ ಶೃಂಗೇರಿ ಪೀಠಾಧಿಪತಿಯಾಗಿದ್ದ ಭಾರತಿತೀರ್ಥ ಶ್ರೀಪಾದರಿಗೆ (ಭಾರತಿ ಕೃಷ್ಣತೀರ್ಥ) ದತ್ತಿ ದಾನಗಳನ್ನು ನೀಡಿದ ವಿವರಗಳು ಶಾಸನದಲ್ಲಿ ದಾಖಲಾಗಿದೆ. ಈ ಶಾಸನದಲ್ಲಿ ಮಾಧವ (ವಿದ್ಯಾರಣ್ಯ) ಉಲ್ಲೇಖವಾಗಲಿ ಅಥವಾ ಶೃಂಗೇರಿಯ ಯಾವುದೇ ಪೀಠಾಧಿಪತಿ ವಿಜಯನಗರ ಸ್ಥಾಪನೆಗೆ ನೆರವಾದ ಬಗ್ಗೆಯಾಗಲಿ ಏನನ್ನೂ ಹೇಳಿಲ್ಲ. ಭಾರತಿ ಕೃಷ್ಣತೀರ್ಥರ ನಂತರ ವಿದ್ಯಾರಣ್ಯ ಶೃಂಗೇರಿ ಪೀಠಾಧಿಪತಿಯಾದರು. (೩) ವಿಜಯನಗರ ಸ್ಥಾಪಿಸಿದ ೫ ಜನ ಸೋದರರಲ್ಲಿ ಮಾರಪ್ಪ ನಾಲ್ಕನೆಯಾತ. ಈತ ಬನವಸೆ-೧೨೦೦೦ ಪ್ರಾಂತದ ಮಾಂಡಲಿಕನಾಗಿ ಚಂದ್ರಗುತ್ತಿಯಿಂದ ಆಳುತ್ತಿದ್ದನು. ಈತ ಹಾಕಿಸಿದ ಫೆಬ್ರುವರಿ ೧೩, ೧೩೪೭ ರ (ಶಾಲಿವಾಹನ ಶಕೆ ೧೩೬೮, ವ್ಯಯ ಸಂವತ್ಸರ. ಮಾಘ ದಶಮಿ ರವಿವಾರ) ಸಂಸ್ಕೃತ ಭಾಷೆಯಲ್ಲಿರುವ ಸೊರಬದ ತಾಮ್ರಶಾಸನದಲ್ಲಿ ‘ಮಾರಪ್ಪ ಭೂಪನು ಪಶ್ಚಿಮರಾಜ್ಯವನ್ನು ಪಡೆದು ಗೋಮಾಂತಕ ಮತ್ತು ಬನವಸೆ-೧೨೦೦೦ ನಾಡುಗಳನ್ನು ಸುಖದಿಂದ ಆಳುತ್ತಿದ್ದನು. ಈತನ ರಾಜ್ಯವೆಂಬ ಗಹನವಾದ ಸಮುದ್ರಕ್ಕೆ ಕರ್ಣಧಾರನೂ ಬುದ್ಧಿಯಲ್ಲಿ ಬೃಹಸ್ಪತಿಯನ್ನು ಕೂಡ ಹಿಮ್ಮೆಟ್ಟಿಸುವವನೂ ಆದ ಮಾಧವನೆಂಬುವನು ಮಂತ್ರಿಯಾಗಿದ್ದನು. ಈ ಮಾಧವ ಮಂತ್ರಿಯ ಗುರುವು ಕ್ರಿಯಾಶಕ್ತಿಯು. ಅವನು ತೇಜಸ್ಸಿನಲ್ಲಿ ಸಾಕ್ಷಾತ್ ತ್ರಯಂಬಕನು. ಭಾರ್ಗವನಿಗೆ ಶಂಕರನು ಗುರುವಾಗಿದ್ದಂತೆ ವೈರಿಗಳನ್ನು ಜಯಿಸುವ ಮಾಧವನಿಗೆ ಕ್ರಿಯಾಶಕ್ತಿಯು ಗುರುವೂ ಮಾರ್ಗದರ್ಶಕನೂ ಆಗಿದ್ದನು. ಮೂರು ವೇದಗಳನ್ನು ಪುರಾಣಾಗಮಗಳನ್ನು ಸಮಾಲೋಚಿಸಿ ಲೋಕಹಿತಕ್ಕಾಗಿ ಮತ್ತು ಮಂತ್ರಿ ಮಾಧವನ ಪ್ರೀತಿಗಾಗಿ ತ್ರಯಂಬಕ ಶಾಸನೋಕ್ತ ಸಮಸ್ತ ಶೈವಾಗಮಸಾರ ಸಂಗ್ರಹವನ್ನು ರಚಿಸಿದನು.’ ಎಂದು ದಾಖಲಾಗಿದೆ. (೪) ೧೩೫೬ ರಲ್ಲಿ ಮೊದಲನೆ ಬುಕ್ಕ ಶೃಂಗೇರಿಗೆ ಭೇಟಿ ನೀಡಿದಾಗ ವಿದ್ಯಾತೀರ್ಥ ಶ್ರೀಪಾದರಿಗೆ ದತ್ತಿದಾನಗಳನ್ನು ನೀಡಿದುದನ್ನು ತಿಳಿಸುವ ಶಾಸನದಲ್ಲಿಯಾಗಲಿ , ಇಮ್ಮಡಿ ಹರಿಹರ ನೀಡಿದ ದಾನಗಳನ್ನು ದಾಖಲಿಸುವ ತಾಮ್ರಪತ್ರಗಳಲ್ಲಿ ವಿಜಯನಗರ ಸ್ಥಾಪನೆಯಲ್ಲಿ ವಿದ್ಯಾರಣ್ಯರ ಪಾತ್ರ , ಅವರು ಹಂಪಿಯಲ್ಲಿ ನಡೆಸಿದ ಚಟುವಟಿಕೆಗಳನ್ನು ಕುರಿತಾದ ಒಂದು ಹೇಳಿಕೆಯೂ ಇಲ್ಲ. (೫) ೧೩೫೫ ರ ಅವಧಿಯಲ್ಲಿ ಮಾಧವ (ವಿದ್ಯಾರಣ್ಯ) ವಾರಣಾಸಿಯಲ್ಲಿದ್ದನು. ಈತನನ್ನು ಶೃಂಗೇರಿಗೆ ಹಿಂದಕ್ಕೆ ಕರೆಸಲು ವಿದ್ಯಾತೀರ್ಥರು ಬಯಸಿದ್ದರು. ೧೩೩೬ರಲ್ಲಿ ಮೊದಲನೆ ಬುಕ್ಕ ಮಾಧವನಿಗೆ (ವಿದ್ಯಾರಣ್ಯ) ಓಲೆಯೊಂದನ್ನು ಬರೆದು ಗುರುವಿನ ಆಣತಿಯಂತೆ ತಕ್ಷಣವೇ ಹಂಪಿಗೆ ಹಿಂದಿರುಗಬೇಕೆಂದು ತಿಳಿಸಿದ್ದನು. ಇದಕ್ಕೆ ಓಗೊಟ್ಟು ಮಾಧವ (ವಿದ್ಯಾರಣ್ಯ) ವಾರಣಾಸಿಯಿಂದ ಹಿಂದಿರುಗಿದನು. (೬) ಇದಾದ ಕೆಲಕಾಲದ ನಂತರ ಮೊದಲನೆ ಬುಕ್ಕ-೧ , ಮಾಧವ (ವಿದ್ಯಾರಣ್ಯ) ಜೊತೆಗೆ ಶೃಂಗೇರಿಗೆ ಭೇಟಿ ನೀಡಿದನಲ್ಲದೆ ಆಗ ವಿದ್ಯಾರಣ್ಯನಿಗೆ ದತ್ತಿ, ದಾನಗಳನ್ನು ನೀಡಿದನು. ವಿದ್ಯಾರಣ್ಯ ಹೆಸರು ನೇರವಾಗಿ ದಾಖಲಾಗಿರುವ ಶಾಸನವಿದು. ಈ ಶಾಸನದಲ್ಲಿ ಎಲ್ಲಿಯೂ ತನ್ನ ಅಣ್ಣನಿಗೆ (ಮೊದಲನೆ ಹರಿಹರ) ವಿಜಯ ಸಾಮ್ರಾಜ್ಯ ಸ್ಥಾಪಿಸಲು ವಿದ್ಯಾರಣ್ಯರು ನೆರವು ನೀಡಿದರೆಂದು ತಿಳಿಸಿಲ್ಲ. (೭) ನವೆಂಬರ್ ೪, ಸೋಮವಾರ ೧೩೬೮ ರ (ಶಾಲಿವಾಹನ ಶಕೆ ೧೨೯೧ ಕೀಲಕ ಸಂವತ್ಸರ ಕಾರ್ತಿಕ ಅಷ್ಟಮಿ ಸೋಮವಾರ) ಶಿಕಾರಿಪುರ ತಾಲೂಕು ಹಾರೋಮುಚ್ಚಳ್ಳಿ ಅಗ್ರಹಾರದ ತಾಮ್ರಪಟದಲ್ಲಿ ‘ಮಹಾರಾಜಾಧಿರಾಜ ರಾಜ ಪರಮೇಶ್ವರ ಪೂರ್ವ ಸಮುದ್ರಾಧಿಪತಿ ಬುಕ್ಕಭೂಪಾಲನು ವಸುಂಧರೆಯೆಂಬ ವಧುವಿನ ಕಂಠದೋಪಾದಿಯಲ್ಲಿರುವ ಹೇಮಕೂಟ ಮುಕ್ತಹಾರದಂತೆ ಶೋಭಿಸುವ ತುಂಗಭದ್ರೆಯ ಮಧ್ಯೆ ನಾಯಕರತ್ನದಂತೆ ರಾರಾಜಿಸುವ ನೂತನ ವಿಜಯನಗರ ಸಿಂಹಾಸನವನ್ನೇರಿ ರಾಜಭಾರಮಾಡುತ್ತಿದ್ದನು. ಸಾಮಂತ ರಾಜರಿಂದ ಸೇವಿಸಲ್ಪಡುವ ಬುಕ್ಕ ಮಹಾರಾಜನ ಶೌರ್ಯವೇ ಜಗತ್ತನ್ನು ರಕ್ಷಿಸುವುದಕ್ಕಾಗಿ ಶರೀರವನ್ನು ಧರಿಸಿ ಪವಿತ್ರ ಪುರುಷಾಕಾರವಾದಂತೆ ಶ್ರೀಮನ್ ಮಾಧವ ಅಮಾತ್ಯನಿದ್ದನು. ಆ ಬುಕ್ಕ ಭೂಪತಿಯ ಆದೇಶದಂತೆ ಪಶ್ಚಿಮ ಸಮುದ್ರ ಪರ್ಯಂತ ರಾಜ್ಯವನ್ನು ಬೆಳೆಸಿ ಅದರ ಆಧಿಪತ್ಯವನ್ನು ಅಂಗೀಕರಿಸಿ ಆ ರಾಜ್ಯದ ಯೋಗಕ್ಷೇಮವನ್ನು ನೋಡುತ್ತಿದ್ದನು. ಶ್ರೀಮತ್ ಕಾಶೀವಿಳಾಸ ಕ್ರಿಯಾಶಕ್ತಿ ಶಿವದೇಶಿಕನಿಂದ ಉಪದೇಶವನ್ನು ಪಡೆದು ಶುದ್ಧಶೈವ ಆಮ್ನಾಯವರ್ತನಿಜೇಷ್ಟಲಿಂಗ ವ್ರತಾಧಿಷ್ಠಾನನಾಗಿದ್ದನು. ದೇವ ದೇವನಾದ ಶ್ರೀ ಮತ್ ತ್ರ್ಯಂಬಕನಾಥನನ್ನು ನಿತ್ಯ ನೈಮಿತ್ತಿಕ ಆತ್ಮಕ್ರಿಯಾನೇಮಗಳಿಂದ ಜಪಿಸುತ್ತಿದ್ದನು’ ಎಂದು ದಾಖಲಿಸಲಾಗಿದೆ. (೮) ೧೩೭೮ ರ ಚೆನ್ನರಾಯಪಟ್ಟಣ ತಾಲೂಕಿನ ಹುಲಿಕೇರಿ ತಾಮ್ರಪಟ ಶಾಸನ ಸಂಸ್ಕೃತ ಭಾಷೆಯಲ್ಲಿದೆ. ಈ ಶಾಸನ ‘ವಿರೂಪಾಕ್ಷ ಸಾಕ್ಷಾತ್‘ಕುಲಪರಮದೈವಂ ಕುಲಗುರುಃ |ಕ್ರಿಯಾಶಕ್ತ್ಯಾಚಾರ್ಯ ಕಲಿಕಲಭ ಕಂಠೀರವಯಶಃ |ಜಗದ್ರಕ್ಷಾ ಶಿಕ್ಷಾಕರವಿಭವಸಾಸ್ಯ ಸಚಿವಃ ಸಏವಾ ಭೂದ್ವಂಶ ಕ್ರಮಪರಿಗತತಿಸ್ಸೈವ ನಗರೀ || ಎಂದು ಆರಂಭವಾಗುತ್ತದೆ. ಇದರಲ್ಲಿ ಸಂಗಮ , ಆತನ ಮಕ್ಕಳು , ಬುಕ್ಕರಾಯ ಆತ ವಿಜಯನಗರವನ್ನು ಕಟ್ಟಿಸಿದ ವಿವರ, ಬುಕ್ಕ ಮತ್ತು ಹೊನ್ನಾಯಿಯರ ಮಗನಾದ ಇಮ್ಮಡಿ ಹರಿಹರ , ಬುಕ್ಕನ ಕುಲಗುರು ಕ್ರಿಯಾಶಕ್ತಿ ಇವರ ವಿವರಗಳು ದಾಖಲಾಗಿವೆ. (೯) ೧೩೮೦ ರ ಇಮ್ಮಡಿ ಹರಿಹರನ ತಾಮ್ರಪತ್ರಗಳಲ್ಲಿ ವಿದ್ಯಾರಣ್ಯರ ಪಾದಗಳು ಬ್ರಹ್ಮನ ಪಾದಗಳನ್ನು ಮೀರಿಸಿದವೆಂದು ಹೇಳಲಾಗಿದೆ. ಇಂತಹುದೇ ಗುಣಗಾನ ವಿದ್ಯಾತೀರ್ಥ ಮತ್ತು ಭಾರತಿತೀರ್ಥರನ್ನು ಕುರಿತಾಗಿಯೂ ಮಾಡಲಾಗಿದೆ. ಆದರೆ ಎಲ್ಲಿಯೂ ಶೃಂಗೇರಿ ಪೀಠಾಧಿಪತಿಗಳು ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಭಾಗಿಯಾದ ಒಂದು ಮಾತೂ ಇಲ್ಲ. (೧೦) ೧೩೮೪ ರ ಇಮ್ಮಡಿ ಹರಿಹರನ ತಾಮ್ರಪತ್ರದಲ್ಲಿ ವಿದ್ಯಾರಣ್ಯ ಮುನಿಯಿಂದ ಯಾವುದೇ ರಾಜರು ಗಳಿಸಲಾಗದ ಜ್ಞಾನ ಸಾಮ್ರಾಜ್ಯವನ್ನು ಇಮ್ಮಡಿ ಹರಿಹರ ಗಳಿಸಿದನೆಂದು ಹೇಳಲಾಗಿದೆ. ಇದರೊಂದಿಗೆ ಮೊದಲನೆಯ ಹರಿಹರ ವಿದ್ಯಾರಣ್ಯರ ಕೃಪೆಯಿಂದ ವಿಜಯನಗರ ಸಾಮ್ರಾಜ್ಯ ಪಡೆದನೆಂದು ತಿಳಿಸಲು ಮೊದಲನೆಯ ಹರಿಹರನ ಶಾಸನ ಮತ್ತು ತಾಮ್ರಪತ್ರಗಳಲ್ಲಿ ತಿಳಿಸಲು ಎಲ್ಲ ಬಗೆಯ ಸಕಾರಣಗಳಿದ್ದವಾದರೂ ಅಂತಹ ಮಹತ್ತರ ವಿಚಾರದ ಬಗ್ಗೆ ಒಂದೇ ಒಂದು ತೋರಿಕೆಯ ಮಾತು ದಾಖಲಾಗಿಲ್ಲ. (೧೧) ಶೃಂಗೇರಿಯ ಮಠದ ದಾಖಲೆಗಳ ಪ್ರಕಾರ ವಿದ್ಯಾರಣ್ಯರು ೧೩೮೬ರಲ್ಲಿ ಹಂಪಿಯಲ್ಲಿ ಸಾವನ್ನಪ್ಪಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿ ಹೇಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದರೆನ್ನುವ ಮಹತ್ತರ ಸಂಗತಿಗೆ ಅವಕಾಶವೇ ದಕ್ಕಿಲ್ಲ. (೧೨) ೧೩೮೬ ರಲ್ಲಿ ಇಮ್ಮಡಿ ಹರಿಹರ ವಿದ್ಯಾರಣ್ಯರ ನೆನಪಿನಲ್ಲಿ ಶೃಂಗೇರಿ ಮಠಕ್ಕೆ ಊರೊಂದನ್ನು ದಾನ ನೀಡಿ ದನ್ನು ವಿದ್ಯಾರಣ್ಯಪುರ ಎಂದು ಹೆಸರಿಸಿದನು. ಇಲ್ಲಿಯೂ ವಿದ್ಯಾರಣ್ಯ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ/ನೆರವಾದ ಸಂಗತಿಯಿಲ್ಲ. (೧೩) ೧೩೮೬ ರಲ್ಲಿ ಇಮ್ಮಡಿ ಹರಿಹರ ಹಾಕಿಸಿದ ಅಪೂರ್ಣ ಶಾಸನವೊಂದರಲ್ಲಿ ವಿದ್ಯಾರಣ್ಯರಿಗೆ ನಾಲ್ಕು ಮುಖಗಳಿಲ್ಲ ಆದ್ದರಿಂದ ಆತ ಬ್ರಹ್ಮನಲ್ಲ. ನಾಲ್ಕು ಕೈಗಳಿಲ್ಲ ಆದ್ದರಿಂದ ಆತ ವಿಷ್ಣುವಲ್ಲ. ಹಣೆಯಲ್ಲಿ ಕಣ್ಣಿಲ್ಲ. ಆದ್ದರಿಂದ ಆತ ಶಿವನಲ್ಲ. ಹಾಗಾದರೆ ಆತ ಯಾರು ಎಂದು ದೀರ್ಘಕಾಲ ವಾದಿಸಿದ ಪಂಡಿತರು ಕೊನೆಗೆ ಅವರು ಮಹಾ ಅವತಾರ ಎನ್ನುವ ನಿರ್ಧಾರಕ್ಕೆ ಬಂದರು ಎಂದು ಹೇಳಲಾಗಿದೆ. ಇಲ್ಲಿ ಎಲ್ಲಿಯೂ ವಿದ್ಯಾರಣ್ಯರಿಗೂ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಇದ್ದ ನಂಟಿನ ಬಗ್ಗೆ ಚಕಾರ ಎತ್ತಿಲ್ಲ. (೧೪) ಇಮ್ಮಡಿ ಹರಿಹರನ ಮಗ ಚಿಕ್ಕರಾಯ ವಿದ್ಯಾರಣ್ಯರಿಗೆ ಹಲವು ದಾನ, ದತ್ತಿಗಳನ್ನು ನೀಡಿದ್ದಾನಾದರೂ ಎಲ್ಲಿಯೂ ಆತ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಅವರ ಪಾತ್ರ ಕುರಿತಾಗಿ ಹೇಳಿಲ್ಲ. (೧೫) ೧೪೧೦ ರಲ್ಲಿ ಒಂದನೇ ದೇವರಾಯ ಅಳುತ್ತಿದ್ದನು. ಆತನ ಹರಿಹರದ ಶಾಸನ ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿದೆ. ಕನ್ನಡ ಭಾಗದಲ್ಲಿ ಸಂಗಮ ವಂಶದ ಕುಲಗುರು ಕ್ರಿಯಾಶಕ್ತಿಯನ್ನು ‘ಕೋಟಿಪಾಟನ ಪ್ರಚಟಿತ ಪ್ರತಾಪ ವಿದಳಿತ ಸಕಲಜನಾನುತಾಪ ಶ್ರೀಸ್ವಯಂಭೂ ತ್ರಿಯಂಬಕ ಚರಣಾರವಿಂದಾರಾಧಕ ಶ್ರೀ ಮದ್ರಾಯ ರಾಜಗುರು ಮಂಡಲಾಚಾರ್ಯ ಆಚಾರ್ಯವರ್ಯ ಅಭಂಗರಾವುತ್ತರಾಯ ತಪೋರಾಜ್ಯಲಕ್ಷ್ಮೀ ನಿಜನಿವಾಸಕಾಯ ಶ್ರೀ ಕ್ರಿಯಾಶಕ್ತಿ ಗುರುವರ ಚರಣ ಪರಿಚರಣ ಪ್ರಸಾದಾಸಾದಿತ ಮಹಿತ ಸರ್ವಜ್ಞ ಸಾಮ್ರಾಜ್ಯವೈಭವ ಸಮಾಜ ಶ್ರೀ ಮದ್ರಾಜಾಧಿರಾಜ ಪರಮೇಶ್ವರ ವೀರಪ್ರತಾಪ ದೇವರಾಜ” ಎಂದು ಹೊಗಳಲಾಗಿದೆ. (೧೬) ಮೊದಲನೆ ಬುಕ್ಕನ ಮಗ ಕಂಪಣನ ಹೆಂಡತಿ ಗಂಗಾದೇವಿ ಸಂಸ್ಕೃತದಲ್ಲಿರುವ ತನ್ನ ‘ಮಧುರಾ ವಿಜಯಂ’ ಕೃತಿಯಲ್ಲಿ ‘ಅಸಾಧಾರಣ ಸಾರ್ವಜ್ಞಂ ವಿಲಸತ್ಸರ್ವ ಮಂಗಲಂ ಕ್ರಿಯಾಶಕ್ತಿ ಗುರುಂ ವಂದೇ ತ್ರಿಲೋಚನಮಿವಾಪರಂ’ ಎಂದು ತಮ್ಮ ಕುಲಗುರುವನ್ನು ನೆನೆದಿದ್ದಾಳೆ. (೧೭) ಶಿಲಾಶಾಸನಗಳಿಂದ ಮಾಧವ (ವಿದ್ಯಾರಣ್ಯ) ೧೩೫೬ ರವರೆಗೆ ಶೃಂಗೇರಿ ಮಠದ ಪೀಠಾಧಿಪತಿಗಳು ಆಗಿರಲಿಲ್ಲ. ೧೩೫೬ ರ ನಂತರ ಅವರಿ ವಾರಾಣಾಸಿಯಿಂದ ಹಂಪಿಗೆ ಮರಳಿದರು ಎಂದು ಸ್ಪಷ್ಟವ್ವಾಗುತ್ತದೆ. ೧೩೮೦ ರ ಇಮ್ಮಡಿ ಹರಿಹರನ ಶಾಸನದಿಂದ ಆ ವೇಳೆಗೆ ವಿದ್ಯಾರಣ್ಯರ ಗುರುಗಳಾದ ಭಾರತಿ ವಿದ್ಯಾತೀರ್ಥರು ತೀರಿಕೊಂಡಿದ್ದು ವಿದ್ಯಾರಣ್ಯರು ಶೃಂಗೇರಿ ಪೀಠಾಧಿಪತಿಗಳಾಗಿದ್ದರು ಎನ್ನುವುದು ಸ್ಪಷ್ಟ. ಮೇಲಿನ ದಾಖಲೆಗಳನ್ನು ಗಮನಿಸಿದಾಗ ಕಾಶೀವಿಲಾಸ ಕ್ರಿಯಾಶಕ್ತಿ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಸಂಗಮವಂಶದ ದೊರೆಗಳ ಕುಲ ಹಾಗೂ ರಾಜ ಗುರುಗಳಾಗಿದ್ದರು ಎನ್ನುವುದು ಸ್ಪಷ್ಟ. ಬಳ್ಳಾರಿ ಜಿಲ್ಲೆಯ ಹಂಪಿ ಪರಿಸರದ ಶಾಸನಗಳಿಂದ ಈ ಪ್ರದೇಶದಲ್ಲಿ ೧೦-೧೪ ನೇ ಶತಮಾನದ ಅವಧಿಯಲ್ಲಿ ಅವೈದಿಕ ಯೋಗ-ತಂತ್ರ ಮಾರ್ಗ ಪ್ರತಿಪಾದಕರಾಗಿದ್ದ ಲಕುಲೀಶ ಪಾಶುಪತ ಪಂಥದ ಶೈವ ಗುರುಗಳು ಪ್ರಬಲರಾಗಿದ್ದರು. ಅವರನ್ನು ರಾಶಿ , ಪಂಡಿತ, ಶಕ್ತಿ, ಜೀಯ ಎಂದು ಗೌರವ ಪೂರ್ವಕವಾಗಿ ಕರೆಯಲಾಗುತ್ತಿದ್ದಿತು. ಇವರು ಮಠ , ದೇವಸ್ಥಾನಗಳ ಮುಖ್ಯಸ್ಥರಾಗಿದ್ದರು ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಈ ಪಂಥ ಲಿಂಗಾಯತ/ವೀರಶೈವದಲ್ಲಿ ಲೀನವಾಯಿತು. ಕಾಶೀ ವಿಲಾಸ ಕ್ರಿಯಾಶಕ್ತಿ ಲಕುಲೀಶ ಪಾಶುಪತ ಶೈವ ಪಂಥಕ್ಕೆ ಸೇರಿದ ಗುರು. ವಿಜಯನಗರದ ಅರಸರು ಇತರ ಮಠಗಳಿಗೆ ನೀಡುವಂತೆ ಶೃಂಗೇರಿ ಮಠಕ್ಕೂ ದಾನ , ದತ್ತಿಗಳನ್ನು ನೀಡಿದರು ಎನ್ನುವುದು ಐತಿಹಾಸಿಕ ಸತ್ಯ. ವಿಜಯನಗರ ಸಾಮ್ರಾಜ್ಯದ ಆರಂಭಿಕ ಕಾಲದ ಯಾವ ದಾಖಲೆಗಳೂ ಶೃಂಗೇರಿ ಪೀಠಾಧಿಪತಿ ವಿದ್ಯಾರಣ್ಯರನ್ನು ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಕರು ಎಂದು ತಿಳಿಸುವುದಿಲ್ಲ. ಇದನ್ನು ಗಮನಿಸಿದ ಕೆಲವರು ಕಾಶೀವಿಲಾಸ ಕ್ರಿಯಾಶಕ್ತಿಯೇ ವಿದ್ಯಾರಣ್ಯರು ಎಂದು ಸಾಧಿಸಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ. ಆದರೆ ನಂತರ ಕಾಲದಲ್ಲಿ ಹೊಸೆದ ಕೆಲ ಗ್ರಂಥಗಳು , ಖೊಟ್ಟಿ ದಾಖಲೆಗಳು ಶೃಂಗೇರಿ ಪೀಠಾಧಿಪತಿ ವಿದ್ಯಾರಣ್ಯರನ್ನು ವಿಜಯನಗರ ಸಾಮ್ರಾಜ್ಯದ ಪ್ರೇರಕ/ಸ್ಥಾಪಕರು. ಅವರು ಮೊದಲನೆ ಹರಿಹರನಿಗೆ ಪಟ್ಟಾಭಿಷೇಕ ಮಾಡಿದರು ಎನ್ನುವುದು ಕಟ್ಟು ಕಥೆಯೇ ಹೊರತು ನಿಜವಲ್ಲ. ವಿದ್ಯಾರಣ್ಯರು ವಿಜಯನಗರಕ್ಕೆ ವಿದ್ಯಾನಗರವೆಂದು ಹೆಸರಿಟ್ಟು ಕರೆದರು ಎನ್ನುವುದು ಕೂಡ ಕಟ್ಟು ಕಥೆಯೇ. ವಿಜಯನಗರಕ್ಕೆ ವಿದ್ಯಾನಗರ ಎನ್ನುವ ಹೆಸರು ೧೫೩೧ ರ ನಂತರ ಕಾಣಿಸಿಕೊಳ್ಳುತ್ತದೆ. ಮೊದಲಿನಿಂದಲೂ ಈ ನಗರಕ್ಕೆ ವಿಜಯದ ಸಂಕೇತವಾಗಿ ‘ವಿಜಯ’ , ‘ವಿಜಯನಗರ’ ಎಂದು ಕರೆಯಲಾಗುತ್ತಿದ್ದಿತು. ಮೊದಲನೆ ಹರಿಹರನ (ಹುಕ್ಕ) ಕಾಲದಲ್ಲಿ ವಿಜಯನಗರ ಅಸ್ತಿತ್ವದಲ್ಲಿಯೇ ಇರಲಿಲ್ಲ. ಈ ನಗರವನ್ನು ಬುಕ್ಕ ೧೩೬೮ ರಲ್ಲಿ ನಿರ್ಮಿಸಲು ಪ್ರಾರಂಭಿಸಿದನು. ಇದು ಎರಡನೆಯ ಹರಿಹರನ ಕಾಲಕ್ಕೆ ೧೩೭೮ ರಲ್ಲಿ ಮುಗಿಯಿತು. ಎರಡನೆಯ ಹರಿಹರನ ಆಳ್ವಿಕೆಯಲ್ಲಿ (೧೩೭೮) ವಿಜಯನಗರದ ನಿರ್ಮಾಣದ ಮುಕ್ತಾಯ ಘಟ್ಟದಲ್ಲಿ ವಿದ್ಯಾರಣ್ಯ ವಿಜಯನಗರಕ್ಕೆ ಬಂದಿರುವ್ವ ಸಾಧ್ಯತೆಗಳಿವೆ. ಆದ್ದರಿಂದ ಶೃಂಗೇರಿ ಪೀಠಾಧಿಪತಿ ವಿದ್ಯಾರಣ್ಯ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ. |