ಮಾರ್ಕೋನಹಳ್ಳಿ ಆಣೆಕಟ್ಟೆ – ಯೋಜನೆ ಮತ್ತು ಇತಿಹಾಸ ಕರ್ನಾಟಕ ಮತ್ತು ಭಾರತದಲ್ಲಿ ಅತ್ಯಂತ ತಪ್ಪು ಮಾಹಿತಿ ಹಂಚಲ್ಪಟ್ಟ ಅಣೆಕಟ್ಟು ಯೋಜನೆ ಇದಾಗಿದೆ. ವಿಕಿಪೀಡಿಯ ಲೇಖನದಿಂದ ಮೊದಲುಗೊಂಡು ವ್ಯಾಪಕವಾಗಿ ಹಂಚಲಾಗುತ್ತಿರುವ ಸಾಮಾಜಿಕ ಮಾಧ್ಯಮದ ವೀಡಿಯೊಗಳವರೆಗೆ ಎಲ್ಲದರಲ್ಲಿ ಇದರ ಇತಿಹಾಸವನ್ನು ತಪ್ಪಾಗಿ ಚಿತ್ರಿಸಲಾಗಿದೆ. ಕರ್ನಾಟಕದಲ್ಲಿ ವಿಶೇಷವಾಗಿ ಮೈಸೂರು ಸಂಸ್ಥಾನದ ಪ್ರದೇಶದಲ್ಲಿ ವೈಭವೀಕರಣ , ಪುರಾಣೀಕರಣದ ಮೂಲಕ ಕೆಟ್ಟ ಸಂಪ್ರದಾಯ ಒಂದಕ್ಕೆ ಮೊರೆಹೋಗಲಾಗುತ್ತಿದ್ದು , ಭಾರತದ ಸ್ವಾತಂತ್ರ್ಯಕ್ಕೆ ಮೊದಲು ಪೂರ್ಣಗೊಂಡ ಪ್ರತಿಯೊಂದು ನೀರಾವರಿ ಯೋಜನೆ ಮತ್ತು ಅಣೆಕಟ್ಟಿನ ಬಗ್ಗೆ ವಾಸ್ತವಿಕ ದಾಖಲೆಗಳನ್ನು ನಿರ್ಲಕ್ಷಿಸಿ ಅಂತಹ ಯೋಜನೆಗಳೆಲ್ಲವೂ ಸರ್.ಎಂ.ವಿಶ್ವೇಶ್ವರಯ್ಯನವರ ಸಾಧನೆಗಳಿಗೆ ಪಟ್ಟಿಗೆ ಸೇರಿಸಲಾಗಿದೆ. ಸರ್ ಎಂ ವಿಶ್ವೇಶ್ವರಯ್ಯ ಅವರು ಮಾರ್ಕೋನಹಳ್ಳಿ ಯೋಜನೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲದಿದ್ದರೂ, ಈ ಯೋಜನೆಯಲ್ಲಿರುವ ಖ್ಯಾತ ವಲ್ಯೂಟ್ ಮತ್ತು ಹುಡ್ ಸೈಫನ್ಗಳನ್ನು ಒಳಗೊಂಡಂತೆ ಎಲ್ಲವನ್ನೂ ಅದರ ನೈಜ ಪ್ರತಿನಿಧಿಗಳಿಂದ ಕಿತ್ತು ಸರ್ ಎಂ.ವಿಶ್ವೇಶ್ವರಾಯ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಮಾರ್ಕೋನಹಳ್ಳಿ ಯೋಜನೆಯ ಪರಿಚಯ ಮಾಡಲಾಗಿದೆ. ಶಿಂಷಾ, ಕಾವೇರಿಯ ಉಪನದಿಯಾಗಿರುವ ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟಗಳಲ್ಲಿ ಹುಟ್ಟುತ್ತದೆ. ವೀರವೈಷ್ಣವಿ ಶಿಂಷಾ ನದಿಯ ಉಪನದಿ. ಶಿಂಷಾ ನದಿಗೆ ಅಡ್ದ ಆಣೆಕಟ್ಟೆ ಕಟ್ಟಿ ಜಲಾಶಯ ನಿರ್ಮಿಸುವ ಕಾರ್ಯಸಾಧ್ಯತೆಯ ಚಿಂತನೆ 19 ನೇ ಶತಮಾನದ ಕೊನೆಯ ದಶಕಕ್ಕೂ ಹಿಂದಿನದು. 1897 ರಲ್ಲಿ ಇಂಜಿನಿಯರ್ ಸಿ.ಟಿ. ದಲಾಲ್ 10000 ಹೆಕ್ಟೇರ್ (25,000 ಎಕರೆ) ಭೂಮಿಗೆ ನೀರುಣಿಸಲು 1.2 ಟಿಎಂಸಿ ಸಾಮರ್ಥ್ಯದ ಆಣೆಕಟ್ಟೆಯ ಯೋಜನೆ ವರದಿಯನ್ನು ಸಿದ್ಧಪಡಿಸಿದರು. ನಂತರದ ದಿನಗಳಲ್ಲಿ ಇಂಜಿನಿಯರ್ ವಿ.ಎಚ್.ಕಾರ್ವೆ ಮುಂದಾಳತ್ವದಲ್ಲಿ ಈ ಯೋಜನೆಯ ತಾಂತ್ರಿಕ ಅಂಶಗಳನ್ನು ಕುರಿತಾಗಿ ಹೆಚ್ಚು ವಿವರವಾಗಿ ತನಿಖೆ ನಡೆಸಿ ಅಂದಾಜು ರೂ. 7.92 ಲಕ್ಷಗಳ ಯೋಜನೆಯನ್ನು ಸಿದ್ಧಪಡಿಸಲಾಯಿತು . ಇದರಲ್ಲಿ ವೀರವೈಷ್ಣವಿ ನದಿಯೊಂದಿಗೆ ಶಿಂಷಾ ನದಿ ಕೂಡುವ ಜಾಗದ ಕೆಳಗೆ ನದಿಗೆ ಅಡ್ಡಲಾಗಿ ಮಣ್ಣಿನ ಏರಿಯನ್ನು ಕಟ್ಟುವ ಪ್ರಸ್ತಾಪ ಹೊಂದಿದ್ದಿತು. ಈ ಯೋಜನೆಯ ವರದಿಯನ್ನು ಅಕ್ಟೋಬರ್ 1902 ರಲ್ಲಿ ಮುಖ್ಯ ಇಂಜಿನಿಯರ್ಗೆ ಸಲ್ಲಿಸಲಾಯಿತು. ಇದಕ್ಕೆ ಪರ್ಯಾಯವಾದ ಇನ್ನೊಂದು ವರದಿಯಲ್ಲಿ ನದಿಯ ಭಾಗದಲ್ಲಿ ಕಲ್ಲಿನ ಅಣೆಕಟ್ಟು ಮತ್ತು ಮತ್ತು ಬಲ ಬದಿಯಲ್ಲಿ ೩೦೫ ಮೀಟರ್ (೧೦೦ ಅಡಿ) ಉದ್ದ ಮಣ್ಣಿನ ಏರಿಯನ್ನು ಹೊಂದಿರುವ 8.28 ಲಕ್ಷಗಳನ್ನು ಪ್ರಸ್ತಾವನೆ ಇದ್ದಿತು. ಅನುದಾನ ಸಿಕ್ಕಾಗ ಈ ಯೋಜನೆಯನ್ನು ಕೈಗೆತ್ತಿಕೊಳ್ಳಳು ಮೈಸೂರು ಸರ್ಕಾರ ಬಯಸಿದ್ದಿತು. 1909 ರಲ್ಲಿ ಎರಡು ಪರ್ಯಾಯ ಅಂದಾಜುಗಳನ್ನು ತಯಾರಿಸಲಾಯಿತು. ಮೊದಲ ಅಂದಾಜಿನಲ್ಲಿ 580 M (1900 ಅಡಿ) ಉದ್ದದ ಮಣ್ಣಿನ ಏರಿಯ ಪ್ರಸ್ತಾವನೆಯಿದ್ದು 9.7 ಲಕ್ಷ ವೆಚ್ಚ ನಿಗದಿಮಾಡಲಾಗಿದ್ದಿತು. ಎರಡನೇ ಅಂದಾಜಿನಲ್ಲಿ ನದಿಯ ಪಾತ್ರದಲ್ಲಿರುವ ಗಟ್ಟಿ ಕಲ್ಲಿನ ಮೇಲೆ ಕಲ್ಲಿನ ಆಣೆಕಟ್ಟೆ ಮತ್ತು ಎಡ ಮತ್ತು ಬಲ ಬದಿಗಳಲ್ಲಿ ಮಣ್ಣಿನ ಏರಿಗಳನ್ನು ಹೊಂದಿದ್ದಿತು. ಇದರಲ್ಲಿ , ಕಲ್ಲಿನ ಆಣೆಕಟ್ಟೆಯ ಭಾಗದಲ್ಲಿ 122 ಮೀಟರ್ (400 ಅಡಿ) ಉದ್ದದ ಕೋಡಿ ಮತ್ತು ಬಲಬದಿಯ ಮಣ್ಣಿನ ಏರಿಯಲ್ಲಿ 336 M (1100 ಅಡಿ) ಉದ್ದದ ಕೋಡಿಗಳಿದ್ದು ರೂ. 11.3 ಲಕ್ಷ ಅಂದಾಜು ವೆಚ್ಚ ಒಳಗೊಂಡಿದ್ದಿತು. ಕೊನೆಯಲ್ಲಿ ನಡುವೆ ಕಲ್ಲಿನ ಅಣೆಕಟ್ಟೆ ಮತ್ತು ಎಡ-ಬಲ ಬದಿಗಳಲ್ಲಿ ಮಣ್ಣಿನ ಏರಿ ಹೊಂದಿರುವ ಸಂಯೋಜಿತ ಅಣೆಕಟ್ಟಿನ ಎರಡನೇ ಆಯ್ಕೆಯನ್ನು ಅಂಗೀಕರಿಸಲಾಯಿತು. 1918 ರಲ್ಲಿ ತುಮಕೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ. ಜಿ. ಕೃಷ್ಣ ಅಯ್ಯಂಗಾರ್ ಶಿಂಷಾ ಮತ್ತು ವೀರವೈಷ್ಣವಿ ಕೂಡುವ ಮೊದಲು 300 ಮೀಟರ್ ಮೇಲುಗಡೆ ಕಲ್ಲಿನ ಬಂಡೆಗಳಿರುವಲ್ಲಿ ಆಣೆಕಟ್ಟೆಯಿರುವ ಪ್ರಸ್ತಾವನೆ ಸಿದ್ಧಪಡಿಸಿದರು. ಆಣೆಕಟ್ಟೆಯ ಉದ್ದ್ ಹೆಚ್ಚಿರುವುದರಿಂದ ಅದು ಆರ್ಥಿಕವಾಗಿ ಹೊರೆ ಎಂದು ಕೈಬಿಡಲಾಯಿತು. 1928 ರಲ್ಲಿ ಈ ಹಿಂದೆ 1909 ರಲ್ಲಿ ಮಾಡಲಾದ ಪರ್ಯಾಯ ಅಂದಾಜುಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅಂದಾಜು ವೆಚ್ಚವನ್ನು 18.1 ಮತ್ತು 15.75 ಲಕ್ಷಗಳಿಗೆ ಗೊತ್ತುಪಡಿಸಲಾಯಿತು. ಮೈಸೂರಿನ ದಿವಾನ ಮಿರ್ಜಾ ಇಸ್ಮಾಯಿಲ್ ಅಕ್ಟೋಬರ್ 1931 ರಲ್ಲಿ ಸ್ಥಳವನ್ನು ಪರಿಶೀಲಿಸಿ ಇನ್ನೊಮ್ಮೆ ಯೋಜನೆಯ ಆಗುಹೋಗುಗಳ ಅಧ್ಯಯನ ಮಾಡಲು ನಿರ್ದೇಶಿಸಿದರು. ಮುಖ್ಯ ಇಂಜಿನಿಯರ್ ನಿರ್ದೇಶನದಂತೆ ತುಮಕೂರು ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಕೃಷ್ಣ ಅಯ್ಯಂಗಾರ್ 22 ಲಕ್ಷದ ಪರಿಷಕರಿಸಿದ ಯೋಜನೆಯ ಸಿದ್ಧಪಡಿಸಿದರು. ಮಾರ್ಕೋನಹಳ್ಳಿ ಯೋಜನೆಯಲ್ಲಿ ನದಿಯ ನಡುವಿನ ಭಾಗದಲ್ಲಿ ಕಲ್ಲು ಆಣೆಕಟ್ಟೆಯಿದ್ದು ಅದು ಸ್ಲೂಯಿಸ್ ಗೇಟ್ಗಳು ಮತ್ತು ವಾಲ್ಯೂಟ್ ಸೈಫನ್ಗಳನ್ನು ಒಳಗೊಮ್ದಿದ್ದು ನದಿ ತಳ ಮಟ್ಟದಿಂದ 19.825 ಮೀಟರ್ (65 ಅಡಿ) ಎತ್ತರದಲ್ಲಿದ್ದು ೭ ಮೀಟರ್ ಕೆಳಗಿರುವ ಗಟ್ಟಿ ಬಂಡೆಯ ಮೇಲೆ ಬುನಾದಿ ಹೊಂದಿದೆ. ಕಲ್ಲು ಅಣೆಕಟ್ಟು 141.825 M (465 ಅಡಿ) ಉದ್ದವಾಗಿದ್ದು, ಅದರ ಮೇಲ್ಭಾಗ ನೆರೆ ಕೋಡಿಯಿಂದ ೨.೧ ಮೀಟರ್ ( ೭ ಅಡಿ) ಎತ್ತರದಲ್ಲಿದೆ. ಆಣೆಕಟ್ಟೆ ಬುನಾದಿ ಮಟ್ಟದಲ್ಲಿ ೧೭ ಮೀ (೫೬ ಅಡಿ) ಇದ್ದು ಮೇಲ್ಭಾಗದಲ್ಲಿ 3.6 ಮೀಟರ್ (12 ಅಡಿ) ಅಗಲವಿದೆ. ಇಅದರ ಮೇಲೆ ವಾಹನಗಳು ಹೋಹಬಹುದು. ಕಲ್ಲು ಆಣೆಕಟ್ಟೆಯ ಎಡ ಮತ್ತು ಬಲದಲ್ಲಿರುವ ಮಣ್ಣಿನ ಏರಿಗಳು 705 ಮೀಟರ್ (2310 ಅಡಿ) ಮತ್ತು 766 ಮೀಟರ್ (2514 ಅಡಿ). ಉದ್ದವಿವೆ. ಈ ಮೂರು ಭಾಗಗಳನ್ನು ಒಳಗೊಂಡಂತೆ ಅಣೆಕಟ್ಟಿನ ಒಟ್ಟು ಉದ್ದ 1613 ಮೀಟರ್ (5289 ಅಡಿ) . ಗರಿಷ್ಟ ಎತ್ತರ ಇರುವಲ್ಲಿ ಮಣ್ಣಿನ ಏರಿ ನದಿಯ ತಳ ಮಟ್ಟದಿಂದ 22 ಮೀಟರ್ (72 ಅಡಿ) ಮತ್ತು ಅದರ ಕೆಳಗೆ 3.6 ಮೀಟರ್ (12') ವರೆಗೆ ಒಟ್ಟು ಎತ್ತರ 25.62 ಮೀಟರ್ (84') ಎತ್ತರವಿದೆ. ನೀರು ಒಸರುವುದನ್ನು ನಿಯಂತ್ರಿಸಲು ಮಣ್ಣಿನ ಏರಿಯ ನಡುಭಾಗದಲ್ಲಿ ಕಲ್ಲಿನ ತಿರುಳು ಗೋಡೆ ಕಟ್ಟಲಾಗಿದೆ. ಈ ಗೋಡೆಯ ಒಟ್ಟು ಎತ್ತರ ನದಿಯ ತಳದ ಮೇಲೆ 22 ಮೀಟರ್ (72 ಅಡಿ) ಮತ್ತು ಅದರ ಕೆಳಗೆ 4.575 ಮೀಟರ್ (15' ಅಡಿ) ಇದೆ. ತಿರುಳು ಗೋಡೆಯ ಗರಿಷ್ಠ ಎತ್ತರ 26.535 ಮೀಟರ್ (87 ಅಡಿ). ಗರಿಷ್ಠ ಎತ್ತರದಲ್ಲಿರುವ ಮಣ್ಣಿನ ಕಟ್ಟೆಯ ಅಗಲವು ಕೆಳಭಾಗದಲ್ಲಿ 79.3 ಮೀಟರ್ (260') ಇದೆ. ಮೇಲ್ಭಾಗದಲ್ಲಿ ಮಣ್ಣಿನ ಕಟ್ಟೆಯ ಅಗಲವು 4.88 ರಿಂದ 13.725 ಮೀಟರ್ (16 ರಿಂದ 45 ಅಡಿ) ವರೆಗೆ ಬದಲಾಗುತ್ತದೆ. 1 ರಲ್ಲಿ 1 ಇಳಿಜಾರಿನೊಂದಿಗೆ 6.10 x 7 ಮೀಟರ್ (20 ಅಡಿ 23 ಅಡಿ) ಹಿಡಿತದ ಕಂದಕಗಳನ್ನು ಮಣ್ಣಿನ ಏರಿಗೆ ಒದಗಿಸಲಾಗಿದೆ. ಮಣ್ಣಿನ ಏರಿಯ ಕೆಳಭಾಗದಲ್ಲಿ ಒದಗಿಸಲಾದ ಜೆಲ್ಲಿ ಚರಂಡಿಗಳ ಮೂಲಕ ಸೋರಿಕೆಯ ನೀರು ಹೊರಹರಿಯುತ್ತದೆ. ಕಲ್ಲು ಆಣೆಕಟ್ಟೆಯ ಒಟ್ಟು ಪರಿಮಾಣ - 26000 ಘನ ಮೀಟರ್ ಮಣ್ಣಿನ ಏರಿಯ ಒಟ್ಟು ಪರಿಮಾಣ - 73.76 ಲಕ್ಷ ಘನ ಮೀಟರ್ ಸೋರಿಕೆ ಹತೋಟಿಯ ಮಣ್ಣಿನ ಭಾಗ - 70930 ಘನ ಮೀಟರ್ ಮೂಲ ಯೋಜನೆಯಲ್ಲಿ ನೆರೆಯ ಎಲ್ಲ ನೀರನ್ನು ಕೋಡಿಯ ಮೂಲಕ ಹೊರಹಾಕಲು ಯೋಜಿಸಲಾಗಿದ್ದಿತು. ನಂತರ ಅದನ್ನು ಮಾರ್ಪಾಡಿಸಿ ಕಲ್ಲು ಆಣೆಕಟ್ಟೆಯ ಭಾಗದಲ್ಲಿ 3.05 x 6.1 M (10 x 20) ಗಾತ್ರದ ಗೇಟ್ನಿಂದ ನಿಯಂತ್ರಿಸುವ ಐದು ಕಿಂಡಿಗಳನ್ನು ಎರಡು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ವಾಲ್ಯೂಟ್ ಸೈಫನ್ಗಳನ್ನು ಒದಗಿಸಲಾಗಿದೆ. ಮಣ್ಣಿನ ಏರಿಯ ಭಾಗದಲ್ಲಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಹುಡ್ ಸೈಫನ್ಗಳನ್ನು ಒದಗಿಸಲಾಗಿದೆ. ಎಡದಂಡೆಯ ಮೇಲೆ ನೀರನ್ನು ಬಿಡುವ 1.38 x 2.1 M (4.5 x 7 ಅಡಿ) ಅಲತೆಯ ತೂಬನ್ನು ಒದಗಿಸಲಾಗಿದೆ. ಅಣೆಕಟ್ಟಿನ ನಿರ್ಮಾಣವು 1937 ರಲ್ಲಿ ಪ್ರಾರಂಭವಾಯಿತು ಮತ್ತು 1941 ರಲ್ಲಿ ಪೂರ್ಣಗೊಂಡಿತು. ಆಣೆಕಟ್ಟೆಯ ಜಲಾನಯನ 4055 ಚದರ ಕಿಲೋಮೀಟರ್ ಇದ್ದು ಸರಾಸರಿ ಮಳೆಯ ಪ್ರಮಾಣ 80೦ ಮಿಮೀ ಮತ್ತು ಗರಿಷ್ಠ ನೆರೆ 1700 ಘನ ಮೀಟರ್ಗಳು ಎಂದು ಅಂದಾಜಿಸಲಾಗಿದೆ. ಗರಿಷ್ಠ ನೀರಿನ ಮಟ್ಟದಲ್ಲಿ ಜಲಾಶಯ 13.32 ಚ.ಕಿ.ಮೀ ಮತ್ತು ಪೂರ್ಣ ಜಲಾಶಯ ಮಟ್ಟದಲ್ಲಿ 12.39 ಚ.ಕಿ.ಮೀ ಹರಡಿರುತ್ತದೆ. ಜಲಾಶಯದ ಒಟ್ಟು ಸಾಮರ್ಥ್ಯವು 0.066 BMC (2.32 TMC) ಮತ್ತು ಬಳಕೆಯ ಸಾಮರ್ಥ್ಯ 0.061 BMC (2.14 TMC) ಆಗಿದೆ. ಸೈಫೊನ್ಗಳು ಜಲಗತಿಯ ತತ್ತ್ವದ ಮೇಲೆ ಅದಚಣೆಯನ್ನು ದಾಟಿ ನೀರು ಸಾಗಿಸುವ ಕೆಲಸ ಮಾಡುವ ಕೊಳವೆಗಳು. ಮೇಲ್ಮಟ್ಟ ಮತ್ತು ಕೆಳಮಟ್ಟದಲ್ಲಿರುವ ಕೊಳವೆಯ ತುದಿಗಳ ನಡುವಿನ ನೀರಿನ ಮಟ್ಟ ಮತ್ತು ಕೊಳವೆಯಲ್ಲಿ ನಿರ್ವಾತ ಸ್ಥಿತಿಯಲ್ಲಿರುವಾಗ ಇವು ಕೆಲಸ ಮಾಡುತ್ತವೆ. ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಶ್ರೀ ಗಣೇಶ್ ಅಯ್ಯರ್ ಅವರು ವಾಲ್ಯೂಟ್ ಸೈಫನ್ಗಳ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದರು. ಅವರು ವಿನ್ಯಾಸ ಮಾಡಿದ ವಾಲ್ಯೂಟ್ ಸೈಫನ್ಗಳನ್ನು ಮೊದಲ ಬಾರಿಗೆ ಮಾರ್ಕೋನಹಳ್ಳಿ ಅಣೆಕಟ್ಟಿನಲ್ಲಿ ನಿರ್ಮಿಸಲಾಯಿತು. ನಂತರ ಶರಾವತಿ ನದಿಗೆ ಅಡ್ಡಲಾಗಿ ಹಿರೇಭಾಸ್ಕರ ಅಣೆಕಟ್ಟಿಗೆ ಇದೇ ರೀತಿಯ ಸೈಫೋನ್ಗಳನ್ನು ಒದಗಿಸಲಾಯಿತು.