|
ಹಳೆಗನ್ನಡ ಮತ್ತು ಮರಾಠಿ
(ಮರಾಠಿ ಭಾಷೆಯ ಮೇಲೆ ಹಳೆಗನ್ನಡದ ಪ್ರಭಾವ) ಭಾಷಾ ಹಿನ್ನೆಲೆ ಭಾರತದಲ್ಲಿ (೧) ಇಂಡೋ-ಆರ್ಯನ್ (ಸಂಸ್ಕೃತ, ಪ್ರಾಕೃತ) (೨) ದ್ರಾವಿಡ (ಕನ್ನಡ,ತೆಲುಗು,ತಮಿಳು, ಮಲೆಯಾಳಂ, ತುಳು, ಕೊಡವ ಮುಂತಾದವು) (೩) ಆಸ್ಟ್ರೋ-ಏಷಿಯಾಟಿಕ (ಮುಂಡಾ, ಸಂತಾಲಿ ಮುಂತಾದವು) ಹಾಗೂ (೪) ಇಂಡೋ-ಟಿಬೆಟಿಯನ್ ಭಾಷಾವರ್ಗಗಳಿವೆ. ಇಂಡೋ-ಆರ್ಯನ್ ಭಾಷೆಯಾದ ಸಂಸ್ಕೃತ, ಪ್ರಾಕೃತಗಳು ಹಲವಾರು ಕವಲುಗಳಾಗಿ ಬೆಳೆದು ಹೊಸ ಇಂಡೋ-ಆರ್ಯ ಭಾಷೆಗಳು (ಅಸ್ಸಾಮಿ, ಬಂಗಾಳಿ, ಒಡಿಯಾ, ಹಿಂದಿ , ಮರಾಠಿ, ಗುಜರಾಥಿ, ರಾಜಸ್ಥಾನಿ, ಪಂಜಾಬಿ ಮುಂತಾದವು) ಹುಟ್ಟಿದವು. ಇವುಗಳಲ್ಲಿ ಪ್ರಾಚೀನವಾದುದು ಮರಾಠಿ. ೯-೧೦ ನೇ ಶತಮಾನದಲ್ಲಿ ಮರಾಠಿ ಭಾಷೆ ಉಗಮಿಸುತ್ತಿರುವ ಪ್ರದೇಶದಲ್ಲಿ ಪ್ರಾಚೀನ ದ್ರಾವಿಡ ಭಾಷೆಗಳಾದ ಕನ್ನಡ ಮತ್ತು ತೆಲುಗು ಬಹಳ ಪ್ರಬಲವಾಗಿದ್ದವು. ಈಗ ಮರಾಠಿ ಭಾಷೆ ಪ್ರಚಲಿತವಿರುವ ಪ್ರದೇಶದಲ್ಲಿ ಹಳೆಗನ್ನಡ ಸಾಹಿತ್ಯ, ಸಂಸ್ಕೃತಿ , ಬರವಣಿಗೆ , ವ್ಯವಹಾರಗಳಲ್ಲಿ ಬಲವಾಗಿ ಬೇರೂರಿ ಬೆಳೆದಿದ್ದು ಆ ಪ್ರದೇಶದ ಅಧಿಕೃತ ಭಾಷೆಯಾಗಿದ್ದಿತು. ಆಗತಾನೆ ಕಣ್ಣು ತೆರೆಯುತ್ತಿದ್ದ ಮರಾಠಿ ಇಂಡೋ-ಆರ್ಯನ್ ಮೂಲದ ಪದ ಸಂಪತ್ತನ್ನು ಹೊಂದಿತಾದರೂ ಅದರ ಮೂಲ ಸ್ವರೂಪ ಮತ್ತು ವ್ಯಾಕರಣದ ಮೇಲೆ ಕನ್ನಡ ತನ್ನ ದಟ್ಟ ಪ್ರಭಾವ ಬೀರಿತು. ಈ ಪ್ರಭಾವ ಕನ್ನಡ/ದ್ರಾವಿಡ ಭಾಷೆಗಳ ಮೇಲೆ ಪದಸಂಪತ್ತಿನ ಮೂಲಕ ಹಳೆಯ ಇಂಡೋ-ಆರ್ಯನ್ ಭಾಷೆಗಳಾದ ಸಂಸ್ಕೃತ ಮತ್ತು ಪ್ರಾಕೃತ ಬೀರಿದ ಪ್ರಭಾವಕ್ಕಿಂತಲೂ ಆಳ ಮತ್ತು ವ್ಯಾಪಕವಾಗಿದ್ದಿತು. ಚಾರಿತ್ರಿಕ ಹಿನ್ನೆಲೆ -ಪ್ರ.ಶ ೬೩೪ ರ ಐಹೊಳೆಯ ಮೇಗುತಿ ಜಿನಾಲಯದ ಇಮ್ಮಡಿ ಪುಲಿಕೇಶಿಯ ಶಾಸನದಲ್ಲಿ ‘ತ್ರಯಾಣಾಂ ಮಹಾರಾಷ್ಟ್ರಾಣಂ’ ಎಂದರೆ ಮೂರು ಮಹಾರಾಷ್ಟ್ರಗಳು ಎಂದು ಹೇಳಲಾಗಿದೆ. ಈ ಮೂರು ಮಹಾರಾಷ್ಟ್ರಗಳು ಆಡಳಿತ ವಿಭಾಗಗಳಾಗಿದ್ದವ್ದೆನ್ನುವುದು ಸ್ಪಷ್ಟ. -ಪ್ರ.ಶ ೮೧೪ ರ ಕವಿರಾಜ ಮಾರ್ಗ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ಕನ್ನಡ ನಾಡನ್ನು ಹೇಳುತ್ತದೆ. ಎಂದರೆ ಆಗ ಈಗಿನ ಅರ್ಥದ ಮಹಾರಾಷ್ತ್ರ ಮತ್ತು ಮರಾಠಿ ಭಾಷೆ ಇರಲಿಲ್ಲ ಎನ್ನುವುದು ಸ್ಪಷ್ಟ. -ಪ್ರ,ಶ. ೭೫೭ ರಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ಉದಯವಾಗಿ ಪ್ರ.ಶ ೯೭೫ ರವರೆಗೆ ೧೯ ರಾಜರುಗಳ ಆಳ್ವಿಕೆಯಲ್ಲಿ ಅಸ್ತಿತ್ವದಲ್ಲಿದ್ದಿತು. ಈ ಸ್ರ್ಮಾಮ್ದಾರಾಜ್ಯ ಉತ್ತರದಲ್ಲಿ ನದಿಯಿಂದ ದಕ್ಷಿಣದಲ್ಲಿ ಕಾವೇರಿಯವರೆಗೆ ಹರಡಿದ್ದಿತು. -ರಾಷ್ಟ್ರಕೂಟರ ನಂತರ ಬಂದ ಕಲ್ಯಾಣದ ಚಾಲುಕ್ಯರು ಪ್ರ.ಶ ೯೭೩ ರಿಂದ ೧೧೮೯ ರವರೆಗೆ ಆಳಿದರು. ಇವರ ಆಳ್ವಿಕೆಯ ಪ್ರದೇಶ ದಕ್ಷಿಣದಲ್ಲಿ ಶಿವಮೊಗ್ಗದಿಂದ ಉತ್ತರದಲ್ಲಿ ಗೋದಾವರಿಯವರೆಗೆ ಹರಡಿದ್ದಿತು. -ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ಸೇವುಣರು ಪ್ರ.ಶ ೧೧೭೩ ರಲ್ಲಿ ಸ್ವತಂತ್ರರಾಗಿ ೧೩೧೨ ರವರೆಗೆ ರಾಜ್ಯವಾಳಿದರು. ಸೇವುಣರು ಬರೆಸಿದ ಐನೂರಕ್ಕೂ ಅಧಿಕ ಶಾಸನ , ತಾಮ್ರಪತ್ರಗಳಿದ್ದು ಇವೆಲ್ಲವೂ ಕನ್ನಡ ಲಿಪಿ ಮತ್ತು ಭಾಷೆಯಲ್ಲಿವೆ. ಇವರ ಆಡಳಿತದ ಅಂತಿಮ ಹಂತದಲ್ಲಿ ಬಂದ ಸುಮಾರು ೨೦ ಶಾಸನಗಳು ಮಾತ್ರ ದೇವನಾಗಲಿ ಲಿಪಿ , ಮರಾಠಿ ಭಾಷೆಯಲ್ಲಿವೆ. -‘ಪ್ರಾಕೃತ ಚಂದ್ರಿಕೆ’ ಪ್ರಾಕೃತದ ೨೭ ಪ್ರಭೇದಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ ವ್ರಾಚಡ , ಲಾಟ, ವೈದರ್ಭ , ಉಪನಾಗರ, ನಾಗರ, ಬಾರ್ಬರ , ಆವಂತಿ, ಪಾಂಚಾಲ, ಟಾಕ್ಕ, ಮಾಳವ , ಕೇಕಯ, ಗೌಡ,ಆಢ್ರ, ಹೈವ, ಪಾಶ್ಚಾತ್ಯ,ಪಾಂಡ್ಯ,ಕುಂತಲ, ಸಿಂಹಳ , ಕಳಿಂಗ ಪ್ರಾಚ್ಯ, ಕರ್ಣಾಟ , ದ್ರಾವಿಡ , ಗುರ್ಜರ , ಅಬೀರ ಮತ್ತು ಮಧ್ಯದೇಶೀಯಗಳು ಮಾತ್ರ ದಾಖಲಾಗಿವೆ. ಎಂದರೆ ಆಗಿನ್ನೂ ಮರಾಠಿ ಭಾಷೆ ಇರಲಿಲ್ಲ. ಅದಿನ್ನೂ ವೈದರ್ಭವಾಗಿದ್ದಿತು. -೧೪ ನೇಶತಮಾನದವರೆಗೆ ಗೋದಾವರಿಯವರೆಗೆ ಕನ್ನಡ ಇದ್ದಿತಾದರೂ ಗೋದಾವರಿ-ನೀರಾ ನದಿಗಳ ನಡುವಿನ ಪ್ರದೇಶದಲ್ಲಿ ನವ ಅರ್ಯ ಭಾಷೆ ಮರಾಠಿ ೯-೧೦ ನೇ ಶತಮಾನದ ವೇಳೆಗೆ ತನ್ನ ಅಸ್ತಿತ್ವವನ್ನು ತೋರಿಸತೊಡಗಿತು. ಕನ್ನಡ ವ್ಯಾಕರಣ ಮತ್ತು ಮರಾಠಿಯ ಮೇಲೆ ಅದರ ದಟ್ಟ ಪ್ರಭಾವ ಹಳೆಗನ್ನಡ ಮರಾಠಿಯ ಮೇಲೆ ಬೀರಿದ ಪ್ರಭಾವದಿಂದಾಗಿ ಮರಾಠಿ ತನ್ನ ಮೂಲಸ್ವರೂಪದಲ್ಲಿಯೇ ಇಂಡೋ-ಆರ್ಯನ್ ಲಕ್ಷಣಗಳನ್ನು ಕಳೆದುಕೊಂಡು ಹಳೆಗನ್ನಡದ ದಟ್ಟ ಕುರುಹುಗಳನ್ನು ಉಳಿಸಿಕೊಂಡು ಬೆಳೆಯಿತು. ಕನ್ನಡ ಮರಾಠಿಯ ಮೂಲಕ ಗುಜರಾಥಿ ಹಾಗೂ ಹಿಂದಿ ಭಾಷೆಗಳ ಮೇಲೆಯೂ ಪ್ರಭಾವ ಬೀರಿದೆ. ಇಂಡೋ-ಆರ್ಯನ್ ಭಾಷೆಗಳಿಗೆ ಹೊರತಾದ ಕನ್ನಡದವೇ ಆದ ಇತರ ಇಂಡೋ-ಆರ್ಯನ್ ಭಾಷೆಗಳಲ್ಲಿ ಇಲ್ಲದ ಮರಾಠಿಯಲ್ಲಿ ಮಾತ್ರವೆ ಇರುವ ಕೆಲ ಲಕ್ಷಣಗಳು ಹೀಗಿವೆ. # ಸಂಸ್ಕೃತದ ಯಾವ ವಿಭಕ್ತಿ ಪ್ರತ್ಯಯವೂ ನೇರವಾಗಿ ಮರಾಠಿಗ್ದೆ ಹೋಗಿಲ್ಲವೆಂದು ಭಾಷಾ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. # ಇಂಡೋ-ಆರ್ಯನ್ ಭಾಷೆಗಳು ಸಂಸ್ಕೃತದ ಸಂಧಿನಿಯಮಗಳನ್ನು ಅನುಸರಿಸುತ್ತವೆ. ಸ್ವರಲೋಪ ಸಂಧಿ ದ್ರಾವಿಡ ಭಾಷೆಗಳ ಲಕ್ಷಣ. ಹಳೆಗನ್ನಡದ ಸಂಪರ್ಕ ಮತ್ತು ದಟ್ಟ ಪ್ರಭಾವದಿಂದಾಗಿ ಮರಾಠಿಯಲ್ಲಿ ಸ್ವರಲೋಪ ಸಂಧಿ ಬಳಕೆಗೆ ಬಂದಿದೆ. ಉದಾ. ನ+ಉರೇ>ನುರೇ. ತುಮಂತಗಳು # ಇಚ್ಚೆ/ಆಶಯದ ಅರ್ಥ ಹೊಂದಿರುವ ‘ಮಾಡಲು’, ’ನೋಡಲು’, ’ಕೇಳಲು’ ಮುಂತಾದ ಕ್ರಿಯಾಸೂಚಿ ರೂಪಗಳು ಸಂಸ್ಕೃತ/ಪ್ರಾಕೃತದಲ್ಲಿ ‘ತುಮ್’ ಪ್ರತ್ಯಯ ಸೇರಿ ಕರ್ತುಂ (ಮಾಡಲು) , ಗಂತುಂ (ಹೋಗಲು) , ಶ್ರುಣತುಂ (ಕೇಳಲು) ಎಂದಾಗುತ್ತವೆ. ಇವು ಸಂಸ್ಕೃತ/ಪ್ರಾಕೃತದಲ್ಲಿ ತುಮಂತಗಳು ಕನ್ನಡದಲ್ಲಿ ಇವು ‘ಅಲ್’ ಪ್ರತ್ಯಯ ಸೇರಿ ಬರುತ್ತವೆ. ಮಾಡು+ಅಲ್>ಮಾಡಲ್ (ಮಾಡಲು) , ನೋಡ್+ಅಲ್>ನೋಡಲ್ ಮುಂತಾಗಿ ಆಗುತ್ತವೆ. ಕ್ರಿಯೆಯ ಅಪೂರ್ಣತೆಯನ್ನು ಸೂಚಿಸುವಲ್ಲಿಯೂ ಕನ್ನಡದಲ್ಲಿ ‘ಅಲ್’ ಬಳಕೆಯಾಗುತ್ತದೆ. ಮಾಡುತ್ತಿರಲ್ , ಹೋಗುತ್ತಿರಲ್ ಎನ್ನುವಲ್ಲಿ ‘ಅಲ್’ ಬಳಕೆಯಿಂದ ಕ್ರಿಯೆಯ ಅಪೂರ್ಣತೆ ತಿಳಿಸಲ್ಪಟ್ಟಿದೆ. ಆದ್ದರಿಂದ ಹಳೆಗನ್ನಡದಲ್ಲಿ ‘ಅಲ್’ ಬಳಕೆ (೧) ಇಚ್ಚೆ/ಆಶಯ (೨) ಕ್ರಿಯೆಯ ಅಪೂರ್ಣತೆಗಳನ್ನು ಸೂಚಿಸಲು ಬಳಕೆಯಾಗುತ್ತದೆ. ‘ಅಲ್’ ಇಚ್ಚೆ/ಆಶಯ ಅಥವಾ ಕ್ರಿಯೆಯ ಅಪೂರ್ಣತೆಯ ಎರಡರಲ್ಲಿ ಯಾವುದನ್ನು ಪ್ರತಿನಿಧಿಸುತ್ತದೆ ಎಂದು ಸ್ಪಷ್ಟಪಡಿಸಲು ‘ಅಲ್’ ಗೆ ‘ಕ್ಕೆ’, ’ಕೆ’ ಸೇರಿಸುವುದು ವಾಡಿಕೆಯಾಯಿತು ಇದರಿಂದ ನೋಡ್+ಅಲ್+ಕೆ>ನೋಡಲ್ಕೆ>ನೋಡಲಿಕ್ಕೆ (ಇಚ್ಚೆ/ಆಶಯ) , ಮಾಡ್+ಅಲ್+ಕೆ>ಮಾಡಲ್ಕೆ>ಮಾಡಲಿಕ್ಕೆ ಎನ್ನುವ ರೂಪಗಳು ಬಂದವು. ಇವು ಚತುರ್ಥಿ ವಿಭಕ್ತಿಯಿಂದ ಸಾಧಿತವಾಗುತ್ತವೆ. ಕನ್ನಡದ ಈ ಚತುರ್ಥಿ ವಿಭಕ್ತಿ ಬಳಕೆ ಮರಾಠಿ , ಹಿಂದಿ, ಗುಜರಾಥಿಗಳ ಮೇಲೆ ಪ್ರಭಾವ ಬೀರಿ ಜಾಗೇಸೆ (ಮರಾಠಿ), ಜಾನೇಕೆಲಿಯೇ(ಹಿಂದಿ) , ಜಾಮಾಡೇ (ಗುಜರಾಥಿ) ಸಾಧಿತಗಳಿಗೆ ಕಾರಣವಾಗಿವೆ. ಚತುರ್ಥಿ ವಿಭಕ್ತಿ ಪ್ರತ್ಯಯ ಬಳಸಿ ಇಚ್ಚೆ/ಆಶಯವನ್ನು ಇಂಡೋ-ಆರ್ಯನ್ ಭಾಷೆಗಳಲ್ಲಿ ‘ತುಮ್’ ಪ್ರತ್ಯಯದಿಂದ ಮಾತ್ರ ಸೂಚಿಸಬಹುದೇ ಹೊರತು ಚತುರ್ಥಿ ವಿಭಕ್ತಿ ಪ್ರತ್ಯಯದಿಂದಲ್ಲ. ಆದ್ದರಿಂದ ಮರಾಠಿಯ ಈ ಬಳಕೆಯ ಮೇಲೆ ಹಳೆಗನ್ನಡದ ಪ್ರಭಾವ ಸ್ಪಷ್ಟವಾಗಿದೆ. # ಕನ್ನಡದಲ್ಲಿ ಷಷ್ಟಿ ವಿಭಕ್ತಿ ಪ್ರತ್ಯಯ ‘ಅ’. ಮರಾಠಿಯಲ್ಲಿ ಇದು ‘ಅ’ ಎಂದಾಗಿ ಚತುರ್ಥಿ ವಿಭಕ್ತಿಯಾಗಿದೆ. ಹಳೆಗನ್ನಡದಲ್ಲಿ ‘ಆಗ’ , ‘ಆಗದು’ ಪದಪ್ರಯೋಗಗಳು ಇಷ್ಟಾರ್ಥವನ್ನು , ‘ಆೞ್’ ಶಕ್ತಾರ್ಥವನ್ನು ಸೂಚಿಸುತ್ತವೆ. ಈ ವಿಭಕ್ತಿಗಳು ‘ವ’ ಪ್ರತ್ಯಯದ ರೂಪದಲ್ಲಿ ಮರಾಠಿ ಪ್ರವೇಶಿಸಿವೆ. ಚೇತನ ಭಾವ # ಚೇತನ ಭಾವ ತಿಳಿಸಲು ಕನ್ನಡದಲ್ಲಿ (ದ್ರಾವಿಡ ಭಾಷೆಗಳಲ್ಲಿ) ‘ತನ’ ‘ತನ್ನ’ (ತನ್ನತನ , ಮಗುತನ, ಜಿಗುಟುತನ, ಮನೆತನ….) ಬಳಕೆಯಲ್ಲಿವೆ. ಇದು ಸಂಸ್ಕೃತದಲ್ಲಿ ‘ತ್ವ ದಿಂದ ಸಾಧಿತವಾಗುತ್ತವೆ. ( ಬಾಲ್ಯತ್ವ, ದೃಢತ್ವ, ..) ಕನ್ನಡದ ಪ್ರಭಾವದಿಂದಾಗಿ ಅಪಭ್ರಂಶದಲ್ಲಿ ‘ತ್ವ’‘ ಬದಲು ‘ತ್ತಣ’ ಬಂದು ಕುಟಿಲತ್ತಣ (<ಕುಟಿಲತ್ವ), ಧುತ್ತತ್ತಣ (<ಧೂರ್ತತ್ವ) ಮುಂತಾದ ಸಾಧಿತಗಳಾಗಿವೆ. ‘ತ್ತಣ’ ಮರಾಠಿಗೆ ಹೋಗಿ ‘ಪ್ಪಣ’ವಾಗಿದೆ. ಮರಾಠಿಯ ಅಪ್ಪಣ , ಆತ್ಮತ್ವ>ಅಪ್ಪ+ತ್ತಣ>ಅಪ್ಪ+ಪ್ಪಣ>ಅಪ್ಪಣ ಹಂತಗಳಲ್ಲಿ ಮೈದಾಳಿದೆ. ಇದರಂತೆ ಗಾಢತ್ವ>ಗಾಢಪ್ಪಣ>ಗಾಢೇಪಣೇ ಆಗಿದೆ. # ಮರಾಠಿಯಲ್ಲಿ ‘ಆಹೇ’ ‘ಆಹೇಸಿ’’ಆಯಾ’ಆಧಿ’ ಮುಂತಾದ ಪದಗಳು ವಿಪುಲ ಬಳಕೆಯಲ್ಲಿವೆ. ಇವುಗಳಿಗೆ ಸಂಸ್ಕೃತ/ಪ್ರಾಕೃತ ಮೂಲದ ಪದಗಳು ದಕ್ಕಿಲ್ಲ. ಪೂರ್ವ ಹಳೆಗನ್ನಡದಲ್ಲಿ ‘ಅಹೆನ್’ ‘ಅಹೆಂ’ ‘ಅಹನ್’ (ಆಗಿದ್ದಾನೆ), ‘ಅಹಿ’ ‘ಅಹೆಳ್’ (ಆಗಿದ್ದಾಳೆ) ‘ಅಹೆತ್>ಹೌದು (ಆಗಿದೆ) ಎನ್ನುವ ಉತ್ತಮ ಪುರುಷ ಏಕವಚನ ಪದಗಳು ಇವೆ. ಈ ಪದಗಳೇ ಮರಾಠಿಯಲ್ಲಿ ‘ಅಹೇ’ ‘ಅಹೇಸಿ’’ಅಯಾ’ ಆಗಿವೆ. ಮರಾಠಿಯಲ್ಲಿ ‘ಅಹೇ’ ಬಹುವಚನವಾಗಿದೆ. ಕನ್ನಡದಲ್ಲಿ ನಪುಂಸಕವಾಗಿರುವ ಪದಗಳು ಸಂಸ್ಕೃತವನ್ನು ಅನುಸರಿಸಿ ಮರಾಠಿಯಲ್ಲಿ ಸ್ತ್ರೀಲಿಂಗ ತಾಳುತ್ತವೆ. ಹೀಗೆ ಸ್ತ್ರೀಲಿಂಗ ತಾಳಿದ ಪದಗಳ ಮೇಲೆ ‘ಅಹೇಳ್’ ಬಳಕೆಯಾಗಿದೆ. ‘ಆಳ್’ ಎನ್ನುವುದು ದ್ರಾವಿಡ ಭಾಷೆಯಲ್ಲಿ ಸ್ತ್ರೀಲಿಂಗ ವಾಚಿ. ಹಳೆಗನ್ನಡದ ಪದ ಮರಾಠಿಯ ಸ್ತ್ರೀಲಿಂಗ ವಾಚಿಯೊಂದಿಗೆ ಬೆರೆತು ‘ಆಳ್’ ಕೊನೆಯಾಗುವುದು ಗಮನಾರ್ಹವಾಗಿದ್ದು ಮರಾಠಿಯ ಮೇಲೆ ಕನ್ನಡದ ದಟ್ಟ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಕಾಲಸೂಚಕ ಕೃದಂತ # ಕನ್ನಡದಲ್ಲಿ ವರ್ತಮಾನ ಹಾಗೂ ಭವಿಷ್ಯ ಕಾಲವಾಚಕ ಕೃದಂತಗಳನ್ನು ‘ಉವ’ ಪ್ರತ್ಯಯ ಸೇರಿಸಿ ಪಡೆಯಲಾಗುತ್ತದೆ. ಮಾಡು+ಉವ>ಮಾಡುವ , ಕೇಳು+ಉವ>ಕೇಳುವ. ಕನ್ನಡದ ಆಡು ಮಾತಿನಲ್ಲಿ ಇದು ‘ಓ’ ಪ್ರತ್ಯಯ ಪಡೆಯುತ್ತದೆ. ಮಾಡು+ಓ>ಮಾಡೋ, ಕೇಳು+ಓ>ಕೇಳೋ ಮುಂತಾದವು. ಕನ್ನಡದ ಪ್ರಭಾವದಿಂದಾಗಿ ಮರಾಠಿಯಲ್ಲಿ ‘ಊ’ , ‘ಔ’ ಪ್ರತ್ಯಯಗಳು ಬರುತ್ತವೆ. ಉದಾ. ವಿನ+ಉ>ವಿನಉ (ಬಿನ್ನಯಿಸುವ) , ಘೋಟ್+ಉ>ಗೊಟು (ಗುಟುಕರಿಸುವ) ,ಚಡ್+ಓ>ಚಡೋ . ಈ ಲಕ್ಷಣ ಇತರ ಇಂಡೋ-ಆರ್ಯನ್ ಭಾಷೆಗಳಲ್ಲಿ ಇಲ್ಲ. ಲ್ಯಬಂತ - ಕ್ರಿಯಾಭಾವ ರೂಪ # ನೋಡಿ , ಮಾಡಿ ಮುಂತಾದ ಭಾವಕ್ರಿಯಾ ಭೂತವಾಚಕಗಳನ್ನು ಪಡೆಯಲು ಸಂಸ್ಕೃತ/ಪ್ರಾಕೃತದಲ್ಲಿ ‘ತ್ವಾ’ , ‘ತ್ಯಾ’ ಪ್ರತ್ಯಯಗಳನ್ನು ಸೇರಿಸಲಾಗುತ್ತದೆ. ಇವುಗಳನ್ನು ಲ್ಯಬಂತಗಳು ಎನ್ನುತ್ತಾರೆ. ಉದಾ. ಕೃತ್ವಾ (ಮಾಡಿ), ಶ್ರುತ್ವಾ (ಕೇಳಿ) , ಅನುಗಮ್ಯಾ . ಹಳೆಗನ್ನಡದ ‘ಇಂ’ ಪ್ರತ್ಯಯ –ಕಳೆದಿಂ(ಕಳೆದು) , ಪೋಗಿಂ(ಹೋಗಿ) , ಸೋಂಕಿಂ (ಸೋಂಕಿ), ಸುಳಿದುಂ (ಸುಳಿದು), ಅರಸುತ್ತುಂ (ಅರಸುತ್ತ)- ಭಾವಕ್ರಿಯಾ ಭೂತಕಾಲ ವಾಚಕ ಪ್ರತ್ಯಯವಾಗಿದೆ. ಇದನ್ನು ಅನುಸರಿಸಿ ಮರಾಠಿಯಲ್ಲಿ ಲ್ಯಬಂತಗಳು ಸಂಸ್ಕೃತಕ್ಕಿಂತ ಸಂಪೂರ್ಣ ಭಿನ್ನವಾಗಿದ್ದು ‘ಊನಿ’ , ‘ಔನಿ’ ಆಗಿವೆ. ದೇಖೋನಿ (ನೋಡಿ), ವಿಚಾರಾನಿ (ವಿಚಾರಿಸಿ), ಓಸಂದೂನಿ (ಬಿಟ್ಟು) ಇದಕ್ಕೆ ಕೆಲ ಉದಾಹರಣೆಗಳು. ಕೃದಂತಗಳು # ಕ್ರಿಯೆ ಜರುಗುತ್ತಾ ಇರುವ ಸ್ಥಿತಿಯನ್ನು ಹಳೆಗನ್ನಡದಲ್ಲಿ ‘ಉತಂ’’ಉತ್ತಂ’,’ ಉತಾ’ ಪ್ರತ್ಯಯದಿಂದ ಸಾಧಿಸಲಾಗುತ್ತದೆ. ನಗುತಂ (ನಗುತ್ತಾ) , ಪುಗುತಂ (ಹೋಗುತ್ತಾ), ಕರೆಯುತಂ (ಕರೆಯುತ್ತಾ) ಮುಂತಾದವು. ಇದು ಮರಾಠಿಯ ಮೇಲೆ ತೀವ್ರ ಪರಿಣಾಮ ಬೀರಿ ಅದು ಸಂಸ್ಕೃತದಿಂದ ದೂರ ಸರಿಯುವಂತೆ ಮಾಡಿದೆ. ಮರಾಠಿಯ ಗಾಜತ (ಗರ್ಜಿಸುತ್ತಾ) , ಭೇದಿತು (ಭೇದಿಸುತ್ತ) , ಜಾತ ಅಹೇ (ಹೋಗುತ್ತಾ ಇದ್ದಾನೆ) , ಜಾತಾ ಹೋತಾ (ಹೋಗುತ್ತಾ ಇದ್ದಿತು) ಜಾತ ಅಸೇಲ (ಹೋಗುತ್ತಾ ಇರಬಹುದು) ಕನ್ನಡ ಪ್ರಭಾವದ ಸ್ಪಷ್ಟ ದಾಖಲೆಗಳು. # ಮರಾಠಿಯಲ್ಲಿ ಸರ್ವಕಾಲೀನ ಕ್ರಿಯಾರೂಪಗಳು ಸಂಸ್ಕೃತ ಅಥವಾ ಅಪಭ್ರಂಶದಿಂದ ಬಂದಿಲ್ಲ. ಮರಾಠಿಯಲ್ಲಿ ಭೂತಕಾಲಕ್ಕಾಗಿ ಅಖ್ಯಾತ ಪ್ರತ್ಯಯಗಳಿಗಿಂತ ಹೆಚ್ಚಾಗಿ ಧಾತು ಸಾಧಿತ ಕೃದಂತಗಳು ಬಳಕೆಯಲ್ಲಿವೆ. ಕನ್ನಡದಲ್ಲಿ ವರ್ತಮಾನ ಕಾಲದ ಕ್ರಿಯಾರೂಪಗಳು ಭವಿಷ್ಯತ್ ಕಾಲಕ್ಕೂ ಬಳಕೆಯಾಗುತ್ತವೆ. ಒಂದು ಕಾಲದ ಕ್ರಿಯಾ ರೂಪವನ್ನು ಇನ್ನೊಂದು ಕಾಲಕ್ಕೆ ಬಳಸುವುದು ಹಳೆಗನ್ನಡದ ಲಕ್ಷಣ. ಉದಾ. ಕಾಲು ನೋಯ್ದಾಗ ಕುಳಿತುಕೊಂಡೆನು. ಕಾಲು ನೋಯ್ದಾಗ ಕುಳಿತು ಕೊಳ್ಳುವೆನು. ಇದರ ಪೂರ್ಣ ಪ್ರಭಾವ ಮರಾಠಿಯಲ್ಲಿ ಕಾಣಿಸಿಕೊಂಡಿದೆ. # ಕನ್ನಡದಲ್ಲಿ ‘ಅಪ’, ‘ದಪ’,’ ದಪ್ಪ’ ವಿಕರಣಗಳಿಂದ ಭೂತ-ವರ್ತಮಾನ-ಭವಿಷ್ಯತ್ತಿನ ಕ್ರಿಯಾ ರೂಪಗಳು ಸಿದ್ಧವಾಗುತ್ತವೆ. ಜಗುಳ್ದಪಂ , ಬರೆದಪಂ, ನೋಡಿದಪಂ -ವರ್ತಮಾನ ಕಾಲ. ಗೆಲ್ದಪೆಂ (ಗೆಲ್ಲುವೆನು). ಕೊಲ್ದಪೆಂ (ಕೊಲ್ಲುವೆನೆ) ,ಪೋಪೆಂ (ಹೋಗುವೆನು)- ಭವಿಷ್ಯತ್ ಕಾಲ. ಮರಾಠಿ ಈ ವಿಕರಣಗಳನ್ನು ಸಂಸ್ಕೃತದಿಂದ ಪಡೆಯದೆ ಹಳೆಗನ್ನಡದಿಂದ ಪಡೆದಿದೆ. # ಸಂಸ್ಕೃತ ಹಾಗೂ ತಧ್ಬವ ಧಾತುಗಳಿಗೆ ‘ಇಸು’ , ‘ಅಸು’ , ‘ಚು’ , ‘ಸು’ ವಿಕರಣಗಳು ಸೇರಿ ಕನ್ನಡದಲ್ಲಿ ಮಾಡಿಸು , ಬಾಗಿಸು ಮುಂತಾದ ಅಕರ್ಮಕ, ಸಕರ್ಮಕ ಕ್ರಿಯಾಪದಗಳಾಗುತ್ತವೆ. ಕನ್ನಡದ ಪ್ರಭಾವದಿಂದಾಗಿ ಮರಾಠಿಯಲ್ಲಿ ಇವು ‘ಇಜ’ ಆಗಿ ಕಾಣಿಸಿಕೊಳ್ಳುತ್ತವೆ. ಇಂತಹ ಲಕ್ಷಣ ಇಂಡೋ-ಆರ್ಯನ್ ಭಾಷೆಗಳಿಗೆ ಹೊರತಾದುದು. ಉದಾ.. ಅವಧಾರಿಜೊ (ಅವಧಾರಿಸು) , ಆದರಿಜೊ (ಆದರಿಸು) , ಉದೈಜ (ಉದಿಸು) , ಸೇವಿಜ್ (ಸೇವಿಸು) # ಮಧ್ಯಮ ಪುರುಷ ಏಕವಚನ ಕ್ರಿಯಾಪದಗಳನ್ನು ಕನ್ನಡದಲ್ಲಿ ‘ಅಯ್’ ಪ್ರತ್ಯಯ ಸೇರಿಸಿ ಪಡೆಯಲಾಗುವುದು. ನುಡಿದಯ್ , (ನುಡಿದೆ(ನೀನು) ) , ಮಾಡಿದಯ್ (ಮಾಡಿದೆ (ನೀನು)) , ಉತ್ತಮನಯ್ (ಉತ್ತಮನು(ನೀನು) ) . ಇದನ್ನು ಅನುಸರಿಸಿ ಮರಾಠಿಯಲ್ಲಿ ‘ಅಯ್’ ಪ್ರತ್ಯಯಗಳು ಬರುತ್ತವೆ. ದೇಖೋಜೈ (ನೋಡಿದೆ(ನೀನು) . # ಧಾತುಗಳಿಗೆ ಹಳೆಗನ್ನಡದಲ್ಲಿ ‘ಉವ’ ಮತ್ತು ಆಡು ಮಾತಿನಲ್ಲಿ ‘ಓ’ ಪ್ರತ್ಯಯ ಸೇರಿ ಭವಿಷ್ಯತ್ ಕಾಲವಾಚಕ ಬರುತ್ತದೆ. ಉದಾ. ಹೇಳುವ (ಮಾತು) , ಎತ್ತುವ (ಭಾರ) , ಮಾಡುವ (ಕೆಲಸ) , ದಾಟುವ (ನದಿ).. ಇದನ್ನು ಅನುಕರಿಸಿ ಮರಾಠಿಯಲ್ಲಿ ಬೋಲೋ (ಹೇಳುವ) , ದೇಖಲೋ (ತೋರಿಸುವ ) ರೂಪಗಳು ಕಾಣಿಸಿಕೊಂಡಿವೆ. # ಹಳೆಗನ್ನಡದಲ್ಲಿ ಉತ್ತಮ ಪುರುಷ ಏಕವಚನ ಆಜ್ಞಾರ್ಥದಲ್ಲಿ ‘ಎಂ’ ಪ್ರತ್ಯಯದಿಂದ ಸಾಧಿತವಾಗುತ್ತದೆ. ಮಾಳ್ಪೆಂ (ಮಾಡುವೆ) , ಪೂಜಿಪೆಂ (ಪೂಜಿಸುವೆ) . ಇದು ಮರಾಠಿಯಲ್ಲಿ ‘ಏನ’ , ‘ಐನ’ ಅಗಿ ಬಳಕೆಗೆ ಬಂದಿದೆ. ಉದಾ. ಪ್ರತಿಷ್ಠೀನ (ಪ್ರತಿಷ್ಠಿಸುವೆ) , ಸಾಂಘೈ (ಹೇಳುವೆ) # ಆಗು ಧಾತುವಿನ ಭೂತಕಾಲವಾಚಕ ಪಡೆಯಲು ಹಳೆಗನ್ನಡದಲ್ಲಿ ‘ತು’ ‘ಇತ್ತು’, ’ಇತು’ ಪ್ರತ್ಯಯಗಳು ಬರುತ್ತವೆ. ಉದಾ.. ಆಗು>ಆಯಿತು/ಆಯ್ತು/ಆಯಿತ್ತು . ಇದು ಮರಾಠಿಯಲ್ಲಿ ‘ಆಧಿ’ ‘ಆಇತಿ’, ‘ಆಯಿತೀ’ , ಪ್ರತ್ಯಯವಾಗಿ ಕಾಣಿಸಿಕೊಂಡಿದೆ. ಮರಾಠಿಯಲ್ಲಿ ಆಗು ಧಾತುವಿಗೆ ವಿಧಿ ಅರ್ಥ ಪ್ರಥಮ ಪುರುಷ ‘ಎ’ ಪ್ರತ್ಯಯ ಸೇರಿ ಆಗು+ಏ>ಆಗವೇ ರೂಪ ಬಂದಿದೆ. ಇದಕ್ಕೆ ನಿಷೇಧಾತ್ಮಕ ‘ನ’ ಸೇರಿ ‘ನಾಗವೇ’ ದಕ್ಕುತ್ತದೆ. ‘ಆಗವೇ’ , ‘ನಾಗವೇ’, ಮರಾಠಿಯಲ್ಲಿ ನೆಲೆ ಕಂಡಿವೆ. # ‘ಅಲ್’ ,’ಉಳ್’ , ‘ಒಳ್’ ಪದಗಳಿಗೆ ಹಳೆಗನ್ನಡದಲ್ಲಿ ‘ಆಗು’,’ಇರು’ ಮತ್ತು ಒಳಗೆ (<ಒಳ್) ಅರ್ಥಗಳಿವೆ. ಹಳೆಗನ್ನಡದ ‘ಒಳ್’ ಮರಾಠಿಯಲ್ಲಿ ‘ಅತುಲು’,’ಅತುಲೀ’ ರೂಪಗಳಾಗಿ ಬದಲಾವಣೆಗೊಂಡು ಬಳಕೆಯಲ್ಲಿದೆ. ಉದಾ, ಮರಾಠಿಯ ಏತೇ (ಇವು) , ತೇ (ಅವು) ಗಳ ಮೇಲೆ ಒಳ್>ಉಳ್>ಉಲ ಸವಾರಿ ಮಾಡಿ ‘ಏತುಲು (ಇವುಗಳು), ‘ತೇಮಲಾ(ಅವುಗಳು) ಬಂದಿವೆ. # ಸಂಸ್ಕೃತದಲ್ಲಿ ‘ಅ’ಕಾರಾಂತ ಸ್ತ್ರೀಲಿಂಗ ಪದಗಳು ಇಲ್ಲ. ನಪುಂಸಕಲಿಂಗಗಳಲ್ಲಿ ‘ಅ’ ಕಾರಂತ ಪದಗಳಿಗೆ ಏಕವಚನ ಪ್ರತ್ಯಯ ‘ಮ್’ ಹತ್ತುತ್ತದೆ. ಪಶ್ಚಿಮ ಅಪಭ್ರಂಶದಿಂದ ಕವಲೊಡೆದ ರಾಜಸ್ಥಾನಿ , ಗುಜರಾಥಿ, ಹಿಂದಿ ಭಾಷೆಗಳಲ್ಲಿ ಪ್ರಥಮ ವಿಭಕ್ತಿಯಲ್ಲಿ ‘ಉ’ ಪ್ರತ್ಯಯ ಬರುವುದಿಲ್ಲ. ಹಳೆಗನ್ನಡದಲ್ಲಿ ಪ್ರಥಮ ವಿಭಕ್ತಿಯ ಸಂದರ್ಭದಲ್ಲಿ ‘ಉ’ ಪ್ರತ್ಯಯ ಬಂದ ದಾಖಲೆಗಳು ಸಿಗುತ್ತವೆ. ಉದಾ. ಮಗನುಂ , ಪುತ್ರಕನುಂ . ಕನ್ನೆಯರುಂ .. ಈ ‘ಉ’ ಪ್ರತ್ಯಯ ಬಹುವಚನದಲ್ಲಿ ‘ರ್(ರು)’ – ಪುತ್ರಕರ್(ರು) , ಕನ್ನೆಯರ್ (ರು) ಆಗುತ್ತದೆ. ಇದು ಮರಾಠಿಯಲ್ಲಿ ಗೋವಳರು, ಕೀಡರು, ಲೇಕರು ಆಗಿ ಕಾಣಿಸಿಕೊಂಡಿದೆ. # ಹಳೆಗನ್ನಡದಲ್ಲಿ’ಇತ್ತೊದಾನ್’, ‘ಇದಾನ್’, ‘ಪೊರುಂದಮಾನ್’ ,’ಆಳುವಂ’ , ಕಟವಪ್ರಂ’ ಎನ್ನುವ ದ್ವಿತೀಯ ವಿಭಕ್ತಿ ಪ್ರಯೋಗಗಳು ಮರಾಠಿಯಲ್ಲಿ ‘ಏ’ , ‘ಆ’ , ‘ಊ’ ಆಗಿವೆ. # ಮರಾಠಿಯಲ್ಲಿ ದ್ವಿತೀಯ ಹಾಗೂ ಚತುರ್ಥಿ ವಿಭಕ್ತಿ ಪ್ರತ್ಯಯವಾಗಿ ‘ತೇ’ ಬರುತ್ತದೆ. ಇದು ಷಷ್ಠಿ ವಿಭಕ್ತಿಯಿಂದ ಬಂದಿದೆ. ಹಳೆಗನ್ನಡದಲ್ಲಿ ಷಷ್ಟಿ ವಿಭಕ್ತಿ ಪ್ರತ್ಯಯ ‘ಅ’ (‘ಅದು’ ಪದದ ಸಂಕ್ಷಿಪ್ತ ರೂಪ) . ‘ಅದು’ ಪದ ಮರಾಠಿಯಲ್ಲಿ ನೇರವಾಗಿ ‘ತೇ’ ಆಗಿ ಕಾಣಿಸಿಕೊಂಡಿದೆ. ಇದರಿಂದಾಗಿ ಕನ್ನಡದಂತೆ ಮರಾಠಿಯಲ್ಲಿಯೂ ‘ತೇ’ ಷಷ್ಟಿ ಹಾಗೀ ದ್ವಿತಿಯ ವಿಭಕ್ತಿ ಪ್ರತ್ಯಯವಾಗಿ ಕಾಣಿಸಿಕೊಂಡು ಅಲ್ಲಿಯೂ ದ್ವಿತೀಯ , ಚತುರ್ಥಿ ಮತ್ತು ಷಷ್ಠಿ ರೂಪದಲ್ಲಿ ಬಳಕೆಯಾಗತೊಡಗಿತು. # ಕನ್ನಡದಲ್ಲಿ ಭೂತಕಾಲವಾಚಕ ಕೃದಂತ ಪ್ರತ್ಯಯ ಷಷ್ಠಿ ವಿಭಕ್ತಿಯ ಏಕವಚನ ಪ್ರತ್ಯಯವಾಗಿದೆ. (ಬಂದ , ಹೋದ, ನೋಡಿದ). ಇದನ್ನು ಅನುಸರಿಸಿ ಮರಾಠಿಯಲ್ಲಿ ‘ತೇ’ ಷಷ್ಠಿ ಏಕವಚನದೊಂದಿಗೆ ಭೂತಕಾಲವಾಚಕ ಕೃದಂತ ವರ್ತಮಾನ ಪ್ರಥಮ ಪುರುಷ ನಪುಂಸಕಲಿಂಗದ ಪ್ರತ್ಯಯವಾಗಿದೆ. ಮುಂದಿನ ದಿನಗಳಲ್ಲಿ ‘ತೇ’ ದಂತ್ಯ ‘ಚೇ’ ತಾಲವ್ಯವಾಗಿ ಬದಲಾಗಿದೆ. # ಸಂಸ್ಕೃತ ವ್ಯಾಕರಣದಲ್ಲಿ ಪರಸ್ಪರ ಅವಲಂಬನೆ/ಸಂಬಂಧ ಇರುವ ಪದಗಳು ಬಂದರೆ ಮೊದಲನೆಯದು ಪ್ರತಿಯೋಗಿ. ಎರಡನೆಯದು ಅನುಯೋಗಿ. ಮರಾಠಿ ಹಾಗೂ ಇತರ ನವ ಇಂಡೋ-ಆರ್ಯನ್ ಭಾಷೆಗಳಲ್ಲಿ ಷಷ್ಠಿ ವಿಭಕ್ತಿ ಇರುವಾಗ ಅನುಯೋಗಿ ಪದದ ಲಿಂಗ ಪ್ರತಿಯೋಗಿ ಲಿಂಗದ ಮೇಲೆ ಪರಿಣಾಮ ಬೀರುತ್ತದೆ. ಉಳಿದ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ ಇಂತಹ ಲಕ್ಷಣಗಳು ಹೊಸ ಇಂಡೋ-ಆರ್ಯನ್ ಭಾಷೆಗಳಲ್ಲಿ ಇಲ್ಲ. ಇದಕ್ಕೆ ಕಾರಣ ನೀಡುವುದು ನವ ಇಂಡೋ-ಆರ್ಯನ್ ಭಾಷಾ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಹಳೆಗನ್ನಡದ ಪ್ರಭಾವವೇ ಆಗಿದೆ. # ಇಂಡೋ-ಆರ್ಯn ಭಾಷೆಗಳಲ್ಲಿ ವಿಶೇಷಣ/ಅನುಯೋಗಿಯು (ಹಿರಿದು, ಕಿರಿದು, ದೊಡ್ದ….) ವಿಶೇಷ್ಯ/ಪ್ರತಿಯೋಗಿಯ (ಆತ ,ಆಕೆ , ಅದು ,ಅವರು…) ಲಿಂಗ,ವಚನಗಳನ್ನು ಅನುಸರಿಸುತ್ತದೆ. ಇದಕ್ಕೆ ಹೊರತಾಗಿ ಕನ್ನಡದಲ್ಲಿ ಮುಂದಿನ ಅನುಯೋಗಿಯ ಲಿಂಗ, ವಚನಗಳು ಪ್ರತಿಯೋಗಿ ಪದದ ಮೇಲೆ ಪ್ರಭಾವ ಬೀರುತ್ತವೆ. ಮರಾಠಿ ಸೇರಿದಂತೆ ಹೊಸ ಇಂಡೋ-ಆರ್ಯನ್ ಭಾಷೆಗಳಲ್ಲಿ ಷಷ್ಠಿ ವಿಭಕ್ತಿ ಪ್ರತ್ಯಯ ಇರುವಾಗ ಕನ್ನಡದಲ್ಲಿ ಇರುವಂತೆ ಪ್ರತಿಯೋಗಿಯ ಲಿಂಗ , ವಚನಗಳು ಅನುಯೋಗಿಯ ಮೇಲೆ ಪ್ರಭಾವ ಬೀರುತ್ತವೆ. ಈ ಭಾಷೆಗಳ ಮೇಲೆ ಹಳೆಗನ್ನಡ ಬೀರಿರುವ ಪ್ರಭಾವವೇ ಇದಕ್ಕೆ ಕಾರಣವಾಗಿದೆ. ಕನ್ನಡದ ಷಷ್ಠಿ ವಿಭಕ್ತಿ ಪ್ರತ್ಯಯ ‘ಅ’ ‘ಆ’ (=ಅದು/ಅವನು/ಅವಳು) ಮರಾಠಿಗೆ ಸಾಗಿ ‘ತೇ’ ಎಂದು ಅನುವಾದಗೊಂಡಿದೆ. ಈ ‘ತೇ’ . ‘ತೋ’ ರೂಪಗಳನ್ನು ಇಂಡೋ-ಆರ್ಯನ್ ಭಾಷೆಗಳ ಮೂಲದಿಂದ ಪಡೆಯಲು ಸಾಧ್ಯವಿಲ್ಲ. # ಕನ್ನಡದಲ್ಲಿ ‘ಎ’ , ‘ಋ’, ‘ಓ’, ‘ಔ’ ಗಳಲ್ಲಿ ಕೊನೆಗೊಳ್ಳುವ ಏಕವಚನ ಪದಗಳಿಗೆ ತೃತೀಯ ವಿಭಕ್ತಿ ಬರುವಾಗ ‘ಇನ’ ಸೇರುತ್ತದೆ. ಉದಾ. ಮಾವು+ಇನ+ಇಂದ>ಮಾವಿನಿಂದ , ನಾಡು+ಇನ+ಇಂದ>ನಾಡಿನಿಂದ. ಆರಂಭದಲ್ಲಿ ಷಷ್ಠಿ ಪ್ರತ್ಯಯ ಬಂದು ನಂತರ ಅದಕ್ಕೆ ತೃತೀಯ ಪ್ರತ್ಯಯ ಬರುವುದು ಕನ್ನಡದ ಮುಖ್ಯ ಲಕ್ಷಣ. ಕನ್ನಡದ ;ಈ’ ಇದು , ಇವನು , ಇವಳು , ಇವು , ಇವರು ಅರ್ಥ ಹೊಂದಿದೆ. ಇದೇ ಆಧಾರಧ ಮೇಲೆ ಮರಾಠಿಯಲ್ಲಿ ‘ಇನ್’ ಸೇರಿಸುವ ಪದ್ದತಿ ಇದೆ. ಉದಾ. ತೇ+ಇನ್> ತೇಣೇ , ಜೋ+ಇನ್>ಜೇಣೇ. ಇದನ್ನು ಅನುಸರಿಸಿ ಮರಾಠಿಯಲ್ಲಿ ತೃತೀಯ ವಿಭಕ್ತಿಗೆ ‘ಇನ್’ ಸೇರಿ ಇಯಾಚೇ (ಇದು) ಏಯಾಚೇ ಮುಂತಾದವು ಬರುತ್ತವೆ. # ಕನ್ನಡದಲ್ಲಿ ‘ವರಂ’ , ‘ವರೆಗೆ’ ಪದಗಳು ಇಲ್ಲಿಯವರೆಗೆ , ಅಲ್ಲಿಯವರೆಗೆ ಎನ್ನುವ ಬಳಕೆಗಳು ‘ಈ ಸಮಯಯದ ತನಕ ’ .‘ಆ ಮೇರೆಯವರೆಗೆ’ ಎನ್ನುವ ಕಾಲ ಮತ್ತು ದೇಶ ವ್ಯಾಪ್ತಿಯ ಅರ್ಥಗಳನ್ನು ಹೊಂದಿವೆ. ಇದು ನೇರವಾಗಿ ಮರಾಠಿಗೆ ಹೋಗಿ ‘ವೇರಿ’, ವೇಝಿ’ ಆಗಿ ಇಯಾವೇಝ (ಇಲ್ಲಿಯವರೆಗೆ) , ಜವವೇರಿ (ಯಾವವರೆಗೆ) , ಹೃದಯಕಮಲವೇರಿ (ಹೃದಯ ಕಮಲದವೆರೆಗೆ) ಮುಂತಾಗಿ ಬಳಕೆ ಕಂಡಿದೆ. # ಹಳೆಗನ್ನಡದಲ್ಲಿ ‘ಉೞಿ’ ಧಾತು ತ್ಯಜಿಸು , ಬಿಡು , ಹೊರತಾಗು ಎನ್ನುವ ಅರ್ಥ ಹೊಂದಿದೆ. ಇದರಿಂದ ‘ಉೞೆದು’ (ಹೊರತು) ಪದ ದಕ್ಕಿದೆ. ಇದರ ಪ್ರಭಾವದಿಂದ ಮರಾಠಿ ‘ಊನಿ’, ‘ಔನಿ’ ಪ್ರತ್ಯಯಗಳನ್ನು ಪಡೆದಿದೆ. ಉದಾ. ಹೋಜಾನಿ ,ಮ್ಹಜಾನಿ , ವಾಚಾನಿ. # ಕನ್ನಡದಲ್ಲಿ ‘ಸರಿ’ ಪದಕ್ಕೆ ‘ಸಮಾನ’ , ‘ಜೊತೆ’ ‘ಒಡನೆ’ ಎನ್ನುವ ಅರ್ಥಗಳಿವೆ. ಇದು ಮರಾಠಿಯಲ್ಲಿ ‘ಸಕಟ’ವಾಗಿದೆ. # ಕನ್ನಡದಲ್ಲಿ ‘ಪತ್ತು’ (=ಹತ್ತು) ಪದ ತೊಡಗು ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತದೆ. ಇದು ಮರಾಠಿಯಲ್ಲಿ ‘ಲಾಗ್’ ಆಗಿ ಅದೇ ಅರ್ಥ ಹೊಂದಿದೆ. # ‘ಕನ್ನಡದ ಓಸುಗ’ , ‘ಸಲುವಾಗಿ’ ‘ವರೆ’ ಪದಗಳಿಗೆ ಸಾಮ್ಯ, ಹೋಲಿಕೆ ಅರ್ಥಗಳಿವೆ. ಇದೇ ಮಾದರಿಯಲ್ಲಿ ಸಾಠೀ , ಪೋಲೀ , ಸರಿಸೇ , ಸಮೇ ಪದಗಳು ಮರಾಠಿಯಲ್ಲಿ ಕಾಣಿಸಿಕೊಂಡಿವೆ. ಆಕರಗಳು (1) Kanarese Influence On Old Marathi – R.V Jahagirdar, Annals Of Bhandarkar Oriental Research Institute XI-IV 1930 (2) ಹಳಗನ್ನಡ ಮತ್ತು ಮರಾಠಿ – ರಂ.ಶಾ ಲೋಕಾಪುರ , ಹಂಪಿ ವಿಶ್ವವಿದ್ಯಾಲಯ , ೧೯೯೪ |
Comment Box is loading comments...