|
ತಮಿಳು-ತಮಿಳಗಂ
(ತಮಿಳಗಂ-ಸಂಗಂ ; ಎಷ್ಟು ಪ್ರಾಚೀನ ಕೃತಿಯ ಆಯ್ದ ಭಾಗ) ಪ್ರಾಚೀನ ಸಾಹಿತ್ಯ ಮತ್ತು ಶಿಲಾಶಾಸನಗಳನ್ನು ಗಮನಿಸಿದಾಗ ಅಶೋಕನ ಕಾಲದಿಂದ ಕ್ರಿ.ಶ. 3 ನೇ ಶತಮಾನದವರೆಗೆ ದಕ್ಷಿಣ ಭಾರತದಲ್ಲಿ ಹಲವಾರು ಜನಾಂಗಗಳು, ಸಮುದಾಯಗಳು ತಮ್ಮ ಅಧಿಪತ್ಯ ಸಾಧಿಸಿ ರಾಜ್ಯ ಸ್ಥಾಪನೆಯ ಯತ್ನದಲ್ಲಿದ್ದುದು ಸ್ಪಷ್ಟವಾಗುತ್ತದೆ. ಈ ಜನಾಂಗಗಳಲ್ಲಿ ತಮಿಳರು ಬಹು ಪ್ರಮುಖರು. ಕ್ರಿ.ಶ. 1-3 ನೇ ಶತಮಾನದ ಅವಧಿಯಲ್ಲಿ ಪಶ್ಚಿಮ ಕರಾವಳಿ ತೀರದಲ್ಲಿ ಗುಜರಾತ್ನ ಭರುಗಚ್ಛದಿಂದ ಪ್ರಾರಂಭಿಸಿ ದಕ್ಷಿಣ ತುದಿಯ ಕನ್ಯಾಕುಮಾರಿಯವರೆಗೆ ಹಲವಾರು ರಾಜರುಗಳ ,ಸ್ಥಳೀಯ ನಾಯಕರುಗಳಡಿಯಲ್ಲಿ ಗ್ರೀಕ್-ರೋಮನ್ರ ಸಂಪರ್ಕದಿಂದ ವಾಣಿಜ್ಯ, ವ್ಯಾಪಾರ ಚಟುವಟಿಕೆಗಳು ಏರುಗತಿಯನ್ನು ಕಂಡಿದ್ದವು. ಆದರೆ ಎಲ್ಲಿಯೂ ಇಲ್ಲಿನ ಹಲವಾರು ಭಾಷಾ ಸಮುದಾಯಯಗಳ ಬಗೆಗೆ ಖಚಿತ ತೀರ್ಮಾನ ನೀಡುವ ದಾಖಲೆಗಳು ದಕ್ಕುವುದಿಲ್ಲ. ಪ್ರಾಚೀನ ತಮಿಳಗಂ ಕುರಿತಾಗಿ ಸಂಗಂ ಸಾಹಿತ್ಯದ ಮೂಲಕ ಸಾಕಷ್ಟು ಮಾಹಿತಿಗಳು ದೊರೆಯುವವಾದರು ಇದನ್ನು ಬೆಂಬಲಿಸಲು ಶಿಲಾಶಾಸನ, ನಾಣ್ಯ, ನಗರ ಮತ್ತು ನಿರ್ಮಾಣಗಳ ರೂಪದಲ್ಲಿ ಸಂಶಯಾತೀತವಾದ ಬಾಹ್ಯ ಸಾಕ್ಷಿಗಳು ದಕ್ಕಿಲ್ಲ. ಹಿನ್ನೆಲೆ ತಮಿಳಗಂ ಚರಿತ್ರೆ ಕ್ರಿ.ಪೂ 7 ನೇ ಶತಮಾನದ ಕಬ್ಬಿಣದ ಯುಗದ ಕಪ್ಪು-ಕೆಂಪು ಮಣ್ಣಿನ ಪಾತ್ರೆ ಬಳಕೆಯ ಜನಾಂಗದ ಸಂಚಲನೆಯಿಂದ ಪ್ರಾರಂಭವಾಗುತ್ತದೆ. ತಮಿಳು ಈ ಕಾಲದಲ್ಲಿ ನಿರ್ದಿಷ್ಟ ಸಮುದಾಯದ ಸ್ವತಂತ್ರ ಭಾಷೆಯಾಗಿ ಕಾಣಿಸಿಕೊಂಡಿತು. ಪ್ರಾಕ್ತನ ಶೋಧನೆಗಳು ಈ ಕಾಲದಲ್ಲಿ ಬೇಟೆ ಮತ್ತು ಸಂಗ್ರಹದ ಸ್ಥಿತಿ ಪ್ರಮುಖವಾಗಿದ್ದ ಸ್ಥಿತಿಯನ್ನು ಸೂಚಿಸುತ್ತವೆ. ತಮಿಳಗಂನ ಚಾರಿತ್ರಿಕ ಕಾಲ ಕ್ರಿ.ಪೂ-3 ರಿಂದ ಕ್ರಿ.ಶ 3ರ ಶತಮಾನದ ನಡುವಿನ ಅವಧಿಯಲ್ಲಿ ಪ್ರಾರಂಭವಾಗುತ್ತದೆಯೆಂದು ಪರಿಗಣಿಸಬಹುದು. ತಮಿಳಗಂ ಬೆಟ್ಟ , ಗುಡ್ಡ , ನದಿ, ಕರಾವಳಿ ಮತ್ತು ಬರಡು ಭೂಮಿಗಳನ್ನೊಳಗೊಂಡ ವಿಶಾಲ ಪ್ರದೇಶವಾಗಿದ್ದು ಭೌಗೋಳಿಕ ವ್ಯತ್ಯಾಸಗಳು ಗಣನೀಯವಾಗಿವೆ. ಇದನ್ನು ಅನುಸರಿಸಿ ಆ ಭೌಗೋಳಿಕ ಪರಿಸರದ ಪ್ರಾತಿನಿಧಿಕವಾದ ಹೂವುಗಳ ಹೆಸರಿನಿಂದ ಅವುಗಳನ್ನು ಗುರುತಿಸಲಾಯಿತು. ಕುರಿಂಜಿ-ಬೆಟ್ಟದ ಹೂವು (ಬೆಟ್ಟ+ಕಾಡು) , ಮುಲ್ಲೈ-ಹುಲ್ಲುಗಾವಲಿನ ಹೂವು (ಕಾಡು+ಬಯಲು), ಮರುದಂ-ನದಿ ದಡದ ಮರಗಳ ಹೂವು (ನದಿತೀರ+ನದಿಬಯಲು ಪ್ರದೇಶ) , ನೆಯ್ದಿಲ್-ನೀರಿನ ಹೂವು (ಕರಾವಳಿ) ಮತ್ತು ಪಾಳೈ-ಬಂಜರಿನ ಹೂವು ( ಬರಡು ಪ್ರದೇಶ) ಎಂಬ ಐದು ವಲಯಗಳನ್ನು ಗುರುತಿಸಲಾಗಿದ್ದಿತು. (ಸಂಗಂ ಸಾಹಿತ್ಯದಿಂದ ಇದು ನೇರವಾಗಿ ದಕ್ಕುವುದಿಲ್ಲ. ಸಂಗಂಸಾಹಿತ್ಯ ಕುರಿತಾದ ಇರೈಯನಾರ್ ಅಹಪೆÇ್ಪರುಳ್ ಮತ್ತು ತೊಲ್ಕಾಪ್ಪಿಯಂನ ಪೆÇರುಳಾದಿಗಾರಂಗಳಿಂದ ಇಂತಹ ವಿಭಜನೆ ದಕ್ಕುತ್ತದೆ.) ಕುರಿಂಜಿಯಲ್ಲಿದ್ದ ಕಾನವರ್(ಕಾಡಿನವರು) ಮತ್ತು ವೇಟರ್ಗಳು(ಬೇಟೆಯವರು) ಕಾಡು ಉತ್ಪನ್ನ ಮತ್ತು ಸಂಗ್ರಹದಲ್ಲಿ , ಮುಲ್ಲೈನಲ್ಲಿದ್ದ ಇಡೈಯಾರ್(ಗೊಲ್ಲರು) ಮತ್ತು ಕುರುವರು(ಕುರುಬರು) ಪಶುಸಾಕಾಣಿಕೆ ಮತ್ತು ಸೀಮಿತ ಕೃಷಿಯಲ್ಲಿ , ಮರುದಂನಲ್ಲಿ ವೆಳ್ಳಾರ (ಕೃಷಿಕರು), ಉಳವರ್ಗಳು(ಉಳುವವರು) ವ್ಯವಸ್ಥಿತ ವಿಸ್ತೃತ ಕೃಷಿಯಲ್ಲಿ , ನೆಯ್ದಲ್ ಪ್ರದೇಶದ ಪರದವರ್(ಮೀನಿಗಾರರು) ಮತ್ತು ಉಮಣರ್(ಉಪ್ಪಿನವರು) ಮೀನುಗಾರಿಕೆ ಮತ್ತು ಉಪ್ಪು ತಯಾರಿಕೆ,ಮಾರಾಟಗಳಲ್ಲಿ ಪಾಳೈನಲ್ಲಿದ್ದ ಮಾರವರ್,ಎಯಿನಾರ್, ಕಳ್ಳರ್ಗಳು ದನಗಳ ಕಳ್ಳತನ , ದೋಚುವಿಕೆಯಲ್ಲಿ , ನಿರತರಾಗಿದ್ದರು. ಹಲವು ಭೂಪ್ರದೇಶಗಳು ಸೇರುವಲ್ಲಿ ಈ ಕಸುಬುಗಳು ಮಿಶ್ರಣಗೊಳ್ಳುತ್ತಿದ್ದವು ಅಥವಾ ಅದಲು ಬದಲಾಗುತ್ತಿದ್ದವು. ಕುರಿಂಜಿಯಲ್ಲಿ ಮುರುಗ(ಸೆಯೊನ್) , ಮುಲ್ಲೈನಲ್ಲಿ ವಿಷ್ಣು (ಮಯೋನ್) , ಮರುದಂನಲ್ಲಿ ಇಂದ್ರ (ವೆಂಡನ್) , ನೆಯ್ದಿಲ್ನಲ್ಲಿ ವರುಣ (ಕಡಲೋನ್) ಮತ್ತು ಪಾಳೈನಲ್ಲಿ ಕೊರ್ರವಿ (ದುರ್ಗೆ) ಆರಾಧ್ಯ ದೈವಗಳಾಗಿದ್ದವು. ಈ ಎಲ್ಲ ಭೂಪ್ರದೇಶಗಳಲ್ಲಿ ಅತ್ಯಂತ ಸಮೃದ್ಧವಾದುದೆಂದರೆ ಮರುದಂ. ಇದು ಕೃಷಿ ಚಟುವಟಿಕೆಗಳ ಕೇಂದ್ರವಾಗಿದ್ದು ಜನವಸತಿಯ ಊರುಗಳಲ್ಲಿ ವೆಳ್ಳಾರ,ಉಳವರ್ ಎಂದು ಕರೆಯಲಾಗುವ ಒಕ್ಕಲಿಗರಿದ್ದರು. ಇಂತಹ ಕೃಷಿಯೋಗ್ಯ ಊರುಗಳ ಮುಂದಾಳುವನ್ನು ಕಿಳವನ್ ಅಥವಾ ತಲೈವನ್ ಎಂದು ಕರೆಯಲಾಗುತ್ತಿತ್ತು. ಕಿಳವರ್ಗಳು ತಾವಾಗಿಯೇ ವ್ಯವಸಾಯ ಚಟುವಟಿಕೆಗಳಲ್ಲಿ ಭಾಗವಹಿಸದೆ ಅಡಿಯೋರ್ (ಅಡಿಯಾಳು=ಸೇವಕ) , ವಿನೈಯೋರ್ (ಕೆಲಸಗಾರ), ಕಲಮರ್ಗಳನ್ನು (ಹೊಲಗೆಲಸದವರು) ಶ್ರಮಿಕರನ್ನಾಗಿ ಹೊಂದಿದ್ದರು. ಈ ಕಿಳವರ್ಗಳು ವೇಂದನ್ ಅಥವಾ ರಾಜನ ಅಧೀನದಲ್ಲಿರುತ್ತಿದ್ದರು. ಕೃಷಿ ಭೂಮಿಯನ್ನು ನೀಡಿದ ಅಥವಾ ಹೊಂದಲು ನೆರವಾದ ತಮ್ಮ ವೇಂದನ್ ಆಣತಿಯನ್ನು ತಲೈವರುಗಳು ಚಾಚೂತಪ್ಪದೆ ಪಾಲಿಸುತ್ತಿದ್ದರು. ಯುದ್ಧಗಳಲ್ಲಿ ಭಾಗವಹಿಸಿ ವೇಂದನ್ ಪರ ಹೋರಾಡಿ ಅವರ ಋಣ ತೀರಿಸುವುದು ಕೀಳಾರ್ರ ಕರ್ತವ್ಯವಾಗಿದ್ದಿತು. ಯುದ್ದದಲ್ಲಿ ತೋರಿಸಿದ ಶೌರ್ಯಕ್ಕೆ ಇವರಿಗೆ ದೋಚಿದ ಸಂಪತ್ತಿನಲ್ಲಿ ಪಾಲು, ಕೆಲವೊಮ್ಮೆ ದಾನ ರೂಪದಲ್ಲಿ ಉತ್ತಮ ಭೂಮಿಗಳು ದಕ್ಕುತ್ತಿದ್ದವು. ಇವರೊಂದಿಗೆ ರಾಜರನ್ನು ಕುರಿತಾಗಿ ಹೊಗಳಿ ಹಾಡುತ್ತಿದ್ದ ಬಿದುರಿನ ಕೊಳಲನ್ನು ನುಡಿಸುತ್ತಿದ್ದ ಕೆಳವರ್ಗದ ಪಾಣಾರ್ ಮತ್ತು ಕದನದಲ್ಲಿ ಎದೆಗಾರಿಕೆ ತೋರಿದ ಮಾರವರ್ ಸಹ ಪರಿಗಣಿತರಾಗುತ್ತಿದ್ದರು. ಕೀಳಾರ್ಗಳು ಕಾಡನ್ನು ಕಡಿದು ನಾಡನ್ನು ವಿಸ್ತರಿಸಲು ಯತ್ನಿಸುತ್ತಿದ್ದರು. ಇದಕ್ಕೆ ವೇಂದರ್ಗಳ ಬೆಂಬಲವಿದ್ದಿತು. ಒಕ್ಕಲಿಗರು ಊರಿನ ಹೊರ ಬಯಲಿನಲ್ಲಿದ್ದ ಮರದ ಕೆಳಗಿನ ಕಟ್ಟೆಗಳಲ್ಲಿ ಮನ್ರಂ (ಗ್ರಾಮಸಭೆ) ಹೊಂದಿರುತ್ತಿದ್ದರು. ಇಲ್ಲಿ ಊರ ಹಿರಿಯರು ಸಮಾಲೋಚನೆ ನಡೆಸಿದರೆ , ಯುವಕರು ಆಟ , ಬೇಟಗಳಲ್ಲಿ ಕಾಲ ಕಳೆಯುತ್ತಿದ್ದರು. ಈ ಮನ್ರಂ ಅಲೆಮಾರಿ ಪಾಣಾರ್ಗಳಿಗೆ ಅವರ ಕುಟುಂಬದವರಿಗೆ ತಾತ್ಕಾಲಿಕ ನೆಲೆಯಾಗಿದ್ದರೆ , ಶತೃಗಳಿಗೆ ದಾಳಿಯ ಗುರಿಯಾಗಿದ್ದಿತು. ಕೃಷಿಗೆ ಅನುಕೂಲವಾದ ಪ್ರಮುಖ ನದಿಗಳಾದ ಕಾವೇರಿಯನ್ನು ಚೋಳರು , ಅನ್(ವಂಜಿ)-ಪೊರುಣಿ (ಅಮರಾವತಿ) ಚೇರರು , ವೈಗೈಯನ್ನು ಪಾಂಡ್ಯರು ಅವಲಂಬಿಸಿದ್ದರು. ಇವರು ಮೂವೇಂದರರೆಂದು ಹೆಸರಾಗಿದ್ದರು. ತಮಿಳಗಂನ ಇತರ ಪ್ರದೇಶಗಳಲ್ಲಿ ಮರುದಂಗೆ ಇರುವ ಸಂಪತ್ತಾಗಲಿ ಅಥವಾ ಸಮೃದ್ಧಿಯನ್ನು ಸಾಧಿಸಲು ಬೇಕಾದ ನೈಸರ್ಗಿಕ ಅನುಕೂಲಗಳಾಗಲಿ ಇರಲಿಲ್ಲ. ಇದರಿಂದಾಗಿ ಪಾಳೈ ವಲಯಗಳಲ್ಲಿದ್ದ ಕ್ರೂರ ನಿಲುವಿನ, ನಿರ್ದಯಿ ನಡವಳಿಕೆಯ , ಅಸೀಮ ನಿಷ್ಠೆಯ , ಅಧಿಕ ದೈಹಿಕ ಸಾಮಥ್ರ್ಯದ ಮಾರವರ್ ಜನಾಂಗದವರು ಕೀಳಾರ್ ,ವೇಳೀರ್, ವೇಂದರ್ಗಳ ಆಶ್ರಯ ಬಯಸಿ ಬರುತ್ತಿದ್ದರು. ಯುದ್ಧದಲ್ಲಿ ಭಾಗವಹಿಸಿ ,ಶೌರ್ಯ ತೋರಿ ಮೆಚ್ಚುಗೆ ಗಳಿಸಿ ಕೆಲವೊಮ್ಮೆ ಭೂಮಿ ಪಡೆದು ಒಕ್ಕಲುತನವನ್ನು ಅವಲಂಬಿಸುತ್ತಿದ್ದರು. ಶಾಂತ ಸ್ಥಿತಿಯಲ್ಲಿ ಕೃಷಿಗಿಳಿಯುವ , ಬಿಕ್ಕಟ್ಟಿನಲ್ಲಿ ಸದಾ ಯುದ್ದ ಸನ್ನದರಾಗಿರುತ್ತಿದ್ದ ಇವರು ಮರುದಂನ ಮೂಲ ಒಕ್ಕಲಿಗರಿಗಿಂತಲೂ ಪ್ರಬಲರಾಗಿರುತ್ತಿದ್ದರು. ನದಿ ತೀರದ ಫಲವತ್ತಾದ ಪ್ರದೇಶ ಹಿಡಿದಿದ್ದ ಮೂವೇಂದರರು ಬಲಿಷ್ಟರಾದ ಮಾರವರ್ ನೆರವಿನಿಂದ ಯುದ್ದದಲ್ಲಿ ಮೇಲ್ಗೈ ಸಾಧಿಸುತ್ತ , ತಮ್ಮ ನೆಲೆಗಳನ್ನು ಅಗಾಗ ವಿಸ್ತರಿಸುತ್ತ ,ಕೃಷಿ ಚಟುವಟಿಕೆಯಿಂದ ಆಹಾರೋತ್ಪದಾನೆ ಮಾಡಿಸುತ್ತ ಪ್ರಬಲರಾಗುತ್ತಿದ್ದರು. ಇದೇ ಸಮಯದಲ್ಲಿ ಮರುದಂ ಹೊರಗಿನವರು ಈ ಅನುಕೂಲಗಳಿಂದ ವಂಚಿತರಾಗಿ ಜೀವನಕ್ಕಾಗಿ ದೋಚುವ ಕೆಲಸಕ್ಕಿಳಿಯುತ್ತಿದ್ದರು. ಮೂವೇಂದರರಿಗೆ ಸವಾಲೆಸೆಯುವಂತೆ ಎಳಿಮಲೈ , ಪೆರೆಯಿಲ್ ಮಲೈ, ಕಿಳ್ಳಿ ಮಲೈ , ಕುದಿರಮಲೈ, ಪರಂಚಿ ಮಲೈ , ವೆಂಕಟ ಮಲೈ ನಂತಹ ನೂರಾರು ಬೆಟ್ಟಗಳಲ್ಲಿ ಕೋಟೆಗಳನ್ನು ಕಟ್ಟಿಕೊಂಡಿದ್ದ ಸ್ವತಂತ್ರರಾದ ವೇಳೀರ್ಗಳು ,ಚಿರ್ರರಸರು, ಮನ್ನರ್,ಉರ್ಕಿಲರ್ಗಳು ಕಿಕ್ಕಿರಿದಿದ್ದರು. ಕಾಲಾನುಕ್ರಮದಲ್ಲಿ ಮೂವೇಂದರರು ತಮ್ಮ ಅಧಿಪತ್ಯವನ್ನು ತೀರ ಪ್ರದೇಶಗಳಿಗೆ ವಿಸ್ತರಿಸಿದರು. ಇದು ಚೇರರು ಪಶ್ಚಿಮ ಕರಾವಳಿಯ ತೊಂಡಿ , ಮುಶಿರಿ , ಚೋಳರು ಪೂರ್ವ ಕರಾವಳಿಯ ಕಾವೇರಿ ಪೂಪಟ್ಟಿನಂ ಮತ್ತು ಪಾಂಡ್ಯರು ಕೊರ್ಕೈವರೆಗೆ ತಮ್ಮ ನೆಲೆಗಳನ್ನು ವಿಸ್ತರಿಸುವಲ್ಲಿಗೆ ಕೊನೆಗೊಂಡಿತು. ಗ್ರೀಕ್-ರೋಮನ್ ಮೂಲದ ವ್ಯಾಪಾರ ಈ ತೀರ ಪ್ರದೇಶಗಳಲ್ಲಿ ನಡೆಯುತ್ತಿತ್ತಾದರೂ ತಮಿಳಗಂ ಸಂಪನ್ಮೂಲಗಳೆಲ್ಲವು ಕೃಷಿ ಮೂಲದವಾಗಿದ್ದವು. ಈ ಸಂಪತ್ತಿನ ಕೊರತೆಯಾದಗಲೆಲ್ಲ ಯುದ್ಧ ಮತ್ತು ದೋಚುವಿಕೆಗಳು ಕಾಣಿಸಿಕೊಳ್ಳುತ್ತಿದ್ದವು. ಕೃಷಿ ಯುದ್ಧದ ಆರಂಭ ಮತ್ತು ಅಂತ್ಯ ಎರಡಕ್ಕೂ ಕಾರಣವಾಗಿದ್ದಿತು. ಪ್ರಾಚೀನ ತಮಿಳಗಂ ಸಮಾಜವನ್ನು ಸ್ಥಿರವಾಗಿ ನೆಲೆಗೊಂಡಿರುವ ಸುಸಜ್ಜಿತ ಆಳ್ವಿಕೆಯನ್ನು ಹೊಂದಿದ್ದ ನೆಲೆಯೆಂಬಂತೆ ಸಾಂಪ್ರದಾಯಿಕ ದೃಷ್ಟಿಯಲ್ಲಿ ಚಿತ್ರಿಸಲಾಗುತ್ತಿದೆ. ಆದರೆ ಸಂಗಂ ಸಾಹಿತ್ಯದ ಆಂತರಿಕ ವಿಶ್ಲೇಷಣೆಯಿಂದ ಸಂಪನ್ಮೂಲಗಳಿಗಾಗಿ ಪರಸ್ಪರ ಸೆಣಸುವ , ದೋಚುವ , ದೋಚಿದ್ದನ್ನು ಹಂಚುವ ನೋಟ ದಕ್ಕುತ್ತದೆ. ತಮಿಳಗಂನ ಹತ್ತಾರು ಬಂದರು ಪಟ್ಟಣಗಳಲ್ಲಿ ರೋಮನ್ರೊಂದಿಗೆ ವ್ಯಾಪಾರ ಚಟುವಟಿಕೆಗಳು ನಡೆಯುತ್ತಿದ್ದು ಯವನರಿಂದ ಅಪಾರ ಪ್ರಮಾಣದ ಬಂಗಾರ ತಮಿಳಗಂಗೆ ವಿನಿಮಯ ರೂಪದಲ್ಲಿ ಬರುತ್ತಿತ್ತೆಂದು ಭಾವಿಸಲಾಗುತ್ತಿದೆ. ಈ ಬಗೆಯಲ್ಲಿ ವಿಸ್ತೃತ ವ್ಯಾಪಾರ ನಡೆಯಬೇಕೆಂದರೆ ಸ್ಥಿರವಾದ ಸಮಾಜ, ನಿರ್ದಿಷ್ಟವಾದ ಆಡಳಿತ , ಅಗತ್ಯಕ್ಕಿಂತ ಹೆಚ್ಚುವರಿ ಉತ್ಪಾದನೆಗಳು , ಆರ್ಥಿಕ ಸಮನ್ವಯತೆ ಅತ್ಯಗತ್ಯ. ಪ್ರಾಚೀನ ತಮಿಳಗಂನಲ್ಲಿ ಈ ಯಾವುವೂ ಅಸ್ತಿತ್ವದಲ್ಲಿರಲಿಲ್ಲ. ತಮಿಳಗಂನಲ್ಲಿ ಪಾಶ್ಚಾತ್ಯರಿಂದ ಬರುವ ಸರಕುಗಳನ್ನು ಬಳಸಬಲ್ಲ ಗ್ರಾಹಕ ವಲಯವಿದ್ದಂತೆ ಕಾಣುವುದಿಲ್ಲ. ಅರಿಕಮೇಡು , ನಟ್ಟಮೇಡು, ಕಾರೈಕ್ಕಾಡು, ಕಾಂಚೀಪುರಂ , ಕೊರ್ಕೈಗಳಾಚೆಗೆ ರೋಮನ್ರು ಹೋದ ಕುರುಹುಗಳಿಲ್ಲ. ಈ ನೆಲೆಗಳು ಯವನರ ವಸಾಹಾತುಗಳಾಗಿದ್ದು ಇದರಾಚೆಗೆ ಅವರ ಪ್ರಭಾವವಿರಲಿಲ್ಲ. ತಮಿಳಗಂನಲ್ಲಿ ನಗರ ಸಂಸ್ಕೃತಿಯಿದ್ದ ಕುರುಹುಗಳು ಪ್ರಾಕ್ತನ ಶೋಧನೆಯಿಂದ ಖಚಿತಪಟ್ಟಿಲ್ಲ ಹಾಗೂ ಈ ಶೋಧನೆಗಳಿಂದ ತಮಿಳಗಂನಿಂದ ಹೊರದೇಶಗಳಿಗೆ ಕಳಿಸಬಹುದಾದ ಸರಕುಗಳನ್ನು ಉತ್ಪಾದಿಸಿದಂತೆ ಸಾರುವ ಯಾವ ಸಾಕ್ಷ್ಯಗಳು ಲಭ್ಯವಿಲ್ಲ. ನೇಯ್ಗೆ , ಕಲ್ಲು ಗಣಿಗಾರಿಕೆಯಂತಹವುಗಳ ಕುರುಹುಗಳು ದಕ್ಕಿವೆಯಾದರೂ ಇವುಗಳ ಉತ್ಪಾದನೆ,ಸಾರಿಗೆ , ಮಾರಾಟ ಯಾರ ನಿಯಂತ್ರಣದಲ್ಲಿದ್ದವೆಂದು ಹೇಳಲಾಗದು. ಆದ್ದರಿಂದ ತಮಿಳಗಂನಲ್ಲಿ ಬಂದರು ವ್ಯಾಪಾರ ಒಮ್ಮುಖವಾಗಿದ್ದು ಯವನರ ಪ್ರಾಬಲ್ಯದಲ್ಲಿದ್ದಿತೆಂದು , ವಿನಿಮಯ ರೂಪದಲ್ಲಿ ಸಾಕಷ್ಟು ಬಂಗಾರ ತಮಿಳಗಂ ತಲುಪಿತಾದರೂ ಅದು ಮಧ್ಯವರ್ತಿಗಳ ಹಿಡಿತದಲ್ಲಿದ್ದಿತು. ಈ ಮಧ್ಯವರ್ತಿಗಳು ಸಹ ತಮಿಳೇತರರಾಗಿದ್ದರು. ಸಂಗಂ ಸಾಹಿತ್ಯದಿಂದ ಈ ವ್ಯಾಪಾರ ಜನಸಾಮಾನ್ಯರ ಜೀವನ ಮಟ್ಟ ಮತ್ತು ಶೈಲಿಯಲ್ಲಿ ಯಾವುದೇ ಗಣನೀಯ ಪ್ರಭಾವ ಬೀರಿರಲಿಲ್ಲವೆಂದು ಖಚಿತವಾಗುತ್ತದೆ. ಈ ಕಾಲದಲ್ಲಿ ಲಾಭ ಉದ್ದೇಶಿತ ವಿನಿಮಯವಿರದೆ ಕಡ ಪಡೆಯುವ ಮತ್ತು ಹಿಂದಕ್ಕೆ ಕೊಡುವ , ಸರಕುಗಳನ್ನು ವಿನಿಮಯಗೊಳಿಸಿಕೊಳ್ಳುವ ಪದ್ಧತಿಯಿದ್ದಿತು. ಈ ಹಿನ್ನೆಲೆಯಲ್ಲಿ ಸಂಪತ್ತನ್ನು ಕ್ರೋಢೀಕರಿಸುವುದು ಮತ್ತು ಅದನ್ನು ಹಂಚುವುದು ಮುಖಂಡರ ಮುಖ್ಯ ಕರ್ತವ್ಯವಾಗಿದ್ದಿತು. ಇವುಗಳ ಕೊರತೆಯಾದಾಗ ಸಮೃದ್ಧಿಯಾಗಿರುವ ಪ್ರದೇಶಗಳಿಗೆ ನುಗ್ಗಿ ದೊಚುವುದು ಬಹು ಮುಖ್ಯ ಕಸುಬಾಗಿದ್ದಿತು. ಸಂಗಂ ಸಾಹಿತ್ಯದಲ್ಲಿನ ಬಹುತೇಕ ಕವಿತೆಗಳು ಯುದ್ಧ , ದಾಳಿ, ದೋಚಿಕೆಯನ್ನು ಕುರಿತಾಗಿ ಹಾಡಿದಂತಹವು. ಎದುರಾಳಿಗಳ ಕೃಷಿ ಭೂಮಿಯ ಮೇಲೆರಗುವುದು ಮತ್ತು ಹಾಳುಗೆಡವುವುದು ಹೆಮ್ಮೆಯ ವಿಚಾರಗಳಾಗಿದ್ದವು. ಸ್ಥಿರ ಬದುಕಿಗಾಗಿ ಕೃಷಿಗೆ ಮೊರೆ ಹೋಗಲು ಯತ್ನಿಸುವುದು , ಅದೇ ಕಾಲದಲ್ಲಿ ಸಂಪನ್ಮೂಲ ಕೊರತೆಯನ್ನು ತುಂಬಿಸಿಕೊಳ್ಳಲು ದೋಚುವುದು ಮತ್ತು ಈ ಯತ್ನದಲ್ಲಿ ಕೃಷಿ ವಲಯವನ್ನು ನಾಶಮಾಡುವುದು , ನಾಶವಾದ ಕೃಷಿ ಭೂಮಿಯಿಂದ ಆದ ನಷ್ಟವನ್ನು ತುಂಬಿಕೊಳ್ಳಲ್ಲು ಮತ್ತೆ ದೋಚುವ ವಿಷ ವರ್ತುಲಕ್ಕೆ ಸಿಕ್ಕಂತೆ ಕಂಡುಬರುತ್ತದೆ. ಈ ಕಾಲದಲ್ಲಿ ಉತ್ಪಾದನೆ ಮತ್ತು ತಂತ್ರದ ದೃಷ್ಟಿಯಿಂದ ಹೆಚ್ಚು ಸುಸ್ಥಿರವಾದ ಕೃಷಿ ಪೂರ್ಣ ಅಭಿವೃದ್ಧಿಗೊಂಡಿರಲಿಲ್ಲ. ಹಾಗಾಗಿ ನಾಯಕನ ಹಂಚುವ ಸಾಮರ್ಥ್ಯ ಆತನ ರಾಜಕೀಯ ಪ್ರಾಬಲ್ಯದ ಗುರುತಾಗಿದ್ದಿತು. ಹಂಚುವ ಸಂಪತ್ತು ಇಲ್ಲದಂತಾದಾಗ ಅದರ ಕೊರತೆಯನ್ನು ತುಂಬಿಸಿಕೊಳ್ಳಲು ದೋಚುವುದು ಅನಿವಾರ್ಯವೆಂದು ಪರಿಗಣಿಸಲಾಗಿದ್ದಿತು. ಸದಾ ಯುದ್ದ ನಿರತವಾದ ಸಮಾಜದಲ್ಲಿ ಊರಿನವರ ಹಿತಕ್ಕಾಗಿ ಇದ್ದ ಮುನ್ರಂ ಪ್ರಾಮುಖ್ಯತೆ ಕಳೆದುಕೊಳ್ಳತೊಡಗಿತು. ಊರ ಯುವಕರು ಕೀಳಾರ್ಗಳನ್ನು ಹಿಂಬಾಲಿಸಿ ವೇಂದರ್ ಪರ ಹೋರಾಡಲು ಹೋಗುತ್ತಿದ್ದರು. ಇಂತಹ ಸಮಾಜದಲ್ಲಿ ಯುದ್ಧ ಮತ್ತು ವೀರಮರಣ ಸಂಪ್ರದಾಯಗಳಾಗಿದ್ದವು. ಯುದ್ಧ ಮಾಡುವ ಸಾಮಥ್ರ್ಯ , ಎದುರಾಳಿಗಳ ಮೇಲೆರಗುವ ಆಕ್ರಮಣ ಶೀಲತೆ , ದೋಚುವ ನಿರ್ದಯತೆ , ತಿರುಗಿ ಬಿದ್ದವರ ವಿರುದ್ಧ ತಳೆಯುವ ಕಠೋರ ನಿಲುವು ನಾಯಕನ ಗುಣ ವಿಶೇಷಗಳಾಗಿದ್ದವು. ಯುದ್ದೊನ್ಮಾದ ಇಡಿ ಸಮಾಜವನ್ನು ವ್ಯಾಪಿಸಿದ್ದಿತು. ಯುದ್ದದಲ್ಲಿ ಬೆನ್ನು ತಿರುಗಿಸುವುದಕ್ಕಿಂತಲೂ ಆತ್ಮಹತ್ಯೆಯೇ ಶ್ರೇಷ್ಟವೆಂಬ ನಂಬಿಕೆಯಿದ್ದಿತು. ಹೆಂಗಸರು ಈ ಅವೇಶದಲ್ಲಿ ಯುದ್ದಕ್ಕಾಗಿ ತಮ್ಮ ಮಕ್ಕಳನ್ನು , ಗಂಡಂದಿರನ್ನು ಬೀಳ್ಕೊಡಲು ಹಿಂಜರಿಯುತ್ತಿರಲಿಲ್ಲ. ಮಗನನ್ನು ಹೆರುವುದು ನನ್ನ ಕೆಲಸ ಆತನನ್ನು ಕದನ ಕಲಿಯಾಗಿಸುವುದು ಅಪ್ಪನ ಕೆಲಸ ಎಂದು ಸಾರುವವರು, ಯುದ್ದದ ಮೊದಲ ದಿನ ತಂದೆ ಸತ್ತ , ಎರಡನೆ ದಿನ ಅಣ್ಣ ವೀರ ಮರಣ ಹೊಂದಿದ , ನಿನ್ನೆ ಗಂಡ ರಣರಂಗದಲ್ಲಿ ಮಡಿದ ಆದರೂ ನಾನೀಗ ಮಗನನ್ನು ಯುದ್ದಕ್ಕೆ ಬೀಳ್ಕೊಡಲು ಮರುಯೋಚಿಸುವುದಿಲ್ಲ ಎಂದು ಹೇಳುವ ತಾಯಿಯರು ಸಹ ಇದ್ದರು. ಗಂಡ ಸತ್ತಾಗ ಬಳೆ ತೆಗೆದು, ತಲೆ ಬೋಳಿಸಿ ಮುಂಡೆಯರಾಗುತ್ತಿದ್ದರು. ಸತಿ ಹೋಗುವ ಪದ್ಧತಿಯೂ ಪ್ರಚಲಿತವಾಗಿದ್ದಿತು. ಸತ್ತವರಿಗಾಗಿ ವೀರಗಲ್ಲುಗಳು ಊರೂರಿನಲ್ಲಿ ತಲೆಯೆತ್ತಿದವು. ಇಡೀ ಸಂಗ ಸಾಹಿತ್ಯ ಎಡೆಬಿಡದಂತೆ ಯುದ್ಧದಲ್ಲಿ ಹೋರಾಡಿ ಗೆಲ್ಲುವ ಆಶಯ , ಗೆದ್ದ ನಂತರ ದೋಚಿದುದರಲ್ಲಿ ದಕ್ಕುವ ಪಾಲು , ನಂತರ ಸಿಗಬಹುದಾದ ಉಡುಗೊರೆ , ದಾನಗಳ ನಿರೀಕ್ಷೆಯಲ್ಲಿ ತುಂಬಿ ತುಳುಕುತ್ತದೆ. ಇದರ ಇನ್ನೊಂದು ಮುಖದಲ್ಲಿ ಧ್ವಂಸಗೊಂಡ ಸಹಜ ಜೀವನ , ಯುದ್ಧ ತರುವ ರೌರವತೆಗಳ ನಿಟ್ಟುಸಿರುಗಳಿವೆ. ಯುದ್ಧಕ್ಕೆ ಮೊದಲು ಮತ್ತು ನಂತರ ನರ್ತಿಸುವುದು (ಕುರುವೈ ಕುಟ್ಟು), ನಿರ್ದಯವಾಗಿ ಕೊಲ್ಲುವುದು (ವಾಕೈ) , ಯುದ್ಧ ಮತ್ತು ನಂತರ ಸಹಭೋಜನ ( ಉಣತ್ತು) ಸಾಮಾನ್ಯವಾಗಿದ್ದವು. ಯುದ್ದದಲ್ಲಿ ಗಾಯಗೊಂಡು ಬಂದ ಮಕ್ಕಳನ್ನು ಮತ್ತು ಗಂಡಂದಿರನ್ನು ಹೆಂಗಸರು ಹೆಮ್ಮೆಯಿಂದ ಬರಮಾಡಿಕೊಳ್ಳುತ್ತಿದ್ದರು. ಕೃಷಿ ಭೂಮಿ (ಕಳನಿ) ಮತ್ತು ಜನವಸತಿ (ಚೇರಿ)ಗಳ ಮೇಲಿನ ದಾಳಿಗಳು ಪ್ರಮುಖವಾಗಿದ್ದವು. ನೇರ ಹಣಾಹಣಿ ನಡಿಸಿ ದನಗಳನ್ನು ಕದಿಯುವುದು , ಕದ್ದ ದನಗಳನ್ನು ಮರಳಿ ಪಡೆಯಲು ಹೋರಾಟ ನಡೆಸುವುದು ಸರ್ವೇ ಸಾಮಾನ್ಯವಾಗಿದ್ದವು. ತಮ್ಮ ಪಶು ಸಂಪತ್ತನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿ ಮರಣ ಹೊಂದಿದವರ ಹೆಸರಿಗೆ ನೆಟ್ಟ ಕಲ್ಲುಗಳು ಕಾಲಾನುಕ್ರಮದಲ್ಲಿ ಊರನ್ನು ಕಾಯುವ ದೇವತೆಗಳಾದವು. ಗೆದ್ದ ಅಟ್ಟಹಾಸದಲ್ಲಿ ಮಾರವರ್ ಕದ್ದ/ಗೆದ್ದ ದನಗಳ ಮಾಂಸ ತಿನ್ನುತ್ತ , ಕಳ್ಳನ್ನು ಕುಡಿಯುತ್ತ ಉಳಿದುದನ್ನು ಹಿಂಬಾಲಕರಿಗೆ ಹಂಚುತ್ತಿದ್ದರು. ವೇಂದರ್ಗಳು ತಮ್ಮ ಅಧಿಪತ್ಯ ಸ್ಥಾಪಿಸಲು ಅಥವಾ ತಮ್ಮ ರಾಜ್ಯದ ಸೀಮೆಯನ್ನು ವಿಸ್ತರಿಸಲು ಸಾಂದರ್ಭಿಕವಾಗಿ ಯುದ್ಧ ಮಾಡುವುದು ಅತ್ಯಪರೂಪವಾಗಿದ್ದಿತು. ದ್ವೇಷ , ಸೇಡು, ದೋಚುವುದು ಪ್ರತಿಯೊಂದು ಯುದ್ಧದ ಕಾರ್ಯಸೂಚಿಗಳಾಗಿದ್ದವು. ಫಲಬಿಟ್ಟು ನಿಂತ ಕೃಷಿ ಭೂಮಿಯನ್ನು ಹಾಳುಗೆಡುವುವುದು, ಸುಡುವುದು , ಹಳ್ಳಿಗಳಿಗೆ ಬೆಂಕಿಯಿಡುವುದು , ಜನವಸತಿಗಳ ಮೇಲೆ ಆನೆಗಳನ್ನು ನುಗ್ಗಿಸುವುದು ಮುಖ್ಯ ಕಾರ್ಯಾಚರಣೆಗಳಾಗಿದ್ದವು. ಕದನಗಳು ಪಶು , ಧನ, ಧಾನ್ಯಗಳ ಲೂಟಿಗೆ ಸೀಮಿತವಾಗಿರಲಿಲ್ಲ. ಹೆಂಗಸರು, ಮಕ್ಕಳು ಸಹ ಈ ದೋಚಿಕೆಯ ಭಾಗವಾಗಿದ್ದರು. ಇದರ ಪ್ರತಿರೋಧಗಳು ಕದನದ ಮುಂದುವರಿಕೆಯಾಗಿದ್ದವು. ಸಾಮಾನ್ಯ ಜನರ ಮನುಜ ಸಹಜವಾದ ನೋಟ , ಬೇಟ ಕೂಟಗಳಿದ್ದವು. ಇವುಗಳಿಗೆ ಸರಿಸಮನಾಗಿ ರಥ , ಕುದುರೆ, ಕಾಲಾಳುಗಳೊಂದಿಗೆ ಬಂದು ಹೆಣ್ಣುಗಳ ಅಪಹರಣಗಳು ಸಹ ನಡೆಯುತ್ತಿದ್ದವು. ಇವನ್ನು ನಾಯಕನ ದೌರ್ಜನ್ಯವೆಂದು ಭಾವಿಸದೆ ಚೆಲುವುಳ್ಳ ಹೆಣ್ಣಿನ ದೌರ್ಭಾಗ್ಯವೆಂದು ಪರಿಗಣಿಸಲಾಗುತ್ತಿತ್ತು. ಸದಾ ಸ್ಪೊಟಕ ವಾತಾವರಣವಿದ್ದ ಇಂತಹ ಸಮಾಜದಲ್ಲಿ ಅಲೆಮಾರಿ ವೃತ್ತಿ ಗಾಯಕರಾದ ಪಾಣಾರರು ತಮಗೆ ಆಹಾರ , ಆಶ್ರಯ , ಉಡುಗೊರೆಗಳು ದಕ್ಕುವ ನೆಲೆಗಳನ್ನು ಹುಡುಕುತ್ತ ತಮಿಳಗಂನಲ್ಲಿ ತಿರುಗುತ್ತಿದ್ದರು. ತಮ್ಮನ್ನು ಪೆÇೀಷಿಸಿದ ವೇಂದರ್ಗಳ ಸಾಹಸಗಳನ್ನು ಪಾಣಾರ್ಗಳು ನೂರಾರು ಕವಿತೆಗಳಲ್ಲಿ ಹಾಡಿದ್ದಾರೆ. ಯುದ್ದದ ಬಿಡುವಿನಲ್ಲಿ ಅಥವಾ ಯುದ್ಧ ಸಾಕೆನಿಸಿದಾಗ ಕೃಷಿಯತ್ತ ಗಮನ ಹರಿಸುತ್ತಿದ್ದಿದ್ದು ಅದು ಎರಡನೇ ಪ್ರಾಶಸ್ತ್ಯವಾಗಿದ್ದಿತು. ಇದರಿಂದಾಗಿ ಪಾಣಾರ್ಗಳು ರೈತರನ್ನು ಕುರಿತಾಗಿ ಹಾಡುವ ಸಂದರ್ಭಗಳು ಒದಗಿ ಬರಲಿಲ್ಲ. ಹಾಗಾಗಿ ಅನ್ನ ಒದಗಿಸುತ್ತಿದ್ದ ವೆಳ್ಳಾರ-ಉಳವನ್ಗಿಂತಲೂ ಕದನಪ್ರಿಯರಾದ ಮಾರವರ್ಗೆ ಪ್ರಾಮುಖ್ಯತೆ ದಕ್ಕುವಂತಾಯಿತು. ಅಸ್ತಿತ್ವಕ್ಕಾಗಿ ವೆಳ್ಳಾರರು ಶಾಂತಿ ಬಯಸಿದರೆ ಮಾರವರ್ ಯುದ್ಧವನ್ನು ಅರಸುತ್ತಿದ್ದರು. ಯುದ್ಧ-ಯುದ್ಧಗಳ ನಡುವಿನ ಶಾಂತಿ ಕಾಲದಲ್ಲಿ ಜನ ಸಾಮಾನ್ಯರು ತಮ್ಮ ಸಹಜ ಚಟುವಟಿಕೆಗಳಲ್ಲಿರುತ್ತಿದ್ದರು. ಮಳೆ,ಬೆಳೆ,ಸುಗ್ಗಿಗಳು ಅವರಿಗೆ ಹಿಗ್ಗನ್ನು ತಂದು ವಿಳ(ಹಬ್ಬ)ಗಳನ್ನು ಆಚರಿಸುತ್ತಿದ್ದರು. ನದಿಗಳು ತುಂಬಿ ಹರಿದಾಗ ಜನರ ಉತ್ಸಾಹಕ್ಕೆ ಮೇರೆ ಇರುತ್ತಿರಲಿಲ್ಲ. ವೇಂದನ್ಗಳು ಇಂತಹ ಹಬ್ಬಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದರು. ಈ ಕಾಲದಲ್ಲಿ ಬಂಡಿಗಳಲ್ಲಿ ತಂದು ಮಾರಲಾಗುತ್ತಿದ್ದ ಕಳ್ಳನ್ನು ಯಥೇಚ್ಚವಾಗಿ ಕುಡಿದು ಮಾಂಸವನ್ನು ತಿಂದು ಹಿಗ್ಗುತ್ತಿದ್ದರು. ಚೋಳ ನಾಡಿನಲ್ಲಿ ಇಂದ್ರವಿಳ ,ಪಾಂಡ್ಯ ನಾಡಿನಲ್ಲಿ ತಿರುಪ್ಪಾರನ್ ಕುನ್ರಂ (ಮುರುಗನ ಮದುವೆ) ಜನಪ್ರಿಯ ಆಚರಣೆಗಳಾಗಿದ್ದವು. ಗಂಡಸರಿಗೆ ಕೆಲಸಗಳಲ್ಲಿ ನೆರವಾಗುವುದು, ಗೃಹಕೃತ್ಯಗಳ ನಿರ್ವಹಣೆ ಹೆಂಗಸರ ಕರ್ತವ್ಯಗಳಾಗಿದ್ದವು. ಬೆಳೆದು ಬಂದ ಪೈರಿಗೆ ಕಾಡು ಪ್ರಾಣಿ, ಆನೆಗಳು ನುಗ್ಗದಂತೆ ಕಳ್ಳರು ದೋಚದಂತೆ ರಾತ್ರಿಯಿಡಿ ಬೆಂಕಿಯುರಿಸುತ್ತ , ತಮ್ಮಟೆ ಬಾರಿಸುತ್ತ ಒಕ್ಕಲಿಗರು ತಮ್ಮದೇ ಆದ ಲೋಕಗಳಲ್ಲಿ ಮಗ್ನರಾಗಿರುತ್ತಿದ್ದರು. ಈ ಶಾಂತಿ ಕಾಲ ಆಟ , ಬೇಟ, ಕೂಟಗಳಲ್ಲಿ ಪ್ರಕಟವಾಗುತ್ತ ಅಗಂ ಸಾಹಿತ್ಯಕ್ಕೆ ಕಾರಣವಾಯಿತು. ಶಾಂತಿಯ ಕಾಲದಲ್ಲು ಸಹ ಶತೃ ದಾಳಿ , ಪ್ರಾಣಿಗಳ ಭಯ, ಬರ , ಬೇಸಿಗೆಯ ಚಿಂತೆಗಳು ಜನರನ್ನು ಕಾಡುತ್ತಿದ್ದವು. ತಮಿಳಗಂನ ಆರಂಭಿಕ ಕಾಲದ ಸ್ಥಿತಿಯನ್ನು ಈಗ ಪಾಕಿಸ್ತಾನದ ವಜೀರಿಸ್ಥಾನ ಮತ್ತು ಅಫಘನಿಸ್ಥಾನದಲ್ಲಿರುವ ಪರಿಸ್ಥಿತಿಗೆ ಹೋಲಿಸಬಹುದು. ಯುದ್ಧ-ಬಿಡುವು-ಯುದ್ಧಗಳಲ್ಲಿ ಮುಳುಗಿದ್ದ ತಮಿಳಗಂಗೆ ಉತ್ತರದ ವಡುಗರ/ಅರಿಯರ ಪ್ರವೇಶ ಹೊಸ ಪ್ರಪಂಚದ ಬಾಗಿಲನ್ನು ತೆರೆಯಿತು. ಚತುರ್ವೇದಗಳಲ್ಲಿ ಪಾರಂಗತರೆಂದು ಖ್ಯಾತರಾದ ಬ್ರಾಹ್ಮಣರು ನಿಧಾನವಾಗಿ ತಮಿಳಗಂನಲ್ಲಿ ಬೇರೂರತೊಡಗಿದರು. ಸದಾ ಪರಸ್ಪರ ಬಡಿದಾಡುತ್ತಿದ್ದ ವೇಂದರ್ಗಳನ್ನು ಇವರು ತಮ್ಮ ವರ್ಣಾಶ್ರಮದ ಅಂಗವಾದ ಕ್ಷತ್ರಿಯರೆಂದು ಗುರುತಿಸಲು ಹಿಂಜರಿಯಲಿಲ್ಲ. ಇದರ ಪರಿಣಾಮವಾಗಿ ಉತ್ತರದ ರಾಜರಂತೆ ತಮಿಳಗಂನ ವೇಂದರರು ತಮ್ಮನ್ನು ಮಹಾಭಾರತದೊಂದಿಗೆ ಗುರುತಿಸಿಕೊಳ್ಳುವ ,ಸಮೀಕರಿಸಿಕೊಳ್ಳುವ ಪರಂಪರೆ ಬೆಳೆಯತೊಡಗಿತು. ಮುಂದುವರೆದ ನಾಗರಿಕತೆಯಿಂದ ಬಂದಿದ್ದ ಅರ್ಥಶಾಸ್ತ್ರದ ಅರಿವಿದ್ದ , ಕಾಮಶಾಸ್ತ್ರವನ್ನು ಹೇಳಬಲ್ಲ, ಜ್ಯೋತಿಷ್ಯದಿಂದ ಭವಿಷ್ಯ ನುಡಿಯಬಲ್ಲ , ಆಯುರ್ವೇದದಿಂದ ರೋಗ ಪರಿಹರಿಸಬಲ್ಲ , ಧರ್ಮಸೂತ್ರಗಳನ್ನು ಭೋದಿಸಬಲ್ಲ ಇವರ ಮುಂದೆ ಬುಡಕಟ್ಟು ಚಿಂತನೆ ಹೊಂದಿದ್ದ , ಸೀಮಿತ ಜ್ಞಾನ ವ್ಯಾಪ್ತಿಯ ಬಡ ಪಾಣಾರ್ಗಳ ಪರಂಪರೆ ಅವಸಾನದತ್ತ ಸಾಗತೊಡಗಿತು. ಪಾಣಾರ್ಗಳು ಕಣ್ಮರೆಯಾಗಲಿರುವ ತಮಿಳಗಂನ್ನು ಸೂಚಿಸಿದರೆ ಬ್ರಾಹ್ಮಣರು ಮುಂದೆ ಬರಲಿರುವ ತಮಿಳಗಂಗೆ ಕುರುಹಾದರು. ಬುಡಕಟ್ಟು ನೆಲೆಯ ವೇಂದರ್ಗಳು ನಿಧಾನಗತಿಯಲ್ಲಿ ವಡುಗರ ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳತೊಡಗಿದರು. ಯಾಗ, ಯಜ್ಞಗಳಿಗೆ ಪ್ರಾಶಸ್ತ್ಯಗಳು ದಕ್ಕತೊಡಗಿದವು. ಜೈನ , ಬೌದ್ಧರು ಈ ಕಾಲಕ್ಕಾಗಲೇ ತಮಿಳಗಂ ಪ್ರವೇಶಿಸಿದ್ದರಾದರೂ ಅವರ ಪ್ರಭಾವ ಬ್ರಾಹ್ಮಣರ ಮುಂದೆ ನಗಣ್ಯವಾಗಿದ್ದಿತು. ಕ್ರಿ.ಶ 2 ನೇ ಶತಮಾನದ ಉತ್ತರಾರ್ಧದ ವೇಳೆಗೆ ಯುದ್ಧ , ದೋಚಿಕೆ , ಹಂಚಿಕೆ ತಾರಕಕ್ಕೇರಿ ಪ್ರಾಚೀನ ತಮಿಳಗಂನ ಬುಡಕಟ್ಟು ಆಧಾರಿತ ಸಮಾಜದ ಸೌಧ ಕುಸಿಯತೊದಗಿತು. ಇದಕ್ಕೆ ಕರ್ನಾಟಕ, ಆಂಧ್ರದ ಕಡೆಯಿಂದ ಬಂದ ವಡುಗರ ಕೊಡುಗೆಯೂ ಸಾಕಷ್ಟಿದ್ದಿತು. ಉತ್ತರದ ಪ್ರಭಾವದಿಂದಾಗಿ ತಮಿಳಗಂಗಿಂತ ಒಂದೆರಡು ಶತಮಾನ ಮೊದಲೆ ಕರ್ನಾಟಕ,ಆಂಧ್ರಗಳು ಸುಧಾರಿತ ಆಡಳಿತಗಳನ್ನು ಕಂಡಿದ್ದವು. ಈ ಪ್ರದೇಶಗಳಲ್ಲಿ ಸರಿ ಸುಮಾರು ಐನೂರು ವರ್ಷಗಳಷ್ಟು ಹಿಂದೆಯೇ ಸಾಕಷ್ಟು ಕ್ರಮಬದ್ಧವಾದ ಆಡಳಿತ ನಡೆಸಿದ ಜಾನಪದಗಳು ಆಗಿಹೋಗಿದ್ದವು. ಇಲ್ಲಿ ಬುಡಕಟ್ಟು ಆಧಾರಿತ ವ್ಯವಸ್ಥೆಗಳು ಹಿಂದೆಯೇ ದುರ್ಬಲವಾಗಿ ಸುಧಾರಿತ ರಾಜ ಕೇಂದ್ರಿತ ಆಡಳಿತಗಳಿದ್ದವು. ರಾಜರ ಆಸ್ಥಾನಗಳಲ್ಲಿ ಸಾಹಿತ್ಯಕ ಪೋಷಣೆಗಳಿದ್ದವು. ಜಾನಪದ ರೂಪದಲ್ಲಿ ಹಾಡುಗಳನ್ನು ಹೇಳುತ್ತಿದ್ದ ಪಾಣಾರ್ಗಳು ಬಹುಹಿಂದೆಯೇ ಮರೆಯಾಗಿ ಹೋಗಿದ್ದರು. ಹಾಲನ ಗಾಥಾ ಸಪ್ತಸತಿಯಂತಹ ಲಿಖಿತ ಲೌಕಿಕ ಸಾಹಿತ್ಯ ಬೆಳಕು ಕಂಡಿದ್ದಿತು. ತಮಿಳಗಂ ಅಗಂ (=ಅಹಂ)-ಪುರಂಗಳಿಗೆ (ಬೇಟ-ಹೊಡೆದಾಟ) ಸೀಮಿತವಾಗಿದ್ದರೆ , ಆಹಾರ- ಅಶ್ರಯ-ಪ್ರಣಯಗಳನ್ನು ಮೀರಿದ ಧಾರ್ಮಿಕ ಚಿಂತನೆಗಳು ಇವರಿಗೆ ಪರಿಚಿತವಾಗಿದ್ದವು. ಕ್ರಿ.ಶ 3 ನೇ ಶತಮಾನದ ಮಧ್ಯಾವಧಿಯಿಂದ ವಡುಗರ ನೆಲೆಯಿಂದ ಪಲ್ಲವ , ಕದಂಬರು ಕಾಣಿಸಿಕೊಂಡಾಗ ಮೂವೇಂದರ್ಗಳ ಯುಗ ಮುಗಿದು ಹೋಗಿದ್ದಿತು. ಹೀಗೆ ಬುಡಕಟ್ಟುಗಳ ರೀತಿ ರಿವಾಜುಗಳನ್ನು ಹೊಂದಿದ್ದ ತಮಿಳಗಂ ಬಾಹ್ಯದಿಂದ ಬಂದ ಬದಲಾವಣೆಯ ಗಾಳಿಗೆ ಕುಸಿಯಿತು. ಇಂತಹ ಸಮಯದಲ್ಲಿ ಕರ್ನಾಟಕ ಮತ್ತು ಆಂಧ್ರ ಕಡೆಯಿಂದ ಕಳಭ್ರರ ಪ್ರವೇಶವಾಯಿತೆಂದು ಭಾವಿಸಲಾಗಿದೆ. ಈ ಕಾಲದಲ್ಲಿ ಕಾನೂನು-ಕಟ್ಟಳೆಗಳನ್ನು ಬಿಗಿಗೊಂಡು , ದೋಚುವುದಕ್ಕೆ ಕಡಿವಾಣ ಬಿದ್ದು , ಕೃಷಿಗೆ ಮಾನ್ಯತೆ ದಕ್ಕಿ ಸಮೃದ್ಧಿ ಹೆಚ್ಚಿ ಶಾಂತಿ ನೆಲೆಸುವ ವಾತಾವರಣ ಮೂಡಿ ನೀತಿ ನಿಯಮಗಳನ್ನು ಸಂಗಂ ಕಾಲದ ಸಮಾಜ ಪಾಲಿಸುವಂತಾಯಿತು. ಕೊಡುಗೆ ರೂಪದಲ್ಲಿ ಪಡೆದ ಬ್ರಹ್ಮದೇಯ, ಭೂದಾನಗಳು ಸಾರ್ವಜನಿಕ ಬಳಕೆಗೆ ಬಿಡುಗಡೆಗೊಂಡು ಅವನ್ನು ಪಡೆದವರಿಂದ ಕಳಭ್ರರು ದುಷ್ಟ‘ಕಲಿಯರಸರೆಂದು ಕರೆಸಿಕೊಂಡರು. ಈ ಕಾಲದಲ್ಲಿ ಅಪ್ರಸ್ತುತರಾದ ಮೂವೇಂದರರು ಮುಂದೆ ಮುನ್ನೂರು ವರ್ಷ ಈ ಬದಲಾವಣೆಯ ಹೊಂದಾಣಿಕೆಗಾಗಿ ಹೆಣಗಾಡಿದರು. ಇದರ ಫಲವಾಗಿ ಮತ್ತೊಮ್ಮೆ 6 ನೇ ಶತಮಾನದ ಹೊತ್ತಿಗೆ ಚೇರ , ಚೋಳ, ಪಾಂಡ್ಯರು ಕಾಣಿಸಿಕೊಳ್ಳತೊಡಗಿದರು. ತಮಿಳಗಮ್ ಇತಿಹಾಸದಲ್ಲಿ ಕ್ರಿ.ಶ 3-6 ನೇ ಶತಮಾನದ ಅವಧಿಯ ಮುನ್ನೂರು ವರ್ಷಗಳು ಕಳಭ್ರರ ಆಳ್ವಿಕೆಯ ಅಂಧಕಾರ ಯುಗವೆಂದು ಖ್ಯಾತ. ಆದರೆ ನಿಜವಾಗಿಯೂ ಇದು ಹೊಸ ತಮಿಳಗಂನ್ನು ರೂಪಿಸಿದ ಕಾಲದಂತೆ ಕಾಣುತ್ತದೆ. ಸದಾ ಯುದ್ಧ ಪೀಡಿತ (ಪುರಂ) , ಬೇಟ ಪ್ರೇರಿತ (ಅಗಂ)ತಮಿಳಗಂಗೆ ಅವನ್ನು ಮೀರಿದ ಶಾಂತಿ , ನೀತಿಯನ್ನು ಜಾರಿಗೊಂಡ ಕಾಲವೆಂದು ಸಹ ಭಾವಿಸಬಹುದು. ಉಜ್ವಲ ಇತಿಹಾಸ ಹೊಂದಿದ್ದ ಪ್ರಾಚೀನ ಭಾರತ ಮಧ್ಯಕಾಲದ ಅವಧಿಯ ವೇಳೆಗೆ ಸಹಸ್ರಾರು ಹಿರಿ,ಕಿರಿ ರಾಜರುಗಳ ಆಳ್ವಿಕೆಯ ಫಲವಾಗಿ ಅನೈಕ್ಯಮತ , ಸ್ವಾರ್ಥ , ಲಂಪಟತನ ,ಸ್ವಜನ ಪಕ್ಷಪಾತ ಮತ್ತು ಅದಕ್ಷತೆಯಿಂದ ಸರಿಸುಮಾರು 500 ವರ್ಷಗಳ ಕಾಲ ಜರ್ಝರಿತವಾಗಿದ್ದಿತು. ಇದು ಬ್ರಿಟೀಷರು ಭಾರತವನ್ನು ಸುಲಭವಾಗಿ ತಮ್ಮ ವಶಪಡಿಸಿಕೊಳ್ಳಲು ನೆರವಾಯಿತು. ಬ್ರಿಟೀಷರ ಸರಿಸುಮಾರು ಎರಡು ಶತಮಾನಗಳ ಆಳ್ವಿಕೆ , ಅದರಿಂದ ಬಿಡುಗಡೆಗಾಗಿ ನಡೆಸಿದ ಸ್ವಾತಂತ್ರ ಹೋರಾಟಗಳ ಅಂಗವಾಗಿ ಎಚ್ಚೆತ್ತ ರಾಷ್ಟ್ರ ಪ್ರಜ್ಞೆಯಿಂದಾಗಿ ಸದಾ ಪರಸ್ಪರ ಸೆಣಸಾಡುತ್ತಿದ್ದ , ಸಾಮಾನ್ಯ ಜನತೆಯ ಹಿತಕ್ಕೆ ಮಾರಕವಾಗಿದ್ದ 600 ಕ್ಕೂ ಅಧಿಕ ರಾಜ ಸಂಸ್ಥಾನಗಳು ಅಳಿದು ಪ್ರಜಾಪ್ರಭುತ್ವ ಆಧಾರಿತ ಆಧುನಿಕ ಭಾರತದ ಉದಯವಾಯಿತು. ಇದನ್ನು ಹೋಲಿಸಿ ನೋಡಿದರೆ ಕಳಭ್ರರು ಪ್ರಾಚೀನ ತಮಿಳಗಂನ ಬ್ರಿಟೀಷರಂತೆ ಕಾಣುತ್ತಾರೆ. ಆದರೆ ತಮಿಳಗಂ ಇತಿಹಾಸದಲ್ಲಿ ಈ ಕಳಭ್ರರ ಅಸ್ತಿತ್ವವನ್ನು ಖಚಿತಪಡಿಸುವ ಸಾಕ್ಷ್ಯಗಳು ಇಲ್ಲವೆನಿಸುವಷ್ಟು ಅತ್ಯಪರೂಪ. ಈ ಕಳಭ್ರರ ನೈಜ ಚರಿತ್ರೆಯನ್ನು ಹೊರಗೆಡಹುವುದು ಇತಿಹಾಸಕಾರ ಮುಂದಿರುವ ಸವಾಲು. ತಮಿಳೇತರ ಸಾಹಿತ್ಯದಲ್ಲಿ ಅರಿಸ್ಟಾಟಲ್ , ಮೆಗಸ್ತಾನಿಸ್, ಸ್ಟ್ರಾಬೋ, ಪೆರಿಪ್ಲಸ್, ಟಾಲೆಮಿ ಮುಂತಾದ ಪಾಶ್ಚಾತ್ಯರ ಮತ್ತು ಭಾರತೀಯ ಮೂಲದ ಕೌಟಿಲ್ಯನ ಅರ್ಥಶಾಸ್ತ್ರ , ಮಹಾಭಾರತ, ಅರಣ್ಯಕಗಳು ಪ್ರಾಚೀನ ತಮಿಳಗಂ ಕುರಿತಾಗಿ ಸಾಕಷ್ಟು ವಿವರಗಳನ್ನು ನೀಡುತ್ತವೆ0iÉುಂದು ಹೇಳಲಾಗುತ್ತಿದೆ. ಇವುಗಳಿಂದ ದಕ್ಕುವ ಮಾಹಿತಿ ಮಾಹಿತಿಯಲ್ಲಿ ಜನಾಂಗೀಯವಾಗಿ ತಮಿಳರು ಮತ್ತು ಭಾಷೆಯಾಗಿ ತಮಿಳು ಹೇಗೆ ಕಾಣಿಸಿಕೊಂಡಿದೆ ಹಾಗೂ ಇವುಗಳಿಂದ ಯಾವುದಾದರೂ ನಿರ್ದಿಷ್ಟ ತೀರ್ಮಾನಗಳಿಗೆ ಬರಬಹುದೇ ಎಂದು ಮುಂದೆ ನೋಡಲಾಗಿದೆ. ಮೆಗಸ್ತಾನಿಸ್ನ ‘ಇಂಡಿಕ’ ಇದರಲ್ಲಿ ಪಾಂಡ್ಯರ ಉಲ್ಲೇಖಗಳಿವೆಯೆಂದು ಹೇಳಲಾದ ಭಾಗಗಳು ಹೀಗಿವೆ ತುಣುಕು-56.ಬಿ – ‘ಪಾಂಡೆಯನ್ ದೇಶದಲ್ಲಿ ಸ್ತ್ರೀಯರ ಆಳ್ವಿಕೆಯಿದೆ. ಇವರ ಮೊದಲನೇ ರಾಣಿ ಹಕ್ರ್ಯುಲಿಸ್ನ ಮಗಳೆಂದು ಹೇಳುತ್ತಾರೆ. ಗುರುವಿಗೆ(ಜೂಪಿಟರ್) ಮೀಸಲಾದ ಮೆರೋಸ್ ಹೆಸರಿನ ಪವಿತ್ರ ಪರ್ವತ, ತಂದೆ ಬಖಸ್ನನ್ನು ಪೋಷಿಸಿದ ಗವಿ ಮತ್ತು ನಯಸ್ ನಗರ ಈ ಪ್ರಾಂತದಲ್ಲಿವೆ. ಬಖಸ್ ತನ್ನ ತಂದೆಯ ತೊಡೆಯಿಂದ ಜನಿಸಿದನೆಂ¨ ಅದ್ಭುತವಾದ ಕಥೆಯನ್ನು ಭಾರತೀಯರು ಹೇಳುತ್ತಾರೆ. ತುಣುಕು-58 - ಹೆರಾಕ್ಲಿಸ್ ಮತ್ತು ಪಾಂಡೆಯ ಕುರಿತು : ‘ಹೆರಾಕ್ಲಿಸ್ ಭಾರತದಲ್ಲಿ ಒಬ್ಬ ಮಗಳನ್ನು ಪಡೆದನು. ಈಕೆಯನ್ನು ಪಾಂಡೆಯ ಎಂದು ಕರೆದನು. ಭಾರತದ ದಕ್ಷಿಣ ಸಮುದ್ರದವರೆಗೆ ವಿಸ್ತರಿಸಿದ ಭೂಭಾಗಗಳನ್ನು ನೀಡಿ ಅದರಲ್ಲಿನ 365 ಹಳ್ಳಿಗಳನ್ನು ಆಕೆಯ ಆಳ್ವಿಕೆಯಡಿಯಲ್ಲಿ ತಂದು ಪ್ರತಿಯೊಂದು ಹಳ್ಳಿಯು ವರ್ಷದ ಒಂದು ನಿರ್ದಿಷ್ಟ ದಿನ ಕಪ್ಪ ಕಾಣಿಕೆಗಳನ್ನು ಸಲ್ಲಿಸುವಂತೆ ಮಾಡಿದನು. ತುಣುಕು-100 : ಪಾಂಡೆಯನ್ ಪ್ರದೇಶ ಕುರಿತು : ‘ಮೆಗಸ್ತಾನಿಸ್ ಪಾಂಡೈಯನ್ ಪ್ರದೇಶದಲ್ಲಿ ಆರು ವರ್ಷದಲ್ಲೇ ಮಕ್ಕಳನ್ನು ಹೆರುತ್ತಾರೆಂದು ಹೇಳಿದ್ದಾನೆ. ಅಜ್ಞಾತ ಕೃತಿಕಾರನ ಪೆರಿಪ್ಲಸ್ ಮಾರಿಸ್ ಎರಿಥ್ರಿಯನ್ ಪೆರಿಪ್ಲಸ್ ಆph ಎರಿಥ್ರಿಯನ್ ಸೀ(ಕೆಂಪು ಸಮುದ್ರದಮಾರ್ಗದರ್ಶಕ- ಕಾಲ: ಕ್ರಿ.ಶ. 60-100) ಈ ಕೃತಿಯಲ್ಲಿ ಒಟ್ಟು 66 ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯ ಒಂದು ಪರಿಚ್ಛೇದದಷ್ಟಿದೆ. ಈ ಕೃತಿ ಭಾರತದ ಪಶ್ಚಿಮ ಕರಾವಳಿಯ ಬಂದರು ಮತ್ತು ಪಟ್ಟಣಗಳನ್ನು ಅನುಕ್ರಮದಲ್ಲಿ ನೀಡುತ್ತದೆ. ಈಗಿನ ಗುಜರಾತ್ಗೆ ಸೇರಿದ ಬರಿಗಝ (ಭೃಗುಕಚ್ಚ>, ಭರುಕಚ್ಚ>ಭುಜ್), ಈಗಿನ ಮಹಾರಾಷ್ಟ್ರದ ಸುಪ್ಪಾರ(ಸುಪಾರ,ಮಹಾಭಾರತದ ಶೂರ್ಪಾರಕ), ಕಲಿಯಣ (ಕಲ್ಯಾಣ) ,ಸೆಮಿಲ್ಲ (ಸೆಮುಲ್ಲ/ಚಿಮೋಲೋ/ಚಾಲ್/ಚಂಪಾವತಿ),ಮಂಡಗೊರ(ಸಾವಿತ್ರಿಮುಖತೀರದ ಮಂದರಗಿರಿ/ಬಾಂಕೋಟ್?)ಪಾಲೆಪಟ್ಮೊ (ಪಾರಿಪಟ್ಟಣ/ಧಾಬೋಲ್) ,ಮೆಲಿಝಿಗಾರ (ರಾಜಾಪುರ,ರತ್ನಗಿರಿ ಜಿಲ್ಲೆ), ಬೈಜಂಟಿಯಂ(ವಿಜಯದುರ್ಗ), ತೋಗರಂ(ದೇವಘಢ) ,ಔರನ್ನೊಬೊಸ್(ಅರಣ್ಯವಾಹ/ಮಾಳ್ವನ್), ಸೆಸೆಕ್ರೀನೆ (ವೆಂಗೂರ್ಲ ಬಳಿಯ ಬಂಡೆಗಳು), ಈಗಿಡೈ (ಗೋವಾ/ಅಂಜ್ದೀವ್-ಗೋವಾ), ಈಗಿನ ಕರ್ನಾಟಕದ ಸೀನಿತೀ (ಕಾರವಾರದ ಎದುರಿನ ದ್ವೀಪಗಳ ಗುಂಪು), ಚೆರ್ಸೊನೀಸಸ್-ಕಡಲ್ಗಳ್ಳರಿದ್ದಾರೆಂದು ಸೂಚಿಸಲಾದ ಪ್ರದೇಶ. (ಕಾರವಾರದ ಹತ್ತಿರ ಚಾಚಿಕೊಂಡಿರುವ ಪ್ರದೇಶ), ಬಿಳಿದ್ವೀಪ (ನಿತ್ರಾನ್,ನಿತ್ರಿಯಾಸ್-ಬಿಳಿಹವಳ ಮತ್ತು ಸುಣ್ಣ ಸಿಗುವ ಪಾರಿವಾಳ ದ್ವೀಪ), ಕೇರಳಕ್ಕೆ ಸೇರಿದ ನೌರ (ಹೊನ್ನಾವರ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದರೆ ,ಷಾಪ್ಫರ್ ಖಚಿತವಾಗಿ ಕಣ್ಣಾನೂರು ಎಂದು ಹೇಳಿದ್ದಾರೆ), ತಿಂಡಿಸ್ (ಪೊನ್ನಾಣಿ ನದಿ ತೀರದ ಪೊನ್ನಾಣಿ ಎಂದು ಷಾಫರ್ , ಬೆಯ್'ಪುಅರದ ಸಮೀಪದ ಕಡಲುಂದಿ ಡಾ. ಬರ್ನೆಲ್ ಹೇಳಿದ್ದಾರೆ) ಮತ್ತು ಮುಜಿರಿಸ್ (ಮುಯಿರಿಕೊಯಿಲು), ಬಕರೆ (ಪೆÇರಕ್ಕಾಡು) , ಪಲಿಯ (ತಿರುವಾಂಕೂರು),ಕೆಮ್ಮಣ್ಣಿನ ಪ್ರದೇಶದಲ್ಲಿರುವ ಬಲಿಟ (ವರಕ್ಕಳ್ಳೈ), ತಮಿಳುನಾಡಿಗೆ ಸೇರಿದ ಕೊಮರಿ (ಕನ್ಯಾಕುಮಾರಿ),ಕೊಲ್ಚಿ (ಕೊಲ್ಕಾಯ್ ), ಮತ್ತು ಪೂರ್ವ ಕರಾವಳಿ ಬಂದರು/ಪಟ್ಟಣಗಳಾದ ಕಮರ (ಕಾರೈಕಲ್), ಪೊಡುಕ (ಪುದುಚ್ಚೇರಿ), ಸೋಪಟ್ಟಾ (ಚನ್ನಪಟ್ಟಣಂ-ಚೆನ್ನೈ ಎಂದು ಕೆಲವರು ಕಡಲೂರು ಎಂದು ಇತರರು ಪರಿಗಣಿಸಿದ್ದಾರೆ) ,ಅರ್ಗರು (ಒರೈಯೂರು-ತಮಿಳುನಾಡು),ಆಂಧ್ರಪ್ರದೇಶಕ್ಕೆ ಸೇರಿರುವ ಮಸಾಲಿಯಂ(ಮಚಲಿಪಟ್ಟಣ-ಆಂಧ್ರಪ್ರದೇಶ), ದೊಸೆರಿನ(ಒಡಿಷಾ) ಉಲ್ಲೇಖಿಸುತ್ತದೆ. ಪೆರಿಪ್ಲಸ್ ಕಲ್ಯಾಣ ಬಂದರು ಸರಗನಸ (ಶಾತಕರ್ಣಿ-ಕ್ರಿ.ಶ 44-69 ಅವಧಿಯಲ್ಲಿದ್ದ ಅರಿಷ್ಟ ಶಾತಕರ್ಣಿ ?)ರಾಜನ ಕಾಲದಲ್ಲಿ ಅಧಿಕೃತ ವ್ಯಾಪಾರಿ ಪಟ್ಟಣವಾಯಿತೆಂದು , ಸಾಂಡೆರಸ್(ಸುಂದರೇಶ-ಅರಿಷ್ಟ ಶಾತಕರ್ಣಿಯ ನಂತರ ಒಂದು ವರ್ಷ ರಾಜ್ಯವಾಳಿದ ಸುಂದರ ಶಾತಕರ್ಣಿ ?) ಕಾಲದಲ್ಲಿ ಈ ಪಟ್ಟಣದಲ್ಲಿ ವ್ಯಾಪಾರಕ್ಕೆ ಅಡೆತಡೆಗಳುಂಟಾದವೆಂದು ತಿಳಿಸುತ್ತದೆ. ಪೆರಿಪ್ಲಸ್ನಲ್ಲಿ ತಮಿಳಗಮ್ ಕುರಿತಾಗಿ ‘ದಮಿರಿಕಾದ ಮುಖ್ಯ ಮಾರುಕಟ್ಟೆಗಳೆಂದರೆ ನೌರ , ತಿಂಡಿಸ್, ಮುಜಿರಿಸ್ ಮತ್ತು ನೆಲ್ಸಿಂಡಾ. ತಿಂಡಿಸ್ ಕೆರಬೊತ್ರಾ ರಾಜ್ಯದಲ್ಲಿದೆ. ಇದು ಮಟ್ಟಸ ಜಾಗದಲ್ಲಿರುವ ಹಳ್ಳಿ. ಇದು ಸಮುದ್ರದಿಂದ ಕಾಣುತ್ತದೆ. ಇದೇ ರಾಜ್ಯಕ್ಕೆ ಸೇರಿದ ಮುಜಿರಿಸ್ನಲ್ಲಿ ಗ್ರೀಕ್ ಮತ್ತು ಅರೇಬಿಯಾದಿಂದ ಬಂದ ಹಡಗುಗಳು ನಿಲ್ಲುತ್ತವೆ. ಮುಜಿರಿಸ್ ನದಿಯ ದಂಡೆಯ ಮೇಲಿದ್ದು ತಿಂಡಿಸ್ನಿಂದ ನದಿ ಮತ್ತು ಸಮುದ್ರ ಮಾರ್ಗವಾಗಿ 500 ಸ್ಟೇಡಿಯಾ ದೂರದಲ್ಲಿ ಹಾಗೂ ನದಿತೀರದಿಂದ 20 ಸ್ಟೇಡಿಯಾ ದೂರದಲ್ಲಿದ್ದು ಪಾಂಡಿಯನ್ ಹೆಸರಿನ ಬೇರೆ ರಾಜ್ಯಕ್ಕೆ ಸೇರಿದೆ. ಈ ಜಾಗವೂ ಸಹ ನದಿಯ ತೀರದಲ್ಲಿದ್ದು ಸಮುದ್ರದಿಂದ 120 ಸ್ಟೇಡಿಯಾ ದೂರದಲ್ಲಿದೆ. ಇದೇ ನದಿಯ ಮುಖದಲ್ಲಿ ಬಕಾರೆಯೆಂಬ ಹಳ್ಳಿಯಿದೆ. ನೆಲ್ಸಿಂಡಾದಿಂದ ಹೊರಟ ಹಡಗುಗಳು ಸರಕುಗಳನ್ನು ತುಂಬಿಕೊಳ್ಳಲು ಇಲ್ಲಿಗೆ ಬರುತ್ತವೆ. ಇಲ್ಲಿ ನದಿ ಆಳವಾಗಿಲ್ಲದಿರುವುದರಿಂದ ಮತ್ತು ನದಿ ಪಾತ್ರ ಖಚಿತವಾಗಿಲ್ಲದಿರುವುದರಿಂದ ಹಡಗುಗಳು ದೂರದಲ್ಲೇ ಲಂಗರು ಹಾಕುತ್ತವೆ. ಇವೆರಡು ಮಾರುಕಟ್ಟೆಗಳ ರಾಜರು ಒಳನಾಡಿನಲ್ಲಿ ವಾಸಿಸುತ್ತಾರೆ. ಸಮುದ್ರದ ಕಡೆಯಿಂದ ಪ್ರವೇಶಿಸಿದಾಗ ಕಪ್ಪು ಬಣ್ಣದ , ಕೆಂಪುಗಣ್ಣಿನ ಸರ್ಪಗಳು ಎದುರಾಗುತ್ತವೆ. ಇದು ಈ ಸ್ಥಳಗಳತ್ತ ಸಾಗುತ್ತಿದ್ದೇವೆಂಬ ಕುರುಹು. ಟಾಲೆಮಿಯ ‘ಎ ಗೈಡ್ ಟು ಜಿಯೋಗ್ರಫಿಯ ಕ್ರಿ.ಶ 2 ನೇ ಶತಮಾನದ ಮಧ್ಯಾವಧಿಯ ಆಂಟೋನಿನಸ್ ಪೇಯಸ್ ರಾಜನ ಆಳ್ವಿಕೆಯಲ್ಲಿದ್ದ ಈಜಿಪ್ತಿನ ಅಲೆಕ್ಸಾಂಡ್ರಿಯಾದಲ್ಲಿ ಟಾಲೆಮಿ (ಕ್ಲಾಡಿಯಸ್ ಟಾಃಲೆಮೇಯೊಸ್) ಜೀವಿಸಿದ್ದನು. ಟಾಲೆಮಿ ತನ್ನ ಭೂಗೋಳ ಮಾರ್ಗದರ್ಶಿ (ಎ ಗೈಡ್ ಟು ಜಿಯೋಗ್ರಫಿ ಕ) ಕೃತಿಯಿಂದ ಖ್ಯಾತ. ಟಾಲೆಮಿ ತನ್ನ ಕೃತಿಯಲ್ಲಿ ಬರುವ ಸ್ಥಳಗಳನ್ನು ಅಕ್ಷಾಂಶ,ರೇಖಾಂಶಗಳ ನೆರವಿನಿಂದ ನಿರ್ದೇಶಿಸಿದ್ದಾನೆ. ಟಾಲೆಮಿ ಭಾರತಕ್ಕೆ ಬಂದಿರಲಿಲ್ಲ. ಆದರೆ ಭಾರತಕ್ಕೆ ಬಂದ ಪ್ರವಾಸಿ ಮತ್ತು ವ್ಯಾಪಾರಗಾರರಿಂದ ತಿಳಿದ ವಿಷಯಗಳನ್ನು ಕ್ರೋಢೀಕರಿಸಿದ್ದಾನೆ. ಟಾಲೆಮಿ ತನ್ನ ಕೃತಿಯಲ್ಲಿ ಭಾರತದ ನೂರಾರು ಬಂದರು ಮತ್ತು ಪಟ್ಟಣಗಳ ಹೆಸರನ್ನು ಹೇಳಿದ್ದಾನೆ. ಇವು ಮೂಲ ಹೆಸರನ್ನು ಗುರುತಿಸಲಾಗದಷ್ಟು ಅಪಭ್ರಂಶ ಹೊಂದಿವೆ. ಈತನ ಕೃತಿಯಿಂದ ದಕ್ಕುವ ದಕ್ಷಿಣ ಭಾರತದ ವಿವರಗಳಲ್ಲಿ ಉತ್ತರ ಕರ್ನಾಟಕ ಕುರಿತಾಗಿ ಸಂಗ ಸಾಹಿತ್ಯದ ಮೂಲಕ ದಕ್ಕುವುದಕ್ಕಿಂತಲೂ ಹೆಚ್ಚಿನದನ್ನು ತಿಳಿಸುತ್ತವೆ. ಅವುಗಳ ಸಂಕ್ಷಿಪ್ತ ವಿವರಗಳು ಮುಂದಿವೆ. ‘ಲಿಮಿರಿಕದಲ್ಲಿ ತಿಂಡಿಸ್(ತಣೂರು/ಕಡಲು ಮಂಡಿ), ಬ್ರಮಗರ (ಬ್ರಹ್ಮಾಗರ=ಬ್ರಾಹ್ಮಣರ ಅಗರ ?),ಕಲೈಕರಿಯಾನ್(ಕಡಲ ಅಂಚು ?), ಮೌಜರೀಸ್ (ಮುಯಿರಿ ಕೋಯಿಲ್), ಸೂಡಸ್ತೊಮಸ್ (ತೋರಿಕೆಯ ನದಿಮುಖ) , ಪೊಡಪೆರೂರು (ಪೌಡೋಪಟ್ಟಣ), ಸೆಮ್ನೆ (?) , ಕೊರುಯೂರ (?) ಬಕರೈ ( ಪೊರಕ್ಕಾಡು) , ಬರಿಸ್ ನದಿ ಮುಖ (ಕ್ವಿಲಾನ್ ಸಮೀಪದ ಸಣ್ಣ ನದಿ ?)ಗಳಿವೆ. ಐಯೋಯಿ (ಅಹಿ=ಅಯಿ?) ನಾಡಿನಲ್ಲಿ ಮೇಲ್ಕಂಡ (ನೆಲ್ಸಿಂಡಾ ?) , ಎಲಂಗಕೋನ್/ರ್(ಕ್ವಿಲಾನ್), ಕೊಟೈಯರ ಎಂಬ ರಾಜಧಾನಿ (ಕೊಟ್ಟಾರ/ಕೊಟೂರು), , ಬಮ್ಮಲ(ಬಮ್ಮಲ=ವರಕ್ಕಿಳ್ಳೈ) , ಕೊಮರಿಯ ಎಂಬ ಭೂಶಿರ ಮತ್ತು ಪಟ್ಟಣಗಳಿವೆ. ‘ ಕರಿಯೊಯೆ ನಾಡಿನ (ಕರಾವಳಿ ನಾಡು ?) ಕೊಲ್ಖಕ್ ಖಾರಿಯಲ್ಲಿ (ಕೊಲ್ಕಾರೆ=ಮನಾರ್ ಖಾರಿ) ಮುತ್ತಿನ ಸಿಂಪಿ ತೆಗೆಯುವ ಸೋಸಿಕೂರು (ಟೋಟಿಕೂರು=ಟುಟಿಕೊರಿನ್), ಕೊಲ್ಖೋಯ್ ಎಂಬ ವಾಣಿಜ್ಯ ಕೇಂದ್ರ ಮತ್ತು ಸೋಲೇನ್ (ಸೈಲೂರು) ಎಂಬ ನದಿಮುಖಗಳಿವೆ. ‘ ಪಾಂಡಿಯನ್ ನಾಡಿನಲ್ಲಿ ಒರ್ಲಲಿಕ್(ಉರೈಯೂರು) ಖಾರಿಯಲ್ಲಿರುವ ಕೋರಿ ಎಂಬ ಭೂಶಿರ, ಅರ್ಗೀರು (ಉರೈಯೂರು) ಎಂಬ ಪಟ್ಟಣ ಮತ್ತು ಸಲೂರ್ ಎಂಬ ಸಂತೆಯ ಸ್ಥಳಗಳಿವೆ.’ ‘ಬತೊಯ್ (ತಂಜಾವೂರು) ಎಂಬ ನಾಡಿನಲ್ಲಿ ನಿಕಮ (ನಗಪಟಂ=ನಾಗಪಟ್ಟಣಂ ?) ಎಂಬ ರಾಜಧಾನಿಯೂ , ಧೇಲ್ಖೀರ್(ನಗೋರ್) ಮತ್ತು ಕೂರುಲ (ಕಾರೈಕಲ್) ಎಂಬ ಪಟ್ಟಣವು ಇವೆ. ತೋರಂಗೊಯ್ (ಚೋರಿಂಗಯ್ ಚೋಳಂಗಯ್=ಚೋಳ ನಾಡು ?) ಎಂಬ ಜನರ ನಾಡಾದ ಪರಲಿಯಾ (ತಿರುವಾಂಕೂರು)ಎಂಬ ವಿಶಿಷ್ಟ ಹೆಸರಿರುವ ದೇಶದಲ್ಲಿ ಖಬೆರೋಸ್(ಕಾವೇರಿ) ನದಿ ಮತ್ತು ಖಬೆರೋಸ್ ಎಂ ಪ್ಪೋರಿಯಂ(ಕಾವೇರಿ ಪಟ್ಟಣ) ಎಂಬ ವ್ಯಾಪಾರ ಕೇಂದ್ರ ಮತ್ತು ಸಬೂರಸ್ (ಸುಡಲೂರು=ಕಡ್ಡಲೂರು) ಎಂಬ ಮತ್ತೊಂದು ವ್ಯಾಪಾರ ಕೇಂದ್ರ ಇವೆ. ಆರೂಅರ್ನಾಯ್ (?) ಪ್ರದೇಶದಲ್ಲಿ ಪೊಡೋಕೆ (ಪುದುಚ್ಚೇರಿ ಅಥವಾ ಪುಲಿಕ್ಕಾಡು),ಎಂಬ ವ್ಯಾಪಾರ ಕೇಂದ್ರ , ಮೆಲಂಗೇ ( ಕೃಷ್ಣಾ ಪಟ್ಟಣ ಅಥವಾ ಮಲಂಕಾ ಬಂದರು) ಎಂಬ ಮತ್ತೊಂದು ವ್ಯಾಪಾರ ಕೇಂದ್ರವಿದೆ. ತೈನಾ ನದಿ ಮುಖ (ಪೆನ್ನಾರ್) ,ಕೊಟ್ಟಿಸ್ , ಮನರ್ಘ (ಮನಾರ) ಎಂಬ ಮಾರುಕಟ್ಟೆಯಿದೆ. ಮೈಸೊಲಿಯಾ(ಕೃಷ್ಣಾ-ಗೋದಾವರಿ ನದಿಗಳ ನಡುವಿನ ಮಸಲಿಪಟ್ಟಣ) ಎಂಬ ನಾಡಿನಲ್ಲಿ ಮೈಸೋಲೋಸ್ ಎಂಬ ನದಿಯ ಮುಖ , ಕೊಂಟಕೊಸ್ಯಲ (ಕಂಟಕ ಸ್ಥಳ) ಎಂಬ ಸಂತೆಯ ಊರು , ಕೊಡ್ಡೂರ (ಮಸಲಿಪಟ್ಟಣದ ಸಮೀಪದ ಗೂಡ್ರೂ), ಅಲ್ಲೊಸಿಗ್ನೆ (ಕೊರಿಂಗ ಅಥವಾ ಕೊರಮ್ಜಿ) ಎಂಬ ಸಂತೆ ಊರು , ಖ್ರಿಸಿಗೆ (ಮಲಯ ಪರ್ಯಾಯ ದ್ವೀಪ) ಹೋಗುವ ಹಡಗುಗಳು ಹೊರಡುವ ಸ್ಥಳಗಳಿವೆ. ಗಂಗಾಖಾರಿಯಲ್ಲಿ ಪಲೂರ ಅಥವಾ ಪಕೂರ (ಗಂಜಾಂ ನದಿ ದಡದ ಪಲೂರು) , ನನಿಗೈನ (ಪುರಿ) , ಕಟಿಕರ್ದಮ (ಕಟಕ್ ?) ,ಕನ್ನಗರ (ಕನರಕ ಅಥವಾ ಕಪ್ಪು ಪಗೋಡ) , ಮನದ ನದಿಯ (ಮಹಾನದಿ) ಮುಖ, ಕೊಟ್ಟೊಬರ, ಸಿಪ್ಪರ (ಸೂರ್ಪಾರಕ) ಮತ್ತು ತೈಂಡಿಸ್ (ಬ್ರಾಹ್ಮಣಿ) ನದಿ ಮುಖಗಳಿವೆ. ಬೆಟ್ಟಿಗೊ( ಕೊಯಮತ್ತೂರಿನಿಂದ ಕೇಪ್ ಕಾಮೊರಿನ್ವರೆಗೆ ಹಬ್ಬಿರುವ ಪಶ್ಚಿಮ ಘಟ್ಟದ ಪರ್ವತಗಳಲ್ಲಿ ಕೊನೆಯದು) ಮತ್ತು ಅಡೀಸತ್ರೋಸ್ ( ಕಾವೇರಿ ನದಿ ಉಗಮದ ಸಹ್ಯಾದ್ರಿ) ಮಧ್ಯದ ಪ್ರದೇಶದಲ್ಲಿ ಸೋರಾಯ್ (ಚೋಳ ?) ಎಂಬ ಜನರಿದ್ದಾರೆ, ಇವರು ಸ್ಥಳದಿಂದ ಸ್ಥಳಕ್ಕೆ ಅಲೆಯುವ ಜನ . ಇವರಲ್ಲಿ ಸಂಗಮಾರ್ತ ಮತ್ತು ಸೋರ ( ಈಗಿನ ಆರ್ಕಾಟ್) ಎಂಬ ಪಟ್ಟಣಗಳಿವೆ. ಬೆಟ್ಟಿಗೋ ಪರ್ವತದ ತಪ್ಪಲು ಪ್ರದೇಶಗಳಲ್ಲಿ ಬ್ರಕಮನಾಯ್ ಮಗೊಯಿ (ಹೀಗೆಂದರೆ ಬ್ರಾಹ್ಮಣ ಮಕ್ಕಳೆಂದು ಅರ್ಥವೆಂದು, ಮಗ ಶಬ್ಧ ಮಗೊಯಿ ರೂಪ ತಾಳಿದೆಯೆಂದು, ಈ ಪ್ರದೇಶದಲ್ಲಿದ್ದ ಬ್ರಾಹ್ಮಣರು ಸ್ಥಳೀಯರನ್ನು ಮದುವೆಯಾದುದರಿಂದ ಉದಿಸಿದ ಸಂತಾನವೆಂದು , ಇವರು ಹವ್ಯಕ ಬ್ರಾಹ್ಮಣರು (ಹೈಗ ಬ್ರಾಹ್ಮಣ) ಆಗಿರಬಹುದೆಂದು ಜೆ.ಕ್ಯಾಂಪ್ಬೆಲ್ ಸೂಚಿಸಿದ್ದರೆ , ಮಕ್ರಿಂಡಲ್ರವರು ತಾಮ್ರಪರ್ಣಿಯ ತೀರದ ಬ್ರಾಹ್ಮಣರ ಪಟ್ಟಣ ಇದೆಂದು ಅಭಿಪ್ರಾಯ ಪಟ್ಟಿದ್ದಾರೆ. ಕದಂಬರು ಮೂಲತ ಈ ನೆಲೆಯವರಾಗಿರಬಹುದೇ ಎಂಬುದು ವಿಚಾರಾರ್ಹವಾದುದು.) ಅಡೀಸತ್ರೋಸ್ ಪರ್ವತ ಶ್ರೇಣಿಯಯ ತಪ್ಪಲಿನಲ್ಲಿ ಬದಿಯಮಖೋಯ್ ( =ಬಾದಾಮಿ ಮಕ್ಕಳು , ಇವರು ಐತಿಹಾಸಿಕ ಸುಪ್ರಸಿದ್ಧ ಬಾದಾಮಿ ಪ್ರದೇಶದವರೆಂದು ಮಕ್ರಿಂಡಿಲ್ ಭಾವಿಸಿದ್ದಾರೆ) ಜನರಿದ್ದಾರೆ ಇವರ ನಗರದ ಹೆಸರು ತಥಿಲ್ಬಾ. ಅರಿಯಕೆ ನಾಡಿನ (ನೋಡಿರಿ:ತೆರೆದ ಪ್ರಶ್ನೆಗಳು) ಒಳಭಾಗದಲ್ಲಿರುವ ನಗರಗಳು , ಹಳ್ಳಿಗಳು ಯಾವುವೆಂದರೆ ಬೇಂಡಾದ (ಭೀಮಾ ನದಿ ) ಪಶ್ಚಿಮಕ್ಕೆ ಮಲಿಪ್ಪಲ (ಮಲ್ಪೆ ?) , ಸರಿಸಬಿಸ್ , ತಗರ (ತಗರಪುರ/ದೌಲತಬಾದ್/ಕೊಲ್ಲಾಪುರ/ದೇವಘಡ ?) , ದಿಯೋಪಲ್ಲಿ ( ದೇವಪಲ್ಲಿ =ದೇವಘಡ ) , ಗಮಲಿಬ ಮತ್ತು ಬಮೆನೋಗರ. ಬೇಂಡಾ (ಭೀಮಾ ನದಿ ) ಬನೌಸಿ (ಬನವಾಸಿ) ನಡುವೆ ಇರುವ ಊರುಗಳೆಂದರೆ ನಗರೂರು (ಬಿಜಾಪುರ/ಬಾಗಲಕೋಟೆ ಜಿಲ್ಲೆಗಳ ಯಾವುದೋ ನಾಗೂರು/ನಗರೂರು ) , ತಬಸೊ (ಬೆಳಗಾವಿ ಜಿಲ್ಲೆಯ ತವಸಿ) , ಇಂಡೆ ( ಬಿಜಾಪುರ ಜಿಲ್ಲೆಯ ಇಂಡಿ) , ತಿರಿಪಂಗಲಿದ (ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ) , ಬಲೆಒಕುರದ ರಾಜಧಾನಿಯಾದ ಹಿಪ್ಪೊಕೂರ (ಬಾಗೇವಾಡಿ ತಾಲೂಕಿನ ಹಿಪ್ಪರಗಿ), ಸೂಬೊತ್ತು ಅಥವಾ ಸಬಥ (ರೋಣ ತಾಲೂಕಿನ ಸವಡಿ) , ಸಿರಿಮಲಗ(ಬಿಜಾಪುಅರ ಜಿಲ್ಲೆಯ ಚಿಮ್ಮಲಗಿ/ಮುಂದೆ ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಶ್ರೀ ಮಳಖೇಡ ಇದೆಂದು ರಂ.ಶ್ರೀ.ಮುಗಳಿಯವರು ಅಭಿಪ್ರಾಯ ಪಟ್ಟಿದ್ದಾರೆ.) , ಕಲ್ಲಿಗೇರಿಸ್ ( ಬಿಜಾಪುರ ಅಥವ ಧಾರವಾಡ ಜಿಲ್ಲೆಯಲ್ಲಿರುವ ಈಗಿನ ಕಲ್ಲಕೇರಿ) , ಮೊದೊಗಲ್ಲ (ರಾಯಚೂರು ಜಿಲ್ಲೆಯ ಮುದುಗಲ್ಲು) , ಪೆರ್ತಿಗಾಲ(ಬಾಗೇವಾಡಿ ತಾಲೂಕಿನ ಹತ್ತರ್ಕಿಹಾಳು ಇದೆಂದು ರಂ.ಶ್ರೀ.ಮುಗಳಿಯವರು ಹೇಳಿದರೆ , ಪಟ್ಟದಕಲ್ಲು ಎಂದು ಗೋವಿಂದ ಪೈ ತಿಳಿಸಿದ್ದಾರೆ.) ಲಿಮಿರಿಕೆಯ ಒಳನಾಡಿನಲ್ಲಿ ಬನೌಸೆಯಿಂದ ಪಶ್ಚಿಮಕ್ಕಿರುವ ನಗರಗಳಾವುವೆಂದರೆ ನರೂಲ್ಲ (?)ಕೂಬ (ಗೋವಾ ?) ಮತ್ತು ಪಲೂರ , ಬನೌಸಿಗೂ ಬರಿಸಿಗೂ ಮಧ್ಯೆ ಪಸಗೆ (ಹಲಸಿ) , ಮಸ್ತನೂರು(?) , ಕೂರೆಲ್ಲೂರು (?) , ಪುನ್ನಾಟ ( ಹೆಗ್ಗಡದೇವನ ಕೋಟೆ ಪ್ರದೇಶ / ಶ್ರೀರಂಗಪಟ್ಟಣದಿಂದ ಅಗ್ನೇಯ ದಿಕ್ಕಿನಲ್ಲಿ 110. ಕಿ,ಮೀ ದೂರದಲ್ಲಿರುವ ಕಿತ್ತೂರು ಎಂದು ಮಕ್ರಿಂಡಲ್ ಸೂಚಿಸಿದ್ದಾರೆ.) , ಆಲೋ (?) , ಕೆರಬೊತ್ರರ ರಾಜಧಾನಿಯಾದ ಕರೂರ (ಕೊಯಂಮತ್ತೂರು ಜಿಲ್ಲೆಯ ಕರೂರು) , ಅರೆಂಬೂರ್(?) , ಬಿದೆರಿ (ಈರೋಡ್ ?) , ಪೊಂಟಿಪೊಳಿ (?) , ಅದರಿಮ (?) ಮತ್ತು ಕೊರಿಯೂರ್ (?) ಅಹಿ ( ಅಯಿ=ಚೇರರು ?) ಎಂಬ ಜನರಿಗೆ ಸೇರಿದ ಒಳನಾಡಿನ ಮೊರುಂದ (?) ಎಂಬ ಪಟ್ಟಣವಿದೆ. ಕರೀಯ (ಕರಾವಳಿ ?) ನಾಡಿನ ಪಕ್ಕದಲ್ಲಿರುವ ಪಟ್ಟಣಗಳೆಂದರೆ ಮೆಂಡೆಲ (?) , ಸೇಲೂರ್ (?) , ತಿತ್ತೂವ (?), ಮಂಟಿತ್ತೂರ್ (?) ಪಾಂಡಿಯನ್ ನಾಡಿನ ಒಳಭಾಗದಲ್ಲಿರುವ ನಗರಗಳಾವುವೆಂದರೆ ತೈನೂರು (ತಂಜಾವೂರು ?) ,ಪೆರಿಂಗಕರಿ (ವೈಗೈ ನದಿ ತೀರದ ಪೆರುಂಗರಿ) , ಕೊರಿಂದಿಯೂರ್ (?) ,ತಂಗಲತಗ (ದಿಂಡಿಗಲ್ ?) , ಪಾಂಡಿನಾಡಿನ ರಾಜಧಾನಿಯಾದ ಮೊದುರ (ಮಧುರೈ) ಮತ್ತು ಅಕೂರ್ (?) , ಬತೊಯ್ ಜನರ ನಾಡಿನಲ್ಲಿ ಕಲಿಂದೋಯಿಯಾ (?) , ಬತ (ಪತ್ತುಕ್ಕೊಟ್ಟ ಅಥ್ವಾ ಪುದುಕ್ಕೋಟ್ಟೈ ?) ಸೊರೆತಾಯರ (ಚೋಳ ?) ಕಡಲ ಪ್ರದೇಶದಲ್ಲಿರುವ ಊರುಗಳೆಂದರೆ ಕಲಿಯೂರ್ (?) , ತೆನ್ನೆಗೊರ (?) , ಐಕೂರ್(?), ಸೊರೆತಾಯರ ರಾಜಧಾನಿ ಒರ್ತೂರ (ತಿರುಚಿನಾಪಳ್ಳೀಯ ಸಮೀಪದ ಉರೈಯೂರು), ಬೆರೆ (?) , ಅಬೂರು (ಉತ್ತರ ಆರ್ಕಾಟ್ ಜಿಲ್ಲೆಯ ಅಂಬುದುರ್ಗ ?),ಕರ್ಮರ (?) , ಮಗೂರ್ (?) , ಕೆರಬೊತ್ರರ ರಾಜಧಾನಿ ಕರೂರ (ಕರೂರು) ಅರಂಬೂರು (ಊರುಪರುಂ) , ಬಿದೆರಿ (ಈರೋಡು ?) . ಚೀನಾದ ವೀಲ್ಯು ಕೃತಿ ಚೀನಾದ ಯು ಹು ಆನ್ ಕೃತಿಯಲ್ಲಿ ತಮಿಳಗಂನ ಪಾಂಡ್ಯರ ಉಲ್ಲೇಖವಿದೆಯೆಂದು ಹೇಳಲಾಗುತ್ತಿದೆ. ಕ್ರಿ.ಶ. 3ನೇ ಶತಮಾನದಲ್ಲಿದ್ದ ಯು ಹು ಆನ್ ಅಧಿಕೃತವಾಗಿ ಚರಿತ್ರೆಕಾರನಲ್ಲದಿದ್ದರು ಚೀನಿ ಪಂಡಿತರಿಂದ ಗೌರವಿಸಲ್ಪಟ್ಟವನು. ಈತ ವೀ ವಂಶದ ಸಂಕ್ಷಿಪ್ತ ಚರಿತ್ರೆಯನ್ನು ವೀಲ್ಯು ಕೃತಿಯಲ್ಲಿ ನೀಡಿದ್ದಾನೆ. ಯು ಹು ಆನ್ ತನ್ನ ಕೃತಿಯಲ್ಲಿನ ಮಾಹಿತಿಗಳ ಆಕರ ಯಾವುದೆಂದು ತಿಳಿಸಿಲ್ಲ. ವಿದೇಶಿ ಯಾತ್ರಿಕ ಮತ್ತು ನಾವಿಕರಿಂದ ಪಡೆದ ವಿವರಗಳೇ ಈತನ ಕೃತಿಯ ತಿರುಳು. ವೀಲ್ಯು ಕೃತಿಯನ್ನು ಇಂಗ್ಲೀಷ್ಗೆ ಭಾಷಾಂತರಿಸಿದ ಜಾನ್. ಇ. ಹಿಲ್ ಇದರಲ್ಲಿ ಖಚಿತವಾಗಿ ಗುರುತಿಸಲಾಗದ ಚೀನಾದ ಹೊರಗಿನ ಹಲವಾರು ಪ್ರದೇಶಗಳಿವೆಯೆಂದು , ಚೀನಾದಿಂದ ಈಜಿಪ್ತ್ಗೆ ನೀಡಲಾಗಿರುವ ಸಮುದ್ರ ಮಾರ್ಗದ ವಿವರಣೆಯಲ್ಲಿ ಸ್ಪಷ್ಟತೆ ದಕ್ಕುತ್ತಿಲ್ಲವೆಂದು ಹೇಳಿದ್ದಾನೆ. ವೀಲ್ಯು ಕೃತಿಯಲ್ಲಿ ಪಶ್ಚಿಮ ಜನಾಂಗಗಳು 6,7 ಮತ್ತು 8 ನೇ ವಿಭಾಗಗಳಲ್ಲಿ ಲಿನ್ನಿ , ಜುಲಿ ,ಪಾನ್ಯು ರಾಜ್ಯಗಳನ್ನು ಹೆಸರಿಸಿಲಾಗಿದೆ. ಇವನ್ನು ಲುಂಬಿನಿ , ಅಯೋಧ್ಯಾ , ಪಾಂಡ್ಯ ಎಂದು ಹೇಳಲಾಗುತ್ತಿದೆ. ಎಂಟನೇ ವಿಭಾಗದಲ್ಲಿ ‘ಪಾನ್ಯು ಸಾಮ್ರಾಜ್ಯವನ್ನು ಹ್ಯಾನ್ಯುಯೆವ್ಯಾಂಗ್ ಎಂದು ಸಹ ಕರೆಯಲಾಗುತ್ತದೆ. ಇದು ತಿಯಾಂಝದಿಂದ (ಉತ್ತರ ಭಾರತ) ಹಲವಾರು ಸಹಸ್ರ ಲೀ ದೂರದಲ್ಲಿದ್ದು ಯೀ ಪಥದೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿನ ನಿವಾಸಿಗಳು ಸಣ್ಣ ಗಾತ್ರದವರಾಗಿದ್ದು ಚೀನಾದವರಷ್ಟೇ ಎತ್ತರವಾಗಿದ್ದಾರೆ. ಷು ಪ್ರಾಂತದ ವರ್ತಕರು ಈ ವರೆಗೆ ಬರುತ್ತಾರೆ. ದಕ್ಷಿಣ ಮಾರ್ಗ ತನ್ನ ಪಶ್ಚಿಮ ತುದಿ ತಲುಪಿದ ನಂತರ ಆಗ್ನೇಯ ದಿಕ್ಕಿಗೆ ತಿರುಗಿ ಕೊನೆ ತನಕ ಸಾಗುತ್ತದೆ’ ಎಂಬ ವಿವರ ದಕ್ಕುತ್ತದೆ. ನಿಕೊಲಾಸ್ ಮಾಹಿತಿ ಗ್ರೀಕ್ ಚರಿತ್ರೆಕಾರ ನಿಕೊಲಾಸ್ ಕ್ರಿ.ಶ. 13 ರಲ್ಲಿ ಭಾರತದ ಪಾಂಡಿಯನ್ ರಾಜನಿಂದ ಸೀಸರ್ ಅಗಸ್ಟಸ್ ಆಸ್ಥಾನಕ್ಕೆ ದೂತಪಡೆಯೊಂದು ಕಳಿಸಲ್ಪಟ್ಟಿತ್ತೆಂದು ಮತ್ತು ಆ ಪಡೆಯ ಸದಸ್ಯನನ್ನು ತಾನು ಅಂತಿಯೊಕದಲ್ಲಿ ಭೇಟಿ ಮಾಡಿದುದಾಗಿ ದಾಖಲಿಸಿದ್ದಾನೆ. ಇದರೊಂದಿಗೆ ಈ ದೂತ ಪಡೆ ಚರ್ಮದ ಮೇಲೆ ಗ್ರೀಕ್ನಲ್ಲಿ ಬರೆದ ರಾಜತಾಂತ್ರಿಕ ಪತ್ರವನ್ನು ಹೊಂದಿದ್ದು ಅದರಲ್ಲಿ ಹಲವಾರು ಜನರ ಹೆಸರಿದ್ದರೂ ದೀರ್ಘ ಪ್ರಯಾಣದ ಫಲವಾಗಿ ಹಲವರು ಮಾರ್ಗ ಮಧ್ಯದಲ್ಲಿ ಮೃತಪಟ್ಟು ಕೇವಲ ಮೂರು ಜನ ಮಾತ್ರ ಅಂತಿಮ ಗುರಿ ತಲುಪಿದ್ದರೆಂದು ತಿಳಿಸಿದ್ದಾನೆ. ಈ ಪತ್ರದಲ್ಲಿ ಅದನ್ನು ಬರೆದಾತ ಪೊರೊಸ್ ಎಂದು ಹಾಗು ಅದರಲ್ಲಿ ತಾನು 600 ರಾಜರುಗಳಿಗೆ ಅಧಿಪತಿಯಾಗಿದ್ದರು ಸೀಸರ್ ಅಗಸ್ಟಸ್ನ ಸ್ನೇಹ ಬಯಸಿರುವುದಾಗಿಯೂ , ಅಗಸ್ಟಸ್ ಬಯಸಿದರೆ ನ್ಯಾಯಯುತವಾದ ಯಾವುದೇ ಕೆಲಸಕ್ಕೂ ತನ್ನ ಬೆಂಬಲವಿದ್ದು, ಬಯಸಿದರೆ ತನ್ನ ರಾಜ್ಯದ ಯಾವುದೇ ಭಾಗದ ಮೂಲಕ ಸಾಗಲು ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದಿತೆಂದು ನಿಕೊಲಾಸ್ ಹೇಳಿದ್ದಾನೆ. ನಗ್ನರಾದ , ಕುತ್ತಿಗೆಗೆ ಸರಗಳನ್ನು ಧರಿಸಿ , ಸುಗಂಧ ದ್ರವ್ಯ ಪೂಸಿಸಿಕೊಂಡ ಎಂಟು ಜನ ಸೇವಕರು ಪೊರಸ್ ಉಡುಗೊರೆಯಾಗಿ ಕಳಿಸಿದ ಹುಟ್ಟು ಕೈಗಳಿಲ್ಲದ ವಿಕಲಾಂಗ ,ದೊಡ್ದ ಸರ್ಪ ಮತ್ತು ನದಿಯಾಮೆ, ಹದ್ದಿನ ಗಾತ್ರದ ಗಿಳಿಯನ್ನು ನೀಡಿದರೆಂದು ನಿಕೊಲಾಸ್ ದಾಖಲಿಸಿದ್ದಾನೆ. ಈ ದೂತ ಪಡೆಯಲ್ಲಿ ಶ್ರಮಣನೊಬ್ಬನು ಸದಸ್ಯನಾಗಿದ್ದನೆಂದು, ಮುಂದೆ ಕೆಲಕಾಲದ ನಂತರ ತನ್ನ ಧರ್ಮದ ಶ್ರೇಷ್ಟತೆಯನ್ನು ಸಾರಲು ಈ ಶ್ರಮಣ ಅಥೆನ್ಸ್ನಲ್ಲಿ ಅಗ್ನಿ ಪ್ರವೇಶ ಮಾಡಿದನೆಂದು ಹೇಳಿದ್ದಾನೆ. ಇತರ ಇತಿಹಾಸಕಾರರಾದ ಸ್ಟ್ರಾಬೋ ಮತ್ತು ಡಯೋ ಕ್ಯಾಸಿಯಸ್ ಸಹ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. ಈ ಶ್ರಮಣನ ನೆನಪಿನಲ್ಲಿ ನಿರ್ಮಿಸಿದ ಗೋರಿ ತನ್ನ ಕಾಲದಲ್ಲಿ ಅಸ್ತಿತ್ವದಲ್ಲಿದ್ದುದಾಗಿ ಪ್ಲುಟಾರ್ಖ್ ತಿಳಿಸಿದ್ದಾನೆ. ಸ್ಟ್ರಾಬೋ ಹೇಳಿಕೆ ಇತಿಹಾಸಕಾರ ಸ್ಟ್ರಾಬೊ ಕೃತಿಯಲ್ಲಿ ತಮಿಳಗಂ ಉಲ್ಲೇಖವಿರುವುದಾಗಿ ಹೇಳಲಾಗಿದೆ. ಸ್ಟ್ರಾಬೊ ಈಗಿನ ತುರ್ಕಿಯ ಇರ್ಮಾಕ್ ನದಿ ತಟದ ಅಲೆಸಿಯಾ ನಗರದವನು. ಈತನ ಕಾಲ ಕ್ರಿ.ಪೂ 54-ಕ್ರಿ.ಶ 24 ಇರಬಹುದೆಂದು ಅಂದಾಜಿಸಲಾಗಿದೆ. ಈತ ಪ್ರವಾಸಿಯಾದರು ಭಾರತಕ್ಕೆ ಬಂದಿರಲಿಲ್ಲ. ಈತ ಭಾರತದ ಬಗ್ಗೆ ಅವರಿವರಿಂದ ಸಂಗ್ರಹಿಸಿದ ವಿವರಗಳನ್ನು ನೀಡಿದ್ದಾನೆ. ಅಲೆಕ್ಸಾಂಡ್ರಿಯಾ ಗ್ರಂಥಾಲಯದ ಅಧ್ಯಕ್ಷನಾಗಿದ್ದ ಎರತೋಸ್ತನಿಸ್ ನೀಡಿದ ವಿವರಗಳೇ ಸ್ಟ್ರಾಬೊ ಕೃತಿಯ ಆಕರಗಳು. ಎರಿತೋಸ್ತನಿಸ್ ತನಗೆ ಭಾರತದ ಬಗ್ಗೆ ಮೆಗಸ್ತಾನಿಸ್ಗಿಂತ ಹೆಚ್ಚು ಗೊತ್ತೆಂದು ಹೇಳಿಕೊಳ್ಳುತ್ತಿದ್ದನು. ಆದರೆ ಎರಿತೋಸ್ತನಿಸ್ ಸೆಲ್ಯುಕಸ್ ನಿಕಟಾರ ಮತ್ತು ಆಂಟಿಯೋಖಸನ ಕೈಕೆಳಗೆ ಸೈನ್ಯಾಧಿಕಾರಿಯಾಗಿದ್ದ ಪೆಟ್ರೋಕ್ಲಿಸ್ನಿಂದ ಭಾರತದ ಬಗ್ಗೆ ಅರಿತಿದ್ದನು. ಅಲೆಕ್ಸಾಂಡರ್ ನಂತರ ಭಾರತದ ಬಗ್ಗೆ ಬರೆದ ಎಷ್ಟೋ ಜನರಲ್ಲಿ ನಿಖರತೆಯಿರದೆ ಉತ್ಪ್ರೇಕ್ಷೆ ಎದ್ದು ಕಾಣುತ್ತಿದೆಯೆಂದು ಭಾವಿಸಿದ್ದನು. ಪಾಂಡಿಯನ್ ರಾಜನಿಂದ ಸೀಜರ್ ಆಗಸ್ಟಸ್ ಆಸ್ಥಾನಕ್ಕೆ ರಾಯಭಾರಿಗಳು ಬಂದಿದ್ದರೆಂದು ಕೆಲವರು ಬರೆದಿದ್ದಾರೆ. ಆದರೆ ಆತ ಪಾಂಡಿಯನಲ್ಲ ಪೋರಸ್ . ಪೋರಸ್ ಕಳಿಸಿದ ರಾಯಭಾರಿಗಳಲ್ಲಿ ಕುತರ್ಕಿಯೊಬ್ಬನಿದ್ದನು. ಇವನು ಅಥೆನ್ಸ್ನಲ್ಲಿ ಬೆಂಕಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡನು. ಕಲನೋಸನೆಂಬುವನು ಸಹ ಇದೇ ದಾರಿ ಹಿಡಿದನು ಸ್ಟ್ರಾಬೊ ಎಂದು ಹೇಳಿದ್ದಾನೆ. ಪ್ಲಿನಿಯ ಪ್ರಾಕೃತಿಕ ಚರಿತ್ರೆ ರೋಂ ನಗರ ವಾಸಿಯಾಗಿದ್ದ ಪ್ಲಿನಿ ‘ಪ್ರಾಕೃತಿಕ ಚರಿತ್ರೆ’ ಎಂಬ ಮಹಾನ್ ಗ್ರಂಥವನ್ನು ಕ್ರಿ.ಶ 77ರಲ್ಲಿ ಬರೆದಿದ್ದಾನೆ. ಪ್ಲಿನಿಗೆ ಭ್ರಾತ್ರೇಯನೂ , ದತ್ತುಪುತ್ರನೂ ಆಗಿದ್ದ ಕಿರಿಯ ಪ್ಲಿನಿ ಎಂಬುವನಿದ್ದನು. ಪ್ಲಿನಿ ತಾನಾಗಿಯೇ ಪ್ರವಾಸಿಯಲ್ಲ. ಪ್ಲಿನಿ ಬರೆದುದರ¯ಲಿ ತಾನು ಕಂಡಿದ್ದಕ್ಕಿಂತ ಪುಸ್ತಕಳಿಂದ ಓದಿ ಅರಿತದ್ದೇ ಹೆಚ್ಚು. ಪ್ಲಿನಿಯ ಪ್ರಾಕೃತಿಕ ಚರಿತ್ರೆ 37 ಭಾಗಗಳಲ್ಲಿದ್ದು ಆರನೆಯ ಭಾಗದಲ್ಲಿ ಭಾರತದ ಭೂಗೋಳದ ವಿವರಗಳಿವೆ. ಇದರಲ್ಲಿ ತಮಿಳಗಂ ಕುರಿತಾಗಿ ದಕ್ಕುವ ಮಾಹಿತಿಯಿಂದ ‘ ಹಿಪ್ಪಲಸ್ ಎಂಬ ಮಾರುತದ ನೆರವಿನಿಂದ ಭಾರತದ ಮುಜೈರಿಸ್ (ಮುಯಿರಿ ಕೋಯಿಲ್, ಕ್ರಾಂಗನೂರು) ಎಂಬ ಬಂದರನ್ನು ನಲವತ್ತು ದಿನಗಳಲ್ಲಿ ಮುಟ್ಟಬಹುದು. ಇದು ಕಡಲುಗಳ್ಳರ ತಾಣವಾಗಿದ್ದು ಅಷ್ಟೊಂದು ಸುರಕ್ಷಿತ ಜಾಗವಲ್ಲ. ವ್ಯಾಪಾರಕ್ಕೆ ಬೇಕಾದ ಸರಕುಗಳು ಇಲ್ಲಿ ಸಾಕಷ್ಟು ಸಿಕ್ಕುವುದಿಲ್ಲ. ಇಲ್ಲಿಗೆ ಬಂದ ಹಡಗುಗಳು ದೂರದಲ್ಲಿ ಲಂಗರು ಹಾಕಿ ನಿಲ್ಲಬೇಕು. ಹಡಗಿನ ಸಾಮಾನುಗಳನ್ನು ದೋಣಿಗಳಲ್ಲಿ ಹೇರಿಕೊಂಡು ಹೋಗಿ ನೆಲವನ್ನು ತಲುಪಬೇಕು. ನಾನು ಇದನ್ನು ಬರೆಯುತ್ತಿರುವಾಗ ಮುಜೈರಿಸ್ ನಾಡನ್ನು ಕಾಯಲೋಬೊತ್ರಾಸ್(ಕೇರಳ ಪುತ್ರ) ಎಂಬ ದೊರೆ ಆಳುತ್ತಿದ್ದಾನೆ. ಮುಜೈರಿಗಿಂತಲೂ ಉತ್ತಮ ಬಂದರೆಂದರೆ ನಿಸೈಂಡೆನ್ (ಯೂಲರ್ ಇದನ್ನು ಕನೆಟ್ಟಿ ಮತ್ತು ಕೋಲಮಿಗಂ ಮಧ್ಯದ ಬಂದರೆಂದು ಸೂಚಿಸಿದ್ದಾನೆ) ಇದನ್ನು ಬೆಕರೆ ಎಂಂತಲೂ ಕರೆಯುತ್ತಾರೆ. ಇಲ್ಲಿ ಪಾಂಡಿಯನ್ ಎಂಬ ರಾಜ ಆಳುತ್ತಿದ್ದಾನೆ. ಈತನ ರಾಜಧಾನಿ ಬಂದರಿನಿಂದ ಬಹು ದೂರ ಒಳನಾಡಿನಲ್ಲಿದೆ. ಇದರ ಹೆಸರು ಮೊದುರ (ಮಧುರೈ). ಒಳನಾಡಿನಿಂದ ಬೆಕರೆಗೆ ಮೆಣಸು ಬರುತ್ತದೆ. ಈ ಒಳನಾಡಿನ ಹೆಸರು ಕೊಟ್ಟನಾರ (ಕೊಲ್ಲಟ ನಾಡು- ತಲಚ್ಚೇರಿ ಜಿಲ್ಲೆ). ಈ ಹಿಂದಿನ ಲೇಖಕರು ನಾನು ಹೇಳಿದ ರಾಜ್ಯಗಳ , ಬಂದರುಗಳ ಮತ್ತು ನಗರಗಳ ಹೆಸರನ್ನು ತಿಳಿಸಿಲ್ಲ. ಮಹಾವಂಶ ಮಹಾವಂಶ, ದೀಪವಂಶ ಮತ್ತು ಚುಳವಂಶ ಕೃತಿಗಳು ಶ್ರೀಲಂಕಾದ ಬೌದ್ಧರ ವಂಶಾನುವಳಿ ಹಾಗೂ ಘಟನೆಗಳನ್ನು ಸುಮಾರು ಎರಡು ಸಾವಿರ ವರ್ಷಗಳಿಗೂ ಅಧಿಕ ಅವಧಿಯ ಕಾಲಾನುಕ್ರಮಣಿಕೆಯಲ್ಲಿ ನೀಡುತ್ತವೆ. ಕ್ರಿ.ಪೂ 543ರಲ್ಲಿ ಸಿಂಹಳಕ್ಕೆ ವಿಜಯನ ಆಗವiನದೊಂದಿಗೆ ಪ್ರಾರಂಭವಾಗುವ ಮಹಾವಂಶ ಕ್ರಿ.ಶ 1815 ರಲ್ಲಿ ಪರಿಸಮಾಪ್ತಿಗೊಂಡಿತು. ಕ್ರಿ.ಶ 1 ನೇ ಶತಮಾನದಲ್ಲಿ ರಚಿತವಾದ ದೀಪವಂಶದ ಆಧಾರದ ಮೇಲೆ ಶ್ರೀಲಂಕಾದೊರೆ ಧಾತುಸೇನನ ತಮ್ಮ ಥೇರಾ ಮಹಾನಾಮನಿಂದ ಈ ಗ್ರಂಥ ಕ್ರಿ.ಶ 5ನೇ ಶತಮಾನದಲ್ಲಿ ಪ್ರಾರಂಭಗೊಂಡು ಮುಂದೆ ಎಂಟುನೂರು ವರ್ಷಗಳ ಕಾಲ ಹಲವಾರು ಜನ ಲೇಖಕರಿಂದ ಮುಂದುವರೆಸಲ್ಪಟ್ಟಿತು. ಮಹಾವಂಶದ ಎರಡನೇ ಭಾಗವೆಂದು ಪರಿಗಣಿತವಾದ ಚುಳವಂಶ 13 ನೇ ಶತಮಾನದಲ್ಲಿ ರಚಿತವಾಯಿತು. ಮಹಾವಂಶದ ಬಗೆಗೆ ವಿಸ್ತೃತ ಅದ್ಯಯನ ನಡೆಸಿದ ಡಬ್ಲ್ಯು. ಗೀಗರ್ ಇದರಲ್ಲಿನ ಆರಂಭಿಕ ಅಧ್ಯಾಯಗಳನ್ನು ಹೊರತುಪಡಿಸಿ ಉಳಿದ ಭಾಗಗಳು ಚರಿತ್ರಾರ್ಹವೆಂದು ಸಾರಿದ್ದಾನೆ. ಮಹಾವಂಶ ಮತ್ತು ದೀಪವಂಶಗಳು ಶ್ರೀಲಂಕಾದ ದೊರೆ ವಿಜಯ (ಕ್ರಿ.ಪೂ. 543) ಪಾಂಡು ದೊರೆಯ ಮಗಳನ್ನು ಮದುವೆಯಾಗಿದ್ದನೆಂದು ಹಾಗೂ ಈತ ತನ್ನ ಮಾವನಿಗೆ ಶ್ರೀಮಂತ ಉಡುಗೊರೆಗಳನ್ನು ಪ್ರತಿವರ್ಷ ಕಳಿಸುತ್ತಿದ್ದನೆಂದು ದಾಖಲಾಗಿದೆ. ಈ ದೊರೆಯನ್ನು ತಮಿಳಗಂ ಪಾಂಡ್ಯನೆಂದು ಭಾವಿಸಲಾಗಿದೆ. ಮಹಾವಂಶದಲ್ಲಿನ ವಿವರಣೆ ಹೀಗಿದೆ : ‘ ರಾಜಕುಮಾರ ವಿಜಯನಿಗೆ ಪಾಂಡುವಿನಿಂದ ಕಳಿಸಲ್ಪಟ್ಟ ಉಡುಗೊರೆಗಳನ್ನು ಮತ್ತು ಆತನ ಮಗಳ ನೇತೃತ್ವದಲ್ಲಿ ಆಕೆಯನ್ನೊಳಗೊಂಡಿದ್ದ ಸೇವಕಿಯರನ್ನು ರಾಯಭಾರಿಗಳು ಅರ್ಪಿಸಿದರು. ವಿಜಯ ಅವರಿಗೆ ಆದರಾತಿಥ್ಯ ನೀಡಿ ಅವರವರ ಅಂತಸ್ತುಗಳಿಗೆ ತಕ್ಕದಾದ ಗೌರವ ನೀಡುವಂತೆ ಮಂತ್ರಿಗಳಿಗೆ ಸೂಚಿಸಿದನು. ಸಂಪ್ರದಾಯದಂತೆ ತುಂಬಿದ ಸಭೆಯಲ್ಲಿ ವಿಜಯನನ್ನು ಅಭಿಷಿಕ್ತಗೊಳಿಸಿ ಮಹಾ ಉತ್ಸವ ಆಚರಿಸಿದರು. ಆಗ ನಡೆದ ಉತ್ಸವದಲ್ಲಿ ಪಾಂಡು ದೊರೆಯ ಮಗಳನ್ನು ವರಿಸಿ ಪಟ್ಟದರಸಿಯನ್ನಾಗಿ ಮಾಡಿಕೊಂಡನು. ಪಾಂಡುವಿನ ಮಂತ್ರಿಗಳನ್ನು ಉಡುಗೊರೆಗಳಿಂದ ತಣಿಸಿ , ಪ್ರತಿ ವರ್ಷ ತನ್ನ ಮಾವನಿಗೆ ಎರಡು ಲಕ್ಷ ಬಂಗಾರದ ನಾಣ್ಯಗಳಿಗೆ ಸಮನಾದ ಮುತ್ತುಗಳನ್ನು ಕಳಿಸುವ ವ್ಯವಸ್ಥೆ ಮಾಡಿದನು. ಕೌಟಿಲ್ಯನ ಅರ್ಥಶಾಸ್ತ್ರ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತಮಿಳಗಂ ಉಲ್ಲೇಖವಿದೆಯೆಂದು ಹೇಳಲಾಗುತ್ತಿದೆ. ಅದರ ವಿವರಗಳು ಇಲ್ಲಿವೆ. ಕೌಟಿಲ್ಯನ ಅರ್ಥಶಾಸ್ತ್ರದ 11 ನೇ ಅಧ್ಯಾಯ ರಾಜ ಭಂಡಾರಕ್ಕೆ ಸೇರಿಸಬೇಕಾದ ಮುತ್ತು ರತ್ನಗಳ ಪರೀಕ್ಷೆಯನ್ನು ಕುರಿತಾಗಿ ಹೇಳುತ್ತದೆ. ಇದರಲ್ಲಿ ತಾಮ್ರಪರ್ಣಿಯ ತಾಮ್ರಪರ್ಣಿಕಾ , ಪಾಂಡ್ಯ ಕವಾಟದ ಪಾಂಡ್ಯ ಕವಾಟಕ , ಪಾಸದ ಪಾಸ್ಯಕ , ಕೂಲದ ಕೌಲೇಯ , ಚಾರ್ಣದ ಚಾರ್ಣೇಯ , ಮಹೇಂದ್ರ ಪರ್ವತದ ಮಹೇಂದ್ರ , ಕಾರ್ದಮದ ಕಾರ್ದಮಿಕ , ಸ್ರೋತಸಿಯ ಸ್ರೌತಸೀಯ , ಹ್ರದ (ಆಳ ನೀರಿನ) ಹ್ರದಿಯ ಎಂಬ ಮುತ್ತುಗಳಿವೆ ಎಂದು ವಿವರಿಸಲಾಗಿದೆ. ಇದೇ ಅಧ್ಯಾಯದಲ್ಲಿ ಬಟ್ಟೆ , ಚರ್ಮ ಕುರಿತಾಗಿ ವಂಗದೇಶದ ಮೃದು ಬಿಳಿ ಬಟ್ಟೆ (ವಂಗಕ) , ಪಾಂಡ್ಯದ ಕಪ್ಪು ಬಣ್ಣದ ನಯ ಮೇಲ್ಮೈ ಬಟ್ಟೆ (ಪಾಂಡ್ರಕ) , ಹಸಿ ಹಾಗೂ ಸಮರೂಪಿ ಎಳೆಗಳಿಂದ ನೇಯ್ದ ಕಡುಗೆಂಪಿನ ಬಟ್ಟೆಗಳು ಲಭ್ಯ. ಕಾಶಿಯಲ್ಲಿ ತಯಾರಾದ ಕೌಶಿಕ, ಪಾಂಡ್ಯದ(ಪೌಂಡ್ರಕ) ಕ್ಷಮ ಎಂಬ ಬಟ್ಟೆಗಳಿವೆ ಎಂದು ಹೇಳಲಾಗಿದೆ. ಕೆಲಸವನ್ನು ಪಡೆಯಲು ಒಪ್ಪಂದ ಕುರಿತಾಗಿ ವಿವರಿಸುವ 12 ನೇ ಅಧ್ಯಾಯದಲ್ಲಿ ವ್ಯಾಪಾರ ಮಾರ್ಗಗಳ ಬಗೆಗೆ ಚರ್ಚಿಸುತ್ತ ‘ ದಕ್ಷಿಣಕ್ಕೆ ಸಾಗುವ ವ್ಯಾಪಾರ ಮಾರ್ಗಗಳಲ್ಲಿ ಜನ ಬಳಕೆಯ ಕಡಿಮೆ ವೆಚ್ಚದ ಸುಲಭವಾದ ಮಾರ್ಗ ಅಥವಾ ಸಾಕಷ್ಟು ಬಗೆಯ ಸರಕುಗಳನ್ನು ತೆಗೆದುಕೊಂಡು ಹೋಗಬಹುದಾದ ಮಾರ್ಗವನ್ನು ಅನುಸರಿಸಬಹುದೆಂದು ತಿಳಿಸಲಾಗಿದೆ. ವಿಶ್ಲೇಷಣೆ * ಮೆಗಸ್ತಾನಿಸ್ನ ಇಂಡಿಕಾ ಕೃತಿಯಲ್ಲಿನ ‘ಪಾಂಡೆಯ’ ಪಾಂಡ್ಯ ಎಂಬ ಶಬ್ಧದೊಂದಿಗೆ ಸಾಮ್ಯತೆ ಹೊಂದಿರುವ ಹೊರತು ತಮಿಳಗಂಗೆ ಸಂಬಂಧಿಸಿದುದು ಏನೂ ಇಲ್ಲ. * ಪೆರಿಪ್ಲಸ್ನಿಂದ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಈಜಿಪ್ತ್ ಮತ್ತು ಅರೇಬಿಯಾದೊಂದಿಗೆ ಬಿರುಸಿನ ವ್ಯಾಪಾರ ಚಟುವಟಿಕೆಗಳನ್ನು ಹೊಂದಿದ್ದವೆಂದು ಸ್ಪಷ್ಟಗೊಳ್ಳುತ್ತದೆ. ಉತ್ಖನನದಲ್ಲಿ ದಕ್ಕಿರುವ ಗ್ರೀಕ್-ರೋಮನ್ ನಾಣ್ಯಗಳಿಂದ ಇದು ಖಚಿತಗೊಂಡಿದೆ. ಈ ಕೃತಿಯಿಂದ ಆಫಿû್ರಕಾ ಮತ್ತು ಭಾರತದ ಹಲವಾರು ಬಂದರು , ಪಟ್ಟಣ , ಜನಾಂಗಗಳ ಉಲ್ಲೇಖಗಳು ದಕ್ಕುತ್ತವೆ. ಇದರಿಂದ ಯಾವುದೇ ರಾಜಕೀಯ, ಸಾಮಾಜಿಕ, ಭಾಷಿಕ ವಿವರಗಳು ದಕ್ಕುವುದಿಲ್ಲ. ಬೆರ್ಬರ ದೇಶದ ದೊರೆ ಝೋಸ್ಕೇಲ್ಸ್ ಲೋಭಿ ಮತ್ತು ಆಶೆಬುರುಕನಾದರೂ ನ್ಯಾಯಪರನಾಗಿದ್ದು ಗ್ರೀಕ್ ಸಾಹಿತ್ಯ ಅರಿತವನೆಂದು ತಿಳಿಸುತ್ತದೆ. ಇಂತಹ ವಿವರಗಳು ಬೇರೆಯವರನ್ನು ಕುರಿತಾಗಿ ದಕ್ಕಿಲ್ಲ. ನಹಪಾನ ಮತ್ತು ಸರಗನಸ ಸಂಡೆರಸ್ (ಶಾತವಾಹನ ಸಂದರೇಶ) ಹೆಸರಿನ ರಾಜನ ಹೊರತಾಗಿ ಭಾರತದಲ್ಲಿನ ಇತರ ರಾಜರನ್ನು ಹೆಸರಿಸಿಲ್ಲ. ಉಳಿದ ಪ್ರದೇಶಗಳಲ್ಲಿದ್ದ ಜನಾಂಗಗಳು ಯಾವುವೆಂದು ಈ ಕೃತಿಯಿಂದ ಗೊತ್ತಾಗುವುದೇ ಹೊರತು ಹೆಚ್ಚಿನ ಮಾಹಿತಿ ದಕ್ಕುವುದಿಲ್ಲ. ಕೆರಬೊತ್ರ ಮತ್ತು ಪಾಂಡಿಯರ ಪ್ರದೇಶಗಳನ್ನು ಹೇಳುವ ಈ ಕೃತಿ ಚೋಳ ಮತ್ತು ಸತ್ಯಪುತ್ರರ ಬಗ್ಗೆ ಏನನ್ನೂ ಹೇಳುವುದಿಲ್ಲ ನೆಲ್ಸಿಂಡಾ ಮತ್ತು ಬಕಾರೆ ಸ್ಥಳಗಳು ಪಾಂಡಿಯನ್ ರಾಜ್ಯದಲ್ಲಿವೆಯೆಂದು ತಿಳಿಸುವ ಪೆರಿಪ್ಲಸ್ ಈ ಮಾರುಕಟ್ಟೆಗಳ ರಾಜರು ಒಳನಾಡಿನಲ್ಲಿ ವಾಸಿಸುತ್ತಾರೆಂದು ಸ್ಪಷ್ಟವಾಗಿ ತಿಳಿಸುತ್ತದೆ. ಇದು ಪಾಂಡಿಯ ಎಂಬುದು ರಾಜಮನೆತನವಾಗಿರದೆ ಪ್ರದೇಶ ಸೂಚಕವಾಗಿದ್ದು , ಈ ಪ್ರದೇಶದಲ್ಲಿ ಹಲವಾರು ಸ್ವತಂತ್ರ ರಾಜರಿದ್ದುದನ್ನು ಸೂಚಿಸುತ್ತದೆ. * ಪೆರಿಪ್ಲಸ್ ಹೊರತಾಗಿ ಬೇರೆಲ್ಲ ಕೃತಿಗಳು ಭಾರತ ಕುರಿತಾಗಿ ಅನ್ಯ ಆಕರ ಮತ್ತು ಪ್ರವಾಸಿಗಳ ವಿವರಗಳನ್ನು ಆಧರಿಸಿ ರಚಿತವಾಗಿವೆ. ಇವುಗಳ ಖಚಿತತೆಯ ತೀರ್ಮಾನ ಬಹು ಕಷ್ಟಕರ. ಪಾಶ್ಚಾತ್ಯರ ಕೃತಿಗಳಿಂದ ಕೆರಬೊತ್ರ ಮತ್ತು ಪಾಂಡಿಯಗಳು ಜನ ಮತ್ತು ಪ್ರದೇಶ ಇವೆರಡರ ಸೂಚಕವಾಗಿರುವಂತೆ ಭಾಸವಾಗುತ್ತದೆ. ಇವುಗಳಲ್ಲಿ ಯಾವುವೂ ಅಶೋಕ ಹೆಸರಿಸಿರುವ ಚೋಳ , ಸತ್ಯಪುತ್ರರನ್ನು ಕುರಿತಾಗಿ ಏನನ್ನೂ ಹೇಳಿಲ್ಲ. * ಟಾಲೆಮಿ ಕೃತಿಯಿಂದ ಭಾರತದಲ್ಲಿನ ನೂರಾರು ಜನಾಂಗ, ಪಟ್ಟಣ, ಬಂದರುಗಳ ಬಗೆಗೆ ಮಾಹಿತಿಗಳು ದಕ್ಕುತ್ತವೆ. ತಮಿಳಗಂನಲ್ಲಿ ವಿಭಿನ್ನ ನಾಡುಗಳಿದ್ದವೆಂದು ಚೇರ, ಚೋಳ, ಪಾಂಡ್ಯರನ್ನೊಳಗೊಂಡಂತೆ ಹಲವಾರು ಸ್ಥಳೀಯ ರಾಜರುಗಳಿದ್ದರೆಂದು ಗೊತ್ತಾಗುತ್ತದೆ. ಆದರೆ ಇದರಲ್ಲಿ ಸತ್ಯಪುತ್ರರ ಕುರುಹಿಲ್ಲ. ಆಂಧ್ರಪ್ರದೇಶ ಮತ್ತು ಉತ್ತರಕರ್ನಾಟಕದ ಬಗ್ಗೆ ಸಮಕಾಲೀನ ಸಂಗಂ ಸಾಹಿತ್ಯದಿಂದ ದಕ್ಕದ ಸಾಕಷ್ಟು ಮಾಹಿತಿಗಳು ಇದರಿಂದ ದಕ್ಕುತ್ತವೆ. ಸಂಗಂ ಸಾಹಿತ್ಯದ ಕಾಲದಲ್ಲಿ ತಮಿಳರಿಗೆ ತಮ್ಮ ಗಡಿಯಲ್ಲಿದ್ದ ಕರ್ನಾಟಕದ ಅಲ್ಪ ಭಾಗದ ಹೊರತು ಅದರಾಚೆಗಿನ ವಿಶಾಲ ಕರ್ನಾಟಕದ ಪರಿಚಯವಿರಲಿಲ್ಲವೆನಿಸುತ್ತದೆ. ಕರ್ನಾಟಕದ ಆರಂಭಿಕ ಚರಿತ್ರೆಯನ್ನು ಸಂಗಂ ಸಾಹಿತ್ಯ ಆಧರಿಸಿ ಅರಿಯಲು ಹೊರಟಾಗ ಈ ಕೊರತೆ ಎದ್ದು ಕಾಣುತ್ತದೆ. * ವೀಲ್ಯು ಕೃತಿಯಲ್ಲಿನ ಪಾನ್ಯು=ಪಾಂಡ್ಯ ಎಂಬುದು ವಿವಾದಸ್ಪದವಾದ ಒಂದು ಊಹೆ. ಆದ್ದರಿಂದ ಪ್ರಾಚೀನ ಕಾಲದಿಂದಲೂ ಚೀನಿಯರಿಗೆ ತಮಿಳಗಂ ಬಗ್ಗೆ ಅರಿವಿತ್ತು ಎನ್ನುವುದು ರಮ್ಯ ಕಲ್ಪನೆ ಮಾತ್ರ. * ಭಾರತದಾದ್ಯಂತ ಇತಿಹಾಸದುದ್ದಕ್ಕೂ ಪಾಂಡ್ಯ , ಪಾಂಡು,ಪಾಂಡವ ಹೆಸರಿನ ಹಲವಾರು ವಂಶಗಳು ಮತ್ತು ರಾಜರುಗಳು ಪ್ರಾಚೀನ ಕಾಲದಿಂದ ಆಗಿ ಹೋಗಿದ್ದಾರೆ. ಮಹಾವಂಶದಲ್ಲಿ ಪಾಂಡುಕಾಭಯ,ಪಾಂಡುವಾಸುದೇವ ಹೆಸರಿನ ರಾಜರುಗಳಿರುವುದು ಗಮನಾರ್ಹ. ಪ್ರಾಚೀನ ಉಲ್ಲೇಖಗಳಲ್ಲಿನ ಪಾಂಡ, ಪಾಂಡ್ಯ ಎಂಬುದು ಖಚಿತವಾಗಿ ಯಾರನ್ನು ಕುರಿತಾಗಿದೆ0iÉುಂದು ತೀರ್ಮಾನಿಸುವುದು ಕಷ್ಟ. ಸಂಗಂ ಕಾಲದ ಪಾಂಡ್ಯರಿಗೆ ಸಮಕಾಲೀನರಾದ ಕರ್ನಾಟಕದ ಪಾಂಡ್ಯರು ಸಹ ಇದ್ದರು. ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಆಳುತ್ತಿದ್ದ ಭೂತಳ ಪಾಂಡ್ಯನನ್ನು (ಕ್ರಿ.ಶ. 77) ಕುರಿತಾದ ಭೂತಳ ಪಾಂಡ್ಯ ಚರಿತೆ0iÉುಂಬ ಸಂಸ್ಕೃತ ಕೃತಿಯೊಂದಿದೆ. ಆದ್ದರಿಂದ ಇವರು ಯಾರೆಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದಾಗುವುದಿಲ್ಲ. * ಅಶೋಕನ ಶಿಲಾಶಾಸನಗಳಲ್ಲಿರುವ ಸತ್ಯಪುತ್ರರ ಬಗ್ಗೆ ಪೆರಿಪ್ಲಸ್ ಸೇರಿದಂತೆ ಯಾವುದೇ ಕೃತಿ ಏನನ್ನೂ ಹೇಳುವುದಿಲ್ಲ. ಭಾರತೀಯ ಮೂಲದ ಅರ್ಥಶಾಸ್ತ್ರ ಮತ್ತು ಮಹಾವಂಶಗಳಲ್ಲಿ ಚೋಳ, ಚೇರ,ಸತ್ಯಪುತ್ರ ಉಲ್ಲೇಖಗಳಿಲ್ಲ. ಇದರಲ್ಲಿ ಕೇವಲ ‘ಪಾಂಡ’’ಪಾಂಡ್ಯ’ ಸಾಮ್ಯದ ಹೆಸರುಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಎಲ್ಲ ಜನಾಂಗಗಳ ಭಾಷೆ,ನೆಲೆ ನಿರ್ಧರಿತವಾದಂತೆ ಕಾಣುವುದಿಲ್ಲ. * ಕೌಟಿಲ್ಯನಿಗೆ ದಮಿಳಸ್ವಾಮಿ ಎಂಬ ಪರ್ಯಾಯ ಹೆಸರಿದ್ದಿತೆಂದು ಈತ ಪ್ರಾಚೀನ ತಮಿಳಗಂಗೆ ಸೇರಿದ ಈಗಿನ ಕೇರಳದ ಮಲಬಾರ್ ಪ್ರದೇಶಕ್ಕೆ ಸೇರಿದವನೆಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ತನ್ನ ಕಾಲದಲ್ಲಿದ್ದ ಎಲ್ಲ ವಿವರಗಳನ್ನು ಉತ್ಸಾಹದಿಂದ ಅರ್ಥಶಾಸ್ತ್ರದಲ್ಲಿ ದಾಖಲಿಸಿರುವ ಕೌಟಿಲ್ಯ ತಮಿಳಗಂ ಬಗೆಗಾಗಲಿ ಅಥವಾ ಅಲ್ಲಿದ್ದ ಜನಾಂಗ , ಭಾಷೆ ,ರಾಜರುಗಳ ಬಗೆಗೆ ಮೌನವಾಗಿರುವುದು ಇಂತಹ ಅಭಿಪ್ರಾಯಕ್ಕೆ ವಿರುದ್ಧವಾಗಿರುವುದಲ್ಲದೆ ತಮಿಳಿನ ಪ್ರಾಚೀನತೆಯ ಚರ್ಚೆಗೆ ಕಾಲದ ಗಡಿಯನ್ನು ಒದಗಿಸಿದೆ. * ಮೇಲಿನ ಎಲ್ಲ ವಿವರಗಳಿಂದ ಇತರ ಜನಾಂಗ ಮತ್ತು ಪ್ರದೇಶಗಳಂತೆ ತಮಿಳಗಂ ಮತ್ತು ಅದರ ಪ್ರದೇಶಗಳ ಬಗೆಗೆ ಉಲ್ಲೇಖಗಳು ದಕ್ಕಿ ತಮಿಳು ಜನಾಂಗದ ಪ್ರಾಚೀನತೆ ಸ್ಪಷ್ಟವಾಗುತ್ತದೆ0iÉುೀ ಹೊರತು ಅವರು ದಕ್ಷಿಣದ ಬೇರೆ ಜನಾಂಗಗಳಿಗಿಂತ ಮುಂದುವರೆದಿದ್ದರೆಂದು ಖಚಿತಪಡಿಸುವ ಅಥವಾ ಪ್ರಬಲ ಸಾಮ್ರಾಜ್ಯ ಸ್ಥಾಪಿಸಿದ ಅಥವಾ ಉನ್ನತ ಸಾಹಿತ್ಯ, ಸಂಸ್ಕೃತಿ ಸೃಷ್ಟಿಸಿದ ಅಥವಾ ಭಾಷಿಕವಾದ ಯಾವುದೇ ಕುರುಹುಗಳು ದಕ್ಕುವುದಿಲ್ಲ. ಸಂಗಂ ಸಾಹಿತ್ಯದಲ್ಲಿ ಆರಂಭ ಕಾಲದ ತಮಿಳುನಾಡಿನ ಜನಜೀವನ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಕುರಿತಾದಂತೆ ಮಾಹಿತಿ ನೀಡುವ ಮತ್ತೊಂದು ಆಕರವೆಂದರೆ ಸಂಗಂ ಸಾಹಿತ್ಯ. ಈ ಸಾಹಿತ್ಯದಲ್ಲಿ ಆರಂಭಿಕ ಕಾಲದ ಚೇರ,ಚೋಳ,ಪಾಂಡ್ಯರಂತಹ ಪ್ರಮುಖರೊಂದಿಗೆ ಹಲವಾರು ಸಣ್ಣ ಪುಟ್ಟ ಅರಸರ ,ಕೀಳಾರ್,ವೇಳಿರ್ಗಳ, ಸೇನಾನಾಯಕರ, ಪಾಳೇಗಾರರ ನೂರಾರು ಹೆಸರುಗಳು ಲಭ್ಯವಾಗುತ್ತವೆ. ಈ ಸಾಹಿತ್ಯದಲ್ಲಿ ದಕ್ಕುವ ರಾಜರುಗಳನ್ನು ಐತಿಹಾಸಿಕ ಕಾಲಾನುಕ್ರಮಣಿಕೆಯಲ್ಲಿ ಜೋಡಿಸಲು ಸಾಧ್ಯವಾಗಿಲ್ಲ. ಕೆ.ಎನ್. ಶಿವರಾಜ ಪಿಳ್ಳೆಯವರು ತಮ್ಮ ‘ದಿ ಕ್ರೋನಾಲಜಿ ಆಫ್ ದಿ ಅರ್ಲಿ ತಮಿಳ್ಸ್ ಕೃತಿಯಲ್ಲಿ ಸಂಗಂ ಸಾಹಿತ್ಯದ ಆಧಾರಧ ಮೇಲೆ ತಮಿಳುನಾಡಿನ ಆರಂಭಿಕ ಕಾಲದ ರಾಜವಂಶಗಳ ಕಾಲ ಹಾಗೂ ತಲೆಮಾರುಗಳನ್ನು ನಿರ್ಧರಿಸಲು ಯತ್ನಿಸಿದ್ದಾರಾದರೂ ಅದರಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿಲ್ಲ. ಚೇರ , ಚೋಳ ಮತ್ತು ಪಾಂಡ್ಯರನ್ನು ಕ್ರಿ.ಶ. ಆರಂಭದ್ದೆಂದು ಭಾವಿಸಲಾದ ಸಂಗಂ ಸಾಹಿತ್ಯದ ಕಾಲದವರು ಮತ್ತು ಆರನೇ ಶತಮಾನದ ನಂತರದ ಕಾಲದವರೆಂದು ಗುರುತಿಸಬಹುದು. ಮೊದಲ ಅವಧಿಯಲ್ಲಿದ್ದ ವಂಶಗಳನ್ನು ಆದಿವಂಶಗಳೆಂದು ನಂತರದ ಅವಧಿಯಲ್ಲಿದ್ದವರನ್ನು ಮಧ್ಯಕಾಲೀನ ವಂಶಗಳೆಂದು ಕರೆಯಬಹುದು. ಮಧ್ಯಕಾಲೀನ ಚೇರ,ಚೋಳ,ಪಾಂಡ್ಯರನ್ನು ಕುರಿತಾಗಿ ವಿಪುಲವಾದ ಐತಿಹಾಸಿಕ ದಾಖಲೆಗಳು ಲಭ್ಯ. ಆದರೆ ಆದಿಕಾಲದ ಈ ವಂಶಗಳನ್ನು ಕುರಿತಾಗಿ ಸಂಗಂನಂತಹ ಸಾಹಿತ್ಯ ಮೂಲದ ಮಾಹಿತಿಗಳು ದಕ್ಕುವುವೇ ಹೊರತು ಚಾರಿತ್ರಿಕ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಆದ್ದರಿಂದ ಈ ಕಾಲದ ಇಡೀ ಚರಿತ್ರೆಯೇ ಅಸ್ಪಷ್ಟವಾಗಿದೆ. ಸಂಗಂ ಸಾಹಿತ್ಯದಿಂದ ದಕ್ಕುವ ಮಾಹಿತಿಯಿಂದ ಆರಂಭಕಾಲದ ಖ್ಯಾತರಾದ ತಮಿಳು ಅರಸರನ್ನು ಹಾಗೂ ಅವರ ಸಾಮಥ್ರ್ಯ ಮತ್ತು ಹೆಗ್ಗಳಿಕೆಗಳನ್ನು ಕುರಿತಾದ ಸಂಕ್ಷಿಪ್ತ ವಿವರಗಳನ್ನು ಮುಂದೆ ಕಾಣಬಹುದು. ಆದಿ ಚೇರರು ಆದಿ ಚೇರರು ಈಗಿನ ಕೇರಳ ಮತ್ತು ತಮಿಳುನಾಡಿನ ಪೂರ್ವ ಕೊಯಂಬತ್ತೂರು,ಈರೋಡ್,ಕರೂರು ಹಾಗೂ ಸೇಲಂ ಪ್ರದೇಶಗಳನ್ನು ಅಳುತ್ತಿದ್ದರು. ಇದು ಕೊಂಗು ನಾಡು ಎಂದು ಹೆಸರಾಗಿದ್ದಿತು. ಇವರು ಈಜಿಪ್ತ್ ,ರೋಮ್,ಗ್ರೀಕ್ ದೇಶಗಳೊಂದಿಗೆ ದಂತ, ಮಸಾಲೆ ಪದಾರ್ಥ ಮತ್ತು ಮುತ್ತು ರತ್ನಗಳ ವ್ಯಾಪಾರ ವಹಿವಾಟನ್ನು ಹೊಂದಿದ್ದರು. ಸಂಗಂ ಸಾಹಿತ್ಯದ ಎಟ್ಟುತ್ತೊಕ್ಕೈನ ಪದಿರುಪ್ಪತ್ತು (ಹತ್ತರ ಹತ್ತು) ಸಂಗ್ರಹದಲ್ಲಿ ಹತ್ತು ಚೇರ ದೊರೆಗಳನ್ನು ಉಲ್ಲೇಖವಿದೆ. ಇವರಲ್ಲಿ ಪ್ರತಿಯೊಬ್ಬರನ್ನು ಹತ್ತು ಹಾಡುಗಳಲ್ಲಿ ಹೊಗಳಲಾಗಿದೆ. ವಂಚಿ ಚೇರರ ರಾಜಧಾನಿಯಾಗಿದ್ದಿತು. ಕೆಲ ಇತಿಹಾಸಕಾರರು ಇದನ್ನು ಈಗಿನ ಕೇರಳದ ತ್ರಿಶೂರ್ ಜಿಲ್ಲೆಯ ಕೋಡುಂಗಲ್ಲೂರು ಎಂತಲೂ ಉಳಿದವರು ಈಗಿನ ಕರೂರು ಎಂದು ನಿರ್ಧರಿಸಿದ್ದಾರೆ. ಬಿಲ್ಲು-ಬಾಣ ಇವರ ಲಾಂಚನ. ತಮಿಳು ಸಾಹಿತ್ಯದಲ್ಲಿ ಉಲ್ಲೇಖಿತನಾಗಿರುವ ಚೇರ ದೊರೆಗಳಲ್ಲಿ ಮೊದಲನೆಯವನೆಂದರೆ ಉದಿಯನ್ ಚೇರಳ್. ಶಿಲಪ್ಪದಿಕಾರಂ ಕೃತಿಯಲ್ಲಿ ಕನ್ನಗಿ ಶಾಪವಿತ್ತು ಮಧುರೈನ್ನು ಭಸ್ಮಗೊಳಿಸಿದ ಸಂಗತಿಯನ್ನು ಪರಿಗಣಿಸಿ ಈತನ ಕಾಲವನ್ನು ಶೇಷ ಅಯ್ಯರ್ ಕ್ರಿ.ಶ. 17 ಎಂದು ನಿರ್ಧರಿಸಿದ್ದಾರೆ. ಆದರೆ ನೀಲಕಂಠ ಶಾಸ್ತ್ರಿಗಳು ಗಜಬಾಹು ಸಮಕಾಲೀನತೆಯನ್ನು ಆಧಾರವಾಗಿರಿಸಿಕೊಂಡು ಕ್ರಿ.ಶ. 130 ಎಂದು ನಿರ್ಧರಿಸಿದ್ದಾರೆ. (ನೋಡಿರಿ : ಗಜಬಾಹು ಸಮಕಾಲೀನತೆ) ಉತಿಯನ್ ಚೇರಳ್ : ಈತ ಶ್ರೀಮಂತ ನಾಡಿನ ಒಡೆಯನಾಗಿದ್ದನು. ವೆಳಿಯನ್ ವೆನ್ಮಾನ್ ಮಗಳಾದ ನಳ್ಳಿನಿ ಈತನ ರಾಣಿ. ಈತನ ಕಾಲದಲ್ಲಿ ವಿದೇಶಿ ವರ್ತಕರ ನಾವೆಗಳು ಆಳ ಸಮುದ್ರದಲ್ಲಿ ಬಂದು ನಿಂತಾಗ ಸಣ್ಣ ದೋಣಿಗಳಲ್ಲಿ ತೀರದೆಡೆಗೆ ಸರಕುಗಳನ್ನು ಸಾಗಿಸಲಾಗುತ್ತಿತ್ತು. ಈತ ಮಹಾಭಾರತ ಯುದ್ಧದಲ್ಲಿ ಪಾಂಡವ ಕೌರವರಿಬ್ಬರಿಗೂ ಆಹಾರ ಸರಬರಾಜು ಮಾಡಿದನೆಂದು ಹೊಗಳಲಾಗಿದೆ. ನಿಷ್ಟಾವಂತ ಮಂತ್ರಿಗಳಿಂದ ಶೋಭಿತನಾದ ಉದಿಯನ್ ಚೇರಳ್ ವೇದೋಕ್ತ ಬಲಿಗಳಿಗೆ ಆಶ್ರದಾತನಾಗಿದ್ದನು. ಪೂರ್ವ-ಪಶ್ಚಿಮ ತೀರಗಳ ನಡುವೆ ಈತನ ನಾಡು ಹರಡಿದ್ದಿತು. ಈತನಿಗೆ ವಣವರಂಬನ್ ಎಂಬ ಬಿರುದಿದ್ದಿತು. ಕಾವ್ಯಪ್ರೇಮಿಯೂ, ಕಲಾಪೋಷಕನೂ ಆಗಿದ್ದನು. ಈತನ ಗಜ ಹಾಗೂ ಅಶ್ವದಳಗಳು ಬಹು ಮನ್ನಣೆ ಗಳಿಸಿದ್ದವು. ನೆಡುಂಚೇರಳ್ ಅಡನ್ : ಈತ ಉದಿಯನ್ ಚೇರಳ್ನ ಮಗ. ತನ್ನ ಸಾಮ್ರಾಜ್ಯವನ್ನು ಹಿಮಾಲಯದವರೆಗೆ ವಿಸ್ತರಿಸಿ ಹಿಮಾಲಯದ ಪರ್ವತದ ಮೇಲೆ ಚೇರಲಾಂಛನವನ್ನು ಕೆತ್ತಿಸಿ ‘ಇಮಯಂವರಂಬನ್’ ಹೆಸರಿನಿಂದ ಖ್ಯಾತನಾದನು. ಈತನ ಸಾಮ್ರಾಜ್ಯ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಹಬ್ಬಿದ್ದಿತು. ನನ್ನನ್ ವಶದಲ್ಲಿದ್ದ ಬಂಗಾರ ಲಬ್ಧ ಕೊಂಗಣವನ್ನು ಈತ ವಶಪಡಿಸಿಕೊಂಡನು.ಳೀ ಕುರಿತಾಗಿ ಹಲವಾರು ಕವಿಗಳು ಹಾಡಿ ಹೊಗಳಿದ್ದಾರೆ. ಈತ ಯವನರನ್ನು ಹತೋಟಿಯಲ್ಲಿರಿಸಿ ತಿರುಗಿಬಿದ್ದವರನ್ನು ಸೆರೆಯಲ್ಲಿರಿಸಿದ್ದನು. ಉಂಬರಕಾಡುವಿನಲ್ಲಿನ 500 ಹಳ್ಳಿಗಳನ್ನು ಹಾಗೂ ಅನಘ್ರ್ಯ ರತ್ನಗಳನ್ನು ಈತ ದೇವಾಲಯಗಳಿಗೆ ದತ್ತಿ ಇತ್ತನು. ಪಲ್ಯಾಣೈ ಸೆಲ್ಕೆಳು ಕುಟ್ಟುವನ್ : ಈತ ನೆಡುಂಚೇರಲ್ ಅಡನ್ನ ಸೋದರ . ಅಯಿರಿ ಮಲೆಯ ಪುಲಿನಾಡಿನ ದೊರೆ. ಈ ಪ್ರದೇಶವನ್ನು ಶೇಷ ಅಯ್ಯರ್ ಕೇಂದ್ರ ತಿರುವಾಂಕೂರಿನ ಜಾಗವೆಂದು ಗುರುತಿಸಿದ್ದಾರೆ. ಈತ ಕೊಂಗುನಾಡಿನ ಮೇಲೆ ವಿಜಯ ಸಾಧಿಸಿದನಲ್ಲದೆ ವೈದಿಕ ಧರ್ಮದ ಅಶ್ರಯದಾತನಾಗಿದ್ದನು. ಪಾಲೈ ಗ್ರಾಮದ ಗೌತಮ ಹತ್ತು ಯಾಗಗಳನ್ನು ನೆರವೇರಿಸಲು ನೆರವಾದನು. ಈತ ಕೊಳ್ಳಿ ಹಾಗೂ ಪಕ್ಕೂರು ಪ್ರಾಂತದ ಮಲವರ ನಾಯಕನೆಂದು ಗುರುತಿಸಲ್ಪಟ್ಟಿದ್ದಾನೆ. ನೆಡುಂಪರದಾಯರ್ ಈತನ ಮಂತ್ರಿ. ಈತನ ರಾಜ್ಯ ಪೂರ್ವ ತೀರದಿಂದ ಪಶ್ಚಿಮ ತೀರದವರೆಗೆ ಹಬ್ಬಿದ್ದಿತು. ಗಜದಳವನ್ನು ಬಲಪಡಿಸಿದ ಈತ ಅಯಿರಿಯಲ್ಲಿನ ದುರ್ಗೆಯ ಆರಾಧಕನಾಗಿದ್ದನು. ನಾರ್ಮುಡಿ ಚೇರಳ್ : ಚಿನ್ನದಿಂದ ಮಾಡಿದ ವಿಶಿಷ್ಟ ಕಿರೀಟ (ಕಲಂಗೈ) ಧರಿಸುತ್ತಿದ್ದ ಈತ ಕಲಂಕಾಯ್ಕಣ್ಣಿ ನಾರ್ಮುಡಿ ಚೇರಳ್ ಎಂದು ಖ್ಯಾತನಾದನು. ಇಮಯವರುಂಬನ್ ನೆಡುಂಚೇರಳ್ನ ಪುತ್ರನಾಗಿದ್ದ ಈತ ತಗಡೂರಿನ ಅಂಜಿ ಮತ್ತು ಪುಲಿನಾಡಿನ ನನ್ನನ್ ಮೇಲೆ ವಿಜಯ ಸಾಧಿಸಿದನು. ಈತ ಪೂಜಿಸುತ್ತಿದ್ದ ವಿಷ್ಣುವಿನ ದೇವಸ್ಥಾನ ತಿರುವನಂತಪುರನಲ್ಲಿರುವುದಾಗಿ ಗುರುತಿಸಲಾಗಿದೆ. ನಾರ್ಮುಡಿ ಚೇರಳ್ ಕವಿ ಕಾಪ್ಪಿಯನಾರ್ಗೆ ನಲವತ್ತು ಲಕ್ಷ ಚಿನ್ನದ ನಾಣ್ಯಗಳನ್ನು ಕೊಟ್ಟಿದುದಾಗಿ ಪದಿರುಪ್ಪತ್ತುವುನಲ್ಲಿ ಹೇಳಲಾಗಿದೆ. ಸೆಂಗುಟ್ಟವನ್ : ತಂದೆ ಇಮಯವರುಂಬನ್ ಮತ್ತು ಚೋಳ ರಾಜಕುಮಾರಿ ಮನಕ್ಕಿಳ್ಳಿ ಈತನ ತಾಯಿ. ಸೆಂಗುಟ್ಟವನ್ ಚೇರರಲ್ಲಿ ಅತ್ಯಂತ ಖ್ಯಾತ ದೊರೆ. ನನ್ನನ್ ವೆಲ್ಮಾನ್ನನ್ನು ವಿಯಲೂರಿನಲ್ಲಿ ಜಯಿಸಿದ ಈತ ನದಿಯನ್ನು ದಾಟಿ ಕೋಡುಕ್ಕೂರನ್ನು ವಶಪಡಿಸಿಕೋಂಡು ಪಾಳೈಯಾನ್ನನ್ನು ಸೋಲಿಸಿದನು. ಈತನ ಭಾವ ಕಿಳ್ಳಿಯ ವಿರುದ್ಧ 9 ಜನ ಚೋಳ ರಾಜಕುಮಾರರು ಯುದ್ಧ ಮಾಡಿದ್ದರು. ಸೆಂಗುಟ್ಟವನ್ ಇವರೆಲ್ಲರನ್ನು ಮಣಿಸಿದನಲ್ಲದೆ ಸಮುದ್ರದಲ್ಲಿ ಯವನರನ್ನು ಬಗ್ಗು ಬಡಿದು ಕಡಲ್ ಪಿರಕ್ಕೋಟ್ಟಿಯ ಎಂಬ ಬಿರುದನ್ನು ಪಡೆದನು. ಕೊಂಗರ ವಿರುದ್ಧ ಈತ ಜಯ ಸಾಧಿಸಿದನು. ಈತನ ಕಾಲದಲ್ಲಿ ಯವನರು ದೊಡ್ಡ ಹಡುಗುಗಳಲ್ಲಿ ಮುಸಿರಿಗೆ ಬರುತ್ತಿದ್ದರಲ್ಲದೆ ಚಿನ್ನಕ್ಕೆ ಬದಲಾಗಿ ಮಸಾಲೆ ಹಾಗೂ ಮೆಣಸನ್ನು ಖರೀದಿಸಿ ಒಯ್ಯುತ್ತಿದ್ದರು. ಸಾತಕಣ್ಣಿಯ ಮನವಿಯ ಮೇರೆಗೆ ಸೆಂಗುಟ್ಟವನ್ ಆತನ ಉತ್ತರಾಪಥದ ವಿಜಯ ಯಾತ್ರೆಗೆ ನೆರವಾದನು. 55 ವರ್ಷಗಳ ಕಾಲ ಆಳಿದ ಈತ ಕನ್ನಗಿಗಾಗಿ ದೇವಾಲಯವನ್ನು ನಿರ್ಮಿಸಿದನು. ವಿದ್ಯಾಭಿಮಾನಿಯೂ,ಕಲಾಪ್ರೇಮಿಯೂ ಆಗಿದ್ದ ಸೆಂಗುಟ್ಟವನ್ ಕವಿ ಪರನಾರ್ಗೆ ಉಂಬರಕಾಡನ್ನು ಉಂಬಳಿಯಾಗಿತ್ತನು. ಅದುಕೋಟಪತ್ತು ಚೇರಲತನ್ : ಈತ ಇಮಯವರಂಬನ್ನ ಇನೊಬ್ಬ ಮಗ ಮತ್ತು ನಾರ್ಮುಡಿ ಚೇರಳ್ನ ಸೋದರ. ಈತ ದೇಶದ ನಾನಾ ಭಾಗದಲ್ಲಿದ್ದ ಶ್ರೇಷ್ಟರನ್ನು ಕರೆಸಿ ಗೌರವಿಸುತ್ತಿದ್ದನು.ಈತನ ರಾಜ್ಯ ನರವು ಬಂದರಿನಾಚೆಗೆ ವಿಸ್ತರಿಸಿದ್ದಿತು. ಈ ನರವು ಬಂದರನ್ನು ಪೆರಿಪ್ಲಸ್ ಆಫ್ ಎರಿಥ್ರಿಯನ್ ಸೀ ಕೃತಿಯಲ್ಲಿ ನೌವುದ ಎಂದು, ಪ್ಲಿನಿಯಿಂದ ನಿತ್ರಾ ಎಂದು ಕರೆಯಲ್ಪಟ್ಟಿದೆ. ಇದನ್ನು ಮಂಗಳೂರು ಬಂದರು ಎಂದು ಗುರುತಿಸಲಾಗಿದೆ. ಕರಿಕಾಲ ಚೋಳನ ವೈರಿಯಾದ ಚೇರಮಾನ್ ಪೆರುಂಚೇರಳ್ ಅದನ್ ಈತನೆಂದು ಗುರುತಿಸಲಾಗಿದೆ. 38 ವರ್ಷಗಳ ಕಾಲ ಆಳಿದ ಈತ ವೆಣ್ಣೀ ಕದನದಲ್ಲಿ ಸೋತು ಮಡಿದನು. ಕವಯತ್ರಿ ನಾಚೆಲ್ಲಿಯಾರ್ಗೆ ಈತ ಸುವರ್ಣ ದಾನ ಮಾಡಿದನೆಂದು ಹೊಗಳಲ್ಪಟ್ಟಿದ್ದಾನೆ. ಸೆಲ್ವ ಕಡುಂಗೋ ವಲಿಯಾತನ್ ಕುಟ್ಟುವನ್ ಇರುಂಪೊರೈ : ಅಂತುವನ್ನ ಮಗನಾದ ಈತನನ್ನು ಕುರಿತಾಗಿ ಕವಿ ಕಪಿಲಾರ್ ಹಾಡಿದ್ದಾನೆ. ವೈದಿಕ ಧರ್ಮಾಭಿಮಾನಿಯಾಗಿದ್ದ ಈತ ಯಾಗ ಪರಿಸಮಾಪ್ತಿಯ ಸಮಯದಲ್ಲಿ ಓಂಕಟೂರು ಹಳ್ಳಿಯನ್ನು ತನ್ನ ಇಷ್ಟ ದೈವವಾದ ವಿಷ್ಣು ದೇವಸ್ಥಾನಕ್ಕೆ ನೀಡಿದನು. ಕವಿ ಕಪಿಲಾರ್ಗೆ ಒಂದು ಲಕ್ಷ ಚಿನ್ನದ ನಾಣ್ಯ ಹಾಗೂ ಬೆಟ್ಟದ ತುದಿಯ ಮೇಲೆ ನಿಂತಾಗ ಕಾಣುವಷ್ಟು ಭೂಪ್ರದೇಶವನ್ನು ಇತ್ತುದಾಗಿ ತಿಳಿದು ಬರುತ್ತದೆ. ಕವಿಪ್ರಿಯನಾಗಿದ್ದ ಈತನಿಗೆ ಮಂತರಂ ಪೊರೈಯನ್ ಕಡುಂಗೋ ಪಸುಂಪತ್ ಪೊರೈಯನ್ ಹಾಗೂ ಪೆರುಂಪತ್ ಪೊರೈಯನ್ ಎಂಬ ಹೆಸರುಗಳು ಇದ್ದುವೆಂದು ತಿಳಿಯಲಾಗಿದೆ. 25 ವರ್ಷಗಳ ರಾಜ್ಯವಾಳಿದ ಈತ ಚಿಕ್ಕರಪಳ್ಳಿಯಲ್ಲಿ ಮೃತನಾದನು. ಮಂಗುಳಂ ಶಿಲಾಶಾಸನದಲ್ಲಿ ಉಕ್ತನಾಗಿರುವ ಕೋ ಅತನ್ ಸೆಲ್ಲಿರುಂಪೊರೈ ಈತನೆಂದು ಭಾವಿಸಲಾಗಿದೆಯಾದರೂ ಖಚಿತವಾಗಿ ಈತನೆ ಎಂದು ಹೇಳಲಾಗಿಲ್ಲ. ಪೆರುಂಚೇರಳ್ ಇರುಂಪೊರೈ : ಈತ ಸೆಲ್ವಕಡುಂಗೋ ಮಗ. ಕೊಳ್ಳಿಕುರ್ರಂ ಸನಿಹದ ನಿರ್ಕೂರಿನ ಹತ್ತಿರ ಅತಿಯಾನ್ ಪಾಳೆಯಗಾರನನ್ನು ಸೋಲಿಸಿದನು. ತಗಡೂರು ಹಾಗೂ ನೊಚ್ಚಿಯ ರಾಜರು ಈತನಿಗೆ ಶರಣಾದರು. ತನ್ನ ಸಿಂಹಾಸನ, ಒಂಬತ್ತು ಲಕ್ಷ ಕಣಂ ಹಾಗೂ ಅರಮನೆಯನ್ನು ಕವಿ ಅರಿಸಿಲ್ ಕಿಲಾರನಿಗೆ ಉಡುಗೊರೆಯಾಗಿತ್ತನು. ಆದರೆ ಕವಿ ಇವೆಲ್ಲವನ್ನೂ ರಾಜನಿಗೆ ಹಿಂದಿರುಗಿಸಿ ಅವನಡಿಯಲ್ಲಿ ಮಂತ್ರಿಯಾಗಿ ಸೇವೆಸಲ್ಲಿಸಿದನು. ಕೊಡೈಮರ್ಬ ಎಂದು ಹೆಸರಾಗಿದ್ದ ಈತ 17 ವರ್ಷಗಳ ಕಾಲ ರಾಜ್ಯವಾಳಿದನು. ಇಳಂಚೇರಳ್ ಇರುಂಪೊರೈ : ಈತ ಸೆಲ್ವಕಡುಂಗೋ ಮತ್ತು ಮೈಯೂರು ಕಿಳನ್ ವೆನ್ಮಾಲ್ ಅಂತುವನ್ ಮಗಳಾದ ಪದುಮನ್ ದೇವಿಯರ ಮಗ. ಈತ ವಿಚ್ಚಿ , ವಿಟ್ಟಿಯ ಇಳಂ ಪಾಳೈಯಾನ್, ಪೆಟ್ಟಿಯ ಪೆರುಂ ಚೋಳರನ್ನು ಸೋಲಿಸಿದನು. ವಂಚಿ ಮತ್ತೂರು ಮತ್ತು ಇನ್ನಿತ ಐದು ಕೋಟೆಗಳನ್ನು ಗೆದ್ದು , ಮಂತ್ರಿಯಾದ ಮೈಯೂರು ಕೀಳನ್ ನೆರವಿನಿಂದ ವಂಚಿಯಿಂದ ಚಮಕ್ಕ ಭೂತವನ್ನು ಕರೆತಂದನು. 32000 ಕಣಂ ನಾಣ್ಯ, ಭೂಮಿ ಮತ್ತು ಹಳ್ಳಿಗಳನ್ನು ನೀಡಿದನು. ತೊಂಡಿ , ಕೊಂಗ, ಕುಟ್ಟುವರ್, ಪುಲಿನಾಡಿನ ಅಧಿಪತಿಯಾಗಿದ್ದ ಈತ 16 ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಪಾಳೈ ಪಡಿಯ ಪರುಮಕಡುಂಕೋ : ವಂಚಿಯನ್ನು ಆಳುತಿದ್ದ ಈತ ಪಾಂಡ್ಯ ದೊರೆಯ ಸ್ನೇಹಿತನಾಗಿದ್ದನು. ಸೆಂಗುಟ್ಟವನ್ ಹಿಂದಿನ ಕಾಲದಲ್ಲಿದ್ದ ಈತ ಸ್ವಯಂ ಕವಿಯಾಗಿದ್ದನು. ಪುಗಳೂರಿನ ಶಾಸನೋಕ್ತನಾದ ಪರಮಕಡುಂಗೋ ಈತನಾಗಿರಬಹುದೆಂದು ಭಾವಿಸಲಾಗಿದೆ ಸಂಗಂ ಕಾಲದ ರಾಜರುಗಳಲ್ಲಿ ಅತ್ಯಂತ ಪ್ರಬಲರಾಗಿದ್ದವರೆಂದರೆ ಚೇರರು. ತಿರುಚಿರಾಪಳ್ಳಿ ಜಿಲ್ಲೆಯ ಕರೂರಿನಿಂದ ಮುಶಿರಿಯವರೆಗೆ ಇವರ ರಾಜ್ಯ ಹಬ್ಬಿದ್ದಿತು. ಶಾತವಾಹನರೊಂದಿಗೆ ಇವರಿಗೆ ಸಂಪರ್ಕವಿದ್ದಿತು. ಚೇರರ ವಶದಲ್ಲಿದ್ದ ಪಶ್ಚಿಮ ಕರಾವಳಿ ಪೂರ್ವ ಕರಾವಳಿಗಿಂತ ಹೆಚ್ಚು ಕ್ರಿಯಾಶೀಲವಾಗಿದ್ದು ಹೆಚ್ಚಿನ ಬಂದರುಗಳನ್ನು ಹೊಂದಿದ್ದು ರೋಮ್,ಗ್ರೀಕ್ನೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದು ಪಶ್ಚಿಮ ತೀರದ ಮುಶಿರಿ ಈ ವ್ಯಾಪಾರದ ಹೆಬ್ಬಾಗಿಲಾಗಿದ್ದಿತು. ಬಂಡಾರ್ ಹಾಗೂ ಕೋಡುಮಣಂ ಮುತ್ತು,ಹವಳಕ್ಕೆ ಪ್ರಸಿದ್ಧವಾಗಿದ್ದವು. ಬೇರೆಲ್ಲ ತಮಿಳು ದೊರೆಗಳಿಗಿಂತ ಇವರು ಯವನರೊಂದಿಗೆ ಹೆಚ್ಚು ಸಂಪರ್ಕ ಹೊಂದಿರುವುದನ್ನು ಸಂಗಂ ಸಾಹಿತ್ಯ ತಿಳಿಸುತ್ತದೆ. ಪುಗಳೂರಿನ ಶಿಲಾಶಾಸನದಲ್ಲಿ ಕರೂರಿನ ಚಿನ್ನದ ವ್ಯಾಪಾರಿಗಳ ಉಲ್ಲೇಖವಿದೆ. ಆದ್ದರಿಂದ ಇಂತಹ ವ್ಯಾಪಾರ ಹೊಂದಿದ್ದ ಚೇರರು ತಮ್ಮದೇ ಆದ ನಾಣ್ಯಗಳನ್ನು ಹಾಕಿಸಿರಬೇಕೆಂದು ಸಂಶಯಿಸಲಾಗಿದೆ. ವಿಶ್ಲೇಷಣೆ * ಆದಿಚೇರರನ್ನು ಕುರಿತಾಗಿ ಸಂಗಂ ಸಾಹಿತ್ಯ ಹೊರತಾಗಿ ಬೇರೆ ಯಾವುದೇ ಖಚಿತವಾದ ಐತಿಹಾಸಿಕ ಸಾಕ್ಷ್ಯಗಳು ದಕ್ಕಿಲ್ಲ. ಸಂಗಂ ಸಾಹಿತ್ಯದಲ್ಲಿ ಕೇರಳ ಪ್ರದೇಶದ ಜನರನ್ನು ಮಲಯರ್ ಎಂದು ಕರೆಯಲಾಗಿದೆ. ಅಲ್ಲಿ ಎಲ್ಲಿಯೂ ಈ ಪ್ರದೇಶದ ಜನರನ್ನು ಚೇರಪುತ್ರರೆಂದು ಕರೆದಿಲ್ಲ. ಆದರೆ ಇಲ್ಲಿನ ದೊರೆಗಳು ತಮ್ಮನ್ನು ಚೇರಳ್, ಕುಟ್ಟುವನ್,ಇರಂಪೊರೈ,ಕೊಳ್ಳಿಪುರೈ,ಅಥನ್,ಕೊಥೈ , ಮಕೋಥೈ, ಅತಿಯಾನ್,ಚೇರಮನ್, ಕೊಂಗರಸ ಎಂದು ಕರೆದುಕೊಳ್ಳುತ್ತಿದ್ದರು. ಮಧ್ಯಕಾಲೀನ ಚೇರರು ಶಿಲಾಶಾಸನಗಳಲ್ಲಿ ತಮ್ಮನ್ನು ಅಯಿ, ಒರಿ ಎಂದು ಕರೆದುಕೊಂಡಿದ್ದಾರೆ. ಆದ್ದರಿಂದ ಚೇರಪುತ್ರ>ಕೆರಪುತೋ>ಕೆರಬೊತ್ರ>ಕೆಲಾಲಬೊತ್ರ ಎಂಬುದು ಪ್ರದೇಶದಿಂದ ಜನರಿಗೆ ಬಂದ ಹೆಸರೋ ಅಥವಾ ಜನರಿಂದ ಪ್ರದೇಶಕ್ಕೆ ಬಂದುದೋ ಸ್ಪಷ್ಟವಾಗುವುದಿಲ್ಲ. ಚೇರಮಗನ್>ಚೇರಪುತ್ರ>ಕೇರಪುತ್ರ>ಕೆರಪುತ ರೂಪ ತಾಳಿದೆ0iÉುಂದು ಕೆಲ ವಿದ್ವಾಂಸರು ಸೂಚಿಸಿದ್ದಾರೆ. * ಪೆರಿಪ್ಲಸ್ ಆಫ್ ಎರಿಥ್ರಿಯನ್ ಸೀ ಮತ್ತು ಟಾಲೆಮಿಯ ‘ಜಿಯೋಗ್ರಫಿûಯಾ’ ಗ್ರಂಥಗಳಿಂದ ಕ್ರಿ.ಶ. 1-3 ನೆ ಶತಮಾನದ ಅವಧಿಯಲ್ಲಿ ಗುಜರಾತ್ನ ಬರುಗಚ್ಛದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಮತ್ತು ಪೂರ್ವ ಕರಾವಳಿ ಮೂಲಕ ಗ್ರೀಕ್-ರೋಮನ್ರು ಭಾರತದ ಹಲವಾರು ಸ್ಥಳೀಯ ಸಂಸ್ಥಾನಗಳೊಂದಿಗೆ ಬಿರುಸಿನ ವ್ಯಾಪಾರ ವಹಿವಾಟು ನಡೆಸುತ್ತಿದ್ದುದು ಖಚಿತವಾಗುತ್ತದೆ. ಚೇರವಂಶದ ಮೊದಲಿಗನೆಂದು ಪರಿಗಣಿಸಲಾದ ಉದಿಯನ್ ಚೇರಳ್ ಇವರೊಂದಿಗೆ ವಹಿವಾಟು ನಡೆಸುತ್ತಿದ್ದನೆಂದು ಸಂಗಂ ಸಾಹಿತ್ಯ ತಿಳಿಸುತ್ತದೆ. ಉದಿಯನ್ ಚೇರಳ್ ಹಿಂದಿನ ಯಾವ ಚೇರ ರಾಜನ ಹೆಸರು ಲಭ್ಯವಿಲ್ಲ. ಆದ್ದರಿಂದ ಅಶೋಕನ ಶಿಲಾಶಾಸನಗಳಲ್ಲಿನ ‘ಕೆರಪುತೋ’ ಚೇರ ಸಾಮ್ರಾಜ್ಯದ ಸೂಚಕವಾಗಿರದೆ ಆಂಧ್ರ,ಪುಳಿಂದರಂತೆ ಪ್ರಾದೇಶಿಕ ಬುಡಕಟ್ಟುಗಳ ಹೆಸರಾಗಿರುವ ಸಾಧ್ಯತೆಗಳಿವೆ. * ಮೇಲಿನ ಸಮಸ್ಯೆಯನ್ನು ಪರಿಗಣಿಸಿದ ಆರ್.ನಾಗಸ್ವಾಮಿಯವರು ತಮಿಳುನಾಡಿನಲ್ಲಿ ಕಂಡುಬಂದಿರುವ ಜೈನರ ತಮಿಳು-ಬ್ರಾಹ್ಮಿ ಗುಹಾ ಬರಹಗಳ ಹಿನ್ನೆಲೆಯಲ್ಲಿ ತಮಿಳಗಂನ ಆರಂಭಿಕ ಚರಿತ್ರಯನ್ನು ಪುನರಾವಲೋಕಿಸಿ ಅಶೋಕನ ಕಾಲದವರೆಗೆ ಹಿಂದಕ್ಕೊಯ್ಯುವ ಅಗತ್ಯವಿದೆಯೆಂದು ಭಾವಿಸುತ್ತಾರೆ. ಗಿಫ್ಟ್ ಶಿರೋಮಣಿಯವರು ಇದೇ ನಿಲುವನ್ನು ತಾಳಿದ್ದಾರೆ. ಜೈನರಿಗೆ ನೆಲೆ ನಿರ್ಮಿಸಿದುದನ್ನು ಹೇಳುವ ಪುಗಳೂರಿನ(ಅರಣತ್ತರ ಮಲೈ) ಶಿಲಾಶಾಸನದಲ್ಲಿ ಅದಮ್ ಚೇರಳ್ ಇರುಂಪೊರೈ, ಈತನ ಮಗ ಪೆರುಮಕಡುಂಗೋ ಹಾಗೂ ಈತನ ಮಗ ಇಳಮಕಡುಂಗೋ ಉಲ್ಲೇಖಗೊಂಡಿದ್ದಾರೆಂದು ಹೇಳಲಾಗಿದೆ. ವಿವಾದಕ್ಕೆಡೆ ಮಾಡಿಕೊಟ್ಟಿರುವ ಈ ಶಿಲಾಶಾಸನದ ಕಾಲವನ್ನು ಪ್ರಾಕ್ತನಾಲೇಖ್ಯದ ಆಧಾರದ ಮೇಲೆ ಕ್ರಿ.ಶ. 1-2 ಶತಮಾನ ಎಂದು ನಿರ್ಧರಿಸಲಾಗಿದೆ. ಸಂಗಂ ಸಾಹಿತ್ಯದಲ್ಲಿ ತಮಿಳು ರಾಜರುಗಳು ವೇದೋಕ್ತ ಯಾಗಗಳನ್ನು ನಡೆಸಿದ ಮಾಹಿತಿಗಳಿವೆಯೇ ಹೊರತು ಅವರು ಜೈನ ಮತ ಪೋಷಕರಾಗಿದ್ದುದಕ್ಕೆ ಯಾವುದೇ ಸೂಚನೆಗಳಿಲ್ಲ. * ಆರ್.ನಾಗಸ್ವಾಮಿ ಮತ್ತು ಗಿಫ್ಟ್ ಶಿರೋಮಣಿಯವರು ಸೂಚಿಸಿದಂತೆ ( ಚೇರರ ವಂಶವನ್ನು ಅಶೋಕನ ಕಾಲದವರೆಗೆ ಒಯ್ಯಬೇಕಾದರೆ ಈಗ ನಿರ್ಧರಿಸಿದ ಕಾಲಾವಧಿಯಿಂದ ಹತ್ತರಿಂದ ಹನ್ನೆರಡು ತಲೆಮಾರುಗಳಷ್ಟು ಹಿಂದಕ್ಕೆ ಸಾಗಬೇಕಾಗುತ್ತದೆ. ಆಗ ನೀಲಕಂಠಶಾಸ್ತ್ರಿ ಗಜಬಾಹು ಸಮಕಾಲೀನತೆ (ನೋಡಿರಿ :ಶಿಲಪ್ಪದಿಗಾರಂ,ಮಣಿಮೇಖಲೈ), ಶೇಷ ಅಯ್ಯಂಗಾರ್ ಶಿಲಪ್ಪದಿಗಾರಂನಲ್ಲಿ ಕನ್ನಗಿ ಮಧುರೈನ್ನು ಸುಟ್ಟ ಅಧಾರ, ಶಿವರಾಜ ಪಿಳ್ಳೆಯವರು ಸಂಗಂ ಸಾಹಿತ್ಯದ ಕವಿತೆಗಳ ಮೇಲೆ ನಿರ್ಧರಿಸಿದ ಸಂಗಂ ಸಾಹಿತ್ಯದ ಇಡೀ ಕಾಲಸರಣಿ ಗೋಜಲಿನ ಗೂಡಾಗಿ ಪ್ರಾಚೀನ ತಮಿಳಗಂನ ಚರಿತ್ರೆ ಅಗ್ರಾಹ್ಯವಾಗುತ್ತದೆ. ಈ ಎಲ್ಲ ವಿದ್ವಾಂಸರು ಸಂಗಂ ಸಾಹಿತ್ಯದ ಕಾಲಾವಧಿಯನ್ನು ಕ್ರಿ.ಶ ಆರಂಭದ ಮೂರು ಶತಮಾನಗಳಿಗೆ ಸೀಮಿತಗೊಳಿಸಿದ್ದಾರೆ. ಸಂಗಂ ಕಾಲವನ್ನು ಅಶೋಕನ ಕಾಲಕ್ಕೆ ಒಯ್ದರೆ ಕ್ರಿ.ಶ. ಆರಂಭದಿಂದ ಕಳಭ್ರರ ಅಂಧಕಾರ ಯುಗ ಮುಗಿಯುವವರೆಗೆ ಸುಮಾರು 600 ವರ್ಷಗಳ ಕಾಲ ತಮಿಳಗಂ ಚರಿತ್ರೆ ಶೂನ್ಯವಾಗುತ್ತದೆ. ಇದು ಅಶೋಕನ ಕಾಲದಲ್ಲಿ ಚೇರ ಸಾಮ್ರಾಜ್ಯ ಇದ್ದುದನ್ನು ಸಂಶಯಕ್ಕೆಡೆಮಾಡಿಕೊಡುತ್ತದೆ. * ಸಂಗಂ ಸಾಹಿತ್ಯದ ಅಗನಾನೂರು ಮತ್ತು ಪುರನಾನೂರು ಸಂಗ್ರಹಗಳಲ್ಲಿನ ಪದ್ಯವೊಂದರಲ್ಲಿ ಮುದಿನಾಗರಾಯರ್ ಚೇರ ದೊರೆ ಉದಿಯನ್ ಚೇರಳ್ ಮಹಾಭಾರತದ ಯುದ್ದದಲ್ಲಿ ಪಾಂಡವ ಮತ್ತು ಕೌರವ ಸೇನೆಗಳೆರಡಕ್ಕೂ ನೆರವಿತ್ತನೆಂದು ಹಾಡಿದ್ದಾನೆ. ಇದನ್ನು ಎಲ್ಲ ಇತಿಹಾಸಕಾರರು ಅಲ್ಲಗಳೆದಿದ್ದಾರೆ. ಆದರೆ ಕೆಲವರು ಈ ಪದ್ಯದ ಆಧಾರದ ಮೇಲೆ ಚೇರರು ಮಹಾಭಾರತದ ಕಾಲದಲ್ಲಿ ಇದ್ದರೆಂದು , ತಮಿಳಗಂನ ಚರಿತ್ರೆ ಕ್ರಿ.ಪೂ 2000 ಅವಧಿಗೆ ಎಳೆದೊಯ್ದಿದ್ದಾರೆ. * ಕರ್ನಾಟಕದ ಗಂಗರು ಕ್ರಿ.ಶ. 3ನೇ ಶತಮಾನದಿಂದ ಚೇರರ ಕೊಂಗುನಾಡಿನ ಪ್ರದೇಶಗಳಾದ ಕರೂರು , ಕೊಯಂಬತ್ತೂರು, ಸೇಲಂ ಮತ್ತು ಈರೋಡ್ ಪ್ರಾಂತಗಳಲ್ಲಿ ಆಡಳಿತ ನಡೆಸುತ್ತಿದ್ದುದು ಐತಿಹಾಸಿಕ ದಾಖಲೆಗಳಿಂದ ಸ್ಪಷ್ಟವಾಗಿದೆ. ಇವರು ಇದೇ ಪ್ರಾಂತದ ಅಧಿಪತಿಗಳಾದ ಆದಿಚೇರರೊಂದಿಗೆ ಯಾವುದೇ ಸರಸ , ವಿರಸ, ರಾಜಕೀಯ ತಾಕಲಾಟಗಳನ್ನು ಹೊಂದಿದ್ದ ಕುರುಹುಗಳಿಲ್ಲ. ಇದು ಚೇರರ ವ್ಯಾಪ್ತಿ ,ಸಾಮಥ್ರ್ಯ ಮತ್ತು ಅಧಿಪತ್ಯಗಳ ಬಗೆಗೆ ಮರುಚಿಂತನೆ ಮಾಡುವಂತೆ ಪ್ರೇರೇಪಿಸುತ್ತದೆ. ಚೇರರು ಬೇರೆಲ್ಲರಿಗಿಂತ ಹೆಚ್ಚು ಗ್ರೀಕ್-ರೋಮನ್ ಸಂಪರ್ಕ ಹೊಂದಿದ್ದರೆಂದು ಸಂಗಂ ಸಾಹಿತ್ಯದಿಂದ ತಿಳಿದು ಬರುತ್ತದೆ. ಆದರೆ ಚೇರ ದೊರೆಗಳನ್ನು ಕುರಿತಾಗಿ ಹಾಡಲಾಗಿರುವ ಕವನಗಳಲ್ಲಿ ಇದರ ಬಗ್ಗೆ ಮಾಹಿತಿಯಿಲ್ಲ. ಸಂಗಂ ಕವನಗಳಲ್ಲಿ ಗ್ರೀಕ್ ಶಬ್ಧಗಳ ಬಳಕೆ ಕಂಡುಬಂದಿಲ್ಲ. ಇದು ನಾಡಿನ ಜನಸಾಮಾನ್ಯರು ವ್ಯಾಪಾರ-ವಹಿವಾಟುಗಳಲ್ಲಿ ಯಾವ ಪಾತ್ರವನ್ನು ಸಹ ಹೊಂದಿರಲಿಲ್ಲವೆಂಬ ಅದನ್ನು ನಿಯಂತ್ರಿಸುವವರು ಬೇರಾರೋ ಆಗಿದ್ದರೆಂದು ಸೂಚಿಸುತ್ತದೆ.(ಲೇ:24) ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಟುವಟಿಕೆಗಳಲ್ಲಿ ದೇವನಹಳ್ಳಿ ಸುತ್ತಲಿನ ಗ್ರಾಮದವರ ಯಾವ ಚಟುವಟಿಕೆ ಮತ್ತು ನಿಯಂತ್ರಣಕ್ಕೆ ಆಸ್ಪದವಿರದಂತಹ ಸ್ಥಿತಿಯನ್ನು ಇದು ಹೋಲುತ್ತದೆ. * ಕ್ರಿ.ಶ. ಮೂರನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಸರಿಸುಮಾರು ಐನೂರು ವರ್ಷಗಳ ಅವಧಿಯಲ್ಲಿ ಚೇರರ ಬಗೆಗೆ ಯಾವುದೇ ಮಾಹಿತಿಗಳಿಲ್ಲ. ಮಹಾನ್ ಸಾಮ್ರಾಜ್ಯ ಕಟ್ಟಿದವರಂತೆ, ಹಿಮಾಲಯದಲ್ಲಿ ಲಾಂಛನ ಕೊರೆಸಿದವರಂತೆ ಬಿಂಬಿತವಾಗಿರುವ ಆದಿ ಚೇರರು ಸಂಗಂ ಸಾಹಿತ್ಯ ಹೊರತಾಗಿ ಬೇರೆಲ್ಲೂ ಶಿಲಾಶಾಸನ, ಬರಹವುಳ್ಳ ನಾಣ್ಯದಂತಹ ಮಾಧ್ಯಮಗಳ ಮೂಲಕ ತಮ್ಮ ಕುರುಹನ್ನು ಖಚಿತವಾಗಿ ಉಳಿಸದೆ ಹೋಗಿರುವುದು ಸೋಜಿಗವಾಗಿದೆ. ಎಂಟನೇ ಶತಮಾನದಿಂದ , ಮಧ್ಯಕಾಲೀನ ಚೇರ ವಂಶದ ಐತಿಹಾಸಿಕ ದಾಖಲೆಗಳು ವಿಪುಲವಾಗಿ ಸಿಗುತ್ತವೆ. ಈ ಕಾಲದ ಚೇರರು ಭಕ್ತಿಯುಗದ ಚೇರರೆಂದು ಖ್ಯಾತರಾಗಿದ್ದಾರೆ. ಆದಿಚೋಳರು ಆದಿ ಚೋಳರನ್ನು ಕುರಿತಾಗಿ ಯಾವುದೇ ಬಗೆಯ ಸ್ಪಷ್ಟ ಮಾಹಿತಿಗಳು ಲಭ್ಯವಿಲ್ಲ. ಸಂಗಂ ಸಾಹಿತ್ಯದ ಪುರನಾನೂರು, ಪೆರಿಯಪುರಾಣಂನಂತಹ ಧಾರ್ಮಿಕ ಗ್ರಂಥ , ಕುಲೋತ್ತುಂಗ ಚೋಳನ (ಕ್ರಿ.ಶ. 1070-1120) ಕಾಲದಲ್ಲಿ ರಚಿತವಾದ ಕಲಿಂಗತ್ತುಪರಣಿಯಂತಹ ಅರೆಜೀವನ ಚರಿತ್ರೆಗಳಿಂದ ಆದಿಚೋಳರ ಬಗೆಗೆ ಹಲವಾರು ವಿಷಯಗಳು ತಿಳಿಯುತ್ತವೆ. ಇವು ಆದಿಚೊಳರ ಇದ್ದರೆಂದು ಭಾವಿಸಲಾದ ಸಾವಿರ ವರ್ಷಗಳ ನಂತರ ಬರೆಯಲಾಗಿದೆ0iÉುಂಬುದು ಗಮನಾರ್ಹ. ಆದ್ದರಿಂದ ಈ ಆಕರಗಳು ಐತಿಹ್ಯ, ಪುರಾಣಗಳಿಂದ ತುಂಬಿಹೋಗಿವೆ. ಇವುಗಳಿಂದ ಚಾರಿತ್ರಿಕ ಅಂಶಗಳನ್ನು ಆರಿಸಿ ತೆಗೆಯುವುದು ದುಸ್ತರವಾಗಿದೆ. ಸಂಗಂ ಸಾಹಿತ್ಯದ ಪುರನಾನೂರಿನಲ್ಲಿ 125ಕ್ಕೂ ಹೆಚ್ಚಿನ ಚೋಳ ರಾಜರುಗಳ ಹೆಸರುಗಳು ಲಭ್ಯ. 10ನೇಶತಮಾನದ ಅನ್ಬಿಲ್ ತಾಮ್ರಪತ್ರದಲ್ಲಿ ಐತಿಹಾಸಿಕ ವ್ಯಕ್ತಿಯಾದ 9ನೇ ಶತಮಾನದ ವಿಜಯಾಲಯನೊಂದಿಗೆ (ಕ್ರಿ.ಶ. 848-871) ಆತನಿಗಿಂತ ಮೊದಲಿಗಿದ್ದ ಹದಿನೈದು (೧೫) ಚೋಳರ ಉಲ್ಲೇಖವಿದ್ದರೆ , ತಿರುವಳಂಗಡಂ ದಾನಪತ್ರದಲ್ಲಿ ಚೋಳ ವಂಶಾವಳಿ ನಲವತ್ತುನಾಲ್ಕು (44) ಚೋಳರಿಂದ ತುಂಬಿ ಚಾರಿತ್ರಿಕ ದಾಖಲೆಯಾಗಿ ಅನರ್ಹವೆನಿಸಿದೆ. ಕನ್ಯಾಕುಮಾರಿ ತಾಮ್ರಪಟದಲ್ಲಿ ಐವತ್ತೆರಡು (52) ಚೋಳರ ಉಲ್ಲೇಖವಿದ್ದರೆ, ಕಳಿಂಗತ್ತುಪರಣೈ ಎಂಬ ಕೃತಿಯಲ್ಲಿ ಚೋಳ ಸಂತತಿಯ ಪಟ್ಟಿಯಿದೆ. ಇವುಗಳಲ್ಲಿ ಯಾವೆರಡು ಪಟ್ಟಿಗಳಲ್ಲಿನ ಹೆಸರುಗಳು ಪರಸ್ಪರ ಹೊಂದಾಣಿಕೆಯಾಗುವುದಿಲ್ಲ. ಕೆಲವು ಪಟ್ಟಿಗಳು ದೇವಾನುದೇವತೆಗಳನ್ನು ಹೊಂದಿವೆ. ಇವುಗಳಲ್ಲಿನ ಕೆಲ ಚೊಳ ರಾಜರನ್ನು ಪುರಾಣಗುಣ ಪ್ರಸಿದ್ಧರನ್ನಾಗಿ ಚಿತ್ರಿಸಲಾಗಿದೆ. ಸಂಗಂ ಸಾಹಿತ್ಯದಿಂದ ಚೋಳರ ವಂಶಾವಳಿಯನ್ನು ನಿರ್ಧರಿಸುವುದು ಅಸಾಧ್ಯವೇ ಅಗಿದೆ. ಮಧ್ಯಕಾಲೀನ ಚೋಳರು ತಾವು ಆಳುತ್ತಿದ್ದ ಪ್ರದೇಶದ ಮೇಲೆ ತಮ್ಮ ಪಾರಂಪರಿಕ ಹಕ್ಕನ್ನು ಸಾಧಿಸಲು ಇಂತಹ ತಂತ್ರಗಳಿಗೆ ಮೊರೆಹೋಗಿರುವ ಸಾಧ್ಯತೆಗಳಿವೆಯೆಂದು ಕೆಲ ಇತಿಹಾಸಕಾರರು ಭಾವಿಸುತ್ತಾರೆ. ಚೋಳರ ಅಧಿದೆವತೆ ಶಿವ. ಅಯಿ/ಉಮಾ/ಕೊಟ್ಟವ್ವೆ ಮುರುಗ ಅವರ ಇಷ್ಟ ದೈವಗಳು. ವಂಚಿ (ಇಂದ್ರ), ನೇತ್ರಮನ್(ವರುu) ಏಳ್ ಅಥವಾ ಉರಿ (ಸೂರ್ಯ),ನನ್ನ (ಇಂದ್ರ) ಅವರ ಇತರ ದೇವತೆಗಳು. ಚೋಳರ ಲಾಂಛನ ಹುಲಿ. ಕರಿಕಾಲ ಚೋಳ : ಆದಿಚೋಳರಲ್ಲಿ ಈತ ಬಹು ಖ್ಯಾತ. ಈತನ ತಂದೆ ಇಳಂಸೆಂತಿಸನ್ನಿ. ಪತ್ತಿನಪಾಳೈ(ಪಟ್ಟಣದ ಹಾಳು=ಪಟ್ಟಣದ ವಿರಹ) ಎಂಬುದು ಉರುತ್ತಿರ ಕಣ್ಣನಾರ್ (ರುದ್ರನ್ ಕಣ್ಣನಾರ್) ಚೋಳರ ರಾಜಧಾನಿಯಾದ ಕಾವೇರಿಪಟ್ಟಿನಂ ಮೇಲೆ ಹಾಡಿದ ಸುದೀರ್ಘ ಕವನ. ಈ ಕವನ ನಿರೂಪಿಸಿದಂತೆ ಬಾಲ್ಯದಲ್ಲಿ ಈತ ಬೆಂಕಿ ಆಕಸ್ಮಿಕಕ್ಕೆ ಸಿಲುಕಿ ಕಾಲು ಸುಟ್ಟುಕೊಂಡನೆಂದು, ನಂತರ ಸ್ವಯಂಪ್ರಯತ್ನದಿಂದ ಚೋಳ ಸಾಮ್ರಾಜ್ಯವನ್ನು ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಪತ್ತಿನಪಾಳೈ ಕರಿಕಾಲ ಚೋಳ ವೆಣ್ಣಿಯಲ್ಲಿ ಚೇರ,ಪಾಂಡ್ಯರನ್ನು ಅವರೊಂದಿಗಿದ್ದ ಹನ್ನೊಂದು ಜನ ಪಾಳೆಯಗಾರರ ಸಂಘಟಿತ ಸೇನೆಯೊಡನೆ ಸೆಣಸಿ ಗೆದ್ದನೆಂದು, ಅಸಂಖ್ಯಾತ ಒಳಿಯಾರ್ ಮತ್ತು ಪ್ರಾಚೀನ ಅಳುವಳಾರ್ ಕರಿಕಾಲನ ಆದೇಶ ಪಾಲಿಸಿದರೆಂದು , ಯವನರು ಮಂಕಾದರೆಂದು ಪಾಂಡ್ಯರ ಇಳಂಗೋವನ್ ಶರಣಾದನೆಂದು ಹಾಡುತ್ತದೆ. ಈ ಯುದ್ಧದಲ್ಲಿ ಬೆನ್ನು ತಿರುಗಿಸಿದ ಚೇರ ದೊರೆ ಚೋಳನಿಂದ ಗಾಯಗೊಂಡು ಅವಮಾನಿತನಾಗಿ ಆತ್ಮಹತ್ಯೆ ಮಾಡಿಕೊಂಡನೆಂದು ಹೇಳಲಾಗಿದೆ. ಕರಿಕಾಲ ಚೋಳ ಕಂಚಿಯನ್ನು ಗೆದ್ದು , ತೊಂಡೈಮಂಡಲದಲ್ಲಿ ಕಾಡನ್ನು ಕಡಿದು ಜನವಸತಿ ಪ್ರದೇಶವನ್ನಾಗಿ ಪರಿವರ್ತಿಸಿ ಕೃಷಿಯನ್ನು ನೆಲೆಗೊಳಿಸಿ, ಕೆರೆಗಳನ್ನು ಕಟ್ಟಿಸಿದನೆಂದು ನಂಬಲಾಗಿದೆ. ಈತನ ಕಾಲದಲ್ಲಿ ಕಾವೇರಿ ಪಟ್ಟಿನಂ ಸಮೃದ್ಧ ನಗರವಾಗಿದ್ದಿತು. ಕರುಂಗುಲಾಲ್ ಅಡನಾರ್ ಮತ್ತು ಪರನಾರ್ ಕರಿಕಾಲನನ್ನು ಕುರಿತಾಗಿ ಹಾಡಿದ್ದಾರೆ. ನೆರೆ ಸಮಯದಲ್ಲಿ ಉಕ್ಕಿ ಹರಿದು ವಿನಾಶಕಾರಿಯಾಗಿದ್ದ ಕಾವೇರಿ ನದಿಯ ದಡಗಳನ್ನು ಎತ್ತರಿಸಿದನೆಂದು ಹತ್ತನೆಯ ಶತಮಾನದ ಚೋಳರ ತಾಮ್ರಪತ್ರಗಳು, ಶಿಲಾಶಾಸನಗಳು ಸಾರುತ್ತವೆ. ಆದರೆ ಸಂಗಂ ಸಾಹಿತ್ಯದಲ್ಲಿ ಇದರ ಕುರುಹಿಲ್ಲ. ನಳನ್ ಕಿಳ್ಳಿ ಮತ್ತು ನೆಡುಂಕಿಳ್ಳಿ : ಸೋದರರಾದ ಇವರಿಬ್ಬರ ಮಧ್ಯದ ಕದನವನ್ನು ಕೋವೂರು ಕೀಳಾರ್ ಹಾಡಿದ್ದಾನೆ. ನಳಿನ್ ಕಿಳ್ಳಿಯ ತಮ್ಮ ಮಾವಲಟ್ಟನ್ ಮುತ್ತಿಗೆ ಹಾಕಿದಾಗ ನೆಡುಂಕಿಳ್ಳಿ ಆವೂರು ಕೋಟೆಯಲ್ಲಡಗಿದ್ದನು. ಈ ಸಂದರ್ಭದಲ್ಲಿ ಕವಿ ಕೀಳಾರ್ ನೆಡುಂಕಿಳ್ಳಿಯನ್ನು ಗಂಡುಗಲಿಯಂತೆ ಕೋಟೆಯಿಂದ ಹೊರಬಂದು ಕಾದಿ ಜನರಿಗೆ ತೊಂದರೆ ಕೊಡದಂತೆ ಛೇಡಿಸಿದ್ದಾನೆ. ಇದೇ ಕವಿ ಇನ್ನ್ನೊಂದು ಪದ್ಯದಲ್ಲಿ ಸೋದರರಿಬ್ಬರು ಕದನ ಮಾಡದಂತೆ ಪ್ರಾರ್ಥಿಸಿ, ಯಾರೇ ಗೆದ್ದರೂ ಚೋಳನೊಬ್ಬನ ಸೋಲು ಖಚಿತವೆಂದು ಅಲವತ್ತುಕೊಂಡಿದ್ದಾನೆ. ಕೊಚೆಂಗಣ್ಣನ್ : ಈತ ಚೋಳರ ಮತ್ತೊಬ್ಬ ಖ್ಯಾತ ದೊರೆ. ಪೊಯ್ಗಯಾರ್ ತನ್ನ ಕೃತಿ ಕಳವಳಿಯಲ್ಲಿ ಕೊಚೆಂಗಣ್ಣನ್ ಹಾಗೂ ಚೇರ ದೊರೆ ಕಣೈಕ್ಕಾಲ್ ಇರುಂಪೊರೈ ಮಧ್ಯೆ ಕಲುಂಮಲಂನಲ್ಲಿ ನಡೆದ ಕಾಳಗವನ್ನು ದಾಖಲಿಸಿದ್ದಾನೆ. ಈ ಯುದ್ದದಲ್ಲಿ ಚೇರ ದೊರೆ ಸೆರೆಸಿಕ್ಕು ಆತನ ಸ್ನೇಹಿತನಾದ ಪೊಯ್ಗಯಾರ್ ಸಹ ಬಂಧಿತನಾದನು. ಆಗ ಈ ಕವಿ ಕೊಂಚೆಗಣ್ಣನ್ನನ್ನು ನಲವತ್ತು ವಚನಗಳಲ್ಲಿ ಹೊಗಳಿದಾಗ ಸಂತುಷ್ಟನಾಗಿ ಇಬ್ಬರನ್ನು ಬಿಡುಗೊಡೆಗೊಳಿಸಿದನು. ಕೊಂಚೆಗಣ್ಣನ್ ಮುಂದೆ ಹಲವಾರು ಐತಿಹ್ಯಗಳಿಗೆ ವಸ್ತುವಾದನು. ಈತನನ್ನು ಮಾನವರೂಪದ ಶಿವನೆಂದು ಹೊಗಳಲಾಗಿದೆ. ಈತ ಕಾವೇರಿ ನದಿ ತೀರದಲ್ಲಿ 70ಕ್ಕೂ ಹೆಚ್ಚು ಶಿವ ದೇವಾಲಯಗಳನ್ನು ಕಟ್ಟಿಸಿದನೆಂದು ಏಳನೆಯ ಶತಮಾನದ ನಂತರದ ಕೃತಿಗಳಲ್ಲಿ ಹೊಗಳಲಾಗಿದೆ. ಆದರೆ ಸಂಗಂ ಕಾಲದ ತಮಿಳಗಂ ರಾಜರುಗಳು ಭಕ್ತಿ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಲಿ , ದೇವಸ್ಥಾನಗಳನ್ನು ಕಟ್ಟಿಸಿದುದ್ದಕ್ಕಾಗಲಿ ಪುರಾವೆಗಳಿಲ್ಲ. ಆದರೆ ಅವರು ವೇದೋಕ್ತ ಸಂಪ್ರದಾಯಗಳ ಅನುಯಾಯಿಗಳೆಂದು ಸಂಗಂ ಸಾಹಿತ್ಯದಿಂದ ಸ್ಪಷ್ಟವಾಗುತ್ತದೆ. ವಿಶ್ಲೇಷಣೆ * ಕ್ರಿ.ಶ. 3ನೇ ಶತಮಾನದಿಂದ ಒಂಬತ್ತನೆ ಶತಮಾನದ ಅವಧಿಯವರೆಗೆ ಸಂಗಂ ಸಾಹಿತ್ಯ ಹೊರತಾಗಿ ಚೋಳರನ್ನು ಕುರಿತಾದ ಯಾವುದೇ ಐತಿಹಾಸಿಕ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಮಧ್ಯಯುಗದ ಚೋಳರ ಚರಿತ್ರೆ ವಿಜಯಾಲಯನಿಂದ (ಕ್ರಿ.ಶ. 848-871) ಪ್ರಾರಂಭವಾಗುತ್ತದೆ. * ಕರಿಕಾಲ ಚೋಳ ಕ್ರಿ.ಶ. 2 ನೇ ಶತಮಾನದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಿಸಿದನೆಂದು ಹಾಗೂ ಜಗತ್ತಿನಲ್ಲಿ ನದಿಗೆ ಅಡ್ಡಲಾಗಿ ಮೊದಲ ಬಾರಿಗೆ ಕಟ್ಟೆ ಕಟ್ಟಿದ ಕೀರ್ತಿ ತಮಿಳರಿಗೆ ಸಲ್ಲುತ್ತದೆ0iÉುಂದು ಅಂತರ್ಜಾಲದಲ್ಲಿ ತೀವ್ರವಾಗಿ ಪ್ರಚಾರವಾಗುತ್ತಿದೆ. ಆದರೆ ಈ ಕುರಿತಾಗಿ ಎಂಟನೇ ಶತಮಾನದಿಂದ ದಕ್ಕುವ ಐತಿಹಾಸಿಕ ಆಕರಗಳಿಂದ ಬೇರೆಯವೇ ಆದ ಮಾಹಿತಿಗಳು ಲಭ್ಯ. ಅವುಗಳತ್ತ ಒಂದು ನೋಟ ಹರಿಸಬಹುದು. * ಎಂಟನೇ ಶತಮಾನಕ್ಕೆ ಸೇರಿದ ಕಡಪ-ನೆಲ್ಲೂರು ಪ್ರಾಂತದ ಚೋಳ ಪುಣ್ಯಕುಮಾರ ತನ್ನನ್ನು ತಾಮ್ರಪತ್ರಗಳಲ್ಲಿ ಕಾವೇರಿಯ ದಡಗಳನ್ನು ಭದ್ರಗೊಳಿಸಿದ ಕರಿಕಾಲನ ವಂಶಜನೆಂದು ಹೆಮ್ಮೆ ಪಟ್ಟಿದ್ದಾನೆ. # ಕ್ರಿ.ಶ. 966ರ ರಾಜಕೇಸರಿವರ್ಮನ್ ಕಾಲದ ಶಿಲಾಶಾಸನವೊಂದರಲ್ಲಿ ನೀಡಿದ ದಾನದ ವಿವರದಲ್ಲಿ ಕರಿಕಾಲ ಎತ್ತರಿಸಿದ ಕಾವೇರಿ ತೀರದ ಏರಿಯನ್ನು ಒಂದು ಗಡಿಯನ್ನಾಗಿ ಪರಿಗಣಿಸಲಾಗಿದೆ. # ಕ್ರಿ.ಶ. 1018 ರ ಮೊದಲನೇ ರಾಜೇಂದ್ರ ಚೋಳನ ದಾನದಲ್ಲಿ ಕರಿಕಾಲ ಕಾವೇರಿ ತೀರಗಳನ್ನು ಭದ್ರಗೊಳಿಸಿ ಅಮರನಾದನೆಂದು ಹೊಗಳಲಾಗಿದೆ. # ಮೊದಲನೆ ರಾಜರಾಜ (ಕ್ರಿ.ಶ. 987-1013) ಬುದ್ಧ ವಿಹಾರಕ್ಕೆ ನೀಡಿದ ದಾನವನ್ನು ಉಲ್ಲೇಖಿಸುವ 1014 ರ ತಾಮ್ರಪಟದಲ್ಲಿ ಕರಿಕಾಲ ಕಾವೇರಿ ನದಿ ದಡಗಳನ್ನು ಭದ್ರಗೊಳಿಸಿದನೆಂದು ಹೇಳಲಾಗಿದೆ. # ಕ್ರಿ.ಶ 1207ರ ತೆಲುಗು ದೊರೆ ತಮ್ಮಸಿದ್ಧಿಯ ಶಿಲಾಶಾಸನದಲ್ಲಿ ಕಾವೇರಿ ತೀರವನ್ನು ಎತ್ತರಿದಿದ ಕರಿಕಾಲನ ವಂಶಜನೆಂದು ಹೆಮ್ಮೆ ಪಡಲಾಗಿದೆ. # ವೀರರಾಜೇಂದ್ರನ (1062-1078) ಶಿಲಾಶಾಸನದಲ್ಲಿ ಉಕ್ಕಿ ಹರಿಯುವ ಕಾವೇರಿಯನ್ನು ನಿಗ್ರಹಿಸಲು ನದಿ ತೀರವನ್ನು ಎತ್ತರಿಸಿದ ಸೂರ್ಯಪ್ರಭರೂಪಿಯೆಂದು ಕರಿಕಾಲನನ್ನು ಹೊಗಳಲಾಗಿದೆ. ಇದಕ್ಕಾಗಿ ಕರಿಕಾಲ ತನ್ನ ಸಾಮಂತರು ಏರಿ ನಿರ್ಮಾಣಕ್ಕೆ ಬುಟ್ಟಿಯಲ್ಲಿ ಮಣ್ಣನ್ನು ಹೊರುವಂತೆ ಮಾಡಿದನೆಂದು ಹೊಗಳಲಾಗಿದೆ. * ತ್ರಿವಿಕ್ರಮ ಚೋಳನನ್ನು (ಕ್ರಿ.ಶ. 1118-36) ಕುರಿತಾದ ಉಕ್ಕಿರನ್ಸೋಳನ್ ಉಳ ದಲ್ಲಿ ಕರಿಕಾಲನನ್ನು ಕಾವೇರಿ ತೀರವನ್ನು ಭದ್ರಗೊಳಿಸಿದ ಖ್ಯಾತನೆಂದು ಕರೆಯಲಾಗಿದೆ. ಈ ಕೃತಿಯನ್ನು ವಿಕ್ರಮ ಚೋಳನ ಸಮಕಾಲೀನನಾದ ಒಟ್ಟಕುಟ್ಟನ್ ರಚಿಸಿದ್ದಾನೆಂದು ಭಾವಿಸಲಾಗಿದೆ. ಇದೇ ಕವಿ ಈತನ ಮಗನಾದ ಇಮ್ಮಡಿ ಕುಲೋತ್ತುಂಗ ಮತ್ತು ಆತನ ನಂತರ ಬಂದ ರಾಜರಾಜನನ್ನು ಕುರಿತಾಗಿ ಕುಲೋತ್ತುಂಗಚೋಳ ಉಳ ಮತ್ತು ರಾಜರಾಜಚೋಳ ಉಳ ಕೃತಿಗಳನ್ನು ರಚಿಸಿದ್ದಾನೆ. # ಹದಿನೈದನೇ ಶತಮಾನಕ್ಕೆ ಸೇರಿದ ಅಜ್ಞಾತ ಕವಿಯ ಸಂಕರ ಚೋಳ ಉಳ ಕರಿಕಾಲ ಚೋಳ ದುರ್ಬಲವಾಗಿದ್ದ ಕಾವೇರಿಯ ತೀರಗಳನ್ನು ಗಟ್ಟಿಗೊಳಿಸಿದನೆಂದು ಹಾಡಲಾಗಿದೆ. # ಐದನೇ ಶತಮಾನಕ್ಕೆ ಸೇರಿದ ಶ್ರೀಲಂಕಾದ ಕೆಲವು ಕಥೆ ಹಾಗೂ ಲಾವಣಿಗಳಿಂದ ಕರಿಕಾಲ ಚೋಳ ಶ್ರೀಲಂಕಾವನ್ನು ಮುತ್ತಿ ಸಾವಿರಾರು ಜನರನ್ನು ಬಂಧಿಸಿ ಕಾವೇರಿ ನದಿ ತೀರವನ್ನು ಭದ್ರಗೊಳಿಸುವ ಕೆಲಸದಲ್ಲಿ ಆಳುಗಳನ್ನು ತೊಡಗಿಸಿದನೆಂದು ತಿಳಿದು ಬರುತ್ತದೆ. # ಕಾವೇರಿ ಸಮುದ್ರ ಸೇರುವವಲ್ಲಿಯಿಂದ ಸುಮಾರು ನೂರು ಕಿ.ಮೀ ಹಿಂದಿರುವ ಈಗಿನ ತಿಲ್ಲಸ್ಥಾನಂ ಹಳ್ಳಿಯ ಬಳಿ ಕರಿಕಾಲ ತೀರಗಳನ್ನು ಎತ್ತರಿಸದನೆಂದು ಈ ಕಾರ್ಯದಲ್ಲಿ ತನ್ನ ಅಧೀನನಾದ ತ್ರಿಲೋಚನ ಪಲ್ಲವನು ಭಾಗಿಯಾಗುವಂತೆ ಒತ್ತಾಯಿಸಿದನೆಂದು ಹೇಳಲಾಗಿದೆ. ಆದರೆ ಈ ತ್ರಿಲೋಚನ ಪಲ್ಲವ ಯಾರು ಈತನ ಕಾಲ ಯಾವುದು ಎಂಬುದು ಸ್ಪಷ್ಟವಿಲ್ಲ. * ಮೊದಲನೆ ಕುಲೋತ್ತುಂಗ ಚೋಳನನ್ನು (ಕ್ರಿ.ಶ 1070-1120) ಕುರಿತಾಗಿ ಜಯಂಗೊಂಡನ್ ರಚಿಸಿದ ಕಲಿಂಗತ್ತುಪರಣಿಯಲ್ಲಿ ಕಾವೇರಿಯ ತೀರವನ್ನು ಎತ್ತರಿಸುವ ಕಾರ್ಯದಲ್ಲಿ ಸಾಮಂತ ದೊರೆ ಮುಕುರಿ (ಕೆಲ ವಿದ್ವಾಂಸರು ಭಾವಿಸುವಂತೆ ಮುಕುರಿಯೆಂಬ ನದಿಗೆ ಅಡ್ಡವಾಗಿದ್ದ ದಿಣ್ಣೆ) ತನ್ನ ಆದೇಶ ಪಾಲಿಸದಿದ್ದುದರಿಂದ ಕರಿಕಾಲ ಆತನನ್ನು ಶಿಕ್ಷಿಸಿದನೆಂದು ಹಾಡಲಾಗಿದೆ. * ಉರುತ್ತಿರ ಕಣ್ಣನಾರ್ (ರುದ್ರನ್ ಕಣ್ಣನಾರ್) ಕರಿಕಾಲ ಚೋಳನನ್ನು ಕುರಿತಾಗಿಯೇ ಪತ್ತಿನ ಪಾಳೈ ಎಂಬ ಕೃತಿ ರಚಿಸಿದ್ದಾನೆ. ಇದರಲ್ಲಿ ಕರಿಕಾಲ ಚೋಳ ಆಣೆಕಟ್ಟು ಕಟ್ಟಿಸಿದ ಯಾವ ಮಾಹಿತಿಯೂ ಇರದೆ ಕಾವೇರಿ ನದಿಯ ಎರಡು ದಂಡೆಗಳನ್ನು ಎತ್ತರಿಸಿ ಭದ್ರಗೊಳಿಸಿದನೆಂದು ಹಾಡಲಾಗಿದೆ. * ಐತಿಹಾಸಿಕವಾಗಿ ಸಂಗಂ ಕಾಲದ ಕರಿಕಾಲನ ಉಲ್ಲೇಖ ಕಂಡುಬರುವ ಆರಂಭಿಕ ದಾಖಲೆಗಳೆಂದರೆ ಶಿಲಾಶಾಸನಗಳು ಮತ್ತು ತಾಮ್ರಪತ್ರಗಳು. ಕ್ರಿ.ಶ. 932ರ ಪರಾತಂಕನ ತಾಮ್ರಪತ್ರಗಳು . ಉದಯೆಂದ್ರ ತಾಮ್ರಪತ್ರಗಳು ಕರಿಕಾಲನ ಹೆಸರನ್ನು ಹೇಳಿ ಮೌನ ತಾಳಿದರೆ ಇದೇ ರಾಜನ ತಿರುತ್ತಣಿ ಮತ್ತು ವೆಲಂಜೇರಿ ತಾಮ್ರಪತ್ರಗಳು ಚೋಳರ ವಂಶಾವಳಿ ಮತ್ತು ಸಾಧನೆಗಳನ್ನು ತಿಳಿಸುತ್ತವೆ. ಅದರಲ್ಲಿ ದಾಖಲಾಗಿರುವ ಕರಿಕಾಲನ ಸಾಧನೆಗಳೆಂದರೆ (1) ಹಿಮಾಲಯದಲ್ಲಿ ಚೋಳ ಲಾಂಛನವನ್ನು ಕೊರೆಸಿದ್ದು (2) ನದಿ ನಿಯಂತ್ರಣಕ್ಕೆ ನದಿ ದಡಗಳನ್ನು ಎತ್ತರಿಸಿದ್ದು ಮತ್ತು (3) ಕಂಚಿಯನ್ನು ಅರಮನೆಗಳ ನಗರವನ್ನಾಗಿಸಿದ್ದು. ತಮ್ಮ ಪೂರ್ವಿಕನಾದ ಶಿಬಿ ಚಕ್ರವರ್ತಿ ಪಾರಿವಾಳವೊಂದನ್ನು ಉಳಿಸಲು ತನ್ನ ದೇಹದ ಮಾಂಸವನ್ನೇ ನೀಡಿದನೆಂದು ಹೊಗಳಿಕೊಳ್ಳುವ ಈ ಪತ್ರಗಳು ಕರಿಕಾಲ ನದಿಗೆ ಆಣೆಕಟ್ಟನ್ನು ಕಟ್ಟಿಸಿದಂತಹ ಮಹತ್ತರವಾದ ವಿಚಾರದ ಬಗೆಗೆ ಏನನ್ನೂ ಹೇಳುವುದಿಲ್ಲ. * ತಿರುವೆಳ್ಳಾರೈನಲ್ಲಿರುವ ಮಂಟಪವೊದರಲ್ಲಿ ತಮಿಳು ಪದ್ಯರೂಪದಲ್ಲಿ ಶಿಲಾಶಾಸನವೊಂದಿದೆ. ಇದು ಕ್ರಿ.ಶ 1200 ರಲ್ಲಿ ಸುಂದರ ಪಾಂಡ್ಯ ಚೋಳ ಸಾಮ್ರಾಜ್ಯವನ್ನು ಆಕ್ರಮಿಸಿ ಅಲ್ಲಿನ ಚೋಳ ನಿರ್ಮಿತ ಕೋಟೆ, ಕೊತ್ತಳ, ಅರಮನೆಗಳನ್ನು ನಾಶಪಡಿಸಿದನೆಂದು ಹಾಗು ಅಲ್ಲಿದ್ದ ಒಂದು ಮಂಟಪವನ್ನು ಮಾತ್ರ ಉಳಿಸಿದನೆಂದು ಇದನ್ನು ಕರಿಕಾಲ ಚೋಳ ಉರುತ್ತಿರ ಕಣ್ಣನಾರ್ಗಾಗಿ (ರುದ್ರನ್ ಕಣ್ಣನಾರ್) ಕಟ್ಟಿಸಿದ್ದನೆಂದು ತಿಳಿಸುತ್ತದೆ. ಈ ಶಿಲಾಶಾಸನವೂ ಸಹ ಕರಿಕಾಲನ ಆಣೆಕಟ್ಟೆಯ ಬಗೆಗೆ ಮೌನ ವಹಿಸಿದೆ. ಆದ್ದರಿಂದ ಕರಿಕಾಲ ಚೋಳ ಕಾವೇರಿ ನದಿಯ ಎರಡು ದಂಡೆಗಳನ್ನು ಎತ್ತರಿಸಿ ಭದ್ರಗೊಳಿಸಿರುವ ಕುರುಹುಗಳು ದಕ್ಕುತ್ತವೆ ಯೇ ಹೊರತು ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಿದುದನ್ನು ಯಾುವುವೂ ಹೇಳುವುದಿಲ್ಲ. * ಕ್ರಿ.ಪೂ 2900 ರಲ್ಲಿ ಈಜಿಪ್ತ್ನ ಬಳಿ ನೈಲ್ ನದಿಯ ಕವಲೊಂದಕ್ಕೆ ಅಡ್ಡಲಾಗಿ 15 ಮೀ ಎತ್ತರದ ಕಲ್ಲಿನ ಆಣೆಕಟ್ಟನ್ನು ಕಟ್ಟಿ ಮೆನೆಸ್ ರಾಜನ ಮೆಂಫಿûಸ್ ನಗರಕ್ಕೆ ನೀರನ್ನು ತಿರುಗಿಸಿರುವುದನ್ನು ಗುರುತಿಸಲಾಗಿದೆ. ಈಜಿಪ್ತ್ನ ರಾಜಧಾನಿ ಕೈರೋದಿಂದ 30 ಕಿ.ಮೀ ದೂರದ ಸಾದ್-ಅವ್-ಕಯರದ ಬಳಿ ಕ್ರಿ.ಪೂ. 2700 ರಲ್ಲಿ ಕಲ್ಲಿನ ಆಣೆಕಟ್ಟನ್ನು ಕಟ್ಟಲಾಯಿತು. ಇದಕ್ಕೆ ಕೋಡಿಯನ್ನು ಒದಗಿಸದಿದ್ದರಿಂದ ಪೂರ್ಣಗೊಂಡ ಕೆಲದಿನಗಳಲ್ಲೇ ನೆರೆಬಂದು ಕೊಚ್ಚಿಹೋಯಿತು. ಈ ಆಣೆಕಟ್ಟೆಯ ಅವಶೇಷಗಳನ್ನು ಪ್ರಾಕ್ತನಶಾಸ್ತ್ರಜ್ಞರು ಗುರುತಿಸಿದ್ದಾರೆ. ಸಿರಿಯಾದ ಬರೊಂಬೆಸ್ನಲ್ಲಿ ಕ್ರಿ.ಪೂ 1300 ರಲ್ಲಿ ಕಟ್ಟಿದ 6.1 ಮೀ ಎತ್ತರದ ಆಣೆಕಟ್ಟು ಇಂದಿಗೂ ಸೇವೆಯಲ್ಲಿದೆ. ಆದಿಪಾಂಡ್ಯರು ಮಧುರೈಕಾಂಚಿ,ಪುರನಾನೂರು,ಶಿಲಪ್ಪದಿಗಾರಮ್ ಕೃತಿಗಳಿಂದ ಪಾಂಡ್ಯರ ವಂಶಾವಳಿಯನ್ನು ಗುರುತಿಸಲಾಗಿದೆ. ಪಾಂಡ್ಯರ ಮೊದಲ ರಾಜಧಾನಿ ಕೊರ್ಕೈನಲ್ಲಿದ್ದಿತು. ನಂತರ ಮೊದಲನೆ ನೆಡುಂಚೆಳಿಯನ್ ಕಾಲದಲ್ಲಿ ಅದನ್ನು ಕೂಡಲ್ಗೆ (ಮಧುರೈ) ಸ್ಥಳಾಂತರಿಸಲಾಯಿತು. ಪಾಂಡ್ಯರ ಲಾಂಛನ ಜೋಡಿ ಮೀನುಗಳು. ಒಂದನೇ ನೆಡುಂಚೆಳಿಯನ್. ಸಂಗಂ ಸಾಹಿತ್ಯದಲ್ಲಿ ದಾಖಲಾಗಿರುವ ಮೊದಲ ದೊರೆ. ತಾಮ್ರಪರ್ಣಿ ನದಿ ಮುಖದಲ್ಲಿನ ಕೊರ್ಕೈ ಈತನ ರಾಜಧಾನಿ. ಈತನ ಕಾಲದಲ್ಲಿ ತಮಿಳು ಪ್ರದೇಶ ಹಲವಾರು ಸಣ್ಣ ರಾಜರ ಆಳ್ವಿಕೆಗೆ ಒಳಪಟ್ಟಿದ್ದಿತು. ಈತ ಅಕುಟ್ಟೈ ಹೆಸರಿನ ಪಾಳೇಗಾರನಿಗೆ ಸೇರಿದ್ದ ಕೂಡಲ್ (ಮಧುರೈ) ಮೇಲೆ ದಾಳಿಮಾಡಿ ಅದನ್ನು ವಶಪಡಿಸಿಕೊಂಡು ತನ್ನ ರಾಜಧಾನಿಯನ್ನಾಗಿ ಬದಲಾಯಿಸಿಕೊಂಡನು. ಉತ್ತರದಿಂದ ಬಂದ ಸೇನೆಯನ್ನು ಹಿಮ್ಮೆಟ್ಟಿಸಿ ಅರಿಯಪ ಪಡೈಕಡಂತ (ಆರ್ಯ ಪಡೆ ಗೆದ್ದ) ಪಾಂಡ್ಯನ್ ಎಂಬ ಬಿರುದು ಧರಿಸಿದನು. ಈತನ ಮಗ ಪುರಪ್ಪಾಂಡಿಯನ್ ಈಗಿನ ಪುದುಕ್ಕೋಟ್ಟೈ ಸನಿಹದ ಒಳೆಯೂರನ್ನು ಗೆದ್ದನು. ಇವರಿಬ್ಬರೂ ಸ್ವಯಂ ಕವಿಗಳಾಗಿದ್ದು ಪುರನಾನೂರು ಸಂಗ್ರಹದಲ್ಲಿ ಇವರ ರಚನೆಗಳಿವೆ. ಇಮ್ಮಡಿ ನೆಡುಂಚೆಳಿಯನ್: ಪುರಪ್ಪಾಂಡಿಯನ್ ನಂತರ ಅಧಿಕಾರಕ್ಕೆ ಬಂದವನು. ಈತನಿಗೆ ಪಸುಂಪನ್ ಪಾಂಡ್ಯನ್ ಎಂಬ ಹೆಸರಿದ್ದಿತು. ಈತ ಅಧಿಕಾರಕ್ಕೆ ಬಂದ ತಕ್ಷಣ ವೈಗೈ ನದಿ ಉತ್ತರಕ್ಕೆ ದಂಡೆತ್ತಿ ಹೋಗಿ ಇಮ್ಮಡಿ ಎವ್ವಿ ಮತ್ತು ಅಯಿ ಎಂಬ ಇಬ್ಬರು ಪಾಳೇಗಾರರನ್ನು ಸೋಲಿಸಿದನು. ಈತನ ರಾಜ್ಯ ಪೂರ್ವ ಪಶ್ಚಿಮ ಕರಾವಳಿಗಳ ನಡುವೆ ಹಬ್ಬಿದ್ದರಿಂದ ಈತನಿಗೆ ಕಡಲ್ ವಡಿಂಪಲಂಬನಿಂದ್ರ ಪಾಂಡ್ಯನ್ (ಎರಡು ಸಮುದ್ರಗಳು ಮೈದೊಳೆವ ಪ್ರದೇಶದ ಪಾಂಡ್ಯನ್) ಎಂಬ ಹೆಸರಿದ್ದಿತು. ಈತನನ್ನು ಪನ್ನಾಡು ತಂತ (ಹಲವು ಪ್ರದೇಶಗಳನ್ನು ಲಗತ್ತಿಸಿಕೊಂಡ) ಪಾಂಡ್ಯನ್ ಎಂಬ ಬಿರುದು ಸಹ ಇದ್ದಿತು. ಈತನ ನಂತರ ಬಂದ ಮುದುಕುಡುಮಿ ಪೆರುವಾಳುಡಿ ಮಹಾಪರಾಕ್ರಮಿಯಾಗಿದ್ದು ಉತ್ತರದ ಪರಂಪರೆಯಂತೆ ಬ್ರಾಹ್ಮಣ ಅರ್ಚಕರಿಂದ ಹಲವಾರು ಯಾಗಗಳನ್ನು ನಡೆಸಿದನು. ಮುಮ್ಮುಡಿ ನೆಡುಂಚೆಳಿಯನ್: ಈತ ಸಂಗಂ ಕಾಲದ ಪಾಂಡ್ಯರಲ್ಲಿ ಬಹು ವಿಖ್ಯಾತನಾದ ವೀರ. ಈತನ ನೆರೆಯವರಾದ ಚೇರ,ಚೋಳ ಮತ್ತು ಇನ್ನಿತರ ಐದು ಜನ ಸಣ್ಣ ರಾಜರುಗಳ ಒಕ್ಕೂಟದ ವಿರುದ್ದ ಸೆಣೆಸಿ ಈಗಿನ ತಂಜಾವೂರು ಜಿಲ್ಲೆಯ ತಲೈಲಂಗಂನ ಕದನವನ್ನು ಗೆದ್ದು ತಲೈಲಂಗಂನತ್ತು ಸೆರುವೇಂದ್ರ ಪಾಂಡ್ಯನ್ ಎಂಬ ಹೆಸರನ್ನು ಧರಿಸಿದನು. ಈತನ ನಂತರ ಮುಸಿರಿಯನ್ನು ಗೆದ್ದ ಮುತ್ತಿರಿಯ ಚೆಳಿಯನ್ ಹಾಗು ತಿರುವಳ್ಳುವರ್ಗೆ ನೆಲೆಯೊದಗಿಸಿದ್ದ ಉಕ್ಕಿರಪ್ಪ ಪೆರುವಾಳುಡು ಪಾಂಡ್ಯನಾಡನ್ನು ಆಳಿದರು. ವಿಶ್ಲೇಷಣೆ * ಮಂಗುಳಂ (ಮೀನಾಕ್ಷಿಪುರಮ್) ಶಿಲಾಬರಹದಲ್ಲಿ ಪರೋಕ್ಷವಾಗಿ ಪಾಂಡ್ಯ ರಾಜ ನೆಡುಂಚೆಳಿಯನ್ ಉಲ್ಲೇಖವಿದೆಯೆಂದು ಹೇಳಲಾಗುತ್ತಿದೆ. ಆದರೆ ಈ ಶಿಲಾಶಾಸನದ ಪಾಠ ಅಂತಹ ಯಾವ ಪುರಾವೆಗಳನ್ನು ಒದಗಿಸುವುದಿಲ್ಲ. (ನೋಡಿರಿ : ತಮಿಳು ಬ್ರಾಹ್ಮಿ) * ಸಂಗಂ ಸಮಕಾಲೀನರಾದ ತುಳುನಾಡನ್ನು ಆಳಿದ ಆಳುಪ ದೊರೆಗಳಿಗೆ ಪಾಂಡ್ಯರೆಂಬ ಹೆಸರಿದ್ದಿತು. ಪಾಂಡ್ಯ ಕೇವಲ ತಮಿಳಗಂಗೆ ಸೀಮಿತವಾದ ಹೆಸರಲ್ಲ. ತುಳುವಿನಲ್ಲಿ ಪಾಂಡಿ ಎಂದರೆ ದೊಡ್ಡ ಗಾತ್ರದ ವ್ಯಾಪಾರ ದೋಣಿ. ಪಾಂಡ್ಯ ಕುಲನಾಮ ಪಾಂಡಿ ಶಬ್ಧದಿಂದ ಬಂದಿರಬಹುದೆಂದು ಸೇಡಿಯಾಪು ಕೃಷ್ಣಭಟ್ಟರು ಅಭಿಪ್ರಾಯಪಟ್ಟಿದ್ದಾರೆ. ಆಳುಪರು ಮತ್ತು ಪಾಂಡ್ಯರು ಪಶ್ಚಿಮ ಕರಾವಳಿಯಲ್ಲಿ ನೆಲೆಹೊಂದಿದ್ದರು. ತಮಿಳಗಂನ ಪಾಂಡ್ಯರಂತೆ ತುಳುನಾಡಿನ ಆಳುಪರು ಸಹ ಜೋಡಿ ಮೀನಿನ ಲಾಂಛನ ಹೊಂದಿದ್ದರು. ಕರ್ನಾಟಕದ ಕರಾವಳಿಯಲ್ಲಿ ಭೂತಳ ಪಾಂಡ್ಯನೆಂಬ ದೊರೆ ಕ್ರಿ.ಶ. 77 ರ ಅವಧಿಯಲ್ಲಿ ಈಗಿನ ಮಂಗಳೂರು ಸಮೀಪದ ಬಾರ್ಕೂರಿನಿಂದ ಆಳುತ್ತಿದ್ದನೆಂದು ಪಾಂಡಿಯನ್ನು ಹೊಂದಿದ್ದ ಈತನನ್ನು ಕುರಿತಾದ ಭೂತಳ ಪಾಂಡ್ಯ ಚರಿತಂ ಎಂಬ ಸಂಸ್ಕೃತ ಗ್ರಂಥದಿಂದ ತಿಳಿದುಬರುತ್ತದೆ. ಆಧುನಿಕ ಕೇರಳ ರಾಜ್ಯದ ಪ್ರದೇಶಗಳು ಈತನ ಆಡಳಿತಕ್ಕೊಳಪಟ್ಟಿದ್ದವು. ಪುರಾಣಗಳಲ್ಲಿ ಈ ಪಾಂಡ್ಯನ ಬಗೆಗೆ ಮಾಹಿತಿಗಳು ದಕ್ಕುತ್ತವೆ. ಕೆಲ ವಿದ್ವಾಂಸರು ವಿದೇಶಿ ಬರಹಗಾರರು ಹೇಳುವ ಪಾಂಡಿಯನ್ ರಾಜ್ಯ ಇದೆಂದು , ತಮಿಳಗಂನಲ್ಲಿರುವುದಲ್ಲವೆಂದು ವಾದಿಸಿದ್ದಾರೆ. * ಸಂಗಂ ಕಾಲದ ಪಾಂಡ್ಯರ ಬಗೆಗೆ ದಕ್ಕುವ ಸಾಹಿತ್ಯವೆಲ್ಲವು ಕ್ರಿ,ಶ. ಏಳನೇ ಶತಮಾನದ ನಂತರ ಸೃಜಿತವಾದುದು. ಕ್ರಿ.ಶ. 730-765ರಲ್ಲಿದ್ದ ಪಾಂಡ್ಯ ದೊರೆ ಅರಿಕೇಸರಿ ಪರಾತಂಕ ಮಾರವರ್ಮನ್ ಕುರಿತಾಗಿ ಹಲವಾರು ತಾಮ್ರಶಾಸನಗಳು ಲಭ್ಯವಿವೆ. ಈತ ಪ್ರಮುಖ ಚೇರರಾಜರನ್ನು ಸೋಲಿಸಿರುವುದಾಗಿ ದಾಖಲಾಗಿದೆ. ಕರ್ನಾಟಕದಿಂದ ಹೋದ ನಂಬೂದರಿಗಳೇ ಮಧ್ಯಕಾಲೀನ ಪಾಂಡ್ಯ ರಾಜ್ಯ ಸ್ಥಾಪಿಸಿದರೆಂದು ಕೆಲ ವಿದ್ವಾಂಸರ ಅಭಿಮತ. ಆದ್ದರಿಂದ ಆದಿಪಾಂಡ್ಯರ ಬಗ್ಗೆ ಐತಿಹಾಸಿಕ ಸಾಕ್ಷ್ಯಗಳು ಅಲಭ್ಯ. ಶಿಲಾಶಾಸನಗಳಲ್ಲಿ ಕ್ರಿ.ಶ. 1000 ಕ್ಕೆ ಮುಂಚಿನ ಭಾರತದ ಇತಿಹಾಸದ 80% ಭಾಗ ಶಿಲಾಬರಹಗಳಿಂದ ದಕ್ಕಿದೆ. ಸಾಹಿತ್ಯ ಕೃತಿಗಳು ಮೂಲಪ್ರತಿಯ ನಕಲು,ಅದರ ನಕಲಾಗುತ್ತ ಪಠ್ಯ ದೋಷ , ಲಿಪಿ ದೋಷ , ನಕಲುಗಾರನ ಅಸಮರ್ಪಕತೆ, ನಕಲುಗಾರ ತನಗೆ ಬೇಕಾದುದನ್ನು ಸೇರಿಸುವ , ಬೇಕಿಲ್ಲದ್ದನು ಕೈಬಿಡುವ , ಮೂಲ ಕೃತಿಯನ್ನು ತಿದ್ದುವ ಸ್ವಾತಂತ್ರವಿರುವುದರಿಂದ ಕಾಲಾನುಕ್ರಮದಲ್ಲಿ ಈ ಮೂಲದ ಮಾಹಿತಿ ದೋಷಯುಕ್ತವಾಗುತ್ತ ಹೋಗುತ್ತದೆ. ಇಂತಹ ಕೊರತೆಗಳು ಶಿಲಾಶಾಸನಗಳಿಗಿಲ್ಲ. ಆದ್ದರಿಂದ ಭಾರತದಲ್ಲಿ ಶಿಲಾಶಾಸನಗಳು ಇತಿಹಾಸದ ಅತ್ಯಂತ ಪ್ರಮುಖ ಅಂಗಗಳು. ಭಾರತದಲ್ಲಿ ಶಿಲಾಶಾಸನಗಳ ಚೌಕಟ್ಟಿನ ಮೇಲೆ ನಿರ್ಮಿಸಿದ ಇತಿಹಾಸಕ್ಕೆ ಸಾಹಿತ್ಯ ರಕ್ತ ಮಾಂಸ ತುಂಬಿದೆ. ಶಿಲಾಶಾಸನಗಳಲ್ಲಿ ದಕ್ಕಿದ ಮಾಹಿತಿಗೆ ಸಾಹಿತ್ಯ ಮೂಲದ ಮಾಹಿತಿ ಪರಿಪೂರಕವೆಂಬಂತೆ ವರ್ತಿಸುತ್ತದೆ. ಸಂಗಂ ಸಾಹಿತ್ಯ ಕಾಲದಲ್ಲಿ ಭಾರತದಲ್ಲಿ ಬೇರೆ ಭಾಗಗಳಲ್ಲಿದ್ದ ರಾಜರುಗಳ ನೂರಾರು ಶಿಲಾಶಸನಗಳು ದಕ್ಕಿವೆ. (ನೋಡಿರಿ : ತಮಿಳು ಬ್ರಾಹ್ಮಿ) ಆದರೆ ಸ್ವಯಂ ಕವಿಗಳು , ಸಾಹಿತ್ಯ ಪೆÇೀಷಕರು, ದಾನಿಗಳು ಆಗಿದ್ದ ತಮಿಳಗಂನ ಆರಂಭಿಕ ಕಾಲದ ರಾಜರುಗಳ ಯಾವುದೇ ನೇರ ಶಿಲಾಶಾಸನಗಳು ದಕ್ಕದಿರುವುದು ಆ ಕಾಲದಲ್ಲಿ ತಮಿಳಗಂನಲ್ಲಿ ಲಿಪಿ ಸಂಸ್ಕೃತಿಯ ಬಗೆಗೆ ಮರು ಚಿಂತನೆ ನಡೆಸುವಂತೆ ಪ್ರೇರೇಪಿಸುತ್ತದೆ. ಅಶೋಕನ ಶಿಲಾಶಾಸನಗಳು ಕ್ರಿ.ಪೂ 300 ರ ಮೌರ್ಯ ಚಕ್ರವರ್ತಿ ಅಶೋಕನ ಗಿರ್ನಾರ್ನ ಎರಡು ಮತ್ತು ಹದಿಮೂರನೇ ಹೆಬ್ಬಂಡೆಶಾಸನಗಳಲ್ಲಿ ತಮಿಳು ರಾಜರ ಉಲ್ಲೇಖವಿರುವುದಾಗಿ ಗುರುತಿಸಲಾಗಿದೆ. ಎರಡನೇ ಹೆಬ್ಬಂಡೆ ಶಾಸನ : ‘……….ಪ್ರಿಯದರ್ಶಿನಿ , ದೇವನಾಂಪ್ರಿಯ ಗೆದ್ದ ಸಾಮ್ರಾಜ್ಯದ ಎಲ್ಲೆಯೊಳಗೆ , ಕೊಡ,ಪಡ,ಸತಿಯಪುತೋ, ಕೆರಪುತೋ,ತಂಬಪಣ್ಣಿ, ಅಂತಿಯೋಗೋ ಹೆಸರಿನ ಯವನ ದೊರೆಯ, ಆ ದೊರೆಯ ನೆರೆ ರಾಜ್ಯಗಳೂ ಸೇರಿದಂತೆ ನೆರೆ ರಾಜ್ಯಗಳ ಗಡಿಯಲ್ಲಿ (ಅಂತ ಅಟ ಕೊಡ,ಪಡ, ಸತಿಯಪುತೋ, ಕೆರಪುತೋ, ತಂಬಪಣ್ಣಿ ಅಂತಿಯೋಗೋ ನಾಮ ಮಾನಲಾಜ) ಮಾನವ ಹಾಗೂ ಪಶುಗಳಿಗಾಗಿ ಎರಡು ಬಗೆಯ ಉಪಚಾರಗಳನ್ನು ಪ್ರಿಯದರ್ಶಿನಿ ಏರ್ಪಡಿಸಿರುತ್ತಾನೆ. ……” ಹದಿಮೂರನೇ ಹೆಬ್ಬಂಡೆ ಶಾಸನ : ‘…….ಗ್ರೀಕರ ದೇಶದ ಹೊರತಾಗಿ ಬ್ರಾಹ್ಮಣರು , ಪೂಜ್ಯರು ಇರದ ದೇಶವಿಲ್ಲ. ಯಾವುದೇ ಆಗಿರಲಿ ಧರ್ಮವನ್ನು ಪಾಲಿಸದಿರುವ ದೇಶವಿಲ್ಲ..........ಗ್ರೀಕ್ ದೊರೆ ಅಂತಿಯೋಗೋ ಆಳುವಲ್ಲಿ , ಟಾಲೆಮಿ,ಅಂತಿಗೊನೊಸ್, ಮಗಾಸ್ ಮತ್ತು ಅಲೆಕ್ಸಾಂಡರ್ ಆಳ್ವಿಕೆ ಇರುವಲ್ಲಿ , ಅದರಂತೆ ದಕ್ಷಿಣದಲ್ಲಿನ ಕೊಡ,ಪಡರಲ್ಲಿ , ತಂಬಪಣ್ಣಿಯವರೆಗೆ , ಇಲ್ಲಿ ಚಕ್ರವರ್ತಿಯ ಸಾಮ್ರಾಜ್ಯದಲ್ಲಿರುವ ಗ್ರೀಕ್,ಕಾಂಭೋಜ, ನಭಕ,ನಭಪಂಕಿತ, ಭೋಜ, ಪಿತಿನಿಕ, ಆಂಧ್ರ, ಪಳಿದರಲ್ಲಿ ..... ‘ * ಇಲ್ಲಿ ಕೊಡ=ಚೋಳ , ಪಡ = ಪಾಂಡ್ಯ , ಕೆರಪುತೋ=ಚೇರ, ತಂಬಪಣ್ಣಿ = ಶ್ರೀಲಂಕಾ ಎಂದು ಅರ್ಥೈಸಲಾಗಿದೆ. ಅಶೋಕನ ಶಾಸನದಲ್ಲಿನ ಕೇರಪುತೋ ಎಂದರೆ ಕೇರಳ ಅಥವಾ ಚೇರರನ್ನು ಹೇಳುತ್ತದೆಯೋ ಎಂದು ನಮಗೆ ಸ್ಪಷ್ಟತೆಯಿಲ್ಲ. ಆದ್ದರಿಂದ ಚೇರಪುತ್ರ>ಕೆರಪುತೋ ಎಂಬುದು ಪ್ರದೇಶದಿಂದ ಜನರಿಗೆ ಬಂದ ಹೆಸರೋ ಅಥವಾ ಜನರಿಂದ ಪ್ರದೇಶಕ್ಕೆ ಬಂದುದೋ ಸ್ಪಷ್ಟವಾಗುವುದಿಲ್ಲ. ಅಶೋಕ ತನ್ನ ಶಿಲಾಶಾಸನಗಳಲ್ಲಿ ಸಂಸ್ಥಾಪಿತ ರಾಜರನ್ನು ಹೆಸರಿಸಿದಂತೆ ದಕ್ಷಿಣದ ರಾಜರನ್ನು ಹೆಸರಿಸದೆ ಚೋಳ,ಪಾಡ,ಕೇರಳಪುತ್ರ,ಸತ್ಯಪುತ್ರ ಎಂದು ಹೇಳಿರುವುದರಿಂದ ಆ ಕಾಲದಲ್ಲಿ ತಮಿಳಗಂ ಹಲವಾರು ಬುಡಕಟ್ಟು ಮುಖ್ಯರ ವಶದಲ್ಲಿದ್ದು ಸಂಸ್ಥಾಪಿತ ರಾಜ್ಯವಾಗಿರಲಿಲ್ಲ. ಹಾಥಿಗುಂಪಾ ಶಿಲಾಶಾಸನ ಒಡಿಷಾ ರಾಜಧಾನಿ ಭುವನೇಶ್ವರ ಸಮೀಪದ ಹಾಥೀಗುಂಪಾದಲ್ಲಿರುವ (ಆನೆ ಗವಿ) ಚೇದಿವಂಶದ ಖಾರವೇಳನ(ಕ್ಷಾರವೇಳ) ಶಾಸನ. ಈ ಶಿಲಾಶಾಸನ ಗವಿಯ ಮುಂಭಾಗದಲ್ಲಿ ಕೊರೆದ ಇಳಿಜಾರಿನ ಮುಖದಲ್ಲಿದೆ. ಈ ಶಾಸನದಲ್ಲಿ ಹದಿನೇಳು ಸಾಲುಗಳಿದ್ದು ಬ್ರಾಹ್ಮಿ ಲಿಪಿಯಲ್ಲಿ ಆಳವಾಗಿ ಕೊರೆಯಲಾಗಿದೆ. ಇಲ್ಲಿಂದ 9 ಕಿ. ಮೀ ದೂರದಲ್ಲಿನ ಧೌಳಿಯಲ್ಲಿ ಅಶೋಕನ ಶಿಲಾಶಾಸನವಿದೆ. ಮೌರ್ಯ ಶಕೆಯ 165 ನೇ ವರ್ಷದಲ್ಲಿ ಇದನ್ನು ಲಿಪಿಗೊಳಿಸಲಾಯಿತೆಂದು ಸೂಚಿತವಾಗಿದೆ. ಆದರೆ ಕೆಲ ವಿದ್ವಾಂಸರು ಮೌರ್ಯ ಎಂಬುದನ್ನು ಮುಖ್ಯ ಎಂದು ಓದಿದ್ದಾರೆ. ಕ್ರಿ.ಪೂ. 321 ರಲ್ಲಿ ಚಂದ್ರಗುಪ್ತ ಮೌರ್ಯ ಪಟ್ಟಾಭಿಷಿಕ್ತನಾದಗಿನಿಂದ ಮೌರ್ಯ ಶಕೆ ಪ್ರಾರಂಭಯಾಯಿತೆಂದು ಪರಿಗಣಿಸಿದಾಗ (321-165)=ಕ್ರಿ.ಪೂ 156 ರಲ್ಲಿ ಈ ಶಾಸನವನ್ನು ಬರೆಯಿಸಲಾಗಿದೆ. 156+13=ಕ್ರಿ. ಪೂ 169 ರಲ್ಲಿ ಖಾರವೇಳ ಅಧಿಕಾರಕ್ಕೆ ಬಂದ ಏಳು ವರ್ಷಗಳ ನಂತರ ಎಂದರೆ ಕ್ರಿ. ಪೂ 162 ರಲ್ಲಿ ಯವನ ದೊರೆ ಡೆಮೆತ್ರಿಯನ್ನ್ನು ಸೋಲಿಸಿದನು. ಖಾರವೇಳನ ಈ ಶಾಸನದಲ್ಲಿ ತಮಿಳು ದೊರೆಗಳ ಉಲ್ಲೇಖ 4,11 ಹಾಗೂ 13 ನೇ ಸಾಲಿನಲ್ಲಿ ಬಂದಿದೆಯೆಂದು ಹೇಳಲಾಗುತ್ತಿದೆ. ಸಾಲು 4 : ಮೂವತ್ತೈದು ಸಾವಿರ ಜನರ (ಬಲಿದಾನದಿಂದ) ಆಯಿತು. ಹಾಗೂ (ಆತ) ಜನರನ್ನು ಸಂತುಷ್ಟಗೊಳಿಸಿದನು ಮತ್ತು ಎರಡನೇ ವರ್ಷದಲ್ಲಿ (ಆತ) ಸಾತಕಾಮಿನಿಯನ್ನು ಉಪೇಕ್ಷಿಸಿ, ಕುದುರೆ, ಆನೆ, ರಥ ಹಾಗೂ ಕಾಲಾಳುಗಳನ್ನು ಪಶ್ಚಿಮದತ್ತ ನಿಯೋಜಿಸಿ ಕನ್ಹ-ಬೆಮ್ನಾ ನದಿಯನ್ನು ತಲುಪಿ ತಲುಪಿ ಮುಶಿಕನಗರವನ್ನು ಚೆಲ್ಲಾಪಿಲ್ಲಿಗೊಳಿಸಿದನು. ಮತ್ತೊಮ್ಮೆ ಮೂರನೇ ವರ್ಷದಲ್ಲಿ . ಸಾಲು 11 : ಮತ್ತು ಅವ ರಾಜನಿಂದ ಸ್ಥಾಪಿಸಲ್ಪಟ್ಟ ಪಿತ್ತುಮ ನಗರವನ್ನು ಕತ್ತೆಗಳಿಂದ ಉತ್ತನು. ಮತ್ತು (ಆತ) ತನ್ನ ರಾಜ್ಯ ಹಾಗೂ ಜನಪರರಿಗೆ ಅಪಾಯಕಾರಿಯಾಗಿದ್ದ ನೂರ ಹದಿಮೂರು ವರ್ಷಗಳ ತಮಿರರ ಒಕ್ಕೂಟವನ್ನು ಒಡೆದನು. ಹಾಗೂ ಹನ್ನೆರಡನೇ ವರ್ಷದಲ್ಲಿ ಉತ್ತರಾಧಿಪತಿ ರಾಜರಲ್ಲಿ ನಡುಕವನ್ನುಂಟು ಮಾಡಿದನು. ಸಾಲು 13 : (ಆತ) ಒಳಗಡೆ ಕೆತ್ತನೆಯಿಂದ ಕೂಡಿದ ಅತ್ಯುತ್ತಮ ಗೋಪುರವನ್ನು ನಿರ್ಮಿಸಿದನು. ನೂರಾರು ಕಟ್ಟಡ ಶಿಲ್ಪಿಗಳಿಗೆ ನೆಲೆ ಕಲ್ಪಿಸಿ ಅವರನ್ನು ಭೂಮಿ ತೆರಿಗೆಯಿಂದ ಮುಕ್ತಗೊಳಿಸಿದನು. ಆನೆಗಳನ್ನು ತರುಬಲು ಅದ್ಭುತವಾದ ಪ್ರಾಕಾರಗಳನ್ನು ನಿರ್ಮಿಸಿದನು. ಪಾಂಡ್ಯ ದೊರೆ ನೂರಾರು ಸಂಖ್ಯೆಯಲ್ಲಿ ಆನೆ, ಕುದುರೆ , ಮುತ್ತು,ರತ್ನಗಳನ್ನು ತರುವಂತೆ ಮಾಡಿದನು. ವಿಶ್ಲೇಷಣೆ * ಖಾರವೇಲನ ಶಿಲಾಶಾಸನ ದೀರ್ಘಕಾಲ ನೈಸರ್ಗಿಕ ಬಲಗಳಿಗೆ ಪಕ್ಕಾದುದರಿಂದ ಇದರಲ್ಲಿನ ಹಲವಾರು ಅಕ್ಷರ, ಶಬ್ಢ ಮತ್ತು ಸಾಲುಗಳು ಭಾಗಶಃವಾಗಿ ಮುಕ್ಕಾಗಿವೆ. ಇದರಿಂದ ಓದಿಕೆಯಲ್ಲಿ ಹಲವಾರು ಪಾಠಾಂತರಗಳಿವೆ. ಇದಲ್ಲಿನ ಭಾಷೆ ಮತ್ತು ವ್ಯಾಕರಣ ವಿದ್ವಾಂಸರಿಂದ ಬಹು ಚರ್ಚಿತವಾಗಿವೆ. ಇದರಿಂದಾಗಿ ವಿಭಿನ್ನ ವಿದ್ವಾಂಸರು ಇದನ್ನು ವಿವಿಧ ರೀತಿಯಲ್ಲಿ ಓದಿ ಅರ್ಥೈಸಿದ್ದಾರೆ. * ನಾಲ್ಕನೇ ಸಾಲಿನಲ್ಲಿರುವ ಮುಶಿಕನಗರ ಉತ್ತರ ಕೇರಳದ ಮುಶಿರಿಯೆಂದು ಇದು ತಮಿಳಗಂನ ಬಂದರೆಂದು ಹೇಳಲಾಗುತ್ತಿದೆ. ಆಂಧ್ರಪ್ರದೇಶದ ತೀರದ ಪಟ್ಟಣ ಇದೆಂದು ಕೆಲವರು ಹೇಳಿದ್ದಾರದರೂ ಇದಕ್ಕೆ ಸಮರ್ಥನೆಯನ್ನೊದಗಿಸಲಾಗಿಲ್ಲ. ಸದಾನಂದ ಅಗರ್ವಾಲ್ ಕನ್ಹ-ಬೆಮ್ನಾ (ಕೃಷ್ಣವೇಣ=ಕರಿಹೊಳೆ) ಎಂದರೆ ಸಾಮಾನ್ಯವಾಗಿ ಕೃಷ್ಣಾ ನದಿಯೆಂಬ ಅರ್ಥವಿದೆಯಾದರು ಕೃಷ್ಣಾ ನದಿ ಕಳಿಂಗದ ದಕ್ಷಿಣಕ್ಕೆ ಹರಿಯುತ್ತದೆ. ಆದ್ದರಿಂದ ಖಾರವೇಲ ಉಲ್ಲೇಖಿಸಿದ ಕಳಿಂಗದ ಪಶ್ಚಿಮಕ್ಕೆ ಹರಿಯುವ ನದಿ ಇದಲ್ಲ. ಮಹಾರಾಷ್ಟ್ರದ ವಿದರ್ಭ ಪ್ರದೇಶದ ನಾಗಪುರದ ಪಶ್ಚಿಮಕ್ಕೆ ಹರಿಯುವ ಕನ್ಹನ್ ನದಿ ಮುಂದೆ 17 ಕಿ.ಮೀ ದೂರದಲ್ಲಿ ವೇಣಾ (ವೈನ ಗಂಗಾ) ನದಿಯನ್ನು ಸೇರಿ ಕನ್ಹ-ವೇಣಾ ಆಗುತ್ತದೆ. ನಾಗ್ಪುರ ಜಿಲ್ಲೆಯ ಅಡಂನಲ್ಲಿ ನಡೆಸಿದ ಉತ್ಖನನಗಳಲ್ಲಿ ಅಸಕ ಜಾನಪದದ ಮುದ್ರೆಗಳು ದೊರೆತಿವೆ. ಆದ್ದರಿಂದ ಇದು ಖಾರವೇಲ ಹೇಳುವ ಅಶಿಕನಗರವೆಂದು ಖಚಿತಪಡಿಸಿದ್ದಾರೆ. (ಲೇ:31) * ಹನ್ನೊಂದನೇ ಸಾಲಿನಲ್ಲಿರುವ ತಮಿರರ ಒಕ್ಕೂಟ ತಮಿಳು ರಾಜರಾದ ಚೋಳ, ಚೇರ ಮತ್ತು ಪಾಂಡ್ಯರನ್ನು ಪ್ರತಿನಿಧಿಸುತ್ತದೆ ಯೆಂದು ಮೊದಲ ಬಾರಿಗೆ ಕೆ.ಎ. ನೀಲಕಂಠಶಾಸ್ತ್ರಿಗಳು ಹೇಳಿದರು. ಈ ಆಧಾರದ ಮೇಲೆ ಕ್ರಿ.ಪೂ 156ರ ಅವಧಿಯಲ್ಲೇ ತಮಿಳರು ಖಾರವೇಲನಿಗೆ ಸರಿಸಮಾನವಾದ ಸಾಮ್ರಾಜ್ಯ ಸ್ಥಾಪಿಸಿದ್ದರೆಂದೂ ಹಾಗೂ ಅವರು ತಮಿಳಗಂನ್ನು ಪರರ ಆಕ್ರಮಣದಿಂದ ರಕ್ಷಿಸಲು ತಮ್ಮಲ್ಲೇ ಒಪ್ಪಂದವೊಂದನ್ನು ಮಾಡಿಕೊಂಡಿದ್ದರೆಂದು ಇದನ್ನೇ ಖಾರವೇಲ ತಮಿರ ಸಂಘಟ್ಟನಂ ಎಂದು ಶಿಲಾಶಾಸನದಲ್ಲಿ ಸೂಚಿಸಿದ್ದಾನೆಂದು ವಾದಿಸಲಾಗುತ್ತಿದೆ. ಇದರ ಆಧಾರದ ಮೇಲೆ ಅಂತರ್ಜಾಲದಲ್ಲಿ ಸುದೀರ್ಘವಾದ ಲೇಖನಗಳನ್ನು ಬರೆದು ತಮಿಳು ರಾಜರುಗಳು ಆಧುನಿಕ ರೀತಿಯಲ್ಲಿ ದೇಶ ದೇಶಗಳು ಮಾಡಿಕೊಳ್ಳುವಂತಹ ರಕ್ಷಣಾ ಒಪ್ಪಂದವನ್ನು ಹೊಂದಿದ್ದರೆಂದು ರಂಜಕವಾಗಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಇಂತಹ ವಾದಕ್ಕಿರುವ ಅಡಚಣೆಗಳನ್ನು ನಾವು ಮುಂದೆ ಗಮನಿಸಬಹುದು. * ಎಸ್.ಕೆ. ಸಾಗು ಶಾಸನದ 11 ನೇ ಸಾಲನ್ನು ‘’’’ಜನಪದ ಭವನಂ ಚ ತೆರಸ ಸತ ಕಟಂ ಭಿದತಿ ತ್ರಮಿರ ದೇಹ ಸಂಘಟ್ಟನಂ’’’’ ಎಂದು ಓದಿ ಇದು ಸಂಸ್ಕೃತದಲ್ಲಿ ‘’’ಜನಪದ ಭವನಂ ಚ ತ್ರಯೋದಶ ವರ್ಷ ಸತ ಕೃತಂ ಭಿನತ್ತ ದ್ರಮಿಲ ದೇಶ ಸಂಘಟ್ಟನಂ’’ ‘ ಎಂದಾಗುವುದೆಂದು ಹೇಳಿದ್ದಾರೆ. ಕೆ.ಪಿ ಜೈಸ್ವಾಲ್ ಇದೇ ಸಾಲನ್ನು ‘’’’ಜನಪದ ಭವನಂ ಚ ತೆರಸ-ವಸ-ಸತ-ಕೇತು-ಭವ ತಿತ್+ಅಮರ ದೇಹ ಸಂಘಟ್ಟನಂ’ ‘ ಎಂದು ಓದಿದ್ದಾರೆ. ಜೈಸ್ವಾಲರ ಓದಿಕೆಯಲ್ಲಿ ತ್ರಮಿರ ತಿತ್+ಅಮರ ರೂಪ ತಾಳಿ ಬೇರೆಯದೇ ಆದ ಅರ್ಥ ಹೊಂದಿದೆ. * ಖಾರವೇಲ ತಮಿಳರ ಒಕ್ಕೂಟವನ್ನು ಸೋಲಿಸಬೇಕೆಂದರೆ ಆಗ ತಮಿಳಗಂ ಮತ್ತು ಖಾರವೇಲನ ರಾಜ್ಯದ ನಡುವಿದ್ದ ಶಾತವಾಹನರ ಪ್ರದೇಶವನ್ನು ಹಾಯ್ದುಹೋಗಲೇಬೇಕು. ಸ್ವತಂತ್ರ ಆಡಳಿತ ನಡೆಸುತ್ತಿದ್ದ ಶಾತವಾಹನರು ಇದಕ್ಕೆ ಆಸ್ಪದ ನೀಡಿರುವ ಸಾಧ್ಯತೆಗಳಿಲ್ಲ. ಒಂದು ವೇಳೆ ಖಾರವೇಲ ಶಾತವಾಹನರನ್ನು ಉಪೇಕ್ಷಿಸಿ ಪಶ್ಚಿಮದ ಕನ್ಹ-ಬೆಮ್ನಾದತ್ತ ಹೋದಂತೆ ದಕ್ಷಿಣದತ್ತ ಸಾಗಿದ್ದನೆಂದರೆ ಅಂತಹ ಮಹತ್ವದ ವಿಷಯವನ್ನು ತನ್ನ ಶಾಸನದಲ್ಲಿ ಹೇಳದಿರುತ್ತಿರಲಿಲ್ಲ. * ಖಾರವೇಲನ ಶಾಸನದಲ್ಲಿ ಮು(ಅ)ಶಿಕ (ಸಾಲು 4) ರಥಿಕ , ಭೋಜಿಕರು (ಸಾಲು-6) , ಯವನ ದೊರೆ ದಿಮಿತ (ಸಾಲು-8) , ಅವ ರಾಜ ,ಉತ್ತರಾಪಥದ ರಾಜರು (ಸಾಲು-11) , ಮಗಧ ದೊರೆ ಬಹಸತಿಮಿತ (ಸಾಲು-12) , ಪಾಂಡ್ಯ ದೊರೆ (ಸಾಲು-13) , ಸಿಂಹಪಥ ರಾಣಿ ಸಿಂಧುಲ ಹೆಸರಿನ ಜನಾಂಗ , ರಾಜ , ಸಾಮ್ರಾಜ್ಯಗಳನ್ನು ಮತ್ತು ಮುಶಿಕನಗರ (ಸಾಲು-4), ಪಿತುಂದ (ಸಾಲು-11), ಅಂಗ (ಸಾಲು-12), ಮಗಧ(ಸಾಲು-12) ಮುಂತಾದ ರಾಜ್ಯ/ಸ್ಥಳಗಳನ್ನು ಹೆಸರಿಸಿದ್ದಾನೆ. ತಮಿಳಗಂಗೆ ಸೇರಿದ ಯಾವುದೇ ರಾಜ ಅಥವ ಸ್ಥಳದ ಉಲ್ಲೇಖವಿಲ್ಲ. (ಲೇ:26) * ಸಾಲು 13 ರಲ್ಲಿನ ರಾಜ ತಮಿಳು ಪಾಂಡ್ಯನೆಂದು ಭಾವಿಸಲಾಗಿದೆ. ಈ ಹಿಂದೆ ನೋಡಿದಂತೆ ಪಾಂಡ್ಯ , ಪಾಂಡ, ಪಾಂಡವ ಹೆಸರುಗಳು ಯಾರನ್ನು ಸೂಚಿಸುತ್ತವೆಯೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಭಾರತದಲ್ಲಿನ ಪ್ರಾಚೀನ ಉಲ್ಲೇಖಗಳಲ್ಲಿ ನೂರಾರು ಬಾರಿ ಈ ಸಾಮ್ಯತೆಯ ಹೆಸರುಗಳು ಬಂದಿವೆ. ತಮಿಳರ ಒಕ್ಕೂಟವನ್ನು ಮುರಿದ ನಂತರ ಪಾಂಡ್ಯರು , ಚೇರ , ಚೋಳರನ್ನು ತೊರೆದು ಪ್ರತ್ಯೇಕವಾಗಿ ಖಾರವೇಲನಿಗೆ ಶರಣಾದರೆನ್ನುವುದು ಅಸಹಜವೆನಿಸುತ್ತದೆ ಮತ್ತು ತಮಿರ ಸಂಘಟ್ಟನೆ ಮುರಿದ ವಿವರ ನೀಡುವಾಗಲೇ (ಸಾಲು-4) ಅವರಲ್ಲಿ ಶರಣಾಗತನಾದ ಪಾಂಡ್ಯನ ಬಗೆಗೆ ಹೇಳದೆ ನಂತರ ಪ್ರತ್ಯೇಕವಾಗಿ ಆತನ ಪ್ರಸ್ತಾಪ ಬರುವುದು ಆತ ತಮಿಳು ಪಾಂಡ್ಯನಲ್ಲವೆಂದು ಬಲವಾಗಿ ಪ್ರತಿಪಾದಿಸುತ್ತದೆ. * ಸಂಗಂ ಸಾಹಿತ್ಯದ ಕಾಲ ಹಾಗೂ ಅದನ್ನು ಕುರಿತಾದ ಇನ್ನಿತರ ವಿವಾದಗಳನ್ನು ಕೆಲಕಾಲ ಬದಿಗಿರಿಸಿ ನೋಡಿದಾಗಲೂ ಈ ಸಾಹಿತ್ಯದಲ್ಲಿ ಎಲ್ಲಿಯೂ ತಮಿಳು ರಾಜರುಗಳು ಒಂದು ಸಂಘಟನೆಯಾಗಿ ಕಾಣಿಸಿಕೊಂಡಿಲ್ಲ ಅಥವಾ ಉಲ್ಲೇಖಗೊಂಡಿಲ್ಲ. ಇಡೀ ಸಂಗಂ ಸಾಹಿತ್ಯ ಚೇರ,ಚೋಳ,ಪಾಂಡ್ಯರು ಇನ್ನಿತರ ವೇಳೀರ್ಗಳೊಂದಿಗೆ ತಮ್ಮ ಮೇಲೈ ಸಾಧಿಸಲು ಪರಸ್ಪರ ಹೆಣಗಾಡುತ್ತಿರುವುದು ಸ್ಪಷ್ಟವಾಗುತ್ತದೆಯೇ ಹೊರತು ಒಕ್ಕೂಟ ರಚಿಸಿಕೊಳ್ಳುವಷ್ಟು ಪ್ರಬುದ್ಧ ನಾಗರಿಕತೆಯಾಗಿ,ರಾಜಕೀಯ ಶಕ್ತಿಯಾಗಿ ಬೆಳೆದಂತೆ ತೋರಿಸುವುದಿಲ್ಲ. * ತಮಿರ : ತಮಿರ-ತಾಮ್ರ ಶಬ್ಧದ ರೂಪಾಂತರ. ಹೂಗ್ಲಿ ನದಿ ದಡದ ಬಂಗಾಳಕೊಲ್ಲಿಯ ತೀರದಲ್ಲಿರುವ ಈಗಿನ ತಮಲುಕ ಪಟ್ಟಣವೇ ತಮಿರ ದೇಹ . ಈಗ ಪಶ್ಚಿಮ ಬಂಗಾಳದಲ್ಲಿರುವ ತಮುಲಕದ ಪ್ರಾಚೀನ ಹೆಸರು ತಾಮ್ರಲಿಪ್ತಿ . ಅಶೋಕನ ಮಗಳು ಮತ್ತು ಮಗ ಶ್ರೀಲಂಕಾಕ್ಕೆ ತಾಮ್ರಲಿಪ್ತಿಯಿಂದ ಪ್ರಯಾಣ ಬೆಳಸಿದರೆಂದು ಹೇಳಲಾಗುತ್ತಿದೆ. ಪ್ರಾಚೀನ ಧರ್ಮ ಗ್ರಂಥಗಳು ಇದನ್ನು ಭಿವಾಸ್ ಎಂದು ಕರೆದು ಕಳಿಂಗ ಮತ್ತು ವಂಗಗಳ ಮಧ್ಯದೇಶವೆಂದು ಗುರುತಿಸಿವೆ. ಈ ಪ್ರಾಚೀನ ಬಂದರಿನ ದಕ್ಷಿಣಕ್ಕೆ ಬಂಗಾಳ ಸಮುದ್ರ ,ಪೂರ್ವದಲ್ಲಿ ರೂಪನಾರಾಯಣ , ಪಶ್ಚಿಮದಲ್ಲಿ ದ್ವಾರಕೇಶ್ವರ ಮತ್ತು ಶಿಲೈ ನದಿಗಳು ಜೋಡಿಯಾಗಿ ಹರಿಯುವ ಸುವರ್ಣರೇಖ ನದಿಗಳಿವೆ. ಈ ನದಿ ಪಾತ್ರಗಳಿಂದಾಗಿ ತಮಲುಕ ಕೃಷಿಯೋಗ್ಯ ಫಲವತ್ತಾದ ಭೂಮಿಯನ್ನೂ ಹೊಂದಿದೆ.ಇದು ಪ್ರಾಚೀನ ಕಾಲದಲ್ಲಿ ಬಹುಮುಖ್ಯ ವ್ಯಾಪಾರ ಕೇಂದ್ರವಾಗಿದ್ದು ಆಗಿನ ಕಾಲದಲ್ಲಿ ಖ್ಯಾತವಾಗಿದ್ದ ರೇಷ್ಮೆ ಹೆದ್ದಾರಿಯ ಮೂಲಕ ಚೀನಾ , ಉತ್ತರಾಪಥ, ಯೂರೋಪಿನ ಸಂಪರ್ಕ ಹೊಂದಿದ್ದಿತು. ಇದು ಪೂರ್ವ ದಿಕ್ಕಿನ ಬಾಲಿ, ಜಾವ ಹಾಗೂ ಸುಮಾತ್ರಗಳೆಡೆಗೆ ಸಮುದ್ರಯಾನ ಕೈಗೊಳ್ಳುವ ಬಂದರು. ತಮಲುಕ 3000 ಅಧಿಕ ವರ್ಷಗಳಿಂದ ಪ್ರಮುಖ ಜಲಮಾರ್ಗವಾಗಿ ಗುರುತಿಸಿಕೊಂಡಿದೆ. ಯಥೇಚ್ಛ ತಾಮ್ರದ ನಿಕ್ಷೆಪ ಹೊಂದಿರುವ ಘಾಟ್ಸಿಲಾ ಪ್ರದೇಶ ,ಒಡಿಷ ಮತ್ತು ಜಾರ್ಖಂಡ್ ರಾಜ್ಯಗಳು ತಮಲುಕದ ಸನಿಹದಲ್ಲಿವೆ. ಇದನ್ನು ಬಿಟ್ಟರೆ ರಾಜಸ್ಥಾನದಲ್ಲಿ ಖೇತ್ರಿಯಲ್ಲಿ ತಾಮ್ರದ ನಿಕ್ಷೇಪಗಳಿವೆ. ಈಗ ಇಲ್ಲಿ ಭಾರತ ಸರ್ಕಾರದ ಹಿಂದೂಸ್ಥಾನ್ ಕಾಪರ್ ಲಿಮಿಟೆಡ್ ಹೆಸರಿನ ತಾಮ್ರದ ಕಾರ್ಖಾನೆಯಿದೆ. ಸಾಗಣಿಕೆಯ ದೃಷ್ಟಿಯಿಂದ ಪ್ರಾಚೀನ ಕಾಲದಲ್ಲಿ ಇದು ಅಂತಹ ಪ್ರಶಸ್ತ ತಾಣವಾಗಿರಲಿಲ್ಲ. ಕ್ರಿ.ಪೂ 100 ರ ಸರಿಸುಮಾರಿಗೆ ಕಬ್ಬಿಣದ ಯುಗ ಪ್ರಾರಂಭವಾಗಿ ತಾಮ್ರದ ಆದ್ಯತೆ ಹಿಂಜರಿಯುವಂತಾಯಿತು. ಅಲ್ಲಿಯವರೆಗೆ ತಮಲುಕದಿಂದ ಭಾರತದ ದಕ್ಷಿಣ ಭಾಗಗಳಿಗೆ ತಾಮ್ರ ಸರಬರಾಜಾಗುತ್ತಿರುವ ಸಾಧ್ಯತೆಗಳು ಹೆಚ್ಚು. ತಮಲುಕದಲ್ಲಿ ಉತ್ಖನನಗಳನ್ನು ನಡೆಸಲಾಗಿದೆ. ಇದರಿಂದ ಕ್ರಿ.ಪೂ 3ನೇ ಶತಮಾನದಿಂದ ಇಲ್ಲಿ ನಿರಂತರ ಚಟುವಟಿಕೆಗಳು ನಡೆದಿರುವ ಸಾಕ್ಷ್ಯಗಳು ದಕ್ಕಿವೆ. ತಮಲುಕ ಪುರಾಣ ಹಾಗೂ ಮಹಾಭಾರತದಲ್ಲಿ ತಾಮ್ರಲಿಪ್ತಿ , ತಾಮ್ರಲಿಪ್ತ , ಐತಿಹಾಸಿಕ ಕೃತಿಗಳಲ್ಲಿ ತಮಿರ,ತಮಲಿಕ , ವಿದೇಶಿಯರ ಬರಹಗಳಲ್ಲಿ ತಮಲಿಟ್ಟಿ , ಬ್ರಿಟೀಷರಿಂದ ತಮೌಲಕ್ ಎಂದು ಕರೆಯಲ್ಪಟ್ಟಿದೆ. ಪ್ರಾಚೀನ ಭಾರತದಲ್ಲಿ ವಣಿಕ ಸಂಘಗಳು ಬಹು ಪ್ರಬಲವಾಗಿರುತ್ತಿದ್ದವು. ಅಯ್ಯಾಹೊಳೆಯ ಐನೂರ್ವರು ಹೆಸರಿನಲ್ಲಿ ಖ್ಯಾತವಾಗಿದ್ದ ವರ್ತಕರ ಸಂಗವನ್ನು ಬಾದಾಮಿಯ ಶಿಲಾಶಾಸನ ಉಲ್ಲೇಖಿಸುತ್ತಿದೆ. ಈ ವಣಿಕ ಸಂಘಗಳು ತಮ್ಮವೇ ಆದ ಲಾಂಛನಗಳನ್ನು ಸಹ ಹೊಂದಿರುತ್ತಿದ್ದವು. ಇವು ರಾಜ ಸಂಪರ್ಕದಲ್ಲಿದ್ದು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದುದು ಚರಿತ್ರೆಯಿಂದ ತಿಳಿದು ಬರುತ್ತದೆ. ಖಾರವೇಲನ ಶಿಲಾಶಾಸನದಲ್ಲಿರುವ ತಮಿರ ಸಂಘ ತಮಿಳಗಂ ರಾಜರ ಒಕ್ಕೂಟವಾಗಿರದೆ ತಾಮ್ರ ವರ್ತಕರ ಸಂಘವಾಗಿರುವ ಅಥವಾ ತಮಿರ ಪ್ರಾಂತದ ಸಂಘಟನೆಯಾಗಿರುವ ಸಾಧ್ಯತೆಗಳೇ ಹೆಚ್ಚು. ವಂಗ ಕಳಿಂಗಗಳಿಗಿರುವ ಪ್ರಾಚೀನ ಸಂಬಂಧ ಇದನ್ನು ಪ್ರಬಲವಾಗಿ ಸಮರ್ಥಿಸುತ್ತದೆ. ಜಂಬೈ ಶಿಲಾಬರಹ : ಕಾಲ ಕ್ರಿ.ಶ. 1 ನೇ ಶತಮಾನ ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ತಿರುಕ್ಕೋವಿಲೂರು ಪಟ್ಟಣದಿಂದ 15 ಕಿ, ಮೀ ದೂರದಲ್ಲಿನ ಜಂಬೈ ಹಳ್ಳಿಯಲ್ಲಿನ ಗುಹಾಂತರ ನೆಲೆಯಲ್ಲಿ ತಮಿಳು ಬ್ರಾಹ್ಮಿಯಲ್ಲಿರುವ ಬರಹ. ಶಿಲಾಬರಹ : ‘”ಸತಿಯಪುತೋ ಅತಿಯಾನ್ ನೆಟುಮಾನ್ ಅಂಜಿ ಇಟ್ಟ ಪಳಿ”’ (ಸತ್ಯಪುತ್ರ ಅತಿಯಾನ್ ನೆಟುಮಾನ್ ಅಂಜಿ ಕೊಟ್ಟ ನೆಲೆ) ಅಶೋಕನ ಗಿರ್ನಾರ್ನ ಮೂರನೇ ಶಿಲಾಶಾಸನದಲ್ಲಿ ಕೊಡ, ಪಡ, ಸತಿಯಪುತೋ,ಕೆರಪುತೋ, ತಂಬಪಣ್ಣಿಯನ್ನು ಹೇಳಲಾಗಿದೆ. ಇದರ ಆಧಾರದ ಮೇಲೆ ಕೆ.ಎ. ನೀಲಕಂಠಶಾಸ್ತ್ರಿ ಮತ್ತು ಕೆ.ಜಿ. ಶೇಷ ಅಯ್ಯರ್ ಅಶೋಕನ ಸಾಮ್ರಾಜ್ಯದ ಎಲ್ಲೆಯಾಚೆಗಿರುವವರೊಂದಿಗೆ ಸತ್ಯಪುತ್ರರನ್ನು ಸೇರಿಸಿರುವುದರಿಂದ ಇವರು ಸಹ ತಮಿಳಗಂಗೆ ಸೇರಿದವರೆಂದು ನಿರ್ಧರಿಸಿದರು. ಮೊದಲ ಬಾರಿಗೆ ಶೇಷ ಅಯ್ಯರ್ ಭಾಷಾ ಅಧಾರದ ಮೇಲೆ ಸತ್ಯಪುತ್ರರನ್ನು ಸಂಗಂ ಸಾಹಿತ್ಯದ ಅತಿಯಾನ್ರೊಂದಿಗೆ ಗುರುತಿಸಿದರು. ಬರೊ ಇನ್ನು ಮುಂದುವರೆದು ‘ಸತಿಯ’ದಲ್ಲಿ ಸ ಶಬ್ಧ ಲೋಪದೊಂದಿಗೆ ಅತಿಯ ಹಾಗೂ ಪುತೊ=ಮಕನ್=ಮಾನ್ ರೂಪತಳೆದು ಸತ್ಯಪುತ್ರ=ಅತಿಯಮಾನ್ ಆಗಿದೆಯೆಂದು ವಾದಿಸಿ ಶಿಲಾಬರಹದಲ್ಲಿನ ಸತಿಯಪುತೋ ಅತಿಯಾನ್ನನ್ನು ಅಶೋಕ ಶಿಲಾಶಾಸನದ ಸತಿಯಪುತರೊಂದಿಗೆ ಸಮೀಕರಣಗೊಳಿಸಿದರು. ಆರ್.ನಾಗಸ್ವಾಮಿ, ಗಿಫ್ಟ್ ಶಿರೋಮಣಿ ಮತ್ತು ಐ.ಮಹಾದೇವನ್ ಮುಂತಾದ ವಿದ್ವಾಂಸರು ಜಂಬೈ,ಮಂಗುಳಂ ಮತ್ತು ಪುಗಳೂರು ಶಿಲಾಶಾಸನಗಳ ಮೂಲಕ ಅಶೋಕನ ಶಾಸನಗಳಲ್ಲಿ ಉದ್ಧರಿಸಲಾದ ತಮಿಳಗಂನ ಸತ್ಯಪುತ್ರ ವಂಶಕ್ಕೆ ಮತ್ತು ತಮಿಳಗಂನ ಆದಿವಂಶಗಳ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕಿದೆಯೆಂದು ವಾದಿಸಿದ್ದಾರೆ. ಆದರೆ ಈ ತೀರ್ಮಾನಗಳ ಸತ್ಯಾಸತ್ಯತೆಯನ್ನೊಮ್ಮೆ ನೋಡೋಣ. * ಸಂಗಂ ಸಾಹಿತ್ಯದಿಂದ ತಮಿಳಗಂ ಚೇರ,ಚೋಳ,ಪಾಂಡ್ಯರ ಪ್ರಾಬಲ್ಯದ ಮೂವೇಂದರರ ನಾಡೆಂದು ಇವರೊಂದಿಗೆ ನೂರಾರು ಜನ ವೇಳೀರ್ಗಳು ಸದಾ ಸೆಣಸಾಡುತ್ತಿದ್ದರೆಂದು ತಿಳಿದುಬರುತ್ತದೆ. ಸತ್ಯಪುತ್ರರು ತಮಿಳಗಂಗೆ ಸೇರಿದ ರಾಜರು ಅಥವಾ ಜನಾಂಗವೇ ಆಗಿದ್ದಲ್ಲಿ ಅವರು ಉಳಿದ ಮೂವರಷ್ಟೇ ಖ್ಯಾತರಾಗಿದ್ದಲ್ಲಿ ಸಂಗಂ ಕವಿಗಳು ಮೂವರಸರ (ಚೇರ,ಚೋಳ,ಪಾಂಡ್ಯ) ಜೊತೆಗೆ ಈ ವಂಶವನ್ನು ಕುರಿತು ಹೇಳುತ್ತಿದ್ದರು. * ಸಂಗಂ ಸಾಹಿತ್ಯದಿಂದ ಎಲ್ಲಿಯೂ ಅತಿಯಾರ್ರು ಸತ್ಯಪುತ್ರರೆಂಬ -ಸಂಸ್ಕೃತ ಮೂಲದ- ಬಿರುದನ್ನಾಗಲಿ , ಹೆಗ್ಗಳಿಕೆಯನ್ನಾಗಲಿ ಹೊಂದಿದಂತೆ ತಿಳಿದುಬರುವುದಿಲ್ಲ. ಸತ್ಯ ತಮಿಳಿನಲ್ಲಿ ಅತಿಯಾನ್ ಆಗಿದೆಯೆಂದರೆ ಸತಿಯಪುತೊ ಅತಿಯಮಾನ್ ಎಂಬಲ್ಲಿ ದ್ವಿರುಕ್ತಿ ದೋಷವಿದೆ. ಸತ್ಯಪುತ್ರ ಒಂದು ವಂಶಕ್ಕಿದ್ದ ಬಿರುದೋ ಅಥವಾ ನೆಟುಮಾನ್ ಅಂಜಿಗೆ ಸೀಮಿತವಾಗಿದ್ದಿತೊ ತಿಳಿಯದು. * ಸತ್ಯಪುತ್ರರು ಯಾರೆಂಬ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಕೆಲ ವಿದ್ವಾಂಸರು ಇವರನ್ನು ಮಹಾರಾಷ್ಟ್ರದ ಸತ್ಪುತೆಗಳೆಂದು ಪರಿಗಣಿಸಿದರೆ, ಇನ್ನೂ ಕೆಲವರು ಶಾತವಾಹನರೆಂದು, ಮತ್ತೆ ಕೆಲವರು ಉತ್ತರ ಕೇರಳದ ಜನಾಂಗವೆನ್ನುತ್ತಾರೆ. ಇನ್ನೊಂದು ಬಣ ಸಂಗಂ ಸಾಹಿತ್ಯದಲ್ಲಿರುವ ಕರ್ನಾಟಕದ ಪಶ್ಚಿಮ ಕರವಾಳಿಯ ವೈಮೊಳಿ(ಮಾತಿಗೆ ತಪ್ಪದ) ಕೋಶರು ಇವರೆಂದು ಭಾವಿಸಿದ್ದಾರೆ. * ಭಾರತದ ದಕ್ಷಿಣ, ಪಶ್ಚಿಮ ಭಾಗದಲ್ಲಿ ‘ಸಾತ್ಪುತೆ’ ಕುಲನಾಮದ ಮರಾಠ ,ಕಾಯಸ್ಥ ಮತ್ತು ಬ್ರಾಹ್ಮಣ ಕುಟುಂಬಗಳಿವೆ. ಸಾತ್ಪುತೆ ಸತ್ಯಪುತ್ರ ಶಬ್ಧದಿಂದ ಬಂದಿರುವಂತೆ ತೋರುತ್ತದೆಯೆಂದು ಅಶೋಕನ ಕಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕೊಂಕಣದ ಭಾಗದಲ್ಲಿ ಅಶೋಕನ ಶಿಲಾಶಾಸನದಲ್ಲಿ ಉಲ್ಲೇಖಿಸಿರುವ ಸತ್ಯಪುತ್ರರ ಸ್ವತಂತ್ರ ರಾಜ್ಯ ಇದ್ದಿರಬಹುದೆಂದು ಆರ್.ಜಿ.ಭಂಡಾರ್ಕರ್ ಸೂಚಿಸಿದ್ದಾರೆ. ಬುಹ್ಲರ್ ಐತರೇಯ ಬ್ರಾಹ್ಮಣದಲ್ಲಿ ಪ್ರಸ್ತಾಪಿಸಲ್ಪಟ್ಟ ಸಾತ್ವಾತ ಪಂಗಡವೇ ಸತ್ಯಪುತ್ರರೆಂಬ ಅಭಿಪ್ರಾಯ ತಳೆದಿದ್ದಾರೆ. ವಿ.ಎಸ್. ಸ್ಮಿತ್ ಸತ್ಯಪುತ್ರರು ತುಳುನಾಡಿನವರಿರಬೇಕೆಂಬ ಸಂದೇಹ ವ್ಯಕ್ತ ಪಡಿಸಿದ್ದಾರೆ. ಎಸ್.ವಿ. ವೆಂಕಟೇಶ್ ಕಾಂಚೀಪುರವನ್ನು ರಾಜಧಾನಿಯನ್ನಾಗಿ ಹೊಂದಿದ್ದ ಜನ ಅಥವಾ ಪ್ರದೇಶದ ಹೆಸರು ಸತ್ಯಪುತ್ರವಾಗಿರಬೇಕೆಂದು ಸೂಚಿಸಿದ್ದಾರೆ. ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ಅಳಿಯ ಸಂತಾನ ಪದ್ದತಿಯಿರುವ ಕೊಚ್ಚಿನ್ ಹಾಗೂ ತುಳುನಾಡಿನ ಪ್ರದೇಶದವರೇ ಸತ್ಯಪುತ್ರರೆಂದು ಹೇಳಿದ್ದಾರೆ. * ಪ್ರಾಕ್ತನಾಲೇಖದ (Paleography) ಆಧಾರದ ಮೇಲೆ ಜಂಬೈ ಶಿಲಾಬರಹದ ಕಾಲವನ್ನು ಕ್ರಿ.ಶ. 2 ನೇ ಶತಮಾನವೆಂದು ನಿರ್ಧರಿಸಲಾಗಿದೆ. ಎಂದರೆ ಅಶೋಕನ ಶಿಲಾಶಾಸನ ಇದಕ್ಕಿಂತಲೂ 500 ವರ್ಷಗಳ ಹಿಂದಿನದು. ಸಣ್ಣ ಪುಟ್ಟ ರಾಜರುಗಳಿರಲಿ ಯಾವುದೇ ಮಹಾನ್ ಸಾಮ್ರಾಜ್ಯವೂ ಸಹ -ಅದು ಆರಂಭ ಕಾಲದಲ್ಲಿ -ಇಷ್ಟು ಸುದೀರ್ಘಕಾಲ ಅಸ್ತಿತ್ವದಲಿರುವುದು ಕಷ್ಟ ಸಾಧ್ಯ. ಆದರೆ ಅಂತಹ ಅಸ್ತಿತ್ವ ಹೊಂದಿದ್ದ ತುಳುನಾಡಿನ ಆಳುಪರು ಸತತವಾಗಿ ಕರ್ನಾಟಕದ ರಾಜವಂಶಗಳೊಂದಿಗೆ ಸಂಬಂಧ ಹೊಂದಿದ್ದ ಬಗೆಗೆ ಖಚಿತವಾದ ಐತಿಹಾಸಿಕ ಸಾಕ್ಷ್ಯಗಳು ದಕ್ಕುತ್ತವೆ. ಕ್ರಿ.ಶ. ಆರಂಭದ ಕಾಲದಲ್ಲಿ ಚುಟುಗಳು ಬನವಾಸಿಯನ್ನು , ಸಡಕಣರು ಚಂದ್ರವಳ್ಳಿಯನ್ನು, ಮಹಾರಥಿಗಳು ಉತ್ತರ ಕರ್ನಾಟಕವನ್ನು ಆಳುತ್ತಿದ್ದರು. ಈ ಕಾಲಾವಧಿಯಲ್ಲಿ ಶಾತವಾಹನ ಮತ್ತು ಕುರರ ಶಾಖೆ ದಕ್ಷಿಣಕ್ಕೆ ಸಾಗಿ ಬನವಾಸಿಯಲ್ಲಿ ರಾಜ್ಯ ಸ್ಥಾಪನೆ ಮಾಡಿತು. ಆದರೆ ದಕ್ಷಿಣ ಕನ್ನಡ ಮಾತ್ರ ಆಳುಪರ ವಶದಲ್ಲಿದ್ದಿತು. ಆಳುಪರು ಸಂಗಂ ಕಾಲದ ತಮಿಳಗಮ್ ರಾಜರುಗಳ ಸಮಕಾಲೀನರು. ಆದರೆ ಸಂಗಂ ಸಾಹಿತ್ಯ ಇವರ ಬಗೆಗೆ ಏನನ್ನೂ ಸೂಚಿಸುವುದಿಲ್ಲ. ಅಶೋಕನ ಶಿಲಾಶಾಸನದಲ್ಲಿನ ಸತ್ಯಪುತ್ರರು ಇವರೆಂದು ಕೆಲ ವಿದ್ವಾಂಸರ ಅಭಿಮತ. ಕನ್ನಡದ ಮೊದಲನೆಯದೆನಿಸಿದ ಹಲ್ಮಿಡಿ ಶಿಲಾಶಾಸನದಲ್ಲಿ ಅಳುಪ ಗಣದ ಪಶುಪತಿಯ ಉಲ್ಲೇಖವಿದೆ. ತುಳುನಾಡಿನ ಆಳುಪರು ಜೋಡಿ ಮೀನಿನ ಲಾಂಛನ ಹೊಂದಿದ್ದು ಅವರು ತಮ್ಮನ್ನ್ನು ಪಾಂಡ್ಯ ವಂಶ-ಚಂದ್ರಕುಲದವರೆಂದು ಗುರುತಿಸಿಕೊಂಡಿದ್ದಾರೆ. ಇವರ ನಾಣ್ಯಗಳಲ್ಲಿ ಪಾಂಡ್ಯ ಧನಂಜಯ ಎಂಬ ಬರಹವಿದೆ. ಆಳುಪರ ಶಿಲಾಶಾಸನಗಳಲ್ಲಿ ಅಳ್ವಖೇಡ ಪ್ರಾಂತವನ್ನು ಸೂಚಿಸಲಾಗಿದೆ. ಈ ಪ್ರಾಂತ ಈಗಿನ ಕಾಸರಗೋಡು ಜಿಲ್ಲೆಯ ಪಯಸ್ವಿನಿ ನದಿ ತೀರದವರೆಗೆ ಹಬ್ಬಿದ್ದಿತು. * ಸಂಗಂ ಸಾಹಿತ್ಯದಲ್ಲಿ ಹೇಳಲಾಗಿರುವ ವಂಶಗಳಲ್ಲಿ ಅತಿಯಾರ್ ಕೊನೆಯದು. ಇಲ್ಲಿನ ಅತಿಯಾರ್ ವಂಶ ರಾಜಕುಲವಾಗಿರದೆ , ವೇಳೀರ್ಗಳದ್ದಾಗಿದೆ. ಈ ಸಾಹಿತ್ಯದಲ್ಲಿ ಎಲ್ಲಿಯೂ ಅತಿಯಾನ್ಗಿಂತ ಮುಂಚಿನ ಪೂರ್ವಿಕರ ಹೆಸರುಗಳಿಲ್ಲ. ಆದರೆ ಈ ಸಾಹಿತ್ಯದಿಂದ ಅತಿಯಾನ್ನ ಪೂರ್ವಜನೊಬ್ಬ ತಮಿಳಗಂನಲ್ಲಿ ಕಬ್ಬಿನ ಕೃಷಿ ಪರಿಚಯಿಸಿದನೆಂದು ತಿಳಿದುಬಂದಿದೆ. ಇವರಲ್ಲಿ ಯಾರೊಬ್ಬರು ಜೈನ ಧರ್ಮದೊಂದಿಗೆ ಸಂಬಂಧ ಹೊಂದಿದಂತೆ ಅಥವಾ ಪೆÇೀಷಿಸಿದಂತೆ ಎಲ್ಲಿಯೂ ಕಂಡು ಬರುವುದಿಲ್ಲ. ಮಂಗುಳಂ (ಮೀನಾಕ್ಷಿಪುರಂ)ಶಿಲಾಬರಹ : ಕಾಲ ಕ್ರಿ,ಪೂ. 2ನೇ ಶತಮಾನ. ಇದು ಈವರೆಗೆ ದಕ್ಕಿರುವ ಅತ್ಯಂತ ಹಳೆಯದಾದ ತಮಿಳು ಭಾಷೆಯ ಬರಹ. 1882 ರಲ್ಲಿ ರಾಬರ್ಟ್ ಸೆವೆಲ್ ಬೆಳಕಿಗೆ ತಂದನು. ಪ್ರಾಕ್ತನಾಲೇಖ್ಯದ ಆಧಾರದ ಮೇಲೆ ಈಗ ಇದರ ಕಾಲವನ್ನು ಕ್ರಿ.ಪೂ 2 ಶತಮಾನವೆಂದು ನಿರ್ಧರಿಸಲಾಗಿದೆ. ಇದು ವಿದ್ವಾಂಸರ ಗಮನಕ್ಕೆ ಅಷ್ಟಾಗಿ ಬಂದಿರಲಿಲ್ಲ. 1906ರಲ್ಲಿ ಇದರ ಪ್ರಾಮುಖ್ಯತೆಯ ಬಗೆಗೆ ಗಮನ ಸೆಳೆದ ಕೆ.ವಿ. ಸುಬ್ರಮಣಿ ಅಯ್ಯರ್ ಮತ್ತೊಮ್ಮೆ ಈ ಶಿಲಾಬರಹ ವಿದ್ವಾಂಸರಿಂದ ಚರ್ಚೆಗೊಳಗಾಗುವಂತೆ ಮಾಡಿದರು. ಇದರಲ್ಲಿ ಸಂಗಂ ಕಾಲದ ದೊರೆ ನೆಡುಂಚೆಳಿಯನ್ ಉಲ್ಲೇಖಿತರಾಗಿದ್ದಾನೆಂದು ಹೇಳಲಾಗುತ್ತಿದೆ. ಶಿಲಾಬರಹ : “ಕಣಿಯನಂತ ಅಸಿರಿಯ ಇ ಕುವ್ ಅನ್ ಕೆ ದಮ್ಮಮ್ ಇತ್ತಾ ನೆಟುಂಚೆಳಿಯನ್ ಪಣ ಅನ್ ಕಡಲ್ ಅಣ್ ವಾಳುತ್ತಿ0iÀiï ಕೋಟ್ಟುಪಿತ್ತ ಅಯಳಿ ಇಯ” (ಕಣಿ ನಂದ ಸಿರಿ ಕುವನ್ಗೆ ಧರ್ಮವಿತ್ತ ನೆಡುಂಚೆಳಿಯನ್. ಪಾಣಾನ್ ಕಡಲಣ್ ವಳುತ್ತಿಯಿಂದ ಕೊರೆಸಲ್ಪಟ್ಟ ನೆಲೆ) ಪುಗಳೂರು ಶಿಲಾಶಾಸನ : ಕಾಲ ಕ್ರಿ.ಶ 1-2 ಶತಮಾನ ಪುಗಳೂರಿನ( ಅರಣತ್ತರ್ಮಲೈ) ಶಿಲಾಬರಹ. ಈ ಶಿಲಾಶಾಸನ ಚೇರ ರಾಜರುಗಳ ಮೂರು ತಲೆಮಾರುಗಳನ್ನು ಹೊಂದಿದೆ ಯೆಂದು ಭಾವಿಸಲಾಗಿದೆ. ಅದಮ್ ಚೇರಳ್ ಇರುಂಪೊರೈ, ಈತನ ಮಗ ಪೆರುಮಕಡುಂಗೋ ಹಾಗೂ ಅತನ ಮಗ ಇಳಮಕಡುಂಗೋ ಹೆಸರುಗಳನ್ನು ಸೂಚಿಸುತ್ತದೆಯೆಂದು ಭಾವಿಸಲಾಗಿದೆ. ಶಿಲಾಬರಹ : “ ಮುತ ಅಮಣನ್ ಯಾರೂರ್ ಸೆಂಕಯ್ಯಪ್ಪನ್ ಊರೈ ಕೋ ಅತನ್ ಸೆಲ್ಲಿರುಂಪ್ಪೊರೈ ಮಕನ್ ಪೆರುಕಟುಂಕೋನ್ ಮಕನ್ (ಇ) ಳನ್ ಕಟುಂಕೋ (ಇ)ಳಂಕೋ ಅಕ ಅರುತ್ತ ಕಲ್”(‘ಹಿರಿಯ ಶ್ರಮಣ ಯಾರೂರಿನ ಸೆಂಕಯ್ಯಪ್ಪನ್ಗಾಗಿ ಸೆಲ್ಲಿರುಂಪೆÇರೈ ಮಗ ಪೆರುಂಕಡುಂಗೋನ್ ಮಗ ಇಳಂ ಕಡುಂಗೋ ಮಾಡಿಸಿದ ಕಲ್ ನೆಲೆ) * ಮಂಗುಳಂ ಶಿಲಾಶಾಸನದಲ್ಲಿ ಉಕ್ತನಾಗಿರುವ ಕೋ ಅತನ್ ಸೆಲ್ಲಿರುಂಪ್ಪೊರೈಯನ್ನು ಚೇರ ವಂಶದ ದೊರೆಗಳಿಗಾಗಿಯೇಮೀಸಲಾಗಿರುವ ಪದಿರುಪತ್ತುವಿನಲ್ಲಿ ಹಾಡಲಾಗಿಲ್ಲ ಮತ್ತು ಸಂಗಂ ಸಾಹಿತ್ಯದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ . ಪದಿರುಪ್ಪತ್ತುವಿನಲ್ಲಿನ ಸೆಲ್ವಕಡುಂಗೋ ವಲಿಯಾತನ್ ಕುಟ್ಟುವನ್ ಇರುಂಪ್ಪೊರೈ ಈತನೆಂದು ಕೆಲವರು ಪರಿಗಣಿಸಿದ್ದಾರೆ. * ಸಂಗಂ ಸಾಹಿತ್ಯದ ಅಧಾರದ ಮೇಲೆ ತಮಿಳಗಂನ ರಾಜರ ವಂಶಾವಳಿಗಳನ್ನು ವಿಭಿನ್ನ ಸಂಶೋಧಕರು ವಿವಿಧ ರೀತಿಯಲ್ಲಿ ನೀಡಿದ್ದಾರೆ. ಮೇಲಿನ ಶಿಲಾಶಾಸನಗಳಲ್ಲಿ ಸೂಚಿಸಿದ ತಲೆಮಾರನ್ನು ಸಂಶಯಾತೀತವಾಗಿ ಯಾರೂ ಪಡೆದಿಲ್ಲ. ಕೋ ಎಂದರೆ ರಾಜ ಎನ್ನುವುದರೊಂದಿಗೆ ನಾಯಕ , ಮುಂದಾಳು ಎನ್ನುವ ಅರ್ಥಗಳಿವೆ. ಶಿವರಾಜ ಪಿಳ್ಳೆಯವರು ಪಾಂಡ್ಯರ ಮೊದಲ ದೊರೆ ನೆಡುಂಚೆಳಿಯನ್ ಕಾಲವನ್ನು ಕ್ರಿ.ಶ. 1-ಕ್ರಿ.ಶ 25 ಎಂದು ನಿರ್ಧರಿಸಿದ್ದಾರೆ. ಈತ ಚೋಳರ ಮೊದಲನೆಯ ಕರಿಕಾಲ ಮತ್ತು ಚೇರ ದೊರೆ ಉದಿಯನ್ ಚೇರಳ್ ಇವರ ಸಮಕಾಲೀನ. ಕನಕಸಭಾ ಪಿಳ್ಳೆಯವರು ಗಜಬಾಹು ಸಮಕಾಲೀನತೆಯ ಆಧಾರದ ಮೇಲೆ ಕರಿಕಾಲನ ಅವಧಿಯನ್ನು ಕ್ರಿ,ಶ. 113-125 ಎಂದು ನಿರ್ಧರಿಸಿದ್ದಾರೆ.(ನೋಡಿರಿ:ಶಿಲಪ್ಪದಿಗಾರಂ) ಹೆಸರಿನ ಸಾಮ್ಯತೆಗಳ ಮೇಲೆ ಚರಿತ್ರೆಯನ್ನು ಹೊಂದಿಸುವ ಪರಿಪಾಠ ತಮಿಳಿನಲ್ಲಿ ಎದ್ದು ಕಾಣುತ್ತದೆ. ಪ್ರಾಕ್ತನಾಲೇಖ್ಯದ ಆಧಾರದ ಮೇಲೆ ಈ ಶಿಲಾಶಾಸನದ ಕಾಲವನ್ನು ಕ್ರಿ.ಶ 1-2 ಶತಮಾನವೆಂದು ಐ.ಮಹಾದೇವನ್ ನಿರ್ಧರಿಸಿದ್ದಾರೆ. ಇದನ್ನು ಪುನರ್ವಿಮರ್ಶಿಸಬೇಕೆಂದು ಆರ್. ನಾಗಸ್ವಾಮಿ ಮತ್ತು ಗಿ¥sóï್ಟ ಶಿರೋಮಣಿ ಭಾವಿಸುತ್ತಾರೆ. ಲಿಪಿ ಸ್ವರೂಪದ ಆಧಾರದ ಮೇಲೆ ಶಾಸನದ ಕಾಲವನ್ನು ಕ್ರಿ.ಪೂ 200 ಎಂದು ಮೊದಲಿಗೆ ನಿರ್ಧರಿಸುವುದು. ನಂತರ ಇದನ್ನು ಬಳಸಿ ನೆಡುಂಚೆಳಿಯನ್ ಕಾಲವನ್ನು ಹೇಳುವುದು. ಮತ್ತೊಂದು ಸಂದರ್ಭದಲ್ಲಿ ನೆಡುಂಚೆಳಿಯನ್ನ್ನು ಆಧಾರದ ಮೇಲೆ ಶಿಲಾಶಾಸದ ಕಾಲ ಸೂಚಿಸುವ ವರ್ತುಲ ಪರಾಮರ್ಶೆ ತಮಿಳಿನ ಚರಿತ್ರೆಯಲ್ಲಿ ದಕ್ಕುತ್ತವೆ. ಇವೆರಡಕ್ಕೂ ಅನ್ಯ ಖಚಿತ ಬಾಹ್ಯ ಆಧಾರಗಳಿರುವುದಿಲ್ಲ. * ತಮಿಳುನಾಡಿನ ಆದಿವಂಶಗಳನ್ನು ಕುರಿತಾಗಿ ಪುರಂ ಸಾಹಿತ್ಯದ ಮೂಲಕ ಸಾಕಷ್ಟು ಹೇಳುವ ಸಂಗಂ ಸಾಹಿತ್ಯ ಅವರ ಜೈನ ಧಾರ್ಮಿಕ ಪೋಷಣೆಯ ಬಗ್ಗೆ ಸೊಲ್ಲೆತ್ತುವುದಿಲ್ಲ. ಸಂಗಂ ಸಾಹಿತ್ಯದಲ್ಲಿ ಬ್ರಾಹ್ಮಣರ, ವೈದಿಕ ಧರ್ಮದ ಕುರುಹುಗಳು ಸಾಕಷ್ಟಿದ್ದರು ಜೈನಮತದ ಕುರುಹುಗಳು ಇಲ್ಲವೆನ್ನುವಷ್ಟು ಅತ್ಯಲ್ಪ. ಆದರೆ ಸಂಗಂ ಸಾಹಿತ್ಯ ಆ ಕಾಲದ ಕೆಲ ದೊರೆಗಳು ಆರಾಧಿಸುತ್ತಿದ್ದ ದೈವಗಳ ಬಗ್ಗೆ , ಯಜ್ಞ ಯಾಗದಿಗಳಿಗೆ ನೆರವಿತ್ತುದನ್ನು ಮತ್ತು ಬ್ರಾಹ್ಮಣರನ್ನು ಕುರಿತಾಗಿ ಹಲವಾರು ಸಂಗತಿಗಳನ್ನು ಪ್ರಾಸಂಗಿಕವಾಗಿ ಸೂಚಿಸುತ್ತದೆ. ಆದರೆ ಇವರಲ್ಲಿ ಯಾರೂ ಜೈನ ಧರ್ಮವನ್ನು ಪೆÇೀಷಿಸಿದುದಕ್ಕೆ ಕುರುಹುಗಳಿಲ್ಲ. ಯಾವುದೇ ಧರ್ಮದಿಂದ ಪ್ರೇರಿತನಾದ ದೊರೆಯನ್ನು ಅದರಿಂದ ಹೊರತುಪಡಿಸಿ ನೋಡುವುದು ಸಾಹಿತ್ಯದಲ್ಲಾಗಲಿ, ಚರಿತ್ರೆಯಲ್ಲಾಗಲಿ ಸಾಧ್ಯವಿಲ್ಲ. ಆದ್ದರಿಂದ ಸಂಗಂ ಕಾಲದ ನೆಡುಂಚೆಳಿಯನ್, ಸತ್ಯಪುತ್ರ ಅತಿಯಮಾನ್ ಅಥವ ಚೇರದೊರೆ ಇಳಂಕಡುಂಗೋ ಜೈನ ಶ್ರಮಣರಿಗೆ ಗುಹಾವಾಸವನ್ನು ನಿರ್ಮಿಸಿಕೊಟ್ಟರೆಂಬುದು ಅಸಂಭವನೀಯವಾಗಿರುತ್ತದೆ. ಸಂಗಂ ಸಾಹಿತ್ಯದ ಕಾಲವನ್ನು ಕ್ರಿ.ಶ 1-ಕ್ರಿ.ಶ 3 ನೇ ಶತಮಾನವೆಂದು ಹೆಚ್ಚಿನ ವಿದ್ವಾಂಸರು ಒಪ್ಪಿರುವುದರಿಂದ ಜೈನರು ಈ ಮೊದಲೇ ತಮಿಳಗಂನಲ್ಲಿ ನೆಲೆ ಹೊಂದಿದ್ದರೆ ಅಥವಾ ಸಮಕಾಲೀನರಾಗಿದ್ದರೆ ಅದರಲ್ಲಿ ಅದರ ಕುರುಹು ಸಿಗದೇ ಹೋಗುತ್ತಿರಲಿಲ್ಲ. ಆದ್ದರಿಂದ ಪ್ರಾಕ್ತನಾಲೇಖ್ಯದ ಆಧಾರದ ಮೇಲೆ ಮಾತ್ರ ನಿರ್ಧರಿಸಲಾದ ಈ ಶಿಲಾಶಾಸನಗಳ ಕಾಲವನ್ನು ಮತ್ತೊಮ್ಮೆ ಪರೀಕ್ಷಿಸಬೇಕು. ಏಕೆಂದರೆ 6ನೇ ಶತಮಾನದವರೆಗೂ ಜೈನರಿಗೆ ನೆಲೆಗಳನ್ನು ನಿರ್ಮಿಸಿಕೊಟ್ಟ ದಾಖಲೆಗಳಿವೆಯೆಂದು ಕೆಲ ಇತಿಹಾಸಕಾರರು ಸೂಚಿಸಿದ್ದಾರೆ. ಈ ಶಾಸನಗಳಲ್ಲಿರುವವರು ಸಂಗಂ ಸಾಹಿತ್ಯದಲ್ಲಿರುವ ರಾಜರುಗಳಾಗಿರದೆ ಬೇರೆಯದೇ ಆದ ವರ್ಗವೆಂದು ಕಾಣುತ್ತದೆ. ಗುಹಾ-ಶಿಲಾಬರಹ ಬರೆದ ಜೈನರು ತಮಿಳು ಮುಖ್ಯವಾಹಿನಿಯವರಾಗಿರದೆ ಪ್ರತ್ಯೇಕ ವರ್ಗದವರಂತೆ ಕಾಣುತ್ತಾರೆ. ಆದ್ದರಿಂದ ಈ ಶಿಲಾಬರಹಗಳ ಭಾಷೆ,ವರ್ಗ ಮತ್ತು ಕಾಲವನ್ನು ಕೂಲಂಕಷವಾಗಿ ವಿಮರ್ಶಾತ್ಮಕ ದೃಷ್ಟಿಯಿಂದ ನೋಡಬೇಕಾದ ಅವಶ್ಯಕತೆಯಿದೆ. |
Comment Box is loading comments...