|
ತಮಿಳು-ತಮಿಳಗಂ ಇತಿಹಾಸದ ಹಿನ್ನೆಲೆಯತ್ತ ಒಂದು ನೋಟ
(ತಮಿಳಗಂ-ಸಂಗಂ : ಎಷ್ಟು ಪ್ರಾಚೀನ ಗ್ರಂಥದ ಆಯ್ದ ಭಾಗ) ಭಾರತದ ಆರಂಭಿಕ ಚರಿತ್ರೆಯನ್ನು ಸ್ಥೂಲವಾಗಿ ಉತ್ತರ ಹಾಗೂ ದಕ್ಷಿಣವೆಂದು ವಿಂಗಡಿಸಿ ನೋಡಲು ಸಾಧ್ಯ. ಇವೆರಡರ ಸಾಮ್ಯತೆ .ಸಂಘರ್ಷ,ಸಮನ್ವಯತೆ ಭಾರತದ ಸಂಸ್ಕೃತಿ , ಸಾಹಿತ್ಯ ಪರಂಪರೆ, ಜೀವನ ದರ್ಶನವನ್ನು ರೂಪಿಸಿದವು. ಉತ್ತರ ಭಾರತದಲ್ಲಿದ್ದ ಸಾಂಸ್ಕೃತಿಕ, ರಾಜಕೀಯ ಪರಿಸ್ಥಿತಿ ಮತ್ತು ಒತ್ತಡಗಳು ಜೈನ,ಬೌದ್ಧದಂತಹ ಧರ್ಮಗಳ ಉಗಮಕ್ಕೆ ವೈದಿಕದಂತಹ ತತ್ವದರ್ಶನ ಆಚಾರ , ವಿಚಾರಗಳ ಹರಡಿಕೆಗೂ ಕಾರಣವಾದವು. ಉತ್ತರದಲ್ಲಿ ನಂದ, ಮೌರ್ಯ ವಂಶಗಳ ಪರಂಪರೆಯಲ್ಲಿ ಅಶೋಕನಂತಹ ಮಹಾನ್ ಚಕ್ರವರ್ತಿಗಳು ಕಾಣಿಸಿಕೊಂಡು ತಾವಿದ್ದ ಕುರುಹನ್ನು ಭಾರತದಾದ್ಯಂತ ಬಿಟ್ಟು ಹೋದರು. ಆದರೆ ದಕ್ಷಿಣದಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದ್ದಿತು. ಇಲ್ಲಿ ಮೂಲ ಜಾನಪದ ಆಚರಣೆ , ಜೀವನ ಪದ್ದತಿಗಳು ಮೇಲ್ಗೈ ಸಾಧಿಸಿದ್ದವು. ದಕ್ಷಿಣದ ವೈಶಿಷ್ಟ್ಯಗಳು ಸದ್ದಿಲ್ಲದೆ ತನ್ನ ಸಂಪರ್ಕಕ್ಕೆ ಬಂದ ಉತ್ತರದ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದವು. ಇದರಿಂದ ಭಾರತದಲ್ಲಿ ಒಂದು ಸಂಕೀರ್ಣ ಸಮನ್ವಯತೆ ಮೂಡಿಬಂದಿತು. ಕ್ರಿ.ಪೂ 300-ಕ್ರಿ.ಶ 300ರ ಅವಧಿಯಲ್ಲಿ ಉತ್ತರ ಭಾರತದಲ್ಲಿದ್ದ ಸ್ಥಿತಿಗತಿಗಳ ಬಗೆಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಭಾರತೀಯರೇತರಾದ ಗ್ರೀಕ್, ಹೂಣ,ಕುಶಾನ,ಅರೈಮೆಕ್ನಂತಹವರ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಆದರೆ ದಕ್ಷಿಣಭಾರತದಲ್ಲಿನ ಇತಿಹಾಸದಲ್ಲಿ ಇದು ಆಗಬೇಕಾಗಿದೆ. ದಕ್ಷಿಣ ಭಾರತದಲ್ಲಿ ಇಂಡೋ-ಆರ್ಯನ್ ಹೊರತಾದ ದ್ರಾವಿಡ ಭಾಷಾ ವರ್ಗದ ಸಮುದಾಯಗಳಿದ್ದು ಇವುಗಳ ಮಧ್ಯದ ಪಾರಸ್ಪರಿಕ ಸಂಬಂಧ , ವೈದೃಶ್ಯ, ಸಾದೃಶ್ಯಗಳನ್ನು ಗುರಿತಿಸಬೇಕಾಗಿದೆ. ಇತ್ತೀಚೆಗೆ ವಿದ್ವಾಂಸರು ಈ ನಿಟ್ಟಿನಲ್ಲಿ ಅಧ್ಯಯನಕ್ಕೆ ಒತ್ತು ನೀಡುತ್ತಿದ್ದಾರೆ. ಇದಕ್ಕಾಗಿ (1) ಪ್ರಾಕ್ತನ ಶೋಧನೆ (2) ಶಿಲಾಶಾಸನ ಮತ್ತು ನಾಣ್ಯಗಳಂತಹ ಆಕರಗಳು (3) ಸಾಹಿತ್ಯದ ಮರು ಓದಿಕೆ ಮತ್ತು ಅರ್ಥೈಸಿಕೆಗಳ ಮೊರೆ ಹೋಗುತ್ತಿದ್ದಾರೆ. ದ್ರಾವಿಡ ಭಾಷೆಗಳು ಮತ್ತು ಸಾಹಿತ್ಯ ಇದಕ್ಕೆ ಬೇಕಾದ ಹಿನ್ನೆಲೆಯನ್ನೊದಗಿಸುತ್ತಿವೆ. ಈ ದಿಶೆಯಲ್ಲಿ ನಡೆದ ಕೆಲವು ಅಧ್ಯಯನಗಳು ಕೆಲವು ಸತ್ಯಗಳನ್ನು ಮನಗಾಣಿಸಿ ಅಷ್ಟೇ ಪ್ರಬಲವಾದ ಸಮಸ್ಯೆಗಳನ್ನು ಹುಟ್ಟುಹಾಕಿವೆ. ದಕ್ಷಿಣ ಭಾರತದ ಇತಿಹಾಸದಲ್ಲಿ ತಮಿಳಿಗೆ ಪ್ರಮುಖ ಸ್ಥಾನವಿದೆಯಾದರೂ ಎಲ್ಲವನ್ನು ಅದರ ಹಿನ್ನೆಲೆಯಲ್ಲಿ ನೋಡುವ ಪರಿಪಾಠ ನಿರೀಕ್ಷಿತ ಫಲಿತಾಂಶಗಳನ್ನು ನೀಡದೆ ನಮಗೆ ಸಮಗ್ರ ನೋಟ ದಕ್ಕದಂತಾಗಿದೆ. ಇತ್ತೀಚೆಗೆ ಕೆಲವು ವಿದ್ವಾಂಸರು ತೊಲ್ಕಾಪ್ಪಿಯಂ, ಸಂಗಂ ಸಾಹಿತ್ಯಗಳನ್ನು ಆರಂಭಿಕ ಇತಿಹಾಸ ಸಾರುವ ಅಧಿಕೃತ ಮೂಲಗಳಂತೆ ಪರಿಗಣಿಸಿ ತಮ್ಮ ಸಂಶೋಧನೆಗಳನ್ನು ಸಾಗಿಸಿದ್ದಾರೆ. ಇಲ್ಲಿ ತೊಲ್ಕಾಪ್ಪಿಯಂ ಸಂಗಂ ಸಾಹಿತ್ಯದಂತಹ ಮಹಾನ್ ಪರಂಪರೆಗೆ ನಾಂದಿ ಹಾಡಿತೆಂದು ಪರಿಗಣಿಸಿದ್ದಾರೆ. ಆದರೆ ಇದನ್ನು ಸಮರ್ಥಿಸುವ ಯಾವುದೇ ಐತಿಹಾಸಿಕ, ಆಂತರಿಕ, ಬಾಹ್ಯ ಸಾಕ್ಷ್ಯಗಳ ವಿಚಾರಣೆಯನ್ನು ಕೈಬಿಟ್ಟಿದ್ದಾರೆ. ತೊಲ್ಕಾಪ್ಪಿಯಂ ಕೃತಿಯ ಕಾಲದ ಬಗೆಗಿನ ವಿವಾದ ದ್ರಾವಿಡ ಭಾಷೆಗಳ ವಿಕಸನ ಹಾಗೂ ಅವುಗಳ ಸಾಹಿತ್ಯ ಮಾರ್ಗದ ವಿವಾದವೂ ಹೌದು. ಆದ್ದರಿಂದ ದಕ್ಷಿಣ ಭಾರತದ ಚರಿತ್ರೆಯನ್ನು ಅರಿಯಲು ಈ ವಿವಾದಗಳು ನೆರವಾಗುತ್ತವೆ. ಇದರಿಂದಾಗಿಯೇ ಕವಿರಾಜಮಾರ್ಗಕ್ಕಿಂತ ಎಂಟು ನೂರು ವರ್ಷ ಮೊದಲೆ ತೊಲ್ಕಾಪ್ಪಿಯಂ ರಚಿತವಾಯಿತೆಂಬ ಹೇಳಿಕೆ ಚರ್ಚಾಸ್ಪದ ಸಂಗತಿಯಾಗುತ್ತದೆ. ಕ್ರಿ.ಶ. ಆರಂಭದ ಕಾಲಕ್ಕೆ ಕನ್ನಡಿಗರು ಮತ್ತು ತೆಲುಗರು ಸಮೃದ್ದ ಮತ್ತು ವೈವಿಧ್ಯಮಯ ಸಾಹಿತ್ಯ ಹೊಂದಿದ್ದ ಪ್ರಾಕೃತ ಮತ್ತು ಸಂಸ್ಕೃತಗಳ ಪ್ರಭಾವಕ್ಕೊಳಗಾಗಿದ್ದರು. ತಮಿಳಗಂನ ಗಡಿಗಳು ತಮಿಳರಿಗೆ ಸಂವಹನೆಯ ನಿರ್ಬಂಧವೊಡ್ಡಿದರೆ ಕನ್ನಡಿಗ ಮತ್ತು ತೆಲುಗರ ಗಡಿಗಳು ಹೊಸ ವಿಚಾರಗಳ ಪ್ರವೇಶದ ಹೆಬ್ಬಾಗಿಲುಗಳಾಗಿದ್ದವು. ಕನ್ನಡವನ್ನು ತಮಿಳಿಗೆ ಹೋಲಿಸಿ ಈವರೆಗೆ ಈ ಕೆಳಗೆ ಪಟ್ಟಿಮಾಡಿದ ಪ್ರಶ್ನೆಗಳನ್ನು ಎತ್ತಲಾಗಿದೆ. # ತಮಿಳಗಂನಲ್ಲಿನ ಸಂಗಂ ಸಾಹಿತ್ಯದಂತೆ ಕನ್ನಡ ನಾಡಿನಲ್ಲಿ ಏಕೆ ದೇಶೀಯ ಸಾಹಿತ್ಯ ಬರಲಿಲ್ಲ. # ಸಂಸ್ಕೃತ ಪರಂಪರೆಗಳ ಹಿಂಬಾಲಕನಂತೆ ಕಾಣುವ ಮಾರ್ಗಕಾರನಾಗಲಿ ಅಥವಾ ಅವನ ಇತರರೇ ಆಗಲಿ ನೆರೆಯ ತಮಿಳಿನ ತೊಲ್ಕಾಪ್ಪಿಯಂನಂತಹ ಪರಂಪರೆಗೆ ಏಕೆ ಮಿಡಿಯಲಿಲ್ಲ ? # ಕನ್ನಡದಲ್ಲಿನ ಮೊದಲ ಬರಹ (ಹಲ್ಮಿಡಿ ಶಾಸನ) ಕಾಣಿಸಿಕೊಂಡ ಮತ್ತು ಮೊದಲ ಕೃತಿಯಾದ ಕವಿರಾಜಮಾರ್ಗಗಳ ಮಧ್ಯೆ 500 ವರ್ಷಗಳ ದೀರ್ಘಾವಧಿಯಲ್ಲಿ ಕನ್ನಡದ ಸಾಹಿತ್ಯ ಎಂತಹುದಿದ್ದಿತು ? # ಉತ್ತರದ ಪ್ರಾಕೃತ/ಸಂಸ್ಕೃತ ಮತ್ತು ದಕ್ಷಿಣದ ತಮಿಳು ಇವೆರಡು ಪರಂಪರೆಗಳ ಅರಿವಿದ್ದ ಕನ್ನಡಿಗರು ತಮ್ಮ ಜ್ಞಾತಿ ಭಾಷೆಯಾದ ತಮಿಳನ್ನು ಅನುಸರಿಸದೆ ಬಾಹ್ಯ ಭಾಷೆಗಳನ್ನು ಪುರಸ್ಕರಿಸದ್ದೇಕೆ ? ಮೇಲೆತ್ತಿದಂತಹ ಪ್ರಶ್ನೆಗಳು ಈಗಲೂ ಅಸ್ತಿತ್ವದಲ್ಲಿವೆ . ಈಗ ಸಂಸ್ಕೃತದ ಬದಲಿಗೆ ಇಂಗ್ಲೀಷ್ ಬಂದಿದೆ. ಈಗ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳೆಲ್ಲವು ವೈಜ್ಞಾನಿಕ,ಸಾಮಾಜಿಕ,ರಾಜಕೀಯ,ಕಲೆ ಸಾಹಿತ್ಯ ಸೇರಿದಂತೆ ನವೀನ ಚಿಂತನೆಗಳಿಗೆ ಇಂಗ್ಲೀಷ್ನತ್ತ ಮುಖ ಮಾಡಿವೆ. ಭಾರತೀಯ ಭಾಷೆಗಳ ಮಧ್ಯೆ ಸೀಮಿತ ಅನುವಾದಗಳು ನಡೆಯುತ್ತಿರುವವಾದರೂ ಯಾವೊಂದು ಭಾರತೀಯ ಭಾಷೆಯೂ ತನ್ನ ನೆರೆ ಭಾಷೆಯಿಂದ ಗಣನೀಯ ಪ್ರೇರೇಪಣೆ ಪಡೆಯುತ್ತಿಲ್ಲ. ಆಧುನಿಕ ಕರ್ನಾಟಕದಲ್ಲಿ ವಿಶಿಷ್ಟ ದಾರ್ಶನಿಕ ಚಿಂತನೆಯಿಂದ ಖ್ಯಾತರಾದ ಕುವೆಂಪುರವರಿಂದ ತೆಲುಗು,ತಮಿಳು,ಮರಾಠರು ಯಾವ ಸ್ಪೂರ್ತಿ ಪಡೆದಿದ್ದಾರೆ ? ಅಥವಾ ಈಗಿನ ತಮಿಳಿನ ಯಾವ ಲೇಖಕ ಅಥವಾ ಸಾಹಿತ್ಯ ಪರಂಪರೆ ಕನ್ನಡದ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ ? ಕರ್ನಾಟಕದ ಯಾವ ಜ್ಞಾನಪೀಠ ಪುರಸ್ಕೃತನ ಸಾಹಿತ್ಯ ನೆರೆ ಭಾಷಿಕರಲ್ಲಿ ವ್ಯಾಪಕ ನೆಲೆ ಕಂಡಿದೆ ? ತಮಿಳಿನ ಭಾವಗೀತೆಗಳಾಗಲಿ , ಜಾನಪದ ಸಾಹಿತ್ಯ ಅಥವಾ ಬೇರೆ ಬಗೆಯ ವಿಶಿಷ್ಟ ಸಂವೇದನೆಗಳಾಗಲಿ ನಮ್ಮ ಮೇಲೆ ಪ್ರಭಾವ ಬೀರಿರುವುವೆ ? ಇಪ್ಪತ್ತನೇ ಶತಮಾನದಲ್ಲಿ ಕನ್ನಡದಲ್ಲಿ ಶ್ರೇಷ್ಟವೆನಿಸುವ ಕನಿಷ್ಟ ಮೂರು ಮಹಾಕಾವ್ಯಗಳು ಬಂದಿವೆ. ಇವು ನೆರೆಯ ತಮಿಳಿನ ಮೇಲೆ ಯಾವ ಪ್ರಭಾವವನ್ನೂ ಬೀರಿವೆ ? ಇದಕ್ಕೆ ನಮ್ಮಿಂದ ಇಲ್ಲ ಎನ್ನುವ ಉತ್ತರ ಸಹಜವಾಗಿ ಬರುತ್ತದೆ. ಮನೋರಂಜನೆ ಹೊರತುಪಡಿಸಿ ತಮ್ಮ ಜ್ಞಾನಾರ್ಜನೆ, ಬೌದ್ಧಿಕ ತೃಪ್ತಿಗಾಗಿ ಯಾವ ಕನ್ನಡಿಗ,ತೆಲುಗ ಅಥವಾ ತಮಿಳ ಇತರ ಭಾಷಾ ವಾಹಿನಿಗಳನ್ನು ವೀಕ್ಷಿಸುತ್ತಿದ್ದಾನೆ ? ಇದಕ್ಕೂ ಸಹ ಇಲ್ಲವೆಂಬ ಉತ್ತರ ಸಿದ್ದ. ಭಾರತದ ಯಾವುದೇ ವಿದ್ಯಾವಂತ ತನ್ನ ಜ್ಞಾನ ವಿಸ್ತರಣೆಗೆ,ಬೌದ್ಧಿಕ ತೃಪ್ತಿಗೆ ಡಿಸ್ಕವರಿ,ನ್ಯಾಷನಲ್ ಜಿಯಾಗ್ರಫಿ ,ಹಿಸ್ಟರಿ ವಾಹಿನಿಗಳಿಗೆ ಮೊರೆ ಹೋಗುತ್ತಾನೆಯೇ ಹೊರತು ಸಂಬಂಧಿ ಭಾಷೆಯ ವಾಹಿನಿಗಳಿಗಲ್ಲ. ಯಾರಾದರೂ ಮಹಾಬಾಜಣೆ ಸಿದ್ಧಾಂತವನ್ನು ಅರಿಯಲು ಇಂಗ್ಲೀಷ್ ಭಾಷೆಯ ವಾಹಿನಿಗಳನ್ನು ಉಪೇಕ್ಷಿಸಿ ದೇಶಾಭಿಮಾನದ ದೃಷ್ಟಿಯಲ್ಲಿ ಭಾರತೀಯ ವಾಹಿನಿಗಳಿಗೆ ಜೋತುಬೀಳಲು ಸಾಧ್ಯವೆ ? ಈ ಸ್ಥಿತಿ ಸಾಹಿತ್ಯಕ್ಕೂ ಅನ್ವಯಿಸುತ್ತದೆ. ನಮ್ಮಲ್ಲಿರುವುದು ನಮ್ಮ ಪಕ್ಕದಲ್ಲಿರುವವರ ಹತ್ತಿರದಲ್ಲಿರುವುದು ಒಂದೇ ಆಗಿದ್ದಾಗ ಜನ ಅದನ್ನು ಮೀರಿದುದನ್ನು ನೀಡಬಲ್ಲ ಬಾಹ್ಯದತ್ತ ನೋಡುವುದು ಸಹಜ. ತಮಿಳಿನ ಪರಂಪರೆಯಿಂದ ಕನ್ನಡ ಸ್ಪೂರ್ತಿ ಪಡೆಯದಿರಲು ಇದು ಒಂದು ಮುಖ್ಯ ಕಾರಣ. ಧನ,ಧಾನ್ಯ ಇದ್ದವರನ್ನು ಕುರಿತಾಗಿ ಹೊಗಳಿ ,ಅವರಿಗೆ ಮೆಚ್ಚಿಗೆಯಾಗುವಂತಹ ಹಾಡುಗಳನ್ನು ಹಾಡಿ ಕಾಣಿಕೆಗಳನ್ನು ಗಿಟ್ಟಿಸುವ ಪದ್ದತಿ ನಾಗರಿಕತೆ ಉದಯವಾದಾಗಿನಿಂದಲೂ ಇದೆ. ಇದಕ್ಕಾಗಿ ವೃತ್ತಿ ಗಾಯಕ ಪರಂಪರೆಗಳಿವೆ. ಈಗಲೂ ಹಳ್ಳಿಗಳ ಕಡೆ ಹಬ್ಬಗಳಲ್ಲಿ , ಜೋಕುಮಾರನನ್ನು ಕಳಿಸುವಾಗ , ಹಾಡಿ ಹೊಗಳಿ ದಾನ ನೀಡುವಂತೆ ಒತ್ತಾಯಿಸುವ ಪದ್ದತಿಯಿದೆ. ಸಂಗಂ ಸಾಹಿತ್ಯ ಅಂತಹ ಪದ್ದತಿಯ ವಿಸ್ತೃತ ರೂಪದಂತೆ ಕಾಣುತ್ತದೆ. ಇಂತಹುದೇ ಪರಂಪರೆ ಭಾರತದ ಇತರ ಭಾಗಗಳಲ್ಲಿ ಇರಲಿಲ್ಲವೆನ್ನಲಾಗದು. ಇಂತಹ ಸಾಹಿತ್ಯ ಜಾನಪದ ಮೌಖಿಕ ಪರಂಪರೆಗೆ ಸೇರುತ್ತದೆ. ಸಂಗಂ ಸಾಹಿತ್ಯ ಮೌಖಿಕವಾಗಿ ಅಸ್ತಿತ್ವದಲ್ಲಿದ್ದ ಕಾಲದಲ್ಲೇ ಸಂಸ್ಕೃತ ಮತ್ತು ಪ್ರಾಕೃತದಲ್ಲಿ ಸಾಕಷ್ಟು ವಿಷಯ ವೈವಿಧ್ಯದ ಗ್ರಂಥಗಳಿದ್ದವು. ಧರ್ಮ, ಜಿಜ್ಞಾಸೆ, ಮೀಮಾಂಸೆ, ತರ್ಕ, ನಾಟಕ,ಕಾವ್ಯ,ಪರಿಣಯ,ಕಥೆಯ ಎಲ್ಲ ಪ್ರಾಕಾರದ ಸಾಹಿತ್ಯ ಸಾಕಷ್ಟು ಸೃಷ್ಟಿಯಾಗಿದ್ದಿತು. ಪ್ರಾಕೃತಕ್ಕೆ ನೇರವಾಗಿ ಮೈಯೊಡ್ಡಿದ್ದ ಕನ್ನಡಿಗರಿಗೆ ಮತ್ತು ತೆಲುಗರಿಗೆ ಇದರಲ್ಲಿನ ಲಭ್ಯ ಸಾಹಿತ್ಯ ಬೌದ್ಧಿಕ,ಭಾವುಕ ಅಗತ್ಯಗಳನ್ನು ಪೂರೈಸುತ್ತಿರಬೇಕು. ಆದ್ದರಿಂದ ಅವರು ಮೌಖಿಕವೆನಿಸುವ ,ಏಕತಾನತೆಯೆನಿಸಿದ ತಮ್ಮಲ್ಲಿಯು ಸಹ ಇದ್ದ ಸಂಗಂನಂತಹ ಸಾಹಿತ್ಯ ಪ್ರಾಕಾರಕ್ಕೆ ಅಂತಹ ಪ್ರಾಶಸ್ತ್ಯ ನೀಡಿಲ್ಲದಿರುವ ಸಾಧ್ಯತೆಗಳಿವೆ. ತಮಿಳಗಂನ ಉತ್ತರದ ನೀಲಗಿರಿಯಾಚೆಗಿರುವ ಕರ್ನಾಟಕದ ಅಥವಾ ವೇಂಗಡದಾಚೆಗಿನ ಆಂಧ್ರದ ಪರಿಗಣನೆ ಒತ್ತಟ್ಟಿಗಿರಲಿ , ತಮಿಳಗಂನ ಅಳಗಂಕುಲಂನಿಂದ , ರಾಮೇಶ್ವರಂನಿಂದ ಕೂಗಳತೆಯ ದೂರದಲ್ಲಿರುವ ಶ್ರೀಲಂಕಾದಲ್ಲಿ ಸಂಗಂ ಸಾಹಿತ್ಯ ಹೋಲುವ ಚಟುವಟಿಕೆಯ ಕುರುಹಿಲ್ಲದಿರುವುದು ಈ ವಾದವನ್ನು ದೃಢಪಡಿಸುತ್ತದೆ. ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟೀಷರಿಂದ ನಮಗೆ ಶಿಕ್ಷಣ ದೊರೆಯುವ ತನಕ ಅದೆಷ್ಟೇ ಜನಪ್ರಿಯವಾಗಿದ್ದರು ಯಾವ ಮೌಖಿಕ ಕಾವ್ಯವನ್ನಾಗಲಿ ನಮ್ಮ ಶಿಷ್ಟ ಕವಿಗಳು ಉಲ್ಲೇಖಿಸದಿರುವುದು ಗಮನಾರ್ಹ. ಜಾನಪದ ವೀರಕಾವ್ಯವೆನಿಸಿದ ಪಿರಿಯಾಪಟ್ಟಣದ ಕಾಳಗವಾಗಲಿ ಅಥವಾ ಮಲೆ ಮಹದೇಶ್ವರನ ಮೌಖಿಕ ಕಾವ್ಯ ಸಂಪ್ರದಾಯವನ್ನಾಗಲಿ ತಮಿಳಿನ ಸಂಗಂ ಕಾಲದ ತುಳುವಿನ ಪಾಡ್ದನವನ್ನಾಗಲಿ ಕುರಿತಾಗಿ ನಮ್ಮ ಮಾರ್ಗ ಸಾಹಿತ್ಯ ಪರಂಪರೆ ಒಂದು ಮಾತನ್ನೂ ಆಡುವುದಿಲ್ಲ. ಹಾಗೆಂದಾಗ ಶಿಷ್ಟ ಸಾಹಿತ್ಯ ಪರಂಪರೆಗೆ ಮೌಖಿಕ ಸಾಹಿತ್ಯದ ಅಸ್ತಿತ್ವ ಅಥವಾ ಶ್ರೇಷ್ಟತೆಯ ಅರಿವಿರಲಿಲ್ಲ ಎನ್ನುವುದಕ್ಕಿಂತ ಅದನ್ನು ಜಾನಪದ ನೆಲೆಯಲ್ಲಿ ಪರಿಗಣಿಸುತ್ತಿರಬೇಕು ಎನ್ನುವುದು ಸರಿಯಾಗುತ್ತದೆ. 19 ನೇ ಶತಮಾನದ ಅಂತ್ಯದಲ್ಲಿ ಮರುಶೋಧಿತವಾಗಿ ಪ್ರಚಾರಕ್ಕೆ ಬರುವವರೆಗೆ ತಮಿಳರಿಗೆ ಸಂಗಂ ಸಾಹಿತ್ಯದ ಅಸ್ತಿತ್ವದ ಅರಿವೇ ಇರಲ್ಲಿವೆಂಬುದು ತಮಿಳಗಂ ಇತಿಹಾಸದಲ್ಲಿ ಅದಕ್ಕೆ ಅಂತಹ ಮಾನ್ಯ ಸ್ಥಾನ ದಕ್ಕಿರಲಿಲ್ಲವೆಂದು ಸೂಚಿಸುತ್ತದೆ. ಇಪ್ಪತ್ತನೇ ಶತಮಾನದಿಂದ ತಮಿಳರು ಸಂಗಂ ಸಾಹಿತ್ಯಕ್ಕೆ ನೀಡುತ್ತಿರುವ ಮನ್ನಣೆಗೆ ಅಂತಹ ಚಾರಿತ್ರಿಕ ಹಿನ್ನೆಲೆ ಇರುವಂತೆ ಕಾಣುತ್ತಿಲ್ಲ. ಕಾಲದ ವಿವಾದವನ್ನು ಹೊರಗಿರಿಸಿ ನೋಡಿದಾಗಲೂ ತೊಲ್ಕಾಪ್ಪಿಯಂ ಗ್ರಂಥ ಕನ್ನಡಿಗರಿಗೆ ಬಹು ವಿಶಿಷ್ಟ ಕೃತಿಯಾಗಿ ಕಂಡಿರದ ಸಾಧ್ಯತೆಗಳಿವೆ. ಏಕೆಂದರೆ ಆ ವೇಳೆಗೆ ಅವರಿಗೆ ಪ್ರಾಕೃತ,ಸಂಸ್ಕೃತದ ಮೂಲಕ ವ್ಯಾಕರಣದ ನಾನಾ ಶಾಖೆಗಳು , ಮತ್ತು ವೇದಗಳ ಪ್ರತಿಸಾಖ್ಯಗಳ ಅರಿವು ಇವರಿಗಿದ್ದಿತು. ಆದ್ದರಿಂದ 20 ನೇ ಶತಮಾನದಲ್ಲಿ ತಮಿಳರು ಬಿಂಬಿಸಿದಂತೆ ತೊಲ್ಕಾಪ್ಪಿಯಂ ಲೋಕೋತ್ತರ ಕೃತಿಯಾಗಿರದೆ ಮತ್ತೊಂದು ಕೃತಿಯಾಗಿದ್ದಿತು. ಆದ್ದರಿಂದ ಅದಕ್ಕಿಂತಲೂ ಮುಂದುವರೆದ ಪರಂಪರೆಯನ್ನು , ಹೆಚ್ಚು ವ್ಯಾಪಕವೂ ಜನಜನಿತವೂ ಆದ ಆಕರಗಳನ್ನು ಅನುಕರಿಸಲು ಕವಿರಾಜಮಾರ್ಗಕಾರ ಆಯ್ದುಕೊಂಡಿರಬಹುದು. ಕನ್ನಡದಲ್ಲಿ ಪ್ರಾಕೃತ/ಸಂಸ್ಕೃತದಂತೆ ಮಹಾಪ್ರಾಣಗಳ ಬಳಕೆ ಯಾವಾಗಿನಿಂದ ಬಂತಿದೆಂಬುದು ಸ್ಪಷ್ಟವಿಲ್ಲ. ಕ್ರಿ.ಪೂ 300 ರಿಂದಲೇ ಭಾರತದಾದ್ಯಂತ ಪ್ರಚಲಿತವಿದ್ದ ಪ್ರಾಕೃತದಂತಹ ಬ್ರಾಹ್ಮಿ ಲಿಪಿಪೋಷಿತ ವಿಕಸಿತ ಭಾಷೆಯ ಸಂಪರ್ಕ ಹೊಂದಿದ್ದ ಕನ್ನಡಿಗರಿಗೆ ತಮ್ಮದಲ್ಲದ ಹೊರ ಭಾಷೆಯ ಸ್ಪಷ್ಟ ಅರಿವಿಗೆ ಮಹಾಪ್ರಾಣಗಳು ಅತ್ಯಗತ್ಯವೆಂದು ತೋರಿರಬೇಕು. ಆದ್ದರಿಂದ ಅವರು ದ್ರಾವಿಡಕ್ಕೆ ವಿಶಿಷ್ಟವಾದ ಅಕ್ಷರಗಳನ್ನು ಉಳಿಸಿಕೊಂಡು ಮಹಾಪ್ರಾಣಗಳಿಗೂ ಆಸ್ಪದವಿತ್ತಿರಬೇಕು. ಆದ್ದರಿಂದ ‘ಬರೆದಂತೆ ಓದುವ ಲಿಪಿ ಸಂಸ್ಕೃತಿ ಕನ್ನಡ,ತೆಲುಗುಗಳದ್ದಾದರೆ ‘ಬರೆದುದನ್ನು ಸಂದರ್ಭಕ್ಕನುಗುಣವಾಗಿ ಓದುವ’ ಲಿಪಿ ಸಂಸ್ಕೃತಿಯತ್ತ ತಮಿಳರು ಸಾಗಿದರು. ಇದರಿಂದ ಯಾವುದನ್ನೇ ಆಗಲಿ ಪೂರ್ವ ಜ್ಞಾನವಿಲ್ಲದೆ ಸರಿಯಾಗಿ ಓದುವುದು ತಮಿಳಿನಲ್ಲಿ ಸಾಧ್ಯವಿಲ್ಲದಾಯಿತು. ಪರಕೀಯ ಭಾಷೆಗಳ ಶಬ್ಧಗಳನ್ನು ಮೂಲದಲ್ಲಿರುವಂತೆ ಉಚ್ಚರಿಸುವಲ್ಲಿ ಕನ್ನಡಿಗರು ಮತ್ತು ತೆಲುಗರು ಪ್ರಸಿದ್ಧರಾಗಿ ತಮ್ಮದೇ ಆದ ಪರಂಪರೆಯೊಂದನ್ನು ನಿರ್ಮಿಸಿಕೊಂಡರು. ತಮಿಳರು ಅದೆಷ್ಟೇ ಹೆಮ್ಮೆ ಪಡಲಿ ಅವರು ಅನುಪಮವೆಂದು ಭಾವಿಸುವ ತೊಲ್ಕಾಪ್ಪಿಯಂ-ಸಧ್ಯಕ್ಕೆ ಇದರ ಕಾಲದ ವಿವಾದವನ್ನು ಹೊರಗಿರಿಸಿ ತಮಿಳಿನ ಆದಿಗ್ರಂಥವೆಂದು ಪರಿಗಣಿಸಿದಾಗಲೂ- ಬರವಣಿಗೆ ಕುರಿತಾದಂತೆ ಸರಿಯಾದ ವೈಜ್ಞಾನಿಕ ನಿಲುವು ತಾಳಲಿಲ್ಲವೆಂದು ಭಾವಿಸಬೇಕಾಗುತ್ತದೆ. ಉದಾಹರಣೆಗೆ ‘ಕ’ ಎಂದು ಬರೆದುದನ್ನು ಯಾವಾಗ ‘ಕ’ ಎಂದು ಉಚ್ಚರಿಸಬೇಕು , ಯಾವ ಸಂದರ್ಭಗಳಲ್ಲಿ ‘ಗ’ ಎಂದು ಉಚ್ಚರಿಸಬೇಕೆಂದು ವ್ಯಾಕರಣ ಗ್ರಂಥಗಳು ಮಾರ್ಗದರ್ಶನ ನೀಡುತ್ತದೆ. ಸಂಸ್ಕೃತದಿಂದ ಪದಗಳನ್ನು ತಮಿಳಿಗೆ ಬದಲಾಯಿಸಿಕೊಳ್ಳುವ ಸೂತ್ರಗಳನ್ನು ನಿರ್ದೇಶಿಸುತ್ತದೆ. ಇದರಿಂದ ತಮಿಳಿನಲ್ಲಿ ‘ಗ’ ‘ಜ’ ‘ಡ’ ‘ದ’’ಬ’ ಉಚ್ಚಾರಗಳು ಅಸ್ತಿತ್ವದಲ್ಲಿದ್ದವೆಂದು ಒಪ್ಪಬೇಕಾಗುತ್ತದೆ. ಹೊರಭಾಷೆಯಿಂದ ಬಂದ ಶಬ್ಧಗಳು ಒತ್ತಟ್ಟಿಗಿರಲಿ , ತನ್ನ ಭಾಷೆಯಲ್ಲಿರುವ ಉಚ್ಚಾರಗಳಿಗೆಲ್ಲವುಗಳಿಗೂ ನಿರ್ದಿಷ್ಟವಾದ ಅಸಂದಿಗ್ದವಾದ ಅಕ್ಷರಗಳನ್ನು ಹೊಂದಬೇಕೆಂಬುದನ್ನು ತಮಿಳರು ಮನಗಾಣಲಿಲ್ಲ. ಈ ಕೊರತೆಯನ್ನು ತಮಿಳಿನ ವೈಶಿಷ್ಟ್ಯವೆಂದು ತಮಿಳಿನ ವಿದ್ವಾಂಸರು ಮಂಡಿಸಿದರೆ ಕೆಲ ಪಾಶ್ಚಾತ್ಯ ಮತ್ತು ಕನ್ನಡಿಗ ತಜ್ಞರು ಹೌದೆಂದು ಗೋಣು ಹಾಕುತ್ತಿರುವುದೊಂದು ವಿಪರ್ಯಾಸ. ದೇಶ ಹಾಗೂ ಅದರೊಂದಿಗೆ ವ್ಯಕ್ತಿಯೂ ಜಗತ್ತಿನ ವಿವಿಧ ಸಂಸ್ಕೃತಿ, ವ್ಯಾಪಾರ ವಹಿವಾಟುಗಳಿಗೆ ಮೈಯೊಡ್ಡಿಕೊಳ್ಳುತ್ತಿರುವ ಜಾಗತೀಕರಣದ ಈ ಅವಧಿಯಲ್ಲಿ ತಮಿಳಿನ ಈ ಕೊರತೆ ಎದ್ದು ಕಾಣತೊಡಗಿದೆ. ಇದರಿಂದಾಗಿ ತಮಿಳೇತರ ಉಚ್ಚಾರಗಳೆಲ್ಲವು ಅಪಾರ ವಿಕೃತಿ ಹೊಂದಿ ತಮಿಳನ್ನು ಪ್ರವೇಶಿಸುತ್ತಿವೆ. ಮುಂದೊಂದು ದಿನ ಈ ಕೊರತೆಯನ್ನು ನೀಗಿಸಿಕೊಳ್ಳಲ್ಲು ತಮಿಳು ಭಾರತದ ಇತರ ಭಾಷೆಗಳಲ್ಲಿರುವಂತೆ ತನ್ನ ಲಿಪಿ ವ್ಯವಸ್ಥೆಯನ್ನು ಬದಲಿಸಿಕೊಳ್ಳುವ , ಸಂಯುಕ್ತಾಕ್ಷರಗಳನ್ನು ಬರೆಯುವ ವಿಧಾನವನ್ನು ರೂಪಿಸಿಕೊಳ್ಳುವ ಚಾರಿತ್ರಿಕ ಒತ್ತಡಕ್ಕೊಳಗಾದರೂ ಆಶ್ಚರ್ಯವಿಲ್ಲ. ಪ್ರಾಕೃತದಲ್ಲಿರುವ ಹಾಲನ ಗಾಥಾ ಸಪ್ತಶತಿ (ಇದು ಸಹ ಮೂಲತಃ ಜಾನಪದ ಪ್ರೇರಣೆಯಿಂದ ಬಂದ ಶಿಷ್ಟ ಸಾಹಿತ್ಯವೆಂದು ಭಾವಿಸಲಾಗಿದೆ) ಸಂಗಂ ಸಾಹಿತ್ಯ ಒದಗಿಸಿದಂತಹ ಶೃಂಗಾರ ಕಾವ್ಯವನ್ನು ಒದಗಿಸುತ್ತದೆ. ಆದ್ದರಿಂದ ತಮಿಳಗಂನ ಹೊರಗಿದ್ದ ವಿದ್ಯಾವಂತ ವಡುಗರು ಮೌಖಿಕ ಸಂಗಂ ಸಾಹಿತ್ಯಕ್ಕಿಂತಲೂ ಇದಕ್ಕೆ ಹೆಚ್ಚಿನ ಮನ್ನಣೆಯಿತ್ತಿರಬಹುದು. ಗಾಥಾ ಸಪ್ತಶತಿಯಲ್ಲಿನ ಸುಕ್ಲಿಷ್ಟತೆ , ಮುಂದುವರೆದ ನಾಗರಿಕತೆಯ ಅಂಶಗಳು ಅವರ ಗಮನ ಸೆಳೆದಿರುವ ಸಾಧ್ಯತೆಗಳಿವೆ. ಆದ್ದರಿಂದ ಸಂಗಂ ಸಾಹಿತ್ಯದವೇಕೆ ಕನ್ನಡದಲ್ಲಿ ಬರಲಿಲ್ಲ , ಮಾರ್ಗಕಾರನೇಕೆ ತೊಲ್ಕಾಪ್ಪಿಯಂ ಅನುಕರಿಸಲಿಲ್ಲ ಎನ್ನುವುದಕ್ಕೆ ಅಂತಹ ಮಹತ್ವವಿಲ್ಲದಂತಾಗುತ್ತದೆ. ಸಂಗಂ ಸಾಹಿತ್ಯ ಆ ಕಾಲದ ಕನ್ನಡಿಗರಿಗೆ ದೈನಂದಿನ ಊಟವೆನಿಸಿ ಅದಕ್ಕಿಂತಲೂ ಬೇರೆಬಗೆಯ ವ್ಯಂಜನ ಬೇಕೆನಿಸಿರಬಹುದು. ದೈನಂದಿನ ಜೀವನವನ್ನು ಯಥಾವತ್ ಚಿತ್ರಿಸುವ ಸಿನಿಮಾಕ್ಕಿಂತಲೂ ಸಹಜತೆಯೊಂದಿಗೆ ನಾಟಕೀಯತೆ ಮಿಶ್ರಿತವಾದ ಸಿನಿಮಾವನ್ನು ಮೆಚ್ಚುವಂತೆ ಸಂಗಂಗಿಂತಲೂ ಭಿನ್ನವಾದ ರಂಜಿತ ಸಾಹಿತ್ಯ ಕನ್ನಡಿಗರನ್ನು ಸೆಳೆದಿರಬಹುದು. ತಮಿಳಿರಗಿಂತಲೂ ಮೊದಲೆ ಇವರು ಸಂಸ್ಕೃತ ಮತ್ತು ಪ್ರಾಕೃತಗಳ ಮೂಲಕ ಸಾಹಿತ್ಯದ ವಿಭಿನ್ನ ಸಾಧ್ಯತೆಗಳನ್ನು ಅರಿತಿದ್ದ ಸಾಧ್ಯತೆಗಳು ಅಧಿಕವಾಗಿವೆ. ಕನ್ನಡದಲ್ಲಿ ತೊಲ್ಕಾಪ್ಪಿಯಂ ಏಕೆ ಬರಲಿಲ್ಲವೆನ್ನುವುದು ತಮಿಳಗಂನಲ್ಲಿ ಬಸವಣ್ಣ ಏಕೆ ಬರಲಿಲ್ಲ ಎನ್ನುವಂತಹ ಇನ್ನೊಂದು ಉತ್ತರವಿಲ್ಲದ ಪ್ರಶ್ನೆಯಾಗುತ್ತದೆ. ತೊಲ್ಕಾಪ್ಪಿಯಂನಂತಹ ಲಕ್ಷಣ ಗ್ರಂಥ ಕಾಣಿಸಿಕೊಂಡ 800 ವರ್ಷಗಳವರೆಗೆ ಕನ್ನಡದಲ್ಲಿ ಅಂತಹ ಗ್ರಂಥವೇಕೆ ಬರಲಿಲ್ಲ ಎಂಬುದೊಂದು ಸಮಸ್ಯೆ. ತೊಲ್ಕಾಪ್ಪಿಯಂ ಕಾಲದ ವಿವಾದವನ್ನು ನಾವು ಪರಿಗಣಿಸದೆ ಅದನ್ನು ಆದಿಗ್ರಂಥ,ಅನನ್ಯ,ಮಾರ್ಗಪ್ರೇರಕ,ಪ್ರಶ್ನಾತೀತ ಎಂಬ ಪೂರ್ವಾಗ್ರಹಪೀಡಿತ ತೀರ್ಮಾನಕ್ಕೆ ಜೋತು ಬೀಳುವವರಗೆ ಈ ಸಮಸ್ಯೆ ಉಳಿದಿರುತ್ತದೆ. ಆದರೆ ಇದರ ಕಾಲವನ್ನು ವಿವಾದವೆಂದು ಪರಿಗಣಿಸಿದ ತಕ್ಷಣ ಹಲವಾರು ಸ್ಪಷ್ಟ ಅಂಶಗಳು ಕಾಣತೊಡಗುತ್ತವೆ. ತಮಿಳಿನ ಎಲ್ಲ ವಿದ್ವಾಂಸರು ತೊಲ್ಕಾಪ್ಪಿಯಂನ ಅನನ್ಯತೆ ಮತ್ತು ಪ್ರಾಚೀನತೆಯನ್ನು ಒಪ್ಪಿಕೊಂಡಿಲ್ಲವೆಂಬುದನ್ನು ಗಮನಿಸಬೇಕು. ಯಾವುದೇ ಸಾಹಿತ್ಯ ಕೃತಿಯ ಕಾಲವನ್ನು ಮತ್ತು ಅದರ ಕೃತಿಗಾರನ ಕಾಲವನ್ನು ನಿರ್ಧರಿಸಲು ಆಂತರಿಕ, ಬಾಹ್ಯ,ಐತಿಹಾಸಿಕ ಸಾಕ್ಷ್ಯಗಳನ್ನು ಪರಿಗಣಿಸಬೇಕು. ವಡ್ಡಾರಾಧನೆ ಮತ್ತು ಕವಿರಾಜಮಾರ್ಗದ ಕಾಲ ನಿರ್ಧರಿಸಲು ಹಲವಾರು ವಿದ್ವತ್ಪೂರ್ಣ , ನಿಷ್ಪಕ್ಷಪಾತ ಸಂಶೋಧನೆಗಳು ಜರುಗಿವೆ. ತೊಲ್ಕಾಪ್ಪಿಯಂ ಕಾಲ ನಿರ್ಧಾರದಲ್ಲಿ ಇವು ಯಾವ ರೀತಿಯಲ್ಲಿ ಸಾಗಿವೆ ಎಂಬುದನ್ನು ಪರಿಶೀಲಿಸಿ ನೋಡಬೇಕಾಗುತ್ತದೆ. ತೊಲ್ಕಾಪ್ಪಿಯಂನ್ನು ಪ್ರಾಚೀನ ಕಾಲಕ್ಕೊಯ್ಯುವವರ ವಾದಕ್ಕಿಂತಲೂ ಅದನ್ನು ಮುಂದಕ್ಕೆಳೆಯುತ್ತಿರುವವರ ಬಣಕ್ಕೆ ಹೆಚ್ಚಿನ ಶಕ್ತಿಯಿರುವಂತೆ ತೋರುತ್ತದೆ. ಈ ವರೆಗೆ ಯಾವ ತಮಿಳಿನ ಪ್ರಾಚೀನ ಕೃತಿಯ ಕಾಲವೂ ವಿವಾದಾತೀತವಾಗಿ ನಿರ್ಧಾರವಾಗಿಲ್ಲವೆಂಬುದು ಗಮನಾರ್ಹ. ತಾಂತ್ರಿಕ ಆವಿಷ್ಕಾರಗಳು ಅನೂಹ್ಯ ಬದಲಾವಣೆಗಳನ್ನು ತರುತ್ತಿವೆ. ಅಂತಹುವುದರಲ್ಲಿ ಅಂತರ್ಜಾಲವೂ ಒಂದು. ಅಂತರ್ಜಾಲ ಬಂದ ನಂತರ ಜಗತ್ತು ಜನಸಾಮಾನ್ಯರ ಕೈಹಿಡಿತಕ್ಕೆ ದಕ್ಕುತ್ತಿದೆ. ಅಂತರ್ಜಾಲದ ಸಂಪರ್ಕ ಮತ್ತು ಸಂವಹನೆಗಳು ಅತ್ಯಂತ ವ್ಯಾಪಕ ಮತ್ತು ಶೀಘ್ರ ಸ್ವರೂಪ ತಳೆಯುತ್ತಿವೆ. ಕಳೆದ ದಶಕದಲ್ಲಿ ಸಾಮಾನ್ಯನೊಬ್ಬ ಲೇಖನ ಬರೆದು ಪ್ರಕಟಿಸುವುದು ಅನೂಹ್ಯವಾಗಿದ್ದಿತು. ಆದರೆ ಅಂತರ್ಜಾಲ ಎಲ್ಲರನ್ನು ಲೇಖಕರನ್ನಾಗಿಸಿ ಪ್ರತಿಯೊಬ್ಬರು ತಮ್ಮ ಅಭಿಪ್ರಾಯಗಳನ್ನು ನೀಡಲು ಅನುವು ಮಾಡಿಕೊಡುತ್ತಿದೆ . ಇದು ಮಾಹಿತಿ ಮಾಲಿನ್ಯಕ್ಕೂ ಕಾರಣವಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಮೇಲೆ ಅಭಿಮಾನವಿರುವುದು ಸಹಜ. ಆದರೆ ಇಡೀ ಜಗತ್ತಿನಲ್ಲಿ ತಮಿಳರಿಗಿರುವ ಭಾಷಾಭಿಮಾನ ಅತ್ಯಂತ ಕುತೂಹಲಕಾರಿಯೂ , ಅಧ್ಯಯನಾರ್ಹವೂ ಆಗಿದೆ. ಗ್ರೀಕ್ , ಲ್ಯಾಟಿನ್ , ಹೀಬ್ರೂ, ಅರೇಬಿಕ್, ಸಂಸ್ಕೃತ,ಪ್ರಾಕೃತದಂತಹ ಪ್ರಾಚೀನ ಭಾಷೆಗಳಿವೆ. ಇವುಗಳಲ್ಲಿ ವೈವಿಧ್ಯಮಯ ವಿಪುಲ ವಾಜ್ಞಯವಿದೆ. ಆದರೆ ಇವುಗಳಿಗೆ ಯಾವುದಕ್ಕೂ ಇಲ್ಲದ ಹೆಗ್ಗಳಿಕೆಯನ್ನು ತಮಿಳಿನಲ್ಲಿ ಕಾಣಲಾಗುತ್ತಿದೆ. ಇದಕ್ಕಾಗಿ ನೂರಾರು ಜಾಲತಾಣಗಳು ಸೃಜಿತವಾಗಿ ಇತಿಹಾಸದ ಬದಲು ಐತಿಹ್ಯದಿಂದ ತುಂಬಿ ತುಳುಕುತ್ತಿವೆ. ಆಧುನಿಕ ಭಾಷಾವಿಜ್ಞಾನ,ಇತಿಹಾಸಶಾಸ್ತ್ರ ಒಪ್ಪದಿರುವ ಹಲವಾರು ಸಂಗತಿಗಳನ್ನು ತಮಿಳಿನ ಶ್ರೇಷ್ಟತೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಜಾಲತಾಣಗಳಲ್ಲಿ ಲೇಖನ ಬರೆಯುವವರು ಮತ್ತು ಪ್ರತಿಕ್ರಿಯಿಸುವವರು ತಮಿಳರೆ. ಜಾಲತಾಣಗಳಲ್ಲಿ ವಿಹರಿಸುವ ಭಾರತೀಯೇತರ ಸಾಮಾನ್ಯನಿಗೆ ತಮಿಳು ಜಗತ್ತಿನ ಮೂಲ ಭಾಷೆಯೇನೋ ಎಂಬ ಭ್ರಮೆ ಮೂಡಿಸುತ್ತವೆ. ತಮಿಳಿನ ಈ ಉಗ್ರ ಭಾಷಾಭಿಮಾನಕ್ಕೆ ಪ್ರತಿಯಾಗಿ ಕಾಲಾನುಕ್ರಮದಲ್ಲಿ ಇನ್ನಿತರ ಭಾಷಿಕರಿಂದ ವಿವಿಧ ಭಾಷಾ ಹೋರಾಟಗಳು ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ. ಆರಂಭಿಕ ಕಾಲದ ದಕ್ಷಿಣ ಭಾರತದ ಚರಿತ್ರೆಯನ್ನು (1) ಜನಾಂಗ (2) ಭಾಷೆ-ಲಿಪಿ (3) ಸಾಹಿತ್ಯ -ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಪರಿಗಣಿಸಬಹುದು. ಇದರ ಅಧ್ಯಯನದಿಂದ ದ್ರಾವಿಡ ಮತ್ತು ದ್ರಾವಿಡೇತರ ಭಾಷೆ,ಸಂಸ್ಕೃತಿಗಳ ನಡುವಿನ ಸಂಬಂಧದೊಂದಿಗೆ , ವಿವಿಧ ದ್ರಾವಿಡ ಭಾಷೆಗಳು ಮತ್ತು ಅವುಗಳೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿಗಳ ಮಧ್ಯದ ಸಾಮ್ಯತೆ ,ವೈದೃಶ್ಯಗಳು ಸ್ಪಷ್ಟವಾಗುತ್ತವೆ. ಕ್ರಿ.ಶ. 3 ನೇ ಶತಮಾನದ ನಂತರ ತಮಿಳುನಾಡಿನಲ್ಲಿ ಪಲ್ಲವರ , ಕರ್ನಾಟಕದಲ್ಲಿ ಕದಂಬರ ರಾಜ್ಯ ಸ್ಥಾಪನೆಯೊಂದಿಗೆ ಇತಿಹಾಸವನ್ನು ಸಾಕಷ್ಟು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗುವಂತಹ ಐತಿಹಾಸಿಕ ದಾಖಲೆಗಳು ಸಿಕ್ಕುತ್ತವೆ. ಆದ್ದರಿಂದ ದಕ್ಷಿಣ ಭಾರತದ ಆರಂಭಿಕ ಇತಿಹಾಸ ಕ್ರಿ.ಶ. 1 ರಿಂದ ಕ್ರಿ.ಶ 3 ಶತಮಾನದ ಅವಧಿಯದೆಂದು ಹೇಳಬಹುದು. ದಕ್ಷಿಣ ಭಾರತದ ಪ್ರಾಚೀನ ಜನಾಂಗಗಳಲ್ಲಿ ತಮಿಳರು,ಕನ್ನಡಿಗರು,ತೆಲುಗರು ಎದ್ದು ಕಾಣುತ್ತಾರೆ. ಈ ಜನಾಂಗಗಳು ಇಂದಿಗೂ ಪ್ರಭಾವಶಾಲಿಗಳಾಗಿದ್ದು ಭಾರತೀಯ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಇವುಗಳಷ್ಟೆ ಪ್ರಾಚೀನ ಮತ್ತು ಸಮರ್ಥವಾದ ತುಳು ಐತಿಹಾಸಿಕ ಕಾಲಘಟ್ಟವೊಂದರಲ್ಲಿ ಲಿಪಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳದೆ ಮೌಖಿಕತೆಗೆ ಒತ್ತುಕೊಟ್ಟದ್ದರಿಂದ ಉಳಿದ ಪ್ರಮುಖ ದ್ರಾವಿಡ ಭಾಷೆಗಳಿಗಿರುವಂತೆ ಅದಕ್ಕೆ ಲಿಖಿತ ವಾಜ್ಞಯವಿಲ್ಲವಾದರೂ ದ್ರಾವಿಡರ ಪ್ರಾಚೀನತೆ, ಸ್ವರೂಪದ ಚರ್ಚೆಯಲ್ಲಿ ಪ್ರಮುಖ ಸ್ಥಾನವಿದೆ. ಚರಿತ್ರೆಯುದ್ದಕ್ಕೂ ತುಳುನಾಡು ಕನ್ನಡ ರಾಜರುಗಳ ಆಳ್ವಿಕೆಗೆ ಒಳಪಟ್ಟದ್ದರಿಂದ ತುಳು ಇತಿಹಾಸ ಕನ್ನಡದ ಇತಿಹಾಸದೊಂದಿಗೆ ಬೆರೆತುಕೊಂಡು ಇವೆರಡರ ಇತಿಹಾಸ ಒಂದೇ ಎಂಬಂತೆ ಭಾಸವಾಗುತ್ತದೆ. ತುಳುನಾಡನ್ನು ಆರಂಭ ಕಾಲದಿಂದಲೂ ಆಳಿದ ಆಳುಪರು ಮೊದಲಿಗೆ ಕದಂಬರ ನಂತರ ಚಾಳುಕ್ಯರ ಅಧೀನದಲ್ಲಿದ್ದರು. ಚಾಲುಕ್ಯರೊಂದಿಗೆ ವೈವಾಹಿಕ ಸಂಬಂಧವನ್ನು ಸಹ ಅಳುಪರು ಹೊಂದಿದ್ದರು. ಕೊಡವರು ಒಂದು ಭಾಷಾ ಸಮುದಾಯವಾಗಿ ಎಂದಿಗೂ ಪ್ರಾಬಲ್ಯ ಹೊಂದಿರದಿದ್ದರು ಆರಂಭ ಕಾಲದಲ್ಲಿ ತಮಿಳಗಂ ಮತ್ತು ಕನ್ನಡ ನಾಡುಗಳ ಮಧ್ಯದ ಸ್ವತಂತ್ರ ವಲಯದಂತೆ ವರ್ತಿಸಿದರು. ಈಗ ಅಸ್ತಿತ್ವದಲ್ಲಿರುವ ದ್ರಾವಿಡ ಭಾಷೆಗಳಲ್ಲಿ ತಮಿಳು,ಕನ್ನಡ,ತುಳು,ತೆಲುಗು ಮತ್ತು ಮಲಯಾಳಂ ಪ್ರಮುಖವಾದುವು. ಈ ಭಾಷೆಗಳಿಗೆ ತಮ್ಮದೇ ಆದ ರಾಜಕೀಯ, ಸಾಂಸ್ಕೃತಿಕ ,ಭೌಗೋಳಿಕ ನೆಲೆಗಳಿವೆ.ಭಾಷಾ ವಿದ್ವಾಂಸರು ಮೂಲ ದ್ರಾವಿಡದಿಂದ ಮೊದಲಿಗೆ ತೆಲುಗು ಪ್ರತ್ಯೇಕಗೊಂಡಿತೆಂದು, ನಂತರ ತಮಿಳು ಕನ್ನಡಗಳು ಬೇರ್ಪಟ್ಟವೆಂದು ನಿರ್ಧರಿಸಿದ್ದಾರೆ. ಕ್ರಿ.ಶ. ಆರಂಭದ ಶತಮಾನಗಳಲ್ಲಿ ಈಗಿನ ಕೇರಳದ ಬಹುತೇಕ ಪ್ರದೇಶ ಪ್ರಾಚೀನ ತಮಿಳಗಂನ ವಲಯವಾಗಿದ್ದಿತೆಂಡೂ ಭಾವಿಸಲಾಗಿರುವುದರಿಂದ ಆರಂಭ ಕಾಲದ ದ್ರಾವಿಡ ಪ್ರದೇಶದ ಇತಿಹಾಸದ ಚರ್ಚೆಯಲ್ಲಿ ಮಲೆಯಾಳಂ ಭಾಷೆ ಒಳಗೊಳ್ಳುವುದಿಲ್ಲ. ಮೂಲ ದ್ರಾವಿಡದಿಂದ ಕವಲೊಡೆದು ವಿಕಸಿಸಿದ ಭಾಷೆಗಳಿಗೆ ತಮ್ಮದೇ ಆದ ವೈಶಿಷ್ಟ್ಯ , ಪ್ರತ್ಯೇಕತೆ, ಅನನ್ಯತೆ,ಪ್ರಾಚೀನತೆಗಳಿವೆ. ಇವುಗಳಲ್ಲಿ ತಮಿಳು ಹಿರಿಯಕ್ಕನಂತಿದೆ. ಬೇರೆ ದ್ರಾವಿಡ ಭಾಷೆಗಳಿಗಿಂತ ಉಜ್ವಲವಾದ, ಹಿರಿದಾದ , ಪ್ರಾಚೀನವಾದ ಪರಂಪರೆ ತನಗಿದೆ0iÉುಂಬ ಹಮ್ಮು-ಬಿಮ್ಮುಗಳು, ಬೇರೆಯವರತ್ತ ಕಡೆನೋಟ ಬೀರುವ ಗತ್ತು ಗಾಂಭೀರ್ಯಗಳನ್ನು ಕಳೆದ ಶತಮಾನದಿಂದ ತಮಿಳು ತೋರಿಸುತ್ತ ಬಂದಿದೆ. ಒಡಹುಟ್ಟಿದ ಉಳಿದ ಸೋದರಿಯರು ತನಗಿಂತ ಬಹು ಹಿಂದೆ,ಬಹು ಕೆಳಗೆ ಎಂಬ ಧೋರಣೆ ಈ ಹಿರಿಯಕ್ಕನದು. ಈ ಧೋರಣೆಯ ಹಿಂದೆ ಅಲ್ಪಮಟ್ಟದ ಚಾರಿತ್ರಿಕ ,ಸಾಹಿತ್ಯಕ ಸತ್ಯಗಳು ಇಲ್ಲದಿಲ್ಲ. ಆದರೆ ಇದು ಯಾವ ಮಟ್ಟಿಗೆ , ಯಾವ ಹಂತದವರೆಗೆ ಸರಿ ? ಎಂಬ ಪ್ರಶ್ನೆಗೆ ಉತ್ತರ ನೀಡುವುದು ಅಷ್ಟು ಸುಲಭ ಸಾಧ್ಯವಾದುದಲ್ಲ. ಅಜ್ಞಾತ ಪ್ರಾಚೀನದಲಿ , ಅಲಿಖಿತ ಸಂಸ್ಕೃತಿಗಳಲ್ಲಿ , ಅವ್ಯಕ್ತ ಘಟ್ಟಗಳಲ್ಲಿ ಇದಕ್ಕೆ ಪರಿಹಾರ ಹುಡುಕಬೇಕಾಗುತ್ತದೆ. ಇದಕ್ಕಾಗಿ ಚರಿತ್ರೆ , ಸಾಹಿತ್ಯ, ಮೌಖಿಕ ಪರಂಪರೆ ಮತ್ತು ಭಾಷಾ ಪರಿಕರದ ಸಂಶೋಧನೆಯ ಮಾರ್ಗಗಳಿಗೆ ಮೊರೆ ಹೋಗಬೇಕಾಗುತ್ತದೆ. ತಮಿಳು ಎಷ್ಟು ಪ್ರಾಚೀನ ? ಎನ್ನುವ ಪ್ರಶ್ನೆಗೆ ಉತ್ತರವನ್ನು ಇಡೀ ದ್ರಾವಿಡ ಭಾಷಾ ವರ್ಗವನ್ನು ಆಳವಾಗಿ ಬಲ್ಲ , ಇತಿಹಾಸ, ಸಾಹಿತ್ಯ ಸಂಸ್ಕೃತಿಗಳ ನಿಕಟ ಪರಿಚಯವಿರುವ ಸಹೃದಯಿ ಇತಿಹಾಸಕಾರ ಮಾತ್ರ ನೀಡಬಲ್ಲ. ಇದು ಈಗಿನ ಕಾಲಘಟ್ಟದಲ್ಲಿ ಅಸಾಧ್ಯವೇನೋ ಎನಿಸುತ್ತದೆ. ಏಕೆಂದರೆ ಸ್ವಾತಂತ್ರಾನಂತರ ಭಾಷಾ ತಳಹದಿಯ ಮೇಲೆ ರಾಜ್ಯಗಳು ರೂಪುಗೊಂಡವು. ಇದರಿಂದ ಪ್ರತಿ ಭಾಷೆಗೂ ತನ್ನದೇ ಆದ ನಿರ್ದಿಷ್ಟ ಗಡಿ , ತನ್ನದೇ ಆದ ರಾಜಕೀಯ ಬಲ ಲಭ್ಯವಾಯಿತು. ಪರಿಣಾಮವಾಗಿ ಪ್ರತಿಯೊಂದು ಭಾಷೆಯೂ ತನ್ನದೇ ಶ್ರೇಷ್ಟ , ತನ್ನದೇ ಪ್ರಾಚೀನ, ತನ್ನದೇ ಆಧುನಿಕ ಎಂಬ ನಿಲುವು ತಳೆಯತೊಡಗಿದವು. ಈ ಮುಂಚೆ ಇತಿಹಾಸದಲ್ಲಿ ಇಂತಹ ಭಾಷಾಭಿಮಾನ ಇರಲಿಲ್ಲವೇ? ಎಂದರೆ ಇತ್ತು ಆದರೆ ಈಗಿನಂತಲ್ಲ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಭಾರತದಲ್ಲಿ ಬ್ರಿಟೀಷರು ಬರುವುದಕ್ಕೆ ಮುಂಚೆ ಜನರ ಹೊಲ ,ಆಸ್ತಿಗಳು ಸೇರಿದಂತೆ ಯಾವ ನೈಸರ್ಗಿಕ ಕ್ಷೇತ್ರಗಳಿಗೂ ಖಚಿತ ಗಡಿ ರೇಖೆಗಳಿರಲಿಲ್ಲ. ಈಗ ತಮಿಳುನಾಡು ಎನ್ನುವಲ್ಲಿ ಕನ್ನಡ, ಕರ್ನಾಟಕ ಎನ್ನುವಲ್ಲಿ ತೆಲುಗು, ಆಂಧ್ರಪ್ರದೇಶ ಎನ್ನುವಲ್ಲಿ ತೆಲುಗು , ಕನ್ನಡಗಳು ಜೊತೆ ಜೊತೆಯಾಗಿಯೇ ಇದ್ದವೆಂದು ಹೇಳಬೇಕು. ಜನಸಾಮಾನ್ಯರು ಈ ಭಾಷೆ ಮತ್ತು ಸಂಸ್ಕೃತಿಯ ಕಲಬೆರಕೆಯನ್ನು ಸಹಜವೆಂಬಂತೆ ಒಪ್ಪಿಕೊಂಡಿದ್ದರು. ಈಗಿನ ಸ್ಥಿತಿಯಲ್ಲಿ ಕನ್ನಡದ ಶ್ರೇಷ್ಟ ವಿದ್ವಾಂಸನಿಗೆ ತೆಲುಗು , ತಮಿಳಿನ ಪರಿಚಯವಿರುವುದಿಲ್ಲ. ತಮಿಳಿನ ವಿದ್ವಾಂಸ ಯಾವುದೇ ನಿರ್ದಿಷ್ಟ ಶಬ್ಧದ ಪ್ರಾಚೀನ ರೂಪ ಕನ್ನಡದಲ್ಲೊ ಇಲ್ಲ ತೆಲುಗಿನಲ್ಲೊ ಇರುವುದನ್ನು ತಿಳಿಯುವ ದಾರಿಗಳು ಅತ್ಯಲ್ಪವಾಗಿವೆ. ಈಗ ಕನ್ನಡ, ತೆಲುಗು, ತಮಿಳಿನ ಶಿಲಾಶಾಸನ, ಸಾಹಿತ್ಯಗಳು ಇಂಗ್ಲೀಷ್ ಮುಖಾಂತರ ಪರಸ್ಪರ ವಿನಿಮಯಗೊಳ್ಳುತ್ತಿವೆ. ಸಧ್ಯಕ್ಕೆ ಇದಕ್ಕೆ ಹೊರತಾದ ಬೇರೆ ದಾರಿಗಳಿಲ್ಲ. ಆದ್ದರಿಂದ ಈ ಆಕರಗಳ ನೆರವಿನಿಂದ ಈ ಕೃತಿಯಲ್ಲಿನ ವಿಚಾರಗಳನ್ನು ನೀಡಲಾಗಿದೆ. ತನ್ನದೇ ನೆಲ, ಜಲ, ಆಡಳಿತ ,ಪರರಿಂದ ಪ್ರಭಾವಿತವಾಗದ ಸಂಸ್ಕೃತಿ, ಸ್ವೋಪಜ್ಞವಾದ ಮೂಲ ಸಾಹಿತ್ಯ ಇವೆಲ್ಲವುಗಳಿಗೆ ಗರಿಯಿಟ್ಟಂತೆ ಪ್ರಾಚೀನತೆಗಳಿಂದಾಗಿ ತಮಿಳು ಬೇರೆ ದ್ರಾವಿಡ ಭಾಷೆಗಳಿಗಿಂತ ಶ್ರೇಷ್ಟವೆಂಬ ಹೆಮ್ಮೆಯ ಸೌಧ ರೂಪುಗೊಂಡಿದೆ. ಈ ಸೌಧದ ಆಧಾರ ಸ್ತಂಭಗಳೆಂದರೆ - (1) ಆರಂಭಿಕ ಕಾಲದಲ್ಲಿ ಚೇರ , ಚೋಳ , ಪಾಂಡ್ಯರೆಂಬ ಸ್ವತಂತ್ರರಾದ ಮೂವೇಂದರರ ಆಳ್ವಿಕೆ (2) ಸಂಗಂ ಸಾಹಿತ್ಯವೆಂಬ ಸೃಜನಶೀಲತೆ (3) ತೊಲ್ಕಾಪ್ಪಿಯಂ ಎಂಬ ವ್ಯಾಕರಣ ಗ್ರಂಥ (4) ತಮಿಳು-ಬ್ರಾಹ್ಮಿಯೆಂಬ ಲಿಪಿ ಮತ್ತು ಸೆಂದಮಿಳ್ ಎಂಬ ಪರಿಶುದ್ಧ ಭಾಷೆ. ಈ ಆಧಾರ ಸ್ತಂಭಗಳ ಖಚಿತತೆ , ಚಾರಿತ್ರಿಕ ಸತ್ಯಾಸತ್ಯತೆ ಇವುಗಳನ್ನು ಸುತ್ತವರಿದಿರುವ ವಿವಾದಗಳು ದ್ರಾವಿಡ ಭಾಷೆಗಳ ಮೂಲ ಅವುಗಳ ಚಾರಿತ್ರಿಕ ಘಟ್ಟಗಳ ಮೇಲೆ ಹೊಸ ಬೆಳಕು ಚೆಲ್ಲುತ್ತವೆ. ಈ ಅಧಾರ ಸ್ತಂಭಗಳನ್ನು ಹಲವಾರು ದೃಷ್ಟಿ ಕೋನಗಳಿಂದ ನೋಡಿದ ವಿದ್ವಾಂಸರು, ಚರಿತ್ರೆಕಾರರು ಎತ್ತಿದ ಪ್ರಶ್ನೆಗಳನ್ನು ಸ್ಥೂಲವಾಗಿ ಈ ಮುಂದೆ ನೀಡಲಾಗಿದೆ. # ಪ್ರಾಚೀನ ಉಲ್ಲೇಖಗಳಲ್ಲಿ ತಮಿಳು ಮತ್ತು ತಮಿಳಗಂ ಹೇಗೆ ಪ್ರತಿನಿಧಿಸಲ್ಪಟ್ಟಿವೆ? ಬೇರೆ ಭಾಷೆ ಮತ್ತು ಪ್ರದೇಶಗಳಿಗಿಂತ ಇವುಗಳನ್ನು ಭಿನ್ನವಾಗಿ ಪರಿಗಣಿಸಲಾಗಿದೆಯೇ? ಈ ಮೂಲಗಳಿಂದ ಆರಂಭಿಕ ಕಾಲದ ತಮಿಳಗಂ ಮತ್ತು ತಮಿಳು ಭಾಷೆಯ ಸ್ವರೂಪವನ್ನು ತಿಳಿಯಬಹುದೆ ? # ತಮಿಳಿನ ಆರಂಭಿಕ ಮತ್ತು ಮಹೋತ್ತರವೆನಿಸಿದ ಸಂಗಂ ಸಾಹಿತ್ಯಕ್ಕೆ ಪ್ರೇರಣೆ ಮತ್ತು ಚೌಕಟ್ಟನು ತಮಿಳಿನ ಆದಿಗ್ರಂಥವೆನಿಸಿದ ತೊಲ್ಕಾಪ್ಪಿಯಂ ಒದಗಿಸಿದೆಯೆಂದು ಭಾವಿಸಲಾಗಿದೆ. ತೊಲ್ಕಾಪ್ಪಿಯಂ ಕಾಲ ಕ್ರಿ. ಪೂ 500-ಕ್ರಿ.ಶ. 800 ರ ಸರಿಸುಮಾರು 1300 ವರ್ಷಗಳ ಕಾಲಾವಧಿಯಲ್ಲಿ ತೂಗುಯ್ಯಾಲೆಯಾಡುತ್ತಿದೆ. ಸುಮಾರು 2831 ಕವನಗಳಿರುವ 473 ಕವಿಗಳಿಂದ ಸೃಜಿತವಾದ 30000 ಸಾಲುಗಳಷ್ಟು ಸಮೃದ್ಧವಾದ ಸಂಗಂ ಸಾಹಿತ್ಯದಲ್ಲಿ ಅದಕ್ಕೆ ಮೂಲ ಚೌಕಟ್ಟನ್ನು ಒದಗಿಸಿದ ಗ್ರಂಥದ ಮತ್ತು ಅದರ ಕರ್ತೃವಿನ ಉಲ್ಲೇಖ ಒಮ್ಮೆಯಾದರೂ ಬರದಿರಲು ಕಾರಣವೇನು ಮತ್ತು ಅಂತಹ ಗ್ರಂಥ ಅಸ್ತಿತ್ವದಲ್ಲಿದ್ದುದಕ್ಕೆ ಯಾವುದೇ ಆಂತರಿಕ ಮತ್ತು ಬಾಹ್ಯ ಪುರಾವೆಗಳು ದಕ್ಕದಿರುವ ಹಿನ್ನೆಲೆಯೇನು ? ತಮಿಳಗಂನ ರಾಜರುಗಳು ಸಾಹಿತ್ಯಾಭಿಮಾನಿಗಳು , ಸ್ವಯಂ ಕವಿಗಳು , ಕವಿ ಪೋಷಕರಾಗಿದ್ದು ಕವಿಗಳಿಗೆ ಕೊಡುಗೈ ದಾನಿಗಳಾಗಿದ್ದರೆಂದು ಸಂಗಂ ಸಾಹಿತ್ಯದ ಕೆಲ ಭಾಗಗಳಲ್ಲಿ ನಿರೂಪಿತವಾಗಿದೆ. ಇಂತಹವರು ತೊಲ್ಕಾಪ್ಪಿಯಂನಂತಹ ಮಹಾನ್ ಕೃತಿಗೆ ಯಾವುದೇ ಮನ್ನಣೆಯನ್ನು ನೀಡದ , ಅದರ ಬಗೆಗೆ ಅಭಿಮಾನ ತಾಳದ , ಅದರ ಅಸ್ತಿತ್ವವನ್ನೇ ಅರಿಯದಂತಿರುವ ಸಂಗತಿ ಸೋಜಿಗವಲ್ಲವೇ ? ಸ್ವರರಹಿತ ವ್ಯಂಜನ ಗುರುತಿಸಲು ತೊಲ್ಕಾಪ್ಪಿಯಂ ಸೂಚಿಸಿರುವ ಪುಲ್ಲಿ ಪದ್ದತಿ ತಮಿಳುನಾಡಿನಲ್ಲಿ ಅತ್ಯಂತ ಪ್ರಾಚೀನವೆಂದು ಭಾವಿಸಲಾಗಿರುವ ಈಗ ತಮಿಳು-ಬ್ರಾಹ್ಮಿಯೆಂದು ಕರೆಯಲಾಗುತ್ತಿರುವ ಗುಹಾ ಶಿಲಾಬರಹಗಳಲ್ಲಿ ಏಕಿಲ್ಲ ? ಮಹಾಪ್ರಾಚೀನವೆನಿಸಿದ ತೊಲ್ಕಾಪ್ಪಿಯಂ ಕುರಿತಾಗಿ ಹನ್ನೆರಡನೇ ಶತಮಾನದವರೆಗೆ ಯಾವುದೇ ಭಾಷ್ಯ ಗ್ರಂಥಗಳು ರಚನೆಯಾಗದಿದ್ದು ನಂತರವೇ ಕಾಣಿಸಿಕೊಳ್ಳುವಲ್ಲಿ ಯಾವುದೇ ನಿರ್ದಿಷ್ಟ ಚಾರಿತ್ರಿಕ ಕಾರಣಗಳಿವೆಯೇ ? # ತಮಿಳುನಾಡಿನಲ್ಲಿ ಲಭ್ಯವಾಗುವ ಅತ್ಯಂತ ಪ್ರಾಚೀನವಾದ ಬರಹದ ಆಕರಗಳೆಂದರೆ ಗುಹಾ ಶಿಲಾಬರಹಗಳು. ಇವುಗಳ ಕಾಲವನ್ನು ಕ್ರಿ.ಪೂ 300 – ಕ್ರಿ. ಶ 300 ಅವಧಿಯಲ್ಲಿ ಪರಿಗಣಿಸಲಾಗಿದೆ. ಈ ಎಲ್ಲ ಗುಹಾ ಬರಹಗಳು ಜೈನ ಧರ್ಮಕ್ಕೆ ಸಂಬಂಧಿಸಿದ್ದು ಬಹುತೇಕ ಎಲ್ಲವು ಜೈನ ಶ್ರಮಣರಿಗೆ ನಿರ್ಮಿಸಿಕೊಟ್ಟ ನೆಲೆಗಳಾಗಿವೆ. ಇಲ್ಲಿಯ ತನಕ ಜೈನೇತರ ಕಾರಣಗಳನ್ನು ಹೊಂದಿದ ಯಾವುದೇ ಪ್ರಾಚೀನ ಗುಹಾಶಿಲಾಬರಹ ದಕ್ಕಿಲ್ಲ. ಗುಹಾ ಶಿಲಾಬರಹಗಳೆಲ್ಲವು ಬಹು ಹ್ರಸ್ವವಾಗಿದ್ದು ಆತುರದಲ್ಲಿ ಬರೆದು ಮುಗಿಸಿದಂತಿವೆ. ಕ್ರಿ.ಪೂ ಶತಮಾನಗಳಲ್ಲೇ ತೊಲ್ಕಾಪ್ಪಿಯಂನಂತಹ ಗ್ರಂಥ ನೀಡಿದ, ಸಂಗಂನಂತಹ ಸಾಹಿತ್ಯ ಸೃಜಿಸಿದ, ಗ್ರೀಕ್-ರೋಮನ್ರೊಂದಿಗೆ ವ್ಯಾಪಾರ ನಡೆಸಿದ ತಮಿಳಗಂ ಜೈನೇತರವಾದ ಯಾವ ಪ್ರಾಚೀನ ಬರಹವನ್ನು ಕೊಡದಿರಲು ಕಾರಣವೇನು ? ಇಲ್ಲಿಯವರೆಗೆ ಆರಂಭ ಕಾಲದ ಯಾವುದೇ ತಮಿಳಗಂ ರಾಜ ಮನೆತನಗಳಿಂದ ನೇರವಾಗಿ ಹೊರಬಂದ ಬರಹವೇಕೆ ದಕ್ಕಿಲ್ಲ ? ತಮಿಳಗಂ ಹೊರಗೆ ಸಂಗಂ ಸಾಹಿತ್ಯದ ಸಮಕಾಲೀನ ರಾಜರುಗಳು, ದಾನಿಗಳು ನೂರಾರು ಶಿಲಾಶಾಸನಗಳನ್ನು ಬರೆಸುತ್ತಿದ್ದಾಗ ಅಕ್ಷರ ಪ್ರೇಮಿಗಳಾದ ತಮಿಳರು ಇದರಿಂದ ಹಿಂದುಳಿದುದೇಕೆ ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕ ಹೊರಟಾಗ ಲಭ್ಯವಾದ ಮಾಹಿತಿಗಳು ಮತ್ತು ಅವುಗಳಿಂದ ಸ್ಥೂಲವಾಗಿ ಪಡೆಯಬಹುದಾದ ತೀರ್ಮಾನಗಳೇ ಈ ಪುಸ್ತಕದ ತಿರುಳು. ಅಂತರ್ಜಾಲದ ತಾಣಗಳಲ್ಲಿ ಮತ್ತು ಚರ್ಚೆಗಳಲ್ಲಿ ತಮಿಳಿನ ಹೆಗ್ಗಳಿಕೆಯನ್ನು ಕುರಿತಾಗಿ ಕಂಡುಬರುವ ಪ್ರಮುಖಾಂಶಗಳನ್ನು ಕೆಳಗೆ ದಾಖಲಿಸಿಲಾಗಿದೆ. ಅವುಗಳ ಸತ್ಯಾಸತ್ಯತೆಯನ್ನು ಸಾಂದರ್ಭಿಕವಾಗಿ ವಿವಿಧ ಶೀರ್ಷಿಕೆಗಳಡಿಯಲ್ಲಿ ಪರಿಶೀಲಿಸಲಾಗಿದೆ. (1) ತಮಿಳು ಜಗತ್ತಿನಲ್ಲಿ ಅತ್ಯಂತ ಪ್ರಾಚೀನವಾದ ಮತ್ತು ಸರ್ವ ಶ್ರೇಷ್ಟವಾದ ಭಾಷೆ. ಸುಮೇರಿಯನ್, ಹರಪ್ಪ ಮೊಹೆಂಜದಾರೋಗಳ ಭಾಷೆ ಪೂರ್ವದ ತಮಿಳು. ಜಗತ್ತಿನ ಎಲ್ಲ ಭಾಷೆಗಳು ತಮಿಳಿನ ಅಪಭ್ರಂಶಗಳು. ತಮಿಳಿನ ಪ್ರಾಚೀನತೆ ಮಾನವನ ವಿಕಾಸದಿಂದ ಪ್ರಾರಂಭವಾಗುತ್ತದೆ. (2) ತಮಿಳು ಪ್ರಾಚೀನತೆ ಮತ್ತು ಶ್ರೇಷ್ಟತೆಯಲ್ಲಿ ಸಂಸ್ಕೃತಕ್ಕಿಂತಲೂ ಮಿಗಿಲಾದುದು.ತಮಿಳು ಸ್ವಯಂಪರಿಪೂರ್ಣವಾದ ಭಾಷೆ. ಅದರ ಮೆಲೆ ಬೇರೆ ಯಾವ ಭಾಷೆಯೂ ಪ್ರಭಾವ ಬೀರಿಲ್ಲ. ಜಗತ್ತಿನಲ್ಲಿನ ಯಾವುದೇ ಭಾಷೆಯಲ್ಲಿನ ಯಾವುದೇ ಶಬ್ಧಕ್ಕೆ ತಮಿಳಿನಲ್ಲಿ ಅದರದೇ ಆದ ಶಬ್ಧವಿದೆ. (3) ಭಾರತದ ಎಲ್ಲ ಸಾಮ್ರಾಜ್ಯಗಳು, ಚಕ್ರವರ್ತಿಗಳು ತಮಿಳರು. ಮಗಧವನ್ನಾಳಿದ ಮೌರ್ಯ ವಂಶ ಮೂಲತ ತಮಿಳಿನದು. ಸಂಸ್ಕೃತಕ್ಕೆ ವ್ಯಾಕರಣವನ್ನು ನೀಡಿದವರು ತಮಿಳರು. ಜಗತ್ತಿನ ಮೊದಲ ವ್ಯಾಕರಣ ಗ್ರಂಥ ತೊಲ್ಕಾಪ್ಪಿಯಂ. (4) ಸಂಗಂ ಸಾಹಿತ್ಯ ಜಗತ್ತಿನಲ್ಲಿಯೇ ಅನನ್ಯವಾದುದು. ಇದು ಜಗತ್ತಿನ ಒಂದು ಮಹಾನ್ ಕಾವ್ಯ ಪರಂಪರೆಗೆ ನಾಂದಿಯಾಯಿತು. (5) ಪ್ರಾಚೀನ ಕಾಲದಲ್ಲಿ ತಮಿಳಗಂ ಈಗಿನ ಶ್ರೀಲಂಕಾದ ದಕ್ಷಿಣಕ್ಕೆ ಮಡಗಾಸ್ಕರ್ವರೆಗೆ ಹಬ್ಬಿದ್ದಿತು. ಇದನ್ನು ಕುಮಾರಿ ಖಂಡ ಎಂದು ಕರೆಯಲಾಗುತ್ತಿತ್ತು. ಸಮುದ್ರದ ವಿಕೋಪಕ್ಕೆ ಸಿಕ್ಕಿ ಈ ಖಂಡ ಮುಳುಗಿ ಹೋದುದರಿಂದ ಬಹು ಪ್ರಾಚೀನವಾದ ಅಮೂಲ್ಯ ಸಾಹಿತ್ಯ ಕಣ್ಮರೆಯಾಯಿತು. (6) ಅಶೋಕನಿಗಿಂತಲೂ ಮೊದಲೆ ತಮಿಳರು ಸ್ವತಂತ್ರವಾದ ಮಹಾಸಾಮ್ರಾಜ್ಯವನ್ನು ಸ್ಥಾಪಿಸಿದ್ದರು ಹಾಗೂ ಅಶೋಕ ಚಕ್ರವರ್ತಿಯನ್ನು ಸೋಲಿಸಿದ್ದರು. ತಮಿಳಗಂನ ರಾಜರು ಇಡೀ ಭಾರತವನ್ನು ಗೆದ್ದಿದ್ದರು. ಅವರು ಹಿಮಾಲಯದವರೆಗೆ ಸಾಗಿ ಅಲ್ಲಿ ತಮ್ಮ ಲಾಂಛನಗಳನ್ನು ಕೆತ್ತಿದ್ದರು. (7) ತಮಿಳರಿಗೆ ಅವರದೇ ಆದ ವಿಶಿಷ್ಟ ಸಂಸ್ಕೃತಿಯಿದೆ. ಹೊರಗಿನ ಬಂದ ಆರ್ಯರಿಂದ ಅದಕ್ಕೆ ಧಕ್ಕೆಯಾಯಿತು. ತಮಿಳರ ಶ್ರೇಷ್ಟತೆಯನ್ನು ಹತ್ತಿಕ್ಕುವ ಪ್ರಯತ್ನಗಳು ಭಾರತದಲ್ಲಿ ಸತತವಾಗಿ ನಡೆಯುತ್ತಿವೆ. (8) ತಮಿಳಿನ ಸಿದ್ಧರ ವೈದ್ಯ ಪದ್ಧತಿ ಜಗತ್ತಿನಲ್ಲೇ ಪ್ರಾಚೀನ ಹಾಗೂ ಅನನ್ಯವಾದುದು. ಇದರಂತೆ ತಮಿಳಿನ ಸಂಗೀತ (ಇಸೈ) , ನಾಟ್ಯ (ಕುಟ್ಟು) ಭಾರತದಲ್ಲೇ ಅತ್ಯಂತ ಪ್ರಾಚೀನ ಮತ್ತು ಸ್ವೋಪಜ್ಞ. ಇವು ಬಾಹ್ಯ ಪ್ರಭಾವವಿಲ್ಲದೆ ತಮಿಳಗಂನಲ್ಲಿ ವಿಕಸಿಸಿದ ಸರ್ವ ಶ್ರೇಷ್ಟ ಸಾಧನೆಗಳು. (9) ಜಗತ್ತಿನಲ್ಲಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಿದ ಮೊದಲಿಗ ಕರಿಕಾಲ ಚೋಳ. (10) ಕ್ರಿ.ಪೂ 1300 (ಅಥವಾ ಕ್ರಿ.ಪೂ 130) ವರ್ಷಗಳ ಹಿಂದೆ ಚೇರ,ಚೋಳ,ಪಾಂಡ್ಯರು ತಮಿಳಗಂನ ಮೇಲೆ ಆಕ್ರಮಣ ಮಾಡುವ ಹೊರಗಿನವರನ್ನು ಎದುರಿಸಲು ಪರಸ್ಪರ ಸಹಾಯವೆಸಗುವ ಒಪ್ಪಂದ ಮಾಡಿಕೊಂಡಿದ್ದರು. ಇದು ಖಾರವೇಲನ ಹಾಥಿಗುಂಪ ಶಾಸನದಲ್ಲಿದೆ. (11) ಈಗ ತಮಿಳು ಬ್ರಾಹ್ಮಿ ಎಂದು ಕರೆಯಲಾಗುತ್ತಿರುವ ತಮಿಳುನಾಡಿನಲ್ಲಿನ ಗುಹಾ ಶಿಲಾಬರಹಗಳ ಲಿಪಿ ಅಶೋಕನ ಬ್ರಾಹ್ಮಿಲಿಪಿಗೆ ಪ್ರೇರಣೆಯಾಯಿತು. ಅಥವಾ ತಮಿಳು ಬ್ರಾಹ್ಮಿ ಮತ್ತು ಅಶೋಕ ಬ್ರಾಹ್ಮಿ ಒಟ್ಟಿಗೆ ರೂಪುಗೊಂಡವು. (12) ತಮಿಳು ಮಾತ್ರ ದ್ರಾವಿಡ ಭಾಷೆಗಳ ಎಲ್ಲ ಪ್ರಾಚೀನ ಸ್ವರೂಪಗಳನ್ನು ಉಳಿಸಿಕೊಂಡಿದೆ. ದಕ್ಷಿಣ ಭಾರತದ ಚರಿತ್ರೆಯೆಂದರೆ ತಮಿಳಿನ ಚರಿತ್ರೆಯಲ್ಲದೆ ಬೇರೆಯಲ್ಲ. ತಮಿಳಿನ ಸೆಂದಮಿಳ್ ನಿಲಂ ಪ್ರದೇಶದಾಚೆಗೆ ಆಡು ಭಾಷೆಯ ರೂಪದಲ್ಲಿದ್ದ ಕೋಡುಂತಮಿಳ್ ಮುಂದೆ ಕನ್ನಡ , ತುಳು ಹಾಗೂ ತೆಲುಗು ಭಾಷೆಗಳ ಉಗಮಕ್ಕೆ ಕಾರಣವಾಯಿತು. ಈ ಭಾಷೆಗಳನ್ನು ಕರುನಾಟ ತಮಿಳ್, ಆಂಧ್ರ ತಮಿಳ್ , ತುಳು ತಮಿಳ್ ಎಂದು ಕರೆಯಲಾಗುತ್ತಿತ್ತು. ಸಂಗಂ ಸಾಹಿತ್ಯದಲ್ಲಿ ಬಳಕೆಯಾಗಿರುವ ಬಹು ಹಿಂದೆಯೇ ತಮಿಳಿನಿಂದ ಮರೆಯಾಗಿ ಹೋಗಿರುವ ನೂರಾರು ಶಬ್ಧಗಳು , ಪದ ಪ್ರಯೋಗಳು ಈಗಲೂ ಕನ್ನಡ ಆಡು ಭಾಷೆಯಲ್ಲಿ , ಸಾಹಿತ್ಯದಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿವೆ. ಆದ್ದರಿಂದ ಕನ್ನಡ ತಮಿಳಿನಿಂದ ಮೂಡಿ ಬಂದಿದೆ. (13) ಸಂಗಂ ಸುವರ್ಣ ಯುಗದ ಕೊನೆಯ ಅವಧಿಯಲ್ಲಿ ತಮಿಳಗಂನ್ನು ಆಕ್ರಮಿಸಿದ ಕರ್ನಾಟಕ/ಆಂಧ್ರ ಮೂಲದ ಕಳಭ್ರರಿಂದ ತಮಿಳಿನ ಪ್ರಾಚೀನ ಸಾಹಿತ್ಯದ ಬಹು ಭಾಗ ನಾಶವಾಯಿತು. ಮೇಲಿನ ಅಂಶಗಳಲ್ಲಿ (1) ರಿಂದ (8)ರವರೆಗಿನ ನಿಲುವುಗಳು ಅತ್ಯುಗ್ರ ಅಂಧ ಭಾಷಾಭಿಮಾನದ ಪ್ರತೀಕಗಳಾಗಿವೆ. ಇವಕ್ಕೆ ಹೆಚ್ಚಿನ ವಿಚಾರಶೀಲ ಇತಿಹಾಸ ಪ್ರಜ್ಞೆಯಿರುವ ತಮಿಳರ ಬೆಂಬಲವಿಲ್ಲ. ಅಂಶ (9) ನ್ನು ಕುರಿತಾದಂತೆ ಹೆಚ್ಚಿನ ತಮಿಳರಿಗೆ ಹೆಮ್ಮೆಯಿದೆ ಆದರೆ ಅದರ ಹಿಂದಿರುವ ವಿಭಿನ್ನ ಐತಿಹಾಸಿಕ ಸಾಕ್ಷ್ಯಗಳ ಅರಿವಿಲ್ಲ. (10) ರಿಂದ (13) ರವರೆಗಿನ ಅಂಶಗಳು ವಿದ್ವತ್ ವಲಯದಲ್ಲಿ ಪ್ರಚಲಿತವಿದ್ದು ಕೆಲವರಿಗೆ ತಮಿಳಿನ ಪ್ರಾಚೀನತೆಯನ್ನು ಆದಷ್ಟು ಹಿಂದಕ್ಕೊಯ್ಯಲು ಪ್ರೇರಣೆ ದಕ್ಕುತ್ತಿದೆ. ಐರಾವತಂ ಮಹಾದೇವನ್ , ಮದಿವಣ್ಣನ್ನಂತಹ ಖ್ಯಾತ ವಿದ್ವಾಂಸರು ಸಿಂಧೂ ಲಿಪಿಯಲ್ಲಿ ಪೂರ್ವ ದ್ರಾವಿಡದ ಬೇರುಗಳಿವೆ ಯೆಂದು ವಾದಿಸಿದ್ದಾರೆ. ಮಹಾದೇವನ್ ವ್ಯಕ್ತವಾಗಿ ಹೇಳದಿದ್ದರೂ ಪೂರ್ವ ದ್ರಾವಿಡವೆಂದರೆ ತಮಿಳೆಂಬ ಅಂತರ್ಗತ ಅರ್ಥದಲ್ಲಿ ವ್ಯವಹರಿಸುತ್ತಾರೆ. ಅವರ ನಿಲುವುಗಳಲ್ಲಿ ಹರಪ್ಪ ನಾಗರಿಕತೆಯನ್ನು ತಮಿಳಿನ ನಾಗರಿಕತೆಯನ್ನಾಗಿಸುವ ಗುಪ್ತ ಕಾರ್ಯಕ್ರಮವಿರುವಂತೆ ತೋರುತ್ತದೆ. ಮುಂದಿನ ಪುಟಗಳಲ್ಲಿ ಮೇಲೆ ಪಟ್ಟಿಮಾಡಲಾದ ಅಂಶಗಳ ಹಿಂದಿನ ಚಾರಿತ್ರಿಕ ಸತ್ಯ/ವಿವಾದಗಳನ್ನು ಕುರಿತಾಗಿ ಸಾಂದರ್ಭಿಕವಾದ ಪಕ್ಷಿ ನೋಟ ಬೀರಲಾಗಿದೆ. ಸ್ವತಂತ್ರ ಭಾಷೆಯಾಗಿ ಕನ್ನಡದ ಅಸ್ತಿತ್ವ ಅಶೋಕನ ಶಿಲಾಶಾಸನದ ಇಸಿಲ ಶಬ್ಧದಿಂದ , ಬರಹ ಸಾಧನೆ ಹಲ್ಮಿಡಿ ಶಾಸನದ ಮೂಲಕ ಮತ್ತು ಸಾಹಿತ್ಯ ಕವಿರಾಜಮಾರ್ಗದ ಮೂಲಕ ಕಾಣಿಸಿಕೊಳ್ಳುತ್ತವೆ. ಇದೇ ರೀತಿಯಲ್ಲಿ ತಮಿಳು ಭಾಷೆ ಮತ್ತು ಲಿಪಿ ಪ್ರಾಚೀನ ಗುಹಾ-ಶಿಲಾಬರಹಗಳ ಮೂಲಕ ವ್ಯಕ್ತವಾಗುತ್ತವೆ. ಸಾಹಿತ್ಯ ಸಂಗಂ ಕಾಲದ ಮೌಖಿಕರೂಪದ ಕವನಗಳಿಂದ ಮೊದಲು ಕಾಣಿಸಿಕೊಳ್ಳುತ್ತದೆ. ಇವೆರಡು ಭಾಷೆಗಳ ಈ ಅಭಿವ್ಯಕ್ಯಿಗಳ ತೌಲನಿಕ ನೋಟಗಳು ವಿವಿಧ ತಲೆ ಬರಹಗಳಲ್ಲಿ ಮೂಡಿಬಂದಿವೆ. |
Comment Box is loading comments...