|
ಖೊಟ್ಟಿ ಯೋಗಾಸನ ಗ್ರಂಥಗಳು
ಭಾರತ ಮೂಲದ ಎಲ್ಲವನ್ನೂ ವೈದಿಕ ಪರಂಪರೆಗೆ ಲಗತ್ತಿಸಿ ಪ್ರಾಚೀನತೆಯ ಗರ್ವ ತುಂಬಿ ಅವುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ತಂತ್ರ ಹಲವು ಸಲ , ಹಲವು ಸಂಗತಿಗಳಲ್ಲಿ ಘಟಿಸಿದೆ. ಯೋಗಾಸನಗಳು ೧೫ ನೇ ಶತಮಾನದ ಹಠಯೋಗ ಪ್ರದೀಪಿಕೆಗಿಂತ ಹಿಂದೆ ಎಲ್ಲಿಯೂ ಉಲ್ಲೇಖವಾಗಿಲ್ಲ ಎನ್ನುವ ಚಿಂತೆ ಮತ್ತು ಹೇಗಾದರೂ ಅವುಗಳನ್ನು ವೈದಿಕ ಋಷಿಗಳಿಗೆ ಲಗತ್ತಿಸಬೇಕೆಂಬ ಹಂಬಲದಿಂದ ಎರಡು ಖೊಟ್ಟಿ ಪ್ರಾಚೀನ ಗ್ರಂಥಗಳನ್ನು ಸೃಷ್ಟಿಸಲಾಗಿದೆ. ಈ ಗ್ರಂಥಗಳ ಜನಕರು ಕೃಷ್ಣಮಾಚಾರ್ಯರು. ಕೃಷ್ಣಮಾಚಾರ್ಯರು ೧೮೮೮ ರಲ್ಲಿ ಹುಟ್ಟಿದಾಗ ಈಗ ಪ್ರಚಲಿತವಿರುವ ಯಾವ ಯೋಗಾಸನಗಳು ಇರಲಿಲ್ಲ. ಆಗ ಇದ್ದುದು ಪರಂಪರೆಯಿಂದ ಬಂದ ಹಠಯೋಗದ ಅಸನಗಳು ಮಾತ್ರ. ಬಗೆಬಗೆಯ ಹಠಯೋಗದ ಆಸನಗಳನ್ನು ಹಾಕುವುದು , ಮುಳ್ಳಿನ ಆವುಗೆಯ ಮೇಲೆ ಒಂಟಿ ಕಾಲಿನಲ್ಲಿ ನಿಲ್ಲುವುದು, ಉಸಿರು ಬಿಗಿಹಿಡಿದು ತಲೆಯನ್ನು ನೆಲದಲ್ಲಿ ಹೂಳಿಕೊಳ್ಳುವುದು, ಹಲ್ಲಿನಿಂದ ನೀರು ತುಂಬಿದ ಕೊಡಪಾನವನ್ನು ಎತ್ತುವುದು ಮುಂತಾದ ಕಸರತ್ತುಗಳನ್ನು ಹೊಟ್ಟೆ ಹೊರೆಯುವ ಒಂದು ದಾರಿಯೆಂದು ಜನ ಪರಿಗಣಿಸುತ್ತಿದ್ದರು. ಕೃಷ್ಣಮಾಚಾರ್ಯರು ಇತ್ತೀಚಿನವರೆಗೆ ಜೀವಿಸಿದ್ದರಾದರೂ ಅವರ ಆರಂಭಿಕ ಆಗೂ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನದೇನೂ ತಿಳಿದಿಲ್ಲ. ಅವರು ತಮ್ಮ ಆಪ್ತರಿಗೆ ತಿಳಿಸಿದಂತೆ ಅವರದು ೯ನೇ ಶತಮಾನಕ್ಕೆ ಸೇರಿದ ವೈಷ್ಣವ ಭಕ್ತಿ ಪಂಥದ ನಾಥಮುನಿಯ ವಂಶ. ಅವರು ತಂದೆಯ ಮಾರ್ಗದರ್ಶನದಲ್ಲಿ ಐದು ವರ್ಷದ ಬಾಲಕರಾಗಿರುವಾಗಲೇ ಪತಂಜಲಿ ಯೋಗ ಸೂತ್ರಗಳನ್ನು ಕಲಿತಿದ್ದರು. ಅವರು ಹರಯಕ್ಕೆ ಬರುವ ವೇಳೆಗೆ ತಂದೆ ತೀರಿಕೊಂಡರು. ಆ ವೇಳೆಗಾಗಲೇ ಅವರು ಶೃಂಗೇರಿ ಮಠದ ಸ್ವಾಮಿ ಒಬ್ಬರಿಂದ ೨೪ ಆಸನಗಳನ್ನು ಕಲಿತಿದ್ದರು. ಇದರೊಂದಿಗೆ ಅವರ ಮನೆತನದ ಪಾರಂಪರಿಕ ವಿದ್ಯೆಗಳಾದ ಪೂಜೆ ,ಹೋಮ , ಹವನ , ಮನೆ ವೈದ್ಯಗಳು ಅವರಿಗೆ ಸಹಜವಾಗಿ ಕರಗತವಾಗಿದ್ದವು. ೧೬ ನೇ ವಯಸ್ಸಿನಲ್ಲಿರುವಾಗ ಅವರಿಗೆ ಕನಸೊಂದು ಬಿದ್ದಿತು. ಅದರಲ್ಲಿ ಕಾಣಿಸಿಕೊಂಡ ವ್ಯಕ್ತಿ ಅವರ ವಂಶದ ಮೂಲ ನೆಲೆಯಾದ ತಮಿಳುನಾಡಿನ ಆಳ್ವಾರ್ ತಿರುನಗರಿಗೆ ಹೋಗುವಂತೆ ಸೂಚಿಸಿದ. ಕೈಯಲ್ಲಿ ಕಾಸಿಲ್ಲದ ಕೃಷ್ಣಮಾಚಾರ್ಯರು ಕಾಲ್ನಡಿಗೆಯಲ್ಲಿ ೭೦೦ ಕಿ.ಮೀ ದೂರದ ತಿರುನಗರಿಗೆ ಹೋದರು. ಆಳ್ವಾರ್ ತಿರುನಗರಿ ತಲುಪಿದ ಕೃಷ್ಣಮಾಚಾರ್ಯರು ದೇವಸ್ಥಾನಕ್ಕೆ ಹೋಗಿ ಅಲ್ಲಿದ್ದ ಕಾವಲುಗಾರನನ್ನು ತಮ್ಮ ಪೂರ್ವಜರ ಬಗ್ಗೆ ವಿಚಾರಿಸಿದರು. ಆಗ ಆತ ತಾಮ್ರಪರ್ಣಿ ನದಿಯಲ್ಲಿ ಮಿಂದು ಎದುರಿಗೆ ಕಾಣುವ ಮಾವಿನ ತೋಪಿಗೆ ಹೋಗಬೇಕೆಂದು ತಿಳಿಸಿದ. ಅದರಂತೆ ಅವರು ನದಿಯಲ್ಲಿ ಮಿಂದು ಹೊರಬಂದಾಗ ಪರವಶರಾಗಿ ಕೆಳಕ್ಕೆ ಬಿದ್ದರು. ಹಾಗೆ ಬಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿರುವಾಗ ಮೂವರು ಯೋಗಿಗಳು ಅವರಿಗೆ ಕಾಣಿಸಿಕೊಂಡರು. ಮಧ್ಯದಲ್ಲಿ ಇದ್ದವರು ನಾಥಮುನಿ. ಆಚಾರ್ಯರು ತಮಗೆ ಉಪದೇಶ ನೀಡಬೇಕೆಂದು ಬೇಡಿಕೊಂಡರು. ಆಗ ನಾಥಮುನಿ ನಾಲ್ಕು ಗಂಟೆಗಳ ಕಾಲ ‘ಯೋಗರಹಸ್ಯ’ ವನ್ನು ಕೃಷ್ಣಮಾಚಾರ್ಯರಿಗಾಗಿ ಹಾಡಿದರು. ಎಚ್ಚರವಾಗಿ ನೋಡಿದಾಗ ತಮಗೆ ಬೋಧಿಸಿದ ನಾಥಮುನಿ ಮತ್ತು ದಾರಿ ತೋರಿಸಿದ ಕಾವಲುಗಾರ ಒಂದೇ ಎಂದು ತಿಳಿಯಿತು. ತಿರುನಗರಿಯಿಂದ ಊರಿಗೆ ಮರಳಿದ ನಂತರ ಕೃಷ್ಣಮಾಚಾರ್ಯರು ತಾವು ಬಾಲ್ಯದಲ್ಲಿ ಕಲಿತಿದ್ದ ಹಠಯೋಗದ ಆಸನಗಳ ಅಭ್ಯಾಸ ಮುಂದುವರೆಸಿದರಲ್ಲದೆ ಇತರರಿಗೂ ಹೇಳಿಕೊಡುತ್ತಿದ್ದರು. ಕಡುಬಡತನ ಅವರ ಹೆಗಲೇರಿದ್ದಿತು. ಆಚಾರ್ಯರ ಆಸನಗಳನ್ನು ನೋಡಿದ ಮೈಸೂರಿನ ಉಪಾಧ್ಯಾಯರೊಬ್ಬರು ಅವರಿಗೆ ಹಠಯೋಗಿ ಶ್ರೀ ರಾಮಮೋಹನ ಬ್ರಹ್ಮಚಾರಿ ಎನ್ನುವವರನ್ನು ಕಾಣಲು ತಿಳಿಸಿದರು. ಈ ಹಠಯೋಗಿ ತಮ್ಮ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ಗವಿಯೊಂದರಲ್ಲಿ ವಾಸಿಸುತ್ತಿದ್ದರು ಎನ್ನುವುದನ್ನು ಬಿಟ್ಟು ಬೇರೆ ಮಾಹಿತಿ ದಕ್ಕದು. ಕೃಷ್ಣಮಾಚಾರ್ಯರು ತಾವು ಈ ಯೋಗಿಯಿಂದ ಪತಂಜಲಿ ಯೋಗ ಸೂತ್ರ, ಪ್ರಾಣಾಯಾಮ, ಆಸನಗಳನ್ನು ಕಲಿಯುತ್ತ ೭ ವರ್ಷಗಳನ್ನು ಕಳೆದೆವೆಂದು ಹೇಳಿದ್ದಾರೆ. ಈ ಅವಧಿಯಲ್ಲಿ ತಾವು ೩೦೦೦ ಆಸನಗಳನ್ನು ಕಲಿತೆವೆಂದು ಅವರು ತಿಳಿಸಿದ್ದಾರೆ. ಗುರುದಕ್ಷಿಣೆಯಾಗಿ ಶ್ರೀ ರಾಮಮೋಹನ ಬ್ರಹ್ಮಚಾರಿ ಯೋಗವನ್ನು ಜಗತ್ತಿನಾದ್ಯಂತ ಹರಡುವ ವಾಗ್ದಾನವನ್ನು ಕೃಷ್ಣಮಾಚಾರ್ಯರಿಂದ ಪಡೆದರು. ಕೃಷ್ಣಮಾಚಾರ್ಯರು ‘ಯೋಗ ರಹಸ್ಯ’ವನ್ನು ನಾಥಮುನಿಯಿಂದ ಪಡೆದೆನೆಂದು ಹೇಳುತ್ತಾರೆ. ೭-೮ ಶತಮಾನಕ್ಕೆ ಸೇರಿದ ತಮಿಳುನಾಡಿನ ವೈಷ್ಣವ ಪರಂಪರೆಯ ೧೨ ಆಳ್ವಾರ್’ಗಳ ಹಾಡುಗಳನ್ನು ಸಂಗ್ರಹಿಸಿ ‘ನಾಳಯಿರ ದಿವ್ಯ ಪ್ರಬಂಧಮ್’ ಹೆಸರಿನ ಕೃತಿ ಸಂಪಾದಿಸಿದಾತ ನಾಥಮುನಿ. ಇದು ತಮಿಳುನಾಡಿನಲ್ಲಿ ‘ದ್ರಾವಿಡ ವೇದ’ ಎಂದೇ ಪ್ರಸಿದ್ಧವಾಗಿದೆ. ನಾಥಮುನಿ ‘ನ್ಯಾಯ ತತ್ತ್ವ’ ಮತ್ತು ‘ಯೋಗ ರಹಸ್ಯ’ ಎನ್ನುವ ಇನ್ನೆರಡು ಗ್ರಂಥಗಳನ್ನು ರಚಿಸಿರುವನೆಂಬ ನಂಬಿಕೆಯಿದೆ. ಕಣ್ಮರೆಯಾಗಿರುವ ಹಲವಾರು ಪ್ರಾಚೀನ ಕೃತಿಗಳ ಪಟ್ಟಿಯಲ್ಲಿ ಇವೆರಡೂ ಸೇರಿವೆ. ಬೇರೆ ಕಡೆ ಉಲ್ಲೇಖಗೊಂಡು ಈವರೆಗೆ ಸಿಗದಿರುವ ಹಲವಾರು ಕನ್ನಡ, ತಮಿಳು , ಪ್ರಾಕೃತ ಸಂಸ್ಕೃತ ಕೃತಿಗಳ ಪಟ್ಟಿಗಳಿವೆ. ಇದು ಭಾರತೀಯ ಸಂದರ್ಭದಲ್ಲಿ ಅಸಹಜವಾದುದೇನೂ ಅಲ್ಲ. ನಾಥಮುನಿ ರಚಿಸಿದ್ದನೆಂದು ಹೇಳಲಾಗುವ ಆದರೆ ಲಭ್ಯವಾಗದ ಕೃತಿ ಕೃಷ್ಣಮಾಚಾರ್ಯರು ಯೋಗಾಸನಗಳನ್ನು ವೈದಿಕ ಮೂಲಕ್ಕೆ ಒಯ್ಯಲು ಒಂದು ಒಳ್ಳೆಯ ಸಾದ್ಯತೆಯನ್ನು ಒದಗಿಸಿದ್ದಿತು. ಅದಕ್ಕೆ ಪೂರಕವಾಗಿ ತಮ್ಮದೇ ಆದ ಒಂದು ಕಟ್ಟು ಕಥೆಯನ್ನು ಅವರು ಹೆಣೆದರು. ಮತ್ತೆಲ್ಲಿಯೂ ಈ ಹಿಂದೆ ಸಿಗದ ಪ್ರತಿ ತಮಗೆ ಸಿಕ್ಕಿತೆಂದು ಹೇಳಿದರೆ ಯಾರಿಗಾದರೂ ಅದರ ಮೇಲೆ ಸಂಶಯ ಬರುತ್ತದೆ. ತಾಡಯೋಲೆಯನ್ನು ಇತರರಿಗೆ ತೊರಿಸಬೇಕಾಗುತ್ತದೆ ಮತ್ತು ಅವರ ಅದರ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಅವರು ಪ್ರಯತ್ನಿಸುತ್ತಾರೆ. ಇದರ ಬದಲು ಪರವಶ ಸ್ಥಿತಿಯಲ್ಲಿ ಇರುವಾಗ ತಮಗೆ ನಾಥಮುನಿ ಬೋಧಿಸಿದರು ಎನ್ನುವ ಸುಲಭ ತಂತ್ರಕ್ಕೆ ಕೃಷ್ಣಮಾಚಾರ್ಯರು ಮೊರೆಹೋಗಿದ್ದಾರೆ. ಇದರಿಂದ ಭೌತಿಕವಾಗಿ ವಿಶ್ಲೇಷಣೆಗೆ ಗ್ರಂಥವನ್ನು ನೀಡಬೇಕಿಲ್ಲ ಮತ್ತು ತಾವೇ ರಚಿಸಿದ ಗ್ರಂಥಕ್ಕೆ ಋಷಿ , ಮುನಿಗಳ ಅಧಿಕೃತ ಮುದ್ರೆಯನ್ನು ಸುಲಭವಾಗಿ ಒತ್ತಬಹುದು ಎನ್ನುವ ತಂತ್ರ ಇದರಲ್ಲಿದೆ. ಕೃಷ್ಣಮಾಚಾರ್ಯರು ಯೋಗ ರಹಸ್ಯದ ಪಾಠಗಳನ್ನು ತನ್ನ ಮಗ ದೇಶಿಕಾಚಾರ್’ಗೆ ಹೇಳುತ್ತಿದ್ದರು. ಅದು ಬರವಣಿಗೆಗೆ ಇಳಿದಿರಲಿಲ್ಲ. ೧೯೬೫ ರಲ್ಲಿ ಅವರು ಅದನ್ನು ಬರವಣಿಗೆಗೆ ಇಳಿಸಿದರು. ಇಲ್ಲಿರುವ ಆಸನಗಳು ಅಷ್ಟಾಂಗ ಯೋಗದ ಆಸನಗಳಂತೆಯೇ ಇವೆ. ಯೋಗ ರಹಸ್ಯ ಗರ್ಭಧಾರಣೆಯ ಬಗ್ಗೆಯೂ ಸಾಕಷ್ಟು ಹೇಳುತ್ತಿದ್ದು ಅದು ಸೃಷ್ಟಿಯಾದ ಉದ್ದೇಶವನ್ನು ಇನ್ನಷ್ಟು ಎತ್ತಿ ತೋರಿಸುತ್ತದೆ. ಪಟ್ಟಾಭಿ ಜೋಯಿಸ್ ಪ್ರಚಾರ ಮಾಡಿರುವ ‘ಅಷ್ಟಾಂಗ ವಿನ್ಯಾಸ’ ಪದ್ದತಿಗೆ ಅವರ ಗುರು ಕೃಷ್ಣಮಾಚಾರ್ಯರು ಕೋಲ್ಕತ್ತಾ ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯದಲ್ಲಿ ಹುಡುಕಿ ತೆಗೆದ ‘ಯೋಗ ಕುರುಂತ’ ಗ್ರಂಥವೇ ಮೂಲವೆಂದು ಹೇಳಲಾಗಿದೆ. ‘ಗ್ರಂಥ’ ಪದದ ತಮಿಳು ರೂಪವೇ ಕುರುಂತ. ‘ಯೋಗ ರಹಸ್ಯ ತಮಿಳಿನಲ್ಲಿ ‘ಯೋಗ ಕುರುಂತ’. ಇದನ್ನು ವಾಮನ ಋಷಿ ರಚಿಸಿದನೆಂದು ನಂಬಲಾಗಿದೆ. ಯೋಗ ಗ್ರಂಥ ಗುರು-ಶಿಷ್ಯ ಪರಂಪರೆಯಲ್ಲಿ ಸಾಗಿ ಬರುವ ಕಂಠಪಾಠಕ್ಕೆ ಅನುಕೂಲವಾಗುವಂತೆ ಪದ್ಯ ರೂಪದಲ್ಲಿದೆ. ಈ ಗ್ರಂಥದ ಇನ್ನೊಂದು ಪ್ರತಿ ಭಾರತದಲ್ಲಿ ಇನ್ನೆಲ್ಲಿಯೂ ಸಿಕ್ಕಿಲ್ಲ. ಕೃಷ್ಣಮಾಚಾರ್ಯರನ್ನು ಹೊರತಾಗಿ ಬೇರೆ ಯಾರೂ ಈ ಗ್ರಂಥವನ್ನು ನೋಡಿಲ್ಲ. ಕೃಷ್ಣಮಾಚಾರ್ಯರಿಗೆ ಸಿಕ್ಕ ಈ ಗ್ರಂಥದ ಪ್ರತಿ ಈಗ ಲಭ್ಯವಿಲ್ಲ. ಅದು ಗೆದ್ದಲು ಹತ್ತಿ ಹಾಳಾಗಿದೆ ಎಂದು ಹೇಳಲಾಗುತ್ತಿದೆ. ಯೋಗ ಗ್ರಂಥದ ಪಾಠವನ್ನು ಮೌಖಿಕವಾಗಿ ತಮ್ಮ ಶಿಷ್ಯರಾದ ಅಯ್ಯಂಗಾರ್ ಮತ್ತು ಪಟ್ಟಾಬಿಯವರಿಗೆ ತಿಳಿಸಿದರೆಂದು ಹೇಳಲಾಗುತ್ತದೆ. ಆಧುನಿಕ ಯೋಗಾಸನದ ಹಲವು ಪದ್ದತಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡುವಲ್ಲಿ ಯೋಗಗ್ರಂಥ ಹಿನ್ನೆಲೆಯಾಗಿದೆ. ಕೃಷ್ಣಮಾಚಾರ್ಯರ ಮೊಮ್ಮಗ ಒಂದು ಕಡೆ ತಮ್ಮ ತಾತ ನೇಪಾಳಕ್ಕೆ ಹೋಗಿ ಒಬ್ಬ ಬೌದ್ಧ ಗುರುಗಳಡಿಯಲ್ಲಿ ಯೋಗಾಸನ ಕಲಿತರೆಂದು ಹೇಳಿದ್ದಾರೆ. ನಾಥಮುನಿ ಅವರಿಗೆ ಎಲ್ಲ ಯೋಗ ರಹಸ್ಯವನ್ನು ತಿಳಿಸಿದ್ದರೆ ಅವರು ನೇಪಾಳಕ್ಕೆ ಹೋಗುವ ಅಗತ್ಯ ಇರಲಿಲ್ಲ. ಮೇಲಿನ ಸಂಗತಿಗಳಿಂದ ‘ಯೋಗ ರಹಸ್ಯ’ ‘‘ಯೋಗ ಗ್ರಂಥ ‘ ಇಪ್ಪತ್ತನೇ ಶತಮಾನದ ಖೊಟ್ಟಿ ಸೃಷ್ಟಿಗಳೆನ್ನುವುದು ಸ್ಪಷ್ಟ. |
Comment Box is loading comments...