ವೈಮಾನಿಕ ಶಾಸ್ತ್ರ - ಒಂದು ವಿಮರ್ಶೆ
ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ೨೫/೦೯/೨೦೧೧ ಸೋಮವಾರದಂದು ವೈಮಾನಿಕಶಾಸ್ತ್ರ ಕುರಿತಾದ ವರದಿಯೊಂದು ಪ್ರಕಟಗೊಂಡಿದೆ. ೧೬/೧೨/೨೦೦೩ ರಲ್ಲಿಯೂ ಸಹ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕೆ.ಆರ್.ಏನ್ ಸ್ವಾಮಿ ಬರೆದ ಇದೇ ವಿಷಯದ ಫ್ಲೈಯಿಂಗ್ ಹೈ ಲೇಖನ ಪ್ರಕಟಗೊಂಡಿದ್ದಿತು. ಪ್ರಾಚಿನ ಭಾರತೀಯರಿಗೆ ವೈಮಾನಿಕ ಜ್ಞಾನದ ಅರಿವಿದ್ದಿತು. ಅವರು ವಿಮಾನಗಳನ್ನು ನಿರ್ಮಿಸಿ ಬಳಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಹೊಂದಿದ ಯುದ್ಧ ವಿಮಾನಗಳು ಸಹ ಬಳಕೆಯಲ್ಲಿದ್ದವು ಎನ್ನುವಂತಹ ಹೇಳಿಕೆಗಳು, ಕೃತಿಗಳ ಉಲ್ಲೇಖಗಳು , ಪರಾಮರ್ಶನೆಗಳು ಆಗಾಗ್ಗೆ ಪತ್ರಿಕೆಗಳಲ್ಲಿ ದೊಡ್ದಕ್ಷರಗಳಲ್ಲಿ ಬಂದು ಭಾರತೀಯರಲ್ಲಿ ಪುಳಕ ಹಾಗು ಸಾಧನೆಯ ಭಾವನೆಯನ್ನು ತುಂಬುತ್ತವೆ. ವೈಮಾನಿಕಶಾಸ್ತ್ರದ ಸತ್ಯಾಸತ್ಯತೆ ಏನು ? ನಿಜವಾಗಿಯೂ ಅಂತಹ ಶಾಸ್ತ್ರವೊಂದು ಇದ್ದೀತೆ ? ಅದಕ್ಕೆ ಪುರಾವೆಗಳಿವೆಯೇ ? ಅದರಲ್ಲಿರುವುದು ಎಷ್ಟು ಮೌಲಿಕ ? ಎನ್ನುವ ಪ್ರಶ್ನೆಗಳು ಧುತ್ತೆಂದು ಎದುರು ನಿಲ್ಲುತ್ತವೆ. ಈ ಕುರಿತಾಗಿ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳಾದ ಎಚ್.ಎಸ. ಮುಕುಂದ , ಎಸ.ಎಂ. ದೇಶಪಾಂಡೆ , ಎಚ್.ಆರ್. ನಾಗೇಂದ್ರ ಮತ್ತು ಏ. ಪ್ರಭು ೧೯೭೪ ರಲ್ಲಿ ‘ಏ ಕ್ರಿಟಿಕಲ್ ಸ್ಟಡಿ ಆಫ್ ದಿ ವರ್ಕ್ ವೈಮಾನಿಕ ಶಾಸ್ತ್ರ’ ಎನ್ನುವ ಲೇಖನವನ್ನೂ ಪ್ರಕಟಿಸಿದ್ದಾರೆ. ಇದು ಜಾಲತಾಣದಲ್ಲಿ ಸಹ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತೀಯರ ವೈಮಾನಿಕ ಶಾಸ್ತ್ರದ ಒಳಗುಟ್ಟನ್ನು ತಿಳಿಯೋಣ. ಇದರೊಂದಿಗೆ ಬೇರೆ ಆಕರಗಳು ಏನನ್ನು ಹೇಳುತ್ತವೆಯೆಂದು ಮತ್ತು ಗಾಳಿಗಿಂತ ಭಾರವಾದ ವಿಮಾನದ ಹಾರಾಟ ಸಾಧ್ಯವಾಗಬೇಕಾದರೆ ಯಾವ ತಾಂತ್ರಿಕ ಸಾಧ್ಯತೆಗಳು ಕೈವಶವಾಗಿರಬೇಕೆಂದು ನೋಡಬಹುದು. ವೈಮಾನಿಕ ಶಾಸ್ತ್ರದ ಕಾಲ ಮತ್ತು ಹಿನ್ನೆಲೆ : ಕ್ರಿ.ಶ ೧೯೫೯ ರಲ್ಲಿ ಶ್ರೀ ಬ್ರಹ್ಮಮುನಿ ಪರಿವ್ರಾಜಕ ‘ಬೃಹದ್ ವಿಮಾನ ಶಾಸ್ತ್ರ’ (ಬೃವಿಶಾ)ಎಂಬ ಗ್ರಂಥವನ್ನು ಪ್ರಕಟಿಸಿದರು. ಇದರ ಮೂಲ ಹಸ್ತಪ್ರತಿಯನ್ನು ಕ್ರಿ.ಶ ೧೯೪೪ ರಲ್ಲಿ ಬರೋಡದ ರಾಜಕೀಯ ಸಂಸ್ಕೃತ ಗ್ರಂಥಾಲಯದಿಂದ ಪಡೆಯಲಾಯಿತು. ಗೋ. ವೆಂಕಟಾಚಲ ಶರ್ಮ ದಿನಾಂಕ ೯/೮/೧೯೧೯ ಎನ್ನುವ ಸಹಿಯಿರುವ ಮತ್ತೊಂದು ಪ್ರತಿಯನ್ನೂ ಪುಣೆಯಲ್ಲಿ ಗುರುತಿಸಲಾಯಿತು. ಇವೆರಡು ಹಸ್ತಪ್ರತಿಗಳು ಒಂದೇ ವಿಷಯವನ್ನು ಹೊಂದಿರುವುದು ಖಚಿತವಾಯಿತು. ಬೃವಿಶಾದಲ್ಲಿ ವಿಮಾನವನ್ನು ವರ್ಣಿಸುವ ಸಂಸ್ಕೃತ ಶ್ಲೋಕಗಳು ಹಾಗು ಅವುಗಳಿಗೆ ಹಿಂದಿಯಲ್ಲಿ ವಿವರಣೆಗಳಿವೆ. ಕ್ರಿ..ಶ ೧೯೭೫ ರ ಸರಿ ಸುಮಾರು ಅವಧಿಯಲ್ಲಿ ಜಿ.ಆರ್ ಜೋಸಿಯರ್ ಇದೆ ಸಂಸ್ಕೃತ ಶ್ಲೋಕಗಳು , ಇಂಗ್ಲಿಷ್ ವಿವರಣೆ ಹಾಗು ಕೆಲ ವಿಮಾನಗಳ ಚಿತ್ರಗಳನ್ನು ಹೊಂದಿದ ‘ವೈಮಾನಿಕ ಶಾಸ್ತ್ರ’(ವೈಶಾ) ಪ್ರಕಟಿಸಿದರು. ಜಿ.ಆರ್ ಜೋಸಿಯರ್ ತಮ್ಮ ಕೃತಿಯ ಮುನ್ನುಡಿಯಲ್ಲಿ ಆನೆಕಲ್ಲಿನ ಸುಬ್ಬರಾಯಶಾಸ್ತ್ರಿಗಳು ಪಠಿಸಿದ ಶ್ಲೋಕಗಳನ್ನು ವೆಂಕಟಾಚಲ ಶರ್ಮ ಬರೆದುಕೊಂಡರೆಂದು ತಿಳಿಸಿದ್ದಾರೆ. ಇವರಿಬ್ಬರು ವೈಮಾನಿಕ ಶಾಸ್ತ್ರದ ಮೂಲ ಶ್ಲೋಕಗಳು ಭಾರಧ್ವಾಜ ಮುನಿ ರಚಿಸಿದ್ದ ‘ಯಂತ್ರ ಸರ್ವಸ್ವ’ದಲ್ಲಿ ಕಾಣಿಸಿಕೊಂಡಿವೆ , ಇವುಗಳು ಭಾರಧ್ವಾಜ ಮುನಿಗಿಂತಲೂ ಹಿಂದಿದ್ದ ಋಷಿಗಳ ಶಾಸ್ತ್ರಗಳಲ್ಲಿದ್ದ ವಿಮಾನ ನಿರ್ಮಾಣ ತಂತ್ರದ ಸಂಗ್ರಹವೆಂದು ಸೂಚಿಸಿ ವೇದಗಳ ಕಾಲಕ್ಕೆ ಇವನ್ನೂ ಸಾಗಿಸಿದ್ದಾರೆ. ಗುಪ್ತ ಕಾರ್ಯಸೂಚಿ ಹೊಂದಿರುವ ಕೆಲ ಉತ್ಸಾಹಿಗಳು ಸಾಪೇಕ್ಷವಾದ , ಕ್ವಾಂಟಂ ಬಲವಿಜ್ಞಾನ , ತಳಿಶಾಸ್ತ್ರ ಸೇರಿದಂತೆ ಆಧುನಿಕ ವಿಜ್ಞಾನದ ಎಲ್ಲ ಜ್ಞಾನ ಋಷಿ-ಮುನಿಗಳಿಗೆ ಬಹು ಮುಂಚಿನಿಂದಲೇ ತಿಳಿದಿದ್ದಿತು ಎಂದು ವೇದ/ಪುರಾಣಗಳಲ್ಲಿರುವ ನಾನಾ ಅರ್ಥ ನೀಡುವ ಕೆಲ ಬಿಡಿ ಶ್ಲೋಕಗಳನ್ನು ಆಯ್ದು , ಉದ್ದರಿಸಿ , ತಮಗೆ ಬೇಕಾದಂತೆ ಸಾಧಿಸಲು ಹೆಣಗುತ್ತಿದ್ದಾರೆ. ಇದರಲ್ಲಿ ವೈಮಾನಿಕಶಾಸ್ತ್ರವು ಒಂದು. ವೈಮಾನಿಕಶಾಸ್ತ್ರದೊಂದಿಗೆ ಹತ್ತನೇ ಶತಮಾನಕ್ಕೆ ಸೇರಿದ ಧಾರಾ ನಗರವನ್ನು ಆಳುತ್ತಿದ್ದ ರಾಜಾ ಭೋಜ ರಚಿಸಿದ ‘ಸಮರಾಂಗಣ ಸೂತ್ರಧಾರ’ವನ್ನೂ ಕೆಲವೊಮ್ಮೆ ಉಲ್ಲೇಖಿಸಲಾಗುತ್ತದೆ. ಇವೆರಡು ಗ್ರಂಥಗಳ ಉಗಮ ,ಕಾಲ , ಅವುಗಳಲ್ಲಿರುವ ವೈಮಾನಿಕ ವಿವರಗಳನ್ನು ವಿಮರ್ಶಾತ್ಮಕವಾಗಿ ನೋಡಬೇಕಿದೆ. ವೈಮಾನಿಕಶಾಸ್ತ್ರದಲ್ಲಿ ೩೦೦೦ ಶ್ಲೋಕಗಳು . ೮ ಅಧ್ಯಾಯಗಳು , ೧೦೦ ವಿಭಾಗಗಳಿವೆ . ಇದರಲ್ಲಿ ೫೦೦ ತತ್ವಗಳಿದ್ದು , ವಿಮಾನ ಚಾಲನೆಗೆ ೩೨ ತಂತ್ರಗಳನ್ನು ಹೇಳಲಾಗಿದೆ. ಇದರಲ್ಲಿ ಯುಗಗಳಿಗೆ ತಕ್ಕಂತಹ ವಿಮಾನಗಳನ್ನೂ ಹೆಸರಿಸಲಾಗಿದ್ದು, ಕೃತಯುಗದಲ್ಲಿ ಇಂಧನದಿಂದ ನಡೆಯುವ ವಿಮಾನಗಳಿರಬೇಕೆಂದು ಹೇಳಲಾಗಿದೆ. ಆನೆಕಲ್ಲು ಸುಬ್ಬರಾಯ ಶಾಸ್ತ್ರಿ : ವೈಮಾನಿಕ ಶಾಸ್ತ್ರದ ಎಲ್ಲ ಮೂಲಗಳು ಆನೆಕಲ್ಲು ಸುಬ್ಬರಾಯ ಶಾಸ್ತ್ರಿಗಳಲ್ಲಿ ಕೊನೆಗೊಳ್ಳುತ್ತವೆ. ಮೂಲ ಗ್ರಂಥ ಸುಬ್ಬುರಾಯ ಶಾಸ್ತ್ರಿಗಳಿಗೆ ಎಲ್ಲಿಂದ ದಕ್ಕಿತೆಂದು ತಿಳಿದಿಲ್ಲ. ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ಸತತ ಪ್ರಯತ್ನದ ನಂತರ ಗೋ. ವೆಂಕಟಾಚಲಶರ್ಮ ಹಾಗು ಸುಬ್ಬರಾಯಶಾಸ್ತ್ರಿಗಳ ದತ್ತುಪುತ್ರ ವೆಂಕಟರಾಮಶಾಸ್ತ್ರಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಇದರಿಂದ ವೈಮಾನಿಕಶಾಸ್ತ್ರದ ಮೂಲ ಕುರಿತಾದ ಅನೇಕ ಸಂಗತಿಗಳು ಬೆಳಕಿಗೆ ಬಂದವು. ಸುಬ್ಬಾರಾಯಶಾಸ್ತ್ರಿ ಹೊಸೂರು ತಾಲೂಕಿನ ತೊಗರೆ ಅಗ್ರಹಾರ ಎಂಬ ಕುಗ್ರಾಮಕ್ಕೆ ಸೇರಿದವರು. ಮೂವರು ಸೋದರರು , ಹಲ ಸೋದರಿಯರು ಇದ್ದ ಕಡುಬಡತನದ ಕುಟುಂಬ ಅವರದು. ಹಿರಿಯ ಮಗನಾಗಿ ಎಂಟನೆ ವರ್ಷಕ್ಕೆ ಮದುವೆಯಾಗಿ ಮುಂದಿನ ಕೆಲವರ್ಷಗಳಲ್ಲೇ ಹೆತ್ತವರನ್ನು ಕಳೆದುಕೊಂಡು ಕಿಶೋರ ಅವಸ್ಥೆಯಲ್ಲಿ ಒಡಹುಟ್ಟಿದವರೊಂದಿಗೆ ಮಾವನ ಮನೆ ಸೇರಿದರು. ಕಾಡುತ್ತಿದ್ದ ಕಡುಬಡತನದಿಂದ ಅಲ್ಲಿಂದ ಹೊರಬಂದು ಸೋದರರೊಂದಿಗೆ ಬಿಕ್ಷಾಟನೆ ನಡೆಸಿ ಬದುಕಿದರು. ಸಿಡುಬಿಗೆ ತುತ್ತಾಗಿ ಅವರ ಸೋದರ , ಸೋದರಿಯರಲ್ಲಿ ಕೆಲವರು ಸತ್ತರು. ಸುಬ್ಬಾರಾಯಶಾಸ್ತ್ರಿಗಳಿಗೂ ಸಹ ಸಿಡುಬು ತಗುಲಿ ಕೈ ಚಲಿಸದಂತಾದಾಗ ಅವರ ಸೋದರರು ಅವರನ್ನು ತೊರೆದು ತಮ್ಮ ಜೀವ ಉಳಿಸಿಕೊಳ್ಳಲು ಬೇರೆಡೆಗೆ ಹೋದರು. ಎಲೆ . ಗಿಡ . ಗಂಟೆಗಳನ್ನು ತಿಂದು ಉಸಿರನ್ನು ಉಳಿಸಿಕೊಂಡಿದ್ದ ಸುಬ್ಬರಾಯ ಶಾಸ್ತ್ರಿಗಳು ಸಾವಿನಂಚಿಗೆ ತಲುಪಿ ಕೋಲಾರ ಜಿಲ್ಲೆಯ ಅವನಿ ಕಾಡನ್ನು ತಲುಪಿ ಹಲವು ವರ್ಷಗಳ ಕಾಲ ಅಲ್ಲಿ ಕಾಡಿನ ಜೀವನ ಸಾಗಿಸಿದರು. ಇಲ್ಲಿನ ಗುಹೆಯೊಂದರಲ್ಲಿದ್ದ ಋಷಿಯ ಕಣ್ಣಿಗೆ ಬಿದ್ದು ಅವರ ಕೃಪೆಗೊಳಗಾಗಿ ರೋಗಮುಕ್ತರಾದರು. ಋಷಿಗಳು ಎಲೆಯ ತುದಿಯಿಂದ ನಾಲಿಗೆಯ ಮೇಲೆ ಬರೆದ ಮೇಲೆ ನಿರಕ್ಷರಕುಕ್ಷಿಯಾಗಿದ್ದ ಶಾಸ್ತ್ರಿಗಳಿಗೆ ದಿವ್ಯಜ್ಞಾನ ಮತ್ತು ಸಂಸ್ಕೃತ ಭಾಷೆಯಲ್ಲಿ ಹಿಡಿತ ದಕ್ಕಿತು. ‘ವಿಮಾನ ಶಾಸ್ತ್ರ’ ‘ಭೌತಿಕ ಕಲಾನಿಧಿ’ ‘ಜಲತಂತ್ರ’ ಇತ್ಯಾದಿ ವಿದ್ಯೆಗಳನ್ನು ಗವಿಯೊಂದರಲ್ಲಿ ಗುರುಮುಖೇನ ಕಲಿತರು. ಇಲ್ಲಿಯೇ ಕನ್ನಡ . ತೆಲುಗು ಬರವಣಿಗೆ ಕಲಿತರು. ನಂತರ ಪತ್ನಿಯೊಂದಿಗೆ ಬಂದು ಮುಂದಿನ ೨೫ ವರ್ಷಗಳ ಕಾಲ ಆನೇಕಲ್ಲಿನಲ್ಲಿ ನೆಲೆಸಿದರು. ಆನೆಕಲ್ಲಿನಲ್ಲಿರುವಾಗ ಆಗ್ಗಾಗ್ಗೆ ಅನುಭಾವಕ್ಕೆ ಒಳಗಾಗುತ್ತಿರುವಂತೆ ವರ್ತಿಸುತ್ತಿದ್ದ ಶಾಸ್ತ್ರಿಗಳು ವೈಮಾನಿಕಶಾಸ್ತ್ರಕ್ಕೆ ಸಂಬಂಧಿಸಿದ ಶ್ಲೋಕಗಳನ್ನು ಹೇಳುತ್ತಿದ್ದರು. ಅದನ್ನು ಅವರ ಆಪ್ತರಾದ ವೆಂಕಟಾಚಲಶರ್ಮ ಬರೆದುಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಮುಂಬಯಿಯ ಉದ್ಯಮಿ ಪುಂಜಿಲಾಲ ಗಿರಿಧರ್ ಪರಿಚಯವಾಗಿ ಮುಂಬಯಿಗೆ ಹಲವಾರು ಬಾರಿ ಹೋದರು. ಅಲ್ಲಿ ವಿಮಾನ ನಿರ್ಮಾಣ ಕುರಿತಾಗಿ ಹಲವಾರು ಪ್ರಯೋಗಗಳನ್ನು ನಡೆಸುತ್ತಿದ್ದ ಡಾ. ಶಿವಕರ ಬಾಪೂಜಿ ತಲ್ಪಡೆ ಸ್ನೇಹ ದಕ್ಕಿತು. ಮೊದಲ ಬಾರಿಗೆ ಶಾಸ್ತ್ರಿಗಳು ವೈಮಾನಿಕ ಶಾಸ್ತ್ರದ ಬಗ್ಗೆ ಡಾ. ತಲ್ಪಡೆಗೆ ತಿಳಿಸಿದರು. ಸುಬ್ಬರಾಯ ಶಾಸ್ತ್ರಿಗಳ ಶ್ಲೋಕಗಳನ್ನು ಆಧರಿಸಿ ಡಾ. ತಲ್ಪಡೆ ಮಾಡಿದ ಯಾವ ಮಾದರಿ ವಿಮಾನಗಳು ಸಹ ಹಾರಲಿಲ್ಲ. ಆದರೆ ೧೮೯೫ ರಲ್ಲಿ ಮಹಾದೇವ ಗೋವಿಂದ ರಾನಡೆ . ರಾಜ ಸಯ್ಯಾಜಿ ರಾವ್ ಗಾಯಕವಾಡ ಎದುರಿಗೆ ತಲ್ಪಡೆ ಮರುತ್ ಶಕ್ತಿ ಹೆಸರಿನ ಪಾದರಸದಿಂದ ನಡೆಯುವ ವಿಮಾನವನ್ನು ಹಾರಿಸಿದರೆಂದು ಅದು ೧೫೦೦ ಅಡಿ ಮೇಲಕ್ಕೇರಿ ಸಮುದ್ರದ ಪಾಲಾಯಿತೆಂದು ಕೇಸರಿ ಪತ್ರಿಕೆ ವರದಿ ಮಾಡಿದೆ. ಇದಕ್ಕೆ ಹೆಚ್ಚಿನ ಆಧಾರಗಳಿಲ್ಲ. ಈ ವಿಮಾನ ಗಾಳಿಗಿಂತ ಹಗುರವಾದುದೋ ಅಥವಾ ಭಾರವಾದುದೋ ತಿಳಿದಿಲ್ಲ. ಕ್ರಿ.ಶ ೧೯೧೬ ರಲ್ಲಿ ಡಾ. ತಲ್ಪಡೆ ಕೊನೆಯುಸಿರೆಳೆದರು. ಈ ಸಮಯದಲ್ಲೇ ಸುಬ್ಬರಾಯ ಶಾಸ್ತ್ರಿಗಳ ವೈಮಾನಿಕಶಾಸ್ತ್ರ ಪುಸ್ತಕ ರೂಪ ತಳೆಯತೊಡಗಿತು. ಇಂಜಿನಿಯರಿಂಗ್ ಕಾಲೇಜಿನಲ್ಲಿದ್ದ ಡ್ರಾಫಟ್ಸಮನ್ ಟಿ.ಕೆ ಎಲ್ಲಪ್ಪನ ಮೂಲಕ ಸುಬ್ಬರಾಯ ಶಾಸ್ತ್ರಿಗಳು ಹಲವಾರು ವಿಮಾನಗಳ ಚಿತ್ರಗಳನ್ನೂ ಸಹ ಈ ಪುಸ್ತಕಕ್ಕಾಗಿ ಪಡೆದರು. ಇವುಗಳ ಮೇಲೆ ಎಲ್ಲಪ್ಪನವರ ಸಹಿ ಮತ್ತು ೨/೧೨/೧೯೨೩ ದಿನಾಂಕ ಸ್ಪಷ್ಟವಾಗಿ ದಾಖಲಾಗಿವೆ. ಇದರಿಂದ ವೈಮಾನಿಕಶಾಸ್ತ್ರ ೧೯೧೦-೧೯೨೩ ರ ಅವಧಿಯಲ್ಲಿ ಸೃಜಿತವಾದ ಕೃತಿಯೆಂದು ಸಾಬೀತಾಗುತ್ತದೆ. ವಿಜ್ಞಾನಿಗಳು ತಮ್ಮ ಲೇಖನದಲ್ಲಿ ಇದನ್ನು ಸಾಕ್ಷಾಧಾರಗಳನ್ನು ಒದಗಿಸಿ ತೋರಿಸಿದ್ದಾರಾದರೂ ಆಗಾಗ್ಗೆ ಈ ಕೃತಿಗಳನ್ನು ಉಲ್ಲೇಖಿಸಿ , ಮರುಮುದ್ರಿಸಿ ಗತಕಾಲವನ್ನು ವೈಭವಿಕರಿಸಲಾಗುತ್ತ್ತಿದೆ. ಶಾಸ್ತ್ರಿಗಳು ‘ಅಂಶುಬೋಧಿನಿ ,ಜಲತತ್ವ ಪ್ರಕಾಶಿಕ , ಪ್ರಸ್ಥಾನ ತ್ರಯ , ಬೃಹದ್ ಮಧುಸೂದನ ಸ್ಮೃತಿ , ರಾಜಭಕ್ತಿ , ದೇಶಭಕ್ತಿ , ಪಂಚಗವ್ಯಶಾಸ್ತ್ರ ಇತ್ಯಾದಿ ಕೃತಿಗಳನ್ನೂ ಸಹ ರಚಿಸಿದರು. ದಾಖಲೆಗಳ ಮೌನ : ಯಾವುದೇ ಪರಂಪರೆಯ ಇತಿಹಾಸ ಲಭ್ಯಸಾಹಿತ್ಯ , ಶಾಸನಗಳು, ಪ್ರಾಕ್ತನ ಸಂಶೋಧನೆ ಮತ್ತು ಮೌಖಿಕ ಪರಂಪರೆಗಳ ಆಧಾರದ ಮೇಲೆ ಕಟ್ಟಲ್ಪಡುತ್ತದೆ. ವೈಮಾನಿಕಶಾಸ್ತ್ರಕ್ಕೆ ಇಂತಹ ಯಾವ ಆಧಾರಗಳು ಇಲ್ಲ. ಋಗ್ವೇದದಿಂದ ಪ್ರಾರಂಭಿಸಿ ಇಪ್ಪತ್ತನೇ ಶತಮಾನದ ಆರಂಭದವರೆಗೆ ಎಲ್ಲೆಲ್ಲಿಯೂ ವೈಮಾನಿಕಶಾಸ್ತ್ರದಂತಹ ಗ್ರಂಥವಿದ್ದಿತೆಂದು ಯಾವ ಚಾರಿತ್ರಿಕ ಮೂಲಗಳಿಂದಲೂ ತಿಳಿದುಬರುವುದಿಲ್ಲ. ಪ್ರಾಕೃತ-ಸಂಸ್ಕೃತ-ತಮಿಳು-ಕನ್ನಡ ಭಾಷೆಯಲ್ಲಿರುವ ೯೦೦೦೦ಕ್ಕೂ ಅಧಿಕ ಶಾಸನಗಳು ಮತ್ತು ೪೦೦೦ಕ್ಕೂ ಅಧಿಕ ಕೃತಿಗಳು ಪ್ರಾಚಿನ ಕಾಲದ ಸಿದ್ಧಿ ಸಾಧನೆಗಳನ್ನು , ಜನಜೀವನವನ್ನೂ ಬಿಂಬಿಸುತ್ತಿವೆ. ಎಲ್ಲ ಭಾರತಿಯ ಭಾಷೆಗಳ ಪ್ರಾಚಿನ ಕೃತಿಕಾರರು ತಮ್ಮ ಹಿಂದಿನ ಆಚಾರ್ಯರನ್ನು ಅವರ ಕೃತಿಗಳನ್ನೂ ಎಡೆಬಿಡದೆ ನೆನೆದಿದ್ದಾರೆ. ಶಾಸನಗಳು ನಮ್ಮ ಜನಜೀವನದ ಚಿತ್ರಣ ನೀಡುತ್ತಿವೆ.. ಜಗತ್ತಿನ ಎಲ್ಲ ಜನಾಗಗಳಲ್ಲಿರುವಂತೆ ನಮ್ಮಲ್ಲಿಯೂ ಕಾಲ್ಪನಿಕ ರಮ್ಯಾದ್ಭುತ ಕಥೆಗಳಲ್ಲಿ , ಉತ್ಪ್ರೇಕ್ಷಿತ ವಿವರಣೆಗಳಲ್ಲಿ ಹಾರಾಟ ಕಾಣಿಸಿಕೊಂಡಿದೆಯೇ ಹೊರತು ವಾಸ್ತವಿಕ ಸಾಧ್ಯತೆಯಾಗಿ, ಪ್ರಯಾಣ ಮತ್ತು ಯುದ್ಧ ಮಾಧ್ಯಮವಾಗಿ ಎಲ್ಲಿಯೂ ಹೇಳಿಲ್ಲ. ಭಾರತೀಯರ ಹಲವಾರು ವಿಚಾರ, ವಿದ್ಯೆ , ಕಲೆಗಳ ಬಗ್ಗೆ ಮೆಚ್ಚುಗೆಯಲ್ಲಿ ಬರೆದಿರುವ ಯಾವ ಪ್ರಾಚಿನ ವಿದೇಶಿ ಪ್ರವಾಸಿಯಿಂದಲೂ , ಯಾವ ಪ್ರಾಚೀನ ದಾಖಲೆಯಿಂದಲೂ ವಿಮಾನ ಹಾರಾಟದ ಬಗ್ಗೆ ಸೋಲಿಲ್ಲ. ಸುಬ್ಬುರಾಯ ಶಾಸ್ತ್ರಿಗಳಿಗೆ ಮಾತ್ರ ಇದು ಗೊತ್ತು !. ಆದ್ದರಿಂದ ವೈಮಾನಿಕ ಶಾಸ್ತ್ರ ಸುಬ್ಬರಾಯಶಾಸ್ತ್ರಿಗಳ ಕನಸಿನ ಕೂಸು ಎನ್ನದೆ ಬೇರೆ ವಿಧಿಯಿಲ್ಲ. ಸಮಾಂತರ ಪ್ರಯತ್ನಗಳು : ಡಾ. ತಲ್ಪಡೆಯವರು ರೈಟ್ ಸೋದರಿಗಿಂತ ೭ ವರ್ಷ ಮೊದಲೇ ವೈಮಾನಿಕಶಾಸ್ತ್ರದ ತತ್ವಗಳಿಗೆ ಅನುಗುಣವಾಗಿ ಪಾದರಸ ಇಂಧನ ಚಾಲಿತ ಗಾಳಿಗಿಂತ ಭಾರವಾದ ವಿಮಾನದ ಹಾರಾಟವನ್ನು ಸಾಧಿಸಿದರೆಂದು , ಬ್ರಿಟಿಷರ ಕುಯುಕ್ತಿಯಿಂದ ಅದನ್ನು ಅದುಮಿ ಹಿಡಿಯಲಾಯಿತೆಂದು ವಾದಿಸಲಾಗುತ್ತಿದೆ. ಇದನ್ನು ಕುರಿತಾಗಿ ಕೆಲ ತಿಂಗಳುಗಳ ಹಿಂದೆ ಕನ್ನಡದ ವಾರ ಪತ್ರಿಕೆಯೊಂದು ಸುದೀರ್ಘ ಲೇಖನವನ್ನೂ ಸಹ ಪ್ರಕಟಿಸಿದೆ. ಗಾಳಿಗಿಂತ ಭಾರವಾದ ವಿಮಾನವನ್ನು ಹಾರಿಸಿದವರಲ್ಲಿ ಮೊದಲಿಗರು ಯಾರು ಎನ್ನುವ ಬಗ್ಗೆ ಈಗಲೂ ಕೆಲ ವಿವಾದಗಳು ಉಳಿದಿವೆ. ಕ್ರಿ.ಶ ೧೮೪೮ ರಲ್ಲಿ ಲಂಡನ್ನಿನ ಜಾನ್ ಸ್ಪ್ರಿಂಗ್ ಫೆಲ್ಲೋ ಮತ್ತು ಜಾನ್ ಹೆನ್ಸನ್ ಉಗಿ ಇಂಜಿನ್ ಬಳಸಿ , ೧೮೭೦ ರಲ್ಲಿ ದಕ್ಷಿಣ ಆಫ್ರಿಕಾದ ಜಾನ್ ಗುಡ್ಮನ್ ಹೌಸ್ ಹೋಲ್ಡ್ , ೧೮೯೮ ರಲ್ಲಿ ಬ್ರೆಜಿಲ್ ದೇಶದ ಆಲ್ಬರ್ಟೋ ಸಾಂಟಾಸ್ ಡು ಮಾಂತ್ , ಆಗಸ್ಟ್ ೧೪ , ೧೯೦೧ ರಂದು ಗುಸ್ತವೆ ವೈಟ್ ಹೆಡ್ ಸಹ ಗಾಳಿಗಿಂತ ಭಾರವಾದ ವಿಮಾನಗಳನ್ನು ಹಾರಿಸಿದ್ದರೆಂದು ಹೇಳಲಾಗುತ್ತಿದೆ. ಆದರೆ ಇವರಾರಿಗೂ ಪ್ರಾಚಿನ ಋಷಿ ಮುನಿಗಳ , ಸಂಸ್ಕೃತದ ಹಂಗಿಲ್ಲ. ಇವರೆಲ್ಲರೂ ಸ್ವಪ್ರಯತ್ನದಿಂದ , ತಮಗೆ ಆ ಕಾಲದಲ್ಲಿ ಲಭ್ಯವಿದ್ದ ತಂತ್ರಜ್ಞಾನ , ಡಿಸೇಲ್ , ಉಗಿ ಇಂಜಿನ್ , ಗೇರ್ ವ್ಯವಸ್ಥೆ , ಉಕ್ಕು /ಮರದ ಚೌಕಟ್ಟಿನ ಕಾಯ ಬಳಸಿ ನಾನಾ ಬಗೆಯಲ್ಲಿ ವಿಮಾನ ನಿರ್ಮಿಸಿ ಹಾರಾಡಲು ಯತ್ನಿಸಿದವರು. ಅತ್ಯಂತ ಕುತೂಹಲಕರವಾದ ವಿಚಾರವೆಂದರೆ ೧೯೨೩ರಲ್ಲಿ ಬಿಡಿಸಲಾದ ಶಕುನ ವಿಮಾನದ ಯೋಜನಾ ನೋಟ (Plan View) ಬಹುತೇಕ ಗುಸ್ತವೆ ವೈಟ್ ಹೆಡ್ ವಿಮಾನವನ್ನು ಹೋಲುತ್ತದೆ. ವೈಜ್ಞಾನಿಕ ಹಿನ್ನೆಲೆ -ತಾಂತ್ರಿಕ ಸಾಧ್ಯತೆ : ವೈಮಾನಿಕಶಾಸ್ತ್ರ ಅಸ್ತಿತ್ವದಲ್ಲಿ ಇದ್ದಿತೆಂದು ಹೇಳಿದಾಕ್ಷಣ ಅದಕ್ಕೆ ಪ್ರತಿಕ್ರಿಯಿಸಿರುವ ವಿಜ್ಞಾನಿ-ಇಂಜಿನಿಯರಗಳು ಅದನ್ನು ಆಳವಾಗಿ ಅಭ್ಯಸಿಸಬೇಕು, ಸಂಸ್ಕೃತದಲ್ಲಿ ಪಾಂಡಿತ್ಯ ಬೇಕು , ಶ್ಲೋಕಗಳನ್ನು ಸರಿಯಾಗಿ ಅರ್ಥೈಸಿ ಅರಿತುಕೊಳ್ಳಬೇಕು ಎಂದು ಹೇಳುವುದು ಸರ್ವೆ ಸಾಮಾನ್ಯ. ಈ ನಿಲುವು ತಕ್ಷಣವೇ ನಿರ್ದಿಷ್ಟವಾಗಿ ಏನನ್ನು ಹೇಳದೆ ಅಡ್ಡಗೋಡೆಯ ಮೇಲೆ ದೀಪವಿಡುವ ಧೋರಣೆಯತ್ತ ಸಾಗುತ್ತದೆ. ಸುಬ್ಬರಾಯಶಾಸ್ತ್ರಿಗಳ ವೈಮಾನಿಕ ಶಾಸ್ತ್ರದ ವಿಮಾನಗಳನ್ನು ಅಭ್ಯಸಿಸಲು ಯಾವ ವಿಶೇಷ ವಿದ್ವತ್ತು ಅಥವಾ ಸಂಶೋಧನೆ ಬೇಕಿಲ್ಲ. ಅಲ್ಲಿ ಕೊಟ್ಟಿರುವ ವಿಮಾನದ ಮಾದರಿಗಳನ್ನು ಮಾಡಿ ಬೆಂಗಳೂರಿನಲ್ಲಿರುವ ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೆಟರಿಯ ಗಾಳಿ ಸುರಂಗಗಳಲ್ಲಿರಿಸಿದರೆ (Wind Tunnel) ಬಂಡವಾಳ ಕ್ಷಣಾರ್ಧದಲ್ಲಿ ಬಯಲಾಗುತ್ತದೆ. ವೈಮಾನಿಕಶಾಸ್ತ್ರದಂತಹ ಗ್ರಂಥಗಳನ್ನು ಕುತೂಹಲಕ್ಕೆ ಅಭ್ಯಸಿಸಸಬಹುದೇ ಹೊರತು ಅದರಲ್ಲಿ ವಿಮಾನ ನಿರ್ಮಾಣದ ಜ್ಞಾನ ಹುಡುಕಲಲ್ಲ. ಅಂತಹ ಪ್ರಯತ್ನ ವ್ಯರ್ಥ. ಏಕೆಂದರೆ ಯಾವುದೇ ತಾಂತ್ರಿಕ ಸಾಧನೆಯ ಹಿಂದೆ ನಿರ್ದಿಷ್ಟ ವೈಜ್ಞಾನಿಕ ಜ್ಞಾನ ಮತ್ತು ಅದನ್ನು ಬಳಕೆಗೆ ತರಬಹುದಾದ ತಾಂತ್ರಿಕ ಪ್ರಗತಿ ದಕ್ಕಿರಬೇಕು. ತ್ಸಿಯಲೋವಸ್ಕಿ ರಾಕೆಟ್ ಸಿದ್ಧಾಂತವನ್ನು ಪ್ರಚುರಪಡಿಸಿದ್ದನಾದರೂ ಅದಕ್ಕೆ ಪೂರಕವಾದ ಇಂಜಿನ್^ಗಳನ್ನು ನಿರ್ಮಿಸುವವರೆಗೆ ರಾಕೆಟ್ ಉಡಾವಣೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ವಿಮಾನ ಹಾರಾಟದ ಮೂಲತತ್ವ ಮತ್ತು ಭಾರತೀಯರಿಗಿದ್ದ ಜ್ಞಾನ ಎಷ್ಟು ಎಂದು ನೋಡಿದಾಗ , ಹಾರಾಟದ ಯಾವ ತತ್ವಗಳು ಯಾವ ಕಾಲದಲ್ಲಿ ಮಾನವ ಜನಾಂಗಕ್ಕೆ ಗೊತ್ತಾದವೆಂದು ತಿಳಿದಾಗ ನಮಗೆ ವೈಮಾನಿಕಶಾಸ್ತ್ರದ ಪೊಳ್ಳುತನ ಗೊತ್ತಾಗುತ್ತದೆ. ಗಾಳಿಗಿಂತ ಹಗುರವಾದ ಬಲೂನಿನ ಹಾರಾಟದ ಹಿನ್ನೆಲೆಯಲ್ಲಿ ತೇಲುವಿಕೆ ತತ್ತ್ವವಿದೆ-ಇದು ಆರ್ಕಿಮಿಡಿಸ್ ತೇಲುವಿಕೆಯ ನಿಯಮದ ಮೇಲಿದೆ.. ಆದರೆ ಗಾಳಿಗಿಂತ ಭಾರವಾದ ವಿಮಾನದ ಹಾರಾಟದ ಹಿಂದೆ (೧) ಎತ್ತಿಕೆ-ಗುರುತ್ವಕ್ಕೆ ವಿರುದ್ಧವಾದ ಬಲ (Lift) (೨) ಜಗ್ಗಿಕೆ-ವಿಮಾನವನ್ನು ಹಿಂದಕ್ಕೆ ಎಳೆಯುವ ಬಲ (Drag) (3) ತೂಕ-ವಿಮಾನದ ಭಾರ (Weight) (4) ನೂಕಿಕೆ (Thrust)-ವಿಮಾನವನ್ನು ಮುಂದಕ್ಕೆ ತಳ್ಳುವ ಬಲ ಎನ್ನುವ ೪ ಬಲಗಳು ಕಾರ್ಯ ಪ್ರವೃತ್ತವಾಗಿರುತ್ತವೆ. ಇವುಗಳಲ್ಲಿ (೨) ಮತ್ತು (೩) ಹಾರಾಟಕ್ಕೆ ಅಡ್ಡಿಯನ್ನುಂಟು ಮಾಡಿದರೆ (೧) ಮತ್ತು (೪) ಹಾರಾಟವನ್ನು ಸಾಧ್ಯವಾಗಿಸುತ್ತವೆ. ಇದರೊಂದಿಗೆ ಗಾಳಿಯಲ್ಲಿ ತೇಲುವ ವಾಹನದಂತ ವಸ್ತುವಿಗೆ ಇರಬೇಕಾದ ವಾಯುಗತಿಶೀಲ (Aerodynamic) ಮತ್ತು ಸ್ಥಿರತೆ ನೀಡುವ ಆಕಾರ , ರೂಪಗಳ ಬಗ್ಗೆಯೂ ಖಚಿತ ಜ್ಞಾನ ಅತ್ಯಗತ್ಯ. ಕ್ರಿ.ಶ ೧೭೩೮ ರಲ್ಲಿ ಡೇನಿಯಲ್ ಬರ್ನುಲಿ ಹೈಡ್ರೋಡೈನಾಮಿಕ್ಸ್ ಕೃತಿಯಲ್ಲಿ ಪ್ರವಾಹಿಗಳ (Fluids) ಹರಿವಿನ ಗುಣ ಲಕ್ಷಣಗಳನ್ನು ವಿವರಿಸುವವರೆಗೆ , ನಂತರ ವಿಜ್ಞಾನಿಗಳು ಅದನ್ನು ವಿವಿಧ ಸನ್ನಿವೇಶಗಳಿಗೆ ಅನ್ವಯಿಸುವವರೆಗೆ ವಿಮಾನದ ಹಾರಾಟಕ್ಕೆ ಅತ್ಯಗತ್ಯವಾದ (೧) ಮತ್ತು (೪) ಬಲಗಳು ಇವೆಯೆಂದು ಮತ್ತು ಬೇಕೆಂದು ತಿಳಿದಿರಲಿಲ್ಲ. ಹಾರಾಟ ಸಾಧ್ಯವಾಗಬೇಕೆಂದರೆ ಸತತವಾಗಿ ಎತ್ತಿಕೆ ಮತ್ತು ನೂಕಿಕೆ ಒದಗಿಸುವ ಇಂಜಿನ್ ಗಳು ಬೇಕು. ಇದಕ್ಕೆ ಅಂತರ್ದಹನ (Internal Cobustine Engines) ಇಂಜಿನ್ ನಿರ್ಮಾಣ ಸಾಧ್ಯವಾಗಿರಬೇಕು. ಇದಕ್ಕಾಗಿ ಲೋಹಶಾಸ್ತ್ರ , ಔಷ್ನೀಯಗತಿಶಾಸ್ತ್ರ (Thermodynamics) , ಅದನ್ನು ನಡೆಸಲು ಬೇಕಾದ ಇಂಧನವನ್ನು ಆಹರಣ (Extract) ಮಾಡಿ ಶೋಧಿಸುವ ತಿಳುವಳಿಕೆಗಳು ಬೇಕು. ಹಲವಾರು ನಿಖರ ವೈಜ್ಞಾನಿಕ ಸಂಗತಿಗಳನ್ನೂ ತಿಳಿಸಲು ಗಣಿತ ಅಭಿವೃದ್ಧಿಯಾಗಿರಬೇಕು. ನಮ್ಮಲ್ಲಿ ಪ್ರಾಚಿನ ಕಾಲದಲ್ಲಿ ಇದ್ದ ಗಣಿತ ಎಂತಹುದೆಂದು ಈಗಾಗಲೇ ತಿಳಿದಿದೆ. ವಿಮಾನವನ್ನು ನಡೆಸಲು ಅಂತರ್ದಹನ ಇಂಜಿನ್^ಗಿಂತಲೂ ಬೇರೆಯದಾದ-ಪಾದರಸ ಅಯಾನ್ ಪ್ರವಾಹದಂತಹ- ತಂತ್ರವಿದ್ದರೆ ಅದರ ಹಿನ್ನೆಲೆಯಲ್ಲಿ ಅಪಾರ ಮತ್ತು ವ್ಯಾಪಕವಾದ ವೈಜ್ಞಾನಿಕ ಸಾಹಿತ್ಯ , ಪ್ರಯೋಗ , ಪರಿಶೀಲನೆಯ ವಿವರಗಳು ಲಭ್ಯವಿರಬೇಕು. ವಿಮಾನ ಹಾರಾಟಕ್ಕೆ ಸಂಬಂಧಿಸಿದ ವಿವಿಧ ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದನತೆ ೧೭ ನೆ ಶತಮಾನದಿಂದ ಈವರೆಗೆ ಜಗತ್ತಿನಾದ್ಯಂತ ಕನಿಷ್ಠ ಒಂದು ಲಕ್ಷಕ್ಕೂ ಅಧಿಕ ಲೇಖನಗಳು ವಿವಿಧ ಕ್ಷೇತ್ರಗಳಲ್ಲಿ ಪ್ರಕಟಗೊಂಡಿವೆ.. ನೂರಾರು ವ್ಯಾಕರಣ ಗ್ರಂಥ , ಕಾವ್ಯ , ಕಲೆ, ನಾಟಕ , ವಾಸ್ತುಶಾಸ್ತ್ರ , ಖಗೋಳಶಾಸ್ತ್ರದ ಕೃತಿಗಳನ್ನು ರಚಿಸಿದ ನಮ್ಮಲ್ಲಿ ವೈಮಾನಿಕಶಾಸ್ತ್ರದ ಹಿನ್ನೆಲೆಗೆ ಬೇಕಾದ ಯಾವ ಕೃತಿಯು ಲಭ್ಯವಿಲ್ಲ. ಇವುಗಳ ಕೊರತೆ ಆ ಬಗ್ಗೆ ನಮಗಿದ್ದ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಸಂಸ್ಕೃತ ಶ್ಲೋಕಗಳು ಸೂತ್ರ ರೂಪದಲ್ಲಿವೆ , ಅಯೋಗ್ಯರಿಗೆ ಸಿಗದಂತೆ ಮಾಡಲು ಋಷಿ-ಮುನಿಗಳು ಇಂತಹ ತಂತ್ರಕ್ಕೆ ಮೊರೆಹೊದರೆಂದು ವಾದಿಸುವ ಒಂದು ಗುಂಪಿದೆ. ಸಮರಾಂಗಣ ಸೂತ್ರಧಾರ ಇದೇ ರೀತಿಯ ಸೋಗು ಹಾಕಿದೆ. ರಾಜ ಭೋಜ ತನಗಿರುವ ವೈಮಾನಿಕ ವಿದ್ಯೆಯಿಂದ , ಶಸ್ತ್ರಾಸ್ತ್ರಗಳಿಂದ ಜಗತ್ತನ್ನೇ ಏಕೆ ಗೆಲ್ಲಲಿಲ್ಲ , ಆತನ ಸಮಕಾಲೀನರು ಆತನತ್ತ ಏಕೆ ಬೆರಗಿನಿಂದ ನೋಡಲಿಲ್ಲ ಎನ್ನುವುದು ತೆರೆದ ಪ್ರಶ್ನೆಯಾಗಿಯೇ ಉಳಿದಿದೆ. ಪರಾ ವಿದ್ಯೆ ಎನಿಸಿದ ವೇದಗಳಿಗೆ ಟೀಕೆಗಳನ್ನು ಬರೆದವರು ಅಪರಾ ವಿದ್ಯೆಯಾದ ವೈಮಾನಿಕ ಶಾಸ್ತ್ರವನ್ನು ಮುಚ್ಚಿಡುವಂತಹುದು ಏನಿತ್ತು ? ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲ. ಆಲಿಬಾಬ ನಲವತ್ತು ಕಳ್ಳರು ಕಥೆಯಲ್ಲಿ ‘ಸೇಸಮೆ ಬಾಗಿಲು ತೆಗೆ’ ಸನ್ನಿವೇಶವನ್ನು ಉಲ್ಲೇಖಿಸಿ ಅರಬರು ಪ್ರಾಚೀನ ಕಾಲದಲ್ಲೇ ನಮ್ಮಲ್ಲಿ ಧ್ವನಿ ಗುರುತಿಸುವ , ದೂರಸಂವೇದಿ ತಂತ್ರಜ್ಞಾನ, ಎಲೆಕ್ಟಾನಿಕ್ಸ್ ಅಭಿವೃದ್ಧಿಗೊಂಡಿದ್ದಿತೆಂದು ವಾದಿಸಬಹುದು. ಇದಕ್ಕೆ ಕೊನೆ ಮೊದಲಿಲ್ಲ. ಇದು ಕಾಗಕ್ಕ-ಗುಬ್ಬಕ್ಕಗಳ ಕಥೆಯಲ್ಲದೆ ಬೇರಲ್ಲ. ವೈಮಾನಿಕ ಶಾಸ್ತ್ರದ ತಂತ್ರಜ್ಞಾನ : ‘‘ಏ ಕ್ರಿಟಿಕಲ್ ಸ್ಟಡಿ ಆಫ್ ದಿ ವರ್ಕ್ ವೈಮಾನಿಕಶಾಸ್ತ್ರ’’ ಬರೆದ ವಿಜ್ಞಾನಿಗಳು ಅದರಲ್ಲಿರುವ ವಿಮಾನದ ವಿವರಣೆಗಳು ಎಷ್ಟು ಅಸಂಬದ್ಧವೆಂದು ಅವರಿಗೆ ಗಾಳಿಗಿಂತ ಭಾರವಾದ ಹಾರಾಟದ ತತ್ವಗಳು ಎಳ್ಳಷ್ಟು ತಿಳಿದಿರಲಿಲ್ಲವೆಂದು , ಅದರಲ್ಲಿನ ತತ್ವಗಳು ಹೇಗೆ ಪರಸ್ಪರ ತಾಳೆಯಾಗದೆ ಮುಖಾಮುಖಿಯಾಗಿವೆಯೆಂದು , ಅವುಗಳಲ್ಲಿ ಉಲ್ಲೇಖವಾಗಿರುವ ಇಂಧನ ಎಷ್ಟು ವಿಕೃತವಾದುದೆಂದು ಸಾಧಾರವಾಗಿ ಚರ್ಚಿಸಿದ್ದಾರೆ. ಆಸಕ್ತರು ಜಾಲತಾಣದಿಂದ ಈ ಲೇಖನವನ್ನೂ ಇಳಿಸಿಕೊಂಡು ಓದಬಹುದು. ಸುಬ್ಬರಾಯ ಶಾಸ್ತ್ರಿಗಳ ಉದ್ದೇಶ : ವೈಮಾನಿಕ ಶಾಸ್ತ್ರದ ಬಗ್ಗೆ ಸಂಶೋಧಿಸಿದ ವಿಜ್ಞಾನಿಗಳು ಸುಬ್ಬರಾಯರ ಪ್ರಾಮಾಣಿಕತೆಯ ಬಗ್ಗೆ ಸಂಶಯಿಸಿಲ್ಲ. ಆದರೆ ಆ ಹಿಂದೆ ಎಲ್ಲಿಯೂ ಉಲ್ಲೇಖವಾಗದ , ಇಡೀ ಜಗತ್ತಿನಲ್ಲಿ ಆ ಮೊದಲು ಯಾರಿಗೂ ಗೊತ್ತಿರದ ಕೃತಿ ರಚಿಸಲು ಕಾರಣವೇನೆಂದು , ಆದರೆ ಅದರ ಮೂಲ ಎಲ್ಲಿದೆಯೆಂದು ಹುಡುಕುವುದು ಸಾಧ್ಯ. ನಿರಕ್ಷರಕುಕ್ಷಿಗಳಾಗಿದ್ದ ಸುಬ್ಬಾರಾಯರು ಕೊಲಾರದ ಕಾಡಿನಲ್ಲಿ ಗುರುಗಳಡಿಯಲ್ಲಿ ವಿದ್ಯಾಭ್ಯಾಸ ಪಡಿದುಕೊಂಡಿರುವುದು ಅವರ ಜೀವನ ಚರಿತ್ರೆಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.. ಆಗ ಅವರು ಸಂಸ್ಕೃತ ಕಲಿತಿರುವುದರಲ್ಲಿ ಸಂಶಯವಿಲ್ಲ. ವೈಮಾನಿಕಶಾಸ್ತ್ರ ಮತ್ತು ಶಂಕರಾಚಾರ್ಯ ಭಾರತಿ ಕೃಷ್ಣ ತೀರ್ಥರಿಂದ ೧೯೬೫ರಲ್ಲಿ ರಚಿಸಲ್ಪಟ್ಟ ‘ವೇದಿಕ್ ಮ್ಯಾಥೆಮ್ಯಾಟಿಕ್ಸ್’ ಒಂದೇ ಬಗೆಯ ಸಂಶಯದ ಹಿನ್ನೆಲೆ ಹಾಗು ಮೂಲ ಉದ್ದೇಶ ಹೊಂದಿರುವಂತೆ ಭಾಸವಾಗುತ್ತವೆ. ಭಾರತಿ ಕೃಷ್ಣ ತೀರ್ಥರು ಅಥರ್ಣವ ವೇದದಿಂದ ೧೬ ಗಣಿತದ ಸೂತ್ರಗಳನ್ನು ಪಡೆದು ಅವುಗಳ ಆಧಾರದ ಮೇಲೆ ೧೬ ಗ್ರಂಥಗಳನ್ನು ರಚಿಸಿದುದಾಗಿಯೂ ,ಪ್ರಕಟಣೆಗೆ ಕೆಲ ದಿನ ಮೊದಲು ಹಸ್ತಪ್ರತಿ ಕಳೆದುಹೋದವೆಂದು ಆದರೆ ತಮ್ಮ ಜ್ಞಾಪಕ ಶಕ್ತಿಯ ಆಧಾರದ ಮೇಲೆ ಒಂದು ಕೃತಿಯನ್ನು ಮಾತ್ರ ಮತ್ತೆ ಬರೆಯಲು ಸಾಧ್ಯವಾಯಿತೆಂದು ಹೇಳಿಕೊಂಡರು. ವೈಮಾನಿಕಶಾಸ್ತ್ರದಂತೆಯೇ ಭಾರತಿ ಕೃಷ್ಣ ತೀರ್ಥರು ಹೇಳುವಂತೆ ಅಥರ್ಣವ ಯಾವ ಲಭ್ಯ ಹಸ್ತಪ್ರತಿಯಲ್ಲಿಯೂ ಈ ಸೂತ್ರಗಳು ಇಲ್ಲವೆಂಬುದನ್ನು ವಿದ್ವಾಂಸರು ಗಮನಕ್ಕೆ ತಂದರು .ತಕ್ಷಣವೇ ಭಾರತಿ ತೀರ್ಥರ ಬೆಂಬಲಿಗರು ಅದಕ್ಕೆ ಪ್ರತಿಕ್ರಿಯೆ ನೀಡಿ ಈ ಸೂತ್ರಗಳು ನಿರ್ದಿಷ್ಟವಾಗಿ ಇರದಿದ್ದರೂ ತಮ್ಮ ಆಳ ತಪಸ್ಸಿನ ದೃಷ್ಟಿಯಿಂದ ತೀರ್ಥರು ವೇದ ಋಷಿಗಳ ಆಶಯಗಳನ್ನು ಅರಿತು ತಿಳಿಸಿರುವರೆಂದು ವಾದಿಸಿದರು. ಇವರಿಬ್ಬರೂ ಹೀಗೇಕೆ ಮಾಡಿದರೆಂದು ಸೋಜಿಗವಾಗುತ್ತದೆ. ಆ ಕಾಲದಲ್ಲಿ ಜರುಗಿದ ಸ್ಥಿತಿ ಗತಿಗಳನ್ನು ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಬ್ರಿಟಿಶರು ನಾವು ಹಿಂದೆಂದೂ ಉಹಿಸಲಾರದ ಆಧುನಿಕ ಯಂತ್ರ ಜಗತ್ತನ್ನು ನಮ್ಮ ಮುಂದಿರಿಸಿದರು. ಆಧುನಿಕವಾದುದೆಲ್ಲವು ಅವರ ಕೊಡುಗೆಯಾಗಿದ್ದಿತು.ಇದರಿಂದ ನಮ್ಮ ದೇಶ , ಸಂಸ್ಕೃತಿಗಳ ಮೇಲೆ ಉತ್ಕಟ ಅಭಿಮಾನವಿರಿಸಿಕೊಂಡಿದ್ದ ಕೆಲವರ್ಗಗಳಿಗೆ ನಮ್ಮದೇ ಆದ ಶ್ರೇಷ್ಟತೆಯನ್ನು ಎತ್ತಿ ತೋರಿಸಲೇಬೇಕಾಗಿದ್ದಿತು. ಆಧುನಿಕತೆಯ ಮುಂಚೂಣಿಯಲ್ಲಿದ್ದ ಬ್ರಿಟಿಷರನ್ನು ಅದೇ ಕಣದಲ್ಲಿ ಎದುರಿಸುವುದು ಸಾಧ್ಯವಿರಲಿಲ್ಲ. ನಮ್ಮ ಹೆಗ್ಗಳಿಕೆಯ ಪ್ರತಿಯೊಂದಕ್ಕು ವೇದಮಾತೆಯ ಗರ್ಭವನ್ನು ಹೋಗುವ ಆ ಮೂಲಕ ಅವರನ್ನು ಎದುರುಗೊಳ್ಳುವ ತಂತ್ರ ಸುಲಭವೆನಿಸಿತು. ವೇದಗಳ ಕಾಲದಲ್ಲಿಯೇ ವೈಮಾನಿಕಶಾಸ್ತ್ರ ರಚನೆಗೊಂಡಿತೆಂದು ಸಾಧಿಸುವುದರ ಮೂಲಕ ಪಾಶ್ಯಾತ್ಯರ ಸಾಧನೆಯನ್ನು ಕುಗ್ಗಿಸಿ . ಒಂದು ಬಗೆಯ ಭಾವತೃಪ್ತಿ ಪಡೆಯಲು ಸಾಧ್ಯವಾಯಿತು. ಆದ್ದರಿಂದಲೇ ಸುಬ್ಬಾರಾಯಶಾಸ್ತ್ರಿಗಳಿಂದ ವೈಮಾನಿಕಶಾಸ್ತ್ರ ಸಂಶೋಧಿಸಲ್ಪಟ್ಟಿತು. ಕ್ರಿ.ಶ ೧೯೧೪-೧೯೧೮ ರ ಅವಧಿಯಲ್ಲಿ ನಡೆದ ಮೊದಲನೆ ಜಾಗತಿಕ ಯುದ್ಧದಲ್ಲಿ ಮೊದಲ ಬಾರಿಗೆ ವಿಮಾನಗಳನ್ನು ವ್ಯಾಪಕವಾಗಿ ಬಳಸಲಾಯಿತು. ಆಗ್ಗಾಗ್ಗೆ ಮುಂಬಯಿಗೆ ಭೇಟಿ ನೀಡುತ್ತಿದ್ದ ಸುಬ್ಬಾರಾಯಶಾಸ್ತ್ರಿಗಳಿಗೆ ಹಲವಾರು ಮೂಲಗಳಿಂದ ಇದರ ವಿವರಗಳು ದೊರಕಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಷ್ಟೇ ಅಲ್ಲ ೧೯೦೫ ರ ವೇಳೆಗೆ ಬೆಂಗಳೂರಿನ ಸೌತ್ ಪೆರೇಡ ಮೈದಾನದಲ್ಲಿ ಮೈಸೂರು ಮಹಾರಾಜರು ವಿಮಾನ ಹಾರಾಟದ ಪ್ರದರ್ಶನವನ್ನು ಸಹ ಏರ್ಪಡಿಸಿದ್ದರು. ಜನರಲ್ಲಿ ವಿಮಾನದ ಬಗ್ಗೆ ಕುತೂಹಲ ಹಾಗೂ ತಿಳುವಳಿಕೆಗಳು ಸಾಕಷ್ಟು ಮೂಡಿ ಬಂದಿದ್ದವು. ಬೆಂಗಳೂರಿನ ಹೊಸ್ತಿಲಲ್ಲೇ ಇರುವ ಆನೆಕಲ್ಲಿನಿಂದ ಸುಬ್ಬರಾಯ ಶಾಸ್ತ್ರಿಗಳು ಬಂದು ಈ ಪ್ರದರ್ಶನವನ್ನು ನೋಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ರಾಜಭಕ್ತಿ , ದೇಶಭಕ್ತಿ, ಪಂಚಗವ್ಯಶಾಸ್ತ್ರದಂತಹ ಕೃತಿಗಳನ್ನೂ ರಚಿಸಿದ ಸುಬ್ಬಾರಾಯ ಶಾಸ್ತ್ರಿಗಳು ವೆಂಕಟಾಚಲಶರ್ಮರೊಂದಿಗೆ ಸೇರಿ ವೈಮಾನಿಕಶಾಸ್ತ್ರವನ್ನು ತಮ್ಮ ಮನೆಯಲ್ಲಿಯೇ ‘ಉತ್ಪಾದಿಸಿದರೆಂದು’ ಸಾಂದರ್ಭಿಕ ಸಾಕ್ಷಿಗಳಿಂದ ಸ್ಪಷ್ಟವಾಗುತ್ತದೆ. ನಮ್ಮ ಸಾಧನೆಗಳ ಬಗ್ಗೆ ಹೆಮ್ಮೆಯಿರಬೇಕು ನಿಜ. ಆದರೆ ನಮ್ಮಲ್ಲಿ ಇಲ್ಲದುದನ್ನು ಹೇಗಾದರು ನಮ್ಮದೆಂದು ಸಾಧಿಸಬೇಕೆಂಬ ಗೀಳು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. |
|
Comment Box is loading comments...