ಆಧ್ಯಾತ್ಮದಲ್ಲಿ ಹುರುಳಿದೆಯೇ ?
(ಭಗವದ್ಗೀತೆ ಬೆಳಕು ನೀಡುವುದೇ ಕೃತಿಯ ಆಯ್ದ ಭಾಗ) ವೇದ , ಉಪನಿಷತ್ತುಗಳು , ಭಗವದ್ಗೀತೆ, ಪುರಾಣ , ಸ್ವಾಮಿಗಳು , ಆಚಾರ್ಯರುಗಳನ್ನು ಕಂಡರೆ ಭಾರತೀಯರಿಗೆ ಅಪಾರ ಗೌರವ. ಏಕೆಂದರೆ ಅವರು ಆಧ್ಯಾತ್ಮವನ್ನು ಬಲ್ಲವರು. ಆಧ್ಯಾತ್ಮ ಮಾತ್ರ ಮನುಷ್ಯನನ್ನು ಭವಬಂಧನದಿಂದ ಬಿಡಿಸಿ ಶಾಶ್ವತ ಸ್ಥಿತಿಗೆ ಒಯ್ಯಬಲ್ಲುದು. ಆಧ್ಯಾತ್ಮ ಕುರಿತಾದಂತೆ ಭಾರತದಲ್ಲಿ ಬಹು ಹಿಂದಿನಿಂದಲೂ ಕೆಲವು ನಂಬಿಕೆಗಳು ಬೆಳೆದು ಬಂದಿವೆ. ಇವುಗಳಿಗೆ ಯಾವ ಆಧಾರಗಳು ಇಲ್ಲ. ಇವುಗಳನ್ನು ಒಂದೊಂದಾಗಿ ನೋಡಬಹುದು. (೧) ವೇದ , ಉಪನಿಷತ್ತುಗಳು ಅಪೌರುಷೇಯ. ಅವು ಶಾಶ್ವತ ಸತ್ಯವನ್ನು ಈ ವಿಶ್ವದ ಹಿನ್ನೆಲೆ , ಕಾರ್ಯ , ಕಾರಣಗಳನ್ನು ಹೇಳುತ್ತವೆ. ಆಧ್ಯಾತ್ಮದ ಗುರಿ ಈ ಅಂತಿಮ ಸತ್ಯವನ್ನು ತಿಳಿದುಕೊಳ್ಳುವುದು. (೨) ಋಷಿ-ಮುನಿಗಳು ತಮ್ಮ ಧ್ಯಾನ/ತಪಸ್ಸಿನಿಂದ ದಿವ್ಯದೃಷ್ಟಿಯಲ್ಲಿ ಈ ಸತ್ಯಗಳನ್ನು ಕಂಡುಕೊಂಡರು. (೩) ಸನಾತನವಾದ ಆಧ್ಯಾತ್ಮಿಕ ಜ್ಞಾನದ ಮುಂದೆ ಆಧುನಿಕ ವೈಜ್ಞಾನಿಕ ತಿಳುವಳಿಕೆಯನ್ನು ನಿವಾಳಿಸಿ ತೆಗೆಯಬೇಕು. (೪) ಸಾಧು-ಸಂತರು , ಸ್ವಾಮಿಗಳು , ಮಠಾಧಿಪತಿಗಳು , ಬಾಬಾಗಳು ಯೋಗದಿಂದ/ಧ್ಯಾನದಿಂದ/ಪೂಜೆಯಿಂದ ಈ ಸತ್ಯಗಳನ್ನು , ವಿಶ್ವದ ರಹಸ್ಯಗಳನ್ನು ತಿಳಿದುಕೊಂಡು ನಮಗೆ ತಿಳಿಸುತ್ತಿದ್ದಾರೆ. ಇಂತಹ ನಂಬಿಕೆಗಳಿಗೆ ಏನಾದರೂ ಆಧಾರಗಳಿವೆಯೇ ? ಆಧ್ಯಾತ್ಮ ಈ ವಿಶ್ವದ ಬಗ್ಗೆ ಖಚಿತವಾಗಿ ಏನನ್ನಾದರೂ ತಿಳಿಸುವಲ್ಲಿ ಯಶಸ್ಸನ್ನು ಕಂಡಿದೆಯೇ? ಆಧ್ಯಾತ್ಮದ ಪರಿಕಲ್ಪನೆಗಳಾದ ಆತ್ಮ , ಬ್ರಹ್ಮನ್ ಇತ್ಯಾದಿಗಳಿಗೆ ಏನಾದರು ಅರ್ಥವಿದೆಯೇ ? ಎಂದು ಮುಂದಿನ ಪುಟಗಳಲ್ಲಿ ಚರ್ಚಿಸಲಾಗಿದೆ. ಆಧುನಿಕ ವಿಜ್ಞಾನ ಕಂಡುಹಿಡಿದಿರುವ ಮುಂದೆ ಕಂಡುಹಿಡಿಯಲಿರುವ ಪ್ರತಿಯೊಂದನ್ನು ವೇದ, ವೇದಾಂತಗಳು ಆಗಲೇ ಸೂತ್ರ ರೂಪದಲ್ಲಿ ವ್ಯಕ್ತಪಡಿಸಿವೆ ಎಂದು ಹೇಳುವ ಚಟ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ. ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ತಮ್ಮ ಭಾಷಣಗಳಲ್ಲಿ ಸ್ವಾಮಿ ವಿವೇಕಾನಂದರು ‘ಆಧುನಿಕ ವಿಜ್ಞಾನ ಜಡರೂಪದ ಭೌತಿಕವಾದ ಆತ್ಯಂತಿಕ ಸತ್ಯವನ್ನು ಕಂಡು ಹಿಡಿಯಲು ಯತ್ನಿಸುತ್ತಿದ್ದರೆ ವೇದಾಂತ ಅದರಾಚೆಗಿನ ಚೇತನ ಸ್ವರೂಪಿಯಾದ ಆತ್ಯಂತಿಕ ಸತ್ಯದ ಹುಡುಕಾಟದಲ್ಲಿ ನಿರತವಾಗಿ ಯಶಸ್ಸನ್ನು ಕಂಡಿತು ಎಂದು ಹೇಳಿದರು. ಮುಂದಿನ ದಶಕಗಳಲ್ಲಿ ಈ ಹೇಳಿಕೆ ನಾನಾ ರೀತಿಯ ಅತಿರೇಕಗಳಿಗೆ ಎಡೆ ಮಾಡಿಕೊಡತೊಡಗಿತು. ಸ್ವಾಮಿ ವಿವೇಕಾನಂದರು ಗತಿಸಿದ ಮೂರೇ ವರ್ಷಗಳಲ್ಲಿ ಜಗತ್ತಿನಲ್ಲಿ ಜಡ-ಚೇತನಗಳೆಂಬ ಎರಡು ತತ್ತ್ವಗಳಿಲ್ಲ. ಅವೆರಡೂ ಒಂದೇ ಎಂದು ಖಚಿತವಾಯಿತು. ಹೀಗಿದ್ದರೂ ಇತ್ತೀಚೆಗೆ ‘ಸದ್ಗುರು’ವೊಬ್ಬರು ವೇದಾಂತ ವಿಜ್ಞಾನಗಳಾಚೆಗಿನ ಸತ್ಯವನ್ನು ಕುರಿತು ಹೇಳುತ್ತಿದೆ ಎಂದು ಅಪ್ಪಣೆ ಕೊಡಿಸಿದ್ದಾರೆ. ಅದು ಅವರಿಗೆ ಹೇಗೆ ತಿಳಿಯಿತು ? ಹೇಗೆ ಹೇಳಬಲ್ಲರು ? ಎಂದು ಯಾರೂ ವಿಚಾರಿಸುವ ಗೊಡವೆಗೆ ಹೋಗಲಿಲ್ಲ. ಅಂತಹ ಪ್ರಶ್ನೆಗಳಿಗಳಿಗೆ ಅವರು ಮತ್ತೊಮ್ಮೆ ವೇದ , ವೇದಾಂತಗಳ ಶ್ಲೋಕಗಳನ್ನು ಪುನರುಚ್ಚರಿಸುತ್ತಾರೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ಯಾವುದನ್ನು ಪರೀಕ್ಷಿಸಬೇಕೆಂದಿರುವೆವೋ ಅದನ್ನೇ ಅದರ ಸಮರ್ಥನೆಗೆ ಸಾಕ್ಷ್ಯವನ್ನಾಗಿ ಒದಗಿಸುವಲ್ಲಿ ಇರುವ ದೋಷವನ್ನು ಪರಿಗಣಿಸದೇ ಇರುವುದು ಆಧ್ಯಾತ್ಮದ ವಿಷಯಗಳಲ್ಲಿ ಅಂತರ್ಗತವಾಗಿದೆ. ಇದರ ಹಿಂದೆ ಅಧ್ಯಾತ್ಮವನ್ನು ವಿಶ್ವದ ಎಲ್ಲ ತಿಳುವಳಿಕೆಗಳಿಗಿಂತ ಹೆಚ್ಚಿನದೆಂಬ ‘ಕಾಲ್ಪನಿಕ’ ನಂಬಿಕೆಯ ಹೊರತಾಗಿ ಬೇರೇನೂ ಇಲ್ಲ. ಉದಾಹರಣೆಗೆ ಹೇಳುವುದಾದರೆ ಆತ್ಮ/ಪರಮಾತ್ಮ/ಬ್ರಹನ್ ವಿಶ್ವ ಸೃಷ್ಟಿಗೆ ಕಾರಣವೆಂದು ಹೇಗೆ ಹೇಳುತ್ತೀರಿ ಎಂದರೆ ಪ್ರಾಚೀನ ಗ್ರಂಥಗಳಲ್ಲಿ ಹಾಗೆ ಹೇಳಲಾಗಿದೆ ಎಂಬ ಸಮರ್ಥನೆ ದಕ್ಕುತ್ತದೆ. ಇಲ್ಲಿ ಸಾಕ್ಷ್ಯ ಬೇಕಾಗಿರುವ ಹಾಗೂ ಸಾಕ್ಷ್ಯ ಒದಗಿಸುವ ಮೂಲಗಳೆರಡೂ ಒಂದೇ ಆಗಿರುವ ದೋಷ ನುಸುಳಿದೆ. ಆಧ್ಯಾತ್ಮ ಕುರಿತಾದ ಅಸ್ತಿತ್ವದಲ್ಲಿರುವ ಅತಿರಂಜಿತ ಕಲ್ಪನೆ ಹಾಗೂ ಅವುಗಳ ಇತಿಮಿತಿಗಳನ್ನು ನೋಡೋಣ. ಗೀತೆ-ವೇದ-ಉಪನಿಷತ್ತುಗಳು ಎಂದ ಕೂಡಲೇ ಅದಕ್ಕೆ ಪಾರಲೌಕಿಕ , ಆಧ್ಯಾತ್ಮಿಕ ನಿಗೂಢಛಾಯೆ ಆವರಿಸುತ್ತದೆ. ಭಾರತೀಯರಿಗೆ ಆಧ್ಯಾತ್ಮವೇ ಆಧಾರ , ಮೋಕ್ಷವೇ ಅಂತಿಮ ಎಂದು ಮೇಲಿಂದ ಮೇಲೆ ಕೇಳಿ ಬರುತ್ತಿರುವ ಹೇಳಿಕೆಗಳನ್ನು ನೋಡಿದರೆ ಗೀತೆಯನ್ನು ನಾವು ವಿಮರ್ಶಿಸಬಾರದು. ನೀವು ರೈತ , ವಕೀಲ, ನ್ಯಾಯಾಧೀಶ , ವೈದ್ಯ , ಇಂಜಿನಿಯರ್ , ಸಾಹಿತಿ ಕುಶಲಕಾರ್ಮಿಕ ಹೀಗೆ ನಾನಾ ರಂಗಗಳಲ್ಲಿ ತೊಡಗಿಸಿಕೊಂಡಿರುತ್ತಿರಿ. ನಿಮ್ಮ ಪ್ರತಿಭೆ , ಪರಿಶ್ರಮಿಗಳಿಗೆ ಅನುಗುಣವಾಗಿ ನಿಮ್ಮ ರಂಗದಲ್ಲಿ ಅಧಿಕೃತವಾಗಿ ಮಾತನಾಡಬಲ್ಲಿರಿ. ಯಾವುದಾದರು ವಿಜ್ಞಾನಿ ಆತನದಲ್ಲದ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿರದಿದ್ದರೆ ಅದರಲ್ಲಿ ಏನನ್ನೂ ಹೇಳಲು ಇಚ್ಚಿಸುವುದಿಲ್ಲ. ತನ್ನ ಅನುಭವ ಹಾಗೂ ಸಿದ್ಧಿಗಳ ಮೂಲಕ ಸರಿಯೆಂದು ಭಾವಿಸಲಾದ ವಿಷಯಗಳ ಮೇಲೆ ಮಾತ್ರ ಮಾತನಾಡಬಲ್ಲ. ಆದರೆ ನಮ್ಮ ಮಾಧ್ಯಮಗಳನ್ನು ನೋಡಿರಿ. ಪ್ರತಿಯೊಬ್ಬರೂ ದೇವರು , ಧರ್ಮ , ಆತ್ಮ , ಮೋಕ್ಷ ಇತ್ಯಾದಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ. ಒಬ್ಬ ಭೌತವಿಜ್ಞಾನಿ , ರಸಾಯನಶಾಸ್ತ್ರಜ್ಞ , ಜೀವಶಾಸ್ತ್ರಜ್ಞ , ಗಣಿತಜ್ಞ ಅಥವಾ ಇಂಜಿನಿಯರ್ ಜಗತ್ತಿನ ಮೂಲ ನಿಯಮಗಳನ್ನು ಅರಿಯಲು ಜೀವಮಾನವನ್ನೇ ಸವೆಸಿರಬಹುದು. ಪರಮಾಣುಗಳನ್ನು ಬಿಗಿದಿರುವ ದೇವಕಣಗಳನ್ನು (ಹಿಗ್ಗಿನ್ ಬೊಸಾನ್ಸ್) ಪತ್ತೆ ಹಚ್ಚಿರಬಹುದು. ಆದರೂ ವೇದಿಕೆಗಳ ಮೇಲೆ , ಸಾರ್ವಜನಿಕವಾಗಿ ವೇದ , ಉಪನಿಷತ್ತು , ಭಗವದ್ಗೀತೆಗಳನ್ನು ಅದರ ಶ್ಲೋಕಗಳನ್ನು ಬಡಬಡಿಸುತ್ತಿರುವರಿಗಿಂತ ಅವರು ಕಡಿಮೆಯೆಂದು ಭಾವಿಸುತ್ತೇವೆ. ಬಣ್ಣ ಬಣ್ಣದ ಧೋತ್ರ , ನಿಲುವಂಗಿ ತೊಟ್ಟು , ಕೊರಳಲ್ಲಿ ನಾನಾ ಬಗೆಯ ಮಣಿಮಾಲೆಗಳನ್ನು ಧರಿಸಿ ಹತ್ತು ಬೆರಳುಗಳಿಗೆ ಉಂಗುರ ತೊಟ್ಟು ದೂರದರ್ಶನ ಕಾರ್ಯಕ್ರಮದಲ್ಲಿ ಬರುವ ಅಚಾರ್ಯರನ್ನು ಸಂದರ್ಶಕರು ‘ಗುರುಗಳೇ’ ಎಂದು ಪದೇ ಪದೇ ತಲೆತಗ್ಗಿಸಿ ವಿಮಯಪೂರ್ವಕವಾಗಿ ಕರೆಯುತ್ತ , ‘ಇಂತಹ ಊರಿನ ಇಂತಹವರಿಗೆ ಇಂತಹ ಸಂಶಯ ಬಂದಿದೆ . ಅದಕ್ಕೆ ಪರಿಹಾರ ಹೇಳಿ’ ಎಂದು ಸವಿನಯವಾಗಿ ಬೇಡಿಕೊಳ್ಳುತ್ತಾರೆ. ಗುರುಗಳೇ ತಿಲೋತ್ತಮೆಯ ವೃತ್ತಾಂತ ಸ್ವಲ್ಪ ತಿಳಿಸುತ್ತಿರಾ? ಎಂದು ಸಂದರ್ಶಕಿ ಕೇಳಿದ ಪ್ರಶ್ನೆಗೆ ಆ ಗುರು ಪುರಾಣದ ಕಥೆಗಳನ್ನು ಹೊಸೆದು , ಶಂಕರಾಚಾರ್ಯರ ಬ್ರಹ್ಮಸೂತ್ರಗಳನ್ನು ಬೆಸೆದು ಗಂಟೆಗಟ್ಟಲೆ ಮಾತನಾಡುತ್ತಾರೆ. ಮತ್ತೊಬ್ಬ ಶ್ರೀಶ್ರೀಗಳು ಹಣೆಯ ಮದ್ಯದಲ್ಲಿ ಸುದರ್ಶನ ಚಕ್ರವನ್ನು ಗಿರಗಿರನೆ ಸುತ್ತಿಸುತ್ತಾರೆ. ಇನ್ನೊಬ್ಬ ಸದ್ಗುರುಗಳು ಆಧುನಿಕ ವಿಜ್ಞಾನ ತಿಳಿಸುವ ಭೌತಿಕ ಸತ್ಯದ ಹೊರಗಿರುವ ಮತ್ತೇನನ್ನೋ ವೇದೋಪನಿಷತ್ತುಗಳು ತಿಳಿಸುತ್ತವೆ ಎಂದು ಸಾರುತ್ತಾರೆ. ಇದು ನಿಜವೇ ? ಇದು ಇವರಿಗೆ ಹೇಗೆ ಗೊತ್ತಾಯಿತು. ಯಾರಾದರು ಗುರುಗಳನ್ನು ಪ್ರಶ್ನಿಸಬಹುದೇ? ಕೂಡದು. ಉಪನಿಷತ್ತುಗಳು ಆತ್ಮನ ಸ್ಥಾನವೆಂದು ಪರಿಗಣಿಸಿರುವ ಹೃದಯವನ್ನು ಕೆಲಕಾಲ ಸ್ತಬ್ದಗೊಳಿಸಿ ಬಗೆದು ತೆಗೆದು ದುರಸ್ತಿಗೊಳಿಸುವ ವೈದ್ಯನನ್ನು ‘ರೀ’ ‘ಸರ್’ ಸಂಬೋಧನೆಗೆ ಮಿತಿಗೊಳಿಸಲಾಗುತ್ತದೆ. ಯಾವ ವಿಜ್ಞಾನಿಯ ಕಾಲಿಗೂ ಯಾರೂ ಎಂದೂ ಅಡ್ಡ ಬಿದ್ದಿರುವುದನ್ನು ಈವರೆಗೆ ನಾನು ಕಂಡಿಲ್ಲ. ಆದರೆ ಆಧ್ಯಾತ್ಮಿಕ ಗುರುಗಳ ಪಾದಾರವಿಂದಗಳಲ್ಲಿ ಪ್ರಧಾನಮಂತ್ರಿಯಿಂದ ಪ್ರಾರಂಭಿಸಿ ಚಪರಾಸಿಯವರೆಗೂ ಸಾರ್ವಜನಿಕವಾಗಿ ಅಡ್ಡ ಬೀಳುವುದು ಸಹಜವೆನಿಸಿದೆ. ಇಂತಹ ನಡವಳಿಕೆಗಳ ಹಿಂದೆ ಆಧ್ಯಾತ್ಮಿಕ ಜ್ಞಾನ ಎಲ್ಲ ಜ್ಞಾನಕ್ಕಿಂತ ಶ್ರೇಷ್ಟ. ಅದರ ಬಗ್ಗೆ ಬಡಬಡಿಸುವವರು ಜ್ಞಾನಿಗಳು . ಆಧುನಿಕ ವಿದ್ಯಾಭ್ಯಾಸ ಪಡೆದ ಅಂಗಿ , ಪ್ಯಾಂಟ್ ತೊಡುವವರು ಎಷ್ಟೇ ದೊಡ್ಡ ಸಂಶೋಧನೆ ಮಾಡಿರಲಿ , ಎಷ್ಟೇ ವಿಚಾರವಂತರಾಗಿರಲಿ , ಅವರು ತತ್ತ್ವಶಾಸ್ತ್ರದ ಪ್ರಾಧ್ಯಾಪಕರೆ ಆಗಿರಲಿ, ಅವರಿಗಿಂತ ಕೆಳಗೆ ಎನ್ನುವ ಪಾರಂಪರಿಕ ನಂಬಿಕೆಯೇ ಇದರ ಹಿಂದೆ ಕ್ರಿಯಾಶೀಲವಾಗಿದೆ. ಭಾರತಿಯ ಜನಜೀವನದಲ್ಲಿ ಆಧ್ಯಾತ್ಮಿಕತೆ ಎನ್ನುವ ಸಮ್ಮೋಹಿನಿ ಅಡರಿರುವುದರಿಂದ ಯಾರು ಏನನ್ನು ಬೇಕಾದರೂ ಹೇಳಿ ಅರಗಿಸಿಕೊಳ್ಳಬಹುದು. ನೀವು ಕಣಭೌತ ವಿಜ್ಞಾನಿಯಾಗಿ , ಮಹಾಅಮ್ಲಗಳಲ್ಲಿ ಸಂಶೋಧನೆ ನಡೆಸಿ ನೊಬೆಲ್ ಪ್ರಶಸ್ತಿಯ ಕದ ತಟ್ಟಿರಬಹುದು. ಆದರೇನಂತೆ ಮಲೆನಾಡಿನ ಮೂಲೆಯ ಅಥವಾ ಬಯಲು ಸೀಮೆಯ ಕುಗ್ರಾಮದ ಆಶ್ರಮದಲ್ಲಿರುವ ಸಂಸ್ಕೃತ ಶ್ಲೋಕಗಳನ್ನು ಪುಂಖಾನುಪುಂಖವಾಗಿ ಉದುರಿಸುತ್ತ ಕರ್ಮಯೋಗ’ದ ಬಗೆಗೆ ಮಾತನಾಡುವ ಸ್ವಾಮಿಗಿಂತ ನೀವು ಕೆಳಗೆ. ಹೀಗೇಕಾಯಿತು ಎನ್ನುತ್ತಿರಾ ? ಅದು ನಮ್ಮ ಪಾರಂಪರಿಕ ಮನೋಧರ್ಮ. ಇದರಿಂದಾಗಿಯೇ ಅಧ್ಯಾತ್ಮ ಎನ್ನುವುದನ್ನು ಯಾರು ಬೇಕಾದರೂ ಆಶ್ರಯಿಸಬಹುದು. ತನಗೆ ಗೊತ್ತಿರದಿದ್ದರೂ ಅದನ್ನು ಅನ್ಯರ ಮೇಲೆ ಹೇರಬಹುದು. ಆದ್ದರಿಂದ ಆಧ್ಯಾತ್ಮ ಎಂದಿಗೂ ಪ್ರಶ್ನೆ , ಪರಿಶೀಲನೆಗಳಿಗೆ ಒಳಪಡದೆ ವೈಯುಕ್ತಿಕ ನೆಲೆಗಟ್ಟಿನ ಮೇಲೆ ಸಾಗುವ ತಂತ್ರವಲ್ಲದೆ ಬೇರೇನಲ್ಲ. ದೊಡ್ಡ ವಿಜ್ಞಾನಿಯಾಗಿರುವ ನಿಮ್ಮ ಮೇಲೆ ಮಠದ ಸ್ವಾಮಿಗಳು ಹೇಗೆ ಅಧಿಕವಾಗಿ ಪರಿಣಿತನಾದ? ಆತನ ಹೇಳಿಕೆಗಳಿಗೆ ಅಧಿಕೃತತೆ ಎಲ್ಲಿಂದ ಬಂದಿತು ಎಂದು ಪ್ರಶ್ನಿಸುವ ನಮ್ಮ ಬೌದ್ಧಿಕ ಜಡತ್ವವೇ ಇವೆಲ್ಲ ಅನಾಹುತಗಳಿಗೆ ಕಾರಣ. ಅಧ್ಯಾತ್ಮದ ಪರ ಮಾತನಾಡುವವರೆಲ್ಲ ಸಾಮಾನ್ಯವಾಗಿ ಹೇಳುವ ಮಾತೊಂದಿದೆ. ನೀವು ವೇದೋಪನಿಷತ್ತುಗಳನ್ನು ಅಲ್ಲಗೆಳೆಯುವ ಮೊದಲು ಅದರಲ್ಲಿ ಏನು ಸಾಧನೆ ಮಾಡಿದ್ದಿರಿ ? ಸಾಧಕರಿಗೆ ಮಾತ್ರ ಅದರಲ್ಲಿನ ಸತ್ಯ ಗೋಚರಿಸುತ್ತದೆ. ತರ್ಕವಾದಿಗಳಿಗೆ ಅದು ದಕ್ಕದು ಇತ್ಯಾದಿ ಇತ್ಯಾದಿ. ಹಾಗಾದರೆ ಇವರು ಭೌತಿಕ ಪ್ರಪಂಚವೆಲ್ಲವನ್ನು ಅರಿತುಕೊಂಡು . ಅದರಿಂದ ದಕ್ಕುವ ಜ್ಞಾನದ ಇತಿಮಿಗಳನ್ನು ಪರಾಮರ್ಶಿಸಿ , ಅದರಲ್ಲಿ ಉತ್ತರಗಳು ದಕ್ಕದಿದ್ದಾಗ ಆಧ್ಯಾತ್ಮಕ್ಕೆ ಮೊರೆ ಹೊಕ್ಕು , ಆಧ್ಯಾತ್ಮಿಕವಾಗಿ ಕಂಡುಕೊಂಡ ಸತ್ಯಗಳನ್ನು ಭೌತಿಕ ಸತ್ಯಗಳೊಂದಿಗೆ ತುಲನೆ ಮಾಡಿ ಅದರ ಸತ್ಯಾಸತ್ಯತೆಗಳನ್ನು ಮನಗಂಡು ಹೇಳುತ್ತಿದ್ದಾರೆಯೇ ಮೊದಲು ಸ್ಪಷ್ಟವಾಗಬೇಕು. ಪರಾಜ್ಞಾನವೇ ಅಂತಿಮ ಎಂದು ಕೂಗುವ ಮೊದಲು ಅಪರಾ ಜ್ಞಾನದ ಎಲ್ಲೆಗಳನ್ನು ತಲುಪಿರಬೇಕು. ಶಂಕರಾಚಾರ್ಯರ ಬ್ರಹ್ಮಸೂತ್ರದ ಬಗ್ಗೆ ದೂರದರ್ಶನದಲ್ಲಿ ಗಟ್ಟಿ ಗಂಟಲಿನಲ್ಲಿ ಕೂಗುವವರಿಗೆ ನಮ್ಮನ್ನು ಆಳುತ್ತಿರುವ ಚಲನೆಯ ಸರಳ ನಿಯಮಗಳು ಗೊತ್ತಿಲ್ಲ ಎನ್ನುವುದು ಸತ್ಯ. ಭೌತಿಕ ಪ್ರಪಂಚದ ಬಗ್ಗೆ ಇವರಿಗೆ ಹತ್ತನೆಯ ತರಗತಿಯ ವಿದ್ಯಾರ್ಥಿಗೆ ಇರುವಷ್ಟು ಸಹ ಖಚಿತ ಜ್ಞಾನವಿಲ್ಲ. ಇವರು ನೀಡುವ ಸಮರ್ಥನೆಗಳೆಲ್ಲವು ವೇದ , ಬ್ರಹ್ಮಸೂತ್ರ ಇತ್ಯಾದಿಗಳಲ್ಲಿರುವ ಪೊಳ್ಳು ಶ್ಲೋಕಗಳು ಮತ್ತು ಹೇಳಿಕೆಗಳು. ತಾನು ಹೇಳಿದುದನ್ನು ಪ್ರತ್ಯಕ್ಷ ಅಥವಾ ಪರೋಕ್ಷ ಅನುಭವಕ್ಕೆ ತರಬಲ್ಲ ಅಪರಾ ವಿದ್ಯೆಯ ವಿಜ್ಞಾನಿಯನ್ನು ಇವರೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಇವರು ಅತ್ಯಂತ ದುರ್ಬಲ ವೇದಿಕೆಯನ್ನೆರಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಭೌತಿಕ , ಜೀವ ಜಗತ್ತಿನ ಬಗೆಗೆ ಯಾವುದೇ ನಿರ್ದಿಷ್ಟ ಜ್ಞಾನವಿರದ ಕಾಲದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಋಷಿಗಳೆಂದು ಕರೆಸಿಕೊಳ್ಳುತ್ತಿದ್ದ ಕೆಲವರ ಊಹಾತ್ಮಕ ಚಿಂತನೆಗಳೆ ಇವರಿಗೆ ಆಧಾರ. ವಿಚಾರವಾದಿಯೊಬ್ಬರು ದೇವರೆಲ್ಲಿ ? ಎಂದು ಕೇಳಿದಾಗ ಸ್ವಾಮಿಗಳು ಗಾಳಿ , ವಿದ್ಯುತ್ ಎಲ್ಲಿ ಕಾಣಿಸುತ್ತಿಲ್ಲ ? ಎಂದು ಪ್ರಶ್ನಿಸಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡರು. ಆದರೆ ಪಂಚೇಂದ್ರಿಯಗಳಲ್ಲಿ ಕಣ್ಣನ್ನು ಹೊರತಾಗಿ ಉಳಿದೆಲ್ಲವುಗಳಿಗೆ ಅವು ಅನುಭವ ಸಿದ್ಧ, ಅವುಗಳನ್ನು ಪ್ರತ್ಯಕ್ಷ , ಪರೋಕ್ಷ ರೀತಿಗಳಿಂದ ತೋರಿಸಬಹುದು. ಅಷ್ಟೇಕೆ ನಮ್ಮ ಕಣ್ಣಿಗೆ ಅವು ಕಾಣದಿದ್ದರೂ ಇತರ ಇಂದ್ರಿಯಗಳ ನೆರವಿನಿಂದ ಅವುಗಳನ್ನು ನಿಯಂತ್ರಿಸಿ ನಾವು ಬಳಸುತ್ತಿದ್ದೇವೆ. ಇಡೀ ಆಧ್ಯಾತ್ಮ ಕೆಲವು ಎಂದೂ ಪರಿಶೀಲಿಸಲಾಗದ ಸಂಗತಿಗಳನ್ನೇ ನೆಮ್ಮಿಕೊಂಡು ಬಾಳಿಬದುಕಿದೆ. ಆಧ್ಯಾತ್ಮದ ಈ ಒಪ್ಪಿಕೊಂಡ ಸಂಗತಿಗಳೇನು ? ಅವುಗಳಲ್ಲಿ ಏನಾದರೂ ಹುರುಳಿದೆಯೇ ಎಂದು ವಿಚಾರಿಸಬಹುದು. (೧) ಪ್ರತಿಯೊಬ್ಬ(ಪ್ರತಿಯೊಂದು?) ಜೀವಿಯಲ್ಲಿಯೂ ಕೊನೆ-ಮೊದಲಿಲ್ಲದ , ಎಂದಿಗೂ ಬದಲಾಗದ ಆತ್ಮವಿದೆ(=ಜೀವಾತ್ಮ). ದೇಹವೇ ಅದರ ಮನೆ. ಆ ಮನೆಯೇ ಅದರ ಸೆರಮನೆ. ಮೈಯೊಳಗೆ ಸೇರಿದ್ದರಿಂದಲೇ ಆತ್ಮನಿಗೆ ಸುಖ-ದು:ಖಗಳು ಉಂಟಾಗುತ್ತಿವೆ. . (೨) ನಮಗೆ ಈಗ ತಿಳಿದಿರುವ , ತಿಳಿಯಲಿರುವ ಜಗತ್ತಿನ ಮತ್ತು ಅದರ ನಿಯಮಗಳಾಚೆ ಎಂದಿಗೂ ಬದಲಾಗದ ನಿತ್ಯ ತತ್ತ್ವವಿದೆ. ಅದೇ ಬ್ರಹ್ಮನ್(=ಪರಮಾತ್ಮ). ಅದನ್ನು ಇಂದ್ರಿಯಗಳಿಂದ ಅರಿಯಲು ಸಾಧ್ಯವಿಲ್ಲ. ಆಧ್ಯಾತ್ಮ ಸಾಧನೆಯಿಂದ ಮಾತ್ರ ಅರಿಯಬಹುದು. ಅದೇ ಮುಕ್ತಿ. ಹಿಂದಿನಿಂದ ಎಲ್ಲ ಋಷಿ-ಮುನಿಗಳು , ಆಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದ , ಅರವಿಂದಘೋಷ್ ರಂತಹವರು ಇವುಗಳನ್ನು ಆಧುನಿಕ ರೀತಿಯಲ್ಲಿ ಪ್ರಚಾರ ಮಾಡಿದರು. ಹಿಂದಿನಿಂದಲೂ ಆತ್ಮ-ಪರಮಾತ್ಮ ಒಂದೆಯೇ ಬೇರೆಯೇ ? ಇವೆರಡರ ನಡುವಿನ ಸಂಬಂಧ ಎಂತಹುದು , ಇವೆರಡೂ ಒಂದೇ ಆಗಿದ್ದರೆ ಹೇಗೆ ಬೇರೆಯಾಗಿ ಕಾಣುತ್ತವೆ , ಜಗತ್ತು ಹೇಗೆ ಮೂಡಿ ಬಂದಿತು , ಅದು ಮುಂದೇನಾಗುತ್ತದೆ ಎನ್ನುವಂತಹ ಪ್ರಶ್ನೆಗಳನ್ನೆತ್ತಿಕೊಂಡು ಚರ್ಚಿಸಿ ಪರಸ್ಪರ ಒಮ್ಮತಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಭಾರತೀಯ ತತ್ತ್ವಶಾಸ್ತ್ರ ನೂರಾರು ಕವಲುಗಳಾಗಿ ಟಿಸಿಲೊಡೆದಿದೆ. ಅದ್ವೈತಿ-ದ್ವೈತಿ-ವಿಶಿಷ್ಟಾದ್ವೈತಿಗಳು ಈ ವಿಚಾರಗಳಲ್ಲಿ ಪರಸ್ಪರ ಭಿನ್ನ ನಿಲುವು ತಳೆದು ಮುಖಾಮುಖಿಯಾಗಿದ್ದಾರೆ. ಅದ್ವೈತಿಗಳು ಹೇಳಿದ್ದನ್ನು ದ್ವೈತಿಗಳು ಸಾರಾಸಗಟಾಗಿ ತಿರಸ್ಕರಿಸಿದರೆ ಸೌತಂತ್ರಿಕರು , ಮೀಮಾಂಸಕರು ಈ ಬಗ್ಗೆ ತಮಗೆ ತಿಳಿತಿಳಿದಂತೆ ಪರಿಹರಿಸಲು ಯತ್ನಿಸಿದ್ದಾರೆ. ಆದರೆ ಎಲ್ಲ ಆಧ್ಯಾತ್ಮ ಚಿಂತಕರು ಅಂತ್ಯದಲ್ಲಿ ‘ದ್ರವ್ಯ-ಚೇತನ’(=ಜಡ-ಚೇತನ) ಎಂದು ಎರಡು ಭೌತಿಕ ರೂಪದ ವಸ್ತುಗಳಿಗೆ ಮೊರೆಹೋಗಿದ್ದಾರೆ. ‘ದ್ರವ್ಯ , ‘ಚೇತನ’ಗಳು ಎಲ್ಲಿಂದ ಬಂದವು , ಹೇಗೆ ಜಗತ್ತಿನ ಉಗಮಕ್ಕೆ ಕಾರಣವಾದುವು ಎನ್ನುವುದನ್ನು ವಿವರಿಸಲು ನೂರಾರು ಅಸಂಬದ್ಧ ಸಿದ್ಧಾಂತಗಳನ್ನು ಮುಂದಿರಿಸಿದ್ದಾರೆ. ಇವು ಯಾವುಗಳಿಗೂ ಯಾವುದೇ ಆಧಾರವಿಲ್ಲ. ಬ್ರಹ್ಮಜ್ಞಾನಿಯು ಇಂತಹ ಜ್ಞಾನ ಪಡೆದಿರುವನೆಂದು ಹೇಳುತ್ತಾರೆ. ಜಗತ್ತಿನ ಮೂಲ ತಿಳಿದು ಮುಕ್ತರಾಗಲು ಹೊರಟ ಇವರು ಮಾಡಿದ್ದಾದರೂ ಏನನ್ನು ? ಜಗತ್ತಿನ ಮೂಲಕ್ಕೆ ದ್ರವ್ಯ-ಚೈತನ್ಯಗಳೇ ಕಾರಣ. ಅದರ ಹಿಂದೆ ನಿತ್ಯ ಅವಿನಾಶಿ ತತ್ತ್ವವೊಂದಿದೆ. ಅದು ಸಾಧಕರಿಗೆ ಮಾತ್ರ ತಿಳಿಯುತ್ತದೆ ಎನ್ನುವ ಪರಿಶೀಲಿಸಲಾಗದ ನಿಗೂಢವಾಗಿ ಕಾಣಿಸುವ ತೀರ್ಮಾನಕ್ಕೆ ಮಾತ್ರ ಬರಲು ಸಾಧ್ಯವಾಯಿತು. ಜಗತ್ತಿನಲ್ಲಿ ಜಡ-ಚೇತನ ಎನ್ನುವುದಿಲ್ಲ. ಇವೆರಡರ ಸಂಬಂಧ ೧೯೦೫ರಲ್ಲಿ ಆಲ್ಬರ್ಟ್ ಐನ್^ಸ್ಟೀನ್ ಸಾಪೇಕ್ಷ ಸಿದ್ಧಾಂತ ಸೂತ್ರದ ಮೂಲಕ ತಿಳಿದು ಬಂದಿದೆ. ಯಾವುದೇ ಮೂಲ ಧಾತುವಿನ ಕೊನೆಯ ಭಾಗ ಪರಮಾಣು. ಅದರ ಬೀಜದಲ್ಲಿ ಪ್ರೋಟಾನ್, ನ್ಯೂಟ್ರಾನ್ ಹಾಗೂ ಪರಿಧಿಯಲ್ಲಿ ಎಲೆಕ್ಟ್ರಾನ್ ಕಣಗಳಿವೆ.(ಇದು ಕಣವಲ್ಲ-ಕ್ಷೇತ್ರ ಎಂದು ಈಗ ಭಾವಿಸಲಾಗಿದೆ) ನ್ಯೂಟ್ರಾನ್-ಪ್ರೋಟಾನ್ ಬಂಧಿಸಲು ಹಲವಾರು ಉಪಪರಮಾಣ್ವಕ ಕಣಗಳಿವೆ ಎಂದು ಹೇಳುವ , ಇವೆಲ್ಲವುಗಳ ಅಸ್ತಿತ್ವವನ್ನು ಪರೋಕ್ಷವಾಗಿ ಸಾಬೀತು ಪಡಿಸುವ ತಿಳುವಳಿಕೆಯ ಬಗ್ಗೆಯಾಗಲಿ , ವಿಶ್ವದ ಹಿಗ್ಗುವಿಕೆ , ತಾರೆ , ನಕ್ಷತ್ರಗಳ ಉಗಮ , ವಿಕಸನ , ಕಾಲಾಂತರದಲ್ಲಿ ಅವುಗಳ ಸಾವಿನಂತಹ ವಿಶ್ವದ , ನಿಸರ್ಗದ ಅದ್ಭುತ ವಿಸ್ಮಯ ಸಂಗತಿಗಳನ್ನು ತಿಳಿಸುವ ಜ್ಞಾನದೊಂದಿಗೆ ಆಧ್ಯಾತ್ಮದ ಮೂಲಕ ಹೇಳಲ್ಪಡುತ್ತಿರುವ ವಿಶ್ವ ಉಗಮದ ವಿವರಗಳನ್ನು ಹೋಲಿಸಿ ನೋಡಿರಿ. ಇದರಲ್ಲಿ ಯಾವುದು ನಿಮಗೆ ಬೌದ್ಧಿಕ ಸಮಾಧಾನ ನೀಡಿತೆಂದು ನೀವೇ ನಿರ್ಧರಿಸಿರಿ. ಇವೆರಡರ ಹೋಲಿಕೆಯಿಂದ ನಮಗೆ ಒಂದು ವಿಷಯ ಮಾತ್ರ ಸ್ಪಷ್ಟವಾಗುತ್ತದೆ. ಆಧ್ಯಾತ್ಮ ನಾನಾ ಸಿದ್ಧಾಂತಗಳ ಮೂಲಕ , ಸಾಕ್ಷಾತ್ಕಾರಗಳ ಸೋಗಿನಲ್ಲಿ ವಿಶ್ವದ ರಹಸ್ಯವನ್ನು ತಿಳಿದಂತೆ ಮತ್ತು ತಿಳಿಸುವಂತೆ ಮಾತನಾಡುತ್ತದೆ. ಅದು ತಾನು ಅಂತಿಮ ಸತ್ಯವನ್ನು (ಪರಾ ವಿದ್ಯೆ) ಬಲ್ಲೆ ಎನ್ನುತ್ತದೆ ಆದರೆ ಸ್ವಲ್ಪವೇ ವಿಚಾರಿಸಿ ನೋಡಿದರೆ ಅದಕ್ಕೆ ಕೆಳಮಟ್ಟದ ಅಪರಾ ವಿದ್ಯೆಯೂ (=ನಿಸರ್ಗದ ನಿಯಮಗಳು) ಸಹ ತಿಳಿದಿಲ್ಲ. ಆದ್ದರಿಂದ ಶಂಕರಾಚಾರ್ಯರ ವಿವೇಕ ಚೂಡಾಮಣಿಯ ಬಗ್ಗೆ ಗಂಟೆಗಳ ಲೆಕ್ಕದಲ್ಲಿ ಕೊರೆಯುವಾತನಿಗೆ ನೀರು ಏಕೆ ಹರಿಯುತ್ತದೆ ಎನ್ನುವ , ತಾನೂ ದೂರದರ್ಶನದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವ ಸರಳತಮ ಮಟ್ಟದ ಜ್ಞಾನವು ಇಲ್ಲ. ಆದರೂ ತನಗೆ ಏನೋ ತಿಳಿದಿದೆ ಎಂಬ ಧಿಮಾಕಿನಿಂದ ಹೊರಬಂದಿಲ್ಲ. ಆತ್ಮ ಎಲ್ಲಿದೆ ? ಬೌದ್ಧರನ್ನು ಹೊರತಾಗಿ ಎಲ್ಲ ಭಾರತೀಯ ತಾತ್ತ್ವಿಕ ಶಾಖೆಗಳು ಪ್ರತಿಯೊಂದು ಜೀವಿಯಲ್ಲಿಯೂ ಆತ್ಮವಿದೆ ಎನ್ನುತ್ತವೆ. ಪ್ರತಿಕ್ಷಣವೂ ಬದಲಾಗುತ್ತಿರುವ ವಿಶ್ವದಲ್ಲಿ ಬದಲಾಗದ ಆತ್ಮ ತತ್ತ್ವ ಇರಲು ಸಾಧ್ಯವಿಲ್ಲ ಎನ್ನುವುದು ಬೌದ್ಧರ ವಾದ. ಜೈನರು ಎಲ್ಲ ಜೀವಿ ಮತ್ತು ವಸ್ತುಗಳಲ್ಲಿ ಆತ್ಮವಿದೆ ಎನ್ನುತ್ತಾರೆ. ‘ಹಿಂದೂ’ ಋಷಿಗಳಿಗೆ ಮರಗಳಿಗೆ ಜೀವವಿರುವುದು ಖಚಿತವಿರಲಿಲ್ಲ. ಆದ್ದರಿಂದ ಅವುಗಳಿಗೆ ಆತ್ಮ ಇದೆಯೇ ಇಲ್ಲವೇ ಎನ್ನುವ ವಿಚಾರಣೆಯ ಗೋಜಿಗೆ ಅವರೆ ಹೋಗಿಲ್ಲ. ಜೀವಿಯಲ್ಲಿಯಲ್ಲಿರುವ ಆತ್ಮ ಯಾವ ಸ್ವರೂಪದ್ದು ? ಅದರ ನೆಲೆ ಎಲ್ಲಿದೆ ? ಆತ್ಮ ದ್ರವ್ಯವೇ ಅಥವಾ ಚೈತನ್ಯವೇ ? ದ್ರವ್ಯವೆಂದರೆ ಈ ಭೌತಿಕ ಜಗತ್ತಿಗೆ ಸಂಬಂಧಿಸಿದುದೆ ? ಅಥವಾ ಅದನ್ನು ಮೀರಿದುದೆ ? ಅದು ಭೌತಿಕ ಜಗತ್ತಿಗೆ ಸಂಬಂಧಿಸಿದ್ದೇ ಆದರೆ ಅದು ಹೇಗೆ ಇರಲಿ ಇಂದಲ್ಲ ನಾಳೆ ನಾವು ಅದನ್ನು ಹುಡುಕಲು ಸಾಧ್ಯ. ಜೈನರು ಹೇಳುವಂತೆ ವಸ್ತುವಿನಲ್ಲಿಯೂ ಆತ್ಮವಿದ್ದರೆ ಅದನ್ನು ಹುಡುಕುವುದು ಇನ್ನೂ ಸುಲಭ. ಆಗ ಆ ಆತ್ಮ ದ್ರವ್ಯವನ್ನು ಅಳೆಯಲು , ಅದರ ಗುಣಗಳನ್ನು ತಿಳಿಯಲು ಮತ್ತು ವಿವರಿಸಲು ಸಾಧ್ಯ. ಅದು ಭೌತಿಕ ಜಗತ್ತನ್ನು ಮೀರಿದುದು ಅದನ್ನು ಕಾಣಲು ಸಾಧ್ಯವಿಲ್ಲ. ಅದರ ಸಾಕ್ಷಾತ್ಕಾರ ಮಾತ್ರ ಸಾಧ್ಯ ಎಂದರೆ ಇಲ್ಲದ್ದನ್ನು ಇರುವಂತೆ ಮಾಡುವ ಹುನ್ನಾರವಲ್ಲದೆ ಬೇರೆ ಯಾವ ಕಾರಣವೂ ಇಲ್ಲ. ಅಷ್ಟಕ್ಕೂ ಅಂತಹ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಹೇಗೆ ? ಧ್ಯಾನ , ತಪಸ್ಸಿನಿಂದ ? . ಧ್ಯಾನ , ತಪಸ್ಸುಗಳು ಭೌತಿಕ ಚಟುವಟಿಕೆಗಳ ಫಲವಲ್ಲವೆ ? ಮನಸ್ಸು ಮತ್ತು ಬುದ್ಧಿಗಳಿಗೆ ಮೆದುಳು ನೆಲೆಯಲ್ಲವೇ ? ಭೌತಿಕ ಸ್ವರೂಪದ ಮೆದುಳಿನ ಕ್ರಿಯೆಗಳಾದ ಮನಸ್ಸು ಮತ್ತು ಬುದ್ಧಿಯ ಮೂಲಕ ಭೌತಾತೀತವಾದ ಆತ್ಮನ ಅರಿವು ಸಾಧ್ಯವೇ? ಹಾಗಾದರೆ ಆತ್ಮ ಭೌತಿಕ ತತ್ತ್ವಗಳಾಚಿನದಲ್ಲ ಎನ್ನಬೇಕಾಗುತ್ತದೆ. ಆತ್ಮದ ಬಗ್ಗೆ ವೇದ , ಉಪನಿಷತ್ತುಗಳು ಹಲವಾರು ವಿಚಾರಗಳನ್ನು ಹೇಳುತ್ತವೆ. ಅವುಗಳನ್ನು ಉಚ್ಚಸ್ಥಾಯಿಯಲ್ಲಿ ಎತ್ತಿ ಹೇಳಲಾಗುತ್ತದೆ. ಸ್ವಾಮಿಗಳು ವೇದಿಕೆಗಳಿಂದ ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸಿ ಹೇಳುವುದನ್ನು ವಿಚಾರಿಸುವ ಗೋಜಿಗೆ ನಾವು ಹೋಗುವುದಿಲ್ಲ. ಉಪನಿಷತ್ತುಗಳು ಆತ್ಮನ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳು ಮುಂದಿವೆ. # ಶ್ವೇತಾಶ್ವತರ ಉಪನಿಷತ್ ‘ಆತ್ಮ ಕೂದಲಿನ ಮೊನೆಯ ಹತ್ತು ಸಾವಿರದ ಒಂದು ಭಾಗದಷ್ಟು ಗಾತ್ರ. ಅದರ ಸ್ಥಾನ ಹೃದಯದ ಮಧ್ಯದಲ್ಲಿ (೫-೯) , ಅದನ್ನು ಕಣ್ಣಿನಿಂದ ಯಾರೂ ನೋಡಲಾರರು (೪-೨೦) ಎಂದು ಹೇಳಿದರೆ , ಮುಂಡಕ ಉಪನಿಷತ್ ‘ಆತ್ಮನು ಅಣು ಸ್ವರೂಪಿಯಾಗಿದ್ದು ಪರಿಪೂರ್ಣವಾದ ಬುದ್ಧಿಯು ಅದನ್ನು ಕಾಣಬಲ್ಲುದು ಈ ಆತ್ಮ ಐದು ಬಗೆಯ ವಾಯುಗಳಲ್ಲಿ (ಪ್ರಾಣ-ಆಪಾನ-ವ್ಯಾನ-ಸಮಾನ-ಉದಾನ) ತೇಲುತ್ತಿರುತ್ತದೆ. ಹೃದಯದಲ್ಲಿ ಮನೆಮಾಡಿರುತ್ತದೆ ಎಂದು ಹೇಳಿದೆ. ಉಪನಿಷತ್ತುಗಳೆಂಬ ಗೋವುಗಳಿಂದ ಸ್ವಯಂ ಭಗವಂತನೇ ಹಿಂಡಿದ ಭಗವದ್ಗೀತೆ (೧೩/೨೨ ,೨೪ ,೩೨ ,೧೫/೧೧ ,೧೫/೧೫ ,೧೮/೬೧) ಸಹ ಇದನ್ನು ಒಪ್ಪುತ್ತದೆ. ಇದನ್ನು ಶಂಕರ-ಮಧ್ವ-ರಾಮಾನುಜರು ತಮ್ಮ ಭಾಷ್ಯಗಳಲ್ಲಿ ಹಲವು ಹತ್ತಾರು ಕಡೆ ಹೇಳಿದ್ದಾರೆ. ಇದರಿಂದ ಆತ್ಮ ಭೌತಿಕ ವಸ್ತುವೆಂದು ಉಪನಿಷತ್ತಿನ ಋಷಿಗಳು ಭಾವಿಸಿರುವುದು ಸ್ಪಷ್ಟ. # ಶ್ವೇತಾಶ್ವತರ ಉಪನಿಷತ್ ಆತ್ಮ ಸೂರ್ಯನ ಬಣ್ಣವಿದೆ (೩-೮) , ಛಾಂದೋಗ್ಯ ಉಪನಿಷತ್ , ಪ್ರಕಾಶಮಾನವಾಗಿದೆ (೩-೧೪-೨) ಬೃಹದಾರಣ್ಯಕ ಉಪನಿಷತ್ ಸ್ವಯಂ ಬೆಳಗುತ್ತಿದೆ (೪-೩-೯) ಕಠೋಪನಿಷತ್ ನಿರಾಕಾರ (೩-೧೫) ಎನ್ನುತ್ತವೆ. ಉಪನಿಷತ್ತುಗಳು ಹೇಳುವ ಆತ್ಮನ ಗಾತ್ರವನ್ನು ಸ್ವಲ್ಪ ವಿವೇಚಿಸೋಣ. ಮಾನವನ ಕೂದಲು ಸರಾಸರಿ ೦.೧ ಮಿ.ಮೀ. (೧೦೦ ಮೈಕ್ರಾನ್) ಇರುತ್ತದೆ. ಆಗ ಆತ್ಮನ ಅಳತೆ ೦.೧/೧೦೦೦೦ ಮಿ.ಮೀ. (೧೦ -೫ ಮಿ.ಮೀ=೧೦-೮ ಮೀ) ಎಂದಾಗುತ್ತದೆ. ನಾವು ಈಗ ಬಳಸುತ್ತಿರುವ ನ್ಯಾನೋ (೧೦-೯ ಮೀ) ಮಾನಕ ಇದಕ್ಕಿಂತ ಹತ್ತುಪಟ್ಟು ಚಿಕ್ಕದು. ಅಷ್ಟೇ ಅಲ್ಲ ಎಲೆಕ್ಟ್ರಾನ್ ೧೦-೧೫ ಮೀ ಎಂದರೆ ಆತ್ಮನಿಗಿಂತ ಹತ್ತು ಲಕ್ಷ ಪಟ್ಟು ಚಿಕ್ಕದು. ಹಾಗಾದರೆ ಉಪನಿಷತ್ತಿನ ಈ ಆತ್ಮನನ್ನು ನಾವು ಹುಡುಕುವುದು ಅಥವಾ ಪರೋಕ್ಷವಾಗಿ ಅದರ ಪರಿಣಾಮಗಳನ್ನು ತಿಳಿಯುವುದು ಸಾಧ್ಯ ಎಂದಾಯಿತು. ಇನ್ನು ಕೆಲವು ಜಾಣರು ‘ಹುಡುಕಾಟ ಸಾಧ್ಯವಿರಬಹುದು. ಆದರೆ ಅದು ನಮಗೆ ದಕ್ಕದಿರಬಹುದು. ಏಕೆಂದರೆ ವಿಜ್ಞಾನಕ್ಕೆ ಗೊತ್ತ್ತಿರದ ಎಷ್ಟೋ ಸಂಗತಿಗಳಿವೆ. ಅವು ಋಷಿಗಳಿಗೆ ತಿಳಿದಿರಬಹುದು’ ಎಂದು ಸಮಾಧಾನ ಪಡಿಸಲು ಯತ್ನಿಸುತ್ತಾರೆ. ಇದು ಎಂತಹ ವಾದವೆಂದರೆ ಮುಂದೊಂದು ದಿನ ಅತ್ಯಾಧುನಿಕ ವೈಜ್ಞಾನಿಕ ಮಾರ್ಗಗಳ ಮೂಲಕ ಸಮಗ್ರ ತನಿಖೆ ನಡೆಸಿ ‘ಆತ್ಮ’ ಎಂದು ಕರೆಯಲಾಗುವ ಯಾವ ದ್ರವ್ಯ/ಚೈತನ್ಯ/ತತ್ತ್ವವೂ ಅಸ್ತಿತ್ವದಲ್ಲಿಲ್ಲ ಎಂದು ಖಚಿತಪಡಿಸಿದಾಗಲೂ ಇದೇ ವಾದವನ್ನು ಮುಂದೊಡ್ಡಬಹುದು. ಇಂತಹ ವಾದಗಳಿಗೆ ಕೊನೆ ಮೊದಲಿಲ್ಲ. ನಾವು ಹೊಸ ಜ್ಞಾನಗಳನ್ನು ಗಳಿಸದೇ ೩೦೦೦ ವರ್ಷಗಳ ಹಿಂದೆ ಕಾಡಿನಲ್ಲಿ ಕುಳಿತು ತಮಗೆ ತೋಚಿದ್ದನ್ನು , ಪರಿಶೀಲಿಸಲು ಆಗದಂತಹುದನ್ನು ಹೇಳಿದ ಋಷಿ ಮುನಿಗಳನ್ನು ನಂಬುತ್ತಾ , ಸ್ಪಷ್ಟವಾದ ನಿರ್ದಿಷ್ಟ ಮಾರ್ಗಗಳ ಅನ್ವೇಷಣೆಯನ್ನು ಒಪ್ಪದಿರುವುದು ಬೌದ್ಧಿಕ ದಿವಾಳಿತನದ ಪರಮಾವಧಿ. ಇನ್ನು ಆತ್ಮನ ನೆಲೆಯಾದ ಹೃದಯದ ಬಗ್ಗೆ ಮಾತನಾಡೋಣ. ಆಧುನಿಕ ವಿಜ್ಞಾನದ ದೆಸೆಯಿಂದ ನಾವು ಮಾನವ ದೇಹದ ಅಂಗಾಂಗಗಳ ಬಗ್ಗೆ ಹಿಂದೆಂದಿಗಿಂತಲು ಹೆಚ್ಚಿನ ಅರಿವನ್ನು ಸಂಪಾದಿಸಿದ್ದೇವೆ. ಹಿಂದಿದ್ದ ಎಲ್ಲ ಋಷಿ-ಮುನಿಗಳು , ಆಚಾರ್ಯರು ಹೃದಯವೇ ಭಾವನೆಗಳ , ಬುದ್ಧಿಯ , ಮನಸ್ಸಿನ ಮೂಲವೆಂದು ಭಾವಿಸಿದ್ದರು. ಆದ್ದರಿಂದ ಪ್ರತಿಯೊಬ್ಬರೂ ಹೃದಯ ಶುದ್ಧವಿರಬೇಕು , ಹೃತ್ಪೂರ್ವಕವಾಗಿ ಮಾಡಿದ್ದು ಭಗವಂತನಿಗೆ ತಲುಪುತ್ತದೆ ಇತ್ಯಾದಿಯಾಗಿ ಹೇಳುತ್ತಿದ್ದರು. ಆದರೆ ಮನಸ್ಸು-ಬುದ್ಧಿಗಳ ಕೇಂದ್ರ ಮೆದುಳೆಂದು ನಮಗೆ ಖಚಿತವಾಗಿ ಈಗ ಗೊತ್ತಾಗಿದೆ. ಭಾವಾವೇಶವಾದಾಗ , ಚೋದನಿಕೆಗಳು ಸುರಿದು ಹೃದಯ ರಕ್ತವನ್ನು ಹೆಚ್ಚಿನ ಮಟ್ಟದಲ್ಲಿ ತಳ್ಳುವಂತೆ ಮಾಡುತ್ತವೆಯೆಂದು ತಿಳಿದಿರಲಿಲ್ಲ. ಹೃದಯ ಮತ್ತು ಮೆದುಳು ಇವೆರಡರ ಚಟುವಟಿಕೆಗಳನ್ನು ಆಸ್ಪತ್ರೆಗಳಲ್ಲಿ ಈಗ ಅತ್ಯಂತ ಸಹಜ ಎನ್ನುವಂತೆ ಇ.ಸಿ.ಜಿ ಮತ್ತು ಇ.ಇ..ಜಿಗಳನ್ನು ಬಳಸಿ ಅಳೆಯಲಾಗುತ್ತಿದೆ. ಇದೆಲ್ಲ ಇರಲಿ ಆತ್ಮನ ಸ್ಥಾನ ಹೃದಯದಲ್ಲಿ ಎನ್ನುವ ಋಷಿ-ಮುನಿಗಳ ಹೇಳಿಕೆ ಎಂತಹ ತಾತ್ತ್ವಿಕ ಸಮಸ್ಯೆಗಳನ್ನು ತಂದಿತ್ತಿದೆಯೆಂದು ನೋಡೋಣ. (೧) ಒಂದು ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಒಂದು ವರ್ಷದಲ್ಲಿ ಒಂದು ಕೋಟಿಗಿಂತಲೂ ಅಧಿಕ ಜನ ನಾನಾ ಬಗೆಯ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ತೆರೆದ ಹೃದಯದ ಚಿಕಿತ್ಸೆ ಎಂದರೆ ಮೋಟಾರ್ ಪಂಪನ್ನು ರಿಪೇರಿಗೆ ಬಿಚ್ಚಿಟ್ಟಂತೆ. ಅದು ನೀರನ್ನು ಎತ್ತಲಾರದು. ಅದು ರಿಪೇರಿ ಆಗುವವರೆಗೆ ನಿಷ್ಕ್ರಿಯವಾಗಿರುತ್ತದೆ. ಅದರಂತೆ ಹೃದಯವು ಸಹ. ತೆರೆದ ಹೃದಯ ಚಿಕಿತ್ಸೆ ನಡೆಸುವಾಗ ಹೃದಯದ ಕಾರ್ಯವನ್ನು ಹೃದಯ-ಶ್ವಾಸಕೋಶ ಯಂತ್ರಕ್ಕೆ ವರ್ಗಾಯಿಸುತಾರೆ. ಶಸ್ತ್ರ ಚಿಕಿತ್ಸೆಯ ಕಾಲದಲ್ಲಿ ಹೃದಯದ ಸ್ನಾಯುಗಳು ಕೆಡದಂತೆ ಕೆಲಗಂಟೆಗಳ ಕಾಲ ಸಂರಕ್ಷಿಸಿಡುವ ತಂಪಿಸಿಕೆಯ ತಂತ್ರಗಳನ್ನು ಬಳಸುತ್ತಾರೆ. ತೆರೆದ ಹೃದಯ ಚಿಕಿತ್ಸೆ ಮಾಡುವಾಗ ಹೃದಯವನ್ನು ಬೇಕಾದಂತೆ ಕತ್ತರಿಸಿ ತೆರೆಯುತ್ತಾರೆ. ಎಂದರೆ ಆತ್ಮನ ಅವಾಸ ಸ್ಥಾನವನ್ನೇ ಬಗೆದಿರುತ್ತಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆತ್ಮ ಹೃದಯದಿಂದ ಬೇರೆಯಾಗಿರುತ್ತದೆಯೇ ಅಥವಾ ಮತ್ತೊಮ್ಮೆ ಹೃದಯವನ್ನು ಸಕ್ರಿಯಗೊಳಿಸುವವರೆಗೂ ನಿಷ್ಕ್ರಿಯಗೊಳಿಸಲ್ಪಟ್ಟ ಹೃದಯದಲ್ಲೇ ಕಾದಿರುತ್ತದೆಯೇ ? ಇಲ್ಲಿ ಇದಕ್ಕಿಂತಲೂ ಗಹನವಾದ ಮತ್ತೊಂದು ವಿಷಯವಿದೆ. ಶಸ್ತ್ರ ಚಿಕಿತ್ಸೆಯ ಯಶಸ್ಸು ಆದನ್ನು ನಡೆಸುವ ಚಿಕಿತ್ಸಕನ ನೈಪುಣ್ಯ , ಬಳಸುವ ಯಂತ್ರೋಪಕರಣಗಳು , ಆಧುನಿಕ ಸೌಲಭ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿ ಆತ್ಮನ ಯಾವ ಕರ್ಮಫಲಗಳು ಸಹ ಏನನ್ನು ಮಾಡಲಾರವು. ಆದ್ದರಿಂದಲೇ ಎಲ್ಲ ಯೋಗಸಿದ್ಧಿ ಪಡೆದ ಗುರುಗಳು ಅತ್ಯಾಧುನಿಕ ಆಸ್ಪತ್ರೆಗೆ ಓಡುತ್ತಾರೆ. ಈವರೆಗೆ ಯಾವ ಗುರು ಸಹ ತೆರೆದ ಹೃದಯದ ಚಿಕಿತ್ಸೆ ನಡೆಸುವಾಗ ಆತ್ಮನಿಗೆ ಏನಾಗಬಹುದೆಂದು ತಮ್ಮ ಧ್ಯಾನ/ತಪಸ್ಸಿದ್ಧಿಯಿಂದ ತಿಳಿಸಿಲ್ಲ. ವ್ಯಾಸ-ಯಾಜ್ಞವಲ್ಕ್ಯ ಶಂಕರ-ಮಧ್ವ-ರಾಮಾನುಜರಿಗೆ ಇಂತಹ ಪ್ರಶ್ನೆ ಎದುರಾಗಿರಲಿಲ್ಲ. ಇವರೆಲ್ಲರಿಗೆ ಹೃದಯವನ್ನು ಬಗೆಯುವುದೇ ಅನೂಹ್ಯ ಕಲ್ಪನೆಯಾಗಿದ್ದಿತು. ಮಾತು ಮಾತಿಗೆ ವೇದ , ಉಪನಿಷತ್ತು ಇತ್ಯಾದಿಗಳ ಶ್ಲೋಕಗಳನ್ನು ಉದ್ಧರಿಸಿ ಆತ್ಮ , ಪರಮಾತ್ಮ ಇತ್ಯಾದಿಯಾಗಿ ಕೂಗುವ ಪ್ರತಿಯೊಬ್ಬರಿಗೂ ನಾವು ನಿಮ್ಮ ಯೋಗ ಸಿದ್ಧಿಯ ಮೂಲಕ ಇದಕ್ಕೆ ಉತ್ತರಿಸಿರಿ ಎಂದು ಒತ್ತಾಯಿಸಬೇಕಾಗಿದೆ. (೨) ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಿಂತಲೂ ಬದಲಿ ಹೃದಯ ಕಸಿ ಇನ್ನೂ ಹೆಚ್ಚಿನ ತಾತ್ತ್ವಿಕ ಸಮಸ್ಯೆಯನ್ನು ಹುಟ್ಟುಹಾಕಿದೆ.. ಎಲ್ಲ ಜೀವಿಗಳ ಹೃದಯದಲ್ಲಿ ಆತ್ಮ ಸ್ಥಿತನಾಗಿದ್ದಾನೆ , ಆತನೇ ಎಲ್ಲ ಪ್ರಾರಬ್ದ ಕರ್ಮಗಳನ್ನು ಸಾವಿನಿಂದ ಮತ್ತೊಂದು ಹುಟ್ಟಿಗೆ ಒಯ್ಯುತ್ತಾನೆ ಎನ್ನುವ ಹಿಂದು ಧರ್ಮದ ಮೂಲ ಪರಿಕಲ್ಪನೆಗೆ ಧಕ್ಕೆ ತಂದು ಋಷಿ-ಮುನಿ-ಆಚಾರ್ಯರ ಜ್ಞಾನ/ಸಿದ್ಧಾಂತ ಮತ್ತು ಅವರ ತಿಳುವಳಿಕೆಗಳ ಬುಡವನ್ನೇ ಎಂದೋ ಕಡಿದು ಹಾಕಿದೆ. ಈಗ್ಗೆ ೪೫ ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕ್ರಿಶ್ಚಿಯನ್ ಬರ್ನಾರ್ಡ್ ಎನ್ನುವ ವೈದ್ಯ ನಡೆಸಿದ ಶಸ್ತ್ರ ಚಿಕಿತ್ಸೆಯೇ ಇದಕ್ಕೆ ಕಾರಣ . ೧೯೬೭ ರಲ್ಲಿ ಲೂಯಿ ವ್ಯಾಷನ್ಸ್ಕಿ ಎನ್ನುವಾತನ ಹೃದಯ ಸಂಪೂರ್ಣ ವಿಫಲವಾಗಿ ಸಾವಿನ ಬಾಗಿಲನ್ನು ತಟ್ಟಿದ್ದನು. ಅದೇ ವೇಳೆ ನಡೆದ ಅಪಘಾತವೊಂದರಲ್ಲಿ ಹುಡುಗಿಯೊಬ್ಬಳು ಮೃತಪಟ್ಟಿದ್ದಳು . ತಕ್ಷಣ ಕ್ರಿಶ್ಚಿಯನ್ ಬರ್ನಾರ್ಡ್ ಲೂಯಿ ವ್ಯಾಷನ್ಸ್ಕಿಯ ಹೃದಯವನ್ನೂ ತೆಗೆದು ಬಾಲಕಿಯ ಹೃದಯವನ್ನು ಜೋಡಿಸಿದನು. ಈಗ ಪ್ರತಿ ವರ್ಷ ೩೫೫೦ ಕ್ಕೂ ಹೆಚ್ಚು ಹೃದಯ ಕಸಿಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಹೃದಯ ಕಸಿಯಾದ ನಂತರ ಸರಾಸರಿ ೧೫ ವರ್ಷಗಳ ಕಾಲ ಬದುಕುತ್ತಿದ್ದಾರೆ. ೧೯೭೮ ರಲ್ಲಿ ತನ್ನ ಇಪ್ಪತ್ತನೇ ವರ್ಷದಲ್ಲಿ ಹೃದಯ ಕಸಿ ಮಾಡಿಸಿಕೊಂಡು ಬದಲಿ ಹೃದಯ ಪಡೆದ ಟೋನಿ ಹ್ಯೂಸ್^ಮನ್ ೩೧ ವರ್ಷಗಳ ಕಾಲ ಬದುಕಿದ್ದನು. ಆತ್ಮ ಹೃದಯದಲ್ಲಿ ಸಂಸ್ಥಾಪಿತ ಎಂದು ಎಲ್ಲ ಶಾಸ್ತ್ರಗಳು ಬೊಬ್ಬಿರಿದಿವೆ. ವ್ಯಕ್ತಿಯೊಬ್ಬ ಹೃದಯ ಕಸಿ ಮಾಡಿಸಿಕೊಂಡ ತಕ್ಷಣವೇ ಆತನ ಆತ್ಮ ತನ್ನ ಹಳೆಯ ಹೃದಯವನ್ನು ತೊರೆದು ತನ್ನೆಲ್ಲ ಸಂಸ್ಕಾರಗಳನ್ನು ಗಂಟು ಮೂಟೆ ಕಟ್ಟಿಕೊಂಡು ಹೊಸ ಹೃದಯಕ್ಕೆ ಸಾಗುತ್ತದೆಯೇ? ಅಥವಾ ಹುಟ್ಟಿನಿಂದ ದಕ್ಕಿದ ಹೃದಯಕ್ಕೆ ಮಾತ್ರ ಅದು ಬದ್ಧವೆ? ವಾಯುವು ಸುಗಂಧ ವಸ್ತುವಿನಿಂದ ಪರಿಮಳವನ್ನು ಒಯ್ಯುವಂತೆ ಜೀವಾತ್ಮನು ತ್ಯಜಿಸಿದ ಶರೀರದಿಂದ ಮನಸಹಿತ ಇಂದ್ರಿಯಗಳನ್ನು ಗ್ರಹಣ ಮಾಡಿ ಹೊಸದಾಗಿ ಸಿಗುವ ಶರೀರವನ್ನು ಪ್ರವೇಶಿಸುತ್ತಾನೆ. (೧೫/೮) ಎನ್ನುವ ಭಗವದ್ಗೀತೆಯ ಭಗವಂತನ ಹೇಳಿಕೆ ಎಂತಹ ಸಂದಿಗ್ದಕ್ಕೆ ಸಿಲುಕಿದೆ ಎಂದು ನೀವು ಮನಗಾಣಬಹುದು. ತೆರೆದ ಹೃದಯದ ಚಿಕಿತ್ಸೆ ಆತ್ಮ ,ಜೀವಾತ್ಮ , ಪರಮಾತ್ಮ , ಬಂಧನ , ಮುಕ್ತಿ ಇತ್ಯಾದಿ ಎಲ್ಲವನ್ನೂ ಗುಡಿಸಿ ಕಸದ ಬುಟ್ಟಿಗೆ ಎಸೆದಿದೆ. (೩) ತೀವ್ರ ಹೃದಯದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಸಿ ಮಾಡಲು ಸಾಕಷ್ಟು ಹೃದಯಗಳು ದೊರೆಯದೆ ಇರುವುದರಿಂದ , ಹೃದಯ ಕಸಿ ಕುರಿತಾಗಿ ಕಟ್ಟುನಿಟ್ಟಿನ ಕಾನೂನುಗಳನ್ನು ಸರ್ಕಾರಗಳು ಜಾರಿಗೆ ತಂದಿರುವುದರಿಂದ ಮನುಷ್ಯರ ಹೃದಯದ ಬದಲು ಹಂದಿ ಮುಂತಾದ ಸಸ್ತನಿಗಳ ಹೃದಯಗಳನ್ನು ಕಸಿ ಮಾಡುವ ಸಂಶೋಧನೆಗಳು ತೀವ್ರ ಗತಿಯಲ್ಲಿ ಸಾಗಿವೆ. ಅದಕ್ಕಿರುವ ಅಡಚಣೆಗಳು ಈಗ ಸ್ಪಷ್ಟವಾಗಿ ಗೊತ್ತಾಗಿವೆ. ಈ ಶತಮಾನದಲ್ಲಿ ಇವೆಲ್ಲವುಗಳನ್ನು ದಾಟಿ ‘ಅನ್ಯ ಸಂಕುಲ’ದ ಹೃದಯ ಕಸಿ ಸಾಧ್ಯವಾಗಲಿದೆ. ಇಷ್ಟೇ ಅಲ್ಲ ಹೃದಯಡ ಬದಲಿಗೆ ಕಾರ್ಯ ನಿರ್ವಹಿಸಬಲ್ಲ ದೇಹಾಂತರ್ಗತವಾದ ವಿಶೇಷ ಪಂಪ್^ಗಳು ಬಂದರೂ ಅಚ್ಚರಿಯೇನಿಲ್ಲ. ಆಗ ಆತ್ಮ /ಬ್ರಹ್ಮ/ಕರ್ಮ/ಜ್ಞಾನ ಇತ್ಯಾದಿ ಎಲ್ಲ ಸನಾತನ ಆಧ್ಯಾತ್ಮಿಕ ‘ಸಾಕ್ಷಾತ್ಕರ’ಗಳಿಗೆ ಶಾಶ್ವತ ಮುಕ್ತಿ ದೊರೆಯಲಿದೆ. ಯೋಗ ಯಾವುದರೊಂದಿಗೆ? ಯೋಗವೆಂದರೆ ಚಿತ್ತವೃತ್ತಿ ನಿರೋಧ. ಬಾಹ್ಯ ಸಂಗತಿಗಳು ಸದಾ ಇಂದ್ರಿಯಗಳನ್ನು ಸೆಳೆಯುತ್ತಿರುತ್ತವೆ. ಇವುಗಳೊಂದಿಗೆ ಇಂದ್ರಿಯಗಳು ಬೆರೆತು ಸುಖ-ದುಃಖ ಅನುಭವಿಸುತ್ತವೆ. ಇದರಿಂದ ಬಂಧನವುಂಟಾಗಿ ಆತ್ಮನ ನೈಜ ಸ್ವರೂಪ ಮರೆಯಾಗುತ್ತದೆ. ಇಂದ್ರಿಯಗಳನ್ನು ನಿಯಂತ್ರಿಸಿ ಆತ್ಮನ ಅಸ್ತಿತ್ವದತ್ತ ಮನಸ್ಸನ್ನು ಕೇಂದ್ರೀಕರಿಸಿ ಆತ್ಮ/ಬ್ರಹ್ಮಜ್ಞಾನ ಪಡೆಯುವುದೇ ಯೋಗದ ಗುರಿ. ಇದಕ್ಕಾಗಿ ರಾಜಯೋಗ /ಅಷ್ಟಾಂಗ ಯೋಗ ಪ್ರಸಿದ್ಧಿಯಾಗಿವೆ. ಇಂದ್ರಿಯಗಳ ಸೆಳೆತ , ಮನಸ್ಸು , ಬುದ್ಧಿಗಳನ್ನು ಯೋಗದ ಮೂಲಕ ನಿಯಂತ್ರಿಸಬೇಕೆಂದು ಎಲ್ಲರೂ ಒಕ್ಕೊರಲಿನಿಂದ ಪ್ರತಿಪಾದಿಸಿದ್ದಾರೆ. ಇಂದ್ರಿಯಗಳಿಂದಾಗಿ ಬಾಹ್ಯ ಪ್ರಚೋದನೆಗಳ ಅಲೆ ಮನಸ್ಸಿನಲ್ಲಿ ಎದ್ದು ಆತ್ಮಜ್ಞಾನ ಮರೆಯಾಗಿದೆಯೆಂದು ಭಾವಿಸಲಾಗಿದೆ. ಭಾರತದಲ್ಲಿ ಸಾವಿರಾರು ಯೋಗಿಗಳು ಆಗಿ ಹೋಗಿದ್ದಾರೆಂದು ನಂಬಲಾಗಿದೆ. ಆಧುನಿಕ ಕಾಲದಲ್ಲಿಯೂ ಯೋಗಿಗಳಿಗೇನೂ ಕೊರತೆಯಿಲ್ಲ. ಆದರೆ ಈವರೆಗೆ ಮನಸ್ಸು , ಬುದ್ಧಿಯನ್ನು ಕುರಿತಾಗಿ ಯಾವ ಸ್ಪಷ್ಟ ಸಂಗತಿಯನ್ನು ಇವರಿಂದ ತಿಳಿಸಲಾಗಿಲ್ಲ. ಮೂರು ಸಾವಿರ ವರ್ಷಗಳ ಹಿಂದೆ ಹೇಳಲಾದ ಚಿತ್ತವೃತ್ತಿ ನಿರೋಧದ ಜಾಗಟೆಯನ್ನು ಆಗಾಗ ಗಟ್ಟಿಯಾಗಿ ಬಾರಿಸುತ್ತಿರುತ್ತಾರೆ. ಧ್ಯಾನದ ಫಲ ಅನುಭವವೇದ್ಯವೇ ಹೊರತು ವಿವರಣ ಸಾಧ್ಯವಲ್ಲ ಎಂದು ಸಾರಾಸಗಟಾದ ಹೇಳಿಕೆ ನೀಡುತ್ತಾರೆ. ನಮಗೆ ಅವರಿಗೆ ದಕ್ಕಿದ ಅಂತಿಮ ಬ್ರಹ್ಮಜ್ಞಾನವನ್ನು ತಿಳಿಸುವುದೇನೂ ಬೇಡ. ಆದರೆ ಅದಕ್ಕಿಂತ ಬಹು ಕೆಳಮಟ್ಟದ ಮನಸ್ಸಿನ ಸ್ವರೂಪವನ್ನು ವಿವರಿಸಬಹುದಲ್ಲ. ಮನಸ್ಸಿನ ಉಗಮ ಅದಕ್ಕೂ ಬುದ್ಧಿಗೂ ಇರುವ ಸಂಬಂಧವನ್ನು ಸ್ಪಷ್ಟೀಕರಿಸಬಹುದಲ್ಲ. ಇಂದ್ರಿಯಗಳೊಂದಿಗೆ ಮನಸ್ಸು ಸೇರಿ ಆಶೆಗಳು ಹುಟ್ಟುತ್ತವೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಅದು ಹೇಗೆ ಮತ್ತು ಏಕೆಂದು ಯಾರೂ ಹೇಳುವುದಿಲ್ಲ. ಇಲ್ಲಿಯವರೆಗೆ ಯಾವ ಯೋಗಿಗೂ ಸಾಮಾನ್ಯವಾಗಿ ಕಾಣಿಸುವ ಮನೋವಿಕಾರಗಳಿಗೆ ಕಾರಣ , ಅವುಗಳ ಪರಿಹಾರದ ಬಗ್ಗೆ ಏನಾದರೂ ಖಚಿತವಾಗಿ ತಿಳಿದಿರುವುದು ಗೊತ್ತಿಲ್ಲ. ಪಾಶ್ಚಾತ್ಯರು ವಿಶ್ವದ ಮೂಲ ಭೌತಿಕ ಸ್ವರೂಪವನ್ನು ಯಶಸ್ವಿಯಾಗಿ ಹೊರಗೆಡವುತ್ತಿದ್ದಾರೆ. ಆವರು ಹಾಕಿದ ವೈಜ್ಞಾನಿಕ ಮಾರ್ಗದಲ್ಲಿ ಸಾಗುತ್ತಿರುವ ಭಾರತೀಯರು ಅದರಲ್ಲಿ ಗಣನೀಯ ಯಶಸ್ಸನ್ನು ಸಾದಿಸಿರುವುದನ್ನು ಮನಗಾಣಬೇಕು. ಆದರೆ ಇವೆಲ್ಲವುಗಳನ್ನು ಅಪರಾ ವಿದ್ಯೆ , ಯೋಗ ಪರಾವಿದ್ಯೆಯತ್ತ ಒಯ್ಯುತ್ತದೆ ಎಂದು ಹೆಜ್ಜೆಹೆಜ್ಜೆಗೆ ಹೇಳುವ ನಾವು ಜಗತ್ತಿಗೆ ಯಾವ ಖಚಿತ , ನಿರ್ದಿಷ್ಟ ಜ್ಞಾನ ನೀಡಿದ್ದೇವೆ ಎನ್ನುವ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಮನಸ್ಸು , ಬುದ್ಧಿಗಳನ್ನು ಸಮಗ್ರವಾಗಿ ಅರಿತ , ಅವುಗಳನ್ನು ದಾಟಿ ಆತ್ಮ ಸಾಕ್ಷಾತ್ಕಾರ ಪಡೆದ , ಅಂತರಂಗದ ಆಳವನ್ನು ಬಲ್ಲ ಯೋಗಿಗಳಲ್ಲಿ ಯಾರಾದರೊಬ್ಬರು ಮನುಷ್ಯನ ಅನುಭವಗಳು ಎಲ್ಲಿವೆ ? ನೆನಪು ಹೇಗೆ ಮೂಡುತ್ತದೆ ? ಮನಸ್ಸು ಮತ್ತು ಬುದ್ದಿಯ ಚಟುವಟಿಕೆಗಳಲ್ಲಿ ಮೆದುಳಿನ ಭೌತಿಕ ಕ್ರಿಯೆಯ ಪಾಲೆಷ್ಟು ? ಅಭೌತಿಕ ಕಾರಣಗಳ ಕೊಡುಗೆಯೇನು ಎಂದು ಸ್ಪಷ್ಟವಾಗಿ ತಿಳಿಸಿ ಮಾನವ ಜನಾಂಗಕ್ಕೆ ಏಕೆ ಉಪಕಾರ ಮಾಡಬಾರದು. ಭಾರತದ ಎಲ್ಲ ದರ್ಶನಗಳು ಇಂದ್ರಿಯ ಸಂಯೋಗದಿಂದ ಮಾನಸಿಕ ಕ್ಷೋಭೆಯುಂಟಾಗಿ ನಿಜವಾದ ಆತ್ಮಜ್ಞಾನ ಮರೆಯಾಗಿದೆಯೆಂದು ಹೇಳುತ್ತವೆ. ನಮ್ಮ ಅನುಭವ ತಿಳಿಸುವಂತೆ ಕಣ್ಣಿನ ಮೂಲಕ ನಮಗೆ ಅತಿ ಹೆಚ್ಚು ಪ್ರಮಾಣದ ಬಾಹ್ಯ ಜ್ಞಾನ ದಕ್ಕುತ್ತಿದೆ. ಹಾಗಾದರೆ ಹುಟ್ಟು ಕುರುಡನಿಗೆ ಕಣ್ಣಿನ ಮೂಲಕ ದಕ್ಕುವ ಆಲೋಚನೆಗಳ ಕೊರತೆ ಇರುವುದರಿಂದ ಸಾಮಾನ್ಯರಿಗಿಂತ ಆತನಿಗೆ ಮನಸ್ಸನ್ನು ನಿಯಂತ್ರಿಸುವುದು ಸುಲಭವೇ? ಅಥವಾ ಹುಟ್ಟು ಕುರುಡ , ಕಿವುಡ , ಮೂಗನಿಗೆ ಇಂದ್ರಿಯ ಸಂಯೋಗದಿಂದ ಮನಸ್ಸಿನಲ್ಲಿ ಏಳಬಹುದಾದ ಬಹುತೇಕ ಆಲೋಚನೆಗಳ ಅಲೆಗಳು ಇಲ್ಲದಿರುವುದರಿಂದ , ಆತ ಬಹು ಸುಲಭವಾಗಿ ಮನಸ್ಸನ್ನು ನಿಯಂತ್ರಿಸಿ , ಶೀಘ್ರವಾಗಿ ಆತ್ಮಜ್ಞಾನ ಪಡೆಯಬಹುದೇ ? ಇಂತಹ ವಸ್ತುನಿಷ್ಠ ಪ್ರಶ್ನೆಗಳಿಗೆ ಉತ್ತರಗಳನ್ನೂ ಯಾರು ಕೊಡಬಲ್ಲರು. ಕೇವಲ ಕಪಿಲ-ಪತಂಲಿಗಳು ಅಲ್ಲಿ ಹಾಗೆ ಹೇಳಿದ್ದಾರೆ , ಇಲ್ಲಿ ಹೀಗೆ ವಿವರಿಸಿದ್ದಾರೆ ಎಂದು ಸಂಸ್ಕೃತ ಶ್ಲೋಕಗಳನ್ನು ಉದ್ದರಿಸಿ ಬಡಬಡಿಸಿದರೆ ಬರುವ ಪ್ರಯೋಜನವಾದರೂ ಏನು? ಪತಂಜಲಿ ಯೋಗ ಸೂತ್ರ ಪತಂಜಲಿಯ ‘ಯೋಗಸೂತ್ರ’ ಯೋಗ ಮಾರ್ಗವನ್ನು ಕುರಿತಾದಂತಹ ಅಧಿಕೃತ ಮಾರ್ಗ ಗ್ರಂಥ. ಇದು ‘ಯೋಗಃ ಚಿತ್ತ ವೃತ್ತಿ ನಿರೋಧ : (೧.೨) ಯೋಗವೆಂದರೆ ಮನಸ್ಸಿನ ಚಟುವಟಿಕೆಗಳನ್ನು ನಿಯಂತ್ರಿಸುವ ಮಾರ್ಗ ಎಂದು ಪ್ರಾರಂಭವಾಗುತ್ತದೆ. ಇದರಲ್ಲಿ ನಮಗೆ ಎಲ್ಲಿಯೂ ಚಿತ್ತ ಎಂದರೇನು , ಅದಕ್ಕೂ ಬುದ್ಧಿಗೂ ಇರುವ ಸಂಬಂಧವೇನು , ಮನೋವಿಕಾರಗಳಾದಾಗ ಚಿತ್ತಕ್ಕೆ ಏನಾಗಿರುತ್ತದೆ ಎನ್ನುವ ಸಂಗತಿಗಳ ವಿವರಗಳು ದಕ್ಕುವುದಿಲ್ಲ. ಎಲ್ಲ ಧಾರ್ಮಿಕ ಗ್ರಂಥಗಳು ಇಂದ್ರಿಯಗಳ ಸಂಯೋಗದಿಂದ ಮಾನಸಿಕ ಚಟುವಟಿಕೆಗಳು ಮೂಡುತ್ತವೆ ಎಂದು ಹೇಳಿ ಸುಮ್ಮನಾಗುತ್ತವೆ. ಮನುಷ್ಯರಂತೆಯೇ ಪ್ರಾಣಿಗಳು ಸಹ ಹಸಿವು-ಬಾಯಾರಿಕೆ –ನಿದ್ರೆ –ಭಯ-ಮೈಥುನದಿಂದ ಹಿಡಿದಿಡಲ್ಪಟ್ಟಿವೆ. ಪ್ರಾಣಿ , ಪಕ್ಷಿಗಳಿಗೆ ಮನಸ್ಸು ಇರುವುದೇ , ಇದ್ದುದೇ ಆದರೆ ಅದು ಮನುಷ್ಯನ ಮನಸ್ಸಿಗಿಂತ ಎಷ್ಟು ಮತ್ತು ಹೇಗೆ ಭಿನ್ನ , ಅವಕ್ಕೂ ಆಲೋಚನೆಯ ತರಂಗಗಳು ಏಳುತ್ತವೆಯೇ ಎನ್ನುವ ಹಲವಾರು ಸಂಶಯದ ಪ್ರಶ್ನೆಗಳಿಗೆ ಅವಕಾಶವಿಲ್ಲ. ಯೋಗಸೂತ್ರಗಳಲ್ಲಿ (೧) ಪ್ರಮಾಣ-ಅರಿವು (೨) ವಿಪರ್ಯಯ-ತಪ್ಪು ತಿಳುವಳಿಕೆ (೩) ವಿಕಲ್ಪ-ಹುಚ್ಚು, ಭ್ರಮೆ (೪) ನಿದ್ರೆ-ಜಡತೆ (೫) ನೆನಪು ಎನ್ನುವ ಐದು ಬಗೆಯ ಮಾನಸಿಕ ಚಟುವಟಿಕೆಗಳನ್ನು ಗುರುತಿಸಲಾಗಿದೆ. ಯೋಗಶಾಸ್ತ್ರ ಹೇಳುವ ಈ ಚಟುವಟಿಕೆಗಳು ಸಾಮಾನ್ಯ ವೀಕ್ಷಣೆಯಿಂದ ತಿಳಿದು ಬರುವಂತಹುವೇ ಹೊರತು ಇವುಗಳ ಬಗ್ಗೆ ನಿರ್ದಿಷ್ಟ ಖಚಿತ ಜ್ಞಾನ ದಕ್ಕುವುದಿಲ್ಲ. ಯಮ-ನಿಯಮ-ಪ್ರಾಣಾಯಾಯ-ಪ್ರತ್ಯಾಹಾರ-ಧ್ಯಾನ-ಧಾರಣ ಎನ್ನುವ ಏಳು ಹಂತಗಳ ಮೂಲಕ ಎಂಟನೇ ಹಂತವಾದ ಸಮಾಧಿಯನ್ನು ಗಳಿಸಿಕೊಂಡಾಗ ಇವೆಲ್ಲ ಮರೆಯಾಗುವುವು ಎಂದು ಹೇಳಿದೆ. ಆದರೆ ಇಂತಹ ವಿಭಿನ್ನ ಚಟುವಟಿಕೆಗಳಿಗೆ ಮನಸ್ಸಿನ ಸ್ವರೂಪ ಕಾರಣವೇ , ಇಂದ್ರಿಯಗಳ ವ್ಯತಿಕರಣ ಕಾರಣವೇ ಎನ್ನುವುದರ ಬಗ್ಗೆ ಯಾವುದೇ ಕುರುಹುಗಳು ಸಿಗುವುದಿಲ್ಲ. ಮನುಷ್ಯನನ್ನು ಹುಟ್ಟಿನಿಂದ ಸಾಯುವವರೆಗೆ ಎಡೆಬಿಡದೆ ಹಿಂಬಾಲಿಸುವ ಆಧುನಿಕ ಮನಶಾಸ್ತ್ರದ ಮುಖ್ಯಶಾಖೆಯಾದ ನಿದ್ರಾಸ್ಥಿತಿಯಲ್ಲಿನ ಕನಸಿನ ಬಗ್ಗೆ ಯೋಗಸೂತ್ರಗಳಲ್ಲಿ ಜಾಗವಿಲ್ಲ. ಮನಸ್ಸಿನ ಹತೋಟಿಯ ಮೂಲಕ ಆತ್ಮಜ್ಞಾನವನ್ನು ಸಾಧಿಸುವುದನ್ನು ತಿಳಿಸಲು ಹೊರಟಿರುವ ಶಾಸ್ತ್ರ ಮಲಗಿದಾಗ ಕನಸುಗಳು ಮೂಡುವಂಥ ಸೋಜಿಗದ ಮಾನಸಿಕ ಚಟುವಟಿಕೆಯ ಪ್ರಶ್ನೆಯನ್ನೇ ಪರಿಗಣಿಸದಿರುವುದೇ ಸೋಜಿಗ. (ಆವರಣದಲ್ಲಿರುವ ಸಂಖ್ಯೆ ಪತಂಜಲಿ ಯೋಗಸೂತ್ರದ ಅಧ್ಯಾಯ ಮತ್ತು ಶ್ಲೋಕಗಳನ್ನು ಸೂಚಿಸುತ್ತವೆ . ಉದಾ. ೩.೪) ಮನಸ್ಸು ಅಸ್ತಿತ್ವ ಕಳೆದುಕೊಂಡು ಕೊನೆಯ ತತ್ತ್ವದೊಂದಿಗೆ ಒಂದಾಗುವುದೇ ಸಮಾಧಿ.(೩.೩) ಧ್ಯಾನ-ಧಾರಣ-ಸಮಾಧಿಗಳ ಒಗ್ಗೂಡಿಕೆಯೇ ಸಂಯಮ.(೩.೪) , ಸಂಯಮದಿಂದ ಹಲವಾರು ಸಿದ್ಧಿಗಳು ದಕ್ಕುವುವಂತೆ. ಅವುಗಳಲ್ಲಿ ಮುಖ್ಯವಾದುವು ಮುಂದಿವೆ. (೩.೧೭ -೩.೪೯)\ (೧) ಎಲ್ಲ ಶಬ್ದ , ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ (೨) ಹಿಂದಿನ ಜನ್ಮಗಳ ನೆನಪು ಮತ್ತು ಕಾರ್ಯ-ಕಾರಣದ ಅರಿವು (೩) ಬೇರೆಯವರ ಮನಸ್ಸಿನಲ್ಲಿ ಇರುವುದನ್ನು ತಿಳಿಯುವುದು (೪) ಕಣ್ಣಿಗೆ ಕಾಣದೆ ಮರೆಯಾಗುವುದು (೫) ಇಂದ್ರಿಯಗಳನ್ನು ಮೀರುವುದು (೬) ಸಾವನ್ನು ಮೊದಲೇ ತಿಳಿಯುವುದು (೭) ಆನೆಯ ಬಲ ಪಡೆಯುವುದು (೮) ದೂರದ ಘಟನೆಗಳ ನಿಯಂತ್ರಣ (೯) ಸೂಕ್ಷ್ಮಮಟ್ಟದ ಜ್ಞಾನ (೧೦) ಚಂದ್ರ-ತಾರೆಗಳ ಜ್ಞಾನ (೧೧) ತಾರೆಗಳ ಆಂತರಿಕ ರಚನೆಯ ಜ್ಞಾನ (೧೨) ಋಷಿ-ಮುನಿಗಳ ದರ್ಶನ (೧೩) ಕೂರ್ಮ ನಾಡಿಯ ಮೂಲಕ ದೇಹದ ಸ್ಥಿರತೆ (೧೪) ಎಲ್ಲದರ ಜ್ಞಾನ (೧೫) ಮಾನಸಿಕ ವಿಶ್ವದ ಜ್ಞಾನ (೧೬) ಶುದ್ಧ ಪ್ರಜ್ಞೆಯ ಜ್ಞಾನ (೧೭) ದಿವ್ಯಾನುಭವಗಳು (೧೮) ದೇಹಾಂತರ ಚಲನೆ (೧೯) ಹಗುರವಾಗುವುದು (೨೦) ಪ್ರತಿಭಾ ಜ್ಞಾನ (೨೧) ಅಣುವಿನಂತೆ ಸೂಕ್ಷ್ಮವಾಗುವುದು (೨೨) ದೇಶವನ್ನು ವ್ಯಾಪಿಸುವಂತೆ ಹಿಗ್ಗುವುದು (೨೩) ಸಂಪೂರ್ಣ ಹಗುರವಾಗುವುದು (೨೪) ಭಾರಿ ತೂಕವಾಗುವುದು (೨೫) ಬೇಕಾದುದನ್ನು ಪಡೆಯುವುದು (೨೬) ಬಯಸಿದಂತೆ ಆಗುವುದು (೨೭) ವಿಶ್ವದ ಒಡೆಯನಾಗುವುದು (೨೮) ವಿಶ್ವವನ್ನು ವಶಪಡಿಸಿಕೊಳ್ಳುವುದು (೨೯) ದಿವ್ಯ ಕೇಳಿಕೆ (೩೦) ಅಜ್ಞಾನದ ನಾಶ (೩೧) ದೇಹದ ಸಮಗ್ರತೆ (೩೨) ಇಂದ್ರಿಯಗಳ ಗರಿಷ್ಟ ಕ್ರಿಯಾಶೀಲತೆ (೩೩) ಕಾರ್ಯ-ಕಾರಣಗಳ ಮೂಲದ ಹತೋಟಿ ಹೀಗೆ ಸಮಾಧಿ ಸ್ಥಿತಿ ತಲುಪಿದ ನಂತರ ಮೇಲೆ ಪಟ್ಟಿ ಮಾಡಿದ ೩೩ ಕ್ಕಿಂತಲೂ ಹೆಚ್ಚಿನ ಸಿದ್ಧಿಗಳು ದಕ್ಕುತ್ತವೆಯೆಂದು ಮಹರ್ಷಿ ಪತಂಜಲಿ ಹೇಳುತ್ತಾರೆ. ೨೧ ನೇ ಶತಮಾನದಲ್ಲಿರುವ ನಾವು ಈ ಶ್ಲೋಕಗಳನ್ನು ಉದ್ದರಿಸಿ ಭಾರತೀಯರ ಸಾಧನೆಗಳ ಗಾನಗಳನ್ನು ಕೇಳಿ ಆನಂದಿಸುತ್ತೇವೆ. ಮೇಲಿನ ಪಟ್ಟಿ ನೋಡಿದರೆ ಅಪರಾ ವಿದ್ಯೆಯ ಎಲ್ಲ ಜ್ಞಾನವು ನಮಗೀಗ ದಕ್ಕಿದೆಯೆಂದೇ ಅರ್ಥ . ಏಕೆಂದರೆ ನಮ್ಮ ದೇಶದಲ್ಲಿ ಅದೆಷ್ಟು ಯೋಗಿ, ಸಿದ್ಧಪುರುಷರು ಆಗಿ ಹೋಗಿಲ್ಲ ! ಯೋಗಿಗಳ ಮೂಲಕ ನಮಗೆ ಎಲ್ಲ ರಹಸ್ಯ ತಿಳಿದಿದೆ . ನಮಗೆ ವಿಜ್ಞಾನದ ಪರಿಚಯವೇಕೆ ? ವಿಜ್ಞಾನ ಸಂಘ , ಸಂಸ್ಥೆಗಳು ಏಕೆ ? ಒಂದಿಬ್ಬರು ಯೋಗಿಗಳನ್ನು ಕರೆಸಿದರೆ ಸಾಕು , ಕೆಲವೇ ಗಂಟೆಗಳಲ್ಲಿ ನಾವು ಪಾಶ್ಚಾತ್ಯರ ಈವರೆಗಿನ , ಮುಂದೆ ಬರಲಿರುವ ಸಮಸ್ತ ಜ್ಞಾನದಒಡೆಯರಾಗಿರುತ್ತೇವೆ. ಯೋಗ ಸಿದ್ಧಿಯಿಂದ ಎಲ್ಲ ಶಬ್ದ (ಪ್ರಾಣಿ , ಪಕ್ಷಿಗಳದ್ದು ಸೇರಿ) ಎಲ್ಲ ಭಾಷೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ದಕ್ಕುವುದೆಂದು ತಿಳಿಸಲಾಗಿದೆ. ಆದರೆ ವಾಸ್ತವ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಉತ್ತರ ಭಾರತದ ಪ್ರಚಂಡ ಯೋಗಿಗಳಿಗೆ ಕನ್ನಡ , ತೆಲುಗು , ತಮಿಳುಗಳು ಗ್ರೀಕ್ , ಲ್ಯಾಟಿನ್^ಗಳಿಗಿಂತಲೂ ಪರಕೀಯ. ಎಲ್ಲ ಭಾಷೆಗಳು ಒತ್ತಟ್ಟಿಗಿರಲಿ ಕನ್ನಡ ಯೋಗಿಗೆ ಸೋದರಿ ಭಾಷೆಗಳಾದ ತೆಲುಗು , ತಮಿಳುಗಳು ಅಷ್ಟೇ ಏಕೆ ಕರ್ನಾಟಕದಲ್ಲೇ ಇರುವ ತುಳು , ಕೊಡವ ಸಹ ಬರುವುದಿಲ್ಲ. ಎಲ್ಲಾದರೂ ಯೌಗಿಕ ಸಿದ್ಧಿಯಲ್ಲಿ ಊನವಾಯಿತೆ? ಸಿದ್ಧಿ ಪಡೆದ ಯೋಗಿಗೆ ಚಂದ್ರ , ತಾರೆಗಳ ಜ್ಞಾನ ಲಭ್ಯವಂತೆ. ಅಧ್ಬುತ . ಆದರೆ ಸೂರ್ಯ ಉರಿಯುವ ಗೋಳ , ಚಂದ್ರ ಬರಡು ನೆಲ ಎಂದಾಗಲಿ , ಅದು ಭೂಮಿಯಿಂದ ಇರುವ ದೂರವನ್ನಾಗಲಿ , ಭೂಮಿಯ ಅಕ್ಷದ ಓರೆಯಾಗಿದೆ ಎಂದಾಗಲಿ ,ಜಲಜನಕ , ಹೀಲಿಯಂ ವಿಶ್ವಾದ್ಯಂತ ವ್ಯಾಪಿಸಿವೆ ಎಂದಾಗಲಿ ಯಾವ ಯೋಗಿಯೂ ತಿಳಿಸಲಿಲ್ಲ. ರೋಮಾಂಚನಗೊಳಿಸುವಂತೆ ಅಣುವಾಗುವುದು , ಹಿರಿದಾಗುವುದು ಯೋಗಿಗೆ ಗೊತ್ತು . ಆದರೂ ಪರಮಾಣುಗಳ ಬಗ್ಗೆ ಅದರ ಉಪಕಣಗಳ ಬಗ್ಗೆ ಯಾವ ಯೋಗಿಯೂ ಏನನೂ ಹೇಳಲಿಲ್ಲ. ಯೋಗಿ ಭಾರಿ ತೂಕವಾಗಬಲ್ಲನಂತೆ ಕಪ್ಪು ಕುಳಿಯಂತೆ (ಬ್ಲ್ಯಾಕ್ ಹೋಲ್) ಆದರೂ ಆತನಿಗೆ ವಸ್ತುಗಳ ಸಾಂದ್ರತೆಯ ಜ್ಞಾನವಿರಲಿಲ್ಲ. ಯೋಗಿ ಕಾರ್ಯ-ಕಾರಣಗಳನ್ನು ಹತೋಟಿಯಲ್ಲಿ ಇಡಬಲ್ಲನಂತೆ ಆದರೂ ಆತನಿಗೆ ತನ್ನನ್ನು ಭೂಮಿಗೆ ಬಂಧಿಸಿರುವ ಗುರುತ್ವದ ಬಗ್ಗೆ ಗೊತ್ತಿಲ್ಲ. ಯೌಗಿಕ ಮಾರ್ಗದಿಂದ ದಕ್ಕುತ್ತವೆ ಎಂದು ಹೇಳಲಾಗುವ ಮೇಲಿನ ಎಲ್ಲ ಸಿದ್ಧಿಗಳು ನಮಗೆ ಗೊತ್ತಿರುವ ಬಹುತೇಕ ಎಲ್ಲ ಭೌತಿಕ ನಿಯಮಗಳನ್ನು ಮೀರುತ್ತವೆ. ಇವನ್ನು ನಾವು ಹೇಗೆ ನಂಬಬೇಕು. ಯಾರಾದರೂ ಒಬ್ಬ ಯೋಗಿ ನಮಗೆ ನಂಬಿಕೆ ಬರುವಂತೆ ಸಾರ್ವಜನಿಕವಾಗಿ ಯಾವುದಾದರೊಂದು ಸಿದ್ಧಿಯನ್ನು ಪ್ರದರ್ಶಿಸಿ ಅದರ ಕುರಿತಾದ ಅನುಮಾನಗಳಿಗೆ ಅಂತಿಮ ತೆರೆ ಎಳೆಯಬಾರದೇಕೆ ? ಕೆಲ ವರ್ಷಗಳ ಹಿಂದೆ ಒಬ್ಬ ಸ್ವಾಮಿಗಳನ್ನು ನನ್ನ ಸ್ನೇಹಿತರೊಬ್ಬರು ಪರಿಚಯಿಸುತ್ತ ಅವರಿಗೆ ಯೋಗ ಸಿದ್ಧಿಯಾಗಿದೆ ಎಂದು ಹೇಳಿದರು. ತಕ್ಷಣ ನಾನು ನಂಬುವುದಿಲ್ಲ. ಹಾಗೆ ನಂಬಬೇಕಾದರೆ ವಿಶ್ವಾಸಾರ್ಹವಾಗುವಂತಹ ಏನನ್ನಾದರೂ ತೋರಿಸಬೇಕು ಎಂದೆ. ತಕ್ಷಣ ಕಸಿವಿಸಿಗೊಂಡ ಸ್ವಾಮಿಗಳು ಹಾಗೆಲ್ಲ ಕಂಡವರೆದುರು ಯೌಗಿಕ ಸಿದ್ಧಿಗಳನ್ನು ಪ್ರದರ್ಶಿಸಬಾರದು ಎಂದು ಉತ್ತರ ನೀಡಿದರು. ಅದಕ್ಕೆ ಪ್ರತಿಯಾಗಿ ನಾನು ‘ ನನಗೆ ಬ್ರಹ್ಮ ಜ್ಞಾನವಾಗಿದೆ. ಆದರೆ ಅದನ್ನು ಮನುಷ್ಯರ ಮುಂದೆ ಸಾಬೀತು ಪಡಿಸಬಾರದು ಎಂದೆ. ಸುಖ-ದುಃಖ , ಸೋಲು-ಗೆಲುವು , ಮಾನ-ಅಪಮಾನಗಳನ್ನು ಗೆದ್ದ ಯೋಗಿಗಳು ಇದಕ್ಕೆ ಮರು ಉತ್ತರ ನೀಡದೆ ಸಿಟ್ಟಿನಲ್ಲಿ ದೂರ ಸಾಗಿದರು. ಇದು ಏನನ್ನು ಸೂಚಿಸುತ್ತದೆಯೆಂದರೆ ಯೋಗ ಸಿದ್ಧಿಗಳು ಯೋಗಿಗೆ ಆತನ ವೈಯುಕ್ತಿಕ ಅನುಭವಕ್ಕೆ ಮಾತ್ರ ಸೀಮಿತ. ಆತನ ಅನುಭವಗಳಿಂದ ನಮಗೆ ವಿಶ್ವವನ್ನು ಕುರಿತಾಗಿ ಯಾವುದೇ ಜ್ಞಾನ ದಕ್ಕುವುದಿಲ್ಲ. ಆದರೂ ಆತನಿಗೆ ಎಲ್ಲ ಜ್ಞಾನ ದಕ್ಕಿದೆಯೆಂದು ನಾವು ಒಪ್ಪಬೇಕು. ಇನ್ನು ಕುಂಡಲಿನಿ ಶಕ್ತಿ ಇತ್ಯಾದಿಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ಮಾನವನ ಹಾಗೂ ಇತರ ಪ್ರಾಣಿಗಳ ದೇಹವನ್ನು ಛೇದಿಸಿ ಲಕ್ಷಾಂತರ ಜನ ವೈದ್ಯರು , ಜೀವವಿಜ್ಞಾನಿಗಳು ಅಧ್ಯಯನ ನಡಿಸಿದ್ದಾರೆ. ಗುಣ ಲಕ್ಷಣಗಳ ಮೇಲೆ ಜಗತ್ತಿನಲ್ಲಿರುವ ಬಹುತೇಕ ಎಲ್ಲ ಪ್ರಾಣಿ , ಪಕ್ಷಿ , ಸಸ್ಯಗಳ ಬಗ್ಗೆ ಸಾಕಷ್ಟು ತಿಳಿದಿದ್ದಾರೆ. ಜೀವಿಗಳ ಅಂಗರಚನೆ ಮತ್ತು ಅಂಗಕ್ರಿಯಾಶಾಸ್ತ್ರ ಅಧ್ಬುತವಾಗಿ ವಿಕಸಿಸಿವೆ. ಜೀವಿಗಳ ನರವ್ಯೂಹಾಂಗ ,ಅವುಗಳ ಕ್ರಿಯಾಶೀಲತೆ ,ಇಂದ್ರಿಯ ಜ್ಞಾನ ಮೆದುಳಿನಲ್ಲಿ ಪರಿಷ್ಕಾರವಾಗುವ ರೀತಿ ನೀತಿಗಳನ್ನು ಬಲ್ಲರು. ನರಜಾಲದ ಹತೋಟಿ ಕೇಂದ್ರವಾದ ಮೆದುಳಿನ ಆಳಕ್ಕೆ ಇಳಿದು ಅನೂಹ್ಯ ಸಂಗತಿಗಳನ್ನು ತಿಳಿಸಿದ್ದಾರೆ. ನಾನಾ ಉಪಕರಣಗಳನ್ನು ಬಳಸಿ ನಾಡಿಗಳ , ಮೆದುಳಿನ ಕ್ರಿಯಾಶೀಲತೆ ಕಂಡಿದ್ದಾರೆ. ಆದರೆ ಯಾರಿಗೂ ಮೂಲಾಧಾರ ಚಕ್ರ , ಇಡಾ-ಪಿಂಗಳ-ಸುಷುಮ್ನ ನಾಡಿಗಳು , ಮೆದುಳಿನಲ್ಲಿರುವ ಬ್ರಹ್ಮ ರಂಧ್ರ ಸಿಕ್ಕಿಲ್ಲ. ಅದು ಯೋಗಿಗೆ ಮಾತ್ರ ಗೊತ್ತು. ಅದು ಭಾರತ ದೇಶದ ಯೋಗಿಗಳಿಗೆ ಮಾತ್ರ. ಎಂತಹ ಅದ್ಭುತ ! ವಿಶ್ವ ಎಂತಹುದು ? ವಿಶ್ವದ ಕಲ್ಪನೆಯಲ್ಲಿ ಋಷಿಗಳ ಜ್ಞಾನ ಭೂ-ಭುವ:-ಸುವಗಳಾಚೆ , ಸೂರ್ಯ,ಚಂದ್ರರನ್ನು ದಾಟಿ ಸಾಗಿರಲಿಲ್ಲ. ಅಗಾಧ ವಿಶ್ವದಲ್ಲಿ ಅಸಂಖ್ಯಾತ ಬ್ರಹ್ಮಾಂಡಗಳಿರುವವೆಂದು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಈಗ ನಮಗೆ ವಿಶ್ವದ ಅಗಾಧ ಹರವು , ಅದರ ಅಸಂಖ್ಯಾತ ಬ್ರಹ್ಮಾಂಡಗಳು , ಅವುಗಳೆಲ್ಲವನ್ನೂ ಬಿಗಿದು ಬಂಧಿಸಿರುವ ನಿಯಮಗಳು ಒಂದೊಂದಾಗಿ ತಿಳಿದುಬರುತ್ತಿವೆ. ಇಂತಹ ಅದ್ಭುತ ಜ್ಞಾನ ಹಿಂದಿನ ಯಾವ ಗೋತ್ರದ ಯಾವ ಋಷಿಗೂ ಇರಲಿಲ್ಲ. ಇನ್ನು ಶಂಕರಾಚಾರ್ಯರ ಅದ್ವೈತ ಬ್ರಹ್ಮದ ಬಗೆಗೆ ಕೂಗುವ ಮಂದಿ ಅದು ಕೇವಲ ತಾತ್ತ್ವಿಕ ಊಹೆ ಎಂದು ತಿಳಿಯುವಲ್ಲಿ ವಿಫಲರಾಗಿದ್ದಾರೆ. ಶಂಕರಾಚಾರ್ಯರು ಹೇಳುವ ಜಗತ್ತಿನ ಭೌತಿಕ ತತ್ತ್ವಗಳಾಚೆಯ ನಿತ್ಯ , ಸತ್ಯ ಬ್ರಹ್ಮ ಸಾಕ್ಷಾತ್ಕಾರ ಭೌತಾತೀತ. ಅದು ಧ್ಯಾನ , ಚಿಂತನೆ, ಯೌಗಿಕ ಸಾಧನೆಗಳಿಂದ ಮಾತ್ರ ಸಾಧ್ಯ. ಈ ಬ್ರಹ್ಮ ಹೇಗೆ ಸಿಗಲಾರದ ತತ್ತ್ವವೆಂದರೆ ಏನೇ ಸಿಕ್ಕಿದರೂ ತಿಳಿದರೂ ನೀವು ಅದನ್ನು ಅದಲ್ಲ , ಇದಲ್ಲ ಎನ್ನಬೇಕು. ತಮಗೆ ಖಚಿತವಾಗಿ ತಿಳಿಯದುದನ್ನು ಹೇಳಲು ಇದಕ್ಕಿಂತ ಉತ್ತಮವಾದ ತಪ್ಪಿಸಿಕೊಳ್ಳುವ ಮಾರ್ಗ ಇನ್ನೊಂದಿಲ್ಲ. ಏಕೆಂದರೆ ಬ್ರಹ್ಮನ್ ಆಕಾಶ , ಚೈತನ್ಯ , ದ್ರವ್ಯ ಹೀಗೆ ನೀವು ಏನೇ ಹೇಳಿದರೂ ತಕ್ಷಣವೇ ಅದು ಎಲ್ಲಿಂದ , ಹೇಗೆ , ಏಕೆ ಬಂದಿತು ,ಅದು ಏತಕ್ಕೆ ಹಾಗಿದೆ ? ಎನ್ನುವ ಪ್ರಶ್ನೆಗಳು ಎದುರಾಗುತ್ತದೆ. ಅಂತಹ ಪ್ರಶ್ನೆಗಳಿಗೆ ಸಮಾಧಾನ ನೀಡುವ ಅನಿವಾರ್ಯತೆ ಎದುರಾಗುತ್ತದೆ. ಅಂತಹ ಸಮಾಧಾನ ನೀಡಲು ಅಸಮರ್ಥರಾದಾಗ ‘ಅದು ಅದಲ್ಲ. ಇದಲ್ಲ’ ಎಂದು ತಪ್ಪಿಸಿಕೊಳ್ಳಬೇಕಾಗುತ್ತದೆ. ವಿಶ್ವಸೃಷ್ಟಿ ಕುರಿತಾಗಿ ಹಾಡಿ ಹೊಗಳುತ್ತಿರುವ ಋಗ್ವೇದದದ ನಾಸದೀಯ ಸೂಕ್ತ ಇಂತಹ ಇನ್ನೊಂದು ಕಂತೆ. ನಾಸದೀಯ ಸೂಕ್ತದಿಂದ ನಮಗೆ ಏನಾದರು ಜ್ಞಾನ ದಕ್ಕುತ್ತದೆಯೇ ಅಥವಾ ಈವರೆಗೆ ಏನಾದರು ದಕ್ಕಿದೆಯೇ ಎನ್ನುವ ಪ್ರಶ್ನೆಗೆ ನಕಾರಾತ್ಮಕ ಉತ್ತರವೇ ದಕ್ಕುತ್ತದೆ. ಆಧ್ಯಾತ್ಮವಾದಿಗಳು ಹೇಳುವಂತೆ ಜಗತ್ತಿನಲ್ಲಿ ಪರಾ-ಅಪರಾ ಎನ್ನುವ ಎರಡು ಬಗೆಯ ವಿದ್ಯೆಗಳಿವೆ. ಅಂತಿಮ ಬ್ರಹ್ಮನ್ ಸಾಕ್ಷಾತ್ಕಾರದ ಮಾರ್ಗ ಪರ. ವೇದ, ಉಪನಿಷತ್ತುಗಳು ಸೇರಿದಂತೆ ಉಳಿದೆಲ್ಲವೂ ಅಪರಾ ವಿದ್ಯೆಗಳು. ಜಗತ್ತಿನಲ್ಲಿ ಈಗ ೭೦೦ ಕೋಟಿ ಜನಸಂಖ್ಯೆಯಿದೆ. ವಿಶ್ವದ ಮೂಲ , ಅದರ ಕಾರಣಗಳನ್ನು ಹುಡುಕಲು ಯತ್ನಿಸುತ್ತಿರುವ ಭೌತಶಾಸ್ತ್ರಜ್ಞ , ವಿಶ್ವದ ಅಸ್ತಿತ್ವಕ್ಕೆ ಕಾರಣವಾದ ದ್ರವ್ಯದ ರಾಸಾಯನಿಕ ಬಂಧಗಳ ಪ್ರಪಂಚದಲ್ಲಿ ನುಗ್ಗುತ್ತಿರುವ ರಸಾಯನ ಶಾಸ್ತ್ರಜ್ಞ , ಡಿ.ಎನ್.ಎ ಭೇದಿಸಿ ಜೀವ ಕಾರಣಗಳನ್ನು ತಡಕಾಡುತ್ತಿರುವ ಜೀವವಿಜ್ಞಾನಿ , ವಿಶ್ವದ ಭವಿಷ್ಯವೇನು ಎಂದು ನಾನಾ ವಿಧದ ಸಾಧನ , ಸಲಕರಣೆಗಳ ಪ್ರಯೋಗಗಳ ಮೂಲಕ ಅರಿಯಲು ಯತ್ನಿಸುತ್ತಿರುವ ಇಡಿ ವಿಶ್ವದ ಆಗುಹೋಗುಗಳನ್ನು ಒಂದೇ ಸೂತ್ರದಲ್ಲಿ ಹಿಡಿದಿಡಬಲ್ಲ ‘ಸ್ಪ್ರಿಂಗ್ ಥಿಯರಿ’ ರೂಪಿಸಲು ಶ್ರಮಿಸುತ್ತಿರುವ ವಿಶ್ವಶಾಸ್ತ್ರಜ್ಞ ಇವರೆಲ್ಲರದು ಅಪರಾ ವಿದ್ಯೆ. ಇವರಿಗೆ ವಿಶ್ವ ತನ್ನ ಯಾವ ರಹಸ್ಯಗಳನ್ನು ಬಿಟ್ಟುಕೊಟ್ಟಿಲ್ಲ. ಕಚ್ಚೆಹಾಕಿ , ಮೂಗು ಮುಚ್ಚಿ , ಧ್ಯಾನ ಭಂಗಿಯಲ್ಲಿ ಕುಳಿತಿರುವಾತ , ಶಂಕರಾಚಾರ್ಯರ ಬ್ರಹ್ಮ ಸೂತ್ರಗಳನ್ನು ಕಂಠಪಾಠ ಮಾಡಿದಾತ ‘ಪರಾ ವಿದ್ಯೆ’ ಬಲ್ಲ, ವಿಶ್ವದ ಬಗೆಗೆ ಖಚಿತವಾಗಿ ಹೇಳುತ್ತಿರುವ , ಅವುಗಳನ್ನು ನಮ್ಮ ಅನುಭವಕ್ಕೆ ತಂದಿರುವ ಎಲ್ಲ ವಿಜ್ಞಾನಿಗಳನ್ನು ಮೀರಿ ಶಂಕರಾಚಾರ್ಯರೇ ಸರಿ ಎಂದು ಕೂಗಬಲ್ಲ. ಏಕೆಂದರೆ ಈತನಿಗೆ ತಾನು ಹೇಳಿದುದು ಸತ್ಯವೆಂದು ಸಾಧಿಸಿ ತೋರಿಸಬೇಕಾದ ಹೊಣೆಗಾರಿಕೆ ಇಲ್ಲ. ಸಾಧನೆ ಮಾಡಿ ಗೊತ್ತಾಗುತ್ತದೆ, ಅದನ್ನು ಸಾಕ್ಷಾತ್ಕಾರದಿಂದ ಮಾತ್ರ ಅರಿಯಬಹುದು. ಅದು ಮಾತುಗಳನ್ನೂ ಮೀರಿದ್ದು ಎನ್ನುತ್ತಾನೆ. ನೀನು ಸಾಧನೆ ಮಾಡಿ ಗೊತ್ತು ಪಡಿಸಿಕೊಂಡಿರುವೆಯಾ ? ಎಂದರೆ ಅಪೌರುಷೇಯದ , ಶಂಕರಾಚಾರ್ಯರ ಹಿರಿಮೆ , ಗರಿಮೆಗಳತ್ತ ತನ್ನ ಮಾತನ್ನು ತಿರುಗಿಸುತ್ತಾನೆ. ವೇದಮಾತೆಯ ಅಡಿದಾವರೆಗಳಲ್ಲಿ ಮರೆಯಾಗುತ್ತಾನೆ. ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ಮೇಲಿಂದ ಮೇಲೆ ಪೌರಾತ್ಯರು ಅಂತರಂಗದ ಅನ್ವೇಷಣೆಯ ಮೂಲಕ ಹುಡುಕಾಟ ಸಾಗಿಸಿದರೆ , ಪಾಶ್ಚಾತ್ಯರು ಬಾಹ್ಯ ವಿಶ್ವದ ಹುಡುಕಾಟದಲ್ಲಿ ನಿರತರು. ಇವರಿಬ್ಬರು ಅಂತಿಮವಾಗಿ ತಲುಪುವುದು ಒಂದೆ ಕಡೆ ಎಂದು ಅಪ್ಪಣೆ ಕೊಡಿಸಿದ್ದಾರೆ. ಅವರಿಗೆ ಹೇಗೆ ಇದು ತಿಳಿಯಿತೋ ಗೊತ್ತಿಲ್ಲ. ಆದರೆ ಒಂದು ಮಾತ್ರ ನಿಜ. ಬಾಹ್ಯ ವಿಶ್ವದ ಹುಡುಕಾಟದಲ್ಲಿ ನಾವು ಸಾಗಿ ಬಂದ ದಾರಿ , ನಮಗೆ ದಕ್ಕಿದ ಫಲಗಳು ಸುಸ್ಪಷ್ಟವಾಗಿವೆ. ಈ ಸತ್ಯಗಳು ತೆರೆದ ಪುಸ್ತಕಗಳಾಗಿವೆ. ಇವುಗಳನ್ನು ಯಾರು ಬೇಕಾದರೂ ಪಡೆಯಬಹುದು. ಆದರೆ ಅಂತರಂಗದ ಹುಡುಕಾಟದಲ್ಲಿ ನಮಗೆ ಏನು ದಕ್ಕಿದೆ ಏನು ದಕ್ಕಿಲ್ಲ ಎಂದು ಯಾರಿಗೂ ತಿಳಿದಿಲ್ಲ. ವಿಶ್ವದ ಬಾಹ್ಯ ಹುಡುಕಾಟದ ಜ್ಞಾನ ಸಾರ್ವತ್ರಿಕವಾಗಿ ಕಂಡು ಬಂದರೆ ಸ್ವಾಮಿ ವಿವೇಕಾನಂದರು ಹೇಳುವ ಆಂತರಿಕ ಹುಡುಕಾಟ ತೀರ ವೈಯುಕ್ತಿಕ , ಊಹಾತ್ಮಕವಾಗಿದ್ದು ಅದರ ನೈಜತೆಯ ಮೇಲೆಯೇ ಸಂಶಯಿಸುವಂತಿದೆ. ಇದು ಆಧ್ಯಾತ್ಮದ ಇತಿಮಿಗಳತ್ತ ಬೆರಳು ತೋರಿಸುತ್ತಿದೆ. ಹಲವಾರು ಜನ ಪಾಶ್ಚಾತ್ಯ ಚಿಂತಕರು , ವಿಜ್ಞಾನಿಗಳು ವೇದಾಂತ , ಭಗವದ್ಗೀತೆ ಮತ್ತು ಯೋಗಗಳನ್ನು ಒಪ್ಪಿದ್ದರು ಎನ್ನುವಂತಹ ಚರ್ಚೆಗಳು ಸಾಕಷ್ಟು ನಡೆದಿವೆ. ವಿಶ್ವದಲ್ಲಿನ ಪ್ರತಿಯೊಂದು ಮತ್ತೊಂದರೊಂದಿಗೆ ಬೆಸೆದುಕೊಂಡಿದೆ. ಮೂಲದಲ್ಲಿ ಒಂದೇ ಆಗಿರುವ ತತ್ತ್ವ ಬೇರೆ ಬೇರೆ ರೂಪ ತಾಳುತ್ತದೆ. ಚೈತನ್ಯ ಒಂದು ರೂಪದಿಂದ ಮತ್ತೊಂದಕ್ಕೆ ಪರಿವರ್ತಿತವಾಗುತ್ತದೆಯೇ ಹೊರತು ಅದು ಹೊಸದಾಗಿ ಸೃಷ್ಟಿಯಾಗುವುದೂ ಇಲ್ಲ .ನಾಶವಾಗುವುದು ಇಲ್ಲ ಎನ್ನುವ ‘ಚೈತನ್ಯ ನಿತ್ಯತೆ ನಿಯಮ’ ( Law of Conservation of Energy) ಅದರಂತೆ ‘ದ್ರವ್ಯವನ್ನು ರೂಪಾಂತರಿಸಬಹುದೇ ಹೊರತು ನಾಶಗೊಳಿಸಲಾಗದು ಎನ್ನುವ ‘ದ್ರವ್ಯ ನಿತ್ಯತೆಯ ನಿಯಮ’ (Law of Conservation of Mass) ಪ್ರತಿಯೊಬ್ಬ ವಿಜ್ಞಾನಿಗೆ ಮನದಟ್ಟಾಗಿರುತ್ತದೆ. ಜಗತ್ತಿನ ಎಲ್ಲ ಘಟನೆಗಳನ್ನು ನಿಸರ್ಗದ ಬೆರಳೆಣಿಕೆಯ ತತ್ತ್ವಗಳಿಂದ (ಈಗಿನ ತಿಳುವಳಿಕೆಯಂತೆ ಗುರುತ್ವ ಬಲ-ವಿದ್ಯುತ್ ಕಾಂತೀಯ ಬಲ-ಪ್ರಬಲ ಬೈಜಿಕ ಬಲ-ಕ್ಷೀಣ ಬೈಜಿಕ ಬಲ) ಅರಿಯಬಹುದು ಮತ್ತು ವಿವರಿಸಬಹುದು ಎನ್ನುವುದನ್ನು ವಿಜ್ಞಾನಿಗಳು ಬಲ್ಲರು. ಆದ್ದರಿಂದಲೇ ಇಡೀ ವಿಶ್ವವನ್ನು ಒಂದು ಸೂತ್ರ/ತತ್ತ್ವದಡಿ ತರಲು ಅವರು ಯತ್ನಿಸುತ್ತಿದ್ದಾರೆ. ಚರಾಚರ ವಿಶ್ವದ ಹಿನ್ನೆಲೆಯಲ್ಲಿ ಒಂದೇ ತತ್ತ್ವವಿದೆ. ಅದು ಅವ್ಯಯಿ , ಅವಿನಾಶಿ ಎನ್ನುವ ವೇದಾಂತದ ಹೇಳಿಕೆಗಳು ತಕ್ಷಣ ವಿಜ್ಞಾನಿಗಳ ಮನ ಸೆಳೆಯುತ್ತವೆ. (ಭಾರತೀಯ ಮೂಲದ ಬೌದ್ಧ ಧರ್ಮ ಇದಕ್ಕೆ ಹೊರತು) ಪೌರಾತ್ಯ ತತ್ತ್ವಶಾಸ್ತ್ರಗಳಲ್ಲಿ ಇಂತಹ ದೃಷ್ಟಿಕೋನಗಳು ಎದ್ದು ಕಾಣುತ್ತದೆಯಾದರೂ ಸೆಮೆಟಿಕ್ ಮೂಲದ ಯಹೂದಿ-ಕ್ರೈಸ್ತ –ಇಸ್ಲಾಂ ನಲ್ಲಿ ಇವುಗಳು ಕಾಣಸಿಗುವುದಿಲ್ಲ. ಆದ್ದರಿಂದಲೇ ಹಲವಾರು ಪಾಶ್ಚಾತ್ಯ ವಿಜ್ಞಾನಿಗಳು ವೇದಾಂತದತ್ತ ಕುತೂಹಲ ತೋರಿಸಿದ್ದಾರೆ. ;ಸರ್ವ ಧರ್ಮಮ್ ಪರಿತ್ಯಜ್ಯಂ ಮಾಮೇಕಂ ಶರಣಂ ವ್ರಜ ( ಎಲ್ಲ ಧರ್ಮಗಳನ್ನು ಪರಿತ್ಯಜಿಸಿ ನನಗೆ ಮಾತ್ರ ಶರಣಾಗು) ಎನ್ನುವಂಥ ಹೇಳಿಕೆಗಳು ಅವರಲ್ಲಿ ರೋಮಾಂಚನ ತಂದಿವೆ. (ದಿನ ನಿತ್ಯ ಹಲವಾರು ವಿಭಿನ್ನ ಮೂಲದ ಇಂತಹ ಹತ್ತಾರು ಧಾರ್ಮಿಕ /ಆಧ್ಯಾತ್ಮ ವಿಷಯಗಳನ್ನು ಕೇಳುವ ನಮಗೆ ಏನೂ ಅನಿಸದು) ಅವರಲ್ಲಿ ಕೆಲವರು ವೇದಾಂತದ ಗಹನವಾದ ಅಧ್ಯಯನವನ್ನು ಸಹ ಮಾಡಿದ್ದಾರೆ. ವೇದಾಂತದ ಇಂತಹ ಚಿಂತನೆಗಳನ್ನು ಆಧುನಿಕ ವಿಜ್ಞಾನದ ತಿಳುವಳಿಕೆಯೊಂದಿಗೆ ಹೋಲಿಸಿ ಹಲವು ಹತ್ತಾರು ಕೃತಿಗಳು ಸಹ ಬಂದಿವೆ. ಆದರೆ ಈವರೆಗೆ ಯಾವ ವಿಜ್ಞಾನಿಯು ನಾನು ವೇದಾಂತ ಹೇಳಿದ ಆತ್ಮಜ್ಞಾನದ ಮಾರ್ಗದಲ್ಲಿ ಸಾಗಿ ವಿಶ್ವದ ರಹಸ್ಯವನ್ನು ಅರಿಯುತ್ತೇನೆಂದು ಹೇಳಿಲ್ಲ. ಹಾಗೆ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅದೇ ವೇದಾಂತ ನೀಡಿದ ಭಾರತೀಯರಾದ ನಮ್ಮಿಂದ ಈವರೆಗೆ ನಿಸರ್ಗದ ಯಾವ ಮೂಲ ತತ್ತ್ವವನ್ನು ಸಹ ಬಿಡಿಸಿ ವಿವರಿಸಲಾಗಿಲ್ಲ. ಈಗ ನಮಗೆ ತಿಳಿದಿರುವ ನಿಸರ್ಗದ ನಾಲ್ಕು ಮೂಲ ಬಲಗಳನ್ನು ಬಿಡಿಸಿರುವ ಎಲ್ಲ ವಿಜ್ಞಾನಿಗಳು ವೇದಾಂತದ ಗಂಧಗಾಳಿ ಇಲ್ಲದ , ವೇದಾಂತದ ಅವಿನಾಶಿ , ಅವ್ಯಯ ತತ್ತ್ವದ ಪರಿಕಲ್ಪನೆ ಇಲ್ಲದ ಸೆಮೆಟಿಕ್ ಧರ್ಮ ಮೂಲದವರೆನ್ನುವುದನ್ನು ಮರೆಯಬಾರದು. ಆದ್ದರಿಂದ ಅವರ ವೇದಾಂತದ ಆಸಕ್ತಿ ಎಂತಹುದಾಗಿತ್ತೆನ್ನುವುದನ್ನು ಸರಿಯಾಗಿ ತಿಳಿದುಕೊಳ್ಳದೆ ಸಾರಾಸಗಟಾಗಿ ಇಂತಹ ವಿಜ್ಞಾನಿಯೇ ವೇದಾಂತವನ್ನು ಮೆಚ್ಚಿದ್ದಾರೆ-ಅದರಲ್ಲಿ ವಿಜ್ಞಾನದಲ್ಲಿ ಇರುವುದು ಎಲ್ಲವದು ಇದೆ ಎಂದು ವಾದಿಸಲಾಗದು. ಇದರೊಂದಿಗೆ ಆಧ್ಯಾತ್ಮ ತನ್ನ ಸಮರ್ಥನೆಗೆ ವಿಜ್ಞಾನದ ನೆರವನ್ನು ಬಯಸುತ್ತಿರುವುದು ಏನನ್ನು ಸೂಚಿಸುತ್ತದೆಯೆಂದು ಸಹ ಚಿಂತಿಸಬೇಕು. ವೇದಾಂತ ಬಹುತೇಕ ವಿಶ್ವಸೃಷ್ಟಿಯ ಬಗ್ಗೆ , ಅದರ ಬಂಧನದಿಂದ ಬಿಡುಗಡೆಯಾಗುವ ಬಗ್ಗೆ ಮಾತನಾಡುತ್ತದೆ. ಆದ್ದರಿಂದ ಆಧುನಿಕ ಭೌತವಿಜ್ಞಾನ ಪರಿಹರಿಸಲು ಹೆಣಗುತ್ತಿರುವ ಪ್ರಶ್ನೆರೂಪದಲ್ಲಿ ಸರಳವಾಗಿರುವ ಆದರೆ ವಿಶ್ವದ ಬಗ್ಗೆ ಖಚಿತ ತಿಳುವಳಿಕೆ ಕೊಡಬಲ್ಲ ಆಯ್ದ ಕೆಲ ಸಮಸ್ಯೆಗಳನ್ನು ಮುಂದೆ ಪಟ್ಟಿಮಾಡಿದ್ದೇನೆ. ಪ್ರಕೃತಿ-ಪುರುಷ-ತ್ರಿಗುಣಗಳು ಇತ್ಯಾದಿಗಳನ್ನು ದಾಟಿದ ನಂತರವೇ ಬ್ರಹ್ಮನ್ ಸಾಕ್ಷಾತ್ಕಾರ ಪಡೆದ ಯಾವುದಾರೂ ಯೋಗಿ ವೇದಾಂತದ ತತ್ತ್ವದ ಮೂಲಕ ಇದಕ್ಕೆ ಉತ್ತರ ನೀಡಿ ಮಾನವ ಕುಲಕ್ಕೆ ನೆರವಾಗಬಹುದು. (೧) ನಮಗೆ ಈಗ ತಿಳಿದಿರುವ ಎಲ್ಲ ಭೌತಿಕ ನಿಯಮಗಳು ಏಕೆ ಹಾಗಿವೆಯೆಂದು ವಿವರಿಸಲು ಸಾಧ್ಯವೇ? (೨) ಕಾಲ-ದೇಶಗಳ ನಡುವಿನ ಸಂಬಂಧ ಏನು ? (೩ ) ದೇಶ-ಕಾಲಗಳು ಅವಿಚ್ಛಿನ್ನವಾಗಿವೆ ಎಂದು ಸಾಧಿಸಬಹುದೆ? (೪) ವಿಶ್ವ ಯಾವ ಆಕಾರದಲ್ಲಿದೆ ? (೫) ವರ್ತಮಾನ ಭೌತಿಕವಾಗಿ ಅದರ ಹಿಂದಿನ ಮತ್ತು ನಂತರದ ಸ್ಥಿತಿಗಳಿಗಿಂತ ಭಿನ್ನವೇ ? (೬) ಗುರುತ್ವ ವಿಶ್ವದ ಇತರ ಮೂರೂ ಬಲಗಳೊಂದಿಗೆ ಹೇಗೆ /ಯಾವ ಸಂಬಂಧ ಹೊಂದಿದೆ. (೭) ಗುರುತ್ವ ಬೇರೆ ಬಲಗಳಿಗೆ ಹೋಲಿಸಿದಾಗ ತುಂಬಾ ದುರ್ಬಲವಾಗಿದೆ ಏಕೆ ? (೮) ವಿಶ್ವದಲ್ಲಿ ನಾಲ್ಕಕ್ಕಿಂತ ಅಧಿಕ (ಉದ್ದ-ಅಗಲ-ಎತ್ತರ-ಕಾಲ) ಆಯಾಗಳಿವೆಯೇ? (೯) ನಮಗೆ ಈಗ ತಿಳಿದಿರುವಂತಹ ಆದರೆ ಅರಿಯಲು ಅಸಾಧ್ಯವಾದ ಇತರ ಭೌತಿಕ ವಿಶ್ವಗಳ ಅಸ್ತಿತ್ವ ಸಾಧ್ಯವೇ? ಸಾಧ್ಯವಾದರೆ ಅದನ್ನು ಸಾಬೀತು ಪಡಿಸುವುದು ಹೇಗೆ ? (೧೦) ವಿಶ್ವದ ಈಗಿನ ಆಯಸ್ಸು ಎಷ್ಟು ? ಅದು ಮುಂದೆ ಎಷ್ಟು ಕಾಲ ಅಸ್ತಿತ್ವದಲ್ಲಿರುತ್ತದೆ? |
|
Comment Box is loading comments...