ಎಂ.ವಿ-ಐತಿಹ್ಯ ಮತ್ತು ವಾಸ್ತವ
DISMANTLING THE MYTHS ON SIR M.VISVESVARAYA AND CRITICAL EXAMINATION OF SIR M.VISVESVARAYA AS A CIVIL ENGINEER ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಪುಸ್ತಕ ಇ-ಬುಕ್ ರೂಪದಲ್ಲಿ ಪೂರ್ಣ ಲಭ್ಯ -ಉಚಿತವಾಗಿ : ಕೊಂಡಿ : https://play.google.com/store/search?q=SIR%20M.V.%20ONDU%20BICHHU%20NOTA&c=books ಸರ್ ಎಂ.ವಿ-ಒಂದು ಬಿಚ್ಚು ನೋಟ- ಕೃತಿಯ ಆಯ್ದ ಭಾಗ) ಲೇಖಕರು : ಎನ್. ಶಂಕರಪ್ಪ ತೋರಣಗಲ್ಲು ಪ್ರಕಾಶಕರು : ಕಾವ್ಯಕಲಾ ಪ್ರಕಾಶನ , ನಂ. ೧೨೭೩ , ೭ನೇ ಅಡ್ಡರಸ್ತೆ , ಚಂದ್ರಾ ಬಡಾವಣೆ, ವಿಜಯನಗರ, ಬೆಂಗಳೂರು- ೫೬೦೦೪೦ , ದೂರವಾಣಿ : ೯೯೬೪೧೨೪೮೩೧, ೯೦೩೫೨೨೮೨೯೦ ಈ ಲೇಖನಕ್ಕೆ ಪೂರಕವಾದ ತಾಂತ್ರಿಕ ಲೆಕ್ಕಾಚಾರಗಳು , ಕೋಷ್ಟಕಗಳು , ಚಿತ್ರ , ನಕಾಶೆಗಳು ಮೂಲ ಮುದ್ರಿತ ಪುಸ್ತಕದಲ್ಲಿವೆ. ಬೆನ್ನುಡಿ ಭಾರತ ರತ್ನ ಸರ್.ಎಂ.ವಿಯವರನ್ನು ಕುರಿತಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹತ್ತಾರು ಪುಸ್ತಕ , ನೂರಾರು ಲೇಖನಗಳು ಬಂದಿವೆ. ಈ ಎಲ್ಲ ಪುಸ್ತಕ ಮತ್ತು ಲೇಖನಗಳು ಬಹುತೇಕ ಒಂದೇ ಬಗೆಯಲ್ಲಿ ಸರ್.ಎಂ.ವಿಯವರ ಜೀವನ ಮತ್ತು ಸಾಧನೆಗಳನ್ನು ಚಿತ್ರಿಸುತ್ತವೆ. ಇವು ಯಾವುದರಲ್ಲಿಯೂ ವಸ್ತುನಿಷ್ಟ ಭಿನ್ನ ಚಿತ್ರಣವಾಗಲಿ ಅಥವಾ ವಿಮರ್ಶೆಯಾಗಲಿ ದಕ್ಕದು. ಇಂಜಿನಿಯರಿಂಗ್ ಮತ್ತು ವಿಜ್ಞಾನದ ಲಕ್ಷಣಗಳ ಸ್ಪಷ್ಟ ತಿಳಿವಳಿಕೆ ಇಲ್ಲದ ಸರ್.ಎಂ.ವಿಯವರ ಸಮಕಾಲೀನ ಸಾಹಿತಿಗಳು ಮತ್ತು ಸಮಾಜದಲ್ಲಿ ಹೆಸರು ಗಳಿಸಿದ ಕೆಲ ಸಮಾನ ಮನಸ್ಕರು ಅವರ ಪ್ರತಿಯೊಂದು ತಾಂತ್ರಿಕ ಕೆಲಸವನ್ನು ಅದ್ಭುತವೆಂಬಂತೆ ಚಿತ್ರಿಸುವುದಕ್ಕೆ ನಾಂದಿ ಹಾಡಿದರು. ಇದು ಮುಂದೆ ಒಂದು ಪರಂಪರೆಯಾಗಿಯೇ ಬೆಳೆಯಿತು. ಇದರ ಮುಂದುವರಿಕೆಯಾಗಿ ಸರ್.ಎಂ.ವಿಯವರನ್ನು ಕುರಿತಾಗಿ ಒಂದರ ನಂತರ ಒಂದರಂತೆ ಕೃತಿಗಳು ಹೊರಬರುತ್ತಲ್ಲಿವೆ. ಸವೆದಿರುವ ಈ ಹಾದಿಯನ್ನು ಬಿಟ್ಟು , ವಸ್ತುನಿಷ್ಠ ವಿಮರ್ಶೆಯ ದಾರಿಯನ್ನು ತುಳಿದಿರುವ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಲೇಖಕರು ಸರ್.ಎಂ.ವಿಯವರ ಇಂಜಿನಿಯರಿಂಗ್ ಸಾಧನೆಗಳನ್ನು ತಾಂತ್ರಿಕ ವಿಮರ್ಶೆಗೆ ಒಳಪಡಿಸಿದ್ದಾರೆ. ಭಕ್ತಿ ಅಥವಾ ಭಯ , ನಂಬಿಕೆ ಅಥವಾ ಕುರುಡು ಬಹುಮತಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಾಗವಿಲ್ಲ. ಅಲ್ಲಿ ವಸ್ತುನಿಷ್ಠತೆಗೆ ಮಾತ್ರ ಮನ್ನಣೆ. ಆದರೆ ಸರ್.ಎಂ.ವಿಯವರ ವಿಷಯದಲ್ಲಿ ಇವೆಲ್ಲವೂ ಸೇರಿಕೊಂಡು ಅವರನ್ನು ದೈವಾಂಶ ಸಂಭೂತರನ್ನಾಗಿಸಿವೆ. ಸರ್ ಎಂ.ವಿಯವರು ಮಹಾ ಮೇಧಾವಿ , ಅನನ್ಯ ಇಂಜಿನಿಯರ್ ಎನ್ನುವುದು ತಾಂತ್ರಿಕ ಸಂಗತಿಗಳ ಮೇಲೆ ನಿರ್ಧಾರವಾಗಬೇಕೇ ಹೊರತು ಇತರ ಭಾವುಕ ಅಂಶಗಳ ಮೇಲಲ್ಲ ಎನ್ನುತ್ತಾರೆ ಲೇಖಕರು. ಆ ಮೂಲಕ ಸರ್.ಎಂ.ವಿಯವರು ಜನ ಭಾವಿಸಿದಂತೆ ಅಸಾಧಾರಣ ಇಂಜಿನಿಯರ್ ಅಲ್ಲವೆನ್ನುತ್ತಾರೆ. ತಾಂತ್ರಿಕ ವಿಶ್ಲೇಷಣೆಗಳಿಂದ ತುಂಬಿರುವ ಹೊಸ ಬಗೆಯ ಈ ಕೃತಿಯನ್ನು ತೆರೆದ ಮನಸ್ಸಿನ , ವೈಚಾರಿಕ , ವಸ್ತುನಿಷ್ಟ ಮನೋಭಾವದ ಕನ್ನಡಿಗರಿಗೆ ಅರ್ಪಿಸಲು ನಾವು ಹರ್ಷಿಸುತ್ತೇವೆ. - ಪ್ರಕಾಶಕರು ***************************************************** “ನಮ್ಮ ಇತಿಹಾಸದ ಅತ್ಯಂತ ದೊಡ್ಡ ಕೊರತೆಯೆಂದರೆ ಎಲ್ಲವನ್ನೂ ಉತ್ಪ್ರೇಕ್ಷಿಸುತ್ತ , ನೈಜವಾದ ಇತಿಹಾಸವನ್ನು ಬರೆಯದಿರುವುದು. ಚಾರಿತ್ರಿಕ ಸಂಗತಿಗಳು ಐತಿಹ್ಯ ಹಾಗೂ ಧಾರ್ಮಿಕ ನಂಬಿಕೆಗಳಿಂದ ತುಂಬಿ ಹೋಗಿವೆ. ಒಬ್ಬ ಒಳ್ಳೆಯ ರಾಜ ಇದ್ದನೆಂದರೆ ಆತನನ್ನು ಎಲ್ಲ ರಾಜರಿಗಿಂತ ಶ್ರೇಷ್ಟನೆಂದು ಕರೆದು ದೈವತ್ವದ ಮಟ್ಟಕ್ಕೇರಿಸುವ ಪರಿಪಾಠವಿದೆ. ದೇವರನ್ನು ಪೂಜಿಸುತ್ತಿದ್ದ ಅರ್ಚಕನೇ ಮುಂದೆ ದೇವಾಲಯದ ದೈವವಾಗಿ ಮೂಲ ದೇವತೆಯನ್ನು ಹಿಂದಿಕ್ಕಿದಂತಹ ಸನ್ನಿವೇಶವಿದು. (7-364) - ಸರ್. ಎಂ.ವಿ (7 ಆಗಸ್ಟ್ 1916 , ಮಿಥಿಕ್ ಸೊಸೈಟಿಯ ಆರನೇ ವಾರ್ಷಿಕ ಸಭೆ) ಮೊದಲು ‘ಭಾರತ ರತ್ನ’ ಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರು ಹುಟ್ಟಿದ 15 , ಸೆಪ್ಟೆಂಬರ್ ದಿನವನ್ನು ಇಂಜಿನಿಯರ್’ಗಳ ದಿನವೆಂದು ಘೋಷಿಸಲಾಗಿದೆ. ಸರ್ಕಾರ ಸೇರಿದಂತೆ ದೇಶಾದ್ಯಂತ ಇಂಜಿನಿಯರ್’ಗಳ ಸಂಘಗಳು ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ತಾಂತ್ರಿಕ ಸಭೆ, ಸಮಾರಂಭ , ಸಂವಾದ , ವಿಷಯ ಮಂಡನೆಗಳು ಜರುಗುತ್ತವೆ. ಪ್ರತಿ ಬಾರಿಯೂ ವಿಶ್ವೇಶ್ವರಯ್ಯನವರ ಇಂಜಿನಿಯರಿಂಗ್ ಪ್ರತಿಭೆ, ಕರ್ತವ್ಯ ನಿಷ್ಠೆ , ಮುನ್ನೋಟ , ಪ್ರಗತಿಪರ ಚಿಂತನೆ, ಮಾಡಿದ ಕೆಲಸಗಳ ಗುಣಗಾನ ಮಾಡಲಾಗುತ್ತದೆ. ಬಹುತೇಕ ವೇಳೆ ವಿಶ್ವೇಶ್ವವರಯ್ಯನವರನ್ನು ಬ್ಲಾಕ್ ಸಿಸ್ಟಂ (ಕಟ್ಟು ಪದ್ದತಿ) ಜಾರಿಗೆ ತಂದ , ಸ್ವಯಂಚಲಿ ಗೇಟ್’ಗಳನ್ನು ಉಪಜ್ಞಿಸಿದ , ಕನ್ನಂಬಾಡಿ ಆಣೆಕಟ್ಟೆಯನ್ನು ಕಟ್ಟಿದ , ಭದ್ರಾವತಿ ಕಬ್ಬಿಣ ಕಾರ್ಖಾನೆಯ ಸ್ಥಾಪನೆಗೆ ಕಾರಣರಾದ ಮಹಾನ್ ಇಂಜಿನಿಯರ್ ಎಂದು , ದಿವಾನರಾಗಿ ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ದಿಗೆ ಕಾರಣರಾದವರೆಂದು ಪರಿಗಣಿಸಲಾಗುತ್ತದೆ. ವಿಶ್ವೇಶ್ವರಯ್ಯನವರ ಈ ಸಾಧನೆಗಳ ಬಗ್ಗೆ ಮೆಚ್ಚುಗೆ ಮತ್ತು ಗೌರವ ಬಹುತೇಕ ಹಿಂದಿನಿಂದ ಬಂದ ನಂಬಿಕೆಯಾಗಿ ಮುಂದುವರೆದಿದೆಯೇ ಹೊರತು ಅವರು ಮಾಡಿದ ಕೆಲಸಗಳ ತಾಂತ್ರಿಕ ಅಧ್ಯಯನ ಮತ್ತು ವಿಮರ್ಶೆಯಿಂದ ಬಂದುದಲ್ಲ. ಇದಕ್ಕೆ ಪೂರಕವಾಗಿ ಜನಸಾಮಾನ್ಯರಲ್ಲಿ ‘ವಿಶ್ವೇಶ್ವರಯ್ಯನವರ ತಲೆ’ಯ ಬಗ್ಗೆ ಹಲವು ಹತ್ತಾರು ಐತಿಹ್ಯಗಳು ಚಲಾವಣೆಯಲ್ಲಿವೆ. ವಿಶ್ವೇಶ್ವರಯ್ಯನವರ ಜೀವನ ಕುರಿತಾಗಿ ನೂರಾರು ಲೇಖನಗಳು , ಹತ್ತಾರು ಪುಸ್ತಕಗಳು ಹೊರ ಬಂದಿವೆ. ಇವೆಲ್ಲವೂ ವಿಶ್ವೇಶ್ವರಯ್ಯನವರ ‘ಮೆಮೊಯಿರ್ಸ್ ಆಫ್ ಮೈ ವರ್ಕಿಂಗ್ ಲೈಫ್ ‘ಕೃತಿಯಲ್ಲಿರುವ ಸಂಗತಿಗಳನ್ನೇ ವಿವಿಧ ಬಗೆಯಲ್ಲಿ ಹೇಳುತ್ತವೆ. ಈವರೆಗೆ ವಿಶ್ವೇಶ್ವರಯ್ಯನವರು ಮಾಡಿದ ತಾಂತ್ರಿಕ ವಿನ್ಯಾಸ , ನೀಡಿದ ವರದಿ, ಜಾರಿಗೊಳಿಸಿದ ಯೋಜನೆಗಳ ವಿವರಗಳು ಎಲ್ಲಿಯೂ ಸಮಗ್ರ ರೀತಿಯಲ್ಲಿ ದಕ್ಕುವುದಿಲ್ಲ. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಆಣೆಕಟ್ಟೆ ವಿನ್ಯಾಸಿಸಿ , ಕಟ್ಟಿಸಿದ ಇಂಜಿನಿಯರ್ ಎನ್ನುವ ಹೊಗಳಿಕೆ ಸಾರ್ವತ್ರಿಕವಾಗಿದೆಯಾದರೂ ಅವರು ಮಾಡಿದ ವಿನ್ಯಾಸ ಹೇಗಿದ್ದಿತೆಂದು ಯಾರೂ ಒಮ್ಮೆಯೂ ಇಂಜಿನಿಯರಿಂಗ್ ದೃಷ್ಟಿಯಲ್ಲಿ ಅಧ್ಯಯನ ಮಾಡಿಲ್ಲ. ಆದ್ದರಿಂದ ಈ ಕೃತಿಯಲ್ಲಿ ಅಂತಹ ಒಂದು ತಾಂತ್ರಿಕ ವಿಮರ್ಶಾತ್ಮಕ ಅಧ್ಯಯನ ನಡೆಸಲಾಗಿದೆ. ‘ಇಂಜಿನಿಯರಿಂಗ್ ಸ್ಥಿತಿ-ಗತಿಗಳು’ ತಲೆಬರಹದ ಅಧ್ಯಾಯ ವಿಶ್ವೇಶ್ವರಯ್ಯನವರಿಗೆ ಸಂಬಂಧಿಸಿದುದಲ್ಲವಾದರೂ ಅವರ ಕಾಲದಲ್ಲಿ ಚಾಲ್ತಿಯಲ್ಲಿದ್ದ ಇಂಜಿನಿಯರಿಂಗ್ ಸ್ವರೂಪ ಮತ್ತು ಸಾಧನೆಗಳನ್ನು ಹಿನ್ನೆಲೆಯಲ್ಲಿ ಒದಗಿಸುತ್ತದೆ. ಗುರು ಭಕ್ತಿ ಅಥವಾ ಭಯ , ನಂಬಿಕೆ , ಕುರುಡು ಬಹುಮತಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಾಗವಿಲ್ಲ. ಆದರೆ ವಿಶ್ವೇಶ್ವರಯ್ಯನವರ ವಿಷಯದಲ್ಲಿ ಇವೆಲ್ಲವೂ ಸೇರಿಕೊಂಡು ಅವರನ್ನು ದೈವಾಂಶ ಸಂಭೂತರನ್ನಾಗಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವ್ಯಕ್ತಿ ಮತ್ತು ವ್ಯಕ್ತಿತ್ವದಿಂದ ಬೇರ್ಪಡಿಸಲ್ಪಟ್ಟ ವಸ್ತುನಿಷ್ಠತೆಗೆ ಮಾತ್ರ ಮನ್ನಣೆ. ವಿಶ್ವೇಶ್ವರಯ್ಯನವರು ಮಹಾ ಮೇಧಾವಿ , ಅನನ್ಯ ಇಂಜಿನಿಯರ್ ಎನ್ನುವುದು ತಾಂತ್ರಿಕ ಸಂಗತಿಗಳ ಮೇಲೆ ನಿರ್ಧಾರವಾಗಬೇಕೇ ಹೊರತು ಇತರ ಭಾವುಕ ಅಂಶಗಳ ಮೇಲಲ್ಲ. ಈ ಹಿನ್ನೆಲೆಯಲ್ಲಿ ತಾಂತ್ರಿಕ ದೃಷ್ಟಿಯಲ್ಲಿ ವಿಶ್ವೇಶ್ವರಯ್ಯನವರು ನಿಜವಾಗಿಯೂ ಎಂತಹ ಇಂಜಿನಿಯರ್ ಆಗಿದ್ದರು , ಅವರ ಸಾಧನೆಗಳು ಅಷ್ಟೊಂದು ಅನನ್ಯವಾಗಿದ್ದವೇ ಎನ್ನುವ ಪ್ರಶ್ನೆ ಮತ್ತು ಅದಕ್ಕೆ ವಸ್ತುನಿಷ್ಠ ಹುಡುಕಾಟಗಳು ಈ ಕೃತಿಯಲ್ಲಿ ಸಾಗಿ ಬಂದಿವೆ. ಇದಕ್ಕಾಗಿ 1884-1930 ರ ಅವಧಿಯಲ್ಲಿ ಬಳಕೆಯಲ್ಲಿದ್ದ ಸಿವಿಲ್ ಇಂಜಿನಿಯರಿಂಗ್ ತಂತ್ರಜ್ಞಾನವನ್ನು ಮಾತ್ರ ಪರಿಗಣಿಸಲಾಗಿದೆ. ಎಂ.ವಿಯರನ್ನು ಕುರಿತಾಗಿ ಸಾವಿರಾರು ಲೇಖನ , ನೂರಾರು ಪುಸ್ತಕಗಳಿವೆಯಾದರೂ ಈ ಪುಸ್ತಕ ಬರೆಯಲು ನನಗೆ ಅಗತ್ಯವಾಗಿ ಬೇಕಾದ ಎಲ್ಲ ತಾಂತ್ರಿಕ ಮಾಹಿತಿ ದೊರೆಯಲಿಲ್ಲ. ಆದ್ದರಿಂದ ಸಿಕ್ಕಿರುವ ಮಾಹಿತಿಗಳ ಆಧಾರದ ಮೇಲೆ ಇಂಜಿನಿಯರಿಂಗ್ ತತ್ತ್ವಗಳನ್ನು ಆಧರಿಸಿ ಹಲವಾರು ನಿರ್ಧಾರಗಳನ್ನು ನೀಡಿದ್ದೇನೆ. ಎಂ.ವಿಯವರ ಮೂಲ ತಾಂತ್ರಿಕ ದಾಖಲೆಗಳಲ್ಲಿ ಈ ನಿರ್ಧಾರಗಳಿಗೆ ಹೊಂದಿಕೆಯಾಗದ ಸಂಗತಿಗಳಿದ್ದರೆ ನನ್ನ ತೀರ್ಮಾನಗಳನ್ನು ತಿದ್ದಿಕೊಳ್ಳುತ್ತೇನೆ. ಜಟಿಲವಾದ ಇಂಜಿನಿಯರ್ ಲೆಕ್ಕಗಳನ್ನು ಆದಷ್ಟು ಚಿತ್ರರೂಪದಲ್ಲಿ ನೀಡಲು ಯತ್ನಿಸಲಾಗಿದೆ. ಹಳೆಯ ಡ್ರಾಯಿಂಗ್’ಗಳು ಅಸ್ಪಷ್ಟವಾಗಿರುವುದರಿಂದ ಅವುಗಳನ್ನು ಬಳಸಿಕೊಂಡು ಹೊಸ ಡ್ರಾಯಿಂಗ್’ಗಳನ್ನು ಕೊಡಲಾಗಿದೆ. ವಿಶ್ವೇಶ್ವವರಯ್ಯನವರು ತಮ್ಮ ಹೆಸರನ್ನು Visvesvaraya ಎಂದು ಬರೆದುಕೊಳ್ಳುತ್ತಿದ್ದರು. ಈಗ ಚಾಲ್ತಿಯಲ್ಲಿರುವಂತೆ ಅವರ ಹೆಸರು ವಿಶ್ವೇಶ್ವರಯ್ಯ ಆಗಿದ್ದಿತೋ ಅಥವಾ ರಾಮರಾಯ , ಕೃಷ್ಣರಾಯ ಇರುವಂತೆ ವಿಶ್ವೇಶರಾಯ ಆಗಿದ್ದಿತೋ ಎನ್ನುವ ಸ್ಪಷ್ಟತೆ ದಕ್ಕದು. ಸಂಕ್ಷಿಪ್ತವಾಗಿ ಅವರು ಸರ್ ಎಂ.ವಿ ಎಂದೇ ಖ್ಯಾತರು. ಆದ್ದರಿಂದ ಈ ಕೃತಿಯಲ್ಲಿ ಅವರನ್ನು ಎಂ.ವಿ ಎಂದೇ ಕರೆಯಲಾಗಿದೆ. ಈ ಪುಸ್ತಕವನ್ನು ಇಂಗ್ಲಿಷ್’ನಲ್ಲಿ ಬರೆಯಬೇಕೋ ಅಥವಾ ಕನ್ನಡದಲ್ಲಿ ಬರೆಯಬೇಕೋ ಎನ್ನುವ ಗೊಂದಲ ನನ್ನಲ್ಲಿ ಇದ್ದಿತು. ಅಂತಿಮವಾಗಿ ಇಂತಹ ತಾಂತ್ರಿಕ ವಿಮರ್ಶೆಯ ಪುಸ್ತಕಗಳು ಇಂಗ್ಲಿಷ್ ಭಾಷೆಗೆ ಏಕೆ ಸೀಮಿತವಾಗಿರಬೇಕು. ದೇಶ ಭಾಷೆಗಳಲ್ಲಿ ಏಕೆ ಬರಬಾರದು? ಅಗತ್ಯ ಎನಿಸಿದರೆ ಮುಂದೆ ಇಂಗ್ಲಿಷ್’ನಲ್ಲಿ ತಂದರಾಯಿತು ಎನ್ನುವ ನಿರ್ಧಾರಕ್ಕೆ ಬಂದು ಕನ್ನಡದಲ್ಲಿ ಬರೆದಿದ್ದೇನೆ. ಈ ಪುಸ್ತಕದಲ್ಲಿ ಅಧಿಕವಾಗಿ ಸಿವಿಲ್ ಇಂಜಿನಿಯರಿಂಗ್’ಗೆ ಸೇರಿದ ತಾಂತ್ರಿಕ ಚರ್ಚೆಗಳಿವೆ. ಸಿವಿಲ್ ಇಂಜಿನಿಯರ್’ಗಳನ್ನು ಹೊರತು ಪಡಿಸಿ ಇತರರಿಗೆ ಇವು ಅರ್ಥವಾಗುವುದು ಕಷ್ಟ. ಆದ್ದರಿಂದ ತಾಂತ್ರಿಕ ಚರ್ಚೆಯನ್ನು ಆದಷ್ಟು ಸರಳಗೊಳಿಸಿ ಹೇಳಲು ಪ್ರಯತ್ನಿಸಿದ್ದೇನೆ. ಈ ಪುಸ್ತಕ ಜಟಿಲ ಎನಿಸಿದರೆ ಅದು ವಿಷಯದ ತಾಂತ್ರಿಕತೆಯಲ್ಲಿದೆಯೇ ಹೊರತು ಬಳಸಿದ ಕನ್ನಡ ಭಾಷೆಯಲ್ಲಿ ಅಲ್ಲ. ಈ ಕೃತಿಯನ್ನು ಇಂಗ್ಲಿಷ್’ನಲ್ಲಿ ಬರೆದರೂ ಸಿವಿಲ್ ಇಂಜಿನಿಯರ್ ಅಲ್ಲದವರರಿಗೆ ಈಗಿರುವಷ್ಟೇ ಜಟಿಲವಾಗಿರುತ್ತದೆ. ‘ಆಣೆಕಟ್ಟೆಗಳ ವಿನ್ಯಾಸದ ಚರಿತ್ರೆ’ ತಲೆಬರಹದಲ್ಲಿರುವ ವಿವರಗಳು ಬಹಳ ತಾಂತ್ರಿಕವಾಗಿರುವುದರಿಂದ ಇಂಜಿನಿಯರಿಂಗ್ ಹಿನ್ನೆಲೆ ಇಲ್ಲದವರು ಈ ಭಾಗವನ್ನು ಅರ್ಥೈಸಿಕೊಳ್ಳಲು ಹೆಚ್ಚು ಶ್ರಮಪಡದೆ ಸಾಮಾನ್ಯ ಮಾಹಿತಿಯಂತೆ ಓದಿ ತೃಪ್ತಿಪಡಬೇಕಾಗುತ್ತದೆ. ಕನ್ನಡದಲ್ಲಿ ಬರುವ ಪಾರಿಭಾಷಿಕ ಪದಗಳಿಗೆ ಪಕ್ಕದಲ್ಲಿಯೇ ಇಂಗ್ಲಿಷ್ ಪದ ನೀಡಿದ್ದೇನೆ. ದ್ರಾವಿಡ ಭಾಷೆಗಳಲ್ಲಿ ಮಣ್ಣಿನಿಂದ ಕಟ್ಟಿದ ಒಡ್ಡಿಗೆ ‘ಏರಿ’ , ಕಲ್ಲಿನಿಂದ ಕಟ್ಟಿದ ನಿರ್ಮಾಣಕ್ಕೆ ‘ಆಣೆ’ ‘ಆಣೆಕಟ್ಟೆ’ ಎನ್ನುವ ಪದಗಳಿವೆ. ಅಲ್ಪ ಎತ್ತರದ ಕಟ್ಟೆ ಅದರ ಮೇಲೆ ನಿಯಂತ್ರಿಸುವ ಗೇಟ್’ಗಳನ್ನು ಅಳವಡಿಸಿ ನೀರಿನ ಮಟ್ತ ಏರಿಸುವ ನಿರ್ಮಾಣಗಳನ್ನು ಇಂಗ್ಲಿಷ್’ನಲ್ಲಿ ‘ಬ್ಯಾರೇಜ್’ ಎಂದು ಕರೆಯಲಾಗುತ್ತದೆ. ಈ ಪದ ಕನ್ನಡದಲ್ಲಿಲ್ಲ . ಅದಕ್ಕಾಗಿ ‘ಕೋಡಿಕಟ್ಟೆ’ ಎನ್ನುವ ಪದ ಬಳಸಲಾಗಿದೆ. ಏರಿ ಮಣ್ಣಿನ ನಿರ್ಮಾಣವಾದರೆ ಕಟ್ಟೆ ಕಲ್ಲಿನ ನಿರ್ಮಾಣ. ಎಂ.ವಿಯವರ ಸಾಮಾಜಿಕ ನೀತಿ , ನಿಲುವುಗಳು , ಮೀಸಲಾತಿ ಕುರಿತಾಗಿ ಅವರಿಗಿದ್ದ ಧೋರಣೆ, ಅದರ ಸಾಧಕ-ಬಾಧಕಗಳು , ಅವರ ವೈಯಕ್ತಿಕ ಜೀವನ , ಖ್ಯಾತರೊಂದಿಗೆ ಅವರಿಗಿದ್ದ ಸಂಪರ್ಕ , ಆರ್ಥಿಕ ಚಿಂತನೆ , ಮುಖ್ಯ ಇಂಜಿನಿಯರ್ ಮತ್ತು ದಿವಾನರಾಗಿ ಅವರು ನೇಮಕಗೊಳ್ಳುವ ಹಿನ್ನೆಲೆಯಲ್ಲಿದ್ದ ರಾಜಕೀಯ ಮತ್ತು ಜಾತಿ ಕಾರಣಗಳು , ಅವರು ಮಾಡಿದ ಕೆಲಸಗಳ ತೌಲನಿಕ ಅಧ್ಯಯನ , ಕೈಗಾರಿಕೋದ್ಯಮಿಗಳೊಂದಿಗೆ ಅವರು ನಡೆಸಿದ ವಿದೇಶಿ ಪ್ರವಾಸಗಳ ಹಿನ್ನೆಲೆ ಹಾಗೂ ಮೌಲ್ಯಮಾಪನ ಈ ಪುಸ್ತಕದ ಮೂಲ ಚೌಕಟ್ಟಿನ ಹೊರಗಿವೆ. ಅವುಗಳ ಬಗ್ಗೆ ಆ ನಿರ್ದಿಷ್ಟ ಶಿಸ್ತಿನ ಪರಿಣಿತರು ಹೊಸ ಬೆಳಕು ಚೆಲ್ಲಬಹುದು. ಎಂ.ವಿಯವರ ಶಿಸ್ತಿನ ಜೀವನ , ಕರ್ತವ್ಯ ನಿಷ್ಠತೆ , ಪ್ರತಿಭೆಗಳನ್ನು ಹೊಗಳುವ ನೂರಾರು ಪುಸ್ತಕಗಳಿದ್ದು ಆ ನಿಟ್ಟಿನಲ್ಲಿ ಹೊಸದಾಗಿ ಬರೆಯುವಂತಹುದು ಏನೂ ಉಳಿದಿಲ್ಲ. ತಾಂತ್ರಿಕ ಅಂಶಗಳು ಸ್ಪಷ್ಟವಾಗಿ ಅರ್ಥವಾಗದಿದ್ದರೂ ಎಂ.ವಿಯವರನ್ನು ತಾಂತ್ರಿಕ ಹಿನ್ನೆಲೆಯಲ್ಲಿ ವಿಮರ್ಶೆಗೆ ಒಳಪಡಿಸುವ ಅನಿವಾರ್ಯತೆ ಇದೆ ಎನ್ನುವುದು ಓದುಗರಿಗೆ ಈ ಪುಸ್ತಕ ಓದಿದ ಮೇಲೆ ಭಾಸವಾಗುತ್ತದೆ ಎಂದು ನಂಬಿದ್ದೇನೆ. ಎಂ.ವಿಯವರು ತಮ್ಮ ಕೊನೆಗಾಲಕ್ಕೆ ಸ್ವಲ್ಪ ಮೊದಲು ತಮ್ಮ ದಾಖಲೆಗಳನ್ನು ಸುಟ್ಟು ನಾಶಗೊಳಿಸಿದರೆಂದು ದಾಖಲಾಗಿದೆ. ಹೀಗೆ ಮಾಡಿದವರಲ್ಲಿ ಎಂ.ವಿಯವರು ಮೊದಲಿಗರೇನಲ್ಲ. ನವಾಲ್ ಎಹ್. ತಾತಾ ತಮ್ಮ ಸಾವಿನ ನಂತರ ತಮಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸುಡಬೇಕೆಂದು ಉಯಿಲು ಮಾಡಿದ್ದರು. ‘ಜೇಮ್’ಸೇಟ್’ಜಿ ನಸ್ಸರ್’ವಾಲ್’ಜಿ ತಾತಾ : ಎ ಕ್ರೊನಿಕಲ್ ಆಫ್ ಹಿಸ್ ಲೈಫ್’ ಪುಸ್ತಕ ಬರೆದ ನಂತರ ಅದರ ಲೇಖಕ ಎಫ್.ಎಚ್. ಹ್ಯಾರಿಸ್ ಜೆ.ಎನ್.ತಾತಾರವರಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ನಾಶಗೊಳಿಸಿದರು. ಕೆಲವೊಮ್ಮೆ ಖ್ಯಾತರಿಗೆ ಸಂಬಂಧಿಸಿದ ದಾಖಲೆಗಳು ಉಳಿದಿದ್ದರೂ ಅವು ಸಾರ್ವಜನಿಕರಿಗೆ , ಸಂಶೋಧಕರಿಗೆ ಬಹುತೇಕ ವೇಳೆ ದಕ್ಕದೆ ಅವರ ಕುಟುಂಬ ಸದಸ್ಯರ ಮನೆಯ ಕಪಾಟುಗಳಲ್ಲಿ ಭದ್ರವಾಗಿ ಅಡಗಿ ಕುಳಿತಿರುತ್ತವೆ. ಖ್ಯಾತರಿಗೆ ಸಂಬಂಧಿಸಿದ ದಾಖಲೆಗಳನ್ನು ಅಧ್ಯಯನಕ್ಕೆ ಒಳಪಡಿಸಿದರೆ ಅವರ ಕೆಲಸ , ಕಾರ್ಯ , ನಡವಳಿಕೆಗಳು ಟೀಕೆಗೆ ಒಳಗಾಗಿ ಅವರ ಖ್ಯಾತಿ ಮುಕ್ಕಾಗುವುದೆನ್ನುವ ಭಯ ಇದರ ಹಿನ್ನೆಲೆಯಲ್ಲಿರುತ್ತದೆ. ಎಂ.ವಿಯವರ ಹುಟ್ಟೂರು ಮುದ್ದೇನಹಳ್ಳಿಯಲ್ಲಿರುವ ಅವರ ಸ್ಮಾರಕ ಮ್ಯೂಜಿಯಂನಲ್ಲಿ ಆಯ್ದ ಕೆಲವೇ ಅದರಲ್ಲೂ ಬಹುತೇಕ ಅವರ ಸಾಧನೆಗಳನ್ನು ಎತ್ತಿ ತೋರಿಸುವ ವಸ್ತುಗಳನ್ನು ಮಾತ್ರ ಪ್ರದರ್ಶನಕ್ಕೆ ಇಡಲಾಗಿದೆ. ಅವರು ಓದಿದ , ಬಳಸಿದ ಅಷ್ಟೇನೂ ಮುಖ್ಯವಲ್ಲದ ನಾಲ್ಕಾರು ಪುಸ್ತಕಗಳು ಮಾತ್ರ ಕಪಾಟಿನಲ್ಲಿ ಸ್ಥಾನ ಗಿಟ್ಟಿಸಿವೆ. ಎಂ.ವಿಯವರು ಮಾಡಿಕೊಂಡ ತಾಂತ್ರಿಕ ದಾಖಲೆಗಳು , ಪತ್ರ ವ್ಯವಹಾರಗಳು ಅಲ್ಲಿಲ್ಲ. ಎಂ.ವಿಯವರು ವಿದೇಶಗಳಿಗೆ ಭೇಟಿ ನೀಡಿದಾಗ ಎಂತಹ ತಾಂತ್ರಿಕ ಟಿಪ್ಪಣಿಗಳನ್ನು ಮಾಡಿಕೊಳ್ಳುತಿದ್ದರು ಎನ್ನುವ ಕುತೂಹಲಕ್ಕೆ ಎಲ್ಲಿಯೂ ಉತ್ತರಗಳು ದಕ್ಕುವುದಿಲ್ಲ. ‘ಭಾರತ ರತ್ನ’ ಪ್ರಶಸ್ತಿ ಪಡೆದ ನಂತರ ಎಂ.ವಿಯವರು ಅವರ ಕುಟುಂಬವನ್ನು ಮೀರಿ ದೇಶಕ್ಕೆ ಸೇರಿದವರಾಗುತ್ತಾರೆ. ಆದ್ದರಿಂದ ಅವರ ಕುಟುಂಬದವರು ಅವರ ಎಲ್ಲ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಿ ಆಸಕ್ತರಿಗೆ ನಿರ್ದಿಷ್ಟ ಮೊತ್ತಕ್ಕೆ ಕೊಡುವ ವ್ಯವಸ್ಥೆ ಮಾಡಬೇಕು. ಹಾಗೆ ಮಾಡಿದರೆ ಎಂ.ವಿಯವರನ್ನು ಅವರ ಸಾಧನೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಇಲ್ಲದಿದ್ದರ ಐತಿಹ್ಯಗಳೇ ಅವರ ಚರಿತ್ರೆಯಾಗಿರುತ್ತದೆ. ಸಂಗತಿ , ಕಥೆ ಹಾಗೂ ಐತಿಹ್ಯಗಳ ಮೂಲಕ ಎಂ.ವಿಯವರು ಹೇಗೆ ದೈವತ್ವದ ಮಟ್ಟಕ್ಕೆ ಏರಿಸಲ್ಪಟ್ಟರು ಎನ್ನುವುದನ್ನು ಗುರುತಿಸಲು ಯತ್ನಿಸಿದ್ದೇನೆ. ನೈಜ ಸಂಗತಿಗಳು ಮಸುಕಾದಾಗ ಐತಿಹ್ಯಗಳು , ಪುರಾಣಗಳು ಹುಟ್ಟುತ್ತವೆ. ಈ ಪುರಾಣಗಳ ಮೂಲಕ ಋಷಿ , ಮುನಿಗಳು ಕಾಣಿಸಿಕೊಳ್ಳುತ್ತಾರೆ. ಸಂತ ಚರಿತ್ರೆಗಳು ರಚಿತವಾಗುತ್ತವೆ. ಈ ಮಸುಕಿನ ಮುಸುಕನ್ನು ತೆಗೆಯಲು ವಸ್ತುನಿಷ್ಠ ವಿಮರ್ಶೆಯ ಅಧ್ಯಯನವೊಂದೇ ದಾರಿ. ನನ್ನ ಈ ಹಿಂದಿನ ಎಲ್ಲ ವೈಚಾರಿಕ ಕೃತಿಗಳನ್ನು ಪ್ರಕಟಿಸಿದ ಕಾವ್ಯಕಲಾ ಪ್ರಕಾಶನದ ಸೊಂದಲಗೆರೆ ಲಕ್ಷ್ಮೀಪತಿಯವರಿಗೆ ನನ್ನ ಕೃತ್ತಜ್ಞತೆಗಳು. ಈ ಪುಸ್ತಕವನ್ನು ಸಿವಿಲ್ ಇಂಜಿನಿಯರಿಂಗ್ ಸಮುದಾಯಕ್ಕೆ ಸಲ್ಲಿಸುತ್ತಿದ್ದೇನೆ. ವಿಮರ್ಶೆಗಳಿಗೆ , ಸಂವಾದಕ್ಕೆ ಸ್ವಾಗತ. ಎನ್.ಶಂಕರಪ್ಪ ತೋರಣಗಲ್ಲು 1. ಐತಿಹ್ಯಗಳ ಸುತ್ತ “ನಮ್ಮ ಇತಿಹಾಸದ ಅತ್ಯಂತ ದೊಡ್ಡ ಕೊರತೆಯೆಂದರೆ ಎಲ್ಲವನ್ನೂ ಉತ್ಪ್ರೇಕ್ಷಿಸುತ್ತ , ನೈಜವಾದ ಇತಿಹಾಸವನ್ನು ಬರೆಯದಿರುವುದು. ಚಾರಿತ್ರಿಕ ಸಂಗತಿಗಳು ಐತಿಹ್ಯ ಹಾಗೂ ಧಾರ್ಮಿಕ ನಂಬಿಕೆಗಳಿಂದ ತುಂಬಿ ಹೋಗಿವೆ. ಒಬ್ಬ ಒಳ್ಳೆಯ ರಾಜ ಇದ್ದನೆಂದರೆ ಆತನನ್ನು ಎಲ್ಲ ರಾಜರಿಗಿಂತ ಶ್ರೇಷ್ಟನೆಂದು ಕರೆದು ದೈವತ್ವದ ಮಟ್ಟಕ್ಕೇರಿಸುವ ಪರಿಪಾಠವಿದೆ. ದೇವರನ್ನು ಪೂಜಿಸುತ್ತಿದ್ದ ಅರ್ಚಕನೇ ಮುಂದೆ ದೇವಾಲಯದ ದೈವವಾಗಿ ಮೂಲ ದೇವತೆಯನ್ನು ಹಿಂದಿಕ್ಕಿದಂತಹ ಸನ್ನಿವೇಶವಿದು. (7-364) - ಸರ್. ಎಂ.ವಿ (7 ಆಗಸ್ಟ್ 1916 , ಮಿಥಿಕ್ ಸೊಸೈಟಿಯ ಆರನೇ ವಾರ್ಷಿಕ ಸಭೆ) ****************************************************************** ಈ ಹಿಂದೆ ಪ್ರೌಢಶಾಲೆಯಲ್ಲಿ ಸರ್ ಎಂ.ವಿಯವರ ಜೀವನ ಕುರಿತಾದ ‘ಭಾಗ್ಯಶಿಲ್ಪಿ’ ಎನ್ನುವ ಅವಿಸ್ತೃತ ಪಠ್ಯಪುಸ್ತಕವಿದ್ದಿತು. ‘ಭಾಗ್ಯಶಿಲ್ಪಿ’ ಯನ್ನು ಮಾಡುವಾಗ ಅಧ್ಯಾಪಕರುಗಳು ವಿಶ್ವೇಶ್ವರಯ್ಯನವರ ಬಗೆಗೆ ಹೇಳುತ್ತಿದ್ದರು. ಅವರ ಬುದ್ಧಿವಂತಿಕೆ, ಶಿಸ್ತು ,ಅಚ್ಚುಕಟ್ಟುತನ, ಸಮಯ ಪ್ರಜ್ಞೆ , ಅಧ್ಯಯನಶೀಲತೆ, ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ನಿಲುವು, ಕಾರ್ಯ ತತ್ಪರತೆಗಳ ಬಗ್ಗೆ ವಿವರವಾಗಿ ತಿಳಿಸುತ್ತಿದ್ದರು. ಜೀವನಾನುಭವದ ಕೊರತೆಯಿಂದಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇಂತಹ ವಿಷಯಗಳು ಅಸ್ಪಷ್ಟವಾಗಿ ಅರ್ಥವಾಗುತ್ತವೆ. ಆದರೆ ಎಂವಿಯವರ ಬುದ್ಧಿವಂತಿಕೆ ಕುರಿತಾಗಿ ಅಧ್ಯಾಪಕರುಗಳು ಹೇಳಿದ ವಿವರ ಮತ್ತು ಸಂಗತಿಗಳು ಬಹು ದೀರ್ಘ ಕಾಲ ನೆನಪಿನಲ್ಲಿ ಉಳಿದಿರುತ್ತವೆ. ಹೀಗೆ ಅಚ್ಚಳಿಯದೆ ಉಳಿದ ಕೆಲ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. [1] ಇದರಲ್ಲಿ ಮೊದಲನೆಯದೆಂದರೆ ಎಂ.ವಿಯವರು ಮಹಾನ್ ಬುದ್ಧಿಶಾಲಿಗಳಾಗಿದ್ದರು. ಅವರ ಬುದ್ಧಿಶಕ್ತಿಯ ಮುಂದೆ ಬ್ರಿಟಿಷರು ಮಂಡಿಯೂರಿದ್ದರು. ಕನ್ನಂಬಾಡಿ ಆಣೆಕಟ್ಟೆಯನ್ನು ಬ್ರಿಟಿಷ್ ಇಂಜಿನಿಯರ್’ಗಳಿಂದ ಕಟ್ಟಲು ಸಾಧ್ಯವಾಗಿರಲಿಲ್ಲ. ಎಂ.ವಿಯವರು ತಾವೇ ನಿಂತು ಅದನ್ನು ಕಟ್ಟಿಸಿದರು. ಅದನ್ನು ಕಂಡು ಬ್ರಿಟಿಷ್ ಇಂಜಿನಿಯರ್’ಗಳು ಮೂಕವಿಸ್ಮಿತರಾಗಿದ್ದರು. ಎಂ.ವಿಯವರನ್ನು ಕುರಿತಾದ ಎರಡನೇ ಐತಿಹ್ಯ ಇನ್ನೂ ಕುತೂಹಲಕಾರಿಯಾದುದು. ಅವರ ಬುದ್ಧಿಶಕ್ತಿಯನ್ನು ಕಂಡು ಬೆರಗಾಗಿದ್ದ ಪಾಶ್ಚಾತ್ಯ ವಿಜ್ಞಾನಿಗಳು - ಬ್ರಿಟನ್ , ಜರ್ಮನ್ , ಜಪಾನ್ ಮುಂತಾದವರು -ಅವರು ತೀರಿಕೊಂಡ ನಂತರ ಅವರ ಮೆದುಳಿನ ಅಧ್ಯಯನ ನಡೆಸಲು ಮುಂದಾಗಿದ್ದರು. ಜಪಾನಿನವರು ಅದಕ್ಕಾಗಿ ಎರಡು ಕೊಟಿ ರೂಪಾಯಿಗಳನ್ನು ಕೊಡಲು ಸಹ ಸಿದ್ಧರಿದ್ದರು. ಇನ್ನು ಮೂರನೆಯ ಸಂಗತಿಯೆಂದರೆ ಪಾಕಿಸ್ತಾನದ ಸಿಂಧ್ ಪ್ರಾಂತದ ಸುಕ್ಕೂರಿನಲ್ಲಿ ಎಂ.ವಿಯವರು ಆಣೆಕಟ್ಟೆಯೊಂದನ್ನು ನಿರ್ಮಿಸಿದ್ದಾರೆ. ಆ ಆಣೆಕಟ್ಟೆಯ ಒಂದು ಭಾಗದಲ್ಲಿ ಭಾರತದ ನಕ್ಷೆ ಬರುವಂತೆ ನಿರ್ಮಾಣ ಮಾಡಿದ್ದಾರೆ. ಇದನ್ನು ಕಂಡು ಸಿಟ್ಟಾದ ಬ್ರಿಟಿಷರು , ಪಾಕಿಸ್ತಾನಿಗಳು ಆ ಭಾಗವನ್ನು ತೆಗೆಯಲು ಯತ್ನಿಸಿದರು. ಆ ಭಾಗವನ್ನು ತೆಗೆದರೆ ಆಣೆಕಟ್ಟೆ ಕುಸಿಯುತ್ತದೆ ಎಂದು ತಿಳಿದ ನಂತರ ಸುಮ್ಮನಾದರು. ಕೊನೆಯದಲ್ಲವಾದರೂ ಇನ್ನೊಂದು ಐತಿಹ್ಯವೆಂದರೆ ಎಂ.ವಿಯವರು ಯುರೋಪಿನಲ್ಲಿ ಒಮ್ಮೆ ರೈಲಿನಲ್ಲಿ ಸಂಚರಿಸುತ್ತಿದ್ದಾಗ ನಿಲುಗಡೆ ಸರಪಳಿ ಎಳೆದರು. ಆಗ ರೈಲು ನಿಂತಿತು. ನಿಲುಗಡೆ ಸರಪಳಿ ಏಕೆ ಎಳೆದರೆಂದು ಎಂ.ವಿಯವರನ್ನು ಪ್ರಶ್ನಿಸಿದಾಗ ಅವರು ನೂರಿನ್ನೂರು ಮೀಟರ್ ಮುಂದಿರುವ ಸೇತುವೆಯತ್ತ ಕೈ ತೋರಿ , ಆ ಸೇತುವೆಯ ಮೇಲೆ ಹಾದು ಹೋಗಿರುವ ಹಳಿ ಸೀಳಿದೆ. ರೈಲುಗಾಡಿ ಸಾಗುವಾಗ ಬರುವ ಶಬ್ದ ವ್ಯತ್ಯಾಸದಿಂದ ಇದು ನನಗೆ ಮನದಟ್ಟಾಗುತ್ತಿದೆ. ಅದರ ಮೇಲೆ ರೈಲು ಹೋದರೆ ಅಪಘಾತವಾಗುವುದು ಖಂಡಿತ ಎಂದು ಹೇಳಿದರು. ನಂತರ ಕೂಲಂಕಷವಾಗಿ ಪರೀಕ್ಷಿಸಿದಾಗ ಅಲ್ಲಿ ಹಳಿ ಸೀಳಿರುವುದು ತಿಳಿದುಬಂದಿತು. ಈಗ ಹೆಬ್ಬಾಳ ಕೆರೆಯಿರುವ ಪಕ್ಕದ ಬಂಡೆಯ ಮೇಲೆ ಧ್ಯಾನಸ್ಥರಾಗಿ ಕುಳಿತು ಎಂ.ವಿಯವರು ಕೃಷ್ಣರಾಜ ಸಾಗರ ಅಣೆಕಟ್ಟೆ ಹಾಗೂ ಕಾಲುವೆಗಳ ಜಾಲದ ವಿನ್ಯಾಸ ಮಾಡಿದರೆಂದು ಒಬ್ಬ ಪ್ರೊಫೆಸರ್ ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದರ ಮೂಲಕ ನೆನಪಿಸಿಕೊಂಡು ಎಂ.ವಿಯವರನ್ನು ಕುರಿತಾದ ಮತ್ತೊಂದು ಐತಿಹ್ಯಕ್ಕೆ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. 2007 ರಲ್ಲಿ ಎಂ.ವಿಯವರ ದರ್ಶನ ಮಾಡಿಸಲು ಕೃತಿಯೊಂದನ್ನು ರಚಿಸಿರುವ ಅಧೀಕ್ಷಕ ಇಂಜಿನಿಯರ್ ಒಬ್ಬರು ಅವರ ಹದಿನೈದು ಹೆಸರುಗಳ ‘ನಾಮ ಸ್ಮರಣೆ’ ಮಾಡಿ ಕೊನೆಗೆ ‘ಮಂಗಳಾರತಿ’ಯನ್ನು ಸಹ ಎತ್ತಿದ್ದಾರೆ. ಎಂ.ವಿಯವರು ಯಾವಾಗಲೂ ಎರಡು ಪೆನ್ನು , ಎರಡು ಮೇಣದ ಬತ್ತಿಗಳನ್ನು ಇಟ್ಟುಕೊಂಡಿರುತ್ತಿದ್ದರು. ಅದರಲ್ಲಿ ಒಂದು ಸ್ವಂತ ಕೆಲಸಕ್ಕೆ ಮತ್ತೊಂದು ಸರ್ಕಾರಿ ಕೆಲಸಕ್ಕೆ ಬಳಸುತ್ತಿದ್ದರು. ಅವರು ಯಾವಾಗಲೂ ರಾಜಿನಾಮೆ ಪತ್ರವನ್ನು ಜೇಬಿನಲ್ಲಿ ಇರಿಸಿಕೊಂಡಿರುತ್ತಿದ್ದರು. ಮಹಾರಾಜರಿಗೆ ರಾಜಿನಾಮೆ ಕೊಡಲು ಸರ್ಕಾರಿ ಕಾರಿನಲ್ಲಿ ಹೋದರು. ಹಿಂದಕ್ಕೆ ಬರುವಾಗ ಸ್ವಂತದ ಕಾರಿನಲ್ಲಿ ಬಂದರು ಎನ್ನುವ ಕಥೆಗಳಿವೆ. ಈ ಕಥೆಗಳು ಸರ್ಕಾರಿ ಕೆಲಸ ಮತ್ತು ಖಾಸಗಿ ಜೀವನದ ನಡುವೆ ದಾಟಲಾರದಂತಹ ಸ್ಪಷ್ಟ ಗೆರೆ ಎಳೆಯುವುದೇ ಎಂ.ವಿಯವರ ಗುರಿಯಾಗಿದ್ದಿತು ಎನ್ನುವುದನ್ನು ಸೂಚಿಸುತ್ತವೆ. ಮುಖ್ಯ ಇಂಜಿನಿಯರ್ ಹಾಗೂ ದಿವಾನ ಹುದ್ದೆಯಲ್ಲಿರುವ ಒಬ್ಬ ವ್ಯಕ್ತಿ ಹೀಗೆ ಸಾರ್ವಜನಿಕ ಮತ್ತು ಖಾಸಗಿ ಜೀವನಗಳ ನಡುವೆ ಗೆರೆ ಕೊರೆದಂತೆ ಬದುಕಬಹುದೇ ಎನ್ನುವ ಚರ್ಚೆ ಎಂ.ವಿಯವರ ಆರಾಧನೆಯ ಗಲಾಟೆಯಲ್ಲಿ ಮರೆಯಾಗಿ ಹೋಗಿದೆ. ಎಂ.ವಿಯವರ ಶಿಸ್ತು ಮತ್ತು ಗರಿಯಾದ ಉಡುಪಿನ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ಎಂ.ವಿಯವರು ಮೈಸೂರು ಪೇಟವನ್ನು ತಮ್ಮ ತಲೆಗಿರಿಸಿಕೊಂಡು ಅದನ್ನು ಅಂತಾರಾಷ್ಟ್ರೀಯ ಗೌರವ ದಕ್ಕುವಂತೆ ಮಾಡಿದರೆಂದು ಭಾವಿಸುವವರು ಇದ್ದಾರೆ. ಆದರೆ ಎಂ.ವಿಯವರಿಗೆ ತಾವು ತೊಡುತ್ತಿದ್ದ ಮೈಸೂರು ಪೇಟವನ್ನು ತಾವೇ ಮಡಿಸಿಕೊಳ್ಳಲು ಬರುತ್ತಿರಲಿಲ್ಲ. ಅದಕ್ಕಾಗಿ ತಿಂಗಳಿಗೆ 30 ರೂ ವೇತನದ ಮೇಲೆ ನಿವೃತ್ತ ಶಾಲಾ ಶಿಕ್ಷಕನನ್ನು ನೇಮಿಸಿಕೊಂಡಿದ್ದರು ಎನ್ನುವ ವಾಸ್ತವ ಸಂಗತಿ ಎಲ್ಲಿಯೋ ಅಡಗಿ ಕುಳಿತಿರುತ್ತದೆ . ಯೌವನದಲ್ಲಿಯೇ ವಿವಾಹಗಳ ವೈಫಲ್ಯದಿಂದ ಒಬ್ಬಂಟಿಯಾಗಿದ್ದ ಎಂ.ವಿಯವರು ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನಗಳ ನಡುವಿನ ವ್ಯತ್ಯಾಸವನ್ನೇ ಅಳಿಸಿಬಿಟ್ಟಿದ್ದರು. ಅದು ಅವರಿಗೆ ಅನಿವಾರ್ಯವೂ ಆಗಿದ್ದಿತು. ಈ ಅನಿವಾರ್ಯತೆಯನ್ನು ಸಾರ್ವಜನಿಕ ಸೇವೆಯಲ್ಲಿ ಇರುವ ಪ್ರತಿಯೊಬ್ಬರೂ ತಮ್ಮ ಪ್ರಾಮಾಣಿಕತೆಯನ್ನು ಎತ್ತಿ ತೋರಿಸಲು ಪಾಲಿಸಬೇಕಾದ ನಡವಳಿಕೆ ಎಂಬಂತೆ ಅವರ ಅಭಿಮಾನಿಗಳು ಬಿಂಬಿಸಿದ್ದರು. ಎಂ.ವಿಯವರಲ್ಲಿ ದೈವಿಕ ಗುಣಗಳನ್ನು ಕಂಡ ಅವರ ಅಭಿಮಾನಿಗಳು ಅವರ ಜೀವನ ಪರಿಶುದ್ಧತೆಯಿಂದ ಮೈದಳೆದ , ಪರಿಶುದ್ಧತೆಯಲ್ಲಿ ಬೆಳಗಿದ , ಪರಿಪೂರ್ಣವಾದ ಯಾವ ಒಪ್ಪು-ತಪ್ಪುಗಳೂ ಇಲ್ಲದೆ ಕರಾರುವಾಕ್ಕಾಗಿ, ನಿರ್ಭಾವುಕವಾಗಿ ಘಟಿಸಿದ ಒಂದು ದೈವಿಕ/ಯಾಂತ್ರಿಕ ಲೀಲೆಯೆಂಬಂತೆ ಭಾವಿಸಿ ಹಾಡಿ ಹೊಗಳಿದ್ದಾರೆ. ಎಂ.ವಿಯವರನ್ನು ಕುರಿತಾದ ನೂರಾರು ಐತಿಹ್ಯಗಳಲ್ಲಿ ಅವರ ಮೆದುಳನ್ನು ಪಡೆದು ಅಭ್ಯಸಿಸಲು ಇತರ ದೇಶಗಳ ವಿಜ್ಞಾನಿಗಳು ಪೈಪೋಟಿಗಿಳಿದ ಸಂಗತಿ ವಿದ್ಯಾರ್ಥಿಗಳನ್ನು ಬಹುವಾಗಿ ಕಾಡುವ ಸಂಗತಿಯಾಗಿದ್ದಿತು. ವಿದ್ಯಾರ್ಥಿಗಳಿಗೆ ಎಂ.ವಿಯವರ ತಲೆ ಎಂತಹದಿರಬಹುದು , ಅದು ಎಷ್ಟು ಅದ್ಭುತವಾಗಿದ್ದೀತು ಎನ್ನುವ ಊಹೆಯೇ ಕಕ್ಕಾಬಿಕ್ಕಿಯಾಗಿಸುತ್ತಿದ್ದಿತು. ಅದರೊಂದಿಗೆ ಎಂ.ವಿಯವರು ಬೇರೆಲ್ಲ ಬ್ರಿಟಿಷ್ ಇಂಜಿನಿಯರುಗಳಿಗಿಂತ ಜಾಣರಾಗಿದ್ದರೆಂಬ ಕಲ್ಪನೆಯೇ ಬಹುತೇಕ ವಿದ್ಯಾರ್ಥಿಗಳಿಗೆ ರೋಮಾಂಚನಕಾರಿಯಾಗಿದ್ದಿತು. ಸಿವಿಲ್ ಇಂಜಿನಿಯಂಗ್ ವಿದ್ಯಾಭ್ಯಾಸಕ್ಕೆ ಸೇರಿದ ಎಲ್ಲರೂ ಅಲ್ಪ ಕಾಲದಲ್ಲಿಯೇ ಒಂದು ಸಂಗತಿಯನ್ನು ಗಮನಿಸುತ್ತಾರೆ. ಸಿವಿಲ್ ಇಂಜಿನಿಯರಿಂಗ್’ನಲ್ಲಿ ನೀರು, ಗಾಳಿ, ನೆಲ, ಕಟ್ಟಡ, ರಸ್ತೆ, ಹೆದ್ದಾರಿ, ಸೇತುವೆ , ನೀರಾವರಿ, ನೀರು ಸರಬರಾಜು ,ನೈರ್ಮಲ್ಯ , ಪರಿಸರ ಮುಂತಾದ ಶಾಖೆಗಳಿಗೆ ಸೇರಿದ ನೂರಾರು ಕ್ಲಿಷ್ಟ ಸೂತ್ರಗಳು, ಲೆಕ್ಕಾಚಾರಗಳು, ಪರಿಕಲ್ಪನೆಗಳು, ಗಹನವಾದ ಗಣಿತದ ಮಾದರಿಗಳು ತುಂಬಿ ತುಳುಕುತ್ತವೆ. ಅವುಗಳಲ್ಲಿ ಅಯ್ಲರ್ , ಬರ್ನೂಲಿ , ರೆನಾಲ್ಡ್ , ಹಾರ್ಡಿಕ್ರಾಸ್, ಕ್ಯಾನೆ, ಮುಲ್ಲರ್, ಬ್ರೆಸ್ಲೆ , ಥಾಮಸ್ ಯಂಗ್ , ರಾಬರ್ಟ್ ಹುಕ್ , ಬೆಟ್ಟಿ , ಮೊಹ್ರ್, ಟೆರ್ಝಗಿ ಮುಂತಾದ ನೂರಾರು ಭಾರತೀಯೇತರ ಹೆಸರುಗಳಿರುವುವೇ ಹೊರತು ಒಂದೂ ಭಾರತೀಯ ಹೆಸರಿಲ್ಲ. ನೀರಾವರಿ ಹಾಗೂ ನೀರಿಗೆ ಸಂಬಂಧಿತ ವಿಷಯದಲ್ಲಿಯೂ ಕೂಡ ಬರ್ನೂಲಿ, ಅಯ್ಲರ್, ರೆನಾಲ್ಡ್, ಛೆಜಿ , ರಂಗೂಲಿ, ಕುಟ್, ಸ್ಟೋಕ್ಸ್ ,ಸ್ಟ್ರೇಂಜ್, ಮ್ಯಾನಿಂಗ್ ,ಇಂಗ್ಲಿಸ್ , ಸಿಪ್ಪೊಲೆಟ್ಟಿ ,ರೇನಾಲ್ಡ್ಸ್ ಮುಂತಾದ ನೂರಾರು ಹೆಸರುಗಳು ಎದುರಾಗುತ್ತವೆ. ನೀರಾವರಿ ಮತ್ತು ನೀರು ಸರಬರಾಜು ಇಂಜಿನಿಯರಿಂಗ್’ನಲ್ಲಿ ಖ್ಯಾತರೆಂದು ಹೆಸರಾದ ಸರ್.ಎಂ.ವಿಯವರ ಹೆಸರು ಎಲ್ಲಿಯೂ ಕಾಣದಿರುವುದು ಸೋಜಿಗ ಉಂಟುಮಾಡುತ್ತದೆ. ಎಂ.ವಿಯವರ ಸಮಕಾಲೀನ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ಕುರಿತಾದ ಹಲವಾರು ವಿದ್ವತ್ ತಾಂತ್ರಿಕ ಪತ್ರಿಕೆಗಳಲ್ಲಿ ,ಸಂಶೋಧನಾ ಗ್ರಂಥಗಳಲ್ಲಿ ಎಂ.ವಿಯವರ ಹೆಸರು ಎಲ್ಲಿಯೂ ಕಂಡುಬರುವುದಿಲ್ಲ. 1950-60 ರ ದಶಕಗಳಿಂದ ಭಾರತೀಯ ಇಂಜಿನಿಯರ್’ಗಳು ಸಿವಿಲ್ ಇಂಜಿನಿಯರಿಂಗ್ ಸಂಶೋಧನೆಯಲ್ಲಿ ಸಾಕಷ್ಟು ಮಟ್ಟಿಗೆ ಕಾಣಿಸಿಕೊಳ್ಳತೊಡಗುತ್ತಾರೆ. ನೈಸರ್ಗಿಕ ನಿಯಮಗಳನ್ನು ಮಾನವನ ಅನುಕೂಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದೇ ತಂತ್ರಜ್ಞಾನ- ಇದು ಎಲ್ಲ ಇಂಜಿನಿಯರಿಂಗ್ ಶಾಖೆಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಈ ಅಳವಡಿಕೆ, ಬಳಕೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಬೇರೆ ಇಂಜಿನಿಯರ್’ಗಳಿಗಿಂತ ಭಿನ್ನ .ಉಳಿದ ಇಂಜಿನಿಯರಿಂಗ್ ಶಾಖೆಗಳ ಚಟುವಟಿಕೆಗಳು ಬಹುತೇಕ ಮಾನವ ನಿಯಂತ್ರಿತ ಪರಿಸರದಲ್ಲಿ ನಡೆದರೆ ಸಿವಿಲ್ ಎಂಜಿನಿಯರಿಂಗ್’ನಲ್ಲಿ ಪಂಚಭೂತಗಳು- ನೆಲ, ನೀರು, ಗಾಳಿ , ಬೆಂಕಿ, ಆಕಾಶ-ನೇರವಾಗಿ ಮುಖಾಮುಖಿಯಾಗುತ್ತವೆ. ಈ ಮುಖಾಮುಖಿ ಅತ್ಯಂತ ಸಂಕೀರ್ಣವಾಗಿದ್ದು ತಾಂತ್ರಿಕ , ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಯಂತ್ರಗಳ ನಿರ್ಮಾಣದಲ್ಲಿ ಹಲವಾರು ಜಟಿಲ ಸವಾಲುಗಳಿವೆಯಾದರೂ ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್ ತಾನು ಹೊಸದಾಗಿ ಗುರುತಿಸಿದ ತಾಂತ್ರಿಕ ಸಾಧ್ಯತೆಗಳನ್ನು ಮತ್ತು ಅದರ ಆಗು, ಹೋಗುಗಳನ್ನು ನಿಯಂತ್ರಿತ ಪರಿಸರದಲ್ಲಿ ಮಾಡಬಹುದು. ವಿದ್ಯುತ್ ಮೋಟಾರ್, ರಾಸಾಯನಿಕಗಳ ತಯಾರಿಕೆ, ವಿದ್ಯುನ್ಮಾನ ಮಂಡಲಗಳ ತಯಾರಿಕೆಗಳಿಗೂ ಇದು ಸಲ್ಲುತ್ತದೆ. ಒಬ್ಬ ಸಿವಿಲ್ ಇಂಜಿನಿಯರ್ ಎಷ್ಟೇ ಜಾಣನಾಗಿರಲಿ ತಾನು ಪರಿಕಲ್ಪಿಸಿಕೊಂಡ ತಾಂತ್ರಿಕ ಸಾಧ್ಯತೆಗಳ ಮೇಲೆ ನೇರವಾಗಿ ಒಂದು ಕಟ್ಟಡವನ್ನಾಗಲಿ , ಅಣೆಕಟ್ಟೆಯನ್ನಾಗಲಿ ಅಥವಾ ಸೇತುವೆಯನ್ನಾಗಲಿ ಕಟ್ಟಿ ಅವುಗಳ ಆಗು ಹೋಗುಗಳನ್ನು ತಿಳಿಯುವಂತಿಲ್ಲ. ಆದ್ದರಿಂದ ಸಿವಿಲ್ ಇಂಜಿನಿಯರಿಂಗ್’ನಲ್ಲಿ ಹೆಚ್ಚಿನ ಇಂಜಿನಿಯರ್’ಗಳಿಂದ ಮಾನ್ಯತೆ ಪಡೆದ ಸಿದ್ಧಾಂತ ಹಾಗೂ ಸಂಶೋಧನೆಗಳಿಂದ ದೃಢಪಟ್ಟ ಸಂಗತಿಗಳನ್ನು ಮಾತ್ರ ಸಾರ್ವಜನಿಕ ಬಳಕೆಗೆ ತರಲು ಸಾಧ್ಯ. ಒಂದು ಯಂತ್ರ, ಕಾರು ಅಥವಾ ಮೊಬೈಲ್ ತಯಾರಿಕೆಯ ಕಂಪೆನಿ ತಾನು ತಯಾರಿಸಿದ ದೋಷಪೂರಿತ ಸರಕನ್ನು ಹಿಂದಕ್ಕೆ ಪಡೆಯುವುದು , ಸರಿಪಡಿಸುವುದು ಸಾಧ್ಯ. ಆದರೆ ಸಿವಿಲ್ ಇಂಜಿನಿಯರ್ ಕಟ್ಟಿದ ಒಂದು ದೋಷಪೂರಿತ ಕಟ್ಟಡ , ಆಣೆಕಟ್ಟೆ , ಸೇತುವೆಗಳನ್ನು ಸುಲಭವಾಗಿ ಸರಿಪಡಿಸಲಾಗಲಿ ಅಥವಾ ತೆರವುಗೊಳಿಸಲಾಗಲಿ ಸಾಧ್ಯವಿರದೆ ತನ್ನದೇ ಆದ ಸಾಮಾಜಿಕ , ಆರ್ಥಿಕ ಪರಿಣಾಮಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಸಿವಿಲ್ ಇಂಜಿನಿಯರಿಂಗ್ ಚಟುವಟಿಕೆಯ ಹಿನ್ನೆಲೆಯಲ್ಲಿ ವಿಸ್ತೃತ ಲೆಕ್ಕಗಳು ಇರುತ್ತವೆ. ಇಂತಹ ಲೆಕ್ಕಗಳನ್ನು ಮಾಡುವಾಗ ಅನುಸರಿಸಬೇಕಾದ ತಾಂತ್ರಿಕ ಮಾರ್ಗದರ್ಶಿ ಸೂತ್ರಗಳಿರುತ್ತವೆ. ಇವುಗಳನ್ನು ಸಿವಿಲ್ ಇಂಜಿನಿಯರಿಂಗ್ ಸಮುದಾಯ ‘ಕೋಡ್ ಆಫ್ ಪ್ರಾಕ್ಟೀಸ್’ (ಅನುಷ್ಠಾನ ಸಂಹಿತೆ) ಎಂದು ಗುರುತಿಸುತ್ತಾರೆ. ಈಗ ನಿರ್ಮಾಣವಾಗುತ್ತಿರುವ ಜಗತ್ತಿನ ಎಲ್ಲ ಸಿವಿಲ್ ಇಂಜಿನಿಯರಿಂಗ್ ಯೋಜನೆಗಳ ಹಿನ್ನೆಲೆಯಲ್ಲಿ ಈ ‘ಕೋಡ್ ಆಫ್ ಪ್ರಾಕ್ಟೀಸ್’ ಸಕ್ರಿಯವಾಗಿವೆ. ಇವು ಇಂಜಿನಿಯರ್’ಗಳನ್ನು ನಿರ್ದಿಷ್ಟ ಶಿಸ್ತಿಗೆ ಒಳಪಡಿಸಿ, ಇಂಜಿನಿಯರಿಂಗ್ ಮೂಲ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕಾದಾಗ ಅನುಸರಿಸಬೇಕಾದ ಚೌಕಟ್ಟನ್ನು ಒದಗಿಸುತ್ತವೆ. ಯಾವುದೇ ಹೊರಹೊಮ್ಮುತ್ತಿರುವ ಇಂಜಿನಿಯರಿಂಗ್’ನಲ್ಲಿ ಅದರೊಂದಿಗೆ ಅದನ್ನು ಬಳಸುವ ಮಾರ್ಗದರ್ಶಿ ಸೂತ್ರಗಳು , ಪಾಲಿಸಲೇಬೇಕಾದ ಸಂಹಿತೆ -‘ಕೋಡ್ ಆಫ್ ಪ್ರಾಕ್ಟೀಸ್- ಜೊತೆ ಜೊತೆಯಾಗಿ ಬೆಳೆದು ಬರುತ್ತದೆ. ಈ ಹಿನ್ನೆಲೆಯಲ್ಲಿ ಎಂ.ವಿಯವರು ಹಲವಾರು ನೀರು ಸರಬರಾಜು ಹಾಗೂ ನೀರಾವರಿ ಯೋಜನೆಗಳನ್ನು ವಿನ್ಯಾಸಗೊಳಿಸುತ್ತಿದ್ದಾಗ , ಆಣೆಕಟ್ಟಿನ ವಿನ್ಯಾಸ ಮಾಡಿದಾಗ ಯಾವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತಿದ್ದರು. ಆ ಕಾಲದಲ್ಲಿ ‘ಅನುಷ್ಠಾನ ಸಂಹಿತೆ’ಗಳು ಇದ್ದವೇ ? ಅವುಗಳನ್ನು ಯಾರು ತಯಾರಿಸಿದ್ದರು ಎನ್ನುವ ಸಂಶಯಗಳು ಎದುರಾಗುತ್ತವೆ. ಎಂ.ವಿಯವರು ಕೃಷ್ಣರಾಜ ಸಾಗರ ಆಣೆಕಟ್ಟೆಯನ್ನು ವಿನ್ಯಾಸಗೊಳಿಸಿದಾಗ ಅವರೊಂದಿಗೆ ದುಡಿದ ಇಂಜಿನಿಯರ್’ಗಳ ತಂಡದಲ್ಲಿ ಯಾರಿದ್ದರು ? ಆವರು ಆ ಕಾಲದಲ್ಲಿ ಲಭ್ಯವಿದ್ದ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು , ಅಣೆಕಟ್ಟೆಯ ವಿನ್ಯಾಸಕ್ಕೆ ಬಳಸಿಕೊಂಡಿದ್ದರೆ ಎನ್ನುವ ಕುತೂಹಲ ಮೂಡುತ್ತದೆ. ಆದರೆ ಈ ಕುತೂಹಲವನ್ನು ತಣಿಸುವ ಯಾವುದೇ ವಿವರಗಳು ಸುಲಭವಾಗಿ ಲಭ್ಯವಾಗುವುದಿಲ್ಲ. ಎಂ.ವಿಯವರಿಗೆ ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಖ್ಯಾತಿ ತಂದಿತ್ತ , ಹಳೆ ಮೈಸೂರು ಪ್ರದೇಶದಲ್ಲಿ ಅವರನ್ನು ದೈವತ್ವದ ಮಟ್ಟಕ್ಕೇರಿಸಿದ ಘಟನೆ ಎಂದರೆ ಕೃಷ್ಣರಾಜ ಸಾಗರ ಆಣೆಕಟ್ಟೆಯ ನಿರ್ಮಾಣ. ಎಂ.ವಿಯವರೇ ಬರೆದ ಅವರ ವೃತ್ತಿ ಜೀವನದ ವಿವರಗಳಲ್ಲಿ ಆಸ್ವಾನ್ ನಂತಹ ದೊಡ್ಡ ಆಣೆಕಟ್ಟನ್ನು ಕಂಡಿದ್ದ , ಬಾಂಬೆ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ದೇಶದ ಹಲವು ಕಡೆಯಲ್ಲಿದ್ದ ಸಾಕಷ್ಟು ದೊಡ್ಡ ಆಣೆಕಟ್ಟೆಗಳನ್ನು ಬಲ್ಲ ನನಗೆ ಕೃಷ್ಣರಾಜ ಸಾಗರ ಆಣೆಕಟ್ಟೆಯನ್ನು ವಿನ್ಯಾಸಗೊಳಿಸಲು ಹೆಚ್ಚೇನೂ ಶ್ರಮವಾಗಲಿಲ್ಲ ಎಂದು ದಾಖಲಿಸಿದ್ದಾರೆ. ಅವರ ವೃತ್ತಿಜೀವನದ ವಿವರಗಳು ಯಾವುದೇ ತಾಂತ್ರಿಕ ವಿವರಗಳಿಗೆ ಆಸ್ಪದ ಕೊಡದೆ ಕೇವಲ ಸಾಮಾನ್ಯ ಕಥೆಯಂತೆ ಸಾಗುತ್ತವೆ. ಆದ್ದರಿಂದ ಎಂ.ವಿಯವರ ಹಿನ್ನೆಲೆಯಲ್ಲಿ ಇದ್ದ ಸಿವಿಲ್ ಇಂಜಿನಿಯರಿಂಗ್ ಸ್ವರೂಪ ಹೇಗಿದ್ದಿತು ಎನ್ನುವ ಪ್ರಶ್ನೆ ಯಾವುದೇ ಸಿವಿಲ್ ಇಂಜಿನಿಯರ್’ಗೆ ಎದುರಾದರೆ ಸೋಜಿಗವೇನಿಲ್ಲ. ಎಂ.ವಿ ಯವರ ಬುದ್ಧಿಶಕ್ತಿಯ ಬಗ್ಗೆ ಅಪಾರ ವಿಶ್ವಾಸ ಇಟ್ಟವರಿಗೆ ಇಂತಹ ಸರಳೀಕೃತ ಹೇಳಿಕೆಗಳು ಸಾಕು. ಆದರೆ ಒಬ್ಬ ಸಿವಿಲ್ ಇಂಜಿನಿಯರ್’ಗೆ ಇಂತಹ ಸರಳ ಹೇಳಿಕೆಗಳು ಖಂಡಿತ ತೃಪ್ತಿ ನೀಡಲಾರದು. ಸಾರ್ವಜನಿಕ ಸೇವೆಯಲ್ಲಿರುವಾಗ ಯಾವುದೇ ವ್ಯಕ್ತಿ ಒಂದು ನಿರ್ದಿಷ್ಟ ಹುದ್ದೆಯಲ್ಲಿರುತ್ತಾನೆ. ಆ ಹುದ್ದೆಯ ಅಂಗವಾಗಿಯೇ ಕೆಲಸಗಳನ್ನು ನಡೆಸುತ್ತಾನೆ. ಅಲ್ಲಿ ಹುದ್ದೆ ಪ್ರಮುಖವೇ ಹೊರತು ಅದನ್ನು ಅಲಂಕರಿಸಿದ ವ್ಯಕ್ತಿಯಲ್ಲ. ಬ್ರಿಟಿಷ್ ಆಡಳಿತ ಕಾಲದಲ್ಲಿ ಆಣೆಕಟ್ಟೆಯ ವಿನ್ಯಾಸ ಹಾಗೂ ನಿರ್ಮಾಣದ ನೇತೃತ್ವ ವಹಿಸಿದ್ದ ಮುಖ್ಯ ಇಂಜಿನಿಯರ್’ಗಳ ಹೆಸರನ್ನೇ ಹಲವು ಆಣೆಕಟ್ಟೆ ಮತ್ತು ಜಲಾಶಯಗಳಿಗೆ ಇಡಲಾಗಿದ್ದಿತು. ನಂತರ ಇಂತಹ ಪದ್ದತಿಯನ್ನು ಕೈಬಿಡಲಾಯಿತು. ಸ್ವಾತಂತ್ರ ಬಂದ ಹೊಸತರಲ್ಲಿ ಹಾಗೂ ನಂತರ ಹಲವಾರು ದೊಡ್ಡ ಆಣೆಕಟ್ಟೆಗಳ ನಿರ್ಮಾಣ ನಡೆದಿವೆ. ದೇಶಕ್ಕೆ ಸ್ವಾತಂತ್ರ ಬಂದ ಹೊಸತರಲ್ಲಿ ಸವಾಲು ಎನಿಸಬಹುದಾದಂತಹ ಭಾಕ್ರಾ ಆಣೆಕಟ್ಟೆಯನ್ನು ನಿರ್ಮಿಸಲಾಯಿತು. ಇದರ ವಿನ್ಯಾಸ ಹಾಗೂ ನಿರ್ಮಾಣವನ್ನು ಹಲವಾರು ಜನ ಇಂಜಿನಿಯರ್’ಗಳು ವಹಿಸಿಕೊಂಡಿದ್ದರು. ಇವರಲ್ಲಿ ಯಾರಾದರು ಒಬ್ಬ ಮುಖ್ಯ ಇಂಜಿನಿಯರ್’ನನ್ನು ಆ ಆಣೆಕಟ್ಟೆಯ ಶಿಲ್ಪಿ ಎನ್ನಬಹುದೇ ಎನ್ನುವ ಪ್ರಶ್ನೆ ಸದಾ ಎದುರಿಗಿರುತ್ತದೆ. ಆಣೆಕಟ್ಟೆಯ ನಿರ್ಮಾಣ ಯಾವಾಗಲೂ ಸಾಮೂಹಿಕ ಶ್ರಮ ಆಗಿರುತ್ತದೆಯೇ ಹೊರತು ಏಕ ವ್ಯಕ್ತಿಯದಲ್ಲ. ಯಾವುದೇ ಯೋಜನೆಯ ಮುಂದಾಳತ್ವ ವಹಿಸಿದಾತ ಉಳಿದವರ ಭುಜದ ಮೇಲೆ ನಿಂತಿರುತ್ತಾನೆ. ಸಹಾಯಕ , ಕಾರ್ಯ ನಿರ್ವಾಹಕ ಇಂಜಿನಿಯರ್ ಆದಾಗ ಮಾಡಿದ ಕೆಲಸಗಳನ್ನು ಎಂ.ವಿಯವರು ನಾನು ಮಾಡಿದೆ ಎಂದು ಹೇಳುತ್ತಾರೆ. ಅಲ್ಲಿ ಮುಖ್ಯ ಇಂಜಿನಿಯರ್ ಹೆಸರನ್ನು ಹೇಳುವುದಿಲ್ಲ. ಮುಖ್ಯ ಇಂಜಿನಿಯರ್ ಆದಾಗಲೂ ನಾನು ಮಾಡಿದೆ ಎನ್ನುತ್ತಾರೆಯೇ ಹೊರತು ಸಹಾಯಕ , ಕಾರ್ಯ ನಿರ್ವಾಹಕ ಇಂಜಿನಿಯರ್’ಗಳ ಹೆಸರನ್ನು ಹೇಳುವುದಿಲ್ಲ. ನನ್ನ ನೇತೃತ್ವದ ತಂಡ ಇದನ್ನು ಮಾಡಿತು ಎಂದು ಅವರು ಎಲ್ಲಿಯೂ ಹೇಳುವುದಿಲ್ಲ. ಹಾಗಾದರೆ ಎಂ.ವಿಯವರ ಸಾಧನೆಗಳು ಅವರ ವೈಯಕ್ತಿಕ ಖಾತೆಗೆ ಸೇರುತ್ತವೆಯೇ ಅಥವಾ ಇಂಜಿನಿಯರ್’ಗಳ ಸಾಮೂಹಿಕ ಪರಿಶ್ರಮದ ಫಲಗಳೇ ಎನ್ನುವ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಇದಕ್ಕೆ ಅಪವಾದವೆಂಬಂತೆ ಅವರು ನಿವೃತ್ತರಾದ ನಂತರ ಹೈದರಾಬಾದಿನ ಈಸಿ ಹಾಗೂ ಮೂಸಿ ನದಿಗಳ ಪ್ರವಾಹ ನಿಯಂತ್ರಣಕ್ಕೆ ಕೈಗೊಂಡ ಅಧ್ಯಯನ, ವಿನ್ಯಾಸಗಳಲ್ಲಿ ನೆರವಾದ ಇತರ ಇಬ್ಬರನ್ನು ನೆನೆದಿದ್ದಾರೆ. ಒಬ್ಬ ವ್ಯಕ್ತಿಯ ವೃತ್ತಿ ಜೀವನ ಚರಿತ್ರೆ ಆತನ ವೃತ್ತಿ ಜೀವನದ ಏಳು ಬೀಳು , ಸಾಧನೆ-ವೈಫಲ್ಯ, ವಿಮರ್ಶೆ–ಟೀಕೆಗಳನ್ನು ಹಂಚಿಕೊಳ್ಳುವ, ಆತ್ಮ ವಿಮರ್ಶೆ ಮಾಡಿಕೊಳ್ಳುವ, ತನ್ನ ಇತಿ ಮಿತಿಗಳನ್ನು ಗುರುತಿಸಿಕೊಳ್ಳುವ , ವೃತ್ತಿ ಬಾಂಧವರನ್ನು ಎಚ್ಚರಿಸುವ , ಹುರಿದುಂಬಿಸುವ ಮಾಧ್ಯಮವಾಗಿರಬೇಕು. ಎಂ.ವಿಯವರ ‘ಮೆಮೊಯಿರ್ಸ್ ಆಫ್ ಮೈ ವರ್ಕಿಂಗ್ ಲೈಫ್’ ಇಂತಹ ಯಾವ ಲಕ್ಷಣಗಳನ್ನೂ ಹೊಂದಿಲ್ಲ. ಎಂ.ವಿಯವರು ತಮ್ಮ ವೃತ್ತಿ ಜೀವನವನ್ನು ತಮ್ಮ ನಿರ್ದಿಷ್ಟ ಅಭಿಪ್ರಾಯಗಳಿಗೆ ಸರಿ ಹೊಂದುವಂತೆ, ತಾವು ನಂಬಿದ ಸಾರ್ವಜನಿಕ ನೀತಿಗಳಿಗೆ ಅನುಗುಣವಾಗುವಂತೆ ಹೇಳುತ್ತಾ ಹೋಗಿದ್ದಾರೆ. ಎಂ.ವಿಯವರ ಈ ಆತ್ಮ ಚರಿತ್ರೆಯಲ್ಲಿ ವ್ಯಕ್ತಿಗಳನ್ನು ರೂಪಿಸುವ , ಸಮಾಜವನ್ನು ಸುಧಾರಿಸುವ , ಸಾರ್ವಜನಿಕ ಜೀವನವನ್ನು ಹಸನುಗೊಳಿಸುವ ಹಾಗೂ ಆಣೆಕಟ್ಟೆ ಕಟ್ಟುವ ಕೆಲಸಗಳ ನಡುವೆ ಯಾವುದೇ ವ್ಯತ್ಯಾಸವೂ ಕಾಣಿಸದು. ಎಂ.ವಿಯವರ ವೃತ್ತಿ ಜೀವನ ದಾಖಲಾತಿಯನ್ನು ಹೊರತು ಪಡಿಸಿದರೆ ಅವರು ಬಾಂಬೆ ಸರ್ಕಾರದ ಇಂಜಿನಿಯರ್ ಹಾಗೂ ಸಮಾಲೋಚಕ ಇಂಜಿನಿಯರ್ ಆಗಿ ಸಲ್ಲಿಸಿದ ಯೋಜನಾ ವರದಿಗಳ ಮೂಲಕ ತಿಳಿಯಬಹುದು. ಎಂ.ವಿಯವರು ಈ ಕೃತಿಯನ್ನು ತಮ್ಮ ೯೦ ನೇ ವಯಸ್ಸಿನಲ್ಲಿ ತಮ್ಮ ಹಳೆಯ ದಿನಚರಿಗಳನ್ನು ಆಧಾರವಾಗಿರಿಸಿಕೊಂಡು ಬರೆದಿರುವಂತೆ ಕಾಣುತ್ತದೆ. 'ಮೆಮೊಯಿರ್ಸ್ ಆಫ್ ಮೈ ವರ್ಕಿಂಗ್ ಲೈಫ್’ ವೃತ್ತಿ ನಿರತ ಇಂಜಿನಿಯರ್ ಒಬ್ಬನ ದೃಷ್ಟಿಯಲ್ಲಿ ಯಾವುದೇ ಒಳನೋಟಗಳನ್ನು ನೀಡದ , ಸ್ಫೂರ್ತಿ ಒದಗಿಸದ ನೀರಸವಾದ ಕೃತಿ. ಸಾರ್ವಜನಿಕ ಹಣದಲ್ಲಿ ಕೈಗೆತ್ತಿಕೊಳ್ಳುವ ದೊಡ್ಡ ಇಂಜಿನಿಯರಿಂಗ್’ ಕೆಲಸಗಳ ಯೋಜನೆಯ ವಿನ್ಯಾಸ , ವಿವರವಾದ ವರದಿ ತಯಾರಿಕೆ , ವೆಚ್ಚ ನಿರ್ಧಾರಗಳಲ್ಲಿ ಯಾವ ಎಚ್ಚರಗಳನ್ನು ವಹಿಸಬೇಕು, ಯೋಜನೆಗಳನ್ನು ಜಾರಿಗೊಳಿಸುವಾಗ ಅನುಸರಿಸಬೇಕಾದ ನಿರ್ವಹಣೆಯ ಮಾರ್ಗದರ್ಶಿ ಸೂತ್ರಗಳು ಹೇಗಿರಬೇಕು , ಅನಿರೀಕ್ಷಿತ ಸನ್ನಿವೇಶಗಳು ತಂದೊಡ್ಡುವ ಅಧಿಕ ವೆಚ್ಚಗಳನ್ನು ಯೋಜನೆಯಲ್ಲಿ ಹೇಗೆ ಪರಿಗಣಿಸಬೇಕು , ಆಪತ್ತಿನ ಸನ್ನಿವೇಶಗಳನ್ನು ಎದುರಿಸಲು ಎಂತಹ ಬದಲಿ ಚಿಂತನೆಗಳನ್ನು ರೂಪಿಸಕೊಳ್ಳಬೇಕು , ಆಣೆಕಟ್ಟೆಯಂತಹ ದೊಡ್ಡ ನಿರ್ಮಾಣದ ಕೆಲಸದ ನಿರ್ವಹಣೆ ಎಷ್ಟು ಹಂತ ಮತ್ತು ಯಾವ ಹೊಣೆಗಾರಿಕೆಯಲ್ಲಿ ಇದ್ದರೆ ಉತ್ತಮ, ಇಂತಹ ದೊಡ್ಡ ಯೋಜನೆಗಳಲ್ಲಿ ಸಾಮೂಹಿಕ ಹೊಣೆಗಾರಿಕೆಯ ಸ್ವರೂಪ ಎಂತಹದಿರಬೇಕು , ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ಯೋಜನೆಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಮತ್ತು ಅವುಗಳನ್ನು ಭಾರತದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವೇ , ಸಾಧ್ಯವಲ್ಲದಿದ್ದರೆ ಎಂತಹ ಬದಲಿ ದಾರಿಗಳನ್ನು ಕಂಡುಕೊಳ್ಳಬೇಕು , ಕನ್ನಂಬಾಡಿ ಆಣೆಕಟ್ಟೆಯಂತಹ ದೊಡ್ದ ಯೋಜನೆಯಲ್ಲಿ ತಾಂತ್ರಿಕ ಮತ್ತು ನಿರ್ವಹಣೆಯ ದೃಷ್ಟಿಯಲ್ಲಿ ಎದುರಿಸಿದ ಅಡೆತಡೆಗಳು ಹೇಗಿದ್ದವು , ಅವುಗಳನ್ನು ಹೇಗೆ ನಿವಾರಿಸಿಕೊಳ್ಳಲಾಯಿತು , ಸುರ್ಕಿ ಗಾರೆ ತಯಾರಿಸಲು ಬೇಕಾದ ಉರುವಲಿಗೆ ಎಷ್ಟು ಪ್ರಮಾಣದ ಕಾಡನ್ನು ಕಡಿಯಲಾಯಿತು , ಮುಂದೆ ಇಂತಹುದೇ ಆದ ಹಲವಾರು ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡರೆ ಮುಂದಿನ ದಿನಗಳಲ್ಲಿ ಆಗಬಹುದಾದ ಪರಿಣಾಮಗಳು ಹೇಗಿರಬಹುದು ಎನ್ನುವಂತಹ ಒಬ್ಬ ವೃತ್ತಿನಿರತ ಇಂಜಿನಿಯರ್ ಬಯಸುವ ತಾಂತ್ರಿಕ ಪ್ರಾಮುಖ್ಯದ ಚರ್ಚೆಗಳು ಎಂ.ವಿಯವರ ಲೇಖನಿಯಿಂದ ಹೊರಗುಳಿದಿವೆ. ಕನ್ನಂಬಾಡಿ ಆಣೆಕಟ್ಟೆ ಕಟ್ಟಿದ ನಂತರ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರ ಅದೆಷ್ಟೋ ಮುನ್ನಡೆ ಸಾಧಿಸಿದ್ದಿತು. ಇದರ ಹಿನ್ನೆಲೆಯಲ್ಲಿ ತಾವು ಬಳಸಿದ , ತಮ್ಮ ಕಾಲದಲ್ಲಿದ್ದ ತಂತ್ರಜ್ಞಾನವನ್ನು ಹೋಲಿಸಿ ವಿಮರ್ಶಿಸುವ ಬದಲು ಎಂ.ವಿಯವರು ದಿನಚರಿಯ ರೂಪದಲ್ಲಿ ತಮ್ಮ ಕೆಲಸದ ಕಥೆ ಹೇಳಿದ್ದಾರೆ. ಎಂ.ವಿಯವರು ಕನ್ನಂಬಾಡಿ ಆಣೆಕಟ್ಟೆಯ ವಿನ್ಯಾಸ ಮತ್ತು ವೆಚ್ಚ ನಿರ್ಧಾರ ಮಾಡಿದ್ದರು. ಈ ಆಣೆಕಟ್ಟೆಯ ನಿರ್ಮಾಣ ಕಾರ್ಯ ಮುಂದಿನ 20 ವರ್ಷಗಳ ಕಾಲ ಸಾಗಿತು. ಮೂಲ ವರದಿಯಲ್ಲಿ ಎಷ್ಟು ವರ್ಷಗಳ ಅವಧಿಯನ್ನು ಪರಿಗಣಿಸಲಾಗಿದ್ದಿತು , ಯಾವುದೇ ಕಾರಣಕ್ಕೆ ನಿಯಂತ್ರಣ ತಪ್ಪಿ ಅವಧಿಯನ್ನು ಮೀರಿ ಯೋಜನೆ ಮುಂದುವರೆದರೆ ಆ ಅವಧಿಯ ನಂತರ ಆಗುವ ದರ ವ್ಯತ್ಯಾಸ ಹಾಗೂ ವೆಚ್ಚ ಹೆಚ್ಚಳವನ್ನು ಯಾವ ರೀತಿ ಪರಿಗಣಿಸಲಾಗಿದ್ದಿತು ಎನ್ನುವ ಮಹತ್ತ್ವದ ಸಂಗತಿಗಳಿಗೆ ಎಂ.ವಿಯವರ ನೆನಪಿನ ಸರಮಾಲೆಯಲ್ಲಿ ಯಾವುದೇ ಜಾಗ ಸಿಕ್ಕಿಲ್ಲ. ಬಾಂಬೆ ಪುನರುಜ್ಜೀವನ ಕೆಲಸದ ತನಿಖೆಯ ಸಮಿತಿಯ ತಾಂತ್ರಿಕ ಸದಸ್ಯರಾಗಿದ್ದ ಎಂ.ವಿಯವರು 1912 ಮತ್ತು 1919 ನಡುವಿನ ಏಳು ವರ್ಷಗಳ ಅವಧಿಯಲ್ಲಿ ನಿರ್ಮಾಣ ಸಾಮಗ್ರಿಗಳ ಬೆಲೆಯಲ್ಲಿ 75% ಹಾಗೂ ಕೂಲಿಯಲ್ಲಿ 100% ಹೆಚ್ಚಳವಾಗಿವೆ ಎಂದು ದಾಖಲಿಸಿದ್ದಾರೆ. ಕನ್ನಂಬಾಡಿ ಆಣೆಕಟ್ಟೆಯ ನಿರ್ಮಾಣ 20 ವರ್ಷಗಳ ದೀರ್ಘಾವಧಿಯಲ್ಲಿ ಜರುಗಿದುದರಿಂದ ಆ ಯೋಜನೆಯಲ್ಲಿ ದರ ಏರಿಕೆಯ ಬಿಸಿ ಕಂಡುಬರಲಿಲ್ಲವೇ ? ಅಂತಹ ದರ ಏರಿಕೆಯನ್ನು ವೆಚ್ಚ ಅಂದಾಜು ಪಟ್ಟಿ ಮಾಡುವಾಗಲೇ ಪರಿಗಣಿಸಲಾಗಿದ್ದಿತೇ ? ಅಂದಾಜು ವೆಚ್ಚದೊಳಗೆ ಯೋಜನೆ ಪೂರ್ಣಗೊಂಡಿತೇ , ಹಾಗೆ ಪೂರ್ಣಗೊಂಡಿದ್ದರೆ ಇಪ್ಪತ್ತು ವರ್ಷಗಳಲ್ಲಿ ಆದ ದರಗಳ ವ್ಯತ್ಯಾಸಗಳು ಅದರ ಮೇಲೆ ಯಾವ ಪ್ರಭಾವ ಬೀರಲಿಲ್ಲವೇ ಹಾಗೂ ಕನ್ನಂಬಾಡಿ ಆಣೆಕಟ್ಟೆ ಯೋಜನೆಯನ್ನು ಪೂರ್ಣಗೊಳಿಸಿದಾಗ ನಿಜವಾಗಿಯೂ ಆದ ವೆಚ್ಚವೆಷ್ಟು ಎನ್ನುವ ತಾಂತ್ರಿಕ ಕುತೂಹಲಕಾರಿ ಅಂಶಗಳು ಎಂ.ವಿಯವರ ದೃಷ್ಟಿಯಲ್ಲಿ ಅಪ್ರಸ್ತುತವೆನಿಸಿವೆ. ಈ ಕೃತಿಯಲ್ಲಿ ಎಂ.ವಿಯವರು ತಾವು ತಯಾರಿಸಿದ ಯೋಜನೆ , ಸಲ್ಲಿಸಿದ ವರದಿ, ಮಾಡಿದ ಕೆಲಸಗಳು, ನಿರ್ವಹಿಸಿದ ಜವಾಬ್ದಾರಿಗಳನ್ನು ಯಾವುದೇ ಸೂಕ್ತ ಹಿನ್ನೆಲೆ ಮತ್ತು ವಿವರಣೆಗಳಿಲ್ಲದೆ ಏಕತಾನತೆಯಲ್ಲಿ ಹೇಳುತ್ತಾ ಹೋಗಿದ್ದಾರೆ. ಇದು ಒಬ್ಬ ವ್ಯಕ್ತಿ ತನ್ನ ಕಥೆಯನ್ನು , ತನಗೆ ಬೇಕಾದಷ್ಟು , ತನ್ನದೇ ಆದ ಲಾವಣಿಯಾಗಿ ಹಾಡಿದಂತಿದೆ. ಸಹಾಯಕ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ ಹೊಸತರಲ್ಲಿ ಸೈಫನ್ ನಿರ್ಮಾಣದಲ್ಲಿ ಎದುರಿಸಿದ ಸಮಸ್ಯೆ ಮತ್ತು ಕನ್ನಂಬಾಡಿ ಆಣೆಕಟ್ಟೆಯ ನಿರ್ಮಾಣ ಕುರಿತಾಗಿ ಎಂ.ವಿಯವರು ನೀಡುವ ವಿವರಗಳ ನಡುವೆ ಯಾವುದೇ ವ್ಯತ್ಯಾಸಗಳಾಗಲಿ ,ತಾಂತ್ರಿಕ ವೈದೃಶ್ಯಗಳಾಗಲಿ ಇಲ್ಲ. ಸ್ವಯಂಚಲಿ ಗೇಟ್ ಮತ್ತು ಕನ್ನಂಬಾಡಿ ಆಣೆಕಟ್ಟೆಯ ಯೋಜನೆಯನ್ನು ಕುರಿತಾಗಿ ಅವರು ಎಲ್ಲ ವಿವರಗಳನ್ನು ಹೇಳಿಲ್ಲವೆಂದು ಭಾಸವಾಗುತ್ತದೆ. ಈ ಪುಸ್ತಕದಲ್ಲಿ ಎಲ್ಲ ಸಂಗತಿಗಳ ಚಿತ್ರಣ ಇದೆಯೆಂದಾಗಲಿ ಅಥವಾ ಇರುವ ಸಂಗತಿಗಳು ವಸ್ತುನಿಷ್ಠ , ಸಮಗ್ರ ಅಥವಾ ಸಮರ್ಪಕ ಎಂದಾಗಲಿ ಹೇಳಲಾಗದು. ಅವರ ಕೃತಿಯಲ್ಲಿ ಯಾವುದೇ ಪರಾಮರ್ಶನ ಗ್ರಂಥ , ವರದಿ , ಪಠ್ಯ , ಲೇಖನಗಳ ಗ್ರಂಥಸೂಚಿಯಿಲ್ಲ. ಸಣ್ಣ ಯೋಜನೆಗಳಿರಲಿ ಕನ್ನಂಬಾಡಿ ಆಣೆಕಟ್ಟೆಯಂತಹ ದೊಡ್ಡ ಯೋಜನೆ ಕುರಿತಾಗಿಯೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಇದು ಅವರ ‘ನನ್ನ ವೃತ್ತಿ ಜೀವನದ ನೆನಪುಗಳು’ ಗ್ರಂಥದ ದೊಡ್ದ ಕೊರತೆಯಾಗಿದೆ. ಎಂ.ವಿಯವರನ್ನು ಕುರಿತಾಗಿ ಕನ್ನಡದಲ್ಲಿ 29 ಕ್ಕೂ ಹಾಗೂ ಇಂಗ್ಲಿಷ್’ನಲ್ಲಿ 18 ಕ್ಕೂ ಅಧಿಕ ಕೃತಿಗಳು, ನೂರಾರು ಲೇಖನಗಳು ಹೊರ ಬಂದಿವೆ. ಈ ಯಾವ ಕೃತಿಗಳಲ್ಲಿಯೂ ಎಂ.ವಿಯವರನ್ನು ನಿರ್ದಿಷ್ಟವಿರಲಿ ಸಾಮಾನ್ಯ ವಿಮರ್ಶೆಗೂ ಒಳಪಡಿಸದೆ ಅವರನ್ನು ‘ಜಗದ್ವಿಖ್ಯಾತ ಸಿವಿಲ್ ಇಂಜಿನಿಯರ್’ ‘ ‘ಅಸಾಮಾನ್ಯ ದಿವಾನ-ಸಾಧಕ’ , ‘ಕಂಡು ಕೇಳರಿಯದ ಮೇಧಾವಿ‘ ಎನ್ನುವ ತೀರ್ಮಾನಗಳಿಗೆ ಬರಲಾಗಿದೆ. ಈ ತೀರ್ಮಾನಗಳು ಎಂ.ವಿಯವರ ಹತ್ತಿರ ಸಾಮಾನ್ಯರಿರಲಿ , ವೃತ್ತಿ ನಿರತ ಸಿವಿಲ್ ಇಂಜಿನಿಯರ್’ಗಳೇ ಸುಳಿಯದಂತಹ ಒಂದು ದಿವ್ಯ ಪ್ರಭಾವಲಯವನ್ನು ಸೃಷ್ಟಿಸಿವೆ. ಕನ್ನಂಬಾಡಿ ಆಣೆಕಟ್ಟಿನ ವಿನ್ಯಾಸ-ನಿರ್ಮಾಣ , ಕಟ್ಟು ಪದ್ದತಿಯ (ಬ್ಲಾಕ್ ಸಿಸ್ಟಂ) ನೀರಿನ ಹಂಚಿಕೆ, ಸುಕ್ಕೂರಿನ ನೀರು ಸರಬರಾಜು ಯೋಜನೆಯಂತಹ ಪರಿಕಲ್ಪನೆಗಳು ಶತಮಾನಕ್ಕೊಮ್ಮೆ ಜನಿಸಬಹುದಾದ ಮೇಧಾವಿಯಿಂದ ಮಾತ್ರ ಬರಲು ಸಾಧ್ಯ ಎನ್ನುವ ಐತಿಹ್ಯವನ್ನೇ ಹುಟ್ಟು ಹಾಕಲಾಗಿದೆ. ಯಳಂದೂರು (ವೈ) ಗೋಪಾಲಶಾಸ್ತ್ರಿ (ಜಿ) ಕೃಷ್ಣಮೂರ್ತಿ ಸ್ವತಂತ್ರ ಭಾರತದ ಅವಧಿಗೆ ಮುಂಚೆ ರಾಜಕೀಯ /ಸಾಮಾಜಿಕ ರಂಗದಲ್ಲಿ ಖ್ಯಾತರಾದವರನ್ನು ಕುರಿತಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಪುಸ್ತಕಗಳಿಗೆ ಬಾಬು ರಾಜೇಂದ್ರ ಪ್ರಸಾದ್ , ಜವಾಹರ ಲಾಲ್ ನೆಹರು , ಸರ್ವೇಪಲ್ಲಿ ರಾಧಾಕೃಷ್ಣ ಮುಂತಾದ ಖ್ಯಾತರು ಮುನ್ನುಡಿ ಬರೆದಿದ್ದಾರೆ ಅಥವಾ ಶುಭ ಹಾರೈಸಿದ್ದಾರೆ. ವೈ.ಜಿ.ಕೃಷ್ಣಮೂರ್ತಿಯವರು ಎಂ.ವಿಯವರ ಕಾರ್ಯದರ್ಶಿಯಾಗಿದ್ದು ಮಾಸಿಕ ೭೫ ರೂ ಸಂಬಳ ಪಡೆಯುತ್ತಿದ್ದರು. ವೈ.ಜಿ.ಕೃಷ್ಣಮೂರ್ತಿಯವರು ‘ಎಂ.ವಿಶ್ವೇಶ್ವರಯ್ಯ-ಎ ಸ್ಟಡಿ’ ಎನ್ನುವ ಕೃತಿಯನ್ನು ಬರೆದಿದ್ದಾರೆ. ಇದನ್ನು ಬೆಂಗಳೂರಿನ ಖ್ಯಾತ ಕೈಗಾರಿಕೋದ್ಯಮಿ ಬಿ.ಎಂಶ್ರೀನಿವಾಸಯ್ಯ ಪ್ರಕಟಿಸಿದ್ದರು. ಎಂ.ವಿಯವರಿಗೆ ತಮ್ಮ ಮರುಧ್ವನಿಯನ್ನು ಮತ್ತೊಮ್ಮೆ ಕೇಳಲು ಉತ್ಸಾಹವಿರಲಿಲ್ಲ. ವಿಮರ್ಶೆಯೊಂದಿಗೆ ಕೂಡಿದ ಒಳನೋಟದ ಉತ್ತರಗಳು ಅವರಿಗೆ ಬೇಕಾಗಿದ್ದವು (6-ಪುಟ 8) ಎಂದು ವೈ.ಜಿ ಕೃಷ್ಣಮೂರ್ತಿಯವರು ದಾಖಲಿಸಿದ್ದಾರೆ. ವೈ.ಜಿ.ಕೃಷ್ಣಮೂರ್ತಿಯವರು ಯಾವುದೇ ದಾಖಲೆಗಳಿಗಿಂತಲೂ ಎಂ.ವಿಯವರೊಂದಿಗಿನ ತಮ್ಮ ಒಡನಾಟವೇ ತಮ್ಮ ಕೃತಿ ರಚನೆಯ ಮೂಲವೆಂದು ಕೂಡ ಹೇಳಿದ್ದಾರೆ. ತಮ್ಮ ಕೃತಿಯ ಉದ್ದಕ್ಕೂ ಎಂ.ವಿಯವರನ್ನು ಉದ್ದೇಶಪೂರ್ವಕವಾಗಿ ನಿಧಾನ ಹಾಗೂ ನವಿರು ಗತಿಯಲ್ಲಿ ದೈವತ್ವದ ಮಟ್ಟಕ್ಕೆ ಕಂಡೂ ಕಾಣದಂತೆ ಒಯ್ದಿದ್ದಾರೆ. ಎಲ್ಲಿಯೂ ಎಂ.ವಿಯವರು ತಮಗಿಂತ ಭಿನ್ನವಾದ ಧ್ವನಿಯನ್ನು ಕೇಳಿದ್ದಾಗಲಿ , ಕೇಳುವುದಕ್ಕೆ ಉತ್ಸಾಹ ತೋರಿಸಿದ್ದಾಗಲಿ ದಾಖಲಿಸಿಲ್ಲ. ಎಂ.ವಿಯವರ ಮೆದುಳನ್ನು ಖರೀದಿಸಲು ಅ.ಸಂ.ಸಂಗಳ ಮ್ಯೂಜಿಯಂ ಒಂದು ಮುಂದೆ ಬಂದಿದೆಯೆಂಬ ವದಂತಿ ಎಂ.ವಿಯವರ ಕಿವಿಯನ್ನು ತಲುಪಿದ್ದಿತು. ಈ ವದಂತಿಯನ್ನು ಒಂದು ರೀತಿಯಲ್ಲಿ ಆನಂದಿಸುತ್ತಿದ್ದ ಎಂ.ವಿಯವರು ಅದಕ್ಕೆ ಯಾವುದೇ ವಿವರಣೆ ನೀಡದೆ ಸುಮ್ಮನಿರುತ್ತಿದ್ದರು ಎಂದು ಬರೆಯುವ ಮೂಲಕ ಕೃಷ್ಣಮೂರ್ತಿಯವರು ಎಂ.ವಿಯವರು ವಿಮರ್ಶೆಗಳಿಗೆ ತಮ್ಮನ್ನು ಸದಾ ತೆರೆದುಕೊಂಡಿರುತ್ತಿದ್ದರು ಎನ್ನುವ ಬಗ್ಗೆ ಸಂಶಯ ಬರುವಂತೆ ಮಾಡಿದ್ದಾರೆ. ಆದ್ದರಿಂದ ಎಂ.ವಿಯವ ಜೀವನ ಮತ್ತು ಸಾಧನೆಗಳನ್ನು ಜಾಗರೂಕರಾಗಿ ಅಧ್ಯಯನ ನಡೆಸಬೇಕಾಗುತ್ತದೆ. 1960 ರಲ್ಲಿ ಎಂ.ವಿಯವರು 100 ನೇ ವರ್ಷಕ್ಕೆ ಕಾಲಿರಿಸುವ ಮುನ್ನ ದೆಹಲಿಯಿಂದ ಪ್ರಕಟವಾಗುವ ‘ಯೋಜನ’ ಪತ್ರಿಕೆಯಲ್ಲಿ ( 4, ಸೆಪ್ಟೆಂಬರ್ 1960 , ಸಂಚಿಕೆ 17 , ಸಂಪುಟ 4) ಮೈಸೂರು ಲೋಕೋಪಯೋಗಿ ಇಲಾಖೆಯ ಸಲಹೆಗಾರ, ಶರಾವತಿ ಯೋಜನೆಯ ಆಡಳಿತಗಾರರಾಗಿದ್ದ ಹಾಗೂ ಹಿರಾಕುಡ್’ನಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಎಂ.ಎಸ್. ತಿರುಮಲೆ ಅಯ್ಯಂಗಾರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಎ,ಎನ್.ಮೂರ್ತಿರಾವ್ ಎಂ.ವಿಯವರನ್ನು ಕುರಿತಾಗಿ ಬರೆದ ಲೇಖನಗಳು ಪ್ರಕಟವಾಗಿವೆ, ಈ ಲೇಖನಗಳಲ್ಲಿ ಎಂ.ವಿಯವರನ್ನು ‘ಯುಗ ಪುರುಷ’ ನಂತೆ , ‘ರಾಜ’ , ದೇವ’ರಂತೆ ಚಿತ್ರಿಸಲಾಗಿದೆ. ಎನ್.ಎನ್.ಮೂರ್ತಿ ರಾವ್ ಸಾಹಿತ್ಯಕ ಹಿನ್ನೆಲೆಯವರು. ಅವರ ಲೇಖನದಲ್ಲಿ ಹೆಚ್ಚಿನದನ್ನೇನೂ ನಿರೀಕ್ಷಿಸಲಾಗದು. ಆದರೆ ಇಂಜಿನಿಯರ್ ವೃತ್ತಿಯಲ್ಲಿದ್ದ , ಮುಖ್ಯ ಇಂಜಿನಿಯರ್ ಹಾಗೂ ಸರ್ಕಾರದ ಇಂಜಿನಿಯರಿಂಗ್ ವಿಭಾಗಕ್ಕೆ ಸಲಹೆಗಾರರಾಗಿದ್ದ ತಿರುಮಲೆ ಅಯ್ಯಂಗಾರರ ಲೇಖನವೂ ಮೂರ್ತಿರಾಯರ ಲೇಖನಕ್ಕಿಂತ ಭಿನ್ನವಾಗಿಲ್ಲ. ಎಂ.ವಿಯಯರ ಪ್ರತಿಯೊಂದು ಕೆಲಸವನ್ನು ಅವರು ಪವಾಡದಂತೆ ನೋಡಿದ್ದಾರೆ. ಎಂ.ವಿಯವರು ತಯಾರಿಸಿದ ನಗರ ನೀರು ಸರಬರಾಜು ಯೋಜನೆಗಳು ಅವರಿಗೆ ಅದ್ಭುತ ಪವಾಡದಂತೆ ಭಾಸವಾಗಿವೆ ಪರಿಪೂರ್ಣವಾದ. ಇಂಜಿನಿಯರಿಂಗ್ ಬಯಸುವ ವಸ್ತುನಿಷ್ಠ ವಿಮರ್ಶೆಗೆ ತಿರುಮಲ ಅಯ್ಯಂಗಾರರಂತಹವರೇ ತಿಲಾಂಜಲಿ ಇತ್ತ ಮೇಲೆ ಎಂ.ವಿಯವರು ‘ಇಂಜಿನಿಯರಿಂಗ್ ಪವಾಡ ಪುರುಷ’ನಾಗಿ ಬಿಂಬಿತವಾಗುವಲ್ಲಿ ಯಾವುದೇ ಅಡೆತಡೆಗಳು ಉಳಿಯಲಿಲ್ಲ. ಎಂ.ವಿಯವರ ತಾಂತ್ರಿಕ ಕೆಲಸಗಳನ್ನು ಎಲ್ಲಿಯೂ ಇಂಜಿನಿಯರಿಂಗ್ ದೃಷ್ಟಿಯಲ್ಲಿ ನೋಡದೆ ಆರಾಧನೆಯ ದೃಷ್ಟಿಯಲ್ಲಿ ನೋಡುವ ಪರಂಪರೆಯನ್ನು ಒಂದು ವರ್ಗ ವ್ಯವಸ್ಥಿತವಾಗಿ ಪೋಷಿಸಿಕೊಂಡು ಬಂದಿತು. ಈವರೆಗೆ ಎಂವಿ.ಯವರು ಯಾವುದೇ ವಸ್ತುನಿಷ್ಟ ವಿಮರ್ಶೆಗೆ ಒಳಗಾಗದಿರುವುದರ ಕಾರಣ ಇಲ್ಲಿದೆ. ಎಂ.ವಿಯವರು 7 ಆಗಸ್ಟ್ 1916 ರಂದು ಬೆಂಗಳೂರಿನಲ್ಲಿ ಮಿಥಿಕ್ ಸೊಸೈಟಿಯ ಆರನೇ ವಾರ್ಷಿಕ ಸಭೆಯಲ್ಲಿ ಮಾಡಿದ ಭಾಷಣದಲ್ಲಿನ ಹೇಳಿಕೆಯ ಆಧಾರದ ಮೇಲೆ ಎಂ.ವಿಯವರ ಜೀವನ ಮತ್ತು ಸಾಧನೆಗಳನ್ನು ಐತಿಹ್ಯ ಹಾಗೂ ದೈವತ್ವದ ಮಟ್ಟದಿಂದ ಕೆಳಗಿಳಿಸಿ, ಹೊಗಳಿಕೆ ಮತ್ತು ಭಟ್ಟಂಗಿತನಗಳಿಂದ ಬೇರ್ಪಡಿಸಿ ನೋಡಬೇಕಾಗಿದೆ. ಈ ದೃಷ್ಟಿಯಲ್ಲಿ ಎಂ.ವಿಯವರಂತಹ ಇಂಜಿನಿಯರ್ ಹುಟ್ಟುವುದು ಸಾಧ್ಯವೇ? ಅವರಂತಹ ಮೇಧಾವಿಗಳು ಇರಬಲ್ಲರೇ ಎನ್ನುವಂತಹ ಹೊಗಳಿಕೆ ಹಾಗೂ ಉದಂತ ಕಥೆಗಳನ್ನು ಬಿಡಿಸಿ ಅವರು ನಿಜವಾಗಿಯೂ ಎಂತಹ ಸಿವಿಲ್ ಇಂಜಿನಿಯರ್ ಆಗಿದ್ದರು ಎನ್ನುವುದನ್ನು ಅವರು ಮಾಡಿದ ಕೆಲಸ ಹಾಗೂ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ವಸ್ತುನಿಷ್ಠ ಮೌಲ್ಯ ಮಾಪನಕ್ಕೆ ಒಳಪಡಿಸಿ ನಿರ್ಧರಿಸಬೇಕಾಗಿದೆ. ಎಂ.ವಿಯವರ ಸಾಧನೆ , ಬುದ್ಧಿ ಶಕ್ತಿ, ಮಾನವೀಯ ಕಲ್ಯಾಣ ಗುಣಗಳ ಬಗ್ಗೆ ಹತ್ತಾರು ಪುಸ್ತಕಗಳು ಬಂದಿವೆ. ಆದರೆ ಸಿವಿಲ್ ಇಂಜಿನಿಯರಿಂಗ್ ದೃಷ್ಟಿಯಲ್ಲಿ ಅವರನ್ನು ಎಲ್ಲಿರಿಸಬೇಕೆಂದು ಈವರೆಗೂ ಯಾವ ಬಗೆಯದೇ ಆದ ವಿಮರ್ಶಾತ್ಮಕ ಅಧ್ಯಯನಗಳಾಗಲಿ ಅವರ ಇಂಜಿನಿಯರಿಂಗ್ ಸಾಮರ್ಥ್ಯ ಮತ್ತು ಕೌಶಲ್ಯಗಳ ಬಗ್ಗೆ ಚರ್ಚೆಗಳಾಗಲಿ ಈವರೆಗೆ ನಡೆದಿಲ್ಲ. ನಡೆದಿಲ್ಲ. ಅಂತಹ ಕೊರತೆಯನ್ನು ವಸ್ತುನಿಷ್ಠ ದೃಷ್ಟಿಯಿಂದ ನೀಗಿಸುವತ್ತ ಮುಂದಿನ ಪುಟಗಳಲ್ಲಿ ಯತ್ನಿಸಲಾಗಿದೆ. [1] ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸೇರಿದ ಭಾರತದಲ್ಲಿ ಸೇವೆ ಸಲ್ಲಿಸಿದವರಿಗೆ GCIE ( ನೈಟ್ ಗ್ರಾಂಡ್ ಕಮಾಂಡರ್ ಆಫ್ ದಿ ಇಂಡಿಯನ್ ಎಂಪೈರ್) , KCIE ( ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್) , CIE ( ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್) ಎನ್ನುವ ಗೌರವ ಪದವಿಗಳನ್ನು ನಿಡುವ ಪದ್ದತಿ 31 ಡಿಸೆಂಬರ್ 1877ರಿಂದ ಜಾರಿಗೆ ಬಂದಿತು. KCIE ಗೌರವ ಪಡೆದವರು ತಮ್ಮ ಹೆಸರಿನ ಮೊದಲು ‘ಸರ್’ ಬಳಸುತ್ತಿದ್ದರು. ಐದನೇ ಜಾರ್ಜ್ ಹುಟ್ಟು ಹಬ್ಬದ ನೆನಪಿಗಾಗಿ 3 ಜೂನ್ 1915 ರಂದು ಘೋಷಿಸಿದ KCIE ಗೌರವ ಪದವಿಗಳ ಪಟ್ಟಿಯಲ್ಲಿ ಇತರ ಎಂಟು ಜನರೊಂದಿಗೆ ಮೈಸೂರಿನ ದಿವಾನರಾಗಿದ್ದ ಎಂ.ವಿಯವರು ಸೇರಿದ್ದರು. (65) ದೊಡ್ಡ ಸಂಸ್ಥಾನಗಳ ರಾಜರಿಗೆ ತಪ್ಪದೆ GCIE ಗೌರವ ದಕ್ಕುತ್ತಿದ್ದಿತು. ಬ್ರಿಟಿಷರ ಆಡಳಿತಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ನೆರವಾಗುತ್ತಿದ್ದವರಗೆ ಇಂತಹ ಪದವಿಗಳು ದಕ್ಕುತ್ತಿದ್ದವು. 1895-19೦0ರ ಅವಧಿಯಲ್ಲಿ ಬ್ರಿಟಿಷ್ ಸರ್ಕಾರ ಭಾರತ ಹಾಗೂ ಈಜಿಪ್ತಿನ ಇಂಜಿನಿಯರ್’ಗಳಿಗೆ ನೈಟ್’ಹುಡ್ ಪದವಿಯನ್ನು ಉದಾರವಾಗಿ ನೀಡತೊಡಗಿತು. ನೀರಾವರಿ ಇಂಜಿನಿಯರ್’ಗಳು ತಮ್ಮ ಕಾರ್ಯಗಳ ಮೂಲಕ ಬ್ರಿಟಿಷ್ ಸರ್ಕಾರದ ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕಾಣಿಕೆ ನೀಡುತ್ತಿದ್ದಾರೆ ಎನ್ನುವುದೇ ಇದಕ್ಕೆ ಕಾರಣವಾಗಿದ್ದಿತು. (41) 2. ಇಂಜಿನಿಯರಿಂಗ್ ಸ್ಥಿತಿ-ಗತಿಗಳು ಎಂ.ವಿಯವರ ಸಾಧನೆಗಳನ್ನು ವಿಮರ್ಶೆಗೆ ಒಳಪಡಿಸಲು ಆ ಕಾಲಘಟ್ಟದಲ್ಲಿದ್ದ ಸಿವಿಲ್ ಇಂಜಿನಿಯರಿಂಗ್ ತಂತ್ರಜ್ಞಾನದ ಸ್ಥಿತಿ-ಗತಿ, ಲಕ್ಷಣಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಎಂ.ವಿಯವರ ಸಾಧನೆಗಳನ್ನು ಒರೆಗೆ ಹಚ್ಚಲು ಇವು ನೆರವಾಗುತ್ತವೆ. ಆದ್ದರಿಂದ ಈ ಅಧ್ಯಾಯದಲ್ಲಿ ಹತ್ತೊಂಬತ್ತನೇ ಶತಮಾನ ಅದರಲ್ಲೂ ವಿಶೇಷವಾಗಿ ಆ ಶತಮಾನದ ಎರಡನೆ ಐವತ್ತು ವರ್ಷಗಳಲ್ಲಿದ್ದ ಇಂಜಿನಿಯರಿಂಗ್ ಬೆಳವಣಿಗೆಗಳನ್ನು ಅದಕ್ಕೆ ಪೂರಕವಾದ ಸನ್ನಿವೇಶಗಳನ್ನು ನೀರಾವರಿ ಮತ್ತು ಆಣೆಕಟ್ಟೆಗಳ ನಿರ್ಮಾಣದ ಹಿನ್ನೆಲೆಯಲ್ಲಿ ತಿಳಿಯಲು ಯತ್ನಿಸಲಾಗಿದೆ ಭಾರತದಲ್ಲಿ ಮಳೆ ಅನಿಶ್ಚಿತವಾದ ಸಂಗತಿಯಾಗಿದ್ದರಿಂದ ಬಹು ಪ್ರಾಚೀನ ಕಾಲದಿಂದಲೂ ಮಳೆಗಾಲದಲ್ಲಿ ಹರಿಯುವ ನೀರನ್ನು ತಡೆಹಿಡಿದು , ಸಂಗ್ರಹಿಸಿ ನಂತರ ಕಾಲದಲ್ಲಿ ನೀರಾವರಿಗಾಗಿ ಬಳಸುವ ಪ್ರಯತ್ನಗಳಾಗಿದ್ದವು. ಹಳ್ಳ , ತೊರೆ , ಸಣ್ಣ ನದಿಗಳಿಗೆ 3 ರಿಂದ 8 ಮೀ ಎತ್ತರದ ಮಣ್ಣಿನ ಒಡ್ಡುಗಳನ್ನು ಕಟ್ಟಿ ಕೆರೆಗಳನ್ನು ನಿರ್ಮಿಸುವ ತಂತ್ರಜ್ಞಾನ ತಿಳಿದಿದ್ದಿತು. ದಕ್ಷಿಣ ಭಾರತದಲ್ಲಿ ಇಂತಹ ಸಾವಿರಾರು ಕೆರೆಗಳು ಕಟ್ಟಲ್ಪಟ್ಟವು. ಭಾರತೀಯರಿಗೆ ದೊಡ್ಡ ನದಿಗಳಿಗೆ ಎತ್ತರವಾದ ಕಲ್ಲಿನ ಆಣೆಕಟ್ಟೆಗಳನ್ನು ನಿರ್ಮಿಸುವ ತಾಂತ್ರಿಕ ಸಾಮರ್ಥ್ಯವಿರಲಿಲ್ಲ. ದೊಡ್ಡ ಮತ್ತು ಸರ್ವಋತು ನದಿಗಳು ಎತ್ತರದ ಪ್ರದೇಶದಿಂದ ಕೆಳಗಿಳಿದು ರಭಸ ಕಳೆದುಕೊಂಡು , ನೀರಿನ ಆಳ ತಗ್ಗಿ ವಿಶಾಲ ಮೈದಾನದಲ್ಲಿ ಹರಡಿ ಮುಖಜ ಭೂಮಿಯನ್ನು (Delta Plain) ರೂಪಿಸುತ್ತವೆ. ಮುಖಜ ಭೂಮಿ ಪ್ರಾರಂಭವಾಗುವಲ್ಲಿ ನದಿಗಳಿಗೆ ಅಡ್ಡಲಾಗಿ ಅಲ್ಪ ಎತ್ತರದ ಕಲ್ಲಿನ ಕಟ್ಟೆಗಳನ್ನು ಕಟ್ಟುವುದು ಭಾರತೀಯ ಪದ್ದತಿಯಾಗಿದ್ದಿತು. ಇದರಿಂದ ನೀರಿನ ಮಟ್ಟ ಮೇಲೇರಿ ಪಕ್ಕದಲ್ಲಿ ನದಿಯ ದಡಗಳಿಗೆ ಸಮಾಂತರವಾಗಿ ನಿರ್ಮಿಸಿದ್ದ ಕಾಲುವೆಗಳ ಮೂಲಕ ನೀರು ಹರಿದು ಹೊಲಗಳಿಗೆ ತಲುಪುತ್ತಿದ್ದಿತು. 10ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತಲಕಾಡಿನ ಹತ್ತಿರ ‘ಮಾಧವ ಮಂತ್ರಿ ಕಟ್ಟೆ’ ನಿರ್ಮಾಣವಾದರೆ , ಇದೇ ಕಾಲದಲ್ಲಿ ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕರಿಕಾಲ ಚೋಳ ‘ಕಲ್ಲಣೈ’ ಕಟ್ಟಿಸಿದ್ದನು. ವೈಗೈ ನದಿಗಳಿಗೆ ಇಂತಹ ಅಲ್ಪ ಎತ್ತರದ ಹಲವಾರು ಕಟ್ಟೆಗಳಿದ್ದವು. ಇದರೊಂದಿಗೆ ಪ್ರತಿ ಬೇಸಿಗೆಯಲ್ಲಿ ನದಿ ಬತ್ತಿದಾಗ ಕಲ್ಲು, ಮಣ್ಣು , ಕಟ್ಟಿಗೆ ಹಾಕಿ ಮಾಡಿದ ತಾತ್ಕಾಲಿಕವಾದ ಕೊರುಂಬುಗಳನ್ನು ತಮಿಳುನಾಡಿನಲ್ಲಿ ಕಟ್ಟಲಾಗುತ್ತಿದ್ದಿತು. ಈ ಕೊರಂಬುಗಳು ನೆರೆ ಇಳಿದಾಗ ನೀರನ್ನು ನಿಲ್ಲಿಸಿ ಬಳಕೆಗೆ ಒದಗಿಸುತ್ತಿದ್ದವು. ತುಂಗಭದ್ರಾ ನದಿಗೆ ಸಿರುಗುಪ್ಪದ ಕೆಂಚನಗುಡ್ಡದ ಬಳಿ 16ನೇ ಶತಮಾನದಲ್ಲಿ ಕಟ್ಟೆಗಳನ್ನು ಕಟ್ಟಿ , ಕಾಲುವೆಯ ಮೂಲಕ ನೀರನ್ನು ಹೊಲಗಳತ್ತ ತಿರುಗಿಸಲಾಗಿದೆ. ಸಿಂಧೂ ನದಿ ಬಯಲಿನಲ್ಲಿ ಬಹು ಹಿಂದಿನಿಂದಲೂ ನೆರೆ ನೀರಾವರಿ ಪದ್ದತಿ ಜಾರಿಯಲ್ಲಿದೆ. ನದಿಯ ದಡದಿಂದ ಪ್ರಾರಂಭಿಸಿ ಹೊರಮುಖವಾಗಿ ನೆರೆ ಕಾಲುವೆಗಳನ್ನು ಕೃಷಿ ಭೂಮಿಗಳತ್ತ ತೋಡಲಾಗಿದೆ. ನೆರೆ ಬಂದಾಗ ಈ ಕಾಲುವೆಗಳಲ್ಲಿ ನೀರು ಹರಿದು ನೀರಾವರಿ ಸೌಲಭ್ಯ ದಕ್ಕುತ್ತದೆ. ಸಿಂಧೂ ನದಿ ಬಯಲಿನಲ್ಲಿ ಎಲ್ಲ ದಿಕ್ಕುಗಳಲ್ಲಿ ಇಂತಹ ನೂರಾರು ನೆರೆ ಕಾಲುವೆಗಳು ನಿರ್ಮಿಸಲ್ಪಟ್ಟಿವೆ. (13) ಈ ಎಲ್ಲ ನೀರಿನ ಮೂಲಗಳು ಬಹು ಹಿಂದಿನಿಂದಲೂ ಸ್ಥಳೀಯ ಆಡಳಿತಗಾರರ ಹತೋಟಿಯಲ್ಲಿದ್ದವು. ವರ್ತಕರಾಗಿ ಬಂದಿದ್ದ ಬ್ರಿಟಿಷರು ಭಾರತವನ್ನು ವಶಪಡಿಸಿಕೊಂಡು ಆಡಳಿತಗಾರರಾಗಿ ಬದಲಾದಂತೆ ಅವರ ಹೊಣೆಗಾರಿಕೆಯ ವ್ಯಾಪ್ತಿ ಹಿಗ್ಗತೊಡಗಿತು. ಭಾರತ ಮೇಲಿಂದ ಮೇಲೆ ಬರಕ್ಕೆ ತುತ್ತಾಗಿ ಕೆರೆ , ಕುಂಟೆ , ಕಟ್ಟೆಗಳು ಬತ್ತಿ ನೀರಿಗೆ ಹಾಹಾಕಾರ ಏಳುತ್ತಿದ್ದಿತು. ಜಲಾಶಯಗಳಲ್ಲಿ ಹೂಳು ತುಂಬಿ ಅವುಗಳ ನೀರು ಹಿಡಿಯುವ ಸಾಮರ್ಥ್ಯ ಕುಗ್ಗಿದ್ದವು. 1832ರಲ್ಲಿ ಬಾಂಬೆ ಪ್ರಾಂತದಲ್ಲಿ (ಮಹಾರಾಷ್ಟ್ರ-ಉತ್ತರ ಕರ್ನಾಟಕ-ಆಂಧ್ರಪ್ರದೇಶ) ಬರಗಾಲ ಬಂದಿತು. ಲಕ್ಷಾಂತರ ಜನ ಹಸಿವೆಯಿಂದ ಸತ್ತರು. 1848 ರಲ್ಲಿ ಬರಗಾಲಕ್ಕೆ ತುತ್ತಾಗಿ ಬೆಳೆ ತೆರಿಗೆ ದಕ್ಕದಂತಾಯಿತು. ಕರಿಮಣ್ಣಿನ ಪ್ರದೇಶದಲ್ಲಿ ಸಾಕಷ್ಟು ಮಳೆಯಾದ ನಂತರ ಬಿತ್ತಲು ಸಾಧ್ಯವಿಲ್ಲ. ಹಸಿ ಮಣ್ಣಿನಲ್ಲಿ ಕೂರಿಗೆಗಳು ಸಿಕ್ಕಿ ಹಾಕಿಕೊಳ್ಳುತ್ತವೆ. ಆದ್ದರಿಂದ ಅಲ್ಲಿನ ರೈತರು ಅತ್ಯಲ್ಪ ಮಳೆ ಬಂದ ತಕ್ಷಣ ಕೂರಿಗೆಯಲ್ಲಿ ಬಿತ್ತುತ್ತಿದ್ದರು. ಮಳೆ ಬಾರದೆ ಹೋದಾಗ ಕಂಗಾಲಾಗುತ್ತಿದ್ದರು. ಬರದ ಕಾಲದಲ್ಲಿ ಬಾವಿಯಲ್ಲಿ ನೀರಿರುತ್ತಿರಲಿಲ್ಲ. (5) ಹೊಸದಾಗಿ ಆಡಳಿತಗಾರನ ಜಾಗಕ್ಕೆ ಬಂದಿರುವ ಬ್ರಿಟಿಷರು ಮೊದಲಿನಂತೆ ದೇಶೀಯ ರಾಜರುಗಳು ಕೆರೆ , ಕಟ್ಟೆಗಳ ನಿರ್ವಹಣೆ, ನಿರ್ಮಾಣಗಳಿಗೆ ನೀಡುತ್ತಿದ್ದ ಪ್ರಾಶಸ್ತ್ಯವನ್ನು ಕೊಡುತ್ತಿಲ್ಲ, ಆದ್ದರಿಂದಲೇ ನೀರಿನ ಸಂಕಷ್ಟಗಳು ಎದುರಾಗಿವೆ ಎಂದು ಜನ ಸಾಮಾನ್ಯರು ನಂಬಿದ್ದರು. ಇಂತಹುದೇ ನಿಲುವನ್ನು ಹೊಂದಿದ್ದ ಕೆಲ ಬ್ರಿಟಿಷ್ ಇಂಜಿನಿಯರುಗಳು ಬರವನ್ನು ಎದುರಿಸುವಂತೆ ಕೆರೆಗಳನ್ನು ನಿರ್ವಹಣೆ ಮಾಡದ ತಮ್ಮ ಸರ್ಕಾರದ ವಿರುದ್ದವೇ ಸಿಟ್ಟಾಗಿದ್ದರು. (5) ಬ್ರಿಟಿಷರು ಸ್ಥಳೀಯ ಕೆರೆ , ಕಟ್ಟೆಗಳ ಬಗ್ಗೆ ಅನಾದರ ತೋರುತ್ತಿರುವುದನ್ನು ಉಗ್ರವಾಗಿ ಖಂಡಿಸಿದ್ದ ಎಡ್ಮಂಡ್ ಬರ್ಕ್ , ಈ ನಿರ್ಮಾಣಗಳು-ಕೆರೆ,ಕುಂಟೆ,ಕಟ್ಟೆಗಳು-ನಿಮ್ಮ ಪರಿಶ್ರಮದಿಂದ ಜನ್ಮ ತಾಳಿದವಲ್ಲ. ಇಲ್ಲಿನ ಜನರ ಪೂರ್ವಜರ ಕೊಡುಗೆಗಳಾದ ಇವು ನಿಮ್ಮ ತೆವಲಿಗೆ ತುತ್ತಾಗಬಾರದು ಎಂದಿದ್ದನು. ಬ್ರಿಟಿಷ್ ಇಂಜಿನಿಯರ್ ಆರ್ಥರ್ ಕಾಟನ್ ಹಾಗೂ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿದ್ದ ಸ್ಯಾಂಕಿ ಭಾರತೀಯರ ಪಾರಂಪರಿಕ ನೀರಾವರಿ ಹಾಗೂ ನೀರಿನ ನಿರ್ವಹಣೆ ಬಗ್ಗೆ ಮೆಚ್ಚುಗೆ ಹೊಂದಿದ್ದರು. ಇವುಗಳನ್ನು ಕುರಿತಾಗಿ ಬ್ರಿಟಿಷರಿಗಿದ್ದ ಧೋರಣೆಯ ಬಗ್ಗೆ ಅರ್ಥರ್ ಕಾಟನ್’ಗೆ ಅಸಹನೆಯಿದ್ದಿತು. (11) . ಭಾರತದಲ್ಲಿ ತಳವೂರಿ ಅದನ್ನು ಆಳಬೇಕೆಂದರೆ ಜನರ ಜೀವನದ ಮೇಲೆ ಸುದೀರ್ಘ ಮತ್ತು ವ್ಯಾಪಕ ಪರಿಣಾಮ ಬೀರುವ ಬರ ಎದುರಿಸಲು ಸಿದ್ದರಿರಬೇಕು. ನೀರು , ನೀರಾವರಿಯಂತಹ ಸಂಗತಿಗಳತ್ತ ಗಮನ ಹರಿಸಬೇಕು. ಪಾರಂಪರಿಕವಾಗಿ ಬಂದಿದ್ದ ವ್ಯವಸ್ಥೆಗಳನ್ನು ಸುಧಾರಿಸಿ , ಕೆರ, ಕಟ್ಟೆಗಳನ್ನು ಕಟ್ಟಿ ಜನರ ಒಲವು ಗಳಿಸಬೇಕು ಎನ್ನುವುದು ಬ್ರಿಟಿಷರಿಗೆ ಮನದಟ್ಟಾಗತೊಡಗಿತು. ಬ್ರಿಟಿಷರು ನೀರಾವರಿ ಯೋಜನೆಗಳ ಮೇಲೆ ಬಂಡವಾಳ ಹೂಡಿದರೆ ಅದರಿಂದ ಹಿಂದಿರುಗಬಹುದಾದ ಬಡ್ಡಿದರವನ್ನು ಲೆಕ್ಕ ಹಾಕುತ್ತಿದ್ದರು. ಈ ಬಡ್ಡಿ ದರ ನಿರ್ದಿಷ್ಟ ಮಟ್ಟದಲ್ಲಿದ್ದರೆ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ಗಂಗಾ-ಯಮುನಾ ನದಿ ಬಯಲಿನಲ್ಲಿ ಈ ಬಡ್ಡಿದರ ಸಾಕಷ್ಟು ಅನುಕೂಲಕರವಾಗಿತ್ತಾದರೂ ಬಾಂಬೆ ಪ್ರಾಂತದಲ್ಲಿ ಆಕರ್ಷಕವಾಗಿರಲಿಲ್ಲ. 1830-1870ರ ಅವಧಿಯಲ್ಲಿ ಬಂದ ಭಾರಿ ಬರಗಾಲಗಳು ಬ್ರಿಟಿಷರು ಬೇರೆ ರೀತಿಯಲ್ಲಿ ಚಿಂತಿಸುವಂತೆ ಮಾಡಿದವು. ದಕ್ಷಿಣ ಭಾರತದಲ್ಲಿ ನೀರಾವರಿ ಯೋಜನೆಗಳ ಮೇಲೆ ಹೂಡಿದ ಬಂಡವಾಳದ ಮೇಲೆ ಬರುವ ಬಡ್ಡಿ ಅಲ್ಪವಾಗಿದ್ದರೂ ಬರಗಾಲದಲ್ಲಿ ಜನರ ಮೇಲೆ ವ್ಯಯಿಸಬೇಕಾದ ಹಣದ ಮೊತ್ತಕ್ಕೆ ಹೋಲಿಸಿದರೆ ಮೊದಲನೆಯದೇ ಸೂಕ್ತ ಎಂದು ತೋರಿಬಂದಿತು. ಇದು ಬ್ರಿಟಿಷರು ದೊಡ್ಡ ಆಣೆಕಟ್ಟೆಗಳ ಮೂಲಕ ನೀರು ಸಂಗ್ರಹಿಸಿ, ನೀರಾವರಿಗೆ ಒತ್ತು ಕೊಡಲು ಕಾರಣವಾಯಿತು. ನೀರಾವರಿಗಾಗಿ ಹೂಡಿದ ಬಂಡವಾಳವನ್ನು ನೀರಿನ ಕರದ ರೂಪದಲ್ಲಿ ಹಿಂದಕ್ಕೆ ಪಡೆಯುವುದು ಸಾಧ್ಯ ಎನ್ನುವ ಅಭಿಪ್ರಾಯಕ್ಕೆ ಅವರು ಬಂದರು. ಇದರ ಪರಿಣಾಮವಾಗಿ ನೀರು , ನೀರಾವರಿ ಮತ್ತು ನೀರಿನ ನಿರ್ವಹಣೆಯಲ್ಲಿ ಬ್ರಿಟಿಷರ ಪ್ರಭಾವ ಕಾಣಿಸತೊಡಗಿತು. ಇದರ ಪರಿಣಾಮವಾಗಿ ದಕ್ಷಿಣ ಹಾಗೂ ಉತ್ತರ ಭಾರತದ ದೊಡ್ಡ ನದಿಗಳ ನೀರಿನ ಸಂಗ್ರಹಣೆ ಮತ್ತು ನಿರ್ವಹಣೆ ಹೊಸ ಸಾಧ್ಯತೆಗಳತ್ತ ಸಾಗತೊಡಗಿತು. ಬ್ರಿಟಿಷರು ದಕ್ಷಿಣ ಭಾರತದಲ್ಲಿ ಮೊದಲಿಗೆ ದೊಡ್ದ ಮಟ್ಟದಲ್ಲಿ ಕಾವೇರಿ ಕೊಳ್ಳದಲ್ಲಿ ನೀರಿನ ಸಂಗ್ರಹ ಮತ್ತು ನಿರ್ವಹಣೆಯ ಸವಾಲುಗಳನ್ನು ಎದುರಿಸಬೇಕಾಯಿತು. ಕಾವೇರಿ ತಂಜಾವೂರಿನ ಮುಖಜ ಭೂಮಿ ಪ್ರವೇಶಿಸುವಲ್ಲಿ ಕೊಲ್ಲಡಂ ಮತ್ತು ಅಲ್ಲಾರ್ (=ಕಾವೇರಿ) ಎನ್ನುವ ಎರಡು ಕವಲುಗಳಾಗುತ್ತದೆ. ಈ ಎರಡು ಕವಲುಗಳು ಕೆಳಭಾಗದಲ್ಲಿ ಮತ್ತೊಮ್ಮೆ ಸೇರುತ್ತವೆ. ಶ್ರೀರಂಗಂ ಈ ಎರಡು ಕವಲುಗಳ ನಡುವಿನ ದ್ವೀಪ. ಶ್ರೀರಂಗಂ ಕೆಳಭಾಗದಲ್ಲಿ ಎರಡು ನದಿಗಳು ಸೇರುವುದಕ್ಕೆ ಮೊದಲು ಅಲ್ಲಾರ್ (=ಕಾವೇರಿ) ನದಿಗೆ 10 ನೇ ಶತಮಾನದಲ್ಲಿ ಕಲ್ಲಣೈ (ಗ್ರ್ಯಾಂಡ್ ಆಣೆಕಟ್ಟೆ, Grand Anaicut ) ಕಟ್ಟಿ ನೀರಾವರಿ ಸೌಕರ್ಯ ಒದಗಿಸಲಾಗಿದ್ದಿತು. ಕಲ್ಲಣೈ ಆಧುನಿಕ ಲಕ್ಷಣದ ಆಣೆಕಟ್ಟೆಯಾಗಿರದೆ ಅಲ್ಪ ಎತ್ತರ ( 3-4 ಮೀ) ಹಾಗೂ ವಿಶಾಲ ತಳಹದಿಯ (12-15 ಮೀ ) ಗುಂಡು ಕಲ್ಲುಗಳ ರಾಶಿಯಾಗಿದ್ದಿತು. ಬಹು ದೀರ್ಘ ಕಾಲದಿಂದ ನಿರ್ವಹಣೆ ಇರದೆ ಕಲ್ಲಣೈ ಜಲಾಶಯದಲ್ಲಿ ಹೂಳು ತುಂಬಿ ಅದರ ಸಾಮರ್ಥ್ಯ ಕುಗ್ಗಿರುವುದನ್ನು ಗುರುತಿಸಿದ್ದ ಕ್ಯಾಪ್ಟನ್ ಕಾಲ್ಡ್’ವೆಲ್ 1804 ರಲ್ಲಿ ಅದರ ಎತ್ತರವನ್ನು 0.69 ಮೀ ನಷ್ಟು ಹೆಚ್ಚಿಸಿ , ಹೂಳು ಕೊಚ್ಚಿಹೋಗಲು ಕಿಂಡಿಗಳನ್ನು ನಿರ್ಮಿಸಿ ಅಧಿಕ ನೀರು ಸಂಗ್ರಹಿಸಲು ಯತ್ನಿಸಿದ್ದನು. ಇದೇ ಸಮಯದಲ್ಲಿ ಕಾವೇರಿ ಪಾತ್ರದಲ್ಲಿ ಹೂಳು ತುಂಬಿ ಅದರ ನೀರು ಕೊಲ್ಲಡಂ ನದಿಯತ್ತ ತಿರುಗುತ್ತಿರುವುದು ತಿಳಿದು ಬಂದಿದ್ದಿತು. ಇದಕ್ಕೆ ಪರಿಹಾರ ಹುಡುಕುವ ಹೊಣೆಯನ್ನು ಆರ್ಥರ್ ಕಾಟನ್’ಗೆ ವಹಿಸಲಾಯಿತು. ಅರ್ಥರ್ ಕಾಟನ್ ಕಲ್ಲಣೆ ಎತ್ತರವನ್ನು 5.4 ಮೀ ಗಳಿಗೆ ಏರಿಸಿ , ಅದರ ತಳವನ್ನು 20 ಮೀ ಗಳಿಗೆ ವಿಸ್ತರಿಸಿ ದುರಸ್ತಿಗೊಳಿಸಿದನಾದರೂ ಇದು ಶಾಶ್ವತ ಪರಿಹಾರವಾಗಿರಲಿಲ್ಲ. 1825 ರ ವೇಳೆಗೆ ಕಾವೇರಿಯ ಕವಲಿನಲ್ಲಿ ಹೂಳು ತುಂಬಿ ಹೆಚ್ಚಿನ ನೀರು ಕೊಲ್ಲಡಂ ನದಿಯತ್ತ ಹರಿದು ಸಾವಿರಾರು ವರ್ಷಗಳಿಂದ ಕಾವೇರಿಯಿಂದ ನೀರಾವರಿಗೆ ಒಳಪಟ್ಟ ಸುಮಾರು 2000-2500 ಕಿ.ಮೀ ಗೂ ಅಧಿಕ ವಿಸ್ತೀರ್ಣದಲ್ಲಿ ಹರಡಿದ್ದ ನೀರಾವರಿ ಪ್ರದೇಶ ಮುಂದಿನ ದಿನಗಳಲ್ಲಿ ನೀರಿಲ್ಲದೆ ಒಣಗುವ ಅಪಾಯ ಎದುರಾಗುವ ಭಯ ತಲೆದೋರಿದ್ದಿತು. (11) . ಇದಕ್ಕೆ ಪರಿಹಾರವಾಗಿ ಕೊಲ್ಲಡಂ ನದಿ ಕಾವೇರಿಯಿಂದ ಕವಲೊಡೆಯುವ ಜಾಗಕ್ಕಿಂತ ಸ್ವಲ್ಪ ಮೇಲ್ಭಾಗದಲ್ಲಿ ಅಣೆಕಟ್ಟೆಯನ್ನು ಕಟ್ಟಿದರೆ ಅದರ ಹಿಂಭಾಗದಲ್ಲಿ ನೀರಿನ ಮಟ್ಟ ಏರುತ್ತದೆ. ಈ ಮಟ್ಟದ ಏರಿಕೆಯಿಂದ ಕಾವೇರಿ ನದಿಯಲ್ಲಿ ನೀರು ಸಮ ಪ್ರಮಾಣದಲ್ಲಿ ಹರಿಯುವಂತೆ ಮಾಡಿ ಫಲವತ್ತಾದ ಜಾಗಕ್ಕೆ ಮೊದಲಿನಂತೆಯೇ ನೀರು ಹರಿಸುವುದು ಆರ್ಥರ್ ಕಾಟನ್ ಯೋಜನೆಯಾಗಿದ್ದಿತು. ಕಲ್ಲಣೈ ನಿರ್ಮಾಣ ತಂತ್ರದಿಂದ ಬಹುವಾಗಿ ಪ್ರಭಾವಿತನಾಗಿದ್ದ ಆರ್ಥರ್ ಕಾಟನ್ ಕಾವೇರಿ ಮತ್ತು ಕೊಲ್ಲಡಮ್ ಕವಲೊಡೆಯುವ ಮೇಲ್ಭಾಗದಲ್ಲಿ ಅಲ್ಪ ಎತ್ತರ (ಸರಾಸರಿ 2.0 ಮೀ) ಹಾಗೂ ವಿಶಾಲ ತಳಹದಿಯ ಕಟ್ಟೆಯನ್ನು ಕಟ್ಟುವ ಕೆಲಸವನ್ನು ಕೈಗೆತ್ತಿಕೊಂಡು 1836ರಲ್ಲಿ ಪೂರ್ಣಗೊಳಿಸಿದನು. ಇದು ಮುಕ್ಕೊಂಬು ( Upper Anicut ) ಎಂದು ಹೆಸರಾಗಿದೆ. ಈ ಆಣೆಕಟ್ಟೆಯ ನಿರ್ಮಾಣದಿಂದ ಕೊಲ್ಲಡಂ ನದಿಯ ಹರಿವು ಇಳಿದು ಮುಖಜ ಭೂಮಿ ಪ್ರದೇಶದ ಪಾರಂಪರಿಕ ನೀರಾವರಿ ಪ್ರದೇಶಗಳು ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಮುಕ್ಕೊಂಬುವಿನಿಂದ 112 ಕಿ.ಮೀ ಕೆಳಭಾಗದಲ್ಲಿ ಸರಾಸರಿ 1.8 ಮೀ ಎತ್ತರದ ಕೆಳ ಆಣೆಕಟ್ಟೆಯನ್ನು ( Lower Anicut ) ಇದೇ ವೇಳೆಗೆ ಕಟ್ಟಲಾಯಿತು. ಈ ಆಣೆಕಟ್ಟೆಯ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಯನ್ನು ಗಂಗೈಕೊಂಡ ಚೋಳಪುರಂನ ಕಟ್ಟಡದ ಅವಶೇಷಗಳಿಂದ ಪಡೆಯಲಾಯಿತು. (15) ಕಾವೇರಿ ನದಿಯ ಮೇಲೆ ಬ್ರಿಟಿಷರು ಕಟ್ಟಿದ ಮುಕ್ಕೊಂಬು ಮತ್ತು ಕೆಳ ಆಣೆಕಟ್ಟೆಗಳಿಂದಾಗಿ ನೀರಾವರಿ ಪ್ರದೇಶ ಹಲವು ಪಟ್ಟು ಹಿಗ್ಗಿತು. 1891 ರಲ್ಲಿ 4.7 ಲಕ್ಷ ಎಕರೆ ನೀರಾವರಿಗೆ ಒಳಪಟ್ಟಿದ್ದರೆ ಅರ್ಥರ್ ಕಾಟನ್ ಸಾಯುವ ವೇಳೆಗೆ (1899) ಅದು 11 ಲಕ್ಷ ಎಕರೆಗೆ ಹಿಗ್ಗಿದ್ದಿತು. (11) ಈ ಸಾಧನೆ ಬ್ರಿಟಿಷರಲ್ಲಿ ನೀರಿನ ನಿಯಂತ್ರಣ ಮತ್ತು ನಿರ್ವಹಣೆ ಕುರಿತಾಗಿ ಅಪಾರ ಆತ್ಮ ವಿಶ್ವಾಸ ತಂದಿತ್ತಿತು. ಗೋದಾವರಿ ಹಾಗೂ ಕೃಷ್ಣ ಜಲಾನಯನ ಪ್ರದೇಶಗಳು ಹಾಗೂ ಅವುಗಳ ಸಮಸ್ಯೆಗಳು ಕಾವೇರಿಗಿಂತ ಹಲವು ಪಟ್ಟು ದೊಡ್ಡದಾಗಿದ್ದವು. 1832ರಲ್ಲಿ ಬಂದ ಭೀಕರ ಬರಗಾಲದಲ್ಲಿ ಗೋದಾವರಿ ನದಿ ಪ್ರದೇಶದ ಜನ ನೀರಿಲ್ಲದೆ ತತ್ತರಿಸಿದ್ದರು. ಸಾವಿರಾರು ಜನ ಸತ್ತು, ಹೆಣ ಸಂಸ್ಕಾರ ಸವಾಲಿನ ಕೆಲಸವಾಗಿದ್ದಿತು. ಗೋದಾವರಿ ಹಾಗೂ ಕೃಷ್ಣ ಮುಖಜ ಭೂಮಿಯ ನೀರಾವರಿ ಪ್ರದೇಶ ದೊಡ್ಡ ಭೂಮಾಲಿಕರ ಹಿಡಿತಲ್ಲಿದ್ದಿತು. ಬಹು ಹಿಂದೆಯೇ ಬಾವಿ ,ಕೆರೆ, ಕುಂಟೆಯಂತಹ ಸಣ್ಣ ಪ್ರಮಾಣದ ನೀರಾವರಿ ಸೌಕರ್ಯಗಳನ್ನು ಅವಗಣಿಸಿದ್ದ ಭೂಮಾಲೀಕರಿಗೆ ಬರ ಎರಗಿ ಬಂದ ಸಿಡಿಲಾಗಿದ್ದಿತು. ಸರ್ಕಾರಕ್ಕೆ ತೆರಿಗೆ ಕಟ್ಟಲಾಗದೆ ಅದರ ಬಾಕಿಗಾಗಿ ಅವರ ಹೊಲ, ಗದ್ದೆಗಳು ಸರ್ಕಾರದ ವಶವಾಗಿದ್ದವು. ರೈತರಿಂದ ವಶಪಡಿಸಿಕೊಂಡ ಭೂಮಿಯನ್ನು ಸರ್ಕಾರ ಏನು ಮಾಡಬೇಕು ಎಂಬ ಬೃಹತ್ ಪ್ರಶ್ನೆ ಎದುರಾಯಿತು. ಇದಕ್ಕಾಗಿ ಪರಿಹಾರ ಹುಡುಕಲು ಮಾಂಟೆಗೊಮರಿಯನ್ನು ಗೋದಾವರಿ ಮುಖಜ ಪ್ರದೇಶಕ್ಕೆ ಕಳಿಸಲಾಯಿತು. ಗೋದಾವರಿ ಮುಖಜ ಭೂಮಿಯಲ್ಲಿ ಸಂಚರಿಸಿದ್ದ ಮಾಂಟೆಗೋಮರಿ, ದೊಡ್ಡ ಭೂಮಾಲೀಕರಿಂದ ವಶಪಡಿಸಿಕೊಂಡಿದ್ದ ಭೂಮಿಯನ್ನು ಸಣ್ಣ ರೈತರಿಗೆ ಗೇಣಿ ನೀಡಲು ನಿರ್ಧರಿಸಿದನು. ದೊಡ್ಡ ಭೂಮಾಲಿಕರೇ ಸೋತು ಸೊರಗಿದ್ದ ನೀರಿಲ್ಲದ ಒಣ ಭೂಮಿಯಲ್ಲಿ ಗೇಣಿದಾರರು ಹೇಗೆ ತಾನೆ ಬರಬಲ್ಲರು ? ಇದಕ್ಕೆಪರಿಹಾರವಾಗಿ ನೀರಾವರಿಯ ಸೌಕರ್ಯಗಳನ್ನು ಹೆಚ್ಚಿಸುವ ಯೋಜನೆಗಳತ್ತ ಗಮನ ಹರಿಸಲು ಬ್ರಿಟಿಷರು ನಿರ್ಧರಿಸಿದರು. (11) ಇದೇ ಕಾಲದಲ್ಲಿ ಅರ್ಥರ್ ಕಾಟನ್ ಗೋದಾವರಿ ತೀರದ ರಾಜಮಹೇಂದ್ರಿಯಲ್ಲಿ ಸಂಚರಿಸಿದಾಗ ಕಾವೇರಿ ಮುಖದ ಭೂಮಿಯಲ್ಲಿ ಇರುವಂತಹ ವ್ಯಾಪಕ ನೀರುಣಿಸುವ ಪ್ರದೇಶವಾಗಲಿ , ನೀರಾವರಿಯಾಗಲಿ ಇರದಿರುವುದನ್ನು ಗುರುತಿಸಿ ಗೋದಾವರಿ ಮುಖಜ ಭೂಮಿಯನ್ನು ಕಾವೇರಿ ಮುಖಜ ಭೂಮಿಯ ತಂಜಾವೂರಿನಂತೆ ಹಸಿರು ವಲಯವನ್ನಾಗಿ ಮಾರ್ಪಡಿಸುವ ಕನಸು ಕಂಡಿದ್ದನು. ಅದಕ್ಕೆ ಪೂರಕವೆಂಬಂತೆ ಗೋದಾವರಿ ಮುಖಜ ಭೂಮಿಯಲ್ಲಿ ನೀರಾವರಿಯನ್ನು ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ಹಾಗೂ ತಾಂತ್ರಿಕ ಸಾಧ್ಯತಾ ವರದಿ ತಯಾರಿಸಲು ಆರ್ಥರ್ ಕಾಟನ್’ನನ್ನು ಕೋರಲಾಯಿತು. ಸರ್ ಅರ್ಥರ್ ಕಾಟನ್ ಅಂದಾಜು ವೆಚ್ಚ ತಯಾರಿಸಿದಾಗ ಅದರ ಮೊತ್ತ ನೋಡಿ ಬ್ರಿಟಿಷ್ ಸರ್ಕಾರ ಬೆಚ್ಚಿಬಿದ್ದಿದ್ದಿತು. ಅರ್ಥರ್ ಕಾಟನ್ ತನ್ನ ವರದಿಯಲ್ಲಿಯೇ ಇಂತಹ ಅಧಿಕ ವೆಚ್ಚವನ್ನು ಹೇಗೆ ಹಿಂದಕ್ಕೆ ಪಡೆಯುವುದು ಎನ್ನುವ ಪ್ರಶ್ನೆಯನ್ನು ಅಡಿ ಟಿಪ್ಪಣಿಗಳಲ್ಲಿ ಹಾಕಿಕೊಂಡು ಉತ್ತರಿಸಿದ್ದನು. ಗೋದಾವರಿ ನೀರು ಸಮುದ್ರಕ್ಕೆ ಹರಿಯವುದನ್ನು ತಪ್ಪಿಸಿ ಆಣೆಕಟ್ಟೆಗಳ ಮೂಲಕ ಸಂಗ್ರಹಿಸಿ ನೀರನ್ನು ಹಂಚಿ , ಅದರ ಮೇಲೆ ತೆರಿಗೆ ಹಾಕಿ ಯೋಜನೆಯ ಮೇಲೆ ಹಾಕಿದ ಬಂಡವಾಳ ಮತ್ತ ಬಡ್ಡಿಯನ್ನು ಹಿಂಪಡೆಯಬಹುದೆಂದು ತೋರಿಸಿದ್ದನು. ಆರ್ಥರ್ ಕಾಟನ್ ಗ್ರ್ಯಾಂಡ್ ಆಣೆಕಟ್ಟೆ ಮಾದರಿಯಲ್ಲಿಯೇ ಗೋದಾವರಿ ಅಡ್ಡಲಾಗಿ ಅಲ್ಪ ಎತ್ತರದ, ಅಗಲ ತಳಹದಿಯ ಗುಂಡುಕಲ್ಲಿನ ಆಣೆಕಟ್ಟೆ ಕಟ್ಟಲು ಯೋಜಿಸಿದ್ದನು. ಕಾಟನ್’ನ ಈ ಯೋಜನೆಗೆ 1847ರಲ್ಲಿ ಅನುಮತಿ ಸಿಕ್ಕಿ ಆಣೆಕಟ್ಟೆಯ ಕೆಲಸ ಪ್ರಾರಂಭವಾಗಿ ಪ್ರಾರಂಭವಾಗಿ 1852ರಲ್ಲಿ ಮುಗಿಯಿತು. ಈ ನಿರ್ಮಾಣಕ್ಕೆ ದಿನಕ್ಕೆ ಹತ್ತು ಸಾವಿರಕ್ಕೂ ಅಧಿಕ ಕೂಲಿಯಾಳುಗಳನ್ನು ನಿಯೋಜಿಸಲಾಗಿದ್ದಿತು. ಆಣೆಕಟ್ಟೆಯ ಕೆಲಸ ನಡೆಯುತ್ತಿದ್ದಾಗ ಅರ್ಥರ್ ಕಾಟನ್ ಸನಿಹದಲ್ಲೇ ನದಿ ತೀರದ ಮೇಲೆ ತೆಂಗಿನ ಗರಿಯ ಗುಡಿಸಲಿನಲ್ಲಿ ವಾಸವಿದ್ದನು. ಅಲ್ಲಿಯೇ ಹುಟ್ಟಿದ ಆತನ ಇಬ್ಬರು ಮಕ್ಕಳು ಚಿಕ್ಕವಯಸ್ಸಿನಲ್ಲಿ ಅಲ್ಲಿಯೇ ಮರಣ ಹೊಂದಿದರು. ರಾಜಮಹೇಂದ್ರಿಯ ಕೆಳಗೆ ಧವಳೇಶ್ವರದಲ್ಲಿ ಕೋಡಿಕಟ್ಟೆ ಪೂರ್ಣಗೊಳಿಸಿದ ನಂತರ ಅದರ ಮೇಲೆ 0.6 ಮೀ (2’) ಎತ್ತರದ ಗೇಟ್ ಗಳನ್ನು ಅಳವಡಿಸಿ ನೀರಿನ ಮಟ್ಟ ಹೆಚ್ಚಿಸಲಾಯಿತು. ಹತ್ತೊಂಬತ್ತನೇ ಶತಮಾನದ ಆರಂಭದ ವೇಳೆಗೆ ಇದನ್ನು ಇನ್ನು 0.6 ಮೀ (2’) ಎತ್ತರಕ್ಕೆ ಏರಿಸಲಾಯಿತು. ಆರ್ಥರ್ ಕಾಟನ್ ಗೋದಾವರಿಗೆ ಆಡ್ಡಗಟ್ಟೆಗಳನ್ನು ಕಟ್ಟುವ ಮೊದಲು 18000 ಎಕರೆ ನೀರಾವರಿ ಪ್ರದೇಶವಿದ್ದಿತು. ಹತ್ತೊಂಬತ್ತನೇ ಶತಮಾನ ಪ್ರಾರಂಭವಾಗುವ ವೇಳೆಗೆ ಇದು 6,40,000 ಎಕರೆಗೆ ವಿಸ್ತೀರ್ಣಗೊಂಡು ಅದರ ಯಶಸ್ಸಿಗೆ ಸಾಕ್ಷಿಯಾಗಿ ಗಂಗಾಬಯಲಿನ ನಂತರ ಎರಡನೇ ಸ್ವರ್ಗವಾಯಿತು. ಈಗ ಧವಳೇಶ್ವರದ ಹೊಸ ಅಣೆಕಟ್ಟೆಯ ತೀರದಲ್ಲಿ ಆರ್ಥರ್ ಕಾಟನ್ ಸ್ಮಾರಕ ಮ್ಯೂಜಿಯಂ ತೆರೆಯಲಾಗಿದೆ. (11) [1] ಕಾವೇರಿಯ ಗ್ರ್ಯಾಂಡ್ ಆಣೆಕಟ್ಟೆ ಕಂಡಿದ್ದ ಲೆಫ್ಟಿನೆಂಟ್ ಬೇಲ್’ಸನ್ ಅದರಂತೆಯೇ ವಿಜಯವಾಡದ ಸನಿಹ ಕೃಷ್ಣಾ ನದಿಗೆ ಅಡ್ಡಲಾಗಿ ಆಣೆಕಟ್ಟೆ ಕಟ್ಟುವ ಕನಸು ಕಂಡಿದ್ದನಾದರೂ ಅದು ನನಸಾಗಲಿಲ್ಲ. 1847ರಲ್ಲಿ ಕ್ಯಾಪ್ಟನ್ ವೇರ್ ಕೃಷ್ಣಾ ನದಿಗೆ ಅಡ್ಡಲಾಗಿ ಆಣೆಕಟ್ಟೆ ಕಟ್ಟುವ ಸಾಧ್ಯತೆಯ ಅಧ್ಯಯನ ನಡೆಸಿ ವರದಿ ತಯಾರಿಸಿದ್ದನು. ಇದರ ಬಗ್ಗೆ ಆರ್ಥರ್ ಕಾಟನ್ ಅಭಿಪ್ರಾಯ ಕೇಳಲಾಯಿತು. ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಮತ್ತೊಂದು ಆಣೆಕಟ್ಟೆ ಕಟ್ಟಿದರೆ, ಬೇಸಿಗೆಯಲ್ಲಿ ನೀರಾವರಿಗೆ ಬೇಕಾದಷ್ಟು ನೀರನ್ನು ಪಡೆಯಬಹುದು. ಇದಕ್ಕಾಗಿ 1 ಲಕ್ಷ ಪೌಂಡ್ ಸಿಡಿಮದ್ದನ್ನು ಹತ್ತು ಕಡೆ ಸಿಡಿಸಿದರೆ ಕಾಲು ಮೈಲಿ ಅಗಲದ ಆಣೆಕಟ್ಟೆ ಕಟ್ಟಲು ಬೇಕಾದ ಕಲ್ಲು ಸಿಗುತ್ತದೆ ಎಂದು ಆರ್ಥರ್ ಕಾಟನ್ 1873 ರಲ್ಲಿ ಪ್ರತಿಪಾದಿಸಿದ್ದನು. ಇದರೊಂದಿಗೆ ಕೃಷ್ಣಾ ನದಿಗೆ ಮೇಲ್ಭಾಗದಲ್ಲಿ ಮತ್ತೊಂದು ಸಂತುಲನಾ ಜಲಾಶಯ ಕಟ್ಟಬೇಕೆಂದು ವಾದಿಸಿದ್ದನು. ಆರ್ಥರ್ ಕಾಟನ್’ನ ಈ ಪ್ರಸ್ತಾವನೆಗಳನ್ನು ಹುಚ್ಚು ಹುಡುಗಾಟವೆಂದು ತಳ್ಳಿ ಹಾಕಲಾಯಿತು. ನಂತರ ಇದೇ ಯೋಜನೆಗಳು ನಾಗಾರ್ಜುನ ಸಾಗರ ಹಾಗೂ ತುಂಗಭದ್ರಾ ಹೆಸರಿನಲ್ಲಿ ಪೂರ್ಣಗೊಂಡವು. ಬ್ರಿಟಿಷರು ಮುಂದಿನ ದಿನಗಳಲ್ಲಿ ಹೊಸ ನೀರಾವರಿ ಯೋಜನೆಗಳೊಂದಿಗೆ ಹಳೆಯ ಸೌಕರ್ಯಗಳ ಪುನರುಜ್ಜೀವನವೂ ಜೊತೆಯಾಗಿ ಕೈಗೆತ್ತಿಕೊಳ್ಳತೊಡಗಿದರು. ಮೆಡುಸ್ ಟೇಲರ್ ಮಧ್ಯಯುಗಕ್ಕೆ ಸೇರಿದ ಸುರಪುರದ ಸನಿಹದ ಬೋನಾಳ ಕೆರೆಯನ್ನು ಸುಸ್ಥಿತಿಗೆ ತಂದನು. 1857ರಲ್ಲಿ ಕಾಚಕನೂರಿನ ಹತ್ತಿರ ಕೆರೆ ಕಟ್ಟಲಾಯಿತು. 1885ರ ನಂತರ ಇಂತಹ ಯೋಜನೆಗಳಿಗೆ ಹೆಚ್ಚಿನ ಬೆಂಬಲ ಸಿಗತೊಡಗಿತು. 1886ರಲ್ಲಿ ಹಂಪಿ, ಹೊಸಪೇಟೆಯ ಹತ್ತಿರ 25000 ಎಕರೆಗಳಿಗೆ ನೀರು ಒದಗಿಸುತ್ತಿದ್ದ ಹಳೆಯ ಕಾಲುವೆಗಳನ್ನು, ಕೋಡಿಕಟ್ಟೆಗಳನ್ನು ದುರಸ್ತಿಗೊಳಿಸಲಾಯಿತು. ಸಿಂಧೂ, ಗಂಗಾ-ಯಮುನಾ ನದಿಗಳಲ್ಲಿ ಯಥೇಚ್ಛ ನೀರು ಹರಿಯುತ್ತಿದ್ದಿತಾದರೂ ಈ ನೀರಿನ ಸಂಗ್ರಹ ಹಾಗೂ ನಿರ್ವಹಣೆಯ ಸ್ಥಿತಿ-ಗತಿಗಳು ದಕ್ಷಿಣ ಭಾರತಕ್ಕಿಂತ ಭಿನ್ನವಾಗಿರಲಿಲ್ಲ. 1837 ಮತ್ತು 1840 ರಲ್ಲಿ ಉತ್ತರ ಭಾರತದಲ್ಲಿ ಭೀಕರ ಬರಗಾಲ ಬಂದಾಗ ಉತ್ತರ ಪ್ರದೇಶ ಒಂದರಲ್ಲೇ 20 % ಕ್ಕೂ ಅಧಿಕ ಜನ ಸಾವನ್ನಪ್ಪಿ ಎದುರಾದ ಪರಿಸ್ಥಿತಿ ನೀರಾವರಿ ಯೋಜನೆಗಳತ್ತ ಗಮನ ಹರಿಸಬೇಕಾದ ಅನಿವಾರ್ಯತೆಯನ್ನು ತಂದಿತು. (16) ಯಮುನಾ ನದಿಗೆ ಸಮಾಂತರದಲ್ಲಿ ಕಾಲುವೆಗಳನ್ನು ತೋಡಿ ನೆರೆಯ ನೀರನ್ನು ನೀರಾವರಿಗೆ ಬಳಸಿಕೊಳ್ಳುವ ಪದ್ದತಿ ಬಹು ಹಿಂದಿನಿಂದಲೂ ಚಾಲ್ತಿಯಲ್ಲಿದ್ದಿತು. 1350 ರಲ್ಲಿ ಮೊಗಲರ ಫಿರೋಝ್ ಷಾ ತುಗಲಖ್ , ನಹರ್-ಇ-ಬಹಿಸ್ತ್ (ಸ್ವರ್ಗದ ನದಿ) ಹೆಸರಿನ ಪಶ್ಚಿಮ ದಡದ ಕಾಲುವೆಯನ್ನು ತೋಡಿಸಿ ಹರಿಯಾಣದ ಹಸಿ-ಸಫಿದಾ ಪ್ರದೇಶಕ್ಕೆ ನೀರನ್ನು ಸಾಗಿಸಿದ್ದನು. ಈತ ಸತ್ತ ಅಲ್ಪ ಕಾಲದಲ್ಲೇ ಈ ಕಾಲುವೆ ನಿಷ್ಕ್ರಿಯವಾಯಿತು. 1568 ರಲ್ಲಿ ಅಕ್ಬರ್ , 1628 ರಲ್ಲಿ ಷಹಜಾಹಾನ್ ಈ ಕಾಲುವೆಯ ದುರಸ್ತಿಗೆ ಯತ್ನಿಸಿದ್ದರು. 17ನೇ ಶತಮಾನದ ದ್ವಿತೀಯಾರ್ಧದ ವೇಳೆಗೆ ಅದು ಹೂಳು ತುಂಬಿ ನಿಷ್ಪ್ರಯೋಜಕವಾಗಿದ್ದಿತು. ಇದನ್ನು ಸಣ್ಣ ಮಟ್ಟದಲ್ಲಿ ಪುನರುಜ್ಜೀವನಗೊಳಿಸುವ ಯತ್ನಗಳು ಜರುಗಿದ್ದವು. ಮುಂದಿನ ದಿನಗಳಲ್ಲಿ ಈ ಕಾಲುವೆ ಸಂಪೂರ್ಣ ಮುಚ್ಚಿಹೋಗುವ ಸ್ಥಿತಿಗೆ ಬಂದಿತು. ಇದನ್ನು ಗಮನಿಸಿದ ಬ್ರಿಟಿಷರು 1820 ರ ನಂತರ ಕಾಲುವೆಯ ಸಾಲುಗೊಳಿಕೆಯನ್ನು (Alignment) ಸಾಧ್ಯವಾದ ಕಡೆ ಬದಲಿಸಿ , ಮುಖ್ಯ ಹಾಗೂ ವಿತರಣಾ ಕಾಲುವೆಗಳು ಸೇರಿದಂತೆ 720 ಕಿ.ಮೀ ಉದ್ದವನ್ನು ನವೀಕರಣಗೊಳಿಸಿದರು. (11 , 16). ಯಮುನಾ ನದಿಯ ಪೂರ್ವ ದಡದ ಕಾಲುವೆಯನ್ನು 18 ನೇ ಶತಮಾನದಲ್ಲಿ ಷಾ ಮಹಮ್ಮದ್ ಆಡಳಿತದ ಕಾಲದಲ್ಲಿ ತೋಡಲಾಗಿದ್ದಿತು. ಇದು ಅಲ್ಪ ಕಾಲದಲ್ಲೇ ಹೂಳಿನಿಂದಾಗಿ ನಿಷ್ಕ್ರಿಯವಾಗಿದ್ದಿತು. ಇದನ್ನು ಇದೇ ಕಾಲದಲ್ಲಿ ನವೀಕರಣಗೊಳಿಸಲಾಯಿತು. ಪ್ರೊಬಿ.ಟಿ. ಕೌಟ್ಲೆ ಭಾರತೀಯ ಹೃದಯದ ಬ್ರಿಟಿಷ್ ಇಂಜಿನಿಯರ್ ಎಂದು ಇತಿಹಾಸದಲ್ಲಿ ದಾಖಲಾಗಿದ್ದಾನೆ. ಈತ 1840 – 1856 ರ ಅವಧಿಯಲ್ಲಿ ಗಂಗಾ ನದಿಯ ಮೇಲೆ ಸರಣಿ ಕಾಲುವೆಗಳ ನಿರ್ಮಾಣ ಪೂರೈಸಿ ಭಾರತದ ನೀರಾವರಿ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದ್ದಾನೆ. ಕೌಟ್ಲೆ 1840ರಲ್ಲಿ 283.75 ಘ,ನ ಮೀ/ಸೆಕೆಂಡ್ ಸಾಮರ್ಥ್ಯದ (10000 ಘ. ಅಡಿ/ಸೆಕೆಂಡ್ ) ಗಂಗಾ ಮೇಲ್ದಂಡೆ ಕಾಲುವೆ ಯೋಜನೆ ಸಿದ್ಧಪಡಿಸಿದನು. ಈ ಪ್ರಮಾಣದಲ್ಲಿ ನೀರನ್ನು ಕಾಲುವೆಗೆ ತಿರುಗಿಸಿದರೆ ಮಾತ್ರ ಮಾಡಿದ ವೆಚ್ಚ ಹಿಂದುರುಗಿ ಬರುವುದೆನ್ನುವುದು ಆತನ ಲೆಕ್ಕಾಚಾರವಾಗಿದ್ದಿತು. ಒಂದು ವರ್ಷದ ನಂತರ ಈ ಕಾಲುವೆಯ ಸಾಮರ್ಥ್ಯವನ್ನು 190.52 ಘ.ನ ಮೀ/ಸೆಕೆಂಡ್’ಗಳಿಗೆ (6750 ಘ.ಅಡಿ/ಸೆಕೆಂಡ್ ) ನಿಗದಿಪಡಿಸಿ , 1842ರಲ್ಲಿ ಕೌಟ್ಲೆ ತಯಾರಿಸಿದ ಯೋಜನೆಯನ್ನು ಪರಿಷ್ಕೃತಗೊಳಿಸಿ ನಿರ್ಮಾಣಕ್ಕೆ ಅನುಮತಿ ನೀಡಲಾಯಿತು. ಈ ಕಾಲುವೆಯ ನಿರ್ಮಾಣಕ್ಕೆ ಬೇಕಾದ ಇಂಜಿನಿಯರಿಂಗ್ ವಿನ್ಯಾಸಗಳಿಗಾಗಿ ರೂರ್ಕಿಯಲ್ಲಿ ಭಾರತದ ಮೊದಲ ಇಂಜಿನಿಯರಿಂಗ್ ಕಾಲೇಜ್- ಥೋಮಸನ್ ಕಾಲೇಜ್ ಆಫ್ ಸಿವಿಲ್ ಇಂಜಿನಿಯರಿಂಗ್ (ಈಗ ಇದು ಐಐಟಿ-ರೂರ್ಕಿ) ಪ್ರಾರಂಭಿಸಲಾಯಿತು. ಮರಳಿನಿಂದ ತುಂಬಿದ್ದ ಪ್ರದೇಶದ ಮೂಲಕ ಕಾಲುವೆಯನ್ನು ನಿರ್ಮಿಸುವುದು ಭಾರಿ ಸವಾಲಿನ ಕೆಲಸವಾಗಿದ್ದಿತು. (16) ಕೌಟ್ಲೆ ಇವೆಲ್ಲ ಸಮಸ್ಯೆಗಳನ್ನು ಎದುರಿಸಿ , ನೀರಾವರಿಗೆ ಸಂಬಂಧಿಸಿತ ಎಲ್ಲ ಬಗೆಯ ನಿರ್ಮಾಣಗಳನ್ನು ಮಾಡಿ ಖ್ಯಾತನಾದನು. 1845 ರಿಂದ 1848ರವರೆಗೆ ರಜೆಯಲ್ಲಿದ್ದ ಕೌಟ್ಲೆ , ಕಾಲುವೆ ನೀರಾವರಿಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಇಟಲಿಗೆ ಭೇಟಿ ನೀಡಿದ್ದನು. ಆಗಿನ ಕಾಲದಲ್ಲಿ ಕಾಲುವೆ ನೀರಾವರಿಯಲ್ಲಿ ಇಟಲಿಯನ್ನು ಸರಿಗಟ್ಟುವ ದೇಶವಿರಲಿಲ್ಲ. 1850ರಲ್ಲಿ ಕೌಟ್ಲೆ ತನ್ನ ಕೈಕೆಳಗಿನ ಇಂಜಿನಿಯರ್ ರಿಚರ್ಡ್ ಬೇರ್ಡ್’ಸ್ಮಿಥ್ ಎಂಬಾತನನ್ನು ಇಟಲಿಗೆ ಕಾಲುವೆಗಳ ಹೆಚ್ಚಿನ ಅಧ್ಯಯನಕ್ಕೆ ಕಳುಸಿದನು. ಬ್ಲೇರ್ಡ್ ಸ್ಮಿಥ್ 1852ರಲ್ಲಿ ‘ಇಟಾಲಿಯನ್ ಇರಿಗೇಷನ್’ ಕೃತಿ ಹೊರತಂದನು. 1848 ರ ವೇಳೆಗೆ 1280 ಕಿ.ಮೀ ಗೂ ಅಧಿಕ ಉದ್ದದ ಕಾಲುವೆಗಳು ನಿರ್ಮಾಣಗೊಂಡು 7 ಲಕ್ಷ ಎಕರೆಗೂ ಅಧಿಕ ಪ್ರದೇಶ ನೀರಾವರಿಗೆ ಒಳಪಟ್ಟಿತು. ಈ ಕಾಲುವೆಯ ಪೂರಕ ಕೆಲಸಗಳು 1854 ರ ವೇಳೆಗೆ ಪೂರ್ಣಗೊಂಡವು. ಗಂಗಾ ಮೇಲ್ಭಾಗದ ಕಾಲುವೆಗಳ ನಿರ್ಮಾಣದ ಮುಂದಾಳುವಾಗಿದ್ದ ಕೌಟ್ಲೆ ಕಾಲುವೆಯ ಉದ್ದಕ್ಕೂ 100 ಅಡಿಗೆ ಒಂದರಂತೆ ಅದರ ಎಡ , ಬಲದಲ್ಲಿ ದೇಶೀಯ ತಳಿಯ ಮರಗಳನ್ನು ನೆಡಬೇಕು. ಇವು ಕಾಲುವೆಯ ತುದಿಯಿಂದ 40 ಅಡಿ ದೂರವಿರಬೇಕು. ಅವುಗಳಿಗೆ ತೂತಿರುವ ಮಣ್ಣಿನ ಗಡಿಗೆಗಳ ಮೂಲಕ ನೀರು ನೀಡಬೇಕು ಎಂದು ಯೋಜಿಸಿದ್ದನು. (11,16). ಉತ್ತರ ಭಾರತದಲ್ಲಿ ಯಮುನ ನದಿಯ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಕಾಲುವೆಗಳು ಬ್ರಿಟಿಷರಿಂದ ನಿರ್ಮಿಸಲ್ಪಟ್ಟವು. ರಿಚರ್ಡ್ ಬ್ಲೇರ್ಡ್ ಸ್ಮಿಥ್ ಗಂಗಾ ಕಾಲುವೆಯ ಉಸ್ತುವಾರಿ ಇಂಜಿನಿಯರ್ ಆದ ನಂತರ ಅರ್ಥರ್ ಕಾಟನ್ ಮುಂದಾಳತ್ವದಲ್ಲಿ ಜಾರಿಗೊಂಡ ನೀರಾವರಿ ಯೋಜನೆಗಳ ವೀಕ್ಷಣೆ ನಡೆಸಲು 2400 ಕಿ.ಮೀಗೂ ಅಧಿಕ ದೂರ ಸಂಚರಿಸಿದನು. ಇದರ ಭಾಗವಾಗಿ , ದುರ್ಗಮ ಪ್ರದೇಶಗಳಲ್ಲಿ 6 ವಾರಗಳ ಕಾಲ ಪಲ್ಲಕ್ಕಿಯಲ್ಲಿ ಸಂಚಾರ ಮಾಡಿದ್ದನು. 1856 ರಲ್ಲಿ ‘ದಿ ಕಾವೇರಿ . ಕಿಸ್ತ್ನಾ ಅಂಡ್ ಗೋದಾವರಿ’ ಎನ್ನುವ ಪುಸ್ತಕವನ್ನು ಬರೆದನು. ಮೆಡೂಸ್ ಟೇಲರ್ , ಪ್ರೊಬಿ ಟಿ ಕೌಟ್ಲೆ , ಬ್ಲೇರ್ಡ್’ಸ್ಮಿಥ್ , ಅರ್ಥರ್ ಕಾಟನ್ ಮುಂತಾದವರು ನೀರಾವರಿ ಇಂಜಿನಿಯರಿಂಗ್ ತಮ್ಮ ಧರ್ಮ ಮತ್ತು ದೇವರು ಎಂದು ನಂಬಿದ್ದರು. (11) ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ಪಶ್ಚಿಮ ಭಾಗಗಳು ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುವುದನ್ನು ಕಂಡಿದ್ದ ಕರ್ನಲ್ ಫೈಫ್ ಪೂನಾದಿಂದ 20 ಕಿ.ಮೀ ದೂರದಲ್ಲಿ ಮುಠಾ ನದಿಗೆ ಅಡ್ಡಲಾಗಿ ಖಡಕವಾಸಲ ಹಳ್ಳಿಯ ಬಳಿ ಆಣೆಕಟ್ಟೆ ಕಟ್ಟುವ ನೀರಾವರಿ ಯೋಜನೆಯನ್ನು 1868 ರಲ್ಲಿ ಸಿದ್ಧಪಡಿಸಿದನು. ಈ ಹಿಂದೆ ಕಾವೇರಿ , ಗೋದಾವರಿ , ಗಂಗಾ-ಯಮುನಾ ನದಿಗಳಿಗೆ ಪಾರಂಪರಿಕ ಅನುಭವ ಆಧರಿಸಿ ಕೋಡಿಕಟ್ಟೆಗಳನ್ನು ಕಟ್ಟಲಾಗಿದ್ದಿತು. ಇವು ಗರಿಷ್ಟ 5.0 ಮೀ ಎತ್ತರವಿದ್ದವು. ಆದರೆ ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದ ಹಲವಾರು ನದಿಗಳು ಸಣ್ಣವಾಗಿದ್ದು , ಮಳೆಗಾಲದಲ್ಲಿ ಮಾತ್ರ ಹರಿಯುತ್ತಿದ್ದವು. ಇವುಗಳಿಗೆ ಎತ್ತರದ ಆಣೆಕಟ್ಟೆಯನ್ನು ಕಟ್ಟದ ಹೊರತು ಹೆಚ್ಚಿನ ನೀರನ್ನು ಸಂಗ್ರಹಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಫೈಫ್ ಆ ಹಿಂದೆ ಕಟ್ಟಲಾರದಷ್ಟು ಎತ್ತರದ ಆಣೆಕಟ್ಟೆಯ ಯೋಜನೆಯನ್ನು ಮಂಡಿಸಿದ್ದನು. ಇದಕ್ಕೆ 1870 ರಲ್ಲಿ ಅನುಮೋದನೆ ಸಿಕ್ಕಿ ಆಣೆಕಟ್ಟೆಯ ನಿರ್ಮಾಣ ಪ್ರಾರಂಭವಾಯಿತು. ಖಡಕವಾಸಲದಲ್ಲಿ ಫೈಫ್ ಯೋಜಿಸಿದ್ದ ಆಣೆಕಟ್ಟೆ ಕಲ್ಲುಕಟ್ಟಣೆಯ ಹೊರಕವಚ ಮತ್ತು ಕಾಂಕ್ರಿಟಿನ ಒಳತಿರುಳನ್ನು ಹೊಂದಿದ್ದು ನದಿಪಾತ್ರದಿಂದ 31.42 ಮೀ (103 ‘) ಹಾಗೂ ಬುನಾದಿಯಿಂದ 39.65 ಮೀ (130’) ಎತ್ತರವಿದ್ದಿತು. ಇಷ್ಟು ಎತ್ತರದ ಆಣೆಕಟ್ಟೆ ಭಾರತದಲ್ಲಿ ಎಲ್ಲಿಯೂ ನಿರ್ಮಾಣವಾಗಿರಲಿಲ್ಲ. 1879 ರಲ್ಲಿ ಈ ಆಣೆಕಟ್ಟೆಯೊಂದಿಗೆ ಮುಠಾ ಎಡ ಹಾಗೂ ಬಲದಂಡೆ ಕಾಲುವೆಗಳು ನಿರ್ಮಾಣಗೊಂಡು 49800 ಎಕರೆ ಪ್ರದೇಶವನ್ನು ನೀರಾವರಿಗೆ ತರಲಾಯಿತು. ಖಡಕವಾಸಲ ಆಣೆಕಟ್ಟೆಯ ಮೂಲಕ ಬ್ರಿಟಿಷ್ ಇಂಜಿನಿಯರ್’ಗಳು ಎತ್ತರದ ಆಣೆಕಟ್ಟೆ ಕಟ್ಟುವ ವಿಶ್ವಾಸ ಬೆಳೆಸಿಕೊಂಡರು.[2] ಪೂನಾ ನಗರದ ಪಶ್ಚಿಮಕ್ಕೆ ಎಳವಂದಿ ಮತ್ತು ನೀರಾ ನದಿಗಳು ಸೇರುವ ಮೇಲ್ಭಾಗದಲ್ಲಿ ಎಳವಂದಿ ನದಿಗೆ ಅಡ್ಡಲಾಗಿ ಆಣೆಕಟ್ಟೆಯನ್ನು ಕಟ್ಟಿ ನೀರಾವರಿ ಸೌಕರ್ಯಗಳನ್ನು ಹಿಗ್ಗಿಸುವ ಇನ್ನೊಂದು ಪ್ರಸ್ತಾವನೆಯನ್ನು ಫೈಫ್ 1863ರಲ್ಲಿ ಮುಂದಿಟ್ಟು ಆರಂಭಿಕ ಕೆಲಸಗಳನ್ನು ಮಾಡಿದ್ದನು. ಈ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು 1868ರಲ್ಲಿ ವೈಟಿಂಗ್ ಮುಂದಾಳತ್ವದಲ್ಲಿ ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯ ಪರಿಶೀಲನೆ 1871 ರವರೆಗೆ ಸಾಗಿ , ಎಳವಂದಿ ನದಿಗೆ ಭಾತ್’ಘರ್ ಬಳಿ ಆಣೆಕಟ್ಟೆಯನ್ನು ನಿರ್ಮಿಸುವುದು. (ವೈಟಿಂಗ್ ಸರೋವರ). ಹೆಚ್ಚುವರಿ ನೀರನ್ನು ನೀರಾ ನದಿಗೆ ಹರಿಸುವುದು. ನೀರಾ ನದಿಗೆ ವೀರ್ ಬಳಿ ಇನೊಂದು ಕೋಡಿಕಟ್ಟೆ ನಿರ್ಮಿಸಿ ಎಡದಂಡೆಯಲ್ಲಿ ಕಾಲುವೆ ನಿರ್ಮಿಸಿ ಅಂತಿಮವಾಗಿ 275000 ಎಕರೆ ಪ್ರದೇಶವನ್ನು ನೀರಾವರಿಯಡಿಯಲ್ಲಿ ತರುವುದು ಎನ್ನುವ ತೀರ್ಮಾನಕ್ಕೆ ಬರಲಾಯಿತು. 1898ರ ವೇಳೆಗೆ ಯೋಜನೆಯ ಎಲ್ಲ ಕೆಲಸಗಳು ಪೂರ್ಣಗೊಂಡು ಕಾಲುವೆಯಲ್ಲಿ ನೀರು ಹರಿಯತೊಡಗಿತು. ಮುಂದಿನ ದಶಕಗಳಲ್ಲಿ ನೀರಾ ಬಲದಂಡೆ ಕಾಲುವೆ ಕಾಲುವೆಯಡಿಯಲ್ಲಿ ಹೆಚ್ಚಿನ ಪ್ರದೇಶವನ್ನು ನೀರಾವರಿಯಡಿಯಲ್ಲಿ ತರಲು ಆಣೆಕಟ್ಟೆಯ ಎತ್ತರವನ್ನು ಎತ್ತರಿಸುವ ಚಿಂತನೆಗಳು ಮೊಳಕೆಯೊಡೆದವು. ವಿಸ್ತೃತ ಅಧ್ಯಯನ ನಂತರ ಹಳೆಯ ಆಣೆಕಟ್ಟೆಯನ್ನು ಎತ್ತರಿಸುವ ಬದಲು ಅದರ ಕೆಳಭಾಗದಲ್ಲಿ 51.24 ಮೀ (168) ಎತ್ತರದ ಮತ್ತೊಂದು ಆಣೆಕಟ್ಟೆಯನ್ನು ನಿರ್ಮಿಸುವ ತೀರ್ಮಾನಕ್ಕೆ ಬರಲಾಯಿತು. ಇದರ ಫಲಿತಾಂಶವಾಗಿ ಲಾಯ್ಡ್ ಆಣೆಕಟ್ಟೆ ಮತ್ತು ಸರೋವರಗಳು ನಿರ್ಮಾಣಗೊಂಡು ನೀರಾವರಿ ಪ್ರದೇಶ 281829 ಎಕರೆಗಳಿಗೆ ಹೆಚ್ಚಿತು. ಲಾಯ್ಡ್ ಸರೋವರ ನಿರ್ಮಾಣವಾದ ನಂತರ ಭಾತ್’ಘರ್ ಆಣೆಕಟ್ಟೆ ಅದರಲ್ಲಿ ಮುಳುಗಡೆಯಾಯಿತು. 1875 ರಿಂದ 1920 ರ 45 ವರ್ಷಗಳ ಅವಧಿಯಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ 50 ಕ್ಕೂ ಹೆಚ್ಚು ಕೆರೆ ಮತ್ತು ಆಣೆಕಟ್ಟೆಗಳನ್ನು ಕಟ್ಟಿ ನೀರು ಸರಬರಾಜು ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಕೇರಳದಲ್ಲಿ ನಿರ್ಮಾಣಗೊಂಡ ಪೆರಿಯಾರ್ (ಮುಳ್ಳೈ ಪೆರಿಯಾರ್) ಆಣೆಕಟ್ಟೆ ಬ್ರಿಟಿಷರ ಇಂಜಿನಿಯರಿಂಗ್ ಸಾಹಸ ಮತ್ತು ಸಾಧ್ಯತೆಗಳನ್ನು ಇನ್ನೊಂದು ಮಜಲಿಗೆ ಒಯ್ದಿತು. ಬಾಂಬೆ ನಗರಕ್ಕೆ ನೀರು ಒದಗಿಸುವ ತಾನ್ಸಾ ಅಣೆಕಟ್ಟಿನ ನಿರ್ಮಾಣ ಪೆರಿಯಾರ್ ಅಣೆಕಟ್ಟೆಗಿಂತ ಮೊದಲೇ ಪೂರ್ಣಗೊಂಡಿದ್ದಿತಾದರೂ , ವಿನ್ಯಾಸದಲ್ಲಿ ಪೆರಿಯಾರ್ ಆಣೆಕಟ್ಟೆ ಹಿರಿಯ ಸ್ಥಾನದಲ್ಲಿದೆ. ಪಶ್ಚಿಮ ಘಟ್ಟಗಳಲ್ಲಿ ಬೀಳುವ ಮಳೆ ನೀರಿನಿಂದ ಪೆರಿಯಾರ್ ನದಿ ತುಂಬಿ ತುಳುಕಿ, ದಟ್ಟ ಕಾಡಿನ ನಡುವೆ ಹರಿದು ಕೊಚ್ಚಿನ್ ಬಳಿ ಸಮುದ್ರ ಸೇರುತ್ತದೆ. ವಿಪುಲ ಪ್ರಮಾಣದ ಈ ನೀರನ್ನು ಬಳಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಈ ನದಿಯ ಪೂರ್ವ ಭಾಗದ ಎತ್ತರದ ಪ್ರದೇಶದಲ್ಲಿರುವ ವೈಗೈ ನದಿ ಕಣಿವೆಯಲ್ಲಿ ಸಾವಿರಾರು ವರ್ಷಗಳಿಂದಲೂ ಸಣ್ಣ, ಪುಟ್ಟ ಕಟ್ಟೆಗಳನ್ನು ಕಟ್ಟಿ ಕೆರೆಗಳಲ್ಲಿ ನೀರನ್ನು ನಿಲ್ಲಿಸಿ ನೀರಾವರಿಗೆ ಬಳಸಿಕೊಳ್ಳಲಾಗುತ್ತದೆ. ವೈಗೈ ನದಿ ನೀರು ಸಮುದ್ರ ತಲುಪದಷ್ಟು ತೀವ್ರವಾಗಿ ಬಳಕೆಯಲ್ಲಿದ್ದರೆ ಇದಕ್ಕೆ ತದ್ವಿರುದ್ದವಾಗಿ ಪೆರಿಯಾರ್ ನದಿಯ ನೀರು ಬಳಕೆಯಾಗದೆ ವ್ಯರ್ಥವಾಗಿ ಸಮುದ್ರ ಸೇರುತ್ತದೆ. ಕೆಲವು ಕಡೆ ವೈಗೈ ಉಪನದಿಯ ಕಣಿವೆ, ಪೆರಿಯಾರ್ ಸಮೀಪದಲ್ಲಿ ಪೂರ್ವದತ್ತ ಸಾಗುತ್ತದೆ. ಇವೆರಡು ನದಿ ಕಣಿವೆಗಳನ್ನು ಬೇರ್ಪಡಿಸಿರುವ ಎತ್ತರದ ದಿಬ್ಬವನ್ನು ಕಡಿದು ಸಂಪರ್ಕ ಕಲ್ಪಿಸಿದರೆ ಪೆರಿಯಾರ್ ನದಿಯ ನೀರನ್ನು ವೈಗೈ ಕೊಳ್ಳದತ್ತ ಹರಿಸಲು ಸಾಧ್ಯ. 1798 ರಲ್ಲಿ ರಾಮನಾಡಿನ ಮಂತ್ರಿಯಾಗಿದ್ದ ಮುತ್ತು ಅರುಳಪಿಳ್ಳೈ ಪೆರಿಯಾರ್ ನದಿಯ ನೀರನ್ನು ವೈಗೈ ನದಿ ಕಣಿವೆಯತ್ತ ತಿರುಗಿಸುವ ಸಾಧ್ಯತೆಯನ್ನು ತಿಳಿಯಲು ಹನ್ನೆರಡು ಜನರ ಸಮಿತಿಯನ್ನು ರಚಿಸಿದರು. ಈ ಸಮಿತಿ ಇಂತಹ ಯೋಜನೆ ಸಾಧ್ಯವೆಂದು ಅಭಿಪ್ರಾಯ ಪಟ್ಟಿತಾದರೂ , ಆರ್ಥಿಕ ಕಾರಣಗಳಿಗಾಗಿ ಅದನ್ನು ಕೈಬಿಡಲಾಯಿತು. 1807 ರಲ್ಲಿ ಮದುರೈ ಕಲೆಕ್ಟರ್ ಆಗಿದ್ದ ಪರಿಷ್ ಮತ್ತೊಮ್ಮೆ ಈ ಯೋಜನೆಯಲ್ಲಿ ಆಸಕ್ತಿ ತಾಳಿ ದಟ್ಟ ಕಾಡಿನಲ್ಲಿ ಸಂಚರಿಸುವಾಗ ಕಾಡಿನ ಜ್ವರಕ್ಕೆ ತುತ್ತಾಗಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದನಾದರೂ ಮುಂದಿನ ವರ್ಷ ಕಾಲ್ಡ್’ವೆಲ್’ನನ್ನು ಆ ಕೆಲಸಕ್ಕೆ ನಿಯೋಜಿಸಿದನು. ಕಾಲ್ಡ್’ವೆಲ್ ಇಂತಹ ಯೋಜನೆ ಆರ್ಥಿಕ ದೃಷ್ಟಿಯಿಂದ ಕಾರ್ಯಸಾಧುವಲ್ಲ ಎನ್ನುವ ವರದಿ ನೀಡಿದನು. ಇದರಿಂದ ಯೋಜನೆಯನ್ನು ಕೈಬಿಡಲಾಯಿತು. 1850ರಲ್ಲಿ ಕ್ಯಾಪ್ಟನ್ ಫೇಬರ್ ಸಣ್ಣ ಆಣೆಕಟ್ಟೆ ಕಟ್ಟಲು ಯತ್ನಿಸಿದನಾದರೂ ಅದು ಯಶಸ್ಸನ್ನು ಕಾಣಲಿಲ್ಲ. ಇದಾದ ನಂತರ ನಡೆಸಿದ ಅಧ್ಯಯನಗಳಿಂದ ಅಲ್ಪ ಎತ್ತರದ ಆಣೆಕಟ್ಟೆ ಕಟ್ಟುವುದರಿಂದ ಯಾವುದೇ ಶಾಶ್ವತ ನೀರಾವರಿ ಸಾಧ್ಯವಿಲ್ಲವೆಂದು ತಿಳಿದುಬಂದಿದ್ದಿತು. 1862 ರಲ್ಲಿ ಜೋಸೆಫ್ ಗೋರ್ ರೈವ್ಸ್ ಪೆರಿಯಾರ್ ನದಿಗೆ ಆಣೆಕಟ್ಟೆ ಕಟ್ಟುವ ಕಲ್ಪನೆಗೆ ಮತ್ತೊಮ್ಮೆ ಜೀವತುಂಬಿ 1867ರಲ್ಲಿ 53 ಮೀ ಎತ್ತರದ ( 175’ ) ಮಣ್ಣಿನ ಏರಿ ಕಟ್ಟುವ ಯೋಜನೆ ಸಿದ್ದಪಡಿಸಿದನು. 1877ರಲ್ಲಿ ಆರ್.ಸ್ಮಿಥ್ ‘ಹೈಡ್ರಾಲಿಕ್ ಪ್ಲೇಸ್’ಮೆಂಟ್’ ಎನ್ನುವ ತಂತ್ರ ಬಳಸಿ ಇಂತಹ ಬೃಹತ್ ಗಾತ್ರದ ಮಣ್ಣಿನ ಏರಿ ಕಟ್ಟಬಹುದೆಂದು ವಾದಿಸಿದನು. ಈ ತಂತ್ರದಿಂದ ಇಷ್ಟೊಂದು ದೊಡ್ಡ ಗಾತ್ರದ ಏರಿಯನ್ನು ಎಲ್ಲಿಯೂ ಕಟ್ಟದಿರುವುದರಿಂದ ಹಾಗೂ ಅಂತಹ ನಿರ್ಮಾಣದ ಅನುಭವ ಕೊರತೆಯ ಹಿನ್ನೆಲೆಯಲ್ಲಿ ಆರ್. ಸ್ಮಿಥ್ ನೀಡಿದ ಸಲಹೆಯನ್ನು ಮದ್ರಾಸಿನ ಮುಖ್ಯ ಇಂಜಿನಿಯರ್ ಜನರಲ್ ವಾಕರ್ ತಿರಸ್ಕರಿಸಿ ಅದರ ಬದಲು ಕಲ್ಲಿನ ಅಣೆಕಟ್ಟೆ ಕಟ್ಟುವ ಸಾಧ್ಯತೆಯ ಅಧ್ಯಯನವನ್ನು ಕೈಗೆತ್ತಿಕೊಳ್ಳುವಂತೆ ಆರ್.ಸ್ಮಿಥ್ ಹಾಗೂ ಪೆನ್ನಿಕುಯಿಕ್’ಗೆ ವಹಿಸಿದನು. ಈ ಹಿಂದೆ ಅಧಿಕ ವೆಚ್ಚದ ಕಾರಣದಿಂದ ಕಲ್ಲಿನ ಅಣೆಕಟ್ಟೆಗಳನ್ನು ಕಟ್ಟಲಾಗದು ಎಂದು ಸ್ಮಿಥ್ ವಾದಿಸಿದ್ದನಾದರೂ , ಬದಲಾದ ಸನ್ನಿವೇಶದ ಕಾರಣದಿಂದಲೋ ಅಥವಾ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಯಶಸ್ವಿಯಾಗಿ ದೊಡ್ದ ಗಾತ್ರದ ಕಲ್ಲಿನ ಆಣೆಕಟ್ಟೆಯನ್ನು ಕಟ್ಟುತ್ತಿರುವ ಸಂಗತಿ ತಿಳಿದಿದ್ದರಿಂದಲೋ ಸ್ಮಿಥ್ ಹೊಸ ಹೊಣೆಗಾರಿಕೆ ಹೊರಲು ಮುಂದಾದನು. 1876-77ರಲ್ಲಿ ಭೀಕರ ಬರಗಾಲ ಬಂದೆರಗಿ ಪೆರಿಯಾರ್ ಯೋಜನೆಯನ್ನು ಹಿಂದಿಕ್ಕಿರಿಸಲಾಯಿತು. 8 ಮೇ 1882ರಲ್ಲಿ ಪರಿಷ್ಕೃತಗೊಂಡ ಯೋಜನಾ ವರದಿಯನ್ನು ಸಿದ್ದಪಡಿಸಲು ಪೆನ್ನಿಕುಯಿಕ್’ಗೆ ಅದೇಶಿಸಲಾಯಿತು. ಅದೇ ವರ್ಷದ ಕೊನೆಗೆ ಅದಕ್ಕೆ ಅನುಮೋದನೆ ನೀಡಲಾಯಿತು. ಅಣೆಕಟ್ಟಿನ ಮುಖ್ಯಭಾಗ ನದಿಯ ತಳದಲ್ಲಿ 60ಮೀ (197’) ಉಳಿದ ಕಡೆ 54 ಮೀ (177’) ಎತ್ತರವಿದ್ದಿತು. ಇದು ಆವರೆಗೆ ಕಟ್ಟಿದ್ದ ಎಲ್ಲ ಆಣೆಕಟ್ಟೆಗಳನ್ನು ಎತ್ತರದಲ್ಲಿ ಮೀರಿಸಿದ್ದಿತು. ಸೆಪ್ಟೆಂಬರ್ 1887ರಲ್ಲಿ ಪೆರಿಯಾರ್ ಅಣೆಕಟ್ಟೆಯ ಕೆಲಸ ಪ್ರಾರಂಭವಾಯಿತು. ಪೆರಿಯಾರ್ ಅಣೆಕಟ್ಟೆಯ ನಿರ್ಮಾಣದಲ್ಲಿ ತಾಂತ್ರಿಕವಲ್ಲದ ಹಲವಾರು ಸಮಸ್ಯೆಗಳು ಎದುರಾದವು. ನೆರೆ ನೀರು ಮಾರ್ಚ್’ವರೆಗೆ ನಿಂತಿದ್ದು ನಿರ್ಮಾಣ ಚಟುವಟಿಕೆಗಳಿಗೆ ಅಡ್ಡಿಯಾದರೆ , ಕಾಡಿನ ಜ್ವರ ತಗುಲಿ ಕೆಲಸಗಾರರ ಸಮಸ್ಯೆ ಎದುರಾಗುತ್ತಿದ್ದಿತು. ಆಣೆಕಟ್ಟೆಯ ನಿರ್ಮಾಣದ ಜಾಗ ಅತಿ ಸನಿಹದ ಬಂಡಿ ಗಾಡಿ ಜಾಡಿನಿಂದ 11 ಕಿ.ಮೀ , ಕೃಷಿಗೆ ಒಳಪಟ್ಟ ಅತಿ ಸನಿಹ ಪ್ರದೇಶದಿಂದ 32 ಕಿ.ಮೀ , ಅತಿ ಸನಿಹದ ರೈಲ್ವೇ ನಿಲ್ದಾಣದಿಂದ 128 ಕಿ.ಮೀ ದೂರವಿದ್ದು ಮಾನವ ಸಂಚಾರ ಹಾಗೂ ಸರಕು ಸಾಮಗ್ರಿಗಳ ಸಾಗಾಣಿಕೆಗೆ ಬಹು ದೊಡ್ಡ ಅಡಚಣೆಗಳಾಗಿದ್ದವು. ಮನುಷ್ಯ ಮತ್ತು ಪ್ರಾಣಿಗಳಿಂದಾಗುವ ಕೆಲಸಗಳನ್ನು ಯಾಂತ್ರಿಕವಾಗಿ ಮಾಡಲು ಯತ್ನಿಸಲಾಯಿತು. ಅಣೆಕಟ್ಟೆಯ ಬುನಾದಿ ಕೆಲಸ ಪ್ರಾರಂಭವಾದಾಗ 12ಮೀ ಅಗಲ 3.6 ರಿಂದ 5.5 ಮೀ ಆಳದ ದೊಡ್ಡ ಕೊರಕಲು ಅನಿರೀಕ್ಷಿತವಾಗಿ ಎದುರಾಯಿತು. ಈ ಕೊರಕಲಿಂದ ನೀರು ರಭಸದಿಂದ ಒತ್ತಡದಲ್ಲಿ ಹರಿಯತೊಡಗಿತು. ಈ ನೀರನ್ನು ಹೊರತೆಗೆದು ತಳಪಾಯ ಹಾಕುವುದೇ ದೊಡ್ಡ ಸವಾಲಿನ ಕೆಲಸವಾಯಿತು. ಪೆರಿಯಾರ್ ನದಿಯಿಂದ ಪೂರ್ವಾಭಿಮುಖವಾಗಿ ವೈಗೈ ನದಿ ಪಾತ್ರದತ್ತ ನೀರು ತಿರುಗಿಸುವ ಸುರಂಗ , ಸುರಂಗದ ಪ್ರವೇಶ ದ್ವಾರ ಅದನ್ನು ನಿಯಂತ್ರಿಸುವ ಗೇಟ್’ಗಳ ವಿನ್ಯಾಸ , ಅಳವಡಿಕೆ ಬೇರೆಯದೇ ಆದ ಹೊಸ ಬಗೆಯ ಸಾಹಸಗಳಾಗಿದ್ದವು. 1895 ರಲ್ಲಿ ಆಣೆಕಟ್ಟೆಯ ಕೆಲಸ ಪೂರ್ಣಗೊಂಡಾಗ ಭಾರತದಲ್ಲಿ ಆಣೆಕಟ್ಟೆಗಳ ನಿರ್ಮಾಣ ಒಂದು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದ್ದಿತು. ಇವೆಲ್ಲವನ್ನೂ ಗಮನಿಸಿದ ಇಂಜಿನಿಯರ್ ಸರ್ ಜಾನ್ ವುಲ್ಫ್ ಬ್ಯಾರಿ ‘ ಈ ಆಣೆಕಟ್ಟೆಯ ವಿನ್ಯಾಸದಲ್ಲಿ ತೋರಿದ ತಾಂತ್ರಿಕ ಪರಿಣಿತಿ , ನಿರ್ಮಾಣದಲ್ಲಿದ್ದ ಬಿಗಿ ಹಿಡಿತ , ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಕಾರ್ಯ ಸಾಧಿಸಿದ ಸಿಬ್ಬಂದಿಯ ಕಾಯಕ ನಿಷ್ಠೆಗಳನ್ನು ಎಲ್ಲರೂ ಗುರುತಿಸಬೇಕು’ ಎಂದು ದಾಖಲಿಸಿದ್ದಾನೆ. (4)[3] ಈಗ ಪಾಕಿಸ್ತಾನಕ್ಕೆ ಸೇರಿರುವ ಪಂಜಾಬ್ ಮತ್ತು ಸಿಂಧ್ ಪ್ರಾಂತಗಳು 20 ನೇ ಶತಮಾನದ ಎರಡನೇ ದಶಕದವರೆಗೆ ಬಾಂಬೆ ಪ್ರೆಸಿಡೆನ್ಸಿಯ ಅಧೀನದಲ್ಲಿದ್ದವು. ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ಪಶ್ಚಿಮ ಭಾಗಗಳಲ್ಲಿ ( ಈಗಿನ ಮಹಾರಾಷ್ಟ್ರ) ನೀರಾವರಿ ಯೋಜನೆಗಳಿಗೆ ಒತ್ತು ಸಿಕ್ಕಿದ್ದಿತು. ಮದ್ರಾಸ್ ಪ್ರೆಸಿಡೆನ್ಸಿ ಹಾಗೂ ಗಂಗಾ-ಯಮುನಾ ಕಣಿವೆ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳು ಜಾರಿಗೊಂಡಿದ್ದವು. ಈ ಮುನ್ನಡೆ ಪಂಜಾಬ್ ಹಾಗೂ ಸಿಂಧ್ ಪ್ರದೇಶಗಳಲ್ಲಿ 20 ನೇ ಶತಮಾನದ ಎರಡನೇ ದಶಕದವರೆಗೆ ಆಗಿರಲಿಲ್ಲ. ಭಾರತದ ನೀರಾವರಿ ಚರಿತ್ರೆಯಲ್ಲಿ ಪಂಜಾಬ್ ಮತ್ತು ಸಿಂಧ್ ಪ್ರಾಂತಗಳಿಗೆ ಅದರದೇ ಆದ ವಿಶಿಷ್ಟ ಸ್ಥಾನವಿದೆ. ಪಂಜಾಬ್ ಮತ್ತು ಸಿಂಧ್ ಪ್ರಾಂತದಲ್ಲಿ ಸಿಂಧೂ ಮತ್ತು ಇತರ ಐದು ನದಿಗಳ (ಝೀಲಂ, ಚೀನಾಬ್, ರಾವಿ, ಬಿಯಾಸ್, ಸಟ್ಲೆಜ್) ಬಯಲಿನಲ್ಲಿ ಬಹು ಪ್ರಾಚೀನ ಕಾಲದಿಂದಲೂ ನೆರೆಯ ನೀರನ್ನು ಹರಿಸಿ ಕೃಷಿ ಮಾಡಲು ಕಾಲುವೆಗಳನ್ನು ನಿರ್ಮಿಸಲಾಗಿದ್ದಿತು. ಇಂತಹ ಹಲವಾರು ಕಾಲುವೆಗಳಲ್ಲಿ ಹೂಳು ತುಂಬಿ ನೀರನ್ನು ಸಾಗಿಸಲು ಅಸಮರ್ಥವಾಗಿದ್ದವು. ಜೆ.ಜೆ ಫೈಫ್ 1855-1859 ರವರೆಗೆ ಬಾಂಬೆ/ಸಿಂಧ್ ಪ್ರಾಂತದ ಕಾಲುವೆ ವಿಭಾಗದ ಅಧೀಕ್ಷಕ ಇಂಜಿನಿಯರ್’ನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಪೂರ್ವ ದಿಕ್ಕಿನಲ್ಲಿದ್ದ ನಾರಾ ಕಾಲುವೆಯನ್ನು ಸಿಂಧೂ ನದಿಯೊಂದಿಗೆ ಸಂಪರ್ಕಿಸುವಂತೆ ಮಾಡಿದ್ದನು . ಈ ಕಾಲುವೆ 1932 ರವರೆಗೆ ಉತ್ತಮ ಸ್ಥಿತಿಯಲ್ಲಿದ್ದಿತು. ಸಿಂಧ್ ಪ್ರಾಂತದಲ್ಲಿ ಬಳಕೆಯಲ್ಲಿದ್ದ ನೆರೆ ಕಾಲುವೆಗಳ ದೋಷಗಳನ್ನು ಗುರುತಿಸಿದ್ದ ಫೈಫ್ ಇವುಗಳಿಗೆ ಬದಲಾಗಿ ನೀರು ಸಂಗ್ರಹಿಸಿ, ನೀರಾವರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳಿಗೆ ಮಹತ್ವ ಗುರುತಿಸಿದ್ದನು. ಫೈಫ್ ಸಿಂಧ್ ಪ್ರದೇಶದ ನೀರಾವರಿಗೆ 5 ಮುಖ್ಯ ಕಾಲುವೆಗಳ ಯೋಜನಾ ವರದಿಗೆ ತಯಾರಿಸಿದ್ದನು. ಇದರಲ್ಲಿ ಹಲವು ಕೋಡಿಕಟ್ಟೆಗಳು ಪ್ರಸ್ತಾಪಗೊಂಡಿದ್ದವು. ಈ ವರದಿಯನ್ನು ಬಾಂಬೆ ಸರ್ಕಾರ ತಿರಸ್ಕರಿಸಿದ್ದಿತು. ಬಾಂಬೆ ಸರ್ಕಾರ ಈ ವರದಿಯನ್ನು ಒಪ್ಪಿದ್ದರೂ ಕ್ರೇನ್, ಬುಲ್ಡೋಜರ್, ಡ್ರ್ಯಾಗ್’ಲೈನ್ ಮುಂತಾದ ಉಪಕರಣ ಹಾಗೂ ವಾಹನಗಳಿಲ್ಲದೆ ಅಂತಹ ನಿರ್ಮಾಣಗಳನ್ನು ಮಾಡಲು ಸಾಧ್ಯವಿರಲಿಲ್ಲ. ( 40 ವರ್ಷಗಳ ನಂತರ ಈ ಬಗೆಯ ಯಂತ್ರಗಳು ಬಳಕೆಗೆ ಬಂದವು.) ಇಂತಹ ಯಂತ್ರಗಳನ್ನು 1869ರಲ್ಲಿ ಫ್ರೆಂಚ್ ಇಂಜಿನಿಯರ್’ಗಳು ಮೊದಲ್ ಬಾರಿಗೆ ಸೂಯೆಜ್ ಕಾಲುವೆ ನಿರ್ಮಾಣದಲ್ಲಿ ಬಳಸಿದ್ದರು. ಸಿಂಧ್ ಪ್ರಾಂತದಲ್ಲಿ ನೆರೆಗಾಲುವೆಗಳ ಹೊರತಾಗಿ ಯಾವುದೇ ಕೋಡಿಕಟ್ಟೆಗಳಿರಲಿಲ್ಲ. 1894ರಲ್ಲಿ ಮೊದಲ ಬಾರಿಗೆ ನಾರಾ ನದಿಗೆ ಅಡ್ಡಗಟ್ಟೆ ಕಟ್ಟಿ ( ಜಮ್ರಾವ್ ಯೋಜನೆ) ನೀರು ಸಂಗ್ರಹಿಸಿ ನೀರಾವರಿಗೆ ಒದಗಿಸಲಾಯಿತು. ಇದಾದ ನಂತರ ಬ್ರಿಟಿಷರು ಹಲವಾರು ದೊಡ್ಡ ಕಾಲುವೆ ಜಾಲಗಳನ್ನು ನಿರ್ಮಿಸಿ, (ಉನಾದ, ಧಾಮ್ ರಾವ್, ಪ್ರಚಂಡ್ ಮುಂತಾದ) ಹೆಚ್ಚಿನ ಪ್ರದೇಶಗಳನ್ನು ನೀರಾವರಿಯಡಿಯಲ್ಲಿ ತಂದರು. 1858ರಲ್ಲಿ ಮುಖ್ಯ ಇಂಜಿನಿಯರ್ ಹುದ್ದೆಗೇರಿದ್ದ ಫೈಫ್ 132.65 ಘ.ಮೀ/ಸೆಕೆಂಡ್ ( 1426 ಘ.ಅ/ಸೆಕೆಂಡ್ ) ನೀರನ್ನು ಸಾಗಿಸುವ ಸಾಮರ್ಥ್ಯದ ಕಾಲುವೆಯನ್ನು ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದನು. ಒಂಬತ್ತು ವರ್ಷಗಳ ನಂತರ ಈ ಯೋಜನಾ ವರದಿಯನ್ನು ಒಪ್ಪಿದ ಬ್ರಿಟಿಷ್ ಸರ್ಕಾರ, ಅದನ್ನು ಮರು ಪರಿಶೀಲಿಸಲು ತಿಳಿಸಿ ಮರುಶೀಲನೆಯ ಹೊಣೆಯನ್ನು ಕ್ಯಾಪ್ಟನ್, ಲೆ ಮಸೂರಿಯರ್’ಗೆ ಒಪ್ಪಿಸಿತು. 1867 ರಲ್ಲಿ 815544 ಎಕರೆಗೆ ನೀರಾವರಿ ಒದಗಿಸಬಲ್ಲ ಪರಿಷ್ಕೃತ ಯೋಜನೆ ಪೂರ್ಣಗೊಂಡಿತು. 1871ರಲ್ಲಿ ಸಿಂಧೂ ಕಣಿವೆಯಲ್ಲಿ ಮೂರು ಯೋಜನೆಗಳ (ಗುಡ್ಡು-ಸುಕ್ಕೂರು-ಕೇದ್ರಿ) ಭಾಗವಾಗಿ ಕೋಡಿಕಟ್ಟೆಗಳ ನಿರ್ಮಾಣ ಸಾಧ್ಯತೆಯ ಅಧ್ಯಯನ ನಡೆಸಲು ತಿಳಿಸಲಾಯಿತು. 1872ರಲ್ಲಿ ಸಿಂಧ್’ಗೆ ಭೇಟಿ ನೀಡಿದ ವೈಸರಾಯ್ ಲಾರ್ಡ್ ನಾರ್ಥ್’ಬ್ರೂಕ್ ಈ ಎಲ್ಲ ಯೋಜನೆಗಳನ್ನು ರದ್ದುಗೊಳಿಸಿದನು. ಸಿಂಧ್ ಪ್ರಾಂತದಲ್ಲಿ ನೆರೆ ಕಾಲುವೆ ನೀರಾವರಿ ಪದ್ದತಿ ಹಳೆಯದಾಗಿದ್ದು, ಅಲ್ಲಿನ ನೀರಾವರಿ ದುಸ್ಥಿತಿಯಲ್ಲಿ ಇರುವುದರಿಂದ ಹೊಸ ನೀರು ಸಂಗ್ರಹದ ಯೋಜನೆಗಳನ್ನು ಅನುಷ್ಟಾನಗೊಳಿಸುವ ಅನಿವಾರ್ಯತೆಯನ್ನು ತಿಳಿಸುವ ವರದಿಯೊಂದನ್ನು ವೈಸರಾಯ್’ಗೆ ಕಳಿಸಲಾಯಿತು. ಇಂತಹ ಪ್ರಯತ್ನಕ್ಕೆ ವೈಸರಾಯ್ ನಾರ್ಥ್’ಬ್ರೂಕ್ ಕಡೆಯಿಂದ ತಣ್ಣನೆಯ ಪ್ರತಿಕ್ರಿಯೆ ಬಂದಿತು. ಆತ ಸಿಂಧ್ ಪ್ರಾಂತದಲ್ಲಿ ಯಾವುದೇ ಹೊಸ ನೀರಾವರಿ ಯೋಜನೆಗೆ ವಿರುದ್ದವಾಗಿದ್ದನು. ಇದರಿಂದ ಸಿಂಧ್ ಪ್ರಾಂತದ ನೆರೆ ಕಾಲುವೆಗಳು ವರ್ಷದಲ್ಲಿ 90-120 ದಿನಗಳ ಕಾಲ ಮಾತ್ರ ನೀರನ್ನು ಸಾಗಿಸಿ ಉಳಿದ ವೇಳೆ ಬರಿದಾಗಿರುತ್ತಿದ್ದವು. ಇದಕ್ಕೆ ತದ್ವಿರುದ್ದವಾಗಿ ಗಂಗಾ ಯಮುನಾ ನದಿಗಳ ಮೇಲೆ ನೀರಿನ ಸಂಗ್ರಹದ ಕೋಡಿಕಟ್ಟೆಗಳಿದ್ದು ವರ್ಷ ಪೂರ್ತಿ ನೀರನ್ನು ಒದಗಿಸುತ್ತಿದ್ದವು. 1890ರ ವೇಳೆಗೆ ನೆರೆ ಕಾಲುವೆಗಳಿಂದ ಸಿಂಧ್ ಪ್ರಾಂತದಲ್ಲಿ ನೀರಾವರಿ ಮಾಡುವುದೇ ದುಸ್ತರ ಎಂಬ ಅಭಿಪ್ರಾಯಕ್ಕೆ ಬರಲಾಯಿತು. 40 ವರ್ಷಗಳ ಹಿಂದೆ ತಾನು ಪ್ರಸ್ತಾಪಿಸಿದ ಸಂಗ್ರಹಿತ ನೀರಿನ ನೀರಾವರಿಯ ಯೋಜನೆ ಹಾಗೂ ಆಣೆಕಟ್ಟೆಗಳ ನಿರ್ಮಾಣ ಕೈಗೂಡದಿರುವುದನ್ನು ಅರಿತಿದ್ದ ಫೈಫ್ 1890ರಲ್ಲಿ ಪತ್ರ ಬರೆದು ಶಾಶ್ವತ ನೀರಾವರಿಗೆ ಒತ್ತಾಯಿಸಿದನು.[4] 1903ರಲ್ಲಿ ಇಂಡಿಯನ್ ಇರಿಗೇಷನ್ ಕಮಿಷನ್ ಮೂರು ಕಾಲುವೆ ಯೋಜನೆಗಳು (ಗುಡ್ಡು-ಸುಕ್ಕೂರು-ಕೇದ್ರಿ) ಕಾರ್ಯ ಸಾಧ್ಯ ಎನ್ನುವ ವರದಿ ನೀಡಿತು. 1906ರಲ್ಲಿ ಸಿಂಧ್’ಗೆ ಶಾಶ್ವತ ನೀರಾವರಿ ಒದಗಿಸುವ ನಾಲ್ಕು ಯೋಜನೆಗಳನ್ನು ಪರಿಗಣಿಸಿ ಮಿರಾನ್ ಕೋಲ್, ಸುಕ್ಕೂರು, ಸೆಹ್ವಾನ್, ಕೇಂದ್ರ ಝರಾಕ್ ಸೆಹ್ವಾನ್ ಜಾಗಗಳ ಪರಿಶೀಲನೆ ನಡೆಸಿ ಅದರಲ್ಲಿ ಸುಕ್ಕೂರು ಯೋಜನೆಯನ್ನು ಪರಿಗಣಿಸಲು ಸೂಚಿಸಲಾಯಿತು. ಸುಕ್ಕೂರು ಕೋಡಿಕಟ್ಟೆಯ ನಿರ್ಮಾಣದ ಕಾರ್ಯ ಸಾಧ್ಯತೆ ಕುರಿತಾಗಿ ಅಧ್ಯಯನ ನಡೆಸಲು ನೇಮಿಸಿದ್ದ ಡಾ.ಸಮ್ಮರ್ಸ್ ಸಮಿತಿ 1913ರಲ್ಲಿ ಸುಕ್ಕೂರು ಅಣೆಕಟ್ಟೆಯ ನಿರ್ಮಾಣದಲ್ಲಿ ಎದುರಾಗುವ ಬೃಹತ್ ಕಾಮಗಾರಿಯ ಸ್ವರೂಪ , ಅದಕ್ಕಿರುವ ಅಡಚಣೆಗಳನ್ನು ಪಟ್ಟಿಮಾಡಿ ಅದರೊಂದಿಗೆ ಹೂಡಿದ ಬಂಡವಾಳದ ಮೇಲೆ 4.5 % ಬಡ್ಡಿ ಮಾತ್ರ ಹಿಂದಿರುಗುವ ಸಾಧ್ಯತೆ ಇರುವುದರಿಂದ ಆರ್ಥಿಕವಾಗಿ ಕಾರ್ಯ ಸಾಧುವಲ್ಲ ಎಂಬ ವರದಿ ನೀಡಿತು. ಇದಕ್ಕೆ ಪರಿಹಾರವಾಗಿ ಮೊದಲು ಕಾಲುವೆ ನಿರ್ಮಿಸಿ ನಂತರ ಕೋಡಿಕಟ್ಟೆ ನಿರ್ಮಿಸಿದರೆ, ಬಂಡವಾಳದ ಹೊಂದಿಕೆ ಹಾಗೂ ಅದರ ಮರುಪಾವತಿಯ ಹೊರೆಯನ್ನು ತಗ್ಗಿಸಬಹುದೆಂಬ ನಿರ್ಧಾರಕ್ಕೆ ಬರಲಾಯಿತು. 1913ರಲ್ಲಿ ಇಂಗ್ಲೆಂಡಿನಲ್ಲಿ ಬಟ್ಟೆ ಕಾರ್ಖಾನೆಗಳಿಗೆ ಹತ್ತಿಯ ಕೊರತೆ ಎದುರಾಯಿತು. ಬ್ರಿಟನ್’ಗೆ ಬಟ್ಟೆಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ಅಸಂಸಂ ಹಾಗೂ ಜಪಾನ್ ದೇಶಗಳಿಗೆ ತಮ್ಮದೇ ಆದ ಹತ್ತಿ ಬೆಳೆಯುವ ಪ್ರದೇಶವಿದ್ದಿತು. ಆದ್ದರಿಂದ ಬ್ರಿಟಿಷರು ಸಿಂಧ್ ಪ್ರದೇಶವನ್ನು ಶಾಶ್ವತ ನೀರಾವಡಿಯಲ್ಲಿ ತಂದು ಅಲ್ಲಿ ಹತ್ತಿ ಬೆಳೆಯಲು ಮುಂದಾದರು. ಸುಕ್ಕೂರು ಕೋಡಿಕಟ್ಟೆ ಕಟ್ಟುವ ಸಾದ್ಯತೆ ಕುರಿತಾಗಿ ಮುಂದಿನ ಹಲವಾರು ವರ್ಷಗಳ ಕಾಲ ಹತ್ತಾರು ಚರ್ಚೆಗಳು ನಡೆದು 1923ರಲ್ಲಿ ಜುಲೈನಲ್ಲಿ ಅದಕ್ಕೆ ಅಂತಿಮ ಅನುಮತಿ ದೊರೆಯಿತು. ಸುಕ್ಕೂರು ಕೋಡಿಕಟ್ಟೆಯ ನಿರ್ಮಾಣವನ್ನು ಸಾಕ್ಷಾತ್ಕಾರಗೊಳಿಸಲು ಗುಲಾಂ ಮಹಮ್ಮದ್ ಬುರ್ಗರಿ ಮತ್ತು ಸೇಥ್ ಹರಚಂದರಾಯ್ ಸತತವಾಗಿ ಬ್ರಿಟಿಷ ಸರ್ಕಾರದ ಸಂಪರ್ಕದಲ್ಲಿದ್ದು, ಯೋಜನೆಯನ್ನು ಅನುಷ್ಟಾನಗೊಳಿಸುವಂತೆ ಒತ್ತಾಯ ಹಾಕುತ್ತಿದ್ದನು. ಇವೆಲ್ಲದರ ಫಲವಾಗಿ 1 ಜುಲೈ 1923 ರಂದು ಸುಕ್ಕೂರು ಕೋಡಿಕಟ್ಟೆಯ ನಿರ್ಮಾಣ ಪ್ರಾರಂಭವಾಯಿತು. ಈ ಅಣೆಕಟ್ಟೆಗೆ ಜಾರ್ಜ್ ಲಾಯ್ಡ್ ಬ್ಯಾರೇಜ್-1 (ಇಂಗ್ಲೆಂಡ್ ಪ್ರಧಾನ ಮಂತ್ರಿ ) ಹೆಸರಿಡಲು ಲರ್ಕಾನ ಪಟ್ಟಣದ ಲೋಕಲ್ ಬೋರ್ಡ್ ತೀರ್ಮಾನಿಸಿತು. ಸುಕ್ಕೂರು ಅಣೆಕಟ್ಟೆ ಆ ಕಾಲದಲ್ಲಿ ಕೈಗೆತ್ತಿಕೊಂಡ ಜಗತ್ತಿನ ಅತ್ಯಂತ ದೊಡ್ಡ ಯೋಜನೆಯಾಗಿದ್ದಿತು. ಅಣೆಕಟ್ಟೆಯ ನಿರ್ಮಾಣಕ್ಕಾಗಿ ಸಾವಿರಾರು ಕಾರ್ಮಿಕರು, ಕೂಲಿಯಾಳುಗಳು ಬೇಕಾಗಿದ್ದರು. 1917ರಲ್ಲಿ ಕಾಣಿಸಿಕೊಂಡಿದ್ದ ಇನ್’ಫ್ಲೂಯೆಂಜಾ ಜ್ವರ ಗ್ರಾಮೀಣ ಪ್ರದೇಶದಲ್ಲಿ 40% ಅಧಿಕ ಜನರ ಸಾವಿಗೆ ಕಾರಣವಾಗಿದ್ದಿತು. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಜನ ಸಿಗದಂತಾಗಿದ್ದರು. ಸುಕ್ಕೂರು ಅಣೆಕಟ್ಟೆಯಂತಹ ಬೃಹತ್ ಕಾಮಗಾರಿಯಲ್ಲಿ ಜನರನ್ನು ತೊಡಗಿಸಿಕೊಂಡರೆ ಕೃಷಿ ಚಟುವಟಿಕೆಗಳಿಗೆ ಇನ್ನೂ ಹೊಡೆತ ಬಿದ್ದು ಕೂಲಿ ಹಲವು ಪಟ್ಟು ಹೆಚ್ಚುವ ಸಾಧ್ಯತೆಗಳಿದ್ದವು. ಕೂಲಿಯಾಳುಗಳ ಕೊರತೆ ಅಣೆಕಟ್ಟೆಯ ನಿರ್ಮಾಣಕ್ಕೆ ಬರುವ ಕೂಲಿಯಾಳುಗಳ ದಿನಗೂಲಿಯಲ್ಲೂ ಹೆಚ್ಚಳ ತರುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದವು. ಇದು ಯೋಜನೆಯ ಆದಾಯ ವೆಚ್ಚ ಮೀರಿ ಹೋಗುವ ಎಲ್ಲ ಸಾಧ್ಯತೆಗಳಿದ್ದವು. ಇವೆಲ್ಲವುಗಳಿಗೆ ಪರಿಹಾರವಾಗಿ ಇಂಜಿನಿಯರುಗಳು ಪರ್ಯಾಯ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕಾಗಿದ್ದಿತು. 1903 -1920 ನಿರ್ಮಾಣ ಕಾರ್ಯದಲ್ಲಿ ಬಳಸುವ ಯಂತ್ರಗಳಲ್ಲಿ ಭಾರಿ ಕ್ರಾಂತಿ ಉಂಟಾಯಿತು. 1903 ರಲ್ಲಿ ಫೋರ್ಡ್ ಕಂಪನಿ ಮಾಡೆಲ್-ಬಿ ಕಾರುಗಳನ್ನು ತಯಾರಿಸಿದರೆ, ಕ್ಯಾಟರ್’ಫಿಲ್ಲರ್ ಕಂಪನಿ ಕ್ರಾಲರ್, ಟ್ರ್ಯಾಕ್ಟರ್’ಗಳ ತಯಾರಿಕೆಯಲ್ಲಿ ಸಿದ್ಧಹಸ್ತವಾಯಿತು. ಲೆ ಟಾರ್ನಿಯಾ ಕಂಪನಿಯಿಂದ ಸ್ಕೂಪರ್ ,ಬುಲ್’ಡೋಜರ್, ಬ್ಲೇಡ್, ಪವರ್ ವಿಂಚ್ ತಯಾರಾಗಿ ಬಳಕೆಗೆ ಬಂದವು. ಇಂಗ್ಲೆಂಡಿನ ರಸ್ಟನ್ ಸ್ಥಿರ ಹಾಗೂ ಸಾಗಿಸಬಲ್ಲ ಡೀಸೆಲ್ ಇಂಜಿನ್’ಗಳನ್ನು ತಯಾರಿಸಿದನು. ಈ ಕಂಪನಿ ಬೈಸ್ಪಾರಸ್ ಕಂಪನಿಯ ಸಹಯೋಗದಲ್ಲಿ, ಕ್ಲಾಮ್’ಷೆಲ್, ಕ್ರೇನ್, ಡ್ರಿಲ್ಲಿಂಗ್ ಹಾಗೂ ಬ್ಲಾಸ್ಟಿಂಗ್ ರಿಗ್ , ಪೈಲ್ ಹ್ಯಾಮರ್’ ಕಂಪ್ರೆಸರ್ ಮತ್ತು , ಮಲ್ಟಿ ಸಿಲಿಂಡರ್ ಡೀಸೆಲ್ ಇಂಜಿನ್’ಗಳನ್ನು ತಯಾರಿಸಿತು. ಹೆಚ್ಚಿನ ಶಕ್ತಿಗಾಗಿ ಸಾಗಿಸಬಹುದಾದ ಉಗಿ ಇಂಜಿನ್’ಗಳು ತಯಾರಾದವು. ಈ ಹೊಸ ಯಂತ್ರೋಪಕರಣಗಳು ಮಣ್ಣು ಅಗೆತ , ಸಾಗಿಸಿಕೆ , ಬಂಡೆಗಳ ಸ್ಫೋಟಗಳಲ್ಲಿ ಮಾನವ ಹಾಗೂ ಪ್ರಾಣಿಗಳ ಬಳಕೆಯನ್ನು ಬಹುಮಟ್ಟಿಗೆ ಇಲ್ಲವಾಗಿಸಿ ನಿರ್ಮಾಣದಲ್ಲಿ ಕ್ರಾಂತಿಯನ್ನೇ ತಂದವು. ಈ ಯಂತ್ರಗಳ ನೆರವಿನಿಂದ ಬೃಹತ್ ಪ್ರಮಾಣದ ಕಾಮಗಾರಿಯಿಂದಾಗಿ ಮಾನವ ಶ್ರಮದ ಮೂಲಕ ಅಸಾಧ್ಯ ಎನಿಸಿದ್ದ ಸಿಂಧ್ ಪ್ರಾಂತದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವೆಂದು ಮನದಟ್ಟಾಗತೊಡಗಿತು. ಇದರ ಫಲಿತಾಂಶವಾಗಿ ಮಣ್ಣು ಅಗೆತ, ಸಾಗಿಸಿಕೆ, ನೀರೆತ್ತುವಿಕೆ, ಸಾಮಾನು ಸಾಗಿಸಿಕೆ, ಮುಂತಾದ ಎಲ್ಲ ಕೆಲಸಗಳಿಗೆ ಯಂತ್ರಗಳನ್ನು ಬಳಸಲು ನಿರ್ಧರಿಸಲಾಯಿತು. ಯಂತ್ರೋಪಕರಣಗಳ ಮೇಲೆ ಹೂಡಿದ ಬಂಡವಾಳ ಯೋಜನೆಯ ಒಟ್ಟು ಮೊತ್ತದ 22% ಆಗಿದ್ದಿತಾದರೂ ಮಾನವ ಶ್ರಮದಿಂದ ಮಾಡುವುದಕ್ಕಿಂತ ಹಲವು ಪಟ್ಟು ಕಡಿಮೆಯಿದ್ದಿತು. ಕಾಲುವೆಗಳನ್ನು ನಿರ್ಮಿಸುವ ಮೊದಲು ನೀರಾವರಿ ಪ್ರದೇಶವನ್ನು 320 ಎಕರೆ ವಿಸ್ತೀರ್ಣದ ಕ್ಷೇತ್ರಗಳಲ್ಲಿ ವಿಂಗಡಿಸಲಾಯಿತು. ಇಂತಹ ಒಂದೊಂದು ಕ್ಷೇತ್ರವನ್ನು 1 ಎಕರೆಯಲ್ಲಿ ಗುರುತಿಸಲಾಯಿತು. ನೀರಿನ ಕಾಲುವೆಗಳು ಈ ಕ್ಷೇತ್ರಗಳ ಮೇರೆಯಲ್ಲಿ ಸಾಗಿ ನೀರು ಸರಬರಾಜನ್ನು ಅತ್ಯಂತ ಕ್ಷಮತೆಯಲ್ಲಿ ಸಾಗಿಸುವಂತಾಯಿತು. ನೀರಿನ ತೆರಿಗೆಯನ್ನು ಆರಂಭದಲ್ಲಿಯೇ ಪ್ರತಿ ಎಕರೆಗೆ ಇಷ್ಟೆಂದು ನಿರ್ಧರಿಸಲಾಯಿತು. ನೀರಾವರಿ ಪ್ರದೇಶದ ಮಣ್ಣನ್ನು ಪರೀಕ್ಷಿಸಿ ಉತ್ತಮ , ಸಾಧಾರಣ , ಕಳಪೆ , ನಿರುಪಯುಕ್ತ ಎನ್ನುವ ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಯಿತು. ನೀರು ನಿಂತು ಭೂಮಿ ಸವುಳಾಗುವುದನ್ನು ತಪ್ಪಿಸಲು ಅಂತರ್ಜಲ ಮಾಪಕಗಳನ್ನು ಅಳವಡಿಸಲಾಯಿತು. ಸುಕ್ಕೂರು ಆಣೆಕಟ್ಟೆ ನಿರ್ಮಾಣಕ್ಕೆ ಮೊದಲ ಸಿಂಧೂ ಪ್ರದೇಶದ ಕೃಷಿ ಚಟುವಟಿಕೆ ನದಿಯ ನೆರೆಯ ಕಾಲುವೆಗೆ ಒಳಗಾಗಿದ್ದಿತು. ನಂತರ ಕಾಲದಲ್ಲಿ ನಿಯಂತ್ರಿತ ನೀರು ದಕ್ಕಿ ಮುಂದಿನ 50 ವರ್ಷಗಳಲ್ಲಿ ನೀರಾವರಿ ಪ್ರದೇಶ 3.5 ಯಷ್ಟು ಜನ ಸಂಖ್ಯೆ 6 ರಷ್ಟು ಹೆಚ್ಚಳ ಕಂಡವು. ಸುಕ್ಕೂರು ಆಣೆಕಟ್ಟೆ ಹಾಗೂ ಕಾಲುವೆಗಳಿಗೆ 5.5897 ಕೋಟಿ ವೆಚ್ಚ ತಗುಲಿದ್ದಿತು . ಇದರೊಂದಿಗೆ ಬ್ರಿಟಿಷರು ಜಗತ್ತಿನ ಅತ್ಯಂತ ದೊಡ್ಡ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದರು. (17) ಹತ್ತೊಂಬತ್ತನೇ ಶತಮಾನದ ಮೂರನೇ ದಶಕದಿಂದ ಇಪ್ಪತ್ತನೇ ಶತಮಾನದ ಆರಂಭದವರೆಗೆ 70 ವರ್ಷಗಳ ಅವಧಿಯಲ್ಲಿ ಬ್ರಿಟಿಷರು ನೀರಾವರಿ ಯೋಜನೆಗಳನ್ನು ಒಂದರ ನಂತರ ಒಂದರಂತೆ ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದರು. ನಲವತ್ತರ ದಶಕದಲ್ಲಿ ಕಾವೇರಿ ಹಾಗೂ ಗೋದಾವರಿ ಮುಖಜ ಭೂಮಿಯಲ್ಲಿ , ಐವತ್ತರ ದಶಕದಲ್ಲಿ ಬಾರಿ ದೋ ಅಬ್, ಗಂಗಾ ಕಣಿವೆ ಮತ್ತು ಕೃಷ್ಣ ಮುಖಜ ಭೂಮಿಯಲ್ಲಿ , ಅರವತ್ತರ ದಶಕದಲ್ಲಿ ಬಾಂಬೆ ಹಾಗೂ ಬಂಗಾಳದಲ್ಲಿ (ನಾಲ್ಕು ನೀರಾವರಿ ಕಾಲುವೆಗಳು) , ಎಪ್ಪತ್ತರ ದಶಕದಲ್ಲಿ ಬಂಗಾಳ , ಬಿಹಾರ (ಸೋನಾ ಕಾಲುವೆ) , ಬಾಂಬೆ ಪ್ರಾಂತ ( ಮುಠಾ , ನೀರಾ ಕಾಲುವೆಗಳು ) , ಗಂಗಾ ಬಯಲುಗಳಲ್ಲಿ (ಗಂಗಾ ಕೆಳಕಾಲುವೆ, ಆಗ್ರಾ ಕಾಲುವೆ ) ,ಎಂಬತ್ತರ ದಶಕದಲ್ಲಿ ಸಿಂಧ್ ಪ್ರಾಂತದಲ್ಲಿ (ಸರ್ ಹಿಂದ್ ಕಾಲುವೆ) , ತೊಂಬತ್ತರ ದಶಕದಲ್ಲಿ ಚೀನಾಬ್ ಕಾಲುವೆಗಳು ಪೂರ್ಣಗೊಂಡು ಭಾರತದ ನೀರಾವರಿಯಲ್ಲಿ ಭಾರಿ ಕ್ರಾಂತಿಗಳಾದವು. 1830ಕ್ಕೆ ಮೊದಲು 30-40 ಲಕ್ಷವಿದ್ದ ನೀರಾವರಿ ಪ್ರದೇಶ ಇಪ್ಪತ್ತನೇ ಶತಮಾನಕ್ಕೆ ಬರುವ ವೇಳೆಗೆ 2 ಕೋಟಿ ಎಕರೆಗೆ ಏರಿದ್ದಿತು. ಹಳೆಯ ನೀರಾವರಿ ವ್ಯವಸ್ಥೆಯಾಚೆಗೆ ಬ್ರಿಟಿಷರು 1.5 ಕೋಟಿ ಎಕರೆ ಪ್ರದೇಶವನ್ನು ಹೊಸದಾಗಿ ನೀರಾವರಿಗೆ ಒಳಪಡಿಸಿದರು. 70,400 ಕಿ.ಮೀ ಉದ್ದದ ಕಾಲುವೆಗಳು ನಿರ್ಮಾಣಗೊಂಡವು. ಹೂಡಿದ ಬಂಡವಾಳ ವಾರ್ಷಿಕವಾಗಿ 6-7% ಅದಾಯ ತರುತ್ತಿದ್ದಿತು. ಈ ಎಲ್ಲ ಯೋಜನೆಗಳ ಅನುಷ್ಠಾನದಲ್ಲಿ ಬ್ರಿಟಿಷರು ಹೊಸ ತಿಳಿವಳಿಕೆಯಿಂದ ದೊಡ್ಡ ಗಾತ್ರದ ಆಣೆಕಟ್ಟೆಗಳನ್ನು ಕಟ್ಟಿದರು. ಎದುರಾದ ಸವಾಲುಗಳಿಗೆ ಮುಖಾಮುಖಿಯಾಗಿ ಯಶಸ್ಸನ್ನು ಸಾಧಿಸಿದರು. ಬ್ರಿಟಿಷ್ ಆಡಳಿತದ ಈ ಅವಧಿಯನ್ನು ಭಾರತದ ನೀರಾವರಿಯ ಹೊಸ ಶಕೆಯ ಆರಂಭವೆಂದೇ ಹೇಳಬಹುದು. ಆಣೆಕಟ್ಟೆಗಳ ವಿನ್ಯಾಸದ ಚರಿತ್ರೆ ಭಾರತದಲ್ಲಿ ಅದರಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಬಹು ಪ್ರಾಚೀನ ಕಾಲದಿಂದಲೂ ನೀರಿನ ಸಂಗ್ರಹಕ್ಕಾಗಿ ಕೆರೆ, ಕಟ್ಟೆಗಳನ್ನು ಕಟ್ಟುವ ಪರಂಪರೆಯಿದೆ. ಹೀಗೆ ಕಟ್ಟಲಾದ ಎಲ್ಲ ಜಲಾಶಯಗಳು ಮಣ್ಣಿನ ಏರಿ ಹೊಂದಿವೆ. ಸಣ್ಣ ಪ್ರಮಾಣದ ಹಳ್ಳ, ಹೊಳೆ, ನದಿಗಳಿಗೆ ಅಡ್ಡಲಾಗಿ 15 ಮೀ (49’3”) ಎತ್ತರದವರೆಗೆ ಒಡ್ಡನ್ನು ಕಟ್ಟಿ ನೀರನ್ನು ಸಂಗ್ರಹಿಸುವುದು ಇದರಿಂದ ಸಾಧ್ಯ. ಇದಕ್ಕಾಗಿ ಮಣ್ಣಿನ ಏರಿಗಳನ್ನು ನಿರ್ಮಿಸುವ ಪಾರಂಪರಿಕ ಜ್ಞಾನ ಸಹ ಬೆಳೆದು ಬಂದಿತು. ಈ ಪಾರಂಪರಿಕ ಜ್ಞಾನ ಅನುಭವ ಅಧಾರಿತವಾಗಿದ್ದಿತೇ ಹೊರತು ಯಾವುದೇ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿರಲಿಲ್ಲ. ಇದರಿಂದ ಕರೆ ಏರಿಗಳು ಒಡೆದು ಹೋಗುವುದು ಸಾಮಾನ್ಯ ಸಂಗತಿಯಾಗಿದ್ದಿತು. ಭಾರತದಲ್ಲಿದ್ದ ಕೆರೆಯ ಏರಿಗಳು ಒಂದು ನಿರ್ದಿಷ್ಟ ಎತ್ತರಕ್ಕೆ ಸೂಕ್ತವಾಗಿದ್ದವೇ ಹೊರತು ಅಧಿಕ ನೀರು ಸಂಗ್ರಹಿಸಲು ದೊಡ್ಡ ನದಿಗಳಿಗೆ ಅಡ್ಡಲಾಗಿ ಅವುಗಳನ್ನು ಕಟ್ಟಲು ಸಾಧ್ಯವಿರಲಿಲ್ಲ. ಆದ್ದರಿಂದ ಬ್ರಿಟಿಷ್ ಇಂಜಿನಿಯರುಗಳು ಒಳ ತಿರುಳು (Inner Core ) ಹಾಗೂ ಹೊರ ಮುಚ್ಚಿಕೆಯಲ್ಲಿ ( Outer Casing) ವಿಭಿನ್ನ ಬಗೆಯ ಮಣ್ಣುಗಳನ್ನು ಬಳಸಿ ಎತ್ತರದ ಮಣ್ಣಿನ ಏರಿಗಳನ್ನು ಕಟ್ಟತೊಡಗಿದರು. ಇದರಿಂದಾಗಿ ತಿರುಳಿನಲ್ಲಿ ನೀರು ಸೋರದಂತೆ ತಡೆಯುವ ಜೇಡಿ ಮಣ್ಣು ಅಥವಾ ಕಲ್ಲಿನ ಗೋಡೆ ಹೊಂದಿದ ವಿನ್ಯಾಸಗಳು ಚಾಲ್ತಿಗೆ ಬಂದವು. (4). 18ನೇ ಶತಮಾನದಿಂದ ವೈಜ್ಞಾನಿಕ ಹಿನ್ನೆಲೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಬೆಳವಣಿಗೆ ಹೊಂದತೊಡಗಿ ದೊಡ್ಡ ನದಿಗಳಿಗೆ ಅಡ್ಡಲಾಗಿ ದೊಡ್ಡ ಗಾತ್ರದ ಆಣೆಕಟ್ಟೆಗಳನ್ನು ಕಟ್ಟಿ ಹಿಂದಿಗಿಂತಲೂ ನೂರಾರು ಪಟ್ಟು ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿ ನೀರಿನ ಕೊರತೆಯ ದಿನಗಳಲ್ಲಿ ಬಳಸುವುದು ಸಾಧ್ಯವಾಯಿತು. ಇದಕ್ಕಾಗಿ ಮಣ್ಣಿನ ಏರಿಯ ಬದಲು ಇತರ ಸಾಮಾಗ್ರಿಗಳ ಆಣೆಕಟ್ಟೆಗಳು ನಿರ್ಮಾಣಗೊಳ್ಳತೊಡಗಿದವು. (3) (ಚಿತ್ರ : ಸುಧಾರಿಸಿದ ಮಣ್ಣಿನ ಏರಿಯ ಚಿತ್ರ) ವಿಶಾಲ ಪ್ರದೇಶವನ್ನು ನೀರಾವರಿಗೆ ಒಳಪಡಿಸಬೇಕೆಂದರೆ ಹೆಚ್ಚಿನ ನೀರನ್ನು ಸಂಗ್ರಹಿಸಲು ದೊಡ್ದ ನದಿಗಳಿಗೆ ಅಡ್ಡಲಾಗಿ ಒಡ್ಡನ್ನು ಹಾಕಬೇಕು. ಆದರೆ ಮಣ್ಣಿನ ಒಡ್ಡುಗಳು ಅದಕ್ಕೆ ಸಮರ್ಕವಾದುವಲ್ಲ ಎನ್ನುವುದು ಮನವರಿಕೆಯಾಗತೊಡಗಿತು. ಆದ್ದರಿಂದ ಬ್ರಿಟಿಷ್ ಇಂಜಿನಿಯರುಗಳು ಹೊಸ ನೀರಾವರಿ ಯೋಜನೆಗಳನ್ನು ಜಾರಿಗೆ ತರುವಾಗ ಭಾರತದ ಸಾಂಪ್ರದಾಯಿಕ ನೀರಾವರಿ ಪದ್ದತಿಗಳ ಬದಲು ಯುರೋಪಿಯನ್ ಮಾದರಿಗಳಿಗೆ ಒತ್ತು ನೀಡತೊಡಗಿದರು. ಯುರೋಪಿಯನ್ ಮಾದರಿಯಲ್ಲಿ ಅತಿ ಹೆಚ್ಚು ಪ್ರದೇಶಕ್ಕೆ ಅತಿ ಹೆಚ್ಚು ಜನರಿಗೆ ನೀರನ್ನು ನೀಡುವುದು ಅವರ ಉದ್ದೇಶವಾಗಿದ್ದಿತು. (11) ಇದಕ್ಕಾಗಿ ಮಣ್ಣಿನ ಏರಿಗಳ ಬದಲು ಎತ್ತರದ ಕಲ್ಲಿನ ಕಟ್ಟೆಗಳನ್ನು ಕಟ್ಟುವ ಸಾಧ್ಯತೆಯತ್ತ ಗಮನ ಹರಿಸತೊಡಗಿದರು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎತ್ತರದ ಆಣೆಕಟ್ಟೆಗಳ ನಿರ್ಮಾಣದ ಮೂಲಕ ವಿಶಾಲ ಜಲಾಶಯ ಹಾಗೂ ವಿಶಾಲ ಪ್ರದೇಶದ ನೀರಾವರಿ ಹೇಗೆ ವಿಕಸನಗೊಂಡವು ಎನ್ನುವುದು ಕುತೂಹಲಕಾರಿಯಾಗಿದ್ದು ಅದರತ್ತ ಮುಂದಿನ ಪುಟಗಳಲ್ಲಿ ಒಂದು ನೋಟ ಬೀರಲಾಗಿದೆ. ಹೊರನೋಟಕ್ಕೆ ಒಂದು ನದಿಗೆ ಅಡ್ದಲಾಗಿ ಕಟ್ಟೆಯೊಂದನ್ನು ಕಟ್ಟುವುದು ಸರಳ ಎಂದು ಕಂಡುಬಂದರೂ , ತಾಂತ್ರಿಕವಾಗಿ ಅದು ಭಾರಿ ಸವಾಲಿನ ಕೆಲಸವೇ ಆಗಿರುತ್ತದೆ. ಹದಿನಾರನೇ ಶತಮಾನದಲ್ಲಿ ಸ್ಪೇನ್’ನಲ್ಲಿ ಎತ್ತರದ ಕಲ್ಲಿನ ಆಣೆಕಟ್ಟೆಗಳನ್ನು ಕಟ್ಟುವ ಸಾಹಸ ಪ್ರಾರಂಭವಾಯಿತು. ಇಂತಹ ಆಣೆಕಟ್ಟೆಗಳ ನಿರ್ಮಾಣಕ್ಕೆ ಬೇಕಾದ ತಾಂತ್ರಿಕ ಹಿನ್ನೆಲೆ ಇರದಿದ್ದುದರಿಂದ ಈ ಆಣೆಕಟ್ಟೆಗಳು ಅಗತ್ಯಕ್ಕಿಂತ ಭಾರಿ ಗಾತ್ರವಾಗಿದ್ದವು. ದೊಡ್ದ ಗಾತ್ರದ ಗೋಡೆ , ಕಂಬ , ತೊಲೆಗಳಿರುವ ಕಟ್ಟಡಗಳು ತಾಂತ್ರಿಕ ದೃಷ್ಟಿಯಲ್ಲಿ ಸುರಕ್ಷಿತವಾಗಿರುತ್ತದೆ ಎಂದೇನಿಲ್ಲ. ಸ್ಪೇನ್’ನಲ್ಲಿ ಕಟ್ಟಲಾಗಿದ್ದ ದೊಡ್ಡ ಗಾತ್ರದ ಕಲ್ಲಿನ ಆಣೆಕಟ್ಟೆಗಳು ತಮ್ಮ ಸ್ವಂತ ಗಾತ್ರದಿಂದಾಗಿಯೇ ತಳಭಾಗದಲ್ಲಿ ಸರಕ್ಷಿತತೆಯ ಮಟ್ಟ ಮೀರಿದ ಹೆಚ್ಚಿನ ಒತ್ತಾಯಗಳನ್ನು (Stress) ಹೊಂದಿದ್ದವು. ಮಿತವ್ಯಯಕಾರಿ ವೆಚ್ಚದಲ್ಲಿ ಎತ್ತರದ ಆಣೆಕಟ್ಟೆ ಕಟ್ಟಿ ಹೆಚ್ಚು ನೀರು ಸಂಗ್ರಹಿಸುವ ಹೊಣೆಗಾರಿಕೆ ಇಂಜಿನಿಯರ್’ಗಳ ಹೆಗಲಿಗೇರಿತು. ಅಧ್ಯಯನಗಳಿಂದ ದೊಡ್ದ ಗಾತ್ರದ ಕಟ್ಟೆಯ ಬದಲು ಸೂಕ್ತ ರೀತಿಯ ಆಕಾರ ಹೊಂದಿರುವ ಆಣೆಕಟ್ಟೆಗಳನ್ನು ಕಡಿಮೆ ಸಾಮಗ್ರಿಗಳನ್ನು ಬಳಸಿ ಹೆಚ್ಚು ಸುರಕ್ಷಿತ ಮತ್ತು ಮಿತವ್ಯಯಿಕಾರಿಯಾಗಿರುವಂತೆ ಕಟ್ಟುವ ಸಾಧ್ಯತೆಗಳನ್ನು ಇಂಜಿನಿಯರಿಂಗ್ ತತ್ತ್ವಗಳಿಂದ ಗುರುತಿಸಲಾಯಿತು. (* ಜಗತ್ತಿನ ಅತ್ಯಂತ ಹಳೆಯ ಕಲ್ಲುಕಟ್ಟಡದ ಆಣೆಕಟ್ಟೆಗಳ ಪಟ್ಟಿ ) ಎತ್ತರದ ಆಣೆಕಟ್ಟೆಗಳನ್ನು ಕಟ್ಟಬೇಕೆಂದರೆ ಅದರ ನಡವಳಿಕೆಯ ಸೈದ್ಧಾಂತಿಕ , ತಾಂತ್ರಿಕ ವಿವರಗಳು ಲಭ್ಯವಿರಬೇಕು. ಸ್ವಂತ ತೂಕ, ತಳ್ಳುವ ನೀರಿನ ಬಲಗಳನ್ನು ತಾಳಿಕೊಂಡು ನೀರಿನ ಒತ್ತಡಕ್ಕೆ ಮುಂದಕ್ಕೆ ಮುಗುಚದೆ ( Overturn) ತಳಭಾಗದಲ್ಲಿ ಬರುವ ಒತ್ತಾಯಗಳನ್ನು (Stress) ತಾಳಿಕೊಂಡು ಸುರಕ್ಷಿತವಾಗಿ ಸೇವೆ ಸಲ್ಲಿಸಬಲ್ಲ, ಆಣೆಕಟ್ಟೆಗಳ ವಿನ್ಯಾಸ ಹೇಗಿರಬೇಕೆಂಬ ಸವಾಲು ಸಿವಿಲ್ ಇಂಜಿನಿಯರ್’ಗಳಿಗೆ ಎದುರಾಯಿತು. ಯಾವುದೇ ಇಂಜಿನಿಯರಿಂಗ್ ಕಾರ್ಯದಲ್ಲಿ ಅದರ ತಾಂತ್ರಿಕ ಅಗತ್ಯಗಳಿಗಳೊಂದಿಗೆ ಅದಕ್ಕೆ ತಗಲುವ ವೆಚ್ಚವೂ ಜೊತೆಯಾಗಿರುತ್ತದೆ. ತಾಂತ್ರಿಕವಾಗಿ ಸರ್ವ ಸಮರ್ಪಕವಾಗಿರುವ ವಿನ್ಯಾಸ ಅದರ ಗಾತ್ರ ,ಸರಕು-ಸಾಮಗ್ರಿ, ನಿರ್ಮಾಣ , ನಿರ್ವಹಣೆಗಳ ವೆಚ್ಚಗಳ ಕಾರಣಗಳಿಂದಾಗಿ ಕಾರ್ಯಸಾಧುವಲ್ಲ ಎನಿಸಬಹುದು. ಆದ್ದರಿಂದ ಇಂಜಿನಿಯರಿಂಗ್ ಪ್ರತಿಪಾದಿಸುವ ಸಿದ್ಧಾಂತ ಹಾಗೂ ವಿನ್ಯಾಸದ ಸೂತ್ರಗಳನ್ನು ಮುರಿಯದೆ ಅವುಗಳು ಹಾಕಿದ ಗಡಿಯನ್ನು ದಾಟದೆ, ಆರ್ಥಿಕವಾಗಿ ಒಪ್ಪಬಹುದಾದ ಅಣೆಕಟ್ಟೆಯನ್ನು ವಿನ್ಯಾಸಗೊಳಿಸುವ ಸವಾಲನ್ನು ಸಿವಿಲ್ ಇಂಜಿನಿಯರ್’ಗಳು ಎದುರಿಸಿದರು. 1736ರಲ್ಲಿ ಬೆಲಿಡೊರ್ ಮತ್ತು ವಿಲ್ಲಾರಿಯಲ್ ಅಣೆಕಟ್ಟೆಗಳ ವಿನ್ಯಾಸದ ಸೂತ್ರಗಳನ್ನು ನೀಡಿದ್ದರು. ಟೆಲ್’ಫೋರ್ಡ್’ನ ‘ಮೆಮೊರಾಂಡಮ್’ ಪುಸ್ತಕದಲ್ಲಿ ಜಲಾಶದ ಏರಿ ಮತ್ತು ಕಟ್ಟೆಗಳ ಮೇಲೆ ವರ್ತಿಸುವ ಬಲಗಳನ್ನು ಲೆಕ್ಕಹಾಕುವ ಸೂತ್ರಗಳನ್ನು ನೀಡಲಾಗಿದ್ದಿತು. ೧೮೨೫ ರಲ್ಲಿ ಗ್ರೆಗೊರಿ ಮಣ್ಣು ಜಾರದಂತೆ ತಡೆಯೊಡ್ಡುವ ಕಲ್ಲಿನ ಗೋಡೆ ಮತ್ತು ನೀರನ್ನು ತಡೆಹಿಡಿಯುವ ಕಟ್ಟೆಗಳ ವಿನ್ಯಾಸಗಳ ಬಗ್ಗೆ ಚರ್ಚಿಸಿದ್ದನು. ಮೋಸ್ಲೆ ತನ್ನ ‘ಟ್ರಿಟೈಸ್ ಆನ್ ಹೈಡ್ರೋಸ್ಟ್ಯಾಟಿಕ್ಸ್ ‘(1830) , ‘ಟ್ರಿಟೈಸ್ ಆನ್ ಮೆಕ್ಯಾನಿಕ್ಸ್’ (1834) ಮತ್ತು ‘ಮೆಕ್ಯಾನಿಕಲ್ ಪ್ರಿನ್ಸಿಪಲ್ಸ್’ ( 1843, 1855 ) ಕೃತಿಗಳಲ್ಲಿ ಆಣೆಕಟ್ಟೆಗಳ ವಿನ್ಯಾಸದ ಮೂಲತತ್ತ್ವಗಳನ್ನು ಚರ್ಚಿಸಿದ್ದನು. (4) ಫ್ರೆಂಚ್ ಇಂಜಿನಿಯರ್ ಜೆ.ಅಗಸ್ಟೀನ್ ಟೊರ್ಟೆನೆ ಡೆ.ಸ್ಯಾಝಿಲ್ಲಿ ೧೮೫೩ ರಲ್ಲಿ ‘ಅನಲ್ಸ್ ಡೆ ಪಾಂಟ್ಸ್ ಎಟ್ ಷೌಸೆಸ್’’ ಎಂಬ ಪತ್ರಿಕೆಯಲ್ಲಿ ‘ನೋಟ್ ಸುರ್ ಉನ್ ಟೈಪ್ ಡೆ ಪ್ರೊಫೈಲ್ ಡಿ ಈಗಟೆ ರೆಸಿಸ್ಟೆನ್ಸ್ ಪ್ರೊಪೊಸ್ ಪೌರ್ ಲೆ ಮರ್ಸ್ ಡೆ ರಿಸಾರ್ವಾಯಿರ್ ಡಿಎಯತ ‘ ಎನ್ನುವ ಲೇಖನ ಪ್ರಕಟಿಸಿ ಕಲ್ಲಿನ ಆಣೆಕಟ್ಟೆಗಳ ವಿನ್ಯಾಸದ ಎರಡು ಮೂಲ ತತ್ತ್ವಗಳನ್ನು ಮಂಡಿಸಿದನು. ಇವುಗಳೆಂದರೆ - (೧) ಆಣೆಕಟ್ಟೆಯ ಯಾವುದೇ ಭಾಗ/ಬಿಂದುವಿನಲ್ಲಿ ಹಾಗೂ ಅಡಿಪಾಯದಲ್ಲಿ ಆಣೆಕಟ್ಟೆಯ ತೂಕ (Self Weight) ಮತ್ತು ಹೊರಗಿನ ಬಲಗಳಿಂದ (External Forces) ಪ್ರೇರೇಪಿತಗೊಂಡ ಒತ್ತಾಯಗಳು (Induced Stresses ) ಒಂದು ನಿರ್ದಿಷ್ಟ ಮೌಲ್ಯವನ್ನು ಮೀರಬಾರದು (೨) ಆಣೆಕಟ್ಟೆಯ ಯಾವುದೇ ಸಮತಳದ (Plane/Section ) ಮೇಲೆ ಆ ಸಮತಳದ ಮೇಲಿನ ಮತ್ತು ಕೆಳಗಿನ ಭಾಗಗಳು ಪರಸ್ಪರ ಜರುಗದಂತಿರಬೇಕು ಅದರಂತೆಯೇ ಆಣೆಕಟ್ಟೆಯ ಅದರ ಅಡಿಪಾಯದ ಮೇಲೆ ಜರುಗದಂತಿಬೇಕು. (Non Sliding) ಇದರಲ್ಲಿ ಮೊದಲನೆಯದು ಆಣೆಕಟ್ಟೆಯ ಕಟ್ಟಡ ಭಾರ ಹೊರುವ ಸಾಮರ್ಥ್ಯವನ್ನು ಸೂಚಿಸುವ (Load Bearing Capacity-Stress Principle) ಒತ್ತಾಯದ ತತ್ತ್ವ, ಎರಡನೆಯದು ಅದು ಜರುಗದಂತೆ ಸ್ಥಿರವಾಗಿ ಕಟ್ಟಿದ ಜಾಗದಲ್ಲೇ ಇರುವ ನಿರ್ಬಂಧವನ್ನು (Stable Safe Condition ) ಸುರಕ್ಷತೆಯ ಸ್ಥಿತಿಯನ್ನು ಸೂಚಿಸುತ್ತವೆ. ಒತ್ತಾಯದ ತತ್ತ್ವವನ್ನು ಬಳಸಿ (1) ಜಲಾಶಯ ಬರಿದಾಗಿರುವಾಗ ಮತ್ತು (2) ಜಲಾಶಯ ತುಂಬಿರುವಾಗ ಆಣೆಕಟ್ಟೆಯಲ್ಲಿ ಇರಬಹುದಾದ ಒತ್ತಾಯಗಳನ್ನು ನಿರ್ಧರಿಸಬೇಕು. ಈ ಒತ್ತಾಯಗಳು ಅದುಮಿಕೆಯಲ್ಲಿರಬೇಕು (Compression) ಎಂದು ಸ್ಯಾಝಿಲಿ ಒತ್ತಾಯದ ನಿರ್ಬಂಧವನ್ನು (Stress Condition) ಸೂಚಿಸಿದನು. ಇದು ಸಮ ಒತ್ತಾಯದ ತತ್ತ್ವ (Equal Stress Principle) ಎಂದು ಹೆಸರಾಯಿತು. ಈ ತತ್ತ್ವಕ್ಕೆ ಅನುಗುಣವಾಗಿ ಹಂತಗಳಲ್ಲಿ ಮೆಟ್ಟಿಲಿನಂತೆ ಇರುವ ರೂಪವನ್ನು ಸ್ಯಾಝಿಲಿ ನಿರ್ಧರಿಸಿದನು. ಇವೆರಡಕ್ಕೆ ಪೂರಕವಾಗಿ ಆಣೆಕಟ್ಟೆ ನೀರಿನ ತಳ್ಳುವಿಕೆಯಿಂದ ಮುಂದಕ್ಕೆ ಮುಗುಚಿಕೊಳ್ಳದಂತಿರಬೇಕು (No Overturning) ಎನ್ನುವ ಮತ್ತೊಂದು ಸುರಕ್ಷತೆಯ ತತ್ತ್ವವನ್ನು ಸೇರಿಸಿದರೆ ಒಂದು ಆಣೆಕಟ್ಟೆಯನ್ನು ವಿನ್ಯಾಸಗೊಳಿಸಲು ಬೇಕಾದ ಎಲ್ಲ ನಿರ್ಬಂಧಗಳನ್ನು ಪಾಲಿಸಿದಂತಾಗುತ್ತದೆ. 1888 ರಲ್ಲಿ ಎಡ್ವರ್ಡ್ ವೆಗ್’ಮನ್ ಈ ತತ್ತ್ವಗಳನ್ನು (1) ಜಲಾಶಯ ತುಂಬಿದ ಹಾಗೂ (2) ಜಲಾಶಯ ಖಾಲಿ ಸ್ಥಿತಿಗಳಿಗೆ ಬಳಸಿ ಮಾಡಿದ ವಿನ್ಯಾಸ ಆಣೆಕಟ್ಟೆ ಎಲ್ಲ ಸಂದರ್ಭಗಳಲ್ಲಿ ಸುರಕ್ಷಿತವಾಗಿರುವ ಭರವಸೆ ನೀಡುತ್ತದೆಯೆಂದು ಪ್ರತಿಪಾದಿಸಿದನು. (3) (ಚಿತ್ರ : ಸಮ ಒತ್ತಾಯದ ತತ್ತ್ವ ಮತ್ತು ಸ್ಯಾಝಿಲಿ ಆಣೆಕಟ್ಟೆ ಅಡ್ಡ ಖಂಡ) ಫ್ರಾನ್ಸ್’ನ ಲೊಯಿರ್ ನದಿಯ ನೆರೆಗೆ ಸುತ್ತ ಮುತ್ತಲಿನ ಪ್ರದೇಶ ಮುಳುಗಡೆಯಾಗುತ್ತಿದ್ದಿತು. ಈ ನೆರೆಯನ್ನು ನಿಯಂತ್ರಿಸಿ, ಕುಡಿಯುವ ನೀರಿನ ಆಕರವಾಗಿ ಜಲಾಶಯ ನಿರ್ಮಿಸುವ ಸವಾಲು ಎದುರಾಯಿತು. ಇದಕ್ಕಾಗಿ ೫೦ ಮೀ.ಗಳಿಗೂ (164’) ಅಧಿಕ ಎತ್ತರದ ಒಡ್ಡು ಕಟ್ಟುವುದು ಅನಿವಾರ್ಯವಾಗಿದ್ದಿತು. ಇಷ್ಟು ಎತ್ತರಕ್ಕೆ ಮಣ್ಣಿನ ಏರಿ ನಿರ್ಮಿಸುವುದು ಅಪಾಯಕಾರಿಯೆಂದು ಮನದಟ್ಟಾಗಿ, ಅದರ ಬದಲಿಗೆ ಆಣೆಕಟ್ಟೆ ನಿರ್ಮಿಸುವ ಒತ್ತಡಗಳು ಮೂಡಿದವು. ಆಣೆಕಟ್ಟೆಗಳನ್ನು ಕಟ್ಟುವ ಸಾಧ್ಯತೆ ಹಾಗೂ ಅದರ ವಿನ್ಯಾಸದ ತತ್ತ್ವಗಳನ್ನು ಕುರಿತಾಗಿ ಶೋಧಿಸಬೇಕೆಂದು ಇಂಜಿನಿಯರ್ ಎಮಿಲೆ ಡೆಲೊಕ್ರೆ ಹಾಗೂ ಎ.ಗ್ರಾಫ್ ಇವರನ್ನು ವಿನಂತಿಸಿಕೊಳ್ಳಲಾಯಿತು. ಡೆಲೊಕ್ರೆ , ಅಣೆಕಟ್ಟೆಯನ್ನು ಹಂತ, ಹಂತದ ಮೆಟ್ಟಿಲುಗಳನ್ನು ಹೋಲುವ ಕಟ್ಟೆಯ ಬದಲು ಮೇಲ್ಮುಖ ಹಾಗೂ ಕೆಳಮುಖದಲ್ಲಿ ವಕ್ರವಾಗಿರುವ ಆಕಾರ ಒದಗಿಸಿ ವಿನ್ಯಾಸಗೊಳಿಸಿದರೆ ಸ್ಯಾಝಿಲಿಯ ಎಲ್ಲ ತತ್ತ್ವಗಳು ಪಾಲನೆಯಾಗುವುದರೊಂದಿಗೆ , ಸಾಮಗ್ರಿಗಳ ಬಳಕೆಯಲ್ಲಿಯೂ ಮಿತವ್ಯಯ ಸಾಧ್ಯವೆಂದು ತೋರಿಸಿದನು. ಡೆಲೊಕ್ರೆ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು ಬಳಸಿ ಸೇಂಟ್ ಎಟಿಯೆನ್ನೆ ಬಳಿ ೫೦ ಮೀ (164’) ಎತ್ತರದ ಫ್ಯುರೆನ್ಸ್ ಕಲ್ಲಿನ ಆಣೆಕಟ್ಟೆಯನ್ನು ಕಟ್ಟಲಾಯಿತು. ಈ ಆಣೆಕಟ್ಟೆಯ ವಿನ್ಯಾಸಕ್ಕೆ ಬಳಸಿದ್ದ ಸೂತ್ರಗಳನ್ನು 1866 ರಲ್ಲಿ ‘ಅನಲ್ಸ್ ಡೆ ಪಾಂಟ್ಸ್ ಎಟ್ ಷೌಸೆಸ್’ ಪತ್ರಿಕೆಯಲ್ಲಿ ಡೊಲೆಕ್ರೆ ಪ್ರಕಟಿಸಿದನು. ಇದರಿಂದ ಡೊಲೆಕ್ರೆ ಆಣೆಕಟ್ಟೆಯ ವಿನ್ಯಾಸಕ್ಕೆ ಬಳಸಿದ್ದ ಬಹು ಜಟಿಲವಾದ ಗಣಿತದ ಸೂತ್ರಗಳು ಇತರರಿಗೆ ತಿಳಿದುಬಂದವು. (3) ಫ್ಯುರೆನ್ಸ್ ಆಣೆಕಟ್ಟೆ ಆವರೆಗೆ ಕಟ್ಟಿದ ರಚನೆಗಳಲ್ಲೇ ಅತ್ಯಂತ ಎತ್ತರವಾಗಿದ್ದು , ಸಿವಿಲ್ ಇಂಜಿನಿಯರಿಂಗ್ ತತ್ತ್ವಗಳ ಮೇಲೆ ವಿನ್ಯಾಸಗೊಂಡ ಮೊದಲ ಆಣೆಕಟ್ಟೆಯಾಗಿದ್ದಿತು. ಈ ಅಣೆಕಟ್ಟೆಯ ನಿರ್ಮಾಣ ಚಟುವಟಿಕೆ ಆ ಕಾಲದಲ್ಲಿ ಅತ್ಯಂತ ಸವಾಲಿನ ಕೆಲಸವಾಗಿದ್ದಿತು. ಆಣೆಕಟ್ಟೆಯ ಜಾಗ ಎತ್ತರದ ಪ್ರದೇಶದಲ್ಲಿ ಇದ್ದುದರಿಂದ ಮೇ 1 ರಿಂದ ಅಕ್ಟೋಬರ್ 1 ರವರೆಗೆ ಮಾತ್ರ ನಿರ್ಮಾಣ ಸಾಗುತ್ತಿದ್ದಿತು. ಅಪಾರ ಪ್ರಮಾಣದ ನಿರ್ಮಾಣ ಸಾಮಗ್ರಿಯನ್ನು ಸಾಗಿಸಲು ಆಣೆಕಟ್ಟೆಯ ಮೇಲೆ ರೈಲ್ವೇ ಹಳಿ ಹಾಕಲಾಯಿತು. ಆಣೆಕಟ್ಟೆಯ ಎತ್ತರ ಏರಿದಂತೆ, ಹಳಿಗಳನ್ನು ಮೇಲಕ್ಕೇರಿಸಲಾಗುತ್ತಿದ್ದಿತು. 1862ರಲ್ಲಿ ಪ್ರಾರಂಭವಾದ ಈ ಆಣೆಕಟ್ಟೆ 1866ರಲ್ಲಿ ಪೂರ್ಣಗೊಂಡಿತು. ಈ ಆಣೆಕಟ್ಟೆಯ ವಿನ್ಯಾಸ ಮತ್ತು ನಿರ್ಮಾಣದ ಎಲ್ಲ ವಿವರಗಳನ್ನ ಡೊಲೆಕ್ರೆ ಮತ್ತು ಎಂ.ಎಂ.ಗ್ರಾಫ್ ‘ಅನಲ್ಸ್ ಡೆ ಪಾಂಟ್ಸ್ ಎಟ್ ಷೌಸೆಸ್’ ಪತ್ರಿಕೆಯಲ್ಲಿ ‘ಮೆಮೊಯಿರ್ಸ್ ಸುರ್ ಲ ಫಾರ್ಮೆ ಡು ಪ್ರೊಫಿಲ್ ಅ ಅಡಾಪ್ತರ್ ಪಾರ್ ಲೆ ಗ್ರಾಂಡ್ ಬ್ಯಾರೇಜಸ್ ಎನ್ ಮಕೊನಿರಿ ಡೆ ರಿಸರ್ವಾಯಿರ್’ ಲೇಖನದ ಮೂಲಕ ಪ್ರಕಟಿಸಿ ಅಣೆಕಟ್ಟೆಯ ವಿನ್ಯಾಸ ಮತ್ತ ನಿರ್ಮಾಣದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿದರು. [1] (ಚಿತ್ರ ಫ್ಯುರೆನ್ಸ್ ಆಣೆಕಟ್ಟೆ) ಯಾವುದೇ ಅಣೆಕಟ್ಟೆ ನದಿಯ ಹರಿವಿನ ದಾರಿಯನ್ನು ಮುಚ್ಚುವಂತೆ ಎರಡು ದಡಗಳ ಎತ್ತರದ ನೆಲೆಗಳವರೆಗೆ ಹರಡಿರುತ್ತದೆ. ಒಂದು ನದಿ ಎರಡು ಬೆಟ್ಟಗಳ ನಡುವೆ ಹಾದು ಹೋಗುತ್ತಿದ್ದರೆ ಆ ಬೆಟ್ಟಗಳನ್ನು ಸಂಪರ್ಕಿಸುವಂತೆ ಬೇಕಾದ ಎತ್ತರದವರೆಗೆ ಅಣೆಕಟ್ಟೆಯನ್ನು ಕಟ್ಟಬಹುದು. ಆದರೆ ವಾಸ್ತವಿಕ ಸಂಗತಿಗಳು ಎಣಿಸಿದಷ್ಟು ಸರಳವಾಗಿರುವುದಿಲ್ಲ. ಅಣೆಕಟ್ಟೆಯನ್ನು ಭದ್ರವಾದ ಕಲ್ಲಿನ ತಳಪಾಯದ ಮೇಲೆ ಕಟ್ಟಬೇಕಾಗುತ್ತದೆ. ಇಂತಹ ತಳಪಾಯ ನೇರ ರೇಖೆಯಲ್ಲಿ ಸಿಗದೆ ಹೋಗಬಹುದು. ಆಗ ಗಟ್ಟಿ ತಳಹದಿ ಇರುವಂತೆ ತಳ ವಿನ್ಯಾಸದಲ್ಲಿ (Base Plan ) ವಕ್ರರೂಪದಲ್ಲಿ ಕಟ್ಟೆಯನ್ನು ಕಟ್ಟಬೇಕಾಗುತ್ತದೆ. ಹಾಗೆ ಕಟ್ಟಿದಾಗ ಆಣೆಕಟ್ಟೆ ಎರಡು ಬೆಟ್ಟಗಳ ನಡುವೆ ಚಾಚಿರುವ ಕಮಾನಿನಂತೆ (Arch) ವರ್ತಿಸಲಾರದೆ ಎನ್ನುವ ಸಂಶಯ ಬರುತ್ತದೆ. ಡೆಲೊಕ್ರೆ ಹಾಗೂ ಪೆಲ್ಲೆಟ್ರಿಯೌ ಈ ಸಮಸ್ಯೆಯನ್ನು ಪರಿಗಣಿಸಿ ಅದಕ್ಕಾಗಿ ಪರಿಹಾರಗಳನ್ನು ನೀಡಿದರು. ಡೆಲೊಕ್ರೆ ನದಿಯ ಮೇಲ್ಭಾಗದ ವಕ್ರತೆಯ ತ್ರಿಜ್ಯದ (Curve Radius) ಮೂರನೇ ಒಂದು ಭಾಗಕ್ಕಿಂತ ಅಣೆಕಟ್ಟೆಯ ದಪ್ಪ ಕಡಿಮೆ ಇದ್ದಾಗ ಮಾತ್ರ ಅಣೆಕಟ್ಟೆ ಕಮಾನಿನಂತೆ ವರ್ತಿಸುತ್ತದೆ ಎಂದು ತೋರಿಸಿದನು . ಪೆಲ್ಲೆಟ್ರಿಯೌ ದಪ್ಪವನ್ನು ತ್ರಿಜ್ಯದ ಅರ್ಧದಷ್ಟೆಂದು ವಾದಿಸಿದನು. ತಳ ವಿನ್ಯಾಸದಲ್ಲಿ ವಕ್ರವಾಗಿದ್ದು ಕಮಾನಿನಂತೆ ಇರುವ ಆಣೆಕಟ್ಟೆಗಳು ಹೇಗೆ ವರ್ತಿಸುತ್ತವೆ ಎನ್ನುವುದನ್ನು ಈ ಇಂಜಿನಿಯರುಗಳು ಸ್ಪಷ್ಟಪಡಿಸಿದರು. ಇವೆಲ್ಲ ಇಂಜಿನಿಯರುಗಳ ಪ್ರಯತ್ನದ ಫಲವಾಗಿ 1870-75 ರ ವೇಳೆಗೆ ಕಲ್ಲಿನ /ಕಾಂಕ್ರಿಟಿನ ಆಣೆಕಟ್ಟೆಗಳ ವಿನ್ಯಾಸದ ತತ್ತ್ವಗಳಲ್ಲಿ ಶಿಷ್ಟತೆ (Standardisation) ಬಂದಿದ್ದಿತು. ಇವುಗಳ ಆಧಾರದ ಮೇಲೆ (1) ಸಮಗಲ್ಲಿನ ನಿಟ್ಟಿನ ಕಲ್ಲಿನ ಕಟ್ಟಣೆ ( Size Stone Coursed Rubble Masonry) (2) ಹೊರ ಮುಖಗಳಲ್ಲಿ ಸಮಗಲ್ಲಿನ ನಿಟ್ಟಿನ ಕಟ್ಟಣೆ ( Size Stone Coursed Rubble Masonry) ಒಳಗೆ ನಿಟ್ಟಿರದ ಗುಂಡುಕಲ್ಲಿನ ಕಟ್ಟಣೆ (Uncoursed Random Rubble Masonry) (3) ಅಸಮ ಕಲ್ಲಿನ ಕಟ್ಟಣೆ (Uncoursed Random Rubble Masonry) (4) ಕಾಂಕ್ರಿಟ್ ಕಟ್ಟೆ ಕಟ್ಟುವ ವಿನ್ಯಾಸಗಳಲ್ಲಿ ಶಿಷ್ಟತೆಗಳು ಜಾರಿಗೆ ಬಂದವು. ದೊಡ್ಡ ನದಿಗಳಿಗೆ ಎತ್ತರದ ಆಣೆಕಟ್ಟೆಗಳನ್ನು ಕಟ್ಟಿ ಹೆಚ್ಚಿನ ನೀರು ಸಂಗ್ರಹಿಸಲು ಹಲವು ಬ್ರಿಟಿಷ್ ಇಂಜಿನಿಯರ್’ಗಳು ಉತ್ಸುಕರಾಗಿದ್ದರು. ಮಣ್ಣಿನ ಒಡ್ಡುಗಳು ಇದಕ್ಕೆ ಸೂಕ್ತವಲ್ಲವೆಂದು ಅವರಿಗೆ ಮನದಟ್ಟಾಗಿದ್ದಿತು. ರೋಹಿಲಕಂಡ್ ಹಾಗೂ ಬೆಳಗಾಂ ಪ್ರದೇಶಗಳಲ್ಲಿ ಇಂಜಿನಿಯರ್’ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಕ್ಯಾಪ್ಟನ್ ಡಬ್ಲ್ಯೂ.ಜೋನ್ಸ್ (1855) ಹಾಗೂ ಕ್ಯಾಪ್ಟನ್ ಜೆ. ವಿನ್’ಗೇಟ್ (1853) ಸ್ಥಳೀಯವಾಗಿ ವಿಪುಲವಾಗಿ ಸಿಗುವ ಕಲ್ಲನ್ನು ಬಳಸಿ ಆಣೆಕಟ್ಟೆ ಕಟ್ಟಲು ಪ್ರತಿಪಾದಿಸಿದ್ದರು. ಬಾಂಬೆ ಪ್ರಸಿಡೆಸ್ಸಿಯ ಇಂಜಿನಿಯರ್ ಫೈಫ್ ನೀರು ಸರಬರಾಜು ಹಾಗೂ ನೀರಾವರಿಗಾಗಿ ದೊಡ್ದ ಆಣೆಕಟ್ಟೆಗಳನ್ನು ಕಟ್ಟಲು ಉತ್ಸುಕನಾಗಿದ್ದನು. ಎಫ್.ಡಿ. ಕ್ಯಾಂಪ್’ಬೆಲ್ ಸೊಲ್ಲಾಪುರದ ಸನಿಹ ಎಕ್’ರೂಖ್ ಬಳಿ ಮಣ್ಣಿನ ಏರಿಯನ್ನು ನಿರ್ಮಿಸುವ ಯೋಜನೆ ತಯಾರಿಸಿದ್ದನು. ಇದರ ಅಂದಾಜು ವೆಚ್ಚ ಕಲ್ಲಿನ ಆಣೆಕಟ್ಟೆಯ ವೆಚ್ಚಕ್ಕೆ ಸರಿಸಮಾನವಾಗಿರುವುದು ಫೈಫ್ ಗಮನಕ್ಕೆ ಬಂದು ಕಲ್ಲಿನ ಆಣೆಕಟ್ಟೆ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬರಲಾಗಿದ್ದಿತಾದರೂ ಅದು ಸಾಕ್ಷಾತ್ಕಾರವಾಗಲಿಲ್ಲ. ಪ್ರೆಂಚ್ ಇಂಜಿನಿಯರುಗಳು ಕಲ್ಲಿನ ಆಣೆಕಟ್ಟೆಯ ವಿನ್ಯಾಸವನ್ನು ಸ್ಪಷ್ಟಗೊಳಿಸಿದ್ದರಾದರೂ ಬ್ರಿಟಿಷ್ ಇಂಜಿನಿಯರುಗಳಿಗೆ ಅವುಗಳ ಪರಿಚಯವಿರುವಂತೆ ಕಾಣುವುದಿಲ್ಲ. ಬ್ರಿಟಿಷ್ ಇಂಜಿನಿಯರ್ ಮತ್ತು ಪ್ರಾಧ್ಯಾಪಕ ವಿಲಿಯಂ ಜಾನ್ ಮೆಕೌರ್ನ್ ರಾಂಕಿನ್ ತನ್ನ ‘ಅಪ್ಲೈಡ್ ಮೆಕ್ಯಾನಿಕ್ಸ್’ (1858) ಮತ್ತು ‘ಸಿವಿಲ್ ಇಂಜಿನಿಯರಿಂಗ್’ (1862) ಪುಸ್ತಕಗಳಲ್ಲಿ ಕಲ್ಲಿನ ಆಣೆಕಟ್ಟೆಗಳ ವಿನ್ಯಾಸದ ಮಾರ್ಗದರ್ಶಿ ವಿವರಗಳನ್ನು ನೀಡಿದ್ದನು. ಇವು 1830 ರಲ್ಲಿ ಮೋಸ್ಲೆ ಪ್ರತಿಪಾದಿಸಿದ ತತ್ತ್ವಗಳನ್ನು ಬಹುತೇಕವಾಗಿ ಹೋಲುತ್ತಿದ್ದವು. ಮೋಲ್ಸ್’ವರ್ಥ್ ಪ್ರಕಟಿಸಿದ ‘ಪಾಕೆಟ್ ಬುಕ್’ (1868) ನೀರನ್ನು ತಡೆಹಿಡಿಯುವ ಕಲ್ಲಿನ ಕಟ್ಟೆಯ ವಿನ್ಯಾಸಗಳನ್ನು ಒಳಗೊಂಡಿದ್ದಿತು. ನದಿಗೆ ಅಡ್ಡಲಾಗಿ ಕಟ್ಟುವ ಕಲ್ಲಿನ ಆಣೆಕಟ್ಟೆಗಳ ವಿನ್ಯಾಸದ ಬಗ್ಗೆ ಯುರೋಪಿನಲ್ಲಿ ಸಾಕಷ್ಟು ಚರ್ಚೆಗಳಾಗಿದ್ದರೂ 1870ಕ್ಕಿಂತ ಮೊದಲು ಬ್ರಿಟಿಷ್ ಇಂಜಿನಿಯರುಗಳು ಯಾವ ಸೂತ್ರ ಮತ್ತು ಯಾವ ಮಾರ್ಗದರ್ಶಿ ನಿಯಮಗಳನ್ನು ಅನುಸರಿಸಿ ಮಣ್ಣಿನ ಏರಿ ಅಥವಾ ಸಣ್ಣ ಗಾತ್ರದ ಕಲ್ಲಿನ ಕಟ್ಟೆಗಳನ್ನು ವಿನ್ಯಾಸಗೊಳಿಸುತ್ತಿದ್ದರು ಹಾಗೂ ಕಟ್ಟುತ್ತಿದ್ದರು ಎನ್ನುವುದು ಸ್ಪಷ್ಟವಿಲ್ಲ. (4) ಪೂನಾ ನಗರಕ್ಕೆ ನೀರು ಸರಬರಾಜು ಮಾಡಲು ಮುಠಾ ನದಿಗೆ ಅಡ್ಡಲಾಗಿ ಕೋಡಿಕಟ್ಟೆಯೊಂದನ್ನು 1848ರಲ್ಲಿ ಕಟ್ಟಲಾಗಿದ್ದಿತು. ಈ ಜಲಾಶಯಕ್ಕೆ ಪೂನಾ ನಗರದ ಚರಂಡಿ ನೀರು ಬಳಕೆಗೆ ಅಯೋಗ್ಯವಾಗಿದ್ದಿತು. ಇದಕ್ಕೆ ಪರಿಹಾರವಾಗಿ ಇದಕ್ಕೆ 10 ಕಿ.ಮೀ ಮೇಲ್ಭಾಗದಲ್ಲಿ , ಖಡಕವಾಸಲ ಹಳ್ಳಿಯ ಸಮೀಪ ಹೊಸದಾಗಿ ಕಲ್ಲಿನ ಆಣೆಕಟ್ಟೆ ಕಟ್ಟುವ ಪ್ರಸ್ತಾವನೆಯನ್ನು 1865ರಲ್ಲಿ ಫೈಫ್ ತಯಾರಿಸಿದನು. ಇದು ನೀರಾವರಿ ಹಾಗೂ ಕುಡಿಯುವ ನೀರು ಸರಬರಾಜು ಎರಡೂ ಉದ್ದೇಶಗಳನ್ನು ಒಳಗೊಂಡಿದ್ದಿತು. ತಳಪಾಯದಿಂದ 32.6ಮೀ (107 ಅಡಿ) ಹಾಗೂ ನದಿ ಪಾತ್ರದ ಮೇಲೆ 28.7 ಮೀ (94’) ಎತ್ತರವಿರುವ ಆಣೆಕಟ್ಟೆಯನ್ನು ವಿನ್ಯಾಸಗೊಳಿಸಲಾಯಿತು. ಈ ಆಣೆಕಟ್ಟೆಯ ನಿರ್ಮಾಣ ೧೮೭೦ ರಲ್ಲಿ ಪ್ರಾರಂಭವಾಗಿ ೧೮೭೯ ರಲ್ಲಿ ಪೂರ್ಣಗೊಂಡಿತು. ಇದರಿಂದ ಮಣ್ಣನ್ನು ಬಳಸದೆ ಮಿತಕಾರಿ ವೆಚ್ಚದಲ್ಲಿ ಎತ್ತರದ ಆಣೆಕಟ್ಟೆಗಳನ್ನು ಕಟ್ಟುವುದು ಸಾಧ್ಯವೆಂದು ಮನದಟ್ಟಾಯಿತು. ಖಡಕವಾಸಲ ಜಲಾಶಯದಲ್ಲಿ ನೀರು ತುಂಬಿದ ನಂತರ ನೀರಿನ ಬಲಗಳಿಗೆ ಒಳಗಾಗಿ ಆಣೆಕಟ್ಟೆ ಜರುಗಿದೆಯೆಂದು ಭಾವಿಸಲಾಯಿತು. ಅದು ಜರುಗದಂತೆ ಮಾಡಲು ಕೆಳಮುಖದಲ್ಲಿ ಫೈಫ್ ಮಣ್ಣಿನ ಏರಿ ನಿರ್ಮಿಸಿದನು. ನಂತರದ ಅಧ್ಯಯನಗಳಿಂದ ಆಣೆಕಟ್ಟೆ ಜರುಗಿಲ್ಲವೆಂದು , ತಾಪಮಾನದಿಂದ ಉಂಟಾದ ಪರಿಣಾಮಗಳಿಂದ ಹಾಗೆ ಭಾಸವಾಗುತ್ತಿದೆಯೆಂದು ತಿಳಿದುಬಂದಿತು. [2] ಮಣ್ಣಿನ ಏರಿಗಳ ಬದಲು ಕಲ್ಲಿನ ಅಣೆಕಟ್ಟೆಗಳ ನಿರ್ಮಾಣದ ಬಗ್ಗೆ ಫೈಫ್ ಚಿಂತಿಸುತ್ತಿರುವಾಗಲೇ ಅಜ್ಮೇರ್’ನಲ್ಲಿದ್ದ ಇಂಜಿನಿಯರ್ ಎ. ಎಲ್.ಆಷರ್ 1870ರಲ್ಲಿ ಕಲ್ಲಿನ ಅಣೆಕಟ್ಟೆಯ ವಿನ್ಯಾಸದ ತತ್ತ್ವಗಳನ್ನು ವಿವರಿಸಿದ್ದನು. ಈ ವಿನ್ಯಾಸದ ತತ್ತ್ವಗಳ ಸಮರ್ಪಕತೆಯನ್ನು ಟಿ. ಹಿಂಗ್’ಹ್ಯಾಂ ಪರಿಶೀಲಿಸಿ, ವಿಮರ್ಶೆಗೆ ಒಡ್ಡಿದ್ದನು. ಮದ್ರಾಸ್’ನಲ್ಲಿದ್ದ ಡೆಪ್ಯುಟಿ ಚೀಫ್ ಇಂಜಿನಿಯರ್ ಜಾರ್ಜ್ ಗೋರ್ಡಾನ್ ಮದ್ರಾಸ್’ಗೆ ನೀರಾವರಿ ಹಾಗೂ ಕುಡಿಯುವ ನೀರು ಒದಗಿಸಲು ಬದ್ರಾ ನದಿಗೆ ಅಡ್ಡಲಾಗಿ 53 ಮೀ ಎತ್ತರದ (170’) ಕಲ್ಲು ಹಾಗೂ ಇಟ್ಟಿಗೆಯ ಅಣೆಕಟ್ಟೆಯನ್ನು ವಿನ್ಯಾಸಗೊಳಿಸಿದ್ದನು. 1869ರ ವೇಳೆಗೆ ಗೋರ್ಡಾನ್ ಮಾಸೂರು ಜಲಾಶಯಕ್ಕೆ ಕಲ್ಲಿನ ಅಣೆಕಟ್ಟೆಯನ್ನು ಪ್ರಸ್ತಾಪಿಸಿದ್ದನು. ಖಾನ್’ದೇಶದ ರೊಕ್ಸಾನ್’ದಲ್ಲಿ ದೊಡ್ಡ ಗಾತ್ರದ ಕಲ್ಲಿನ ಆಣೆಕಟ್ಟೆ ಕಟ್ಟಲು ಫೈಫ್ ಬಯಸಿದ್ದನು. ನದಿಯ ಪಾತ್ರದಲ್ಲಿ ಗಟ್ಟಿ ಕಲ್ಲು ಸಿಗದೆ, ಅಳದವರೆಗೆ ಮರಳು ತುಂಬಿದ್ದರಿಂದ ಆ ಯೋಜನೆಯನ್ನು ಕೈ ಬಿಡಲಾಯಿತು. (4) ಖಡಕವಾಸಲ ಅಣೆಕಟ್ಟೆಯ ಕೆಲಸ ಪ್ರಗತಿಯಲ್ಲಿರುವಾಗಲೇ ಡೊಲೆಕ್ರೆ ಮತ್ತು ಎಂ.ಎಂ. ಗ್ರಾಫ್ ‘ಅನಲ್ಸ್ ಡೆ ಪಾಂಟ್ಸ್ ಎಟ್ ಷೌಸೆಸ್’ ಪತ್ರಿಕೆಯಲ್ಲಿ 1866 ರಲ್ಲಿ ಅಣೆಕಟ್ಟೆಯ ವಿನ್ಯಾಸ ಕುರಿತಾಗಿ ಪ್ರಕಟಿಸಿದ್ದ ಲೇಖನ ಫೈಫ್ ಗಮನಕ್ಕೆ ಬಂದಿತು. ಈ ಲೇಖನವನ್ನು ಓದಿದಾಗ ಖಡಕವಾಸಲ ಆಣೆಕಟ್ಟೆಯ ವಿನ್ಯಾಸದಲ್ಲಿ ತಾನು ಮಾಡಿದ ತಪ್ಪುಗಳು ಫೈಫ್’ಗೆ ಅರಿವಾದವು. ಫ್ರೆಂಚ್ ಇಂಜಿನಿಯರ್’ಗಳು ನೀಡಿದ ಅಣೆಕಟ್ಟೆಯ ವಿನ್ಯಾಸದ ತತ್ತ್ವಗಳು ಅತ್ಯಂತ ವೈಜ್ಞಾನಿಕವಾಗಿದ್ದು, ಸುರಕ್ಷತೆಗೆ ಆದ್ಯತೆ ನೀಡಿ ವೆಚ್ಚಕ್ಕೆ ಕಡಿವಾಣ ಹಾಕುವುದು ಆತನಿಗೆ ಮನದಟ್ಟಾಗಿದ್ದಿತು. ಇತರ ದೇಶಗಳಲ್ಲಿ ಜರುಗುತ್ತಿರುವ ತಾಂತ್ರಿಕ ಪ್ರಗತಿಗಳನ್ನು ಅರಿಯದೆ, ಹೆಚ್ಚು ವೆಚ್ಚದ , ಕಡಿಮೆ ಸುರಕ್ಷತೆಯ ಅಣೆಕಟ್ಟನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಫೈಫ್ ಚಡಪಡಿಸಿ ಕಳವಳಗೊಂಡನು. ಇತರ ಇಂಜಿನಿಯರ್’ಗಳಿಗೂ ಈ ಫ್ರೆಂಚ್ ಇಂಜಿನಿಯರ್’ಗಳು ನೀಡಿದ ತಾಂತ್ರಿಕ ಸೂತ್ರಗಳು ತಿಳಿಯಲಿ ಎಂದು ಅದನ್ನು ಇಂಗ್ಲೀಷ್’ಗೆ ಅನುವಾದ ಮಾಡಿದನು . ಈ ಲೇಖನ ಭಾರತದಲ್ಲಿ ಬ್ರಿಟಿಷ್ ಇಂಜಿನಿಯರುಗಳ ಕಲ್ಲಿನ ಅಣೆಕಟ್ಟೆಯ ವಿನ್ಯಾಸಗಳ ಬಗ್ಗೆ ಖಚಿತ ಜ್ಞಾನ ಹೊಂದುವಂತೆ ಮಾಡಿತು. (3,4). ರಾಂಕಿನ್ ತತ್ತ್ವ ಹಾಗೂ ಸೂತ್ರಗಳನ್ನು ಅನುಸರಿಸಿ ಫೈಫ್ ಮಾಡಿದ ಖಡಕವಾಸಲ ಮತ್ತು ಆಣೆಕಟ್ಟೆಯ ವಿನ್ಯಾಸ , ಹಾಗೂ ಫೈಫ್ ಅನುವಾದಿಸಿದ ಫ್ರೆಂಚ್ ಇಂಜಿನಿಯರ್’ಗಳ ಆಣೆಕಟ್ಟೆಯ ವಿನ್ಯಾಸದ ತತ್ತ್ವ, ಸೂತ್ರಗಳು ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದ ಇಂಜಿನಿಯರ್’ಗಳ ಕೈಸೇರಿ ಆಣೆಕಟ್ಟೆಗಳ ವಿನ್ಯಾಸದಲ್ಲಿ ಹೊಸ ತಾಂತ್ರಿಕ ತಿಳಿವಳಿಕೆಗೆ ನಾಂದಿಯಾಯಿತು. ಫೈಫ್ ಅನುವಾದಿಸಿದ ಲೇಖನದ ಪ್ರತಿ 1872 ರ ವೇಳೆಗೆ ‘ರಾಯಲ್ ಇಂಜಿನಿಯರ್ಸ್’ ಲೈಬ್ರರಿಗೆ ಸೇರ್ಪಡೆಗೊಂಡಿದ್ದಿತು. (4) ಇದೇ ವೇಳೆಯಲ್ಲಿ ಕ್ಯಾಪ್ಟನ್ ಹೆಕ್ಟರ್ ಟುಲ್ಲೋಖ್ ಬಾಂಬೆ ನಗರಕ್ಕೆ ನೀರು ಒದಗಿಸುವ ವಿಹಾರ ಜಲಾಶಯ ನಿರ್ಮಾಣಕ್ಕಾಗಿ ಮಣ್ಣಿನ ಏರಿಯನ್ನು ವಿನ್ಯಾಸಗೊಳಿಸಿದ್ದನು. ಕಲ್ಲಿನ ಆಣೆಕಟ್ಟೆ ಅತ್ಯಂತ ದುಬಾರಿ, ಅದನ್ನು ಕಟ್ಟಲು ಭಾರಿ ಸಂಖ್ಯೆಯ ಕುಶಲ ಕಾರ್ಮಿಕರು ಬೇಕು ಎಂದು ಆತ ನಂಬಿದ್ದನು. ಹೆಕ್ಟರ್ ಟುಲ್ಲೋಖ್ ವಿನ್ಯಾಸಗೊಳಿಸಿದ ಏರಿಯನ್ನು ಕುರಿತಾಗಿ ಬಿಸಿ ಚರ್ಚೆಗಳೆದ್ದಿದ್ದವು. ಆದ್ದರಿಂದ ಟುಲ್ಲೋಖ್ ಮಣ್ಣಿನ ಏರಿಯ ಬದಲು ಬೇರೆ ಯಾವ ರೀತಿಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಾಣಗಳನ್ನು ಮಾಡಬಹುದೆನ್ನುವ ಹುಡುಕಾಟದಲ್ಲಿದ್ದನು. ಇದೇ ವೇಳೆಗೆ ಆತನಿಗೆ ಫೈಫ್ ಅನುವಾದಿಸಿದ ಲೇಖನ ತಿಳಿದುಬಂದಿತು. ಹೆಕ್ಟರ್ ಟುಲ್ಲೋಖ್ ತನ್ನ ಮೇಲಾಧಿಕಾರಿಗಳು ಹಾಗೂ ಬಾಂಬೆ ಪ್ರೆಸಿಡೆನ್ಸಿಯ ಉನ್ನತ ಅಡಳಿತ ವರ್ಗದ ಅನುಮತಿ ಪಡೆದು 18 ಅಕ್ಟೋಬರ್ 1870ರಲ್ಲಿ ಗ್ಲಾಸ್ಗೊ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ಪ್ರಾಧ್ಯಾಪಕನಾಗಿದ್ದ ಡಬ್ಲ್ಯು.ಜೆ.ಎಂ.ರಾಂಕಿನ್’ಗೆ ಪತ್ರ ಬರೆದನು. ಆ ಪತ್ರದೊಂದಿಗೆ ಫೈಫ್ ಅನುವಾದಿಸಿದ ಲೇಖನ, ಅದನ್ನು ಅನುಸರಿಸಿ ತಾನು ಮಾಡಿದ ಅಣೆಕಟ್ಟೆಯ ವಿನ್ಯಾಸದ ವಿವರಗಳನ್ನು ಲಗತ್ತಿಸಿ ಅವುಗಳನ್ನು ಪರಿಶೀಲಿಸಿ ಅಭಿಪ್ರಾಯ ಸೂಚಿಸುವಂತೆ ರಾಂಕಿನ್’ಗೆ ಕೋರಿದ್ದನು. (3.4) 9 ಫೆಬ್ರವರಿ 1871ರಲ್ಲಿ ಟುಲ್ಲೋಖ್ ಪತ್ರಕ್ಕೆ ರಾಂಕಿನ್ ವಿವರವಾಗಿ ಉತ್ತರಿಸಿ ಫ್ರೆಂಚ್ ಇಂಜಿನಿಯರ್’ಗಳು ಪ್ರತಿಪಾದಿಸಿದ್ದ ವಿನ್ಯಾಸದ ತತ್ತ್ವಗಳು ಸರಿಯಾಗಿದ್ದರೂ ಅವುಗಳಲ್ಲಿ ಹಲವಾರು ಬದಲಾವಣೆಗಳು ಅಗತ್ಯವೆಂದು ತಿಳಿಸಿದ್ದನು. ಮುಂದೆ ಇವು ಸುರಕ್ಷಿತ ಅಣೆಕಟ್ಟೆಯ ವಿನ್ಯಾಸದಲ್ಲಿ ರಾಂಕಿನ್ ತತ್ತ್ವಗಳೆಂದೇ ಹೆಸರಾದವು. ರಾಂಕಿನ್ ತನ್ನ ಲೇಖನದಲ್ಲಿ ಸೂಚಿಸಿದ ಎರಡು ಹೆಚ್ಚುವರಿ ಮಹತ್ತ್ವದ ತತ್ತ್ವಗಳೆಂದರೆ (1) ಅಣೆಕಟ್ಟೆ ಸ್ವಂತ ತೂಕ (Self Weight) , ನೀರಿನ ಒತ್ತಡ (Water Pressure) ಹಾಗೂ ಇನ್ನಿತರ ಪ್ರಾಸಂಗಿಕ ಬಲಗಳಿಗೆ (Incidental Forces) ಒಳಗಾಗಿ ಸ್ಥಿರತೆ (Stability) ಕಳೆದುಕೊಂಡು, ಮುಂದಕ್ಕೆ ಮುಗಚದಂತೆ (Non Overturning) ಇರಬೇಕಾದರೆ, ಅಣೆಕಟ್ಟೆಯ ಮೇಲೆ ವರ್ತಿಸುತ್ತಿರುವ ಎಲ್ಲ ಬಲಗಳು ಅದರ ತಳಪಾಯದ ಮಧ್ಯದ ಮೂರನೇ ಒಂದು ಭಾಗದಲ್ಲಿ (Middle Third) ಸಾಗಬೇಕು. (2) ಅಣೆಕಟ್ಟೆಯ ಯಾವ ಕ್ಷಿತಿಜೀಯ ಸಮತಲದ (Horizontal Plane) ಮೇಲೂ ಎಳೆತದ ಒತ್ತಾಯಗಳು (Tensile Stresses) ಇರಬಾರದು. ಈ ಎರಡು ತತ್ತ್ವಗಳನ್ನು ಬಳಸಿ ಟುಲ್ಲೋಖ್ ಮಾಡಿದ ವಿನ್ಯಾಸವನ್ನು ರಾಂಕಿನ್ ಪರಿಷ್ಕರಿಸಿದ್ದನು. ಇದರ ಎಲ್ಲ ಪತ್ರ ವ್ಯವಹಾರ ಹಾಗೂ ತಾಂತ್ರಿಕ ವಿವರಗಳು ಈ ವಿವರಗಳು 1872 ರಲ್ಲಿ ‘ಇಂಜಿನಿಯರ್’ ಪತ್ರಿಕೆಯಲ್ಲಿ ‘ರಿಪೋರ್ಟ್ ಆನ್ ದಿ ಡಿಸೈನ್ ಅಂಡ್ ಕನ್’ಸ್ಟ್ರಕ್ಷನ್ಸ್ ಆಫ್ ಮೇಸನರಿ ಡ್ಯಾಮ್ಸ್’ ಲೇಖನದ ಮೂಲಕ ಬೆಳಕು ಕಂಡವು. 1877 ರಲ್ಲಿ ರಾಂಕಿನ್ ಪ್ರಕಟಿಸಿದ ‘ಮ್ಯಾನುಯಲ್ ಆಫ್ ಸಿವಿಲ್ ಇಂಜಿನಿಯರಿಂಗ್’ ಪುಸ್ತಕದಲ್ಲಿ ಮೊದಲ ಬಾರಿಗೆ ಇವು ಸೇರ್ಪಡೆಗೊಂಡವು. [3] ರೂರ್ಕಿಯ ಥೊಮಸನ್ ಸಿವಿಲ್ ಇಂಜಿನಿಯರಿಂಗ್ ಕಾಲೇಜಿನಿಂದ 1873ರಲ್ಲಿ ಪ್ರಕಟಗೊಂಡ ‘ರೂರ್ಕಿ ಟ್ರಿಟೈಸ್ ಆನ್ ಸಿವಿಲ್ ಇಂಜಿನಿಯರಿಂಗ್’ ಕೈಪಿಡಿಯಲ್ಲಿ ಫ್ರೆಂಚ್ ಇಂಜಿನಿಯರುಗಳ ವಿನ್ಯಾಸ ಹಾಗೂ ರಾಂಕಿನ್ ಅವುಗಳಿಗೆ ಸೂಚಿಸಿದ ತಿದ್ದುಪಡಿಗಳಿದ್ದವು. ಇವು ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಧಿಗಳ ಕೈ ಸೇರಿ , ಆಣೆಕಟ್ಟೆಗಳ ವಿನ್ಯಾಸ ಶೈಕ್ಷಣಿಕ ವಲಯ ಪ್ರವೇಶಿಸಿತು. ಡೊಲೆಕ್ರೆ ಸೂತ್ರ ಹಾಗೂ ಅದರ ಮೇಲೆ ತಿದ್ದುಪಡಿ ಸೂಚಿಸಿ ರಾಂಕಿನ್ ಪ್ರಸ್ತಾಪಿಸಿದ್ದ ವಿನ್ಯಾಸದ ಸೂತ್ರಗಳನ್ನು ಎಲ್ಲ ಇಂಜಿನಿಯರ್’ಗಳು ಒಮ್ಮೆಲೆ ಒಪ್ಪಿರಲಿಲ್ಲ. 1872ರಲ್ಲಿ ರಸೆಲ್ ಏಟ್ಕಿನ್ ಈ ಮಾರ್ಗದರ್ಶಿ ಸೂತ್ರಗಳನ್ನು ಬಳಸಿ ಫೈಫ್ ವಿನ್ಯಾಸಗೊಳಿಸಿದ ಅಣೆಕಟ್ಟೆಯ ಸುರಕ್ಷತೆಯ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದ್ದನು. ಫೈಫ್ ನಂತರ ಅಧಿಕಾರ ವಹಿಸಿಕೊಂಡಿದ್ದ ಇಂಜಿನಿಯರ್ ಪ್ಲೇಫೇರ್ , ಫೈಫ್ ಅನುಸರಿಸುತ್ತಿರುವ ವಿನ್ಯಾಸ ಸೂತ್ರಗಳು ಅಗತ್ಯಕ್ಕಿಂತ ಹೆಚ್ಚು ದಿಟ್ಟತನಕ್ಕಿಂತ ಕೂಡಿವೆ. ಅವುಗಳ ಸುರಕ್ಷಿತಗಾಗಿ ಇನ್ನೂ ಹೆಚ್ಚಿನ ಗಾತ್ರಗಳಿಗೆ ಮೊರೆಹೋಗಬೇಕಾಗಿತ್ತು ಎನ್ನುವ ಅಭಿಪ್ರಾಯ ತಾಳಿದ್ದನು. (4) ಸ್ಯಾಝಿಲಿ , ಡೊಲೆಕ್ರೆ ಮತ್ತು ರಾಂಕಿನ್ ವಿನ್ಯಾಸಗಳನ್ನು ಹೋಲಿಸಿದ ಎಂ.ಬೌವಿಯೆರ್ ಇವರೆಲ್ಲರ ತತ್ತ್ವ ಮತ್ತು ಸೂತ್ರಗಳು ಸಂಪೂರ್ಣ ಸರಿಯಲ್ಲ. ಇವರೆಲ್ಲರೂ ಆಣೆಕಟ್ಟೆಯ ಕ್ಷಿತಿಜೀಯ ಸಮತಲದ ಮೇಲೆ ಗರಿಷ್ಟ ಒತ್ತಾಯ ಬರುತ್ತದೆ ಎಂದು ಪರಿಗಣಿಸಿದ್ದಾರೆ. ಇದು ತಪ್ಪು. ಗರಿಷ್ಟ ಒತ್ತಾಯ ಆಣೆಕಟ್ಟೆಯ ತೂಕ (Self weight) ಮತ್ತು ನೀರಿನ ನೂಕಿಕೆ (Hydraulic Thrust) ಈ ಎರಡು ಬಲಗಳ ಫಲಿತಾಂಶಕಕ್ಕೆ (Resultanat) ಲಂಬವಾಗಿರುವ (Normal) ಸಮತಲ ಮೇಲಿರುತ್ತದೆ. ಆಣೆಕಟ್ಟೆಯ ಮುಖ ಲಂಬ ರೇಖೆಯಿಂದ ಬಾಗಿದಷ್ಟೂ ಹೆಚ್ಚು ಒತ್ತಾಯಗಳು ಪ್ರೇರೇಪಿಸಲ್ಪಟ್ಟಿರುತ್ತವೆ ಎಂದು ಸೂಚಿಸಿ ಗರಿಷ್ಠ ಮೌಲ್ಯದ ‘ಪ್ರಧಾನ ಒತ್ತಾಯ’ಗಳನ್ನು (Principal Stresses) ಲೆಕ್ಕ ಹಾಕುವ ವಿಧಾನಗಳನ್ನು ನೀಡಿದನು. (ಚಿತ್ರ : ಬೌವಿಯೆರ್ ಪ್ರಧಾನ ಒತ್ತಾಯ ಹಾಗೂ ಸಮತಳ) ಸ್ಯಾಝಿಲಿ, ಡೊಲೆಕ್ರೆ ಹಾಗೂ ರಾಂಕಿನ್, ಎಂ.ಬೌವಿಯೆರ್ ಮಂಡಿಸಿದ ವಿನ್ಯಾಸದ ತತ್ತ್ವಗಳು ಸ್ಪಷ್ಟವಾಗಿದ್ದರೂ ಅವುಗಳನ್ನು ಆಣೆಕಟ್ಟೆಯ ವಿನ್ಯಾಸದಲ್ಲಿ ಬಳಸುವ ಸೂತ್ರಗಳು ಬಹಳ ಜಟಿಲವಾಗಿವೆ. 1876 , 1877 , 1899 ರಲ್ಲಿ ‘ಅನಲ್ಸ್ ಡೆ ಪಾಂಟ್ಸ್ ಎಟ್ ಷೌಸೆಸ್’ ನಲ್ಲಿ ಡೊಲೆಕ್ರೆ ಮತ್ತು ಸ್ಯಾಝಿಲಿ ತತ್ತ್ವಗಳನ್ನು ಬಳಸಿ , ಆಣೆಕಟ್ಟೆಯ ವಿನ್ಯಾಸವನ್ನು ಮಾಡಲು ಹಲವಾರು ಸರಳ ಮಾರ್ಗಗಳನ್ನು ಎಂ. ಪೆಲ್ಲೆಟ್ರಿಯೌ ನೀಡಿದನಾದರೂ ಅವು ಆಣೆಕಟ್ಟೆಯ ಎಲ್ಲ ಬಗೆಯ ಆಕಾರಗಳಿಗ ಬಳಸುವಂತಿರಲಿಲ್ಲ. ಎಂ.ಡೆ. ಬಿಯಾಯುವೆ ಆಣೆಕಟ್ಟೆಯ ವಿನ್ಯಾಸದಲ್ಲಿ ಜಟಿಲವಾದ ಸೂತ್ರಗಳನ್ನು ಬಿಡಿಸಲು ನೆರವಾಗುವ ಆಲೇಖೀಯ ತಂತ್ರಗಳನ್ನು ( Graphical Methods ) ಪರಿಚಯಿಸಿದನು. ಡಬ್ಲ್ಯು.ಬಿ. ಕೊವೆಂಟ್ರಿ ಮುಂತಾದವರು ಆಣೆಕಟ್ಟೆಯ ವಿನ್ಯಾಸದಲ್ಲಿರುವ ಜಟಿಲವಾದ ಗಣಿತ ಸೂತ್ರಗಳನ್ನು ಸುಲಭವಾಗಿ ಪರಿಹರಿಸುವ ಹಲವಾರು ಮಾರ್ಗೋಪಾಯಗಳನ್ನು ಪರಿಚಯಿಸಿದರು. ಮೋಲ್ಸ್’ವರ್ಥ್ ಬೌವಿಯೆರ್ ಸೂತ್ರಗಳಿಗೆ ಅನುಗುಣವಾದ ಪರಿಹಾರಗಳನ್ನು ಒದಗಿಸುವ ವಿಧಾನಗಳನ್ನು ಸಿದ್ಧಗೊಳಿಸಿದನು. ಆಣೆಕಟ್ಟೆ ವಿನ್ಯಾಸದ ಈ ವಿವಿಧ ಸೂತ್ರಗಳನ್ನು , ವಿಧಾನಗಳನ್ನು ಇಂಜಿನಿಯರ್’ಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿದ್ದರು. ಭಾರತದಲ್ಲಿ ಹೆಚ್ಚಿನ ಬ್ರಿಟಿಷ್ ಇಂಜಿನಿಯರ್’ಗಳು ಫೈಫ್ ಅನುವಾದಿಸಿದ ಡೊಲೆಕ್ರೆ ಲೇಖನ, ಅದನ್ನು ಮಾರ್ಪಡಿಸಿದ ರಾಂಕಿನ್ ಸೂತ್ರಗಳು, ಹಾಗೂ ಮೋಲ್ಸ್’ವರ್ಥ್ ಸರಳಗೊಳಿಸಿದ ಗಣಿತದ ಮಾದರಿಗಳನ್ನು ಬಳಸಿಕೊಂಡು ವಿನ್ಯಾಸಗೊಳಿಸಿದ ದೊಡ್ಡ ಗಾತ್ರದ ಆಣೆಕಟ್ಟೆಗಳು ಭಾರತದ ಇತರ ಕಡೆಗಳಲ್ಲಿ ಕಟ್ಟಲು ಪ್ರಾರಂಭಿಸಿದರು. ಕೆಲ ಇಂಜಿನಿಯರ್’ಗಳು ಬೌವಿಯರ್ ಸೂತ್ರಗಳನ್ನು ಬಳಸುತ್ತಿದ್ದರು. (3,4) (ಚಿತ್ರ : ವಿವಿಧ ವಿಧಾನಗಳಿಂದ ದಕ್ಕುವ ಆಣೆಕಟ್ಟೆಯ ಅಡ್ದ ಖಂಡ ( Cross Section) ) 1880 ರ ನಂತರ ಕಟ್ಟಲಾದ ಎಲ್ಲ ಆಣೆಕಟ್ಟೆಗಳ ವಿನ್ಯಾಸ ಮಾಡುವಾಗ ಆ ಕಾಲಕ್ಕೆ ಸ್ಥಾಪಿತವಾಗಿದ್ದ (ಡೊಲೆಕ್ರೆ , ರಾಂಕಿನ್) ತತ್ತ್ವ ಹಾಗೂ ಸೂತ್ರಗಳನ್ನು ಬಳಸಲಾಯಿತು. ಈ ತತ್ತ್ವಗಳ ಸಮರ್ಪಕ ಬಳಕೆಗೆ ಸಾಕ್ಷಿಯಾಗಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಎಳವಂದಿ ನದಿಗೆ ಅಡ್ದಲಾಗಿ 38.7 ಮೀ ಎತ್ತರ , 920 ಮೀ ಉದ್ದದ ಭಾತ್’ಘರ್ ಆಣೆಕಟ್ಟೆ ನಿರ್ಮಾಣಗೊಂಡಿತು. ಆರಂಭದಲ್ಲಿ ಈ ಆಣೆಕಟ್ಟೆಯನ್ನು ನಿಟ್ಟಿಲ್ಲದ ಕಲ್ಲು ಕಟ್ಟಣೆಯಾಗಿ (Uncoursed Masonry) ವಿನ್ಯಾಸಗೊಳಿಸಲಾಗಿದ್ದಿತು. ಆದರೆ ಇದೇ ಸಮಯದಲ್ಲಿ ಸಿಮೆಂಟ್ ಬಳಸಿ ಉತ್ತಮ ಗುಣಮಟ್ಟದ ಕಾಂಕ್ರಿಟ್ ತಯಾರಿಸುವುದು ಸಾಧ್ಯವೆಂದು ಪರೀಕ್ಷೆಗಳಿಂದ ತಿಳಿದುಬಂದಿತು. ಹಾಗಾಗಿ ಒತ್ತಾಯ 0.42 MPa ಗಿಂತ ಕಡಿಮೆ ಇರುವ ಭಾಗಗಳಲ್ಲಿ ಕಾಂಕ್ರಿಟ್ ಬಳಸಲಾಯಿತು. ಈ ಆಣೆಕಟ್ಟೆಯ ವಿನ್ಯಾಸವನ್ನು ಜೆ.ಇ.ವೈಟಿಂಗ್ ಕೈಕೆಳಗಿನ ಇಂಜಿನಿಯರ್ ಆರ್ಥರ್ ಹಿಲ್ ಮಾಡಿದ್ದನು. ಆರ್ಥರ್ ಹಿಲ್ ಮೋಲ್ಸ್’ವರ್ಥ್ ಸಿದ್ಧಪಡಿಸಿದ್ದ ಆಲೇಖ ವಿಧಾನಗಳನ್ನು ಅನುಸರಿಸಿದ್ದನು. ಮೊದಲ ಬಾರಿಗೆ ಈ ಆಣೆಕಟ್ಟೆಯಲ್ಲಿ ಜಲಾಶಯದಲ್ಲಿನ ಹೂಳನ್ನು ಹೊರತೆಗೆಯಲು ಅನುಕೂಲವಾಗುವ 15 ಕೆಳತೂಬುಗಳನ್ನು (Under Sluice ) ಒದಗಿಸಲಾಯಿತು. ಈ ಆಣೆಕಟ್ಟೆಯ ಜಲಾಶಯವನ್ನು ವೈಟಿಂಗ್ ಜಲಾಶಯ ಎಂದು ಹೆಸರಿಸಲಾಯಿತು. ಖಡಕವಾಸಲ ಮತ್ತು ಭಾತ್’ಘರ್ ಆಣೆಕಟ್ಟೆಗಳು 40 ಕಿ. ಮೀ ಅಂತರ ಹಾಗೂ 20 ವರ್ಷಗಳ ವ್ಯತ್ಯಾಸದಲ್ಲಿ ನಿರ್ಮಾಣಗೊಂಡ ಆಣೆಕಟ್ಟೆಗಳು. ಇವೆರಡರ ತೌಲನಿಕ ನೋಟ ಆಣೆಕಟ್ಟೆಗಳ ವಿನ್ಯಾಸದಲ್ಲಿ ಬಂದ ಬದಲಾವಣೆಗಳ ಸೂಚಿಯಾಗಿದೆ. (4) ಆಣೆಕಟ್ಟೆಗಳ ವಿನ್ಯಾಸ ಕುರಿತಾದ ತೀವ್ರ ಚರ್ಚೆಗಳಿಗೆ ಟುಲ್ಗೋಖ್ ಕಾರಣನಾದರೂ ಆತ ಪ್ರಸ್ತಾಪಿಸಿದ ಯೋಜನೆಗಳು ಕಾರ್ಯಗತವಾಗಲಿಲ್ಲ. ವಿಹಾರ್ ಹಾಗೂ ತುಳಸಿ ಜಲಾಶಯಗಳ ಮೂಲಕ ಮೂಲಕ ಬಾಂಬೆ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದ್ದಿತು. 1884 ರ ವೇಳೆಗೆ ಈ ನೀರಿನ ಮೂಲಗಳು ಬಾಂಬೆ ನಗರದ ದಾಹ ತಣಿಸದಂತಾದವು. ಇದಕ್ಕೆ ಪರಿಹಾರವಾಗಿ ಬಾಂಬೆಯಿಂದ 90 ಕಿ.ಮೀ ದೂರದಲ್ಲಿ ತಾನ್ಸಾ ನದಿಗೆ ಅಡ್ಡಲಾಗಿ ರಾಂಕಿನ್ ವಿನ್ಯಾಸ ತತ್ತ್ವಗಳನ್ನು ಒಳಗೊಂಡ 26 ಮೀ ಎತ್ತರದ ನಿಟ್ಟಿಲ್ಲದ ಕಲ್ಲಿನ ಕಟ್ಟೆಯ (Uncoursed Masonry) ನಿರ್ಮಾಣಕ್ಕೆ ಅನುಮತಿ ಸಿಕ್ಕಿತು. ಈ ಯೋಜನೆಯ ವಿನ್ಯಾಸವನ್ನು ಬಾಂಬೆ ಸಿಟಿ ಇಂಜಿನಿಯರ್ ರೀಂಝ ವಾಲ್ಟನ್, ಬೌವಿಯರ್ ಸೂತ್ರಗಳ ಮೇಲೆ ಮೊಲ್ಸ್’ವರ್ಥ್ ಸಿದ್ಧಪಡಿಸಿದ ಆಲೇಖಗಳನ್ನು ಬಳಸಿ ಮಾಡಿದ್ದನು. ಈತನ ವಿನ್ಯಾಸಗಳನ್ನು ಫೈಫ್ ಮುಂದಾಳತ್ವದ ಸಮಿತಿ ಪರಿಶೀಲನೆ ಒಪ್ಪಿಸಲಾಯಿತು. ತಾನ್ಸಾ ಆಣೆಕಟ್ಟೆಯ ವಿನ್ಯಾಸಗಳನ್ನು ಈ ಸಮಿತಿಯ ಸದಸ್ಯ ಹಿಲ್ ಪರಿಶೀಲಿಸಿ , ಬೌವಿಯರ್-ಮೋಲ್ಸ್’ವರ್ಥ್ ವಿಧಾನ ರಾಂಕಿನ್ ವಿಧಾನಕ್ಕಿಂತಲೂ ಮಿತವ್ಯಯಕಾರಿಯಾದ ಆಣೆಕಟ್ಟೆಯ ಆಕಾರಗಳನ್ನು ನೀಡುವುದೆಂದು , ಬ್ರಿಟನ್’ನಲ್ಲಿ ನಿರ್ಮಾಣಗೊಂಡಿದ್ದ ವೈರ್ನ್’ವಿ ಆಣೆಕಟ್ಟೆಗಿಂತಲೂ ಇದು ಕಡಿಮೆ ವೆಚ್ಚದ್ದೆಂದು ಗುರುತಿಸಿದ್ದನು. 36 ಮೀ (118’) ಎತ್ತರ , 2804 ಮೀ ( 8800’) ಉದ್ದದ ಕಟ್ಟೆ , 503 ಮೀ ಉದ್ದದ ಕೋಡಿ ಹೊಂದಿರುವ ಈ ಆಣೆಕಟ್ಟೆಯನ್ನು ನಿಟ್ಟಿಲ್ಲದ ಕಟ್ಟಣೆಯಲ್ಲಿ ಕಟ್ಟಲಾಯಿತು. ಈ ಆಣೆಕಟ್ಟೆಯನ್ನು 41 ಮೀ. (135’) ಎತ್ತರಕ್ಕೆ ವಿನ್ಯಾಸಗೊಳಿಸಿ , ಮೊದಲ ಹಂತದಲ್ಲಿ 36 ಮೀ ಎತ್ತರಕ್ಕೆ ಸೀಮಿತಗೊಳಿಸಲಾಯಿತು. 150 ಮಿ.ಮೀ ಗಿಂತಲೂ ( 6”) ಕಡಿಮೆ ಇರುವ ಸ್ಥಳೀಯವಾಗಿ ದೊರೆಯುವ ಬಸಾಲ್ಟ್ ಕಲ್ಲು ಹಾಗೂ ಸಿಮೆಂಟ್ ಬದಲು ವೆಚ್ಚ ಮಿತಗೊಳಿಸಲು ‘ಕಂಕರ್’ ಸುಣ್ಣದ ಕಲ್ಲಿನ ಗಾರೆಯನ್ನು ನಿರ್ಮಾಣಕ್ಕೆ ಬಳಸಲಾಯಿತು. 75 ಮಿ.ಮೀ ( 3”) ಗಾತ್ರದ ಗಾರೆಯ ಘನಗಳ ಮೇಲೆ ಪರೀಕ್ಷೆ ನಡೆಸಿ ಸಾಮರ್ಥ್ಯವನ್ನು ನಿರ್ಧರಿಸಲಾಯಿತು. ಕೆಲ ಘನಗಳನ್ನು ಪರೀಕ್ಷೆಗಾಗಿ ಲಂಡನ್’ನ ಕಿಕಾಲ್ದಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದಿತು. ಸುಣ್ಣದ ಗಾರೆಯ ಸಾಮರ್ಥ್ಯದಲ್ಲಿ ಬಹಳ ವ್ಯತ್ಯಾಸಗಳು ಕಂಡುಬಂದಿದ್ದರೂ ಅದು ಹೊರೆ ತಾಳುವ ಸಾಮರ್ಥ್ಯ ತೃಪ್ತಿಕರವಾಗಿದ್ದಿತು. ತಾನ್ಸಾ ಅಣೆಕಟ್ಟಿನ ನಿರ್ಮಾಣ 1886 ರ ಜನವರಿಯಲ್ಲಿ ಪ್ರಾರಂಭವಾಗಿ 31 ಮಾರ್ಚ್ 1892 ರಲ್ಲಿ ಪೂರ್ಣಗೊಂಡಿತು. (ಚಿತ್ರ : ಟುಲ್ಲೋಖ್ ವಿನ್ಯಾಸದ ತಾನ್ಸಾ ಆಣೆಕಟ್ಟೆ ) ಎತ್ತರದ ಆಣೆಕಟ್ಟೆಗಳ ವಿನ್ಯಾಸದಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಬೀಸಿದ ಗಾಳಿ ಇತರ ಕಡೆಯೂ ಬೇರೆ ವಿಧ ಮತ್ತು ಪ್ರಮಾಣಗಳಲ್ಲಿ ತನ್ನ ಪರಿಣಾಮವನ್ನು ಬೀರಿದ್ದಿತು. ಬುಂದೇಲಖಂಡದಲ್ಲಿ ನೀರಾವರಿಗೆ ಸಂಬಂಧಿಸಿದ ಯೋಜನಾ ವರದಿಯನ್ನು 1855ರಲ್ಲಿ ಕ್ಯಾಪ್ಟನ್ ರಿಚರ್ಡ್ ಸ್ಟ್ರೇಷಿ ತಯಾರಿಸಿದ್ದನು. 1868 ರಲ್ಲಿ ಬುಂದೇಲಖಂಡದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ಲೆಫ್ಟಿನೆಂಟ್ ಎಫ್.ಹೋಂ ಇದೇ ನೀರಾವರಿ ಯೋಜನೆಯ ಅಂಗವಾಗಿ ಬೇತ್ವಾ ನದಿಗೆ ಅಡ್ಡಲಾಗಿ ಕೋಡಿಕಟ್ಟೆಯ ನಿರ್ಮಾಣವನ್ನು ಪ್ರಸ್ತಾಪಿಸಿದನು. ಇದಕ್ಕೆ ಮುಖ್ಯ ವಾಯುವ್ಯ ಪ್ರಾಂತದ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಕರ್ನಲ್ ಡಬ್ಲ್ಯು.ಡಬ್ಲ್ಯು.ಎಚ್.ಗ್ರೆಟ್’ಹೆಡ್ ಬೆಂಬಲವಿದ್ದಿತು. ಈ ವೇಳೆಗೆ ನೀರಾವರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಜನರಲ್ ಹುದ್ದೆಗೇರಿದ್ದ ರಿಚರ್ಡ್ ಸ್ಟ್ರೇಷಿಗೆ ಬಾಂಬೆ ಪ್ರಾಂತದಲ್ಲಿ ಫೈಫ್ ಮುಂದಾಳತ್ವದಲ್ಲಿ ಕುರಾರ್ ಬಳಿ 7.0 ಮೀ ಎತ್ತರದ ಕಲ್ಲಿನ ಆಣೆಕಟ್ಟೆಯನ್ನು ಕಟ್ಟಿರುವುದು ತಿಳಿದಿದ್ದು , ಅಂತಹುದೇ ನಿರ್ಮಾಣ ಬೇತ್ವಾ ನದಿಯ ಮೇಲೂ ಆಗಬೇಕೆಂದು ಸೂಚಿಸಿದನು. ಲೆಫ್ಟಿನೆಂಟ್ ಆರ್ಥರ್ .ಎಚ್. ಬ್ಯಾಗೆ 27/11/1869 ರಲ್ಲಿ ಆಣೆಕಟ್ಟೆ ಕಟ್ಟಲು ಸೂಕ್ತವಾದ 4 ಸ್ಥಳಗಳನ್ನು ಗುರುತಿಸಿ ಯೋಜನಾ ವಿವರಗಳನ್ನು ಸಲ್ಲಿಸಿದನು. ಆರ್ಥರ್ ಎಚ್. ಬ್ಯಾಗೆ ಮಾಡಿದ ವಿನ್ಯಾಸ 1858, 1862 ರಲ್ಲಿ ರಾಂಕಿನ್ ನೀಡಿದ ತತ್ತ್ವಗಳಿಗೆ ಅನುಗುಣವಾಗಿದ್ದಿತು. ಅಧೀಕ್ಷಕ ಇಂಜಿನಿಯರ್ ಹುದ್ದೆಯಲ್ಲಿದ್ದ ಕ್ಲಿಂಟನ್ ಆಂಡರ್’ಸನ್’ಗೆ ಡೊಲೆಕ್ರೆಯ ವಿನ್ಯಾಸದ ವಿವರಗಳು ಹಾಗೂ ಫ್ರಾನ್ಸ್’ನ ಪ್ಯುರೆನ್ಸ್ ಆಣೆಕಟ್ಟೆಯ ನಿರ್ಮಾಣದ ವಿವರಗಳು ತಿಳಿದಿದ್ದವು. ಅರ್ಥರ್ ಬ್ಯಾಗೆ ವಿನ್ಯಾಸಗೊಳಿಸಿದ ಆಣೆಕಟ್ಟೆ ಅಗತ್ಯಕ್ಕಿಂತ ಹೆಚ್ಚು ಗಾತ್ರದ್ದಾಗಿದ್ದು ಅದನ್ನು ಡೊಲಕ್ರೆ ಸೂತ್ರಗಳಿಗೆ ಅನುಗುಣವಾಗಿ ಬದಲಾಯಿಸಬೇಕೆಂದು ಕ್ಲಿಂಟನ್ ಆಂಡರ್’ಸನ್ ತಿಳಿಸಿದನು. ಈ ಎಲ್ಲ ಬಳವಣಿಗಗಳನ್ನು ಗಮನಿಸುತ್ತಿದ್ದ ವಾಯುವ್ಯ ಭಾರತದ ಮುಖ್ಯ ಇಂಜಿನಿಯರಿಂಗ್ ಕಛೇರಿಯಿಂದ ಆಣೆಕಟ್ಟೆಯ ವಿನ್ಯಾಸ ಕುರಿತಾಗಿ ಹೆಚ್ಚಿನ ವಿವರಗಳನ್ನು ಕೇಳಿತು. ಆಗ (1874) ಬುಂದೇಲಖಂಡ ನೀರಾವರಿ ಕೆಲಸಗಳ ಅಧೀಕ್ಷಕ ಇಂಜಿನಿಯರ್ ಸ್ಥಾನದಲ್ಲಿದ್ದ ಜೇಮ್ಸ್ ಹೇರ್ , ತಳವಿನ್ಯಾಸದಲ್ಲ ವಕ್ರವಾಗಿರುವ ಕ್ಯಾಂಕರ್ ಕಲ್ಲಿನ ಸುಣ್ಣ ಮತ್ತ ಸ್ವಲ್ಪ ಪೋರ್ಟ್’ಲ್ಯಾಂಡ್ ಸಿಮೆಂಟ್ ಬೆರಸಿದ ಗಾರೆಯ ಅಸಮ ಕಲ್ಲಿನ ಕಟ್ಟಡದ (Ruble Masonry) ವಿನ್ಯಾಸ ನೀಡಿದನು. ಜೇಮ್ಸ್ ಹೇರ್ ನೀಡಿದ ವಕ್ರತಳ ವಿನ್ಯಾಸಕ್ಕೆ ಗ್ರೇಟ್’ಹೆಡ್ ಬಂಬಲ ದೊರೆಯಿತಾದರೂ , ಆತ ನೀಡಿದ ಆಣೆಕಟ್ಟೆ ಆಕಾರದಿಂದ ಕೆಳಬಾಗ ನೀರಿನ ಹೊಡೆತಕ್ಕಿ ಸಿಲುಕಿ ಹಾಳಾಗಬಹುದಾದ್ದರಿಂದ , ಆಣೆಕಟ್ಟೆಯ ಕೆಳಮುಖವನ್ನು ಗೊಡೆಯಂತೆ ನೇರವಾಗಿಸಿ ಸ್ಥಿರತೆಗಾಗಿ (Stability) ಮೇಲ್ಮುಖವನ್ನು ವಕ್ರಗತಿಯಲ್ಲಿ ಹಚ್ಚಿಸಬೇಕಂದು ಬ್ರೌನ್’ಲೋ ವಾದಿಸಿದನು. ಬೇತ್ವಾ ವಲಯದ ಇಂಜಿನಿರ್’ಗಳು ಆಣೆಕಟ್ಟೆ ನಿಟ್ಟಿಲ್ಲದ ಕಟ್ಟಣೆಯಾಗಿದ್ದು , ಅದರ ಹೊರ ಮುಖದಲ್ಲಿ ನಿಟ್ಟಿನ ಕಟ್ಟಣೆ ಇರಬೇಕೆಂದು ಪ್ರತಿಪಾದಿಸಿದ್ದರು. ಇದನ್ನು ಒಪ್ಪದ ಕರ್ನಲ್ ಕ್ರಾಪ್ಟನ್- ಇನ್’ಸ್ಪೆಕ್ಟರ್ ಜನರಲ್ ಆಫ್ ಇಂಡಿಯಾ , ಬಾಂಬೆ ಪ್ರೆಸಿಡನ್ಸಿಯಲ್ಲಿ ಇರುವಂತೆ ನಿಟ್ಟಿಲ್ಲದ ಕಟ್ಟೆ ಕಟ್ಟಬೇಕಂದು ಸೂಚಿಸಿದನು. ಇದನ್ನು ಗ್ರೇಟ್’ಹೆಡ್ ಒಪ್ಪಲಿಲ್ಲ. ಬೇತ್ವಾ ಆಣೆಕಟ್ಟೆಯ ವಿನ್ಯಾಸ ಮತ್ತು ನಿರ್ಮಾಣ ಕುರಿತಾದಂತೆ ಬೇತ್ವಾ ನೀರಾವರಿ ವಿಭಾಗ , ವಾಯುವ್ಯ ಪ್ರಾಂತ ನೀರಾವರಿ ವಿಭಾಗ ಮತ್ತು ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯಗಳು ಮೂಡಿ 1880ರ ವರೆಗೆ ಮುಂದುವರೆದವು. 1881 ರಲ್ಲಿ ಮೇಜರ್ ವೆಸ್ಟರ್ನ್ ಪರಿಚ ಬಳಿ ಆಣೆಕಟ್ಟೆಯ ನಿರ್ಮಾಣ ಪ್ರಾರಂಭಿಸಿದನು. ಸ್ವಲ್ಪ ಕಾಲದ ನಂತರ ಈ ಜಾಗವನ್ನು ಬಿಟ್ಟು ಖೂರ್ದ್ ಬಳಿ , ಹೇರ್ ಪ್ರತಿಪಾದಿಸಿದ ವಕ್ರತಳವಿನ್ಯಾಸ , ಬ್ರೌನ್’ಲೋ ಪ್ರತಿಪಾದಿಸಿದ ಬದಲಿ ಆಕಾರದಲ್ಲಿ ಆಣೆಕಟ್ಟೆ ಕಟ್ಟುವ ನಿರ್ಧಾರಕ್ಕೆ ಬಂದು 29/9/1885 ರಲ್ಲಿ 17 ಮೀ (55’9” )ಎತ್ತರದ ಆಣೆಕಟ್ಟೆ ಪೂರ್ಣಗೊಂಡಿತು. ಜಬಲ್’ಪುರದ ಹತ್ತಿರ ಖಂದಾರಿ ಹಳ್ಳಕ್ಕೆ ಅಡ್ಡಲಾಗಿ 23 ಮೀ (74 ಅಡಿ) ಎತ್ತರದ ಆಣೆಕಟ್ಟೆಯನ್ನು ಸ್ಥಳೀಯವಾಗಿ ಸಿಗುವ ಬಸಾಲ್ಟ್ ಕಲ್ಲು ಮತ್ತು ಗಾರೆ ಬಳಸಿ ನಿಟ್ಟಿಲ್ಲದ ಕಲ್ಲಿನ ಅಣೆಕಟ್ಟೆಯನ್ನು (Uncoursed masonry) ಜೆ.ಸಿ.ಅಡಿಸನ್ ರಾಂಕಿನ್ ಸೂತ್ರಗಳಿಗೆ ಅನುಗುಣವಾಗಿ ವಿನ್ಯಾಸಿಸಿದ್ದನು. ಕರ್ನಲ್ ಸಿ.ಎಂ ಬ್ರೌನ್ ನಿರ್ಮಾಣ ತಂತ್ರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದನು. ಈ ಆಣೆಕಟ್ಟೆಯ ಕೆಲಸವನ್ನು ಜೆ.ಜೆ.ಎಚ್ ಗ್ಲಾಸ್’ಮಿಸ್ಟ್ 1881ರಲ್ಲಿ ಪ್ರಾರಂಭಿಸಿ 1884ರಲ್ಲಿ ಪೂರ್ಣಗೊಳಿಸಿದನು. 1850 ರ ಅವಧಿಯಲ್ಲಿ ಕ್ಯಾಪ್ಟನ್ ಹೆನ್ರಿ ರಾಮ್ಸೆ ಭೀಮತಲ್ ಹೊಳೆಗೆ ಸಣ್ಣದಾದ ಆಣೆಕಟ್ಟೆ ಕಟ್ಟಿದ್ದನು. 1870ರಲ್ಲಿ ಇದರ ಬದಲು ಕಲ್ಲಿನ ತಿರುಳಿರುವ , ಮಣ್ಣಿನ ಏರಿಯನ್ನು ಕಟ್ಟಲಾಯಿತು. ಈ ಆಣೆಕಟ್ಟೆಯ ಸುರಕ್ಷಿತತೆಯ ಬಗ್ಗೆ ಅನುಮಾನಗಳೆದ್ದಿದ್ದವು. ಆಗಸ್ಟ್ 1892 ರಲ್ಲಿ ಬಂದ ಭಾರಿ ಮಳೆಗೆ ಈ ಆಣೆಕಟ್ಟೆ ಕೊಚ್ಚಿ ಹೋಯಿತು. ಇದರ ಬದಲು ಹೊಸದಾದ ಆಣೆಕಟ್ಟೆ ಕಟ್ಟಲು ನಿರ್ಧರಿಸಲಾಯಿತು. 1892 ರಲ್ಲಿ ಕೆಲಸ ಪ್ರಾರಂಭವಾಗಿ 1893 ರಲ್ಲಿ ಪೂರ್ಣಗೊಂಡಿತು. ಭೀಮತಲ್ ಆಣೆಕಟ್ಟೆ ವಿನ್ಯಾಸಿಸಲು ರಾಂಕಿನ್ ಸೂತ್ರಗಳಿಗೆ ಮೊರೆ ಹೋಗಲಾಗಿದ್ದಿತು. ಕರ್ನಾಟಕದ ಬಾಗಲಕೋಟೆ ಸಮೀಪದ ಮುಚುಕುಂದಿಯಲ್ಲಿ 19 ಮೀ(62’3”) ಎತ್ತರ ಹಾಗೂ ಅಹ್ಮದ್’ನಗರ ಸನಿಹ 15 ಮೀ ಎತ್ತರದ ಭಾತೊಡಿ ಆಣೆಕಟ್ಟೆಗಳು ನಿರ್ಮಾಣಗೊಂಡವು. (4) ಪೆನ್ನಿಕುಯಿಕ್ ಆರಂಭದಲ್ಲಿ ಪೆರಿಯಾರ್ ನದಿಗೆ 54.25 ಮೀ (155 ಅಡಿ) ಎತ್ತರದ ಕಾಂಕ್ರಿಟ್ ಆಣೆಕಟ್ಟೆಯನ್ನು ಪರಿಗಣಿಸಿದ್ದನು. ಸಾಕಷ್ಟು ಪ್ರಮಾಣದಲ್ಲಿ ಕಲ್ಲು ಲಭ್ಯವಿದ್ದುದರಿಂದ ಮುಂದಿನ ಹಾಗೂ ಹಿಂದಿನ ಮುಖಭಾಗಕ್ಕೆ ಸಮಗಲ್ಲಿನ ನಿಟ್ಟಿನ ಕಟ್ಟಣೆಯನ್ನು (Size Stone Coursed Masonry) ನಿಗದಿಗೊಳಿಸಿ ಮಧ್ಯದಲ್ಲಿ ಕಾಂಕ್ರಿಟ್ ಬಳಸುವ ತೀರ್ಮಾನಕ್ಕೆ ಬರಲಾಯಿತು. ಹೀಗೆ ವಿಭಿನ್ನ ಸಾಮಾಗ್ರಿಗಳನ್ನು ಬಳಸುವುದರಿಂದ ಅಸಮ ನೆಲೆಗೊಳಿಕೆಯಾಗುವುದೆಂದು (Uneven Settlement) ಆರಂಭದಲ್ಲಿ ಅಕ್ಷೇಪಣೆ ಎತ್ತಲಾಯಿತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಎದ್ದ ಸಂಶಯಗಳನ್ನು ಪೆನ್ನಿಕುಯಿಕ್ ನಿವಾರಿಸಿದನು. ಪೆರಿಯಾರ್ ನದಿ ಪಾತ್ರದಿಂದ ವೈಗೈನದಿ ಪಾತ್ರಕ್ಕೆ ನೀರು ತಿರುಗಿಸುವ ಅಂಗವಾಗಿ ನಿರ್ಮಿಸಬೇಕಾಗಿದ್ದ 2000 ಮೀ ಉದ್ದದ ಸುರಂಗ ನಾಲೆಯ ನಿರ್ಮಾಣದ ಬಗ್ಗೆ ಪೆನ್ನಿಕುಯಿರ್ ಹೆಚ್ಚು ಚಿಂತಿತನಾಗಿದ್ದನಲ್ಲದೆ ಅದರತ್ತ ಹೆಚ್ಚಿನ ಶ್ರಮ ವಿನಿಯೋಗಿಸಿದ್ದನು. ಬೌವಿಯರ್ ಪರಿಗಣಿಸಿದಂತೆ ಗರಿಷ್ಟ ಒತ್ತಾಯ ಬರುವ ಜಾಗ ಹೆಚ್ಚು ವಸ್ತುನಿಷ್ಟವಾಗಿರದೆ ಸೈದ್ದಾಂತಿಕ ಊಹೆಯ ಮೇಲಿದೆ ಇದರಂತೆ ಬೌವಿಯೆರ್-ಮೋಲ್ಸ್,ವರ್ಥ್ ಸೂತ್ರಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿದ ಅಣೆಕಟ್ಟೆಯಲ್ಲಿ ಹೆಚ್ಚಿನ ಸಾಮಗ್ರಿ ಬಳಕೆಯಾಗುತ್ತದೆ ಎಂದು ಭಾವಿಸಿದ್ದ ಪೆನ್ನಿಕುಯಿಕ್ ತನ್ನದೇ ಆದ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಬೌವಿಯೆರ್-ಮೋಲ್ಸ್’ವರ್ಥ್ ಸೂತ್ರಗಳನ್ನು ವಿನ್ಯಾಸದಲ್ಲಿ ಬಳಸಿದ್ದನು. ಪೆನ್ನಿಕುಯಿಕ್ ಮತ್ತು ಸ್ಮಿಥ್ ಡೊಲೆಕ್ರೆ , ರಾಂಕಿನ್ ಮತ್ತು ಬೌವಿಯೆರ್ ಪ್ರಸ್ತುತ ಪಡಿಸಿದ ವಿನ್ಯಾಸದಲ್ಲಿನ ಕೊರತೆಗಳನ್ನು ಪಟ್ಟಿ ಮಾಡಿದ್ದರು. ಅವು ಹೀಗಿವೆ – (1) ಸ್ಯಾಝಿಲ್ಲಿ ಮತ್ತು ಡೊಲೆಕ್ರೆ ಹಾಗೂ ರಾಂಕಿನ್ ವಿಧಾನಗಳು ದೋಷರಹಿತವಾಗಿಲ್ಲ. ಈ ವಿಧಾನಗಳನ್ನು ಬಳಸಿ ನಿರ್ಮಿಸಿದ ಅಣೆಕಟ್ಟೆ ಎಲ್ಲ ಬಗೆಯ ಸಂದರ್ಭಗಳಲ್ಲಿ ಸುರಕ್ಷಿತವಾಗಿರಲಾರದು. (2) ಸ್ಯಾಝಿಲಿ,ಡೊಲೆಕ್ರೆ ವಿಧಾನಗಳು ಭಾರಿ ಗಣಿತೀಯವಾಗಿದ್ದರೆ , ರಾಂಕಿನ್ ವಿಧಾನ ಸಾಮಾನ್ಯ ಪರಿಹಾರಗಳನ್ನು ನೀಡುತ್ತದೆ. ಇವೆರಡು ತ್ರಾಸದಾಯಕ ವಿಧಾನಗಳನ್ನು ಬಳಸಲು ಇಂಜಿನಿಯರ್’ಗಳು ಹಿಂಜರಿಯುತ್ತಾರೆ. ಬೌವಿಯರ್ ವಿಧಾನ ಅತಿ ಹೆಚ್ಚಿನ ಒತ್ತಾಯಕ್ಕೆ ಒಳಗಾದ ಒಳಮುಖ ಹಾಗೂ ಹೊರಮುಖದಲ್ಲಿರುವ ಬಿಂದುಗಳನ್ನು ಹುಡುಕುತ್ತದೆ. ಇದಕ್ಕೆ ಪರಿಹಾರ ಹುಡುಕುವುದು ಸುಲಭ. ಆದ್ದರಿಂದಲೇ ಮೋಲ್ಸ್’ವರ್ಥ್ ಆಣೆಕಟ್ಟೆಯ ವಿನ್ಯಾಸಕ್ಕೆ ಬೌವಿಯರ್ ವಿಧಾನವನ್ನು ಪರಿಗಣಿಸಿದ್ದಾನೆ. (3) ಫ್ರೆಂಚ್ ಇಂಜಿನಿಯರುಗಳು ಸ್ಪೇನ್’ನಲ್ಲಿ ಅಸ್ತಿತ್ವದಲ್ಲಿದ್ದ ಕಲ್ಲಿನ ಅಣೆಕಟ್ಟೆಗಳನ್ನು ಪರಿಗಣಿಸಿ ಅಣೆಕಟ್ಟೆಗಳಲ್ಲಿ ೦.೬೫ ರಿಂದ ೧.೪ ನ್ಯೂ /ಚ.ಮಿ.ಮೀ ಒತ್ತಾಯ ಬರಬಹುದೆಂದು ಅಂದಾಜಿಸಿದ್ದಾರೆ. ಇದು ಕಲ್ಲಿನ ಕಟ್ಟಣೆಗೆ ಇರುವುದಕ್ಕಿಂತಲೂ ಕಡಿಮೆ ಸಾಮರ್ಥ್ಯ. ಈ ಸಾಮರ್ಥ್ಯ ಬಳಸಿ ಮಾಡಿದ ವಿನ್ಯಾಸದಿಂದ ಅಣೆಕಟ್ಟೆಯ ಗಾತ್ರ ಹೆಚ್ಚಾಗಿ, ವೆಚ್ಚದಾಯಕವಾಗಿದೆ. ಇದರಿಂದ ಹೊರಬರಲು ಫ್ರೆಂಚ್ ಇಂಜಿನಿಯರುಗಳು ಕಡಿಮೆ ವೆಚ್ಚದ ಖಂಡಕ್ಕೆ ಮೊರೆ ಹೋಗಿದ್ದಾರೆ. ಇಂತಹ ತೆಳುವಾದ ಖಂಡದ ಆಣೆಕಟ್ಟೆಯಲ್ಲಿ ತಳಭಾಗ ಸುರಕ್ಷಿತವಾಗಿ ಇರಬಹುದಾದರೂ ಮೇಲ್ಭಾಗದಲ್ಲಿ ಎಳೆತದ ಒತ್ತಾಯಗಳು (Tensile Stresses) ಬರಬಹುದು. ಇದು ಅಣೆಕಟ್ಟೆಗೆ ಹೆಚ್ಚು ಅಪಾಯಕಾರಿ . (4) ಫ್ರೆಂಚ್ ಇಂಜಿನಿಯರುಗಳು ವೆಚ್ಚ ತಗ್ಗಿಸಲು ಕಟ್ಟಣೆಯ ಸಾಮರ್ಥ್ಯದ ಸನಿಹಕ್ಕೆ ಒತ್ತಾಯಗಳು ಬರುವಂತೆ ಅಣೆಕಟ್ಟೆಯ ದಪ್ಪವನ್ನು ತಗ್ಗಿಸಿದ್ದಾರೆ. ಅದೇ ವೇಳೆಗೆ ಅವರು ಆಣೆಕಟ್ಟೆಯ ನೀರಿನ ಮುಖದಲ್ಲಿ ಕಾಣಿಸಿಕೊಳ್ಳಬಹುದಾದ ಎಳೆತದ ಒತ್ತಾಯಗಳನ್ನು (Tensile Stresses) ಪರಿಗಣಿಸಿಲ್ಲ. ಸುರಕ್ಷಿತವಾಗಿ ನಿಂತಿರುವ ಅಣೆಕಟ್ಟೆಯ ನಡವಳಿಕೆಯನ್ನು ವಿವರಿಸುವಷ್ಟು ಸುಲಭವಾಗಿ ವಿಭಿನ್ನ ಸನ್ನಿವೇಶ, ಸಂದರ್ಭ, ಪರಿಸರಗಳಲ್ಲಿ ನಿರ್ಮಾಣವಾಗುವ ಅಣೆಕಟ್ಟೆಯ ವಿನ್ಯಾಸ ಮಾಡುವುದು ಸುಲಭದ ಕೆಲಸವಲ್ಲ. ಆದ್ದರಿಂದ ಆಣೆಕಟ್ಟೆಯ ವಿನ್ಯಾಸ ಸನ್ನಿವೇಶಕ್ಕೆ ಅನುಗುಣವಾಗಿರಬೇಕು. (5) ಜಲಾಶಯದ ಕಡೆ ನಿಂತಿರುವ ನೀರಿನ ಒತ್ತಡವನ್ನು ಪರಿಗಣಿಸಿ ವಿನ್ಯಾಸದ ಸೂತ್ರಗಳನ್ನು ಕೊಡಲಾಗಿದೆ. ಈ ಸೂತ್ರಗಳಲ್ಲಿ ಜಲಾಶಯದ ಕಡೆಗಿರುವ ಆಣೆಕಟ್ಟೆಯ ಮೇಲೆ ನಿಲ್ಲುವ ನೀರಿನ ತೂಕ ಪರಿಗಣಿಸಿಲ್ಲ. (6) ಅಪರೂಪದ ಸಂದರ್ಭಗಳಲ್ಲಿ ದೊಡ ಪ್ರವಾಹಗಳು ಬಂದು ಅಣೆಕಟ್ಟೆಯಲ್ಲಿ ವಿನ್ಯಾಸ ಪರಿಗಣಿಸಿದ್ದಕ್ಕಿಂತಲೂ ಅಧಿಕ ಒತ್ತಾಯಗಳು ಬರಬಹುದು. ಇಂತಹುದೇ ಸನ್ನಿವೇಶದಲ್ಲಿ 1881ರಲ್ಲಿ ಅಲ್ಜೀರಿಯಾದ ಹಬ್ರಾ ಆಣೆಕಟ್ಟೆ ಕುಸಿದಿದೆ. ಮೇಲಿನ ಅಂಶಗಳನ್ನು 1882 ರ ಪೆರಿಯಾರ್ ಯೋಜನೆಯ ವರದಿಯಲ್ಲಿ ವಿವರಿಸಲಾಗಿದ್ದಿತು. ಅಣೆಕಟ್ಟೆಯ ಮುಂದಡಿ ಹಾಗೂ ಹಿಮ್ಮಡಿಯಲ್ಲಿ ಒತ್ತಾಯಗಳು 0.11 MPa ಯಷ್ಟು ಇರಬಹುದೆಂದು ರಾಂಕಿನ್ ಸೂಚಿಸಿದ್ದನು. ಇದರ ಬದಲು ಪೆನ್ನಿಕುಯಿಕ್ ಅದನ್ನು 0.09 MPa ಗೆ ನಿಗದಿಗೊಳಿಸಿದನು. ಪೆನ್ನಿಕುಯಿಕ್ ವಿನ್ಯಾಸದಲ್ಲಿ ಜಲಾಶಯ ಬರಿದಾಗಿದ್ದಾಗ ಆಣೆಕಟ್ಟೆಯ ಅಡ್ಡಖಂಡದ ಮಧ್ಯದ ಮೂರನೇ ಒಂದರಲ್ಲಿ ಫಲಿತಾಂಶ ಸಾಗುವ ನಿಯಮ ಸ್ವಲ್ಪ ಭಂಗಗೊಂಡಿದ್ದು ರಾಂಕಿನ್ ತತ್ತ್ವವನ್ನು ಪಾಲಿಸುತ್ತಿರಲಿಲ್ಲ. ಪೆನ್ನಿಕುಯಿಕ್ ಮಾಡಿಕೊಂಡಿರುವ ಈ ಬದಲಾವಣೆಗಳ ಆಗು-ಹೋಗುಗಳನ್ನು ತಿಳಿಯಲು ಮದ್ರಾಸ್’ನ ವಿಭಾಗದ ಹೆಚ್ಚುವರಿ ಮುಖ್ಯ ಇಂಜಿನಿಯರ್ ಆಗಿ ಜವಾಬ್ದಾರಿ ವಹಿಸಿಕೊಂಡ ಕರ್ನಲ್ ಜೆ.ಜೆ ಹಾಲ್’ಸ್ಟೆಡ್ ಪೆನ್ನಿಕುಯಿಕ್ ವಿನ್ಯಾಸಗಳನ್ನು ಮೋಲ್ಸ್’ವರ್ಥ್’ಗೆ ಪರಿಶೀಲನೆಗೆ ಕಳಿಸಿದನು. ವೋಲ್ಸ್.ವರ್ಥ್ ತನ್ನ ವಿಧಾನಗಳನ್ನು ಸಮರ್ಥಿಸಿಕೊಂಡು ಅವು ಹೆಚ್ಚು ಸುರಕ್ಷತೆಯನ್ನು ನೀಡುವುತ್ತ ತಪ್ಪಾಗಿವೆ ಎಂದು ವಾದಿಸಿ ತನ್ನ ಲೆಕ್ಕಗಳನ್ನು ಪ್ರಚುರಪಡಿಸಿದನು. ಇದಕ್ಕೆ ಬ್ರೌನ್’ಲೋ ಬೆಂಬಲ ಸೂಚಿಸಿದನು. ನಂತರ ಬೌವಿಯೆರ್-ಮೋಲ್ಸ್’ವರ್ಥ್ ವಿಧಾನಗಳನ್ನು ಇಲಾಖೆಯಲ್ಲಿ ಪರಿಚಯಿಸುವ ಯತ್ನಗಳಾಗಿ , ಈ ವಿನ್ಯಾಸದ ತತ್ತ್ವಗಳನ್ನು ಮುದ್ರಿಸಿ ಇಲಾಖೆಯ ಇಂಜಿನಿಯರ್’ಗಳಿಗೆ ಹಂಚಲಾಯಿತು. (4) ಪೆರಿಯಾರ್ ಅಣೆಕಟ್ಟೆಯಲ್ಲಿ ಬಳಸಿದ್ದ ಕಾಂಕ್ರಿಟಿನ ಮೂಲಕ ನೀರು ಸಣ್ಣ ಮಟ್ಟದಲ್ಲಿ ಜಿನುಗುವುದು ಕಂಡುಬಂದಿತು. ಈ ಸಮಸ್ಯೆಯನ್ನು ಕುರಿತಾಗಿ ಚರ್ಚೆಗಳು ಪ್ರಾರಂಭವಾದವು. 1887ರಲ್ಲಿ ಗೋದಾವರಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ಜಿ.ಟಿ.ವಾಲ್ಖ್ ಹಲವಾರು ಪ್ರಯೋಗಗಳನ್ನು ನಡೆಸಿ. ನೀರಿಗೆ ಅಭೇದ್ಯವಾಗಿರುವಂತೆ (Water Proof) ಅಣೆಕಟ್ಟೆ ಕಟ್ಟಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ನೀಡಿದನು. (ಚಿತ್ರ : ಪೆರಿಯಾರ್ ಆಣೆಕಟ್ಟೆಯ ಅಡ್ಡ ಖಂಡ) 1900ರ ವೇಳೆಗೆ ಅಣೆಕಟ್ಟೆಗಳ ವಿನ್ಯಾಸಕ್ಕೆ ರಾಂಕಿನ್ ಸೂತ್ರಗಳನ್ನು ಬಳಸಬೇಕೆಂದು ತಿಳುವಳಿಕೆ ವ್ಯಾಪಕವಾಗಿದ್ದಿತು. ಬ್ಲಿಗ್ 1907ರಲ್ಲಿ ಹೊರತಂದ ‘ಡಿಸೈನ್ ಆಫ್ ಇರಿಗೇಷನ್’ನಲ್ಲಿ ಇದು ಶಿಷ್ಟ ವಿನ್ಯಾಸದ ವಿಧಾನವಾಗಿ ದಾಖಲಾಗಿದ್ದಿತು. ಅದರೂ ಅದರ ಸಮರ್ಪಕತೆ ಕುರಿತಾದ ವಿವಾದಗಳು ಸಂಪೂರ್ಣ ತಣ್ಣಗಾಗಿರಲಿಲ್ಲ. ಮಣ್ಣು , ಕಲ್ಲು , ಕಾಂಕ್ರಿಟ್ ಮುಂತಾದ ಯಾವುದೇ ಸಾಮಗ್ರಿಯನ್ನು ಬಳಸಿ ಕಟ್ಟಿದ ಆಣೆಕಟ್ಟೆಯಾಗಲಿ ಸಂಪೂರ್ಣವಾಗಿ ನೀರು ಸೋರದಂತೆ ಜಲಾಭೇಧ್ಯವಾಗಿರುವುದಿಲ್ಲ (Water Proof) . ಆದ್ದರಿಂದ ಆಣೆಕಟ್ಟೆಯ ಅಡಿಪಾಯ ಹಾಗೂ ಜಲಾಶಯದ ಮುಖದ ಕಡೆ ನೀರು ಜಿನುಗುತ್ತದೆ. ಹೀಗೆ ಜಿನುಗುವ ನೀರಿನ ಒತ್ತಡ ಜಲಾಶಯದಲ್ಲಿ ನಿಂತಿರುವ ನೀರಿನ ಮಟ್ಟಕ್ಕೆ ಅನುಗುಣವಾಗಿರುತ್ತದೆ. ಈ ಒತ್ತಡ ಆಣೆಕಟ್ಟೆಯ ತೂಕವನ್ನು ಕಡಿಮೆಗೊಳಿಸುವಂತೆಯೇ , ನೀರಿರುವ ಮುಖದಲ್ಲಿ ಎಳೆತದ ಒತ್ತಾಯಗಳಿಗೆ ಕಾರಣವಾಗಬಹುದು. ಇಂತಹ ಒತ್ತಡವನ್ನು ಮೇಲೆತ್ತಿಕೆ ( Uplift) ಎಂದು ಕರೆಯಲಾಗುತ್ತದೆ. ಈ ಒತ್ತಡ ಇರುವಾಗ ಆಣೆಕಟ್ಟೆಯ ಸುರಕ್ಷಿತತೆ ಬೇರೆಯದೇ ಆಗಿರುತ್ತದೆ. ಸ್ಯಾಝಿಲಿ , ಡೊಲೆಕ್ರೆ , ರಾಂಕಿನ್ ಇವರ ವಿಧಾನಗಳಲ್ಲಿ ಈ ಸನ್ನಿವೇಶದ ಪರಿಗಣನೆಯೇ ಇಲ್ಲ. ಪೆನ್ನಿಕುಯಿಕ್ ಮತ್ತು ಸ್ಮಿಥ್ ಇದೇ ಸನ್ನಿವೇಶವನ್ನಲ್ಲದೇ ಹೋದರೂ ಅಂತಹ ಸರಿಸಮಾನ ಸಾಧ್ಯತೆಯನ್ನು ಕಲ್ಪಿಸಿಕೊಳ್ಳುತಿದ್ದರು. ಬಹುತೇಕ ಇಂಜಿನಿಯರ್’ಗಳ ಕಣ್ಮಣಿಯಾಗಿದ್ದ ಆಣೆಕಟ್ಟೆಯ ವಿನ್ಯಾಸದ ಸೂತ್ರ ಮತ್ತು ವಿಧಾನಗಳನ್ನು ಪರಿಷ್ಕರಿಸಬೇಕಾದ ಅನಿವಾರ್ಯತೆ ಮತ್ತೊಮ್ಮೆ ಫ್ರಾನ್ಸ್’ನಲ್ಲಿಯೇ ಎದುರಾಯಿತು. (ಚಿತ್ರ : ಮೇಲೆತ್ತಿಕೆ ಬಲ ಮತ್ತು ಪರಿಣಾಮ) ಫ್ರಾನ್ಸ್’ನಲ್ಲಿ 1876 ರಲ್ಲಿ ಬೌಝಿ ಆಣೆಕಟ್ಟೆ ವಿನ್ಯಾಸಗೊಂಡಿತು. ಆರಂಭಿಕ ನಿರ್ಮಾಣದ ದಿನಗಳಿಂದಲೂ ಅದಕ್ಕೆ ಒಂದಲ್ಲ ಒಂದು ಬಗೆಯ ಸಂಕಟಗಳು ಎದುರಾಗಿದ್ದವು. 27 ಏಪ್ರಿಲ್ 1895 ರಲ್ಲಿ ಬೌಝಿ ಆಣೆಕಟ್ಟೆ ಕುಸಿಯಿತು. ಬೌಝಿ ಆಣೆಕಟ್ಟೆಯ ವಿನ್ಯಾಸವನ್ನು ನಂತರ ತಪಾಸಣೆಗೆ ಒಳಪಡಿಸಿದರು. ಇಅದರಿಂದ ವಿನ್ಯಾಸದಲ್ಲಿ ನೀರಿನ ಮೇಲೆತ್ತಿಕೆ ಬಲಗಳನ್ನು (Uplift) ಪರಿಗಣಿಸದಿರುವುದೇ ಆಣೆಕಟ್ಟೆಯ ಕುಸಿಯಲು ಕಾರಣವೆಂದು ತಿಳಿದುಬಂದಿತು. [4] ಬೌಝಿ ಆಣೆಕಟ್ಟೆ ಒಡೆದ ನಂತರ ಡಬ್ಲ್ಯು.ಸಿ.ಉನ್ವಿನ್ ಆಣೆಕಟ್ಟೆಯ ತತ್ತ್ವ ಮತ್ತು ಸೂತ್ರಗಳನ್ನು ಪ್ರತಿಪಾದಿಸುವ ಎಲ್ಲ ವಿಧಾನಗಳನ್ನು ತೌಲನಿಕ ಅಧ್ಯಯನ ನಡೆಸಿದನು. ಫ್ರೆಂಚ್ ಇಂಜಿನಿಯರ್’ಗಳಿಗಿಂತ ಮೊದಲು ಪ್ರತಿಪಾದಿಸಿದ್ದ ಎಲ್ಲ ವಿನ್ಯಾಸ ತತ್ತ್ವಗಳು ನೀರಿನ ತಳ್ಳಿಕೆ , ತಳದಿಂದ ಜಿನುಗುವಿಕೆಯನ್ನು ಪರಿಗಣಿಸಿ, ಆಣೆಕಟ್ಟೆ ಮುಂದಕ್ಕೆ ಜರುಗದಂತೆ (Non Sliding) , ಮುಂದಿನ ತುದಿಯ ಮೇಲೆ ಮುಗುಚದಂತೆ (Non Overturning) ಸುರಕ್ಷಿತವಾಗಿರಬೇಕೆಂದು ಪ್ರತಿಪಾದಿಸಿದ್ದವು. ಮಿತವ್ಯಯದ ಬೆನ್ನು ಹತ್ತಿದ್ದ ಫ್ರೆಂಚ್ ಇಂಜಿನಿಯರ್’ಗಳು ಆಣೆಕಟ್ಟೆಯ ಅಡಿ ಅಥವಾ ಯಾವುದೇ ಭಾಗದಿಂದ ಆಗಬಹುದಾದ ನೀರಿನ ಸೋರಿಕೆಯ ಬಲಗಳನ್ನು ನಿರ್ಲಕ್ಷಿಸಿದ್ದರು. ಇದರಿಂದಾಗಿ ನೀರಿನ ಮುಖದ ಕಡೆ ಎಳೆತದ ಒತ್ತಾಯಗಳಿದ್ದಾಗ ಕಲ್ಲು ಹಾಗೂ ಗಾರೆಯ ನಡುವೆ ಬಿರುಕು ಕಾಣಿಸಿಕೊಳ್ಳುತ್ತದೆ. ಈ ಬಿರುಕಿನ ಮೂಲಕ ಅಣೆಕಟ್ಟೆಯ ಕೆಳಗೆ ಒತ್ತಡದಲ್ಲಿರುವ ನೀರು ಇನ್ನು ಹೆಚ್ಚಿನ ಒತ್ತಾಯಗಳನ್ನು ತರುತ್ತದೆ. ಆಗ ಬಿರುಕುಗಳು ಅಗಲವಾಗುತ್ತಾ ಹೋಗಿ ಆಣೆಕಟ್ಟೆ ಸೀಳಿ ಒಡೆಯುತ್ತದೆ ಎಂದು ಉನ್ವಿನ್ ತೋರಿಸಿದನು. ಬೌಝಿ ಆಣೆಕಟ್ಟೆಯ ವಿಫಲವಾದ ನಂತರ ಅದೇ ವರ್ಷ ‘ಅಕಾಡೆಮಿ ಡೆ ಸೈನ್ಸಸ್ ‘ ಪತ್ರಿಕೆಯಲ್ಲಿ ‘ಕ್ಯುಯೆಲ್ಕ್ಯೂಸ್ ಕನ್ಸಿಡರೇಷನ್ಸ್ ಸುರ್ ಲ ಕನ್ಸ್,ಟ್ರಕ್ಷನ್ಸ್ ಡೆ ಗ್ರ್ಯಾಂಡ್ಸ್ ಬ್ಯಾರೆಜಸ್’ ಲೇಖನ ಪ್ರಕಟಿಸಿದ್ದ ಎಂ.ಲೆವಿ ಆಣೆಕಟ್ಟೆಯ ನೀರಿನ ಮುಖದ ಕಡೆ ಇರುವ ಪ್ರತಿ ಬಿಂದುವಿನಲ್ಲಿಯೂ ಇರುವ ಅದುಮಿಕೆಯ ಒತ್ತಾಯ (Compressive Stress) ಅಲ್ಲಿರುವ ನೀರಿನ ಒತ್ತಡಕ್ಕಿಂತ (Water Pressure) ಹೆಚ್ಚಿಗಿರಬೇಕು. ಇಲ್ಲದಿದ್ದರೆ ತಾಪಮಾನ , ಕುಗ್ಗಿಕೆ ಅಥವಾ ಬೇರೆ ಯಾವುದೇ ಕಾರಣಗಳಿಂದ ಬಿರುಕುಗಳಾದಾಗ ಅವುಗಳ ಒಳಗಡೆ ನೀರು ಸೋರಿ , ಎಳೆತದ ಒತ್ತಾಯಗಳು (Tensile Stresses) ಬಂದು ಆಣೆಕಟ್ಟೆಯ ಸುರಕ್ಷತೆ ಕುಸಿಯುತ್ತದೆ ಎಂದು ಎಚ್ಚರಿಸಿದ್ದನು. ಆಣೆಕಟ್ಟೆಯ ಕೆಳಗೆ ಇರಬಹುದಾದ ಮೇಲೆತ್ತಿಕೆ ಬಲಗಳ ವಿತರಣೆಯನ್ನು (Uplift Force Distribution) ಸೂಚಿಸಿ , ಅವುಗಳನ್ನು ಆಣೆಕಟ್ಟೆಯ ವಿನ್ಯಾಸದಲ್ಲಿ ಬಳಸಿಕೊಳ್ಳುವಂತೆ ಪ್ರತಿಪಾದಿಸಿದ್ದನು. (70) ಆಣೆಕಟ್ಟೆಯ ತಳಪಾಯದಲ್ಲಿನ ಮೇಲೆತ್ತಿಕೆ ಬಲಗಳನ್ನು ಪರಿಗಣಿಸಿ ವಿನ್ಯಾಸ ಮಾಡಿದರೆ ಆಣೆಕಟ್ಟೆಯ ಗಾತ್ರ ಸ್ಯಾಝಿಲ್,ಡೊಲೆಕ್ರೆ, ರಾಂಕಿನ್ ಸೂತ್ರಗಳಿಂದ ದಕ್ಕುವ ಗಾತ್ರಕ್ಕಿಂದ ಹಲವು ಪಟ್ಟು ಹೆಚ್ಚಿರುತ್ತದೆ. ಆದ್ದರಿಂದ ಆಣೆಕಟ್ಟೆಯ ತಳಪಾಯದ ಅಥವಾ ಮುಖದ ಮೂಲಕ ಸೋರುವ ನೀರನ್ನು ಹೊರಹಾಕಲು ಸೂಕ್ತವಾದ ನೀರು ಬಸಿಕೆ ದಾರಿಗಳನ್ನು ಆಣೆಕಟ್ಟೆಯಲ್ಲಿ ಒದಗಿಸಬೇಕೆಂದು ವಾದಿಸಿದ್ದರು. ಬೌಝಿ ಆಣೆಕಟ್ಟೆ ಕುಸಿಯುವ ಮೊದಲೇ ಇದನ್ನು ಮನಗಂಡಿದ್ದ ಟಿ.ಹೌಕ್ಸ್ಲೆ ಮತ್ತು ಜಿ.ಡಿಯೊಕೊನ್ ೧೮೮೨ ರಲ್ಲಿಯೇ ಲಿವರ್’ಪೂಲ್ ಸನಿಹ ಕಟ್ಟಿದ ವೈರ್ನ್’ವಿ ಆಣೆಕಟ್ಟೆಯಲ್ಲಿ ೦.೨೩/೦.೩ ಮೀ ಗಾತ್ರದ ೨೬ ಬಸಿಕೆ ಮಾರ್ಗಗಳನ್ನು ಆಣೆಕಟ್ಟೆಯ ಮೇಲ್ಮುಖದ ಸನಿಹ ಒದಗಿಸಿದ್ದರು. ೧೮೯೧ ರಲ್ಲಿ ಜರ್ಮನಿಯಲ್ಲಿ ನಿರ್ಮಾಣಗೊಂಡ ಎಷ್ಕೆನ್’ಬಾಖ್ ಆಣೆಕಟ್ಟೆಯ ವಿನ್ಯಾಸ ಮಾಡಿದ್ದ ಇಂಟ್ಝ್ ಆಣೆಕಟ್ಟೆಯ ಮೇಲ್ಮುಖದಲ್ಲಿ ನೀರು ಸೋರದಂತೆ ಜಲಾಭೇಧ್ಯ ಪದರ ಹಾಗೂ ಬಸಿಕೆಯ ಮಾರ್ಗಗಳನ್ನು ನಿರ್ಮಿಸಿದ್ದನು. ಇದನ್ನು ಅನುಸರಿಸ ಜರ್ಮನಿಯಲ್ಲಿ ಹಲವಾರು ಆಣೆಕಟ್ಟೆಗಳು ನಿರ್ಮಾಣಗೊಂಡವು. (70) ಭಾರತದಲ್ಲಿ ಸೇವೆ ಸಲ್ಲಿಸಲು ಬೇಕಾದ ಇಂಜಿನಿಯರ್’ಗಳ ಆಯ್ಕೆ ಮಾಡುವಾಗ ಇಂಗ್ಲೆಂಡ್’ನ ಚಾತಮ್’ನಲ್ಲಿದ್ದ ರಾಯಲ್ ಇಂಜಿನಿಯರ್ಸ್ ಸಂಸ್ಥೆಗೆ ಸೇರಿದವರಿಗೆ ಪ್ರಾಶಸ್ತ್ಯ ದಕ್ಕುತ್ತಿದ್ದಿತು. ಇದೇ ಸಂಸ್ಥೆಯ ಜಾರ್ಜ್ ಕೆನ್ನತ್ ಸ್ಕಾಟ್ ಮೊನ್’ಕ್ರೀಫ್ 1899ರಲ್ಲಿ ಭಾರತಕ್ಕೆ ಭೇಟಿ ನೀಡಿ ವರದಿಯೊಂದನ್ನು ತಯಾರಿಸಿದ್ದನು. ಈ ವರದಿ ರಾಯಲ್ ಇಂಜಿನಿಯರ್ಸ್ ಸಂಸ್ಥೆಯ ಸೇವೆಗೆ ಸೇರಿದ್ದ ಹೊಸಬ ಇಂಜಿನಿಯರುಗಳ ತರಬೇತಿಗಾಗಿ ಆತನೆ ರಚಿಸಿದ ‘ವಾಟರ್ ಸಪ್ಲೈ’ ಪಠ್ಯದ ಅನುಬಂಧವಾಗಿದ್ದಿತು. ಈತನ ‘ವಾಟರ್’ ಮತ್ತು ‘ಸ್ಟ್ರಕ್ಚರಲ್ ಅನ್ಯಾಲಿಸಿಸ್’ ಪುಸ್ತಕಗಳಲ್ಲಿಯೂ ಅಣೆಕಟ್ಟೆಯ ವಿನ್ಯಾಸ ಹಾಗೂ ರಾಂಕಿನ್ ತತ್ತ್ವಗಳು ಹಾಗೂ ಬೌಝಿ ಆಣೆಕಟ್ಟೆ ವಿನ್ಯಾಸದ ಕೊರತೆಗಳ ಚರ್ಚೆ ಸೇರಿದ್ದವು. ಆದ್ದರಿಂದ 20 ನೇಶತಮಾನದ ಆರಂಭದಲ್ಲಿ ಭಾರತಕ್ಕೆ ಬರುತ್ತಿದ್ದ ಬ್ರಿಟಿಷ್ ಇಂಜಿನಿಯರ್’ಗಳಿಗೆ ಆಣೆಕಟ್ಟೆಯ ವಿನ್ಯಾಸದ ಎಲ್ಲ ಮಗ್ಗುಲುಗಳು ತಿಳಿದಿರುತ್ತಿದ್ದವು. ಬೌಝಿ ಆಣೆಕಟ್ಟೆಯ ವೈಫಲ್ಯ , ಬೌವಿಯರ್ , ಉನ್ವಿನ್ ಹಾಗೂ ಪೆನ್ನಿಕುಯಿಕ್’ರವರ ಚರ್ಚೆಗಳನ್ನು ಅರಿತಿದ್ದ ಗಾರೆಟ್ 1906ರಲ್ಲಿ ರಾಜಸ್ಥಾನದ ಅಗರ್ ಅಣೆಕಟ್ಟೆಯನ್ನು ಹಲವು ಕಮಾನುಗಳ ವಿನ್ಯಾಸದಲ್ಲಿ ಮಾಡಿದಾಗ ಮೇಲೆತ್ತಿಕೆ ಬಲಗಳನ್ನು (Uplift Forces ) ಸಹ ಪರಿಗಣಿಸಿದ್ದನು. 1890ರ ವೇಳೆಗೆ ಭಾರತದಲ್ಲಿ ಭಾತ್’ಘರ್ ,ಭಗತ್’ಪುರ, ತಾನ್ಸಿ ಹಾಗೂ ಪೆರಿಯಾರ್ ಯೋಜನೆಯ ಅಂಗವಾಗಿ ಕೆಲ ದೊಡ್ಡ ಆಣೆಕಟ್ಟೆಗಳು ಯಶಸ್ವಿಯಾಗಿ ನಿರ್ಮಾಣಗೊಂಡಿದ್ದರೆ ಇನ್ನು ಕೆಲವು ನಿರ್ಮಾಣದ ಹಂತದಲ್ಲಿದ್ದವು. ಇವುಗಳೊಂದಿಗೆ ನೀರಾವರಿ ಇಂಜಿನಿಯರಿಂಗ್ ಚಟುವಟಿಕೆಗಳು ಹೆಚ್ಚು ಪ್ರಾಮುಖ್ಯತೆ ಗಳಿಸತೊಡಗಿದ್ದವು. ಇವುಗಳ ಅಧ್ಯಯನ ನಡೆಸಿ ಅಸಂಸಂಗಳ ನೀರಾವರಿ ಯೋಜನೆಗಳನ್ನು ರೂಪಿಸಲು ಅಗತ್ಯವಾದ ಅಂಶಗಳನ್ನು ಅರಿತುಕೊಳ್ಳಲು ಹರ್ಬರ್ಟ್.ಎಂ.ವಿಲ್ಸನ್’ನನ್ನು ಭಾರತಕ್ಕೆ ಕಳಿಸಲಾಯಿತು. ಆತ ಜನವರಿ 13 , 1890 ರಂದು ಬಾಂಬೆ ತಲುಪಿ 31 ಮಾರ್ಚ್’ವರೆಗೆ ಭಾರತದಾದ್ಯಂತ- ಈಗಿನ ಪಾಕಿಸ್ತಾನದ ಸಿಂಧ್ ಪ್ರದೇಶ ಸೇರಿದಂತೆ -ಸಂಚರಿಸಿ, ಎಲ್ಲ ಮುಖ್ಯ ನೀರಾವರಿ ಯೋಜನೆಗಳನ್ನು , ಆಣೆಕಟ್ಟೆಗಳನ್ನು ಸಂದರ್ಶಿಸಿ ಸಮಗ್ರ ವರದಿ ತಯಾರಿಸಿದನು. ಇದನ್ನು ‘ಡೈರೆಕ್ಟರ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೇ’ 1890-91ರಲ್ಲಿ ‘ಇರಿಗೇಷನ್ ವರ್ಕ್ಸ್ ಆಫ್ ಇಂಡಿಯಾ’ ಹೆಸರಿನಲ್ಲಿ ಭಾರತದಲ್ಲಿನ ನೀರಾವರಿ ಚಟುವಟಿಕೆಗಳ ಸಮಗ್ರ ಚಿತ್ರಣ ನೀಡುವ ಗ್ರಂಥವನ್ನು ಪ್ರಕಟಿಸಿತು. ಬಾಂಬೆಯಿಂದ ಅಸಂಸಂಗಳಿಗೆ ಹಿಂದಿರುಗುವ ಮಾರ್ಗದಲ್ಲಿ ಏಡೆನ್, ಈಜಿಪ್ತಿನ ‘ಬ್ಯಾರೇಜ್ ಡು ನೈಲ್’ ಆಣೆಕಟ್ಟೆಗಳ ನಿರ್ಮಾಣಗಳನ್ನು ವೀಕ್ಷಿಸಿದರು. ಈತ ಇಟಲಿ ಫ್ರಾನ್ಸ್’ನಲ್ಲಿನ ಹಲವಾರು ನೀರು ಸರಬರಾಜು ಮತ್ತು ನೀರಾವರಿ ಯೋಜನೆಗಳಿಗೆ ಭೇಟಿ ನೀಡಿ ಸಮಗ್ರ ವರದಿ ತಯಾರಿಸಿ ‘ಇರಿಗೇಷನ್ ಇನ್ ಇಂಡಿಯಾ’ ಹೆಸರಿನ ಸಮಗ್ರ ವರದಿ ತಯಾರಿಸಿದನು. ಇದು 1890-91ರಲ್ಲಿ ಪ್ರಕಟಗೊಂಡಿತು. ಭಾರತದ ನೀರಾವರಿ ಕ್ಷೇತ್ರದಲ್ಲಿ ಆದ ಹೊಸ ಬೆಳವಣಿಗೆಗಳನ್ನು ಒಳಗೊಂಡ ಎರಡನೆ ಆವೃತ್ತಿ 1902ರಲ್ಲಿ ಪ್ರಕಟಗೊಂಡಿತು. ಇದು ಹತ್ತೊಂಬತ್ತನೇ ಶತಮಾನದ ಕೊನೆಯ ಹಾಗೂ ಇಪ್ಪತ್ತನೇ ಶತಮಾನದ ಆರಂಭಿಕ ದಶಕಗಳಲ್ಲಿ ಭಾರತದಲ್ಲಿ ನಡೆಯುತ್ತಿದ್ದ ನೀರಾವರಿ ಇಂಜಿನಿಯರಿಂಗ್ ಚಟುವಟಿಕೆಗಳ ಸಮಗ್ರ ಚಿತ್ರಣ ನೀಡುತ್ತದೆ. 1899 ರಲ್ಲಿ ಎಡ್ಗರ್ ವೆಗ್’ಮನ್ ‘ ದಿ ಡಿಸೈನ್ ಅಂಡ್ ಕನ್ಸ್ಟ್ರಕ್ಷನ್ ಆಪ್ ಡ್ಯಾಮ್ಸ್ ಇನ್’ಕ್ಲೂಡಿಂಗ್ ಮೇಸನರಿ , ಅರ್ಥ್ ,ರಾಕ್’ಫಿಲ್ ಅಂಡ್ ಟಿಂಬರ್ ಸ್ಟ್ರಕ್ಚರ್ಸ್ ಆಲ್’ಸೋ ದಿ ಪ್ರಿನ್ಸಿಪಲ್ ಟೈಪ್ಸ್ ಆಫ್ ಮೂವಬಲ್ ಡ್ಯಾಮ್ಸ್’ ಪುಸ್ತಕವನ್ನು ಹೊರತಂದು ಆಣೆಕಟ್ಟೆಯ ವಿನ್ಯಾಸದ ಇತಿಹಾಸ ಹಾಗೂ ಸಮಕಾಲೀನ ರೂಢಿಗಳ ಸಮಗ್ರ ಪರಿಚಯಯವನ್ನು ಮಾಡಿದನು. ಇದು ಭಾರತಲ್ಲಿದ್ದ ಇಂಜಿನಿಯರ್’ಗಳು ಆಣೆಕಟ್ಟೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಲು ಒಂದು ಸಿದ್ಧ ಕೈಪಿಡಿಯಂತೆ ಸ್ಥಾನ ಗಿಟ್ಟಿಸಿತು. ಇವೆಲ್ಲ ಸಂಗತಿಗಳನ್ನು ಸಮಗ್ರವಾಗಿ ನೋಡಿದರೆ ಹತ್ತೊಂಬತ್ತನೇ ಶತಮಾನದ ವೇಳೆಗೆ ಭಾರತದಲ್ಲಿದ್ದ ಬ್ರಿಟಿಷ್ ಇಂಜಿನಿಯರ್’ಗಳಿಗೆ ಸುರಕ್ಷಿತ ಆಣೆಕಟ್ಟೆಗಳ ವಿನ್ಯಾಸದ ಎಲ್ಲ ಮಗ್ಗಲುಗಳು ತಿಳಿದಿದ್ದವೆನ್ನುವುದು ಸ್ಪಷ್ಟ. ಬಾಲದ ಸಮಸ್ಯೆ ಭಾರತದತ್ತ ಒಂದು ನೋಟ ಹರಿಸಿದರೆ ನೀರಾವರಿಗೆ ಒಳಗಾದ ಹಾಗೂ ಒಳಗಾಗದ ಪ್ರದೇಶಗಳ ನಡುವಿನ ವೈದೃಶ್ಯಗಳು ಎದ್ದು ಕಾಣುತ್ತವೆ. ಒಂದು ಕಡೆ ವಿಶಾಲವಾದ ನೆಲ್ಲು, ಕಬ್ಬು, ತೆಂಗು , ಬಾಳೆಗಳು ತಲೆದೂಗುತ್ತಿರುವ ಪ್ರದೇಶವಿದ್ದರೆ ಮತ್ತೊಂದು ಕಡೆ ಕಾದು ಹೆಂಚಾದ ನೆಲದಲ್ಲಿ ಸಜ್ಜೆ, ನವಣೆ, ಜೋಳ, ಸೂರ್ಯಕಾಂತಿಯಂತಹ ಒಣಬೆಳೆಗಳ ಪ್ರದೇಶ ಎದುರಾಗುತ್ತದೆ. ಬಹು ಹಿಂದಿನ ಕಾಲದಿಂದಲೂ ಭಾರತದಲ್ಲಿ ಕೆರೆಗಳ ಅಚ್ಚುಕಟ್ಟಿನಲ್ಲಿ ನೆಲ್ಲು, ಕಬ್ಬು ಮುಂತಾದ ಹೆಚ್ಚು ನೀರು ಬೇಡುವ ಹಸಿ ಬೆಳೆಗಳನ್ನು , ಉಳಿದ ಪ್ರದೇಶಗಳಲ್ಲಿ ಮಳೆ ಆಧಾರಿತ ಕಾಳು, ಹತ್ತಿ ಮುಂತಾದ ಕಡಿಮೆ ನೀರು ಬೇಡುವ ಒಣಬೆಳೆಗಳನ್ನು ಬೆಳೆಯಲಾಗುತ್ತಿದ್ದಿತು. ಬ್ರಿಟಿಷ್ ಆಡಳಿತ ಕಾಲದಲ್ಲಿ ಈ ಸಾಂಪ್ರದಾಯಿಕ ಪದ್ದತಿಯನ್ನು ತೊರೆದು ಬರಗಾಲದ ವಿರುದ್ಧದ ಸಂರಕ್ಷಣೆಯ ತಂತ್ರವಾಗಿ ಒಣ ಬೆಳೆಗಳನ್ನು ಬೆಳೆಯುವ ವಿಶಾಲ ಪ್ರದೇಶಗಳಿಗೆ ನೀರನ್ನು ಒದಗಿಸಲು ಯೋಜಿಸಲಾಯಿತು. ಬ್ರಿಟಿಷ್ ಹಾಗೂ ಸ್ವತಂತ್ರ ಭಾರತದಲ್ಲಿ ನೀರಾವರಿ ಪ್ರದೇಶ ಹೆಚ್ಚಿಸಿ ಇತರ ಚಟುವಟಿಕೆಗಳಿಗೆ ನೀರನ್ನು ಒದಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೂರಾರು ಯೋಜನೆಗಳನ್ನು ಕಾರ್ಯಗತಗೊಳಿಸಿವೆ. ಅದರಂತೆಯೇ ನೂರಾರು ಯೋಜನೆಗಳು ಅನುಷ್ಠಾನಕ್ಕೆ ಕಾದಿವೆ. ಆದರೂ ನೀರಿನ ಸಮಸ್ಯೆಗಳು ದಿನದಿಂದ ದಿನಕ್ಕೆ ಜಟಿಲವಾಗುತ್ತಿವೆ. ಕೃಷಿ ಪ್ರದೇಶಕ್ಕೆ ನೀರು ಪಡೆಯುವ ವಿಚಾರದಲ್ಲಿ ರಾಜ್ಯಗಳ ನಡುವೆ ಸುದೀರ್ಘ ಕಾಲದಿಂದ ವ್ಯಾಜ್ಯಗಳು ಸಾಗಿವೆ. ಈ ಸಮಸ್ಯೆಯ ಮೂಲ ದೊಡ್ಡ ಗಾತ್ರದ ಆಣೆಕಟ್ಟೆಗಳ ನಿರ್ಮಾಣದೊಂದಿಗೆ ಮೊಳಕೆಯೊಡೆದು ಬೆಳೆದು ನಿಂತಿದೆ. ಭಾರತದ ಯಾವ ನೀರಾವರಿ ಯೋಜನೆಯೂ ವಿನ್ಯಾಸಗೊಂಡ ಪ್ರದೇಶಕ್ಕೆ ನಿಗದಿತ ಪ್ರಮಾಣದ ನೀರನ್ನು ಒದಗಿಸುವಲ್ಲಿ ಯಶಸ್ವಿಯಾಗಿಲ್ಲ. ಬಹುತೇಕ ನೀರಾವರಿ ಯೋಜನೆಗಳಲ್ಲಿ ವಿಸ್ತೃತ ಯೋಜನಾ ವರದಿಯಲ್ಲಿ DPR-Detail Project Report) ದಾಖಲಾದ ಅರ್ಧಕ್ಕಿಂತಲೂ ಕಡಿಮೆ ಪ್ರದೇಶಕ್ಕೆ ಮಾತ್ರ ಸರಿಯಾದ ಕಾಲದಲ್ಲಿ , ಸೂಕ್ತ ಪ್ರಮಾಣದ ನೀರನ್ನು ಒದಗಿಸುವುದು ಸಾಧ್ಯವಾಗಿದೆ. ಇದಕ್ಕೆ ಪರಿಹಾರವಾಗಿ ಇಂಜಿನಿಯರುಗಳು ನೀರಿನ ಸೋರಿಕೆ ತಡೆಗಟ್ಟಲು ಕಾಲುವೆಗಳಿಗೆ ಕಾಂಕ್ರೀಟ್ ಲೈನಿಂಗ್ ಬೇಕೆಂದು ಹಾಗೂ ನೀರಿನ ನಿರ್ವಹಣೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ ಅಧಿಕಾರಿಗಳ ಉಸ್ತುವಾರಿ ಸೀಮಿತಗೊಳಿಸಿ , ನೀರಿನ ಸರಿಯಾದ ನಿರ್ವಹಣೆಗೆ ಜನರನ್ನು ತಯಾರುಗೊಳಿಸಿಬೇಕು ಎಂದು ವಾದಿಸಿದ್ದಾರೆ. ನೀರಿನ ಹಂಚಿಕೆ , ನಿರ್ವಹಣೆಯ ಸಮಸ್ಯೆಗಳಿಗೆ ಅದರದ್ದೇ ಆದ ಇತಿಹಾಸವಿದೆ. 1857 ರ ಸ್ವಾತಂತ್ರ ಸಂಗ್ರಾಮದ ನಂತರ ಭಾರತದಲ್ಲಿ ಬ್ರಿಟಿಷರ ಪಾತ್ರ ವ್ಯಾಪಾರ , ವಹಿವಾಟುಗಳನ್ನು ಮೀರಿ ಬೆಳೆದಿದ್ದಿತು. ಇದರ ಫಲಿತಾಂಶವಾಗಿ ಅವರು ಆಡಳಿತ ಸುಧಾರಿಸುವ , ಬರ ಎದುರಿಸುವ ಅದರೊಂದಿಗೆ ನೀರಾವರಿ ಯೋಜನೆಗಳನ್ನು ಪರಿಗಣಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿದರು. ಬರ ಪರಿಹಾರ ಮತ್ತು ನೀರಾವರಿ ದೊಡ್ಡ ಪ್ರಮಾಣದ ಬಂಡವಾಳ ಮತ್ತು ದೀರ್ಘ ಕಾಲೀನ ಯೋಜನೆಯನ್ನು ಒಳಗೊಂಡಿರುವುದರಿಂದ ಆರ್ಥಿಕ ಲೆಕ್ಕಾಚಾರಗಳು ಸಹಜವಾಗಿ ಅದರಲ್ಲಿ ಸೇರಿಕೊಂಡಿರುತ್ತವೆ. ಬ್ರಿಟಿಷರು ನೀರಾವರಿ ಯೋಜನೆಗಳ ಮೇಲೆ ಬಂಡವಾಳ ಹೂಡಿದರೆ ಅದರಿಂದ ಹಿಂದಿರುಗಬಹುದಾದ ಬಡ್ಡಿ ದರವನ್ನು ಲೆಕ್ಕ ಹಾಕುತ್ತಿದ್ದರು. ಈ ಬಡ್ಡಿ ದರ ಒಪ್ಪಿದಂತಹ ಮಟ್ಟದಲ್ಲಿದ್ದರೆ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ಗಂಗಾ ಯಮುನಾ ನದಿ ಕಣಿವೆಯಲ್ಲಿ ಈ ಬಡ್ಡಿದರ ಸಾಕಷ್ಟು ಅನುಕೂಲಕರವಾಗಿತ್ತಾದರೂ ಇತರ ಕಡೆಗಳಲ್ಲಿ ಅದು ಆಕರ್ಷಕವಾಗಿರಲಿಲ್ಲ. 1860-1870ರ ದಶಕದಲ್ಲಿ ಬಂದ ಭಾರಿ ಬರಗಾಲಗಳು ಬ್ರಿಟಿಷರ ಬೇರೆ ರೀತಿಯಲ್ಲಿ ಚಿಂತಿಸುವಂತೆ ಮಾಡಿದವು. ದಕ್ಷಿಣ ಭಾರತದಲ್ಲಿ ನೀರಾವರಿ ಯೋಜನೆಗಳ ಮೇಲೆ ಹೂಡಿದ ಬಂಡವಾಳದ ಮೇಲೆ ಬರುವ ಬಡ್ಡಿ ಅಲ್ಪವಾಗಿದ್ದರೂ ಬರಗಾಲದಲ್ಲಿ ಜನರ ಮೇಲೆ ವ್ಯಯಿಸಬೇಕಾದ ಹಣದ ಮೊತ್ತಕ್ಕೆ ಹೋಲಿಸಿದರೆ ಮೊದಲನೆಯದೇ ಸೂಕ್ತ ಎಂದು ತೋರಿಬಂದಿತು. ಇದು ಬ್ರಿಟಿಷರು ದೊಡ್ಡ ಆಣೆಕಟ್ಟೆಗಳ ಮೂಲಕ ನೀರು ಸಂಗ್ರಹಿಸಿ, ನೀರಾವರಿಗೆ ಒತ್ತು ಕೊಡಲು ಕಾರಣವಾಯಿತು. ದೊಡ್ಡ ಗಾತ್ರದ, ಭಾರಿ ವೆಚ್ಚದ ನೀರಾವರಿ ಯೋಜನೆಗಳು ಯಾವಾಗಲೂ ಅಂದಾಜಿಸಿದಂತೆಯೇ ಸಾಗುತ್ತಿರಲಿಲ್ಲ. ಆರ್ಥರ್ ಕಾಟನ್ ದಕ್ಷಿಣ ಭಾರತದ ನದಿಗಳಿಗೆ ಅಡ್ಡಲಾಗಿ ಆಣೆಕಟ್ಟೆಗಳನ್ನು ಕಟ್ಟಿ ನೀರಾವರಿ ಹಾಗೂ ನೌಕಾ ಪ್ರಯಾಣಕ್ಕೆ ಅನುಕೂಲಕರವಾದ ಕಾಲುವೆಗಳನ್ನು ನಿರ್ಮಿಸಬೇಕೆಂದು ಕರೆಯಿತ್ತನು. ಇದು ರೈಲ್ವೇ ಮಾರ್ಗಕ್ಕಿಂತ ಹೆಚ್ಚು ಅನುಕೂಲಕರ ಎನ್ನುವುದು ಆತನ ಅಭಿಪ್ರಾಯವಾಗಿದ್ದಿತು. ಆರ್ಥರ್ ಕಾಟನ್ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ 1858ರಲ್ಲಿ ಕರ್ನೂಲು-ಕಡಪಾ ಕಾಲುವೆಯ ಕೆಲಸ ಪ್ರಾರಂಭವಾಯಿತು. ಕರ್ನೂಲಿನ ಬಳಿ ತುಂಗಭದ್ರಾ ನದಿ ಅಡ್ಡಗಟ್ಟೆ ಕಟ್ಟಿ ಅಲ್ಲಿಂದ 420 ಕಿ. ಮೀ ದೂರದ ಕಡಪದ ಪೆನ್ನಾರ್ ನದಿಯತ್ತ ನೀರನ್ನು ಒಯ್ಯುವ ಯೋಜನೆಯಿದು. ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಆರ್ಥರ್ ಕಾಟನ್ ಮುಂದಾಳತ್ವದಲ್ಲಿ ‘ಮದ್ರಾಸ್ ಇರಿಗೇಷನ್ ಕಂಪನಿ’ ಹೆಸರಿನ ಖಾಸಗಿ ಕಂಪನಿ ಮುಂದೆ ಬಂದಿತು. ಇದಕ್ಕಾಗಿ ಸರ್ಕಾರದ ಭರವಸೆಯೊಂದಿಗೆ ಇಂಗ್ಲೆಂಡ್’ನಲ್ಲಿ ಸಾರ್ವಜನಿಕರಿಂದ 1 ಮಿಲಿಯನ್ ಪೌಂಡ್ ಬಂಡವಾಳವನ್ನು 30% ಹಿಂದುರುಗಿಕೆಯ ಭರವಸೆಯ ಮೇಲೆ ಸಂಗ್ರಹಿಸಿತು. 1860 ವೇಳೆಗೆ ಈ ಕಂಪನಿ ಕೆಲಸ ಪೂರ್ತಿಗೊಳಿಸಲಾಗದೆ ದಿವಾಳಿ ಎದ್ದಿತು. ಇದರಿಂದ ಬ್ರಿಟಿಷ್ ಪಾರ್ಲಿಮೆಂಟ್ ಇಂತಹ ಯೋಜನೆಗಳ ಬಗ್ಗೆ ಕಟ್ಟೆಚ್ಚರ ವಹಿಸತೊಡಗಿತು. ಮದ್ರಾಸ್ ಸರ್ಕಾರ ಈ ವಿಫಲಗೊಂಡ ಯೋಜನೆಯ ಜವಾಬ್ದಾರಿ ಹೊರಬೇಕಾಯಿತು. ಅದಕ್ಕೆ ತಗುಲಿದ ವೆಚ್ಚ, ಬಡ್ಡಿಯನ್ನು ರೈತರಿಗೆ ನೀರು ಒದಗಿಸುವುದರಿಂದ ಪಡೆಯಲು ಸಾಧ್ಯವೇ ಇರಲಿಲ್ಲ. ಗ್ರಾಂಡ್ ಅಣೆಕಟ್ಟೆ ಕಟ್ಟಿದ ನಂತರ ಮದ್ರಾಸ್ ಸರ್ಕಾರ ರೈತರಿಗೆ ಮೊದಲ ಐದು ವರ್ಷ ಉಚಿತವಾಗಿ, ನಂತರ ಐದು ವರ್ಷ ಅರ್ಧ ಬೆಲೆಯಲ್ಲಿ ನೀರನ್ನು ಒದಗಿಸುವುದಾಗಿ ಹೇಳಿದರೂ ರೈತರು ಅದಕ್ಕೆ ಮರುಳಾಗಿರಲಿಲ್ಲ. ದೊಡ್ಡ ಹಿಡುವಳಿದಾರರು ಹಣಕೊಟ್ಟು ನೀರನ್ನು ಪಡೆದು ಹಸಿ ಬೆಳೆಗಳನ್ನು ಬೆಳೆಯುವುದಕ್ಕಿಂತ ಸಾಂಪ್ರದಾಯಿಕವಾದ ಒಣ ಬೆಳೆಗಳೇ ಹೆಚ್ಚಿಗೆ ಲಾಭಕರ ಎಂದು ಭಾವಿಸಿದ್ದರು. ಸಣ್ಣ ಹಿಡುವಳಿದಾರರಿಗೆ ಈ ನೀರಾವರಿ ಯೋಜನೆಗೆಳು ಅಪ್ರಸ್ತುತವಾಗಿದ್ದವು. ಇದರಿಂದ ಬ್ರಿಟಿಷ್ ಸರ್ಕಾರಕ್ಕೆ ತಮ್ಮ ಯೋಜನೆಗಳಲ್ಲಿ ರೈತರು ನಿಜವಾಗಿಯೂ ಭಾಗಿಗಳಾಗುವರೇ ಎಂಬ ಬಗ್ಗೆ ಸಂಶಯಗಳೆದ್ದಿದ್ದವು. ನೀರಾವರಿ ಯೋಜನೆಗಳು ಯಶಸ್ವಿಯಾಗುತ್ತವೆ ಎನಿಸಿದ ಮೇಲೆ 1879ರ ನಂತರ ಸರ್ಕಾರ ತಾನಾಗಿಯೇ ಹಲವಾರು ಅಣೆಕಟ್ಟೆ ಮತ್ತು ಕಾಲುವೆಗಳನ್ನು ನಿರ್ಮಿಸತೊಡಗಿದರು. ತಾಂತ್ರಿಕ , ಸಾಮಾಜಿಕ, ಆರ್ಥಿಕ ದೃಷ್ಟಿಯಿಂದ ಅತಿ ಹೆಚ್ಚಿನ ಪ್ರದೇಶಕ್ಕೆ ಅತಿ ಹೆಚ್ಚಿನ ಜನರಿಗೆ ನೀರನ್ನು ಒದಗಿಸುವುದೇ ನೀರಾವರಿ ನೀತಿಯ ತಳಗಟ್ಟೆಂದು ಭಾವಿಸಲಾಗಿದೆಯಾದರೂ ಇದು ವಾಸ್ತವದಲ್ಲಿ ನಿಜವಾಗಿಲ್ಲ. ಬ್ರಿಟಿಷರ ಆಡಳಿತ ಕಾಲದಿಂದಲೂ ಸರಕಾರದ ನೀತಿ, ನಿಯಮ, ಕಟ್ಟಳೆ, ಆರ್ಥಿಕ ಚಿಂತನೆ, ತಾಂತ್ರಿಕ ಸಲಹೆಗಳು ಏನೇ ಇರಲಿ ಕಾಲುವೆಯ ಮೇಲ್ಭಾಗದಲ್ಲಿರುವ ಪ್ರಬಲ ರೈತರು ಹಸಿಬೆಳೆಗೆ ಮುಗಿದುಬೀಳುತ್ತಿರುವುದು ಮತ್ತು ಕಾಲುವೆಯ ಕೆಳಭಾಗದ ನೀರಿನ ಕೊರತೆಯಿಂದ ತತ್ತರಿಸುತ್ತಿರುವುದು ಸ್ಪಷ್ಟವಾಗಿದೆ. (೫,೨೫). ಇಂತಹ ಪರಿಸ್ಥಿತಿ ಏಕೆ ಮತ್ತು ಹೇಗೆ ಕಾಣಿಸಿಕೊಂಡಿತು ಎನ್ನುವುದಕ್ಕೆ ಉತ್ತರ ನೀರಾವರಿ ಯೋಜನೆಗಳ ನಿರ್ವಹಣೆಯಲ್ಲಿಯೇ ಹುದುಗಿಕೊಂಡಿದೆ. ಯಾವುದೇ ನೀರಾವರಿ ಯೋಜನೆಯ ಹಿನ್ನೆಲೆಯಲ್ಲಿ ಭಾರಿ ಆರ್ಥಿಕ ಹೊರೆ ಇರುತ್ತದೆ. ಈ ಆರ್ಥಿಕ ಹೊರೆಯನ್ನು ಹಗುರಗೊಳಿಸಿಕೊಳ್ಳಬೇಕೆಂದರೆ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ತೆರಿಗೆ ರೂಪದಲ್ಲಿ ರೈತರಿಗೆ ಮಾರಾಟ ಮಾಡಬೇಕಾಗುತ್ತದೆ. ನೀರಿನ ಮಾರಾಟದ ಪ್ರಮಾಣ ಬೆಳೆ, ಮಣ್ಣಿನ ಗುಣದ ಮೇಲೆ ಅವಲಂಬಿತವಾಗಿರುತ್ತದೆ. ರೈತರು ನೀರನ್ನು ಬಳಸುವ ಪ್ರಮಾಣದ ಮೇಲೆ ಅವರಿಗೆ ತೆರಿಗೆ ಹಾಕಬೇಕೆ ಅಥವಾ ಅವರು ಬೆಳೆದ ಬೆಳೆ ಹಾಗೂ ಅದರ ವಿಸ್ತೀರ್ಣದ ಆಧಾರದ ಮೇಲೆ ತೆರಿಗೆ ಹಾಕಬೇಕೆ ಎಂದು ನಿರ್ಧರಿಸುವುದು ಸುಲಭ ಸಾಧ್ಯವಾದುದಲ್ಲ. ಪ್ರತಿ ಪ್ರದೇಶ ಅಥವಾ ರೈತ ಎಷ್ಟು ನೀರನ್ನು ಬಳಸುತ್ತಾನೆಂದು ನಿರ್ಧರಿಸುವುದು ಅತ್ಯಂತ ಕಠಿಣ ಕೆಲಸ. ಅದಕ್ಕಾಗಿ ಬೆಳೆಯ ಸ್ವರೂಪ ಹಾಗೂ ವಿಸ್ತೀರ್ಣದ ಆಧಾರದ ಮೇಲೆ ತೆರಿಗೆ ಹಾಕುವ ಪದ್ದತಿಯನ್ನು ಬ್ರಿಟಿಷರು ಜಾರಿಗೆ ತಂದರು. (5) ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಎಲ್ಲರಿಗೂ ಸೂಕ್ತ ಪ್ರಮಾಣದ ನೀರನ್ನು , ಸಕಾಲದಲ್ಲಿ ಒದಗಿಸಬೇಕೆನ್ನುವುದು ಯಾವುದೇ ಯೋಜನೆಯ ಉದ್ದೇಶವಾದರೂ ಅದನ್ನು ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭವಲ್ಲ. 1874 ರಲ್ಲಿ ಮುಠಾ ಹಾಗೂ 1885 ರಲ್ಲಿ ನೀರಾ ಎಡದಂಡೆ ಕಾಲುವೆಗಳು ನೀರು ಒದಗಿಸಲು ಪ್ರಾರಂಭಿಸಿದವು. ಖಡಕವಾಸಲ ಅಣೆಕಟ್ಟೆಯಿಂದ 75000 ಎಕರೆಗೆ ನೀರಾವರಿ ಒದಗಿಸಲು ಅಂದಾಜಿಸಲಾಗಿದ್ದಿತು. 1890ರಲ್ಲಿ ಅದರ ಹತ್ತನೇ ಒಂದು ಭಾಗದಷ್ಟು ಮಾತ್ರ ನೀರಾವರಿಗೆ ಒಳಪಟ್ಟಿದ್ದಿತು. ಅಣೆಕಟ್ಟೆ ಕಟ್ಟಿ, ಕಾಲುವೆಗಳನ್ನು ಮಾಡಿದ 30 ವರ್ಷಗಳ ನಂತರವೂ ಯೋಜನೆಯಲ್ಲಿರುವ 30% ಭೂಮಿಯನ್ನು ಕೂಡ ನೀರಾವರಿಗೆ ಒಳಪಡಿಸಲು ಆಗಿರಲಿಲ್ಲ. ಇದಕ್ಕೆ ಅದರದೇ ಆದ ಕಾರಣಗಳಿದ್ದವು. ರೈತರು ಯಾವಾಗಲೂ ಕಾಲುವೆಯ ನೀರನ್ನು ಕೇಳುತ್ತಿರಲಿಲ್ಲ. ಬರಗಾಲದಲ್ಲಿ ಜೋಳ, ರಾಗಿಯಂತಹ ಒಣ ಬೆಳೆಗಳನ್ನು ಉಳಿಸಿಕೊಳ್ಳಲು ಮಾತ್ರ ರೈತರು ನೀರನ್ನು ತೆರಿಗೆ ಕೊಟ್ಟು ಪಡೆಯುತ್ತಿದ್ದರೇ ಹೊರತು, ಕಾಲುವೆ ನೀರು ಹೆಚ್ಚಿಗೆ ದೊರೆಯುತ್ತದೆ ಎನ್ನುವ ಕಾರಣದಿಂದ ನೀರಾವರಿಗೆ ಒಳಪಡಿಸಿ ಜಮೀನನ್ನು ವಿಸ್ತರಿಸಿಕೊಳ್ಳುತ್ತಿರಲಿಲ್ಲ. ಅಚ್ಚುಕಟ್ಟಿನ ಪ್ರದೇಶದಲ್ಲಿ ಕಪ್ಪು ಎರೆಮಣ್ಣಿನ ಭೂಮಿ ಅಧಿಕವಾಗಿದ್ದು ಅದು ಬಹು ದೀರ್ಘ ಕಾಲ ನೀರಿನ ಪಸೆಯನ್ನು ಉಳಿಸಿಕೊಳ್ಳುತ್ತದೆ. ಅಲ್ಪ ಪ್ರಮಾಣದಲ್ಲಿ ಮಳೆ ಬಂದರೂ ಒಣಬೆಳೆಗಳನ್ನು ಬೆಳೆಯಬಹುದು. ಇದರಿಂದ ರೈತರು ಕೊನೆಯ ಗಳಿಗೆಯವರೆಗೂ ಮಳೆಗಾಗಿ ಕಾಯುವುದರಿಂದ ಕಾಲುವೆ ನೀರಿಗೆ ಬೇಡಿಕೆ ಇರದು. ಮಳೆ ಬರಬಾರದೆಂದು ಗೊತ್ತಾದ ಅಂತಿಮ ಕ್ಷಣದಲ್ಲಿ ಹೊಲಗಳಿಗೆ ಕಾಲುವೆ ನೀರು ಹರಿಸಲು ರೈತರು ತರಾತುರಿಯಲ್ಲಿ ಮುಂದಾಗುತ್ತಿರುವುದನ್ನು ಗುರುತಿಸಲಾಗಿದ್ದಿತು. ಇದರೊಂದಿಗೆ ಇನ್ನೊಂದು ಅಗೋಚರ ಕಾರಣವೂ ಸೇರಿದ್ದಿತು. ಒಳ್ಳೆಯ ಮಳೆ ಬಂದ ವರ್ಷ ಜಲಾಶಯಗಳು ತುಂಬಿರುತ್ತವೆ. ಒಣಬೆಳೆಗಳಿಗೆ ಜಲಾಶಯದ ನೀರು ಬೇಕಿರುವುದಿಲ್ಲ. ಫಸಲು ಚೆನ್ನಾಗಿ ಬಂದು , ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹ ಹೆಚ್ಚಿ ಬೆಲೆ ಕುಸಿದಿರುತ್ತದೆ. ಇದರಿಂದ ತೆರಿಗೆ ಕಟ್ಟಿ ನೀರನ್ನು ಪಡೆಯುವುದು ಲಾಭದಾಯಕವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ತೆರಿಗೆ ಕಟ್ಟಿ ನೀರನ್ನು ಪಡೆಯಲು ಒಣಬೆಳೆ ಪ್ರದೇಶದ ರೈತರು ಮುಂದಾಗುವುದಿಲ್ಲ. ಒಣಬೆಳೆಯ ರೈತರು ಮಳೆ ಕೈಕೊಟ್ಟಾಗ ಪೂರಕ ಪ್ರಮಾಣದ ನೀರಿಗೆ ಮಾತ್ರ ತೆರಿಗೆ ಕಟ್ಟಲು ಸಿದ್ದರಿದ್ದರೇ ಹೊರತು ಬೆಳೆದ ಬೆಳೆ ಹಾಗೂ ಪ್ರದೇಶವನ್ನು ಪರಿಗಣನೆಗೆ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಇಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆನ್ನುವುದು ಬ್ರಿಟಿಷರಿಗೆ ತಿಳಿಯದಂತಾಯಿತು. (5,25 ). ಕೆಲ ರೈತರು ಹೇಗಾದರೂ ನೀರಿಗೆ ತೆರಿಗೆ ಕೊಡಬೇಕು. ಅದ್ದರಿಂದ ಒಣ ಬೆಳೆಗಳ ಬದಲು ಅಧಿಕ ಬೆಲೆಯಿರುವ ಹಸಿ ಬೆಳೆಗಳನ್ನು ಬೆಳೆದರಾಯಿತು. ಎನ್ನುವ ನಿಲುವು ತಳೆದಿದ್ದರು. ಇದು ಅಧಿಕ ಜಾಗಕ್ಕೆ ನೀರು ಒದಗಿಸುವ, ಬರದಿಂದ ರಕ್ಷಣೆ ಒದಗಿಸುವ ಮೂಲ ಉದ್ದೇಶಕ್ಕೆ ಧಕ್ಕೆ ತಂದು ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡುವ ಅನಿವಾರ್ಯ ಪರಿಸ್ಥಿತಿಗೆ ಬದಲಾಗತೊಡಗಿತು. ನೀರಾ ಕಾಲುವೆ ಪ್ರಾರಂಭವಾದ ನಂತರ ಸ್ಥಳೀಯ ರೈತರು ತೆರಿಗೆ ನೀಡಿ ನೀರನ್ನು ಪಡೆಯಲು ಮುಂದಾಗುತ್ತಿರಲಿಲ್ಲ. ಇದನ್ನು ಕಂಡ ಸಾಸ್ವಾಡ ಪ್ರದೇಶದ ಮಾಲಿಗಳು ಅಚ್ಚುಕಟ್ಟಿನ ಪ್ರದೇಶಕ್ಕೆ ಬಂದು ಗೇಣಿಯ ಆಧಾರದ ಮೇಲೆ ರೈತರಿಂದ ಜಮೀನು ಪಡೆದು , ನೀರಿನ ತೆರಿಗೆ ಕಟ್ಟಿ ಅಧಿಕ ನೀರು ಬೇಡುವ ಕಬ್ಬನ್ನು ಬೆಳೆಯಲು ಮುಂದಾದರು. ಸ್ಥಳೀಯ ರೈತರಿಗೆ ಸಾಸ್ವಾಡದ ಮಾಲಿಗಳಿಗೆ ಕಬ್ಬು ಬೆಳೆಯಲು ಭೂಮಿಯನ್ನು ಕೊಟ್ಟು ಗುತ್ತಿಗೆ ಪಡೆಯುವುದು ತೆರಿಗೆ ನೀಡಿ ಕಾಲುವೆ ನೀರು ಪಡೆದು , ಫಸಲು ಗಿಟ್ಟಿಸಿಕೊಂಡು ಮಾರಿ ಲಾಭ ಪಡೆಯುವುದಕ್ಕಿಂತ ಆಕರ್ಷಕವಾಗಿ ಕಂಡಿದ್ದಿತು. ಕಾಲುವೆಯ ನೀರಾವರಿಗೆ ಒಳಪಟ್ಟ ಆದರೆ ರೈತರು ತೆರಿಗೆ ನೀಡಿ ನೀರು ಪಡೆಯಲು ಇಚ್ಛಿಸದಿದ್ದ ಸಾಕಷ್ಟು ಭೂಮಿ ಮಾಲಿಗಳಿಗೆ ಸುಲಭವಾಗಿ ಗುತ್ತಿಗೆಗೆ ಸಿಗತೊಡಗಿತು. ಸಾಕಷ್ಟು ನೀರು ದಕ್ಕಿದರೆ ಕಾಳು, ಕಡಿ , ತರಕಾರಿಗಳನ್ನು ಬೆಳೆಯುವುದಕ್ಕಿಂತ ಕಬ್ಬು ಬೆಳೆಯುವುದು ಸುಲಭ. ಕಬ್ಬಿನಿಂದ ಕಂದು ಸಕ್ಕರೆ , ಬೆಲ್ಲ ತಯಾರಿಸಿದರೆ ಕಾಳು ಅಥವಾ ತರಕಾರಿಯಂತೆ ತಕ್ಷಣ ಮಾರುವ ಅಗತ್ಯವಿಲ್ಲ. ಉತ್ತಮ ಬೆಲೆ ಬರುವವರೆಗೆ ಕಾಯಬಹುದು. ಆದ್ದರಿಂದ ಮಾಲಿಗಳು ನೀರಾ ಕಾಲುವೆಯ ಅಚ್ಚುಕಟ್ಟಿನಲ್ಲಿ ಭಾರಿ ಭೂಮಿಯನ್ನು ಗುತ್ತಿಗೆ ಪಡೆದು ಕಬ್ಬು ಬೆಳೆಯತೊಡಗಿದರು. ಅದಕ್ಕಾಗಿ ನೀರಿಗೆ ತೆರಿಗೆ ನೀಡಲು ಸಿದ್ಧರಿದ್ದರು. ಇದರಿಂದ ನೀರಿಗೆ ಬೆಲೆ ಸಿಕ್ಕಿ ಯೋಜನೆಗಳ ಮೇಲೆ ಹಾಕಿದ ಬಂಡವಾಳ ಹಿಂದಿರುಗುವ ಭರವಸೆ ಬ್ರಿಟಿಷರಿಗೆ ದಕ್ಕಿತು. ಇದರ ಪರಿಣಾಮವಾಗಿ 1890 ರ ವೇಳೆಗೆ ಕಬ್ಬು ಬೆಳೆಯಲು ಅವಕಾಶ ನೀಡಿದರೆ ಹಣವನ್ನು ಹಿಂದಕ್ಕೆ ಪಡೆಯುವುದು ಸಾಧ್ಯ ಎನ್ನುವ ಸಂದೇಶ ಸರ್ಕಾರಕ್ಕೆ ತಲುಪಿತು. ನೀರು ಹಂಚಿಕೆಯ ಸಮಸ್ಯೆಗಳು ಬಲಾಢ್ಯ ರೈತರು ಒಣಬೆಳೆಗಳ ಬದಲು ಹಸಿಬೆಳೆಗಳಿಗೆ ಬದಲಾಗಿರುವಲ್ಲಿಗೆ ಮಾತ್ರ ಸೀಮಿತವಾಗಿಲ್ಲ. ಹಸಿಬೆಳೆಗಳಿಗೆ ಕಡಿವಾಣ ಹಾಕಿ , ವಿಶಾಲ ಪ್ರದೇಶದಲ್ಲಿ ಒಣಬೆಳೆಗಳಿಗೆ ಮಾತ್ರ ಅವಕಾಶ ನೀಡಬೇಕೆನ್ನುವ ತತ್ತ್ವಕ್ಕೆ ಅದರದೇ ಆದ ವಾಸ್ತವಿಕ ಅಡಚಣೆಗಳಿವೆ. ಮಾಲಿಗಳನ್ನು ಅನುಸರಿಸಿ ಸ್ಥಳೀಯ ಮರಾಠ , ಬ್ರಾಹ್ಮಣ ಹಾಗೂ ಇತರ ಭೂಮಾಲಿಕರು ಕಾಲುವೆ ನೀರಿನಿಂದ ಕಬ್ಬನ್ನು ಬೆಳೆಯುವುದೇ ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದರು. ಇದರ ಪರಿಣಾಮಗಳು ವಿಚಿತ್ರ ತಿರುವು ಪಡೆದವು. ಯಾರಿಗಾಗಿ , ಯಾವ ಉದ್ದೇಶಕ್ಕಾಗಿ ಅಣೆಕಟ್ಟೆ ಕಟ್ಟಿ , ಕಾಲುವೆಗಳ ಮೂಲಕ ನೀರನ್ನು ಒದಗಿಸಲಾಗಿದ್ದಿತೋ ಅವರು ತೆರಿಗೆ ಕೊಟ್ಟು ನೀರನ್ನು ಪಡೆಯಲು ಎಲ್ಲ ಕಾಲದಲ್ಲೂ ಉತ್ಸುಕರಾಗಿರುತ್ತಿರಲಿಲ್ಲ. ಯಾವ ಬೆಳೆಯನ್ನು ನಿಯಂತ್ರಿಸಬೇಕೆಂದಿದ್ದರೋ (ಹಸಿಬೆಳೆ) ಅದನ್ನು ಬೆಳೆಯುವವರು ಯಾವಾಗಲೂ ಹಣಕೊಟ್ಟು ನೀರನ್ನು ಖರೀದಿಸಲು ತಯಾರಿದ್ದರು. ಇದರಿಂದ ಹಸಿಬೆಳೆಗೆ ನೀರನ್ನು ಒದಗಿಸಿ ಯೋಜನೆಯ ವೆಚ್ಚಗಳನ್ನು, ಬಡ್ಡಿಯನ್ನು ಹಿಂಪಡೆಯಬೇಕೇ ? ಅಥವಾ ಯೋಜನೆಯಂತೆ ಬರಗಾಲದ ರಕ್ಷಣೆಗಾಗಿ ವಿಶಾಲವಾದ ಒಣಬೆಳೆ ಪ್ರದೇಶಗಳಿಗೆ ಅವಶ್ಯಕತೆಯುಂಟಾದಾಗ ನೀರನ್ನು ಒದಗಿಸಲು ಮಾತ್ರ ಜಲಾಶಯಗಳನ್ನು ತುಂಬಿರಿಸಿಕೊಳ್ಳಬೇಕೆ ಎಂಬ ತಾಕಲಾಟ ಬ್ರಿಟಿಷ್ ಆಡಳಿತಗಾರರಿಗೆ ಎದುರಾಯಿತು. ಬೇಕಾದಾಗ ಮಾತ್ರ ನೀರನ್ನು ಪಡೆಯುವ ಒಣಬೆಳೆಗಾರ ಹಾಗೂ ಯಾವಾಗಲೂ ತೆರಿಗೆ ನೀಡಲು ಸಿದ್ಧನಿರುವ ಹಸಿಬೆಳೆಗಾರ ಯಾರ ಪರವಾಗಿ ನಿಲ್ಲುವುದು ಎನ್ನುವ ತಾಕಲಾಟ, ಆರ್ಥಿಕ ಲೆಕ್ಕಾಚಾರಗಳು ಹಸಿಬೆಳೆಗಾರನತ್ತ ಒಲವು ತೋರುವಂತೆ ಮಾಡಿದವು. ಇದಕ್ಕೆ ಪರಿಹಾರವಾಗಿ ಅಧಿಕ ನೀರು ಬೇಡುವ ನೆಲ್ಲು, ಕಬ್ಬು ಮುಂತಾದ ಹಸಿಬೆಳೆಗಳಿಗೆ ಅನುಮತಿಕೊಟ್ಟು ತೆರಿಗೆ ಪಡೆಯತೊಡಗಿದರು. ಇದು ಕಾಲುವೆಗಳ ಮೇಲ್ಭಾಗದ ಪ್ರದೇಶದ ರೈತರು ಹಸಿಬೆಳೆಗಳನ್ನು ಬೆಳೆಯುವುದನ್ನು ಪ್ರೊತ್ಸಾಹಿಸಿತಲ್ಲದೆ, ಅದು ಅವರ ಹಕ್ಕಾಗಿ ಪರಿಗಣಿತವಾಯಿತು. ಮಳೆ ಬಾರದೆ ವರ್ಷಗಳಲ್ಲಿ ಇದು ನಿಜಕ್ಕೂ ಸಂಕಟಮಯ ಪರಿಸ್ಥಿತಿಗೆ ಕಾರಣವಾಯಿತು. ಇದರ ಪರಿಣಾಮವಾಗಿ 1890 ರಲ್ಲಿ ಬರಗಾಲ ಬಂದಾಗ ಕಾಲುವೆಯ ಮೇಲ್ಭಾಗದಲ್ಲಿ ಕಬ್ಬು, ನೆಲ್ಲು ಬೆಳೆಯುತ್ತಿದ್ದರೆ, ಕೆಳಭಾಗದ ರೈತರು ಬರ ಪರಿಹಾರ ಶಿಬಿರಗಳಲ್ಲಿದ್ದರು. ಬರಗಾಲ ಬಂದಾಗ 2 ಲಕ್ಷ ಪ್ರದೇಶದ ಒಣಬೆಳೆಗೆ ನೀರು ಒದಗಿಸುವುದೇ ನೀರಾ ಕಾಲುವೆಯ ಗುರಿಯಾಗಿದ್ದಿತು. ಆದರೆ 1890ರ ವೇಳೆಗೆ ಅಲ್ಲಿ ಕಬ್ಬು ಪ್ರಾಶ್ಯಸ್ತ್ಯದ ಬೆಳೆಯಾಗಿದ್ದಿತು. ನಂತರದ ವರ್ಷ ಪ್ಲೇಗ್ ಹಾವಳಿ ಕಾಣಿಸಿಕೊಂಡು ಕಬ್ಬಿನ ಗದ್ದೆಯಲ್ಲಿ ದುಡಿಯಲು ಆಳುಗಳು ಸಿಗದಂತಾದರು. ಇದರಿಂದಾಗಿ ಕಬ್ಬಿನ ಪ್ರಾಶಸ್ತ್ಯ ಇಳಿಯತೊಡಗಿತು. 1898-1900ರ ಅವಧಿಯಲ್ಲಿ ಮಳೆಯ ಕೊರತೆಯಿಂದಾಗಿ ಕಬ್ಬು ಬೆಳೆಯುವುದನ್ನೇ ನಿಲ್ಲಿಸಲಾಯಿತು. 1902 ರಲ್ಲಿ ಉತ್ತಮ ಮಳೆಯಾಗಿ ಕಾಲುವೆಯಿಂದ ನೀರನ್ನು ಪಡೆಯುತ್ತಿದ್ದ ಒಣಬೆಳೆಯ ಪ್ರದೇಶ 17000ರಿಂದ 3000 ಎಕರೆಗೆ ಇಳಿದು ತೆರಿಗೆ ಸಂಗ್ರಹ ಕುಸಿಯಿತು. ಮತ್ತೊಮ್ಮೆ ಕಬ್ಬಿಗೆ ನೀರು ಒದಗಿಸುವುದು ಪ್ರಾರಂಭವಾಯಿತು. ಕಬ್ಬಿನ ಬೆಳೆಗೆ ಅವಕಾಶ ಮಾಡಿದ್ದರಿಂದ ಸಾಧಾರಣ ಹಾಗೂ ಕಡಿಮೆ ಮಳೆ ದಿನಗಳಲ್ಲಿ ಕಾಲುವೆಯ ಕೆಳಭಾಗದಲ್ಲಿ ನೀರಿನ ಕೊರತೆ ಕಾಡಲಾರಂಭಿಸಿತು. ಒಣಬೆಳೆಗಳೊಂದಿಗೆ ಹಸಿಬೆಳೆಗಳನ್ನು ಬೆಳೆಯಲು ಅವಕಾಶ ನೀಡಿದ್ದರಿಂದ ನೀರಿನ ಹಂಚಿಕೆಯ ಸಮಸ್ಯೆ ಬೇರೆಯದೇ ಆದ ರೂಪ ತಾಳತೊಡಗಿತು. ಕಾಲುವೆಯ ಮೇಲ್ಬಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಸಾಂಪ್ರದಾಯಿಕ ಒಣಬೆಳೆಯ ಪ್ರದೇಶದಲ್ಲೂ ರೈತರು ಹಸಿಬೆಳೆಗಳತ್ತ ವಾಲುವಂತೆ ಮಾಡಿತು. ಇದರ ಪರಿಣಾಮವಾಗಿ ಕಾಲುವೆಯ ಕೆಳಭಾಗದ ರೈತರು ನೀರಿಲ್ಲದೆ ಪರದಾಡುವಂತಾಯಿತು. ಬರಗಾಲದಲ್ಲಿ ಒಣಬೆಳೆಯ ಪ್ರದೇಶದ ರೈತರು ತೆರಿಗೆ ಕಟ್ಟಿ ನೀರನ್ನು ಪಡೆಯಲು ತಯಾರಿದ್ದರೂ, ಹಸಿಬೆಳೆಯ ರೈತರು ಬರಗಾಲದ ಸಮಯದಲ್ಲೂ ಮಳೆ ಸಮೃದ್ದಿಯ ದಿನಗಳಂತೆ ನೀರನ್ನು ಒದಗಿಸಬೇಕೆಂಬ ನಿರೀಕ್ಷೆಗಳನ್ನು ಹೊಂದಿದ್ದರು. ದನಗಳಿಗೆ ಬೇಕಾದ ಒಣಹುಲ್ಲಿನ ಬೆಲೆ ಕಬ್ಬಿಗಿಂತ ಹೆಚ್ಚಿಗಿದ್ದರೂ ಹಸಿಬೆಳೆಗೆ ನೀರನ್ನು ಒದಗಿಸುವ ಅನಿವಾರ್ಯತೆ ಎದುರಾಗಿದ್ದಿತು. ಹಸಿಬೆಳೆಗಾರರಿಗೆ ಬರಗಾಲದಲ್ಲಿ ನೀರನ್ನು ಒದಗಿಸದಿದ್ದರೆ, ಅವರು ನೀರಾವರಿ ಯೋಜನೆಗಳನ್ನು ನಂಬದೆ, ಹಸಿಬೆಳೆಗಳನ್ನು ಕೈ ಬಿಡುತ್ತಿದ್ದರು. ಆಗ ಸಮೃದ್ದಿಯ ದಿನಗಳಲ್ಲಿ ಸಂಗ್ರಹವಾದ ನೀರನ್ನು ಯಾರಿಗೆ ಒದಗಿಸಬೇಕು ? ಅಣೆಕಟ್ಟೆಯ ಆರ್ಥಿಕ ಹೊರೆಯನ್ನು ಹೇಗೆ ನಿವಾರಿಸಬೇಕೆಂಬ ತೊಡಕು ಎದುರಾಯಿತು. ಇದು ಬಹು ಜಟಿಲವಾದ ಸಮಸ್ಯೆಯಾಗಿ ಬದಲಾಯಿತು. ನೀರಾ ಯೋಜನೆಯ ಎಲ್ಲ ಕಾಲುವೆಗಳು ಪುರ್ಣಗೊಳ್ಳದಿದ್ದ ಸಂದರ್ಭದಲ್ಲಿ ಕಬ್ಬಿನ ಬೆಳೆಗೆ ಸುಲಭವಾಗಿ ನೀರು ದಕ್ಕುತ್ತಿದ್ದಿತು. ಮುಂದಿನ ದಿನಗಳಲ್ಲಿ 6 ಕ್ಕೂ ಹೆಚ್ಚು ವಿತರಣಾ ಕಾಲುವೆಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಕಬ್ಬಿಗೆ ಬೇಕಾದ ನೀರನ್ನು ಒದಗಿಸುವುದು ದುಸ್ತರವಾಗತೊಡಗಿತು. ಇದಕ್ಕೆ ಪರಿಹಾರ ಹುಡುಕಲು ಇಂಡಿಯನ್ ಇರಿಗೇಷನ್ ಕಮಿಷನ್ ಹಲವು ನೀರಾವರಿ ವೃತ್ತಗಳ ಅಭಿಪ್ರಾಯ ಕೇಳಿತು. ಇದಕ್ಕೆ ಪರಿಹಾರವಾಗಿ ಎಂ.ವಿಯವರು ಕಟ್ಟು ಪದ್ದತಿಯನ್ನು ಸೂಚಿಸಿದರು. ಮುಂದಿನ ದಿನಗಳಲ್ಲಿ ಅಹ್ಮದ್ ನಗರ , ನಾಸಿಕ್ , ಸತಾರ , ಸೊಲ್ಲಾಪುರ ಪ್ರದೇಶಗಳಲ್ಲಿ ಹೊಸ ನೀರಾವರಿ ಯೋಜನೆಗಳು ಜಾರಿಗೊಂಡವು. ಸಾಸ್ವಾಡ ಮಾಲಿಗಳು ಕಬ್ಬು ಬೆಳೆದು ಲಾಭ ಗಳಿಸುವುದನ್ನು ಕಂಡಿದ್ದ ಸ್ಥಳೀಯ ರೈತರು ಗುತ್ತಿಗೆ ದರವನ್ನು ಹೆಚ್ಚಿಸಿದರು. ಇದರಿಂದ ಗದ್ದೆಗಳ ಮಾರುಕಟ್ಟೆಯ ಮೌಲ್ಯವೂ ಹೆಚ್ಚಿತು. ಇದಕ್ಕೆ ಉತ್ತರವಾಗಿ ಮಾಲಿಗಳು ಹೊಸದಾಗಿ ನಿರ್ಮಾಣಗೊಂಡ ಕಾಲುವೆ ಪ್ರದೇಶಗಳತ್ತ ಹೋಗಿ ಅಲ್ಲಿಯೂ ಕಡಿಮೆ ದರದಲ್ಲಿ ಗುತ್ತಿಗೆ ಪಡೆದು ಕಬ್ಬು ಬೆಳೆಯತೊಡಗಿದರು. ಕಾಲಾನುಕ್ರಮದಲ್ಲಿ ಅಲ್ಲಿಯೂ ನೀರಾ ಅಚ್ಚುಕಟ್ಟು ಪ್ರದೇಶದಲ್ಲಿ ಎದುರಾದಂತಹ ಸನ್ನಿವೇಶಗಳೇ ಮರುಕಳಿಸಿದವು. ಇಂತಹ ಸ್ಥಿತಿಯನ್ನು ಎದುರಿಸಲು ಫೈಫ್ ಸೊಲ್ಲಾಪುರದ ಹತ್ತಿರ ನಿರ್ಮಾಣಗೊಂಡ ಅಣೆಕಟ್ಟೆಯ ಕಾಲುವೆಗೆ ನೀರು ಬಿಡುವ ತೂಬುಗಳನ್ನು ವಿವಿಧ ಎತ್ತರದಲ್ಲಿರಿಸಿದ್ದನು. ಎಲ್ಲಕ್ಕಿಂತ ಎತ್ತರವಿರುವ ತೂಬುಗಳು ಹಸಿಬೆಳೆಗೆ , ಕೆಳಭಾಗದ ತೂಬುಗಳು ಒಣಬೆಳೆಗೆ ಸೀಮಿತವಾಗಿದ್ದವು. ಯೋಜನೆಯ ಪ್ರಕಾರ ಒಣಬೆಳೆಗಳಿಗೆ ನೀರು ಒದಗಿಸಲು ಮಾಡಿದ ಕಾಲುವೆಗಳು ಹಸಿ ಬೆಳೆಗೆ ಮಾಡಿದ ಕಾಲುವೆಗಳ ಮೂರರಷ್ಟು ಉದ್ದವಿರುತ್ತಿದ್ದವು. ಒಣಬೆಳೆ ಪ್ರದೇಶಗಳು ಮಳೆ ಬಾರದ ಬರಗಾಲದಲ್ಲಿ ಮಾತ್ರ ನೀರನ್ನು ಕೇಳಿದರೆ ಹಸಿ ಬೆಳೆಗಳು ಯಾವಾಗಲೂ ನೀರನ್ನು ಕೇಳುತ್ತಿದ್ದವು. ಒಣ ಬೆಳೆಗಳನ್ನು ನಂಬಿ ನೀರನ್ನು ಉಳಿಸಿಕೊಂಡರೆ, ಬಂಡವಾಳ ಹಿಂಪಡೆಯಲು ಸಾಧ್ಯವಿಲ್ಲ. ಹಸಿ ಬೆಳೆಗಳಿಗೆ ನೀರಿನ ಭರವಸೆ ನೀಡದೆ ತೆರಿಗೆ ನೀಡುವ ಮೂಲವನ್ನು ಖಚಿತಪಡಿಸಿಕೊಳ್ಳಲು ಆಗದು. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಒಣ ಬೆಳೆಗಳಿಗೆ ಬೇಕಾದಷ್ಟು ಉದ್ದದ ಕಾಲುವೆಗಳನ್ನು ನಿರ್ಮಿಸಿ , ಒಣಬೆಳೆಗಳಿಗೆ ನೀರು ಬೇಕಿಲ್ಲದಾಗ ಹಸಿಬೆಳೆಗಳಿಗೆ ನೀರು ಒದಗಿಸುವುದು ಎನ್ನುವ ತರ್ಕಕ್ಕೆ ಬರಲಾಯಿತು. ಆದರೆ ಅಂತಿಮದಲ್ಲಿ ಫೈಫ್ ಯೋಜನೆಯೂ ಬುಡಮೇಲಾಗಿ ಹಸಿ ಬೆಳೆಗಳು ಹೆಚ್ಚಿನ ನೀರನ್ನು ಬಳಸಿ ಕೆಳಭಾಗದ ಒಣ ಬೆಳೆಗಳಿಗೆ ನೀರಿಲ್ಲದಂತಾಯಿತು. ಭಾರತ ಸ್ವತಂತ್ರವಾಗಿ ನೂರಾರು ದೊಡ್ಡ ಆಣೆಕಟ್ಟೆಗಳನ್ನು ಕಟ್ಟಿದ ನಂತರ ಕಾಲುವೆ ಕೆಳಭಾಗದ ಸಮಸ್ಯೆ ಬೇರೆಯದೇ ಆದ ಸ್ವರೂಪ ಪಡೆಯತೊಡಗಿತು. ಒಣಬೆಳೆಗಳಿಗೆ ನೀರು ಒದಗಿಸಲು ನಿರ್ಮಿಸಿದ ಕಾಲುವೆ ಮೇಲ್ಭಾಗದಲ್ಲಿ ಬಲಾಢ್ಯ ರೈತರು ವಾಣಿಜ್ಯ ಪ್ರಾಶಸ್ತ್ಯದ ಹಸಿ ಬೆಳೆಗಳನ್ನು ಯಾವ ಎಗ್ಗಿಲ್ಲದೆ ಬೆಳೆಯತೊಡಗಿದರು. ಭಾರತದಲ್ಲಿ ಸ್ಥಾಪಿತವಾಗಿರುವ ಪಕ್ಷ ಆಧಾರಿತ ಚುನಾವಣಾ ರಾಜಕೀಯ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಂತಹ ಅಕ್ರಮ ಪದ್ದತಿಗೆ ಕಡಿವಾಣ ಹಾಕುವಲ್ಲಿ ಸೋತಿತು. ಇದರ ಪರಿಣಾಮವಾಗಿ ಭಾರತದ ಎಲ್ಲ ನೀರಾವರಿ ಯೋಜನೆಗಳಲ್ಲಿಯೂ ಕೆಳಭಾಗದ ಕಾಲುವೆಗಳಲ್ಲಿ ನೀರಿನ ಕೊರತೆಯ ಸಮಸ್ಯೆ ತೀವ್ರ ಸ್ವರೂಪ ತಳೆಯಿತು. [1] 1866 ಕ್ಕೆ ಮೊದಲು ಫ್ರಾನ್ಸ್’ನಲ್ಲಿ 47 ಎತ್ತರದ ಆಣೆಕಟ್ಟೆಗಳನ್ನು ಯಾವುದೇ ವೈಜ್ಞಾನಿಕ ಹಿನ್ನೆಲೆಯಿಲ್ಲದೆ ಕಟ್ಟಲಾಗಿದ್ದಿತು [2] ಖಡಕವಾಸಲಾ ಆಣೆಕಟ್ಟೆಯ (ಲೇಕ್ ಫೈಫ್) ಯ ಕೋಡಿಗೆ 2775 ಘನ ಮೀ /ಸೆಕೆಂಡ್ ಪ್ರವಾಹ ಹರಿಸುವ ಸಾಮರ್ಥ್ಯವಿದ್ದಿತು. 1961 ರಲ್ಲಿ ಇದರ ಮೇಲ್ಭಾಗದಲ್ಲಿ ಕಟ್ಟಿದ ಷ್ಯಾನ್’ಷೆಟ್ (ತಾನಾಜಿ ಸಾಗರ) ಆಣೆಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡು ನಂತರ ಒಡೆದು ಹೋಗಿ ಅದರ ಜಲಾಶಯದಲ್ಲಿದ್ದ ಅಪಾರ ಪ್ರಮಾಣದ ನೀರು ಖಡಕವಾಸಲದತ್ತ ಹರಿಯಿತು. ಹೆಚ್ಚಿನ ಪ್ರವಾಹವನ್ನು ಸಾಗಿಸುವ ಸಾಮರ್ಥ್ಯವಿಲ್ಲದೆ ಖಡಕವಾಸಲ ಅಣೆಕಟ್ಟಿನ ಕೋಡಿಯ ಮೇಲೆ ನೀರು ಹರಿದು ಖಡಕವಾಸಲ ಆಣೆಕಟ್ಟೆ ಕುಸಿಯಿತು. [3] 1877ರಲ್ಲಿ ಮದ್ರಾಸ್ ಪ್ರಾಂತದಲ್ಲಿ ತೀವ್ರ ಬರಗಾಲ ಬಂದಿತು. ಲಕ್ಷಾಂತರ ಜನರಿಗೆ ಅನ್ನ ಒದಗಿಸುವ ಹೊರೆ ಬ್ರಿಟಿಷ್ ಸರ್ಕಾರದ ಮೇಲೆ ಬಿದ್ದಿತು. ಸ್ಥಳೀಯರು ಬರದ ನೆಪದಲ್ಲಿ ಸರ್ಕಾರಕ್ಕೆ ಹೊರೆಯಾಗುತ್ತಿರುವರೆಂದು ಭಾವಿಸಿದ ಕೆಲವರು (ಲಾರ್ಡ್ ವೈಟನ್) ಬರಗಾಲದ ಸಮಯದಲ್ಲಿ ಪುಕ್ಕಟೆ ಆಹಾರ ನೀಡದೆ, ಅಣೆಕಟ್ಟೆಗಳ ನಿರ್ಮಾಣದಲ್ಲಿ ಜನರನ್ನು ಬಳಸಿಕೊಂಡು ಅವರಿಗೆ ಗಂಜಿ/ ಕೂಲಿಯ ಮುಖಾಂತರ ನೆರವು ನೀಡಬೇಕೆಂದು ಪ್ರತಿಪಾದಿಸಿದನು. ಫೈಫ್ 1869 ರಲ್ಲಿ ಸೊಲ್ಲಾಪುರದ ಸನಿಹ ಆಷ್ತಿ ಅಣೆಕಟ್ಟೆಯ ಯೋಜನೆ ಸಿದ್ದಪಡಿಸಿದ್ದನಾದರೂ 1878ರಲ್ಲಿ ಬರಗಾಲ ಬರುವವರೆಗೆ ಇದರ ನಿರ್ಮಾಣವನ್ನು ತಡೆಹಿಡಿದು, ಬರ ಪರಿಹಾರ ಕಾಮಗಾರಿಗಾಗಿ 19000 ಜನ ಕೂಲಿ ಆಳುಗಳನ್ನು ಬಳಸಿಕೊಂಡು ಆಣೆಕಟ್ಟೆ ಪ್ರಾರಂಭವಾಯಿತು. ಬರ ಮುಗಿದ ನಂತರ ಜೈಲಿನ ಸೆರೆಯಾಳುಗಳನ್ನು ಇದಕ್ಕೆ ಬಳಸಲಾಯಿತು. [4] 1886 ರಲ್ಲಿ ತಾನ್ಸಾ ಆಣೆಕಟ್ಟೆಯ ನಿರ್ಮಾಣದ ಸಮಯದಲ್ಲಿ ಬುನಾದಿ ಮಟ್ಟದಲ್ಲಿರುವ ಕಲ್ಲಿನ ಬಿರುಕುಗಳ ಮೂಲಕ ಸೋರಿಕೆಯಿಂದಾಗುವ ಮೇಲೆತ್ತಿಕೆ ಬಲಗಳನ್ನು ನಿರ್ಧರಿಸಲು ಪ್ರಯತ್ನಿಸಲಾಗಿದ್ದಿತು. [1] 1960ರಲ್ಲಿ ಗೋದಾವರಿ ಪ್ರವಾಹದ ಒಡೆತಕ್ಕೆ ಇದು ತತ್ತರಿಸಿತು. ಇದಕ್ಕೆ ಪರಿಹಾರವಾಗಿ ಇದರ ಮೇಲ್ಭಾಗದಲ್ಲಿ ಕಾಂಕ್ರೀಟ್ ಕೋಡಿಕಟ್ಟಿ ನಿರ್ಮಿಸಲಾಯಿತು. (11) [2] ಈ ಆಣೆಕಟ್ಟೆಯಿಂದ ನಿರ್ಮಾಣಗೊಂಡ ಜಲಾಶಯವನ್ನು ಫೈಫ್ ಸರೋವರ ಎಂದು ಹೆಸರಿಸಲಾಯಿತು. ಸ್ವಾತಂತ್ರ ಬಂದ ನಂತರ ಇದನ್ನು ಖಡಕವಾಸಲ ಸರೋವರ ಎಂದು ಹೆಸರಾಯಿತು. [3] ಪೆರಿಯಾರ್ ನದಿಯಲ್ಲಿ ನೆರೆ ಬಂದಾಗ ಅದರಲ್ಲಿನ ಹರಿವಿನ ಪ್ರಮಾಣ ನಯಾಗಾರ ನದಿಯ ಸಾಧಾರಣ ಹರಿವಿನ ಅರ್ಧದಷ್ಟಿರುತ್ತಿದ್ದಿತು. ಇದರಿಂದಾಗಿ ಆಣೆಕಟ್ಟೆಯ ಬುನಾದಿ ಮೇಲಿಂದ ಮೇಲೆ ಕೊಚ್ಚಿ ಹೊಗುತ್ತಿದ್ದಿತು. ಈ ಹಂತದಲ್ಲಿ ಬ್ರಿಟಿಷ್ ಸರ್ಕಾರ ಆರ್ಥಿಕ ನೆರವನ್ನು ನಿಲ್ಲಿಸಿತು. ಆಗ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡವು. ಚಲ ಬಿಡದ ಪೆನ್ನಿಕುಯಿಕ್ ಎರಡನೇ ಬಾರಿ ಆಣೆಕಟ್ಟೆಯ ನಿರ್ಮಾಣ ಪ್ರಾರಂಬಿಸಿದನು. ಇದಕ್ಕೆ ಬ್ರಿಟಿಷ್ ಸರ್ಕಾರದ ನೆರವು ಸಿಗಲಿಲ್ಲ. ಇದರಿಂದ ಪೆನ್ನಿಕುಯಿಕ್ ಖಿನ್ನತೆಗೆ ಒಳಗಾಗಿದ್ದನು. ಇದನ್ನು ಕಂಡ ಆತನ ಹೆಂಡತಿ ಗ್ರೇಸ್ ಜಿಯೋರ್ಜಿಯಾನ ಷಾಮಿಯರ್ ತನ್ನ ಒಡವೆ ಮತ್ತು ಸ್ವಂತ ವಸ್ತುಗಳನ್ನು ಮಾರಿ ಆಣೆಕಟ್ಟೆಯ ನಿರ್ಮಾಣಕ್ಕೆ ಆರಂಭಿಕ ಬಂಡವಾಳ ಒದಗಿಸಿ ಗಂಡನಿಗೆ ಬೆಂಬಲವಿತ್ತಳು. ಪೆರಿಯಾರ್ ಆಣೆಕಟ್ಟೆಯನ್ನು ಕಟ್ಟಲೇ ಬೇಕೆಂಬ ದೃಢ ಸಂಕಲ್ಪ ಮಾಡಿದ್ದ ಪೆನ್ನಿಕುಯಿಕ್ ಮದ್ರಾಸ್ ಪ್ರಾಂತದಲ್ಲಿ ತನಗಿದ್ದ ಸಂಪರ್ಕ ಮತ್ತು ಪ್ರಭಾವಗಳನ್ನು ಬಳಸಿ ಖಾಸಗಿಯಾಗಿ ಬಂಡವಾಳ ಸಂಗ್ರಹಿಸಿಲು ಯತ್ನಿಸಿದನು. ಇದರಿಂದಲೂ ಆಣೆಕಟ್ಟೆಯ ನಿರ್ಮಾಣಕ್ಕೆ ಬೇಕಾದಷ್ಟು ಹಣ ಸಂಗ್ರಹವಾಗಲಿಲ್ಲ. ಎದೆಗುಂದದ ಪೆನ್ನಿಕುಯಿಕ್ ಮತ್ತು ಆತನ ಹೆಂಡತಿ ಇಂಗ್ಲೆಡ್’ನಲ್ಲಿದ್ದ ತಮ್ಮ ಕುಟುಂಬದ ಆಸ್ತಿಯನು ಮಾರಿದರು. ಅಂತಿಮವಾಗಿ 45 ಲಕ್ಷ ಬಂಡವಾಳ ಸಂಗ್ರಹಿಸಿಸಲು ಯಶಸ್ವಿಯಾದರು. ಮುಂದಿನ ದಿನಗಳಲ್ಲಿ ಅವರು ಆಣೆಕಟ್ಟೆಯ ನಿರ್ಮಾಣಕ್ಕೆ ಹಾಕಿದ ಖಾಸಗಿ ಹಣವನ್ನು ಹಿಂದಿರುಗಿಸಲಾಯಿತು ಎನ್ನುವ ವರದಿಗಳಿವೆ. ಕೇರಳದ ಇತಿಹಾಸಕಾರ ಎಂ.ಜಿ.ಎಸ್ ನಾರಾಯಣನ್ ಪೆನ್ನಿಕುಯಿಕ್ ಪೆರಿಯಾರ್ ಆಣೆಕಟ್ಟೆ ನಿರ್ಮಾಣ ಮಾಡಲು ಇಂಗ್ಲೆಂಡ್’ನಲ್ಲಿದ್ದ ತನ್ನ ಆಸ್ತಿಯನ್ನು ಮಾರಿದ್ದನು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಅವೆಲ್ಲ ಜನಜನಿತ್ತ ಐತಿಹ್ಯಗಳಷ್ಟೇ ಎಂದಿದ್ದಾರೆ. ಪೆನ್ನಿಕುಯಿಕ್ ಕ್ರಿಕೆಟ್ ಪಟು ಮತ್ತು ಪ್ರೇಮಿಯಾಗಿದ್ದು ಭಾರತದಲ್ಲಿ ಕ್ರಿಕೆಟ್ ಆಟ ಬೇರೂರುವಂತೆ ಮಾಡಲು ಯತ್ನಿಸಿದ್ದನು. ಕ್ರಿಕೆಟ್’ನಲ್ಲಿ ಆಲ್ ರೌಂಡರ್ ಆಗಿದ್ದ ಪೆನ್ನಿಕುಯಿಕ್ ಬೆಂಗಳೂರು ಮತ್ತು ಮದ್ರಾಸ್ ಕ್ಲಬ್’ಗಳ ಪರವಾಗಿ ಆಡುತ್ತಿದ್ದನಲ್ಲದೆ ಚೆಪಾಕ್’ನಲ್ಲಿದ್ದ ಮದ್ರಾಸ್ ಕ್ರಿಕೆಟ್ ಕ್ಲಬ್’ನ ಕಾರ್ಯದರ್ಶಿಯಾಗಿದ್ದನು. [4] ಸುಕ್ಕೂರು ಎಂದು ಕನ್ನಡದಲ್ಲಿ ಬರೆಯಲಾಗುತ್ತಿದೆಯಾದಾರೂ ಈ ಪದದ ಸರಿಯಾದ ಉಚ್ಛಾರ ಏನೆಂದು ಸ್ಪಷ್ಟವಿಲ್ಲ. ಸಿಂದಿಯಲ್ಲಿ ಇದನ್ನು ಸ್ಥಳೀಯರು ‘ಸಖರ್’ ಎಂದು ಕರೆಯುತ್ತಾರೆ. 3. ಭಾಗ್ಯಶಿಲ್ಪಿಯ ವೃತಿ ಜೀವನ ಸರ್ ಎಂ.ವಿ ಯವರು ಬರೆದ ‘ಮೆಮೊಯಿರ್ಸ್ ಆಫ್ ಮೈ ವರ್ಕಿಂಗ್ ಲೈಫ್ ‘ (ನನ್ನ ವೃತ್ತಿ ಜೀವನದ ನೆನಪುಗಳು) ಆಧಾರದ ಮೇಲೆ ಅವರ ವೃತಿ ಜೀವನದ ಮೈಲಿಗಲ್ಲುಗಳನ್ನು ಹೀಗೆ ಪಟ್ಟಿ ಮಾಡಬಹುದು. (1) (1) ಮಾರ್ಚ್ , 1884- ಸಹಾಯಕ ಇಂಜಿನಿಯರ್ , ಲೋಕೋಪಯೋಗಿ ಇಲಾಖೆ , ನಾಸಿಕ್ - ವೃತ್ತಿ ಜೀವನದ ಪ್ರಾರಂಭ (2) ಧುಲಿಯಾ ಉಪ ವಿಭಾಗಕ್ಕೆ ವರ್ಗಾವಣೆ - -ನೀರಾವರಿ ಕಾಲುವೆಗಳ ನಿರ್ವಹಣೆ ಮತ್ತು ದುರಸ್ತಿ . ನಾಲೆಗಳ ತಲೆ ಕೆಲಸಗಳು.(Head Works) -ಧುಲಿಯಾದಿಂದ 56 ಕಿ.ಮೀ ದೂರದ ಧಾವಾರ್ಥಿ ಹಳ್ಳಿಗೆ ನೀರು ಸಾಗಿಸುವ ಕಾಲುವೆ ನಿರ್ಮಾಣ. - ಬಾಂಕ್ರಾನದಿಯ ಉಪನದಿ ದಾಟುವಲ್ಲಿ ಸೈಫೆನ್ ನಿರ್ಮಾಣದ ಉಸ್ತುವಾರಿ. (3) ಕಾರ್ಯ ನಿರ್ವಾಹಕ ಇಂಜಿನಿಯರ್ ಅನುಪಸ್ಥಿತಿಯಲ್ಲಿ ಉಸ್ತುವಾರಿ / ಹಂಗಾಮಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ . ಖಾಂದೇಶ್ ಹಾಗೂ ನಾಸಿಕ್ ಜಿಲ್ಲೆಗಳ ನೀರಾವರಿ ಕೆಲಸಗಳ ಉಸ್ತುವಾರಿ. -ಧುಲಿಯಾ ನೀರು ಸರಬರಾಜು ಯೋಜನೆಯ ವಿನ್ಯಾಸ. ಅದರ ಅಂಗವಾಗಿ ಸಣ್ಣ ಜಲಾಗಾರದ ವಿನ್ಯಾಸ ಮತ್ತು ಆರಂಭಿಕ ನಿರ್ಮಾಣ ಚಟುವಟಿಕೆ. -ಸಾಮ್ಯಕ ಜಿಲ್ಲೆಯ ಬೆಟ್ಟಗಳ ಕೆಳಭಾಗದಲ್ಲಿ ಜಲಾಶಯ ನಿರ್ಮಿಸಲು ಸರ್ವೇ ಕಾರ್ಯ (4) ಪ್ರಾಯೋಗಿಕ ಇಂಜಿನಿಯರಿಂಗ್’ನಲ್ಲಿ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆ. ಇದರೊಂದಿಗೆ ಮರಾಠಿ ಭಾಷೆಯ ಹಿಡಿತ ನಿರ್ಧರಿಸುವ ಮೌಖಿಕ ಹಾಗೂ ಲಿಖಿತ ಪರೀಕ್ಷೆ ಪರೀಕ್ಷೆಯಲ್ಲಿ ತೇರ್ಗಡೆ ಸಹಾಯಕ ಇಂಜಿನಿಯರ ಗಳ ಎರಡನೇ ಶ್ರೇಣಿಗೆ ಬಡ್ತಿ. (5) ಮುಂದಿನ ಹತ್ತೇ ತಿಂಗಳುಗಳಲ್ಲಿ ಖಾಲಿ ಇದ್ದ ಪ್ರಥಮ ಶ್ರೇಣಿ ಹುದ್ದೆಗಳಿಗೆ ಭಡ್ತಿ. ಕೆಲಸಕ್ಕೆ ಸೇರಿದ 20 ತಿಂಗಳುಗಳಲ್ಲಿ ಮಾಸಿಕ 500 ರೂ ಸಂಬಳದ ಪ್ರಥಮ ಶ್ರೇಣಿಗೆ ತಲುಪಿಕೆ. (6) ಖಾನ್ದೇಶದಲ್ಲಿ ಹರಡಿದ್ದ ಮಲೇರಿಯಾಕ್ಕೆ ಹೆದರಿ ಬೇರೆ ಕಡೆಗೆ ವರ್ಗಾವಣೆ ಕೋರಿಕೆ. ಪೂನಾದ ರಸ್ತೆ ಮತ್ತು ಕಟ್ಟಡ ವಿಭಾಗಕ್ಕೆ ವರ್ಗ. ರಸ್ತೆ , ಕಟ್ಟಡ ನಿರ್ಮಾಣದಲ್ಲಿ ಅನುಭವ ಹೊಂದುವ ಅವಕಾಶ. -ಗಣೇಶಖಿಂಡಿಯಲ್ಲಿ ಮೊದಲೇ ವಿನ್ಯಾಸಗೊಂಡಿದ್ದ ಪೂನಾ ಪ್ರಾಂತೀಯ ಸರ್ಕಾರದ ಮುಖ್ಯ ಕಟ್ಟಡ ನಿರ್ಮಾಣದ ಉಸ್ತುವಾರಿ . ನಗರದ ಹೊರ ರಸ್ತೆಗಳ ನಿರ್ಮಾಣದ ಉಸ್ತುವಾರಿ. (7) 1893 ರಲ್ಲಿ ಸಿಂಧ್ ಪ್ರಾಂತದ ಸುಕ್ಕೂರಿನಲ್ಲಿದ್ದ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಸಾವು. ಚಾಲ್ತಿಯಲ್ಲಿದ್ದ ಸಂಬಳದ ಮೇಲೆ ಮಾಸಿಕ ರೂ. 200 ಹಾಗೂ ಮನೆ ಭತ್ಯೆ 50 ರೂ ಕೊಡುವ ಭರವಸೆಯೊಂದಿಗೆ ಸುಕ್ಕೂರಿಗೆ ವರ್ಗಾವಣೆ. (ಕೆಲಸಕ್ಕೆ ಸೇರಿದ ಇಪ್ಪತ್ತು ತಿಂಗಳುಗಳಲ್ಲೇ ಮಾಸಿಕ 500 ರೂ ಸಂಬಳ ಪಡೆಯುತ್ತಿದ್ದ ಎಂ.ವಿ 1893ರಲ್ಲಿ ಎಷ್ಟು ಮಾಸಿಕ ಸಂಬಳ ಪಡೆಯುತ್ತಿದ್ದರೆಂದು ತಿಳಿದುಬರುವುದಿಲ್ಲ). ಮುಂಬಯಿ ಗವರ್ನರ್ ಸ್ಯಾಂಡ್ ಹರ್ಸ್ಟ್ , ಸುಕ್ಕೂರು ನಗರ ಸಭೆ ಮತ್ತು ಬಾಂಬೆ ಸರ್ಕಾರದಿಂದ ಸುಕ್ಕೂರಿನಲ್ಲಿ ಎಂವಿ ಯವರು ಸಲ್ಲಿಸಿದ ಸೇವೆಯ ಮುಕ್ತ ಪ್ರಶಂಸೆ. (8) 1895ರಲ್ಲಿ ಸೂರತ್ ನಗರಕ್ಕೆ ನೀರು ಸರಬರಾಜು ಯೋಜನೆಯನ್ನು ಕಾರ್ಯಗತಗೊಳಿಸಲು ನಿಯೋಜನೆ. ಇದೇ ಅವಧಿಯಲ್ಲಿ ಸೂರತ್ ಹಾಗೂ ಭರೂಚ್ ಜಿಲ್ಲೆಗಳ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಹೆಚ್ಚಿನ ಹೊಣೆ. (9) 1896 ಅಧೀಕ್ಷಕ ಇಂಜಿನಿಯರ್ , ಲೋಕೋಪಯೋಗಿ ವಿಭಾಗ, ಪೂನಾ ಕೇಂದ್ರ ವಲಯ. ಬರ ಕಾಮಗಾರಿ ಅಡಿಯಲ್ಲಿ ಕೆಲ ನೀರಾವರಿ ಕೆಲಸಗಳ ನಿರ್ವಹಣೆ. ಕೆಳಹಂತದ ಇಂಜಿನಿಯರ್’ಗಳಿಂದ ಬಂದಿದ್ದ ಯೋಜನೆಗಳ ಪರೀಶೀಲನೆ ,ಪರಿಷ್ಕರಣೆಗಳಿಗೆ ಸಲಹೆ ಹಾಗೂ ಹೊಸ ಯೋಜನೆಗಳ ಸಿದ್ದತೆಗೆ ಸೂಚನೆ ಸಲಹೆ. (10) ಏಪ್ರಿಲ್ 1899 ಪೂನಾ ವಿಭಾಗದ ನೀರಾವರಿ ಇಲಾಖೆಗೆ ವರ್ಗ. ಬಾಂಬೆ ಪ್ರೆಸಿಡೆಸ್ಸಿಯಲ್ಲಿನ ಎರಡು ದೊಡ್ಡ ಜಲಾಶಯಗಳು ಈ ಇಲಾಖೆಯ ಅಡಿಯಲ್ಲಿದ್ದು ಹೆಚ್ಚಿನ ಕೃಷಿ ನೀರಾವರಿಗೆ ಒಳಪಟ್ಟಿದ್ದಿತು. ಪೂನಾದ ಹೊರ ವಲಯ , ಕಿರ್ಕಿ ಮತ್ತು ದಂಡು ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಮತ್ತು ಪೂನಾಕ್ಕೆ ಒಳಚರಂಡಿ ವ್ಯವಸ್ಥೆ ಒದಗಿಸುವ ಹೊಣೆ. -‘ಆನ್ ದಿ ಇರಿಗೇಷನ್ ವರ್ಕ್ಸ್ ಇನ್ ದಿ ಬಾಂಬೆ ಪ್ರೆಸಿಡೆನ್ಸಿ ಎಕ್ಸ್’ಕ್ಲೂಡಿಂಗ್ ಸಿಂಧ್ ‘ ಎನ್ನುವ ತಾಂತ್ರಿಕ ಕೈಪಿಡಿ ತಯಾರಿಕೆ. ನೀರಾವರಿಯಲ್ಲಿ ‘ಬ್ಲಾಕ್ ಸಿಸ್ಟಂ’ ಹೆಸರಿನ ಹೊಸ ನೀರು ಹಂಚಿಕೆ ಪದ್ದತಿಯ ಪರಿಚಯ. -1901-03ರ ಅವಧಿಯಲ್ಲಿ ಫೈಫ್ (ಖಡಕವಾಸಲ) ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹಿಸಲು ಆಣೆಕಟ್ಟೆಯ ಕೋಡಿಯ ಮೇಲೆ ಸ್ವಯಂಚಲಿ ಗೇಟ್’ಗಳ ಅಳವಡಿಕೆ. ಈ ಗೇಟ್’ಗಳ ತಯಾರಿಕೆಗಾಗಿ ಬಾಂಬೆಯಲ್ಲಿದ್ದ ಮೆ. ಜಿಯೋ ಗಹಗನ್ ಅಂಡ್ ಕಂಪೆನಿಯೊಂದಿಗೆ ಒಪ್ಪಂದ . ಸ್ವಯಂಚಲಿ ಗೇಟ್’ಗಳ ಮೇಲೆ ಪೇಟೆಂಟ್ ಪಡೆಯಲು ನಿರಾಕರಣೆ. -1904 ರಲ್ಲಿ ಬಾಂಬೆ ಸರ್ಕಾರದ ಶಾಶ್ವತ ನೈಮರ್ಲ್ಯ ಇಂಜಿನಿಯರ್ ಆಗಿ ನೇಮಕ. ಸಿಮ್ಲಾದಲ್ಲಿ ನಡೆದ ‘ಇರಿಗೇಷನ್ ಕಾನ್ಫರೆನ್ಸ್’ನಲ್ಲಿ ನಾಲ್ಕು ಮುಖ್ಯ ಲೇಖನಗಳ ಮಂಡನೆ. - 1904 ರಲ್ಲಿ ‘ಫೆಲೋ ಆಫ್ ಬಾಂಬೆ ಯೂನಿರ್ವರ್ಸಿಟಿ’ ಎಂಬ ಗೌರವ. ವಿಶ್ವವಿದ್ಯಾಲಯದ ನೀತಿ ನಿಯಮಗಳನ್ನು ತಯಾರಿಸುವ ಹೊಣೆ. 1905 ರಲ್ಲಿ ಸ್ಯಾನಿಟರಿ ಇಂಜಿನಿಯರ್ ಹೊಣೆಯೊಂದಿಗೆ ಕೆಲವು ನೀರಾವರಿ ಯೋಜನೆಗಳ ಮೇಲೆ ಅಧ್ಯಯನ ನಡೆಸಲು /ವರದಿ ಸಿದ್ಧಪಡಿಸಲು ಸಚಿವಾಲಯದಲ್ಲಿ ಕೆಲಸ. -ಕೊಲ್ಹಾಪುರಕ್ಕೆ ನೀರು ಸರಬರಾಜು ಆಕರವಾಗಿದ್ದ ಜಲಾಶಯದ ಮಣ್ಣಿನ ಏರಿಯ ಕುಸಿತ ಅದರ ದುರಸ್ತಿಗೆ ಪರಿಹಾರ. (11) 1906 ರಲ್ಲಿ ಏಡನ್ ಬಂದರಿನ ದಂಡು ಪ್ರದೇಶಕ್ಕೆ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ ಒದಗಿಸುವ ಹೊಣೆಗಾರಿಕೆ ಇದರೊಂದಿಗೆ ಏಡೆನ್ ದಂಡು ಪ್ರದೇಶದ ರಸ್ತೆಗಳ ವರ್ಗೀಕರಣ ಮೇಲ್ದರ್ಜೆ, ಅಂದಾಜು ವೆಚ್ಚಗಳ ಸಿದ್ದಪಡಿಸಿಕೆ. (12) 1907 ರಲ್ಲಿ ಮೂವರು ಅಧಿಕ್ಷಕ ಇಂಜಿನಿಯರ್ ಗಳ ತಾತ್ಕಾಲಿಕ ಮೇಲಾಧಿಕಾರಿಯಾಗಿ ನೇಮಕ. ಇದೇ ವೇಳೆಗೆ ಬಾಂಬೆ ಸರ್ಕಾರದ ಸ್ಯಾನಿಟರಿ ಇಂಜಿನಿಯರ್ ಹೊಣೆಗಾರಿಕೆ. -ರಸ್ತೆ ನಿರ್ವಹಣೆಯ ನಿಯಮಗಳ ರಚನೆ. -ಧಾರವಾಡ, ಬಿಜಾಪುರಗಳಿಗೆ ನೀರು ಸರಬರಾಜು ಯೋಜನೆಯ ವರದಿ ತಯಾರಿ. -ಪೂನಾ ಇಂಜಿನಿಯರಿಂಗ್ ಕಾಲೇಜಿನ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ ಭಾಗಿ. (13) 1907ರಲ್ಲಿ ಎರಡು ರಾಜ್ಯಗಳಿಂದ ಮುಖ್ಯ ಇಂಜಿನಿಯರ್ ಸ್ಥಾನ ನಿರ್ವಹಿಸಲು ಆಹ್ವಾನ. ಈ ಆಹ್ವಾನ ಮತ್ತು ತಮಗಿರುವ ಅನುಭವದ ಆಧಾರದ ಮೇಲೆ ತಮ್ಮನ್ನು ಮುಖ್ಯ ಇಂಜಿನಿಯರ್ ಮಾಡಬೇಕೆಂದು ಎಂ.ವಿ ಯವರ ಹಕ್ಕೊತ್ತಾಯ. ಹಿರಿತನದಲ್ಲಿ ಇರುವವರ ಸರದಿಯ ನಂತರವೇ ತಮಗೆ ಬಾಂಬೆ ಸರ್ಕಾರದಲ್ಲಿ ಮುಖ್ಯ ಇಂಜಿನಿಯರ್ ಹುದ್ದೆ ದೊರೆಯುತ್ತದೆ. ಎಂದು ಖಚಿತವಾದಂತೆಯೇ ಎಂ.ವಿ ಯವರ ಚಡಪಡಿಕೆ ಮತ್ತು ವೃತ್ತಿಯಿಂದ ನಿವೃತ್ತರಾಗುವ ಯೋಚನೆ. (14) 1908 ಅಧೀಕ್ಷಕ ಇಂಜಿನಿಯರ್ ಹುದ್ದೆಯನ್ನು ತೊರೆದು ನಿವೃತ್ತಿಯ ಹೊಂದುವ ನಿರ್ಧಾರ. ನಿವೃತ್ತಿ ಕೋರಿ ಪತ್ರಗಳನ್ನು ಸಲ್ಲಿಸಿ , ರಜೆ ಪಡೆದು ವಿದೇಶಿ ಪ್ರವಾಸ. ವಿದೇಶಿ ಪ್ರವಾಸದಲ್ಲಿ ಇದ್ದಾಗಲೇ ಹೈದರಾಬಾದ್ ನಿಜಾಮನಿಂದ ಮೂಸಿ ಮತ್ತು ಈಸಿ ನದಿಗಳ ನೆರೆ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಆಹ್ವಾನ. (15) 1909ರಲ್ಲಿ ಬಾಂಬೆ ಸರ್ಕಾರದಿಂದ ನಿವೃತ್ತಿ. ನಿವೃತ್ತಿಯ ನಂತರ ಸಮಾಲೋಚಕ ಸಿವಿಲ್ ಇಂಜಿನಿಯರ್ (Consulting Civil Engineer) ಆಗಿ ವೃತ್ತಿ ಜೀವನ ಪ್ರಾರಂಭ. (16) ಅಸಂಸಂಗಳ ಪ್ರವಾಸ ಮುಗಿಸಿ ಹಿಂದಿರುಗಿ 15/4/1909 ರಿಂದ ನವೆಂಬರ್ 1009 ರವರೆಗೆ ಹೈದರಾಬಾದ್’ನಲ್ಲಿ ಈಸಿ , ಮೂಸಿ ನದಿಗಳ ಪ್ರವಾಹ ನಿಯಂತ್ರಣ ಯೋಜನೆಯ ವಿನ್ಯಾಸ. 1913 ರಲ್ಲಿ ಹೈದರಾಬಾದ್ ಸರ್ಕಾರದಿಂದ ಮೂಸಿ ಅಣೆಕಟ್ಟೆ ನಿರ್ಮಾಣ ಪ್ರಾರಂಭ (17) ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಎಂ.ಮೆಕ್’ಹಚಿನ್ ಜೂನ್ ೧೯೦೯ ರಲ್ಲಿ ನಿವೃತ್ತಿ. 15/11/1909 ರಂದು ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ ನೇಮಕ. -ಮಾರಿಕಣಿವೆ ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟು ಪದ್ದತಿ (ಬ್ಲಾಕ್ ಸಿಸ್ಟಂ) ಜಾರಿಗೆ ಪ್ರಯತ್ನ. -ಮೈಸೂರು ಒಳಚರಂಡಿ ವ್ಯವಸ್ಥೆಯ ವಿನ್ಯಾಸ. - 5/11/1911 ರಂದು ಕನ್ನಂಬಾಡಿ ಹಳ್ಳಿಯ ಸನಿಹ ಕಾವೇರಿ ನದಿಗೆ ಆಣೆಕಟ್ಟೆ ಕಟ್ಟುವ ಯೋಜನೆಯ ವರದಿ ಸಲ್ಲಿಸಿಕೆ ಹಾಗೂ ಆಣೆಕಟ್ಟೆಯ ತಳಪಾಯದ ಕೆಲಸ ಪ್ರಾರಂಭ. (18) ನವೆಂಬರ್ 1912 ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕ. ಕೃಷ್ಣರಾಜ ಸಾಗರ ಆಣೆಕಟ್ಟೆ ನಿರ್ಮಾಣ ಕುರಿತಾಗಿ ಮದ್ರಾಸ್ ಸರ್ಕಾರದ ಆಕ್ಷೇಪಣೆ. ಕಾವೇರಿ ವಿವಾದವನ್ನು ಪರಿಹರಿಸಲು 18/7/1913 ರಲ್ಲಿ ಹ್ಯಾರಿ ಗ್ರಿಫಿನ್ ಅಧ್ಯಕ್ಷತೆಯಲ್ಲಿ ನ್ಯಾಯಮಂಡಳಿ ರಚನೆ. ಮೇ ,1914 ರಲ್ಲಿ ಅಂತಿಮ ತೀರ್ಪು. (19) ಮೇ 1918 , ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ ಕಾರ್ಖಾನೆಯ ನಿರ್ಮಾಣ ಆರಂಭ. (20) ಡಿಸೆಂಬರ್ 1918 , ದಿವಾನ ಪದವಿಯಿಂದ ಸ್ವಯೇಚ್ಛೆಯಿಂದ ನಿವೃತ್ತಿ. (21) 1922 ಪ್ರಗತಿಯಲ್ಲಿದ್ದ ಹೈದರಾಬಾದ್ ಸರ್ಕಾರದ ಕೆಲಸಗಳ ಪರಿಶೀಲನೆ ಮತ್ತು ಸಲಹೆ ಸೂಚನೆಗಳು . (22) 1924 ಕೃಷ್ಣರಾಜ ಸಾಗರ ಜಲಾಶಯದ ನಾಲೆಗಳ ವಿನ್ಯಾಸ ಮತ್ತು ನಿರ್ಮಾಣ ಸಮಿತಿಯ ಮುಖ್ಯಸ್ಥ. ಬ್ಲಾಕ್ ಸಿಸ್ಟಂ ನೀರು ಹಂಚಿಕೆಯ ವ್ಯವಸ್ಥೆಯ ಜಾರಿ. (23) ನವ ಬೆಂಗಳೂರು ನೀರು ಸರಬರಾಜು ಯೋಜನೆಯ ವಿನ್ಯಾಸ ಮತ್ತು ಅನುಷ್ಠಾನ ಸಮಿತಿಯ ಮುಖ್ಯಸ್ಥ (ಚಾಮರಾಜ ಸಾಗರ ಜಲಾಶಯ -ತಿಪ್ಪಗೊಂಡನ ಹಳ್ಳಿ ಆಣೆಕಟ್ಟೆ) (24) 1929 ರಲ್ಲಿ ರಚಿಸಲಾದ ಸುಕ್ಕೂರು ಬ್ಯಾರೇಜ್ ನಿರ್ಮಾಣದಲ್ಲಿನ ಅವ್ಯವಹಾರಗಳ ತನಿಖೆ ಸಮಿತಿಯ ಹಿರಿಯ ಸದಸ್ಯ. (25) 1930 ರಲ್ಲಿ ಹೈದರಾಬಾದ್ ನಗರದ ಕುಂದು-ಕೊರತೆಗಳನ್ನು ಗುರುತಿಸಿ ಅವುಗಳ ಸುಧಾರಣೆ ಕ್ರಮಗಳ ಶಿಫಾರಸ್ಸಿನ ವರದಿ ತಯಾರಿಕೆ. ಸಮಾಲೋಚಕ ಸಿವಿಲ್ ಇಂಜಿನಿಯರಿಂಗ್ ಸೇವೆಗಳು -1922 ರಲ್ಲಿ ಕಲ್ಕತ್ತಾದಿಂದ ದೆಹಲಿಗೆ ರಾಜಧಾನಿ ಬದಲಾವಣೆಯ ಸಾಧಕ-ಬಾಧಕಗಳ ಅಧ್ಯಯನಕ್ಕೆ ನೇಮಿಸಿದ ನ್ಯೂ ಕ್ಯಾಪಿಟಲ್ ಎನ್’ಕ್ವೆಯರಿ ಕಮಿಟಿಯ ಸದಸ್ಯ. -1924-25 ಬಾಂಬೆ ಪುನರುಜ್ಜೀವನ ಸಮಿತಿಯ ಸದಸ್ಯ. ಬಾಂಬೆ ನಗರಕ್ಕೆ ಮೂಲ ಸೌಕರ್ಯಗಳ ಒದಗಿಸಿಕೆಯ ಶಿಫಾರಸ್ಸುಗಳ ತಯಾರಿಕೆಯಲ್ಲಿ ಭಾಗಿ. 1926 ಬಾಂಬೆ ಬ್ಯಾಕ್ ಬೇ ರಿಕ್ಲಮೇಷನ್ ಎನ್’ಕ್ವಯರಿ ಕಮಿಟಿಯ ಸದಸ್ಯ. -ಗ್ವಾಲಿಯರ್ ಸಂಸ್ಥಾನದ ನೀರಾವರಿ ಯೋಜನೆ ಮತ್ತು ಕೊಚ್ಚಿಹೋಗಿದ್ದ ತಿಗ್ರಾ ಆಣೆಕಟ್ಟೆ ಮರುನಿರ್ಮಾಣಕ್ಕೆ ಸಲಹೆಗಳು. -ಸಿಂಧ್ ಪ್ರಾಂತದ ಹೈದರಾಬದ್ ನಗರದ ನೀರು ಸರಬರಾಜು ವ್ಯವಸ್ಥೆಯ ಸೆಟ್ಲಿಂಗ್ ಟ್ಯಾಂಕ್’ಗಳ ವಿನ್ಯಾಸ. -ನಾಗಪುರ್ ನಗರ ನೀರು ಸರಬರಾಜು ಯೋಜನೆಗೆ ಸಲಹೆಗಳು -ಗೋವಾ ನಗರ ನೀರು ಸರಬರಾಜು ಯೋಜನೆಗೆ ಸಲಹೆಗಳು -ಕಾಥೇವಾಡದ ಭಾವನಗರದ ನೀರು ಸರಬರಾಜು ವ್ಯವಸ್ಥೆಯ ಸುಧಾರಣೆ ಮತ್ತು ಕೊಚ್ಚಿ ಹೋದ ಏರಿಯ ಮರುನಿರ್ಮಾಣಕ್ಕೆ ಸಲಹೆ ಮತ್ತು ಉಸ್ತುವಾರಿ. -ಭೋಪಾಲ್ ನಗರಕ್ಕೆ ನೀರು ಹಾಗೂ ವಿದ್ಯುತ್ ಸಂಬಂಧಿಸಿದ ಯೋಜನೆಗಳ ವರದಿ. 1929 ಸುಕ್ಕೂರು ಆಣೆಕಟ್ಟೆ ನಿರ್ಮಾಣದಲ್ಲಿ ಆದ ಅವ್ಯವಹಾರಗಳ ತನಿಖೆ ಸಮಿತಿಯ ಸದಸ್ಯ. - 1938 ಬಾಂಬೆ ಇರಿಗೇಷನ್ ಕಮಿಟಿಯ ಸದಸ್ಯ. ನೀರಾವರಿಗೆ ಸಂಬಂಧಿಸಿದ ನೀತಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಲ್ಲಿ ನೆರವು. ಎಲ್ಲ ನೀರಾವರಿ ಯೋಜನೆಗಳಲ್ಲಿ ಬ್ಲಾಕ್ ಸಿಸ್ಟಂ ಜಾರಿಗೆ ತರುವ ನಿರ್ಧಾರ. -1939 ರಲ್ಲಿ ಒಡಿಷಾದಲ್ಲಿ ಬಂದ ನೆರೆ ಹಾಗೂ ಆದ ಅನಾಹುತಗಳಿಗೆ ಪರಿಹಾರ ಒದಗಿಸುವ ಯೋಜನೆಗಳ ಶಿಫಾರಸ್ಸು ಮತ್ತು ವರದಿ. -1947 ರಲ್ಲಿ ತುಂಗಭದ್ರಾ ಆಣೆಕಟ್ಟೆಯ ವಿನ್ಯಾಸ ಹಾಗೂ ನಿರ್ಮಾಣದಲ್ಲಿ ಎದುರಾದ ತಾಂತ್ರಿಕ ಭಿನ್ನಾಭಿಪ್ರಯಗಳ ಪರಿಹರಿಸಿಕೆ. -1949 ರಲ್ಲಿ ಸೌರಾಷ್ಟ್ರದಲ್ಲಿ ಹಲವಾರು ಆಣೆಕಟ್ಟೆಗಳನ್ನು ನಿರ್ಮಿಸಲು ಸೂಕ್ತ ಸ್ಥಳಗಳನ್ನು ಗುರುತಿಸಲು ನೆರವು. -1952 ಗಂಗಾ ನದಿ ಸೇತುವೆ ಸ್ಥಳ ನಿರ್ಧಾರ ಸಮಿತಿಯ ಅಧ್ಯಕ್ಷ ಹಿನ್ನೋಟ ಎಂ.ವಿಯವರನ್ನು ಕುರಿತಾಗಿ ಅವರು (1) ಅಸಾಧಾರಣ ಪ್ರತಿಭಾವಂತ ಇಂಜಿನಿಯರ್ (2) ಜಗತ್ತಿನಲ್ಲಿ ನಡೆಯುತ್ತಿರುವ ತಾಂತ್ರಿಕ ಮುನ್ನಡೆಗಳನ್ನು ತಿಳಿದುಕೊಳ್ಳಲು ಅವರು ಸದಾ ಉತ್ಸುಕರಾಗಿರುತ್ತಿದ್ದರು. (3) ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜಗತ್ತಿನ ಯಾವ ಮೂಲೆಯಲ್ಲಿ ಇರಲಿ ಅವುಗಳನ್ನು ತಿಳಿದುಕೊಳ್ಳುತ್ತಿದ್ದರು ಮತ್ತು ಅವುಗಳನ್ನು ತಮ್ಮ ಯೋಜನೆಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು. (4) ಹೊಸ ತಾಂತ್ರಿಕ ಜ್ಞಾನಾರ್ಜನೆಗಾಗಿ ಹಲವಾರು ಬಾರಿ ವಿದೇಶಗಳಿಗೆ ಪ್ರವಾಸ ಮಾಡಿದ್ದರು. (5) ಅವರು ರೂಪಿಸಿದ ಯೋಜನೆಗಳು , ಮಾಡಿದ ವಿನ್ಯಾಸಗಳು , ನೀಡಿದ ವರದಿಗಳು ಅಸಾಧಾರಣ ಮತ್ತು ಚಾರಿತ್ರಿಕವಾಗಿದ್ದವು. (6) ಅವರನ್ನು ಸಮಗಟ್ಟುವ ಸಮಕಾಲೀನ ಇಂಜಿನಿಯರ್’ಗಳೇ ಇರಲಿಲ್ಲ. ಎನ್ನುವಂತಹ ಅಭಿಪ್ರಾಯಗಳು ಜನರ ಮನಸ್ಸಿನಲ್ಲಿ ಬೇರೂರಿವೆ. ಎಂ.ವಿಯವರ ವೃತ್ತಿ ಜೀವನದ ಸಾಧನೆಗಳನ್ನು ಸನಿಹದಿಂದ ನೋಡುತ್ತ ಈ ಅಭಿಪ್ರಾಯಗಳನ್ನು ನೈಜತೆಯನ್ನು ಅರಿತುಕೊಳ್ಳಲು ಯತ್ನಿಸಬಹುದು. ಎಂ.ವಿಯವರ ವೃತ್ತಿ ಜೀವನವನ್ನು ಸರ್ಕಾರಿ ಇಲಾಖೆಯ ಇಂಜಿನಿಯರ್ ಹಾಗೂ ಸಮಾಲೋಚಕ ಇಂಜಿನಿಯರ್ ಎನ್ನುವ ಎರಡು ಸ್ಪಷ್ಟ ಮಜಲುಗಳಲ್ಲಿ ಗುರುತಿಸಬಹುದು. ಸರ್ಕಾರದ ಸಹಾಯಕ ಇಂಜಿನಿಯರ್ ಹುದ್ದೆಯಿಂದ ಪ್ರಾರಂಭವಾದ ಅವರ ವೃತ್ತಿ ಜೀವನ ಅಧೀಕ್ಷಕ ಇಂಜಿನಿಯರ್ ಮಟ್ಟಕ್ಕೇರಿತು. ಮುಖ್ಯ ಇಂಜಿನಿಯರ್ ಆಗುವ ಅರ್ಹತೆ ತಮಗಿದ್ದರೂ , ತಕ್ಷಣವೇ ಅದು ತಮಗೆ ದಕ್ಕದೆಂದು ಅದಕ್ಕಾಗಿ ಸರದಿಯಲ್ಲಿ ಕಾಯಬೇಕಾಗುವುದೆಂದು ತಿಳಿದ ಎಂ.ವಿಯವರು ಸ್ವಯಂ ನಿವೃತ್ತಿ ಪಡೆದರು. ಅವರು ಪೂರೈಸಿದ ಸೇವಾವಧಿಗೆ ನಿವೃತ್ತಿ ವೇತನ ದಕ್ಕುವಂತಿರಲಿಲ್ಲವಾದರೂ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬಾಂಬೆ ಪ್ರೆಸಿಡೆನ್ಸಿ ಅವರಿಗೆ ನಿವೃತ್ತಿ ವೇತನವನ್ನು ಮಂಜೂರು ಮಾಡಿತು. ಎಂ.ವಿಯವರು ಸರ್ಕಾರದ ಸೇವೆಯಲ್ಲಿದ್ದಾಗ ಸಲ್ಲಿಸಿದ ಸೇವೆಗಳು ಬಹುತೇಕ ಇಲಾಖೆಗೆ ಸಂಬಂಧಿಸಿದ ದೈನಂದಿನ ತಾಂತ್ರಿಕ ಕೆಲಸಗಳಾಗಿದ್ದವು. ಎಂ.ವಿಯವರು ಈ ಕೆಲಸಗಳು ಸಣ್ಣವಿರಲಿ ಅಥವಾ ದೊಡ್ಡವಿರಲಿ ಎಲ್ಲವನ್ನೂ ಒಂದೇ ದೃಷ್ಟಿಯಲ್ಲಿ ನೋಡಿ ಅವುಗಳಿಗೆ ನ್ಯಾಯ ಒದಗಿಸುತ್ತಿದ್ದರು. ಆರಂಭದ ದಿನಗಳಲ್ಲಿ ನೀರಾವರಿ ಇಲಾಖೆಯಲ್ಲಿ ಇದ್ದುದರಿಂದ ಅವರಿಗೆ ತಾಂತ್ರಿಕ ತಿಳಿವಳಿಕೆಯೊಂದಿಗೆ ಜನಸ್ಪಂದನದ ಅನುಭವಗಳು ದಕ್ಕಿದವು. ಇವು ಅವರು ಜನರೊಂದಿಗೆ ಅವರದೇ ಆದ ಭಾಷೆಯಲ್ಲಿ ಸಂವಾದಿಸಬಲ್ಲ ಇಂಜಿನಿಯರ್ ಅಗಿ ಬೆಳೆಯಲು ನೆರವಾದವು. ತಮ್ಮ ಸಾಮರ್ಥ್ಯದ ಆಧಾರದ ಮೇಲೆಯೇ ಎಂ.ವಿಯವರು ಸಣ್ಣ ವಯಸ್ಸಿನಲ್ಲಿಯೇ ಹಲವು ಹಿರಿಯ ಇಂಜಿನಿಯರ್’ಗಳನ್ನು ಹಿಂದೆ ಹಾಕಿ ವೃತ್ತಿಯಲ್ಲಿ ಮುಂದುವರೆಯುವ ಅವಕಾಶಗಳು ದಕ್ಕಿದವು. ಈ ಎಲ್ಲ ಅವಕಾಶಗಳನ್ನು ಎಂ.ವಿಯವರು ನಿಷ್ಠೆ ಮತ್ತು ದಕ್ಷತೆಯಿಂದ ಬಳಸಿಕೊಂಡರು. [1] ಇದರ ಹೊರತಾಗಿ ಎಂ.ವಿಯವರು ನಿಜವಾಗಿಯೂ ಇಂಜಿನಿಯರಿಂಗ್/ತಾಂತ್ರಿಕ ದೃಷ್ಟಿಯಲ್ಲಿ ಅಸಾಧಾರಣ ಸಿವಿಲ್ ಇಂಜಿನಿಯರ್ ಆಗಿದ್ದರೆ ಎನ್ನುವ ಪ್ರಶ್ನೆಗೆ ನೇರ ಉತ್ತರವಿಲ್ಲ. ಏಕೆಂದರೆ ಎಂ.ವಿಯವರು ತಮ್ಮ ವೃತ್ತಿ ಜೀವನವನ್ನು ಕುರಿತಾಗಿ ಬರೆದಿರುವ ಕೃತಿಯನ್ನು ಆಧರಿಸಿ ಅವರ ಜೀವನ ಚಿತ್ರವನ್ನು ಕೊಟ್ಟಿರುವ ಪ್ರತಿಯೊಬ್ಬರೂ ಅವರು ಅದರಲ್ಲಿ ದಾಖಲಿಸಿದ ಪ್ರತಿಯೊಂದು ಕೆಲಸವನ್ನು –ಕೊಳವೆಗಳನ್ನು ಹಾಕುವುದು , ನಾಲೆಗಳ ನಿರ್ವಹಣೆ ಮತ್ತು ದುರಸ್ತಿ , ನೀರು ಸರಬರಾಜು, ಒಳಚರಂಡಿ ಯೋಜನೆ , ಕಟ್ಟಡ ಮತ್ತು ರಸ್ತೆ ನಿರ್ಮಾಣ , ನೆರೆ ಪರಿಹಾರ ಯೋಜನೆ, ಆಣೆಕಟ್ಟೆಗಳ ವಿನ್ಯಾಸ ,ಬ್ಲಾಕ್ ಸಿಸ್ಟಂ ನೀರಾವರಿ ಪದ್ದತಿ , ಸ್ವಯಂಚಲಿ ಗೇಟ್’ಗಳ ಉಪಜ್ಞೆ , ಕನ್ನಂಬಾಡಿ ಆಣೆಕಟ್ಟೆಯ ವಿನ್ಯಾಸ ಮತ್ತು ನಿರ್ಮಾಣ , ಭದ್ರಾವತಿ ಕಬ್ಬಿಣದ ಕಾರ್ಖಾನೆಯ ಯೋಜನೆ – ಅಸಾಧಾರಣ ಸಾಧನೆಗಳು ಎನ್ನುವಂತೆ ಬಿಂಬಿಸಿದ್ದಾರೆ. ಇದನ್ನು ನಯವಾಗಿ ಬದಿಗೆ ಸರಿಸಿರುವ ಸಿವಿಲ್ ಇಂಜಿನಿಯರಿಂಗ್ ಪದವಿಯ ಹಿನ್ನೆಲೆಯುಳ್ಳವರು ಇವುಗಳಲ್ಲಿ ಬ್ಲಾಕ್ ಸಿಸ್ಟಂ ನೀರಾವರಿ ಪದ್ದತಿ , ಸ್ವಯಂಚಲಿ ಗೇಟ್’ಗಳ ಉಪಜ್ಞೆ ಮತ್ತು ಕನ್ನಂಬಾಡಿ ಯೋಜನೆಗಳೊಂದಿಗೆ ಎಂ.ವಿಯವರನ್ನು ಗುರುತಿಸಿದ್ದಾರೆ. .ವಿಯವರ ಸಾಧನೆಗಳು ಕೇವಲ ನಮ್ಮ ಹೆಮ್ಮೆಯ ಹಿನ್ನೆಲೆಯಲ್ಲಿ ಮೂಡಿಬಂದಂತಹ ಕಲ್ಪನೆಗಳೇ ಅಥವಾ ಹೆಮ್ಮೆಯನ್ನು ಪರಿಗಣಿಸದೆ ವಸ್ತುನಿಷ್ಠ ಸಂಗತಿಗಳನ್ನು ಮಾತ್ರ ಪರಿಗಣಿಸುವ ಸಿವಿಲ್ ಇಂಜಿನಿಯರಿಂಗ್ ಜಗತ್ತಿನಲ್ಲಿ ಅವುಗಳಿಗೆ ಏನಾದರೂ ಸ್ಥಾನವಿದೆಯೇ ಎಂದು ಈವರೆಗೆ ಯಾರೂ ವಿಮರ್ಶಕ ದೃಷ್ಟಿಯಿಂದ ನೋಡುವ ಯತ್ನಗಳನ್ನು ಮಾಡಿದಂತಿಲ್ಲ. ಆದ್ದರಿಂದ ಮುಂದಿನ ಪುಟಗಳಲ್ಲಿ ಅಂತಹ ತಾಂತ್ರಿಕ ಬಿಚ್ಚುನೋಟದಲ್ಲಿ ಎಂ.ವಿಯವರನ್ನು ನೋಡುವ ಪ್ರಯತ್ನಗಳಿವೆ. ಧುಲಿಯಾದಿಂದ 35 ಮೈಲಿ ದೂರದ ಧಾವಾರ್ಥಿ ಹಳ್ಳಿಗೆ ನೀರು ಸಾಗಿಸುವ ಕಾಲುವೆ ಪಂಬ್ರಾದ ಉಪನದಿ ದಾಟುವಲ್ಲಿ ಸೈಫೆನ್ ನಿರ್ಮಾಣದಿಂದ ಎಂ.ವಿಯವರ ಸಿವಿಲ್ ಇಂಜಿನಿಯರಿಂಗ್ ವೃತ್ತಿ ಜೀವನ ಪ್ರಾರಂಭವಾಗುತ್ತದೆ. ಈ ಕೆಲಸದ ಆರಂಭದಲ್ಲಿ ಎಂ.ವಿಯವರು ಹಲವಾರು ಅಡೆ ತಡೆಗಳನ್ನು ಎದುರಿಸುತ್ತಾರೆ. ಇಂತಹ ಅಡೆತಡೆಗಳು ಸಿವಿಲ್ ಇಂಜಿನಿಯರಿಂಗ್ ಜೀವನದಲ್ಲಿ ಅತ್ಯಂತ ಸಾಮಾನ್ಯ ಸಂಗತಿಗಳು. ಸಿವಿಲ್ ಇಂಜಿನಿಯರಿಂಗ್’ನಲ್ಲಿ ಅನುಷ್ಠಾನ ಹಂತದಲ್ಲಿ ಎಡರು , ತೊಡರುಗಳಿರುವುದೇ ಸಹಜ ಸಂಗತಿಯಾಗಿದ್ದು , ಸಂಪೂರ್ಣ ಸುಸೂತ್ರವಾಗಿ ಯೋಜನೆ ಪೂರ್ಣಗೊಳ್ಳುವುದೇ ಅತ್ಯಪರೂಪದ ಸಂಗತಿಯಾಗಿರುತ್ತದೆ. ಎಂ.ವಿಯವರು ಈ ಸಮಸ್ಯೆಯನ್ನು ಇತರ ಇಂಜಿನಿಯರ್’ಗಳು ಎದುರಿಸುವಂತೆಯೇ ಎದುರಿಸಿ ಯಶಸ್ವಿಯಾದರು. 1894-95 ರಲ್ಲಿ ಎಂ.ವಿಯವರು ಸುಕ್ಕೂರಿಗೆ ನೀರು ಒದಗಿಸುವ ಯೋಜನೆಯ ವಿನ್ಯಾಸ ಮತ್ತು ನಿರ್ಮಾಣದ ಹೊಣೆ ಹೊತ್ತರು. ಈ ಯೋಜನೆ ಸಿಂಧೂ ನದಿಯ ದಡದಿಂದ ನೀರನ್ನು ಅದರ ಸನಿಹದಲ್ಲಿದ್ದ ಎಡಿನ್’ಬರೋ ಚರ್ಚ್’ಹಿಲ್ ಸನಿಹದ ನೀರು ಸರಬರಾಜು ಘಟನೆಗಳಿಗೆ ಎತ್ತಿ ಸಾಗಿಸಿ , ಕುಡಿಯುವ ನೀರನ್ನು ಒದಗಿಸುವ ಕೆಲಸವನ್ನು ಒಳಗೊಂಡಿದ್ದಿತು. ಆರೋಗ್ಯದ ದೃಷ್ಟಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡುವ ಮೊದಲು ಶೋಧಿಸಬೇಕು. ಸುಕ್ಕೂರು ಪುರಸಭೆಯಲ್ಲಿ ಸಾಕಷ್ಟು ಹಣ ಇರದ ಕಾರಣ ಶೋಧಕ ಘಟಕ ಅಳವಡಿಸುವ ಸಾಧ್ಯತೆ ಇರಲಿಲ್ಲ. . ಸಿಂಧೂ ನದಿಯ ನೀರು ಯಾವಾಗಲೂ ಬಗ್ಗಡವಾಗಿರುತ್ತಿದ್ದುದರಿಂದ ಅದನ್ನು ಶೋಧಿಸದೆ ಕುಡಿಯಲು ಒದಗಿಸುವಂತಿರಲಿಲ್ಲ. ಬಗ್ಗಡವಾಗಿರುವ ನದಿಯ ನೀರನ್ನು ನೇರವಾಗಿ ತೆಗೆದುಕೊಳ್ಳದೆ , ನದಿ ದಡದ ಮರಳಿನಲ್ಲಿ 1-2 ಮೀ ಆಳದ ಒರತೆಗಳನ್ನು ನಿರ್ಮಿಸಿ, ಅದರ ಮೂಲಕ ಜಿನುಗುವ ನೀರನ್ನು ಕುಡಿಯಲು ಬಳಸುವುದು ಬಹು ಪ್ರಾಚೀನ ರೂಢಿಗತ ಪದ್ದತಿ. ಎಂ.ವಿಯವರು ಈ ಪದ್ದತಿಯನ್ನು ಬಳಸಿಕೊಂಡು ನದಿ ದಡದ ನೈಸರ್ಗಿಕ ಮರಳನ್ನು ಶೋಧಕದಂತೆ ಬಳಸಿಕೊಂಡರು. ಸಿಂಧೂ ನದಿಯ ದಡದಲ್ಲಿ ತೋಡಿದ ಇಂತಹ ಜಿನುಗು ಬಾವಿಗಳಿಗೆ ಸಾಕಷ್ಟು ನೀರು ಬರುತ್ತಿರಲಿಲ್ಲ. ಇದಕ್ಕೆ ಪರಿಹಾರವಾಗಿ ಎಂ.ವಿಯವರು ಬಾವಿಯ ತಳದಿಂದ ನದಿಗೆ ತಲುಪುವಂತೆ ಅಡ್ಡ ಸುರಂಗಗಳನ್ನು ನಿರ್ಮಾಣ ಮಾಡಿದರು. ನದಿಯ ಕೆಳಭಾಗದಿಂದ ಅಡ್ಡ ಸುರಂಗದ ಮೂಲಕ ನೀರು ಬಾವಿಗೆ ಹರಿದು ಬರುವಾಗಲೇ ಶೋಧಿಸಲ್ಪಡುತ್ತಿದ್ದಿತು. ಇದರಿಂದ ಶೋಧಕಗಳನ್ನು ನಿರ್ಮಿಸದೆ ಸಾಕಷ್ಟು ಶುದ್ಧ ನೀರನ್ನು ಒದಗಿಸಲು ಸಾಧ್ಯವಾಯಿತು. ತಪತಿ ನದಿ ದಡದ ಮೇಲೆ ಇಂತಹುದೇ ತಂತ್ರದ ಮೇಲೆ ಹಲವಾರು ವೃತ್ತಾಕಾರದ ಶೋಧಕ ಬಾವಿಗಳನ್ನು ನಿರ್ಮಿಸಿ, ನದಿಯಿಂದ ಮರಳಿನ ಮೂಲಕ ಜಿನುಗುವ ನೀರನ್ನು ಸಂಗ್ರಹಿಸಿ , ಹೀಗೆ ಸಂಗ್ರಹವಾದ ನೀರನ್ನು ಕೊಳವೆಗಳ ಮೂಲಕ ಸಂಗ್ರಹಾಗಾರಗಳಿಗೆ ಸಾಗಿಸಿ ಕುಡಿಯಲು ಒದಗಿಸುವ ಯೋಜನೆಯನ್ನು ಬೇರೊಬ್ಬ ಇಂಜಿನಿಯರ್ ಈ ಮೊದಲೇ ವಿನ್ಯಾಸಿಸಿದ್ದನು. ಎಂ.ವಿಯವರು ಸುಕ್ಕೂರಿನಲ್ಲಿ ಅನುಸರಿಸಿದ ತಂತ್ರ ಬಹುತೇಕ ಇಂತಹುದೇ ಆಗಿದ್ದಿತು. ಎಂ.ವಿಯವರು ಸುಕ್ಕೂರಿನಲ್ಲಿ ಅನುಸರಿಸಿದ ತಂತ್ರಗಳಲ್ಲಿ ಯಾವ ವಿಶೇಷತೆಯಾಗಲಿ , ಹೊಸತನವಾಗಲಿ ಇರಲಿಲ್ಲ. ಸುಕ್ಕೂರು ಪುರಸಭೆ ಅವರ ಕಾರ್ಯತತ್ಪರತೆಯನ್ನು ಮೆಚ್ಚಿ ಗೌರವಿಸಿದ್ದಿತು. (ಚಿತ್ರ : ನೀರು ಶೋಧಕ ಜಿನುಗು ಬಾವಿ) ಯಾವುದೇ ಮರಳಿನ ಶೋಧಕ ಗುಣ ಅದರ ಕಣಗಳ ಗಾತ್ರ , ಅದರಲ್ಲಿ ಬೆರೆತಿರಬಹುದಾದ ಮಣ್ಣಿನ ಪ್ರಮಾಣ, ಹೂಳಿನ ದಪ್ಪದ ಮೇಲೆ ಅವಲಂಬಿತವಾಗಿರುತ್ತದೆ. ಇದು ಋತುಮಾನಗಳಿಗೆ ಅನುಗುಣವಾಗಿ ಅಥವಾ ವರ್ಷದಿಂದ ವರ್ಷಕ್ಕೆ ಬೇರೆಯಾಗಬಹುದು. ನದಿಯ ದಡದ ಮರಳನ್ನು ಶೋಧಕದಂತೆ ಪರಿಗಣಿಸುವ ಮೊದಲು ಎಂ.ವಿಯವರು ಯಾವುದಾದರೂ ತಾಂತ್ರಿಕ ಅಧ್ಯಯನ ನಡೆಸಿದ್ದರೆ ಅಥವಾ ಮರಳಿನ ಮೂಲಕ ನೀರು ಶುದ್ಧವಾಗಿ ಹರಿಯುತ್ತದೆ ಎನ್ನುವ ಸರಳ ಅನುಭವವನ್ನು ಅವಲಂಬಿಸಿದ್ದರೆ ಸ್ಪಷ್ಟವಿಲ್ಲ. ಸುಕ್ಕೂರಿನಲ್ಲಿ ಅಳವಡಿಸಿದ ವಿಧಾನ ನಿಜವಾಗಿಯೂ ಹೇಗಿದ್ದಿತು , ಇದರಿಂದ ನೀರು ಯಾವ ಮಟ್ಟದಲ್ಲಿ ಶುದ್ಧವಾಗುತ್ತಿದ್ದಿತು ಮತ್ತು ಆ ಕಾಲದಲ್ಲಿ ಕುಡಿಯುವ ನೀರಿನ ಶುದ್ಧತೆ ಯಾವ ಮಟ್ಟದಲ್ಲಿ ಅಂಗೀಕಾರವಾಗುತ್ತಿದ್ದಿತು , ನೀರಿನ ಶುದ್ಧತೆ ಆಗಿನ ಕಾಲದಲ್ಲಿ ಯುರೋಪಿಯನ್ ದೇಶಗಳಲ್ಲಿ ಒಪ್ಪಿದ ಮಟ್ಟಕ್ಕೆ ಇದ್ದಿತೇ ಎನ್ನುವುದಕ್ಕೆ ಯಾವುದೇ ಪೂರಕ ಡ್ರಾಯಿಂಗ್’ಗಳಾಗಲಿ , ಅಂಕಿ-ಅಂಶಗಳನ್ನಾಗಲಿ ದಕ್ಕುವುದಿಲ್ಲ. ಎಂ.ವಿಯವರು ಸುಕ್ಕೂರಿನಲ್ಲಿ ಅನುಸರಿಸಿದ ವಿಧಾನ ತಾಂತ್ರಿಕವಾಗಿ ಸರಿ ಮತ್ತು ಅದರಿಂದ ದಕ್ಕುವ ಫಲಿತಾಂಶಗಳು ಸ್ಥಾಪಿತ ಮಟ್ಟಗಳಿಗೆ ಅನುಗುಣವಾಗಿದ್ದು , ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಮಿತವ್ಯಯಕಾರಿಯಾಗಿ ಇದ್ದದ್ದೇ ಆದರೆ ಬಗ್ಗಡದ ಕಲುಷಿತ ನೀರನ್ನು ಕುಡಿಯುತ್ತಿರುವ ನದಿಯ ದಡದ ಸಾವಿರಾರು ಭಾರತೀಯ ಹಳ್ಳಿಗಳಿಗೆ ಅದನ್ನು ಅಳವಡಿಸಲು ಇರುವ ಅಡ್ಡಿಯೇನು ಎನ್ನುವುದಕ್ಕೆ ಯಾರೂ ಉತ್ತರ ಕೊಟ್ಟಂತಿಲ್ಲ. ಎಂ.ವಿಯವರು 1906 ರಲ್ಲಿ ಏಡನ್ ಬಂದರಿನ ದಂಡು ಪ್ರದೇಶಕ್ಕೆ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ ಒದಗಿಸುವ ಹಾಗೂ ಏಡೆನ್ ದಂಡು ಪ್ರದೇಶದ ರಸ್ತೆಗಳ ವರ್ಗೀಕರಣ ಮೇಲ್ದರ್ಜೆಗೇರಿಸುವ ಅಂದಾಜು ವೆಚ್ಚಗಳ ಸಿದ್ದಪಡಿಸಿಕೆಯ ಹೊಣೆಯನ್ನು ಹೊತ್ತಕೊಂಡಿದ್ದರು. ಏಡೆನ್'ನಿಂದ 90 ಕಿ,ಮೀ ದೂರದಲ್ಲಿರುವ ಬೆಟ್ಟಗಳ ಸನಿಹ ಸಾಕಷ್ಟ ಮಳೆಯಾಗುತ್ತಿದ್ದಿತು. ಈ ಮಳೆ ಹಳ್ಳದ ಮೂಲಕ ಹರಿದು ಲಹೇಜ್ ಪ್ರಾಂತ ಪ್ರವೇಶಿಸಿ ಅಲ್ಲಿನ ಮರಳಿನ ಹಾಸಿನಲ್ಲಿ ಕಣ್ಮರೆಯಾಗುತ್ತಿದ್ದಿತು. ಈ ನದಿಯ ಮೇಲೆ ಜಿನುಗು ಸಂಗ್ರಹ ಬಾವಿಗಳನ್ನು ನಿರ್ಮಿಸಿ ಅವುಗಳಲ್ಲಿ ನೀರನ್ನು ಸಂಗ್ರಹಿಸಿ , ಹಾಗೆ ಸಂಗ್ರಹವಾದ ನೀರನ್ನು ಕೊಳವೆಗಳ ಮೂಲಕ ಪಂಪ್ ಮಾಡಿ ಏಡೆನ್ ಗೆ ಸಾಗಿಸುವ ಯೋಜನೆಯನ್ನ ಎಂ.ವಿಯವರು ಸಿದ್ದಪಡಿಸಿದರಾದರೂ ಅದನ್ನು ಕಾರ್ಯಗತಗೊಳಿಸುವಲ್ಲಿ ಅವರು ಭಾಗಿಯಾಗಿರಲಿಲ್ಲ. ಇಂತಹುದೇ ತಂತ್ರವನ್ನು ಬಲೂಚಿಸ್ತಾನದ ಕ್ವೆಟ್ಟಾ ಪ್ರಾಂತದಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದ್ದಿತು. ಈ ಪ್ರಾಂತದಲ್ಲಿ ಕರೇಜ್ ಹೆಸರಿನ ಸುರಂಗಗಳ ಮೂಲಕ ಬೆಟ್ಟದ ಬುಡಗಳಲ್ಲಿರುವ ಅಂತರ್ಜಲವನ್ನು ಹೊರತೆಗೆಯಲಾಗುತ್ತಿದ್ದಿತು. ಬೆಟ್ಟದ ತಪ್ಪಲಿನಲ್ಲಿ ನೆಲಮಟ್ಟದಿಂದ ಹತ್ತಾರು ಅಡಿ ಕೆಳಕ್ಕೆ ಹಗೇವಿನಂತೆ 3 ರಿಂದ 4 ಅಡಿ ಅಗಲದ ಬಾವಿಗಳನ್ನು ತೋಡಲಾಗುತ್ತಿದ್ದಿತು, ಈ ಕರೇಜ್’ಗಳ ಕೆಳ ತಳದಿಂದ ಸುರಂಗವನ್ನು ಕೊರೆದು, ಬೆಟ್ಟದ ಬುಡದಲ್ಲಿ ಜಿನುಗುವ ನೀರು ಬಾವಿಯಲ್ಲಿ ಸಂಗ್ರಹವಾಗಿ ಅವುಗಳನ್ನು ಸಂಪರ್ಕಿಸಿರುವ ಸುರಂಗಗಳ ಮೂಲಕ ಹರಿದು ತಗ್ಗಾದ ಜಾಗದಲ್ಲಿ ಸಂಗ್ರಹಗೊಳ್ಳುತ್ತಿದ್ದಿತು. ಇಂತಹ ಹಲವಾರು ಕರೇಜ್’ಗಳು 25-30 ಮೀ ಅಡಿ ಅಂತರದಲ್ಲಿ ಇರುತ್ತಿದ್ದವು. ಕರೇಜ್’ನಿಂದ ತಗ್ಗಿನ ಪ್ರದೇಶಕ್ಕೆ ಸಂಪರ್ಕಿಸುವ ಸುರಂಗಗಳಿಗೆ ಯಾವುದೇ ಭದ್ರ ಆಸರೆಯಿಲ್ಲದೆ ಕುಸಿದು, ನೀರಿನ ಹರಿವಿಗೆ ಅಡಚಣೆ ಉಂಟಾಗುತ್ತಿದ್ದಿತು. ಎಂ.ವಿಯವರು ಏಡನ್ ಬಂದರಿನ ನೀರು ಸರಬರಾಜು ಯೋಜನೆಗೆ ಇಂತಹುದೇ ತಂತ್ರವನ್ನು ಸ್ವಲ್ಪ ಮಾರ್ಪಡಿಸಿ ಅಳವಡಿಸಿಕೊಂಡಿದ್ದರೇ ಹೊರತು ಅದರಲ್ಲಿ ಯಾವುದೇ ಹೊಸತನವಿರಲಿಲ್ಲ. (ಚಿತ್ರ : ಕರೇಜ್ ನೀರು ಸಂಗ್ರಹ) ಕಟ್ಟು ನೀರಾವರಿ ಪದ್ದತಿ ಎಂ.ವಿಯವರ ಜೀವನದ ಸಾಧನೆಗಳಲ್ಲಿ ಅವರು ಕಾಲುವೆಯ ನೀರನ್ನು ಹಂಚಲು ಜಾರಿಗೆ ತಂದ ‘ಬ್ಲಾಕ್ ಸಿಸ್ಟಂ’ (ಕಟ್ಟು ಪದ್ದತಿ) ಕುರಿತಾಗಿ ಹೊಗಳಿಕೆಯ ಮಹಾಪೂರಗಳೇ ಹರಿದುಬಂದಿವೆ. ನೀರಾವರಿಗೆ ಸಂಬಂಧಪಟ್ಟ ಬೆರಳೆಣಿಕೆಯ ತಾಂತ್ರಿಕ ಲೇಖನಗಳ ಹೊರತಾಗಿ ಎಲ್ಲಿಯೂ ‘ಬ್ಲಾಕ್ ಸಿಸ್ಟಂ’ ಬಗ್ಗೆ ಚರ್ಚೆಗಳಾಗಿಲ್ಲ. ನಿಜವಾಗಿಯೂ ಎಂ.ವಿಯವರು ಪ್ರತಿಪಾದಿಸಿದ ‘ಬ್ಲಾಕ್ ಸಿಸ್ಟಂ’ ಎಂತಹುದು ಅದು ಅನುಷ್ಠಾನ ಮಟ್ಟದಲ್ಲಿ ಎಷ್ಟು ಯಶಶ್ವಿಯಾಗಿದ್ದಿತು ಎನ್ನುವುದನ್ನು ನೋಡಬಹುದು. ಮಳೆ ಬರದಿದ್ದಾಗ ಮಾತ್ರ ನೀರನ್ನು ಪಡೆದು ಉಳಿದ ಸಮಯದಲ್ಲಿ ನೀರನ್ನು ಬಯಸದ ರೈತರ ನಿಲುವು , ಅಗತ್ಯಕ್ಕಿಂತ ಹೆಚ್ಚಿಗೆ ನೀರನ್ನು ಬಳಸುವ ಆದರೆ ನೀರಿನ ತೆರಿಗೆ ನೀಡಲು ಸಿದ್ದವಾಗಿರುವ ಕಬ್ಬು ಬೆಳೆಯುವ ರೈತರ ಹಿತಾಸಕ್ತಿಗಳನ್ನು ಹೇಗೆ ಸಮತೋಲನದಲ್ಲಿರಬೇಕೆಂದು ನಿರ್ಧರಿಸುವುದು ಕಷ್ಟವಾಯಿತು. ಇದಕ್ಕೆ ಪರಿಹಾರ ಹುಡುಕಲು ಈ ಹಿಂದೆ ಈಜಿಪ್ತಿನಲ್ಲಿ ನೀರಾವರಿ ಇಲಾಖೆಯ ಮುಖ್ಯಸ್ತನಾಗಿದ್ದ ಕೊಲಿನ್ ಸ್ಕಾಟ್’ ಮೊನ್’ಕ್ರೀಫ್ ಮುಂದಾಳತ್ವದಲ್ಲಿ ‘ಇಂಡಿಯನ್ ಇರಿಗೇಷನ್ ಕಮಿಷನ್’ ನೇಮಕಗೊಂಡಿತು. ಈ ಸಮಿತಿ ಭಾರತದಾದ್ಯಂತ ಸಂಚರಿಸಿ ನೀರಾವರಿಯನ್ನು ಉತ್ತಮಗೊಳಿಸುವ ಸಾಧ್ಯತೆಗಳ ಹುಡುಕಾಟ ನಡೆಸಿತು. ಆಗ ಮುಠಾ ಹಾಗೂ ನೀರಾ ಕಾಲುವೆಗಳ ಉಸ್ತುವಾರಿ ವಹಿಸಿದ್ದ ಎಂ.ವಿಯವರು ನೀರನ್ನು ಮಳೆ ಕೊರತೆಯ ದಿನಗಳಲ್ಲಿ ಹೆಚ್ಚಿನ ಪ್ರದೇಶಗಳಿಗೆ ಒದಗಿಸುವ ಪರಿಕಲ್ಪನೆಯೇ ತಪ್ಪು. ವೆಚ್ಚ ಮಾಡಿ ಸಂಗ್ರಹಿಸಿದ ನೀರು ತನ್ನ ಮೇಲೆ ಹೂಡಿದ ಬಂಡವಾಳವನ್ನು ಹಿಂದಕ್ಕೆ ತರಬೇಕೇ ಹೊರತು ಯಾವಾಗಲೋ ಬರಬಹುದಾದ ಬರಗಾಲದ ರಕ್ಷಣೆಗಾಗಿ ಕಾಯ್ದಿರಿಸಿಕೊಂಡಿರುವಂತಹುದಲ್ಲ. ನೀರನ್ನು ಉತ್ಪಾದನೆಯ ಮತ್ತು ಹಣಗಳಿಕೆಯ ದೃಷ್ಟಿಯಲ್ಲಿ ನೋಡಬೇಕೇ ಹೊರತು ಬರಗಾಲದ ದೃಷ್ಟಿಯಿಂದಲ್ಲ. ಬರಗಾಲದಲ್ಲಿ ನೆರವಾಗುವಂತೆ ವಿಶಾಲ ಪ್ರದೇಶಕ್ಕೆ ಸೇವೆ ಸಲ್ಲಿಸುವ ಯೋಜನೆಗಳು ಅರ್ಥಹೀನ. ಅತ್ಯಧಿಕ ಬಂಡವಾಳ ನೀಡುವ ಅಧಿಕ ಲಾಭ ತರುವಂತೆ ವಾಣಿಜ್ಯಿಕವಾಗಿ ಆಕರ್ಷಕವಾಗಿರುವಂತೆ ಹಸಿಬೆಳೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಒಣ ಬೆಳೆಗಳ ಪ್ರದೇಶದ ಬಗ್ಗೆ ಚಿಂತಿಸಬೇಕಿಲ್ಲ ಎಂದು ವಾದಿಸಿದರು. ಹಾಗಾದರೆ ಬರ ಬಂದಾಗ ಒಣ ಬೆಳೆ ಪ್ರದೇಶದ ರೈತರು ಏನು ಮಾಡಬೇಕು ? ಎನ್ನುವ ಪ್ರಶ್ನೆಗೆ ಎಂ.ವಿಯವರು ಅವರು ಹಸಿ ಬೆಳೆಯ ಪ್ರದೇಶದ ಕಬ್ಬು, ನೆಲ್ಲಿನ ಗದ್ದೆಗಳಲ್ಲಿ ದುಡಿದು ಕೂಲಿ ಗಳಿಸಬಹುದು ಎನ್ನುವ ಉತ್ತರ ನೀಡಿದ್ದರು. ಬರಗಾಲದಲ್ಲಿ ಒಣ ಬೆಳೆಯ ಪ್ರದೇಶದ ಸಾವಿರಾರು ಜನರಿಗೆ ಕಬ್ಬಿನ ಗದ್ದೆಗಳಲ್ಲಿ ಕೆಲಸ ಒದಗಿಸಲು ಸಾಧ್ಯವಿಲ್ಲ. ಹಾಗೂ ಸ್ವಂತ ಜಮೀನು ಹೊಂದಿರುವ ಒಬ್ಬ ಭಾರತೀಯ ರೈತ ಮತ್ತೊಂದು ಮಳೆ ಬರುವವರೆಗೆ ಕಾಯುತ್ತಾನೆಯೇ ಹೊರತು ಇನ್ನೊಬ್ಬ ರೈತನ ಜಮೀನಿಗೆ ಕೂಲಿಯಾಳಾಗಿ ಹೋಗಲಾರ ಎನ್ನುವ ಹಿನ್ನೆಲೆಯಲ್ಲಿ ಬ್ರಿಟಿಷರು ಎಂ.ವಿ ಯವರ ಈ ಸಲಹೆಗೆ ಮಾನ್ಯತೆ ನೀಡಲಿಲ್ಲ. (5) ಎಂವಿ.ಯವರ ಉಸ್ತುವಾರಿಯಲ್ಲಿದ್ದ ನೀರಾ ಅಚ್ಚುಕಟ್ಟು ಪ್ರದೇಶದ ಕಾಲುವೆಯ ಮೇಲ್ಬಾಗದಲ್ಲಿ ಕಬ್ಬಿನ ಬೆಳೆ ಪ್ರಾಶಸ್ತ್ಯ ಗಳಿಸಿದ್ದಿತು. ಕಬ್ಬನ್ನು ಬೆಳೆದು ಆರ್ಥಿಕವಾಗಿ ಬಲಾಢ್ಯರಾಗಿದ್ದ ಪೂನಾ ಸನಿಹದ ರೈತರು ತೆರಿಗೆ ಕೊಡುವ ಆಧಾರದ ಮೇಲೆ ನೀರಿನ ಮೇಲೆ ತಮಗೆ ಸಂಪೂರ್ಣ ಹಕ್ಕಿದೆಯೆಂದು ಭಾವಿಸಿ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಬಳಸತೊಡಗಿದರು . ಇದರಿಂದ ಕಾಲುವೆಯ ಕೆಳಭಾಗದ ಒಣ ಬೆಳೆಗಳಿಗೆ ನೀರು ದೊರೆಯದಂತಾಯಿತು. ಇದನ್ನು ತಡೆಗಟ್ಟಲು ಪೂನಾದವರೇ ಆದ ಸಹಾಯಕ ಇಂಜಿನಿಯರ್ ವಿ.ಎನ್.ವರ್ತಕ್ ಪರಿಶ್ರಮಿಸುತ್ತಿದ್ದು 10 ದಿನಗಳಿಗೊಮ್ಮೆ ನೀರು ಹಂಚುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಇದನ್ನು ಕಾಲುವೆಯ ಮೇಲ್ಭಾಗದ ಬಲಿಷ್ಟ ರೈತರು ವಿರೋಧಿಸಿ , ನೀರಾವರಿ ಇಲಾಖೆ ಜನ ವಿರೋಧಿ ಎಂದು ಪ್ರತಿಭಟಿಸಿದ್ದರು. ಇಂಜಿನಿಯರುಗಳು ನೀರಿನ ಬಳಕೆಯನ್ನು ನಿಯಂತ್ರಿಸಲು ಸಿದ್ದರಾಗಿದ್ದರೂ ಕೆಳವರ್ಗದ ನೀರಗಂಟಿ, ನಾಲೆ ವಿತರಿಕರಿಗೆ ಲಂಚನೀಡಿ, ಮೇಲ್ಭಾಗದ ರೈತರು ಹೆಚ್ಚಿನ ನೀರನ್ನು ಬಿಡಿಸಿಕೊಳ್ಳುತ್ತಿದ್ದರು. ಇಕ್ಕಟ್ಟಿನಲ್ಲಿ ಸಿಲುಕಿದ ಸರ್ಕಾರ ಅಣೆಕಟ್ಟೆಯ ನಿರ್ಮಾಣದ ವೆಚ್ಚವನ್ನು ಹಿಂದಕ್ಕೆ ಪಡೆಯುವ ಹಾಗೂ ನೀರನ್ನು ಹಂಚುವ ವ್ಯವಸ್ಥೆಯ ಸುಧಾರಣೆಗಳನ್ನು ಸೂಚಿಸುವಂತೆ ವಿಭಾಗೀಯ ಕಛೇರಿಗಳಿಗೆ ಕೋರಲಾಯಿತು. (5) ರೈತರು ಮತ್ತು ನೀರಾವರಿ ಇಲಾಖೆಯ ನಡುವಿನ ಸಮಸ್ಯೆಯನ್ನು ಬಗೆಹರಿಸಲು ಎಂ.ವಿಯವರು ಪೂನಾದ ಫರ್ಗ್ಯೂಸನ್ ಕಾಲೇಜಿನಲ್ಲಿ ರೈತರ ಸಭೆ ಕರೆದರು. ಬಳಕೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀರಿನ ಬಳಕೆಯಲ್ಲಿ ಶಿಸ್ತು ಮತ್ತು ನಿರ್ವಹಣೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಜಾರಿಗೆ ತರುವುದು ಎಂ.ವಿಯವರ ಗುರಿಯಾಗಿದ್ದಿತು. ಎಂವಿಯವರು ಪ್ರತಿಯೊಂದು ವಿತರಣಾ ಕಾಲುವೆಯ ಮೂಲಕ ಹರಿಯುವ ನೀರಿನ ಪ್ರಮಾಣ , ಅದರಿಂದ ನೀರಾವರಿಗೆ ಒಳಪಟ್ಟ ಪ್ರದೇಶ , ಆ ಪ್ರದೇಶದ ಬೆಳೆಗಳ ಅಂಶಗಳನ್ನು ದಾಖಲಾತಿ ಮಾಡಿ, ಅಗತ್ಯಕ್ಕೆ ಬೇಕಾದಷ್ಟು ನೀರನ್ನು ಒದಗಿಸುವ ಭರವಸೆ ನೀಡಿದರು. ವೈಜ್ಞಾನಿಕ ಆಧಾರದ ಮೇಲೆ ನೀರಿನ ಪ್ರಮಾಣವನ್ನು ನಿರ್ಧರಿಸಿದ ನಂತರ ರೈತರು ಬೇಕಾದರೆ ನೀರಿನ ಹಂಚಿಕೆಯನ್ನು ತಮ್ಮಲ್ಲೇ ಇರಿಸಿಕೊಳ್ಳುವ ಆಯ್ಕೆಯನ್ನು ಮುಂದಿರಿಸಿದರಾದರೂ ರೈತರು ಈ ಜವಾಬ್ದಾರಿಯಿಂದ ನುಣುಚಿಕೊಂಡರು. ಎಂ.ವಿಯವರು ನೀರಿನ ಬಳಕೆ ಮತ್ತು ಹಂಚಿಕೆಯಲ್ಲಿ ಇದ್ದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಹರಿಸಲು ಯತ್ನಿಸಿದ ಫಲವಾಗಿ ‘ಮೆಮೊರೆಂಡೆಂ ಆನ್ ದಿ ಇರಿಗೇಷನ್ ವರ್ಕ್ಸ ಇನ್ ದಿ ಬಾಂಬೆ ಪ್ರೆಸಿಡೆಸ್ನಿ ಎಕ್ಸ್’ಕ್ಲೂಡಿಂಗ್ ಸಿಂಧ್’ ಎನ್ನುವ ಕೈಪಿಡಿ ಹೊರಬಂದಿತು. ಇದರಲ್ಲಿ ಲಭ್ಯ ನೀರಿನಲ್ಲಿ ಹೆಚ್ಚಿನ ಪ್ರದೇಶಗಳನ್ನು ನೀರಾವರಿಯಡಿ ತರುವ ಸಲಹೆಗಳು ಮತ್ತು ಅವುಗಳನ್ನು ಜಾರಿಗೊಳಿಸುವ ಮಾರ್ಗವಾಗಿ ಬ್ಲಾಕ್ ಸಿಸ್ಟಂ (ಕಟ್ಟು ಪದ್ಧತಿ) ಪ್ರತಿಪಾದಿಸಿದ್ದರು. ಸರ್ ಕೊಲಿನ್ ಸ್ಕಾಟ್’ ಮೊನ್’ಕ್ರೀಫ್ ಮುಂದಾಳತ್ವದ ‘ಇಂಡಿಯನ್ ಇರಿಗೇಷನ್ ಕಮಿಷನ್’ ಕಟ್ಟು ಪದ್ದತಿಯನ್ನು ಯಥಾವತ್ತಾಗಿ ಜಾರಿಗೆ ತರಲು ಶಿಫಾರಸ್ಸು ಮಾಡಿತು. ಎಂ.ವಿಯವರು ಪ್ರತಿಪಾದಿಸಿದ ಕಟ್ಟು ಪದ್ದತಿ ತಿಳಿಯಲು ಪಾರಂಪರಿಕ ನೀರು ಹಂಚಿಕೆಯ ವ್ಯವಸ್ಥೆಯನ್ನು ಅರಿತುಕೊಳ್ಳಬೇಕು. ಬಾಂಬೆ ಪ್ರಾಂತದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೂರಾರು ವರ್ಷಗಳಿಂದ ಒಂದರಿಂದ 4 ಮೀ ಎತ್ತರದ ಕೋಡಿಕಟ್ಟೆಗಳನ್ನು ಹಳ್ಳಿಗರು ನಿರ್ಮಿಸಿಕೊಂಡಿದ್ದರು. ಇಲ್ಲಿ ನಿಂತ ನೀರನ್ನು ಹಂಚಿಕೊಳ್ಳಲು ಅವರು ತಮ್ಮದೇ ಆದ ಪಾರಂಪರಿಕ ಪದ್ದತಿ ಹೊಂದಿದ್ದರು. ಧುಳೆ ಮತ್ತು ನಾಸಿಕ್ ಪ್ರದೇಶಗಳಲ್ಲಿಯೂ ಫಡ್ ಅಥವಾ ಬಾಂಧಾರ ಎಂದು ಕರೆಯಲಾಗುವ ಇದೇ ಬಗೆಯ ನೀರು ಹಂಚಿಕೆ ಪದ್ದತಿಯನ್ನು ರೈತರು ಅನುಸರಿಸುತ್ತಿದ್ದರು. ಈ ಪದ್ದತಿಯ ಪ್ರಕಾರ ನೀರಾವರಿ ಪ್ರದೇಶವನ್ನು ನಾಲ್ಕು ಭಾಗಗಳಾಗಿ (ಕಟ್ಟು) ವಿಂಗಡಿಣೆಯಾಗಿರುತ್ತದೆ. ಯಾವುದೇ ಒಂದು ಕಟ್ಟಿನಲ್ಲಿ ಯಾರಿಗೆ ಯಾವುದೇ ಪ್ರಮಾಣದ ಜಮೀನು ಇರಬಹುದು. ಈ ನಾಲ್ಕು ಕಟ್ಟುಗಳಲ್ಲಿ ಸರದಿಗೆ ಅನುಸಾರವಾಗಿ ಕಬ್ಬು, ನೆಲ್ಲು , ಗೋಧಿ ಹಾಗೂ ಅಲ್ಪ ನೀರಿನ ಅಗತ್ಯದ ಬೆಳೆಯನ್ನು ಬೆಳೆಯುವುದು . ಇದರಿಂದ ಒಂದು ಹಂಗಾಮಿನಲ್ಲಿ ಒಂದು ಕಟ್ಟಿನಲ್ಲಿ ಕಬ್ಬು ಇದ್ದರೆ , ನಂತರದ ಹಂಗಾಮಿನಲ್ಲಿ ನೆಲ್ಲು , ಮೂರನೆಯ ಹಂಗಾಮಿನಲ್ಲಿ ಗೋಧಿ ನಾಲ್ಕನೇ ಹಂಗಾಮಿನಲ್ಲಿ ಕಾಳುಗಳನ್ನು ಬೆಳೆಯಬೇಕು. ಈ ಕಟ್ಟು ಪದ್ದತಿ ಸರ್ಕಾರ ನಿರ್ಮಿಸಿದ ಆಣೆಕಟ್ಟೆಗಳ ಕಾಲುವೆಗಳ ಮೂಲಕ ಪಡೆಯುವ ನೀರಿಗೆ ಇರಲಿಲ್ಲ. ಸರ್ಕಾರದ ನೀರಾವರಿಗೆ ಒಳಪಟ್ಟ ಪ್ರದೇಶದಲ್ಲಿ ಕಬ್ಬು, ನೆಲ್ಲು ಬೆಳೆಯುತ್ತಿದ್ದವರು ಯಾವಾಗಲೂ ಅವುಗಳನ್ನೇ ಬೆಳೆಯುತ್ತ ಅರ್ಥಿಕವಾಗಿ ಪ್ರಬಲವಾಗುತ್ತಿದ್ದರೆ ಇತರರು ಒಣಬೆಳೆಗಳಿಗೆ ಮಾತ್ರ ತೃಪಿ ಪಟ್ಟುಕೊಳ್ಳಬೇಕಾಗಿದ್ದಿತು. ಇಂತಹುದೇ ಕಟ್ಟು ಪದ್ದತಿಯನ್ನು ನೀರಾ ಕಾಲುವೆ ಅಚ್ಚುಕಟ್ಟಿನಲ್ಲಿಯೂ ಜಾರಿಗೊಳಿಸುವುದು ಎಂ.ವಿಯವರ ಉದ್ದೇಶವಾಗಿದ್ದಿತು. ಸಾಂಪ್ರದಾಯಿಕವಾದ ಈ ಕಟ್ಟು ಪದ್ದತಿ 50-250 ಎಕರೆ ಪ್ರದೇಶದ ಸಣ್ಣ ಅಚ್ಚುಕಟ್ಟು ಪ್ರದೇಶಕ್ಕೆ ಸರಿಹೊಂದುತ್ತಿದ್ದಿತು. ಇದೇ ಪದ್ದತಿಯನ್ನು ಅನುಸರಿಸಿ ನೀರಾ ಕಾಲುವೆಯ ಅಚ್ಚುಕಟ್ಟು ಪ್ರದೇಶವನ್ನು ನಾಲ್ಕು ಕಟ್ಟುಗಳಾಗಿ ವಿಭಜಿಸಲು ಸಾಧ್ಯವಿರಲಿಲ್ಲ. ಏಕೆಂದರೆ ನೀರಾ ಅಚ್ಚುಕಟ್ಟು ಪ್ರದೇಶ ವಿಶಾಲವಾಗಿದ್ದು , ಅದರ 1/4 ದಲ್ಲಿ ಕಬ್ಬು ಬೆಳೆಯುವಷ್ಟು ನೀರನ್ನು ಒದಗಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ಸಾಂಪ್ರದಾಯಿಕ ಕಟ್ಟು ಪದ್ದತಿಯನ್ನು ಎಂ.ವಿಯವರು ಸ್ವಲ್ಪ ಮಾರ್ಪಡಿಸಿ ಹೊಸ ಕಟ್ಟು ಪದ್ದತಿಯನ್ನು ಸೂಚಿಸಿದರು. (5,25,26) [2] ಎಂ.ವಿಯವರು ನಿರೂಪಿಸಿದ ಕಟ್ಟು ಪದ್ದತಿಯ ಮುಖ್ಯ ಲಕ್ಷಣಗಳು ಹೀಗಿವೆ – (1) ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟುಗಳ ಪ್ರದೇಶವನ್ನು ಗುರುತಿಸುವುದು. ಪ್ರತಿ ಕಟ್ಟು ಪ್ರದೇಶದಲ್ಲಿ ಹೆಚ್ಚು ನೀರು ಬೇಡುವ ಕಬ್ಬಿನ ಬೆಳೆಯನ್ನು ನಿರ್ದಿಷ್ಟ ವಿಸ್ತೀರ್ಣಕ್ಕೆ ಸೀಮಿತಗೊಳಿಸುವುದು ಮತ್ತು ಉಳಿದ ಪ್ರದೇಶದಲ್ಲಿ ಅಲ್ಪ ಹಾಗೂ ಪೂರಕ ನೀರು ಬೇಡುವ ಆಹಾರ ಮತ್ತು ಇತರ ಬೆಳೆಗಳಿಗೆ ಅವಕಾಶ ನೀಡುವುದು. ಪ್ರತಿ ಕಟ್ಟಿನಲ್ಲಿ ಹಸಿ ಮತ್ತು ಒಣ ಬೆಳೆಗಳಿಗೆ ಬೇಕಾದ ನೀರಿನ ಪ್ರಮಾಣವನ್ನು ನಿರ್ಧರಿಸುವುದು. (2) ಪ್ರತಿ ಕಟ್ಟು ಪ್ರದೇಶಕ್ಕೆ ನಿರ್ದಿಷ್ಟ ಪ್ರಮಾಣದ ಕಾಲುವೆ ನೀರನ್ನು ಒದಗಿಸಲು ದೀರ್ಘಾವಧಿ (5-6 ವರ್ಷಗಳು) ಒಪ್ಪಂದಕ್ಕೆ ರೈತರಿಗೆ ಅವಕಾಶ ಮಾಡಿಕೊಡುವುದು. [3] (3) ರೈತರು ದುಂಡಾವರ್ತಿ ಮಾಡಿ ಹೆಚ್ಚಿನ ನೀರನ್ನು ಬಳಸಿಕೊಳ್ಳುವುದನ್ನು ತಪ್ಪಿಸಲು ಪ್ರತಿ ಕಟ್ಟಿನ ಪ್ರದೇಶಕ್ಕೆ ಮೊದಲೇ ನಿರ್ಧರಿಸಿದಷ್ಟು ಪ್ರಮಾಣದ ನೀರನ್ನು ಮಾತ್ರ ಬಿಡುವುದರ ಮೂಲಕ ನೀರಿನ ಹಂಚಿಕೆ ಮಾಡುವ ಕೆಳಹಂತದ ಸಿಬ್ಬಂದಿ ಲಂಚ, ಆಮಿಷಗಳಿಗೆ ಒಳಗಾಗಿ ಹೆಚ್ಚು ನೀರನ್ನು ಬಿಡುವುದನ್ನು ನಿಯಂತ್ರಿಸುವುದು. (4) ನೀರಿನ ಮೇಲಿನ ತೆರಿಗೆಯನ್ನು ಜಮೀನಿನ ವಿಸ್ತೀರ್ಣ , ಬೆಳೆಯ ಸ್ವರೂಪಕ್ಕಿಂತಲೂ ಬಳಸಿದ ನೀರಿನ ಪ್ರಮಾಣದ ಮೇಲೆ ನಿರ್ಧರಿಸಿ ನೀರನ್ನು ಪೋಲು ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕುವುದು. ಮೇಲಿನ ನಾಲ್ಕು ಅಂಶಗಳ ಮೇಲೆ ರೂಪುಗೊಂಡ ಎಂ.ವಿಯವರ ಕಟ್ಟು ಪದ್ದತಿಯ ಜಾರಿ ಲಕ್ಷಣಗಳು ಈ ರೀತಿ ಇದ್ದವು. (1) ಪ್ರತಿ ವಿತರಣಾ ನಾಲೆಯ ನೀರಾವರಿ ಪ್ರದೇಶವನ್ನು ಮೂರು ಅಥವಾ ನಾಲ್ಕು ಕಟ್ಟುಗಳಾಗಿ ವಿಭಜಿಸುವುದು. ಪ್ರತಿ ಕಟ್ಟಿನಲ್ಲಿ ಕಬ್ಬಿನ ಬೆಳೆಯನ್ನು 1/3 ಪ್ರದೇಶಕ್ಕೆ ನಿರ್ಬಂಧಿಸುವುದು. ಇನ್ನು ಉಳಿದ 2/3 ಪ್ರದೇಶದಲ್ಲಿ ಅಲ್ಪ , ಪೂರಕ ನೀರು ಬೇಡುವ ಆಹಾರ ಬೆಳೆಗಳನ್ನು ಬೆಳೆಯುವುದು ಮತ್ತು ಈ ಪ್ರದೇಶಗಳನ್ನು ಆವರ್ತನೆಯಲ್ಲಿ ಬದಲಾಯಿಸುವುದು. ಪ್ರತಿ ಕಟ್ಟಿನಲ್ಲಿ ಕಬ್ಬಿಗೆ 12 ತಿಂಗಳು , ಇತರ ಬೆಳೆಗಳಿಗೆ 8 ತಿಂಗಳು ನೀರು ಒದಗಿಸುವುದು. ಕಟ್ಟಿನ ಪ್ರದೇಶವನ್ನು 1.5 ಎಕರೆಯ ಘಟಕಗಳಲ್ಲಿ ಗುರುತಿಸಿ ಅದರಲ್ಲಿ 0.5 ಎಕರೆ ಕಬ್ಬು ಮತ್ತು ಒಂದು ಎಕರೆಯಲ್ಲಿ ಇತರ ಬೆಳೆಗಳಿಗೆ ನೀರು ಒದಗಿಸುವುದು. (2) ಮೇಲಿನ ನಿಬಂಧನೆಗೆ ಒಳಗಾಗಿ ಪ್ರತಿಯೊಬ್ಬ ರೈತನೂ ನೀರನ್ನು ಪಡೆಯಲು ಸರ್ಕಾರದೊಂದಿಗೆ ದೀರ್ಘಾವಧಿ ಒಪ್ಪಂದ ಮಾಡಿಕೊಳ್ಳುವುದು. ಈ ಒಪ್ಪಂದ ಯಾವುದೇ ಕಟ್ಟಿನಲ್ಲಿರುವ ರೈತರು ಸಾಮೂಹಿಕವಾಗಿ ಮಾಡಿಕೊಳ್ಳುವ ಒಪ್ಪಂದದ ಭಾಗವಾಗಿರುತ್ತದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಈ ಅವಧಿಗೆ ನಿರ್ದಿಷ್ಟ ಪ್ರಮಾಣದ ನೀರನ್ನು ರೈತರಿಗೆ ಕೊಡುವ ಭರವಸೆ ನೀಡುವುದು. (3) ಪ್ರತಿ ಕಟ್ಟಿನಲ್ಲಿ ಯಾವುದೇ ಬೆಳೆ , ಎಷ್ಟೇ ಪ್ರದೇಶದಲ್ಲಿ ಇರಲಿ ಸರ್ಕಾರ (1) ರ ನಿಬಂಧನೆಗಳಿಗೆ ಅನುಗುಣವಾಗಿ ಮೊದಲೇ ನಿರ್ಧರಿಸಿದ ಪ್ರಮಾಣದ ನೀರನ್ನು ಮಾತ್ರ ಒದಗಿಸುತ್ತದೆ. ಆರಂಭದಲ್ಲಿ ಕಟ್ಟು ಪದ್ದತಿ ಯಶಸ್ವಿಯಾಗುವ ಸೂಚನೆಗಳನ್ನು ನೀಡತೊಡಗಿತು. ಕಟ್ಟು ಪದ್ದತಿಯಿಂದ ಕಬ್ಬಿಗೆ ಹಾಗೂ ಇತರ ಬೆಳೆಗಳಿಗೆ ನಿರ್ದಿಷ್ಟ ಪ್ರಮಾಣದ ನೀರನ್ನು ದೀರ್ಘಾವಧಿಗೆ ಒದಗಿಸಿದ್ದರಿಂದ ಕಬ್ಬಿನ ಬೆಳೆಗಾರರ ಆತಂಕ ದೂರವಾಗಿ , ಉಳಿದ ಆಹಾರ ಬೆಳೆಗಳಿಗೆ ಲಭ್ಯ ಪ್ರಮಾಣದ ನೀರು ದಕ್ಕಿ ಬೆಲೆಗಳಲ್ಲಿ ಸ್ಥಿರತೆ ಕಂಡು ಬಂದಿತು. ಕಬ್ಬಿಗೆ ನೀರಿನ ಭರವಸೆ ದಕ್ಕಿದ್ದರಿಂದ ಗದ್ದೆ ಊಳಲು ಎತ್ತುಗಳು , ಉತ್ಪನ್ನಗಳನ್ನು ಸಾಗಿಸಲು ಎತ್ತಿನ ಗಾಡಿಗಳು ಹೆಚ್ಚಾದವು. ಎತ್ತುಗಳಿಗೆ ಬೇಕಾದ ಮೇವನ್ನು ಒದಗಿಸಲು ರೈತರು ಪೂರಕ ನೀರು ಒದಗಿಸಿದ ಪ್ರದೇಶದಲ್ಲಿ ಜೋಳವನ್ನು ಬೆಳೆಯತೊಡಗಿದರು. ಇದು ಸಾಮಾಜಿಕ ಮತ್ತು ಆರ್ಥಿಕ ಎರಡೂ ದೃಷ್ಟಿಗಳಿಂದಳೂ ಸಮಂಜಸವಾಗಿದ್ದಿತು. ಪ್ರತಿ ಕಟ್ಟಿಗೆ ಒದಗಿಸುವ ನೀರಿನ ಪ್ರಮಾಣ ಮೊದಲೇ ನಿರ್ಧಾರವಾಗಿರುವ್ದರಿಂದ ಆಡಳಿತದ ದೃಷ್ಟಿಯಲ್ಲೂ ಕಟ್ಟು ಪದ್ದತಿ ಸರಳವಾಗಿದ್ದು ಇಂಜಿನಿಯರ್’ಗಳ ಮೇಲಿನ ಹೊಣೆಯನ್ನು ತಗ್ಗಿಸಿತು. ಎಂವಿಯವರು ಜಾರಿಗೆ ತಂದ ಕಟ್ಟು ಪದ್ದತಿ ಆರಂಭಿಕ ಕಾಲದಲ್ಲಿ ಮೇಲೆ ಗುರುತಿಸಿದ ಹಲವಾರು ಲಾಭಗಳನ್ನು ತಂದಿತಾದರೂ ಕಾಲಾನುಕ್ರಮೇಣ ಅದರೊಳಗಿನ ಒಂದೊಂದೇ ಹುಳುಕುಗಳು ಹೊರಬರತೊಡಗಿದವು. ಎಂ.ವಿಯವರು ಪ್ರತಿಪಾದಿಸಿದಂತೆ ಕಟ್ಟು ಪದ್ದತಿಯನ್ನು ಜಾರಿಗೆ ತರಲು ಅನುಷ್ಠಾನ ಅಡಚಣೆಗಳಿದ್ದು ಅದು ಅಲ್ಪಾವಧಿಯಲ್ಲೇ ವಿಫಲವಾಯಿತು. ಕಟ್ಟು ಪದ್ದತಿಯಲ್ಲಿದ್ದ ಕೊರತೆಗಳು ಹೀಗಿವೆ. (1) ಕಟ್ಟು ನೀರಾವರಿ ಪದ್ದತಿಗೆ ಪ್ರೇರಣೆಯಾದ ಬಾಂಧಾರ ಪದ್ದತಿ ಪ್ರದೇಶದಲ್ಲಿದ್ದ ಭೂಮಾಲಿಕತ್ವ ಆಣೆಕಟ್ಟೆಗಳ ಕಾಲುವೆ ನೀರಾವರಿ ಅಚ್ಚುಕಟ್ಟಿಗಿಂತ ಬಹು ಭಿನ್ನವಾಗಿದ್ದಿತು. ಬಾಂಧಾರ ಪದ್ದತಿ ಅನುಸರಿಸುತ್ತಿದ್ದ ಪ್ರದೇಶ ಸೀಮಿತವಾಗಿದ್ದು ಅದರಲ್ಲಿ ಭಾಗಿಯಾಗುತ್ತಿದ್ದ ರೈತರ ಸಂಖ್ಯೆ ಬೆರಳೆಣಿಕೆಯಷ್ಟಿರುತ್ತಿದ್ದಿತು. ಅಲ್ಲಿ ರೈತರು ಪರಸ್ಪರ ಸಮಾಲೋಚನೆಯ ಮೂಲಕ ನೀರಿನ ಹಂಚಿಕೆಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಆಣೆಕಟ್ಟೆಯ ನೀರಾವರಿ ಪ್ರದೇಶ ಬಹು ವಿಶಾಲವಾಗಿದ್ದು, ಸಾವಿರಾರು ರೈತರು ಅದರ ಭಾಗಿಗಳಾಗಿದ್ದು ಇಂತಹ ನಿರ್ಧಾರ ಸುಲಭವಾಗಿರಲಿಲ್ಲ. (2) ಯಾವ ಬೆಳೆಗೆ ಎಷ್ಟು ಪ್ರಮಾಣದ ನೀರು ಬೇಕಾಗಬಹುದೆಂದು ಇಂಜಿನಿಯರ್’ಗಳು ತಮ್ಮದೇ ಆದ ಲೆಕ್ಕಗಳಿಂದ ಪಡೆಯುತ್ತಿದ್ದರು. ಆದರೆ ಈ ಲೆಕ್ಕಾಚಾರಗಳು ವಾಸ್ತವಿಕ ಬಳಕೆಗಿಂತ ಬೇರೆಯವೇ ಆಗಿರುತ್ತಿದ್ದವು. ಬೆಳೆಯುವ ಪ್ರದೇಶ , ಕಾಲುವೆಯಲ್ಲಿ ಹರಿಸಬೇಕಾದ , ಹರಿಸಿರುವ ನೀರಿನ ಪ್ರಮಾಣಗಳ ನಡುವೆ ಬಹಳ ವ್ಯತ್ಯಾಸಗಳಿರುತ್ತಿದ್ದವು. ಕಾಲುವೆಯ ಅಚ್ಚುಕಟ್ಟಿನ ಪ್ರದೇಶದಲ್ಲಿ ಒಣ ಹಾಗೂ ಹಸಿ ಬೆಳೆಗಳ ಜಾಗಗಳು ವಿಶಾಲ ಪ್ರದೇಶದಲ್ಲಿ ಹಂಚಿಹೋಗಿರುತ್ತಿದ್ದವು. ಒಂದು ಕಡೆ ನೂರು ಹೆಕ್ಟೇರ್ ಒಣ ಅಥವಾ ಹಸಿ ಬೆಳೆಗೆ ಬಳಕೆಯಾಗುತ್ತಿದ್ದ ನೀರಿನ ಪ್ರಮಾಣ ಬೇರೆ ಕಡೆ ಬೇರೆಯದೇ ಆಗಿರುತ್ತಿದ್ದಿತು. ಆದ್ದರಿಂದ ಇಂಜಿನಿಯರ್’ಗಳು ಎಲ್ಲಿ ಕನಿಷ್ಟ ನೀರು ಬಳಕೆಯಾಗುತ್ತದೆಯೋ ಅದೇ ನಿಜವಾದ ಬೇಡಿಕೆಯೆಂದು ಪರಿಗಣಿಸಿ ಉಳಿದ ಕಡೆ ನೀರು ಪೋಲಾಗುತ್ತಿದೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಈ ತೀರ್ಮಾನಕ್ಕೆ ಬರುವ ಮೊದಲು ಮಣ್ಣಿನ ಗುಣ , ಕೃಷಿಯ ಏರು ಪೇರುಗಳು , ಹವಾಮಾನದ ಅನಿಶ್ಚಿತತೆ , ಮಳೆ ಮುಂತಾದ ಬಾಹ್ಯ ಪರಿಣಾಮಗಳು ಗಣನೆಗೆ ಬಂದಿರಲಿಲ್ಲ. ಎಂ.ವಿಯವರು ಕಟ್ಟು ಪದ್ದತಿಯಲ್ಲಿ ನಿರ್ಧರಿಸಿದ ನೀರಿನ ಪ್ರಮಾಣ ಇಂತಹ ಹಲವಾರು ಗೋಜಲಿನ ಅಂಶಗಳನ್ನು ಒಳಗೊಂಡಿದ್ದಿತು. (41) (3) ಸಾಂಪ್ರದಾಯಿಕ ಕಟ್ಟು ಪದ್ದತಿಯಲ್ಲಿ ನೀರಾವರಿ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದ್ದಿತು. ಈ ಕಟ್ಟಿನಲ್ಲಿ ಯಾವುದೇ ರೈತನಿಗೆ ಯಾವುದೇ ಪ್ರಮಾಣದ ಭೂಮಿ ಇರಬಹುದಿತ್ತು. ಇದರಿಂದ ಹೆಚ್ಚಿನ ಭೂಮಿ ಇದ್ದವರು ಕಬ್ಬು ,ನೆಲ್ಲಿನ ಸರದಿ ಬಂದಾಗ ತಮ್ಮ ವಿಶಾಲ ಭೂಮಿಗಳಿಗೆ ನೀರುಣಿಸಿ ಸಮೃದ್ದಿ ಹೊಂದುತ್ತಿದ್ದರು. ಹೊರ ನೋಟಕ್ಕೆ ಸಮಾನತೆಯ ಆಧಾರದ ಮೇಲೆ ಕಟ್ಟು ಪದ್ದತಿ ಇದೆಯೆಂದು ಭಾಸವಾದರೂ ಒಣ ಹಿಡುವಳಿಯ ಪ್ರಮಾಣದ ಮೇಲೆ ಇದು ಅಸಮ ಹಂಚಿಕೆಯಾಗಿದ್ದಿತು. ಎಂ.ವಿಯವರ ಕಟ್ಟು ಪದ್ದತಿಯಲ್ಲಿ ಪ್ರತಿ ಹಳ್ಳಿಯ ನೀರಾವರಿ ಪ್ರದೇಶದ 1/3 ಭಾಗವನ್ನು ಕಬ್ಬು ಕಟ್ಟು ಎಂದು ಗುರುತಿಸಲಾಗಿದ್ದಿತು. ಹಳ್ಳಿಯ ಎಲ್ಲರ ಜಮೀನು ಕಬ್ಬು ಕಟ್ಟಿನಲ್ಲಿ ಇರುತ್ತಿರಲಿಲ್ಲ. ಒಂದು ವರ್ಷ ಕಬ್ಬು ಕಟ್ಟಿನಲ್ಲಿ ಬೆಳೆ ಬೆಳೆದಾತ ಮುಂದಿನ ಹಂಗಾಮಿಗೆ ಅದನ್ನು ಇನ್ನೊಬ್ಬ ರೈತನಿಗೆ ಬಿಟ್ಟುಕೊಟ್ಟು, ತಾನು ಒಣ ಬೆಳೆಗೆ ಬದಲಾಗಬೇಕಿದ್ದಿತು ಅಥವಾ ಹಳ್ಳಿಯಲ್ಲಿ ಜಮೀನು ಹೊಂದಿರುವ ಪ್ರತಿಯೊಬ್ಬ ರೈತನಿಗೂ ಕಬ್ಬು ಕಟ್ಟಿನಲ್ಲಿ ಭೂಮಿ ಹೊಂದುವ ಅವಕಾಶವಿರಬೇಕಾಗಿದ್ದಿತು. ಇವೆರಡೂ ಜಾರಿಗೊಳಿಸಲು ಅಸಾಧ್ಯವಾದ ಸಂಗತಿಗಳಾಗಿದ್ದವು. ಕಬ್ಬಿನ ಕಟ್ಟಿನಲ್ಲಿ ಜಮೀನು ಹೊಂದಿರುವವರು ಇತರರಿಗೆ ತಮ್ಮ ಭಾಗ ಬಿಟ್ಟುಕೊಟ್ಟು ಹಂಗಾಮಿಗೆ ತಕ್ಕಂತೆ ಒಣಬೆಳೆ ಪ್ರದೇಶಕ್ಕೆ ಹೋಗಲು ತಕರಾರೆತ್ತಿದರು. ಇದರಿಂದ ಎಂ.ವಿಯವರ ಕಟ್ಟು ಪದ್ದತಿಗೆ ತೀವ್ರ ಹಿನ್ನೆಡೆಯಾಗಿ ಅದರಲ್ಲಿ ಮಾರ್ಪಾಡುಗಳನ್ನು ಮಾಡಬೇಕಾಯಿತು. ನಂತರದ ದಿನಗಳಲ್ಲಿ ಇತರ ಇಂಜಿನಿಯರುಗಳು ಹಳ್ಳಿಯಲ್ಲಿ ಕಬ್ಬಿನ ಕಟ್ಟು ಗುರುತಿಸುವ ಬದಲು ಪ್ರತಿಯೊಬ್ಬನ ಜಮೀನಿನಲ್ಲಿ 1/3 ಭಾಗದಲ್ಲಿ ಕಬ್ಬು ಬೆಳೆಯುವ ಪದ್ದತಿ ಜಾರಿಗೆ ತಂದರು. ಇದರಿಂದ ಸಾಂಪ್ರದಾಯಿಕವಾದ ಕಟ್ಟು ಪದ್ದತಿಯಲ್ಲಿ ಇದ್ದ ಅಸಮಾನತೆ ಇಲ್ಲಿಯೂ ಮುಂದುವರೆಯಿತು. ಕೆಲವು ರೈತರಿಗೆ ಅವರಿಗೆ ನಿಗದಿಯಾದ ಭೂಮಿಯಲ್ಲಿ ಕಬ್ಬನ್ನು ಬೆಳೆಯುವ ಆರ್ಥಿಕ ಸಾಮರ್ಥ್ಯವಿರಲಿಲ್ಲ. ಇದರಿಂದ ಅವರ ಪಾಲಿನ ಕಬ್ಬಿನ ನೀರನ್ನು ಬಲಾಢ್ಯರು ಬಳಸತೊಡಗಿ ಇನ್ನೂ ಪ್ರಬಲರಾದರು. (4) ಭೌಗೋಳಿಕ , ಭೂಮಾಲಿಕತ್ವ ಮತ್ತು ಬೆಳೆಯ ಸ್ವರೂಪದಿಂದಾಗಿ ಕಟ್ಟುಗಳನ್ನು ಒಂದರ ಸನಿಹ ಇನ್ನೊಂದರಂತೆ ಗುರುತಿಸುವುದು ಅಸಾಧ್ಯವಾಗಿದ್ದಿತು. ಒಂದು ಕಟ್ಟಿನಲ್ಲಿ ಗುರುತಿಸಲಾದ 1/3 ಕಬ್ಬು ಹಾಗೂ 2/3 ಆಹಾರ ಬೆಳೆಗಳ ಪ್ರದೇಶಗಳು ಚದುರಿಹೋಗಿದ್ದು ಅವುಗಳನ್ನು ಗುರುತಿಸಿ , ನಿರ್ವಹಿಸಿ , ನಿಯಂತ್ರಿಸುವುದು ಬಹು ಕ್ಲಿಷ್ಟಕರವಾಗಿದ್ದಿತು. (5) ಕಟ್ಟಿನ ಪ್ರದೇಶದ ನೀರಾವರಿ ಜಮೀನುಗಳು ಮತ್ತು ಕಟ್ಟಿನಲ್ಲಿಯೇ ಕಬ್ಬು ಹಾಗೂ ಆಹಾರ ಬೆಳೆಗಳ ಪ್ರದೇಶಗಳು ಚದುರಿ ಹೋಗಿದ್ದರಿಂದ ಆಹಾರ ಬೆಳೆಗಳ ಪ್ರದೇಶವನ್ನು ಕಬ್ಬು ಬೆಳೆಯ ಪ್ರದೇಶವಾಗಿ ವಿಸ್ತರಿಸುವುದು ಮತ್ತು ಕಟ್ಟು ಪ್ರದೇಶಕ್ಕೆ ಒಳಪಡದ ಭೂಮಿಗೂ ಕಾಲುವೆಯ ನೀರನ್ನು ಹರಿಸುವುದು ಸುಲಭವಾಗಿದ್ದಿತು. ಇದರಿಂದಾಗಿ ಅಲ್ಪ ಕಾಲದಲ್ಲಿಯೇ ಕಟ್ಟಿನ ಪ್ರದೇಶದ ರೈತರು ಆಹಾರ ಬೆಳೆಯ ಪ್ರದೇಶದಲ್ಲಿ ಅನಧಿಕೃತವಾಗಿ ಕಬ್ಬನ್ನು ಬೆಳೆಯತೊಡಗಿದರೆ , ಕಟ್ಟಿನ ಹೊರಗಿನ ಪ್ರದೇಶದವರು ಕಾಲುವೆಯ ನೀರನ್ನು ಬಳಸತೊಡಗಿದರು. ಇದರಿಂದಾಗಿ ಅತ್ಯಲ್ಪ ಕಾಲದಲ್ಲೇ ಪ್ರತಿ ಕಟ್ಟಿಗೆ ನಿಗದಿತ ಪ್ರಮಾಣ ಮೀರಿ ನೀರು ಬಳಕೆಯಾಗುತ್ತಿದ್ದಿತು. ಇದನ್ನು ಹತೋಟಿಗೆ ತಂದು ನೀರಾವರಿಯಲ್ಲಿ ಶಿಸ್ತನ್ನು ತರಲು ಇಂಜಿನಿಯರ್’ಗಳು ಹಲವಾರು ಪ್ರಯೋಗಗಳನ್ನು ಮಾಡಿದರು. ಆದರೆ ಇವೆಲ್ಲ ಶೋಚನೀಯ ಸೋಲನ್ನು ಕಂಡವು. (6) ಕಾಲುವೆ ಮೇಲ್ಭಾಗದಲ್ಲಿ ಕಬ್ಬನ್ನು ಬೆಳೆದು ಶ್ರೀಮಂತರಾಗಿದ್ದ ಕೆಲ ಬಲಾಢ್ಯ ರೈತರು , ಇತರ ಕಟ್ಟುಗಳಿಗೆ ಸೇರಿದ ರೈತರ ಜಮೀನನ್ನು ಗುತ್ತಿಗೆ ಪಡೆದು ಸರ್ಕಾರದೊಂದಿಗೆ ನೀರಿನ ಒಪ್ಪಂದ ಮಾಡಿಕೊಂಡು ಅಲ್ಲಿಯೂ ಕಬ್ಬನ್ನು ಬೆಳೆಯತೊಡಗಿದರು. ಕಾಲಾನುಕ್ರಮೇಣ ಇವರು ಪ್ರಬಲರಾಗಿ ಯಾರ ಭಯವಿಲ್ಲದೆ ಕಟ್ಟಿನ ಹೊರ ಪ್ರದೇಶಗಳಿಗೂ ಕಬ್ಬಿನ ಬೆಳೆಯನ್ನು ವಿಸ್ತರಿಸಿದರು. (7) ಚೆನ್ನಾಗಿ ಮಳೆ ಬಂದ ವರ್ಷ 2/3 ಪ್ರದೇಶದಲ್ಲಿ ಕಾಲುವೆಯ ನೀರಿನ ಅಗತ್ಯವಿರುತ್ತಿರಲಿಲ್ಲ. ಕಟ್ಟು ಪದ್ದತಿಯಲ್ಲಿ ಬೆಳೆಗಿಂತಲೂ ಬಳಸಿದ ನೀರಿನ ಪ್ರಮಾಣದ ಮೇಲೆ ತೆರಿಗೆ ಹಾಕಲಾಗುತ್ತಿದ್ತು. ಮಳೆ ಬಂದ ವರ್ಷ ಸಹಜವಾಗಿ ರೈತರು ನೀರನ್ನು ಬಳಸದೆ ತೆರಿಗೆ ಸಂಗ್ರಹವೂ ಇಳಿಯುತ್ತಿದ್ದಿತು. ಆಗ ತೆರಿಗೆ ಕಟ್ಟಿ ದಕ್ಕುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು 1/3 ಭಾಗದ ಕಬ್ಬಿನ ಬೆಳೆಗಾರರು ಕಾತರರಾಗಿದ್ದು ಕಬ್ಬಿನ ಪ್ರದೇಶಗಳನ್ನು ವಿಸ್ತರಿಸಿಕೊಳ್ಳಲು ಪ್ರೇರಕವಾಗಿದ್ದಿತು. ಇದು ಮುಂದುವರೆದು ಮಳೆ ಕೊರತೆಯ ದಿನಗಳಲ್ಲಿಯೂ ಅವರು ವಿಸ್ತರಿಸಿದ ಭೂಮಿಯಲ್ಲಿ ಯಾವ ಎಗ್ಗಿಲ್ಲದೆ ಕಬ್ಬನ್ನು ಬೆಳೆಯುತ್ತಿದ್ದರು. (8) ಕಾಲುವೆಯ ಮೇಲ್ಭಾಗದ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದ ರೈತರು ನಿಗದಿತ ಪ್ರಮಾಣ ಮತ್ತು ಅವಧಿ ಮುಗಿದ ನಂತರವೂ ನೀರನ್ನು ಬಿಡುವಂತೆ ಒತ್ತಡ ಹಾಕುತ್ತಿದ್ದರು. ನೀರನ್ನು ಬಿಡುತ್ತಿದ್ದ ಕೆಳ ಹಂತದ ಸಿಬ್ಬಂದಿ ಇಂತಹ ಒತ್ತಡ ಮತ್ತು ಆಮಿಷಗಳನ್ನು ತಾಳಿಕೊಳ್ಳುವಷ್ಟು ಬಲಿಷ್ಟರಾಗಿರಲಿಲ್ಲ. (9) ಒತ್ತಡ ತಂತ್ರದಿಂದ ಕಬ್ಬಿನ ಪ್ರದೇಶ ಹಿಗ್ಗಿ , ಅಗತ್ಯಕ್ಕಿಂತ ಹೆಚ್ಚು ನೀರು ಹರಿದು ಗದ್ದೆಗಳು ಬಸಿಯಾಡಿ , ನೆಲ ಫಲವತ್ತತೆ ಕಳೆದುಕೊಂಡು ಸವುಳಾಗಿ ಕೃಷಿಗೆ ಅಯೋಗ್ಯವಾಗತೊಡಗಿತು.[4] ಕಾಲುವೆಯ ನೀರನ್ನು ಹಂಚಲು ವಾರಬಂದಿ/ಓಸರಬಂದಿ (ಪಂಜಾಬ್ , ಹರಿಯಾಣ , ರಾಜಸ್ಥಾನ , ಉತ್ತರದ ಪ್ರದೇಶ) ಸೇಜಪಾಲಿ (ಮಹಾರಾಷ್ಟ್ರ, ಗುಜರಾತ್) , ಸಟ್ಟಾ (ಬಿಹಾರ್) ಹಾಗೂ ಸ್ಥಳೀಕರಣ (ಪಶ್ಚಿಮ ಬಂಗಾಳ , ಒರಿಸ್ಸ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ , ಆಂಧ್ರಪ್ರದೇಶ, ತೆಲಂಗಾಣ ಇತ್ಯಾದಿ) ಮುಂತಾದ ಹಲವು ಪದ್ದತಿಗಳು ಭಾರತದಲ್ಲಿ ಮೊದಲಿನಿಂದಲೂ ಜಾರಿಯಲ್ಲಿದ್ದವು. ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಈ ಪದ್ದತಿಗಳು ಹಾಗೂ ಈ ಪದ್ದತಿಗಳ ಕಲಬೆರಕೆ ಹಲವಾರು ವಿಭಿನ್ನ ಸ್ವರೂಪದಲ್ಲಿ ಬಳಕೆಯಲ್ಲಿವೆ. (26) ವಾರಬಂದಿ ಪದ್ದತಿ ಆಹಾರ ಬೆಳೆಗಳಿಗೆ ಪೂರಕ ನೀರನ್ನು ಒದಗಿಸಿ ಅತಿ ಹೆಚ್ಚಿನ ಪ್ರದೇಶಕ್ಕೆ ನೀರನ್ನು ಒದಗಿಸಿ , ಆ ಮೂಲಕ ಬರಗಾಲದ ತೀವ್ರತೆಯನ್ನು ಕಡಿಮೆಗೊಳಿಸಲು ಬ್ರಿಟಿಷರು ಜಾರಿಗೆ ತಂದ ಪಡಿತರ ಪದ್ದತಿ. ಈ ಪದ್ದತಿಯಲ್ಲಿ ಆರ್ಥಿಕ ಲಾಭಕ್ಕಿಂತ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ತೂಕ. ಇಲ್ಲಿ ನೀರನ್ನು ಹೆಚ್ಚಿನ ದರಕ್ಕೆ ಮಾರುವುದಕ್ಕಿಂತಲೂ ಹೆಚ್ಚಿನ ಜನರಿಗೆ ಹಂಚುವುದೇ ಗುರಿಯಾಗಿರುತ್ತದೆ. ಸೇಜಪಾಲ ಪದ್ದತಿಯಲ್ಲಿ ರೈತ ತನಗೆ ಬೇಕಾದ ನೀರಿನ ಪ್ರಮಾಣವನ್ನು ನಿರ್ಧರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾನೆ. ಇಂತಹ ರೈತರ ಎಲ್ಲ ಮನವಿಗಳನ್ನು ಲಭ್ಯ ನೀರಿನ ಪ್ರಮಾಣದೊಂದಿಗೆ ಹೋಲಿಸಿ , ಪ್ರತಿ ರೈತನಿಗೆ/ಜಮೀನಿಗೆ ನೀಡಬಹುದಾದ ಪ್ರಮಾಣವನ್ನು ಸರ್ಕಾರವೇ ನಿರ್ಧರಿಸುತ್ತದೆ. ಇದು ವಾರಬಂದಿಯಂತೆ ಪಡಿತರ ಪದ್ದತಿಯಲ್ಲವಾದರೂ ಒಂದು ಬಗೆಯಲ್ಲಿ ರೈತನ ನೀರಿನ ದಾಹಕ್ಕೆ ತಡೆಯೊಡ್ಡುತ್ತದೆ. ಸ್ಥಳೀಕರಣ ಪದ್ದತಿಯಲ್ಲಿ ನಿರ್ದಿಷ್ಟ ಕಾಲುವೆ ನೀರು ಒದಗಿಸುವ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ , ನಿರ್ದಿಷ್ಟ ಬೆಳೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇದರಿಂದ ಕಾಲುವೆಗಳು ಕಬ್ಬು ,ನೆಲ್ಲು , ಹತ್ತಿ ಮುಂತಾದ ಬಳಕೆಯ ಅನುಕ್ರಮದಲ್ಲಿ ವಿಂಗಡಣೆಯಾಗಿರುತ್ತವೆ. ಈ ಪದ್ದತಿಯಲ್ಲಿ ನೆಲ್ಲು , ಹತ್ತಿ ಕಾಲುವೆ ಅಚ್ಚುಕಟ್ಟಿನಲ್ಲಿ ಕಬ್ಬು ಬೆಳೆಯುವಂತಿಲ್ಲ. ಹತ್ತಿ ಅಚ್ಚುಕಟ್ಟಿನಲ್ಲಿ ಕಬ್ಬು , ನೆಲ್ಲು ಬೆಳೆಯುವಂತಿಲ್ಲ. ಎಂವಿಯವರು ಪ್ರತಿಪಾದಿಸಿದ ಕಟ್ಟು ಪದ್ದತಿ ಇವೆರಡು ಪದ್ದತಿಗಳ ನಡುವಿನ ಸಮನ್ವಯ ಮಾರ್ಗ ಎಂದು ಭಾಸವಾಗುವುದಾದರೂ ಅದು ನಿಜವಲ್ಲ. ಏಕೆಂದರೆ ಕಟ್ಟು ಪದ್ದತಿ ಆದರ್ಶಮಯ ಸನ್ನಿವೇಶಗಳನ್ನು ಊಹಿಸಿಕೊಂಡು ರೂಪಿಸಲ್ಪಟ್ಟ ಪದ್ದತಿ. ಕೊನೆಯವರೆಗೂ ನೀರಾ ಅಚ್ಚುಕಟ್ಟು ಪ್ರದೇಶದಲ್ಲಿ ಎಂ.ವಿಯವರು ಪ್ರತಿಪಾದಿಸಿದಂತೆ ಕಟ್ಟುಗಳನ್ನು ಗುರುತಿಸಿವುದು ಸಾಧ್ಯವಾಗಲಿಲ್ಲ ಎನ್ನುವುದು ಮತ್ತು ಎಂವಿಯವರ ಮುಂದಾಳತ್ವದಲ್ಲಿ ನೀರಾ ಅಚ್ಚುಕಟ್ಟು ಪ್ರದೇಶದಲ್ಲಿ ಜಾರಿಗೆ ತರಲು ಪ್ರಯತ್ನಿಸಿದ ಕಟ್ಟು ಪದ್ದತಿ ಯಶಸ್ವಿಯಾಗಿ ಎಂದೂ ಅನುಷ್ಠಾನಗೊಳ್ಳದಿರುವುದು ಅದರ ವೈಫಲ್ಯದ ಗುರುತು. ಎಂ.ವಿಯವರಿಗೆ ತಾವು ಪ್ರತಿಪಾದಿಸಿದ ಕಟ್ಟು ಪದ್ದತಿಯ ಬಗ್ಗೆ ಅಪಾರ ಮೋಹವಿರುವಂತೆ ಕಂಡುಬರುತ್ತದೆ. ನೀರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟು ಪದ್ದತಿ ಯಶಸ್ವಿಯಾಗದಿರುವುದು ದಾಖಲಾಗಿದ್ದಿತು. ಅದಕ್ಕೆ ಕಾರಣ ಮತ್ತು ಸುಧಾರಣೆಗಳತ್ತ ಎಂ.ವಿಯವರು ಚಿಂತಿಸಿದಂತೆ ಕಾಣುವುದಿಲ್ಲ. 1 ಜುಲೈ 1913 ರಿಂದ ಮಾರಿಕಣಿವೆಯಲ್ಲಿ ಕಟ್ಟು ಪದ್ದತಿ ಜಾರಿಗೆ ತರಲಾಯಿತು. ಮೈಸೂರು ಇಂಜಿನಿಯರ್ಸ್ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಎಂವಿಯವರು ‘ವಾಣಿ ವಿಲಾಸ ಸಾಗರ ಜಲಾಶಯದ ನೀರು ಸಂಪೂರ್ಣ ಬಳಕೆಗೆ ದೊರೆಯುವಂತೆ ಮಾಡಲು ಎತ್ತರದ ಕಾಲುವೆಯನ್ನು ಪ್ರಸ್ತಾವಿಸಲಾಗಿದ್ದಿತು. ಅದನ್ನು ಪೂರ್ಣಗೊಳಿಸಿ, ಕಾಲುವೆಯ ಮೂಲಕ ನೀರು ಬಿಡಲಾಗುತ್ತದೆ. ನೀರಿನ ಸಮರ್ಪಕ ಹಾಗೂ ಉಚಿತ ಬಳಕೆಗೆ ಕಟ್ಟು ಪದ್ದತಿಯನ್ನು ರೈತರಿಗೆ ವಿವರಿಸಲಾಗಿದೆ. ಆ ಪದ್ದತಿಯನ್ನು ರೈತರು ತಾತ್ತ್ವಿಕವಾಗಿ ಒಪ್ಪಿದ್ದಾರೆ. ಈ ಕಾಲುವೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆಯಲು ಪ್ರೋತ್ಸಾಹ ನೀಡಿ ವರಮಾನ ಹೆಚ್ಚಿಸಿಕೊಳ್ಳಬಹುದು. ಜಲಾಶಯದಿಂದ ನೀರಾವರಿಗೆ ಒಳಪಡುವ ಪ್ರದೇಶವನ್ನು ಕುಗ್ಗಿಸಿ, ಅಲ್ಲಿ ಕಬ್ಬಿನಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿದರೆ ಅದರ ಮೂಲಕ ಅದರಲ್ಲಿ ಉತ್ಪನ್ನವಾಗುವ ಆದಾಯದ 1/10 ರಿಂದ 1/15 ರಷ್ಟು ಪ್ರಮಾಣದ ಮೊತ್ತವನ್ನು ನೀರಿನ ತೆರಿಗೆಯ ರೂಪದಲ್ಲಿ ಸಂಗ್ರಹಿಸಬಹುದು ಎಂದು ಹೇಳಿದ್ದರು. ಮುಂದಿನ ಕೆಲ ದಿನಗಳ ನಂತರ ಮಾರಿಕಣಿವೆಯಲ್ಲಿ ಅನುಷ್ಟಾನಗೊಳಿಸಿದ ಕಟ್ಟು ಪದ್ದತಿ ತೃಪ್ತಿಕರವಾಗಿದೆ. ನೀರಿಗಾಗಿ ಜನರ ಬೇಡಿಕೆ ಹೆಚ್ಚಿದ್ದು ನೀರಾವರಿ ಪ್ರದೇಶದಲ್ಲಿ ನೀರಾವರಿಗೆ ಒಳಪಟ್ಟು ಪ್ರದೇಶವೂ ಹೆಚ್ಚಿದೆ. ಕಾಲುವೆಯ ಅಚ್ಚುಕಟ್ಟು ಪ್ರದೇಶಕ್ಕೆ ಹೊರಗಿನ ಜನರೂ (ತಮಿಳರು ?) ಕೂಡ ಬಂದು ನೆಲೆಸುತ್ತಿದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ. ಇದರಿಂದ ಅವರಿಗೆ ಕಟ್ಟು ಪದ್ದತಿ ಸ್ವಯಂಪೂರ್ಣ ಪದ್ದತಿ ಎನ್ನುವ ಅಭಿಪ್ರಾಯ ಇದ್ದಿತೆಂದು ಭಾಸವಾಗುತ್ತದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಮಾರಿಕಣಿವೆಯಲ್ಲಿ ಜಾರಿಗೆ ತಂದ ಕಟ್ಟು ಪದ್ದತಿ ಸಂಪೂರ್ಣವಾಗಿ ವಿಫಲವಾಯಿತು. ಈ ವೈಫಲ್ಯಕ್ಕೆ ವಾಸ್ತವಿಕ ಕಾರಣಗಳನ್ನು ಗುರುತಿಸುವ ಬದಲು ಅಧಿಕಾರ ವರ್ಗದ ಅಸಹಕಾರವೇ ಕಾರಣವೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದು ನಿಜವಲ್ಲ. ನೀರಾ ಅಚ್ಚುಕಟ್ಟು ಪ್ರದೇಶದಲ್ಲಿ ಎಂ.ವಿಯವರ ಕಟ್ಟು ಪದ್ದತಿಗೆ ಬ್ರಿಟಿಷ್ ಸರ್ಕಾರದ ಬೆಂಬಲವಿದ್ದಿತು. ಮಾರಿಕಣಿವೆ ಸಂದರ್ಭದಲ್ಲಿ ಅವರು ಮುಖ್ಯ ಇಂಜಿನಿಯರ್ ಆಗಿದ್ದು ಮಹಾರಾಜರು ಅವರಿಗೆ ಕಾರ್ಯ ನಿರ್ವಹಣೆಯ ಸ್ವಾತಂತ್ರ ನೀಡಿದ್ದರು. ಇಂತಹ ಸ್ಥಿತಿಯಲ್ಲೂ ಕಟ್ಟು ಪದ್ದತಿ ವಿಫಲವಾಗಿದ್ದು ಎನ್ನುವುದಕ್ಕೆ ಕಾರಣಗಳನ್ನು ಹುಡುಕಬೇಕೇ ಹೊರತು ಕೀರ್ತಿ ಬಂದಾಗ ಸಾಧನೆಯ ಲೆಕ್ಕಕ್ಕೆ ಸೇರಿಸಿ , ವೈಫಲ್ಯಗಳಿಗೆ ಸಮಜಾಯಿಷಿ ನೀಡಿ , ಬೇರೆಯವರತ್ತ ಬೆರಳು ತೋರುವುದು ಸರಿಯಲ್ಲ. ಕನ್ನಂಬಾಡಿ ಆಣೆಕಟ್ಟೆ ನಿರ್ಮಾಣಗೊಂಡ ೩೦ ವರ್ಷಗಳ ನಂತರವೂ ವಿಶ್ವೇಶ್ವರಯ್ಯ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಾಯೋಗಿಕ ಅಡಚಣೆಗಳಿಂದಾಗಿ ಕಟ್ಟು ಪದ್ದತಿಯನ್ನು ಜಾರಿಗೆ ತರಲಾಗಿರಲಿಲ್ಲ. ಕೊಲಿನ್ ಸ್ಕಾಟ್’ ಮೊನ್’ಕ್ರೀಫ್ ಮುಂದಾಳತ್ವದ ‘ಇಂಡಿಯನ್ ಇರಿಗೇಷನ್ ಕಮಿಷನ್’ ಎಂ.ವಿಯವರ ಕಟ್ಟು ಪದ್ದತಿಯನ್ನು ಯಥಾವತ್ತಾಗಿ ಜಾರಿಗೆ ತರಲು ಶಿಫಾರಸ್ಸು ಮಾಡಿರುವುದರಿಂದ ಅದು ಅತ್ಯಂತ ಸಮರ್ಪಕ ಪದ್ದತಿಯೆಂಬಂತೆ ಬಿಂಬಿಸಲಾಗಿದೆ. ಈಜಿಪ್ತಿನ ಈಸ್ಟ್ ಡೆಲ್ಟಾ ಭಾಗಕ್ಕೆ ನೀರು ಸಾಗಿಸುವ ಕಾಲುವೆಗಳ ನೀರನ್ನು ರೈತರು ದುಂದು ಬಳಕೆ ಮಾಡುತ್ತಿರುವರೆಂದು ಕೊಲಿನ್ ಸ್ಕಾಟ್ ಮೊನ್’ಕ್ರೀಫ್ ಭಾವಿಸಿದ್ದನು. ಇಂತಹುದೇ ಸಮಸ್ಯೆಯನ್ನು ಎಂ.ವಿಯವರು ಮುಠಾ ಹಾಗೂ ನೀರಾ ಕಾಲುವೆಗಳಲ್ಲಿ ಗುರುತಿಸಿ ಪರಿಹಾರವಾಗಿ ಕಟ್ಟು ನೀರಾವರಿ ಪದ್ದತಿಯನ್ನು ಸೂಚಿಸಿದ್ದರು. ಈ ಪದ್ದತಿ ಕೊಲಿನ್ ಸ್ಕಾಟ್ ಮೋನ್’ಕ್ರೀಫ್’ಗೆ ನೀರಿನ ದುಂದು ಬಳಕೆಯ ಮೇಲೆ ಹಾಕುವ ಕಡಿವಾಣವಾಗಿ ಕಂಡಿದ್ದಿತು. ಕಾಲುವೆಯ ಮೇಲ್ಭಾಗದ ಪ್ರದೇಶಕ್ಕೆ ನಿರ್ದಿಷ್ಟ ಪ್ರಮಾಣದ ನೀರನ್ನು ಇಂಜಿನಿಯರಿಂಗ್ ಲೆಕ್ಕಾಚಾರಗಳ ಮೂಲಕ ಒದಗಿಸಿದರೆ ಸಾಕು. ಇದರಿಂದ ನಿರ್ದಿಷ್ಟ ಪ್ರಮಾಣದ ನೀರು ಗರಿಷ್ಟ ಉತ್ಪಾದನೆಗೆ ನೆರವಾಗುತ್ತದೆ ಎಂದು ಆತ ನಂಬಿದ್ದನು. (41) ಆಣೆಕಟ್ಟೆ ಮತ್ತು ಕಾಲುವೆಗಳ ನಿರ್ಮಾಣ ನೇರವಾಗಿ ಇಂಜಿನಿಯರಿಂಗ್’ಗೆ ಸೇರಿದ ಸಮಸ್ಯೆಗಳು. ಇವುಗಳಿಗೆ ನಿರ್ದಿಷ್ಟ ತಾಂತ್ರಿಕ ಪರಿಹಾರಗಳಿರುತ್ತವೆ. ಕಾಲುವೆಯ ನೀರನ್ನು ಹಂಚುವುದರಲ್ಲಿ ತಾಂತ್ರಿಕವಲ್ಲದ ಐತಿಹಾಸಿಕ , ಸಾಮಾಜಿಕ , ಸಾಂಸ್ಕೃತಿಕ ಅಂಶಗಳು ಸೇರಿರುತ್ತವೆ. ಆದ್ದರಿಂದ ಇದಕ್ಕೆ ಹಲವು ಪರಿಹಾರಗಳಿದ್ದು ಅವುಗಳಲ್ಲಿ ಯಾವುವೂ ಸಮರ್ಪಕವಾಗಿರುವ ಭರವಸೆಯಿಲ್ಲ. ಬ್ರಿಟಿಷ್ ಸರ್ಕಾರಕ್ಕೆ ಎದುರಾದ ಕಾಲುವೆಯ ನೀರು ಹಂಚಿಕೆ ಸಮಸ್ಯೆಗೆ ಎಂ.ವಿಯವರು ಒಂದು ಪರಿಹಾರ ಸೂಚಿಸಿದ್ದರು. ಅದರ ಆಗು-ಹೋಗುಗಳು ಅದರ ಅನುಷ್ಠಾನದಿಂದ ಮಾತ್ರ ತಿಳಿದು ಬರಬಲ್ಲವಾಗಿದ್ದವು. ಆದ್ದರಿಂದ ಒಂದು ಪ್ರಯತ್ನದ ಭಾಗವಾಗಿ ಬ್ರಿಟಿಷರು ಕಟ್ಟು ಪದ್ದತಿಯನ್ನು ಜಾರಿಗೊಳಿಸಲು ಹಸಿರು ನಿಶಾನೆ ತೋರಿದರು. ನಂತರ ಅದರ ಗುಣ-ದೊಷಗಳು ಹೊರಬಂದವು. ಕಾಲುವೆ ನೀರಿನ ಹಂಚಿಕೆಯ ಸಮಸ್ಯೆಯನ್ನು ಬಗೆಹರಿಸಲು ಇಂಜಿನಿಯರ್’ಗಳು ತಮ್ಮ ಅನುಭವ ಹಾಗೂ ವೈಜ್ಞಾನಿಕ ಅಂಶಗಳನ್ನು ಬಳಸಿಕೊಂಡು ಹಲವಾರು ಪದ್ದತಿಗಳನ್ನು ಪ್ರತಿಪಾದಿಸಿದ್ದಾರೆ. ಇದರಲ್ಲಿ ಯಾವುದೊಂದು ಪದ್ದತಿಯೂ ಸರ್ವಸಮರ್ಪಕವಾದುದಲ್ಲ. ಪ್ರತಿ ಪದ್ದತಿಗೂ ಅದರದೇ ಆದ ಇತಿಮಿತಿ ಮತ್ತು ಅನುಷ್ಠಾನದ ಅಡಚಣೆಗಳಿವೆ. ನೀರಿನ ಹಂಚಿಕೆಯ ಸಮಸ್ಯೆಯನ್ನು ಬಗೆಹರಿಸಲು ಎಂ.ವಿಯವರು ಕಟ್ಟು ಪದ್ದತಿಯನ್ನು ಪ್ರತಿಪಾದಿಸಿದರು. ಆ ಪದ್ದತಿಯ ಆಗು-ಹೋಗುಗಳು ನಂತರ ತಿಳಿದು ಬಂದವು. ಭಾರತದಲ್ಲಿ ಕಟ್ಟು ಪದ್ದತಿಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳದಿರುವುದು ಅದರ ಸೀಮಿತ ಯಶಸ್ಸಿನ ಸೂಚಕವಾಗಿದೆ. ಸ್ವಯಂಚಲಿ ಗೇಟುಗಳು (Automatic Gates) ಎಂ.ವಿಯವರ ಇಂಜಿನಿಯರಿಂಗ್ ಸಾಧನೆಗಳಲ್ಲಿ ಅವರು ವಿನ್ಯಾಸಿಸಿ , ಪೇಟೆಂಟ್ ಗಳಿಸಿದ ಮೊದಲ ಬಾರಿಗೆ ಖಡಕವಾಸಲ ಆಣೆಕಟ್ಟೆಯ ಮೇಲೆ ಸ್ಥಾಪಿಸಿದ ಸ್ವಯಂಚಲಿ ಗೇಟ್’ಗಳು ಪ್ರಮುಖವಾಗಿ ಪರಿಗಣಿತವಾಗಿವೆ. ಈ ಸ್ವಯಂಚಲಿ ಗೇಟ್’ಗಳ ಪರಿಕಲ್ಪನೆ , ವಿನ್ಯಾಸದ ಚರಿತ್ರೆ ಕುತೂಹಲಕಾರಿಯಾಗಿದ್ದು ಅವುಗಳ ವಿನ್ಯಾಸದಲ್ಲಿ ಎಂ.ವಿವರ ಪಾತ್ರ ಯಾವ ಬಗೆಯದಾಗಿದ್ದಿತು ಎನ್ನುವುದರತ್ತ ಒಂದು ನೋಟ ಬೀರಲಾಗಿದೆ. ಮೂಲ ಪರಿಕಲ್ಪನೆ ಮತ್ತು ವಿನ್ಯಾಸ ಜಲಾಶಯದಲ್ಲಿ ನೀರಿನ ಮಟ್ಟವನ್ನು ನಿಯಂತ್ರಿಸಲು ಮತ್ತು ಹಲವಾರು ಬಾರಿ ಪ್ರವಾಹ ಇಳಿದ ನಂತರ ಕೋಡಿಯ ಮಟ್ಟಕ್ಕಿಂತಲೂ ಹೆಚ್ಚಿನ ನೀರನ್ನು ಸಂಗ್ರಹಿಸಲು ಕೋಡಿಯ ಮೇಲೆ ನಾನಾ ಬಗೆಯ ಗೇಟ್’ಗಳನ್ನು ಅಥವಾ ಅಡೆತಡೆಗಳನ್ನು ಇರಿಸಬೇಕಾಗುತ್ತದೆ. ಕೋಡಿಯ ಮೇಲೆ ಇರಿಸಿದ ಇಂತಹ ಹೆಚ್ಚುವರಿ ಸಂಗ್ರಹದ ಗೇಟ್’ಗಳನ್ನು ಯಂತ್ರಗಳಿಂದ ಅಥವಾ ಮನುಷ್ಯರ ನೆರವಿನಿಂದ ಎತ್ತಬೇಕಾಗುತ್ತದೆ. ದೊಡ್ಡ ಆಣೆಕಟ್ಟೆಗಳಲ್ಲಿ ಇಂತಹ ಗೇಟುಗಳು 50-100 ರಷ್ಟು ಸಂಖ್ಯೆಯಲ್ಲಿರಬಹುದು. ಇಷ್ಟೊಂದು ಸಂಖ್ಯೆಯ ಗೇಟ್’ಗಳನ್ನು ಎತ್ತಲು ಸಾಕಷ್ಟು ಮಾನವ /ಯಂತ್ರ ಶ್ರಮ ಮತ್ತು ಕಾಲ ಬೇಕು. ಕೆಲವು ಸಲ ಹೀಗೆ ಇರಿಸಿದ ಹೆಚ್ಚುವರಿ ಗೇಟ್’ಗಳನ್ನು ತೆಗೆಯಲು ಕಾಲಾವಕಾಶ ನೀಡದಂತೆ ಮಿಂಚು ನೆರೆ (Flash Floods) ಬರುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ನಿರ್ದಿಷ್ಟ ಮಟ್ಟದವರೆಗೆ ನೀರನ್ನು ಸಂಗ್ರಹಿಸಿ, ಅದಕ್ಕಿಂತಲೂ ಹೆಚ್ಚಿನ ಮಟ್ಟದ ನೀರು ಬಂದಾಗ, ತಾವಾಗಿಯೇ ತೆರೆದು ಹೆಚ್ಚುವರಿ ನೆರೆ ನೀರನ್ನು ಹೊರಗೆ ಬಿಡಲು ಸ್ವಯಂಚಲಿ ಗೇಟ್’ಗಳಿದ್ದರೆ ಸೂಕ್ತ . ಇಂತಹ ಗೇಟುಗಳು ನಿರ್ದಿಷ್ಟ ಮಟ್ಟದ ಮೀರಿದ ನೆರೆ ಬಂದಾಗ ಅದು ಹಗಲಿರಲಿ, ರಾತ್ರಿಯಿರಲಿ- ತಕ್ಷಣವೇ ಅವು ತೆರೆದುಕೊಂಡು ಹೆಚ್ಚಿನ ನೀರನ್ನು ಹೊರಬಿಟ್ಟು ನೀರಿನ ಮಟ್ಟ ನಿರ್ದಿಷ್ಟ ಮಟ್ಟಕ್ಕೆ ಬಂದ ನಂತರ ಮುಚ್ಚಿಕೊಳ್ಳುತ್ತವೆ. ಇಂತಹ ನಾನಾ ಬಗೆಯ ಸ್ವಯಂಚಲಿ ಗೇಟ್’ಗಳನ್ನು ಜಗತ್ತಿನಾದ್ಯಂತ ಹಲವು ಕಡೆ ಸ್ಥಾಪಿಸಲಾಗಿದ್ದಿತು. ಈ ಎಲ್ಲ ಗೇಟ್’ಗಳಿಗೂ ಅವುಗಳದೇ ಆದ ಅನುಕೂಲ ಮತ್ತು ಅನಾನುಕೂಲಗಳಿದ್ದವು. ಭಾತ್’ಘರ್ ಆಣೆಕಟ್ಟೆ ನಿರ್ಮಾಣದ ಮುಖ್ಯ ಇಂಜಿನಿಯರ್ ಆಗಿದ್ದ ವೈಟಿಂಗ್ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ಕೋಡಿಯ ಮೇಲೆ ಸ್ಥಾಪಿಸಬಹುದಾದ ಸ್ವಯಂಚಲಿ ಗೇಟ್ ವಿನ್ಯಾಸ ಮಾಡಿದ್ದನು. ಈ ಗೇಟ್ ಕೆಳಭಾಗದಲ್ಲಿ ಕೀಲಿಕೆ (Hinge) ಹೊಂದಿದ್ದು , ಮೇಲ್ಭಾಗದಲ್ಲಿ ಸರಪಳಿಗೆ ಲಗತ್ತಾಗಿದ್ದಿತು. ಈ ಸರಪಳಿಯ ಇನ್ನೊಂದು ತುದಿ ಆಣೆಕಟ್ಟೆಯಲ್ಲಿ ನಿರ್ಮಿಸಿದ ಬಾವಿಯಲ್ಲಿ (CD) ಇರಿಸಿದ ಸಂತುಲಿತ ತೂಕಕ್ಕೆ (W) ಸೇರಿಸಲಾಗಿದ್ದಿತು. ನೀರಿನ ಸಂಗ್ರಹದ ಗರಿಷ್ಟ ಮಟ್ಟದ ಮೇಲೆ , ಆಣೆಕಟ್ಟೆಯ ನೀರಿನ ಮುಖದಿಂದ ಈ ಬಾವಿಗೆ ಸಂಪರ್ಕ ಒದಗಿಸಲು ದೊಡ್ದ ಗಾತ್ರದ ನೀರು ಒಳಬಿಡುವ ಕೊಳವೆ ಕಿಂಡಿಯನ್ನು ( AB) ಒದಗಿಸಲಾಗಿದ್ದಿತು. ಬಾವಿಯಲ್ಲಿ ಬಿದ್ದ ನೀರು ಹೊರಗೆ ಹರಿದು ಹೋಗಲು ಒಳಬಿಡುವ ಕೊಳವೆ ಕಿಂಡಿಗಿಂತ ಗಾತ್ರದಲ್ಲಿ ಸಣ್ಣದಾಗಿದ್ದ ಮತ್ತೊಂದು ಕೊಳವೆಕಿಂಡಿ ( DE) ಒದಗಿಸಲಾಗಿದ್ದಿತು. ನೀರು ನಿರ್ದಿಷ್ಟ ಮಟ್ಟ ಮುಟ್ಟಿದ ನಂತರ ಕೊಳವೆಯ ಮೂಲಕ ಬಾವಿಗೆ ಬೀಳುತ್ತಿದ್ದ ನೀರು , AB ಕೊಳವೆಯ ಮೂಲಕ ಹೊರಗೆ ಹರಿಯುವ ನೀರಿಗಿಂತ ಹೆಚ್ಚಿಗಿರುತ್ತಿದ್ದಿತು. ಇದರಿಂದ ಬಾವಿಯಲ್ಲಿ ನೀರು ಸಂಗ್ರಹವಾಗಿ, ನೀರಿನ ತೇಲಿಸುವ ಪರಿಣಾಮದಿಂದಾಗಿ (Buoyancy Effect) ಸಂತುಲಿತ ತೂಕ (W) ಹಗುರವಾಗಿ ಸರಪಳಿ ಮೇಲೇರುತ್ತಿದ್ದಿತು. ಹೀಗೆ ಮೇಲೇರಿದಾಗ ಕೋಡಿಯ ಮೇಲಿನ ಗೇಟ್’ನ ಮೇಲ್ಭಾಗ ನಿಧಾನವಾಗಿ ಹಿಂದಕ್ಕೆ ಕೋಡಿಯ ಮೇಲೆ ಒರಗಿ ಹೆಚ್ಚಿನ ನೀರನ್ನು ಹೊರಹಾಕುತ್ತಿದ್ದಿತು. ಕೋಡಿಯ ಮೇಲೆ ನೀರು ನಿರ್ದಿಷ್ಟ ಮಟ್ಟಕ್ಕಿಂತ ಕೆಳಗಿಳಿದಾಗ , ಬಾವಿಯೊಳಗೆ AB ಮೂಲಕ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿ , DE ಮೂಲಕ ಹರಿಯುವ ನೀರಿನ ಪ್ರಮಾನ ಹೆಚ್ಚಿ ಅಲ್ಪಕಾಲದಲ್ಲೇ ಬಾವಿ ಬರಿದಾಗಿ , ತೂಕ ಕೆಳಗಿಳಿದು ಕೋಡಿಯ ಗೇಟ್ ತನ್ನ ಸ್ಥಾನಕ್ಕೆ ಬಂದು ಹೆಚ್ಚಿನ ನೀರು ಹರಿಯದಂತೆ ತಡೆದು ನಿಲ್ಲಿಸುತ್ತಿದ್ದಿತು. ವೈಟಿಂಗ್ ವಿನ್ಯಾಸಗೊಳಿಸಿದ ಈ ಸ್ವಯಂಚಲಿ ಗೇಟ್ ಪರಿಕಲ್ಪನೆ ಸರಿಯಾಗಿದ್ದರೂ ಪ್ರಾಯೋಗಿಕವಾಗಿ ಹಲವು ಸಮಸ್ಯೆಗಳನ್ನು ಮುಂದೊಡ್ಡಿದ್ದಿತು. ಈ ಗೇಟ್ ಕೋಡಿಯ ಮೇಲೆ ನೀರು ನಿರ್ದಿಷ್ಟ ಮಟ್ಟಕ್ಕಿಂತ ಕೆಳಗೆ ಇಳಿದ ತಕ್ಷಣ ಮುಚ್ಚಿಕೊಳ್ಳದೆ ನಿಧಾನ ಗತಿಯಲ್ಲಿ ಮುಚ್ಚಿಕೊಳ್ಳುತ್ತಿದ್ದುದರಿಂದ ಕೋಡಿಯ ಮೇಲೆ ಗೇಟಿನ ಎತ್ತರಕ್ಕೆ ಬದಲಾಗಿ ಕೇವಲ ಎರಡು ಅಡಿ ನೀರನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಿದ್ದಿತು. (ಚಿತ್ರ : ವೈಟಿಂಗ್ ಗೇಟ್) ವೈಟಿಂಗ್ ಗೇಟ್’ಗಳನ್ನು ಸುಧಾರಿಸಿ ಇ.ಕೆ.ರೀನಾಲ್ಡ್ ಉತ್ತಮವಾಗಿ ಕಾರ್ಯ ನಿರ್ವಹಿಸುವ ಗೇಟ್’ಗಳನ್ನು ತಯಾರಿಸಿ ಪೇಟೆಂಟ್ ಪಡೆದನು, ಈ ಗೇಟ್’ಗಳನ್ನು ಭಾತ್’ಘರ್ ಆಣೆಕಟ್ಟೆಯ ಮೇಲೆ ಸ್ಥಾಪಿಸಲಾಯಿತು. ಭಾತ್’ಘರ್ ಆಣೆಕಟ್ಟೆಯಲ್ಲಿ ಪ್ರವಾಹದ ನೀರನ್ನು ಹೊರಹಾಕಲು 3.05 ಮೀ ( 10 ಅಡಿ) ಅಗಲದ 103 ಕಂಡಿಗಳಿವೆ. ಇವುಗಳಲ್ಲಿ 88 ಕಂಡಿಗಳಿಗೆ ಇ.ಕೆ.ರೀನಾಲ್ಡ್ ವಿನ್ಯಾಸಗೊಳಿಸಿ ಪೇಟೆಂಟ್ ಪಡೆದಿದ್ದ ಸ್ವಯಂಚಲಿ ಗೇಟ್’ಗಳನ್ನು ಅಳವಡಿಸಲಾಯಿತು. ಈ ಗೇಟ್’ಗಳು 1892 ರಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸತೊಡಗಿದವು. (ಚಿತ್ರ : ರೀನಾಲ್ಡ್ ಗೇಟ್) [5] ರೀನಾಲ್ಡ್ ಸ್ವಯಂಚಲಿ ಗೇಟನ್ನು ಮೇಲ್ಭಾಗದ ಮೂಲಕ ಎರಡು ಸರಪಳಿಗಳಿಂದ ಹಿಡಿದಿಡಲಾಗಿದೆ. ಈ ಸರಪಳಿಗಳು ರಾಟೆಯ ಮೇಲೆ ಸಾಗಿ ಆಣೆಕಟ್ಟೆಯ ಹಿಂಬಾಗದಲ್ಲಿರುವ ಬಾವಿಯಲ್ಲಿರುವ ತೂಕಕ್ಕೆ ಲಗತ್ತಾಗಿರುತ್ತವೆ. ವೈಟಿಂಗ್ ಗೇಟುಗಳಿಗಿರುವಂತೆ ಇಲ್ಲಿಯೂ ಬಾವಿಯ ಒಳಕ್ಕೆ , ತೂಕದ ಮೇಲೆ ನೀರು ಬಿಡುವ (AB) ಹಾಗೂ ಬಾವಿಯಿಂದ ನೀರನ್ನು ಹೊರಹಾಕುವ (DE) ಎರಡೂ ಕೊಳವೆ ಕಂಡಿಗಳಿರುತ್ತವೆ. ಜಲಾಶಯದಲ್ಲಿ ನೀರು ನಿರ್ದಿಷ್ಟ ಗರಿಷ್ಟ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವಾಗ ಬಾವಿಯಿಂದ ಹೊರಹೋಗುವ ನೀರಿನ ಪ್ರಮಾಣಕ್ಕಿಂತ ಒಳಸೇರುವ ನೀರಿನ ಪ್ರಮಾಣ ಹೆಚ್ಚಿದ್ದು ಬಾವಿ ಯಾವಾಗಲೂ ತುಂಬಿದ್ದು ತೂಕ ಮೇಲೆದ್ದು ಗೇಟುಗಳು ತೆರೆದುಕೊಳ್ಳುತ್ತವೆ. ಕೋಡಿಯ ಮೇಲೆ ನೀರು ನಿರ್ದಿಷ್ಟ ಮಟ್ಟಕ್ಕಿಂತ ಕೆಳಗಿಳಿದಾಗ ಬಾವಿಯನ್ನು ಒಳಸೇರುವ ನೀರಿಗಿಂತ ಹೊರಹೋಗುವ ನೀರಿನ ಪ್ರಮಾಣ ಹೆಚ್ಚಿರುತ್ತದೆ. ಆಗ ತೂಕ ಕೆಳಗಿಳಿದು ಗೇಟುಗಳು ಮುಚ್ಚಿಕೊಳ್ಳುತ್ತವೆ. ಗೇಟು ಹಾಗೂ ತೂಕಗಳ ನಡುವೆ ಗಾಲಿ ಮತ್ತು ಹಳಿಗಳ ನಡುವಿನ ಘರ್ಷಣೆಯನ್ನು ಮೀರುವಂತಹ ಸೂಕ್ಷ್ಮವಾದ ವ್ಯತ್ಯಾಸವಿದೆ. ಆಣೆಕಟ್ಟೆಯ ನೀರಿನ ಮುಖದ ಕಡೆ ಒದಗಿಸಲಾಗಿರುವ ಈ ಗೇಟ್’ಗಳು ಹೆಚ್ಚಿನ ಘರ್ಷಣೆಯಿಲ್ಲದೆ ಸರಾಗವಾಗಿ ಚಲಿಸುವಂತೆ ಮಾಡಲು ಅವುಗಳಿಗೆ ಇಳಿಜಾರಿನ ಹಳಿಗಳನ್ನು ಒದಗಿಸಲಾಗಿದೆ. ಇದರಿಂದ ಗೇಟ್’ನ ಒಳಮುಖ ಮತ್ತು ಆಣೆಕಟ್ಟೆಯ ಗೋಡೆಯ ನಡುವೆ ಸಣ್ಣ ತೆರವು ಉಳಿಯುತ್ತದೆ. ಈ ತೆರವಿನ ಮೂಲಕ ನೀರು ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗುತ್ತದೆ. ಭಾತ’ಘರ್ ಆಣೆಕಟ್ಟೆಗೆ ಒದಗಿಸಿದ ರೀನಾಲ್ಡ್’ನ ಈ ಸುಧಾರಿಸಿದ ಪ್ರತಿಯೊಂದು ಗೇಟ್’ 2.9 ಟನ್ ತೂಗಿದರೆ , ತೂಕ ಮತ್ತು ಅದರರೊಳಗೆ ತುಂಬಿದ ಮರಳು ಸೇರಿ 4.21 ಟನ್ ತೂಕವಿದ್ದು , 3.3 ಟನ್ ತೂಕದ ನೀರನ್ನು ಸ್ಥಳಾಂತರಗೊಳಿಸುತ್ತಿದ್ದಿತು . ತೂಕ ಗಾಳಿಯಲ್ಲಿ 4.21 ಟನ್ ತೂಗಿದರೆ , ಬಾವಿಯಲ್ಲಿ ನೀರು ತುಂಬಿದಾಗ 0.985 ತೂಕ ತಳೆದು , ಗೇಟಿಗಿಂತ 1.91 ಟನ್ ಹಗುರವಾಗಿರುತ್ತಿದ್ದಿತು. ಅಗತ್ಯಕ್ಕೆ ತಕ್ಕಂತೆ ತೂಕವನ್ನು ಬದಲಿಸುವ ವ್ಯವಸ್ಥೆಯಿದ್ದಿತು. ರೀನಾಲ್ಡ್’ನ ಈ ಗೇಟುಗಳು ನೆರೆ ಗರಿಷ್ಟ ಮಟ್ಟ ತಲುಪಿದಾಗ -ಆಣೆಕಟ್ಟೆಯ ಮೇಲಿನಿಂದ 2.44 ಮೀ (8’) ಕೆಳಗೆ- ತಾವಾಗಿಯೇ ತೆರೆದುಕೊಂಡು ಹೆಚ್ಚುವರಿ ನೀರನ್ನು ಹೊರಗೆ ಹಾಕಿ , ನೆರೆ ಗರಿಷ್ಟ ಮಟ್ಟದಿಂದ ಕೆಳಗಿಳಿದಾಗ ತಾವಾಗಿಯೇ ಮುಚ್ಚಿಕೊಂಡು ,ಆಣೆಕಟ್ಟೆಯ ಕೋಡಿಯ ಮಟ್ಟಕ್ಕಿಂತ 2.44 ಮೀ (8’) ಎತ್ತರಕ್ಕೆ ಹೆಚ್ಚುವರಿಯಾಗಿ ನೀರನ್ನು ನಿಲ್ಲಿಸುತ್ತಿದ್ದವು. (2:166-168,,13:196-201) ಖಡಕವಾಸಲ ಜಲಾಶಯ ಪುಣೆ ನಗರಕ್ಕೆ ಕುಡಿಯುವ ಹಾಗೂ ನೀರಾವರಿಗೆ ಬೇಕಾದ ನೀರನ್ನು ಒದಗಿಸಲು ನಿರ್ಮಾಣಗೊಂಡಿದ್ದಿತು. ಹಲವಾರು ಬಾರಿ ಜಲಾಶಯಾದಲ್ಲಿ ಸಂಗ್ರಹಗೊಳ್ಳುವ ನೀರಿನಿಂದ ಇವೆರಡು ಪೂರೈಕೆಗಳನ್ನು ಮಾಡುವುದು ಸಾಧ್ಯವಿರಲಿಲ್ಲ. ಕೋಡಿಯ ಮಟ್ಟಕ್ಕಿಂತ ಎತ್ತರಕ್ಕೆ ಹೆಚ್ಚು ನೀರನ್ನು ನಿಲ್ಲಿಸಿ ಈ ಅಗತ್ಯಗಳನ್ನು ಪೂರೈಸುವ ಹಲವಾರು ಪ್ರಯತ್ನಗಳಾಗಿದ್ದವು. ಕೋಡಿಯ ಮೇಲೆ 1.22 ಮೀ (4’) ಎತ್ತರಕ್ಕೆ ನೀರನ್ನು ನಿಲ್ಲಿಸಿದರೆ ಹೆಚ್ಚುವರಿಯಾಗಿ 1.294 ಟಿ.ಎಂ.ಸಿ ನೀರನ್ನು ಸಂಗ್ರಹಿಸಲು ಸಾಧ್ಯವಿದ್ದು , ಇದು ಜಲಾಶಯದ ಯೋಜಿತ ಸಾಮರ್ಥ್ಯದ 50% ನಷ್ಟು ಇರುವುದನ್ನು ಗುರುತಿಸಿ 1884 ರಲ್ಲಿ ಕೋಡಿಗಿಂತ ನಾಲ್ಕು ಅಡಿ ಹೆಚ್ಚು ಎತ್ತರಕ್ಕೆ ನೀರನ್ನು ನಿಲ್ಲಿಸುವ ಪ್ರಸ್ತಾಪ ಮಾಡಲಾಯಿತು. ಇದಕ್ಕಾಗಿ ಕೋಡಿಯ ಮೇಲೆ ಕಬ್ಬಿಣದ ಕಂಬಗಳನ್ನು ಅಳವಡಿಸಿ ಅವುಗಳ ನಡುವೆ 1.22 ಮೀ ಎತ್ತರದ (4‘) ಮರದ ಅಡ್ಡಪಟ್ಟಿಗಳನ್ನು ಇರಿಸಲಾಯಿತು. ಖಡಕವಾಸಲ ಜಲಾಶಯದ ಕೋಡಿಗಳ ಮೇಲೆ ಗರಿಷ್ಟ 1759 ಘ.ಮೀ/ಸೆಕೆಂಡ್ (62000 ಘನ ಅಡಿ/ ಸೆಕೆಂಡ್ ) ನೆರೆ ಬರಬಹುದೆಂದು ಲೆಕ್ಕ ಹಾಕಿ ಅದಕ್ಕಿಂತಲೂ 20 % ಹೆಚ್ಚಿನ ನೀರನ್ನು ಸಾಗಿಸುವ (2128 ಘ.ಮೀ/ಸೆಕೆಂಡ್ =75000 ಘನ ಅಡಿ/ಸೆಕೆಂಡ್) ಸಾಮರ್ಥ್ಯದ ಕೋಡಿಗಳನ್ನು ವಿನ್ಯಾಸಿಸಿ ಕಟ್ಟಲಾಗಿದ್ದಿತು. ಹಲವಾರು ಬಾರಿ ವಿನ್ಯಾಸಗೊಂಡ ಸಾಮರ್ಥ್ಯದ ಸನಿಹದ ನೆರೆ ಬಂದಾಗ ಈ ಅಡ್ಡ ಹಲಗೆಗಳನ್ನು ಇರಿಸುವ ಹಾಗೂ ತೆಗೆಯುವ ಕಾರ್ಯ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದಿತು. ಸೆಪ್ಟೆಂಬರ್ 1900 ರಲ್ಲಿ ಕೋಡಿಯ ಮೇಲಿರಿಸಿದ್ದ ಅಡ್ಡಪಟ್ಟಿಗಳ ಮೇಲೆ 1.12 ಮೀ (3.65’) ನೀರು ಹರಿಯತೊಡಗಿತು. ಈ ನೆರೆಯ ರಭಸದಲ್ಲಿ ಕೆಲಸಗಾರರಿಂದ ತಕ್ಷಣವೇ ಹಲಗೆಗಳನ್ನು ತೆಗೆದು ನೆರೆ ನೀರು ಹರಿದು ಹೋಗುವಂತೆ ಮಾಡಲಾಗಲಿಲ್ಲ. ಅದ್ದರಿಂದ ಅಪಾಯಕಾರಿಯಾದ ಮರದ ಹಲಗೆಗಳ ಬದಲು ಭಾತ್’ಘರ್’ನಲ್ಲಿರುವಂತಹ ಇ.ಕೆ. ರೀನಾಲ್ಡ್ ವಿನ್ಯಾಸಿಸಿದಂತಹ ಗೇಟ್’ಗಳನ್ನು ಅಳವಡಿಸಲು ನಿರ್ಧರಿಸಲಾಯಿತು. (13:198-199) 1899ರಲ್ಲಿ ಎಂ ವಿಯವರು ಖಡಕವಾಸಲ ಜಲಾಶಯದ ಮುಠಾ ಕಾಲುವೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಲ್ಲಿಂದ ಮುಂದೆ ಎಂ.ವಿಯವರು ಸ್ವಯಂಚಲಿ ಗೇಟ್’ಗಳ ಉಪಜ್ಞೆಕಾರರಾಗಿ ಕಾಣಿಸಿಕೊಳ್ಳುತ್ತಾರೆ. ವೈಟಿಂಗ್ ಮೂಲ ಪರಿಕಲ್ಪನೆಯ , ಇ.ಕೆ ರೀನಾಲ್ಡ್ ಸುಧಾರಿಸಿದ ಸ್ವಯಂಚಲಿ ಗೇಟ್’ಗಳು ಭಾತ್’ಘರ್ ಆಣೆಕಟ್ಟೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವಾದರೂ ಅವುಗಳನ್ನು ಇರುವಂತೆಯೇ ಖಡಕವಾಸಲದಲ್ಲಿ ಬಳಸಿಕೊಳ್ಳುವಂತಿರಲಿಲ್ಲ. ಭಾತ್’ಘರ್ ಆಣೆಕಟ್ಟೆಯನ್ನು ಕಟ್ಟುವಾಗಲೇ ಇ.ಕೆ.ರೀನಾಲ್ಡ್ಸ್ ಗೇಟ್’ಗಳ ಸ್ಥಾಪನೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದ್ದಿತು. ಖಡಕವಾಸಲ ಆಣೆಕಟ್ಟೆಯನ್ನು ಇಂತಹ ಗೇಟ್’ಗಳ ಸ್ಥಾಪನೆಗೆ ಅನುಕೂಲವಾಗುವಂತೆ ಕಟ್ಟಿರಲಿಲ್ಲ. ಆದ್ದರಿಂದ ರೀನಾಲ್ಡ್ಸ್ ಗೇಟ್’ಗಳಲ್ಲಿ ಕೆಲ ಸುಧಾರಣೆಗಳನ್ನು ತಂದು ಖಡಕವಾಸಲ ಆಣೆಕಟ್ಟೆಯ ಮೇಲೆ ಸ್ಥಾಪಿಸಲು ಎಂ.ವಿಯವರು ಮುಂದಾದರು. ತಾವು ಸುಧಾರಿಸಿದ ರೀನಾಲ್ಡ್ಸ್ ಗೇಟ್’ಗಳ ಹಕ್ಕುಸ್ವಾಮ್ಯ ಪಡೆಯಲು 1888 ರ ಇನ್ವೆನ್ಷನ್ಸ್ ಅಂಡ್ ಡಿಸೈನ್ಸ್ ಆಕ್ಟ್ ನಿಬಂಧನೆಗಳಡಿಯಲ್ಲಿ 2 ಜನವರಿ 1902 ರಂದು ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಿದರು. ಇದು 18 ,ಜನವರಿ 1902 ರ ‘ಗವರ್ನಮೆಂಟ್ ಆಫ್ ಇಂಡಿಯಾ-ಡಿಪಾರ್ಟ್’ಮೆಂಟ್ ಆಫ್ ರೆವಿನ್ಯೂ ಅಂಡ್ ಅಗ್ರಿಕಲ್ಚರ್ – ಗೆಝೆಟ್ ಆಫ್ ಇಂಡಿಯಾ – ಪಾರ್ಟ್ 2 - ಇನ್ವೆನ್ಷನ್ಸ್ ಅನ್ದ್ ಡೆಸೈನ್ಸ್ ‘ನಲ್ಲಿ –ನಂ102 ಆಫ್ 1901 ರಲ್ಲಿ ದಾಖಲಾಗಿ ಪ್ರಕಟಗೊಂಡಿತು. ಎಂ.ವಿಯವರು ಪೇಟೆಂಟ್’ಗೆ ಸಲ್ಲಿಸಿದ ಶೀರ್ಷಿಕೆ ‘ ‘ಇಂಪ್ರೂವಿಂಗ್ ದಿ ಆಟೋಮ್ಯಾಟಿಕ್ ಆಕ್ಷನ್ ಆಫ್ ಸ್ಲೂಯಿಸ್ ಗೇಟ್ಸ್ ಅಫ್ ವೇಸ್ಟ್ ವೀರ್ಸ್ ಆರ್ ಡ್ಯಾಮ್ಸ್ ಆಫ್ ಸ್ಟೋರೇಜ್ ರಿಸರ್ವಾಯಿರ್ಸ್ ‘ (ಚಿತ್ರ : ಎಂ.ವಿ ಗೇಟ್) ತಾಂತ್ರಿಕ ಪರಿಕಲ್ಪನೆಯಲ್ಲಿ ಇ.ಕೆ.ರೀನಾಲ್ಡ್ ಮತ್ತು ಎಂ.ವಿಯವರ ಸ್ವಯಂಚಲಿ ಗೇಟ್’ಗಳ ನಡುವೆ ಅತ್ಯಲ್ಪ ವ್ಯತ್ಯಾಸಗಳಿವೆ. ರೀನಾಲ್ಡ್ ವಿಧಾನದಲ್ಲಿ ಪ್ರತಿಯೊಂದು ಗೇಟಿನ ಎಡಬಲದಲ್ಲಿ ಆಣೆಕಟ್ಟೆಯೊಳಗೆ ಮೊದಲೇ ಕಟ್ಟಿರುವ ಎರಡು ಬಾವಿಗಳು ಮತ್ತು ಆ ಬಾವಿಗಳೊಳಗೆ ಗೇಟಿನ ಸ್ವಯಂಚಲನೆಯನ್ನು ನಿಯಂತ್ರಿಸುವ ತೂಕಗಳಿದ್ದವು.ಎಂ.ವಿಯವರು ಇದರ ಬದಲು ಎಂಟು ಗೇಟುಗಳನ್ನು ಒಂದು ಗುಂಪು ಮಾಡಿ , ಅವೆಲ್ಲವಕ್ಕೂ ಒಂದೇ ಬಾವಿ ಮತ್ತು ತೂಕವನ್ನು ಒದಗಿಸಿದರು. ಈ ಗೇಟ್’ಗಳು ಪರಸ್ಪರ ಸಮತೋಲನದಲ್ಲಿರುವಂತೆ ಮಾಡಲಾಗಿದ್ದಿತು. ನೆರೆ ಬಂದಾಗ ಇವುಗಳಲ್ಲಿ ನಾಲ್ಕು ಹಗುರ ಗೇಟುಗಳು ನೆರೆ ಮಟ್ಟಕ್ಕಿಂತ ಮೇಲೇರಿ , ಇನ್ನೂ ನಾಲ್ಕು ಭಾರದ ಗೇಟುಗಳು ಕೋಡಿ ಮಟ್ಟಕ್ಕಿಂತ ಕೆಳಗಿಳಿದು ನೆರೆಯ ನೀರು ಹೊರಹೋಗಲು ತೆರೆದುಕೊಳ್ಳುತ್ತಿದ್ದವು. ಈ ವ್ಯವಸ್ಥೆಯನ್ನು ಸ್ವಲ್ಪ ಮಾರ್ಪಡಿಸಿ ಸಂದರ್ಭಕ್ಕೆ ಅನುಗುಣವಾಗಿ ಎಲ್ಲ ಗೇಟುಗಳು ಮೇಲೇರುವಂತೆ ಅಥವಾ ಕೆಳಗಿಳಿಯುವಂತೆ ಮಾಡಬಹುದಾಗಿದ್ದಿತು. ಭಾರದ ಗೇಟುಗಳು 5.8 ರಿಂದ 6.1 ಟನ್ ತೂಕವಿದ್ದರೆ , ಹಗುರ ಗೇಟ್’ಗಳು 2.24 ಟನ್ ತೂಕವಿವೆ. ಭಾರದ ಗೇಟು ಕೆಳಗಿಳಿಯುವ ಮತ್ತು ಹಗುರ ಗೇಟ್’ ಮೇಲೇರುವ ಪ್ರಮಾಣ ಒಂದೇ ಆಗಿರುತ್ತದೆ. ಭಾರದ ಗೇಟ್’ಗಳನ್ನು ಸರಪಳಿಯ ಮೂಲಕ ಆಣೆಕಟ್ಟೆಯ ಹಿಂದಿನ ಬಾವಿಯಲ್ಲಿರುವ 20-22 ಘನ.ಮೀ ಸಾಮರ್ಥ್ಯದ ತೂಕಕ್ಕೆ ನೇತುಹಾಕಲಾಗಿದೆ. ಮರಳು ತುಂಬಿ ಮುಚ್ಚಿದ ಸಿಲಿಂಡರ್’ನ್ನು ತೂಕವಾಗಿ ಬಳಸಿರುವುದರಿಂದ , ಅದರಲ್ಲಿನ ಮರಳಿನ ಪ್ರಮಾಣವನ್ನು ವ್ಯತ್ಯಾಸ ಮಾಡಿ ತೂಕವನ್ನು ಬದಲಿಸಬಹುದು. ಆಣೆಕಟ್ಟೆಯಲ್ಲಿ ಜಲಾಶಯದ ಕಡೆ ಒಂದು ಕಾಲುವೆ ಮಾಡಲಾಗಿದೆ. ಈ ಕಾಲುವೆಯ ನೀರಿನ ಗರಿಷ್ಟ ಮಟ್ಟಕ್ಕಿಂತ 150 ಮಿ.ಮೀ ಕೆಳಗಿರುವಂತೆ ‘P’ ಯಲ್ಲಿ ಒಂದು ಕೊಳವೆಯನ್ನು ಒದಗಿಸಲಾಗಿದೆ. ‘P’ ಯಿಂದ ನೀರು ತೂಕವಿರುವ ಬಾವಿಗೆ ಹರಿಯುತ್ತದೆ. ಬಾವಿಯಲ್ಲಿ ಬಿದ್ದ ನೀರು ಹೊರಗೆ ಹರಿಯಲು ಅದರ ತಳದಲ್ಲಿ ಕೊಳವೆಯೊಂದನ್ನು ಒದಗಿಸಲಾಗಿದೆ. ಬಾವಿಯಲ್ಲಿ ನೀರಿಲ್ಲದೆ ಇರುವಾಗ ಭಾರದ ಗೇಟ್’ಗಳು ತೂಗು ಹಾಕಿರುವ ಸರಪಳಿಯನ್ನು ಬಿಗಿಯಾಗಿ ಎಳೆದು ಹಿಡಿದಿರುತ್ತವೆ. ಜಲಾಶಯದಲ್ಲಿ ನೀರು ಒಂದು ನಿರ್ದಿಷ್ಟ ಮಟ್ಟ ಮೀರಿದಾಗ , ಕಾಲುವೆಯಲ್ಲಿ ಹರಿದು ‘P’ ಮಾರ್ಗದ ಮೂಲಕ ಬಾವಿಗೆ ಹರಿಯುತ್ತದೆ. ಬಾವಿಯಲ್ಲಿ ನೀರು ತುಂಬಿದಂತೆ ತೂಕ ನೀರಿನಲ್ಲಿ ಮುಳುಗಿ ಅದರ ಮುಳುಗಿದ ಗಾತ್ರಕ್ಕೆ ಸಮನಾದ ನೀರಿನ ತೂಕವನ್ನು ಕಳೆದುಕೊಂಡು ಮೇಲೇರುತ್ತದೆ. ಹಾಗೆ ಮೇಲೇರಿದಾಗ ಭಾರವಾದ ಗೇಟ್’ಗಳನ್ನು ಹೊತ್ತಿರುವ ಸರಪಳಿಗಳು ಸಡಿಲವಾಗುತ್ತವೆ. ಇದರಿಂದ ಭಾರದ ಗೇಟುಗಳು ಕೋಡಿಯ ಮಟ್ಟಕ್ಕಿಂತ ಕೆಳಗಿಳಿದರೆ , ಹಗುರ ಗೇಟ್’ಗಳು ನೆರೆಯ ಮಟ್ಟಕ್ಕಿಂತ ಮೇಲೇರಿ ನೀರು ಹರಿಯತೊಡಗುತ್ತದೆ. ಜಲಾಶಯದ ನೀರು ನಿರ್ದಿಷ್ಟ ಮಟ್ಟಕ್ಕಿಂತ ಕೆಳಗಿಳಿದಾಗ ತೂಕದ ಬಾವಿಗೆ ಜಲಾಶಯದ ಕಡೆಯಿಂದ ನೀರು ಸರಬರಾಜು ಆಗದೆ , ಬಾವಿಯಲ್ಲಿ ಮೊದಲಿದ್ದ ನೀರು ಹೊರಗೆ ಹರಿದು ಹೋಗುತ್ತದೆ. ಆಗ ತೂಕ ಮತ್ತೊಮ್ಮೆ ತನ್ನ ಮೂಲ ತೂಕ ಗಳಿಸಿ ಕೆಳಗಿಳಿದು ಅವುಗಳನ್ನು ಹಿಡಿದಿರುವ ಸರಪಳಿ ಬಿಗಿಯಾಗುತ್ತದೆ. ಇದರಿಂದ ಹಗುರ ಗೇಟ್ಗಳು ಕೆಳಗಿಳಿಯುತ್ತವೆ. ಜಲಾಶಯದ ಕಡೆಗಿನ ಕಾಲುವೆಗೆ ಜಲಾಶಯದ ವಿವಿಧ ಮಟ್ಟಗಳಿಂದ ನೀರು ಹರಿಯಲು ನಿಯಂತ್ರಿಸಬಹುದಾದ ವಾಲ್ವ್’ಗಳನ್ನು ಒದಗಿಸಲಾಗಿದೆ. ಇದರಿಂದ ಜಲಾಶಯದಲ್ಲಿ ಬೇಕಾದ ಮಟ್ಟದವರೆಗೆ ಕಾಯಿರಿಸಿಕೊಳ್ಳೂವಂತೆ ಗೇಟ್’ಗಳು ಕಾರ್ಯ ನಿರತವಾಗುವಂತೆ ಮಾಡಬಹುದು. ಎಂ.ವಿಯವರಿಗೆ ಈ ಸ್ವಯಂಚಲಿ ಗೇಟ್’ಗಳ ಮೇಲೆ ಪೇಟೆಂಟ್ ಸಿಕ್ಕಿತು. ಇವುಗಳನ್ನು ಖಡಕವಾಸಲ ಜಲಾಶಯದ ಕೋಡಿಯ ಮೇಲೆ ಸ್ಥಾಪಿಸಲು ಅನುಮತಿ ದೊರಕಿದ ಮೇಲೆ ಎಂವಿಯವರು ಗೇಟ್’ಗಳ ತಯಾರಿಕೆಗೆ ಬಾಂಬೆಯಲ್ಲಿದ್ದ ಮೆ. ಜಿಯೋ ಗಹಗನ್ ಅಂಡ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡರು. 1901-03ರ ಅವಧಿಯಲ್ಲಿ ಈ ಗೇಟ್ ಗಳನ್ನು ಖಡಕವಾಸಲ ಜಲಾಶಯದ ಕೋಡಿಗಳ ಮೇಲೆ ಸ್ಥಾಪಿಸಲಾಯಿತು. ಈ ಗೇಟ್’ಗಳಿಗಾಗಿ ನಾನು ಪೇಟೆಂಟ್ ಪಡೆದಿದ್ದೆನಾದರೂ , ಇವುಗಳ ಸ್ಥಾಪನೆಯ ಕೆಲಸ ನನ್ನ ನೇತೃತ್ವದಲ್ಲಿ ನಡೆದುದರಿಂದ ನಾನು ಯಾವುದೇ ರಾಯಧನ ಪಡೆಯಲಿಲ್ಲ ಎಂದು ಎಂ.ವಿ ದಾಖಲಿಸಿದ್ದಾರೆ. ಖಡಕವಾಸಲದ ಆಣೆಕಟ್ಟೆಯ ಮೆಲೆ ಎಂ.ವಿಯವರು ಸುಧಾರಿಸಿದ 8x11=88 ಗೇಟ್’ಗಳನ್ನು ಸ್ಥಾಪಿಸಲಾಗಿದೆ. ಈ ಗೇಟ್’ಗಳು 3 ಲಕ್ಷ ರೂಪಾಯಿ ಮತ್ತು ಅವುಗಳನ್ನು ಸ್ಥಾಪಿಸಲು ನಡೆಸಿದ ಕಾಮಗಾರಿಗಳಿಗಾಗಿ 2 ಲಕ್ಷ ರೂಪಾಯಿ ವೆಚ್ಚವಾಗಿದ್ದಿತು. ಕಾಲುವೆಗೆ ನೀರು ಹರಿಸುವ ವಾಲ್ವ್’ಗಳನ್ನು ಮನುಷ್ಯರು ನಿಯಂತ್ರಿಸಿದಾಗ ಗೇಟುಗಳು ತೆಗೆದುಕೊಳ್ಳಲು 7 ನಿಮಿಷ , ಮುಚ್ಚಲು 8 ನಿಮಿಷಗಳು ಬೇಕಾಗುತ್ತವೆ. ಎಲ್ಲ ವಾಲ್ವ್’ಗಳನ್ನು ನಿಯಂತ್ರಿಸಲು ಒಬ್ಬ ವ್ಯಕ್ತಿಗೆ 20 ನಿಮಿಷಗಳು ಬೇಕಾಗುತ್ತದೆ ಎಂದು ನಂತರದ ಅನುಭವದಿಂದ ತಿಳಿದುಬಂದಿತು. ಇಂತಹುದೇ ಗೇಟ್’ಗಳನ್ನು ಮುಂದೆ ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ ತಿಗ್ರಾ ಹಾಗೂ ಕನ್ನಂಬಾಡಿ ಆಣೆಕಟ್ಟೆಗಳಲ್ಲಿ ಸ್ಥಾಪಿಸಲಾಯಿತು. ಸ್ವಯಂಚಲಿ ಗೇಟ್’ಗಳು ಸ್ಥಾಪನೆಯಾದ 45 ವರ್ಷಗಳ ನಂತರ ನಾನು ಖಡಕವಾಸಲಕ್ಕೆ ಭೇಟಿ ನೀಡಿದಾಗಲೂ ಅವು ಸುಸ್ಥಿತಿಯಲ್ಲಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದವು ಎಂದು ಎಂ.ವಿಯವರು ದಾಖಲಿಸಿದ್ದಾರೆ.[6] This indenture made – Seventeenth day of December one thousand nine hundred and two between M.Visvesvaraya a civil engineer in the public works department of the Bombay presidency hereinafter called “the patentee” which expression unless repugnanat to the subject or context shall include his heirs , extended administrators and assigns of the one part and George Gahagan , Roland Hayes Gahagan , Edwin George Gahagan , George Meyers Alfred Gahagan all of Bomabay Europeans carrying on business in Bombay under the name & firm of Geo Gahagan & Co., hereinafter called “the licensee’ which expression shall unless repugnanat to the subject or context & be deemed to include the person or persons for the time being constituting the firm of Geo Gahagan and Co., of the other part whereas in a specification filed in accordance with the Indian Invention Act No.5 of 1888 the Patent has been granted to exclusive principle of using excercising and vending to British India a certain inventions of an Improved system of automatic sluice gates and of authorizing – to do a copy of the specifications ಖಡಕವಾಸಲ ಆಣೆಕಟ್ಟೆಯನ್ನು ವಿನ್ಯಾಸಿಸಿ ನಿರ್ಮಿಸಿದ್ದ ಫೈಫ್’ಗೆ ತಾನು ಮಾಡಿದ ವಿನ್ಯಾಸ ಪ್ರಚಲಿತ ಇಂಜಿನಿಯರಿಂಗ್ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇಲ್ಲವೆಂದು ತಿಳಿದಿದ್ದಿತು. ಆಣೆಕಟ್ಟೆ ಜರುಗದಂತೆ ಸುರಕ್ಷತೆ ಒದಗಿಸಲು ಅದರ ಹಿಂಭಾಗದಲ್ಲಿ ಮಣ್ಣನ್ನು ತುಂಬಲಾಗಿದ್ದಿತು. ಇ.ಕೆ. ರೀನಾಲ್ಡ್ ಏಕಸ್ವಾಮ್ಯ ಪಡೆದ ಸ್ವಯಂಚಲಿ ಗೇಟ್’ಗಳನ್ನು ಮೊದಲಿಗೆ ಭಾತ್’ಘರ್ ಆಣೆಕಟ್ಟೆಯಲ್ಲಿ ಅಳವಡಿಸಿಲಾಯಿತು. ಭಾತ್’ಘರ್ ಆಣೆಕಟ್ಟೆ ಆ ಕಾಲದಲ್ಲಿ ಪ್ರಚಲಿತವಿದ್ದ ಇಂಜಿನಿಯರಿಂಗ್ ತತ್ತ್ವಗಳ ಮೇಲೆ ವಿನ್ಯಾಸಗೊಳಿಸಿ ಕಟ್ಟಲಾಗಿದ್ದಿತು. ಎಂ.ವಿಯವರು ಪ್ರಚಲಿತ ಇಂಜಿನಿಯರಿಂಗ್ ತತ್ತ್ವಗಳಿಗೆ ಅನುಗುಣವಾಗಿ ವಿನ್ಯಾಸಗೊಳ್ಳದ, ಸುರಕ್ಷತೆಯ ಬಗ್ಗೆ ಸಂಶಯವಿದ್ದ ಖಡಕವಾಸಲ ಆಣೆಕಟ್ಟೆಯ ಮೇಲೆ ಸ್ವಯಂಚಲಿ ಗೇಟ್’ಗಳನ್ನು ಸ್ಥಾಪಿಸಲು ಮುಂದಾಗಿದ್ದರು. ಇಂತಹ ಆಣೆಕಟ್ಟೆಯ ಮೇಲೆ ಸ್ವಯಂಚಲಿ ಗೇಟ್’ಗಳನ್ನು ಅಳವಡಿಸುವುದರಿಂದ , ಹೆಚ್ಚಿನ ಮಟ್ಟಕ್ಕೆ ನೀರು ಸಂಗ್ರಹವಾಗಿ ಆಣೆಕಟ್ಟೆಯ ಮೇಲೆ ಒತ್ತಡಗಳು ಹೆಚ್ಚುವುದರಿಂದ ಅದರ ಸುರಕ್ಷತೆಗೆ ಏರುಪೇರು ಆಗುವ ಸಾಧ್ಯತೆಗಳಿದ್ದವು. ಅಂತಹ ಸಾಧ್ಯತೆಗಳನ್ನು ಅದಕ್ಕೆ ಪರಿಹಾರವಾಗಿ ಆಣೆಕಟ್ಟೆಯನ್ನು ಬಲಪಡಿಸುವ ಅಥವಾ ಬಲಪಡಿಸದಿರುವ ತೀರ್ಮಾನಗಳನ್ನು ಹೇಗೆ ತೆಗೆದುಕೊಳ್ಳಲಾಯಿತು ಅಥವಾ ಪ್ರಚಲಿತ ಇಂಜಿನಿಯರಿಂಗ್ ತತ್ತ್ವಗಳಿಗೆ ಅನುಗುಣವಾಗುವಂತೆ ಆಣೆಕಟ್ಟೆಯನ್ನು ಮಾರ್ಪಡಿಸುವ ಚರ್ಚೆಗಳು ನಡೆದಿದ್ದವೆ ಎನ್ನುವ ಯಾವುದೇ ಬಗೆಯ ತಾಂತ್ರಿಕ ವಿವರಗಳನ್ನು ಅವರು ನೀಡುವುದಿಲ್ಲ. ಸ್ವಯಂಚಲಿ ಗೇಟ್’ಗಳ ಮೂಲ ಪರಿಕಲ್ಪನೆ ಎಂ.ವಿಯವರಿಗೆ ಸೇರಿದ್ದಲ್ಲ. ಅಂತಹ ಪರಿಕಲ್ಪನೆ ಮತ್ತು ಬಳಕೆಯ ಮುಂದುವರೆದ ಮೂರನೆಯ ಹಂತದಲ್ಲಿ (ವೈಟಿಂಗ್-ಇ.ಕೆ.ರೆನಾಲ್ಡ್ಸ್-ಎಂ.ವಿ) ಅವರು ಕಾಣಿಸಿಕೊಳ್ಳುತ್ತಾರೆ. ಸಮಕಾಲೀನ ಇಂಜಿನಿಯರಿಂಗ್ ದಾಖಲೆಗಳಲ್ಲಿ ಇಂತಹ ಗೇಟ್’ಗಳ ಪರಿಕಲ್ಪನೆ ಮತ್ತು ಸುಧಾರಣೆಯನ್ನು ಇಂಜಿನಿಯರಿಂಗ್’ನ ಮತ್ತೊಂದು ಸಹಜ ವಿದ್ಯಾಮಾನ ಎಂಬಂತೆ ಪರಿಗಣಿಸಲಾಗಿದೆಯೇ ಹೊರತು ಅದನ್ನು ಅನನ್ಯ ಇಂಜಿನಿಯರಿಂಗ್ ಸಾಧನೆ , ಎಂ.ವಿಯವರಂತಹ ಪ್ರತಿಭಾವಂತರಿಗೆ ಮಾತ್ರ ಅದು ಸಾಧ್ಯವಾಗುವ ಉಪಜ್ಞೆ ಎಂದು ಯಾರೂ ಭಾವಿಸಿಲ್ಲ. 1903 ರಲ್ಲಿ ಭಾರತದ ಸಮಗ್ರ ನೀರಾವರಿ ಯೋಜನೆಗಳನ್ನು ‘ದಿ ಇರಿಗೇಷನ್ ಇನ್ ಇಂಡಿಯಾ’ದಲ್ಲಿ ದಾಖಲಿಸಿದ ಹರ್ಬರ್ಟ್ ಎಂ. ವಿಲ್ಸನ್ ಮತ್ತು 1905 ರಲ್ಲಿ ‘ದಿ ಇರಿಗೇಷನ್ ವರ್ಕ್ಸ್ ಆಫ್ ಇಂಡಿಯಾ’ ಪ್ರಕಟಿಸಿದ ರಾಬರ್ಟ್ ಬರ್ಟನ್ ಬಕ್ಲೆ ಹಲವು ಇಂಜಿನಿಯರಿಂಗ್ ಪರಿಕಲ್ಪನೆಗಳಲ್ಲಿ ಎಂವಿಯವರ ಸ್ವಯಂಚಲಿ ಗೇಟ್’ಗಳು ಒಂದೆಂಬಂತೆ ಸಹಜವಾಗಿ ದಾಖಲಿಸಿದ್ದಾರೆ. ಜಗತ್ತಿನಲ್ಲಿ ಆ ಕಾಲದಲ್ಲಿ ಪ್ರಕಟಗೊಂಡ ತಾಂತ್ರಿಕ ಸಾಹಿತ್ಯದಲ್ಲಿ ಎಂವಿಯವರ ಈ ಗೇಟ್’ಗಳ ಉಲ್ಲೇಖಗಳಿಲ್ಲ ಹಾಗೂ ಇರುವ ಒಂದೆರಡು ಉಲ್ಲೇಖಗಳು ಅದನ್ನು ರೋಮಾಂಚನಕಾರಿಯಾಗಿ ಕಂಡಿಲ್ಲ. ಎಂ.ವಿಯವರು ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ನಂತರ ದಿವಾನರಾದ ಮೇಲೆ ಅವರ ಕೆಲಸಗಳನ್ನು ತಾಂತ್ರಿಕ ವಸ್ತುನಿಷ್ಠ ದೃಷ್ಟಿಯಿಂದ ನೋಡದೆ , ಅವರ ಪ್ರತಿಯೊಂದು ಕೆಲಸವನ್ನು ಅಸಾಧಾರಣ ಸಾಧನೆ ಎಂದು ಒಂದು ವರ್ಗ ಪ್ರತಿಪಾದಿಸಿ ಬಿಂಬಿಸತೊಡಗಿತು. ಇದರಿಂದ ಎಂ.ವಿಯವರ ಸ್ವಯಂಚಲಿ ಗೇಟ್’ಗಳ ಬಗ್ಗೆ ವ್ಯಾಪಕ ಪ್ರಚಾರ ಸಿಕ್ಕಿತು. ಎಂ.ವಿಯವರಂತೆ ಬೇರೆ ಬಗೆಯ ಸ್ವಯಂಚಲಿ ಗೇಟ್’ಗಳನ್ನು ಉಪಜ್ಞಿಸಿದ್ದ ಇಂಜಿನಿಯರ್’ಗಳ ಹೆಸರು ಬೆಳಕಿಗೆ ಬರಲಿಲ್ಲ.[7] ಹೊರಗಿನ ಬೆಂಬಲವಿಲ್ಲದೆ ತಾವಾಗಿಯೇ ತೆರೆದು ಮುಚ್ಚಿಕೊಳ್ಳುತ್ತವೆ ಎನ್ನುವುದರ ಹೊರತಾಗಿ ಸ್ವಯಂಚಲಿ ಗೇಟ್’ಗಳು ಬೇರೆ ಗೇಟ್’ಗಳಿಗಿಂತ ಭಿನ್ನವಲ್ಲ. ಮನುಷ್ಯ ನಿರ್ಮಿಸಿದ ಪ್ರತಿಯೊಂದರಲ್ಲೂ ಅದರದೇ ಆದ ಗುಣ,ದೋಷಗಳಿರುತ್ತವೆ. ದೋಷಗಳಿಲ್ಲದ ಒಂದು ನಿರ್ಮಾಣ/ತಯಾರಿಕೆ ಸಾಧ್ಯವಾಯಿತೆಂದರೆ ಆ ನಿಟ್ಟಿನಲ್ಲಿ ಮನುಷ್ಯ ಇನ್ನೇನೂ ಮಾಡುವುದಿಲ್ಲ ಎಂದೇ ಅರ್ಥ. ಹಾಗಾದರೆ ಎಂ.ವಿಯವರ ಸ್ವಯಂಚಲಿ ಗೇಟ್’ಗಳು ಅಷ್ಟೊಂದು ಪರಿಪೂರ್ಣವೇ , ಅವುಗಳಲ್ಲಿ ಸೈದ್ಧಾಂತಿಕ , ಪ್ರಾಯೋಗಿಕ ಕೊರತೆಗಳಿಲ್ಲವೆ ? ಇದಕ್ಕೆ ಉತ್ತರ ನೀಡಬೇಕಾದವರು ಅದನ್ನು ಬಳಸುವವರು ಮಾತ್ರ. ಖಡಕವಾಸಲ ಅಥವಾ ಕನ್ನಂಬಾಡಿ ಆಣೆಕಟ್ಟೆಯ ಮೇಲೆ ಸ್ಥಾಪಿಸಿದ ಈ ಗೇಟ್’ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ , ಅವುಗಳ ನಿರ್ವಹಣೆ , ದುರಸ್ತಿ ಎಂತಹ ಸಮಸ್ಯೆಗಳನ್ನು ಒಡ್ಡುತ್ತದೆ ಎಂದು ಯಾರೂ ದಾಖಲಿಸಿಲ್ಲ. ಎಂ.ವಿಯವರ ಗುಣಗಾನದ ಗುಂಗಿನಲ್ಲಿ ಇಂತಹ ತಾಂತ್ರಿಕ ವಸ್ತುನಿಷ್ಠ ಸಂಗತಿಗಳು ಹಿನ್ನೆಲೆಗೆ ಸರಿದು ನಾಚಿ ನಿಂತಿವೆ. ಬಳಕೆಯ ನೇರ ಅನುಭವ ಇಲ್ಲದಿದ್ದರೂ ವಿನ್ಯಾಸದ ಲಕ್ಷಣಗಳ ಮೇಲೆ ಕೆಲವೊಂದು ಸಂಗತಿಗಳನ್ನು ಗಮನಿಸಬಹುದು. ಇ.ಕೆ ರೀನಾಲ್ಡ್ಸ್ ಗೇಟ್’ಗಳು ಪ್ರತಿಯೊಂದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಿದ್ದು, ಒಂದು ಇನ್ನೊಂದರ ಮೇಲೆ ಅವಲಂಬಿತವಾಗಿಲ್ಲ. ಎಂ.ವಿಯವರು ವಿನ್ಯಾಸಿಸಿದ ಗೇಟ್’ಗಳು 4 ಅಥವಾ 8 ರ ಗುಂಪಿನಲ್ಲಿ ಕೆಲಸ ಮಾಡುತ್ತವೆ. ಈ ಗುಂಪಿನಲ್ಲಿ ಯಾವುದಾದರೂ ಒಂದು ಗೇಟ್’ನಲ್ಲಿ ತಾಂತ್ರಿಕ ದೋಷ ಅಥವಾ ಅಡಚಣೆ ಉಂಟಾದರೆ ಅದರೊಂದಿಗಿರುವ ಉಳಿದೆಲ್ಲ ಗೇಟ್’ಗಳು ನಿಷ್ಕ್ರಿಯವಾಗುತ್ತವೆ. ಒಂದು ಗೇಟ್’ನ್ನು ದುರಸ್ತಿ ಅಥವಾ ನಿರ್ವಹಣೆಗೆ ಬಿಚ್ಚಬೇಕೆಂದರೆ ಅದು ಉಳಿದ ಗೇಟ್’ಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ದುರಸ್ತಿಗೆ ಒಂದು ಗೇಟ್ ಬಿಚ್ಚಿದರೆ ಅದರ ಜಾಗದಲ್ಲಿ ಬೇರೆ ಸಮ ತೂಕವನ್ನು ಇರಿಸಬೇಕಾಗುತ್ತದೆ. ಇದಕ್ಕೆ ಅನುಷ್ಠಾನದ ದೃಷ್ಟಿಯಲ್ಲಿ ಹಲವಾರು ಅಡಚಣೆಗಳಿವೆ. ಆದ್ದರಿಂದ ಎಂ.ವಿಯವರು ಸ್ಥಾಪಿಸಿದ ಗೇಟ್’ಗಳು ನಿಜವಾಗಿಯೂ ಹೇಗಿದ್ದವು ಎನ್ನುವುದನ್ನು ಅದನ್ನು ಬಳಸಿದ ಇಂಜಿನಿಯರ್’ಗಳು ವಸ್ತುನಿಷ್ಠವಾಗಿ ದಾಖಲಿಸಿದಾಗ ಮಾತ್ರ ಅವುಗಳ ಗುಣಾವಗುಣಗಳು ತಿಳಿದು ಬರುತ್ತವೆಯೇ ಹೊರತು ಗುಣಗಾನದಿಂದಲ್ಲ. ಸರ್ ಎಂ.ವಿಯವರು ವಿನ್ಯಾಸಿಸಿ , ಕನ್ನಂಬಾಡಿ ಆಣೆಕಟ್ಟೆಯ ಮೇಲೆ ಸ್ಥಾಪಿಸಿರುವ ಈ ಗೇಟ್’ಗಳು ಸ್ಥಾಪನೆಯಾದ ದಿನದಿಂದ ಈವರೆಗೆ ಒಂದು ಸಲವೂ ಕೆಲಸ ಮಾಡಿಲ್ಲವಾದರೂ , ಸತ್ಯ ಸಂಗತಿಗಳನ್ನು ಮುಚ್ಚಿಟ್ಟು ಅವುಗಳನ್ನು ಹೊಗಳಿ , ಅಟ್ಟಕ್ಕೇರಿಸುವ ಪರಂಪರೆಗೇನೂ ಧಕ್ಕೆಯಾಗಿಲ್ಲ. ಕಾಲುವೆ ನಿಯಂತ್ರಕ ಕಟ್ಟು ಪದ್ದತಿ ಯಶಸ್ಸು ಕಾಣಬೇಕೆಂದರೆ ರೈತರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅವಧಿಯಲ್ಲಿ ಪೂರ್ವ ನಿಗದಿತ ಪ್ರಮಾಣದ ನೀರನ್ನು ಕಾಲುವೆಗಳಲ್ಲಿ ಹರಿಸಬೇಕು. ಕಾಲುವೆಯಲ್ಲಿ ನಿಗದಿತ ಪ್ರಮಾಣದ ನೀರನ್ನು ಒದಗಿಸಲು ಹಲವಾರು ತಾಂತ್ರಿಕ ಸಾಧನ ಹಾಗೂ ರಚನೆಗಳ ನಿರ್ಮಾಣಗಳನ್ನು ಗಿಬ್ಸ್ , ಕ್ರಂಪ್ ಮುಂತಾದ ಇಂಜಿನಿಯರ್’ಗಳು ಬಹು ಹಿಂದೆಯೇ ಮಾಡಿದ್ದರು. ಅವುಗಳಲ್ಲಿ ಕೆಲವು ಜಾರಿಗೊಂಡಿದ್ದವು. ಕಟ್ಟು ನೀರಾವರಿ ಪದ್ದತಿಯನ್ನು ಪ್ರತಿಪಾದಿಸಿದ್ದ ಎಂ.ವಿ.ಯವರು ಇಂತಹ ಒಂದು ನಿಯಂತ್ರಣ ಸಾಧನ ಹಾಗೂ ರಚನೆಯನ್ನು ಪ್ರತಿಪಾದಿಸಿದ್ದರು. ಎಂ.ವಿಯವರ ಈ ಸಾಧನ ಬಹುತೇಕ ‘ಸ್ವಯಂಚಲಿ ಗೇಟ್’’ಗಳ ತತ್ತ್ವದ ಮೇಲೆ ನಿರ್ಮಾಣಗೊಂಡಿದ್ದಿತು. 1904 ರಲ್ಲಿ ಸಿಮ್ಲಾದಲ್ಲಿ ನಡೆದ ‘ಇರಿಗೇಷನ್ ಕಾನ್ಫರೆನ್ಸ್’ನಲ್ಲಿ ಸ್ವಯಂಚಲಿ ಗೇಟ್’ಗಳ ಕ್ರಿಯಾ ಸುಧಾರಣೆಯ ಲೇಖನದೊಂದಿಗೆ ಈ ನಿಯಂತ್ರಕದ ಲೇಖನವೂ ಮಂಡಿತವಾಗಿ ಪ್ರಕಟಗೊಂಡಿತು. (ಚಿತ್ರ : ಕಾಲುವೆ ನಿಯಂತ್ರಕ ) ಈ ನಿಯಂತ್ರಕದಲ್ಲಿ ವಿತರಣೆ ಕಾಲುವೆಯನ್ನು ಒಂದು ಕೋಠಿಯೊಂದಿಗೆ (Chamber) ಸಂಪರ್ಕಿಸಲಾಗಿದೆ. ಇದರಿಂದ ಕಾಲುವೆ ಹಾಗೂ ಕೋಠಿಯಲ್ಲಿರುವ ನೀರಿನ ಮಟ್ಟ ಒಂದೇ ಆಗಿರುತ್ತದೆ. ಕೋಠಿಯೊಳಗಿನ ನೀರಿನಲ್ಲಿ ಒಂದು ಬ್ಯಾರೆಲ್ ತೇಲಿಬಿಡಲಾಗಿದೆ. ಕೋಠಿಯೊಳಗಿನ ನೀರು ವಾಲ್ವ್ ನಿಯಂತ್ರಣದ ಮೂಲಕ ಬ್ಯಾರೆಲ್’ ಒಳಗೆ ಸೇರುತ್ತದೆ. ಬ್ಯಾರೆಲ್’ನ ಕೆಳಭಾಗವನ್ನು ನೀರು ಹರಿಸಬೇಕಾದ ಕೆಳಕಾಲುವೆಯೊಂದಿಗೆ ಮಡಚುವ ಕೊಳವೆಯೊಂದರ ಮೂಲಕ ಸಂಪರ್ಕಿಸಲಾಗಿದೆ. ಕೋಠಿಯ ನೀರಿನ ಮಟ್ಟಕ್ಕೆ ಅನುಗುಣವಾಗಿ ಬ್ಯಾರೆಲ್’ನಲ್ಲಿ ನೀರು ಹರಿಯುತ್ತದೆ. ಕೋಠಿಯೊಳಗಿನ ನೀರು ನಿರ್ದಿಷ್ಟ ಮಟ್ಟ ದಾಟಿದರೆ ಅದಕ್ಕೆ ಅನುಗುಣವಾಗಿ ಮಡಚು ಕೊಳವೆ ಕುಗ್ಗಿ ಕೆಳಗಿಳಿದು ನೀರನ್ನು ಹರಿಸಿ ಮತ್ತೆ ಸ್ವಸ್ಥಾನಕ್ಕೆ ಬರುತ್ತದೆ. ಇದರಿಂದ ಯಾವಾಗಲೂ ನಿರ್ದಿಷ್ಟ ಪ್ರಮಾಣದ ನೀರು ಮಾತ್ರ ಹರಿಯಲು ಸಾಧ್ಯವಾಗುತ್ತದೆ. ಕಟ್ಟು ಪದ್ದತಿ ಜಾರಿಗೆ ತಂದ ನಂತರ ಎಂ.ವಿಯವರು ಪ್ರತಿಪಾದಿಸಿದ್ದ ಈ ನಿಯಂತ್ರಕಗಳನ್ನು ನೀರಾ ವಿತರಣ ಕಾಲುವೆಯ ಮೇಲೆ ಸ್ಥಾಪಿಸಲಾಗಿದ್ದಿತೇ ಎನ್ನುವುದು ತಿಳಿಯದು. ಮಾರಿಕಣಿವೆಯಲ್ಲಿ ಕಟ್ಟು ಪದ್ದತಿ ಜಾರಿಗೊಳಿಸುವ ನಿರ್ಧಾರ ಕೈಗೊಂಡಾಗ ಇಂತಹ ನಿಯಂತ್ರಕಗಳನ್ನು ಪರಿಗಣಿಸಲಾಗಿದ್ದಿತೋ ತಿಳಿಯದು. [8] ಆಣೆಕಟ್ಟೆಗಳ ವಿನ್ಯಾಸದಲ್ಲಿ ಒಸ್ಮಾನ್ ಸಾಗರ ಮತ್ತು ಹಿಮಾಯತ್ ಸಾಗರ ಆಣೆಕಟ್ಟೆಗಳು ಕನ್ನಂಬಾಡಿ ಆಣೆಕಟ್ಟೆಯನ್ನು ಎಂ.ವಿಯವರೊಂದಿಗೆ ಬಿಡಿಸಲಾಗದಂತೆ ಗುರುತಿಸಿ ದೊಡ್ಡ ಆಣೆಕಟ್ಟೆಗಳ ವಿನ್ಯಾಸದಲ್ಲಿ ಎಂ.ವಿಯವರನ್ನು ಸಮಗಟ್ಟುವುದಿರಲಿ ಆ ವಿಚಾರದಲ್ಲಿ ಬೇರೆಯವರು ಅವರ ಸನಿಹ ಸುಳಿಯಲೂ ಸಾಧ್ಯವಿಲ್ಲ ಎನ್ನುವ ನಂಬಿಕೆ ಕರ್ನಾಟಕದಲ್ಲಿ ಜನಜನಿತವಾಗಿದೆ. ಇದರ ಹಿನ್ನೆಲೆಯಲ್ಲಿ ಆಣೆಕಟ್ಟೆಯ ವಿನ್ಯಾಸದಲ್ಲಿ ಎಂ.ವಿಯವರಿಗೆ ಇದ್ದ ಅನುಭವ , ಅವುಗಳನ್ನು ವಿನ್ಯಾಸಿಸಲು , ಕಟ್ಟಲು ಅವರು ಬಳಸುತ್ತಿದ್ದ ಸೂತ್ರ , ವಿಧಾನಗಳು ಯಾವುವು ಎಂದು ನೋಡೋಣ. ಎಂ.ವಿಯವರ ವೃತ್ತಿ ಜೀವನದತ್ತ ಒಂದು ನೋಟ ಹರಿಸಿದರೆ 1909 ರಲ್ಲಿ ಹೈದರಾಬಾದ್’ನ ಪ್ರವಾಹ ನಿಯಂತ್ರಣ ಯೋಜನೆಯನ್ನು ರೂಪಿಸುವಂತೆ ಕರೆ ಹೋದಾಗ ಅವರಿಗೆ ದೊಡ್ಡ ಆಣೆಕಟ್ಟೆಯ ವಿನ್ಯಾಸ ಮಾಡಿದ ಹಾಗೂ ನಿರ್ಮಿಸಿದ ಅನುಭವವೇ ಇರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಬಾಂಬೆ ಸರ್ಕಾರದಲ್ಲಿ ಸಹಾಯಕ , ಕಾರ್ಯ ನಿರ್ವಾಹಕ , ಅಧೀಕ್ಷಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಅವರು ಕಾಲುವೆಗಳ ನಿರ್ವಹಣೆ , ನೀರಿನ ಹಂಚಿಕೆ , ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ವಿನ್ಯಾಸ ಮತ್ತು ನಿರ್ಮಾಣಗಳಲ್ಲಿ ಭಾಗಿಯಾಗಿದ್ದರೇ ಹೊರತು ಯಾವುದೇ ದೊಡ್ಡ ಕಲ್ಲಿನ ಆಣೆಕಟ್ಟೆಯ ವಿನ್ಯಾಸ ಹಾಗೂ ನಿರ್ಮಾಣದಲ್ಲಿ ಭಾಗಿಯಾಗಿರಲಿಲ್ಲ. ಬಾಂಬೆ ಸರ್ಕಾರದ ವ್ಯಾಪ್ತಿಯಲ್ಲಿದ್ದ ಖಡಕವಾಸಲ (ಫೈಫ್ ಜಲಾಶಯ) ಎಂ.ವಿಯವರು ಕೆಲಸಕ್ಕೆ ಸೇರುವ ವೇಳೆಗೆ ನಿರ್ಮಾಣಗೊಂಡಿದ್ದಿತು. ಭಾತ್’ಘರ್ , ತಾನ್ಸಾ ಆಣೆಕಟ್ಟೆಗಳ ವಿನ್ಯಾಸ ಮತ್ತು ನಿರ್ಮಾಣಗಳನ್ನು ಬ್ರಿಟಿಷ್ ಇಂಜಿನಿಯರ್’ಗಳು ಮಾಡಿದ್ದರು. ಬಾಂಬೆ ಸರ್ಕಾರದಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಫೈಫ್ ಪ್ರಯತ್ನದ ಫಲವಾಗಿ ದೊಡ್ಡ ಆಣೆಕಟ್ಟೆಗಳ ವಿನ್ಯಾಸದ ತತ್ತ್ವಗಳು , ವಿನ್ಯಾಸದ ವಿವರ ಮತ್ತು ದಾಖಲೆಗಳು ಲಭ್ಯವಿದ್ದವು. ಇದೇ ವಿಭಾಗದಲ್ಲಿ ಇದ್ದ ಎಂ.ವಿಯವರು ಈ ಎಲ್ಲ ತಾಂತ್ರಿಕ ದಾಖಲೆಗಳನ್ನು ಹೊಂದಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂ.ವಿಯವರು ವಿನ್ಯಾಸ ಮಾಡಿದ ಮೊದಲ ದೊಡ್ಡ ಆಣೆಕಟ್ಟೆಯೆಂದರೆ ಮೂಸಿ ನದಿಗೆ ಅಡ್ಡಲಾಗಿ ಕಟ್ಟಿರುವ ಒಸ್ಮಾನ್ ಸಾಗರ ಆಣೆಕಟ್ಟೆ (1912-1920). ಈ ಆಣೆಕಟ್ಟೆಯ ವಿನ್ಯಾಸವನ್ನು ಅನುಸರಿಸಿ ನವಾಬ್ ಆಲಿ ನವಾಜ್ ಜಂಗ್ ಬಹದ್ದೂರ್ ಈಸಿ ನದಿಗೆ ಅಡ್ಡಲಾಗಿ ಕಟ್ಟಿದ ಹಿಮಾಯತ್ ಸಾಗರ (1919-1926) , ವೈರ ಮತ್ತು ಕದ್ದಂ ಆಣೆಕಟ್ಟೆಗಳ ವಿನ್ಯಾಸ ಹಾಗೂ ನಿರ್ಮಾಣ ಮಾಡಿದರು. ಒಸ್ಮಾನ್ ಸಾಗರ ಆಣೆಕಟ್ಟೆಯ ನಿರ್ಮಾಣವನ್ನು ಸಿ.ಟಿ.ದಲಾಲ್ ಮುಂದಾಳತ್ವದಲ್ಲಿ ಮಾಡಲಾಯಿತು. ಉಸ್ಮಾನ್ ಸಾಗರ ಆಣೆಕಟ್ಟೆಯ ವಿನ್ಯಾಸ ಎಂ.ವಿಯವರು ದೊಡ್ದ ಆಣೆಕಟ್ಟೆಗಳ ವಿನ್ಯಾಸದಲ್ಲಿ ಎಷ್ಟು ಪರಿಶ್ರಮ ಹೊಂದಿದ್ದರು ಎಂದು ವಿಮರ್ಶಾತ್ಮಕವಾಗಿ ನೋಡಲು ನೆರವಾಗುತ್ತವೆ. (1) 1912 ರಲ್ಲಿ ನಿರ್ಮಾಣ ಪ್ರಾರಂಭವಾದ ಒಸ್ಮಾನ್ ಸಾಗರ ಆಣೆಕಟ್ಟೆ ನದಿ ಪಾತ್ರದಿಂದ 34.16 ಮೀ (112’) ಹಾಗೂ ಬುನಾದಿಯಿಂದ ಗರಿಷ್ಟ ಎತ್ತರ 36.6 ಮೀ (120’) ಇದೆ. 1919 ರಲ್ಲಿ ನಿರ್ಮಾಣ ಪ್ರಾರಂಭವಾದ ಹಿಮಾಯತ್ ಸಾಗರ ಆಣೆಕಟ್ಟೆ ನದಿ ಪಾತ್ರದಿಂದ 27.785 ಮೀ (91’ )ಹಾಗೂ ಬುನಾದಿಯಿಂದ 32.05 ಮೀ (105’) ಗರಿಷ್ಟ ಎತ್ತರವಿದೆ. ಈ ಆಣೆಕಟ್ಟೆಗಳ ವಿನ್ಯಾಸವನ್ನು ಆ ಕಾಲದಲ್ಲಿ ಪ್ರಚಲಿತವಿದ್ದ ಸೂತ್ರಗಳಿಗೆ ಅನುಗುಣವಾಗಿ ಮಾಡಲಾಗಿದೆ. ಈ ಆಣೆಕಟ್ಟೆಗಳು ಜಲಾಶಯದ ನೀರಿನ ಬಲಗಳಿಗೆ ಒಳಗಾದಾಗ ಹೊರಗಿನ ಯಾವ ಹೆಚ್ಚುವರಿ ನೆರವಿಲ್ಲದೆ ಮುಗುಚದೆ , ಜರುಗದೆ ಇರುವಂತೆ ಸುರಕ್ಷಿತವಾಗಿ ಇರುವಂತೆ ವಿನ್ಯಾಸಿಸಲಾಗಿದೆ ಎಂದು ದಾಖಲಾಗಿದೆ. ಆದರೆ ವಾಸ್ತವದಲ್ಲಿ ಈ ಆಣೆಕಟ್ಟೆಗಳ ಹಿಮ್ಮುಖದಲ್ಲಿ ದೊಡ್ಡ ಗಾತ್ರದ ಮಣ್ಣಿನ ಏರಿಯನ್ನು ನಿರ್ಮಿಸಲಾಗಿದೆ. ಭಾರತ ಸರ್ಕಾರದ ಕೇಂದ್ರೀಯ ನೀರಾವರಿ ಇಲಾಖೆ-ಪ್ರಕಟಣೆ ಸಂಖ್ಯೆ-48 ‘ ಡ್ಯಾಟಾ ಆಫ್ ಹೈ ಡ್ಯಾಮ್ಸ್ ಇನ್ ಇಂಡಿಯಾ-1950’ ರಲ್ಲಿ ಒಸ್ಮಾನ್ ಸಾಗರ್ ಆಣೆಕಟ್ಟೆಯನ್ನು ಎಂ.ವಿಯವರು ‘ಸ್ವಂತ ನಿಲ್ಲಬಲ್ಲ’ (Self Supporting) ಆಣೆಕಟ್ಟೆಯಾಗಿ ವಿನ್ಯಾಸಗೊಳಿಸಿದರು. ಆದರೂ ಜರುಗಿಕೆಯ ವಿರುದ್ಧ ಹೆಚ್ಚಿನ ಸುರಕ್ಷತತೆಗಾಗಿ ಮುಂಭಾಗದಲ್ಲಿ ಮಣ್ಣಿನ ಏರಿಯನ್ನು ಒದಗಿಸಲಾಗಿದೆ ಎಂಬ ಟಿಪ್ಪಣಿ ಸೇರಿಸಲಾಗಿದೆ. ಕೆಲ ಮೂಲಗಳು ಒಸ್ಮಾನ್ ಸಾಗರ್ ಆಣೆಕಟ್ಟೆಯ ಜಲಾಶಯದ ಗರಿಷ್ಠ ಮಟ್ಟವನ್ನು ಏರಿಸಲಾಯಿತು. ಹೀಗೆ ಬದಲಾದ ಮಟ್ಟಕ್ಕೆ ನೀರಿನ ಮಟ್ಟಕ್ಕೆ ಆಣೆಕಟ್ಟೆಯನ್ನು ಮತ್ತೊಮ್ಮೆ ಪರಿಕ್ಷಿಸಿದಾಗ ಆಣೆಕಟ್ಟೆಯ ಮುಂದಡಿಯಲ್ಲಿ ಎಳೆತದ ಒತ್ತಾಯಗಳಿದ್ದವು (Tensile Stresses). ಈ ಒತ್ತಾಯಗಳನ್ನು ಇಲ್ಲವಾಗಿಸಲು ಎಂ.ವಿಯವರು ಆಣೆಕಟ್ಟೆಯ ಮುಂಭಾಗದಲ್ಲಿ ಮಣ್ಣಿನ ಏರಿ ನಿರ್ಮಿಸಿದರು ಎಂದು ತಿಳಿಸುತ್ತವೆ. ಆದರೆ ಈ ವಿಷಯವನ್ನು ‘ ಡ್ಯಾಟಾ ಆಫ್ ಹೈ ಡ್ಯಾಮ್ಸ್ ಇನ್ ಇಂಡಿಯಾ-1950’ ದಾಖಲಿಸಿಲ್ಲ. ಜಗತ್ತಿನಲ್ಲಿ ಎಲ್ಲಿಯೂ ಆ ಕಾಲದ ಇಂಜಿನಿಯರಿಂಗ್ ತಿಳಿವಳಿಕೆಗಳಿಗೆ ಅನುಗುಣವಾದ ಸೂತ್ರಗಳನ್ನು ಬಳಸಿಕೊಂಡು ‘ಸ್ವಂತ ನಿಲ್ಲಬಲ್ಲ’ ಆಣೆಕಟ್ಟೆ ವಿನ್ಯಾಸಗೊಳಿಸಿದ ಅಥವಾ ಕಟ್ಟಿದ ನಂತರ ‘ಇನ್ನೂ ಹೆಚ್ಚಿನ ಸುರಕ್ಷತೆ’ಗೆ ಕೆಳಮುಖದಲ್ಲಿ ಮಣ್ಣಿನ ಏರಿಗಳನ್ನು ಒದಗಿಸಿದ ಉಲ್ಲೇಖಗಳೇ ಇಲ್ಲ. (ಚಿತ್ರ ಒಸ್ಮಾನ್ ಸಾಗರ ಆಣೆಕಟ್ಟೆಯ ಅಡ್ಡ ಖಂಡ) (2) ಉಸ್ಮಾನ್ ಸಾಗರ್ ಆಣೆಕಟ್ಟೆ ಉದ್ದ 1921.5 ಮೀ (6300’). ಇದರಲ್ಲಿ ಮುಖ್ಯವಾದ ನೀರು ಮೇಲೆ ಹರಿಯದ (Non Overflow) ಆಣೆಕಟ್ಟೆಯ ಉದ್ದ 1406.05 ಮೀ (4610’) ಹಾಗೂ ನೆರೆಯ ನೀರನ್ನು ಹರಿಸುವ ಕೋಡಿಯ ಉದ್ದ 515.45 ಮೀ (1690’). 1406.05 ಮೀ ಉದ್ದದ ಆಣೆಕಟ್ಟೆಯ ಮುಂಭಾಗದಲ್ಲಿ ಮಣ್ಣಿನ ಏರಿ ಒದಗಿಸಲಾಗಿದೆ. ಆದರೆ ತಾಂತ್ರಿಕ ವಿನ್ಯಾಸದ ದೃಷ್ಟಿಯಲ್ಲಿ ಮೇಲೆ ಹರಿವಿರದ 1406.05 ಮೀ ಉದ್ದ ಹಾಗೂ ಕೋಡಿಯಿರುವ 515.45 ಮೀ ಉದ್ದದ ಆಣೆಕಟ್ಟೆಯ ವಿನ್ಯಾಸದಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಸ್ವಂತ ಆಧಾರದ ಮೇಲೆ ನಿಲ್ಲುವ ಆಣೆಕಟ್ಟೆಯನ್ನು ವಿನ್ಯಾಸ ಮಾಡುವಾಗ 1 ಮೀ ಉದ್ದವನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಎರಡೂ ಭಾಗಗಳು ಒಂದೇ ನೀರಿನ ನೂಕಿಕೆಗೆ ಒಳಗಾಗಿರುತ್ತವೆ. ಇದರಲ್ಲಿ 1406.05 ಮೀ ಉದ್ದದ ಆಣೆಕಟ್ಟೆಯ ಭಾಗಕ್ಕೆ ಮಾತ್ರ ಮಣ್ಣಿನಏರಿಯನ್ನು ಒದಗಿಸಿ ಜರುಗಿಕೆಯ ವಿರುದ್ಧ ಹೆಚ್ಚಿನ ಸುರಕ್ಷತೆ ಪಡೆಯಲು ಯತ್ನಿಸಿರುವುದು ತಾಂತ್ರಿಕ ದೃಷ್ಟಿಯಲ್ಲಿ ತಪ್ಪು. (3) ಸ್ವಂತ ನಿಲ್ಲುವ ಆಣೆಕಟ್ಟೆಯನ್ನು (Self Supporting Dam) ವಿನ್ಯಾಸ ಮಾಡಿದ ನಂತರ ಅದನ್ನು ಇನ್ನೂ ಹೆಚ್ಚು ಸಶಕ್ತಗೊಳಿಸುವ ಅಗತ್ಯವಿರುವುದಿಲ್ಲ. ಏಕೆಂದರೆ ಸ್ವಂತ ನಿಲ್ಲುವ ಆಣೆಕಟ್ಟೆಯನ್ನು ಅದರ ಮೇಲೆ ಬರುವ , ಬರಬಹುದಾದ ಎಲ್ಲ ಬಗೆಯ ಬಲಗಳನ್ನು ಪರಿಗಣಿಸಿ , ಮುಗುಚಿಕೆ (Overturning) ಹಾಗೂ ಜರುಗಿಕೆ (Sliding) ವಿರುದ್ಧ ಅಗತ್ಯ ಇರುವಷ್ಟು ಸುರಕ್ಷತೆ (Safety) ಇರುವಂತೆ ವಿನ್ಯಾಸಿಸಲಾಗುತ್ತದೆ. ಒಬ್ಬ ವಿನ್ಯಾಸಕಾರ ತನ್ನ ವಿನ್ಯಾಸದಲ್ಲಿ ಸಮರ್ಥನೆ ಒದಗಿಸಬಹುದಾದ ಹೆಚ್ಚುವರಿ ಬಲಗಳನ್ನು ಪರಿಗಣಿಸಬಹುದಾದರೂ , ಒಮ್ಮೆ ಆ ಬಲಗಳನ್ನು ಪರಿಗಣಿಸಿದ ನಂತರ ತಾನು ವಿನ್ಯಾಸಿಸಿದ ರಚನೆಯನ್ನು ತಾನೇ ಸಶಕ್ತಗೊಳಿಸುವ ಸಂದರ್ಭವೇ ಬರುವುದಿಲ್ಲ. ಏಕೆಂದರೆ ವಿನ್ಯಾಸದ ಹಂತದಲ್ಲಿಯೇ ವಿನ್ಯಾಸಗಾರ ಇಂಜಿನಿಯರಿಂಗ್ ಸಮ್ಮತ ಹಾಗೂ ತನಗೆ ಅನುಕೂಲಕರವೆನಿಸುವ ಹೆಚ್ಚುವರಿ ಸುರಕ್ಷತೆಗಳನ್ನು ಅಳವಡಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತಾನೆ. ಹಾಗಿರುವಾಗ ಎಂ.ವಿಯವರು ಕಲ್ಲಿನ ಆಣೆಕಟ್ಟೆಯ ವಿನ್ಯಾಸದಲ್ಲಿಯೇ ಏಕೆ ಹೆಚ್ಚಿನ ಸುರಕ್ಷತೆ ಸೇರಿಸಿಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತದೆ. (ವಿವಿಧ ಆಣೆಕಟ್ಟೆಗಳ ಅಡ್ಡಖಂಡಗಳ ಹೋಲಿಕೆ) ಎಂ.ವಿಯವರು ಒಸ್ಮಾನ್ ಸಾಗರ ಆಣೆಕಟ್ಟೆಯನ್ನು ಸ್ವಂತ ನಿಲ್ಲುವ ಆಣೆಕಟ್ಟೆಯಾಗಿ ವಿನ್ಯಾಸಿಸಿದ್ದರೂ , ಕೆಳಭಾಗದಲ್ಲಿ ದೊಡ್ಡ ಗಾತ್ರದ ಮಣ್ಣಿನ ಏರಿಯನ್ನು ಒದಗಿಸುವುದಕ್ಕೆ ಯಾವುದೇ ತಾಂತ್ರಿಕ ಸಮರ್ಥನೆಗಳಿರಲಿಲ್ಲ. ಎಂ.ವಿಯವರು ಕೆಳಭಾಗದಲ್ಲಿ ಒದಗಿಸಿದ ಮಣ್ಣಿನ ಏರಿ ಎಷ್ಟು ದೊಡ್ದದಾಗಿದೆ ಎಂದರೆ ಆಣೆಕಟ್ಟೆಯ ಬದಲು ಏರಿಯನ್ನೇ ನಿರ್ಮಿಸುವುದು ಸೂಕ್ತ ಪರಿಹಾರವಾಗಿದ್ದಿತು. ಎಂ.ವಿಯವರು ಒದಗಿಸಿದ ಹೆಚ್ಚುವರಿ ಮಣ್ಣಿನ ಏರಿ ತಾಂತ್ರಿಕ ದೃಷ್ಟಿಯಲ್ಲಿ ಅನಾವಶ್ಯಕ. ಇದರ ವಿನ್ಯಾಸಕ್ಕೆ ಯಾವುದೇ ಸಿದ್ಧಾಂತದ ಬೆಂಬಲವಿಲ್ಲ. ಇದರಿಂದ ವೃಥಾ ವೆಚ್ಚ ಹೆಚ್ಚುವುದಲ್ಲದೆ ಬೇರೆ ಯಾವುದೇ ಉಪಯೋಗವಿಲ್ಲ ಎಂದು ಇತರ ಇಂಜಿನಿಯರ್’ಗಳು ಹೇಳಿದ್ದರು. ಎಂ.ವಿಯವರು ಈಜಿಪ್ತಿನಲ್ಲಿ ಕಟ್ಟಿರುವ ಆಸ್ವಾನ್ ಆಣೆಕಟ್ಟೆಯನ್ನು ಹೀಗೆ ಬಲಗೊಳಿಸಲಾಗಿದೆ ಎನ್ನುವ ಸಮರ್ಥನೆ ಒದಗಿಸಿದ್ದರೆಂದು ತಿಳಿದುಬರುತ್ತದೆ. ಈ ತಾಂತ್ರಿಕ ವಿವಾದ ಬ್ರಿಟಿಷ್ ಸರ್ಕಾರದ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಮೈಖೆಲ್ ನೆದರ್’ಸೋಲ್ ವರೆಗೆ ಹೋಯಿತು. ಮೈಕೇಲ್ ನೆದರ್’ಸೋಲ್ ಎಂ.ವಿಯವರು ಒದಗಿಸಿದ ತಾಂತ್ರಿಕ ಅಂಕಿ-ಅಂಶಗಳನ್ನು ನೋಡಿ ಆಣೆಕಟ್ಟೆಯ ಹಿಂಭಾಗದಲ್ಲಿ ಹೆಚ್ಚಿನ ಮಣ್ಣಿನ ಏರಿ ಒದಗಿಸಿದ್ದಕ್ಕೆ ಒಪ್ಪಿಗೆ ಸೂಚಿಸಿದ್ದರೆನ್ನುವ ಮಾಹಿತಿ ದಕ್ಕುತ್ತದೆ. ಮೈಖೇಲ್ ನೆದರ್’ಸೋಲ್ ನೀಡಿದ ಅನುಮೋದನೆ ಎಂ.ವಿಯವರು ಮಾಡಿದ ವಿನ್ಯಾಸಗಳು ಹಾಗೂ ನೀಡಿದ ವಿವರಣೆ ಸರಿಯೆಂದು ಸಮರ್ಥಿಸುವುದಿಲ್ಲ. (4) ಅಸ್ವಾನ್ ಆಣೆಕಟ್ಟೆಯನ್ನು ಸಶಕ್ತಗೊಳಿಸಿರುವುದಕ್ಕೂ , ಎಂ.ವಿಯವರು ಉಸ್ಮಾನ್ ಸಾಗರ ಆಣೆಕಟ್ಟೆಯ ಹಿಂಭಾಗದಲ್ಲಿ ಹೆಚ್ಚುವರಿ ಮಣ್ಣಿನ ಏರಿಯನ್ನು ನೀಡಿರುವುದಕ್ಕೂ ಯಾವುದೇ ಸಂಬಂಧಗಳಿಲ್ಲ. ನೈಲ್ ಜಗತ್ತಿನ ಅತಿ ದೊಡ್ದ ನದಿಗಳಲ್ಲಿ ಒಂದು. ಅದು ಬಹು ಪ್ರಾಚೀನ ಕಾಲದಿಂದಲೂ ಕುಡಿಯಲು ಮತ್ತು ಕೃಷಿಗೆ ನೀರು ಒದಗಿಸುವ ಮೂಲಕ ವರವೂ , ವಿನಾಶಕಾರಿ ದೊಡ್ಡ ನೆರೆಗಳಿಂದ ಶಾಪವೂ ಆಗಿದ್ದಿತು. ನೆರೆ ಹಾವಳಿ ತಡೆದು , ಹೆಚ್ಚಿನ ಭೂಮಿಯನ್ನು ಕೃಷಿಗೆ ಒಳಪಡಿಸಲು 2.496 ಬಿ.ಸಿ.ಎಂ (88 ಟಿ.ಎಂ.ಸಿ) ಸಾಮರ್ಥ್ಯದ ಜಲಾಶಯಕ್ಕೆ ಆಣೆಕಟ್ಟೆಯನ್ನು ಕಟ್ಟುವ ಯೋಜನೆಗಳಿದ್ದವು. ಇಂತಹ ಸಾಮರ್ಥ್ಯದ ಜಲಾಶಯದಿಂದ ಪ್ರ,ಶ.ಪೂ 1700 ರ ಅವಧಿಗೆ ಸೇರಿದ ಜಗತ್ಪ್ರಸಿದ್ಧ ಫಿಲೆ ಮತ್ತು ಅಬು ಸಿಂಬಲ್ ದೇವಾಲಯಗಳ ಮುಳುಗಡೆಯಾಗುವುದರಿಂದ ಆಣೆಕಟ್ಟೆಯ ಎತ್ತರವನ್ನು ಕುಗ್ಗಿಸುವಂತೆ ಸಾರ್ವಜನಿಕರಿಂದ ಒತ್ತಡಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಆಸ್ವಾನ್ ಅಣೆಕಟ್ಟೆ ಯೋಜನೆ 1898 ರಲ್ಲಿ ಪ್ರಾರಂಭವಾಗಿ 1902 ರಲ್ಲಿ ಪೂರ್ಣಗೊಂಡಾಗ ಅದರ ಗರಿಷ್ಟ ಎತ್ತರ 36.6 ಮೀ (120’) ಮತ್ತು ಜಲಾಶಯದ ಸಾಮರ್ಥ್ಯ 0.98 ಬಿ.ಸಿ.ಎಂ ( 34.54 ಟಿ.ಎಂ.ಸಿ) ಇದ್ದಿತು. ನೈಲ್ ನದಿಯಲ್ಲಿ ದೊಡ್ದ ಪ್ರವಾಹ ಬಂದಾಗ ಆಣೆಕಟ್ಟೆಯ ತೂಬುಗಳಿಂದ ನೀರು ಭಾರಿ ರಭಸದಲ್ಲಿ ಹೊರಬಂದು ಆಣೆಕಟ್ಟೆಯ ಕೆಳಭಾಗದ ನದಿಪಾತ್ರದ ಕಲ್ಲಿನ ತಳ ಕಿತ್ತುಹೋಗತೊಡಗಿತು. ಇದನ್ನು ತಡೆಗಟ್ಟಲು 1905-1906 ರ ಅವಧಿಯಲ್ಲಿ ಆಣೆಕಟ್ಟೆಯ ಹಿಂಭಾಗದಲ್ಲಿ ಪೂರಕವಾದ ಹಾಸಿನಂತಿರುವ ಕಲ್ಲು ಕಟ್ಟಣೆ ಕಟ್ಟಿ ನೀರಿನ ರಭಸಕ್ಕೆ ಆಣೆಕಟ್ಟೆಯ ಕೆಳಭಾಗದ ಕಲ್ಲು ಸವೆದು ಕೊಚ್ಚಿಹೋಗದಂತೆ ಮಾಡಲಾಯಿತು. 1905 ರ ವೇಳೆಗೆ ಆಸ್ವಾನ್ ಜಲಾಶಯದ ನೀರಿಗೆ ಭಾರಿ ಬೇಡಿಕೆ ಮತ್ತು ಜಲಾಶಯದ ಸಂಗ್ರಹವನ್ನು ಹೆಚ್ಚಿಸುವ ಒತ್ತಡಗಳು ಬಂದವು. ಇದಕ್ಕಾಗಿ ನಿವೃತ್ತನಾಗಿದ್ದ ಮೂಲ ಯೋಜನೆಯ ತಾಂತ್ರಿಕ ಪರಿಶೀಲನಾ ಸಮಿತಿ ಸದಸ್ಯರಲ್ಲಿ ಒಬ್ಬನಾಗಿದ್ದ ಬೆಂಜಮಿನ್ ಬೇಕರ್’ನನ್ನು ಸಮಾಲೋಚಕ ಸಿವಿಲ್ ಇಂಜಿನಿಯರ್ ಆಗಿ ನೇಮಕ ಮಾಡಿಕೊಳ್ಳಲಾಯಿತು. ಸಮಗ್ರ ಸ್ಥಳ ಪರಿಶೀಲನೆ ನಡೆಸಿದ ನಂತರ ಇನ್ನೊಂದು ಆಣೆಕಟ್ಟೆ ನಿರ್ಮಾಣಕ್ಕೆ ಸೂಕ್ತ ಸ್ಥಳ ದಕ್ಕದೆ , ಮೊದಲಿನ ಆಣೆಕಟ್ಟೆಯನ್ನು ಎತ್ತರಕ್ಕೆ ಏರಿಸುವುದೊಂದೇ ಮಾರ್ಗ ಎಂದು ತಿಳಿದುಬಂದಿತು. ಆಣೆಕಟ್ಟೆಯನ್ನು 7 ಮೀ ಎತ್ತರಕ್ಕೆ ಮತ್ತು ನೀರಿನ ಸಂಗ್ರಹವನ್ನು 5.0 ಮೀ ಎತ್ತರಕ್ಕೆ ಏರಿಸಿದರೆ ಜಲಾಶಯದ ಸಾಮರ್ಥ್ಯ 2.198 ಬಿ.ಸಿ.ಎಂ (77.5 ಟಿ.ಎಂ.ಸಿ)ಗೆ ಹೆಚ್ಚಿಸುವ ಯೋಜನೆಯನ್ನು ಅಂತಿಮಗೊಳಿಸಲಾಯಿತು. ಇದರ ಅಂಗವಾಗಿ ಆನೆಕಟ್ಟೆಯನ್ನು ಹಿಂಭಾಗದಲ್ಲಿ ಹೆಚ್ಚುವರಿ ಕಲ್ಲಿನ ಕಟ್ಟಣೆಯಿಂದ ದಪ್ಪಗೊಳಿಸಿ , ಸಶಕ್ತಗೊಳಿಸಿ ಎತ್ತರ ಏರಿಸಲಾಯಿತು. ಆಸ್ವಾನ್ ಆಣೆಕಟ್ಟೆಯಲ್ಲಿ ಹಳೆಯ ಹಾಗೂ ಹೊಸ ಹೆಚ್ಚುವರಿ ಭಾಗಗಳೆರಡೂ ಕಲ್ಲಿನವಾಗಿದ್ದವು. ಈ ಎರಡು ಭಾಗಗಳು ಒಂದೇ ಆಗುವಂತೆ ಕಬ್ಬಿಣದ ಸರಳುಗಳಿಂದ ಬಂಧಿಸಲಾಯಿತು. ಆಸ್ವಾನ್ ಆಣೆಕಟ್ಟೆಯಲ್ಲಿ ಸ್ವಂತ ನಿಲ್ಲುವ ಆಣೆಕಟ್ಟೆಗೆ ಅದರ ವಿನ್ಯಾಸ ಮೀರಿ ಇನ್ನೂ ‘ಹೆಚ್ಚಿನ’ ಸುರಕ್ಷಿತತೆ ಬರಲಿ ಎಂದು ಮಣ್ಣಿನ ಏರಿಯನ್ನು ಒದಗಿಸಿಲ್ಲ. ಆಣೆಕಟ್ಟೆಯ ಎತ್ತರ ಹೆಚ್ಚಿಸುವಾಗ ಹಳೆ ಮತ್ತು ಹೊಸ ಭಾಗಗಳು ಒಂದೇ ಬಗೆಯ ಸಾಮಗ್ರಿಯಿಂದ ಮಾಡಲ್ಪಟ್ಟಿವೆ. ಆದ್ದರಿಂದ ಎಂ.ವಿಯವರಂತಹ ಪ್ರತಿಭಾವಂತ ಇಂಜಿನಿಯರ್ ಜರುಗುವಿಕೆಯ ವಿರುದ್ಧ ಹೆಚ್ಚಿನ ಸುರಕ್ಷತೆ ಪಡೆಯಲು ಇಷ್ಟು ದೊಡ್ದ ಗಾತ್ರದ ಹೆಚ್ಚುವರಿ ಮಣ್ಣಿನ ಏರಿ ನಿರ್ಮಿಸಬೇಕಿತ್ತೇ ಎಂದು ವಿಚಾರಿಸ ಹೊರಟಾಗ ಎಂ.ವಿಯವರಿಗೆ ಅವರದೇ ಆದ ‘ವಿನ್ಯಾಸ ಭಯ’ ಹಾಗೂ ತಾವು ಮಾಡಿದ ವಿನ್ಯಾಸದಲ್ಲಿ ‘ಸಂಪೂರ್ಣ ವಿಶ್ವಾಸ’ ಇರದ ಕಾರಣಗಳಿಂದ ಅವರು ಈ ಹೆಚ್ಚುವರಿ ಮಣ್ಣಿನ ಏರಿಯನ್ನು ಸೇರಿಸಿದರು ಎಂದು ತಾಂತ್ರಿಕ ಲೆಕ್ಕಾಚಾರಗಳಿಂದ ತೋರಿಸಬಹುದು. ಜರುಗಿಕೆ ಹೋಲಿಕೆ ಲೆಕ್ಕಗಳ ಕೋಷ್ಟಕ (A) ಒಸ್ಮಾನ್ ಸಾಗರ ಆಣೆಕಟ್ಟೆಯ ಪ್ರತಿ ಮೀ ಉದ್ದ ಪರಿಗಣಿಸಿದರೆ ಆಣೆಕಟ್ಟೆಯ ತೂಕ = 1147.41 ಟನ್ ಆಣೆಕಟ್ಟೆಯ ಮೇಲೆ ನೇರವಾಗಿ ಬರುವ ಮಣ್ಣಿನ ಏರಿಯ ತೂಕ = 488 ಟನ್ ನೀರಿನ ಒಟ್ಟು ತಳ್ಳಿಕೆ = 562.80 ಟನ್ (ಅ) ಹಿಮ್ಮುಖದ ಮಣ್ಣಿನ ಏರಿಯನ್ನು ಪರಿಗಣಿಸದೆ ಜರುಗಿಕೆಯ ವಿರುದ್ಧದ ಸುರಕ್ಷತೆ = 1147.41X0.6/562.8 = 1.22 (1147.41x0.7/562.8=1.43) (ಆ) ಹಿಮ್ಮುಖದ ಮಣ್ಣಿನ ಏರಿಯನ್ನು ಪರಿಗಣಿಸಿ ಜರುಗಿಕೆಯ ವಿರುದ್ಧದ ಸುರಕ್ಷತೆ = (1147.41+562.8) x 0.6 /562.80 =1.82 (1147.41+562.8)x0.7/562.80=1.49) (5) ವಿವಿಧ ಆಣೆಕಟ್ಟೆಗಳಲ್ಲಿ ಜರುಗಿಕೆಯ ವಿರುದ್ಧದ ಸುರಕ್ಷಿತ ಅಂಶಗಳನ್ನು ಕೋಷ್ಟಕದಲ್ಲಿ ಲೆಕ್ಕಹಾಕಲಾಗಿದೆ. ಆಗಿನ ಕಾಲದ ವಿನ್ಯಾಸಗಳಲ್ಲಿ ಇದು 1.1 ರಿಂದ 2 ರವರೆಗೆ ಸಂದರ್ಭಾನುಸಾರ ಬದಲಾಗಿದೆ. ಇದೇ ಕಾಲದಲ್ಲಿ ಇಂಜಿನಿಯರ್’ಗಳು ಜರುಗಿಕೆಯ ವಿರುದ್ಧದ ಸುರಕ್ಷತೆಯ ಅಂಶ 1.5 ಕ್ಕೆ ನಿಗದಿಪಡಿಸಿದ್ದರು. ಉಸ್ಮಾನ್ ಸಾಗರ ಆಣೆಕಟ್ಟೆಯ ಜರುಗಿಕೆಯ ವಿರುದ್ಧದ ಸುರಕ್ಷತೆಯ ಅಂಶವನ್ನು 1.5 ಕ್ಕೆ ಏರಿಸಿದರೆ ಆಗ ಅಡ್ಡಖಂಡ ವಿಸ್ತಿರ್ಣವನ್ನು 117 ಚ.ಮೀ ನಷ್ಟು -23 % (24.98 ಚ.ಮೀ-4.9 % ಹೆಚ್ಚಿಸಬೇಕಾಗುತ್ತದೆ. ಇದರ ಬದಲು ಯಾವುದೇ ಸಿದ್ಧಾಂತದ ಬೆಂಬಲವಿಲ್ಲದೆ , ಯಾವುದೇ ಲೆಕ್ಕಗಳ ಸಮರ್ಥನೆಯಿಲ್ಲದ ಮುಂಭಾಗದಲ್ಲಿ ಮಣ್ಣನ್ನು ಹೇರುವ ತಂತ್ರಕ್ಕೆ ಮೊರೆ ಹೋಗಲಾಗಿದೆ. ಆಣೆಕಟ್ಟೆಯ ಹಿಂದೆ ಇನ್ನೊಂದು ಮಣ್ಣಿನ ಏರಿ ಹೆಚ್ಚುವರಿಯಾಗಿ ಬಂದಿದೆ. ಈ ಹೆಚ್ಚುವರಿ ಏರಿಯ ಮಣ್ಣಿನ ಪ್ರಮಾಣ ಆಣೆಕಟ್ಟೆಯ ಕಲ್ಲುಕಟ್ಟಣೆಯ 114.17 % (582.26/509.96) ಸಮನಾಗಿದೆ. ಹಿಮಾಯತ್ ಸಾಗರ , ನಿಜಾಂ ಸಾಗರ , ವೈರಾ , ತುಂಗಭದ್ರಾ ಆಣೆಕಟ್ಟೆಯ ( ಇವು ಎಂ.ವಿಯವರ ವಿನ್ಯಾಸವಲ್ಲದಿದ್ದರೂ ಅವರ ಪ್ರಭಾವಕ್ಕೆ ಒಳಗಾಗಿದ್ದು ಎಂದು ಹೇಳಬಹುದು) ಆಣೆಕಟ್ಟೆಗಳಲ್ಲಿ ಜರುಗಿಕೆಯ ವಿರುದ್ಧದ ಸುರಕ್ಷತೆ ಅಂಶ 1.5ಕ್ಕಿಂತ ಹೆಚ್ಚಿಗಿದೆ. ಹೀಗಿದ್ದರೂ ಆಣೆಕಟ್ಟೆಯ ಪ್ರಮಾಣಕ್ಕೆ ಸಮ ಹಾಗೂ ಮಿಗಿಲೆನಿಸುವ ಪ್ರಮಾಣದ ಮಣ್ಣನ್ನು ಹೊಂದಿರುವ ಹೆಚ್ಚುವರಿ ಏರಿಗಳನ್ನು ನಿರ್ಮಿಸಲಾಗಿದೆ. ಎಂ.ವಿಯವರು ಕನ್ನಂಬಾಡಿ ಆಣೆಕಟ್ಟೆಯ ವಿನ್ಯಾಸದಲ್ಲಿ ಜರುಗಿಕೆಯ ವಿರುದ್ಧದ ಸುರಕ್ಷತೆಗಾಗಿ ಯಾವುದೇ ಹೆಚ್ಚುವರಿ ಮಣ್ಣಿನ ಏರಿಯನ್ನು ನಿರ್ಮಿಸದೇ ಕಲ್ಲಿನ ಆಣೆಕಟ್ಟೆಯ ಗಾತ್ರದಿಂದಲೇ ತಮಗೆ ಬೇಕೆನಿಸಿದ ಸುರಕ್ಷತೆಯನ್ನು ಪಡೆದಿದ್ದಾರೆ. ಇದರಿಂದ ಒಸ್ಮಾನ್ ಮತ್ತು ಹಿಮಾಯತ್ ಸಾಗರ ಆಣೆಕಟ್ಟೆಗಳನ್ನು ಮೊದಲಿಗೆ ವಿನ್ಯಾಸಿಸಿದಾಗ ಅವರಿಗೆ ಆ ನಿಟ್ಟಿನ ಅನುಭವ ಇರದೆ ಅವರ ಆರಂಭಿಕ ಯತ್ನವಾಗಿದ್ದಿತೆಂದು ಸ್ಪಷ್ಟವಾಗುತ್ತದೆ. (6)ಎಂ.ವಿಯವರು ಆಣೆಕಟ್ಟೆಯ ವಿನ್ಯಾಸಕ್ಕೆ ಮೋಲ್ಸ್’ವರ್ಥ್ , ಉನ್’ವಿನ್ ಅಥವಾ ಎಂ.ಬೌವಿಯೆರ್ ವಿಧಾನಗಳನ್ನು ಬಳಸುತ್ತಿದ್ದರು. ಕೆಳಭಾಗದ ಮೇಲೆ ಏರಿಯ ರೂಪದಲ್ಲಿ ಮಣ್ಣನ್ನು ಹೇರಿದಾಗ ಆಣೆಕಟ್ಟೆಯ ವಿನ್ಯಾಸವನ್ನು ಯಾವ ವಿಧಾನಗಳಿಂದ ಮಾಡಬೇಕು ಎಂದು ಎಂ.ವಿಯರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಯಾವ ವಿಧಾನಗಳು ತಿಳಿಸುವುದಿಲ್ಲ. ಎಂ.ವಿಯವರು ಈ ಎಲ್ಲ ವಿಧಾನಗಳನ್ನು ಮೀರಿ ತಮ್ಮದೇ ಆದ ವಿಧಾನವನ್ನು ಕಂಡುಹಿಡಿದು ಇಂತಹ ವಿನ್ಯಾಸವನ್ನು ಮಾಡಿದರು ಎಂದೂ ಹೇಳುವಂತಿಲ್ಲ. ಏಕೆಂದರೆ ಅಂತಹ ವಿನ್ಯಾಸಕ್ಕೆ ಮೂಲ ತಾಂತ್ರಿಕ ಸಿದ್ಧಾಂತಗಳನ್ನು ರೂಪಿಸಬೇಕು. ಆ ಕಾಲದ ಯಾವುದೇ ತಾಂತ್ರಿಕ ಆಕರಗಳು ಎಂ.ವಿಯವರಾಗಲಿ ಅಥವಾ ಬೇರೆಯವರೇ ಆಗಲಿ ಅಂತಹ ಸಿದ್ಧಾಂತ ರೂಪಿಸಿದ ಬಗ್ಗೆ ಯಾವ ಕುರುಹುಗಳು ಆ ಕಾಲದ ತಾಂತ್ರಿಕ ಸಾಹಿತ್ಯದಲ್ಲಿ ಸಿಗುವುದಿಲ್ಲ. ಆಣೆಕಟ್ಟೆಯ ವಿನ್ಯಾಸಕ್ಕೆ ಸಿದ್ಧ ಲಭ್ಯ ಸೂತ್ರಗಳನ್ನು ಬಳಸುತ್ತ , ಆ ಸೂತ್ರಗಳು ಪರಿಗಣಿಸದ ಹೊರೆಗಳನ್ನು ಹಾಕುವ ಎಂ.ವಿಯವರ ವಿನ್ಯಾಸಗಳಿಗೆ ಯಾವುದೇ ಸೈದ್ಧಾಂತಿಕ ಬೆಂಬಲವಿಲ್ಲ. (7) ‘ಜರುಗಿಕೆಯ ವಿರುದ್ಧ ಹೆಚ್ಚಿನ ಸುರಕ್ಷತೆ’ಗಾಗಿ ಎಂವಿಯವರು ಪ್ರತಿಪಾದಿಸಿದ ಈ ಮಣ್ಣಿನ ಏರಿ ತಾಂತ್ರಿಕ ದೃಷ್ಟಿಯಲ್ಲಿ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಿಂತಲೂ ಕಡಿಮೆಗೊಳಿಸುತ್ತದೆ ಎಂದು ತೋರಿಸಬಹುದು. ಜಲಾಶಯ ಬರಿದಾಗಿದ್ದು , ಆಣೆಕಟ್ಟೆಯ ಮುಂಭಾಗದ ಮೇಲಿನ ಮಣ್ಣು ಹಸಿಯಾಗಿ ಸಂತೃಪ್ತ ಸ್ಥಿತಿಯಲ್ಲಿದ್ದಾಗ (Saturated Condition) ಜಲಾಶಯ ತುಂಬಿರುವಾಗ ಆಣೆಕಟ್ಟೆಯ ಮೇಲೆ ಇರುವುದಕ್ಕಿಂತಲೂ ಹೆಚ್ಚಿನ ನೂಕಿಕೆ (Thrust) ಮತ್ತು ಭ್ರಾಮ್ಯತೆಗಳಿರುತ್ತವೆ (Moments). ಇವುಗಳ ವಿರುದ್ಧ ಸುರಕ್ಷತೆಗಾಗಿ ಜಲಾಶಯದ ಕಡೆಗಿರುವ ಆಣೆಕಟ್ಟೆಯ ಭಾಗದ ಕಡೆಗೂ ಇನ್ನೊಂದು ಮಣ್ಣಿನ ಏರಿ ನಿರ್ಮಿಸಬೇಕಾಗುತ್ತದೆ ಅಥವಾ ಆ ಕಡೆ ಆಣೆಕಟ್ಟೆಯ ಗಾತ್ರವನ್ನು ಹೆಚ್ಚಿಸಬೇಕಾಗುತ್ತದೆ. ಇದರಿಂದ ಎಂ.ವಿಯವರು ಸುರಕ್ಷತೆಗಾಗಿ ಎಂದು ಪರಿಗಣಿಸಿರುವುದು ತಾಂತ್ರಿಕ ದೃಷ್ಟಿಯಲ್ಲಿ ಸಮರ್ಥನೀಯವಲ್ಲ ಮತ್ತು ಸುರಕ್ಷಿತವೂ ಅಲ್ಲ. ಆಣೆಕಟ್ಟೆ ಬಹಳ ದೃಢವಾಗಿದ್ದು ಮಣ್ಣಿನ ನೂಕಿಕೆಯಿಂದ ಅದರಲ್ಲಿ ಅತ್ಯಲ್ಪ ಪಲ್ಲಟಗಳಾಗುತ್ತವೆ (Displacements). ಆದ್ದರಿಂದ ಮಣ್ಣು ವಿಶ್ರಾಂತ ಸ್ಥಿತಿಯಲ್ಲಿದ್ದು (Earth at Rest) ಅಲ್ಪ ನೂಕಿಕೆಯನ್ನು ಮಾತ್ರ ಹಾಕುತ್ತದೆ. ಆದ್ದರಿಂದ ಜಲಾಶಯ ಖಾಲಿಯಾಗಿದ್ದಾಗ ಮುಂಭಾಗದಲ್ಲಿರುವ ಏರಿಯ ಮಣ್ಣು ಆಣೆಕಟ್ಟೆಯ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಾಣೆಗಳನ್ನು ತರುವುದಿಲ್ಲ ಎನ್ನುವ ವಾದವನ್ನು ಮಾಡಲು ಸಾಧ್ಯವಿದೆ. ಆದರೆ ಮಣ್ಣಿನ ವಿಶ್ರಾಂತ ಸ್ಥಿತಿಯ ಅಧ್ಯಯನಗಳು 1928 ರ ನಂತರ ಪ್ರಾರಂಭವಾದವು. ಎಂ.ವಿಯವರು ಮಣ್ಣಿನ ಏರಿಯನ್ನು ಪ್ರತಿಪಾದಿಸುವಾಗ ಇಂತಹ ಯಾವುದೇ ತಿಳಿವಳಿಕೆ ಇರಲಿಲ್ಲ ಮತ್ತು ಎಂ.ವಿಯವರು ಇದನ್ನು ವಿನ್ಯಾಸದಲ್ಲಿ ಪರಿಗಣಿಸಿಲ್ಲ. (8) ಜರುಗಿಕೆಯ ವಿರುದ್ಧವಾಗಿ ಹೆಚ್ಚಿನ ಸುರಕ್ಷತೆ ಒದಗಿಸಲು ಆಣೆಕಟ್ಟೆಯ ಬುನಾದಿಯಲ್ಲಿ ಬೀಗಗಳನ್ನು ಒದಗಿಸುವ ತಂತ್ರ ಬಹು ಹಿಂದಿನಿಂದಲೂ ಬಳಕೆಯಲ್ಲಿದೆ. ಇದನ್ನು ಹಲವಾರು ಆಣೆಕಟ್ಟೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದ್ದು ,ವೈಜ್ಞಾನಿಕ ಸೂತ್ರಗಳಿಗೆ ಅನುಗುಣವಾಗಿದ್ದು ಖಚಿತ ವಿನ್ಯಾಸಗಳನ್ನು ಮಾಡಲು ನೆರವಾಗುತ್ತದೆ. ಒಸ್ಮಾನ್ ಸಾಗರ್ ಮತ್ತು ಹಿಮಾಯತ್ ಸಾಗರ ಎರದೂ ಆಣೆಕಟ್ಟೆಗಳು ಗಟ್ಟಿ ಕಲ್ಲಿನ ಬುನಾದಿಯ ಮೇಲೆ ಇರುವುದರಿಂದ ಮೆಲೆತ್ತಿಕೆ ಬಲಗಳನ್ನು (Uplift Forces) ವಿನ್ಯಾಸದಲ್ಲಿ ಪರಿಗಣಿಸಿಲ್ಲದಿರುವುದು ದಾಖಲಾಗಿದೆ. ಗಟ್ಟಿ ಕಲ್ಲಿನಲ್ಲಿ ಬುನಾದಿ ಬೀಗಗಳನ್ನು ಒದಗಿಸುವುದು ಸುಲಭ ಮತ್ತು ಅಪೇಕ್ಷಣೀಯ. ಇಂತಹ ಸಂಸ್ಥಾಪಿತ , ವೆಚ್ಚ ಮಿತಿಯ ವಿಧಾನದ ಬದಲು ಆಣೆಕಟ್ಟೆಯ ಹಿಮ್ಮುಖದಲ್ಲಿ ಮಣ್ಣಿನ ಏರಿಯನ್ನು ನಿರ್ಮಿಸುವಲ್ಲಿ ಎಂ.ವಿಯವರಿಗೆ ತಾಂತ್ರಿಕ ಕಾರಣಗಳಿಗಿಂತಲೂ ಬೇರೆಯದೇ ಆದ ಕಾರಣಗಳಿರುವಂತಿದೆ. ಇದೇ ಕಾಲದಲ್ಲಿ ವಿನ್ಯಾಸಗೊಂಡ ಒಸ್ಮಾನ್ ಸಾಗರದ ಸರಿ ಸುಮಾರು ಎರಡರಷ್ಟು ಎತ್ತರವಿರುವ ಹಾಗೂ 4 ರಷ್ಟು ನೀರಿನ ನೂಕಿಕೆ ಹಾಕುವ ತೋಕರವಾಡಿ , ಪ್ರವರ ಆಣೆಕಟ್ಟೆಗಳಿಗೆ ಇಂತಹ ಹೆಚ್ಚುವರಿ ಸುರಕ್ಷತಾ ಮಣ್ಣಿನ ಏರಿಗಳನ್ನು ಒದಗಿಸಿಲ್ಲ. ಭಾರತದಲ್ಲಿ ಮತ್ತು ಜಗತ್ತಿನಲ್ಲಿ ಇದೇ ಕಾಲದಲ್ಲಿ ನಿರ್ಮಿಸಿದ ಇದಕ್ಕಿಂತಲೂ ದೊಡ್ದ ಗಾತ್ರದ ಆಣೆಕಟ್ಟೆಗಳಲ್ಲಿ ಜರುಗಿಕೆಯ ಸುರಕ್ಷತೆಗಾಗಿ ಇಂತಹ ಹೆಚ್ಚುವರಿ ಮಣ್ಣಿನ ಏರಿ ನಿರ್ಮಿಸದಿರುವುದು ಮತ್ತು ಇತರ ವಿನ್ಯಾಸಕಾರರು ಇಂತಹ ಪರಿಕಲ್ಪನೆಗಳಿಗೆ ಮೊರೆ ಹೋಗದಿರುವುದು ಎಂ.ವಿಯವರಿಗೆ ಸುರಕ್ಷತೆಗಿಂತಲೂ ‘ವಿನ್ಯಾಸದ ಭಯ’ಗಳಿದ್ದವೇನೋ ಎಂದು ಸಂಶಯಿಸಲು ಪ್ರೇರೇಪಿಸುತ್ತವೆ. (9) ವಿನ್ಯಾಸದಲ್ಲಿ ಸಮಕಾಲೀನ ಇಂಜಿನಿಯರಿಂಗ್ ಪ್ರತಿಪಾದಿಸುವ ಯಾವುದೇ ಮೂಲ ತತ್ತ್ವವನ್ನು ಪಾಲಿಸದೆ ಹಲವಾರು ಅಣೆಕಟ್ಟೆಗಳನ್ನು ರಾಜಸ್ಥಾನದ ಮರ್ವಾರ ಮತ್ತು ಅಜ್ಮೇರ್ ಸುತ್ತಲಿನ ಪ್ರದೇಶಗಳಲ್ಲಿ ಕಟ್ಟಲಾಗಿದೆ. ನೀರಿನ ಮುಖದ ಕಡೆ ತೆಳುವಾದ ಕಲ್ಲಿನ ಕಟ್ಟೆ ಅದರ ಹಿಂಭಾಗದಲ್ಲಿ ಮಣ್ಣಿನ ಏರಿ ಇರುವ ನಿಯಾರನ್ ಆಣೆಕಟ್ಟೆಯನ್ನು 1857 ಕ್ಕಿಂತ ಮೊದಲು ನಿರ್ಮಿಸಲಾಗಿದ್ದಿತು. ಅಖೈಜಿತಘಡದಲ್ಲಿ 12.81 ಮೀ (42’) ಎತ್ತರದ ಇಂತಹುದೇ ಆಣೆಕಟ್ಟೆ ನಿರ್ಮಾಣವಾಗಿದ್ದಿತು. 1890ರ ಬರ ಪರಿಹಾರ ಕಾಮಗಾರಿಯಡಿಯಲ್ಲಿ ಅಜ್ಮೇರ್’ನಲ್ಲಿ ಇಂತಹುದೇ ಆಣೆಕಟ್ಟೆಯನ್ನು (ಫಾಯ್ ಸಾಗರ್) ನಿರ್ಮಿಸಲಾಯಿತು. (13-79,81) ಜಗತ್ತಿನಲ್ಲಿ ಆಣೆಕಟ್ಟೆಯ ವಿನ್ಯಾಸದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿದ್ದರೂ ಹಿಂದಿನಿಂದ ಬಂದ ರೂಢಿಗತ ತಪ್ಪು ವಿನ್ಯಾಸಗಳನ್ನು ಕೆಲ ಇಂಜಿನಿಯರ್’ಗಳು ಕೈಬಿಟ್ಟಿರಲಿಲ್ಲ. 1905 ರಲ್ಲಿ ರಾಬರ್ಟ್ ಬರ್ಟನ್ ಬರ್ಕ್ಲೆ ಇಂತಹ ಆಣೆಕಟ್ಟೆಗಳು ಎಲ್ಲ ಇಂಜಿನಿಯರಿಂಗ್ ಸೂತ್ರಗಳನ್ನು ಮುರಿದಿದ್ದರೂ ಕಳೆದ 50 ವರ್ಷಗಳಿಂದ ವಿಫಲವಾಗದೆ ಹೇಗೆ ನಿಂತಿವೆಯೆಂದು ಸೋಜಿಗ ಪಟ್ಟಿದ್ದನು. ಎಂ.ವಿಯವರ ಪ್ರಭಾವಕ್ಕೆ ಒಳಗಾಗಿದ್ದ ನವಾಬ್ ಆಲಿ ನವಾಜ್ ಜಂಗ್ ಬಹದ್ದೂರ್ ಮುಂದಾಳತ್ವದಲ್ಲಿ ವಿನ್ಯಾಸಗೊಂಡ ಹಿಮಾಯತ್ ಸಾಗರ , ವೈರ , ಕದ್ದಂ ಆಣೆಕಟ್ಟೆಗಳನ್ನು ಮತ್ತು ತುಂಗಭದ್ರಾ ಆಣೆಕಟ್ಟೆಯ ಕೋಡಿ ಹೊರತಾದ 543 ಮೀ ಉದ್ದದ ಬದಿಯ ಭಾಗವನ್ನು ಕಲ್ಲಿನ ಕಟ್ಟೆ ಮತ್ತು ಹಿಂಬದಿಯಲ್ಲಿ ಮಣ್ಣಿನ ಏರಿ ಇರುವಂತೆ ಕಟ್ಟಲಾಗಿದೆ. 2003 ರಲ್ಲಿ ತುಂಗಭದ್ರಾ ಆಣೆಕಟ್ಟೆಯ ಸುರಕ್ಷಿತತೆಯ ಅಧ್ಯಯನ ನಡೆಸಿರುವ ಕೆಂದ್ರೀಯ ಜಲ ಸಮಿತಿ ಕೆಳಮುಖದಲ್ಲಿ ಆಣೆಕಟ್ಟೆ ಮತ್ತು ಮೇಲ್ಮುಖದಲ್ಲಿ ಮಣ್ಣಿನ ಏರಿ ಹೊಂದಿರುವ ಈ ಭಾಗ ಇಂಜಿನಿಯರಿಂಗ್ ದೃಷ್ಟಿಯಲ್ಲಿ ಬಹಳ ಜಟಿಲವಾಗಿದ್ದು , ಕಲ್ಲು ಮತ್ತು ಮಣ್ಣಿನ ಸಾಮಗ್ರಿಗಳ ನಡುವೆ ಇರಬಹುದಾದ ನಡವಳಿಕೆಯನ್ನು ಗಣಕ ಆಧಾರಿತ ಅತ್ಯಾಧುನಿಕ ವಿಶ್ಲೇಷಣಾ ವಿಧಾನಗಳಿಂದ ಮತ್ತೊಮ್ಮೆ ಪರಿಶೀಲಿಸಬೇಕೆನ್ನುವ ಶಿಫಾರಸ್ಸನ್ನು ಮಾಡಿದೆ. ಆದ್ದರಿಂದ ಒಸ್ಮಾನ್ ಸಾಗರ ಆಣೆಕಟ್ಟೆಯ ಹಿಂಭಾಗದಲ್ಲಿರುವ ಮಣ್ಣಿನ ಏರಿ ಆ ಕಾಲದ ಇಂಜಿನಿಯರಿಂಗ್ ತತ್ತ್ವಗಳಿಗೆ ಅನುಗುಣವಾಗಿ ಇರದೆ ‘ವ್ಯಕ್ತಿಗತ’ ವಿನ್ಯಾಸದ ಆಯ್ಕೆಯಾಗಿದ್ದಿತು. ಖಡಕವಾಸಲಾ ಆಣೆಕಟ್ಟೆ ನಿರ್ಮಾಣಗೊಂಡ ಕೆಲಕಾಲದ ನಂತರ ಜಲಾಶಯದ ನೀರಿನ ನೂಕಿಕೆಯಿಂದಾಗಿ ಆಣೆಕಟ್ಟೆ ಮುಂದಕ್ಕೆ ಜರುಗಿದೆ ಎನ್ನುವ ಅನುಮಾನಗಳೆದ್ದಿದ್ದವು . ಇದಕ್ಕೆ ಪರಿಹಾರವಾಗಿ ಫೈಫ್ ಆಣೆಕಟ್ಟೆಯ ಹಿಮ್ಮುಖದಲ್ಲಿ 18.3 ಮೀ (60’) ಅಗಲ ಮತ್ತು 9.15 ಮೀ (30’) ಎತ್ತರದ ಮಣ್ಣಿನ ಏರಿಯನ್ನು ನಿರ್ಮಿಸಲಾಯಿತು. (2-162). ಎಂ.ವಿಯವರು ಖಡಕವಾಸಲದಲ್ಲಿ ಬಹು ಕಾಲ ಸೇವೆಯಲ್ಲಿದ್ದರು. ಆಗ ಅವರ ಮನಸ್ಸಿಗೆ ನಾಟಿದ್ದ ‘ಜರುಗಿಕೆಯ ವಿರುದ್ಧದ ಸುರಕ್ಷತೆ’ಗಾಗಿ ಮಣ್ಣಿನ ಏರಿ ಒದಗಿಸುವ ಪರಿಕಲ್ಪನೆಯನ್ನು ಅಗತ್ಯವಿಲ್ಲದಿದ್ದರೂ ಒಸ್ಮಾನ್ ಸಾಗರ ಮತ್ತು ಹಿಮಾಯತ್ ಸಾಗರ ಆಣೆಕಟ್ಟೆಗಳಿಗೆ ಅನ್ವಯಿಸಿದರೆಂದು ಊಹಿಸಬಹುದು. ಯಾವುದೇ ಸಮಕಾಲೀನ ಸ್ಥಾಪಿತ ಸಿದ್ಧಾಂತ ಪ್ರತಿಪಾದಿಸದ ಸ್ಥಿತಿಗಳನ್ನು ಹೊಂದಿರುವ ಒಸ್ಮಾನ್ ಸಾಗರ್ (1912) ಆಣೆಕಟ್ಟೆಯನ್ನು ಎಂ.ವಿಯವರು ವಿನ್ಯಾಸಿಸಿ ನಿರ್ಮಿಸಿದರು. ಈ ಅಣೆಕಟ್ಟೆಯ ವಿನ್ಯಾಸದಲ್ಲಿ ಎಂ.ವಿಯವರೊಂದಿಗಿದ್ದ ನವಾಬ್ ಆಲಿ ನವಾಜ್ ಜಂಗ್ ಬಹದ್ದೂರ್ ಮುಂದಿನ ದಿನಗಳಲ್ಲಿ ಹಿಮಾಯತ್ ಸಾಗರ್ (1912- , ವೈರ (1922-1926) , ಕದ್ದಂ ಆಣೆಕಟ್ಟೆಗಳ ವಿನ್ಯಾಸದಲ್ಲಿ ಇದೇ ದಾರಿ ತುಳಿದರು. 1908 ರಲ್ಲಿ ಅಸಂಸಂದಲ್ಲಿ ಚಾಲ್ರೊಟ್ಟೆವಿಲ್ಲೆ-ಆಲ್ಬೆಮಾರ್ಲೆ ನಗರ ನೀರು ಸರಬರಾಜು ಅಂಗವಾಗಿ 20.44 ಮೀ (67’) ಎತ್ತರ, ತಳದಲ್ಲಿ 17.35 ಮೀ ಅಗಲದ (57’) ‘ಲೋ ರಾಗ್ಡ್ ಮೌಂಟೇನ್ ಡ್ಯಾಂ’ ಹೆಸರಿನ ಆಣೆಕಟ್ಟೆ ನಿರ್ಮಾಣಗೊಂಡಿತು. ಇದು ಜಗತ್ತಿನಾದ್ಯಂತ ಅದರಲ್ಲೂ ವಿಶೇಷವಾಗಿ ಅಸಂಸಂಗಳಲ್ಲಿ ಆಣೆಕಟ್ಟೆಗಳು ಕಲ್ಲಿನ ಕಟ್ಟಣೆಗಳಿಂದ ಕಾಂಕ್ರಿಟ್ ಕಟ್ಟಣೆಗಳಿಗೆ ಸ್ಥಿತ್ಯಂತರವಾಗುತ್ತಿದ್ದ ಕಾಲ. ದೊಡ್ಡ ಗಾತ್ರದ ಕಲ್ಲುಗಳನ್ನು ಬಳಸಿ ತಯಾರಾದ ‘ಸೈಕ್ಲೋಪಿಯನ್ ಕಾಂಕ್ರೀಟ್’ ಬಳಸಿ ಆ ಕಾಲದಲ್ಲಿ ಬಳಕೆಯಲ್ಲಿದ್ದ ಸೂತ್ರಗಳಿಗೆ ಅನುಗುಣವಾಗಿ ( ಬೌವಿಯರ್ , ಮೋಲ್ಸ್,ವರ್ಥ್ , ರಾಂಕಿನ್) ವಿನ್ಯಾಸಗೊಂಡ ‘ಸ್ವಂತ ನಿಲ್ಲಬಲ್ಲ’ ಆಣೆಕಟ್ಟೆಯಿದು. 1930 ರ ವೇಳೆಗೆ ಈ ಆಣೆಕಟ್ಟೆಯ ಮೇಲ್ಮುಖ ಹಾಗೂ ಕೆಳಮುಖಗಳು ನೀರಿನ ಹಾಗೂ ತಳಪಾಯದ ಸೋರಿಕೆಯ ಒತ್ತಡಕ್ಕೆ ಉಬ್ಬಿ ಆಣೆಕಟ್ಟೆಯ ಸುರಕ್ಷಿತತೆಯ ಬಗ್ಗೆ ಸಂಶಯ ಉಂಟಾಯಿತು. ಇದಕ್ಕೆ ಪರಿಹಾರವಾಗಿ ಆಣೆಕಟ್ಟೆಯ ಸ್ಥಿರತೆಯನ್ನು ಹೆಚ್ಚಿಸಲು 1934 ರಲ್ಲಿ ಮೇಲ್ಮುಖದ ತಳಪಾಯದ ಮುಂಭಾಗದಲ್ಲಿ ತೂತುಗಳನ್ನು ಕೊರೆದು ಸಿಮೆಂಟ್ ರಸ ತುಂಬಿಸಿ , ಆಣೆಕಟ್ಟೆಯ ಕೆಳಗೆ ನೀರು ಸೋರದಂತೆ ಮಾಡಲಾಯಿತು. ಇದರೊಂದಿಗೆ ಸ್ಥಿತರೆಗಾಗಿ ಹೆಚ್ಚುವರಿ ಮಣ್ಣಿನ ಏರಿಯನ್ನು ಕೆಳಮುಖದಲ್ಲಿ ಸೇರಿಸಲಾಯಿತು. 2002-03 ರಲ್ಲಿ ಈ ಆಣೆಕಟ್ಟೆಯ ಸುರಕ್ಷತೆಯ ಸಮಗ್ರ ಪರಿಶೀಲನೆ ನಡೆಸಿದ ಸಮಾಲೋಚಕ ಇಂಜಿನಿಯರ್’ಗಳು ಈ ನಿರ್ಣಯಗಳಿಗೆ ಬಂದಿದ್ದಾರೆ . (1) ಆಣೆಕಟ್ಟೆ ಆಧುನಿಕ ವಿನ್ಯಾಸದ ತತ್ತ್ವಗಳ ಹಿನ್ನೆಲೆಯಲ್ಲಿ ಸುರಕ್ಷಿತವಾಗಿಲ್ಲ (2) ಆಣೆಕಟ್ಟೆಯ ಮುಂಭಾಗದಲ್ಲಿರುವ ಮಣ್ಣಿನ ಏರಿಯ ವಿನ್ಯಾಸದಲ್ಲಿ ಸ್ಪಷ್ಟತೆಯಿಲ್ಲ. (3) ಮಣ್ಣಿನ ಏರಿಯ ಮುಂಭಾಗದಲ್ಲಿ ಹೆಚ್ಚುವರಿ ಕಾಂಕ್ರಿಟ್ ಕವಚ ತೊಡಿಸಿ ಅಥವಾ ಮಣ್ಣಿನ ಏರಿಯನ್ನು ಸಂಪೂರ್ಣ ತೆಗೆದು ಅದರ ಜಾಗದಲ್ಲಿ ಕಾಂಕ್ರಿಟ್ ಒದಗಿಸಿ ಬೇಕಾದ ಸುರಕ್ಷತೆಯನ್ನು ಪಡೆಯಬೇಕು. 1959-63 ರ ಅವಧಿಯಲ್ಲಿ ನಿರ್ಮಾಣಗೊಂಡ ಕರ್ನಾಟಕದ 62.5 ಮೀ ಎತ್ತರದ ತಲಕಳಲೆ ಆಣೆಕಟ್ಟೆ ನಿರ್ಮಾಣದ ದೋಷಗಳಿಂದ ಸೋರತೊಡಗಿತು. ಇದರಿಂದ ಕಟ್ಟೆ ಕಟ್ಟಲು ಬಳಸಿದ್ದ ಗಾರೆ ದ್ರವರೂಪದಲ್ಲಿ ಹೊರಬರತೊಡಗಿತು. ಇದನ್ನು ನಿಲ್ಲಿಸಲು ಮಾಡಿದ ಇತರ ಪ್ರಯತ್ನಗಳು ವಿಫಲವಾದ ನಂತರ ಗಾರೆ ದ್ರವ ರೂಪದಲ್ಲಿ ಹೊರಸೋರದಂತೆ ಮಾಡಲು ಮತ್ತು ಹೆಚ್ಚಿನ ಸ್ಥಿರತೆಗಾಗಿ ಆಣೆಕಟ್ಟೆಯ ಕೆಳಮುಖದಲ್ಲಿ ಮೂಲ ವಿನ್ಯಾಸದಲ್ಲಿ ಮಣ್ಣಿನ ಏರಿಯನ್ನು ನಿರ್ಮಿಸಲಾಯಿತು. ಈ ಏರಿಯ ಮಣ್ಣು ವಿಶ್ರಾಂತ ಸ್ಥಿತಿಯಲ್ಲಿದ್ದು ಯಾವುದೇ ನೂಕಿಕೆಯನ್ನು ಆಣೆಕಟ್ಟೆಯ ಮೇಲೆ ಹಾಕುವುದಿಲ್ಲ ಎಂದು ಪರಿಗಣಿಸಲಾಗಿದೆ. (37) ಇಂತಹ ಪರಿಗಣನೆ ಸರಿಯೇ ಎನ್ನುವ ತಾಂತ್ರಿಕ ಚರ್ಚೆಗಳು ಇನ್ನ್ನೂ ಮುಗಿದಿಲ್ಲ. (10) 1890 ರ ವೇಳೆಗೆ ಆಣೆಕಟ್ಟೆಗಳನ್ನು ಮೇಲೆತ್ತಿಕೆ (Uplift Force) ಹಾಗೂ ಭೂಕಂಪನದ ಬಲಗಳನ್ನು (Seismic Force) ತಾಳಿಕೊಳ್ಳುವಂತೆ ವಿನ್ಯಾಸಗೊಳಿಸಬೇಕು ಎನ್ನುವುದರಲ್ಲಿ ಇಂಜಿನಿಯರಿಂಗ್ ಸಮುದಾಯದಲ್ಲಿ ಒಮ್ಮತ ಮೂಡಿತು. ಇದಕ್ಕಿಂತಲೂ ಹಿಂದೆ ಆಣೆಕಟ್ಟೆಗಳ ವಿನ್ಯಾಸದಲ್ಲಿ ಹೆಚ್ಚಿನ ವಿನ್ಯಾಸಕಾರರು ಈ ಬಲಗಳನ್ನು ಪರಿಗಣಿಸುತ್ತಿರಲಿಲ್ಲ. ಆದ್ದರಿಂದ ಹಿಂದೆ ಕಟ್ಟಿದ ಇಂತಹ ಆಣೆಕಟ್ಟೆಗಳನ್ನು ಮೇಲೆತ್ತಿಕೆ ಅದರಲ್ಲೂ ವಿಶೇಷವಾಗಿ ಭೂಕಂಪನದ ಬಲಗಳನ್ನು ತಾಳಿಕೊಳ್ಳುವಂತೆ ಹೇಗೆ ಸಶಕ್ತಗೊಳಿಸಬೇಕೆಂಬ ಸವಾಲು ಇಂಜಿನಿಯರ್’ಗಳ ಮುಂದೆ ಬಂದಿತು. ಇದಕ್ಕೆ ಪರಿಹಾರವಾಗಿ ಆಣೆಕಟ್ಟೆಗಳ ಹಿಂಭಾಗದಲ್ಲಿ ಮಣ್ಣಿನ ಏರಿ ನಿರ್ಮಿಸುವ ಸಾಧ್ಯತೆ ಕಂಡುಬಂದಿತು. ಕಲ್ಲು/ಕಾಂಕ್ರಿಟ್ ಆಣೆಕಟ್ಟೆ ಮತ್ತು ಮಣ್ಣು ವಿಭಿನ್ನ ಬಗೆಯ ಸಾಮಗ್ರಿಗಳಾಗಿರುವುದರಿಂದ ಭೂಕಂಪನದ ಬಲಗಳು ವರ್ತಿಸುವಾಗ ಇವೆರಡರ ನಡುವೆ ಎಂತಹ ಸಂಬಂಧ ಇರಬಹುದು ಮತ್ತು ಅವುಗಳ ನಡುವೆ ಬಲಗಳು ಹೇಗೆ ಹಂಚಿಕೆಯಾಗಬಹುದೆಂದು ಸಾಂಪ್ರದಾಯಿಕ ಲೆಕ್ಕಾಚಾರಗಳಿಂದ ತಿಳಿಯಲು ಸಾಧ್ಯವಿಲ್ಲ. ವಿಭಿನ್ನ ಗುಣ , ಲಕ್ಷಣದ ಸಾಮಗ್ರಿಗಳ ನಡುವಿನ ಅಂತ:ಕ್ರಿಯೆಯನ್ನು ತಿಳಿಯಲು ಇಂಜಿನಿಯರ್’ಗಳು ‘ಫೈನೆಟ್ ಎಲಿಮೆಂಟ್’ ಮೆಥಡ್ ‘ ಎನ್ನುವ ವಿಧಾನವನ್ನು 1960ರ ವೇಳೆಗ ಅಭಿವೃದ್ಧಿಗೊಳಿಸಿದರು. ಗಣಕಗಳ ನೆರವಿಲ್ಲದೆ ಈ ವಿಧಾನವನ್ನು ಬಳಸುವುದು ಸಾಧ್ಯವಿಲ್ಲ. 1980ರ ನಂತರ ಗಣಕಗಳು ಸುಲಭವಾಗಿ , ಕಡಿಮೆ ಬೆಲೆಯಲ್ಲಿ ದಕ್ಕುವಂತಾದ ನಂತರ ಕಲ್ಲು/ಕಾಂಕ್ರಿಟ್ ಆಣೆಕಟ್ಟೆ ಮತ್ತು ಹಿಮ್ಮುಖದಲ್ಲಿನ ಮಣ್ಣಿನ ಏರಿಗಳು ಭೂಕಂಪನದ ಬಲಗಳಿಗೆ ಒಳಗಾದಾದ ಏನಾಗುತ್ತದೆಯೆಂದು ನಿರ್ಧರಿಸಲು ಹಲವಾರು ಅಧ್ಯಯನಗಳು ಮತ್ತು ಪ್ರಯೋಗಗಳು ನಡೆದಿವೆ. ಇವುಗಳಿಂದ ದಕ್ಕಿದ ಫಲಿತಾಂಶಗಳ ಬಗ್ಗೆ ಭಾರಿ ಭಿನ್ನಾಭಿಪ್ರಾಯಗಳಿವೆ. ಎಂ.ವಿಯವರು ಒಸ್ಮಾನ್ ಸಾಗರ ಆಣೆಕಟ್ಟೆಯ ಹಿಂಭಾಗದಲ್ಲಿ ಮಣ್ಣಿನ ಏರಿ ನಿರ್ಮಿಸಿರುವುದಕ್ಕೂ , ಆಧುನಿಕವಾದ ಈ ಪ್ರಯತ್ನಗಳಿಗೂ ಯಾವುದೇ ಸಂಬಂಧವಿಲ್ಲ. ಎಂ.ವಿಯವರು ಮೇಲೆತ್ತಿಕೆ ಬಲಗಳನ್ನು ಪರಿಗಣಿಸಿಲ್ಲ ಮತ್ತು ಅವರ ಕಾಲದಲ್ಲಿ ಭೂಕಂಪನದ ಬಲಗಳಿಗೆ ಆಣೆಕಟ್ಟೆಯನ್ನು ವಿನ್ಯಾಸಿಸಿಸುವ ತತ್ತ್ವಗಳು ಶೈಶವಾವಸ್ಥೆಯಲ್ಲಿದ್ದವು. ಮೈಸೂರು ಸಂಸ್ಥಾನ ಮತ್ತು ನೀರಾವರಿ ಯೋಜನೆಗಳು ಮಾರಿಕಣಿವೆ ಬ್ರಿಟಿಷರ ನೇರ ಆಡಳಿತವಿದ್ದ ಕಡೆ ನೀರಾವರಿ ಯೋಜನೆಗಳು ತ್ವರಿತಗತಿಯಲ್ಲಿ ಸಾಗುತ್ತಿರುವುದನ್ನು ಹಲವು ರಾಜ ಸಂಸ್ಥಾನಗಳು ಗಮನಿಸಿದ್ದವು. ಪ್ರಗತಿಪರ ಧೋರಣೆ ಹೊಂದಿದ್ದ ಮೈಸೂರು ಸಂಸ್ಥಾನದ ಯುವರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ಪರವಾಗಿ ಆಡಳಿತ ನಡೆಸುತ್ತಿದ್ದ ಅವರ ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ) ನಂತರ ವಯಸ್ಕರಾಗಿ ಆಡಳಿತ ಕೈಗೆತ್ತಿಕೊಂಡ ನಾಲ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಸಂಸ್ಥಾನದಲ್ಲಿ ದೊಡ್ದ ಮಟ್ಟದಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಬಯಸಿದ್ದರು. ಮೈಸೂರು ಸಂಸ್ಥಾನದಲ್ಲಿ ಕಾವೇರಿಯನ್ನು ಹೊರತು ಪಡಿಸಿದರೆ ಉಳಿಯುವ ಮುಖ್ಯ ನದಿಗಳಲ್ಲಿ ಕೃಷ್ಣಾ ಜಲಾನಯನಕ್ಕೆ ಸೇರುವ ಹಗರಿ (ವೇದಾವತಿ) ಒಂದಾಗಿದ್ದಿತು. ಹಗರಿ ನದಿಗೆ ಅಡ್ಡಲಾಗಿ ಮಾರಿಕಣಿವೆಯ ಹತ್ತಿರ ಆಣೆಕಟ್ಟೆ ಕಟ್ಟುವ ಪ್ರಸ್ತಾಪ 1801ರಲ್ಲಿ ಮೊದಲ ಬಾರಿಗೆ ಬಂದಿತು. ಈ ಯೋಜನೆ ಹಲವಾರು ಚರ್ಚೆ ,ಪರಿಶೀಲನೆ, ಮರು ಅಂದಾಜಿಗೆ ಒಳಪಡುತ್ತಾ ಯಾವುದೇ ನಿರ್ಧಾರಕ್ಕೆ ಬರಲಾಗದೆ ಮುಂದಕ್ಕೆ ತಳ್ಳಲ್ಪಟ್ಟಿತು. ಹಗರಿ , ತುಂಗಭದ್ರಾ ನದಿಯ ಉಪನದಿ. ತುಂಗಭದ್ರಾ ಬ್ರಿಟಿಷ್ ಆಡಳಿತದಲ್ಲಿರುವ ಮದ್ರಾಸ್ ಪ್ರಾಂತ್ಯದ ಬಳ್ಳಾರಿ ಪ್ರದೇಶದಲ್ಲಿ ಹರಿಯುತ್ತದೆ. ಹಗರಿ ನದಿಗೆ ಅಡ್ದಲಾಗಿ ಆಣೆಕಟ್ಟೆ ಕಟ್ಟಿದರೆ , ಬಳ್ಳಾರಿ ಪ್ರದೇಶಕ್ಕೆ ನೀರಿನ ಕೊರತೆ ಉಂಟಾಗುತ್ತದೆ ಆದ್ದರಿಂದ ಹಗರಿ ನದಿಗೆ ಮಾರಿಕಣಿವೆ ಬಳಿ ಆಣೆಕಟ್ಟೆ ಕಟ್ಟಬಾರದೆಂದು ಮದ್ರಾಸ್ ಸರ್ಕಾರ ಆಕ್ಷೇಪಿಸಿತು. ಮೈಸೂರು ಸಂಸ್ಥಾನ ಹಗರಿ ನದಿಯ ಮೇಲೆ ತನಗಿರುವ ಹಕ್ಕುಗಳನ್ನು ಹಲವು ಹಂತಗಳಲ್ಲಿ ದೃಢವಾಗಿ ಪ್ರತಿಪಾದಿಸಿದ ನಂತರ 1894ರ ವೇಳೆಗೆ ಇಂತಹ ಎಲ್ಲ ಅಕ್ಷೇಪಣೆಗಳನ್ನು ದಾಟಿ ಯೋಜನೆಗೆ ಅನುಮತಿ ಸಿಕ್ಕಿ, ಮತ್ತೊಮ್ಮೆ ಹಲವಾರು ಹಂತದ ತನಿಖೆ, ಪರಿಶೀಲನೆಗೆ ಒಳಗಾಯಿತಾದರೂ ಆಣೆಕಟ್ಟೆಗೆ ಅಡಿಪಾಯ ಹಾಕಲು ನದಿಪಾತ್ರದಲ್ಲಿ ಭದ್ರವಾದ ಕಲ್ಲಿನ ತಳಹದಿ ಸಿಗದಿರುವುದರಿಂದ ಆಣೆಕಟ್ಟೆ ಕಟ್ಟುವುದು ಸುರಕ್ಷಿತವಲ್ಲ ಎಂಬ ಅಭಿಪ್ರಾಯಕ್ಕೆ ಬಂದು ಆಣೆಕಟ್ಟೆಯ ಯೋಜನೆ ಮೂರನೆಯ ಸಲ ಹಿನ್ನೆಲೆಗೆ ಸರಿಯಿತು. 1898ರಲ್ಲಿ ಮೈಸೂರಿನ ದಿವಾನ್ ಕೆ.ಶೇಷಾದ್ರಿ ಅಯ್ಯರ್ ಮಾರಿಕಣಿ ಯೋಜನೆಯ ಅನುಷ್ಠಾನ ಕುರಿತಾಗಿ ಒಂದು ನಿರ್ಧಾರ ತಾಳಲು ಮುಖ್ಯ ಇಂಜಿನಿಯರ್ ಕರ್ನಲ್ ಮೆಕ್’ನೀಲ್ ಕ್ಯಾಂಪ್’ಬೆಲ್ ನೇತೃತ್ವದ ಇಂಜಿನಿಯರ್’ಗಳನ್ನು ಒಳಗೊಂಡ ಪ್ರಭಾವಿ ಸದಸ್ಯರ ಸಮಿತಿಯೊಂದನ್ನು ನೇಮಿಸಿದರು. ಈ ಸಮಿತಿ ಮಾರಿಕಣಿವೆ ಅಣೆಕಟ್ಟೆಯ ಜಾಗದ ನದಿಪಾತ್ರ ಅಡ್ಡ ಸಮತಳದಿಂದ 70 ಡಿಗ್ರಿ ಕೋನದಲ್ಲಿರುವ ಒಂದರ ನಂತರ ಒಂದು ಪದರದ ಹೆಮಟೈಟ್, ಕ್ವಾರ್ಟ್’ಝೈಟ್ ಹಾಗೂ ಷಿಷ್ಟ್ ಕಲ್ಲುಗಳನ್ನು ಹೊಂದಿದೆ. ಇದರಲ್ಲಿ ನೀರಿಗೆ ಕರಗದ ಹಾಗೂ ಸೀಳದ ಹೆಮಟೈಟ್ ನದಿ ಪಾತ್ರದ ಹೆಚ್ಚಿನ ಭಾಗದಲ್ಲಿದ್ದು ಆಣೆಕಟ್ಟೆಯ ಒತ್ತಾಯಗಳನ್ನು ತಾಳುವುದರಲ್ಲಿ ಸಂಶಯವಿಲ್ಲ ಎನ್ನುವ ನಿರ್ಧಾರಕ್ಕೆ ಬರಲಾಯಿತು. ಇದರೊಂದಿಗೆ ನೀರಿಗೆ ಕರಗುವ ಅಥವಾ ಸೀಳುವ ಗುಣವುಳ್ಳ ಷಿಷ್ಟ್ ಕಲ್ಲಿನ ಪ್ರತಿಚಯಗಳನ್ನು ತೆಗೆದು ಪರೀಕ್ಷೆಗೆ ಒಳಪಡಿಸಿದಾಗ ಅವು 65 ರಿಂದ 80 ಟನ್ / ಚ. ಮೀ ಒತ್ತಾಯ ತಾಳುವುದು ಖಚಿತವಾಯಿತು. ಕಾಲಾಂತರದಲ್ಲಿ ಸಂಗ್ರಹವಾಗುವ ಹೂಳಿನಿಂದ ಅವುಗಳ ಸೀಳಿನ ಮೂಲಕ ಆಗುವ ನೀರಿನ ಸೋರಿಕೆ ನಿಂತು ಹೋಗುತ್ತದೆ. ಆದ್ದರಿಂದ ಅಣೆಕಟ್ಟೆ ಕಟ್ಟಲು ಯಾವುದೇ ಅಡಚಣೆಗಳಿಲ್ಲ ಎಂಬ ತಾಂತ್ರಿಕ ವರದಿಯ ಆಧಾರದ ಮೇಲೆ ಮಾರಿಕಣಿವೆ ಅಣೆಕಟ್ಟೆಯ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಅದೇ ವರ್ಷ ಆಗಸ್ಟ್’ನಲ್ಲಿ ಆಣೆಕಟ್ಟೆಯ ನಿರ್ಮಾಣದ ಆರಂಭಿಕ ಕೆಲಸಗಳು ಪ್ರಾರಂಭವಾದವು. ಮಾರಿಕಣಿವೆ ಆಣೆಕಟ್ಟೆಯ ನಿರ್ಮಾಣದ ಉಸ್ತುವಾರಿಯನ್ನು ಮುಖ್ಯ ಇಂಜಿನಿಯರ್ ಕರ್ನಲ್ ಮೆಕ್’ನೀಲ್ ಕ್ಯಾಂಪ್’ಬೆಲ್ ,ಕ್ಯಾಪ್ಟನ್ ಎ.ಸಿ ಜೋಲ್ಲರ್ , ಅಧೀಕ್ಷಕ ಇಂಜಿನಿಯರ್ ಲೋಬ್ಬಿನಿಯರ್ ಹಾಗೂ ಸಿ.ಟಿ ದಲಾಲ್ ವಹಿಸಿದ್ದರು.[9] ಮಾರಿಕಣಿವೆ ಯೋಜನೆ ನೀರಾವರಿ ಯೋಜನೆಗಳ ವಿನ್ಯಾಸ ಮಾಡುವವರಿಗೆ ಹಲವು ನಿಟ್ಟಿನಲ್ಲಿ ಕುತೂಹಲಕಾರಿ ಅಂಶಗಳನ್ನು ಒದಗಿಸುತ್ತದೆ. ಮಾರಿಕಣಿವೆಯ ಮೇಲ್ಭಾಗದಲ್ಲಿ ಹಗರಿ ನದಿ 5312 ಚ.ಕಿ.ಮೀ ಜಲಾನಯನ ಪ್ರದೇಶ ಹೊಂದಿದೆ. ಈ ಜಲಾನಯನದ ಸರಾಸರಿ ಮಳೆಯ ಪ್ರಮಾಣ 596 ಮಿ.ಮೀ . ಮಾರಿಕಣಿವೆಯ ಮೇಲ್ಭಾಗದಲ್ಲಿ 970 ಕೆರೆಗಳಿವೆ. ಈ 970 ಕೆರೆಗಳ ಒಟ್ಟು ಸಾಮರ್ಥ್ಯ 0.184 ಬಿ.ಸಿ.ಎಂ (6.5 ಟಿ.ಎಂ.ಸಿ) 1876-77 ಅವಧಿಯಲ್ಲಿ ಬಂದ ಮಹಾ ಬರದ ಕಾಲದಲ್ಲಿ ಈ ಯಾವ ಕೆರೆಗಳೂ ತುಂಬದೆ ನೀರಿಗೆ ಹಾಹಾಕಾರ ಉಂಟಾಗಿ ಮಾರಿಕಣಿವೆ ಪ್ರದೇಶದ ಜನಸಂಖ್ಯೆಯ 1/3 ಭಾಗ ಸಾವಿಗೀಡಾಗಿದ್ದಿತು. ಹಗರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುಪೇರಾಗುತ್ತದೆ. 1864 ರಲ್ಲಿ 0.186 ಬಿ.ಸಿ.ಎಂ (6.588 ಟಿ.ಎಂ.ಸಿ) 1865 ರಲ್ಲಿ 0.671 ಬಿ.ಸಿ.ಎಂ (23.652 ಟಿ.ಎಂ.ಸಿ) ನೀರು ಈ ನದಿಯಲ್ಲಿ ಹರಿಯಿತು. ಹೆಚ್ಚಿನ ಮಳೆ ಬಂದಾಗ ಈ ನದಿಯಲ್ಲಿ ಹರಿಯುವ ನದಿ ನೀರಿನ ಪ್ರಮಾಣ 0.90 ಬಿಸಿ.ಎಂ(32 ಟಿ.ಎಂ.ಸಿ) ದಾಟಬಹುದೆಂದು ಅಂದಾಜಿಸಲಾಯಿತು. ಬರದ ವರ್ಷ 0.085 ಬಿ.ಸಿ.ಎಂ (3.0 ಟಿ.ಎಂ.ಸಿ) , ಸಾಧಾರಣ ವರ್ಷ 0.284 ಬಿ.ಸಿ.ಎಂ (10 ಟಿ.ಎಂ.ಸಿ) , ಒಳ್ಳೆ ಮಳೆಯ ವರ್ಷ 0.539 ಬಿ.ಸಿ.ಎಂ (19 ಟಿ.ಎಂ.ಸಿ) ನೀರನ್ನು ಸಂಗ್ರಹಿಸಲು ಸಾಧ್ಯವೆಂದು ಅಂದಾಜಿಸಲಾಯಿತು. ಇದರ ಆಧಾರದ ಮೇಲೆ 0.567 ಬಿಸಿ.ಎಂ (20 ಟಿ.ಎಂ.ಸಿ) ಸಂಗ್ರಹ ಸಾಮರ್ಥ್ಯದ ಆಣೆಕಟ್ಟೆಯ ನಿರ್ಮಾಣವನ್ನು ನಿಗದಿಪಡಿಸಲಾಗಿದ್ದಿತು. ಈ ಸಂಗ್ರಹ ಸಾಮರ್ಥ್ಯ ಹಗರಿ ನದಿಯ ವಾರ್ಷಿಕ ಹರಿವಿಗೆ ಸಮ. ಆದರೆ ಚಂಡಮಾರುತಗಳು ಬಂದಾಗ ಜಲಾಶಯ ಪೂರ್ಣ ತುಂಬುವ ಸಾಧ್ಯತೆಯೊಂದಿಗೆ ಅದರ ಮೇಲ್ಬಾಗದಲ್ಲಿರುವ 970 ಕ್ಕೂ ಅಧಿಕ ಕೆರೆಗಳಲ್ಲಿ ಕೆಲವು ಒಡೆದರೆ 1702 ಘನ.ಮೀ/ಸೆಕೆಂಡ್ (60000 ಘನ / ಅಡಿ ಸೆಕೆಂಡ್) ಪ್ರವಾಹ ಬರಬಹುದೆಂದು ಊಹಿಸಲಾಯಿತು. ಇಷ್ಟು ಪ್ರಮಾಣದ ನೀರನ್ನು ಹೊರ ಹಾಕಲು ಬೇಕಾದ ಕೋಡಿಯ ಅಗಲ ಪಡೆಯಲು ಆಣೆಕಟ್ಟೆಯ ಎಡ ದಡ ಬಲದಲ್ಲಿದ್ದ ಗಟ್ಟಿಯಾದ ಕಲ್ಲನ್ನು ಒಡೆದು ತೆಗೆಯಬೇಕಾಗಿದ್ದಿತು. ಇದರ ಬದಲು ಅಣೆಕಟ್ಟೆಯನ್ನು ಎತ್ತರಿಸಿ, ಇಷ್ಟು ಪ್ರಮಾಣದ ನೀರನ್ನು ಹೊರಹಾಕುವಷ್ಟು ಅಗಲದ ಕೋಡಿಯನ್ನು ಪಡೆಯುವುದು ಕಡಿಮೆ ವೆಚ್ಚವೆಂದು ತಿಳಿದು ಬಂದಿತು. ಇದರಿಂದ 1.078 ಬಿ.ಸಿ.ಎಂ ( 38 ಟಿ. ಎಂ.ಸಿ) ಸಾಮರ್ಥ್ಯದ ಆಣೆಕಟ್ಟೆಯ ವಿನ್ಯಾಸವನ್ನು ಅನುಮೋದಿಸಲಾಯಿತು. ಹೀಗೆ ವಿನ್ಯಾಸಗೊಂಡ ಮಾರಿಕಣಿವೆ ಅಣೆಕಟ್ಟೆಯ ತಳಪಾಯವನ್ನು ನದಿಯ ಪಾತ್ರದಿಂದ 8.75 ಮೀ (25’) ಕೆಳಗೆ ಭದ್ರವಾದ ಕಲ್ಲಿನ ಮೇಲೆ ಇರಿಸಲಾಗಿದ್ದು ಆಣೆಕಟ್ಟೆಯ ಗರಿಷ್ಟ 50.935 ಮೀ. (167’) ಎತ್ತರವಿದ್ದು , 39.65 ಮೀ (130 ಅಡಿ) ಎತ್ತರಕ್ಕೆ ನೀರನ್ನು ನಿಲ್ಲಿಸುವ ಸಾಮರ್ಥ್ಯ ಹೊಂದಿದೆ. ಈ ಮಟ್ಟದಲ್ಲಿರುವಾಗ ಅಣೆಕಟ್ಟೆಯ ಸಂಗ್ರಹ ಸಾಮರ್ಥ್ಯ 0.918 ಬಿ.ಸಿ.ಎಂ (32.348 ಟಿ.ಎಂ.ಸಿ) ಆದ್ದರಿಂದ ಮಾರಿಕಣಿವೆ ಅದರ ಸಾಧಾರಣ ಲಭ್ಯತೆಯ ಹಲವು ಪಟ್ಟು ಸಾರ್ಮರ್ಥ್ಯ ಹೊಂದಿರುವ ಅಣೆಕಟ್ಟೆಯಾಗಿ ನಿರ್ಮಾಣಗೊಂಡಿತು. (ಚಿತ್ರ : ಮಾರಿಕಣಿವೆ ಅಣೆಕಟ್ಟೆಯ ಅಡ್ಡ ಖಂಡ) ದಾಖಲೆಗಳ ಪ್ರಕಾರ ಹಗರಿ ನದಿಯಲ್ಲಿ ಎಂದಿಗೂ 1004 ಘ.ಮೀ/ ಸೆಕೆಂಡ್ (35377 ಘನ ಅಡಿ/ ಸೆಕೆಂಡ್) ಗಿಂತಲೂ ಹೆಚ್ಚಿನ ಪ್ರವಾಹ ಬಂದಿರಲಿಲ್ಲವಾದರೂ, ಒಂದು ವೇಳೆ ಅಂದಾಜಿಸಿದಂತೆ 1702 ಘನ.ಮೀ/ಸೆಕೆಂಡ್ (60000 ಘನ / ಅಡಿ ಸೆಕೆಂಡ್) ನೀರು ನದಿಯಲ್ಲಿ ಬಂದರೂ, ಅದೆಲ್ಲ ನೀರು ಕೋಡಿಯ ಮೇಲೆ ಹರಿಯುವುದಿಲ್ಲ. ಏಕೆಂದರೆ ಅದು ಜಲಾಶಯದ ಹಿನ್ನೀರಿನ ವಿಸ್ತಾರವನ್ನು ಹೆಚ್ಚಿಸಿದಂತೆ ಹರಡಿಕೊಳ್ಳುತ್ತದೆ. ಈಗ ಕಟ್ಟಲಾಗಿರುವ ಕೋಡಿ 127.5 ಮೀ ( 418 ಅಡಿ) ಉದ್ದವಿದ್ದು 652.6 ಘ.ಮೀ/ಸೆಕೆಂಡ್ (23000 ಘನ ಅಡಿ / ಸೆಕೆಂಡ್) ಪ್ರಮಾಣದ ನೀರನ್ನು ಮಾತ್ರ ಹರಿಸಬಲ್ಲದು. ಕೋಡಿಯ ಮೇಲೆ 3.05 ಮೀ (10 ಅಡಿ) ಎತ್ತರಕ್ಕೆ ನೀರು ಹರಿಯುತ್ತಿರುವಾಗ ನೆರೆ 1135 ಘ.ಮೀ /ಸೆಕೆಂಡ್ (40000 ಅಡಿ / ಸೆಕೆಂಡ್) ಪ್ರಮಾಣದಲ್ಲಿರುತ್ತದೆ. ಮಾರಿಕಣಿವೆ ಆಣೆಕಟ್ಟೆಯ ನಾಲೆಗಳಿಗೆ ನೀರು ಹರಿಸುವ ತೂಬು ಗರಿಷ್ಟ ನೀರಿನ ಮಟ್ಟದಿಂದ 24.4 ಮೀ (80 ಅಡಿ) ಕೆಳಗಿದೆ. ತೂಬಿನ ಮೇಲೆ 3.0 ಮೀ (10 ಅಡಿ) ನೀರು ಇರುವಾಗ ಈ ತೂಬಿನ ಸಾಮರ್ಥ್ಯ 29.7 ಘ.ಮೀ (1047 ಘನ ಅಡಿ / ಸೆಕೆಂಡ್) ಇರುತ್ತದೆ. 24.4 ಮೀ (80 ಅಡಿ) ಅಧಿಕ ಎತ್ತರದಿಂದ ನಾಲೆಗಳಿಗೆ ನೀರನ್ನು ಹರಿಸಬೇಕಾಗಿರುವುದರಿಂದ ಇದಕ್ಕೆ ಇವುಗಳ ತೂಬುಗಳ ಬಿಡುಗಡೆ ದ್ವಾರಗಳಿಗೆ ಸ್ಟೋನಿ ರೋಲರ್ ಗೇಟ್’ಗಳನ್ನು ಒದಗಿಸಲಾಗಿದೆ. ಮದ್ರಾಸ್ ಮತ್ತು ಬಾಂಬೆ ಪ್ರೆಸಿಡೆನ್ಸಿಗಳಲ್ಲಿ ನಿರ್ಮಾಣಗೊಂಡಿದ್ದ ಪೆರಿಯಾರ್ ಹಾಗೂ ಭಾತ್’ಗರ್ ಜಲಾಶಯಗಳ ಸಾಮರ್ಥ್ಯ 0.194 ಬಿ.ಸಿ.ಎಂ (6.815 ಟಿ.ಎಂ.ಸಿ) ಮತ್ತು 0.132 ಬಿ.ಸಿ.ಎಂ (4.638 ಟಿ.ಎಂ.ಸಿ) ಭಾರತದ ಸಮಕಾಲೀನ ಜಲಾಶಯಗಳಿಗೆ ಹೋಲಿಸಿದರೆ ಮಾರಿಕಣಿವೆ ಅಣೆಕಟ್ಟೆಯನ್ನು ಸಾಧಾರಣ ಲಭ್ಯ ನೀರಿನ ಪ್ರಮಾಣದ 2 ರಿಂದ 3 ರಷ್ಟು ಪ್ರಮಾಣದ ನೀರು ಸಂಗ್ರಹಿಸಲು ಯೋಜಿಸಲಾಗಿದೆ.(13). ಸಮಕಾಲೀನ ಜಗತ್ತಿನಲ್ಲಿ ಅತ್ಯಂತ ಅಧಿಕ ಸಂಗ್ರಹ ಸಾಮರ್ಥ್ಯ ಹೊಂದಿದ್ದ ಈಜಿಪ್ತಿನ ಆಸ್ವಾನ್ ಜಲಾಶಯ 1.078 ಬಿ.ಸಿ.ಎಂ ( 38 ಟಿ.ಎಂ.ಸಿ) ಇದ್ದರೆ ಎರಡನೆಯ ಸ್ಥಾನದಲ್ಲಿ ಮಾರಿಕಣಿವೆಯಿದ್ದಿತು. ಆಸ್ವಾನ್ ಜಲಾಶಯ ಪ್ರತಿವರ್ಷ ಹಲವಾರು ಬಾರಿ ತುಂಬಿದರೆ , ಮಾರಿಕಣಿವೆ ಜಲಾಶಯ ನೂರು ವರ್ಷಗಳಲ್ಲಿ ಎರಡು ಬಾರಿ -1933 ಮತ್ತು 2000 - ಮಾತ್ರ ತುಂಬಿದೆ. ಉಳಿದಂತೆ ಅದರ ಸಾಮರ್ಥ್ಯದ 25%-30% ನೀರು ಮಾತ್ರ ಇರುತ್ತದೆ. ಮಾರಿಕಣಿವೆ ಅಣೆಕಟ್ಟೆಯ ಸಂಗ್ರಹ ಸಾಮರ್ಥ್ಯ 1.078 ಬಿ.ಸಿ.ಎಂ (38 ಟಿ.ಎಂ.ಸಿ) ಇರುವುದಾದರೂ ನೀರಾವರಿ ಕಾಲುವೆಗಳ ತೂಬುಗಳನ್ನು ಕೆಳಮಟ್ಟದಲ್ಲಿ ಇರಿಸಿರುವುದರಿಂದ ವಾರ್ಷಿಕ 0.227 ಬಿ.ಸಿ.ಎಂ ( 8.0 ಟಿ.ಎಂ.ಸಿ) ನೀರು ಮಾತ್ರ ನೀರಾವರಿಗೆ ಲಭ್ಯ. ಇದರಿಂದ 30,000 ಎಕರೆಯನ್ನು ನೀರಾವರಿಗೆ ಒಳಪಡಿಸಬಹುದು. ಸರಿಯಾದ ರೀತಿಯಲ್ಲಿ ಕಾಲುವೆ ಹಾಗೂ ನೀರಾವರಿ ಪದ್ದತಿಗಳನ್ನು ಜಾರಿಗೆ ತಂದರೆ ನೀರಾವರಿ ಪ್ರದೇಶವನ್ನು 45000 ಎಕರೆಗಳಿಗೆ ವಿಸ್ತರಿಸಬಹುದು. ಸಮಕಾಲೀನ ಜಗತ್ತಿನಲ್ಲಿ ಸಂಗ್ರಹ ಸಾಮರ್ಥ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಈ ಆಣೆಕಟ್ಟೆ ನೀರುಣಿಸುವ ಪ್ರದೇಶ 30,000 ಎಕರೆ ಮಾತ್ರ. ಈ ಅಂಕಿ –ಅಂಶಗಳು ಮಾರಿಕಣಿವೆಯ ಸಾರ್ಥಕತೆ ಮತ್ತು ವೈಫಲ್ಯಗಳ ಸೂಚಿಗಳಾಗಿವೆ. ಕನ್ನಂಬಾಡಿ ಆಣೆಕಟ್ಟೆ ಕಾವೇರಿ ಮತ್ತು ಕಾವೇರಿಯ ಉಪನದಿಗಳಿಗೆ ಅಡ್ಡಲಾಗಿ ಕಟ್ಟೆ ಕಟ್ಟಲು ಮೊದಲಿನಿಂದಲೂ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಪ್ರಯತ್ನಗಳಾಗಿದ್ದವು. ಕಾವೇರಿ ನದಿಯ ಉಪನದಿಯಾದ ಲೋಕಪಾವನಿಗೆ ಅಡ್ಡಲಾಗಿ ತೊಣ್ಣೂರಿನ ಬಳಿ 24.4 ಮೀ (80’) ಎತ್ತರದ ಏರಿಯನ್ನು ಕಟ್ಟಲಾಗಿದೆ. ಇದರ ನಿರ್ಮಾಣದ ಕಾಲ ಖಚಿತವಾಗಿ ಗೊತ್ತಿಲ್ಲವಾದರೂ ಸಾಂದರ್ಭಿಕ ಸಾಕ್ಷ್ಯಗಳಿಂದ ಅದು 12 ನೇ ಶತಮಾನಕ್ಕೆ ಸೇರಿರಬಹುದೆಂದು ಊಹಿಸಬಹುದು. ಭಾರತದಲ್ಲಿ ಇಷ್ಟು ಎತ್ತರದ ಬೇರೆ ಯಾವುದೇ ಏರಿ ಇರುದಿರುವುದು ಗಮನಾರ್ಹವಾಗಿದೆಯಲ್ಲದೆ , ಆಧುನಿಕ ಇಂಜಿನಿಯರಿಂಗ್ ಉಗಮಕ್ಕೆ ಮೊದಲು ಇಷ್ಟು ಎತ್ತರದ ಏರಿಯನ್ನು ನಿರ್ಮಿಸಲು ಆಯ್ದುಕೊಂಡ ಅಡ್ಡಖಂಡ (Cross Section) ತಾಂತ್ರಿಕ ಅಧ್ಯಯನಕ್ಕೆ ಕೆಲ ಒಳನೊಟಗಳನ್ನು ಒದಗಿಸಬಲ್ಲುದು. ಉಪನದಿಗಳಿಗೆ ಕಟ್ಟಿದಷ್ಟು ಸುಲಭವಾಗಿ ಎತ್ತರದ ಕಲ್ಲಿನ ಆಣೆಕಟ್ಟೆ ಅಥವಾ ಮಣ್ಣಿನ ಏರಿಯನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟುವುದು ತಾಂತ್ರಿಕವಾಗಿ ಕಠಿಣವಾದ ಕೆಲಸ. 9ನೇ ಶತಮಾನದಲ್ಲಿ ತಲಕಾಡಿನ ಬಳಿ ಮಾಧವ ಮಂತ್ರಿ ಕಟ್ಟೆ ನಿರ್ಮಾಣಗೊಂಡಿತು. ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಕಲ್ಲಣೈ ಕಟ್ಟಲಾಯಿತು. ಈ ಕಲ್ಲಿನ ಕಟ್ಟೆಗಳು 3 ರಿಂದ 5 ಮೀ ಎತ್ತರವಿದ್ದವು. ಇದಕ್ಕಿಂತಲೂ ಎತ್ತರದ ಕಟ್ಟೆಗಳನ್ನು ಕಾವೇರಿಗೆ ಅಡ್ಡಲಾಗಿ ಕಟ್ಟಿರಲಿಲ್ಲ. ಮೈಸೂರಿನ ಆಡಳಿತ ಒಡೆಯರ ಕೈ ಜಾರಿ ಹೈದರ್ ಆಲಿ ಮತ್ತು ಆತನ ಮಗ ಟಿಪ್ಪು ಸುಲ್ತಾನ್ ವಶವಾಯಿತು. ಟಿಪ್ಪು ಸುಲ್ತಾನ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಲು ಯತ್ನಿಸಿದುದಕ್ಕೆ ದಾಖಲೆಗಳಿವೆ. 1911 ರಲ್ಲಿ ಕನ್ನಂಬಾಡಿ ಆಣೆಕಟ್ಟೆಯ ಕೆಲಸ ಪ್ರಾರಂಭವಾದಾಗ 1794 ರಲ್ಲಿ ಟಿಪ್ಪು ಸುಲ್ತಾನ್ ಹಾಕಿಸಿದ್ದ ಪರ್ಷಿಯನ್ ಭಾಷೆಯ ಶಾಸನ ಸಿಕ್ಕಿತು. ಇದರಿಂದ ಕನ್ನಂಬಾಡಿ ಸಮೀಪದ ಎರಡು ಗುಡ್ಡಗಳ ನಡುವೆ ಆಧುನಿಕ ವಿನ್ಯಾಸದ ಆಣೆಕಟ್ಟೆ ಕಟ್ಟುವ ಯೋಜನೆಯು ಟಿಪ್ಪು ಸುಲ್ತಾನನಿಗೆ ಇದ್ದಿತೆಂದು ತಿಳಿದುಬರುತ್ತದೆ. ಟಿಪ್ಪು ಸುಲ್ತಾನ್ ಯಾರ ನೆರವಿನಿಂದ , ಎಂತಹ , ಎಷ್ಟು ಎತ್ತರದ ಕಟ್ಟೆಯನ್ನು ಕಟ್ಟಬೇಕೆಂದಿದ್ದನು ಎನ್ನುವ ವಿವರಗಳು ತಿಳಿಯವು. ಆದರೆ ಫ್ರೆಂಚರೊಂದಿಗೆ ಟಿಪ್ಪು ಸುಲ್ತಾನ್ ಉತ್ತಮ ಬಾಂಧವ್ಯಗಳನ್ನು ಹೊಂದಿರುವುದು ಇತಿಹಾಸದಿಂದ ಸ್ಪಷ್ಟ. ಒಂದು ವೇಳೆ ಟಿಪ್ಪು ಫ್ರೆಂಚರ ನೆರವಿನಿಂದ ಆಣೆಕಟ್ಟೆಯನ್ನು ವಿನ್ಯಾಸಗೊಳಿಸಿ, ಕಟ್ಟಿಸಿದ್ದರೆ ಭಾರತದಲ್ಲಿ ಇಂಜಿನಿಯರಿಂಗ್ ತತ್ತ್ವಗಳನ್ನು ಬಳಸಿ ಆಣೆಕಟ್ಟೆ ಕಟ್ಟಿದ ಮೊದಲಿಗನಾಗುತ್ತಿದ್ದ. ಸದಾ ಯುದ್ಧ ಮತ್ತು ತಿಕ್ಕಾಟದಲ್ಲಿದ್ದ ಟಿಪ್ಪು ಸುಲ್ತಾನನಿಗೆ ದೊಡ್ಡ ಪ್ರಮಾಣದ ಆಣೆಕಟ್ಟೆ ಕಟ್ಟುವ ಆರ್ಥಿಕ ಸಾಮರ್ಥ್ಯ ಹೇಗಿದ್ದಿತೋ ತಿಳಿಯದು. 1921 ರಲ್ಲಿ ಕನ್ನಂಬಾಡಿ ಆಣೆಕಟ್ಟೆ ಪೂರ್ಣಗೊಂಡಾಗ ಟಿಪ್ಪುವಿನ ಪರ್ಷಿಯನ್ ಶಾಸನದ ಕನ್ನಡ ಮತ್ತು ಇಂಗ್ಲಿಷ್ ಅನುವಾದವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟೆಯ ಮುಖಭಾಗದಲ್ಲಿ ಸ್ಥಾಪಿಸಿದರು. ಏರಿ ಮತ್ತು ಆಣೆಕಟ್ಟೆಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ವೈಜ್ಞಾನಿಕತೆ ಮತ್ತು ಆಧುನಿಕತೆ ಬಂದಂತೆ ಕಾವೇರಿ ನದಿಗೆ ಆಡ್ಡಲಾಗಿ ದೊಡ್ಡದಾದ ಆಣೆಕಟ್ಟೆಯನ್ನು ಕಟ್ಟುವ ಕನಸುಗಳು ಹಲವರಿಗಿದ್ದವು. ಬಾಂಬೆ ಪ್ರೆಸಿಡೆನ್ಸಿಯಲ್ಲಿ ಖಡಕವಾಸಲ , ಭಾತ್’ಘರ್ , ತಾನ್ಸಾ ಮುಂತಾದ ದೊಡ್ಡ ಆಣೆಕಟ್ಟೆಗಳು ನಿರ್ಮಾಣವಾಗಿರುವುದು ಮತ್ತು ಆಗುತ್ತಿರುವುದು ಮೈಸೂರು ಸಂಸ್ಥಾನದಲ್ಲಿದ್ದ ಇಂನಿಜಿನಿಯರ್, ಆಡಳಿತಗಾರರು , ಮಹಾರಾಣಿ ಕೆಂಪನಂಜಮ್ಮಣ್ಣಿ ಮತ್ತು ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿದಿದ್ದಿತು. 1870 ರ ಅವಧಿಯಲ್ಲಿ ಕರ್ನಲ್ ಸ್ಯಾಂಕಿ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿದ್ದನು. ಮೈಸೂರು ಸಂಸ್ಥಾನದಲ್ಲಿ ವ್ಯಾಪಕವಾಗಿ ಸಂಚರಿಸಿದ್ದ ಸ್ಯಾಂಕಿ ಪ್ರಾಚೀನ ಕಾಲದಿಂದಲೂ ಸ್ಥಳೀಯರು ಸಣ್ಣ ಹಾಗೂ ಮಧ್ಯ ಗಾತ್ರದ ಹಳ್ಳ ಮತ್ತು ನದಿಗಳಿಗೆ ಅಡ್ದಲಾಗಿ ಕಟ್ಟಿದ ಏರಿ ಮತ್ತು ಕಟ್ಟೆಗಳನ್ನು ಗಮನಿಸಿದ್ದನು. ಏರಿ , ಕಟ್ಟೆಗಳನ್ನು ಕಟ್ಟಲು ಸ್ಥಳೀಯರು ಆಯ್ದುಕೊಂಡ ಜಾಗ ಮತ್ತು ನಿರ್ಮಾಣದ ತಂತ್ರಗಳನ್ನು ಆತ ಮೆಚ್ಚಿದ್ದನು. ಮುಖ್ಯ ಇಂಜಿನಿಯರ್ ಹುದ್ದೆಯಲ್ಲಿರುವಾಗ ನೀರಾವರಿಗಾಗಿ ಕಾವೇರಿ ನದಿಗೆ ಅಡ್ಡಲಾಗಿ ದೊಡ್ಡ ಕಟ್ಟೆ ಕಟ್ಟುವ ಚಿಂತನೆಯನ್ನು ಸ್ಯಾಂಕಿ ಮುಂದಿಟ್ಟನು. ಇದರ ಪರಿಣಾಮವಾಗಿ ಸರ್ವೇ ಕೆಲಸಗಳು ನಡೆದು ಮೈಸೂರು ಮತ್ತು ಮಡಿಕೇರಿಗಳ ಗಡಿಯಲ್ಲಿರುವ ರಾಮಸ್ವಾಮಿ ಕಣಿವೆ ಇದಕ್ಕೆ ಸೂಕ್ತ ಸ್ಥಳ ಎನ್ನುವ ನಿರ್ಧಾರಕ್ಕೆ ಬಂದು ಯೋಜನೆಯ ಅಂದಾಜು ವೆಚ್ಚವನ್ನು ತಯಾರಿಸಲಾಯಿತು. ಅಧಿಕ ವೆಚ್ಚದ ಕಾರಣದಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತು. 1885 ರಲ್ಲಿ ಸ್ಯಾಂಕಿಯ ನಿವೃತ್ತಿಯ ನಂತರ ಕರ್ನಲ್ ಬೊವೆನ್ ಮುಖ್ಯ ಇಂಜಿನಿಯರ್ ಹುದ್ದೆಗೇರಿದನು. ಕಾವೇರಿ ನದಿಗೆ ಅಡ್ದಲಾಗಿ ಕಟ್ಟೆ ಕಟ್ಟಿ ಮೈಸೂರು ನಗರಕ್ಕೆ ಕುಡಿಯಲು ಮತ್ತು ಸುತ್ತಲಿನ ಪ್ರದೇಶಕ್ಕೆ ನೀರಾವರಿಗೆ ನೀರನ್ನು ಒದಗಿಸಲು ಯೋಜನೆಯೊಂದನ್ನು ತಯಾರಿಸುವ ವಿಶೇಷ ಕೆಲಸಕ್ಕಾಗಿ ಆಗ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿದ್ದ ಮೆಕ್ ಲಾಂಘಿನ್’ನನ್ನು ಬೊವೆನ್ ನಿಯೋಜಿಸಿದನು. ಈತ ರೂಪಿಸಿದ ಯೋಜನೆಯನ್ನು ಅಧಿಕ ವೆಚ್ಚದ ಕಾರಣಗಳಿಗಾಗಿ ತಿರಸ್ಕರಿಸಲಾಯಿತು. ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ) ಬಾಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಪರವಾಗಿ 1910 ರವರೆಗೆ ಆಡಳಿತ ನಡೆಸಿದರು. ಆಗ ಅವರು ಹಲವಾರು ಪ್ರಗತಿ ಮತ್ತು ಜನಪರ ಯೋಜನೆಗಳನ್ನು ಹಮ್ಮಿಕೊಂಡರು. ಅವುಗಳಲ್ಲಿ ಮಾರಿಕಣಿವೆ ಆಣೆಕಟ್ಟೆಯ ನಿರ್ಮಾಣ ಮತ್ತು ಶಿವನಸಮುದ್ರದ ಬಳಿ ಭಾರತದಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಜಲವಿದ್ಯುತ್ ಯೋಜನೆ ಎದ್ದು ಕಾಣುತ್ತವೆ. 1898 ರಲ್ಲಿ 37 ಲಕ್ಷ ಅಂದಾಜು ವೆಚ್ಚದ ಮಾರಿಕಣಿವೆ ಆಣೆಕಟ್ಟೆ ನಿರ್ಮಾಣ ಪ್ರಾರಂಭವಾಯಿತು. ಇದರಿಂದಾಗಿ ಕಾವೇರಿ ಕಣಿವೆಯ ಇತರ ಯೋಜನೆಗಳು ಹಿಂದಕ್ಕೆ ಸರಿದವು ಈ ಸಂದರ್ಭದಲ್ಲಿ ಶೇಷಾದ್ರಿ ಅಯ್ಯರ್ ದಿವಾನರಾಗಿದ್ದರು. 1901 ರಲ್ಲಿ ಶಿವನ ಸಮುದ್ರ ಜಲ ವಿದ್ಯುತ್ ಯೋಜನೆ ಪ್ರಾರಂಭವಾಗಿ 1902 ರಲ್ಲಿ ಪೂರ್ಣಗೊಂಡು ವಿದ್ಯುತ್ ಉತ್ಪಾದನೆ ಪ್ರಾರಂಭವಾಯಿತು. ಜಾನ್ ಟೇಲರ್ ಕಂಪೆನಿ ಮೈಸೂರು ಸಂಸ್ಥಾನದೊಂದಿಗೆ ಕೋಲಾರ ಗಣಿಗಳಿಂದ ಚಿನ್ನವನ್ನು ತೆಗೆಯುವ ಒಪ್ಪಂದವನ್ನು ಇದರೊಂದಿಗೆ ಶಿವನಸಮುದ್ರ ವಿದ್ಯುತ್ ಸ್ಥಾವರದಿಂದ ಉತ್ಪನ್ನವಾಗುವ ವಿದ್ಯುತ್ ಖರೀದಿಸುವ ಒಪ್ಪಂದವನ್ನು ಮಾಡಿಕೊಂಡಿದ್ದಿತು. ಅಲ್ಪಾವಧಿಯಲ್ಲಿ ಹೆಚ್ಚಿನ ಚಿನ್ನ ತೆಗೆಯಲು ಈ ಕಂಪೆನಿ ವಿದ್ಯುತ್ ಜನರೇಟರ್ ಮತ್ತು ಯಂತ್ರಗಳನ್ನು ಬಳಸಿಕೊಳ್ಳುತ್ತಿದ್ದಿತು. ಇದಕ್ಕೆ 314 ಕಿ.ವ್ಯಾ (32000 ಅಶ್ವ ಶಕ್ತಿ) ವಿದ್ಯುತ್ ಬೇಕಾಗಿದ್ದಿತು. ಮಳೆಗಾಲದಲ್ಲಿ ಈ ವಿದ್ಯುತ್ ಒದಗಿಸುವುದು ತ್ರಾಸವಲ್ಲದಿದ್ದರೂ , ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ವಿದ್ಯುತ್ ಪೂರೈಕೆ ಏರುಪೇರಾಗುತ್ತಿದ್ದಿತು. ಜುಲೈ 1914 ರ ಒಳಗೆ ನಿರಂತರವಾಗಿ ಅಗತ್ಯವಾದ ವಿದ್ಯುತ್ ಪೂರೈಸದಿದ್ದರೆ ಒಪ್ಪಂದವನ್ನು ರದ್ದುಪಡಿಸುವುದಾಗಿ ಕರಾರಿನಂತೆ ನಷ್ಟವನ್ನು ಭರಿಸಿಕೊಡಬೇಕಾಗಿ ಜಾನ್ ಟೇಲರ್ ಕಂಪೆನಿ ಬೆದರಿಸಿದ್ದಿತು. ಇದಕ್ಕೆ ಪರಿಹಾರವಾಗಿ ಶಿವನಸಮುದ್ರದ ಬಳಿ 2.44 ಮೀ (8’) ಎತ್ತರ , 701.5 ಮೀ (2300’) ಉದ್ದದ ಕಟ್ಟೆಯನ್ನು ಕಟ್ಟಿ , ಅಧಿಕ ನೀರನ್ನು ಸಂಗ್ರಹಿಸಿ 15 ಜುಲೈ 1908 ರಿಂದ ಅಗತ್ಯ ವಿದ್ಯುತ್ ಒದಗಿಸಲಾಯಿತು. ಇದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕ್ರಮವೇ ಹೊರತು ಶಾಶ್ವತ ಪರಿಹಾರವಲ್ಲ ಎನ್ನುವುದು ಜಾನ್ ಟೇಲರ್ ಕಂಪೆನಿ ಅದರಂತೆಯೇ ಮೈಸೂರು ಸಂಸ್ಥಾನಕ್ಕೂ ತಿಳಿದಿದ್ದಿತು. ಕಾವೇರಿ ಅಥವಾ ಅದರ ಉಪನದಿಗಳಲ್ಲಿ ಒಂದಕ್ಕೆ ಅಡ್ಡಲಾಗಿ ಆಣೆಕಟ್ಟೆ ಕಟ್ಟಿ ನೀರನ್ನು ಸಂಗ್ರಹಿಸಿ ಅಗತ್ಯಕ್ಕೆ ತಕ್ಕಂತೆ ಹರಿಸುವುದರಿಂದ ಮಾತ್ರವೇ ಶಿವನಸಮುದ್ರದ ವಿದ್ಯುತ್ ಸ್ಥಾವರದಿಂದ ನಿರಂತರವಾಗಿ ಬೇಕಾದಷ್ಟು ವಿದ್ಯುತ್ ಪಡೆಯಬಹುದೆಂದು ಆಗ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿದ್ದ ಮೆಕ್’’ಹಚಿನ್’ಗೆ ಮನದಟ್ಟಾಗಿದ್ದಿತು. ಮೆಕ್’ಹಚಿನ್ ಈ ಕುರಿತು ಒಂದು ಯೋಜಾನಾ ವರದಿ ತಯಾರಿಸುವ ಹೊಣೆಯನ್ನು ಅಧೀಕ್ಷಕ ಇಂಜಿನಿಯರ್ ವಿ.ಎಚ್.ಕಾರ್ವೆಗೆ ವಹಿಸಿದನು. ವಿ.ಎಚ್. ಕಾರ್ವೆ ಮತ್ತೊಮ್ಮೆ ಸರ್ವೇ ಕಾರ್ಯಗಳನ್ನು ನಡೆಸಿ , ರಾಮಸ್ವಾಮಿ ಕಣಿವೆಯ ಪ್ರದೇಶದಲ್ಲಿರುವ ನದಿಯ ತಳಪಾಯದಲ್ಲಿ ಗಟ್ಟಿ ಕಲ್ಲು ಇಲ್ಲದಿರುವುದರಿಂದ ಅಲ್ಲಿ ಎತ್ತರದ ಆಣೆಕಟ್ಟೆ ಕಟ್ಟುವುದು ಸಾಧ್ಯವಿಲ್ಲ ಹಾಗೂ ಅಲ್ಲಿ ಆಣೆಕಟ್ಟೆ ಕಟ್ಟಿದರೆ ಮೈಸೂರು ಸಂಸ್ಥಾನಕ್ಕೆ ಸೇರದ ಕೊಡಗು ಸ್ವಾಯತ್ತ ಸಂಸ್ಥಾನದ ಕೆಲ ಪ್ರದೇಶಗಳು ಮುಳುಗಡೆಯಾಗುತ್ತವೆ ಎಂದು ವರದಿ ನೀಡಿದನು. ಇದಲ್ಲದೆ ಎತ್ತರದ ಆಣೆಕಟ್ಟೆ ಕಟ್ಟಲು ಸೂಕ್ತವಾದ ಎರಡು ಜಾಗಗಳನ್ನು ಗುರುತಿಸಿದನು. ಇವುಗಳಲ್ಲಿ ಕನ್ನಂಬಾಡಿ ಸೂಕ್ತವಾದ ಜಾಗವೆಂದು ಉಪ ಮುಖ್ಯ ಇಂಜಿನಿಯರ್ ಆಗಿದ್ದ ಕ್ಯಾಪ್ಟನ್ ಬರ್ನಾರ್ಡ್ ಡವೆಸ್ ಶಿಫಾರಸ್ಸು ಮಾಡಿದನು. ಈ ಜಾಗವನ್ನು ಸರ್ಕಾರದ ಭೂವಿಜ್ಞಾನ ಇಲಾಖೆಯ ಮುಖ್ಯಸ್ಥ ಡಬ್ಲ್ಯು.ಎಫ್ ಸ್ಮೀಥ್ ಪರಿಶೀಲಿಸಿ ನದಿ ಪಾತ್ರದಲ್ಲಿ ಗಟ್ಟಿ ಬಂಡೆಯಿದ್ದು ಎತ್ತರದ ಆಣೆಕಟ್ಟೆ ನಿರ್ಮಾಣ ಮಾಡಬಹುದೆನ್ನುವ ಅಭಿಪ್ರಾಯ ನೀಡಿದನು. ಇವೆಲ್ಲ ಸಂಗತಿಗಳನ್ನು ಗಮನಿಸಿ ಹಚಿನ್ಸ್ ಕನ್ನಂಬಾಡಿ ಆಣೆಕಟ್ಟೆ ನಿರ್ಮಾಣಕ್ಕೆ ಪ್ರಶಸ್ತವಾದ ಜಾಗವೆಂದು ತೀರ್ಮಾನಿಸಿ ಯೋಜನಾ ವರದಿಯನ್ನು ತಯಾರಿಸುವಂತೆ ಉಪ ಮುಖ್ಯ ಇಂಜಿನಿಯರ್ ಆಗಿದ್ದ 1907 ರಲ್ಲಿ ಕ್ಯಾಪ್ಟನ್ ನಿಖೊಲಾಸ್ ಬರ್ನಾರ್ಡ್ ಎಡ್ವಿನ್ ಡವೆಸ್’ಗೆ ಆದೇಶಿಸಿದನು. ಬರ್ನಾರ್ಡ್ ಡವೆಸ್ ಸಂಪೂರ್ಣ ಯೋಜನಾ ವರದಿಯನ್ನು ಸಿದ್ಧಪಡಿಸಿ 25 ಜುಲೈ 1908 ರಂದು ಮೆಕ್’ಹಚಿನ್ಸ್’ಗೆ ಸಲ್ಲಿಸಿದನು. ಬರ್ನಾಡ್ ಡವೆಸ್ ಸಲ್ಲಿಸಿದ ಯೋಜನಾ ವರದಿಯ ಪ್ರಕಾರ ಕನ್ನಂಬಾಡಿಯ ಬಳಿ ಮೊದಲ ಹಂತದಲ್ಲಿ 21.35 ಮೀ ( 70')ಎತ್ತರದ ಆಣೆಕಟ್ಟೆ ನಿರ್ಮಿಸುವುದು.ಇಲ್ಲಿ ಸಂಗ್ರಹವಾದ ನೀರನ್ನು ಶಿವನ ಸಮುದ್ರದಲ್ಲಿ ವಿದ್ಯುತ್ ತಯಾರಿಸಲು ಬಳಸುವುದು. ಇದರಿಂದ 226 ಕಿ.ವ್ಯಾ (23000 ಅಶ್ವ ಶಕ್ತಿ) ಅಧಿಕ ವಿದ್ಯುತ್ ಉತ್ಪಾದನೆಯಾಗುತ್ತದೆ. ಜಾನ್ ಟೇಲರ್ ಕಂಪೆನಿಯ ಅಗತ್ಯಗಳನ್ನು ಪೂರೈಸಿದ ನಂತರ ಉಳಿಯುವ ವಿದ್ಯುತ್’ನ್ನು ಕೊಯಂಬತ್ತೂರು ಮತ್ತು ಮದ್ರಾಸ್’ಗೆ ಮಾರಿ ಹಣ ಸಂಗ್ರಹಿಸುವುದು. ಹೀಗೆ ಸಂಗ್ರಹವಾದ ಹಣ ಬಳಸಿ ಎರಡನೇ ಹಂತದಲ್ಲಿ ಆಣೆಕಟ್ಟೆಯನ್ನು 35.075 ಮೀ (115')ಏರಿಸುವುದು. ಆಣೆಕಟ್ಟೆಯ ಎರಡನೇ ಹಂತ ಮುಗಿದ ನಂತರ 30,000 ಎಕರೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು. ಬರ್ನಾರ್ಡ್ ಡವೆಸ್ ತನ್ನ ವರದಿಯಲ್ಲಿ ‘ಈ ಯೋಜನೆಗೆ 1.75 ಕೋಟಿ ಬಂಡವಾಳ ಬೇಕು. 30 ವರ್ಷಗಳಲ್ಲಿ ಆಣೆಕಟ್ಟೆಯ ಮೇಲೆ ಹೂಡಿದ ಬಂಡವಾಳ ಮತ್ತು ಅದರ ಮೇಲಿನ ಬಡ್ಡಿ ಹಿಂದಕ್ಕೆ ಬಂದಿರುತ್ತದೆ. 39ನೇ ವರ್ಷದಲ್ಲಿ ಎಲ್ಲ ನೀರಾವರಿ ಕಾಲುವೆಗಳ ಕೆಲಸ ಪೂರ್ಣಗೊಂಡಿರುತ್ತದೆ. 40ನೇ ವರ್ಷದಿಂದ ವಿದ್ಯುತ್ ಮತ್ತು ನೀರಾವರಿಗಳ ಮೂಲಕ ಮೈಸೂರು ಸಂಸ್ಥಾನಕ್ಕೆ ವಾರ್ಷಿಕ 60 ಲಕ್ಷ ಆದಾಯ ಬಂದರೆ ಕಾಲುವೆಗಳ ನಿರ್ವಹಣೆಗೆ ವಾರ್ಷಿಕ 8 ಲಕ್ಷ ಸಾಕು’ ಎಂದು ಆರ್ಥಿಕ ಲೆಕ್ಕಾಚಾರಗಳನ್ನು ನೀಡಿದ್ದನು. ಅಪಾರ ಬಂಡವಾಳ ಬೇಡುವ ಈ ಯೋಜನೆಯಿಂದ ತನ್ನ ಸಂಸ್ಥಾನದ ಜನರಿಗೆ ಯಾವುದೇ ಉಪಯೋಗವಿಲ್ಲ ಎಂದು ಆಗಿನ್ನೂ ಹರೆಯದಲ್ಲಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್’ಗೆ ತಕ್ಷಣವೇ ತಿಳಿದುಬಂದುದರ ಪರಿಣಾಮವಾಗಿ ಈ ವರದಿಯೂ ತಿರಸ್ಕೃತವಾಯಿತು. 1908 ರಲ್ಲಿ ಮೆಕ್’ಹಚಿನ್ಸ್ ನಿವೃತ್ತನಾಗಿ ಮುಖ್ಯ ಇಂಜಿನಿಯರ್ ಹುದ್ದೆಗೆ ಬರ್ನಾರ್ಡ್ ಡವೆಸ್ ನೇಮಕಗೊಂಡನು. ಹಿಂದಿನ ವರ್ಷ ತಾನು ಮಂಡಿಸಿದ ವರದಿ ಮೈಸೂರು ಸಂಸ್ಥಾನದಿಂದ ತಿರಸ್ಕೃತವಾದ ನೆನಪು ಬರ್ನಾರ್ಡ್ ಡವೆಸ್ ಮನಸ್ಸಿನಲ್ಲಿ ಹಸಿರಾಗಿದ್ದಿತಲ್ಲದೆ ಅದಕ್ಕೆ ಬದಲಾಗಿ ಪರ್ಯಾಯ ಯೋಜನೆಯನ್ನು ರೂಪಿಸುವ ಒತ್ತಡ ಬಂದಿತು. ಬರ್ನಾರ್ಡ್ ಡವೆಸ್ 1909 ರಲ್ಲಿ ಪರಿಷ್ಕೃತ ಯೋಜನಾ ವರದಿಯನ್ನು ಸಲ್ಲಿಸಿದನು. ಬರ್ನಾರ್ಡ್ ಡವೆಸ್ ಯೋಜನಾ ವರದಿಯ ಮುಖ್ಯಾಂಶಗಳು ಹೀಗಿವೆ . (1) ಕನ್ನಂಬಾಡಿಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಮೊದಲ ಹಂತದಲ್ಲಿ 27.45 ಮೀ (90’) ಎತ್ತರವಿದ್ದು ಎರಡನೇ ಹಂತದಲ್ಲಿ 36.6 ಮೀ (120’) ಎತ್ತರಕ್ಕೆ ಏರಿಸಬಹುದ ಆಣೆಕಟ್ಟೆಯನ್ನು ನಿರ್ಮಿಸುವುದು. (2) ಮೊದಲ ಹಂತದಲ್ಲಿ 27.45 ೨ (90’) ಎತ್ತರದ ಆಣೆಕಟ್ಟೆ ಪೂರ್ಣಗೊಂಡಾಗ ಅದರಲ್ಲಿ 24.4 ಮೀ (80’) ಎತ್ತರಕ್ಕೆ ನೀರನ್ನು , ಎರಡನೇ ಹಂತದಲ್ಲಿ 36.6 ಮೀ (120’) ಎತ್ತರ ತಲುಪಿದಾಗ 35.99 ಮೀ (118’) ಎತ್ತರಕ್ಕೆ ನೀರನ್ನು ಸಂಗ್ರಹಿಸಬಹುದು. (3) ಮೊದಲ ಹಂತದ ಆಣೆಕಟ್ಟೆ ನಿರ್ಮಾಣಗೊಂಡಾಗ ಅದರ ಜಲಾಶಯದಲ್ಲಿ ಸಾಮರ್ಥ್ಯ 1.053 ಬಿ.ಸಿ.ಎಂ (37.1 ಟಿ.ಎಂ.ಸಿ) (4) ಜಲಾಶಯದಲ್ಲಿ ಸಂಗ್ರಹವಾದ ನೀರಿನಿಂದ 451.26 ಕಿ.ವ್ಯಾ ( 46000 ಅಶ್ವ ಶಕ್ತಿ) ವಿದ್ಯುತ್ ಉತ್ಪಾದಿಸಬಹುದು. (5) ಪ್ರತಿ ಅಶ್ವಶಕ್ತಿ ಉತ್ಪಾದನೆಯಿಂದ 10 ಡಾಲರ್ ಆದಾಯ ಪಡೆ ಯಬಹುದು (6) 160 ಕಿ.ಮೀ ಉದ್ದದ ಕಾಲುವೆ ನಿರ್ಮಿಸಿ ಮಂಡ್ಯ ,ನಾಗಮಂಗಲ, ಚನ್ನಪಟ್ಟಣ ಮತ್ತು ಮಳವಳ್ಳಿ ತಾಲೂಕುಗಳಿಗೆ ನೀರಾವರಿಗೆ ನೀರು ಒದಗಿಸುವುದು. ಮಹಾರಾಜರಿಗೆ ಸಂತೋಷವಾಗಲಿ ಮತ್ತು ಯೋಜನೆಗೆ ಬೇಗನೆ ಅನುಮತಿ ದೊರೆಯಲಿ ಎನ್ನುವ ಉದ್ದೇಶದಿಂದ (6)ನೇ ಅಂಶವನ್ನು ಸೇರಿಸಲಾಗಿದ್ದಿತು. ಬರ್ನಾರ್ಡ್ ಡವೆಸ್ ವರದಿಯಲ್ಲಿ ಒಟ್ಟು ಯೋಜನಾ ವೆಚ್ಚ 2.5 ಕೋಟಿಗೆ ನಿಗದಿಯಾಗಿದ್ದಿತು. ಇದನ್ನು ಕಂಡ ಮೈಸೂರು ಸಂಸ್ಥಾನ ಬೆಚ್ಚಿಬಿದ್ದಿತು. ಏಕೆಂದರೆ ಅದರ ವಾರ್ಷಿಕ ಆದಾಯವೇ ಅಷ್ಟಿರಲಿಲ್ಲ. ಬರ್ನಾರ್ಡ್ ಡವೆಸ್ ತಯಾರಿಸಿದ ಮೊದಲನೇ ವರದಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಯಾವುದೇ ಲಾಭವಿರಲಿಲ್ಲ. ಆದರೆ ಕನ್ನಂಬಾಡಿಯ ಹತ್ತಿರ ಆಣೆಕಟ್ಟೆ ಕಟ್ಟುವ ಎರಡನೇ ವರದಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಅದರಲ್ಲೂ ವಿಶೇಷವಾಗಿ ರೈತರಿಗೆ ಅನುಕೂಲಕರವಾದ ಅಂಶಗಳಿರುವುದು ಕೆಂಪನಂಜಮ್ಮಣಿ ಗಮನಕ್ಕೆ ಬಂದಿದ್ದಿತು. ಜನಪರವಾದ ಈ ಯೋಜನೆಯನ್ನು ಹೇಗಾದರೂ ಪೂರ್ಣಗೊಳಿಸಬೇಕೆಂಬ ನಿರ್ಧಾರ ಅವರ ಮನಸ್ಸಿನಲ್ಲಿ ಗಟ್ಟಿಯಾಗಿದ್ದಿತು. 1909 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅರಕಲಗೂಡು ತಾಲೂಕಿನ ಕಟ್ಟೆಪುರದ ಬಳಿ ಕಟ್ಟಿದ್ದ ಕೃಷ್ಣರಾಜ ಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡು , ಕೆಲಭಾಗ ಒಡೆದಿದ್ದಿತು. ಈ ಬಿರುಕನ್ನು ಮುಚ್ಚಲು ಮತ್ತು ಒಡೆದ ಭಾಗವನ್ನು ದುರಸ್ತಿಗೊಳಿಸಲು ಮುಖ್ಯ ಇಂಜಿನಿಯರ್ ಬರ್ನಾಡ್ ಡವೆಸ್ 30/07/1909 ರಂದು ಏಳು ಜನ ಸ್ಥಳೀಯ ಕೂಲಿಗಳೊಂದಿಗೆ ನದಿಗೆ ಇಳಿದಿದ್ದನು. ಎರಡು ತೆಪ್ಪಗಳನ್ನು ಕಟ್ಟಿ ಅವುಗಳಲ್ಲಿ ಕಲ್ಲು ತುಂಬಿದ ಬ್ಯಾರೆಲ್’ಗಳನ್ನು ಒಯ್ದು ಅವುಗಳನ್ನು ನದಿಯ ತಳಕ್ಕೆ ಇಳಿಸಿ ಬಿರುಕನ್ನು ಮುಚ್ಚಿ, ದುರಸ್ತಿಗೊಳಿಸುವುದು ಆತನ ತಂತ್ರವಾಗಿದ್ದಿತು. ಕಲ್ಲು ತುಂಬಿದ ಬ್ಯಾರೆಲ್’ನ್ನು ನದಿಯ ತಳಕ್ಕೆ ಇಳಿಸಿದ ನಂತರ ದೊಡ್ಡ ತೆಪ್ಪದ ನೆರವಿಂದ ಅವುಗಳನ್ನು ನಡುಗಡ್ಡೆಯತ್ತ ಎಳೆಯುವುದು ಆತನ ಉದ್ದೇಶವಾಗಿದ್ದಿತು. ತೆಪ್ಪಗಳನ್ನು ನಡುಗಡ್ಡೆಯತ್ತ ಎಳೆಯುವಾಗ ನೆರೆಯ ಉರುಬು ಹೆಚ್ಚಿತು. ಇದರಿಂದ ಕೂಲಿಗಳು ಅಡ್ಡಾದಿಡ್ಡಿಯಾಗಿ ಚಲಿಸಿ ತೆಪ್ಪ ಮುಗುಚಿಕೊಂಡಿತು. ಬರ್ನಾರ್ಡ್ ಡವೆಸ್ ಸೇರಿದಂತೆ ಎಲ್ಲರೂ ನೀರು ಪಾಲಾದರು. ಸ್ಥಳೀಯರಲ್ಲಿ ಒಬ್ಬನ್ನನ್ನು ಹೊರತಾಗಿ ಉಳಿದವರೆಲ್ಲರು ಈಜಿ ದಡದತ್ತ ಸಾಗಿದರು. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದವನು ನೆರವಿಗಾಗಿ ಕೂಗುತ್ತಿದನು. ಆತನ ನೆರವಿಗಾಗಿ ಬರ್ನಾರ್ಡ್ ಮುಂದಾಗಿ ಆತನನ್ನು ದಡದತ್ತ ತಳ್ಳುವ ಪ್ರಯತ್ನದಲ್ಲಿ ತಾನೇ ನೀರು ಪಾಲಾದನು. ಮೂರು ದಿನಗಳ ನಂತರ ಘಟನೆ ನಡೆದ ಸ್ಥಳದಿಂದ ದೂರದಲ್ಲಿ ಬರ್ನಾರ್ಡ್ ಹೆಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ತಮ್ಮವರಲ್ಲಿ ಒಬ್ಬನನ್ನು ರಕ್ಷಿಸಲು ಮುಂದಾದ ಈ ಬಿಳಿಯನ ತ್ಯಾಗ ಮತ್ತು ಮಾನವೀಯತೆಗೆ ಮಾರುಹೋದ ಸ್ಥಳೀಯರು 600 ರೂ ಸಂಗ್ರಹಿಸಿ ಸರ್ಕಾರದಲ್ಲಿ 6.5 % ಬಡ್ಡಿ ಬರುವಂತೆ ಠೇವಣಿ ಇಟ್ಟರು. ಈ ಬಡ್ಡಿಯಿಂದ ಬರುವ ಹಣವನ್ನು ಇತರರನ್ನು ಬದುಕಿಸಲು ಶೌರ್ಯ ಪ್ರದರ್ಶಿಸಿದ ವಿದ್ಯಾರ್ಥಿಗೆ ನೀಡುವ ವ್ಯವಸ್ಥೆ ಮಾಡಿದರು. ಬರ್ನಾಡ್ ಡವೆಸ್’ನ ದಾರುಣ ಸಾವಿನ ನಂತರ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಹುದ್ದೆ ಖಾಲಿ ಉಳಿದಿದ್ದಿತು. ಇದಕ್ಕೆ ಯೋಗ್ಯರಾದ ಭಾರತೀಯರನ್ನು ನೇಮಕ ಮಾಡಿಕೊಳ್ಳುವ ಆಶೆ ಮಹಾರಾಜರಿಗಿದ್ದಿತು. ಇದರ ಫಲಿತಾಂಶವಾಗಿ 15/11/1909 ರಂದು ಎಂ.ವಿಯವರು ಮುಖ್ಯ ಇಂಜಿನಿಯರ್ ಆಗಿ ನೇಮಕಗೊಂಡರು. ಹಾಗೆ ನೇಮಕಗೊಂಡಾಗ ಅವರ ಮುಂದೆ ಬರ್ನಾರ್ಡ್ ಡವೆಸ್ ಸಿದ್ಧಪಡಿಸಿದ್ದ ಕನ್ನಂಬಾಡಿ ಯೋಜನಾ ವರದಿ ಇದ್ದಿತು. ಕನ್ನಂಬಾಡಿಗೆ ಸಂಬಂಧಿಸಿದ ಎಂ.ವಿಯವರ ಎಲ್ಲ ಕೆಲಸಗಳಿಗೆ ಇದು ಮೂಲ ಆಕರವಾಗಿದ್ದಿತು. ದೊಡ್ಡ ನೀರಾವರಿ ಯೋಜನೆಗಳ ಬಗ್ಗೆ ಒಲವಿದ್ದ ಎಂ.ವಿಯವರು ಬರ್ನಾರ್ಡ್ ಡವೆಸ್ ಯೋಜನಾ ವರದಿಗೆ ಒಂದು ಅಂತಿಮ ರೂಪ ಕೊಡಲು 1910ರಲ್ಲಿ ಮತ್ತೊಮ್ಮೆ ಸರ್ವೆ ಕೆಲಸಗಳಿಗೆ ಆದೇಶಿಸಿದರು. 5 ಮೇ 1911 ರಂದು ಎರಡನೇ ಬಾರಿ ಪರಿಷ್ಕೃತಗೊಂಡ ವರದಿ ಸಿದ್ಧಗೊಂಡು , ಅಕ್ಟೋಬರ್ 1911 ರಂದು 80 ಲಕ್ಷ ಅಂದಾಜು ವೆಚ್ಚದ ಆಣೆಕಟ್ಟೆಯ ಮೊದಲ ಹಂತದ ನಿರ್ಮಾಣಕ್ಕೆ ಅನುಮತಿ ಸಿಕ್ಕಿತು. 1911 ರಲ್ಲಿ ಆಣೆಕಟ್ಟೆಯ ಕೆಲಸ ಪ್ರಾರಂಭವಾಯಿತು. 1914 ರ ವೇಳೆಗೆ ನದಿಯ ತಳದಲ್ಲಿ ಸಾಗಬೇಕಾಗಿದ್ದ ಕಷ್ಟಕರವಾದ ಆಣೆಕಟ್ಟೆಯ ಬುನಾದಿ ಕೆಲಸ ಪೂರ್ಣಗೊಂಡು ಆಣೆಕಟ್ಟೆ ದಕ್ಷಿಣ ಭಾಗದಲ್ಲಿ 18.3 ಮೀ (60') , ಉತ್ತರ ಭಾಗದಲ್ಲಿ 10.98 ಮೀ ( 36') ಮೇಲೆದ್ದಿತು. 1915 ರ ವೇಳೆಗೆ ಆಣೆಕಟ್ಟೆ 19.825 ಮೀ (65') ಪೂರ್ಣಗೊಂಡಿತು . ಈ ವೇಳೆಗೆ ಆಣೆಕಟ್ಟೆಯೊಳಗೆ ಕೊರೆತದ ತೂಬುಗಳನ್ನು ಒದಗಿಸಿ ನದಿಯ ನೀರಿನ ಸಾಧಾರಣ ಹರಿವನ್ನು ನಿಯಂತ್ರಿಸಲಾಯಿತು. ಮೊದಲ ಹಂತದಲ್ಲಿ ಪರಿಗಣಿಸಲಾದ 24.4 ಮೀ (80’) ಎತ್ತರ 1920 ರಲ್ಲಿ ತಲುಪಿತು. ಆಗ ಜಲಾಶಯದ ಸಾಮರ್ಥ್ಯ 0.313 ಬಿ.ಸಿ.ಎಂ (11 ಟಿ.ಎಂ.ಸಿ) ಇದ್ದಿತು. ವಿದ್ಯುತ್ ಉತ್ಪಾದನೆ ಮತ್ತು ಆಣೆಕಟ್ಟೆ ನಿರ್ಮಾಣ , ನೀರಾವರಿಗೆ ಸಂಬಂಧಿಸಿದ ಕೆಲಸಗಳ ಬಗ್ಗೆ ಮುಂದಿನ ಕಾರ್ಯಕ್ರಮಗಳನ್ನು ನಿರ್ಧರಿಸಲು ೧೯೨೨ ರಲ್ಲಿ ಫ್ರೆಡರಿಕ್ ಸೇಂಟ್ ಜಾನ್ ಗೆಬ್ಬಿ ನೇತೃತ್ವದ ಸಮಿತಿ ನೇಮಕಗೊಂಡಿತು. 1932 ರಲ್ಲಿ ಆಣೆಕಟ್ಟೆ 40.26 ಮೀ 132’ ಎತ್ತರ ತಲುಪುವುದರೊಂದಿಗೆ ಆಣೆಕಟ್ಟೆಯ ಕೆಲಸಗಳು ಪೂರ್ಣಗೊಂಡು ಮೂಲ ಯೋಜನೆಯ ವೆಚ್ಚ ಸಂಪೂರ್ಣ ಬಳಕೆಯಾಗಿದ್ದು ನೀರಾವರಿಗೆ ಬೇಕಾದ ಕಾಲುವೆ ಕೆಲಸಗಳು ಬಾಕಿ ಉಳಿದಿದ್ದವು. 1929 ರಲ್ಲಿ ಮೇಲ್ಮಟ್ಟದ ಕಾಲುವೆಯ ಕೆಲಸ ಪ್ರಾರಂಭವಾಯಿತು. ಇದೇ ವೇಳೆಗೆ 2806 ಮೀ (9200') ಉದ್ದದ ಹುಲಿಕೆರೆ ಸುರಂಗದಲ್ಲಿ 1220ಮೀ (4000')ಪೂರ್ಣಗೊಂಡಿತು. ಮುಂದಿನ 10 ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಕಾಲುವೆಯ ಕೆಲಸಗಳು ಜರುಗಿ 1940 ರ ವೇಳೆಗೆ ಪೂರ್ಣಗೊಂಡವು. 21 ವರ್ಷಗಳ ಸುದೀರ್ಘ ಅವಧಿಯಲ್ಲಿ ಜರುಗಿದ ಆಣೆಕಟ್ಟೆಯ ಕೆಲಸಗಳು ಮುಂದೆ ಆರು ಮುಖ್ಯ ಇಂಜಿನಿಯರ್’ಗಳ ಮುಂದಾಳತ್ವದಲ್ಲಿ ಸಾಗಿದವು. ಎಂ.ವಿ , ರಾಜಸಭಾ ಭೂಷಣ ಕರ್ಪೂರ ಶ್ರೀನಿವಾಸ ರಾವ್ , ರಾಜಶಿಲ್ಪಿ ವಿಶಾರದ ರಾವ್ ಬಹದ್ದೂರ್ ಸುಬ್ಬಾರಾವ್ , ರಾಜಸಭಾಭೂಷಣ ರಾವ್ ಬಹದ್ದೂರ್ ಕೃಷ್ಣ ಅಯ್ಯಂಗಾರ್ , ರಾಜಸೇವಾಸಕ್ತ ಜಾನ್ ಬೋರ್ , ರಾಜಸೇವಾಸಕ್ತ ದಿವಾನ್ ಬಹದ್ದೂರ್ ಕೆ.ಆರ್ ಶೇಷಾಚಾರ್ , ಎಸ್.ಶ್ರೀನಿವಾಸ ಅಯ್ಯರ್ ಸರದಿಯಲ್ಲಿ ಮುಖ್ಯ ಇಂಜಿನಿಯರ್’ಗಳಾಗಿ ಆಣೆಕಟ್ಟೆಯ ನಿರ್ಮಾಣವನ್ನು ಮುಗಿಸಿದರು. (ಚಿತ್ರ : ಕನ್ನಂಬಾಡಿ ಆಣೆಕಟ್ಟೆಯ ಅಡ್ಡ ಖಂಡ) ತಾಂತ್ರಿಕ ಸಂಗತಿಗಳು ಎಂ.ವಿಯವರು ತಮ್ಮ ‘ಮೆಮೊಯಿರ್ಸ್ ಆಫ್ ಮೈ ವರ್ಕಿಂಗ್ ಲೈಫ್’ನಲ್ಲಿ ಕನ್ನಂಬಾಡಿಯಲ್ಲಿ ಕಾವೇರಿ ನದಿಗೆ ಆಣೆಕಟ್ಟೆ ಕಟ್ಟಲು ಪ್ರಸ್ತಾವನೆ ಇತ್ತಾದರೂ ಯಾವುದೇ ವಿನ್ಯಾಸಗಳನ್ನು ಮಾಡಿರಲಿಲ್ಲ. ಇದಕ್ಕಾಗಿ ಹೊಸದಾಗಿ ಸರ್ವೇ ಮಾಡಲಾಯಿತು. ನಾನು, ನನ್ನ ವಿದೇಶ, ಪ್ರಯಾಣದಲ್ಲಿ ಈಜಿಪ್ತಿನ ಅಸ್ವಾನ್’ನಂತಹ ದೊಡ್ಡ ಆಣೆಕಟ್ಟೆಗಳನ್ನು ನೋಡಿದ್ದೆನು. ಹೈದರಾಬಾದ್ ಸಂಸ್ಥಾನಕ್ಕೆ ಇಂತಹುದೇ ಆಣೆಕಟ್ಟೆಗಳ ವಿನ್ಯಾಸ ಮಾಡಿದ್ದೆನು ಆದ್ದರಿಂದ ನನಗೆ ಕನ್ನಂಬಾಡಿ ಕಟ್ಟೆ ವಿನ್ಯಾಸ ಮಾಡುವುದು ಕಠಿಣವಾಗಲಿಲ್ಲ. ಮಹಾರಾಜರು ನಾನು ತಯಾರಿಸಿದ ವರದಿ, ವಿನ್ಯಾಸಗಳನ್ನು ಬೇರೆ ಇಂಜಿನಿಯರ್’ಗಳಿಗೆ ತೋರಿಸಿದ್ದರೋ ಇಲ್ಲವೋ ನನಗೆ ತಿಳಿಯದು. ಯಾವುದೇ ತಿದ್ದುಪಡಿ, ಸೇರಿಸಿಕೆ, ತೆಗೆಯುವಿಕೆ ಇಲ್ಲದೆ ನನ್ನ ಯೋಜನೆ, ವಿನ್ಯಾಸಗಳಿಗೆ ಹಸಿರು ನಿಶಾನೆ ತೋರಿಸಲಾಯಿತು (1-ಪು 55) ಎನ್ನುವ ಒಂದೇ ಹೇಳಿಕೆಯಲ್ಲಿ ಕನ್ನಂಬಾಡಿಯ ಯೋಜನೆ , ವಿನ್ಯಾಸಗಳನ್ನು ಸೂಚಿಸಿದ್ದಾರೆ. ಇದರೊಂದಿಗೆ (1) 1912ರವರೆಗೆ ಭಾರತದಲ್ಲಿ ಈ ಗಾತ್ರದ ಕಟ್ಟೆಯನ್ನು ಕಟ್ಟಲು ಯಾರೂ ಯತ್ನಿಸಿರಲಿಲ್ಲ. (2) ಅಣೆಕಟ್ಟಿನ ಎಡದಂಡೆ ಕಾಲುವೆಯನ್ನು 2.72 ಕಿ.ಮೀ (1 3/4 ಮೈಲಿ) ಸುರಂಗದ ಮೂಲಕ ಒಯ್ಯಲಾಗಿದೆ. ಇಂತಹ ಪ್ರಯತ್ನ ಭಾರತದಲ್ಲಿಯೇ ಮೊದಲಿನದು ಎಂದು ದಾಖಲಿಸಿದ್ದಾರೆ. ಎಂ.ವಿಯವರಿಗೆ ಅಪಾರ ಕೀರ್ತಿ ತಂದು ಹೊಗಳಿಕೆಗೆ ಪಾತ್ರವಾದ ಇಂತಹ ಬೃಹತ್ ಸಾಧನೆಯನ್ನು ಅವರು ಇಷ್ಟು ಹಗುರವಾಗಿ ಹೇಳಿರುವುದು ಅಚ್ಚರಿ ಮೂಡಿಸುತ್ತದೆ. ಇದು ಅವರ ನಿರಹಂಕಾರ ಮನೋಭಾವವನ್ನು ಸೂಚಿಸುತ್ತದೆ ಎನ್ನುವ ಸಮರ್ಥನೆಯನ್ನು ನೀಡಬಹುದಾದರೂ ತಾಂತ್ರಿಕ ವಿವರಗಳ ಹಿನ್ನೆಲೆಯಲ್ಲಿ ಬೇರೆಯದೇ ಆದ ಪ್ರಶ್ನೆಗಳು ಎದುರಾಗುತ್ತವೆ. [10] (1) ಎಂ.ವಿಯವರು 15/11/1909 ರಂದು (1-43) ಮುಖ್ಯ ಇಂಜಿನಿಯರ್ ಹುದ್ದೆ ವಹಿಸಿಕೊಂಡರು. ಆ ವೇಳೆಗೆ ಕಾವೇರಿಗೆ ಆಣೆಕಟ್ಟೆ ಕಟ್ಟುವ ಯೋಜನೆಯ ವರದಿಯೊಂದು ಇದ್ದಿತು. ಆ ಯೋಜನೆ ಅನುಷ್ಠಾನ ಯೋಗ್ಯವಾಗಿರಲಿಲ್ಲ. ಆದ್ದರಿಂದ ನಾನು ಹೊಸದಾಗಿ ಮತ್ತೊಮ್ಮೆ ಅನುಷ್ಠಾನ ಯೋಗ್ಯ ವರದಿ ತಯಾರಿಸಿ 5/5/1911 ರಂದು ಮಹಾರಾಜರಿಗೆ ಸಲ್ಲಿಸಿದೆ (1-51) ಎಂದು ಎಂ.ವಿಯವರು ಹೇಳುತ್ತಾರೆ. ಅವರು ಹಿಂದೆ ವರದಿ ಸಲ್ಲಿಸಿದ ಇಂಜಿನಿಯರ್ ಹೆಸರೆತ್ತುವುದಿಲ್ಲ. ಅದು ಏಕೆ ಅನುಷ್ಠಾನ ಯೋಗ್ಯವಾಗಿರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುವುದಿಲ್ಲ. ಅದರ ಯೋಜನೆಯ ವೆಚ್ಚ ಏನಾಗಿದ್ದಿತೆಂದು ತಿಳಿಸುವುದಿಲ್ಲ. ತಾವು ಮತ್ತೊಮ್ಮೆ ಯೋಜನೆ ತಯಾರಿಸಲು ರಚಿಸಿದ ಇಂಜಿನಿಯರ್’ಗಳ ತಂಡ, ಅವರ ಹೆಸರು, ಅವರ ಹೊಣೆಗಾರಿಕೆಯ ಬಗ್ಗೆ ಹೇಳುವುದಿಲ್ಲ. ಹಿಂದಿನ ವರದಿಯನ್ನು ಬಳಸಿಕೊಳ್ಳದೆ ಕೇವಲ ಒಂದೂವರೆ ವರ್ಷದಲ್ಲಿ ನೀರಾವರಿ ಒಳಗೊಂಡಿರುವ ಸಮಗ್ರ ವರದಿಯನ್ನು ತಯಾರಿಸಲು ನೆರವಾದ ಮತ್ತೊಬ್ಬ ವ್ಯಕ್ತಿಯ ಹೆಸರನ್ನು ಅಪ್ಪಿ ತಪ್ಪಿಯೂ ದಾಖಲಿಸದೆ ಪ್ರತಿಯೊಂದನ್ನು ನಾನು ಮಾಡಿದೆ ಎಂದು ಹೇಳುವ ಒಂಟಿ ಸಾಹಸಿ ವೀರನಂತೆ ಕಾಣುತ್ತಾರೆ. ಅತ್ಯಾಧುನಿಕ ಸರ್ವೇ ಉಪಕರಣ , ತಾಂತ್ರಿಕ ಸಾಧನ , ಸಲಕರಣೆಗಳು ಇರುವ ಈ ಕಾಲದಲ್ಲಿಯೇ ಜಾಗತಿಕ ಟೆಂಡರ್ ಕರೆದರೂ ಮೇಕೆದಾಟು ಯೋಜನೆಯ ಸಮಗ್ರ ವರದಿ ಸರ್ಕಾರದ ಕೈಸೇರಲು ಕನಿಷ್ಟ 1 ವರ್ಷ ಬೇಕಾಗುವುದೆಂದು ಅಂದಾಜಿಸಲಾಗಿದೆ. ಎಂ.ವಿಯವರ ಕಾಲದಲ್ಲಿ ಇಂತಹುದೇ ಕೆಲಸಕ್ಕೆ ಕನಿಷ್ಟ ಇದರ ಎರಡರಿಂದ ಮೂರು ಪಟ್ಟು ಕಾಲಾವಧಿ ಬೇಕಾಗುತ್ತಿದ್ದಿತು. ಆದ್ದರಿಂದ ಎಂ.ವಿಯವರ ಹೇಳಿಕೆಗಳನ್ನು ಹೇಗೆ ತೆಗೆದುಕೊಳ್ಳಬೇಕೆಂಬ ಸಮಸ್ಯೆ ಎದುರಾಗುತ್ತದೆ. (2) 1912 ರವರೆಗೆ ಭಾರತದಲ್ಲಿ ಕನ್ನಂಬಾಡಿ ಆಣೆಕಟ್ಟೆಯನ್ನು ಹೋಲುವ ಮತ್ತೊಂದು ಆಣೆಕಟ್ಟೆ ನಿರ್ಮಾಣಗೊಂಡಿಲ್ಲ ಎಂದು ಎಂವಿ.ಯವರು ದಾಖಲಿಸಿದ್ದಾರೆ. ಅವರು ಇದನ್ನು ಯಾವ ದೃಷ್ಟಿಯಲ್ಲಿ ಹೇಳುತಿದ್ದಾರೋ ತಿಳಿಯುವುದಿಲ್ಲ. ಏಕೆಂದರೆ ಆಣೆಕಟ್ಟೆ ಯಾವಾಗಲೂ ಜಲಾಶಯದೊಂದಿಗೆ ಲಗತ್ತಾಗಿರುತ್ತದೆ. ನೀರಿನ ಸಂಗ್ರಹ ಸಾಮರ್ಥ್ಯ ಜಲಾಶಯದ ಆಳ ಮತ್ತು ಹರಡಿಕೆಗೆ ಅನುಗುಣವಾಗಿದ್ದರೆ, ಆಣೆಕಟ್ಟೆಯ ಎತ್ತರ ಅಯ್ದುಕೊಂಡ ಜಾಗದ ಮೇಲೆ ಅವಲಂಬಿತವಾಗಿರುತ್ತದೆ. ಪ್ರಶಸ್ತ ಜಾಗ ಸಿಕ್ಕಿದರೆ ಅಲ್ಪ ಎತ್ತರದ ಆಣೆಕಟ್ಟೆ ಕಟ್ಟಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಲು ಸಾಧ್ಯ. ಕೆಲವೊಮ್ಮೆ ಆಯ್ದುಕೊಂಡ ಜಾಗ ಹೆಚ್ಚು ಎತ್ತರದ ಆಣೆಕಟ್ಟೆ ಬೇಡುತ್ತಿದ್ದರೂ ಹೆಚ್ಚಿನ ನೀರು ಸಂಗ್ರಹಿಸಲು ಸಾಧ್ಯವಾಗದಿರಬಹುದು. ಇಂಜಿನಿಯರಿಂಗ್ ದೃಷ್ಟಿಯಲ್ಲಿ ಹೆಚ್ಚು ಎತ್ತರದ ಆಣೆಕಟ್ಟೆಯ ವಿನ್ಯಾಸದಲ್ಲಿ ತಾಂತ್ರಿಕ ಸವಾಲುಗಳು ಅಧಿಕವಾಗಿರುತ್ತವೆ. ಕನ್ನಂಬಾಡಿ ಜಲಾಶಯದ ಸಂಗ್ರಹ ಸಾಮರ್ಥ್ಯ ಭಾರತದಲ್ಲಿ ಆವರೆಗೆ ಇದ್ದ ಬೇರೆಲ್ಲ ಜಲಾಶಯಗಳಿಗಿಂತ ಅಧಿಕವಾಗಿದ್ದಿತು. ಇದಕ್ಕೆ ಆಣೆಕಟ್ಟೆ ಕಟ್ಟಲು ಆಯ್ದುಕೊಂಡ ಜಾಗವೇ ಕಾರಣ. ಆದರೆ ತಾಂತ್ರಿಕವಾಗಿ ಸವಾಲೆಸೆಯುವಂತಹ ಕನ್ನಂಬಾಡಿಗಿಂತಲೂ ಎತ್ತರದ ಆಣೆಕಟ್ಟೆಗಳು ಆ ಮೊದಲೇ ನಿರ್ಮಾಣಗೊಂಡಿದ್ದವು. (3) ಮಾರಿಕಣಿವೆ ಆಣೆಕಟ್ಟೆ ಕನ್ನಂಬಾಡಿ ಆಣೆಕಟ್ಟೆಗಿಂತಲೂ ಹೆಚ್ಚು ಎತ್ತರವಿದ್ದು , ಇಂಜಿನಿಯರಿಂಗ್ ವಿನ್ಯಾಸ , ನಿರ್ಮಾಣದಲ್ಲಿ ಹೆಚ್ಚು ಜಟಿಲವಾಗಿದ್ದಿತು. ಕೃಷ್ಣರಾಜ ಸಾಗರ ಆಣೆಕಟ್ಟೆ ಬುನಾದಿಯಿಂದ 44.53 (146’) ಮತ್ತು ನದಿಪಾತ್ರದಿಂದ 40.87 ಮೀ (134’) ಎತ್ತರವಿದ್ದರೆ , ಈ ಅಳತೆಗಳು 1897 ರಲ್ಲಿ ಪೂರ್ಣಗೊಂಡ ಪೆರಿಯಾರ್ ಆಣೆಕಟ್ಟೆಯಲ್ಲಿ 53.68 ಮೀ (176’) ಮತ್ತು 48.19 ಮೀ ( 158’) ಹಾಗೂ 1907 ರಲ್ಲಿ ಪೂರ್ಣಗೊಂಡ ಮಾರಿಕಣಿವೆ ಆಣೆಕಟ್ಟೆಯಲ್ಲಿ 49.82 ಮೀ ( 163’4”) ಮತ್ತು 43.31 (142’) ಮೀ ಇದ್ದವು. ಕೃಷ್ಣರಾಜ ಸಾಗರ ಆಣೆಕಟ್ಟೆ ಆಗಿನ ಕಾಲಕ್ಕೆ ಭಾರತದ ಅತಿ ದೊಡ್ಡ ಆಣೆಕಟ್ಟೆಯಾಗಿರಲಿಲ್ಲ. ಪೆರಿಯಾರ್ , ಮಾರಿಕಣಿವೆ ಮತ್ತು ಕನ್ನಂಬಾಡಿ ಆಣೆಕಟ್ಟೆಗಳ ನಿರ್ಮಾಣ ವೆಚ್ಚ ಪ್ರತಿ ಘನ. ಮೀ ಗೆ ಅನುಕ್ರಮವಾಗಿ 24.14 , 8.6 ಮತ್ತು 29.62 ರೂಪಾಯಿಗಳಾಗಿದ್ದಿತು. ವಿನ್ಯಾಸದ ದೃಷ್ಟಿಯಲ್ಲಿ ಆಣೆಕಟ್ಟೆಯ ಮುಂದಡಿ ಮತ್ತು ಹಿಂದಡಿಯ ಒತ್ತಾಯಗಳು ( Toe & Heel Stresses) ಈ ಆಣೆಕಟ್ಟೆಗಳಲ್ಲಿ 0.82 MPa, 0.92 MPa ಮತ್ತು 0.98 MPa ಇದ್ದವು. (4) ಲಭ್ಯವಿರುವ ಮಾಹಿತಿಗಳ ಪ್ರಕಾರ ಕನ್ನಂಬಾಡಿ ಆಣೆಕಟ್ಟೆಯನ್ನು ವಿನ್ಯಾಸಗೊಳಿಸುವಾಗ (1) ಗರಿಷ್ಟ ಒತ್ತಾಯಗಳನ್ನು (Maximum Stresses) ನಿರ್ಧರಿಸಲು ಉನ್’ವಿನ್ ಮತ್ತು ಎಂ.ಬೌವಿಯೆರ್ ಸೂತ್ರಗಳನ್ನು ಬಳಸಿಕೊಳ್ಳಲಾಗಿದೆ. (2) ಆಣೆಕಟ್ಟೆಯ ಮೇಲ್ಮುಖದಲ್ಲಿ ಬರುವ ಅಲೆಗಳ ಒತ್ತಡವನ್ನು ಲೆಕ್ಕಹಾಕಲು ಹುಗ್ಸ್ ಸೂತ್ರ ಅಳವಡಿಸಿಕೊಳ್ಳಲಾಗಿದೆ. (3) ಹೊರ ಹಾಗೂ ಒಳಮುಖದಲ್ಲಿ ಗರಿಷ್ಟ ಒತ್ತಾಯಗಳನ್ನು 0.068 MPa ಕ್ಕೆ ಸೀಮಿತಗೊಳಿಸಲಾಗಿದೆ. (4) ಬೌವಿಯರ್ ಸೂತ್ರಗಳಿಗೆ ಅನುಗುಣವಾಗಿ ಆಣೆಕಟ್ಟೆಯ ತುದಿಯಿಂದ 36.6 ಮೀ (120’) ಕೆಳಗಿನ ಅಡ್ಡ ಖಂಡದಲ್ಲಿ ಪ್ರಧಾನ ಒತ್ತಾಯ( Principal Stress ) 0.093 MPa ಎಂದು ಲೆಕ್ಕಹಾಕಲಾಗಿದೆ. (5) ಗಟ್ಟಿ ಕಲ್ಲಿನ ಬುನಾದಿಯ ಮೇಲೆ ಆಣೆಕಟ್ಟೆಯನ್ನು ಕಟ್ಟಿರುವುದರಿಂದ ಸೋರಿಕೆಯ ಮೂಲಕ ತಳಪಾಯದಲ್ಲಿ ಉಂಟಾಗುವ ಮೇಲೆತ್ತಿಕೆ ಬಲಗಳನ್ನು (Uplift Forces) ವಿನ್ಯಾಸದಲ್ಲಿ ಪರಿಗಣಿಸಲಾಗಿಲ್ಲ. (5) ಭಾರತದಲ್ಲಿ ಬ್ರಿಟಿಷರ ಆಡಳಿತ ಅವಧಿಯಲ್ಲಿ ನಿರ್ಮಿಸಲಾದ ಎಲ್ಲ ದೊಡ್ಡ ಆಣೆಕಟ್ಟೆಗಳ ವಿನ್ಯಾಸಗಳನ್ನು ಹಲವು ಹಂತಗಳಲ್ಲಿ ಪರಿಶೀಲಿಸಲಾಗಿದ್ದಿತು. ಮುಖ್ಯ ಇಂಜಿನಿಯರ್ ಹಂತದಲ್ಲಿ ಅಂತಿಮಗೊಂಡ ವಿನ್ಯಾಸಗಳಲ್ಲೂ ತಾಂತ್ರಿಕ ಭಿನ್ನಾಭಿಪ್ರಾಯಗಳಿರುತ್ತಿದ್ದವು. ಈ ತಾಂತ್ರಿಕ ಭಿನ್ನಾಭಿಪ್ರಾಯಗಳು ಬಹು ಮೌಲಿಕವಾಗಿದ್ದು ಇಂಜಿನಿಯರಿಂಗ್ ಮುನ್ನಡೆಗೆ ಕಾರಣವಾಗುತ್ತಿದ್ದವು. ಆಣೆಕಟ್ಟೆಯ ವಿನ್ಯಾಸ ಕುರಿತಾದಂತೆ ಎದುರಾಗಿರುವ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ರಾಂಕಿನ್’ಗೆ ಮನವಿ ಮಾಡಿಕೊಂಡ ಘಟನೆ ಐತಿಹಾಸಿಕವಾಗಿದ್ದು , ಆಣೆಕಟ್ಟೆಗಳ ವಿನ್ಯಾಸದಲ್ಲಿ ಹೊಸ ತಿಳಿವಳಿಕೆಗಳನ್ನು , ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ನೆರವಾಯಿತು. ಇದರಂತೆಯೇ ಪೆರಿಯಾರ್ ಆಣೆಕಟ್ಟೆಯ ವಿನ್ಯಾಸ ಕುರಿತಾದಂತೆ ಪೆನ್ನಿಕುಯಿಕ್ ಮಂಡಿಸಿದ ತಾಂತ್ರಿಕ ವಾದ-ವಿವಾದಗಳು ಒಂದು ದೊಡ್ದ ಯೋಜನೆಯಲ್ಲಿ ತಾಂತ್ರಿಕ ಪರಿಣಿತರ ಪರಿಶೀಲನೆ ಎಷ್ಟು ಮೌಲಿಕವಾದುದು ಎನ್ನುವುದಕ್ಕೆ ಉತ್ತಮ ಸಾಕ್ಷಿಯಾಗಿದೆ. ಎಂ.ವಿಯವರು ತಾವು ನೋಡಿದ ದೊಡ್ದ ಆಣೆಕಟ್ಟೆಗಳು , ಸಂಗ್ರಹಿಸಿದ ವರದಿಗಳು ತಮಗೆ ದೊಡ್ದ ಆಣೆಕಟ್ಟೆಯ ವಿನ್ಯಾಸ ಮಾಡುವ ಅರ್ಹತೆಯನ್ನು ತಂದಿತ್ತಿವೆಯೆಂದು ಭಾವಿಸುತ್ತಾರೆ. ಒಸ್ಮಾನ್ ಸಾಗರ ಆಣೆಕಟ್ಟೆಯ ವಿನ್ಯಾಸ ಗಮನಿಸಿದರೆ ಅವರಿಗೆ ಆಣೆಕಟ್ಟೆಯ ವಿನ್ಯಾಸದಲ್ಲಿ ಹೇಳಿಕೊಳ್ಳುವಂತಹ ಪರಿಣಿತಿ ಇರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಬ್ರಿಟಿಷ್ , ಯುರೋಪಿಯನ್ ಅಥವಾ ಅಸಂಸಂಗಳ ದೊಡ್ಡ ಆಣೆಕಟ್ಟೆಯ ಯೋಜನೆಗಳು , ವಿನ್ಯಾಸಗಳು ಸಮಗ್ರ ಪರಿಶೀಲನೆಗೆ ಒಳಪಟ್ಟಿದ್ದವು. ಎಂ.ವಿಯವರು ಇಂತಹ ಯಾವುದೇ ಪರಿಶೀಲನೆ , ಪರಿಷ್ಕರಣೆಗೆ ಒಳಪಡಿಸುವ ಸಂಯಮವನ್ನು ತೊರಿಸದೆ ತಾವು ಪ್ರತಿಪಾದಿಸಿದ ಯೋಜನೆ ತಕ್ಷಣವೇ ಕಾರ್ಯಗತವಾಗುವಂತೆ ಹಠಮಾರಿ ಧೋರಣೆ ತಳೆಯುತ್ತಾರೆ. ಸಾರ್ವಜನಿಕ ಹಣ ಬಳಕೆಯಾಗುವ , ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರುವ ಇಂತಹ ಯೋಜನೆ ತಮ್ಮ ಮೂಗಿನ ನೇರಕ್ಕೆ ಸಾಗಬೇಕೆನ್ನುವ ಎಂವಿಯವರ ಧೋರಣೆ ಸಮರ್ಥನೀಯವಲ್ಲ. ಒಸ್ಮಾನ್ ಸಾಗರ್ ಅಣೆಕಟ್ಟೆಯನ್ನು ಎರಡು ವರ್ಷಗಳ ಹಿಂದೆ ಎಂ.ವಿಯವರು ವಿನ್ಯಾಸ ಮಾಡಿದ್ದರಾದರೂ ಅದು ನಿರ್ಮಾಣಗೊಂಡಿರಲಿಲ್ಲ. ಈ ಹಿಂದೆ ನೋಡಿದಂತೆ ಅವರ ವಿನ್ಯಾಸದ ಪರಿಕಲ್ಪನೆಯಲ್ಲಿ – ಆಣೆಕಟ್ಟೆಯ ಮುಂಭಾಗದಲ್ಲಿ ಮಣ್ಣಿನ ಏರಿಯ ನಿರ್ಮಾಣ – ದೋಷಗಳಿದ್ದವು. ಮೈಸೂರು ಪ್ರಾಂತದ ವಾರ್ಷಿಕ ಬಜೆಟ್ ಮೀರಿದ ಯೋಜನೆಯ ಮುಖ್ಯ ಅಂಗವಾದ ಆಣೆಕಟ್ಟೆಯ ವಿನ್ಯಾಸವನ್ನು ಯಾವುದೇ ಚರ್ಚೆಗಳಿಲ್ಲದೆ ತಾವು ಪ್ರಸ್ತುತ ಪಡಿಸಿದಂತೆಯೇ ತಕ್ಷಣವೇ ಜಾರಿಗೊಳಿಸಬೇಕೆನ್ನುವ ಹಠಮಾರಿತನ ಎಂ.ವಿಯವರಿಗಿದ್ದಿತು. [11] (6) ಎತ್ತರದ ಆಣೆಕಟ್ಟೆಗಳ ವಿನ್ಯಾಸಕ್ಕೆ ಸ್ಯಾಝಿಲಿ, ಡೊಲೆಕ್ರೆ , ರಾಂಕಿನ್ , ಕ್ರಾಂಟ್ಜ್ , ಹಲ್ರಷೆರ್ , ಕ್ರುಗ್ನೊಲ , ಎಂ.ಬೌವಿಯೆರ್ , ಮೋಲ್ಸ್’ವರ್ಥ್ ಮುಂತಾದ ಇಂಜಿನಿಯರ್’ಗಳು ತಮ್ಮದೇ ಆದ ವಿನ್ಯಾಸ ಮತ್ತು ವಿಧಾನಗಳನ್ನು ಪ್ರತಿಪಾದಿಸಿದ್ದರು. ಆಣೆಕಟ್ಟೆಯ ವಿನ್ಯಾಸಕ್ಕೆ ಹಲವು ವಿಧಾನಗಳು ಲಭ್ಯವಿರುವುದರಿಂದ ಒಬ್ಬ ಇಂಜಿನಿಯರ್ ವಿನ್ಯಾಸಕ್ಕೆ ತೊಡಗುವ ಮೊದಲು ಯಾವ ವಿಧಾನವನ್ನು ಅಳವಡಿಸಿಕೊಳ್ಳುತಿದ್ದಾನೆ ಹಾಗೂ ತನ್ನ ಆಯ್ಕೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾನೆ ಎನ್ನುವುದು ಬಹುಮುಖ್ಯ. ಪೆರಿಯಾರ್ ಆಣೆಕಟ್ಟೆ ವಿನ್ಯಾಸದಲ್ಲಿ ಪೆನ್ನಿಕುಯಿಕ್ ಮೋಲ್ಸ್’ವರ್ಥ್ ವಿಧಾನಗಳನ್ನು ಬಳಸಿಕೊಂಡಿದ್ದನಾದರೂ ರಾಂಕಿನ್ ಮತ್ತು ಡೊಲೆಕ್ರೆಯವರು ಪಸ್ತುತ ಪಡಿಸಿದ್ದ ತತ್ತ್ವಗಳನ್ನು ಮರೆತಿರಲಿಲ್ಲ. ಎಂ.ಬೌವಿಯೆರ್ ವಿಧಾನ ಹೆಚ್ಚು ವಸ್ತುನಿಷ್ಟವಾಗಿರದೆ ಇರುವುದರಿಂದ ಹೆಚ್ಚಿನ ಸಾಮಗ್ರಿ ಬಳಕೆಯಾಗಿ ನಿರ್ಮಾಣ ವೆಚ್ಚ ಹೆಚ್ಚುವುದೆಂದು ಪೆನ್ನಿಕುಯಿಕ್ 12 ವರ್ಷಗಳ ಹಿಂದೆಯಷ್ಟೆ ವಾದಿಸಿದ್ದನು. ಭಾರತದಂತೆಯೇ ಅಸಂಸಂಗಳಲ್ಲೂ ಹತ್ತೊಂಬತ್ತನೇ ಶತಮಾನದ ದ್ವಿತೀಯಾರ್ಧ ಮತ್ತು ಇಪ್ಪತ್ತನೇ ಶತಮಾನದ ಮೊದಲೆರಡು ದಶಕಗಳು ಕಲ್ಲಿನ ಆಣೆಕಟ್ಟೆಯ ನಿರ್ಮಾಣದ ಸುವರ್ಣ ಯುಗ. ಇದೇ ಕಾಲದಲ್ಲಿ ಅಸಂಸಂದಲ್ಲಿ 54.3 ಮೀ (178’) ಎತ್ತರದ ಕ್ವೇಕರ್ ಬ್ರಿಜ್ ಆಣೆಕಟ್ಟೆಯ ಯೋಜನೆ ಪ್ರಾರಂಭಗೊಂಡಿತು. ಕ್ವೇಕರ್ ಬ್ರಿಜ್ ಆಣೆಕಟ್ಟೆ ಕಟ್ಟುವ ಮೊದಲು ಅದರ ವಿನ್ಯಾಸ ಕುರಿತು ಸಮಗ್ರ ಚರ್ಚೆಗಳಾದವು. ಆಣೆಕಟ್ಟೆಯ ವಿನ್ಯಾಸದಲ್ಲಿ ಅನುಸರಿಸಬೇಕಾದ ಸೂತ್ರ, ವಿಧಾನಗಳು , ಬಳಸಬಹುದಾದ ಸಾಮಗ್ರಿ , ನಿರ್ಮಾಣ ಚಟುವಟಿಕೆ , ಗುಣ ನಿಯಂತ್ರಣ , ಆವರೆಗೆ ಇಂಜಿನಿಯರಿಂಗ್ ವಲಯದಲ್ಲಿ ಗಳಿಸಿರುವ ಅನುಭವ , ಆ ಅನುಭವದೊಂದಿಗೆ ಹೋಲಿಸಿದಂತೆ ಕ್ವೇಕರ್ ಬ್ರಿಜ್ ಆಣೆಕಟ್ಟೆಯ ಸಾಧಕ-ಬಾಧಕಗಳ ಸಮಗ್ರ ವರದಿ , ಪರಿಣಿತರ , ಸಾರ್ವಜನಿಕರ ಮುಂದಿರಿಸಲಾಯಿತು. ಅಸಂಸಂ ಲೋಕೋಪಯೋಗಿ ಇಲಾಖೆ ತನ್ನ ಇಂಜಿನಿಯರ್ ಇ.ಎಸ್. ಷೆಷ್’ಬೋಗ್’ನನ್ನು ಆಣೆಕಟ್ಟೆಯ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಯುರೋಪಿಗೆ ಕಳಿಸಿತು. ಕ್ವೇಕರ್ ಆಣೆಕಟ್ಟೆಯ ವಿನ್ಯಾಸದ ಪರಿಶೀಲನೆಗಾಗಿ ಎ.ಟೆಲೆ ಎನ್ನುವ ಸಮಾಲೋಚಕ ಇಂಜಿನಿಯರ್’ನನ್ನು ನೇಮಿಸಲಾಯಿತು. ಆತ 25/7/1887 ರಂದು ಅಕ್ವೆಡಕ್ಟ್ ಕಮಿಷನ್’ನ ಮುಖ್ಯ ಇಂಜಿನಿಯರ್ ಬಿ.ಎಸ್.ಚರ್ಚ್’ಗೆ ಸಲ್ಲಿಸಿದ ವರದಿಯ ಆರಂಭಿಕ ಪುಟಗಳಲ್ಲಿ ಎ.ಟೆಲೆ ಹೀಗೆ ಬರೆದಿದ್ದಾನೆ- (20) [12] “ ಎತ್ತರದ ಕಲ್ಲಿನ ಆಣೆಕಟ್ಟೆಗಳ ವಿನ್ಯಾಸ , ನಿರ್ಮಾಣ , ಬಳಸಬೇಕಾದ ಸಾಮಗ್ರಿ , ನಿರ್ಮಾಣದ ಹಂತ , ನಿಯಂತ್ರಣಗಳನ್ನು ಕುರಿತಾಗಿ ಈ ವರದಿಯಲ್ಲಿ ವಿವರಗಳಿವೆ. ಇಂತಹ ದೊಡ್ಡ ಆಣೆಕಟ್ಟೆಯ ನಿರ್ಮಾಣದಲ್ಲಿ ದೊಡ್ಡ ಮೊತ್ತ ವಿನಿಯೋಗ ಆಗುವುದರಿಂದ ಅಂತಹ ದೊಡ್ಡ ಆಣೆಕಟ್ಟೆಯ ವಿನ್ಯಾಸ ಮತ್ತು ನಿರ್ಮಾಣಗಳಲ್ಲಿ ಭಾಗಿಗಳಾದ ಇತರ ಇಂಜಿನಿಯರ್’ಗಳ , ದೇಶಗಳ ಅನುಭವವನ್ನು , ಅನುಸರಿಸಿದ ವಿಧಾನಗಳನ್ನು ಸಮಗ್ರವಾಗಿ ಅರಿತುಕೊಂಡು ಅವುಗಳ ಆಗು-ಹೋಗಗಳನ್ನು ತೂಗಿ ನೋಡಿದ ನಂತರವೇ ಮುಂದಿನ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಇದು ಈವರೆಗೆ ನಿರ್ಮಾಣಗೊಂಡಿರುವ ಆಣೆಕಟ್ಟೆಗಳಲ್ಲೇ ಎತ್ತರವಾಗಿರುವುದರಿಂದ , ಕೆಲವು ಸಂದರ್ಭಗಳಲ್ಲಿ ಈವರೆಗೆ ಅನುಸರಿಸಿದ ಮಾರ್ಗಗಳಿಂದ ವಿಭಿನ್ನ ಹಾದಿ ತುಳಿಯಬೇಕಾಗುತ್ತದೆ.” (20) ಎ.ಟೆಲೆ ಈ ವರದಿ ತಯಾರಿಸುವ ಮೊದಲೇ ಸರ್ಕಾರದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್’ಗಳ ಗುಂಪು ಯೋಜನೆಯ ಬಗ್ಗೆ ಆಳ ಅಧ್ಯಯನ ನಡೆಸಿ ಪರಿಣಿತ ವಿನ್ಯಾಸಗಾರರು ನೀಡಿದ ಶಿಫಾರಸ್ಸುಗಳಿಗೆ ಅನುಗುಣವಾಗಿ ವಿನ್ಯಾಸಗಳನ್ನು ಮಾಡಿ ಹೋಲಿಸಿ ನೋಡಿದ್ದಿತು. ಇದಕ್ಕಾಗಿ ಪರಿಣಿತ ವಿನ್ಯಾಸಗಾರರು ನೀಡಿದ 15 ಕ್ಕೂ ಹೆಚ್ಚು ತಾಂತ್ರಿಕ ಅಂಶಗಳನ್ನು ಪರಿಗಣಿಸಲಾಯಿತು. ಈ ಹಿಂದೆ ಹಲವಾರು ಆಣೆಕಟ್ಟೆಗಳನ್ನು ಕಟ್ಟಿದ ಅನುಭವ ಇದ್ದಿತಾದರೂ , ಪ್ರಸ್ತಾವಿತ ಹೊಸ ಆಣೆಕಟ್ಟೆಯ ವಿನ್ಯಾಸದಲ್ಲಿ ಹಿಂದಿನ ಆಣೆಕಟ್ಟೆಗಳ ವಿನ್ಯಾಸದಲ್ಲಿ ಇದ್ದಿರಬಹುದಾದ ತಾಂತ್ರಿಕ ಕೊರತೆ ಅಥವಾ ದೋಷಗಳನ್ನು ಸರಿಪಡಿಸಲು ಮತ್ತು ಹೊಸದಾಗಿ ಬೆಳಕಿಗೆ ಬಂದ ಹೆಚ್ಚಿನ ತಾಂತ್ರಿಕ ತಿಳಿವಳಿಕೆಗಳ ಹಿನ್ನೆಲೆಯಲ್ಲಿ ವಿನ್ಯಾಸದಲ್ಲಿ ಪರಿಗಣಿಸಬೇಕಾದ ಅಂಶಗಳನ್ನು ನಿರ್ಧರಿಸಲು ಒಂದು ಸಮಿತಿಯನ್ನು ಮತ್ತು ಮೂರನೆಯ ಪಕ್ಷವಾಗಿ ಆಣೆಕಟ್ಟೆಯ ವಿನ್ಯಾಸದಲ್ಲಿ ಪರಿಣಿತನಾದ ಒಬ್ಬ ಸಮಾಲೋಚಕ ಇಂಜಿನಿಯರ್’ನನ್ನು ನೇಮಿಸಲಾಯಿತು. ಇದರ ಪರಿಣಾಮವಾಗಿ ಹಿಂದೆ ನಿರ್ಮಿಸಲಾಗಿದ್ದ ಆಣೆಕಟ್ಟೆಗಳ ವಿನ್ಯಾಸದಲ್ಲಿ ಸೋರಿಕೆ ಬಲಗಳನ್ನು ಪರಿಗಣಿಸದಿರುವುದು ಗುರುತಿಸಲಾಯಿತು. ಆಣೆಕಟ್ಟೆಯ ಸುರಕ್ಷತೆಗೆ ಸೋರಿಕೆಯಿಂದಾಗುವ ಮೇಲೆತ್ತಿಕೆ ಬಲಗಳನ್ನು (Uplift Forces) ಪರಿಗಣಿಸಬೇಕಾದ ಅನಿವಾರ್ಯತೆಯನ್ನು ಗುರುತಿಸಿ ವಿನ್ಯಾಸಗಳಲ್ಲಿ ಅಳವಡಿಸಿಕೊಳ್ಳಲಾಯಿತು. (20) ಈಜಿಪ್ತಿನ ನೀರಾವರಿ ಇಲಾಖೆ ಆಸ್ವಾನ್ ಆಣೆಕಟ್ಟೆ ನಿರ್ಮಾಣ ಒಳಗೊಂಡ ನೈಲ್ ನದಿಯ ಯೋಜನೆಗಳನ್ನು ಕುರಿತಾಗಿ ಸಮಗ್ರ ವರದಿ ತಯಾರಿಸಿದ ನಂತರ ಅದನ್ನು ಪರಿಶೀಲನೆಗಾಗಿ ಮೂರು ಜನ ಖ್ಯಾತ ಸಿವಿಲ್ ಇಂಜಿನಿಯರ್’ಗಳ ತಾಂತ್ರಿಕ ಸಮಿತಿಯ ಮುಂದಿರಿಸಿತು. ಈಜಿಪ್ತಿನ ಲೋಕೋಪಯೋಗಿ ಇಲಾಖೆಯ ಅಧೀನ ಕಾರ್ಯದರ್ಶಿ ಹಾಗೂ ಸ್ವತಂ ಸಿವಿಲ್ ಇಂಜಿನಿಯರ್ ಆಗಿದ್ದ ಗಾರ್ಸ್ಟಿನ್ ‘ ನಾವು ತಯಾರಿಸಿದ ಯೋಜನೆಯ ಪರಿಪೂರ್ಣತೆಯ ಬಗ್ಗೆಯಾಗಲಿ , ಅದರಲ್ಲಿನ ತಾಂತ್ರಿಕ ವಿವರಗಳ ಬಗ್ಗೆಯಗಲಿ ನಮಗೆ ವಿಶ್ವಾಸ ಇಲ್ಲ ಎಂದಲ್ಲ. ಇಂತಹ ದೊಡ್ಡ ಪ್ರಮಾಣದ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ ಜಗತ್ತಿನ ಪರಿಣಿತರ ಅಭಿಪ್ರಾಯ ಪಡೆದು ನಮ್ಮ ತೀರ್ಮಾನಗಳನ್ನು ಅವರ ಅಂತಿಮ ತೀರ್ಮಾನಗಳಿಗೆ ಒಪ್ಪಿಸಬೇಕೆನ್ನುವುದೇ ನಮ್ಮ ನಿಲುವು’ ಎಂದು ದಾಖಲಿಸಿದ್ದಾನೆ. (7) ಎಂ.ವಿಯವರು ಕನ್ನಂಬಾಡಿ ಆಣೆಕಟ್ಟೆ ವಿನ್ಯಾಸ ಕುರಿತು ಹೇಳುವಾಗ ಆಸ್ವಾನ್ ಯೋಜನೆಯನ್ನು ಉಲ್ಲೇಖಿಸಿದ್ದಾರೆ. ಆಸ್ವಾನ್ ಹಾಗೂ ಕನ್ನಂಬಾಡಿ ಈ ಎರಡು ಆಣೆಕಟ್ಟೆಗಳು ಒಂದೇ ಬಗೆಯ ವಿನ್ಯಾಸದ ಸವಾಲುಗಳನ್ನು ಹೊಂದಿವೆ. ಇವೆರಡರಲ್ಲಿಯೂ ನೆರೆಯ ನೀರನ್ನು ಹೊರಹಾಕಲು ಆಣೆಕಟ್ಟೆಯ ಒಡಲಿನೊಳಗೆ ಕಂಡಿಗಳನ್ನು ಒದಗಿಸಲಾಗಿದೆ. ಎಂ.ವಿಯವರು ಕನ್ನಂಬಾಡಿ ಅಣೆಕಟ್ಟೆ ವಿನ್ಯಾಸದಲ್ಲಿ ಆಸ್ವಾನ್ ತಾಂತ್ರಿಕ ಸಮಿತಿ ನೀಡಿದಂತಹ ವಿನ್ಯಾಸ ಬದಲಾವಣೆಯ ಅಂಶಗಳನ್ನು ಅಳವಡಿಸಿಕೊಂಡಿಲ್ಲ. (8) ಆಣೆಕಟ್ಟೆಯ ಬುನಾದಿಯತ್ತ ಜಲಾಶಯದ ನೀರು ಸೋರಿದರೆ ಆಣೆಕಟ್ಟೆಯ ಮೇಲೆ ಅದು ಮೇಲೆತ್ತಿಕೆ ಬಲಗಳನ್ನು ಹಾಕುತ್ತದೆ. ಈ ಬಲಗಳು ಆಣೆಕಟ್ಟೆಯ ರಾಚನಿಕ ಸುರಕ್ಷತೆ (Structural Safety) ಮತ್ತು ಸ್ಥಿರತೆಯ (Stability) ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ನೀರಿನ ಸೋರಿಕೆಯಿಂದ ಕಾಣಿಸಿಕೊಳ್ಳುವ ಮೇಲೆತ್ತಿಕೆ ಬಲಗಳನ್ನು ಪರಿಗಣಿಸದೆ ವಿನ್ಯಾಸ ಮಾಡಿ ಕಟ್ಟಿದ್ದ ಬೌಝಿ ಆಣೆಕಟ್ಟೆ 1895ರಲ್ಲಿ ಅದರಂತೆಯೇ ಹಬ್ರಾ ಆಣೆಕಟ್ಟೆ ಆಣೆಕಟ್ಟೆಗಳು ಒಡೆದು ಹೋಗಿದ್ದವು. ಇವುಗಳ ಅಧ್ಯಯನ ನಡೆಸಿದ್ದ ಇಂಜಿನಿಯರ್’ಗಳು ಆಣೆಕಟ್ಟೆಯ ಸುರಕ್ಷಿತತೆಯ ದೃಷಿಯಿಂದ ವಿನ್ಯಾಸದಲ್ಲಿ ಮೇಲೆತ್ತಿಕೆಯ ಬಲಗಳನ್ನು ಪರಿಗಣಿಸಬೇಕು ಹಾಗೂ ಸಾಧ್ಯವಿದ್ದರೆ ಹೀಗೆ ಸೋರಿಕೆಯಾಗುವ ನೀರು ಹೊರಬರುವಂತೆ ಬಸಿಕೆ ಗ್ಯಾಲರಿಗಳನ್ನು (Drainage Gallery) ನಿರ್ಮಿಸಬೇಕು ಎನ್ನುವ ವಿವರಗಳನ್ನು 1895 ರ ವೇಳೆಗೆ ಖಚಿತಪಡಿಸಿದ್ದರು. ಇದಕ್ಕಿಂತಲೂ ಹಿಂದೆ 1892 ರಲ್ಲಿ ನಿರ್ಮಾಣಗೊಂಡಿದ್ದ ವೈರ್ನ್’ವಿ ಆಣೆಕಟ್ಟೆಯಲ್ಲಿಯೇ ಮೇಲೆತ್ತಿಕೆಯ ಬಲಗಳನ್ನು ಕಡಿಮೆಗೊಳಿಸಲು ಬಸಿಕೆಯ ಮಾರ್ಗಗಳನ್ನು ಒದಗಿಸಲಾಗಿದ್ದಿತು. ಮೇಲೆತ್ತಿಕೆ ಬಲಗಳನ್ನು ಪರಿಗಣಿಸದೆ ಕಟ್ಟಿದ ಎರಡು ಆಣೆಕಟ್ಟೆಗಳು ಒಡೆದ ನಂತರ ಅಸಂಸಂಗಳ ಪೆನ್’ಸಿಲ್ವೇನಿಯಾ ರಾಜ್ಯದಲ್ಲಿ ಆಣೆಕಟ್ಟೆಗಳ ವಿನ್ಯಾಸವನ್ನು ಸರ್ಕಾರದ ಅಡಿಗೆ ತರುವ ಕಾನೂನು ಜಾರಿಯಾಗಿದ್ದಿತು. ಆಣೆಕಟ್ಟೆಯ ಬುನಾದಿ ಗಟ್ಟಿ ಕಲ್ಲಿನ ಮೇಲಿದ್ದು ಅದರ ಮೂಲಕ ನೀರು ನುಸುಳುವ ಸಾಧ್ಯತೆ ಇಲ್ಲದಿದ್ದರೂ , ಜಾಗರೂಕ ಬಿಗಿ ಉಸ್ತುವಾರಿಯಿಂದ ಆಣೆಕಟ್ಟೆಯನ್ನು ನಿರ್ಮಿಸುವಂತಿದ್ದರೂ , ಬುನಾದಿಯ ಕೆಳಗೆ ನೀರು ಸೋರುವುದನ್ನು ಸಂಪೂರ್ಣವಾಗಿ ತಪ್ಪಿಸಿದೆವೆಂದು ಯಾರೂ ಪರಿಪೂರ್ಣ ವಿಶ್ವಾಸದಿಂದ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಮೇಲೆತ್ತಿಕೆ ಬಲಗಳನ್ನು ತಾಳಿಕೊಳ್ಳುವಂತೆ ಆಣೆಕಟ್ಟೆಯನ್ನು ವಿನ್ಯಾಸ ಮಾಡಬೇಕೆನ್ನುವ ಒಮ್ಮತ ಮೂಡಿದ್ದಿತು. (33, 56) ರಾಂಕಿನ್ , ಕ್ರಾಂಟ್ಜ್ , ಹಲ್ರಷೆರ್ , ಕ್ರುಗ್ನೊಲ , ಎಂ.ಬೌವಿಯೆರ್ , ಮೋಲ್ಸ್’ವರ್ಥ್ ಇವರ ವಿಧಾನಗಳು ಈ ಮೇಲೆತ್ತಿಕೆ ಬಲಗಳನ್ನು ಪರಿಗಣಿಸುವುದಿಲ್ಲ ಹಾಗೂ ಸೋರಿಕೆಯ ನೀರನ್ನು ಹೊರತೆಗೆಯಲು ಯಾವುದೇ ಶಿಫಾರಸ್ಸುಗಳನ್ನು ಮಾಡುವುದಿಲ್ಲ. ಕನ್ನಂಬಾಡಿ ಆಣೆಕಟ್ಟೆಯ ಬುನಾದಿ ಗಟ್ಟಿ ಕಲ್ಲಿನ ಮೇಲಿದೆ, ಆಣೆಕಟ್ಟೆಯ ನೀರಿನ ಮುಖದಲ್ಲಿ ಗಾರೆಯಿಂದ ಗಿಲಾವು (Palstering) ಮಾಡಿದರೆ ಬುನಾದಿಗೆ ನೀರು ಸೋರುವುದಿಲ್ಲ ಎಂದು ಎಂ.ವಿಯವರು ವಿನ್ಯಾಸದಲ್ಲಿ ಪರಿಗಣಿಸುವ ಮೂಲಕ ಪರಿಣಿತ ಇಂಜಿನಿಯರ್’ಗಳು ಗುರುತಿಸಿದ್ದ ಮುಖ್ಯ ಬಲಗಳನ್ನು ಆಣೆಕಟ್ಟೆಯ ವಿನ್ಯಾಸದಲ್ಲಿ ಬಳಸಲಿಲ್ಲ. ಮೆಟ್ಟೂರು ಆಣೆಕಟ್ಟೆಯ ನಿರ್ಮಾಣ ಕಾರ್ಯ 1927 ರಲ್ಲಿ ಪ್ರಾರಂಭವಾಯಿತಾದರೂ ಅದರ ಯೋಜನೆ ಮತ್ತು ಆಣೆಕಟ್ಟೆಯ ವಿನ್ಯಾಸಗಳನ್ನು ಕರ್ನಲ್ ಡಬ್ಲ್ಯು.ಎಂ. ಎಲ್ಲಿಸ್ 1910 ರ ವೇಳೆಗೆ ಅಂತಿಮಗೊಳಿಸಿದ್ದನು. ಕನ್ನಂಬಾಡಿ ಆಣೆಕಟ್ಟೆಯ ನಿರ್ಮಾಣದ ಮ� |
|
Comment Box is loading comments...