ವಾಸ್ತು ಮತ್ತು ಜ್ಯೋತಿಷ್ಯ - ಓತಿಕ್ಯಾತ ಮತ್ತು ಬೇಲಿ
('ವಾಸ್ತು ಎಂಬ ವ್ಯಾಧಿ' ಪುಸ್ತಕದ ಆಯ್ದ ಅಂಶಿಕ ಭಾಗ) ವಾಸ್ತುಪುರುಷ/ವಾಸ್ತುಮಂಡಲಗಳು ಜ್ಯೋತಿಷ್ಯ/ಅಷ್ಟದಿಕ್ಪಾಲಕರೊಂದಿಗೆ ಬಿಡಿಸಲು ಬರದಂತೆ ಬೆಸೆದುಕೊಂಡಿರುವುದನ್ನು ನಾವೀಗಾಗಲೇ ನೋಡಿದ್ದೇವೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ವಾಸ್ತುಶಾಸ್ತ್ರದ ಎರಡನೇ ಮುಖ ಜ್ಯೋತಿಷ್ಯ ಎಷ್ಟು ಖೊಟ್ಟಿ ಎಂದು ನಾವೀಗ ನೋಡೋಣ ಬನ್ನಿರಿ. ಜ್ಯೋತಿಷ್ಯಶಾಸ್ತ್ರದ ಅವಾಸ್ತವಿಕತೆಯನ್ನು ಬಿಚ್ಚಿಡುತ್ತ ಹೋಗುವ ಮೊದಲು ನೀವೊಂದು ಸಣ್ನ ತಪಾಸಣೆಯನ್ನು ಮಾಡಿದರೆ ಒಳ್ಳೆಯದು. ಪ್ರತಿದಿನ ನಮ್ಮ ಎಲ್ಲ ದೂರದರ್ಶನಗಳಲ್ಲಿ ಹಣೆಗೆ ತಿಲಕ/ವಿಭೂತಿ/ಕುಂಕುಮ ಧರಿಸಿ , ಮೈಮೇಲೆ ಶಾಲನ್ನು ಹೊದ್ದು ಪುಂಖಾನುಪುಂಖವಾಗಿ ಬ್ರಹ್ಮಾಂಡದ ಬಗ್ಗೆ , ನಿಮ್ಮ ಗ್ರಹಗತಿಗಳ ಬಗ್ಗೆ ಹೇಳುವ ಶಾಸ್ತ್ರಿ/ಗುರೂಜಿ/ಪಂಡಿತರನ್ನು ಹಲವಾರು ಬಾರಿ ನೋಡಿರಬಹುದು. ಮೋಡವಿಲ್ಲದ ಒಂದು ಅಮವಾಸ್ಯೆಯ ರಾತ್ರಿ ನೀವು ಈ ಜ್ಯೋತಿಷ್ಯ ಕೋವಿದರನ್ನು ಹೊರಕರೆತಂದು ಆಗಸದಲ್ಲಿ ಎಷ್ಟು ತಾರೆಗಳನ್ನು ಗುರುತಿಸಬಲ್ಲರೆಂದು ಕೇಳಿರಿ. ಸುಲಭವಾಗಿ ಜನಸಾಮಾನ್ಯರಿಗೆ ಗೊತ್ತಿರುವ ಸಪ್ತರ್ಷಿ ಮಂಡಲ , ಧೃವ ನಕ್ಷತ್ರಗಳಾಚೆ ಅವರು ತಾವು ಹೇಳುವ ಯಾವ ತಾರೆಯನ್ನು ಗುರುತಿಸಲಾರರು. ಆಷ್ಟೇ ಏಕೆ ನೀವೆ ಮಂಗಳ ಗ್ರಹ ಗುರುತಿಸಿ , ಅದರ ಸನಿಹದಲ್ಲೇ ಇರುವ ಪ್ರಕಾಶಮಾನವಾದ ತಾರೆಯೊಂದನ್ನು ತೋರಿಸಿ ಅದು ನಮ್ಮ ಮೇಲೆ ಏಕೆ ಪ್ರಭಾವ ಬೀರುತ್ತಿಲ್ಲ , ಜ್ಯೊತಿಷ್ಯದಲ್ಲಿ ಅದನ್ನು ಏಕೆ ಪರಿಗಣಿಸಿಲ್ಲ ಎಂದು ಕೇಳಿ ನೋಡಿ. ಅವರ ಉತ್ತರ ಏನಿರಬಹುದೆನ್ನುವುದನ್ನು ನೀವೇ ಊಹಿಸಿ. ಇದರಾಚೆಗೂ ನಿಮಗೆ ಜ್ಯೋತಿಷ್ಯದಲ್ಲಿ ನಂಬಿಕೆಯಿದೆಯೇ ಮುಂದಿನ ಅಂಶಗಳನ್ನು ಓದಿರಿ. ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಉಗಮ ಹೇಗಾಯಿತೆಂದು ನಾವು ನೊಡೋಣ. ಇದಕ್ಕಾಗಿ ನಾವು ಸಹಸ್ರಾರು ವರ್ಷಗಳ ಹಿಂದೆ ಮಾನವನ ಜೀವನಕ್ರಮ ಹೇಗಿದ್ದಿತೆಂದು ಸ್ಥೂಲವಾಗಿ ಪರಿಗಣಿಸಬೇಕು.. ಆಧುನಿಕ ಕಾಲದಲ್ಲಿರುವ ನಾವು ಊಹಿಸಿಕೊಳ್ಳಲು ಆಗದಂತಹ ಪರಿಸ್ಥಿತಿ ಮತ್ತು ಸಾಧ್ಯತೆ ಹಿಂದೆ ಸಹಜವೆನಿಸಿದ್ದವು. ಬೆಳಗಾಗುವುದರೊಂದಿಗೆ ಪ್ರಾರಂಭವಾಗುವ ಜನಜೀವನ ಬೈಗಾಗುವುದರಿಂದ ಕೊನೆಗೊಳ್ಳುತ್ತಿದ್ದಿತು. ಪಂಜು/ಕೊಳ್ಳಿ/ದೀಪಗಳು ಬೈಗಿನ ನಂತರದ ಕತ್ತಲನ್ನು ಅಲ್ಪ ಕಾಲ , ಅತ್ಯಲ್ಪ ಪ್ರದೇಶದಿಂದ ಮಾತ್ರ ನಿವಾರಿಸಬಲ್ಲವಾಗಿದ್ದವು, ಇದರ ಹೊರತು ಬಹುತೇಕ ಜೀವನ ನಿಸರ್ಗದ ಅಮವಾಸ್ಯೆ-ಹುಣ್ಣಿಮೆಗಳಿಗೆ ನೇರವಾಗಿ ಒಡ್ಡಿಕೊಂಡಿದ್ದಿತು., ಕತ್ತಲಾಗುತ್ತಿದ್ದಂತೆಯೇ ಮನೆಯ ಕಟ್ಟೆಯ ಮೇಲೆ ಕುಳಿತು ಹಾಡುತ್ತಲೋ , ಅಂಗಳದಲ್ಲಿ ಆಡುತ್ತಲೊ ಇರುವುದು ಸಹಜವಾಗಿದ್ದಿತು. ಇದರಿಂದ ಜಗತ್ತಿನಾದ್ಯಂತ ತಲೆತಲಾಂತರಗಳ ಅವಧಿಯಲ್ಲಿ ರಾತ್ರಿಯ ಆಗಸದಲ್ಲಿ ತಾರೆಗಳನ್ನು ಎಣಿಸುತ್ತ , ಅವುಗಳಲ್ಲಿ ಕೆಲವನ್ನು ಗುರುತಿಸುತ್ತ , ಅಲ್ಲಿ ನಡೆಯುವ ಘಟನೆಗಳನ್ನು ಸುದೀರ್ಘಾವಧಿ ವೀಕ್ಷಿಸಿ , ಮೊದಮೊದಲು ಸೋಜಿಗದಿಂದ ನೋಡಿ ನಂತರ ತಾರ್ಕಿಕವಾಗಿ ಯೊಚಿಸುತ್ತ , ಆಗಸದ ಘಟನೆಗಳಿಗೆ ಸಂಬಂಧ ಕಲ್ಪಿಸುತ್ತ ಪ್ರಾಚೀನ ಜನಾಂಗಗಳು ತಮ್ಮದೇ ಆದ ತೀರ್ಮಾನಗಳಿಗೆ ಬರಲು ನೆರವಾಯಿತು. ಇದು ಖಗೊಳಶಾಸ್ತ್ರದ ಉಗಮಕ್ಕೆ ಕಾರಣವಾಯಿತು. ಈ ಆರಂಭಿಕ ಕಾಲದಲ್ಲಿ ಎಲ್ಲ ಪ್ರಾಚೀನ ಜನಾಂಗಗಳು ಜೀವಿಸುವುದೆಲ್ಲವುದು ಚಲಿಸುತ್ತದೆ , ನಿರ್ಜೀವವಾದುದು ಜಡ ಎಂದು ಭಾವಿಸಿದ್ದರು. ಎಷ್ಟೇ ಕಾಲ ಸರಿದರೂ , ಭೂಮಿಯ ಮೇಲೆ ಏನೇ ಘಟನೆ ಜರುಗಿದರೂ ಯಾವುದೇ ಬದಲಾವಣೆ ಇಲ್ಲದಂತೆ ಕರಾರುವಾಕ್ಕಾಗಿ , ನಿರ್ದಿಷ್ಟ ಗತಿಯಲ್ಲಿ ಸತತ ಬೆಳಕು ಚೆಲ್ಲುತ್ತ ಚಲಿಸುವ ಆಕಾಶ ಕಾಯಗಳನ್ನು ಪ್ರಾಚೀನರು ಉನ್ನತತರದ ‘ಜೀವಿ’ಗಳೆಂದು ಭಾವಿಸಿ ದೈವತ್ವದ ಪಟ್ಟಕ್ಕೇರಿಸಿದರು. ಇದರ ಫಲವಾಗಿ ಸೂರ್ಯ, ಚಂದ್ರ , ಮಂಗಳ ಇತ್ಯಾದಿ ದೇವತೆಗಳಾದವು. ಮಿನುಗುತ್ತಿರುವ ಚುಕ್ಕಿಗಳು ನಮ್ಮ ಭೂಮಿ , ಸೂರ್ಯರ ಸಹಸ್ರ ಪಟ್ಟು ದೊಡ್ದವಿರಬಲ್ಲವು , ಅವು ಭೂಮಿಯ ಮೇಲಿರುವಂತಹ ಧಾತುಗಳಿಂದಾಗಿವೆ. ಅಲ್ಲಿ ಬೈಜಿಕ ಚಟುವಟಿಕೆಗಳು ನಡೆದು ಸತತ ಬೆಳಕು ಹೊರಹೊಮ್ಮುತ್ತಿದೆ ಎನ್ನುವಂತಹ ಸಂಗತಿಗಳು ಅನೂಹ್ಯವಾಗಿದ್ದವು. ಕಣ್ಣಿಗೆ ಸನಿಹವೆಂದು ಕಾಣುವ ಎರಡು ಚುಕ್ಕಿಗಳ ನಡುವೆ ಕೋಟಿ ಕೋಟಿ ಕಿ.ಮೀ ಅಂತರವಿದೆ ಎಂದು ಯಾರಾದರೂ ಹೇಳಿದ್ದರೆ ಪ್ರಾಚೀನರಿರಲಿ , 200 ವರ್ಷಗಳ ಹಿಂದಿದ್ದವರೂ ನಂಬುತ್ತಿರಲಿಲ್ಲ. ಮಳೆಗಾಲದಲ್ಲಿ ಸಾಗುವ ಮುಗಿಲುಗಳು ನೋಡುಗನ ಭಾವಕ್ಕೆ ತಕ್ಕಂತೆ ನಾನಾ ರೂಪ ತಳೆಯುತ್ತವೆ. ಅದರಂತೆ ಬಾನಂಗಳದಲ್ಲಿ ಚದುರಿದ ಚುಕ್ಕಿಗಳ ನಡುವೆ ಕೆಲವರು ನಿರ್ದಿಷ್ಟ ವಿನ್ಯಾಸವನ್ನು ಗುರುತಿಸತೊಡಗಿದರು. ಇದೇ ದೃಷ್ಟಿಯಲ್ಲಿ ನೋಡತೊಡಗಿದ ಇತರರಿಗೂ ಇದು ಸರಿಯೆಂದು ಕಂಡುಬಂದಿತು. ಇಂತಹ ಜೋಡಣೆಯಲ್ಲಿ ಗುರುತಿಸಿದ ಚುಕ್ಕಿಗಳ ಗುಂಪುಗಳೇ ರಾಶಿಗಳಾದವು. ಸತತ ವೀಕ್ಷಣೆಯಿಂದ ಗ್ರಹಣಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಜರುಗುವುದು ಮತ್ತು ಅವುಗಳ ಕಾಲಾವಧಿಯ ಲೆಕ್ಕಾಚಾರ ತಿಳಿದು ಬಂದಿತು. ಈವರೆಗೆ ಖಗೋಳಶಾಸ್ತ್ರ ಕ್ರಿಯಾಶೀಲವಾಗಿದ್ದಿತು. ಗ್ರಹಣಗಳು ಜರುಗುವುದನ್ನು ಜನ ಭಯ , ಕುತೂಹಲಗಳಿಂದ ವೀಕ್ಷಿಸಿದ್ದರು. ಗ್ರಹಣಕ್ಕೆ ಕಾರಣಗಳು ಗೊತ್ತಿರಲಿಲ್ಲ. (ಆರ್ಯಭಟನಿಗೆ ನಿಜವಾದ ಕಾರಣ ತಿಳಿದಿದ್ದಿತು. ಆದರೆ ಪುರೋಹಿತ ವರ್ಗ ಆ ಜ್ಞಾನವನ್ನು ಹತ್ತಿಕ್ಕಿತು.) ಆದ್ದರಿಂದ ಸೂರ್ಯನನ್ನು ನುಂಗುವ ರಾಹು-ಕೇತುಗಳ ಪರಿಕಲ್ಪನೆ ಮೂಡಿತು. ಪ್ರಾಚೀನ ಕಾಲದಲ್ಲಿ ಭಾರತ ಸೇರಿದಂತೆ ಇತರ ನಾಗರಿಕತೆಗಳಲ್ಲೂ ವಿದ್ಯಾಭ್ಯಾಸ/ಶಾಸ್ತ್ರಾಧ್ಯಯನ ಕೆಲವೇ ವರ್ಗದ ಸೊತ್ತಾಗಿದ್ದಿತು. ಸದಾ ಬೆಳಗುವ ಸೂರ್ಯನನ್ನೇ ನುಂಗುವ ಗ್ರಹಣದಂತಹ ವಿದ್ಯಾಮಾನವನ್ನು ಮುನ್ನುಡಿಯಬಲ್ಲ ಇಂತಹ ಶಾಸ್ತ್ರಿಗಳನ್ನು ಸಾಮಾನ್ಯ ಜನತೆ ನಿಬ್ಬೆರಗಿನಲ್ಲಿ ನೋಡಿತು. ಗ್ರಹಣದ ನೈಜ ಕಾರಣ ತಿಳಿಯದಿದ್ದುದರಿಂದ ಅದಕ್ಕೆ ಧಾರ್ಮಿಕ ವಿವರಣೆಗಳು ಹೊರಬಂದವು. ಸೂರ್ಯನನ್ನು ನುಂಗುವ ಗ್ರಹಣವನ್ನೇ ಮುನ್ನುಡಿಯಬಲ್ಲ ಇವರು ಯಃಕಶ್ಚಿತ್ ರಾಜನ/ಜನರ ಭವಿಷ್ಯವನ್ನು ಹೇಳಲು ಹಿಂಜರಿಯಲಿಲ್ಲ. ತಮಗೆ ಗೊತ್ತಿದ ಕೆಲ ನೈಜ ಖಗೋಳ ಸಂಗತಿಗಳನ್ನು ಯಥೇಚ್ಛವಾದ ಧಾರ್ಮಿಕ ನಂಬಿಕೆ , ಐತಿಹ್ಯಗಳೊಂದಿಗೆ ಕಲಬೆರೆಕೆ ಮಾಡಿ , ಆಕಾಶದ ಗ್ರಹಗಳು , ದೇವಾನುದೇವತೆಗಳು ಹೇಗೆ ವ್ಯಕ್ತಿಯೊಬ್ಬನ ಮೇಲೆ ಪ್ರಭಾವ ಬೀರಬಲ್ಲವೆಂದು ಲೆಕ್ಕಮಾಡಿ ಹೇಳತೊಡಗಿದರು. ಇಲ್ಲಿಂದ ಸಹಜ ವೀಕ್ಷಣೆಯಿಂದ ಉಗಮಿಸಿದ ಖಗೋಳಶಾಸ್ತ್ರ ಕುರುಡು ನಂಬಿಕೆಗಳ ‘ಫಲ ಜ್ಯೋತಿಷ್ಯ ಶಾಸ್ತ್ರ’ದತ್ತ ಉರುಳತೊಡಗಿತು. ಪಾಶಾತ್ಯ ಮತ್ತು ಪೌರಾತ್ಯ ಎಂಬ ಭೇದವಿಲ್ಲದೆ ಈ ರಾಡಿ ಜಗತ್ತಿನಾದ್ಯಂತ ಪಸರಿಸಿತು. ಸದ್ಯದ ಪರಿಸ್ಥಿತಿಯಲ್ಲಿ ಜ್ಯೋತಿಷಿಗಳು ಮತ್ತು ಅವರ ‘ಶಾಸ್ತ್ರ’ ಹೇಗೆ ಸಾಗಿದೆಯೆನ್ನುವುದರತ್ತ ಸ್ವಲ್ಪ ಗಮನ ಹರಿಸೋಣ. ಜ್ಯೋತಿಷಿಗಳು ಜನಪ್ರಿಯ ಮಾಧ್ಯಮಗಳಲ್ಲಿ ತುಂಬಿ ತುಳುಕುತ್ತಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಅವರಿಗೆ ‘ಜ್ಯೋತಿಷ್ಯ’ ಮೆದು ಮಾರ್ಗವಾಗಿದೆ. ವೇದ , ಧರ್ಮ , ಗ್ರಹಣ , ಗ್ರಹಗತಿ , ವೈಜ್ಞಾನಿಕ ಸಂಗತಿಗಳನ್ನು ಎಗ್ಗಿಲ್ಲದೆ ಕಲಬೆರೆಕೆ ಮಾಡುತ್ತ ತಾವು ನುಡಿದ ಭವಿಷ್ಯವೆಲ್ಲವೂ ಹೇಗೆ ನಿಜವಾಗಿದೆ ? ಅದರಿಂದ ಅದೆಷ್ಟು ಜನರಿಗೆ ಒಳಿತಾಗಿದೆಯೆಂದು ಬಡಬಡಿಸುತ್ತಾರೆ. ಊಕೆಲವು ಖ್ಯಾತರ , ಕೆಲವು ಸಾಮಾನ್ಯರ ಕುಂಡಲಿಗಳನ್ನು ತಂದು ಅವುಗಳನ್ನು ನಾನಾ ಬಗೆಯಲ್ಲಿ ಅರ್ಥೈಸಿ ಹೇಗೆ ಜಾತಕದಲ್ಲಿರುವಂತೆಯೇ ಅವರ ಜೀವನದಲ್ಲಿ ಘಟನೆಗಳು ಜರುಗಿವೆ ಎಂದು ತೋರಿಸುತ್ತಾರೆ. ಇವರು ಎಂದಿಗೂ ಕುಂಡಲಿಯೊಂದನ್ನು ತಂದು ಅದನ್ನು ಮುಕ್ತವಾಗಿ ತೋರಿಸಿ, ಅದರಿಂದ ಆ ವ್ಯಕ್ತಿಯ ಭವಿಷ್ಯದ ಲೆಕ್ಕಾಚಾರ ಮಾಡಿ ಮುಂದೆ ಹೀಗೆ ಆಗುತ್ತದೆಯೆಂದು ಹೇಳಿ ಸಾರ್ವಜನಿಕ ಪರಿಶೀಲನೆಗೆ ತಮ್ಮ ಜ್ಯೋತಿಷ್ಯವನ್ನು ಇಡಲು ಬಯಸುವುದಿಲ್ಲ. ಮನುಷ್ಯನ ಜೀವನದಲ್ಲಿ ಘಟಿಸಬಹುದಾದ ಹಲವಾರು ಸಾಧ್ಯತೆಗಳಲ್ಲಿ ಯಾವುದೋ ಒಂದೆರಡು ಘಟನೆಗಳು ಜ್ಯೋತಿಷಿ ನುಡಿದ ಭವಿಷ್ಯವನ್ನು ಹೋಲುತ್ತಿದ್ದರೆ ಅದನ್ನು ಡಂಗುರ ಹೊಡೆದು ಸಾರುತ್ತಾರೆ. ಎಂದಿಗೂ ಇಬ್ಬರು ಜ್ಯೊತಿಷಿಗಳು ಒಂದೇ ಬಗೆಯ ಘಟನಾವಳಿಗಳನ್ನು ಮುನ್ನುಡಿದಿಲ್ಲ. ನಿರ್ದಿಷ್ಟ ವ್ಯಕ್ತಿಯ ಭವಿಷ್ಯವನ್ನು ಪ್ರತ್ಯೇಕವಾಗಿ ನಿರ್ಧರಿಸಿ ಸಾರ್ವಜನಿಕರೆದುರು ಇಡುವ ಪರೀಕ್ಷೆಗೆ ಯಾವ ಜ್ಯೋತಿಷಿಗಳು ಹಾಜರಾಗುವುದಿಲ್ಲ. ಇಂತಹ ಜ್ಯೋತಿಷ್ಯ ಎಂತಹ ಬುನಾದಿಯ ಮೇಲಿದೆ , ಅದರ ತತ್ತ್ವಗಳು ಎಲ್ಲಿಂದ ಉಗಮಗೊಂಡವು , ಹಾಗೆ ಉಗಮಗೊಂಡಾಗ ಅವುಗಳನ್ನು ನೀಡಿದವರಿಗೆ ಇದ್ದ ಜ್ಞಾನ ಎಂತಹುದು ಮತ್ತು ಅದರಲ್ಲಿರುವ ಹುರುಳೆಷ್ಟು ಎಂದು ನೋಡೋಣ. ಜ್ಯೋತಿಷ್ಯ ಶಾಸ್ತದಲ್ಲಿ ಭಾರತೀಯ , ಪಾಶ್ಚಾತ್ಯ , ಚೀನಿ ಇತ್ಯಾದಿಯಾಗಿ ಹಲವು ಹತ್ತಾರು ಕವಲುಗಳಿವೆ. ವ್ಯಕ್ತಿಯೊಬ್ಬನ ಭವಿಷ್ಯ ನಿರ್ಧರಿಸಲು ಒಬ್ಬೊಬ್ಬರು ಒಂದೊಂದು ಅಂಶವನ್ನು ಪರಿಗಣಿಸಿದ್ದಾರೆ. ಕೆಲವರಿಗೆ ಹುಟ್ಟಿದ ಗಳಿಗೆ ಮುಖ್ಯವಾದರೆ , ಇನ್ನು ಕೆಲವರಿಗೆ ಹುಟ್ಟಿದ ತಿಂಗಳು ಪ್ರಭಾವಶಾಲಿಯಾಗಿರುತ್ತದೆ. ಮತ್ತೆ ಕೆಲವರಿಗೆ ಇವೆರಡೂ ಸಮ ಪ್ರಭಾವ ಹೊಂದಿರುತ್ತವೆ. ಅದೇನೇ ಇರಲಿ ಇವರೆಲ್ಲರ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಒಂದು ಸಾಮಾನ್ಯ ಅಂಶವಿದೆ. ಅದೆಂದರೆ ಮಾನವ ಹುಟ್ಟಿದ ಘಳಿಗೆ/ತಿಂಗಳಿನ ಆಧಾರದ ಮೇಲೆ ಆಕಾಶ ಕಾಯಗಳು ಅವನ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಇಂತಹ ಪ್ರಭಾವ ಈ ಆಕಾಶ ಕಾಯಗಳ ಯಾವುದಾದರೊಂದು ಬಲದಿಂದ ಬಂದಿರಬೇಕು ಎನ್ನುವುದು ನಿರ್ವಿವಾದ. ಆಧುನಿಕ ವಿಜ್ಞಾನದ ಜ್ಞಾನವನ್ನು ಬಳಸಿಕೊಂಡು ಕೆಲವರು ಇದನ್ನು ಗುರುತ್ವ ಎಂದರೆ ಇನ್ನು ಕೆಲವರು ವೈದ್ಯುತ್-ಕಾಂತಿಯ ಬಲವೆಂದು ಹೇಳುತ್ತಾರೆ. ಬಹು ಚಾಣಾಕ್ಷರಾದ ಕೆಲವರು ಆಕಾಶ ಕಾಯಗಳು ಮಾನವನ ಮೇಲೆ ಅಜ್ಞಾತ-ಅಗೋಚರವಾದ , ಅಳೆಯಲಾಗದ ಬಲದ ಮೂಲಕ ಪ್ರಭಾವ ಬಿರುತ್ತವೆ ಎಂದು ಹೇಳುತ್ತಾರೆ. ಯಾವುದೇ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಇದಕ್ಕಿಂತ ಜಾಣ ದಾರಿ ಮತ್ತೊಂದಿಲ್ಲ. ಇಂತಹ ನಿಲುವು ಏನೇ ಇರಲಿ ಆಕಾಶ ಕಾಯಗಳು ಮಾನವನ ಮೇಲೆ ಪ್ರಭಾವ ಬೀರುತ್ತವೆ ಎನ್ನುವ ಇವರ ಹೇಳಿಕೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಕೆಲವು ಜ್ಯೋತಿಷಿಗಳು ಆಕಾಶ ಕಾಯಗಳು ಮಾನವನ ಮೇಲೆ ಬೀರುವ ಪ್ರಭಾವವನ್ನು ‘ವ್ಯಕ್ತಿಯೊಬ್ಬನನ್ನು ಅನ್ವಯಿಸಿ ಅಳೆಯಲಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇದನ್ನು ಸಂಖ್ಯಾಕಲನೀಯ ತತ್ವಗಳ ಮೇಲೆ ಅಳೆಯಲು ಸಾಧ್ಯ. ಆದ್ದರಿಂದ ನಮಗೆ ಬಲಗಳ ಬಗೆಗೆ ಮತ್ತು ಅವುಗಳು ವ್ಯಕ್ತಿಯೊಬ್ಬನೇಕೆ ಭೂಮಿಯ ಮೇಲೆ ಎಂತಹ ಪ್ರಭಾವ ಬೀರುತ್ತಿವೆ ಎಂದು ನೋಡೋಣ. ನಿಸರ್ಗದ ಬಲಗಳು : ಈವರೆಗೆ ನಮಗೆ ಖಚಿತವಾಗಿ ವಿಶ್ವದಲ್ಲಿ (1) ಗುರುತ್ವ (2) ವೈದ್ಯುತ್-ಕಾಂತೀಯ (3) ಕ್ಷೀಣ ಬೈಜಿಕ (4) ಪ್ರಬಲ ಬೈಜಿಕ ಎಂಬ ನಾಲ್ಕು ಮೂಲ ಬಲಗಳಿರುವುದು ತಿಳಿದುಬಂದಿದೆ. ಇವುಗಳನ್ನು ಪ್ರಯೋಗಾಲಯಗಳಲ್ಲಿ ಖಚಿತವಾಗಿ ಅಳೆಯಲಾಗಿದೆ. ಇವುಗಳಲ್ಲಿ ಯಾವ ಬಲ ಹೇಗೆ ವರ್ತಿಸುತ್ತದೆಯೆಂದು ನೋಡಬಹುದು. (1) ಗುರುತ್ವ : ಗುರುತ್ವ ಯಾವಾಗಲು ಎರಡು ಕಾಯಗಳ ನಡುವೆ ಅಸ್ತಿತ್ವದಲ್ಲಿರುತ್ತದೆ. ಎರಡು ಕಾಯಗಳ ದ್ರವ್ಯರಾಶಿಯ ಗುಣಲಬ್ದಕ್ಕೆ ಅನುಲೋಮವಾಗಿ (Proportional)ಮತ್ತು ಅವುಗಳ ದೊರದ ವರ್ಗಕ್ಕೆ ವಿಲೋಮವಾಗಿ (Inverse) ಗುರುತ್ವ ಬಲದ ಮಹತ್ತರತೆ (Magnitude) ಇರುತ್ತದೆ. ಚಂದ್ರ ಭೂಮಿಯ ಮೇಲೆ ಬೀರುವ ಗುರುತ್ವದ ಪ್ರಭಾವವನ್ನು 1 ಎಂದು ಪರಿಗಣಿ ವಿವಿಧ ಗ್ರಹಗಳಿಂದ ಭೂಮಿಯ ಮೇಲಾಗುವ ಗುರುತ್ವದ ಪ್ರಭಾವವನ್ನೂ ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ. ಕೋಷ್ಟಕದಲ್ಲಿ ಭೂಮಿಯ ಮೇಲೆ ಚಂದ್ರನ ಗುರುತ್ವವನ್ನು 1 ಎಂದು ಪರಿಗಣಿಸಸಲಾಗಿದೆ. ಉಳಿದವುಗಳು ಇದರ ಅಳತೆಯಲ್ಲಿವೆ. ಗುರುತ್ವ ದರ = ಆಕಾಶಕಾಯದ ಗುರುತ್ವ/ಚಂದ್ರನ ಗುರುತ್ವ . ಮೇಲಿನ ಕೋಷ್ಟಕ ನೋಡಿದರೆ ವ್ಯಕ್ತಿಯೊಬ್ಬನಿಗೆ ಅದೃಷ್ಟ ತರುವ ಚಂದ್ರನ 27000 ಪಟ್ಟು ತೂಕವಿರುವ ಗುರುವಿನ ಗುರುತ್ವ ಪ್ರಭಾವ ಭೂಮಿಯ ಮೇಲೆ ಚಂದ್ರನ 1/100 ರಷ್ಟು ಮಾತ್ರ. ಚಂದ್ರನನ್ನು ಹೊರತುಪಡಿಸಿ ಉಳಿದ ಎಲ್ಲ ಗ್ರಹಗಳ ಗುರುತ್ವದ ಮೊತ್ತ 0.017. ಎಂದರೆ ಉಳಿದೆಲ್ಲ ಗ್ರಹಗಳು ಚಂದ್ರನ ಶೇಕದ 2 ರಷ್ಟು ಮಾತ್ರ ಭೂಮಿಯ ಮೇಲೆ ಗುರುತ್ವ ಬಲ ಹಾಕುತ್ತವೆ. ಇಷ್ಟೇ ಅಲ್ಲ ಚಂದ್ರ ದೀರ್ಘ ವೃತ್ತದಲ್ಲಿ ಭೂಮಿಯನ್ನು ಸುತ್ತುತ್ತದೆ. ಅತಿ ಸಮಿಪವೆಂದರೆ 363,000 ಕಿ.ಮೀ ಹಾಗು ಅತಿ ದೂರವೆಂದರೆ 405000 ಕಿ.ಮೀ ದೂರದಲ್ಲಿರುತ್ತದೆ. ಈ ದೂರಗಳ ವ್ಯತ್ಯಾಸದಿಂದ ಭೂಮಿಯ ಮೇಲೆ ಅದರ ಗುರುತ್ವದ ಪ್ರಭಾವದಲ್ಲಿ 25 % ವ್ಯತ್ಯಾಸವಿರುತ್ತದೆ ಮಾತ್ರವಲ್ಲ 14 ದಿನಗಳಿಗೊಮ್ಮೆ ಇದು ಬದಲಾಗುತ್ತದೆ ಹೀಗಿದ್ದರೂ ಚಂದ್ರ ನಮ್ಮ ಮೇಲೆ ಭೂಮಿಯ ( 1/333333) ದಷ್ಟು ಮಾತ್ರ ಗುರುತ್ವ ಬಲ ಹಾಕಬಲ್ಲದು.ಆದ್ದರಿಂದ ಚಂದ್ರ ಬೇರೆಲ್ಲ ಆಕಾಶ ಕಾಯಗಳಿಗಿಂತ ಭೂಮಿಯ ಮೇಲೆ ಅತಿ ಹೆಚ್ಚಿನ ಗುರುತ್ವ ಬಲ ಹಾಕುತ್ತದೆ. ಯಾವ ಜ್ಯೋತಿಷ್ಯ ಕುಂಡಲಿಯಲ್ಲಿಯು ಚಂದ್ರ ಅತಿ ಪ್ರಬಲನೆಂದು ಪರಿಗಣಿತವಾಗಿಲ್ಲ.. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಕಾಶಕಾಯಗಳ ಗುರುತ್ವ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಎಂದಂತಾಯಿತು. (2) ವೈದ್ಯುತ್-ಕಾಂತೀಯ ಬಲ (ವೈ-ಕಾ) ; ಗುರುತ್ವ ದ್ರವ್ಯರಾಶಿ ಮತ್ತು ದೂರಗಳ ಮೇಲೆ ಅವಲಂಬಿತವಾಗಿದ್ದರೆ ವೈ-ಕಾ ಬಲ ವಿದ್ಯುದಾವಿಷ್ಟ (Electric Charge) ಮತ್ತು ದೂರದ ಮೇಲೆ ಅವಲಂಬಿತವಾಗಿದೆ. ಎಲೆಕ್ಟ್ರಾನ್ ಮತ್ತು ಪ್ರೋಟಾನ್ ನಂತಹ ಮುಕ್ತ ಕಣಗಳಿಂದ ವಿದ್ಯುದಾವಿಷ್ಟ ಬರುತ್ತದೆ. ನಿಸರ್ಗದಲ್ಲಿ ಇವು ಒಂದಕ್ಕೊಂದು ಪರಸ್ಪರ ರದ್ದಾಗಿ ತಟಸ್ಥ ಸ್ಥಿತಿಗೆ ಬರುವುದು ಸಹಜ. ಗ್ರಹಗಳಂತಹ ಬೃಹತ ಕಾಯಗಳಿಗೆ ವಿದ್ಯುದಾವಿಷ್ಟತೆಯಿಲ್ಲ (Electric Charge). ಕೆಲವು ಆಕಾಶ ಕಾಯಗಳಿಗೆ ಕಾಂತೀಯ ವಲಯವಿದೆ. ಆದರೆ ಇದು ಅಲ್ಪ ದೂರಗಳಿಗೆ ಸೀಮಿತ. ಗುರು ಗ್ರಹಕ್ಕೆ ಪ್ರಬಲ ಕಾಂತ ವಲಯವಿದೆ. ಗುರು ಭೂಮಿಗಳಿಗೆ ಇರುವ ದೂರದಿಂದಾಗಿ ಇದು ಅತ್ಯಲ್ಪ ಹಾಗು ನಗಣ್ಯ. ಸೂರ್ಯ ಆಗಾಗ್ಗೆ ಪ್ರಬಲ ಕಾಂತೀಯ ಜ್ವಾಲೆಗಳನ್ನು ಚಿಮ್ಮಿಸುತ್ತದೆ. ಹಲವಾರು ಬಾರಿ ಇದು ಭೂಮಿ ಮೇಲಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯನ ಈ ಪ್ರಭಾವವೇನು ಪರಿಗಣಿತವಾಗಿಲ್ಲ. ಗ್ರಹಗಳ ಒಟ್ಟು ಕಾಂತೀಯ ಪ್ರಭಾವ ಸೂರ್ಯನಿಗೆ ಹೋಲಿಸಿದಂತೆ ಅತ್ಯಲ್ಪ. ಜ್ಯೋತಿಷ್ಯದಲ್ಲಿ ಸೂರ್ಯನಿಗಿಂತ ಗ್ರಹಗಳ ಪ್ರಭಾವಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಗುರುತ್ವವನ್ನು ಪರಿಗಣಿಸಿದರೆ ಚಂದ್ರ , ವೈ-ಕಾ ಪರಿಗಣಿಸಿದರೆ ಸೂರ್ಯ ಭೂಮಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ಜ್ಯೋತಿಷ್ಯ ಇವೆರಡು ಆಕಾಶ ಕಾಯಗಳನ್ನು ಪ್ರಭಾವಶಾಲಿಗಳೆಂದು ಪರಿಗಣಿಸುವುದಿಲ್ಲ. (3) ಕ್ಷೀಣ ಮತ್ತು (4) ಪ್ರಬಲ ಬೈಜಿಕ ಬಲಗಳು : ಪರಮಾಣುವಿನ ಬೀಜದಲ್ಲಿ (ಕ್ಷೀಣ ಬೈಜಿಕ ಬಲ) (1/100000000000000000) ಮೀಟರ್ ಮತ್ತು ಪ್ರಬಲ ಬೈಜಿಕ ಬಲಗಳು (1/100000000000000) ಮೀಟರ್ ದೂರದವರೆಗೆ ಮಾತ್ರ ಅಸ್ತಿತ್ವದಲ್ಲಿರುತ್ತವೆ. ಇವು ಆಕಾಶ ಕಾಯಗಳಿಂದ ಪ್ರೆರೆಪಿಸಲ್ಪಡುವುಡು ಸಾಧ್ಯವಿಲ್ಲ. ತೀರ್ಮಾನ : ಈಗ ಖಚಿತವಾಗಿ ತಿಳಿದಿರುವ ಯಾವ ಬಲವು ಆಕಾಶಕಾಯಗಳ ಮೂಲಕ ನಮ್ಮನ್ನು ಪ್ರಭಾವಿಸಲಾರದು. ಅಥವಾ ಭೌತಶಾಸ್ತ್ರದ ನಿಯಮಗಳನ್ನೂ ಮೀರಿದ ಜ್ಯೋತಿಷಿಗಳಿಗೆ ಮಾತ್ರ ತಿಳಿದಿರುವ ಬಲವಿರಬೇಕು ಅಥವಾ ಭೌತಾತೀತವಾದ ತತ್ವವಿರಬೇಕು ಜ್ಯೋತಿಷಿಗಳು ಹೇಳುವಂತೆ ನಮಗೆ ಗೊತ್ತಿರುವ ಅಥವಾ ಗೊತ್ತಿರದ ಯಾವ ನೈಸರ್ಗಿಕ ಬಲವು ಭೂಮಿಯ ಮೇಲಿರುವ ನಮ್ಮನ್ನು ತಟ್ಟಲಾರದು. ನಮಗೆ ಈಗ ಖಚಿತವಾಗಿ ತಿಳಿದಿರುವ ಎಲ್ಲ ಬಲಗಳ ಪ್ರಭಾವಗಳನ್ನು ಭೂಮಿಯ ಮೇಲೆ ಅಳೆಯಲು ಸಾಧ್ಯ. ಅವು ಯಾವುವು ನಮ್ಮನ್ನು ಪ್ರಭಾವಿಸುವಷ್ಟು ಪ್ರಬಲವಲ್ಲ, ಜ್ಯೋತಿಷ್ಯದ ಮೂಲ ಆಧಾರಗಳು – ನೈಜ ಸಂಗತಿಗಳು ಜ್ಯೋತಿಷ್ಯಶಾಸ್ತ್ರಕ್ಕೆ ಆಧಾರವಾಗಿರುವ ಸಂಗತಿಗಳು ನೈಜ ವಸ್ತುನಿಷ್ಠ ಸಂಗತಿಗಳಿಂದ ಬಹುದೂರ ಉಳಿದಿವೆ. ಅವುಗಳತ್ತ ಗಮನ ಹರಿಸೋಣ. 1. ದಿಕ್ಕುಗಳು : ಭೂಮಿ ಮತ್ತು ನಮ್ಮ ನಮ್ಮ ಸೂರ್ಯ ಮಂಡಲ ಕೊನೆ ಮೊದಲಿಲ್ಲದೆ ಹರಡಿರುವ ವಿಶ್ವದಲ್ಲಿ ಧೂಳಿನ ಕಣಕ್ಕೆ ಸಮ. ಹಗಲು –ರಾತ್ರಿಗಳು ಭೂಮಿಯ ಪರಿಭ್ರಮಣೆಯ ಫಲಗಳು. ನಮ್ಮ ಅನುಕೂಲಕ್ಕಾಗಿ ನಾವು ಸೂರ್ಯ ಮೊದಲಿಗೆ ಕಾಣುವ ದಿಕ್ಕನ್ನು ಪೂರ್ವವೆಂದು ಕರೆದಿದ್ದೇವೆ. ಇದರ ಹೊರತು ನಿಸರ್ಗದಲ್ಲಿ ದಿಕ್ಕುಗಳಿಗೆ ಅರ್ಥವಿಲ್ಲ. ಭೂಮಧ್ಯ ರೇಖೆಯಲ್ಲಿ ಭೂಮಿ ತನ್ನ ಅಕ್ಷದ ಮೇಲೆ ಗಂಟೆಗೆ ಸುಮಾರು 1700 ಕಿ.ಮಿ.(= ಸೆಕೆಂಡಿಗೆ 472 ಮೀ) ವೇಗದಲ್ಲಿ , ಧೃವಗಳಲ್ಲಿ ತಟಸ್ಥವಾಗಿರುವಂತೆ ಪರಿಭ್ರಮಿಸುತ್ತಿದ್ದರೆ ಸೂರ್ಯನನ್ನು ಗಂಟಗೆ 1, 07,200 ಕಿ.ಮೀ. (=ಸೆಕೆಂಡಿಗೆ 29.78 ಕಿ.ಮೀ) ವೇಗದಲ್ಲಿ ಆವರ್ತಿಸುತ್ತಿದೆ. ಭೂಮಿಯ ಉತ್ತರ ಗೋಳದಿಂದ ವೀಕ್ಷಿಸಿದಾಗ ಪ್ರದಕ್ಷಿಣ ಮಾರ್ಗವಾಗಿ ಸರಿದಂತೆ ಕಾಣುವ ಆಕಾಶ ಕಾಯಗಳು ದಕ್ಷಿಣ ಗೋಳದಿಂದ ಅಪ್ರದಕ್ಷಿಣ ಮಾರ್ಗವಾಗಿ ಸರಿದಂತೆ ಭಾಸವಾಗುತ್ತವೆ. ಆದ್ದರಿಂದ ನೈಜವಾಗಿ ಪೂರ್ವ ದಿಕ್ಕು ಎನ್ನುವುದು ಪ್ರತಿಕ್ಷಣ ಬದಲಾಗುವ ಒಂದು ಪರಿಕಲ್ಪನೆ ಮಾತ್ರ. ಇಂತಹ ಅಸ್ತಿತ್ವವೇ ಇಲ್ಲದ ದಿಕ್ಕನ್ನು , ಅದಕ್ಕೆ ದೈವವನ್ನು ಆರೋಪಿಸಿಸುವ ಜ್ಯೋತಿಷ್ಯ ಭೌತ ಘಟನೆಗಳನ್ನು ಕಡೆಗಣಿಸಿ ಕಾಲ್ಪನಿಕ ಸಂಗತಿಗಳ ಮೇಲೆ ಅವಲಂಬಿತವಾಗಿದೆ. 2.ವಾರಗಳು : ಆಕಾಶ ಕಾಯಗಳ ಚಲನೆಯನ್ನಾಗಲಿ ಅಥವಾ ಅಲ್ಲಿನ ಯಾವುದೇ ಘಟನೆಯನ್ನಾಗಲಿ ವೀಕ್ಷಿಸಿ ನಾವು ಈದಿನ ಇಂತಹ ವಾರವೆಂದು ಹೇಳಲಾಗುವುದಿಲ್ಲ. ಒಂದರ ನಂತರ ಒಂದರಂತೆ ಬರುವ ಹಗಲು ರಾತ್ರಿಗಳ ನಡುವಿನ ವ್ಯತ್ಯಾಸ ಗುರುತಿಸಲು ನಾವು ಅನುಕೂಲಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆಯೇ ವಾರ ಪದ್ಧತಿ. ಪ್ರಾಚಿನ ಕಾಲದಲ್ಲಿ ಕೆಲವು ಜನಾಂಗಗಳು ಚಂದ್ರನ ಪಕ್ಷವನ್ನು (14 ದಿನಗಳು) ಅನುಸರಿಸುತ್ತಿದ್ದರೆ ಇನ್ನು ಕೆಲವು ಜನಾಂಗಗಳು ಹತ್ತು ದಿನ . ಇನ್ನು ಕೆಲವು ತಿಂಗಳಿನ ಲೆಕ್ಕಗಳನ್ನು (28 ದಿನ) ಅನುಸರಿಸುತ್ತಿದ್ದವು. ಹತ್ತು ಹಾಗು ತಿಂಗಳಿನ ಲೆಕ್ಕಾಚಾರ ದೀರ್ಘವಾದುದರಿಂದ ನಂತರದ ದಿನಗಳಲ್ಲಿ 1 ಪಕ್ಷವನ್ನೂ ಎರಡು ಭಾಗ ಮಾಡಿ ಎರಡು ವಾರಗಳಾಗಿ ವಿಭಜಿಸಲಾಯಿತು. ಯಾವುದೇ ದಿನ (=ವಾರ) ಭೂಮಂಡಲಕ್ಕೆ ಸಂಪೂರ್ಣವಾಗಿ ಅನ್ವಯಿಸುವುದಿಲ್ಲ. ಕೆಲವರಿಗೆ ಶುಭ ಶುಕ್ರವಾರವಿರುವಾಗ ಮತ್ತೆ ಕೆಲವರಿಗೆ ಪೀಡಕ ಶನಿವಾರ ಎರಗಿರುತ್ತದೆ. ಹೀಗಿರುವಾಗ ಶುಭ ವಾರ , ಶುಭ ಗಳಿಗೆಗಳೆನ್ನುವುವು ಅರ್ಥರಹಿತವಾಗುತ್ತವೆ. |
|
Comment Box is loading comments...