ಇರೈಯನಾರ್ ಅಗಪ್ಪೊರುಳ್ ಕೃತಿಗೆ ಬರೆದ ವ್ಯಾಖ್ಯಾನದಲ್ಲಿ ಮೊದಲ ಬಾರಿಗೆ ಸಂಗಂ ಐತಿಹ್ಯ ಹುಟ್ಟು ಹಾಕಿದ ನಕ್ಕೀರಾರ್ ಮೂರನೇ ಸಂಗಂ ಕಾಲದಲ್ಲಿ ಎಟ್ಟುತ್ತೊಕ್ಕೈ ಎನ್ನುವ ಎಂಟು ಸಂಗ್ರಹಗಳು , ಅಗತ್ತಿಯಂ , ತೊಲ್’ಕಾಪ್ಪಿಯಂ ಎನ್ನುವ ಎರಡು ವ್ಯಾಕರಣಗಳು ಹಾಗೂ ಕುತ್ತು , ವರಿ , ಚಿಱ್ಱಿಚೈ , ಪೇರಿಚೈ ಎನ್ನುವ ಗ್ರಂಥಗಳು ರಚಿತವಾದವು ಎನ್ನುತ್ತಾನೆ. ಇದರಲ್ಲಿ ಪತ್ತುಪ್ಪಾಟ್ಟುಗಳ ಬಗ್ಗೆಯಾಗಲಿ ಅದರಲ್ಲಿರುವ ಯಾವುದೇ ಹಾಡನ್ನು ಕುರಿತಾಗಲಿ ಸೊಲ್ಲಿಲ್ಲ. ನಕ್ಕೀರಾರ್ ಹೇಳುವುದರಲ್ಲಿ ಕೊನೆಯ ನಾಲ್ಕು ಸಿಕ್ಕಿಲ್ಲ ಮಾತ್ರವಲ್ಲ ಅವು ಏನನ್ನು ಕುರಿತಾಗಿ ಹೇಳುತ್ತಿದ್ದವು ಎನ್ನುವುದು ಕೂಡ ಗೊತ್ತಿಲ್ಲ. ಆದರೆ ಕುತ್ತು= ಕುಣಿತ , ನಾಟ್ಯ, ಚಿಱ್ಱಿಚೈ= ಕಿರು ಸಂಗೀತ, ಪೇರಿಚೈ = ಹಿರಿ ಸಂಗೀತ ಎನ್ನುವ ಹೆಸರುಗಳನ್ನು ಗಮನಿಸಿದರೆ ಇವು ನಾಟ್ಯ ಮತ್ತು ಸಂಗೀತ ಗ್ರಂಥಗಳಾಗಿದ್ದು ನಂತರ ಕಾಲಕ್ಕೆ ಸೇರಿದವು ಎಂದು ಹೇಲಾಲು ಯಾವುದೇ ಹುಡುಕಾಟದ ಅಗತ್ಯವಿಲ್ಲ. ನಕ್ಕೀರರ್ ಮತ್ತು ಆತ ಬರೆದಿರುವ ವ್ಯಾಖ್ಯಾನ ಸಾ.ಶ 9-10 ನೇ ಶತಮಾನಕ್ಕೆ ಸಲ್ಲುತ್ತದೆಯೆನ್ನುವುದು ಊಹೆಗಳ ಮೇಲೆ ಅಧಾರಿತವಾಗಿದೆಯೇ ಹೊರತು ಅದಕ್ಕೂ ನಿರ್ದಿಷ್ಟ ಕಾಲ ಸೂಚಿಸುವ ಪುರಾವೆಗಳಿಲ್ಲ. ಎಂದರೆ ಸಾ.ಶ 4 ರಿಂದ 9/10 ರ ಅವರೆಗಿನ ಸುಮಾರು 5-6 ಶತಮಾನಗಳ ಕಾಲ ಸಂಗಂ ಸಾಹಿತ್ಯದ ಅಸ್ತಿತ್ವಕ್ಕೆ ಯಾವುದೇ ಕುರುಹುಗಳಿಲ್ಲ. 4-7 ಶತಮಾನದ ಅವಧಿಯಲ್ಲಿ ಇದ್ದ ಪಲ್ಲವರು ಮತ್ತು ತಮಿೞಗಂ ಮೂವೇಂದರರನ್ನು ಮಣಿಸಿ ತಮಿೞಗಂ ವಶಪಡಿಸಿಕೊಂಡರೆಂದು ಹೇಳಲಾಗುವ ಕಳಭ್ರರ ಕಾಲದಲ್ಲಾಗಲಿ ಸಂಗಂ ಸಾಹಿತ್ಯ ಇದ್ದುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ನಕ್ಕೀರಾರ್ ಮೊದಲ ಬಾರಿಗೆ ಪಾಂಡ್ಯರ ಪೋಷಣೆಯಲ್ಲಿ ಬೆಳೆದು ಬಂದ ಮೂರು ಪ್ರಾಚೀನ ತಮಿೞು ಸಂಗಂಗಳ ಬಗ್ಗೆ ಕಟ್ಟು ಕಥೆಗಳನ್ನು ಹೊಸೆಯುವುದಕ್ಕೂ ಸಂಗಂ ಸಾಹಿತ್ಯದ ಹುಟ್ಟಿಗೂ ಏನಾದರೂ ನಂಟಿರಬಹುದೇ ಎನ್ನುವ ಸಂಶಯ ಏಳದಿರದು. ಆದ್ದರಿಂದ ಇತರ ದ್ರಾವಿಡ ಭಾಷೆಗಳ ಅದರಲ್ಲೂ ಕನ್ನಡದ ಸಾಹಿತ್ಯಕ ಬೆಳವಣಿಗೆಯ ಹಿನ್ನೆಲೆಯಲ್ಲಿ ನೋಡಿದರೆ ಕನ್ನಡ ಮತ್ತು ತಮಿೞು ಒಂದೇ ಬಗೆಯಲ್ಲಿ ಸಾಗಿರುವುದು ಸ್ಪಷ್ಟವಾಗುತ್ತದೆ. 8-10 ಶತಮಾನದಲ್ಲಿ ಕನ್ನಡ ಭಾಷೆ , ಅದರ ಗಡಿ , ಹಿರಿಮೆ , ಗರಿಮೆಗಳನ್ನು ಎತ್ತಿ ಹಿಡಿಯುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ಸಾಗಿರುವುದು ಕಾಣಿಸುತ್ತದೆ. ಇದು ತಮಿೞಿಗೂ ಅನ್ವಯಿಸುತ್ತದೆ. ಆದ್ದರಿಂದ ಸಂಗಂ ಕಾಲದ ನಿರ್ಧಾರ ಮಾಡಲು ಬೇರೆಯದೇ ಆದ ದಾರಿಗಳನ್ನು ಹುಡುಕಬೇಕಾಗುತ್ತದೆ. ಇದಕ್ಕಾಗಿ ತಮಿೞು ಸಂಗಂ ಸಾಹಿತ್ಯ ಸಲಹಿದವರೆಂದು ಒಪ್ಪಲಾಗಿರುವ 8ನೇ ಶತಮಾನದಿಂದ ದಕ್ಕುವ ಪಾಂಡ್ಯರ ಐತಿಹಾಸಿಕ ಮಾಹಿತಿಯನ್ನು ಬಳಸಿಕೊಳ್ಳಬೇಕಾಗುತ್ತದೆ.
ಚೋೞ ಮತ್ತು ಪಾಂಡ್ಯರ ತಾಮ್ರಪತ್ರಗಳಲ್ಲಿರುವ ಹಾಗೂ ಸಂಗಂ ಹಾಡುಗಳಲ್ಲಿರುವ ರಾಜರ ಹೆಸರುಗಳನ್ನು ಮತ್ತು ವಂಶಾವಳಿಗಳನ್ನು ಹೋಲಿಕೆ ಮಾಡುವುದು ಸಂಗಂ ಸಾಹಿತ್ಯ ಕಾಲದ ತೀರ್ಮಾನಕ್ಕೆ ಒಂದು ಸೂಚಿಯಾಗಬಲ್ಲದು. ಈಗ ನಂಬಿರುವಂತೆ 5ನೇ ಶತಮಾನದ ವೇಳೆಗೆ ಪುಲವರರ ಮೂಲಕ ಬರವಣಿಗೆಗೆ ಇಳಿದ ಪಾಣಾರರ ಹಾಡುಗಳು ಮೂವೇಂದರರ ಬಳಿ ಇದ್ದಿರಬೇಕು. ತಮ್ಮ ವಂಶದ ಪೂರ್ವಜರ ಹಾಡುಗಳನ್ನು ಅವರು ಹೆಮ್ಮೆಯಿಂದ ಉಳಿಸಿಕೊಂಡಿರಬೇಕು. ಕಳಭ್ರರ ಆಳ್ವಿಕೆಯ ಕಾಲದಲ್ಲಿದ್ದ ತಮ್ಮ ವಂಶಜರ ಬಗ್ಗೆಯೂ ಗೊತ್ತಿರಬೇಕು. ತಾಮ್ರಪತ್ರಗಳ ಪ್ರಶಸ್ತಿ ಅಥವಾ ಮೆಯ್’ಕೀರ್ತಿಯಲ್ಲಿ ಪೌರಾಣಿಕ ಭಾಗದ ನಂತರ ಬರುವ ಐತಿಹಾಸಿಕ ವಂಶಾವಳಿಯಲ್ಲಿ ಈ ಹೆಸರುಗಳು ಇರಬೇಕು .ಸಾ.ಶ 9ನೇ ಶತಮಾನದ ನಂತರ ಪಾಂಡ್ಯರು ಹೊರಡಿಸಿದ ತಾಮ್ರಪತ್ರಗಳಲ್ಲಿ ದೊರೆಯುವ ಐತಿಹಾಸಿಕ ವಂಶಾವಳಿಯ ಕೋಷ್ಟಕ ಗಮನಿಸಿದರೆ ಸಂಗಂ ಕಾಲದಲ್ಲಿದ್ದ ಪಾಂಡ್ಯರ ಬಗ್ಗೆ ಈ ಐತಿಹಾಸಿಕ ಪಾಂಡ್ಯರಿಗೆ ತಾಮ್ರಪತ್ರಗಳಲ್ಲಿ ಅಥವಾ ಕಲ್ಬರಹಗಳಲ್ಲಿ ಬರೆಸಿಕೊಳ್ಳುವಂತಹ ಯಾವುದೇ ಮಾಹಿತಿ ಇರಲಿಲ್ಲ ಎನ್ನುವುದು ಗೊತ್ತಾಗುತ್ತದೆ. ಇದು ಏಕೆ ಹೀಗಾಗಿದೆಯೆಂದರೆ ಹಿಂದಿನ ಕಾಲದ ಚರಿತ್ರೆ ಕುರಿತಾಗಿ ಇದ್ದ ಮಾಹಿತಿಯನ್ನು ಬಳಸಿಕೊಂಡು ಸಂಗಂ ಪುಱ ಹಾಡುಗಳನ್ನು ಇನ್ನು ಕಟ್ಟಲಾಗಿರಲಿಲ್ಲವೆಂದು ಹೇಳಬಹುದು. ಮದ್ರಾಸ್ ಮ್ಯೂಜಿಯಂ ವೇಳ್ವಿಕುಡಿ ಚಿನ್ನಮನೂಱು
ಆನೈಮಲೈ ಕಲ್ಬರಹದಲ್ಲಿ ಮಾರನ್ ಚಡೈಯನ್ ಹೆಸರಿದ್ದು ಪಲ್ಯಾಗಚಾಲೈ ಮುದುಕುಡುಮಿಯ ವಂಶಜನೆಂದು ಹೇಳಲಾಗಿದೆ. ಆದರೆ ತಾಮ್ರ ಪತ್ರಗಳಲ್ಲಿ ಹೀಗೆ ಹೇಳಿಲ್ಲ.
ನಕ್ಕೀರನಾರ್ (ನಕ್ಕೀರಾರ್) ಇರೈಯನಾರ ಅಗಪ್ಪೊರುಳ್ ಗ್ರಂಥಕ್ಕೆ ಬರೆದ ಭಾಷ್ಯದಲ್ಲಿ ಇರುವ ಒಂದು ಅಸ್ಪಷ್ಟ ಹೇಳಿಕೆಯ ಆಧಾರದ ಮೇಲೆ ಕೊನೆಯ (ಮೂರನೇ) ಸಂಗಂ ಕಾಲದಲ್ಲಿದ್ದ ಪಾಂಡ್ಯ ರಾಜ ಉಕ್ಕಿರ ಪೆರುವೞುದೆ ಅಗನಾನೂಱು ಹಾಡುಗಳ ಸಂಗ್ರಹಕ್ಕೆ ಚಾಲನೆ ನೀಡಿದನು. ಪೆರುವೞುದೆಯ ಇಂತಹ ಮಹತ್ತರ ಕೆಲಸವನ್ನು ಯಾವ ಸಂಗಂ ಪಾಣಾರನೂ ಹಾಡಲಿಲ್ಲ. ಹಾಡುಗಳಿಗೆ ಒದಗಿಸಿರುವ ಪದಿಗಂಗಳು ನಕ್ಕೀರಾರ್ ಅಗಂ ಮತ್ತು ಪುಱಂ ಎರಡು ಬಗೆಯ ಹಾಡುಗಳನ್ನು ಕಟ್ಟಬಲ್ಲ ನಿಪುಣನಾಗಿದ್ದನೆಂದು ಸೂಚಿಸುತ್ತವೆ. (ಕುಱು-105 , ಪುಱ-57). ಪುಱ-21 ಮತ್ತು 367 ಉಕ್ಕಿರ ಪೆರುವೞುದಿಯನ್ನು ಕುರಿತಾದ ಹಾಡುಗಳಿವೆ. ಈ ರಾಜ ಅಗ-26 ಮತ್ತು ನಱ್ಱಿಣೈ-98 ನೇ ಹಾಡುಗಳನ್ನು ಬರೆದಿರುವಂತೆಯೂ ತಿಳಿಸಲಾಗಿದೆ. ನಕ್ಕೀರನಾರ್ ಹಾಡುಗಳಿಗೆ ಒದಗಿಸಿದ ವಿವರಣೆ ಪರಂಪರೆಯ ಮೂಲಕ 10 ತಲೆಮಾರುಗಳಲ್ಲಿ ಹರಿದು ಬಂದಿತು. ಈ ಮಾಹಿತಿಯನ್ನು ಒಪ್ಪುವುದಾದರೆ ಅಗನಾನೂಱು ಹಾಡುಗಳಲ್ಲಿ ಕೆಲವು ಮೊದಲೇ ಕಟ್ಟಲ್ಪಟ್ಟಿದ್ದವು ಮತ್ತು ಇನ್ನೂ ಕೆಲವು ಕಟ್ಟುವಿಕೆಯಲ್ಲಿದ್ದವು ಹಾಗೂ ಬರಹ ರೂಪಕ್ಕೆ ಇಳಿಯುತ್ತಿದ್ದವು. ಎಂದರೆ ಹಾಡು ಕಟ್ಟುವುದು ಕೊರಳು ಪದ್ದತಿಯಲ್ಲಿರದೆ ಬರವಣಿಗೆಗೆ ಬದಲಾಗಿದ್ದಿತು.
ನಕ್ಕೀರನಾರ್ ಸಂಗಂ ಐತಿಹ್ಯ ಹುಟ್ಟು ಹಾಕುವ ಮೊದಲು ಸಂಗಂ ಸಾಹಿತ್ಯ ಇರುವ ಯಾವ ಕುರುಹುಗಳೂ ಸಿಕ್ಕವು. ಇದನ್ನು ಗಮನಿಸಿದ ಹಲವರು ನಕ್ಕೀರನಾರ್ ಕಾಲದಿಂದ ಹಿಂದಕ್ಕೆ ಸಾಗಿ ಸಂಗಂ ಕಾಲವನ್ನು ನಿರ್ಧರಿಸುವ ಯತ್ನವನ್ನು ಮಾಡಿದ್ದಾರೆ. ರಾಜನನ್ನು ಹೊಗಳುವ ಹಾಡುಗಳು ತಮಿೞಿನಲ್ಲಿ ಪಂದಿಕ್ಕೋವೈ ಎಂದು ಹೆಸರಾಗಿವೆ. ನಕ್ಕೀರನಾರ್ ಭಾಷ್ಯದಲ್ಲಿ ಇರುವ ಇಂತಹ ಹಾಡುಗಳಲ್ಲಿ ಪ್ರ,ಶ 8ನೇ ಶತಮಾನದ ಕೊನೆ ಅಥವಾ 9ನೇ ಶತಮಾನದ ಆರಂಭದಲ್ಲಿದ್ದ ವೇಳ್ವಿಕುಡಿ ತಾಮ್ರಪತ್ರಗಳಲ್ಲಿರುವ ಪಾಂಡ್ಯ ಅರಿಕೇಸರಿ ಅಸಮಸಮನ್ ಮಾರವರ್ಮನ್ ಕುರಿತು ಹಾಡಲಾಗಿದೆ ಎಂದು ಆರ್. ನಾಗಸ್ವಾಮಿ ಗುರುತಿಸಿದ್ದಾರೆ. ಈ ತಳಪಾಯದ ಮೇಲೆ ಡೇವಿಡ್ ಷುಲ್’ಮನ್ ‘ತಮಿೞ್ – ಎ ಬಯಾಗ್ರಫಿ ಕೃತಿಯಲ್ಲಿ ಸಂಗಂ ಕಾಲದ ತೀರ್ಮಾನ ಮಾಡಿದ್ದಾರೆ. ಅದರ ಆಗು-ಹೋಗುಗಳ ಮೇಲೆ ಒಂದು ಒಟ್ಟಾರೆ ನೋಟ ಕೆಳಗಿದೆ. ಇದು ಸಂಗಂ ಕಾಲ ತೀರ್ಮಾನಿಸುವ ಎಲ್ಲ ಪ್ರಯತ್ನಗಳಿಗೂ ಸಲ್ಲುತ್ತದೆ . ನಕ್ಕೀರಾರ್ ತನ್ನ ಗ್ರಂಥದಲ್ಲಿ ಅರಿಕೇಸರಿಯನ್ನು ಹೊಗಳಿದ್ದಾನೆ. ನಕ್ಕೀರನಾರ್ ಕಾಲದಿಂದ , ತಲೆಮಾರಿಗೆ 25-30 ವರ್ಷಗಳೆಂದು ಲೆಕ್ಕಿಸಿ , 10 ತಲೆಮಾರು ಹಿಂದಕ್ಕೆ ಸಾಗಿದರೆ ಉಕ್ಕಿರ ಪೆರುವೞುದಿ ಮತ್ತು ಸಂಗಂ ಹಾಡುಗಳ ಸಂಗ್ರಹದ ಕಾಲ 5-6 ನೇ ಶತಮಾನಕ್ಕೆ ಸಲ್ಲುತ್ತವೆ. ತಮಿೞು ಇತಿಹಾಸ ಮತ್ತು ಪರಂಪರೆ ಆ ಕಾಲದಲ್ಲಿ ತಮಿೞಗಂ ಪಲ್ಲವ ಮತ್ತು ಕಳಭ್ರರ ಆಳ್ವಿಕೆಯಲ್ಲಿ ಇದ್ದಿತೆಂದು ತಿಳಿಸುತ್ತದೆ. ಈ ಬಿಕ್ಕಟ್ಟಿನಿಂದ ಪಾರಾಗಲು ಇನ್ನೂ ಒಂದೆರಡು ಶತಮಾನ ಹಿಂದಕ್ಕೆ ತಳ್ಳಿ ಉಕ್ಕಿರ ಪೆರುವಳುದಿಯನ್ನು 4-5 ನೇ ಶತಮಾನಕ್ಕೆ ಕಳಿಸಲಾಗಿದೆ ಹಾಗೂ ವೇಳ್ವಿಕುಡಿ ತಾಮ್ರಪತ್ರದಲ್ಲಿರುವ ಪಾಣ್ಡಿಯನ್ ಪಲ್ಯಾಗಚಾಲೈ ಮುದುಕುಡುಮಿಪ್ಪೆರುವೞುದೆಯನ್ನು ಸಂಗಂ ಕಾಲದ ಕೊನೆಯ ರಾಜನೆಂದು ಗುರುತಿಸಲಾಗಿದೆ. ನಕ್ಕೀರನಾರ್ ಹೊಗಳಿರುವ ರಾಜ ಹಾಗೂ ಗ್ರಂಥ ಲಿಪಿಯಲ್ಲಿರುವ ವೇಳ್ವಿಕುಡಿ ತಾಮ್ರಪತ್ರದ ಸಾಲು-62 ರಲ್ಲಿ ಬಂದಿರುವ ಚೆನ್ದನ್ ಮಗ ಅರಿಕೇಸರಿ ಅಸಮಸಮ ಶ್ರೀ ಮಾರವರ್ಮನ್ ಒಬ್ಬರೇ ಎನ್ನುವುದಕ್ಕೆ ಗಟ್ಟಿ ನೆಲೆಯಿಲ್ಲ. ಏಕೆಂದರೆ ಅರಿಕೇಸರಿ, ನೆಡುಮಾರನ್ ಎನ್ನುವ ಹೆಸರುಗಳು ಈ ತಾಮ್ರಪತ್ರದ ಬೇರೆ ಕಡೆಯೂ ಕಂಡುಬರುತ್ತವೆ. ವೇಳ್ವಿಕುಡಿ ತಾಮ್ರಪತ್ರದಲ್ಲಿ ಅರಿಕೇಸರಿ ಅಸಮಸಮ ಮಾರವರ್ಮನ್ ಪಾಳಿ , ನೆಲ್ವೇಲಿ , ಚೆನ್ನಿಲಂ ಕದನಗಳನ್ನು ಗೆದ್ದನೆಂದು ತಿಳಿಸಲಾಗಿದೆ. ರಾಜಸಿಂಹ-2 ಹಾಕಿಸಿರುವ ಚಿನ್ನಮನೂಱು ತಾಮ್ರಪತ್ರಗಳಲ್ಲಿ ಪಾಳಿಯನ್ನು ಗೆದ್ದಾತ ಪರಾಂಕುಶನ ಪೂರ್ವಜರಲ್ಲಿ ಒಬ್ಬ. ಆತನನ್ನು ಹೆಸರಿಸಿಲ್ಲ. ಚೆನ್ನಿಲಮ್ ಕಾಳಗವನ್ನು ಪರಾಂಕುಶ , ನೆಲ್ವೇಲಿ ಕದನವನ್ನು ಪರಾಂತಕಕನ್ ಚಡೈಯನ್ ಗೆದ್ದರೆಂದು ಹೇಳಲಾಗಿದೆ. ಇದರಲ್ಲಿರುವ ವಂಶಾವಳಿಯಲ್ಲಿ ಬರುವ ಪರಾಂಕುಶ ವೇಳ್ವಿಕುಡಿ ವಂಶಾವಳಿಗೆ ಹೊಂದಾಣಿಕೆಯಾಗುವುದಿಲ್ಲ. ಎರುಕ್ಕಞ್ಗುಡಿ (ಶ್ರೀವಲ್ಲಭ- ಸಾ.ಶ 829) ಶ್ರೀವರಮಂಗಲಮ್ (ಜಟಿಲವರ್ಮ – ಪ್ರ,ಶ 785) , ಪೆರುಂಪುಳ್ಳಿ (ವರಗುಣ-2-ಸಾ.ಶ. 870), ದಳವಾಯಿಪುಱಮ್ (ಪರಾಂತಕ –ವೀರನಾರಾಯಣ, ಸಾ.ಶ-910) ತಾಮ್ರಪತ್ರ ಹಾಗೂ ಕಲ್ಬರಹಗಳನ್ನು ಗಮನಿಸಿದರೆ ನಕ್ಕೀರನಾರ್ ಹೊಗಳಿರುವ ಅರಿಕೇಸರಿ ಯಾರು ಎನ್ನುವುದು ಬಗೆಹರಿಯದೇ ಉಳಿಯುತ್ತದೆ. ಆದ್ದರಿಂದ ಸಂಗಂ ಕಾಲವನ್ನು ಇವುಗಳನ್ನು ಬಳಸಿ ಹುಡುಕಲು ಹೋದರೆ ಊಹೆಗಳೇ ಎದ್ದು ಕಾಣುತ್ತವೆ. ಸಂಗಂ ಹಾಡುಗಳಲ್ಲಿರುವ ರಾಜರು ಹಾಗೂ ನೀಡಿದ ತಾಮ್ರಪತ್ರದ ಆಧಾರಗಳಲ್ಲಿ ಇರುವವರು ಒಂದೇ ಎನ್ನುವ ಪ್ರಶ್ನೆಗೆ ಎಚ್ಚರ ವಹಿಸುತ್ತ ಡೇವಿಡ್ ಷುಲ್’ಮನ್ ಕಂಚಿನ ಯುಗದಲ್ಲಿದ್ದ ಹೋಮರನ ಹಾಡುಗಳಲ್ಲಿ ಕಬ್ಬಿಣ ಯುಗಕ್ಕೆ ಸೇರಿದ ಆಯುಧಗಳು ಕಾಣುವುದನ್ನು ಹೇಳುತ್ತಾರೆ. (146) [1] ಇನ್ನೂ ಮುಂದುವರೆದು 5ನೇ ಶತಮಾನದ ವೇಳೆಗೆ ಸಂಗ್ರಹ ರೂಪ ತಾಳಿದ್ದ ಸಂಗಂ ಹಾಡುಗಳನ್ನು ಸಂಸ್ಕೃತ ಬಲ್ಲ , ಪಂಡಿತ ಬ್ರಾಹ್ಮಣರು 8-9ನೇ ಶತಮಾನದ ಪಾಂಡ್ಯರ ಆಸ್ಥಾನದ ಕಾಲದವರೆಗೆ ಮುಂದುವರೆಸಿಕೊಂಡು ಬಂದರೆನ್ನುವ ತೀರ್ಮಾನಕ್ಕೆ ಬರುತ್ತಾರೆ. (147) [2] ಇಂತಹ ಕಾಲ ನಿರ್ಧಾರದ ಹಿಂದೆ ಸಂಗಂ ಕಟ್ಟು ಕತೆ, ಅದು ಹೊಸೆದಿರುವ ಪರಂಪರೆ ಹೊರತಾಗಿ ಬೇರೆ ಯಾವುದೇ ಹೊರ ಪುರಾವೆ ಇಲ್ಲ. 8ನೇ ಶತಮಾನದಲ್ಲಿ ಪಾಂಡ್ಯರು ತಮಿೞಗಂನಲ್ಲಿ ತಲೆ ಎತ್ತುವುದಕ್ಕೆ ಮೊದಲು ತಮಿೞಿನಲ್ಲಿ ಸಾಹಿತ್ಯ ಚಟುವಟಿಕೆ ನಡೆದಿದ್ದಿತು ಎಂದು ತೋರಿಸಲು ಯಾವುದೇ ಹೊರಗಿನ ಪುರಾವೆ ಇಲ್ಲದಿರುವುದನ್ನು ಹೆಚ್ಚು ಖಚಿತವಾಗುತ್ತಿರುವ ಬಿಕ್ಕಟ್ಟಿನಿಂದ ಹೊರ ಬರಲು ಪಲ್ಲವರಲ್ಲಿ ಅದನ್ನು ಹೇಗಾದರೂ ಹುಡುಕುವ ಯತ್ನಗಳು ಸಾಗಿವೆ. ಪಲ್ಲವರು ಮೊದಲಿಗೆ ಪ್ರಾಕೃತ ಹಾಗೂ ಮುಂದಿನ ದಿನಗಳಲ್ಲಿ ಸಂಸ್ಕೃತವನ್ನು ಬಳಸಿದರಾದರೂ ಅದರಲ್ಲಿ ‘ಬಲ’ವಾದ ತಮಿೞು ಕುರುಹುಗಳಿವೆ, ಅವರ ಬಿರುದುಗಳು ತಮಿೞಿನಲ್ಲಿವೆ ಎನ್ನುವ ಹೊಸ ವಾದಗಳು ತಲೆ ಎತ್ತಲಾರಂಭಿಸಿವೆ. . ಇದಕ್ಕೆ ಚೆಂದಲೈ ಕಲ್ಬರಹವನ್ನು ಎತ್ತಿ ತೋರಿಸಲಾಗುವುದು. ಈ ಕಲ್ಬರಹದ ಕಾಲ ಅಸ್ಪಷ್ಟವಾಗಿದ್ದು ಲಿಪಿ ಲಕ್ಷಣದ ಮೇಲೆ ವೇಳ್ವಿಕುಡಿ ತಾಮ್ರಪತ್ರದ ಸಮಕಾಲೀನ ಎನ್ನಬಹುದು. ಇದರಲ್ಲಿ ಪಲ್ಲವ ವಂಶದವನಲ್ಲದ ಮುತ್ತುರೈಯರ ಕುಟುಂಬಕ್ಕೆ ಸೇರಿದ ಕುವಾವನ್ ಮಾರನ್ ಅಥವಾ ಪೆರುಂಪಿಡುಗು ಮುತ್ತರೈಯನ್’ನನ್ನು ಹೊಗಳಲಾಗಿದೆ. ಕಾಞ್ಚಿಪುಱದ ವೈಕುಂಠ ಪೆರುಮಾಳ್ ಗುಡಿಯಲ್ಲಿರುವ ಕಲ್ಬರಹ ಹಾಗೂ ಜೊತೆಗೆ ಕಡೆಯಲಾದ ಚಿತ್ರಗಳಲ್ಲಿ ನಂದಿನ್-2 ಪಟ್ಟಾಭಿಷೇಕದ ವಿವರಗಳಿವೆ. ಈ ಕಲ್ಬರಹ ಸಂಸ್ಕೃತಕ್ಕೆ ಗ್ರಂಥ ಲಿಪಿ, ತಮಿೞಿಗೆ ತಮಿೞು ಲಿಪಿಯನ್ನು ಬಳಸಿದ್ದು ಗದ್ಯದಲ್ಲಿದ್ದು ನಂತರ ಕಾಲಕ್ಕೆ ಸೇರಿದೆ. (148) [3] (ಆಕರ ಬೇಕು) ತಳವಾನೂರು ಗುಹಾ ದೇವಾಲಯದ ಮುಂಭಾಗದ ಕಲ್ಲಿನ ಮೇಲೆ ಕೆತ್ತಿರುವ ಸಂಸ್ಕೃತದ ಅನುಷ್ಟುಭ್ ಛಂದಸ್ಸಿನ ಭಾಗದಲ್ಲಿ ಶತ್ರುಮಲ್ಲ ಅಥವಾ ಮಹೇಂದ್ರ-1 ಈ ದೇವಾಲಯವನ್ನು ಕಟ್ಟಿಸಿದನೆಂದು ತಿಳಿಸಲಾಗಿದೆ. ಗುಹೆಯ ಹಿಂಭಾಗದ ಕಂಬದ ಮೇಲೆ ತಮಿೞು ಕಲ್ಬರಹವಿದ್ದು , ಸಂಸ್ಕೃತದ ಅನುವಾದದಂತಿದೆ. ಇದರ ಕಾಲ 7ನೇ ಶತಮಾನ ಅಥವಾ 9ನೇ ಶತಮಾನವೂ ಆಗಿರಬಹುದೆನ್ನುವ ಅಭಿಪ್ರಾಯಗಳಿವೆ. ತಿರುಚ್ಚಿರಾಪಳ್ಳಿಯ ಗುಹೆಗಳಲ್ಲಿ 60ಕ್ಕೂ ಹೆಚ್ಚು ಕಲ್ಬರಹಗಳಿವೆ. ಅದರಲ್ಲಿ ಮಹೇಂದ್ರ-1 (ಸಾ.ಶ 600-630) ಕಾಲಕ್ಕೆ ಸೇರಿರುವುದರಲ್ಲಿ ತಮಿೞು, ಸಂಸ್ಕೃತ, ತೆಲುಗು ಭಾಷೆಯಲ್ಲಿ ಬಿರುದುಗಳಿವೆ. ತಮಿಳನ್ನು ,ತಮಿೞು ಮತ್ತು ತೆಲುಗು ಲಿಪಿಗಳೆರಡರಲ್ಲಿಯೂ ಬರೆಯಲಾಗಿದೆ. ಕೆಲವು ತಮಿೞು ಅಕ್ಷರಗಳು ಗ್ರಂಥಲಿಪಿಯನ್ನು ಹೋಲುತ್ತವೆ. (149) [4] ತೆಲುಗಿನಲ್ಲಿ ಬಿರುದುಗಳು ಕಾಣಿಸಿಕೊಂಡ ಈ ಕಾಲದ ನಂತರ ಮುಂದಿನ 500 ವರ್ಷಗಳವರೆಗೆ ತೆಲುಗಿನಲ್ಲಿ ಸಾಹಿತ್ಯ ರಚನೆ ಕಂಡು ಬರುವುದಿಲ್ಲ. ಆದ್ದರಿಂದ ತಮಿೞು ಬಿರುದುಗಳು ಕಾಣಿಸಿಕೊಳ್ಳುವುದು ತಮಿೞು ಸಾಹಿತ್ಯ ಇದ್ದುದಕ್ಕೆ ಪುರಾವೆಯಲ್ಲ. ಪಲ್ಲವರು ಪಾಣಾರರ ಹಾಡುಗಳಿಗಾಗಲಿ , ತಮಿಳನ್ನು ಎತ್ತಿ ಸಾಹಿತ್ಯಕ ಭಾಷೆಯನ್ನಾಗಿಸಲಾಗಲಿ ಯತ್ನಿಸಿರುವುದಕ್ಕೆ ಎಲ್ಲಿಯೂ ಆಧಾರಗಳಿಲ್ಲ. ಇಂತಹ ಎಲ್ಲ ಕುರುಹುಗಳು ಪಾಂಡ್ಯರ ವೇಳ್ವಿಕುಡಿ ತಾಮ್ರಪತ್ರಗಳಲ್ಲಿ ಕಾಣುತ್ತವೆ. ಸಂಗಂ ಸಾಹಿತ್ಯದಲ್ಲಿ ಮೂರು ಸಾಮ್ರಾಜ್ಯಗಳ ಚಿತ್ರಣವಿದೆ. ಇವುಗಳನ್ನು ಆಳುತ್ತಿದ್ದವರನ್ನು ಮೂವರ್, ಮೂನ್ಱು , ಮೂವೇಂದರ್ ಎಂದು ಗುರುತಿಸಲಾಗಿದೆ. ಕೋಳಿ ಅಥವಾ ಕೂಡಲ್’, ಉರುಂದೈ , ಕರುವೂರು ಅಥವಾ ವಂಚಿ ಪಾಂಡ್ಯ, ಚೋೞ, ಚೇರರ ರಾಜಧಾನಿಗಳಾಗಿದ್ದವು. ಅಗನಾನೂಱು-93 ರಲ್ಲಿ ಈ ಊರುಗಳನ್ನು ಉಪಮಾನವಾಗಿ ಬಳಸಿ ಹಾಡಲಾಗಿದೆ. ಮೂವೇಂದರರು ಒಬ್ಬರಿಗೊಬ್ಬರು ಮಾತ್ರವಲ್ಲ ಬೆಟ್ಟ , ಗುಡ್ಡಗಳಲ್ಲಿ ಆಳುತ್ತಿದ್ದ ಸಣ್ಣ ಪುಟ್ಟ ಪಾಳೇಗಾರರೊಂದಿಗೆ ಸದಾ ಸೆಣಸಾಟದಲ್ಲಿದ್ದರು. ಪಾಣ್ಡಿಯನ್ ಕೂಡಕಾರತ್ತುದ್ ತುಞ್ಜಿಯ ಮಾಱನ್ ವೞುದೆ ತಣ್ಣನೆಯ ತಮಿೞುನಾಡು ಎಲ್ಲರಿಗೂ ಸೇರಿದ್ದು ಎಂದರೆ ಕದನಕ್ಕೆ ಅಣಿಯಾಗುತ್ತಾನೆ ಎನ್ನುವ ಹೇಳಿಕೆ ಒಂದು ಕಡೆ ಇದೆ. (ತಣ್ ತಮಿೞ್ ಪೋದು ಎನಪ್ ಪೋಱಾ ಅನ್ , ಪುಱ-51). ಇದಕ್ಕಿಂತ ಬೇರೆಯಾಗಿ ಪುಱ-357 ರಲ್ಲಿ’ ಕುಂದಗಳು ಮುಕ್ಕರಿದ ,ಮಲೆ ಹೆಣೆದು ಇಟ್ಟ ಮಣ್ ಹಂಚಿ ಕೂಡಿದ ಮೂವರ (ಮೂವೇಂದರರ) ಲೋಕ’ ಎನ್ನುವ ಭಾವನೆ ವ್ಯಕ್ತವಾಗಿದೆ. (ಕುನ್ಱುದಲೈ ಮಣನ್ದ ಮಲೈ ಪಿಣಿಂದ ಯಾತ್ತ ಮಣ್ ಪೊದುಮೈ ಕುಟ್ಟಿಯ ಮೂವರ್ ಉಲಗಮುಮ್ –ಪುಱ-357). ಇದರ ಮುಂದುವರಿಕೆಯಂತೆ ಯಙ್ಞದ ಮೂರು ಅಗ್ನಿಗಳಂತಿರುವ ಮೂವೇಂದರ ಒಡೆತನಕ್ಕೆ ತಮಿೞಗಂ ಸೇರಿದೆ ಎನ್ನುವ ಅಭಿಪ್ರಾಯ ಪುಱ-367 ರಲ್ಲಿದೆ.
ವೇಂಗಡ ಬೆಟ್ಟಗಳಲ್ಲಿ ಆನೆಗಳನ್ನು ಪಳಗಿಸುತ್ತಿದ್ದ , ತಮಿಳರಲ್ಲದ ವಡುಗ ಆರ್ಯರಿಂದ ಮೂವೇಂದರರು ಆನೆಗಳನ್ನು ಪಡೆಯುತ್ತಿದ್ದುದುದನ್ನು ಅಗ-27, 276 ಸೂಚಿಸುತ್ತವೆ. (ವೇಞ್ಗಡಮ್ ಪಯನ್ದ ವೆಣ್ ಕೋಟ್ಟು ಯಾನೈ , ಅಗ-27, ಅರಿಯರ್ ಪಿಡಿ ಪಯಿನ್ಱು ತರೊಉಮ್ ಪೆರುಞ್ಗಳಿರು ಪೋಲ್ , ಅಗ-276) ಈ ಕಾಲದಲ್ಲಿ ಮೂವೇಂದರರ ಪ್ರದೇಶಗಳಿಗೆ ತಾಗಿದಂತಿರುವ ಕೊಂಗುನಾಡಿನಲ್ಲಿ ಆನೆಯನ್ನು ಲಾಂಛನವಾಗಿ ಹೊಂದಿದ್ದ ಗಂಗರು ನೆಲೆಯೂರಿದ್ದು ಸಾ.ಶ 350 ರ ವೇಳೆಗೆ ರಾಜ್ಯ ಸ್ಥಾಪನೆ ಮಾಡಿದ್ದರು. ಸಾ.ಶ 4ನೇ ಶತಮಾನದಲ್ಲಿ ಪಲ್ಲವರ ಆಳ್ವಿಕೆಯ ಆರಂಭ ತಮಿೞಗಂನಲ್ಲಿ ಕಾಣಿಸಿಕೊಳ್ಳುತ್ತದೆ. ಸಂಗಂ ಸಾಹಿತ್ಯದಲ್ಲಿ ಚೇರರೊಂದಿಗೆ ಕಡಲಿನ ಅಧಿಪತ್ಯಕ್ಕೆ ಸೆಣಸುತ್ತಿದ್ದ ಕದಂಬರು ಪಲ್ಲವರೊಂದಿಗೂ ಸೆಣಸಾಟದಲ್ಲಿರುವುದು ಇತಿಹಾಸದ ಪುಟಗಳಿಂದ ನಮಗೆ ಗೊತ್ತಾಗುತ್ತದೆ. ಯಾವ ಹಂತದಲ್ಲಿಯೂ , ಯಾವ ರೀತಿಯಲ್ಲಿಯೂ ಮೂವೇಂದರರು ಮತ್ತು ಪಲ್ಲವರ ನಡುವಿನ ಸಂಪರ್ಕ , ತಿಕ್ಕಾಟಗಳನ್ನು ಮತ್ತು ಪಲ್ಲವರ ಪ್ರಾಬಲ್ಯದ ಸಹಜ ಬೆಳವಣಿಗೆಯ ಕುರುಹುಗಳನ್ನು ಸಂಗಂ ಹಾಡುಗಳು ನೀಡುವುದಿಲ್ಲ. ಎಣ್ಣೆ ಕಮ್ಮಿಯಾಗುತ್ತ , ಉರಿ ಇಳಿಯುತ್ತ ದೀಪ ಆರುವಂತೆ ರಾಜವಂಶಗಳು ಕಣ್ಮರೆಯಾಗುವುದು ಇತಿಹಾಸದಲ್ಲಿ ಸಹಜ. ಇದಕ್ಕಿಂತ ಬೇರೆಯಾಗಿ ಗಾಳಿ ಬೀಸಿದಾಗ ದೀಪ ಪಕ್ಕನೆ ಆರುವಂತೆ ಮರೆಯಾದ ಮೂವೇಂದರರು ಮತ್ತೆ ಕಾಣಿಸಿಕೊಳ್ಳುವುದು ಸಾ.ಶ 7-8 ನೇ ಶತಮಾನದಲ್ಲಿಯೇ . ಈ ನಡುವಿನ ಅಂದಾಜು 400 ವರ್ಷಗಳ ಅವಧಿಯಲ್ಲಿ ತಮಿೞಗಂ ಕಳಭ್ರರ ವಶದಲ್ಲಿದ್ದು ತಮಿೞು ಭಾಷೆ ಮತ್ತು ಸಂಸ್ಕೃತಿಯನ್ನು ಹತ್ತಿಕ್ಕಲಾಯಿತು ಎಂದು ತಮಿೞು ಚರಿತ್ರೆ ಹೇಳುತ್ತದೆ. ಅದೇನೇ ಆಗಿರಲಿ ಸಂಗಂ ಪಾಣಾರರ ಹಾಡುಗಳಲ್ಲಿ ಇವು ಕಂಡುಬರಬೇಕಾಗಿದ್ದಿತು. ಹಾಗೆ ಕಾಣಬರದಿರುವುದೇ ಸಂಗಂ ಸಾಹಿತ್ಯ ಸಹಜ ಸೃಷ್ಟಿ ಅಲ್ಲವೇನೋ ಎನ್ನುವ ಗುಮಾನಿಗಳನ್ನು ಹುಟ್ಟುಹಾಕುತ್ತದೆ.
ಕಳಭ್ರರ ಆಡಳಿತದ ಪ್ರಾರಂಭ , ಕೊನೆ ಮತ್ತು ಕಾಲಾವಧಿಗಳು ಕುರಿತಾಗಿ ಏನೂ ಗೊತ್ತಿಲ್ಲ ಎನ್ನುವಷ್ಟು ಅಲ್ಪ ಚಾರಿತ್ರಿಕ ಮಾಹಿತಿ ನಮ್ಮ ಮುಂದಿದೆ. ಮೂವೇಂದರರನ್ನು ಹಣಿದ ಕಳಭ್ರರು ಕದಂಬ, ಗಂಗರನ್ನು ಏಕೆ ಮಣಿಸಲಿಲ್ಲ ಎನ್ನುವುದು ಹೆಚ್ಚಿನ ಸಂಶೋಧನೆಯನ್ನು ಬಯಸುತ್ತದೆ. ಪರಮೇಶ್ವರವರ್ಮನ್-1 ಹೊರಡಿಸಿದ ಕುರ್ರಮ್, ನಂದಿವರ್ಮ-2 ಹೊರಡಿಸಿದ ಕಾಸಕುಡಿ ಮತ್ತು ಪಟ್ಟತ್ತಮಂಗಲಮ್ ತಾಮ್ರಪತ್ರಗಳಲ್ಲಿ ಕಳಭ್ರರ ಉಲ್ಲೇಖವಿದೆ. ಚಾಲುಕ್ಯ ವಿನಯಾದಿತ್ಯನ ಜೇಜೂರಿ ತಾಮ್ರಪತ್ರಗಳಲ್ಲಿ ‘ಪಲ್ಲವ ಕಳಭ್ರ ಕೇರಳ ಹೈಹಯ ವಿಳ ಮಾಳವ ಚೋೞ , ಪಾಂಡ್ಯಾದ್ಯ ಯೇನ .....’ ಎನ್ನುವಲ್ಲಿ ಕಳಭ್ರರ ಅಸ್ತಿತ್ವ ತಿಳಿಯುತ್ತದೆ. 9ನೇ ಶತಮಾನದಲ್ಲಿ ಏಳಿಗೆ ಕಂಡ ಚೋೞರು ಕಳಭ್ರರ ಬಗ್ಗೆ ಹೇಳುವುದಿಲ್ಲ. ಅಚ್ಚುತವಿಕ್ಕಂತೆ ಕಲಂಬಕುಲನಂದನ (ಕಲಬ್ಬಕುಲನಂದನ) ಆಳುತಿದ್ದಾಗ ಬುದ್ಧದತ್ತ ಒಂದು ಬೌದ್ಧ ವಿನಯವನ್ನು ಬರೆದಿರುವುದು ಗೊತ್ತಾಗುತ್ತದೆ. ಬುದ್ಧದತ್ತನ ಕಾಲವನ್ನು 6 ನೆಶತಮಾನಕ್ಕೆ ಮೊದಲೆಂದು ನಿರ್ಧರಿಸಲಾಗಿದೆ. ಕಳಭ್ರರ ಕಾಲದ ಆಧಾರದ ಮೇಲೆ ಈ ಕಾಲಕ್ಕೆ ಬರಲಾಗಿದೆ. ಬುದ್ಧದತ್ತ ಚೋೞ ನಾಡಿನಲ್ಲಿಯೂ ಕ್ರಿಯಾಶೀಲನಾಗಿದ್ದನು. ಕಳಭ್ರರು ಯಾರೇ ಇರಲಿ 8ನೇ ಶತಮಾನದ ಪಾಂಡ್ಯರು ಹಿಂದಿದ್ದ ಪಾಂಡ್ಯರ ನೇರ ಮುಂದುವರಿಕೆಯಲ್ಲ ಎನ್ನುವುದರಲ್ಲಿ ಸಂಶಯವಿಲ್ಲ.
ಪಲ್ಲವರ ಆಸ್ಥಾನ ಭಾಷೆ ಸಂಸ್ಕೃತವಾಗಿದ್ದಿತು. ಮೂವೇಂದರರ ಕಾಲದಲ್ಲೇ ಉನ್ನತ ಮಟ್ಟ ತಲುಪಿದ್ದ ತಮಿಳನ್ನು ಪಲ್ಲವರು ಅಷ್ಟು ಸುಲಭವಾಗಿ ಹಿಂದಕ್ಕೆ ತಳ್ಳುವುದು ಹೇಗೆ ಸಾದ್ಯವಾಯಿತು ? ಪಲ್ಲವರ ಆರಂಭಿಕ ಕಲ್ಬರಹಗಳು ಪ್ರಾಕೃತದಲ್ಲಿದ್ದು ಶಾತವಾಹನರ ಅನುಕರಣೆಯಾಗಿವೆ. ನಂತರ ಕಾಲದಲ್ಲಿ ಪ್ರಾಕೃತದ ಸ್ಥಾನವನ್ನು ಸಂಸ್ಕೃತ ಆಕ್ರಮಿಸಿತು. 7ನೇ ಶತಮಾನದಿಂದ ಪಲ್ಲವರು ತಮಿಳನ್ನು ಬಳಸತೊಡಗಿದರು. ಪ್ರಶಸ್ತಿಗಳಲ್ಲಿ ಪೌರಾಣಿಕ ವಿವರಗಳು ಸಂಸ್ಕೃತದಲ್ಲಿದ್ದರೆ ವ್ಯವಹಾರಕ್ಕೆ ಸಂಬಂಧ ಪಟ್ಟ ಭಾಗ ತಮಿೞಿನಲ್ಲಿ ಇರುತ್ತಿದ್ದಿತು. ಈ ಕಾಲದಲ್ಲಿ ತಮಿೞಿನ ಬಳಕೆ ಕಲ್ಬರಹ ಹಾಗೂ ವ್ಯಾವಹಾರಿಕ ಬಳಕೆಗೆ ಸೀಮಿತವಾಗಿದ್ದು ಸಾಹಿತ್ಯ ರಚನೆಗೆ ಬಳಸಿದುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಪಲ್ಲವರು ತಮಿೞು ಸಂಗಂ ಸಾಹಿತ್ಯದ ಪ್ರೇರಕರಲ್ಲ. ತಮಿಳನ್ನು ಸಾಹಿತ್ಯದ ಭಾಷೆಯಾಗಿ ಬಳಸಿರುವುದಕ್ಕೆ ಸಾ.ಶ 8ನೇ ಶತಮಾನಕ್ಕೆ ಸೇರಿದ ಪಾಂಡ್ಯರ ತಾಮ್ರಪತ್ರಗಳು ಆಧಾರವಾಗಿವೆ. ಭಾಷಿಕ ಗಡಿಯ ಆಧಾರದ ಮೇಲೆ ತಮಿೞಗಂ ಮೂವೇಂದರಿಗೆ ಸೇರಿದ ತ್ರೈರಾಜ್ಯ ಪ್ರದೇಶವೆಂದು 8ನೇ ಶತಮಾನದ ವೇಳೆಗೆ ಪರಿಗಣಿಸಲ್ಪಟ್ಟಿದ್ದಿತು. ಹತ್ತನೇ ಶತಮಾನದ ವೇಳೆಗೆ ಮುಮ್ಮುಡಿಚೋೞ , ಮೂವೇಂದವೇಲನ್ ಎನ್ನುವ ಬಿರುದುಗಳು ಕಾಣಿಸಿಕೊಳ್ಳುತ್ತವೆ. ಜೆಜೂರಿ ತಾಮ್ರಪತ್ರಗಳಲ್ಲಿ ಚಾಲುಕ್ಯ ವಿಜಯಾದಿತ್ಯ ಕಂಚಿಯ ರಾಜನನ್ನು ತ್ರೈರಾಜ್ಯದಲ್ಲಿ ಸೋಲಿಸಿದನೆಂದು ತಿಳಿಸಲಾಗಿದೆ. ತೆಲುಗು ಚೋಡ ಪುಣ್ಯಕುಮಾರನ ದೊಮ್ಮರ-ನಂದ್ಯಾಲ ತಾಮ್ರಪತ್ರಗಳಲ್ಲಿ ಕರಿಕಾಲ ಚೋೞ ಕಾವಿರಿಯನ್ನು ದಾಟಿ ತಾನೊಬ್ಬನೇ ತ್ರೈರಾಜ್ಯಸ್ಥಿತಿಯನ್ನು ಸಂಸ್ಥಾಪಿಸಿದನೆಂದು ತಿಳಿಸಲಾಗಿದೆ. (150) [5] ಇಮ್ಮಡಿ ಪುಲಿಕೇಶಿಯ ಐಹೊಳೆ ಕಲ್ಬರಹದಲ್ಲಿ ಚೋೞರನ್ನು ಮಣಿಸಲು ಕಾವೇರಿಯನ್ನು ದಾಟಬೇಕಾಯಿತೆಂದು , ಪುಲಿಕೇಶಿಯೆಂಬ ಸೂರ್ಯನೆದುರು ಪಲ್ಲವ ಸೇನೆಯೆಂಬ ಮಂಜು ಕರಗಿ ಕಾಞ್ಚಿ ಪಟ್ಟಣದೊಳಗೆ ಅಡಗಿ , ಚೋೞ, ಕೇರಳ, ಪಾಂಡ್ಯರಿಗೆ ಸಮೃದ್ಧಿಯನ್ನು ತಂದಿತು ಎಂದು ಹೇಳಲಾಗಿದೆ. (151) [6] ಕುತೂಹಲದ ವಿಚಾರವೆಂದರೆ ಗಂಗರು , ಚಾಲುಕ್ಯರು, ಕದಂಬರು , ಪಲ್ಲವರು ತಮ್ಮ ಕುಱುಹಗಳನ್ನು ಬಿಟ್ಟು ಹೋಗಿದ್ದರೆ , ಅವರಿಗಿಂತ ಮೊದಲಿದ್ದ ಸಂಗಂ ಸಾಹಿತ್ಯ ಪೋಷಿಸಿದ ಮೂವೇಂದದರು 8ನೇ ಶತಮಾನದವರರೆಗೆ ತಮ್ಮ ಬಗ್ಗೆ ಯಾವುದೇ ದಾಖಲೆಯನ್ನು ಮಾಡದಿರುವುದು. ರಾಜೇಂದ್ರ ಚೋೞ ತನ್ನ ಆರನೇ ವರ್ಷದ ಆಳ್ವಿಕೆಯಲ್ಲಿ ಹೊರಡಿಸಿದ ತಿರುವಲಙ್ಗಾಡು ತಾಮ್ರಪತ್ರದ ಸಂಸ್ಕೃತ ಪ್ರಶಸ್ತಿಯಲ್ಲಿ 221 ಸಾಲುಗಳು ಮೊದಲಿನ ಮೂರು ಯುಗಗಳ ಮೂಲಕ ಸಾಗಿಬಂದ ಚೋೞವಂಶದ ಪೌರಾಣಿಕ ವಂಶಾವಳಿಯನ್ನು ಕೊಡುತ್ತವೆ. ಇದರ ನಂತರ ಕಲಿಯುಗದ ವಂಶಾವಳಿಯಲ್ಲಿ ಪೆರುನಱ್ಕಿಳ್ಳಿ ಮೊದಲ ದೊರೆಯಾಗಿ ಕಾಣಿಸಿಕೊಳ್ಳುತ್ತಾನೆ. (ದೊಡ್ದ ಒಳ್ಳೆಯ ಕಿಳ್ಳಿ – ಇದು ನಿಜವಾಗಿಯೂ ಹೆಸರಲ್ಲ. ನಳ್ಳಿ, ಕಿಳ್ಳಿ ಚೋೞರ ಮನೆತನದ ಹೆಸರುಗಳು). ನಂತರ ಕರಿಕಾಲ ಹಾಗೂ ಕೋಚೆಞ್ಗಣ್ಣನ್ ಹೆಸರಿವೆ. ಈ ಮೂವರ ನಡುವೆ ಇರುವ ಎರಡು ದೀರ್ಘಾವಧಿಗಳಲ್ಲಿ ಆಳಿದ ಚೋೞರ ಹೆಸರುಗಳಿಲ್ಲ .ಅದರಂತೆಯೇ ಪಾಂಡ್ಯರ ವೇಳ್ವಿಕುಡಿ ತಾಮ್ರಪತ್ರಗಳಲ್ಲಿ ಪಲಯಾಗ ಮುದುಕುಡುಮಿ ಪೆರುವಳುದಿಯ ಹೆಸರಿದೆ. ಚಿನ್ನಮನೂಱು ದೊಡ್ದ ತಾಮ್ರಪತ್ರಗಳಲ್ಲಿ ಪೌರಾಣಿಕ ಮೂಲ ಹೇಳಿದ ನಂತರ ಅರಿಕೇಸರಿ , ಆತನ ಮಗ ಜಟಿಲ ಹಾಗೂ ನಂತರದ ತಲೆಮಾರಿನ ಹೆಸರುಗಳಿವೆ. ಪೌರಾಣಿಕ ಭಾಗದಲ್ಲಿ ಪಾಂಡ್ಯ ವಂಶದ ಹೆಗ್ಗಳಿಕೆಯನ್ನು ತಿಳಿಸುತ್ತ ಚಿತ್ರಮುಯರಿ ಮತ್ತು ತಲೈಯಾಲಙ್ಗಾನಮ್ ಕದನಗಳಲ್ಲಿ ತಮ್ಮ ಪೂರ್ವಜ ಇಬ್ಬರು ರಾಜರ (ಚೋೞ, ಚೇರ) ರುಂಡ ಚೆಂಡಾಡಿದನೆಂದು ತಿಳಿಸಲಾಗಿದೆಯಾದರೂ ಆತನ ಹೆಸರಿಲ್ಲ. ಸಂಗಂ ಹಾಡುಗಳು ನೆಡುಞ್ಚೆೞಿಯನ್ ತಲೈಯಾಲಙ್ಗಾನ ಕದನ ಗೆದ್ದ ಬಗ್ಗೆ ಹೇಳುತ್ತವೆಯೇ ಹೊರತು ಎರಡು ಕದನಗಳನ್ನಲ್ಲ. ಹಾಗೂ ಹಗೆಗಳನ್ನು ಕೊಂದ ಮಾಹಿತಿ ಅದರಲ್ಲಿಲ್ಲ. ಸಂಗಂ ಹಾಡುಗಳಲ್ಲಿ ಮೂವೇಂದರರ ವಂಶಕ್ಕೆ ಸೇರಿದ 40 ಕ್ಕೂ ಹೆಚ್ಚು ರಾಜರು ಕಾಣಿಸಿಕೊಳ್ಳುತ್ತಾರೆ. ಅವರಲ್ಲಿ ಕೆಲವರು ಗೆದ್ದ ಕಾಳಗಗಳನ್ನು ಕುರಿತಾಗಿ ತಿಳಿಸಲಾಗಿದೆ. ಹೀಗಿದ್ದರೂ ಅವರು ಪಟ್ಟಿಯಿಂದ ಹೊರಗುಳಿದು ಕರಿಕಾಲ ಮತ್ತು ಮುದುಕುಡುಮಿ ಮಾತ್ರ ತಾಮ್ರಪತ್ರಗಳಲ್ಲಿ ಜಾಗ ಪಡೆದಿದ್ದಾರೆ. ಪ್ರ,ಶ 8ನೇ ಶತಮಾನದಿಂದ ಪಾಂಡ್ಯರು ಮೇಲೇಳತೊಡಗುವುದು ಎದ್ದು ಕಾಣುತ್ತದೆ. ಇವರ ಹಿಂದೆಯೇ ಚೇರ, ಚೋೞರು ಬಲಿಷ್ಟವಾಗತೊಡಗಿದರು. 8ನೇ ಶತಮಾನದ ನಂತರ ಕಾಣಿಸಿಕೊಳ್ಳುವ ಪಾಂಡ್ಯ-ಚೇರ-ಚೋೞರು ಬಹು ಹಿಂದೆ ಇದ್ದ ಅದೇ ಹೆಸರಿನ ವಂಶದವರು ತಾವೆಂದು ಬಿಂಬಿಸಿಕೊಳ್ಳತೊಡಗಿದರು. ಇದರಿಂದ ಅವರಿಗೆ ತಮಿೞಗಂ ಆಳುವ ಅಧಿಕಾರ ವಂಶ ಪಾರಂಪರ್ಯ ಹಕ್ಕಾಗಿ ಮಂಡಿಸಲು ಅವಕಾಶವಿದ್ದಿತು. ಪ್ರ,ಶ 1-4 ಶತಮಾನದಲ್ಲಿ ಮೂವೇಂದರರ ವಂಶದವರು ಇವರಾಗಿದ್ದರೇ , ಅವರ ಮನೆತನಗಳು ಹಾಗೆಯೇ ಉಳಿದಿದ್ದವೇ ಎನ್ನುವುದಕ್ಕೆ ಸ್ಪಷ್ಟ ಉತ್ತರ ಕೊಡಲು ಸಾದ್ಯವಿಲ್ಲ. ನಂತರ ಪಾಂಡ್ಯರ ಆರಂಭಿಕ ಕಾಲಕ್ಕೆ-9ನೇ ಶತಮಾನ- ಸೇರಿದ ವೇಳ್ವಿಕುಡಿ ದಾನ ಪತ್ರಗಳಲ್ಲಿರುವ ವಂಶಾವಳಿ ನೋಡಿದರೆ ಇದು ಹೆಚ್ಚು ಸ್ಪಷ್ಟವಾಗುತ್ತದೆ. ಪಲಯಾಗ ಮುದುಕುಡುಮಿ ಪೆರುವಾಳುದಿ ಎನ್ನುವ ಪ್ರಾಚೀನ ಪಾಂಡ್ಯ ರಾಜನೊಬ್ಬ ನಾಱಕೊಱ್ಱನ್ ಎನ್ನುವನೊಬ್ಬನಿಗೆ ವೇಳ್ವಿಕುಡಿಯನ್ನು (ಯಙ್ಞಪುರ) ದಾನ ಮಾಡಿದ್ದನು. ಪ್ರಾಚೀನ ಮೂವೇಂದರರನ್ನು ಸದೆ ಬಡೆದು ಕಲಿಯರಸರು (ಕಳಭ್ರರು) ವೇಳ್ವಿಕುಡಿಯನ್ನು ವಶಪಡಿಸಿಕೊಂಡಿದ್ದರು. 6ನೇ ಶತಮಾನದ ಪಾಂಡ್ಯ ಸಾಮಾಜ್ರ ಸ್ಥಾಪಿಸಿದ ದೊರೆ ಕಡುಙ್ಗೋನ್ ವೇಳ್ವಿಕುಡಿಯನ್ನು ಮರಳಿ ತನ್ನ ವಶಕ್ಕೆ ತೆಗೆದುಕೊಂಡಿದ್ದನು. ಇದಾದ ನಂತರ ಅದನ್ನು ದಾನ ಪಡೆದವರಿಗೆ ಹಿಂದಿರುಗಿಸಲಾಗಿರಲಿಲ್ಲ. ಇದನ್ನು ಕುರಿತಾಗಿ ನೀಡಿದ ದೂರನ್ನು ಪರಿಶೀಲಿಸಿದ ನೆಡುಞ್ಚಡೈಯನ್ ವೇಳ್ವಿಕುಡಿ ತಾಮ್ರಪತ್ರದ ಮೂಲಕ ಅದನ್ನು ಈ ಹಿಂದೆ ದಾನ ಪಡೆದ ವಂಶಸ್ಥರಿಗೆ ಹಿಂದಿರುಗಿಸಿದನು. ಈ ದಾನ ಪತ್ರದಲ್ಲಿ ನೆಡುಞ್ಚಡೈಯನ್ ತನ್ನ ಪೂರ್ವಜರ ಐದು ತಲೆಮಾರುಗಳನ್ನು ನೆನೆದಿದ್ದಾನೆ. ಸಾ.ಶ 8ನೇ ಶತಮಾನದ ಉತ್ತರಾರ್ಧದ ಪಾಂಡ್ಯರ ತಾಮ್ರಪತ್ರಗಳಲ್ಲಿ ಪ್ರಶಸ್ತಿಗಳು ಸಂಸ್ಕೃತ ಮತ್ತು ತಮಿೞುಗಳಲ್ಲಿ ಕಾಣಿಸಿಕೊಳ್ಳುತ್ತವೆ. ತಮಿೞು ಭಾಗವನ್ನು ಮೆಯ್’ಕೀರ್ತಿ ಎಂದು ಕರೆಯಲಾಗಿದೆ. ವೇಳ್ವಿಕುಡಿ ತಾಮ್ರಪತ್ರದ ಸಂಸ್ಕೃತ ಪ್ರಶಸ್ತಿಯಲ್ಲಿ ಪೌರಾಣಿಕತೆ ತುಂಬಿ ಈ ವಂಶದ ಮೂಲ ಪುರುಷ ಪಾಂಡ್ಯ , ಈತ ಈ ಕಲ್ಪದ ಆದಿಯಲ್ಲಿ ಚಂದ್ರನ ಮಗನಾದ ಬುದ್ಧನಾಗಿ ಮರುಹುಟ್ಟಿದನು. ಬುದ್ಧನ ಮಗ ಪುರೂರವಸ್ ಈತ ಈ ವಂಶದ ಜೋಡಿ ಮೀನುಗಳ ಲಾಂಛನವನ್ನು ಬಳಕೆಗೆ ತಂದನು ಮಾತ್ರವಲ್ಲ ಇಂದ್ರನ ಸಿಂಹಾಸನವನ್ನು ಮತ್ತು ಆತ ಸಂಗ್ರಹಿಸುತ್ತಿದ್ದ ತೆರಿಗೆಯನ್ನೂ ಹಂಚಿಕೊಂಡನು. ಈತನ ನಂತರ ತಾಮ್ರಪತ್ರದ ಸಂಸ್ಕೃತ ಪ್ರಶಸ್ತಿಯಲ್ಲಿ ಐತಿಹಾಸಿಕ ವ್ಯಕ್ತಿ ಜಟಿಲ (=ಪರಾಂತಕ) ಕಾಣಿಸಿಕೊಳ್ಳುತ್ತಾನೆ. ಈತನ ನಂತರದ (1) ಮಾರವರ್ಮನ್-2 (ರಾಜಸಿಂಹ) (2) ರಣಧೀರ ಮತ್ತು (3) ಮಾರವರ್ಮನ್ ಎನ್ನುವ ಮೂರು ತಲೆಮಾರುಗಳ ರಾಜರು ಹೆಸರಿಸಲ್ಪಟ್ಟಿದ್ದಾರೆ. ಇದಕ್ಕಿಂತ ಭಿನ್ನವಾಗಿರುವ ತಮಿೞು ಮೆಯ್’ಕೀರ್ತಿ ಭಾಗದಲ್ಲಿ ಪೌರಾಣಿಕ ಅಂಶಗಳನ್ನು ಬಿಟ್ಟು ಐತಿಹಾಸಿಕ ಅಂಶಗಳನ್ನು ಒಳಗೊಂಡಿದ್ದು ಅದರಲ್ಲಿ (1) ಪಲಯಾಗ ಮುದುಕುಡುಮಿ ಪೆರುವಳುದಿ (2) ನೆಡು ಚಡೈಯನ್ (3) ತೇರ್ ಮಾರನ್ (4) ಚಡೈಯನ್ (5) ಅರಿಕೇಸರಿ ಅಸಮಸಮನ್ ಮಾರವರ್ಮನ್ (6) ಚೆೞಿಯನ್ ವಾಣವನ್ ಚೆನ್ದನ್ (7) ಆವಣಿ ಚೂಳಾಮಣಿ ಮಾರವರ್ಮನ್ (8) ಕಡುಙ್ಗೋನ್ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕುತೂಹಲಕರ ಅಂಶವೆಂದರೆ ವೇಳ್ವಿಕುಡಿ ತಾಮ್ರಪಟಗಳಲ್ಲಿ ಪಲಯಾಗ ಮುದುಕುಡುಮಿ ಪೆರುವಳುದಿಯನ್ನು 8ನೇ ಶತಮಾನದಲ್ಲಿ ಪಾಂಡ್ಯ ರಾಜ್ಯ ಸ್ಥಾಪಿಸಿದ ಕಡುಙ್ಗೋನ್ ತಂದೆ , ತಾತ ಅಥವಾ ಮುತ್ತಾತ ಎನ್ನುವುದನ್ನು ಸೂಚಿಸದೇ ಕೇವಲ ಪೂರ್ವಜ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಅದ್ದರಿಂದ ಪಲಯಾಗ ಮುದುಕುಡುಮಿ ಮತ್ತು 8ನೇ ಶತಮಾನದಲ್ಲಿ ಪಾಂಡ್ಯ ರಾಜ್ಯ ಸ್ಥಾಪಿಸಿದ ಕಡುಙ್ಗೋನ್ ನಡುವೆ ಎಷ್ಟು ತಲೆಮಾರುಗಳು ಸಾಗಿ ಹೋಗಿದ್ದವು ಎನ್ನುವುದು ಊಹೆಯಾಗಬಹುದೇ ಹೊರತು ಅದಕ್ಕೆ ಯಾವುದೇ ಚಾರಿತ್ರಿಕ ಆಧಾರಗಳಿಲ್ಲ. ವೇಳ್ವಿಕುಡಿ ದಾನಪತ್ರ ಬರೆಸಿದ ಪಾಂಡ್ಯರಿಗೆ ತಮಿೞಗಂ ತನ್ನದೇ ಆದ ಹಿರಿಮೆ , ಗರಿಮೆಗಳನ್ನು ಹೊಂದಿದ್ದ ನಿರ್ದಿಷ್ಟ ಭಾಷಿಕ , ಸಾಂಸ್ಕೃತಿಕ ವಲಯವಾಗಿದ್ದಿತು. ಹಿಂದೆಂದೋ ಇದ್ದಿತೆಂದು ಭಾವಿಸಲಾದ ತಮಿೞು ಮತ್ತು ತಮಿೞಗಂ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯುವಲ್ಲಿ ಅವರ ಹಿತಾಸಕ್ತಿ ಅಡಗಿದ್ದಿತು. ಅದ್ದರಿಂದ ದಾನಪತ್ರದಲ್ಲಿ ಈ ಕೆಳಗಿನ ಸಂಗತಿಗಳನ್ನು ಎತ್ತಿಹೇಳಲಾಗಿದೆ. - ಪಾಂಡ್ಯ ರಾಜ ತೇರ್ ಮಾರನ್ (=ರಾಜಸಿಂಹ, ಪ್ರ,ಶ 740-770) ಬಹು ಹಿಂದಿದ್ದ ಮೂವೇಂದರರಿಗೆ ಸೇರಿದ್ದ ಪಾಂಡ್ಯರ ಕೂಡಲ್, ಚೇರರ ವಂಜಿ ಮತ್ತು ಚೋೞರ ಕೋಳಿ ಪಟ್ಟಣಗಳನ್ನು ಹೊಸದಾಗಿಸಿದನು (ಕೂಡಲ್ ವಂಜಿ ಕೋಳಿ ಎಣ್ಣು ಮಾಡಮಾಮಾಡಡಿಲ್ ಪುಡುಕ್ಕಿಯುಮ್ , ಸಾಲು 86-88 ) - ತೇರ್ ಮಾರನ್ ತಂದೆ ಚಡೈಯನ್ ಪಾಂಡ್ಯರ ಜೋಡಿ ಮೀನು , ಚೋೞರ ಹುಲಿ ಮತ್ತು ಚೇರರ ಬಿಲ್ಲಿನ ಲಾಂಛನಗಳನ್ನು ಮೇರು ಪರ್ವತದ ಮೇಲೆ ಕೆತ್ತಿದಸಿದನು. (ಚಿಲೈಯುಮ್ ಪುಲಿಯುಮ್ ಕಯಲುಣ್ ಚೆನ್ಱು ನಿಲೈಯಾಮೈ ನೆಡುವರೈ ಇಡವಯಿರಕಿದಾಯ್ , ಸಾಲು 67-70) - ಚಡೈಯನ್ ಪೊದುಮೊೞಿಯನ್ನು (ಸಾಮಾನ್ಯ ಮಾತು/ಆಳ್ವಿಕೆ) ಮುರಿದು ಏಕಚ್ಛತ್ರಾದಿಪತ್ಯವನ್ನು ಸ್ಥಾಪಿಸಿದನು. (ಅಱೈಕಡಲವಲಾಗಮ್ ಪೊದುಮೊೞಿ ಅಗಱ್ಱಿ) - ಅವಣಿ ಚೂಲಾಮಣಿ ಮಾರವರ್ಮನ್ ಪೊದು (ಸಾಮಾನ್ಯ ಒಡೆತನ) ನೀಗಿದನು (ಮಹೀತಲಮ್ ಪೊದು ನೀಕ್ಕಿ) ಹುಲಿ, ಬಿಲ್ಲು ಮತ್ತು ಮೀನು ಈ ಮೂರು ಲಾಂಛನಗಳು ಮೊದಲು ಪಾಂಡ್ಯರ ನಂತರ ಚೋೞ, ಚೇರರ ನಾಣ್ಯಗಳ ಮೇಲೂ ಕಾಣಿಸಿಕೊಂಡವು. ವೇಳ್ವಿಕುಡಿ ತಾಮ್ರಪಟದಲ್ಲಿರುವ ಈ ಮಾತುಗಳೆಲ್ಲ ಸಂಗಂ ಹಾಡುಗಳಲ್ಲಿ ಸೋಜಿಗವೆಂಬಂತೆ ಹೊಂದಾಣಿಕೆಯಾಗುತ್ತವೆ. ಮೂವೇಂದರರು ತಮ್ಮ ಲಾಂಛನಗಳನ್ನು ಇತರರ ಬೆಟ್ಟ , ಕೋಟೆಗಳ ಮೇಲೆ ಕೆತ್ತಿಸುವುದು ಮಹಾಪರಾಕ್ರಮದ ಕೆಲಸವೆಂದು ಎಣಿಸಿದ್ದರು. ಬಲವೆತ್ತ ಮುರುಸಿನಲಿ ಚೇರಲಾದನ್ ಕಡಲನ್ನು ಓಡಿ ಕಡಮ್ಬು ಅರಿದು ಹಿಮಾಲಯದಲಿ ಮುನ್ನಿನವರಂತೆ ಬಾಗಿದ ಬಿಲ್ಲು ಕೆತ್ತಿಸಿದನು ಎಂದು ಮಾಲೂಲನಾರ್ ಹಾಡಿದ್ದಾನೆ (ವಲಮ್ ಪಡು ಮುರಿಚು ಮುನ್ನೀರ್ ಓಟ್ಟಿ ಕಡಮ್ಬು ಅಱುತ್ತು ಇಯಮತ್ತು ಮುನ್ನೋರ್ ಮರುಳ ವಣಞ್ಗು ವಿಲ್ ಪೊಱಿತ್ತು , ಅಗ-127). ಪರಣರ್ ಹೆಸರು ಹೇಳದೆ ಒಬ್ಬ ಚೇರ ರಾಜನ ಆರ್ಯರರನ್ನು ಸೋಲಿಸಿ ಉತ್ತರದ ಗಡಿಯಲ್ಲಿ ಬಿಲ್ಲು ಕೆತ್ತಿಸಿದನು ಎನ್ನುತ್ತಾನೆ. (ವಡ ವಱೈ ವಣಞ್ಗು ವಿಲ್ ಪೊಱಿತ್ತು , ಅಗ-396). ಪದಿಱ್ಱುಪ್ಪತ್ತು -11 ರಿಂದ 20 ಹತ್ತರ ಪದಿಗಂನಲ್ಲಿ ಚೇರ ಮನ್ನನ್ ಇಮೈಯವರಮ್ಭನ್ ನೆಡುಞ್ಚೇರಲಾದನ್ ಹೀಗೆ ಮಾಡಿದ ಪರಾಕ್ರಮಿಯೆಂದು ತಿಳಿಸಲಾಗಿದೆ. ಚೋೞನ್ ನಲಙ್ಕಿಳ್ಳಿಯ ಸಾಹಸಗಳನ್ನು ಕೋವೂರ್ ಕಿೞಾರ್ ‘ತೆಂಕಣದ ಪಾಂಡ್ಯನ ನಲ್ ನಾಡಿನಲ್ಲ್ ಏಳು ಕೋಟೆಯ ಕದವ ಹೊಯ್ದು ಕೈಯಲಿ ಪಡೆದೆ. ನಿನ್ನ ಅಗಲ ಬಾಯಿಯ ಹುಲಿಯ ಕೆತ್ತಿಸುವ ದಿಟ್ಟನೇ ಎಂದು ಹೊಗಳಿದ್ದಾನೆ (ತೆನ್ನಮ್ ಪೊಱುಪ್ಪನ್ ನನ್ನಾಟ್ಟುಳ್ಳುಮ್ ಏೞೇಯಿಲ್ ಕದವಮ್ ಕೈಕ್ಕೊಣ್ಡು ನಿನ್ ಪೇೞ್ವಾಯ್ ಉೞುವೈ ಪೆಱ್ಱಿಕ್ಕುಮ್ ಆಱ್ಱಲೈ, ಪುಱ- 33). ಚೋೞನ್ ಕುರಾಪ್ಪಳ್ಳಿದ್ ತುಞ್ಜಿಯ ಪೆರುನ್ದಿರುಮಾವಳವನ್ ಮತ್ತು ಪಾಣ್ಡಿಯನ್ ವೆಳ್ಳಿಯಮ್ಬಲತ್ತುದ್ ತುಞ್ಜಿಯ ಪೆರುವೞುದೆ ಇಬ್ಬರನ್ನೂ ಕುರಿತಾಗಿ ಹಾಡಿರುವ ಕಾವಿರಿಪ್ಪೂಪಟ್ಟನತ್ತಿಕ್ ಕಾರಿಕ್ಕಣ್ಣನಾರ್ ನೀವು ಬೇರೆಯವರ ನಾಡಿನಲ್ಲಿರುವ ಎತ್ತರದ ಬೆಟ್ಟಗಳ ಮೇಲೆ ಹುಲಿ ಮತ್ತು ಮೀನಿನ ಗುರುತು ಕೆತ್ತಿಸುವಂತಾಗಲಿ ಎಂದು ಹಾರೈಸಿದ್ದಾನೆ. (ಕೊಡುವರಿಗ್ ಕೊಳ್ ಮಾಗ್ ತುಯಿನ್ಱ ಚೇನ್ ವಿಳಞ್ಗ ತೊಡು ಪೊಱಿ ನೆಡುನೀರ್ಗ್ ಕೆನ್ಡೈಯೋಡು ಪೊಱಿತ್ತ ಕುಡುಮಿಯ ಆಗ ಪಿಱರ್ ಕುನ್ಱು ಕೆೞು ನಾಡೇ , ಪುಱ-58). ಹಾಡುಗಳಲ್ಲಿರುವ ಈ ಸಂಗತಿಯೇ ವೇಳ್ವಿಕುಡಿ ತಾಮ್ರಪತ್ರದಲ್ಲಿ ಬಂದಿದ್ದು ಎರಡೂ ಸಮಕಾಲೀನ ಎಂದು ಹೇಳಬಹುದು.
9ನೇ ಶತಮಾನದಿಂದ ಪಾಂಡ್ಯರು ತಮಿೞು ಸಾಹಿತ್ಯಕ ಭಾಷೆಯಾಗಿ ಹೊರಹೊಮ್ಮುವಂತೆ ಮಾಡಲು ಬಹಳ ಉತ್ಸುಕರಾಗಿದ್ದರು. ದೊಡ್ದ ಚಿನ್ನಮನೂಱು ತಾಮ್ರಪತ್ರದಲ್ಲಿ (ಸಾ.ಶ 926-927) ಇದಕ್ಕೆ ಪುರಾವೆಗಳು ಸಿಗುತ್ತವೆ. ಈ ಪಾಂಡ್ಯರ ಪೂರ್ವಜನೊಬ್ಬ ಸಂಸ್ಕೃತದೊಂದಿಗೆ ಅಚ್ಚ ತಮಿಳನ್ನು ಪೋಷಿಸಿ ವಿದ್ವಜ್ಜನರ ಮುಂಚೂಣಿಯಲ್ಲಿದ್ದನು ಎಂದು ತಿಳಿಸಲಾಗಿದೆ (ಒಂದಮಿೞುಮ್ ವಡಮೊೞಿಯುಮ್ ಪಳುತಱತ್ತಾನ್ ಆರ್ಯಂದು ಪಣ್ಡಿರದಿಲ್ ಮೆನ್’ತೋನ್ಱಿಯುಮ್, ಸಾಲು 94-95) ಅಷ್ಟೇ ಅಲ್ಲ ಈತ ಮಹಾಭಾರತವನ್ನು ತಮಿೞಿಗೆ ತರಿಸಿದನೆಂದು ಮತ್ತು ಮದುರಾಪುರಿಯ ಸಂಗಂ ಸ್ಥಾಪಿಸಿದನೆಂದು ತಿಳಿಸಲಾಗಿದೆ (ಮಕಾಪಾರತಾನ್ ತಮಿೞ್’ಪ್ ಪಾಡುತ್ತುಮ್ ಮದುರಾಪುರಿಗ್ ಚಞ್ಗಮ್ ವೈತ್ತುಮ್, ಸಾಲು 102-103). ದಳವಾಯಪುಱಮ್ ತಾಮ್ರಪತ್ರಗಳು ಹೇಳುವಂತೆ ಪಾಂಡ್ಯರ ಪೂರ್ವಜರು ಅಗತ್ತಿಯಂ ನೆರವಿನಿಂದ ತಮಿೞಿನ ಅಭ್ಯಾಸ ಮಾಡಿದರು.(ಅಗತ್ತಿಯಮ್ ತಮಿೞ್ ಆರಾಯಂದುಮ್ ಸಾಲು 88-89) . ದಕ್ಷಿಣದಲ್ಲಿ ಮದುರೆಯನ್ನು ಸ್ಥಾಪಿಸಿ ಅಲ್ಲಿ ಕಷ್ಟಕರವಾದ ತಮಿೞಿನ ಅಧ್ಯಯನಕ್ಕೆ ಒಳ್ಳೆಯ ಸಂಗ ಸ್ಥಾಪಿಸಿ ತಮಿೞು ಬೆಳೆಯುವಂತೆ ಮಾಡಿದರು ಎಂದು ಹೆಮ್ಮೆ ಪಡಲಾಗಿದೆ. (ತೆನ್ ಮದುರಾಪುರಾನ್ ಚೆಯ್ದುಮ್ ಅಂಙ್ಗಾಡಿಣಿಲ್ ಅರುಮ್ ತಮಿೞ್ ನಲ್ ಚಂಕಂ ಇಱಿತ್ ತಮಿೞ್ ವೞರ್ತ್ತುಮ್, ಸಾಲು 97-98). ಮದುರೆಯನ್ನು ಕೇಂದ್ರವಾಗಿಟ್ಟುಕೊಂಡು ಪಾಂಡ್ಯರು ತಮಿಳನ್ನು ಎತ್ತರಕ್ಕೇರಿಸುವ ಪ್ರಯತ್ನ ಮಾಡಿರುವುದಕ್ಕೆ ಬೇರೆ ಪುರಾವೆಗಳೂ ಇವೆ. ಸಾ.ಶ 829 ರ ಎರುಕ್ಕಣಕುಡಿಯ ಪಾಂಡ್ಯರ ಕಲ್ಬರಹದಲ್ಲಿ ‘ ಜಗದ ಎಲ್ಲೆಡೆ ಹೊಗಳುವ ಅಂದದ ಅಲಂಕುಡಿಯ ಕೂಡಲಿನ ದೊಡ್ದ ಶಿಲೆಯ ಮೇಲೆ ಶ್ರೇಷ್ಟ ತಮಿೞಿನ ಪದಗಳೊಂದಿಗಿರುವ ಇರೈವನ್ –ಶಿವ ಎಂದು ಹಾಡಲಾಗಿದೆ. (ನಾಲಣಂಕಾಳಿರ್ ಪುಗಳುಮ್ ಚಿರ್ ಆಲಂಙ್ಗುಡಿ ಅದರಗು ಇರೈವನ್ ಚೊನ್ ಮಾದ್ ತಣ್ ತಮಿೞ್’ಗ್ ಕುಡಾರ್ ಕಣ್ ಮಾಡ್ ತಿಣ್ ಪಲಗೈ ಮಿಚೈ ) (152) [7] ಒಂದು ತೇವಾರಂನಲ್ಲಿ (ತೇವಾರಂ 3:54:11) ಶಿವನನ್ನು ಅಮ್ ತಣ್ ಮದುರೈ ತೊಗೈ ಆಗಿನಾನ್ (ಅಂದದ ತಣ್ಣನೆಯ ಮದುರೆ ಸಂಗ್ರಹಗಳನ್ನು ಆಗಿಸಿದವನು ) ಎಂದು ಹಾಡಲಾಗಿದೆ. ಇದರಿಂದ ಎಟ್ಟುತ್ತೊಗೈ 7 ನೇ ಶತಮಾನಕ್ಕಿಂತ ಹಿಂದಿನದೆಂದು ಎವಾ ಮಾರಿಯಾ ವಿಲ್ಡೆನ್ ಅಭಿಪ್ರಾಯ ಪಟ್ಟಿದ್ದಾರೆ. (153) [8] ಭಕ್ತಿಯುಗ ಸಾ.ಶ 7ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು ತೇವಾರಂ ಆ ಕಾಲಕ್ಕೆ ಸೇರಿರಬಹುದು ಎನ್ನುವ ಊಹೆಯೇ ಇಂತಹ ತೀರ್ಮಾನದ ಹಿಂದಿದೆ. ಸಂಗ ಸಾಹಿತ್ಯದಲ್ಲಿ ಹೆಸರಾಗಿರುವ ಕಪಿಲರ್, ಪರಣರ್ ಮತ್ತು ನಕ್ಕೀರರ್ ಮತ್ತೊಮ್ಮೆ ಹುಟ್ಟಿಬಂದು ಭಕ್ತಿಯ ಹಾಡುಗಳನ್ನು ಬರೆದರೆಂದು , ಅವರ ಹಾಡುಗಳನ್ನು 11 ನೇ ತಿರುಮುರೈನಲ್ಲಿ ಸೇರಿಸಲಾಗಿದೆ. (154) [9]. ಇಂತಹ ನಂಬಿಕೆಗಳು ಇರುವುದರಿಂದಲೂ , ತೇವಾರಂಗಳು ಕಳೆವುದು-ಸಿಗುವುದು ಪರಂಪರೆಯ ಭಾಗವಾಗಿರುವುದರಿಂದ ಅವುಗಳನ್ನು ಆಧರಿಸಿ ಮಾಡಿದ ಈ ಕಾಲ ನಿರ್ಧಾರ ವಿಶ್ವಾಸಾರ್ಹವಲ್ಲ. ಅಲ್ಲದೆ ಈ ಕಲ್ಬರಹವೂ ಸಂಗಂ ಐತಿಹ್ಯವನ್ನು ಹೇಳದೆ ಮದುರೆಯನ್ನು, ತಮಿೞು ಭಾಷೆಯನ್ನು ಶಿವನೊಂದಿಗೆ ಸಂಬಂಧ ಕಲ್ಪಿಸುತ್ತದೆ. ಇಂತಹ ಹೇಳಿಕೆಗಳೇ ಸಂಗಂ ಐತಿಹ್ಯಗಳಾಗಿ ಬೆಳೆದು ಮುಂದೆ ಇರೈಯನಾರ್ ಅಹಪ್ಪೊರುಳ್ ಬರೆದ ನಕ್ಕೀರಾರ್ ಹಿಗ್ಗಿಸಿ ಕಥೆಯಾಗಿಸಿರುವ ಸಾದ್ಯತೆಗಳಿವೆ.
ಪಾಂಡ್ಯರ ಕಾಲದ ಇನ್ನೊಂದು ಕೃತಿ ಪಂದಿಕ್ಕೋವೈ. ಇದು ಪಾಂಡ್ಯ ರಾಜನನ್ನು ಹೊಗಳುವ ಕೃತಿಯಾಗಿದ್ದು , ಇದನ್ನು ನಕ್ಕೀರಾರ್ ಉದಾಹರಣೆಗಾಗಿ ಬಳಸಿ ಕೊಂಡಿದ್ದಾನೆ. ಅಗಂ ಪ್ರಕಾರಕ್ಕೆ ಹೊಂದುವಂತೆ ತಲೈವ –ತಲೈವಿಯ ನಡುವಿನ ಬೇಟವನ್ನು ತಿಳಿಸುವುದು ನಂತರ ರಾಜನನ್ನು ಹೊಗಳುವುದು ಇದರ ಲಕ್ಷಣ. ಈ ಕಾವ್ಯ ಪದ್ದತಿ 19 ನೇ ಶತಮಾನದವರೆಗೂ ತಮಿೞಿನಲ್ಲಿ ಕೋವೈ ಹೆಸರಿನಲ್ಲಿ ಬಳಕೆಯಲ್ಲಿದ್ದಿತು. ಈ ಕೃತಿಯಿಂದ ಪಾಂಡ್ಯರ ಆಸ್ಥಾನದಲ್ಲಿ ಸಂಗಂ ಹಾಡು ಮತ್ತು ತಂತ್ರಗಳನ್ನು ಬಹುತೇಕ ಹೋಲುವ ಸಾಹಿತ್ಯ ರಚಿಸುವವರು ಇದ್ದರೆಂದು ಸ್ಪಷ್ಟವಾಗುತ್ತದೆ.
ಸಂಗಂ ತಮಿೞು ಭಾಷೆ ಹಾಗೂ ಆರಂಭಿಕ ಕಾಲದ ತಮಿೞು ಕಲ್ಬರಹಗಳ ಭಾಷೆಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಈಗಾಗಲೇ ಖಚಿತವಾಗಿದೆ. ತಮಿೞು ಭಾಷಾ ಪಂಡಿತರು ಸಾಹಿತ್ಯಕ ತಮಿೞಿಗೆ ಒತ್ತು ನೀಡಿ ಕಲ್ಬರಹಗಳ ತಮಿೞಿಗೆ ಗಮನ ಕೊಡದಿರುವುದನ್ನು ಬಹು ಹಿಂದೆಯೇ ಗುರುತಿಸಲಾಗಿದ್ದಿತು. ಸಾಹಿತ್ಯಕ ಭಾಷೆಯನ್ನು ಮಾತ್ರ ಅಧ್ಯಯನ ಮಾಡುವ ಭಾಷಾ ವಿಙ್ಞಾನಿ , ಬದುಕಿರುವ ಪ್ರಾಣಿಯ ಹಳೆಯ ಪಳೆಯುಳಿಕೆಯ ಅಧ್ಯಯನ ಮಾಡಿ ತೃಪ್ತಿಗೊಳ್ಳುವ ಜೀವವಿಕಾಸ ವಿಙ್ಞಾನಿಯಂತೆ ಎನ್ನುವ ಟೀಕೆಗಳು ಎದುರಾಗಿದ್ದವು. ಕಲ್ಬರಹಗಳಲ್ಲಿರುವ ಭಾಷೆ ಸಾಹಿತ್ಯದ ಚೆನ್ದಮಿೞ್ ಅಲ್ಲ ಹಾಗೆಯೇ ಅಶುದ್ಧ ಒರಟು ಭಾಷೆಯೂ ಅಲ್ಲ. ಅದು ಆ ಕಾಲದ ಜನರಾಡುತ್ತಿದ್ದ ನೈಜ ಭಾಷೆ. ಇದು ತೊಲ್ ಕಾಪ್ಪಿಯಂ ಅಥವಾ ಇತರ ವ್ಯಾಕರಣ ಗ್ರಂಥಗಳ ಕಟ್ಟು ಕಟ್ಟಳೆಗಳನ್ನು ಆದ್ದರಿಂದ ಪಾಣಾರರು ಕಟ್ಟಿದ ಹಾಡುಗಳು ಆ ಭಾಷೆಯಲ್ಲಿಯೇ ಇರಬೇಕಾದುದು ಸಹಜ. ಆದರೆ ಅಂತಹ ಭಾಷೆ ಸಂಗಂ ಹಾಡುಗಳಿಲ್ಲ. ಅಲ್ಲಿರುವುದು ಚೊಕ್ಕಗೊಳಿಸಿದ ತಮಿೞು ಕಾವ್ಯ ಭಾಷೆ. ಇದನ್ನು ಕಮಿಲ್ ಝ್ವೆಲೆಬಿಲ್ ಅನುಮೋದಿಸುತ್ತಾರೆ.ಆದರೆ ಅಲೆಮಾರಿ ಪಾಣಾರರು ಹೇಗೆ ಮತ್ತು ಏಕೆ ಇಂತಹ ಚೆನ್ದಮಿೞ್ ಹಾಡಿದರು ಮತ್ತು ಹಾಡಲು ಸಾದ್ಯವಾಯಿತು ಎನ್ನುವುದನ್ನು ಆಳವಾಗಿ ಚರ್ಚಿಸಿಲ್ಲ. ಇದಕ್ಕೆ ದಕ್ಕುವ ಉತ್ತರವೆಂದರೆ ಸಂಗಂ ಹಾಡುಗಳಲ್ಲಿರುವುದು ನಂತರ ಕಾಲದ ಸಾಹಿತ್ಯ, ಕಾವ್ಯಕ್ಕಾಗಿ ಸಿದ್ಧಗೊಂಡ ತಮಿೞು ಭಾಷೆಯೆಂದು ಹೇಳಬಹುದು. [10]
ಹೀಗೆ , ತಾಮ್ರಪತ್ರ, ಕಲ್ಬರಹಗಳ ಮೂಲಕ ಪಾಂಡ್ಯರು ತಮಿಳನ್ನು ಎತ್ತರಕ್ಕೇರಿಸಲು ಮಾಡಿದ ಯತ್ನಗಳ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ. ಈ ಸಮಯದಲ್ಲಿಯೇ ಪ್ರಾಚೀನತೆಯ ಮೆರುಗು ಕೊಡಲು ಮೂರು ಸಂಗಂಗಳು ಮುಳುಗಿದ ಕಟ್ಟು ಕಥೆಯನ್ನು ನಕ್ಕೀರಾರ್ ಇರೈಯನಾರ್ ಅಗಪ್ಪೊರುಳ್ ಟೀಕೆಯಲ್ಲಿ ತೂರಿಸಲು ಸಾದ್ಯವಾಯಿತು. ಸಾ.ಶ 2-4 ಶತಮಾನಕ್ಕಾಗಲೇ ಸಮೃದ್ಧ ಸಾಹಿತ್ಯ ಸೃಷ್ಟಿಯಾಗಿದ್ದ ತಮಿೞಿಗೆ ಇಂತಹ ನೆರವಿನ ಅಗತ್ಯಗಳು ಬೇಕಿರಲಿಲ್ಲ. ಅವುಗಳನ್ನು ಮುಂದುವರೆಸಿಕೊಂಡು ಹೋಗಿದ್ದರೆ ಸಾಕಾಗುತ್ತಿದ್ದಿತು. ಇವೆಲ್ಲವನ್ನು ಒಟ್ಟಾಗಿ ಗಮನಿಸಿದಾಗ 9 ನೇ ಶತಮಾನದಲ್ಲಿದ್ದ ಪಾಂಡ್ಯರ ಪ್ರಶಸ್ತಿಗಳನ್ನು ಬರೆದ , ತಮಿೞು ಮತ್ತು ಸಂಸ್ಕೃತಗಳನ್ನು ಬರೆದ ವಿದ್ಯಾವಂತ ಆಸ್ಥಾನ ಕವಿಗಳೇ ಪ್ರಾಚೀನವೆನಿಸುವ ತಮಿೞಿನಲ್ಲಿ ಅಗಂ ಮತ್ತು ಪುಱಂ ಹಾಡುಗಳನ್ನು ಬರೆದು ಸಂಗಂ ಸಾಹಿತ್ಯ ಕಟ್ಟಿದರು. ಆದ್ದರಿಂದ ಸಂಗಂ ಸಾಹಿತ್ಯ 9 ನೇ ಶತಮಾನಕ್ಕಿಂತ ಮುಂಚಿನದಲ್ಲ.