ಆಹಾರ -ಅಭ್ಯಾಸ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ) ಸ್ವಾಮಿಗಳು ಸಾತ್ವಿಕ-ರಾಜಸ-ತಾಮಸ ಎನ್ನುವ ಮೂರು ಬಗೆಯ ಆಹಾರಗಳಿವೆ ಎನ್ನುವ ಪ್ರಾಚೀನ ಅವೈಜ್ಞಾನಿಕ ವಿಭಜನೆ ನಿಜವೆಂದು ನಂಬಿದ್ದರು. ಅಧ್ಯಾತ್ಮ ಸಾಧನೆ ಮಾಡುವವರು ಅಭ್ಯಾಸ ಸ್ಥಿರವಾಗುವವರೆಗೆ ಸಾತ್ವಿಕ ಆಹಾರ ಸೇವಿಸಬೇಕು. ಇದು ಎಳೆಯ ಗಿಡಕ್ಕೆ ಬೇಲಿ ಹಾಕಿ ಕಾಪಾಡಿದಂತೆ. ಗಿಡ ಮರವಾದ ಮೇಲೆ ಅದಕ್ಕೆ ಬೇಲಿ ಬೇಕಿಲ್ಲ. ಅದರಂತೆ ಅಧ್ಯಾತ್ಮದಲ್ಲಿ ಮಂದುವರೆದಾತ ಯಾವುದೇ ಆಹಾರ ಸೇವಿಬಹುದು ಎಂದು ಭಾವಿಸಿದ್ದರು. ಅಮೆರಿಕ ಸೇರಿದ ನಂತರ ಅಕ್ಟೋಬರ್ ೧೮೯೩ ರಿಂದ ಸ್ವಾಮಿಗಳಿಗೆ ಶ್ರೀಮಂತರ ಆತಿಥ್ಯಗಳು ಸಾಲು ಸಾಲಾಗಿ ಸಿಗತೊಡಗಿದವು. ತಡರಾತ್ರಿಯ ಔತಣ ಕೂಟಗಳಲ್ಲಿ ಅವರು ತಪ್ಪದೇ ಹಾಜರಿರುತ್ತಿದ್ದು ಅಲ್ಲಿ ಮಾಂಸವೇ ಪ್ರಮುಖ ಆಹಾರವಾಗಿದ್ದಿತು. ಸ್ವಾಮಿಗಳ ಪತ್ರಗಳಿಂದ ಅವರು ಯಥೇಚ್ಛವಾಗಿ ಮಾಂಸವನ್ನು ಸೇವಿಸುತ್ತಿದ್ದರೆಂದು ತಿಳಿಯುತ್ತದೆ. ಸ್ವಾಮಿಗಳು ಡೆಟ್ರಾಯಿಟ್’ನಲ್ಲಿ ಸೆನೆಟರ್ ಪಾಮರ್ ಮನೆಯಲ್ಲಿರುವಾಗ ದಿನದ ಮೂರೂ ಹೊತ್ತು ರಾಜಭೋಜನವೇ ಇರುತ್ತಿದ್ದಿತು….. ಇಲ್ಲಿನ ಛಾಯಾಚಿತ್ರಕಾರನು ತಾನು ತೆಗೆದ ಚಿತ್ರಗಳನ್ನು ನನಗೆ ಕಳಿಸಿದ್ದಾನೆ. ಅವು ಖಳನಾಯಕನಂತಿವೆ. ಶ್ರೀಮತಿ ಬ್ಯಾಗ್ಲಿಯವರಿಗೆ ಅವು ಸ್ವಲ್ಪವೂ ಹಿಡಿಸವು. ನಿಜವಾದ ಸಂಗತಿ ಏನೆಂದರೆ ನನ್ನ ಎರಡು ಚಿತ್ರಗಳನ್ನು ತೆಗೆದ ನಡುವಿನ ಅವಧಿಯಲ್ಲಿ ನನ್ನ ಮುಖ ದೊಡ್ಡದಾಗಿ , ದಪ್ಪವಾಗಿ ಹೋಗಿದೆ. ಅದಕ್ಕೆ ಆ ಛಾಯಾಚಿತ್ರಕಾರ ಏನು ಮಾಡಿಯಾನು ? … ಸೆಸ್ಸೆಸೆಸೆ ಸೆನೆನೆಟರ್ ಪಾಪ್ಪಾಮಮರ್ ಸರಳರು. ಅವರು ನನಗೆ ಕರುಣೆ ತೋರುವರು ನಾನು ಅರೆಹೊಟ್ಟೆ ತಿನ್ನಲು ಯತ್ನಿಸುತ್ತಿದ್ದೇನೆ. ಅದನ್ನು ಪ್ರಪಂಚವೆಲ್ಲ ವಿರೋಧಿಸುತ್ತಿದೆ. ವಾಷಿಂಗ್ಟನ್'ನಲ್ಲೇ ಅತ್ಯಂತ ಶ್ರೇಷ್ಟವಾದ ಔತಣವನ್ನು ಅವರು ನನಗೆ ನೀಡುತ್ತಿದ್ದಾರೆ. …... ಪ್ರಯೋಜನವಿಲ್ಲ… ನಾನು ಮನಸ್ಸು ಮಾಡಿಬಿಟ್ಟಿದ್ದೇನೆ’ ಎಂದಿದ್ದರು. ಬೋಷಿ ಸೇನ್ ಸಂಗ್ರಹದಲ್ಲಿರುವ ಇದೇ ಪತ್ರದಲ್ಲಿ ‘ಪಾಮರ್ ಒಳ್ಳೆಯ ವ್ಯಕ್ತಿ. ನನ್ನ ಮೇಲೆ ಅನುಕಂಪವಿದೆ. ಆತನಿಗೊಬ್ಬ ಫ್ರೆಂಚ್ ಬಾಣಸಿಗನಿದ್ದಾನೆ. .. ಓ ದೇವರೇ…. ಹೊಟ್ಟೆಯನ್ನು ಆಶೀರ್ವದಿಸು ! ನಾನು ಉಪವಾಸವಿರಲು ಯತ್ನಿಸುತ್ತಿದ್ದೇನೆ. ಆದರೆ ಇಡೀ ಜಗತ್ತೇ ನನ್ನ ವಿರುದ್ಧ ನಿಂತಿದೆ !! ಇಡೀ ವಾಷಿಂಗ್ಟನ್’ನಲ್ಲೇ ಅತ್ಯುತ್ತಮ ಎನಿಸುವ ಭೋಜನ ಕೊಡುತ್ತಾನೆ !! ಓಹ್ ಇನ್ನೂ ನನ್ನಿಂದಾಗದು ‘ ಎಂದು ೧೦/೩/೧೮೯೪ ರ ಪತ್ರದಲ್ಲಿ ಶ್ರೀಮತಿ ಜಾರ್ಜ್ ಹೇಲ್ ಮುಂದೆ ತಮ್ಮ ಊಟದ ವೈಭವವನ್ನು ಚಿತ್ರಿಸಿದ್ದಾರೆ. ‘ಈ ಆಹ್ವಾನ , ಸಮಾರಂಭಗಳು , ಬೋಜನ ಕೂಟಗಳು,ಅನಿಷ್ಟ ಭೋಜನಗಳು , ನೂರು ಔತಣಗಳನ್ನು ಒಂದರಲ್ಲೇ ಅಡಗಿಸಿ ಪುರುಷರ ಕ್ಲಬ್'ಗಳಲ್ಲಿ ಭೋಜನಗಳ ನಡುವೆ ಧೂಮಪಾನ ಮಾಡುತ್ತ ಮತ್ತೆ ಹೊಸದಾಗಿ ಇನ್ನೊಂದು ಭೋಜನ ಪ್ರಾರಂಭಿಸುವುದು ಇವೆಲ್ಲ ನನಗೆ ಸಾಕಾಗಿ ಹೋಗಿದೆ. (೨೦/೨/೧೮೯೪) , ಹೊವೆ ಕುಟುಂಬ ಭರ್ಜರಿ ಔತಣ ಏರ್ಪಡಿಸಿತ್ತು. ಮೃದು ಕವಚದ ಏಡಿ ಮತ್ತು ಅನೇಕ ತಿನಿಸುಗಳು ಇದ್ದವು. ಸಂತೋಷವಾಗಿ ಕಾಲ ಕಳೆದೆವು (೯/೬/೧೮೯೪), ಶ್ರೀಮಂತರ ಔತಣ ಕೂಟಗಳಿಂದ ಇತ್ತೀಚೆಗೆ ತಪ್ಪಿಸಿಕೊಳ್ಳುತ್ತಿದ್ದೇನೆ ( ೫/೭/೧೮೯೪), ಎಂದಿನಂತೆ ನಾನು ದಪ್ಪವಾಗಿದ್ದೇನೆ ಮತ್ತು ಊಟ ಚೆನ್ನಾಗಿದೆ. ಇಲ್ಲಿ ಮತ್ತು ಭಾರತದಲ್ಲಿ ಇದನ್ನು ರಟ್ಟು ಮಾಡಬೇಡಿ ತಾಯಿ. ಅದು ಕೇವಲ ನನಗೆ , ನಿಮಗೆ ಮತ್ತು ಮಕ್ಕಳಿಗೆ ಮಾತ್ರ ತಿಳಿದಿರುವುದು (೧೦/೧೦/೧೮೯೪) , ಕೆಲವು ಭಾರಿ ಔತಣಗಳು ರಾತ್ರಿ ನಾನು ತಡವಾಗಿ ಹಿಂದಿರುಗುವಂತೆ ಮಾಡಿವೆ. ಅನೇಕ ದಿನಗಳು ನಾನು ಬೆಳಿಗ್ಗೆ ಎರಡು ಗಂಟೆಗೆ ಮನೆಗೆ ಹಿಂದಿರುಗಿದೆನು. ಇಂದು ರಾತ್ರಿ ಅಂತಹ ಒಂದು ಔತಣ ಕೂತಕ್ಕೆ ಹೋಗುತ್ತಿರುವೆನು. ಅಂತಹುದಕ್ಕೆ ಹೋಗುತ್ತಿರುವುದು ಇದು ಕೊನೆಯ ಬಾರಿ. ರಾತ್ರಿ ಅಷ್ಟು ಕಾಲ ಎಚ್ಚರವಾಗಿರುವುದು ಒಳ್ಳೆಯದಲ್ಲ (೧೫/೩/೧೮೯೫) , ಡೆಲ್ ಮಾನಿಕೊ ಹಾಗೂ ವಾಲ್’ಡಾರ್ಫ್ ಔತಣಗಳಿಂದ ನನ್ನ ಆರೋಗ್ಯ ಕೆಡುವುದರಲ್ಲಿತ್ತು. ಆದುದರಿಂದ ಎಲ್ಲ ಆಮಂತ್ರಣಗಳಿಂದ ತಪ್ಪಿಸಿಕೊಳ್ಳಲು ತಕ್ಷಣವೇ ಪಕ್ಕಾ ಸಸ್ಯಾಹಾರಿಯಾದೆ. ಶ್ರೀಮಂತರು ನಿಜವಾಗಿಯೂ ಈ ಪ್ರಪಂಚಹ ಉಪ್ಪು . ಅವರು ಆಹಾರವೂ ಅಲ್ಲ, ಪಾನೀಯವೂ ಅಲ್ಲ (೧೫/೩/೧೮೯೫) ಎಂದು ಶ್ರೀಮತಿ ಜಾರ್ಜ್ ಹೇಲ್’ಗೆ ಬರೆದಿರುವ ಪತ್ರಗಳು , ೧೭/೧೦/೧೮೯೪ ರಂದು ಸಾರಾ ಬುಲ್’ಗೆ ‘ಮೊನ್ನೆ ಬಾಲ್ಟಿಮೋರ್’ನಲ್ಲಿ ಸೊಗಸಾದ ಔತಣ ಕೂಟವಿದ್ದಿತು. ಮುಂದಿನ ಭಾನುವಾರ ಮತ್ತೊಂದಿದೆ ಎಂದು ತಿಳಿಸುವ ಪತ್ರ ೨೮/೭/೧೮೯೭ ರಂದು ಶ್ರೀಮತಿ ಫ್ರಾನ್ಸಿಸ್ ಲೆಗೆಟ್’ಗೆ ‘ಕಳೆದ ಬಾರಿ ಲಂಡನ್'ನಲ್ಲಿ ಬೇಕಾದಷ್ಟು ಭೋಜನ ಕೂಟಗಳಿಗೆ ಹೋಗಬೇಕಾಗಿ ಬಂತು. ಆದರೆ ಈ ಸಲ ಹೋಗಲು ನನಗೆ ಅದೃಷ್ಟವಿಲ್ಲ ‘ ಎನ್ನುವ ಹೇಳಿಕೆಗಳು ಸ್ವಾಮಿಗಳು ಅಮೆರಿಕ ಮತ್ತು ಲಂಡನ್’ನಲ್ಲಿ ಹಾಜರಿರುತ್ತಿದ್ದ ಔತಣ ಕೂಟಗಳು ಮತ್ತು ಅವರು ಅಲ್ಲಿ ಮಾಡುತ್ತಿದ್ದ ಊಟದ ಬಗ್ಗೆ ಮಾಹಿತಿ ನೀಡುತ್ತವೆ. ಸ್ವಾಮಿಗಳು ಎಡೆಬಿಡದೆ ಮಾಂಸಹಾರ ಸೇವಿಸುವುದು ಭಾರತದಲ್ಲಿದ್ದ ಹಲವರಿಗೆ ಸರಿ ಕಂಡಿರಲಿಲ್ಲ. ಈ ಬಗ್ಗೆ ಸರಳ ಘೋಷಲ್ ಸ್ವಾಮಿಗಳನ್ನು ನೇರವಾಗಿಯ ಪ್ರಶ್ನಿಸಿದ್ದಳು. ೨೪/೪/೧೮೯೭ ರಂದು ಇದಕ್ಕೆ ಸುದೀರ್ಘ ಉತ್ತರ ನೀಡಿದ್ದ ಸ್ವಾಮಿಗಳು ಮಾಂಸಾಹಾರ ರಾಜಸಿಕ. ಅದು ಮನುಷ್ಯ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಭಾರತಕ್ಕೆ ಸದ್ಯಕ್ಕೆ ಬೇಕಾಗಿರುವುದು ಅದೇ ಗುಣ. ಭಾರತ ಅವನತಿಯತ್ತ ಸಾಗಲು , ವಿದೇಶಿಯರ ಆಕ್ರಮಣವನ್ನು ತಡೆಯಲು ಸೋತಿದ್ದರಲ್ಲಿ ಮಾಂಸಾಹಾರವನ್ನು ತುಚ್ಚೀಕರಿಸಿದ್ದೂ ಒಂದು ಕಾರಣ ಎಂದು ವಾದಿಸಿದ್ದರು. ಸ್ವಾಮಿಗಳ ಈ ವಾದದಲ್ಲಿ ಹುರುಳಿಲ್ಲವಾದರೂ , ಒಂದು ವೇಳೆ ವಾದಕ್ಕೆ ಅದು ನಿಜವೆಂದು ಒಪ್ಪಿದರೂ , ರಾಜಸಿಕರಾಗಲಿ ಜನ ಸಾಮಾನ್ಯರು ಮಾಂಸ ಸೇವಿಸುವುದನ್ನು ಸಮರ್ಥಿಸಬಹುದೇ ಹೊರತು ಸ್ವಾಮಿಗಳ ಹತೋಟಿಯಿಲ್ಲದ ಮಾಂಸಾಹಾರ ಸೇವನೆಯ ದೌರ್ಬಲ್ಯವನ್ನಲ್ಲ. ಅಮೆರಿಕದಲ್ಲಿ ಸ್ವಾಮಿಗಳು ಮನಸೇಚ್ಛೆ ಮಾಂಸ ತಿನ್ನುತ್ತಿರುವರೆಂದು ಪಾದ್ರಿಗಳು ಹೇಳುತ್ತಿದ್ದರು. ಸ್ವಾಮಿಗಳ ಹಲವು ಶಿಷ್ಯರಿಗೆ ಮತ್ತು ಅಭಿಮಾನಿಗಳಿಗೆ ಅವರು ನಿಯಂತ್ರಣವಿಲ್ಲದೆ ಮಾಂಸಾಹಾರ ಮಾಡುತ್ತಿರುವುದು ಸರಿ ಕಾಣುತ್ತಿಲ್ಲವೆಂದೂ ಅಳಸಿಂಗ ಪೆರಮಾಳ್ ಸ್ವಾಮಿಗಳ ಗಮನಕ್ಕೆ ತಂದಿದ್ದನು. ಇದರಿಂದ ಸ್ವಾಮಿಗಳಿಗೆ ಕಡುಕೋಪ ಬಂದಿದ್ದು ೯/೯/೧೮೯೫ ರಂದು ಅಳಸಿಂಗನನ್ನು ತರಾಟೆಗೆ ತೆಗೆದುಕೊಂಡು ‘…ಭಾರತೀಯರು ಹಿಂದೂ ರೀತಿಯ ಊಟವನ್ನೇ ನಾನು ಮಾಡಬೇಕೆಂದು ಹೇಳಿದರೆ ಅವರಿಗೆ ದಯವಿಟ್ಟು ಒಬ್ಬ ಅಡುಗೆಯವನನ್ನು ಮತ್ತು ಆತನಿಗೆ ಸಂಬಳ ಕೊಡಲು ಸಾಕಾಗುವಷ್ಟು ಹಣವನ್ನು ಕಳಿಸಲು ಹೇಳು. ಎಳ್ಳಷ್ಟೂ ನೆರವಾಗದೆ ಬುದ್ಧಿವಾದ ಹೇಳುವುದನ್ನು ಕೇಳಿ ನನಗೆ ನಗು ಬರುತ್ತದೆ ‘ ಎಂದು ಕೆರಳಿದ್ದರು. ಸ್ವಾಮಿಗಳು ಎರಡು ತಿಂಗಳ ಹಿಂದೆ (ಜುಲೈ ೧೮೯೫) ಬೆಟ್ಟಿ ಸ್ಟರ್ಜಿಸ್’ಗೆ ಥೌಸಂಡ್ ಐಲ್ಯಾಂಡ್ ಪಾರ್ಕ್’ನಿಂದ ಬರೆದ ಪತ್ರದಲ್ಲಿ ‘ ನಾನೀಗ ಸಸ್ಯಾಹಾರವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೇನೆ. ಸಾಕಷ್ಟು ಉಪವಾಸ ಮಾಡುತ್ತಿದ್ದೇನೆ’ ಎಂದಿದ್ದರು. ಸ್ವಾಮಿಗಳು ಪಸಡೆನದಲ್ಲಿ ಮಿಡ್ ಸೋದರಿಯರ ಮನೆಯಲ್ಲಿರುವಾಗ ಮಧ್ಯಾಹ್ನದ ಊಟಕ್ಕೆ ಸಾಮಾನ್ಯವಾಗಿ ಕುರಿಮಾಂಸದೊಂದಿಗೆ ತರಕಾರಿಗಳು ಇರುತ್ತಿದ್ದವು. ಉಟದ ನಂತರ ಡೆಸರ್ಟ್ ಬದಲು ಹಣ್ಣುಗಳನ್ನು ಕೊಡಲಾಗುತ್ತಿದ್ದಿತು. ದ್ರಾಕ್ಷಿಯನ್ನು ಬಹು ಇಷ್ಟಪಡುತ್ತಿದ್ದ ಸ್ವಾಮಿಗಳಿಗೆ ಕೆಲವು ಹಣ್ಣುಗಳು ರುಚಿಸುತ್ತಿರಲಿಲ್ಲ ಎಂದು ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ನೆನೆಪಿಸಿಕೊಂಡಿದ್ದಾಳೆ. (56) ಕ್ಯಾಲಿಫೋರ್ನಿಯಾದ ಪಸಡೆನದ ಹೋಂ ಆಫ್ ಟ್ರುಥ್’ನಲ್ಲಿದ್ದ ಇಬ್ಬರು ಹೆಣ್ಣಾಳುಗಳಲ್ಲಿ ಮೊಲಿ ರಾಂಕಿನ್ ಎಂಬಾಕೆ ಅಧ್ಯಾತ್ಮಿಕ ವ್ಯಕ್ತಿಗಳು ಅಪರೂಪವಾಗಿ ಉಣ್ಣುತ್ತಾರೆ , ಎಂದಿಗೂ ಮಾಂಸ ತಿನ್ನುವುದಿಲ್ಲ ಮತ್ತು ಧೂಮಪಾನ ಮಾಡುವುದಿಲ್ಲ , ರೋಗಪೀಡಿತರಾಗುವುದಿಲ್ಲ ಎಂದು ಭಾವಿಸಿದ್ದಳು. ಸ್ವಾಮಿಗಳು ನನಗೆ ಮಾಂಸ ಬೇಕು , ಬಟಾಟೆ , ಅಸ್ಪರಾಗಸು ಬೇಡ ಎಂದು ಹೋಂ ಆಫ್ ಟ್ರುಥ್’ನ ಶ್ರೀಮತಿ ಮತ್ತು ಶ್ರೀ ರೂರ್’ಬಾಖ್ಸ್’ಗೆ ತಿಳಿಸಿದ್ದರು. ಶುದ್ಧ ಸಸ್ಯಾಹಾರಿಗಳಾಗಿದ್ದ ಆ ದಂಪತಿ ಸ್ವಾಮಿಗಳಿಗೆ ಮಾಂಸಾಹಾರ , ಸಿಗರೆಟ್ ಒದಗಿಸಿದ್ದರು. (57) ಶ್ರೀಮಂತರ ಅದ್ದೂರಿ ಔತಣ ಕೂಟಗಳಲ್ಲಿ ಮದ್ಯಪಾನ ಸಾಮಾನ್ಯವಾಗಿರುತ್ತಿದ್ದಿತು. ಸ್ವಾಮಿಗಳು ಇಂತಹ ಒಂದು ಔತಣ ಕೂಟದಲ್ಲಿ ಷಾಂಪೇನ್ ಸೇವಿಸುವುದನ್ನು ಕಂಡು ಜುಗುಪ್ಸೆಗೊಂಡಿದ್ದ ಲೇಡಿ ಹೆನ್ರಿ ಸಾಮರ್’ಸೆಟ್ ಸ್ವಾಮಿಗಳಿಗೆ ಪತ್ರ ಬರೆದು ಲಂಡನ್’ಗೆ ಬಂದಾಗ ಅವರಿಂದ ದೂರವಿರುವುದಾಗಿ ತಿಳಿಸಿದ್ದಳು. ಇದು ಸಾರಾ ಬುಲ್’ಗೆ ತಿಳಿದು ಬಂದಿದ್ದು ಸ್ವಾಮಿಗಳ ಅಭ್ಯಾಸಗಳನ್ನು ಕುರಿತಾಗಿ ೨೨/೮/೧೮೯೫ ರಂದು ಲೇಡಿ ಹೆನ್ರಿ ಸಾಮರ್’ಸೆಟ್’ಗೆ ಸುದೀರ್ಘ ಪತ್ರ ಬರೆದು ಅವರ ದೌರ್ಬಲ್ಯಗಳನ್ನು ಸಹಜವೆಂಬಂತೆ ಒಪ್ಪಿ ಲಂಡನ್’ನಲ್ಲಿ ಈ ವಿಷಯಗಳ ಆಧಾರದ ಮೇಲೆ ಎದುರಾಳಿಗಳು ದಾಳಿ ಮಾಡುವುದನ್ನು ತಪ್ಪಿಸಲು ಇಂತಹ ಸಂಗತಿಗಳಿಗೆ ಮಾನ್ಯತೆ ನೀಡಬಾರದೆಂದು ಕೋರಿದ್ದಳು. ಜನಾಂಗೀಯ ತಾರತಮ್ಯದ ಮೇಲೆ ಸ್ವಾಮಿಗಳ ಈ ಅಭ್ಯಾಸಗಳನ್ನು ಋಣಾತ್ಮಕವಾಗಿ ನೋಡಲಾಗುತ್ತಿದೆ ಎನ್ನುವ ವಿವರಣೆ ನೀಡಿದ್ದಳು. (58) ಮಾಂಸಾಹಾರದ ಪರ ಮತ್ತು ವಿರೋಧದ ಚರ್ಚೆ , ವಾದ-ವಿವಾದಗಳು ಬಹು ಹಿಂದಿನಿಂದಲೂ ಜರುಗಿವೆ. ಸ್ವಾಮಿಗಳ ವಿಷಯದಲ್ಲಿ ಇದು ಅವರು ಮಾಂಸ ತಿನ್ನುತ್ತಿದ್ದಾರೆ ಎನ್ನುವುದಕ್ಕಿಂತ ಅವರಿಗೆ ಊಟದ ಮೇಲೆ ನಿಯಂತ್ರಣ ಇಲ್ಲ ಎನ್ನುವುದೇ ಮುಖ್ಯ ಆಕ್ಷೇಪವಾಗಿದ್ದಿತು. ತಮ್ಮ ಕೈಲಾಗದನ್ನು ಇತರರಿಗೆ ಬೋಧಿಸಲು ಸ್ವಾಮಿಗಳೇನು ಹಿಂಜರಿಯುತ್ತಿರಲಿಲ್ಲ. ಮಾರ್ಚ್ ೧೮೯೪ ರಲ್ಲಿ ಅಖಂಡಾನಂದರಿಗೆ ‘ ನೀವು ತೆಗೆದುಕೊಳ್ಳುವ ಆಹಾರದ ಬಗ್ಗೆ ಜನ ದೂರಿದರೆ ಆ ಆಹಾರವನ್ನು ತ್ಯಜಿಸಿರಿ. ಪರೋಪಕಾರಕ್ಕಾಗಿ ಹುಲ್ಲನ್ನಾದರೂ ತಿನ್ನುವುದು ಮೇಲು. ಕಾವಿಯ ಬಟ್ಟೆ ಭೋಗಕ್ಕಲ್ಲ ‘ ಎನ್ನುವ ಭಾರಿ ಉಪದೇಶ ಮಾಡಿದ್ದರು. ಪಾಶ್ಚಾತ್ಯ ದೇಶದಲ್ಲಿ ಭಾರತದಂತೆ ಸಸ್ಯಾಹಾರವನ್ನು ತಿಂದು ಬದುಕಲು ಸಾಧ್ಯವಿಲ್ಲ ಎನ್ನುವುದು ಸ್ವಾಮಿಗಳ ವಾದವಾಗಿದ್ದಿತು. ಆದರೆ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ವೀರಚಂದ ಗಾಂಧಿ ಸಸ್ಯಾಹಾರ ಬಿಟ್ಟು ಬೇರೆ ಏನನ್ನೂ ಮುಟ್ಟಿರಲಿಲ್ಲ. ೧೮೯೬ರಲ್ಲಿ ಲಂಡನ್’ನಲಿರುವಾಗ ಸ್ವಾಮಿಗಳು, ಅವರ ತಮ್ಮ ಮಹೇಂದ್ರನಾಥ ದತ್ತ , ಶಾರದಾನಂದ ಮಾಂಸಹಾರಿಗಳಾಗಿದ್ದರೆ ಮಾಂಸಾಹಾರದ ಮೇಲೆ ಯಾವ ನಿಷೇಧವೂ ಇಲ್ಲದ ಧರ್ಮ ಮತ್ತು ಸಮಾಜಕ್ಕೆ ಸೇರಿದ್ದ ಲಂಡನ್ ವಾಸಿಗಳಾದ ಎಡ್ವರ್ಡ್ ಸ್ಟರ್ಡಿ ಮತ್ತು ಹೆನ್ರಿಯೆಟ್ಟಾ ಮುಲ್ಲರ್ ಮೊಟ್ಟೆಯನ್ನೂ ಮುಟ್ಟದ ಶುದ್ಧ ಶಾಖಾಹಾರಿಗಳಾಗಿದ್ದರು. ಜೆ.ಜೆ ಗುಡ್ವಿನ್ ಸಸ್ಯಾಹಾರಿಯಾಗಿ ಬದಲಾಗಿದ್ದನು. ಕ್ಯಾಲಿಫೋರ್ನಿಯಾದಲ್ಲಿ ಸ್ವಾಮಿಗಳಿಗೆ ಆತಿಥ್ಯ ನೀಡಿದ್ದ ಹೋಂ ಆಫ್ ಟ್ರುಥ್’ನ ಎಲ್ಲ ಸದಸ್ಯರೂ ಶುದ್ಧ ಶಾಖಾಹಾರಿಗಳಾಗಿದ್ದರು. (59) ಅಮೆರಿಕದಲ್ಲಿ ವೆಜೆಟೇರಿಯನ್ ಕ್ಲಬ್’ಗಳು ಸಾಕಷ್ಟಿದ್ದವು. ಮಾಂಸದೂಟದಂತೆ ಸ್ವಾಮಿಗಳನ್ನು ಸೆಳೆದಿದ್ದ ಇನ್ನೊಂದು ಪಾಶ್ಚಾತ್ಯ ಸ್ವಾದಿಷ್ಟ –ಐಸ್ ಕ್ರೀಂ. ೧೮೯೯ ರಲ್ಲಿ ರಿಡ್ಜ್’ಲಿ ಮ್ಯಾನೊರ್’ನಲ್ಲಿರುವಾಗ ಊಟ ಮುಗಿಸಿ ಹೊರಹೋಗುತ್ತಿದ್ದ ಸ್ವಾಮಿಗಳು ‘ಐಸ್ ಕ್ರೀಮ್’ ಶಬ್ದ ಕೆಳಿದ ತಕ್ಷಣ ಚುರುಕಾಗಿ ಹಿಂದಕ್ಕೆ ಬರುತ್ತಿದ್ದರು. ಮಕ್ಕಳಂತೆ ಐಸ್ ಕ್ರೀಮ್ ಬರುವುದನ್ನು ನಸುನಗುತ ಕಾತರದಿಂದ ಕಾಯುತ್ತಿದ್ದರು , ಅವರಿಗೆ ಚಾಕೊಲೆಟ್ ಐಸ್ ಕ್ರೀಮ್ ಎಂದರೆ ಪ್ರಾಣ ಎಂದು ಲೇಡಿ ಬೆಟ್ಟಿ , ಮೌಡ್ ಸ್ಟುಮ್ ನೆನಪಿಸಿಕೊಂಡಿದ್ದಾರೆ. ಶ್ರೀಮತಿ ಅಲನ್ ಮತ್ತು ಶ್ರೀಮತಿ ಇಡಾ ಅನ್’ಸೆಲ್ ಸ್ವಾಮಿಗಳ ಐಸ್ ಕ್ರೀಮ್ ಪ್ರೀತಿಯ ಹಲವು ಘಟನೆಗಳನ್ನು ನೀಡಿದ್ದಾರೆ. ಸ್ವಾಮಿಗಳು ಕೆಲವೊಮ್ಮೆ ಬಿಸಿ ಊಟಕ್ಕಿಂತ ತಂಪು ಐಸ್ ಕ್ರೀಮ್ ಬಯಸುತ್ತಿದ್ದರು. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಸ್ಯಾನ್ ಪ್ರಾನ್ಸಿಸ್ಕೊದ ಸಾಯಂಕಾಲಗಳು ಗಾಳಿ , ಚಳಿಯಿಂದ ಕೂಡಿರುತ್ತಿದ್ದವು. ಆಗಲೂ ಸ್ವಾಮಿಗಳು ಐಸ್ ಕ್ರೀಮ್ ಬಿಡುತ್ತಿರಲಿಲ್ಲ. ಒಮ್ಮೆ ಸಾಯಂಕಾಲ ಉಪನ್ಯಾಸ ಮುಗಿದ ನಂತರ ಸ್ಯಾನ್ ಫ್ರಾನ್ಸಿಸ್ಕೊದ ಪೊವೆಲ್ ಸ್ಟ್ರೀಟ್’ನಲ್ಲಿದ್ದ ಐಸ್ ಕ್ರೀಂ ಪಾರ್ಲ’ಗೆ ಎಂಟು ಜನ ಅಭಿಮಾನಿ/ಶಿಷ್ಯೆಯರನ್ನು ಕರೆದೊಯ್ದರು. ಅಂಗಡಿ ತಲುಪಿದಾಗ ಎಲ್ಲರಿಗೂ ಐಸ್ ಕ್ರೀಮ್ ಕೇಳಲಾಯಿತು. ಅಲ್ಲಿದ್ದ ಕೆಲಸದವಳು ತಪ್ಪಾಗಿ ತಿಳಿದು ೯ ಐಸ್ ಸೋಡಾ ತಂದಳು. ಈ ಐಸ್ ಸೋಡಾ ಸ್ವಾಮಿಗಳು ಸೇರಿದಂತೆ ಯಾರಿಗೂ ಇಷ್ಟವಿರಲಿಲ್ಲ. ಐಸ್ ಸೋಡಾ ಬದಲು ಐಸ್ ಕ್ರೀಂ ತರಲು ಕೆಲಸದಾಕೆ ಒಳಹೋಗತೊಡಗಿದಳು. ಇದನ್ನು ಕಂಡ ಅಂಗಡಿಯ ಮಾಲಿಕ ಆಕೆಯನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಾರಂಭಿಸಿದನು. ಆಗ ಸ್ವಾ,ಮಿಗಳು ಆತನನ್ನು ತಡೆದು ತಾವೇ ೯ ಐಸ್ ಸೊಡಾ ಕಬಳಿಸಿದರು. (60) ಅಲಮೆಡದಲ್ಲಿ ಹೋಂ ಆಫ್ ಟ್ರುಥ್’ನಲ್ಲಿ ಒಂದು ದಿನ ಬೆಳಗಿನ ಉಪಾಹಾರಕ್ಕೆ ತಂದಿiದ್ದ ಬೆಣ್ಣೆ ಮಾಯವಾಗಿದ್ದಿತು. ಉಪಾಹಾರದ ಸಮಯದಲ್ಲಿ ಬೆಣ್ಣೆ ಕಣ್ಮರೆಯಾದ ಬಗ್ಗೆ ತೀವ್ರ ಚರ್ಚೆ ನಡೆದಿತು. ಆಲ್ಲಿದ್ದವರೆಲ್ಲರೂ ತಮ್ಮ ಊಹಾಪೋಹಗಳನ್ನು ತೇಲಿಬಿಡುವವರೆಗೆ ಸುಮ್ಮನಿದ್ದ ಸ್ವಾಮಿಗಳು ಕೊನೆಗೆ ಬೆಳಿಗ್ಗೆ ಎಲ್ಲವನ್ನೂ ತಾವೇ ತಿಂದೆವೆಂದು ತಣ್ಣನೆಯ ಧ್ವನಿಯಲ್ಲಿ ತಿಳಿಸಿದರು. (61) ನಾನು ಸಂನ್ಯಾಸಿ ಎಲ್ಲಿ , ಯಾರ ಕಡೆಯಿಂದ ಏನನ್ನು ಬೇಕಾದರೂ ತಿನ್ನಬಹುದು ಎನ್ನುತ್ತಿದ್ದರು.ಅಲಮೆಡದ ಚೈನಾ ಟೌನ್’’ನಲ್ಲಿದ್ದ ಒಂದು ಅತ್ಯುತ್ತಮ ರೆಸ್ಟೋರೆಂಟ್’ನಲ್ಲಿ ಶ್ರೀ ಚಾರ್ಲ್ಸ್ ಪಿ. ನೀಲಸನ್ ಸ್ವಾಮಿಗಳನ್ನು ಊಟಕ್ಕೆ ಕರೆದೊಯ್ದಿದ್ದನು. ಊಟವನ್ನು ಮುಂಚಿತವಾಗಿ ಆದೇಶಿಸಲಾಗಿದ್ದಿತು. ಅತಿಥೇಯರೆಲ್ಲರು ಸೇರಿದ ನಂತರ ಬಾಣಸಿಗ ಅವರನ್ನು ಸ್ವಾಗತಿಸಲು ಹೊರಗೆ ಬಂದನು. ಆತನನ್ನು ನೋಡಿದ ತಕ್ಷಣ ಸ್ವಾಮಿಗಳು ಆತ ಮಾಡಿದ ಅಡುಗೆ ಉಣ್ಣಲು ನಿರಾಕರಿಸಿದರು. ಇದರಿಂದ ನೀಲ್ಸನ್’ಗೆ ಬಹಳ ನಿರಾಶೆಯಾಯಿತು. ಬಾಣಸಿಗನ ಚಾರಿತ್ರ್ಯ ಸರಿ ಇಲ್ಲದಿರುವುದರಿಂದ ತಮಗೆ ಉಣ್ಣಲು ಸಾದ್ಯವಿಲ್ಲವೆಂದು ಸ್ವಾಮಿಗಳು ತಿಳಿಸಿದರು. ಇನ್ನೊಂದು ಸಲ ಫ್ರೆಂಚ್ ರೆಸ್ಟೊರೆಂಟ್’ನಲ್ಲಿ ಕರಿದ ಸೀಗಡಿ ಮೀನುಗಳನ್ನು ಸ್ವಾಮಿಗಳು ತಿಂದರು . ಮನೆಗೆ ಬಂದ ನಂತರ ವಾಂತಿ ಮಾಡಿಕೊಂಡರು. ಅಲೈಸ್ ಹ್ಯಾನ್ಸ್’ಬ್ರೋ ಅಜೀರ್ಣದಿಂದ ಹಾಗಾಗಿರಬಹುದು ಎಂದಾಗ ಇಲ್ಲ ಅಡಿಗೆಯವನ ಚಾರಿತ್ರ್ಯವೇ ಇದಕ್ಕೆ ಕಾರಣವೆಂದು ತಿಳಿಸಿದರು. (62) ಬಾಣಸಿಗ : ಭಾರತದ ಖಾರದ ಮೂಲ ಮೆಣಸು (ಕಾಳು). ಪೋರ್ಚುಗೀಸರು ಭಾರತಕ್ಕೆ ಬಂದು ಕಾಯಿ ಮೆಣಸು (ಮೆಣಸಿನ ಕಾಯಿ) ಪರಿಚಯಿಸಿದರು. ಕಾಲಾನುಕ್ರಮದಲ್ಲಿ ಅಗ್ಗದ ಮೆಣಸಿನ ಕಾಯಿ ಕಾಳು ಮೆಣಸಿನ ಜಾಗವನ್ನು ಆಕ್ರಮಿಸಿತು. ಭಾರತದ ಜನ ಮಸಾಲೆ ಪ್ರಿಯರು. ಸಂನ್ಯಾಸಿಯಿರಲಿ , ಸಂಸಾರಿಯಿರಲಿ ಭಾರತೀಯರಿಗೆ ಪಾಶ್ಚಾತ್ಯ ಊಟ-ಸಸ್ಯ, ಮಾಂಸ ಯಾವುದೇ ಇರಲಿ-ಸಪ್ಪೆ ಎನಿಸುತ್ತವೆ. ಅವರ ಬ್ರೆಡ್ , ಬನ್ , ಮಾಂಸ ಸೇರಿದಂತೆ ಹೆಚ್ಚಿನ ಅಡುಗೆಗಳು ಕೆಲ ದಿನಗಳಲ್ಲಿಯೇ ಏಕತಾನತೆಯಿಂದ ವಾಕರಿಕೆ ತರಿಸತೊಡಗುತ್ತವೆ. ಆದ್ದರಿಂದ ಸ್ವಾಮಿಗಳು ಸೇರಿದಂತೆ ಅಮೆರಿಕ , ಲಂಡನ್ ಸೇರಿದಂತೆ ಪಾಶ್ಚಾತ್ಯ ದೇಶಗಳಿಗೆ ಹೋಗುತ್ತಿದ್ದವರು ಭಾರತೀಯ ಶೈಲಿಯಲ್ಲಿ ಅಡುಗೆ ಮಾಡಿಕೊಳ್ಳಲು ಹಿಟ್ಟು , ಮಸಾಲೆ , ಚಟ್ನಿ ಪುಡಿ ಮುಂತಾದವುಗಳನ್ನು ಒಯ್ಯುತ್ತಿದ್ದರು. ಬಾಯಿ ಕೆಟ್ಟಾಗ , ನಾಲಗೆ ಮರಗಟ್ಟಿದಾಗ ಭಾರತದ ಖಾರ ನಾಲಿಗೆಯನ್ನು ಚುರುಕುಗೊಳಿಸಿ , ಕಣ್ಣಲ್ಲಿ ನೀರು ತರಿಸಿಕೊಂಡಾಗ ಸಂತೃಪ್ತಿ ಬರುತ್ತಿದ್ದಿತು. ಸ್ವಾಮಿಗಳು ಅಮೆರಿಕದಲ್ಲಿ ಅತಿಥೇಯರ ಮನೆಯಲ್ಲಿರುವಾಗ ಅವರು ಸಿದ್ಧಪಡಿಸಿ ನೀಡಿದ ಊಟವನ್ನು ಮಾಡುತ್ತಿದ್ದರು. ಉಳಿದಂತೆ ಅವಕಾಶ ಸಿಕ್ಕಾಗಲೆಲ್ಲ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ತಂದೆಯಿಂದ ಅವರಿಗೆ ಬಾಣಸಿಗತನದಲ್ಲಿ ಅಭಿರುಚಿ ಬಾಲ್ಯದಿಂದಲೇ ಬಂದಿದ್ದಿತು. ನ್ಯೂಯಾರ್ಕ್’ನಲ್ಲಿ ಲಿಯಾನ್ ಲ್ಯಾಂಡ್ಸ್’ಬರ್ಗ್ ಜೊತೆ ೫೪ ಪಶ್ಚಿಮ ೩೩ನೇ ಬೀದಿಯ ಕಟ್ಟಡ ( ೧೮೯೫ : ೨೬ ಫೆಬ್ರವರಿ-ಮಾರ್ಚ್ ೧೨, ಮಾರ್ಚ್ ೨೩-ಜೂನ್ ೩) , ಲಂಡನ್ ೮೦, ಓಕ್ಲೆ ಸ್ಟ್ರೀಟ್’ ( ೧೮೯೫ : ಅಕ್ಟೋಬರ್ ೨೯-ನವೆಂಬರ್ ೨೬) , ನ್ಯೂಯಾರ್ಕ್ ೨೨೮ ಪಶ್ಚಿಮ ೩೯ ಸ್ಟ್ರೀಟ್ ( ೧೮೯೫: ಡಿಸೆಂಬರ್ ೬- ಡಿಸೆಂಬರ್ ೨೩ , ೧೮೯೬ : ಜನವರಿ ೩ – ಮಾರ್ಚ್ ೨ ) , ಲಂಡನ್ ೬೩ , ಸೇಂಟ್ ಜಾರ್ಜ್ ರಸ್ತೆಯಲ್ಲಿರುವಾಗ ( ೧೮೯೬ : ಮೇ ೧ –ಜುಲೈ ೧೮) , ಲಂಡನ್ ಗ್ರೇ ಕೋಟ್ ಗಾರ್ಡನ್ಸ್ ( ೧೮೯೬ : ಅಕ್ಟೋಬರ್ ೧೦ –ಡಿಸೆಂಬರ್ ೧೫ ) ಸ್ವಾಮಿಗಳು ಸ್ವಂತ ಬಾಡಿಗೆ ಕಟ್ಟಡದಲ್ಲಿದ್ದು ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಇದಲ್ಲದೆ ಥೌಸಂಡ್ ಐಲ್ಯಾಂಡ್ ಪಾರ್ಕ್ (೧೮೯೫ : ಜೂನ್ ೧೮- ಆಗಸ್ಟ್ ೬) , ದಕ್ಷಿಣ ಪಸಡೆನ ಮೀಡ್ ಸೋದರಿಯರ ಮನೆ ( ೧೯೦೦ : ಜನವರಿ ೨೫- ಫೆಬ್ರವರಿ ೨೦ ) , ಸ್ಯಾನ್ ಫ್ರಾನ್ಸಿಸ್ಕೊ – ಟರ್ಕ್ ಸ್ಟ್ರೀಟ್ ಬಾಡಿಗೆ ಮನೆ ( ೧೯೦೦ : ಮಾರ್ಚ್ ೮ –ಏಪ್ರಿಲ್ ೧೦) ಸ್ವಾಮಿಗಳಿಗೆ ಅಡುಗೆ ಕೈಚಳಕ ತೋರಿಸಲು ಅವಕಾಶ ಕೊಟ್ಟಿದ್ದವು. ಥೌಸಂಡ್ ಐಲ್ಯಾಂಡ್ ಪಾರ್ಕ್’ನಲ್ಲಿರುವಾಗ ಸ್ವಾಮಿಗಳ ಅಡುಗೆ ಮಾಡುತ್ತೇನೆ ಎಂದಾಗ ಅವರ ಸಂನ್ಯಾಸಿ ಶಿಷ್ಯ ಲಿಯಾನ್ ಲ್ಯಾಂಡ್ಸ್’ಬರ್ಗ್ (ಕೃಪಾನಂದ) ಭಾರತೀಯ ಮಸಾಲೆಗಳನ್ನು ಹಾಕಿ ಮಾಡುತ್ತಿದ್ದ ಪಾತ್ರೆಗಳನ್ನು ತಿಕ್ಕಿ ತೊಳೆಯುವುದನ್ನು ನೆನಪಿಸಿಕೊಂಡು ನಡುಗುತ್ತಿದ್ದನು. ನಾನು ಲ್ಯಾಂಡ್ಸ್’ಬರ್ಗ್ ಅನ್ನ , ಪಲ್ಯ , ಸ್ವಲ್ಪ ಕಾಳು ಹೀಗೆ ಏನಾದರೂ ಬೇಯಿಸಿಕೊಂಡು ತಿನ್ನುತ್ತಿದ್ದೇವೆ ಎಂದು ಸ್ವಾಮಿಗಳು ತಿಳಿಸಿದ್ದರು. (೧೪/೨ ಮತ್ತು ೧೫/೩/೧೮೯೫) . ಪಸಡೆನದಲ್ಲಿ ಮೀಡ್ ಸೋದರಿಯರ ಮನೆಯಲ್ಲಿರುವಾಗ ಸ್ವಾಮಿಗಳು ಪಂಚೆ ಕಟ್ಟಿ ಅಡುಗೆಗೆ ಇಳಿಯತ್ತಿದ್ದರು. ಸ್ವಾಮಿಗಳು ಚಪಾತಿಯನ್ನು ಮಾಡುತ್ತಿದ್ದರು. ಅಡುಗೆ ಮನೆಯ ನೆಲ್ಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತು ಕಟ್ಟಿಗೆಯ ಬೋಗುಣಿಯಲ್ಲಿ ಮಸಾಲೆ ಅರೆಯುತ್ತಿದ್ದರು. ಒಗ್ಗರಣೆ ಕೊಡುವ ಮೊದಲು ಸ್ವಾಮಿಗಳು ‘ಈಗ ತಾತ ಬರುತ್ತಿದ್ದಾನೆ. ಎಲ್ಲ ಹೊರಕ್ಕೆ’ ಎನ್ನುತ್ತಿದ್ದರು , ಮಸಾಲೆಯ ಕಟು ವಾಸನೆ ತಾಳದ ಅಮೆರಿಕನ್ ಹೆಂಗಸರು ಅಡುಗೆ ಮನೆಯಿಂದ ಹೊರಗೆ ಓಡುತ್ತಿದ್ದರು. ಸ್ವಾಮಿಗಳು ಮಾಡುತ್ತಿದ್ದ ವಿವಿಧ ಬಗೆಯ ಪಲ್ಯ , ಸಾರುಗಳನ್ನು ಗುರುತಿಸಲಾಗದೆ ಶ್ರೀಮತಿ ಅಲೈಸ್ ಹ್ಯಾನ್ಸ್’ಬ್ರೋ ಅವುಗಳನ್ನು ‘ಕರಿ’ಗಳೆಂದು ಕರೆದಿದ್ದಾಳೆ. ಕ್ಯಾಂಪ್ ಟೇಲರ್’ನಲ್ಲಿರುವಾಗ ಸ್ವಾಮಿಗಳು ಗುಡಾದೊಳಗೆ ನೆಲದ ಮೇಲೆ ಕುಳಿತುಕೊಂಡು ಕಲ್ಲಿನ ಮೇಲೆ ಮಸಾಲೆ ಅರೆದು ಖಾರದ ಸಾರು ಮಾಡಿಕೊಳ್ಳುತ್ತಿದ್ದರು. ಅದು ಯಂತ್ರದಲ್ಲಿ ರುಬ್ಬಿದ್ದಕ್ಕಿಂತಲೂ ನಯವಾಗಿರತ್ತಿದ್ದಿತೆಂದು ಜೊತೆಗಿದ್ದ ಹೆಂಗಸರು ನೆನೆದಿದ್ದಾರೆ. (63) , ನಿನಗೆ ಅಡುಗೆ ಮಾಡಲುಬರದು. ಬ್ಯಾಟಲ್ ಕ್ರೀಕ್ ಪದಾರ್ಥಗಳನ್ನು ತಂದರೆ ನಾನು ಅಡುಗೆ ಮಾಡುತ್ತೇನೆ. ನೀನು ಪಾತ್ರೆ ತೊಳೆ ಎಂದು ಕ್ರಿಸ್ಟೈನಾ ಗ್ರೀನ್’ಸ್ಟೈಡಲ್’ಗೆ ತಿಳಿಸಿದ್ದರು. ನ್ಯೂಯಾರ್ಕ್’ನಲ್ಲಿ ೫೪ ಪಶ್ಚಿಮ ೩೩ನೇ ಬೀದಿಯ ಕಟ್ಟಡದಲ್ಲಿ ಸ್ವಾಮಿಗಳು ಮತ್ತು ಲಿಯಾನ್ ಲ್ಯಾಂಡ್ಸ್ಬರ್ಗ್’ ಒಟ್ಟಿಗೆ ಇದ್ದರು. ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಲು ಊಟವೂ ಒಂದು ಕಾರಣವಾಗಿದ್ದಿತು. ಸ್ವಾಮಿಗಳ ಹಿತೈಷಿಗಳು ಅವರ ಆರೋಗ್ಯ ಸುಸ್ಥಿಯಲ್ಲಿಯಲ್ಲಿರಲು ಅವರು ಮನೆಯಲ್ಲಿ ಅಡುಗೆ ಮಾಡಿ ಉಣ್ಣುವುದೇ ಸರಿ ಎಂದು ತಿಳಿಸಿದ್ದರು. ಇದಕ್ಕಿಂತ ಬೇರೆಯಾಗಿ ಉನ್ನತ ಸಾಧನೆಯನ್ನು ಗುರಿಯಾಗಿಸಿಕೊಂಡಿರುವ ಯೋಗಿಯೊಬ್ಬನು ದಿನದ ಹೆಚ್ಚಿನ ಸಮಯ ಯಾವ ಅಡುಗೆ ಮಾಡಬೇಕು , ಎಷ್ಟು ಅಡುಗೆ ಮಾಡಬೇಕು , ಯಾರು ಪಾತ್ರೆ ತೊಳೆಯಬೇಕು ಎನ್ನುವಂತಹ ವಿಚಾರಗಳನ್ನು ಚರ್ಚಿಸುತ್ತ ಕಳೆಯುವುದರಲ್ಲಿ ಅರ್ಥವಿಲ್ಲ. ಅದರ ಬದಲು ಯಾವುದಾದರೂ ಹೋಟೆಲ್’ಗೆ ಹೋಗಿ ಏನನ್ನಾದರೂ ತಿಂದು ಬರುವುದೇ ಸರಿ ಎನ್ನುವುದು ಕೃಪಾನಂದನ ಅಭಿಪ್ರಾಯವಾಗಿದ್ದಿತು. (64) ಲಿಯಾನ್ ಲ್ಯಾಂಡ್ಸ್’ಬರ್ಗ್ (ಕೃಪಾನಂದ) ಸ್ವಾಮಿಗಳನ್ನು ತೊರೆದು ಬೇರೆ ವಸತಿ ಮಾಡಿಕೊಳ್ಳುವಲ್ಲಿ ಈ ಕಾರಣವೂ ಮುಖ್ಯವಾದುದಾಗಿದ್ದಿತು. ಸಾತ್ತ್ವಿಕ ಆಹಾರದ ಬಗ್ಗೆ ಸ್ವಾಮಿಗಳು ಬಹಳ ಹೇಳುತ್ತಿದ್ದರು. ಭಗವದ್ಗೀತೆಯಲ್ಲಿ ಕಹಿ , ಹುಳಿ , ಹೆಚ್ಚು ಉಪ್ಪು , ಖಾರ , ಬಿಸಿಯಿರುವ , ಹುರಿದಿರುವ , ಉರಿಯುಂಟು ಮಾಡುವ ಪದಾರ್ಥಗಳು ರಾಜಸ ಎಂದು ಹೇಳಿರುವುದು ಸ್ವಾಮಿಗಳಿಗೆ ಚೆನ್ನಾಗಿ ಗೊತ್ತಿದ್ದಿತು (೧೭/೭). ಆದರೂ ಸ್ವಾಮಿಗಳ ಖಾರ ಸೇವನೆ ದಂತಕಥೆಯ ಆಗಿದ್ದಿತು. ಹರಿಪದ ಮಿತ್ರರು ಸ್ವಾಮಿಯವರನ್ನು ಕುರಿತಾದ ತಮ್ಮ ನೆನಪುಗಳನ್ನು ಬಂಗಾಳಿಯಲ್ಲಿ ಬರೆದಿದ್ದಾರೆ. ಇವು ‘ಸ್ವಾಮಿಜೀರ್ ಕಥ’ ಮತ್ತು ‘ಬಾಣಿ ಓ ರಚನ’ದಲ್ಲಿ ದಾಖಲಾಗಿವೆ. ಇವುಗಳ ಅನುವಾದಗಳು ‘ದಿ ಲೈಫ್-೧೯೧೪’ ಮತ್ತು ‘ರೆಮಿನಿಸೆನ್ಸ್’ ಕೃತಿಗಳಲ್ಲಿ ಕಾಣಿಸಿಕೊಂಡಿವೆ. ಇವು ಮೂಲಗಳಿಗೆ ನಿಷ್ಟವಾಗಿರದೆ ಅನುಕೂಲಕರವಾಗುವಂತೆ ಬದಲಿಸಲಾಗಿದೆ ಎನ್ನುವುದನ್ನು ವಿದ್ವಾಂಸರು ಈಗಾಗಲೇ ಗುರುತಿಸಿದ್ದಾರೆ. ಸ್ವಾಮಿಗಳು ಮೆಣಸು , ಹಸಿ ಮೆಣಸಿನ ಕಾಯಿ ಮುಂತಾದ ಕಟು ಪದಾರ್ಥಗಳನ್ನು ಅಧಿಕವಾಗಿ ತಿನ್ನುತ್ತಿದ್ದರು. ಈ ಕುರಿತಾಗಿ ಹರಿಪದ ಮಿತ್ರರು ಸ್ವಾಮಿಯವರನ್ನು ಪ್ರಶ್ನಿಸಿದಾಗ ಅವರು ‘ ಅಲೆಮಾರಿ ಜೀವನದಲ್ಲಿ ಯಾರದೋ ಊಟ, ಎಲ್ಲಿಯದೋ ನೀರು ಕುಡಿಯಬೇಕಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಪರಿಹಾರವಾಗಿ ಇತರ ಅಲೆಮಾರಿ ಸಾಧುಗಳು ಗಾಂಜಾ, ಭಂಗಿಗಳಿಗೆ ಮೊರೆಹೋಗುತ್ತಾರೆ.ಅದರ ಬದಲು ನಾನು ಮೆಣಸಿನಕಾಯಿಗೆ ಮೊರೆಹೋಗಿದ್ದೇನೆ’ ಎಂದು ಹೇಳಿದರು ಎಂದು ಬರೆದಿದ್ದಾರೆ. ಆದರೆ ಮಹೇಂದ್ರನಾಥದತ್ತ ಸ್ವಾಮಿಯವರು ಮೆಣಸು, ಮೆಣಸಿನಕಾಯಿಯ ಅತಿ ಸೇವನೆಗೆ ಬೇರೆಯದೇ ಆದ ಕಾರಣ ಕೊಟ್ಟಿದ್ದಾರೆ. ಲಂಡನ್’ನಲ್ಲಿ ಒಮ್ಮೆ ಸ್ವಾಮಿಯವರು ಹಸಿ ಮೆಣಸಿನಕಾಯಿಗಳನ್ನು ಪೇರಿಸಿಕೊಂಡು ತಿನ್ನುತ್ತಿರುವುದನ್ನು ಗಮನಿಸಿದವರು ಅವರನ್ನು ಪ್ರಶ್ನಿಸಿದಾಗ ಅವರು ನನ್ನ ಜೀವನದಲ್ಲಿ ಅದೆಷ್ಟೋ ಬಾರಿ ಅನ್ನ , ಉಪ್ಪು, ಮೆಣಸಿನ ಕಾಯಿಯೆಂದಲೇ ಜೀವನ ತಳ್ಳಿದ್ದೇನೆ. ಈಗ ಅವೇ ನನ್ನ ಒಡನಾಡಿಗಳು ಎಂದಿದ್ದರು. ಕ್ಯಾಂಪ್ ಟೇಲರ್’ನಲ್ಲಿ ಸ್ವಾಮಿಗಳು ತಾವು ಅರೆದ ಮಸಾಲೆ ಸಾಲದೆಂಬಂತೆ ಕೆಂಪು ಮೆಣಸಿನಕಾಯಿಯನ್ನು ನೆಂಜಿಕೊಳ್ಳುವದನ್ನು ಕಂಡು ಅಮೆರಿಕನ್ ಹೆಂಗಸರು ಬೆರಗಿನಿಂದ ನೋಡುತ್ತಿದ್ದರು. ಸ್ವಾಮಿಗಳ ದೃಷ್ಟಿಯಲ್ಲಿ ಸಂನ್ಯಾಸವೆಂದರೆ ಹೆಣ್ಣು-ಹೊನ್ನಿನಿಂದ ದೂರವಿರುವುದೇ ಆಗಿದ್ದಿತು. ಅದನ್ನು ಅವರು ದಾರಿದ್ರ್ಯ ಮತ್ತು ಬ್ರಹ್ಮಚರ್ಯ ಎನ್ನುವ ಎರಡು ಮಾತಗಳಲ್ಲಿ ಸೆರೆ ಹಿಡಿದಿದ್ದರು. ಆಹಾರ , ಧೂಮಪಾನ , ವಾಸ ಮುಂತಾದ ಸಂಯಮಗಳು ಅದರಲ್ಲಿ ಸೇರಿರಲಿಲ್ಲ. ೧೫/೧೧/೧೮೯೪ ರಂದು ಹರಿದಾಸ ವಿಹಾರಿದಾಸ ದೇಸಾಯಿಯವರಿಗೆ ಬರೆದ ಪತ್ರದಲ್ಲಿ ‘….ಸಂನ್ಯಾಸಿ ತನ್ನ ಸಂನ್ಯಾಸತ್ವದ ಒಂದು ಸಣ್ಣ ಅಂಶವನ್ನು ತನ್ನ ಜೀವನ ವಿಧಾನವನ್ನೂ ಕಳೆದುಕೊಂಡಿಲ್ಲ ಎನ್ನುವ ಭರವಸ ನೀಡಿದ್ದರು. ಸ್ವಾಮಿಗಳು ಅಮೆರಿಕದ ಪತ್ರಿಕೆಗಳಿಗೆ ನೀಡಿದ ಎಲ್ಲ ಸಂದರ್ಶನಗಳಲ್ಲೂ ಈ ಅಂಶವನ್ನೇ ಒತ್ತಿ ಹೇಳಿದ್ದರು. ಅಮೆರಿಕದಲ್ಲಿ ಸ್ವಾಮಿಗಳ ಜೀವನ ಶೈಲಿಯ ಬಗ್ಗೆ ಭಾರತದ ಕ್ರೈಸ್ತ ಪಾದ್ರಿಗಳು ವಿವರಗಳನ್ನು ನೀಡುತ್ತಿದ್ದರು. ಈ ವಿವರಗಳು ಏನಾಗಿದ್ದವೆಂದು ನಮಗೆ ತಿಳಿಯುವುದಿಲ್ಲವಾದರೂ ಅವು ಬಹುತೇಕ ಸ್ವಾಮಿಗಳ ಶ್ರೀಮಂತರ ಮನೆಯ ವಾಸ, ಔತಣ ಕೂಟ ,ಮಾಂಸಾಹಾರ ಸೇವನೆ ಮತ್ತು ಧೂಮಪಾನ ಚಟದ ಬಗ್ಗೆ ಇದ್ದವೆಂದು ಊಹಿಸಬಹುದು. ಪಾದ್ರಿಗಳ ಈ ಆರೋಪಗಳನ್ನು ಅಳಸಿಂಗ ಪೆರುಮಾಳ್ ಸ್ವಾಮಿಗಳ ಗಮನಕ್ಕೆ ತಂದಿದ್ದನು. ಆಗ ಅವರು ‘ನಾನು ಬಡತನ ಮತ್ತು ಬ್ರಹ್ಮಚರ್ಯದಿಂದ ಕದಲಿಲ್ಲ ಎಂದು ಆ ಪಾದ್ರಿ ಹ್ಯೂಮ್'ಗೆ ಹೇಳು’ ಎಂದು ಉತ್ತರಿಸಿದ್ದರು. (೯/೯/೧೮೯೫), ನಿರಂತರ ಧೂಮಪಾನ ಮತ್ತು ಮಾಂಸಾಹಾರ ಸೇವನೆ ಮುಂದಿನ ದಿನಗಳಲ್ಲಿ ಸ್ವಾಮಿಗಳ ಆರೋಗ್ಯ ಹದಗೆಟ್ಟು ಈಗ ಗುರುತಿಸಲಾಗಿರುವ ಜೀವನಶೈಲಿಯ ರೋಗಗಳು ಬರಲು ಕಾರಣವಾಯಿತು. ಸ್ವಾಮಿಗಳು ಮಾಂಸಹಾರ ಸೇವನೆಯನ್ನು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದರು. ಅವರ ಶಿಷ್ಯ ಮತ್ತು ಅಭಿಮಾನಿ ಬಳಗ ಸ್ವಾಮಿಗಳು ಮಾಂಸ ತಿನ್ನುತ್ತಿದ್ದುದರಲ್ಲಿ ಯಾವ ತಪ್ಪಿಲ್ಲ ಎಂದು ಒಂದೇ ಮಾತಿನಲ್ಲಿ ಹೇಳಿದರೆ ಸಾಕಾಗುತ್ತಿದ್ದಿತು. ಅದರ ಬದಲು ಮಾರಿ ಲೂಯಿ ಬರ್ಕೆ ರಾಮಕೃಷ್ಣ ಪರಮಹಂಸರ ಅಭಿಪ್ರಾಯದಂತೆ ಸ್ವಾಮಿಗಳು ಶಾಸ್ತ್ರಗಳಲ್ಲಿ ನಿಷೇಧಿಸಲ್ಪಟ್ಟವುಗಳೂ ಸೇರಿದಂತೆ ಏನು ಬೇಕಾದರೂ ತಿನ್ನಬಹುದು. ಹಾಗೆ ತಿಂದರೂ ಅವರ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಆಗುವುದಿಲ್ಲ ಎನ್ನುವ ಭರವಸೆ ನೀಡಿದ್ದರೆನ್ನುವ ನಗೆಪಾಟಲಿನ ಸಮರ್ಥನೆ ನೀಡಿದ್ದಾರೆ.(65) ಅಭ್ಯಾಸ : ಹತ್ತು , ಹನ್ನೊಂದನೆಯ ವಯಸ್ಸಿನಿಂದಲೇ ನಶ್ಯ ಏರಿಸುವ , ವೀಳ್ಯದೆಲೆ ಮೆಲ್ಲುವ , ಚುಟ್ಟ ಸೇದುವ ಚಟಗಳು ನರೇಂದ್ರಮಾಥನಲ್ಲಿ ಸ್ವಾಮಿಗಳಲ್ಲಿ ಬಿಗಿಯಾಗಿ ಬೇರೂರಿದ್ದವು. ಮಹೇಂದ್ರನಾಥದತ್ತ ತಮ್ಮ ಕುಟುಂಬದಲ್ಲಿ ಎಲ್ಲೆಂದರಲ್ಲಿ ಉಗಿಯುವ ಕೆಟ್ಟ ಚಟವಿದ್ದು ಅದು ನರೇಂದ್ರನಾಥದತ್ತನಿಗೂ ಅಂಟಿಕೊಂಡಿದ್ದಿತು ಎನ್ನುತ್ತಾರೆ. (52) ಹತ್ತು-ಹನ್ನೊಂದನೇ ವಯಸ್ಸಿನಿಂದಲೇ ನಶ್ಯವನ್ನು ಮೂಗಿಗೇರಿಸುವ ಚಟಕ್ಕೆ ನರೇಂದ್ರನಾಥ ಬಿದ್ದಿದ್ದು ನಶ್ಯದ ಖಾರ ಮೂಗಿಗೇರಿದಾಗ ಅದರ ಅರ್ಧ ನಶ್ಯವನ್ನು ಹೊರಗೆಳೆದು ಎಸೆಯುತ್ತಿದ್ದನು. ಮಲಗಿದಾಗ ಹಾಕಿದ ಸೊಳ್ಳೆಪರದೆಯ ಪಕ್ಕದಲ್ಲಿಯೇ ಉಗಿಯುವ ಕೆಟ್ಟ ಚಟವಿದ್ದಿತು. ಸಂನ್ಯಾಸಿಯಾದ ನಂತರವೂ ಈ ಚಟಗಳನ್ನು ನಿಯಂತ್ರಿಸಿಕೊಂಡಿರಲಿಲ್ಲ. ಧೂಮಪಾನವನ್ನು ನಿಯಂತ್ರಿಸುವುದಕ್ಕೂ ಅಧ್ಯಾತ್ಮ ಜೀವನಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಸ್ವಾಮಿಗಳ ಧೃಢ ನಂಬಿಕೆಯಾಗಿದ್ದಿತು. ಬೆಳಗಾವಿಯಲ್ಲಿ ಹರಿಪದ ಮಿತ್ರರ ಮನೆಯಲ್ಲಿರುವಾಗ ಸ್ವಾಮಿಗಳು ನನಗೆ ಚಿಲುಮೆಯಾದರೂ ಸರಿಯೇ , ಚುಟ್ಟವಾದರೂ ಸರಿಯೇ ಅಭ್ಯಂತರವಿಲ್ಲದಿದ್ದಲ್ಲಿ ನಾನು ಯಾರದೇ ಚಿಲುಮೆ , ಚುಟ್ಟ ಬೇಕಾದರೂ ಸೇದಬಲ್ಲೆ ಎಂದು ಹೇಳಿದ್ದರು. ಹರಿಪದ ಮಿತ್ರ ಹುಕ್ಕದಲ್ಲಿ ಸುವಾಸಿತ ನೀರನ್ನು ಹಾಕಿ ಸಿದ್ಧಪಡಿಸಿದ್ದ ತಂಬಾಕನ್ನು ಮೂಸಿ ಅದರ ವಾಸನೆ ಸರಿಯಲ್ಲ ಎಂದಿದ್ದರು. (53) ಮೈಸೂರಿಗೆ ಬಂದಿದ್ದಾಗ ಕಾಣಿಕೆಯಾಗಿ ತಂಬಾಕು ಕೊಳವೆಯೊಂದನ್ನು ಖರೀದಿಸಿದ್ದರು. ಅಮೆರಿಕದಲ್ಲಿ ನಶ್ಯ ಮತ್ತು ಎಲೆ ಇಲ್ಲವಾದರೂ ಅತ್ಯುತ್ತಮ ಚುಟ್ಟಗಳಿಗೆ ಕೊರತೆ ಇರಲಿಲ್ಲ. ೧೬/೩/೧೮೯೪ ರಂದು ಶ್ರೀಮತಿ ಡಬ್ಲ್ಯು ಜಾರ್ಜ್ ಹೇಲ್’ಗೆ ಬರೆದ ಪತ್ರದಲ್ಲಿ ತಾವು ಚುಟ್ಟವನ್ನು ತುಟಿಗಿರಿಸಿಕೊಂಡು ಸೆನೆಟರ್ ಪಾಮರ್ ಮನೆಯಲ್ಲಿ ಹೇಗೆ ಕನಸು ಕಾಣುತ್ತ , ಕರ್ಮ ಕುರಿತಾಗಿ ತಮಗಿರುವ ಹುಚ್ಚನ್ನು ತಾತ್ವಿಕವಾಗಿ ಅರಿಯಲು ಯತ್ನಿಸುವುದಾಗಿ ಮತ್ತು ೧೩/೯/೧೮೯೪ ರಂದು ‘ ಫಾದರ್ ಪೋಪ್’ರ ತುಂಬಿದ ಸಿಗರೆಟ್ ಪೆಟ್ಟಿಗೆ ಹಗಲು , ರಾತ್ರಿ ತೆರೆದಿರುತ್ತಿದ್ದ ಕಾಲದಲ್ಲಿ ನಾನು ಎಷ್ಟು ಧೂಮಪಾನ ಮಾಡುತ್ತಿದ್ದೆನೋ ಅದರ ಮೂರನೆಯ ಒಂದು ಭಾಗವನ್ನು ಮಾತ್ರ ನಾನೀಗ ಮಾಡುತ್ತಿದ್ದೇನೆ ‘ ಎಂದು ತಿಳಿಸಿದ್ದರು. ಪ್ರಾನ್ಸಿಸ್ ಲೆಗೆಟ್ ಕಳಿಸಿದ್ದ ಹಲವು ಸಿಗರೆಟ್ ಪ್ಯಾಕೆಟ್’ಗಳನ್ನು ಪಡೆದು ‘ನೀವು ದಯಮಾಡಿ ಕಳಿಸಿದ ಉಡುಗೊರೆಗಳಿಗೆ ಧನ್ಯವಾದಗಳು. ಚುಟ್ಟಾಗಳು ನಿಜವಾಗಿಯೂ ಆಹ್ಲಾದಕರವಾಗಿವೆ-ನೂರ್ಮಡಿ ಚೆನ್ನಾಗಿವೆ. ಏಕೆಂದರೆ ಅವು ನಿಮ್ಮಿಂದ ಬರುತ್ತಿವೆ’ ಎಂದು ಅಭಿಮಾನ ತೋರಿಸಿದ್ದರು. (೪/೫/೧೮೯೫) ಸ್ವಾಮಿಗಳ ಧೂಮಪಾನ ಚಟವನ್ನು ಗಮನಿಸಿದ್ದ ಲೆಗೆಟ್ ಅವರಿಗೆ ಸಂತೋಷವಾಗುವಂತಹ ಉಡುಗೊರೆಯನ್ನೇ ಕಳಿಸಿದ್ದನು. ಅನಾಸಕ್ತಿ ಎಂದರೆ ಯಾವುದೇ ಒಂದು ವಿಷಯದ ಬಗ್ಗೆ ತೀವ್ರ ಏಕಾಗ್ರತೆ ಮರುಕ್ಷಣವೇ ಅದನ್ನು ಮನಸ್ಸಿಂದ ತೊರೆಯುವ ಸಾಮರ್ಥ್ಯ ಎಂದು ಸ್ವಾಮಿಗಳು ಭಾಷಣಗಳಲ್ಲಿ ಹೇಳಿದ್ದರು. ತಂಬಾಕಿನ ವಿಷಯಯದಲ್ಲಿ ಅನಾಸಕ್ತಿಯ ಎರಡನೇ ತತ್ತ್ವವನ್ನು ಅನುಷ್ಠಾನಗೊಳಿಸುವಲ್ಲಿ ಸ್ವಾಮಿಗಳು ಸೋತಿದ್ದರು. ಲಂಡನ್’ನಲ್ಲಿ ಇರುವಾಗ ಸ್ವಾಮಿಗಳು ಮತ್ತು ಎಡ್ವರ್ಡ್ ಸ್ಟಡಿಯ ನಡುವೆ ತಂಬಾಕಿನ ವಿಷಯದಲ್ಲಿ ಭಾರಿ ಕಂದಕವೇ ಉಂಟಾಗಿದ್ದಿತು. ಮುಂದಿನ ದಿನಗಳಲ್ಲಿ ಇದು ಎಡ್ವರ್ಡ್ ಸ್ಟರ್ಡಿ ಸ್ವಾಮಿಗಳ ಸಂನ್ಯಾಸ ಜೀವನವನ್ನೇ ಪ್ರಶ್ನಿಸುವ ಮಟ್ಟಕ್ಕೆ ಹೋಯಿತು. ಸ್ವಾಮಿಗಳು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಎರಡನೇ ಬಾರಿ ಅಮೆರಿಕಕ್ಕೆ ಹೋಗಿದ್ದು ಅಲ್ಲಿ ನಾನಾ ಬಗೆಯ ಚಿಕಿತ್ಸೆ ಪಡೆಯುತ್ತಿದ್ದ ಕಾಲದಲ್ಲಿ (?)/೧೧/೧೮೯೯ ರಂದು ನ್ಯೂಯಾರ್ಕ್’ನಿಂದ ಎಡ್ವರ್ಡ್ ಸ್ಟರ್ಡಿಗೆ ಬರೆದ ಸುದೀರ್ಘ ಪತ್ರದಲ್ಲಿ ತಮಗೆ ಸರಿಯಾದ ಸವಲತ್ತುಗಳನ್ನು ಒದಗಿಸದ ಆತನ ಬಗ್ಗೆ ಹಲವಾರು ಆಕ್ಷೇಪಣೆಗಳನ್ನತ್ತಿ ‘ ನೀನು ನನಗೆ ಸೇದುವುದಕ್ಕೆ ಪೆನ್ನಿ ಅಥವಾ ಷಿಲ್ಲಿಂಗ್ ಬೆಲೆಯ ಯಾವ ಚುಟ್ಟವನ್ನೂ ಕೊಟ್ಟ ಜ್ಞಾಪಕವಿಲ್ಲ ‘ ಎಂದು ಕೊಡವಿ ಹಾಕಿದ್ದರು. ಇದಾದ ಎರಡು ತಿಂಗಳ ನಂತರ ೨೭/೧೨/೧೮೯೯ ರಂದು ಮೇರಿ ಹೇಲ್’ಗೆ ‘ ಚಿಕಿತ್ಸಕಳು ನನಗಿರುವುದು ಬರಿ ಅಜೀರ್ಣ. ಹೃದಯ , ಮೂತ್ರಕೋಶದ ದೋಷವಲ್ಲ ಎಂದಿದ್ದಾಳೆ. ಧೂಮಪಾನ ಬಿಡುವ ಅವಶ್ಯಕತೆಯಿಲ್ಲ ಎಂದು ಹೇಳಿರುವುದರಿಂದ ತಂಬಾಕು ಸೇದುವ ಪೈಪನ್ನು ಬಿಸಾಡದೆ ಇಟ್ಟುಕೊಂಡಿದ್ದೇನೆ ‘ಎಂದು ತಿಳಿಸಿದ್ದರು. ನಿಸ್ಸಂಗಿಗಳಾದ ಸ್ವಾಮಿಗಳಿಗೆ ತಂಬಾಕು ಬಿಟ್ಟರೂ ಬಿಡಲಾರೆ ಎನ್ನುವ ಮಾಯಾಂಗನೆಯಾಗಿದ್ದಿತು. ಪಸಡೆನ ಹೋಂ ಆಫ್ ಟ್ರುಥ್’ನಲ್ಲಿ ಧೂಮಪಾನವನ್ನು ನಿಷೇದಿಸಲಾಗಿದ್ದಿತು. ಬೆಳಿಗ್ಗೆ ಎದ್ದು ಸ್ವಾಮಿಗಳು ಜನರಿಲ್ಲದ ಕೋಣೆಯೊಳಗೆ ಸೇರಿಕೊಂಡು ತಂಬಾಕಿನ ಹೊಗೆ ಎಬ್ಬಿಸಿ ಅದರ ಕಟುವಾಸನೆಯನ್ನು ಹರಡುತ್ತಿದ್ದರು. ಸ್ವಾಮಿ ನಿಖಿಲಾನಂದ ‘ವಿವೇಕಾನಂದ – ಎ ಬಯಾಗ್ರಫಿ’ಯಲ್ಲಿ ಒಂದು ಘಟನೆ ದಾಖಲಿಸಿದ್ದಾರೆ. ಒಂದು ದಿನ ಹೋಂ ಆಫ್ ಟ್ರುಥ್ ಸದಸ್ಯರೊಬ್ಬರು ತಮ್ಮ ಮನೆಗೆ ಉಟಕ್ಕೆ ಆಹ್ವಾನಿಸಿದ್ದರು. ಉಟದ ನಂತರ ಅತಿಥಿಗಳು ಕೆಲ ನಿಮಿಷ ಕೋಣೆಯಿಂದ ಹೊರ ಹೋಗಿದ್ದರು. ಅವರು ಬರುವಷ್ಟರಲ್ಲಿ ಸ್ವಾಮಿಗಳು ಚುಟ್ಟ ಹಚ್ಚಿ ಕೋಣೆಯ ತುಂಬ ಹೊಗೆ ತುಂಬಿಸಿದ್ದರು. ಅದನ್ನು ಕಂಡು ಅಲ್ಲಿದ್ದವರೆಲ್ಲ ಬೆರಗಾದರು. ಆಗ ಮನೆಯ ಯಜಮಾನಿ ದೇವರು ಮನುಷ್ಯನನ್ನು ಧೂಮಪಾನಿಯಾಗಿ ಸೃಷ್ಟಿಸಿದ್ದರೆ ಆತನಿಗೆ ಹೊಗೆ ಹೊರ ಹಾಕಲು ಒಂದು ಚಿಮಣಿಯನ್ನು ಕೊಟ್ಟಿರುತ್ತಿದ್ದ ಎಂದು ತಿಳಿಸಿದ್ದಳು. ಅಗ ಸ್ವಾಮಿಗಳು ನಗುತ್ತ ಅದರ ಬದಲು ಹೊಗೆ ಕೊಳವೆಯನ್ನು ತಯಾರು ಮಾಡಿಕೊಳ್ಳುವ ಬುದ್ಧಿ ನೀಡಿದ್ದಾನೆ ಎಂದು ಉತ್ತರಿಸಿದ್ದರು. ಈ ಘಟನೆ ಮಾರಿ ಲೂರಿ ಬರ್ಕೆಯ ಪುಸ್ತಕದಲ್ಲಿಯೂ ಇದೆ. ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಓಕ್’ಲ್ಯಾಂಡ್ ನಡುವಿನ ಖಾರಿಯನ್ನು ದಾಟಲು ಸ್ವಾಮಿಗಳು ಫೆರಿಯನ್ನು ಹತ್ತಿ ಅದರ ಡೆಕ್ ಮೇಲ್ಭಾಗದಲ್ಲಿ ಇಬ್ಬರು ಹೆಂಗಸರ ನಡುವೆ ಕುಳಿತಿದ್ದರು. ಎದುರಿಗಿದ್ದ ‘ ಧೂಮಪಾನ ನಿಷಿದ್ಧ’ ಎನ್ನುವ ಎಚ್ಚರಿಕೆಯ ಬರಹವನ್ನು ನೋಡುತ್ತಲೇ ಪ್ಯಾಕ್’ನಿಂದ ಸಿಗರೇಟ್ ಹೊರಸೆಳೆದು ಹಚ್ಚಿದರು. ಸ್ವಾಮಿಗಳ ಜೊತೆಗೆ ಹೋದವರು ‘ಸ್ವಾಮಿ ನೀವು ಇಲ್ಲಿ ಸಿಗರೇಟ್ ಸೇದುವಂತಿಲ್ಲ , ಅಧಿಕಾರಿಗಳು ಬರುತ್ತಿದ್ದಾರೆ ಎಂದು ಕೂಗುತ್ತ ಎಚ್ಚರಿಸುತ್ತಿರೂ ಅದನ್ನು ಲೆಕ್ಕಿಸದೆ ‘ ನಾನೇಕೆ ಆರಿಸಲಿ ‘ ಎನ್ನುತ್ತ ಮುಂದುವರೆಸಿದರು. ಫೆರಿಯ ಅಧಿಕಾರಿ ಸಮೀಪ ಬರುವವರೆಗೆ ಹಲವು ದಮ್ಮುಗಳನ್ನು ಎಳೆದುಕೊಂಡು , ಉಳಿದ ಸಿಗರೇಟ್’ನ್ನು ನಂದಿಸಿ ನೀರಿಗೆ ಎಸೆದರು.(54) . ಸ್ವಾಮಿಗಳ ಇಂತಹ ನಡವಳಿಕೆಯನ್ನು ಸಮರ್ಥಿಸುತ್ತ ಅವರಿಗೆ ಮಗುವಿನ ಮುಗ್ದ ತುಂಟತನವಿದ್ದಿತು , ಅವರು ಮಾಂಸ ತಿಂದು , ಸಿಗರೆಟ್ ಸೇದಿ ಅಧ್ಯಾತ್ಮಿಕತೆ ಎಂದರೆ ಯಾವುದು ಮತ್ತು ಯಾವುದಲ್ಲ ಎನ್ನುವುದನ್ನು ತೋರಿಸಿಕೊಟ್ಟರು ಎನ್ನುತ್ತ ಅವರ ಭಕ್ತರು ಭಟ್ಟಂಗಿತನದ ತುದಿ ತಲುಪಿದ್ದಾರೆ, ವಿಶ್ವ ಧರ್ಮ ಸಂಸತ್ತಿನ ಅವಧಿಯಲ್ಲಿ ೨೧/೯/೧೮೯೩ ರಂದು ತೆಗೆದ ವಿಶ್ವ ಧರ್ಮ ಸಂಸತ್ತಿನ ವೇದಿಕೆಯ ಗಣ್ಯರ ಫೋಟೊದಲ್ಲಿ ಸ್ವಾಮಿಗಳಿಲ್ಲ, ಸ್ವಾಮಿಗಳ ಅನುಪಸ್ಥಿತಿಗೆ ಏನು ಕಾರಣವಿರಬಹುದು ಎನ್ನುವ ಪ್ರಶ್ನೆಗೆ ಒಂದು ಸಕಾರಣ ಊಹೆಯೊಂದನ್ನು ಮುಂದಿಡಬಹುದು. ತಾಸಿಗೊಮ್ಮೆ ತುಟಿಗೆ ಚುಟ್ಟ ಇಡುವ ಚಟ ಹೊಂದಿದ್ದ ಸ್ವಾಮಿಗಳಿಗೆ ಬಹು ದೀರ್ಘ ಕಾಲ ವೇದಿಕೆಯ ಮೇಲೆ ಅದಿಲ್ಲದೆ ಇರುವುದು ಸಾಧ್ಯವಿರಲಿಲ್ಲ. ಆ ವೇಳೆಗೆ ಚುಟ್ಟ ಹಚ್ಚಲು ಹೊರಗೆ ಹೋಗಿರಬಹುದು. |
|
Comment Box is loading comments...