ಕಳಭ್ರರು
(ತಮಿಳಗಂ-ಸಂಗಂ : ಎಷ್ಟು ಪ್ರಾಚೀನ ಕೃತಿಯ ಆಯ್ದ ಭಾಗ) ಸಾಂಪ್ರದಾಯಿಕ ಚರಿತ್ರೆಯಂತೆ ಕ್ರಿ.ಪೂ 3 ನೇ ಶತಮಾನದ ಅಶೋಕನ ಸಮಕಾಲೀನರೆಂದು ಭಾವಿಸಲಾದ ತಮಿಳಗಂನ ಚೋಳ (ಕೊಡ) , ಪಾಂಡ್ಯ (ಪಡ) , ಚೇರ(ಕೆರಪುತೊ) ದೊರೆಗಳು ಸ್ವತಂತ್ರವಾದ ರಾಜ್ಯಗಳನ್ನು ಸ್ಥಾಪಿಸಿ, ಸಂಗಂಗಳನ್ನು ಪೋಷಿಸಿ ಅನನ್ಯ ಸಾಹಿತ್ಯ ಪರಂಪರೆಗೆ ಕಾರಣವಾದವರು. ಯವನರೊಂದಿಗೆ ವ್ಯಾಪಾರ ವಹಿವಾಟುಗಳನ್ನು ಹೊಂದಿದ್ದು , ಉತ್ತರ ಭಾರತದವರೆಗೆ ಸಾಗಿ ಹಿಮಾಲಯದ ಮೇಲೆ ತಮ್ಮ ಲಾಂಛನಗಳನ್ನು ಕೆತ್ತಿ ತಮಿಳಗಂಗೆ ಸುವರ್ಣ ಯುಗ ತಂದಿತ್ತವರು. ಇಂತಹ ಪ್ರಬಲ ಮೂವರಸರ ಅಳ್ವಿಕೆ ಕ್ರಿ.ಶ. 3ನೇ ಶತಮಾನದ ಸುಮಾರಿನಲ್ಲಿ ಹಠಾತ್ ಮರೆಯಾಗಿ ಮುಂದೆ ಸುಮಾರು ಮೂರು ಶತಮಾನಗಳ ಕಾಲ ತಮಿಳಗಂ ಚರಿತ್ರೆಯಲ್ಲಿ ಅಂಧಕಾರ ಮುಸುಕುತ್ತದೆ. ಇದಕ್ಕೆ ಕಾರಣರಾದವರು ಉತ್ತರದಿಂದ ಬಂದು ತಮಿಳಗಂನ್ನು ಆಕ್ರಮಿಸಿದ ಕಳಭ್ರರು . ಕಳಭ್ರರಿಂದಾಗಿ ಸಂಗಂ ಯುಗದಲ್ಲಿ ಸೃಜಿತವಾದ ಅಪೂರ್ವವಾದ ಅಪಾರ ಸಾಹಿತ್ಯ ,ಪರಂಪರೆ, ಶ್ರೇಷ್ಟತೆಗಳು ನಾಶವಾಗುತ್ತವೆ. ಈ ಅವಧಿಯಲ್ಲಿ ತಮಿಳಗಂನ ಮೂವರಸರ ಬಗೆಗೆ ಯಾವುದೇ ಐತಿಹಾಸಿಕ ಮಾಹಿತಿಗಳು ಲಭ್ಯವಾಗುವುದಿಲ್ಲ. 6ನೇ ಶತಮಾನದ ನಂತರವೇ ಮತ್ತೊಮ್ಮೆ ಚೋಳ , ಚೇರ , ಪಾಂಡ್ಯರು ಕಾಣಿಸಿಕೊಳ್ಳುತ್ತಾರೆ. ಇದಾದ ನಂತರವೇ ತಮಿಳಗಂ ಇತಿಹಾಸ ಸ್ಪಷ್ಟವಾಗುತ್ತ ಹೋಗುತ್ತದೆ. ತಮಿಳಗಂನ ಪ್ರಬಲ ರಾಜವಂಶಗಳನ್ನು ಮೂಲೆಗೊತ್ತಿದ ಕಳಭ್ರರು ಯಾರು ಎಂಬುದನ್ನು ಇತಿಹಾಸಕಾರರಿಂದ ಸ್ಪಷ್ಟವಾಗಿ ಗುರುತಿಸಲಾಗಿಲ್ಲ. ಮೂರು ಶತಮಾನಗಳಿಗೂ ಅಧಿಕ ಕಾಲ ಆಳಿದ ಇವರು ಯಾವ ಐತಿಹಾಸಿಕ ಕುರುಹುಗಳನ್ನು ಬಿಟ್ಟು ಹೋಗಿಲ್ಲ. ಜಗತ್ತಿನ ಚರಿತ್ರೆಯಲ್ಲಿ ಅಭಿವೃದ್ಧಿ ಕಾಣದ ಹಲವಾರು ‘ಅಂಧಕಾರ ಯುಗ’ಗಳು ಬಂದು ಹೋಗಿವೆ. ಆದರೆ ಒಟ್ಟಾರೆ ಚರಿತ್ರೆಯೇ ತಿಳಿಯದಂತಹ ಕಳಭ್ರ ಯುಗದಂತಹುದು ಮತ್ತೊಂದಿಲ್ಲ. ಹಾಗಾದರೆ ಸಂಗಂ ಕಾಲ ಮತ್ತು 6ನೇ ಶತಮಾನದಲ್ಲಿ ಪಲ್ಲವ,ಪಾಂಡ್ಯರ ಪುನರುಜ್ಜೀವನದ ನಡುವಿನ ‘ಅಂಧಕಾರ ಯುಗ’ದ ಇತಿಹಾಸ ಶೋಧನೆಯಲ್ಲಿ ತಮಿಳಗಂನ ನೈಜ ಚರಿತ್ರೆ ಅಡಗಿದೆಯೇ ?. ಆದ್ದರಿಂದ ಇಡೀ ಸಂಗಂ ಕಾಲಾವಧಿಯನ್ನು ಹೊಸ ದೃಷ್ಟಿಯಲ್ಲಿ ನೋಡಬೇಕಾದ ಅವಶ್ಯಕತೆಯಿದೆಯೇ ಎಂಬುದನ್ನು ಇತಿಹಾಸಕಾರರೇ ಸಂಶೋಧಿಸಿ ನಿರ್ಧರಿಸಬೇಕು. ಚೋಳ, ಚೇರ, ಪಾಂಡ್ಯ ಪಲ್ಲವರನ್ನು ಮಣಿಸಿ ಮೂರು ಶತಮಾನಗಳ ಕಾಲ ಮೆರೆದ ಕಳಭ್ರರ ಬಗೆಗೆ ಇತಿಹಾಸ ಮೌನವಾಗಿದೆ. ಇವರು ಯಾವುದೇ ಶಿಲಾಶಾಸನ , ಸಾಹಿತ್ಯ, ಸ್ಮಾರಕ , ರಚನೆ, ನಿರ್ಮಾಣಗಳನ್ನು ಬಿಟ್ಟು ಹೋಗಿಲ್ಲ. ಜೈನ , ಬೌದ್ಧ ಸಾಹಿತ್ಯಗಳಲ್ಲಿ ಇವರನ್ನು ಕುರಿತಾಗಿ ಅತ್ಯಲ್ಪ ಮಾಹಿತಿಗಳು ದಕ್ಕುತ್ತವೆ. ಸಾಕ್ಷ್ಯಗಳು : ಸಾಹಿತ್ಯದಲ್ಲಿ ತಮಿಳು ಸಾಹಿತ್ಯದಲ್ಲಿ ವೆಳ್ಳಾಲ ಪಂಗಡಕ್ಕೆ ಸೇರಿದ ಮುಧುರೈ ಕಳಪ್ಪಾಳಾರ್ ಉಲ್ಲೇಖಗಳಿವೆ. ಇವರು ಯಾರು , ತಮಿಳಗಂನೊದಿಗೆ ಇವರ ಸಂಬಂಧಗಳೇನೆಂದು ಸ್ಪಷ್ಟವಾಗಿಲ್ಲ. ಆದರೆ ಕೆಲ ಇತಿಹಾಸಕಾರರು ಈ ವೆಳ್ಳಾಲರನ್ನು ಕಳಭ್ರರೆಂದು , ಭಾವಿಸಿದ್ದಾರೆ. ಸಂಗಂ ಸಾಹಿತ್ಯದಿಂದ ಪಾವಿತ್ತಿರಿಯ ತಿರೈಯನ್ ಮತ್ತು ವೇಂಗಡದ ಪುಲ್ಲಿ ಹೆಸರಿನ ದನ ಕದಿಯುವ ಕಳವರ ಕುಲದ ನಾಯಕರಿದ್ದುದಾಗಿ ತಿಳಿದು ಬರುತ್ತದೆ. ಕ್ರಿ.ಶ 3ನೇ ಶತಮಾನದ ವೇಳೆಗೆ ಶಾತವಾಹನರ ಪತನವಾಗಿ ಪಲ್ಲವರ ಉದಯವಾಗತೊಡಗಿತು. ಇದೇ ಕಾಲದಲ್ಲಿ ಸಮುದ್ರಗುಪ್ತ ದಕ್ಷಿಣಾಪಥದ ಮೇಲೆ ದಂಡೆತ್ತಿ ಬಂದು ವಿಜಯ ಸಂಪಾದಿಸಿದುದರಿಂದ ತಿರುಪತಿಯನ್ನೊಳಗೊಂಡ ತೊಂಡೈಮಂಡಲ ಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾದಾಗ ಅಲ್ಲಿನ ಮೂಲ ನಿವಾಸಿಗಳಾದ ಕಳವರು ತಮ್ಮ ಮೂಲ ನೆಲೆಯನ್ನು ಕಳೆದುಕೊಂಡು ತಮಿಳಗಮ್ ಮೇಲೆ ದಾಳಿಯೆಸಗಿರಬಹುದೆಂಬ ಊಹೆಯಿದೆ. ಕ್ರಿ.ಶ 5ನೇ ಶತಮಾನಕ್ಕೆ ಸೇರಿದ್ದ ಪಾಳಿ ಭಾಷೆಯ ಮಹಾನ್ ವಿದ್ವಾಂಸನಾದ ಬುದ್ಧದತ್ತ ತನ್ನ ‘ವಿನಯವಿನಿಚ್ಚಯ’ ಗ್ರಂಥದ ‘ನಿಗಮನ’ ಅಧ್ಯಾಯದಲ್ಲಿ ಚೋಳರತ್ತ (ಚೋಳರಾಷ್ಟ್ರ) ಪ್ರಾಂತವನ್ನು ಕಾವೇರಿಪಟ್ಟಣದಿಂದ ಕಳಂಬ ಕುಲವಂಶ ಜಾತನಾದ ‘ಕಳಂಬ ಕುಲನಂದನ’ ಎಂದು ಖ್ಯಾತನಾದ ಅಚ್ಯುತ ವಿಕ್ರಾಂತ ಆಳುತ್ತಿದ್ದಾಗ ಕಾವೇರಿ ನದಿ ದಡದಲ್ಲಿದ್ದ ಭೂತಮಂಗಲದ ವೆಣ್ಣುದಾಸ ವಿಹಾರದಲ್ಲಿ ತಾನು ಕೃತಿಯನ್ನು ರಚಿಸಿದುದಾಗಿ, ಮತ್ತು ಅಚ್ಯುತ ವಿಕ್ರಾಂತ ಬೌದ್ಧನಾಗಿದ್ದನೆಂದು ತಿಳಿಸಿದ್ದಾನೆ. ಬುದ್ಧದತ್ತ ಬುದ್ಧಘೋಷನ ಸಮಕಾಲೀನನಾಗಿದ್ದನೆಂಬ ಆಧಾರದ ಮೇಲೆ ಅಚ್ಯುತ ವಿಕ್ರಾಂತ ಕ್ರಿ.ಶ. 5ನೇ ಶತಮಾನದಲ್ಲಿದ್ದನೆಂದು ತೀರ್ಮಾನಿಸಬಹುದು. ಇದರಿಂದ ಸಂಗಂ ಕಾಲದ ಅಂತ್ಯದಲ್ಲಿ ತಮಿಳಗಂನ ಮೂವರಸರನ್ನ್ನು ಕಳಭ್ರರು ಮಣಿಸಿ ಆಳ್ವಿಕೆ ನಡೆಸಿ ತಮಿಳುನಾಡಿನಲ್ಲಿ ರಾಜಕೀಯ ಐತಿಹಾಸಿಕ ತಿರುವು ಪಡೆಯುವಂತೆ ಮಾಡಿದರೆಂದು ಭಾವಿಸಲಾಗಿದೆ. ತಮಿಳು ನವಲಾರ್ ಚರಿತೆಯಲ್ಲಿ ವೆಂಬಾ ಛಂದಸ್ಸಿನ ನಾಲ್ಕು ಪದ್ಯಗಳಿವೆ. ಇವುಗಳಲ್ಲಿ ತಲಾ ಒಂದೊಂದು ಪದ್ಯವನ್ನು ಚೋಳ,ಚೇರರು ಹಾಗೂ ಎರಡು ಪದ್ಯಗಳನ್ನು ಪಾಂಡ್ಯನು ರಚಿಸಿದನೆಂದು ನಂಬಲಾಗಿದೆ. ಈ ಪದ್ಯಗಳಿಗೆ ಬರೆದ ಭಾಷ್ಯದಲ್ಲಿ ಈ ಮೂವೇಂದರರನ್ನು ಅಕ್ಕುಡ ಕಳಪ್ಪುಳನ್ ಬಂಧಿಸಿ ಸೆರೆಯಲ್ಲಿರಿಸಿದ್ದನೆಂದು ತಿಳಿಸಲಾಗಿದೆ. ತಮಿಳು ಶೈವ ಪರಂಪರೆಗೆ ನಾಂದಿಹಾಡಿದ ಮೆಯ್ಗಂಡದೇವರನ ತಂದೆಯನ್ನು ಅಕ್ಕುಡ ಕಳಪ್ಪಾಳಾರ್ ಎಂದು ಗುರುತಿಸಲಾಗಿದೆ. ಈತ ಕಳಭ್ರ ಕುಲದವನಿರಬೇಕೆಂದು ಕೆಲವರು ಭಾವಿಸಿದ್ದಾರೆ. ಪೊಯ್'ಗಯ್ ಆಳ್ವಾರರ ಭಕ್ತಿ ಗೀತೆಗಳಿಂದ ವೇಂಗಡ ಪ್ರದೇಶ ಕುರುವರ (ಕುರುಬ) ನೆಲೆಯಾಗಿದ್ದಿತೆಂದು ಇಲ್ಲಿದ್ದ ಆನೆಗಳನ್ನು ಹಿಡಿದು ಪಳಗಿಸುವುದಲ್ಲಿ ಅವರು ಸಿದ್ಧ ಹಸ್ತರಾಗಿದ್ದರೆಂದು ತಿಳಿದು ಬರುತ್ತದೆ. ಕರ್ನೂಲು ,ಮೈಸೂರು, ಸೇಲಂ ಕೊಯಂಬತ್ತೂರು, ನೀಲಗಿರಿ ಪ್ರದೇಶದಲ್ಲಿ ಕುರುಬರು ಪ್ರಬಲರಾಗಿದ್ದು ಮೂಲ ನಿವಾಸಿಗಳಾಗಿದ್ದರೆಂದು ತಿಳಿಸುವ ಆಳ್ವಾರರು ಅಲ್ಲಿ ಕುರುಬರಕೋಟೆ , ಕುರುಬರ ಪಟ್ಟಿ , ಕುರುಬಲ ಪಟ್ಟಿ, ಕುರುಬ ನಾಗಲಾಪುರಂ , ಕುರುಬ ಪಾಳ್ಯಂ ,ಕುರುಂಬಪಟ್ಟಿ , ಕುರುಬರ ಹಳ್ಳಿ ಇತ್ಯಾದಿ ಊರುಗಳಿದ್ದವೆಂದು , ಪಲ್ಲವರು ಅದನ್ನು ತಮ್ಮ ವಶಕ್ಕೆ ಪಡೆಯುವವರೆಗೆ ತಿರುಪತಿ ಪ್ರದೇಶ ಕುರುಬರ ಹಿಡಿತದಲ್ಲಿತ್ತೆಂದು ತಿಳಿಸುತ್ತಾರೆ. ಇದನ್ನು ಪರಿಗಣಿಸಿದ ಕೆಲ ಇತಿಹಾಸಕಾರರು ಇಲ್ಲಿನ ಕುರುಬರೇ ಕಳಭ್ರರೆಂದು ಹೇಳಿದ್ದಾರೆ. ಮೂರ್ತಿ ನಾಯನಾರ್ ಪೆರಿಯಪುರಾಣದಲ್ಲಿ ವಡುಗ ಕರ್ನಾಟಕರು ಪಾಂಡ್ಯರನ್ನು ಸೋಲಿಸಿ ತಮ್ಮ ಅಧಿಪತ್ಯ ಸ್ಥಾಪಿಸಿದರೆಂದು, ಇವರು ತಮಿಳಗಂ ಪ್ರವೇಶಿಸಿದ ನಂತರ ಜೈನಮತ ಪ್ರಬಲವಾಗಿ ಜನ ಅದರತ್ತ ಮತಾಂತರವಾಗತೊಡಗಿದರೆಂದು ದಾಖಲಿಸಿದ್ದಾರೆ. ಇದರ ಹೊರತಾಗಿ ಪಾಂಡ್ಯನಾಡನ್ನು ಆಕ್ರಮಿಸಿ ದೀರ್ಘ ಕಾಲ ಆಳಿದ ಕಳಭ್ರ ಕುಲದ ಯಾವ ಮಾಹಿತಿಯೂ ದಕ್ಕುವುದಿಲ್ಲ. ಸಂಗಂ ಸಾಹಿತ್ಯದಲ್ಲಿನ ಸಮಾಜ ಯುದ್ಧ ಮತ್ತು ಪ್ರಣಯದಾಚೆಗೆ ಹೋಗದೆ, ಮಾನವನ ಇತರ ಬೌದ್ಧಿಕ ಅಭೀಪ್ಸೆಗಳಿಗೆ ಯಾವುದೇ ಅವಕಾಶವನ್ನು ಒದಗಿಸಿದಂತೆ ಕಾಣುವುದಿಲ್ಲ. ಆದ್ದರಿಂದ ಈ ಸಾಹಿತ್ಯ ಅಹಂ-ಪುರಂಗಳಾಚೆ ಹೋಗಿಲ್ಲ. ಕಳಭ್ರರ ಕಾಲದಲ್ಲಿ ಬೌದ್ಧ, ಜೈನರು ತಮಿಳಗಂನಲ್ಲಿ ಪ್ರಾಬಲ್ಯ ಗಳಿಸಿದ ನಂತರವಷ್ಟೇ ತಮಿಳು ಸಾಹಿತ್ಯದಲ್ಲಿ ವಿಭಿನ್ನತೆ ಕಾಣತೊಡಗುತ್ತದೆ. ತಮಿಳಗಂನಲ್ಲಿದ್ದ ಬುಡಕಟ್ಟುಗಳ ಸದಾ ಕದನ ಸ್ವಭಾವ ಮತ್ತು ಹಿಂಸೆಯನ್ನು ಇಷ್ಟಪಡದ, ತಾತ್ವಿಕ ವೈವಿಧ್ಯತೆಯನ್ನು ಅರಸುತ್ತಿದ್ದ ಜೈನ/ಬೌದ್ಧರು ಸಂಗಂನ ಪಾಣಾರ್ಗಳಿಗಿಂತ ವಿಭಿನ್ನವಾದ ಸಾಹಿತ್ಯ ಸೃಷ್ಟಿಗೆ ಮುಂದಾದರು. ಈ ಕಾಲದಲ್ಲಿಯೇ ಬೌದ್ಧ ಧರ್ಮದ ದಟ್ಟ ಛಾಯೆಯುಳ್ಳ ಶಿಲಪ್ಪದಿಗಾರಂ , ಮಣಿಮೇಗಲೈ ಮತ್ತಿತರ ಕೃತಿಗಳು ರಚಿತವಾದವು. ತಮಿಳು ಸಂಗಂ ಸಾಹಿತ್ಯದಲ್ಲಿನ ‘ಪದಿನೇಣ್ ಕೀಳ್ಕಣಕ್ಕು’ (ಹದಿನೆಂಟು ಸಣ್ಣ ಕೃತಿಗಳು) ಈ ಕಾಲಕ್ಕೆ ಸೇರಿದವೆಂದು ಭಾವಿಸಲಾಗಿದೆ. ಆದರೆ ವಯ್ಯಾಪುರಿ ಪಿಳ್ಳೆಯವರು ಇವು ನಂತರದ ಕಾಲದವೆಂಬ ಅಭಿಪ್ರಾಯ ತಳೆದಿದ್ದಾರೆ. 10ನೇ ಶತಮಾನದಲ್ಲಿದ್ದ ತಮಿಳಿನ ವ್ಯಾಕರಣ ಗ್ರಂಥದ ಕರ್ತೃ ಅಮಿತಸಾಗರ ಅಚ್ಯುತ ವಿಕ್ರಾಂತನನ್ನು ಕುರಿತಾಗಿ ಕೆಲ ಪದ್ಯಗಳನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ಸಾಕ್ಷ್ಯಗಳು : ಇತಿಹಾಸದಲ್ಲಿ ಕ್ರಿ.ಶ. 8-11 ನೇ ಶತಮಾನದ ಅವಧಿಯಲ್ಲಿ ಕೊಡುಂಬಾಳೂರು ಮುತ್ತರಾಯರ್ (ಮುದಿರಾಜರು) ವಂಶದ ಆಳ್ವಿಕೆಯಲ್ಲಿದ್ದಿತು. ಕೆಲ ಇತಿಹಾಸಕಾರರು ಇವರನ್ನು ಕಳಭ್ರ ವಂಶದವರೆಂದು ಭಾವಿಸಿದ್ದಾರೆ. ಕಳಭ್ರರ ಕರ್ನಾಟಕ ಮೂಲ ಕುರಿತಾದಂತೆ ಹಲವಾರು ವಾದಗಳಿವೆ. ಶ್ರವಣಬೆಳ್ಗೊಳದಲ್ಲಿರುವ ಚಿಕ್ಕಬೆಟ್ಟವನ್ನು ಪ್ರಾಚೀನ ಶಿಲಾಶಾಸನಗಳಲ್ಲಿ ಕಳ್ವಪ್ಪು ಎಂದು ಗುರುತಿಸಲಾಗಿದ್ದು ಇದರ ಸುತ್ತಲಿನ ಪ್ರದೇಶಕ್ಕೆ ಕಳಬಪ್ಪ ನಾಡು ಎಂಬ ಹೆಸರಿದ್ದು ಇದು ಜೈನರ ಪ್ರಮುಖ ನೆಲೆಯಾಗಿದ್ದಿತು. ಶ್ರವಣಬೆಳ್ಗೊಳದಲ್ಲಿ ನೆಲೆಸಿದ್ದ ಇಲ್ಲಿನ ಜನ ಕದಂಬ, ಗಂಗರ ಪ್ರೋರೀತ್ಸಾಹದಿಂದ ಪೂರ್ವಕ್ಕೆ ಹೋಗಿ ಕೋಲಾರ ಪ್ರಾಂತದಲ್ಲಿ ನೆಲೆಸಿದರೆಂದು ಭಾವಿಸಲಾಗಿದೆ. ಆದ್ದರಿಂದ ಬೆಂಗಳೂರು-ಕೋಲಾರ ಪ್ರದೇಶವನ್ನು ಪ್ರಾಚೀನ ಕಾಲದಲ್ಲಿ ಕಳವರನಾಡು ಎಂದು ಗುರುತಿಸಲಾಗುತ್ತಿತ್ತು. ಮುಂದೆ ಇವರು ತಮಿಳುನಾಡಿನಲ್ಲಿದ್ದ ಜೈನರ ಆಹ್ವಾನದ ಮೇರೆಗೆ ದಕ್ಷಿಣಕ್ಕೆ ಸಾಗಿ ಪ್ರಬಲರಾಗಿ ತಮಿಳಗಂನ ಮೂವರಸರ ಆಳ್ವಿಕೆಯನ್ನು ಕೊನೆಗೊಳಿಸಿದರೆಂದು ತರ್ಕಿಸಲಾಗಿದೆ. ಕೆಲ ವಿದ್ವಾಂಸರು ಕರ್ನಾಟಕದ ಕದಂಬರೇ ಕಳಭ್ರರೆಂದು ಭಾವಿಸಿ ಕಳಭ್ರ>ಕಳಬ್ಬ>ಕಳಂಬ>ಕದಂಬ ಆಗಿರುವ ಸಾಧ್ಯತೆಯಿದೆ ಎನ್ನುತ್ತಾರೆ. ಕಳಭ್ರ ಕುಲದ ಅಕ್ಕುಟವಿಕ್ಕಂತ (ಅಚ್ಯುತ ವಿಕ್ರಾಂತ ,ಅಚೈತ ವಿಕ್ರಮ) ಚೋಳ ನಾಡಿನಲ್ಲಿ ಆಳುತ್ತಿದ್ದನೆಂದು ತಿಳಿದು ಬರುತ್ತದೆ. ಈತನೇ ಕಳಭ್ರ ರಾಜ್ಯ ಸ್ಥಾಪಕನೆಂದು , ಈತನ ಆಳ್ವಿಕೆಯ ಸಮಯದಲ್ಲಿ ಕಳಭ್ರರು ಪ್ರಾಬಲ್ಯ ಸಾಧಿಸಿದರೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಅಕ್ಕುಟವಿಕ್ಕಂತನಿಗೆ ‘ಕಳಂಬ(ಕಳಬ್ಬ) ಕುಲನಂದನ ಹೆಸರಿದ್ದಿತು. ಆದರೆ ಕದಂಬ ಕುಲದೊಂದಿಗೆ ಈತನಿಗಿದ್ದ ಸಂಬಂಧ ಸೂಚಿಸುವ ಯಾವ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲ. ಕೆಲ ವಿದ್ವಾಂಸರು ಈತನ ತಾಯಿ ಕದಂಬ ಕದಂಬ ವಂಶದವಳೆಂದು ಸೂಚಿಸಿದ್ದಾರೆ. ಕಳಭ್ರರು ಒಂದು ಕಾಲದಲ್ಲಿ ಭಾರಿ ಪ್ರಬಲರಾಗಿದ್ದು ಚೋಳರ ರಾಜ್ಯದ ಮೇಲೆ ಅಪಾರ ಪ್ರಭಾವ ಬೀರಿದುದಾಗಿ ತಿಳಿದು ಬರುತ್ತದೆ. 6ನೇ ಶತಮಾನದಲ್ಲಿ ಪಲ್ಲವ ರಾಜ ಸಿಂಹವಿಷ್ಣುವಿನಿಂದ ಇವರು ಪರಾಜಿತರಾದಂತೆ ತೋರುತ್ತದೆ. ಹಲ್ಮಿಡಿ ಶಾಸನದಿಂದ ಕದಂಬರಿಗೆ ಕಳಭೋರರೆಂಬ ಶತ್ರುಗಳಿದ್ದರೆಂದು ತಿಳಿದು ಬರುತ್ತದೆ. ಇವರು ಕಳಭ್ರರಾಗಿರುವ ಸಾಧ್ಯತೆಯನ್ನು ಹಲವರು ಗುರುತಿಸಿದ್ದಾರೆ. ಪಾಂಡ್ಯ ದೊರೆ ನೆಡುಂಜಡೈಯನ್ನ (ಕ್ರಿ.ಶ 765-815) ವೆಳ್ವಿಕುಡಿ ಶಿಲಾಶಾಸನದಲ್ಲಿ ಕಳಭ್ರರ ಉಲ್ಲೇಖ ಬಂದಿದೆ. ಇದರಲ್ಲಿ ಪಾಂಡ್ಯ ದೊರೆ ಮುದುಕುಡುಮಿ ಪೆರುವಾಳುಡಿ ವೆಳ್ವಿಕುಡಿ ಗ್ರಾಮವನ್ನು ಬ್ರಾಹ್ಮಣರಿಗೆ ದಾನ ಮಾಡಿದ್ದು ಅದು ಬಹು ದೀರ್ಘ ಕಾಲ ಅವರ ಅನುಭವದಲ್ಲಿದ್ದಿತು. ನಂತರದಲ್ಲಿ ಬಂದ ಕಳಭ್ರ ಕುಲದ ಕಲಿಯರಸ (ದುಷ್ಟ ರಾಜ) ಈ ದಾನವನ್ನು ಉಪೇಕ್ಷಿಸಿ ಬ್ರಹ್ಮದೇಯವನ್ನು ಕಿತ್ತುಕೊಂಡು ರಾಜ್ಯದ ಆಸ್ತಿಯನ್ನಾಗಿಸಿಕೊಂಡನು. ತನ್ನ ಪೂರ್ವಜರಿಗೆ ನೀಡಲಾದ ಈ ದಾನವನ್ನು ತನ್ನ ಅನುಭೋಗಕ್ಕೆ ಮತ್ತೆ ನೀಡಬೇಕೆಂದು ನಾರ್ಕೊರ್ರನ್ ಎಂಬುವನು ನೆಡುಂಜಡೈಯನ್ಗೆ ಮನವಿ ಸಲ್ಲಿಸಿದನು. ಈ ಕುರಿತಾಗಿ ನಾನ್ಕೊರ್ರನ್ ನೀಡಿದ ದಾಖಲೆಗಳನ್ನು ಪರಿಶೀಲಿಸಿ ಬ್ರಹ್ಮದೇಯವನ್ನು ಆತನಿಗೆ ಮರಳಿಸಲಾಯಿತೆಂದು ಶಿಲಾಶಾಸನದ ಮೂಲಕ ತಿಳಿದು ಬರುತ್ತದೆ. ಇದರ ಆಧಾರದ ಮೇಲೆ ವಿದ್ವಾಂಸರು ಕಳಭ್ರರನ್ನು ಸಂಸ್ಕೃತಿ ನಾಶಕರೆಂದು ತೀರ್ಮಾನಿಸಿದ್ದಾರೆ. ಸೆಂಡಲೈ (ಚತುರ್ವೇದಿ ಮಂಗಳಂ) ಶಿಲಾಶಾಸನದಲ್ಲಿ ಕುವಾವನ್ ಮಾರನ್ ( ಪೆರುಂಪಿಡುಗು ಮುತ್ತರೈಯನ್-1) , ಆತನ ಮಗ ಮಾರನ್ ಪರಮೇಶ್ವರನ್ (ಇಳಂಗೋವನ್ ಅರೈಯನ್) ಮತ್ತು ಆತನ ಮಗ ಸುವರನ್ ಮಾರನ್ ( ಪೆರುಂಪಿಡುಗು ಮುತ್ತರೈಯನ್-2) ಹೆಸರುಗಳಿವೆ. ಸುವರನ್ ಮಾರನ್ನನ್ನು ಕಳವರ ಕಳವನ್ , ಶ್ರೀ ಶತ್ರು ಕೇಸರಿ , ಶ್ರೀ ಕಳಭ್ರ ಕಳವನ್, ಶ್ರೀ ಕಳವ ಕಳವನ್ ಎಂದು ಕರೆಯಲಾಗಿದೆ. ಕನ್ನಡದಲ್ಲಿ ಕಳವರ>ಕಳಬರ>ಕಳಭ್ರ ಆಗಿದೆಯೆಂ ದು , ತಮಿಳಗಂನ ಮೂವರಸರನ್ನು (ಚೇರ , ಚೋಳ, ಪಾಂಡ್ಯ) ಜಯಿಸಿದ ಗುರುತಾಗಿ ಮೂ+ತರೈಯರ್>ಮುತ್ತರೈಯರ್ ಆಗಿದೆಯೆಂದು ತರ್ಕಿಸಲಾಗಿದೆ. ದಾಖಲೆಗಳ ಕೊರತೆ * ಸಂಗಂ ಸಾಹಿತ್ಯವಾಗಲಿ , ಕಳಭ್ರರ ಆಳ್ವಿಕೆಯಲ್ಲಿ ರಚಿತವಾಗಿವೆಯೆಂದು ಭಾವಿಸಲಾದ ಪಂಚ ಮಹಾಕಾವ್ಯಗಳಾಗಲಿ , ಪದಿನೇಣ್ ಕೀಳ್ಕಣಕ್ಕುಗಳಾಗಲಿ , ಕ್ರಿ.ಶ. 7 ನೇ ಶತಮಾನದ ನಂತರದ ಶಿಲಾಶಾಸನಗಳಲ್ಲಿ ಬಂದಿರುವ ಕಳವ, ಕಳಭ್ರ ಎಂಬ ಯಾವ ಉಲ್ಲೇಖಗಳಾಗಲಿ ಆ ಹೆಸರಿನ ರಾಜವಂಶ ಇದ್ದಿತೆಂದು ಎಲ್ಲಿಯೂ ಖಚಿತವಾಗಿ ತಿಳಿಸುವುದಿಲ್ಲ. ಸರಿಸುಮಾರು ಮೂರು ಶತಮಾನಗಳ ಕಾಲ ಆಳಿದರೆಂದು ಪರಿಗಣಿಸಲಾದ , ತಮಿಳಗಂನಲ್ಲಿ ಸಾಹಿತ್ಯಕ್ಕೆ ಹೊಸ ಗಾಳಿ ತಂದರೆಂದು ಭಾವಿಸಲಾದ ಕಳಭ್ರರಿಂದ ನೇರವಾಗಿ ಹೊರಡಿಸಲ್ಪಟ್ಟ ಯಾವುದೇ ಶಿಲಾಶಾಸನ, ದಾನ , ತಾಮ್ರಪತ್ರಗಳು , ಅವರಿಂದ ಪೆÇೀಷಿತವೆಂದು ಹೇಳಬಹುದಾದ ಸಾಹಿತ್ಯಕ ಕೃತಿಗಳು ಲಭ್ಯವಿಲ್ಲ. * ಕಳಭ್ರರೆಂದು ಭಾವಿಸಲಾದ ಆನೆ , ಕುರಿ,ಕುದುರೆ ,ಮೀನು ,ಕುಳಿತ ಭಂಗಿಯ ಜಿನಮುನಿ , ಸ್ವಸ್ತಿಕ , ಮಂಜುಶ್ರೀಯ ಗುರುತಾದ ಕಿರು ಖಡ್ಗ ಲಾಂಛನಗಳನ್ನು ಹೊಂದಿದ ತಾಮ್ರದ ನಾಣ್ಯಗಳು ದಕ್ಕಿವೆ. ಇವುಗಳಲ್ಲಿ ಅಚುವಿಕಂತ ಕಳಭ್ರ ಎಂಬ ಪ್ರಾಕೃತ ಬರಹಗಳಿವೆ. ಆರನೇ ಶತಮಾನದ ವೇಳೆಗೆ ಈ ನಾಣ್ಯಗಳ ಮೇಲೆ ವೈದಿಕ ದೇವತೆಗಳು ಕಾಣಿಸಿಕೊಂಡಿದ್ದಾರೆ. * ಬೌದ್ಧ , ಜೈನರು ಭಾರತದೆಲ್ಲೆಡೆ ತಾವಿದ್ದ ಜಾಗಗಳಲ್ಲಿ ಶಿಲಾಶಾಸನ , ತಾಮ್ರಪಟ , ಸ್ಮಾರಕ ನಿರ್ಮಾಣಗಳಂತಹ ಶಾಶ್ವತ ಸಾಕ್ಷ್ಯಗಳನ್ನು ,ಸಾಹಿತ್ಯ ರಚನೆ , ಸಂಘಗಳ ಸ್ಥಾಪನೆಗಳ ಮೂಲಕ ಧಾರ್ಮಿಕ ಛಾಯೆಗಳನ್ನು , ವಣಿಕ ಸಂಘಟನೆಗಳ ಮೂಲಕ ವ್ಯಾವಹಾರಿಕ ಕುರುಹುಗಳನ್ನು ಉಳಿಸಿ ಹೋಗಿದ್ದಾರೆ. ಆದರೆ ಬೌದ್ಧ/ಜೈನರೆಂದು ಭಾವಿಸಲಾದ ಕಳಭ್ರರ ಅಸ್ತಿತ್ವವನ್ನು ಸೂಚಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿರುವುದು ಅವರ ಅಸ್ತಿತ್ವವನ್ನೇ ಸಂಶಯದಿಂದ ನೋಡುವಂತೆ ಮಾಡುತ್ತದೆ. ಪ್ರಾದೇಶಿಕ ಅಸ್ಪಷ್ಟತೆ * ಕಳಭ್ರರ ಅಂಧಕಾರ ಯುಗದಲ್ಲಿ ತಮಿಳಗಂನ ಮೂವೇಂದರರು ಹೇಳಹೆಸರಿಲ್ಲದಂತಾದರು. ಆದರೆ ಸಂಗಂ ಸಾಹಿತ್ಯದಲ್ಲಿ ಉಲ್ಲೇಖಿಸಲ್ಪಟ್ಟ ಕಡಂಬುಗಳು (ಕದಂಬರ) , ಕೊಂಗರು (ಗಂಗರು), ಪುನ್ನಾಟರು ಮಾತ್ರ ಸ್ವತಂತ್ರ ರಾಜ್ಯಗಳನ್ನು ಸ್ಥಾಪಿಸಿ ನಿರ್ವಿಘ್ನವಾಗಿ ಮುಂಡುವರೆದರು. ಇವರ ಮೇಲೆ ಕಳಭ್ರರು ಏಕೆ ಎರಗಲಿಲ್ಲ ,ಕಳಭ್ರರು ತಮಿಳಗಂನ ಮೂವೇಂದರ ಮೇಲೆ ಮಾತ್ರ ಅಧಿಪತ್ಯ ಸ್ಥಾಪಿಸಿದರೆ ? ಎನ್ನುವ ಸಮಸ್ಯೆಗಳು ಉಳಿಯುತ್ತದೆ. * ಕಳಭ್ರರು ಇದ್ದರೆಂದು ಭಾವಿಸಲಾದ ಅವಧಿಯಲ್ಲಿ ಉತ್ತರದಲ್ಲಿ ಮೊದಲಿಗೆ ಕದಂಬರು ನಂತರ ಚಾಲುಕ್ಯರು , ದಕ್ಷಿಣದಲ್ಲಿ ಪಲ್ಲವರು , ಮಧ್ಯದಲ್ಲಿ ಗಂಗರು ಆಳುತ್ತಿದ್ದರು. ಗಂಗರ ಸಾಮ್ರಾಜ್ಯ ಉತ್ತರದಲ್ಲಿ ಮರುಂದಲೆ , ಪೂರ್ವದಲ್ಲಿ ತೊಂಡನಾಡು , ಪಶ್ಚಿಮದಲ್ಲಿ ಕೊಚ್ಚಿನ್ , ತಿರುವಾಂಕೂರು , ದಕ್ಷಿಣದಲ್ಲಿ ಸೇಲಂ, ಕೊಯಂಬತ್ತೂರು ಪ್ರದೇಶಗಳನ್ನೊಳಗೊಂಡಿದ್ದಿತು. ತಮಿಳಗಂ ಪ್ರದೇಶಕ್ಕೆ ಒತ್ತಿಕೊಂಡಂತಿದ್ದ ಗಂಗರನ್ನು ಸೇರಿದಂತೆ ಇವರಲ್ಲಿ ಯಾರೊಬ್ಬರೂ ಕಳಭ್ರರೊಂದಿಗೆ ಯಾವುದೇ ಬಗೆಯ ಸಂಪರ್ಕ, ರಾಜಕೀಯ ಏಳು-ಬೀಳಾಟಗಳನ್ನು ಹೊಂದಿದಂತೆ ಕಾಣುವುದಿಲ್ಲ. ಇದು ಅತ್ಯಂತ ಸೋಜಿಗದ ವಿಷಯವಾಗಿದ್ದು ಕಳಭ್ರರ ಅಸ್ತಿತ್ವದ ಬಗೆಗೆ ಅನುಮಾನ ತಾಳುವಂತೆ ಮಾಡುತ್ತದೆ. ಸಂಗಂ ಅವಧಿಯ ಮರುಚಿಂತನೆ * ಸಂಗಂ ಸಾಹಿತ್ಯದಲ್ಲಿನ ಯವನರ ಉಲ್ಲೇಖ , ಅವರೊಂದಿಗಿನ ವ್ಯಾಪಾರ ವಹಿವಾಟುಗಳ ವಿವರಣೆ, ತಮಿಳಗಂನಲ್ಲಿ ಲಭ್ಯವಾದ ರೋಮನ್ ನಾಣ್ಯಗಳ ಆಧಾರಧ ಮೇಲೆ ಸಂಗಂ ಸಾಹಿತ್ಯದ ಕಾಲವನ್ನು ಕ್ರಿ.ಶ. 1- ಕ್ರಿ.ಶ 3 ಎಂದು ನಿರ್ಧರಿಸಲಾಗಿದೆ. ದಕ್ಷಿಣ ಭಾರತ-ರೋಮನ್ ವಾಣಿಜ್ಯ ಸಂಪರ್ಕ ಕ್ರಿ.ಪೂ 31 ರಿಂದ ಕ್ರಿ.ಶ 218 ರ ಅವಧಿಯಲ್ಲಿ ಊರ್ಜಿತವಿದ್ದು ಕ್ರಿ.ಶ 217 ರಲ್ಲಿ ರೋಮನ್ ಚಕ್ರವರ್ತಿ ಕ್ಯಾರಕಲ್ಲನ ಅವಸಾನದೊಂದಿಗೆ ಕೊನೆಗೊಳ್ಳುತ್ತದೆಯೆಂದು ಚರಿತ್ರೆಕಾರರು ಭಾವಿಸಿದ್ದಾರೆ. ಆದರೆ ಕ್ರಿ.ಶ 4-5 ಶತಮಾನಕ್ಕೆ ಸೇರಿದ ರೋಮನ್ ನಾಣ್ಯಗಳು ತಮಿಳಗಂನ ಕರೂರು , ಮಧುರೈ, ತಿರುಕ್ಕೋಯಿಲೂರುಗಳಲ್ಲಿ ಯಥೇಚ್ಚವಾಗಿ ದಕ್ಕಿವೆ. ಕ್ರಿ.ಶ 217 ರ ನಂತರ ಕೆಲ ಕಾಲ ಕ್ಷೀಣಗೊಂಡಿದ್ದ ರೋಮನ್ ವ್ಯಾಪಾರ ಮತ್ತೊಮ್ಮೆ ಪುನರುಜ್ಜೀವನಗೊಂಡು ಕ್ರಿ.ಶ 5 ನೇ ಶತಮಾನದವರೆಗೂ ಮುಂದುವರಿಯಿತೆಂದು ಆರ್. ಕೃಷ್ಣಮೂರ್ತಿಯವರು ತಮ್ಮ ಸಂಶೋಧನೆಯಿಂದ ಖಚಿತಗೊಳಿಸಿದ್ದಾರೆ. ಸಂಗಂ ಸಾಹಿತ್ಯದಲ್ಲಿರುವ ಯವನರು ಈ ಕಾಲದವರೇ ಆಗಿರಬಹುದು. ಇದನ್ನು ಪರಿಗಣಿಸಿದ್ದೇ ಆದರೆ ಸಂಗಂ ಕಾಲ ಕ್ರಿ.ಶ 1-ಕ್ರಿ.ಶ 3 ಶತಮಾನದ ಅವಧಿಗೆ ಬದಲು ಕ್ರಿ.ಶ 3-ಕ್ರಿ.ಶ 5 ನೇ ಶತಮಾನದ ಅವಧಿಗೆ ಸರಿದು ಅಸ್ತಿತ್ವದಲ್ಲಿಲ್ಲದ ಕಳಭ್ರರ ಸಮಸ್ಯೆ ಬಗೆಹರಿದು ತಮಿಳಗಂನ ಚರಿತ್ರೆಯಲ್ಲಿ ಸಾತತ್ಯ ದಕ್ಕುತ್ತದೆ. ಇದು ದಕ್ಷಿಣ ಭಾರತದ ಬುಡಕಟ್ಟುಗಳು (ಕದಂಬರು, ಗಂಗರು, ಚೇರ,ಚೋಳ, ಪಾಂಡ್ಯರು,ಪಲ್ಲವರು) ತಮ್ಮ ಮೂಲ ಕಸುಬಿನಾಚೆಗೆ ಸಾಗುತ್ತಾ , ತಮ್ಮ ಮೂಲ ನೆಲೆಯನ್ನು ವಿಸ್ತರಿಸಿಕೊಳ್ಳುವ ಆರಂಭಿಕ ಅವಧಿಗೆ ತಾಳೆಯಾಗುತ್ತದೆ. ದಕ್ಷಿಣ ಭಾರತದ ಎಲ್ಲ ಆರಂಭಿಕ ರಾಜ ವಂಶಗಳ ಆರಂಭ 3-4ನೇ ಶತಮಾನಗಳಿಂದ ಅಸ್ಪಷ್ಟ ದಾಖಲೆಗಳಿಂದ ಗೋಚರವಾಗುವುದು ಗಮನಾರ್ಹ. * ಸಂಗಂ ಸಾಹಿತ್ಯದಲ್ಲಿ ಪಲ್ಲವರ ಉಲ್ಲೇಖವಿಲ್ಲ. ಆದ್ದರಿಂದ ಅದರ ಕಾಲ ಅದಕ್ಕೂ ಹಿಂದಿನದೆಂದು ತೀರ್ಮಾನಿಸಲಾಗಿದೆ. ಕ್ರಿ.ಶ. 4 ರಿಂದ ಕ್ರಿ.ಶ 6 ನೇ ಶತಮಾನದ ಆರಂಭದ ಅವಧಿಯವರೆಗೆ ಪಲ್ಲವರ ಚರಿತ್ರೆ ಬಹು ಮಸುಕಾಗಿದೆ. ಸಮುದ್ರಗುಪ್ತ ತನ್ನ ಅಲಹಾಬಾದ್ ಸ್ತಂಭ ಶಿಲಾಶಾಸನದಲ್ಲಿ ಕಂಚಿಯ ವಿಷ್ಣುಗೋಪನನ್ನು ಸೋಲಿಸಿದುದಾಗಿ ದಾಖಲಿಸಿದ್ದಾನೆ. ಈತ ಪಲ್ಲವರ ರಾಜನೆಂದು ಚರಿತ್ರೆಕಾರರು ಭಾವಿಸಿದ್ದಾರೆ. ಆದರೆ ಶಿಲಾಶಾಸನದಲ್ಲಿ ಆತನನ್ನು ಪಲ್ಲವನೆಂದು ಕರೆದಿಲ್ಲ. ಆದ್ದರಿಂದ 4ನೇ ಶತಮಾನದಲ್ಲಿ ‘ಪಲ್ಲವ’ ಹೆಸರು ಬಳಕೆಯಲ್ಲಿರಲಿಲ್ಲ. ಸಂಗಂ ಸಾಹಿತ್ಯದಿಂದ ಕಂಚಿಯ ದೊರೆಗಳನ್ನು ‘ತಿರೈಯನ್’’ತೊಂಡೈಮಾನ್’ ಹೆಸರಿನಿಂದ ಕರೆಯಲಾಗುತ್ತಿತ್ತೆಂದು ತಿಳಿದು ಬರುತ್ತದೆ. ತೊಂಡಮಂಡಲ ಪಟ್ಟಿಯಂ ತಿರೈಯನ್ರ ಹಲವಾರು ಪಂಗಂಡಗಳನ್ನು ಸೂಚಿಸುತ್ತ ಅದರಲ್ಲಿ ‘ಪಲ್ಲವ ತಿರೈಯರ್’ ಒಂದೆಂದು ಹೇಳಿದೆ. ಇವರೇ ಮುಂದೆ ಪ್ರಬಲರಾಗಿ ಪಲ್ಲವರಾದ ಸಾಧ್ಯತೆಗಳಿವೆ. ಪಲ್ಲವರ ನಾಣ್ಯಗಳ ಮೇಲೆ ಹಡಗು ಹಾಗು ಪಟಕಂಬಗಳ ಲಾಂಛನಗಳಿವೆ. ಇದನ್ನು ಪರಿಗಣಿಸಿದ ಡುಬ್ರೆಯಿಲ್ ಇವರು ಸಾಗರ ಮಾರ್ಗವಾಗಿ ಬಂದ ಪರ್ಷಿಯನ್ರೆಂದು ನಿರ್ಧರಿಸಿದ್ದಾರೆ. ದ್ರಾಯ (ಸಮುದ್ರ)ದ ತಮಿಳು ರೂಪ ‘ತಿರಯರ್’ ಎಂದು ರಾಮಸ್ವಾಮಿ ಅಯ್ಯಂಗಾರ್ ಸೂಚಿಸಿದ್ದಾರೆ. ಇದನ್ನು ಪರಿಗಣಿಸಿದರೆ ತಮಿಳಗಂ ಚರಿತ್ರೆಯಲ್ಲಿ ನಿಗೂಢ ಮತ್ತು ಅಜ್ಞಾತವಾಗಿರುವ ಕಳಭ್ರಯುಗ , ಸಂಗಂ ಕಾಲದದೊಂದಿಗೆ ಸಮನ್ವಯ ಹೊಂದಿ ಉಳಿದ ದಕ್ಷಿಣ ಭಾರತ ಚರಿತೆಯೊಂದಿಗೆ ತಾಳೆಯಾಗುತ್ತ , ಮೂವರಸರ ಹಿನ್ನಡೆ , ಕದಂಬ-ಪಲ್ಲವರ ಹೋರಾಟಗಳು ಸ್ಪಷ್ಟವಾಗುತ್ತ ಚಾರಿತ್ರಿಕ ಸಾತತ್ಯ ದಕ್ಕುತ್ತದೆ. * ದಿವಾಕರರ್ ಎಂಬ ಪಾಣಾರ್ ಅಂಬರಕಿಳನ್ ಕುರಿತಾಗಿ ಹಾಡಿದ್ದಾನೆ. ಅದಿಮಾನ್ ಎಳಿನಿ ಈತನ ಸಮಕಾಲೀನ. ಅವ್ವೈಯಾರ್ ಮತ್ತು ಕಲ್ಲಾಡನಾರ್ ಸಹ ಅಂಬರಕಿಳನ್ನ್ನು ಹೊಗಳಿ ಹಾಡಿದ್ದಾರೆ. ಇವರು ಸಂಗಂ ಕಾಲದವರೆಂದು ವಿದ್ವಾಂಸರು ಒಪ್ಪಿದ್ದಾರೆ. ದಿವಾಕರರ್ ಚಾಲುಕ್ಯರನ್ನು ವೇಳೀರ್ಗಳೆಂದು ಕರೆದಿದ್ದಾನೆ. ಚಾಳುಕ್ಯರ ಚರಿತ್ರೆ ಕ್ರಿ.ಶ. 5 ನೇ ಶತಮಾನದ ಕೊನೆಯಿಂದ ಪ್ರಾರಂಭವಾಗುತ್ತದೆ. ಇದು ಸಂಗಂ ಕಾಲದ ಅವಧಿಯನ್ನು ಮತ್ತೊಮ್ಮೆ ವಿಮರ್ಶಕ ದೃಷ್ಟಿಯಿಂದ ನೋಡುವಂತೆ ಒತ್ತಾಯಿಸುತ್ತದೆ. * ಸಂಗಂ ಸಾಹಿತ್ಯದಲ್ಲಿ ಅರಿಯರನ್ನು, ವಂಬ ಮೊರಿಯರನ್ನು ಕುರಿತಾಗಿ ಹೇಳಲಾಗಿದೆ ಆದರೆ ಕಳಭ್ರರ ಬಗೆಗೆ ಯಾವುದೇ ವಿವರಗಳಿಲ್ಲ . ಯಾವುದೇ ವ್ಯವಸ್ಥೆಯಾಗಲಿ ಹಠಾತ್ ಅಂತ್ಯಗೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಸಂಗಂ ಕಾಲದ ಕೊನೆಯ ಅವಧಿಯಲ್ಲೇ ತಮಿಳಗಂ ಮೇಲೆ ಕಳಭ್ರರ ನೆರಳು ಬಿದ್ದಿದ್ದು ಅವರು ಚೋಳ , ಚೇರ , ಪಾಂಡ್ಯರ ವಿರುದ್ಧ ತಿರುಗಿ ಬಿದ್ದ ಕುರುಹಗಳು ದಕ್ಕಬೇಕಾಗಿದ್ದವು. ಅಂತಹವು ಯಾವುವೂ ಇಲ್ಲ. ಆದ್ದರಿಂದ ಸಂಗಂ ಕಾಲದ ಅವಧಿಯ ಮತ್ತು ಅದರ ಅಂತ್ಯವನ್ನು ಮರು ಪರಿಶೀಲನೆಗೆ ಒಳಪಡಿಸಬೇಕಾಗಿದೆ. * ವಂಬ ಮೊರಿಯರು (ನವ ಮೌರ್ಯರು) ವಡುಗರು ಹಾಗೂ ಕೋಸರರ ನೆರವಿನಿಂದ ತಮಿಳಗಂನ್ನು ಮುತ್ತಿ ಮೋಹೂರಿನ ಪಾಲಯನ್ನ್ನು ಸೋಲಿಸಲು ತಮಿಳಗಂಗೆ ಸೇನೆ ತಂದ ವಿವರವನ್ನು ಮಾಮೂಲನಾರ್ , ಪೆರುಂಕಡುಂಗೋ , ಪರಂಕೊರ್ರನಾರ್ ಮತ್ತು ಅತ್ತಿರೈಯನಾರ್ ತಿಳಿಸಿದ್ದಾರೆ. ಈ ಆಧಾರದ ಮೇಲೆ ವಂಬ ಮೌರ್ಯರ ನೆಲೆ ಹಾಗೂ ಕಾಲವನ್ನು ನಿರ್ಧರಿಸಲು ಯತ್ನಿಸಲಾಗಿದೆ. ಇವರನ್ನು ಕೆಲವರು ಕೊಂಕಣದ ಮೌರ್ಯರೆಂದು ಒಪ್ಪಿದ್ದರೆ , ಉಳಿದವರು ಕ್ರಿ.ಶ 5 ನೇ ಶತಮಾನದಲ್ಲಿ ದಕ್ಷಿಣಕ್ಕೆ ದಂಡಯಾತ್ರೆ ನಡೆಸಿದ ಸಮುದ್ರಗುಪ್ತನ ಸೇನೆ ಇದೆಂದು ಸೂಚಿಸಿದ್ದಾರೆ. * ಮೇಲಿನ ಐತಿಹಾಸಿಕ ಅಂಶಗಳಿಂದ ಕಳಭ್ರರ ಅಸ್ತಿತ್ವಕ್ಕೆ ಯಾವುದೇ ನಿರ್ದಿಷ್ಟ ಸಾಕ್ಷ್ಯಗಳು ದಕ್ಕದೆ ಸಂಗಂ ಯುಗದ ಅವಧಿಯನ್ನು ಮರು ಚಿಂತಸುವ ಅನಿವಾರ್ಯತೆ ಮುಡುತ್ತದೆ. |
|
Comment Box is loading comments...