ಖ್ಯಾತ ಮತ್ತು ಸಾಮಾನ್ಯ ಇಂಜಿನಿಯರಿಂಗ್ ಕಾಲೇಜುಗಳು-
ಒಂದು ವಿಮರ್ಶಕ ನೋಟ ಕಳೆದ ತಿಂಗಳು ಪಿಯುಸಿ ಪರೀಕ್ಷೆಗಳು , ನಂತರ ವೃತ್ತಿಪರ ಶಿಕ್ಷಣಕ್ಕೆ ಮುಖ್ಯ ಮೆಟ್ಟಿಲುಗಳಾದ ‘ಸಿಇಟಿ’ , ಕಾಮೆಡ್-ಕೆ , ಜೆ.ಇ.ಇ ಮುಂತಾದ ಹಲವು ಪ್ರವೇಶ ಪರೀಕ್ಷೆಗಳು ಮುಗಿದಿವೆ. ವಿದ್ಯಾರ್ಥಿಗಳ ಕೈಯಲ್ಲಿ ಈಗ ಅಂಕಪಟ್ಟಿ , ಪ್ರವೇಶ ಅರ್ಹತಾ ಪಟ್ಟಿಗಳಿವೆ. ಸಿಇಟಿ ಮೂಲಕ ಸೀಟುಗಳ ಹಂಚುವ ಪ್ರಕ್ರಿಯೆ ಪ್ರಾರಂಭವಾಗಿದೆ. ಪಿಯುಸಿ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿಗಳ ಭಾವ ಚಿತ್ರಗಳು , ಅವರು ಅಧ್ಯಯನ ನಡೆಸಿದ ರೀತಿ , ಗಳಿಸಿದ ಅಂಕಗಳು , ಅವರ ಆಸೆ , ಆಕಾಂಕ್ಷೆಗಳು , ಮುಂದೆ ಆರಿಸಿಕೊಳ್ಳಲಿರುವ ಕೋರ್ಸ್ , ಅವರ ಸಾಧನೆಗಳು ಎಲ್ಲ ದಿನಪತ್ರಿಕೆಗಳಲ್ಲಿ ಬಹು ಮುಖ್ಯ ವಿಷಯಗಳಂತೆ ಪ್ರಕಟಿಸಿಲ್ಪಟ್ಟಿವೆ. ದೃಶ್ಯ ಮಾಧ್ಯಮಗಳು ಕೂಡ ಇದರಲ್ಲಿ ಹಿಂದುಳಿದಿಲ್ಲ. ಹಲವಾರು ತರಬೇತಿ ಕೇಂದ್ರಗಳು ತಮ್ಮಿಂದ ತರಬೇತಾದ ವಿದ್ಯಾರ್ಥಿಗಳು ಇಂತಹ ಪರೀಕ್ಷೆಗಳಲ್ಲಿ ಎಷ್ಟೊಂದು ಯಶಸ್ವಿಯಾಗಿದ್ದಾರೆಂದು ಬಣ್ಣ, ಬಣ್ಣದ ಕರಪತ್ರ , ಪತ್ರಿಕಾ ಜಾಹಿರಾತುಗಳ ಮೂಲಕ ಸಾರುತ್ತಿವೆ. ಇಂತಹುದೇ ಸಾಧನೆ ಮಾಡಬೇಕೆಂದರೆ ತಮ್ಮ ತರಬೇತಿ ಕೇಂದ್ರಗಳಿಗೆ ತಕ್ಷಣವೇ ನೋಂದಾಯಿಸಿಕೊಳ್ಳುವಂತೆ ಪುಸಲಾಯಿಸುತ್ತಿವೆ. ಈಗ ಭಾರತದಾದ್ಯಂತ ವೃತ್ತಿ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಜ್ವರ ತಾಗಿದೆ. ಈ ಜ್ವರ ಹಿಂದೆಂದಿಗಿಂತಲೂ ಬಹು ತೀವ್ರವಾಗಿದೆ. ಕಳೆದ ೩೦ ವರ್ಷಗಳಿಂದ ಬದಲಾಗುತ್ತ , ಆರ್ಥಿಕವಾಗಿ ಮುನ್ನಡೆಯುತ್ತ , ಬೆಳೆಯುತ್ತಿರುವ ಮಧ್ಯಮ ವರ್ಗದ ಕನಸುಗಳನ್ನು ನನಸಾಗಿಸುವ ಏಕೈಕ ಮಾರ್ಗವಾಗಿ ಈ ಪ್ರವೇಶ ಪರೀಕ್ಷೆಗಳು ಬದಲಾಗಿವೆ. ಈ ಹಿಂದೆ ಪ್ರವೇಶ ಪರೀಕ್ಷೆಗಳು ಇದ್ದವಾದರೂ ಈ ರೀತಿಯ ತೀವ್ರ ಪೈಪೋಟಿ , ವೈಭವೀಕರಣಗಳು ಇರಲಿಲ್ಲ ಎನ್ನಬಹುದು. ಬೆಂಗಳೂರಿನಂತಹ ಊರಿನಲ್ಲಿ ೯೦ % ಗಿಂತಲೂ ಕಡಿಮೆ ಅಂಕಗಳನ್ನು ಪಡೆದವರನ್ನು ‘ಅನರ್ಹ’ ‘ ‘ದಡ್ದ’ ಎಂದು ಸಾರುವ ಮಟ್ಟಿಗೆ ಈ ಹುಚ್ಚಾಟ ಬೆಳೆದಿದೆ. ಇದು ಮುಂದೆ ಚೀನಾದಲ್ಲಿರುವ ‘ಕೀ ಪಾಯಿಂಟ್’ ಶಾಲೆ/ಕಾಲೇಜುಗಳ ಪ್ರವೇಶ ಪರೀಕ್ಷೆಯ ಉನ್ಮಾದದ ಲಕ್ಷಣಗಳತ್ತ ಹೊರಳುವ ಎಲ್ಲ ಸಾಧ್ಯತೆಗಳಿವೆ. ಇಂತಹ ಅಂಕ ಆಧಾರಿತ ಅರ್ಹತೆ ಹಾಗೂ ಪ್ರವೇಶದ ರೀತಿ ನೀತಿಗಳನ್ನು ಪ್ರಶ್ನಿಸುವಲ್ಲಿ ನಮ್ಮ ‘ಶಿಕ್ಷಣ ತಜ್ಞ’ರು , ‘ಬುದ್ಧಿ ಜೀವಿ’ಗಳು ಸೋತಿದ್ದಾರೆ. ಬೆರಳೆಣಿಕೆಯ ವಿಚಾರವಂತರು ಇದರ ವಿರುದ್ಧ ಕ್ಷೀಣ ಧ್ವನಿ ಎತ್ತಿರುವರಾದರೂ ಇದು ಸದಾ ಇಬ್ಬಂದಿತನದಲ್ಲಿ ಮುಳುಗಿರುವ ವಿದ್ಯಾವಂತ ಮಧ್ಯಮವರ್ಗದ ಕಿವಿಗೆ ಬೀಳುತ್ತಿಲ್ಲ. ಇದಲ್ಲದೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಂಟು ಜಾಡ್ಯದಂತೆ ಬೆಳೆಯುತ್ತಿರುವ ಮತ್ತೊಂದು ವಿದ್ಯಾಮಾನದತ್ತ ಗಮನ ಸೆಳೆಯುವುದೇ ಈ ಲೇಖನದ ಉದ್ದೇಶ. ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನ ಮಧ್ಯಮ ವರ್ಗದ ಪೋಷಕ ಹಾಗೂ ವಿದ್ಯಾರ್ಥಿಗಳಲ್ಲಿ ಹೊಸದೊಂದು ‘ಹುಸಿ ಸಾಕ್ಷಾತ್ಕಾರ’ ಆಗತೊಡಗಿ ಸಾಮಾಜಿಕ ಪಿಡುಗಿನ ರೂಪ ತಾಳುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಈ ಪಿಡುಗಿನ ಮುಖ್ಯ ಲಕ್ಷಣ ಹೀಗಿದೆ. ಸಿಇಟಿ/ಕಾಮೆಡ್-ಕೆ ಮುಂತಾದ ಪರೀಕ್ಷೆಗಳಲ್ಲಿ ಅರ್ಹತೆ ಗಳಿಸಿ ತಮ್ಮ ಆಸಕ್ತಿಯ ತಾಂತ್ರಿಕ ಶಿಕ್ಷಣವನ್ನು ಪಡೆದರೆ ಸಾಲದು. ಅಂತಹ ಶಿಕ್ಷಣವನ್ನು ಕೆಲ ನಿರ್ದಿಷ್ಟ ಕಾಲೇಜುಗಳಲ್ಲಿಯೇ ಪಡೆಯಬೇಕು. ಆ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದರೆ ಮಾತ್ರ ಜೀವನ್ಮುಕ್ತಿ ಎಂಬ ನಿಲುವು. ಇದರ ಪರಿಣಾಮವಾಗಿ ಬೆಂಗಳೂರಿನ/ಕರ್ನಾಟಕದ ಮೊದಲ ಹತ್ತು ಶ್ರೇಷ್ಟ ಕಾಲೇಜುಗಳ ಪಟ್ಟಿ ಅಂತರ್ಜಾಲದಲ್ಲಿ ಹರಿದಾಡತೊಡಗಿದೆ. ಅದರಲ್ಲಿ ಕರ್ನಾಟಕದ ಮೊದಲ ಇಂಜಿನಿಯರಿಂಗ್ ಕಾಲೇಜಾದ ಯು.ವಿಸಿ.ಇ ಸೇರಿದಂತೆ ಯಾವುದೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲದಿರುವುದು ಗಮನಾರ್ಹ. ೯೦% ಗಿಂತಲೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿ ಕೂಡ ಈ ‘ಖ್ಯಾತ’ ನಿರ್ದಿಷ್ಟ ಕಾಲೇಜುಗಳಿಗೆ ಪ್ರವೇಶ ಸಿಗದಿದ್ದರೆ ಜೀವನವೇ ವ್ಯರ್ಥ ಎಂಬ ನಿರ್ಧಾರಕ್ಕೆ ಬಂದು ನಿಂತಿದ್ದಾನೆ. ವಿದ್ಯಾವಂತ ಪೋಷಕರು ಈ ‘ಹುಸಿ ಶ್ರೇಷ್ಟತೆ’ಯನ್ನು ಕಿತ್ತೊಗೆಯುವಂತೆ ಮಕ್ಕಳಿಗೆ ತಿಳಿವಳಿಕೆ ನೀಡುವ ಬದಲು ಅವರು ಸಹ ಆ ಶ್ರೇಷ್ಟತೆಯ ವ್ಯಸನದಲ್ಲಿ ಪಾಲುದಾರರಾಗಿದ್ದಾರೆ. ವಿದ್ಯಾರ್ಥಿಗಳು ವಿದ್ಯಾರ್ಥಿಗಳೊಂದಿಗೆ ಸೇರಿದಾಗ , ಪೊಷಕರು ನೆಂಟರಿಷ್ಟರೊಂದಿಗೆ , ಸಹೋದ್ಯೋಗಿಗಳೊಂದಿಗೆ , ಸ್ನೇಹಿತರೊಂದಿಗೆ ಸೇರಿದಾಗ ಈ ಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರೆಯುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಅಥವಾ ಹೇಗೆ ತಮ್ಮ ಮಗ/ಮಗಳ ಸಾಧನೆಗೆ ಅಂತಹ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತು ಎನ್ನುವ ಹೆಗ್ಗಳಿಕೆಗಳೇ ತುಂಬಿರುತ್ತವೆ. ಹಾಗಾದರೆ ಈಗಿರುವ ಸ್ಥಿತಿಯಲ್ಲಿ ಇಂಜಿನಿಯರಿಂಗ್ ಕಾಲೇಜುಗಳನ್ನು ನಿಜವಾಗಿಯೂ ಅತ್ಯುತ್ತಮ /ಶ್ರೇಷ್ಟ ಎಂದು ವರ್ಗೀಕರಿಸಲು ಸಾಧ್ಯವೇ ಎಂದು ಮುಂದೆ ನೊಡೋಣ. ಈ ಪ್ರತಿಷ್ಟಿತ/ಖ್ಯಾತ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಕಾರಿಸುತ್ತಿರುವವರು ನೀಡುವ ಕಾರಣಗಳು ಹೀಗಿವೆ. - ಉತ್ತಮ ಮೂಲ ಸೌಕರ್ಯ - ಉತ್ತಮ ಬೋಧಕ ಸಿಬ್ಬಂದಿ-ಅತ್ಯುತ್ತಮ ಶೈಕ್ಷಣಿಕ ವಾತಾವರಣ- ಹೆಚ್ಚಿನ ಜ್ಞಾನ ಸಂಪಾದನೆಗೆ ಅವಕಾಶ - ಉದ್ಯೋಗಾವಕಾಶ ಉತ್ತಮ ಮೂಲ ಸೌಕರ್ಯ ಯಾವುದೇ ಕಾಲೇಜು ಇಂಜಿನಿಯರಿಂಗ್ ಶಿಕ್ಷಣ ನೀಡಬೇಕೆಂದರೆ ಅದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಏಐಸಿಟಿಇ) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅನುಮೋದನೆಗೆ ಒಳಪಟ್ಟಿರುತ್ತದೆ. ಇವುಗಳ ಅನುಮೋದನೆಗೆ ನಿಗದಿತ , ನಿರ್ದಿಷ್ಟ ಮೂಲ ಸೌಕರ್ಯಗಳು ಇರಲೇಬೇಕು. ಪ್ರತಿಯೊಂದು ಇಂಜಿನಿಯರಿಂಗ ಕೋರ್ಸ್’ಗೆ ಬೇಕಾದ ಪ್ರಯೋಗಾಲಯ , ಉಪಕರಣ , ಸಾಧನ, ಸಲಕರಣೆಗಳು ಇರಲೇಬೇಕು. ಇಲ್ಲದಿದ್ದರೆ ಇಂಜಿನಿಯರಿಂಗ್ ಶಿಕ್ಷಣ ನೀಡಲು ಸಾಧ್ಯವಿಲ್ಲ. ಹೊಸದಾಗಿ ಪ್ರಾರಂಭವಾದ ಕಾಲೇಜುಗಳು ಈ ಮೂಲ ಸೌಕರ್ಯಗಳನ್ನು ಇರುಕಿಸಿ ಸ್ಥಾಪಿಸಿರುತ್ತವೆ. ವರ್ಷಗಳು ಕಳೆದಂತೆ ಪ್ರತಿಯೊಂದು ವಿಭಾಗಗಳಿಗೂ ಸ್ವಂತ ಕಟ್ಟಡಗಳು ತಲೆ ಎತ್ತತೊಡಗಿ , ಈ ಮೂಲ ಸೌಕರ್ಯಗಳು ಆ ಕಟ್ಟಡಗಳಿಗೆ ಸ್ಥಳಾಂತರವಾಗುತ್ತವೆ. ಪ್ರಾರಂಭವಾದ ಹತ್ತು ವರ್ಷಗಳೊಳಗೆ ಬಹುತೇಕ ಎಲ್ಲ ಕಾಲೇಜುಗಳು ಈ ಮೂಲ ಸೌಕರ್ಯಗಳನ್ನು ವೃದ್ಧಿಗೊಳಿಸಿ ಸರಿದಾರಿಗೆ ಬಂದಿರುತ್ತವೆ. ಇತ್ತೀಚೆಗೆ ತಾಂತ್ರಿಕ ಶಿಕ್ಷಣದ ಕಾಲೇಜುಗಳನ್ನು ದೊಡ್ದಮಟ್ಟದ ಬಂಡವಾಳಗಾರರು ಸ್ಥಾಪಿಸುತ್ತಿರುವುದರಿಂದ ಈ ಎಲ್ಲ ಮೂಲ ಸೌಕರ್ಯಗಳು ಮೊದಲ ಎರಡು ವರ್ಷಗಳಲ್ಲಿ ತೃಪ್ತಿದಾಯಕ ಮಟ್ಟಕ್ಕೆ ಬಂದಿರುತ್ತವೆ. ಇನ್ನು ಉಳಿದಂತೆ ಹಳೆಯ ಕಾಲೇಜುಗಳು ಸಾಕಷ್ಟು ಕಾಲದಿಂದ ಇದ್ದು ಈ ಮೂಲ ಸೌಕರ್ಯಗಳನ್ನು ನವೀಕರಿಸಿಕೊಂಡಿರುತ್ತವೆ. ೨೦ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಸ್ನಾತಕೋತ್ತರ ಪದವಿ ನೀಡುತ್ತಿದ್ದ ಇಂಜಿನಿಯರಿಂಗ್ ಕಾಲೇಜುಗಳು ೫-೬ ಕ್ಕಿಂತ ಹೆಚ್ಚಿರಲಿಲ್ಲ. ಈಗ ಹತ್ತು ವರ್ಷ ಪೂರೈಸಿರುವ ಹಲವಾರು ಕಾಲೇಜುಗಳು ಸ್ನಾತಕೋತ್ತರ ಪದವಿ ಪ್ರಾರಂಭಿಸಿವೆ. ಈ ಪದವಿಗಳಿಗೆ ಬೇಕಾದ ಮೂಲ ಸೌಕರ್ಯಗಳು ಅವುಗಳೊಂದಿಗೆ ಇರುತ್ತವೆ. ಸಾಂಪ್ರದಾಯಿಕ ಕೋರ್ಸ್’ಗಳಾದ ಸಿವಿಲ್. ಮೆಕ್ಯಾನಿಕಲ್ , ಎಲೆಕ್ಟ್ರಿಕಲ್ ಕೋರ್ಸ್’ಗಳಿಗೆ ಬೇಕಾದ ಮೂಲ ಸೌಕರ್ಯ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ , ಟೆಲೆ ಕಮ್ಮ್ಯುನಿಕೇಷನ್ ಮುಂತಾದ ಕೋರ್ಸ್’ಗಳಿಗೆ ಬೇಕಾದುದಕ್ಕಿಂತಲೂ ಭಿನ್ನವಾಗಿರುತ್ತವೆ. ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ , ಟೆಲೆ ಕಮ್ಯುನಿಕೇಷನ್ ಕೋರ್ಸ್’ಗಳಿಗೆ ಬೇಕಾದ ಪ್ರಯೋಗಾಲಯ , ಸಲಕರಣೆ , ಸಾಧನಗಳನ್ನು ಕಾಲೇಜಿನ ಕಟ್ಟಡದೊಳಗೆ ಇರಿಸಿ ಅವುಗಳನ್ನು ಬಹುಮಹಡಿ ಕಟ್ಟಡಗಳಲ್ಲಿ ನಡೆಸುವುದು ಸಾಧ್ಯ. ಹೊಸ ಉಪಕರಣಗಳನ್ನು ತರಿಸುವುದು, ಸ್ಥಾಪಿಸುವುದು ಸವಾಲಿನ ಕೆಲಸವಲ್ಲ. ಕಳೆದ ಹತ್ತು ವರ್ಷಗಳಿಂದ ಪ್ರಾರಂಭವಾದ ಹಲವಾರು ಕಾಲೇಜುಗಳಲ್ಲಿ ‘ಸಿವಿಲ್ ಇಂಜಿನಿಯರಿಂಗ್’ನಂತಹ ಸಾಂಪ್ರದಾಯಿಕ ಕೋರ್ಸ್’ಗಳಿಲ್ಲ. ಆದ್ದರಿಂದ ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಶೈಕ್ಷಣಿಕ ಮೂಲ ಸೌಕರ್ಯಗಳ ದೃಷ್ಟಿಯಲ್ಲಿ , ಪ್ರಯೋಗಾಲಯ, ಉಪಕರಣಗಳ ದೃಷ್ಟಿಯಲ್ಲಿ ‘ಖ್ಯಾತ’ ಹಾಗೂ ‘ಸಾಮಾನ್ಯ’ ಕಾಲೇಜುಗಳ ನಡುವೆ ಅಂತಹ ಅಂತರವಿಲ್ಲ. ಇನ್ನು ಉಳಿದಂತೆ ಆಡಳಿತ ಮಂಡಳಿಗಳು ಶೈಕ್ಷಣಿಕ ವಿಷಯಗಳಲ್ಲಿ ಮೂಗು ತೂರಿಸುವಲ್ಲಿ ‘ಖ್ಯಾತ’ ಹಾಗೂ ‘ಸಾಮಾನ್ಯ’ ಕಾಲೇಜುಗಳ ನಡುವೆ ವ್ಯತ್ಯಾಸವಿಲ್ಲ. ಮೂಲ ಸೌಕರ್ಯಗಳ ಪಟ್ಟಿಯಲ್ಲಿ ಗ್ರಂಥಾಲಯಗಳು ಬರುತ್ತವೆ. ಬಹುತೇಕ ಕಾಲೇಜುಗಳಲ್ಲಿ ಕೋರ್ಸ್’ಗಳಿಗೆ ಶಿಫಾರಸ್ಸು ಮಾಡಲಾಗಿರುವ ಪುಸ್ತಕಗಳು ಇರುತ್ತವೆ. ಪ್ರತಿಷ್ಟೆಗಾಗಿ ರಾಷ್ಟ್ರೀಯ , ಅಂತಾರಾಷ್ಟ್ರೀಯ ತಾಂತ್ರಿಕ ಪತ್ರಿಕೆಗಳನ್ನು ಬಹುತೇಕ ಎಲ್ಲ ಕಾಲೇಜುಗಳು ತರಿಸುತ್ತವೆ. ಆದರೆ ವಾಸ್ತವಿಕವಾಗಿ ಈ ಪತ್ರಿಕೆಗಳ ಬಳಕೆ ಕುತೂಹಲಕಾರಿಯಾಗಿದೆ. ಭಾರತದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪರೀಕ್ಷಾ ಕೇಂದ್ರಿತವಾಗಿವುದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ನೆರವಾಗಬಲ್ಲ ಪುಸ್ತಕಗಳನ್ನು ಓದುತ್ತಾರೆ ಮತ್ತು ಎರವಲು ಪಡೆಯುತ್ತಾರೆ. ತಾಂತ್ರಿಕ ಪತ್ರಿಕೆಗಳಲ್ಲಿ ಬರುವ ಬಹುತೇಕ ಲೇಖನಗಳು ಪದವಿ ವಿದ್ಯಾರ್ಥಿಗಳ ಜ್ಞಾನ ಪರಿಧಿಯಾಚೆಗೆ ಇರುತ್ತವೆ. ಪಠ್ಯಕ್ರಮ ಹೊರತಾಗಿ ಹೆಚ್ಚಿನ ಜ್ಞಾನ ಬಯಸಿ ಇಂತಹ ತಾಂತ್ರಿಕ ಪತ್ರಿಕೆಗಳ ಲೇಖನಗಳನ್ನು ಅರಗಿಸಿಕೊಳ್ಳಬಲ್ಲ ವಿದ್ಯಾರ್ಥಿಗಳು ಇಲ್ಲವೆನಿಸುವಷ್ಟು ವಿರಳ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಈ ತಾಂತ್ರಿಕ ಪತ್ರಿಕೆಗಳು ನೆರವಾಗುತ್ತವೆ ಎನ್ನುವುದು ನಿಜ. ಈಗ ಕಾಲೇಜುಗಳು ಡಿಜಿಟಲ್ ಗ್ರಂಥಾಲಯಗಳ ಸದಸ್ಯರಾಗುತ್ತಿವೆ. ಇದು ಸಾಂಪ್ರದಾಯಿಕ ಗ್ರಂಥಾಲಯಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ಅಂತರ್ಜಾಲದಲ್ಲಿ ತಾಂತ್ರಿಕ ಆವಿಷ್ಕಾರ, ಬೆಳವಣಿಗೆಗಳ ಸಾಕಷ್ಟು ಪರಿಚಯ ಲಭ್ಯ. ಜಗತ್ತಿನಾದ್ಯಂತ ಇರುವ ನೂರಾರು ಇಂಜಿನಿಯರಿಂಗ್ ಕಾಲೇಜುಗಳು , ಪ್ರಾಧ್ಯಾಪಕರು , ವಿದ್ಯಾರ್ಥಿಗಳು , ವೃತ್ತಿಪರರು ಸಾವಿರಾರು ಲೇಖನಗಳನ್ನು ಜಾಲತಾಣಗಳಲ್ಲಿ ಮುಕ್ತವಾಗಿ ಹರಿಯಬಿಟ್ಟಿದ್ದಾರೆ. ಐಐಟಿ ಯಂತಹ ಭಾರತದ ಶ್ರೇಷ್ಟ ತಾಂತ್ರಿಕ ಸಂಸ್ಥೆಗಳ ಪ್ರಾಧ್ಯಾಪಕರ ಉಪನ್ಯಾಸಗಳು ಜಾಲತಾಣ ಹಾಗೂ ಡಿವಿಡಿ ರೂಪದಲ್ಲಿ ಲಭ್ಯ. ನಿಜವಾಗಿಯೂ ಕಲಿಕೆಯಲ್ಲಿ ಆಸಕ್ತನಾಗಿರುವ ವಿದ್ಯಾರ್ಥಿಗೆ ತನ್ನ ಕಾಲೇಜಿನ ವ್ಯಾಪಿ ಮೀರಿದ ಜ್ಣಾನ ಗಳಿಕೆಯ ಹಲವು ಹತ್ತಾರು ದಾರಿಗಳು ಆಧುನಿಕ ತಂತ್ರಜ್ಣಾನದಿಂದಾಗಿ ಲಭ್ಯ. ಆದ್ದರಿಂದ ಮೂಲ ಸೌಕರ್ಯದ ದೃಷ್ಟಿಯಿಂದ ಒಂದು ಕಾಲೇಜು ಇನ್ನೊಂದು ಕಾಲೇಜಿಗಿಂತ ಶ್ರೇಷ್ಟ ಎಂದು ಹೇಳಲು ಸಾಧ್ಯವಿಲ್ಲ. ಬೆಂಗಳೂರಿನ ‘ಖ್ಯಾತ’ ಕಾಲೇಜುಗಳಿಗೆ ಇರುವ ಈ ಎಲ್ಲ ಲಭ್ಯ ಸವಲತ್ತುಗಳು ಇತರ ‘ಸಾಮಾನ್ಯ’ ಕಾಲೇಜುಗಳಲ್ಲೂ ಲಭ್ಯ. ಎಲ್ಲ ಕಾಲೇಜುಗಳಲ್ಲೂ ಸಭಾಂಗಣ ಸೇರಿದಂತೆ ಸಾಂಸ್ಕೃತಿಕ ಕೆಂದ್ರ , ವಿಭಿನ್ನ ವೇದಿಕೆಗಳು ಅಸ್ತಿತ್ವದಲ್ಲಿವೆ. ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ತಕ್ಕ ಮಟ್ಟಿನ ವಿಸ್ತೀರ್ಣದ ಮೈದಾನಗಳಿವೆ. ಕ್ಯಾಂಟೀನ್ , ಬ್ಯಾಂಕ್ , ಸಾರಿಗೆ ಸೌಲಭ್ಯಗಳು ಇಲ್ಲದ ಕಾಲೇಜುಗಳೇ ಈಗ ಇಲ್ಲ ಎನ್ನಬಹುದು. ಹೊಸದಾಗಿ ಪ್ರಾರಂಭವಾದ ಕೆಲ ಕಾಲೇಜುಗಳಲ್ಲಿ ಇವು ತೃಪ್ತಿದಾಯಕ ಮಟ್ಟದಲ್ಲಿ ಇಲ್ಲದಿರಬಹುದು. ಉತ್ತಮ ಬೋಧಕ ಸಿಬ್ಬಂದಿ-ಅತ್ಯುತ್ತಮ ಶೈಕ್ಷಣಿಕ ವಾತಾವರಣ- ಹೆಚ್ಚಿನ ಜ್ಞಾನ ಸಂಪಾದನೆಗೆ ಅವಕಾಶ ‘ಖ್ಯಾತ’ ಕಾಲೇಜುಗಳಲ್ಲಿ ಅತ್ಯುತ್ತಮ ಬೋಧಕ ಸಿಬ್ಬಂದಿ ಇರುತ್ತದೆ. ಆದ್ದರಿಂದ ಮಕ್ಕಳು ಅಲ್ಲಿಯೇ ಓದಬೇಕೆನ್ನುವುದು ಪೋಷಕರ ಆಶೆ. ಇದಕ್ಕೆ ಏನಾದರೂ ಆಧಾರಗಳಿವೆಯೇ ಎನ್ನುವುದನ್ನು ನೋಡೊಣ. ಇಂಜಿನಿಯರಿಂಗ್ ಶಿಕ್ಷಣದಲ್ಲಿ ಪಿಯುಸಿ ಮಾದರಿಯ ಬೋಧನೆಯನ್ನು ನಿರೀಕ್ಷಿಸುವುದು ತಪ್ಪು. ತಾಂತ್ರಿಕ ಶಿಕ್ಷಣದಲ್ಲಿ ಮೂಲ ಪರಿಕಲ್ಪನೆಗಳ ಪರಿಚಯ , ಅವುಗಳನ್ನು ಬಳಸುವ ರೀತಿಗೆ ಒತ್ತು ನೀಡಬೇಕಾಗುತ್ತದೆ. ಉತ್ತಮ ಬೋಧಕ ಸಿಬ್ಬಂದಿ ಪಠ್ಯಕ್ರಮದಲ್ಲಿರುವ ಪ್ರತಿಯೊಂದನ್ನು ಪರೀಕ್ಷೆಗೆ ಸಿದ್ಧವಾಗಿರುವಂತೆ ತಿಳಿಸಿಕೊಡಬೇಕು ಎಂಬ ತಪ್ಪು ನಂಬಿಕೆ ಪ್ರಚಲಿತವಾಗಿದೆ. ಅತಿಯಾದ ಅಂಕ ಆಧಾರಿತ ಚಿಂತನೆ ಇದರ ಹಿನ್ನೆಲೆಯಲ್ಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ ತಾಂತ್ರಿಕ ಪದವಿ ಶಿಕ್ಷಣಕ್ಕೆ ಬೇಕಾದ ಬೋಧಕ ಸಿಬ್ಬಂದಿಯ ವಿದ್ಯಾರ್ಹತೆ ನಿಗದಿ ಪಡಿಸಿದೆ. ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ ಪಡೆದವರು ಉಪನ್ಯಾಸಕ, ಸಹ ಪ್ರಾಧ್ಯಾಪಕರಾಗಿದ್ದರೆ ಡಾಕ್ಟರೇಟ್ ಪಡೆದವರು ಪ್ರಾಧ್ಯಾಪಕರಾಗಿರುತ್ತಾರೆ. ‘ಖ್ಯಾತ’ ಕಾಲೇಜುಗಳಲ್ಲಿ ಯಾವ ಪದವಿ ಗಳಿಸಿರುವವರು ಬೋಧಕರಾಗಿ ಇರುತ್ತಾರೋ ಅದೇ ಪದವಿ ಗಳಿಸಿದವರು ಇತರ ಕಾಲೇಜುಗಳಲ್ಲಿಯೂ ಬೋಧಕರಾಗಿರುತ್ತಾರೆ . ‘ಖ್ಯಾತ’ ಕಾಲೇಜುಗಳಲ್ಲಿ ಮೇಲೇರಲು ಅವಕಾಶ ಸಿಗದೆ ಹೆಚ್ಚಿನ ಸ್ಥಾನ ಮಾನ ಸಿಗುವ ಇತರ ಕಾಲೇಜುಗಳಿಗೆ ಹೋಗುವ ಬೋಧಕರ ಪ್ರಮಾಣ ಕಡಿಮೆಯೇನಲ್ಲ. ‘ಖ್ಯಾತ’ ಕಾಲೇಜುಗಳಲ್ಲಿ ಓದಿ ಬಂದವರೇ ‘ಸಾಮಾನ್ಯ ‘ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಯಾಗಿರುವುದು ಸಾಮಾನ್ಯ ಸಂಗತಿಯಾಗಿದೆ. ಇವರು ‘ಖ್ಯಾತ’ ಕಾಲೇಜಿನಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ಎರಡನೇ ದರ್ಜೆಗೆ ಸೇರಿಸಲಾಗುತ್ತದೆಯೇ ಅಥವಾ ಅವರ ಬೋಧನಾ ಮಟ್ಟ ಕಳಪೆ ಎಂದು ಹೇಳಲು ಸಾಧ್ಯವೇ ? ಬೆಂಗಳೂರಿನ ‘ಖ್ಯಾತ’ ನಂ-೧ ಕಾಲೇಜಿನಲ್ಲಿ ಸ್ನಾತಕೋತ್ತರ ಪಡೆದಾತ ‘ಸಾಮಾನ್ಯ’ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದರೆ ಏನೆಂದು ಅರ್ಥೈಸಬೇಕು ? ‘ಖ್ಯಾತ’ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದ ಹಲವರು ಇತರ ಕಾಲೇಜುಗಳಿಗೆ , ಇತರ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದವರು ‘ಖ್ಯಾತ’ ಕಾಲೇಜುಗಳಿಗೆ ಹೋಗುವುದು ಸಾಮಾನ್ಯ. ಆಗ ಬೋಧನಾ ಶ್ರೇಷ್ಟತೆ ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಹೋಗಿತೆನ್ನಬಹುದೇ ? ಪದವಿ ಮಟ್ಟದಲ್ಲಿ ಸಂಶೋಧನೆ ಮಾಡಿದ ಪ್ರಾಧ್ಯಾಪಕರ ಪ್ರಭಾವ ಅತ್ಯಂತ ಸೀಮಿತವಾಗಿದ್ದು ಸ್ನಾತಕೋತ್ತರ ಮಟ್ಟದಲ್ಲಿ ನೆರವಾಗಬಲ್ಲದಷ್ಟೇ. ಆದ್ದರಿಂದ ಉತ್ತಮ ಬೋಧನಾ ಸಿಬ್ಬಂದಿ ಎನ್ನುವುದು ಅಮೂರ್ತ ಕಲ್ಪನೆಯೇ ಹೊರತು ವಾಸ್ತವ ಸಂಗತಿಯಲ್ಲ. ‘ಖ್ಯಾತ’-‘ಸಾಮಾನ್ಯ’ ಎರಡೂ ಬಗೆಯ ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಯಾವುದೇ ವಿಧಾನದಿಂದಾಗಲಿ ಯಾವ ವಿದ್ಯಾರ್ಥಿ ಯಾವ ಕಾಲೇಜಿಗೆ ಸೇರಿರಬಹುದು ಎಂದು ನಿರ್ಧರಿಸುವುದು ಸಾಧ್ಯವೇ ಇಲ್ಲ. ನಿಗದಿತ ಪಠ್ಯಕ್ರಮ , ನಿಗದಿತ ಅವಧಿಯಲ್ಲಿ ಯಾವುದೇ ಒಂದು ಕಾಲೇಜು ಬೇರೆ ಕಾಲೇಜುಗಳಿಗಿಂತ ವಿಭಿನ್ನವಾಗಿ ಶಿಕ್ಷಣ ನೀಡುತ್ತದೆ ಎನ್ನುವುದು ಒಂದು ಹುಸಿ ನಂಬಿಕೆಯೇ ಹೊರತು ವಾಸ್ತವಿಕ ಸಂಗತಿಯಲ್ಲ. ಈಗ ಪ್ರತಿಯೊಂದು ಕಾಲೇಜಿನವರೂ ಒಂದಲ್ಲ ಒಂದು ಕೋರ್ಸ್’ನಲ್ಲಿ ವಿಟಿಯು ಪರೀಕ್ಷೆಗಳಲ್ಲಿ ರಾಂಕ್ ಪಡೆದವರನ್ನು ತೋರಿಸುತ್ತಾರೆ. ನೀವು ಯಾವುದೇ ಇಂಜಿನಿಯರಿಂಗ ಕಾಲೇಜುಗಳಿಗೆ ಹೋದರೂ ಇಂತಹ ಸಾಧಕ ವಿದ್ಯಾರ್ಥಿಗಳ ಪಟ್ಟಿ ನಿಮ್ಮ ಕೈ ಸೇರುತ್ತದೆ. ಕಾಲೇಜಿನ ಪ್ರವೇಶ ದ್ವಾರದಲ್ಲಿ ಅವರ ಭಾವ ಚಿತ್ರಗಳಿರುತ್ತವೆ . ಇವೆಲ್ಲವುಗಳಾಚೆ ಕಾಲೇಜಿನಿಂದ ಹೊರ ಬರುವಾಗ ಪದವಿ ನೀಡುವ ಸಂಸ್ಥೆ -ವಿಟಿಯು-ಒಂದೇ ಆಗಿರುತ್ತದೆ. ಪದವಿಯ ನಂತರ ಹೊಸ ಇಂಜಿನಿಯರಿಂಗ್ ಪದವೀಧರನಿಗೆ ಕೆಲಸ ನೀಡುವವರು ಆತ ಯಾವ ಕಾಲೇಜಿಗೆ ಸೇರಿದಾತ ಎನ್ನುವುದಕ್ಕಿಂತ ಮಿಗಿಲಾಗಿ ತಮ್ಮ ಸಂಸ್ಥೆ ಮತ್ತು ಹುದ್ದೆಗೆ ಎಷ್ಟು ಸೂಕ್ತ ಎನ್ನುವುದನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಇನ್ನು ಉಳಿದಂತೆ ಹೆಚ್ಚಿನ ಜ್ಞಾನ ಸಂಪಾದನೆ. ಈಗ ದಕ್ಕುತ್ತಿರುವ ತಾಂತ್ರಿಕ ಶಿಕ್ಷಣ ನಿರ್ದಿಷ್ಟ ಪಠ್ಯಕ್ರಮಕ್ಕೆ ಒತ್ತು ನೀಡುತ್ತದೆ. ಈ ಪಠ್ಯ ಕ್ರಮ ಒಬ್ಬ ವಿದ್ಯಾರ್ಥಿ ಪದವಿ ಗಳಿಸಿ ಹೊರಬಂದಾಗ , ತಾನು ಅಭ್ಯಸಿಸಿದ ಶಿಸ್ತಿನ ಸ್ಥೂಲ , ಒಟ್ಟಾರೆ ಚಿತ್ರಣ ಹಾಗೂ ಇಂಜಿನಿಯರ್ ಆಗಿ ವೃತ್ತಿ ಜೀವನ ಪ್ರಾರಂಭಿಸಲು ವೇದಿಕೆ ಒದಗಿಸುತ್ತದೆ. ಯಾವೊಬ್ಬ ವಿದ್ಯಾರ್ಥಿ ಪಠ್ಯಕ್ರಮದ ಹೊರತಾಗಿ ಹೆಚ್ಚಿನ ಜ್ಞಾನ ಗಳಿಸಲು ಬೋಧನೆಯ ರೂಪದಲ್ಲಿ ದಕ್ಕುವ ನೆರವು ಸೀಮಿತವಾಗಿರುತ್ತದೆ. ಏಕೆಂದರೆ ಪಠ್ಯಕ್ರಮದ ಹೊರತಾಗಿ ಹೆಚ್ಚಿನ ಜ್ಞಾನ ಸಂಪಾದಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವಿದ್ಯಾರ್ಥಿಗೆ ಅಸ್ಪಷ್ಟ ಎನಿಸಿದ ಕೆಲ ವಿವರಗಳಿಗೆ ಬೋಧಕರಿಂದ ಮಾರ್ಗದರ್ಶನ ಸಿಗಬಹುದಷ್ಟೇ. ಈಗಿರುವ ಶೈಕ್ಷಣಿಕ ಹೊರೆಯಡಿಯಲ್ಲಿ ಯಾವುದ ಉಪನ್ಯಾಸಕ ,ಪ್ರಾಧ್ಯಾಪಕ ಕೆಲ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಬಯಸಿದರೆ ಅವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗಲಿ ಅಥವಾ ಹೆಚ್ಚಿನ ವಿಷಯಗಳನ್ನು ಪಠ್ಯಕ್ರಮಗಳಲ್ಲಿ ಸೇರಿಸಲಾಗಲಿ ಸಾಧ್ಯವಿಲ್ಲ. ಈಗಿನ ಸ್ಥಿತಿಯಲ್ಲಿ ಹೆಚ್ಚಿನ ಜ್ಞಾನವನ್ನು ಉನ್ನತ-ಸ್ನಾತಕೋತ್ತರ- ಅಧ್ಯಯನದಿಂದ ಪಡೆಯವುದು ಒಂದೇ ಮಾರ್ಗ. ಇಂಜಿನಿಯರಿಂಗ್ ಅನ್ವಯಿಕ ವಿಜ್ಞಾನವಾಗಿರುವುದರಿಂದ ಪದವಿ ಪಡೆದ ನಂತರ ವೃತ್ತಿಯಲ್ಲಿ ದಕ್ಕುವ ಅವಕಾಶ , ಅನುಭವ ಮತ್ತು ಜ್ಞಾನ ಪದವಿ ಪಡೆಯುವಾಗ ಪಡೆದ ಜ್ಞಾನಕ್ಕಿಂತ ಹೆಚ್ಚು ಸ್ಪಷ್ಟ ಮತ್ತು ನಿಖರವಾಗಿರುತ್ತದೆ. ಈ ದೃಷ್ಟಿಯಲ್ಲಿ ‘ಖ್ಯಾತ’ ಕಾಲೇಜುಗಳಿಂದ ಹೆಚ್ಚಿನ ಜ್ಞಾನ ದಕ್ಕುತ್ತದೆ ಎನ್ನುವುದು ವೈಷಯಿಕವೇ ಹೊರತು ವಸ್ತುನಿಷ್ಠವಲ್ಲ. ಈ ನಿಟ್ಟಿನಲ್ಲಿ ‘ಖ್ಯಾತ’ ಹಾಗೂ ‘ಸಾಮಾನ್ಯ’ ಕಾಲೇಜುಗಳಿಂದ ಬಂದ ಪದವೀಧರರನ್ನು ಗುರುತಿಸುವುದು ಸಾಧ್ಯವಿಲ್ಲ. ಈವರೆಗೆ ‘ಖ್ಯಾತ’ ಹಾಗೂ ‘ಸಾಮಾನ್ಯ; ಕಾಲೇಜಿನಿಂದ ಪದವಿ ಪಡೆದವರು ವೃತ್ತಿ ಜೀವನದಲ್ಲಿ ಹೇಗೆ ಯಶಸ್ವಿಗಳಾಗಿದ್ದಾರೆ ಎಂದು ಯಾರೂ ಅಧ್ಯಯನ ನಡೆಸಿಲ್ಲ. ‘ಖ್ಯಾತ’ ಕಾಲೇಜುಗಳಿಂದ ಬಂದವರು ‘ಸಾಮಾನ್ಯ’ ಕಾಲೇಜುಗಳಿಂದ ಬಂದವರಿಗಿಂತ ಹೆಚ್ಚಿನ ಯಶಸ್ಸನ್ನು ಪಡೆದಿರುವರೆಂದು ಸಾಧಿಸಲು ಯಾವುದೇ ಅಂಕಿ ಅಂಶಗಳಿಲ್ಲ. ಉದ್ಯೋಗಾವಕಾಶ ‘ಖ್ಯಾತ’ ಕಾಲೇಜುಗಳಿಗೆ ನೂಕು ನುಗ್ಗಲು ಉಂಟಾಗಲು ಮುಖ್ಯ ಕಾರಣ ‘ಕ್ಯಾಂಪಸ್ ಇಂಟರ್’ವ್ಯೂ’ ಎಂಬ ಮಾಯಾಂಗನೆ. ಶೈಕ್ಷಣಿಕ ಸಂಸ್ಥೆಗಳಾದ ಕಾಲೇಜುಗಳು ತಮ್ಮ ಸಂಸ್ಥೆ ಸೇರಿದ ವಿದ್ಯಾರ್ಥಿಗಳಿಗೆ ತಾವು ಉತ್ತಮ ತಾಂತ್ರಿಕ ಶಿಕ್ಷಣ ನೀಡಿದೆವೆಂದು , ಹಲವಾರು ಬಗೆಯ ಶೈಕ್ಷಣಿಕ ಸಂವಾದ . ಚರ್ಚೆ , ನೈಜ ಯೋಜನೆಗಳಲ್ಲಿ ಭಾಗಿಗಳಾಗಲು ಅವಕಾಶ ಒದಗಿಸಿದೆವೆಂದು ಹೆಮ್ಮೆ ಪಡಬೇಕಾಗಿದ್ದಿತು. ಅದರ ಬದಲು ಈಗ ಎಲ್ಲ ಕಾಲೇಜುಗಳು ಖಾಸಗಿ ಕಂಪೆನಿಗಳ ಹಂಗಿನಲ್ಲಿ ಬಿದ್ದಿವೆ. ಪ್ರತಿಯೊಂದು ಕಾಲೇಜು ತನ್ನ ಸಂಸ್ಥೆಗೆ ಯಾವ ಯಾವ ಖಾಸಗಿ ಕಂಪೆನಿಗಳು ಬಂದಿದ್ದವು , ಅವುಗಳು ಎಷ್ಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡವು ಎಂದು ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿವೆ. ಕಾಲೇಜುಗಳ ತುಂಬ ಈ ಕಂಪೆನಿಗಳ ಲಾಂಛನಗಳು ತುಂಬಿ ತುಳುಕುತ್ತಿವೆ. ಹಾಗಾದರೆ ಕ್ಯಾಂಪಸ್ ಇಂಟರ್’ವ್ಯೂ ಜೀವನದಲ್ಲಿ ಅಷ್ಟೊಂದು ನಿರ್ಣಾಯಕವೇ ಎಂದು ನೋಡಬೇಕಾಗುತ್ತದೆ. ಇದಕ್ಕಾಗಿ ಕ್ಯಾಂಪಸ್ ಇಂಟರ್’ವ್ಯೂಗಳ ಚರಿತ್ರೆಯತ್ತ ಕಣ್ಣು ಹಾಯಿಸಬೇಕಾಗುತ್ತದೆ. ಉದಾರಿಕರಣ ಪ್ರಾರಂಭವಾದ ನಂತರ ಹಲವಾರು ಸಾಫ್ಟ್’ವೇರ್ ಕಂಪೆನಿಗಳು ಹುಟ್ಟಿದವು. ಈ ಕಂಪೆನಿಗಳು ಪಡೆದ ಗುತ್ತಿಗೆಗಳನ್ನು ನಿರ್ವಹಿಸಲು ಒಮ್ಮೆಲೆ ಸಾವಿರಾರು ಜನ ಉದ್ಯೋಗಿಗಳ ಅಗತ್ಯ ಬೀಳತೊಡಗಿತು. ಇದಕ್ಕಾಗಿ ಅವು ಕಾಲೇಜಿನಿಂದ ಕಾಲೇಜಿಗೆ ತಡಕಾಡುತ್ತ ‘ಕ್ಯಾಂಪಸ್ ಇಂಟರ್’ವ್ಯೂ ಎಂಬ ಪರಿಕಲ್ಪನೆ ತಂದವು. ಈ ಖಾಸಗಿ ಕಂಪೆನಿಗಳಿಗೆ ತಮಗೆ ಸಿಕ್ಕ ಗುತ್ತಿಗೆ ಕೆಲಸವನ್ನು ಪೂರೈಸಲು ಜನ ಬೇಕು. ಬಹುತೇಕ ವೇಳೆ ಇದಕ್ಕೆ ಇಂಜಿನಿಯರಿಂಗ್ ಜ್ಞಾನಕ್ಕಿಂತಲೂ ಬೇರೆಯದೇ ಬಗೆಯದಾದ ಬೇಡಿಕೆ ಇರುತ್ತದೆ. ಈಗ ಇಂಜಿನಿಯರಿಂಗ್ ಕಾಲೇಜಿನಿಂದ ಪಡೆಯುವ ಶಿಕ್ಷಣ ಮೂಲತತ್ತ್ವಗಳಿಗೆ ಅನುಗುಣವಾಗಿರುತ್ತದೆ. ಜಗತ್ತಿನಲ್ಲಿ ಎಲ್ಲ ಕಡೆಯೂ ಇಂತಹ ಶಿಕ್ಷಣವಿದೆ. ಆದರೆ ಖಾಸಗಿ ಕಂಪೆನಿಗಳಿಗೆ ಇಂತಹ ಶಿಕ್ಷಣ ಬೇಡ. ಅವುಗಳಿಗೆ ಗುತ್ತಿಗೆ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಮುಗಿಸುವ ಸಿಬ್ಬಂದಿ ಬೇಕು. ಆದ್ದರಿಂದ ಈ ಕಂಪೆನಿಗಳು ಇಂಜಿನಿಯರ್’ಗಳನ್ನ್ನು ಕೆಲಸಕ್ಕೆ ಸೇರಿಸಿಕೊಂಡು ತಮ್ಮ ಗುತ್ತಿಗೆ ಪೂರೈಸಲು ಬೇಕಾದ ತರಬೇತಿ ನೀಡುತ್ತವೆ. ಈ ತರಬೇತಿಗೂ ಮೂಲ ಇಂಜಿನಿಯರಿಂಗ್ ವಿಷಯಗಳಿಗೂ ಅದೆಷ್ಟೋ ವೇಳೆ ಯಾವುದೇ ಸಂಬಂಧ ಇರುವುದಿಲ್ಲ. ಎಲೆಕ್ಟ್ರಾನಿಕ್ಸ್ , ಟೆಲೆ ಕಮ್ಯುನಿಕೇಷನ್ ಪದವಿ ಪಡೆದವರೊಂದಿಗೆ ಸಿವಿಲ್ , ಮೆಕ್ಯಾನಿಕಲ್ ಅಷ್ಟೇ ಏಕೆ ಬಿಎಸ್ಸಿ ಪದವೀಧರರೂ ಈ ಸಾಫ್ಟ್’ವೇರ್ ತರಬೇತಿ ಪಡೆದು ಗುತ್ತಿಗೆ ಪೂರೈಸಲು ಬಳಕೆಯಾಗುತ್ತಾರೆ. ಕ್ಯಾಂಪಸ್ ಇಂಟರ್’ವ್ಯೂನಲ್ಲಿ ಆಯ್ಕೆಯಾದವರೊಂದಿಗೆ ಬೇರೆ ಪದವಿ ಗಳಿಸಿ ನಿರ್ದಿಷ್ಟ ವಿಷಯಗಳಲ್ಲಿ ಶೀಘ್ರ ಕಂಪ್ಯೂಟರ್ ತರಬೇತಿ ಪಡೆದಿರುವವರು ಸೇರಿರುತ್ತಾರೆ. ಆದ್ದರಿಂದ ಕ್ಯಾಂಪಸ್ ಇಂಟರ್’ವ್ಯೂಗಳು ಯಾವಾಗಲೂ ಒಬ್ಬ ತಾಂತ್ರಿಕ ಪದವೀಧರನ ತಾಂತ್ರಿಕ ಜ್ಞಾನ ಮತ್ತು ಪರಣಿತಿಯನ್ನು ಬಳಸಿಕೊಳ್ಳುತ್ತವೆಯೋ ಅಥವಾ ತಮಗೆ ಬೇಕಾದ ನಿರ್ದಿಷ್ಟ ಬೋನಿನಡಿಯಲ್ಲಿ ಅವನನ್ನು ಪಳಗಿಸುತ್ತವೆಯೋ ಸ್ಪಷ್ಟವಿಲ್ಲ. ಇನ್’ಫಾರ್ಮೇಷನ್ ಟೆಕ್ನಾಲಜಿ , ಇನ್’ಫಾರ್ಮೇಷನ್ ಸೈನ್ಸ್ ನಲ್ಲಿ ಪದವಿ ಪಡೆದ ಇಂಜಿನಿಯರ್’ಗಳಿಗೆ ಕ್ಯಾಂಪಸ್ ಇಂಟರ್’ವ್ಯೂ ನಡೆಸಿರುವ ಅದೆಷ್ಟೋ ಖಾಸಗಿ ಕಂಪೆನಿಗಳು ಬಿಪಿಒ ವಲಯದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ಆಹ್ವಾನ ನೀಡಿವೆ. ತಾವು ಅಭ್ಯಸಿಸಿದ ಇಂಜಿನಿಯರಿಂಗ್ ಜ್ಞಾನ ಇದಕ್ಕೆ ಅಗತ್ಯವಿಲ್ಲವೆಂದು , ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕುದಾದ ಕೆಲಸ ಇದಲ್ಲವೆಂದು ಭಾವಿಸುವ ಅದೆಷ್ಟೋ ವಿದ್ಯಾರ್ಥಿಗಳು ಈ ಆಹ್ವಾನ , ಆಯ್ಕೆಗಳನ್ನು ತಿರಸ್ಕರಿಸುವುದು ರಹಸ್ಯ ಸಂಗತಿಯೇನಲ್ಲ. ಅದ್ದರಿಂದ ಅದೆಷ್ಟೋ ವೇಳೆ ಕ್ಯಾಂಪಸ್’ನಿಂದ ಆಯ್ಕೆಯಾದ ವಿದ್ಯಾರ್ಥಿ ಮಾಡುತ್ತಿರುವ ಕೆಲಸ ಪಡೆದಿರುವ ಪದವಿಗಳ ನಡುವೆ ಯಾವುದೇ ಸಾವಯವ ಸಂಬಂಧ ಇರುವುದಿಲ್ಲ. ಹಲವು , ಹತ್ತಾರು ಯಾಂತ್ರಿಕ ವಿವರ, ವಿನ್ಯಾಸಗಳನ್ನು ನಾಲ್ಕು ವರ್ಷಗಳ ಕಾಲ ಅಭ್ಯಸಿಸಿದ ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್ ಅಲ್ಪಕಾಲದಲ್ಲೇ ಪರದೇಶದಿಂದ ಗುತ್ತಿಗೆ ಪಡೆದ ಯೋಜನೆಗಳಲ್ಲಿ ಡ್ರಾಫ್ಟ್’ಮನ್ ಆಗಿರುತ್ತಾನೆ. ಡಾಲರ್ ಎಣಿಕೆಯಲ್ಲಿ ಸಂಬಳ ಬರುತ್ತಿರುತ್ತದೆ. ಕಾಲೇಜಿನ ಕ್ಯಾಂಪಸ್ಸಿನಿಂದ ನೇರವಾಗಿ ಕೆಲಸ ಪಡೆದವರಲ್ಲಿ ಎಷ್ಟು ಜನರಿಗೆ ಅವರು ಓದಿದ ತಾಂತ್ರಿಕ ಪರಿಣಿತಿಯ ಕೆಲಸ ದಕ್ಕಿದೆ , ಎಷ್ಟು ಜನರನ್ನು ಗುತ್ತಿಗೆ ಆಧಾರಿತ ಕೆಲಸಗಳಿಗೆ ಪಳಗಿಸಲಾಗಿದೆ ಎನ್ನುವುದರ ಬಗ್ಗೆ ಯಾರೂ ಅಧ್ಯಯನ ನಡೆಸಿಲ್ಲ- ಅಂಕಿ ಅಂಶಗಳಿಲ್ಲ. ಹೆಚ್ಚಿನ ಸಂಬಳ ಬರುವುದಾದರೆ ಇಂತಹ ಚರ್ಚೆಗಳು ಅನಾವಶ್ಯಕ ಎಂದು ಬಹುತೇಕರ ಅಭಿಪ್ರಾಯ. ಕ್ಯಾಂಪಸ್ ಆಯ್ಕೆ ನಿಜವಾಗಿಯೂ ಸುಖದ ಹಾದಿಯೇ ? ಆರಂಭಿಕ ಸಂಬಳವನ್ನು ಗಮನಿಸಿದರೆ ಹಾಗೆನಿಸುವುದು ನಿಜ. ಆದರೆ ಅದೇ ವೇಳೆಗೆ ಕ್ಯಾಂಪಸ್ ಆಯ್ಕೆ ಇಂಜಿನಿಯರ್ ಒಬ್ಬಾತನನ್ನು ಒಂದು ನಿರ್ದಿಷ್ಟ ಪರಿಧಿಯಾಚೆಗೆ ಯೋಚಿಸದಂತೆ ಮಾಡುತ್ತದೆ. ಕ್ಯಾಂಪಸ್ ಆಯ್ಕೆಯಾಗದವರು ಆರಂಭಿಕ ವರ್ಷಗಳಲ್ಲಿ ನಾನಾ ಬಗೆಯಲ್ಲಿ ಹೆಣಗಿ . ಪರಿಶ್ರಮಿಸಿ ತಮ್ಮದೇ ಆದ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಎಷ್ಟೋ ಸಲ ದೀರ್ಘ ವೃತ್ತಿ ಜೀವನದ ದೃಷ್ಟಿಯಲ್ಲಿ ಕ್ಯಾಂಪಸ್ ಆಯ್ಕೆ ಒಂದು ಅಡಚಣೆಯಾಗಿಯೂ ಪರಿಣಮಿಸಬಹುದು. ಸ್ವತಂತ್ರ ಚಿಂತನೆ , ಉದ್ಯಮಶೀಲತೆ , ಜೀವನದ ಏಳು-ಬೀಳುಗಳನ್ನು ಎದುರಿಸುವ ಸ್ಥೈರ್ಯ ಕ್ಯಾಂಪಸ್ ಆಯ್ಕೆಯಲ್ಲಿ ಹಿನ್ನೆಲೆಗೆ ಸರಿಯಬಹುದು. ಕ್ಯಾಂಪಸ್ ಆಯ್ಕೆ ಆಗದ ದುರ್ಬಲ ಮನಸ್ಸಿನವರು ತಾವು ಅಂತಹ ‘ಖ್ಯಾತ’ ಕಂಪೆನಿಗಳಲ್ಲಿ ಉದ್ಯೋಗಿಗಳಾಗಲು ಅರ್ಹರಲ್ಲ ಎನ್ನುವ ಕೀಳರಿಮೆ ಹೊಂದಿದ ನಿದರ್ಶನಗಳಿವೆ. ‘ಖ್ಯಾತ’ ಕಾಲೇಜುಗಳು ಹಾಗೂ ಕ್ಯಾಂಪಸ್ ಇಂಟರ್’ವ್ಯೂ ಪರಸ್ಪರ ಪೂರಕವಾದ ಕ್ರಿಯೆಗಳಾಗಿರುವಂತೆ ಕಾಣುತ್ತದೆ. ‘ಖ್ಯಾತ’ ಕಾಲೇಜಿನ ವಿದ್ಯಾರ್ಥಿಗಳನ್ನು ‘ಖ್ಯಾತ’ ಕಂಪೆನಿ ಆರಿಸುತ್ತದೆ. ಇಂತಹ ‘ಖ್ಯಾತ’ ಕಂಪೆನಿ ತನ್ನ ವಿದ್ಯಾರ್ಥಿಗಳನ್ನು ಆರಿಸಿತೆಂದು ‘ಖ್ಯಾತ’ ಕಾಲೇಜು ಹೆಮ್ಮೆಪಟ್ಟುಕೊಳ್ಳುತ್ತದೆ. ಈ ಎರಡು ‘ಖ್ಯಾತ’ಗಳ ನಡುವೆ ಪೂರ್ವಗ್ರಹಗಳಿವೆ. ಇದು ಒಂದು ಬಗೆಯ ಆಧುನಿಕ ‘ವರ್ಣಾಶ್ರಮ’ ಪದ್ದತಿಯಂತಿದೆ. ಯಾವುದಾದರೂ ಒಂದು ‘ಖ್ಯಾತ’ ಕಂಪೆನಿ ಕಾಲೇಜಿನ ಹೆಸರನ್ನು ಬಹಿರಂಗ ಪಡಿಸಲು ಕೋರದೆ ಒಂದು ದೊಡ್ಡ ಗುಂಪಿನಲ್ಲಿರುವ ವಿದ್ಯಾರ್ಥಿಗಳನ್ನು ಆಯ್ಕೆಮಾಡಿದರೆ ಅದರಲ್ಲಿ ‘ಖ್ಯಾತ’ ಕಾಲೇಜಿನವರು ಎಷ್ಟು ಪ್ರಮಾಣದಲ್ಲಿ ಇರುತ್ತಾರೆ ಎನ್ನುವುದು ಅತ್ಯಂತ ಕುತೂಹಲಕಾರಿಯಾಗಿದೆ. ಆದರೆ ಇಂತಹ ಪ್ರಯೋಗಶೀಲತೆ ಯಾರಿಗೂ ಬೇಡವಾಗಿದೆ. ಈ ಎಲ್ಲ ಚರ್ಚೆಗಳನ್ನು ಕ್ರೋಡೀಕರಿಸಿ ಹೀಗೆ ಹೇಳಬಹುದು . (೧) ಎಲ್ಲ ಇಂಜಿನಿಯರಿಂಗ್ ಕಾಲೇಜುಗಳು ಒಂದು ನಿರ್ದಿಷ್ಟ ಪಠ್ಯಕ್ರಮ ಅನುಸರಿಸುತ್ತಿವೆ. ಆದ್ದರಿಂದ ಶೈಕ್ಷಣಿಕ ವಿಷಯ ಬೋಧನೆಯಲ್ಲಿ ಮೇಲು ಕೀಳುಗಳಿಲ್ಲ (೨) ಎಲ್ಲ ಕಾಲೇಜುಗಳಲ್ಲಿ ಬೋಧಿಸುವ ವರ್ಗ ಒಂದೇ ಮಟ್ಟದ ವಿದ್ಯಾರ್ಹತೆ ಹೊಂದಿರುತ್ತದೆ. ಆದ್ದರಿಂದ ಯಾವುದೇ ಕಾಲೇಜಿನ ಉಪನ್ಯಾಸಕ ಇನ್ನೊಂದು ಕಾಲೇಜಿನ ಉಪನ್ಯಾಸಕನಿಗಿಂತ ಶ್ರೇಷ್ಟ ಎಂದು ಹೇಳಲಾಗದು. (೩) ಎಲ್ಲ ಕಾಲೇಜುಗಳು ತಾಂತ್ರಿಕ ಶಿಕ್ಷಣಕ್ಕಾಗಿ ಬೇಕಾದ ಎಲ್ಲ ಬಗೆಯ ಮೂಲ ಸೌಕರ್ಯಗಳನ್ನು ಹೊಂದಿರಲೇ ಬೇಕು. ಆದ್ದರಿಂದ ಮೂಲ ಸೌಕರ್ಯದ ದೃಷ್ಟಿಯಲ್ಲಿ ಮೇಲು-ಕೀಳು ಎಂದು ವಿಂಗಡಿಸುವುದು ಕಷ್ಟ. ಒಂದು ಕಾಲೇಜಿಗೆ ಆಕರ್ಷಕ ಕಟ್ಟಡವಿದೆ, ಸುಂದರ ತೋಟವಿದೆ, ಇಂಗ್ಲಿಷ್ ಮಾತನಾಡುವ ಸುಂದರ ಸ್ವಾಗತಕಾರರಿದ್ದಾರೆ ಎಂದು ಹೇಳಬಹುದಷ್ತೇ. (೪) ಗ್ರಂಥಾಲಯ , ಪುಸ್ತಕ ಮುಂತಾದ ವಿಷಯಗಳಲ್ಲಿ ಹೆಚ್ಚಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಿಲ್ಲ (೫) ಕ್ಯಾಂಪಸ್ ಆಯ್ಕೆಯೇ ಜೀವನದ ಗುರಿ ಎಂದು ಭಾವಿಸುವುದಾದರೆ ಮಾತ್ರ ಕಾಲೇಜುಗಳ ನಡುವೆ ತಾರತಮ್ಯಗಳಿವೆ. ಆದರೆ ದೀರ್ಘ ವೃತ್ತಿ ಜೀವನದ ದಾರಿಯಲ್ಲಿ ಕ್ಯಾಂಪಸ್ ಆಯ್ಕೆಗಿಂತ ಆಯ್ಕೆಯಾಗದಿರುವುದೇ ಹೊಸತನ , ಉದ್ಯಮಶೀಲತೆ , ಪರಿಶ್ರಮಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಕ್ಯಾಂಪಸ್ ಆಯ್ಕೆಯನ್ನು ರೂಢಿಗೆ ತಂದಿರುವ ಖಾಸಗಿ ಕಂಪೆನಿಗಳು ಮುಂದಿನ ಕೆಲ ವರ್ಷಗಳಲ್ಲಿ ಈ ಪದ್ದತಿ ಕೈಬಿಟ್ಟು ಬೇರೆಯದೇ ಆದ ಆಯ್ಕೆ ಮಾರ್ಗಗಳಿಗೆ ಮೊರೆಹೊಕ್ಕರೂ ಸೋಜಿಗವಿಲ್ಲ. ಆದ್ದರಿಂದ ‘ಖ್ಯಾತ’ ಕಾಲೆಜುಗಳ ‘ಖ್ಯಾತಿ’ ಕೃತಕ ಹಾಗೂ ಉದ್ದೇಶಪೂರ್ವಕ ಸೃಷ್ಠಿ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಕಾಲೇಜಿನಲ್ಲಾಗಲಿ ಒಳ್ಳೆಯ ಇಂಜಿನಿಯರ್ ಆಗಲು ಪರಿಶ್ರಮಿಸಬೇಕೆ ಹೊರತು ಕಾಲೇಜಿನ ನಾಮ ಬಲದ ಮೇಲೆ ಹೆಮ್ಮೆ ಅಥವಾ ಕೀಳರಿಮೆ ಹೊಂದುವುದು ತರವಲ್ಲ. |
|
Comment Box is loading comments...