ಹಾರ್ವರ್ಡ್ ಮತ್ತು ಕೊಲಂಬಿಯಾ ಪ್ರಾಧ್ಯಾಪಕ ಹುದ್ದೆ
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ ) ಸ್ವಾಮಿಗಳು ನೀಡಿದ ಭಾಷಣದಿಂದ ಹಾರ್ವರ್ಡ್ ಪ್ರಾಧ್ಯಾಪಕರು ಭಾರಿ ಪ್ರಭಾವಿತರಾಗಿದ್ದು ಸ್ವಾಮಿಗಳಿಗೆ ಹಾರ್ವರ್ಡ್ ವಿಶ್ವಾವಿದ್ಯಾಲಯದಲ್ಲಿ ಪೌರಾತ್ಯ ತತ್ತ್ವಶಾಸ್ತ್ರದ ಪೀಠವನ್ನು ಶಾಶ್ವತವಾಗಿ ಅಲಂಕರಿಸಬೇಕೆಂದು ಕೋರಿದ್ದರು. ಸಂನ್ಯಾಸಿಯಾಗಿರುವ ತಾವು ಒಂದೇ ನೆಲೆಯಲ್ಲಿ ಬಹು ದೀರ್ಘ ಕಾಲ ನಿಲ್ಲುವುದು ತಪ್ಪು ಮತ್ತು ತಮಗೆ ಬೇರೆಯದೇ ಆಗ ಆದ್ಯತೆಗಳಿವೆ ಎಂದು ಸ್ವಾಮಿಗಳನ್ನು ಅದನ್ನು ನಿರಾಕರಿಸಿದರು ಎಂದು ಮೌರಿಸ್ ಲೂಯಿ ಬರ್ಕೆ ದಾಖಲಿಸಿದ್ದಾರೆ. ಸ್ವಾಮಿಗಳ ಜೀವನ ಚರಿತ್ರೆ ಬರೆದವರೆಲ್ಲರೂ ಈ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ಬೋಸ್ಟನ್ ವೇದಾಂತ ಕೇಂದ್ರದ ಮಿಸ್ ಎಲ್ವ ನೆಲ್ಸನ್ ಸಂಶೋಧನೆ ನಡೆಸಿ ಹಾರ್ವರ್ಡ್ ವಿಶ್ವವಿದ್ಯಾಲಯ ಸ್ವಾಮಿಗಳಿಗೆ ಅಂತಹ ಯಾವುದೇ ಆಹ್ವಾನ ನೀಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಬೋಸ್ಟನ್ ವೇದಾಂತ ಕೇಂದ್ರದ ಮುಖ್ಯಸ್ಥ ಸರ್ವಾಗತಾನಂದರೂ ಇಂತಹ ಯಾವುದೇ ಅಧಿಕೃತ ದಾಖಲೆಯ ಅಸ್ತಿತ್ವ ತಮಗೆ ತಿಳಿದಿಲ್ಲ ಎಂದಿದ್ದಾರೆ. ರಾಮಕೃಷ್ಣ ವೇದಾಂತ ಸೊಸೈಟಿ , ೫೮- ಡೀರ್ ಫೀಲ್ಡ್ ಸ್ಟ್ರೀಟ್ ಬೋಸ್ಟನ್ ‘ ಎ ಬರ್ಡ್ಸ್ ಐ ವ್ಯೂ –ವಿವೇಕಾನಂದ ಅಂಡ್ ಹಿಸ್ ಸ್ವಾಮೀಸ್ ‘ ಹೆಸರಿನಲ್ಲಿ ಗೋಲ್ಡನ್ ಜುಬಿಲಿ ಸಾವೆನಿಯರ್ (೧೯೪೨-೧೯೯೨) ಹೊರತಂದಿದೆ. ಮಿಸ್ ಎಲ್ವ ನೆಲ್ಸನ್ ಸ್ವಾಮಿಗಳಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಆಹ್ವಾನ ಬಂದಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲವೆಂದು ತಿಳಿಸಿದ್ದರೂ ಈ ಸ್ಮರಣ ಸಂಚಿಕೆಯಲ್ಲಿ ಅದನ್ನು ಉಪಾಯವಾಗಿ ಮುಚ್ಚಿಟ್ಟು ಕಟ್ಟುಕಥೆ ಮುಂದುವರೆಯುವಂತೆ ಸಂಪಾದಕರು ನೋಡಿಕೊಂಡಿದ್ದಾರೆ. (೧) ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣರ ಬಗ್ಗೆ ಆಳವಾದ ಸಂಶೋಧನೆ ನಡೆಸಿ ಆರು ವಿದ್ವತ್’ಪೂರ್ಣ ಪುಸ್ತಕಗಳನ್ನು ಬರೆದಿರುವ ಪಶ್ಚಿಮ ಬಂಗಾಳದ ಬಹುಕಾಲ ಅಮೆರಿಕದಲ್ಲಿ ಜೀವವಿಜ್ಞಾನಿಯಾಗಿ ಸಂಶೋಧನೆ ನಡೆಸಿರುವ ರಾಜಗೋಪಾಲ ಚಟ್ಟೋಪಾಧ್ಯಾಯರು ಈ ಸಂಗತಿಯ ಸತ್ಯಾಸತ್ಯತೆ ಹುಡುಕಲು ೧೯೯೨ ರ ಅವಧಿಯಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಥಾಮಸ್ ಸ್ಕ್ಯಾನ್’ಲನ್'ರನ್ನು ಸಂಪರ್ಕಿಸಿದ್ದರು. ಥಾಮಸ್ ಸ್ಕ್ಯಾನ್’ಲನ್ ತಾವಾಗಲಿ , ತಮ್ಮ ಸಹೋದ್ಯೋಗಿಗಳಾಗಲಿ ಇಂತಹ ಒಂದು ಆಹ್ವಾನವನ್ನು ನೀಡಲಾಗಿದ್ದಿತು ಎನ್ನುವುದನ್ನು ಎಂದೂ ಕೇಳಿಲ್ಲ ಮತ್ತು ಅಂತಹ ಯಾವ ದಾಖಲೆಯನ್ನೂ ನೋಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ೨) ಸ್ವಾಮಿಗಳ ಕೆಲವು ಭಕ್ತರು ಈ ನಿವೇದನೆ ಲಿಖಿತವಾಗಿರಲಿಲ್ಲ ಮೌಖಿಕವಾಗಿದ್ದಿತು ಎಂದಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಒಂದು ಪೀಠದ ಮುಖ್ಯಸ್ಥನನ್ನಾಗಿ ಮಾಡುವ ವಿಚಾರ ಮೌಖಿಕ ಮಟ್ಟದಲ್ಲಿ ತೀರ್ಮಾನವಾಗುವಂತಹುದಲ್ಲ. ಅದು ಆಡಳಿತ ಮಂಡಳಿಯ ಚರ್ಚೆಗಳಲ್ಲಿ ಬಂದು ಅನುಮೋದನೆಯಾದರೆ ಮಾತ್ರ ಅದಕ್ಕೆ ಮಾನ್ಯತೆ. ಸ್ವಾಮಿಗಳು ಹಾರ್ವರ್ಡ್’ನಲ್ಲಿ ಭಾಷಣ ಮಾಡಿದಾಗ ಚಾರ್ಲ್ಸ್ ಡಬ್ಲ್ಯು ಇಲಿಯಟ್ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿದ್ದರು. ವಿಶ್ವವಿದ್ಯಾಲಯದ ಪೀಠವನ್ನು ಶಾಶ್ವತವಾಗಿ ಅಲಂಕರಿಸುವಂತಹ ತೀರ್ಮಾನಗಳು ಅಧ್ಯಕ್ಷರ ಕಡೆಯಿಂದ ಅಧಿಕೃತವಾಗಿ ಪ್ರಕಟಗೊಳ್ಳಬೇಕು. ಸ್ವಾಮಿಗಳು ಅಮೆರಿಕದಲ್ಲಿ ಮಾಡಿದ ಕೆಲಸ ಮತ್ತು ಅದರ ನಿಜವಾದ ಪರಿಣಾಮವನ್ನು ಜನರ ಮುಂದಿಡಲು ಕ್ರಿಶ್ಚಿಯನ್ ಲಿಟರೆರಿ ಸೊಸೈಟಿ ಅಮೆರಿಕದ ೪೦ ಖ್ಯಾತರಿಗೆ ಪತ್ರ ಬರೆದು ಅವರ ಅಭಿಪ್ರಾಯಗಳನ್ನು ಕೋರಿದ್ದಿತು. ಈ ಅಭಿಪ್ರಾಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿತು. ಹೀಗೆ ಅಭಿಪ್ರಾಯ ನೀಡಿದವರಲ್ಲಿ ಚಾರ್ಲ್ಸ್ ಡಬ್ಲ್ಯು ಇಲಿಯಟ್ ಕೂಡ ಒಬ್ಬಾತ. ಈತ ಸ್ವಾಮಿಗಳು ಮತ್ತು ಅವರ ತತ್ತ್ವಶಾಸ್ತ್ರದ ಬಗ್ಗೆ ಅಂತಹ ಉತ್ಸುಕನಾಗಿರಲಿಲ್ಲ ಮಾತ್ರವಲ್ಲ ಸ್ವಾಮಿಗಳು ಅಮೆರಿಕದಲ್ಲಿ ಯಾವ ಪರಿಣಾಮವನ್ನೂ ಎಂದು ತಿಳಿಸಿದ್ದನು. (೩) ಹಾರ್ವರ್ಡ್’ನಲ್ಲಿ ಮುಂದೆ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾದ ಹ್ಯೂಗೊ ಮುನ್’ಸ್ಟರ್’ಬರ್ಗ್’ಗೆ ೧೮೯೭ ರಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ಅಹ್ವಾನಿಸಿ ಚಾರ್ಲ್ಸ್ ಡಬ್ಲ್ಯು ಇಲಿಯೆಟ್ ಪತ್ರ ಬರೆದಿದ್ದನು. ಸ್ವಾಮಿಗಳಿಗೆ ಬರೆದ ಅಂತಹ ಯಾವ ಪತ್ರವೂ ಈವರೆಗೆ ಬೆಳಕಿಗೆ ಬಂದಿಲ್ಲ. (೪) ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಚಾರ್ಲ್ಸ್ ರಾಕ್’ವೆಲ್ ಲ್ಯಾನ್’ಮನ್ , ಗ್ರೀಕ್ ವಿಭಾದದ ಪ್ರಾಧ್ಯಾಪಕ ಜಾನ್ ಹೆನ್ರ್ರಿ ರೈಟ್ ಮತ್ತು ಡಿವಿನಿಟಿ ಸ್ಕೂಲ್’ನ ಚಾರ್ಲ್ಸ್ ಕೆರೊಲ್ ಎವೆರೆಟ್ ಸ್ವಾಮಿಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಸ್ವಾಮಿಗಳು ಮಾಡಿದ ಭಾಷಣವನ್ನು ಸಂಪಾದಸಿ ಕರಪತ್ರ ಹೊರತರಲು ಚಾರ್ಲ್ಸ್ ರಾಕ್’ವೆಲ್ ಲ್ಯಾನ್’ಮನ್ ಮತ್ತು ಪ್ರಾಧ್ಯಾಪಕ ಜಾನ್ ಹೆನ್ರ್ರಿ ರೈಟ್ ಶ್ರಮಿಸಿದ್ದರೆ ಚಾರ್ಲ್ಸ್ ಕೆರೊಲ್ ಎವೆರೆಟ್ ಅದಕ್ಕೆ ಮುನ್ನಡಿ ಬರೆದಿದ್ದರು. ಹಾರ್ವರ್ಡ್ ತತ್ತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜೇಮ್ಸ್ ಮತ್ತು ಅದ್ವೈತ ಚಿಂತಕ ಜೊಸೆಯಾ ರಾಯ್ಸ್ ಸ್ವಾಮಿಗಳ ಬಗ್ಗೆ ಯಾವುದೇ ಆಸಕ್ತಿ ತೋರಿಸಿರಲಿಲ್ಲ. (೫) ಜಾನ್ ಎಫ್ ಫಾಕ್ಸ್ ೨/೮/೧೯೦೦ ರಂದು ಸಾರಾ ಬುಲ್’ಗೆ ಬರೆದ ಪತ್ರದಲ್ಲಿ ಸ್ವಾಮಿಗಳ ಲಂಡನ್ ಉಪನ್ಯಾಸಗಳನ್ನು ಓದಿದ ನಂತರ ಅವುಗಳಲ್ಲಿ ಅದ್ಬುತ ವಾಗ್ಮೀಯತೆ ಇದೆ ಎಂದು ತಿಳಿಸಿದ್ದನು. ೨೫/೩/೧೮೯೬ ರಂದು ಸ್ವಾಮಿಗಳು ಹಾರ್ವರ್ಡ್’ನಲ್ಲಿ ಭಾಷಣ ಮಾಡಿದಾಗ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಆತನಿಗೆ ಈ ಸಂಗತಿ ಗೊತ್ತಾಗಿರಲಿಲ್ಲವೇ ? ಇದಕ್ಕೆ ಉತ್ತರ ನೀಡಲು ಸಾಧ್ಯ. ಅಂದು ಸ್ವಾಮಿಗಳು ಹಾರ್ವರ್ಡ್ ವಿಶ್ವವಿದ್ಯಾಲಯದ ಸೈಕೊಲಾಜಿಕಲ್ ಲ್ಯಾಬೊರೇಟರಿಯ ಕೊನೆಯ ಅಂತಸ್ತಿನ ಡೇನ್ ಸಭಾಂಗಣದಲ್ಲಿ ಭಾಷಣ ಮಾಡಿದರು. ಅದಕ್ಕೆ ಸೊಸೈಟಿಯ ಸದಸ್ಯರು ಮತ್ತು ಆಹ್ವಾನಿತರಿಗೆ ಮಾತ್ರ ಪ್ರವೇಶವಿದ್ದಿತು. ಅದೇ ದಿನ, ಅದೇ ಸಮಯದಲ್ಲಿ ಹಾರ್ವಡ್ ಫಿಲಾಸಫಿಕಲ್ ಕ್ಲಬ್ ಫಾಗ್ ಮ್ಯೂಸಿಯಂ ಹಾಲ್’ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ‘ ಸಾಕ್ರೆಟಿಸ್ ಅಂಡ್ ದಿ ಸೋಫ್ಸ್’ ಎನ್ನುವ ಭಾಷಣವನ್ನು ಗುಡ್ವಿನ್ ಮಾಡಿದರು. ಅದು ಸಾರ್ವಜನಿಕರಿಗೆ ಮುಕ್ತವಾಗಿದ್ದಿತು. ಆ ದಿನ ಜಾನ್ ಫಾಕ್ಸ್ ಗುಡ್ವಿನ್ ಭಾಷಣ ಕೇಳಲು ಹೋಗಿದ್ದರೇ ಹೊರತು ಸ್ವಾಮಿಗಳ ಭಾಷಣವನ್ನಲ್ಲ ಎಂದು ತೀರ್ಮಾನಿಸಬಹುದು. ಆದ್ದರಿಂದ ಸರಿಯಾದ ದಾಖಲೆ ಸಿಗುವವರೆಗೆ ಸ್ವಾಮಿಗಳಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಆಹ್ವಾನ ಬಂದಿದ್ದಿತು ಎನ್ನುವುದಕ್ಕೆ ಯಾವುದೇ ಅಧಾರಗಳಿಲ್ಲ. |
Comment Box is loading comments...