ಗೊಂಡಿ ಭಾಷೆಯಿಂದ
ಸಿಂಧು ರಹಸ್ಯ ಲಿಪಿಯ ಶೋಧ ಮತ್ತು ಓದು - ಪರಿಶೀಲನೆಯ
ಮೂಸೆಯಲ್ಲಿ -ಎನ್.ಶಂಕರಪ್ಪ ತೋರಣಗಲ್ಲುಬಿ.ಇ.
(ಸಿವಿಲ್)., ಎಂ.ಇ
(ಸ್ಟ್ರಕ್ಚರ್ಸ್) -------------------------------------------------------------------------------------------------------------------------------------------------- ದಕ್ಷಿಣ ಏಷ್ಯಾ/ಭಾರತದ ಚರಿತ್ರೆಯಲ್ಲಿ ಸೈಂಧವ ನಾಗರಿಕತೆ ಮಹಾಬಾಜಣೆ (ಬಿಗ್ ಬ್ಯಾಂಗ್) ಇದ್ದಂತೆ. ಈ ಮಹಾಬಾಜಣೆಯನ್ನು ವಶಪಡಿಸಿಕೊಂಡರೆ, ಉಳಿದೆಲ್ಲ ಚರಿತ್ರೆ ತಾನಾಗಿಯೇ ಅದನ್ನು ವಶಪಡಿಸಿಕೊಂಡಿರುವವರ ಅಡಿಯಲ್ಲಿ ಬಿದ್ದಿರುತ್ತದೆ. ಆದ್ದರಿಂದ ಇದನ್ನು ವಶಪಡಿಸಿಕೊಳ್ಳಲು ಸಂಸ್ಕೃತ ಮಾತಾನಾಡುತಿದ್ದ ಋಗ್ವೈದಿಕರ ಪರವಾಗಿ ಆಧುನಿಕ ವೈದಿಕರು , ದ್ರಾವಿಡ ಭಾಷೆಯ ಪರವಾಗಿ ಕೆಲ ಪಾಶ್ಚಾತ್ಯ ವಿದ್ವಾಂಸರು ಅವರೊಂದಿಗೆ ಕೆಲ ತಮಿಳರು ಕಳೆದ ಅರವತ್ತು ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲ ಪ್ರಯತ್ನಗಳಿಗೆ ಸೈಂಧವ ಲಿಪಿ ಮತ್ತು ಭಾಷೆ ದೊಡ್ದ ಅಡಚಣೆಗಳಾಗಿವೆ. ಯಾವುದೇ ಬಣದವರಾಗಲಿ ಸೈಂಧವ ಲಿಪಿಯನ್ನು ಬಿಡಿಸಿ ಓದಿದೆವೆಂದು ಹೇಳಿದರೆ ಎದುರು ಬಣದವರು ಅವರ ಓದಿಕೆಯನ್ನು ಅಲ್ಲಗಳೆಯುತ್ತಿದ್ದಾರೆ. ಈವರೆಗೆ ತಮಿಳರ ಹೊರತಾಗಿ ಯಾವುದೇ ಇತರ ದ್ರಾವಿಡ ಭಾಷಿಕರು ತಾವು ಸೈಂಧವರ ಉತ್ತರಾಧಿಕಾರಿಗಳೆಂದು ಹೇಳಿಕೊಂಡಿರಲಿಲ್ಲ. ಹಾಗೆ ಹೇಳಿಕೊಳ್ಳುವುದರ ಹಿಂದಿರುವ ಸಮಸ್ಯೆಗಳು ಇತರ ದ್ರಾವಿಡ ಭಾಷಿಕರಿಗೆ ಚೆನ್ನಾಗಿ ಮನದಟ್ಟಾಗಿದ್ದವು.
ಸೈಂಧವಿ ಲಿಪಿ ಕಾ ಗೊಂಡಿಮೆ ಉದ್ವಾಚನ (ಗೊಂಡಿ ಭಾಷೆಯಿಂದ ಸಿಂಧು ರಹಸ್ಯ ಲಿಪಿಯ ಶೋಧ ಮತ್ತು ಓದು-ಅನುವಾದ ಕೆ.ಬಿ. ಬ್ಯಾಳಿ) ಕೃತಿಯ ಮೂಲಕ ಮೋ.ಛ.ಕಂಗಾಲಿಯವರು ಸೈಂಧವರ ಭಾಷೆ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಗೊಂಡಿಯಾಗಿದ್ದಿತೆಂದು ವಾದಿಸಿದ್ದಾರೆ. ಸಂಸ್ಕೃತ-ದ್ರಾವಿಡ ಭಾಷೆಗಳ ಹಿನ್ನೆಲೆಯಲ್ಲಿ ಸೈಂಧವ ಲಿಪಿಯನ್ನು ಬಿಡಿಸಲು ಈವರೆಗೆ ನೂರಕ್ಕೂ ಅಧಿಕ ಪ್ರಯತ್ನಗಳಾಗಿವೆ. ಪ್ರತಿ ಪ್ರಯತ್ನವೂ ಪರಿಶೀಲನೆಯ ಮೂಸೆಯಲ್ಲಿ ತಿರಸ್ಕೃತವಾಗಿದೆ. ಇತರ ದ್ರಾವಿಡ ಭಾಷೆಗಳಂತೆ ಪ್ರಾಚೀನ ಲಿಖಿತ ವಾಜ್ಞಯವಿರದ , ತನ್ನದೇ ಆದ ನಿರ್ದಿಷ್ಟ ಅಧಿಪತ್ಯದ ಪ್ರದೇಶವಿರದ ಗೋಂಡಿಯಂತಹ ಒಂದು ಭಾಷೆ ಸೈಂಧವ ಭಾಷೆಯನ್ನು ತನ್ನದೆಂದು ಘೋಷಿಸಿಕೊಳ್ಳುವುದು ಕುತೂಹಲಕಾರಿಯಾಗಿದೆ. ಮೋ.ಛ. ಕಂಗಾಲಿಯವರು ಗೊಂಡಿಯ ಮೂಲಕ ಸೈಂಧವ ಲಿಪಿಯನ್ನು ಬಿಡಿಸಿರುವ ಮಾರ್ಗ , ಅವರ ಓದಿಕೆಯ ಸಾಫಲ್ಯ , ವೈಫಲ್ಯಗಳನ್ನು ವಿಮರ್ಶೆಗೆ ಒಡ್ಡುವ ಮುನ್ನ ಈವರೆಗೆ ಸಂಸ್ಕೃತ-ದ್ರಾವಿಡ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸೈಂಧವ ಲಿಪಿಯನ್ನು ಬಿಡಿಸಲು ನಡೆದಿರುವ ಪ್ರಯತ್ನಗಳು , ಅವುಗಳ ಕೊರತೆಗಳನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಲೇಖನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಭಾಗ-೧ ಸೈಂಧವರ ಭಾಷೆ ಯಾವುದಾಗಿರಬಹುದು ಅದರ ಲಿಪಿಯನ್ನು ಬಿಡಿಸುವಲ್ಲಿರುವ ಅಡಚಣೆಗಳೇನು ಎಂದು ವಿಚಾರಿಸಿದರೆ , ಭಾಗ-೨ ಮೋ.ಛ ಕಂಗಾಲಿಯವರ ಸೈಂಧವ ಲಿಪಿ ಓದಿಕೆಯ ಸಾಫಲ್ಯ-ವೈಫಲ್ಯಗಳನ್ನು ಚರ್ಚಿಸುತ್ತದೆ.
ಭಾಗ-೧ : ಸೈಂಧವನುಡಿ –ಬರವಣಿಗೆಮತ್ತುಬಿಡಿಸಿಕೆ
ಬೇರೆ ಎಲ್ಲ ಪ್ರಾಚೀನ ಜನಾಂಗಗಳು ತಮ್ಮ ಅಸ್ತಿತ್ವದ ಕುರುಹುಗಳನ್ನು ಭೌತಿಕ ರೂಪದಲ್ಲಿ ಬಿಟ್ಟು ಹೋಗಿವೆ. ಗುಡಿ, ಅರಮನೆಯಂತಹ ಕಟ್ಟಡಗಳು,ಶಿಲಾಶಾಸನಗಳು ,ಬರಹಗಳು, ಚಿತ್ರಗಳು, ಪಾಳು ಬಿದ್ದ ಕೋಟೆ, ನಗರಗಳು ಅವುಗಳ ಕಥೆಯನ್ನು ಹೇಳುತ್ತವೆ. ಈ ಎಲ್ಲ ಪ್ರಾಚೀನ ಜನಾಂಗಗಳ ಸಾಹಿತ್ಯ , ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಆ ಜನಾಂಗಗಳು ಬಿಟ್ಟು ಹೋಗಿರುವ ಲಿಪಿ ಮಾಧ್ಯಮದಲ್ಲಿರುವ ಮಾಹಿತಿಯನ್ನು ಬಿಡಿಸಿ ಓದಬೇಕಾದ ಅನಿವಾರ್ಯತೆ ಮತ್ತು ಸವಾಲು ಎದುರಿಗಿದ್ದಿತು. ಪಾಶ್ಚಾತ್ಯ ವಿದ್ವಾಂಸರು ಆ ಸವಾಲನ್ನು ಸಮರ್ಥವಾಗಿ ಎದುರಿಸಿ, ಈಜಿಪ್ತ್, ಮೆಸಪೊಟೆಮಿಯಾ, ಚೀನಾ ,ಗ್ರೀಕ್, ಮಾಯಾ ಮುಂತಾದ ಸಂಸ್ಕೃತಿಗಳನ್ನು ಅರ್ಥೈಸಿ ಇತಿಹಾಸ ರಚಿಸಿದರು. ಆದರೆ ಸೈಂಧವ/ಋಗ್ವೈದಿಕ/ಇಂಡೋ ಆರ್ಯರ ಸಮಸ್ಯೆ ಇದಕ್ಕೆ ತದ್ವಿರುದ್ದವಾಗಿದೆ. ಆರ್ಯರ ಸಾಹಿತ್ಯ, ಸಂಸ್ಕೃತಿಯನ್ನು ಅರಿಯಲು ಮೊದಲಿಗೆ ಯಾವುದೇ ಲಿಪಿಗಳನ್ನು ಬಿಡಿಸಬೇಕಾಗಿಲ್ಲ , ಅಗೆತಗಳನ್ನು ನಡೆಸಬೇಕಿಲ್ಲ. ಸಾವಿರಾರು ವರ್ಷಗಳಿಂದ ಅವರು ರಚಿಸಿದ ಸಾಹಿತ್ಯ ಧ್ವನಿಮುದ್ರಿಕೆಗಳಂತೆ ವೈದಿಕರ ಮುಖಾಂತರ ಒಂದಕ್ಷರವೂ ತಪ್ಪದಂತೆ ಹರಿದು ಬಂದಿದೆ. ಹೀಗೆ ಹರಿದು ಬಂದಿರುವ ಸಂಸ್ಕೃತಿಯನ್ನು ಯಾವ , ಯಾರ ಭೌತಿಕ/ಸರಕು ಸಂಸ್ಕೃತಿಯೊಂದಿಗೆ ಸಮೀಕರಿಸಬೇಕೆಂಬ ಸವಾಲು ಮುಂದಿದೆ. ಈ ಸವಾಲು ಸಿಂಧೂಲಿಪಿಯತ್ತ ತಿರುಗುತ್ತದೆ. ಆರ್ಯರ ಇತಿಹಾಸ ಮತ್ತು ಮೂಲ ನೆಲೆಯನ್ನು ಅರಿಯಲು, ಸೈಂಧವ ಹಾಗೂ ಋಗ್ವೈದಿಕರ ನಡುವೆ ಇರಬಹುದಾದ ಸಂಬಂಧಗಳ ಊಹೆಗಳಿಗೆ ಅಂತಿಮ ತೆರೆ ಎಳೆಯಲು ಸಿಂಧೂಲಿಪಿಯನ್ನು ಬಿಡಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಸೈಂಧವ ಲಿಪಿಯನ್ನು ಬಿಡಿಸಬೇಕೆಂದರೆ ಸೈಂಧವರು ಯಾವ ಭಾಷೆ ಮಾತನಾಡುತ್ತಿದ್ದರೆಂದು ತಿಳಿಯುವುದು ಬಹು ಮುಖ್ಯ. ಈವರೆಗೆ ಜಗತ್ತಿನ ಯಾವುದೇ ಸಾಹಿತ್ಯ, ಚಾರಿತ್ರಿಕ ದಾಖಲೆಗಳಲ್ಲೂ ಸೈಂಧವ ಸಂಸ್ಕೃತಿ ಅಥವಾ ಭಾಷೆಯ ಬಗ್ಗೆ ಪರಿಗಣಿಸಬಹುದಾದಂತಹ ಸ್ಪಷ್ಟ ಮಾಹಿತಿಗಳು ದಕ್ಕಿಲ್ಲ. ಇದು ಸೈಂಧವರ ಭಾಷೆ ಕುರಿತಾಗಿ ನೂರಾರು ಊಹೆಗಳಿಗೆ ದಾರಿ ಮಾಡಿಕೊಟ್ಟಿದೆ. ಮೆಸಪೊಟೆಮಿಯಾದ ಮಗನ್ ಹೆಸರಿನ ಬಂದರು ಪಟ್ಟಣದ ಮೂಲಕ ಅಕ್ಕಡಿಯನ್ನರು ಸಿಂಧೂನದಿಯ ಪಶ್ಚಿಮತೀರದ ಮಕ್ರನ್ ಪಟ್ಟಣದ ಸೈಂಧವರೊಂದಿಗೆ ವಿಸ್ತೃತ ವ್ಯಾಪಾರ ಸಂಪರ್ಕ ಹೊಂದಿದ್ದರು. ಅಕ್ಕಡಿಯನ್ ದೊರೆ ಸರ್ಗೊನ್ ಕಾಲಕ್ಕೆ ಸೇರಿದ ಮೊನಚುಲಿಪಿ ದಾಖಲೆಗಳಲ್ಲಿ ಸೈಂಧವರನ್ನು ಕುರಿತಾದ ’ಮೆಲುಹ’ ಹಾಗೂ ’ ಬರ್ ಇಮಿನ್ ’(ಏಳು ನಗರಗಳು) ಉಲ್ಲೇಖ ಬಂದಿದೆ. ಅನುಕೂಲಕ್ಕಾಗಿ ಸೈಂಧವ ಭಾಷೆಯನ್ನು ಮೆಲುಹ ಭಾಷೆ ಎಂತಲೂ ಪರಿಗಣಿಸಬಹುದು. ಈ ಭಾಷೆ ಮೆಸಪೊಟೆಮಿಯಾದ ಎಲಮೈಟ್ , ಸುಮೇರಿಯನ್ ಮತ್ತು ಅಕ್ಕಡಿಯನ್’ಗಳಿಗಿಂತ ಭಿನ್ನವಾದುದೆಂದು ಮೊನಚು ಲಿಪಿಯ ದಾಖಲೆಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಸಿಂಧೂ ಪ್ರದೇಶದಿಂದ ಪಶ್ಚಿಮಕ್ಕೆ ಈಗಿನ ಇರಾನ್-ಅಫಘಾನಿಸ್ತಾನಗಳ ಗಡಿ ಹಲವು ವಿಭಿನ್ನ ಭಾಷೆಗಳ ಸಂಗಮ ಸ್ಥಳವಾಗಿದ್ದಿತು. ಈ ಪ್ರದೇಶಗಳಲ್ಲಿ ಸಿರುಸ್ಕಯನ್ ಮತ್ತು ಮರಹಾಸಿ ಭಾಷೆಗಳು ಅಸ್ತಿತ್ವದಲ್ಲಿದ್ದವು. ಈ ಭಾಷೆಗಳಿಗೂ ಮೆಲುಹರ ಭಾಷೆಗೂ ಸಂಬಂಧಗಳಿರಬಹುದು ಎನ್ನುವುದೊಂದು ಊಹೆ. (೧೦೨)
ಮೆಸಪೊಟೆಮಿಯಾದ ದಾಖಲೆಗಳಲ್ಲಿ ಮೆಲುಹ ಹೆಸರು ಹಲವು ಕಡೆ ಬಂದಿದೆ. ಊರ್’ಕಲ್ ಮತ್ತು ಊರ್’ದ್ಲಾಮ ಎಂಬಿಬ್ಬರನ್ನು ಮೆಲುಹರ ಮಕ್ಕಳೆಂದು ಕರೆಯಲಾಗಿದೆ. ಮೆಲುಹರು ದಿಲ್’ಮನ್ (ಬಹ್ರೇನ್) ಮಾರ್ಗವಾಗಿ ಗಿಸ್-ಅಬ್-ಒ-ಮೆ-ಲು-ಹ (ಅಬ್ಬಕಂಗೆ) ಮೇಸು, ಮ್ಯಾಜಿಯಂ ದೋಣಿಗಳ ಮೂಲಕ ಸಿಂದ ,ಹಾಲುಪ್ಪು , ಜಿಸ್’ಗಿ ಸಿಮ್ಮರ್ ಹೆಸರಿನ ಮರಮುಟ್ಟುಗಳನ್ನು , ತಾಳೆ, ಖರ್ಜೂರ, ಝಝ ದನಗಳನ್ನು ಮೆಸಪೊಟೆಮಿಯಾಕ್ಕೆ ತರುತ್ತಿದ್ದರು. ಅಕ್ಕಡಿಯನ್ ಮೊನಚುಲಿಪಿ ದಾಖಲೆಗಳಲ್ಲಿ ಸೈಂಧವ ಮೂಲದ ೪೦ಕ್ಕೂ ಹೆಚ್ಚು ಪದಗಳು ಕಂಡು ಬಂದಿವೆ. ಇವುಗಳಲ್ಲಿ ಕೆಲವನ್ನು ದಿಲ್’ಮನ್ (ಬಹ್ರೇನ್) ದಲ್ಲಾಳಿಗಳು ಸೃಷ್ಟಿಸಿದ್ದು ಅವು ಸೈಂಧವ ಭಾಷೆಗೆ ಸಂಬಂಧಿಸದೇ ಇರಬಹುದು. (೧೦೨)
ಮೆಸಪೊಟೆಮಿಯಾದ ಅಕ್ಕಡಿಯನ್ ದಾಖಲೆಗಳಲ್ಲಿ ಸೈಂಧವರನ್ನು ಮೆಲುಹರೆಂದು ಕರೆಯಲಾಗಿದೆ. ಶತಪಥ ಬ್ರಾಹ್ಮಣದಲ್ಲಿ ಮೊದಲ ಬಾರಿಗೆ ಅನಾಗರಿಕವಾಗಿ ಮಾತನಾಡುವವರನ್ನು (ಶ.ಬ್ರಾ ೩/೨/೧) ಮ್ಲೇಚ್ಛರೆಂದು ಕರೆಯಲಾಗಿದೆ. ಮಥುರಾ-ಗುಜರಾತ್-ವಿಂಧ್ಯ ಗಡಿಗಳ ನಡುವಿನ ಪ್ರದೇಶಕ್ಕೆ ಸೇರಿದ ನಂತರ ಕಾಲದ ಬೌದ್ದ ಗ್ರಂಥಗಳಲ್ಲಿ ಮಿಲಕ್ಕೆ, ಮಿಲಖು ಎಂಬ ಪದಗಳು , ಇತರ ಕಡೆ ಮ್ಲಿಚ್ಛ (ಪಹಾಡಿ,) , ಮೆಲೆಖ್ (ಪಂಜಾಬಿ), ಮೆಲೆಷ್ (=ಕೊಳಕ, ಪಶ್ಚಿಮ ಪಹಾಡಿ) ರೂಪದಲ್ಲಿ ಸಿಗುತ್ತವೆ. ಆರ್ಯರು ಸಿಂಧೂ ಬಯಲಿನಿಂದ ಪೂರ್ವದ ಗಂಗಾ ಬಯಲಿಗೆ ಸರಿದಂತೆ ಉತ್ತರ ಪಂಜಾಬ್ ಹಾಗೂ ಸಿಂಧೂ ಬಯಲನ್ನು ಮ್ಲೇಚ್ಛ ದೇಶವೆಂದು ಕರೆದರು. ಉತ್ತರ ಪಂಜಾಬ್ ,ಸಿಂಧ್, ಪೂರ್ವ ರಾಜಸ್ಥಾನ, ಬಿಹಾರ, ಬಂಗಾಳ ಹಾಗೂ ಒರಿಸ್ಸಾದ ಬುಡಕಟ್ಟುಗಳು ಮ್ಲೇಚ್ಛರಾದರು. ಗಾಂಧಾರ, ಕಾಂಬೋಜದವರು ಸಹ ಆರ್ಯ ಪರಂಪರೆ ಮರೆತು/ತೊರೆದು ಮ್ಲೇಚ್ಛರಾದರು. ಕುರು ಪಾಂಚಾಲರನ್ನು ಆರ್ಯರ ಪರಿಶುದ್ದ ತಾಣವಾಗಿ ಪರಿಗಣಿಸಲಾಯಿತು.
ಟಿಬೆಟೋ-ಮುಂಗೊಲಾಯಿಡ್ ಜನರಿದ್ದ ಹಿಮಾಲಯ ಪ್ರದೇಶ ,ವಿಂಧ್ಯ ಪರ್ವತ ಮತ್ತು ಅದರ ದಕ್ಷಿಣದ ಪ್ರದೇಶಗಳು ಮ್ಲೇಚ್ಛ ದೇಶಗಳಾಗಿದ್ದವು. ವಿಂಧ್ಯ ಪರ್ವತದ ಶ್ರೇಣಿ ಪ್ರದೇಶ, ನರ್ಮದಾ , ತಪತಿ , ವೈನಗಂಗಾ ನದಿಗಳ ಬಯಲು ಪ್ರದೇಶ, ಛೋಟಾ ನಾಗ್ಪುರ , ಛತ್ತಿಸಗಡ ಪ್ರ.ಶ ಆರಂಭದವರೆಗೆ ಹಲವು ಬುಡಕಟ್ಟುಗಳ ನೆಲೆಯಾಗಿದ್ದ ಮ್ಲೇಚ್ಛ ಪ್ರದೇಶವಾಗಿದ್ದಿತು. ವೈದಿಕ ಸಾಹಿತ್ಯದ ಮ್ಲೇಚ್ಛ ಪದ ಆರ್ಯರು ಭಾರತಕ್ಕೆ ಬಂದಾಗ ಇದ್ದ ಸ್ಥಳೀಯ ಜನಾಂಗಗಳನ್ನು ಸೂಚಿಸುತ್ತದೆ. ಋಗ್ವೇದದಲ್ಲಿ ಮ್ಲೇಚ್ಛರ ಉಲ್ಲೇಖಗಳಿಲ್ಲ. ಇದರಿಂದ ಮೆಲುಹ ಪದ ಮ್ಲೇಚ್ಛವಾಗಿರುವ ಸಾಧ್ಯತೆಗಳು ಎದ್ದು ಕಾಣುತ್ತವೆ. ಮ್ಲೇಚ್ಛ ಎಂದರೆ ಹೊರಗಿನವರು, ಪರದೇಶದವರು ಎಂಬ ಅರ್ಥ ವೈದಿಕ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ. ವೈದಿಕರು ಜಗತ್ತನ್ನು ಆರ್ಯೀಕರಣಗೊಳಿಸುವ ಕರೆ (ಕೃಣ್ವಂತೋ ವಿಶ್ವಮಾರ್ಯಂ) ನೀಡಿರುವರೇ ಹೊರತು ಮೆಲುಹರನ್ನಾಗಿಸಲಲ್ಲ. ಆದ್ದರಿಂದ ಋಗ್ವೈದಿಕ ಸಂಸ್ಕೃತ ಮ್ಲೇಚ್ಛ ಅಥವಾ ಮೆಲುಹರ ಭಾಷೆಯಾಗಿರಲು ಸಾಧ್ಯವಿಲ್ಲ ಎಂದು ಪ್ರಾರಂಭಿಕ ಸಾಧ್ಯತೆಯಾಗಿ ಪರಿಗಣಿಸಬಹುದು..
ಸೈಂಧವರ ಭಾಷೆ ಸಂಸ್ಕೃತವಲ್ಲ (ಇಂಡೋ-ಯುರೋಪಿಯನ್/ಇರಾನಿಯನ್/ಆರ್ಯನ್ ). ಋಗ್ವೈದಿಕ ಸಂಸ್ಕೃತದ ಮೇಲೆ ಸೈಂಧವ ಭಾಷೆಯ ಪ್ರಭಾವಗಳು ದಾಖಲಾಗಿವೆ. ಈ ಪ್ರಭಾವದಿಂದಾಗಿ ಋಗ್ವೈದಿಕ ಸಂಸ್ಕೃತ ಇಂಡೋ-ಯುರೋಪಿಯನ್ ಭಾಷೆಗಳಲ್ಲಿ ಕಾಣದ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಋಗ್ವೈದಿಕ ಸಂಸ್ಕೃತದ ಮೇಲಾಗಿರುವ ಪ್ರಭಾವಗಳ ಲಕ್ಷಣಗಳನ್ನು ಗುರುತಿಸಿ ಆ ಮೂಲಕ ಸೈಂಧವ ನಾಗರಿಕತೆಯ ಭಾಷೆ ಯಾವುದಾಗಿರಬಹುದೆಂದು ನಿರ್ಧರಿಸುವ ಪ್ರಯತ್ನ ಮಾಡಬಹುದು. ಸೈಂಧವ ನಾಗರಿಕತೆಯ ಭಾಷೆ ದ್ರಾವಿಡ , ಮುಂಡಾ ಅಥವಾ ಈಗ ಗುರುತಿಸಲಾಗಿರುವ ಯಾವುದೇ ಭಾಷಾ ಕುಟುಂಬಕ್ಕೆ ಸೇರದ ಭಾಷೆಯಾಗಿರಬಹುದು. ಋಗ್ವೈದಿಕ ಸಂಸ್ಕೃತ-ಆರ್ಯರ ಆಗಮನ/ಆಕ್ರಮಣ-ಸೈಂಧವ ಭಾಷೆ ಈ ಮೂರು ಪರಸ್ಪರ ತಳುಕು ಹಾಕಿಕೊಂಡಿರುವ , ಒಂದನ್ನು ಬಿಡಿಸಿದರೆ ಉಳಿದವುಗಳ ಸಿಕ್ಕು ತಾನಾಗಿಯೇ ಬಿಚ್ಚಿಕೊಳ್ಳುವ ಸಂಬಂಧ ಹೊಂದಿವೆ. ಸೈಂಧವ ಮುದ್ರಿಕೆಗಳ ಮೇಲಿನ ಬರಹಗಳನ್ನು ಬಿಡಿಸಲು ಸಾಧ್ಯವಾಗದಿರುವುದರಿಂದ ಈ ಎಲ್ಲ ಅನಿಸಿಕೆ ಸಾಧ್ಯಾಸಾಧ್ಯತೆಗಳು ಭಾಷಾಲಕ್ಷಣಗಳ ಸುತ್ತ ಗಿರಕಿ ಹೊಡೆಯುತ್ತವೆ. ಇದು ಅನಿವಾರ್ಯವೂ ,ಸದ್ಯಕ್ಕೆ ಸಾಗಬಹುದಾದ ಒಂದೇ ಒಂದು ದಾರಿಯಾಗಿಯೂ ಉಳಿದಿದೆ.
ಸೈಂಧವ ಭಾಷೆ ಅದರ ಮುದ್ರಿಕೆಗಳ ಮೇಲಿರುವ ಚಿತ್ರಲಿಪಿಯ ಸಂಕೇತಗಳಲ್ಲಿ ಕಾಣಿಸಿಕೊಂಡಿರುವುದೆಂದು ಭಾವಿಸಬಹುದು. ಸೈಂಧವ ಸಂಸ್ಕೃತಿ ಬಹು ವಿಶಾಲ ಪ್ರದೇಶದಲ್ಲಿ ಹರಡಿದ್ದರಿಂದ (ಕರ್ನಾಟಕದ ಐದರಷ್ಟು ವ್ಯಾಪ್ತಿ) ಅದರಲ್ಲಿ ಹಲವಾರು ಪ್ರಾದೇಶಿಕ ವ್ಯತ್ಯಾಸಗಳು ಇದ್ದು ಮುದ್ರಿಕೆಯ ಬರವಣಿಗೆಯಲ್ಲೂ ಅದು ವ್ಯಕ್ತವಾಗಿರಬೇಕು. ಸಿಂಧೂ ನದಿಯ ಉತ್ತರದ ಪಂಜಾಬ್ ಪ್ರದೇಶಕ್ಕೆ ಸೇರಿರುವ ಹರಪ್ಪಾದಲ್ಲಿ ದಕ್ಕಿರುವ ಮುದ್ರಿಕೆಗಳಲ್ಲಿರುವ ಹಲವಾರು ಲಕ್ಷಣಗಳು ಕೆಳ ದಕ್ಷಿಣ ಭಾಗದ ಸಿಂಧ್ ಪ್ರದೇಶಕ್ಕೆ ಸೇರಿದ ಮೊಹೆಂಜದಾರೋವಿನಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗಿವೆ. ಹೂಜಿ ಸಂಕೇತ ಹರಪ್ಪಾದ ಮುದ್ರಿಕೆಗಳಿಗೆ ಮಾತ್ರ ಸೀಮಿತವಾಗಿರುವುದು ಸೈಂಧವ ಭಾಷೆ ಉತ್ತರ ಹಾಗೂ ದಕ್ಷಿಣ ಭಾಷಾ ಪ್ರಭೇಧಗಳನ್ನು ಹೊಂದಿರಬಹುದೆಂಬ ಊಹೆಗೆ ಆಸ್ಪದ ನೀಡುತ್ತದೆ.
ಸೈಂಧವರ ಕಾಲದಲ್ಲಿಯೇ ಭಾರತದಲ್ಲಿ ದ್ರಾವಿಡ, ಟಿಬೆಟೋ-ಬರ್ಮನ್, ಆಸ್ಟ್ರೋ-ಏಷಿಯಾಟಿಕ್- ಭಾಷೆಗಳು ಅಸ್ತಿತ್ವದಲ್ಲಿ ಇದ್ದುದಕ್ಕೆ ಯಾವ ಸಂಶಯಗಳೂ ಇಲ್ಲ. ಅವನತಿಯ ಹಂತದವರೆಗೆ ಇಂಡೋ-ಆರ್ಯನ್ ಸಂಸ್ಕೃತ , ಸೈಂಧವ ಪ್ರದೇಶವನ್ನು ಪ್ರವೇಶಿಸಿರಲಿಲ್ಲ ಎನ್ನುವ ಆರ್ಯ ಆಕ್ರಮಣ/ಆಗಮನ ವಾದವನ್ನು ಒಪ್ಪಿದರೆ ಸೈಂಧವರ ಭಾಷೆಯನ್ನು ದ್ರಾವಿಡ, ಟಿಬೆಟೋ-ಬರ್ಮನ್, ಆಸ್ಟ್ರೋ-ಏಷಿಯಾಟಿಕ್ ಮೂಲಗಳಲ್ಲಿ ಹುಡುಕಬೇಕಾಗುತ್ತದೆ. ಆದರೆ ಇದು ಅನಿವಾರ್ಯವಾದುದೇನಲ್ಲ. ಏಕೆಂದರೆ ಜಗತ್ತಿನ ಭಾಷಾ ಚರಿತ್ರೆಯಲ್ಲಿ ಮೆರೆದು ಬಾಳಿದ ಭಾಷೆಗಳು ಯಾವ ಕುರುಹಗಳನ್ನೂ ಉಳಿಸದೆ ಕಣ್ಮರೆಯಾಗಿವೆ, ಇವುಗಳನ್ನು ಅಜ್ಞಾತ ಭಾಷೆಗಳ ಪಟ್ಟಿಗೆ ಸೇರಿಸಲಾಗಿದೆ. ಸುಮೇರಿಯನ್ ಭಾಷೆಯಂತೆ ಸೈಂಧವ ಭಾಷೆಯೂ ಈಗ ಗೊತ್ತಿರುವ ಯಾವ ಭಾಷಾ ಕುಟುಂಬಕ್ಕೂ ಸೇರದೇ ಇರಬಹುದು. ಇದು ಸೈಂಧವ ಭಾಷೆಯನ್ನು ಎಂದಿಗೂ ಅರಿಯಲಾಗದ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಸೈಂಧವ ಭಾಷೆಯನ್ನು ಗುರುತಿಸಬೇಕೆಂದರೆ ಆ ಕಾಲದಲ್ಲಿ ದ್ರಾವಿಡ, ಟಿಬೆಟೋ-ಬರ್ಮನ್, ಆಸ್ಟ್ರೋ-ಏಷಿಯಾಟಿಕ್ ಮತ್ತು ಇಂಡೋ-ಆರ್ಯನ್ ಭಾಷಿಕರು ಎಲ್ಲಿದ್ದರು ಎಂದು ಮೊದಲು ಗುರುತಿಸಬೇಕಾಗುತ್ತದೆ.
ಈಗ ಬಹುತೇಕ ದಕ್ಷಿಣ ಭಾರತಕ್ಕೆ ಸೀಮಿತವಾಗಿರುವ ದ್ರಾವಿಡರು ಹಿಂದೆ ಭಾರತದಾದ್ಯಂತ ಹರಡಿದ್ದರೆನ್ನುವುದಕ್ಕೆ ಸಾಕ್ಷ್ಯಗಳು ದಕ್ಕುತ್ತವೆ. ಇದರಿಂದ ದ್ರಾವಿಡರು ಮೊದಲು ಎಲ್ಲಿದ್ದರು , ಎಲ್ಲಿಂದ ಈಗಿರುವ ನೆಲೆಗಳಿಗೆ ಯಾವಾಗ ಬಂದರೆಂಬ ಪ್ರಶ್ನೆ ಎದುರಾಗುತ್ತದೆ. ಮೆಸಪೊಟೆಮಿಯಾದಲ್ಲಿದ್ದ ಸುಮೇರಿಯನ್ , ಎಲಮೈಟ್ ಹಾಗೂ ದ್ರಾವಿಡ ಭಾಷೆಗಳ ನಡುವೆ ಹಲವಾರು ಸಾಮ್ಯತೆಗಳು ಕಂಡು ಬಂದಿವೆ. ಊರು , ಸುಡು , ಉರಿ , ಇಳಿ ಮಂತಾದ ಪದಗಳು ಸುಮೇರಿಯನ್, ಎಲಮೈಟ್’ನಂತೆ ದ್ರಾವಿಡ ಭಾಷೆಗಳ ಮೂಲ ಪದಕೋಶದಲ್ಲಿವೆ. ಸುಮೇರಿಯನ್ ,ಎಲಮೈಟ್ ಮತ್ತು ದ್ರಾವಿಡ ಭಾಷೆಗಳು ಅಂಟು ಭಾಷೆಗಳಾಗಿದ್ದು ಒಂದೇ ಲಕ್ಷಣಗಳನ್ನು ಹೊಂದಿವೆ. ಸುಮೇರಿಯನ್ ಹಾಗೂ ಎಲಮೈಟ್ ಭಾಷೆಯಲ್ಲಿರುವ ಎಳ್ಳು ಹಾಗೂ ಅದರ ಜಿಡ್ಡು (ಎಳ್+ನೆಯ್=ಎಣ್ಣೆ) ಕನ್ನಡದಲ್ಲಿ ಈಗಲೂ ಹಾಗೆಯೇ ಉಳಿದಿದೆ. ಇದು ಸೈಂಥವ ನಾಗರಿಕತೆಗೂ ಮೊದಲು ದ್ರಾವಿಡರು ಸಿಂಧೂ ಬಯಲಿನಲ್ಲಿದ್ದು ಮೆಸಪೊಟೆಮಿಯಾದೊಂದಿಗೆ ಸಂಪರ್ಕ ಹೊಂದಿದ್ದು, ನಂತರ ದಕ್ಷಿಣಕ್ಕೆ ಸಾಗಿರುವ ಸಾಧ್ಯತೆಗಳತ್ತ ಬೆರಳು ತೋರುತ್ತದೆ. ಎಲ್ಲ ದ್ರಾವಿಡರೂ ದಕ್ಷಿಣಕ್ಕೆ ಸಾಗಿರದೆ, ಕೆಲವರು ಅಲ್ಲೇ ಉಳಿದಿರಬಹುದು. ಸಿಂಧೂ ನಾಗರಿಕತೆಯಲ್ಲಿ ದ್ರಾವಿಡರೂ ಭಾಗಿಗಳಾಗಿರುವ ಸಾಧ್ಯತೆಗಳಿವೆ.
ಕೆಲ ವಿದ್ವಾಂಸರು ಇರಾನ್ ತೀರದಲ್ಲಿದ್ದ ಅದಿಮ-ಎಲಮೋ-ದ್ರಾವಿಡರು ಕರಾವಳಿಗುಂಟ ಸಾಗಿ ಮೆಸಪೊಟೆಮಿಯಾ , ಬಲೂಚಿಸ್ತಾನ, ಸಿಂಧ್, ಗುಜರಾತ್ ಮೂಲಕ ಇಂಡೋ-ಆರ್ಯರಿಗಿಂತ ಮೊದಲೇ ಭಾರತಕ್ಕೆ ಬಂದರು. ಸಿಂಧ್ , ರಾಜಸ್ಥಾನ, ಮಹಾರಾಷ್ಟ್ರಗಳ ನೈಸರ್ಗಿಕ ಎಲ್ಲೆ ಮತ್ತು ಸ್ಥಳನಾಮಗಳಲ್ಲಿ ಅವರು ಸಾಗಿ ಬಂದ ಕುರುಹುಗಳಿವೆ. ದ್ರಾವಿಡರು ಸಿಂಧೂ ಪ್ರದೇಶ ತಲುಪುವ ವೇಳೆಗೆ ಅಲ್ಲಿ ಹಲವು ಭಾಷೆಗಳು ಪ್ರಚಲಿತವಿದ್ದವು. ದ್ರಾವಿಡರು ಭಾರತಕ್ಕೆ ಪ್ರವೇಶಿಸುವ ಮೊದಲೇ ಭಾರತಕ್ಕೆ ಇನ್ನೂ ಆಗಮಿಸದಿದ್ದ ಇಂಡೋ-ಇರಾನಿಯನ್/ಆರ್ಯರೊಂದಿಗೆ ಇರಾನ್ ಪ್ರದೇಶದಲ್ಲಿ ಸಂಪರ್ಕ ಹೊಂದಿದ್ದರು. ಆದ್ದರಿಂದ ಇಂಡೋ-ಆರ್ಯನ್ ಮತ್ತು ದ್ರಾವಿಡ ಭಾಷೆಗಳ ಪರಸ್ಪರ ಪ್ರಭಾವ ಈಗ ಭಾವಿಸಿದುದಕ್ಕಿಂತಲೂ ಪ್ರಾಚೀನವಾಗಿದ್ದು ಸಿಂಧೂ ನಾಗರಿಕತೆಗಿಂತಲೂ ಹಿಂದಿನ ಕಾಲಕ್ಕೆ ಸರಿಯುತ್ತದೆ. ದ್ರಾವಿಡರು ಆರ್ಯರಿಗಿಂತ ಮುಂಚೆ ಭಾರತ ಪ್ರವೇಶಿಸಿದ್ದರಿಂದ ಅವರು ಸೈಂಧವ ಸಂಸ್ಕೃತಿಯಲ್ಲಿ ಭಾಗಿಗಳಾದರು. ಅರೆಅಲೆಮಾರಿಗಳಾಗಿದ್ದ ಅವರು ಸೈಂಧವರಿಂದ ಕೃಷಿಯನ್ನು ಕಲಿತರು. ಇದರಿಂದ ಸೈಂಧವರ ಕೃಷಿ ಸಂಬಂಧಿತ ಪದಗಳು ಅವರ ಭಾಷಾ ಪದಕೋಶ ಸೇರಿದವು. ನಂತರ ಕಾಲದಲ್ಲಿ ಆರ್ಯರು ಪಂಜಾಬ್ ಪ್ರವೇಶಿಸಿದರು. ಆ ವೇಳೆಗೆ ಸೈಂಧವ ಸಂಸ್ಕೃತಿ ಪ್ರಬುದ್ಧ ಹಂತ ತಲುಪಿದ್ದಿತು. ಪಂಜಾಬ್ ಪ್ರದೇಶದಲ್ಲಿ ಬಳಕೆಯಲ್ಲಿದ್ದ ಸೈಂಧವರ ಉತ್ತರ ಭಾಗದ ಭಾಷೆ (ಹರಪ್ಪಾ) ಇಂಡೋ- ಆರ್ಯನ್ ಸಂಸ್ಕೃತ , ದಕ್ಷಿಣದ ಸಿಂಧ್ ಪ್ರದೇಶದಲ್ಲಿದ್ದ ಸೈಂಧವರ ಮೊಹೆಂಜದಾರೋ ಪ್ರದೇಶದ ಭಾಷೆ ದ್ರಾವಿಡರೊಂದಿಗೆ ಕೊಳು-ಕೊಡುಗೆ ನಡೆಸಿದವು.
ಈ ವಾದಗಳು ಸೈಂಧವರ ಭಾಷೆ ಯಾವುದಾಗಿತ್ತು ಎನ್ನುವದಕ್ಕಿಂತ ಅದು ಯಾವ ಭಾಷೆಗಳೊಂದಿಗೆ ಸಂಪರ್ಕ ಹೊಂದಿದ್ದಿತು ಎನ್ನುವ ಹುಡುಕಾಟದಲ್ಲಿ ಕೊನೆಗೊಳ್ಳುತ್ತದೆ. ಸೈಂಧವರ ಭಾಷೆ ದ್ರಾವಿಡ , ಇಂಡೋ-ಆರ್ಯನ್ , ಆಸ್ಟ್ರೋ-ಏಷಿಯಾಟಿಕ್ ಕುಟುಂಬಗಳಿಗೆ ಸೇರದೆ ಬೇರಯದೇ ಆದ ಭಾಷೆಯಾಗಿರುವ ಸಾಧ್ಯತೆಯನ್ನು ಪರಿಗಣಿಸಿದರೆ ಸೈಂಧವರ ಭಾಷೆ ಕುರಿತಾಗಿ ಮೊದಲಿನಂತೆಯೇ ಊಹೆಗಳು ಉಳಿದು ಅದಕ್ಕೆ ದ್ರಾವಿಡ-ಆದಿಮ ಮುಂಡಾ-ಸಂಸ್ಕೃತಗಳ ಹಿನ್ನೆಲೆ ಹೊಸದಾಗಿ ಕಾಣಿಸಿಕೊಳ್ಳುವ ಬದಲಾವಣೆ ಮಾತ್ರ ಬರುತ್ತದೆ. ನಗರ ಪದಕ್ಕೆ ಇಂಡೋ-ಯುರೋಪಿಯನ್ ಮೂಲವಿಲ್ಲ-ಅದು ಸಂಸ್ಕೃತ ಪದವಾಗಿರಲಾರದು. ದ್ರಾವಿಡ, ಮುಂಡಾ ಭಾಷೆಗಳಲ್ಲೂ ಈ ಪದದ ಮೂಲಗಳು ದಕ್ಕವು. ಊರು , ವೀಡು , ಪೊಳಲ್ , ಕೇರಿ , ಪಾಕ್ಕಂ ದ್ರಾವಿಡ ಭಾಷೆಯಲ್ಲಿ ನೆಲೆಯನ್ನು ತಿಳಿಸುವ ಪದಗಳು ಆದ್ದರಿಂದ ನಗರ ಪದ ಸೈಂಧವ ಪದವಾಗಿರಬಹುದು.
[ಪಿರಾಕ್’ನಲ್ಲಿ ಸಿಕ್ಕಿರುವ ಪ್ರ.ಶ.ಪೂ ೧೭೦೦ರ ಅವಧಿಯ ಕುದುರೆಯ ಮೂರ್ತಿಗಳು ಆರ್ಯರವಲ್ಲ. ಅವು ಅವರಿಗಿಂತ ಮಂಚೆ ಇದ್ದ ದ್ರಾವಿಡರಿಗೆ ಸೇರಿದವು ಆದ್ದರಿಂದ ಕುದುರೆಯ ಪರಿಚಯವನ್ನು ಅರ್ಯರೊಂದಿಗೆ ತಳುಕು ಹಾಕಲೇಬೇಕಾದ ಅನಿವಾರ್ಯತೆಯಿಲ್ಲ. ಅವೆಸ್ತಾದಲ್ಲಿ ಪಟ್ಟಿ ಮಾಡಲಾಗಿರುವ ಆರ್ಯ ಪ್ರದೇಶಗಳಲ್ಲಿ ಪಶ್ಚಿಮ ಬಲೂಚಿಸ್ತಾನ ಸೇರದಿರುವುದು ಎದ್ದು ಕಾಣುತ್ತದೆ. ಇಲ್ಲಿ ದ್ರಾವಿಡರೇ ಇದ್ದಿರಬಹುದು. ದ್ರಾವಿಡರೇ ಕುದುರೆ ಹಾಗೂ ಒಂಟೆಯನ್ನು ಇರಾನಿಯನ್ ಪ್ರದೇಶದಿಂದ ಸಿಂಧೂ ಪ್ರದೇಶಕ್ಕೆ ಪರಿಚಯಿಸಿದರು ಎನ್ನುವ ವಾದಗಳಿವೆ. ದ್ರಾವಿಡ ಭಾಷೆಗಳಲ್ಲಿ ಕುದುರೆಯನ್ನು ಇವುಳಿ (ತಮಿಳು) , ಹು/ಇಳ್ಳಿ, (ಬ್ರಾಹುಇ), ಕುದುರೆ (ಕನ್ನಡ), ಕುದುರ (ತೆಲುಗು) ಎಂದು ಕರೆಯಲಾಗಿದೆ. ಇದು ಇಂಡೋ-ಯುರೋಪಿಯನ್ ಭಾಷೆಯ ಅಶ್ವಕ್ಕಿಂತ ಬೇರೆಯಾದುದು. ದ್ರಾವಿಡ ಭಾಷೆಗಳಲ್ಲಿ ಒಂಟೆಗೆ ಸ್ವತಂತ್ರ ಪದವಿಲ್ಲದಿರುವುದು ಈ ಸಾಧ್ಯತೆಗೆ ದೊಡ್ಡ ಅಡಚಣೆಯಾಗಿ ಕಾಣುತ್ತದೆ. ರಥಕ್ಕೆ ಸಂಬಂಧಪಟ್ಟ ಅಕ್ಷ (ಅಚ್ಚು-ಕನ್ನಡ) ಅರ, ರಥ ಮುಂತಾದ ಪದಗಳನ್ನು ದ್ರಾವಿಡರು ಇಂಡೋ- ಆರ್ಯರಿಂದ ಇರಾನಿನಲ್ಲಿಯೇ ಪಡೆದರು. ದ್ರಾವಿಡರಲ್ಲಿ ಕೆಲ ಪಂಗಡಗಳು ಇಂಡೋ-ಆರ್ಯರಿಗಿಂತ ಮೊದಲೇ ದಕ್ಷಿಣ ಏಷ್ಯಾ ಪ್ರವೇಶಿಸಿ ಅವರೊಂದಿಗೆ ಒಡನಾಟ ಹೊಂದಿರಬಹುದು ಎನ್ನುವ ವಾದಗಳಿವ. ಆದರೆ ಇದನ್ನು ಸಮರ್ಥಿಸಲು ಮೂಲ ದ್ರಾವಿಡರಲ್ಲಿ ಕುದುರೆ, ’ರಥ’ ‘ಯಜ್ಞ’ದಂತಹ ಪದಗಳು ಇಲ್ಲದಿರುವುದು ಇತರ ಸಮಸ್ಯೆಗಳಿಗೆ ಕಾರಣವಾಗಿದೆ.]
ಸೈಂಧವರ ಭಾಷೆ ಯಾವುದಾಗಿದ್ದಿತೆಂದು ತಿಳಿಯಲು ಆ ಕಾಲದ ಬೇರೆ ಯಾವುದೇ ಮೂಲಗಳು ಇಲ್ಲದಿರುವುದರಿಂದ ಅದೇ ಕಾಲಕ್ಕೆ ಸೇರಿದ ಬಹುತೇಕ ಅದೇ ಭೌಗೋಳಿಕ ವಲಯಕ್ಕೆ ಸೇರಿರುವ ಮೌಖಿಕ ಸಂಪ್ರದಾಯದ ಮೂಲಕ ಹರಿದು ಬಂದಿರುವ ಋಗ್ವೈದಿಕ ಸಂಸ್ಕೃತದ ಮೂಲಕ ಸೈಂಧವರ ನುಡಿಯನ್ನು ಹುಡುಕಿ ಆ ಮೂಲಕ ಆರ್ಯರ ತವರು ನೆಲೆಯ ಪ್ರಶ್ನೆಗೆ ಅಂತಿಮ ಉತ್ತರ ಕೊಡುವುದು ಸಾಧ್ಯವೆಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸೈಂಧವ ಮತ್ತು ಋಗ್ವೈದಿಕವೆಂಬ ಎರಡು ವಿಭಿನ್ನ ಸಂಸ್ಕೃತಿಗಳು ಒಂದೇ ಭೌಗೋಳಿಕ ನೆಲೆಯಲ್ಲಿದ್ದವು ಎನ್ನುವ ಆಧಾರದ ಮೇಲೆ ಸೈಂಧವರ ಭಾಷೆ ಏನಾಗಿದ್ದಿತೆಂದು ಊಹಿಸುವುದಕ್ಕೆ ಹಲವಾರು ಅಡಚಣೆಗಳಿವೆ. ಋಗ್ವೈದಿಕ ಸಂಸ್ಕೃತ ಅಸ್ತಿತ್ವದಲ್ಲಿದ್ದ ಕಾಲದಲ್ಲೇ ಇತರ ಭಾಷೆಗಳು ಅಸ್ತಿತ್ವದಲ್ಲಿ ಇದ್ದುದರಿಂದ ಸಿಂಧೂ ಬಯಲಿನಲ್ಲಿ ಸೈಂಧವ, ಆದಿಮ ದ್ರಾವಿಡ, ಇಂಡೋ-ಆರ್ಯನ್ ಸಂಸ್ಕೃತ , ಆದಿಮ ಮುಂಡಾ ಎಂಬ ಮೂರು ಭಾಷಿಕ ಪಂಗಡಗಳು ಕ್ರಿಯಾಶೀಲವಾಗಿರಬಹುದು. ಇಂತಹ ಸನ್ನಿವೇಶದಲ್ಲಿ ಋಗ್ವೈದಿಕರು ತಮ್ಮೊಳಗೆ ಆಡುಮಾತಿನ ಸಂಸ್ಕೃತ , ಯಜ್ಞ ಕಾರ್ಯಗಳಿಗೆ ಮಂತ್ರ ಸಂಸ್ಕೃತ , ಬೀದಿಯಲ್ಲಿ ಸೈಂಧವ-ದ್ರಾವಿಡ ಮಿಶ್ರಿತ ಸಂಸ್ಕೃತ ಭಾಷೆಗಳನ್ನು ಬಳಸುತ್ತಿದ್ದಿರಬಹುದು. ಕಲುಷಿತವಾಗದಂತೆ ಜತನದಿಂದ ಕಾಯ್ದುಕೊಂಡು ಬಂದಿರುವ ಋಗ್ವೈದಿಕರ ಮಂತ್ರ ಸಂಸ್ಕೃತ ಮಾತ್ರ ತಲೆತಲಾಂತರಗಳಿಂದ ಉಳಿದು, ಅವರ ಆಡು ಸಂಸ್ಕೃತ ಕಣ್ಮರೆಯಾಗಿರಬಹುದು ಅಥವಾ ಗುರುತಿಸಲಾಗದಂತೆ ಬದಲಾಗಿರಬಹುದು. ಋಗ್ವೇದದ ಕೊನೆಯ ಕಾಂಡಗಳ ಕಾಲಕ್ಕೆ ದ್ರಾವಿಡರು ಋಗ್ವೈದಿಕ ಮೇಲೆ ಪ್ರಭಾವ ಬೀರಿ ಬದಲಾವಣೆಗಳನ್ನು ತಂದಿರುವ, ಅದರಂತೆ ಆರ್ಯರ ಯಜ್ಞ ಯಾಗಾದಿ ಆಚರಣೆಗಳನ್ನು ಸೀಮಿತ ರೀತಿಯಲ್ಲಿ ಅಳವಡಿಸಿಕೊಂಡಿರುವ ಕುರುಹುಗಳು ಋಗ್ವೇದೋತ್ತರ ಪಠ್ಯಗಳಲ್ಲಿ ಕಾಣತೊಡಗುತ್ತವೆ. ಆದ್ದರಿಂದ ಋಗ್ವೇದದಲ್ಲಿರುವ ಸಂಸ್ಕೃತೇತರ ಪದ , ವ್ಯಾಕರಣ ಲಕ್ಷಣಗಳ ಮೂಲಕ ಸೈಂಧವರ ಭಾಷೆ ಹುಡುಕುವ ಪ್ರಯತ್ನಕ್ಕೆ ಅದರದೇ ಆದ ಇತಿಮಿತಿಗಳಿರುತ್ತವೆ.
ಋಗ್ವೈದಿಕ ಸಂಸ್ಕೃತ ಇಂಡೋ-ಯುರೋಪಿಯನ್ ಭಾಷಾವೃಕ್ಷದ , ಇಂಡೋ-ಇರಾನಿಯನ್ ಕೊಂಬೆಯ, ಇಂಡೋ-ಅರ್ಯನ್ ಟಿಸಿಲಿಗೆ ಸೇರಿದೆಯೆನ್ನುವದಕ್ಕೆ ಭಿನ್ನಾಭಿಪ್ರಾಯಗಳಿಲ್ಲ. ಋಗ್ವೈದಿಕ ಸಂಸ್ಕೃತದ ಪದಕೋಶ, ಭಾಷಾ ಲಕ್ಷಣಗಳು ಇಂಡೋ-ಯುರೋಪಿಯನ್ ಭಾಷಾಸಮುದಾಯಕ್ಕೆ ಸೇರಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಋಗ್ವೈದಿಕ ಸಂಸ್ಕೃತದಲ್ಲಿ ಇಂಡೋ-ಯುರೋಪಿಯನ್ ಭಾಷಾ ಸಮುದಾಯದಲ್ಲಿ ಕಾಣದ ಹಲವಾರು ವೈಶಿಷ್ಟ್ಯಗಳು , ಭಾಷಾ ಲಕ್ಷಣಗಳು ದಾಖಲಾಗಿವೆ. ಇವುಗಳನ್ನು ಪದ ಹಾಗೂ ವ್ಯಾಕರಣ ಎರಡೂ ದೃಷ್ಟಿಯಲ್ಲಿ ಗುರುತಿಸುವುದು ಸಾಧ್ಯ. ಅದ್ದರಿಂದ ಸೈಂಧವರ ಭಾಷೆ ಋಗ್ವೈದಿಕ ಸಂಸ್ಕೃತವಲ್ಲದೆ ಬೇರೆಯದೇ ಆಗಿರುವ ಸಾಧ್ಯತೆಗಳು ಕಾಣತೊಡಗುತ್ತವೆ. ಋಗ್ವೈದಿಕ ಸಂಸ್ಕೃತದಲ್ಲಿರುವ ಇಂಡೋ-ಯುರೋಪಿಯನ್ ಹೊರತಾದ ಭಾಷಾ ಲಕ್ಷಣಗಳನ್ನು ಹುಡುಕಿ, ಅವು ಯಾವ ಭಾಷಾ ವರ್ಗಕ್ಕೆ ಸೇರಿವೆಯೆಂದು ಗುರುತಿಸುವ ಪ್ರಯತ್ನ ಮಾಡಬಹುದು. ಅಂತಹ ಲಕ್ಷಣಗಳು ಈಗ ತಿಳಿದಿರುವ- ದ್ರಾವಿಡ, ಟಿಬೆಟೋ-ಬರ್ಮನ್, ಆಸ್ಟ್ರೋ-ಏಷಿಯಾಟಿಕ್ ಯಾವ ಭಾಷಾ ವರ್ಗಕ್ಕೂ ಸೇರಿಲ್ಲದಿದ್ದರೆ ಅವು ಸೈಂಧವ ಭಾಷೆಯ ಪ್ರಭಾವದಿಂದ ಬಂದಿರಬಹುದೆಂಬ ಆರಂಭಿಕ ತೀರ್ಮಾನಕ್ಕೆ ಬರಬಹುದು. ಏಕೆಂದರೆ ಸೈಂಧವ ಅವನತಿಯ ನಂತರ ಋಗ್ವೈದಿಕರು ಸೈಂಧವ ಭಾಷೆ ಮತ್ತು ಸಂಸ್ಕೃತಿಗಳೊಂದಿಗೆ ಕೊಳು-ಕೊಡುಗೆ ನಡೆಸಿರುವುದು ಸಾಧ್ಯ. ಋಗ್ವೈದಿಕ ಸಂಸ್ಕೃತದ ಮೇಲೆ ದ್ರಾವಿಡ ಹಾಗೂ ಆಸ್ಟೋ- ಏಷಿಯಾಟಿಕ್ ಭಾಷೆಗಳ ಪ್ರಭಾವ ಇರುವುದೆಂದು ಹಲವರ ಅಭಿಪ್ರಾಯ. ಇವೆರಡರಲ್ಲಿ ಯಾವುದು ನಿಜವಾಗಿಯೂ ಪ್ರಭಾವ ಬೀರಿವೆ ಎಂದು ಗುರುತಿಸುವುದು ಮುಂದಿನ ಸವಾಲು. (೧೦೨)
[ಕೆಲ ಭಾರತೀಯ ವಿದ್ವಾಂಸರು ದ್ರಾವಿಡ ಹಾಗೂ ಇಂಡೋ-ಆರ್ಯನ್ ಸಂಸ್ಕೃತ ಭಾಷೆಗಳ ನಡುವೆ ಹಲವಾರು ಸಾಮ್ಯತೆಗಳಿವೆ. ಇಂತಹ ಸಾಮ್ಯತೆಗಳು ಇತರ ಇಂಡೋ-ಯುರೋಪಿಯನ್ ಭಾಷೆಗಳೊಂದಿಗೆ ಕಂಡು ಬರುವುದಿಲ್ಲ. ಆದ್ದರಿಂದ ಸಂಸ್ಕೃತ ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರದೆ, ದ್ರಾವಿಡ ಭಾಷಾ ಲಕ್ಷಣಗಳನ್ನು ಹೊಂದಿದ್ದ ಸ್ವತಂತ್ರವಾಗಿ ಅಸ್ತಿತ್ವದಲ್ಲಿದ್ದ ಈಗ ಗುರುತಿಸಲಾಗದ ದಕ್ಷಿಣಏಷ್ಯಾದ ಪ್ರತ್ಯೇಕ ಭಾಷಾ ಕುಟುಂಬಕ್ಕೆ ಸೇರುತ್ತದೆ, ಈಗ ದ್ರಾವಿಡ ಎಂದು ಕರೆಸಿಕೊಳ್ಳುವ ಭಾಷೆಗಳು ಸಹ ಅದೇ ಭಾಷಾಕುಟುಂಬಕ್ಕೆ ಸೇರುತ್ತವೆ. ಆದ್ದರಿಂದ ದ್ರಾವಿಡ ಮತ್ತು ಸಂಸ್ಕೃತ ಒಂದೇ ಮೂಲದ ಎರಡು ಕವಲುಗಳು ಎಂದು ವಾದಿಸಿದ್ದಾರೆ. ಈ ವಾದಕ್ಕೆ ಅಂತಹ ಮಾನ್ಯತೆಯಿಲ್ಲ ಏಕೆಂದರೆ ಯಾವುದೇ ಭಾಷಾ ಕುಟುಂಬ ತನ್ನದೇ ಆದ ಭಾಷಾಲಕ್ಷಣಗಳನ್ನು ಹೊಂದಿರುತ್ತದೆ. ಅದರ ಆಧಾರದ ಮೇಲೆಯೇ ಭಾಷಾಕುಟುಂಬಗಳ ವರ್ಗೀಕರಣ ಮಾಡಲಾಗಿದೆ. ಹೊರಗೆ ಅದೆಷ್ಟೋ ಸಾಮ್ಯತೆಗಳು ಕಂಡರೂ ಮೂಲದಲ್ಲಿ ದ್ರಾವಿಡ ಹಾಗೂ ಇಂಡೋ-ಆರ್ಯನ್ ಭಾಷೆಗಳೇ ಬೇರೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ದ್ರಾವಿಡ- ಸಂಸ್ಕೃತ ಭಾಷೆಗಳಂತೆಯೇ ಬಾಲ್ಕನ್ ಹಾಗೂ ಗ್ರೀಕ್ ಭಾಷೆಗಳ ನಡುವೆ ಹಲವಾರು ಸಾಮ್ಯತೆಗಳು , ನಿರ್ದಿಷ್ಟ ಲಕ್ಷಣಗಳು ಕಾಣಿಸಿಕೊಂಡಿವೆ. ಇವು ಪರಸ್ಪರ ಪ್ರಭಾವದಿಂದ ಬಂದಿವೆಯೇ ಹೊರತು, ಅವು ಒಂದೇ ಭಾಷಾ ಕುಟುಂಬಕ್ಕೆ ಸೇರಿದವೆಂದು ಸಾಬೀತಾಗುವುದಿಲ್ಲ.]
ಯಾವುದೇ ಒಂದು ಭಾಷೆ ತನ್ನ ಭಾಷಾಕುಟುಂಬಕ್ಕೆ ಸೇರಿದಂತೆ ತನ್ನದೇ ಆದ ಲಕ್ಷಣಗಳನ್ನು ವ್ಯಾಕರಣವನ್ನು ಹೊಂದಿರುತ್ತದೆ. ಪದಕೋಶ ಹಾಗೂ ವ್ಯಾಕರಣಗಳ ಆಧಾರದ ಮೇಲೆ ಒಂದು ಭಾಷೆಯಲ್ಲಿ ಪದಗಳು ರೂಪುಗೊಳ್ಳುವ, ವ್ಯಾಕರಣ ಬಳಕೆಯಾಗುವ, ಸೂತ್ರಗಳನ್ನು ಸಿದ್ದಪಡಿಸಬಹುದು. ಈ ಸೂತ್ರಗಳು ಒಂದು ಬಗೆಯಲ್ಲಿ ಆ ಭಾಷೆಯ ಪದಗಳನ್ನು ತಯಾರಿಸುವ ಗಣಿತದ ಸೂತ್ರಗಳಿದ್ದಂತೆ. ಉದಾಹರಣೆಗೆ ದ್ರಾವಿಡ ಭಾಷೆಗಳಲ್ಲಿ ಪದದ ಮೊದಲು ಘೋಷಗಳು, ಒತ್ತಕ್ಷರಗಳು , ದ್ವಿತ್ತ್ವಗಳು ಬರುವುದಿಲ್ಲ. ಪದಾಂತ್ಯ ಸ್ವರರಹಿತವಾಗಿರುತ್ತವೆ. ಪೂರ್ವಪ್ರತ್ಯಯಗಳು ಅಸ್ತಿತ್ವದಲ್ಲಿಲ್ಲ, ಎನ್ನುವಂತಹ ಸೂತ್ರಗಳು ದ್ರಾವಿಡ ಭಾಷೆಯನ್ನು ವಿವರಿಸುತ್ತವೆ. ಹೀಗೆ ಜಗತ್ತಿನ ಎಲ್ಲ ಭಾಷಾ ಕುಟುಂಬಗಳಿಗೆ ಒಂದು ಬಗೆಯ ಸ್ಥೂಲವಾದ ಸೂತ್ರಗಳನ್ನು ಭಾಷಾತಜ್ಞರು ರಚಿಸಿದ್ದಾರೆ. ಇಂತಹುದೇ ಸೂತ್ರಗಳು ಇಂಡೋ-ಯುರೋಪಿಯನ್ ಭಾಷೆಗೂ ಲಭ್ಯವಿವೆ. ಈ ಸೂತ್ರಗಳನ್ನು ಋಗ್ವೈದಿಕ ಸಂಸ್ಕೃತದ ಮೇಲೆ ಬಳಸಿದಾಗ ಅದರಲ್ಲಿ ಅಂದಾಜು ೪% ಎಂದರೆ ೩೦೦ ಪದಗಳು ಇಂಡೋ-ಆರ್ಯನ್ ಭಾಷೆಯ ಮೂಲಕ್ಕೆ ಸೇರದವು ಎಂದು ತಿಳಿದು ಬರುತ್ತದೆ. (೧೦೨)
ಋಗ್ವೇದದ ಶುತದ್ರಿ , ವಿಪಾಶ ಎಂಬ ನದಿಗಳ ಹೆಸರುಗಳನ್ನು ಇಂಡೋ-ಆರ್ಯನ್ ಭಾಷಾಮೂಲದಲ್ಲಿ ವಿವರಿಸಲು ಸಾಧ್ಯವಿಲ್ಲ. (ಶುತದ್ರಿ > ಶತದ್ರು ಎಂದರೆ ನೂರ ಕವಲಿನ ನದಿ ಎಂಬ ಜನಪ್ರಿಯ ವಿವರಣೆ ನಂತರದ ಕಾಲದ್ದು) ವಿಪಾಶ ಹೆಸರು ವಿಪಾಳ ಅಥವಾ ವಿಬಾಳದಿಂದ ಬಂದಿರಬಹುದು. ಋಗ್ವೇದದಲ್ಲಿ ಅದನ್ನು ವಿಬಾಲಿ (ಋ.ವೇ ೪/೩೦ , ೧೧/೧೧) ಎಂದು ಸಹ ಕರೆಯಲಾಗಿದೆ. ಸರಸ್ವತಿ ನದಿಯನ್ನು ತೈತ್ತರೀಯ ಬ್ರಾಹ್ಮಣದಲ್ಲಿ (ತೈ.ಬ್ರಾ ೨/೫/೮/೬) ವೈಶಂಬಾಲ್ಯ ಎನ್ನಲಾಗಿದೆ. ಭಾಲ್ಯ ಎಂಬ ಪದ ಬ್ರಾಹ್ಮಣಗಳಲ್ಲಿ ವಿಧವಿಧವಾಗಿ ಉಚ್ಛರಿಸಲ್ಪಟ್ಟು ಹೊರ ಮೂಲದತ್ತ ಕೈದೋರುತ್ತದೆ. ಇದು ಶಂಬರ , ಕಂಭೋಜ ಪದಗಳಂತೆ ಹೊರ ಮೂಲದ್ದಾಗಿದೆ. ಸೈಂಧವ ಕಾಲದಲ್ಲಿ ಸರಸ್ವತಿಯ ಹೆಸರು ವಿ(ಶಂ)ಬಾಲ ಅಥವಾ ವಿ(ಸಂ)ಬಾಳ್ ಇರಬಹುದು. ವಿಶಾಲ ಪಂಜಾಬ್’ನಲ್ಲಿ ಗಾಂಧಾರ, ಕುಭ, ಕ್ರುಮು, ಕಾಂಭೋಜ ಪದಗಳಿವೆ. ಗಾಂಧಾರಿಯನ್ನು ಹಳೆಪರ್ಷಿಯನ್’ನಲ್ಲಿ ಗಂಡಾರ ಎಂದರೆ ಗ್ರೀಕರು ಗಂಡರಿಯಾಯಿ ಎಂದಿದ್ದಾರೆ. ಇದು ಗಂಗಾನದಿಯ ಬಯಲಿನ ಗಂಡಕಿ, ಗಂಡ್, ಗಡ್ ಎಂಬ ನದಿ ಸೂಚಕ ಹೆಸರನ್ನು ಹೋಲುವಂತಿದೆ.
ಋಗ್ವೇದದಲ್ಲಿರುವ ಸಂಸ್ಕೃತೇತರ ಪದಗಳಲ್ಲಿ ೨೫ ದ್ರಾವಿಡ ಮೂಲದ ಪದಗಳಾಗಿದ್ದು ನಂತರದ ಕಾಲದಲ್ಲಿ ಇವುಗಳ ಸಂಖ್ಯೆ ೮೫ಕ್ಕೆ ಏರಿದೆ. ಸಂಸ್ಕೃತ (ಇಂಡೋ-ಆರ್ಯನ್) ಭಾಷೆಯಲ್ಲಿರುವ ಒಕ್ಕಲುತನ , ದವಸ , ಧಾನ್ಯ , ದೇಹದ ಅಂಗಗಳು, ಕೆಲವು ಸಂಬಂಧವಾಚಿ ಪದಗಳು ದ್ರಾವಿಡ ಮೂಲದವೆಂದು ಗುರುತಿಸಲಾಗಿದೆ. ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಬ್ರಾಹುಯಿ ಭಾಷೆ ಇರಾನ್, ತುರ್ಕಮೆನಿಸ್ತಾನ್, ಅಫಘಾನಿಸ್ತಾನ್ , ಬಲೂಚಿಸ್ತಾನ್ ಮತ್ತು ಸಿಂಧ್ ಪ್ರದೇಶದ ಭಾಗಗಳಲ್ಲಿ ಅಸ್ತಿತ್ವದಲ್ಲಿದೆ. ಈ ಭಾಷೆ ಎಂದಿನಿಂದ ಇಲ್ಲಿದೆಯೆನ್ನುವುದು ವಿವಾದಾಸ್ಪದವಾಗಿದೆಯಾದರೂ ಪ್ರ.ಶ.ಪೂ ೪೦೦ ರ ಅವಧಿಯಲ್ಲಿ ಎಲಮೈಟ್ ಮೂಲದ ಅದಿಮ ದ್ರಾವಿಡರು ಭಾರತದತ್ತ ಬಂದು ಸಿಂಧೂ ಬಯಲಿನಲ್ಲಿ ನೆಲೆಸಿರುವ ಸಾಧ್ಯತೆಗಳಿವೆ. ಋಗ್ವೇದದಲ್ಲಿರುವ ’ಗಂಡ’ ’ಲಂಗಲ” (ನೇಗಿಲು) , ಲಾಂಗೂಲ (ಕೋತಿ) ಮುಂತಾದ ಪದಗಳು ಆಸ್ಟ್ರೋ-ಏಷಿಯಾಟಿಕ್ (ಆದಿಮ ಮುಂಡಾ) ಭಾಷಾ ಮೂಲದಲ್ಲಿ ಗುರುತಿಸಲಾಗಿದೆ. ಕೆಲ ಪದಗಳು ಪೂರ್ವಪ್ರತ್ಯಯ ಹೊಂದಿರುವ ಅಜ್ಞಾತ ಭಾಷೆಗೆ ಸೇರಿವೆ. ಇದು ಆಸ್ಟ್ರೋ-ಏಷಿಯಾಟಿಕ್ ಭಾಷೆಗಳ ಲಕ್ಷಣ. ಆದ್ದರಿಂದ ಈ ಪದಗಳು ಮುಂಡಾ, ಆದಿಮ ಮುಂಡಾ, ಖಾಸಿ ಮೂಲದ್ದಾಗಿರಬಹುದು.
ವೈದಿಕ ಸಂಸ್ಕೃತದಲ್ಲಿ (೧) ಕ್, ಕಿ, ಪ್ರಯ, ಬಲ, ಭ್ರೂ, ಮುಂತಾದ ಶಬ್ದಗಳಿಂದ ಪ್ರಾರಂಭವಾಗುವ ಪದಗಳು (೨) ಇ,ಉ, ಋ,ರ,ನಂತರ ‘ಕ್ಷ’ ಬದಲು ‘ಸ’ ಬಂದಿರುವುದು (೩) ಪದಾಂತ್ಯದಲ್ಲಿ ಅ,ಸ,ತ, ಅನ್, ಡ, ಆ ದ, ಭೂತ ಶಬ್ದಗಳ ಅಸ್ತಿತ್ವ (೪) ಜಾರ್, ಪಾರ್, ಸಾರ್ ಪೂರ್ವ ಪ್ರತ್ಯಯ ಹೊಂದಿದ ಪದಗಳು ಬಂದಿವೆ. (೫) ವೈದಿಕ ಪಠ್ಯಗಳಲ್ಲಿ ಹಲವಾರು ಕಡೆ ’ಕ’ ಬದಲು’ಸ’ ಬಂದಿದೆ. (ಕಾರ್ಕೋಟಕ =ಸಾರ್ಕೋಟಕ, ಕಂಬಳ=ಸಂಬಳ, ಕಟಕ=ಸಟಕ, ಕಿಸ್ತ-ಸಿಸ್ತ್, ಕಾಮಿಡಿನ್=ಸಿಮಿಡ, ಕಂಬು=ಶಂಬು) ಇವು ಇಂಡೋ-ಯುರೋಪಿಯನ್ ಭಾಷಾ ಕುಟಂಬಕ್ಕೆ ಸೇರಿದ ಋಗ್ವೈದಿಕ ಸಂಸ್ಕೃತದಲ್ಲಿ ಇರಲು ಸಾಧ್ಯವಿಲ್ಲ. (೬) ಕೊ-ಕಿ ಮುಂತಾದ ಅಕ್ಷರಗಳಿಂದ ಪ್ರಾರಂಭವಾಗುವ ಪದಗಳು ಸಂಸ್ಕೃತಕ್ಕೆ ಸೇರಿಲ್ಲ. ಕೋಸಿ ಮುಂತಾದ ನದಿ ಹೆಸರುಗಳು ಪೂರ್ವ ಭಾರತದಲ್ಲಿ , ಹಿಮಾಲಯ ತಪ್ಪಲಿನ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ. ನೇವಾರಿ ಭಾಷೆಯಲ್ಲಿ ಖೊ –ಖು-ಕ್ವಾ-ಕೊ- ಎಂದರೆ ನದಿ ಎಂದರ್ಥ. ಚುಲ್ಲಿಂ_ಖು, ಥೆನ್-ಖು , ಜಪ್ತಿ-ಖು, ಹುಡಿ-ಖು, ಪಿ-ಖು, ವಿಹ್ಲಿಮೆ–ಖೊ-ಸ್ತ್ರೋತ, ರಿಪ್ಸಂ-ಖೊ ಮುಂತಾದ ಹೆಸರುಗಳಲ್ಲಿ ಖೊ-ನದಿ ಎಂಬ ಅರ್ಥವಿದೆ. ಋಗ್ವೈದಿಕ ಸಂಸ್ಕೃತದಲ್ಲಿರುವ ಇಂತಹ ಹೊರಗಿನ ಪದ , ವ್ಯಾಕರಣಗಳ ಲಕ್ಷಣಗಳನ್ನು ಪರಿಗಣಿಸಿ ಅವು ಯಾವ ಭಾಷಾ ಪರಿವಾರಕ್ಕೆ ಸೇರಿವೆ ಹಾಗೂ ಆ ಮೂಲಕ ಸೈಂಧವರ ಭಾಷೆ ಏನಾಗಿದ್ದಿತೆಂದು ನಿರ್ಧರಿಸಲು ಸಾಧ್ಯ.
ಸೈಂಧವ = ದ್ರಾವಿಡ
ಸೈಂಧವರ ಭಾಷೆ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ್ದಿತೆಂಬ ವಾದವನ್ನು ಪಾಶ್ಚಾತ್ಯ ಹಾಗೂ ಕೆಲವು ಭಾರತೀಯ ವಿದ್ವಾಂಸರು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. ಈಗ ಬಲೂಚಿಸ್ತಾನದಲ್ಲಿ ದ್ರಾವಿಡ ಭಾಷಾಗುಂಪಿಗೆ ಸೇರಿರುವ ಬ್ರಾಹುಇ ಅಸ್ತಿತ್ವದಲ್ಲಿರುವುದು ಈ ವಾದಕ್ಕೆ ಕೆಲಮಟ್ಟಿನ ಬಲ ತಂದಿತ್ತಿದೆ. ಬ್ರಾಹೂಇ ಭಾಷೆ ಎಷ್ಟು ದಿನದಿಂದ ಇಲ್ಲಿ ಇದೆಯೆಂದು ಈವರೆಗೆ ವಿವಾದಾತೀತವಾಗಿ ನಿರ್ಧರಿಸಲಾಗಿಲ್ಲ. ಆರ್, ಮೂಲ (ಮೂಲೆ) , ಕಂಡಿ, ಕೋಟೆ, ಊರು ಮುಂತಾದ ಪದಗಳು ಗುಜರಾತ್ ಸೇರಿದಂತೆ ಸಿಂಧೂ ನದಿಯ ಆಸುಪಾಸಿನಲ್ಲಿ ಕಾಣಬರುತ್ತವೆ. ಈ ಹೆಸರುಗಳ ಪ್ರಾಚೀನತೆಯ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ಸೈಂಧವರು ಅವನತಿಯ ಕಾಲದಲ್ಲಿ ಚದುರಿ, ಗುಜರಾತ್, ಮಹಾರಾಷ್ಟ್ರದತ್ತ ಸಾಗಿರುವದಕ್ಕೆ ಪುರಾತತ್ತ್ವ ಸಾಕ್ಷ್ಯಗಳಿವೆ. ಮರಾಠಿ ಆರ್ಯ ಭಾಷೆಯೆಂದು ಹೇಳಲಾದರೂ, ಅದರ ತಳಹದಿಯಲ್ಲಿ ಪ್ರಧಾನವಾಗಿ ದ್ರಾವಿಡ ಲಕ್ಷಣಗಳು ಕಂಡು ಬರುತ್ತದೆ. ಸಿಂಧ್, ಪಂಜಾಬಿ, ಭಾಷೆಗಳ ತಳದಲ್ಲೂ ದ್ರಾವಿಡರ ಲಕ್ಷಣ, ಪ್ರಭಾವಗಳಿವೆ. ಮಧ್ಯಪ್ರದೇಷದ ಸ್ಥಳ ನಾಮಗಳು ದ್ರಾವಿಡ ಮೂಲದವಾಗಿವೆ. ಈ ಸಂಗತಿಗಳ ಹಿನ್ನೆಲೆಯಲ್ಲಿ ಸೈಂಧವ ಭಾಷೆ ದ್ರಾವಿಡವಾಗಿರುವ ಸಾಧ್ಯತೆಗೆ ಹೆಚ್ಚಿನ ಒತ್ತಾಸೆ ಸಿಗುತ್ತದೆ. (೨೭)
ದ್ರಾವಿಡ ಭಾಷೆಗಳಲ್ಲಿ ಮೇಲ್-ಅಕಮ್ ಎಂದರೆ ಎತ್ತರದ ನೆಲೆ ಎಂಬ ಅರ್ಥವಿದ್ದು ಬಲೂಚಿಸ್ಥಾನವನ್ನು ಸೂಚಿಸುತ್ತದೆ. ಸಂಸ್ಕೃತದ ‘ಮೇರು’ (ಪರ್ವತ) ದ್ರಾವಿಡರ ‘ಮೇಲು’ವಿನ ರೂಪಾಂತರವಾಗಿದೆ. ‘ಮೇಲ್-ಅಕಮ್’ ಅಕ್ಕಡಿಯನ್ ಭಾಷೆಯಲ್ಲಿ ಮೆಲುಹಂ>ಮೆಲುಹ ಎಂದಾಗಿದೆ. ನಗರ ನಾಗರಿಕತೆಯ ಆರಂಭ ಬಲೂಚಿಸ್ತಾನದ ಮೆಹರ್’ಘರ್’ನಲ್ಲಿ ಕಂಡುಬರುತ್ತದೆ. ಆದ್ದರಿಂದ ಸೈಂಧವರು ದ್ರಾವಿಡ ಭಾಷಿಕರಾಗಿದ್ದರು. ಅದರಂತೆಯೇ ದಕ್ಷಿಣ ಇರಾನಿನ ಏಲಂ ಪ್ರದೇಶದ ಎಲಮೈಟ್ ಹಾಗೂ ದ್ರಾವಿಡ ಭಾಷೆಗಳ ನಡುವೆ ಸಂಬಂಧವಿದೆಯೆಂದು ಭಾಷಾತಜ್ಞರು ಒಪ್ಪಿದ್ದಾರೆ. ಸೈಂಧವ ಹಾಗೂ ಏಲಂ ಸಮಕಾಲೀನ ಸಂಸ್ಕೃತಿ ಹಾಗೂ ಒಂದೇ ಬಗೆಯ ಲಕ್ಷಣಗಳನ್ನು ಹೊಂದಿರುವ ಭಾಷೆಗಳು. ಸೈಂಧವರು ಹಾಗೂ ದಕ್ಷಿಣ ಇರಾನ್ ನಡುವೆ ಬಿರುಸಿನ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಆದ್ದರಿಂದ ಸೈಂಧವ ಹಾಗೂ ಎಲಮೈಟ್ ವ್ಯಾಪಾರಿಗಳಿಗೆ ಈ ಎರಡೂ ಭಾಷೆಗಳು ಗೊತ್ತಿರಬೇಕು. ಈ ಎರಡೂ ಭಾಷೆಗಳು ಎಲಮೋ-ದ್ರಾವಿಡ ಭಾಷೆಗಳು.
[ಇಂಡೋ-ಯುರೋಪಿಯನ್ ಮತ್ತು ದ್ರಾವಿಡ ಭಾಷೆಗಳ ನಡುವೆ ಇವೆರಡೂ ವರ್ಗಗಳಿಗೆ ಸೇರದ ಮೂರನೆಯ ಭಾಷೆಯಿತ್ತೆಂದು ಅದು ನಶಿಸಿತೆಂದು ಕೆಲವರು ವಾದಿಸಿದ್ದಾರೆ. ಮಹಾ ನಾಗರಿಕತೆಗೆಗೆ ಕಾರಣವಾದ ಸುಮೇರಿಯನ್ ಭಾಷೆ ನಂತರ ಬಂದ ಅಕ್ಕಡಿಯನ್ ಭಾಷೆಗೆ ಸಿಲುಕಿ ಮರೆಯಾದಂತೆ ಇಂತಹ ಮೂರನೆಯ ಭಾಷೆ ಇದ್ದಿರಲೂ ಬಹುದು. ಇಂತಹ ನಡು ಭಾಷೆ ಸಾಧ್ಯತೆ ದ್ರಾವಿಡ ಭಾಷೆಗಳು ಇಂಡೋ-ಆರ್ಯನ್ ಸಂಸ್ಕೃತದ ಮೇಲೆ ಏಕೆ ನೇರ ಪ್ರಭಾವ ಬೀರಲಿಲ್ಲ ಎಂದು ವಿವರಿಸಬಹುದು. ಉಗಾರಿಕ್’ನಲ್ಲಿ ಶಿಶು (ಮಗು) , ಕೋಟ (ಮನೆ) ಮುಂತಾದ ದ್ರಾವಿಡ ಮೂಲದ ಪದಗಳಿವೆ. ದ್ರಾವಿಡದಿಂದ ಈ ಪದಗಳು ಇಂತಹ ಮೂರನೆಯ ಭಾಷೆಯನ್ನು ಸೇರಿ ಉಗಾರಿಕ್’ಗೆ ಸೇರ್ಪಡೆಯಾಗಿವೆ. ಆದ್ದರಿಂದ ಈ ಮೂರು ಭಾಷಾ ಕಟುಂಬಗಳ ಮೂಲ ಭಾರತ ಎಂಬ ವಾದವೂ ಅಸ್ತಿತ್ವದಲ್ಲಿದೆ.]
ದ್ರಾವಿಡ ಪ್ರಭಾವದಿಂದಾಗಿ ಋಗ್ವೈದಿಕ ಸಂಸ್ಕೃತದಲ್ಲಿ ದಂತ್ಯ ವ್ಯಂಜನಗಳು ಮೂರ್ಧನೀಕರಣಕ್ಕೆ ಒಳಗಾಗಿವೆ. ದಂಡ, ಕುಂಡ , ಉಲೂಖಾಲ( ಒರಳ್ ಕಲ್ -ಕನ್ನಡ , ಉಳುಕಲ್ -ತಮಿಳು ) , ಉರಿಸ್ (ಬೆರಳು) ,ಬಿಲ (ತೂತು) , ಕಟು (ತೀವ್ರ) , ಬಲ (ಬಲ್ಲ) , ಕಳಶ, ತಡಿತ್ (ಮಿಂಚು), ಫಲಾ (ಪಾಲು) , ಕೂಲ (ಇಳಿಜಾರು,ದಡ,), ಫಲಗು (ಪೊಳ್ಳು) , ಆಣಿ(ಮೊಳೆ), ಬಿಲ್ವ, ಕುಲಾಯ (ಗೂಡು) , ಕದಂಬ (ಸಾರು –ಗಂಜಿ) , ಊಖ (ಹೆಳವ) , ಕುರ್ಕುರ(ನಾಯಿ), ತನು (ದೇಹ) , ಅರ್ಕ (ಎಕ್ಕ), ಚಂದನ (ಗಂಧ), ಕವಚ (ತೊಡುಗೆ), ಜಟಾ (ಕೂದಲು,ಜಡೆ), ಮಾಲ (ಮಾಲೆ), ಎಡ (ಕುರಿ) , ಕಾಣ (ಕುರುಡ) , ಮಯೂರ (ಮಯಿಲ್-ತಮಿಳು,ಮಲೆಯಾಳಂ).ಬುದ್ಬುದ (ಬುಡ ಬುಡ –ಕನ್ನಡ, ತೆಲುಗು, ತುಳು) , ನೀರಾ, ತೋಯ, ಮೀನ, ಹೇರಂಭ (ಈ ನಾಲ್ಕು ಪದಗಳು ಪ್ರಾಕೃತದಲ್ಲಿಲ್ಲ) ಮುಂತಾದ ದ್ರಾವಿಡ ಮೂಲದ ಪದಗಳು ಋಗ್ವೇದದಲ್ಲಿ ಕಂಡುಬರುತ್ತವೆ. (೧೧೫)
ಸೈಂಧವ ನಗರಗಳ ಶೋಧನೆಗಳಲ್ಲಿ ಋಗ್ವೈದಿಕ ಸಂಸ್ಕೃತಿಗೆ ಹೊಂದಾಣಿಕೆಯಾಗದ ತಾಯಿ ದೇವತೆ, ಫಲವಂತಿಕೆಯ ತಾಯಿ, ಮಾತೃ ಪ್ರಧಾನ ಕುಟುಂಬದ ಸುಳಿವುಗಳು , ಯೌಗಿಕ ಮತ್ತು ಪಶುಪತಿಯ ಪರಿಕಲ್ಪನೆಗಳು ಕಂಡುಬಂದಿವೆ. ಇವೆಲ್ಲ ದ್ರಾವಿಡ ಸಂಸ್ಕೃತಿಯ ಕುರುಹುಗಳಾಗಿವೆ. ಆದ್ದರಿಂದ ಸೈಂಧವರು ದ್ರಾವಿಡ ಭಾಷಿಕರಾಗಿದ್ದರು.
ಸೈಂಧವ = ಆದಿಮಮುಂಡಾ
ಬ್ರಾಹುಇ ಮೊದಲಿನಿಂದಲೂ ಈಗಿರುವ ಬಲೂಚಿಸ್ತಾನದ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇದ್ದಿತೇ ಎನ್ನುವ ಬಗ್ಗೆ ಖಚಿತತೆಯಿಲ್ಲ. ಆರಂಭ ಕಾಲದಿಂದಲೂ ಬ್ರಾಹುಇ ಅದೇ ಜಾಗದಲ್ಲಿ ಇದ್ದಿದ್ದರೆ ಅದರಲ್ಲಿ ಹಳೆ ಪರ್ಷಿಯಾದ ಪದ ಸಂಪತ್ತು ಹಾಗೂ ಇತರ ಪ್ರಭಾವಗಳು , ಅವೆಸ್ತಾ ಅಥವಾ ಪಾಶ್ತೊಗೆ ಸೇರಿದ ಪ್ರಾಚೀನ ಪದ ಪ್ರಯೋಗಗಳು ಕಾಣಿಸಬೇಕಿತ್ತು. ಅಥವಾ ಅವುಗಳಲ್ಲಿ ಬ್ರಾಹುಇ ನೀಡಿದ ದ್ರಾವಿಡ ಕೊಡುಗೆಗಳಾಗಲಿ ಕಾಣಿಸಬೇಕಿತ್ತು. ಅಂತಹ ಯಾವುದೇ ಸಾಕ್ಷ್ಯಗಳು ಕಾಣಿಸವು. ಆದ್ದರಿಂದ ಬ್ರಾಹುಇ ಅಥವಾ ಯಾವುದೇ ದ್ರಾವಿಡ ಸೈಂಧವ ಕಾಲದ ಹಾಗೂ ಸೈಂಧವರ ಭಾಷೆಯಾಗಿರಲು ಸಾಧ್ಯವಿಲ್ಲ.
ಋಗ್ವೇದದಲ್ಲಿರುವ ಸಂಸ್ಕೃತೇತರ ಲಕ್ಷಣಗಳು ದ್ರಾವಿಡಕ್ಕಿಂತಲೂ ಆಸ್ಟ್ರೋ-ಏಷಿಯಾಟಿಕ್ ಭಾಷೆಗಳಿಗೆ ಹೆಚ್ಚು ಹತ್ತಿರವಿರುವಂತೆ ಕಾಣುತ್ತವೆ. ಆದ್ದರಿಂದ ಸೈಂಧವರ ಭಾಷೆ ಒಂದು ಬಗೆಯ ಆದಿಮ-ಮುಂಡಾ ಆಗಿರುವ ಸಾಧ್ಯತೆಗಳಿವೆ. (೧) ಋಗ್ವೈದಿಕ ಸಂಸ್ಕೃತದ ಮೇಲೆ ದ್ರಾವಿಡ ಭಾಷೆಗಳ ಪ್ರಭಾವವಿಲ್ಲ. ಆದರೆ ಈ ಪ್ರಭಾವ ನಂತರದ ವೈದಿಕ ಪಠ್ಯಗಳಲ್ಲಿ ಕಂಡು ಬರುತ್ತದೆ. (೨) ಋಗ್ವೇದೋತ್ತರ ವೇದಗಳಲ್ಲಿ ಪೂರ್ವ ಭಾರತದ ಆದಿಮ-ಮುಂಡಾ ಹೆಸರುಗಳಿವೆ. (೩) ನಂತರ ಋಗ್ವೈದಿಕ ಮತ್ತು ಋಗ್ವೇದೋತ್ತರ ವೈದಿಕ ಸಂಸ್ಕೃತದ ಮೇಲೆ ವಾಯುವ್ಯದಲ್ಲಿ ಆದಿಮ ಬುರುಷಷ್ಕಿ , ಹಿಮಾಲಯ ,ಕೋಸಲ ಪ್ರದೇಶಗಳಲ್ಲಿ ಟಿಬೆಟೋ-ಬರ್ಮನ್ , ಸಿಂಧ್-ಗುಜರಾತ್, ಮಧ್ಯಭಾರತದಲ್ಲಿ ದ್ರಾವಿಡ ಭಾಷೆಗಳ ಪ್ರಭಾವಗಳಿವೆ.
ಸೈಂಧವರು ದ್ರಾವಿಡ ಭಾಷಿಕರಲ್ಲ . ಆದ್ದರಿಂದ ಋಗ್ವೇದದಲ್ಲಿ ‘ದ್ರಾವಿಡ ಸೈಂಧವ’ರ ಯಾವ ಪ್ರಭಾವಗಳು ಎಲ್ಲಿಯೂ ಕಾಣುವುದಿಲ್ಲ. ದಂಡ ,ಕುಂಡ ಪದಗಳನ್ನು ಸ್ಪಷ್ಟವಾಗಿ ದ್ರಾವಿಡ ವರ್ಗಕ್ಕೆ ಸೇರಿಸಲಾಗದು. ಉಲೂಖಾಲ( ಒರಳ್ ಕಲ್ -ಕನ್ನಡ , ಉಳೈಕಲ್ -ತಮಿಳು ) ದ್ರಾವಿಡ ಮೂಲದ್ದೆಂದು ಒಪ್ಪಿದರೂ ಅದರ ಮೂಲವನ್ನು ಸರಿಯಾಗಿ ಹೇಳಲಾಗದು. ಎರಡನೇ ಹಂತಕ್ಕೆ ಸೇರಿದ ಋಗ್ವೇದದ ೩ ಮತ್ತು ೭ ಕಾಂಡಗಳಲ್ಲಿ ಹಾಗೂ ೩ನೇ ಹಂತಕ್ಕೆ ಸೇರಿದ ೧ ಮತ್ತು ೮ನೇ ಕಾಂಡಗಳಲ್ಲಿ ಮೊದಲ ಬಾರಿಗೆ ದ್ರಾವಿಡರ ಪ್ರಭಾವಗಳು ಕಾಣಿಸಿಕೊಳ್ಳುತ್ತವೆ. ದ್ರಾವಿಡವೆಂದು ಭಾವಿಸಲಾಗಿರುವ ಪದಗಳು ಋಗ್ವೇದೋತ್ತರ ಪಠ್ಯಗಳಲ್ಲಿ ಇವೆಯೇ ಹೊರತು ಋಗ್ವೇದದಲ್ಲಿಲ್ಲ. ತನು ದ್ರಾವಿಡರ ತಾನ್ (ತಾನು) ಪದದಿಂದ ಬಂದಿದೆ ಎನ್ನಲಾಗಿದೆ ಆದರೆ ಇದು ಅವೆಸ್ತಾದಲ್ಲಿಯೂ ಹಾಗೆಯೇ ಬಂದಿರುವುದರಿಂದ ಅದು ದ್ರಾವಿಡ ಪದವಾಗಿರುವ ಸಾಧ್ಯತೆ ಕ್ಷೀಣವಾಗಿದೆ. ಮಯೂರ (ನವಿಲು) , ಕುಲಾಯ (=ಗೂಡು, ಋ.ವೇ ೬/೧೫/೧೬) ಕದಂಬ (ಸಾರು –ಗಂಜಿ) , ಊಖ(ಹೆಳವ) ಪದಗಳು ದ್ರಾವಿಡವೆಂದು ಭಾವಿಸಲಾಗಿದ್ದರೂ ಮುಂಡಾ ಭಾಷೆಯಲ್ಲಿಯೂ ಅವುಗಳನ್ನು ಗುರುತಿಸಲು ಸಾಧ್ಯ. ನಂತರ ಕಾಲದ ಹೆಚ್ಚುವರಿ ಮಂತ್ರಗಳಲ್ಲಿ ಮಾತ್ರ ಫಲ ಪಿಂಡ, ಕಂಗಾರು,ಮಯೂರ,ಕಾಣ ಮುಂತಾದ ದ್ರಾವಿಡ ಪದಗಳಿವೆ. (೧೦೨)
ಋಗ್ವೇದದಲ್ಲಿ ಬರುವ ಪ್ರಮಗಂಡ ಹೆಸರಿನಲ್ಲಿ ಮುಂಡಾ ಭಾಷೆಯ ಛಾಯೆಗಳಿವೆ. ಗಂಡಕಿ ನದಿಯನ್ನು ವೈದಿಕ ಸಾಹಿತ್ಯದಲ್ಲಿ ದ್ರಾವಿಡ ಪದ ‘ಸದಾನೀರಾ’ ಹೆಸರಿನಿಂದ ಗುರುತಿಸಲಾಗಿದೆ. ಆದರೆ ಈ ಪ್ರದೇಶದಲ್ಲಿರುವ ಉತ್ತರ ದ್ರಾವಿಡ ಭಾಷೆಗಳಾದ ಮಾಲ್ತೊ, ಕುರುಖ್’ಗಳಲ್ಲಿ ‘ನೀರು’ ಪದವಿಲ್ಲ. ನೀರು ಪದ ಬಲೂಚಿಸ್ತಾನದ ದ್ರಾವಿಡ ಭಾಷೆ ಬ್ರಾಹುಇಯಲ್ಲಿ ದೀರ್ ರೂಪ ತಳೆದಿದೆ. ಸದಾನೀರಾ ಎನ್ನುವ ಒಂದೇ ಹೆಸರಿನ ಆಧಾರದ ಮೇಲೆ ಗಂಗಾ- ಯಮುನಾ ಬಯಲಿನಲ್ಲಿ ದ್ರಾವಿಡರು ಇದ್ದರೆಂದು ಹೇಳಲಾಗದು. ಅಲ್ಲಿನ ಸ್ಥಳ ನಾಮಗಳಲ್ಲಿ , ನದಿಗಳ ಹೆಸರುಗಳಲ್ಲಿ ದ್ರಾವಿಡ ಪದಗಳ ಬದಲಿಗೆ ಟಿಬೆಟೋ- ಬರ್ಮನ್ ಪದಗಳು ಸಿಗುತ್ತವೆ. ಗಂಡ್,ಗಡ್,ಗಗ್,ಡ್ ಮುಂಡಾ ಭಾಷೆಯ ಪದಗಳಾಗಿದ್ದು ಅವುಗಳಿಂದ ಗಂಡ-ಕಿ ಗಂಗ್-ಆ (ಗಂಗಾ) ಹೆಸರುಗಳು ಬಂದಿರಬಹುದು. ಪಶ್ಚಿಮ ನೇಪಾಳದಲ್ಲಿ ನದಿಗಳ ಹೆಸರುಗಳು ಗಡ್’ನಿಂದ ಕೊನೆಗೊಳ್ಳುತ್ತವೆ.
ಮುಂಡಾ ಭಾಷೆಗೆ ಸೇರಿರಬಹುದೆಂದು ಭಾವಿಸಲಾದ ಎಲ್ಲ ವ್ಯಕ್ತಿಗಳ ಹೆಸರುಗಳು ಋಗ್ವೇದದಲ್ಲಿ ಸೈಂಧವ ಅವನತಿಯ ನಂತರದ ಪ್ರದೇಶಗಳಾದ ಪೂರ್ವಪಂಜಾಬ್’ಗೆ ಸೇರಿರುವುದು ಗಮನಾರ್ಹವಾಗಿದೆ. ಋಗ್ವೇದದಲ್ಲಿ (ಋ.ವೇ ೧೦/೧೫೫/೧) ಬುದ್ಬುದ ಎಂದು ಬಂದಿದೆ. ನೊರೆ, ಗುಳ್ಳೆಗಳನ್ನು ಸಂತಾಲಿಯಲ್ಲಿ ಬುಡ್’ಚ್ ಬುಡ್’ಚ್ ಎನ್ನುತ್ತಾರೆ. ಸಂತಾಲಿ ಆಸ್ಟ್ರೋ-ಏಷಿಯಾಟಿಕ್ ಮುಂಡಾ ಭಾಷಿಕ ವರ್ಗಕ್ಕೆ ಸೇರಿದೆ. [ಕನ್ನಡದ ಬುಳು ಬುಳು (ಸರಿದಾಡು) ಏರಿಳು, ಬೊಬ್ಬುಳಿ ಪದಗಳಿದ್ದು ಅವು ಸಂತಾಲಿ/ಮುಂಡಾ ಭಾಷೆಗೆ ಸೇರಿದವು ಎಂದು ತೀರ್ಮಾನ ತಳೆಯಲು ಅಡ್ಡಿಯಾಗಿವೆ. ]
ಋಗ್ವೇದದಲ್ಲಿರುವ ಕೃಷಿ ಸಂಬಂಧಿತ ಉಪಕರಣ , ಬೆಳೆಗಳ ಹೆಸರುಗಳು ಇಂಡೋ-ಆರ್ಯನ್ ಮೂಲದ ಪದಗಳು ಅಲ್ಲವೆಂದು ಒಪ್ಪಬಹುದಾದರೂ ಅವು ದ್ರಾವಿಡ ಮೂಲದ್ದಾಗಿರುವ ಸಾಧ್ಯತೆ ಕಡಿಮೆಯಿದ್ದು ಮುಂಡಾ ಭಾಷೆಯಿಂದ ಬಂದಿರುವ ಸಾಧ್ಯತೆಗಳೇ ಹೆಚ್ಚು . ಈ ಹಿನ್ನೆಲೆಯಲ್ಲಿ ಋಗ್ವೇದದಲ್ಲಿ ಪ್ರಬಲವಾದ ದ್ರಾವಿಡ ತಳಹದಿ ಇದೆ ಎನ್ನುವುದು ತಪ್ಪು. ಅದರಲ್ಲಿ ಎಲ್ಲೋ ಒಂದೆರಡೂ ದ್ರಾವಿಡ ಪದಗಳು ಬಂದಿವೆ ಅಷ್ಟೇ. ಅವು ಕೂಡ ಋಗ್ವೇದದ ನಂತರದ ಪಠ್ಯಗಳಲ್ಲಿ ಹೆಚ್ಚು ಕಾಣಬರುತ್ತವೆ. ಆದ್ದರಿಂದ ಋಗ್ವೈದಿಕರು ಆರಂಭದಲ್ಲಿ ದ್ರಾವಿಡರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಋಗ್ವೈದಿಕರು ನಂತರ ಕಾಲದಲ್ಲಿ ಗಂಗಾ-ಯಮುನಾ ಬಯಲುಗಳಲ್ಲಿ ನೆಲೆ ನಿಂತ ನಂತರ ಅವರ ಸಂಪರ್ಕಕ್ಕೆ ಬಂದರು ಆದ್ದರಿಂದ ಸೈಂಧವರ ನುಡಿ ದ್ರಾವಿಡವಾಗಿರಲಿಲ್ಲ. ದ್ರಾವಿಡ ಹಿನ್ನೆಲೆಯಿಂದ ಸಿಂಧೂಲಿಪಿ ಬಿಡಿಸ ಹೊರಡುವುದು ವ್ಯರ್ಥ ಪ್ರಯತ್ನ. ಸೈಂಧವರಲ್ಲಿ ದ್ರಾವಿಡ ಭಾಷಿಕರು ಇದ್ದದ್ದೇ ಆಗಿದ್ದರೆ ೬೦೦-೭೦೦ ವರ್ಷಗಳ ಕಾಲ ಸಮೃದ್ಧಿಯಲ್ಲಿ ಮೆರೆದ ಆ ಸಂಸ್ಕೃತಿಯಲ್ಲಿ ಗಣನೀಯ ಸಂಖ್ಯೆಯಲ್ಲಿ ದ್ರಾವಿಡ ಪದಗಳು ಸೇರಿ ಹೋಗಿದ್ದು , ಅವು ಋಗ್ವೇದದಲ್ಲಿಯೂ ಅದೇ ಪ್ರಮಾಣದಲ್ಲಿ ಕಾಣಸಿಗಬೇಕಾಗಿದ್ದಿತು. ಆದರೆ ವಾಸ್ತವದಲ್ಲಿ ಅಂತಹ ಸಾಧ್ಯತೆಗಳು ಕಂಡು ಬರುತ್ತಿಲ್ಲ ಆದರೆ ಋಗ್ವೇದೋತ್ತರ ಪಠ್ಯಗಳಲ್ಲಿ ಕಂಡು ಬರುತ್ತವೆ. ಆದ್ದರಿಂದ ಸೈಂಧವ ನಾಗರಿಕತೆಯಲ್ಲಿ ದ್ರಾವಿಡರು ಇರಲಿಲ್ಲ.
ಋಗ್ವೇದದಲ್ಲಿ ಆರಂಭಿಕ ಮಂಡಲಗಳಲ್ಲಿ ದ್ರಾವಿಡಕ್ಕಿಂತಲೂ ಮುಂಡಾ ಮೂಲದ ಪದಗಳು ಅಧಿಕ ಇವೆ. ಒಟ್ಟಾರೆಯಾಗಿ ಹರಪ್ಪಾ ಕೆಳಗಿನ ಪ್ರದೇಶಗಳಲ್ಲಿ ದ್ರಾವಿಡ ಭಾಷೆ ಪ್ರಬಲರಾಗಿದ್ದಾರೆ , ಪಂಜಾಬ್’ನಲ್ಲಿ ಮುಂಡಾ ಪ್ರಭಾವವಿದ್ದಿತೆಂದು ಭಾವಿಸಬಹುದು. ಪುರಾತತ್ತ್ವದ ದೃಷ್ಟಿಯಿಂದ ಮುಂಡಾ ಜನರ ಅಸ್ತಿತ್ವವನ್ನು ತಾಮ್ರದ ಸರಕುಗಳನ್ನು ಹೂಳಿಡುತ್ತಿದ್ದ ಜನರೊಂದಿಗೆ ಗುರುತಿಸಬಹುದು. ತಾಮ್ರದ ಸರಕುಗಳ ಹೂಳಿಕೆ ಪ್ರ.ಶ.ಪೂ ೨೦೦೦ ರಿಂದ ೧೧೦೦ ರ ಅವಧಿಯಲ್ಲಿ ಚಾಲ್ತಿಯಲ್ಲಿ ಇದ್ದಿತೆಂದು ನಿರ್ಧರಿಸಲಾಗಿದೆ. ಈ ಜನರನ್ನು ಕಾವಿ (ಓಖರೆ) ಬಣ್ಣದ ಮಡಕೆಗಳನ್ನು ಬಳಸುತ್ತಿದ್ದ ಜನರೊಂದಿಗೆ ಸಮೀಕರಿಸಲಾಗಿದೆ. ತಾಮ್ರದ ಹೂಳಿಕೆ ಸರಕುಗಳು ಓರಿಸ್ಸಾ, ಪಶ್ಚಿಮಬಂಗಾಳದಿಂದ ಪ್ರಾರಂಭಿಸಿ ಗುಜರಾತ್’ವರೆಗೆ ಆಂಧ್ರಪ್ರದೇಶದಿಂದ ಉತ್ತರ ಪ್ರದೇಶದ ದಕ್ಷಿಣ ಭಾಗದವರೆಗೆ ವಿಸ್ತಾರ ಪ್ರದೇಶದಲ್ಲಿ ಕಂಡುಬಂದಿವೆ. ತಾಮ್ರದ ನಿಕ್ಷೇಪ ಇರುವ ಜಾರ್ಖಂಡ್ ಬಳಿ ದೊಡ್ಡ ಪ್ರಮಾಣದ ಸರಕುಗಳು ಸಿಕ್ಕಿವೆ. ಮಧ್ಯಪ್ರದೇಶದ ಗುಣಗೇರಿಯಾದಲ್ಲಿ ಸಿಕ್ಕ ಹೂಳಿಕೆಯಲ್ಲಿ ೪೨೪ ತಾಮ್ರದ ಉಪಕರಣಗಳು, ಶಸ್ತ್ರಗಳು, ೧೦೨ ತೆಳು ಬೆಳ್ಳಿ ಹಾಳೆಗಳು ಸಿಕ್ಕಿವೆ. ತಾಮ್ರದ ಹೂಳಿಕೆಗಳು ಗಂಗಾ-ಯಮುನಾ ನದಿ ಬಯಲಿನಲ್ಲಿ ಅದರಂತೆ ಸಿಂಧೂ ಬಯಲುಗಳ ನೆಲೆಗಳಲ್ಲಿಯೂ ಸಿಕ್ಕಿವೆ.
ಇಂದಿಗೂ ಜಾರ್ಖಂಡ್ , ಒರಿಸ್ಸಾ, ಪಶ್ಚಿಮ ಬಂಗಾಳದ ಸರಹದ್ದಿನಲ್ಲಿ ಮುಂಡಾರಿ ಭಾಷೆ ಅಸ್ತಿತ್ವದಲ್ಲಿದ್ದು ಪ್ರಭಾವಶಾಲಿಯಾಗಿದೆ. ಬಂಗಾಳದ ಜನ ಮಗ, ಪುಂಡ್ರ ಇತ್ಯಾದಿ ಪಂಗಡದವರಾಗಿದ್ದು ಮೂಲದಲ್ಲಿ ಆಸ್ಟ್ರೋ-ಏಷಿಯಾಟಿಕ್ ಭಾಷೆಯಾಡುತ್ತಿದ್ದ ಆಸ್ಟೋಲಾಯಿಡ್’ಗಳೆಂದು ತಿಳಿಯಲಾಗಿದೆ. ಪೂರ್ವದಲ್ಲಿ ದಟ್ಟ ಅರಣ್ಯಗಳು, ಗಂಗಾ ಬಯಲಿನ ಮಧ್ಯದ ಪ್ರದೇಶಗಳನ್ನು ದಾಟುವುದು ಕಠಿಣವಾದುದರಿಂದ ಅವರು ಗುಡ್ಡ ಹಾಗೂ ಬಯಲಿನ ಮಾರ್ಗಗಳನ್ನು ಆಯ್ದುಕೊಂಡಿರುವ ಸಾಧ್ಯತೆಗಳಿವೆ. ಅವರು ಬಿಹಾರ್ , ಉತ್ತರಪ್ರದೇಶ ,ಮಧ್ಯಪ್ರದೇಶದ ನದಿ ಬಯಲುಗಳಲ್ಲಿ ಸಂಚರಿಸಿ ಸಿಂಧೂ ನೆಲೆ ತಲುಪಿದರು. ಆದ್ದರಿಂದ ಸೈಂಧವ ನಾಗರಿಕತೆಯಲ್ಲಿ ಮುಂಡಾ ಸಂಬಂಧಿ ಭಾಷೆ ಇದ್ದಿತೆಂದು ಊಹಿಸಬಹುದು.
ಸೈಂಧವ = ಸಂಸ್ಕೃತ
ಋಗ್ವೈದಿಕ ಸಂಸ್ಕೃತದ ಮೇಲೆ ದ್ರಾವಿಡ , ಮುಂಡಾ ಮಂತಾದ ಭಾಷೆಗಳ ಪ್ರಭಾವ ಇರುವುದನ್ನು ಒಪ್ಪುತ್ತಲೇ ಸೈಂಧವರು ಮತ್ತು ಋಗ್ವೈದಿಕರು ಬೇರೆಯಲ್ಲ , ಅವರಿಬ್ಬರ ಭಾಷೆಯೂ ಒಂದೇ-ಅದು ಸಂಸ್ಕೃತ ಎಂಬ ವಾದವನ್ನು ಇತ್ತೀಚೆಗೆ ಗಟ್ಟಿಯಾಗಿ ಮಂಡಿಸುವ ಗುಂಪೊಂದು ಸಕ್ರಿಯವಾಗಿದೆ. ಭಾರತದಿಂದ ಹೊರಕ್ಕೆ ವಾದವನ್ನು ಒಪ್ಪುವರೆಲ್ಲರೂ ಈ ತೀರ್ಮಾನಕ್ಕೆ ಬರಲೇಬೇಕಾದ ಅನಿವಾರ್ಯತೆಯಿದೆ. ಸೈಂಧವ ನಾಗರಿಕತೆಯ ಪ್ರದೇಶ ಮತ್ತು ಋಗ್ವೈದಿಕ ಸಂಸ್ಕೃತಿಯ ಪ್ರದೇಶಗಳು ಒಂದೇ ಆಗಿರುವುದು ಮತ್ತು ಬೇರೆ ಯಾವ ಭಾಷಿಕರೂ ತಮ್ಮ ಪ್ರಾಚೀನ ಭಾಷೆಯನ್ನು ಕಾಯ್ದುಕೊಂಡು ಬರದಿದ್ದು ವೈದಿಕರು ಮೌಖಿಕ ಸಂಪ್ರದಾಯದ ಮೂಲಕ ವೈದಿಕ ಸಂಸ್ಕೃತವನ್ನು ಕಾಯ್ದುಕೊಂಡು ಬಂದಿರುವುದು ಇಂತಹ ವಾದಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಲು ಕಾರಣವಾಗಿರುವಂತೆ ಹೊರನೋಟಕ್ಕೆ ಕಾಣಿಸುತ್ತದೆ. ಆದರೆ ಸೈಂಧವರ ಸರಕುಗಳ ಮತ್ತು ಅದರಲ್ಲಿ ಪ್ರತಿಬಿಂಬಿತವಾಗಿರುವ ಸಂಸ್ಕೃತಿ ಇಂತಹ ಸರಳ ತೀರ್ಮಾನಕ್ಕೆ ಬರಲು ಅಡ್ಡಿಯಾಗಿವೆ.
ಯಾವುದುಸರಿ ?
ಋಗ್ವೇದ ಹಾಗೂ ವೈದಿಕ ಪಠ್ಯಗಳಲ್ಲಿರುವ ಇಂಡೋ-ಆರ್ಯನ್ ಭಾಷಿಕ ಹೊರತಾದ ಲಕ್ಷಣಗಳು ಬೇರೆ ಭಾಷೆಗಳ ತಳಹದಿಯಿಂದ ಮೂಡಿ ಬಂದಿವೆ ಎನ್ನುವುದನ್ನು ನಿಜವಾದರೂ ಋಗ್ವೈದಿಕ ಭಾಷೆಯ ತಳಹದಿಯಲ್ಲಿ ಆದಿಮ-ಮುಂಡಾ ಭಾಷೆಯ ಪ್ರಭಾವವಿದೆ ಅದು ಸೈಂಧವರ ಭಾಷೆಯಾಗಿದ್ದಿತು ಎನ್ನುವುದು ಸರಿಯಲ್ಲ. ಪುರಾತತ್ತ್ವ ಶೋಧ ಹಾಗೂ ಮಾನವಶಾಸ್ತ್ರಗಳ ಸಾಕ್ಷ್ಯಗಳ ಆಧಾರದ ಮೇಲೆ ಆಸ್ಟ್ರೋ-ಏಷಿಯಾಟಿಕ್ ಭಾಷೆಗಳ ಮೂಲ ಆಗ್ನೇಯ ಏಷ್ಯವೆಂದು ರಾಬರ್ಟ್ ವಾಸ್’ಹೀನ್ ಗೆಲ್ಟ್ರನ್ ನಿರ್ಧರಿಸಿದ್ದಾರೆ. ಮುಂಡಾ ಭಾಷೆ ಒರಿಸ್ಸಾ, ಬಿಹಾರ, ಮಧ್ಯಪ್ರದೇಶ, ಪೂರ್ವದ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದ್ದಿತು. ಅದು ಎಂದೂ ಸಿಂಧೂಬಯಲಿಗೆ ಸಾಗಿರಲಿಲ್ಲ. ಮುಂಡಾ ಪದಗಳಲ್ಲಿ ಮಧ್ಯಪ್ರತ್ಯಯಗಳು ಬರುತ್ತವೆ. ಅಂತಹ ಮಧ್ಯಪ್ರತ್ಯಯಗಳು ಋಗ್ವೇದದಲ್ಲಿ ಸಂಸ್ಕೃತೇತರವೆಂದು ಪರಗಣಿಸಲಾದ ಪದಗಳಲ್ಲಿ ಕಾಣಸಿಗವು. ಮಧ್ಯಪ್ರತ್ಯಯಗಳ ಲಕ್ಷಣಗಳನ್ನು ಮುಂಡಾ ಭಾಷೆ ನಂತರದ ಕಾಲದಲ್ಲಿ ಪಡೆಯಿತು. ಸೈಂಧವ ಕಾಲದಲ್ಲಿ ಆ ಲಕ್ಷಣಗಳನ್ನು ಅದು ಹೊಂದಿರುವುದಕ್ಕೆ ಪುರಾವೆಗಳಿಲ್ಲ.
ಯಾವುದೇ ಒಂದು ಭಾಷೆ ತನ್ನ ಭಾಷಿಕ ಕುಟುಂಬದಿಂದ ದೂರವಾಗಿ ಪ್ರತ್ಯೇಕವಾಗಿ ಉಗಮಗೊಳ್ಳಲು ಸಾಧ್ಯವಿಲ್ಲ. ಆಸ್ಟ್ರೋ- ಏಷಿಯಾಟಿಕ್ ಭಾಷೆಗಳ ತವರನ್ನು ಚೀನಾದ ಕರಾವಳಿಯಿಂದ ಪ್ರಾರಂಭಿಸಿ, ಸಿಂಧೂ ಬಯಲಿನವರೆಗೆ ಗುರುತಿಸಲಾಗಿದೆ. ಆದರೆ ಆಸ್ಟ್ರೋ-ಏಷಿಯಾಟಿಕ್ ಜನರ ನೆಲೆಯನ್ನು ಅದೇ ಭಾಷಿಕ ಗುಂಪಿಗೆ ಸೇರಿದ ಜಪಾನಿಯನ್ನು ತೊರೆದು ನೋಡುವಂತಿಲ್ಲ. ಅಸ್ಟ್ರೋ-ಏಷಿಯಾಟಿಕ್ ಭಾಷೆಯ ಲಕ್ಷಣಗಳನ್ನು ಈವರೆಗೆ ಸರಿಯಾಗಿ ನಿರ್ಧರಿಸಲಾಗಿಲ್ಲ. ಅದರ ವ್ಯಾಕರಣಗಳು ಸಮಗ್ರ ಅಧ್ಯಯನಗಳಿಗೆ ಒಳಗಾಗಿಲ್ಲ. ಆದ್ದರಿಂದ ಆಸ್ಟ್ರೋ-ಏಷಿಯಾಟಿಕ್ ಲಕ್ಷಣಗಳೆಂದು ಗುರುತಿಸಿದ ಅಂಶಗಳಲ್ಲಿ ಎಷ್ಟು ನಿಜವಾಗಿಯೂ ಆ ಭಾಷಿಕ ಗುಂಪಿಗೆ ಸೇರಿವೆಯೆಂದು ಖಚಿತವಾಗಿಲ್ಲ. ಆದ್ದರಿಂದ ಊಹಿತ/ ಅರೆ ಸ್ಥಾಪಿತ ಅಂಶಗಳ ಮೇಲೆ ಸೈಂಧವರ ಭಾಷೆ ಆದಿಮ ಮುಂಡಾ ಎನ್ನುವುದು ಬೀಸು ಹೇಳಿಕೆಯಾಗುತ್ತದೆ ಅಷ್ಟೇ.
ಋಗ್ವೇದದ ಆರಂಭಿಕ ಮಂಡಲಗಳ ಮೇಲೆ ದ್ರಾವಿಡ ಪ್ರಭಾವವಿಲ್ಲ. ಮುಂಡಾ ಭಾಷೆಯ ಪ್ರಭಾವ ಮಾತ್ರವಿದೆ. ನಂತರದ ಮಂಡಲ ಹಾಗೂ ವೈದಿಕ ಪಠ್ಯಗಳಲ್ಲಿ ದ್ರಾವಿಡ ಅಂಶಗಳಿವೆ. ಆದ್ದರಿಂದ ಸೈಂಧವ ಸಂಸ್ಕೃತಿ ದ್ರಾವಿಡವಲ್ಲ ಎನ್ನುವುದು ದುರ್ಬಲ ಆಧಾರಗಳ ಮೇಲಿದೆ. ಋಗ್ವೇದದ ಯಾವ ಮಂಡಲ ಆರಂಭಿಕ , ಯಾವ ಮಂಡಲ ನಂತರದ್ದು ಎನ್ನುವ ನಿರ್ಣಯದ ಮೇಲೆ ಇದು ಅವಲಂಬಿತವಾಗಿದೆ. ಋಗ್ವೇದವನ್ನು ಆರಂಭಿಕ ಮಧ್ಯ ಹಾಗೂ ಅಂತಿಮ ಎಂಬ ಮೂರು ಕಾಲ ಘಟ್ಟಗಳಲ್ಲಿ ಗುರುತಿಸಲಾಗಿದೆ. ಕಳೆದ ಶತಮಾನದಲ್ಲಿ ವಿದ್ವಾಂಸರು ಮಂಡಲ ೨ ರಿಂದ ೭ ಹಾಗೂ ೯ ರ ಆರಂಭಿಕ , ೮ ಮತ್ತು ೧ ಮಧ್ಯಮ, ಮಂಡಲ ೧೦ ಅಂತಿಮ ಕಾಲಘಟ್ಟಕ್ಕೆ ಸೇರಿದ್ದೆಂದು ನಿರ್ಧರಿಸಿದ್ದಾರೆ. ಇದರ ಬದಲು ಮಂಡಲ ೨,.೪.೬. ಆರಂಭಿಕ ಮಂಡಲಗಳು ೩ ಮತ್ತು ೭ಮಧ್ಯಮ, ೧ನೇ ಮಂಡಲದ ಮೊದಲ ಭಾಗ, ೮ನೇ ಮಂಡಲದ ಎರಡನೇ ಭಾಗ .೮ನೇ ಮಂಡಲದ ೪೯ ರಿಂದ ೫೯ ಸಾಲುಗಳು ಅಂತಿಮ ಭಾಗಗಳಲ್ಲಿದೆ ಎಂದು ಒಪ್ಪಿದರೆ ಆರಂಭಿಕ ಹಂತದಲ್ಲಿ ದ್ರಾವಿಡರ ಪ್ರಭಾವವಿಲ್ಲ ಎನ್ನುವ ಫಲಿತಾಂಶ ಬರುತ್ತದೆ. ಆದ್ದರಿಂದ ಸೈಂಧವರು ದ್ರಾವಿಡರಲ್ಲ ಎನ್ನುವುದು ಅಂತಿಮ ತೀರ್ಮಾನವಾಗಲಾರದು.
ಋಗ್ವೇದ ಸಂಪೂರ್ಣವಾಗಿ ಸಿಂಧೂ ಬಯಲಿನ ಪಂಜಾಬ್ ಪ್ರದೇಶದಲ್ಲಿ ರಚನೆಯಾಯಿತು ಎನ್ನುವ ಊಹೆಯ ಮೇಲೆ ಅದರಲ್ಲಿ ದ್ರಾವಿಡ , ಮುಂಡಾ ಭಾಷೆಗಳ ಪ್ರಭಾವವನ್ನು ಗುರುತಿಸುವ ಯತ್ನ ಸಾಗಿದೆ, ಋಗ್ವೇದದ ಅತ್ಯಂತ ಹಳೆಯ ಭಾಗ ಬ್ಯಾಕ್ಟ್ರಿಯಾ-ಮಾರ್ಜಿಯಾನ ಪುರಾತತ್ತ್ವ ನೆಲೆಯಲ್ಲಿ ರಚನೆಯಾಗಿರುವ ಸಾಧ್ಯತೆಗಳಿವೆ. ಇಂಡೋ-ಯುರೋಪಿಯನ್ನರಲ್ಲಿ ಸೋಮ ಸಂಪ್ರದಾಯವಿಲ್ಲ. ಋಗ್ವೇದ ಮತ್ತು ಅವೆಸ್ತಾದಲ್ಲಿರುವ ಸೋಮ ಸಂಪ್ರದಾಯವನ್ನು ಬ್ಯಾಕ್ಟ್ರಿಯಾ-ಮಾರ್ಜಿಯಾನ ಪ್ರದೇಶದ ಮೂಲಕ ಸಾಗುವಾಗ ಅಲ್ಲಿನ ಮೂಲ ನಿವಾಸಿಗಳಿಂದ ಆರ್ಯರು ಪಡೆದರು. ಋಗ್ವೇದದ ಅತ್ಯಂತ ಹಳೆಯ ಭಾಗ ಸಿಂಧೂ ಪ್ರದೇಶದಲ್ಲಿಯೇ ರಚಿತವಾಯಿತೆಂದು ಖಚಿತವಾಗಿ ತೋರಿಸುವವರೆಗೆ ಋಗ್ವೈದಿಕರು ನಂತರ ಕಾಲದಲ್ಲಿ ದ್ರಾವಿಡರೊಂದಿಗೆ ಸಂಪರ್ಕ ಹೊಂದಿದರೆಂಬ ಹೇಳಿಕೆ ಹಾಗೂ ಸೈಂಧವರ ಭಾಷೆ ಮುಂಡಾ ಆಗಿರಬಹುದೆಂದು ವಾದಗಳಿಗೆ ತೀವ್ರ ಅಡಚಣೆಗಳುಂತಾಗುತ್ತದೆ.
ಸೈಂಧವರ ಭಾಷೆ ದ್ರಾವಿಡ ಅಥವಾ ಮುಂಡಾ ಎನ್ನಲು ಕೆಲವು ಮುಖ್ಯ ಅಡಚಣೆಗಳಿವೆ. ಅವೆಸ್ತಾ ಹಾಗೂ ಋಗ್ವೇದದ ಭಾಷೆಗಳಲ್ಲಿ ಇತರ ಇಂಡೋ ಯುರೋಪಿಯನ್ ಭಾಷೆಗಳಲ್ಲಿ ಇಲ್ಲದ ಲಕ್ಷಣಗಳಿವೆ. ಅಘೋಷ ವ್ಯಂಜನಗಳು ಮತ್ತು ಮಧ್ಯ ದೀರ್ಘ ಉಚ್ಛಾರಗಳು ( ವಾಯಿಸಲೆಸ್ ಆಸ್ಪಿರೇಟ್ಸ್ ಹಾಗೂ ಲಾಂಗ್ ಮಿಡ್ಲ್ ಸಿಲಬಲ್ಸ್) ಇಂಡೋ-ಯುರೋಪಿಯವ್ ಭಾಷಾ ಲಕ್ಷಣಗಳಲ್ಲ. ಆದರೆ ಇವು ಋಗ್ವೇದ ಮತ್ತು ಅವೆಸ್ತಾದಲ್ಲಿವೆ. ಈ ಲಕ್ಷಣಗಳು ಋಗ್ವೇದ ಹಾಗೂ ಅವೆಸ್ತಾದಲ್ಲಿ ಒಂದೇ ರೀತಿಯಿಲ್ಲ. ಎಂದರೆ ಈ ಲಕ್ಷಣಗಳು ಅವೆರಡೂ ಭಾಷೆಗಳು ಬೇರೆಯಾದ ನಂತರ ಬೆಳೆದಿರಬಹುದು ಅಥವಾ ಅವೆರಡೂ ಭಾಷೆಗಳಿಗೆ ಈ ಲಕ್ಷಣಗಳನ್ನು ನೀಡಿದ ಇನ್ನೊಂದು ಭಾಷೆ ತಳಹದಿಯಲ್ಲಿರಬಹುದು. ಈ ಲಕ್ಷಣಗಳು ದ್ರಾವಿಡ, ಮುಂಡಾ ಭಾಷೆಗಳಲಿಲ್ಲ. ಆದ್ದರಿಂದ ಅವೆಸ್ತಾ ಮತ್ತು ಋಗ್ವೈದಿಕ ಸಂಸ್ಕೃತಕ್ಕೆ ಈ ಲಕ್ಷಣಗಳನ್ನು ನೀಡಿದ ಭಾಷೆ ಇಂಡೋ-ಇರಾನಿಯನ್ನರು ಸಾಗಿ ಬಂದ ಮಾರ್ಗದಲ್ಲಿ ಬ್ಯಾಕ್ಟ್ರಿಯಾ-ಮಾರ್ಜಿಯಾನ ಪ್ರದೇಶದಲ್ಲಿ ಅಸ್ತಿತ್ವದಲ್ಲಿರಬೇಕು. ಇದರಿಂದ ಸಿಂಧೂ ಪ್ರದೇಶಕ್ಕೆ ಬರುವ ಮೊದಲೇ ಇಂಡೋ-ಇರಾನಿಯನ್ನರ ಮೇಲೆ ಪ್ರಭಾವ ಬೀರಿದ ಭಾಷೆ ಆಸ್ಟ್ರೋ-ಏಷಿಯಾಟಿಕ್ ಭಾಷೆ ಗುಂಪಿಗೆ ಸೇರಿದ ಮುಂಡಾ ಆಗಿರಲಾರದು.
ಸಾಮಾನ್ಯವಾಗಿ ಗೆದ್ದ ಜನಾಂಗ, ಸೋತ ಜನಾಂಗದ ಭಾಷೆಯಿಂದ ತಕ್ಷಣ ಪದಗಳನ್ನು ಎರವಲು ಪಡೆಯುವುದಿಲ್ಲ. ಗೆದ್ದ ಹಾಗೂ ಸೋತ ಜನಾಂಗಗಳು ಕೆಲ ಕಾಲವಾದರೂ ಒಟ್ಟಿಗೆ ಜೀವಿಸಿದ ನಂತರ ಪರಸ್ಪರ ಪ್ರಭಾವ ಬೀರಬಲ್ಲವು. ಬ್ಯಾಕ್ಟ್ರಿಯಾ-ಮಾರ್ಜಿಯಾನ ಪ್ರದೇಶದಲ್ಲಿ ಪ್ರಚಲಿತವಿದ್ದ ಸೋಮ ಆಚರಣೆ ಹಾಗೂ ಅಲ್ಲಿನ ಭಾಷೆಯ ಪ್ರಭಾವ ಆಗಬೇಕೆಂದರೆ ಇಂಡೋ-ಇರಾನಿಯನ್ನರು ಆ ಪ್ರದೇಶದಲ್ಲಿ ಸಾಕಷ್ಟು ಕಾಲ ನೆಲೆಸಿರಬೇಕು. ಹಾಗೆ ನೆಲೆಸಿದಾಗಲೇ ಸೋಮ ಆಚರಣೆಯ ಮಂತ್ರಗಳು ರಚಿತವಾಗಬೇಕು. ಇಂತಹ ಮಂತ್ರಗಳು ರಚಿತವಾದ ನಂತರವೇ ಅವರು ಸಿಂಧೂ ಬಯಲನ್ನು ಪ್ರವೇಶಿಸಿ ಸೈಂಧವರಿಗೆ ಮುಖಾಮುಖಿಯಾಗಿರಬೇಕು. ಇದರಿಂದಾಗಿ ನಂತರ ಕಾಲದ ಮಂತ್ರಗಳಲ್ಲಿ ದ್ರಾವಿಡ ಪ್ರಭಾವ ಕಂಡು ಬಂದಿದ್ದು, ಆರಂಭಿಕ ಮಂತ್ರಗಳಲ್ಲಿ ಬ್ಯಾಕ್ಟ್ರಿಯಾ-ಮಾರ್ಜಿಯಾನ ಪ್ರದೇಶದಲ್ಲಿ ಇದ್ದಿರಬಹುದಾದ ಭಾಷೆಯ ಪ್ರಭಾವಗಳು ಉಳಿದಿರಬಹುದು. (೧೦೩)
ಋಗ್ವೇದದಲ್ಲಿ ದ್ರಾವಿಡ , ಮುಂಡಾ ಎಂದು ಪಟ್ಟಿ ಮಾಡಲಾದ ಎಲ್ಲ ಪದಗಳನ್ನು ಇಂಡೋ-ಯುರೋಪಿಯನ್ ಮೂಲದಿಂದ ಬಂದವೆಂದು ಸಾಧಿಸಿ ತೋರಿಸಲು ಸಾಧ್ಯವಾಗಿ ಋಗ್ವೈದಿಕ ಸಂಸ್ಕ್ರತದ ಮೇಲೆ ದ್ರಾವಿಡರ ಪ್ರಭಾವ ಇಲ್ಲ ಎಂದರೂ ದ್ರಾವಿಡ ಹಾಗೂ ಆರ್ಯರ ನಡುವೆ ಸಂಪರ್ಕಗಳು ಇರಲಿಲ್ಲ ಎಂದು ಸಾಧಿಸಿದಂತಾಗುವುದಿಲ್ಲ. ಈ ಎಲ್ಲ ಪದಗಳನ್ನು ವಿಶ್ವಾಸಾರ್ಹವಾಗಿ ದ್ರಾವಿಡ ಎಂದು ಹೇಳಲು ಸಾಧ್ಯವಿಲ್ಲವಾದ್ದರಿಂದ , ಇಂಡೋ-ಆರ್ಯನ್ ಭಾಷೆ ದ್ರಾವಿಡ, ಮುಂಡಾ ಹೊರತಾದ ಈಗ ಕಣ್ಮರೆಯಾಗಿರುವ ಅಜ್ಞಾತ ಭಾಷೆಯಿಂದ ಪ್ರಭಾವಿತವಾಗಿರಬಹುದು. ಆದರೆ ಇಂತಹ ಅಜ್ಞಾತ ಭಾಷೆ ಊಹಾತ್ಮಕವಾಗಿರುವುದೇ ಹೊರತು ಯಾವುದೇ ಹೊಸ ಬೆಳಕು ಚೆಲ್ಲಲಾರದು.
ಬರವಣಿಗೆ- ರಟ್ಟಾಗದಗುಟ್ಟು
ಪ್ರ.ಶ. ೧೮೭೬ರಲ್ಲಿ ಚಿತ್ರ ಹಾಗೂ ಸಂಕೇತಗಳಿರುವ ಮುದ್ರಿಕೆಯನ್ನು ಮೊದಲ ಬಾರಿ ನೋಡಿದ್ದ ಅಲೆಕ್ಸಾಂಡರ್ ಕನ್ನಿಂಗ್’ಹ್ಯಾಂ ಅದರ ಮೇಲಿರುವ ಲಿಪಿ ಯಾವುದು ? ಅದರಲ್ಲಿ ಏನನ್ನು ಬರೆಯಲಾಗಿದೆ ? ಅದರ ಭಾಷೆ ಯಾವುದು ಎಂದು ಎಷ್ಟು ಸೋಜಿಗ ಪಟ್ಟಿದ್ದನೋ , ಅಷ್ಟೇ ಸೋಜಿಗ ಮತ್ತು ಕುತೂಹಲ ೧೩೭ ವರ್ಷಗಳ ನಂತರವೂ ಹಾಗೆಯೇ ಉಳಿದಿದೆ. ಜಗತ್ತಿನ ಇತಿಹಾಸಕಾರರಿಗೆ , ವಿದ್ವಾಂಸರಿಗೆ , ಆಸಕ್ತರಿಗೆ ಸೈಂಧವ ಲಿಪಿ ಎಸೆದ ಸವಾಲು ಇಂದಿಗೂ ಅಬಾಧಿತವಾಗಿಯೇ ಉಳಿದಿದೆ. ಸೈಂಧವ ಲಿಪಿಯನ್ನು ಬಿಡಿಸಿ ಓದಲು ಕಳೆದ ಒಂದು ಶತಮಾನದಿಂದ ೧೦೦ ಕ್ಕೂ ಅಧಿಕ ಗಂಭೀರ ಪ್ರಯತ್ನಗಳು , ಅದರ ಎರಡು ಪಟ್ಟು ಹವ್ಯಾಸಿ ,ಕುತೂಹಲಿಗರ ಪ್ರಯತ್ನಗಳೂ ಸಾಗಿವೆಯಾದರೂ ಆ ಲಿಪಿಯನ್ನು ಬಿಡಿಸಿದೆವೆಂದು ವಿಶ್ವಾಸದಿಂದ ಹೇಳಿದವರಿಲ್ಲ. ಹಾಗೆ ಹೇಳಿಕೊಂಡ ಬೆರಳೆಣಿಕೆಯ ಜನ ಅಲ್ಪ ಸಮಯದಲ್ಲಿಯೇ ಪರಿಶೀಲನೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ಸೈಂಧವ ಲಿಪಿಯಲ್ಲಿರುವ ಎಲ್ಲ ಸಂಕೇತಗಳನ್ನು ಪಟ್ಟಿಮಾಡಿ , ಅವುಗಳಿಗೆ ಸಂಖ್ಯೆಗಳನ್ನು ಕೊಟ್ಟು ವ್ಯವಸ್ಥಿತವಾಗಿ ವರ್ಗೀಕರಿಸಿರುವುದನ್ನು ಬಿಟ್ಟರೆ ಕಳೆದ ಒಂದು ಶತಮಾನದಿಂದ ಆ ಲಿಪಿಯ ಗೂಢತೆಯನ್ನು ಭೇದಿಸುವತ್ತ ಒಂದು ಹೆಜ್ಜೆಯನ್ನು ಕದಲಿಸಲಾಗಿಲ್ಲ ಎನ್ನುವುದು ಮಾತ್ರ ನಿಜ. ಅಷ್ಟೇಕೆ ಸೈಂಧವ ಲಿಪಿ ಚೀನಾದ ಲಿಪಿಯಂತೆ ಚಿತ್ರ ಲಿಪಿಯೇ ಇಲ್ಲ ಈಜಿಪ್ತಿನ ಹೈರೊಗ್ಲಾಫಿಕ್ಸ್;ನಂತೆ ಚಿತ್ರಾಕ್ಷರ ಲಿಪಿಯೇ ಅಥವಾ ಇವೆರಡಕ್ಕೂ ಹೊರತಾದ ಚಿತ್ರಪದ ಲಿಪಿಯೇ ಎನ್ನುವ ಬಗ್ಗೆಯೇ ಒಮ್ಮತವಿಲ್ಲ. ಅತ್ಯಾಧುನಿಕ ಗಣಕಗಳನ್ನು , ಕ್ರಮವಧಿಗಳನ್ನು ಬಳಸಿ ನಡೆಸಿದ ಅದ್ಯಯನಗಳು ಒಂದೊಂದು ಒಂದೊಂದು ದಿಕ್ಕಿನತ್ತ ಮುಖಮಾಡಿವೆ. ಕೆಲವರಿಗೆ ಅದರಲ್ಲಿ ‘ದೇವಭಾಷೆ ಸಂಸ್ಕೃತ’ ಕಂಡರೆ ಇನ್ನೂ ಕೆಲವರಿಗೆ ‘ದ್ರಾವಿಡರ ಸಾಧನೆಗಳ ಕೈಪಿಡಿ’ಗಳು ಕಂಡಿವೆ. ಸೈಂಧವ ಲಿಪಿ ಯಾವುದೇ ಭಾಷೆಯನ್ನು ಪ್ರತಿನಿಧಿಸುವುದಿಲ್ಲ , ಹಾಗೆ ಪ್ರತಿನಿಧಿಸುತ್ತದೆ ಎಂದು ಸಾಧಿಸಿ ಪಣಕ್ಕೊಡ್ಡಿರುವ ಮೊತ್ತವನ್ನು ತಮ್ಮದಾಗಿಸಿಕೊಳ್ಳಬಹುದು ಎನ್ನುವ ಸವಾಲು ಸಹ ಎದುರಿಗಿದೆ.
ಜಗತ್ತಿನಲ್ಲಿ ಈವರೆಗೆ ಬಿಡಿಸಲಾಗಿರುವ ಎಲ್ಲ ನಿಗೂಢ ಲಿಪಿಗಳಿಗೂ ಒಂದು ಹಿನ್ನೆಲೆಯಿದ್ದಿತು. ಈಜಿಪ್ತಿನ ಪ್ರಾಚೀನ ಭಾಷೆ ಕುರಿತಾಗಿ ಗ್ರೀಕ್’ರು ತಮಗೆ ತಿಳಿದ ಅಲ್ಪಸ್ವಲ್ಪ ವಿಷಯಗಳನ್ನು ದಾಖಲಿಸಿದ್ದರು. ಪಿರಮಿಡ್ , ದೇವಾಲಯ , ಪ್ಯಾಪಿರಸ್ ಪುಟಗಳ ಮೇಲೆ ವಿಪುಲ ಬರವಣಿಗೆ ಲಭ್ಯವಿದ್ದಿತು. ಕೆಲವು ಕಡೆ ಹಲವು ಲಿಪಿ , ಹಲವು ಭಾಷೆಗಳ ಬರಹಗಳು ದಕ್ಕಿದ್ದವು. ಈಜಿಪ್ತಿನ ಕ್ರ್ರೈಸ್ತರು ಚರ್ಚ್’ಗಳಲ್ಲಿ ಬಳಸುತ್ತಿದ್ದ ಕಾಪ್ಟಿಕ್ ಭಾಷೆ ಈಜಿಪ್ತಿನ ಪ್ರಾಚೀನ ಭಾಷೆಯ ಮುಂದುವರಿಕೆಯೆಂದು ಗೊತ್ತಿದ್ದಿತು. ಇಂತಹ ಯಾವ ಮಾಹಿತಿಗಳೂ ಸೈಂಧವ ಲಿಪಿಯ ಬಗ್ಗೆ ಇಲ್ಲ. ಸೈಂಧವ ಲಿಪಿ, ಬೇರೆ ಎಲ್ಲಿ ಲಿಪಿಗಳಿಗಿಂತ ಭಿನ್ನ. ಅದನ್ನು ಬೇರೆ ಲಿಪಿಗಳಿಗೆ ಹೋಲಿಸಿ ಬಿಡಿಸಲು ಸಾಧ್ಯವಿಲ್ಲ. ಮಧ್ಯ ಅಮೆರಿಕಾದ ಮಾಯಾ ಲಿಪಿ ಸಹ ಇತರ ಯಾವ ಲಿಪಿಗಳನ್ನು , ಯಾವ ರೀತಿಯಲ್ಲಿಯೂ ಹೋಲದ ಸ್ವತಂತ್ರ ಲಿಪಿ. ಆದರೂ ಮಾಯಾಲಿಪಿಗೆ ಇರುವ ಅನುಕೂಲತೆ ಸೈಂಧವ ಲಿಪಿಗಿಲ್ಲ. ಮಾಯಾಲಿಪಿ ಪ್ರ.ಶ. ೧೪-೧೫ನೇ ಶತಮಾನದವರೆಗೆ ಬಳಕೆಯಲ್ಲಿದ್ದಿತು. ಪ್ರ.ಶ ೧೫ನೇ ಶತಮಾನದಲ್ಲಿ ಕ್ರೈಸ್ತ ಪಾದ್ರಿ ಲಂಡಾ ಅದನ್ನು ಬಳಸುತ್ತಿದ್ದ ಜನರಿಂದ ವಿವರಣೆ ಪಡೆದು, ದಾಖಲಿಸಿಕೊಂಡಿದ್ದನು. ಲಂಡಾನ ದಾಖಲೆಗಳಲ್ಲಿ ಅದೆಷ್ಟೇ ದೋಷಗಳಿದ್ದರೂ ಕೆಲ ಸಂಕೇತಗಳು ಏನನ್ನು ಸೂಚಿಸುತ್ತವೆ, ಯಾವ ಅರ್ಥ ನೀಡುತ್ತವೆ ಎಂಬ ಸುಳಿವುಗಳಿದ್ದವು. ಸೈಂಧವ ಲಿಪಿ ಮರೆಯಾಗಿ ೪೦೦೦ ವರ್ಷಗಳೇ ಕಳೆದಿವೆ. ಅದು ಯಾವ ಭಾಷೆಯನ್ನು ಪ್ರತಿನಿಧಿಸುತ್ತಿದ್ದಿತು ಎಂಬ ಕುರುಹುಗಳು ಎಲ್ಲಿಯೂ ಇಲ್ಲ ಅಜ್ಞಾತ ಲಿಪಿ ಅಜ್ಞಾತ ಭಾಷೆಯ ಸ್ಥಿತಿಯಲ್ಲಿರುವ ಸೈಂಧವ ಲಿಪಿಯನ್ನು ಬಿಡಿಸಲು ಊಹೆಗಳೇ ಆಧಾರಗಳಾಗಿವೆ.
ಸೈಂಧವ ಲಿಪಿಯನ್ನು ಬಿಡಿಸುವ ಪ್ರಯತ್ನಗಳಿಗಿಂತ ಅಂತಹ ಯತ್ನಗಳ ಹಿಂದಿರುವ ಊಹೆ/ಪರಿಕಲ್ಪನೆ/ತತ್ತ್ವಗಳೇ ಅದರ ಸೋಲು-ಗೆಲುವುಗಳನ್ನು ನಿರ್ಧರಿಸುತ್ತವೆ. ಸೈಂಧವ ಲಿಪಿ- ಚಿತ್ರಲಿಪಿ/ಚಿತ್ರಾಕ್ಷರ /ಚಿತ್ರಪದ ಲಿಪಿಯೆಂದು ಪರಿಗಣಿಸಿ ಅದನ್ನು ಬಿಡಿಸಲು ಶ್ರಮಿಸಲಾಗಿದೆ. ಚಿತ್ರಲಿಪಿಗಳನ್ನು ಯಾವ ಬದಲಾವಣೆಗಳೂ ಇಲ್ಲದೆ ಒಂದು ಭಾಷೆಯಂದ ಇನ್ನೊಂದು ಭಾಷೆಗೆ ಅಳವಡಿಸಬಹುದು. ಚೀನಿ ಚಿತ್ರಗಳನ್ನು ಬಳಸಿ ಜಪಾನಿ ಹಾಗೂ ಕೊರಿಯಾ ಭಾಷೆಗಳ ಪದಗಳನ್ನು ಸೂಚಿಸಲಾಗುತ್ತದೆ. ಆದ್ದರಿಂದ ಚಿತ್ರಲಿಪಿ ಭಾಷೆಯನ್ನು ಪ್ರತಿನಿಧಿಸುತ್ತದೆಯೆಂದು ಹೇಳಲಾಗದು. ಚಿತ್ರಲಿಪಿಯಲ್ಲಿ ಅಮೂರ್ತ ಭಾವನೆಗಳನ್ನು ಪ್ರತಿನಿಧಿಸುವುದು ಸವಾಲಿನ ಕೆಲಸವಾಗುತ್ತದೆ. ನಾಯಿಯ ಚಿತ್ರ ಕನ್ನಡದ ‘ನಾಯಿ’ ಪದವನ್ನು ಅದೇ ವೇಳೆಗೆ ಸಂಸ್ಕೃತದ ‘ಶ್ವಾನ’ ಇಂಗ್ಲಿಷ್’ನ ‘ಡಾಗ್’ ಸೂಚಿಸಲು ಸಾಧ್ಯ.
ದಕ್ಷಿಣ ಇರಾನಿನ ಏಲಂ ಪ್ರದೇಶದ ಎಲಮೈಟ್ ಹಾಗೂ ದ್ರಾವಿಡ ಭಾಷೆಗಳ ನಡುವೆ ಸಂಬಂಧವಿದೆ. ಸುಮೇರಿಯಾದಲ್ಲಿ ಮೊನಚುಲಿಪಿ ಬಳಕೆಗೆ ಬಂದ ಅಲ್ಪ ಕಾಲದಲ್ಲಿಯೇ ಎಲಮೈಟ್ ಲಿಪಿ ಬಳಕೆಗೆ ಬಂದಿತು. ಇದು ಚಿತ್ರಲಿಪಿಯಾಗಿದ್ದು ಇದನ್ನು ಆರಂಭಿಕ ಎಲಮೈಟ್ ಲಿಪಿ ಎನ್ನಲಾಗುತ್ತದೆ. ಈ ಲಿಪಿಯನ್ನು ಇನ್ನೂ ಬಿಡಿಸಲಾಗಿಲ್ಲ. ಸೈಂಧವ ಹಾಗೂ ಎಲಮೈಟ್ ಎರಡೂ ಲಿಪಿಗಳು ಒಂದೇ ರೀತಿಯ ಲಕ್ಷಣಗಳನ್ನು ಹೊಂದಿವೆ. ಚಿತ್ರಲಿಪಿಯಲ್ಲಿ ಯಾವುದೇ ನಿರ್ದಿಷ್ಟ ಓದಿಕೆ ಇರುವುದಿಲ್ಲ. ನಿರ್ದಿಷ್ಟ ಭಾವನೆ /ಪರಿಕಲ್ಪನೆ ಮಾತ್ರ ಒಂದೇ ಆಗಿರುತ್ತದೆ. ಮರದ ಚಿತ್ರವನ್ನು ದ್ರಾವಿಡರು ‘ಮರ’ , ಸಂಸ್ಕೃತದವರು ‘ವೃಕ್ಷ’ , ಇಂಗ್ಲಿಷರು ‘ ಟ್ರೀ’ ಎಂದು ಓದಲು ಸಾಧ್ಯ. ಇದು ಅವರವರ ಭಾಷೆಗೆ ಸರಿಹೊಂದುವ ಆದರೆ ಮೂಲ ಆಶಯವನ್ನು ಸರಿಯಾಗಿಯೇ ಪ್ರತಿಬಿಂಬಿಸುವ ಬರವಣಿಗೆಯಾಗಿರುತ್ತದೆ, ಆದ್ದರಿಂದ ಎಲಮೈಟ್ ಮತ್ತು ಸೈಂಧವ ಲಿಪಿಗಳ ಚಿತ್ರ/ಸಂಕೇತಗಳ ನಡುವೆ ಸಾಮ್ಯತೆಗಳಿದ್ದ ಮಾತ್ರಕ್ಕೆ ಅವುಗಳಿಂದ ಆ ಚಿತ್ರ ಪ್ರತಿನಿಧಿಸುವ ಭಾಷೆಯನ್ನಾಗಲಿ , ಪದವನ್ನಾಗಲಿ ಕಂಡುಹಿಡಿಯಲು ಸಾಧ್ಯವಿಲ್ಲ. ಹಾಗಾಗಿಯೇ ಸೈಂಧವ ಬರವಣಿಗೆಯಲ್ಲಿ ಜಗತ್ತಿನ ಎಲ್ಲ ಭಾಷೆಗಳು ನೋಡುವವರ ನೋಟಕ್ಕೆ ತಕ್ಕಂತೆ ಕಂಡುಬಂದಿವೆ. ಸೈಂಧವ ಲಿಪಿ ಎಲಮೋ-ದ್ರಾವಿಡ ಭಾಷೆಯನ್ನು ಪ್ರತಿನಿಧಿಸುತ್ತಿದ್ದಿತು ನಂತರ ಅದನ್ನು ಇತರರು ತಮ್ಮ ಭಾಷೆಯನ್ನು ಪ್ರತಿನಿಧಿಸಲು ಸಹ ಬಳಸಿಕೊಂಡರೆಂದು ಹೇಳಲು ಸಾಧ್ಯವಿದೆ. ಈ ಸಾಧ್ಯತೆ ಎಲಮೋ-ದ್ರಾವಿಡ ಚಿತ್ರಲಿಪಿಯನ್ನು ಆರ್ಯರು ಬಳಸಿಕೊಂಡರು ಎನ್ನುವಂತೆ ಆರ್ಯರ ಲಿಪಿಯನ್ನು ಎಲಮೋ-ದ್ರಾವಿಡರು ಬಳಸಿಕೊಂಡರು ಅಥವಾ ಸೈಂಧವ ಹಾಗೂ ಎಲವೊ ದ್ರಾವಿಡ ಲಿಪಿಗಳು ಎರಡೂ ಒಂದೇ ಮೂಲದಿಂದ ಕವಲೊಡೆದವೆಂದು ಹೇಳಬಹುದು. ಇದು ಸೈಂಧವ ಲಿಪಿಯನ್ನು ಚಿತ್ರಲಿಪಿ ಎಂದು ಪರಿಗಣಿಸಿದಾಗ ಎದುರಾಗುವ ಸನ್ನಿವೇಶ.
ಸೈಂಧವ ಲಿಪಿ ಚಿತ್ರಾಕ್ಷರ ಪದ್ದತಿಯಲ್ಲಿದ್ದರೆ ಸೈಂಧವರ ಭಾಷೆ ಏನಾಗಿದ್ದಿತೆನ್ನುವ ಪ್ರಶ್ನೆಗೆ ಮೊದಲು ಉತ್ತರ ಕೊಡಬೇಕಾಗುತ್ತದೆ. ಏಕೆಂದರೆ ಚಿತ್ರಾಕ್ಷರ ಪದ್ದತಿಯ ಲಿಪಿಯಲ್ಲಿ ಯಾವುದೇ ಒಂದು ಚಿತ್ರ ಒಟ್ಟು ಪರಿಕಲ್ಪನೆಯ ಬದಲು ಒಂದು ಅಕ್ಷರದ ಪ್ರತಿನಿಧಿಯಾಗುತ್ತದೆ. ನಾಯಿಯ ಚಿತ್ರ ‘ನ’ ಅಥವಾ ‘ನಾ’ ಉಚ್ಛಾರಣೆ ಸೂಚಸುತ್ತಿರುತ್ತದೆ. ಇದನ್ನು ಸಂಸ್ಕೃತದ ‘ಶ್ವಾ(ನ)’ ಅಥವಾ ಇಂಗ್ಲಿಷ್’ನ ‘ಡಾ(ಗ್) ಎಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ‘ನಾಯಿ ‘ ಮತ್ತು ‘ಗುಡ್ಡ’ದ ಎರಡು ಚಿತ್ರಗಳು ಕನ್ನಡದಲ್ಲಿ ‘ನಗು’ ಅರ್ಥ ನೀಡಿದರೆ , ಉಳಿದ ಭಾಷೆಗಳಲ್ಲಿ ಬೇರೆ ಯಾವುದೋ ಪದಕ್ಕೆ ಕಾರಣವಾಗುತ್ತವೆ. ಆ ಪದಕ್ಕೆ ಆ ನಿರ್ದಿಷ್ಟ ಭಾಷೆಯಲ್ಲಿ ಯಾವುದೇ ಅರ್ಥ ಇರಬಹುದು ಅಥವಾ ಇರದಿರಬಹುದು. ನಾಯಿ ಮತ್ತು ಗುಡ್ಡ ಸಂಸ್ಕೃತ ಮತ್ತು ಇಂಗ್ಲಿಷ್’ನಲ್ಲಿ ‘ಶ್ವಾಪ’ (ಶ್ವಾನ-ಪರ್ವತ) , ಇಂಗ್ಲಿಷ್’ನಲ್ಲಿ ಡಾಹಿ (ಡಾಗ್-ಹಿಲ್) ಪದಗಳಾಗಿ ಯಾವುದೇ ಅರ್ಥ ಇಲ್ಲದಿರಬಹುದು.
ದ್ರಾವಿಡದತೊಡಕುಗಳು
ಸೈಂಧವ ಲಿಪಿ ಒಗಟಿನ ತತ್ತ್ವಗಳ (ರೀಬಸ್ ಪ್ರಿನ್ಸಿಪಲ್) ಮೇಲೆ ರೂಪುಗೊಂಡ ಚಿತ್ರಲಿಪಿಯಾದ್ದರಿಂದ ಅದು ಅಮೂರ್ತ ಭಾವನೆಗಳನ್ನು ಸಹ ಪ್ರತಿನಿಧಿಸುತ್ತದೆ ಎಂದು ಕೆಲವರು ವಾದಿಸಿ ಆ ಆಧಾರದ ಮೇಲೆ ಸೈಂಧವ ಲಿಪಿ ದ್ರಾವಿಡ ಭಾಷೆಯನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ. ಅದ್ದರಿಂದ ಮೀನಿನ ಸಂಕೇತ ‘ಮಿನ್’ ಅಂದರೆ ತಾರೆಯನ್ನು ಪ್ರತಿನಿಧಿಸುವುದು ಸಾಧ್ಯ. ಪ್ರಬುದ್ದ ಸೈಂಧವ ನಾಗರಿಕತೆಗೆ ಸೇರಿದ ಮಡಕೆಗಳ ಮೇಲೆ (ಅಮ್ರಿ ೧೧೧ ಎ ಹಾಗೂ ಸಿ) ಮೀನು ಹಾಗೂ ತಾರೆ ಎರಡೂ ಸಂಕೇತಗಳು ಕಂಡು ಬಂದಿವೆ. ಇದರಿಂದ ಮೀನು (=ಮಿನ್) ತಾರೆವನ್ನು ಪ್ರತಿನಿಧಿಸುತ್ತಿದ್ದು ಸೈಂಧವ ಭಾಷೆ ದ್ರಾವಿಡ ಎಂದಾಗುತ್ತದೆ. ಪ್ರಾಚೀನ ಸಾಹಿತ್ಯದಲ್ಲಿ ಆಕಾಶಗಂಗೆಯ ಪರಿಕಲ್ಪನೆಯಿದೆ. ರಾತ್ರಿಯ ಆಕಾಶವನ್ನು ಕಡಲಿನಂತೆಯೂ ತಾರೆಗಳನ್ನು ಅದರಲ್ಲಿ ಈಜುವ ಮೀನುಗಳಂತೆಯೂ ಪರಿಕಲ್ಪಿಸಿಕೊಳ್ಳಲಾಗಿದ್ದಿತು. ಆದ್ದರಿಂದ ‘ದ್ರಾವಿಡ ಸೈಂಧವ’ರು ತಾರೆಗಳನ್ನು ಮಿನ್ ಎಂದು ಗುರುತಿಸಿ ಮೀನಿನ ಸಂಕೇತದಿಂದ ಪ್ರತಿನಿಧಿಸಿರಬಹುದು ಆಕಾಶಗಂಗೆಯ ಕಲ್ಪನೆಯನ್ನು ಆರ್ಯರು ಸೈಂಧವರಿಂದ ಪಡೆದು ತಮ್ಮದಾಗಿರಿಸಿಕೊಂಡಿರುವ ಸಾಧ್ಯತೆಗಳಿವೆ. ಸೈಂಧವ ಲಿಪಿಗಳಲ್ಲಿ ಏಡಿಯ ಚಿತ್ರ ಸಂಕೇತವಿದೆ. ಇದನ್ನು ‘ಕೊಳ್’ ( ‘ಹಿಡಿ’ ಅಥವಾ ‘ಕೊಲ್ಲು’) ಎಂದು ಅರ್ಥೈಸಬಹುದು. ದ್ರಾವಿಡ ‘ಕೊಳ್’ ಸಂಸ್ಕೃತದ ‘ಗ್ರಹ’ಕ್ಕೆ ಸಮ. ಏಡಿ ಗ್ರಹವನ್ನು ಸೂಚಿಸುತ್ತದೆ. ತೆನೆಯನ್ನು ಹೋಲುವ ಸಂಕೇತ ‘ನೆಲ್ಲು’ ಸಸ್ಯದ ಪ್ರತೀಕವಾಗಿದ್ದು ‘ನೆಲ್’ ‘ನಿಲ’ ‘ನೆಲ’ ಪದಗಳನ್ನು ಆ ಮೂಲಕ ಚಂದ್ರನನ್ನು ಪ್ರತಿನಿಧಿಸುತ್ತವೆ. ಮಡಿಸಿ ಮಲಗಿಸಿದ ಅಸ್ತಿ ಪಂಜರದಂತೆ ಕಾಣುವ ಸಂಕೇತವನ್ನು ‘ಮುರುಗ’ ದೈವವಾಗಿ ಕಾಣಲಾಗಿದೆ.
ಈ ರೀತಿಯಾಗಿ ಸೈಂಧವ ಲಿಪಿಯ ಹಲವಾರು ಚಿತ್ರ/ಸಂಕೇತಗಳನ್ನು ದ್ರಾವಿಡ ಮೂಲದಿಂದ ‘ಓದಲಾಗಿದೆ’. ಇಂತಹ ಓದಿಕೆಯ ಸಮಂಜಸತೆಯನ್ನು ವಿಮರ್ಶೆಗೊಡ್ಡಿ ಪ್ರಶ್ನಿಸಲಾಗಿದೆ. ಅಂತಹವುಗಳಲ್ಲಿ ಮುಖ್ಯ ಪ್ರಶ್ನೆಗಳು ಹೀಗಿವೆ.
(೧) ಸೈಂಧವ ಲಿಪಿ ಒಗಟಿನ ತತ್ತ್ವದ ಮೇಲೆ ರೂಪುಗೊಂಡಿದೆ ಅದು ದ್ರಾವಿಡ ಎನ್ನುವುದು ಒಂದು ಊಹೆ.
(೨) ಪ್ರಾಚೀನ ಜನಾಂಗಗಳು ತಾರೆಗಳನ್ನು ಸುಲಭವಾಗಿ ಗೀಟುಗಳಿಂದ ಪ್ರತಿನಿಧಿಸುತ್ತಿದ್ದವು . ಇಂತಹ ನೇರ ಸರಳ ಸಂಕೇತ ಬಿಟ್ಟು ಒಗಟಿನ ರೂಪದ ಮೀನಿನ ಮೂಲಕ ವ್ಯಕ್ತಪಡಿಸಿರುವುದು ಅನುಮಾನ. ಚಂದ್ರನನ್ನು ತೆನೆಯ ಮೂಲಕ ಚಿತ್ರಿಸುವುದು ಬಹು ಜಟಿಲವಾದ ಮಾರ್ಗ. ಚೀನಾ ಹಾಗೂ ಇತರ ನಾಗರಿಕತೆಗಳು ಚಂದ್ರನನ್ನು ಅರ್ಥಗೋಳಾಕಾರದಲ್ಲಿ , ಉಗುರಿನಾಕಾರದಲ್ಲಿ ಪ್ರತಿನಿಧಿಸಿವೆ. ಇಂತಹ ಸುಲಭದ ಸಂಕೇತದ ಬದಲು ಕಷ್ಟಕರವಾದ ತೆನೆ ಸಂಕೇತ ಸಹಜವಾದುದಲ್ಲ. ಒಗಟಿನ ತತ್ತ್ವದ ಮೇಲೆ ಪಡೆದಿರುವ ಎಲ್ಲ ಓದಿಕೆಗಳಿಗೆ ಊಹೆ ಹೊರತಾಗಿ ಬೇರೆ ಯಾವುದೇ ಬಾಹ್ಯ ಸಮರ್ಥನೆಗಳಿಲ್ಲ.
(೩) ಸೈಂಧವ ಲಿಪಿಯನ್ನು ಓದಲು ಪ್ರಸಕ್ತ ಅಸ್ತಿತ್ವದಲ್ಲಿರುವ ದ್ರಾವಿಡ ಭಾಷೆಗಳಿಗೆ ಮೊರೆ ಹೋಗಲಾಗಿದೆ. ಇದರಿಂದ ಸೈಂಧವರ ಅದಿಮ ದ್ರಾವಿಡ ಪದಗಳಿಗೂ ಈಗಿನ ದ್ರಾವಿಡ ಪದಗಳಿಗೂ ವ್ಯತ್ಯಾಸವಿಲ್ಲವೆಂದು ಪರಿಗಣಿಸಲಾಗಿದೆ. ಇದು ಭಾಷಾಶಾಸ್ತ್ರದ ದೃಷ್ಟಿಯಿಂದ ಸರಿಯಲ್ಲ. ಏಕೆಂದರೆ ಸೈಂಧವ ಹಾಗೂ ಪ್ರಸಕ್ತ ದ್ರಾವಿಡ ಭಾಷೆಗಳ ನಡುವೆ ೨೦೦೦ ವರ್ಷಗಳ ಅಂತರ ಕಾಣಿಸಿಕೊಳ್ಳುತ್ತದೆ. ಈ ಅಂತರದಲ್ಲಿ ಸೈಂಧವರ ದ್ರಾವಿಡ ಭಾಷೆ ಬದಲಾಗಲಿಲ್ಲ ಎಂಬ ಊಹೆ ನಿರಾಧಾರವಾದುದು.
(೪) ಸೈಂಧವ ಲಿಪಿಯಲ್ಲಿ ಅಂಟು ಭಾಷೆಯ ಲಕ್ಷಣಗಳಿವೆ. ಇದು ದ್ರಾವಿಡ ಭಾಷೆಗಳ ಲಕ್ಷಣ. ಇಂಡೋ-ಆರ್ಯನ್ ಭಾಷೆಗಳು ಸಂಶ್ಲಿಷ್ಟ ಭಾಷೆಗಳೆಂದು ಪರಿಗಣಿಸಲಾಗಿದೆ. ಇಂತಹ ವಾದದ ಆಧಾರಧ ಮೇಲೆ ಲೀನಿಯರ್-ಬಿ ಲಿಪಿಯನ್ನು ಬಿಡಿಸಲಾಗಿದೆ. ಆದರೆ ಈ ತಂತ್ರ ಇನ್ನಿತರ ಲಿಪಿಗಳ ವಿಚಾರದಲ್ಲಿ ಫಲಪ್ರದವಾಗಿಲ್ಲ. ಸೈಂಧವ ಲಿಪಿ ಅಂಟು ಲಕ್ಷಣದ ದ್ರಾವಿಡ ಭಾಷೆಗಳನ್ನೇ ಪ್ರತಿನಿಧಿಸುತ್ತದೆ ಎಂದು ಒಪ್ಪಿದರೂ ಅದರಲ್ಲಿ ಯಾವ ಸಂಕೇತ ಏನನ್ನೂ ಸೂಚಿಸುತ್ತಿರಬಹುದು ಎಂಬ ಬಗ್ಗೆ ಒಮ್ಮತವಿಲ್ಲ. ಸೈಂಧವರು ದ್ರಾವಿಡರು ಎಂದು ಹೇಳುವ ಫಿನ್ನಿಷ್, ರಷ್ಯನ್ ಅಮೆರಿಕನ್ ಹಾಗೂ ಭಾರತೀಯ ವಿದ್ವಾಂಸರಲ್ಲಿ ಕೆಲವರು ಒಂದು ಸಂಕೇತವನ್ನು ಅಥವಾ ಸಂಕೇತ ಗುಣಿತವನ್ನು ನಾಮಪದ, ಕ್ರಿಯಾಪದ, ಪ್ರತ್ಯಯ ಪೂರ್ವ ಪ್ರತ್ಯಯ ಹೀಗೆ ನಾನಾ ಬಗೆಯಾಗಿ ಪರಿಗಣಿಸಿದ್ದಾರೆ. ಇಂತಹುದೇ ತಂತ್ರ ಬಳಸಿ ಸುಭಾಷ್ ಕಾಕ್ ಸೈಂಧವರು ಸಂಸ್ಕೃತ ಭಾಷಿಕರೆಂದು ವಾದಿಸುತ್ತಾರೆ. ಆದ್ದರಿಂದ ಸೈಂಧವ ಲಿಪಿಗಳನ್ನು ಗಣಕಗಳ ಕ್ರಮ ವಿಧಿಗಳ ಮೂಲಕ ವಿಶ್ಲೇಷಿಸಿ ಅವರ ಭಾಷೆ ದ್ರಾವಿಡ ಅಥವಾ ಆರ್ಯವಾಗಿತ್ತೆಂದು ನಿರ್ಧರಿಸಲು ಸಾಧ್ಯವಿಲ್ಲ.
(೫) ಸೈಂಧವ ಭಾಷೆ ದ್ರಾವಿಡ ಮೂಲದ್ದು ಎಂದು ಹೇಳುವುದು ಒಂದು ಊಹೆ. ಸಾಂದರ್ಭಿಕ ತೀರ್ಮಾನಗಳ ಹೊರತಾಗಿ ಪ್ರ.ಶ.ಪೂ ೪ನೇ ಶತಮಾನಕ್ಕಿಂತ ಹಿಂದೆ ದ್ರಾವಿಡ ಭಾಷೆಗಳು ಅಸ್ತಿತ್ವದಲ್ಲಿ ಇದ್ದವು ಎಂದು ತೋರಿಸಲು ಯಾವುದೇ ಸಾಕ್ಷ್ಯಧಾರಗಳಿಲ್ಲ . ಅಶೋಕ ಶಾಸನದಲ್ಲಿ ಕೊಡ, ಪಡ, ಕೆರಪುತ ಪದಗಳಿಂದ ದ್ರಾವಿಡರು ಇದ್ದ ಬಗ್ಗೆ ಅಸ್ಪಷ್ಟ ಉಲ್ಲೇಖಗಳಿವೆ. ಎನ್ನಬಹುದು. ಇದರ ಹೊರತು ನಮಗೆ ಸಿಗುವ ಅತ್ಯಂತ ಪ್ರಾಚೀನ ದಾಖಲೆಗಳೆಂದರೆ ತಮಿಳು ಬ್ರಾಹ್ಮಿ ಬರಹಗಳು. ಏನೇ ಪ್ರಯತ್ನ ಮಾಡಿದರೂ ಇವನ್ನು ಪ್ರ.ಶ.ಪೂ ೨ನೇ ಶತಮಾನಕ್ಕಿಂತ ಹಿಂದೆ ಒಯ್ಯುವುದು ಸಾಧ್ಯವಿಲ್ಲ. ಬಲೂಚಿ ಸ್ತಾನದಲ್ಲಿರುವ ಬ್ರಾಹುಯಿ ಭಾಷೆ ಎಂದಿನಿಂದ ಅಸ್ತಿತ್ವದಲ್ಲಿ ಇದ್ದಿತೆಂದು ಯಾರೂ ಸಮರ್ಪಕ ಆಧಾರಗಳಿಂದ ಸಾಧಿಸಿ ತೋರಿಸಿಲ್ಲ. ಹೀಗಿರುವಾಗ ಸೈಂಧವ ಸಂಸ್ಕೃತಿ ಭಾಷೆ ದ್ರಾವಿಡ ಎಂದು ಪರಿಗಣಿಸುವುದು ಸರಿಯಲ್ಲ. ಅದು ಉತ್ತರ- ಮಧ್ಯಮ-ದಕ್ಷಿಣ ಯಾವ ದ್ರಾವಿಡವಿರಬಹುದು. ಇವೆಲ್ಲವುಗಳಿಗಿಂತಲೂ ಹಿಂದಿನ ಮೂಲ ದ್ರಾವಿಡ ? ಅದರ ಸ್ವರೂಪ ಎಂತಹುದು. ? ಈಗಿನ ದ್ರಾವಿಡ ಭಾಷೆಗಳ ನೆರವಿನಿಂದ ಸಿಂಧೂ ಸಂಸ್ಕೃತಿಯ ದ್ರಾವಿಡವನ್ನು ಹಿಡಿಯಲು ಸಾಧ್ಯವೇ ಇಲ್ಲ. ಹೊಸ ಸಂಗತಿಗಳು ತಿಳಿಯುವವರೆಗೆ ಇದು ಅಸಾಧ್ಯ ಮತ್ತು ಸಿಂಧೂ ಲಿಪಿಯನ್ನು ದ್ರಾವಿಡ ನೆಲೆಯಲ್ಲಿ ಬಿಡಿಸುವ ಪ್ರಯತ್ನಗಳು ವ್ಯರ್ಥ.
ದಾರಿಕಾಣದಮುಂಡಾ
ಬಿಹಾರ್ ರಾಜ್ಯದ ಜಿಲ್ಲಾ ಸಾರಿಗೆ ಅಧಿಕಾರಿಯಾಗಿದ್ದ ಎನ್. ಕೆ. ಎಲ್ ಶರ್ಮಾ ಸೈಂಧವ ಲಿಪಿ ಹಾಗೂ ಮುಂಡಾ ಬಾಷಾ ವರ್ಗದ ಸಂತಾಲಿಗಳ ನಡುವೆ ಸಂಬಂಧ ಸಾಮ್ಯತೆಗಳು ಇವೆಯೆಂದು ವಾದಿಸಿರುವುದನ್ನು ಎಸ್.ಕೆ.ಬಿಸ್ವಾಸ್ ವರದಿ ಮಾಡಿದ್ದಾರೆ. ಸೈಂಧವ ಪ್ರದೇಶದಿಂದ ೧೫೦೦ ಕಿ ಮೀ ದೂರದಲ್ಲಿ ೪೦೦೦ ವರ್ಷಗಳ ಹಿಂದಿದ್ದ ಭಾಷೆ ಸೈಂಧವ ಭಾಷೆಯನ್ನು ಸಂತಾಲಿಯಲ್ಲಿ ಗುರುತಿಸಿರುವುದು ಕುತೂಹಲಕಾರಿಯಾಗಿದೆ. ಸಂತಾಲಿಗಳು ತಮ್ಮ ಗುಡಿಸಲುಗಳ ಮೇಲೆ ಸೈಂಧವ ಸಂಕೇತಗಳನ್ನು ಹೋಲುವ ಚಿತ್ರಗಳನ್ನು ಬರೆಯುತ್ತಾರೆ, ಧಾರ್ಮಿಕ ಆಚರಣೆಗಳ ಸಮಯದಲ್ಲೂ ಇಂತಹ ಚಿತ್ರಗಳು ಇರುತ್ತವೆ. ಧಾರ್ಮಿಕ ಆಚರಣೆಯ ಅಂಗವಾಗಿ ಉಚ್ಛರಿಸಲ್ಪಡುತ್ತಿದ ಪದಗಳನ್ನು ಈ ಸಂಕೇತಗಳೊಂದಿಗೆ ಸಮೀರಿಕರಿಸಿದ ಎನ್.ಕೆ.ವರ್ಮಾ , ಮುಂಡಾಗಳೇ ಸೈಂಧವರೆಂದು ಸಾರಿದರು. ೨೦ನೇ ಶತಮಾನದ ಸಂತಾಲಿಗಳು, ೪೦೦೦ ವರ್ಷಗಳ ಹಿಂದಿನ ಲಿಪಿ ಹಾಗೂ ಭಾಷೆಯನ್ನು ಹೇಗೆ ಕಾಯ್ದಿರಿಸಿಕೊಂಡು ಬಂದರು. ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ವಾದಕ್ಕಾಗಿ ಸಂತಾಲಿಗಳು ಸೈಂಧವ ಸಂಕೇತಗಳನ್ನು ಕಳೆದ ೪೦೦೦ ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿರುವರೆಂದು ಒಪ್ಪಿದರೂ, ಅದು ಮುಂಡಾ ಭಾಷೆಯನ್ನು ಪ್ರತಿನಿಧಿಸುವುದೇ ಹೊರತು, ಸೈಂಧವ ಭಾಷೆಯನ್ನಲ್ಲ. ವ್ಯಾಪಕವಾಗಿದ್ದ ಸೈಂಧವ ಲಿಪಿಯನ್ನು ಮುಂಡಾಗಳು ಅಳವಡಿಸಿಕೊಂಡರೆಂದು ವಾದಿಸಬಹುದು. ಟಿಬೆಟಿಯನ್ನರು ಬ್ರಾಹ್ಮಿ ಲಿಪಿ ಬಳಸಿದರೂ ಮೂಲ ಬ್ರಾಹ್ಮಿ ಲಿಪಿ ಟಿಬೆಟ್’ನಲ್ಲಿ ಹುಟ್ಟಿತೆಂದು ಹೇಳಲಾಗದು. ಆದ್ದರಿಂದ ಮುಂಡಾ ಭಾಷೆಯನ್ನು ಬಳಸಿ ಸೈಂಧವ ಲಿಪಿಯನ್ನು ಬಿಡಿಸುವ ಪ್ರಯತ್ನಗಳು ದ್ರಾವಿಡ ಲಿಪಿಯನ್ನು ಬಿಡಿಸುವ ಮಾರ್ಗಗಳಿಗಿಂತ ದುರ್ಬಲವಾಗಿವೆ.
ಸಂಸ್ಕೃತದಸಿಕ್ಕುಗಳು
ಪುರಾತತ್ತ್ವ ಶೋಧನೆಯಲ್ಲಿ ಸಿಕ್ಕಿರುವ ಮಾಹಿತಿಗಳು ಸೈಂಧವ ಹಾಗೂ ಋಗ್ವೈದಿಕ ಸಂಸ್ಕೃತಿಗಳು ಬೇರೆಯೆಂಬ ನಿರ್ಧಾರ ತಳೆಯುವಂತೆ ಪ್ರೇರೇಪಿಸುತ್ತವೆ. ಸೈಂಧವರೇ ಋಗ್ವೈದಿಕರು ಹಾಗೂ ಅವರ ಭಾಷೆ ಸಂಸ್ಕೃತ ಎಂದು ಘೋಷಿಸುವುದಕ್ಕೆ ಸೈಂಧವ ಲಿಪಿ ದೊಡ್ಡ ಅಡಚಣೆಯಾಗಿದೆ. ಸೈಂಧವರು ಋಗ್ವೈದಿಕ ಸಂಸ್ಕೃತವನ್ನು ಆಡುತಿದ್ದರು ಎನ್ನುವುದಕ್ಕೆ ಮೊದಲು ಅವರು ಬರವಣಿಗೆಯ ಬಾಳ್ವೆ ಸಾಗಿಸುತ್ತಿದ್ದರೆಂದು ಯಾವುದೇ ಸಂಶಯಗಳಿಲ್ಲದೆ ಮೊದಲು ಸಾಧಿಸಬೇಕಾಗುತ್ತದೆ. ಋಗ್ವೈದಿಕರು ಬರಹ ಸಂಸ್ಕೃತಿಯನ್ನು ಹೊಂದಿದ್ದರೇ ? ಎನ್ನುವ ವಾದದ ಹಿನ್ನೆಲೆಯನ್ನು ಈ ಮುಂದೆ ನೋಡಬಹುದು.
ಅಕ್ಷರಸ್ಥಋಗ್ವೈದಿಕ ?
ವೈದಿಕರು ಗುರುಕುಲ ಮತ್ತು ಕಂಠಪಾಠ ಪದ್ದತಿಯ ಮೂಲಕ ತಮ್ಮ ಪರಂಪರೆಯನ್ನು ಕಾಯ್ದುಕೊಂಡು ಬಂದರು. ಮಂತ್ರಗಳ ಬಾಯಿಪಾಠ ಮಾಡುತ್ತಿದ್ದುದೇ ವೈದಿಕರಿಗೆ ಲಿಪಿ ಅಪರಿಚಿತವಾಗಿದ್ದಿತು ಎನ್ನುವುದಕ್ಕೆ ಸಾಕ್ಷಿ ಎನ್ನುವ ನಿರ್ಧಾರ ತಪ್ಪು. ಜಗತ್ತಿನ ಹಲವಾರು ಪ್ರಾಚೀನ ಜನಾಂಗಗಳಲ್ಲಿ ಲಿಪಿ ಇದ್ದಾಗಲೂ ಕಂಠಪಾಠ ಮಾಡುವ ಪದ್ದತಿಯಿದ್ದಿತು. ಆದ್ದರಿಂದ ಮೌಖಿಕ ಸಂಸ್ಕೃತಿ ಲಿಪಿ ಇಲ್ಲದ ಸಮಾಜದ ಗುರುತಾಗಿ ಇರಬೇಕೆಂದಿಲ್ಲ. ಹೋಮರನ ಕಾವ್ಯ ಹಲವಾರು ತಲೆಮಾರುಗಳಲ್ಲಿ ಕಂಠಪಾಠದ ಮೂಲಕ ಹರಿದು ಬಂದಿತು. ಜೂಲಿಯಸ್ ಸೀಜರ್ ಡ್ರೂಯಿಡರು (ಸೆಲ್ಟ್ ಜನಾಂಗದ ಬ್ರಾಹ್ಮಣರು) ಸಾಂಪ್ರದಾಯಿಕ ಜ್ಞಾನವನ್ನು ಹಲವಾರು ವರ್ಷಗಳ ಕಂಠಪಾಠದಿಂದ ಕಲಿಯುತ್ತಿದ್ದರೆಂದು ಹೇಳಿದ್ದಾನೆ. ಡ್ರೂಯಿಡರ ಪ್ರಾಚೀನ ಮೌಖಿಕ ಸಂಪತ್ತು ಈಗ ಸಿಕ್ಕಿಲ್ಲವಾದರೂ ಸೀಜರ್’ಗಿಂತ ಹಲವು ದಶಕಗಳ ಹಿಂದೆಯೇ ಸೆಲ್ಟರು ಲಿಪಿ ಹೊಂದಿದ್ದರು. ಹಾಗಾದರೂ ಅವರು ತಮ್ಮ ಜ್ಞಾನವನ್ನು ಬರವಣಿಗೆಗೆ ಇಳಿಸದೆ ಬರವಣಿಗೆಗಿಂತ ಮೌಖಿಕ ಸಂಪ್ರದಾಯಕ್ಕೆ ಹೆಚ್ಚಿನ ಮಾನ್ಯತೆ ನೀಡಿದ್ದರೆಂದು ತೋರುತ್ತದೆ. ಅದರಂತೆಯೇ ಋಗ್ವೈದಿಕರು ಬರವಣಿಗೆ ಬಲ್ಲವರಾದರೂ ಮೌಖಿಕ ಸಂಪ್ರದಾಯಕ್ಕೆ ಹೆಚ್ಚಿನ ಒತ್ತು ಕೊಟ್ಟಿರಬಹುದು. ಆದ್ದರಿಂದ ಋಗ್ವೈದಿಕರನ್ನು ಬರವಣಿಗೆ ಅರಿಯದವರೆಂದು ತಿರಸ್ಕರಿಸಿ ಅವರನ್ನು ಸೈಂಧವರೆಂದು ಗುರುತಿಸಲು ಹಿಂಜರಿಯಬೇಕಿಲ್ಲ. [ ಪ್ಲೇಟೋ ಬರವಣಿಗೆಯಿಂದ ಮಾನವ ಕುಲ ಹಿಂದಕ್ಕೆ ಸಾಗಿದಂತಾಗಿದೆ. ಅದರಿಂದ ನೆನಪಿನ ಶಕ್ತಿ ಕುಂದಿದೆ. ಅಯೋಗ್ಯರಿಗೆ ದಕ್ಕಬಾರದ ಸಂಪತ್ತು ದಕ್ಕುವಂತಾಗಿದೆ ಎಂದು ಹೇಳಿದ್ದನು. ಆದರೆ ಆತ ಮಾತ್ರ ಅಕ್ಷರ ಬಲ್ಲ ಜಾಣನಾಗಿ ಜಗತ್ತಿನ ಚರಿತ್ರೆಯಲ್ಲಿ ಚಿರಸ್ಥಾಯಿಯಾದನು. ]
ಋಗ್ವೇದದಂತಹ ಸುದೀರ್ಘ ಸಾಹಿತ್ಯವನ್ನು ನೆನಪಿನಿಂದ ಮಾತ್ರ ಉಳಿಸಿಕೊಂಡು ಬರಲು ಸಾಧ್ಯವಿಲ್ಲ. ಪರೀಕ್ಷಾರ್ಥವಾಗಿ ಋಗ್ವೇದವನ್ನು ಕೇವಲ ಕಂಠಪಾಠ, ನೆನಪಿನ ಶಕ್ತಿಯೊಂದಿಗೆ ಉಳಿಸಿಕೊಳ್ಳುವ ಒಂದು ಬಣ, ಕಂಠಪಾಠದೊಂದಿಗೆ ಬರಹದ ಮೂಲಕ ಸಾಗಿಸುವ ಇನ್ನೊಂದು ಬಣಗಳಲ್ಲಿ ಯಾವ ಸ್ಥಿತಿ ತಾಳಬಹುದೆಂದು ನೋಡಬಹುದು. ಮೌಖಿಕ ಸಂಪ್ರದಾಯದಲ್ಲಿ ಕಂಠಪಾಠ ಮಾಡಿದ ಬಣ, ಅಲ್ಪಕಾಲದಲ್ಲೇ ಸುದೀರ್ಘ ಸಾಹಿತ್ಯವನ್ನು ಮರೆತು ತಪ್ಪುಗಳು ನುಸುಳುತ್ತವೆ. ಆದರೆ ಮೌಖಿಕ ಹಾಗೂ ಬರಹ ಎರಡೂ ಮಾರ್ಗಗಳನ್ನು ತುಳಿದ ಎರಡನೆ ಬಣ, ಮರೆತುದನ್ನು ಮರಳಿ ಜ್ಞಾಪಿಸಿಕೊಂಡು ಮುಂದುವರೆಸಲು ಬರಹದ ಮೊರೆ ಹೋಗುತ್ತದೆ. ಆದ್ದರಿಂದ ಋಗ್ವೇದದಂತಹ ಸುದೀರ್ಘ ಸಾಹಿತ್ಯವನ್ನು ವೈದಿಕರು ಕೇವಲ ನೆನಪಿನಿಂದಲೇ ಮುಂದುವರಿಸಿದರೆನ್ನುವುದು ತಪ್ಪು. ಬರವಣಿಗೆಯ ನೆರವಿಲ್ಲದೆ ಋಗ್ವೇದದಂತಹ ಸಾಹಿತ್ಯದ ರಚನೆ ಮತ್ತು ಮುಂದುವರಿಕೆ ಸಾಧ್ಯವಿಲ್ಲ.
ವೇದ ಸಂಹಿತೆಯ ಸಂಗ್ರಹ ವಿಭಜನೆ ಬರವಣಿಗೆ ಇಲ್ಲದೆ ಸಾಧ್ಯವೇ ? ಅಥರ್ವವೇದದಲ್ಲಿ (ಅ.ವೇ ೧೯/೭೨/೧) ವೇದಗಳನ್ನು ಪಠಿಸಿದ ನಂತರ ಹಿಂದಕ್ಕೆ ಪೆಟ್ಟಿಗೆಯಲ್ಲಿ ಇರಿಸಬೇಕು ಎಂದು ಹೇಳಿದೆ. ವಿಶ್ವಾಮಿತ್ರ ಶಾಶ್ವತ ಜ್ಞಾನ ಕಾಣುವಂತಹುದು ಎನ್ನುತ್ತಾನೆ. (ಋ.ವೇ ೩/೫೩/೧೫-೧೬). ಇದರಿಂದ ಮಂತ್ರ ದ್ರಷ್ಟಾರ ಎಂದರೆ ಮಂತ್ರಗಳನ್ನು ಮನಸ್ಸಿನಲ್ಲಿ ಕಂಡವನಲ್ಲ. ಬರವಣಿಗೆಯ ರೂಪದಲ್ಲಿ ಕಂಡವನು ಎಂದು ಅರ್ಥ. ಋಗ್ವೇದದಲ್ಲಿ ಹಸುವನ್ನು ಅಷ್ಟಕರ್ಣಿ ಎಂದರೆ ಕಿವಿಯ ಮೇಲೆ ೮ರ ಗುರುತಿರುವುದು ಎಂದಿದೆ. (ಋ ವೇ ೧೦/೬೨/೭) ಎಂದರೆ ೮ ರ ಲಿಪಿ ರೂಪ ಉಲ್ಲೇಖವಾಗಿದೆ. ಐತರೇಯ ಅರಣ್ಯಕದಲ್ಲಿ ( ಐ.ಅ ೫/೩/೩) ಸ್ವರ ವ್ಯಂಜನಗಳ ಭೇದ ತಿಳಿಸಿದರೆ , ಛಾಂದೋಗ್ಯ ಉಪನಿಷತ್ ( ಛಾ.ಉ ೨/೧೦/೧-೪) ಅಕ್ಷರಗಳ ಎಣಿಕೆ ತಿಳಿಸುತ್ತದೆ. ಆದ್ದರಿಂದ ಋಗ್ವೈದಿಕರಿಗೆ ಬರವಣಿಗೆ ತಿಳಿದಿದ್ದಿದು ಮತ್ತು ಅವರೇ ಸೈಂಧವರು ಎನ್ನುವುದಕ್ಕೆ ಯಾವುದೇ ಸಂಶಯಗಳಿಲ್ಲ.
ಸಮಗ್ರ ಋಗ್ವೇದವನ್ನು ನೆನಪಿನಲ್ಲಿ ಇರಿಸಿಕೊಂಡು ಮುಂದುವರೆಸುವುದು , ಬರವಣಿಗೆ ಇಲ್ಲದೆ ಕಾಯ್ದುಕೊಳ್ಳುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ತಪ್ಪು. ಋಗ್ವೇದವನ್ನು ಹಲವು ಸಂತತಿಯವರು ತಮ್ಮ, ತಮ್ಮ ಗೋತ್ರಗಳಲ್ಲಿ ನೂರಾರು ಜನರ ಮೂಲಕ ವಿವಿಧ ಭಾಗಗಳನ್ನು ನೆನಪಿಟ್ಟುಕೊಳ್ಳುತ್ತಿದ್ದರು. ಎಲ್ಲ ವೈದಿಕರೂ ಇಡೀ ಋಗ್ವೇದವನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರೆಂದು ಹೇಳಲಾಗದು. ಬ್ರಾಹ್ಮಣರು ಉಪನಯನವಾದ ನಂತರ ಮದುವೆಯಾಗುವವರೆಗೆ ಹನ್ನೊಂದು ವರ್ಷಗಳ ಕಾಲ ವೇದಗಳನ್ನು ಕಂಠಪಾಠ ಮಾಡುತ್ತಿದ್ದರು. ಮದುವೆಯಾಗದವರು ೪೮ ವರ್ಷಗಳವರೆಗೆ ವೇದಗಳನ್ನು ಕಂಠಪಾಠ ಮಾಡುತ್ತಿದ್ದರು. ಒಬ್ಬ ಗುರು ಹಲವಾರು ಶಿಷ್ಯಂದಿರನ್ನು ಹೊಂದಿದ್ದು ಅವರನ್ನು ಹಲವು ಗುಂಪುಗಳಾಗಿ ವಿಭಜಿಸಿ ಹಂತ ಹಂತವಾಗಿ ಯಾವುದೇ ಶಬ್ದ ತಪ್ಪದಂತೆ ಕಂಠಪಾಠ ಮಾಡಿಸುತ್ತಿದ್ದನು.
ಋಗ್ವೇದ ಬಹು ವಿಸ್ತಾರವಾಗಿದೆಯೆಂದು ಭಾಸವಾಗಬಹುದಾದರೂ ಅದರಲ್ಲಿನ ಎಲ್ಲ ಸಂಗತಿಗಳನ್ನು ಕೆಲವೇ ಪುಟಗಳಿಗೆ ಸೀಮಿತಗೊಳಿಸಬಹುದು. ಬಹುತೇಕ ಜಾನಪದ ಹಾಡುಗಳಂತೆ ವೇದಗಳು ಪುನರುಕ್ತಿ, ಒಂದೇ ಬಗೆಯ ಆಶಯಗಳನ್ನು ಹೊಂದಿರುವುದರಿಂದ ನಾಲ್ಕು ಸಾಲಿನ ಋಚೆಗಳನ್ನು ಒಬ್ಬ ದ್ರಷ್ಟಾರ ಹಾಡಿ ಒಂದೆರಡು ದಿನಗಳಲ್ಲಿ ರಚಿಸಬಹುದು. ಹಾಗೆ ಒಂದು ವರ್ಷದಲ್ಲಿ ೨೦ಕ್ಕೂ ಹೆಚ್ಚು ಸೂಕ್ತಗಳನ್ನು ರಚಿಸುವುದು ಸಾಧ್ಯ. ಹಾಗೆ ರಚಿಸಿದ ಋಚೆ, ಸೂಕ್ತಗಳನ್ನು ತನ್ನ ಮಕ್ಕಳು ಹಾಗೂ ಶಿಷ್ಯಂದಿರಿಗೆ ಕಂಠಪಾಠ ಮಾಡಿಸಿದರೆ ಸಾಕು. ದೀರ್ಘ ಕಾವ್ಯ ಕವನಗಳನ್ನು ಮೌಖಿಕವಾಗಿ ಕಲಿಯಲು ಸಾಧ್ಯವಿಲ್ಲ ಎನ್ನುವುದು ವಾಸ್ತವಿಕ ಸತ್ಯವಲ್ಲ. ಭಾರತದ , ಕರ್ನಾಟಕದ ಹಲವಾರು ಕಲಾವಿದರು ತಮ್ಮ ಎಲ್ಲ ಜೀವನ ಜಂಜಾಟಗಳ ನಡುವೆ- ವೈದಿಕರಿಗೆ ಇರುವ ಯಾವ ಸವಲತ್ತುಗಳೂ ಇಲ್ಲದೆ- ಅತ್ಯಂತ ಸುದೀರ್ಘ ಕಾವ್ಯಗಳನ್ನು ಕಂಠಪಾಠ ನೆನಪಿನ ಮೂಲಕವೇ ರಕ್ಷಿಸಿದ್ದಾರೆ. ಕೆಲವೇ ಬೆರಳೆಣಿಕೆಯ ಅನಕ್ಷರಸ್ಥರು ಮೌಖಿಕವಾಗಿ ಕಲಿತು , ನೆನಪಿನಲ್ಲಿರಿಸಿಕೊಂಡು ಬಂದಿದ್ದಾರೆ.
ಸೈಂಧವರನ್ನು ಋಗ್ವೈದಿಕರಿಗೆ ಸಮೀಕರಿಸಿ ಸೈಂಧವರ ಸಾಧನೆಗಳನ್ನು ಋಗ್ವೈದಿಕರಿಗೆ ವರ್ಗಾವಣೆ ಮಾಡಲು ಯತ್ನಿಸಲಾಗಿದೆ. ಋಗ್ವೈದಿಕರೇ ಸೈಂಧವರು ಎಂದಾದರೆ ಋಗ್ವೈದಿಕರು ಲಿಪಿ ಪಡೆದ ಜನಾಂಗವಾಗಿದ್ದು ಯಾವಾಗ? ಋಗ್ವೇದದ ಮಂತ್ರಗಳ ರಚನೆಯ ನಂತರವೇ ? ಭಾರತದಿಂದ ಹೊರಕ್ಕೆ ವಾದದಲ್ಲಿ ಬ್ರಾಹ್ಮಣಗಳ ಕಾಲವನ್ನು ಪ್ರಬುದ್ಧ ಸೈಂಧವ ನಾಗರಿಕತೆಯ ಕಾಲಕ್ಕೆ ಸರಿ ಹೊಂದಿಸಲಾಗಿದೆ. ಆದರೆ ಈ ಬರಹದ ಯಾವ ಕುರುಹುಗಳೂ ಬ್ರಾಹ್ಮಣಗಳಲ್ಲಿಲ್ಲ. ವೈದಿಕ ಪರಂಪರೆಯನ್ನು ಗಮನಿಸಿದರೆ ಅವರು ಬರವಣಿಗೆಗೆ ಎಲ್ಲಿಯೂ ಪ್ರಾಶಸ್ತ್ಯ ಕೊಟ್ಟಿರುವುದು ಕಂಡುಬರದೆ ಬರವಣಿಗೆಯ ವಿರೋಧಿಗಳಾಗಿ ಅಲ್ಲಲ್ಲಿ ಕಾಣಿಸಿಕೊಂಡಿದ್ದಾರೆ. .ಪ್ರ.ಶ,ಪೂ ೬-೪ ಶತಮಾನಗಳ ಅವಧಿಯಲ್ಲಿ ಪರ್ಷಿಯಾದಲ್ಲಿ ಜರುಗಿದ ಘಟನೆಗಳ ಒತ್ತಡಕ್ಕೆ ಒಳಗಾಗಿ ವೈದಿಕರು ಬರವಣಿಗೆಯನ್ನು ಒಪ್ಪಿಕೊಳ್ಳುವ ಅನಿವಾರ್ಯ ಸ್ಥಿತಿಗೆ ಬಂದರು.
ಪ್ರ.ಶ.ಪೂ ೫೧೯ರಲ್ಲಿ ಪರ್ಷಿಯಾದ ಚಕ್ರವರ್ತಿ ಡೇರಿಯಸ್ ಮೊನಚು ಲಿಪಿಯನ್ನು ಅಳವಡಿಸಿಕೊಂಡು ಶಿಲಾಶಾಸನ ಬರೆಸುವ ಮೂಲಕ ಮೊದಲ ಬಾರಿಗೆ ಇಂಡೋ- ಇರಾನಿಯನ್/ಆರ್ಯನ್ ಭಾಷೆಯನ್ನು ಬರಹ ರೂಪಕ್ಕೆ ತಂದನು. (ಡೇರಿಯನ್ ತನ್ನ ಶಿಲಾಶಾಸನದಲ್ಲಿ ಅರಿಯ ಭಾಷೆಯನ್ನು ಮೊದಲಿಗೆ ಬರಹ ರೂಪಕ್ಕೆ ತಂದವನು ತಾನೆಂದು ಹೇಳಿಕೊಂಡಿದ್ದಾನೆ.)ಪ್ರ.ಶ.ಪೂ ೫೩೦-೩೨೦ರ ಅವಧಿಯಲ್ಲಿ ಪರ್ಷಿಯಾ ಸಾಮ್ರಾಜ್ಯದ ಭಾಗವಾಗಿದ್ದ ಗಾಂಧಾರದಲ್ಲಿ ಸ್ಥಳೀಯ ಶಾಸ್ತ್ರಗಳನ್ನು ಬರಹ ರೂಪಕ್ಕೆ ತಂದು ಸಂರಕ್ಷಿಸುವ ಚಟುವಟಿಕೆಗಳು ಪ್ರಾರಂಭವಾದವು. ಗಾಂಧಾರದ ನೆರೆಯ ಅರಖೋಸಿಯಾ ವೇದಗಳನ್ನು ಸಂಗ್ರಹಿಸಿ , ಶಾಸ್ತ್ರರೂಪಕ್ಕೆ ಆ ಮೂಲಕ ಬರಹಕ್ಕೆ ತರುವ ಒತ್ತಡ ತರತೊಡಗಿತು. ಪ್ರ.ಶ.ಪೂ ೪ ನೇ ಶತಮಾನದಲ್ಲಿ ಬ್ರಾಹ್ಮಿ ಹಾಗೂ ಖರೋಷ್ಟಿ ಲಿಪಿಗಳು ನೈರುತ್ಯ ಭಾರತದಲ್ಲಿ ಕಾಣಿಸಿಕೊಂಡವು.
ಹಲವಾರು ವೈದಿಕ ಶಾಖೆಗಳು ಪ್ರತಿಸಾಖ್ಯಗಳ ಮೂಲಕ ತಮ್ಮ ಮಂತ್ರಗಳನ್ನು ಕಾಪಾಡಿಕೊಂಡು ಬಂದಿದ್ದವು. ವಾಯುವ್ಯ ಭಾಗದ ಗಾಂಧಾರವನ್ನು ಉದಿಚ ಎಂದು ಕರೆಯುತ್ತಿದ್ದರು. ಕೌಷ್ಟೀತಕಿ ಬ್ರಾಹ್ಮಣ ಅದು ಶ್ರೇಷ್ಟ ಭಾಷೆಯ ಪ್ರದೇಶವೆಂದು ಕರೆದಿದೆ. ಉತ್ತಮ ಪಾಠ, ಶುದ್ದ ಉಚ್ಛಾರಗಳಿಗೆ ಉದಿಚ ದೇಶಗಳತ್ತ ಮಕ್ಕಳನ್ನು ಕಳಿಸಬೇಕೆಂದು ಹೇಳಲಾಗಿದೆ.
ಮೌಖಿಕ ಸಂಪ್ರದಾಯದಲ್ಲಿ ಅಧಿಕೃತ ವ್ಯಕ್ತಿ ಮೂಲದಿಂದ ಅಯ್ದ ವ್ಯಕ್ತಿಗೆ/ಶಿಷ್ಯ/ಮಗನಿಗೆ ಜ್ಞಾನ , ಸಂಪ್ರದಾಯ ,ಆಚರಣೆಗಳು ವರ್ಗಾಂತರವಾಗುತ್ತವೆ. ಮೌಖಿಕ ಸಂಪ್ರದಾಯ ನಿರ್ದಿಷ್ಟ ಜ್ಞಾನವನ್ನು ತನ್ನಲ್ಲೇ ಉಳಿಸಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ. ಬರಹ ಸಂಸ್ಕೃತಿ ಇಂತಹ ಅಧಿಕಾರ ಮತ್ತು ಅಧಿಕೃತತೆಯನ್ನು ಮುರಿದು, ಅದನ್ನು ಸಾರ್ವತ್ರೀಕರಿಸುತ್ತದೆ. ಮಂತ್ರಗಳನ್ನು ಬರಹ ರೂಪಕ್ಕೆ ತರುವುದೆಂದರೆ, ಅವುಗಳ ಮೇಲೆ ವೈದಿಕರು ಹೊಂದಿದ್ದ ಹಿಡಿತವನ್ನು ಸಡಿಲಿಸುವುದೆಂದೇ ಅರ್ಥ. ಬರವಣಿಗೆ ವೈದಿಕರಿಗೆ ಸಹಿಸಲಾಗದ ಅವಿಷ್ಕಾರವಾಗಿದ್ದಿತು. ಪರ್ಷಿಯನ್ ಸಾಮ್ರಾಜ್ಯದಲ್ಲಿ ದೈನಂದಿನ ಆಡಳಿತ, ಸಂವಹನಗಳಿಗೆ ಬರವಣಿಗೆ ಬಳಕೆಯಾಗುತ್ತಿದ್ದಿತು. ಇಂತಹ ಬರಹ ಪಶುಪಾಲಕರಾಗಿದ್ದ ವೈದಿಕರಿಗೆ ಅಗತ್ಯ ಮಾಧ್ಯಮವೂ ಆಗಿರಲಿಲ್ಲ ಹಾಗೂ ಅವರ ಶ್ರೇಷ್ಣತೆಯನ್ನು ಮುರಿಯುವ ತಂತ್ರದಂತೆ ಭಾಸವಾಗುತ್ತಿದ್ದಿತು. ಅದ್ದರಿಂದ ಲಿಖಿತ ಸಾಮಾಜ್ಯದ ಎಲ್ಲೆಯೊಳಗಿದ್ದ ಶಾಲಾತುರ ಪಟ್ಟಣದ ವಾಸಿಯಾಗಿದ್ದ ಪಾಣಿನಿ ಬರಹ ಸಂಸ್ಕೃತಿಗೆ ಮೈಯೊಡ್ಡದೆ ಪಾರಂಪರಿಕವಾದ ನೆನಪಿಡಲು ಸುಲಭವಾಗಿರುವಂತೆ ಸೂತ್ರದ ಹೇಳಿಕೆಗಳ ರೂಪದಲ್ಲಿ ಅಷ್ಟಾಧ್ಯಾಯಿ ರಚಿಸಿದನು.
ಬರಹ ಸಂಸ್ಕೃತಿಯ ದಾಳಿಗೆ ತತ್ತರಿಸಿದ ವೈದಿಕರಲ್ಲಿ ಕೆಲವರು ಪೂರ್ವದ ವಿದೇಹದತ್ತ ಸಾಗಿದರು. ವಾಯುವ್ಯ ಭಾರತದ ಶಕಲ ಬುಡಕಟ್ಟಗೆ ಸೇರಿದ್ದ ಆದರೆ ಪೂರ್ವದ ವಿದೇಹ ಪ್ರದೇಶದಲ್ಲಿ ವಾಸವಾಗಿದ್ದ ಪರಂಪರೆಯ ಶಾಕಲ್ಯ ಮೌಖಿಕ ಸಂಪ್ರದಾಯದಲ್ಲಿ ಪದಪಾಠ ರಚಿಸಿದನು. ಈತ ಸಹ ಪಾಣಿನಿಯಂತೆ ಬರಹಕ್ಕೆ ಮನ್ನಣೆ ನೀಡಲಿಲ್ಲ. ಮೌಖಿಕ ಸಂಪ್ರದಾಯದಲ್ಲಿ ಅಪಾರ ನಿಷ್ಠೆ ಮತ್ತು ಸಾಧನೆ ಹೊಂದಿದ್ದ ಈ ವೈದಿಕ ಬ್ರಾಹ್ಮಣರು ಪಶ್ಚಿಮದಿಂದ ಪೂರ್ವಕ್ಕೆ ಸರಿಯುವುದರೆ ಹಿನ್ನೆಲೆಯಲ್ಲಿ ಬರಹ ಸಂಸ್ಕೃತಿಯ ಒತ್ತಡಗಳನ್ನು ಗುರುತಿಸಬಹುದು. ಬರವಣಿಗೆ ಗೊತ್ತಿಲ್ಲದ , ಗೊತ್ತಾದ ನಂತರವೂ ಅದನ್ನು ಪುರಸ್ಕರಿಸದ ವೈದಿಕರಲ್ಲಿ ಬರಹಕ್ಕೆ ಅವರದೇ ಆದ ಪದವಿರಲಿಲ್ಲ. ಎಲಮೈಟ್’ನ ಭಾಷೆಯ ಟಿಪ್ಪು (=ಬರವಣಿಗೆ) ಹಳೆ ಪರ್ಷಿಯನ್’ನಲ್ಲಿ ‘ದಿಪಿ’ ಪೂರ್ವ ಇರಾನ್’ನಲ್ಲಿ ಲಿಪಿ/ಲಿಬಿಯಾಗಿ ಬಳಕೆಯಲ್ಲಿದ್ದಿತು. ಈ ಪ್ರಭಾವದಿಂದ ವೈದಿಕರ ಸಂಸ್ಕೃತದಲ್ಲಿ ಪುಸ್ತಕ , ಲಿಪಿ , ಲಿಪಿಕಾರ ಪದಗಳು ಸೇರಿದವು.
ಡೇರಿಯಸ್ ಶಾಸನದಲ್ಲಿ ಪದಗಳನ್ನು ವಿಂಗಡಿಸಲು ಗೀಟುಗಳನ್ನು ಬಳಸಲಾಗಿದೆ. ಇದು ಅವೆಸ್ತಾದ ಮಂತ್ರಗಳ ಪಠಣದ ಮೇಲೆ ಅದರಂತೆ ವೈದಿಕರ ಪದಪಾಠದ ಕಲ್ಪನೆಗಳಿಗೆ ಕಾರಣವಾಗಿರುವ ಸಾಧ್ಯತೆಗಳಿವೆ. ಬರವಣಿಗೆಯಲ್ಲಿ ಪದಗಳನ್ನು ಬೇರ್ಪಡಿಸುವ ತಂತ್ರ ತಿಳಿದಿದ್ದ ಶಾಕಲ್ಯನ ಪೂರ್ವಜರು ವೈದಿಕ ಮಂತ್ರಗಳನ್ನು ಪದಪಾಠವಾಗಿ ಪಠಿಸಿ, ಉಳಿಸಲು ಯತ್ನಿಸಿರಬಹುದು. ಪ್ರ.ಶ.ಪೂ ೬ನೇ ಶತಮಾನದಲ್ಲಿ ವಾಯುವ್ಯ ಭಾರತ ಗೆದ್ದ ಪರ್ಷಿಯನ್ನರು ಅರೈಮೆಕ್ ಲಿಪಿಯನ್ನು ಅಧಿಕೃತವಾಗಿ ಬಳಸತೊಡಗಿದರು. ಇದು ಅಲ್ಪ ಕಾಲದಲ್ಲೇ ಖರೋಷ್ಟಿ ಲಿಪಿಗೆ ಮಾರ್ಪಾಡಾಯಿತು. (೧೨೬)
ಬರವಣಿಗೆಯ ಮೂಲಕ ವೇದಗಳನ್ನು ಸಾರ್ವಜನಿಕಗೊಳಿಸುವ ಯತ್ನ ಬ್ರಾಹ್ಮಣ ಅಧಿಕೃತತೆ, ಅಧಿಕಾರಕ್ಕೆ ಕೊಡಲಿ ಪೆಟ್ಟು ನೀಡತೊಡಗಿದ್ದರಿಂದ ವೈದಿಕರು ಅದಕ್ಕೆ ವಿರುದ್ಧವಾಗಿ ವೇದಗಳನ್ನು ಬರವಣಿಗೆಗೆ ಇಳಿಸಬಾರದೆಂದು ನಿಷೇಧ ಹೇರಿದರು. ಬರವಣಿಗೆಯ ಬಗ್ಗೆ ವೈದಿಕರ ತಾಳಿದ ಅಸಡ್ಡೆ ಮಹಾಭಾರತ ರಚನೆಯ ಕಾಲಕ್ಕೂ ಮುಂದುವರೆದಿದ್ದಿತು. ಮಹಾಭಾರತದಲ್ಲಿ ವೇದಗಳನ್ನು ಬರೆದವರು, ತಿರಸ್ಕರಿಸಿದವರು ನರಕಕ್ಕೆ ಹೋಗುತ್ತಾರೆ ಎಂದು ಹೇಳಿದರೆ, ಕುಮಾರಿಲ ಸರಿಯಾಗಿ ಪಠಿಸಿ ಕಲಿಯದ ಬರಹದ ಮೂಲಕ ಕಲಿತ ವೇದ ಫಲಹೀನ ಎಂದಿದ್ದಾನೆ. ಎಲ್ಲ ಕಾಲದಲ್ಲೂ ಎಲ್ಲ ಸಂಸ್ಕೃತಿಗಳೂ ಬರವಣಿಗೆಯನ್ನು ಒಪ್ಪಿಕೊಳ್ಳುತ್ತವೆ ಎಂದು ಹೇಳಲಾಗದು. ಪರ್ಷಿಯಾ ಎಲಮೈಟ್’ನಿಂದ ಮೊನಚುಲಿಪಿ ಪಡೆದಿದ್ದರೂ, ಅದರ ನೆರೆಯ ಬ್ಯಾಕ್ತ್ರಿಯಾ-ಮಾರ್ಜಿಯಾನ ಸಂಕೀರ್ಣ, ಅಗ್ನೇಯ ಇರಾನಿನ ಜಿರೋಫಟ್ ಸಂಸ್ಕೃತಿ, ಅದರ ಉತ್ತರಕ್ಕಿದ್ದ ಮುಂಡಿಗಾರ್ ಸಂಸ್ಕೃತಿ ಲಿಪಿಗಳ ಅಸ್ತಿತ್ವವನ್ನು ತಿಳಿದಿದ್ದರೂ ಅದನ್ನು ಅಳವಡಿಸಿಕೊಳ್ಳಲಿಲ್ಲ. ಉತ್ತರದಲ್ಲಿ ತುರ್ಕೆಮೆನಿಸ್ತಾನನಿಂದ ದಕ್ಷಿಣದಲ್ಲಿ ಪರ್ಷಿಯನ್ ಕೊಲ್ಲಿ, ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರದಿಂದ ಪೂರ್ವದಲ್ಲಿ ಗುಜರಾತ್, ದೆಹಲಿಯವರೆಗೆ ಹಲವು ಜನಾಂಗಗಳು ಲಿಪಿಯಿಂದ ದೂರವೇ ಉಳಿದಿದ್ದವು. ಇದರಂತೆ ಅಕ್ಷರಸ್ಥ ಮಾಯಾಗಳ ನೆರೆಹೊರೆಯಲ್ಲಿಯೇ ಅನಕ್ಷರಸ್ಥರಾದ ಇಂಕಾ ಹಾಗೂ ಇತರ ಸಂಸ್ಕೃತಿಗಳು ಸಮ ಕಾಲೀನವಾಗಿದ್ದವು. ಈ ಸಂಸ್ಕೃತಿಗಳು ಬರವಣಿಗೆ ತಮಗೆ ಅಗತ್ಯವೆಂದು ಪರಿಗಣಿಸಿರಲಿಲ್ಲ. ಅಂತಹ ಸಂಸ್ಕೃತಿಗಳಲ್ಲಿ ವೈದಿಕವೂ ಸೇರಿದೆ.
ಎಡವುತ್ತಿರುವಯತ್ನಗಳು
ಮೊದಲ ಬಾರಿಗೆ ಆರ್ಯ ಭಾಷೆಗಳನ್ನು ಬರೆಯಲು ಬಳಸಲಾದ ಮೊನಚು ಲಿಪಿ (ಡೇರಿಯಸ್ ಶಾಸನ) ನಂತರ ಬಳಸಲಾದ ಬ್ರಾಹ್ಮಿಲಿಪಿಗಿಂತ (ಅಶೋಕ ಶಾಸನ) ಸೈಂಧವ ಲಿಪಿ ತೀರಾ ಭಿನ್ನ. ಸೈಂಧವ ಲಿಪಿಯೊಂದಿಗೆ ಬ್ರಾಹ್ಮಿಗೆ ಸಂಬಂಧ ಕಲ್ಪಿಸುವುದೇ ತಪ್ಪು, ಬರವಣಿಗೆ ಕುರಿತಾದ ವೈದಿಕರ ಧೋರಣೆಗಳನ್ನು ಗಮನಿಸಿದರೆ ಸೈಂಧವರ ಭಾಷೆ ಸಂಸ್ಕೃತವಾಗಿರುವ ಸಾಧ್ಯತೆಗಳು ಕ್ಷೀಣವಾಗಿ , ಆ ಮೂಲಕ ಸೈಂಧವ ಲಿಪಿಯನ್ನು ಬಿಡಿಸುವ ಯತ್ನಕ್ಕೆ ಹಿನ್ನಡೆಯಾಗುತ್ತದೆ. ಇಷ್ಟೆಲ್ಲ ತೊಡಕು , ಹಿನ್ನಡೆಗಳ ಸಿಕ್ಕಿನಲ್ಲಿಯೂ ಋಗ್ವೈದಿಕ ಸಂಸ್ಕೃತದ ನೆರವಿನಿಂದ ಸೈಂಧವ ಲಿಪಿಯನ್ನು ಬಿಡಿಸುವ ಯತ್ನಗಳಿಗೆ ಬರವಿಲ್ಲ.
ಸೈಂಧವ ಲಿಪಿಯನ್ನು ಚಿತ್ರ/ಚಿತ್ರಾಕ್ಷರ/ಚಿತ್ರಪದ ಲಿಪಿಯಾಗಿ ಪರಿಗಣಿಸಿ ಸಂಸ್ಕೃತದ ಮೂಲಕ ಬಿಡಿಸಲು ನಡೆಸಿರುವ ಬಹುತೇಕ ಎಲ್ಲ ಯತ್ನಗಳು ವೈದಿಕಾಭಿಮಾನದಿಂದ ತುಂಬಿ ತುಳುಕುತ್ತಿದ್ದು ಋಗ್ವೈದಿಕ ಸಂಸ್ಕೃತವೇ ಸೈಂಧವರ ಭಾಷೆ ಎಂಬ ಅಚಲ ನಿರ್ಧಾರದಿಂದ ಪ್ರಾರಂಭವಾಗುತ್ತವೆ. ನಂತರ ಕಾಲದ ನಂಬಿಕೆ , ಪುರಾಣಗಳನ್ನು ಇದಕ್ಕಾಗಿ ಎಗ್ಗಿಲ್ಲದೆ ಬಳಸಿಕೊಳ್ಳಲಾಗಿದೆ. ಕೆಲವರು ಈಗ ಹಿಂದೂಧರ್ಮದಲ್ಲಿ ಜನಪ್ರಿಯವಾಗಿರುವ ತಾವು ನಂಬಿರುವ ದೈವಗಳ ಪೂರ್ವಸ್ಥಿತಿಯನ್ನು ಇವುಗಳಲ್ಲಿ ಕಂಡಿದ್ದಾರೆ. ಇಂತಹ ಪ್ರಯತ್ನಗಳಲ್ಲಿ ಎಸ್.ಆರ್. ರಾವ್ ಮಾಡಿರುವ ಪ್ರಯತ್ನಗಳನ್ನು ಪ್ರಾತಿನಿಧಿಕವಾಗಿ ಸ್ವಲ್ಪ ವಿವರವಾಗಿ ನೋಡಬಹುದು.
ಎಸ್.ಆರ್.ರಾವ್ ಸೈಂಧವ ಲಿಪಿ ಬಿಡಿಸುವ ಮೊದಲು (೧) ಸೈಂಧವ ಲಿಪಿ ನಮಗೆ ಈಗ ತಿಳಿದಿರುವ ಭಾಷೆಯನ್ನು ಪ್ರತಿನಿಧಿಸುತ್ತಿದ್ದಿತು. (೨) ಲಿಪಿಯ ಲಕ್ಷಣಗಳು , ಸಂಕೇತಗಳು ಬೇರೆ ಕಾಲದ ಬೇರೆ ನೆಲೆಯ ಸ್ಥಳಗಳಲ್ಲಿಯೂ ಕಂಡು ಬರುತ್ತವೆ. (೩) ಸೈಂಧವ ನಾಗರಿಕತೆ ಪ್ರಬುದ್ದ ಹಂತಕ್ಕೆ ಬರುವ ವೇಳೆಗೆ ಅದರ ಸಂಕೇತಗಳು ಬದಲಾಗದಿದ್ದರೂ ಅವುಗಳ ಚಿತ್ರಸ್ವರೂಪ ಬದಲಾಗಿ ಜಟಿಲ ಚಿತ್ರಗಳು ಸರಳ ವಕ್ರರೇಖೆಗಳಾಗತೊಡಗುತ್ತವೆ. ಪ್ರತೀಕಗಳಿಗೆ ಕಾಗುಣಿತಗಳು ಕಾಣಿಸಿಕೊಳ್ಳುತ್ತವೆ. ಇದು ಬ್ರಾಹ್ಮಿ ಲಿಪಿಯ ಗುಣಿತಗಳನ್ನು ಹೋಲುತ್ತದೆ. ಈ ಲಕ್ಷಣ ಬ್ರಾಹ್ಮಿ ಹಾಗೂ ದೇವನಾಗರಿಯ ಸಸ್ವರ ವ್ಯಂಜನ ಪದ್ದತಿಯಲ್ಲೂ ಕಾಣಿಸಿಕೊಂಡಿವೆ. ಆದ್ದರಿಂದ ಸೈಂಧವ ಲಿಪಿ ಚಿತ್ರಧ್ವನಿ ಹಾಗೂ ಚಿತ್ರಾಕ್ಷರ ಲಿಪಿಯೇ ಹೊರತು ಚಿತ್ರಲಿಪಿಯಲ್ಲ (೪) ಸೈಂಧವ ಲಿಪಿಯಲ್ಲಿ ೨೪ ಮೂಲ ಧ್ವನಿ ಸಂಕೇತಗಳು ಇವೆ. ಇವುಗಳಿಗೆ ಕೆಲ ಪರ್ಯಾಯ ಸಂಕೇತಗಳೂ ಅಸ್ತಿತ್ವದಲ್ಲಿವೆ. ಇವಗಳೊಂದಿಗೆ ಕೆಲವು ೨೮ ಭಾವಲಿಪಿ ಸಂಕೇತಗಳಿವೆ. (೫) ಸೈಂಧವ ಲಿಪಿಯನ್ನು ಆಧರಿಸಿ ಪ್ರ.ಶ.ಪೂ ೧೬೦೦ರಲ್ಲಿ ಸೆಮೆಟಿಕ್ ಲಿಪಿ ಕಾಣಿಸಿಕೊಂಡಿತು. ಪ್ರ.ಶ.ಪೂ ೪೦೦ ರಲ್ಲಿ ಬ್ರಾಹ್ಮಿ ಲಿಪಿ ಬಂದಿತು. ಆದರೂ ಸೆಮೆಟಿಕ್ ಹಾಗೂ ಬ್ರಾಹ್ಮಿ ಲಿಪಿಗಳ ನಡುವೆ ಯಾವುದೇ ಸಂಬಂಧವಿಲ್ಲ.
(೬) ಸೈಂಧವ ಲಿಪಿ ಚಿತ್ರಾಕ್ಷರ ಹಾಗೂ ಭಾವಲಿಪಿ ಸಂಕೇತಗಳೆರಡನ್ನೂ ಒಳಗೊಂಡಿದೆ. ಸೈಂಧವ ಲಿಪಿ ಉಗಾರಿಟಿಕ್, ಫೊನೇಷಿಯನ್ ನಂತಹ ಸೆಮಿಟಿಕ್ ಲಿಪಿಯಲ್ಲಿರುವ ೨೪ ಸಂಕೇತಗಳು ಸೈಂಧವ ಲಿಪಿಯಲ್ಲೂ ಇವೆ. (೭) ಮಹಾಶಿಲಾಯುಗಕ್ಕೆ ಸೇರಿದ ಮಡಕೆ, ಕುಡಿಕೆಗಳ ಮೇಲೆ-ಪ್ರ.ಶ.ಪೂ ೯ನೇ ಶತಮಾನದವರೆಗೆ- ಕಾಣಬರುವ ೮೯% ಸಂಕೇತಗಳನ್ನು ಸೈಂಧವ ಲಿಪಿಯಿಂದ ಬಂದವೆಂದು ಹೇಳಬಹುದು. ಎಂದರೆ ಪ್ರ.ಶ.ಪೂ ೧೯೦೦-೯೦೦ವರೆಗಿನ ಸಾವಿರ ವರ್ಷಗಳ ಅವಧಿಯನ್ನು ಮಡಿಕೆ, ಸರಕುಗಳ ಮೇಲಿನ ಸೈಂಧವ ಲಿಪಿ ಹೋಲುವ ಸಂಕೇತಗಳು ಆವರಿಸಿವೆ. ಇಂತಹುದೇ ಸಂಕೇತಗಳು ನಂತರ ಕಾಲದ ಮುದ್ರಾಂಕಿತ (ಪಂಚ್ ಮಾರ್ಕ್) ನಾಣ್ಯಗಳ ಮೇಲೂ ಕಂಡು ಬಂದಿವೆ. ಅದ್ದರಿಂದ ಸೈಂಧವ ಲಿಪಿ ಹಾಗೂ ನಂತರ ಕಾಲದ ನಡುವೆ ಸಾತತ್ಯವಿದೆ. ಇದರ ಮುಂದುವರಿಕೆಯಾಗಿ ಬ್ರಾಹ್ಮಿ ಲಿಪಿ ಬಂದಿತು. (೮) ಸೈಂಧವ ನಾಗರಿಕತೆಯ ಕಾಲದಲ್ಲಿ ಸುಮಾರು ೩೦೦ವರ್ಷಗಳ ಅವಧಿಯಲ್ಲಿಯೂ ಸೈಂಧವ ಲಿಪಿಯ ಸಂಕೇತಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡು ಬರುವುದಿಲ್ಲ. ಅದರಂತೆಯೇ ಪ್ರ.ಶ.ಪೂ ೬೦೦-೩೦೦ರ ಮುನ್ನೂರು ವರ್ಷಗಳ ಅವಧಿಗೆ ಸೇರಿದ ಮುದ್ರಾಂಕಿತ (ಪಂಚ್ ಮಾರ್ಕ್) ನಾಣ್ಯಗಳ ಮೇಲಿನ ಸಂಕೇತಗಳಲ್ಲಿಯೂ ಎದ್ದುಕಾಣುವ ಬದಲಾವಣೆಗಳಿಲ್ಲ. ಸಂಪ್ರದಾಯಶೀಲತೆ ಇವೆರಡೂ ಅವಧಿಗಳಲ್ಲಿ ಕಾಣ ಬರುತ್ತದೆ. ಇದು ಸೈಂಧವ ಲಿಪಿ ನಿಧಾನವಾಗಿ ಮುಂದುವರೆದಿರುವ ಕುರುಹಾಗಿದೆ. (೯) ಪ್ರ.ಶ ಆರಂಭ ಕಾಲಕ್ಕೆ ಸೇರಿದ ನಾಣ್ಯಗಳು ಸೈಂಧವ ಮುದ್ರಿಕೆಗಳನ್ನು ಹೋಲುತ್ತವೆ. ಸೈಂಧವ ಮುದ್ರಿಕೆಗಳಲ್ಲಿ ಪ್ರಾಣಿ ,ಪಕ್ಷಿ ಸಸ್ಯ, ಅಚರಣೆಯ ಆಶಯಗಳು ಅದರ ಮೇಲೆ ಸಂಕ್ಷಿಪ್ತ ಬರಹಗಳಿವೆ. ಇದೇ ಪದ್ದತಿ ನಂತರ ಕಾಲದ ನಾಣ್ಯಗಳ ಮೇಲೂ ಮುಂದುವರೆದಿದೆ.(೧೦) ಸೈಂಧವ ಮುದ್ರಿಕೆಗಳ ಹಿಂಭಾಗದಲ್ಲಿ ದಾರದ ಗುರುತುಗಳಿವೆ. ಎಂದರೆ ಮುದ್ರಿಕೆಗಳನ್ನು ಸರಕಿಗೆ, ಪತ್ರಗಳಿಗೆ ಅಂಟಿಸುತ್ತಿದ್ದುದು ಖಚಿತ. ಇನ್ನೊಂದು ಬಗೆಯ ಮುದ್ರಿಕೆಗಳಲ್ಲಿ ಸಣ್ಣ ತೂತು ಕೊರೆದು ಗುರುತಿನ ಲಾಂಛನವಾಗಿ ಬಳಸುವಂತೆ ಮಾಡಲಾಗಿದೆ. ಇಂತಹುದೇ ಲಕ್ಷಣಗಳು ನಂತರ ಕಾಲದ ನಾಣ್ಯಗಳಲ್ಲಿಯೂ ಪತ್ತೆಯಾಗಿದೆ. ಎಂಬ ನಿರ್ಧಾರಗಳಿಗೆ/ಊಹೆಗಳಿಗೆ ಬಂದಿದ್ದಾರೆ.
ಹೊರನೋಟಕ್ಕೆ ಒಂದೇ ರೀತಿ ಕಾಣುವ ಲಿಪಿಗಳೆರಡನ್ನು ಹೋಲಿಸಿ, ಗೊತ್ತಿರದ ಲಿಪಿಯನ್ನು ಬಿಡಿಸುವ ಹಲವಾರು ವಿಫಲ ಯತ್ನಗಳು ಈ ಹಿಂದೆ ಜರುಗಿವೆ. ಒಂದು ಗೊತ್ತಿರದ ಲಿಪಿ ಇನ್ನೊಂದು ಗೊತ್ತಿರುವ ಲಿಪಿಯನ್ನು ಹೋಲುತ್ತಿದ್ದರೆ, ಗೊತ್ತಿರುವ ಲಿಪಿಯ ಶಬ್ದಗಳನ್ನು ಗೊತ್ತಿರದ ಲಿಪಿಗೆ ಅನ್ವಯಿಸಿ ಅದರ ಉಚ್ಛಾರ ನಿರ್ಧರಿಸಲಾಗದು. ಏಕೆಂದರೆ ಎರಡು ಲಿಪಿಗಳಲ್ಲಿ ಒಂದೇ ರೀತಿ ಕಾಣಿಸುವ ಸಂಕೇತಗಳಿಗೆ ಒಂದೇ ಉಚ್ಛಾರವಿರುವ ಭರವಸೆಯಿಲ್ಲ. ಏಕೆಂದರೆ ಭಾಷೆಗಳು ಬೇರೆಯಾದಂತೆ ಲಿಪಿಗಳು ಅವುಗಳಿಗೆ ಅನುಗುಣವಾಗಿ ವಿಕಸಿಸಿರುತ್ತವೆ. ರೂನಿಕ್ ಅಥವಾ ಸಿರಿಟಿಕ್ ಲಿಪಿಗಳು, ಲ್ಯಾಟಿನ್ ಹಾಗೂ ಗ್ರೀಕ್ ಲಿಪಿಗಳೊಂದಿಗೆ ಹಲವಾರು ಸಾಮಾನ್ಯ ಸಂಕೇತಗಳನ್ನು ಹಂಚಿಕೊಂಡಿವೆ. ಈ ಸಾಮಾನ್ಯತೆಯ ಲಕ್ಷಣದ, ಮೇಲೆ ಈ ಲಿಪಿಗಳನ್ನು ಬಿಡಿಸಲು ಸಾಧ್ಯವಿಲ್ಲ. ಲ್ಯಾಟಿನ್’ನ ಸಿ ಮತ್ತು ಪಿ ಸಿರಿಟಿಕ್’ನಲ್ಲಿ ಎಸ್ ಮತ್ತು ಆರ್ ಉಚ್ಛಾರಗಳಾಗಿ ಕಾಣಿಸಿಕೊಂಡಿವೆ. ಇಂತಹ ಸ್ಥಿತಿಯಲ್ಲಿ ಒಂದು ಅಜ್ಞಾತ ಲಿಪಿಯನ್ನು ಬಿಡಿಸುವ ಕೆಲಸವನ್ನು ಎಲ್ಲಿಂದ ಹೇಗೆ ಪ್ರಾರಂಭಿಸಬೇಕೆಂಬ ಸಮಸ್ಯೆ ಉಳಿಯುತ್ತದೆ. ಹಾಗಾಗಿ ಒಂದೇ ಮೂಲದಿಂದ ಬಂದಿರಬಹುದೆಂದು ಭಾವಿಸಲಾದ ಲಿಪಿಗಳಲ್ಲಿ ಒಂದೇ ಬಗೆಯ ಸಂಕೇತಗಳಿಗೆ ಒಂದೇ ರೀತಿಯ ಉಚ್ಛಾರಣೆ ಲಗತ್ತಿಸುವುದು ಪ್ರಾಯೋಗಿಕ ನಡೆಯಾಗುತ್ತದೆ. ಹಾಗಾಗಿ ಬೇರೆ ಯಾವ ಪರ್ಯಾಯ ಮಾರ್ಗಗಳು ದಕ್ಕದಿದ್ದಾಗ ಸೈಂಧವ ಹಾಗೂ ಸೆಮೆಟಿಕ್ ಲಿಪಿಯ ಸಂಕೇತಗಳು ಒಂದೇ ಉಚ್ಛಾರ ಹೊಂದಿದ್ದವು. ಎಂದು ಊಹಿಸುವುದು ದೊಡ್ಡ ಅಪರಾಧವಲ್ಲ. ಆರಂಭದ ಇಂತಹ ಪ್ರಯತ್ನ ಅಸಂಬದ್ದ ಅಸಹಜ ಓದಿಕೆಗೆ ಕಾರಣವಾದರೆ, ಅಂತಹ ಉಚ್ಛಾರಣೆಗಳನ್ನು ತಿದ್ದಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ವಿಭಿನ್ನ ಪ್ರಯತ್ನವೆಂದು ಕೊರತೆಗಳನ್ನು ಕಡೆಗಣಿಸಿ ನೋಡಿದಾಗಲೂ ಎಸ್.ಆರ್.ರಾವ್ ಓದಿಕೆ ಅವರದೇ ಆದ ಇತಿಮಿತಿಗಳನ್ನು ಹೊಂದಿದೆ. ಸ್ಥೂಲವಾಗಿ ಅವುಗಳನ್ನು ಪಟ್ಟಿಮಾಡಬಹುದು.
(೧) ಎಸ್.ಆರ್.ರಾವ್ ಪುರಾಣಗಳಲ್ಲಿ ಬರುವ ದ್ವಾರಕೆಯನ್ನು ಪುರಾತತ್ತ್ವ ಶೋಧನೆಗಳಲ್ಲಿ ಗುರುತಿಸಲಾದ ದ್ವಾರಕೆಯೊಂದಿಗೆ ಸಮೀಕರಿಸಿ ಸೈಂಧವ ಲಿಪಿ ಬಿಡಿಸಲು ಯತ್ನಿಸಿದ್ದಾರೆ. ಬ್ರಾಹ್ಮಿ ಲಿಪಿ ಮೊಟ್ಟ ಮೊದಲ ಬಾರಿಗೆ ಪಿಪ್ರಾಹ್ವದಲ್ಲಿ ಸಿಕ್ಕಿರುವ ಸಂಪುಟದ ಮೇಲೆ ಗುರುತಿಸಲಾಗಿದ್ದು ಇದರ ಕಾಲ ಪ್ರಶಪೂ ೪೫೦ ಎಂದು ಅಂದಾಜಿಸಲಾಗಿದೆ.
(೨) ರಾವ್ ಬಿಡಿಸಿದ ಸೈಂಧವ ಲಿಪಿಯಲ್ಲಿ ಘೋಷ ವ್ಯಂಜನ ಮತ್ತು ಮೂರ್ಧನ್ಯ ವ್ಯಂಜನಗಳಿಗೆ (ಟ, ಠ, ಡ, ಢ, ಣ) ಸಂಕೇತಗಳಿಲ್ಲ. ಈ ವ್ಯಂಜನಗಳನ್ನು ಅಘೋಷ ವ್ಯಂಜನಗಳಿಗೆ ಬಳಸಿದ ಸಂಕೇತಗಳನ್ನು ಮಾರ್ಪಡಿಸಿ ಸೂಚಿಸಲಾಗಿದೆ. ಇದರಿಂದ ಸೈಂಧವ ಲಿಪಿಯಲ್ಲಿ ಇವುಗಳ ಧ್ವನಿಮಾ ವ್ಯತ್ಯಾಸವಿರಲಿಲ್ಲ. ಅಥವಾ ಸೈಂಧವ ಲಿಪಿ ಬಳಕೆಗೆ ಬಂದ ನಂತರ ಸಂಸ್ಕೃತದಲ್ಲಿ ರ್ಮೂರ್ಧನೀಕರಣ ಜರುಗಿತೆಂದು ಒಪ್ಪಬೇಕಾಗುತ್ತದೆ.
(೩) ಕೆಲ ಪದಗಳು ಋಗ್ವೈದಿಕ ಸಂಸ್ಕೃತಕ್ಕಿಂತ ಅವೆಸ್ತಾದ ಕಡೆ ಒಲವು ತೋರುತ್ತವೆ. ಸಪ್ತ ಬದಲು ಹಪ್ತ , ಅಗ್ನಿ ಬದಲು ಅವೆಲ್ , ಸತ್ಯ ಬದಲು ಅಶ ಎಂದು ಓದಲಾಗಿದೆ. ಎಂದರೆ ಲಿಪಿ ಮೂಲದಲ್ಲಿ ಇಂಡೋ-ಆರ್ಯನ್ ಭಾಷೆಯಾದ ಸಂಸ್ಕೃತವನ್ನು ಪ್ರತಿನಿಧಿಸಲು ರೂಪಿಸಲಾಗಿಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅಥವಾ ಇಂಡೋ-ಆರ್ಯನ್ನರು ತಮ್ಮ ಸಂಸ್ಕೃತಕ್ಕೆ ಬೇಕಾದ ಲಿಪಿಯ ಅನ್ವೇಷಣೆಯ ಆರಂಭಿಕ ಪ್ರಯತ್ನಗಳಲ್ಲಿದ್ದರು ಈ ಕೊರತೆಗಳನ್ನು ಸರಿಪಡಿಸಿ ಮುಂದೆ ಬ್ರಾಹ್ಮಿ ಲಿಪಿ ಮೂಡಿತೆಂದು ಭಾವಿಸಬೇಕಾಗುತ್ತದೆ.
(೪) ಬಾಣದ ಸಂಕೇತ ಶರವನ್ನು ಆ ಮೂಲಕ ಶ/ಕ್ಷ ಉಚ್ಛಾರವನ್ನು ಪ್ರತಿನಿಧಿಸುತ್ತದೆಯೆಂದು ಊಹಿಸಲಾಗಿದೆ. ಇದು ನಿಜವೇ ಆಗಿದ್ದರೆ ಸೈಂಧವ ಭಾಷೆ ದ್ರಾವಿಡವಾಗಿರುವ ಸಾಧ್ಯತೆಗಳು ಕ್ಷೀಣವಾಗುತ್ತವೆ. ಆಗ ಬಾಣದ ಸಂಕೇತ ಚಿತ್ರ ಅಥವಾ ಕ್ಷೇತ್ರ ಪದ ಸೂಚಿಸಬಹುದು. ಆದರೆ ಇವೆಲ್ಲ ಊಹೆಗಳು ಮಾತ್ರ. ಬಾಣದ ಸಂಕೇತ ಶರ ಏಕೆ ಆಗಿರಬೇಕು. ಅದು ದ್ರಾವಿಡದ ಕಣೆಯಾಗಿದ್ದು ‘ಕ’ ಸೂಚಿಸುತ್ತಿರಬಹುದು ಎನ್ನುವುದಕ್ಕೆ ಎದುರುತ್ತರ ಕೊಡಲಾಗದು.
(೫) ‘ಅ’ ಸ್ವರವನ್ನು ಪ್ರತಿನಿಧಿಸುವ ಸಂಕೇತ ಕೆಲವು ಕಡೆ ವ್ಯಂಜನದ ನಂತರ ಬರುತ್ತದೆ.
(೬) ರಾವ್ ಬಿಡಿಸಿರುವ ಸೈಂಧವ ಲಿಪಿಯ ಭಾಷೆಯಲ್ಲಿ ಮೂರು ವಿಭಕ್ತಿಗಳಿವೆ, ಲಿಂಗ , ವಚನಗಳು ಇಲ್ಲ. ಆದರೆ ಈಗ ಭಾಷಾತಜ್ಞರು ಒಪ್ಪಿರುವಂತೆ ಇಂಡೋ-ಯುರೋಪಿಯನ್ ಭಾಷೆಗಳಲ್ಲಿ ಎಂಟು ವಿಭಕ್ತಿಗಳು , ಎರಡು (ಹಿಟ್ಟೈಟ್) ಹಾಗೂ ಮೂರು ಲಿಂಗಗಳಿವೆ. ಹಾಗಾದರೆ ಸೈಂಧವ ಮುದ್ರಿಕೆಗಳ ಮೇಲೆ ಎಂಟರಲ್ಲಿ ಮೂರು ವಿಭಕ್ತಿಗಳು (ಅವನ, ಅವರ, ಅವರಿಂದ) ಮುಂತಾದವು ಮಾತ್ರ ಬಳಕೆಯಾಗಿವೆಯೇ ? ಇದು ಸರಿ ಎಂದಾದರೆ ಸೈಂಧವ ಮುದ್ರಿಕೆಗಳ ಮೇಲೆ ವಾಕ್ಯ, ಹೇಳಿಕೆಗಳಾಗಲಿ ಇಲ್ಲ. ಅವುಗಳ ಮೇಲೆ ರಾಮನ ಚೀಲ ಮಾಲಿಕನ ಹಣ ಎನ್ನುವಂತಹ ಹೇಳಿಕೆಗಳು ಮಾತ್ರ ಇವೆ ಎನ್ನಬೇಕಾಗುತ್ತದೆ. ಆರಂಭದಲ್ಲಿ ಎಲ್ಲ ಇಂಡೋ-ಯುರೋಪಿಯನ್ ಭಾಷೆಗಳಲ್ಲಿ ೮ ವಿಭಕ್ತಿಗಳನ್ನು ಹೊಂದಿದ್ದವು. ಆರ್ಯ ಭಾಷೆ ಪ್ರತಿನಿಧಿಸುವ ಸೈಂಧವ ಲಿಪಿಯಲ್ಲಿ ಕೇವಲ ಮೂರು ಮಾತ್ರ ಕಂಡು ಬರುತ್ತದೆ ಎನ್ನುವುದನ್ನು ಒಪ್ಪುವುದು ಕಷ್ಟ.
ಇಂಡೋ ಇರಾನಿಯನ್ನರು ಅವೆಸ್ತಾ ಹಾಗೂ ಋಗ್ವೈದಿಕ ಬಣಗಳಾಗಿ ಒಡೆದ ಕಾಲಾವಧಿಗೆ ಸಿಂಧೂಲಿಪಿಗಳು ಸೇರುತ್ತವೆ. ಹಿಟ್ಟೈಟ್ ಹಾಗೂ ನಂತರದ ಇಂಡೋ-ಯುರೋಪಿಯನ್ ಭಾಷಾ ಕವಲುಗಳಲ್ಲಿ , ಋಗ್ವೈದಿಕ ಹಾಗೂ ನಂತರ ವೈದಿಕ ಸಾಹಿತ್ಯದಲ್ಲಿ ಲಿಂಗ,ವಚನಗಳು ಸ್ಪಷ್ಟವಾಗಿ ಕಂಡು ಬರುತ್ತವೆ. ಸಿಂಧೂ ಲಿಪಿ ಬರೆದ ಈ ವೈದಿಕರು, ತಮ್ಮ ಮುದ್ರಿಕೆಯ ಲಿಪಿಗಳಲ್ಲಿ ಲಿಂಗ, ವಚನಗಳನ್ನು ಬರೆಯುವುದನ್ನು ಕೈಬಿಟ್ಟರೇ ಅಥವಾ ಮರೆತರೇ ಎನ್ನುವ ಪ್ರಶ್ನೆ ಎಸ್.ಆರ್.ರಾವ್ ಓದಿಕೆಯಲ್ಲಿ ಎದುರಾಗುತ್ತದೆ.
(೭) ಸೈಂಧವ ಲಿಪಿ ಚಿತ್ರಾಕ್ಷರ ಲಿಪಿ ಎಂದು ಒಪ್ಪಿದ ನಂತರ ಪ್ರತಿಯೊಂದು ಚಿತ್ರವೂ ಒಂದು ಅಕ್ಷರವನ್ನು ಪ್ರತಿನಿಧಿಸುತ್ತದೆ ಎನ್ನುವದನ್ನು ಒಪ್ಪುವ ಅನಿವಾರ್ಯತೆ ಎದುರಾಗುತ್ತದೆ. ಇದರಿಂದಾಗಿ ಬಿಲ್ಲು ಹಿಡಿದಿರುವ ಮನುಷ್ಯ , ಕೊಳಗ ಒಯ್ಯುತ್ತಿರುವ ಮನುಷ್ಯ , ಮಂಡಿಯೂರಿ ಪ್ರಾರ್ಥನೆಗೆ ಕುಳಿತಿರುವ ಮನುಷ್ಯನಂತಹ ಎಲ್ಲ ಸಂಕೇತಗಳನ್ನು ಅಕ್ಷರಗಳಿಗೆ ಸೇರಿಸಿದ ಕಾಗುಣಿತಗಳೆಂದು ಪರಿಗಣಿಸಲಾಗಿದೆ. ಇದನ್ನು ಒಪ್ಪವುದು ಅಸಾಧ್ಯ. ಕೊಳಗೆ ಹಿಡಿದಿರುವ ಮನುಷ್ಯ, ಎರಡು ನೊಗಗಳಿಗೆ ಲಗತ್ತಾಗಿರುವ ಕೊಳಗಗಳನ್ನು ಹೊತ್ತಿರುವ ಮನುಷ್ಯನ ಸಂಕೇತವನ್ನು ‘ಜಲಪ’ ಎಂದರೆ ನೀರಿನ ದೇವ ಎಂದು ಓದಿದ್ದಾರೆ. ವಕ್ರ ಗೀಟುಗಳ ಸನಿಹದಲ್ಲೇ ಇಂತಹ ಚಿತ್ರಗಳು ಬಂದಿರುವುದು ಸೈಂಧವ ಲಿಪಿ ಚಿತ್ರಾಕ್ಷರಲಿಪಿ ಎಂಬ ವಾದಕ್ಕೆ ದೊಡ್ಡ ತೊಡಕಾಗಿದೆ. ಕೆಲವು ಸಂಕೇತಗಳಿಗೆ ಬಗೆ ಬಗೆಯಲ್ಲಿ ಗೀಟುಗಳನ್ನು ಸೇರಿಸಿರುವುದು ಸಂಯುಕ್ತ ಪದವೆಂದು ಪರಿಗಣಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಗಳಿಗೆ ಉತ್ತರಗಳಿಲ್ಲ.
(೮) ಸೈಂಧವ ಲಿಪಿಯ ಓದಿಕೆಯಲ್ಲಿ ಸಂಸ್ಕೃತದಲ್ಲಿ ಪದದ ಮೊದಲಿಗೆ ಬರುವ ಕಂಠ ಮೂಲೀಯ (ಲ್ಯಾರಿಂಜಿಯಲ್) ‘ಹ’ ಗುರುತಿಸಲಾಗಿದೆ. ಸಂಸ್ಕೃತದಲ್ಲಿ ಪದದ ಕೊನೆಗೆ ವಿಸರ್ಗ ರೂಪದಲ್ಲಿ ಹ (ರಾಮ:) ಬರುತ್ತದೆಯೇ ಹೊರತು ಮೊದಲಲ್ಲ. ಆದ್ದರಿಂದ ರಾವ್ ಸೈಂಧವ ಲಿಪಿ ಬಿಡಿಸಿಕೆ ಸಂಸ್ಕೃತ ವ್ಯಾಕರಣ ದೃಷ್ಟಿಯಿಂದ ಅಂಗೀಕಾರಾರ್ಹವಲ್ಲ.
(೯) ಸೆಮಿಟಿಕ್ ಲಿಪಿ ಸೈಂಧವ ಲಿಪಿಯಿಂದ ಪ್ರೇರಿತ ಎನ್ನುವುದಕ್ಕೆ ಹಲವು ಅಡಚಣೆಗಳಿವೆ. ಸೆಮಿಟಿಕ್’ನಲ್ಲಿ ಅಲಫ್ = ಗೂಳಿ , ಬೆಟ್ = ಮನೆ, ಗಿಮೆಲ್= ಒಂಟೆ ಆದ್ದರಿಂದ ಗೂಳಿ, ಮನೆ, ಒಂಟೆ , ಅ- ಬ- ಗ ಉಚ್ಛರಣೆಯ ಸಂಕೇತಗಳಾಗಿವೆ (ಚಿತ್ರಾಕ್ಷರ ಲಿಪಿ). ಸೆಮೆಟಿಕ್ ಜನ ತಮ್ಮ ಭಾಷೆಯ ಪದ ಸಂಪತ್ತಿನ ಪರಿಕಲ್ಪನೆಗಳನ್ನೇ ಶಬ್ದಗಳ ಪ್ರತೀಕಗಳಾಗಿಸಿರುವುದರಿಂದ ಸೆಮಿಟಿಕ್ ಲಿಪಿ, ಸೈಂಧವ ಲಿಪಿಯಿಂದ ಪ್ರಭಾವಿತವಾಗಿ ಹುಟ್ಟಿತು ಎನ್ನುವ ವಾದಕ್ಕೆ ಹಿನ್ನೆಡೆಯುಂಟಾಗುತ್ತದೆ. ಒಂದು ಭಾಷೆಯಲ್ಲಿ ಒಂದು ಶಬ್ದದಿಂದ ಪ್ರಾರಂಭವಾಗುವ ಹಲವಾರು ಪದಗಳು ಇರುತ್ತವೆ. ಆ ಶಬ್ದವನ್ನು ಆಡು , ಆಳು, ಆನೆ, ಆಕಳು ,ಚಿತ್ರಗಳಿಂದ ಸೂಚಿಸುವುದು ಸಾಧ್ಯ. ಆದ್ದರಿಂದ ಎರಡು ವಿಭಿನ್ನ ಲಿಪಿಯ ಒಂದು ಸಂಕೇತ ವಿಭಿನ್ನ ಉಚ್ಛಾರ ನೀಡುವುದು ಸಾಧ್ಯ. ಇದರಂತೆಯೇ ಹಸುವಿನ ಚಿತ್ರ ಆಕಳು , ದನ ಎಂಬ ಎರಡು ಪದಗಳನ್ನು ಪ್ರತಿನಿಧಿಸಬಲ್ಲದು. ಆದ್ದರಿಂದ ಚಿತ್ರ, ಸಂಕೇತಗಳು ಒಂದೇ ರೀತಿಯಲ್ಲಿ ಇದ್ದ ಮಾತ್ರಕ್ಕೆ ಅವು ಒಂದೇ ಉಚ್ಛಾರ ಹೊಂದಿರುತ್ತವೆ ಎನ್ನಲಾಗದು. ಸೈಂಧವದಿಂದ ಸೆಮೆಟಿಕ್ ಲಿಪಿ ಬಂದಿತೆನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ.
ಸೈಂಧವ ಲಿಪಿ ಹಾಗೂ ಈಜಿಪ್ತಿನ ಪವಿತ್ರ ಲಿಪಿಗಳ ನಡುವೆ ಸಂಬಂಧ ಕಲ್ಪಿಸುವ ಯತ್ನಗಳನ್ನು ಹಲ ವಿದ್ವಾಂಸರು ಮಾಡಿದ್ದಾರೆ. ಆದರೆ ಹಲವಾರು ಬಗೆಯ ಲಿಪಿಗಳನ್ನು ಹೊಂದಿದ್ದ ಇತರ ನಾಗರಿಕತೆಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಸೈಂಧವರು ಬಹು ದೂರದ ಈಜಿಪ್ತ್ ಲಿಪಿಯಿಂದ ಪ್ರಭಾವಿತವಾಗಿರುವ ಸಾಧ್ಯತೆಗಳು ಅಲ್ಪ. ಈಜಿಪ್ತಿಗೆ ಹೆಚ್ಚು ಸನಿಹವಿದ್ದ ಸೆಮಿಟಿಕ್ ಜನ ಈಜಿಪ್ತಿನ ಪವಿತ್ರ ಲಿಪಿಯನ್ನು ನೇರವಾಗಿ ಅಳವಡಿಸಿಕೊಳ್ಳದೆ ಬೇರೆ ಮೂಲದ ಲಿಪಿಯನ್ನು ಅಳವಡಿಸಿಕೊಂಡರು. ಅದ್ದರಿಂದ ಸೆಮಿಟಿಕ್ ಲಿಪಿ ಈಜಿಪ್ತಿನ ಲಿಪಿಯಿಂದ ಪ್ರೇರಣೆ ಪಡೆದಿರಬಹುದು. ಸೈಂಧವ ಲಿಪಿ ಸೈಂಧವ ಜನರಿಂದ ಅವಿಷ್ಕಾರಗೊಳ್ಳದೆ, ಅದರೊಂದಿಗೆ ವ್ಯವಹಾರ ನಡೆಸುತ್ತಿದ್ದ ವ್ಯಾಪಾರಿ ಸಮುದಾಯಗಳಿಂದ ಆರಂಭಿಸಲ್ಪಟ್ಟಿರಬಹುದು.
ರಾಜಾರಾಂ ಮತ್ತು ನಟವರ್ ಝಾ ಹದಿಮೂರು ವರ್ಷಗಳ ಹಿಂದೆ ಸೈಂಧವ ಲಿಪಿಯನ್ನು ಋಗ್ವೈದಿಕ ಸಂಸ್ಕೃತದಲ್ಲಿ ಒಮ್ಮೆಲೆ ಓದಿ ಜಗತ್ತಿನಾದ್ಯಂತ ತಲ್ಲಣ ಮೂಡಿಸಿದರು. ಇವರ ಓದಿಕೆಯಲ್ಲಿ ಓದಿಕೆಗಿಂತ ವೈದಿಕರ ವೈಭವೀಕರಣವೇ ಮುಖ್ಯ ಗುರಿಯಾಗಿದ್ದಿತು. ಆಗಿಂದಾಗ್ಗೆ ಸೈಂಧವ ಲಿಪಿಯನ್ನು ಬಿಡಿಸಿ ಭಾರತದ/ವೈದಿಕರ ಶ್ರೇಷ್ಟತೆಯನ್ನು ಜಗತ್ತಿಗೆ ಸಾರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಎಸ್.ಆರ್. ರಾವ್ , ರಾಜಾರಾಂ , ನಟವರ್ ಝಾ ಸೈಂಧವ ಲಿಪಿಯನ್ನು ಬಿಡಿಸಿದೆವೆಂದು ಹೇಳಿದ ತಕ್ಷಣ ಅಪಾರ ಸಾಧನೆ ಮಾಡಿದ ಋಷಿ-ಮುನಿಗಳನ್ನು , ಸನಾತನ ಹಿಂದೂ ಧರ್ಮವನ್ನು ಸೈಂಧವರಲ್ಲಿ ಕಂಡ ದೇಶ/ಧರ್ಮಾಭಿಮಾನಿಗಳಿದ್ದಾರೆ.
ಎಸ್.ಆರ್ ರಾವ್ ಅವರ ೭೦ನೇ ವರ್ಷದ ಸ್ಮರಣ ಸಂಚಿಕೆಯಲ್ಲಿ ೫೦೦ಕ್ಕೂ ಹೆಚ್ಚು ಪುಟಗಳಿವೆ. ಇದರಲ್ಲಿ ಇಸ್ರೇಲಿನ ಟೆಲ್ ಅವಿವ್’ನ ಆಲ್ಫಾಬೆಟ್ ಮ್ಯೂಜಿಯಂನ ನಿರ್ದೇಶಕ ಡಾ ಡೇವಿಡ್ ಡಾರೆಂಜರ್ ಕಳಿಸಿದ ಹೊಗಳಿಕೆಯ ಪತ್ರ ಪ್ರಕಟಿಸಲಾಗಿದೆ. ಇದರೊಂದಿಗೆ ಇಂತಹ ಇಲಾಖೆಯ ಇಂತಹ ಮುಖ್ಯಸ್ಥರು ರಾವ್ ಸೈಂಧವ ಲಿಪಿಯನ್ನು ಬಿಡಿಸಿರುವುದನ್ನು ಒಪ್ಪಿದ್ದಾರೆ ಎಂದು ಹೇಳಲಾಗಿದೆ. ಒಂದು ಇಲಾಖೆಯ ಮುಖ್ಯಸ್ಥರು ಇನ್ನೊಬ್ಬ ಇಲಾಖೆಯ ಮುಖ್ಯಸ್ಥರೋ ಅಥವಾ ಖ್ಯಾತರೋ ಸೈಂಧವ ಲಿಪಿಯನ್ನು ಬಿಡಿಸಿದರೆಂದು ಒಪ್ಪಿದರೆ ಆಯಿತೇ ? ಅದು ನಿಜವಾಗಬಲ್ಲುದೇ ? ಉನ್ನತ ಸ್ಥಾನದಲ್ಲಿ ಏರಿದವರ ಸಿದ್ದಾಂತಗಳನ್ನು ವಿಮರ್ಶಿಸಿಸದೆ ಒಪ್ಪುವುದೆಂದರೇನು? ಅದನ್ನು ವಿಮರ್ಶಿಸುವ ಪರಿಶ್ರಮವಿಲ್ಲವೆಂದು ಅರ್ಥವಲ್ಲವೆ ? ಅಥವಾ ವೈಚಾರಿಕ ಕಠಿಣ ನಿಲುವನ್ನು ತೊರೆಯುವುದು ಸಜ್ಜನಿಕೆಯೆಂದು ಪರಿಗಣಿತವಾಗಿದೆಯೇ ತಿಳಿಯದು.
ಸೈಂಧವ ಲಿಪಿ ಸರಿ ಸುಮಾರು ಒಂದು ಶತಮಾನದಿಂದ ಜಗತ್ತಿನ ತಜ್ಞರನ್ನು ಕಾಡುತ್ತಿದೆ. ಇದ್ದಕ್ಕಿದ್ದಂತೆ ಒಂದು ದಿನ ಎಸ್.ಆರ್. ರಾವ್ ಅಥವಾ ರಾಜಾರಾಮ್ , ನಟವರ್ ಝಾ ಅದನ್ನು ಬಿಡಿಸಿದರೆಂದರೆ ಒಪ್ಪಬಹುದೇ ? ಆದ್ದರಿಂದಲೇ ಎಸ್.ಆರ್ ರಾವ್, ರಾಜಾರಾಮ್ , ನಟವರ್ ಝಾ, ಮಣಿವಣ್ಣನ್ ಸೈಂಧವ ಲಿಪಿ ಬಿಡಿಸಿದ ಬಗ್ಗೆ ವಿದ್ವತ್ ವಲಯಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುವುದಿಲ್ಲ. ಅದು ಹಿಂದೂ ಆರ್ಷೇಯ ಭಾರತ ಪ್ರಿಯರಿಗೆ ಮಾತ್ರ ರೋಮಾಂಚನ ತರಬಲ್ಲದು. ಜಗತ್ತಿನಲ್ಲಿ ಕೈಬೆರಳೆಣಿಕೆಯ ಜನರಿಗೆ ಮಾತ್ರ ಅರ್ಥವಾಗುವ ಸಂಗತಿಗಳಿವೆ. ವಿಜ್ಞಾನದಲ್ಲಿ ಫರ್ಮಾಟ್ ಸಿದ್ದಾಂತ , ಪಾನ್’ಕ್ವಾರೆ ಪ್ರಮೇಯ ಅಂತಹ ಉದಾಹರಣೆಗಳು .ಈ ಸಿದ್ದಾಂತ , ಪ್ರಮೇಯಗಳಿಗೆ ಪರಿಹಾರ ಒದಗಿಸಿದಾಗ, ಇಡೀ ಜಗತ್ತಿನ ವಿದ್ವತ್ ವಲಯ ರೋಮಾಂಚನಗೊಂಡು ಅದರ ಚರ್ಚೆಯಲ್ಲಿ ತೊಡಗುತ್ತದೆ. ರಾವ್, ರಾಜಾರಾಂ ಲಿಪಿ ಬಿಡಿಸಿಕೆ ಅಂತಹ ಯಾವ ಪ್ರತಿಕ್ರಿಯೆಗಳನ್ನು ಹೊತ್ತು ತರುವುದಿಲ್ಲ. ರಾವ್ ಹಾಗೂ ರಾಜಾರಾಂ ಅಭಿಮಾನಿಗಳು ಸಹ ಅವರು ಲಿಪಿ ಬಿಡಿಸಿದ ನಂತರ ಒಂದೇ ಒಂದು ಇನ್ನೊಂದು ಮುದ್ರಿಕೆಯನ್ನು ಓದಿ ಪ್ರಕಟಿಸಲಿಲ್ಲ. ರಾವ್, ರಾಜಾರಾಂ ಓದಿಕೆ ಸರಿಯಾಗಿದ್ದೇ ಆದರೆ ದ್ರಾವಿಡ ಬಣದವರು ಮೊದಲು ಅದನ್ನು ಒಪ್ಪಬೇಕಾಗುತ್ತದೆಯೇ ಹೊರತು ರಾವ್, ರಾಜಾರಾಂ ಅಭಿಮಾನಿಗಳಲ್ಲ. ಎಲ್ಲಿಯವರೆಗೆ ಎದುರು ಬಣದವರು ಪ್ರಶ್ನೆಗಳನ್ನು ಎತ್ತುತ್ತಿರುವರೋ ಆವರೆಗೆ ಸೈಂಧವ ಲಿಪಿ ಬಿಡಿಸಿದ ವಿವಾದ ಮುಗಿದಿಲ್ಲವೆಂದೇ ಅರ್ಥ. ವೈಭವೀಕೃತ ವೈದಿಕ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬಿಡಿಸಲ್ಪಟ್ಟ ಸೈಂಧವ ಲಿಪಿಯನ್ನು ಬೇರೆಲ್ಲ ಬಿಡಿಸಿಕೆಗಳಿಗಿಂತಲೂ ಹೆಚ್ಚಿನ ಗುಮಾನಿ ಮತ್ತು ವಿಮರ್ಶೆಗಳಿಂದ ನೋಡಬೇಕಾಗುತ್ತದೆ.
ಸೈಂಧವ ಲಿಪಿಯನ್ನು ಸಂಸ್ಕೃತದ ಹಿನ್ನೆಲೆಯಲ್ಲಿ ಬಿಡಿಸುವ ಯತ್ನಗಳಿಗೆ ಬೇರೆಯದೇ ಆದ ತೊಡಕುಗಳಿವೆ. ಕುರ್ಗನ್ ಹಾಗೂ ಇಂಡೋ-ಯುರೋಪಿಯನ್ ಎಂದು ಭಾವಿಸಲಾಗಿರುವ ಯಾವ ಸಂಸ್ಕೃತಿಗಳಲ್ಲೂ ಬರವಣಿಗೆಯ ಸುಳಿವುಗಳಿಲ್ಲ. ಇಂಡೋ- ಯುರೋಪಿಯನ್ ಸಮುದಾಯಗಳು ಬಾಲ್ಕನ್ ಪ್ರವೇಶಿಸುತ್ತಿರುವಂತೆಯೇ ಲೀನಿಯರ್ ಲಿಪಿ ಕಣ್ಮರೆಯಾಯಿತು. ವಿಂಚಿ ನಾಗರಿಕತೆ ತನ್ನದೇ ಆದ ಲಿಪಿ ಹೊಂದಿದ್ದಿತು. ಅನಾತೊಲಿಯಾ ಮೂಲದ ಕೃಷಿಕ ಇಂಡೋ-ಯುರೋಪಿಯನ್ ಸಮುದಾಯ (ಅನಾತೊಲಿಯಾ ವಾದ) ವಿಂಚಿ ಪ್ರದೇಶ ಪ್ರವೇಶಿಸುತ್ತಿದ್ದಂತೆಯೇ ಅದರ ಲಿಪಿ ಕಣ್ಮರೆಯಾಯಿತು. ಇಂಡೋ-ಆರ್ಯರು ಬರುತ್ತಿದ್ದಂತೆಯೇ ಸೈಂಧವ ಲಿಪಿ ಮರೆಯಾಯಿತು. ಇಂಡೋ- ಯುರೋಪಿಯನ್ ಲಿಪಿ ಗಳಿಸಿದ ಜನಾಂಗವಲ್ಲ. ಇಂಡೋ- ಯುರೋಪಿಯನ್ನರು ತಮ್ಮ ಮೂಲ ನೆಲೆ ತೊರೆದಾಗ ಲಿಪಿ ಹೊಂದಿರಲಿಲ್ಲವೆಂದು ಹೇಳಬೇಕಾಗುತ್ತದೆ. ಋಗ್ವೈದಿಕರೇ ಸೈಂಧವರು ಅವರೇ ಪಶ್ಚಿಮಕ್ಕೆ ಸಾಗಿದರು ಎಂದಾದರೆ. ಅವರಿಗೆ ಎದುರಾದ ಜನಾಂಗಗಳು ಲಿಪಿ ಬಳಸುವಷ್ಟು ಮುಂದುವರೆದಿರಲಿಲ್ಲ ಎಂದು ಹೇಳಬೇಕಾಗುತ್ತದೆ. ಅಂತಹ ಸ್ಥಿತಿಯಲ್ಲ ಋಗ್ವೈದಿಕ ಸೈಂಧವರು ತಮ್ಮ ಲಿಪಿಯನ್ನು ಏಕೆ ಮುಂದುವರೆಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ದಕ್ಕದು.
ಸೈಂಧವರ ಬರಹಗಳು, ಸಾಹಿತ್ಯ ಯಾವುವೂ ದಕ್ಕಿಲ್ಲ. ಸೈಂಧವ ಸಂಸ್ಕೃತಿಯ ಕಾಲದಿಂದ ಅಶೋಕ ಮೌರ್ಯನ ಕಾಲದವರೆಗೆ, ೧೪೦೦ಕ್ಕೂ ಅಧಿಕ ವರ್ಷಗಳ ದೀರ್ಘ ಇತಿಹಾಸದಲ್ಲಿ ಯಾವುದೇ ಲಿಖಿತ ದಾಖಲೆಗಳು ಸಿಗದಿರುವುದು ಸೋಜಿಗವಾಗಿದೆ. ಈ ಅವಧಿಯಲ್ಲಿ ಹಲವಾರು ಗಮನಾರ್ಹ ಸಾಹಿತ್ಯ ಹಾಗೂ ಇತರ ಕೃತಿಗಳ ರಚನೆಯಾಯಿತು. ಪಾಣಿನಿ ಬರಹದ ನೆರವಿಲ್ಲದೆ ಅಂತಹ ವ್ಯಾಕರಣ ಹೇಳಲು ಸಾಧ್ಯವೇ ? ಸಾಧ್ಯವಿಲ್ಲ. ಎಂದರೆ ಇದನ್ನು ಹೇಗೆ ವಿವರಿಸಬೇಕು ಪ್ರಶಪೂ ೧೯೦೦ ರಿಂದ ೩೦೦ರವರೆಗೆ ಯಾವುದೇ ಲಿಖಿತ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎನ್ನುವುದನ್ನು ನೈಜ ಹಿನ್ನೆಲೆಯಲ್ಲಿ ನೋಡಿದಾಗ ಪ್ರಾಕ್ತನ ಶೋಧನೆ ಬಹು ಹಿಂದುಳಿದಿರುವಂತೆ ಭಾಸವಾಗುತ್ತದೆ. ಸೈಂಧವರು ಹಾಳಾಗಬಹುದಾದ ವಸ್ತುವಿನ ಮೇಲೆ ಬರೆದಿರಬಹುದು ಕಲಾತ್ಮಕ ವಸ್ತುಗಳು ಚರ್ಮ , ಕಲ್ಲಿನ ಮೇಲೆ ಬರೆಯುವುದು ಅವರ ಪದ್ದತಿಯಲ್ಲಿ ಇಲ್ಲದಿರಬಹುದು. ಈಜಿಪ್ತಿಯನ್ನರು ಸತ್ತ ಮೇಲೆ ಬದುಕುವ ತಹತಹಿಯಿಂದ ಶವಸಂಪುಟ, ಗೋರಿಗಳಲ್ಲಿ ಬರೆದರು. ಸೈಂಧವರಿಗೆ ಅಂತಹ ನಂಬಿಕೆಗಳಿರಲಿಲ್ಲ ಎನ್ನಬಹುದೇ ? ಇಂತಹ ಊಹೆಗಳಿಂದ ಸೈಂಧವ ಲಿಪಿ ಸಂಸ್ಕೃತವನ್ನು ಪ್ರತಿನಿಧಿಸುತ್ತಿದ್ದಿತೆಂದು ಹೇಳಲಾಗದು. (೪೦)
ಭಾರತದಿಂದ ಹೊರಕ್ಕೆ ವಾದ ಒಪ್ಪಿದರೆ ಋಗ್ವೈದಿರೇ ಮುಂದುವರಿದು ಸೈಂಧವವರಾದರು. ಸೈಂಧವರ ಕಾಲ ಬ್ರಾಹ್ಮಣಗಳ ಕಾಲಕ್ಕೆ ಸರಿಹೊಂದುತ್ತದೆ. ಆಗ ಋಗ್ವೈದಿಕರೇ ಮುಂದೆ ಸೈಂಧವ ಲಿಪಿಯ ಪ್ರವರ್ತಕರಾದರೆಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಹಾಗಾದರೆ ಸೈಂಧವ ನಾಗರಿಕತೆಯ ಕಾಲದಲ್ಲಿ –ಬ್ರಾಹ್ಮಣಗಳ ಕಾಲ- ಲಿಪಿ ಕಂಡು ಹಿಡಿದಿದ್ದ, ವೈದಿಕ ಸೈಂಧವರು ನಾಗರಿಕತೆಯ ಅವನತಿಯ ಬ್ರಾಹ್ಮಣಗಳ ಕಾಲಕ್ಕೆ ಪ್ರವೇಶಿಸುತ್ತಿದ್ದಂತೆಯೇ ತಾವೇ ಕಂಡು ಹಿಡಿದ ಲಿಪಿಯನ್ನು ತಿರಸ್ಕರಿಸಿ, ಅನಕ್ಷರಸ್ಥರಾದರೇ ? ಅವರೇ ಸೃಷ್ಟಿಸಿದ ಲಿಪಿ ಅವರಿಗೆ ಬೇಡವಾಯಿತೇ ? ಮುಂದಿನ ೧೦೦೦ ವರ್ಷಗಳವರೆಗೆ ಇವರಿಂದ ಅಶೋಕನ ಕಾಲದವರೆಗೆ ಯಾವುದೇ ಲಿಪಿ/ ಬರಹಗಳು ಏಕೆ ಬರಲಿಲ್ಲ. ಸಿಂಧೂ ಲಿಪಿಯೇ ಅಶೋಕನ ಬ್ರಾಹ್ಮಿ ಲಿಪಿಯಾಗಿ ಬದಲಾಯಿತು ಎಂದರೆ ಈ ನಡುವಿನ ಸಾವಿರ ವರ್ಷಗಳ ಅವಧಿಯಲ್ಲಿ ವೈದಿಕರು ಏಕೆ ಏನನ್ನು ಬರೆಯಲಿಲ್ಲ ? ಎನ್ನುವ ಪ್ರಶ್ನೆಗಳು ಒಂದರ ನಂತರ ಒಂದರಂತೆ ಬರುತ್ತವೆ.
ಸೈಂಧವ ಲಿಪಿಯಿಂದ ಅಶೋಕನ ಬ್ರಾಹ್ಮಿಲಿಪಿ ಬಂದಿತೆಂದು ಸಾಧಿಸುವುದು ಸಾಧ್ಯವೇ ಇಲ್ಲ. ಪ್ರಾಚೀನ ಕಾಲದ ಎಲ್ಲ ಆರಂಭಿಕ ಲಿಪಿಗಳಂತೆ ಸಿಂಧೂಲಿಪಿಯೂ ಚಿತ್ರಾಕ್ಷರ ಲಿಪಿಯಾಗಿರುವ ಸಾಧ್ಯತೆಗಳಿವೆ. ಇಂತಹ ಚಿತ್ರಾಕ್ಷರ ಲಿಪಿಗಳಲ್ಲಿ ೩೦೦-೪೦೦ ಸಂಕೇತ ಗಳಿರುವುದು ಜಗತ್ತಿನಾದ್ಯಂತ ಕಂಡು ಬಂದಿದೆ. ಆದರೆ ಅಶೋಕನ ಬ್ರಾಹ್ಮಿಲಿಪಿ ಸಸ್ವರ ವ್ಯಂಜನ ಲಿಪಿ. ಇವೆರಡರ ನಡುವೆ ಸಂಬಂಧಗಳಿಲ್ಲ. ಬ್ರಾಹ್ಮಿಲಿಪಿ ಬಳಕೆಗೆ ಬಂದ ಕಾಲದಲ್ಲಿಯೇ ವಾಯುವ್ಯ ಭಾರತದಲ್ಲಿ ಅದಕ್ಕೆ ಸರಿ ಸಮಾನವಾದ ಖರೋಷ್ಟಿ ಲಿಪಿ ಸಹ ಅಸ್ತಿತ್ವದಲ್ಲಿದ್ದಿತು. ಈ ಲಿಪಿಯನ್ನು ಪರ್ಷಿಯನ್ ಸಾಮ್ರಾಜ್ಯದಲ್ಲಿ ವ್ಯಾಪಕವಾಗಿ ಬಳಸಲಾಗಿದ್ದಿತು. ಅಶೋಕ ಖರೋಷ್ಟಿ ಲಿಪಿಯಲ್ಲಿಯೂ ಸಹ ಶಾಸನಗಳನ್ನು ಹಾಕಿಸಿದನು. ಇವೆರಡೂ ಲಿಪಿಗಳು ಅರೈಮಕ್ ಲಿಪಿಯಿಂದ ಪ್ರೇರಿತವಾದುವು.
ಸಿಂಧೂ ಲಿಪಿಯಿಂದಲೇ ಬ್ರಾಹ್ಮಿ ಲಿಪಿ ಬಂದಿದ್ದರೆ, ಈಜಿಪ್ತನ ಚಿತ್ರಲಿಪಿ ಅದರ ರೂಪಾಂತರಿತ ಡೆಮಾಟಿಕ್ ಲಿಪಿಗಳಂತೆ ಹಲವು ಹಂತದ ಬೆಳವಣಿಗೆ ಹೊಂದಿರಬೇಕಾಗಿದ್ದಿತು. ಡೆಮಾಟಿಕ್ ಲಿಪಿಯಿಂದ ಈಜಿಪ್ತ್ಗಿನ ಎಲ್ಲ ಚಿತ್ತಾಕ್ಷರ ಲಿಪಿಗಳನ್ನು ಹೇಗೆ ಉಚ್ಛರಿಸಬೇಕೆಂದು ಒಂದಕ್ಕೆ ಒಂದರಂತೆ ಬೆಸೆಯಲಾಯಿತು. ಆದರೆ ಈವರೆಗೆ ಸಿಂಧೂ ಲಿಪಿಯ ಯಾವ ಸಂಕೇತವನ್ನು ಹೇಗೆ ಉಚ್ಛರಿಸಬೇಕೆಂದು ಯಾರಿಗೂ ತಿಳಿದಿಲ್ಲ. ಸಾವಿರ ವರ್ಷಗಳ ಲಿಪಿ ಕಂದಕ ಸಿಂಧೂಲಿಪಿಯೇ ಬ್ರಾಹ್ಮಿಲಿಪಿಯಾಯಿತೆಂದು ವಾದವನ್ನು ನಿರಸನಗೊಳಿಸುತ್ತದೆ. ಅಥವಾ ಆಡಳಿತ/ಜನಬಳಕೆಯಿಂದ ದೂರವಾಗಿ ಮಾಯಾಲಿಪಿ ಮರೆಯಾದಂತೆ ಸಿಂಧೂ ಲಿಪಿ ಮರೆಯಾಯಿತೆಂದು ಹೇಳಿದರೆ, ಆ ಲಿಪಿಯ ಬದಲು ಬಳಕೆಗೆ ಬಂದ ಆ ಇನ್ನೊಂದು ಲಿಪಿಯ ಯಾವ ಕುರುಹುಗಳೂ ದಕ್ಕಿಲ್ಲ. ಬರವಣಿಗೆ ಕುರಿತಾಗಿ ವೈದಿಕ ಸಾಹಿತ್ಯದಲ್ಲಿ ಎಲ್ಲಿಯೂ ಒಂದೇ ಒಂದು ಮಾತು ಸಹ ಬಂದಿಲ್ಲ. ಬೌದ್ದರೇ ಭಾರತದಲ್ಲಿ ಬರೆದ ಮೊದಲಿಗರು.
ಸುಸಜ್ಜಿತವಾದ ಸೈಂಧವ ನಗರ ಸಂಸ್ಕೃತಿ ಹಾಗೂ ನಂತರ ಬಂದ ಋಗ್ವೈದಿಕ ಸಂಸ್ಕೃತಿಗಳ ನಡುವಿನ ಕಾಲದ ಅಂತರವೇ ಸೈಂಧವ ಲಿಪಿ ಕಣ್ಮರೆಯಾಗಲು ಕಾರಣವಾಗಿದೆ. ಋಗ್ವೈದಿಕರು ದನ ಕಾಯುವವರಾಗಿದ್ದು, ಇಂತಹ ಲಿಪಿಯ ಅವಶ್ಯಕತೆ ಅವರಿಗೆ ಇರದ ಕಾರಣ ಅವರು ಅದನ್ನು ಮುಂದುವರೆಸಿಕೊಂಡು ಹೋಗದೆ ಮುಂದಿನ ೧೦೦೦ ವರ್ಷಗಳ ಕಾಲ ಕಾದಿದ್ದರು. ಸೈಂಧವ ಲಿಪಿ ದ್ರಾವಿಡ , ಮುಂಡಾ ಅಥವಾ ಅಜ್ಞಾತ ಭಾಷೆಯಾಗಿದ್ದಿತೆಂಬ ಸಾಧ್ಯತೆಗಳನ್ನು ಟೀಕಿಸುವ ವೈದಿಕರು ಸೈಂಧವ ಲಿಪಿ ಸಂಸ್ಕೃತವನ್ನು ಪ್ರತಿನಿಧಿಸುತ್ತಿದ್ದಿತು ಎಂದು ತಾಳಿರುವ ನಿಲುವುಗಳಿಗೆ ಗಟ್ಟಿ ನೆಲೆಯಿಲ್ಲ.
ಭಾಗ-೨
: ಗೊಂಡಿ ಭಾಷೆಯಿಂದ ಸಿಂಧು ರಹಸ್ಯ ಲಿಪಿಯ ಶೋಧ ಮತ್ತು ಓದು-ಪರಿಶೀಲನೆಯ ಮೂಸೆಯಲ್ಲಿ
ಈವರೆಗೆ ಸೈಂಧವ ಲಿಪಿಯನ್ನು ಬಿಡಿಸಲು ೧೦೦ಕ್ಕೂ ಅಧಿಕ ಯತ್ನಗಳಾಗಿವೆ. ಆದ್ದರಿಂದ ಸೈಂಧವ
ಲಿಪಿಯನ್ನು ಬಿಡಿಸುವ ಮೊದಲು ಈವರೆಗೆ ನಡೆಸಿದ ಪ್ರಯತ್ನಗಳು , ಅವುಗಳ ಸಾಫಲ್ಯ-ವೈಫಲ್ಯಗಳನ್ನು
ಗುರುತಿಸಬೇಕು. ಹಾಗೆ ಗುರುತಿಸಿದ ನಂತರ ಅವುಗಳಲ್ಲಿನ ಕೊರತೆಗಳನ್ನು ಪಟ್ಟಿಮಾಡಿ, ಅಂತಹ
ಕೊರತೆಗಳನ್ನ ಮೀರಿ ಮುಂದೆ ಸಾಗುವ ಸಾಧ್ಯತೆಗಳನ್ನು ಸ್ಪಷ್ಟಗೊಳಿಸಿಕೊಳ್ಳಬೇಕು. ಆ ನಂತರ ಸೈಂಧವ
ಲಿಪಿ ಬಿಡಿಸಲು ದ್ರಾವಿಡ, ಆರ್ಯ,ಮುಂಡಾ ಅಥವಾ ಬೇರೆ ಯಾವುದೇ ಭಾಷೆಯನ್ನು ಏಕೆ ಆಯ್ಕೆ
ಮಾಡಿಕೊಳ್ಳಲಾಗಿದೆ ಎನ್ನುವುದನ್ನು ವಿವರಿಸಬೇಕು. ಗೊಂಡಿಯನ್ನು ಸೈಂಧವ ಭಾಷೆ ಎಂದು ಪರಿಗಣಿಸುವ ಮೊದಲು ದ್ರಾವಿಡ
ಭಾಷೆಗಳ ಉಗಮ, ವಿಕಾಸ, ಕವಲಾದ ಕಾಲ ಹಾಗೂ ವಿವರಗಳನ್ನು ಸಮೂಲಾಗ್ರವಾಗಿ ಶೋಧಿಸಬೇಕು. ಸೈಂಧವ ಸಂಸ್ಕೃತಿಯ ಆರಂಭಿಕ
ಪ್ರದೇಶಗಳು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಇರುವುದರಿಂದ ಈಗ
ಭಾರತದ ಮಧ್ಯಬಾಗಕ್ಕೆ ಸೀಮಿತವಾಗಿರುವ ಗೊಂಡಿ ಜನಾಂಗ ಹೇಗೆ ಯಾವ ಮೂಲದಿಂದ ಸೈಂಧವರಿಗೆ ಸಂಬಂಧಿಸಿದ್ದಿತೆಂದು ತೋರಿಸಬೇಕು. ಮುಂದಿನ
ಹಂತದಲ್ಲಿ ಸೈಂಧವ ಸಂಸ್ಕೃತಿಯ ಅಂಶಗಳು, ನಂಬಿಕೆ ಐತಿಹ್ಯಗಳು, ಮುದ್ರಿಕೆಗಳ ಮೇಲಿರುವ ಆಶಯಗಳು ಹೇಗೆ, ಎಲ್ಲಿ
ಗೊಂಡಿಯಲ್ಲಿ ಪ್ರತಿಬಿಂಬಿತವಾಗಿವೆ ಎಂದು ಖಚಿತ ಪಡಿಸಬೇಕು. ಈ ಆರಂಭಿಕ ಕೆಲಸಗಳನ್ನು ಮಾಡದೆ ಸೈಂಧವರ ಭಾಷೆ
ಗೊಂಡಿ ಎಂದು ಸಾಗುವುದು ಗಾಳಿಗೋಪುರವಾಗುತ್ತದೆ.
ಮೋ.ಛ. ಕಂಗಾಲಿಯವರು ಇಂತಹ ಯಾವುದೇ ಆರಂಭಿಕ
ಸಿದ್ದತೆಗಳಿಲ್ಲದೆ ಸೈಂಧವ ಭಾಷೆ ಗೊಂಡಿ ಎಂದು ಕಲ್ಪಿಸಿಕೊಂಡು ನೇರವಾಗಿ ಸೈಂಧವ ಲಿಪಿ ಭೇದಿಸುವ ಚಕ್ರವ್ಯೂಹಪ್ರವೇಶಿದ್ದಾರೆ. ತಾವು ಗೊಂಡಿ ಸಂಸ್ಕೃತಿ ,ಸಮಾಜ, ಭಾಷೆಗಳ
ಬಗ್ಗೆ ಹೊಂದಿರುವ ತಿಳಿವಳಿಕೆಗಳನ್ನು ನೇರವಾಗಿ ಸೈಂಧವರ ಮೇಲೆ ಹೇರಿದ್ದಾರೆ. ಸದ್ಯಕ್ಕೆ
ಗೊತ್ತಿರುವ ಗೊಂಡ ಸಮುದಾಯ ಏಳು ಗೋತ್ರಗಳಲ್ಲಿದೆ (ಬೆಡಗು) ಎಂಬ ತಿಳಿವಳಿಕೆಯ ಮೇಲೆ ಸೈಂಧವ ಸಮಾಜದಲ್ಲಿ ಸಹ ಏಳುಕುಲಗಳು ಇದ್ದವೆಂದು ಊಹಿಸಲಾಗಿದೆ. (ಪುಟ ೩೭) ಇದು ಗೊತ್ತಿರದ ಸಂಗತಿಗೆ
ಗೊತ್ತಿರುವ , ಬೇಕಾದ ಸಂಗತಿಯನ್ನು ಪ್ರಯೋಗಿಸಿ ಬೇಕಾದ ಫಲಿತಾಂಶ ಪಡೆಯುವ ಪ್ರಯತ್ನವಾಗಿದೆ. ಇದರ
ಬದಲು ಸೈಂಧವ ಸಮಾಜದಲ್ಲಿ ಏಳು ಕುಲಗಳಿದ್ದವು ಎನ್ನುವುದನ್ನು ಅನ್ಯ ಬಾಹ್ಯ ಆಕರಗಳಿಂದ
ಸಾಧಿಸಬೇಕು.
ಸೈಂಧವರ ಭಾಷೆ, ಲಿಪಿಗಳ ಹುಡುಕಾಟದ ದಾರಿಯಲ್ಲಿ ಗೊಂಡಿ
ಎದುರಾಗಿ, ಆ ಮೂಲಕ ಗೊಂಡಿಯ ಮೂಲಕ ಸೈಂಧವ ಲಿಪಿಯನ್ನು ಬಿಡಿಸಲು ಹೊರಡಬೇಕಾಗಿತ್ತು. ಅದರ ಬದಲು
ಗೊಂಡಿ ಭಾಷೆ ಸಮಾಜ, ಸಂಸ್ಕೃತಿಗಳಿವೆ. ಅವು ಸೈಂಧವ ಸಮಾಜದಲ್ಲಿ ಪ್ರತಿಬಿಂಬಿತವಾಗಿವೆ ಎನ್ನುವ ಆರಂಭಿಕ ಊಹೆಯೇ
ಕಂಗಾಲಿಯವರ ದಾರಿ ತಪ್ಪಿಸಿದೆ. ಸೈಂಧವರ ಸಾಮಾಜಿಕ ಸ್ಥಿತಿಗತಿಗಳನ್ನು ಸೈಂಧವರೊಂದಿಗೆಯಾವ ಎಗ್ಗಿಲ್ಲದೆ ಸಮೀಕರಿಸಲಾಗಿದೆ. ಈ ಸಮೀಕರಣದಿಂದ
ಕಂಗಾಲಿಯವರ ಸೈಂಧವ ಲಿಪಿಯ ಓದಿಕೆಗೆ ಯಾವುದೇ ತೊಡಕುಗಳು ಎದುರಾಗುವುದಿಲ್ಲ. ದ್ರಾವಿಡ ಭಾಷೆಗಳ
ಲಕ್ಷಣ ಅವುಗಳ ಪದಕೋಶ ವ್ಯಾಕರಣ ಸ್ವರೂಪಗಳನ್ನು ಕಂಗಾಲಿಯವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಗೊಂಡಿ ಸೈಂಧವ
ಎಂದು ಏಕೆ ಪರಿಗಣಿಸಲಾಗಿದೆ ಎಂದು ಕೇಳಿದರೆ ಇವರೇ ಅವರು ಎನ್ನುವ ಉತ್ತರ ಅವರದು.
ಮೋ.ಛ
ಕಂಗಾಲಿಯವರು ಆರು ಸಾವಿರ ವರ್ಷಗಳ
ಹಿಂದೆ-ಪ್ರ..ಶ.ಪೂ ೪೦೦೦- ಭಾರತದಲ್ಲಿ ಗೊಂಡಿ ಸಂಸ್ಕೃತಿ ಪ್ರಭಾವಯುತವಾಗಿದ್ದಿತು. ಭಾರತಕ್ಕೆ ಕುವಯರಾಷ್ಟ್ರ
ಅಥವಾ ಗೊಂಡ ರಾಷ್ಟ್ರ ಎಂದು ಕರೆಯಲಾಗುತ್ತಿದ್ದಿತು ಎನ್ನುವ ಉಲ್ಲೇಖ ಋಗ್ವೇದದಲ್ಲಿದೆ ಎನ್ನುತ್ತಾರೆ. ಪ್ರ.ಶ.ಪೂ
ನಾಲ್ಕು ಸಾವಿರ ವರ್ಷಗಳ ಹಿಂದೆ ಯಾವ ಸಂಸ್ಕೃತಿ ಭಾರತದಲ್ಲಿ ಇದ್ದಿತು ಎನ್ನುವುದಕ್ಕೆ ಪುರಾತತ್ತ್ವ
ಸಾಕ್ಷ್ಯಗಳ ಕೊರತೆಯಿದೆ. ಭಾರತ ಎಂದರೆ ಯಾವ ಪ್ರದೇಶ ? ಸಿಂಧೂ ಬಯಲು? ಹಿಮಾಲಯ ಕಣಿವೆ ? ಅರಾವಳಿ
ವಿಂಧ್ಯ ಪರ್ವತ ಪ್ರದೇಶಗಳು ?ದಕ್ಷಿಣ ಭಾರತ ?ಪೂರ್ವ ಭಾರತ? - ಯಾವುದೆಂಬ
ನಿಖರತೆಯಿಲ್ಲ. ಪುರಾತತ್ತ್ವ ಸಾಕ್ಷ್ಯಗಳು ಈ ಅವಧಿಯಲ್ಲಿ ದಕ್ಷಿಣ ಏಷ್ಯಾದ ಈಗ ಭಾರತವೆಂದು
ಕರೆಯಲಾಗುವ ಪ್ರದೇಶದಲ್ಲಿ ಮಾನವ ಸಂಸ್ಕೃತಿ ಒಂದೇ ಬಗೆಯದಾಗಿರಲಿಲ್ಲ. ಒಂದೇ ಹಂತದ್ದಾಗಿರಲಿಲ್ಲ ಎಂದು ತಿಳಿಸುತ್ತವೆ. ಸೈಂಧವ ಸಂಸ್ಕೃತಿಯ ಉತ್ತುಂಗದ ಕಾಲದಲ್ಲಿ ಮಧ್ಯ ಹಾಗೂ ದಕ್ಷಿಣ ಭಾರತಗಳು ಇನ್ನೂ
ನವಶಿಲಾಯುಗದಲ್ಲಿದ್ದವು. ನಂತರ ಒಮ್ಮೆಲೆ ಕಬ್ಬಿಣದ ಯುಗ ಪ್ರವೇಶಿಸಿದವು ಎಂದು ಈವರೆಗಿನ
ಪುರಾತತ್ತ್ವ ಶೋಧನೆಗಳಿಂದ ತಿಳಿದುಬಂದಿದೆ.
ಸದ್ಯಕ್ಕೆ ಹೆಚ್ಚಿನ ವಿದ್ವಾಂಸರ ಅಭಿಪ್ರಾಯದಂತೆ
ಪ್ರಬುದ್ದ ಸೈಂಧವ ನಾಗರಿಕತೆಯ ಕಾಲ ಪ್ರಶಪೂ ೨೪೦೦-೧೯೦೦ ಇದರ ಆರಂಭಿಕ ಕಾಲ ಮೆಹರಘರ್ ಅವಧಿ ಪ್ರ.ಶ.ಪೂ
೪೦೦೦ ಮೆಹರ್’ಘರ್ ಆರಂಭಿಕ ಸ್ಥಿತಿ ಹೋಲುವ ಬೆಳವಣಿಗೆಗಳು ಈಗಿನ ಭಾರತ ಪ್ರದೇಶದಲ್ಲಿ ಸಿಕ್ಕಿಲ್ಲ.
ಆದ್ದರಿಂದ ಆಗ ಭಾರತದಲ್ಲಿ ಗೊಂಡಿ ಸಂಸ್ಕೃತಿ ಪ್ರಭಾವಯುತವಾಗಿದ್ದಿತು ಎನ್ನುವುದರಲ್ಲಿ
ಅರ್ಥವಿಲ್ಲ. ಇನ್ನು ಋಗ್ವೇದದ ಕಾಲ ಪ್ರ.ಶ.ಪೂ ೧೭೦೦-೧೨೦೦ ಎಂದು ಹೆಚ್ಚಿನ ಸಾಕ್ಷ್ಯಧಾರಗಳು
ಸೂಚಿಸುತ್ತವೆ. ಹೀಗಿರುವಾಗ ಅದಕ್ಕಿಂತಲೂ ೧೫೦೦ ವರ್ಷಗಳ ಹಿಂದಿದೆ ಎಂದು ಹೇಳಲಾಗುತ್ತಿರುವ ಗೊಂಡಿಯ ಕುವಯ ರಾಷ್ತ್ರ್ರದ ಉಲ್ಲೇಖ ಋಗ್ವೇದದಲ್ಲಿ ಹೇಗೆ ಇರಲು
ಸಾಧ್ಯ ? ಗೊಂಡಿ ಪದ ಮೊದಲ ಬಾರಿಗೆ ಎಲ್ಲಿ, ಯಾವ ಮೂಲಕ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು
ತೋರಿಸದ ಹೊರತು ಗೊಂಡಿ ದ್ರಾವಿಡ ಭಾಷೆಗಳ ತಾಯಿ ಅದರದು ಅತ್ಯಂತ ಹಳೆಯ ಸಂಸ್ಕೃತಿ ಎನ್ನುವುದಕ್ಕೆ ಅರ್ಥವಿಲ್ಲ. ಗೊಂಡಿ ಪದದ ಮೂಲವನ್ನು
ಮೊದಲು ದ್ರಾವಿಡ ಭಾಷಾ ಬೇರುಗಳಲ್ಲಿ ಗುರುತಿಸಬೇಕು. ಅಂತಹ
ಯಾವ ಪ್ರಯತ್ನಗಳನ್ನು ಕಂಗಾಲಿಯವರು ನಡೆಸಿಲ್ಲ.
ಋಗ್ವೇದ ಹಾಗೂ ಇತರ ವೈದಿಕದಲ್ಲಿ ದಾಸ,ದಸ್ಯು, ಪಣಿಗಳೆಂಬ ಆರ್ಯರ ಎದುರಾಳಿಗಳು ಅಳಿನ, ಸೃಂಜನ , ಪುರು-ಭರತ
ಅನು-ದ್ರುಹ್ಯ,ಯದು-ತುರ್ವಸ , ಪಕ್ತ ಮುಂತಾದ ಆರ್ಯರ, ಆರ್ಯೇತರ ಬುಡಕಟ್ಟುಗಳು ಹಲವಾರು ಕಡೆ
ಉಲ್ಲೇಖಿತವಾಗಿವೆಯೇ ಹೊರತು ಎಲ್ಲಿಯೂ ಗೊಂಡ ಪದ ಬಳಕೆಯಾಗಿಲ್ಲ, ಕುಯವ
ಅಥವಾ ಕೋಯಾ ಎಲ್ಲಿಯೂ ಉಲ್ಲೇಖವಾಗಿಲ್ಲ. ಕುವಯ ರಾಷ್ಟ್ರ, ಗೊಂಡ ರಾಷ್ಟ್ರ ಹೇಗಾಯಿತು
? ಕುವಯ ದ್ರಾವಿಡ ಮೂಲ ಪದವೇ ? ಅದು ಇತರ ದ್ರಾವಿಡ ಭಾಷೆಗಳಲ್ಲಿ ಕಾಣಿಸಿಕೊಂಡಿವೆಯೇ ?
ಇಲ್ಲವಾದರೆ ಅದು ಗೊಂಡಿಯಲ್ಲಿ ಮಾತ್ರ ಹೇಗೆ ಉಳಿಯಿತು ?
ಗೊಂಡ್ವಾನ ಪ್ರದೇಶದಲ್ಲಿ ವಾಸಿಸುವರೇ ಗೊಂಡರು. ಆರ್ಯರ
ಆಗಮನಕ್ಕಿಂತ ಮುಂಚೆ ಇದನ್ನು ಗೊಂಡಾರಣ್ಯವೆಂದು ಕರೆಯುತ್ತಿದ್ದರು. ಇದರ ಪ್ರಸ್ತಾಪ ರಾಮಾಯಣ,
ಮಹಾಭಾರತಗಳಲ್ಲಿ ಬರುತ್ತದೆ ಎನ್ನುವ ಸಮರ್ಥನೆಯನ್ನು
ಕಂಗಾಲಿಯವರು ನೀಡಿದ್ದಾರೆ. ಗೊಂಡಾರಣ್ಯದಲ್ಲಿ ಇರುವ ಅರಣ್ಯ ಇಂಡೋ-ಆರ್ಯನ್ ಪದ. ಆದ್ದರಿಂದ ಅದು ಆ ಪ್ರದೇಶದ ಮೂಲ ಹೆಸರಲ್ಲ. ಇದು ನಂತರ ಇಟ್ಟಿರುವ ಹೆಸರು. ಆರ್ಯರ ಆಗಮನಕ್ಕಿಂತ ಮುಂಚೆ
ಗೊಂಡಾರಣ್ಯ ಎನ್ನುವ ಹೆಸರಿದ್ದಿತು ಎನ್ನುವುದು ಊಹೆಯೇ ಹೊರತು ಅದಕ್ಕೆ ಆಧಾರಗಳಿಲ್ಲ. ಋಗ್ವೇದದ
ಕಾಲ ಪ್ರ.ಶ.ಪೂ ೧೭೦೦-೧೨೦೦ ಬ್ರಾಹ್ಮಣ, ಅರಣ್ಯಕ, ಉಪನಿಷತ್ತುಗಳ ಕಾಲ ಪ್ರ.ಶ.ಪೂ ೫-೪ನೇ
ಶತಮಾನದವರೆಗೆ ಸಾಗಿ ಬಂದಿದೆ. ಉಪನಿಷತ್ತುಗಳಲ್ಲಿ ರಾಮಾಯಣ, ಮಹಾಭಾರತ ಕುರಿತಾದ ಯಾವುದೇ ಕನಿಷ್ಟ
ಸಾಂದರ್ಭಿಕ ಹೇಳಿಕೆಗಳಿಲ್ಲ. ಈ ಕಾವ್ಯಗಳ ಭಾಷೆ ಅಭಿಜಾತ ಸಂಸ್ಕೃತಕ್ಕೆ ನಾಂದಿ ಹಾಡಿದೆ. ವಿದ್ವಾಂಸರು ಮಹಾಭಾರತ ರಚನೆಯ ಕಾಲವನ್ನು ಪ್ರ.ಶ.ಪೂ
೨-೩ ಶತಮಾನಗಳಿರಬಹುದೆಂದು ಅಂದಾಜಿಸಿದ್ದಾರೆ. ಆದ್ದರಿಂದ ಮಹಾಭಾರತದಲ್ಲಿ ಬರುವ ಉಲ್ಲೇಖ ಸೈಂಧವ
ಕಾಲದ ಗೊಂಡರನ್ನು ಕುರಿತಾಗಿ ಏನನ್ನೂ ಹೇಳಲಾರದು. ಇದೇ ಮಹಾಭಾರತದ ಭೀಷ್ಮ ಪರ್ವದಲ್ಲಿ ಕರ್ಣಾಟ, ಚೋರ,
ಚೋಳ, ದ್ರಮಿಳರು ಬಂದಿದ್ದಾರೆ. ಯವನರು ಕಾಣಿಸಿಕೊಂಡಿದ್ದಾರೆ. ಮಹಾಭಾರತ ರಚನೆಯ ಕಾಲಕ್ಕೂ ಸೈಂಧವ ಸಂಸ್ಕೃತಿಗೂ ೨೦೦೦ ವರ್ಷಗಳ
ಅಂತರವಿದೆ.
ಕರಿಗೊಂಡ, ಮಲ್ಲಗೊಂಡ, ವೀರಗೊಂಡ, ಲಾಳಗೊಂಡ, ಬೂಸಗೊಂಡ
ಇತ್ಯಾದಿ ಪದಗಳಲ್ಲಿರುವ ಗೊಂಡ ಪದ ಗೊಂಡ ಜನಾಂಗದ ಪ್ರಾಚೀನತೆಯ ಕುರುಹು ಎನ್ನುವುದು
ಸಂಶಯಾಸ್ಪದ. ಅದೆಷ್ಟೋ ಶಿಲಾಶಾಸನಗಳಲ್ಲಿ ನಾಳ್ಗಾವುಂಡ ,ನಾಳಗೊಂಡವಾಗಿದೆ. ಗಾಮಊಡ, ಗವುಂಡ, ಗೊಂಡ ರೂಪಗಳು ಸಿಕ್ಕುತ್ತವೆ.. ಈಗಲೂ ಬಸನ ಗೌಡ ,ಮಲ್ಲನಗೌಡ ಎಂದು ಬರೆದು ಬಸಗೊಂಡ,
ಮಲಗೊಂಡ ಎಂದು ಉಚ್ಛರಿಸುವ
ಪದ್ದತಿಯೂ ಇದೆ. ಆದ್ದರಿಂದ ಈ ಪದಗಳಲ್ಲಿರುವ ಗೊಂಡ ಗೊಂಡರಿಗೆ ಸಂಬಂಧಿಸಿದ್ದಲ್ಲ.
೫ ಸಾವಿರ ವರ್ಷಗಳ ಪೂರ್ವದಲ್ಲಿ –ಪ್ರ.ಶ.ಪೂ ಮೂರನೇ ಸಹಸ್ರಮಾನ- ಅಗಸ್ತ್ಯನೆಂಬ ಆರ್ಯಋಷಿ ಗೊಂಡ್ವಾನ ರಾಜ್ಯದಲ್ಲಿ ಬಂದ ನಂತರ ಆರ್ಯರು ಬರಹತ್ತಿದರು ಎಂದು ಕಂಗಾಲಿಯವರು ಹೇಳುತ್ತಾರೆ. ಅಗಸ್ತ್ಯ ವಿಂಧ್ಯ ಪರ್ವತ ದಾಟಿದ ಮೊದಲ ಆರ್ಯ ಎಂಬ
ಐತಿಹ್ಗ್ಯವಿದೆಯೇ ಹೊರತು ಸಪ್ತ ಸಿಂಧೂವನ್ನು ಪ್ರವೇಶಿಸಿದ ಮೊದಲಿಗನೆಂದಲ್ಲ. ಈ ಹೇಳಿಕೆಯಲ್ಲಿ ಲೇಖಕರು ತಾವು ಕಟ್ಟಲು ಯತ್ನಿಸಿರುವ
ಸೈಂಧವ=ಗೊಂಡಿ ಸಂಸ್ಕೃತಿಯ ಚೌಕಟ್ಟನ್ನು ತಾವಾಗಿಯೇ ಮುರಿದಿದ್ದಾರೆ. ಆರ್ಯರ ಆಗಮನ ಒಪ್ಪುವ ಪ್ರತಿಯೊಬ್ಬರೂ ಅವರು ವಾಯುವ್ಯ
ಭಾರತವನ್ನು ಮೊದಲಿಗೆ ಪ್ರದೇಶಿಸಿದರು. ಮೊದಲು ಅವರಿಗೆ. ಸಿಂಧೂ ,ಸರಸ್ವತಿ, ಝೀಲಂ, ಚೀನಾಬ್, ರಾವಿ ಬಿಯಾಸ್
ಸಟ್ಲೇಜ್ ಎನ್ನುವ ಸಪ್ತ ಸಿಂಧೂಗಳು ಎದುರಾದವು ಎಂದು ಒಪ್ಪಿದ್ದಾರೆ. ಸೈಂಧವ ಸಂಸ್ಕೃತಿ ಗೊಂಡರದ್ದೇ ಆಗಿದ್ದರೆ, ಅವರ ಆರ್ಯರ ಮುಖಾಮುಖಿ ವಾಯುವ್ಯ
ಭಾರತದಲ್ಲಿ ಅಗಸ್ತ್ಯ ವಿಂಧ್ಯ ಪರ್ವತ ದಾಟುವುದಕ್ಕಿಂತ ತೀರ ಮೊದಲು ಆಗಿರುತ್ತದೆಯೇ
ಹೊರತು. ಮೋ.ಛ.
ಕಂಗಾಲಿಯವರು ಭಾವಿಸಿದಂತಲ್ಲ. ಕಂಗಾಲಿಯವರು ಆರ್ಯ-ಸೈಂಧವ-ಗೊಂಡಿ ಸಮಸ್ಯೆಯನ್ನು ಬಿಡಿಸಲುತುಳಸೀರಾಮಾಯಣಕ್ಕೆ ಮೊರೆಹೊಕ್ಕಿದ್ದಾರೆ. ಇದು ಪರಿಗಣನೆಗೆ ಅರ್ಯವಲ್ಲದ ಇತ್ತೀಚಿನ ಕೃತಿ.
ಸೈಂಧವರುಕರ್ನಾಟಕದಿಂದ ಬಂಗಾರ ತರಿಸಿಕೊಳ್ಳುತ್ತಿದ್ದರು ಎಂದು
ಕಂಗಾಲಿಯವರು ದಾಖಲಿಸುತ್ತಾರೆ. (ಪುಟ -೬) ಸೈಂಧವ ಗೊಂಡರು ಕರ್ನಾಟಕದಿಂದ ಬಂಗಾರ ತರಿಸಿಕೊಂಡಿದ್ದುದು ನಿಜವೇ ಆಗಿದ್ದರೆ ಆಗ ಕರ್ನಾಟಕದಲ್ಲಿ
ಯಾವ ಭಾಷಿಕರಿದ್ದರು ? ಆಗ ತಾನೇ ಆರ್ಯರು ಸಪ್ತ ಸಿಂಧೂವಿಗೆ ಪ್ರವೇಶಿಸಿದ್ದರು. ಅವರಿಗೆ ಪೂರ್ವ, ದಕ್ಷಿಣ ಭಾರತಗಳ
ಪರಿಚಯವಿರಲಿಲ್ಲವಾದರಿಂದ ಕರ್ನಾಟಕದಲ್ಲಿ ಸಂಸ್ಕೃತವಿರಲಿಲ್ಲ ಎಂದು
ವಿಶ್ವಾಸದಿಂದ ಹೇಳಬಹುದು. ಇದಕ್ಕೆ ಋಗ್ವೇದ ಹಾಗೂ ನಂತರ ಕಾಲದ ವೈದಿಕ ಸಾಹಿತ್ಯ ಪುರಾವೆಗಳನ್ನು
ಒದಗಿಸುತ್ತವೆ. .ಹಾಗಾದರೆ ಆಗಿನ
ಕರ್ನಾಟಕದಲ್ಲಿ ಜನ ಏನನ್ನು ಮಾತನಾಡುತ್ತಿದ್ದರು. ಗೊಂಡಿ ಭಾಷೆಯನ್ನೇ ಅಥವಾ ಗೊಂಡಿ ಭಾಷೆಯಿಂದ
ಕವಲೊಡೆದ ಮತ್ತೊಂದು ಭಾಷೆಯನ್ನೇ ? ಕರ್ನಾಟಕದಲ್ಲಿ ಗೊಂಡಿಯ ಕವಲು ಭಾಷೆ ಇದ್ದಿತು ಎಂದಾದರೆ
ಕನ್ನಡಿಗರಿಗೂ ಅದರಂತೆ ತಮಿಳು, ತೆಲುಗರು ಅದರದೇ ಕವಲುಗಳಾಗಿದ್ದು ಸೈಂಧವ ಸಂಸ್ಕೃತಿಯಲ್ಲಿ ಅವರ
ಪಾಲಿಲ್ಲವೇ ? ದ್ರಾವಿಡ ಭಾಷೆಗಳು ಸೈಂಧವ ಗೊಂಡಿಯಭಾಷಾ ಕವಲುಗಳೇ ಆಗಿದ್ದರೆ ಅವರ ನಗರ ಸಂಸ್ಕೃತಿಯ ಕುರುಹುಗಳು ಮತ್ತು
ಲಿಪಿ ದಕ್ಷಿಣ ಭಾರತದಲ್ಲಿ
ಏಕಿಲ್ಲ ?.
ಸಾಕಷ್ಟು
ಸಿದ್ದತೆಯಿಲ್ಲದೆ ಅಭದ್ರ ನೆಲೆಗಟ್ಟಿನ ಮೇಲೆ ಸೈಂಧವ ಲಿಪಿಯನ್ನು ಗೊಂಡಿ ಭಾಷೆಯಲ್ಲಿ ಓದುವ
ಕಂಗಾಲಿಯವರ ಪ್ರಯತ್ನ ಮತ್ತು ಫಲಿತಾಂಶಗಳತ್ತ ಒಂದು ನೋಟ ಬೀರಬಹುದು.
ಸೈಂಧವ
ಲಿಪಿ ಚಿತ್ರ, ಚಿತ್ರಾಕ್ಷರ , ಚಿತ್ರಪದ ಯಾವ ಬಗೆಯ ಲಿಪಿಯಾಗಿರಬಹುದು , ಅದರ ಬರವಣಿಗೆಯ ದಿಕ್ಕು
ಯಾವುದು? ಅಂತಹ ದಿಕ್ಕು ಎಲ್ಲಿಯೂ ಬದಲಾಗಿಲ್ಲವೆ ಎನ್ನುವಂತಹ ಸಂಗತಿಗಳನ್ನು ಕಳೆದ ೭೫ ವರ್ಷಗಳಿಂದ
ವಿದ್ವಾಂಸರು ಸುದೀರ್ಘವಾಗಿ ಚರ್ಚಿಸಿದ್ದಾರೆ. ಇಂತಹ ಚರ್ಚೆಗಳು ಯಾವುದೇ ಲಿಪಿಯನ್ನು ಬಿಡಿಸಲು
ಹೊರಡುವ ಮೊದಲು ಅಂತಹ ಪ್ರಯತ್ನಕ್ಕೆ ಬೇಕಾದ ಸಿದ್ಧತೆಯನ್ನು ಒದಗಿಸುತ್ತವೆ, ಕಂಗಾಲಿಯವರು ಇಂತಹ
ಯಾವುದೇ ಸಾಧ್ಯತೆಗಳನ್ನು ಪರಿಗಣಿಸಿಲ್ಲ ಹಾಗೂ ಎದುರಾಗಬಹುದಾದ ಪ್ರಶ್ನೆಗಳನ್ನು ತಮಗೆ ತಾವು
ಹಾಕಿಕೊಂಡಿಲ್ಲ.ಸೈಂಧವ ಲಿಪಿ ಚಿತ್ರ ಅಥವಾ ಚಿತ್ರಾಕ್ಷರ ಲಿಪಿಯಲ್ಲ
ಅದು ಚಿತ್ರಪದ ಲಿಪಿಎನ್ನುವ ನಿಲುವು ತಾಳಲಾಗಿದೆ. (ಪುಟ
-೭) ಯಾವ ಆಧಾರದ ಮೇಲೆ ಸೈಂಧವ ಲಿಪಿಯನ್ನು ಚಿತ್ರಪದ (ಚಿತ್ರ ಶಾಬ್ದಿಕ) ಲಿಪಿ
ಎಂದು ನಿರ್ಧರಿಸಲಾಗಿದೆ. ? ಇಂತಹ ನಿರ್ಧಾರಕ್ಕೆ ಬರಲು ಅನುಸರಿಸಿದ ಮಾರ್ಗಗಳು ಯಾವುವು ? ಸಿಂಧೂ
ಲಿಪಿ ಚಿತ್ರಪದ ಲಿಪಿ ಎಂದು ಪರಿಗಣಿಸಿ ಅದರ ಭಾಷೆ ಸಂಸ್ಕೃತ ಎಂದು ಕೆಲವರು ವಾದಿಸಿರುವುದನ್ನು ಹೇಗೆ ಎದುರಿಸುವುದು ? ಸೈಂಧವ ಲಿಪಿ ಬಿಡಿಸಲು ಹೊರಡುವ ಮೊದಲು ಇಂತಹ ಪ್ರಮುಖ ಸಿಕ್ಕುಗಳನ್ನು ಪರಿಗಣಿಸಿ ಪರಿಹರಿಸಲು ಲೇಖಕರು ಯತ್ನಿಸಿಲ್ಲ.
ಸೈಂಧವ ಲಿಪಿಯನ್ನು ಚಿತ್ರಪದ ಲಿಪಿ ಎಂದುಕೊಂಡಿರುವುದರಿಂದ ಈಗಿರುವ ಗೊಂಡಿ ಭಾಷೆಯ ಎಲ್ಲ
ಬಗೆಯ ಪದ,ಭಾಷೆ, ವ್ಯಾಕರಣ ಪ್ರಯೋಗಗಳು ಅದರಲ್ಲಿ ಹಾಸುಹೊಕ್ಕಾಗಿವೆ. ಇದರಿಂದಾಗಿ ಸೈಂಧವ ಕಾಲದ ಗೊಂಡಿ
ಭಾಷಾ ಲಕ್ಷಣಗಳು ಏನಿದ್ದವೆಂದು ಎಲ್ಲಿಯೂ ತಿಳಿಯುವುದಿಲ್ಲ. ಇದರ ಪರಿಣಾಮವಾಗಿ ದ್ರಾವಿಡ ಭಾಷೆಗಳಿಗೆ ಯಾವ
ರೀತಿಯಲ್ಲೂ ಹೊಂದಾಣಿಕೆಯಾಗದ ಪದ, ವ್ಯಾಕರಣ ಪ್ರಯೋಗಗಳನ್ನು ಕಂಗಾಲಿಯವರು ಮಾಡಿದ್ದಾರೆ.ಗೊಂಡಿ ಸೈಂಧವವಾದರೆ ಬಲೂಚಿಸ್ತಾನದಲ್ಲಿರುವ ಬ್ರಾಹುಯಿ ಏನಾಗಬೇಕು. ಸುಮೇರಿಯನ್, ಎಲಮೈಟ್ ಪದ ಮತ್ತು ವ್ಯಾಕರಣ ಲಕ್ಷಣಗಳನ್ನು
ಹೊಂದಿರುವ ಕನ್ನಡ, ತಮಿಳು, ತೆಲುಗು ಮುಂತಾದ ಇತರ ದ್ರಾವಿಡ ಭಾಷೆಗಳ ಸ್ಥಾನ ಯಾವುದು ?ಗೊಂಡಿಯ ಮೂಲಕ ಬಿಡಿಸಿದ ಸೈಂಧವ ಲಿಪಿ ನಿಜವಾಗಿಯೂಈಗ ನಮಗೆ ಗೊತ್ತಿರುವ ಪುರಾತತ್ತ್ವ ಸಾಕ್ಷ್ಯಗಳ
ಹಿನ್ನೆಲೆಯಲ್ಲಿ ಕಾಣುವ, ಅಕ್ಕಡಿಯನ್ನರೊಂದಿಗೆ ವ್ಯಾಪಾರ ಸಂಪರ್ಕಹೊಂದಿದ ಮೆಲುಹರನ್ನು ನಿಜವಾಗಿಯೂ
ಪ್ರತಿನಿಧಿಸುತ್ತದೆಯೇ ? ದ್ರಾವಿಡ ಪದಗಳಾದ ಊರು,ಕೇರಿ, ಹುಡೇವು, ಪಾಕ್ಕಂ, ಪೊಳಲ್, ಪಳ್ಳಿ , ಆರ್ , ಮುಂತಾದ ಪದಗಳು ಸೈಂಧವ ಲಿಪಿಯಲ್ಲಿ ಎಲ್ಲಿಯೂ ಇಲ್ಲವೇ? ಕಂಗಾಲಿಯವರು ಹೇಳುವಂತೆ ಸೈಂಧವ ವ್ಯಾಪಾರಿ ನಿಜವಾಗಿಯೂ ಗೊಂಡಿಯ ಬಿಲಾಲನೇ ? ಈ
ಬಿಲಾಲ ಪದ ಇತರ ದ್ರಾವಿಡ ಭಾಷೆಗಳಲ್ಲಿ ಏಕಿಲ್ಲ ? ಸೈಂಧವ ಭಾಷೆಯಲ್ಲಿ ಶ,ಷ,ಸ ಗಳಿದ್ದವೇ ?
ಮಹಾಪ್ರಾಣಗಳಿದ್ದವೇ ? ಯಾವುದಕ್ಕೂ ಉತ್ತರಗಳಿಲ್ಲ.
ಗೊಂಡಿ ಭಾಷೆಯು ದ್ರಾವಿಡ ಪೂರ್ವದ ಭಾಷೆಯಾಗಿದ್ದು ಎಲ್ಲ
ದ್ರಾವಿಡ ಭಾಷೆಗಳ ಜನನಿ ಎಂದು ಮೋ.ಛ.ಕಂಗಾಲಿಯವರು ಘೋಷಿಸುತ್ತಾರೆ. (ಪುಟ-೯) ಇದಕ್ಕೆ ಸಮರ್ಥನೆ ಒದಗಿಸುವ ಪದಕೋಶ , ವ್ಯಾಕರಣ ,
ಭಾಷೆಯ ಸಂರಚನೆಯ ಲಕ್ಷಣಗಳನ್ನು ಎಲ್ಲಿಯೂ ಒದಗಿಸಿಲ್ಲ.
ಆದ್ದರಿಂದ ಗೊಂಡಿ ಅದಿಮ ದ್ರಾವಿಡ ಭಾಷೆಯೆಂಬ ಒಣ ಹೆಮ್ಮೆಯಿದೆಯಾದರೂ
ಅದಕ್ಕೆ ಯಾವುದೇ ಆಧಾರಗಳಿಲ್ಲ. ದ್ರಾವಿಡ ಭಾಷೆಗಳನ್ನುಕಳೆದ ೨೦೦ ವರ್ಷಗಳಿಂದ ಆಳವಾಗಿ ಅದ್ಯಯನ ಮಾಡಿದ ವಿವಿಧ
ವಿದ್ವಾಂಸರು ಈ ಭಾಷೆಗಳಲ್ಲಿ
ಕವಲುಗಳು ಯಾವಾಗ ಬಂದಿರಬಹುದೆಂದು ಊಹಿಸಿದ್ದಾರೆ. ಪ್ರ.ಶ.ಪೂ ೨೦೦೦-೨೫೦೦ ವರ್ಷಗಳ ಹಿಂದೆಯೇ
ದ್ರಾವಿಡ ಭಾಷೆಗಳು ಉತ್ತರ-ಮಧ್ಯ-ದಕ್ಷಿಣದ ಕವಲುಗಳಾಗಿ ಒಡೆದಿದ್ದವು. ಇದು ಸೈಂಧವರ ಭಾಷೆ
ಗೊಂಡಿಯಾಗಿದ್ದಿತೆಂಬ ವಾದಕ್ಕೆ ಹಿನ್ನೆಡೆ ತರುತ್ತದೆ. ಪ್ರತಿಯೊಂದು ದ್ರಾವಿಡ ಭಾಷೆಯ ತನ್ನ ಮೂಲ ಭಾಷೆಯ ಹಲವು
ಲಕ್ಷಣಗಳನ್ನು ಉಳಿಸಿಕೊಂಡಿರುವಂತೆ, ಇನ್ನು ಕೆಲ ಲಕ್ಷಣಗಳನ್ನು ಕಳೆದುಕೊಂಡಿದೆ. ಕನ್ನಡ ತಮಿಳು
ತೆಲಗುಗಳು ಹೇಗೆ, ಯಾವಾಗ ಇಂತಹ ಲಕ್ಷಣಗಳನ್ನು ಹೊಂದಿದ್ದವು. ಹೇಗೆ ಯಾವಾಗ ಕಳೆದುಕೊಂಡವು ಎಂದು
ಗುರುತಿಸಲು ಸಾಧ್ಯ. ಗೊಂಡಿ ಭಾಷೆಗೆ ಇದು ಸಾಧ್ಯವಿಲ್ಲ. ಕನ್ನಡ ತಮಿಳಿನ ಕೆಲ ಪದಗಳು ಲಕ್ಷಣಗಳು
ಸುಮೇರಿಯನ್ ಎಲಮೈಟನನ್ನು ಹೋಲುತ್ತವೆ. ಸುಮೇರಿಯನ್ ಎಲಮೈಟ್ ಪ್ರಾಚೀನ ಸೈಂಧವ ಸಮಕಾಲೀನ ಭಾಷೆಗಳು. ಆದ್ದರಿಂದ ಸೈಂಧವ
ಗೊಂಡ ಮೂಲ ದ್ರಾವಿಡ ಆಗಲಾರದು. ಸೈಂಧವರನ್ನುಸಮಾಕಾಲೀನ
ಅಕ್ಕಡಿಯನ್ ಜೇಡಿಬಿಲ್ಲೆ ಮೊನಚುಲಿಪಿ ಬರಹಗಳಲ್ಲಿ ಮೆಲುಹರೆಂದು ಕರೆಯಲಾಗಿದೆ. ಗೊಂಡಿ ಮೆಲುಹ ಎನ್ನಲು ಯಾವುದೇ ಪುರಾವೆಗಳಿಲ್ಲ.
ಗೊಂಡಿಯಲ್ಲಿ
ದಯಿರ ಬೀರ ಪದವಿದೆ. ಬೀರ ಎಂದರೆ ಬಲದ
ಉಪಾಸಕ. ಗೊಂಡಿಯ ದಮಿರ ಬೀರ ದ್ರಾವಿಡ ರೂಪ ತಾಳಿತು. ದ್ರಾವಿಡ ಪದದ ಮೂಲವನ್ನು ಗೊಂಡಿ ಹೊರತಾಗಿ ಬೇರೆ ದ್ರಾವಿಡ
ಭಾಷೆಗಳಿಂದ ಪಡೆಯಲು ಸಾಧ್ಯವಿಲ್ಲ. (ಪುಟ-೧೦) ಎನ್ನುವ ಬೀಸು ಹೇಳಿಕೆ ನೀಡಲಾಗಿದೆ.ದಮಿರ ಬೀರ ಮುಂದೆ ದ್ರಾವಿಡ ರೂಪ ತಾಳಿದ್ದು ನಿಜವೇ ಆಗಿದ್ದರೆ, ಗೊಂಡಿ ಆದಿಮ ದ್ರಾವಿಡ ಭಾಷೆಯೇ ಆಗಿದ್ದರೆ ಆ ಸಂಸ್ಕೃತಿಯ ಐತಿಹ್ಯಗಳು
ಅದರಿಂದ ಉಗಮಿಸಿದ ಇತರ ದ್ರಾವಿಡ ಭಾಷೆಗಳಲ್ಲಿ ಏಕಿಲ್ಲ ? ದಯಿರ ಬೀರ ಬಿಡಿಸಿ ನೋಡಿದರೆ ಬೀರ ಸಂಸ್ಕೃತದ ವೀರ ಪದದ
ತದ್ಭವವಾಗಿದೆ. ಕಂಗಾಲಿಯವರು ಹೇಳುವ ದಯಿಯ ಬೀರ ದೇವರ ವೀರ ಅಥವಾ ದ್ಯಾವೀರ ಪದದ ಅಪಭ್ರಂಶವಾದಂತೆ ಕಾಣುತ್ತದೆ. ವೀರರ ಬದಲು ದ್ರಾವಿಡ ಪದ ಕಲಿ ಪದ ಇಲ್ಲಿ ಇರಬೇಕಾಗಿದ್ದಿತು.
ಜಗತ್ತಿನ ಶ್ರೇಷ್ಟ ವಿದ್ವಾಂಸರು ದ್ರಾವಿಡ ಪದದ ಮೂಲದ ಬಗೆಗೆ ತಿಣುಕುತ್ತಿರುವಾಗ ಅವುಗಳನ್ನು
ತೌಲನಿಕವಾಗಿ ವಿಮರ್ಶಿಸಿ ಗೊಂಡಿಯ ದಮೀರ ಬೀರ ದ್ರಾವಿಡ ಎಂದು ಸಾಧಿಸಬೇಕಿತ್ತು. ದ್ರಾವಿಡ
ಭಾಷೆಗಳಲ್ಲಿ ವ - ಬ ಆಗಿದೆಯೇ ಹೊರತು ಬ- ವಆಗಿಲ್ಲ.
ಗೊಂಡರು ತಮ್ಮನ್ನು ಕೊಯಾ (ಕಂದರ, ಗರಿ) ವಂಶಸ್ಥರೆಂದು
ಹೇಳಿಕೊಳ್ಳುವರೆಂಬ ವಿವರಣೆ ನೀಡಲಾಗಿದೆ. ಸೈಂಧವರಂತಹ ಮಹಾನಗರ ಸಂಸ್ಕೃತಿ ಕಟ್ಟಿದವರು
ತಾವು ಕಂದರ, ಗಿರಿಗಳ ನೆಲೆಯವರು ಎಂದು ಹೇಳಿಕೊಳ್ಳುವುದು ಸೋಜಿಗವಾಗಿದ್ದು, ಲೇಖಕರು ಮಂಡಿಸುವ
ವಾದಕ್ಕೆ ತದ್ವಿರುದ್ದವಾಗಿದೆ. ಗೊಂಡಿಯ ಗೂಡಾ ಸೂತ್ರದ ಪ್ರಕಾರ ಕೊಯಾ ವಂಶದ ಗೊಂಡ ಸಮುದಾಯದ ಮೂಲ
ಜನ್ಮಸ್ಥಳ ಅಮರಕೋಟ = ಅಮರ ಕಂಟಕ ಎಂಬ ಹೇಳಿಕೆ ಈವರೆಗೆ ತಿಳಿದಿರುವ ಸಂಗತಿಗಳಿಗೆ
ವಿರುದ್ಧವಾಗಿದೆ. ಸೈಂಧವ ನಾಗರಿಕತೆಯ ಉಗಮ ಬಲೂಚಿಸ್ತಾನದ
ಕಾಚಿ ಬಯಲುಗಳಿಂದ ಪ್ರಾರಂಭವಾಗಿ ಮುಂದೆ ಪೂರ್ವದತ್ತ ಹರಿದು
ಬಂದಿರುವುದನ್ನು ಪುರಾತತ್ತ್ವ
ಸಾಕ್ಷ್ಯಗಳು ದೃಢಗೊಳಿಸಿವೆ. ಆದ್ದರಿಂದ ಸೈಂಧವ ಗೊಂಡಿ ನಾಗರಿಕತೆಯನ್ನು ಅಮರಕಂಟಕದಲ್ಲಿ ಹುಡುಕಲಾಗದು.
ನರ್ಮದಾ, ಜವಾರಾ, ಸೋನಾ ಕಾಡಾ, ಖೋಬದಿ ಬೆನಗೂಡಾ
ಪೆನಗೂಡಾ, ಮಾಗೊಂಡಮೂರಿ, ಗೋಯಂದಾದಿ, ಕಯಮಾರಿ, ಪೆನ್ ಪೆನಾಮೀಲ, ಟಾಗರಿ, ಉಟಾನಗರಿ ಗೊಂಡಿಗಳ ನದಿ ನೆಲೆಗಳು. ಈ ನದಿ ಹೆಸರುಗಳಲ್ಲಿ ನರ್ಮದಾ ದ್ರಾವಿಡ ಪದವಲ್ಲ. ಸೋನಾದಲ್ಲಿ ಸ್ವರ್ಣ ಕಾಣಿಸುತ್ತದೆ.
ಉಳಿದಂತೆ ಆರ್ (=ಹೊಳೆ/ನದಿ, ಹುಳಿಯಾರ್, ಪೆನ್ನಾರ್) ನದಿ ಸೂಚಿಸುವ ದ್ರಾವಿಡ ಪದ, ಆದರೆ ಈ ಯಾವ
ಪದಗಳು ಋಗ್ವೇದದಲ್ಲಿ ಎಲ್ಲಿಯೂ ಕಾಣಸಿಗವು. ನಂತರ ಬ್ರಾಹ್ಮಣ ಅರಣ್ಯಕಗಳಲ್ಲಿಯೂ ಸಿಗವು. ಆದ್ದರಿಂದ ಇವುಗಳಲ್ಲಿ ಕೆಲವು ದ್ರಾವಿಡ ಪದದ ಅಪಭ್ರಂಶಗಳಾದರೂ,
ಸೈಂಧವ ನಾಗರಿಕತೆಯ ಕಾಲದಲ್ಲಿ ಬಳಕೆಯಲ್ಲಿ ಇರಲಿಲ್ಲವೆಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಹರಯೂಪಿಯಾ/ಹರ್ವಾಕೋಟ=ಹರಪ್ಪಾ,
ಮುರ್ವಿದುರ್ಯೋಣ /ಮುರ್ವಾಕೋಟ=ಮೊಹೆಂಜದಾರೋ ಎನ್ನುವ ಹೇಳಿಕೆ ಸರಿಯಲ್ಲ ಈ ಬಗೆಯ ಪದಗಳು
ದ್ರಾವಿಡ ಲಕ್ಷಣಗಳನ್ನು ಹೊಂದಿಲ್ಲ. ಮೂಲ ದ್ರಾವಿಡದಲ್ಲಿ ಹ ಕಾರವಿಲ್ಲ ಪಾಕಿಸ್ತಾನ ಪ್ರದೇಶದಲ್ಲಿ
ದಾರೋ ಎಂದರೆ ಹಳ್ಳಿ (ಚುನ್’ಹುದಾರೋ)ಹರಯೂಪಿಯಾ ಪದ ಋಗ್ವೇದದಲ್ಲೂ
ಬಳಕೆಯಾಗಿದೆ. ಎಂದರೆ ಆ ಕಾಲಕ್ಕೆ ದ್ರಾವಿಡ ಪದ. ಸಂಸ್ಕೃತ ಪದಕೋಶವನ್ನು ಹೊಕ್ಕಿತೆಂಬ ನಿರ್ಣಯಕ್ಕೆ
ಬರಬೇಕಾಗುತ್ತದೆ. ಆದರೆ, ಇದು ಸಾಧ್ಯವಿಲ್ಲ. ಏಕೆಂದರೆ ಕನ್ನಡ, ತಮಿಳಿನ ಪ್ರಾಚೀನ
ಶಿಲಾಶಾಸನಗಳಿಂದ ಈ ಭಾಷೆಗಳಲ್ಲಿ ಮೊದಲಿಗೆ ಹ ಕಾರಗಳಿರಲಿಲ್ಲ. (ತಮಿಳಿನಲ್ಲಿ ಈಗಲೂ ಇಲ್ಲ) ಎಂದು
ತಿಳಿದು ಬರುತ್ತದೆ. ಹತ್ತನೇ ಶತಮಾನದ ನಂತರ ಕನ್ನಡದಲ್ಲಿ ಪ ಕಾರ ಹ ಕಾರವಾಗಿದೆ. ಮುರ್ವಿದುರ್ಯೋಣ ಹೇಗೆ
ದ್ರಾವಿಡ ಪದವಾಗಬಲ್ಲದು ? ಮುರ್ವಿದುರ್ಯೋಣದ ಪದ
ವಿಭಜನೆ ಹಾಗೂ ಅರ್ಧಗಳೇನೆನ್ನುವುದು ಸ್ಪಷ್ಟವಿಲ್ಲ.ದ್ರಾವಿಡ ಮೂಲದಲ್ಲಿ ಪದ ಬಿಡಿಸಿ ಇದನ್ನು ವಿವರಿಸಲು ಸಾಧ್ಯವಿಲ್ಲ.
ಗೊಂಡಿಯಲ್ಲಿ
ಮುರ್ರಾಲಪೆನ್ (ಮುರಿಗೆ>ಮುರಾ=ಕೊಂಭು?) ಬುರ್ರಾಲೆಪನ್ ಸರೋಜಪೆನ್, ಪರಸಾಪೆನ್, ಫಡಾಪೆನ್, ಬುಡಾಲಪೆನ್, ಬೊಂಹಾಪೆನ್ ಈನುವ ಹೆಸರುಗಳಿವೆ ಎನ್ನಲಾಗಿದೆ. ಇವು ಮುರುಗಪ್ಪನ್, ಬುರ್ರುಗಪ್ಪಾನ್ ಸರ್ರೋಜಪ್ಪನ್ ಪರಸಪ್ಪನ್, ಪಡಪ್ಪನ್,
ಬುಡಪ್ಟಿನ್ ಇರಬಹುದು.
ಕುವ ಅಥವಾ ಕೋಯಾ ವಂಶದವರ ಮುರ್ಮಿದೋರ್ಯೋಣಮತ್ತು ಹರಯೂಪಿಯಾ ನಗರಗಳ ಮೇಲೆ ಆರ್ಯರು
ಆಕ್ರಮಣ ಮಾಡಿ ಅಲ್ಲಿಯ ಕುಯುವ
ಅಸುರರನ್ನು ಸಂಹಾರಮಾಡಿ ಅವರ ಸಂಪತ್ತನ್ನು ಲೂಟಿ ಮಾಡಿ ನಗರಗಳನ್ನು ಧ್ವಂಸ ಮಾಡಿದರು ಎಂದು ಊಹಿಸಲಾಗಿದೆ. ಇಲ್ಲಿ ಅಸುರ=ಗೊಂಡಿ ಎನ್ನುವ ಸಮೀಕರಣ ಬಂದಿದೆ. ಗೊಂಡಿಗಳನ್ನು
ಅಸುರರೆಂದು ಪರಿಗಣಿಸಿರುವುದಕ್ಕೆ ಯಾವುದೇ ಬಗೆಯ ಬಾಹ್ಯ ಸಾಕ್ಷ್ಯಗಳಿಲ್ಲ. ಋಗ್ವೇದದಲ್ಲಿ ಮಿತ್ರ,
ವರುಣರು ಅಸುರರು. ಋಗ್ವೈದಿಕ ಕಾಲದಲ್ಲಿ ದೇವ (ಹೊಳೆಯುವವ) ಮತ್ತು ಅಸುರ(ಶಕ್ತಿಶಾಲಿ) ಎರಡೂ ದೇವಗಣಗಳಾಗಿದ್ದವು. ಕಳೆದ ಎರಡು ದಶಕಗಳಿಂದ ನಡೆದಿರುವ ಸಂಶೋಧನೆಗಳು
ಪುರಾತತ್ತ್ವ ಶೋಧನೆಗಳು ಆಕ್ರಮಣದಿಂದ ಸೈಂಧವ ನಾಗರಿಕತೆ ಕೊನೆಗೊಂಡಿತೆಂಬ ವಾದವನ್ನು
ತಿರಸ್ಕರಿಸುತ್ತ ಸಾಗಿವೆ. ಮಾರ್ಟಿಮ್ ವೀಲರ್ ಮೊದಲ ಬಾರಿಗ ಇಂದ್ರನೇ ಅಪರಾಧಿ ಎಂದು ಸಾರಿದ ಹೇಳಿಕೆಯ ವಿವರಣೆಯನ್ನು ಕಂಗಾಲಿಯವರು ಅವಲಂಬಿಸಿದ್ದಾರೆ. ನಗರ
ಧ್ವಂಸ ಮತ್ತು ಆಕ್ರಮಣಗಳಿಗೆ ಪುರಾತತ್ತ್ವ ಸಾಕ್ಷ್ಯಗಳ ಕೊರತೆಯಿದೆ.
ಕುತ್ಸ ಪ್ರ.ಶ.ಪೂ ೧೮೦೦ರಲ್ಲಿ ಮುರ್ವಿದುರ್ಯೋಣ ನಾಶಗೊಳಿಸಿದನು.
ಇದಾದ ೩೦೦ ವರ್ಷಗಳ ಮೇಲೆ ಋಗ್ವೇದ ರಚನೆಯಾಯಿತು ಎನ್ನುವ ಹೇಳಿಕೆ
ಆಧಾರರಹಿತವಾದುದು. ಋಗ್ವೇದದಲ್ಲಿ
ಬರುವ (೧/೧೩೪/೭) ಋಚೆಯಲ್ಲಿ ಇಂದ್ರ ದಾಸರನ್ನು ನಾಶಗೊಳಿಸಿದನು ಎಂದಿದೆ. ಒಂದು ಕಡೆ ಸೈಂಧವರನ್ನು
ದಾಸರಿಗೆ, ಇನ್ನೊಂದು ಕಡೆ ಅಸುರರಿಗೆ ಹೋಲಿಸುವ ಲೇಖಕರು ದಾಸ =ಸೈಂಧವ=ಗೊಂಡಿ ಎನ್ನುವ ತೊಡಕಿನ , ತಪ್ಪು
ನಿರ್ಧಾರಕ್ಕೆ ಬಂದಿದ್ದಾರೆ. ದಾಸರನ್ನು ಋಗ್ವೈದಿಕರ ಸೋದರರಾದ ಪಾರ್ಸಿಗಳ ಅವೆಸ್ತಾದಲ್ಲಿ ದಾಹೆಗಳೆಂದು ಕರೆಯಲಾಗಿದೆ. ಗ್ರೀಕರು ಇವರನ್ನು ಉಲ್ಲೇಖಿಸಿದ್ದಾರೆ
ದಾಸ/ದಾಹೆಗಳು ಇರಾನಿನ ಬುಡಕಟ್ಟುಗಳೆಂದು ಕೆಲ ವಿದ್ವಾಂಸರು, ಆರ್ಯರ ಯಾಜ್ಞಿಕ ಪದ್ದತಿಯನ್ನು
ಒಪ್ಪದ ವಿಭಿನ್ನ ಕವಲೆಂದು ಇತರರು ವಾದಿಸಿದ್ದಾರೆ. ಋಗ್ವೇದದಲ್ಲಿ ಅಪಘಾನಿಸ್ತಾನಕ್ಕೆ
ಸೇರಿದ ನದಿಗಳ ಪ್ರಸ್ತಾಪವಿದೆ. (ಕುಭಾ-ರಸ-ಇತ್ಯಾದಿ) . ಆದ್ದರಿಂದ ಸೈಂಧವ ನಗರಗಳ ನಾಶದ ನಂತರ
೩೦೦ ವರ್ಷಗಳ ಋಗ್ವೇದದ ರಚನೆಯಾಯಿತೆನ್ನುವುದು ತಪ್ಪು. ಋಗ್ವೇದದಲ್ಲಿ ಬರುವ ಪುರಗಳು ಹರಪ್ಪಾ ಮೊಹೆಂಜದಾರೋ ನಗರಗಳನ್ನು ಹೋಲುವುದಿಲ್ಲ. ಇಂದ್ರಶಂಬರನ ೧೦೦ ಪುರಗಳನ್ನು ಹಾಳುಗೆಡವಿದನೆಂದು
ಹೇಳಲಾಗಿದೆ. ಇಂತಹ ಪುರಗಳು ಅಫಘಾನಿಸ್ತಾನ ಉತ್ತರ ತುರ್ಕೆಮೆನಿಸ್ತಾನದ ಬ್ಯಾಕ್ಟ್ರಿಯಾ-ಮಾರ್ಜಿಯಾನ ಪುರಾತತ್ತ್ವ ಸಂಕೀರ್ಣ ಪ್ರದೇಶಕ್ಕೆ ಸೇರಿರಬಹುದು.
ಋಗ್ವೇದದ ಪುರಗಳು ಮೂರು ಸುತ್ತಿನ ರಕ್ಷಣೆಯಿರುವ ಬಿದಿರು, ಮಣ್ಣು
. ದುಂಡುಗಲ್ಲುಗಳಿಂದ
ಭದ್ರಗೊಳಿಸಲ್ಪಟ್ಟ ಗೋಡೆಗಳನ್ನು ಹೊಂದಿದ್ದವು. ಸೈಂಧವ ನಗರಗಳು ಸುಟ್ಟ
ಇಟ್ಟಿಗೆಯ ನಿರ್ಮಾಣಗಳು.
ಕುಯವ ರಾಜ ಶಂಬರನ ೧೦೦ ಕೋಟಿಗಳನ್ನು ಇಂದ್ರ ಕೆಡವಿದ ಎನ್ನುವುದು ಕಂಗಾಲಿಯವರಊಹೆ. ಶಂಬರ- ದ್ರಾವಿಡ ಪದವಲ್ಲ. ಋಗ್ವೇದದ ಆಂತರಿಕ ವಿಶ್ಲೇಷಣೆಗಳಿಂದ ಶಂಬರ ಎತ್ತರದ ಗುಡ್ಡಗಾಡು ಪ್ರದೇಶಕ್ಕೆ ಸೇರಿದ್ದ
ಬುಡಕಟ್ಟುಗಳ ರಾಜ. ಆತನನ್ನು ಸೈಂಧವರಿಗೆ ಆ ಮೂಲಕ ಗೊಂಡರಿಗೆ ಹೋಲಿಸಲು ಯಾವುದೇ ಸಮರ್ಥನೆಗಳಿಲ್ಲ.
ಗೊಂಡಿಗಳು
ಎಲ್ಲ ಕೆಲಸಗಳನ್ನು ಬಲಗಡೆಯಿಂದ ಪ್ರಾರಂಭಿಸುತ್ತಾರೆ ಸೈಂಧವ ಲಿಪಿಯನ್ನು ಬಲದಿಂದ ಎಡಕ್ಕೆ ಬರೆಯಲಾಗಿದೆ. ಆದ್ದರಿಂದ ಸೈಂಧವ=ಗೊಂಡಿ
ಎನ್ನುವುದು ಒಂದು ಕಲ್ಪನೆ. ಜಗತ್ತಿನ ಹಲವಾರು ಪ್ರಾಚೀನ ಜನಾಂಗಗಳಲ್ಲಿಯೂ ಬಲಗಡೆಯಿಂದ ಪ್ರಾರಂಭಿಸುವ ಪದ್ದತಿ ಇದ್ದಿತು. ಆದ್ದರಿಂದ ಗೊಂಡರಿಗೂ ಸೈಂಧವ ಲಿಪಿ ದಿಕ್ಕಿಗೂ
ಸಂಬಂಧವಿಲ್ಲ. ಸೈಂಧವ ಲಿಪಿ ಕೆಲವು ಕಡೆ ಉಳುಮೆ ಪದ್ದತಿಯಂತೆಯೂ ಸಾಗಿದೆ.
ಸೈಂಧವ ಲಿಪಿ ಚಿತ್ರಪದ ಲಿಪಿ ಎಂದು ಪರಿಗಣಿಸಿರುವ
ಲೇಖಕರು, ಅದರ ಸಂಕೇತಗಳನ್ನು ತಮಗೆ ಬೇಕಾದ ಪದವಾಗಿ ಊಹಿಸಿಕೊಂಡಿದ್ದಾರೆ. ಅಂತಹ ಪದ ಗೊಂಡಿಯದೇ
ಆಗಿದೆಯೆಂಬ ಅದಮ್ಯ ವಿಶ್ವಾಸ ಅವರದ್ದು, ಈವರೆಗೆ ಸೈಂಧವರ ಭಾಷೆ ಕುರಿತಾಗಿ ಜಗತ್ತಿನ ಶ್ರೇಷ್ಟ ಭಾಷಾವಿದ್ವಾಂಸರು ನಡೆಸಿದ
ಚಿಂತನೆಗಳ ವಿವರಗಳಿಲ್ಲ. ಕಂಗಾಲಿಯವರು ಮೊದಲಿಗೆ ಒಂದು ನಿರ್ದಿಷ್ಟ ಸಂಕೇತವನ್ನು ಮನುಷ್ಯ ಎಂದು
ಪರಿಗಣಿಸುತ್ತಾರೆ. ಇದನ್ನು ಗೊಂಡಿಯ ಆಲ ಪದಕ್ಕೆ ಹೊಂದಿಸುತ್ತಾರೆ. ನಂತರ ಇದರ ಆಧಾರಧ ಮೇಲೆ
ಸೈಂಧವ ಲಿಪಿಯನ್ನು ಬಿಡಿಸುವ ಯತ್ನ ನಡೆಸಿದ್ದಾರೆ. ಕಳೆದ ನಾಲ್ಕು ಸಾವಿರ ವರ್ಷಗಳಲ್ಲಿ ಸೈಂಧವರ
ಭಾಷೆಯ ಲಕ್ಷಣಗಳು ಗೊಂಡಿಯಲ್ಲಿ ಹಾಗೆಯೇ ಉಳಿದಿವೆ ಎಂದು ಭಾವಿಸುತ್ತಾರೆ. ರಪನೂಯಿ(ರೋಂಗೋ ರೊಂಗೋ)
ಲಿಪಿ ಬಿಡಿಸಲು ಯತ್ನಿಸಿದವರೆಲ್ಲರೂ ಅದರಲ್ಲಿರುವ ಮನುಷ್ಯನಂತಹ ಸಂಕೇತಗಳನ್ನು ಗಮನಿಸಿ ತಮ್ಮದೇ
ಆದ ಕಥೆಗಳನ್ನು ಕಟ್ಟಿದ್ದಾರೆ. ಆದರೆ ಇಂತಹ ಯಾವ ಪ್ರಯತ್ನಗಳೂ ಲಿಪಿ ಬಿಡಿಸುವ ಮಾರ್ಗಗಳೆಂದು
ಪರಿಗಣಿತವಾಗಿಲ್ಲ. ಆದ್ದರಿಂದ ಲೇಖಕರು ಮನುಷ್ಯರ ಚಿತ್ರಗಳಂತಹ ಸಂಕೇತಗಳಿಗೆ ನೀಡುವ ಓದಿಕೆಯೇ ಸರಿಯಾದ ನೆಲೆಗಟ್ಟಿನ ಮೇಲಿಲ್ಲ.
ಸಂಕೇತ-೧ : ಇದನ್ನು ಮಾನವಾಕೃತಿಯೆಂದು ಪರಿಗಣಿಸಲಾಗಿದೆ. ಗೊಂಡಿಯಲ್ಲಿ ಮಾನವ = ಆಲ
ಎಂದು ನಿರ್ಧರಿಸಿದ್ದಾರೆ. ವ್ಯಕ್ತಿಗೆ ಆಲ ಎನ್ನುವುದು ಪೂರ್ವ ದ್ರಾವಿಡ ರೂಪವಾಗಿರುವ ಸಾಧ್ಯತೆಯಿಲ್ಲ ಹಾಗೂ ಆ ಪದ ಸೈಂಧವ
ಕಾಲದಲ್ಲಿಯೂ ಅದೇ ಉಚ್ಛಾರದಲ್ಲಿ ಈಗಿನಂತೆಯೇ ಇದ್ದಿತೆಂದು ಹೇಳಲಾಗದು. ಗಂಡು, ಹೆಣ್ಣು ,ಪ್ರಾಣಿ/ವಸ್ತುಗಳಿಗೆ
ದ್ರಾವಿಡ ಭಾಷೆಗಳಲ್ಲಿ ಆನ್, ಆಳ್,ಆದ್ (ಬಂದಾನ್, ಬಂದಾಳ್, ಬಂದಾದ್)ಪದಗಳಿವೆಯೇ ಹೊರತು ಆಲ
ಪದವಿಲ್ಲ ಆ ಕೊನೆಯ ಪದ ಮೂಲ ದ್ರಾವಿಡದಲ್ಲಿ ಇರುವುದು ಸಾಧ್ಯವಿಲ್ಲ. ಆಲ್ ಪದವೇ ಗೊಂಡಿಯಲ್ಲಿ ಆಲ ಆಗಿದೆ.
ತೆಲುಗಿನಲ್ಲಿ ಆಳ್ ಅಲವಾಗಿ, ಹೆಣ್ಣನ್ನು ಸೂಚಿಸುತ್ತದೆ. (ಚೆಲ್ಲಾಲ, ಕೋಡಾಲ ). ಆದ್ದರಿಂದಸಂಕೇತ-೧ ’ಆಲ’ (ಅಳಿ) ಎನ್ನುತ್ತ ಊಹೆಯಿಂದ ಪ್ರಾರಂಭವಾಗುವ ಚಿತ್ರಪದ ಓದಿಕೆಯಲ್ಲಿ ಮೊದಲ ಹೆಜ್ಜೆಯಲ್ಲೇ
ವ್ಯಕ್ತಿ (ಆಳ್) ಶುದ್ದರೂಪ ಇಲ್ಲದಂತಾಗಿದೆ. ಆದ್ದರಿಂದ ಗೊಂಡಿಯ ’ಆಲ’ ಪ್ರಾಚೀನ ದ್ರಾವಿಡ ಪದವಲ್ಲ ಮತ್ತು
ಅದು ಸೈಂಧವ ಆಗಿರುವ ಸಾಧ್ಯತೆಗಳೇ ಇಲ್ಲ.
ಸಂಕೇತ-೨ ; ಆಯ=ಎಲೆ
ಎಂದು ಅರ್ಥೈಸಿ ಅದು ತಾಯಿ ಸೂಚಕ ಎಂದು ಪರಿಗಣಿಸಲಾಗಿದೆ. ದ್ರಾವಿಡ ಭಾಷೆಗಳಲ್ಲಿ ಇಲೈ (ತಮಿಳು), ಎಲೆ(ಕನ್ನಡ), ಇದೆ,
ಎಲೆ (ತುಳು) , ಇಲೆ (ಮಲಯಾಳಂ) ಪದವಿದ್ದರೆ ತೆಲುಗಿನಲ್ಲಿ ಮಾತ್ರ ಆಕು (ತೆಲುಗು)ಪದವಿದೆ. ಮೂಲದಲ್ಲಿ ಆಕು ಪದಕ್ಕೆ ಎಲೆ ಎಂಬ
ಅರ್ಥವಿಲ್ಲ. ಆಕು ಎಂದರೆ ಇನ್ನು ಊರದ ಸಸಿ (ಅಣ್ಣೆ, ಅಗೇವು,-ಅಗೆ ಹಾಕುವುದು) ಎಂದು ಅರ್ಥ.
ಆದ್ದರಿಂದ ಆಯ + ಆಲ ಒಂದು ಕೃತಕ ರಚನೆ. ಅಮ್ಮನಿಗೆ ತಾಯ್ (ಕನ್ನಡ, ತಮಿಳು, ತುಳು,ಮಲೆಯಾಳಂ) ತಲ್ಲಿ, (ತೆಲುಗು)
ಪದಗಳಿವೆ. ತ ಕಾರ ನಷ್ಟವಾಗಿರುವ ಪದಗಳಿಗೆ ಈ ಭಾಷೆಗಳಲ್ಲಿ ಉದಾಹರಣೆಗಳು ಸಿಕ್ಕವು. ಆದ್ದರಿಂದ
ಗೊಂಡಿಯ ’ಆಯ’ ಬೇರೆ ಯಾವುದೇಮೂಲದಿಂದ ವ್ಯತ್ಯಾಸಗೊಂಡ
ಪದವಿರಬಹುದು.
ಆದಿಮ ದ್ರಾವಿಡ ಭಾಷೆಯಲ್ಲಿ ಮೊದಲಿಗೆ ಎರಡೇ ಲಿಂಗಗಳಿದ್ದು (ಪುಲ್ಲಿಂಗ, ನಪುಂಸಕ
ಲಿಂಗ) ನಂತರದ
ಕಾಲದಲ್ಲಿ ಸ್ತ್ರೀಲಿಂಗ ಸೇರ್ಪಡೆಗೊಂಡಿತು. ಈಗ ತೆಲುಗನ್ನು ಹೊರತಾಗಿ ಇತರ ದ್ರಾವಿಡ ಭಾಷೆಗಳಲ್ಲಿ ನಪುಂಸಕಲಿಂಗ ಬಳಕೆಯಲ್ಲಿದೆ.. ತೆಲುಗಿನಲ್ಲಿಯೂ ಕೆಲವು ಕಡೆ
ಅಸ್ಪಷ್ಟವಾಗಿ ಸ್ತ್ರೀಲಿಂಗ ಬಂದಿದೆ. (ಚೆಲ್ಲಾಳ್>ಚೆಲ್ಲಾಲ, ಕೋಡಾಳ್>ಕೋಡಾಲ್). ಆದ್ದರಿಂದ ಆದಿಮ
ದ್ರಾವಿಡ ಲಕ್ಷಣಗಳನ್ನು
ಹೊಂದಿದೆಯೆಂದು ಹೇಳಲಾಗುವ ಸೈಂಧವ ಗೊಂಡಿಯಲ್ಲಿ ಆಳ್ ಅಥವಾ ಯಾವುದೇ ಸ್ತೀಲಿಂಗ ಸೂಚಿಸುವ ಸ್ವತಂತ್ರ ಪ್ರತ್ಯಯ
ಇರಲಾರದು. ಒಂದು ಕಡೆ ಪುಲ್ಲಿಂಗವನ್ನು ಸೂಚಿಸುತ್ತದೆ ಎಂದು ಹೇಳುವ ಆಲ ಪದವನ್ನು ಸ್ತ್ರೀಲಿಂಗ ಸೂಚಕ ತಾಯಿ ಪದ (ಎಲೆಯಾಲ)
ಪದದ ಮೇಲೂ ಬಳಸಲಾಗಿದೆ.(ಆಲ=ವ್ಯಕ್ತಿಎಂದು ಅರ್ಥೈಸಲಾಗಿದೆಯಾದರೂ ಅದನ್ನು ಎಲ್ಲ ಕಡೆ
ಪುಲ್ಲಿಂಗದಂತೆ ಪರಿಗಣಿಸಿ ಲಿಪಿಯನ್ನು ಓದಲಾಗಿದೆ) ಆದ್ದರಿಂದ ಎರಡನೇ ಸಂಕೇತ ಅಮ್ಮ ತಾಯಿ ಎನ್ನುವುದಕ್ಕ ಸಮರ್ಥನೆಗಳಿಲ್ಲ. ಇದನ್ನು
ಲೇಖಕರ ಹಾದಿಯಲ್ಲೇ ಸಾಗಿ ಎಲೆಯಾನ್ ಎಲೆಯಾಳ್ ಎಲೆಯಾದ್ (ಎಲೆಯವನು-ಎಲೆಯವಳು-ಎಲೆಯದು) ಎಂದು ಸಹ ಓದಬಹುದು. ಆಗ
ತಾಯಿ ಅರ್ಥ ಬರದು.
ಸಂಕೇತ-೩ : ಇದಕ್ಕೆ ನೀಡಿರುವ ವಿವರಣೆ ಸಂಕೇತ ೧ಕ್ಕೆ ನೀಡಿರುವ
ವಿವರಣೆಗಳ ಹಿಂದೆ ಹೆಚ್ಚಿನ ವ್ಯತ್ಯಾಸಗಳಿಲ್ಲ. ಸಂಕೇತ – ೧ಕ್ಕೆ ಹೆಚ್ಚುವರಿ ಗೀಟು ಸೇರಿಸಿ,
ಸಂಕೇತ-೩ ಪಡೆಯಲಾಗಿದೆಯೆಂದು ಅದು ಪದಕ್ಕೆ ಸೇರಿಸಿರುವ ಪ್ರತ್ಯಯ ಎಂದು ಊಹಿಸಲಾಗಿದೆ. ಈ ಪ್ರತ್ಯಯ
ಏನನ್ನು , ಏಕೆ. ಹೇಗೆ, ಸೂಚಿಸುತ್ತದೆಯೆಂದು ತಿಳಿಸಲು ಬೇರೆ ವಿವರಣೆಗಳಿಲ್ಲ.
ಸಂಕೇತ ೫ ರಿಂದ ೧೯ : ಸಂಸ್ಕೃತ ಪ್ರೇಮಿಗಳು ಸಂಕೇತ-೧ನ್ನು ಧಾರ/ಧಾರಿ ಧರಿಸಿದವನು ವ್ಯಕ್ತಿ, ಎಂದು
ಅರ್ಥೈಸಿ ೫ರಿಂದ ೧೯ರವರೆಗಿನಸಂಕೇತಗಳನ್ನು
ದಂಢಧಾರಿ, ಶರಧನುರ್ಧಾರಿ , ದ್ವಿದಂಡಧಾರಿ, ಧನುರ್ಧಾರಿ , ದ್ವಿಧನುರ್ಧಾರಿ ಪಾತ್ರಧಾರಿ,ಉಲಾಖಾಲಧಾರಿ,ಘಟಾಧಾರಿ,ಸಸ್ಯಧಾರಿ,
ಶಾಖಾಧಾರಿ, ವಿಧ್ರಕಠಾರಿ , ಅಸ್ತಿಧಾರಿ, ಮಾಪಧಾರ, ಮುಖ್ಯಮಾಪದಾರಿ ಭಾರದಾರಿ ಎಂದು ಓದಬಹುದು. ಈ
ಸಂಕೇತಗಳನ್ನ ವಿವರಿಸಲು ಬಳಸಿರುವ ದಂಡ ಮುಂತಾದವು ದ್ರಾವಿಡ ಪದಗಳಲ್ಲ. ಬಿಲ್
ಪದದ ಮೂಲರೂಪ ವಿಲ್. ಸೈಂಧವ ಗೊಂಡಿಯಲ್ಲಿ ವಿಲ್ಲಾಳ್ (ಬಿಲ್ಲುಗಾರ) ಇರುವ
ಸಾದ್ಯತೆಗಳಿವೆಯೇ ಹೊರತು ಬಿಲ್ಲಾಲನಲ್ಲ. ಕುಮ್ಮಾ ಕುಂಭಾರ ಪದದ ಅಪಭ್ರಂಶ/ತಧ್ವವ.
ಆದ್ದರಿಂದ ಕುಮ್ಮಾಲ ಸೈಂಧವ ಪದವಲ್ಲ. ಅದು ಸೈಂಧವ ಪದವೆಂದರೆ ಇಂಡೋ-ಆರ್ಯನ್ ಭಾಷಿಕರಾದ ಋಗ್ವೈದಿಕ
ಆರ್ಯರು ಬರುವವರೆಗೆ ಸೈಂಧವರಿಗೆ ಮಡಿಕೆ , ಕುಡಿಕೆಗಳನ್ನು ಮಾಡುವುದು ತಿಳಿದಿರಲಿಲ್ಲ
ಎಂದಾಗುತ್ತದೆ.
ಸಂಕೇತ-೬ ಬಿಲ್ ಎಂದರೆ ವ್ಯಾಪಾರಿ ಎಂಬ ಅರ್ಥ ಹೊಂದಿಸಲಾಗಿದೆ.. ದ್ರಾವಿಡ ಭಾಷೆಗಳಲ್ಲಿ ಬಿಲ್ ಪದಕ್ಕೆ ಎಲ್ಲಿಯೂ ಮಾರು ಕೊಳ್ಳು ಎಂಬ ಅರ್ಥಗಳಿಲ್ಲ. ಸಂಕೇತ ೬ ಹಾಗೂ ೮ ರ
ನಡುವೆ ಬಂದಿರುವ ಅರ್ಥ ವ್ಯತ್ಯಾಸ ಅತ್ಯಂತ ಕೃತಕವಾಗಿದೆ.
ಸಂಕೇತ-೮ ರಲ್ಲಿ
ಬಿಲ್ ಮಾರಾಟವಾದರೆ ೧೦ ರಲ್ಲಿ ಬನಿ(ಬಾನಿ) ಆ ಅರ್ಥ
ಪಡೆದಿದೆ. ಬಿದಿರಿನ ಬುಟ್ಟಿಯ (ಆಲ್) ಮೂಲಕ ಅಲಾಲ ಸಾಧಿಸಲಾಗಿದೆ.
ಸಂಕೇತ ೧೧ ಹಾಗೂ ೧೨ ರಲ್ಲಿ ಮಾನವಾಕೃತಿ ಹಿಡಿದಿರುವ ವಸ್ತುವನ್ನು ಒರಳು, ಒನಕೆ, ಕೊಡ ಎಂದು ಊಹಿಸಿ, ಬೇಕಾದ ಅರ್ಥ
ಹೊರಡಿಸಲಾಗಿದೆ. ಅಕ್ಕಸಾಲಿಗೆ ದ್ರಾವಿಡ ಭಾಷೆಯಲ್ಲ್ಲಿ ಪೊನ್ನಾಳ್ ಎಂದು ಕರೆಯಬಹುದಷ್ಟೇ
ಅಕ್ಕಸಾಲಿ/ಮೂರ್ತಿಗಾರನನ್ನು ಸೂಚಿಸಲು ಕೊಡ ಹಿಡಿಡ ಮನುಷ್ಯನ ಚಿತ್ರ ಅಸಂಬದ್ದವೆನಿಸುತ್ತದೆ.
ಸಂಕೇತ ೧೩ ; ಗೋಧಿಯ ಕಾಂಡಕ್ಕೆ ಗೊಂಡಿಯಲ್ಲಿ ನೆಲ್ಲು
ಎನ್ನುತ್ತಾರೆ ಎಂದಿದೆ. ನೆಲ್ಲು (ಅಕ್ಕಿಯ ಕಾಳು) ದ್ರಾವಿಡ ಪದ. ಗೋಧಿ ಹಾಗೂ ನೆಲ್ಲು ಬೇರೆಯದೇ ಆದ ಧಾನ್ಯಗಳು. ಗೋಧಿ ನೆಲ್ಲು
ಆಗಲಾರದು. ಗೋಧಿ ಪದದ ಮೂಲದ ಬಗ್ಗೆ ಭಾಷಾ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಯಾವ ದ್ರಾವಿಡ ಭಾಷೆಯಲ್ಲೂ ಗೋಧಿ, ನೆಲ್ಲು
ಆಗಿಲ್ಲ. ಓರ್ಮಾನದಲ್ಲಿ ಮಾನ ಆದಿಮ ದ್ರಾವಿಡ ಪದವಲ್ಲ. ಹಿಂದೆ ಪ್ರಾಚೀನ ದ್ರಾವಿಡರು ದಿನಗಳನ್ನು
ತಿಂಗಳ್ (ಚಂದ್ರನ) ಲೆಕ್ಕದಲ್ಲಿ ಎಣಿಸುತ್ತಿದ್ದರು.
ಸಂಕೇತ-೧೪ : ಕಕವಾಲ
ಸೀಡಿವಾಲ ಇವು ದ್ರಾವಿಡ ಲಕ್ಷಣದ ಪದಗಳಲ್ಲ. ಕಿವಿ, ಕಣ್ ಪದಗಳು ಎಲ್ಲ ದ್ರಾವಿಡ ಭಾಶೆಗಳಲ್ಲಿ ಒಂದೇ ಬಗೆಯಲ್ಲಿ ಇರುವಾಗ ಗೊಂಡಿ ಭಾಷೆಯ ’ಕಕ’ ‘ಸೀಡಿಗಳಿಗೆ ಮಹತ್ವವಿಲ್ಲ.
ಸಂಕೇತ ೧೫ ; ಕೊಯ್ ದ್ರಾವಿಡ ಮೂಲ ಪದವನ್ನು ಗೊಂಡಿಯಲ್ಲಿರುವ ಕೋಯಾ
ಬುಡಕಟ್ಟುಗಳಿಗೆ ಹೊಂದಾಣಿಕೆ ಮಾಡಲು ತಿಣುಕಾಡಲಾಗಿದೆ. ಕೋಯಾ ಕೊಯ್ ಆಗಲಾರದು.
ಸಂಕೇತ-೧೬ : ಪ್ರಾಣಿಗಳ ಕಾಲಿನ ಹಿಂಭಾಗ ಪಿನ್
(ಹಿನ್+ಅಡಿ=ಪಿನ್ನಡಿ/ಹಿನ್ನಡಿ ಹಿಮ್ಮಡಿ ಇದು ಅಪಭ್ರಂಶಗೊಂಡು ಗೊಂಡಿಯಲ್ಲಿ ಪಿಂಡಾ ಆಗಿದೆ.
ಆದ್ದರಿಂದ ಪಿಂಡಾಲ = ತಂದೆ ಎನ್ನುವ ಅರ್ಥೈಸಿಕೆ ಅನರ್ಥಕಾರಿಯಾಗಿದೆ. ಪಿಂಡ ಸಂಸ್ಕೃತ ಮೂಲದ ಪದ. ಇದು ಸೈಂಧವ ಗೊಂಡಿಯಲ್ಲಿದ್ದು ಪಿಂಡಾಲ
ಜನ್ಮದಾತ ಎಂಬ ಅರ್ಥ ನೀಡಲು ಸಾಧ್ಯವಿಲ್ಲ. ಇದರ ಬದಲು ನೇರ ಹಾಗೂ ಸರಳವಾದ ದ್ರಾವಿಡದ ತಂದೆ , ಅಪ್ಪ ಇವೆ.
ಗೊಂಡಿಯಲ್ಲಿ ಈಗ ಬಳಕೆಯಲ್ಲಿರುವ ಪಿಂಡಾಲದ ಸರಿಯಾದ ರೂಪ ಪಿನ್ನಾಳ್ (ಹಿಂದಿನ ಆಳು
ಬೇಟೆಗಾರ) ಇರಬಹುದು.
ಸಂಕೇತ-೨೨: ಇದನ್ನು ಕೆಪಾಲ
, ಕೋಪಾಲ ಎಂದು ಓದಲಾಗಿದೆ. ಈ ಓದಿಕೆ ಮತ್ತು ಅರ್ಥೈಸಿಕೆ ಅತ್ಯಂತ ಕೃತಕವಾಗಿದೆ. ಸೈಂಧವ ಕಾಲದ ಗೊಂಡಿ ಸಂಸ್ಕೃತದ ಗೋ (ಇಂಗ್ಲೀಷಿನ ಕೌ) ಹಾಗೂ ಪಾಲರನ್ನು ಹೊಂದಿರಲು ಸಾಧ್ಯವಿಲ್ಲ. ಇದು ಇದು ದ್ರಾವಿಡ ಭಾಷೆಯಲ್ಲಿ ಆವ್ ಕಾಯ್ವನ್ ಆಗಬಹುದಷ್ಟೇ
ಸಂಕೇತ – ೨೫; ಇದನ್ನು ಏಕವಚನ ಸ್ತ್ರೀಲಿಂಗ ಎಂದು ತಿಳಿಸಲಾಗಿದೆ. ಪೂರ್ವ
ದ್ರಾವಿಡ ಭಾಷೆಯಲ್ಲಿ ಸ್ತ್ರೀಲಿಂಗ ಪ್ರತ್ಯಯಗಳಿರಲಿಲ್ಲ.
ಸಂಕೇತ-೨೭; ಅರಳಿ ಆರ್ ನಿಂದ ಬಂದಿತೆಂದು ಭಾವಿಸಲಾಗಿದೆ. ತಾಯಿಯ
ಹೋರಾಟ ಎನ್ನುವ ಅರ್ಥೈಸಿಕೆ ದಾರಿ ತಪ್ಪಿದೆ.
ಸಂಕೇತ-೨,೩೨ ಎರಡೂ ತಾಯಿಯನ್ನು ಸೂಚಿಸುತ್ತವೆ ಎಂದು ಹೇಳಲಾಗಿದ್ದು ಸೈಂಧವ ಭಾಷೆಯಲ್ಲಿ ಹಲವು ಪ್ರಬೇಧಗಳನ್ನು ಊಹಿಸಲಾಗಿದೆ.
ಸಂಕೇತ ೬ ಮತ್ತು ೩೧ ರ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಹೇಗಾದರೂ ಮಾಡಿ ಎಲ್ಲ ಸಂಕೇತಗಳನ್ನು ಓದಬೇಕೆಂಬ ಹಠದಿಂದ ಇದು ಬಂದಿದೆ.
ಸಂಕೇತ ೧೫ ಮತ್ತು ೩೫ ಎರಡು ಕತ್ತರಿಯ ಸಂಕೇತಗಳೆರಡು
ಹೇಳಲಾಗಿದೆ. ಸಂಕೇತ ೧೨ರಲ್ಲಿ ೩೫ನ್ನುಕಾಲು=ಕತ್ತರಿ ಎನ್ನಲಾಗಿದೆ. ಒಂದೇ ಪದ ಸೂಚಿಸುವ ಎರಡು ಸಂಕೇತಗಳಲ್ಲಿ ವ್ಯತ್ಯಾಸಗಳಿವೆ. ಸಂಕೇತ ೩೬ರ ಕತ್ತಿ ೧೫ನ್ನು ಹೋಲುತ್ತದೆ. ಸಂಕೇತ ೧೫ ಹಾಗೂ ೩೬ ಗೋತ್ರ ಸೂಚಕಗಳೆನ್ನುತ್ತಾರೆ. ಆದಿಮ ದ್ರಾವಿಡರಲ್ಲಿ
ಗೋತ್ರಗಳು ಇದ್ದವೇ ಎನ್ನುವುದು ಗೊತ್ತಿಲ್ಲ. ಅವರಲ್ಲಿ ಬೆಡಗುಗಳು ಇದ್ದಿರಬಹುದು. ಸೈಂಧವ ಚಿತ್ರಪದ ಲಿಪಿ ಎಂದು
ಪರಿಗಣಿಸಿರುವುದರಿಂದ ಕತ್ತರಿ ಯಾವ ದ್ರಾವಿಡ ಪದದ ಮೂಲಕ ಹೇಗೆ ಗೋತ್ರ ಸೂಚಕವಾಗಬಲ್ಲದು ಎನ್ನುವ
ವಿವರಣೆಗಳು ಲಭ್ಯವಿಲ್ಲ.
ಸಂಕೇತ ೨೦ ರಲ್ಲಿಮನುಷ್ಯನ ತಲೆಯ ಮೇಲೆ ಸಂಕೇತ ೩೮ (ಕೊಂಬು) ಇದೆಯೆಂದು
ಭಾವಿಸಲಾಗಿದೆ. ಆದರೆ ಇಂತಹುದೇ ಲಕ್ಷಣವಿರುವ ಆದರೆ ಹೆಚ್ಚುವರಿ ಗೀಟುಗಳನ್ನು ಹೊಂದಿರುವ ಸಂಕೇತದಲ್ಲಿ ಈ ಹೆಚ್ಚುವರಿ
ಗೀಟುಗಳನ್ನು ಬಿಟ್ಟು ಕಾವಡಿಗೆ (ಹೆಗಲ್ ಮೇಲೆ ಹೊರುವ ಬುಟ್ಟಿಗಳು) ಮಾತ್ರ ಪ್ರಾಶಸ್ತ್ಯ ನೀಡಲಾಗಿದೆ.
ಸಂಕೇತ-೫ ನ್ನು ಕೋಲಾಲ=ಪ್ರತಿಷ್ಟಿತ ವ್ಯಕ್ತಿ , ಮಗ ಎಂದು ಓದಲಾಗಿದೆ. ಸಂಕೇತ-೧೭, ೧೮ ರಲ್ಲಿ
ಅಂತಹ ಯಾವುದೇ ಲಕ್ಷಣಗಳಿರದ ಸಂಕೇತವನ್ನು ಕೋಲಾಲ ಎಂದು ಓದಿ ಲೆಕ್ಕಿಗಮುಖ್ಯ ಲೆಕ್ಕಿಗ ಎಂದು ಅರ್ಥೈಸಲಾಗಿದೆ. ೫,೧೭,೧೮ ರ ಓದಿಕೆ
ಮತ್ತು ಅರ್ಥೈಸಿಕೆಗಳಲ್ಲಿ
ಸಾಂಗತ್ಯವಿಲ್ಲ.
ಸಂಕೇತ ೧೧,೧೨ ರಲ್ಲಿ ಕೈಯಲ್ಲಿರುವ ಹಿಡಿದಿರುವ ಹೆಚ್ಚುವರಿ
ಗೀಟುಗಳಿರುವ ಪಾತ್ರೆಯಂತಹ ಚಿತ್ರಕ್ಕೆ ನುರು ಕೋಟಾ ಅರ್ಥಗಳನ್ನು ಹೊಂದಿಸಲಾಗಿದೆ. ಅಂತಹುದೇ
ಸಂಕೇತ ೨೯ರಲ್ಲಿ ಆಮ = ಆಗುಅರ್ಥ ಹಚ್ಚಲಾಗಿದೆ.
ಸಂಕೇತ ೨೫ರಲ್ಲಿ ಪಾತ್ರೆಯನ್ನು ಅನಾ ಆಗು ಎಂದು ಕರೆಯಲಾಗಿದೆ. ೩೩ ರಲ್ಲಿ ಆಲಾ
ಧಾಲಾ ೨೫ ಹಾಗೂ ೩೩ರ ನಡುವೆ ಯಾವುದೇ ಸಂಬಂಧಗಳಿರುವಂತೆ ಭಾವಿಸಲಾಗಿದೆ.
ಸಂಕೇತ ;೨೬ ಇದನ್ನು ಇತರರು ಶ/ಷ/ಸಕಾರದಂತೆ ಅರ್ಥೈಸಿದ್ದಾರೆ. ಇದನ್ನು
ಅರ ಎಂದು
ಓದಿ ಅದಿಮ ದ್ರಾವಿಡ ಭಾಷೆಯ
ಚತುರ್ಥಿ ವಿಭಕ್ತಿಪ್ರತ್ಯಯವಾಗಿದ್ದಿತೆಂದು ಪರಿಗಣಿಸಲಾಗಿದೆ. ಇದಕ್ಕೆ ದ್ರಾವಿಡ ಭಾಷಾ ಶಾಸ್ತ್ರದ ಬೆಂಬಲವಿಲ್ಲ.
ಸಂಕೇತ-೨೮ ಕ್ಕೆ ಕೋಲು ಕುರಿ ಹಾಗೂ ಡಾಂಡ, ನಾಲೆ ಎಂಬ ಓದಿಕೆ ಪಡೆಯಲಾಗಿದೆ.೫೮ ಕ್ಕೆ
ನೆಲೆ ಎಂದು ಓದಲಾಗಿದೆ. ಆದರೆ ಸಂಕೇತ-೫ ರಲ್ಲಿ ಇದೇ ಕೋಲು ಹಿಡಿದಾತ ಮಗನಾಗಿದ್ದಾನೆ. ದ್ರಾವಿಡ ಭಾಷೆಗಳಲ್ಲಿ ಹರಿಯುವ ದಾರಿ
ಕಾಲ್ (ಕಾಲುವೆ, ಕೊಳ್ಳೆಗಾಲ, ಸತ್ತೆಗಾಲ) ಡಾಂಡಾ ಪದ ದ್ರಾವಿಡವಿಲ್ಲ.
ಸಂಕೇತ ೫೧ ಇದನ್ನು ದ್ರಾವಿಡ ಬಣದ ಹೆಚ್ಚಿನ ಜನ ಮಿನ್ =ತಾರೆ ಎಂದು
ಓದಿದ್ದಾರೆ. ಇದನ್ನು ಕಂಗಾಲಿಯವರು ಪೋಯ ಎಂದು ಓದಿದ್ದಾರೆ. ಇದು ದ್ರಾವಿಡ ಪದವೇಅಥವಾ ಗೊಂಡಿಗೆ ಬೇರೆ ಕಡೆಯಿಂದ ಬಂದಿದೆಯೇ ಸ್ಪಷ್ಟವಿಲ್ಲ.
ಪೋಯಾ ಪದದ ಆಧಾರದ ಮೇಲೆ ಓದಲಾದ ಸಂಕೇತ ೫೨ ರಿಂದ ೫೬ ರವರೆಗಿನ ಸಂಕೇತಗಳ ಓದಿಕೆಗೆ ಯಾವುದೇ ಸಮರ್ಥನೆಗಳಿಲ್ಲ.
ಸಂಕೇತ ೫೯ ರಿಂದ ೬೮ ಸಂಖ್ಯೆಗಳನ್ನು ಸೂಚಿಸುತ್ತವೆಯೆಂದು ಭಾವಿಸಲಾಗಿದೆ. ಸೈ=೫ ಅರ್ಥ ನೀದಲಾಗಿದೆ. (ಕೈಯಲ್ಲಿರುವ ಬೆರಳುಗಳ ಸಂಖ್ಯೆ=ಕೈದು > ಐದು ಆಗಿರುವ ಸಾಧ್ಯತೆಗಳಿವೆ . ಮೂರ್ಧನೀಕರಣದಿಂದ ಕಯ್ ಗೊಂಡಿಯಲ್ಲಿ ಚೆಯ್ > ಸೆಯ್> ಸೈ ಆಗಿರುವ ಸಾಧ್ಯತೆಗಳಿವೆ. ಸೈ ಎಂದರೆ ಬರಾಬ್ಬರಿ ಎನ್ನುವ ಅರ್ಥ ಸಲ್ಲದು.
ಸಾರ (=೬) ದ್ರಾವಿಡ ಮೂಲದಲ್ಲಿ ಇರಲಾರದು. ಆದಿಮ ದ್ರಾವಿಡ
ಭಾಷೆಯಲ್ಲಿ ಮರ/ಯರೂಂ/ಯವಾಗ (=ಏಳು) ಅರ, ಅರೂರಿ,ಅರೂಂಗ್ (ಎಂಟು) ನರ, ನರೂ ನರೂಂಗ (=ಒಂಬತ್ತು) ಇದ್ದಿತೆಂದು
ಸಾಧಿಸಬೇಕು. ವಿದ್ವಾಂಸರು ಪತ್ (ಹತ್ತು)
ಹಿಂದಿನದು ಒನ್-ಪತ್ (=ಒಂಬತ್ತು) ಎಂದಾಗಿದೆಯೆಂದು ಭಾವಿಸಿದ್ದಾರೆ. ಆದರೆ
ಗೊಂಡಿಯಲ್ಲಿ ಮಾತ್ರ ಒಂಬತ್ತು ಸಂಖ್ಯೆ ಸಂಸ್ಕೃತದ ನವ ಪದದಿಂದ ಪ್ರಭಾವಿಸಲ್ಪಟ್ಟಂತೆ ಕಾಣುತ್ತದೆ.
ಸಂಕೇತ ೬೮ರ ಅರ್ಥ ವಿವರಣೆ ಗೊಂಡಲದ ಗೂಡಾಗಿದೆ. ಸಂಕೇತ ೩೫
ನೆಲ್ಲು , ಓಮ್ ಒಂದೇ ಅರ್ಥ ಹೊಂದಿವೆ ಎಂದು ಹೇಳಲಾಗಿದೆ. ಗೋಧಿ, ನೆಲ್ಲು, ಓಮ ಬೇರೆಯದೇ ಆದ
ಪದಗಳು ಓಮಾ (ಕನ್ನಡ,. ತಮಿಳು,ತೆಲುಗು,ತುಳು,ಮಲೆಯಾಳಂನಲ್ಲಿ ಅಜ್ವಾನ) ಮತ್ತು ನೆಲ್ಲು (ಕನ್ನಡ,ತಮಿಳು,ತೆಲುಗು) ಬೇರೆಯದೇ ಆದ ಪದಗಳನ್ನು ಹೊಂದಿವೆ. ಅದ್ದರಿಂದ ನೆಲ್=ಚಂದ್ರ=ಓಮಾನ
ಎಂದು ಸಮೀಕರಿಸಲಾಗದು. ಸಂಕೇತ ೭೦ರಿಂದ ೮೦ ಓಮಾನ ಪದದ ಮೇಲೆ ಅವಲಂಬಿತವಾಗಿದ್ದು ಓದಿಕೆಯ ಮೇಲೆ ಸಂಶಯ ತಾಳುವಂತಾಗಿದೆ..
ಬಿಲ್ಲು, ಮತ್ತು ಚಾಪಾಕಾರದ ಎರಡು ಬಗೆಯ ಸಂಕೇತಗಳಿವೆ ಎಂದು ಹೇಳಲಾಗಿದೆ. ಬಿಲ್ಲು (ವಿಲ್)
ದ್ರಾವಿಡ ಹಾಗೂ ಚಾಪ (ಸಂಸ್ಕೃತ) ಪದಗಳಾಗಿವೆಯೇ ಹೊರತು ಅವೆರಡರ ನಡುವೆ ವ್ಯತ್ಯಾಸಗಳಿಲ್ಲ. ಈ ಸಂಕೇತಗಳು ಪೂರ್ವ ಅಥವಾ
ಅಂತ್ಯ ಪ್ರತ್ಯಯಗಳಾಗಿ ಬರುತ್ತವೆ. ಎನ್ನಲಾಗಿದೆ. ದ್ರಾವಿಡ ಭಾಷೆಗಳಲ್ಲಿ ಪೂರ್ವ
ಪ್ರತ್ಯಯಗಳಿಲ್ಲ. ಬಿಲ್ಲಿನ ಸಂಕೇತ (ಪುಟ ೩೫) ಕರಿಯಾ ಬಿಲ್ (ಅಮವಾಸ್ಯೆ) , ಬಿಲೆರಚ (ಹುಣ್ಣಿಮೆ)
ಸೂಚಿಸುತ್ತವೆ ಎನ್ನಲಾಗಿದೆ. ಇವುಗಳ ಪದ ವಿಭಜನೆ ಮಾಡಿ, ದ್ರಾವಿಡ ಪದ ರೂಪ ತೋರಿಸಬೇಕಿತ್ತು..
ಏ ಓ ವಿ ದ್ರಾವಿಡ ಭಾಷೆಗಳ ವಿಶೇಷ ಲಕ್ಷಣಗಳು
ಕಂಗಾಲಿಯವರ ಸೈಂಧವ ಗೊಂಡಿಯಲ್ಲಿ ಇಂತಹ ಯಾವ ಲಕ್ಷಣಗಳೂ ಇಲ್ಲ. ಆದಿಮ
ದ್ರಾವಿಡ ಭಾಷೆಗಳಲ್ಲಿ ಇರದ ಮಹಾಪ್ರಾಣಗಳಿಗೆ ಯಥೇಚ್ಛಅವಕಾಶಗಳಿವೆ. ದ್ರಾವಿಡ ಪದಗಳಿಗೆ ಅಪರಿಚಿತವಾದ ಪೂರ್ವಪ್ರತ್ಯಯಗಳೂ
ಸಾಧ್ಯವಾಗಿವೆ. ಮೂರುಲಿಂಗಗಳು ಕಾಣಸಿಕೊಂಡಿವೆ. ನೆಲ್ಲು ಹಾಗೂ ಓಮ ಒಂದೇ ಕಾಳುಗಳಾಗಿವೆ. ತಂದೆ
ಇಲ್ಲ. ತಾಯಿ ಅಂಬ ಆಗಿದ್ದಾಳೆ. ಅಕ್ಕ,ತಂಗಿ, ತಮ್ಮ ಅಣ್ಣಂದಿರಿಲ್ಲ. ಅವರು ಬಿಡಿಸಿದ ಲಿಪಿಯಲ್ಲಿ ಊರು
ಅಗಸೆಹುಡೇವು ಮಾರಾಟ ತೆರ ,ತೆರಿಗೆ , ಹತ್ತಿ ,ಕೊಳಗಳಿಲ್ಲ.
ಹೊತ್ತು ತಿಂಗಳುಗಳಿಲ್ಲ. ಪುಲ್ಲಿಂಗ ಸ್ತ್ರೀಲಿಂಗಗಳಿವೆ ನಪುಂಸಕ ಲಿಂಗಗಳಿಲ್ಲ. ಮುಖಿಯಾ (ಮುಖ್ಯ)
ಆರ್ಯರ ಆಗಮನದ ವೇಳೆಗಾಗಲೇ ಸೈಂಧವರ ಪದಕೋಶ ಪ್ರವೇಶಿಸಿದ್ದಾನೆ. ಮರವಾದಲ್ಲಿ ಮಹಾಪ್ರಾಣವಿದೆ. ಪಾತ್ರೆಯ ಸಂಕೇತ
ಅಂದ ಆಗು ಎಂಬ ಕ್ರಿಯಾರೂಪ ಹೊಂದಿದ್ದರೆ. ಓದಿಕೆಯಲ್ಲಿ ಅದು ಕಾಳು ಇಡುವ ಪೊಟ್ಟಣ ವಾಗಿದೆ.
(ಪುಟ – ೫೯)ಯಾವ ಪ್ರಚಲಿತ ದ್ರಾವಿಡ
ಭಾಷೆಗಳಲ್ಲೂ ಇದರ ಗೊಂಡಿಯ ಟುಗ್ಗಾ ಸೈಂಧವರ ಕಾಳು ಆಗಿದೆ. ಪೋಯ ಮುಖ್ಯಸ್ಥವಾಗಿದೆ. ಒಂದು ಕಡೆ
ಹಣಿಗೆ ಸಂಕೇತ ಸಂಬಂಧಕಾರಕವಾಗಿದ್ದರೆ ಓದಿಕೆಯಲ್ಲಿ (ಪುಟ – ೫೮ ) ಅದರ ಪರಿಣಾಮವೇ ಇಲ್ಲ.
ಸಂಕೇತ ೩೫ (ಪುಟ ೨೭) ಗೋತ್ರ / ವಂಶದ ಗುರುತು ಓದಿಕೆ
(ಪಟ ೫೮/೬) ಎಲ್ಲಿಗೋ ಸಂದಿದೆ. ಎರಡು ಅಳತೆಯ ತಯಾರಿ ವಸ್ತ್ರಗಳ ರಾಶಿಯ ಸ್ಥಾಳ ಎಂದು
ಕೊಂಡೊಯ್ಯಬಲ್ಲ /ಧರಿಸಬಲ್ಲ ಮುದ್ರಿಕೆಗಳ ಮೇಲಿನ ಬರಹವಾಗಿದೆ. ಒಂದರ ನಂತರ ಒಂದರಂತೆ ಬರುವ ಹಣಿಗೆಯ ಸಂಕೇತಗಳನ್ನು
ಯಾವುದೇ ಎಗ್ಗಿಲ್ಲದೆ ಓದಲಾಗಿದೆ. (ಪುಟ ೫೮/೮)
ಶೀರ್ಷ ಮುಖಿಯಾ ಧನುರ್ಧಾರಿ ಮುಖಿಯಾಗಿಂತ ಶ್ರೇಷ್ಟ , ತಾರಾಮಂಡಲದ
ಸಂಗ್ರಹಣ ಸ್ಥಳ ಅಂತರಿಕ್ಷ ಇರುತ್ತದೆ ಎನ್ನುವಂತಹ ಅದ್ಭುತ ಓದಿಕೆಗಳು ಹೊರ ಬಂದಿವೆ. ಯಾವುದೇ ದ್ರಾವಿಡ
ಭಾಷೆಯಲ್ಲೂ ಇರದ ದರ ಸುಕೋಮ ಸೈಂಧವರ ತಾರೆಯಾಗಿದೆ.
ತಾಯಿಯನ್ನು ಸಂಕೇತ ೨ರಲ್ಲಿ ಹೇಳಿದರೆ ಓದಿಕೆಯಲ್ಲಿ (೫೮/೧೩) ಬೇರೆ
ಯಾವುದೇ ಸಂಕೇತ ಬಂದಿದೆ.
ಸಂಕೇತ ೩೫ (ಪುಟ ೨೭) ಕತ್ತರಿಯ ಸಂಕೇತ, ಕೋಯಾ ವಂಶದ ಗುರುತಾಗಿದ್ದರೆ
ಪುಟ ೪೧/೬ರಲಿ ಗುಡೇರ (ಗುಡ್ಡೆ) ಗೋಡೆ, ಸಿಹಿ ನೀರಿನ ಗುರುತಾಗಿದೆ. (ಗುಡಾ ಬೆಲ್ಲ ಎಂದು
ಸಿಹಿನೀರಿನ ಅರ್ಥ ಬಂದಿದೆ.)
೧೫ ಪುಟ ೬೦ ಇಬ್ಬರನ್ನು ಬಂಧಿಸುವವ ೧೬(ಪುಟ ೬೦) ಸಭೆಯ ಬೆಳಗಿನ
ಉಪಾಹಾರದ ೨೦(ಪುಟ ೬೧) ಗೀತಾಕಾರನ ಗುರುತು ೨೧ (ಪುಟ ೬೧) ಗಾಳಿ ಚಕ್ರದ ಮುಖ್ಯಸ್ಥ ೨೪ (ಪುಟ ೬೨) ಮೃದಂಗದ ಒಡೆಯ ೨೫ (ಪುಟ ೬೨) ನೃತ್ಯ ವಾದ್ಯಗಳ ಸಂಗ್ರಹ, ೧೯
(ಪುಟ ೬೩) ಸ್ನಾನಗ್ರುಹ ದಂತಹ ಹೇಳಿಕೆಗಳು ಮುದ್ರಿಕೆಗಳ ಮೇಲಿವೆ.. ಪುರಾತತ್ತ್ವ ಸಾಕ್ಷ್ಯಗಳಲ್ಲಿ ಎಲ್ಲೂ ಕಂಡು ಬಂದ
ಗ್ರಾಮಪೂಜೆ (೩೧ ಪುಟ ೬೩) ಕಾಣಿಸಿಕೊಂಡಿದೆ.
೫೫ ಪುಟ ೬೪ , ೩೭ ( ಪುಟ ೬೪) ಯಾವುದೇ ತರ್ಕಗಳಿಗೆ ಬದ್ದವಾಗಿಲ್ಲ. ೪೦
( ಪುಟ ೬೫) ,೪೪೫ ( ಪುಟ ೬೬) , ೪೬ (ಪುಟ ೬೬) ಅಸಂಬದ್ಧವಾಗಿದೆ. ಗಾಳಿ ಚಕ್ರದ ಊಹೆಯ ಗಾಳಿಪದ ಅಗಸಕ್ಕೇರಿದೆ.
೫೧ (ಪುಟ ೬೭), ೫೨,೫೩,೫೫ ಏನನ್ನು ಹೇಳ ಬಯಸುತ್ತವೆ ಸ್ಪಷ್ಟವಿಲ್ಲ. ೬೨ (ಪುಟ ೭೦) ಗುರಿ ಇರುತ್ತದೆ ಎನ್ನುವಂತಹ ಓದಿಕೆ
ಮುದ್ರಿಕೆಗಳ ಮೇಲಿರಲು ಸಾಧ್ಯವಿಲ್ಲ.
೭೦,೭೩,೭೪, (ಪುಟ ೭೨) ಓದಿಕೆಗಳು ಸಂಕೇತಗಳಿಗೆ ಕಲ್ಪಿಸಿಕೊಂಡ
ಪದಗಳಿಗೆ ಅನುಗುಣವಾಗಿ ಬಂದಿದ್ದು ಅತ್ಯಂತ ಅಸಹಜವಾಗಿದೆ.
೯೨ (ಪುಟ ೭೭) ಠಾಣಾ ಪದ ಸೈಂಧವ ಪಟ್ಟಿಗೆ ಸೇರಿದೆ. ೧೦೦(ಪುಟ ೭೫)
ಸೈಂಧವ ನಾಗರಿಕತೆಯಲ್ಲಿ ಕಾಣಬರದ ಪೂಜಕ ಇಲ್ಲಿದ್ದಾನೆ.
೧೨೨,೧೨೩, (ಪುಟ ೮೧) ಓದಿಕೆಗಳಲ್ಲಿ ಈಗಿನ ಗೊಂಡಿ ಸಮಾಜದ
ವ್ಯವಸ್ಥೆಯನ್ನು ನೇರವಾಗಿ ಸೈಂಧವರ ಮೇಲೆ ಹೇರಲಾಗಿದೆ. ೧೫೩ (ಪುಟ ೮೮) ಗೊಂಡಿ ಗೊಂಡಾಲ ಸಮುದಾಯ
ಎಂದು ಹೇಳಲಾಗಿದೆ. ಕನ್ನಡದಲ್ಲಿ ಗೊಂದಲ ಎಂದರೆ ಶಿಸ್ತು ಇಲ್ಲದ ಗುಂಪು ಎಂದರ್ಥ೧೫೭ (ಪುಟ ೮೪)೧೭೧(ಪುಟ ೯೧) ಸೂರ್ಯ ವಂಶದ ಕಲ್ಪನೆ ಬಂದಿದೆ. ೮೭ ೧೪ (ಪುಟ ೯೮) ರೈತ ಪದವನ್ನು ಹಲವಾರು
ಸಂಕೇತಗಳಲ್ಲಿ ಸೂಚಿಸಲಾಗಿದೆ.ಇಲ್ಲಿ ಹಲ ಸಂಕೇತಗಳು ಒಂದೇ ಪದ ಸೂಚಿಸುತ್ತ ಚಿತ್ರಪದ ಲಿಪಿಯ ಊಹೆಗೆ
ವಿರುದ್ದವಾಗಿದೆ.
ಹೀಗೆ ಮೋ.ಛ ಕಂಗಾಲಿಯವರ ಓದಿಕೆಯ ಕೊರತೆಗಳನ್ನು ಪಟ್ಟಿ ಮಾಡುತ್ತಲೇ ಹೋಗಬಹುದು. ಆದ್ದರಿಂದ ಅವರ ಪುಸ್ತಕ ಪ್ರಕಟವಾಗಿ ಹತ್ತು ವರ್ಷಗಳು ಕಳೆದಿದ್ದರೂ ಸೈಂಧವ ಸಂಸ್ಕೃತಿಯ ಬಗ್ಗೆ
ಸಂಶೋಧನೆ ನಡೆಸುತ್ತಿರುವ ಚರಿತ್ರೆಕಾರರಾಗಲಿ , ಭಾಷಾಶಾಸ್ತ್ರಜ್ಞರಾಗಲಿ
, ಲಿಪಿಯನ್ನು ಬಿಡಿಸಲು ಹೆಣಗುತ್ತಿರುವವರಾಗಲಿ ಅವರ ಓದಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ
ತೋರಿಲ್ಲ,ಅವರ ಓದಿಕೆ ಯಾವುದೇ
ಪ್ರತಿಕ್ರಿಯೆಯನ್ನು ತೋರದಷ್ಟು ದುರ್ಬಲವಾಗಿದೆ.
ಮೋ.ಛ ಕಂಗಾಲಿಯವರ ಸಹಚರ ಮತ್ತು ಅಭಿಮಾನಿಯಗಿರುವ ಸಲಾಮೆ ಪ್ರಕಾಶ್ ಎನ್ನುವವರು ಅಂತರ್ಜಾಲ ತಾಣನವೊಡರಲ್ಲಿ
ನೀಡಿದ -
Myself prakash
namdeorao salame from chanda district maharashtra state india.once again would
like to allover world that harappan and mohenjodaro pictographical script can
be decepher in gondi lan. only dr. m.c. kangali has published his nobel inventional
discovery book DECEPHERMENT OF INDUS SCRIPT IN GONDI> on date 01 sept.2002
at hindi bhavan nagpur. maharashtra state india.. this historical event was
picturised and telecast by sahyandri doordarshan marathiTV.. but in the
electronic days world is till under darkness and saying indus scipt is not
redable.. it is very very unfortunate to rest of world.gond prime community is
successor to harappa and mohenjodaro culture only. it is true like mother earth
and the sun and moon. if any body of the world interest to know the fact may
contact on my mobile no 9922475025 or my address p.n. salame assistant engineer
chandrapur super thermal power station chandrapur maharashtra state pin code
442402 india.
************************************************************************** ಸೈಂಧವರ
ಸಾಧನೆಗಳು ಏನಾಗಿದ್ದವೆನ್ನುವುದು ಅವರು ಬಿಟ್ಟುಹೋಗಿರುವ ಸಾಕ್ಷ್ಯಗಳಿಂದ ಖಚಿತ ಹಾಗೂ ಸ್ಪಷ್ಟವಾಗಿದ್ದರೂ
ಅವರು ಯಾರು , ಅವರ ಭಾಷೆ ಯಾವುದು ಎನ್ನುವುದು ಇನ್ನೂ ಬಗೆ ಹರಿಯದೇ
ಉಳಿದ ಸಮಸ್ಯೆಯಾಗಿದೆ. ಅವರು ಬಿಟ್ಟು ಹೋದ ಸಾಧನೆಯ ಶ್ರೀಮಂತ ಖಾತೆಗೆ ಉತ್ತರಾಧಿಕಾರಿಗಳಾಗಲು
ಹಲವರು ಕಳೆದ ಸರಿಸುಮಾರು ೧೦೦ ವರ್ಷಗಳಿಂದ ಸತತವಾಗಿ
ಯತ್ನಿಸುತ್ತಿದ್ದಾರೆ.ಅದಕ್ಕಾಗಿ
ಸೈಂಧವ ಲಿಪಿಯನ್ನು ಅವರು ಬಯಸಿದ ಭಾಷೆಯಲ್ಲಿ ಓದುವ ಅನಿವಾರ್ಯತೆ ಎದುರಾಗಿದೆ. ಸಂಸ್ಕೃತ (ವೈದಿಕ)ಮತ್ತು ದ್ರಾವಿಡ (ತಮಿಳು) ಅಭಿಮಾನಿಗಳಿಬ್ಬರೂ ಸೈಂಧವ ಲಿಪಿಯನ್ನು ತಮಗೆ ಬೇಕಾದಂತೆ
ಓದಿ ಅದರ ರಹಸ್ಯವನ್ನು ಬಿಡಿಸಿದೆವೆಂದು ಭಾವಿಸಿದ್ದಾರೆ. ಪ್ರತಿ ಓದಿಕೆಯೂ
ತಜ್ಞ ಪರಾಮರ್ಶನೆಯ ಒರೆಗಲ್ಲಿನ ಮೇಲೆ ಸೋತುಹೋಗಿದೆ. ಈವರೆಗೆ ದ್ರಾವಿಡ ಭಾಷಾ
ವರ್ಗದಲ್ಲಿ ಸೈಂಧವರ ಉತ್ತರಾಧಿಕಾರವನ್ನು ತಮಿಳರು ಮಾತ್ರ ಘೋಷಿಸಿಕೊಳ್ಳುತ್ತಿದ್ದರು. ಮೋ.ಛ. ಕಂಗಾಲಿವರ ಮೂಲಕ ಅವರೊಂದಿಗೆ
ಈಗ ಗೊಂಡಿಗಳು ಸ್ಪರ್ಧೆಗೆ ಇಳಿದಂತಾಗಿದೆ. ----------------------------------------------------------------------------------------