ಐತಿಹ್ಯಗಳನ್ನು ಕಟ್ಟುವುದು ಮತ್ತು ಹರಡುವುದು- ಒಂದು ಎತ್ತುಗೆ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡದ ಒಬ್ಬ ಜನಪ್ರಿಯ ಲೇಖಕರು. ಕರ್ನಾಟಕದ ಮಲೆನಾಡು ಸೀಮೆಯ ಹಳ್ಳಿ ಜೀವನವನ್ನು ರಮ್ಯಶೈಲಿಯಲ್ಲಿ ಕಟ್ಟಿಕೊಡುವುದರಲ್ಲಿ ನುರಿತವರು. ಇವರು 1977-78 ರಲ್ಲಿ ತಮ್ಮ ಹೆಂಡತಿಯೊಂದಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಪ್ರವಾಸ ಮಾಡಿದ್ದರು. ಆಗ ಅವರು ಹಂಗ್ರಿ ಹಾರ್ಸ್ ಡ್ಯಾಂ ಗೆ ಭೇಟಿ ನೀಡಿದ್ದರು. ಭಾರತಕ್ಕೆ ಮರಳಿದ ನಂತರ 'ಅಮೆರಿಕದಲ್ಲಿ ಗೊರೂರು ' ಎನ್ನುವ ಪ್ರವಾಸ ಕಥನವನ್ನು ಬರೆದರು. ಇದಕ್ಕೆ 1980 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ ದಕ್ಕಿತು. ಈ ಪುಸ್ತಕದಲ್ಲಿ ಸರ್. ಎಂ.ವಿಶ್ವೇಶ್ವರಯ್ಯನವರು (ಸರ್. ಎಂ.ವಿ) ಅಮೆರಿಕದಲ್ಲಿರುವ ಹಂಗ್ರಿ ಹಾರ್ಸ್ ಡ್ಯಾಂ ಗೆ ಭೇಟಿ ನೀಡಿದಾಗ ನಡೆದ ಘಟನೆಯೊಂದನ್ನು ನೀಡಲಾಗಿದೆ. ಈ ಘಟನೆ ಹೀಗಿದೆ. ಗೊರೂರರು ಹಂಗ್ರಿ ಹಾರ್ಸ್ ಡ್ಯಾಂಗೆ ಹೋಗಿದ್ದಾಗ ಅಲ್ಲಿದ್ದ ಅಂದಾಜು 75 ವರ್ಷದ ಭದ್ರತಾ ಸಿಬ್ಬಂದಿಯೊಬ್ಬರು, ಮುಖ್ಯ ಇಂಜಿನಿಯರ್ ವಿಶ್ವೇಶ್ವರಯ್ಯ ಇನ್ನೂ ಬದುಕಿದ್ದಾರೆಯೇ ಎಂದು ಗೊರೂರರನ್ನು ಕೇಳಿದರು. ಕೆಲ ವರ್ಷಗಳ ಹಿಂದೆ ತಮ್ಮ 102 ನೇ ವಯಸ್ಸಿನಲ್ಲಿ ಅವರು ತೀರಿಕೊಂಡರೆಂದು ತಿಳಿಸಿದಾಗ ಭದ್ರತಾ ಕೆಲಸಗಾರ ; ಓಹ್ , ಅವರೊಬ್ಬ ಮಹಾನ್ ವಯೋ ವೃದ್ಧರು , ಇಂಜಿನಿಯರ್'ಗಳಲ್ಲಿ ದೈತ್ಯರು. ಅವರು ಇಲ್ಲಿಗೆ ಬಂದಿದ್ದಾಗ ಅವರ ಮಾತುಗಳನ್ನು ಕೇಳಲು ಅಮೆರಿಕದ ಎಲ್ಲ ಮುಖ್ಯ ಇಂಜಿನಿಯರ್'ಗಳು ಇಲ್ಲಿ ಸೇರಿದ್ದರು. ಅವರು ಡ್ಯಾಂ ನಿರ್ಮಾಣವನ್ನು ಒಂದು ಗಂಟೆಗೂ ಹೆಚ್ಚು ಕಾಲ ನೋಡಿ , ಹಲವಾರು ಮೌಲಿಕ ಸಲಹೆಗಳನ್ನು ಕೊಟ್ಟರು ಎಂದು ತಿಳಿಸಿದನು. ಸಿವಿಲ್ ಇಂಜಿನಿಯರಿಂಗ್ ಬಗ್ಗೆ ಏನೇನೂ ಗೊತ್ತಿಲ್ಲದ ಗೊರೂರರು ಸರ್. ಎಂ.ವಿಯವರನ್ನು ವೈಭವೀಕರಿಸಲೆಂದೇ ಈ ಕಟ್ಟು ಕಥೆಯನ್ನು ಹುಟ್ಟುಹಾಕಿದ್ದಾರೆಂದು ಆ ಕಾಲದ ಸ್ಥಿತಿ ಗತಿಗಳು , ದಾಖಲೆಗಳ ಮೂಲಕ ತೋರಿಸಬಹುದು.
ಅಮೆರಿಕದಲ್ಲಿ ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಎಲ್ಲ ಬಗೆಯ ಉತ್ಪಾದನೆಯ ಚಟುವಟಿಕೆಗಳಿಗೆ ವಿದ್ಯುತ್ ಅತ್ಯವಶ್ಯಕವಾಗಿದ್ದಿತು. ತುರ್ತು ಪರಿಸ್ಥಿತಿಯಲ್ಲಿ ಯುದ್ಧ ಸಂಬಂಧಿ ತಯಾರಿಕೆಯ ಚಟುವಟಿಕೆಗಳಿಗೆ ಬೇಕಾದ ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು , ವಿವಿದೋದ್ಧೇಶದ ಹಂಗ್ರಿ ಹಾರ್ಸ್ ಡ್ಯಾಂ ಯೋಜನೆ ರೂಪುಗೊಂಡಿತು. ಇದರ ಮುಖ್ಯ ಗುರಿ ಜಲ ವಿದ್ಯುತ್ ಉತ್ಪಾದನೆಯಾಗಿದ್ದಿತು ಯುದ್ಧದ ಅವಶ್ಯಕತೆಗಳನ್ನು ಪೂರೈಸಿದ ನಂತರವೂ ಬಂಡವಾಳವನ್ನು ಒದಗಿಸಬಹುದಾದರೆ ಮಾತ್ರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದು ಎನ್ನುವ ಷರತ್ತಿನ ಮೇಲೆ 5/6/1944 ರಂದು ಅಮೆರಿಕದ ಕಾಂಗ್ರೆಸ್ ಯೋಜನೆಗೆ ಅನುಮೋದನೆ ನೀಡಿತು. ಕೊಲಂಬಿಯಾ ನದಿಗೆ ಅಡ್ಡಲಾಗಿ ಕಟ್ಟಿರುವ ಗ್ರಾಂಡ್ ಕೌಲಿ ಮತ್ತು ಬೊನ್ನೆವಿಲ್ಲೆ ಆಣೆಕಟ್ಟುಗಳಿಗೆ ಲಗತ್ತಾಗಿರುವ ಜಲ ವಿದ್ಯುತಾಗರಗಳಿಗೆ ನೀರನ್ನು ಒದಗಿಸುವುದು ಹಾಗೂ ಹಂಗ್ರಿ ಹಾರ್ಸ್ ಡ್ಯಾಂನಲ್ಲೂ ಜಲ ವಿದ್ಯುತ್ ಉತ್ಪಾದಿಸುವುದು ಮತ್ತು ಫ್ಲಾಟ್ ಲ್ಯಾಂಡ್ ಲೇಕ್ ಪ್ರದೇಶದ ವ್ಯವಸಾಯದ ಭೂಮಿಯನ್ನು ನೆರೆಯಿಂದ ಕಾಪಾಡುವುದು ಈ ಯೋಜನೆಯ ಭಾಗವಾಗಿದ್ದವು. . . ಹಂಗ್ರಿ ಹಾರ್ಸ್ ಡ್ಯಾಂ ಯೋಜನೆಯ ಮೈಲಿಗಲ್ಲುಗಳು ಹೀಗಿವೆ . (1) 16/1/1945 ರಂದು ಯೋಜನೆಯ ಇಂಜಿನಿಯರ್ ಆಗಿ ಪೌಲ್ .ಎ ಜೋನ್ಸ್ ನೇಮಕ (2) ಆಗಸ್ಟ್ 1945 ರಲ್ಲಿ ನಿರ್ಮಾಣ ಪೂರ್ವ ಚಟುವಟಿಕೆಗಳ ಪ್ರಾರಂಭ. (3) 10/7/1948 ರಂದು ಜಲ ವಿದ್ಯುತ್ ಸ್ಥಾವರದ ನಿರ್ಮಾಣ ಆರಂಭ (4) 3/11/1947 ರಂದು ನದಿಯನ್ನು ತಿರುಗಿಸುವ ಕಾಲುವೆಗೆ ಅಗೆತ ಪ್ರಾರಂಭ ಹಾಗೂ 11/11/1948 ರಲ್ಲಿ ಮುಕ್ತಾಯ. (5) ಮೇ , 1947 ರಿಂದ 24/9/1951 ರ ವರೆಗೆ ಆಣೆಕಟ್ಟೆ ನಿರ್ಮಾಣ ಜಾಗವನ್ನು ಚೊಕ್ಕಟಗೊಳಿಸಿ ಆಣೆಕಟ್ಟೆ ಕಟ್ಟಲು ಸಿದ್ಧಗೊಳಿಸಲಾಯಿತು. (6) 7/9/1949 ರಂದು ಮುಖ್ಯ ಆಣೆಕಟ್ಟೆಯ ನಿರ್ಮಾಣ ಪ್ರಾರಂಭ ಮತ್ತು 4/10/1952 ರಂದು ಪೂರ್ಣ. (7) 1/10/1952 ರಂದು ಅಮೆರಿಕ ಅಧ್ಯಕ್ಷ ಹ್ಯಾರಿ ಟ್ರೂಮನ್ 'ನಿಂದ ವಿದ್ಯುತ್ ಸ್ಥಾವರದ ಉದ್ಘಾಟನೆ.
ಸರ್ ಎಂ.ವಿಯವರು ತಮ್ಮ 6ನೇ ವಿದೇಶ ಪ್ರಯಾಣವನ್ನು 1946 ರಲ್ಲಿ ಕೈಗೊಂಡರು. ಅವರು ತಮ್ಮ 'ಮೆಮೊಯಿರ್ಸ್ ಆಫ್ ಮೈ ವರ್ಕಿಂಗ್ ಲೈಫ್' ಕೃತಿಯಲ್ಲಿ ಹೀಗೆ ದಾಖಲಿಸಿದ್ದಾರೆ : ನಾವು ಇಂಗ್ಲೆಂಡ್'ನಿಂದ ಅಮೆರಿಕ ಸಂಯುಕ್ತ ಸಂಸ್ಥಾನ್ಗಳು ಮತ್ತು ಕೆನಡಾದತ್ತ ಸಾಗಿದೆವು. ನಯಾಗಾರ ಜಲ ವಿದ್ಯುತ್ ಸ್ಥಾವರ ಸೇರಿದಂತೆ ಹಲವಾರು ಕೈಗಾರಿಕೆ ಕೇಂದ್ರಗಳನ್ನು , ಚಿಕಾಗೊದಲ್ಲಿ ಬೃಹತ್ ಇಂಜಿನಿಯರಿಂಗ್ ಕಾರ್ಖಾನೆಗಳನ್ನೂ ನೋಡಿದೆವು. ಡೆಟ್ರಾಯಿಟ್ ಹಾಗೂ ವಿಂಡ್ಸರ್'ನಲ್ಲಿದ್ದ ವಾಹನ ತಯಾರಿಕೆಯ ಕಾರ್ಖಾನೆಗಳನ್ನು ನೋಡುತ್ತ ಕೆಲ ದಿನಗಳನ್ನು ಕಳೆದೆವು. ನಾವು ನ್ಯೂಯಾರ್ಕ್'ನಲ್ಲಿದ್ದ ವಿಮಾನ ತಯಾರಿಕೆಯ ಕಾರ್ಖಾನೆಗೂ ಭೇಟಿ ಕೊಟ್ಟೆವು. ವೈಯಕ್ತಿಕವಾಗಿ ಟಿ.ವಿ.ಎ ( ಟೆನ್ನಿಸನ್ ವ್ಯಾಲಿ ಅಥಾರಿಟಿ) ಯೋಜನೆಯಲ್ಲಿ ಆಸಕ್ತಿ ಹೊಂದಿದ್ದ ನಾನು , ನ್ಯೂಯಾರ್ಕ್'ನಿಂದ ನಾಕ್ಸ್'ವಿಲ್ಲೆಗೆ ಭೇಟಿ ನೀಡಿ ವಿಮಾನದ ಮೂಲಕ ಹಿಂದಿರುಗಿದೆನು. ಅಮೆರಿಕದಲ್ಲಿ ಹಾಗೂ ಕೆನಡಾ ಪ್ರವಾಸವನ್ನು ಮುಗಿಸಿದ ನಂತರ ನಮ್ಮಲ್ಲಿ ಕೆಲವರು ಪ್ರತ್ಯೇಕ ತಂಡಗಳಲ್ಲಿ ಫ್ರಾನ್ಸ್ ಹಾಗೂ ಯುರೋಪಿನ ಇತರ ದೇಶಗಳ ಕೈಗಾರಿಕೆ ಜಾಗಗಳಿಗೆ ಭೇಟಿ ಕೊಟ್ಟೆವು. ಇಂಗ್ಲೆಂಡ್ ಬಿಡುವ ಮೊದಲು ನಮ್ಮ ನಿಯೋಗ 1946 ಡಿಸೆಂಬರ್ 'ನಲ್ಲಿ ಲಂಡನ್'ನಲ್ಲಿ ನಡೆದ ಬ್ರಿಟಿಷ್ ಟ್ರೇಡ್ ಫೇರ್ 'ಗೆ ಭೇಟಿ ನೀಡಿತು.
ಮಹಾ ಆರ್ಥಿಕ ಹಿಂಜರಿತದಿಂದ ತತ್ತರಿಸಿದ್ದ ಪ್ರದೇಶಕ್ಕೆ ಅಗತ್ಯವಾದ ನದಿ ಸಾರಿಗೆ , ನೆರೆ ಹತೋಟಿ , ವಿದ್ಯುತ್ ಉತ್ಪಾದನೆ , ರಾಸಾಯನಿಕ ಗೊಬ್ಬರ ತಯಾರಿಕೆ , ಕೈಗಾರಿಕೆ ಅಭಿವೃದ್ಧಿ ಮುಂತಾದ ಗುರಿಗಳನ್ನು ಸಾಧಿಸಲು 18/5/1933 ರಂದು ಕಾಂಗ್ರೆಷನಲ್ ಚಾರ್ಟರ್ ಮೂಲಕ ಅಮೆರಿಕದ ಚಾರಿತ್ರಿಕ ಹೆಮ್ಮೆಯ ಟಿ.ವಿ.ಎ ( ಟೆನ್ನಿಸನ್ ವ್ಯಾಲಿ ಅಥಾರಿಟಿ) ಅಸ್ಥಿತ್ವಕ್ಕೆ ಬಂದಿತು. ಟಿ.ವಿ.ಎ ಯೋಜನೆ ಟೆನ್ನೆಸ್ಸೆ ರಾಜ್ಯದ ಬಹುತೇಕ ಪ್ರದೇಶ ಹಾಗೂ ಅಲ್ಬಮಾ , ಮಿಸ್ಸಿಸಿಪ್ಪಿ, ಕೆಂಟುಕಿ ರಾಜ್ಯದ ಹಲವು ಭಾಗಗಳನ್ನು ಹಾಗೂ ನಾರ್ಥ್ ಕೆರೊಲಿನಾ ಮತ್ತು ವರ್ಜೀನಿಯಾ ರಾಜ್ಯಗಳ ಅಲ್ಪ ಭಾಗಗಳನ್ನು ಒಳಗೊಂಡಿದ್ದಿತು. ಟಿ.ಎ.ಎ ಆಡಳಿತ ಕೇಂದ್ರ ನ್ಯೂಯಾರ್ಕ್'ನಿಂದ 1275 ಕಿ.ಮೀ ದೂರದ ನಾಕ್ಸ್'ವಿಲ್ಲೆಯಲ್ಲಿ ಇದ್ದರೆ , ಹಂಗ್ರಿ ಹಾರ್ಸ್ ಡ್ಯಾಮ್ ರಸ್ತೆ ಮೂಲಕ ನ್ಯೂಯಾರ್ಕಿನಿಂದ 3390 ಕಿ.ಮೀ ದೂರದಲ್ಲಿದ್ದು , ಮೊಂಟೆನಾ ರಾಜ್ಯಕ್ಕೆ ಸೇರಿದ್ದಿತು. ಸರ್ ಎಂ.ವಿ ಯವರು ನಾಕ್ಸ್'ವಿಲ್ಲೆಗೆ ತಾಂತ್ರಿಕ ಮುನ್ನಡೆ ಹಾಗೂ ಯೋಜನೆಗಳನ್ನು ತಿಳಿಯುವ ಙ್ಞಾನಾರ್ಥಿಯಾಗಿ ಹೋಗಿದ್ದರೆ ಹೊರತು ಙ್ಞಾನ ಹರಡುವ ಇಂಜಿನಿಯರ್'ನಂತಲ್ಲ.
ಹಂಗ್ರಿ ಹಾರ್ಸ್ ಡ್ಯಾಮ್ - ಕಮಾನು ಆಣೆಕಟ್ಟೆಯಾಗಿದೆ. ಆಣೆಕಟ್ಟೆಗಳ ವಿನ್ಯಾಸದಲ್ಲಿ ಸರ್ ಎಂ.ವಿ ಭಾರಿ ಪರಿಣಿತಿ ಹೊಂದಿದ್ದರು ಎನ್ನುವುದಕ್ಕೆ ಗಟ್ಟಿಯಾದ ತಾಂತ್ರಿಕ ಪುರಾವೆಗಳಿಲ್ಲ. ಅಲ್ಲದೆ ಸರ್ ಎಮ್.ವಿಯವರು ಕಮಾನು ಆಣೆಕಟ್ಟೆಗಳ ವಿನ್ಯಾಸದ ಪರಿಣಿತರಾಗಲಿ ಅಥವಾ ಅಂತಹ ಆಣೆಕಟ್ಟೆಗಳನ್ನು ಕಟ್ಟಲು ಮುಂದುವರೆದ ನಿರ್ಮಾಣದ ತಂತ್ರಗಳನ್ನು ತಿಳಿಸಿಕೊಡುವಂತಹ ಅನುಭವವನ್ನಾಗಲಿ ಹೊಂದಿದವರಾಗಿರಲಿಲ್ಲ. 1943 ರಲ್ಲಿ ಬಂಗಾಳದಲ್ಲಿ ಉಂಟಾದ ದಾಮೋದರ ನೆರೆಯಿಂದ ಬಹಳ ಹಾನಿಯಾಯಿತು.. ಇದಕ್ಕೆ ಪರಿಹಾರ ಹುಡುಕಲು 10 ಸದಸ್ಯರ ನೆರೆ ವಿಚಾರಣೆ ಸಮಿತಿ ರಚನೆಯಾಯಿತು. ವಿಙ್ಞಾನಿ ಮೇಘನಾದ ಷಹಾ ಈ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದರು. ಮಾರ್ಚ್ 1944 ರಲ್ಲಿ ಮೇಘನಾದ ಷಹಾ ತಮ್ಮ ಟಿಪ್ಪಣಿಯಲ್ಲಿ ' ಜಗತ್ತಿನ ಎಲ್ಲ ನದಿ ಕೊಳ್ಳಗಳ ಪೈಕಿ ದಾಮೋದರ ನದಿ ಕೊಳ್ಳ ಟೆನ್ನೆಸ್ಸೆ ನದಿ ಕೊಳ್ಳಗೆ ಹೆಚ್ಚು ಸಾಮ್ಯತೆ ಹೊಂದಿದೆ. ದಾಮೋದರ ನದಿ ನೆರೆ ಪರಿಹಾರಕ್ಕಾಗಿ ಅಮೆರಿಕ ಸರ್ಕಾರ ಟೆನೆಸ್ಸೆ ಕೊಳ್ಳದಲ್ಲಿ ಅನುಸರಿಸಿದ ಕ್ರಮಗಳನ್ನೇ ಕೆಲ ಮಾರ್ಪಾಡುಗಳೊಂದಿಗೆ ಅಳವಡಿಸಿಕೊಳ್ಳಬೇಕಾಗುತ್ತದೆ' ಎಂದು ಬರೆದರು. ಮೇಘನಾದ ಷಹಾರವರ ಟಿಪ್ಪಣಿಯಿಂದ ಪ್ರಭಾವಿತರಾಗಿದ್ದ ಇತರ ಸದಸ್ಯರೂ ಇದನ್ನು ಒಪ್ಪಿದರು. ನೆರೆ ವಿಚಾರಣೆ ಸಮಿತಿಯ ಶಿಫಾರಸ್ಸುಗಳನ್ನು ಆಗಸ್ಟ್ 1944 ರಲ್ಲಿ ಭಾರತ ಸರ್ಕಾರದ ಮುಂದಿರಿಸಲಾಯಿತು. ಮುಂದಿನ ಹಂತದಲ್ಲಿ ಬಂಗಾಳದ ಗವರ್ನರ್ ಆರ್..ಜಿ ಕೇಸೆ ' ಇಂತಹ ಕೆಲಸಕ್ಕೆ ಅತ್ಯುನ್ನತ ತಾಂತ್ರಿಕ ಙ್ಞಾನ ಹೊಂದಿದ ಪರಿಣಿತರು , ಹೇಳುವುದಾದರೆ ಅಮೆರಿಕದವರು ಬೇಕಾಗುತ್ತಾರೆ ಎಂದು ಬರೆದು ಭಾರತದಲ್ಲಿ ಉನ್ನತ ಮಟ್ಟದಲ್ಲಿ ಈ ಬಗ್ಗೆ ಸಲಹೆ ನೀಡಬಲ್ಲವರು ಯಾರೊಬ್ಬರೂ ಇಲ್ಲ ಎನ್ನುವ ಹೆಚ್ಚುವರಿ ಅಭಿಪ್ರಾಯವನ್ನೂ ಸೇರಿಸಿದ್ದನು.
ಅಮೆರಿಕದಲ್ಲಿದ್ದ ಬ್ರಿಟಿಷ್ ರಾಯಭಾರಿ ಲಾರ್ಡ್ ಹಾಲಿಫಾಕ್ಸ್ ಹೊಂದಿದ್ದ ಸಂಪರ್ಕಗಳ ಮೂಲಕ ಟಿ.ವಿ.ಎ ಯಲ್ಲಿ ಹಿರಿಯ ಇಂಜಿನಿಯರ್ ಆಗಿದ್ದ ಡಬ್ಲ್ಯು. ಎಲ್. ವೂರ್ಡುಯಿನ್ ಸೇವೆಗಳನ್ನು ಪಡೆಯುವ ನಿರ್ಧಾರ ಮಾಡಲಾಯಿತು. ವೂರ್ಡುಯಿನ್'ನನ್ನು ಸೆಂಟ್ರಲ್ ಟೆಕ್ನಿಕಲ್ ಅಂಡ್ ಪವರ್ ಬೋರ್ಡ್ ( ಸಿ.ಟಿ & ಫಿ.ಬಿ) ಸದಸ್ಯನನ್ನಾಗಿ ಮಾಡಲಾಯಿತು. ವೂರ್ಡುಯಿನ್ ನೆರೆ ನಿಯಂತ್ರಣ , ನೀರಾವರಿ , ವಿದ್ಯುತ್ ಉತ್ಪದನೆ , ಸಾರಿಗೆಯನ್ನು ಒಳಗೊಂಡಿರುವ ಪ್ರಸ್ತಾವನಾ ಯೋಜನೆಯನ್ನು ತಯಾರಿಸಿದನು. ವೂರ್ಡುಯಿನ್ ಯೋಜನೆಯನ್ನು ದಾಮೋದರ ಯೋಜನೆಯ ತಾಂತ್ರಿಕ ಸದಸ್ಯರಾಗಿದ್ದ ಟಿ.ವಿ.ಎ ಯೋಜನೆಯ ಇಬ್ಬರು ಪರಿಣಿತ ಇಂಜಿನಿಯರ್'ಗಳು ಹಾಗೂ ಭಾರತದ ಕಡೆಯಿಂದ ಎ.ಎನ್ ಖೋಸ್ಲಾ ಮತ್ತು ಎಂ.ನರಸಿಂಹಯ್ಯ ಪರಿಶೀಲನೆ ಮಾಡಿ , ತಡಮಾಡದೆ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕೆಂದು ಶಿಫಾರಸ್ಸು ಮಾಡಿದರು. 1948 ರಲ್ಲಿ ನಡೆದ ಪಾರ್ಲಿಮೆಂಟ್ ಅಧಿವೇಶನದಲ್ಲಿ ಟಿ.ವಿ.ಎ ಗೆ ಕೃತಙ್ಞತೆ ಸಲ್ಲಿಸಲಾಯಿತು. ಹಾಗಾಗಿ ಭಾರತದಲ್ಲಿಯು ಸರ್ ಎಂ.ವಿ ಎಲ್ಲ ಬಗೆಯ ಸಿವಿಲ್ ಇಂಜಿನಿಯರಿಂಗ್ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮಾಂತ್ರಿಕನಾಗಿರಲಿಲ್ಲ.
ಸರ್ ಎಂ.ವಿ ಯವರ ಸುತ್ತ ಹರಡಿದ್ದ ವೈಭವೀಕರಣ, ವ್ಯಕ್ತಿಪೂಜೆಯ ಕಟ್ಟು ಕಥೆಗಳನ್ನು ಕೇಳಿದ್ದ , ಓದಿದ್ದ ಗೊರೂರರು ತಮ್ಮ ಸಾಹಿತ್ಯ ಸಾಹಸದ ಭಾಗವಾಗಿ ಅದಕ್ಕೆ ತಮ್ಮದೇ ಆದ ಕಾಣಿಕೆಯನ್ನು ಸೇರಿಸಲು ಹಂಗ್ರಿ ಹಾರ್ಸ್ ಡ್ಯಾಂ ನಲ್ಲಿದ್ದ 75 ವರ್ಷದ ಭದ್ರತೆಯ ಕೆಲಸಗಾರನೊಬ್ಬನನ್ನು ಸೃಷ್ಟಿಸಿಕೊಂಡರು ಮಾತ್ರವಲ್ಲ ಅಮೆರಿಕದದ ಎಲ್ಲ ಇಂಜಿನಯರ್'ಗಳು 'ಇಂಜಿನಿಯರಿಂಗ್ ಮೇಧಾವಿ' ಸರ್ ಎಂ.ವಿ' ಸುತ್ತ ಕೈಕಟ್ಟಿ ನಿಂತಿರುರುವ ರಮ್ಯಾದ್ಭುತ ಕಲ್ಪನೆಯನ್ನು ಕಂಡು ಸಾಹಿತ್ಯ ರೂಪಕ್ಕೆ ತಂದು ತಮ್ಮ ಪುಸ್ತಕದಲ್ಲಿ ಸೇರಿಸಿದರು. ಸರ್ ಎಂ.ವಿಯವರ ಜೀವನ , ಸಾಧನೆಗಳನ್ನು ಕುರಿತಾಗಿ ಪುಸ್ತಕ ಬರೆದಿರುವ ವಿ. ಎಸ್. ನಾರಾಯಣ ರಾವ್ ಇದನ್ನು ತಮ್ಮ ಪುಸ್ತಕದಲ್ಲಿ ಸೇರಿಸಿಕೊಂಡರು. ಇಂತಹ ಆಧಾರವಿಲ್ಲದ ಸಂಗತಿಗಳನ್ನು ಒಳಗೊಂಡಿರುವ ಪುಸ್ತಕದ ಇಂಗ್ಲಿಷ್ ಅನುವಾದವನ್ನು ಯಾವುದೇ ಪರಿಶೀಲನೆಯಿಲ್ಲದೆ ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾದವರು ಪ್ರಕಟಿಸಿದರು. ಹೀಗೆ ಗೊರೂರು ಹೊಸೆದ ಕಥೆ ವಿ.ಎಸ್ ನಾರಾಯಣ್ ರಾವ್ ಮೂಲಕ ಗಟ್ಟಿಯಾಗಿ ಬೇರೂರಿ , ನ್ಯಾಷನಲ್ ಟ್ರಸ್ಟ್ ಮೂಲಕ ಹೆಮ್ಮರವಾಯಿತು.