ಸ್ವಾಮಿ ವಿವೇಕಾನಂದ : ರಾಮಕೃಷ್ಣರ ‘ಹೊಸ ಚರಿತ್ರೆ’ಗಳ ನಿರ್ಮಾಣ
ರಾಮಕೃಷ್ಣ ಪರಮಹಂಸ ಭ್ರಮೆಗಳ ತೂಗುಯ್ಯಾಲೆ- ಪುಸ್ತಕದ ಆಯ್ದ ಭಾಗ
ಆರಂಭಿಕ ದಿನಗಳಲ್ಲಿ ದಕ್ಷಿಣೇಶ್ವರದ ತಾಯಿ ಕಾಳಿಯ ಹುಚ್ಚೇರಿಸಿಕೊಂಡು ಭಾವ, ಮಹಾಭಾವಗಳಿಂದ ಸ್ತಬ್ದರಾಗುತ್ತಿದ್ದ , ನಂತರದ ದಿನಗಳಲ್ಲಿ ಉತ್ತಮ ಭಜನೆ , ಉತ್ಸವ , ಊಟಗಳಲ್ಲಿ ಆನಂದದಿಂದ ಜೀವನ ಸಾಗಿಸಿದ ಭಕ್ತ, ಶಾಕ್ತ , ಎಡಗೈ ತಾಂತ್ರಿಕ ರಾಮಕೃಷ್ಣರು ಜಗದ್ಗುರು , ಆಧುನಿಕ ಹಿಂದೂಧರ್ಮದ ಜೀವಂತ ಮೂರ್ತಿ ಹಾಗೂ ವಿಶ್ವವೇ ಪೂಜಿಸುವ ಅತ್ಯುನ್ನತ ಅದ್ವೈತ ಸಾಧಕನಾದ ಹಿನ್ನೆಲೆಯಲ್ಲಿ ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಕಳೆದ ಮೂರು ದಶಕಗಳಿಂದ ಸಂಶೋಧನೆ ನಡೆಸುತ್ತಿರುವ –ರಾಮಕೃಷ್ಣ ಮಠ/ಮಿಷನ್ ಅಥವಾ ಭಕ್ತ ಗಣಕ್ಕೆ ಸೇರದ- ವಿದ್ವಾಂಸರು ಈಗ ಪ್ರಚಲಿತವಿರುವ ರಾಮಕೃಷ್ಣರ ಜೀವನ ಚರಿತ್ರೆಯಲ್ಲಿ ಎಲ್ಲವೂ ನೇರವಿಲ್ಲ, ಅದೆಷ್ಟೋ ವಿಷಯಗಳನ್ನು ಮುಚ್ಚಿಡಲಾಗಿದೆ, ಇನ್ನೂ ಹಲವು ವಿಷಯಗಳನ್ನು ಹಸನುಗೊಳಿಸಲಾಗಿದೆ ಎಂದು ಭಾವಿಸುತ್ತಾರೆ. ‘ಶ್ರೀಶ್ರೀರಾಮಕೃಷ್ಣ ಕಥಾಮೃತ’ವನ್ನು ‘ದಿ ಗಾಸ್ಪೆಲ್ ಆಫ್ ಶ್ರೀ ರಾಮಕೃಷ್ಣ ‘ ಹೆಸರಿನಲ್ಲಿ ಇಂಗ್ಲಿಷ್’ಗೆ ಅನುವಾದ ಮಾಡಿರುವ ಸ್ವಾಮಿ ನಿಖಿಲಾನಂದರು ಕಥಾಮೃತದ ಕೆಲವು ಭಾಗಗಳನ್ನು ಅನುವಾದಿಸದೆ ಮುಚ್ಚಿಟ್ಟಿದ್ದಾರೆ ಎನ್ನುವ ಆರೋಪಗಳಿವೆ. ರಾಮಕೃಷ್ಣರ ಜೀವನ ಚರಿತ್ರೆಯನ್ನು ಇದ್ದಂತೆಯೇ ಕೊಡದೆ ಅದನ್ನು ತಿದ್ದಿ ,ಚೊಕ್ಕಟಗೊಳಿಸಿ ದೈವೀಕರಣಗೊಳಿಸುವ ಕೆಲಸ ಅವರ ಪ್ರಿಯ ಶಿಷ್ಯ ಸ್ವಾಮಿ ವಿವೇಕಾನಂದರಿಂದಲೇ ಪ್ರಾರಂಭವಾಯಿತು. ಇದು ಹೇಗೆ ಎನ್ನುವುದನ್ನು ತಿಳಿಯಲು ಸ್ವಾಮಿ ವಿವೇಕಾನಂದನಾಗುವ ಮೊದಲಿದ್ದ ನರೇಂದ್ರನಾಥದತ್ತನನ್ನು ಅರಿಯಬೇಕಾಗುತ್ತದೆ.
ಸ್ವಾಮಿಗಳ ಎಲ್ಲ ಚರಿತ್ರೆಕಾರರು ನರೇಂದ್ರನಾಥದತ್ತ ಬಾಲ್ಯದಿಂದಲೇ ಮಹಾಪ್ರತಿಭಾಶಾಲಿ ಎಂದಿದ್ದಾರೆ. ೧೮೮೧-೮೪ ರಲ್ಲಿ ಆತ ವಿದ್ಯಾರ್ಥಿಯಾಗಿದ್ದ ಜನರಲ್ ಅಸೆಂಬ್ಲಿ ಇನ್’ಸ್ಟಿಟ್ಯೂಷನ್ (ಮುಂದೆ ಸ್ಕಾಟಿಷ್ ಚರ್ಚ್ ಕಾಲೇಜ್ ಎಂದು ಹೆಸರಾಯಿತು) ಪ್ರಿನ್ಸಿಪಾಲ್ ರೆ. ವಿಲಿಯಂ ಹೇಜಿ ‘ ನರೇಂದ್ರ ನಿಜವಾಗಿಯೂ ಮೇಧಾವಿ. ನಾನು (ಜಗತ್ತಿನ) ಉದ್ದಗಲಕ್ಕೆ ಸಂಚರಿಸಿರುವೆನಾದರೂ ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ , ತತ್ತಶಾಸ್ತ್ರದ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲಿಯೂ ಅಂತಹ ಪ್ರತಿಭೆ ಮತ್ತು ಸಾಮರ್ಥ್ಯವಿರುವ ಹುಡುಗನನ್ನು ಕಂಡಿಲ್ಲ’ ಎಂದು ಹೇಳಿದ್ದರಂತೆ. ನರೇಂದ್ರನಾಥದತ್ತ ಡೇವಿಡ್ ಹ್ಯೂಮ್ , ಇಮ್ಯಾನುಯಲ್ ಕ್ಯಾಂಟ್ , ಜೊಹಾನ್ ಜಿ. ಫಿಕ್ಟೆ , ಬರೂಖ್ ಸ್ಪಿನೋಝಾ , ಜಾರ್ಜ್ ಡಬ್ಲ್ಯು. ಎಫ್ ಹೇಗೆಲ್ , ಆರ್ಥರ್ ಷೋಪೆನ್’ಹಾವರ್ ,ಅಗಸ್ಟೆ ಕಾಮ್ಟೆ , ಹರ್ಬರ್ಟ್ ಸ್ಪೆನ್ಸರ್ , ಜಾನ್ ಎಸ್ ಮಿಲ್ , ಚಾರ್ಲ್ಸ್ ಡಾರ್ವಿನ್ ಮುಂತಾದವರ ಕೃತಿಗಳನ್ನು ಓದಿ ಅರಗಿಸಿಕೊಂಡಿದ್ದನು. ತತ್ತ್ವಶಾಸ್ತಜ್ಞರಲ್ಲಿ ಹರ್ಬರ್ಟ್ ಸ್ಪೆನ್ಸರ್ ಆತನಿಗೆ ನೆಚ್ಚಿನವನಾಗಿದ್ದನು ಎಂದು ವಿವಿಧ ಮೂಲಗಳಲ್ಲಿ ದಾಖಲಿಸಿಲಾಗಿದೆ. ಮಾತೃಭಾಷೆ ಬಂಗಾಳಿಯಂತೆ ಸಂಸ್ಕೃತ ಮತ್ತು ಇಂಗ್ಲಿಷ್ ಮೇಲೆ ಅಪೂರ್ವ ಹಿಡಿತ ಆತನಿಗಿದ್ದಿತು ಎನ್ನುವ ಉದ್ಗಾರಗಳಿವೆ. ಒಮ್ಮೆ ಕೇಳಿದ್ದನ್ನು ಮರೆಯದ ಶೃತಿಧಾರ ಅತನಾಗಿದ್ದ ಎಂದು ಕೆಲವರು ಹೊಗಳಿದ್ದಾರೆ. ಪುಟಗಳ ಮೇಲೆ ಕಣ್ಣಾಡಿಸುತ್ತಿದ್ದಂತೆಯೇ ಅದರಲ್ಲಿ ಇರುವುದೆಲ್ಲವೂ ಆತನ ತಲೆ ಸೇರುತ್ತಿದ್ದಿತು ಎಂದು ಇನ್ನೂ ಕೆಲವರು ಸೋಜಿಗಪಟ್ಟಿದ್ದಾರೆ. ವಾರಣಾಸಿಯ ಪ್ರಮದದಾಸಮಿತ್ರ , ಖೇತ್ರಿಯ ಸುಂದರಲಾಲ , ಪೋರಬಂದರಿನ ಶಂಕರ ಪಾಂಡುರಂಗ ಮುಂತಾದ ವಿದ್ವಾಂಸರು ಬೆರಗಾಗುವಷ್ಟು ವೇಗದಲ್ಲಿ ಶಾಸ್ತ್ರ , ಸಂಸ್ಕೃತ ವ್ಯಾಕರಣಗಳನ್ನು ಕಲಿತರಂತೆ. ಪಂಡಿತ ಶಂಕರ ಪಾಂಡುರಂಗ ಸ್ವಾಮಿಗಳಿಗೆ ಸಂಸ್ಕೃತ ವ್ಯಾಕರಣ ಕಲಿಸಿದ್ದಲ್ಲದೆ , ತಮ್ಮ ಖಾಸಗಿ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಓದಲು ಕೊಟ್ಟು , ಪಾಶ್ಚಾತ್ಯರಿಗೆ ಸನಾತನ ಧರ್ಮದ ಬಗ್ಗೆ ಬೋಧಿಸಲು ನಿಮಗಿಂತಲೂ ಅರ್ಹನಾದ ವ್ಯಕ್ತಿ ಇನ್ನೊಬನಿಲ್ಲ ಎಂದಿದ್ದರಂತೆ. ಇದಾದ ನಂತರ ಅಮೆರಿಕಕ್ಕೆ ಹೋಗುವ ಸ್ವಲ್ಪ ಮೊದಲು ಗುರುಭಾಯಿ ತ್ರಿಗುಣಾತೀತಾನಂದರಿಗೆ ‘ ನನಗೆ ಎಷ್ಟು ಶಕ್ತಿ ಇದೆ, ನಾನು ಜಗತ್ತನೇ ಬದಲಾಯಿಸಬಲ್ಲೆ ಎನಿಸುತ್ತಿದೆ’ ಎಂದು ಉಧ್ಗರಿಸಿದ್ದರಂತೆ. ವಾಸ್ತವದಲ್ಲಿ ನರೇಂದ್ರನಾಥದತ್ತ ದಡ್ದನೂ ಅಲ್ಲ , ಅದರಂತೆ ಅಪೂರ್ವ ಪ್ರತಿಭಾಶಾಲಿಯೂ ಅಲ್ಲ. ಇತರರು ಬರೆದದ್ದನ್ನು ಓದಿ , ಅದರ ಮೇಲೆ ಸ್ವಂತ ಅಭಿಪ್ರಾಯ ರೂಪಿಸಿಕೊಂಡು , ಗಳಿಸಿದ ಜ್ಞಾನವನ್ನು ವ್ಯವಸ್ಥಿತ ಮತ್ತು ಕ್ರಮಬದ್ಧವಾಗಿ ಮಂಡಿಸುವ ಸಾಮರ್ಥ್ಯ ಆತನಿಗಿದ್ದಿತು.
ಬಂಗಾಳದ ನಗರವಾಸಿ ಮಧ್ಯಮ ವರ್ಗದ ಕುಟುಂಬದ ಕುಡಿಯಾಗಿದ್ದ ನರೇಂದ್ರನಾಥದತ್ತ ಇತರ ಸರೀಕ ಹುಡುಗರಂತೆ ಆಟೋಟ , ಈಜು , ಕತ್ತಿವರಸೆ, ಕುಸ್ತಿ , ಹಾಡು , ಸಂಗೀತ ಜೊತೆಗೆ ಶಾಲೆಯ ಪಠ್ಯಗಳ ಅಧ್ಯಯನಗಳಲ್ಲಿ ದಿನದೂಡುತ್ತಿದ್ದನಾದರೂ ಬಾಲ್ಯದಿಂದಲೇ ಅಧ್ಯಾತ್ಮಿಕತೆಯತ್ತ ಒಲವಿದ್ದಿತಂತೆ. ನಂತರದ ದಿನಗಳಲ್ಲಿ ಮಾರ್ಗರೆಟ್ ನೋಬಲ್’ಗೆ ಆವರೇ ತಿಳಿಸಿದಂತೆ ಎಂಟನೇ ವಯಸ್ಸಿನಲ್ಲಿಯೇ ಅವರಿಗೆ ಸಮಾಧಿಯ ಅನುಭವ ಆಗಿದ್ದಿತಂತೆ. ಬಾಲ್ಯದಿಂದಲೂ ದೇವರನ್ನು ನೋಡಬೇಕೆನ್ನುವ ಬಯಕೆಯಿದ್ದ ಆತ ಶಿವ , ರಾಮರ ಭಕ್ತನಾಗಿದ್ದನು. ಸ್ವಾಮಿಗಳನ್ನು ಕುರಿತಾದ ಹಲವು ಅದ್ಭುತ ಸಂಗತಿಗಳು ಅವರ ಭಕ್ತ , ಅಭಿಮಾನಿ . ಅನುಯಾಯಿಗಳಿಂದ , ಕೆಲವು ಸೋದರ ಮಹೇಂದ್ರನಾಥ ಮತ್ತು ಭೂಪೇಂದ್ರನಾಥದತ್ತರಿಂದ ಬಂದರೆ ಇನ್ನೂ ಉಳಿದವು ಸ್ವಾಮಿಗಳಿಂದ ನೇರವಾಗಿ ಬಂದಂತಹವು. ಸ್ವಾಮಿಗಳು ಪತ್ರದಲ್ಲಿ ಬಳಸುತ್ತಿದ್ದ ಉತ್ಪ್ರೇಕ್ಷೆ, ತನ್ನ ಬಣ್ಣನೆಗಳನ್ನು ಗಮನಿಸಿದರೆ ಇಂತಹವುಗಳನ್ನು ಪರಿಗಣಿಸುವಾಗ ಎಚ್ಚರದಿಂದ ಇರಬೇಕೆನ್ನುವುದು ಸ್ಪಷ್ಟ. ರೆ. ವಿಲಿಯಂ ಹೇಜಿ ನರೇಂದ್ರನಾಥದತ್ತನನ್ನು ಹೊಗಳಿದ್ದು ನಿಜವೇ ? ವಿಲಿಯಂ ಹೇಜಿ ಹಿಂದೂಧರ್ಮದ ಕಟು ಟೀಕಾಕಾರನಾಗಿದ್ದನೆನ್ನುವುದು ಆತ ಬಂಕಿಮಚಂದ್ರ ಚಟರ್ಜಿಯೊಂದಿಗೆ ಮಾಡಿದ ತೀವ್ರ ವಾಗ್ವಾದವೇ ಸಾಕ್ಷಿಯಾಗಿದೆ. ವಿಲಿಯಂ ಹೇಜಿ ನರೇಂದ್ರನಾಥದತ್ತನನ್ನು ಹೀಗೆ ಹೊಗಳುತ್ತಿದ್ದನು ಎಂದು ಸ್ವಾಮಿಗಳು ತೀರಿಕೊಂಡ ೫ ವರ್ಷಗಳನಂತರ- ೧೯೦೭ –ಆತನ ಕಾಲೇಜು ಗೆಳೆಯ ಪ್ರಬುದ್ಧ ಭಾರತದಲ್ಲಿ ಬರೆದದ್ದು ‘ಗೆದ್ದೆತ್ತಿನೊಂದಿಗೆ ನಾನು ಇದ್ದರೆ ಗೌರವ’ ಎನ್ನುವ ಧೋರಣೆಯಾಗಿದೆಯೇ ಹೊರತು ವಾಸ್ತವಿಕವಲ್ಲ.
ದೊಡ್ದ ಕಣ್ಣುಗಳ ಕಾಯಸ್ಥರ ಹುಡುಗ ನರೇಂದ್ರನಾಥದತ್ತನನ್ನು ಕಂಡು ಮನಸೋತಿದ್ದ ರಾಮಕೃಷ್ಣರು ಆತನನ್ನು ‘ಕಮಲಾಕ್ಷ’ ಎಂದು ಕರೆದಿದ್ದರು. ನರೇಂದ್ರನಾಥದತ್ತನ ಬಗ್ಗೆ ಗುರುಗಳಿಗೆ ಎಂತಹ ಆಕರ್ಷಣೆಯಿದ್ದಿತು , ಮೊದಲ ಭೇಟಿಯಲ್ಲಿಯೇ ಅವರು ಆತನಿಗೆ ಹೇಗೆ ಮಾರು ಹೋದರು. ನಂತರದ ದಿನಗಳಲ್ಲಿ ಆತನ ಮೈ, ಕೈ ಸವರುತ್ತ , ಗಲ್ಲ ಹಿಡಿದು , ಕಣ್ಣೀರು ಸುರಿಸುತ್ತ , ಬಹುಕಾಲ ನೆಟ್ಟಗಣ್ಣಿನಲ್ಲಿ ನೋಡುತ್ತ ಹೇಗೆ ಬಾವಮುಖರಾಗುತ್ತ ಸಮಾಧಿಗೆ ಏರುತ್ತಿದ್ದರು ಎನ್ನುವುದನ್ನು ಶಾರದಾನಂದರು ಲೀಲಾಪ್ರಸಂಗದಲ್ಲಿ ಸುದೀರ್ಘವಾಗಿಯೇ ನೀಡಿದ್ದಾರೆ. ಕಥಾಮೃತ ಇದಕ್ಕೆ ಪೂರಕವಾಗಿ ಹಲವಾರು ಘಟನೆಗಳನ್ನು ಸಾಕಷ್ಟು ವಿವರವಾಗಿಯೇ ನೀಡುತ್ತದೆ. ಮನುಷ್ಯನನ್ನು ವರ್ಣಿಸಲು ಬಳಸಬಹುದಾದ ಎಲ್ಲ ಉತ್ಪ್ರೇಕ್ಷೆಗಳನ್ನು ನರೇಂದ್ರನಾಥದತ್ತನಿಗೆ ಬಳಸಲು ರಾಮಕೃಷ್ಣರು ಹಿಂಜರಿಯುತ್ತಿರಲಿಲ್ಲ. ಇಂಗ್ಲಿಷ್ ಶಿಕ್ಷಣ ಆ ಮೂಲಕ ಸಾಕಷ್ಟು ವೈಚಾರಿಕತೆ ಬೆಳೆಸಿಕೊಂಡಿದ್ದ ನರೇಂದ್ರನಾಥದತ್ತನಿಗೆ ರಾಮಕೃಷ್ಣ ಐಲು ವ್ಯಕ್ತಿಯಂತೆ ಕಂಡುಬಂದಿದ್ದರು. ದಕ್ಷಿಣೇಶ್ವರದಲ್ಲಿ ರಾಮಕೃಷ್ಣರ ಕೊಠಡಿಯಲ್ಲಿ ಸೇರುತ್ತಿದ್ದ ಭಕ್ತ ಸಮೂಹ , ಕಿವಿಗೆ ಇಂಪೆನಿಸುವ ದೇವರ ಹಾಡುಗಳು , ನಡುವಿನಲ್ಲಿ ಒಮ್ಮೊಮ್ಮೆ ಮೈಮರೆತು ಕುಣಿಯುತ್ತಿದ್ದ ಗುಂಪುಗಳು ಒಂದು ಬಗೆಯ ಉನ್ಮತ್ತ ವಾತಾವರಣವನ್ನು ಸೃಜಿಸುತ್ತಿದ್ದು , ಮನಸೆಳೆಯುವಂತಿದ್ದವು. ಇವುಗಳಲ್ಲಿ ಭಾಗಿಯಾಗಿ ಮೈ , ಮನಗಳು ತಣಿದು ಒಂದು ಬಗೆಯ ಸಾರ್ಥಕಭಾವ ಹುಟ್ಟುತ್ತಿದ್ದಿತು. ತಂದೆಯ ಅಕಾಲಿಕ ಮರಣ , ಕುಟುಂಬದ ಹೊಟ್ಟೆ ತುಂಬಿಸಬೇಕಾದ ಹೊಣೆ , ಅನಿಸಿದ್ದು ಆಗದ ಕಠೋರ ವಾಸ್ತವಗಳು ನರೇಂದ್ರನಾಥದತ್ತನನ್ನು ಹಿಂಡಿ ಹಿಪ್ಪೆ ಮಾಡಿದ್ದವು. ತಂದೆ ವಿಶ್ವನಾಥದತ್ತನಷ್ಟೇ ವಯಸ್ಸಿನ ರಾಮಕೃಷ್ಣರಿಗೆ ತನ್ನ ಮೇಲಿದ್ದ ಗೀಳು , ಅವರು ಆಡುತ್ತಿದ್ದ ಮೆಲುಮಾತುಗಳು ಮಾನಸಿಕವಾಗಿ ದುರ್ಬಲನಾಗಿದ್ದ ನರೇಂದ್ರನ ಮೇಲೆ ಭಾರಿ ಪರಿಣಾಮವನ್ನು ಉಂಟುಮಾಡಿದ್ದವು. ಕುಟುಂಬದ ಕಷ್ಟಗಳಿಂದ ಕಂಗೆಟ್ಟಿದ್ದ ನರೇಂದ್ರನಾಥದತ್ತ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಮಾಡಿದ್ದನು. ಗುರುಗಳು ಅದನ್ನು ತಪ್ಪಿಸಿದರು ಎಂದು ಶಾರದಾನಂದರು ಬರೆದಿದ್ದಾರೆ. (29) ಇದಲ್ಲದೆ ದಕ್ಷಿಣೇಶ್ವರಕ್ಕೆ ರಾಮಕೃಷ್ಣನನ್ನು ನೋಡಲು ಹಲವು ಗಣ್ಯರು ಬರುತ್ತಾರೆ. ಅವರ ಮೂಲಕ ಉದ್ಯೋಗವೊಂದನ್ನು ಪಡೆಯುವುದು ಸಾದ್ಯ ಎನ್ನುವ ಸಣ್ಣ ಆಶೆಯೂ ಮನಸ್ಸಿನಲ್ಲಿ ಇದ್ದಿತು. ಇಂತಹ ಸ್ಥಿತಿಗಳ ಒಟ್ಟು ಪ್ರಭಾವಗಳು ನರೇಂದ್ರನಾಥದತ್ತ ದಕ್ಷಿಣೇಶ್ವರದತ್ತ ಹೋಗಲು ಪ್ರೇರಕವಾಗಿದ್ದವು.
ಏಳು ವರ್ಷದವನಾಗಿದ್ದಾಗ ತಂದೆಯನ್ನೂ , ಇಪ್ಪತ್ತನೇ ವಯಸ್ಸಿನಲ್ಲಿ ತಂದೆಯಂತಿದ್ದ ಅಣ್ಣ ರಾಮಕುಮಾರನನ್ನು ಕಳೆದುಕೊಂಡು ‘ಭಕ್ತ, ಸಾಧಕ, ‘ಅವತಾರ ಪುರುಷ’ನಾಗಿ ಬದಲಾಗಿದ್ದ ರಾಮಕೃಷ್ಣರಿಗೆ ತಂದೆಯ ಹಠಾತ್ ಮರಣ ಎಂತಹ ಸಂಕಟ ತರಬಲ್ಲದು ಎನ್ನುವ ಅರಿವಿದ್ದಿತು. ಹಾಗಾಗಿ ನರೇಂದ್ರನಾಥದತ್ತನನ್ನು ತಂದೆಯಂತೆ ಸಂತೈಸಿದರು. ಹಾಗೆ ಮಾಡುವಾಗಲೇ ಈ ಸಂಸಾರ ದುರ್ಭರ ; ಅದಕ್ಕೆ ಹೆಣ್ಣು , ಹೊನ್ನು ಕಾರಣಗಳು. ಅದ್ದರಿಂದ ನೀನು ಅವುಗಳಿಂದ ದೂರವಿದ್ದು ತ್ಯಾಗಿಯಾಗು. ನೀನು ಸಾಮಾನ್ಯನಂತೆ ಬದುಕಲು ಹುಟ್ಟಿ ಬಂದಿಲ್ಲ. ನೀನು ಜಗತ್ತಿನ ಕಲ್ಯಾಣಕ್ಕಾಗಿ ಹುಟ್ಟಿ ಬಂದಿರುವ ನಾರಾಯಣ. ನೀನು ಸಪ್ತರ್ಷಿಗಳಲ್ಲಿ ಒಬ್ಬ ಎನ್ನುವ ಬೀಜ ಬಿತ್ತಿದರು. ಇದು ಸಸಿಯಾಗಿ ನೆಲಕ್ಕೆ ಅಂಟಿಕೊಂಡಿದ್ದಿತಾದರೂ ತಕ್ಷಣವೇ ರಾಮಕೃಷ್ಣರು ಬಯಸಿದಂತೆ ಬೆಳೆಯಲಿಲ್ಲ. ಹಾಗಾಗಿ ನಡುನಡುವೆ ಅದಕ್ಕೆ ಬೇಕಾದ ಗೊಬ್ಬರ , ನೀರು ಹಾಕುವುದನ್ನು ಅವರು ಮರೆತಿರಲಿಲ್ಲ. ರಾಮಕೃಷ್ಣರು ಸಾಯುವವರೆಗೂ ಅವರ ಬಗ್ಗೆ ಯಾವುದೇ ನಿರ್ದಿಷ್ಟ , ಖಚಿತ ತೀರ್ಮಾನಕ್ಕೆ ಬರಲಾಗದ ನರೇಂದ್ರನಾಥದತ್ತ , ಅವರು ಸತ್ತ ನಂತರ ಅನುಕೂಲಕರ ಅವಕಾಶ ಸಿಕ್ಕಾಗ ತಾನು ಸಾಮಾನ್ಯನಲ್ಲ , ಜಗತ್ತಿನ ಉದ್ದಾರಕ್ಕೆ ಅವತರಿಸಿದ ಭಗವಂತ ಎನ್ನುವುದನ್ನು ಸ್ಥಾಪಿಸಿಕೊಂಡನು.
ನಾನು ಎದೆ ಮುಟ್ಟಿದ ತಕ್ಷಣ ನರೇಂದ್ರನಾಥದತ್ತ ಎಚ್ಚರ ತಪ್ಪಿದ ಎಂದು ರಾಮಕೃಷ್ಣರು ಹೇಳುತ್ತಿದ್ದರಾದರೂ ಅದರಿಂದ ಆತನೇನೂ ಬದಲಾಗಿರಲಿಲ್ಲ. ಯದುಮಲ್ಲಿಕನ ತೋಟದಲ್ಲಿ ‘ನೀವು ಕಾಣುತ್ತಿರುವ ಭಗವಂತನ ರೂಪುಗಳೆಲ್ಲ ನಿಮ್ಮ ಮಾನಸಿಕ ಬ್ರಾಂತಿ ‘ ಎಂದು ಗುರುವಿಗೆ ತಿರುಮಂತ್ರ ಹಾಕಿದಾಗ ಕಳೆದ ಹದಿನೈದು ವರ್ಷಗಳಿಂದ ತಾಯಿ ಕಾಳಿಯನ್ನು ಕಾಣುತ್ತಿರುವೆ ಎಂದು ಎಲ್ಲರಿಗೂ ಹೇಳುತ್ತಿದ್ದ ರಾಮಕೃಷ್ಣರಿಗೆ ತಮ್ಮ ದರ್ಶನಗಳ ಬಗ್ಗೆ ಸಂಶಯ ಉಂಟಾಗಿ ಅತ್ತಿದ್ದರು. ಗುರುಗಳು ಸಾಯವುದಕ್ಕೆ ಒಂದು ವರ್ಷ ಮೊದಲು ಒಂದು ದಿನ ವಾದ ಮಾಡುತ್ತ ನರೇಂದ್ರನಾಥ ಭಗವದ್ಗೀತೆಯನ್ನು ಕೃಷ್ಣ ಹೇಳಿದನೋ ಅಥವಾ ಬೇರೆ ಇನ್ನಾರಾದರೋ ಬರೆದರೋ ಎಂದಾಗ ಗುರುಗಳು ಕಕ್ಕಾಬಿಕ್ಕಿಯಾಗಿದ್ದರು. (30) ಗುರುಗಳು ಸಾಯುವುದಕ್ಕಿಂತ ಮೂರು ತಿಂಗಳು ಮೊದಲು ನರೇಂದ್ರನಾಥದತ್ತ ಗುರುಗಳ ಎಲ್ಲ ದರ್ಶನಗಳು ಭ್ರಾಂತಿಗಳೆಂದು ‘ಮ’ ನೊಂದಿಗೆ ನರೇಂದ್ರನಾಥದತ್ತ ವಾದಿಸಿದ್ದನು. (31)
ಆರಂಭದಲ್ಲಿ ರಾಮಕೃಷ್ಣರ ಭಜನಾನಂದ , ಕುಣಿತಾನಂದಗಳ ಬಗ್ಗೆ ಹೆಚ್ಚು ತಕರಾರು ಎತ್ತದ ನರೇಂದ್ರನಾಥ ದತ್ತ , ಅವರು ಶ್ಯಾಮಪುಕುರಿನಲ್ಲಿ ಇರುವಾಗ ಅವರ ಸುತ್ತ ಇತರ ಭಕ್ತರು ಸೇರಿಕೊಂಡು ಹಾಡು , ಕುಣಿತಗಳಲ್ಲಿ ತನ್ಮಯರಾಗುವುದನ್ನು ಬಲವಾಗಿ ಖಂಡಿಸತೊಡಗಿದನು. ದಿಟ್ಟತನದಿಂದ ‘ಮೈ ತಿರುಚುವುದು , ಕಣ್ಣೀರು ಹರಿಸುವುದು , ರೋಮಾಂಚನಗೊಳ್ಳುವುದು , ಕ್ಷಣಮಾತ್ರದಲ್ಲಿ ಭಾವ ತುಂಬಿ ತುಳುಕುವುದು ಎಲ್ಲಾ ಬೂಟಾಟಿಕೆ. ಗಟ್ಟಿ ಮನಸ್ಸಿನಿಂದ ಇವುಗಳನ್ನು ಎದುರಿಸಬೇಕು; ಅದರಿಂದ ಆಗದಿದ್ದರೆ ಪೌಷ್ಟಿಕ ಆಹಾರ ಸೇವಿಸಬೇಕು ; ಅದೂ ಆಗದಿದ್ದರೆ ವೈದ್ಯರನ್ನು ಕಾಣಬೇಕು’ ಎಂದು ಸಾರಿದನು. ಅನುಭಾವದಲ್ಲಿ ಅಲ್ಪ ಹುರುಳಿರಬಹುದಾದರೂ ಅವುಗಳಿಂದ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ತೀರ್ಮಾನಿಸಿದನು. ನನ್ನ ‘ಜೀವನದುದ್ದಕೂ ಪಡೆದ ಅನುಭವ’ದಿಂದ ಇದನ್ನು ಹೇಳುತ್ತಿದ್ದೇನೆ ಎಂದು ಸಾರಿದನು. ರಾಮಕೃಷ್ಣರು ಸತ್ತ ಕೆಲದಿನದಲ್ಲಿಯೇ ಅವರ ಸಮಾಧಿ ಸ್ಥಿತಿಯನ್ನು ನರೇಂದ್ರನಾಥದತ್ತ ಅಣಕಿಸಿ , ಗುರುಭಾಯಿಗಳನ್ನು ನಗಿಸಿದನು. (32) ಮುಸ್ಲಿಂ ಫಕೀರನ ಶಾಪದಿಂದ ನನಗೆ ವಾಂತಿ , ಭೇದಿ ಉಂಟಾಯಿತು. ಆಗ ನಿಮ್ಮ ರಾಮಕೃಷ್ಣ ಏನೂ ಮಾಡಲಿಲ್ಲ ಎಂದು ಶಾರದಾಮಣಿಯ ಮುಂದೆ ನೇರವಾಗಿಯೇ ದೂರಿದ್ದನು. (33) ರಾಮಕೃಷರು ದಕ್ಷಿಣೇಶ್ವರದಲ್ಲಿರುವಾಗ ತಮಗೆ ದೊರೆತ ಯೌಗಿಕ ಸಿದ್ಧಿಗಳನ್ನು ವರ್ಗಾಂತರಿಸಲು ಮುಂದಾದಾಗ ನರೇಂದ್ರನಾಥದತ್ತ ಒಪ್ಪಿರಲಿಲ್ಲ. ಅಲ್ಲಿ ಮುಕ್ತಿಯ ಬಯಕೆಗಿಂತ ಹೆಚ್ಚಾಗಿ ಅಂತಹ ಸಿದ್ಧಿಗಳು ಅವರಲ್ಲಿರುವ ಬಗ್ಗೆ ಇದ್ದ ಅಪನಂಬಿಕೆಯೇ ಕಾರಣವಾಗಿದ್ದಿತು. (34)
ರಾಮಕೃಷ್ಣರು ಕ್ಯಾನ್ಸರ್ ಚಿಕಿತ್ಸೆಗಾಗಿ ಶ್ಯಾಮಾಪುಕುರದಲ್ಲಿರುವಾಗಲೇ ನರೇಂದ್ರನಾಥ ದತ್ತನ ಮತ್ತೊಂದು ಮಗ್ಗಲು ನಿಧಾನವಾಗಿ ತೆರೆದುಕೊಳ್ಳತೊಡಗಿತು. ಆತ ಇತರರನ್ನು ಹಿಂದಕ್ಕೆ ಹಾಕಿ ಗುರುಗಳ ಅಧ್ಯಾತ್ಮಿಕ ಶಕ್ತಿಯನ್ನು ಪಡೆಯುವ , ಅದನ್ನು ಮುಂದುವರೆಸುವ ಅರ್ಹನಾಗಿ ಸ್ಥಾಪಿಸಿಕೊಳ್ಳತೊಡಗಿದನು. ಯುವ ಹಾಗೂ ಗೃಹಸ್ಥ ಭಕ್ತರಿಬ್ಬರಿಗೂ ಗುರುಗಳ ನಂತರ ನಾನೇ ಎನ್ನುವ ಪರೋಕ್ಷ ಸಂದೇಶ ಕೊಡತೊಡಗಿದನು. ಅಲ್ಲಿರುವಾಗ ನಿರ್ವಿಕಲ್ಪ ಸಮಾಧಿ ಪಡೆದನು. ನನಗೆ ಹಲವು ಸಿದ್ಧಿಗಳು ಈಗಾಗಲೇ ದಕ್ಕಿವೆಯಾದರೂ ದೈವ ಸಾಕ್ಷಾತ್ಕಾರ ಆಗುವವರೆಗೆ ಅವುಗಳನ್ನು ತೋರಿಸುವುದಿಲ್ಲ ಎಂದನು. ಯಾವುದೇ ವೈಚಾರಿಕ ಸ್ಪಷ್ಟತೆ ಇಲ್ಲದ ನರೇಂದ್ರನಾಥದತ್ತ ಮತ್ತು ಇತರ ಯುವ ಸಂನ್ಯಾಸಿಗಳು ಗುರುಗಳು ತೀರಿಕೊಂಡ ನಂತರ ಬರಾನಗರ ಮಠದಲ್ಲಿ ರಾಮಕೃಷ್ಣರ ಚಿತ್ರಪಠದ ಎದುರು ಯಂತ್ರದ ಚಿತ್ರ ಬರೆದು , ಹೋಮ ನಡೆಸಿ , ತಾಂತ್ರಿಕ ವಿಧಾನದಲ್ಲಿ ಪೂಜೆ ಮಾಡಿ , ಹೋತವನ್ನು ಬಲಿಕೊಟ್ಟಿದ್ದರು. (35) ಗುರುಗಳ ಮರಣದ ನಂತರ ಸಂನ್ಯಾಸಿಯಾಗಿ ಸಂಚಾರ ಮಾಡುವ ಬದಲು ಅವರ ಹೆಸರಿನಲ್ಲಿ ಒಂದು ಮಠ ಕಟ್ಟುವ ಯೋಜನೆ ನರೇಂದ್ರನಾಥ ದತ್ತನ ಮನಸ್ಸಿನಲ್ಲಿಯೇ ಸಿದ್ಧಗೊಂಡಿದ್ದಿತು.
ರಾಮಕೃಷ್ಣರ ಅಧ್ಯಾತ್ಮಿಕ ಉತ್ತರಾಧಿಕಾರಿಯಾಗುವವರು ಅವರಂತೆಯೇ ಭಾವ-ಮಹಾಭಾವ-ಸಮಾಧಿಗಳನ್ನು ಆಗಾಗ್ಗೆ ಪಡೆಯುತ್ತಿರಬೇಕು , ಅವರಂತೆಯೇ ಹುಚ್ಚು ಹುಡುಗನಂತೆ ಬಟ್ಟೆ ಬಿಚ್ಚಿ ಬಯಲಿನಲ್ಲಿ ಬತ್ತಲಾಗಿ ಕುಣಿಯಬೇಕು , ಹೆಣ್ಣನ್ನು ‘ಅಮ್ಮಾ’ ಎನ್ನುತ್ತಲೇ ಅಧ್ಯಾತ್ಮಿಕ ಸಮರ್ಥನೆಯಲ್ಲಿ ತಿರಸ್ಕರಿಸಬೇಕು, ಬೇಕಾದಾಗ ತಾಯಿ ಕಾಳಿಯೊಂದಿಗೆ ಮಾತನಾಡಬೇಕು, ಭಾವಾವಿಷ್ಟನಾಗಬೇಕು, ಹೆಜ್ಜೆ ಹೆಜ್ಜೆಗೂ ಸಮಾಧಿ ಸ್ಥಿತಿ ತಲುಪುತ್ತಿರಬೇಕು ಎಂದು ರಾಮಕೃಷ್ಣರ ಭಕ್ತರು ಬಯಸುತ್ತಾರೆ, ಆದು ತನಗೆ ಸಾದ್ಯವಿಲ್ಲ ಎಂದು ಇಂಗ್ಲಿಷ್ ಶಿಕ್ಷಣ ಪಡೆದಿದ್ದ ನರೇಂದ್ರನಾಥ ದತ್ತನಿಗೆ ಚೆನ್ನಾಗಿ ಗೊತ್ತಿದ್ದಿತು. ಆದ್ದರಿಂದ ರಾಮಕೃಷ್ಣರಂತೆ ವ್ಯಾಕುಲಗೊಂಡ ಉನ್ಮತ್ತ ಭಕ್ತನಾಗುವುದಕ್ಕಿಂತ ಶಾಸ್ತ್ರಪ್ರಮಾಣಗಳನ್ನು ಪಾಲಿಸುವ ಅದ್ವೈತ ವೇದಾಂತಿಯಾಗುವುದು ಸುಲಭವಾಗಿದ್ದಿತು. ಇದು ಹೆಣ್ಣು ವೇಷ ಹಾಕಿ ರಾಧೆಯಂತೆ ವೈಯ್ಯಾರ ಮಾಡುತ್ತಿದ್ದ , ಸನ್ನಿವೇಶಗಳಿಗೆ ಅನುಗುಣವಾಗಿ ತಾಂತ್ರಿಕ ಸಾಧಕನಂತೆ ಬದಲಾಗುತ್ತಿದ್ದ ರಾಮಕೃಷ್ಣರನ್ನು ವೇದಾಂತದ ಅದ್ವೈತ ಸಿದ್ಧಾಂತ ಪ್ರತಿಪಾದಕರಂತೆ ಬಿಂಬಿಸುವಲ್ಲಿ ಕೊನೆಗೊಂಡಿತು.
೧೮೯೭ ರಲ್ಲಿ ಆಲ್ಮೋರಾದಲ್ಲಿ ಭೇಟಿಯಾಗಿದ್ದ ಅಶ್ವಿನಿಕುಮಾರದತ್ತರಿಗೆ ಖ್ಯಾತಿಯ ತುತ್ತ ತುದಿಯಲ್ಲಿದ್ದ ಸ್ವಾಮಿ ವಿವೇಕಾನಂದರು ‘ ನೀನು ರಾಧಾ-ಕೃಷ್ಣರ ಹಾಡುಗಳನ್ನು ಎಲ್ಲೇ ಕೇಳಲಿ , ಅವರನ್ನು ಎಡ,ಬಲದಲ್ಲಿ ಜಡಿ. ಇಡೀ ದೇಶ ಅತ್ತು ಹಾಳಾಗುತ್ತಿದ್ದೆ ! ಸ್ವಂತ ನಿಯಂತ್ರಣವಿಲ್ಲದ ಜನ ಅಂತಹ ಹಾಡುಗಳಲ್ಲಿ ತನ್ಮಯರಾಗುತ್ತಾರೆ’ ಎಂದು ಕರೆಕೊಟ್ಟಿದ್ದರು. ಕ್ರೈಸ್ತ ಮಿಷನರಿಗಳನ್ನು ಎದುರಿಸಲು ಧರ್ಮವೊಂದೇ ಸಾಲದು , ಅದಕ್ಕೆ ಬೇರೆಯದೇ ಆದ –ಸಾಮಾಜಿಕ- ಆಯಾಮ ಬೇಕೆಂದು ಮನದಟ್ಟಾಗಿದ್ದಿತು. ಧರ್ಮವನ್ನು ಮಾನವ ಸೇವೆಯೊಂದಿಗೆ ಬೆಸೆಯದಿದ್ದರೆ ಉಳಿಗಾಲವಿಲ್ಲವೆಂದು ಸ್ಪಷ್ಟವಾಗಿದ್ದಿತು. ಇದಕ್ಕೆ ಭಾವುಕನಾಗಿ ಹುಚ್ಚನಂತೆ ಮೇಲಿಂದ ಮೇಲೆ ಸಮಾಧಿಗೆ ಹೋಗುತ್ತಿದ್ದ , ಪ್ರತಿಯೊಂದಕ್ಕೂ ತಾಯಿ ಕಾಳಿಯ ಅಭಿಪ್ರಾಯ ಕೇಳುತ್ತಿದ್ದ ದೈನಂದಿನ ಜನಸಾಮಾನ್ಯರ ಕಡು ಕಷ್ಟಗಳ ಬಗ್ಗೆ ಯಾವುದೇ ಅನುಕಂಪವಿಲ್ಲದ ರಾಮಕೃಷ್ಣರು ಬೇಡವಾಗಿ ಅವರ ಜಾಗದಲ್ಲಿ ಜನರ ಒಳಿತಿಗಾಗಿ ಕರಗುವ , ಮರುಗುವ , ಮುಂದಾಗುವ ರಾಮಕೃಷ್ಣ ಬೇಕಾಗಿದ್ದರು. ಅನ್ನಗತ ಪ್ರಾಣ ಪ್ರಧಾನವಾಗಿರುವ ಕಲಿಯುಗದಲ್ಲಿ ವೇದಾಂತ ಮತ ಸಲ್ಲದು. ಈಗೇನಿದ್ದರೂ ಭಗವತಿಯನ್ನು ತಾಯಿಯಂತೆ ಪೂಜಿಸುವ ಯುಗ ಎಂದು ಗುರುಗಳು ಈಶಾನಚಂದ್ರನಿಗೆ ಮಾಡಿದ್ದ ಉಪದೇಶ ಸ್ವಾಮಿಗಳಿಗೆ ಅಪ್ರಸ್ತುತವಾಗಿ ಕಂಡಿದ್ದಿತು. (36) ಸ್ವಾಮಿಗಳ ಬಯಕೆಗೆ ಭಕ್ತನಿಗಿಂತಲೂ ವೇದಾಂತಿ ರಾಮಕೃಷ್ಣ ಹೆಚ್ಚು ಸೂಕ್ತವಾಗಿದ್ದನು. ಇಂತಹ ರಾಮಕೃಷ್ಣನನ್ನು ಪ್ರತಿಪಾದಿಸುವುದನ್ನು ಇತರ ಗುರುಭಾಯಿಗಳು ಪ್ರಶ್ನಿಸಿದಾಗ ಸ್ವಾಮಿ ವಿವೇಕಾನಂದರು ಭಾವ ಸಮಾಧಿಗೆ ಹೋಗಿದ್ದರು. (37)
ಸ್ವಾಮಿಗಳು ತಾವು ಕಲ್ಪಿಸಿಕೊಂಡಿದ್ದ ಸಮಾಜ ಸೇವೆಯ ಮಾದರಿಗೆ ಧರ್ಮವನ್ನು ತಳಹದಿಯಾಗಿರಿಸಿಕೊಂಡಿದ್ದರು. ಅವರ ಕಲ್ಪನೆಯ ಧರ್ಮ ರಾಮಕೃಷ್ಣರು ಪ್ರತಿಪಾದಿಸಿದ , ಮೈಮರೆತು ಹಾಡುವ , ಕುಣಿಯುವ , ಜಗತ್ತಿನ ಗೊಡವೆಯೇ ಬೇಡ ಎನ್ನುವ , ಕಾತರ, ಕಳವಳ ತುಂಬಿರುವ ವ್ಯಾಕುಲ ಆರ್ತ ಕರೆಯ ಧರ್ಮವಾಗಿರಲಿಲ್ಲ. ಅಂತಹ ಧರ್ಮ ಎಡ-ಬಲ ಹಣಿಸಿಕೊಳ್ಳಲು ಮಾತ್ರ ಯೋಗ್ಯವಾಗಿದ್ದಿತು. ಪಾಶ್ಚಾತ್ಯರು ಪ್ರಶ್ನಿಸದ , ವಿಶ್ವಾತ್ಮಕವೆನ್ನುವ ಧರ್ಮ ಸ್ವಾಮಿಗಳಿಗೆ ಬೇಕಾಗಿದ್ದಿತು. ಅದನ್ನು ಅವರು ವೇದಾಂತದಲ್ಲಿ ಕಂಡರು. ಅಂತಹ ಎಲ್ಲವನ್ನೂ ಒಳಗೊಳ್ಳುವ ವೇದಾಂತವನ್ನು ರಾಮಕೃಷ್ಣರು ಬೋಧಿಸಿದರು , ಅದರಂತೆ ಬಾಳಿದರು ಎನ್ನುವುದನ್ನು ಸ್ಥಾಪಿಸಬೇಕಿದ್ದಿತು. ಗೃಹಸ್ಥ ಭಕ್ತರು ಗುರುಗಳ ಜೀವನ ಚರಿತ್ರೆಯಲ್ಲಿ ಚಿತ್ರಿಸಿದ್ದ ರಾಮಕೃಷ್ಣ ರಾಧಾ-ಕೃಷ್ಣ ಭಕ್ತಿಯಲ್ಲಿ ಮೈಮರೆಯುವ , ಹಾದಿ ಬೀದಿಯಲ್ಲಿ ಮೈಮರೆತು ಕುಣಿಯುವ, ತಾಯಿ ಕಾಳಿಯ ಆದೇಶಗಳಿಗೆ ಕಾಯುವ , ಆಧುನಿಕ ಮನಸ್ಸಿಗೆ ಅಸಹ್ಯಕರವೆನಿಸುವ ಎಡಗೈ ತಾಂತ್ರಿಕ ಸಾಧನೆ ಮಾಡುವ ಹುಂಬ ಭಕ್ತನಾಗಿದ್ದು ಸ್ವಾಮಿಗಳು ಬಯಸಿದಂತೆ ಇರಲಿಲ್ಲ. ಬೃಂದಾವನದ ಗೋಪಿಯರಂತೆ ಮಧುರ ಭಾವದ ಸಾಧನೆ ನಮಗೆ ಬೇಕಿಲ್ಲ ; ಜೀವನ ಸಂಗ್ರಾಮದಲ್ಲಿ ಹೋರಾಡಬಲ್ಲ ವೀರ ಸ್ವಭಾವದ ಮನುಷ್ಯ ನಮಗೀಗ ಬೇಕಾಗಿದೆ. ಜೀವನವನ್ನು ನಂದನವನದಂತೆ ನೋಡುವ ಪ್ರೇಮಿಯಲ್ಲ. (38) ಈ ಘೋಷಣೆಯೊಂದಿಗೆ ವೇದಾಂತಿ ರಾಮಕೃಷ್ಣರನ್ನು ತಮಗೆ ಬೇಕಾದಂತೆ ಸ್ವಾಮಿಗಳು ಕೆತ್ತತೊಡಗಿದರು.
ರಾಮಕೃಷ್ಣರು ಬದುಕಿದ್ದಾಗ ಸ್ವಾಮಿಗಳು ಎಂತಹ ಧರ್ಮವನ್ನು ಬಯಸಿದ್ದರು ಎನ್ನುವುದು ಸ್ಪಷ್ಟವಾಗುವುದಿಲ್ಲವಾದರೂ , ಅವರ ಸಾವಿನ ನಂತರ ಪರಿವ್ರಾಜಕರಾಗಿದ್ದಾಗ ಬರೆದ ಪತ್ರಗಳಲ್ಲಿ ಅವರಿಗೆ ಸಮಾಜ ಸೇವೆಯ ಕಳಕಳಿ ಇರುವುದು ಕಾಣುವುದಿಲ್ಲ. ವಿಶ್ವ ಸಂಸತ್ತಿನಲ್ಲಿ ಭಾಗವಹಿಸಿದ ನಂತರ ಯಾವುದೇ ಬಗೆಯ ಟೀಕೆಗಳಿಗೆ ಒಳಗಾಗದ , ಜಗತ್ತಿನಲ್ಲಿ ಎಲ್ಲ ಕಡೆ ಚಲಾವಣೆಯಾಗಬಲ್ಲ ಒಂದು ಧರ್ಮ ಹೊಳೆದಿದ್ದಿತು. ಅಂತಹ ಧರ್ಮ ಎಲ್ಲರಿಗೂ ಒಪ್ಪಿಗೆಯಾಗುವಂತಿರಬೇಕು , ತತ್ತ್ವಶಾಸ್ತ್ರೀಯವಾಗಿರಬೇಕು , ಅಷ್ಟೇ ಭಾವುಕ , ಅನುಭಾವಿಕ ಹಾಗೂ ಕ್ರಿಯಾಶೀಲ ಅಂಶಗಳನ್ನು ಒಳಗೊಂಡಿರಬೇಕು , ಸುಲಭವಾಗಿ ಟೀಕೆಗೆ ದಕ್ಕದಂತಿರಬೇಕು ಎನ್ನುವುದು ಸ್ಪಷ್ಟವಾಗಿದ್ದಿತು. ಗುರು ರಾಮಕೃಷ್ಣರು ಕೆಲವೊಮ್ಮೆ ಹೇಳುತ್ತಿದ್ದ ‘ಯಥಾ ಮತ , ತಥಾ ಪಥ’ ಎನ್ನುವ ಮಾತು ನೆನಪಿನಲ್ಲಿದ್ದಿತು. ಇದನ್ನು ಬಳಸಿಕೊಂಡು ‘ಸತ್ಯವನ್ನು ನೂರು ವಿಧದಲ್ಲಿ ಹೇಳಬಹುದು ಎನ್ನುವುದನ್ನು ನಾವು ಮನಗಾಣಬೇಕು. ಇವು ತಾವು ತಲುಪುವ ಗುರಿಯವರೆಗೆ ಸತ್ಯವಾಗಿರುತ್ತವೆ’ ಎಂದರು. ಇದರಿಂದಲೇ ಹಿಂದೂ ಧರ್ಮ ಇತರ ಧರ್ಮಗಳಿಗಿಂತ ಶ್ರೇಷ್ಟ ಎಂದು ಘೋಷಿಸಿದರು. ಹೀಗೆಂದ ಮಾತ್ರಕ್ಕೆ ಧರ್ಮ ಜನಪರ ಆಗದೆಂದು ಹೊಳೆದಾಗ ‘ ಬಡವನ ಹಸಿವನ್ನು ನೀಗದ , ವಿಧವೆಯ ಕಣ್ಣಿರನ್ನು ಒರೆಸದ ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ ‘ ಎಂದು ಘೋಷಿಸಿದರು. ಇದಕ್ಕಾಗಿ ತನ್ನ ಕಾಲಕ್ಕೆ ತಕ್ಕಂತೆ ವೇದಾಂತವನ್ನು ತಿರುಚಿ ಗತಿಶೀಲ ಧರ್ಮ , ಒಗ್ಗೂಡಿದ ಭಾರತ’ ಎಂದರು.
ಮುಂದುವರೆದ ಅಮೆರಿಕ ಮತ್ತು ಯುರೋಪಿನ ದೇಶಗಳನ್ನು ಸುತ್ತಿಬಂದಿದ್ದ ಸ್ವಾಮಿಗಳನ್ನು ಭಾರತದ ದಾರಿದ್ರ್ಯ ಮತ್ತು ಜನರ ಅಜ್ಞಾನಗಳು ಕುಟುಕಿ ಅಣಕಿಸುತ್ತಿದ್ದವು. ಇದಕ್ಕೆ ಪರಿಹಾರವಾಗಿ ಜನ ಕಾಳಜಿ ಹೊಂದಿದ , ಸಾಮಾಜಿಕ ಸೇವೆಯನ್ನು ಹಾಸುಹೊಕ್ಕಾಗಿರುವ ವೇದಾಂತವನ್ನು ಅವಲಂಬಿಸಿರುವ ತಮ್ಮದೇ ಆದ ಧರ್ಮವನ್ನು ಕಲ್ಪಿಸಿಕೊಂಡರು. ಇದು ಅವರ ಗುರು ರಾಮಕೃಷ್ಣರು ಅನುಸರಿಸಿದ , ಬಾಳಿದ , ಬೋಧಿಸಿದ ಧರ್ಮವಾಗಿರಲಿಲ್ಲ. ಸೈದ್ಧಾಂತಿಕವಾಗಿ ವೇದಾಂತ ಸ್ವಾಮಿಗಳಿಗೆ ಬೇಕಾಗಿದ್ದಿತೇ ಹೊರತು , ಅದರ ಆಚರಣೆಗಳಲ್ಲ. ಸಾಂಪ್ರದಾಯಿಕ ವೇದಾಂತ ವೈರಾಗ್ಯ ಹೊಂದಿ , ಜನ ಜಂಗುಳಿಯಿಂದ ದೂರವಿದ್ದು , ಅದರ ಬಗ್ಗೆ ಚಿಂತಿಸದೆ ಆತ್ಮಸಾಕ್ಷಾತ್ಕಾರಕ್ಕಾಗಿ ವೈಯಕ್ತಿಕ ಸಾಧನೆ ಮಾಡಬೇಕೆನ್ನುತ್ತದೆ. ವಿರಕ್ತ ಜೀವನವನ್ನು ಹೇರುತ್ತದೆ. ಇವು ಸ್ವಾಮಿಗಳಿಗೆ ಬೇಕಿರಲಿಲ್ಲ. ಜೀವನದುದ್ದಕೂ ಸಂನ್ಯಾಸಿಯಾಗಿದ್ದರೂ ವಿರಕ್ತ ಪರಂಪರೆಯಲ್ಲಿ ನನಗೆ ನಂಬಿಕೆಯಿಲ್ಲ ಎಂದಿದ್ದರು. ಇನ್ನೊಮ್ಮೆ ತಾಪಸಿಕ ಜೀವನ ಪೈಶಾಚಿಕ ‘ ಎಂದಿದ್ದರು. ಮತ್ತೊಮ್ಮೆ ಪ್ರಾರ್ಥಿಸುವುದಕ್ಕಿಂತ ನಗುವುದು ಲೇಸು ಎಂದರೆ , ಮಗದೊಮ್ಮೆ ದನದ ಮಾಂಸ ತಿನ್ನುತ್ತಿದ್ದ ಬ್ರಾಹ್ಮಣರಿದ್ದ ವೈದಿಕ ಸಮಾಜವನ್ನು ಹೊಗಳಿ , ಗಟ್ಟಿ ಮಾಂಸಖಂಡಗಳಿಂದ ಗೀತೆ ಚೆನ್ನಾಗಿ ಅರ್ಥವಾಗುತ್ತದೆ ಎಂದು ಕರೆಕೊಟ್ಟಿದ್ದರು. ಇಂತಹ ಹೇಳಿಕೆಗಳಿಂದ ಸ್ವಾಮಿಗಳು ವೇದಾಂತವನ್ನು ಮೆಚ್ಚುವ ಅದೇ ವೇಳೆಗೆ ಕ್ರಿಯಾಶೀಲತೆಯನ್ನು ಎತ್ತಿ ಹಿಡಿಯುವ ಆಧುನಿಕ ಸಂನ್ಯಾಸಿ ಎಂದು ಜನ ಭಾವಿಸುವಂತಾಯಿತು.
ಸ್ವಾಮಿಗಳ ಈ ಎಲ್ಲ ಆಧುನಿಕ ಚಿಂತನೆಗಳು ಅವರ ಗುರುಗಳ ಮಧ್ಯಕಾಲೀನ ಚಿಂತನೆಗಳ ಮುಂದೆ ತೀರಾ ಭಿನ್ನವಾಗಿದ್ದವು. ರಾಮಕೃಷ್ಣರು ಮನುಷ್ಯನ ಎಲ್ಲ ತೊಂದರೆಗಳಿಗೆ ಹೆಣ್ಣು-ಹೊನ್ನು ಕಾರಣ , ಅವುಗಳನ್ನು ದಾಟಿ ಭಗವಂತನೆಡೆಗೆ ಹೋಗುವುದೇ ಮಾನವ ಜೀವನದ ಗುರಿ ಎಂದು ಪ್ರತಿಮಾತಿನಲ್ಲಿಯೂ ಎಚ್ಚರಿಸುತ್ತಿದ್ದರು. ಆದರೆ ತಾವು ಮಾತ್ರ ಶಾರದಾಮಣಿ ಸೇರಿದಂತೆ ಹಲವು ಹೆಂಗಸರಿಂದ ಸೇವೆ ಮಾಡಿಸಿಕೊಳ್ಳುತ್ತ , ಶ್ರೀಮಂತ ರಸದ್ದಾರರಿಂದ ಎಲ್ಲ ಸೌಕರ್ಯಗಳನ್ನು ಪಡೆದು ಸುಖವಾಗಿದ್ದರು. ರಾಮಕೃಷ್ಣರು ಪಾಂಡಿತ್ಯ ಮತ್ತು ಸಮಾಜ ಸೇವೆಯ ವಿರುದ್ಧವಾಗಿದ್ದರು. ಈಶ್ವರಚಂದ್ರ ವಿದ್ಯಾಸಾಗರ ಭಗವಂತನ ಚಿಂತನೆ ಮಾಡದೆ ಸಮಾಜ ಸೇವೆ ಮತ್ತು ಸುಧಾರಣೆಯ ಹಿಂದೆ ಬಿದ್ದು ತನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾನೆಂದು ಬಲವಾಗಿ ಹಲವು ಸಲ ಪ್ರತಿಪಾದಿಸಿದ್ದರು. ಶಂಭುಚರಣಮಲ್ಲಿಕ ಕೆರೆ , ಆಸ್ಪತ್ರೆ ಮುಂತಾದ ಜನೋಪಯೋಗಿ ಕೆಲಸಗಳನ್ನು ಮಾಡುವುದನ್ನು ವಿರೋಧಿಸಿ ಜಗತ್ತಿಗೆ ನೆರವಾಗಲು ಅದೇನು ನೀನು ಭಾವಿಸಿದಷ್ಟು ಸಣ್ಣದೇ ಎಂದು ಅಣಕಿಸಿದ್ದರು. ಹಾಗಾಗಿ ರಾಮಕೃಷ್ಣ ಮತ್ತು ಅವರ ಸಂನ್ಯಾಸಿ ಶಿಷ್ಯ ವೀರ ವೇದಾಂತಿ ಸ್ವಾಮಿ ವಿವೇಕಾನಂದರ ದೃಷ್ಟಿಕೋನಗಳಲ್ಲಿ ತಾಳಮೇಳಗಳಿರದೆ ಪರಸ್ಪರ ವಿರುದ್ಧವಾಗಿದ್ದವು. ರಾಮಕೃಷ್ಣರನ್ನು ಜನ ‘ಹುಚ್ಚ ಠಾಕೂರ, ಮಗುವಿನಂತೆ ಮುಗ್ದ , ಅಕೃತಿಮ ಎಂದು ಗುರುತಿಸಿದ್ದರು. ಇದಕ್ಕೆ ವೈದೃಶ್ಯವೆಂಬಂತೆ ಸ್ವಾಮಿಗಳು ಅವರ ಅಭಿಮಾನಿಗಳಿಗೆ ಅನಭಿಷಿಕ್ತ ರಾಜ , ಮಹಾವೀರ , ಚಿಂತಕ , ಶಾಸ್ತ್ರಪಂಡಿತ ಅಷ್ಟೇ ಅಲ್ಲ ಪರಮ ಯೋಗಿಯಾಗಿ ಕಾಣಿಸುತ್ತಿದ್ದರು. ಆದರೆ ಗುರು ರಾಮಕೃಷ್ಣ ಮತ್ತು ಶಿಷ್ಯ ಸ್ವಾಮಿ ವಿವೇಕಾನಂದರಲ್ಲಿ ಕೆಲವು ಸಮಾನ ಅಂಶಗಳಿದ್ದವು. ಇಬ್ಬರಲ್ಲಿಯೂ ,ಮೋಡಿಗಾರಿಕೆ , ಅಧಿಕಾರವಾಣಿ ಮತ್ತು ಜನರನ್ನು ಸೆಳೆಯುವ ವರ್ಚಸ್ಸು ಇದ್ದವು. ಇದಕ್ಕಿಂತ ಮಿಗಿಲಾಗಿ ಈ ಇಬ್ಬರೂ ತೀವ್ರ ಆವೇಶಕ್ಕೆ ಒಳಗಾದಾಗ ಭಾವನೆಗಳ ವಿರುದ್ಧ ಧೃವಗಳ ನಡುವೆ ತೂಗುಯ್ಯಾಲೆಯಾಡುತ್ತಿದ್ದರು. ಇವು ಭಕ್ತ , ಶಿಷ್ಯರಲ್ಲಿ ಬೆರಗು , ಗೌರವ ಮತ್ತು ಶರಣಾಗತಿಯನ್ನು ಪ್ರೇರೇಪಿಸುತ್ತಿದ್ದವು. ತನ್ನ ಗುರು ರಾಮಕೃಷ್ಣರ ಭಾವಾವೇಶ , ಉದ್ವೇಗಗಳ ಹಾದಿಯಲ್ಲಿಯೇ ಸಾಗಿದ ಸ್ವಾಮಿಗಳು ತಮ್ಮ ಪಡಿಚ್ಚಿನಲ್ಲಿ ತಮ್ಮ ಗುರುಗಳನ್ನು ಎರಕ ಹೊಯ್ಯಲು ಮುಂದಾದರು.
ಸಮಾಜದ ಬಗೆ ಸ್ವಲ್ಪವೂ ಕಾಳಜಿ ಇರದ ರಾಮಕೃಷ್ಣರ ಭಕ್ತಿಯನ್ನು ಸ್ವಾಮಿಗಳು ಕಲ್ಪಿಸಿಕೊಂಡಿದ್ದ ಸಮಾಜ ಸೇವೆಯೊಂದಿಗೆ ಬೆಸೆದು ಸಮಗ್ರಗೊಳಿಸಬೇಕಾಗಿದ್ದಿತು. ಇದಕ್ಕಾಗಿ ಸ್ವಾಮಿ ವಿವೇಕಾನಂದರ ರಾಮಕೃಷ್ಣ ಪರಮಹಂಸ ಪಾರಂಪರಿಕ ಸಾಧು, ಸಂತರಿಗಿಂತ ಬೇರೆಯದೇ ಆದ ಆಧುನಿಕ ಭಾರತದ ಅವತಾರ ಪುರುಷ ಆಗಬೇಕಿದ್ದಿತು. ಇದಕ್ಕಾಗಿ ಹಲವು ಬದಲಾವಣೆಗಳು ಬೇಕಿದ್ದವು. ಆ ಕಾಲದ ಬ್ರಾಹ್ಮಣರಂತೆ ಜಾತಿ ಭೇದ ತುಂಬಿ ತುಳುಕುವ , ಸ್ವಭಾವದಲ್ಲಿ ಹೆಣ್ಣಿಗನಾಗಿದ್ದರೂ , ಆಚರಣೆಯಲ್ಲಿ ಹೆಣ್ಣು ವಿರೋಧಿಯಾದ , ಗಳಿಗೆಗೊಮ್ಮೆ ಎಚ್ಚರದಪ್ಪುವ ರಾಮಕೃಷ್ಣರನ್ನು ಹೆಂಗಸರ ಏಳ್ಗೆಯ ಆಶಾಕಿರಣ , ದಲಿತರು ಸೇರಿದಂತೆ ಎಲ್ಲ ಶೋಷಿತ ವರ್ಗಗಳ ಉದ್ಧಾರಕ ಮತ್ತು ಅದಕ್ಕಿಂತ ಮಿಗಿಲಾಗಿ ವೇದಾಂತ ಬೋಧಿಸುವ ಶುದ್ಧ ಅಧ್ಯಾತ್ಮಿಕ ಚೇತನವಾಗಿಸುವ ಒತ್ತಡವಿದ್ದಿತು. ಇದಕ್ಕಾಗಿ ರಾಮಕೃಷ್ಣರು ತನ್ನನ್ನು ಮುಟ್ಟಿದಾಕ್ಷಣ ತನಗೆ ನಿರ್ವಿಕಲ್ಪ ಸಮಾಧಿಯ ಅನುಭವವಾಯಿತು , ಕೊನೆಯ ದಿನಗಳಲ್ಲಿ ಅವರಿಂದ ಅಧ್ಯಾತ್ಮಿಕ ಶಕ್ತಿ ತನಗೆ ವರ್ಗಾಂತರವಾಯಿತು ಎನ್ನತೊಡಗಿದರು. ಇದರಿಂದ ಕಾಳಿಯನ್ನು ಜೀವಂತ ಕಾಣುತ್ತಿದ್ದ ಐಲು ರಾಮಕೃಷ್ಣರ ಬದಲು ಯೋಗಾಚಾರ್ಯ , ಅದ್ವೈತ ವೇದಾಂತಿ ರಾಮಕೃಷ್ಣರು ಚಿಗುರೊಡೆಯತೊಡಗಿದರು. ಇದರ ಪರಿಣಾಮವಾಗಿ ಸ್ವಾಮಿಗಳು ‘ಭಾರತ ರಾಮಕೃಷ್ಣ ಪರಮಹಂಸರ ಪದದಡಿಯಲ್ಲಿ ಕುಳಿತಾಗಲೇ ಉದ್ಧಾರವಾಗಬಲ್ಲದು. ಅದಕ್ಕಾಗಿ ಅವರ ಬೋಧನೆಗಳನ್ನು ದೇಶದ ಉದ್ದಗಲಕ್ಕೆ ಹರಡಬೇಕು. ಹಿಂದೂ ಸಮಾಜದ ಸಂದಿ ಗೊಂದಿಗಳನ್ನು ಅವು ತೂರಬೇಕು ‘ ಎಂದು ಕರೆಕೊಟ್ಟರು. ಇಲ್ಲಿಂದಲೇ ರಾಮಕೃಷ್ಣ ಎನ್ನುವ ಕಲ್ಕತ್ತದ ಮೂಲೆಯ ಹುಚ್ಚು ಭಕ್ತ ಭಾರತದ ಭಾಗ್ಯ ವಿಧಾತನಾಗುವ ಕ್ರಿಯೆ ಪ್ರಾರಂಭವಾಯಿತು.
ರಾಮಕೃಷ್ಣರನ್ನು ಕುರಿತಾಗಿ ಬರೆಯಲು ಮ್ಯಾಕ್ಸ್ ಮುಲ್ಲರ್’ಗೆ ಮಾಹಿತಿ ಒದಗಿಸುವಂತೆ ತಿಳಿಸುತ್ತ ‘ ಗುರುಗಳ ಬೋಧನೆಗಳಲ್ಲಿ ವಿಶ್ವಮಾನ್ಯ ಅಂಶಗಳನ್ನು ಹೊಂದಿರುವವನ್ನು ಮಾತ್ರ ಒದಗಿಸಬೇಕೆಂದು ರಾಮಕೃಷ್ಣಾನಂದರಿಗೆ ತಾಕೀತು ಮಾಡಿದ್ದರು. ನಿವೇದಿತಾಳಿಗೆ ‘ ರಾಮಕೃಷ್ಣರದು ಮಹಾ ಬಾಳುವೆ’ ಎಂದು ತಿಳಿಸಿದರಲ್ಲದೆ , ಅವರು ‘ ವೇದಾಂತ ಎಲ್ಲವನ್ನೂ ಒಳಗೊಂಡಿರುವ ಸಂಪೂರ್ಣ ಧರ್ಮ ‘ ಎಂದು ಸಾರಿ ತಮಗೆ ಬೇಕಾದ ಸಂಶೋಧನೆಯನ್ನು ಮಾಡಿದರು. ಇಷ್ಟೇ ಅಲ್ಲ ಇನ್ನೂ ಮುಂದುವರೆದು ‘ಬುದ್ಧ , ಚೈತನ್ಯ ಮುಂತಾದ ಅವತಾರಗಳಲ್ಲಿ ಏಕತಾನವಾಗಿದ್ದವು ; ರಾಮಕೃಷ್ಣ ಪರಮಹಂಸರು ಇತ್ತೀಚಿನವರು ಮಾತ್ರವಲ್ಲ ಪರಿಪೂರ್ಣರು- ಜ್ಞಾನ , ಪ್ರೀತಿ ,ತ್ಯಾಗ , ವಿಶಾಲ ಮನೋಭಾವ ಮತ್ತು ಮನುಕುಲದ ರಕ್ಷಣೆಯ ಸಾಕಾರ ರೂಪ ‘ ಎಂದು ಘೋಷಿಸಿದರು.
ಅಮೆರಿಕದಿಂದ ಮರಳಿದ ನಂತರ ೨೮/೨/೧೮೯೭ ರಂದು ಕಲ್ಕತ್ತದಲ್ಲಿ ನೆರೆದಿದ್ದ ಸಭೆಯನ್ನು ಉದ್ಡೇಶಿಸುತ್ತ ‘ಸಾವಿರಾರು ವರ್ಷಗಳ ಕೆತ್ತನೆ ಮತ್ತು ಮೂರ್ತಿಕರಣದಿಂದ ಪ್ರಾಚೀನ ಕಾಲದ ಮಹಾತ್ಮರು ನಮ್ಮಲ್ಲಿಗೆ ಬರುತ್ತಾರೆ.; ಆದರೆ ನನ್ನ ಅಭಿಪ್ರಾಯದಲ್ಲಿ ನಾನು ಕಣ್ಣಾರೆ ಕಂಡಿರುವ , ಯಾರ ನೆರಳಿನಲ್ಲಿ ಬದುಕಿದೆನೋ , ಯಾರ ಪದತಲದಲ್ಲಿ ಎಲ್ಲವನ್ನೂ ಕಲಿತೆನೋ ಅಂತಹ ರಾಮಕೃಷ್ಣ ಪರಮಹಂಸರಷ್ಟು ಉನ್ನತ , ಉಜ್ವಲ ಜೀವನ ಮತ್ತೊಬ್ಬರದಿಲ್ಲ’ ಎಂದು ಭಾಷಣ ಮಾಡಿದರು. (39) ಈ ಹೊಸ ರಾಮಕೃಷ್ಣ ಒಂದು ದಶಕದ ಹಿಂದೆ ಸ್ವಾಮಿಗಳು ಭಾವಿಸಿದಂತಹ ಪಾರಂಪರಿಕ ಹಿಂದೂ ಧರ್ಮದ ದೇವಮಾನವನಲ್ಲ ಅಥವಾ ದೇವರಂತಹ ಮಾನವನೂ ಅಲ್ಲ . ಆತ ಅದನ್ನು ದಾಟಿದ , ದೇವರನ್ನು ಮೀರುವ ದೇವರು , ಮಹಾಸಂತ-ಅವತಾರಗಳ ಅವತಾರ. ಪಾರಂಪರಿಕವಾದ ಅವತಾರದ ಕಲ್ಪನೆಯನ್ನು ಆಧುನೀಕರಣಗೊಳಿಸಲು ಬೇಕಾದ ಪ್ರಚಾರ , ಆವೇಶದ ತಂತ್ರಗಳು ಸ್ವಾಮಿಗಳಲ್ಲಿದ್ದವು. ಒಂದು ಧಾರ್ಮಿಕ ಪಂಥ ಬೆಳೆಯಲು ಅವತಾರದ ಕಲ್ಪನೆ ಬಹಳ ನೆರವಾಗುವುದೆಂದು ಗೊತ್ತಿದ್ದಿತು, ಸಾರ್ವಜನಿಕವಾಗಿ ಅಂತಹ ಅವತಾರಗಳ ಆವಶ್ಯಕತೆಯನ್ನು ಪ್ರಶ್ನಿಸಿ , ಹೊಸ ಬಗೆಯ ಅವತಾರವನ್ನು ಮುಂದಿರಿಸಲು ಸ್ವಾಮಿಗಳು ಸಿದ್ಧರಾಗಿದ್ದರು. ಆದರೆ ಇದೇ ಸ್ವಾಮಿಗಳು ೧೮೯೯ ರಲ್ಲಿ ಪ್ರಸನ್ನಕುಮಾರ ಶಾಸ್ತ್ರಿಯೊಂದಿಗೆ ನಡೆಸಿದ ಮಾತುಕತೆಯಲ್ಲಿ ನಾನು ರಾಮಕೃಷ್ಣರನ್ನು ಅವತಾರ ಎಂದು ಪರಿಗಣಿಸುವುದಿಲ್ಲ ಎಂದಿದ್ದರು.
ತಮಗೆ ಬೇಕಾಂದತೆ ರಾಮಕೃಷ್ಣರನ್ನು ಪ್ರಸ್ತುತಪಡಿಸಬೇಕೆಂದಿದ್ದ ಸ್ವಾಮಿಗಳಿಗೆ ಅವರ ಬಗ್ಗೆ ಬಂದಿದ್ದ ಲೇಖನ, ಜೀವನ ಚರಿತ್ರೆಗಳು ಸಮರ್ಪಕವಾಗಿಲ್ಲ ಎನಿಸಿದ್ದಿತು. ೧೮೯೦ ರಲ್ಲಿ ತನ್ನ ತಾಯಿಯ ಸೋದರ ಮಾವ ರಾಮಚಂದ್ರದತ್ತ ಪ್ರಕಟಿಸಿದ್ದ ‘ಶ್ರೀಶ್ರೀ ರಾಮಕೃಷ್ಣ ದೇವೇರ್ ಜೀವನ ವೃತ್ತಾಂತ’ ಪುಸ್ತಕದ ಬಗ್ಗೆ ಅವರಿಗೆ ಅಸಹನೆಯಿದ್ದಿತು. ೩೦/೧೧/೧೮೯೪ ರಲ್ಲಿ ಆಳ್’ಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ಇದನ್ನು ತೋಡಿಕೊಂಡಿದ್ದರು. ‘ರಾಮಕೃಷ್ಣರ ಪವಾಡಗಳು ಎಂತಹ ಅಸಂಬದ್ಧ. ಪವಾಡಗಳ ಬಗ್ಗೆ ನನಗೇನೂ ಗೊತ್ತಿಲ್ಲ . ನನಗೆ ಅರ್ಥವಾಗುವುದೂ ಇಲ್ಲ. ದ್ರಾಕ್ಷಾರಸವನ್ನು ಗುಪ್ತರ ಔಷಧಿಯಾಗಿ ಮಾರ್ಪಡಿಸುವ ಪವಾಡ ಮಾಡುವುದರ ಹೊರತು ರಾಮಕೃಷ್ಣರಿಗೆ ಬೇರೆ ಕೆಲಸವಿರಲಿಲ್ಲವೇ ? ( ಕಲ್ಕತ್ತದ ಡಿ.ಗುಪ್ತ ಅಂಡ್ ಕಂ. ಗಿಡ ಮೂಲಿಕೆಗಳ ಔಷಧಿಗಳ ಪೇಟೆಂಟ್ ಪಡೆದು ಖ್ಯಾತವಾಗಿದ್ದಿತು). ದೇವರೇ , ಅಂತಹ ಜನರಿಂದ ನನ್ನನ್ನು ಕಾಪಾಡು! ಕೆಲಸ ಆರಂಭಿಸಲು ಎಂತಹ ದಾಖಲೆಗಳು ! ರಾಮಕೃಷ್ಣರು ಏನನ್ನು ಮಾಡಲು , ಏನನ್ನು ಬೋಧಿಸಲು ಬಂದರು ಎಂದು ತಿಳಿಸುವ ಅವರ ನಿಜವಾದ ಜೀವನ ಚರಿತ್ರೆಯನ್ನು ಬರೆಯುವಂತಿದ್ದರೆ ಬರೆಯಲಿ. ಅದಲ್ಲದಿದ್ದರೆ ಅವರು ಅವರ ಜೀವನ ಮತ್ತು ಬೋಧನೆಗಳನ್ನು ತಿರುಚುವುದು ಬೇಡ……….ಪರಮಹಂಸರ ಪ್ರೇಮ , ಜ್ಞಾನ , ಉಪದೇಶ ಹೃದಯ ವೈಶಾಲ್ಯ ಇವಗಳನ್ನು ಅನುಷ್ಠಾನದಲ್ಲಿ ತೋರಿಸಲಿ. ಅವರ ಜೀವನ ಒಂದು ಪ್ರಕಾಶಮಾನವಾದ ದೀಪದಂತಿದೆ. ಇದರ ಬೆಳಕಿನಲ್ಲಿ ಹಿಂದೂ ಧರ್ಮದ ಉದ್ದೇಶವನ್ನು ತಿಳಿದುಕೊಳ್ಳಬಹುದು. ಶಾಸ್ತ್ರಗಳಲ್ಲಿ ಹೇಳಲಾಗಿರುವ ಸಕಲ ವಿದ್ಯೆಗೂ ಅವರು ಮೈವೆತ್ತ ನಿದರ್ಶನ. ನಮ್ಮ ಋಷಿಗಳು , ಅವತಾರ ಪುರುಷರು ಯಾವುದನ್ನು ಜಗತ್ತಿಗೆ ಬೋಧಿಸಬೇಕೆಂದಿದ್ದರೋ ಅದನ್ನು ಇವರು ತಮ್ಮ ಜೀವನದಲ್ಲಿ ತೋರಿಸಿರುವರು….. ಹೀಗೆ ಚಿತ್ತಾಕರ್ಷಕವಾಗಿ ಅವರ ಜೀವನ ಚರಿತ್ರೆ ಬರೆಯಬಹುದು. ಎಲ್ಲಕ್ಕೂ ಕಾಲ ಬೇಕು. ಎಲ್ಲ ಅಸಭ್ಯ ವಿಷಯಗಳನ್ನು ಕಿತ್ತು ಹಾಕಿ. ಏಕೆಂದರೆ ಹೊರದೇಶದವರು ಅಂತಹ ವಿಷಯಗಳಿಗೆ ಅಸಹ್ಯ ಪಡುತ್ತಾರೆ. ಇಂಗ್ಲಿಷ್’ನಲ್ಲಿ ಬರೆದ ರಾಮಕೃಷ್ಣರ ಜೀವನ ಚರಿತ್ರೆಯನ್ನು ಇಡೀ ಜಗತ್ತೇ ಓದುತ್ತದೆ, ನನಗೆ ಕಳಿಸಿದ ಬಂಗಾಳಿ ಪುಸ್ತಕ ಓದಿದೆ…ಅದು ಎಂತಹ ಅಸಹ್ಯ ಶಬ್ದಗಳಿಂದ ತುಂಬಿ ಹೋಗಿದೆ. ಆದ್ದರಿಂದ ಎಚ್ಚರದಿಂದಿರಿ…..ಈ ಮನುಷ್ಯ ಗಂಡಸರಂತೆ ಹೆಂಗಸರೂ ಈ ಪುಸ್ತಕವನ್ನು ಓದಬೇಕೆಂದು ನಿರೀಕ್ಷಿಸುತ್ತಾನೆ ! ದೇವರೇ ಈ ಮೂರ್ಖರಿಂದ ನನ್ನನ್ನು ರಕ್ಷಿಸು……ಕಲ್ಕತ್ತೆಯ ಗೆಳೆಯರಿಗೆ ಏನೂ ಸಾಮರ್ಥ್ಯವಿಲ್ಲ. ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಮುಂದು ಮಾಡುತ್ತಾರೆ. …ನಾನು ಮದ್ರಾಸಿಗಳ ಮೇಲೆ ಎಲ್ಲ ಭರವಸೆ ಇಟ್ಟುಕೊಂಡಿದ್ದೇನೆ… .ಬಂಗಾಳಿ ಪುಸ್ತಕ ನೋಡಿ ನನಗೆ ನಾಚಿಕೆಯಾಯಿಇಶ್ಯತು.….ಅದು ರದ್ದಿ, ಲದ್ಧಿ (rot & prot) ‘ (40) ಇದೇ ಸಮಯದಲ್ಲಿ ಶಿವಾನಂದರಿಗೆ ಬರೆದ ಇಂತಹುದೇ ಇನ್ನೊಂದು ಪತ್ರದಲ್ಲಿ ರಾಮಕೃಷ್ಣರದು ಬುದ್ಧ , ಶ್ರೀಚೈತನ್ಯರಿಗಿಂತ ಮಿಗಿಲಾದ ವ್ಯಕ್ತಿತ್ವ , ಅದು ಅತಿ ನವೀನ ಮತ್ತು ಪರಿಪೂರ್ಣ. ..ಯಾರು ಅವರನ್ನು ಮೆಚ್ಚಲಾರನೋ ಅವನ ಬಾಳ ವ್ಯರ್ಥ…’ ಎಂದು ಬರೆದಿದ್ದರು. ಈ ಪತ್ರದಲ್ಲಿ ರಾಮಕೃಷ್ಣರೊಂದಿಗೆ ಶಾರದಾಮಣಿಯನ್ನೂ ಸೇರಿಸಿದ್ದರು. (41)
ರಾಮಚಂದ್ರದತ್ತನ ಜೀವನವೃತ್ತಾಂತ ರದ್ದಿ ,ಲದ್ದಿಯಾಗಿ ಕಂಡಿದ್ದರೆ ೧೮೯೪ ರಲ್ಲಿ ಹೊರಬಂದಿದ್ದ ಅಕ್ಷಯಕುಮಾರ ಸೇನರ ‘ರಾಮಕೃಷ್ಣ ಪುಂಥಿ’ಯ ಬಗ್ಗೆ ಒಳ್ಳೆಯ ಅಭಿಪ್ರಾಯ ತಳೆದಿದ್ದರು. ೧೮೯೫ ರಲ್ಲಿ ಅಮೆರಿಕದಿಂದ ರಾಮಕೃಷ್ಣಾನಂದರಿಗೆ ಬರೆದ ದಿನಾಂಕವಿಲ್ಲದ ಪತ್ರದಲ್ಲಿ ಒಟ್ಟು ೧೫ ಅಂಶಗಳಿದ್ದವು. ಅವುಗಳಲ್ಲಿ ರಾಮಕೃಷ್ಣರನ್ನು ಕುರಿತಾಗಿ (೧) ಯಾಗ ಯಜ್ಞಾದಿಗಳಂತಹ ಕರ್ಮಗಳು ಹಿಂದಿನ ಕಾಲಕ್ಕೆ ಸರಿಹೋಗುತ್ತಿದ್ದವು. ಆದರೆ ಆಧುನಿಕ ಕಾಲಕ್ಕೆ ಸಲ್ಲವು (೨) ಶ್ರೀರಾಮಕೃಷ್ಣರ ಅವತಾರ ಪ್ರಾರಂಭವಾದ ದಿನದಿಂದಲೇ ಸತ್ಯಯುಗ ಮೊದಲಾಗಿದೆ. (೩) ಈ ಅವತಾರದಲ್ಲಿಯೇ ನಾಸ್ತಿಕ ಭಾವಗಳು ಜ್ಞಾನ ಖಡ್ಗದಿಂದ ಕತ್ತರಿಸಲ್ಪಡುವುವು. ಭಕ್ತಿ ಮತ್ತು ಪ್ರೇಮದಿಂದ ಪ್ರಪಂಚವೇ ಒಂದಾಗುವುದು. ಅದೂ ಅಲ್ಲದೆ ಈ ಅವತಾರದಲ್ಲಿ ರಜಸ್ಸು ಎಂದರೆ ಕೀರ್ತಿ , ಗೌರವಗಳ ಆಸೆ ಸಂಪೂರ್ಣ ಮಾಯವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಯಾರು ಅವರ ಉಪದೇಶದಂತೆ ನಡೆಯುವರೋ ಅವರು ಧನ್ಯರು. ಜನರು ಅವರನ್ನು ಒಪ್ಪಲಿ , ಒಪ್ಪದಿರಲಿ ಏನೂ ಬಾಧಕವಿಲ್ಲ. (೪) ಹಿಂದಿನ ಕಾಲದ ಅಥವಾ ಇಂದಿನ ಕಾಲದ ಬೇರೆ ಬೇರೆ ಧರ್ಮಗಳ ಸ್ಥಾಪಕರು ಯಾರೂ ತಪ್ಪು ಮಾಡಿಲ್ಲ. ಅವೆಲ್ಲಾ ಒಳ್ಳೆಯವೇ. ಆದರೆ ಉತ್ತಮವಾದುದು ಉತ್ತಮತರ , ಉತ್ತಮತಮ ಆಗಬೇಕೆನ್ನುವುದೇ ನಮ್ಮ ಗುರಿ. (೫) ಆದ್ದರಿಂದ ಎಲ್ಲರನ್ನೂ ಅವರು ಇಂದು ಎಲ್ಲಿರುವರೋ ಅಲ್ಲಿಂದ ಮುಂದಕ್ಕೆ ಕರೆದೊಯ್ಯಬೇಕು. ಅಂದರೆ ಉತ್ತಮೋತ್ತಮ ಆದರ್ಶಗಳೆಡೆಗೆ ಅವರನ್ನು ಕರೆದುಕೊಂಡು ಹೋಗಬೇಕು. ಆದರೆ ಎಂದಿಗೂ ಅವರಿಗೆ ಇಷ್ಟವಾದ ಮನೋಭಾವವನ್ನು ಕದಲಿಸಬಾರದು. ಸಾಮಾಜಿಕ ಸ್ಥಿತಿಯ ವಿಚಾರವಾಗಿ ಈಗ ಏನಿರುವುದೋ ಅದು ಒಳ್ಳೆಯದೇ ಆಗಿದೆ. ಆದರೆ ಅದು ಇನ್ನೂ ಉತ್ತಮವಾಗಬೇಕು, ಉತ್ಕೃಷ್ಟವಾಗಬೇಕು. (೬) ಮಹಿಳೆಯರ ಸ್ಥಿತಿ ಉತ್ತಮಗೊಳ್ಳದೆ ಜಗತ್ತು ಮೇಲೇರಲು ಸಾದ್ಯವಿಲ್ಲ. ಹಕ್ಕಿ ಒಂದೇ ರೆಕ್ಕೆಯ ಬಲದಿಂದ ಹಾರಲಾರದು. ಅದಕ್ಕಾಗಿಯೇ ಶ್ರೀರಾಮಕೃಷ್ಣ ಅವತಾರದಲ್ಲಿ ಅವರು ಹೆಂಗಸನ್ನು ಗುರುವಾಗಿ ಸ್ವೀಕರಿಸಿದರು. ಅದಕ್ಕಾಗಿಯೇ ಅವರು ಹೆಣ್ಣಿನ ವೇಷದಲ್ಲಿ ಮತ್ತು ಭಾವದಲ್ಲಿ ದೇವರನ್ನು ಪೂಜಿಸಿದರು. ಹೆಂಗಸರ ತಾಯ್ತನದ ಆದರ್ಶವನ್ನು ಅವರು ಜಗನ್ಮಯಿಯ ಪ್ರತಿನಿಧಿ ಎಂದು ಅವರು ಉಪದೇಶ ಮಾಡಿದರು.
‘…. ನಾನು ಬದುಕಿರುವವರೆಗೆ ಶ್ರೀರಾಮಕೃಷ್ಣರು ನನ್ನ ಮೂಲಕ ಕೆಲಸ ಮಾಡುತ್ತಿರುವರು. ಎಲ್ಲಿಯವರೆಗೆ ನೀನು ಇದನ್ನು ನಂಬುವೆಯೋ ಅಲ್ಲಿಯವರೆಗೆ ನಿನಗೆ ಅಪಾಯವಿಲ್ಲ. ಅಕ್ಷಯ ಕಳಿಸಿದ ಶ್ರೀರಾಮಕೃಷ್ಣ ಪುಂಥಿ ಬಹಳ ಚೆನ್ನಾಗಿದೆ. ಆ ಗ್ರಂಥದ ಮೊದಲಲ್ಲಿ ಶಕ್ತಿಯ ಸ್ತುತಿಯಿಲ್ಲ. ಇದು ಒಂದು ದೊಡ್ಡ ಕುಂದು. ಎರಡನೇ ಆವೃತ್ತಿಯಲ್ಲಿ ಇದನ್ನು ಸರಿಪಡಿಸುವಂತೆ ಅವನಿಗೆ ಹೇಳು. ಪ್ರಪಂಚದ ಎದುರಿಗೆ ನಾವೆಲ್ಲರೂ ನಿಂತಿರುವೆವು. ನಾವು ಮಾಡುವ ಪ್ರತಿಯೊಂದು ಕೆಲಸ ಮತ್ತು ಮಾತನ್ನು ಜನ ಗಮನಿಸುತ್ತಿರುವರು ಎನ್ನುವುದನ್ನು ಯಾವಾಗಲೂ ನೆನಪಿಡು. ಇದನ್ನು ತಿಳಿದು ಕೆಲಸ ಮಾಡಿರಿ……..ಕ್ರಮೇಣ ನಿನಗೆ ಗೊತ್ತಾಗುವುದು ಶ್ರೀರಾಮಕೃಷ್ಣರು ಭರತಖಂಡಕ್ಕೆ ಮಾತ್ರ ಉದ್ಧಾರಕರೇನು ? ಈ ಸಂಕುಚಿತ ಭಾವನೆಯೇ ಭರತಖಂಡದ ಹೀನಸ್ಥಿತಿಗೆ ಕಾರಣ….ಶ್ರೀರಾಮಕೃಷ್ಣರು ಯಾರೊಬ್ಬರ ಉದ್ದಾರಕ್ಕೆ ಬಂದರೇನು ? ಅವರು ಇಡೀ ವಿಶ್ವದ ಉದ್ಧಾರಕ್ಕೆ ಬಂದರು. ಅವರು ಜಗದ ಹಿತಕ್ಕಾಗಿ ಬಂದಿದ್ದರೆ ಇಡೀ ಜಗತ್ತು ಅವರನ್ನು ಅರ್ಥ ಮಾಡಿಕೊಳ್ಳುವಂತೆ ಅವರ ವಿಷಯವನ್ನು ಮಂಡಿಸಬೇಕು. ಯಾರು ಯಾರೋ ಬರೆದ ಜೀವನ ಚರಿತ್ರೆಯನ್ನು ನೀನು ಒಪ್ಪಬೇಡ ಅಥವಾ ಅದಕ್ಕೆ ನಿನ್ನ ಒಪ್ಪಿಗೆಯನ್ನೂ ಸೂಚಿಸಬೇಡ. ನಮ್ಮ ಹೆಸರಿನ ಸಂಬಂಧವಿಲ್ಲದೆ ಅಂತಹ ಜೀವನ ಚರಿತ್ರೆ ಬಂದರೆ ಅದರಿಂದ ಏನೂ ಅಪಾಯವಿಲ್ಲ. ಯಾರು ಏನು ಹೇಳಿದರೂ ಹೌದು ಹೌದೆಂದು ನಿಮ್ಮ ನಿರ್ಧಾರಕ್ಕೆ ಮಾತ್ರ ಮನಸ್ಸು ಕೊಡಿ.’
‘ಈಗ ತಾನೆ ನಾನು ಅಕ್ಷಯನ ಪುಸ್ತಕವನ್ನು ಓದಿದೆನು. ನನ್ನ ಒಂದು ಲಕ್ಷ ಪ್ರೇಮಾಲಿಂಗನಗಳನ್ನು ಅವನಿಗೆ ಕೊಡು. ಅವನ ಲೇಖನಿಯ ಮೂಲಕ ಶ್ರೀರಾಮಕೃಷ್ಣರು ತಾವೇ ಆವಿರ್ಭವಿಸುತ್ತಿರುವರು. ಧನ್ಯ ! ‘ಶ್ರೀರಾಮಕೃಷ್ಣ ಪುಂಥಿ’ಯನ್ನು ಎಲ್ಲರ ಮುಂದೆ ಓದಿ ಹೇಳಲಿ. ಉತ್ಸವದಲ್ಲಿ ಎಲ್ಲರೆದುರಿಗೂ ಅದನ್ನು ಓದಬೇಕು. ಒಟ್ಟು ಗ್ರಂಥ ಬಹಳ ವಿಶಾಲವಾದರೆ ಕೆಲವು ಭಾಗಗಳನ್ನು ಓದಲಿ. ಅದರಲ್ಲಿ ಒಂದಾದರೂ ಅಸಂಬದ್ಧ ಪದವಿಲ್ಲ. ಅವನ ಪುಸ್ತಕವನ್ನು ಓದಿ ಆನಂದಿಸಿದೆ. ಆ ಆನಂದವನ್ನು ನಾನು ಮಾತಿನಲ್ಲಿ ವರ್ಣಿಸಲಾರೆ. ಪುಸ್ತಕವನ್ನು ಹೆಚ್ಚಾಗಿ ಮಾರಾಟ ಮಾಡಲು ನೀವು ಸಹಾಯ ಮಾಡಿ. ಅಕ್ಷಯನಿಗೆ ಹಳ್ಳಿಯಿಂದ ಹಳ್ಳಿಗೆ ಬೋಧಿಸುವುದಕ್ಕೆ ಹೋಗಲು ಹೇಳು. ಅಕ್ಷಯ ನೀನು ಒಳ್ಳೆಯ ಕೆಲಸ ಮಾಡಿದೆ ! – ಅವರು ತಮ್ಮ ಕೆಲಸವನ್ನು ಮಾಡುತ್ತಿರುವರು. ಹಳ್ಳಿಯಿಂದ ಹಳ್ಳಿಗೆ ಹೋಗಿ ಶ್ರೀರಾಮಕೃಷ್ಣರ ಉಪದೇಶವನ್ನು ಎಲ್ಲರಿಗೂ ತಿಳಿಸು. ಇದಕ್ಕಿಂತ ಪರಮ ಭಾಗ್ಯವಿರುವುದೇ ? ಅಕ್ಷಯನ ಪುಸ್ತಕ ಮತ್ತು ಅಕ್ಷಯ ಜನರಲ್ಲಿ ಒಂದು ಕ್ರಾಂತಿಯನ್ನು ಎಬ್ಬಿಸಬೇಕೆಂದು ನಾನು ಹೇಳುತ್ತೇನೆ. ನನ್ನ ಪ್ರಿಯ ಅಕ್ಷಯ ! ನಿನ್ನನ್ನು ಮನಃಪೂರ್ವಕವಾಗಿ ಆಶೀರ್ವದಿಸುವೆನು. ಜಗದೀಶನು ನಿನ್ನ ನಾಲಿಗೆಯ ಮೇಲೆ ನೆಲೆಸಲಿ ! ಹೋಗು ಮನೆಯಿಂದ ಮನೆಗೆ. ಅವರ ಉಪದೇಶವನ್ನು ಹರಡು. ನೀನು ಸಂನ್ಯಾಸಿಯಾಗುವ ಆವಶ್ಯಕತೆಯಿಲ್ಲ. ಅಕ್ಷಯ ಬಂಗಾಳಿ ಜನರ ಮುಂದಿನ ಧರ್ಮಪ್ರಚಾರಕ ಮುಖಂಡ. ಅಕ್ಷಯನನ್ನು ಬಹಳ ವಿಶ್ವಾಸದಿಂದ ನೋಡಿಕೋ. ಅವನ ಶ್ರದ್ಧಾಭಕ್ತಿಗಳು ಫಲಿಸಿರುವುವು. ಅಕ್ಷಯನಿಗೆ ಅವನ ಪುಸ್ತಕದ ಮೂರನೇ ಭಾಗವಾದ ‘ಧರ್ಮಪ್ರಚಾರ’ದಲ್ಲಿ ಕೆಲವು ಕೆಳಗೆ ಕಂಡ ವಿಚಾರಗಳನ್ನು ಸೇರಿಸಲು ಹೇಳು.
(೧) ವೇದವೇದಾಂತಗಳು , ಉಳಿದ ಅವತಾರಗಳು ಯಾವುದನ್ನು ಹಿಂದೆ ಬೋಧಿಸಿದ್ದವೋ ಅವುಗಳೆಲ್ಲವನ್ನೂ ತಮ್ಮ ಒಂದೇ ಜೀವನದಲ್ಲಿ ಶ್ರೀರಾಮಕೃಷ್ಣರು ಅನುಷ್ಠಾನಕ್ಕೆ ತಂದರು. (೨) ಇವರ ಜೀವನವನ್ನು ತಿಳಿದುಕೊಳ್ಳದೆ ವೇದ , ವೇದಾಂತ ಮತ್ತು ಅವತಾರಗಳನ್ನು ತಿಳಿಯಲು ಸಾದ್ಯವಿಲ್ಲ. ಏಕೆಂದರೆ ಇವರ ಜೀವನವೇ ಅವಕ್ಕೆ ಭಾಷ್ಯವಾಗಿದೆ. (೩) ಇವರು ಹುಟ್ಟಿದ ದಿನದಿಂದಲೇ ಸತ್ಯಯುಗ ಪ್ರಾರಂಭವಾಯಿತು. ಇನ್ನು ಮೇಲೆ ಎಲ್ಲಾ ವಿಧವಾದ ಭೇದಭಾವಗಳು ಕೊನೆಗಾಣುವುವು. ಚಂಡಾಲನಿಂದ ಹಿಡಿದು ಎಲ್ಲರೂ ಅವರ ಪ್ರೀತಿಗೆ ಪಾತ್ರರಾಗುವರು. ಗಂಡು-ಹೆಣ್ಣು , ಬಡವ-ಬಲ್ಲಿದ ಬ್ರಾಹ್ಮಣ-ಚಾಂಡಾಲ ಈ ಭೇದಭಾವಗಳನ್ನು ಖಂಡಿಸಲು ಅವರು ಜೀವಿಸಿದರು. ಶಾಂತಿಯನ್ನು ಹರಡುವ ದೇವದೂತರೇ ಅವರು. ಹಿಂದೂಗಳಿಗೂ-ಮುಸ್ಲಿಮರಿಗೂ , ಹಿಂದೂಗಳಿಗೂ- ಕ್ರೈಸ್ತರಿಗೂ ಇರುವ ಭೇದಗಳೆಲ್ಲ ಗತಕಾಲಕ್ಕೆ ಸಂಬಂಧಿಸಿದವು. ಮತ ಕಲಹ ಗತಕಾಲದ ಮಾತು. ಈ ಸತ್ಯಯುಗದಲ್ಲಿ ಶ್ರೀರಾಮಕೃಷ್ಣರೆಂಬ ಮಹಾಪ್ರವಾಹವು ಎಲ್ಲರನ್ನೂ ಒಂದೇ ಸಮನಾಗಿ ,ಮಾಡಿರುವುದು. ಈ ಅಭಿಪ್ರಾಯಗಳನ್ನೆಲ್ಲ ವಿಶದಪಡಿಸಿ ತನ್ನದೇ ಶೈಲಿಯಲ್ಲಿ ಬರೆಯುವಂತೆ ಹೇಳು. ಗಂಡಾಗಲಿ , ಹೆಣ್ಣಾಗಲಿ ಯಾರು ಶ್ರೀರಾಮಕೃಷ್ಣರನ್ನು ಪೂಜಿಸುತ್ತಾರೋ ಅವರು ಎಷ್ಟು ಹೀನಸ್ಥಿತಿಯಲ್ಲಿದ್ದರೂ ಆ ಕ್ಷಣವೇ ಪಾವನರಾಗುವರು. ಈ ಅವತಾರದ ಮತ್ತೊಂದು ವಿಶೇಷ – ದೇವರ ಮಾತೃಭಾವ. ಅವರು ಹೆಣ್ಣಿನಂತೆ ವೇಷ ಹಾಕಿಕೊಳ್ಳುತ್ತಿದ್ದರು-ತಾಯಿಯಂತೆ ಇದ್ದರು. ನಾವು ಎಲ್ಲಾ ಹೆಂಗಸರನ್ನು ಜಗನ್ಮಯಿಯ ಪ್ರತಿಬಿಂಬದಂತೆ ಕಾಣಬೇಕು. ಭಾರತದಲ್ಲಿ ಎರಡು ದೊಡ್ದ ಕೆಡುಕುಗಳಿವೆ. ಹೆಂಗಸರನ್ನು ಪೀಡಿಸುವುದು ಮತ್ತು ಬಡವರನ್ನು ಜಾತಿ ಬಂಧನಗಳಿಂದ ಹಿಂಸಿಸುವುದು. ಶ್ರೀರಾಮಕೃಷ್ಣರು ಹೆಂಗಸರ ಮತ್ತು ಜನಸಾಮಾನ್ಯರ ಉದ್ಧಾರಕರು. ಅಕ್ಷಯ ಇವರ ಪೂಜೆಯನ್ನು ಪ್ರತಿಮನೆಯಲ್ಲಿಯೂ ಪ್ರಚಾರಕ್ಕೆ ತರಲಿ. ಬ್ರಾಹ್ಮಣನಾಗಲಿ , ಚಾಂಡಾಲನಾಗಲಿ , ಗಂಡಾಗಲಿ ,ಹೆಣ್ಣಾಗಲಿ ಪ್ರತಿಯೊಬ್ಬರಿಗೂ ಅವರನ್ನು ಪೂಜಿಸುವ ಅಧಿಕಾರವಿದೆ. ಕೇವಲ ಭಕ್ತಿಯಿಂದಲೇ ಅವರನ್ನು ಯಾರು ಪ್ರೀತಿಸುವರೋ ಅವರು ಎಂದೆಂದಿಗೂ ಧನ್ಯರು. ಈ ರೀತಿಯಲ್ಲಿ ಬರೆಯುವಂತೆ ಹೇಳು. ಮತ್ತಾವುದನ್ನೂ ಲೆಕ್ಕಿಸದಿರಲಿ. ದೇವರು ಆತನ ಕಡೆ ಇದ್ದಾನೆ. (42)
ಅಕ್ಷಯಕುಮಾರ ಸೇನ ಸ್ವಾಮಿಗಳ ಆತ್ಮೀಯ ಗೆಳೆಯನಾಗಿದ್ದು ಆತನನ್ನು ಶಾಂಖ್’ಚುನ್ನಿ (ಮರಿಪಿಶಾಚಿ) ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಬಂಗಾಳಿಗಳಿಗೆ ಪ್ರಿಯವಾದ ಎರಡು ಸಾಲುಗಳ ಛಂದಸ್ಸಿನಲ್ಲಿರುವ , ರಾಗವಾಗಿ ಹಾಡಬಹುದಾದ ಅಂಶಗಳಿಗಾಗಿ ‘ರಾಮಕೃಷ್ಣ ಪುಂಥಿ’ ಸ್ವಾಮಿಗಳ ಮೆಚ್ಚುಗೆ ಗಳಿಸಿದ್ದಿತಾದರೂ, ಅದರಲ್ಲಿರುವ ರಾಮಕೃಷ್ಣರ ಚಿತ್ರಣ ತಾವು ಬಯಸಿದಂತೆ ಇಲ್ಲವೆಂದು ಸ್ಪಷ್ಟವಾಗಿದ್ದಿತು.ಆದ್ದರಿಂದ ‘ಆರಂಭದಲ್ಲಿ ಶಕ್ತಿಯ ಮಹಿಮೆಯ ವರ್ಣನೆಯಿಲ್ಲದಿರುವುದು ಮಹಾನ್ ದೋಷ ’ ಎಂದಿದ್ದರು. ಇನ್ನೂ ಮುಂದುವರೆದು ‘ನಾವೀಗ ಜಗತ್ತಿನ ಕಣ್ಣ ಮುಂದೆ ನಿಂತಿದ್ದೇವೆ. ಜನ ನಮ್ಮೆಲ್ಲ ನಡೆ , ನುಡಿಗಳನ್ನು ಗಮನಿಸುತ್ತಾರೆ’ ಎನ್ನುವುದನ್ನು ಲೇಖನಿಗೆ ಮನದಟ್ಟು ಮಾಡಿಕೊಡಲು ಮರೆಯಬೇಡ ಎಂದು ರಾಮಕೃಷ್ಣಾನಂದರಿಗೆ ಎಚ್ಚರಿಸಿದ್ದರು. ಸ್ವಾಮಿಗಳು ಭಾರತದಲ್ಲಿರುವಾಗ ಶಕ್ತಿಯ ಬಗ್ಗೆ ಹೆಚ್ಚಿನದೇನನ್ನೂ ಹೇಳುತ್ತಿರಲಿಲ್ಲ. ಅಮೆರಿಕಕ್ಕೆ ಹೋದ ನಂತರ ಅಲ್ಲಿಯ ಹೆಂಗಸರನ್ನು ಕಂಡ ಮೇಲೆ ಶಕ್ತಿಯ ಕಲ್ಪನೆ ಬಂದಿದ್ದಿತು. ಈ ಹಿಂದೆ ಸ್ವಾಮಿಗಳು ಕಾಶಿಪುರ ತೋಟದ ಮನೆಯಲ್ಲಿ ಗುರುಗಳು ಸಾಯುವ ಕೆಲ ತಿಂಗಳುಗಳ ಮೊದಲು ಅವರ ಪಾದದಡಿಯಲ್ಲಿ ಕುಳಿತು ಹೆಂಗಸರು ಭಗವಂತನ ಸಾಕ್ಷಾತ್ಕಾರಕ್ಕೆ ಎಂತಹ ದೊಡ್ಡ ಅಡಚಣೆ’ ಎಂದು ಉದ್ಗರಿಸಿದ್ದರು. (43) [ ಸ್ವಾಮಿಗಳು ಹೊಗಳಿದ್ದ ಅಕ್ಷಯಕುಮಾರ ಸೇನ ‘ಡಿ ಗುಪ್ತರಾ ಎಲಿಕ್ಸಿರಿನ ವಾಸನೆಯು | ತೋರಿತದು ಜನಜನಿತವಾದ ಔಷಧಿಯು |……ತಾಂತ್ರಿಕ ಪೂಜೆಯ ನೆಪದಿ ಮದ್ಯವನು | ತಂದಲ್ಲಿ ಔಷಧದ ಕಂಪ ಬೀರಿದನು || ರಾಮಕೃಷ್ಣರ ಮಹಿಮೆ ಸಾಮಾನ್ಯವಲ್ಲ | ಜೀವನಕೆ ಶುಭದರ್ಶನವೀವುದಲ್ಲ || - ಎಂದು ಪುಂಥಿಯಲ್ಲಿ ಹಾಡಿರುವುದೇ ಒಂದು ಅಣಕವಾಗಿದೆ (44) ]
ಅಕ್ಷಯಕುಮಾರಸೇನನ ‘ರಾಮಕೃಷ್ಣ ಪುಂಥಿ’ ಮಾತ್ರವಲ್ಲ ಸುರೇಶಚಂದ್ರದತ್ತ ೧೮೮೬ ರಲ್ಲಿ ಬಂಗಾಳಿಯಲ್ಲಿ ಹೊರತಂದಿದ್ದ ‘ಶ್ರೀಶ್ರೀ ರಾಮಕೃಷ್ಣದೇಬೇರ್ ಉಪದೇಶಿ’ ಎನ್ನುವ ರಾಮಕೃಷ್ಣರ ಬೋಧನೆಗಳ ಕಿರುಪುಸ್ತಕ ಕುರಿತಾಗಿಯೂ ಸ್ವಾಮಿಗಳು ತಮ್ಮ ಅಭಿಪ್ರಾಯವನ್ನು ರಾಮಕೃಷ್ಣಾನಂದರಿಗೆ ತಿಳಿಸಿದ್ದರು. ಇದರಲ್ಲಿ ‘ಶ್ರೀಶ್ರೀ ರಾಮಕೃಷ್ಣ ಲೀಲಾ’ ತಲೆಬರಹದಡಿಯಲ್ಲಿ ರಾಮಕೃಷ್ಣರ ಜೀವನದ ಸಂಕ್ಷಿಪ್ತ ಆದರೆ ಸಮಗ್ರ ಪರಿಚಯವಿದ್ದಿತು. ಸ್ವಾಮಿಗಳು ‘ ಸುರೇಶಚಂದ್ರ ದತ್ತರ ಉದ್ದೇಶ ಉದಾತ್ತವಾದುದು ; ಪುಸ್ತಕವನ್ನೂ ಚೆನ್ನಾಗಿ ಬರೆಯಲಾಗಿದೆ. ಅದು ಸ್ವಲ್ಪ ಒಳಿತನ್ನು ತರುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅದೇನೆ ಇರಲಿ ಅವರು ರಾಮಕೃಷ್ಣರನ್ನು ಎಷ್ಟರ ಮಟ್ಟಿಗೆ ತಿಳಿದಿದ್ದಾರೆ ಎನ್ನುವುದೇ ಒಂದು ಪ್ರಶ್ನೆ ‘ ಎಂದರು. ಇದರೊಂದಿಗೆ ‘ಶ್ರೀರಾಮಕೃಷ್ಣರು ಅವತಾರ ಪುರುಷರು ಮುಂತಾದವುಗಳನ್ನು ಬೋಧಿಸಬೇಕಾಗಿಲ್ಲ. ಅವರು ಜನರ ಕಲ್ಯಾಣಕ್ಕಾಗಿ ಬಂದರೇ ಹೊರತು ಕೀರ್ತಿ , ಗೌರವದ ಆಸೆಗೆ ಬರಲಿಲ್ಲ. ನೀನು ಇದನ್ನು ಎಂದಿಗೂ ಮರೆಯಬಾರದು. ಶಿಷ್ಯರು ಯಾವಾಗಲೂ ತಮ್ಮ ಗುರುವಿನ ಕೀರ್ತಿ ಉಳಿಯಬೇಕೆಂದು ಬಯಸಿ ಅವರ ಉಪದೇಶವನ್ನು ಮೂಲೆಗೊತ್ತುವರು. ಇದರಿಂದ ಮತಾಂಧತೆ ಬರುವುದು’ ಎನ್ನುವ ಎಚ್ಚರವೂ ಸೇರಿದ್ದಿತು.
ಸ್ವಾಮಿಗಳಿಗೆ ತಾವು ಬಯಸಿದಂತೆ ತಮ್ಮ ಗುರುಗಳ ಜೀವನ ಚರಿತ್ರೆ ಇರದಿರುವುದು ಒಂದು ದೊಡ್ದ ಕೊರತೆಯೆಂದು ಭಾಸವಾಗಿದ್ದಿತು. ಅದಕ್ಕಾಗಿ ತಾವೇ ಒಂದು ಕೃತಿ ರಚಿಸಲು ಬಯಸಿದ್ದರು. ಅದರ ಮುಖ್ಯ ಲಕ್ಷಣಗಳು ೧೮೯೫ ರಲ್ಲಿ ಬ್ರಹ್ಮಾನಂದರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿವೆ. ‘ ಇಂಗ್ಲಿಷ್’ನಲ್ಲಿ ಶ್ರೀರಾಮಕೃಷ್ಣರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಬರೆಯುತ್ತೇನೆ. ಅದನ್ನು ಬಂಗಾಳಿಗೆ ಅನುವಾದಿಸಿ ಮುದ್ರಿಸಿ ಉತ್ಸವದ ಸಮಯದಲ್ಲಿ ಮಾರಿರಿ. ಸುಮ್ಮನೆ ಹಂಚಿದ ಪುಸ್ತಕವನ್ನು ಜನ ಓದುವುದಿಲ್ಲ. ಪುಸ್ತಕಕ್ಕೆ ಕನಿಷ್ಟಪಕ್ಷ ಒಂದು ಬೆಲೆಯನ್ನು ಇಡಿ. ಉತ್ಸವವನ್ನು ವಿಜೃಂಭಣೆಯಿಂದ ನಡೆಸಿ……..ಶ್ರೀರಾಮಕೃಷ್ಣರು ಹುಟ್ಟಿದ ದಿನವೇ ನವ ಭಾರತದ ಮತ್ತು ಸತ್ಯಯುಗದ ಮೊದಲ ದಿನ. ಈ ಸುವರ್ಣ ಯುಗವನ್ನು ಜಗತ್ತಿಗೆ ತರುವ ಬಾಲಕರು ನೀವು. ಈ ದೃಢ ನಂಬಿಕೆಯನ್ನು ಹೃದಯದಲ್ಲಿರಿಸಿಕೊಂಡು ಕೆಲಸ ಮಾಡಿ……….ಅವತಾರ ಪುರುಷರಲ್ಲಿ ಚೈತನ್ಯ ದೇವನು ಬಹಳ ಉತ್ತಮನು. ಆದರೆ ಆತನಲ್ಲಿ ಅಷ್ಟಾಗಿ ಜ್ಞಾನವಿರಲಿಲ್ಲ. ಆದರೆ ಶ್ರೀರಾಮಕೃಷ್ಣ ಅವತಾರದಲ್ಲಿ ಜ್ಞಾನವಿದೆ, ಭಕ್ತಿಯಿದೆ, ಪ್ರೇಮವಿದೆ-ಅನಂತ ಜ್ಞಾನ , ಅನಂತ ಪ್ರೇಮ , ಅನಂತ ಕರ್ಮ , ಅನಂತ ವಿಶ್ವಾಸ, ಅನುಕಂಪಗಳಿವೆ. ಅವರ ವಿಚಾರವಾಗಿ ಕೇಳಿದರೂ ಕೆಲವರಿಗೆ ಅರ್ಥವಾಗುವುದಿಲ್ಲ. ಆದಿಯಿಂದಲೂ ಇಡೀ ಹಿಂದೂ ಜನಾಂಗ ಏನನ್ನು ವಿಚಾರ ಮಾಡಿತು. ಅವೆಲ್ಲವನ್ನೂ ಅವರು ತಮ್ಮ ಒಂದು ಜೀವನದಲ್ಲಿ ಬಾಳಿದರು. ಅವರ ಜೀವನ ಎಲ್ಲಾ ಜನಾಂಗದ ಪವಿತ್ರ ಗ್ರಂಥಗಳಿಗೆ ಬರೆದಿರುವ ಜೀವಂತ ಭಾಷ್ಯ. ಕ್ರಮೇಣ ಜನರಿಗೆ ಇದು ಗೊತ್ತಾಗುವುದು. ನನ್ನದು ಅದೇ ಹಿಂದಿನ ಮಂತ್ರ- ಹೋರಾಡಿ , ಧ್ಯೇಯ ಸಾಧನೆಗೆ ಹೋರಾಡಿ –ಮುಂದೆ , ಮುಂದೆ’. ಈ ಪತ್ರದಲ್ಲಿ ಇತರ ಲೇಖಕರು ರಾಮಕೃಷ್ಣರನ್ನು ‘ಅವತಾರ ಪುರುಷ’ ಎಂದಿರುವುದನ್ನು ಈ ಹಿಂದೆ ಒಪ್ಪದಿದ್ದ ಸ್ವಾಮಿಗಳು ತಾವೇ ಅದಕ್ಕೆ ಉಪಾಯವಾಗಿ ಜೋತು ಬೀಳತೊಡಗಿರುವುದು ಎದ್ದು ಕಾಣುತ್ತದೆ. ಒಮ್ಮೆ ಇತರರು ಅವತಾರ ಎನ್ನುವುದನ್ನು ಖಂಡಿಸುವ ಅದೇ ವೇಳೆಗೆ ತಾವೇ ಅವತಾರ ಎಂದು ಸಾರುವ ತಾತ್ತ್ವಿಕ ಎಡಬಿಡಂಗಿ ಅವರಿಗೆ ಗೊತ್ತಿಲ್ಲದಂತೆ ಅವರ ಆಂತರ್ಯದಲ್ಲಿ ತಲೆ ಎತ್ತುತ್ತಿರುವುದು ಸ್ಪಷ್ಟವಾಗಿ ಗುರುತಿಸಬಹುದು.
ಸ್ವಾಮಿಗಳು ಅಮೆರಿಕಕ್ಕೆ ಹೋಗುವ ನಾಲ್ಕು ವರ್ಷ ಮೊದಲು ೭/೨/೧೮೮೯ ರಲ್ಲಿ ಅಂತ್’ಪುರದಿಂದ ‘ಮ’ಗೆ ಬರೆದ ಪತ್ರದಲ್ಲಿ ‘ ಲಕ್ಷ ಧನ್ಯವಾದಗಳು ಮಾಸ್ಟರ್ , ರಾಮಕೃಷ್ಣರನ್ನು ನೀವು ಸರಿಯಾದ ಜಾಗದಲ್ಲಿಯೇ ತಾಕಿದ್ದೀರಿ. ಅಯ್ಯೋ , ಕೆಲವರು , ಕೆಲವರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಬಲ್ಲರು’ ಎಂದು ಹೊಗಳಿದ್ದರು. ಜೊತೆಗೆ ವಿ.ಸೂ :- ನನ್ನ ಹೃದಯ ಸಂತೊಷದಿಂದ ತುಂಬಿ ತುಳುಕಾಡುತ್ತಿದೆ. ಇನ್ನು ಮುಂದೆ ಜಗತ್ತಿನಲ್ಲಿ ಶಾಂತಿಯನ್ನು ಬೀರುವ ಸಿದ್ಧಾಂತ ಪ್ರಚಾರದಲ್ಲಿ ಯಾರಾದರೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ನೋಡಿದಾಗಲೂ ನಾನಿನ್ನೂ ಹುಚ್ಚನಾಗಿಲ್ಲ ಎನ್ನುವುದೇ ಸೋಜಿಗವಾಗುತ್ತಿದೆ ಎನ್ನುವ ಬಾಲಂಗೋಚಿಯೂ ಇದ್ದಿತು. ೧೮೯೬ ರ ವೇಳೆಗೆ ಕಥಾಮೃತದ ಇಂಗ್ಲಿಷ್ ಅನುವಾದ ‘ದಿ ಗಾಸ್ಪೆಲ್ ಆಫ್ ಶ್ರೀರಾಮಕೃಷ್ಣ’ ಹಸ್ತಪ್ರತಿಯಲ್ಲಿದ್ದಿತು. ಅದನ್ನು ಓದಿ ಸ್ವಾಮಿಗಳು ೧೪/೪/೧೮೯೬ ರಂದು ಸ್ವಾಮಿ ತ್ರಿಗುಣಾತೀತಾನಂದರಿಗೆ ಬರೆದ ಪತ್ರದಲ್ಲಿ ‘ಶ್ರೀರಾಮಕೃಷ್ಣ ಪರಮಹಂಸ ದೇವರು ಮುಂತಾದವುಗಳೆಲ್ಲ ಈ ದೇಶದಲ್ಲಿ (ಅಮೆರಿಕ) ನಡೆಯುವುದಿಲ್ಲ. ಇಂತಹ ವಿಷಯಗಳನ್ನು ಎಲ್ಲರಿಗೂ ಹೇಳುವ ಅಭ್ಯಾಸ ‘ಮ’ಗೆ ಇದೆ. ಆದ್ದರಿಂದ ನಮ್ಮ ಚಳವಳಿಯು ಒಂದು ಸಣ್ಣ ಪಂಥವಾಗುತ್ತದೆ.ಅಂತಹ ಯತ್ನಗಳಿಂದ ನೀನು ದೂರ ಇರು ; ಮತ್ತೆ ಅದೇ ಸಮಯದಲ್ಲಿ ಯಾರಾದರೂ ಅವರನ್ನು ದೇವರೆಂದು ಪೂಜಿಸಿದರೆ ಅಡ್ಡಿಯಿಲ್ಲ ; ಅದಕ್ಕೆ ಪ್ರೋತ್ಸಾಹವನ್ನಾಗಲಿ , ಅಡ್ಡಿಯನ್ನಾಗಲಿ ಮಾಡುವುದು ಬೇಕಿಲ್ಲ ‘ ಎಂದಿದ್ದರು. ಈ ಮೂಲಕ ‘ಮ’ ಕಥಾಮೃತದಲ್ಲಿ ರಾಮಕೃಷ್ಣರನ್ನು ‘ಅವತಾರ ವರಿಷ್ಟ’ನಂತೆ ಚಿತ್ರಿಸಿರುವುದಕ್ಕೆ ತಮ್ಮ ಅಸಮಾಧಾನವನ್ನು ಹೊರಗೆ ಹಾಕಿದ್ದರು ಮತ್ತು ತಮ್ಮ ಪಂಥ ಜಗತ್ತಿನಲ್ಲಿ ಎಲ್ಲರೂ ಒಪ್ಪುವಂತಹದಾಗಿರಬೇಕು ಎನ್ನುವ ಒಳ ಬಯಕೆಯೂ ಇದ್ದಿತು.
೧೮೯೭ ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ ತಾವು ಅಮೆರಿಕದ ಜನರನ್ನು ಸಂತೃಪ್ತಿ ಪಡಿಸಬೇಕೆನ್ನುವುದನ್ನು ಸ್ವಾಮಿಗಳು ಹಿಂದಕ್ಕೆ ಹಾಕಿದ್ದರು. ‘ಮ’ ಕಥಾಮೃತದ ಬಗ್ಗೆ ಈ ಹಿಂದೆ ತಾಳಿದ್ದ ನಿಲುವನ್ನು ಬದಲಿಸಿದ್ದರು. ಅಕ್ಟೋಬರ್-೧೮೯೭ ರಲ್ಲಿ ಬರೆದ ಪತ್ರದಲ್ಲಿ ‘‘ ಪ್ರೀತಿಯ ‘ಮ’ ನೀನೀಗ ಸರಿಯಾದುದನ್ನೇ ಮಾಡುತ್ತಿರುವೆ. ಜೀವನವೆಲ್ಲ ಮಲಗುವುದನ್ನು ಬಿಟ್ಟು ಹೊರಗೆ ಬಾ. ಕಾಲ ಹಾರಿ ಹೋಗುತ್ತಿದೆ. ಧೀರನೇ ಅದು ಮಾರ್ಗ. ನಿನ್ನ ಪ್ರಕಟಣೆಗೆ ಹಲವು ಧನ್ಯವಾದಗಳು …..’ ಎಂದಿದ್ದರು. ೧೦/೧೦/೧೮೯೭ ರಂದು ಬ್ರಹ್ಮಾನಂದರಿಗೆ ಬರೆದ ಪತ್ರದಲ್ಲಿ ‘ ಮಾಸ್ಟರ್ ಮಹಾಶಯ ಇಷ್ಟು ದೀರ್ಘ ಕಾಲದ ನಂತರ ಕೆಲಸಕ್ಕೆ ಕೈಹಾಕಲು ಸಿದ್ಧರಾಗಿರುವರಲ್ಲ. ಅವರಿಗೆ ನನ್ನ ವಿಶೇಷ ಪ್ರೀತಿ, ಅಭಿನಂದನೆಗಳನ್ನು ತಿಳಿಸು. ಅವರು ತಮ್ಮ ಸ್ತ್ರೀ ಸಹಜ ನಾಚಿಕೆಯನ್ನು ಬಿಟ್ಟು ಕೆಲಸಕ್ಕೆ ಕೈ ಹಾಕಿರುವುದು ನೋಡಿದರೆ ನನ್ನ ಧೈರ್ಯ ನೂರ್ಮಡಿ ಹೆಚ್ಚಿದೆ. ನಾನು ನಾಳೆಯೇ ಅವರಿಗೆ ಬರೆಯುತ್ತೇನೆ. ಭಗವಂತನಿಗೆ ಜಯವಾಗಲಿ’ ಎಂದು ತಿಳಿಸಿದರು. ಅದೇ ವರ್ಷ ಮುಂದಿನ ತಿಂಗಳು-ನವೆಂಬರ್-‘ದಿ ಗಾಸ್ಪೆಲ್ ಆಫ್ ಶ್ರೀ ರಾಮಕೃಷ್ಣ:ಪಾರ್ಟ್-೨’ ಓದಿದ ನಂತರ ‘ನಿಮ್ಮ ಎರಡನೇ ಪುಸ್ತಕಕ್ಕಾಗಿ ಅನೇಕ ವಂದನೆಗಳು. ಅದು ನಿಜವಾಗಿಯೂ ಅದ್ಭುತವಾಗಿದೆ. ಈ ಪ್ರಯತ್ನ ಅತ್ಯಂತ ಹೊಸತಾಗಿದೆ. ಈ ಹಿಂದೆ ಎಂದೂ ಒಬ್ಬ ಮಹಾನ್ ಗುರುವಿನ ಚರಿತ್ರೆಯು ಇಷ್ಟರಮಟ್ಟಿಗೆ ಲೇಖಕನ ಮನಸ್ಸಿನಿಂದ ವಿಕೃತಗೊಳ್ಳದೆ ಸಾರ್ವಜನಿಕರಿಗೆ ಲಭ್ಯವಾಗಿರಲಿಲ್ಲ. ಭಾಷೆ ಕೂಡ ಚೊಕ್ಕಟವಾಗಿದ್ದು ಮನಸ್ಸಿಗೆ ನಾಟುವಂತಿದೆಯಲ್ಲದೆ , ನೇರ ಮತ್ತು ಸರಳವಾಗಿಯೂ ಇದೆ. ಇದಕ್ಕೆ ಯಾವ ಪ್ರಶಂಸೆಯೂ ಸಾಲದು. ನನಗೆ ಅದರಿಂದ ಉಂಟಾದ ಆನಂದವನ್ನು ಹೇಳಲಾರೆ. ನಾನು ಅದನ್ನು ಓದುವಾಗ ನಿಜವಾಗಿಯೂ ಮೈಮರೆತಂತಾಗುವುದು ಅಚ್ಚರಿಯಲ್ಲವೇ ? ನಮ್ಮ ಗುರುದೇವರಾದ ಭಗವಾನರು ಎಷ್ಟು ಸ್ವಂತಿಕೆ ಹೊಂದಿದ್ದರು ! ನಮ್ಮಲ್ಲಿ ಪ್ರತಿಯೊಬ್ಬರೂ ಕಲ್ಪನಾ ಶಕ್ತಿ ಹೊಂದಿರಬೇಕು. ಏಕೆ ? ನಮ್ಮಲ್ಲಿ ಮತ್ತಾರಾದರೂ ಅವರ ಜೀವನ ಚರಿತ್ರೆ ಬರೆಯಲು ಯತ್ನಿಸದಿರಲು ಇದೇ ಕಾರಣ. ಈಗ ನನಗೆ ಅರ್ಥವಾಗುತ್ತಿದೆ. ಈ ಮಹತ್ಕಾರ್ಯ ನಿಮಗಾಗಿ ಮೀಸಲಾಗಿದ್ದಿತು. ಅವರು ನಿಜವಾಗಿಯೂ ನಿಮ್ಮೊಂದಿಗದ್ದಾರೆ’ ವಿ,ಸೂ:- ಸಾಕ್ರೆಟಿಸನ ಸಂಭಾಷಣೆಯ ತುಂಬ ಇರುವುದು ಪ್ಲೇಟೋವೇ. ಆದರೆ ನೀವು ಸಂಪೂರ್ಣವಾಗಿ ಮರೆಯಲ್ಲಿರುವಿರಿ. ಅದೂ ಅಲ್ಲದೆ ನಿಮ್ಮ ಬರವಣಿಗೆಯಲ್ಲಿ ಬಂದಿರುವ ನಾಟಕೀಯತೆ ಅತ್ಯಂತ ಸುಂದರವಾಗಿದೆ. ಇಲ್ಲಿ ಮತ್ತು ಪಶ್ಚಿಮ ದೇಶಗಳಲ್ಲಿ ಎಲ್ಲರೂ ಅದನ್ನು ಇಷ್ಟ ಪಡುವರು’ ಎನ್ನುವ ಮೆಚ್ಚುಗೆಯ ಮಹಾಪೂರವೇ ಹರಿದಿದ್ದಿತು.
೧೮೯೪ ರಲ್ಲಿ ಅಮೆರಿಕದಲ್ಲಿರುವಾಗ ಅಲ್ಲಿನ ಜನ ರಾಮಕೃಷ್ಣರ ಜೀವನ ಚರಿತ್ರೆಯ ಪುಸ್ತಕಗಳನ್ನು ಕೇಳುತ್ತಿದ್ದರು. ಆಗ ಪ್ರತಾಪಚಂದ್ರ ಮಜುಂದಾರ ಬರೆದ ಕಿರುಪುಸ್ತಕ ಹೊರತಾಗಿ ಇಂಗ್ಲಿಷ್’ನಲ್ಲಿ ಬೇರೆ ಯಾವ ಕೃತಿಯೂ ಹೊರಬಂದಿರಲಿಲ್ಲ. ಬಂಗಾಳಿಗಳು ಬರೆದಿರುವ ಕೃತಿಗಳಲ್ಲಿ ಅಮೆರಿಕನ್ನರು , ಐರೋಪ್ಯರು ಟೀಕೆ ಮಾಡುವ ಹಲವು ಅಂಶಗಳಿವೆಯೆಂದು ಸ್ವಾಮಿಗಳು ಮನಗಂಡಿದ್ದರು. ಸ್ವಾಮಿಗಳ ದೃಷ್ಟಿಯಲ್ಲಿ ರಾಮಕೃಷ್ಣರನ್ನು ಜಗತ್ತಿನಾದ್ಯಂತ ಒಪ್ಪಬಲ್ಲ, ಘನತೆಯೆತ್ತ , ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕ , ಅದ್ವೈತ ವೇದಾಂತಿ , ಜೀವನ್ಮುಕ್ತನಂತೆ ಮೂಲ ಚಿತ್ರಣ ಕಟ್ಟಿಕೊಡುವಲ್ಲಿ ಎಲ್ಲ ಬಂಗಾಳಿಗಳು ಸೋತಿದ್ದರು. ಆತ್ಮಸಾಮರ್ಥ್ಯ ಮತ್ತು ವಿಶ್ವಾಸ ಇಲ್ಲದ ಬಂಗಾಳಿಗಳಿಗಿಂತ ರಾಮಕೃಷ್ಣರನ್ನು ನೇರವಾಗಿ ಅರಿಯದ , ಬಂಗಾಳಿ ಗೊತ್ತಿಲ್ಲದ ಮದ್ರಾಸಿಗಳ ಮೂಲಕ ತಮಗೆ ಬೇಕಾದಂತಹ ‘ಚರಿತ್ರೆ’ ಬರೆಸುವ ಯೋಜನೆಯೂ ಕೆಲವು ಸಲ ಸ್ವಾಮಿಗಳ ತಲೆಯನ್ನು ಹೊಕ್ಕಿದ್ದಿತು. ಅದಕ್ಕೆ ಮದ್ರಾಸಿಗಳು ಹೆಚ್ಚು ದಕ್ಷರೆಂದು ಸ್ವಾಮಿಗಳಿಗೆ ಹಲವು ಸಲ ಅನಿಸಿದ್ದಿತು. ೩೦/೧೧/೧೮೯೪ ರಲ್ಲಿ ಆಳ್’ಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ಕಿಡಿ (ಸುಂದರವೇಲು ಮುದಲಿಯಾರ್) ರಾಮಕೃಷ್ಣರ ಜೀವನ ಚರಿತ್ರೆಯನ್ನು ಬರೆಯುವಂತೆ ಆತನಿಗೆ ತಿಳಿಸಲು ಹೇಳಿದ್ದರಲ್ಲದೆ, ಅದು ಹೇಗಿರಬೇಕೆನ್ನುವ ಚೌಕಟ್ಟನ್ನು ತಿಳಿಸಿದ್ದರು.
‘ರಾಮಕೃಷ್ಣರ ಜೀವನ ಒಂದು ಅಸಾಧಾರಣ ಶೋಧಕ ಪ್ರಭೆ. ಅದರ ಬೆಳಕಿನಲ್ಲಿ ಸಮಗ್ರ ಹಿಂದೂ ಧರ್ಮವನ್ನು ಅರಿತುಕೊಳ್ಳುವುದು ಸಾದ್ಯ. ಶಾಸ್ತ್ರಗಳಲ್ಲಿ ತಿಳಿಸಲಾಗಿರುವ ಎಲ್ಲ ಸಿದ್ಧಾಂತಗಳ ಅನುಷ್ಠಾನವೇ ಅವರು. ತಮ್ಮ ಜೀವನದ ಮೂಲಕ ಋಷಿ , ಮುನಿಗಳು ಏನನ್ನು ಬೋಧಿಸಲು ಯತ್ನಿಸಿದರೆಂದು ತೋರಿಸಿದರು. ಅವರು ತಿಳಿಸಿದ ಅವಸ್ಥೆ ಅಥವಾ ಹಂತಗಳಲ್ಲಿ ವೇದಗಳನ್ನು ವಿವರಿಸಬಹುದು , ಶಾಸ್ತ್ರಗಳನ್ನು ಅರಿಯಬಹುದು. ನಾವು ಬೇರೆಯವರ ಬಗ್ಗೆ ಸಹನೆ ಹೊಂದಿರುವುದು ಮಾತ್ರವಲ್ಲ ,ಅವರನ್ನು ತಬ್ಬಬೇಕು , ಸತ್ಯವೇ ಎಲ್ಲ ಧರ್ಮಗಳ ಸಾರ ಎನ್ನುವುದನ್ನು ಅರಿಯಬಹುದು ‘ ಇದು ಸ್ವಾಮಿಗಳು ತಮ್ಮ ಗುರುಗಳನ್ನು ಮದ್ರಾಸಿಗಳ ಮೂಲಕ ಕಾಣಬಯಸಿದ್ದ ರೀತಿಯಾಗಿದ್ದಿತು. ಇಷ್ಟೇ ಅಲ್ಲದೆ ಆಳ್’ಸಿಂಗನಿಗೆ ‘ ಲೈಂಗಿಕತೆ , ಅಶ್ಲೀಲ ಶಬ್ದ ಬಳಕೆ , ಅಸಭ್ಯ ಮಾತುಕತೆಗಳನ್ನು ತಪ್ಪಿಸಿರಿ….ಏಕೆಂದರೆ ಇತರ ದೇಶಗಳಲ್ಲಿ ಅಂತಹವುಗಳನ್ನು ಅಸಭ್ಯತೆಯ ತುದಿಯೆಂದು ಭಾವಿಸುತ್ತಾರೆ. ಅಷ್ಟೇ ಅಲ್ಲ ಇಂಗ್ಲಿಷ್’ನಲ್ಲಿರುವ ಅವರ ಜೀವನ ಚರಿತ್ರೆಯನ್ನು ಇಡೀ ಜಗತ್ತೇ ಓದುತ್ತದೆ’ ಎನ್ನುವ ಎಚ್ಚರಿಕೆ ಸಾಲುಗಳನ್ನು ಸೇರಿಸಿದ್ದರು. ಅದೇ ದಿನ ಕಿಡಿಗೆ ಬರೆದ ಪತ್ರದಲ್ಲಿ ‘ ಒಂದು ಚಿಂತನೆಯನ್ನು ತೆಗೆದುಕೋ, ಎಲ್ಲ ಪವಾಡಗಳನ್ನು ಬದಿಗೆ ಸರಿಸಿ ರಾಮಕೃಷ್ಣರ ಜೀವನವನ್ನು ಚಿತ್ರಿಸು..ಅವರ ಬೋಧನೆಗಳೇ ಅವರ ಜೀವನವಾಗಿದ್ದಿತು ಎನ್ನುವುದು ಬೆಳಗು ‘ ಎಂದು ಸಲಹೆ ನೀಡಿದ್ದರು.
ಬಂಗಾಳಿಗಳಂತೆ ಮದ್ರಾಸಿನ ಶಿಷ್ಯರು ಅವರ ನಿರೀಕ್ಷೆಗೆ ತಲುಪಿರಲಿಲ್ಲ. ಇದರಿಂದ ಕೆರಳಿ ಕೆಂಡವಾಗಿದ್ದ ಸ್ವಾಮಿಗಳು ಗುರುಭಾಯಿಗಳನ್ನು ಹೀಗೆ ಕೊಡವಿದರು. ‘ನಾನೆಂದೂ ಬಂಗಾಳಿಗಳನ್ನು ನಂಬಿರಲಿಲ್ಲ. ಈಗ ಮದ್ರಾಸಿಗಳೂ ಏನನ್ನೂ ಮಾಡಲಿಲ್ಲ…ಒಬ್ಬನ ಹತ್ತಿರವೂ ಒಂದು ಮೂಲ ಪರಿಕಲ್ಪನೆಯಿಲ್ಲ. ಪ್ರತಿಯೊಬ್ಬನೂ ರಾಮಕೃಷ್ಣರು ಹಾಗೆ, ಹೀಗೆ ಎನ್ನುವ ತಲೆ ಬುಡವಿಲ್ಲದ ಅದೇ ಕಾಗೆ-ಗುಬ್ಬಿಗಳ ಕಥೆಯನ್ನು ಹೇಳುತ್ತ ಹಳೆಯ ಜಮಖಾನವನ್ನು ಕೊಡವುತ್ತಿದ್ದಾನೆ….ಇವತ್ತು ಒಂದು ಗಂಟೆಯಿದೆ, ನಾಳೆ ಅದಕ್ಕೆ ಒಂದು ಕೊಂಬು ಜೋಡಿಸುತ್ತೀರಿ…ಮರುದಿನ ಅದಕ್ಕೊಂದು ಚೌರಿಯ ಅಲಂಕಾರ. ಇವತ್ತು ಒಂದು ಮಂಚವನ್ನು ಪರಿಚಯಿಸುತ್ತೀರಿ , ನಾಳೆ ಅದರ ಕಾಲುಗಳಿಗೆ ಬೆಳ್ಳಿಯ ಹಣಸುಗಳು ಬರುತ್ತವೆ……..ಜನ ಮುದ್ದೆ-ಸಾರಿಗಾಗಿ ಪರಸ್ಪರ ನೆರವಾಗುತ್ತಾರೆ ಮತ್ತು ಎರಡು ಸಾವಿರ ಕಾಗೆ ಗೂಗೆಗಳ ಕಥೆ ಕಟ್ಟುತ್ತೀರಿ…ಇದನ್ನೇ ಇಂಗ್ಲಿಷ್’ನಲ್ಲಿ ಪೆದ್ದುತನ , ಮನೋದೌರ್ಬಲ್ಯ ಎನ್ನುತ್ತಾರೆ.
ರಾಮಕೃಷ್ಣರ ಜೀವನ ಚರಿತ್ರೆಯ ವಿಚಾರದಲ್ಲಿ ಬಂಗಾಳಿಗಳು ಅದರಂತೆಯೇ ಮದ್ರಾಸಿಗಳು ಏಕೆ ಸ್ವಾಮಿಗಳನ್ನು ನಿರಾಶೆಗೊಳಿಸಿದ್ದರೆಂದು ತಿಳಿಯುವುದು ಸಾದ್ಯ. ಬಂಗಾಳಿ ಭಾಷೆಯ ಚರಿತ್ರೆಗಳಲ್ಲಿ ರಾಮಕೃಷ್ಣರು ಬಂಗಾಳದ ಹಳ್ಳಿ ಮಾತಿನಲ್ಲಿ - ಕಲ್ಕತ್ತ ನಗರ ಬಂಗಾಳಿಯ ದೃಷ್ಟಿಯಲ್ಲಿ ಒರಟು ಮತ್ತು ಹೊಲಸು ಭಾಷೆ- ಹೇಳಿದುದನ್ನೇ ಹಾಗೆಯೇ ಬರೆಯುತ್ತಿದ್ದರು. ರಾಮಕೃಷ್ಣರನ್ನು ನೇರವಾಗಿ ಕಂಡಿದ್ದ , ಅವರನ್ನು ಸನಿಹದಿಂದ ಬಲ್ಲ ಶಿಷ್ಯರು, ಭಕ್ತರು ದಕ್ಷಿಣೇಶ್ವರದಲ್ಲಿ ನಡೆಯುತ್ತಿದ್ದುದನ್ನು , ಮಥುರಮೋಹನ ಬಿಶ್ವಾಸನ ಅಂತಪುರದಲ್ಲಿ ರಾಮಕೃಷ್ಣರು ಹೆಣ್ಣು ವೇಷದಲ್ಲಿ ವಾಸವಿದ್ದುದನ್ನು , ಭೈರವಿ ಬ್ರಾಹ್ಮಣಿಯ ಮಾರ್ಗದರ್ಶನದಲ್ಲಿ ಮಾಡಿದ ಭಯಂಕರ ಮತ್ತು ಅತಿ ಭಯಂಕರ ತಾಂತ್ರಿಕ ಸಾಧನೆಗಳನ್ನು ಅವರ ಬಾಯಿಯಿಂದ ಕೇಳಿದಂತೆಯೇ ದಾಖಲಿಸುತ್ತಿದ್ದರು. ನರೇಂದ್ರನಾಥದತ್ತ , ರಾಖಾಲಚಂದ್ರ ಘೋಷ್ , ಪೂರ್ಣ , ಭವನಾಥ ಮುಂತಾದ ಯುವಕರನ್ನು ಕಾಣದೆ ಗುರುಗಳು ಹೇಗೆ ವ್ಯಾಕುಲರಾಗುತ್ತಿದ್ದರು , ಅವರತ್ತ ಗುರುಗಳಿಗೆ ಎಷ್ಟು ಆಕರ್ಷಣೆಯಿದ್ದಿತು ಎನ್ನುವ ಸಂಗತಿಗಳನ್ನು ಕಂಡಂತೆ , ಇರುವಂತೆ ಚಿತ್ರಿಸುತ್ತಿದ್ದರು. ಇಂತಹ ಸಹಜ ಚಿತ್ರಣವನ್ನು ವೈಚಾರಿಕರಾದ ಪಾಶ್ಚಾತ್ಯ ಮುಂದೆ ಇರಿಸುವುದು ಸ್ವಾಮಿಗಳ ಬೇಕಾಗಿರಲಿಲ್ಲ. ಗುರುಗಳು ನರೇಂದ್ರನಾಥನತ್ತ ಅಂತಹ ಒಲವು ತೋರಿಸುತ್ತಿದ್ದರು , ಇಂತಹ ಪ್ರೇಮವಿದ್ದಿತು , ಆತನನ್ನು ಹಾಗೆನ್ನುತ್ತಿದ್ದರು, ಹೀಗೆನ್ನುತ್ತಿದ್ದರು ಎಂದು ‘ದಿ ಇಂಡಿಯನ್ ಮಿರರ್’ ಪತ್ರಿಕೆಗೆ ಏಕೆ ಹೇಳಿದಿರೆಂದು ಗುರುಭಾಯಿಗಳನ್ನು ಕೊಡವಿದ್ದರು. ಏಕೆಂದರೆ ಜಗತ್ತಿನ ಮುಂದೆ ಇರಿಸಬೇಕೆಂದು ಸ್ವಾಮಿಗಳು ಬಯಸಿದ್ದ ರಾಮಕೃಷ್ಣರು ಅದರಲ್ಲಿ ಇರಲಿಲ್ಲ. ಮದ್ರಾಸಿಗಳಿಗೆ ಲಭ್ಯವಿದ್ದ ಆಕರಗಳು ಕಲ್ಕತ್ತದಿಂದ ದಕ್ಕಿದವೇ ಆಗಿದ್ದು ಅವುಗಳಲ್ಲಿ ಸ್ವೋಪಜ್ಞತೆ ಇರಲಿಲ್ಲ ಮತ್ತು ಸಾಂಪ್ರದಾಯಿಕ ಪುರಾಣ ಶೈಲಿಯಲ್ಲಿದ್ದವು. ಇವು ಸ್ವಾಮಿಗಳಿಗೆ ರುಚಿಸಿರಲಿಲ್ಲ. ಸ್ವಾಮಿಗಳ ಈ ಎಲ್ಲ ಟೀಕೆಗಳನ್ನು ಅರಿತಿದ್ದ ಶಾರದಾನಂದರು ಮುಂದಿನ ದಿನಗಳಲ್ಲಿ ಶ್ರೀಶ್ರೀ ರಾಮಕೃಷ್ಣ ಲೀಲಾಪ್ರಸಂಗದಲ್ಲಿ ಅವುಗಳು ಮುನ್ನೆಲೆಗೆ ಬರದಂತೆ ಎಚ್ಚರ ವಹಿಸಿದರು.
ಸ್ವಾಮಿಗಳು ತಾವೇ ಏಕೆ ರಾಮಕೃಷ್ಣರ ಚರಿತ್ರೆಯನ್ನು ಆರಂಭದಲ್ಲಿ ಬರೆಯಲಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತದೆ. ೧೮೯೬ ರಲ್ಲಿ ನೀವೇ ಏಕೆ ಗುರುಗಳ ಚರಿತ್ರೆಯನ್ನು ಬರೆದು ಮ್ಯಾಕ್ಸ್ ಮುಲ್ಲರ್’ಗೆ ಒದಗಿಸಬಾರದೆಂದು ಶಾರದಾನಂದರು ಸ್ವಾಮಿಗಳನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸುತ್ತ ಸ್ವಾಮಿಗಳು ‘ ಗುರುಗಳ ಬಗ್ಗೆ ನನಗೆ ಆಳವಾದ ಭಾವಗಳಿರುವುದರಿಂದ ಸಾರ್ವಜನಿಕರಿಗಾಗಿ ನಾನು ಅವರ ಚರಿತ್ರೆಗಳನ್ನು ಬರೆಯಲಾರೆ. ಮ್ಯಾಕ್ಸ್ ಮುಲ್ಲರ್’ಗೆ ಬೇಕಾದ ಲೇಖನವನ್ನು ನಾನೇ ಬರೆಯತೊಡಗಿದರೆ ತತ್ತ್ವಶಾಸ್ತ್ರ , ಶಾಸ್ತ್ರಗ್ರಂಥಗಳನ್ನು ಮಾತ್ರವಲ್ಲ ಬೈಬಲ್’ನಲ್ಲಿರುವ ಹೇಳಿಕೆಗಳನ್ನೂ ಉದ್ಧರಿಸಿ ಜಗತ್ತಿನಲ್ಲಿ ಈವರೆಗೆ ಬಂದುಹೋದ ಎಲ್ಲ ಪ್ರವಾದಿಗಳಿಗಿಂತ ಶ್ರೇಷ್ಟವೆಂದು ತೋರಿಸುತ್ತಿದ್ದೆ’ ಎಂದು ಉತ್ತರಿಸಿದ್ದರು. ಸ್ವಾಮಿಗಳು ಬರೆದಿದ್ದ ‘ಮೈ ಮಾಸ್ಟರ್’ ಹೆಸರಿನ ರಾಮಕೃಷ್ಣರ ಜೀವನ ಚರಿತ್ರೆ ಸಣ್ಣದಾಗಿದ್ದರೂ ಶಾರದಾನಂದರು ಬರೆದ ಲೀಲಾಪ್ರಸಂಗಕ್ಕಿಂತ ಹೆಚ್ಚು ಖ್ಯಾತವಾಯಿತು. ಆದರೆ ‘ಮೈ ಮಾಸ್ಟರ್’ನಲ್ಲಿ ನಿಜವಾಗಿಯೂ ಇದ್ದ ರಾಮಕೃಷ್ಣರ ಬದಲಾಗಿ ಸ್ವಾಮಿ ವಿವೇಕಾನಂದರು ಬಯಸಿದಂತಹ ರಾಮಕೃಷ್ಣರಿದ್ದರು.
ಸ್ವಾಮಿ ವಿವೇಕಾನಂದರ ಕಾಲದಿಂದಲೂ ರಾಮಕೃಷ್ಣರ ಜೀವನ ಚರಿತ್ರೆ ಬರೆಯುವುದರಲ್ಲಿ ಮತ್ತು ಅವರ ಸಂದೇಶವನ್ನು ಅರ್ಥೈಸುವುದರಲ್ಲಿ ರಾಮಕೃಷ್ಣ ಮಠ ಮತ್ತು ಮಿಷನ್’ಗಳು ಹಿಡಿತ ಸಾಧಿಸಿದವು. ಈಗ ಲಭ್ಯವಿರುವ ರಾಮಕೃಷ್ಣರ ಬಹುತೇಕ ಜೀವನ ಚರಿತ್ರೆಗಳಿಗೆ ಇವೇ ಆಧಾರವಾಗಿವೆ. ಈ ಸಾಂಸ್ಥಿಕ ಬಲದ ಮುಂದೆ ನಿಲ್ಲಲಾರದ ಆರಂಭಿಕ ಕಾಲದ ಬಂಗಾಳಿಯ ಜೀವನ ಚರಿತ್ರೆಗಳು ಕತ್ತಲು ಕೋಣೆ ಸೇರಿದವು. ಸ್ವಾಮಿಗಳ ಸಮಕಾಲೀನರಾಗಿದ್ದ ಬ್ರಾಹ್ಮ ಸಮಾಜದ ಕೃಷ್ಣಕುಮಾರ ಮಿತ್ರ ‘ ನರೇಂದ್ರನಾಥದತ್ತ ರಾಮಕೃಷ್ಣರ ಭಕ್ತನಾಗಿದ್ದು ನಿಜವಾದರೂ ಆತ ಅವರನ್ನು ಪಂಥಗಳನ್ನು ಮೀರಿದ ವ್ಯಕ್ತಿಯಾಗಿ ಕಡೆದು ನಿಲ್ಲಿಸಿದನು’ ಎಂದಿರುವುದೇ ನಿಜ. (45) ಈಗ ಪ್ರಚಾರದಲ್ಲಿರುವ , ಜನ ಪರಿಚಿತವಾಗಿರುವ ರಾಮಕೃಷ್ಣ ಈ ಭೂಮಿಗಿಳಿದ ಅತ್ಯುನ್ನತ ಅವತಾರ ಮಾತ್ರವಲ್ಲ , ಹೊಸದಾಗಿ ಉದಯಿಸಿದ ಭಾರತದ ಪರಮ ಶ್ರೇಷ್ಟ ಸಂತ. ಉಳಿದ ಎಲ್ಲ ಸಂತರೂ ಆತನ ಅಂಶ ಮಾತ್ರ. ಜಾತಿ ಭೇದ ಎಣಿಸುವ , ಹೆಣ್ಣನ್ನು ತುಚ್ಛೀಕರಿಸುವ , ಜನರನ್ನು ಮೇಲೆತ್ತುವ ಸಮಾಜ ಸೇವೆಯನ್ನು ಹೀಗಳೆಯುವ ರಾಮಕೃಷ್ಣರ ಜಾಗದಲ್ಲಿ ನವಯುಗಾಚಾರ್ಯ ರಾಮಕೃಷ್ಣರ ಮೂರ್ತಿಯನ್ನು ಕಡೆದು ನಿಲ್ಲಿಸಲಾಗಿದೆ. ಇದಕ್ಕೆ ಸಮಾಂತರದಲ್ಲಿ ಗೃಹಸ್ಥ ಭಕ್ತರಾದ ರಾಮಚಂದ್ರದತ್ತ ಮತ್ತು ಮಹೇಂದ್ರನಾಥಗುಪ್ತರ ರಾಮಕೃಷ್ಣ ದಂತಗೋಪುರದಲ್ಲಿರುವ ಭಗವಂತನ ಮೂರ್ತಿಯಾದರೂ ಆತನಲ್ಲಿ ನಯ ನಾಜೂಕುಗಳಿಲ್ಲದ ಹಳ್ಳಿಯ ಬ್ರಾಹ್ಮಣನಿದ್ದಾನೆ ; ಗ್ರಾಮ್ಯ ಭಾಷೆಯಿದೆ, ಹುಂಬತನದೊಂದಿಗೆ ಬೋಳೇತನ ಬೆರೆತಿದೆ. ಕಾಮಾರಪುಕುರದಿಂದ ಕಲ್ಕತ್ತಕ್ಕೆ ಬಂದು ದೇವರ ಹುಚ್ಚು ಹತ್ತಿಸಿಕೊಂಡಿದ್ದ ಗದಾಧರ ಚಟರ್ಜಿ ಸಮಾಜ ಸುಧಾರಕನೂ ಅಲ್ಲ, ನವಯುಗಾಚಾರ್ಯನಂತೂ ಮೊದಲೇ ಅಲ್ಲ, ವೇದಾಂತಿ ಎನ್ನಲು ಆಧಾರಗಳಿಲ್ಲ ; ಆತ ಸ್ವಭಾವದಿಂದ ಭಕ್ತ , ಸನ್ನಿವೇಶದಿಂದ ಕಾಳಿಯ ಪೂಜಾರಿ , ಭೈರವಿಯ ಸಂಗದಿಂದ ಎಡಗೈ ತಾಂತ್ರಿಕ , ತೋತಾಪುರಿಯಿಂದ ಅರೆಕಾಲಿಕ ಸಂನ್ಯಾಸಿ. ಕೆಲವು ಭಾವುಕ ಭಕ್ತರಿಗೆ ಅವರು ಬಾಬಾ, ಭಗವಾನ್ ಆಗಿ ಕಂಡಿದ್ದರೂ , ಅವರ ಗಡಿ ಕಲ್ಕತ್ತದ ಹೊರ ಅಂಚಿನ ದಕ್ಷಿಣೇಶ್ವರದ ಒಳಗಿದ್ದಿತು. ಅವರ ಶಿಷ್ಯರ ಸಂಖ್ಯೆ ಐವತ್ತನೂ ದಾಟಿರಲಿಲ್ಲ. ಹೀಗಿದ್ದ ರಾಮಕೃಷ್ಣರನ್ನು ಸ್ವಾಮಿ ವಿವೇಕಾನಂದರು ಅವತಾರದ ಅವತಾರ , ಭಗವಾನರ ಭಗವಾನರನ್ನಾಗಿಸಿದರು.
*****
೧೮೯೪-೧೮೯೫ ರ ಅವಧಿಯಲ್ಲಿ ಬರೆದ ಹಲವು ಪತ್ರಗಳಲ್ಲಿ ರಾಮಕೃಷ್ಣರ ಜೀವನವೇ ವೇದ , ವೇದಾಂತಗಳ ಭಾಷ್ಯವಾಗಿದೆ ಎನ್ನುತ್ತ ‘ಅವತಾರ ಪುರುಷ ರಾಮಕೃಷ್ಣ’ರನ್ನು ಸೃಷ್ಟಿಸತೊಡಗಿದ ಸ್ವಾಮಿಗಳ ಮನಸ್ಸು ಅಮೆರಿಕಕ್ಕೆ ಹೋಗುವ ಮೊದಲು ಅವರ ತಳಮಳ , ಬೌದ್ಧಿಕ ತಾಕಲಾಟ, ಶಾಸ್ತ್ರಗಳಲ್ಲಿ ಅಪನಂಬಿಕೆಯ ರಣರಂಗವಾಗಿದ್ದಿತು-ಅಲ್ಲಿ ಹಲವು ವೈರುಧ್ಯಮಯ ಚಿಂತನೆಗಳ ಕಾದಾಟ ಸಾಗಿದ್ದಿತು. ರಾಮಕೃಷ್ಣರನ್ನು ದೇವರ ದೇವನನ್ನಾಗಿಸಿದ , ಅವರ ಮುಟ್ಟುವಿಕೆಯಿಂದಲೇ ಪ್ರಜ್ಞೆ ಕಳೆದುಕೊಂಡು ನಿರಾಕಾರದ ಅಂತಿಮ ಸತ್ಯದ ಬಾಗಿಲನ್ನು ತಟ್ಟಿ ಬಂದಿದ್ದ ಸ್ವಾಮಿ ವಿವೇಕಾನಂದರು ಹೊರಗೆ ಹೇಳುವುದಕ್ಕಿಂತ ಭಿನ್ನವಾಗಿ ಅಂತರಂಗದಲ್ಲಿ ತಮ್ಮ ಗುರುಗಳ ಬೋಧನೆಯಿಂದ/ಸ್ಪರ್ಶದಿಂದ ಏನನ್ನೂ ಗಳಿಸಿರಲಿಲ್ಲ ಎನ್ನುವುದನ್ನು ತಿಳಿಯಲು ಹಲವು ಪೂರಕ ಸಾಕ್ಷ್ಯಾಧಾರಗಳು ನಮಗೆ ದಕ್ಕುತ್ತವೆ. ೪/೭/೧೮೮೯ ರಂದು ಪ್ರಮದದಾಸರಿಗೆ ಬರೆದ ಪತ್ರದಲ್ಲಿ ‘’…ನನ್ನ ಪಾಲಿಗೆ ಆದರ್ಶ ಶಾಸ್ತ್ರ ದೊರಕಿದೆ, ಆದರ್ಶ ಪುರುಷನನ್ನು ನೋಡಿದ ಭಾಗ್ಯ ನನ್ನದಾಗಿದೆ. ಆದರೂ ಅವುಗಳೊಂದಿಗೆ ನನ್ನ ಜೀವನದ ಪರಮ ಗುರಿಯನ್ನು ಸೇರಲು ಸೋತಿರುವೆನು. ಇದೇ ನನ್ನ ಪರಮ ದುಃಖ ‘ ಎಂದು ಬರೆದರು. (46)
ಇದಾದ ನಂತರ ಬರೆದ ಇನ್ನೊಂದು ಪತ್ರದಲ್ಲಿ (೧೭/೮/೧೮೮೯) ಶಾಸ್ತ್ರಗಳಿಗೆ ಅನುಗುಣವಾಗಿ ಜಾತಿ ಅನುವಂಶಿಕವೇ ಅಲ್ಲವೇ ಎನ್ನವುದಕ್ಕೆ ಪ್ರಮದದಾಸ ಮಿತ್ರರಿಂದ ಸ್ಪಷ್ಟನೆ ಬಯಸಿ , ಈ ವಿಷಯದಲ್ಲಿ ನನ್ನ ಗುರುವಿನ ಕೃಪೆಯಿಂದ ನನಗೆ ಕೆಲವು ನಿರ್ದಿಷ್ಟ ಅಭಿಪ್ರಾಯಗಳಿವೆ ಎನ್ನುವ ಬಾಲಂಗೋಚಿ ಸೇರಿಸಿದ್ದರು. ಇದೇ ಪತ್ರ ಮುಂದಿನ ಭಾಗದಲ್ಲಿ (೧) ಮುಕ್ತಿ ಮತ್ತು ನಿರ್ವಾಣಗಳ ನಡುವಿನ ವ್ಯತ್ಯಾಸವನ್ನು ತಿಳಿಯಬಯಸಿದ್ದರು. (೨) ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಬೌದ್ಧರ ಪ್ರಜ್ಞಾಪಾರಮಿತದ ನಕಲು ಎನ್ನುವ ಸಂಶಯವನ್ನು ಸೂಚಿಸಿದ್ದರು. (೩) ಭಗವಂತನ ಇರುವಿಕೆಗೆ ವೇದಗಳೇ ಸಾಕ್ಷಿ –ವೇದಗಳೇ ಭಗವಂತನ ಉಸಿರು’ ಎನ್ನುವ ಶಾಸ್ತ್ರಗಳ ಹೇಳಿಕೆಯಲ್ಲಿ ಪರಸ್ಪರ ಒಂದನ್ನು ಇನ್ನೊಂದು ಸಮರ್ಥಿಸುವ ‘ಚಕ್ರವಾದ’ದ ತಾರ್ಕಿಕ ದೋಷಗಳನ್ನು ಗುರುತಿಸಿದ್ದರು (೪) ತರ್ಕದಿಂದ ಪೂರ್ಣತ್ವ ದಕ್ಕದು ಎನ್ನುವ ವೇದಾಂತ ಇತರ ತತ್ತ್ವಗಳನ್ನು ಖಂಡಿಸಲು ಅತಿರೇಕದ ತರ್ಕವನ್ನು ಬಳಸಿದ್ದು ಸರಿಯೇ ಎಂದು ಪ್ರಶ್ನಿಸಿದ್ದರು. (೫) ವ್ಯಾಸ , ಕಪಿಲ ಈ ಇಬ್ಬರೂ ಭ್ರಾಂತಿಯಲ್ಲಿ ಮುಳುಗಿರಲಿಲ್ಲ ಎಂದು ನಾವು ನಂಬುವುದಾದರೂ ಹೇಗೆ ಎಂದು ಶಾಸ್ತ್ರಗಳನ್ನು ಸಂಶಯಿಸಿದ್ದರು. (೬) ಸರ್ವಜ್ಞರಾದ ಋಷಿ-ಮನಿಗಳಿಗೆ ಖಗೋಳ ವಿಜ್ಞಾನದ ಯಾವ ಸತ್ಯವೂ ಗೊತ್ತಿರದೆ , ಭೂಮಿಯನ್ನು ವಾಸುಕಿ ಹೊತ್ತಿರುವನೆಂದು ನಂಬಿದ್ದರು. ಇಂತಹ ಸಾಮಾನ್ಯ ನೈಸರ್ಗಿಕ ವಿವರಗಳನ್ನು ತಿಳಿಯದ ಇಂತಹ ಋಷಿಗಳು ನಮ್ಮನ್ನು ಜನ್ಮಾಂತರದ ಸಾಗರದಿಂದ ಹೇಗೆ ಪಾರು ಮಾಡುಬಲ್ಲರು ಎಂದು ಋಷಿಗಳ ಜ್ಞಾನದ ಬಗ್ಗೆ ಅಪನಂಬಿಕೆ ತಳೆದಿದ್ದರು. (೭) ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ ಭಗವಂತ ಸೃಷ್ಟಿ ಕಾರ್ಯ ನಡೆಸುತ್ತಾನೆ ಎಂದರೆ ಆತನನ್ನು ಪೂಜಿಸುವ ಆವಶ್ಯಕತೆಯೆಲ್ಲಿ ಎನ್ನುವ ವೈಚಾರಿಕತೆ ಸ್ವಾಮಿಗಳಲ್ಲಿ ಮಿನುಗಿದ್ದಿತು. (೮) ವೇದಗಳು ಶಾಶ್ವತ ಸತ್ಯಗಳೇ ಆಗಿದ್ದರೆ ಅವುಗಳಲ್ಲಿದ್ದ ಹಲವಾರು ಆಚರಣೆಗಳನ್ನು ನಂತರ ಕಾಲದಲ್ಲಿ ಏಕೆ ನಿಷೇಧಿಸಲಾಯಿತು ಎಂದು ಕೇಳಿದಾಗ ಬೌದ್ಧಿಕ ನರೇಂದ್ರನಾಥದತ್ತ ಕಾಣಿಸಿಕೊಂಡಿದ್ದನು. (೯) ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹೇಳುವ ವ್ಯಾಸ ಹುಚ್ಚನಿರಬೇಕೆಂದು ಸೋಜಿಗಪಟ್ಟಾಗ ವೈಚಾರಿಕ ಪ್ರಜ್ಞೆ ಎಚ್ಚತ್ತಿದ್ದಿತು. (47)
ಸ್ವಾಮಿಗಳ ಈ ಪತ್ರಕ್ಕೆ ಪ್ರಮದಾದಸಮಿತ್ರರು ಸುದೀರ್ಘವಾಗಿ ಉತ್ತರಿಸಿದ್ದರು. ಅತ್ಯಂತ ಮಹತ್ವವಾದ ಅವರ ಈ ಪತ್ರ ರಾಮಕೃಷ್ಣ ಮಠದ ಕೆಲವರು ಮಾತ್ರವೇ ಪ್ರವೇಶಿಸಬಹುದಾದ ಗರ್ಭ ಗುಡಿಯ ಒಳಗಿರುವ ತಿಜೋರಿಯಲ್ಲಿ ಇರಬಹುದು. ‘ …ಹೇಗಾದರೂ ಇರಲಿ , ನಿಮ್ಮ ಉತ್ತರ ಬಹಳ ಹರಿತ ಮತ್ತು ಸದೆಬಡಿಯುವಂತೆ ಇತ್ತು’- ಹೀಗೆಂದು ಸ್ವಾಮಿಗಳು ಮನಸಾರೆ ಮೆಚ್ಚಿ ಪ್ರಮದದಾಸಮಿತ್ರರಿಗೆ ಮರುಪತ್ರ ಬರೆದಿದ್ದರು. ಸ್ವಾಮಿಗಳು ಮಾರ್ಚ್ ೧೮೯೦ ಅವಧಿಯಲ್ಲಿ ಸ್ವಾಮಿ ಅಖಂಡಾನಂದರಿಗೆ ಬೌದ್ಧ ಧರ್ಮ ಕುರಿತಾಗಿ ಬರೆದಿರುವ ಬಹುತೇಕ ಅಂಶಗಳು ಪ್ರಮದದಾಸಮಿತ್ರರ ಪತ್ರದಲ್ಲಿದ್ದವು ಎನಿಸುತ್ತದೆ. ಶಾಸ್ತ್ರಗಳಲ್ಲಿ ನುರಿತವರನ್ನು , ಗಹನವಾದ ತಾತ್ತ್ವಿಕವಾದ ಚರ್ಚೆಗಳನ್ನು ನಡೆಸುತ್ತಿದ್ದವರನ್ನು ಅಣಕಿಸುತ್ತ ಅದೆಲ್ಲ ಒಣ ಪಾಂಡಿತ್ಯ , ಹಣ್ಣು ತಿನ್ನುವುದು ಮುಖ್ಯವೇ ಹೊರತು ಮರದಲ್ಲಿ ಎಷ್ಟು ಹಣ್ಣಿವೆ , ತೋಟದಲ್ಲಿ ಎಷ್ಟು ಮರಗಳಿವೆ ಎಂದು ವಿಚಾರಿಸುತ್ತ ಕಾಲ ಕಳೆಯುವುದು ವ್ಯರ್ಥ , ವ್ಯಾಕುಲನಾಗಿ ಮುಳುಗು ಹಾಕದಿದ್ದರೆ ಆತನ ಸಾಕ್ಷಾತ್ಕಾರ ಅಸಾದ್ಯ. ಬರೇ ಪಾಂಡಿತ್ಯದಿಂದ ಮನುಷ್ಯನನ್ನು ಬೆರಗುಗೊಳಿಸಬಹುದು. ಆದರೆ ಆತನನ್ನು ಪಡೆಯಲಾಗದು…’ (48) ರಾಮಕೃಷ್ಣರ ಈ ಬೋಧನೆಗಳನ್ನು ಅವರು ಬದುಕಿದ್ದಾಗ ನರೇಂದ್ರನಾಥದತ್ತ ನೂರಾರು ಸಲ ಕೇಳಿದ್ದನು. ಅದರಂತೆಯೇ ಗುರುಗಳು ನನ್ನ ಕುಲಕುಂಡಲಿನಿ ಎಚ್ಚೆತ್ತು ನಾನು ನಿರ್ವಿಕಾರ , ನಿರ್ಗುಣ ಬ್ರಹ್ಮನ್ ಸ್ಥಿತಿ ತಲುಪಿದೆ ಎಂದು ಹೇಳುವಾಗಲೂ ಹಲವು ಸಲ ಇದ್ದನು. ಇಂತಹ ಅನುಭಗಳಿಂದ ಸಂಪನ್ನರಾಗಿದ್ದ ರಾಮಕೃಷ್ಣರು ಸ್ವಾಮಿಗಳ ಪ್ರಶ್ನೆಗಳಿಗೆ ಉತ್ತರಿಸಲು ಪ್ರಮದದಾಸಮಿತ್ರರಿಗಿಂತ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದರು. ಹಾಗಿದ್ದರೂ ನರೇಂದ್ರನಾಥದತ್ತ ಒಮ್ಮೆಯೂ ಗುರುಗಳನ್ನು ತೀವ್ರವಾಗಿ ಮುಖಾಮುಖಿಯಾಗಲಿಲ್ಲ. ಇದಕ್ಕೆ ಕಾರಣವನ್ನು ಹುಡುಕಬಹುದು. ಕೌಟುಂಬಿಕ ಸಂಕಷ್ಟಗಳಿಂದ ತತ್ತರಿಸಿ ‘ನನಗೆ ಬೇಕಾಗಿರುವುದು ಶಾಂತಿ , ಭಗವಂತನಲ್ಲ ಎಂದಿದ್ದ ನರೇಂದ್ರನಾಥದತ್ತ ಅಂತಹ ಪ್ರಶ್ನೆಗಳನ್ನು ಕೇಳುವುದು ಸಾದ್ಯವೂ ಇರಲಿಲ್ಲ ; (49) .ಅದನ್ನು ಮೀರಿ ಕೇಳಿದ್ದರೂ ಗುರುಗಳು ಅದಕ್ಕೆ ಉತ್ತರ ಕೊಡದೆ ತಮ್ಮದೇ ಆದ ಹಣ್ಣು-ಮರ-ಸವಿ ಮುಂತಾದ ಹಳಸಲು ಉತ್ತರಗಳನ್ನೇ ಕೊಡುತ್ತಿದ್ದರು.
೨೯/೧/೧೮೯೦ರವರೆಗೆ ಸ್ವಾಮಿಗಳು ಅಲಹಾಬಾದ್’ನಲ್ಲಿ ಉಳಿದಿದ್ದರು. ನಂತರ ಪವಹಾರಿ ಬಾಬಾನ ಖ್ಯಾತಿ ಕೇಳಿ ಅವರನ್ನು ಕಾಣಲು ಸ್ವಾಮಿಗಳು ಗಾಜಿಪುರಕ್ಕೆ ಹೋಗಿದ್ದರು. ಅವರಿಂದ ಹಠಯೋಗ ಕಲಿಯಲು ಬಯಸಿದ್ದರು. ಸುಮಾರು ಎರಡು ತಿಂಗಳುಗಳ ಕಾಲ ಸ್ವಾಮಿಗಳು ಅಲ್ಲಿದ್ದರು. ಸ್ವಾಮಿಗಳಿಗೆ ವೈಷ್ಣವ ಸಾಧು ಪವಹಾರಿ ಬಾಬಾ ಬಗೆಗಿನ ಆಕರ್ಷಣೆ , ಕುತೂಹಲದಿಂದ ಮೊದಲಾಗಿ , ನಿರೀಕ್ಷೆಯಲ್ಲಿ ಮುಂದುವರೆದು ನಿರಾಶೆಯಲ್ಲಿ ಕೊನೆಗೊಂಡಿತು. ಅಲ್ಪ ಕಾಲದಲ್ಲಿಯೇ ಪವಹಾರಿಬಾಬಾರವರಿಂದ ಏನನ್ನು ಕಲಿಯಲು ಸಾಧ್ಯವಿಲ್ಲ-ಅವರು ಏನನ್ನೂ ಕಲಿಸರು ಎಂದು ಸ್ವಾಮಿಗಳಿಗೆ ಮನದಟ್ಟಾಯಿತು. ಅತಿಯಾದ ಆಚರಣೆಗಳಲ್ಲಿ ಮುಳುಗಿರುವ ಪವಹಾರಿ ಬಾಬಾ ಪೂರ್ಣತೆ ಪಡೆದಿಲ್ಲ ಎನ್ನುವ ಶಂಕೆ ಮೂಡಿ, ಇನ್ನು ಮೇಲೆ ಯಾವ ಮಹಾಪುರುಷರ ಹತ್ತಿರವೂ ಹೋಗುವುದಿಲ್ಲವೆಂಬ ನಿರ್ಧಾರಕ್ಕೆ ಬಂದರು. ನಂತರದ ದಿನಗಳಲ್ಲಿ ಪವಹಾರಿ ಬಾಬಾನ ಹತ್ತಿರ ಹಠಯೋಗ ಕಲಿಯಲು ಹೋದಾಗ ಬಲಭಾಗದಲ್ಲಿ ದುಃಖಿತರಾಗಿ ನಿಂತಿರುವ ರಾಮಕೃಷ್ಣರನ್ನು ಹಲವು ರಾತ್ರಿ ಕಂಡಿದ್ದರಿಂದ ಆ ಯತ್ನ ಕೈಬಿಟ್ಟದ್ದಾಗಿ ಸ್ವಾಮಿಗಳು ಹೇಳಿಕೊಂಡಿದ್ದರ. (50) ಆದರೆ ಇದಕ್ಕಿಂತ ಬೇರೆಯಾಗಿ ಪ್ರಮಾದದಾಸಮಿತ್ರರಿಗೆ ಬರೆದ ಪತ್ರದಲ್ಲಿ ಹೀಗೆ ತಿಳಿಸಿದ್ದರು : ‘….ಶ್ರೀ ರಾಮಕೃಷ್ಣರಿಗೆ ಸಮನಾದವರು ಯಾರೂ ಇಲ್ಲ. ಆ ಅಪೂರ್ವ ಪರಿಪೂರ್ಣತೆ, ಆ ಅದ್ಭುತ ಅಹೇತುಕ ಕೃಪೆ, ಬಂಧನದಲ್ಲಿರುವ ವ್ಯಕ್ತಿಯ ಮೇಲಿರುವ ತೀವ್ರ ಅನುಕಂಪ-ಇವು ಜಗತ್ತಿನಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. (51) ಗುರುಗಳನ್ನು ಹೀಗೆ ಹೊಗಳಿದ್ದ ಸ್ವಾಮಿಗಳ ಮೂಲ ಉದ್ದೇಶ ಪ್ರಮದಾಸಮಿತ್ರರಿಗೆ ೨೬/೫/೧೮೯೦ ರಂದು ಬರೆದ ಪತ್ರದ ಮೂಲಕ ದಕ್ಕುತ್ತದೆ. ಪೂರ್ಣತೆಯ ಪರಾಕಾಷ್ಠೆ ತಲುಪಿದವರು ಮಾತ್ರ ಏನನ್ನೂ ಲೆಕ್ಕಿಸದೆ ಮನೆ , ಮಠ ತೊರೆದ ಪರಿವ್ರಾಜಕರಾಗುವುದು ಸಾದ್ಯ. ಆವರೆಗೆ ಒಂದು ಸ್ಥಿರ ನೆಲೆ ಬೇಕು. ಆದ್ದರಿಂದ ರಾಮಕೃಷ್ಣರ ಹೆಸರಿನಲ್ಲಿ ದೇವಾಲಯ/ಮಠ ಕಟ್ಟಬೇಕೆಂದಿದ್ದೇನೆ. ಇದಕ್ಕೆ ನೀವು ಚಂದಾ ಎತ್ತುವದರ ಮೂಲಕ ನೆರವಾಗಬಲ್ಲಿರಾ ಎಂದು ಕೇಳಿದ್ದರು. ಇನ್ನೂ ಮುಂದೆ ಒಂದು ಹೆಜ್ಜೆ ಹೋಗಿ ಅದಕ್ಕಾಗಿ ನಾನು ಕಳ್ಳತನ , ದರೋಡೆ ಮಾಡಲೂ ಸಿದ್ಧ’ –ದೃಢ ಮಾತಿನಲ್ಲಿ ಹೇಳಿದರು. (52) ). ಇದಕ್ಕೆ ಪ್ರಮದದಾಸ ಮಿತ್ರರು ನೀಡಿದ ಉತ್ತರದಿಂದ ಸ್ವಾಮಿಗಳು ಅವರಿಂದ ದೂರವಾದರು ಮಾತ್ರವಲ್ಲ , ಸರಿಯಾದ ಸಮಯ ಸಿಕ್ಕಾಗ ಅವರಿಗೆ ಬುದ್ಧಿ ಕಲಿಸುವ ನಿರ್ಧಾರ ಮಾಡಿದರು.
ಅಮೆರಿಕದಲ್ಲಿ ಒಂದು ವರ್ಷ ಕಳೆದ ನಂತರ ತಮ್ಮ ಹಳೆಯ ಕನಸನ್ನು ನನಸಾಗಿಸಿಕೊಳ್ಳುವುದು ಸಾದ್ಯ ಎಂದು ಸ್ವಾಮಿಗಳು ಅರಿತರು. ಅದಕ್ಕಾಗಿ ನಾಲ್ಕು ವರ್ಷಗಳ ಹಿಂದೆ ಪ್ರಮದದಾಸ ಮಿತ್ರರ ಮುಂದಿರಿಸಿದ್ದ ತಮ್ಮ ಯೋಜನೆಯನ್ನು ಜಾರಿಗೊಳಿಸಲು ಅಣಿಯಾದರು. ಅದಕ್ಕಾಗಿ ರಾಮಕೃಷ್ಣರನ್ನು ಭಾರತದ ಎಲ್ಲ ಸಾಧು-ಸಂತರಿಗಿಂತ ಶ್ರೇಷ್ಠವಾಗಿಸುವ ಕಾರ್ಯಕ್ರಮದ ಅಂಗವಾಗಿ ಗುರುಭಾಯಿಗಳಿಗೆ , ಶಿಷ್ಯರಿಗೆ ಒಂದರ ನಂತರ ಒಂದರಂತೆ ಪತ್ರಗಳನ್ನು ಬರೆಯತೊಡಗಿ ತಮಗೆ ಬೇಕಾದ ರಾಮಕೃಷ್ಣರ ನಿರ್ಮಾಣಕ್ಕೆ ಸಿದ್ಧರಾದರು. ಸಾಯುವ ಕೆಲ ದಿನ ಮೊದಲು ಯಾವನು ರಾಮನೋ , ಯಾವನು ಕೃಷ್ಣನೋ ಆತನೇ ನಾನು ಎಂದು ಗುರುಗಳು ನನಗೆ ತಿಳಿಸಿದರು ಎಂದು ಸ್ವಾಮಿಗಳು ಸಾರಿದರು. ಕುರುಡು ಭಕ್ತನ ಒಳಗಣ್ಣಿನ ಮೂಲೆಯಲ್ಲಿಯೂ ವೈಚಾರಿಕತೆಯ ಸಣ್ಣ ಬೆಳಕು ಸದಾ ಬೆಳಗುತಿರುತ್ತದೆ. ಸ್ವಾಮಿಗಳು ರಾಮಕೃಷ್ಣರನ್ನು ಭಾರತದ ಭಾಗ್ಯ ವಿಧಾತ , ಅವತಾರ ಪುರುಷರನ್ನಾಗಿಸುವ ಪ್ರಯತ್ನದಲ್ಲಿ ಜಯಶೀಲರಾಗುವ ಹಂತದಲ್ಲಿಯೇ ಗುರುಭಾಯಿ ಸ್ವಾಮಿ ಬ್ರಹ್ಮಾನಂದರಿಗೆ ಆ ಬಗ್ಗೆ ಅನುಮಾನ ಮೂಡಿತು. ಈ ಕುರಿತಾಗಿ ಬ್ರಹ್ಮಾನಂದರು ಸ್ವಾಮಿಗಳಿಗೆ ಏನು ಬರೆದಿದ್ದರೆಂದು ತಿಳಿಯುವುದಿಲ್ಲ. ಇಂತಹ ಪತ್ರಗಳು ಎಂದಿಗೂ ಸಿಗುವುದಿಲ್ಲ-ಅವು ಇರಬೇಕಾದಲ್ಲಿ ಭದ್ರವಾಗಿ ಇರುತ್ತವೆ , ಸ್ವಾಮಿಗಳು ೪/೧೦/೧೮೯೫ ರಂದು ಬ್ರಹ್ಮಾನಂದರಿಗೆ ಬರೆದ ಮಾರೋಲೆ ಹೀಗಿದೆ :
‘ ………ಶ್ರೀ ರಾಮಕೃಷ್ಣರನ್ನು ಕಪಟಿಗಳೆಂದು ಒಪ್ಪಿಕೊಂಡರೂ , ಅವರಲ್ಲಿ ಶರಣಾಗತರಾದವರದ್ದು ದೊಡ್ಡ ತಪ್ಪೆಂದು ನಿರ್ಧಾರವಾದರೂ ಈಗ ನಮಗೆ ಮಾಡಲು ಬೇರೆ ಹಾದಿ ಏನಿದೆ ? ಒಂದು ಜನ್ಮ ನಷ್ಟವಾದರೇನಂತೆ ? ಮನುಷ್ಯ ಕೊಟ್ಟ ಮಾತನ್ನು ತಪ್ಪುವುದಕ್ಕೆ ಆಗುತ್ತದೆಯೇ ? ಒಂದು ಹೆಣ್ಣಿಗೆ ಹಲವು ಗಂಡಂದಿರಿರಲು ಸಾದ್ಯವೇ? ....... ಆದರೆ ಈ ಜನ್ಮದಲ್ಲಿ ಆ ನಿರಕ್ಷರಿ ಬ್ರಾಹ್ಮಣ ನನ್ನ ದೇಹವನ್ನು ಎಂದೆಂದಿಗೂ ಕೊಂಡುಕೊಂಡಿರುವನು……. ನೀನು ಶ್ರೀರಾಮಕೃಷ್ಣರ ಜೀವನದ ಮಹಾತ್ಮೆಯನ್ನು ಪ್ರತ್ಯಕ್ಷ ನೋಡಿದರೂ ಕೆಲವು ವೇಳೆ ಅವರ ಮೇಲೆ ನಿನಗೆ ಶ್ರದ್ಧೆ ಜಾರುವುದೇ ! ನೀನು ತಿಳಿಗೇಡಿ. ನಾನು ಹೇಳುವುದು ಏನೂ ಇಲ್ಲ. ನಿನ್ನ ದೇಶದಲ್ಲಿ ಮತ್ತು ಹೊರಗೆ ಅಂತಹ ಮಹಾನುಭಾವನ ಮೂರ್ತಿಯನ್ನು ನಾಸ್ತಿಕರೂ , ಹೃದಯಹೀನರೂ ಕೂಡ ಆರಾಧಿಸುತ್ತಿರುವರು. ಆದರೆ ನಿನಗೆ ಮಾತ್ರ ಕೆಲವು ವೇಳೆ ಅಪನಂಬಿಕೆ ಬರುವುದು. ಅವರು ಉಸಿರು ಬಿಟ್ಟರೆ ನಿನ್ನಂತಹ ನೂರಾರು ಸಾವಿರಾರು ಜನರನ್ನು ಸೃಷ್ಟಿಸಬಲ್ಲರು . ಅವರ ಪಾದ ಧೂಳಿಯನ್ನು ತಲೆಯಲ್ಲಿ ಹೊರುವ ಅವಕಾಶ ಸಿಕ್ಕಿ ನಿನ್ನ ಜನ್ಮ ಪವಿತ್ರವಾಯಿತು. ನಿನ್ನ ವಂಶ ಪವಿತ್ರವಾಯಿತು. ನಿನ್ನ ದೇಶ ಪವಿತ್ರವಾಯಿತು….ಅವರು ನಮ್ಮೆಲ್ಲರನ್ನೂ ಕಾಯುತ್ತಿರುವರು. ಅದು ನನಗೆ ಕಾಣುತ್ತಿದೆ……’ . ಈ ಪತ್ರವನ್ನು ನೋಡಿದರೆ ಸ್ವಾಮಿಗಳು ತಾವೇ ಸೃಷ್ಟಿಸಿದ್ದ ರಾಮಕೃಷ್ಣರನ್ನು ಬಿಟ್ಟುಕೊಡದಂತಹ ಸ್ಥಿತಿಯನ್ನು ತಲುಪಿದ್ದರೆಂದು ಕಾಣುತ್ತದೆ. ಇದನ್ನು ಅವರ ಸಮಕಾಲೀನರು ಗುರುತಿಸಿದ್ದರು. ನರೇಂದ್ರನಾಥದತ್ತನನ್ನು ಒಂದೊಂದು ಸಲ ಒಂದೊಂದು ರೀತಿಯಲ್ಲಿ- ಸಪ್ತರ್ಷಿ ಮಂಡಲದಿಂದ ಬಂದಾತ , ನರರೂಪ ನಾರಾಯಣ , ಶುಕದೇವ , ಶಿವನ ಅವತಾರ-ಹೀಗೆ ಹೇಳುತ್ತಿದ್ದ ರಾಮಕೃಷ್ಣರ ಬಗ್ಗೆಯೇ ಸ್ವಾಮಿಗಳ ನೆಚ್ಚಿನ ಶಿಷ್ಯ ಶರತ್’ಚಂದ್ರ ಚಕ್ರವರ್ತಿಗೆ ಸಂಶಯಗಳು ಮೂಡಿ ಆ ಬಗ್ಗೆ ಯೋಗಾನಂದರನ್ನು ಪ್ರಶ್ನಿಸಿದ್ದನು. (53) , ಇನ್ನೊಂದು ಸಲ ಆತನಿಗೆ ಸ್ವಾಮಿಗಳು ರಾಮಕೃಷ್ಣರ ಹೆಸರಿನಲ್ಲಿ ಒಂದು ಸಂಪ್ರದಾಯ/ಪಂಥವನ್ನು ಹುಟ್ಟು ಹಾಕುತ್ತಿರುವರೆಂದು ಭಾಸವಾಗಿ ನೇರವಾಗಿ ಸ್ವಾಮಿಗಳನ್ನೇ ಪ್ರಶ್ನಿಸಿದ್ದನು. (54) ರಾಮಕೃಷ್ಣರನ್ನು ಸ್ವಾಮಿಗಳು ತಮಗೆ ಬೇಕಾದಂತೆ ಪ್ರಸ್ತುತಪಡಿಸುವುದನ್ನು ಯೋಗಾನಂದರು ಪ್ರಶ್ನಿಸಿದಾಗ ‘ಬ್ರಹ್ಮಜ್ಞಾನಕ್ಕಾದರೂ ಎಲ್ಲೆಯಿದೆ, ಪ್ರಭುವಿನ ತಿಳಿಯಲಾಗದ ಭಾವಕ್ಕೆ ಎಣೆಯಿಲ್ಲ. ಅವರ ಕೃಪಾಕಟಾಕ್ಷದಿಂದ ಲಕ್ಷ ವಿವೇಕಾನಂದರು ತಯಾರಾಗಬಲ್ಲರು’ ಎಂದು ಹೇಳಿ ಅವರ ಬಾಯಿ ಮುಚ್ಚಿಸಿದ್ದರು. (55) ವ್ಯಾಕುಲರಾಗಿ ದೇವರ ಮುಂದೆ ಅಳುವುದರ ಹೊರತು ಯಾವುದೇ ಶಾಸ್ತ್ರ , ಪಾಂಡಿತ್ಯ ಅನಾವಶ್ಯಕ ಎಂದು ಜೀವನದುದ್ದಕ್ಕೂ ಸಾರಿದ್ದ ಗುರುಗಳ ಬೋಧನೆಯನ್ನು ಮೀರಿ ‘ಜ್ಞಾನ ಸಂಪಾದನೆಗೆ ಶಾಸ್ತ್ರಗಳನ್ನು ಓದುವುದು ಅತ್ಯಂತ ಆವಶ್ಯಕ. ನಾನು ಶೀಘ್ರದಲ್ಲಿಯೇ ಮಠದಲ್ಲಿ ಶಾಸ್ತ್ರ ಪಾಠಗಳನ್ನ ತರಗತಿಗಳನ್ನು , ವೇದ, ಉಪನಿಷತ್ತು , ಭಗವದ್ಗೀತೆ , ಭಾಗವತ . ಅಷ್ಟಾಧ್ಯಾಯಿ ಮುಂತಾದವುಗಳ ತರಗತಿಗಳನ್ನು ಪ್ರಾರಂಭಿಸುತ್ತೇನೆ ಎನ್ನುವ ನಿಲುವು ತಾಳಿದ ಸ್ವಾಮಿ ವಿವೇಕಾನಂದರ ಗುರಿ ತಮಗೆ ಬೇಕಾದಂತಹ ರಾಮಕೃಷ್ಣರನ್ನು , ಮಠವನ್ನು ಸ್ಥಾಪಿಸುವದಾಗಿದ್ದಿತೇ ಹೊರತು ಬೇರೆಯಲ್ಲ ಎನ್ನುವುದು ಸ್ಪಷ್ಟ. (56)