|
ತಮಿಳು ಬ್ರಾಹ್ಮಿ
(ತಮಿಳಗಂ-ಸಂಗಂ: ಎಷ್ಟು ಪ್ರಾಚೀನ ? ಕೃತಿಯ ಆಯ್ದ ಭಾಗಗಳು) (see at end for TAMIL BRAHMI-FACTS OVER MYTHS) ಭಾರತದಲ್ಲಿ ಅಶೋಕ ಪರಿಚಯಿಸಿದ ಬ್ರಾಹ್ಮಿಯೇ ಅತ್ಯಂತ ಪ್ರಾಚೀನವಾದ ಲಿಪಿ. ಇದು ಭಾರತದ ಎಲ್ಲ ಲಿಪಿಗಳ ತಾಯಿ. ಇದರಿಂದ ದಕ್ಷಿಣ ಮತ್ತು ಸಿಂಹಳ ಬ್ರಾಹ್ಮಿಗಳು ಕವಲೊಡೆದವು. ಭಾರತದಲ್ಲಿ ಅತ್ಯಂತ ಪ್ರಾಚೀನ ಶಿಲಾಶಾಸನಗಳ ಭಾಷೆ ಪ್ರಾಕೃತ ,ನಂತರ ಸಂಸ್ಕೃತ. ಇದರ ನಂತರದ ಸ್ಥಾನ ತಮಿಳಿನದು. ದಕ್ಷಿಣ ಬ್ರಾಹ್ಮಿಯಿಂದ ರೂಪುಗೊಂಡ ತಮಿಳನ್ನು ಬರೆಯಲು ಉಪಯೋಗಿಸಿದ ಲಿಪಿಯನ್ನು ತಮಿಳರು ಇತ್ತೀಚೆಗೆ ತಮಿಳು-ಬ್ರಾಹ್ಮಿಯೆಂದು ಕರೆದು ಪ್ರಾಚೀನತೆಯನ್ನು ಆರೋಪಿಸಿ ಮೂಲ ಬ್ರಾಹ್ಮಿಗೆ ಸಮಾನವೆಂಬ ಅರ್ಥ ನೀಡಲು ಯತ್ನಿಸಿದರು. ತಮಿಳುನಾಡಿನ ಅತ್ಯಂತ ಪ್ರಾಚೀನ ಶಿಲಾಶಾಸನಗಳು ತಮಿಳು ಬ್ರಾಹ್ಮಿಯಲ್ಲಿವೆ. ಇವುಗಳ ಭಾಷೆ ಪ್ರಾಕೃತ ಮಿಶ್ರಿತ ತಮಿಳು. ಈ ಎಲ್ಲ ಪ್ರಾಚೀನ ಗುಹಾ ಬರಹಗಳು ಜೈನರಿಗೆ ದಾನಕೊಟ್ಟ ಮಾಹಿತಿಯನ್ನೊಳಗೊಂಡಿವೆ. ಜೈನೇತರವಾದ ಬೇರೆ ಯಾವ ತಮಿಳು-ಬ್ರಾಹ್ಮಿ ಬರಹವೂ ಈವರೆಗೆ ದಕ್ಕಿಲ್ಲ. ತಮಿಳುನಾಡಿನ ಕರಾವಳಿಯಲ್ಲಿ ಮತ್ತು ಶ್ರೀಲಂಕಾದ ಅನುರಾಧಪುರದಲ್ಲಿ ದೊರೆತ ಮಡಕೆಗಳ ಮೇಲಿನ ಪ್ರಾಚೀನವೆನಿಸುವ ಬರಹಗಳು ದಕ್ಕಿವೆ. ತಮಿಳು-ಬ್ರಾಹ್ಮಿ ಮೂರು ಲಿಪಿ ವೈವಿಧ್ಯತೆಯಲ್ಲಿ ಕಂಡು ಬಂದಿದೆ. ಕನ್ನಡ , ತೆಲುಗುಗಳಂತೆ ತಮಿಳು ಒಂದೇ ಬಾರಿಗೆ ಸುಸಜ್ಜಿತ ಲಿಪಿಯನ್ನು ಗಳಿಸಿಕೊಳ್ಳಲಿಲ್ಲ. ಅದು ವಟ್ಟೆಳ್ಳುತ್ತು , ಗ್ರಂಥ , ತಮಿಳು ಲಿಪಿಯಗಳಲ್ಲಿ ತಾಕಲಾಡಿ ಸ್ಥಿರರೂಪವನ್ನು ತಳೆಯಲು ಹೆಣಗಾಡಿತು. ಕನ್ನಡದ ಹಲ್ಮಿಡಿ ಶಾಸನ ಬಂದ ವೇಳೆಗೆ ತಮಿಳಿನಲ್ಲಿ ಯಾವುದೊಂದು ಪೂರ್ಣಪ್ರಮಾಣದ ಶಿಲಾಶಾಸನವೂ ಬರಲಿಲ್ಲ. ಇದರ ಹಿನ್ನೆಲೆಯಲ್ಲಿ ತಮಿಳು-ಬ್ರಾಹ್ಮಿ ಮತ್ತು ಅದಕ್ಕೆ ಲಗತ್ತಾದ ಸಮಸ್ಯೆ, ವಿವಾದಗಳ ಪಕ್ಷಿ ನೊಟವಿದೆ. ಅಬ್ಬರದ ಪ್ರಚಾರದಿಂದಾಗಿ ತಮಿಳಿನಲ್ಲಿ ಪೂರ್ಣ ಪ್ರಮಾಣದ ಪ್ರಾಚೀನ ಶಿಲಾಶಾಸನಗಳಿವೆಯೆಂಬ ಭ್ರಮೆ ಮೂಡುತ್ತದೆ. ಆಸಕ್ತ ಒದುಗರಿಗಾಗಿ ತಮಿಳು-ಬ್ರಾಹ್ಮಿ ಬರಹವಿರುವ ಶಿಲಾಶಾಸನ , ಮಡಕೆಗಳ ಛಾಯಾಚಿತ್ರಗಳನ್ನು ಸಹ ನೀಡಲಾಗಿದೆ. ಭಾರತದಲ್ಲಿ ಬರಹ ಸಂಸ್ಕೃತಿ ಕ್ರಿ.ಪೂ 325 ರಲ್ಲಿ ವಾಯುವ್ಯ ಭಾರತಕ್ಕೆ ಭೇಟಿ ನೀಡಿದ ನಿಯಾರ್ಕೊಸ್ ಭಾರತೀಯರು ಹತ್ತಿ ಬಟ್ಟೆಯ ಮೇಲೆ ಬರೆಯುತ್ತಿದ್ದರೆಂದು ಹೇಳಿದ್ದಾನೆ. ಆದರೆ ಲಿಪಿ ಮತ್ತು ಭಾಷೆ ಯಾವುದೆಂದು ಗೊತ್ತಿಲ್ಲ. ನಿಯಾರ್ಕೊಸ್ ನಂತರದ ಎರಡನೇ ದಶಕದಲ್ಲಿ ಈಶಾನ್ಯ ಭಾರತದಲ್ಲಿದ್ದ ಮೆಗಾಸ್ತಾನಿಸ್ ಭಾರತದಲ್ಲಿ ಲಿಖಿತವಾದ ಕಾನೂನು ಕಟ್ಟಳೆಗಳಿಲ್ಲ ಎಂದು ಹೇಳಿದ್ದಾನೆ. ಈ ಅಧಾರದ ಮೇಲೆ ಕೆಲವರು ಭಾರತೀಯರಿಗೆ ಆ ಕಾಲದಲ್ಲಿ ಬರೆಯಲು ಗೊತ್ತಿಲ್ಲವೆಂದು ಹೇಳಿದ್ದಾರೆ. ಪ್ರಾಚೀನ ಬೌದ್ಧ ಗ್ರಂಥ ಲಲಿತ ವಿಸ್ತರದ (ಈ ಕೃತಿ ಕ್ರಿ,ಶ. 308 ರಲ್ಲಿ ಚೀನಿ ಭಾಷೆಗೆ ಅನುವಾದಗೊಂಡಿದೆ) ಲಿಪಿಸಾರ ಸಂದರ್ಶನ 64 ಬಗೆಯ ಲಿಪಿಗಳನ್ನು ಉಲ್ಲೇಖಿಸುತ್ತದೆ. ಆದರೆ ಈ ಲಿಪಿಗಳ ಪಟ್ಟಿ ಪಠ್ಯಾಂತರದೊಂದಿಗೆ ಬದಲಾಗಿರುವುದು ತಿಳಿದುಬಂದಿದೆ. ಇದರಲ್ಲಿ ದಮಿಳ ಲಿಪಿಯೂ ಒಂದು. ಇದರೊಂದಿಗೆ ಹೂಣಲಿಪಿಯ ಪ್ರಸ್ತಾವವೂ ಇದೆ. ಆದ್ದರಿಂದ ಈ ಲಿಪಿಗಳ ಪಟ್ಟಿ ಕ್ರಿ.ಶ. 4ನೇ ಶತಮಾನದ ಈಚಿನದೆಂದು ತೀರ್ಮಾನಿಸಲಾಗಿದೆ. ಈ ಪಟ್ಟಿಯಲ್ಲಿನ ಲಿಪಿಗಳನ್ನು ಬ್ರಾಹ್ಮಿಯ ಪ್ರಾದೇಶಿಕ ರೂಪಗಳೆಂದು ಪರಿಗಣಿಸಬಹುದು. ಕನರಿ ಎನ್ನುವ ಲಿಪಿಯೂ ಇದರಲ್ಲಿ ಉಲ್ಲೇಖವಾಗಿದೆ. ಇದು ಕನ್ನಡ ಲಿಪಿಯಿರಬಹುದೆಂದು ಕೆಲ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಪನ್ನವಣಸುತ್ತ (ಕ್ರಿ.ಪೂ 168) ಮತ್ತು ಸಮವಾಯಾಂಗ ಸುತ್ತ 18 ಲಿಪಿಗಳನ್ನು ಹೆಸರಿಸುತ್ತವೆ. ಇವುಗಳಲ್ಲಿ ಬ್ರಾಹ್ಮಿ ಮತ್ತು ಖರೋಷ್ಟಿ ಮಾತ್ರ ನಿಜವಾದ ಲಿಪಿಗಳಾಗಿರುವ ಸಾಧ್ಯತೆಗಳಿವೆ. ಇವುಗಳಲ್ಲಿ ಹೇಳಲಾಗಿರುವ ದ್ರಾವಿಡ ಲಿಪಿ ಭಟ್ಟಿಪೆÇ್ರೀಲು ಲಿಪಿಯೆಂದು ಬುಹ್ಲರ್ ಅಭಿಪ್ರಾಯವಾಗಿದೆ. ಈ ಕೃತಿಗಳಲ್ಲಿ ಉಲ್ಲೇಖವಾಗಿರುವ ಉಳಿದ ಯಾವುದೇ ಲಿಪಿಗಳಿಗೂ ಬಾಹ್ಯ ಸಾಕ್ಶ್ಯಗಳು ದೊರೆತಿಲ್ಲ. ಪಾಣಿನಿ ತನ್ನ ಅಷ್ಟಾಧ್ಯಯಿಯಲ್ಲಿ ಲಿಪಿ ಮತ್ತು ಬರವಣಿಗೆಯನ್ನು ಕುರಿತಾಗಿ ಹೇಳಿದ್ದಾನೆ. ಆದರೆ ಪಾಣಿನಿಯ ಕಾಲ ಕ್ರಿಪೂ 4-2 ಶತಮಾನಗಳ ನಡುವೆ ಸುತ್ತುತ್ತಿದೆ. ಶ್ರೀಲಂಕಾದ ಅನುರಾಧಪುರದ ಬಳಿ ದಕ್ಕಿದ ಮಡಕೆಗಳ ಮೇಲೆ ಬರಹಗಳಿವೆ. ಈ ಮಡಕೆಗಳು ದೊರೆತ ಸ್ತರಗಳ ಕಾಲವನ್ನು ರೇಡಿಯೋ ಕಾರ್ಬನ್ ಪರೀಕ್ಷೆಯಿಂದ ಮೌರ್ಯಪೂರ್ವ ಕಾಲಕ್ಕೆ ಸೇರಿಸಲಾಗಿದೆ.(ಕ್ರಿ.ಪೂ 400-500). ಉತ್ಖನನಿಸಿದ ಸ್ತರಗಳ ಕಾಲ ಹಾಗೂ ಅಲ್ಲಿನ ಲಭ್ಯ ಮಡಕೆಗಳ ಕಾಲ ಬೇರೆಯಾಗಿದ್ದು ಅವುಗಳಲ್ಲಿನ ಲಿಪಿ ಮೌರ್ಯ ಕಾಲದ ನಂತರದ್ದೆಂದು ಕೆಲ ವಿದ್ವಾಂಸರು ವಾದಿದಿದ್ದಾರೆ. ಭಾರತದಲ್ಲಿ ಲಿಪಿ ಪ್ರಾಚೀನತೆ ಕುರಿತಾಗಿ ನಡೆಸಿದ ಅಧ್ಯಯನಗಳು ಯಾವುದೇ ಒಮ್ಮತದ ತೀರ್ಮಾನಗಳಿಗೆ ಬರುವಲ್ಲಿ ಯಶಸ್ವಿಯಾಗಿಲ್ಲ. ಬ್ರಾಹ್ಮಿ ಲಿಪಿ ಖ್ಯಾತ ಇತಿಹಾಸಕಾರ ಟೇಲರ್ ಬ್ರಾಹ್ಮಿ ಸರಳ , ಸಹಜ , ದಿಟ್ಟ, ಭವ್ಯ , ದೋಷರಹಿತ, ಕಲಿಯಲು ಸುಲಭವಾದ , ಬಳಸಲು ಸ್ನೇಹಿಯಾದ ಲಿಪಿಯೆಂದು ಶ್ಲಾಘಿಸಿದರೆ , ಕಸ್ಟ್ ಭಾರತೀಯ ಬ್ರಾಹ್ಮಿ ಜಗತ್ತಿನಲ್ಲೇ ಅನುಪಮವಾದ ಅಕ್ಷರ ಪದ್ಧತಿಯೆಂದು ಸಾರಿದ್ದಾನೆ. ಮಾನವನ ಧ್ವನಿಯಲ್ಲಿನ ಎಲ್ಲ ಪ್ರಮುಖ ಏರಿಳಿತದ ಛಾಯೆಗಳನ್ನೊಳಗೊಂಡಿರುವ, ಅಲ್ಪ-ಮಹಾಪ್ರಾಣಗಳಿಂದ ಸಂಪದ್ಭರಿತವಾದ , ಅನುನಾಸಿಕ-ಅನುಸ್ವರಗಳ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ , ಮೂರು ಸ ಧ್ವನಿಗಳಿಂದ (ಶ,ಷ,ಸ) ವೈವಿಧ್ಯತೆ ಸಾಧಿಸಿರುವ , ಸ್ವರ-ವ್ಯಂಜನಗಳ ವರ್ಗೀಕರಣದಿಂದ ವೈಜ್ಞಾನಿಕ ಹಿನ್ನೆಲೆ ಹೊಂದಿರುವ ಬ್ರಾಹ್ಮಿಯ ಮುಂದೆ ನಿಲ್ಲಬಲ್ಲ ಲಿಪಿ ಜಗತ್ತಿನಲ್ಲಿ ಇನ್ನೊಂದಿಲ್ಲವೆಂದು ಹಲವಾರು ಖ್ಯಾತ ಲಿಪಿ, ಭಾಷಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬ್ರಾಹ್ಮಿ ಕಾಲಾನುಕ್ರಮದಲ್ಲಿ ಭಾರತದ ಹಲವು ಹತ್ತಾರು ಪ್ರಾದೇಶಿಕ ಭಾಷೆಗಳ ಲಿಪಿ ಉಗಮಕ್ಕೆ ಕಾರಣವಾಯಿತು. ಇದರಿಂದಾಗಿ ಮೂಲ ಬ್ರಾಹ್ಮಿ ಬಳಕೆಯಿಂದ ದೂರ ಸರಿದು ಭಾರತೀಯರಿಗೆ ಅಜ್ಞಾತವಾಯಿತು. ಕ್ರಿ.ಶ 1356 ರಲ್ಲಿ ಫಿûರೋಜ್ ಷಾ ತುಘಲಕ್(ಕ್ರಿ.ಶ. 1351-1388) ತೊಪ್ರಾ ಮತ್ತು ಮೀರತ್ಗಳಲ್ಲಿದ್ದ ಅಶೋಕನ ಬರಹದ ಸ್ತಂಭಗಳನ್ನು ದೆಹಲಿಗೆ ಸಾಗಿಸಿ ಅದರಲ್ಲಿ ಬರೆದುದನ್ನು ಓದುವಂತೆ ಸಂಸ್ಕೃತ ಪಂಡಿತರನ್ನು ಆಹ್ವಾನಿಸಿದನು. ಆದರೆ ಯಾರೊಬ್ಬರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಇಂತಹುದೇ ಮತ್ತೊಂದು ಪ್ರಯತ್ನ ಅಕ್ಬರ್ ಕಾಲದಲ್ಲಾಯಿತು. ಬ್ರಿಟಿಷ್ರು ಭಾರತಕ್ಕೆ ಬಂದು ಲಿಪಿಗಳ ವೈಜ್ಞಾನಿಕ ಅಧ್ಯಯನ ಪ್ರಾರಂಭಿಸಿದ ನಂತರ ಪ್ರಾಚೀನ ಲಿಪಿಗಳನ್ನು ಓದುವಲ್ಲಿ ಗಮನಾರ್ಹ ಯಶಸ್ಸು ದಕ್ಕತೊಡಗಿ 1837 ರಲ್ಲಿ ಜೇಮ್ಸ್ ಪ್ರಿನ್ಸೆಪ್ ಸಾಂಚೀ ಸ್ತೂಪದಲ್ಲಿನ ಬರಹಗಳ ಅಧ್ಯಯನದಿಂದ ಅಶೋಕನ ಶಿಲಾಶಾಸನಗಳ ಲಿಪಿಯಲ್ಲಿನ ಅಕ್ಷರಗಳನ್ನು ಗುರುತಿಸುವ ಮೂಲಕ ಭಾರತದ ಪ್ರಾಚೀನ ಬರಹಗಳ ಅಧ್ಯಯನಕ್ಕೆ ಕ್ರಾಂತಿಕಾರಕ ತಿರುವು ಮೂಡಿತು. ಭಾರತದಾದ್ಯಂತ ಕಂಡು ಬಂದಿರುವ ಮೂಲ ಲಿಪಿಯನ್ನು ಬ್ರಾಹ್ಮಿ0ಯೆಂದು ಗುರುತಿಸಲಾಗಿದೆ. ಬ್ರಾಹ್ಮಿ ಲಿಪಿಯ ಮೂಲ, ಉಗಮಸ್ಥಾನ, ವಿಕಸನ ಕುರಿತಾದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳೆವೆಯಾದರೂ ಅಶೋಕ ಈ ಲಿಪಿಯನ್ನು ಶಿಷ್ಟಗೊಳಿಸಿ , ವಿಸ್ತೃತವಾಗಿ ಬಳಸಿ ಭಾರತೀಯ ಲಿಪಿ ಸಂಸ್ಕೃತಿಗೆ ನಾಂದಿ ಹಾಡಿದನೆಂದು ಮತ್ತು ಭಾರತದಲ್ಲಿನ ಎಲ್ಲಾ ಲಿಪಿಗಳಿಗೂ ಬ್ರಾಹ್ಮಿಯೇ ಮೂಲವೆಂದು ಬಹುತೇಕ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಶ 1 ನೇ ಶತಮಾನದಿಂದ ಬ್ರಾಹ್ಮಿ ಉತ್ತರ ಮತ್ತು ದಕ್ಷಿಣ ಭಾರತದ ಭಾಷೆಗಳ ಲಿಪಿಯಾಗಿ ಕಾಲಾನುಕ್ರಮದಲ್ಲಿ ಹಲವಾರು ಪ್ರಾದೇಶಿಕ ಮಾರ್ಪಾಡುಗಳನ್ನು ಹೊಂದುತ್ತ , ಹತ್ತಾರು ಕವಲುಗಳಲ್ಲಿ ವಿಕಸಿಸಿದೆ. ದಕ್ಷಿಣ ಬ್ರಾಹ್ಮಿ, ಶ್ರೀಲಂಕಾ ಬ್ರಾಹ್ಮಿ ಇಂತಹ ಎರಡು ಮುಖ್ಯ ಕವಲುಗಳು. 19ನೇ ಶತಮಾನದವರೆಗೆ ಅಶೋಕನ ಲಿಪಿಯನ್ನು ‘ಲಾಟ’ , ‘ದಾಕ್ಷಿಣಾತ್ಯ ಅಶೋಕ’, ‘ಭಾರತೀಯ ಪಾಳಿ’,ಮೌರ್ಯ’ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ ಬೌದ್ಧ ಮತ್ತು ಜೈನ ಸಂಪ್ರದಾಯಗಳು ಲಿಪಿಗಳಲ್ಲಿ ಮೊದಲಿಗೆ ಬ್ರಾಹ್ಮಿಯನ್ನು ಹೆಸರಿಸುತ್ತಿದ್ದುದರಿಂದ ಟೆರೆಯನ್ ಡೆ ಲಕಾಪೀರೆ ಅಶೋಕ ಬಳಸಿದ ಲಿಪಿಯನ್ನು ಬ್ರಾಹ್ಮಿಯೆಂದು ಕರೆಯಬೇಕೆಂದು ಸೂಚಿಸಿದನು. ಮುಂದೆ ಇದೇ ಹೆಸರು ಬಳಕೆಗೆ ಬಂದಿತು. ಬ್ರಾಹ್ಮಿಲಿಪಿ ಸ್ವರಸಹಿತ ವ್ಯಂಜನ ಅಕ್ಷರ ಪದ್ದತಿ .ಇದರಲ್ಲಿ ವ್ಯಂಜನ ಸ್ವರ ಸಹಿತವಾಗಿ ಬರುತ್ತದೆ. ಸ್ವರರಹಿತತೆಯನ್ನು ಹೆಚ್ಚುವರಿ ಗೀಟಿನಿಂದ ಸೂಚಿಸಬಹುದು ಅಥವಾ ಸೂಚಿಸದಿರಬಹುದು. ಬ್ರಾಹ್ಮಿ ಲಿಪಿಯಲ್ಲಿ ವ್ಯಂಜನಾಕ್ಷರದಲ್ಲಿ ಯಾವ ಹೆಚ್ಚಿನ ಗುರುತು ಇಲ್ಲದಿದ್ದರೆ ಆ ವ್ಯಂಜನದಲ್ಲಿನ ಸ್ವರ ‘ಅ’. ವ್ಯಂಜನ ಬೇರೆ ಸ್ವರಗಳನ್ನು ಅಂತ್ಯದಲ್ಲಿ ಹೊಂದಿದ್ದರೆ (ಆ,ಇ,ಈ,ಉ,ಊ,ಎ,ಏ) ಅದರ ಗುರುತಿಗೆ ವ್ಯಂಜನಕ್ಕೆ ಹೆಚ್ಚಿನ ಗುರುತನ್ನು ಸೇರಿಸಲಾಗುವುದು. ಸ್ವರರಹಿತ ವ್ಯಂಜನದೊಂದಿಗೆ ವ್ಯಂಜನ ಬಂದಾಗ ಒತ್ತಕ್ಷರ ಬರುತ್ತದೆ. ಇದಕ್ಕಾಗಿ ಪ್ರತಿಯೊಂದು ವ್ಯಂಜನಕ್ಕೆ ಒತ್ತುವಿನ ಸಂಕೇತವಿದೆ. ತಮಿಳು ಬ್ರಾಹ್ಮಿಯ ಚರಿತ್ರೆ ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ ತಮಿಳಗಂನ ಆರಂಭಿಕ ಚರಿತ್ರೆಯನ್ನು ಅರಿಯಲು ಸಂಗಂ ಸಾಹಿತ್ಯದ ಮೊರೆಹೋಗಲಾಯಿತು. ಜಾರ್ಜ್ ಹಾರ್ಟ್ ಅಲೆಮಾರಿ ವೃತ್ತಿಗಾಯಕರುಗಳ ಮೌಖಿಕ ಸಾಹಿತ್ಯವನ್ನು ಪುಲವನ್ರು ಲಿಪಿಗೊಳಿಸಿದರೆಂದು ಸಾರಿದರಾದರೂ ಆ ಕಾಲದಲ್ಲಿನ ಬರಹ ಸಂಸ್ಕೃತಿಯನ್ನು ಸಮಕಾಲೀನ ಲಭ್ಯ ಶಿಲಾಲೇಖನಗಳೊಂದಿಗೆ ಹೋಲಿಸುವ ಗೋಜಿಗೆ ಹೋಗಲಿಲ್ಲ. ಪ್ರ.ಶ 19ನೇ ಶತಮಾನದ ಅಂತ್ಯದವರೆಗೆ ತಮಿಳುನಾಡಿನಲ್ಲಿ 8ನೇ ಶತಮಾನಕ್ಕೆ ಸೇರಿದ್ದ ಪಾಂಡ್ಯರ ವಟ್ಟೆಳ್ಳುತ್ತು ಮತ್ತು 7ನೇ ಶತಮಾನದ ಪಲ್ಲವರ ತಮಿಳು ಲಿಪಿಗಳು ಮಾತ್ರ ತಿಳಿದು ಬಂದಿದ್ದವು. ಒಂದೇ ಮೂಲದ ಬ್ರಾಹ್ಮಿಯಿಂದ ಒಂದೇ ಭಾಷೆಗೆ ಎರಡು ಲಿಪಿಗಳು ಹೇಗೆ ಬಂದವೆಂಬುದು ವಿದ್ವಾಂಸ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದಿತು. ಸಂಗಂ ಸಾಹಿತ್ಯ ಸೃಜಿಸಿದ ಸಂಸ್ಕೃತಿಯ ಲಿಪಿಯ ಆರಂಭಿಕ ಸ್ವರೂಪದ ಬಗೆಗೆ ಯಾವುದೇ ಸ್ಪಷ್ಟ ಮಾಹಿತಿಗಳಿರಲಿಲ್ಲ. 1882ರಲ್ಲಿ ರಾಬರ್ಟ್ ಸೆವೆಲ್ ಅಶೋಕನ ಬರಹಗಳಿಗೆ ಸನಿಹವೆನಿಸುವ ಶಿಲಾಶಾಸನವನ್ನು ಮಂಗುಳಂನ ಗುಹಾ ಬರಹದಲ್ಲಿ ಮೊದಲಿಗೆ ಗುರುತಿಸಿದನು. ಇದನ್ನು ಈಗ ತಮಿಳುನಾಡಿನ ಅತ್ಯಂತ ಪ್ರಾಚೀನ ಶಿಲಾಶಾಸನವೆಂದು ಪರಿಗಣಿಸಲಾಗಿದೆ. ಇದಾದ ನಂತರ ಇಂತಹ ಹಲವಾರು ಗುಹಾಶಿಲಾಶಾಸನಗಳು ಬೆಳಕಿಗೆ ಬಂದವು. ಈ ಬರಹಗಳನ್ನು ತಮಿಳು ಭಾಷೆಯಲ್ಲಿ ಪ್ರಭುತ್ವ ಹೊಂದಿರದ ಜೈನ,ಬೌದ್ಧ ಮುನಿಗಳಿಂದ ಬರೆಸಲ್ಪಟ್ಟಿದ್ದು ಆ ಕಾಲದ ತಮಿಳು ಭಾಷೆಯನ್ನು ಪ್ರತಿನಿಧಿಸುವುದಿಲ್ಲೆಂದು ಭಾವಿಸಲಾಯಿತು. ಆದರೆ ತಮಿಳುನಾಡಿನ ಉತ್ಖನನಗಳಲ್ಲಿ ದೊರೆತ ಮಡಕೆಯ ಮೇಲಿನ ಬರಹಗಳು ಈ ವಾದವನ್ನು ಪುನರಾವಲೋಕಿಸುವಂತೆ ಮಾಡಿದವು. ಐ. ಮಹಾದೇವನ್ ಮಡಕೆಗಳ ಮೇಲಿನ ಬರಹಗಳನ್ನು ಪರಿಗಣಿಸಿ ತಮಿಳಗಂನಲ್ಲಿ ಎಲ್ಲಾ ಹಂತದಲ್ಲಿ ಎಲ್ಲಾ ವರ್ಗಗಳಲ್ಲಿ ಲಿಪಿ ಸಂಸ್ಕೃತಿ ಹರಡಿದ್ದಿತೆಂದು ಸಾರಿದರು. ತಮಿಳುನಾಡಿನ ಗುಹೆಗಳಲ್ಲಿ ಕಂಡು ಬಂದ ಶಿಲಾಬರಹಗಳನ್ನು ಮೊದಲಿಗೆ ಓದಿ ಅರ್ಥೈಸಲಾಗಲಿಲ್ಲ. ಇದಕ್ಕೆ ಕಾರಣವಾದ ಅಂಶಗಳೆಂದರೆ : -ಬರಹಕ್ಕೆ ಬಳಸಿದ ಲಿಪಿಯ ಅಸಮರ್ಪಕ ಅರಿವು -ಬರಹದಲ್ಲಿ ಬಳಸಿದ ಭಾಷೆ ಪ್ರಾಕೃತವೆಂಬ ತಪ್ಪು ನಿರ್ಧಾರ -ದುರ್ಗಮ ಪ್ರದೇಶಗಳಲ್ಲಿದ್ದ ಬರಹದ ತಾಣಗಳು - ಬರಹಗಳ ಅಸ್ಪಷ್ಟತೆ ಈ ಗುಹೆಗಳಲ್ಲಿನ ಬರಹಗಳನ್ನು ಒದಲು ಮತ್ತು ಅರ್ಥೈಸಲು ಹಲವಾರು ಪ್ರಯತ್ನಗಳು ಜರುಗಿದವು. 1906–ವೆಂಕಯ್ಯನವರು ಗವಿಯಲ್ಲಿನ ಲಿಪಿಯನ್ನು ಬ್ರಾಹ್ಮಿ ಎಂದು ಗುರುತಿಸಿದರಾದರು , ಅದರ ಭಾಷೆ ಪಾಳಿಯೆಂದು ಭಾವಿಸಿದರು. ಮೆಟ್ಟುಪಟ್ಟಿ ಶಿಲಾಶಾಸನದಲ್ಲಿ ‘ಅಂತೈ ಅರಿಯ’ ಎಂಬ ಒಂದು ಸಾಲನ್ನು ಓದಿದ ಅವರು ಈ ಶಬ್ಧಗಳ ಅರ್ಥಕ್ಕೆ ವೈದಿಕ ಮೂಲಗಳನ್ನು ತಡಕಾಡಿದರು. 1914 – ಕೃಷ್ಣಶಾಸ್ತ್ರಿ ಸಿತ್ತನ್ನವಾಸಲ್ನ ಶಿಲಾಶಾಸನಗಳನ್ನು ಓದಲು ಯತ್ನಿಸಿದರು. 1919 – ಕೃಷ್ಣಶಾಸ್ತ್ರಿ ಈ ಬರಹಗಳಲ್ಲಿ ಸಿಂಹಳ ಬ್ರಾಹ್ಮಿಯಲ್ಲಿ ಆ ಮೊದಲೇ ಗುರುತಿಸಲಾಗಿದ್ದ ದಕ್ಷಿಣದ ಭಾಷೆಗಳಿಗೆ ವಿಶಿಷ್ಟವಾಗಿರುವ ¾ ಅಕ್ಷರವನ್ನು ಗುರುತಿಸಿದರು. ಇದರೊಂದಿಗೆ ¾ ,ನ ಮತ್ತು ¿ ಎಂಬ ಮೂರು ವಿಶಿಷ್ಟ ಅಕ್ಷರಗಳನ್ನು ಸಹ ಗುರುತಿಸಿದರು. ಅದಲ್ಲದೆ ಶಿಲಾಬರಹಗಳಲ್ಲಿನ ಕೆಲ ವ್ಯಂಜನಗಳು ಮೂಲಾಕ್ಷರಗಳಿರಬೇಕೆಂದು ಮೊದಲ ಬಾರಿಗೆ ಸೂಚಿಸಿದರು. 1924 – ಕೆ.ವಿ.ಸುಬ್ರಹ್ಮಣ್ಯ ಅಯ್ಯರ್ ಬ್ರಾಹ್ಮಿಯಲ್ಲಿರುವುದೆಲ್ಲವೂ ಪ್ರಾಕೃತವೆಂದು ತಪ್ಪಾಗಿ ಭಾವಿಸಿದರಾದರೂ ಇವುಗಳಲ್ಲಿ ಹಲವಾರು ವೈಶಿಷ್ಟ್ಯಗಳಿರುವುದನ್ನು ಗುರುತಿಸಿದರು. ಅವೆಂದರೆ -ಗ,ಜ,ಡ,ದ,ಬ ಅಕ್ಷರಗಳು ಇಲ್ಲದಿರುವುದು. -‘ಸ’ಕಾರದ ಅಪರೂಪ ಬಳಕೆ -‘ಶ’ ಮತ್ತು ‘ಷ’ ಅಕ್ಷರಗಳಿಲ್ಲದಿರುವುದು. -‘ಐ’ ‘ಔ’ ‘ಋ’’Iೂ’ ‘ಅಂ’ ‘ಅಃ ‘ ಸ್ವರಗಳಿಲ್ಲದಿರುವುದು. - ಸಂಯುಕ್ತಾಕ್ಷರಗಳಿಲ್ಲದಿರುವುದು. ಈ ವೀಕ್ಷಣೆಗೆಗಳ ಅಧಾರದ ಮೇಲೆ ಅವರು ಶಿಲಾಬರಹಗಳಲ್ಲಿನ ಭಾಷೆ ಇಂಡೋ-ಅರ್ಯನ್ ಭಾಷಾ ಸಮುದಾಯಕ್ಕೆ ಸೇರದ ದಕ್ಷಿಣ ಭಾಗದ ತಮಿಳು ಎಂದು ಸಾರಿದರು. ಇದಕ್ಕಾಗಿ ಶಿಲಾಶಾಸನಗಳಲ್ಲಿದ್ದ ‘ಪಾಕನ್’’ವಣಿಕನ್’ನಂತಹ ಶಬ್ಧಗಳ ಆಧಾರ ನೀಡಿದರು. ಲಿಪಿಯಲ್ಲಿನ ತಪ್ಪು ಅಕ್ಷರಿಕೆ ಹಾಗೂ ವಿಶಿಷ್ಟ ಲಿಪ್ಯಾಲೇಖದಿಂದಾಗಿ (paleography) ಕೆ.ವಿ.ಸುಬ್ರಹ್ಮಣ್ಯ ಅಯ್ಯರ್ ಶಿಲಾಶಾಸನಗಳನ್ನು ಸರಿಯಾಗಿ ಓದಲಾಗಲಿಲ್ಲ. 1938 - ನಾರಾಯಣರಾವ್ ಗುಹೆಗಳಲ್ಲಿನ ಬರಹಗಳ ಭಾಷೆ ಪ್ರಾಕೃತವೆಂದು ಪರಿಗಣಿಸಿ ಅದರ ‘ಸಂಪೂರ್ಣ’ ಓದಿಕೆಯನ್ನು ಸಹ ನೀಡಿದರು. 1961 – ಕೆ.ಜಿ. ಕೃಷ್ಣನ್ ಶುದ್ಧವಂಜನದ (ಸ್ವರರಹಿತ ವ್ಯಂಜನ) ಗುರುತಿಗೆ ಮತ್ತು ‘ಎ’ ‘ಓ’ಗಳ ಗುರುತಿಗೆ ಪುಳ್ಳಿ(ಚುಕ್ಕೆ) ಬಳಸಿರುವುದನ್ನು ಗುರುತಿಸಿದರು. ನಂತರ 2ನೇ ಶತಮಾನಕ್ಕೆ ಸೇರಿದ ಶಾತವಾಹನರ ಬೆಳ್ಳಿ ನಾಣ್ಯದ ಮೇಲೂ ಪುಳ್ಳಿಯನ್ನು ಗುರುತಿಸಲಾಯಿತು. 1964- ಕಮಿಲ್ ಝ್ವೆಲೆಬಿಲ್ ತಮಿಳುನಾಡಿನ ಗುಹೆಗಳಲ್ಲಿನ ಶಿಲಾಬರಹಗಳ ಅಧ್ಯಯನ ಪ್ರಾರಂಭಿಸಿದರು. 1967 – ಟಿ.ವಿ. ಮಹಾಲಿಂಗಂ ಗುಹಾಶಿಲಾಶಾಸನಗಳನ್ನು ಕುರಿತಾದ ಮೊದಲ ಪುಸ್ತಕ ಪ್ರಕಟಿಸಿದರು. 1966 – ಭಾರತ ಆಡಳಿತ ಸೇವೆಯಲ್ಲಿದ್ದ ಐರಾವತಂ ಮಹಾದೇವನ್ ತಮಿಳುನಾಡಿನ ಗುಹೆಗಳಲ್ಲಿನ ಶಿಲಾಬರಹಗಳನ್ನು ಓದಲು ಮುಂದಾದರು.ಮಹಾದೇವಂ ಆರಂಭಿಕ ವಟ್ಟೆಳ್ಳುತ್ತು ಲಿಪಿಯಲ್ಲಿನ ಎರಡು ಬರಹಗಳು ಸೇರಿದಂತೆ 21 ನಿವೇಶನಗಳಿಂದ 74 ಶಿಲಾಶಾಸನಗಳ ಬರಹಗಳನ್ನು ಸಂಗ್ರಹಿಸಿ ಗುಹೆಯಲ್ಲಿನ ಬರಹಗಳ ಛಾಯಾಚಿತ್ರಗಳನ್ನು ತೆಗೆದು ಗಣಕದ ನೆರವಿನಿಂದ ಪರಿಷ್ಕರಿಸಿ, ಸ್ಫುಟಗೊಳಿಸಿ ತಮ್ಮ ಅಧ್ಯಯನವನ್ನು ಶಿಸ್ತುಬದ್ದಗೊಳಿಸಿ ಶಿಲಾಶಾಸನಗಳನ್ನು ಕಾಲಾನುಕ್ರಮಣಿಕೆಯಲ್ಲಿ ಜೋಡಿಸಿ ಅಧ್ಯಯನ ನಡೆಸಿದ್ದಾರೆ. ಮಹಾದೇವನ್ ಆಂಧ್ರಪ್ರದೇಶದ ಭಟ್ಟಿಪ್ರೋಲು ಬರಹದಲ್ಲಿನ ವೈಶಿಷ್ಟ್ಯಗಳನ್ನು ಗಮನಿಸಿ , ಅದರ ಅನ್ವಯ ತಮಿಳುನಾಡಿನ ಗುಹೆಗಳಲ್ಲಿನ ಶಿಲಾಬರಹಗಳನ್ನು ಪ್ರಾಕ್ತನಾಲೇಖ್ಯ (Paleography) ಮತ್ತು ಲಿಪ್ಯಾಲೇಖ (Orthography ) ಆಧಾರಗಳ ಮೇಲೆ ಓದಿ ಸಂಗಂ ಸಾಹಿತ್ಯ ಮತ್ತು ತೊಲ್ಕಾಪ್ಪಿಯಂ ಆಧಾರಿತ ವ್ಯಾಕರಣದ ನಿಯಮಗಳನ್ನು ಪರಿಗಣಿಸಿ ಅದರಲ್ಲಿನ ಭಾಷೆ ತಮಿಳೆಂದು ಖಚಿತಗೊಳಿಸಿ ಲಿಪಿಯನ್ನು ತಮಿಳು ಬ್ರಾಹ್ಮಿಯೆಂದು ಕರೆದರು. ಮಹಾದೇವನ್ ಕ್ರಿ.ಪೂ 300 ರಿಂದ ಕ್ರಿ.ಶ 600 ಅವಧಿಯಲ್ಲಿ ತಮಿಳಿನ ಲಿಪಿ ತಮಿಳು ಬ್ರಾಹ್ಮಿ (ತ.ಬ್ರಾ) ಮತ್ತು ಆರಂಭಿಕ ವಟ್ಟೆಳ್ಳುತ್ತು ರೂಪಗಳಲ್ಲಿ ಉಗಮಗೊಂಡು ವಿಕಾಸಹೊಂದಿದ ಚರಿತ್ರೆಯನ್ನು ನೀಡಿದ್ದಾರೆ. ಗುಹಾಶಿಲಾಶಾಸನಗಳಲ್ಲಿನ ಭಾಷೆ ಎಷ್ಟರ ಮಟ್ಟಿಗೆ ಮತ್ತು ಎಂತಹ ತಮಿಳು ಭಾಷೆ ಅದರಲ್ಲಿ ತಮಿಳೇತರ ಅಂಶಗಳೆಷ್ಟು ಎಂಬುದನ್ನು ಮಹಾದೇವನ್ ವಿವೇಚಿಸಿದ್ದಾರೆ. ಬ್ರಾಹ್ಮಿಯಿಂದ ತಮಿಳು ಬ್ರಾಹ್ಮಿ ವಿಕಸನಗೊಂಡಿದೆಯೆಂಬ ತಮ್ಮ ವಾದಕ್ಕೆ ಪೂರಕವಾಗಿ ಪ್ರಾಕ್ತನಾಲೆಖ್ಯದ ಕೋಷ್ಟಕಗಳನ್ನು ನೀಡಿದ್ದಾರೆ. ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದ ಲಿಪಿಗಳೆಂದರೆ - (1) ಬ್ರಾಹ್ಮಿ (2) ತಮಿಳು ಬ್ರಾಹ್ಮಿ ಆರಂಭಿಕ ತಮಿಳು ಬ್ರಾಹ್ಮಿ : ಕ್ರಿ.ಪೂ 200 – ಕ್ರಿ.ಶ. 100 ನಂತರದ ತಮಿಳು ಬ್ರಾಹ್ಮಿ : ಕ್ರಿ.ಶ 200 –ಕ್ರಿ.ಶ. 400 (3) ವಟ್ಟೆಳ್ಳುತ್ತು-ಆರಂಭಿಕ ವಟ್ಟೆಳ್ಳುತ್ತು : ಕ್ರಿ.ಶ 500-ಕ್ರಿ.ಶ 600 (4) ತಮಿಳು ಹಾಗೂ (5) ಗ್ರಂಥ ನಂತರದ ವಟ್ಟೆಳ್ಳುತ್ತು ಮತ್ತು ತಮಿಳು ಲಿಪಿ : ಕ್ರಿ.ಶ 700 ರ ನಂತರ ತಮಿಳು ವಿದ್ವಾಂಸರಾದ ಗಿಫ್ಟ್ ಶಿರೋಮಣಿಯವರು ತಮಿಳು ಮೂಲದ ಲಿಪಿಗೆ ಮೌರ್ಯರ ಅಸ್ಥಾನದಲ್ಲಿ ಪ್ರಾಕೃತಕ್ಕೆ ಬೇಕಾದ ಅಧಿಕ ಅಕ್ಷರಗಳನ್ನು ಸೇರಿಸಿ ಅಶೋಕ ಬ್ರಾಹ್ಮಿಯನ್ನು ರೂಪಿಸಲಾಯಿತೆಂದು ಹೇಳಿದ್ದಾರೆ. ಮಹಾವಂಶದಲ್ಲಿ ಪಾಂಡು ದೊರೆ ಶ್ರೀಲಂಕಾದ ವಿಜಯನಿಗೆ ತನ್ನ ಮಗಳೊಂದಿಗೆ ಪತ್ರ ಕಳಿಸಿದ್ದನೆಂದಿದೆ. ಆದ್ದರಿಂದ ಕ್ರಿ.ಪೂ ಅವಧಿಯಲ್ಲೇ ತಮಿಳಗಂನಲ್ಲಿ ಬರಹ ಜ್ಞಾನವಿದ್ದಿತೆಂದು ವಾದಿಸಿದ್ದಾರೆ. ಈ ವಾದದ ಮುಂದುವರಿಕೆಯಾಗಿ ಗಜಬಾಹು ಸಮಕಾಲೀನತೆ ಬಾಹ್ಯ ಆಧಾರಗಳಿಂದ ಪ್ರಮಾಣಿಸಲ್ಪಟ್ಟಿಲ್ಲ. ಆದ್ದರಿಂದ ಇದರ ಆಧಾರದ ಮೇಲೆ ಸಂಗಂ ಸಾಹಿತ್ಯ ಕಾಲದ ನಿರ್ಧಾರ ಸಲ್ಲದು. ಜಂಬೈ ಶಿಲಾಶಾಸನದಲ್ಲಿನ ಮೊದಲ ಭಾಗ ಅಶೋಕ ಬ್ರಾಹ್ಮಿಗೆ ಸನಿಹದಲ್ಲಿದೆ. ಆದ್ದರಿಂದ ಈ ಶಾಸನೋಕ್ತ ಅತಿಯಮಾನ್ ಅಶೊಕನ ಕಾಲದವನು. ಅತಿ ಹೆಚ್ಚು ಆರಂಭಿಕ ಲಿಪಿ ವೈವಿಧ್ಯತೆ ಇರುವ ಪ್ರದೇಶ ಆ ಲಿಪಿಯ ಮೂಲ ತಾಣವೆಂದು ಪರಿಗಣಿಸಬೇಕು. ತಮಿಳುನಾಡಿನಲ್ಲಿ ತಮಿಳು ಬ್ರಾಹ್ಮಿ ಹಲವಾರು ಪದ್ದತಿಗಳಲ್ಲಿ ಕಂಡುಬಂದಿದೆ. ಆದ್ದರಿಂದ ತಮಿಳಗಂ ಬ್ರಾಹ್ಮಿ ಲಿಪಿಯ ತವರೆಂದು ಹೇಳಿದ್ದಾರೆ. ತಮಿಳು ಬ್ರಾಹ್ಮಿ ಸ್ವರೂಪ -ತಮಿಳು ಧ್ವನಿ ವ್ಯವಸ್ಥೆಗೆ ಅನುಕೂಲವಾಗುವಂತೆ ಬ್ರಾಹ್ಮಿ ಲಿಪಿಯಲ್ಲಿ ಮಾರ್ಪಾಡು. -ತಮಿಳು ಭಾಷೆಗೆ ಬೇಕಾಗದ ಆದರೆ ಬ್ರಾಹ್ಮಿಯಲ್ಲಿರುವ ಅಕ್ಷರಗಳ ಬಿಡುವಿಕೆ. -ತಮಿಳು ಭಾಷೆಗೆ ಸೂಕ್ತವಾಗುವಂತಹ ಲಿಪಿ ಬದಲಾವಣೆಗಳು. -ತಮಿಳಿನಲ್ಲಿರುವ ಆದರೆ ಬ್ರಾಹ್ಮಿಯಲ್ಲಿರದ ಉಚ್ಛಾರಗಳಿಗೆ ಹೊಸ ಅಕ್ಷರಗಳ ಸೃಷ್ಟಿ. -ತಮಿಳಿಗೆ ವಿಶಿಷ್ಟವಾಗಿರುವ ನಾಲ್ಕು ಅಕ್ಷರಗಳನ್ನು ಹೊರತಾಗಿ ಉಳಿದವುಗಳಿಗೆ ಧ್ವನಿಸಮೇತವಾಗಿ 26 ಬ್ರಾಹ್ಮಿ ಅಕ್ಷರಗಳ ನೇರ ಅಂಗೀಕಾರ. -ಬ್ರಾಹ್ಮಿಯಲ್ಲಿ ಇಲ್ಲದ ಆದರೆ ತಮಿಳಿಗೆ ವಿಶಿಷ್ಟವಾದ ¾, ¿ ಮತ್ತು ನ ಧ್ವನಿಗಳಿಗೆ ಬ್ರಾಹ್ಮಿಯಲ್ಲಿನ ಸನಿಹ ಧ್ವನಿ ಹೊಂದಿದ ಅಕ್ಷರಗಳ ಬಳಕೆ. -ಸ್ವರರಹಿತ (ಶುದ್ಧ) ವ್ಯಂಜನ ಗುರುತಿಸಲು ಪುಳ್ಳಿ (ಚುಕ್ಕೆ) ಬಳಕೆ. ಈ ಮೇಲಿನ ಬದಲಾವಣೆಗಳೊಂದಿಗೆ ತಮಿಳು ಬ್ರಾಹ್ಮಿ ಮೂರು ಹಂತಗಳಲ್ಲಿ ಅಥವಾ ಮೂರು ವಿಶಿಷ್ಟ ರೂಪಗಳಲ್ಲಿ ವಿಕಸಿಸಿದೆ. ಇವನ್ನು ತಮಿಳು ಬ್ರಾಹ್ಮಿ-1 (ತ.ಬ್ರಾ-1) , ತಮಿಳು ಬ್ರಾಹ್ಮಿ-2 (ತ.ಬ್ರಾ-2) ಮತ್ತು ತಮಿಳು ಬ್ರಾಹ್ಮಿ-3(ತ.ಬ್ರಾ-3) ಎಂದು ಗುರುತಿಸಲಾಗಿದೆ. ಸ್ವರರಹಿತ (ಶುದ್ಧ) ವ್ಯಂಜನಗಳನ್ನು ಗುರುತಿಸಲು ಲಿಪಿ ವಿಕಸನದ ಹಂತದಲ್ಲಿ ಭಾರತೀಯ ಭಾಷೆಗಳು ಹಲವಾರು ತಂತ್ರಗಳಿಗೆ ಮೊರೆಹೋಗಿವೆ. ಕೆಲವೊಮ್ಮೆ ಸ್ವರಸಹಿತ ವ್ಯಂಜನವನ್ನು ಬರೆದು ಸಂದರ್ಭಾನುಸಾರ ಅದರ ಸ್ವರರಹಿತ ಸ್ಥಿತಿಯನ್ನು ಪರಿಗಣಿಸುವಂತೆ ಮಾಡುತ್ತವೆ. ತಮಿಳು ಬ್ರಾಹ್ಮಿ-1 : ವ್ಯಂಜನದಲ್ಲಿ ಅಂತರ್ಗತವಾಗಿರುವ ‘ಅ’ ಸ್ವರ ಇಲ್ಲದಿರುವುದು. ವ್ಯಂಜನದೊಂದಿಗಿರುವ ಸ್ವರದ ಗುರುತಿಗೆ ಹೆಚ್ಚುವರಿ ಗೀಟಿನ ಬಳಕೆ. ಈ ಗೀಟು ಸಂದರ್ಭಾನುಸಾರವಾಗಿ ಹ್ರಸ್ವ ಮತ್ತು ದೀರ್ಘ ಸ್ವರಗಳನ್ನು ಸೂಚಿಸುತ್ತದೆ. ಉದಾ : ‘ಕ’ ಎಂದು ಬರೆದಿರುವುದನ್ನು ‘ಕ್’ ಎಂದು ಓದಬೇಕು. ತಮಿಳು ಬ್ರಾಹ್ಮಿ-2 : ವ್ಯಂಜನದೊಂದಿಗಿನ ಗೀಟು ಅಶೋಕ ಬ್ರಾಹ್ಮಿಯಲ್ಲಿರುವಂತೆ ದೀರ್ಘ ಸ್ವರವನ್ನು ಸೂಚಿಸದೆ ಹ್ರಸ್ವಸ್ವರವನ್ನು ಸೂಚಿಸುವುದು. ಇದು ಆಂಧ್ರಪ್ರದೇಶದ ಭಟ್ಟಿಪ್ರೋಲುವಿನಲ್ಲಿ (ಭಟ್ಟನ ಪೊಳಲ್) ದೊರೆತಿರುವ ಕರಂಡಕದ ಮೇಲಿನ ಪದ್ದತಿಯನ್ನು ಹೋಲುತ್ತದೆ. ಇದು ಭಟ್ಟಿಪ್ರೋಲು ಪದ್ದತಿ. ಉದಾ : ಅಶೋಕ ಬ್ರಾಹ್ಮಿಯಲ್ಲಿ ‘ಕಾ’ ಎಂದು ಬರೆದುದನ್ನು ಈ ಪದ್ದತಿಯಲ್ಲಿ ‘ಕ’ ಎಂದು ಓದಬೇಕು. ತಮಿಳು ಬ್ರಾಹ್ಮಿ-3 : ಸ್ವರರಹಿತ (ಶುದ್ಧ) ವ್ಯಂಜನಗಳನ್ನು ಗುರುತಿಸಲು ಪುಳ್ಳಿ (ಚುಕ್ಕೆ) ಬಳಕೆ. ಇದರಿಂದಾಗಿ ಶ್ರೀಲಂಕಾ ಬ್ರಾಹ್ಮಿ ಲಿಪಿಯಲ್ಲಿರುವಂತೆ ಒತ್ತಕ್ಷರಗಳನ್ನು ದೂರಗೊಳಿಸಿ , ಸಂಯುಕ್ತಾಕ್ಷರಗಳನ್ನು ಬಿಡಿಸಿ ಬರೆಯುವ ಮಾರ್ಗ. ಅಶೋಕನ ಬ್ರಾಹ್ಮಿಯಲ್ಲಿ ಶಬ್ಧದ ಕೊನೆಗೆ ಶುದ್ಧ ವ್ಯಂಜನಗಳು ಬರುವುದಿಲ್ಲ. ಮಧ್ಯದಲ್ಲಿ ಬಂದಾಗ ಒತ್ತಕ್ಶರ ರೂಪ ತಳೆಯುತ್ತವೆ. ಇದನ್ನು ಹೋಗಲಾಡಿಸಲು ತಮಿಳು ಬ್ರಾಹ್ಮಿ-1 , 2 ಪದ್ದತಿಗಳಲ್ಲಿ ಒತ್ತಕ್ಷರಗಳನ್ನು ಬಿಡಿಸಿ ಬರೆಯುವ ಅಗತ್ಯತೆ ಎದುರಾಗಿ ಪುಳ್ಳಿ ಕಲ್ಪನೆ ಬಂದಿದೆ . ಉದಾ : ‘ಕ’ ಅಕ್ಷರದ ಮೇಲೆ ಪುಳ್ಳಿ (ಚುಕ್ಕಿ) ಇಟ್ಟಾಗ ‘ಕ್’ ಎಂದು ಓದುಬೇಕು. ಪುಳ್ಳಿ ಬಳಸಿ ‘ಎ’ ಮತ್ತು ‘ಒ’ಸ್ವರಗಳನ್ನು ‘ಏ’ ಮತ್ತು ‘ಓ’ ಸ್ವರಗಳಿಂದ ಪ್ರತ್ಯೇಕಿಸಿಕೆ ಮತ್ತು ‘ಇ’ (ಕುರಿಯಾಳಿಕಾರಂ) ಮತ್ತು ‘ಉ’ (ಕುರಿಯಾಳುಕಾರಂ)ಗಳ ಗುರುತಿಸಿಕೆ. ತಮಿಳಿಗೆ ವಿಶಿಷ್ಟವಾದ ‘ಐತ್ವಂ’ ಗುರುತಿಸಲು ಪುಳ್ಳಿ ಬಳಕೆ. ಆರಂಭಿಕ ತಮಿಳು ಬ್ರಾಹ್ಮಿಯ ಬರಹಗಳಲ್ಲಿ (ತಮಿಳು ಬ್ರಾಹ್ಮಿ-1) ವ್ಯಂಜನದಲ್ಲಿ ಅಂತರ್ಗತ ‘ಅ’ ಸ್ವರವಿರದಿರುವುದರಿಂದ ಮ ಕ ನ ಎನ್ನುವುದನ್ನು ‘ಮೊದಲೆರಡು ಅಕ್ಷರಗಳನ್ನು ಸ್ವರಸಹಿತವಾಗಿಯೂ ಕೊನೆಯ ಅಕ್ಷರವನ್ನು ಸ್ವರರಹಿತವಾಗಿಯೂ ‘ಮ ಕ ನ್’ ಎಂದು ಓದಬೇಕು. ‘ಬ್ರಾಹ್ಮಿ ಪದ್ದತಿಯಂತೆ ‘ಮಕನ’’ ಎಂಬ ಶಬ್ಧ ಯಾವ ಅರ್ಥವನ್ನು ಕೊಡುವುದಿಲ್ಲ. ಆದರೆ ಮಕನ್’(ಮಗನ್) ಎಂಬ ಶಬ್ಧಕ್ಕೆ ತಮಿಳಿನಲ್ಲಿ ಸ್ಪಷ್ಟ ಅರ್ಥವಿದೆ. ತಮಿಳು ಬ್ರಾಹ್ಮಿಯನ್ನು ಮೊದಲಿಗೆ ಓದಲು ಪ್ರಯತ್ನಿಸಿದವರು ಇದನ್ನು ತಿಳಿಯದಿದ್ದುದರಿಂದ ಶಿಲಾಬರಹಗಳ ಪಾಠವೇನೆಂದು ಅರ್ಥವಾಗಿರಲಿಲ್ಲ. ಆದರೆ ಮಹಾದೇವನ್ ಇದನ್ನು ಹಾಗೂ ಪುಳ್ಳಿಯ ಬಳಕೆಯನ್ನು ಗುರುತಿಸಿದ ನಂತರ ಶಿಲಾಶಾಸನಗಳ ಅರ್ಥ ಸ್ಪಷ್ಟವಾಗತೊಡಗಿತು. (* ಈಗ ಹಿಂದಿಗಾಗಿ ಬಳಸಲಾಗುತ್ತಿರುವ ದೇವನಾಗರಿ ಲಿಪಿಯಲ್ಲು ಸಹ ಇದೇ ವ್ಯವಸ್ಥೆಯಿದೆ.) ತಮಿಳು ಬ್ರಾಹ್ಮಿ-1 ಪದ್ದತಿ, ತಮಿಳು ಬ್ರಾಹ್ಮಿ-2 ಪದ್ಧತಿಗಿಂತ ಹಳೆಯದು. ಆದರೆ ತಮಿಳು ಬ್ರಾಹ್ಮಿ-2 ಪದ್ಧತಿ ಅಶೋಕನ ಬ್ರಾಹ್ಮಿಯಂತೆಯೇ ಇದೆ. ತಮಿಳು ಬ್ರಾಹ್ಮಿ-1 ರಲ್ಲಿ ವ್ಯಂಜನಕ್ಕೆ ಲಗತ್ತಾದಂತೆ ಎಳೆದ ಸಣ್ಣ ಅಡ್ಡ ಗೀಟು ವ್ಯಂಜನದೊಂದಿಗಿನ‘’ಅ’’ ಸ್ವರ ಸೂಚಿಸಿದರೆ , ತಮಿಳು ಬ್ರಾಹ್ಮಿ-2 ರಲ್ಲಿ ಇದು ‘’ಆ’’ ಸ್ವರವನ್ನು ಸೂಚಿಸುತ್ತದೆ. ವಿದ್ವಾಂಸರು ಅಶೋಕ ಬ್ರಾಹ್ಮಿಯನ್ನು ಅನುಸರಿಸಿ ಎಂದರೆ ತಮಿಳು ಬ್ರಾಹ್ಮಿ-2ರ ಪದ್ದತಿಯಂತೆ ತಮಿಳು ಬ್ರಾಹ್ಮಿ-1 ಪದ್ಧತಿಯಲ್ಲಿರುವ ಒಂದು ಶಬ್ಧವನ್ನು ಮಾಕಾನಾ’ ಎಂದು ಓದಿದಾಗ ಯಾವ ಅರ್ಥವೂ ಸ್ಫುರಿಸುವುದಿಲ್ಲ. ಆದರೆ ಇದನ್ನೆ ತಮಿಳು ಬ್ರಾಹ್ಮಿ-1 ಪದ್ದತಿಯಲ್ಲಿ ಓದಿದಾಗ ‘ಮಕನ್’ ಎಂದಾಗಿ ತಮಿಳಿನ ಶಬ್ಧವಿರುವುದು ಸ್ಪಷ್ಟವಾಗುತ್ತದೆ. ತಮಿಳು ಬ್ರಾಹ್ಮಿ ಶಿಲಾಶಾಸನಗಳು ತಮಿಳು ಬ್ರಾಹ್ಮಿಯನ್ನು ಹೊಂದಿರುವ ಗುಹಾಶಿಲಾಶಾಸನಗಳು ಹಾಗೂ ಇನ್ನಿತರ ಮಡಕೆ,ಉಂಗುರದ ಮೇಲಿನ ಬರಹಗಳಲ್ಲಿ ಪ್ರಾತಿನಿಧಿಕವಾಗಿರುವುವನ್ನು ಕೆಳಗೆ ನೀಡಲಾಗಿದೆ. ಈ ಶಿಲಾಶಾಸನಗಳನ್ನು ಸಂದರ್ಭೋಚಿತವಾಗಿ ಓದಿ ತಮಿಳುಬ್ರಾಹ್ಮಿ-1, ತಮಿಳು ಬ್ರಾಹ್ಮಿ-2 ಮತ್ತು ತಮಿಳು ಬ್ರಾಹ್ಮಿ-3 ಇವುಗಳಲ್ಲಿ ಯಾವುದಕ್ಕೆ ಸೇರುತ್ತದೆಯೆಂದು ನಿರ್ಧರಿಸಬೇಕು. 1. ಮಂಗುಳಂ (ಮೀನಾಕ್ಷಿಪುರಂ) ಶಿಲಾಬರಹ : ಕಾಲ ಕ್ರಿ,ಪೂ. 2 ಶತಮಾನ. ಇದು ಈವರೆಗೆ ದಕ್ಕಿರುವ ಅತ್ಯಂತ ಹಳೆಯದಾದ ತಮಿಳು ಭಾಷೆಯ ಬರಹ. 1882 ರಲ್ಲಿ ರಾಬರ್ಟ್ ಸೆವೆಲ್ ಬೆಳಕಿಗೆ ತಂದನು. ಲಿಪಿಯ ಆಧಾರದ ಮೇಲೆ ಈಗ ಇದರ ಕಾಲವನ್ನು ಕ್ರಿ.ಪೂ 2 ಶತಮಾನವೆಂದು ನಿರ್ಧರಿಸಲಾಗಿದೆ. ಇದು ವಿದ್ವಾಂಸರ ಗಮನಕ್ಕೆ ಅಷ್ಟಾಗಿ ಬಂದಿರಲಿಲ್ಲ. 1906ರಲ್ಲಿ ಇದರ ಪ್ರಾಮುಖ್ಯತೆಯ ಬಗೆಗೆ ಗಮನ ಸೆಳೆದ ಕೆ.ವಿ. ಸುಬ್ರಮಣಿ ಅಯ್ಯರ್ ಮತ್ತೊಮ್ಮೆ ಈ ಶಿಲಾಬರಹ ವಿದ್ವಾಂಸರಿಂದ ಚರ್ಚೆಗೊಳಗಾಗುವಂತೆ ಮಾಡಿದರು. ಇದರಲ್ಲಿ ಸಂಗಂ ಕಾಲದ ದೊರೆ ನೆಡುಂಚೆಳಿಯನ್ ಉಲ್ಲೇಖಿತನಾಗಿದ್ದಾನೆಂದು ಹೇಳಲಾಗುತ್ತಿದೆ. (ನೋಡಿರಿ : ತಮಿಳು-ತಮಿಳಗಂ:ಶಿಲಾಶಾಸನಗಳು) ಓದಿಕೆ : ಕಣಿಯ ನಂದಸಿರಿಯ ಕುವನ್ಗೆ ದಮ್ಮಮ್ ಇತ್ತಾ ನೆಡುಂಚಾಳಿಯನ್. ಪಾಣಾನ್ ಕಡಲಾಣ್ ವಾಳುತ್ತಿಯ ಕೊಟ್ಟುಪಿತ್ತ ಅಯಳಿಯ (ಕಣಿ ನಂದಸಿರಿ ಕುವನ್ಗೆ ಧರ್ಮವಿತ್ತ ನೆಡುಂಚೆಳಿಯನ್. ಸೇವಕನಾದ ಕಡಲಾಣ್ ವಾಳುತ್ತಿಯಿಂದ ಕೊರೆಸಲ್ಪಟ್ಟಿತು) ಇದರಲ್ಲಿ ಸಿ,ಧ – ತಮಿಳಿನ ವರ್ಣಮಾಲೆಯಲ್ಲಿರದ ಅಕ್ಷರಗಳು ಬಳಕೆಯಾಗಿವೆ. (ಒಟ್ಟು 20+18+18 =56 ಅಕ್ಷರಗಳು) 2. ಕೇರಳದ ಎಡಕಲ್ಲು ಶಿಲಾಶಾಸನ. ಇದನ್ನು 1894ರಲ್ಲಿ ಫಾಸೆಟ್ ಮೊದಲಿಗೆ ಕಂಡನು. ಇದರ ನಕಲು ಹಾಗೂ ಛಾಯಾಗ್ರಹಣದ ವರದಿಯನ್ನು ಹುಲ್ಟ್ಷ್ಗೆ ನೀಡಿದನು. ಹುಲ್ಟ್ಷ್ ಇದರ ಬಗ್ಗೆ ಕಿರುಟಿಪ್ಪಣಿ ನೀಡಿ ಹುಲ್ಷ್’ಗೆ ಕಳಿಸಿದನು. 1901ರಲ್ಲಿ ಫಾಸೆಟ್ ಈ ಕುರಿತು ಲೇಖನವೊಂದನ್ನು ಪ್ರಕಟಿಸಿದನು. ಹುಲ್ಟ್ಷ್ ಈ ಶಿಲಾಬರಹವನ್ನು ಓದಿ ಅರ್ಥೈಸಿಕೊಳ್ಳಲು ಯತ್ನಿಸಿದನಾದರೂ ಅದರಲ್ಲಿ ಯಶಸ್ಸನ್ನು ಕಾಣಲಿಲ್ಲ. ಓದಿಕೆ : ಕಟುಮ್ಮಿಪುತ ಚೇರ 3.ಪುಗಳೂರು (ಅರಣತ್ತರ ಮಲೈ) ಶಿಲಾಶಾಸನ : ಕಾಲ ಕ್ರಿ.ಶ 1-2 ಶತಮಾನ ಆದಿಚೇರರ ರಾಜಧಾನಿಯಾದ ಕರೂರಿನ ಸನಿಹದ ಪುಗಳೂರಿನಲ್ಲಿ ಹಲವಾರಿ ಶಿಲಾಶಾಸನಗಳು ದೊರೆತಿವೆ. ಇವುಗಳಲ್ಲೊಂದು ಸಂಗಂ ಕಾಲದ ಚೇರರ ಮೂರು ತಲೆಮಾರಿನ ದೊರೆಗಳನ್ನು ಕುರಿತಾಗಿದೆಯೆಂದು ಭಾವಿಸಲಾಗಿದೆ. ಇದರಲ್ಲಿ ಅದಮ್ ಚೇರಳ್ ಇರುಂಪೊರೈ ಆತನ ಮಗ ಪೆರುಮ ಕಡುಂಗೋ ಮತ್ತು ಆತನ ಮಗ ಇಳಮ ಕಡುಂಗೋ ಹೆಸರುಗಳು ಇವೆಯೆಂದು ಭಾವಿಸಲಾಗಿದೆ. (ನೋಡಿರಿ : ತಮಿಳು-ತಮಿಳಗಂ:ಶಿಲಾಶಾಸನಗಳು) ಓದಿಕೆ : ಮುತ ಅಮಣನ್ ಯಾರೂರ್ ಸೆಂಕಯ್ಯಪ್ಪನ್ ಊರೈ ಕೋ ಅತನ್ ಸೆಲ್ಲಿರುಂಪೆÇರೈ ಮಕನ್ ಪೆರುಕಟುಂಕೋನ್ ಮಕನ್ (ಇ) ಳನ್ ಕಟುಂಕೋ (ಇ)ಳಂಕೋ ಅಕ ಅರುತ್ತ ಕಲ್ (ಮುತ ಶ್ರಮಣ ಯಾರೂರ ಸೆಂಕಯ್ಯಪ್ಪನ್ ಊರೆ(ನೆಲೆ). ಕೋ(ದೊರೆ) ಅತನ್ ಸೆಲ್ಲಿರುಂಪೆÇರೈ ಮಗ ಪೆರುಂಕಟುಂಕೋನ್ ಮಗ (ರಾಜಕುಮಾರ) ಇಳನ್ ಕಟುಂಕೋ ಮಾಡಿಸಿದ ಕಲ್’ ) -54 ಅಕ್ಷರಗಳು 4. ಜಂಬೈ ಶಿಲಾಬರಹ : ಕಾಲ ಕ್ರಿ.ಶ. 1-2 ನೇ ಶತಮಾನ (ನೋಡಿರಿ : ತಮಿಳು-ತಮಿಳಗಂ-ಶಿಲಾಶಾಸನಗಳು) ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ತಿರುಕ್ಕೋವಿಲೂರು ಪಟ್ಟಣದಿಂದ 15 ಕಿ, ಮೀ ದೂರದ ಜಂಬೈ ಹಳ್ಳಿಯಲ್ಲಿನ ಗುಹಾಂತರ ನೆಲೆಯಲ್ಲಿ ತಮಿಳು ಬ್ರಾಹ್ಮಿಯಲ್ಲಿರುವ ಬರಹ. ಓದಿಕೆ :‘”ಸತಿಯಪುತೋ ಅತಿಯಾನ್ ನೆಡುಮಾನ್ ಅಂಜಿ ಇಟ್ಟ ಪಳಿ”’(ಸತ್ಯಪುತ್ರ ಅತಿಯಾನ್ ನೆಟುಮಾನ್ ಅಂಜಿ ಮಾಡಿದ ನೆಲೆ’) ಮೇಲಿನ ಬರಹದಲ್ಲಿ ಸತಿಯಪುತೋ ಪ್ರಾಕೃತದಲ್ಲಿದೆ. ಇಟ್ಟ ಮತ್ತು ಪಳಿ ತಮಿಳಿನ ಶಬ್ಧಗಳು. ಹೆಸರಿನ ಕೊನೆಗೆ ‘ಅನ್’ ಪ್ರತ್ಯಯ ಹೊಂದಿರುವುದು ತಮಿಳಿನ ವೈಶಿಷ್ಟ್ಯ . 5. ಆನೈಮಲೈ ಶಿಲಾಶಾಸನ : ಕಾಲ : ಕ್ರಿ.ಶ 2 ಶತಮಾನ ಓದಿಕೆ : ಇವ ಕುನ್ರಾತು ಊರೈಯುಲ್ ಪಟಂತನ್ ಎರಿ ಅರಿತನ್ ಅಟ್ಟುವಾಯಿ ಅರಟ್ಟ ಕಾಯಿಪನ್ ‘ (21+13 = 34 ಅಕ್ಷರಗಳು) 6. ಪುದುಕ್ಕೋಟ್ಟೈ ಜಿಲ್ಲೆಯ ಸಿತ್ತನ್ನವಾಸಲ್ ಶಿಲಾಶಾಸನ : ಕಾಲ ಕ್ರಿ.ಪೂ 1 ನೇ ಶತಮಾನ ಕ್ರಿ.ಪೂ. 1 ನೇ ಶತಮಾನದ್ದೆಂದು ಭಾವಿಸಲಾದ ಪುದುಕ್ಕೋಟ್ಟೈ ಜಿಲ್ಲೆಯ ಸಿತ್ತನ್ನವಾಸಲ್ ಶಿಲಾಶಾಸನ ಓದಿಕೆ : ‘ಎರುಮಿನಾಟು ಕುಮುಲೂರ ಪಿರಂತ ಕವುಟಿ ತೆಂಕು ಚಿರು ಪೊಸಿಲ್ ಇಳಯರ್ ಅಟಿಟ್ಟಾಣಂ’ಮ್ ( 27=11=38 ಅಕ್ಷರಗಳು) 7. ಕರೂರು ಸನಿಹದ ಪುಗಳೂರಿನ ಅರಣತ್ತರಮಲೈ ಶಿಲಾಶಾಸನ : ಕಾಲ ಕ್ರಿ.ಶ. 2ನೇ ಶತಮಾನ ಓದಿಕೆ : ಕೊರ್ರಂತೈ ಇಳವನ್ ಮುನ್ರು 8. ಮೆಟ್ಟುಪಟ್ಟಿ ಶಿಲಾಶಾಸನ : ಕಾಲ ಕ್ರಿ.ಪೂ 2 ನೇ ಶತಮಾನ ಓದಿಕೆ :‘ಅಮಣನ್ ಮತಿರೈ ಅತಿರನ್ ಉರೈ ಉದಯನಸ’(ಶ್ರಮಣ ಮಧುರೆಯ ಅತಿಯನ್ ನೆಲೆ ಉದಯನದು) 9. ತೊಂಡೂರು ಶಿಲಾಶಾಸನ : ಕಾಲ : ಕ್ರಿ.ಶ 3-4 ಓದಿಕೆ : ‘ಎಳಂಕಾಯಿಪಮ್ ಎವ ಅಕಲ್ ಉರ್ ಅಟಂ ಮೋಚಿ ಸೆಯಿತ ಅಟಿಟಣಂ’(ಎಳೆ ಕಾಶ್ಯಪನ ಹೇಳಿಕೆಯಂತೆ ನೆಲೆ ಕೊಡುಗೆ. ಮೋಚಿ ಮಾಡಿದ ಅಧಿಷ್ಟಾನ. ಆಗನೂರುಪಟ್ಟಿ ಶಿಲಾಶಾಸನ : ಕಾಲ ಕ್ರಿ.ಶ. 3-4 ಓದಿಕೆ : * (ಸ್ವಸ್ಥಿ –ಚಿತ್ರ ರೂಪದಲ್ಲಿ) ಪೆರುಂಪೋಕಳ್ ಸೆಕ್ಕಂತಿ ತಾಯಿಯರು. ಸೆಕ್ಕಂತಣ್ಣಿ ಸೆಯ್ವಿಟ್ಟ ಪಳ್ಳಿ ‘( ಪೆರುಂಪೋಕಳ್ (ಊರಿನ) ಸೆಕ್ಕಂತಿ ತಾಯಿಯರು. ಸೆಕ್ಕಂತಣ್ಣಿ ಮಾಡಿಸಿದ ನೆಲೆ.’) ೧೦. ಅರಿತ್ತಪಟ್ಟಿ ಶಿಲಾಶಾಸನ : ಕಾಲ : ಕ್ರಿ.ಪೂ 3 ನೇ ಶತಮಾನ ಓದಿಕೆ : ‘ಇಳಂಜಿಯ ವೇಲ್ ಮಾಪ್ಪರವನ್ ಮಕನ್ ಎಮಯವನ್ ನಲ್ಮುಳುಗೈ ಕೋಟ್ಟು ಪಿತ್ತವನ್ (‘ಇಳಂಜಿಯ ವೇಲ್ ಮಾಪ್ಪರವನ್ ಮಗ ಎಮಯವನ್ ನಲ್ಗುಹೆಯನ್ನು ಕೊಟ್ಟನು’) 10. ಮುತ್ತುಪಟ್ಟಿ ಶಿಲಾಶಾಸನ : ಕಾಲ ಓದಿಕೆ : ಕರುಪ್ಪೂರ್ ಸೆ0iÀiï ಸಿರಿಕನ್’ 11. ಪುಲಿಯಂಗೊಂಬೈ ಶಿಲಾಶಾಸನ : ಕ್ರಿ.ಪೂ 3 ನೇ ಶತಮಾನ ಓದಿಕೆ : ಅಣ್ ಊರ್ ಅತನ್ ನಾಣ್ ಕಲ್ ಅಂಡಿಪಟ್ಟಿಯಲ್ಲಿ ದೊರೆತ ಮಡಕೆ ಚೂರು. ಓದಿಕೆ : ನಾಗನ ಕಳ್ಳು (ಮಡಕೆ) 12. ರಾಮನಾಥಪುರಂ ಜಿಲ್ಲೆಯ ಅಳಗಂಕುಲಂನಲ್ಲಿ ದೊರೆತ ರೌಲೆಟೆಡ್ ವೇರ್ (ಇಂಡಿಯನ್ ಇಮಿಟೇಷನ್) ಬರಹ ಮತ್ತು ಓದಿಕೆ : ಚಾ ಮು ತ ಹ ಕರೂರಿನಲ್ಲಿ ದೊರೆತ ಉಂಗುರ : ಕಾಲ ಕ್ರಿ.ಶ. 1 ನೇ ಶತಮಾನ ಓದಿಕೆ : ಪೆರವತನ್ 13. ರಾಮನಾಥಪುರಂ ಜಿಲ್ಲೆಯ ತೆರಿರುವೇಲಿಯಲ್ಲಿ ಸಿಕ್ಕಿದ ಮಡಕೆ : ಕಾಲ ಕ್ರಿ.ಶ 1ನೇ ಶತಮಾನದ ಬರಹ : ‘ನೆಡುಂಕಿ(ಳಿ)’ 14. ನಾಣ್ಯ : ಕಾಲ ಕ್ರಿ.ಶ 3 ನೇ ಶತಮಾನ ಓದಿಕೆ : ಕುಟ್ಟುವನ್ ಕೋಟ್ಟೈ ಈತನನ್ನು ಕ್ರಿ.ಶ. 3 ನೇ ಶತಮಾನಕ್ಕೆ ಸೇರಿದ ಚೇರ ದೊರೆಯೆಂದು ಭಾವಿಸಲಾಗಿದೆ. 15. ಕರೂರಿನ ಸಮೀಪ ಸಿಕ್ಕಿರುವ ಬೆಳ್ಳಿ ಮುದ್ರೆ: ಕಾಲ ಕ್ರಿ.ಪೂ 1 ನೇ ಶತಮಾನ ಬರಹ : ‘ಕು ರ ವಾ ನಾ’ (ಓದಿಕೆ :ಕುರುವನ್) 16. ಕರೂರಿನ ಸನಿಹ ಸಿಕ್ಕಿರುವ ಬೆಳ್ಳಿಯುಂಗುರ ಓದಿಕೆ : ವೆಳ್ಳಿ ಚೆಂಪನ್ ಕೆಂಪುಸಮುದ್ರದ ತೀರ ಕ್ವಾಸಿಯರ್ ಆಲ್-ಕ್ವಾದಿಂನಲ್ಲಿ ಸಿಕ್ಕಿದ ಮಡಕೆ ಚೂರು. ಓದಿಕೆ : ಕಟನ್ 17. ಮಧುರೈ ಹತ್ತಿರದ ಆನೈಮಲೈ ಶಿಲಾಶಾಸನ ಓದಿಕೆ : ಅತ್ತುವಾಯಿಯ ಅರಟ್ಟ ಕಾಯಿಪನ್ ಈ ಶಿಲಾಶಾಸನದಲ್ಲಿ ‘ಅರಟಟನ’ ಬರಹದಲ್ಲಿ ಮೊದಲ ‘ಟ’ ಅಕ್ಷರದ ಬಲಬದಿಗೆ ಪುಳ್ಳಿ (ಚುಕ್ಕೆ) ಇದೆಯೆಂದು ಇದು ಸ್ವರರಹಿತ ವ್ಯಂಜನ ‘ಟ’ (ಟ ಒತ್ತು ಟ್) ಸೂಚಿಸುವುದೆಂದು ವಾದಿಸಿ ತೊಲ್ಕಾಪ್ಪಿಯಂ ಕಾಲ ಕ್ರಿ.ಪೂದ್ದೆಂದು ಮತ್ತು ಶಾತವಾಹನರ ನಾಣ್ಯದಲ್ಲು ಸ್ವರರಹಿತ ವ್ಯಂಜನದ ಬಲಬದಿಗೆ ಸಣ್ಣ ಗೀಟಿನ ರೂಪದಲ್ಲಿ ಪುಳ್ಳಿ ಕಾಣಿಸಿಕೊಂಡಿದೆ0iÉುಂದು ಹೇಳಿ ಪ್ರಾಕ್ತನಾಲೇಖ್ಯದ ಆಧಾರದ ಮೇಲೆ ಶಿಲಾಬರಹಗಳನ್ನು ನಿರ್ಧರಿಸುವ ತಂತ್ರವನ್ನು ಪುನರಾವಲೋಕನಗೊಳಿಸಬೇಕೆಂದು ಗಿ¥sóï್ಟ ಶಿರೋಮಣಿಯವರು ಕರೆಯಿತ್ತಿದ್ದಾರೆ. 18. ಶಾತವಾಹನರ ನಾಣ್ಯಗಳು : ಈ ನಾಣ್ಯಗಳಲ್ಲಿ ಪ್ರಾಕೃತ ಮತ್ತು ತಮಿಳಿನ ಭಾಷೆಗಳಿವೆಯೆಂದು ಡಾ.ನಾಗಸ್ವಾಮಿಯವರು ಗುರುತಿಸಿದ್ದಾರೆ. ಈ ನಾಣ್ಯಗಳು (1) ವಶಿಷ್ಟಿಪುತ್ರ ಪುಳುಮಾಯಿ (2) ವಶಿಷ್ಟಿಪುತ್ರ ಸಾತಕರ್ಣಿ (3) ವಶಿಷ್ಟಿಪುತ್ರ ಸಿರಿ ಪುಳುಮಾಯಿ, (4) ವಶಿಷ್ಟಿಪುತ್ರ ಶಿವ ಸ್ಕಂದ ಸಾತಕರ್ಣಿ (5) ಗೌತಮಿಪುತ್ರ ಸಾತಕರ್ಣಿ ಮತ್ತು (6) ವಶಿಷ್ಟಿಪುತ್ರ ವಿಜಯ ಸಾತಕರ್ಣಿಗಳಿಗೆ ಸೇರಿವೆ. (ಲೇ:3) ವಶಿಷ್ಟಿಪುತ್ರ ಪುಳುಮಾಯಿಯ ನಾಣ್ಯ ಮುಖಬರಹ : ‘ ರಾಣೋ ವಸಿಟಿ ಪುತಸ ಸಿರಿ ಪುಲಮಾವಿಸ (ಪ್ರಾಕೃತ) ಹಿಂಬದಿ ಬರಹ : ‘ಅರಚನಕು ವಚಿಟ್ಟಿ ಮಕನಕು ತಿರು ಪುಲಿಮಾಯಿಕು’ (ನಾಗಸ್ವಾಮಿ ಓದಿಕೆ) : ‘ಅರಹಣಕು ವಹಿಟ್ಟಿ ಮಕನಕು ತಿರು ಪುಳುಮಾಯಿಕು’ (ಐ.ಕೆ. ಶರ್ಮಾ ಓದಿಕೆ) ವಶಿಷ್ಟಿಪುತ್ರ ಸಾತಕರ್ಣಿಯ ನಾಣ್ಯ ಮುಖಬರಹ : ‘ ರಾಣೋ ವಸಿಟಿ ಪುತಸ ಸಿರಿ ಸಾತಕಣಿಸ (ಪ್ರಾಕೃತ) ಹಿಂಬದಿ ಬರಹ : ‘ಅರಚನಕು ವಚಿಟ್ಟಿ ಮಕನಕು ತಿರು ಚಾತಕಣಿಕು’ (ನಾಗಸ್ವಾಮಿ ಓದಿಕೆ) : ‘ಅರಹಣಕು ವಹಿಟ್ಟಿ ಮಕನಕು ತಿರು ಹಾತಕಣಿಕು’ (ಐ.ಕೆ. ಶರ್ಮಾ ಓದಿಕೆ) ವಶಿಷ್ಟಿಪುತ್ರ ಸಿರಿ ಪುಳುಮಾಯಿ ನಾಣ್ಯ ಮುಖಬರಹ : ‘…..ವಸಿಟಿ ಪುತಸ ಸಿವ ಸಿರಿಪುಲು ……(ಪ್ರಾಕೃತ) ಹಿಂಬದಿ ಬರಹ : ‘ಅರಚನಕು ವಚಿಟ್ಟಿ ಮ(ಕನಕು) ವ ತಿರು ಪುರುಮಾವಿಕು’ (ನಾಗಸ್ವಾಮಿ ಓದಿಕೆ) ವಶಿಷ್ಟಿಪುತ್ರ ಶಿವ ಸ್ಕಂದ ಸಾತಕರ್ಣಿಯ ನಾಣ್ಯ ಮುಖಬರಹ : ‘…..ರಾಣೋ ..ತಿರಿಖದ ತತಕಣಿಸ ……(ಪ್ರಾಕೃತ) ಹಿಂಬದಿ ಬರಹ : ‘…….ಮಕನಕು (ನಾಗಸ್ವಾಮಿ ಓದಿಕೆ) ಗೌತಮಿ ಪುತ್ರ ಸಾತಕರ್ಣಿಯ (ಕ್ರಿ.ಶ. 78-106) ನಾಣ್ಯ ಮುಖಬರಹ : ‘ ರಾಣೋ ಗೌತಮಿಪುತಸ ಸಿರಿ ಯಾನ ಸಾತಕಣಿಸ (ಪ್ರಾಕೃತ) ಹಿಂಬದಿ ಬರಹ : ‘ಅರಚಣಕು ಗೌತಮಿ ಪುತಕು ಚಿರು ಯಜ್ಞ ಚಾತಕಣಿಕು’ (ನಾಗಸ್ವಾಮಿ ಓದಿಕೆ) ವಶಿಷ್ಟಿಪುತ್ರ ವಿಜಯ ಸಾತಕರ್ಣಿಯ ನಾಣ್ಯ ಮುಖಬರಹ : ‘…..ರಾಣೋ …..ಧಿ ಪುತಸ ……(ಪ್ರಾಕೃತ) ಹಿಂಬದಿ ಬರಹ : ‘(ಅರಚನಕು ವಚಿ)ಟ್ಟಿ ಪುತುಕು ತಿರು ವಿಜಯ ಚಾತಕಣಿಕು’ (ನಾಗಸ್ವಾಮಿ ಓದಿಕೆ) ವಟ್ಟೆಳ್ಳುತ್ತು-ಗ್ರಂಥ-ತಮಿಳು ಲಿಪಿ ತಮಿಳುನಾಡು ಅನುಸರಿಸಿದ ಲಿಪಿ ವ್ಯವಸ್ಥೆಯಲ್ಲಿ ಪ್ರಾಕೃತ ಮತ್ತು ಸಂಸ್ಕೃತವನ್ನು ಸ್ಪಷ್ಟವಾಗಿ,ಸಂದಿಗ್ದರಹಿತವಾಗಿ ಬರೆಯಲು ಸಾಧ್ಯವಿರಲಿಲ್ಲ. ಇದಕ್ಕಾಗಿ ಪಲ್ಲವರ ಕಾಲದಲ್ಲಿ ಗ್ರಂಥ ಲಿಪಿಯನ್ನು ಬಳಕೆಗೆ ತರಲಾಯಿತು. ಇದು ಭಾರತದಿಂದ ಹೊರದೇಶಗಳಿಗೂ ಕಾಲಾನುಕ್ರಮದಲ್ಲಿ ಸಾಗಿ ಅಲ್ಲಿನ ಭಾಷೆಗಳ ಉಗಮಕ್ಕೆ ಕಾರಣವಾಯಿತು .ಜಾವ, ಸುಮಾತ್ರ, ಲಾವೋಸ್, ಖ್ಮೇರ್,ಕಾಂಬೋಡಿಯಾ,ವಿಯೆಟ್ನಾಂ ಲಿಪಿಗಳು ಗ್ರಂಥ ಲಿಪಿಯಿಂದ ಉಗಮಗೊಂಡು ವಿಕಸಿಸಿದವು. ತಮಿಳು ಬ್ರಾಹ್ಮಿಯ ಅಕ್ಷರಗಳು ದುಂಡಾಕಾರ ತಳೆಯುತ್ತಾ ಕ್ರಿ.ಶ. 500 ರಿಂದ ತಮಿಳುನಾಡಿನಲ್ಲಿ ವಟ್ಟೆಳ್ಳುತ್ತು ಲಿಪಿ ಮೂಡಿಬಂದಿತು. ಏಳನೆಯ ಶತಮಾನದ ವೇಳೆಗೆ ತಮಿಳು ಲಿಪಿ ಬಳಕೆಗೆ ಬಂದು ವಟ್ಟೆಳ್ಳುತ್ತು ಮರೆಯಾಗತೊಡಗಿತು. ಚೋಳ ಸಾಮ್ರಾಜ್ಯದ ಅಧಿಪತ್ಯ ಪ್ರಬಲವಾಗತೊಡಗಿದಂತೆ ಹದಿಮೂರನೇ ಶತಮಾನದ ವೇಳೆಗೆ ವಟ್ಟೆಳ್ಳುತ್ತು ಸಂಪೂರ್ಣವಾಗಿ ಕಣ್ಮರೆಯಾಯಿತು. ಆದರೆ ಕೇರಳದಲ್ಲಿ 19ನೇ ಶತಮಾನದವರೆಗೆ ಮಲೆಯಾಳಂ ಬರಹಕ್ಕೆ ವಟ್ಟೆಳ್ಳುತ್ತು ಚಾಲ್ತಿಯಲ್ಲಿದ್ದಿತು. ವಟ್ಟೆಳ್ಳುತ್ತು ಲಿಪಿಯಲ್ಲಿನ ಅತ್ಯಂತ ಹಳೆಯ ಬರಹ 5ನೇ ಶತಮಾನಕ್ಕೆ ಸೇರಿದ ಪುಲಂಕುರಿಚ್ಚಿ ಶಾಸನಗಳಲ್ಲಿ ಲಭ್ಯ. ಧರ್ಮಪುರಿ ಜಿಲ್ಲೆಯ ವೀರಗಲ್ಲುಗಳ ಮೇಲೂ ವಟ್ಟೆಳ್ಳುತ್ತು ಲಿಪಿ ಕಾಣಿಸಿಕೊಂಡಿದೆ. ಏಳನೇ ಶತಮಾನದ ಅವಧಿಯಲ್ಲಿ ಪಲ್ಲವರು ಗ್ರಂಥಲಿಪಿಯಿಂದ ತಮಿಳು ಲಿಪಿಯನ್ನು ಸೃಜಿಸಿದರು. ಇದಕ್ಕಾಗಿ ಅಗತ್ಯಕ್ಕನುಗುಣವಾಗಿ ಗ್ರಂಥ ಲಿಪಿಯ ಕೆಲ ಅಕ್ಷರಗಳನ್ನು ಸಹ ಸೇರಿಸಿಕೊಳ್ಳಲಾಯಿತು. ಆದರೆ ಈ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. 7ನೇ ಶತಮಾನಕ್ಕೆ ಸೇರಿದ ಮೊದಲನೇ ಮಹೇಂದ್ರ ಪಲ್ಲವನ ಶಿಲಾಶಾಸನಕ್ಕೆ ಮುಂಚೆ ತಮಿಳುಲಿಪಿಯ ಯಾವ ಬರಹಗಳು ಇಲ್ಲವೆಂದು ಮಹಾದೇವನ್ ಅಭಿಪ್ರಾಯಪಟ್ಟಿದ್ದಾರೆ. ಆಧುನಿಕ ತಮಿಳು ಲಿಪಿ , ತಮಿಳು ಬ್ರಾಹ್ಮಿಯ ನೇರ ಅವತರಣಿಕೆಯಲ್ಲದಿದ್ದರು ಸ್ವರಗಳ ಆಕಾರದ ಮೇಲೆ ದಟ್ಟ ಪ್ರಭಾವ ಬೀರಿದೆ ಎಂದು ಪರಿಗಣಿಸಲಾಗಿದೆ. ಒಂಬತ್ತನೇ ಶತಮಾನದಿಂದ ತಮಿಳು ಶಿಲಾಶಾಸನಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. 9ನೇ ಶತಮಾನದಲ್ಲಿ ಚೋಳರ ಅಧಿಪತ್ಯ ಊರ್ಜಿತವಾದಂತೆ ತಮಿಳು ಲಿಪಿ ವ್ಯಾಪಕತೆ , ಅಧಿಕೃತತೆಗಳನ್ನು ಗಳಿಸುತ್ತ ಬೆಳೆಯತೊಡಗಿತು. 11ನೇ ಶತಮಾನದಿಂದ ತಮಿಳು ಲಿಪಿ ತಮಿಳುನಾಡಿನಾದ್ಯಂತ ನೆಲೆಕಂಡಿತು. ತಮಿಳು-ಬ್ರಾಹ್ಮಿಯ ಸಮಸ್ಯೆಗಳು ಪ್ರಾಕ್ತನಾಲೇಖ್ಯ (Paleography) ಆಧಾರದ ಅನಿರ್ದಿಷ್ಟತೆ : * ತಮಿಳುನಾಡಿನಲ್ಲಿನ ತಮಿಳುಬ್ರಾಹ್ಮಿ ಶಿಲಾಶಾಸನಗಳ ಕಾಲವನ್ನು ನಿರ್ಧರಿಸಲು ಪ್ರಾಕ್ತನಾಲೇಖ ತಂತ್ರವನ್ನು ಪ್ರಮುಖ ಆಧಾರವಾಗಿ ಪರಿಗಣಿಸಲಾಗಿದೆ. ಇದರ ಹೊರತಾಗಿ ಬೇರೆ ಬಾಹ್ಯ ಅಥವಾ ಸಮಕಾಲೀನ ಐತಿಹಾಸಿಕ ದಾಖಲೆಗಳು ದಕ್ಕಿಲ್ಲ. ಬೇರೆ ಯಾವುದೇ ಮಾರ್ಗವಿಲ್ಲದಿದ್ದಾಗ ಮಾತ್ರ ಪ್ರಾಕ್ತನಾಲೇಖ ಆಧಾರವನ್ನು ಶಿಲಾಶಾಸನಗಳ ಕಾಲ ನಿರ್ಧರಿಸಲು ಬಳಸಬೇಕೆಂದು ತಜ್ಞರು ಭಾವಿಸುತ್ತಾರೆ. ಶಿಲಾಶಾಸನಗಳಲ್ಲಿ ಪರಿಣಿತರಾದ ವಿದ್ವಾಂಸರು ಪ್ರಾಕ್ತನಾಲೇಖ್ಯ ಆಧಾರದ ಮೇಲೆ ನೀಡಿದ ತೀರ್ಮಾನಗಳು 2-3 ಶತಮಾನಗಳ ಅಂತರ ಹೊಂದಿರುವ ಸಾಧ್ಯತೆಯಿದೆಯ್ದೆಂ ಹೇಳುತ್ತಾರೆ. (ಕೃ:18- ಪು:169,170) ಪೂರ್ಣಪ್ರಮಾಣದ ತಮಿಳು ಶಾಸನಗಳು ಪಲ್ಲವರ ಕಾಲದಲ್ಲಿ ವಿಶೇಷತಃವಾಗಿ 7ನೇ ಶತಮಾನದಿಂದ ಕಾಣಿಸಿಕೊಳ್ಳುತ್ತವೆ. ಚೋಳ, ಪಾಂಡ್ಯರ ತಾಮ್ರಪಟ , ಶಿಲಾಶಾಸನಗಳು ಸಹ ನಂತರ ಕಾಣಿಸಿಕೊಳ್ಳುತ್ತವೆ. ಇವು ತಮಿಳು-ಸಂಸ್ಕೃತ ದ್ವಿಭಾಷೆಯಲ್ಲಿವೆ. * ಪ್ರಾಕ್ತನಾಲೇಖ ತಂತ್ರದ ಮೇಲೆ ಬರಹದ ಕಾಲವನ್ನು ನಿರ್ಧರಿಸುವಾಗ ಎಷ್ಟೋ ಸಲ ತಜ್ಞನ ಒಲವು, ನಿಲುವುಗಳು, ಪೂರ್ವಾಗ್ರಹಗಳು ಸಹ ಪ್ರಭಾವ ಬೀರುತ್ತವೆ. ಇವು ನೈಜ ಕಾಲ ನಿರ್ಧಾರ ಮಾಡುವಲ್ಲಿ ಎದುರಾಗುವ ಅತಿ ದೊಡ್ಡ ಅಡಚಣೆಗಳೆಂದು ತಜ್ಞರು ಹೇಳುತ್ತಾರೆ. * ಭಾರತದಲ್ಲಿ ಖಚಿತವಾಗಿ ಕಾಲ ನಿರ್ಧಾರಿತವಾದ ಬರಹಗಳೆಂದರೆ ಅಶೋಕನವು. ಅಶೋಕನ ಲಿಪಿಯೊಂದಿಗಿನ ಸಾಮ್ಯತೆ ಮತ್ತು ವೈದೃಶ್ಯಗಳ ಆಧಾರದ ಮೇಲೆ ಉಳಿದ ಲಿಪಿಗಳ ಕಾಲವನ್ನು ನಿರ್ಧರಿಸಬೇಕೆಂಬ ಸ್ಪಷ್ಟ ನಿಲುವು ತಾಳಿದ ಪಾಕಿಸ್ತಾನದ ಖ್ಯಾತ ಶಾಸನತಜ್ಞ ಅಹ್ಮದ್ ಹಸನ್ ದಾನಿ(ಎ.ಎಚ್.ದಾನಿ) ಪ್ರಾಕ್ತನಾಲೇಖ ಆಧಾರದ ಮೇಲೆ ನಿರ್ಧರಿಸಿದ ಕಾಲದ ಪ್ರಾಚೀನತೆಯನ್ನು ಪ್ರಶ್ನಿಸಿ ಅತ್ಯಂತ ಪ್ರಾಚೀನವೆಂದು ಭಾವಿಸಲಾದ ಶ್ರೀಲಂಕಾ ಮತ್ತು ತಮಿಳುನಾಡಿನ ಶಿಲಾಬರಹಗಳು ಕ್ರಿ.ಶ. ಮೊದಲ ಶತಮಾನಗಳಿಗೆ ಸೇರಿದವೆಂದು ಹೇಳಿದ್ದಾರೆ. ಕೆ.ವಿ ಸುಬ್ರಮಣ್ಯ ಅಯ್ಯರ್ ತಮಿಳುನಾಡಿನ ಗುಹಾಶಿಲಾ ಬರಹಗಳನ್ನು ಕ್ರಿ.ಪೂ 300 ಎಂದು ಹೇಳಿದರು. ಉಳಿದವರು ಇದನ್ನು ಅನುಸರಿಸಿದರು. ಇಂತಹ ಯಾವ ಆಧಾರವೂ ಇಲ್ಲದ ಊಹಾಧಾರಿತ ತೀರ್ಮಾನಗಳ ಮೌಲಿಕತೆಯನ್ನು ಎ.ಎಚ್.ದಾನಿ ಪ್ರಶ್ನಿಸಿದ್ದಾರೆ. ಅರಿಕಮೇಡುವಿನಲ್ಲಿ ದೊರೆತ ಮಡಕೆಗಳ ಮೇಲಿನ ಬರಹಗಳನ್ನು ಪ್ರಾಕ್ತನಶಾಸ್ತ್ರ ಮತ್ತು ಇತರ ಆಧಾರಗಳ ಮೇಲೆ ಕ್ರಿ.ಶ 1-2 ಶತಮಾನವೆಂದು ನಿರ್ಧರಿಸಲಾಗಿದೆ. ಈ ಮಡಕೆಗಳ ಮೇಲಿರುವ ಲಿಪಿ ಮತ್ತು ಬರಹ ಕ್ರಿ.ಪೂ ಕಾಲದ್ದೆಂದು ಪರಿಗಣಿಸಿರುವ ತಮಿಳು ಬ್ರಾಹ್ಮಿಗಳ ಮಧ್ಯದಲ್ಲಿ ಸಾಮ್ಯತೆಗಳಿವೆ. ಆದ್ದರಿಂದ ಎಲ್ಲ ತಮಿಳು-ಬ್ರಾಹ್ಮಿ ಶಿಲಾಬರಹಗಳ ಕಾಲವನ್ನು ಮರುಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ. * ಜಂಬೈ ಶಿಲಾಶಾಸನದ ಕಾಲವನ್ನು ಕ್ರಿ.ಶ. 2 ಎಂದು ಪ್ರಾಕ್ತನಾಲೇಖದ ತಂತ್ರಗಳ ಮೇಲೆ ನಿರ್ಧರಿಸಲಾಗಿದೆ. ಅಶೋಕ ಶಿಲಾಶಾಸನದ ‘ಸತಿಯಪುತೊ’ ಮತ್ತು ಜಂಬೈ ಶಿಲಾಶಾಸನದ ‘ಅತಿಯಾನ್’ ಒಂದೇ ಕಾಲದವರೆಂದು ಭಾವಿಸುವ ಆರ್.ನಾಗಸ್ವಾಮಿಯವರು ಮತ್ತು ಗಿಫ್ಟ್ ಶಿರೋಮಣಿಯವರು ಪ್ರಾಕ್ತನಾಲೇಖದ ಆಧಾರದ ಮೇಲೆ ಕಾಲ ನಿರ್ಣಯಿಸುವುದು ಸರಿಯಲ್ಲವೆಂಬ ಅಭಿಪ್ರಾಯಪಟ್ಟಿದ್ದಾರೆ. ಇವರು ಗುಹಾ ಶಿಲಾ ಬರಹಗಳ ಕಾಲವನ್ನು ಅಶೋಕನ ಕಾಲಕ್ಕೆ ಹಿಂದೂಡಬೇಕೆಂದು ಹೇಳಿದ್ದಾರೆ. ಇವರ ಅಭಿಪ್ರಾಯವನ್ನು ಪರಿಗಣಿಸಿದರೆ ಇಡೀ ತಮಿಳಗಂ ಚರಿತ್ರೆ ಗೋಜಲಿನ ಗೂಡಾಗಿ ಕ್ರಿ.ಪೂ 300-ಕ್ರಿ.ಶ 600 ಮಧ್ಯದ ಸುಮಾರು 900 ವರ್ಷಗಳ ಅವಧಿಯಲ್ಲಿ ತಮಿಳು ಬ್ರಾಹ್ಮಿಯ ಬರಹ ಸಾಧನೆ ಅತ್ಯಂತ ನೀರಸ ಮತ್ತು ಶೈಶವ ಸ್ಥಿತಿಯಿಂದ ಮೇಲೇರಲಿಲ್ಲವೆಂ¨ ತೀರ್ಮಾನಕ್ಕೆ ಬರಬೇಕಾಗುತ್ತದೆ. ಪುಳ್ಳಿಯ ಸಮಸ್ಯೆ : (ನೋಡಿರಿ : ತೊಲ್ಕಾಪ್ಪಿಯಂ) * ಲಿಪಿ ವ್ಯವಸ್ಥೆಯಲ್ಲಿ ಪುಳ್ಳಿ(ಚುಕ್ಕಿ) ಬಳಕೆ ಈಗ ಪ್ರಚಾರಗೊಳಿಸಲ್ಪಡುತ್ತಿರುವಂತೆ ತಮಿಳಿಗೆ ಮಾತ್ರ ಸೀಮಿತವಾದ ಅನನ್ಯ ಕಲ್ಪನೆಯಲ್ಲ. ಬ್ರಾಹ್ಮಿಯಲ್ಲಿ ಮತ್ತು ಕನ್ನಡ, ತೆಲುಗುಗಳಲ್ಲಿ ಮತ್ತಿತರ ಭಾಷೆಯ ಲಿಪಿಗಳಲ್ಲು ಸಹ ಅನುಸ್ವಾರ (ಅಂ), ವಿಸರ್ಗಗಳನ್ನು (ಅಃ) ಸೂಚಿಸಲು ಅಕ್ಷರದ ಬಲಬದಿಯಲ್ಲಿ ಚುಕ್ಕೆಯನ್ನು ಇಡಲಾಗುತ್ತದೆ. * ತೊಲ್ಕಾಪ್ಪಿಯಂ ಶುದ್ಧ ವ್ಯಂಜನವನ್ನು (ಸ್ವರರಹಿತ ವ್ಯಂಜನ) ಗುರುತಿಸಲು ಸ್ವರಾಂತರ್ಗತ ವ್ಯಂಜನದ ಮೇಲೆ ಪುಳ್ಳಿ ಬಳಸಬೇಕೆಂದು ಸೂಚಿಸುತ್ತದೆ. ಇದು ತಮಿಳು ಲಿಪಿಯ ವೈಶಿಷ್ಟ್ಯವೆಂದು ಮಹಾದೇವನ್ ಗುರುತಿಸುತ್ತಾರೆ. ಮಧುರೈ ಸಮೀಪದ ಹಲವಾರು ಅತ್ಯಂತ ಪ್ರಾಚೀನವೆಂದು ಭಾವಿಸಲಾಗಿರುವ ಗುಹಾ ಶಿಲಾಶಾಸನಗಳಲ್ಲಿ ಪುಳ್ಳಿಯ ಬಳಕೆಯಾಗಿರುವುದು ವಿದ್ವಾಂಸರ ಗಮನಕ್ಕೆ ಬಂದಿಲ್ಲ. * ಪುಳ್ಳಿಯನ್ನು ಗುರುತಿಸಲಾದ ಖಚಿತವಾಗಿ ಕಾಲ ನಿರ್ಧಾರಿತವಾದ ಮೊದಲ ಸಾಕ್ಷ್ಯವೆಂದರೆ ವಶಿಷ್ಟ ಪುತ್ರ ಶ್ರೀ ಸಾತಕರ್ಣಿಯ ನಾಣ್ಯ (ಕ್ರಿ.ಶ 160) ಇದರಲ್ಲಿ ವಚಿಟ್ಟಿ ಶಬ್ಧದಲ್ಲಿ ‘ಟ್’ ಸೂಚಿಸಲು ಪುಳ್ಳಿ ಬಳಕೆಯಾಗಿದೆಯೆಂದು ಆರ್.ನಾಗಸ್ವಾಮಿಯವರು ಹೇಳಿದ್ದಾರೆ. ಆದರೆ ಅವರ ವಾದಕ್ಕಿರುವ ಮುಖ್ಯ ಅಡಚಣೆಗಳು ಮುಂದಿವೆ. * ತಮಿಳಿನ ಬರಹವುಳ್ಳ ಅತ್ಯಂತ ಪ್ರಾಚೀನ ನಾಣ್ಯಗಳೆಂದರೆ ಉತ್ತರ ಆರ್ಕಾಟ್ ಜಿಲ್ಲೆಯ ಚೆಂಗಂ ತಾಲೂಕಿನ ಅಂದಿಪಟ್ಟಿ ಹಳ್ಳಿಯಲ್ಲಿ ದೊರೆತಿರುವ ಸೆಂದನ್ ಹೊರಡಿಸಿದ ನಾಣ್ಯಗಳು. ಇವುಗಳ ಮೇಲೆ ‘ತಿನ್ನನ್ ಎತಿರನ್ ಸೆಂತನ್’ ಎಂಬ ಬರಹವಿದೆ. ಪ್ರಾಕ್ತನಾಲೇಖದ ಆಧಾರದ ಮೇಲೆ ಇವುಗಳ ಕಾಲವನ್ನು ಕ್ರಿ.ಶ 2-4 ಶತಮಾನವೆಂದು ನಿರ್ಧರಿಸಲಾಗಿದೆ. ಈ ನಾಣ್ಯಗಳಲ್ಲಿ ‘’ಎ’’ ಮತ್ತು ‘’ಒ’’ ಗಳನ್ನು ಗುರುತಿಸಲು ಪುಳ್ಳಿಯನ್ನು ಬಳಸಲಾಗಿದೆ ಆದರೆ ಶುದ್ಧ ವ್ಯಂಜನ ಗುರುತಿಸಲು ಬಳಸಿಲ್ಲ. ಇಲ್ಲಿ ಬಳಕೆಯಾಗಿರುವುದು ಆರಂಭಿಕ ವಟ್ಟೆಳ್ಳುತ್ತು ಲಿಪಿ ಎಂದು ಪರಿಗಣಿಸಲಾಗಿದೆ. ತಮಿಳುನಾಡಿನ ಪ್ರಾಕ್ತನ ಇಲಾಖೆ ಆರ್ಕಾಟ್ ಜಿಲ್ಲೆಯಲ್ಲಿ 6-7ನೇ ಶತಮಾನಕ್ಕೆ ಸೇರಿದ ವಟ್ಟೆಳ್ಳುತ್ತು ಲಿಪಿಯಲ್ಲಿನ ನೂರಾರು ವೀರಗಲ್ಲುಗಳಲ್ಲಿ ‘ಎ’ ಮತ್ತು ‘ಒ’ ಗುರುತಿಸಲು ಪುಳ್ಳಿ ಬಳಕೆಯಾಗಿರುವುದನ್ನು ಖಚಿತಪಡಿಸಿದೆ ಆದರೆ ಇವುಗಳಲ್ಲಿ ಶುದ್ಧ ವ್ಯಂಜನ ಗುರುತಿಸಲು ಪುಳ್ಳಿಯ ಬಳಕೆಯಾಗಿರುವ ಸಾಕ್ಷ್ಯಗಳು ದಕ್ಕಿಲ್ಲ. ಇದಕ್ಕೆ ವಿವರಣೆ ನೀಡಲು ಯತ್ನಿಸಿ ಡಾ.ನಾಗಸ್ವಾಮಿಯವರು ಪ್ರಾದೇಶಿಕ ವೈಶಿಷ್ಟ್ಯವೆಂಬ ಸಮಜಾಯಿಷಿ ನೀಡಿದ್ದಾರೆ. * ಮಧುರೈ ಸಮೀಪದ ವಲ್ಲಂನಲ್ಲಿನ ಕ್ರಿ.ಶ. 7ನೇ ಶತಮಾನಕ್ಕೆ ಸೇರಿದ ಪಲ್ಲವ ಮಹೇಂದ್ರವರ್ಮನ ಶಿಲಾಶಾಸನಗಳಲ್ಲಿ ಶುದ್ಧ (ಸ್ವರರಹಿತ) ವ್ಯಂಜನವನ್ನು ಪುಳ್ಳಿಯಿಂದ ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ಕಾಲದ ನಂತರ ಪುಳ್ಳಿ ಖಚಿತ ಸ್ಥಾನವನ್ನು ಹೊಂದಿದೆ. ತೊಲ್ಕಾಪ್ಪಿಯಂ ತಮಿಳಿನ ಆದಿಗ್ರಂಥವೆಂದು ಪರಿಗಣಿತವಾಗಿದೆ. ಇದರ ಕಾಲ ಕ್ರಿ.ಪೂ 300 ರಿಂದ ಕ್ರಿ.ಶ 1000 ರ ಅವಧಿಯಲ್ಲಿ ತೂಗುಯ್ಯಾಲೆಯಾಡುತ್ತಿದೆ. ಶಿಲಾಶಾಸನಗಳಲ್ಲಿ ಪುಳ್ಳಿಯ ಬಳಕೆಯಾಗತೊಡಗಿದ ಕಾಲ (ಕ್ರಿ.ಶ. 700) ಮತ್ತು ತೊಲ್ಕಾಪ್ಪಿಯಂ ಗ್ರಂಥ ರಚನೆಗೆ ನಿರ್ಧರಿಸಿದ ಕಾಲಗಳು (ಕ್ರಿ.ಪೂ 300- ಕ್ರಿ.ಶ 300) ಒಂದಕ್ಕೊಂದು ತಾಳೆಯಾಗುವುದಿಲ್ಲ. ಆದ್ದರಿಂದ ತಮಿಳು ಬ್ರಾಹ್ಮಿಯ ಸಿದ್ಧಾಂತದಲ್ಲಿ ದೋಷಗಳಿರಬೇಕು ಅಥವಾ ತೊಲ್ಕಾಪ್ಪಿಯಂ ಗ್ರಂಥ ರಚನೆಯ ಕಾಲ ಕ್ರಿ.ಶ. 700 ಸನಿಹದಲ್ಲಿರುವ ಸಾಧ್ಯತೆಗಳತ್ತ ಸಂಶೋಧಿಸಬೇಕು. * ತೊಲ್ಕಾಪ್ಪಿಯಂ ಪುಳ್ಳಿಯನ್ನು ಸೂಚಿಸುವುದರಿಂದ ತಮಿಳಿನ ವರ್ಣಮಾಲೆಯನ್ನು ಬರೆಯುವಾಗ (1) ಎಲ್ಲ ವ್ಯಂಜನಗಳ ಮೇಲೆ ಪುಳ್ಳಿಯನ್ನು ಬಳಸಬೇಕೋ ಅಥವಾ (2) ಒತ್ತಕ್ಷರಗಳು ಬಂದಾಗ ಮಾತ್ರ ಒತ್ತುಗಳನ್ನು ಸೂಚಿಸುವ ವ್ಯಂಜನಗಳ ಮೇಲೆ ಮಾತ್ರ ಪುಳ್ಳಿ ಬಳಸಬೇಕೋ ಎಂಬುದು ಸ್ಪಷ್ಟವಿಲ್ಲ. ಆದರೆ ಈಗ ಪ್ರಚಲಿತವಿರುವ ತಮಿಳಿನ ಮಾರ್ಗ (2)ನೇ ಪದ್ಧತಿಯನ್ನು ಅನುಸರಿಸುತ್ತಿದೆ. ಆದ್ದರಿಂದ ತೊಲ್ಕಾಪ್ಪಿಯಂ ಪುಳ್ಳಿಯನ್ನು ಸೂಚಿಸಿದ ಮೂಲ ಆಶಯ ಮತ್ತು ಸಂದರ್ಭಗಳನ್ನು ಲಿಪಿ ಇತಿಹಾಸದ ದೃಷ್ಟಿಯಿಂದ ಅಭ್ಯಸಿಸಬೇಕಾದ ಅಗತ್ಯತೆಯಿದೆ. ತಮಿಳಿನ ಮೂಲ ಲಿಪಿ ಪದ್ಧತಿ (1)ರಂತೆ ಇದ್ದಿತೆಂದರೆ ತಮಿಳಿನ ವರ್ಣಮಾಲೆಯಲ್ಲಿರುವ ವ್ಯಂಜನಗಳೆಲ್ಲವು ತಲೆಯ ಮೇಲೆ ಪುಳ್ಳಿ ಹೊಂದಿದ್ದು ಬರವಣಿಗೆಯಲ್ಲಿ ಅದರ ನಿರಸನಕ್ಕಾಗಿ ಕಾದಿವೆಯೆಂದು ಒಪ್ಪುವ ಅನಿವಾರ್ಯತೆ ಒದಗಿ ಬಂದು ಲಿಪಿ ವ್ಯವಸ್ಥೆ ಕೃತಕವೆನಿಸುತ್ತದೆ. ಗಣಕದ ಭಾಷೆ ಯೂನಿಕೋಡ್ ರೂಪಿಸುವಾಗ ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಪುಳ್ಳಿ ಹೊಂದಿ ಶುದ್ಧ ವ್ಯಂಜನ ರೂಪದಲ್ಲಿರುವುದರಿಂದ ತಮಿಳು-ಬ್ರಾಹ್ಮಿ ಅಶೋಕ ಬ್ರಾಹ್ಮಿಗಿಂತಲೂ ಪ್ರಾಚೀನ ಮತ್ತು ವೈಜ್ಞಾನಿಕ ಎಂಬ ವಾದವನ್ನು ಮುಂದಿಡುವ ಪ್ರಯತ್ನಗಳಾಗಿವೆ. * ತೊಲ್ಕಾಪ್ಪಿಯಂ ಪ್ರಾಚೀನತೆ ಮತ್ತು ಪುಳ್ಳಿಯ ಸಮಸ್ಯೆಗೆ ಪರಿಹಾರ ಹುಡುಕಲು ಯತ್ನಿಸಿದ ತಮಿಳು ವಿದ್ವಾಂಸರಲ್ಲಿ ಪುಲವರ ರಾಜು,ಗಿಫ್ಟ್ ಶಿರೋಮಣಿ ಮತ್ತು ಇ.ಜೇಬರಾಜನ್ ಮುಂಚೂಣಿಯಲ್ಲಿದ್ದಾರೆ. ಆದರೆ ಯಾರೊಬ್ಬರೂ ಕ್ರಿ.ಶ 7 ನೇ ಶತಮಾನಕ್ಕೆ ಮುಂಚೆ ಶುದ್ಧವ್ಯಂಜನ ಗುರುತಿಸಲು ಪುಳ್ಳಿ ಬಳಕೆಯಾಗಿರುವುದನ್ನು ವಿವಾದಾತೀತವಾಗಿ ಗುರುತಿಸಿಲ್ಲ. * ಪುಲವರ ರಾಜು ಅರಚ್ಚಲ್ಲೂರಿನ ಶಿಲಾಶಾಸನಗಳಲ್ಲಿ ‘ಇ’ ‘ಎ’ ಗಳನ್ನು ‘ಈ’’ಏ’ಗಳಿಂದ ಬೇರೆಯಾಗಿ ಗುರುತಿಸಲು ಪುಳ್ಳಿ ಬಳಕೆಯಾಗಿರುವುದನ್ನು ಗುರುತಿಸಿದ್ದಾರೆ. ಪ್ರಾಕ್ತನಾಲೇಖದ ಆಧಾರದ ಮೇಲೆ ಈ ಬರಹಗಳ ಕಾಲವನ್ನು ಕ್ರಿ.ಶ 3-4 ಶತಮಾನಗಳಿಗೆ ನಿಗದಿತಗೊಳಿಸಲಾಗಿದೆ. ಆದರೆ ಇಲ್ಲಿ ಶುದ್ಧ ವ್ಯಂಜನ ಗುರುತಿಸಲು ಪುಳ್ಳಿ ಬಳಕೆಯಾಗಿಲ್ಲ. * ಗಿಫ್ಟ್ ಶಿರೋಮಣಿಯವರು ಪುಳ್ಳಿ ಬಳಕೆಯಾಗಿದೆಯೆಂದು ಸೂಚಿಸುತ್ತಿರುವ ಆನೈಮಲೈ ಶಿಲಾಬರಹದಲ್ಲಿ ಕಲ್ಲಿನ ಮೇಲೆ ಬೇರೆ ಮೂಲಗಳಿಂದ ಮೂಡಿದ ಕಚ್ಚೋ ಅಥವಾ ಪುಳ್ಳಿಯೋ ಎಂದು ಖಚಿತವಾಗಿ ಹೇಳುವಂತಿಲ್ಲ. ಏಕೆಂದರೆ ಈ ಶಿಲಾಶಾಸನದಲ್ಲಿರುವ ಒಂದು ಗುರುತನ್ನು ಪುಳ್ಳಿಯೆಂದು ಇನ್ನೊಂದು ಅಂತಹುದೇ ಗುರುತು ಪುಳ್ಳಿ ಅಲ್ಲವೆಂದು ಕಲ್ಲಿನ ಮೇಲಿನ ಕಚ್ಚೆಂದು ಗಿಫ್ಟ್ ಶಿರೋಮಣಿಯವರು ಹೇಳಿ ಪುಳ್ಳಿಯ ಅಸ್ತಿತ್ವವನ್ನು ಸಂಶದಿಂದ ನೋಡುವಂತೆ ಮಾಡಿದ್ದಾರೆ. ಇದೇ ಕಾಲದ್ದೆಂದು ಪರಿಗಣಿಸಲಾಗುತ್ತಿರುವ ಇತರ ಶಿಲಾಶಾಸನಗಳಲ್ಲಿ ಪುಳ್ಳಿ ಇರದಿರುವುದು ಈ ಸಂಶವನ್ನು ಪೋಷಿಸುತ್ತದೆ. ತೊಲ್ಕಾಪ್ಪಿಯಂ ಸ್ವರರಹಿತ ವ್ಯಂಜನದ ಮೇಲೆ ಪುಳ್ಳಿಯನ್ನು ಹೇಳುವುದೇ ಹೊರತು ಗಿಫ್ಟ್ ಶಿರೋಮಣಿಯವರು ಹೇಳುವಂತೆ ಬಲಬದಿಗಲ್ಲ. ಇದರ ಮುಂದುವರಿಕೆಯಾಗಿ ಪುಳ್ಳಿ ಇರದ ತಮಿಳು ಬ್ರಾಹ್ಮಿ-1 ಪದ್ದತಿ , ಪುಳ್ಳಿ ಇದ್ದು ಸಾಕ್ಷ್ಯ ದಕ್ಕದ ತಮಿಳು ಬ್ರಾಹ್ಮಿ-2 ಪದ್ದತಿ ಮತ್ತು ಪುಳ್ಳಿಯಿರುವ ತಮಿಳು ಬ್ರಾಹ್ಮಿ ಪದ್ದತಿಗಳು ನಮಗೆ ತಿಳಿದು ಬಂದಿವೆ. ಕ್ರಿ.ಪೂ ಕಾಲದ ತಮಿಳು ಬ್ರಾಹ್ಮಿ ಬರಹಗಳಲ್ಲಿ ಪುಳ್ಳಿಯನ್ನು ಹುಡುಕ ಬೇಕಾಗಿದೆ ಎಂಬ ನಿಲುವನ್ನು ಶಿರೋಮಣಿಯವರು ತಳೆದಿದ್ದಾರೆ. ಶಿಲಾಶಾಸನಗಳ ಕೊರತೆ * ಜೈನರ ಅತ್ಯಂತ ಪ್ರಾಚೀನ ಶಿಲಾಶಾಸನಗಳು ಕ್ರಿ.ಪೂ 2 ನೇ ಶತಮಾನಕ್ಕೆ ಸೇರಿದ್ದು ಒಡಿಷಾ ಮತ್ತು ಮಧುರಾಗಳಲ್ಲಿ ಸಿಕ್ಕಿವೆ. ತಮಿಳು-ಬ್ರಾಹ್ಮಿಯಲ್ಲಿ ಸಿಕ್ಕಿರುವ ಅತ್ಯಂತ ಹಳೆಯ ಶಿಲಾಶಾಸನವನ್ನು ಪ್ರಾಕ್ತನಾಲೇಖ ಆಧಾರದ ಮೇಲೆ ಕ್ರಿ.ಪೂ 3 ನೇ ಶತಮಾನಕ್ಕೆ ಸೇರಿದುದೆಂದು ಹೇಳಲಾಗುತ್ತಿದೆ. ಆದರೆ ಬಾಹ್ಯ ಸಾಕ್ಷ್ಯಗಳು ಇದನ್ನು ಪುರಸ್ಕರಿಸುವುದಿಲ್ಲ. ಭಾರತದಲ್ಲಿ ಲಿಪಿ ಸಂಸ್ಕೃತಿಯನ್ನು ತಂದವರಲ್ಲಿ ಜೈನರು, ಬೌದ್ಧರು ಮೊದಲಿಗರೆಂಬುದರಲ್ಲಿ ಅನುಮಾನವಿಲ್ಲ. ಅತ್ಯಂತ ಪ್ರಾಚೀನವಾದ ಜೈನರ ಬರಹಗಳು ಜೈನ ಧರ್ಮದ ಉಗಮಸ್ಥಾನಕ್ಕಿಂತಲೂ ಅತಿ ದೂರದ ತಮಿಳುನಾಡಿನಲ್ಲಿ ಮೂಡಿದವೆಂಬುದು ಪ್ರಶ್ನಾರ್ಹ. ಇದೇ ಕಾಲದಲ್ಲಿದ್ದ ತಮಿಳಗಂನಲ್ಲಿ ಬೇರೆ ಯಾವುದೇ ಜೈನೇತರ ಬರಹ ದೊರೆಯದಿರುವುದು ಇದನ್ನು ಎತ್ತಿ ತೋರಿಸುತ್ತದೆ. * ಕೆಲ ವಿದ್ವಾಂಸರು ಕರ್ನಾಟಕಕ್ಕೆ ಬಂದ ಜೈನರಿಗೆ ಲಿಪಿಜ್ಞಾನವಿರಲಿಲ್ಲವೆಂದು , ಆದ್ದರಿಂದ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಕ್ರಿ.ಪೂ ಕಾಲದ ಶಿಲಾಶಾಸನಗಳು ಇಲ್ಲವೆಂದು ಇಲ್ಲಿಂದ ತಮಿಳುನಾಡಿಗೆ ಹೋದ ಜೈನರಿಗೆ ಅಲ್ಲಿದ್ದ ದಮಿಳಿ ಲಿಪಿ (ತಮಿಳು ಲಿಪಿ) ಪರಿಚಯವಾಗಿ ಅದರಲ್ಲಿ ಬರೆಯಲು ಯತ್ನಿಸಿದ್ದುದರಿಂದ ತಮಿಳು ಬ್ರಾಹ್ಮಿ ಬರಹಗಳು ಮೂಡಿ ಬಂದವೆಂದು ಹೇಳಿದ್ದಾರೆ. ಈ ವಾದವನ್ನು ಸಮರ್ಥಿಸಲು ಜೈನರಿಗಿಂತ ಮೊದಲು ಮೂಲ ದಮಿಳಿ ಲಿಪಿಯನ್ನು ರೂಪಿಸಿದ ಜನರಿಂದ ನೇರವಾಗಿ ಮೂಡಿಬಂದ ಯಾವ ಶಿಲಾಶಾಸನಗಳು ಅಥವಾ ಬರಹದ ಸಾಕ್ಷ್ಯಗಳು ದಕ್ಕಿಲ್ಲ. ತಮಿಳುನಾಡಿನ ಎಲ್ಲ ಪ್ರಾಚೀನ ಬರಹಗಳು ಜೈನಕೇಂದ್ರಿತವಾಗಿದ್ದು ಈ ವಾದ ಸರಣಿಯನ್ನು ಪೋಷಿಸುವುದಿಲ್ಲ. ಸಂಗಂ ಕಾಲದ ರಾಜರಿಂದ ನೇರವಾಗಿ ಹೊರಬಂದ , ಸ್ಪಷ್ಟವಾಗಿ,ವಿವಾದಾತೀತವಾಗಿ ಗುರುತಿಸಬಹುದಾದ ಯಾವ ಬರಹವು ದಕ್ಕದಿರುವುದು ಈ ವಾದವನ್ನು ನಿರಸನಗೊಳಿಸುವಂತೆ ಕಾಣುತ್ತದೆ. * ಕ್ರಿ.ಪೂ 300 – ಕ್ರಿ.ಶ 400 ರ ಸುದೀರ್ಘ ಅವಧಿಯಲ್ಲಿ ತಮಿಳುನಾಡಿನಲ್ಲಿ ದಕ್ಕಿರುವ ತಮಿಳು ಬ್ರಾಹ್ಮಿ ಶಿಲಾಶಾಸನಗಳೆಲ್ಲವು ಬಹು ಚುಟುಕಾಗಿದ್ದು , ಲಿಪಿ ಸಾಮಥ್ರ್ಯದಲ್ಲಿ ಅಲ್ಪ ಯಶಸ್ಸನ್ನು ಸಾಧಿಸಿರುವುದರತ್ತ ಬೆರಳು ತೋರುತ್ತಿವೆ. ಇತಿಹಾಸದಲ್ಲಿ ದೇವಸ್ಥಾನದ ದೀಪಗಳಿಗೆ ಎಣ್ಣೆ ವ್ಯವಸ್ಥೆ ಮಾಡಿದ, ಕಟ್ಟೆ ಕಟ್ಟಿದ , ಅಲ್ಪವೆನಿಸುವ ದಾನಗಳನ್ನು ನೀಡಿದ , ವೈಯುಕ್ತಿಕ ಸಾಧನೆ ವಿಜಯ , ಹೆಗ್ಗಳಿಕೆಗಳನ್ನು ಸಾರುವ ಸಹಸ್ರಾರು ಶಿಲಾಶಾಸನಗಳು ಲಭ್ಯ. ಆದರೆ ಮೂವತ್ತು ಸಾವಿರಕ್ಕು ಹೆಚ್ಚು ಸಾಲುಗಳ ಸಂಗಂ ಸಾಹಿತ್ಯ ಸೃಜಿಸಿದ ಕವಿಗಳು , ಅವರಿಗೆ ಅಪಾರ ಮನ್ನಣೆಯಿತ್ತ ಚೇರ, ಚೋಳ,ಪಾಂಡ್ಯರು ಮತ್ತು ನೂರಾರು ವೇಳಿರ್ಗಳಲ್ಲಿ ಯಾರೊಬ್ಬರು ಒಂದೂ ಶಿಲಾಶಾಸನ ಹೊರಡಿಸದಿದ್ದುದು ಸೋಜಿಗದ ವಿಷಯವಾಗಿದ್ದು ತಮಿಳಗಂನಲ್ಲಿನ ಬರಹದ ವ್ಯಾಪ್ತಿ ಮತ್ತು ಯಶಸ್ಸಿನ ಬಗ್ಗೆ ಮರುಚಿಂತಿಸುವಂತೆ ಮಾಡುತ್ತಿದೆ. * ಮಡಕೆ ಚೂರುಗಳ ಮೇಲಿನ ಬರಹಗಳನ್ನು ಪರಿಗಣಿಸಿದ ಮಹಾದೇವನ್ ಕ್ರಿ.ಶ. ಆರಂಭದ ವೇಳೆಗೆ ತಮಿಳಗಂನಲ್ಲಿ ಬರಹ ಸಂಸ್ಕೃತಿ ವಿಸ್ತೃತವಾಗಿದ್ದು ಜನಸಾಮಾನ್ಯರನ್ನು ತಲುಪಿದ್ದಿತೆಂಬ ತೀರ್ಮಾನಕ್ಕೆ ಒಯ್ಯುವುದೆಂದು ಹೇಳಿದ್ದಾರೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಸ್ವತಂತ್ರ ಕನ್ನಡ, ತೆಲುಗು ರಾಜಾಡಳಿತಗಳು ಇರಲಿಲ್ಲವಾದುದರಿಂದ ಅವು ಬರಹ ಮತ್ತು ಸಾಹಿತ್ಯದಲ್ಲಿ 500 ವರ್ಷಗಳಷ್ಟು ಹಿಂದುಳಿದವೆಂದು ಹೇಳುತ್ತಾರೆ. ಜನಸಾಮಾನ್ಯರನ್ನು ತಲುಪುವಷ್ಟು ಹಬ್ಬಿದ ಲಿಪಿ ಸಂಸ್ಕೃತಿ ಅದನ್ನು ಪೋಷಿಸಿದ ಚೇರ, ಚೋಳ , ಪಾಂಡ್ಯರ ನೇರ ಶಿಲಾಶಾಸನ, ನಾಣ್ಯಗಳ ಮೇಲಿನ ಬರಹಗಳ ಮೂಲಕ ಏಕೆ ವ್ಯಕ್ತವಾಗಲಿಲ್ಲ ಎಂಬ ಬಗ್ಗೆ ಮಹಾದೇವನ್ ಮೌನ ತಾಳಿದ್ದಾರೆ. ದಕ್ಷಿಣ ಭಾರತದ ನೆಲೆ ಹೊಂದಿದ್ದ ಮೂವೇಂದರರ ಸಮಕಾಲೀನರಾಗಿದ್ದ ಶಾತವಾಹನರು ಶಿಲಾಶಾಸನ, ನಾಣ್ಯಗಳ ಮೇಲೆ ತಮ್ಮ ಹೆಸರುಗಳನ್ನು ಸಾರುತ್ತಿರುವಾಗ ತಮಿಳಗಂನ ರಾಜರುಗಳು ಏಕೆ ಈ ನಿಟ್ಟಿನಲ್ಲಿ ಹಿಂದುಳಿದರೆಂದು ವಿಚಾರಿಸಿಲ್ಲ. ಇದು ತಮಿಳು ಬ್ರಾಹ್ಮಿಯನ್ನು ಕುರಿತಾಗಿರುವ ಉತ್ಸಾಹದ ಉತ್ಪ್ರೇಕ್ಷೆಯನ್ನು ವಾಸ್ತವ ಸಂಗತಿಗಳ ಹಿನ್ನೆಲೆಯಲ್ಲಿ ಪರಿಗಣಿಸುವಂತೆ ಮಾಡುತ್ತದೆ. * ಮಡಕೆಗಳ ಮೇಲಿನ ಬರಹಗಳನ್ನು ಪರಿಗಣಿಸಿ ಪ್ರಾಚೀನ ತಮಿಳಗಂನಲ್ಲಿ ಲಿಪಿ ಸಂಸ್ಕೃತಿ ವ್ಯಾಪಕವಾಗಿತ್ತೆಂಬ ಮಹಾದೇವನ್ ವಾದವನ್ನು ಹಲವಾರು ವಿದ್ವಾಂಸರು ಒಪ್ಪಿಲ್ಲ. ರಾಜನ್ ಗುರುಕ್ಕಳ್ ತಮಿಳು ಸಂಗಂ ಸಾಹಿತ್ಯ ನಿರೂಪಿಸಿದಂತಹ ಸಮಾಜ ವ್ಯಾಪಕವಾದ ಬರಹ ಸಂಸ್ಕೃತಿಯನ್ನು ಬೆಂಬಲಿಸುವುದಂತಹುದಲ್ಲವೆಂದು ಹೇಳಿದರೆ, ಮಡಕೆಗಳ ಮೆಲಿನ ಬರಹಗಳಿಂದ ಆ ಪ್ರದೇಶಕ್ಕೆ ಸೀಮಿತವಾದ ಸಮುದಾಯಗಳಿಗೆ ಬರಹದ ಅರಿವಿದ್ದಿತೆಂದು ಹೇಳಬಹುದಾದರೂ ತಮಿಳಗಂನಲ್ಲಿ ಬರಹ ಸಂಸ್ಕೃತಿ ವ್ಯಾಪಕವಾಗಿತ್ತೆಂದು ಹಾಗೂ ಇವರಲ್ಲಿ ಕೆಲವರು ಸಂಗಂ ಸಾಹಿತ್ಯ ರಚಿಸಿರಬಹುದೆಂದು ಹೇಳಲಾಗದೆಂದು ಮತ್ತು ಮಡಕೆಯ ಮೇಲಿನ ಬರಹ ದಕ್ಕಿದ ಅರಿಕಮೇಡು ಉರೈಯೂರು, ಕೋಡುಮನಾಲ್, ಅಳಗಕುಲಮ್, ಕೊರ್ಕೈ,ವಲ್ಲಂ, ಮಲಿಗೈವೇಡು, ತೆರಿಯವೇಲಿ, ಜಂಬೈ , ಕೋವನ್ಪಟ್ಟಲ್ ,ಪೆÇಲುವಪಟ್ಟಿ .ಕರೂರು,ಶಿವಕಾಶಿ,ಅಟ್ಟೂರು,ಕಳ್ಳ್ಳುಪಟ್ಟಿ,ಓಡಕಲ್ಪಾಳ್ಯಂ ಮತ್ತು ಎಸ್. ಪಾಪಿನಾಯಕಪಟ್ಟಿ ಮತ್ತು ಶ್ರೀಲಂಕಾದ ಪೂನಗಾರಿಯ ಪ್ರದೇಶಗಳು ಗ್ರೀಕ್,ರೋಮನ್ ವ್ಯಾಪಾರ ಸಂಪರ್ಕ ಹೊಂದಿದ ನೆಲೆಗಳೆಂಬುದು ಗಮನಾರ್ಹವೆಂದು ವಿ.ರಾಜೇಶ್ ಹೇಳಿದ್ದಾರೆ. * ಶ್ರೀಲಂಕಾದ ಅನುರಾಧಪುರದಲ್ಲಿ ದಕ್ಕಿರುವ ಮಡಕೆ ಮೇಲಿನ ಬರಹಗಳು ತಮಿಳುನಾಡಿನಲ್ಲಿ ದೊರೆತ ಮಡಕೆಯ ಮೇಲಿನಂತಹ ಬರಹಗಳನ್ನು ಹೋಲುತ್ತವೆ. ಆದ್ದರಿಂದ ಮಹಾದೇವನ್ ತಮಿಳು-ಬ್ರಾಹ್ಮಿಯೆಂದು ಉತ್ಸಾಹದಲ್ಲಿ ಸಾರುವ ಬರಹಗಳು ಯಾವುವೆಂದು ಖಚಿತವಾಗಿ ಹೇಳಲಾಗುವುದಿಲ್ಲ. ಇವು ತಮಿಳೇತರವಾಗಿರುವ ಸಾಧ್ಯತೆಗಳು ಸಮನಾಗಿವೆ. * ಕ್ರಿ.ಶ 350 ರಿಂದ ಪಲ್ಲವರ ಚರಿತ್ರೆ ಆರಂಭವಾಗುತ್ತದೆಯೆಂದು ಭಾವಿಸಲಾಗಿದೆ. ಪಲ್ಲವರ ಆರಂಭಿಕ ಕಾಲದ ಎಲ್ಲ ಶಿಲಾಶಾಸನಗಳು ಪ್ರಾಕೃತದಲ್ಲಿವೆ. ಪಲ್ಲವರ ಆಳ್ವಿಕೆಯ ಮೊದಲ ಮೂರು ಶತಮಾನಗಳಲ್ಲಿ ತಮಿಳಿಗೆ ಯಾವುದೇ ಸ್ಥಾನ ಸಿಗಲಿಲ್ಲ. ಮೂರನೇ ಸಿಂಹವರ್ಮನ್ನ (ಕ್ರಿ.ಶ 525-550) ಶಿಲಾಶಾಸನವನ್ನು ಸಂಯೋಜಿಸಿದಾತ ಪಲ್ಲವರ ಆಸ್ಥಾನ ಪಂಡಿತನಾದ ಮೇಧಾವಿನ್. ಈ ಶಿಲಾಶಾಸನದಲ್ಲಿ ಮೊದಲ ಬಾರಿಗೆ ತಮಿಳು ಭಾಷೆ ಕಾಣಿಸಿಕೊಂಡಿದೆ. ಪಲ್ಲವರ ಕಡು ವೈರಿಯಾಗಿದ್ದ ಕದಂಬರ ಮಯೂರಶರ್ಮ ಸಂಸ್ಕೃತಾಧ್ಯನಕ್ಕೆ ಆಶ್ರಯಿಸಿದ್ದು ಕಂಚಿಯನ್ನು. ಆದರೆ ಆತ ತನ್ನ ಶಿಲಾಶಾಸನಗಳನ್ನು ಬರೆಯಲು ಆರಿಸಿಕೊಂಡ ಭಾಷೆ ಪ್ರಾಕೃತ. ಇದರ ಹಿಂದಿನ ಕಾರಣಗಳ ಚಾರಿತ್ರಿಕ ಹುಡುಕಾಟ ತಮಿಳು,ಕನ್ನಡ ಭಾಷೆಗಳನ್ನು ಕುರಿತಾಗಿ ಹೊಸ ಬೆಳಕು ಚೆಲ್ಲಬಲ್ಲದು. ಸಮೃದ್ಧ ಸಾಹಿತ್ಯ ಸೃಜಿಸಿ , ಮಡಕೆಗಳ ಮೇಲೆ ಜನಸಾಮಾನ್ಯರು ಬರೆಯುವಷ್ಟು ಲಿಪಿ ಸಂಸ್ಕೃತಿ ಹರಡಿದ್ದಿತೆಂದು ಭಾವಿಸಲಾಗಿರುವ ತಮಿಳಗಂನಲ್ಲಿ ಪಲ್ಲವರ ಪ್ರಾಕೃತ ಬಳಕೆ ತಮಿಳು ಆ ಕಾಲದಲ್ಲಿ ಆಡಳಿತ ಭಾಷೆಯೆಂದು ಪರಿಗಣಿತವಾಗಿರಲಿಲ್ಲವೆಂಬ ಸೂಚನೆ ನೀಡುತ್ತದೆ. ಪಲ್ಲವರು ತಮಿಳಗಂಗೆ ಹೊರಗಿನಿಂದ ಬಂದವರೆಂದು ಆದ್ದರಿಂದ ಅವರಿಗೆ ಸ್ಥಳೀಯ ತಮಿಳಿನ ಮೇಲೆ ಮಮಕಾರವಿರಲಿಲ್ಲವೆಂದು ಹೇಳಬಹುದಾದರೂ ಯಾವುದೇ ಪ್ರಬಲ ಸ್ಥಳೀಯ ಭಾಷೆಯನ್ನು ಹೊರಗಿನಿಂದ ಬಂದವರು ಉಪೇಕ್ಷಿಸುವ ಸಾಹಸ ಮಾಡಲಾರರೆಂಬುದು ಗಮನಾರ್ಹ. * ತಮಿಳು ಸಂಗಂ ಕಾಲದಲ್ಲಿ ಗುರುತಿಸಿಕೊಂಡಿದ್ದ ಲಿಪಿಹೊಂದಿದ್ದ ಸಾಹಿತ್ಯ ಹಾಗೂ ಸಂಪರ್ಕ ಮಾಧ್ಯಮದಲ್ಲಿ ಏಕಸ್ವಾಮ್ಯವಾಗಿದ್ದ ಮಾರ್ಗಿ ಭಾಷೆಯಾಗಿತ್ತೆಂದು ಷ.ಶೆಟ್ಟರ್ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಮೇಲಿನ ಅಂಶಗಳು ಈ ವಾದವನ್ನು ಸಮರ್ಥಿಸುತ್ತಿಲ್ಲ. ಬಾಹ್ಯ ಸಾಕ್ಷಿಗಳ ಕೊರತೆ * ಮೂಲದ ತಮಿಳು ಲಿಪಿಗೆ ಹೆಚ್ಚಿನ ಅಕ್ಷರಗಳನ್ನು ಸೇರಿಸಿ ಅಶೋಕ ಬ್ರಾಹ್ಮಿಯನ್ನು ರೂಪಿಸಲಾಯಿತೆಂಬ ಆರ್.ನಾಗಸ್ವಾಮಿ ಮತ್ತು ಗಿಫ್ಟ್ ಟ ಶಿರೋಮಣಿಯವರ ವಾದಕ್ಕೆ ಬೆಂಬಲ ನೀಡುವ ಯಾವ ಬಾಹ್ಯ ಸಾಕ್ಷ್ಯಗಳು ಸಹ ದೊರೆತಿಲ್ಲ. ಕ್ರಿ.ಪೂ 300-ಕ್ರಿ.ಶ. 300 ರ ಅವಧಿಯಲ್ಲಿನ ತಮಿಳಗಂನ ಹೊರಗಿನ ಶಿಲಾಶಾಸನಗಳನ್ನು ತಮಿಳಗಂನ ತಮಿಳು ಬ್ರಾಹ್ಮಿ ಶಿಲಾಶಾಸನಗಳೊಂದಿಗೆ ಹೋಲಿಸಿದಾಗ ,ತಮಿಳಗಂ ಹೊರಗೆ ಲಿಪಿ ಸಂಸ್ಕೃತಿ ವ್ಯಾಪಕವಾಗಿದ್ದು , ವೈವಿಧ್ಯಮಯವಾಗಿದ್ದು ಹಲ ಸಹಸ್ರಪಟ್ಟು ಹೆಚ್ಚಿನದಾಗಿತ್ತೆಂದು ಖಚಿತವಾಗಿ ಹೇಳಬಹುದು. ತಮಿಳು ಬ್ರಾಹ್ಮಿಯಲ್ಲಿನ ಎಲ್ಲ ಶಿಲಾಬರಹಗಳು ಜೈನರಿಗೆ ನೀಡಿದ ಕೊಡುಗೆಗಳನ್ನು ಕುರಿತಾಗಿರುವುದು ಮತ್ತು ಸಂಗಂ ಸಾಹಿತ್ಯ ಕಾಲದ ಯಾವುದೇ ವಿವಾದಾತೀತ ಶಿಲಾಶಾಸನ ಸಿಗದಿರುವುದು ಈ ವಾದವನ್ನು ನಿರಸನಗೊಳಿಸುತ್ತದೆ. ಲಿಪಿ ವೈವಿಧ್ಯತೆಯ ಆಧಾರಗಳು * ತಮಿಳು ಬ್ರಾಹ್ಮಿಯ ಲಿಪ್ಯಾಲೇಖ (Orthgography) ಅಶೋಕ , ಭಟ್ಟಿಪ್ರೋಲು ಹಾಗೂ ಇವೆರಡರ ಮಿಶ್ರಣ ಪದ್ದತಿಯಂತಿದ್ದು ಹಲವಾರು ದೃಷ್ಟಿಯಲ್ಲಿ ವಿಭಿನ್ನವಾಗಿದೆ. ಈ ಆಧಾರದ ಮೇಲೆ ಆರ್.ನಾಗಸ್ವಾಮಿ , ಟಿ.ವ್.ಮಹಾಲಿಂಗಂ ಮತ್ತು ಎಂ.ಎಸ್. ವೆಂಕಟಸ್ವಾಮಿಯವರು ಈ ಶಿಲಾಶಾಸನಗಳನ್ನು ತಮ್ಮದೇ ಆದ ರೀತಿಯಲ್ಲಿ ಓದಿ ಅರ್ಥೈಸಿದ್ದಾರೆ. * ಮಹಾದೇವನ್ ತಮಿಳು ಬ್ರಾಹ್ಮಿಯ ಬರಹಗಳನ್ನು ಓದಲು ತಮ್ಮ ವಾದಕ್ಕಾಗಿ ಭಟ್ಟಿಪ್ರೋಲು ಲಿಪಿ ಪದ್ಧತಿಯನ್ನು ಬಳಸಿಕೊಂಡಿದ್ದಾರೆ. ಆದರೆ ಭಟ್ಟಿಪ್ರೋಲು ತಮಿಳಗಂ ಹೊರಗಿನ ಪ್ರದೇಶವಾಗಿದ್ದು ಶಾತವಾಹನರ ಆಡಳಿತದಲ್ಲಿದ್ದಿತು. ಅದರಲ್ಲಿನ ಭಾಷೆ ಪ್ರಾಕೃತ. ಈ ಲಿಪಿಯಿಂದ ಮುಂದೆ ಕನ್ನಡ ,ತೆಲುಗು ಲಿಪಿಗಳು ಮೈದಾಳಿದವು. ಭಟ್ಟಿಪ್ರೋಲುವಿನಲ್ಲಿ ದೊರೆತ ಬರಹಗಳು ಸ್ಪಷ್ಟ ಮತ್ತು ದೀರ್ಘವಾಗಿದ್ದು ಬರಹದ ಹಿಂದಿನ ಉದ್ದೆಶವನ್ನು ಖಚಿತಗೊಳಿಸುತ್ತವೆ. ಇವು ಯಾವುವೂ ತಮಿಳು ಬ್ರಾಹ್ಮಿ ಶಿಲಾಬರಹಗಳಲ್ಲಿ ಕಂಡುಬರುವುದಿಲ್ಲ. * ಮಹದೇವನ್ ತಮಿಳಗಂನಲ್ಲಿ ಬರಹ ತಮಿಳು ಬ್ರಾಹ್ಮಿ-1, ತಮಿಳು ಬ್ರಾಹ್ಮಿ-2 ಮತ್ತು ತಮಿಳು ಬ್ರಾಹ್ಮಿ-3 ಎಂಬ ಮೂರು ಹಂತಗಳಲ್ಲಿ ವಿಕಸನಗೊಂಡಿದೆಯೆಂದು ಮೊದಲಿಗೆ ಸೂಚಿಸಿದ್ದರು. ಆದರೆ ಅರಿಕಮೇಡು ಮತ್ತುಉರೈಯೂರುವಿನಲ್ಲಿ ಮಹಾಶಿಲಾಯುಗಕ್ಕೆ ಸಂಬಂಧಿಸಿದುದೆಂದು ಭಾವಿಸಲಾದ ಒಂದೇ ಕಾಲಕ್ಕೆ ಸೇರಿದ ,ಒಂದೇ ಸ್ತರದಲ್ಲಿ ದಕ್ಕಿದ ಮಡಕೆಯ ಮೇಲಿನ ಬರಹ ಪರಿಗಣಿಸಿ ತಮಿಳು ಬಾಹ್ಮ್ರಿ-1 ಮತ್ತು ತಮಿಳು ಬ್ರಾಹ್ಮಿ-2 ಇವೆರಡು ಬರಹ ಪದ್ದತಿಗಳು ಸಮಕಾಲೀನದಲ್ಲಿ ಪ್ರತ್ಯೇಕವಾಗಿ ಅಭಿವೃದ್ಧಿಗೊಂಡು ,ಸಮಾಂತರದಲ್ಲಿ ಸ್ವತಂತ್ರ ಅಸ್ತಿತ್ವದಲ್ಲಿದ್ದವೆಂಬ ನಿರ್ಧಾರಕ್ಕೆ ಬಂದರು. * ಅಳಗರಮಲೈನಲ್ಲಿ ಕಂಡುಬಂದಿರುವ ಶಿಲಾಬರಹಗಳಲ್ಲಿ ತಮಿಳು ಬ್ರಾಹ್ಮಿ-1 ಮತ್ತು ತಮಿಳು ಬ್ರಾಹ್ಮಿ-2 ಎರಡು ಪದ್ದತಿಗಳು ಬಳಕೆಯಾಗಿವೆ ಹಾಗೂ ಕೆಲವೊಮ್ಮೆ ಒಂದೇ ಶಿಲಾಶಾಸನದಲ್ಲಿ ಇವೆರಡು ಪದ್ದತಿಗಳು ಬಳಕೆಯಾಗಿರುವುದು ಕಂಡುಬಂದಿದೆ ಎಂದು ಹೇಳುವ ಮಹದೇವನ್ ಇದಕ್ಕೆ ಕಾರಣ ಕೊಡುವ ನಿಟ್ಟಿನಲ್ಲಿ ಇವೆರಡು ಪದ್ದತಿಗಳು ಬ್ರಾಹ್ಮಿಯನ್ನು ತಮಿಳು ಭಾಷೆಗೆ ಅಳವಡಿಸಿಕೊಳ್ಳುವ ಯತ್ನದಲ್ಲಿ ಅಲ್ಪಾವಧಿ ಪ್ರಚಲಿತವಿದ್ದ ಅಸ್ಥಿರ ಪ್ರಾಯೋಗಿಕ ಹಂತಗಳೆಂದು ಹೇಳಿದ್ದಾರೆ. ತಮಿಳು ಬ್ರಾಹ್ಮಿ ಬರಹಗಳು ಕ್ರಿ,ಶ 5 ನೆ ಶತಮಾನದವರೆಗೆ ಹರಡಿರುವುದರಿಂದ ಈ ಅಸ್ಥಿರ ಪ್ರಾಯೋಗಿಕ ಪ್ರಯತ್ನ ಎಷ್ಟು ಕಾಲ ಜರುಗಿತೆಂಬುದು ಖಚಿತವಾಗುವುದಿಲ್ಲ. * ತಮಿಳಗಂನಂತಹ ಸೀಮಿತ ಭೂಪ್ರದೇಶದಲ್ಲಿ ಹೆಚ್ಚಿನ ಭಾಷಾ ವೈವಿಧ್ಯತೆ ಇಲ್ಲದಲ್ಲಿ ಎರಡು ಲಿಪಿ ಪ್ರಭೇದಗಳು ಏಕಕಾಲದಲ್ಲಿ ಹೇಗೆ ಅಸ್ತಿತ್ವದಲ್ಲಿದ್ದವೆಂದು ಮಹಾದೇವನ್ ವಿವರಿಸಲಿಲ್ಲ.ಕೋಡುಮನಾಲ್ ಮತ್ತು ಅರಿಕಮೇಡು ಮಡಕೆಯ ಮೇಲಿನ ಬರಹಗಳನ್ನು ವಿಶ್ಲೇಷಿಸಿದ ಮಹಾದೇವನ್ ಇಲ್ಲಿ ಬಳಕೆಯಾದ ಪದ್ದತಿಗಳು ಬೇರೆಲ್ಲೂ ಬಳಕೆಯಾಗಿಲ್ಲವೆಂಬ ತೀರ್ಮಾನಕ್ಕೆ ಬಂದು ಇವೆರಡು ಬರಹಗಳಲ್ಲಿನ ವ್ಯತ್ಯಾಸಗಳ ವಿವರಣೆಯಾಗಿ ಇವು ಪ್ರಾದೇಶಿಕ ವೈಶಿಷ್ಟ್ಯದ ವಿಭಿನ್ನ ತಮಿಳು ಬ್ರಾಹ್ಮಿಗಳೆಂದು ಕರೆದಿದ್ದಾರೆ. ಆದ್ದರಿಂದ ಯಾವುದೇ ಎರಡು ಬರಹಗಳಲ್ಲಿನ ವ್ಯತ್ಯಾಸಗಳನ್ನು ವಿವರಿಸಲು ಅಪೂರ್ವ, ವಿಶಿಷ್ಟ, ಇದಕ್ಕೊಂದೇ ಸೀಮಿತ ಎಂಬಂತಹ ತೀರ್ಮಾನಗಳಿಗೆ ಬರಲಾಗಿದೆ. ಇದು ಎಷ್ಟರ ಮಟ್ಟಿಗೆ ಅಂಗೀಕಾರ್ಹ ಎನ್ನುವುದು ತೆರೆದ ಪ್ರಶ್ನೆಯಾಗಿಯೇ ಉಳಿದಿದೆ. * ತಮಿಳು ಬ್ರಾಹ್ಮಿ-1 , ತಮಿಳು ಬ್ರಾಹ್ಮಿ-2 ಎಂಬ ಲಿಪಿ ವೈವಿಧ್ಯತೆ ಗುರುತಿಸಲು ಪರಿಗಣಿಸಲಾಗಿರುವ ಶಿಲಾಶಾಸನಗಳ ಸಂಖ್ಯೆ ಅತ್ಯಲ್ಪ. ಇದಕ್ಕಾಗಿ ಎರಡು ಕೆಲವೊಮ್ಮೆ ಒಂದೇ ಶಿಲಾಶಾಸನವನ್ನು ಉದಾಹರಿಸಲಾಗಿದೆ. ಭಾರತದಾದ್ಯಂತ ಕಂಡು ಬಂದಿರುವ ಅಶೋಕ ಬ್ರಾಹ್ಮಿಯಲ್ಲೇ ಪ್ರದೇಶಕ್ಕನುಗುಣವಾಗಿ , ಬರಹಗಾನಿಂದ ಬರಹಗಾರನಿಗೆ ಲಿಪಿ ವ್ಯತ್ಯಾಸಗಳಾಗಿವೆ. ಒಬ್ಬನೇ ಬರಹಗಾರ ಸ್ಥಳದಿಂದ ಸ್ಥಳಕ್ಕೆ ಬರಹದಲ್ಲಿ ಲಿಪಿ ವ್ಯತ್ಯಾಸಗೊಳಿಸುವ ಸಾಧ್ಯತೆಗಳಿವೆ. ಬಂಡೆಯಂತಹ ನೈಸರ್ಗಿಕ ಗಟ್ಟಿ ಮಾಧ್ಯಮದ ಮೇಲೆ ಅಕ್ಷರಗಳನ್ನು ಕೊರೆಯುವಾಗ ಇಂತಹ ವ್ಯತ್ಯಾಸಗಳಾಗುವ ಸಾಧ್ಯತೆ ಅಧಿಕ. ಆದ್ದರಿಂದ ತಮಿಳು ಬ್ರಾಹ್ಮಿ ವೈವಿಧ್ಯತೆಗಳ ಸಮಸ್ಯೆ ಪರಿಹಾರ ಕಾಣದೆ ಹಾಗೆಯೇ ಉಳಿದಿದೆ. ಸಹಜ ಲಿಪಿ ವೈವಿಧ್ಯತೆ * ಅಶೋಕ ಬ್ರಾಹ್ಮಿಯನ್ನು ಪ್ರದೇಶ, ಭಾಷೆಗಳಿಗೆ ಅನುಗುಣವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಅಕ್ಷರಗಳ ಸೇರ್ಪಡೆ , ಹೆಚ್ಚುವರಿ ಗೀಟು,ಗುರುತುಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ. ಉತ್ತರ ಬ್ರಾಹ್ಮಿ,ದಕ್ಷಿಣ ಬ್ರಾಹ್ಮಿ, ಶ್ರೀಲಂಕಾ ಬ್ರಾಹ್ಮಿ ಇವುಗಳಲ್ಲಿ ಪ್ರಮುಖವಾದವು. ಭಟ್ಟಿಪೆÇ್ರೀಲು ಬ್ರಾಹ್ಮಿಯಲ್ಲಿಯೇ ಹಲವು ವೈವಿಧ್ಯಗಳು ಕಂಡುಬಂದಿವೆ. ಭಾರತದ ಎಲ್ಲ ಲಿಪಿಗಳು ವ್ಯಂಜನದೊಂದಿಗಿನ ಸ್ವರವನ್ನು ಗುರುತಿಸಲು ತಮ್ಮದೇ ಆದ ರೀತಿಯಲ್ಲಿ ಗುಣಿತಾಕ್ಷರಗಳನ್ನು ರೂಪಿಸಿಕೊಂಡಿವೆ. ಈ ಕಾರಣದಿಂದಲೇ ಭಾರತದ ಎಲ್ಲ ಪ್ರಮುಖ ಭಾಷೆಗೂ ತನ್ನದೇ ಆದ ಲಿಪಿ ಮೂಡಿಬಂದಿತು ಆದರೆ ಇದನ್ನು ಲಕ್ಷಿಸದೇ ತಮಿಳಿಗೆ ಮಾತ್ರ ಅತಿ ಪ್ರಾಶಸ್ತ್ಯ ನೀಡಿ ಉಳಿದವುಗಳನ್ನು ಕಡೆಗಣಿಸಲಾಗಿದೆ. ತಮಿಳು ಬ್ರಾಹ್ಮಿ ಎಂದು ಕರೆದು ಅದಕ್ಕೆ ಬ್ರಾಹ್ಮಿಯ ಪ್ರಾಚೀನತೆ ಆರೋಪಿಸುವ ವ್ಯವಸ್ಥಿತ ಪ್ರಯತ್ನದಂತೆ ಕಾಣುತ್ತದೆ. * ಎ.ಎಚ್. ದಾನಿ ದಕ್ಷಿಣ ಭಾರತದಲ್ಲಿ ಪ್ರಾಚೀನ ಬರಹಗಳಲ್ಲಿನ ದೋಷಗಳನ್ನು ಲಿಪಿ ವೈವಿಧ್ಯವೆಂದು ಗುರುತಿಸಲಾಗುತ್ತಿದೆಯೆಂದು ಇದು ಸರಿಯಲ್ಲವೆಂದು ಹೇಳುತ್ತಾರೆ. ಮಹಾಲಿಂಗಂ ಅಶೋಕ ಪೂರ್ವಿ ಬ್ರಾಹ್ಮಿಯಿಂದ ತಮಿಳು-ಬ್ರಾಹ್ಮಿ ಲಿಪಿ ಬಂದಿರಬಹುದೆಂದು ಭಾವಿಸಿದರೆ, ಮಹಾದೇವನ್ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಲಿಪಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಯಿತೆಂದು ಇದು ತಮಿಳಿಗೆ ಬಹು ವಿಶಿಷ್ಟವೆಂಬಂತೆ ಬಿಂಬಿಸಿದ್ದಾರೆ. ಶ್ರೀಲಂಕಾ ಬ್ರಾಹ್ಮಿ * ಶ್ರೀಲಂಕಾ ಬ್ರಾಹ್ಮಿ ತಮಿಳು ಬ್ರಾಹ್ಮಿಯಿಂದ ಪ್ರೇರೇಪಿತವಾಗಿದೆಯೆಂಬ ವಾದವನ್ನು ಕೆಲ ತಮಿಳು ವಿದ್ವಾಂಸರು ಮುಂದಿಟ್ಟಿದ್ದಾರೆ. ಗಿಫ್ಟ್ ಶಿರೋಮಣಿ, ಆರ್. ನಾಗಸ್ವಾಮಿಯವರು ಮೂಲದಲ್ಲಿದ್ದ ತಮಿಳು ಲಿಪಿಗೆ ಪ್ರಾಕೃತಕ್ಕೆ ಬೇಕಾದ ಹೆಚ್ಚಿನ ಅಕ್ಷರಗಳನ್ನು ಸೇರಿಸಿ ಅಶೋಕ ಬ್ರಾಹ್ಮಿಯನ್ನು ರೂಪಿಸಲಾಯಿತೆಂದು ವಾದಿಸಿದ್ದಾರೆ. (ಲೇ:26) ಶ್ರೀಲಂಕಾದ ಶಿಲಾಶಾಸನಗಳು , ಅವುಗಳಲ್ಲಿನ ವಿಷಯ ವಿಸ್ತಾರ, ವೈವಿಧ್ಯತೆ ಇದಕ್ಕೆ ವ್ಯತಿರಿಕ್ತವಾದ ಸಾಕ್ಷ್ಯಗಳನ್ನೊದಗಿಸುತ್ತವೆ. ಅಶೋಕನ ಕಾಲದ್ದೆಂದು ಖಚಿತವಾಗಿ ಹೇಳಬಹುದಾದ ಐದು ಶಿಲಾಶಾಸನಗಳು ಶ್ರೀಲಂಕಾದಲ್ಲಿ ಸಿಕ್ಕಿವೆ. ತಮಿಳು ಪರಂಪರೆ ಮೊದಲ ಸಂಗಂ ಶ್ರೀಲಂಕಾದ ಕಪಡಾಪುರಂನಲ್ಲಿ ಸ್ಥಾಪಿತವಾಗಿತ್ತೆಂದು , ಹಾಗೂ ಇದು ತಮಿಳಗಂನ ಭಾಗವಾಗಿತ್ತೆಂದು ಹೇಳುತ್ತದೆ. ಆದರೆ ಶ್ರೀಲಂಕಾದಲ್ಲಿ ಕ್ರಿ..ಪೂ 300 ರಿಂದ ಕ್ರಿ.ಶ 400 ರ ಅವಧಿಯ 3440 ಶಿಲಾಶಾಸನಗಳನ್ನು ಗುರುತಿಸಲಾಗಿದ್ದರೆ ತಮಿಳಗಂನಲ್ಲಿ 89 ಶಾಸನಗಳು ಮಾತ್ರ ದಕ್ಕಿವೆ. ಕ್ರಿ.ಶ. 800 ರ ಅವಧಿಯವರೆಗೆ ಶ್ರೀಲಂಕಾದಲ್ಲಿ ಯಾವುದೇ ತಮಿಳು ಶಿಲಾಶಾಸನಗಳು ಲಭ್ಯವಿಲ್ಲ. * ಕಾಂಭೋಜರು ಶ್ರೀಲಂಕಾದ ಗುಹಾಶಿಲಾಬರಹಗಳಲ್ಲಿ ಕಂಡುಬರುವ ಸ್ವಸ್ತಿಕ ಚಿಹ್ನೆ , ಮಡಕೆ ಮೇಲಿನ ಬರಹ, ನಾಣ್ಯಗಳನ್ನು ಪರಿಚಯಿಸಿರುವ ಸಾಧ್ಯತೆಗಳಿವೆಯ್ದೆಂ ನಂದದೇವ ವಿಜೆಸೇಕರೆ ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾದ ಆರಂಭಿಕ ಶಾಸನಗಳಲ್ಲಿ ಕೆಲವು ಅರಾಮೈಕ್ ಮತ್ತು ಖರೋಷ್ಠಿ ಲಿಪಿಗಳಂತೆ ಬಲದಂತೆ ಎಡಕ್ಕೆ ಬರೆಯಲ್ಪಟ್ಟಿವೆ. ಇನ್ನುಳಿದವು ಆರಂಭಕಾಲದ ಹಾವಿನ ನಡಿಗೆಯ ಗ್ರೀಕ್ ಲಿಪಿಯನ್ನು ಹೋಲುತ್ತವೆಯೆಂದು , ಕ್ರಿ.ಶ 1ನೇ ಶತಮಾನದ ನಂತರದ ಲಿಪಿಗಳೆಲ್ಲವು ಎಡದಿಂದ ಬಲಕ್ಕೆ ಬರೆಯಲ್ಪಟ್ಟಿವೆಯೆಂದು ಇವುಗಳಲ್ಲಿನ ಪ್ರಾಕೃತ ವಾಯುವ್ಯ ಪ್ರಾಂತ ಭೇದವನ್ನು ಹೋಲುವುದೆಂದು ವಿದ್ವಾಂಸರು ಗುರುತಿಸಿದ್ದಾರೆ. ಖರೋಷ್ಠಿ , ಅರಾಮೈಕ್ ಲಿಪಿ ಬಳಕೆಯ ಸನಿಹದ ಪ್ರದೇಶದಲ್ಲಿದ್ದ ಕಾಂಭೋಜರು ಸಮುದ್ರಮಾರ್ಗವಾಗಿ ಶ್ರೀಲಂಕಾಕ್ಕೆ ಬ್ರಾಹ್ಮಿ ಲಿಪಿಯನ್ನು ತಂದಿರುವ ಸಾಧ್ಯತೆಗಳಿವೆ .ಮಹಾವಂಶದಲ್ಲಿ ಮೂರನೇ ಬೌದ್ಧ ಪರಿಷತ್ ವಿಸರ್ಜನೆಗೊಂಡ ನಂತರ ಅಶೋಕ ವನವಾಸ(ಬನವಾಸಿ) ಮತ್ತು ಮಹಿಷಮಂಡಲಗಳಿಗೆ ಬೌದ್ಧ ಧರ್ಮ ಪ್ರಚಾರಕರನ್ನು ಕಳಿಸಿದನೆಂದು ತಿಳಿಸುತ್ತದೆ. ಇವು ಪ್ರಬಲ ಬೌದ್ಧ ಕೇಂದ್ರಗಳಾಗಿದ್ದವು. ಇವನ್ನು ಹೊರತಾಗಿ ಪಶ್ಚಿಮ ಕರಾವಳಿಯಲ್ಲಿ ಬೇರೆ ಪ್ರಬಲ ಬೌದ್ಧ ಕೇಂದ್ರಗಳಿರಲಿಲ್ಲ. ಪಶ್ಚಿಮ ಕರಾವಳಿಗೆ ಹೊಂದಿಕೊಂಡಂತಿದ್ದ ಬನವಾಸಿಯ ಅಶೋಕ ಬ್ರಾಹ್ಮಿ ವ್ಯಾಪಾರ ಕಾರಣಗಳಿಂದ ಸಮುದ್ರ ಸಂಚಾರಿಗಳಾಗಿದ್ದ ಕಾಂಭೋಜರ ಖರೋಷ್ಠಿ/ಅರಾಮೈಕ್ ಪರಸ್ಪರ ಪ್ರಭಾವಿತವಾಗಿದ್ದು ಶ್ರೀಲಂಕಾ ತಲುಪಿರಬಹುದು. (ನೋಡಿರಿ : ತೆರೆದ ಪ್ರಶ್ನೆಗಳು :ಕಾಂಭೋಜರು). ಶ್ರೀಲಂಕಾದ ಆರಂಭಿಕ ಶಿಲಾಶಾಸನಗಳು ಪಶ್ಚಿಮ ಕರಾವಳಿಯ ಪುತ್ತಲಂ ಪ್ರದೇಶಗಳಲ್ಲಿ ಕೇಂದ್ರಿಕೃತವಾಗಿರುವುದು ಈ ಸಾಧ್ಯತೆಯನ್ನು ಬೆಂಬಲಿಸುತ್ತದೆ. *ಪ್ರಾಚೀನ ಶ್ರೀಲಂಕಾದ ಭಾಷೆಯಲ್ಲಿ ‘ವ ಯ , ಸ ‘ ಉಚ್ಚಾರಗಳು ‘ಬ’ ‘ಜ’ ಮತ್ತು ‘ಹ’ ರೂಪ ತಳೆಯುತ್ತವೆ. ಇದು ನೈರುತ್ಯ ಭಾಗದ ಭಾಷೆಗಳ ಲಕ್ಷಣ. ಪ್ರಾಚೀನ ಶಿಲಾಶಾಸನಗಳ ಭಾಷೆಯನ್ನು ತೌಲನಿಕವಾಗಿ ಗಮನಿಸಿದಾಗ ಅದು ಪಾಕಿಸ್ಥಾನ ಗಡಿ ಪ್ರದೇಶದಲ್ಲಿರುವ ಅಶೋಕನ ಮನ್ಸೆಹ್ರ ಮತ್ತು ಷಾಬಾಜ್ಘರಿಯಲ್ಲಿನ ಶಿಲಾಶಾಸನಗಳ ಭಾಷೆಯನ್ನು ಹೋಲುತ್ತದೆ0iÉುಂದು ಅಭಿಪ್ರಾಯಪಡಲಾಗಿದೆ. * ಖುದ್ದಪಾರಿಂದನ ಪತ್ನಿ ವಿಹಾರವೊಂದಕ್ಕೆ ದಾನ ನೀಡಿದ ಕ್ರಿ.ಶ. 5ನೇ ಶತಮಾನದ ಶಿಲಾಶಾಸನ ಶ್ರೀಲಂಕಾದಲ್ಲಿದೆ. ಈಕೆ ತನ್ನ ಪತಿ ಬುದ್ದದಾಸನೆಂದು (ಬುದ್ಧ ದಾಸ ಲಾ ಪರಿದೇವ) ಹೇಳಿದ್ದಾಳೆ. ಈತ ತಮಿಳನೆಂದು ಭಾವಿಸಲಾಗಿದೆ. ಶಿಲಾಶಾಸನದ ಹಿನ್ನೆಲೆಯಲ್ಲಿ ಈತ ಬೌದ್ಧ ಮತಾವಲಂಬಿಯೆಂದು ತೀರ್ಮಾನಿಸಲಾಗಿದೆ. ಖುದ್ದಪಾರಿಂದನ ನಂತರ ಬಂದ ಪಾರಿಂದನೂ ಬೌದ್ಧ ವಿಹಾರಕ್ಕೆ ದಾನ ನೀಡಿದುದನ್ನು ಅರಗಾಮದ ಶಿಲಾಶಾಸನ ಸ್ಪಷ್ಟಗೊಳಿಸುತ್ತದೆ. ಕಟರಗಾಮಾದ ಮತ್ತೊಂದು ಶಿಲಾಶಾಸನದಲ್ಲಿ ತಿರಿತರನ ಮಗನಾದ ದಾತಿಯ ಮಂಗಳ ಮಹಾಚೈತ್ಯಕ್ಕೆ ದಾನ ನೀಡಿದನೆಂದು ಹೇಳಲಾಗಿದೆ. 27 ವರ್ಷ ಆಳ್ವಿಕೆ ನಡೆಸಿದ ಈತ ತಮಿಳನಿರಬಹುದೆಂದು ಭಾವಿಸಲಾಗಿದೆ. ಕ್ರಿ.ಶ. 658-674ರಲ್ಲಿ ತಮಿಳು ಅಧಿಕಾರಿ ಮತ್ತು ಮಹಾಕಂದ ಅಗ್ಗ-ಬೋಧಿ ಸೇವೆಯಲ್ಲಿದ್ದು ವಿಹಾರಗಳನ್ನು ನಿರ್ಮಿಸಿ ಚೈತ್ಯಗಳಿಗೆ ದಾನಗಳನ್ನು ನೀಡಿದ ವಿವರಗಳಿವೆ. ಇವರೆಲ್ಲರ ಶಾಸನಗಳು ಶ್ರಿಲಂಕಾದ ಭಾಷೆಯಲ್ಲಿದ್ದು ತಮಿಳಿನಲ್ಲಿ ಇರದಿರುವುದು ಗಮನಾರ್ಹವಾಗಿದೆ. ಸಾತತ್ಯದ ಕೊರತೆ * ಅತ್ಯಂತ ಚಿಕ್ಕದಾದ ಒಂದು ಅಥವಾ ಎರಡು ವಾಕ್ಯಗಳನ್ನು ಮೀರದ ತಮಿಳು ಬ್ರಾಹ್ಮಿ ಶಿಲಾಬರಹಗಳು ಮತ್ತು 6ನೇ ಶತಮಾನದ ನಂತರ ಕಾಣಿಸಿಕೊಳ್ಳುವ ಪಲ್ಲವ ಪಾಂಡ್ಯರ ಬರಹಗಳ ಅವಧಿಯ ನಡುವೆ ತಮಿಳಿನಲ್ಲಿ ಲಿಪಿಸಂಸ್ಕೃತಿ ಸ್ಥಗಿತಗೊಂಡಂತೆ, ಯಾವುದೇ ಬರಹಗಳು ಕಾಣಿಸಿಕೊಳ್ಳದ ಬರಗಾಲದಂತೆ ಕಾಣುತ್ತದೆ. ಇದು ತಮಿಳಗಂನಲ್ಲಿ ಕಳಭ್ರರ ಅಂಧಕಾರ ಯುಗಕ್ಕೆ ಸಮನಾದುದು (ನೋಡಿರಿ:ಕಳಭ್ರರು). ತಮಿಳಗಂ ಚರಿತ್ರೆಯನ್ನು 300 ವರ್ಷಗಳ ಕಾಲ ಹಿಂದಕ್ಕೆ ನೂಕುವ ಕಂದಕದಂತೆ ಕಾಣುತ್ತದೆ. ಇದು ಬಗೆ ಹರಿಯದೆ ತಮಿಳು ಬ್ರಾಹ್ಮಿಯ ಪ್ರಾಚೀನತೆಯನ್ನು ನಿರ್ಧರಿಸಲಾಗುವುದಿಲ್ಲ. ಮಹಾದೇವನ್ ಅಧ್ಯಯನ ನಡೆಸಿರುವ 700 ವರ್ಷಗಳ ಅವಧಿಯ (ಕ್ರಿ.ಪೂ 2-ಕ್ರಿ.ಶ. 5) ಒಟ್ಟು 89 ತಮಿಳು ಬ್ರಾಹ್ಮಿ ಶಿಲಾಶಾಸನಗಳ ಸಂಚಯಿತ ಬರಹ ಇನ್ನೂರು ವಾಕ್ಯಗಳನ್ನು ಮೀರುವುದಿಲ್ಲ. ಇದು ತಮಿಳು ಭಾಷೆಯ ಲಿಪಿ ಮತ್ತು ಲಿಖಿತ ವಾಜ್ಞಮಯದ ಕೊರತೆಯನ್ನು ಪರೋಕ್ಷವಾಗಿ ತೋರಿಸುತ್ತದೆ. * ಗುಹಾಶಿಲೆಯ ಮೇಲಿನ ತಮಿಳು-ಬ್ರಾಹ್ಮಿ ಶಿಲಾಶಾಸನಗಳ ನಂತರ ದಕ್ಕುವ ಅತ್ಯಂತ ಪ್ರಾಚೀನ ಬರಹಗಳೆಂದರೆ ವಟ್ಟೆಳ್ಳುತ್ತು ಲಿಪಿಯಲ್ಲಿರುವ ಪುಲಂಕುರಿಚಿ(ಕ್ರಿ.ಶ. 500) , ಇರುಳಪಟ್ಟಿ -ವೀರಗಲ್ಲು ಶಿಲಾಶಾಸನ (ಕ್ರಿ.ಶ. 500), ತೊಂಡೂರು -ಸಿಂಹವರ್ಮನ್ ಶಿಲಾಶಾಸನ(ಕ್ರಿ.ಶ. 550) ಮತ್ತು ತಮಿಳು ಲಿಪಿಯಲ್ಲಿರುವ 1 ಮತ್ತು 2 ವಲ್ಲಂ ಮತ್ತು ತಿರುಕ್ಕಾಲುಕುನ್ರಂ-ಶಿಲಾಶಾಸನಗಳು (ಕ್ರಿ.ಶ. 500) , ಪಲ್ಲಂಕೋಯಿಲ್-ಸಿಂಹವರ್ಮನ್-ತಾಮ್ರಪತ್ರಗಳು (ಕ್ರಿ.ಶ. 550) , ಕುರ್ರಂ-ಪರಮೆಶ್ವರವರ್ಮನ್-ತಾಮ್ರಪತ್ರಗಳು (ಕ್ರಿ.ಶ. 669). ತಮಿಳು ಬ್ರಾಹ್ಮಿ ಮತ್ತು ಈ ಶಿಲಾಶಾಸನಗಳ ಅವಧಿಯ ನಡುವೆ ಕಾಲದ ಭಾರಿ ಅಂತರವಿರುವುದರತ್ತ ಎ.ಎಚ್. ದಾನಿ ಗಮನ ಸೆಳೆದಿದ್ದಾರೆ. ದಾನಿಯವರ ವಾದಗಳಲ್ಲಿ ಹುರುಳಿದೆಯೆಂದು ಒಪ್ಪುವ ಮಹಾಲಿಂಗಂ ತಮಿಳುನಾಡಿನ ಗುಹಾಶಿಲಾ ಬರಹಗಳನ್ನು ಕ್ರಿ.ಪೂ 3-ಕ್ರಿ.ಪೂ 6 ನೇ ಶತಮಾನದವರೆಗೆ ಕಾಲಾನುಕ್ರಮಣಿಕೆಯಲ್ಲಿ ಜೋಡಿಸುವ ಅನಿವಾರ್ಯತೆ ಇದೆಯೆನ್ನುತ್ತಾರೆ. ತಮಿಳು-ಬ್ರಾಹ್ಮಿ ಬರಹಗಳನ್ನು ಮರುತೇದಿಗೊಳಿಸಿ ಕಾಲಾನುಕ್ರಮಣಿಕೆಯಲ್ಲಿ ಜೋಡಿಸಿ ಈ ಕೊರತೆಯನ್ನು ಹೋಗಲಾಡಿಸಲು ಮಹಾಲಿಂಗಂ ಯತ್ನಿಸಿದ್ದಾರೆ. ಮಹಾಲಿಂಗಂರವರ ಪ್ರಯತ್ನದ ನಂತರವೂ ಸಾಕಷ್ಟು ದೀರ್ಘಾವಧಿ ಬರಹರಹಿತವಾಗಿ ಉಳಿಯುತ್ತದೆ. ಇದನ್ನು ಸರಿಪಡಿಸಲು ಐರಾವತಂ ಮಹದೇವನ್ ಯತ್ನಿಸಿದ್ದಾರೆ. * ತಮಿಳು ನಾಡಿನಲ್ಲಿ ಲಿಪಿ ಸಂಸ್ಕೃತಿಯನ್ನು ಪರಿಚಯಿಸಿದವರು ಜೈನರು. ಆದರೆ ಹತ್ತನೆ ಶತಮಾನದವರೆಗೆ ಅವರಿಂದ ಗಮನಾರ್ಹವಾದ ಯಾವುದೇ ಜೈನ ತತ್ವ ಮತ್ತು ಧರ್ಮ ಕುರಿತಾದ ಕೃತಿಗಳು ಹೊರಬಂದಿಲ್ಲ. ಜೈನರಿಂದ ತಮಿಳಿನಲ್ಲಿ ರಚಿತವಾದ ಮೊದಲ ಗ್ರಂಥ ಕ್ರಿ.ಶ. 8-10 ಶತಮಾನದ ಅವಧಿಯದೆಂದು ಅಂದಾಜಿಸಲಾದ ಕೊಂಕುವೇಳೀರನ ಪೆರುಂಗತೈ. ಕ್ರಿ.ಶ 6ನೇ ಶತಮಾನದಲ್ಲಿದ್ದ ಗಂಗದೊರೆ ದುರ್ವಿನೀತನ ಸಂಸ್ಕೃತ ಬೃಹತ್ಕತೆಯನ್ನು ಆದರಿಸಿದ್ದಂದು ಹೇಳಲಾಗುತ್ತಿದೆ. ಇದು ತಮಿಳು ಬ್ರಾಹ್ಮಿಯ ಸಿದ್ಧಾಂತವನ್ನು ಮತ್ತೊಮ್ಮೆ ಕೂಲಂಕಷವಾಗಿ ನೋಡಲು ಪ್ರೇರೇಪಿಸುತ್ತದೆ. ಭಾಷೆಯ ಸಮಸ್ಯೆ *ಕಮಿಲ್ ಝ್ವೆಲೆಬಿಲ್ ತಮಿಳು-ಬ್ರಾಹ್ಮಿ ಶಿಲಾಶಾಸನಗಳಲ್ಲಿ ದ್ರಾವಿಡ ಮತ್ತು ದ್ರಾವಿಡೇತರ ಶಬ್ಧಗಳು ಸಮಪ್ರಮಾಣದಲ್ಲಿವೆಯೆಂದು ಹೇಳಿದ್ದಾರೆ. ಮಹಾದೇವನ್ 89 ತಮಿಳು ಬ್ರಾಹ್ಮಿ ಶಾಸನಗಳಲ್ಲಿ 307 ಮೂಲ ಶಬ್ಧಗಳಿದ್ದು ಅದರಲ್ಲಿ 213 ದ್ರಾವಿಡ , 81 ಇಂಡೋ ಆರ್ಯನ್ ಮತ್ತು 13 ವಿವಾದಾಸ್ಪದ ಮೂಲದವೆಂದು , ಇವುಗಳಲ್ಲಿ 13 ಕ್ರಿಯಾಪದಗಳಿವೆಯೆಂದು ಗುರುತಿಸಿದ್ದಾರೆ. ತಮಿಳು-ಬ್ರಾಹ್ಮಿ ಶಿಲಾಶಾಸನದಲ್ಲಿನ ಭಾಷೆ ದ್ರಾವಿಡ-ಪ್ರಾಕೃತಗಳ ಕಲಸು ಮೇಲೋಗರವಾಗಿರದೆ ಅಭಿವೃದ್ಧಿಗೊಂಡ ಸಮಕಾಲೀನದಲ್ಲಿದ್ದ ಸಾಹಿತ್ಯಕ ಹಳೆಯ ತಮಿಳಿಗೆ ಸನಿಹವಾದುದೆಂದು ಅಭಿಪ್ರಾಯ ಪಡುವ ಮಹಾದೇವನ್ ಹಳೆ ತಮಿಳಿನಲ್ಲಾಗಲಿ ಅಥವಾ ತಮಿಳು ಸಾಹಿತ್ಯದಲ್ಲಾಗಲಿ ಇರದ ಶಿಲಾಶಾಸನದಲ್ಲಿನ ಅಪರೂಪದ ಶಬ್ಧಗಳು ಮತ್ತು ಬಳಕೆಗಳು ಮೌಖಿಕವಾಗಿ ಬಳಕೆಯಲ್ಲಿದ್ದವೆಂದು ಹೇಳುತ್ತಾರೆ. ಆದರೆ ಮಯಿಲೈ ಸೀನಿ ವೆಂಕಟಸಾಮಿಯಂತಹ ವಿದ್ವಾಂಸರು ಇವು ತಮಿಳನ್ನು ಸರಿಯಾಗಿ ತಿಳಿಯದ ಹೊರಗಿನಿಂದ ಬಂದ ಜೈನರ ತಪ್ಪು ಬಳಕೆಗಳೆಂದು ಭಾವಿಸುತ್ತಾರೆ. * ತಮಿಳು ಬ್ರಾಹ್ಮಿ ಬರಹಗಲಲ್ಲಿ ಧ , ಸ ಅಕ್ಷರಗಳ ಬಳಕೆ ಎದ್ದು ಕಾಣುತ್ತದೆ . ಅಂಕಿತ ನಾಮಗಳು , ಧಾರ್ಮಿಕ , ಸಂಬಂಧ ಸೂಚಕಗಳಲ್ಲಿ ಪ್ರಾಕೃತದ ಶಬ್ಧಗಳು ಪ್ರಬಲ ಸ್ಥಾನ ಗಳಿಸಿವೆ. ಸ್ವರಗಳ ಗುಂಪು , ‘ಅ’ಕಾರ ಪ್ರತ್ಯಯಗಳು ಕಣ್ಣಿಗೆರಚುವಂತೆ ಕಾಣುತ್ತವೆಯೆಯೆಂದು ಹೆಚ್ಚಿನ ವಿದ್ವಾಂಸರು ಗುರುತಿಸಿದ್ದಾರೆ . ಆದರೆ ಇದಕ್ಕಿಂತಲೂ ಬೇರೆಯದಾಗಿ ನೋಡುವ ಮಹಾದೇವನ್ ಸಂಗಂ ಸಾಹಿತ್ಯದ ಭಾಷೆ, ತೊಲ್ಕಾಪ್ಪಿಯಂ ವ್ಯಾಕರಣ ಶಿಲಾಶಾಸನಗಳ ಭಾಷೆಗಿಂತ ಭಿನ್ನವಲ್ಲವೆಂದು ಹೇಳುತ್ತಾರೆ. ಸಂಗಂ ಸಾಹಿತ್ಯದಲ್ಲಿ ಪ್ರಾಕೃತ ಮತ್ತು ಸಂಸ್ಕೃತಗಳ ಬಳಕೆ ಇಲ್ಲವೇ ಇಲ್ಲದಷ್ಟು ಅತ್ಯಲ್ಪವೆಂದು ಖಚಿತಪಡಿಸಲಾಗಿದೆ. ಈ ಮೂರು ದೃಷ್ಟಿಗಳು ಮೂರು ವಿಭಿನ್ನ ನೆಲೆಯತ್ತ ಎಳೆಯುತ್ತಿದ್ದು ಶಿಲಾಶಾಸನಗಳ ಭಾಷೆಯ ಸಮಸ್ಯೆ ಹಾಗೆಯೇ ಉಳಿದಿದೆ. * ಅಣ್ಣನಿಗೆ ಸಮಾನವಾದ ಗೌರವವಾಚಕ ಶಬ್ಧ ಅಣ್ಣಿ. ತಮಿಳಿನಲ್ಲಿ ಅಣ್ಣಿ ಎಂದರೆ ಅಣ್ಣನ ಹೆಂಡತಿ-ಅತ್ತಿಗೆ ಎಂಬ ಅರ್ಥವಿದೆ. ಕನ್ನಡದಲ್ಲಿ ಅಮ್ಮಣ್ಣಿ , ರಾಜಮ್ಮಣ್ಣಿ, ಅಕ್ಕಣ್ಣಿ ಎಂಬ ಸ್ತ್ರೀ ಗೌರವವಾಚಕ ಶಬ್ಧಗಳಿವೆ. ವಡ್ಡಾರಾಧನೆಯಲ್ಲಿ ಅಣ್ಣಿಕಾಪುತ್ರನ ಕಥೆಯಿದೆ. ತಮಿಳು ಸಾಹಿತ್ಯದಲ್ಲಿ ಎಲ್ಲಿಯೂ ಅಣ್ಣಿ ಎಂಬುದು ಸ್ತ್ರೀಯರಿಗೆ ಗೌರವ ಸೂಚಕವಾಗಿ ಬಳಕೆಯಾಗಿರುವುದು ಕಂಡುಬಂದಿಲ್ಲವಾದರೂ ಮೌಖಿಕವಾಗಿ ಬಳಕೆಯಲ್ಲಿದ್ದ ಇದು ತಮಿಳು-ಬ್ರಾಹ್ಮಿ ಶಿಲಾಶಾಸನದಲ್ಲಿ ಕಾಣಿಸಿಕೊಂಡಿದೆಯೆಯಂದು ಮಹಾದೇವನ್ ಹೇಳುತ್ತಾರೆ. ಇದು ನೆಗನೂರುಪಟ್ಟಿಯಂತಹ ಶಿಲಾಶಾಸನಗಳ ಭಾಷೆ ಕನ್ನಡವಾಗಿರುವ ಸಾಧ್ಯತೆಯತ್ತಲೂ ಕೈದೋರುತ್ತದೆ. * ತಮಿಳು ವ್ಯಾಕರಣ ಗ್ರಂಥಗಳು ‘ಪಿಟ್ಟಂತೈ(ಪಿಟ್ಟನಪ್ಪ)’ ’ಕೊರ್ರಂತೈ(ಕೊರ್ರನಪ್ಪ)’ ಶಬ್ಧಗಳಿಗೆ ಪಿಟ್ಟನ ತಂದೆ , ಕೊರ್ರನ ತಂದೆ ಎಂಬ ಅರ್ಥ ನೀಡುತ್ತವೆ. ಆದರೆ ತಮಿಳು-ಬ್ರಾಹ್ಮಿ ಬರಹಗಳಲ್ಲಿನ ಈ ಶಬ್ಧಗಳಿಗೆ ಆ ಅರ್ಥವಿರದೆ ಗೌರವ ಸೂಚಕವಾದ ಅಂತೈ (ಅಪ್ಪ) ಅಂತ್ಯ ಹೊಂದಿದ (ಪಿಟ್ಟಪ್ಪ , ಕೊರ್ರಪ್ಪ) ಅರ್ಥವಿದೆಯೆಂದು ವಿವರಿಸುವ ಮಹಾದೇವನ್ ತೊಲ್ಕಾಪ್ಪಿಯಂನ ಎಳುತ್ತು 347 ಮತ್ತು ನನ್ನೂಲ್ 238 ರಲ್ಲಿ ನೀಡಲಾದ ಸೂತ್ರಗಳನ್ನು ಅವುಗಳು ವಿವರಿಸಿದಂತೆ ಪರಿಗಣಿಸದೆ ಶಬ್ಧಗಳು ವ್ಯಾವಹಾರಿಕವಾಗಿ ಅಸ್ತಿತ್ವದಲ್ಲಿರುವ ಆಡು ಭಾಷೆಯಲ್ಲಿ ಬಳಕೆಯಲ್ಲಿರುವಂತೆ ಪರಿಗಣಿಸಬೇಕೆಂದು ಸೂಚಿಸಿದ್ದಾರೆ. * ಕೆಲವು ಶಿಲಾಶಾಸನಗಳಲ್ಲಿ ತಮಿಳು ವ್ಯಾಕರಣಕ್ಕೆ ಹೊರತಾದ ಹಲವಾರು ಶಬ್ಧ ಮತ್ತು ವಾಕ್ಯ ರಚನೆಯ ರೂಪಗಳು ಕಾಣಿಸಿಕೊಂಡಿರುವುದನ್ನು (ಉದಾ. ತಾಯಿಯರು-ತಮಿಳಿನಲ್ಲಿ ತಾಯರ್, ಪೊಸಿಲ್-ತಮಿಳಿನಲ್ಲಿ ವಾಯಿರ್) ಗಮನಿಸಿ ಹಳೆಗನ್ನಡ ತಮಿಳಿನ ಮೇಲೆ ಪ್ರಭಾವ ಬೀರಿದೆಯೆಂದು ಹೇಳಲಾಗಿದೆ. ಆದರೆ ಶಿಲಾಗುಹಾಬರಹಗಳಲ್ಲಿ ನಿಜವಾಗಿಯೂ ತಮಿಳು ಭಾಷೆಯಿದೆಯೋ ಅಥವಾ ದ್ರಾವಿಡ ಭಾಷೆಗಳ ಸಾಮಾನ್ಯ ಪೂರ್ವ ರೂಪ/ಹಳೆಗನ್ನಡವಿದೆಯೋ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ಮಹಾದೇವನ್ ಶಿಲಾಶಾಸನಗಳ ಮೇಲೆ ಕನ್ನಡದ ಪ್ರಭಾವವನ್ನು ಕುರಿತಾಗಿ ಹೇಳುತ್ತ ಈ ವರೆಗೆ ಭಾವಿಸಿದಂತೆ ತಮಿಳುನಾಡಿಗೆ ಜೈನ ಮತ ಬಂಗಾಳ,ಒಡಿಷಾಗಳ ಮೂಲಕ ಬಂದಿರದೆ ಕರ್ನಾಟಕದಿಂದ ಬಂದಿವೆಯೆಂದು ಸ್ಪಷ್ಟಪಡಿಸಿದ್ದಾರೆ. * ಕಮಿಲ್ ಝ್ವೆಲೆಬಿಲ್ ದ್ವಿಭಾಷಿಗಳಾದ ಜೈನರಿಂದ ಬರೆಯಲ್ಪಟ್ಟ ತಮಿಳು ಬ್ರಾಹ್ಮಿ ಬರಹಗಳು ಪ್ರಯೋಗದ ಹಂತದಲ್ಲಿದ್ದು ನಿಂತು ನಿಂತು ಸಾಗುವ ಸ್ಥಿತಿಯಲ್ಲಿವೆ. ಇದು ಸಂಗಂ ಸಾಹಿತ್ಯಕ್ಕಿಂತ ಭಿನ್ನವಾದ ಆಡುಭಾಷೆಯಾಗಿರಬಹುದು. ಸಂಗಮ್ ಸಾಹಿತ್ಯ ಮೌಖಿಕವಾಗಿದ್ದು ಕಾವ್ಯ ಭಾಷೆಯಾಗಿರುವ ಸಾಧ್ಯತೆಗಳಿವೆಯೆಂದು ಭಾವಿಸಿದ್ದಾರೆ. ಸಂಗಂ ಕಾಲದ ರಾಜರ ಶಿಷ್ಟ ತಮಿಳಿನ ಒಂದಾದರೂ ಶಿಲಾಶಾಸನ ದಕ್ಕದಿರುವುದು ಇದನ್ನು ಊಹೆಯ ಮಟ್ಟದಲ್ಲಿರುವಂತೆ ಮಾಡಿದೆ. * ತಮಿಳಿನ ಲಿಪಿಯಲ್ಲಿ ವರ್ಗೀಯ ಪ್ರಥಮ ವ್ಯಂಜನಗಳು ಮಾತ್ರವಿದ್ದು ಉಚ್ಚಾರಣೆಯ ಉಳಿದ ಎಲ್ಲ ಧ್ವನಿಗಳಿಗೂ ನಿರ್ದಿಷ್ಟ ಅಕ್ಷರ ಸಂಕೇತಗಳಿಲ್ಲ. ಆದ್ದರಿಂದ ಈಗ ತಮಿಳಿನಲ್ಲಿ ವರ್ಗೀಯ ವ್ಯಂಜನಗಳ ಉಚ್ಚಾರ ಕುರಿತಾಗಿ ಸಾಂದರ್ಭಿಕ ನಿಯಮಗಳಿವೆ. ‘ಮುರುಕನ್’ ಎಂದು ಬರೆದುದನ್ನು ‘ಮುರುಗನ್’ ಎಂದು ಓದಲಾಗುತ್ತಿದೆ. ಸಂದರ್ಭಕ್ಕನುಸಾರವಾಗಿ ಈ ಓದು ಬದಲಾಗುತ್ತದೆ. ಶಬ್ಧದ ಮೊದಲಿಗಿದ್ದಾಗ ಮತ್ತು ಒತ್ತಕ್ಷರವಾಗಿ ಬಂದಾಗ-ವರ್ಗೀಯ ಪ್ರಥವi’ (ಉದಾ. ಕಣ್ಣು , ಮಕ್ಕಳ್) , ಶಬ್ಧದ ಮಧ್ಯದಲ್ಲಿದ್ದಾಗ ಮತ್ತು ಅನುನಾಸಿಕ ವ್ಯಂಜನಗಳ ಹಿಂದಿದ್ದಾಗ-ವರ್ಗೀಯ ತೃತೀಯವಾಗಿ (ಮುರುಗನ್ , ಮಂಗೈ) ಉಚ್ಚರಿಸುವ ನಿಯಮವಿದೆ. ತಮಿಳಿನಲ್ಲಿ ಮೊದಲಿನಿಂದಲೂ ಈ ಉಚ್ಚಾರ ಪದ್ಧತಿ ಇದ್ದ ಬಗ್ಗೆ ವಿದ್ವಾಂಸರಲ್ಲಿ ಎರಡು ಬಣಗಳಿವೆ. ಮೊದಲ ಬಣದವರು ತಮಿಳನ್ನು ಹೊರತಾಗಿ ಎಲ್ಲ ದ್ರಾವಿಡ ಭಾಷೆಗಳಲ್ಲಿ ವರ್ಗೀಯ ತೃತೀಯದ ಉಚ್ಚಾರಗಳಿವೆ. ಆದ್ದರಿಂದ ತಮಿಳಿನಲ್ಲೂ ಇರಬೇಕು ಬ್ರಾಹ್ಮಿಯಿಂದ ಅಕ್ಷರಗಳನ್ನು ಪಡೆದ ಸಂದರ್ಭದಲ್ಲಿ ಉಚ್ಚಾರಣೆಯ ನಿಯಮ ಗೊತ್ತಿದ್ದರಿಂದ ವರ್ಗೀಯ ತೃತೀಯಗಳಿಗೆ ಅಕ್ಷರಗಳನ್ನು ಒದಗಿಸುವ ಅಗತ್ಯ ತಮಿಳು-ಬ್ರಾಹ್ಮಿಯನ್ನು ಚಲಾವಣೆಗೆ ತಂದವರಿಗೆ ಕಂಡು ಬರಲಿಲ್ಲವೆಂದು ಹೇಳುತ್ತಾರೆ. ಇದಕ್ಕೆ ವಿರುದ್ಧ ನಿಲುವು ತಳೆದಿರುವ ಮಹಾದೇವನ್ ತಮಿಳಿನಲ್ಲಿ ವರ್ಗೀಯ ತೃತೀಯದ ಬಳಕೆ ಇರಲಿಲ್ಲ ನಂತರದ ಕಾಲದಲ್ಲಿ ಹೊರಗಡೆಯಿಂದ ತಮಿಳಿಗೆ ಬಂದಿತು , ಹಾಗೆ ಇದ್ದಿದ್ದೇ ಆಗಿದ್ದರೆ ತಮಿಳು-ಬ್ರಾಹ್ಮಿ ಲಿಪಿಯಲ್ಲಿ ಅವುಗಳಿಗೂ ಪ್ರಾತಿನಿಧ್ಯ ದಕ್ಕುತ್ತಿದ್ದಿತು ಇಡೀ ಒಂದು ಅಧ್ಯಾಯವನ್ನೇ ಧ್ವನಿ ವ್ಯವಸ್ಥೆಗೆ ಮೀಸಲಿಟ್ಟಿರುವ ತೊಲ್ಕಾಪಿಯಂನಲ್ಲಿ ಇದರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಮೊದಲನೆ ಬಣದವರನ್ನು ಒಪ್ಪಿದರೆ ತಮಿಳು ಲಿಪಿ ರೂಢಿಸಿಕೊಳ್ಳುವ ಕಾಲದಲ್ಲಿ ವೈಜ್ಞಾನಿಕ ಮಾರ್ಗ ತುಳಿಯಲಿಲ್ಲವೆಂದು , ಉಚ್ಛಾರಣೆಯಲ್ಲಿರುವುದೆಲ್ಲವುದಕ್ಕೂ ಖಚಿತ,ನಿರ್ದಿಷ್ಟ ಸಂಕೇತ ಬೇಕೆಂಬುದನ್ನು ಮನಗಾಣಲಿಲ್ಲವೆಂದು ಭಾವಿಸಬೇಕಾಗುತ್ತದೆ. ಮಹಾದೇವನ್ ಅಭಿಪ್ರಾಯಕ್ಕೆ ಮನ್ನಣೆ ನೀಡಿದರೆ ತೊಲ್ಕಾಪ್ಪಿಯಂ ಮಾನವನ ಉಚ್ಛಾರಣೆಯ ವೈವಿಧ್ಯತೆಯ ಅಂಶಗಳತ್ತ ಗಮನ ಹರಿಸಲಿಲ್ಲವೆಂದು ಹೇಳಬೇಕಾಗುತ್ತದೆ. * ಶಾತವಾಹನರ ನಾಣ್ಯಗಳ ಹಿಂಬದಿಯ ಬರಹದಲ್ಲಿ ಅರಚನ್(ರಾಜ), ಪುತನ್ (ಮಕನ್),ಸಿರಿ(ತಿರು), ಸಾತಕಣಿ(ಚಾತಕಣಿ) ಎಂದಿವೆ ಮತ್ತು ವಶಿಷ್ಟಪುತ್ರ ಸಾತಕರ್ಣಿಯ ನಾಣ್ಯದಲ್ಲಿ ಸ್ವರರಹಿತ ವ್ಯಂಜನದ ಬದಿಯಲ್ಲಿ ಪುಳ್ಳಿ ಬಳಕೆಯಾಗಿದೆ , ತಮಿಳುನಾಡು ಮತ್ತು ಶ್ರೀಲಂಕಾಗಳಿಗೆ ವಿಶಿಷ್ಟವಾಗಿದ್ದ ‘ಮ’ ಬಳಕೆಯಾಗಿದೆ ಇದು ಭಟ್ಟಿಪ್ರೋಲು ಪದ್ದತಿಯಲ್ಲಿಲ್ಲ ಆದ್ದರಿಂದ ಈ ಭಾಷೆ ತಮಿಳು ಎಂದು ನಾಗಸ್ವಾಮಿಯವರು ವಾದಿಸಿ ಐ.ಕೆ. ಶರ್ಮ ಈ ಭಾಷೆ ತೆಲುಗು ಎಂದಿರುವುದನ್ನು ಅಲ್ಲಗಳೆದು ಕನ್ನಡ, ತೆಲುಗುಗಳು ಶಾತವಾಹನರ ಕಾಲದಲ್ಲಿ ಸ್ವತಂತ್ರ ಭಾಷೆಗಳಾಗಿ ಅಸ್ತಿತ್ವದಲ್ಲಿದ್ದವೆಂದು ಇನ್ನೂ ಸಾಬೀತಾಗಿಲ್ಲವೆಂದು ಹೇಳಿದ್ದಾರೆ. ಶಿಲಪ್ಪದಿಗಾರಂನಲ್ಲಿ ಬರುವ ನೂರುವರ್ ಕಣ್ಣರ್ ಪ್ರಸ್ತಾಪ , ಕ್ರಿ.ಶ ಆರಂಭಿಕ ಕಾಲದ ತಮಿಳು ಬ್ರಾಹ್ಮಿ ಶಿಲಾಬರಹಗಳಲ್ಲಿನ ಸಂಕ್ಷಿಪ್ತತೆ ನಾಣ್ಯಗಳಲ್ಲಿನ ಬರಹಗಳನ್ನು ಹೋಲುತ್ತಿದ್ದು ಶಾತವಾಹನರು ತಮಿಳನ್ನು ಪ್ರಮುಖ ಭಾಷೆಯಾಗಿ ಗುರುತಿಸುತ್ತಿದ್ದುದಕ್ಕೆ ಸಾಕ್ಷಿಯಾಗಿದೆಯೆಂದು ವಾದಿಸಿದ್ದಾರೆ. (ನೋಡಿರಿ : ತಮಿಳಿನ ಮೊದಲ ಗ್ರಂಥ ಯಾವುದು :ಶಿಲಪ್ಪದಿಗಾರಂ) ನಾಣ್ಯ ಮಾಧ್ಯಮದಲ್ಲಿ ಸಂಕ್ಷಿಪ್ತ ಬರಹಗಳು ಮಾತ್ರ ಸಾಧ್ಯ. ನಾಣ್ಯದ ಮುಖಬದಿಯ ಪ್ರಾಕೃತದ ಒಕ್ಕಣಿಕೆಯೂ ಸಹ ಇಂತಹುದೆ. ಶಾತವಾಹನರು ತಮ್ಮ ನಾಣ್ಯಗಳಲ್ಲಿ ತಮಿಳನ್ನು ಬಳಸುತ್ತಿರುವಾಗ ತಮಿಳಗಂ ಮೂವೇಂದರರು ತಮಿಳನ್ನು ಲಿಪಿರೂಪದಲ್ಲಿ ಬಳಸಿದ ಯಾವ ಸಾಕ್ಷ್ಯಗಳು ಇಲ್ಲವೆಂಬುದನ್ನು ಮತ್ತು ಈ ಅವಧಿಯ ಯಾವ ಶಿಲಾಬರಹದಲ್ಲೂ ಖಚಿತವಾಗಿ ಪುಳ್ಳಿಯಿರುವುದನ್ನು ಗುರುತಿಸಲಾಗಿಲ್ಲವೆಂಬುದನ್ನು ನಾಗಸ್ವಾಮಿಯವರು ಮರೆತಿದ್ದಾರೆ. ನಾಣ್ಯದ ಹಿಂಬದಿಯ ಭಾಷೆ ತಮಿಳಿನದು ಆಗಿರುವಷ್ಟೇ ಕನ್ನಡ , ತೆಲುಗುಗಳು ಆಗಿರುವ ಸಾಧ್ಯತೆಗಳಿವೆ. ಆಂಧ್ರ , ಕರ್ನಾಟಕ ಪ್ರದೇಶಗಳಲ್ಲಿ ಆಳುತ್ತಿದ್ದ ಕುಂತಲಾಧೀಶ್ವರರೆಂದು ಕರೆದುಕೊಳ್ಳುತ್ತಿದ್ದ ಶಾತವಾಹನರು ತಮ್ಮ ಪ್ರದೇಶದಾಚೆಗಿನ ತಮಿಳಗಂ ಭಾಷೆಯನ್ನು ನಾಣ್ಯಗಳಲ್ಲಿ ಬಳಸಿದರೆಂಬುದು ಒಪ್ಪಲು ಕಷ್ಟವಾದ ವಿಚಾರ. ಅರಚನಕು ವಚಿಟ್ಟಿ ಮಕನಕು ತಿರು ಚಾತಕಣಿಕು ವಾಕ್ಯದಲ್ಲಿನ ‘ಕು’ ಪ್ರತ್ಯಯದ ಮೂಲಕ ಪ್ರಾಕೃತ ತನ್ನ ಪ್ರಭಾವವನ್ನು ದ್ರಾವಿಡ ಭಾಷೆಯ ಮೇಲೆ ಅಚ್ಚೊತ್ತಿದೆ. ಈ ದ್ರಾವಿಡ ಭಾಷೆ ತಮಿಳೇ ಆಗಿರಬೇಕೆಂಬ ನಾಗಸ್ವಾಮಿಯರ ವಾದ ಅಂತಹ ಪ್ರಬಲವಾದುದಲ್ಲ. ಈ ನಾಣ್ಯಗಳ ಮೇಲೆ ತಮಿಳು ವರ್ಜಿಸಿದ ‘ಸ’ ‘ಹ’ ಕಾರಗಳು ಸ್ಪಷ್ಟವಾಗಿ ಬಳಕೆಯಾಗಿವೆ. ಈ ನಾಣ್ಯಗಳ ಹಿಂಬದಿಯಲ್ಲಿನ ಬರಹದ ಭಾಷೆ ತಮಿಳಿಗಿಂತಲೂ ಕನ್ನಡ , ತೆಲುಗು ಅಥವಾ ಇವೆರಡರ ಸಾಮಾನ್ಯ ರೂಪಗಳಾಗಿರುವ ಸಾಧ್ಯತೆಯೇ ಅಧಿಕ. ತೌಲನಿಕ ಬರಹ ಸಾಧನೆ ತಮಿಳುನಾಡಿನಲ್ಲಿ ದೊರೆತ ಗುಹಾಶಿಲಾ ಬರಹಗಳ ವ್ಯಾಪ್ತಿ, ವಿಷಯ ವೈವಿಧ್ಯತೆ ಮತ್ತು ಭಾಷೆಯ ಸಮಸ್ಯೆಗಳನ್ನು ಮೇಲೆ ನೋಡಿದ್ದೇವೆ. ಹೋಲಿಕೆಗಾಗಿ ಕ್ರಿ.ಪೂ 100 ರಿಂದ ಕ್ರಿ,ಶ. 200 ರ ಅವಧಿಯಲ್ಲಿ ತಮಿಳಗಂ ಹೊರಗಿನ ಶಿಲಾಶಾಸನಗಳತ್ತ ಒಂದು ನೋಟ ಬೀರಬಹುದು. (ಕೃ:18- ಪು.286) * ಬೆಸ್ ನಗರ ಸ್ತಂಭಶಾಸನ. * ಹೆಲಿಡೊರಸ್ನಿಂದ ಗರುಡಧ್ವಜ ಸ್ಥಾಪನೆ. ಹೆಲಿಡೊರಸ್ ಯವನ ದೊರೆ ಅಂತಲಿಖಿತನಿಂದ ಸುಂಗ ರಾಜ ಕಾಶೀಪುತ್ರ ಭಾಗಭದ್ರನ ಆಸ್ಥಾನಕ್ಕೆ ನಿಯೋಜಿಸಲ್ಪಟ್ಟವನೆಂದು ಭಾವಿಸಲಾಗಿದೆ. * ಭಾರಹುತ್ ಸ್ತೂಪದ 225 ಶಿಲಾಶಾಸನಗಳು. ಇಲ್ಲಿನ ಸ್ತಂಭ ಶಾಸನ ಸುಂಗರ ಉಲ್ಲೇಖ ಹೊಂದಿದೆ. * ಸಾಂಚಿ ಸ್ತೂಪದಲ್ಲಿನ 842 ಶಿಲಾಬರಹಗಳು. * ಕಾರ್ಲೆ , ಜುನ್ನಾರ್ , ನಾಸಿಕ್ , ನಾನಾಘಾಟ್ನಲ್ಲಿನ ಕೊರೆದ ಶಿಲಾಗುಹೆಗಳಲ್ಲಿನ ಶಾತವಾಹನ ಹಾಗೂ ಪಶ್ಚಿಮ ಕ್ಷಾತ್ರಪರ ಶಿಲಾಶಾಸನಗಳು. * ನಾಸಿಕದ ಶಿಲಾಶಾಸನದಲ್ಲಿ ಉಸವರಾತ ತನ್ನ ಮಾವ ನಹಾಪಾನನ ಪರವಾಗಿ ತಾನು ಮಾಡಿದ ದಾನಗಳನ್ನು ವಿಸ್ತೃತವಾಗಿ ಹೇಳಿದ್ದಾನೆ. ವಶಿಷ್ಟ ಪುತ್ರ ಸಾತಕರ್ಣಿ ತನ್ನ ಪೂರ್ವಿಕ ಗೌತಮೀಪುತ್ರನನ್ನು ಸ್ಮರಿಸಿರುವ ಶಿಲಾಶಾಸನಗಳಿವೆ. * ಕ್ರಿ.ಶ. 150 ರ ಜುನಾಗಢದ ರುದ್ರದಾಮನ ಸಂಸ್ಕೃತ ಶಿಲಾಶಾಸನ ಸಾಹಿತ್ಯ ಮತ್ತು ಭಾಷೆಯ ದೃಷ್ಟಿಯಿಂದ ಗಮನಾರ್ಹವೆನಿಸಿದೆ. * ಕಸ್ತಾನನ ಆಳ್ವಿಕೆಯ 11 ನೇ ವರ್ಷದ (ಕ್ರಿ,ಶ. 52) ಅಂಧ ಶಿಲಾಶಾಸನ. * ನಾಗಾರ್ಜುನಕೊಂಡ , ಅಮರಾವತಿ, ಜಗ್ಗಯ್ಯಪೇಟದ ಶಿಲಾಶಾಸನಗಳು. 2-3 ನೇ ಶತಮಾನದಲ್ಲಿ ಇಕ್ವಾಕ್ಷು ವಂಶದ ದಾನಗಳನ್ನು ವಿವರಿಸುತ್ತವೆ. ಇಲ್ಲಿನ ಇತರ ಶಿಲಾಶಾಸನಗಳು ಇನ್ನಿತರರ ದಾನಗಳ ವಿವರ ನೀಡುತ್ತವೆ. * ಸಮುದ್ರಗುಪ್ತನ ಅಲಹಾಬಾದ್ ಶಿಲಾಶಾಸನ ಆತನ ಸಾಧನೆ ಹಾಗೂ ವಿಜಯಗಳನ್ನು ಗದ್ಯ,ಪದ್ಯಗಳ ಮಿಶ್ರಣದಲ್ಲಿ ನೀಡುತ್ತದೆ. * ಸ್ಕಂದಗುಪ್ತನ ಜುನಾಗಢದ ಶಿಲಾಶಾಸನ. ಇದು ರುದ್ರದಾಮನ ಸುದರ್ಶನ ಸರೋವರದ ದುರಸ್ತಿ ಕಾರ್ಯ ಪ್ರಮುಖವಾದುವು. * ಎರಡನೇ ಚಂದ್ರಗುಪ್ತನ ಸೋದರನೆಂದು ಸಾಹಿತ್ಯದಲ್ಲಿ ದಾಖಲಾಗಿದ್ದ ರಾಮಗುಪ್ತನ ಬಗೆಗೆ ತಿಳಿಸುವ ವಿದಿಷಾ ಶಿಲಾಶಾಸನ. * ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲುಕಿನ ಕಂಗನಹಳ್ಳಿಯಲ್ಲಿನ ಕ್ರಿ.ಶ. 1 ನೇ ಶತಮಾನದ ಸ್ತೂಪದ ಸ್ಥಂಭಗಳಲ್ಲಿ ಶಾತವಾಹನ ದೊರೆಗಳಾದ ಯಜ್ಞಶ್ರೀ ಶಾತಕರ್ಣಿ, ಗೌತಮೀಪುತ್ರ ಶಾತಕರ್ಣಿ ಹಾಗೂ ಪುಲುಮಾವುಗಳ ಶಾಸನಗಳಿವೆ. ಇಲ್ಲಿ ಶ್ರೀಶಾತಕರ್ಣಿ, ಪುಲುಮಾಯಿ, ಸಿಮುಕ ಹಾಗೂ ಅಶೋಕನ ವಿಗ್ರಹಗಳು ಸಹ ಇವೆ. ಸ್ತೂಪದ ಮೇಧಿ, ಮೇಲ್ಛಾವಣಿ,ಬೋದಿಗೆ ಕಂಬ ಸೇರಿದಂತೆ ಹಲವಾರು ಕಡೆ ಇರುವ ಶಿಲಾಶಾಸನಗಳ ಸಂಖ್ಯೆ 170 ಕ್ಕೂ ಅಧಿಕವಾಗಿವೆ. ಇವುಗಳ ಕಾಲವನ್ನು ಕ್ರಿ.ಪೂ 1-ಕ್ರಿ.ಶ 4ನೇ ಶತಮಾನದವರೆಗೆ ಅಂದಾಜಿಸಲಾಗಿದೆ. ಇಲ್ಲಿನ ಕೆಲ ಶಾಸನಗಳು ದಾನಿಯ ಹೆಸರನ್ನು ಮಾತ್ರ ಹೊಂದಿದ್ದರೆ ಉಳಿದವು ದಾನಿಯ ಊರು,ಹಿನ್ನೆಲೆ ,ಅಂತಸ್ತನ್ನು ವಿವರವಾಗಿ ನೀಡುತ್ತವೆ. ಇಲ್ಲಿ ಅಮರಾವತಿ ಸನಿಹದ ಧಾನ್ಯಕಟಕ, ಇಸಿಲ,ಕೊಪಣ,ಕೊಟುಕ,ಎರನ(ಮಧ್ಯಪ್ರದೇಶ) ಮುಂತಾದ ಊರುಗಳ ಉಲ್ಲೇಖಗಳಿವೆ. * ತಮಿಳು ಬ್ರಾಹ್ಮಿಯ ಅತ್ಯಂತ ಉದ್ದದ ಬರಹವೆಂದರೆ 56 ಅಕ್ಷರದ ಮಂಗುಳಂ ಗುಹಾಬರಹ. ತಮಿಳಗಂ ಹೊರಗಿನ ಶಿಲಾಶಾಸನಗಳು ವಿಸ್ತಾರ , ವಿಷಯ ವ್ಯಾಪ್ತಿ , ಭಾಷೆಯ ಬಳಕೆ , ಉದ್ದೇಶ ಸಾಧನೆ,ರಾಜಕೀಯ,ಸಾಂಸ್ಕೃತಿಕ ಚಿತ್ರಣಗಳ ದೃಷ್ಟಿಯಿಂದ ನೋಡಿದಾಗ ತಮಿಳು ಬ್ರಾಹ್ಮಿಯ ಬರಹಗಳು ಅಂಬೆಗಾಲಿಕ್ಕುವ ಶೈಶವ ಸ್ಥಿತಿಯಲ್ಲಿರುವಂತೆ ಕಾಣುತ್ತವೆ. ನೈಜ ಶಾಸನಗಳು ಐರಾವತಂ ಮಹಾದೇವನ್ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಿಗಿಲ್ಲದ ರಾಜಕೀಯ ಸ್ವಾಯತ್ತತೆ , ಚಿಂತನಾ ಸ್ವೋಪಜ್ಞತೆ, ಯವನರೊಡಗಿನ ವ್ಯಾಪಾರ ವಹಿವಾಟುಗಳ ಸಂಪರ್ಕದಿಂದ ಪ್ರಾಚೀನ ತಮಿಳಗಂನಲ್ಲಿ ಲಿಪಿ ಸಂಸ್ಕೃತಿ ವ್ಯಾಪಕವಾಗಿದ್ದು ಸಮಾಜದ ಎಲ್ಲ ವರ್ಗಗಳಿಗೂ ತಲುಪಿದ್ದಿತೆಂದು ಸಾರಿದ್ದಾರೆ. ಆದರೆ ನಾವು ಈ ಮೊದಲೇ ನೋಡಿದ ತಮಿಳು-ಬ್ರಾಹ್ಮಿ ಶಾಸನಗಳು ಮತ್ತು ಸಂಗಂ ಕಾಲದ ಮೂವೇಂದರರ ನೇರವಾದ ಯಾವುದೇ ಶಿಲಾಶಾಸನಗಳು ದಕ್ಕದಿರುವುದು ಇದಕ್ಕೆ ವಿರುದ್ಧವಾದುದನ್ನು ಸಾರುತ್ತವೆ. ಕ್ರಿ.ಶ 610 ರ ಪಲ್ಲವರ ಮಹೇಂದ್ರವರ್ಮ-1 ನ ತಿರುಚಿರಾಪಳ್ಳಿ ಮತ್ತು ಪಲ್ಲವರಂ ಶಿಲಾಶಾಸನಗಳು ಬರುವವರೆಗೆ ತಮಿಳಿನಲ್ಲಿ ಯಾವುದೇ ಪೂರ್ಣ ಆಡಳಿತಾತ್ಮಕ ನೈಜ ತಮಿಳಿನ ಶಿಲಾಶಾಸನಗಳಿರಲಿಲ್ಲ. ಯಾವುದೇ ಭಾಷೆ ಆಡಳಿತದ ಅಂಗವಾಗಿ ಶಾಸನ, ದತ್ತಿ, ದಾನ , ಕೊಡುಗೆ, ರಾಜಾಜ್ಞೆಗಳ ಮೂಲಕ ಪ್ರದೇಶವೊಂದರಲ್ಲಿ ಪ್ರಚಲಿತವಾಗಿದ್ದು ಅದು ಪ್ರತಿನಿಧಿಸುತ್ತಿರುವ ಸಮಾಜದ ಚಿತ್ರಣ ನೀಡುವಂತಿದ್ದರೆ ಅದನ್ನು ಆಡಳಿತ ಭಾಷೆಯೆನ್ನಬಹುದು. ಸಮಾಜದ ಇಂತಹ ಸ್ಥಿತಿಗತಿಗಳನ್ನು ಬಿಂಬಿಸುವ ಶಾಸನಗಳನ್ನು ನೈಜ ಪೂರ್ಣ ಶಾಸನಗಳೆನ್ನಬಹುದು. ಈ ಅಳತೆಗೋಲಿನ ಆಧಾರದ ಮೇಲೆ ಭಾರತದ ವಿವಿಧ ಭಾಷೆಗಳಲ್ಲಿ ಗುರುತಿಸಬಹುದಾದ ನೈಜ ಪೂರ್ಣ ಶಾಸನಗಳ ಪಟ್ಟಿ ಮತ್ತು ಅವುಗಳ ಮೊದಲಿಗೆ ಕಾಣಿಸಿಕೊಂಡ ಕಾಲವನ್ನು ಕೆಳಗೆ ಕೊಡಲಾಗಿದೆ. TAMIL BRAHMI-FACTS OVER MYTHS Uncertainity of Paleography # The date of Tamil Brahmi inscriptions have been decided on paleographic grounds. There are no other external sources to confirm this. When other methods are not available , Paleography is considerd as the last resort to decide the date of inscriptions. Experts feel it is not unsual that the dates decided by paleographic technique may vary by two to three centuries. It is also notable that full scale real inscriptions and copper plate grants of Cholas and Pandyas which are in Sanskrit and Tamil languages appear from 6-7 C.E . Experts also feel that many a times the prejudice of the person also play a role in determining the date of inscriptions on paleographic grounds. # In India the date of inscriptions of Maurya King Ashoka are established on sufficient firm historical grounds. With these as the basis and comparing the variation of script the date of other inscriptions have been determined. After seeing the Tamil Brahmi inscriptions for the first time Subramanya Aiyyar suggested that they belong to 3 B.C.E . Others followed this without much enquiry. Tamil Brahmi writings over pottery have been excavated in Arikamedu , Adichallur and other places. From archeological grounds these pottery are dated to 1-2 C.E. Similarities between these pottery writings and Tamil Brahmi inscription in caves near Madurai which are dated as 3 B.C.E are observed. Considering this aspect historian and epigraphist A.H Dani has questioned the antiquity of Tamil-Brahmi cave inscriptions. # The date of Jambai inscription has been fixed at 2 C.E on paleographical grounds. R.Nagaswamy and Gift Shiromani does not agree this. They argue that in Ashokan inscriptions Satiya Putos are reffered along with Koda (Chola) , Pada (Pandya) and Keraputo (Chera Putra) . As per them Satiyaputo Atiyaman of Jambai inscription belong to Ashokan period and the date of Tamil Brahmi cave inscriptions shall be pushed back to 3 B.C.E. If this argument is accepted the enigma that why development of Tamil Brahmi in 900 years span (3 B.C.E to 6 C.E) does not grow beyond infancy remains unsolved. As per Iravatham Mahadevan upto 6 C.E the total number of Tamil Brahmi inscriptions are around 90. The longest inscription is 65 characters only. This data questions the vary validity of antiquity and evolution of Tamil Brahmi. Pulli problem # As exclaimed Pulli is not unique to Tamil Brahmi alone. Other scripts of India also use Pulli (dot) to denote Anusvara and Visarga. # Tolkappiam Proposes Pulli to designate pure consonants. I.Mahadevan declares this as the special feature of Tamil script. Pulli has not been found in Tamil Brahmi inscription in caves near Madurai. R.Nagaswami says that the first clear indication of pulli to designate the pure consonant is in bilinguial coins of Vashista Putra shatakarni in which dot is used over character ‘Ta’to indicate pure consonant. But this proposal has its own problems. In some coins of Bactrian kings found in Punjab-Sindh area dot was observed over some albhabets and was supposed to be a dot to indicate anusvara/halanta. James Princep who deciphered Brahmi and Kharoshthi , the assay master of calcutta mint of East India company has rejected this and clearly established that they are mere die extension marks. The supposed ‘pulli’ of Vashista Putra satakarni coin is one more such case. Otherwise pulli would have been widely used in Tamil Brahmi inscriptions of the same period. # The oldest coins with earlier vattelluttu script are found in Andipatti village , Chingalapattu taluk , North Arcot District over which the ‘Tinnan Etiran Senthan’ is written. On paleographical grounds the date of which is fixed at 200-400 C.E. Here pulli is used to differentiate ‘e’ and ‘o’ but not to designate pure consonant. Archeological department of Tamil Nadu has discovered hundreds of hero stones belonging to 7-8 C.E in Vattelluttu script in Arcot District. In these pulli has been used to designate ‘e’ and ‘o’ and not for pure consonant. R.Nagaswamy considers this as regional peculiarity and do not give any proof that pulli was used to designate the pure consonant elsewhere during same period. # Tolkappiam proposes pulli to differentiate pure consonants from syllables. But (1) it is not clear whether all consonants shall be written including inherent vowel ‘a’ as in all other Indian scripts and pulli shall be used whenever conjugate syllaby occur. Or (2) All consonants shall be written without vowels using pulli i.e pullis will be under waiting to be removed to form syllaby. The present practice in Tamil follows (1). Regarding pulli lot of discussion had undergone during proposal of Unicode for Tami script. # Pulavara Raju , Gift Shiromani (now deseased) and Jeburajan are in fore front of search for pulli in inscriptions and fix up the antiquity of Tolkappiam. None of them has found pulli for pure consonant without controversy in inscriptions before 7 C.E. Pulavara Raju has recognized use of Pulli in Arachallur inscriptions to differentiate “yee’ and ‘ae’ from ‘yi’ and ‘e’ and none to indicate pure consonant. # As per Gift Shiromani pulli has been used in Anaimalai inscription on the top right side of ‘Ta’ to indicate pure consonant. But it is not clear whether this is pulli mark or dent of the face of the rock because similar mark/dent has been recognized in the same inscription with some other consonant. Shiromani declares the second one ‘not a pulli’ and at this location pure consonant is not existing. This dual stand has raised doubts about the use of pulli in Tamil Brahmi inscriptions. Lack of inscriptions # The oldest Jaina inscriptions belonging to 2 B.C.E are found at Orissa and Madhura. On paleographical grounds the oldest Tamil Brahmi inscriptiona are assigned to 3 B.C.E . But the external evidences further checked does not support this. Buddhists and jains are the pioneers in the written culture of india with Prakrit/pali as their language. The argument that Tamil Brahmi inscriptions are anterior to these is not on firm grounds. # Some experts have argued that the Jains who first came to Shravanabelagola of Karnataka did not have knowledge of writing. After they enetered Tamilnadu from Karnataka they came across Damili script which was existing in Tamilnadu and adopted this for writing. But to support this view no inscription from the people who formed original Damili script is found. Almost all the early Tamil Brahmi inscriptions are Jaina centric only. No noncontroversial and directly issued inscription from Sangam era kings are found in Tamilnadu and cancels all arguments in favour of Damili. For a long duration between 3 B.C.E to 4 C.E of 700 years it is very strange that no Tamil King issued inscription. This very fact doubts the antiquity of Tamil Brahmi # From available pottery inscriptions/some times graffiti I.Mahadevan declares that written culture was wide spread in Tamilagam and it was in reach of common people also. He also comes to the conclusion that Tamilnadu was under the rule of Tamilian native kings while Karnataka and Andhrapradesh were ruled by outsiders. Due to this they remained backward atleast by 500 years when compared to Tamilnadu. # But at the same time I.Mahadevan is silent about the fact that while the kings of remaining India were issuing coins , inscriptions with their names, epitaphs why Muvendars(Chola-Chera-pandya) of Tamilnadu did not. Shatavahans the supposed contemporaries of muvendars have issued coins , inscriptions which speak themselaves. In view of this the the claims made by I.Mahadevan regarding antiquity and wide spread literacy in Tamilgam are enthusiastic in nature rather than on firm grounds. The inscriptions on pottery resembling supposed Tamil Brahmi are found near Anuradhapura of Srilanka. Hdence Some of the supposed Tamil Brahmi inscriptions read by Mahadevan are doubtful and it may not be Tamil also. # The society depicted in sangam literature does not support the wide spread literacy in tamilagam. The written pottery have mostly found near centres of commerce. By this some experts feel that literacy was known to the people residing near these commercial centres and wide spread literacy is a myth. # The history of first three centuries of pallavas is murky and at the best estimates it starts around 350 C.E . Pallavas issued their grants in prakrit for first two hundred years. For the first time pallava king Simhavarman-3 (520-550 C.E) issued grants in Tamil. As per legends Mayura Sharma of Kadambas went to Kachi for persuation of Sanskrit studies. But the grants issued by him are in prakrit. Search for this fact will shed more light on status of the southern languages during that period. In view of this the theory of wide spread literacy among common people via Tamil Brahmi and independency of tamilagam does not hold firmly. # R.Nagaswamy and Gift Shiromani have argued that Ashokan Brahmi was created by adding more syllaby to Tamil Brahmi . Each and every external evidence is against this argument. The corpus of inscriptions , the subject variety contained in them , the extent of spread of Ashokan Brahmi , the limitation of Tamil Brahmi to Jains speak against this theory. Problem of Orthography # The orthography of Tamil Brahmi is a mix of Ashokan and Bhattiprolu systems. Due to this there is wide difference between reading of these inscriptions between experts. # The orthography of Tamil Brahmi is a mix of Ashokan and Bhattiprolu systems. Due to this there is wide difference between reading of these inscriptions between experts. Initially Mahadevan proposed the evolution of writing in tamilagam through Tamil Brahmi-1 , 2 &3 . After studying the pottery inscriptions from Arikamedu and Uraiyur belonging to same period , found at same strata of megalithic period Mahadevan changed his view and concluded Tamil Brahmi-1 & 2 developed separately , existed at same time and were used independently. # In Alagaramalai inscriptions Tamil Brahmi-1 & 2 both systems are used. To explain this anomaly Mahadevan declares that during initial stages when brahmi was adopted to write tamil , confusion prevailed and the mix up indicates the unstable experimental stage of short duration. But the dating of Tamil Brahmi extends from 3 B.C.E to 5 C.E , it is not clear howlong this experimental stage was prevailing. # Whenever writing with peculiarities/mixed system/confusing orthography is reported it is explained on the basis of reagional speciality and declared as new variety of tamil Brahmi. This does not explain how many varieties can exist in limited region like tamilagam. # Whenever writing with peculiarities/mixed system/confusing orthography is reported it is explained on the basis of reagional speciality and declared as new variety of tamil Brahmi. This does not explain how many varieties can exist in limited region like tamilagam. The available inscriptions to classify Tamil Brahmi into 1 2 &3 are very very few. The longest inscription itself is 65 characters in length. The total sentences of all tamil brahmi inscriptions is around 200 spread over nearly supposed 800 years i.e 3 B.C.E to 5 C.E. As per well known epigraphist A.H. Dani the errors in writing are being recognized under various Tamil Brahmis and which not correct. # Some tamil researchers have argued that the Sri Lankan brahmi is an offshoot of Tamil Brahmi. The number , variety and extent of Sri Lankan inscriptions are speaking against these proposals. Atleast 5 inscriptions of Sri Lanka are firmly dated to Ashokan period. As per sangam legend Sri Langa was part of tamilagam and the first Sangam was established in Kapadapuram of Sri Lanka. Contray to this in between 3 B. C.E to 4 C.E 3440 inscriptions from Sri Lanka are reported where as there are only 89 inscription for same period that too with maximum of two sentences. First tamil inscription of Sri lanka belongs to 9 C.E # The early inscriptions of Sri Lanka resembles serpentine trace type greek script and written from right to left. The inscription from 1 C.E are written from left to right. Experts have recognized the language of early inscriptions of Sri Lanka to resemble prakrit of northwest india. The kambhojas of north west india are reffered in a few early inscriptions of Sri Lanka. The Buddhist chronicle Mahavamsha informs that after dispersal of third Buddhist counsil Ashoka has sent bhikkus to Banvasi and Mahiosha Mandala. In ancient past these were the powerful Buddhist centres. The interaction of trade oriented kambhojas who knew Kharaoshthi/Araimak and Buddhist centres of west coast of India with knowledge of brahmi might have effected the evolution of Sri Lankan brahmi. The concentration of early inscription in Puttalam situated on west coast of Sri Lanka supports this possibility. # In old Sri lankan language ‘va’ ‘ya’ ‘sa’ get convert to ‘ba’’ja’ and ‘ha’. Same featurses are recognized in Mansehra and Shabazghari inscriptions of Ashoka which are in today’s Pakistan. Problem of Continuity # There is great difference between the Tamil Brahmi inscription of one or two sentences and the Pallava , Pandya inscriptios of 6 C.E . The writing of tamil brahmi between 700 years of these two periods seems to be stagnant and unevolving. Can a script be so stagnanat for such a long period shall be checked on scientific basis. # After Tamil Brahmi inscription the earliest available inscriptions in Tamilnadu are Pulikurinchi (6 C.E) , Irulupatti hero stone inscription (6) , Tonduru Simhavarman inscription (C.E 6) , 1 & 2 Vallam and Tirukkalukunram inscriptions(C.E 6) in Tamil Script , Pallam Koil –Simhavarman copper plates (6 C.E ), Kurram-Parameshvaran copper plates (7 C.E) . A.H Dani has drawn attention between this large time gap. To overcome this problem tamil epigraphista have tried to spread the period of Tamil brahmi inscriptions evenly. But the problem has not solved yet. # From Tamil Brahmi cave inscriptions it is cleare that Jains are pioneers for writing in tamilnadu. But it is very strange that first jaina work of Perungatai of Konku Velir appears only in 8-10 C.E. This is the translation of original work in Sanskrit by ganga king Durvinita of 6 C.E Problem of Language # As per Kamil Zvelebil language of Tamil Brahmi inscriptions contain dravida and indo-aryan components equally. Considering 89 inscriptions spanning 800 years (3 B.C.E – 5 C.E) Mahadevan counts 307 words among which 213 are Dravidian , 81 Indo-Aryan and 13 of disputed origin with 13 verbs. He also feels that this language is not a mixture of tamil and indo-aryan but close contemporary literary old tamil. For many rare forms which are neither in old tamil are tamil literature he concludes to be existing in oral form. But some other experts say they are the wrong forms adopted by jains who did not understood the tamil correctly. # As recognized by experts in Tamil Brahmi inscriptions ‘dha’ ‘sa’ which are not in tamil are profusely used. Proper names , relation indicative words , prefixes,suffixes, cluster of words in sentence formation are leaning towards prakrit. But Mahadevan overlooks these facts and declares that the the language in inscriptions and the language depicted in Tolkappiam are same. It is very interesting to note that every one declares the sangam literature as pure , undoped by Sanskrit and original. But the language og the inscriptions of the same period say something else. Thus the problem of Tamil Brahmi is dragged into three non conforming directions without coming to consensus. |
Comment Box is loading comments...