|
ರಾಜಯೋಗ ಮತ್ತು ಹುಸಿ ವಿಜ್ಞಾನ
(RAJAYOGA- PSEUDOSCIENCE AND VIVEKANANDA) ಅನುಭವಗಳು ಪುರಾವೆ, ಪರಿಶೀಲನೆ , ಪರೀಕ್ಷೆಗಳಿಂದ ಎಷ್ಟು ಹೊರಗಿರುತ್ತದೆಯೋ ಅವುಗಳನ್ನು ಅಷ್ಟು ಅಧ್ಯಾತ್ಮಿಕ ಎಂದು ಪರಿಗಣಿಸಿ ಪರಿಕಲ್ಪನೆ, ಸಿದ್ಧಾಂತಗಳಾಗಿ ಮಾರ್ಪಡಿಸಲಾಗಿದೆ. ಇಂತಹ ಪರಿಕಲ್ಪನೆಗಳಲ್ಲಿ ಕೆಲವು ವೈಯಕ್ತಿಕ ನೆಲೆಯಲ್ಲಿ ನಿಂತರೆ , ಇನ್ನು ಕೆಲವು ಸಾಮಾಜಿಕ ಮನ್ನಣೆ ಗಳಿಸುತ್ತವೆ. ಅನಿಶ್ಚಿತತೆ ಮತ್ತು ಪುರಾವೆಗಳ ಕೊರತೆ ಇದರ ಮುಖ್ಯ ಲಕ್ಷಣ. ಕುಂಡಲಿನಿ , ಯೋಗ ಮತ್ತು ಸಮಾಧಿ ಈ ಗುಂಪಿಗೆ ಸೇರುತ್ತವೆ. ಇಂತಹ ಪರಿಕಲ್ಪನೆಗಳು ಒಂದು ಸಮುದಾಯ , ಜನಾಂಗ, ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯುವಂತಿದ್ದರೆ ಅವುಗಳು ಪ್ರಶ್ನಾತೀತವಾಗುತ್ತವೆ. ಅವುಗಳನ್ನು ಒಪ್ಪುವವರು , ಪ್ರಚಾರ ಮಾಡುವವರು ಮಹಾತ್ಮರು , ಯೋಗಿಗಳು , ಸಿದ್ಧಪುರುಷರು ಆಗುತ್ತಾರೆ. ಪ್ರಶ್ನಿಸುವವರು ಧರ್ಮ ವಿರೋಧಿಗಳೂ , ಪಾಖಂಡಿಗಳು ಮತ್ತು ಖಂಡನೆಗೆ ಅರ್ಹರೂ ಆಗುತ್ತಾರೆ. ನಲವತ್ತು , ಐವತ್ತು ವರ್ಷ ಯೋಗ ಪ್ರಚಾರ ಮಾಡಿದ ಒಬ್ಬ ಸ್ವಾಮಿಯನ್ನು ಚಿಕಿತ್ಸೆಗಾಗಿ ಆಧುನಿಕ ವೈದ್ಯಕೀಯ ಆಸ್ಪತ್ರೆಗೆ ಸೇರಿಸಿದಾಗಲೂ ಆತನನ್ನು , ಆತ ಪ್ರಚಾರ ಮಾಡಿದ ಯೋಗವನ್ನು ನಂಬಿರುವ ಹಿಂಬಾಲಕರಿಗೆ ಸ್ವಲ್ಪವೂ ಸಂದೇಹ ಉಂಟಾಗುವುದಿಲ್ಲ. ಕೆಲವು ನಂಬಿಕೆಗಳು ನಿಜವಲ್ಲದಿದ್ದರೂ ವೈಯಕ್ತಿಕ ನೆಮ್ಮದಿ ತರುತ್ತವೆ. ಇವು ಗಣನೀಯ ಪ್ರಮಾಣದ ಜನರನ್ನು ಸೆಳೆದರೆ ಸಾಮಾಜಿಕ ಮೌಲ್ಯಗಳಾಗುತ್ತವೆ. ಈ ಸಾಮಾಜಿಕ ಮೌಲ್ಯಗಳಿಗೆ ಭದ್ರವಾದ ಬುನಾದಿಯೇನೂ ಇರುವುದಿಲ್ಲ. ಪ್ರಾಣಾಯಾಮದಿಂದ ಯಾವುದೇ ಲಾಭ ಇಲ್ಲ. ಅದರ ಅದೆಷ್ಟೋ ಕಲ್ಪನೆಗಳು ಅವೈಜ್ಞಾನಿಕ ಎಂದು ಸಾವಿರಾರು ಅಧ್ಯಯನ, ಸಂಶೋಧನೆಗಳು ಸ್ಥಾಪಿಸಿದರೂ ಜನ ಅವುಗಳನ್ನು ಒಪ್ಪುವುದಿಲ್ಲ. ಹತ್ತಾರು ವರ್ಷಗಳ ಪ್ರಾಣಾಯಾಮ ಮಾಡಿದ ನಂತರವೂ ಅಸ್ತಮಾ ಹೋಗದೆ ನೆಬುಲೈಸರ್ ಬಳಕೆಗೆ ಮೊರೆ ಹೋದವರಿದ್ದಾರೆ. ಹಾಗಿದ್ದರೂ ಅವರಿಗೆ ಪ್ರಾಣಾಯಾಮ ಅಸ್ತಮಾವನ್ನು ಹೋಗಲಾಡಿಸುತ್ತದೆ ಎನ್ನುವ ಅಲುಗಿಸಲಾರದ ನಂಬಿಕೆಯಿದೆ. ಈ ನಂಬಿಕೆ ವಾಸ್ತವವನ್ನು ಹಿಂದಕ್ಕೆ ನೂಕಿ , ಅನಿಸಿಕೆಗೆ ಪ್ರಾಶಸ್ತ್ಯ ನೀಡುತ್ತದೆ. ಕುಂಡಲಿನಿ ಎನ್ನುವ ಶಕ್ತಿ ಇದೆ ಅದು ತಮ್ಮಲ್ಲಿ ಜಾಗ್ರತೆಯಾಗಿದೆ ಎಂದು ಯೋಗಿಗಳು ಹೇಳುತ್ತಾರೆ. ಗುರುತಿಸಬಹುದಾದ ನಿರ್ದಿಷ್ಟವಾದ ಅಂತಹ ಯಾವುದೇ ಶಕ್ತಿಯಿಲ್ಲ ಎಂದರೆ ಅವರು ಒಪ್ಪುವುದಿಲ್ಲ. ಏಕೆಂದರೆ ನನಗೆ ಅದರ ಅನುಭವಾಗಿದೆ. ನಿನಗೆ ಆಗಿಲ್ಲ ಎನ್ನುವುದು ಅವರ ವಾದ. ಇದರ ಅರ್ಥವೆಂದರೆ ಕುಂಡಲಿನಿ ಅವರ ಅನುಭವದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ಒಬ್ಬನ ಒಂದು ಮಾನಸಿಕ ಸ್ಥಿತಿಗೆ ಹೊರಗಿನ ಅನುಮೋದನೆ ಬೇಕಿಲ್ಲ - ಅದು ವೈಯಕ್ತಿಕ ಅನುಭವವಾಗ್ಗಿದ್ದರೆ ಸಾಕು. ಎಲ್ಲ ಭ್ರಮೆಗಳು ಆ ವ್ಯಕ್ತಿಗೆ ನಿಜವಾಗಿರುವ ಮಾನಸಿಕ ಸ್ಥಿತಿಗಳು. ಈ ಸ್ಥಿತಿ ಬೇರೆಯವರ ದೃಷ್ಟಿಯಲ್ಲಿ ಅರ್ಥರಹಿತ. ಇಂತಹ ವೈಯಕ್ತಿಕವಾದ ಅನುಭವವನ್ನು ಹೇಗೆ ಬೇಕಾದರೂ ವರ್ಣಿಸಬಹುದು ಅಥವಾ ವರ್ಣನಾತೀತ ಎನ್ನಬಹುದು. ಕುಂಡಲಿನಿ ಜಾಗ್ರತೆ, ಶಿವ-ಶಕ್ತಿ ಸಂಗಮ , ನಿರಾಕಾರ ಬ್ರಹ್ಮನ್ ಅರಿವು , ನಿರ್ವಿಕಲ್ಪ ಸಮಾಧಿ ಹೀಗೆ ನೂರಾರು ಸಂಸ್ಕೃತ ಪದಗಳ ಮೂಲಕ ಅಧಿಕೃತಗೊಳಿಸಲು ಯತ್ನಿಸಬಹುದು. ಕುಂಡಲಿನಿ , ಚಕ್ರಗಳು ನಿಜವಾದ ವಿದ್ಯಾಮಾನಗಳೇ ಎನ್ನುವುದನ್ನು ಸಮರ್ಥಿಸಲಾಗಲಿ ಅಥವಾ ಪರೀಕ್ಷಿಸಲಾಗಲಿ ಯಾವುದೇ ದಾರಿಯಿಲ್ಲ. ಇಂತಹ ಯಾವುದೇ ಸಂಗತಿಯನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲು ಸಾಧ್ಯವಿಲ್ಲ. ಏಕೆಂದರೆ ವಿಜ್ಞಾನದ ನೆರವಿನಿಂದ ದೇಹ , ಮೆದುಳು ಅಥವಾ ಇನ್ನು ಯಾವುದೇ ಅಂಗದಲ್ಲಿ ನಡೆಯುತ್ತಿರುವ ಭೌತಿಕವಾದ ಘಟನೆಗಳನ್ನು ಅಳೆಯಬಹುದು. ಯಾವ ಇಂದ್ರಿಯ ಕಾರ್ಯ ನಿರತವಾದಾಗ ಮೆದುಳಿನ ಯಾವ ಭಾಗ ಕ್ರಿಯಾಶೀಲವಾಗಿರುತ್ತದೆ , ಅಥವಾ ಮೆದುಳಿನ ಯಾವ ಭಾಗಕ್ಕೆ ಧಕ್ಕೆಯಾದರೆ ಎಂತಹ ತೊಂದರೆಗಳಾಗುತ್ತವೆ ಎನ್ನುವುದನ್ನು ಗುರುತಿಸಬಹುದು. ಮೆದುಳಿನಲ್ಲಿ ನಡೆಯುವ ಘಟನೆಗಳನ್ನು ಅತ್ಯಾಧುನಿಕ ಯಂತ್ರಗಳ ನೆರವಿನಿಂದ ಅಳೆದಾಗಲೂ ಅದು ನಿಜವಾಗಿ ಎಂತಹ ಮಾನಸಿಕ ಅನುಭವಗಳನ್ನು ಹುಟ್ಟುಹಾಕುತ್ತಿದೆ ಎಂದು ತಿಳಿಯಲಾಗದು. ಆದ್ದರಿಂದ ಚಕ್ರ , ಕುಂಡಲಿನಿ , ನಿರ್ವಿಕಲ್ಪ ಸಮಾಧಿ ಅನುಭವ ಹೊಂದಿದವರಿಗಷ್ಟೇ ನಿಜ. ಒಬ್ಬರಿಗೆ ಕುಂಡಲಿನಿ ಎಚ್ಚೆತ್ತಾಗ ಆಗುವ ಅನುಭವ ಇತರರಿಗೂ ಆಗುತ್ತದೆಯೇ ಅಥವಾ ಪ್ರತಿಯೊಬ್ಬರಿಗೂ ವಿಭಿನ್ನ ಬಗೆಯ ಅನುಭವಗಳು ಆಗುತ್ತಿದ್ದರೂ ಅವರಲ್ಲಿ ಪ್ರತಿಯೊಬ್ಬ ತನ್ನಲ್ಲಿ ಕುಂಡಲಿನಿ ಎಚ್ಚೆತ್ತುಕೊಳ್ಳುತ್ತಿದೆ ಆದ್ದರಿಂದ ಹೀಗಾಗುತ್ತಿದೆ ಇದು ಕುಂಡಲಿನಿ ಎಚ್ಚರವಾಗಿರುವ , ಎಚ್ಚರವಾಗುತ್ತಿರುವ ಬೇರೆಯವರಿಗೂ ಆಗಿರಬೇಕು , ಆಗುತ್ತಿರಬೇಕು ಎಂದು ಕಲ್ಪಿಸಿಕೊಳ್ಳಬಹುದಷ್ಟೇ. ಆದ್ದರಿಂದ ತನಗೆ ಕುಂಡಲಿನಿ ಎಚ್ಚೆತ್ತಿದೆ ಎನ್ನುವ ಭ್ರಮೆಯಲ್ಲಿರುವ ಗುರು ಬೇರೆ ಯಾವುದೋ ಭ್ರಮೆಯಿಂದ ಶಿಷ್ಯನಿಗೆ ಆಗುತ್ತಿರುವ ಅನುಭವಗಳನ್ನು ಕುಂಡಲಿನಿ ಜಾಗ್ರತೆ ಎಂದು ಶಿಫಾರಸ್ಸು ಮಾಡಬಹುದು. ಕುಂಡಲಿನಿ, ಚಕ್ರಗಳು ನಿಜವೇ ಎಂದರೆ ಹೌದು ನಿಜ ಅದನ್ನು ಅನುಭವಿಸುತ್ತಿದ್ದೇವೆಂದು ಯಾರು ಹೇಳುತ್ತಾರೊ ಅವರಿಗೆ ಮಾತ್ರ ; ಅದೊಂದು ಭ್ರಮೆಯೇ ಎಂದರೆ ಹೌದು ಉಳಿದ ಇತರರಿಗೆಲ್ಲ. ಆದ್ದರಿಂದ ಈ ಅನುಭವಗಳ ಮೌಲ್ಯವನ್ನು ಹೊರಗಿನಿಂದಲೇ ತೀರ್ಮಾನಿಸಬೇಕು. ಯೋಗ ಸಿದ್ಧಿಗಳು ಅಣಿಮಾ, ಮಹಿಮಾ ಮುಂತಾದ ಭೌತಿಕ ಪ್ರಪಂಚವನ್ನು ನಿಯಂತ್ರಿಸುವ ಸಾಮರ್ಥ್ಯ ನೀಡುತ್ತವೆ ಎಂದು ಪತಂಜಲಿ ಹೇಳುತ್ತಾರೆ. ಹಠಯೋಗಿಗಳು ಯೋಗದಿಂದ , ಮುಪ್ಪು , ಸಾವು ,ಹಸಿವು , ಬಾಯಾರಿಕೆಗಳು ಇಲ್ಲವಾಗುತ್ತವೆ. ದೇಹ ಕಾಂತಿಯುಕ್ತವಾಗುತ್ತದೆ ಎನ್ನುತ್ತಾರೆ. ಇವೆಲ್ಲ ಹೊರಗಿನಿಂದ ಪರೀಕ್ಷಿಸಲು ಸಾಧ್ಯ. ಇಂತಹ ಬಾಹ್ಯ ಪುರಾವೆಗಳ ಮೂಲಕ ಯೋಗ , ಕುಂಡಲಿನಿ, ಚಕ್ರ, ಪ್ರಾಣ ಮುಂತಾದುವೆಲ್ಲ ನಿಜ ಎಂದು ಸಾಬೀತುಗೊಳಿಸುವವರೆಗೆ ಅವುಗಳೆಲ್ಲವನ್ನೂ ವ್ಯಕ್ತಿಯೊಬ್ಬನ ಮಾನಸಿಕ ಸ್ಥಿತಿಗಳು ಮಾತ್ರ ಎನ್ನುವ ತೀರ್ಮಾನದಲ್ಲಿ ನಿಂತಿರಬಹುದು. ಈಗಿನ ಕಾಲ ಘಟ್ಟದಲ್ಲಿ ಯೋಗ ಎಂದರೆ ಆಸನಗಳು – ಹಠಯೋಗ- ಎನ್ನುವ ಭಾವನೆ ಬಲವಾಗಿ ಬೇರೂರುತ್ತಿದೆ. ಪಾಶ್ಚಾತ್ಯರ ಎಲ್ಲ ಲೌಕಿಕ ಮತ್ತು ವೈಜ್ಞಾನಿಕ ಸಾಧನೆಗಳನ್ನು ವೇದಾಂತ ಮತ್ತು ಅಧ್ಯಾತ್ಮದಿಂದ ಮಾತ್ರ ಮುಖಾಮುಖಿಯಾಗಲು ಸಾದ್ಯ ಎನ್ನುವ ಅಭಿಪ್ರಾಯ ಭಾರತೀಯ ಸನಾತನ ಶ್ರೇಷ್ಟತೆಯಲ್ಲಿ ನಂಬಿಕೆ ಇಟ್ಟಿರುವ ನವ ಬೌದ್ಧಿಕ ಕ್ಷತ್ರಿಯರೆಂದು ಕರೆದುಕೊಳ್ಳುವ ಒಂದು ಗುಂಪಿನಲ್ಲಿದೆ. ಅದಕ್ಕಾಗಿ ಅವರು ಪತಂಜಲಿ ಯೋಗ , ವೇದಾಂತವನ್ನು ವೈಜ್ಞಾನಿಕ ಹಾಗೂ ಅದೇ ವೆಳೆಯಲ್ಲಿ ವಿಜ್ಞಾನಕ್ಕೆ ಅತೀತ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಅದಕ್ಕೆ ಅವರು ಹುಸಿ ವಿಜ್ಞಾನಕ್ಕೆ ಮೊರೆಹೋಗಿದ್ದಾರೆ. ವಿಜ್ಞಾನ ನಿಸರ್ಗವನ್ನು ಅರಿಯುವ ಒಂದು ಶಿಸ್ತುಬದ್ದವಾದ ಕ್ರಮ. ಈ ಕ್ರಮದಲ್ಲಿ ವಸ್ತುನಿಷ್ಠತೆಗೆ ಮಾತ್ರ ಮನ್ನಣೆ. ಪಾರಂಪರಿಕೆ ಧಾರ್ಮಿಕ ನಂಬಿಕೆ , ಅನಿಸಿಕೆಗಳಿಗೆ ಜಾಗವಿಲ್ಲ. ನಿಸರ್ಗದ ಘಟನೆಗಳನ್ನು ಕ್ರಮಬದ್ದವಾಗಿ ನೋಡುವುದು , ಘಟನೆಯ ಹಿನ್ನೆಲೆಯ ಕಾರಣಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಸಾಮಾನ್ಯೀಕರಿಸಿ ನಿರ್ದಿಷ್ಟ ವಾದ/ಸಿದ್ಧಾಂತ/ನಿಯಮವನ್ನು ರೂಪಿಸಿವುದು. ಈ ವಾದ/ಸಿದ್ದಂತ/ನಿಯಮ ಸರಿಯೋ ತಪ್ಪೋ ಎಂದು ತಿಳಿಯಲು ಹೆಚ್ಚಿನ ವೈವಿಧ್ಯಮಯ ವೀಕ್ಷಣೆಗಳನ್ನು ಪ್ರಯೋಗ ಅಥವಾ ಬೇರೆ ಯಾವುದೇ ಕ್ರಮಬದ್ದ ಮಾರ್ಗದ ಮೂಲಕ ಮಾಡಿ ದತ್ತಾಂಶ ಸಂಗ್ರಹಿಸುವುದು. ಈ ದತ್ತಾಂಶವನ್ನು ವಿಶ್ಲೇಷಿಸಿ ಮಂಡಿಸಿರುವ ವಾದದಲ್ಲಿ ತಿದ್ದುಪಡಿಗಳಿದ್ದರೆ ಮಾಡುವುದು. ಅಂತಿಮಗೊಳಿಸಿದ ವಾದ/ಸಿದ್ಧಾಂತ/ನಿಯಮ ಸರಿಯಾಗಿ ಇದೆಯೇ ಎಂದು ತಿಳಿಯಲು ಆ ವಾದ/ಸಿದ್ಧಾಂತ/ನಿಯಮಕ್ಕೆ ಒಳಪಡುವ ನಿರ್ದಿಷ್ಟ ಘಟನೆಗಳ ಫಲಿತಾಂಶವನ್ನು ಮುನ್ನುಡಿಯುವುದು. ಈ ಫಲಿತಾಂಶ ಹೊಂದಾಣಿಕೆಯಾಗದಿದ್ದರೆ ವಾದ/ಸಿದ್ಧಾಂತ/ನಿಯಮಗಳನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿ ಮರುಪರಿಶೀಲನೆಗೆ ಒಳಪಡಿಸಿವುದು. ಈಗೆ ಹಲವು ಮರುಪರಿಶೀಲನೆಗಳ ನಂತರವೂ ವಾದ/ಸಿದ್ಧಾಂತ/ನಿಯಮ ಸರಿಯಾದ ಫಲಿತಾಂಶಗಳನ್ನು ನೀಡಿದರೆ ಅದನ್ನು ಒಪ್ಪುವುದು ಇಲ್ಲದಿದ್ದರೆ ತಿರಸ್ಕರಿಸುವುದು. ಇದು ವೈಜ್ಞಾನಿಕ ಮಾರ್ಗ. ಯೋಗ/ಧ್ಯಾನ/ಅಧ್ಯಾತ್ಮ ಮಾನಸಿಕ ಅಮೂರ್ತ ಚಿಂತನೆಗಳಿಂದ ತುಂಬಿದ್ದು ವೈಯಕ್ತಿಕವಾಗಿರುವುದರಿಂದ ಅವುಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸುವುದು ಬಹಳ ಕಷ್ಟ ಅಥವಾ ಅಸಾಧ್ಯ ಸನಿಹ ಎಂದರೂ ತಪ್ಪಿಲ್ಲ. ವೈಜ್ಞಾನಿಕ ಮಾರ್ಗದಲ್ಲಿ ಸ್ಥಾಪಿಸಲಾದ ವಾದ/ಸಿದ್ಧಾಂತ/ನಿಯಮಗಳನ್ನು ಆ ಮಾರ್ಗವನ್ನು ಬಳಸಲು ಸಾಧ್ಯವಿಲ್ಲದ- ಯೋಗ/ಧ್ಯಾನ/ಅಧ್ಯಾತ್ಮ ಮುಂತಾದ- ಸಂಗತಿಗಳನ್ನು ವಿವರಿಸಲು ಬಳಸುವುದು, ಹೋಲಿಸುವುದು , ಸಮೀಕರಿಸುವುದು ಹಾಗೂ ಅವು ಆಧುನಿಕ ವಿಜ್ಞಾನದಿಂದ ಒಪ್ಪಲ್ಪಟ್ಟಿವೆ ಎಂದು ವಾದಿಸುವುದೇ ‘ಹುಸಿ ವಿಜ್ಞಾನ ’(Pseudo science). ಈ ಹುಸಿ ವಿಜ್ಞಾನ (೧) ವೈಜ್ಞಾನಿಕ ಪರಿಭಾಷೆಯನ್ನು ಬಳಸುತ್ತದೆ. (೨) ವೈಜ್ಞಾನಿಕ ಮಾರ್ಗಕ್ಕೆ ಬರಲು ಹಿಂಜರಿಯುತ್ತದೆ (೩) ಯಾವ ಹೇಳಿಕೆಗೂ ಸಾಕ್ಷಾಧಾರಗಳನ್ನು ಒದಗಿಸುವ ಹೊಣೆಯಿಂದ ನುಣುಚಿಕೊಳ್ಳುತ್ತದೆ. (೪) ಹೀಗೆ ನುಣುಚಿಕೊಳ್ಳಲು ಅಧ್ಯಾತ್ಮದ ಅನುಭಾವವನ್ನು ಬಳಸಿಕೊಳ್ಳುತ್ತದೆ. (೫) ಸಮಕಾಲೀನ ವಿಜ್ಞಾನದಲ್ಲಿ ಹೊರಹೊಮ್ಮುತ್ತಿರುವ ಆದರೆ ಇನ್ನೂ ಖಚಿತವಾಗಿ ಸ್ಥಾಪಿಸಲಾಗದ ಸಿದ್ಧಾಂತ , ಪರಿಕಲ್ಪನೆಗಳನ್ನು ತಕ್ಷಣವೇ ಬಳಸಿಕೊಂಡು ಆ ಸಿದ್ಧಾಂತ/ಪರಿಕಲ್ಪನೆ ಸಂಪೂರ್ಣ ಸಾಧಿಸಲ್ಪಟ್ಟಿದೆ ಎಂದು ಬಿಂಬಿಸಿ ಅಧ್ಯಾತ್ಮ ವಿಜ್ಞಾನಕ್ಕಿಂತ ಮುಂದಿದ್ದೇನೆಂದು ಪರೋಕ್ಷವಾಗಿ ಪ್ರತಿಪಾದಿಸುತ್ತದೆ. ಸಾಪೇಕ್ಷ ವಾದ , ಕ್ವಾಂಟಂ ಬಲವಿಜ್ಞಾನ , ಜೀವವಿಕಸನ ಎಲ್ಲವದೂ ಅಧ್ಯಾತ್ಮದಲ್ಲಿ ವ್ಯಕ್ತಗೊಂಡಿದೆ. ವಿಜ್ಞಾನ ಈವರೆಗೆ ಹುಡುಕಿರುವ ಮುಂದೆ ಹುಡುಕಲಿರುವ ಎಲ್ಲವದೂ ವೇದ, ಉಪನಿಷತ್ತುಗಳಲ್ಲಿ ಇದೆ ಎನ್ನುವುದು ಈ ಹುಸಿ ವಿಜ್ಞಾನದ ಮತ್ತೊಂದು ಮಗ್ಗಲು. ಅಧ್ಯಾತ್ಮವನ್ನು ಹುಸಿ ವಿಜ್ಞಾನದಿಂದ ವಿವರಿಸುವ ಪರಂಪರೆಯ ಬೀಜವನ್ನು ಬಿತ್ತಿದವರು ಸ್ವಾಮಿ ವಿವೇಕಾನಂದರು. ಸ್ವಾಮಿಗಳಿಗೆ ವಿಜ್ಞಾನದ ಲಕ್ಷಣ, ಸ್ವರೂಪದ ಸರಿಯಾದ ತಿಳಿವಳಿಕೆ ಇರಲಿಲ್ಲ. ಆದರೆ ಅವರು ತಮ್ಮ ಸಮಕಾಲೀನ ವಿಜ್ಞಾನದ ಅದೆಷ್ಟೋ ಸಂಗತಿಗಳನ್ನು , ವಾದ, ಸಿದ್ಧಾಂತ, ನಿಯಮಗಳನ್ನು ಓದಿಕೊಂಡಿದ್ದರು. ಆ ಓದಿಕೆ ಅವರಿಗೆ ನಿರ್ದಿಷ್ಟ ವಿಷಯದ ಬಗ್ಗೆ ಸರಿಯಾದ ಜ್ಞಾನ ನೀಡಿದ್ದಿತೆಂದು ಹೇಳಲಾಗದು. ಸ್ವಾಮಿಯವರು ತಮ್ಮ ‘ರಾಜಯೋಗ’ ಪುಸ್ತಕದಲ್ಲಿ ಹಲವಾರು ಹುಸಿ ವೈಜ್ಞಾನಿಕ ಹೇಳಿಕೆಗಳನ್ನು ಎಗ್ಗಿಲ್ಲದೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಗಳು ಮತ್ತು ಅವರ ಬದುಕು ಮತ್ತು ಕೆಲಸಗಳಲ್ಲಿ ಸಮನ್ವಯತೆಯೇ ಇಲ್ಲ. ಸ್ವಾಮಿಗಳ ರಾಜಯೋಗದಲ್ಲಿರುವ ವೈರುಧ್ಯಮಯ ನಿಲುವಿನ ಕೆಲ ಸಂಗತಿಗಳನ್ನು ಪಟ್ಟಿಮಾಡಲಾಗಿದೆ (೧) ಪ್ರಪಂಚದಲ್ಲೆಲ್ಲ ಸಾಮಾನ್ಯವಾಗಿ ಬೋಧಿಸುವ ಮತಕ್ಕೆ ಶ್ರದ್ದಾ ವಿಶ್ವಾಸಗಳೇ ಆಧಾರವೆಂದು ಹೇಳುತ್ತಾರೆ. ಬಹು ಸಂದರ್ಭಗಳಲ್ಲಿ ಮತವೆಂದರೆ ಬರೀ ಭಿನ್ನ ಭಿನ್ನ ಸಿದ್ಧಾಂತಗಳಾಗಿಬಿಟ್ಟಿದೆ. ಈ ಕಾರಣದಿಂದಲೇ ಎಲ್ಲಾ ಮತದವರೂ ಒಬ್ಬರೊಡನೆ ಒಬ್ಬರು ಜಗಳವಾಡುತ್ತಿರುವರು. ಮೇಘಮಂಡಲದ ಮೇಲ್ಗಡೆಯಲ್ಲಿ ಒಬ್ಬನು ದೊಡ್ಡವನು ಇದ್ದುಕೊಂಡು ಪ್ರಪಂಚವನ್ನೆಲ್ಲ ಆಳುತ್ತಿದ್ದಾನೆಂದೂ ಕೇವಲ ತಮ್ಮ ವಾಕ್ಯದ ಪ್ರಾಮಾಣ್ಯದ ಮೇಲೆ ಈ ಸಿದ್ಧಾಂತವನ್ನು ನಂಬಬೇಕೆಂದೂ ಒಬ್ಬರು ಹೇಳುತ್ತಾರೆ. ಇದರಂತೆಯೆ ನನಗೂ ನನ್ನ ಅಭಿಪ್ರಾಯಗಳು ಇದ್ದೇ ಇವೆ. ಅವುಗಳನ್ನು ಇತರರು ನಂಬಬೇಕೆಂದು ನನ್ನ ಇಚ್ಛೆ. ಆದರೆ ಅವುಗಳಿಗೆ ಕಾರಣವೇನೆಂದು ಕೇಳಿದರೆ ನಾನು ಹೇಳಲಾರೆ. ಇದರಿಂದಲೇ ಧರ್ಮಕ್ಕೂ ತತ್ತ್ವಶಾಸ್ತ್ರಕ್ಕೂ ಈ ಕಾಲದಲ್ಲಿ ಕೆಟ್ಟ ಹೆಸರು ಬಂದಿರುವುದು’ (ರಾಯೋ-೧) ‘ಯೋಗಶಾಸ್ತ್ರಕಾರರು ಮತವೆಂಬುದು ಪೂರ್ವಿಕರ ಅನುಭವದ ಆಧಾರದ ಮೇಲೆ ಆಗಿರುವದೆಂಬುದಿಷ್ಟೇ ಸಾಲದೆಂದೂ ಆ ಅನುಭವಗಳನ್ನು ಪಡೆದ ಹೊರತು ಯಾವನನ್ನೂ ಧಾರ್ಮಿಕನೆಂದು ಹೇಳಲಾಗುವುದಿಲ್ಲವೆಂದು ಹೇಳುವರು (ರಾಯೋ-೩) (ಜಗತ್ತಿನ ಮಹಾತ್ಮರು)"ಇಂದ್ರಿಯಗಳಿಂದ ತಿಳಿಯುವದಕ್ಕಿಂತಲೂ ಹೆಚ್ಚಿನ ತರದ ತತ್ತ್ವಗಳನ್ನು ನಾವು ಕಂಡುಹಿಡಿದಿದ್ದೇವೆ. ನೀವು ಇವುಗಳನ್ನು ಪರೀಕ್ಷಿಸಿ ನೋಡಿರಿ" ಎಂದು ಹೇಳುತ್ತಾರೆ. ಇವರು “ಇಂಥ ಕ್ರಮಗಳನ್ನನುಸರಿಸಿ ಮನಸ್ಸಿಟ್ಟು ಅಭ್ಯಾಸಮಾಡಿರಿ. ಆಮೇಲೆಯೂ ಈ ಅತೀಂದ್ರಿಯ ತತ್ತ್ವವು ಕಾಣದೆ ಹೋದರೆ ನಾವು ಹೇಳುವುದು ಸುಳ್ಳೆನ್ನಬಹುದು” ಎಂದು ಹೇಳುತ್ತಿರುವರು. ಆದರೆ ನಾವು ಹಾಗೆ ಪರೀಕ್ಷೆ ಮಾಡಿ ನೋಡುವುದಕ್ಕೆ ಮುಂಚೆಯೆ ಅವರು ಹೇಳುವುದು ಸುಳ್ಳೆಂದು ತಿಳಿಯುವುದು ಯುಕ್ತವಲ್ಲವಾದುದರಿಂದ ಅವರು ಗೊತ್ತುಮಾಡುವ ಕ್ರಮಗಳನ್ನನುಸರಿಸಿ ಶ್ರದ್ದೆಯಿಂದ ಅಭ್ಯಾಸ ಮಾಡಬೇಕು. ಆಗ ತಿಳಿವಳಿಕೆಯಿಂಟಾಗುವುದು. (ರಾಯೋ-೪) ಮನಸ್ಸನ್ನು ಏಕಾಗ್ರಮಾಡುವುದು ಹೇಗೆ? ಅವಗಳೆಲ್ಲಿರುವ ಸಾಮಾನ್ಯ ನಿಯಮಗಳನ್ನು ಕಂಡುಹಿಡಿದು ಕೊನೆಯು ಸಿದ್ಧಾಂತವನ್ನು ಮಾಡಿಕೊಳ್ಳುವುದು ಹೇಗೆ? ಇದನ್ನೆಲ್ಲ ಹೇಳಿಕೊಡುವುದೇ ಈ ಯೋಗದ ಪರಮೋದ್ದೇಶ. ಹೀಗಿರುವುದರಿಂದ ನಾವು ಆಸ್ತಿಕರೋ, ನಾಸ್ತಿಕರೊ, ಕ್ರಿಸ್ತಿಯರೊ, ಯಹೂದಿಯರೊ, ಅಥವಾ ಬೌದ್ದರೊ, ಯಾವ ಮತಕ್ಕೆ ಸೇರಿದವರೆಂಬುದು ಈ ಶಾಸ್ತ್ರಕ್ಕೆ ಬೇಕಿಲ್ಲ, ನಾವು ಮನುಷ್ಯರು ಇಷ್ಟು ಸಾಕು.(ರಾಯೋ-೭) ಸುಮ್ಮನೆ ಕಣ್ಣು ಮುಚ್ಚಿಕೊಂಡು ನಂಬುವುದು ತಪ್ಪು, ನೀವು ನಿಮ್ಮ ನಿಮ್ಮ ಯುಕ್ತಿಯನ್ನೂ ವಿಚಾರಶಕ್ತಿಯನ್ನೂ ಉಪಯೋಗಿಸಬೇಕು; ಅಭ್ಯಾಸ ಮಾಡಿ ಈ ಸಂಗತಿಗಳು ಹೌದೊ ಅಲ್ಲವೊ ಎಂಬುದನ್ನು ನೋಡಬೇಕು. ಇನ್ನಾವುದಾದರೂ ಶಾಸ್ತ್ರವನ್ನು (=ವಿಜ್ಞಾನ) ಹೇಗೆ ಓದುತ್ತೀರೋ ಹಾಗೆಯೆ ಇದನ್ನೂ ಅಭ್ಯಾಸಮಾಡಬೇಕು. ಇದರಲ್ಲಿ ಯಾವ ರಹಸ್ಯವೂ ಇಲ್ಲ; ಯಾವ ಅಪಾಯವೂ ಇಲ್ಲ, ಇದರಲ್ಲಿ ನಿಜವಾದಂಶವೆಷ್ಟೊ ಅಷ್ಟನ್ನು ಹಾಡುಹಗಲು ರಾಜಬೀದಿಯಲ್ಲಿ ಹೇಳಬೇಕು. ಇಂಥ ವಿಷಯಗಳನ್ನು ಸುಮ್ಮನೆ ಗುಟ್ಟುಮಾಡಿಡುವುದರಿಂದ ಬಹಳ ಅಪಾಯವುಂಟು. (ರಾಯೋ-೧೦) ‘ಈಗ ನಾನು ಹೇಳುವುದರಲ್ಲಿ ಏನೇನೂ ಗೂಢವಾದುದಿಲ್ಲ, ನನಗೆಷ್ಟು ಗೊತ್ತಿದೆಯೊ ಅಷ್ಟು ಮಟ್ಟಿಗೆ ಹೇಳುತ್ತೇನೆ. ನನಗೆ ಎಷ್ಟರಮಟ್ಟಿಗೆ ಯುಕ್ತಿಗಳು ತೋಚುತ್ತವೆಯೊ ಅಷ್ಟರಮಟ್ಟಿಗೆ ಹೇಳುತ್ತೇನೆ. ಆದರೆ ನನಗೆ ಯಾವುದು ಗೊತ್ತಾಗುವುದಿಲ್ಲವೊ ಅದರ ವಿಷಯಕ್ಕೆ ಗ್ರಂಥಗಳಲ್ಲಿ ಏನು ಹೇಳಿದೆಯೊ ಅದನ್ನು ಮಾತ್ರ ತಿಳಿಸುತ್ತೇನೆ ( ರಾಯೋ-೧೦) ನೀವು ಈ ದೇಹವನ್ನು ಏನು ಬೇಕಾದರೂ ಮಾಡಬಹುದು. ಸಣ್ಣದಾಗಿ ಮಾಡಬಹುದು, ಗಾಳಿಯಂತೆ ಮಾಡಬಹುದು. ಈ ಗೋಡೆಯ ಮೂಲಕ ಹೋಗುವಂತೆ ಮಾಡಬಹುದು. ಎಂದು ಯೋಗಿಗಳು ಹೇಳುತ್ತಾರೆ. ನಮಗೆ ಅದು ಗೊತ್ತಿಲ್ಲ. ಹೀಗೆ ಮಾಡುವ ಯಾರನ್ನೂ ನಾನು ನೋಡಿಲ್ಲ. ಆದರೆ ಇವೆಲ್ಲ ಶಾಸ್ತ್ರದಲ್ಲಿ ಇವೆ. ನಾವು ಶಾಸ್ತ್ರವನ್ನು ನಂಬದೇ ಇರುವುದಕ್ಕೆ ಅಧಾರವಿಲ್ಲ (ಕೃ.ಶ್ರೇ: ೬/೨೦೩) ಉಸಿರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿ ಇಡೀ ಶರೀರವನ್ನು ಹಗುರವಾಗಿಸಲು ಪ್ರಯತ್ನಿಸಿ ಗಾಳಿಯಲ್ಲಿ ಮೇಲೆ ಹೋಗುವ ಅನೇಕ ಸಂಪ್ರದಾಯಗಳೂ ಇವೆ. ಗಾಳಿಯಲ್ಲಿ ತೇಲಾಡುವ ಯಾರನ್ನೂ ನಾನೆಂದೂ ಕಂಡಿಲ್ಲ. ಆದರೆ ಗ್ರಂಥಗಳಲ್ಲಿ ಇದರ ಉಲ್ಲೇಖ ಸಿಗುತ್ತದೆ. ನನಗೆಲ್ಲವೂ ತಿಳಿದಿದೆ ಎಂದು ನಾನು ಸೋಗು ಹಾಕುವುದಿಲ್ಲ. ನಾನು ಸದಾಕಾಲವೂ ಆಶ್ಚರ್ಯಜನಕವಾದುವುಗಳನ್ನೇ ನೋಡುತ್ತಿರುತ್ತೇನೆ. ಒಮ್ಮೆ ನಾನು ಶೂನ್ಯದಿಂದ ಹಾಣ್ಣು, ಹೂವು ಮುಂತಾದುವನ್ನು ಹೊರತ್ಯರುವ ಸಾಧುವನ್ನು ನೋಡಿದೆ. …ಯೋಗಿಯು ಪೂರ್ಣತೆಯನ್ನು ಪಡೆದಾಗ ತನ್ನ ಶರೀರವನ್ನು ಎಷ್ಟು ಸೂಕ್ಷ್ಮ ಅಣುವಾಗಿಸಬಲ್ಲನೆಂದರೆ ಅದು ಈ ಗೋಡೆಯ ಮೂಲಕ ಹಾದುಹೋಗುತ್ತದೆ. ಹೌದು ಈ ಶರೀರವನ್ನೇ ಅಷ್ಟು ಚಿಕ್ಕದಾಗಿಸಬಹುದು. ಮತ್ತೆ ಅವನು ಈ ಶರೀರವನ್ನು ಎಷ್ಟು ಭಾರವಾಗಿಸಬಹುದೆಂದರೆ ೨೦೦ ಜನ ಸೇರಿದರೂ ಅವನನ್ನು ಎತ್ತಲಾಗುವುದಿಲ್ಲ. ಅವನು ಇಷ್ಟಪಟ್ಟರೆ ಗಾಳಿಯಲ್ಲಿ ಹಾರಿಕೊಂಡು ಹೋಗಲು ಸಮರ್ಥನಾಗುತ್ತಾನೆ. ಆದರೆ ಯಾರೂ ಸಹ ದೇವರಷ್ಟು ಶಕ್ತಿಶಾಲಿಯಾಗಲಾರರು. ಹಾಗೇನಾದರೂ ಆಗಿದ್ದರೆ ಒಬ್ಬ ಯೋಗಿ ಸೃಷ್ಟಿಸಿದ್ದನ್ನು ಇನ್ನೊಬ್ಬ ಯೋಗಿ ಧ್ವಂಸಗೊಳಿಸಬಹುದಿತ್ತು. (ಕೃ.ಶ್ರೇ: ೬/೪೫೪) ಧರ್ಮವು ಸಾರುವ ಎಲ್ಲವನ್ನೂ ವಿಚಾರ ದೃಷ್ಟಿಯಿಂದ ಪರೀಕ್ಷಿಸಬೇಕು. ಯುಕ್ತಿದೃಷ್ಟಿಗೆ ತಾವು ಬದ್ಧವಲ್ಲವೆಂದು ಧರ್ಮಗಳು ಏತಕ್ಕೆ ಹೇಳಿಕೊಳ್ಳಬೇಕು ? ಅದು ಯಾರಿಗೂ ತಿಳಿಯದು. ಯುಕ್ತಿಪ್ರಮಾಣವನ್ನು ನಾವು ತೆಗೆದುಕೊಳ್ಳದೇ ಇದ್ದರೆ ಧಾರ್ಮಿಕ ವಿಷಯದಲ್ಲಿಯೂ ಸರಿಯಾದ ನಿರ್ಣಯ ಇರಲಾರದು. (ಕೃ.ಶ್ರೇ: ೨/೨೮೧) ಸ್ವಾಮಿಗಳು ಯೊಗ ಇತರ ಧಾರ್ಮಿಕ ನಂಬಿಕೆಗಳಂತಲ್ಲ. ನಾವು ಪರಿಕ್ಷಿಸದೇ , ನಮ್ಮ ಅನುಭವಕ್ಕೆ ಬರದೆ ಯಾವುದನ್ನೂ ಒಪ್ಪುವ ಅಗತ್ಯವಿಲ್ಲ ಎನ್ನುತ್ತಾರೆ. ಧಾರ್ಮಿಕ ವಿಷಯದಲ್ಲಿಯೂ ಯುಕ್ತಿಗೆ ಮಹತ್ವವಿದೇ ಎನ್ನುತ್ತ ವೈಚಾರಿಕತೆಯತ್ತ ಹೊರಳುತ್ತಾರೆ. ಆದರೆ ಅದೇ ವೇಳೆಗೆ ಯೋಗ ಗ್ರಂಥಗಳಲ್ಲಿ ಇರುವುದೆಲ್ಲವದೂ ಅವರ ಅನುಭವಕ್ಕೆ ಬಂದಿಲ್ಲವಾದರೂ ಪರಮ ಸತ್ಯ ಎಂಬಂತೆ ಬಿಂಬಿಸುವುದರಿಂದ ಇತರ ಮತ ಧರ್ಮಗಳಂತೆ ನಂಬಿಕೆಗೆ ಜೋತು ಬಿದ್ದಿದ್ದಾರೆ. ಇಂದ್ರಿಯಗಳಿಂದ ತಿಳಿಯುವದಕ್ಕಿಂತಲೂ ಹೆಚ್ಚಿನ ತರದ ತತ್ತ್ವಗಳನ್ನು ನಾವು ಕಂಡುಹಿಡಿದಿದ್ದೇವೆ. ನೀವು ಇವುಗಳನ್ನು ಪರೀಕ್ಷಿಸಿ ನೋಡಿರಿ" ಎನ್ನುವ ಹೇಳಿಕೆಗೆ ಪುರಾವೆಗಳೆಲ್ಲಿವೆ ? ಪರಿಶೀಲಿಸಿ ನೋಡಿದರೆ ಪುರಾತನ ಋಷಿಗಳಿರಲಿ ಸ್ವಾಮಿಗಳಿಗೆ ಇಂದ್ರಿಯಗಳನ್ನು ಮೀರಿದ ಜ್ಞಾನವಿದ್ದಿತೆಂದು ನಂಬಲು ಯಾವುದೇ ಆಧಾರಗಳು ದಕ್ಕವು. ರಾಜಯೋಗದ ಹೇಳಿಕೆಗಳು ಸರಿಯೋ ತಪ್ಪು ಎಂದು ನಿರ್ಧರಿಸಲು ಪ್ರತಿಯೊಬ್ಬರೂ ಯೋಗಿಗಳಾಗಬೇಕು. ಹಾಗೆ ಯೋಗಿಗಳಾಗಿ ಕೆಲ ಕಾಲ ಅಭ್ಯಾಸ ಮಾಡಿ ಅಲ್ಲಿರುವುದು ಸುಳ್ಳು ಎಂದು ನನಗೆ ತಿಳಿದಿದೆ ಎಂದರೆ ಸ್ವಾಮಿಗಳು ಒಪ್ಪುವುದಿಲ್ಲ. ಹಿಂದೆ ಸಾವಿರಾರು ಋಷಿಗಳಿಗೆ ಅದು ದಕ್ಕಿದ್ದಿತಲ್ಲ. ಅದು ಈಗ ನಿಮಗೆ ದಕ್ಕಿಲ್ಲ ಎಂದಾದರೆ ನಿಮ್ಮ ಮನಶುದ್ಧಿಯಾಗಿಲ್ಲ, ಏಕಾಗ್ರತೆ ಸಾಲದು , ಪೂರ್ವಜನ್ಮದ ಕರ್ಮ ಎಂದು ಹೇಳುತ್ತಾರೆ. ಒಂದು ಕಡೆ ಪರೀಕ್ಷಿಸದೆ ಏನನ್ನೂ ಒಪ್ಪಬೇಡಿ ಎನ್ನುತ್ತಾರೆ. ಹಾಗೊಮ್ಮೆ ಪರೀಕ್ಷಿಸಿ ಒಪ್ಪದಿದ್ದರೆ ನಿಮ್ಮ ಅರ್ಹತೆಯನ್ನು ಪ್ರಶಿಸುತ್ತಾರೆ. ಕೊನೆಗೆ ಹಿಂದಿನನವರ ಹೇಳಿಕೆಗಳು ಸಂಪೂರ್ಣ ನಿಜ ಎನ್ನುವ ನಂಬಿಕೆಗೆ ಶರಣಾಗುತ್ತಾರೆ. ವೈಚಾರಿಕತೆಯನ್ನು ಪ್ರತಿಪಾದಿಸಿದಂತೆ ಹೊರಗಿನಿಂದ ಕಂಡರೂ ಒಳಗಿರುವುದೆಲ್ಲ ನಂಬಿಕೆಯೇ. (೨) ‘ಬಾಹ್ಯ ಪ್ರಪಂಚವೆಂಬುದು ಒಳಗಣ ಸೂಕ್ಷ್ಮ ಪ್ರಪಂಚದ ಸ್ಥೂಲರೂಪವು. ಸೂಕ್ಷ್ಮವೆಂಬುದು ಯಾವಾಗಲೂ ಕಾರಣವಾಗಿರುವುದು. ಸ್ಥೂಲವಾದುದು ಕಾರ್ಯವಾಗಿರುವುದು. ಆದುದರಿಂದ ಬಾಹ್ಯಪ್ರಪಂಚವು ಕಾರ್ಯವಾಗಿಯೂ ಆಧಾತ್ಮಿಕ ಪ್ರಪಂಚವು ಕಾರಣವಾಗಿಯೂ ಇರುವುವು. ಹೀಗೆಯೆ ಹೊರಗೆ ಇರುವ ಶಕ್ತಿ ವಿಶೇಷಗಳು ಸ್ಥೂಲವಾಗಿಯೂ ಶರೀರದೊಳಗಣ ಶಕ್ತಿ ವಿಶೇಷಗಳು ಇವುಗಳ ಸೂಕ್ಷ್ಮ ರೂಪವಾಗಿಯೂ ಇರುವುವು. ಯಾವಾತನು ಒಳಗಣ ಶಕ್ತಿ ವಿಶೇಷಗಳನ್ನು ಕಂಡುಕೊಂಡು ಅವುಗಳ ವ್ಯಾಪಾರವನ್ನು ನಡೆಸುವುದನ್ನು ಅರಿತಿರುವನೋ ಅವನಿಗೆ ಇಡೀ ಸೃಷ್ಟಿಯೇ ಸ್ವಾಧೀನಕ್ಕೆ ಬರುವುದು. ಜಗತ್ತನ್ನೇ ಸ್ವಾಧೀನಮಾಡಿಕೊಂಡು ಇಡೀ ಸೃಷ್ಟಿಯನ್ನೇ ಆಳಬೇಕೆಂಬ ಮಹಾ ಸಂಕಲ್ಪವೇ ಯೋಗಿಯ ಉದ್ದೇಶವು. ಸೃಷ್ಟಿ ನಿಯಮಗಳೆಂಬುವು ಎಲ್ಲಿ ವ್ಯಾಪಾರ ಮಾಡಲಾರವೋ, ಎಲ್ಲಿಗೆ ಹೋದರೆ ಅವುಗಳನ್ನು ದಾಟಿದಂತಾಗುವುದೊ, ಅಂಥ ಸ್ಥಾನವನ್ನು ಸೇರುವುದೇ ಅವನ ಬಯಕೆ. ಒಳಗಣ ಮತ್ತು ಹೊರಗಣ ಎಲ್ಲಾ ಪ್ರಪಂಚವನ್ನು ಜಯಿಸುವುದೇ ಅವನ ಸಂಕಲ್ಪವು. ಜನಾಂಗದವರು ಅಭ್ಯುದಯವನ್ನು ಹೊಂದುವುದೂ ನಾಗರಿಕರಾಗುವುದೂ ಸೃಷ್ಟಿಯನ್ನು ಸ್ವಾಧೀನಮಾಡಿಕೊಳ್ಳುವುದೆ ಆಗಿರುವುದು. (ರಾಯೋ-೮) ಜಗತ್ತನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಬೇರೆ ಬೇರೆ ಜನಾಂಗದವರು ಬೇರೆ ಬೇರೆ ರೀತಿಗಳನ್ನು ಅನುಸರಿಸುತ್ತಾರೆ. ಒಂದೇ ಸಮಾಜಕ್ಕೆ ಸೇರಿದವರಲ್ಲಿಯೇ ಕೆಲವರು ಬಾಹ್ಯ ಪ್ರಪಂಚವನ್ನೂ ಮತ್ತೆ ಕೆಲವರು ಅಂತಃಪ್ರಪಂಚವನ್ನೂ ಗೆಲ್ಲವುದಕ್ಕೆ ಯತ್ನಿಸುವಂತೆ ಬೇರೆ ಬೇರೆ ಜನಾಂಗಗಳಲ್ಲಿ ಒಂದು ಜನಾಂಗದವರು ಹೊರಗಣ ಪ್ರಪಂಚವನ್ನು ಗೆಲ್ಲವುದಕ್ಕೂ ಮತ್ತೊಂದು ಜನಾಂಗದವರು ಒಳಗಣ ಪ್ರಪಂಚವನ್ನು ಗೆಲ್ಲವುದಕ್ಕೂ ಇಚ್ಛಿಸುವರು. ಒಳಗಣ ಪ್ರಪಂಚವನ್ನು ಗೆದ್ದರೆ ಎಲ್ಲವನ್ನೂ ಗೆದ್ದಂತಾಯಿತೆಂದು ಕೆಲವರೆನ್ನವರು. ಇನ್ನು ಕೆಲವರು ಬಾಹ್ಯಪ್ರಪಂಚವನ್ನು ಗೆದ್ದರೆ ಎಲ್ಲವನ್ನೂ ಗೆದ್ದಂತಾಯಿತೆನ್ನುವರು. ಸಂಪೂರ್ಣವಾಗಿ ನೋಡಿದರೆ ಎರಡು ಪಕ್ಷವೂ ಸರಿ. ಏಕೆಂದರೆ ಪ್ರಪಂಚದಲ್ಲಿ ಒಳಗೆ ಹೊರಗೆ ಎಂಬ ವಿಭಾಗವೇ ಇಲ್ಲ, ಒಳಗೆ ಹೊರಗೆ ಎಂಬ ಇವು ಬರೀ ಕಲ್ಪನೆಯಿಂದಾದ ಪರಿಚ್ಛೇದಗಳೇ ಹೊರತು ಎಂದೂ ನಿಜವಾದವುಗಳಲ್ಲ, ಬಾಹ್ಯವಾದಿಗಳಿಗೂ ಅಂತರ್ವಾದಿಗಳಿಗೂ ತಮ್ಮ ಜ್ಞಾನವನ್ನು ಪೂರ್ಣಸ್ಥಿತಿಗೊಯ್ದಾಗ ಎರಡು ಪಕ್ಷವೂ ಒಂದೇ ಎಂದು ತಿಳಿಯಲ್ಪಡುವುದು. (ರಾಯೋ-೯) ನಿಜವಾದ ಆಂತರಿಕ ಜಗತ್ತು ಬಾಹ್ಯ ಜಗತ್ತಿಗಿಂತ ಕೊಟಿಪಾಲು ದೊಡ್ದದು. ಬಾಹ್ಯ ಜಗತ್ತು ನಮ್ಮ ನೈಜ ಸ್ವಭಾವದ ಛಾಯೆ ಮಾತ್ರ (ಕೃ.ಶ್ರೇ-೧/೨೬೦) ಸ್ವಾಮಿ ವಿವೇಕಾನಂದರ ಭಾಷಣಗಳಲ್ಲಿ ಮೇಲಿಂದ ಮೇಲೆ ಕಂಡುಬರುವ ಹುಸಿವೈಜ್ಞಾನಿಕ ಹೇಳಿಕೆಗಳಲ್ಲಿ ಅತ್ಯಂತ ಪ್ರಮುಖವಾದುದು ಇದು. ಭೌತಿಕ ಜಗತ್ತಿನ ಪರಿಣಾಮವಾಗಿ ದೇಹ ಅಸ್ತಿತ್ವಕ್ಕೆ ಬಂದಿದೆ. ಇಂದ್ರಿಯಗಳ ಎಲ್ಲ ಬಗೆಯ ಕ್ರಿಯಾಶೀಲತೆಯೂ ಒಂದಲ್ಲ ಒಂದು ರೀತಿಯಲ್ಲಿ ಭೌತಿಕ ಪರಿಣಾಮದ ಫಲ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ದೃಷ್ಟಿಯಲ್ಲಿ ಹೊರಗೆ ಕಾಣುವ ಜಗತ್ತು ಮತ್ತು ಅಮೂರ್ತವಾದ ಮಾನಸಿಕ ಚಟುವಟಿಗೆಳ ಹಿನ್ನೆಲೆ ಒಂದೇ ಎನ್ನುಬಹುದು. ಆದರೆ ಸ್ವಾಮಿಗಳು ಅಲ್ಲಿಗೆ ನಿಲ್ಲುವುದಿಲ್ಲ. ಬಾಹ್ಯ ಪ್ರಪಂಚವು ಒಳಗಿನ ಸೂಕ್ಷ್ಮರೂಪದ ಅಭಿವ್ಯಕ್ತಿ ಎನ್ನುತ್ತಾರೆ. ಮತ್ತೊಮ್ಮೆ ಆಂತರಿಕ ಜಗತ್ತು ಬಾಹ್ಯ ಜಗತ್ತಿಗಿಂತ ಕೋಟಿಪಾಲು ದೊಡ್ದದು ಎನ್ನುತ್ತ ವೈರುಧ್ಯಮಯ ನಿಲುವನ್ನು ತಾಳುತ್ತಾರೆ. ಸ್ವಾಮಿಗಳ ಹೇಳಿಕೆಗಳಿಗೆ ಉಪನಿಷತ್ತುಗಳ ಭಾವನಾವಾದಿ ಘೋಷಣೆಗಳ ಹೊರತಾಗಿ ಬೇರೆ ಯಾವುದೇ ಸಮರ್ಥನೆ ಇಲ್ಲ. ಸ್ವಾಮಿಗಳು ಹೇಳುವಂತೆ ಒಳಗಿರುವ ಸೂಕ್ಷ್ಮ ಕಾರಣ ಯೋಗಿಗಳಿಗೆ ತಿಳಿದಿದ್ದರೆ ಅವರು ಹೊರಗಿನ ಎಲ್ಲ ನಿಸರ್ಗ ನಿಯಮಗಳನ್ನು ತಿಳಿಸಬಹುದಿದ್ದಿತು. ಯಾವ ಯೋಗಿಯೂ ಸ್ಥೂಲ ಜಗತ್ತಿಗೆ ಸಂಬಂಧಿಸಿದ ಯಾವ ಭೌತಿಕ ನಿಯಮವನ್ನೂ ತಿಳಿಸಲಿಲ್ಲ. ಹಾಗೆ ತಿಳಿಸಲು ಮತ್ತು ವಿವರಿಸಲು ಯಾವ ಯೋಗಿಗೂ ಯಾರೂ ಎಂದೂ ಅಡ್ಡಿಯಾಗಿರಲಿಲ್ಲ. ಹಾಗೆ ತಿಳಿಸುವುದಾಗಿದ್ದರೆ ವಿಜ್ಞಾನದ ಅವಶ್ಯಕತೆ ಇರುತ್ತಿರಲಿಲ್ಲ. ಆಧುನಿಕ ವಿಜ್ಞಾನ ಬಿಡಿಸಲು ಹೆಣಗುತ್ತಿರುವ ಅದೆಷ್ಟೋ ವಿಷಯಗಳು ಈಗ ನಮ್ಮ ಮುಂದಿವೆ. ಸ್ವಾಮಿಗಳ ಕಾಲದಲ್ಲೂ ಇದ್ದವು. ಚಲನೆಯ ನಿಯಮಗಳು ಐಸಾಕ್ ನ್ಯೂಟನ್ , ಔಷ್ಣೀಯ ಗತಿ ಶಾಸ್ತ್ರದ ನಿಯಮಗಳು ಕಾರ್ನೋ ಸಾಡಿ , ವೈದ್ಯುತ್-ಕಾಂತೀಯತೆಗೆ ಮ್ಯಾಕ್ಸ್’ವೆಲ್ ಹೀಗೆ ನೂರಾರು ವಿಜ್ಞಾನಿಗಳಿಂದ ವಿಶ್ವದ ಮೂಲ ನಿಯಮಗಳು , ಸೃಷ್ಟಿಯ ಹೊಳಹುಗಳು ವಿವರಿಸಲ್ಪಟ್ಟವೇ ಹೊರತು ರಾಜಯೋಗದಿಂದ ಇಡೀ ಸೃಷ್ಟಿಯ ನಿಯಮ ಮತ್ತು ಸೃಷ್ಟಿ ಕ್ರಿಯೆಯನ್ನೇ ಅರಿತು ಅದರಾಚೆಗೆ ಹೋದ ಯಾವುದೇ ಯೋಗಿಯಿಂದಲ್ಲ. ಹಾಗೇ ಯೋಗದಿಂದ ಸೃಷ್ಟಿಯ ನಿಯಮಗಳೆಲ್ಲವನ್ನೂ ಹಿಡಿತಕ್ಕೆ ಪಡೆಯಬಹುದಾಗಿದ್ದರೆ ಸ್ವತ: ಯೋಗಿಗಳಾದ ಸ್ವಾಮಿಗಳು ತಾವೇ ಅದನ್ನು ಮಾಡಬಹುದಿದ್ದಿತು. ಹೊರಗಿನ ಮತ್ತು ಒಳಗಿನ ಹುಡುಕಾಟಗಳು ಅಂತಿಮದಲ್ಲಿ ಒಂದೇ ಗುರಿ ತಲುಪುತ್ತವೆ ಎಂದಾದರೆ ಎಲ್ಲರಿಗೂ ನೇರವಾಗಿ ಅರ್ಥವಾಗುವ , ಅನುಭವಕ್ಕೆ ಬರುವ ವಿಜ್ಞಾನದ ಪರಿಶ್ರಮವನ್ನು ಕೆಳಮಟ್ಟದ ಅಪರಾ ವಿದ್ಯೆಗೆ ಸೇರಿಸಿ , ಯೋಗ , ಧ್ಯಾನ , ಅಧ್ಯಾತ್ಮಗಳನ್ನು ಶ್ರೇಷ್ಟವಾದ ಪರಾ ವಿದ್ಯೆಗೆ ಸೇರಿಸಿರುವುದರಲ್ಲಿ ಯಾವ ಅರ್ಥವಿದೆ. ಪಾಶ್ಚಾತ್ಯರ ಬಾಹ್ಯ ವಿಶ್ವದ ವೈಜ್ಞಾನಿಕ ಹುಡುಕಾಟ ಭಾರತೀಯರ ಅಂತರಂಗದ ಹುಡುಕಾಟಕ್ಕಿಂತ ಕೀಳೆಂದು ಸ್ವಾಮಿಗಳು ಭಾವಿಸುವುದಾದರೂ ಏಕೆ ? ಹೊರಗಿನ ಹುಡುಕಾಟ ಎಲ್ಲರಿಗೂ ಕಾಣುವಂತಹ ಫಲಿತಾಂಶಗಳನ್ನು ನೀಡಿದೆ. ಒಳಗಿನ ಹುಡುಕಾಟದ ಫಲಿತಾಂಶಗಳೆಲ್ಲಿ ? ಫಲಿತಾಂಶ ಮತ್ತು ಪರಿಣಾಮಗಳನ್ನು ಕಾಣದ ಕೇವಲ ವೈಯಕ್ತಿಕವಾಗಿರುವುದನ್ನು ನಂಬುವುದಕ್ಕಿಂತ ಸಾರ್ವತ್ರಿಕ ಅನುಭವಕ್ಕೆ ಬರುತ್ತಿರುವ ತನ್ನ ಅಪೂರ್ಣತೆಯನ್ನು ಒಪ್ಪಿಕೊಳ್ಳುವ ವಿಜ್ಞಾನವನ್ನು ಅನುಸರಿಸುವುದು ಒಳ್ಳೆಯದಲ್ಲವೇ ? ಸ್ವಾಮಿಗಳಿಗೆ ತಾವು ಹೇಳುತ್ತಿದ್ದ ಇಂತಹ ವಿಷಯಗಳ ಬಗ್ಗೆ ಅವರಿಗೇ ನಂಬಿಕೆ ಇರುತ್ತಿರಲಿಲ್ಲ. ಇನ್ನೊಂದು ಕಡೆ ಅವರು ‘ಋಷಿಗಳು ಸರ್ವಜ್ಞರು. ಹಾಗಿದ್ದ ಪಕ್ಷ ಸೂರ್ಯ ಸಿದ್ಧಾಂತದ ಪ್ರಕಾರ ಅಷ್ಟೊಂದು ಸರಳವಾದ ಖಗೋಳಶಾಸ್ತ್ರದ ಸತ್ಯಗಳ ವಿಷಯವಾಗಿ ಅವರಿಗೆ ಏನೂ ಗೊತ್ತಿಲ್ಲವೆಂದು ಸಿದ್ಧಗೊಂಡಿದೆಯಲ್ಲ.ಅದು ಹೇಗೆ ? ಅವರು ಈ ಭೂಮಿ ಒಂದು ತ್ರಿಕೋಣ , ವಾಸುಕಿ ಸರ್ಪವು ಭೂಮಿಯನ್ನು ಹೊತ್ತಿಕೊಂಡಿದೆ ಎಂದೆಲ್ಲಾ ಹೇಳುತ್ತಿರಬೇಕಾದರೆ ನಮ್ಮನ್ನು ಈ ಜನ್ಮಾಂತರ ಸಾಗರದಿಂದ ಪಾರು ಮಾಡುವ ಶಕ್ತಿಯುಳ್ಳಲ್ಲವರೆಂದು ನಾವು ಅವರನ್ನು ಹೇಗೆ ಮೊರೆ ಹೋಗುವುದು? (ಸಂಪುಟ ೪/ಪುಟ ೧೭ ) ಎನ್ನುತ್ತ ಸಂಶಯ ತಾಳುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಮಾತಿನ ಆಡಂಬರದಿಂದ ಮರಳು ಮಾಡುವುದೇ ಸ್ವಾಮಿಗಳ ಕೌಶಲ್ಯವಾಗಿದೆ. (೩) ವಿಶೇಷವಾದುದೆಲ್ಲವೂ ಈ ಪ್ರಾಣದಿಂದ ಹುಟ್ಟುವುದು. ಈ ಪ್ರಾಣವೇ ಸಂಚಲನೆಯಾಗಿ ವ್ಯಕ್ತವಾಗಿದೆ. ಆಕರ್ಷಣೆ , ಕಾಂತ ಶಕ್ತಿಗಳ ರೂಪದಲ್ಲಿ ಕಾಣುವುದೂ ಪ್ರಾಣವೆ. ಶರೀರದ ಕ್ರಿಯಾಶೀಲತೆ , ನರಗಳಲ್ಲಿರುವ ಸಂವೇದನೆ, ಆಲೋಚನಾಶಕ್ತಿ ಇವೆಲ್ಲವಾಗಿ ತೋರುತ್ತಿರುವುದು ಪ್ರಾಣವೆ. ಮನೋವೃತ್ತಿ ಮೊದಲಾಗಿ ಅತ್ಯಂತ ಸ್ಥೂಲವಾದ ಭೌತಿಕ ಶಕ್ತಿಯವರೆಗೆ ಹರಡಿರುವುದೆಲ್ಲವೂ ಪ್ರಾಣದ ರೂಪಾಂತರವೆ. ಪ್ರಾಣವೆಂದರೆ ಪ್ರಪಂಚ ಎಲ್ಲ ಮಾನಸಿಕ ಅಥವಾ ಸ್ಥೂಲ ಭೌತಿಕ ಶಕ್ತಿ ವಿಶೇಷಗಳೆಲ್ಲ ಪೂರ್ವಸ್ಥಿತಿಯಲ್ಲಿ ಲಯವಾದಾಗ ದಕ್ಕುವ ಸ್ಥಿತಿ. …. ಪ್ರಾಣದ ಈ ಸ್ವರೂಪವನ್ನು ತಿಳಿದು ಅದನ್ನು ಸ್ವಾಧೀನಕ್ಕೆ ತಂದುಕೊಳ್ಳುವುದೇ ನಿಜವಾದ ಪ್ರಾಣಾಯಾಮವು. (ರಾಯೋ-೨೪) ಶರೀರವನ್ನು ಕ್ರಿಯಾಶೀಲವಾಗಿರಿಸಿರುವ ಆ ಪ್ರಾಣವನ್ನೇ ಹಿಡಿಯಬೇಕು. ಉಸಿರಾಟ ಪ್ರಾಣದ ವ್ಯಕ್ತ ರೂಪ. ಉಸಿರನ್ನು ಅನುಸರಿಸಿ ಮೆಲ್ಲಗೆ ಶರೀರದೊಳಗೆ ಹೊಕ್ಕು ಅಲ್ಲಿ ನಡೆಯುವ ನಾಡೀ ಸಂಚಾರಗಳೆಂಬ ಸೂಕ್ಷ್ಮಕ್ರಿಯೆಗಳನ್ನು ಕಂಡುಹಿಡಿಯುವುದಕ್ಕೆ ಬರುತ್ತದೆ. ಈ ಕ್ರಿಯೆಗಳು ನಮಗೆ ಗೊತ್ತಾಗಿ ಅನುಭವಕ್ಕೆ ಬರುತ್ತಲೆ ಅವುಗಳೂ ಹಾಗೂ ಶರೀರ ನಮ್ಮ ಸ್ವಾಧೀನಕ್ಕೆ ಒಳಪಡತೊಡಗುತ್ತವೆ. ನಾಡೀ ಸಂಚಾರದಿಂದಲೇ ಮನಸ್ಸು ಚಟುವಟಿಕೆಯಲ್ಲಿ ಇರುವುದರಿಂದ ಕೊನೆಗೆ ಶರೀರವೂ ಮನಸೂ ಸಂಪೂರ್ಣವಾಗಿ ನಮ್ಮ ಕೈಗೆ ಸಿಕ್ಕಿ ಎರಡೂ ನಮ್ಮ ದಾಸರಾಗುತ್ತವೆ.(ರಾಯೋ-೨೦) ಪ್ರಾಣದ ಅಸ್ತಿತ್ವ ಜೀವಿಗಳಲ್ಲಿ ಉಸಿರಾಟವಾಗಿ ಬಹುಸ್ಪಷ್ಟವಾಗಿ ತೋರುತ್ತಿರುವುದು. ಇದು ನಿಂತರೆ ಶರೀರ ಸೇರಿದಂತೆ ಎಲ್ಲ ಕಾರ್ಯಗಳೂ ಕೂಡಲೆ ನಿಲ್ಲುತ್ತವೆ. ಆದರೆ ಈ ಉಸಿರಾಟ ನಿಂತರೂ ಶರೀರವು ಬದುಕಿಯೆ ಇರುವಂತೆ ಸಾಧನೆ ಮಾಡಿಕೊಂಡಿರುವವರೂ, ಎಷ್ಟೋ ದಿನಗಳವರೆಗೆ ಹೂತುಕೊಂಡಿದ್ದರೂ ಉಸಿರಾಡದೆಯೆ ಬದುಕಿರುವವರು ಕೆಲವರಿರುವರು…. ಉಸಿರಾಟದಿಂದ ಪ್ರಾಣದ ಚಲನೆಯುಂಟಾಗುವುದಿಲ್ಲ. ಪ್ರಾಣವೇ ಉಸಿರಾಟವನ್ನು ಉಂಟುಮಾಡುತ್ತಿರುವುದು. ..ಆದುದರಿಂದ ಪ್ರಾಣಾಯಾಮವೆಂದರೆ ಉಸಿರಾಡುವುದಲ್ಲ, ಶ್ವಾಸಕೋಶಗಳನ್ನು ಆಡಿಸುವ ಮಾಂಸಖಂಡದ ಶಕ್ತಿಯನ್ನು ಸ್ವಾಧೀನಕ್ಕೆ ತರುವುದೇ ಪ್ರಾಣಾಯಾಮ. …. ಈ ಪ್ರಾಣವು ವಶವಾದ ಕೂಡಲೆ ಶರೀರದಲ್ಲಿರುವ ಇತರ ಪ್ರಾಣ ಕಾರ್ಯಗಳೂ ಒಂದೊಂದಾಗಿ ನಮ್ಮ ಸ್ವಾಧೀನಕ್ಕೆ ಬರುತ್ತವೆ. ಸ್ವಲ್ಪ ಹೆಚ್ಚು ಕಡಿಮೆಯಾಗಿ ಶರೀರದಲ್ಲಿರುವ ಎಲ್ಲಾ ಮಾಂಸಖಂಡಗಳನ್ನೂ ತಮ್ಮ ಇಚ್ಚೆಗೆ ಒಳಪಡಿಸಿಕೊಂಡಿರುವವರನ್ನು ನಾನು ಕಣ್ಣಾರೆ ನೋಡಿದ್ದೇನೆ. ಇದರಲ್ಲಿ ಏನಾಶ್ಚರ್ಯ? ಕೆಲವು ಮಾಂಸಖಂಡಗಳು ನಮ್ಮ ಸ್ವಾಧೀನದಲ್ಲಿದ್ದೇ ಇರುವುವು. ಶರೀರದಲ್ಲಿರುವ ಪ್ರತಿಯೊಂದು ಖಂಡವೂ ನರವೂ ಏತಕ್ಕೆ ನಮ್ಮ ವಶಕ್ಕೆ ಬರಬಾರದು? ಇದರಲ್ಲಿ ಅಸಾಧ್ಯವೇನು? ಈಗ ಇವು ನಮ್ಮ ಸ್ವಾಧೀನ ತಪ್ಪಿರುವುದರಿಂದ ಇವುಗಳು ಸ್ವಯಂ ವ್ಯಾಪಾರವುಳ್ಳವಾಗಿವೆ. ನಮಗೆ ಕಿವಿಯನ್ನು ಅಲ್ಲಾಡಿಸುವುದಕ್ಕೆ ಬರುವುದಿಲ್ಲ; ಆದರೆ ಪ್ರಾಣಿಗಳಿಗೆ ಬರುತ್ತದೆ. ನಾವು ಈ ಶಕ್ತಿಯನ್ನುಪಯೋಗಿಸುವುದಿಲ್ಲ ವಾದ್ದುದರಿಂದ ನಮಗೆ ಅದು ಬರುವುದಿಲ್ಲ.ಇದನ್ನು ಈಗಿನ ಶಾಸ್ತ್ರಜ್ಞರು "ಸ್ವಭಾವ ಪುನರುತ್ಥಾನ" ವೆಂದು ಕರೆಯುತ್ತಾರೆ (ರಾಯೋ-೨೯) ಮನುಷ್ಯನು ಸಂಪೂರ್ಣವಾಗಿ ತನ್ನ ಸ್ವಾಧೀನಕ್ಕೆ ತೆಗೆದು ಕೊಳ್ಳುವುದಕ್ಕಾಗದ ಮಾಂಸಖಂಡವೇ ಶರೀರದಲ್ಲಿಲ್ಲ, ಹೃದಯವು ನಾವು ಇಷ್ಟ ಬಂದಂತೆ ಬೇಕಾದಾಗ ಬಡಿದುಕೊಳ್ಳುವಂತೆಯೂ ಬೇಡವಾದಾಗ ನಿಲ್ಲುವಂತೆಯೂ ಮಾಡಿಕೊಳ್ಳಬಹುದು. ಹೀಗೆಯೆ ಮಿಕ್ಕ ಎಲ್ಲಾ ಅಂಗಗಳನ್ನೂ ವಶಮಾಡಿಕೊಳ್ಳಬಹುದು. ಈ ಯೋಗದಿಂದ ಮನುಷ್ಯರು ಬಹು ಕಾಲ ಜೀವಿಸಬಹುದು. ಹಠಯೋಗಿಗೆ ಆರೋಗ್ಯವೆಂಬುದು ಬಹುಮುಖ್ಯವಾದುದು. ಇದೇ ಅವನ ಪರಮಪುರುಷಾರ್ಥ, ಎಂದೆಂದಿಗೂ ಬೇನೆ ಬೀಳಬಾರದೆಂಬುದು ಅವನ ಸಂಕಲ್ಪ, ಅದರಂತೆ ಅವನಿಗೆ ಎಂದಿಗೂ ರೋಗ ಬರುವುದಿಲ್ಲ. ಅವನು ಬಹುಕಾಲ ಬದುಕಿರುವನು. ನೂರುವರ್ಷವೆಂದರೆ ಅವನಿಗೆ ಬಹುಸ್ವಲ್ಪವಾಯಿತು. ನೂರೈವತ್ತು ವಯಸ್ಸಾದಾಗಲೂ ಅವನಿಗೆ ಒಂದು ಕೂದಲೂ ನರೆತಿರುವುದಿಲ್ಲ. ಅವನು ನವಯವ್ವನದಿಂದ ಮೆರೆಯುತ್ತಿರುವನು. (ರಾಯೋ-೧೩,೧೪) ಇದರಿಂದ (ಪ್ರಾಣದ ನಿಯಂತ್ರಣ) ನಮಗೆ ಸಿಕ್ಕಬಹುದಾದ ಶಕ್ತಿಗೆ ಪಾರವೇ ಇಲ್ಲ. ಉದಾಹರಣೆಗಾಗಿ ಒಬ್ಬ ಮನುಷ್ಯನು ಪ್ರಾಣ ಸ್ವರೂಪವನ್ನು ಪೂರ್ಣವಾಗಿ ತಿಳಿದುಕೊಂಡು ಅದನ್ನು ಸ್ವಾಧೀನಕ್ಕೆ ಪಡೆದಿರುವನೆಂದು ಭಾವಿಸೋಣ. ಈ ಭೂಮಿಯಲ್ಲಿ ಅವನಿಂದ ಆಗದೆ ಇರುವುದು ಯಾವುದು? ಆತ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಕದಲಿಸಬಲ್ಲನು. ಪ್ರಾಣ ಸ್ವಾಧೀನವಿರುವುದರಿಂದ ಅಣುಗಳನ್ನು ಮೊದಲು ಮಾಡಿಕೊಂಡು ದೊಡ್ಡ ತಾರೆಗಳವರೆಗೆ ಜಗತ್ತಿನಲ್ಲಿರುವ ಎಲ್ಲಾ ಪದಾರ್ಥಗಳೂ ಈತನ ವಶವಾಗಿರುವುವು. ಇದು ಪ್ರಾಣಾಯಾಮದ ಪರಮೋದ್ದೇಶ. ಯೋಗಿಯು ಸಿದ್ದಿ ಪಡೆದ ಯೋಗಿಗೆ ವಶವಾಗದೆ ಇರುವುದೇ ಈ ಲೋಕದಲ್ಲಿಲ್ಲ. ದೇವತೆಗಳು, ಸತ್ತವರ ಆತ್ಮಗಳು ಬರಬೇಕೆಂದು ಆತನು ಅಪ್ಪಣೆ ಮಾಡಿದರೆ ಕೂಡಲೆ ಬಂದು ಬಿಡುತ್ತಾರೆ. ಪ್ರಪಂಚದಲ್ಲಿರುವ ಶಕ್ತಿ ವಿಶೇಷಗಳೆಲ್ಲ ಆತನ ದಾಸಾನುದಾಸರಾಗುತ್ತವೆ. ಮೂಢರು ಈ ಯೋಗಸಿದ್ದಿಗಳನ್ನು ನೋಡಿದ ಕೂಡಲೆ ಇವನ್ನೆ ಅದ್ಭುತ ಕ್ರಿಯೆಗಳೆಂದು ಕರೆಯುತ್ತಾರೆ. (ರಾಯೋ-೨೪,೨೫) …. ಯಾವನಿಗೆ ಪ್ರಾಣವು ಕೈವಶವಾಗುವುದೊ ಅವನಿಗೆ ತನ್ನ ಮನಸ್ಸೂ ಉಳಿದ ಎಲ್ಲಾ ಮನಸ್ಸುಗಳೂ ವಶವಾಗುವುವು. ಆತನಿಗೆ ತನ್ನ ಶರೀದಂತೆ ಉಳಿದೆಲ್ಲಾ ಶರೀರಗಳೂ ವಶವಾಗಿರುವವು, ಏಕೆಂದರೆ ಪ್ರಾಣವು ಶಕ್ತಿ ವಿಶೇಷಕ್ಗೆಲ್ಲ ಸಾಮಾನ್ಯ ರೂಪವಾಗಿರುತ್ತದೆ. (ರಾಯೋ-೨೫) ಹಠಯೋಗದಲ್ಲಿರುವ ಒಂದೆರಡು ಅಭ್ಯಾಸಗಳು ಮಾತ್ರ ಬಹಳ ಉಪಯೋಗಕರವಾಗಿವೆ. ಹೇಗೆಂದರೆ ತಲೆನೋವು ಬಂದವರು ಬೆಳಿಗ್ಗೆ ಏಳುತ್ತಲೆ ಮೂಗಿನಿಂದ ನೀರು ಕುಡಿದರೆ ಗುಣವಾಗುವುದು. ಆ ದಿನವೆಲ್ಲ ಮೆದುಳು ಶಾಂತವಾಗಿ ತಂಪಾಗಿರುವುದಲ್ಲದೆ ಶೀತವೂ ಆಗುವುದಿಲ್ಲ. (ರಾಯೋ-೧೪) ಶರೀರವನ್ನು ಬಿಗಿ ಹಿಡಿದಿರುವ ಶಕ್ತಿ ವಿಶೇಷಗಳು ಅರುಗಾಗುತ್ತಲೆ ಶರೀರವು ನಾಶವಾಗಲೇಬೇಕು. ಒಂದು ಕ್ಷಣ ಹೊತ್ತಾದರೂ ವಿಕಾರಹೊಂದದಂತೆ ಶರೀರವನ್ನು ಇಟ್ಟು ಕೊಳ್ಳಬಲ್ಲಾತನು ಯಾರೂ ಇದುವರೆಗೆ ಹುಟ್ಟಲಿಲ್ಲ. ಶರೀರವೆಂದರೇ ಕೆಲವು ವಿಕಾರಗಳ ಸಮೂಹವೆಂದರ್ಥ. ನದಿಯಲ್ಲಿ ನೀರು ಪ್ರತಿಕ್ಷಣವೂ ಬೇರೆ ಬೇರೆ ಆಗುತ್ತಿದ್ದರೂ ಹೊಸ ಹೊಸ ನೀರು ಅದೇ ರೂಪದಲ್ಲಿ ಬರುತ್ತಿರುವಂತೆ ಶರೀರದಲ್ಲಿಯೂ ನಡೆಯುತ್ತಿರುವುದು. (ರಾಯೋ-೧೮) ಮನುಷ್ಯನಿಗೆ ಸಾವು ಯಾವಾಗಲೂ ರಹಸ್ಯವಾಗಿಯೇ ಉಳಿದಿದೆ. ದೇಹದ ಎಲ್ಲ ಅಂಗಗಳು ಇದ್ದರೂ ಅವು ಚಟುವಟಿಕೆ ಏಕೆ ನಡೆಸುತ್ತಿಲ್ಲ ಎನ್ನುವ ಪ್ರಶ್ನೆಗೆ ಸರ್ವ ಸಮರ್ಪಕ ಉತ್ತರ ಈವರೆಗೆ ದಕ್ಕಿಲ್ಲ. ಆದ್ದರಿಂದ ಬಹು ಹಿಂದಿನಿಂದಲೂ ಎಲ್ಲ ಜನಾಂಗಗಳಲ್ಲಿ ದೇಹದ ಅಂಗಗಳನ್ನು ಚಟುವಟಿಕೆಯಲ್ಲಿ ಇರಿಸುವಂತಹ ಯಾವುದೋ ಆಗೋಚರ ಶಕ್ತಿಯಿದೆ. ಅದುವೇ ಪ್ರಾಣ. ಪ್ರಾಣ ಹೊರಹೋದರೆ ಸಾವು ಎನ್ನುವ ನಂಬಿಕೆ ಇದ್ದಿತು. ಇದನ್ನು ಭೌತಿಕ ವಿಶ್ವಕ್ಕೆ ವಿಸ್ತರಿಸಲು ಉಪನಿಷತ್ಕಾರರು ಯತ್ನಿಸಿದ್ದರು. ಅದನ್ನೇ ಸ್ವಾಮಿಯವರು ಸುಕ್ಲಿಷ್ಟ , ಸಾಧಿತ ಸತ್ಯ ಎಂಬಂತೆ ಪ್ರತಿಪಾದಿಸುತ್ತಾರೆ. ಆದರೆ ಅದೇ ವೇಳೆ ಈ ಸಿದ್ಧಾಂತಕ್ಕೆ ವಿರುದ್ದವಾಗಿರುವ ಎಲ್ಲರ ಅನುಭವಕ್ಕೆ ಬರುವ ಸಂಗತಿಗಳನ್ನು ಅವರು ಗಮನಿಸುವುದೇ ಇಲ್ಲ. ಯಾವುದೇ ಪ್ರಾಣಿ ಉಸಿರಾಡದಂತೆ ತಡೆಹಿಡಿದರೆ ಅದು ಸಾಯುತ್ತದೆ. ಉಸಿರಾಟಕ್ಕೆ ಮೂಲ ಕಾರಣವೆಂದು , ಜಗತ್ತಿನ ಸೃಷ್ಟಿಯ ಹಿನ್ನೆಲೆಯಲ್ಲಿರುವುದೆಂದು ಸ್ವಾಮಿಗಳು ವಿವರಿಸುತ್ತಿರುವ ಪ್ರಾಣ ತನ್ನ ಅಧೀನದಲ್ಲಿರುವ ಉಸಿರಾಟವನ್ನು ತಡೆದರೆ ಇಲ್ಲದಂತಾಗುವುದು ಏಕೆ ಎನ್ನುವ ಸರಳ ಪ್ರಶ್ನೆಗೆ ಉತ್ತರಿಸಲು ಹೋಗುವುದಿಲ್ಲ. ಪ್ರಾಣ ಎಂದರೆ ಏನು ? ಅದು ಗುರುತ್ವ, ವೈದ್ಯುತ್-ಕಾಂತತ್ವದಂತೆ ಒಂದು ನಿಸರ್ಗದ ಬಲವೇ ? ಅದು ಹೇಗೆ , ಯಾವ ಮಾಧ್ಯಮ , ತತ್ತ್ವಗಳಿಗೆ ಅನುಗುಣವಾಗಿ ದೇಹದ ಚಟುವಟಿಕೆಗಳಿಗೆ ಕಾರಣವಾಗಿದೆ ಎನ್ನುವ ವಿವರಗಳನ್ನಾಗಲಿ ಹಾಗೂ ಆ ವಿವರಗಳನ್ನು ಪರಿಶೀಲಿಸುವ ಮಾರ್ಗಗಳನ್ನಾಗಲಿ ಅವರು ನೀಡುವುದಿಲ್ಲ. ಪ್ರಾಣ ಕುರಿತಾದ ದೀರ್ಘವಾದ ವಿವರಗಳು ಕೇವಲ ಹೇಳಿಕೆಗಳೇ ಹೊರತು ನಿರ್ದಿಷ್ಟ ತಿಳಿವಳಿಕೆಯ ಮೂಲಗಳಲ್ಲ. ನಿರ್ದಿಷ್ಟ ತಿಳಿವಳಿಕೆ ನೀಡದ ಇಂತಹ ಹೇಳಿಕೆಗಳ ಗುಚ್ಛವೇ ಅಧ್ಯಾತ್ಮದ ಬಂಡವಾಳವಾಗಿದೆ. ಸ್ವಾಮಿಗಳು ಆಧುನಿಕ ಶರೀರಶಾಸ್ತ್ರವನ್ನು ತಮಗೆ ಅನುಕೂಲಕರವಾಗಿ ಕಂಡಲ್ಲಿ ಮಾತ್ರ ಬಳಸುತ್ತಾರೆ. ಇಲ್ಲದಿದ್ದರೆ ತಮ್ಮದೇ ಆದ ಅವೈಜ್ಞಾನಿಕ ಶರೀರಶಾಸ್ತ್ರವನ್ನು ಮುಂದಿರಿಸುತ್ತಾರೆ. ಉಸಿರಾಟದ ಉದ್ದೇಶ ಏನೆಂಬುದನ್ನು ವಿಜ್ಞಾನ ಸಾಕಷ್ಟು ಸ್ಫುಟವಾಗಿ ವಿವರಿಸಿದೆ. ಉಸಿರಾಟ ನಿಯಂತ್ರಣ ಆ ಮೂಲಕ ಪ್ರಾಣ ಶಕ್ತಿಯ ಎಚ್ಚರಿಕೆಯಿಂದ ದೇಹದ ಯಾವುದೇ ಅಂಗವನ್ನು , ಮಾಂಸಖಂಡವನ್ನು ಬೇಕಾದಂತೆ ಬಳಸಬಹುದು ಎನ್ನುವುದು ಅವೈಜ್ಞಾನಿಕ. ಐಚ್ಛಿಕ ಮಾಂಸಖಂಡಗಳ ಹೊರತಾಗಿ ಇತರ ಮಾಂಸಖಂಡಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಹೃದಯ , ಶ್ವಾಸಕೋಶ , ವಪೆ ಮುಂತಾದವು ಅನೈಚ್ಛಿಕ ಕ್ರಿಯಾಶೀಲ ಅಂಗಗಳು. ಹೃದಯದ ಮಿಡಿತವನ್ನು ನಿಲ್ಲಿಸಲಾಗದು. ಹಾಗೆ ನಿಲ್ಲಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಮಣ್ಣಲ್ಲಿ ಹುದುಗಿಕೊಂಡು ಉಸಿರಾಡುವ ಹಲವರು ಯೋಗಿಗಳಲ್ಲ. ಬೀದಿ ಬದಿಯಲ್ಲಿ ಚಮತ್ಕಾರ ತೋರಿಸಿ ಹೊಟ್ಟೆಹೊರೆಯುವವರು. ಪಿತ್ತಕೋಶ , ಮೂತ್ರಕೋಶ ಮುಂತಾದ ಹಲವು ಮುಖ್ಯ ಅಂಗಗಳನ್ನು ಬೇಕಾದಂತೆ ಬಳಸುವುದು ಸಾಧ್ಯವಿಲ್ಲ. ಹಠಯೋಗಿಗೆ ಬೇನೆ ಬೀಳುವುದಿಲ್ಲ , ಮುಪ್ಪು ಬರುವುದಿಲ್ಲ , ಸಾವನ್ನು ಮುಂದೂಡಬಹುದು ಎನ್ನುವುದು ಹಠಯೋಗ ಕುರಿತಾಗಿ ಇದ್ದ ತಪ್ಪು ನಂಬಿಕೆಗಳೇ ಹೊರತು ನೈಜ ಸಂಗತಿಗಳಲ್ಲ. ಸ್ವಾಮಿಗಳು ವೇದ , ಸಾಂಖ್ಯ , ಉಪನಿಷತ್ತು ಹೀಗೆ ಹಲವಾರು ಮೂಲಗಳಲ್ಲಿರುವ ಅದೆಷ್ಟೋ ಪರಸ್ಪರ ವಿರೋಧಾಬಾಸಗಳಿಂದ ತುಂಬಿರುವ ಸೃಷ್ಟಿಯ ವಾದಗಳನ್ನು ಕಲಬೆರಕೆ ಮಾಡಿ ಸಂದರ್ಭಾನುಸಾರ ಹೇಳುತ್ತಾರೆ . ಇವುಗಳೊಂದಿಗೆ ವೈದ್ಯುತ್ ಕಾಂತೀಯತೆ , ಗುರುತ್ವಾಕರ್ಷಣೆ ಮುಂತಾದ ಆಧುನಿಕ ವಿಜ್ಞಾನ ಪ್ರತಿಪಾದಿಸಿದ ನಿಸರ್ಗದ ತತ್ತ್ವಗಳನ್ನು ಪ್ರಾಣದ ಮತ್ತೊಂದು ರೂಪ ಎನ್ನುತ್ತ ಹುಸಿವೈಜ್ಞಾನಿಕ ವಾದ ಮಂಡಿಸುತ್ತಾರೆ. ಪ್ರಾಣಾಯಾಮದಿಂದ ವಿಶ್ವದಲ್ಲಿರುವ ಎಲ್ಲವನ್ನೂ ಹತೋಟಿಗೆ ತೆಗೆದುಕೊಳ್ಳುವುದು ಸಾಧ್ಯ ಎಂದು ಒಂದು ಕಡೆ ಹೆಳುತ್ತಾರೆ. ಮತ್ತೊಂದು ಕಡೆ ಒಂದು ಕ್ಷಣ ಹೊತ್ತಾದರೂ ವಿಕಾರಹೊಂದದಂತೆ ಶರೀರವನ್ನು ಇಟ್ಟು ಕೊಳ್ಳಬಲ್ಲಾತನು ಯಾರೂ ಇದುವರೆಗೆ ಹುಟ್ಟಲಿಲ್ಲ ಎನ್ನುವ ವೈರುಧ್ಯದ ನಿಲುವು ತಾಳಲಾಗಿದೆ ಯೋಗದಿಂದ ದೇಹವನ್ನು ಸಂಪೂರ್ಣ ಹತೋಟಿಗೆ ತರಬಹುದು , ಅಂಗ ಕ್ರಿಯೆಗಳನ್ನು ಬೇಕಾದಂತೆ ಬದಲಿಸಬಹುದು ಎಂದು ಸ್ವಾಮಿ ವಿವೇಕಾನಂದ , ಅರವಿಂದ ಘೋಷ್ ಸೇರಿದಂತೆ ನೂರಾರು ಜನ ಸಾವಿರಾರು ವರ್ಷಗಳಿಂದ ಹೇಳುತ್ತಿದ್ದಾರೆ. ಅರವಿಂದ ಘೋಷ್ ಕಾಲು ಮುರಿದುಕೊಂಡಿದ್ದಾಗ ಅವರಿಗೆ ವೈದ್ಯರು ಚಿಕಿತ್ಸೆ ನೀಡಿ ಸರಿಪಡಿಸಿದರು. ಅವರ ಒಬ್ಬ ಶಿಷ್ಯರು ಅವರನ್ನು ತಮ್ಮ ಯೌಗಿಕ ಬಲದಿಂದ ಏಕೆ ಸರಿಪಡಿಸಿಕೊಳ್ಳಬಾರದು ಎಂದು ಪ್ರಶ್ನಿಸಿದಾಗ ಅವರು ತಮ್ಮ ಮುರಿದ ಕಾಲು ತಾಮಸ ಸ್ಥಾನದಲ್ಲಿದೆ ಆದ್ದರಿಂದ ಸಾದ್ಯವಾಗುತ್ತಿಲ್ಲ ಎಂದರು. ರಾಮಕೃಷ್ಣ ಪರಮಹಂಸರು ಗಂಟಲು ಕ್ಯಾನ್ಸರ್’ಗೆ ಒಳಗಾದಾಗ ಅವರ ಶಿಷ್ಯರೊಬ್ಬರು ಯೌಗಿಕ ಸಿದ್ಧಿಯಿಂದ ಏಕೆ ನಿವಾರಿಸಿಕೊಳ್ಳಬಾರದೆಂದು ಕೇಳಿದರು. ಆಗ ಅವರು ಜೀವನ ಪೂರ್ತಿ ದೇವರಿಗೆ ಒಪ್ಪಿಸಿದ ಮನಸ್ಸನ್ನು ಅಳಿದುಹೋಗುವ ದೇಹಕ್ಕೆ ಅರ್ಪಿಸಲೇ ಎಂದು ಕೇಳಿದರು ಎಂದು ಸ್ವಾಮಿ ವಿವೇಕಾನಂದರು ತಿಳಿಸುತ್ತಾರೆ (ಕೃ.ಶ್ರೇ: ೬/೧೨೩) . ಇದರಿಂದ ಸ್ಪಷ್ಟವಾಗುವುದು ಏನೆಂದರೆ ಯೋಗದ ಬಗ್ಗೆ ಹೇಳುವವರಿಗೆ ಅವರು ಹೇಳುತ್ತಿರುವುದರಲ್ಲೇ ನಂಬಿಕೆ ಇರುವುದಿಲ್ಲ. ಪ್ರಾಣ ನಿಯಂತ್ರಣದಿಂದ ಏನನ್ನು ಬೇಕಾದರೂ ಸಾಧಿಸಬಹುದೆಂದು ಸ್ವಾಮಿ ವಿವೇಕಾನಂದರು ಹೆಳುತ್ತಾರೆ. ಆದರೆ ತಮಗಿದ್ದ ಹತ್ತಾರು ದೈಹಿಕ ತೊಂದರೆಗಳಿಗೆ ಅವರು ಮೊರೆಹೋಗದ ವೈದ್ಯಕೀಯ ಪದ್ದತಿಯಿಲ್ಲ. ಜಗತ್ತಿನ ಒಳಿತಿಗಾಗಿ ಅವರು ತಮ್ಮ ಪ್ರಾಣ ಶಕ್ತಿಯಲ್ಲಿ ಕೋಟಿಯಲ್ಲಿ ಒಂದಂಶವನ್ನು ಮಾತ್ರ ಬಳಸಿ ದೇಹವನ್ನು ಅರೋಗ್ಯವಾಗಿರಿಸಿಕೊಂಡು ಇನ್ನೂ ಹೆಚ್ಚು ಕಾಲ ಬದುಕಿರಬಹುದಿತ್ತಲ್ಲ ? ಪ್ರಾಣದ ನೆರವಿನಿಂದ ನಿಸರ್ಗದ ಯಾವುದೇ ಅಂಶವನ್ನು ಯಾರೂ , ಎಂದೂ ನಿಯಂತ್ರಿಸಿದ್ದಕ್ಕೆ ಪುರಾವೆಗಳಿಲ್ಲ. ಸೂರ್ಯ, ಚಂದ್ರ ನಕ್ಷತ್ರಗಳಿರಲಿ ಬಾಹ್ಯ ಭೌತಿಕ ಕ್ರಿಯೆಯ ಹೊರತಾಗಿ ಒಂದು ಪರಮಾಣುವನ್ನು ಕೂಡ ಪ್ರಚೋದಿಸಲು ಸಾದ್ಯವಿಲ್ಲ. ಯಾವುದೇ ಯೋಗಿ ಸಾಮಾನ್ಯ ರೋಗಗಳಿಂದಲೇ ಮುಕ್ತರಾಗಿರಲಿಲ್ಲ. ಸ್ವಾಮಿಗಳನ್ನು ಮಹಾಯೋಗಿಗಳೆಂದು ಹೆಚ್ಚಿನ ಜನ ಭಾವಿಸುತ್ತಾರೆ. ಆದರೆ ಅವರಿಗೆ ಮಧುಮೇಹ, ಹೃದ್ರೋಗ , ಅಸ್ತಮಾ,ನಿದ್ರಾಹೀನತೆ, ಮೂತ್ರಪಿಂಡ ಸೇರಿದಂತೆ ಹಲವು ರೋಗಗಳು ಕಾಡುತ್ತಿದ್ದವು. ಯೋಗಿಗಳಾದ ಅವರ ತಮ್ಮ ದೇಹದ ಮೇಲೆ ಯಾವ ಸ್ವಾಧೀನವನ್ನೂ ಸಾಧಿಸಿರಲಿಲ್ಲ. ಸ್ವಾಮಿಗಳ ಈ ಎಲ್ಲ ಹೇಳಿಕೆಗಳು ರಂಜನಿಯ ಹೇಳಿಕೆಗಳೇ ಹೊರತು ಅವುಗಳಲ್ಲಿ ಯಾವುದೇ ಹುರುಳಿಲ್ಲ. ಪ್ರಾಣಾಯಾಮದಲ್ಲಿ ಉಸಿರನ್ನು ಎಳೆಯುವಾಗ ಶರೀರವನ್ನೆಲ್ಲ ಪ್ರಾಣದಿಂದ ತುಂಬಬೇಕೆಂದು ಬರೆದಿರುವುದನ್ನು ನಿಮ್ಮಲ್ಲಿ ಕೆಲವರು ಓದಿರಬಹುದು. ಇಂಗ್ಲೀಷ್ ಭಾಷಾಂತರಗಳಲ್ಲಿ ಪ್ರಾಣವೆಂದರೆ ಉಸಿರೆಂದು ಬರೆದಿದೆ. ಉಸಿರನ್ನು ಶರೀರದಲ್ಲೆಲ್ಲ ತುಂಬುವುದು ಹೇಗೆಂದು ನೀವು ಕೇಳಬಹುದು. ಇಲ್ಲಿ ಭಾಷಾಂತರಕಾರನದೆ ತಪ್ಪು. ಶರೀರದಲ್ಲಿ ಪ್ರತಿಯೊಂದು ಭಾಗದಲ್ಲಿಯೂ ಪ್ರಾಣವನ್ನು ತುಂಬುವುದು ಸಾದ್ಯ. ಅದು ಸಾದ್ಯವಾದಾಗ ಶರೀರ ನಿಮ್ಮ ಸ್ವಾಧೀನವಾಗುವುದು ಮತ್ತು ಶರೀರದಲ್ಲಿರುವ ಎಲ್ಲಾ ವಿಧವಾದ ರೋಗಗಳನ್ನೂ , ತೊಂದರೆಗಳನ್ನೂ ಪರಿಹಾರಮಾಡಿಕೊಳ್ಳಬಹುದು. ಅಲ್ಲದೆ ಇನ್ನೊಬ್ಬರ ಶರೀರವು ಕೂಡ ನಿಮ್ಮ ವಶವಾಗುವುದು. ಈ ಜಗತ್ತಿನಲ್ಲಿ ಒಳ್ಳೆಯದು, ಕೆಟ್ಟದ್ದು ಯಾವುದೇ ಇರಲಿ ಒಬ್ಬರಿಂದೊಬ್ಬರಿಗೆ ಹರಡಿಕೊಳ್ಳುತ್ತಿರುವುದು. ನಿಮ್ಮ ಶರೀರವು ಎಷ್ಟು ದೃಢವಾಗಿರುವುದೊ ಇತರರ ಶರೀರಗಳನ್ನೂ ಅಷ್ಟೇ ದೃಢ ಮಾಡುವುದು. ನೀವು ಬಲಿಷ್ಟ , ಆರೋಗ್ಯವಂತರಾಗಿದ್ದರೆ ನಿಮ್ಮ ಸನಿಹದಲ್ಲಿರುವವರು ಬಲಿಷ್ಟ, ಆರೋಗ್ಯವಂತರಿರುವ ಸಂಭವವಿರುವುದು. ನೀವು ರೋಗಿಗಳಾಗಿ ಅಶಕ್ತರಾಗಿದ್ದರೆ ನಿಮ್ಮ ಬಳಿ ಇರುವವರು ಹಾಗೆಯೇ ಆಗಬಹುದು. ఒಟ್ಟಾರೆ ಇನ್ನೊಬ್ಬನ ರೋಗವನ್ನು ವಾಸಿಮಾಡುವಾಗ ತನ್ನ ಆರೋಗ್ಯವನ್ನು ಅವನಿಗೆ ಕೊಡುವುದು ಮೊದಲನೆಯ ರೀತಿ. ಇದು ಪ್ರಾಚೀನ ಪದ್ಧತಿ. ನಮ್ಮ ಆರೋಗ್ಯವನ್ನು ತಿಳಿದೊ ತಿಳಿಯದೆಯೊ ಮತ್ತೊಬ್ಬರಿಗೆ ಕೊಡುವುದಕ್ಕೆ ಬರುತ್ತದೆ. ತಿಳಿದು ಆರೋಗ್ಯವನ್ನು ಕೊಡುವಾಗ ಶೀಘ್ರವಾಗಿಯೂ ಉತ್ತಮ ರೀತಿಯಲ್ಲಿ ಕೆಲಸವಾಗುವುದು. ಇನ್ನೊಂದು ಬಗೆಯಲ್ಲಿ ತಾನು ಆರೋಗ್ಯವಂತನಾಗದಿದ್ದರೂ ಇತರರಿಗೆ ಆರೋಗ್ಯವನ್ನು ಕೊಡುವುದು. ಇಂಥ ಸಂದರ್ಭಗಳಲ್ಲಿ ಆರೋಗ್ಯವನ್ನು ಕೊಡುವವನಿಗೆ ಪ್ರಾಣವು ಹೆಚ್ಚು ಸ್ವಾಧೀನದಲ್ಲಿರುತ್ತದೆ. ಈತ ಪ್ರಾಣವನ್ನು ಒಂದು ನಿರ್ದಿಷ್ಟ ಸ್ಥಿತಿಗೆ ತಂದುಕೊಂಡು ಅದನ್ನು ಇನ್ನೊಬ್ಬನಿಗೆ ಕೊಡುತ್ತಾನೆ . ರೋಗಿ ದೂರದದ್ದಾಗಲೂ ಈ ರೀತಿಯಲ್ಲಿ ಆರೋಗ್ಯವನ್ನು ಕೊಟ್ಟಿರುತ್ತಾನೆ. ನಿಜವಾಗಿ ನೋಡಿದರೆ ಎರಡು ವಸ್ತು/ವ್ಯಕ್ತಿಗಳ ನಡುವೆ ದೂರವೆಂಬುದೇ ಇಲ್ಲ. ನಿಮಗೂ ಸೂರ್ಯನಿಗೂ ಮಧ್ಯೆ ಏನಾದರೂ ಅಂತರವಿದೆಯೇ? ಎಲ್ಲವೂ ಏಕಾಕಾರವಾದ ಭೌತಿಕ ರಾಶಿಯಾಗಿದೆ. ಇದರಲ್ಲಿ ಸೂರ್ಯನು ಒಂದು ಭಾಗ ನೀವು ಮತ್ತೊಂದು ಭಾಗ. ನದಿಯಲ್ಲಿ ಒಂದು ಭಾಗಕ್ಕೂ ಇನ್ನೊಂದು ಭಾಗಕ್ಕೂ ನಡುವೆ ಅಂತರವಿರುವುದೆ? ಹಾಗೆ ಇದ್ದಿದ್ದರೆ ಶಕ್ತಿಯು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲಾರದು? … ದೂರದಿಂದಲೆ ರೋಗ ಗುಣಮುಖ ಮಾಡುವುದು ಸ್ವಲ್ಪವೂ ಸುಳ್ಳಲ್ಲ. ಪ್ರಾಣವನ್ನು ಎಷ್ಟು ದೂರ ಬೇಕಾದರೂ ಕಳುಹಿಸಬಹುದು. …. ಈ ರೀತಿ ಗುಣ ಮಾಡಿರುವ ಅನೇಕ ಸಂದರ್ಭಗಳನ್ನು ವಿಚಾರಿಸಿದರೆ ವೈದ್ಯನು ಮನುಷ್ಟ ಶರೀರವೇ ಸ್ವಭಾವವಾಗಿ ಆರೋಗ್ಯವಾಗಿರುವುದೆಂಬುದನ್ನು ತಮ್ಮನುಕೂಲಕ್ಕೆ ಉಪಯೋಗಿಸಿ ಕೊಂಡಿರುತ್ತಾರೆಂದು ಗೊತ್ತಾಗುವುದು. ಒಬ್ಬ ಪ್ರತಿಕೂಲ ವೈದ್ಯನು ಒಂದು ವಾಂತಿ ಭೇದಿ ರೋಗಕ್ಕೆ ಔಷಧ ಕೊಡುತ್ತಾನೆ. ಅನುರೂಪ ವೈದ್ಯನೊಬ್ಬನು ಬಂದು ತನ್ನ ಔಷಧಗಳನ್ನು ಪ್ರಯೋಗಿಸುತ್ತಾನೆ. ಇವನು ಪ್ರತಿರೂಪ ವೈದ್ಯನಿಗಿಂತ ಹೆಚ್ಚು ರೋಗಿಗಳನ್ನು ಗುಣಮಾಡಬಹುದು. ಏಕೆಂದರೆ ಅನುರೂಪ ವೈದ್ಯನು ರೋಗಿಗಳನ್ನು ಇದ್ದಂತೆಯೆ ಬಿಟ್ಟು ಸ್ವಭಾವದಿಂದ ಅವರು ಏನಾಗುತ್ತಾರೊ ಅದಕ್ಕೆ ಅವಕಾಶ ಕೊಡುತ್ತಾನೆ. ಶ್ರದ್ದಾವೈದ್ಯನು ಇನ್ನೂ ಹೆಚ್ಚು ಗುಣಮಾಡಬಲ್ಲನು. ಏಕೆಂದರೆ ಅವನು ತನ್ನ ಮನಃಶಕ್ತಿಯನ್ನುಪಯೋಗಿಸಿ ರೋಗಿಯಲ್ಲಿ ನಿದ್ರೆ ಹೋದಂತಿರುವ ಪ್ರಾಣವನ್ನು ಶ್ರದ್ಧೆಯ ಮೂಲಕ ಎಬ್ಬಿಸುತ್ತಾನೆ. ….. ಪರಿಶುದ್ಧ ಸ್ವಭಾವವುಳ್ಳಾತನು ಪ್ರಾಣವನ್ನು ವಶಮಾಡಿಕೊಂಡಿದ್ದರೆ ಅದನ್ನು ಒಂದು ನಿರ್ದಿಷ್ಟ ಸ್ಥಿತಿಗೆ ತಂದು ಅದೇ ಸ್ಥಿತಿಯನ್ನೆ ಮತ್ತೊಬ್ಬನಿಗೆ ಕೊಟ್ಟು ಅವನಲ್ಲಿಯೂ ಅದೇ ಸ್ಥಿತಿಯನ್ನು ಉಂಟುಮಾಡಲಿಕ್ಕಾಗುತ್ತದೆ. (ರಾ.ಯೋ-೩೦,೩೧) ಸ್ವಾಮಿಗಳ ವೈಚಾರಿಕ ಗೊಂದಲಗಳಿಗೆ , ಹುಸಿ ವಿಜ್ಞಾನದ ವಿವರಣೆಗಳಿಗೆ ಇದೊಂದು ಅತ್ಯುತ್ತಮ ಉದಾಹರಣೆಯಾಗಿದೆ. ಒಂದು ಕಡೆ ದೇಹದ ಎಲ್ಲ ಚಟುವಟಿಕೆಗಳ ಮೂಲ ಪ್ರಾಣ , ಅದರ ವ್ಯಕ್ತ ರೂಪ ಉಸಿರು ಎನ್ನುತ್ತಾರೆ. ಇಲ್ಲಿ ಅದಕ್ಕಿಂತ ಬೇರೆಯಾಗಿ ಶರೀರ ಎಲ್ಲವನ್ನೂ ಪ್ರಾಣದಿಂದ ತುಂಬಬೇಕು ಎನ್ನುತ್ತಾರೆ. ಹಾಗಾದರೆ ಪ್ರಯತ್ನಪೂರ್ವಕವಾಗಿ ತುಂಬದ ಹೊರತು ಪ್ರಾಣ ಶರೀರದ ಎಲ್ಲ ಭಾಗದಲ್ಲಿ ಇಲ್ಲ ಎಂದಾಯಿತು. ಪ್ರಾಣ ಶರೀರದ ಯಾವ ಭಾಗವನ್ನು ತುಂಬಿದೆ ಎಂದು ತಿಳಿಯುವುದು ಹೇಗೆ ? ಇದಕ್ಕೆ ಸ್ವಾಮಿಗಳು ಯಾವುದೇ ಸೂಚನೆಯನ್ನು ನೀಡುವುದಿಲ್ಲ. ಸೂಕ್ಷ್ಮಜೀವಿಗಳಿಂದ ಬರುವ ಸಾಂಕ್ರಾಮಿಕ ರೋಗಗಳ ಹೊರತಾಗಿ ವೈಯಕ್ತಿಕ ದೇಹ ಮೂಲದ ಉಳಿದ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲವೆಂದು ಎಲ್ಲರಿಗೂ ತಿಳಿದ ಸಂಗತಿ. ತಲೆನೋವು, ಹೊಟ್ಟೆನೋವು , ಹೃದಯ ರೋಗ , ಮೂತ್ರಪಿಂಡದ ವೈಫಲ್ಯ , ಅನುವಂಶಿಕ ಕಾಯಿಲೆಗಳು , ಅಂಗಕ್ರಿಯಾ ದೊಷಗಳು ಒಬ್ಬರಿಂದ ಒಬ್ಬರಿಗೆ ಹರಡಲಾರವು. ಅದರಂತೆ ಒಬ್ಬರ ಆರೋಗ್ಯ, ನೋವು , ನಲಿವುಗಳನ್ನು ಇನ್ನೊಬ್ಬರಿಗೆ ಹಂಚಲಾಗದು. ಸ್ವಾಮಿಗಳು ಪ್ರಾಣದ ಮೂಲಕ ಇದು ಸಾದ್ಯ ಎನ್ನುತ್ತಾರೆ. ಇದು ಶಬರಿ ರಾಮನ ರೋಗಗಳನ್ನು ಸ್ವೀಕರಿಸಿದ ಪೌರಾಣಿಕ ಕಥೆಗೆ ಸರಿಹೊಂದುತ್ತದೆಯೇ ಹೊರತು ವೈಚಾರಿಕ , ವಸ್ತುನಿಷ್ಟತೆಗಲ್ಲ. ಪ್ರಾಣ ಚಿಕಿತ್ಸೆ, ನಂಬಿಕೆ ಚಿಕಿತ್ಸೆ, ರೇಕಿ, ಪಿರಮಿಡ್ ಚಿಕಿತ್ಸೆ ಮುಂತಾದುವೆಲ್ಲ ಕಪಟ, ಢೋಂಗಿ ಮಾರ್ಗಗಳೆಂದು ಸಿದ್ಧವಾಗಿದೆ. ಸ್ವಾಮಿಗಳ ಚಿಂತನೆ ಇಂತಹ ಎಲ್ಲ ಕಪಟಗಳಿಗೆ ಪರವಾನಗಿ ನೀಡುತ್ತದೆ. ಈಥರ್ ಎನ್ನುವ ಮಾಧ್ಯಮ ಇಡೀ ವಿಶ್ವನ್ನು ವ್ಯಾಪಿಸಿದೆ. ಅದರ ಮೂಲಕ ವೈದ್ಯುತ್-ಕಾಂತೀಯ , ಗುರುತ್ವ ಮುಂತಾದ ಎಲ್ಲ ಚೈತನ್ಯ ವಿಶ್ವದಲ್ಲಿ ಎಲ್ಲಿಗೆ ಬೇಕಾದರೂ ಹರಿಯಬಲ್ಲದೆಂದು ಸಮಕಾಲೀನ ವಿಜ್ಞಾನ ಸಾಧಿಸಿದ್ದಿತು. ಇದನ್ನು ಬಳಸಿಕೊಂಡು ಸ್ವಾಮಿಗಳು ಈಥರ್ ಬದಲು ‘ಪ್ರಾಣ’ ಎನ್ನುವ ಪರ್ಯಾಯ ಪದವನ್ನು ಬಳಸಿದ್ದಾರೆ. ಆದರೆ ಈ ಪ್ರಾಣವನ್ನು ಎಲ್ಲಿಗೆ ಬೇಕಾದರೂ ಕಳಿಸಬಹುದೆಂದು ಹೇಳಿರುವುದರಿಂದ ಅದು ಸರ್ವವ್ಯಾಪಿಯಲ್ಲ ಮತ್ತು ಭೌತಿಕ ಲಕ್ಷಣಗಳನ್ನು ಹೊಂದಿದ್ದು ಈಥರ್’ಗಿಂತ ಭಿನ್ನವಾಗಿರುವ ಚಿತ್ರಣ ದಕ್ಕುತ್ತದೆ. ಸ್ವಾಮಿಗಳು ಹೀಗೆ ಹೇಳುತ್ತಿರುವಾಗಲೇ ಮೈಕೆಲ್’ಸನ್-ಮಾರ್ಲೆ ತಮ್ಮ ಪ್ರಯೋಗಗಳ ಮೂಲಕ ಈಥರ್ ಅಸ್ತಿತ್ವವನ್ನೇ ಅಲ್ಲಗಳೆದಿದ್ದರು. ಈ ಜಗತ್ತಿನಲ್ಲಿ ಮಹಾಸಂಕಲ್ಪ ಹೊಂದಿರುವರೋ, ಯಾರು ಜಗತ್ತನ್ನೆ ಅಲ್ಲಾಡಿಸುವುದಕ್ಕೆ ಶಕ್ತರೊ ಅವರು ತಮ್ಮ ಪ್ರಾಣವನ್ನು ಬಹು ರಭಸದಿಂದ ಸಾಗಿಸುವುದನ್ನು ಕಲಿತಿರುತ್ತಾರೆ. ಈ ಪ್ರಾಣ ಕ್ರಿಯೆಯು ಅಪರಿಮಿತವಾಗಿಯೂ ಬಲವಾಗಿಯೂ ಇರುವುದರಿಂದ ಒಂದು ಕ್ಷಣದಲ್ಲಿ ಇತರರನ್ನು ತನ್ನ ವಶಕ್ಕೆ ತಂದುಕೊಳ್ಳುತ್ತದೆ. ಇದರಿಂದ ಸಾವಿರಾರು ಜನರು ಇವರ ಬಳಿಗೆ ಬರುವರು. ಜಗತ್ತಿನಲ್ಲಿ ಬಹು ಸಂಖ್ಯಾತ ಜನರು ಅವರ ಮತವನ್ನಂಗೀಕರಿಸುವರು. ಪ್ರಪಂಚದಲ್ಲಿ ಹುಟ್ಟಿದ ಮಹಾತ್ಮರಿಗೆ ಪ್ರಾಣವು ಎಷ್ಟು ಸ್ವಾಧೀನವಾಗಿತ್ತೆಂಬುದನ್ನು ಯೋಚಿಸಿಕೊಂಡರೆ ಪರಮಾಶ್ಚರವಾಗುತ್ತದೆ. ಅದರಿಂದಲೆ ಅವರಿಗೆ ಅಂಥ ಮಹಾ ಸಂಕಲ್ಪ ಶಕ್ತಿಯು ಬಂದಿದ್ದಿತು. ಅವರು ತಮ್ಮ ಪ್ರಾಣವನ್ನು ಅತ್ಯಂತ ಸೂಕ್ಷ್ಮವಾದ ಚಲನಾ ಸ್ಥಿತಿಗೆ ತಂದುಕೊಂಡಿದ್ದರು. ಆದುದರಿಂದ ಇವರಿಗೆ ಲೋಕವನ್ನೆ ಆಳುವ ಶಕ್ತಿ ಬಂದಿದ್ದಿತು. ಎಲ್ಲಾ ವಿಧವಾದ ಶಕ್ತಿಯೂ ಈ ಪ್ರಾಣ ಸ್ವಾಧೀನತೆಯಿಂದಲೆ ಬರುತ್ತದೆ. ಇದು ಅನೇಕರಿಗೆ ಗೊತ್ತಿರದೆ ಇರಬಹುದು. ಆದರೆ ಇದೊಂದೆ ಇಲ್ಲಿ ನಿಜವಾದ ರಹಸ್ಯ. ಕೆಲಮೊಮ್ಮೆ ನಿಮ್ಮ ಶರೀರಗಳಲ್ಲಿ ಪ್ರಾಣವು ಬಹುಮಟ್ಟಿಗೆ ಒಂದು ಕಡೆಗೇ ಸೇರುವುದು. ಆಗ ಸಮತೋಲವು ತಪ್ಪುತ್ತದೆ. ಪ್ರಾಣದ ಸಮತೋಲವು ತಪ್ಪಿತೆಂದರೆ ರೋಗ ಉಂಟಾಗುತ್ತದೆ. ಹೆಚ್ಚಾಗಿರುವ ಪ್ರಾಣವನ್ನು ತೆಗೆದುಹಾಕುವುದು ಅಥವಾ ಕೊರತೆಯಾದ ಪ್ರಾಣವನು ಕೂಡಿಸಿಕೊಡುವುದು ರೋಗಕ್ಕೆ ಪರಿಹಾರವೆನಿಸುವುದು. ಶರೀರದಲ್ಲಿ ಪ್ರಾಣ ಇರಬೇಕಾದುದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದೆಯೇ ಎಂದು ತಿಳಿದುಕೊಳ್ಳುವುದು ಪ್ರಾಣಾಯಾಮವೆ. (ರಾಯೋ-೩೨) ಮಹಾತ್ಮರಂತೆಯೇ ಮಾತುಗಾರರು , ಕಪಟಿಗಳು ಕೂಡ ಸಾವಿರಾರು ಜನರನ್ನು ತಮ್ಮತ್ತ ಸೆಳೆಯಲು ಸಾದ್ಯ . ಅದೆಷ್ಟೋ ವೇಳೆ ಸಾತ್ತ್ವಿಕ , ಪ್ರಾಮಾಣಿಕರಿಗಿಂತ ಕಪಟಿಗಳೇ ಹೆಚ್ಚಿನ ಜನರನ್ನು ವಶೀಕರಿಸುವುದು, ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಸರ್ವಾಧಿಕಾರಿಗಳು ಇಡೀ ದೇಶವನ್ನೇ ಉನ್ಮಾದದ ಸ್ಥಿತಿಗೆ ಒಯ್ಯುವುದು ಜಗತ್ತಿನ ಚರಿತ್ರೆಯಲ್ಲಿ ದಾಖಲಾಗಿದೆ. ಯೋಗಿಗಳು ಮಾತ್ರವಲ್ಲ ಕಪಟಿಗಳಿಗೂ ಪ್ರಾಣ ವಶವಾಗುತ್ತದೆಯೇ ? ಪ್ರಾಣಗಳಲ್ಲಿ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನು ತರುವ ಎರಡೂ ಸ್ತಿತಿಗಳಿವೆಯೆ ಅಥವಾ ಪ್ರಾಣವನ್ನು ವಶಕ್ಕೆ ಪಡೆದವರ ಸ್ವಭಾವಕ್ಕೆ ಅನುಗುಣವಾಗಿ ಅದು ಬಳಕೆಯಾಗುತ್ತದೆಯೇ ? ಪ್ರಾಣ ಎಂದರೇನು , ಅದರ ಸಮತೋಲನ ಹೇಗಿರುತ್ತದೆ , ದೇಹದಲ್ಲಿ ಒಂದೇ ಕಡೆ ಹೇಗೆ ಮತ್ತು ಏಕೆ ಸೇರುತ್ತದೆ , ಸಮತೋಲನ ಹೇಗೆ ತಪ್ಪುತ್ತದೆ, ಎಷ್ಟು ತಪ್ಪುತ್ತದೆ , ಎಷ್ಟು ತಪ್ಪಿದರೆ ಎಂತಹ ರೋಗ ಬರುತ್ತದೆ ಎಂದು ತಿಳಿಯುವುದು ಸಾಧ್ಯವಿಲ್ಲ. ಯಾವುದನ್ನೂ ತಿಳಿಯಲು ಸಾದ್ಯವಿಲ್ಲವಾದಾಗ ಒಂದು ಹೇಳಿಕೆ ಸರಿಯೋ ತಪ್ಪೋ ಎಂದು ನಿರ್ಧರಿಸುವುದು ಹೇಗೆ ? ನಂಬಿಕೆಯಿಂದಲೇ ? ಹಾಗಾದರೆ ನಂಬಿಕೆಗಳು ವಸ್ತುನಿಷ್ಟ ತಿಳಿವಳಿಕೆಗಗೆ ಸಮವೇ ? ದೇಹದಲ್ಲಿ ಕ್ರಿಯಾಟಿನ್ ಪ್ರಮಾಣ ಹೆಚ್ಚಿ ಮೂತ್ರಪಿಂಡ ತೊಂದರೆಗೆ ಒಳಗಾದಾಗ ಪ್ರಾಣವನ್ನು ಸಮತೋಲನಕ್ಕೆ ತಂದು ಅದನ್ನು ಮೊದಲಿನ ಸ್ಥಿತಿಗೆ ತರಲು ಸಾದ್ಯವೇ ? ಶರೀರ ವಿಜ್ಞಾನ ಸ್ವಸ್ಥ ಮತ್ತು ರೋಗಗ್ರಸ್ತ ಅಂಗಗಳನ್ನು , ಚಟುವಟಿಕೆಗಳನ್ನು ಹೋಲಿಸಿ ರೋಗ ಸ್ಥಿತಿಯನ್ನು ನಿರ್ಧರಿಸುತ್ತದೆ. ಚಿಕಿತ್ಸೆಯಿಂದ ರೋಗಸ್ಥಿತಿ ಬದಲಾಗುವುದು ದಾಖಲಾಗುತ್ತದೆ ಮತ್ತು ಪುರಾವೆಗಳಿರುತ್ತವೆ. ಸ್ವಾಮಿಗಳು ಹೇಳುವ ಪ್ರಾಣ ಸಮತೋಲನದ ಪರಿಕಲ್ಪನೆ ಆಯುರ್ವೇದದ ವಾತ-ಪಿತ್ಥ-ಕಫಗಳ ಸಮತೋಲನದಿಂದ ಪ್ರಭಾವಿತವಾದ ತಲೆ , ಬುಡವಿಲ್ಲದ ಹುಸಿ ಹೇಳಿಕೆ. ಇದರಲ್ಲಿ ಯಾವುದೇ ತಥ್ಯವಿಲ್ಲ. (೪) ಈ ಸಿದ್ಧಾಂತವೇ (ಸಾಂಖ್ಯ) ರಾಜಯೋಗಕ್ಕೆಲ್ಲ ಆಧಾರವಾಗಿದೆ. ಈ ಸಿದ್ಧಾಂತದಂತೆ ಬಾಹ್ಯ ವಿಷಯಗಳು ಇಂದ್ರಿಯಗೋಳಗಳ ಮೇಲೆ ವ್ಯಾಪಾರ ಮಾಡುತ್ತಲೆ ಈ ಸಂಸ್ಕಾರಗಳು ಇಂದ್ರಿಯಗಳಿಗೆ ಹೋಗಿ ಗೋಚರವಾಗುತ್ತವೆ. ಇದರಿಂದ ವಿಷಯ ಜ್ಞಾನ ಉಂಟಾಗುತ್ತದೆ. ಇಂದ್ರಿಯಗಳಿಂದ ಮನಸ್ಸಿಗೆ, ಮನಸ್ಸಿನಿಂದ ಬುದ್ಧಿಗೆ ಹೋಗಿ ಅಲ್ಲಿಂದ ಪುರುಷನನ್ನು ತಲುಪುತ್ತವೆ. ಆಗ ಜ್ಞಾನವುಂಟಾಗುವುದು. ಆಗ ಪುರುಷನು ಏನು ಮಾಡಬೇಕೆಂಬುದನ್ನು ಕರ್ಮೇಂದ್ರಿಯಗಳಿಗೆ ಆಜ್ಞಾಪಿಸುತ್ತಾನೆ. ಪುರುಷನೊಬ್ಬನು ಹೊರತು ಮಿಕ್ಕವೆಲ್ಲ ಭೌತಿಕ ವಸ್ತುಗಳಾಗಿವೆ. ಆದರೆ ಮನಸ್ಸು ಬಾಹ್ಯಕರಣಗಳಿಗಿಂತ ಸೂಕ್ಷ್ಮಪದಾರ್ಥವಾಗಿರುವುದು. ಅಂತಃಕರಣದಲ್ಲಿ ಸೇರಿರುವ ಪದಾರ್ಥವೇ ತನ್ಮಾತ್ರಗಳೆಂಬ ಭೂತಸೂಕ್ಷ್ಮವು. ಈ ತನ್ಮಾತ್ರಗಳು ಸ್ಥೂಲವಾಗಿ ಹೊರಗಣ ವಸ್ತುಗಳಾಗಿರುವುವು. ಹೀಗೆ ಬುದ್ಧಿಗೂ ಸ್ಥೂಲ ಭೂತಗಳಿಗೂ ರೂಪದಲ್ಲಿ ಮಾತ್ರ ಭೇದವಿರುವುದು. ಪುರುಷನೊಬ್ಬನೆ ಅತಿಭೌತಿಕನು. (ರಾಯೋ-೧೦) ಲೋಕದಲ್ಲಿ ಯಾವ ಯಾವ ವಸ್ತುವಿರುವುದೊ ಅದೆಲ್ಲವೂ ಈ ಆಕಾಶದಿಂದಲೇ ಆಗಿರುವುದು. ಅದನ್ನು ಇಂದ್ರಿಯದಿಂದ ತಿಳಿಯುವುದಕ್ಕಾಗುವುದಿಲ್ಲ. ಏಕೆಂದರೆ ಅದು ಬಹು ಸೂಕ್ಷ್ಮವಾಗಿರುವುದರಿಂದ ಪ್ರತ್ಯಕ್ಷ ಜ್ಞಾನಕ್ಕೆ ಮೀರಿರುವುದು. ಅದು ಸ್ಥೂಲವಾಗಿ ರೂಪುಗೊಂಡ ಮೇಲೆ ಮಾತ್ರವೇ ಗೋಚರವಾಗುವುದು. ಸೃಷ್ಟಿಗೆ ಆದಿಯಲ್ಲಿ ಈ ಆಕಾಶವೊಂದೇ ಇರುವುದು. ಕಾಲಾಂತದಲ್ಲಿ ಸಮಸ್ತ ಕಠಿಣವಸ್ತುಗಳೂ, ರಸವಸ್ತುಗಳೂ, ವಾಯುವಸ್ತುಗಳೂ ಎಲ್ಲವೂ ಆಕಾಶದಲ್ಲಿಯೇ ಲಯವಾಗುವುವು, ಮುಂದಿನ ಸೃಷ್ಟಿಯು ಮತ್ತೆ ಹೀಗೆಯೆ ಆಕಾಶದಿಂದಲೆ ಹುಟ್ಟುವುದು. (ರಾಯೋ-೨೩) ಸ್ವಾಮಿಗಳು ತಮಗಿಂತ ಸಾವಿರಾರು ವರ್ಷಗಳ ಹಿಂದಿನ ಕಾಲದ ತಿಳಿವಳಿಕೆಗೆ ತಕ್ಕಂತೆ ಮಂಡಿಸಿದ್ದ ಸಾಂಖ್ಯವಾದವನ್ನೂ ಪ್ರಶ್ನೆಯಿಲ್ಲದೆ ಒಪ್ಪುತ್ತಾರೆ. ಮೇಲಿನ ವಿವರಣೆಯಂತೆ ಇಂದ್ರಿಯಗಳು ಒಳಗಿನ ಪುರುಷನ ಅಪ್ಪಣೆ ಪಡೆದು ಬಾಹ್ಯ ಪ್ರಪಂಚಕ್ಕೆ ಸ್ಪಂದಿಸಿ ದಕ್ಕಿದ ವಿವರಗಳನ್ನು ಮನಸ್ಸಿಗೆ ಕಳಿಸುತ್ತವೆ. ಆದರೆ ವಾಸ್ತವಿಕವಾಗಿ ಅವು ಪುರುಷನ ಹಂಗಿಲ್ಲದೆ ಮಾಹಿತಿ ನೀಡುವ ಸ್ವತಂತ್ರ ಪ್ರಾಥಮಿಕ ತತ್ತ್ವಗಳಾಗಿವೆ. ಅಭೌತಿಕ ಪುರುಷನನ್ನು ಮನಸ್ಸು ಮತ್ತು ಭೌತಿಕ ಕರ್ಮೇಂದ್ರಿಯಗಳೊಂದಿಗೆ ಯಾವುದು ಸಂಪರ್ಕಿಸುತ್ತವೆ ? ಹಾಗೆ ಸಂಪರ್ಕ ಏರ್ಪಡಿಸುವುದು ಭೌತಿಕವೇ ? ಅತಿಭೌತಿಕವೇ ? ಅದು ಎರಡೂ ಆಗಿದ್ದರೆ ಅವೆರಡರ ನಡುವೆ ವ್ಯತ್ಯಾಸವೇನು ಎನ್ನುವುದೆಲ್ಲವದೂ ಸ್ವಾಮಿಗಳಿಗೆ ಅಪ್ರಸ್ತುತವಾಗಿದೆ. ಕುರುಡನಿಗೆ ನೋಟದ ಯಾವ ಅನುಭವವೂ ಇರದು. ಕುರುಡನಲ್ಲಿರುವ ಆತ್ಮ/ಪುರುಷ ಈ ಇಂದ್ರಿಯ ನಿಯಂತ್ರಣದ ಸಾಮರ್ಥ್ಯವನ್ನು ಹೊಂದಿಲ್ಲವೆ ? ಹೊಂದಿಲ್ಲ ಎಂದಾದರೆ ಇಂದ್ರಿಯಗಳೇ ಬಾಹ್ಯ ಜ್ಞಾನದ ಮೂಲ ಒಳಗಿರುವ ಆತ್ಮ ಅಲ್ಲ ಎಂದು ಒಪ್ಪಬೇಕಾಗುತ್ತದೆ. ಸ್ವಾಮಿಗಳು ಪಾಶ್ಚಾತ್ಯರು ಬಾಹ್ಯ ವಿಶ್ವದ ಹುಡುಕಾಟದಲ್ಲಿ ಭಾರತೀಯರಿಗಿಂತ ಹೆಚ್ಚಿನ ಯಶಸ್ಸನ್ನು ಗಳಿಸಿದ್ದಾರೆನ್ನುತ್ತಾರೆ. ಅದೇ ವೇಳೆಗೆ ಸಮಕಾಲೀನ ವಿಜ್ಞಾನ ವಸ್ತು ,ಚೈತನ್ಯ , ವಿಶ್ವ ಮುಂತಾದವುಗಳ ಬಗ್ಗೆ ಏನನ್ನು ಹೇಳುತ್ತದೆ , ಅದರಲ್ಲಿ ಅದು ಎಷ್ಟು ಖಚಿತ ಮತ್ತು ನಿರ್ದಿಷ್ಟವಾಗಿದೆ ಎನ್ನುವುದರ ಬಗ್ಗೆ ಯಾವುದೇ ಗಮನ ಹರಿಸುವುದಿಲ್ಲ. ಅದರ ಬದಲು ಊಹೆಗಳಿಂದ ತುಂಬಿದ ತನ್ಮಾತ್ರ ಎನ್ನುವ ಭೂತ ಸೂಕ್ಷ್ಮವಿದೆ ಎನ್ನುವುದನ್ನು ಒಪ್ಪುತ್ತಾರೆ. ಆ ಭೂತ ಸೂಕ್ಷ್ಮ ವಿಜ್ಞಾನ ಪ್ರತಿಪಾದಿಸುವ ಅಣು , ಪರಮಾಣುಗಳಿಗಿಂತ ಭಿನ್ನವೇ ? ಹಾಗಾದರೆ ಹೇಗೆ ಭಿನ್ನ. ಅವುಗಳ ಗುಣ, ಲಕ್ಷಣಗಳೇನು ? ತನ್ಮಾತ್ರದಿಂದ ಹೊರಗೆ ಕಾಣುವುದು ಭಿನ್ನವಲ್ಲ, ಬೇರೆಯಲ್ಲ ಎಂದರೆ ಸಾಕೇ? ಇದರಿಂದ ಯಾವ ಹೆಚ್ಚುವರಿ ಜ್ಞಾನ ದಕ್ಕುತ್ತದೆ. ಇದು ಸ್ವಾಮಿಗಳಿಗೆ ಹೇಗೆ ಗೊತ್ತಾಯಿತು. ಅದಕ್ಕೆ ಇತರರು ಒಪ್ಪುವಂತೆ ಸಾಕ್ಷ್ಯಾಧಾರಗಳನ್ನು ಒದಗಿಸಬಲ್ಲರೇ ? ತನ್ಮಾತ್ರ ಹೇಗೆ ವಿವಿದ ಭೌತಿಕ ವಸ್ತುಗಳಾಗಿ ಕಾಣಿಸಿಕೊಂಡಿತು ಎಂದು ವಿವರಿಸದೇ ಹೋದರೆ ಅದು ಇನ್ನೊಂದು ಆಧಾರವಿಲ್ಲದ ಹೇಳಿಕೆಯಾಗುತ್ತದೆ. ದೇವರು ಎಲ್ಲವನ್ನೂ ಮಾಡಿದ ಎನ್ನುವ ಹೇಳಿಕೆಯನ್ನೇ ಸ್ವಲ್ಪ ಕ್ಲಿಷ್ಟ ಭಾಷೆಯ;ಲ್ಲಿ ಹೇಳುವುದಕ್ಕಿಂತ ಇದು ಬೇರೆಯಲ್ಲ. ಇದಿಷ್ಟೇ ಅಲ್ಲ ವಿಶ್ವ , ವಿಶ್ವ ಸೃಷ್ಟಿ ಕುರಿತಾದ ಸಾಂಖ್ಯರ ಬೇರೆಯ ನೂರಾರು ಹೇಳಿಕೆಗಳನ್ನು ಆಧುನಿಕ ಭೌತ ವಿಜ್ಞಾನ ತಿರಸ್ಕರಿಸುತ್ತದೆ. ಅನುಕೂಲಕರ ಎಂದು ಕಾಣುವ ಅಂಶಗಳನ್ನು ಎತ್ತಿ ತೋರಿಸಿ ಅನಾನುಕೂಲವೆನಿಸಿದ ಅಂಶಗಳನ್ನು ಮರೆಮಾಚುವುದೇ ಹುಸಿ ವಿಜ್ಞಾನದ ಲಕ್ಷಣ. (೫) ಆಧುನಿಕರಾದ ಶಾರೀರಕಶಾಸ್ತ್ರಜ್ಞರು ಕಣ್ಣುಗಳೇ ನೋಟದ ಇಂದ್ರಿಗಳಲ್ಲಲ್ಲವೆಂದೂ ಇಂದ್ರಿಯವು ಮೆದುಳಿನಲ್ಲಿ ಒಂದು ನಿರ್ದಿಷ್ಟ ಸ್ಥಾನದಲ್ಲಿರುವುದೆಂದು ಹೇಳುವರು. ಇದರಂತೆ ಉಳಿದ ಇಂದ್ರಿಯಗಳೂ ಮೆದುಳಿನ ನಿರ್ದಿಷ್ಟ ಸ್ಥಾನಗಳಲ್ಲಿವೆಯೆಂದು ಹೇಳುತ್ತಾರೆ. ಈ ಸ್ಥಾನಗಳು ಮೆದುಳಿನಲ್ಲಿರುವ ವಸ್ತುವಿನಿಂದಲೆ ಆಗಿವೆಯೆಂದೂ ಎನ್ನುತ್ತಾರೆ. ಸಾಂಖ್ಯರೂ ಇದೇ ಅಭಿಪ್ರಾಯ ತಾಳಿದ್ದಾರೆ. ಶಾರೀರಿಕ ಶಾಸ್ತ್ರಜ್ಞರ ಅಭಿಪ್ರಾಯವು ಭೌತಿಕ ದೃಷ್ಟಿಯಿಂದ ಬಂದದ್ದು. ಸಾಂಖ್ಯರ ಸಿದ್ಧಾಂತವು ಅನುಭವದಿಂದ ಬಂದದ್ದು. ಆದರೂ ಎರಡೂ ಒಂದೆ. ಈಗ ನಾವು ವಿಚಾರ ಮಾಡುವುದು ಇದನ್ನು ಮೀರಿರುವುದು. (೧೧) ಸ್ವಾಮಿಗಳು ಆಧುನಿಕ ಅಂಗರಚನೆ ಮತ್ತು ಅಂಗಕ್ರಿಯಾ ವಿಜ್ಞಾನ ಮತ್ತು ಸಾಂಖ್ಯರ ಇಂದ್ರಿಯ ತತ್ತ್ವಗಳ ನಡುವಿನ ವ್ಯತ್ಯಾಸಗಳನ್ನು ಕಡೆಗಣಿಸಿ ಅವೆರಡನ್ನೂ ಸಮೀಕರಿಸಿದ್ದಾರೆ. ಆಧುನಿಕ ವಿಜ್ಞಾನ ಅಂಗರಚನೆಯನ್ನು ಶರೀರ ಛೇದನದಿಂದ , ಅಂಗಕ್ರಿಯೆಯನ್ನು ಸಾಧನೆ , ಸಲಕರಣೆಗಳ ನೆರವಿನಿಂದ ದಾಖಲಿಸಲಾದ ವ್ಯಾಪಕ, ವಿಸ್ತೃತ ಪ್ರಯೋಗಗಳ ಪುರಾವೆಗಳಿಂದ ಸಾಬೀತುಗೊಳಿಸಿದೆ. ಅದರ ಫಲವಾಗಿ ಮೆದುಳಿನ ಯಾವ ಕೇಂದ್ರದಲ್ಲಿ ಯಾವ ಹತೋಟಿ ಸ್ಥಾನ ಇದೆ. ಮೆದುಳಿನ ಯಾವ ಭಾಗ ಭಾವುಕ , ಯಾವ ಭಾಗ ವೈಶ್ಲೇಷಿಕ ನಿಯಂತ್ರಣ ಹೊಂದಿದೆ ಎಂದು ಸ್ಪಷ್ಟಗೊಳಿಸಿದೆ . ಸಾಂಖ್ಯರಿಗೆ ಮೆದುಳು ಇಂದ್ರಿಯಗಳ ನಿಯಂತ್ರಣ ಕೇಂದ್ರ ಎನ್ನುವುದಾಗಲಿ , ಇಂದ್ರಿಯಗಳು ಬಾಹ್ಯದಿಂದ ಪಡೆದ ಮಾಹಿತಿಯನ್ನು ವೈದ್ಯುತ್-ರಾಸಾಯನಿಕ ಪ್ರಚೋದನೆಗಳ ಮೂಲಕ ಮೆದುಳಿಗೆ ತಲುಪಿಸುತ್ತವೆ ಎಂದಾಗಲಿ ತಿಳಿದಿರಲಿಲ್ಲ. ಇಂದ್ರಿಯಗಳು ಗ್ರಹಿಸುವ ರೀತಿ ಕುರಿತಾದಂತೆ ಸಾಂಖ್ಯ ಮತ್ತು ಆಧುನಿಕ ಶರೀರ ಶಾಸ್ತ್ರ ಇವೆರಡರ ನಡುವೆ ಯಾವುದೇ ಹೋಲಿಕೆಗಳಿಲ್ಲ. ಇಂದ್ರಿಯಗಳನ್ನು ನಿಯಂತ್ರಿಸುವ ಮೆದುಳಿನ ಕೇಂದ್ರಗಳು ಅನುಭವದಿಂದ ಹೇಗೆ ಬರಲು ಸಾಧ್ಯ. ಯಾವುದೇ ಯೋಗಿ ವಿಜ್ಞಾನದ ನೆರವಿಲ್ಲದೆ ಯಾವ ಇಂದ್ರಿಯದ ಸ್ಥಾನ ಮೆದುಳಿನಲ್ಲಿ ಎಲ್ಲಿದೆ ಎಂದು ತೋರಿಸಬಲ್ಲನೇ ? ಹಾಗೆ ತೋರಿಸಿದ್ದೇ ಆದರೆ ಅದರ ಹಿಂದಿರುವ ಸಮರ್ಥನೆಗಳೆಲ್ಲಿ ? ಸಾಂಖ್ಯರು ಇಂದ್ರಿಯಗಳು ಪುರುಷ ನಿಯಂತ್ರಿತ ಎಂದು ಭಾವಿಸಿದ್ದರು. ಅವರು ಇಂದ್ರಿಯ , ಆಲೋಚನೆ ಮುಂತಾದುವುಗಳನ್ನು ಮೆದುಳಿನ ಭೌತಿಕ ಸಂರಚನೆಯೊಂದಿಗೆ ಎಂದಿಗೂ ಹೋಲಿಸಿ ನೋಡಿರಲಿಲ್ಲ. ಆಧುನಿಕ ವಿಜ್ಞಾನದ ಸಂಶೋಧನೆಗಳನ್ನು ಸ್ವಾಮಿಯವರು ಸಾಂಖ್ಯರ ಊಹೆಯ ಸಿದ್ಧಾಂತವನ್ನು ಸಮರ್ಥಿಸಲು ಬಳಸುತ್ತಿದ್ದಾರೆ. (೬) ಯಾವ ಆಹಾರದಿಂದ ಚಿತ್ತಶುದ್ದಿಯಾಗುವುದೊ ಅಂಥ ಆಹಾರವನ್ನೇ ಉಪಯೋಗಿಸಬೇಕು, ಯಾವುದಾದರೂ ಮೃಗಾಲಯಕ್ಕೆ ಹೋಗಿ ನೋಡಿದರೆ ಇದು ಚೆನಾಗಿ ಗೊತ್ತಾಗುವುದು. ಆನೆಗಳು ಮಹಾಪ್ರಾಣಿಗಳಾಗಿದ್ದರೂ ಶಾಂತಸ್ವಭಾವದಿಂದ ಸುಮ್ಮನಿರುತ್ತವೆ. ಹುಲಿ ಮತ್ತು ಸಿಂಹಗಳ ಪಂಜರಗಳ ಸಮೀಪಕ್ಕೆ ಹೋಗುತ್ತಲೆ ಅವು ಚಡಪಡಿಸುತ್ತವೆ. ಆಹಾರದಿಂದ ಎಷ್ಟು ವ್ಯತ್ಯಾಸವಾಗಿದೆ. (ರಾಯೋ-೧೧) ಆದುದರಿಂದ ಪ್ರಾರಂಭದಲ್ಲಿ ನಾವು ತಿನ್ನುವ ಆಹಾರದ ಕಡೆಗೂ ಲಕ್ಷವನ್ನು ಕೊಡಬೇಕಾಗುವುದು. ಸ್ವಲ್ಪ ಅಭ್ಯಾಸ ಬಲವುಂಟಾದ ಮೇಲೆ ಸಾಧನೆಯು ತಕ್ಕ ಮಟ್ಟಿಗೆ ನಡೆದಿರುವಾಗ ಈ ವಿಷಯದಲ್ಲಿ ಅಷ್ಟು ಗಮನಿಸಬೇಕಾದುದಿರುವುದಿಲ್ಲ. ಗಿಡವು ಇನ್ನೂ ಪುಟ್ಟದಾಗಿ ಬೆಳೆಯುತ್ತಿರುವಾಗ ಅದಕ್ಕೆ ಅಪಾಯವಾಗದಂತೆ ಸುತ್ತಲೂ ಬೇಲಿಯನ್ನು ಹಾಕಬೇಕಾಗುವುದು. ಆದರೆ ಅದು ಮರವಾಗುತ್ತಲೆ ಬೇಲಿಗಳನ್ನೆಲ್ಲ ತೆಗೆದುಹಾಕುತ್ತಾರೆ. ಆಗ ಅದಕ್ಕೆ ಯಾವ ಅಪಾಯವನಾದರೂ ತಡೆದುಕೊಳ್ಳುವ ಶಕ್ತಿಯಿರುವುದು. (ರಾಯೋ-೧೨ ) . ಬಾಹ್ಯ ಜಗತ್ತಿನಲ್ಲಿ ಕಾಣುವ ದ್ರವ್ಯ ಮತ್ತು ಶಕ್ತಿಗಳು ನಮ್ಮ ಮನಸ್ಸಾಗಿ ಪರಿಣಮಿಸಿರುವುವು. ಆದ್ದರಿಂದ ದೇಹ , ಮನಸ್ಸು ನಾವು ತಿನ್ನುವ ಆಹಾರ ಇವಕ್ಕೆ ಇರುವ ವ್ಯತ್ಯಾಸ ತೋರಿಕೆಯಲ್ಲಿ ಮಾತ್ರ. ಆದ್ದರಿಂದ ನಾವು ತೆಗೆದುಕೊಳ್ಳುವ ಆಹಾರದಲ್ಲಿರುವ ಭೌತಕಣಗಳಿಂದ ಆಲೋಚನೆಯ ಉಪಕರಣವನ್ನು ನಿರ್ಮಿಸುತ್ತೇವೆ. ಈ ವಸ್ತುಗಳಲ್ಲಿ ಹುದುಗಿರುವ ಸೂಕ್ಷ್ಮ ಶಕ್ತಿಗಳಿಂದ ನಾವು ಆಲೋಚನೆಯನ್ನು ನಿರ್ಮಿಸುತ್ತೇವೆ….. ಪ್ರತಿಯೊಬ್ಬನ ಸುತ್ತಲೂ ಒಂದು ವಿಧವಾದ ಕಾಂತಿ ಇರುವುದು. ಅವನು ಯಾವ ವಸ್ತುಗಳನ್ನು ಮುಟ್ಟಿದರೂ ಅವನ ಪ್ರಭಾವ , ಅವನ ಶೀಲ ಅದರ ಮೇಲೆ ಬಿದ್ದಂತೆ ಆಗುವುದು. ಮಾನವನ ಶೀಲ ಒಂದು ಭೌತಿಕ ಶಕ್ತಿಯಂತೆ ಹೊರಬಂದು ಅವನು ಮುಟ್ಟಿದ್ದನ್ನೆಲ್ಲ ಅವನ ಪ್ರಭಾವಕ್ಕೆ ಒಳಗು ಮಾಡುವುದು. ಆದ್ದರಿಂದ ಅಡಿಗೆ ಮಾಡಿದ ಮೇಲೆ ಆಹಾರವನ್ನು ಯಾರು ಮುಟ್ಟುವರು ಎನ್ನುವುದನ್ನು ಜೋಪಾನವಾಗಿ ನೋಡಿಕೊಳ್ಳಬೇಕು. (ಕೃ.ಶ್ರೇ: ೧/೧೨೮-೧೨೯) ಚಿತ್ತಶುದ್ದಿ ಎಂದರೆ ಏನು ಅದನ್ನು ಹೇಗೆ ಪರಿಗಣಿಸಿ ಅಳತೆ ಮಾಡಲಾಗುತ್ತದೆ ಎನ್ನುವುದು ಸ್ಪಷ್ಟವಿಲ್ಲ. ಮಾನವಿಕ , ಸಾಮಾಜಿಕ ಅಂಶಗಳಾದ ಕಳವು ಮಾಡದಿರುವುದು , ಕಾಡದಿರುವುದು , ಕೊಲ್ಲದಿರುವುದು . ಸುಳ್ಳಾಡದಿರುವುದು, ಮೋಸಮಾಡದಿರುವುದು , ಮರುಕ ತೋರಿಸುವುದು , ಮಾನವ ಸಮಾನತೆಯನ್ನು ಒಪ್ಪುವುದು ಚಿತ್ತಶುದ್ದಿಯಲ್ಲಿ ಬರುತ್ತವೆಯೇ ಅಥವಾ ಇವುಗಳಿಗೆ ಹೊರತಾದ ಕಾಣದಂತಿರುವ ಬೇರೆ ಏನಾದರೂ ಚಿತ್ತಶುದ್ಧಿಯಲ್ಲಿ ಇದೆಯೋ ಗೊತ್ತಿಲ್ಲ. ಸ್ವಾಮಿಗಳು ಆನೆ ಸಸ್ಯಾಹಾರಿ ಆದ್ದರಿಂದ ಅದು ಶಾಂತವಾಗಿರುತ್ತದೆ. ಬೇಟೆಬದುಕುವ ಪ್ರಾಣಿಗಳು ಮಾಂಸ ತಿನ್ನುತ್ತವೆ. ಆದ್ದರಿಂದ ಅವು ಕ್ರೂರ ಮತ್ತು ಅಶಾಂತ ಎನ್ನುತ್ತಾರೆ. ಆಹಾರ ಶುದ್ಧಿ ಕುರಿತಾಗಿ ಇಂತಹುದೇ ಅಭಿಪ್ರಾಯಗಳನ್ನು ಹಲವಾರು ಕಡೆ ಸೂಚಿಸಿದ್ದಾರೆ. ಆಹಾರದ ಬಗ್ಗೆ ಸ್ವಾಮಿಗಳ ಹೇಳಿಕೆ ಜೀವ ವಿಕಾಸ ತಿಳಿವಳಿಕೆಗೆ ವಿರುದ್ದವಾದುದಲ್ಲದೆ ಅವೈಜ್ಞಾನಿಕವೂ ಹೌದು. ಸ್ವಾಮಿಗಳು ಮೆಚ್ಚುವ ಭಾವನಾವಾದಿ ಉಪನಿಷತ್ಕಾರರಲ್ಲಿ ಹಲವರು ಮಾಂಸ ಭಕ್ಷಕರಾಗಿದ್ದರಲ್ಲದೆ ಸ್ವಾಮಿಗಳು ಸ್ವತ ತಾವೇ ಮಾಂಸಾಹಾರವನ್ನು ಸವಿಯುತ್ತಿದ್ದರು. ಅವರ ಗುರು ರಾಮಕೃಷ್ಣರು ಮೀನನ್ನು ಸೇವಿಸುತ್ತಿದ್ದರು. ಆಹಾರ ಯಾವುದೇ ಇರಲಿ ದೇಹ ಅದನ್ನು ಒಡೆದು ಸಕ್ಕರೆ , ವಿಟಮಿನ್, ಕೊಬ್ಬು , ಲವಣ ಮುಂತಾದ ಸರಳ ಸ್ಥಿತಿಗೆ ತಂದು ಬೇಕಾದುದನ್ನು ಬಳಸಿ ಬೇಕಿಲ್ಲದ್ದನ್ನು ಹೊರಹಾಕುತ್ತದೆ. ಸಸ್ಯಾಹಾರವೇ ಇರಲಿ ,ಮಾಂಸಾಹಾರವೇ ಇರಲಿ ಸಮತೋಲನ ಇಲ್ಲದಿದ್ದರೆ ಎರಡೂ ದೇಹದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ಜಗತ್ತಿನ ಉದಾತ್ತ ಚಿಂತಕರಲ್ಲಿ ಹೆಚ್ಚಿನವರು ಮಾಂಸಾಹಾರಿಗಳಾಗಿದ್ದರು. ಆರಂಭದಲ್ಲಿ ಆಹಾರ ನಿಯಂತ್ರಣ ಮುಖ್ಯ. ಅಭ್ಯಾಸವಾದ ನಂತರ ಅದಕ್ಕೆ ಅಂತಹ ಪ್ರಾಮುಖ್ಯತೆ ಇಲ್ಲ ಎನ್ನುವುದು ಪರಸ್ಪರ ವೈರುಧ್ಯಗಳಿಂದ ಕೂಡಿದೆ. ಒಂದು ಆಹಾರವನ್ನು ದೇಹ ಜೀರ್ಣಿಸಿಕೊಂಡು ಅದರಿಂದ ಬೇಕಾದುದನ್ನು ಪಡೆಯುವಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಧ್ಯಾನದ ಅಭ್ಯಾಸ ಬಲಗೊಂಡ ನಂತರ ತಿಂದ ಆಹಾರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಾರದು ಎನ್ನುವುದಾದರೆ ಆಹಾರದಲ್ಲಿ ಯಾವುದೋ ಅಂಶಗಳಿದ್ದು ಅವು ಮನಸ್ಸಿನ ಮೇಲೆ ಪ್ರಭಾವ ಬಿರುತ್ತವೆ ಹಾಗೂ ಧ್ಯಾನದಿಂದ ಆ ಪ್ರಭಾವದ ಪರಿಣಾಮ ಕುಗ್ಗುತ್ತದೆ ಎಂದಾಯಿತು. ಇದಕ್ಕೆ ನಂಬಿಕೆಯ ಹೊರತು ಬೇರೆ ಯಾವುದೇ ಸಮರ್ಥನೆಯಿಲ್ಲ. ವ್ಯಕ್ತಿಗಳ ಸುತ್ತಲೂ ಒಂದು ಬಗೆಯ ಕಾಂತಿ ಇರುತ್ತದೆ ಎನ್ನುವುದು ಬಹು ಪುರಾತನವಾದ ನಂಬಿಕೆ. ಇಪ್ಪತ್ತನೇ ಶತಮಾನದ ಮೊದಲ ದಶಕಗಳಲ್ಲಿ ರಷ್ಯಾದ ಕೀರ್ಲಿಯನ್ ದಂಪತಿಗಳು ವ್ಯಕ್ತಿ, ಪ್ರಾಣಿ, ಸಸ್ಯಗಳ ಛಾಯಾಗ್ರಹಣ ಮಾಡಿ ಇವೆಲ್ಲವುಗಳ ಸುತ್ತ ಪ್ರಭಾವಳಿ ಇರುವುದನ್ನು ದಾಖಲಿಸಿದ್ದರು. ತಕ್ಷಣವೇ ಇದನ್ನು ಬಳಸಿಕೊಂಡು ಹುಸಿ ವಿಜ್ಞಾನವಾದಿಗಳು ಹಲವಾರು ಸಿದ್ಧಾಂತ, ಚಿಕಿತ್ಸೆಗಳನ್ನು ಹೊಸೆಯತೊದಗಿದರು. ಯಾವುದೇ ಜೀವಂತ ಪ್ರಾಣಿ, ಸಸ್ಯಗಳಲ್ಲಿ ಸತತವಾಗಿ ಜೈವಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಹೊರಗಿನಿಂದ ಶಕ್ತಿಯನ್ನು ಹೀರಿಕೊಳ್ಳುವುದು , ಒಳಗಿನಿಂದ ಹೊರಬಿಡುವುದು ನಡದೇ ಇರುತ್ತದೆ. ಅವಗೆಂಪು ಕಿರಣ ಛಾಯಾಗ್ರಹಣ ಮಾಡಿದರೆ ಇದೆಲ್ಲವೂ ಕಾಂತಿಯಂತೆ ದಾಖಲಾಗುತ್ತದೆಯೇ ಹೊರತು ಅದರಲ್ಲಿ ಯಾವ ವಿಶೇಷವೂ ಇಲ್ಲ. ವಸ್ತುಗಳನ್ನು ಮುಟ್ಟುವುದರಿಂದ ವ್ಯಕ್ತಿಯ ಪ್ರಭಾವ ಅದರ ಮೇಲಾಗುತ್ತದೆ ಎನ್ನುವುದು ಇನ್ನೊಂದು ತಳಬುಡವಿಲ್ಲದ ನಂಬಿಕೆ. ಮುಟ್ಟುವುದರಿಂದ ಭೌತಿಕ ಅಂತಃಕ್ರಿಯೆಗಳಾಗಿ ವಸ್ತುವಿನ ಮೇಲೆ ಪ್ರಭಾವ ಬೀರಬಹುದು. ಇದಕ್ಕೆ ವ್ಯಕ್ತಿಯ ಶೀಲ, ನಡವಳಿಕೆ , ಗುಣ ಯಾವುವೂ ಕಾರಣವಲ್ಲ. ಒಂದು ವಸ್ತುವನ್ನು ಒಂದೊಂದು ಶೀಲ , ನಡವಳಿಕೆ ಉಳ್ಳವರು ಮುಟ್ಟಿದಂತೆಲ್ಲ ಅದು ಬದಲಾಗುತ್ತಾ ಹೋಗುತ್ತದೆಯೇ ? ದುಶ್ಶೀಲನೊಬ್ಬನು ಅಡುಗೆ ಮಾಡಿ ಸುಶೀಲನು ಬಡಿಸಿದರೆ ಅಥವಾ ಇವರಿಬ್ಬರ ಪಾತ್ರ ಬದಲಾದರೆ ಅನ್ನದ ಮೇಲೆ ಇವರಿಬ್ಬರಲ್ಲಿ ಯಾರ ಪ್ರಭಾವ ಉಳಿದಿರುತ್ತದೆ? ಆದ್ದರಿಂದ ಸ್ವಾಮಿಗಳ ಈ ಎಲ್ಲ ಚಿಂತನೆಗಳಿಗೆ ಅವರ ಹೇಳಿಕೆ ಹೊರತಾಗಿ ಬೇರೆ ಆಧಾರಗಳಿಲ್ಲ. (೭) ಆಸನದಲ್ಲಿ ಮುಖ್ಯವಾದುದೆಂದರೆ ಎದೆ, ಕುತ್ತಿಗೆ , ತಲೆ ಇವು ಮೂರೂ ಸಮವಾಗಿ ಒಂದೇ ಸಾಲಿನಲ್ಲಿರುವಂತೆ ನೆಟ್ಟಗೆ ಕುಳಿತುಕೊಂಡು ಬೆನ್ನುಹುರಿಗೆ ಅಡ್ಡಿ ಇಲ್ಲದಂತೆ ಮಾಡಬೇಕು. ಶರೀರದ ತೂಕವೆಲ್ಲ ಪಕ್ಕೆಲುಬುಗಳ ಮೇಲೆ ಬೀಳುವಂತೆ ಮಾಡಿಕೊಂಡರೆ ಬೆನ್ನುಹುರಿಯು ನೆಟ್ಟಗಾಗಿ ಸುಲಭವಾದ ಆಸನವಾಗುವುದು. ಎದೆಯು ಒಳಕ್ಕೆ ಸರಿದುಕೊಂಡಿರುವಾಗ ಉತ್ತಮವಿಚಾರಗಳು ಮನಸ್ಸಿಗೆ ಬರುವುದಿಲ್ಲವೆಂಬುದನ್ನು ಸುಲಭವಾಗಿ ಗೊತ್ತುಪಡಿಸಿಕೊಳ್ಳಬಹುದು. (೧೪) ಅಸಹಜ ಭಂಗಿಗಳಿಂದ ದೇಹದ ಅಂಗಗಳಿಗೆ ತೊಂದರೆ ಉಂಟಾಗುತ್ತದೆ ಎನ್ನುವುದು ನಿಜ. ಆದರೆ ಶರೀರದ ತೂಕ ಪಕ್ಕೆಲುಬುಗಳ ಮೇಲೆ ಸಾಗುತ್ತದೆ. ಪಕ್ಕೆಲುಬುಗಳು ನೆಟ್ಟಗಿಲ್ಲದಿದ್ದರೆ ಬೆನ್ನು ಹುರಿಗೆ ಅಡ್ಡಿಯಾಗುತ್ತದೆ ಎನ್ನುವುದು ತಪ್ಪು ತಿಳಿವಳಿಕೆ. ಬೆನ್ನು ಹುರಿ ತೂಕ ಹೊರಲು ಮತ್ತು ಬಾಗಲು ಅನುಕೂಲವಾಗುವಂತೆ ಉಂಗುರದಂತಹ ಖಂಡಗಳಿಂದಾಗಿರುವ ಅಂಗ. ಎದೆ ಒಳಕ್ಕೆ ಬಾಗಿರುವಂತೆ ಇರುವುದು ಆತ್ಮವಿಶ್ವಾಸ ಕೊರತೆಯೆಂದು ಊಹಿಸಬಹುದೇ ಹೊರತು ಅದಕ್ಕೆ ಬೇರೆ ಯಾವುದೇ ವಿವರಣೆಗಳು ಸಾಧ್ಯವಿಲ್ಲ. ಮಾನಸಿಕ ಆಲೋಚನೆಗಳಿಗೂ ಎದೆ ಎತ್ತಿರುವಂತೆ ಇರುವುದಕ್ಕೂ ಯಾವುದೇ ಸಂಬಂಧವಿಲ್ಲ. (೮) ಕೆಲ ತಿಂಗಳು ಸಾಧನೆ ಮಾಡಿದ ಮೇಲೆ ಮತ್ತೊಬ್ಬರ ಆಲೋಚನೆಗಳು ತಿಳಿಯತೊಡಗುವುವು. ಅವರಲ್ಲಿ ಯೋಚನೆಗಳು ತಾಳುತ್ತಿರುವಂತೆಯೇ ನಮ್ಮ ಬಳಿಗೆ ಬರುತ್ತವೆ. ಮನಸ್ಸನ್ನು ಒಂದೇ ಕಡೆಗಿಟ್ಟು ಏನನ್ನಾದರೂ ಕೇಳಬೇಕೆಂದು ಇಚ್ಛಿಸಿದರೆ ಎಷ್ಟೋ ದೂರದಲ್ಲಿ ನಡೆಯುತ್ತಿರುವ ಸಂಗತಿಯು ಕೇಳುವುದು. ಇಂಥ ಝಳುಕುಗಳು ಮೊದಲು ಅಷ್ಟಿಷ್ಟು ಬಂದರೂ ಶ್ರದ್ದೆ, ಧೈರ್ಯ, ಭರವಸೆ ಹುಟ್ಟುತ್ತದೆ. ಉದಾಹರಣೆಗೆ ಮೂಗಿನ ಕೊನೆಯಲ್ಲಿಯೇ ಮನಸ್ಸನು ನಿಲ್ಲಿಸುತ್ತ ಬಂದರೆ ಕೆಲವು ದಿನಗಳಲ್ಲಿಯೆ ಘಮಘಮಿಸುವ ಸುವಾಸನೆಯು ತೋರಿಬರುವುದು. ಇದರಿಂದ ವಿಷಯ ಸಂಯೋಗವಿಲ್ಲದೆಯೇ ಮನಸ್ಸಿಗೆ ಗೋಚರಿಸುವ ಅನುಭವಗಳು ಕೆಲವು ಉಂಟೆಂಬುದು ಚೆನ್ನಾಗಿ ಗೊತ್ತಾಗುವುದು. (೧೬) ಯೋಗಿಗಳಿಗೆ ಬೇರೆಯವರ ಆಲೋಚನೆಗಳು ತಿಳಿಯುತ್ತವೆ , ಅವರು ತ್ರಿಕಾಲ ಜ್ಞಾನಿಗಳು ಎನ್ನುವುದು ಒಂದು ಪಾರಂಪರಿಕ ಕಟ್ಟುಕಥೆಯೇ ಹೊರತು ವಾಸ್ತವ ಅಲ್ಲ. ಇನ್ನೊಬ್ಬರ ಆಲೋಚನೆಗಳನ್ನು ತಿಳಿಯುವುದು ಎಂದರೆ ಅವರ ಅವರ ಇಂದ್ರಿಯಗಳನ್ನು ಆ ಮೂಲಕ ಅವರ ಮೆದುಳಿನಲ್ಲಿ ನಡೆಯುತ್ತಿರುವ ವೈದ್ಯುತ್-ರಾಸಾಯನಿಕ ಕ್ರಿಯೆಗಳನ್ನು ಹತೋಟಿಗೆ ಪಡೆದಂತೆ. ಇಂತಹ ಹತೋಟಿ ಹೇಗೆ ಸಾಧ್ಯ ಎಂದು ವಿವರಿಸದಿರುವುದರಿಂದ ಸ್ವಾಮಿಗಳದ್ದು ಕೇವಲ ಹೇಳಿಕೆಯಾಗಿದೆಯೇ ಹೊರತು ಅದರಲ್ಲಿ ಯಾವುದೇ ಹುರುಳಿಲ್ಲ. ಈವರೆಗೆ ಯಾವ ಯೋಗಿಯೂ ಬೇರೆಯವರ ಆಲೋಚನೆಯನ್ನು ತಿಳಿದು ಅದಕ್ಕೆ ಸಾಕ್ಷ್ಯಾಧಾರ ಒದಗಿಸಿಲ್ಲ ಹಾಗೂ ಹಾಗೆ ಒದಗಿಸುತ್ತೇನೆಂದು , ಅದನ್ನು ಪರೀಕ್ಷಿಸಬಹುದೆಂದು ವಿಶ್ವಾಸದಿಂದ ಮುಂದೆ ಬಂದಿಲ್ಲ. ಇಂದ್ರಿಯ ಪ್ರಚೋದನೆ ಇಲ್ಲದಿದ್ದರೂ ಸುವಾಸನೆ ತೋರುತ್ತದೆ ಎನ್ನುವುದು ಒಂದು ಮಾನಸಿಕ ಭ್ರಮೆಯೇ ಹೊರತು ನಿಜವಾದುದಲ್ಲ. ಏಕೆಂದರೆ ಬಾಹ್ಯ ಭೌತಿಕ ಅಂತಕ್ರಿಯೆ ಆಗದ ಹೊರತು ವಾಸನೆಯ ಅಸ್ತಿತ್ವ ತಿಳಿಯದು. ಇಂತಹ ಹೇಳಿಕೆಗಳನ್ನು ಒಪ್ಪಬಹುದಾದರೆ ಬಾಹ್ಯ ಪರಿಶೀಲನೆಗೆ ದಕ್ಕದ ಹಳ್ಳಿಗರು ಹೇಳುವ ನೂರಾರು ನಂಬಿಕೆಗಳನನ್ನು ಏಕೆ ತಿರಸ್ಕರಿಸಬೇಕು. (೯) ನಮಗೆ ನಮ್ಮ ಶರೀರದ ವಿಷಯದಲ್ಲಿ ಹೆಚ್ಚಿನದೇನೂ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಲಾಗದು. ಒಂದು ಹೆಣವನ್ನು ಹಿಡಿದುಕೊಂಡು ಕೊಯ್ಯಬಹುದು. ಶರೀರದೊಳಗೆ ಏನಿದೆ ಎಂಬುದನ್ನು ನೋಡುವುದಕ್ಕಾಗಿ ಬದುಕಿದ - ಪ್ರಾಣಿಯೊಂದನ್ನು ಹಿಡಿದು ಛೇದಿಸುವವರು ಕೆಲವರಿದ್ದಾರೆ. ಇದು ಹೇಗಾದರೂ ಇರಲಿ. … ನಮಗೇಕೆ ಈ ವಿಚಾರವು ಗೊತ್ತಿಲ್ಲವೆಂದರೆ ಒಳಗೆ ನಡೆಯುತ್ತಿರುವ ಬಹು ಸೂಕ್ಷ್ಮ ವ್ಯಾಪಾರಗಳನ್ನು ವಿವೇಚನೆ ಮಾಡುವಷ್ಟು ಗಮನವಿಟ್ಟು ನೋಡುವ ಶಕ್ತಿಯು ನಮಗಿಲ್ಲ. ಈ ಸೂಕ್ಷ್ಮಾನುಭವವು ಆಗಬೇಕಾದರೆ ಮೊದಲು ಸ್ಥೂಲದಿಂದ ಪ್ರಾರಂಭಿಸಬೇಕು.ಈ ಶರೀರವನ್ನು ಚಾಲನೆಯಲ್ಲಿಟ್ಟಿರುವುದು ಯಾವುದೋ ಅದನ್ನೆ ಹಿಡಿಯಬೇಕು. ಇದೇ ಪ್ರಾಣವು. ಶ್ವಾಸವೇ ಇದರ ವ್ಯಕ್ತ ರೂಪವು, (ರಾಯೋ-೨೦) ಹೆಣಗಳನ್ನು ಕೊಯ್ದು ಅಧ್ಯಯನ ಮಾಡಿದ್ದರಿಂದಲೇ ಶರೀರದ ಎಲ್ಲ ಅಂಗಗಳು , ಅವುಗಳ ಜೋಡಣೆ , ಅಂಗಗಳ ಚಟುವಟಿಕೆ ಅವುಗಳ ಆರೋಗ್ಯ, ಅನಾರೋಗ್ಯ ಸ್ಥಿತಿ , ಈ ಸ್ಥಿತಿಗಳಿಗೆ ಕಾರಣ ಮತ್ತು ಅನಾರೋಗ್ಯ ಸ್ಥಿತಿಯನ್ನು ಸುಧಾರಿಸುವುದಕ್ಕೆ ಅನುಸರಿಸಬೇಕಾದ ಮಾರ್ಗಗಳು ತಿಳಿದುಬಂದಿವೆ. ಆಧುನಿಕ ವೈದ್ಯಕೀಯದ ಎಲ್ಲ ಸಾಧನೆಗಳನ್ನು ಸ್ವಾಮಿಗಳು ನಿಕೃಷ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಅವರ ದೃಷ್ಟಿಯಲ್ಲಿ ಶರೀರದ ಭೌತಿಕ ಸತ್ಯಗಳನ್ನು ತಿಳಿಯುವುದರಿಂದ ಹೆಚ್ಚಿನದೇನನ್ನೂ ತಿಳಿದಂತಾಗದು. ಅಧುನಿಕ ಶರೀರಶಾಸ್ತ್ರ ವಿವರಿಸುವ , ಅಳೆಯುವ ಕೋಶಗಳ ಒಳಗೆ ನಡೆಯುವ ಕ್ರಿಯೆಗಳು ಸೂಕ್ಶ್ಮಮಟ್ಟದವಲ್ಲವೇ? . ನಂಬಿಕೆಗೆ ಹೊರತಾಗಿ ಯಾವುದೇ ಪುರಾವೆಗಳಿಲ್ಲದ ಅವರು ನಂಬಿರುವ ಪ್ರಾಣ ಮಾತ್ರ ನಿಜ. ಸ್ವಾಮಿಗಳು ನಿಜವಾದ ಶರೀರ ಶಾಸ್ತ್ರ ಎಂದರೇನೆಂಬ ಸ್ಪಷ್ಟೀಕರಣವಾಗಲಿ , ವಿವರಣೆಯಾಗಲಿ ಕೊಡದೆ ಪ್ರಾಣವನ್ನು ಹಿಡಿಯುವುದು ಎನ್ನುವ ಯಾವ ನಿರ್ದಿಷ್ಟತೆಯೂ ಇಲ್ಲದ ಅಮೂರ್ತ ಚಿಂತನೆಯನ್ನೇ ಜ್ಞಾನವೆಂದು ಪರಿಗಣಿಸುತ್ತಾರೆ. ಪ್ರಾಣವನ್ನು ಹಿಡಿತಕ್ಕೆ ತೆಗೆದುಕೊಂಡ ಯೋಗಿಗಳು ಯಾರಿದ್ದಾರೆ ? ಅವರು ಅಂಗಗಳ ಚಟುವಟಿಕೆಗಳನ್ನು ಅರಿತಿರುವರೇ ಹಾಗೂ ತೊಂದರೆಗಳು ಪರಿಹರಿಸಬಲ್ಲರೇ ? ಸ್ವಾಮಿಗಳು ತರುಣಾವಸ್ಥೆಯಲ್ಲಿಯೇ ಹಲವಾರು ರೋಗಗಳೆಗೆ ತುತ್ತಾಗಿ ನರಳುತ್ತಿದ್ದರು. ಅವುಗಳ ನಿವಾರಣೆಗೆ ಎಲ್ಲರೂ ಪಡೆಯುವಂತೆ ಚಿಕಿತ್ಸೆ ಪಡೆಯುತ್ತಿದ್ದರೇ ಹೊರತು ಪ್ರಾಣ ಬಲದಿಂದ ಯಾವುದನ್ನೇ ಸರಿಪಡಿಸಿಕೊಳ್ಳುವುದು ಅವರಿಗೆ ಸಾದ್ಯವಾಗಿರಲಿಲ್ಲ. ಆದ್ದರಿಂದ ಸ್ವಾಮಿಗಳ ಈ ಎಲ್ಲ ಚಿಂತನೆಗಳು ಅವೈಜ್ಞಾನಿಕ ಮತ್ತು ಅಸಂಬದ್ದವಾಗಿವೆ. (೧೦) ಪ್ರಾಣಾಯಾಮಕ್ಕೂ ಪ್ರೇತಾತ್ಮವಾದಕ್ಕೂ ಏನಾದರೂ ಸಂಬಂಧವಿದೆಯೆ ? ಪ್ರೇತಾತೃವಾದ ಒಂದು ಬಗೆಯ ಪ್ರಾಣಾಯಾಮ. ಪ್ರೇತಾತ್ಮಗಳು ಇರುತ್ತವೆ. ಆದರೆ ಅವು ನಮಗೆ ಕಾಣಿಸುವುದಿಲ್ಲವೆಂಬುದು ನಿಜವಾದರೆ ಅಂಥ ಪ್ರೇತಾತ್ಮಗಳು ನೂರಾರು ನಮ್ಮ ಸುತ್ತಲೂ ಇದ್ದರೂ ಅವುಗಳನ್ನು ನೋಡುವುದಾಗಲಿ, ಮುಟ್ಟುವುದಾಗಲಿ, ಮತ್ತಾವ ಬಗೆಯಲ್ಲಿ ತಿಳಿಯುವದಾಗಲಿ ನಮ್ಮಿಂದಾಗದೆ ಇರಬಹುದು. ನಾವು ಅವುಗಳ ಶರೀರದೊಳಗೆ ಈಚೆಯಿಂದ ಹೋಗಿ ಆಚೆ ಬರುತ್ತಿದ್ದರೂ ಅವಕ್ಕೆ ನಮ್ಮ ವಿಚಾರವು ಗೊತ್ತಿಲ್ಲದೆ ಇರಬಹುದು. ವೃತ್ತದೊಳಗಿನ ವೃತ್ತದಂತೆ ಒಂದು ಲೋಕದೊಳಗೆ ಇನ್ನೊಂದು ಲೋಕವಿರುವುದು. ನಮಗೆ ಐದು ಇಂದ್ರಿಯಗಳಿವೆ. ನಮ್ಮಲ್ಲಿರುವ ಪ್ರಾಣದ ಚಲನೆಯು ಒಂದು ನಿರ್ದಿಷ್ಟ ಸ್ಥಿತಿಯಲ್ಲಿರುವುದು. ಯಾವ ಪ್ರಾಣಿಗಳಿಗೆ ಪ್ರಾಣದ ಚಲನೆಯು ಇದೇ ಸ್ಥಿತಿಯಲ್ಲಿರುವುದೊ ಅವುಗಳೆಲ್ಲ ಒಂದಕ್ಕೊಂದು ಕಾಣಿಸುತ್ತವೆ. ಆದರೆ ಯಾವ ಪ್ರಾಣಿಗಳಲ್ಲಿ ಈ ಚಲನೆಯು ಇದಕ್ಕಿಂತ ಮೇಲಿನ ಸ್ಥಿತಿಯಲ್ಲಿರುವುದೊ ಅವುಗಳು ಕಾಣಿಸುವುದಿಲ್ಲ. ದೀಪ ಪ್ರಕಾಶವನ್ನು ಹೆಚ್ಚು ಮಾಡುತ್ತ ಮಾಡುತ್ತ ಹೋದರೆ ಕೊನೆಗೆ ಅದು ನಮಗೆ ಕಾಣಿಸುವುದೆ ಇಲ್ಲ, ಆದರೆ ಕಣ್ಣಿನ ಸಾಮರ್ಥ್ಯವು ಹೆಚ್ಚಾಗಿರುವ ಪ್ರಾಣಿಗಳಿದ್ದರೆ ಅವಕ್ಕೆ ಈ ಹೆಚ್ಚಿನ ಬೆಳಕು ಕಾಣಿಸಬಹುದು. ಇದಲ್ಲದೆ ಕಂಪನಗಳು ಅಲ್ಪವಾಗಿದ್ದರೆ ನಮಗೆ ಬೆಳಕು ಕಾಣಿಸುವುದಿಲ್ಲ, ಆದರೆ ಬೆಕ್ಕು, ಗೂಬೆ ಮೊದಲಾದ ಇನ್ನೂ ಕೆಲವು ಪ್ರಾಣಿಗಳಿಗೆ ಅದೇ ಬೆಳಕು ಕಾಣಿಸುವುದು. ನಮ್ಮ ದೃಷ್ಟಿಪಥವೆಂಬುದು ಈ ಪ್ರಾಣ ಚಲನೆಯು ನಡೆಯುವುದರಲ್ಲಿ ಒಂದು ಭಾಗ ಮಾತ್ರವಾಗಿರುತ್ತದೆ. ಉದಾಹರಣೆಗೆ ವಾಯುಮಂಡಲವನ್ನು ತೆಗೆದುಕೊಳ್ಳೋಣ. ಇದು ರಾಶಿಯ ಮೇಲೆ ರಾಶಿಯಾಗಿ ಬಿದ್ದಿರುವುದು. ಆದರೆ ಭೂಮಿಗೆ ಹತ್ತಿರವಿರುವ ರಾಶಿಗಳು ಮೇಲಿನ ರಾಶಿಗಳಿಗಿಂತ ಒತ್ತೊತ್ತಾಗಿರುತ್ತವೆ. ಮೇಲಮೇಲಕ್ಕೆ ಹೋದ ಹಾಗೆಲ್ಲ ವಿರಳ ವಿರಳವಾಗುತ್ತ ಬರುವುದು. ಅಥವಾ ಸಾಗರವನ್ನು ದೃಷ್ಟಾಂತಕ್ಕೆ ತೆಗೆದುಕೊಳ್ಳೋಣ. ಅದರೊಳಗೆ ಎಷ್ಟೆಷ್ಟು ಕೆಳಕ್ಕೆ ಹೋದರೆ ನೀರಿನ ಭಾರವು' ಅಷ್ಟಷ್ಟು ಹೆಚ್ಚಾಗುತ್ತ ಹೋಗುತ್ತದೆ. ಆದುದರಿಂದ ಸಮುದ್ರದ ತಳದಲ್ಲಿರುವ ಪ್ರಾಣಿಗಳು ಮೇಲಕ್ಕೆ ಬರುವುದಕ್ಕಾಗುವುದಿಲ್ಲ, ಮೇಲಕ್ಕೆ ಬಂದರೆ ಅವುಗಳ ಮೈ ಚೂರುಚೂರಾಗಿ ಒಡೆದು ಹೋಗುತ್ತದೆ. ಬ್ರಹಾಂಡವನ್ನೆಲ್ಲ ಆಕಾಶದ ಸಮುದ್ರವೆಂದು ಕಲ್ಪಿಸೋಣ. ಈ ಸಮುದ್ರದಲ್ಲಿ ಪ್ರಾಣಕಾರ್ಯದಿಂದ ಬೇರೆ ಬೇರೆ ಪ್ರಮಾಣದಲ್ಲಿ ಕಂಪಿಸುತ್ತಿರುವ ಆಕಾಶದ ಪದರಗಳು ಒಂದರ ಮೇಲೆ ಒಂದರಂತೆ ಒಡ್ಡಿರುವುವು, ಕೇಂದ್ರ ಸ್ಥಾನಕ್ಕೆ ಬಹುದೂರದಲ್ಲಿ ಕಂಪನಗಳ ವೇಗವು ಕಡಿಮೆಯಾಗಿಯೂ ಹತ್ತಿರಕ್ಕೆ ಬಂದ ಹಾಗೆಲ್ಲ ಹೆಚ್ಚಾಗಿಯೂ ಇರುವುದು. ಒಂದು ಜಾತಿಯ ಕಂಪನೆಯಿಂದ ಕೂಡಿರುವ ಭಾಗವು ಒಂದು ಲೋಕವೆನಿಸುವುದು. ಇಷ್ಟು ಲಕ್ಷ ಮೈಲಿಗಳವರೆಗೆ ಒಂದು ತರದ ಕಂಪನೆಯಿಂದ ಕೂಡಿರುವುದರಿಂದ ಒಂದು ಲೋಕ: ಅಲ್ಲಿಂದ ಮುಂದಕ್ಕೆ ಇಷ್ಟು ಲಕ್ಷ ಮೈಲಿಗಳವರೆಗೆ ಇನ್ನೂ ವೇಗವಾದ ಕಂಪನೆಯಿಂದ ಕೂಡಿರುವುದರಿಂದ ಮತ್ತೊಂದು ಲೋಕ: ಹೀಗೆ ಆಕಾಶ ಮಂಡಲವನ್ನು ಬೇರೆ ಬೇರೆ ಲೋಕಗಳಾಗಿ ವಿಂಗಡಿಸಿದೆಯೆಂದು ಕಲ್ಪಿಸೋಣ. ಆಗ ಒಂದು ಜಾತಿಯು ಕಂಪನಾವಿಶೇಷಗಳಿಂದ ಕೂಡಿದ ಒಂದು ಲೋಕದಲ್ಲಿರುವವರು ತಮ್ಮ ಲೋಕದಲ್ಲಿರುವವರನ್ನು ನೋಡಬಹುದೇ ಹೊರತು ತಮಗಿಂತ ಮೇಲಿನ ಲೋಕದಲ್ಲಿರುವವರನ್ನು ನೋಡಲಾರರು. ದುರ್ಬಿನು, ಭೂತಗನ್ನಡಿ ಇವುಗಳ ಸಹಾಯದಿಂದ ನಮ್ಮ ದೃಷ್ಟಿ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಆಗುವಂತೆ ಯೋಗಾಭಾಸದಿಂದ ಲೋಕಾಂತರದಲ್ಲಿರುವ ಕಂಪನಾಸ್ಥಿತಿಯನ್ನು ನಾವು ಪಡೆದುಕೊಂಡರೆ ಅಲ್ಲಿ ನಡೆಯುವದನ್ನು ನೋಡುವುದಕ್ಕಾಗುತ್ತದೆ. ಈ ಕೋಣೆಯಲ್ಲಿ ನಮಗೆ ಕಾಣದೆ ಇರುವ ಜಂತುಗಳು ಎಷ್ಟೋ ಇವೆಯೆಂದು ಭಾವಿಸೋಣ. ಅವುಗಳಲ್ಲಿ ಪ್ರಾಣವು ಒಂದಾನೊಂದು ಕಂಪನಾ ಸ್ಥಿತಿಯಲ್ಲಿರುವುದು; ನಮ್ಮಲ್ಲಿ ಬೇರೊಂದು ಸ್ಥಿತಿಯಿರುವುದು. ಅವುಗಳಲ್ಲಿರುವ ವೇಗವು ಜೋರಾಗಿಯೂ ನಮ್ಮಲ್ಲಿ ಕಡಿಮೆಯಾಗಿಯೂ ಇದೆಯೆಂದು ಇಟ್ಟುಕೊಳ್ಳೋಣ. ಅವುಗಳೂ ನಮ್ಮಂತೆಯೆ ಪ್ರಾಣದಿಂದಲೆ ಆಗಿರುತ್ತವೆ. ಎಲ್ಲರೂ ಪ್ರಾಣವೆಂಬ ಒಂದೇ ಸಾಗರದ ಅಲೆಗಳಾಗಿದ್ದರೂ ಅವರಲ್ಲಿ ಕಂಪನೆಯ ವೇಗವು ಬೇರೆ ಬೇರೆಯಾಗಿರುವುದು. ನನ್ನಲ್ಲಿರುವ ಕಂಪನೆಯು ಹೆಚ್ಚು ವೇಗವಾದರೆ ಈ ಲೋಕವೇ ನನ್ನ ಪಾಲಿಗೆ ಬೇರೆ ಆಗುವುದು. ಆಮೇಲೆ ನೀವು ನನಗೆ ಕಾಣಿಸುವುದೇ ಇಲ್ಲ: ನೀವು ಹೋಗಿ ಆ ಪ್ರಾಣಿಗಳು ಕಾಣಿಸುವುವು. ಈ ಮಾತು ನಿಜವೆಂಬುದು ನಿಮ್ಮಲ್ಲಿಯೂ ಕೆಲವರಿಗೆ ಗೊತ್ತಿರಬಹುದು. ಮನಸ್ಸನ್ನು ಹೆಚ್ಚಿನ ಸ್ಥಿತಿ ವಿಶೇಷಕ್ಕೆ ತರುವ ಪ್ರಕಾರಕ್ಕೆಲ್ಲ ಯೋಗದಲ್ಲಿ ಒಂದೇ ಹೆಸರು. ಇದನ್ನೇ ಸಮಾಧಿಯೆನ್ನುವರು. ಈ ಹೆಚ್ಚಿನ ವೇಗದ ಕಂಪನಾ ಸ್ಥಿತಿಗಳಲ್ಲಿ ಸಂವೇದನಾಸ್ಥಿತಿಗೆ ಸಮಾಧಿಯೆಂಬ ಮಾತಿನಲ್ಲಿಯೇ ಅಂತರ್ಗತವಾಗಿದೆ. ಈ ಸಮಾಧಿ ಸ್ಥಿತಿಯ ಕೆಳಗಿನ ಮೆಟ್ಟಿಲುಗಳಲ್ಲಿ ಇಂಥ ಪ್ರಾಣಿಗಳನ್ನು ನೋಡುವುದಕ್ಕೆ ಆಗುತ್ತದೆ. ಉತ್ತಮ ಸಮಾಧಿಯಲ್ಲಿ ಪರಮಾರ್ಥವೇ ಗೋಚರವಾಗುವುದು. ಈ ವಿಧ ವಿಧವಾದ ಜೀವರಾಶಿಗಳು ಯಾವುದರಿಂದ ಅಗಿರುವುದೋ ಆ ವಸ್ತುವೇ ಕಾಣುವುದು. ಆ ಮಣ್ಣಿನ ಮುದ್ದೆಯು ನಮಗೆ ಗೊತ್ತಾಗುವುದರಿಂದ ಜಗತ್ತಿನಲ್ಲಿರುವ ಮಣ್ಣಿನ ವಸ್ತುಗಳೆಲ್ಲವೂ ಗೊತ್ತಾದಂತಾಗುವುದು. (ರಾಯೋ-೩೩,೩೪,೩೫) ನಾವು ಅಸ್ತಿತ್ವದಲ್ಲಿರುವ ವಿಶ್ವ ಉದ್ದ, ಅಗಲ,ಎತ್ತರ ಎನ್ನುವ ಮೂರು ಆಯಾಮಗಳಿಂದಾಗಿದೆ. ಕೆಲವು ಸಮಸ್ಯೆಗಳಿಗೆ ಗಣಿತದ ಪರಿಹಾರಗಳಲ್ಲಿ ಮೂರಕ್ಕಿಂತಲೂ ಹೆಚ್ಚುಉತ್ತರಗಳು ದಕ್ಕುತ್ತವೆ. ಈ ಉತ್ತರಗಳನ್ನು ಮೂರು ಆಯಾಮಗಳಲ್ಲಿ ಪ್ರತಿನಿಧಿಸಲು ಸಾದ್ಯವಿಲ್ಲ. ಇದರ ಆಧಾರದ ಮೇಲೆ ಅಧಿಕ ಆಯಾಮಗಳ ಕಲ್ಪನೆಯನ್ನು ಹುಟ್ಟುಹಾಕಲಾಯಿತು. ಯಾವುದೇ ನಿರ್ದಿಷ್ಟ ಸಂಖ್ಯೆಯ ಆಯಾಮ ಹೊಂದಿರುವ ವಿಶ್ವ ಅದಕ್ಕಿಂತ ಕೆಳ ಸಂಖ್ಯೆಯ ಆಯಾಮ ಹೊಂದಿರುವ ಅನಂತ ವಿಶ್ವಗಳನ್ನು ಒಳಗೊಂಡಿರುತ್ತದೆ. ಮೂರಕ್ಕಿಂತ ಹೆಚ್ಚಿನ ಆಯಾಮಗಳನ್ನು ಮನುಷ್ಯರಿಂದ ಅರಿಯಲು ಸಾದ್ಯವಿಲ್ಲ. ಹತ್ತೊಂಬತ್ತನೇ ಶತಮಾನದಲ್ಲಿ ಕೆಲವರು ಪ್ರೇತಗಳು ನಮಗೆ ತಿಳಿಯಲಾಗದ ಹೆಚ್ಚುವರಿ ಆಯಾಮದಲ್ಲಿ ಇವೆಯೆನ್ನುವ ವಾದ ಮುಂದೊಡ್ಡಿದ್ದರು. ಇದರಂತೆಯೇ ವೈದ್ಯುತ್-ಕಾಂತೀಯ ಸಿದ್ಧಾಂತ ಮನುಷ್ಯನ ಕಣ್ಣಿಗೆ ಕಾಣುವ , ಕಾಣದಿರುವ ಕಂಪನ ವ್ಯಾಪ್ತಿಯನ್ನು ವಿವರಿಸಿದ್ದಿತು. ಹೀಗೆ ಊಹೆಯ ಪ್ರೇತಗಳ ಅಧಿಕ ಆಯಾಮ ಮತ್ತು ವಿಜ್ಞಾನದ ತರಂಗಾಂತರಗಳ ಪರಿಕಲ್ಪನೆಗಳನ್ನು ಕಲಬೆರಕೆ ಮಾಡಿ ಅದು ಸಾಧಿತ ಸತ್ಯ ಎಂಬಂತೆ ಬಿಂಬಿಸಿ ಯೋಗ , ಸಮಾಧಿ ಮುಂತಾದವುಗಳಿಗೆ ಸ್ವಾಮಿಗಳು ಹುಸಿ ವೈಜ್ಞಾನಿಕ ವಿವರಣೆ ನೀಡುತ್ತಾರೆ. ಕ್ವಾಂಟಂ ಬಲವಿಜ್ಞಾನ , ಸಾಪೇಕ್ಷವಾದ ಮುಂತಾದ ಆಧುನಿಕ ವಿಜ್ಞಾನದ ಸಾಧನೆಗಳನ್ನು ಬಳಸಿಕೊಂಡು ಅವು ವೇದ, ಉಪನಿಷತ್ತುಗಳಲ್ಲಿ ಉಲ್ಲೇಖಗೊಂಡಿವೆ ಎನ್ನುವ ಹುಸಿ ವಿಜ್ಞಾನದ ಶಾಖೆಗಳೇ ಕವಲು ಹೊಡೆಯುತ್ತಿವೆ. ಅವುಗಳೆಲ್ಲವುದರ ಮೂಲ ಸ್ವಾಮಿಗಳ ಈ ವಿವರಣೆಯಲ್ಲಿದೆ. (೧೧) ಯೋಗಿಗಳು ಹೇಳುವುದೇನೆಂದರೆ, ಬೆನ್ನು ಮೂಳೆಯಲ್ಲಿ ಇಡ, ಪಿಂಗಳ ಎಂಬ ಎರಡು ನಾಡಿಗಳಿವೆ.ಬೆನ್ನು ಹುರಿಯಲ್ಲಿ ಸುಷುಮ್ನ ಎನ್ನುವ ಪೊಳ್ಳು ದಾರಿಯಿದೆ. ಇದರ ಕೆಳಗಡೆಯಲ್ಲಿ ಕುಂಡಲಿನಿ ಪದ್ಮವಿರುವುದೆಂದು,ತ್ರಿಕೋಣಾಕಾರವಾಗಿರುವುದೆಂದು ಯೋಗಿಗಳು ಹೇಳುತ್ತಾರೆ. ಇದರಲ್ಲಿ ಕುಂಡಲಿನಿ ಎಂಬ ಶಕ್ತಿಯು ಸಿಂಬೆಯಂತೆ ಕೂತಿರುವುದಂತೆ. ಇದು ಯೋಗಿಗಳ ಸಾಂಕೇತಿಕ ಭಾಷೆ. ಆ ಕುಂಡಲಿನಿ ಎಚ್ಚೆತ್ತರೆ ಈ ಪೊಳ್ಳದಾರಿಯಲ್ಲಿ ನುಗ್ಗುವುದಕ್ಕೆ ಹೋಗುತ್ತದೆ. ಅದು ಹಾಗೆ ಮೇಲಕ್ಕೆ ಹತ್ತಿದ ಹಾಗೆಲ್ಲ ಮನಸ್ಸಿನ ಪದರಗಳು, ಒಂದಾರ ನಂತರ ಒಂದು ಬಿಚ್ಚಿ ಯೋಗಿಗೆ ವಿವಿಧ ಜ್ಞಾನ, ವಿಚಿತ್ರವಾದ ಸಿದ್ಧಿಗಳು ದಕ್ಕುತ್ತವೆ. ಯಾವಾಗ ಕುಂಡಲಿನಿ ಮೆದುಳನ್ನು ಸೇರುತ್ತದೆಯೋ ಆಗ ಯೋಗಿಯು ಶರೀರ, ಮನಸ್ಸಿನಿಂದಲೂ ಸಂಪೂರ್ಣವಾಗಿ ಬೇರ್ಪಟ್ಟು ಮುಕ್ತಾತ್ಮನಾಗುವನು. ಬೆನ್ನು ಮೂಳೆಯ ರಚನೆಯು ಒಂದು ವಿಲಕ್ಷಣ ರೀತಿಯಲ್ಲಿರುವುದು. ಇಂಗ್ಲೀಷಿನ (8) ಎಂಟೆಂಬ ಅಂಕೆಯನ್ನು 8 ಹೀಗೆ ಅಡ್ಡಡ್ಡವಾಗಿ ಹಾಕಿದರೆ ಎರಡು ಭಾಗಗಳು ನಡುವೆ ಸೇರಿಕೊಂಡಿರುತ್ತವೆ. ಎಂಟರ ಮೇಲೆ ಎಂಟು ಬರುವಂತೆ ಒಂದರ ಮೇಲೊಂದನ್ನು ಸೇರಿಸಿದರೆ ಬೆನ್ನು ಹುರಿಯಂತೆ ಕಾಣುವುದು. ಎಡಗಡೆಯೆ ಇಡ, ಬಲಗಡೆ ಪಿಂಗಳ.ಬೆನ್ನು ಹುರಿಯ ಮಧ್ಯದಲ್ಲಿರುವ ಪೊಳ್ಳು ಕೊಳವಿಯೆ ಸುಷುಮ್ನಾ. ಬೆನ್ನಿನ ಕಿಬ್ಬದಿಯಲ್ಲಿರುವ ಎಲುಬುಗಳಲ್ಲಿ ಬೆನ್ನು ಹುರಿಯು ಸೂಕ್ಷ್ಮವಾದ ದಾರವಾಗಿ ಕಾಣುತ್ತಿರುವುದು. ಆ ದಾರದಲ್ಲಿಯೂ ಕೂಡ ಪೊಳ್ಳಾದ ದ್ವಾರವಿದ್ದೇ ಇರುವುದು; ಆದರೆ ಬಹು ಸಣ್ಣದಾಗಿರುತ್ತದೆ. ಈ ದ್ವಾರವು ತೀರ ಕೆಳಗಡೆಯಲ್ಲಿ ಮುಚ್ಚಿರುವುದು. ಇಲ್ಲಿ ಅಧೊಮಂಡಲವೆಂಬ ನರಮಂಡಲವಿರುವುದು. ಇದು ತ್ರಿಕೋಣಾಕಾರವಾಗಿರುವುದೆಂದು ಶರೀರಶಾಸ್ತ್ರದಲ್ಲಿ ಹೇಳಿರುವುದು. ಬೆನ್ನು ಮೂಳೆಯಲ್ಲಿ ಅಲ್ಲಲ್ಲಿರುವ ಮಂಡಲಗಳನ್ನೆ ಯೋಗಿಯು ಹೇಳುವ ಕಮಲಗಳೆನ್ನಬಹುದು. ಯೋಗಿಯು ಇದರಲ್ಲಿ ಅನೇಕ ಚಕ್ರಗಳನ್ನು ಕಲ್ಪಿಸಿಕೊಂಡಿರುತ್ತಾನೆ. ಇವುಗಳಲ್ಲಿ ಮೂಲಾಧಾರವೆಂಬುದು ಮೊದಲನೆಯದು: ಮೆದುಳಿನಲ್ಲಿರುವ ಸಹಸ್ರಾರವೆಂಬ ಸಾವಿರ ದಳದ ಕಮಲವೇ ಕೊನೆಯದು. ಬೇರೆ ಬೇರೆ ಮಂಡಲಗಳನ್ನೆ ಈ ಕಮಲಗಳೆಂದು ನಾವು ಇಟ್ಟುಕೊಂಡರೆ ಯೋಗಿಯ ಅಭಿಪ್ರಾಯವನ್ನು ಈಗಿನ ಶರೀರ ಶಾಸ್ತ್ರ ರೀತಿಯಿಂದ ತಿಳಿದುಕೊಳ್ಳಬಹುದು. (ರಾಯೋ-೩೭) (ಪ್ರಾಣಾಯಾಮದಿಂದ) ಮೊದಲು ತೋರುವ ಚಿಹ್ನೆಗಳಲ್ಲಿ ಆರೋಗ್ಯವೊಂದು, ಸುಸ್ವರವೊಂದು. ಕಂಠದಲ್ಲಿರುವ ಅಪಸ್ವರಗಳೆಲ್ಲ ಮಾಯವಾಗುವುವು ಇನ್ನೂ ಎಷ್ಟೋ ಪ್ರಯೋಜನಗಳಾಗುವುವು. ಆದರೆ ಇವೆರಡೂ ಮೊದಲು ತೋರುವುವು. ಬಿಡದೆ ಅಭ್ಯಾಸ ಮಾಡುವವರಿಗೆ ಇನ್ನೂ ಕೆಲವು ಚಿಹ್ನೆಗಳು ಏಕರೂಪವಾದ ನಾದವು ತೋರುವವು. ಕೆಲವು ಸಾರಿ ದೂರದಲ್ಲಿ ಅನೇಕ ಗಂಟೆಗಳನ್ನು ಒಂದೇ ಕಾಲಕ್ಕೆ ಬಾರಿಸಿದಂತೆ ಏಕರೂಪವಾದ ನಾದವು ಕೇಳಬರುವುದು. ಕೆಲವು ಸಾರಿ ಸಣ್ಣ ತೇಜೋ ಬಿಂದುಗಳು ಹಾರಾಡುತ್ತ ದೊಡ್ಡ ದೊಡ್ಡದಾಗಿ ತೋರುವುವು. ಈ ಕುರುಹುಗಳು ತೋರಿದರೆ ಅಭ್ಯಾಸವು ಚೆನ್ನಾಗಿ ನಡೆದಿದೆಯೆಂದು ತಿಳಿದುಕೊಳ್ಳಬೇಕು. ಇಡಾ-ಸುಷುಮ್ನ-ಪಿಂಗಳ ಎನ್ನುವ ನಾಡಿಗಳು ನಿಜವಾಗಿಯೂ ದೇಹದಲ್ಲಿ ಇರುವುವೋ ಅಥವಾ ಅವು ಅಧ್ಯಾತ್ಮಿಕ ಸಾಂಕೇತಿಕ ಕಲ್ಪನೆಗಳೋ ಎನ್ನುವ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಸ್ವಾಮಿಗಳು ಅದು 8 ರ ಗಂಟಿನಂತೆ ಇರುತ್ತದೆಯೆಂದು , ನಡುವೆ ಟೊಳ್ಳಿನ ಜಾಗವಿದೆಯೆಂದು ಹೇಳುವುದರಿಂದ ಅವು ಭೌತಿಕ ಅಸ್ತಿತ್ವದಲ್ಲಿ ಇರುತ್ತವೆಯೆಂದು ಭಾವಿಸಿದಂತಿದೆ. ಇದಕ್ಕೆ ಶರೀರಶಾಸ್ತ್ರದ ಬೆಂಬಲವಿಲ್ಲ. ಅವರ ಎಲ್ಲ ಹೇಳಿಕೆಗಳು ಮಾತಿನ ವರಸೆ (Tautology) ಹೊರತು ಪುರಾವೆಗಳಿಲ್ಲ. ಶರೀರಶಾಸ್ತ್ರ ಬೆನ್ನು ಹುರಿ , ಅದರ ಸ್ಥಾನ , ರಚನೆ , ಅದರೊಳಗಿನಿಂದ ಸಾಗುವ ಮುಖ್ಯ ನರ , ಅದರಿಂದ ದೇಹದ ಎಡ , ಬಲಕ್ಕೆ ಕವಲೊಡೆಯುವ ಇತರ ನರಜಾಲಗಳ ಬಗ್ಗೆ ಖಚಿತ ತಿಳಿವಳಿಕ ಹೊಂದಿದೆ. ಕಾರ್ಯಗಳಿಗೆ ಅನುಗುಣವಾಗಿ ನರಗಳನ್ನು ಎರಡು ಗುಂಪುಗಳಲ್ಲಿ ಗುರುತಿಸುತ್ತದೆ. ಎಲ್ಲ ನರಗಳು ಸಂವೇದಕ ಮತ್ತು ಚಾಲಕ ಎರಡರಲ್ಲಿ ಒಂದು ಗುಂಪಿಗೆ ಸೇರುತ್ತವೆ. ಬೆನ್ನು ಹುರಿಯೊಳಗೆ ಸಾಗುವ ಮುಖ್ಯ ನರ ಮೆದುಳಿನಲ್ಲಿ ಕೊನೆಗೊಂಡು ದೇಹದ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಯೋಗಿಗಳು ಹೇಳುವ ನಾಡಿಗಳು ನಿಜವಾಗಿಯೂ ದೇಹದ ಭಾಗಗಳಾಗಿದ್ದರೆ ಅವುಗಳನ್ನು , ಅವುಗಳ ರಚನೆಯನ್ನು , ಕಾರ್ಯವನ್ನು ಗುರುತಿಸುವು ಸಾದ್ಯ. ಈ ನರಗಳು ಹಂತ, ಹಂತವಾಗಿ ಕಂತಿನಲ್ಲಿ ಕ್ರಿಯಾಶೀಲವಾಗುವುದಿಲ್ಲ. ಬಾಹ್ಯ ಪ್ರಚೋದನೆಗಳಿಗೆ ಒಳಪಟ್ಟ ತಕ್ಷಣ ಅವು ಅದನ್ನು ಮೆದುಳಿಗೆ ತಲುಪಿಸುತ್ತವೆ ಇಲ್ಲ ಮೆದುಳಿನಿಂದ ನಿರ್ದೇಶಕ ಸಂದೇಶಗಳನ್ನು ನಿರ್ದಿಷ್ಟ ಅಂಗದ , ನಿರ್ದಿಷ್ಟ ಜಾಗಕ್ಕೆ ತಲುಪಿಸುತ್ತವೆ. ಯೋಗಿಗಳು ಹೇಳುವಂತೆ ನರಗಳಲ್ಲಿ ಮಾನಸಿಕ ಕ್ರಿಯೆಗೆ ಸಂಬಂಧ ಪಟ್ಟ ಯಾವುದೇ ಬಚ್ಚಿಟ್ಟ ಶಕ್ತಿಯಾಗಲಿ ಇಲ್ಲ. ಹಾಗೆ ಅದನ್ನು ಯಾವುದೇ ರೂಪದಲ್ಲಿ ಬಚ್ಚಿಡಲು ಸಾದ್ಯವಾಗಿದ್ದರೆ ಅದನ್ನು ಗುರುತಿಸುವುದು ಸಾದ್ಯ. ಕುಂಡಲಿನಿ ಹಂತ ,ಹಂತದಲ್ಲಿ ಮೇಲೆರುತ್ತದೆ ಎನ್ನುವ ಕಲ್ಪನೆ ಇದೆ. ಈ ಕಲ್ಪನೆ ತಪ್ಪು. ಏಕೆಂದರೆ ಭೌತಿಕ ಅಸ್ತಿತ್ವವಿರುವ ಯಾವುದೇ ನರ ಕಂತಿನಲ್ಲಿ ಅಥವಾ ಹಂತಗಳಲ್ಲಿ ಮೆದುಳಿಗೆ ಸಂದೇಶ ರವಾನಿಸುವುದಿಲ್ಲ. ಅದು ತತ್ ಕ್ಷಣವೇ ಆಗುತ್ತದೆ. ಆದ್ದರಿಂದ ಇಡಾ, ಸುಷುಮ್ನ, ಪಿಂಗಳ ನಾಡಿಗಳು ಕಲ್ಪನೆಯಲ್ಲಿಯೆವೇ ಹೊರತು ನಿಜವಾಗಿ ಅಸ್ತಿತ್ವದಲ್ಲಿಲ್ಲ. ಈ ನಾಡಿಗಳು ಅಧ್ಯಾತ್ಮಿಕ ಪರಿಕಲ್ಪನೆಗಳೇ ಆಗಿದ್ದರೆ ಕುಂಡಲಿನಿ ಬಗ್ಗೆ ಚರ್ಚೆ ನಡೆಸುವುದೇ ವ್ಯರ್ಥ. ಏಕೆಂದರೆ ಯಾವುದೇ ಅಧ್ಯಾತ್ಮದ ಪರಿಕಲ್ಪನೆಯನ್ನು ಪರೀಕ್ಷಿಸಲು , ಸಾಕ್ಷ್ಯಾಧಾರಗಳಿಂದ ಸಮರ್ಥಿಸಲು ಸಾಧ್ಯವಿಲ್ಲ. ಇನ್ನೂ ಕುತೂಹಲಕರದ ಅಂಶವೆಂದರೆ ಕುಂಡಲಿನಿ ಎಚ್ಚೆತ್ತಂತೆ ವಿಚಿತ್ರ ಅನುಭವಗಳಾಗುತ್ತವೆ ಸಿದ್ದಿಗಳು ದಕ್ಕುತ್ತವೆ ಎನ್ನುವುದು. ಈ ಅನುಭವಗಳು ಹಿಂದೆ ಪಡೆದ ಇಂದ್ರಿಯಗಳ ಅನುಭವಗಳ ಪರಿಮಿತಿಯಲ್ಲೇ ಇರುವುದನ್ನು (ಶಬ, ಸ್ಪರ್ಶ, ರಸ, ರೂಪ, ಗಂಧ) ಮತ್ತು ಸಿದ್ಧಿಗಳು (ಅಣಿಮಾ, ಮಹಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶೀತ್ವ) ಇವುಗಳ ಭೌತಿಕ ಸ್ವರೂಪವನ್ನು ಕಡೆಗಣಿಸುವಂತಿಲ್ಲ. ಎಂದರೆ ಕುಂಡಲಿನಿ ನಿಜವಾಗಿಯೂ ಇದ್ದು ಅದು ಸಿದ್ಧಿಗಳ ರೂಪದಲ್ಲಿ ಭೌತಿಕ ಜಗತ್ತಿನ ಮೇಲೆ ಪರಿಣಾಮ ಬೀರುವಂತಿದ್ದರೆ , ಆ ಪರಿಣಾಮವನ್ನು ಅಳೆದು ವೈಜ್ಞಾನಿಕ ಪರಿಭಾಷೆಯಲ್ಲಿ ಕುಂಡಲಿನಿಯನ್ನು ವಿವರಿಸುವುದು ಸಾದ್ಯ. ಇಂದ್ರಿಯ ಪ್ರಚೋದನೆ ಇಲ್ಲದಿದ್ದರೂ ಪ್ರಾಣಾಯಾಮದಿಂದ ಕೇಳಿಸುವ ಸ್ವರ , ಭಾಸವಾಗುವ ವಾಸನೆ ಎಲ್ಲವೂ ಮಾನಸಿಕ ಭ್ರಮೆಗಳ ಪಟ್ಟಿಯಲ್ಲಿ ಬರುತ್ತವೆ. ನರಗಳಲ್ಲಿ ಎರಡು ಬಗೆಯ ಕಾರ್ಯಗಳಿವೆ. ಒಂದು ಒಳಕ್ಕೆ ಹೋಗುವುದು. ಇನ್ನೊಂದು ಹೊರಕ್ಕೆ ಹೋಗುವುದು. ಒಂದು ಜ್ಞಾನ ವಾಹಿನಿಯಾಗಿರುವುದು ಇನ್ನೊಂದು ಕ್ರಿಯಾವಾಹಿನಿಯಾಗಿರುವುದು. ಒಂದು ಕೇಂದ್ರದ ಕಡೆ ಹೋಗುವುದಾಗಿಯೂ ಇನ್ನೊಂದು ಕೇಂದ್ರವನ್ನು ಬಿಟ್ಟು ಹೊರಡುವುದಾಗಿಯೂ ಇರುವುವು. ಒಂದರಿಂದ ಮೆದುಳಿಗೆ ಇಂದ್ರಿಯಗಳ ಜ್ಞಾನ ತಿಳಿಯುವುದು. ಇನ್ನೊಂದು ಕಾರ್ಯದಿಂದ ಮೆದುಳಿನಿಂದ ಶರೀರದ ಹೊರಕ್ಕೆ ವೃತ್ತಿಗಳು ಹೊರಗೆ ಬರುವುವು. ಈ ಎಲ್ಲ ಕಾರ್ಯಗಳೂ ಮೆದುಳಿಗೆ ಸಂಬಂಧಪಟ್ಟಿರುತ್ತದೆ. ಮುಂದೆ ಹೇಳಿದ ಸಂಗತಿಗಳನ್ನು ಚೆನ್ನಾಗಿ ತಿಳಿಯಲು ಅನುಕೂಲಕರವಾಗಬೇಕಾದರೆ ನೆನಪಿನಲ್ಲಿಡಬೇಕಾದ ವಿಚಾರಗಳು ಇನ್ನೂ ಕೆಲವಿವೆ. ಈ ಬೆನ್ನು ಹುರಿಯು ಮೆದುಳಿನಲ್ಲಿ ಒಂದು ಬಗೆಯ ಬುರುಡೆಯಾಗಿ ಪರಿಣಮಿಸಿದೆ. ಇದು ಮೆದುಳಿಗೆ ಸೇರಿಕೊಂಡಿಲ್ಲ. ಇದರ ಒಳಗಡೆ ಒಂದು ದ್ರವದಲ್ಲಿ ತೇಲಾಡಿಕೊಂಡಿರುತ್ತದೆ. ಹೀಗಿರುವುದರಿಂದ ತಲೆಗೆ ಏನಾದರೂ ಪೆಟ್ಟು ತಗುಲಿದರು ಆ ಶಕ್ತಿಯು ದ್ರವದಲ್ಲಿ ಚದರಿಹೋಗುತ್ತದೆಯೇ ಹೊರತು ಬುರುಡೆಗೇನೂ ಅಪಾಯವಾಗುವುದಿಲ್ಲ. ಈ ವಿಷಯವು ಮುಂದಿನ ಗ್ರಂಥ ಭಾಗಕ್ಕೆ ಬಹಳ ಬೇಕಾಗುವುದು. (ರಾಯೋ-೩೭,೩೮) ನರಗಳಲ್ಲಿ ಎರಡು ಗುಂಪುಗಳಿರುವುದು , ಅವುಗಳ ವೈದ್ಯುತ್-ರಾಸಾಯನಿಕ ಕ್ರಿಯಾಶೀಲತೆ , ಆವರ್ತ ಧಾಟಿಯಲ್ಲಿ ಸಂವೇದನೆಗಳನ್ನು ಸಾಗಿಸುವುದು ಮೆದುಳಿನಿಂದ ನಿಯಂತ್ರಿಸಲ್ಪಡುತ್ತಿರುವುದು , ಮೆದುಳಿನ ರಚನೆ ಎಲ್ಲವೂ ಆಧುನಿಕ ವಿಜ್ಞಾನದ ಶೋಧನೆಗಳು. ಇವು ಯಾವುವೂ ಯೋಗಿಗಳಿಗೆ ಗೊತ್ತಿರಲಿಲ್ಲ. ಅವರು ಅಂಗಚ್ಛೇದನ ಮಾಡಿಯಾಗಲಿ, ಮೆದುಳಿನ ಕ್ರಿಯಾಶೀಲತೆಯನ್ನು ಅಳೆದಾಗಲಿ ವಿವರಗಳನ್ನು ಅರಿತಿರಲಿಲ್ಲ. ಸ್ವಾಮಿಗಳು ಆಧುನಿಕ ತಿಳಿವಳಿಕೆಯನ್ನು ಆ ತಿಳಿವಳಿಕೆಯೇ ಇಲ್ಲದಿದ್ದ ಯೋಗದೊಂದಿಗೆ ಬೆರೆಸುವುದರ ಮೂಲಕ ಹುಸಿ ವೈಜ್ಞಾನಿಕತೆಯ ದಾರಿ ತುಳಿದಿದ್ದಾರೆ. (೧೨) ಇನ್ನು ಪ್ರಕೃತಿಶಾಸ್ತ್ರದಿಂದ ಒಂದು ಸಂಗತಿಯನ್ನು ತೆಗೆದುಕೊಳ್ಳೋಣ. ವಿದ್ಯುಚ್ಛಕ್ತಿಯೆಂಬುದು ಅದರ ಸಂಬಂಧವಾದ ಇನ್ನೂ ಶಕ್ತಿಗಳ ವಿಚಾರವಾಗಿಯೂ ನಾವೆಲ್ಲರೂ ಕೇಳಿದ್ದೇವಷ್ಟೆ ವಿದ್ಯುಚ್ಛಕ್ತಿ ಎಂದರೇನೆಂಬುದು ಯಾರಿಗೂ ಗೊತ್ತೇ ಇಲ್ಲ. ಇದುವರೆಗೆ ಗೊತ್ತಾಗಿರುವುದೇನೆಂದರೆ ಅದೊಂದು ಬಗೆಯ ಚಲನೆ. ಈ ಪ್ರಪಂಚದಲ್ಲಿ ಇನ್ನೂ ಅನೇಕ ಬಗೆಯ ಚಲನೆಗಳಿವೆ. ಅವುಗಳಿಗೂ ವಿದ್ಯುಚ್ಛಕ್ತಿಗೂ ಹೆಚ್ಚು ಕಡಿಮೆ ಏನು ? ಇಗೋ , ಈ ಮೇಜಿನಲ್ಲಿ ಚಲನೆಯಾಗುತ್ತಿದೆಯೆಂದು ಕಲ್ಪಿಸೋಣ. ಎಂದರೆ ಇದರಲ್ಲಿರುವ ಅಣುಗಳು ನಾನಾ ಕಡೆಯಲ್ಲಿ ಕಂಪಿಸುತ್ತಿವೆಯೆಂದು ಇಟ್ಟುಕೊಳ್ಳಿ. ಇವುಗಳೆಲ್ಲ ಒಂದೇ ಕಡೆಗೆ ಚಲಿಸಿದರೆ ವಿದುಚ್ಛಕ್ತಿಯಾಗುವುದು. ವಿದುಚ್ಛಲನೆಯಿಂದ ಯಾವ ವಸ್ತುವಿನಲ್ಲಿಯೇ ಆಗಲಿ ಒಂದೇ ದಿಕ್ಕಿನಲ್ಲಿ ಚಲಿಸಿದಂತಾಗುತ್ತದೆ. ಒಂದು ಕೋಣೆಯೊಳಗಿರುವ ವಾಯು ಕಣಗಳೆಲ್ಲ ಒಂದೇ ಕಡೆಯಲ್ಲಿ ಚಲಿಸುವಂತೆ ಮಾಡಿದರೆ ಆ ಕೋಣೆಯೇ ಒಂದು ವಿದ್ಯುಚ್ಛಕ್ತಿಗೆ ದೊಡ್ಡ ತವರು ಮನೆಯಾಗುವುದು. ಇಲ್ಲಿ ಶರೀರ ಶಾಸ್ತ್ರದಲ್ಲಿರುವ ಇನ್ನೊಂದು ವಿಷಯವನ್ನು ನಾವು ನೆನಪಿನಲ್ಲಿಡಬೇಕು. ಶ್ವಾಸೋಚ್ಛ್ವಾಸ ಪದ್ಧತಿಯು ಎಂದರೆ ಉಸಿರಾಟವು ಯಾವ ಸ್ಥಾನದ ಅಧೀನವಾಗಿರುವುದೊ ಅದೇ ಸ್ಥಾನಕ್ಕೆ ನರಗಳ ಕಾರ್ಯಗಳನ್ನು ಸ್ವಲ್ಪ ಮಟ್ಟಿಗೆ ಒಳಪಟ್ಟಿರುತ್ತದೆ. ಈಗ ಶ್ವಾಸಕ್ರಮವನ್ನು ಏತಕ್ಕೆ ಅಭ್ಯಾಸಮಾಡಬೇಕೆಂಬುದನ್ನು ವಿಚಾರ ಮಾಡೋಣ. ಇದರಿಂದಾಗುವ ಮೊದಲನೆಯ ಪ್ರಯೋಜನವೇನೆಂದರೆ ಒಂದೇ ಸಮನಾಗಿ ಉಸಿರಾಡುವುದರಿಂದ ಶರೀರದಲ್ಲಿರುವ ಕಣಗಳೆಲ್ಲ ಒಂದೇ ಕಡೆ ಸಂಚಿತವಾಗುವ ಸಂಭವವಿರುತ್ತದೆ. ಮನಸ್ಸು ಇಟ್ಫಾಶಕ್ತಿಯಾಗುವಾಗ ವೃತ್ತಿಗಳು ವಿದ್ಯುಚ್ಛಕ್ತಿಯಂತೆ ಚಲಿಸುತ್ತವೆ. ನರಗಳನ್ನು ವಿದ್ಯುತ್ಪ್ರವಾಹಕ್ಕೆ ಅವು ಧ್ರುವೀಕರಣಗೊಳ್ಳುತ್ತವೆ. ಇದರಿಂದ ಇಚ್ಛಾಶಕ್ತಿಯು ನರಗಳ ವೃತ್ತಿಯಾಗುವಾಗ ಒಂದು ಬಗೆಯ ವಿದ್ಯುಚ್ಛಕ್ತಿಯಾಗುವುದೆಂದು ಸ್ಪಷ್ಟವಾಗುವುದು. ಶರೀರದಲ್ಲಿ ಎಲ್ಲಾ ಕ್ರಿಯೆಗಳೂ ಸಂಪೂರ್ಣವಾಗಿ ಒಗ್ಗೂಡಿಸಿದರೆ ಶರೀರವೆಂಬುದು ಸಂಕಲ್ಪ ಶಕ್ತಿಯ ಒಂದು ದೊಡ್ಡ ಉತ್ಪತ್ತಿ ಸ್ಥಾನವಾಗುವುದು. ಈ ಮಹಾಸಂಕಲ್ಪವೇ ಯೋಗಿಗೆ ಬೇಕಾದುದು. ಶ್ವಾಸವನ್ನು ಅಭ್ಯಾಸ ಮಾಡುವುದೇಕೆಂಬುದಕ್ಕೆ ಇದು ಶರೀರಶಾಸ್ತ್ರ ರೀತಿಯಿಂದ ಕೊಟ್ಟ ಉತ್ತರವಾಗಿದೆ. ಈ ಅಭ್ಯಾಸದಿಂದ ಶರೀರದಲ್ಲಿ ಕಾರ್ಯಗಳು ಹೊಂದುಗಡೆಯಾಗುತ್ತವೆ. ఆಗ ಶ್ವಾಸೋಚ್ಚಾಸದ ಅಧಿಷ್ಠಾನದ ಮೂಲಕ ಇತರ ಸ್ಥಾನಗಳೂ ನಮ್ಮ ವಶವಾಗುತ್ತವೆ. (ರಾಯೋ-೩೮,೩೯) ಮನುಷ್ಯನಿಗೆ ವಿದ್ಯುತ್ತವಾಹವನ್ನು ಕಳುಹಿಸುವುದಕ್ಕೆ ತಂತಿಯೇ ಆಗಬೇಕು. ಆದರೆ ಪ್ರಪಂಚದಲ್ಲಿ ದೊಡ್ಡ ದೊಡ್ಡ ವಿದುತ್ಪ್ರವಾಹಗಳೂ ಹೋಗುತ್ತಿವೆ. ಅಲ್ಲಿ ಯಾವ ತಂತಿಯೂ ಇಲ್ಲ, ಇದರಿಂದ ತಂತಿಯು ನಿಜವಾಗಿ ಅವಶ್ಯಕವಿಲ್ಲವೆಂದೂ, ಆದರೆ ನಮಗೆ ಅದನ್ನು ಬಿಟ್ಟರೆ ಗತಿಯಿಲ್ಲವಾದುದರಿಂದ ಅದನ್ನು ಉಪಯೋಗಿಸಲೇ ಬೇಕಾಗಿರುತ್ತದೆಂದೂ ಗೊತ್ತಾಗುವುದು. ಇದರಂತೆ ಶರೀರದ ಎಲ್ಲ ವೃತ್ತಿ ಜ್ಞಾನಗಳೂ ಕ್ರಿಯೆಗಳೂ ಮೆದುಳಿಗೂ ,ಮೆದುಳಿನಿಂದ ಹೊರಕ್ಕೂ ಈ ನರಗಳೆಂಬ ತಂತಿಗಳ ಮೂಲಕವಾಗಿಯೇ ಸಾಗುತ್ತಿವೆ. ಬೆನ್ನು ಹುರಿಯಲ್ಲಿರುವ ಜ್ಞಾನವಾಹಿ ನರಗಳೆ ಯೋಗಿಗಳು ಹೇಳುವ ಇಡ ಮತ್ತು ಪಿಂಗಳ. ಇವೇ ಶರೀರದಲ್ಲಿ ಒಳಕ್ಕೂ , ಹೊರಕ್ಕೂ ವೃತ್ತಿ ಪ್ರವಾಹಗಳು ಹೋಗುವ ಮುಖ್ಯದ್ವಾರಗಳು, ಆದರೆ ಮನಸ್ಸು ಯಾವ ತಂತಿಯೂ ಬೇಕಿಲ್ಲದೆ ಜ್ಞಾನವನ್ನು ಏತಕ್ಕೆ ಕಳುಹಿಸಬಾರದು? ಏತಕ್ಕೆ ಕ್ರಿಯಾ ಶಕ್ತಿಯನ್ನು ತೋರಿಸಬಾರದು ಬಾಹ್ಯ ಪ್ರಪಂಚದಲ್ಲಿ ಹೀಗೆಯೆ ನಡೆಯುತ್ತಿರುವುದಲ್ವ? ಹೀಗೆ ತಂತಿ ಇಲ್ಲದೆ ಜ್ಞಾನಕ್ರಿಯೆಗಳನ್ನು ನಡೆಸುವ ಶಕ್ತಿ ಬಂದರೆ ಭೌತಿಕ ಬಂಧವೇ ಹೋಗುವುದೆಂದು ಯೋಗಿಗಳು ಹೇಳುವರು. ಇದನ್ನು ಮಾಡುವುದಕ್ಕೆ ಈ ಪ್ರವಾಹವನ್ನು ಸುಷುಮ್ನಾದೊಳಕ್ಕೆ ಕಳಿಸಬೇಕು. ಆಗ ಕಷ್ಟವೆಲ್ಲ ತಪ್ಪುವುದು. ಮನಸ್ಸು ಈ ನರ ಮಂಡಲವೆಂಬ ಬಲೆಯನ್ನು ಕಟ್ಟಿಕೊಂಡಿರುವುದು. ಅದರ ಕೆಲಸಕ್ಕೆ ಯಾವ ತಂತಿಯ ಅಪೇಕ್ಷೆಯೂ ಇಲ್ಲದೆ ಇರಬೇಕಾದರೆ ಈ ಬಲೆಯನ್ನು ಕಡಿದು ಹಾಕಬೇಕು. ಆಗಲೆ ನಾವು ಸರ್ವಜ್ಞರಾಗುವೆವು. ಶರೀರ ಬಂಧವಿರುವುದಿಲ್ಲ, ಆದುದರಿಂದಲೆ ಸುಷುಮ್ನಾವನ್ನು ಸ್ವಾಧೀನ ಪಡಿಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಯಾವ ನರಗಳನ್ನೂ ತಂತಿಯ ಸ್ಥಾನದಲ್ಲಿ ಉಪಯೋಗಿಸದೆ ಈ ಪೊಳ್ಳು ಕೊಳವೆಯು ಮೂಲಕವೇ ಮನೋವೃತ್ತಿಗಳನ್ನು ಕಳುಹಿಸುವುದಕ್ಕಾದರೆ ಎಲ್ಲಾ ಕಷ್ಟವೂ ಬಿಡುಗಡೆಯಾಗುವುದೆಂದೂ ಹೀಗೆ ಮಾಡುವುದಕ್ಕೂ ಸಾಧ್ಯವಾಗುತ್ತದೆಯೆಂದೂ ಯೋಗಿಗಳು ಹೇಳುವರು. (ರಾಯೋ-೩೮,೩೯) ಇಲ್ಲಿ ಸ್ವಾಮಿಗಳು ಇಡಾ, ಪಿಂಗಳ ಎನ್ನುವ ನಾಡಿಗಳನ್ನು ಭೌತಿಕವಾಗಿ ಬೆನ್ನು ಹುರಿಯಲ್ಲಿ ಗುರುತಿಸುತ್ತಾರೆ. ಎಂದರೆ ಇವೆರಡರ ನಡುವೆ ಸುಷುಮ್ನಾ ನಾಡಿ ಮತ್ತು ಅದರ ತಳದಲ್ಲಿ ಮಲಗಿದ ಕುಂಡಲಿನಿ ಇರಬೇಕು. ಇವುಗಳನ್ನು ವೈಜ್ಞಾನಿಕ ವಿಧಾನದಿಂದ ಪರೀಕ್ಷಿಸಬಹುದು ಎಂದಂತಾಯಿತು. ಆದರೆ ತಕ್ಷಣವೇ ಇವು ಪರಿಶೀಲನೆಗೆ ಒಳಪಡದ ಪ್ರಾಣದ ಕಲ್ಪನೆಯೊಂದಿಗೆ ತಳುಕು ಹಾಕಲಾಗಿದೆ. ಸ್ವಾಮಿಗಳು ಅಸಂಸಂದಲ್ಲಿ ಪರ್ಯಾಯ ವಿದ್ಯುತ್ ಪರಿಚಯಿಸಿದ ಖ್ಯಾತ ವೈದ್ಯುತ್ ಇಂಜಿನಿಯರ್ ನಿಕೊಲಾಸ್ ಟೆಸ್ಲಾನನ್ನು ಭೇಟಿಮಾಡಿದ್ದರು. ಆಗ ಹಾಗೂ ವಿವಿಧ ಮೂಲಗಳಿಂದ ವಿದ್ಯುತ್ ಕುರಿತಾಗಿ ಓದಿ ತಿಳಿದುಕೊಂಡ ಆ ಕಾಲದಲ್ಲಿದ್ದ ವಿಜ್ಞಾನದ ಪರಿಕಲ್ಪನೆಗಳನ್ನು ಯೋಗದ ಸಿದ್ಧಿಗಳನ್ನು ವಿವರಿಸಲು ಬಳಸುತ್ತಾರೆ. ವಿಜ್ಞಾನದ ಪರೀಕ್ಷೆಗೆ ಒಳಪಡದ ಸಂಗತಿಗಳನ್ನು ವೈಜ್ಞಾನಿಕ ಸಿದ್ಧಾಂತಗಳೊಂದಿಗೆ ಹೋಲಿಸುವುದೇ ತಪ್ಪು. ಸ್ವಾಮಿಗಳು ಇದನ್ನು ಹೇಳಿದ ಕೆಲವೇ ವರ್ಷಗಳಲ್ಲಿ ವಿದ್ಯುತ್ ಪ್ರವಾಹದ ಕಾರಣಗಳನ್ನು , ಪರಮಾಣು ರಚನೆಯನ್ನು ವಿವರಿಸಲಾಯಿತು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಕ್ವಾಂಟಂ ಬಲವಿಜ್ಞಾನ ಪ್ರಾರಂಭವಾಯಿತು. ಇತ್ತೀಚಿನ ಯೋಗ ಉತ್ಸಾಹಿಗಳು ಸ್ವಾಮಿಗಳಂತೆಯೇ ಕ್ವಾಂಟಂ ಬಲವಿಜ್ಞಾನದ ತತ್ತ್ವಗಳನ್ನು ಯೋಗ, ವೇದಾಂತಗಳ ಸಮರ್ಥನೆಗೆ ಬಳಸುತ್ತಿದ್ದಾರೆ. ವಿಜ್ಞಾನ ಮುಂದುವರೆದಂತೆಲ್ಲ ಹುಸಿ ವಿಜ್ಞಾನವೂ ಅದರೊಂದಿಗೆ ಸೇರಿಕೊಳ್ಳಲು ಯತ್ನಿಸುತ್ತದೆ. ಒಂದೇ ಸಮನಾಗಿ ಉಸಿರಾಡಿದರೆ ಶರೀರದ ಕಣಗಳೆಲ್ಲ ಒಂದೇ ಕಡೆ ಧ್ರುವೀಕರಣ ಆಗುವುದಿಲ್ಲ. ಇಚ್ಛಾಶಕ್ತಿಯೂ ಕೇಂದ್ರೀಕೃತವಾಗುವುದಿಲ್ಲ. ವಾಯು ಕಣಗಳನ್ನೆಲ್ಲ ಒಂದೇ ಕಡೆ ಚಲಿಸುವಂತೆ ಮಾಡಿದರೆ ವಿದ್ಯುತ್ ಉತ್ಪಾದನೆ ಆಗುವುದಿಲ್ಲ. ವಿದ್ಯುತ್ ಯಾವಾಗಲೂ ಕಾಂತತ್ವದೊಂದಿಗೆ ಇರುತ್ತದೆ ಎನ್ನುವ ವೈಜ್ಞಾನಿಕ ಸತ್ಯವನ್ನು ಸ್ವಾಮಿಗಳು ತಮಗೆ ತಿಳಿದಂತೆ ಅರ್ಥೈಸಿ ಯೋಗವನ್ನು ವಿವರಿಸಲು ಯತ್ನಿಸಿದ್ದಾರೆ. ಮನಸ್ಸು ಯಾವ ತಂತಿಯೂ ಬೇಕಿಲ್ಲದೆ ಜ್ಞಾನವನ್ನು ಏತಕ್ಕೆ ಕಳುಹಿಸಬಾರದು? ಏತಕ್ಕೆ ಕ್ರಿಯಾ ಶಕ್ತಿಯನ್ನು ತೋರಿಸಬಾರದು ಬಾಹ್ಯ ಪ್ರಪಂಚದಲ್ಲಿ ಹೀಗೆಯೆ ನಡೆಯುತ್ತಿರುವುದಲ್ಲ ಎನ್ನುವ ಹೇಳಿಕೆಯಲ್ಲಿ ದೇಹವಿಲ್ಲದೆ , ಪ್ರಚೋದನೆಗಳನ್ನು ನೀಡುವ ನರಗಳಿಲ್ಲದೆ ಮನಸ್ಸು ಇರುತ್ತದೆ ಮತ್ತು ಅದು ಸ್ವತಂತ್ರವಾಗಿ ಜ್ಞಾನವನ್ನು ಕಳಿಸಬಲ್ಲದು ಎನ್ನುವ ಊಹೆಯಿದೆ. ಇದು ನಿಜವೇ ಆಗಿದ್ದರೆ ಕುಂಡಲಿನಿಯನ್ನು ಏಳಿಸಲು ಇಡಾ-ಸುಷುಮ್ನಾ-ನಾಡಿಗಳಾದರೂ ಏಕೆ ಬೇಕು ಮತ್ತು ನಿರ್ದಿಷ್ಟ ವಾಹಿನಿಯ ಅಗತ್ಯವಾದರೂ ಏನಿದೆ? ಆಧಾರವಿಲ್ಲದ ಒಂದು ಊಹೆಯನ್ನು ಸಮರ್ಥಿಸಲು ಬೇಕಾದ ಇನ್ನಿತರ ಊಹೆಗಳೆಲ್ಲ ಮೊದಲಿನದಕ್ಕಿಂತಲೂ ದುರ್ಬಲವಾಗಿರುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನ. (೧೩) ಬಹು ಹೊತ್ತು ವಿಚಾರಮಾಡುತ್ತಿದ್ದರೆ ಅಥವಾ ಬಾಹ್ಯ ವಸ್ತುಗಳನ್ನು ಮನಸ್ಸಿಟ್ಟು ನೋಡುತ್ತಿದ್ದರೆ ಮೂಲಾಧಾರವಿರುವ ಸ್ಥಾನವೂ -ಎಂದರೆ ಈಗಿನ ಶರೀರಶಾಸ್ತ್ರದವರು ಹೇಳುವ ಅಧೋಮಂಡಲಸ್ಥಾನ- ಬೆಚ್ಚಗಾಗುವುದು. ಹೀಗೆ ಕೂಡಿಹಾಕಿರುವ ಶಕ್ತಿಯನ್ನು ಎಬ್ಬಿಸಿ, ಕೆಲಸಕ್ಕೆ ಹಚ್ಚಿ, ಸುಷುಮಾ ದ್ವಾರದಲ್ಲಿ ಹೋಗುವಂತೆ ತಿಳಿದು ಮಾಡಿದರೆ ಅದು ಒಂದಾಗುತ್ತಲೊಂದು ಚಕ್ರವನ್ನು ಮುಟ್ಟುತ್ತ ಹೋದ ಹಾಗೆಲ್ಲ ಒಂದು ದೊಡ್ಡ ಪ್ರತ್ರಿಕ್ರಿಯೆ ಹುಟ್ಟುವುದು.(ರಾಯೋ-೪೧) ಬಹು ಹೊತ್ತು ವಿಚಾರ ಮಾಡುವುದರಿಂದ ದೇಹದ ಯಾವುದೇ ಭಾಗ ಬೆಚ್ಚಗಾಗುವುದಿಲ್ಲ. ಆಡು ಭಾಷೆಯಲ್ಲಿ ಜನ ತಲೆ ಬಿಸಿಯಾಯಿತು ಎನ್ನಬಹುದಷ್ಟೇ. ಉದ್ದೇಶಪೂರ್ವಕವಾಗಿ ನಿಯಂತ್ರಿಸದಿದ್ದರೆ ಬಿಡುಗಡೆಯಾದ ಯಾವುದೇ ಶಕ್ತಿ ಹಂತ , ಹಂತಗಳಲ್ಲಿ ವ್ಯಕ್ತಗೊಳ್ಳುವುದಿಲ್ಲ. ದೀರ್ಘ ಕಾಲ ಒಂದೇ ಭಂಗಿಯಲ್ಲಿ ಕುಳಿತಿದ್ದರೆ ಕುಳಿತ ಜಾಗ ಗಾಳಿಯಾಡದೆ ಅತ್ಯಲ್ಪ ಪ್ರಮಾಣದಲ್ಲಿ ಬಿಸಿಯಾಗಬಹುದಷ್ಟೇ. (೧೪) ಪ್ರಾಣಾಯಾಮದ ಅಭ್ಯಾಸದಿಂದ ದಕ್ಕುವ ಮೊದಲ ಫಲ ಮುಖಭಾವವು ಬೇರೆ ಆಗುವುದು. ಮುಖದ ಮೇಲಿನ ಸುಕ್ಕುಗಳು ಇಲ್ಲವಾಗುವುವು, ಶಾಂತ ವಿಚಾರ ಬಂದ ಕೂಡಲೆ ಮುಖದ ಮೇಲೆ ಶಾಂತಿ ಕಾಣುವುದು. ಆಮೇಲೆ ಸುಸ್ವರ ಉದಿಸುತ್ತದೆ. ನಾನು ಇದುವರೆಗೆ ಒಡಕಲು ಧ್ವನಿಯುಳ್ಳ ಯೋಗಿಯನ್ನೆ ಕಂಡಿಲ್ಲ. ಕೆಲವು ತಿಂಗಳು ಅಭ್ಯಾಸ ಮಾಡುವುದರಲ್ಲಿ ಈ ಗುರುತುಗಳು ಕಾಣುವುವು ಮೇಲೆ ಹೇಳಿದ ಶ್ವಾಸದ ಕ್ರಮವನ್ನು ಕೆಲವು ದಿನ ಅಭ್ಯಾಸ ಮಾಡಿದ ಬಳಿಕ ಇದಕ್ಕಿಂತ ಉತ್ತಮವಾದ ಅಭ್ಯಾಸವನ್ನು ಪ್ರಾರಂಭಿಸಬೇಕು. (ರಾಯೋ-೪೪) ಸುಕ್ಕುಗಳು ಬರುವುದಕ್ಕೆ ವಯೋಸಂಬಂಧಿಯಾದ ಬೇರೆಯವೇ ಆದ ಶಾರೀರಿಕ ಕಾರಣಗಳಿವೆ. ವ್ಯಕ್ತಿಯ ಸ್ವರ ಗಂಟಲು ಮತ್ತು ಧ್ವನಿ ಪೆಟ್ಟಿಗೆಗೆ ಸಂಬಂಧಿಸಿದ್ದು . ಪ್ರಾಣಾಯಾಮ ಇವುಗಳ ಮೇಲೆ ಯಾವ ಪ್ರಭಾವವನ್ನೂ ಬೀರಲಾರದು. ಯೋಗಿಗಳೆಂದು ಕರೆಸಿಕೊಂಡಿದ್ದ ಸಾಕಷ್ಟು ಕಾಲ ಬದುಕಿದ್ದ ಎಲ್ಲರೂ ಮುಪ್ಪು, ರೋಗಗಳಿಗೆ ತುತ್ತಾಗಿದ್ದರು. ರಾಮಕೃಷ್ಣ ಪರಮಹಂಸರಿಗೆ ಗಂಟಲು ಕ್ಯಾನ್ಸರ್ ಬಂದಿದ್ದಿತು. (೧೫) ಉಸಿರನ್ನು ನಿಧಾನವಾಗಿ ಇಡಾದಿಂದ ಎಂದರೆ ಎಡಗಡೆಯ ಹೊಳ್ಳೆಯಿಂದ ತುಂಬಿಕೊಂಡು ನಾಡೀಸಂಚಾರವನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಿರಬೇಕು. ನಾಡಿಯ ಪ್ರವಾಹವನ್ನು ಉಸಿರಿನೊಡನೆ ಪಿಂಗಳ ಎಂಬ ಇನ್ನೊಂದು ಕಡೆಯ ನಾಡಿಯಿಂದ ಎಳೆದುಕೊಳ್ಳುತ್ತಿದ್ದೇನೆಂದು ಭಾವಿಸುತ್ತ ಬಲ ಹೊಳ್ಳೆಯಿಂದ ಹೊರಕ್ಕೆ ಬಿಡಬೇಕು. ಬೆನ್ನು ಹುರಿಯ ಎಡ, ಬಲದಲ್ಲಿ ಇಡಾ, ಪಿಂಗಳ ಎನ್ನುವ ನಾಡಿಗಳು ಇವೆಯೆಂದು ಹೇಳುವ ಸ್ವಾಮಿಗಳು ಇಲ್ಲಿ ಹಾಗೆ ಭಾವಿಸಿ ಉಸಿರನ್ನು ಎಳೆದುಕೊಳ್ಳಬೇಕು ಎನ್ನುತ್ತಾರೆ. ಉಸಿರು ಬೆನ್ನು ಹುರಿಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಅದು ತಾವು ಹೇಳುತ್ತಿರುವ ನಾಡಿಗಳಿಗೆ ಹೋಗದು ಎನ್ನುವ ಅಂಶ ಸ್ವಾಮಿಗಳಿಗೆ ಮನದಟ್ಟಾಗಿರುವುದರಿಂದ ಮೂಗಿನ ಹೊಳ್ಳೆಗಳನ್ನೇ ನಾಡಿಗಳೆಂದು ಪರಿಗಣಿಸಬೇಕೆಂಬ ನಿಲುವಿಗೆ ಬಂದಿದ್ದಾರೆ. (೧೬) ಮನುಷ್ಯನ ಶರೀರದಲ್ಲಿರುವ ಶಕ್ತಿಗಳಲ್ಲೆಲ್ಲ ಓಜಸ್ಸೆಂಬುದೇ ಹೆಚ್ಚಿನದೆಂದು ಯೋಗಿಗಳು ಹೇಳುತ್ತಾರೆ. ಈ ಓಜಸ್ಸು ಮೆದುಳಿನಲ್ಲಿರುವುದು. ಮನುಷ್ಯನ ತಲೆಯಲ್ಲಿ ಎಷ್ಟು ಓಜಸ್ಸಿದ್ದರೆ ಅಷ್ಟು ಶಕ್ತನಾಗಿಯೂ, ಅಷ್ಟು ಬುದ್ಧಿವಂತನಾಗಿಯೂ, ಅಷ್ಟು ಧರ್ಮಾತ್ಮನಾಗಿಯೂ ಇರುವನು. ಒಬ್ಬನು ಎಷ್ಟು ಚೆನ್ನಾಗಿ ಮಾತಾಡುತ್ತಿದ್ದರೂ, ಎಷ್ಟು ಒಳ್ಳೆಯ ವಿಚಾರಗಳನ್ನು ಹೇಳುತ್ತಿದ್ದರೂ ಜನರ ಮನಸ್ಸಿಗೆ ಹತ್ತುವುದಿಲ್ಲ. ಇನ್ನೊಬ್ಬನಿಗೆ ಚೆನ್ನಾಗಿ ಮಾತಾಡುವುದಕ್ಕೂ ಬರುತ್ತಿರುವುದಿಲ್ಲ. ಅವನ ಅಭಿಪ್ರಾಯಗಳೂ ಅಷ್ಟು ಉತ್ತಮವಾಗಿರುವುದಿಲ್ಲ. ಆದರೂ ಜನರು ಅವನ ಮಾತಿಗೆ ಬೆರಗಾಗುವರು. ಆತ ಸುಮ್ಮನೆ ಅತ್ತಿತ್ತ ಓಡಾಡಿದರೆ ಕೂಡ ಜನರು ವಶರಾಗುವರು. ಇದೇ ಓಜಸ್ಸಿನ ಶಕ್ತಿಯು. ಪ್ರತಿಯೊಬ್ಬನಲ್ಲಿಯೂ ಈ ಓಜಸ್ಸೆಂಬುದು ಕೂಡಿಕೊಂಡೇ ಇರುವುದು. ಶರೀರದಲ್ಲಿ ಕ್ರಿಯಾಶೀಲವಾಗಿರುವ ಶಕ್ತಿ ವಿಶೇಷಗಳೆಲ್ಲ ಓಜಸಾಗುತ್ತವೆ. ಇದು ಕೇವಲ ರೂಪಾಂತರವಾಗುವ ಮಾತಾಗಿದೆಯೆ ಹೊರತು ಹೊಸ ಶಕ್ತಿಯೇನೂ ಅಲ್ಲವೆಂಬುದನ್ನು ನೆನಪಿನಲ್ಲಿಡಬೇಕು. (ರಾಯೋ-೪೬,೪೭) ಸ್ವಾಮಿಗಳು ಹೇಳಿಕೆಯಿಂದ ಮೆದುಳಿನಲ್ಲಿ ಎಲ್ಲೋ ಓಜಸ್ಸು ಸಂಗ್ರಹಗೊಂಡಿದೆ. ಅದನ್ನು ಆಧುನಿಕ ವೈದ್ಯಕೀಯದಿಂದ ಹುಡುಕಲು ಸಾಧ್ಯ. ಹಾಗೆ ಅಲ್ಲದಿದ್ದರೆ ಅದೊಂದು ಊಹೆಯ ಪರಿಕಲ್ಪನೆ ಮಾತ್ರ. ಶರೀರದಲ್ಲಿ ಶಕ್ತಿ ವಿಶೇಷಗಳು ಸೇರಿ ಓಜಸ್ಸಾಗಿ ಮೆದುಳಿನಲ್ಲಿ ಸೇರಿರುವುದು , ಹೊರಗಿನ ವಿದ್ಯುಚ್ಛಕ್ತಿ ಮತ್ತು ಓಜಸ್ಸು ಎರಡೂ ಒಂದೇ , ವೀರ್ಯವೇ ಓಜಸ್ಸಗುವುದು ಎನ್ನುವ ಎಲ್ಲ ಹೇಳಿಕೆಗಳೂ ತಪ್ಪು. ವೀರ್ಯ ದೇಹ ಉತ್ಪಾದಿಸುವ ನೂರಾರು ಪ್ರೋಟಿನ್’ಗಳಲ್ಲಿ ಒಂದು. ಅದನ್ನು ಉಳಿಸಿ , ಮಾರ್ಪಡಿಸಲು ಸಾಧ್ಯವಿಲ್ಲ. ಉತ್ಪಾದನೆಯಾದ ವೀರ್ಯ ದೇಹದಿಂದ ಹೊರಬರದಿದ್ದರೆ ನಿರ್ದಿಷ್ಟ ಕಾಲಾನಂತರ-ಸುಮಾರು ೨ ತಿಂಗಳು- ದೇಹದಲ್ಲಿ ವಿಘಟನೆ ಹೊಂದಿ ಇಲ್ಲದಂತಾಗುತ್ತದೆ. ಪಾರಂಪರಿಕ ನಂಬಿಕೆಗಳನ್ನೇ ಸ್ವಾಮಿಗಳು ಸಾಧಿತ ಸತ್ಯಗಳಂತೆ ಪ್ರತಿಪಾದಿಸುತ್ತಾರೆ. (೧೭) ನವುಗೆ ಅನುಭವವೆಂಬುದೊಂದೇ ಗುರು. ನಾವು ಸಾಯುವವರೆಗೂ ಮಾತನಾಡುತ್ತ, ತರ್ಕಮಾಡುತ್ತ ಇದ್ದರೂ ನಮ್ಮ ಸ್ವಂತ ಅನುಭವಕ್ಕೆ ಬಂದ ಹೊರತು ನಿಜವೆಂದರೆ ಇಂಥದ್ದೆಂದು ಎಳ್ಳಷ್ಟೂ ಗೊತ್ತಾಗಲಾರದು. ಒಬ್ಬನಿಗೆ ಕೆಲವು ಗ್ರಂಥಗಳನು ಕೊಟ್ಟ ಮಾತ್ರಕ್ಕೆ ಅವ ಶಸ್ತ್ರವೈದ್ಯನಾಗುವುದಿಲ್ಲ. ಒಂದು ದೇಶವನ್ನು ನೋಡಬೇಕೆಂದಿರುವ ನನ್ನ ಕುತೂಹಲವು ನೀನು ನನಗೆ ಅದರ ನಕಾಶೆಯನ್ನು ತೋರಿದ ಮಾತ್ರಕ್ಕೆ ಹೋಗುವುದಿಲ್ಲ, ನನಗೆ ಸಾಕ್ಷಾತ್ ಬೇಕಾಗಿರುವುದು, ನಕಾಶೆಗಳಿಂದ ಇನ್ನೂ ಹೆಚ್ಚು ಜ್ಞಾನವನ್ನು ಸಂಪಾದಿಸಬೇಕೆಂಬ ಜ್ಞಾನವುಂಟಾದೀತೇ ಹೊರತು ಇವುಗಳಿಗೆ ಮತ್ತೆ ಯಾವ ಹೆಚ್ಚಿನ ಉಪಯೋಗವೂ ಇಲ್ಲ. ಪುಸ್ತಕವನ್ನು ಎಂದೆಂದಿಗೂ ಕೈಬಿಡದೆ ಇರುವುದರಿಂದ ಮನುಷ್ಯರ ಮನಸ್ಸು ಹೀನ ಸ್ಥಿತಿಗೆ ಬರುವುದು.(ರಾಯೋ-೬೨) ಸ್ವಾಮಿಗಳು ಎಲ್ಲಿಯೂ ನನ್ನಲ್ಲಿ ಕುಂಡಲಿನಿ ಎಚ್ಚೆತ್ತಿದೆ, ಯೌಗಿಕ ಸಿದ್ದಿಗಳನ್ನು ತೋರಿಸಿ ನಿಮಗೆ ವಿಶ್ವಾಸ ಮೂಡಿಸಬಲ್ಲೆ ಎಂದು ಹೇಳುವುದಿಲ್ಲ. ಅದರ ಬದಲು ಪಾರಂಪರಿಕವಾಗಿ ಬಂದ ನಂಬಿಕೆಗಳ ಆಧಾರದ ಮೇಲೆ ಯೋಗವನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ನಿಜವಾಗಿಯೂ ಯೋಗಿಗಳೇ ಆಗಿದ್ದರೆ, ಪ್ರಾಣ ಶಕ್ತಿ ಅವರ ವಶಕ್ಕೆ ಸಿಕ್ಕಿದ್ದೇ ಆಗಿದ್ದರೆ ಅವರ ಆರೋಗ್ಯ ಏಕೆ ಅಷ್ಟೊಂದು ಹದಗೆಡುತ್ತಿದ್ದಿತು. ತಮ್ಮ ಮನೆತನದ ಆಸ್ತಿಗಾಗಿ ಏಕೆ ಅಷ್ಟೊಂದು ಹೋರಾಡುತ್ತಿದ್ದರು. ಆದ್ದರಿಂದ ಅಸ್ತಿತ್ವದಲ್ಲಿ ಇಲ್ಲದ , ಯಾರೂ ಕಾಣದ ಜಾಗದ ನಕಾಶೆಯನ್ನು ಸ್ವಾಮಿಗಳು ನಮಗೆ ತೋರಿಸುತ್ತಿದ್ದಾರೆಂದು ನಾವೇಕೆ ಸಂಶಯಿಸಬಾರದು. ಸ್ವಾಮಿಗಳು ತಮ್ಮ ರಾಜಯೋಗ ಕೃತಿಯಲ್ಲಿ ಪತಂಜಲಿ ಯೋಗ ಸೂತ್ರಗಳ ಭಾಷ್ಯ ಬರೆದಿದ್ದಾರೆ. ಈ ಭಾಷ್ಯದಲ್ಲಿ ಹುಸಿ ವೈಜ್ಞಾನಿಕತೆ , ಅಸಂಬದ್ಧತೆ , ವಿರೋಧಾಭಾಸಗಳು ತುಂಬಿವೆ. ಅವುಗಳಲ್ಲಿ ಪ್ರಾತಿನಿಧಿಕವೆನಿಸುವ ಕೆಲವನ್ನು ನೀಡಲಾಗಿದೆ. (೧) ಆಪ್ತ ವಾಕ್ಯವು ಎಂದರೆ ಯೋಗಿಗೆ ಅಥವಾ ತತ್ತ್ವಜ್ಞಾನಿಗೆ ಆಗಿರುವ ಸಾಕ್ಷಾತ್ಕಾರ ಜ್ಞಾನವು. ಎಲ್ಲರೂ ತಿಳಿವಳಿಕೆಯನ್ನು ಸಂಪಾದಿಸುವುದಕ್ಕೆಂದೇ ಪ್ರಯತ್ನ ಮಾಡುತ್ತಿರುವರು. ಆದರೆ ನಮ್ಮ ನಿಮ್ಮಂಥವರಿಗೆ ತಿಳಿವಳಿಕೆ ಬರಬೇಕಾದರೆ ನಾವು ಎಷ್ಟೋ ಕಾಲ ಶ್ರಮಪಟ್ಟು ವಿಚಾರಮಾಡಬೇಕಾಗಿರುವುದು. ಸಂಪೂರ್ಣವಾಗಿ ಮನಃಶುದ್ದಿಯನ್ನು ಪಡೆದಿರುವ ಯೋಗಿಗೆ ಹೀಗೆ ವಿಚಾರ ಮಾಡುವ ಕೆಲಸವಿಲ್ಲ, ಏಕೆಂದರೆ, ಹಿಂದಿನ ಕಾಲ, ಈಗಿನ - ಮುಂದಿನ ಕಾಲ ಇವೆಲ್ಲವೂ ಅವನ ಮುಂದೆ ಓದುವುದಕ್ಕೆಂದು ತೆರೆದಿಟ್ಟ ಪುಸ್ತಕದಂತಿರುವುದು. (ರಾಯೋ-೮೩) ಯೋಗಿಗೆ ತ್ರಿಕಾಲಗಳು ತಿಳಿದಿರುತ್ತವೆ ಎನ್ನುವುದು ಒಂದು ನಂಬಿಕೆಯೇ ಹೊರತು ಅದಕ್ಕೆ ಯಾವ ಸಮರ್ಥನೆಯೂ ದಕ್ಕದು. ವಿಜ್ಞಾನ ತಿಳಿಸಿರುವ ನಿಸರ್ಗದ ನಿಯಮಗಳನ್ನು ಬಳಸಿಕೊಂಡು ಒಂದು ಘಟನೆ ಮುಂದೆ ಇಂತಹ ಫಲಿತಾಂಶ ನೀಡುತ್ತದೆ ಎಂದು ಹೇಳಬಹುದು. ಒಂದು ದೃಷ್ಟಿಯಲ್ಲಿ ಇದು ಭವಿಷ್ಯವನ್ನು ತಿಳಿಸುವ ಮಾರ್ಗ. ಯಾವ ಯೋಗಿಯೂ ಜಗತ್ತಿನ ಭವಿಷ್ಯವಿರಲಿ ಒಂದು ಸರಳ, ಸಾಮಾನ್ಯ ಘಟನೆ ಒಂದು ನಿಮಿಷದ ನಂತರ ಯಾವ ಫಲಿತಾಂಶ ನೀಡಬಲ್ಲದೆಂದು ಹೇಳಿ ಯೌಗಿಕ ತ್ರಿಕಾಲ ಜ್ಞಾನವನ್ನು ಸಾಬೀತುಗೊಳಿಸಲು ಸಾದ್ಯವಿಲ್ಲ. (೨) …….ಅವನಿಗೆ (ಆಪ್ತ) ಸಮಾಧಿಜ್ಞಾನವಿದೆಯೆಂಬುದು ಸಿದ್ದವಾಗಬೇಕೆಂಬುದು ಎರಡನೇ ವಿಷಯ. ಕೇವಲ ನಮ್ಮ ಇಂದ್ರಿಯಗಳಿಗೆ ಗೋಚರವಾಗದಿದ್ದು ಲೋಕಕ್ಕೆ ಉಪಯೋಗವಾಗಿರುವ ಯಾವುದಾದರೊಂದು ವಿಷಯವನ್ನು ಆತನು ನಮಗೆ ತಿಳಿಸಬೇಕೆಂಬುದು ಮೂರನೆಯದು. ಮತ್ತು ಇದು ಇತರ ತತ್ತ್ವಗಳಿಗೆ ವಿರುದ್ಧವಾಗಿರಬಾರದು. ಈ ವಿಷಯದಲ್ಲಿ ಎಚ್ಚರಿಕೆಯಿಂದರಬೇಕು. ಇತರ ಶಾಸ್ತ್ರೀಯಾಂಶಗಳಿಗೆ ವಿರುದ್ಧವಾಗಿದ್ದರೆ ಕೂಡಲೆ ಅದನ್ನು ಬಿಟ್ಟುಬಿಡಬೇಕು. (ರಾಯೋ-೮೪) ಇಂದ್ರಿಯಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಿಳಿಯದ ಎಲ್ಲವದೂ ಅಧ್ಯಾತ್ಮದ ಪರಿಧಿಗೆ ಸೇರುತ್ತದೆ. ಇದಕ್ಕೆ ವೈಯಕ್ತಿಕ ಹೇಳಿಕೆಗಳ ಹೊರತಾಗಿ ನಿಜವೇ ಅಥವಾ ಸುಳ್ಳೇ ಎಂದು ಪರೀಕ್ಷಿಸಲು ಯಾವುದೇ ಮಾರ್ಗಗಳು ಇಲ್ಲದಿರುವುದರಿಂದ ನಂಬಿಕೆಗೆ ಮಾತ್ರ ಸ್ಥಾನವಿದೆ. ನಂಬಿಕೆ ಸಾಧಿತ ಸತ್ಯವಲ್ಲ. (೩) ಸಾಂಖ್ಯ ಸಿದ್ದಾಂತದಲ್ಲಿ ಈಶ್ವರನಿಲ್ಲ. ಈ ಸಿದ್ಧಾಂತದಂತೆ ಈ ಜಗತ್ತಿಗೆ ದೇವರಿರುವುದು ಸಾಧ್ಯವಿಲ್ಲ. ಏಕೆಂದರೆ ದೇವರಿದ್ದರೆ ಅವನು ಆತ್ಮನಾಗಿಯೆ ಇರಬೇಕು. ಆತ್ಮನೆಂದರೆ ಬದ್ಧನಾಗಿರಬೇಕು. ಇಲ್ಲದಿದ್ದರೆ ಮುಕ್ತನಾಗಿರಬೇಕು. ಪ್ರಕೃತಿಯಿಂದ ತಾನೇ ಬದ್ಧವಾಗಿರುವ ಆತ್ಮವು- ಪ್ರಕೃತಿಯ ವಶದಲ್ಲಿರುವ ಆತ್ಮವು - ಸೃಷ್ಟಿ ಹೇಗೆ ಮಾಡಬಲ್ಲದು ? ಅದು ತಾನೇ ದಾಸನಾಗಿರುವುದು. ಹಾಗಲ್ಲದೆ ಆತ್ಮವು ಮುಕ್ತವಾಗಿದ್ದರೆ ಆಶೆಗಳಿಲ್ಲದ ಅದು ಈ ಪದಾರ್ಥಗಳನ್ನೆಲ್ಲ ಸೃಷ್ಟಿ ಮಾಡಿ ಬೇರೆ ಬೇರೆ ರೂಪಗಳಲ್ಲಿಡುವುದಕ್ಕೇನು ಕಾರಣ ? ಆದುದರಿಂದ ಅದಕ್ಕೆ ಸೃಷ್ಟಿ ಮಾಡಬೇಕಾದ ಅಗತ್ಯವೇನೂ ಇಲ್ಲ. ಆದ್ದರಿಂದ ಈ ಸಿದ್ದಾಂತವು ದೇವರನ್ನು ಕಲ್ಪನೆ ಮಾಡಿಕೊಳ್ಳುವುದೇ ಅನವಶ್ಯವೆಂದೂ ಪ್ರಕೃತಿಯಿಂದಲೇ ಎಲ್ಲಾ ಕಾರ್ಯವೂ ಸಾಗುವುದೆಂದೂ ಹೇಳುತ್ತದೆ. … ಕಪಿಲರ ಪ್ರಕಾರ ಎಷ್ಟೋ ಜೀವರುಗಳು ಪೂರ್ಣಸ್ಥಿತಿಗೆ ಸ್ವಲ್ಪ ಕಡಿಮೆಯ ಸ್ಥಿತಿಯನ್ನು ಪಡೆಯುತ್ತಾರೆ. ಅವರ ಮನಸ್ಸುಗಳು ಸ್ವಲ್ಪ ಕಾಲದವರೆಗೆ ಪ್ರಕೃತಿಯಲ್ಲಿ ಲಯವಾಗಿದ್ದು ಕೊನೆಗೆ ಅದರ ಒಡೆಯರಾಗಿ ಹೊರಬೀಳುತ್ತವೆ. ಇಂಥ ದೇವತೆಗಳೇನೋ ಇದ್ದೇ ಇರುವರು. ಇಂಥ ದೇವ ಪದವಿಯನ್ನು ನಾವೆಲ್ಲರೂ ಪಡೆಯಬಹುದು. … ಇವರನ್ನು ಬಿಟ್ಟರೆ ಎ೦ದಿಗೂ ಮುಕ್ತನಾಗಿ ಆನಂದರೂಪನಾಗಿ ಜಗತ್ತನ್ನು ಸೃಷ್ಟಿ ಮಾಡುವ ದೇವರಾರೂ ಇಲ್ಲ. ಆದರೆ ಯೋಗಿಗಳು "ಹಾಗಲ್ಲ: ದೇವರೊಬ್ಬನು ಇದ್ದೇ ಇರುತ್ತಾನೆ. ಎಲ್ಲ ಆತ್ಮಗಳಿಗಿಂತ ಬೇರೆ ಆಗಿರುವ ಒಂದು ಆತ್ಮವಿದೆ. ಅದೇ ಎಲ್ಲಾ ಸೃಷ್ಟಿಗೂ ಎಂದೆಂದಿಗೂ ಒಡೆಯ. ಅದು ನಿತ್ಯಮುಕ್ತ. ಗುರುಗಳ ಗುರು ಎಂದು ಹೇಳುವರು. ಸಾಂಖ್ಯರು ಹೇಳುವ ಪ್ರಕೃತಿ ಲಯುರೆಂಬುವರು ಇರುವರೆಂದೂ ಯೋಗಿಗಳು ಒಪ್ಪಿಕೊಳ್ಳುತ್ತಾರೆ. ಇಂಥವರು ಯೋಗಸಿದ್ಧಿಯನ್ನು ಪೂರ್ಣವಾಗಿ ಪಡೆಯದೆ ಇರುವವರೆಂದೂ ಇವರು ಸ್ವಲ್ಪ ಕಾಲದವರೆಗೆ ಮಾತ್ರ ಕೊನೆಯ ಗತಿಯನ್ನು ಪಡೆಯದೆ ಇರುವವರೆಂದೂ ಇವರು ಜಗತ್ತಿನ ಕೆಲಕೆಲವು ಭಾಗಗಳಿಗೆ ಒಡೆಯರಾಗಿರುತ್ತಾರೆಂದೂ ಹೇಳುವರು. ( ರಾ.ಯೋ-೯೨,೯೩) ಸ್ವಯಂ ಯೋಗಿಗಳೆಂದು ಖ್ಯಾತರಾಗಿದ್ದ, ಯಾವುದನ್ನೂ ಪರಿಶೀಲಿಸದೆ ಒಪ್ಪಬಾರದೆಂದು ಮೇಲಿಂದ ಮೇಲೆ ಹೇಳುವ ಸ್ವಾಮಿಗಳು ಅಂತಿಮ ಪುರುಷನನ್ನು (ದೇವ) ಒಪ್ಪದ ಸಾಂಖ್ಯ ಮತ್ತು ಆತನನ್ನು ಒಪ್ಪುವ ಯೋಗಿಗಳಲ್ಲಿ ಯಾರು ಸರಿ ಎಂದು ಖಚಿತವಾಗಿ ಹೇಳಬೇಕಾಗಿದ್ದಿತು. ಅದರ ಬದಲು ವಿಭಿನ್ನ ಪಂಥಗಳ ಅಭಿಪ್ರಾಯಗಳನ್ನು ಮುಂದಿಟ್ಟು ತಮ್ಮ ಅನುಭವ, ಅನಿಸಿಕೆ, ತೀರ್ಮಾನಗಳಿಗೆ ಯಾವುದೇ ಬೆಲೆ ಇಲ್ಲದಂತೆ ಮಾಡಿದ್ದಾರೆ. (೪) ಓಂಕಾರವೇ ಎಲ್ಲಾ ಶಬ್ದಗಳಿಗೂ ಆಧಾರವಾಗಿರುವ ಮಾತು. ಇದರಲ್ಲಿರುವ ಅಕಾರವು ಮೂಲ ಸ್ವರವು (ಅ-ಉ-ಮ = ಓಂ) ನಾಲಿಗೆ ಅಥವಾ ದವಡೆಯ ಯಾವ ಭಾಗವನ್ನೂ ತಾಗದೆ ಉಚ್ಛಾರವಾಗುವುದು. ‘ಮ’ಕಾರವು ವರ್ಣಗಳಲ್ಲೆಲ್ಲ ಕೊನೆಯದು. ಇದು ತುಟಿಯನ್ನು ಮುಚ್ಚುವುದರಿಂದ ಉಂಟಾಗುವುದು. ಉಕಾರವು ಮುಖವೆಂಬ ಧ್ವನಿಪೆಟ್ಟಿಗೆಯ ಬುಡದಿಂದ ತುದಿಯವರೆಗೆ ಹೊರಳಿಕೊಂಡು ಹುಟ್ಟುವುದು. ಈ ರೀತಿಯಲ್ಲಿ ಓಂಕಾರದಲ್ಲಿ ವರ್ಣಗಳ ಉತ್ಪತ್ತಿ ಕ್ರಮವೆಲ್ಲ ಸೇರಿರುವುದು. ಹೀಗಿರುವುದರಿಂದ ಇದೇ ಸ್ವಾಭಾವಿಕವಾದ ಗುರುತಾಯಿತು. ಇದೇ ಎಲ್ಲಾ ಧ್ವನಿಗಳಿಗೂ ಮಾತೃಸ್ಥಾನವಾಯಿತು. (ರಾಯೋ-೯೭) ಬಾಯಿಯ ಅಂಗಳ , ತುಟಿ , ಮೂಗು , ಹಲ್ಲು ಮುಂತಾದ ಭಾಗಗಳ ಮೂಲಕ ಹೊರಬಿಡುವ ಉಸಿರನ್ನು ನಿಯಂತ್ರಿಸಿ ಆ ಮೂಲಕ ಧ್ವನಿ ಪೆಟ್ಟಿಗೆಯ ಅಲುಗಾಟವನ್ನು ಹದಗೊಳಿಸುವುದರಿಂದ ವಿವಿಧ ಶಬ್ದಗಳು ಹುಟ್ಟುತ್ತವೆ. ‘ಓಂ’ಕಾರದಲ್ಲಿ ಹಲ್ಲಿಗೆ ತಾಗಿ ಹುಟ್ಟುವ (ದಂತ್ಯ) , ಮೂಗಿನ ನೆರನಿಂದ ಪೂರ್ಣವಾಗುವ (ಅನುನಾಸಿಕ) ಶಬ್ದಗಳಿಲ್ಲ. ಸಂಸ್ಕೃತ, ದ್ರಾವಿಡ ಭಾಷೆಗಳಲ್ಲಿ ಇಲ್ಲದ ಅದೆಷ್ಟೋ ಉಚ್ಛಾರಗಳು ಜಗತ್ತಿನ ವಿವಿಧ ಭಾಷೆಗಳಲ್ಲಿವೆ. ಓಂಕಾರದಲ್ಲಿ ಎಲ್ಲ ವರ್ಣಗಳ ಉತ್ಪತ್ತಿ ಕ್ರಮ ಸೇರಿಲ್ಲ.. ಬಹು ಹಿಂದೆ ಅದು ಯಾವುದೋ ಕಾರಣದಿಂದ ಹಸುವಿನ ಕರು ಕೂಗುವ ‘ಅಂಬಾ’ ಶಬ್ದವನ್ನು ಹೋಲುವ ‘ಓಂ’ ಶಬ್ದದಲ್ಲಿ ವಿಶ್ವದ ರಹಸ್ಯ ಅಡಗಿದೆ , ಅದು ಜಗತ್ತಿನ ಉಗಮದ ಮೂಲ ಎಂದು ಭಾವಿಸಿದ್ದರು. ಇದನ್ನು ಬಳಸಿಕೊಂಡು ಕೆಲವರು ಜಗತ್ತಿನ ಕಂಪನವೇ ‘ಓಂ’ಕಾರದಲ್ಲಿ ಅಡಗಿದೆ ಎನ್ನುವ ಹುಸಿವೈಜ್ಞಾನಿಕ ವಿವರಣೆ ನೀಡತೊಡಗಿದರು. ಇದನ್ನೇ ಸ್ವಾಮಿಯವರು ಹೇಳುತ್ತಿದ್ದಾರೆ. (೫) ಈ ಬ್ರಹಾಂಡವೆಲ್ಲ ಪ್ರಾಣ ಮತ್ತು ಆಕಾಶಗಳ ಸೇರುವೆಯಾಗಿರುವುದು. ಮನುಷ್ಯನ ಶರೀರವೂ ಇವೆರಡರಿಂದಾಗಿರುವುದು. ಆಕಾಶದಿಂದ ನಮ್ಮ ಅನುಭವದಲ್ಲಿ ಬರುವ ಮತ್ತು ಕಣ್ಣಿಗೆ ಕಾಣಿಸುವ ಎಲ್ಲಾ ಪದಾರ್ಥಗಳೂ ಆಗಿರುತ್ತವೆ ಮತ್ತು ಪ್ರಾಣದಿಂದ ಎಲ್ಲಾ ಶಕ್ತಿ ವಿಶೇಷಗಳೂ ಆಗಿವೆ. ಈ ಪ್ರಾಣವನ್ನು ಹೊರಕ್ಕೆ ಬಿಡುವುದನ್ನೂ ಬಿಗಿಹಿಡಿಯುವುದನೂ ಪ್ರಾಣಾಯಾಮವೆನಿಸುವುದು, ಪತ೦ಜಲಿಗಳು ಯೋಗಸಿದ್ದಾಂತಕ್ಕೆ ಮೂಲ ಪ್ರವರ್ತಕರಾದುದರಿಂದ ಪ್ರಾಣಾಯಾಮದ ವಿಚಾರವಾಗಿ ವಿಶೇಷವಿಧಿಗಳನ್ನೇ ಹೇಳಿಲ್ಲ. ಅವರಿಂದೀಚೆಗೆ ಇತರ ಯೋಗಿಗಳು ಈ ಪ್ರಾಣಾಯಾಮದಲ್ಲಿ ಅನೇಕ ವಿಷಯಗಳನ್ನು ಕಂಡು ಹಿಡಿದು ಅದನ್ನೆ ಒಂದು ಶಾಸ್ತವನಾಗಿ ಮಾಡಿರುತ್ತಾರೆ. ಪತಂಜಲಿಗಳ ಪ್ರಕಾರ ಅನೇಕ ಸಾಧನಗಳಲ್ಲಿ ಇದೂ ಒಂದು. ಅವರೇನೂ ಅದಕ್ಕೆ ಅಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿಲ್ಲ. ವಾಯುವನ್ನು ಹೊರಕ್ಕೆ ಬಿಡುವುದು ಒಳಕ್ಕೆ ತೆಗೆದುಕೊಳ್ಳುವುದು. ಸ್ವಲ್ಪ ಹೊತ್ತು ಹಾಗೆಯೇ ಹಿಡಿದುಕೊಂಡಿರುವುದು ಇದೇ ಪ್ರಾಣಾಯಾಮವೆಂದೂ ಇದರಿಂದ ಮನಸ್ಸು ಸ್ವಲ್ಪ ಶಾಂತವಾಗುವುದೆಂದೂ ಅವರ ಅಭಿಪ್ರಾಯ. ಆದರೆ ಇಷ್ಟರಿಂದಲೆ ಈಚೆಗೆ ಪ್ರಾಣಾಯಾಮವೆಂಬುದೊಂದು ಶಾಸ್ತ್ರವೇ ಏರ್ಪಟ್ಟುಬಿಟ್ಟಿದೆ. (ರಾಯೋ-೧೦೧) ಪತಂಜಲಿಗೆ ಪ್ರಾಣಾಯಾಮ ಉಸಿರಾಟದ ಒಂದು ಕ್ರಮ ಮಾತ್ರವಾಗಿದ್ದಿತು. ಇತರರು ಅದನ್ನು ಒಂದು ಶಾಸ್ತ್ರವಾಗಿ ವಿಸ್ತರಿಸಿದ್ದರು. ಎಂದರೆ ಯೋಗ ಸೂತ್ರಗಳನ್ನು ಮೊದಲಿಗೆ ರಚಿಸಿದ ಪತಂಜಲಿಗೆ ಗೊತ್ತಿಲ್ಲದ ಪ್ರಾಣಾಯಾಮದ ಆಯಾಮಗಳು ಪ್ರಾಚೀನವಾದುದಲ್ಲ. ಸ್ವಾಮಿಗಳು ಇನ್ನೂ ಮುಂದುವರೆದು ತಮ್ಮ ಕಾಲದಲ್ಲಿದ್ದ ಭೌತಶಾಸ್ತ್ರದ ತಿಳಿವಳಿಕೆಯನ್ನು ಬಳಸಿಕೊಂಡು ಪ್ರಾಣ ಎಂದರೆ ವಿಶ್ವದ ಶಕ್ತಿ , ಅದನ್ನು ನಿಯಂತ್ರಿಸಬಹುದು , ಅದನ್ನು ಒಂದುಕಡೆಯಿಂದ ಇನ್ನೊಂದು ಕಡೆ ಕಳಿಸಬಹುದು ಎನ್ನುವ ಹುಸಿವೈಜ್ಞಾನಿಕ ವಿವರಣೆಗಳ ಸರಣಿಯಲ್ಲಿ ನೀಡುತ್ತಾರೆ. (೬) ನಮಗೆ ಬರುವ ಪ್ರತಿಯೊಂದು ಹೊಸತರದ ಯೋಚನೆಯಿಂದಲೂ ನಮ್ಮ ಮೆದುಳಿನಲ್ಲಿ ಒಂದು ರೀತಿಯಿಂದ ಹೊಸ ಕಾಲುವೆಯೊಂದು ಆಗಲೇಬೇಕು. ಇದರಿಂದ ಮನುಷ್ಯರ ಸ್ವಭಾವವು ಏಕೆ ರೂಢಿಗಳನ್ನು ಅನುಸರಿಸುತ್ತದೆ ಎನ್ನುವುದು ಗೊತ್ತಾಗುತ್ತದೆ. ಮೊದಲಿನ ಹಾದಿಗಳಲ್ಲಿ ಹೋಗುವುದೇ ಮನುಷ್ಯ ಸ್ವಭಾವ. ಏಕೆಂದರೆ ಇದರಲ್ಲಿ ಏನೂ ಕಷ್ಟವಿಲ್ಲ. ಮೆದುಳೆಂಬುದು ಮೆತ್ತನೆಯ ಪದಾರ್ಥವೆಂದು ಮನಸ್ಸು ಅದಕ್ಕೆ ಸುಚ್ಚಿರುವ ಸೂಜಿಯೆಂದು ಭಾವಿಸಿದರೆ ನಮಗೆ ಬರುವ ಪ್ರತಿಯೊಂದು ಯೋಚನೆಯಿಂದಲೂ ಆ ವೆುದುಳಿನಲ್ಲಿ ಒಂದೊಂದು ಉದ್ದನೆಯು ದಾರಿಯನ್ನು ಮಾಡಬೇಕಾಯಿತು. ಈ ದಾರಿಯು ಸ್ವಲ್ಪದರಲ್ಲಿ ಮುಚ್ಚಿಕೊಳ್ಳಬೇಕಾಗಿತ್ತು, ಆದರೆ ಮೆದುಳಿನಲ್ಲಿ ಬೂದುಬಣ್ಣದ ವಸ್ತು ಇದಕ್ಕೆ ಬಳಿದುಕೊಂಡು ಇದನ್ನು ಹಾಗೆಯೆ ಇಟ್ಟಿರುತ್ತದೆ. ಈ ಬೂದು ಬಣ್ಣದ ಬಳಿತವಿಲ್ಲದಿದ್ದರೆ ನೆನಪೇ ಇರುತ್ತಿರಲಿಲ್ಲ, ಏಕೆಂದರೆ ಈ ಹಳೇ ದಾರಿಗಳಲ್ಲಿ ನಡೆಯುವುದೇ-ಒಂದು ಯೋಚನೆಯು ಮೊದಲು ಹೋಗಿದ್ದ ಹಾದಿಯನ್ನು ವುತ್ತೆ ಹಿಡಿಯುವುದು-ನೆನಪು ಎನಿಸಿಕೊಳ್ಳುವುದು. (ರಾಯೋ-೧೦೨,೧೦೩) ಮೆದುಳಿನಲ್ಲಿ ಬಿಳಿ ಮತ್ತು ಕಂದು ಬಣ್ಣದ ಅಂಗಾಂಶಗಳಿವೆ. ಈ ಅಂಗಾಂಶಗಳ ಪ್ರಮಾಣದ ಮೇಲೆ ನೆನಪು , ವಿಶ್ಲೇಷಣೆ ಮುಂತಾದ ಸಾಮರ್ಥ್ಯಗಳು ನಿರ್ಧರಿತವಾಗುತ್ತವೆ ಎನ್ನುವುದು ಆಧುನಿಕ ವಿಜ್ಞಾನದ ಸಂಶೋಧನೆಯೇ ಹೊರತು ಯೋಗಿಗಳಿಗೆ ದಕ್ಕಿದ ಜ್ಞಾನವಲ್ಲ. ಇದಾದ ನಂತರ ವಿಜ್ಞಾನ ಮೆದುಳನ್ನು , ಅದರ ಕ್ರಿಯಾಶೀಲತೆಯನ್ನು ಕುರಿತಾಗಿ ಅದೆಷ್ಟೋ ಹೆಚ್ಚಿನ ತಿಳಿವಳಿಕೆ ನೀಡಿದೆ. ಯೋಗಿಗಳಿಗೆ ಮೆದುಳು , ಆಲೋಚನೆ ಎರಡರ ನಡಿವೆ ಇರುವ ಭೌತಿಕ ಸಂಬಂಧಗಳ ಬಗ್ಗೆ ಏನೇನೂ ತಿಳಿದಿರಲಿಲ್ಲ. (೭) ಯೋಗಿಗಳು ಏನು ಹೇಳುತ್ತಾರೆಂದರೆ, ಮನಸ್ಸು ಮೂಗಿನ ತುದಿಯ ಮೇಲೆ ಧಾರಣೆಯಿಂದ ನಿಂತರೆ ಕೆಲವು ದಿನಗಳಲ್ಲಿ ದಿವ್ವಗಂಧವು ತೋರುವುದು. ನಾಲಗೆಯ ಬುಡದಲ್ಲಿ ಮನಸ್ಸನ್ನು ನಿಲ್ಲಿಸಲು ಶಬ್ದಗಳು ಕೇಳಿಸುವುವು, ನಾಲಗೆಯ ಕೊನೆಯಲ್ಲಿ ನಿಲ್ಲಿಸಲು ವಿಚಿತ್ರವಾದ ರುಚಿಗಳು ತೋರುವುವು. ನಾಲಗೆಯ ಮಧ್ಯದಲ್ಲಿ ನಿಲ್ಲಿಸಿದರೆ ಏನನ್ನೊ ಮುಟ್ಟಿದಂತಾಗುವುದು. ದವಡೆಯಲ್ಲಿ ಮನಸ್ಸನ್ನು ನಿಲ್ಲಿಸಿದರೆ ಕೆಲವು ವಿಶೇಷ ರೂಪಗಳು ತೋರುವುವು. ಮನಸ್ಸು ಚಂಚಲವಾಗಿದ್ದು ಈ ಯೋಗಾಭಾಸಗಳಲ್ಲಿ ಕೆಲವನ್ನು ಮಾಡಬೇಕೆಂಬ ಬಯಕೆ ಇದ್ದು ಇವುಗಳು ನಿಜವೊ ಸುಳ್ಳೊ ಎಂದು ಸಂಶಯ ಪಡುವಾತನಿಗೆ ಸ್ವಲ್ಪ ಅಭಾಸ ಮಾಡುವುದರಲ್ಲಿ ಇಂಥ ಅನುಭವಗಳು ಬರುವುದರಿಂದ ಸಂಶಯಗಳೆಲ್ಲ ತೊಲಗಿ ಅವನು ಮುಂದೆ ಪ್ರಯತ್ನ ಮಾಡುವನು. (ರಾಯೋ-೧೦೪) ನಿರ್ದಿಷ್ಟ ಇಂದ್ರಿಯ ಕಳಿಸುವ ಸಂಕೇತಗಳಿಗೆ ಅನುಗುಣವಾಗಿ ಮೆದುಳು ಶಬ್ದ, ಸ್ಪರ್ಶ,ರಸ, ರೂಪ, ಗಂಧ ಎನ್ನುವ ಭೌತಿಕ ಜಗತ್ತಿನ ಗುಣಲಕ್ಷಣಗಳನ್ನು ಗುರುತಿಸಿತ್ತದೆ. ವಸ್ತುವನ್ನು ನೋಡುವುದು ಕಣ್ಣಿನ ಕೆಲಸ. ನೋಡುವ ಇಂದ್ರಿಯದಿಂದ ದಕ್ಕುವ ತಿಳಿವಳಿಕೆ ಇತರ ಇಂದ್ರಿಯಗಳಿಂದ ದಕ್ಕುವ ತಿಳಿವಳಿಕೆಗೆ ಪರ್ಯಾಯ ಆಗಲಾರದು. ಹಾಗೇ ಆಗಿದ್ದೇ ಆದರೆ ಮಾನಸಿಕ ಭ್ರಮೆಯೇ ಆಗಿರುತ್ತದೆ.ಕೋಟ್ಯಾಂತರ ಜ್ಯೋತಿರ್ವರ್ಷಗಳಾಚೆಗಿರುವ ತಾರೆ, ಬ್ರಹ್ಮಾಂಡಗಳನ್ನು ಕಣ್ಣು ಮಾತ್ರ ನೋಡಬಲ್ಲದು. ಉಳಿದ ಇಂದ್ರಿಯಗಳು ಅವುಗಳ ವಿಷಯದಲ್ಲಿ ಏನೇನೂ ತಿಳಿಯಲಾರವು. ಕೋಟ್ಯಾಂತರ ವರ್ಷಗಳ ಹಿಂದೆ ಜರುಗಿದ ಸೂಪರ್ ನೋವಾ ನೋಡುವ ಇಂದ್ರಿಯಕ್ಕೆ ದಕ್ಕುತ್ತದೆ. ಆದರೆ ಅದೇ ಸಮಯದಲ್ಲಿ ಉಂಟಾದ ಶಾಖ , ಸದ್ದು , ವಾಸನೆ ಯಾವುವನ್ನೂ ತಿಳಿಯಲು ಸಾದ್ಯವಿಲ್ಲ. ಆದ್ದರಿಂದ ಸ್ವಾಮಿಗಳು ತಿಳಿಸುವ ಎಲ್ಲ ಸಿದ್ಧ್, ಅನುಭವಗಳು ಕಾಲ್ಪನಿಕ. (೮) ಅವಿದ್ಯೆ (ತಪ್ಪ ತಿಳಿವಳಿಕೆ), ಅಸ್ಮಿತೆ (ಅಹಂಕಾರ), ರಾಗ (ಆಸಕ್ತಿ), ದ್ವೇಷ (ಹಗೆತನ), ಅಭಿನಿವೇಶ (ಬದುಕಿರಬೇಕೆಂಬ ಆಸೆ) ಇವೇ ಕ್ಲೇಶಗಳು. ಇವೈದೂ ಕ್ಲೇಶಗಳು. ನಮ್ಮನ್ನು ಕಟ್ಟಿಹಾಕಿರುವ ಐದು ಮಡಿಕೆಯ ಗಂಟೇ ಇದು. ಇವುಗಳಲ್ಲಿ ಅಜ್ಞಾನವೇ ಕಾರಣವು ಉಳಿದ ನಾಲ್ಕೂ ಇದರಿಂದಾಗಿರುವ ಕಾರ್ಯಗಳು. ನಿಜವಾಗಿ ನಮಗಾಗಿರುವ ದುಃಖಕ್ಕೆಲ್ಲ ಇದೊಂದೇ ಕಾರಣ. (ರಾಯೋ-೧೧೫) ಬದುಕಿರಬೇಕೆಂಬ ಆಶೆಯೇ ಜೀವ ಜಗತ್ತಿನ ಅಸ್ತಿತ್ವಕ್ಕೆ ಕಾರಣ. ಈ ಮೂಲ ಕಾರಣವನ್ನು ಅಜ್ಞಾನವೆಂದು ಕರೆದು ಕಾಣದ ಆತ್ಮ ಮಾತ್ರ ನಿಜ ಎನ್ನುವುದು ಯಾವುದೇ ಸಮರ್ಥನೆಯಿಲ್ಲದ ಮಾತಿನ ಆಡಂಬರವಾಗಿದೆ. (೯) ನಾವು ಮಾಡುವ ಎಲ್ಲಾ ಕೆಲಸಗಳ ಸಂಸ್ಕಾರಗಳೆಂಬ ಸೂಕ್ಷ್ಮವಾದ ಬೇರುಗಳೂ ಒಂದೇ. ಇವುಗಳು ಈ ಜನ್ಮದಲ್ಲಿಯೊ ಅಥವಾ ಮುಂದಿನ ಜನ್ಮಗಳಲ್ಲಿಯೊ ಫಲಗಳನ್ನು ಕೊಡುವುದಕ್ಕೆ ಕಾರಣವಾಗಿರುವುವು. ಈ ಸಂಸ್ಕಾರಗಳು ಅತ್ಯುತ್ಕಟವಾಗಿರುವಂಥ ವಿಶೇಷ ಸಂದರ್ಭಗಳಲ್ಲಿ ಕೂಡಲೆ ಇವುಗಳ ಫಲವಾಗುವುದು. ಪುಣ್ಯಪಾಪಗಳು ಬಹು ಜೋರಾಗಿದ್ದರೆ ಈ ಜನ್ಮದಲ್ಲಿಯೆ ಫಲವಾಗುವುದು. ಒಳ್ಳೆಯ ಸಂಸ್ಕಾರಗಳು ಬಹಳ ಬಲವಾದರೆ ಅಂಥವರು ಸಾಯಬೇಕಾದುದೇ ಇಲ್ಲ, ಅವರ ಶರೀರವು ಈ ಜನ್ಮದಲ್ಲಿಯೇ ದೇವ ಶರೀರವಾಗುವುದು ಎಂದು ಯೋಗಿಗಳು ಹೇಳುತ್ತಾರೆ. ಯೋಗ ಗ್ರಂಥಗಳಲ್ಲಿ ಇಂಥ ಅನೇಕ ಉದಾಹರಣೆಗಳನ್ನು ಕೊಟ್ಟಿರುತ್ತಾರೆ. ಇಂಥ ಜನರಿಗೆ ಶರೀರದಲ್ಲಿರುವ ಪದಾರ್ಥವೇ ಬೇರೆಯಾಗಿ ಬಿಡುವುದು. ಶರೀರದಲ್ಲಿರುವ ಅಣುಗಳನ್ನು ಮತ್ತೊಂದು ಕ್ರಮದಲ್ಲಿಟ್ಟುಕೊಳ್ಳುವುದರಿಂದ ಇವರಿಗೆ ರೋಗವೇ ಇಲ್ಲವಾಗುವುದು. ಆದುದರಿಂದ ಮರಣವೆಂಬುದು ಇವರಿಗೆ ಬರುವುದಿಲ್ಲ. ಇದೇತಕ್ಕಾಗಬಾರದು? ಶರೀರಶಾಸ್ತ್ರದಂತೆ ಆಹಾರವೆಂದರೆ ಸೂರ್ಯ ಶಕ್ತಿಯನ್ನು ತನ್ನಲ್ಲಿ ಕೂಡಿಸಿಕೊಳ್ಳುವುದೆಂದರ್ಥ. ಈ ಶಕ್ತಿಯು ಮೊದಲು ಗಿಡಕ್ಕೆ ಬರುವುದು. ಇದನ್ನೆ ಪ್ರಾಣಿಯು ತಿನ್ನುವುದು. ಈ ಪ್ರಾಣಿಯನ್ನು ಮನುಷ್ಯನು ತಿನ್ನುತ್ತಾನೆ. ಇದರಿಂದಾದ ಸಿದ್ದಾಂತವೇನೆಂದರೆ-ನಾವು ಅಷ್ಟಷ್ಟು ಶಕ್ತಿಯನ್ನು ಸೂರ್ಯನಿಂದ ನಮ್ಮಲ್ಲಿ ಸೇರಿಸಿಕೊಳ್ಳುತ್ತಿರುವೆವು. ಹೀಗಿರುವುದರಿಂದ ಶಕ್ತಿಯನು ಕೊಳ್ಳುವುದಕ್ಕೆ ಒಂದೇ ಮಾರ್ಗವಿರಬೇಕೆನ್ನುವುದೇನು ? ಸಸ್ಯದ ಮಾರ್ಗವು ನಮ್ಮ ಮಾರ್ಗದಂತೆ ಇಲ್ಲ, ಭೂಮಿಯು ಶಕ್ತಿಯನ್ನು ಹೀರಿಕೊಳ್ಳುವ ಕ್ರಮಕ್ಕೂ ನಮ್ಮ ಕ್ರಮಕ್ಕೂ ಭೇದವಿದೆ. ಅಂತು ಎಲ್ಲರೂ ಈ ಶಕ್ತಿಯನ್ನು ಒಂದು ರೂಪವಲ್ಲದಿದ್ದರೆ ಮತ್ತೊಂದು ರೂಪದಲ್ಲಿ ಹೀರ್ರಿಕೊಳ್ಳುತ್ತಲೇ ಇರುವುದು. ಕೇವಲ ಮನಸ್ಸಿನ ಶಕ್ತಿಯಿಂದಲೇ ಶಕ್ತಿಯನ್ನು ಹೀರಿಕೊಳುವದಕ್ಕೆ ತಮಗೆ ಬರುತ್ತದೆಂರೆುಂತಲೂ ಎಲ್ಲರನೂ ಉಪಯೋಯೋಗಿಸುವ ಮಾರ್ಗಗಳಿಲ್ಲದೆಯೆ ಎಷ್ಟು ಬೇಕೆಂದರೆ ಅಷ್ಟು ಶಕ್ತಿಯನ್ನು ಎಳೆದುಕೊಳ್ಳುತ್ತೇವೆಂದೂ ಯೋಗಿಗಳು ಹೇಳುವರು. (ರಾಯೋ-೧೨೨) ಶರೀರದಲ್ಲಿರುವ ಅಣುಗಳನ್ನು ಮತ್ತೊಂದು ಕ್ರಮದಲ್ಲಿಟ್ಟುಕೊಳ್ಳುವುದರಿಂದ ಇವರಿಗೆ ರೋಗವೇ ಇಲ್ಲವಾಗುವುದು. ಆದುದರಿಂದ ಮರಣವೆಂಬುದು ಇವರಿಗೆ ಬರುವುದಿಲ್ಲ. ಈ ಶರೀರಕ್ಕೆ ನಾವೇ ಯಜಮಾನರು. ಅದರಲ್ಲಿರುವವರೂ ನಾವೆ. ಆದರೆ ಅದಕ್ಕೆ ಹೊಸ ಶಕ್ತಿಯನ್ನು ಕೊಡುವ ಕ್ರಮವನ್ನು ಮರೆತಿದ್ದೇವೆ. ನಾವು ಸುಮ್ಮನೆ ಗಾಣದ ಎತ್ತುಗಳಂತೆ ಮಾಡಿದುದನ್ನೆ ಮಾಡಿಕೊಳ್ಳುತ್ತ ಕೆಳಕ್ಕೆ ಇಳಿದಿದ್ದೇವೆ. ಶರೀರದ ಅಣುಗಳನ್ನು ಕೂಡಿಸುವ ಕ್ರಮಗಳನ್ನು ಮರೆತುಬಿಟ್ಟಿದ್ದೇವೆ. ಈಗ ನಾವು ಅಭಾಸದಿಂದ ತಿಳಿಯದೆ ಮಾಡುತ್ತಿರುವುದನ್ನು ತಿಳಿದು ಮಾಡಬೇಕು. ನಾವೇ ಯಜಮಾನರು. ಈ ಕ್ರಮವನ್ನು ನಾವೇ ಸರಿಪಡಿಸಬೇಕು. ಹೀಗೆ ಸರಿಪಡಿಸುವುದಕ್ಕೆ ಬಂದ ಕೂಡಲೆ ನಮಗೆ ಬೇಕಾದ ರೀತಿಯಲ್ಲಿ ಅದಕ್ಕೆ ಜೀವಕಳೆಯನ್ನು ಕೊಡುವುದಕ್ಕಾಗುವುದು. ಆಗ ನಮಗೆ ಹುಟ್ಟು, ರೋಗ, ಸಾವು ಇವು ಯಾವುವೂ ಬರುವುದಿಲ್ಲ. (ರಾಯೋ-೧೨೩) ಹುಸಿ ವಿಜ್ಞಾನದ ಎಲ್ಲ ಲಕ್ಷಣಗಳು ಈ ಹೇಳಿಕೆಯಲ್ಲಿವೆ. ಸಂಸ್ಕಾರಗಳು ಸಾವನ್ನು ಗೆಲ್ಲಬಲ್ಲವು. ಶರೀರದಲ್ಲಿರುವ ಅಣುಗಳು ಬೇರೆ ಸಂಯೋಜನೆಯಾಗಿ ಮುಪ್ಪು , ಸಾವು ಬರಲಾರದು , ನಮ್ಮ ಶರೀರವನ್ನು ನಿಯಂತ್ರಿಸುವ ನಿಸರ್ಗದ ನಿಯಮಗಳನ್ನು ಮೀರಬಹುದು ಎನ್ನುವುದು ತಪ್ಪು. ವಿಜ್ಞಾನದ ಸಂಶೋಧನೆಗಳನ್ನು ಸ್ವಾಮಿಗಳು ತಪ್ಪಾಗಿ ಅರ್ಥಮಾಡಿಕೊಂಡಿರುವುದೇ ಇಂತಹ ಹೇಳಿಕೆಗಳಿಗೆ ಕಾರಣ ಸೂರ್ಯನ ಬಿಸಿಲಿನಲ್ಲಿ ಸಸ್ಯಗಳು ಆಹಾರ ತಯಾರಿಸುವುದನ್ನು ಬಳಸಿಕೊಂಡು ಸ್ವಾಮಿಗಳು ನೀಡುವ ಉಪಮೆಗಳು ಅಸಂಬದ್ಧವಾಗಿವೆ. (೧೦) ಸ್ಥೂಲ ಭೂತಗಳು. ಇವು ನಮ್ಮ ಇಂದ್ರಿಯಗಳಿಗೆ ಗೊತ್ತಾಗುತ್ತವೆ. ತನ್ಮಾತ್ರಗಳು ಸಾಮಾನ್ಯ ಜನರ ಇಂದ್ರಿಯಕ್ಕೆ ಗೊತ್ತಾಗದ ಸೂಕ್ಷ್ಮವಸ್ತುಗಳು. ಯೋಗಾಭಾಸದಿಂದ ಕೆಲವು ಕಾಲದ ಮೇಲೆ ಇಂದ್ರಿಯು ಜ್ಞಾನಗಳೂ ಸೂಕ್ಷ್ಮವಾಗಿ ಈ ತನ್ಮಾತ್ರಗಳನ್ನು ಕಣ್ಣಾರೆ ಕಾಣಬಹುದೆಂದು ಪತಂಜಲಿಗಳು ಹೇಳುತ್ತಾರೆ. ಹೇಗೆಂದರೆ ಪ್ರತಿಯೊಬ್ಬನಲ್ಲಿಯೂ ಒಂದು ಬೆಳಕಿರುವುದೆಂದು ನೀವು ಕೇಳಿರಬಹುದು. ಪ್ರತಿಯೊಂದು ಪ್ರಾಣಿಯಿಂದಲೂ ಒಂದು ಬಗೆಯ ಬೆಳಕು ಹೊರಟು ಬರುತ್ತಿರುವುದು. ಅದು ಯೋಗಿಗೆ ಕಾಣಿಸುವುದೆಂದು ಇವರು ಹೇಳುತ್ತಾರೆ. ನಮಗೆಲ್ಲರಿಗೂ ಇದು ಕಾಣಿಸುವುದಿಲ್ಲ, ಈ ತನ್ಮಾತ್ರಗಳು ಹೊರಕ್ಕೆ ಹೊರಡುತ್ತಲೆ ಇರುವುವು. ಇದಕ್ಕೆ ಹೂವಿನಿಂದ ಸಣ್ಣ ಸಣ್ಣ ಅಣುಗಳು ಹೊರಕ್ಕೆ ಬರುತ್ತಿರುವುದನ್ನು ದೃಷ್ಟಾಂತವೆನ್ನಬಹುದು. ಹೂವಿನ ಕಣಗಳು ಹೊರಕ್ಕೆ ಬರುತ್ತಿರುವುದರಿಂದಲೆ ಅದರ ವಾಸನೆ ನಮಗೆ ಬರುವುದು. …….ಜನರಿಗೆ ಹೇಗೋ ದೇವರ ಪೂಜೆಯಾಗುವ ಸ್ಥಳದಲ್ಲಿ ಒಳ್ಳೆಯ ತನಾತ್ರಗಳು ತುಂಬಿರುವವೆಂದು ಗೊತ್ತಾಯಿತು. ಪ್ರತಿದಿನವೂ ಜನರು ಅಲ್ಲಿಗೆ ಹೋಗುತ್ತಿರುವರು. ಸಾಂಖ್ಯ ಸಿದ್ಧಾಂತದಲ್ಲಿ ಪ್ರಕೃತಿಯಿಂದ ಈ ಜಗತ್ತಿನಲ್ಲಿ ಹೇಗೆ ಜೀವ ಮತ್ತು ವೈವಿಧ್ಯಮಯ ವಸ್ತುಗಳು ಉದಿಸಿದವು ಎನ್ನುವ ಸಮಸ್ಯೆಯನ್ನು ಬಗೆಹರಿಸಲು ತನ್ಮಾತ್ರ ಎನ್ನುವ ಸೂಕ್ಷ್ಮ ಕಣಗಳ ಪರಿಕಲ್ಪನೆ ಮಾಡಿಕೊಳ್ಳಲಾಗಿದೆ. ವಿಜ್ಞಾನ ಪ್ರತಿಪಾದಿಸುತ್ತಿರುವ ಪರಮಾಣು ಸಿದ್ಧಾಂತ ,ಕ್ವಾಂಟಂ ಬಲವಿಜ್ಞಾನಗಳ ಮುಂದೆ ತನ್ಮಾತೆಗಳು ಆದಿಮ ಸ್ಥಿತಿಯ ಚಿಂತನೆಗಳು ಮಾತ್ರ. ಕಣ್ಣು ೭೫ ಮೈಕ್ರಾನ್;ಗಿಂತ ಸೂಕ್ಷ್ಮವಾದ ವಸ್ತುಗಳನ್ನು ನೋಡಲಾರದು. ಇದಕ್ಕೆ ಕಣ್ಣಿನ ಅಕ್ಷಿಪಟಲದ ರಚನೆ, ಅದರ ನಾಭಿದೂರ, ವಿಯೋಜನ ಸಾಮರ್ಥ್ಯಗಳು ತಡೆಯೊಡ್ಡುತ್ತವೆ. ಕಣ್ಣಿನ ರಚನೆಯನ್ನು ಬದಲಿಸದೆ ಯಾವ ಯೋಗಿಯೂ ಬೇರೆ ಸಾಮಾನ್ಯ ಮನುಷ್ಯನಿಗಿಂತ ಸೂಕ್ಷ್ಮವಾದುದನ್ನು ನೋಡಲಾರ. ಹಾಗೆ ನೋಡಿದ್ದೇ ಆದರೆ ಸೂಕ್ಷ್ಮದರ್ಶಕ ಕಂಡು ಹಿಡಿಯುವ ಮೊದಲೇ ನಮ್ಮ ಯೋಗಿಗಳು ಅಮೀಬಾ, ಬ್ಯಾಕ್ಟಿರಿಯಾ, ವೈರಸ್ , ಅಣು, ಪರಮಾಣು ಎಲ್ಲದರ ಬಗ್ಗೆ ತಿಳಿದಿರುತ್ತಿದ್ದರು. ಪತಂಜಲಿ ಎಲ್ಲಿಯೂ ಪ್ರತಿಯೊಂದು ಪ್ರಾಣಿಯಿಂದಲೂ ಬೆಳಕು ಬರುತ್ತಿದೆಯೆಂದು ಹೇಳಿಲ್ಲ. ತನ್ಮಾತ್ರಗಳಲ್ಲಿ ಒಳ್ಳೆಯ , ಕೆಟ್ಟ ತನ್ಮಾತ್ರೆಗಳು ಇವೆಯೆಂದು ಸಾಂಖ್ಯ ಸಿದ್ಧಾಂತ ಹೇಳುವುದಿಲ್ಲ. (೧೧) ದಾನಗಳನ್ನು ಸ್ವೀಕರಿಸದೆ ಇರುವಾತನಿಗೆ ಮತ್ತೊಬ್ಬರ ಹಂಗು ಇರುವುದಿಲ್ಲ, ಒಬ್ಬರ ಆಶ್ರಯವಿಲ್ಲದೆ ಸ್ವತಂತ್ರನಾಗಿರುತ್ತಾನೆ. ಅವನ ಮನಸ್ಸು ಶುದ್ಧವಾಗಿರುವುದು ದಾನವನ್ನು ತೆಗೆದುಕೊಳ್ಳುವವನಿಗೆ ಒಂದೊಂದು ದಾನವನ್ನು ತೆಗೆದುಕೊಂಡರೆ ಅಷ್ಟಷ್ಟು ದಾತನ ಪಾಪವೂ ಬರುವ ಸಂಭವವುಂಟು. ಹಾಗೆ ದಾನ ಸ್ವೀಕಾರ ಮಾಡದವನಿಗೆ ಚಿತ್ತಶುದ್ದಿಯಾಗಿ ಅದಕ್ಕೆ ಪೂರ್ವಜನ್ಮದ ಸ್ಮರಣೆಯು ಮೊದಲು ತೋರುವುದು. ಆಗ ಮಾತ್ರ ಯೋಗಿಗೆ ತಾನು ಪಡೆಯಬೇಕಾದುದರಲ್ಲಿ ದೃಢವಿಶ್ವಾಸ ಕೂಡುವುದು. (ರಾಯೋ-೧೩೯) ಸ್ವಾಮಿಗಳು ತಮ್ಮ ಕರ್ಮ ಸಿದ್ಧಾಂತದ ಭಾಷಣಗಳಲ್ಲಿ ಪ್ರತಿಯೊಬ್ಬನೂ ತಾನು ಮಾಡಿದ ಕರ್ಮಫಲಗಳನ್ನು ತಾನೇ ಅನುಭವಿಸಬೇಕು ಎನ್ನುತ್ತಾರೆ. ಆದರೆ ಇಲ್ಲಿ ದಾನ ನೀಡುವಾತನ ಪಾಪ ಪಡೆದಾತನಿಗೆ ಹೋಗುತ್ತದೆ. ಎಂದರೆ ಕರ್ಮಫಲ ವೈಯಕ್ತಿಕ ಅಲ್ಲ. ಅವುಗಳನ್ನು ಹಂಚಬಹುದು, ವರ್ಗಾಂತರಿಸಬಹುದು. ಇದು ಅವರು ಬೋಧಿಸಿದ ಕರ್ಮ ಸಿದ್ಧಾಂತವಕ್ಕೆ ವಿರುದ್ಧವಾಗಿದೆಯಲ್ಲದೆ ದಾನ ಕೊಟ್ಟು ಶ್ರೀಮಂತರು ತಮ್ಮ ಪಾಪಗಳಿಂದ ಮುಕ್ತರಾಗಬಹುದು ಎಂದಾಯಿತು. (೧೨) ಯೋಗಿಗಳಿಗೆ ತಮ್ಮ ಶರೀರವನ್ನು ಬಿಟ್ಟು ಹೋಗುವ ಸರಿಯಾದ ಕಾಲವು ಗೊತ್ತಾಗುವುದು. ಯೋಗಿಯು ತನ್ನ ಕರ್ಮದಲ್ಲಿ ಎಂದರೆ ಈಗ ತನ್ನ ಮನಸ್ಸಿನಲ್ಲಿ ಕೆಲಸ ಮಾಡುತ್ತಿರುವ ಕರ್ಮ ಸಂಸ್ಕಾರಗಳಲ್ಲಿಯೂ ಮತ್ತು ಮುಂದೆ ಕೆಲಸ ಮಾಡಬೇಕಾಗಿರುವ ಸಂಸ್ಕಾರಗಳಲ್ಲಿಯೂ ಸಂಯಮ ಮಾಡುವುದರಿಂದ ಮುಂದೆ ಘಟಿಸುವ ಸಂಸ್ಕಾರಗಳಿಂದ ತನ್ನ ಶರೀರವು ಎಂದು ಬಿದ್ದು ಹೋಗಬೇಕೆಂಬುದನ್ನು ನಿರ್ಣಯವಾಗಿ ತಿಳಿದುಕೊಳ್ಳುತ್ತಾನೆ. ತಾನು ಯಾವಾಗ ಸಾಯುತ್ತೇನೆ; ಎಷ್ಟು ಗಂಟೆಗೆ, ಎಷ್ಟು ನಿಮಿಷಕ್ಕೆಂಬುದು ಕೂಡ ಆತನಿಗೆ ತಿಳಿಯುವುದು. ಮರಣವು ಸಮೀಪವಾಗುತ್ತಿರುವುದೆಂಬುದನ್ನು ತಿಳಿದುಕೊಳ್ಳುವುದೆಂದರೆ ಹಿಂದುಗಳಿಗೆ ಬಹಳ ಆದರ, ಏಕೆಂದರೆ ಗೀತೆಯಲ್ಲಿ ಮರಣ ಕಾಲದಲ್ಲಿರುವ ಯೋಚನೆಗಳಿಗೆ ಅನುಸಾರವಾಗಿ ಮುಂದಿನ ಜನ್ಮವಾಗುವುದೆಂದು ಹೇಳಿರುತ್ತದೆ. (ರಾಯೋ-೧೫೦,೧೫೧). ಚಿಕಿತ್ಸೆಗೆ ಸ್ಪಂದಿಸದ ತೀವ್ರ ರೋಗ ಪೀಡಿತರು , ಕ್ಯಾನ್ಸರ್’ನಂತಹ ಮಾರಕ ರೋಗಗಳಿಗೆ ತುತ್ತಾದವರು ಬದುಕಿರಬಹುದಾದ ಕಾಲವನ್ನು ವೈದ್ಯಕೀಯ ಪುರಾವೆ , ಅಂಕಿ-ಅಂಶಗಳ ಆಧಾರಧ ಮೇಲೆ ಅಂದಾಜು ಮಾಡಬಹುದು. ಆರೋಗ್ಯವಂತ ವ್ಯಕ್ತಿಯ ಆಯಸ್ಸನ್ನು ಅಂದಾಜಿಸಬಹುದು. ಯೋಗಿ ತನ್ನ ಸಾವಿನ ಕ್ಷಣವನ್ನು ಅರಿತಿರುತ್ತಾನೆ ಎನ್ನುವುದು ಒಂದು ದೊಡ್ದ ಸುಳ್ಳು. ಜೀವಂತ ಸಮಾಧಿಗೆ ಹೋಗುವವರಿಗೂ ಗಂಟೆ, ನಿಮಿಷ, ಸೆಕೆಂಡ್’ಗಳಲ್ಲಿ ಅವರ ಸಾವಿನ ಸಮಯ ಗೊತ್ತಿರಲು ಸಾದ್ಯವಿಲ್ಲ. ಅರವಿಂದ್ ಘೋಷ್ ತಾವು ಯೋಗಿಗಳಾಗಿರುವುದರಿಂದ ಸಾವು ತಮ್ಮ ನಿಯಂತ್ರಣದಲ್ಲಿದೆ ಎಂದು ಭಾವಿಸಿದ್ದರು. ಆದರೆ ಮುಂದೆ ಏನು ನಡೆಯಿತೆಂಬುದು ಈಗ ಇತಿಹಾಸ. ಒಂದು ಕಡೆ ಜನ್ಮಾಂತರಗಳಲ್ಲಿ ಸಂಚಿತವಾದ ಕರ್ಮಗಳಿಗೆ ಅನುಗುಣವಾಗಿ ಸಾವಿನ ನಂತರದ ಸ್ಥಿತಿ ನಿರ್ಧಾರವಾಗುತ್ತದೆ ಇದು ಕರ್ಮ ಸಿದ್ಧಾಂತ ಎನ್ನಲಾಗುತ್ತದೆ. ಮತ್ತೊಂದು ಕಡೆ ಸಾಯುವ ಕಾಲದಲ್ಲಿರುವ ಆಲೊಚನೆಗಳಿಗೆ ಅನುಗುಣವಾದ ಸ್ಥಿತಿ ದಕ್ಕುತ್ತದೆ ಎಂದು ಗೀತೆಯಲ್ಲಿನ ಹೇಳಿಕೆಯನ್ನು ಒಪ್ಪಲಾಗಿದೆ. ಇವೆರಡು ಪರಸ್ಪರ ಅಸಂಗತ ಮತ್ತು ವೈರುಧ್ಯದ ಸಂಗತಿಗಳು. ಸ್ವಾಮಿಗಳ ಬಹುತೇಕ ಚಿಂತನೆಗಳಲ್ಲಿ ಸ್ಥಿರತೆ , ನಿರ್ದಿಷ್ಟತೆ ಇಲ್ಲ. ಸಮಯ, ಸಂದರ್ಭ, ಮಾಡುತ್ತಿರುವ ಉಪನ್ಯಾಸದ ವಿಷಯಗಳಿಗೆ ಹೊಂದಾಣಿಕೆಯಾಗುವಂತೆ ಅವು ಬದಲಾಗುತ್ತಿರುತ್ತವೆ-ಅದೆಷ್ಟೋ ವಿರೋಧಾಭಾಸಗಳಿದ್ದರು ! (೧೩) ಪ್ರತಿಯೊಬ್ಬನಿಗೂ ಎಷ್ಟು ಶಕ್ತಿ ಬೇಕಾದರೆ ಅಷ್ಟು ಬರುವುದು. ಆದರೆ ಅದನ್ನು ಪಡೆಯುವ ಕ್ರಮವನ್ನು ಮಾತ್ರ ತಿಳಿದುಕೊಳ್ಳಬೇಕು. ಯೋಗಿಗೆ ಬಲ ಬರಬೇಕಾದರೆ ಆನೆಯ ಬಲದಲ್ಲಿ ಸಂಯಮವನ್ನು ಮಾಡಬೇಕು. ಜ್ಯೋತಿಷ್ಟತಿ ಎನ್ನುವ ಪ್ರಭೆಯಲ್ಲಿ ಸಂಯಮ ಮಾಡುವುದರಿಂದ ಸೂಕ್ಷ್ಮವಾದುದು, ಅಡ್ಡಿ ಇರುವುದು, ದೂರವಿರುವುದು ಇವುಗಳ ಜ್ಞಾನವು ಬರುವುದು. ಹೃದಯದಲ್ಲಿರುವ ಈ ದೊಡ್ಡ ಬೆಳಕಿನಲ್ಲಿ ಸಂಯಮವನ್ನು ಮಾಡಿದರೆ ದೂರವಿರುವ ವಸ್ತುಗಳನ್ನು ಸಹ ನೋಡುವುದಕ್ಕಾಗುವುದು. ಅಂದರೆ ನಡುವೆ ಗುಡ್ಡ ಬೆಟ್ಟಗಳು ಅಡ್ಡ ಬಂದಿದ್ದರೂ , ಅವು ಎಷ್ಟೇ ದೂರವಿದ್ದರೂ , ಎಷ್ಟೇ ಸೂಕ್ಷ್ಮವಾಗಿದ್ದರೂ ಕಾಣುವುವು. ಸಿದ್ದರೆಂದರೆ ದೆವ್ವಗಳಿಗಿಂತ ಸ್ವಲ್ಪ ಉತ್ತಮರಾದವರು. ತಲೆಯ ಮೇಲೆ ಯೋಗಿಯು ಮನಸ್ಸನ್ನಿಟ್ಟರೆ ಈ ಸಿದ್ದರು ಗೋಚರವಾಗುವರು. ಸೂರ್ಯನಲ್ಲಿ ಸಂಯಮ ಮಾಡುವುದರಿಮದ ಜಗತ್ತಿನ ಜ್ಞಾನವು , ಚಂದ್ರನಲ್ಲಿ ನಕ್ಷತ್ರಗಳ ಜ್ಞಾನವು , ಧ್ರುವ ನಕ್ಷತ್ರದಲ್ಲಿ ನಕ್ಷತ್ರಗಳ ಗತಿಪ್ರಕಾರದ ಜ್ಞಾನವು. ಹೊಕ್ಕಳಿನ ಚಕ್ತದಲ್ಲಿ ಶರೀರದ ರಚನಾಕ್ರಮದ ಜ್ಞಾನವು , ಗಂಟಲಿನ ಹಳ್ಳದಲ್ಲಿ ಹಸಿವು ಬಾಯಾರಿಕೆಗಳು ನಿವಾರಣೆಯು , ಕೂರ್ಮನಾಡಿಯಲ್ಲಿ ಸ್ಥೈರ್ಯ , ಅಭ್ಯಾಸಕಾಲದಲ್ಲಿ ಶರೀರ ಬಿಗಿಯಾಗಿರಿಸಿದರೆ ಹೃದಯದಲ್ಲಿ ಚಿತ್ತಗಳ ಜ್ಞಾನ ದಕ್ಕುತ್ತವೆ. ಕಿವಿಗೂ ಆಕಾಶಕ್ಕೂ ಇರುವ ಸಂಬಂಧದಲ್ಲಿ ಸಂಯಮವನ್ನು ಮಾಡುವುದುರಿಂದ ದಿವ್ಯವಾದ ಕೇಳುವಿಕೆಯುಂಟಾಗುವುದು. ಆಕಾಶವೂ ಕೇಳುವ ಸಾಧನವಾದ ಕಿವಿಯನೂ ಇರುವವಷ್ಟೆ, ಇವುಗಳಲ್ಲಿ ಸಂಯಮವನ್ನು ಮಾಡಿದರೆ ಯೋಗಿಗೆ ಯಾರಿಗೂ ಇಲ್ಲದ ಕೇಳುವ ಶಕ್ತಿ ಬರುವುದು. ಅವನಿಗೆ ಎಲ್ಲವೂ ಕೇಳಿಸುವುದು. ಎಷ್ಟು ಮೈಲಿಗಳಾಚೆ ಮಾತನಾಡಿದ್ದರೂ ಅಥವಾ ಶಬ್ದ ಮಾಡಿದ್ದರೂ ಅವನಿಗೆ ಕೇಳುವುದು. ಆಕಾಶವೆಂಬುದು ಈ ಶರೀರವಾಗಿರುವ ವಸ್ತು, ಆಕಾಶವು ಒಂದಾನೊಂದು ರೂಪನ್ನು ಹೊಂದಿ ಈ ಶರೀರವಾಗಿರುವುದು. ತನ್ನ ಶರೀರ ವಸ್ತುವಾಗಿರುವ ಈ ಆಕಾಶದಲ್ಲಿ ಯೋಗಿಯು ಸಂಯಮವನ್ನು ಮಾಡಲು ಅದು ಆಕಾಶದಂತೆ ಹಗುರವಾಗಿ ಅಂತರಿಕ್ಷದಲ್ಲಿ ಎಲ್ಲಿಯೆಂದರೆ ಅಲ್ಲಿ ಹೋಗುವುದು,ಮಹಾವಿದೇಹವು (ಶರೀರವಿಲ್ಲದೆ ಇರುವಿಕೆ) ಎಂಬ ಶರೀರದ ಹೊರಗೆ ಇರುವ ಮನಸ್ಸಿನ ನಿಜವಾದ ವೃತ್ತಿಯಲ್ಲಿ ಸಂಯಮ ಮಾಡಿದರೆ ಬೆಳಕಿನ ಮರೆಯು ಹೋಗುವುದು. ಯೋಗಿಯು ಮೊದಲು ಸ್ಥೂಲ ಭೂತಗಳಲ್ಲಿ ಆಮೇಲೆ ಸೂಕ್ಷ್ಮ ಭೂತಗಳಲ್ಲಿ ಸಂಯಮವನ್ನು ಮಾಡುತ್ತಾನೆ. ಈ ಬಗೆಯ ಸಂಯಮವನ್ನು ಕೆಲವು ಜನ ಬೌದ್ದರು ವಿಶೇಷವಾಗಿ ಮಾಡುತ್ತಾರೆ. ಒಂದು ಮುದ್ದೆ ಮಣ್ಣನ್ನು ತೆಗೆದುಕೊಂಡು ಅದರ ಮೇಲೆ ಸಂಯಮವನ್ನು ಮಾಡುತ್ತಾರೆ. ಮೆಲ್ಲಮೆಲ್ಲಗೆ ಅದರಲ್ಲಿರುವ ಸೂಕ್ಷ್ಮ ಪದಾರ್ಥಗಳು ಕಾಣಿಸುತ್ತ ಹೋಗುತ್ತವೆ. ಹೀಗೆ ಎಲ್ಲಾ ಸೂಕ್ಷ್ಮ ಪದಾರ್ಥಗಳಲ್ಲೊ ಕಂಡ ಬಳಿಕ ಆ ಭರೂತವು ಸೂಕ್ಷ್ಮವಾಗುವುದು. ಹೀಗೆಯೇ ಎಲ್ಲಾ ಭೂತಗಳಿಗೂ ತಿಳಿಯಬೇಕು. ಯೋಗಿಯು ಅವುಗಳನ್ನೆಲ್ಲ ಜಯಿಸಬಹುದು. ಅದರಿಂದ ಅಣಿಮಾ ಮೊದಲಾದ ಸಿದ್ದಿಗಳೂ ಶರೀರದ ಸಂಪತ್ತೂ ಅದರ ಗುಣಗಳು ನಾಶವಾಗದೆ ಇರುವುದೂ ಬರುವುವು. ಅಣುವಿನಷ್ಟು ಸಣ್ಣಗೆ ಬೇಕಾದರೂ ಆಗುವುದು: ಬೆಟ್ಟದಷ್ಟು ದಪ್ಪನಾಗುವುದು; ಭೂಮಿಯಷ್ಟು ಭಾರವಾಗುವುದು; ಒಳ್ಳೆಯ ರೂಪವೂ ಕಾಂತಿಯನೂ ಬಲವೂ ವಜ್ರದಂತೆ ಗಟ್ಟಿಯಾಗಿರುವುದೂ ಕಾಯ ಸಂಪತ್ತೆನಿಸುವುದು. ಗಾಳಿಯಷ್ಟು ಹಗುರವಾಗುವುದು; ಯಾವದನ್ನು ಬೇಕಾದರೂ ಆಳುವುದು; ಯಾವುದನ್ನು ಬೇಕಾದರೂ ಗೆಲ್ಲುವುದು ಇವೆಲ್ಲವೂ ಅವನಿಗಾಗುತ್ತವೆ. ಸಿಂಹವಾದರೂ ಅವನ ಕಾಲ ಬಳಿಯಲ್ಲಿ ಕುರೀ ಮರಿಯಂತೆ ಕುಳಿತುಕೊಳ್ಳುವುದು; ಅವನ ಆಸೆಗಳೆಲ್ಲ ಪೂರ್ತಿಯಾಗುವುವು. ಸತ್ತ್ವದಲ್ಲಿ ಸಂಯವು ಮಾಡುವುದರಿಂದ ಸತ್ತ್ವ ಮತ್ತು ಪುರುಷನನ್ನು ಬೇರ್ಪಡಿಸಿದಾತನಿಗೆ ಎಲ್ಲಾ ಕಡೆಯಲ್ಲಿರುವುದೂ ಎಲ್ಲವನ್ನೂ ತಿಳಿಯುವುದೂ ಬರುತ್ತವೆ. ಈ ಎಲ್ಲ ಜ್ಞಾನಗಳು ಪತಂಜಲಿಯ ಯೋಗ ಸೂತ್ರಗಳಲ್ಲಿ ಇವೆಯೇ ಹೊರತು ವಾಸ್ತವದಲ್ಲಿ ಅಲ್ಲ. ಇವುಗಳನ್ನು ಯಾವುದಾದರೂ ಯೋಗಿ ಸಂಶಯಾತೀತವಾಗಿ ಸಾಬೀತು ಪಡಿಸುವವರೆಗೆ ನಂಬುವ ಅವಶ್ಯಕತೆಯಿಲ್ಲ. ಸ್ವಾಮಿಗಳು ಪರೀಕ್ಷಿಸದೇ ಯಾವುದನ್ನೂ ಒಪ್ಪಬಾರದು ಎಂದು ಮೇಲಿಂದ ಮೇಲೆ ಹೇಳುತ್ತಾರೆ. ಆದರೆ ಇಲ್ಲಿ ಅವರಿಗೆ ಕುರುಡು ನಂಬಿಕೆಯೇ ಅವರ ಸಮರ್ಥನೆಯಾಗಿದೆ. ಸೂರ್ಯ , ಚಂದ್ರ, ತಾರೆಗಳಲ್ಲಿಸಂಯಮ ಮಾಡುವುದು ಎಂದರೆ ಏನು ? ಅವುಗಳನ್ನು ಕುರಿತಾಗಿ ಧ್ಯಾನಿಸುವುದೇ ? ಜಪ ಮಾಡುವುದೇದೇ? ಮಂತ್ರಗಲನ್ನು ಹೇಳುವುದೇ? ಸರ್ವ ಸಮರ್ಥರಾದ ಹಿಂದಿನ ಯಾವ ಯೋಗಿಗೂ ಸೂರ್ಯ ಒಂದು ಉರಿಯುತ್ತಿರುವ ಅನಿಲಗಳ ಗೋಳ ಎಂದಾಗಲಿ, ತಾರೆಗಳು ಸೂರ್ಯನ ಸಾವಿರಾರು ಪಟ್ಟು ದೊಡ್ಡವಿರುತ್ತವೆ ಎಂದು ಏಕೆ ಗೊತ್ತಿರಲಿಲ್ಲ ? (೧೪) ಯೋಗಿ ತಾನೊಂದು ಶರೀರದಲ್ಲಿ ಇದ್ದರೂ ಒಂದು ಹೆಣದೊಳಕ್ಕೆ ಪ್ರವೇಶಿಸಿ ಎಬ್ಬಿಸಿ ಓಡಾಡಿಸುವುದಕ್ಕೆ ಬರುತ್ತದೆ ಅಥವಾ ಬದುಕಿರುವವನ ಶರೀರದೊಕ್ಕೆ ಹೊಕ್ಕು ಅವನ ಇಂದ್ರಿಯಗಳನ್ನೂ ಮನಸ್ಸನ್ನೂ ನಿಲ್ಲಿಸಿ ಆ ಕಾಲದ ಮಟ್ಟಿಗೆ ಆ ಶರೀರದಲ್ಲಿ ಕೆಲಸ ಮಾಡುವುದಕ್ಕೆ ಬರುತ್ತದೆ. ಪ್ರಕೃತಿ ಪುರುಷರ ವಿವೇಕದಿಂದಲೆ ಅದು ಯೋಗಿಗೆ ಸಾಧ್ಯವಾಗುವುದು. ಮತ್ತೊಬ್ಬನ ಶರೀರವನ್ನು ಸೇರಬೇಕೆಂದರೆ ಆ ಶರೀರದಲ್ಲಿ ಸಂಯಮವನ್ನು ಮಾಡಿ ಅದನ್ನು ಪ್ರವೇಶಿಸುತ್ತಾನೆ. ಏಕೆಂದರೆ ಅವನ ಆತ್ಮವು ಸರ್ವವಾಪಿಯಾಗಿರುವುದು ಹಾಗಿರಲಿ: ಅವನ ಮನಸ್ಸೂ ಸರ್ವವಾಪಿಯೆಂದು ಯೋಗಿಯು ಹೇಳುತ್ತಾನೆ. ಅದು ಒಟ್ಟು ಮನಸ್ಸಿನಲ್ಲಿ ಒಂದು ಚೂರಾಗಿರುವುದು. ಈಗಿನ ಸ್ಥಿತಿಯಲ್ಲಿ ಈ ಶರೀರದಲ್ಲಿರುವ ನರ ಶಕ್ತಿಯಿಂದ ಕೆಲಸಮಾಡುವುದಕ್ಕೆ ಬರುತ್ತದೆ. ಆದರೆ ಯೋಗಿ ಈ ನರ ಶಕ್ತಿಗಳ ಕಟ್ಟು ಬಿಚ್ಚಿಕೊಂಡರೆ ಬೇರೆ ಕಡೆಯಲ್ಲಿಯೂ ಕೆಲಸ ಮಾಡುವುದಕ್ಕಾಗುತ್ತದೆ. ಉದಾನವೆಂಬುದು ಶ್ವಾಸಕೋಶಗಳನ್ನೂ ಮತ್ತು ಶರೀರದ ಮೇಲ್ಗಡೆ ಇರುವ ಎಲ್ಲಾ ಭಾಗಗಳನ್ನೂ ವಶದಲ್ಲಿಟ್ಟುಕೊಂಡಿರುವ ನರಶಕ್ತಿ ಪ್ರವಾಹವು, ಅದು ಸ್ವಾಧೀನವಾದರೆ ಹಗುರವಾಗಬಹುದು; ನೀರಿನಲ್ಲಿ ಮುಳುಗುವುದಿಲ್ಲ: ಮುಳ್ಳಿನ ಮೇಲೆ ಮತ್ತು ಕತ್ತಿಯ ಅಲಗಿನ ಮೇಲೆ ನಡೆದಾಡಬಹುದು. ಬೆಂಕಿಯಲ್ಲಿ ನಿಲ್ಲಬಹುದು; ಯಾವಾಗ ಬೇಕೆಂದರೆ ಆಗ ಪ್ರಾಣವನ್ನು ಬಿಡಬಹುದು. ಸಮಾನವನ್ನು ಜಯಿಸುವುದರಿಂದ ತನ್ನ ದೊಡ್ಡ ಬೆಳಕಿನ ಜ್ಞಾಲೆಯು ಸುತ್ತಿಕೊಳ್ಳುವುದು. ಯಾವಾಗಲೆಂದರೆ ಆಗ ಶರೀರದಿಂದ ಬೆಳಕೇ ಹೊರಬೀಳುತ್ತಿರುವುದು. ಪರಕಾಯ ಪ್ರವೇಶ ಆದಿಮ ಜನಾಂಗಗಳಲ್ಲಿ ಪ್ರಚಲಿತವಿದ್ದ ಒಂದು ರಮ್ಯಾಧ್ಬುತ ಕಲ್ಪನೆ. ವಿಚಾರಶೀಲತೆಯಿಂದ ಹೊರಬಂದಾಗ ಇದು ಅತ್ಯಂತ ರೋಮಾಂಚನಕಾರಿಯಾಗಿ ಕಾಣುತ್ತದೆ. ಹಳ್ಳಿಗರು ದೆವ್ವ , ಭೂತಗಳು ಹಿಡಿಯುತ್ತವೆ ಎನ್ನುವುದಕ್ಕೂ ಸ್ವಾಮಿಗಳ ಈ ಹೇಳಿಕೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಹಳ್ಳಿಗರು ಅಜ್ಞಾನಿಗಳು. ಅವರರದು ಕುರುಡು ನಂಬಿಕೆ. ಸ್ವಾಮಿಗಳು ಯೋಗಿಗಳು ಅವರದು ಯೋಗ ಮತ್ತು ವೇದಾಂತ ! (೧೫) ಇನ್ನು ಕೆಲವು ತೊಂದರೆಗಳಿವೆ. ದೇವತೆಗಳೇ ಮೊದಲಾದವರು ಯೋಗಿಗೆ ಆಸೆ ತೋರಿಸುತ್ತಾರೆ. ಅವರಿಗೆ ಯಾರು ಮುಕ್ತರಾಗುವುದೂ ಇಷ್ಟವಿಲ್ಲ, ಅವರು ನಮ್ಮಂತೆಯೇ ಅಥವಾ ಕೆಲವು ವೇಳೆ ನಮಗಿಂತ ಹೆಚ್ಚಾಗಿ ಹೊಟ್ಟೆಕಿಚ್ಚು ಪಡುತ್ತಾರೆ. ತಮ್ಮ ಸ್ಥಾನಗಳು ಎಲ್ಲಿ ಹೋಗುವುವೊ ಎಂದು ಹೆದರುತ್ತಿರುವರು. ಸಿದ್ಧಿಯನ್ನು ಪಡೆಯದೆ ಇದ್ದ ಯೋಗಿಗಳು ಸತ್ತು ದೇವತೆಗಳಾಗುವರು. ಇವರು ರಾಜಮಾರ್ಗವನ್ನು ಬಿಟ್ಟು ಸೀಳುಹಾದಿಗಳಲ್ಲಿ ಒಂದನ್ನು ಹಿಡಿಯುವುದರಿಂದ ಈ ಸಿದ್ದಿಗಳು ಬರುತ್ತವೆ. ಆಮೇಲೆ ಮತ್ತೆ ಅವರು ಹುಟ್ಟಬೇಕಾಗುತ್ತದೆ. ಈ ಆಸೆಗಳನ್ನು ತಡೆದುಕೊಳ್ಳುವ ಧೈರ್ಯವು ಯಾರಿಗಿರುವುದೊ ಅವನು ನೆಟ್ಟಗೆ ಪುರುಷಾರ್ಥವನ್ನು ಪಡೆದು ಮುಕ್ತನಾಗುವನು. (೧೬) ಕೆಲವು ವೇಳೆಗಳಲ್ಲಿ ಒಬ್ಬೊಬ್ಬರಿಗೆ ಹುಟ್ಟುತ್ತಲೆ ಸಿದ್ದಿಗಳಿರುತ್ತವೆ. ಅವರು ಪೂರ್ವಜನ್ಮದಲ್ಲಿ ಅವನ್ನು ಸಂಪಾದಿಸಿರುತ್ತಾರೆ. ಅವುಗಳ ಫಲವನ್ನು ಅನುಭವಿಸಲು ಅವರು ಜನ್ಮವೆತ್ತಿರುತ್ತಾರೆ. ಸಾಂಖ್ಯ ಸಿದ್ದಾಂತದ ಪ್ರವರ್ತಕರಾದ ಕಪಿಲರು ಹುಟ್ಟು ಸಿದ್ದರಾಗಿದ್ದರಂತೆ. ಸಿದ್ದ ಎಂದರೆ ಸಿದ್ಧಿಯನ್ನು (ಗೆಲವನ್ನು) ಹೊಂದಿದವನು ಎಂದು ಅಕ್ಷರಾರ್ಥ. ಪತಂಜಲಿ ಹೇಳುವ ಸಿದ್ಧಿಗಳನ್ನು ಹೊಂದಿದ ಯಾರೂ , ಎಂದಿಗೂ ಇದ್ದುದಕ್ಕೆ ಪೌರಾಣಿಕ ಕಥೆ, ಧಾರ್ಮಿಕ ಪ್ರವಚನಗಳಲ್ಲಿ ಹೊರತು ಬೇರೆಲ್ಲಿಯೂ ದಾಖಲೆಗಳಿಲ್ಲ. (೧೭) ವಿಜ್ಞಾನ, ಜ್ಞಾನ, ಧಾರ್ಮಿಕತೆ, ಧರ್ಮ ಇವೆಲ್ಲ ಸರಿಯೆ. ಆದರೆ ಇವುಗಳನ್ನೆಲ್ಲ ಪಡೆಯುವುದಕ್ಕೆ ದೇಹವೇ ಸಾಧನ. ಪ್ರತಿ ಗಳಿಗೆ ಶರೀರವು ನಾಶವಾಗುತ್ತದೆ. ಇದರಿಂದ ಪುರುಷಾರ್ಥವನ್ನು ಪಡೆಯುವುದಕ್ಕೆ ಅದೆಷ್ಟೋ ಕಾಲ ಬೇಕಾಗುವುದು. ಒಬ್ಬ ಯೋಗವನ್ನು ಅಭ್ಯಾಸ ಮಾಡಬೇಕು, ಧಾರ್ಮಿಕ ಶಕ್ತಿಯನ್ನು ಸಂಪಾದನೆ ಮಾಡಬೇಕೆಂದು ಬಯಸುತ್ತಾನೆ. ಸ್ವಲ್ಪ ಅಭ್ಯಾಸ ಮಾಡುವುದರೊಳಗಾಗಿಯೆ ಸಾವು ಬರುತ್ತದೆ. ಮತ್ತೊಮ್ಮೆ ಹುಟ್ಟಿ ಧಾರಣೆ ಮಾಡಿ ಅಭ್ಯಾಸ ಮಾಡುತ್ತ ಮೊದಲಿನಂತೆ ಸಾಯುತ್ತಾನೆ. ಹೀಗೆ ಸತ್ತು ಹುಟ್ಟುವುದರಲ್ಲಿಯೇ ಕಾಲ ಕಳೆದು ಹೋಗುತ್ತದೆ. ಹುಟ್ಟು ಸಾವುಗಳು ಇಲ್ಲದಂತೆ ಶರೀರವನು ಬಲವಾಗಿ , ದೋಷವಿಲ್ಲದಂತೆ ಮಾಡಿದರೆ ಧಾರ್ಮಿಕತೆಯನ್ನು ಸಂಪಾದಿಸುವುದಕ್ಕೆ ಅಷ್ಟು ಕಾಲ ಉಳಿದಂತಾಗುವುದು. ಆದುದರಿಂದ ಶರೀರವನ್ನು ಮೊದಲು ಚೆನಾಗಿ ಬಲಪಡಿಸಿಕೊಳ್ಳಬೇಕೆಂದು ಈ ರಸವಾದಿಗಳು ಹೇಳುತ್ತಾರೆ. ಇವರು ಈ ಶರೀರಕ್ಕೆ ಸಾವೇ ಇಲ್ಲದಂತೆ ಮಾಡುವುದಕ್ಕಾಗುವುದು ಎನ್ನುವರು. ಮಂತ್ರಶಕ್ತಿ-ಮಂತ್ರಗಳೆಂಬ ಕೆಲವು ಪವಿತ್ರವಾದ ಶಬ್ದಗಳಿರುತ್ತವೆ. ಇವುಗಳನ್ನು ಕ್ರಮವರಿತು ಜಪಮಾಡುವುದರಿಂದ ಇಂಥ ಹೆಚ್ಚಿನ ಸಿದ್ದಿಗಳು ಬರುತ್ತವೆ. ಹಗಲೂ ಇರುಳೂ ನಾವು ಎಷ್ಟೋ ಅದ್ಭುತ ಸಂಗತಿಗಳ ಮಧ್ಯದಲ್ಲಿ ವಾಸಮಾಡುತ್ತಿರುವೆವು, ಹೀಗಿರುವುದರಿಂದ ಇವುಗಳ ವಿಚಾರವೇ ನಮ್ಮ ತಲೆಗೆ ಬರುವುದಿಲ್ಲ, ಮನುಷ್ಯನ ಶಕ್ತಿಗೂ ಮಾತುಗಳ ಶಕ್ತಿಗೂ ಮತ್ತು ಮನಸ್ಸಿನ ಶಕ್ತಿಗೂ ಇಷ್ಟೆಂಬ ನಿಯಮವೆಂದಿಗೂ ಇರುವುದಿಲ್ಲ. ಮಾನವನ ಚರಿತ್ರೆಯಿಂದ ಇಂತಹ ಸಾದ್ಯಗಳಿಲ್ಲ ಎನ್ನುವುದು ಸ್ಪಷ್ಟ. ಶಬ್ದಗಳು ಭೌತಿಕ ಸ್ಪಂದನದ ಫಲ. ಅವುಗಳಿಗೆ ವಿಶೇಷ ಶಕ್ತಿ ಇರುತ್ತದೆ ಎಂದು ಆದಿಮ ಹಂತದಲ್ಲಿ ಮನುಷ್ಯ ನಂಬಿದ್ದನು. ಆದರೆ ಇದು ನಿಜವಲ್ಲ |
Comment Box is loading comments...