Click to set custom HTML
|
ಯೋಗ-ಆರೋಗ್ಯ-ಅನಾರೋಗ್ಯ
ಮನುಷ್ಯ ಏನನ್ನಾದರೂ ನಂಬಿದನೆಂದರೆ ಅಥವಾ ಮೆಚ್ಚಿದನೆಂದರೆ ಅದರ ಮಹತ್ವವನ್ನು ಹಿಗ್ಗಿಸಿ ಹೇಳಲು ಕಾತರನಾಗುತ್ತಾನೆ. ಅದರ ಸುತ್ತ ತನ್ನದೇ ಆದ ಕತೆಗಳನ್ನು ಹೆಣೆಯುತ್ತಾನೆ. ಅದು ನಿಜವೆಂದೇ ನಂಬುತ್ತಾನೆ. ಅಧಿಕೃತ ಎಂಬಂತೆ ಮೇಲಿಂದ ಮೇಲೆ ಹೇಳಲಾಗುವ ಸುಳ್ಳುಗಳನ್ನು ಜನ ನಂಬುತ್ತಾರೆ. ಇವುಗಳಿಗೆ ಹುಸಿ ವೈಜ್ಞಾನಿಕತೆಯ ಲೇಪ ಬಳಿದರೆ ಆಧುನಿಕ ವಿದ್ಯಾಭ್ಯಾಸ ಪಡೆದು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಆರಂಕೆಯ ಸಂಬಳ ಪಡೆಯುವ ಬಹು ಜಾಣರೆಂದು ಬಿಂಬಿಸಲ್ಪಟ್ಟ ‘ಟೆಕ್ಕಿ’ಗಳೂ , ಇಂಜಿನಿಯರ್, ವೈದ್ಯ, ವಿಜ್ಞಾನಿಗಳೂ , ಭಾರತದಿಂದ ಪ್ರತಿಭಾ ಪಲಾಯನ ಮಾಡಿ ಅಮೆರಿಕಾದಲ್ಲಿ ಯಶಸ್ವಿಯಾಗಿ ತಾಂತ್ರಿಕ ಕಂಪೆನಿಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವವರು ಒಪ್ಪುತ್ತಾರೆ. ಆ ಸುಳ್ಳುಗಳು ಪ್ರಾಚೀನ ಭಾರತೀಯ ವೇದಗಳಿಗೆ, ಅಧ್ಯಾತ್ಮಕ್ಕೆ ಸಂಬಂಧಿಸಿದ್ದೇ ಆದರೆ ಅದಕ್ಕೆ ಇನ್ನೂ ಬಲವಾದ ಬೆಂಬಲ ದೊರಕುತ್ತದೆ. ವೇದಗಳಲ್ಲಿ ಈಗಿರುವ ,ಮುಂದೆ ಬರುವ ಆಧುನಿಕ ವಿಜ್ಞಾನ ಎಲ್ಲವದೂ ಬೀಜರೂಪದಲ್ಲಿದೆ ಎಂದರೆ ಅದನ್ನು ಒಪ್ಪುವ ಜನರ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಪ್ರತಿಯೊಂದರಲ್ಲೂ ಪ್ರಾಚೀನತೆ, ಪರಂಪರೆ ,ವೈಜ್ಞಾನಿಕತೆಗಳು ಕಾಣತೊಡಗುತ್ತವೆ. ಎಲ್ಲವೂ ಅನುಭವ ಮೀರಿದ ಉನ್ನತತರ ಅನುಭಾವ ಆಗತೊಡಗುತ್ತದೆ. ಯೋಗ , ಯೋಗಾಸನಗಳು ಇದಕ್ಕಿಂತ ಭಿನ್ನವಲ್ಲ. ಯೋಗ/ಯೋಗಾಸನ ಭಾರತೀಯರು ಜಗತ್ತಿಗೆ ನೀಡಿದ ಅತ್ಯಂತ ಪ್ರಾಚೀನ ಕೊಡುಗೆ ಯೋಗ/ಯೋಗಾಸನ ಹಿಂದೂ ಧರ್ಮದ ಮಹೋನ್ನತ ಕಾಣಿಕೆ ಯೋಗ/ಯೋಗಾಸನ ಭಾರತೀಯರ ಜೀವನ ವಿಧಾನ ಯೋಗ/ಯೋಗಾಸದಿಂದ ಭಾರತೀಯರು ಸಾವಿರಾರು ವರ್ಷಗಳಿಂದ ಆರೋಗ್ಯ, ಸುಖ ಸಂತೊಷಗಳಿಂದ ಬದುಕುತ್ತಿದ್ದಾರೆ ಆಧುನಿಕ ವೈದ್ಯಕೀಯ ವಿಜ್ಞಾನದ ಚಿಕಿತ್ಸೆಯ ಹಿಡಿತಕ್ಕೆ ಸಿಗದ ಹಲವಾರು ರೋಗಗಳಿಗೆ ಯೋಗ ಒಂದೇ ಪರಿಹಾರ. ಈಗ ಜನರ ಮನಸ್ಸಿನಲ್ಲಿ ನೆಲೆಸಿರುವ ಮೇಲಿನ ಐದು ಹೇಳಿಕೆಗಳು ಸುಳ್ಳು ಮತ್ತು ಅವುಗಳಿಗೆ ಯಾವುದೇ ಆಧಾರಗಳಿಲ್ಲ. ವಿಮರ್ಶಾತ್ಮಕ ಗುಣ ಇಲ್ಲದವರು ಅತಿ ದೊಡ್ದ ಸುಳ್ಳುಗಳನ್ನು ಅತಿ ಸುಲಭವಾಗಿ ಒಪ್ಪುತ್ತಾರೆ. ಜನಪ್ರಿಯ ಮಾಧ್ಯಮಗಳಲ್ಲಿ ಈ ಸುಳ್ಳುಗಳು ಬಣ್ಣ ಬಣ್ಣದಲ್ಲಿ ಬಿತ್ತರಗೊಂಡರೆ ಅವರ ಕುರುಡು ನಂಬಿಕೆಗಳಿಗೆ ಇನ್ನೂ ಬಲ ಬರುತ್ತದೆ. ತಾವು ನಂಬಿದ್ದನ್ನು ಸುಳ್ಳು ಎಂದು ತೋರಿಸುವ ಎಲ್ಲ ವಾದಗಳಿಗೂ ಅವರು ಕಿವುಡರಾಗಿರುತ್ತಾರೆ. ಬೇರೆಲ್ಲ ದೈಹಿಕ ಚಟುವಟಿಕೆ, ವ್ಯಾಯಾಮಗಳಿಗಿಂತ ಯೋಗ, ಯೋಗಾಸನಗಳು ಶ್ರೇಷ್ಠ. ಯೋಗಾಸನಗಳ ಅಭ್ಯಾಸದಿಂದ ಹಲವು ಬಗೆಯ ರೋಗಗಳನ್ನು ದೂರವಿರಿಸಬಹುದು, ವಾಸಿಗೊಳಿಸಬಹುದು ಎನ್ನುವ ಮಹಾ ಸುಳ್ಳು ಮಾಧ್ಯಮ , ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗುತ್ತಿದೆ. (೫೧೯) ಈ ಪ್ರಭಾವ ವೈಜ್ಞಾನಿಕ ತಳಹದಿಯ ಮೇಲೆ ಬೆಳೆದುಬಂದ , ಪುರಾವೆ ಆಧಾರಿತ ಚಿಕಿತ್ಸಾ ವಿಧಾನಗಳನ್ನು ಮಾತ್ರ ಒಪ್ಪುವ ಆಧುನಿಕ ವೈದ್ಯಕೀಯವನ್ನು ಪ್ರತಿನಿಧಿಸುವ ವೈದ್ಯರ ಮೇಲೂ ಆಗಿದೆ. ‘ ಜರ್ನಲ್ ಆಫ್ ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್’ ನ ಕೆಲ ಲೇಖನಗಳಲ್ಲಿ (೧) ಯೋಗ ವಿಜ್ಞಾನ ಪ್ರಾಚೀನವಾದುದು. ಅದು ನಮ್ಮ ಸಂಸ್ಕೃತಿಯ ಹೆಮ್ಮೆ. ಹಲವಾರು ಪ್ರಾಚೀನ ಪುಸ್ತಕಗಳಲ್ಲಿ ಯೋಗದ ಮೂಲಕ ಕೆಲ ನಿರ್ದಿಷ್ಟ ರೋಗಗಳನ್ನು ವಾಸಿಮಾಡುವುದನ್ನು ಹಾಗೂ ಆರೋಗ್ಯವಾಗಿ ಇರುವುದನ್ನು ಹೇಳಲಾಗಿದೆ. ಯೋಗಕ್ಕೆ ಅಧ್ಯಾತ್ಮಿಕ ಪ್ರಯೋಜನವಲ್ಲದೆ ಚಿಕಿತ್ಸೆ ಮತ್ತು ಧನಾತ್ಮಕ ಆರೋಗ್ಯಕ್ಕೆ ನೆರವಾಗುತ್ತದೆ ಎನ್ನುವ ತೀರ್ಮಾನಗಳನ್ನು ನೀಡಲಾಗಿದೆ (೨) ಆಧುನಿಕ ಕಾಲದಲ್ಲಿ ಚಿಕಿತ್ಸೆಗಾಗಿ ಯೋಗ/ಯೋಗಾಸನವನ್ನು ಬಳಸಲಾಗುತ್ತಿದೆ. ಇದರಿಂದ ಔಷಧಿಗಳ ಪ್ರಮಾಣ ಇಳಿಸಿ ರೋಗಿಗಳಲ್ಲಿ ಭರವಸೆಯನ್ನು ತುಂಬಲು ಸಾದ್ಯವಾಗಿದೆ ಎನ್ನುವಂತಹ ಯಾವ ವೈಜ್ಞಾನಿಕ ಆಧಾರವೂ ಇಲ್ಲದ ಬೀಸು ಹೇಳಿಕೆಗಳಿವೆ. ಯೋಗ / ಯೋಗಾಸನಗಳಿಂದ ಯಾವುದೇ ರೋಗವನ್ನು ತಡೆಯಬಹುದು ಅಥವಾ ರೋಗಕ್ಕೆ ಚಿಕಿತ್ಸೆ ನೀಡಬಹುದು ಎಂದು ಭಾರತದಲ್ಲಿ ಎಂದೂ, ಯಾರೂ ಒಪ್ಪಿರಲಿಲ್ಲ ಮತ್ತು ಹೇಳಿರಲಿಲ್ಲ. ಹಠಯೋಗದಿಂದ ಬಹು ದೀರ್ಘಕಾಲ ಮುಪ್ಪಿಲ್ಲದೆ ಯೋಗಿಗಳು ಬದುಕುತ್ತಾರಂತೆ ಎಂದು ಜನಸಾಮಾನ್ಯರು ಹೇಳುತ್ತಿದ್ದರೇ ಹೊರತು ಅದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರಲಿಲ್ಲ. ಸುಶ್ರುತ , ಚರಕ ತಮ್ಮ ಗ್ರಂಥಗಳಲ್ಲಿ ರೋಗಗಳನ್ನು ತಡೆಯಲು , ವಾಸಿ ಮಾಡಲು ನಾನಾ ಬಗೆಯ ಗಿಡ , ಮೂಲಿಕೆ, ಧಾತುಗಳನ್ನು ತಿಳಿಸುತ್ತಾರೆಯೇ ಹೊರತು ಅಪ್ಪಿ ತಪ್ಪಿಯೂ ಯೋಗಾಸನಗಳ ಸೊಲ್ಲೆತ್ತುವುದಿಲ್ಲ. ಪಾರಂಪರಿಕವಾಗಿ ಹಳ್ಳಿಗಳಲ್ಲಿ ಪ್ರಚಲಿತವಿದ್ದ ಜಾನಪದ ವೈದ್ಯ ಗಿಡ , ಮೂಲಿಕೆ, ಮದ್ದು , ಪಥ್ಯ ಮುಂತಾದ ಲೌಕಿಕ ಚಿಕಿತ್ಸೆ ಹಾಗೂ ಹರಕೆ , ಮುಡಿಪು ಮುಂತಾದ ಅಲೌಕಿಕ ಅಚರಣೆ ಮೂಲಕ ರೋಗಗಳಿಗೆ ಚಿಕಿತ್ಸೆ ನೀಡಲು ಯತ್ನಿಸುತ್ತದೆಯೇ ಹೊರತು ಯಾವುದೇ ಯೋಗಾಸನಗಳನ್ನು ಹೇಳುವುದಿಲ್ಲ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಯಾರಾದರೋ ಯೋಗಾಸನಗಳಿಂದ ರೋಗಗಳು ಬರುವುದಿಲ್ಲ ಅಥವಾ ರೋಗಗಳಿಗೆ ಚಿಕಿತ್ಸೆ ನೀಡಬಹುದು ಎಂದರೆ ಜನ ಅವರನ್ನು ಅನುಮಾನದಿಂದ ನೋಡುತ್ತಿದ್ದರು. ಇಪ್ಪತ್ತನೇ ಶತಮಾನದ ಆರಂಭದ ದಶಕಗಳಲ್ಲಿ ಯೋಗಾಸನಗಳಿಂದ ಆರೋಗ್ಯವಂತರಾಗಬಹುದು, ರೋಗಗಳಿಗೆ ಚಿಕಿತ್ಸೆ ನೀಡಬಹುದು ಎನ್ನುವ ಪರಿಕಲ್ಪನೆಯನ್ನು ಗುಜರಾತಿನ ಮಲಸಾರದ ರಾಜ ಪರಮಹಂಸ ಶ್ರೀ ಮಾಧವದಾಸಜಿ ಮಹಾರಾಜರ ಶಿಷ್ಯರಾಗಿದ್ದ ಶ್ರೀ ಯೋಗೇಂದ್ರ (ಮಣಿಭಾಯಿ ಹರಿಭಾಯಿ ದೇಸಾಯಿ ೧೮೯೭-೧೯೮೯), ಸ್ವಾಮಿ ಕುವಲಯಾನಂದ ( ಜಗನ್ನಾಥ ಗಣೇಶ ಗುಣೆ ೧೮೮೩-೧೯೬೬) ಮೊದಲಿಗೆ ಬಿತ್ತಿದರು. ೧೯೧೮ ರಲ್ಲಿ ಯೊಗೇಂದ್ರ ಬಾಂಬೆ ಸಾಂತಾಕ್ರೂಜ್’ನಲ್ಲಿ ‘ಯೋಗ ಸಂಸ್ಥೆ’ಯನ್ನು , ೧೯೨೪ ರಲ್ಲಿ ಕುವಲಯಾನಂದ ಲೋಣವಾಲದಲ್ಲಿ ಕೈವಲ್ಯಧಾಮ ಕೇಂದ್ರಗಳನ್ನು ಸ್ಥಾಪಿಸಿದರು. ಈ ಎರಡು ಸಂಸ್ಥೆಗಳು ಯೋಗ , ಆರೋಗ್ಯ, ರೋಗ ಚಿಕಿತ್ಸೆ ಕುರಿತಾಗಿ ತಮ್ಮದೇ ಆದ ಸಂಶೋಧನೆಗಳನ್ನು ಮಾಡತೊಡಗಿದವು. ಮುಂದಿನ ದಿನಗಳಲ್ಲಿ ಯೋಗ-ಆರೋಗ್ಯ-ಚಿಕಿತ್ಸೆ ಕುರಿತಾಗಿ ಸಂಶೋಧನೆ ನಡೆಸುವ ಹಲವಾರು ಸಂಸ್ಥೆಗಳು ಭಾರತ ಮತ್ತು ವಿದೇಶಗಳಲ್ಲಿ ತಲೆ ಎತ್ತಿದವು. ಕುವಲಯಾನಂದ ‘ಯೋಗ ಮೀಮಾಂಸ ’ ಎನ್ನುವ ತಮ್ಮದೇ ಆದ ಪತ್ರಿಕೆಯ ಮೂಲಕ ೧೯೩೫ ರಿಂದ ರೋಗ ಚಿಕಿತ್ಸೆಯಲ್ಲ್ ಯೋಗದ ಪ್ರಭಾವ ಕುರಿತಾದ ಸಂಶೋಧನೆಗಳನ್ನು ಪ್ರಕಟಿಸತೊಡಗಿದರು. ಆಧುನಿಕ ವೈದ್ಯಕೀಯ ಪದ್ದತಿಗೆ ಬದಲಾಗಿ ಪರ್ಯಾಯ , ಪರಿಪೂರಕ ಚಿಕಿತ್ಸೆಗಳನ್ನು ಪ್ರತಿಪಾದಿಸುತ್ತಿರುವ ಹಲವಾರು ಸಂಘ, ಸಂಸ್ಥೆಗಳು ಅತ್ಯಲ್ಪ ಬೆರಳೆಣಿಕೆಯ ಮುಖ್ಯ ವಾಹಿನಿಯ ವೈದ್ಯಕೀಯ ಪತ್ರಿಕೆಗಳು ಇಂತಹ ಹಲವು ಸಂಶೋಧನೆಗಳನ್ನು ಪ್ರಕಟಿಸಿವೆ. ಯೋಗದಿಂದ ಅಧ್ಯಾತ್ಮಿಕ ಉನ್ನತಿ, ಮುಕ್ತಿ ದಕ್ಕಿದರೆ ಆಸನ ಮತ್ತು ಪ್ರಾಣಾಯಾಮಗಳಿಂದ ದೈಹಿಕ ಸ್ವಾಸ್ಥ್ಯ ಉತ್ತಮಗೊಳ್ಳುತ್ತದೆ. ಆಧುನಿಕ ವೈಜ್ಞಾನಿಕ ವೈದ್ಯ ಪದ್ದತಿ ಅಸ್ತಮಾ, ಕ್ಯಾನ್ಸರ್ , ಏಡ್ಸ್ , ಮದುಮೇಹ , ಮೂತ್ರಪಿಂಡ ವೈಪಲ್ಯ ಸೇರಿದಂತೆ ಹಲವಾರು ರೋಗಗಳನ್ನು ಗುಣಮುಖಗೊಳಿಸುವಲ್ಲಿ ಹೇಳಿಕೊಳ್ಳುವಂತಹ ಯಶಸ್ಸನ್ನು ಕಂಡಿಲ್ಲ. ಯೋಗಾಸನಗಳು ಇದಕ್ಕೆ ಸಮರ್ಥ ಪರ್ಯಾಯ ಪರಿಹಾರ ಒದಗಿಸುತ್ತದೆ ಎನ್ನುವ ವ್ಯಾಪಕ ಪ್ರಚಾರ ಸಾಗಿದೆ. ಯೋಗ ಮಾನಸಿಕ ಕ್ರಿಯೆ-ಅಮೂರ್ತ-ಅಧ್ಯಾತ್ಮಿಕ ಪರಿಧಿಯದು-ವೈಯಕ್ತಿಕ. ಆದ್ದರಿಂದ ಯೋಗ ಕುರಿತಾಗಿ ಹೇಳಿದ್ದೆಲ್ಲವೂ ಪರಿಶೀಲನೆಯಿಂದ ತಪ್ಪಿಸಿಕೊಳ್ಳುತ್ತದೆ. ಆದರೆ ಯೋಗಾಸನಗಳು ಹಾಗಲ್ಲ. ಅವು ಭೌತಿಕ. ಯೋಗಾಸನ ಮಾಡುವುದರಿಂದ ಹೃದ್ರೋಗ ವಾಸಿಯಾಗುತ್ತದೆ, ಅಸ್ತಮಾ ಇಲ್ಲವಾಗುತ್ತದೆ ಎನ್ನುವುದನ್ನು ಅಧ್ಯಯನಕ್ಕೆ ಒಳಪಡಿಸಿ ಪರೀಕ್ಷಿಸಲು ಸಾಧ್ಯ. ಆದ್ದರಿಂದ ಪವಾಡ ಸದೃಶ್ಯ ಕಥೆಗಳನ್ನು ಹೇಳಿ ಯೋಗಾಸನಗಳು ಆರೋಗ್ಯವಾಗಿರಲು ಅಥವಾ ರೋಗಗಳನ್ನು ಗುಣಗೊಳಿಸಲು ನೆರವಾಗುತ್ತವೆ ಎಂದು ಹೇಳುವುದು ಸಾಧ್ಯವಿಲ್ಲ. ಏಕೆಂದರೆ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಜನ ಮುಂದಾಗುತ್ತಾರೆ ಮತ್ತು ಅದು ಸುಳ್ಳು ಎಂದು ತಿಳಿದರೆ ಅದೊಂದು ವಂಚನೆ ಎನ್ನುವ ನಿರ್ಧಾರಕ್ಕೆ ಬರಲು ಹಿಂಜರಿಯುವುದಿಲ್ಲ. ಈವರೆಗೆ ನಡೆದಿರುವ ವೈಜ್ಞಾನಿಕ ಅಧ್ಯಯನಗಳಿಂದ ಯೋಗಾಸನಗಳು ಇತರ ದೈಹಿಕ ವ್ಯಾಯಾಮಗಳಿಗಿಂತ ಉತ್ತಮವೇ , ಕೆಲ ರೋಗಗಳ ಚಿಕಿತ್ಸೆಯಲ್ಲಿ ಯೋಗಾಸನಗಳನ್ನು ಶಿಫಾರಸ್ಸು ಮಾಡಬಹುದೇ , ವಿವಿಧ ಆರೋಗ್ಯ ಸ್ಥಿತಿಗಳಲ್ಲಿರುವವರಿಗೆ ಯೋಗಾಸನಗಳು ಸೂಕ್ತವೇ , ಯೋಗಾಸನಗಳನ್ನು ಅಂತಹುವೇ ಇತರ ದೈಹಿಕ ವ್ಯಾಯಾಮಗಳೊಂದಿಗೆ ಹೋಲಿಸಿದಾಗ ಅದು ಬೇರೆಯವಕ್ಕಿಂತ ಉತ್ತಮ ಎಂದು ಸಾಬೀತಾಗಿದೆಯೇ , ಯಾವ ಆಸನಗಳು ಯಾವ ರೋಗ ಚಿಕಿತ್ಸೆಗೆ ಸಮರ್ಪಕ ಮತ್ತು ಅಂತಹ ಸಮರ್ಥನೆಗೆ ಯಾವುದಾದರೂ ವೈಜ್ಞಾನಿಕ ವಿವರಣೆಗಳಿವೆಯೇ , ಯೋಗಾಸನದಿಂದ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಬಹುದು ಎನ್ನುವುದು ಸರಿಯೇ ಮುಂತಾದವು ಪ್ರಶ್ನೆಗಳಿಗೆ ಸಿಕ್ಕಿರುವ ಉತ್ತರಗಳು ಖಚಿತವಾಗಿ ಯೋಗಾಸನದ ಪರ ನಿಲ್ಲುವುದಿಲ್ಲ. ಯೋಗಾಸನಗಳು ಇತರ ದೈಹಿಕ ವ್ಯಾಯಾಮ , ಕಸರತ್ತುಗಳಿಗಿಂತ ಅಷ್ಟೊಂದು ಶ್ರೇಷ್ಟವೇ? ಹಾಗೆ ಶ್ರೇಷ್ಟವೆಂದು ಹೇಳಲು ಧಾರ್ಮಿಕ , ಸಾಂಸ್ಕೃತಿಕ , ರಾಷ್ಟ್ರೀಯತೆಯ ಹೆಮ್ಮೆಗಳಲ್ಲದೆ ಬೇರೆ ಕಾರಣಗಳಿಲ್ಲ. ಯೋಗ, ಯೋಗಾಸನ ಕುರಿತಾಗಿ ಭಾರತೀಯರಿಗಿರುವ ಬಹುತೇಕ ನಂಬಿಕೆಗಳು ಭಾವುಕವೇ ಹೊರತು ವಸ್ತುನಿಷ್ಠವಲ್ಲ. ಪ್ರಾಣಾಯಾಮ-ಉಸಿರಾಟ-ರಕ್ತ ಸಂಚಾರ ಯೋಗಾಸನಗಳನ್ನು ಕುರಿತಾಗಿ ಚಾಲ್ತಿಯಲ್ಲಿರುವ ಮಿಥ್ಯೆಗಳಲ್ಲಿ ಮೊದಲನೆಯದು ಮತ್ತು ಅತ್ಯಂತ ವ್ಯಾಪಕವಾಗಿರುವುದು ಪ್ರಾಣಾಯಾಮದಿಂದಾಗುವ ಲಾಭ. ಪ್ರಾಣಾಯಾಮದಲ್ಲಿ ಒಂದಾದ ನಂತರ ಒಂದರಂತೆ ಎಡ ಮತ್ತು ಬಲ ಹೊಳ್ಳೆಗಳಿಂದ ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳುವುದು ಪೂರಕ. ಆ ಉಸಿರನ್ನು ಶ್ವಾಸಕೋಸದಲ್ಲಿ ಬಿಗಿಯಾಗಿ ಇರಿಸಿಕೊಳ್ಳುವುದು ಕುಂಭಕ. ನಿರ್ದಿಷ್ಟ ನಿಧಾನ ಗತಿಯಲ್ಲಿ ಹೊರಬಿಡುವುದು ರೇಚಕ. ಈ ಬಗೆಯ ಉಸಿರಾಟದಿಂದ ಶ್ವಾಸಕೋಶದ ತುಂಬ ಗಾಳಿ ತುಂಬಿಕೊಂಡು ಅದರ ಮೇಲಿರುವ ಅತ್ಯಂತ ಸೂಕ್ಷ್ಮ ಮತ್ತು ಕೊನೆಯದಾದ ರೋಮನಾಳಗಳು ಕ್ರಿಯಾಶೀಲಗೊಳ್ಳುತ್ತವೆ. ಪ್ರಾಣಾಯಾಮದಲ್ಲಿ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ಒಳಗೆ ಹೆಚ್ಚಿನ ಅವಧಿ ಹಿಡಿದಿಡುವುದರಿಂದ ಇದು ಸಾಧ್ಯವಾಗುತ್ತದೆ. ಇದರಿಂದ ಆರೋಗ್ಯಕ್ಕೂ ಲಾಭ ಮತ್ತು ಹಲವು ವಿಧದ ರೋಗಗಳಿಗೆ ಪರಿಹಾರ ಎಂದು ಹೇಳಲಾಗುತ್ತದೆ. ಈ ವಿವರಣೆಯ ಹಿಂದಿರುವ ಅವೈಜ್ಞಾನಿಕ ಅಂಶಗಳನ್ನು ನೋಡಬಹುದು. (೧) ಉಸಿರಾಟದ ಉದ್ದೇಶ ಮತ್ತು ಶ್ವಾಸಕೋಶಗಳ ಕ್ರಿಯೆ ಗಾಳಿಯನ್ನು ಒಳಕ್ಕೆ ಸೆಳೆದುಕೊಂಡು ಅದರಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ರಕ್ತಕ್ಕೆ ಹಂಚಿ ಬೇಕಿಲ್ಲದ ಇಂಗಾಲದ ಡೈ ಆಕ್ಸೈಡ್’ನ್ನು ಹೊರಹಾಕುವುದೇ ಆಗಿದೆ. ಸಾಮಾನ್ಯ ಆರೋಗ್ಯವಂತ ವಯಸ್ಕರಲ್ಲಿ ಒಂದು ನಿಮಿಷಕ್ಕೆ ೧೫ ಸಲ ಹೊರಗಿನ ಗಾಳಿಯನ್ನು ಒಳಗೆ ಸೆಳೆದುಕೊಂಡು , ಆಮ್ಲಜನಕವನ್ನು ಹೀರಿಕೊಂಡು , ಇಂಗಾಲದ ಡೈಆಕ್ಸೈಡ್ ಹೊರಬಿಡುವುದು ಉಸಿರಾಟದ ಚಕ್ರೀಯ ಕ್ರಿಯೆ. ಇದು ಯಾವುದೇ ಗಮನಕ್ಕೆ ಬಾರದೆ ಸಹಜವಾಗಿ ನಡೆಯುತ್ತಿರುತ್ತದೆ. ದೇಹಕ್ಕೆ ಹೆಚ್ಚಿನ ಶಕ್ತಿ ಆ ಮೂಲಕ ಹೆಚ್ಚಿನ ಆಮ್ಲಜನಕ ಬೇಕೆನಿಸಿದಾಗ ಉಸಿರಾಟದ ತೀವ್ರತೆ ಹೆಚ್ಚಿ ಚಕ್ರೀಯ ಕ್ರಿಯ ಕಾಲಾವಧಿ ಕುಗ್ಗುತ್ತದೆ. ಹಿಂದಿನ ಕಾಲದ ಯೋಗಿಗಳಿಗೆ ಉಸಿರಾಟದ ಸಂಪೂರ್ಣ ಕ್ರಿಯೆ , ಉದ್ದೇಶ , ಜರುಗುವ ರೀತಿ ಮತ್ತು ರಕ್ತ ಪರಿಚಲನೆಯೊಂದಿಗೆ ಅದಕ್ಕಿರುವ ಸಂಬಂಧದ ಬಗ್ಗೆ ಏನೂ ಗೊತ್ತಿರಲಿಲ್ಲ. ಆದ್ದರಿಂದ ಅವರು ಊಹಾತ್ಮಕ ಚಿಂತನೆಗಳನ್ನು ಹೊಂದಿದ್ದರು. ದೀರ್ಘ ಉಸಿರಾಟದಿಂದ ಶಕ್ತಿಯನ್ನು ದೇಹದ ಬೇಕಾದ ಅಂಗಗಳಿಗೆ ಕಳಿಸಬಹುದು. ಲೈಂಗಿಕ ಅಂಗಗಳಲ್ಲಿ ಶಕ್ತಿ ಸಂಚಯವಾಗಿರುತ್ತದೆ ಮತ್ತು ಈ ಸಂಚಯವನ್ನು ಹೆಚ್ಚಿಸಬಹುದು. ಹಾಗೆ ಸಂಚಯಿತವಾದ ಶಕ್ತಿ ಸುಪ್ತವಾಗಿ ಜನನಾಂಗದಲ್ಲಿ ವೀರ್ಯ ರೂಪದಲ್ಲಿರುತ್ತದೆ. ಯೋಗದಿಂದ ಈ ವೀರ್ಯ ಲಿಂಗದಿಂದ ಕೆಳಕ್ಕೆ ಸೋರದಂತೆ ಮಾಡಿದರೆ ಅದು ಕುಂಡಲಿನಿ ಎನ್ನುವ ಸುರುಳಿ ಸುತ್ತಿದ ಚೈತನ್ಯ ರೂಪದಲ್ಲಿ ಇರುತ್ತದೆ. ಅದನ್ನು ಸುಷುಮ್ನಾ ಎನ್ನುವ ನಾಡಿಯ ಮೂಲಕ ಮೇಲೇರಿಸಬಹುದು. ಅದು ನೆತ್ತಿಗೇರಿದಾಗ ಬ್ರಹ್ಮಜ್ಞಾನ ಉಂಟಾಗುತ್ತದೆ ಎಂದು ಭ್ರಮಿಸಿದ್ದರು. ಇಂತಹ ಯಾವುದೇ ಸಾಧ್ಯತೆಗಳು ಇಲ್ಲವೆಂದು ಕಳೆದ ೪೦೦ ವರ್ಷಗಳಿಂದ ಮನುಷ್ಯ ಸೇರಿದಂತೆ ವಿವಿಧ ಪ್ರಾಣಿಗಳ ಮೇಲೆ ಕ್ರಮಬದ್ದವಾಗಿ ನಡೆಸಲಾದ ಅಧ್ಯಯನಗಳು ದೃಢಪಡಿಸಿವೆ. (೨) ಮನುಷ್ಯರಿರಲಿ ಯಾವುದೇ ಜೀವಿಯ ಉಸಿರಾಟ ಅದು ಬಯಸಿದಂತೆ ಇರುವುದಿಲ್ಲ. ಅದೊಂದು ಅನೈಚ್ಛಿಕ ಕ್ರಿಯೆ. ದೇಹದ ಚಟುವಟಿಕೆಗೆ ಅಗತ್ಯವಾಗಿ ಶಕ್ತಿ ಹಾಗೂ ಅದಕ್ಕೆ ತಕ್ಕಂತೆ ಆಮ್ಲಜನಕ ಬೇಕು. ಇದಕ್ಕೆ ಅನುಗುಣವಾಗಿ ಉಸಿರಾಟ ಏರುಪೇರಾಗುತ್ತದೆ. ವಿಶ್ರಾಂತಿಯಲ್ಲಿ ಕುಳಿತಾಗ , ಮಲಗಿದಾಗ ಹೆಚ್ಚಿನ ಶಕ್ತಿ ಬೇಕಿಲ್ಲ. ಆದಕ್ಕೆ ತಕ್ಕಂತಹ ಉಸಿರಾಟವಿರುತ್ತದೆ. ಆಡುವಾಗ, ಓಡುವಾಗ ಅಥವಾ ದೈಹಿಕ ಶ್ರಮದ ಕೆಲಸ ಮಾಡುವಾಗ ಹೆಚ್ಚಿನ ಶಕ್ತಿ ಬಿಡುಗಡೆಗಾಗಿ ಹೆಚ್ಚಿನ ಆಮ್ಲಜನಕ ಬೇಕು. ಆಗ ಉಸಿರಾಟ ತಾನೇ ತೀವ್ರಗೊಳ್ಳುತ್ತದೆ. ಅಧಿಕ ಶಕ್ತಿ ಬೇಕಾದ ಓಡುವ ಚಟುವಟಿಕೆಯಲ್ಲಿ ರೋಮನಾಳಗಳಲ್ಲಿ ತುಂಬದ ಗಾಳಿ , ಕುಳಿತು ದೀರ್ಘವಾಗಿ ಉಸಿರೆಳೆದುಕೊಂಡಾಗ ತುಂಬಿಕೊಳ್ಳುತ್ತದೆ ಎನ್ನುವುದು ಭ್ರಮೆಯಲ್ಲದೆ ಬೇರೆನಲ್ಲ. ಉಸಿರಾಟವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ಈವರೆಗೆ ಉಸಿರಾಟವನ್ನು ನಿಯಂತ್ರಿಸುತ್ತೇನೆಂದು ಕೊಚ್ಚಿಕೊಳ್ಳುತ್ತಿರುವ ಯಾವುದೇ ಯೋಗಿ , ಬಾಬಾ ಓಡುತ್ತ , ಆಡುತ್ತ ವಿಶ್ರಾಂತ ಸ್ಥಿತಿಯಲ್ಲಿರುವಾಗ ಇದ್ದ ಉಸಿರಾಟದ ಗತಿಯನ್ನೇ ಉಳಿಸಿಕೊಳ್ಳಬಲ್ಲೆವೆಂದು ತೋರಿಸಿಲ್ಲ. ಹಾಗೆ ಉಳಿಸಿಕೊಂಡಿದ್ದೇ ಆದರೆ ಅದೊಂದು ಪವಾಡ ಮತ್ತು ನಿಸರ್ಗ ಮತ್ತು ಅಂಗಕ್ರಿಯಾ ಅರಿವಿಗೆ ಎಸೆದ ಸವಾಲೆ ಆಗಿರುತ್ತದೆ. ಆದ್ದರಿಂದ ಪ್ರಾಣಾಯಾಮ ಕುರಿತಾದ ನಂಬಿಕೆಗಳಿಗೆ ಯಾವುದೇ ಆಧಾರಗಳಿಲ್ಲ. (೩) ವಿಶ್ರಾಂತ ಸ್ಥಿತಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಗಾಳಿಯನ್ನು ಒಳಸೆಳೆದುಕೊಂಡರೆ ಹಾಗೆ ಸೆಳೆದುಕೊಂಡ ಶುದ್ಧ ಗಾಳಿಯೊಂದಿಗೆ ಶ್ವಾಸಕೋಶದ ಒಳಗೆ ಆ ಮೊದಲೇ ಇದ್ದ ಇಂಗಾಲದ ಡೈಆಕ್ಸೈಡ್ ಮಿಶ್ರಣಗೊಳ್ಳುತ್ತದೆ. ಆಗ ೧೦ % ಗಿಂತಲೂ ಕಡಿಮೆ ಪ್ರಮಾಣದ ಆಮ್ಲಜನಕ ಮರುಪೂರಣಗೊಳ್ಳುತ್ತದೆ. ಎಂದು ಬ್ರಾಡ್ ತಿಳಿಸುತ್ತಾರೆ. ದೈಹಿಕ ಚಟುವಟಿಕೆಯ ಅಗತ್ಯ ಮೀರಿ ಉಸಿರಾಡತೊಡಗಿದರೆ (Hyperventilation ) ಅದು ಒಂದು ಹಂತ ತಲುಪಿದ ನಂತರ ಮೆದುಳಿನತ್ತ ಸಾಗುವ ರಕ್ತನಾಳಗಳು ಸಂಕುಚಿತವಾಗಿ , ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಕುಗ್ಗುತ್ತದೆ. ಆಗ ತಲೆಸುತ್ತು, ಮಬ್ಬು , ತಲೆನೋವು , ಜೋಮು ಹಿಡಿಯುವುದು ಹಾಗೂ ಕೆಲ ಸಂದರ್ಭಗಳಲ್ಲಿ ಮಾನಸಿಕ ಭ್ರಮೆ , ಮೂರ್ಛೆಗೆ ಕಾರಣವಾಗಬಹುದು. (೪) ಯೋಗಾಸನಗಳಿಂದ ಹೃದಯ ಅಥವಾ ಶ್ವಾಸಕೋಶದ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ೨೦೦೫ ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪ್ರತಿದಿನ ೩೦ ನಿಮಿಷ ಯೋಗಾಸನ ಮಾಡುತ್ತಿದ್ದ ೨೬ ಹೆಂಗಸರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಸೂರ್ಯ ನಮಸ್ಕಾರ ಮಾಡುವಾಗ ಅವರು ಇತರ ವ್ಯಾಯಮಾಗಳಲ್ಲಿ ನಿರತರಾಗಿ ಏರುಗತಿ ತಲುಪಿದಾಗ ಎಷ್ಟು ಉಸಿರು ಸೆಳೆದುಕೊಳ್ಳುತ್ತಿದ್ದರೋ ಅದರ ೩೫% ಆಮ್ಲಜನಕವನ್ನು ಮಾತ್ರ ಸೆಳೆದುಕೊಳ್ಳುತ್ತಿದ್ದರು. ಇದು ಟ್ರೆಡ್ ಮಿಲ್’ ಮೇಲೆ ಚುರುಕಾಗಿ ನಡೆಯುವಾಗ ಬಳಸಿಕೊಳ್ಳುತ್ತಿದ್ದ ಸಾಮರ್ಥ್ಯದ ೪೫ % ಹಾಗೂ ಅಮೆರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಉಸಿರಾಟದ ದಕ್ಷತೆಗೆ ನಿಗದಿಪಡಿಸಿದ ಪ್ರಮಾಣಕ್ಕಿಂತ ೫೦-೮೫% ಕಮ್ಮಿಯಿದ್ದಿತು. (೫) ಶೀರ್ಷಾಸನ ಹಾಕಿದರೆ ದೇಹದ ರಕ್ತ ತಲೆಯತ್ತ ಸರಾಗವಾಗಿ ಹರಿದು ಮೆದುಳಿನ ಸಾಮರ್ಥ್ಯ ಹೆಚ್ಚುತ್ತದೆ ಎನ್ನುವುದೊಂದು ನಂಬಿಕೆ. ಹೃದಯದಿಂದ ದೇಹದ ನಾನಾ ಭಾಗಗಳಿಗೆ ತಳ್ಳಲ್ಪಟ್ಟ ರಕ್ತ ಹೃದಯಕ್ಕಿಂತ ಮೇಲ್ಮಟ್ಟದ ಅಂಗಗಳಿಗೆ ಸಾಗುವಾಗ ಗುರುತ್ವದಿಂದ ಹಿಂದಕ್ಕೆ ಕೆಳಗಿಳಿಯದಂತೆ ತಡೆಯಲು ನಾಳಗಳಲ್ಲಿ ವಿಶಿಷ್ಟ ಕವಾಟಗಳಿವೆ. ತಲೆ ಕೆಳಗಾಗಿಯಾಗಿಯೇ ಇರಲಿ , ಸಹಜವಾಗಿ ಮೇಲೆ ಇರಲಿ ಅದಕ್ಕೆ ಹರಿಯುವ ರಕ್ತದ ಪ್ರಮಾಣ ಮತ್ತು ಒತ್ತಡದಲ್ಲಿ ಯಾವುದೇ ವ್ಯತ್ಯಾಸವಾಗದು. ಏಕೆಂದರೆ ಹೃದಯದಿಂದ ತಳ್ಳಲ್ಪಟ್ಟ ರಕ್ತ ೧೭೫ ಮಿ.ಮಿ ಒತ್ತಡದಲ್ಲಿ ಇರುತ್ತದೆ. ಈ ಒತ್ತಡ ಶರೀರ ಯಾವ ಭಂಗಿಯಲ್ಲಿದ್ದರೂ ಒಂದೆ. ಮಧುಮೇಹ ಶಶಾಂಕಾಸನ , ಯೋಗ ಮುದ್ರೆ , ಅರ್ಧ ಮತ್ಸ್ಯೇಂದ್ರಾಸನ , ಪಶ್ಚಿಮೋತ್ತಾಸನ , ಭುಜನಗಾಸನ, ಸೂರ್ಯಭೇದ ಪ್ರಾಣಯಾಮಗಳಿಂದ ಮಧುಮೇಹ ನಿವಾರಿಸಬಹುದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಬೇರೆಯದೇ ಆದ ಆಸನಗಳ ಪಟ್ಟಿ ಕೊಡುತ್ತಾರೆ. ಮಧುಮೇಹದಲ್ಲಿ ಎರಡು ಬಗೆಯಗಳಿವೆ. ದೇಹ ಸೇವಿಸಿದ ಆಹಾರ ಸಕ್ಕರೆ ರೂಪದಲ್ಲಿ ಜೀವಕೋಶಗಳ ಒಳಕ್ಕೆ ಸೇರುತ್ತದೆ. ಕೋಶದಲ್ಲಿ ಈ ಸಕ್ಕರೆ ಒಡೆದು ದೇಹದ ಚಟುವಟಿಕೆಗಳಿಗೆ ಬೇಕಾದ ಶಕ್ತಿ ಬಿಡುಗಡೆಯಗುತ್ತದೆ. ಸಕ್ಕರೆ ಜೀವಕೋಶಗಳ ಒಳಕ್ಕೆ ಸಾಗಿಸಲು ಮೇಧೋಜೀರಕ ಗ್ರಂಥಿಯಿಂದ ಬಿಡುಗಡೆಯಾಗುವ ಇನ್ಸುಲಿನ್ ಒಳಸುರಿಕ ಅತ್ಯವಶ್ಯಕ. ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ಆಹಾರದಲ್ಲಿರುವ ಸಕ್ಕರೆ ಜೀವಕೋಶಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಇದು ಮಧುಮೇಹದ ಮೊದಲ ಬಗೆ. ಇನ್ಸುಲಿನ್ ಉತ್ಪಾದನೆ ದೇಹದ ಆಂತರಿಕ ಕ್ರಿಯೆಗೆ ಸಂಬಂಧ ಪಟ್ಟಿರುವುದರಿಂದ ಇನ್ಸುಲಿನ್ ಉತ್ಪಾದಿಸ ಹೊರತು ಅಥವಾ ಇನ್ಸುಲಿನ್’ನ್ನು ಹೊರಗಿನಿಂದ ಒದಗಿಸದ ಹೊರತು ಬೇರೆ ರೀತಿಯಲ್ಲಿ ಪರಿಹಾರವಿಲ್ಲ. ಆದ್ದರಿಂದ ಯೋಗಾಸನ , ಪ್ರಾಣಾಯಾಮ ಅಥವಾ ಇನ್ನು ಯಾವುದೇ ಬೇರೆ ಬಗೆಯ ದೈಹಿಕ ಚಟುವಟಿಕೆ ಮಾತ್ರದಿಂದ ಇನ್ಸುಲಿನ್’ಗೆ ಸಂಬಂಧಿಸಿದ ತೊಂದರೆಗಳ ಪರಿಹಾರ ಸಾಧ್ಯವಿಲ್ಲ. ಪರಿಣಿತರ ಮಾರ್ಗದರ್ಶನದಲ್ಲಿ ಮಾಡಿದ ಯೋಗಾಸನ ಮಧುಮೇಹ ಕಾರಣದ ಮೂಲಕ್ಕೆ ಹೋಗಿ ಆ ಸಮಸ್ಯೆಯನ್ನು ಪರಿಹರಿಸುತ್ತದೆತ್ತದೆ ಎನ್ನುವ ಹೇಳಿಕೆಗಳಲ್ಲಿ ಯಾವುದೇ ಹುರುಳಿಲ್ಲ. ಏಕೆಂದರೆ ಇನ್ಸುಲಿನ್ ಉತ್ಪಾದನೆ ಆಗದಿರುವುದು ಅಥವಾ ಅಗತ್ಯ ಪ್ರಮಾಣದಲ್ಲಿ ಆಗದಿರುವುದು ದೇಹದ ಚಟುವಟಿಕೆಯ ಕೊರತೆಯೇ ಹೊರತು ಹೊರಗಿನ ಕಾರಣದಿಂದ ಬಂದುದಲ್ಲ. ಅದಲ್ಲದೆ ಪರಿಣಿತ ಯೋಗಾಸನ ತರಬೇತುದಾರರು ಎಂದರೆ ಅವರು ಆಸನಗಳನ್ನು ಕ್ರಮಬದ್ಧವಾಗಿ ಕಲಿಸುವವರೋ ಅಥವಾ ದೇಹದ ಇನ್ಸುಲಿನ್ ಸ್ಥಿತಿಗತಿಗಳನ್ನು ತಪಾಸಿಸಿ ಅದಕ್ಕೆ ಸಮರ್ಕವಾದ ಆಸನಗಳನ್ನು ಕಲಿಸಿಕೊಡುವವರೋ ಸ್ಪಷ್ಟವಿಲ್ಲ. ಇದರಲ್ಲಿ ಎರಡನೆಯದು ನಿಜ ಎಂದಾದರೆ ಅವರು ವೈದ್ಯರಾಗಿರಬೇಕು ಹಾಗೂ ಆಸನಗಳ ಮೂಲಕ ಇನ್ಸುಲಿನ್ ಉತ್ಪಾದನೆಯನ್ನು ನಿಯಂತ್ರಿಸಬಹುದು ಎಂದು ಹೇಳುತ್ತಿರಬೇಕು. ಇವೆರಡು ನಿಜವಾಗಿರಲು ಸಾಧ್ಯವಿಲ್ಲ. ಬೊಜ್ಜು ಹಾಗೂ ಇತರ ಕಾರಣಗಳಿಂದ ದೇಹದಲ್ಲಿ ಬೇಕಾದ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗದು. ದೈಹಿಕ ಚಟುವಟಿಕೆಗಳು , ಆಹಾರ ಪದ್ದತಿ ಬದಲಾವಣೆ ಮತ್ತು ನಿಯಂತ್ರಣ , ಬೊಜ್ಜು ಇಳಿಸುವಿಕೆ ಮುಂತಾದುವುಗಳಿಂದ ಇಂತಹ ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದು. ಹೀಗೆ ನೆರವಾಗುವ ದೈಹಿಕ ಚಟುವಟಿಕೆಗಳಲ್ಲಿ ಯೋಗಾಸನ ಒಂದಾಗಿರಬಹುದು. ಯಾವುದೇ ಔಷಧಿಯ ನಿಯಂತ್ರಣ ಇಲ್ಲದೆ ಕೇವಲ ಯೋಗಾಸನದಿಂದ ಮಧುಮೇಹಕ್ಕೆ ಪರಿಹಾರ ಹೊಂದುವುದು ಸಾಧ್ಯವಿಲ್ಲ. ಕೀಲು ಸಂಧಿ ನೋವು ಯೋಗಾಸನಗಳಿಂದ ಕೀಲು ಸಂಧಿಗಳಲ್ಲಿ ದ್ರವಗಳ ಹರಿದಾಟ ಹೆಚ್ಚಿ ಚಲನೆ ಸರಾಗವಾಗುತ್ತದೆ. ಇದರಿಂದ ಕೀಲುಸಂಧಿ ಸಂಬಂಧಿತ ತೊಂದರೆಗಳನ್ನು ನಿವಾರಣೆಯಾಗುತ್ತವೆ ಎನ್ನುವುದನ್ನು ನಾವು ಮೇಲಿಂದ ಮೇಲೆ ಕೇಳುತ್ತಲಿದ್ದೇವೆ. ಇದಕ್ಕೆ ಯಾವ ವೈಜ್ಞಾನಿಕ ಆಧಾರಗಳು ಇಲ್ಲ. ಕೀಲುಗಳಲ್ಲಿ ಒಂದಕ್ಕಿಂತ ಹೆಚ್ಚು ಮೂಳೆಗಳು ಸೇರುತ್ತವೆ. ಕೀಲು ಸಂಧಿಗಳು ಮೆದು ಹಾಗೂ ಗಟ್ಟಿಯಾದ ಹಲವು ಅಂಗಾಂಶಗಳಿಂದ ಮಾಡಲ್ಪಟ್ಟಿವೆ. ಮೂಳೆ ಮತ್ತು ಈ ಅಂಗಾಂಶಗಳು ಸೇರಿಯೇ ಒಂದು ವ್ಯವಸ್ಥೆ. ಸಂಧಿಯಲ್ಲಿ ಸೇರಿರುವ ಮೂಳೆಗಳು ಪರಸ್ಪರ ಘರ್ಷಣೆಯಿಲ್ಲದೆ ಸರಿದಾಡಲು ಕಾರ್ಟಿಲೇಜ್ ಮತ್ತು ಕೀಲು ಸಂಧಿಯ ಟೋಪಿ ಇರುತ್ತದೆ. ಇವುಗಳನ್ನು ಮಾಂಸಖಂಡ , ಟೆಂಡನ್ ಮತ್ತು ಲಿಗಮೆಂಟ್’ಗಳು ಸುತ್ತುವರೆದಿರುತ್ತವೆ. ಇವೆಲ್ಲವೂ ಸೇರಿ ಕೀಲು ಸಂಧಿಯಲ್ಲಿ ಚಲನೆ ಸರಾಗ ಚಲನೆ ಉಂಟಾಗುತ್ತದೆ. ಕೀಲು ಸಂಧಿಯ ರಚನೆಯ ಒಳಗೆ ಸೈನೊವಿಯಲ್ ಎನ್ನುವ ಪೊರೆ ಇದೆ. ಈ ಪೊರೆಯಲ್ಲಿರುವ ಕೋಶಗಳು ದ್ರವವನ್ನು ಸುರಿಸುತ್ತವೆ. ಈ ದ್ರವ ಕೀಲುಸಂಧಿಯನ್ನು ಸುತ್ತಿವರೆದಿರುವ ಸ್ಕಾರ್ಟಿಲೇಜ್ ಪದರಕ್ಕೆ ಲೇಪನಗೊಂಡು , ಅದರ ಸುತ್ತಲಿನ ಖಾಲಿ ಜಾಗವನ್ನು ತುಂಬುತ್ತದೆ. ಇದರಿಂದ ಕೀಲು ಸಂಧಿಯಲ್ಲಿ ಚಲನೆ ಸರಾಗವಾಗುತ್ತದೆ. ಕೀಲು ಸಂಧಿಗೆ ಎಷ್ಟು ಬೇಕೋ ಅಷ್ಟು ಸೈನೋವಿಯಲ್ ದ್ರವ ಮಾತ್ರ ಹರಿಯುತ್ತದೆ. ಅದಕ್ಕಿಂತ ಹೆಚ್ಚಿನ ದ್ರವ ಹರಿದರೆ ಕೀಲುಸಂಧಿಯ ಊತವುಂಟಾಗುತ್ತದೆ. ಇದರಿಂದ ಕೀಲಿನ ವ್ಯವಸ್ಥೆಯೇ ಜೀರ್ಣಸ್ಥಿತಿಗೆ ಬರಬಹುದು. ದೈಹಿಕ ಚಟುವಟಿಕೆಗಳಿಂದ ಕೀಲುಗಳ ಸಂಧಿಯಲ್ಲಿ ಬೇಕಾದ ಪ್ರಮಾಣದ ರಸ ಹರಿಯುತ್ತದೆ. ಇದಕ್ಕಾಗಿ ಯೋಗಾಸನದಂತಹ ಜಟಿಲವಾದ ಚಟುವಟಿಕೆ ಬೇಕಿಲ್ಲ. ಚಯಾಪಚಯ-ಬೊಜ್ಜು ನಿವಾರಣೆ ಯೋಗ / ಯೋಗಾಸನದಿಂದ ಚಯಾಪಚಯ ಕ್ರಿಯೆ ಹೆಚ್ಚಿ ಸೇವಿಸಿದ ಆಹಾರ ಸಮರ್ಪಕವಾಗಿ ಶಕ್ತಿಯಾಗಿ ಮಾರ್ಪಾಡಾಗುತ್ತದೆ. ಇದರಿಂದ ಬೊಜ್ಜು ಬರುವುದಿಲ್ಲ ಎನ್ನುವ ಪ್ರಬಲ ನಂಬಿಕೆ ಚಾಲ್ತಿಯಲ್ಲಿದೆ. ಜೀವಿಸಲು ಬೇಕಾದ ಕನಿಷ್ಟ ಕ್ರಿಯೆಗಳಿಗೆ - ಉಸಿರಾಟ, ಹೃದಯ ಬಡಿತ , ಒಳಗಿನ ಅಂಗಗಳ ಚಟುವಟಿಕೆ - ಬಳಕೆಯಾಗುವ ಶಕ್ತಿ ಮಹಿಳೆಯರಲ್ಲಿ ೧೮ % , ಪುರುಷರಲ್ಲಿ ೮% . ಜೀವಿಸುವ ಕನಿಷ್ಟ ಅಗತ್ಯತೆಯ ಹೊರತಾಗಿ ಹೆಚ್ಚಿನ ದೈಹಿಕ ಬಲ ಬೇಕಿಲ್ಲದ ಧ್ಯಾನ , ತಪಸ್ಸುಗಳಲ್ಲಿ ನಿರತರಾದ ಯೋಗಿಗಳು ತಮ್ಮ ತೂಕ ಹೆಚ್ಚಬಾರದು ಎಂದರೆ ಇಷ್ಟೇ ಚಟುವಟಿಕೆಗೆ ಬೇಕಾದಷ್ಟು ಆಹಾರ ಮಾತ್ರ ಸೇವಿಸಬೇಕು. ಹಾಗೆ ಸೇವಿಸಿದ್ದೇ ಆದರೆ ಅಲ್ಪ ಕಾಲದಲ್ಲೇ ಅಪೌಷ್ಟಿಕತೆಯಿಂದ ಅವರ ದೈಹಿಕ ಸಾಮರ್ಥ್ಯ ಕುಗ್ಗಿ ನಿತ್ರಾಣತೆ ಕಾಣಿಸಿಕೊಳ್ಳುತ್ತದೆ. ನಿತ್ರಾಣವಾದ ಯಾವ ದೇಹವೂ ಮನಸ್ಸನ್ನು ಕೇಂದ್ರಿಕರಿಸಲಾರದು ಮತ್ತು ಯೋಗ ಚಟುವಟಿಕೆಗೆ ನೆರವಾಗದು. ವಿಷಕಾರಿಗಳ ನಿರ್ಮೂಲನೆ –ರೋಗ ನಿರೋಧತ್ವ ಇತ್ತೀಚಿಗೆ ಸ್ವಯಂಘೋಷಿಸಿಕೊಂಡ ಸಮನ್ವಯ ಮತ್ತು ಸಂಪೂರ್ಣ ಆಹಾರ ಪರಿಣಿತರು / ಚಿಕಿತ್ಸಕರು ಗಿಡ, ಮೂಲಿಕೆ, ಪಥ್ಯ , ಉಪವಾಸಗಳನ್ನು ಶಿಫಾರಸ್ಸು ಮಾಡುವವರು , ದ್ರವಾಹಾರದಿಂದ ದೇಹವನ್ನು ಸುಸ್ಥಿಗೆ ತರಿಸುವವರು , ಬೇಯಿಸದೆ ಹಸಿ ತರಕಾರಿ ಮಾತ್ರ ತಿನ್ನಬೇಕೆನ್ನುವವರು , ಬಿಸಿ ನೀರಿನ ಚಿಕಿತ್ಸೆ ಕೊಡುವವರು , ಕಾಂತ, ಪಿರಮಿಡ್ ಚಿಕಿತ್ಸೆಯ ಮುಂದಾಳುಗಳು , ಬಾಯಲ್ಲಿ ಎಣ್ಣೆ ಮುಕ್ಕಳಿಸುವ ಅಧ್ಬುತ ರೋಗ ನಿರ್ವಾರಣೆಯ ಮಾರ್ಗವನ್ನು ಪ್ರತಿಪಾದಿಸುವವರು ಯಾವ ಅಂಗಕ್ರಿಯಾ ಅಧ್ಯಯನವೂ ಕಾಣದ ವಾತ, ಪಿತ್ತ, ಕಫಗಳ ಬಗ್ಗೆ ಅಧಿಕೃತವಾಗಿ ಮಾತನಾಡುವರು ಎಲ್ಲರೂ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವ ಬಗ್ಗೆ ಚರ್ಚಿಸುತ್ತಾರೆ. ತಲೆನೋವು ,ಹೊಟ್ಟೆ ನೋವು ,ಕ್ಯಾನ್ಸರ್ , ಚಿಕನ್ ಗುನ್ಯಾ ಏನೇ ಬರಲಿ ದೇಹದಿಂದ ವಿಷವಸ್ತುಗಳನ್ನು ಹೊರಗೆ ಹಾಕಬೇಕೆಂದು ಇವರು ಕರೆ ನೀಡುತ್ತಾರೆ. ಇವರೆಲ್ಲರ ನಡುವೆ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಯೋಗಾಸನಕ್ಕಿಂತ ಉತ್ತಮವಾದ ಇನ್ನೊಂದು ದಾರಿಯಿಲ್ಲ , ವಕ್ರಾಸನ ಬಹು ಪರಿಣಾಮಕಾರಿ ಎನ್ನುವವರು ಮುಂಚೂಣಿಯಲ್ಲಿದ್ದಾರೆ. ‘ಬಿಕ್ರಂ ಬಿಸಿ ಯೋಗ’ ಇದಕ್ಕೆ ಅತ್ಯುತ್ತಮವೆಂದು ಕೂಗಲಾಗುತ್ತಿದೆ. ವಕ್ರಾಸನ ಮಾಡುವುದರಿಂದ ದೇಹದಿಂದ ವಿಷಕಾರಿ ವಸ್ತುಗಳು ಹೊರಹಾಕಲ್ಪಡುತ್ತವೆ ಎನ್ನುವಷ್ಟು ಅಸಂಬದ್ಧತೆ ಇನ್ನೊಂದಿಲ್ಲ. ದೇಹವನ್ನು ತಿರುಗಿಸುವುದರಿಂದ ಈ ಅಂಗಗಳ ಮೇಲೆ ಯಾವುದೇ ಪರಿಣಾಮ ಆಗದು. ಹಾಗೇ ಆಗುವುದೇ ಆಗಿದ್ದರೆ ಪ್ರತಿ ಸಲ ದೇಹವನ್ನು ತಿರುಗಿಸಿದಾಗಲೂ ಅದು ಆಗಬೇಕು. ದೇಹದ ತಾಪಮಾನವನ್ನು ಸ್ಥಿರವಾಗಿರಿಸಲು ಬೆವರು ಹರಿಯುತ್ತದೆಯೇ ಹೊರತು ಯಾವುದೇ ವಿಷಕಾರಿ ವಸ್ತುಗಳನ್ನು ಹೊರ ಹಾಕಲು ಅಲ್ಲ. ಅತಿಯಾಗಿ ಬೆವರು ಸುರಿಸುವ ಕಾರಣಗಳ ಅಧ್ಯಯನ ನಡೆಸುವ ಸಮಾಜದ ಸ್ಥಾಪಕ ಸೇಮ್ಟ್ ಲೂಯಿ ವಿಶ್ವವಿದ್ಯಾಲಯದ ‘ಹೈಪರ್ ಹೈಡ್ರೋಸಿಸ್ ಸೊಸೈಟಿ’ ’ ಮುಂದಾಳು ಡಾ. ಡೀ ಅನ್ನಾ ಗ್ಲೇಸರ್ ವಿಸ್ತೃತ ಅಧ್ಯಯನ ನಡೆಸಿ ಬೆವರಿನ ಮೂಲಕ ಯಾವುದೇ ಅಹಿತಕಾರಿ ವಸ್ತುಗಳು ಹೊರಬರುವುದಿಲ್ಲ ಎನ್ನುವ ತೀರ್ಮಾನ ನೀಡಿದ್ದಾರೆ. ದೇಹಕ್ಕೆ ಬೇಡವಾದ ರಾಸಾಯನಿಕಗಳನ್ನು ರಕ್ತದಿಂದ ತೆಗೆದು ಹೊರಕಳಿಸಲು ಶ್ವಾಸಕೋಶ, ಮೂತ್ರ ಪಿಂಡ , ಪಿತ್ತ ಜನಕಾಂಗ ಮುಂತಾದ ವಿಶೇಷ ಅಂಗಗಳು ಹತ್ತಾರು ಲಕ್ಷಾಂತರ ವರ್ಷಗಳಿಂದ ವಿಕಾಸಗೊಂಡಿವೆ. (೫೦೭) . ಈ ಅಂಗಗಳು ವಿಫಲವಾದಾಗ ಆ ಅಂಗಗಳ ಕ್ರಿಯಾಶೀಲತೆಯನ್ನು ಮರುಸ್ಥಾಪಿಸುವ ಅಥವಾ ಆ ಕ್ರಿಯೆಗಳಿಂದ ದೇಹಕ್ಕೆ ಆಗುತ್ತಿದ್ದ ನೆರವನ್ನು ಬೇರೆ ರೀತಿಯಲ್ಲಿ ನೀಡುವುದರಿಂದ ಮಾತ್ರವೇ ಪರಿಹಾರ. ಮೂತ್ರಪಿಂಡ ವೈಫಲ್ಯಗೊಂಡಾಗ ಯಾವ ಪ್ರಾಣಾಯಾಮ , ಆಸನಗಳು ನೆರವಿಗೆ ಬರಲಾರವು. ಆಗ ಆಧುನಿಕ ಆಸ್ಪತೆಯಲ್ಲಿರುವ ಡಯಾಲಿಸಿಸ್ ಯಂತ್ರಗಳೇ ಗತಿ ಎನ್ನುವುದು ಸ್ಪಷ್ಟ. ವಿಶೇಷ ಆಸ್ಪತ್ರೆಯೊಂದನ್ನು ತೆರೆದು ಅಲ್ಲಿ ಮೂತ್ರಪಿಂಡ ವೈಫಲ್ಯವಾದ ರೋಗಿಗಳನ್ನು ಸೇರಿಸಿ, ಅವರಿಗೆ ಬೇರೆ ಯಾವುದೇ ಚಿಕಿತ್ಸೆ ನೀಡದೆ ಯೋಗಾಸನ ಮತ್ತು ಅಂತಹ ಇತರ ಪಾರಂಪರಿಕ ವಿಧಾನಗಳಿಂದ ಚಿಕಿತ್ಸೆ ನೀಡಿ ಯಶಸ್ಸಿನ ಪಟ್ಟಿ ನೀಡಲು ಯಾವುದೇ ಯೋಗಿ, ಬಾಬಾ ಮುಂದಾಗಿಲ್ಲ ಎನ್ನುವುದು ನಿಚ್ಚಳವಾಗಿದೆ. ಪರಕೀಯ ದಾಳಿಗೆ ತುತ್ತಾದಾಗ ತಾಪಮಾನ ಏರಿಕೆ-ಜ್ವರ-ಮೂಲಕ ದೇಹ ಸಂಕೇತಗಳನ್ನು ಕಳಿಸುತ್ತದೆ. ಬಿಳಿರಕ್ತಕಣಗಳು ಸೇರಿದಂತೆ ಇತರ ರೋಗ ನಿರೋಧತ್ವ ವ್ಯವಸ್ಥೆ ಯಾವ ಬಾಹ್ಯ ಪ್ರಚೋದನೆಯೂ ಇಲ್ಲದೆ ತಾನಾಗಿಯೇ ಕ್ರಿಯಾಶೀಲವಾಗುತ್ತದೆ. ಆದ್ದರಿಂದ ಯೋಗಾಸನ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ಯೋಗ/ಯೋಗಾಸನ ಮತ್ತು ವೈಜ್ಞಾನಿಕ ಸಂಶೋಧನೆಗಳು ಯೋಗ , ಯೋಗಾಸನ ಕುರಿತಾಗಿ ಚಾಲ್ತಿಯಲ್ಲಿರುವ ಕೆಲ ಹೇಳಿಕೆಗಳು ಅವುಗಳ ವೈಜ್ಞಾನಿಕ ವಿಶ್ಲೇಷಣೆ ಮತ್ತು ವೈಜ್ಞಾನಿಕ ಸಂಶೋದನೆ ಮತ್ತು ಅಧ್ಯಯನಗಳಿಂದ ಈವರೆಗೆ ತಿಳಿದುಬಂದಿರುವ ಸಂಗತಿಗಳು ಮುಂದಿವೆ. ಜನಪ್ರಿಯ ನಂಬಿಕೆ , ವ್ಯವಸ್ಥಿತ ಪ್ರಚಾರಗಳು ಏನೇ ಇರಲಿ ಯೋಗ / ಯೋಗಾಸನ ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲವೇ ? ಅವುಗಳನ್ನು ಯಾವುದಾದರೂ ರೋಗ ಚಿಕಿತ್ಸೆಗಳಲ್ಲಿ ಬಳಸಿಕೊಳ್ಳಬಹುದೇ ಎನ್ನುವ ಪ್ರಶ್ನೆಗೆ ವೈಜ್ಞಾನಿಕ ಉತ್ತರ ಕಂಡುಕೊಳ್ಳಲು ನೂರಾರು ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳ ಫಲಿತಾಂಶಗಳನ್ನು ನೋಡುವ ಮೊದಲು ಈ ಸಂಶೋದನೆ, ಅಧ್ಯಯನಗಳಿಗೆ ಅಡಚಣೆಯಾಗಿರುವ ಕೆಲ ಅಂಶಗಳತ್ತ ಗಮನ ಹರಿಸಬಹುದು. ಯೋಗ / ಯೋಗಾಸನ ಎಂದರೆ ಏನು ಎನ್ನುವುದರಲ್ಲಿಯೇ ಸ್ಪಷ್ಟತೆಯಿಲ್ಲ. ಅದು ಭಾರತೀಯರಿಗೆ, ಪಾಶ್ಚಾತ್ಯರಿಗೆ ಒಂದೊಂದು ರೀತಿಯಲ್ಲಿ ಅರ್ಥವಾಗುತ್ತದೆ. ಭಾರತೀಯರಲ್ಲೇ ಆಸ್ತಿಕ ಧರ್ಮಾಭಿಮಾನಿಗಳಿಗೆ ಕಾಣಿಸುವಂತೆ ತಟಸ್ಥರಿಗೆ , ಅನುಮಾನವಾದಿಗಳಿಗೆ ಕಾಣಿಸುವುದಿಲ್ಲ. ಹಲವು ಬಗೆಯ ದೈಹಿಕ ಭಂಗಿಗಳು , ಹತೋಟಿಯ ಉಸಿರಾಟ , ವಿಶ್ರಾಂತಿ ಯೋಗಾಸನದ ಮುಖ್ಯ ಲಕ್ಷಣಗಳೆಂದು ಬಹುತೇಕ ಎಲ್ಲರೂ ಒಪ್ಪುತ್ತಾರೆ. ಆದರೆ ಎಲ್ಲ ಕಡೆಯಲ್ಲಿಯೂ ಯೋಗಾಸನ ಇಷ್ಟಕ್ಕೆ ಸೀಮಿತವಾಗಿಲ್ಲ. ಯೋಗಾಸನದೊಂದಿಗೆ ಮಂತ್ರೋಚ್ಛಾರ ,ಸಂಗೀತ, ಹವಾನಿಯಂತ್ರಿತ ಪರಿಸರಗಳು ಸೇರಿರುತ್ತವೆ. ಭಾರತದ ಗಂಗಾನದಿ ತೀರದಲ್ಲಿ ನಾಗಸಾಧು ಹಾಕುವ ಶೀರ್ಷಾಸನ ಮತ್ತು ನ್ಯೂಯಾರ್ಕ್’ನ ಶ್ರೀಮಂತ ಬಡಾವಣೆಯಲ್ಲಿ ಹಾಲಿವುಡ್’ನ ತಳುಕು-ಬಳುಕು ನಟಿ ಮಾಡುವ ಶೀರ್ಷಾಸನ ಒಂದೇ ಅಲ್ಲ. ತಲೆ ಕೆಳಗೆ , ಕಾಲು ಮೇಲೆ ಎನ್ನುವ ಸಾಮಾನ್ಯ ಅಂಶ ಬಿಟ್ಟರೆ ಇವೆರಡರ ನಡುವೆ ಪರಿಸರ, ಪರಿಕರ, ತಂತ್ರ , ಉದ್ದೇಶ, ಫಲಿತಾಂಶಗಳಲ್ಲಿ ಯಾವುದೇ ಸಾಮ್ಯತೆಯಿಲ್ಲ. ಹಾಲಿವುಡ್ ನಟಿ ರಾತ್ರಿ ‘ಫ್ರೀಕ್ ಔಟ್’ ಆಗಿ ಬೆಳಿಗ್ಗೆ ಐಷಾರಾಮಿ ಕಾರಿನಲ್ಲಿ ಯೋಗ ಸ್ಟುಡಿಯೋ ಸೇರಿ ಶೀರ್ಷಾಸನ ಹಾಕುತ್ತಿರಬಹುದು. ಅದಕ್ಕೆ ವ್ಯತಿರಿಕ್ತವಾಗಿ ಬೆಳಿಗ್ಗೆ ಭಂಗಿ ಸೇದಿ , ಅಳಿದುಳಿದ ತಂಗಳು ಬಿಕ್ಷಾನ್ನ ಸೇವಿಸಿ ಮತ್ತೊಬ್ಬ ಸಾಧು ರಸ್ತೆಯ ಮೇಲೆ ತಲೆಕೆಳಗಾಗಿ ದೀರ್ಘ ಕಾಲ ನಿಂತಿರಬಹುದು. ಆದ್ದರಿಂದ ಅಧ್ಯಯನಕ್ಕೆ ಒಳಪಟ್ಟ ಯೋಗಾಸನ ಎಂದರೆ ಯಾವುದು ಎನ್ನುವುದು ಬಗೆಹರಿಯದ ಪ್ರಶ್ನೆಯಾಗಿಯೇ ಉಳಿಯುತ್ತದೆ. ಹಠಯೋಗ ಮತ್ತು ಅಯ್ಯಂಗಾರ್ ಯೋಗಾಸನಗಳಲ್ಲಿ ಭಂಗಿಗಳು , ಮೈ ಹಿಗ್ಗಿಸಿಕೆ , ತಿರುಚಿಕೆ ಪ್ರಧಾನವಾದರೆ ‘ಅಷ್ಟಾಂಗ ವಿನ್ಯಾಸ’ದಲ್ಲಿ ಇವು ಬಿರುಸು ಮತ್ತು ಕ್ರೀಡೆಯ ಲಕ್ಷಣ ತಳೆಯುತ್ತವೆ. ಯಿನ್ ಯೋಗಾಸನ ಮಾಡಿದಾಗ ಸಾಮಾನ್ಯವಾಗಿ ಬೆವರು ಬಾರದು. ಬೆವರು ಬಸಿಯದೇ ಬಿಕ್ರಮ್ ಯೋಗ ಮಾಡಲು ಸಾಧ್ಯವೇ ಇಲ್ಲ. ಒಂದು ಪದ್ದತಿಯ ಯೋಗಾಸನ ಮಾಡಿದವರು ಹಗುರವಾಗಿ ಬೆವರುತ್ತಿದ್ದರೆ, ಇನ್ನೊಂದು ಬಗೆಯ ಯೋಗ ಮಾಡುವವರು ಬೆವರಿ ಬಸವಳಿದಿರುತ್ತಾರೆ. ಪ್ರತಿಯೊಬ್ಬರೂ ತಮ್ಮ ಕ್ರಮವೇ ಸರಿ . ಅದೇ ಋಷಿ-ಮುನಿ ಪ್ರಣೀತ ಪ್ರಾಚೀನ ಪದ್ದತಿ ಎನ್ನುತ್ತಾರೆ. ಇಂತಹ ಶಿಷ್ಟತೆಯಿಲ್ಲದ ಯೋಗಾಸನದ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸುವುದು ಸವಾಲಿನ ಕೆಲಸವೇ ಆಗಿದೆ. ಒಂದು ಪದ್ದತಿ , ಮದ್ದು , ಔಷಧಿ , ತಂತ್ರ ಯಾವುದೇ ಭಾವುಕ ಪಕ್ಷಪಾತಕ್ಕೆ ಒಳಗಾಗದಂತೆ ಅದರ ಮೌಲ್ಯ ನಿರ್ಣಯಿಸಲು ವಿಜ್ಞಾನದಲ್ಲಿ ಅದರಲ್ಲೂ ವಿಶೇಷವಾಗಿ ವೈದ್ಯಕೀಯ ವಿಜ್ಞಾನದಲ್ಲಿ ‘ಒಮ್ಮುಖ ಕುರುಡು (ಒಮ್ಮುಖ ಮರೆಮಾಚಿಕೆ -Single Blind ) ’ ಮತ್ತು ‘ಇಮ್ಮುಖ ಕುರುಡು ( ಇಮ್ಮುಖ ಮರೆಮಾಚಿಕೆ- Double Blind) ವಿಧಾನಗಳು ಬಳಕೆಯಲ್ಲಿವೆ. ಒಮ್ಮುಖ ಕುರುಡು ವಿಧಾನದಲ್ಲಿ ಪ್ರಯೋಗಕ್ಕೆ /ಸಂಶೋಧನೆಗೆ ಒಳಗಾಗುವವರಲ್ಲಿ ತಾವು ಯಾವ ಅಧ್ಯಯನಕ್ಕೆ ಒಳಗಾಗುತ್ತಿದ್ದೇವೆ , ತಮ್ಮಿಂದ ಯಾವ ದತ್ತಾಂಶ ಸಂಗ್ರಹಿಸಲಾಗುತ್ತಿದೆ, ತಮಗೆ ನೀಡುತ್ತಿರುವ ಮದ್ದು/ಔಷಧಿ , ಚಿಕಿತ್ಸೆ ಯಾವುದು ಎಂದು ತಿಳಿದಿರುವುದಿಲ್ಲ. ಆದರೆ ಯಾವ ವ್ಯಕ್ತಿಯ ಮೇಲೆ ಯಾವ ಪ್ರಯೋಗ / ಸಂಶೋಧನೆ ನಡೆಸಲಾಗುತ್ತಿದೆ ಎನ್ನುವುದು ಸಂಶೋಧಕನಿಗೆ ಗೊತ್ತಿರುತ್ತದೆ. ಇಮ್ಮುಖ ಕುರುಡು ವಿಧಾನದಲ್ಲಿ ಸಂಶೋಧಕ ಪ್ರಯೋಗದ ಪದ್ದತಿಯನ್ನು ತಯಾರಿಸುತ್ತಾನೆ. ಅಲ್ಲಿಗೆ ಆತನ ಮೊದಲ ಹಂತದ ಹೊಣೆ ಮುಗಿಯಿತು. ಅಧ್ಯಯನಕ್ಕೆ ಒಳಗಾಗುವರಂತೆ ಆತನಿಗೂ ಯಾವ ಪ್ರಯೋಗ / ಅಧ್ಯಯನವನ್ನು ಯಾರ ಮೇಲೆ ನಡೆಸಲಾಯಿತು. ಅದರಿಂದ ಎಂತಹ ಮಾಹಿತಿ ಸಿಗುತ್ತಿದೆ ಎನ್ನುವುದನ್ನು ಮುಚ್ಚಿಡಲಾಗುತ್ತದೆ. ಎಲ್ಲ ಮಾಹಿತಿಯನ್ನು ವಿಶ್ಲೇಷಿಸಿ ತೀರ್ಮಾನಕ್ಕೆ ಬಂದ ನಂತರ ಯಾರ ಮೇಲೆ ಯಾವ ಬಗೆಯ ಅಧ್ಯಯನ ಮಾಡಲಾಯಿತೆಂದು ತಿಳಿಸಲಾಗುತ್ತದೆ. ಇದರಿಂದ ಪ್ರಯೋಗ / ಅಧ್ಯಯನ ನಡೆಸುವಾತ ಮತ್ತು ಅಧ್ಯಯನಕ್ಕೆ ಒಳಗಾಗುವವರು ಇಬ್ಬರು ಯಾವುದೇ ಪೂರ್ವಗ್ರಹ ಒಲವು , ನಿಲುವುಗಳಿಂದ ಮುಕ್ತರಾಗಿರುತ್ತಾರೆ. ಅದರಿಂದ ನಿಷ್ಪಕ್ಷಪಾತವಾದ ಫಲಿತಾಂಶಗಳು ದಕ್ಕುತ್ತವೆ. ಆದ್ದರಿಂದ ಧ್ಯಾನ, ಯೋಗ , ಯೋಗಾಸನ, ಪವಾಡ , ಜ್ಯೋತಿಷ್ಯ, ವಾಸ್ತು ಮುಂತಾದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಲು ಇಮ್ಮುಖ ಕುರುಡು ವಿಧಾನವೇ ಬೇಕು. ಯೋಗಾಸನಗಳನ್ನು ಗಂಭೀರ ವೈದ್ಯಕೀಯ ಸಂಶೋಧನೆಗಳಿಗೆ ಒಳಪಡಿಸುವ ಪ್ರಯತ್ನಗಳು ೧೯೭೦ ರ ದಶಕದಲ್ಲಿ ಪ್ರಾರಂಭವಾದವು. ಯುನೈಟೆಡ್ ಕಿಂಗ್’ಡಂ ಮೂಲದ ‘ದಿ ಲ್ಯಾನ್ಸೆಟ್’ ವೈದ್ಯಕೀಯ ಪತ್ರಿಕೆಯಲ್ಲಿ ೧೯೭೫ ರಲ್ಲಿ ಮೊದಲ ಬಾರಿಗೆ ಯೋಗಾಸನ ಕುರಿತಾಗಿ ಸಂಶೊಧನೆ ಅಧ್ಯಯನ ಲೇಖನ ಬಂದಿತು. ಇದಾದ ನಂತರ ಕಳೆದ ೮೫ ವರ್ಷಗಳಲ್ಲಿ ‘ಯೋಗ ಚಿಕಿತ್ಸೆ’ ಕುರಿತಾಗಿ ೩೦೦೦ ಕ್ಕೂ ಅಧಿಕ ಸಂಶೋಧನೆಗಳಾಗಿವೆ. ಈ ಎಲ್ಲ ಅಧ್ಯಯನಗಳಲ್ಲೂ ಮೊದಲಿನಿಂದಲು ಇದ್ದ ಹಲವಾರು ಅಡಚಣೆಗಳನ್ನು ದಾಟಲಾಗಿಲ್ಲ. ಈ ಅಡಚಣೆಗಳೆಂದರೆ (೧) ಅಲ್ಪ ಸಂಖ್ಯೆ ಜನರ ಅಧ್ಯಯನ (೨) ಯೋಗಾಸನವನ್ನು ಇತರ ದೈಹಿಕ ಚಟುವಟಿಕೆಗಳೊಂದಿಗೆ ಹೋಲಿಸದಿರುವುದು (೩) ಯೋಗಾಸನವನ್ನು ಇತರ ಮನೋ-ದೈಹಿಕ ಚಿಕಿತ್ಸೆಯ ಪದ್ದತಿಗಳೊಂದಿಗೆ ಹೋಲಿಸದಿರುವುದು. (೪) ದೀರ್ಘ ಕಾಲದ ಅಧ್ಯಯನಗಳು ನಡೆಯದಿರುವುದು (೫) ವಿವಿಧ ಆರೋಗ್ಯ ಸ್ಥಿತಿಗಳನ್ನು ಪರಿಗಣಿಸದಿರುವುದು . ಟೆಕ್ಸಾಸ್ ವಿಶ್ವವಿದ್ಯಾಲಯದ ಎಂ.ಡಿ ಆಂಡರ್’ಸನ್ ಕ್ಯಾನ್ಸರ್ ಸೆಂಟರ್’ನ ಸಮನ್ವಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಲೊರೆಂಝೊ ಕೊಹೆನ್ ಯೋಗಾಸನ ಕುರಿತಾದ ಸಂಶೋಧನೆಗಳಲ್ಲಿ ಯಾವುದನ್ನು ಯೋಗಾಸನ ಎನ್ನುತ್ತವೆ ಎನ್ನುವುದರಲ್ಲಿ ಸ್ಪಷ್ಟತೆಯಿಲ್ಲ. ರೋಗ ಚಿಕಿತ್ಸೆಯಲ್ಲಿ ಯೋಗದ ಪಾತ್ರ ಕುರಿತಾಗಿ ನಡೆಸಿರುವ ಅಧ್ಯಯನಗಳಲ್ಲಿ ಯಾವ ಬಗೆಯಲ್ಲಿ , ಯಾವ ಆಸನಗಳನ್ನು ನಿಗದಿಪಡಿಸಲಾಯಿತು. ಹಾಗೆ ಯಾರು ನಿಗದಿಪಡಿಸಿದರು , ಅವರ ಹಿನ್ನೆಲೆ ಏನು? ಎನ್ನುವ ಖಚಿತತೆ ಇಲ್ಲ’ ಎಂದಿದ್ದಾರೆ. ಯೋಗಾಸನ ಕುರಿತಾದ ಸಂಶೋಧನೆಗಳಿಂದ ಈ ಅನಿರ್ದಿಷ್ಟತೆ ನಿವಾರಣೆಯಾಗದೆ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿಲ್ಲ. ಕೆಲವು ಕಡೆ ಯೋಗಾಸನದಿಂದ ದೇಹದ ಜೈವಿಕ ಕ್ರಿಯೆಗಳ ಮೇಲೆ, ಉದಾಹರಣೆಗೆ ಒಳಸುರಿಕೆ ಹಾರ್ಮೋನ್ , ಆಹಾರ ಅರಗುವ ಕ್ರಿಯೆ ಮುಂತಾದುವುಗಳು ಹೇಗೆ ಬದಲಾಗುತ್ತವೆ ಎಂದು ತಿಳಿಯಲು ಯತ್ನಿಸಿದ್ದಾರೆ. ಈ ಕುರಿತು ಏನನ್ನೂ ಮಾತನಾಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ಸಂಶೋಧಕರು ಬಂದಿದ್ದಾರೆ. ಯೋಗ, ಯೋಗಾಸನ ಕುರಿತಾಗಿ ಈವರೆಗೆ ನಡೆದಿರುವ ಎಲ್ಲ ಅಧ್ಯಯನಗಳು ಕಿರು ಅವಧಿಯವೇ ಆಗಿವೆ. ಯೋಗಾಸನಗಳಿಂದ ದೀರ್ಘಕಾಲದಲ್ಲಿ ಆಗಬಹುದಾದ ಅಪಾಯ ಕುರಿತು ಒಂದೆರಡು ಅಧ್ಯಯನಗಳು ನಡೆದಿವೆ. ಜರ್ಮನಿಯ ಎಸ್ಸೆನ್ ನಗರದ ‘ಡೂಯಿಸ್’ಬರ್ಗ್ –ಎಸ್ಸೆನ್ ವಿಶ್ವವಿದ್ಯಾಲಯದ ಯೋಗ ಸಂಶೋಧನೆಯ ಮುಂದಾಳತ್ವ ವಹಿಸಿರುವ ಹೋಲ್ಗರ್ ಕ್ರಾಮರ್ ‘ಯೋಗಾಸನದ ಬಗ್ಗೆ ಏನನ್ನೇ ಆಗಲಿ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಸಾಕಷ್ಟು ಪುರಾವೆಗಳಿಲ್ಲ ‘ ಎನ್ನುತ್ತಾರೆ. ೧೯೭೫ ರಿಂದ ೨೦೧೪ ರ ಅವಧಿಯಲ್ಲಿ ೨೩ ದೇಶಗಳಲ್ಲಿ ೨೨೫೪೮ ರೋಗಿಗಳನ್ನು ಒಳಗೊಂಡಿರುವ ಯೋಗ ಚಿಕಿತ್ಸೆ ಕುರಿತಾದ ಯಾದೃಚ್ಛಿಕ ಚೈಕಿತ್ಸಕ ತನಿಖೆ ( Random Clinical Trial) ಪ್ರತಿನಿಧಿಸುತ್ತವೆ ಎನ್ನಲಾದ ೩೬೬ ಸಂಶೋಧನಾ ಲೇಖನಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದರಿಂದ ಬಹುತೇಕ ಸಂಶೋಧನೆಗಳಲ್ಲಿ ಅತ್ಯಂತ ಸಣ್ಣ ಸಂಖ್ಯೆಯ ಗುಂಪುಗಳನ್ನು ಪರಿಗಣಿಸಲಾಗಿದೆ ಮತ್ತು ಅವುಗಳಲ್ಲಿ ಯಾವುದೇ ಒಂದು ನಿರ್ದಿಷ್ಟ ರೋಗ ಲಕ್ಷಣಗಳನ್ನು ತನಿಖೆಗೆ ಒಳಪಡಿಸಿಲ್ಲ ಎಂದು ತಿಳಿದು ಬಂದಿದೆ. ಈ ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಕಿ ಅಂಶಗಳು ಹೀಗಿವೆ.(೫೧೯) (ಕೋಷ್ಟಕ-೧ ಮತ್ತು ೨) ಮೇಲಿನವುಗಳಲ್ಲಿ ಕೆಲವು ಸಂಶೋಧನೆಗಳು ಏರು ರಕ್ತದೊತ್ತಡ , ಅಪಸ್ಮಾರ , ಅಸ್ತಮ , ಸ್ನಾಯು ಸೆಳೆತ ಮುಂತಾದವುಗಳನ್ನು ಯೋಗಾಸನಗಳ ಮೂಲಕ ಗುಣಪಡಿಸಬಹುದು ಎಂದು ತೋರಿಸುತ್ತವೆ. ಇದಲ್ಲದೆ ಚಿಕಿತ್ಸೆಯಲ್ಲಿ ಉಂಟಾದ ಅಡ್ದ ಪರಿಣಾಮ , ಗಾಯ, ನೋವುಗಳನ್ನು ತಿಳಿಸಿಲ್ಲ. ಒಂದೊಂದು ಸಂಶೋಧನೆ ಒಂದೊಂದು ರೀತಿಯ ಯೋಗಾಸನಗಳನ್ನು ಚಿಕಿತ್ಸೆಗೆ ಆಯ್ದುಕೊಂಡಿದೆ. ಇವುಗಳಲ್ಲಿ ಏಕರೂಪತೆಯಿಲ್ಲ. ಏತಕ್ಕಾಗಿ ಆ ಆಸನಗಳನ್ನು ಆಯ್ದುಕೊಳ್ಳಲಾಯಿತು ಎನ್ನುವ ವಿವರಗಳಿಲ್ಲ. ಕೆಲ ಸಂಶೋಧನೆಗಳಲ್ಲಿ ಚಿಕಿತ್ಸೆಗೆ ಬಂದವರು ಒಂದು ಗಂಟೆ ಮಾತ್ರ ಭಾಗಿಯಾಗಿದ್ದರೆ , ಇನ್ನೂ ಕೆಲವರಿಗೆ ಹಲವು ವಾರ, ತಿಂಗಳುಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಒಳರೋಗಿಗಳ ಜೀವನ ಶೈಲಿಯನ್ನು ಮಾರ್ಪಡಿಸಲಾಗಿದೆ. ಕೆಲ ರೋಗಿಗಳಿಗೆ ಕಠಿಣವಾದ ಆಸನಗಳನ್ನು ನಿಗದಿಪಡಿಸಿದ್ದರೆ , ಇನ್ನೂ ಕೆಲವರಿಗೆ ಪ್ರಾಣಾಯಾಮ ಹೇಳಲಾಗಿದೆ. ಇದಕ್ಕೆ ಆಧಾರಗಳೇನು ಹಾಗೂ ಇಂತಹ ಅನಿಯಂತ್ರಿತ ಫಲಿತಾಂಶಗಳನ್ನು ಬಳಸಿ ಹೇಗೆ ಒಂದು ನಿರ್ದಿಷ್ಟ ತೀರ್ಮಾನಕ್ಕೆ ಬರಲಾಗಿದೆ ಎನ್ನುವುದು ಸ್ಪಷ್ಟವಿಲ್ಲ. ಇವುಗಳನ್ನು ಸಮಗ್ರವಾಗಿ ನೋಡಿರುವ ವೆರ್ರಾಸ್ಟ್ರೋ ಈ ಸಂಶೋಧನೆಗಳಲ್ಲಿರುವ ತೀರ್ಮಾನಗಳನ್ನು ಸಮರ್ಥಿಸಲು ತಕ್ಕಂತಹ ವೈಜ್ಞಾನಿಕ ಪುರಾವೆಗಳಿಲ್ಲ. ಬಹುತೇಕ ಈ ಅಧ್ಯಯನಗಳು ಸಣ್ಣ ಪ್ರಮಾಣ, ಅನಿಯಂತ್ರಿತವಾಗಿದ್ದು ಕುರುಡುಗೊಳಿಸಲಾಗಿಲ್ಲ , ವೈಧಾನಿಕವಾಗಿ ಹಲವು ದೊಷಗಳಿಂದ ತುಂಬಿದ್ದು , ಫಲಿತಾಂಶಗಳ ನಿರ್ಣಯದಲ್ಲಿ ತಟಸ್ಥತೆ ಇಲ್ಲವೆಂದು ಗುರುತಿಸಿದ್ದಾನೆ. ಇದೆಲ್ಲ ಫಲಿತಾಂಶಗಳನ್ನು ವಿಶ್ಲೇಷಿಸಿದಾಗ ಈವರೆಗೆ ನಡೆದಿರುವ ಸಂಶೋಧನೆಗಳಿಂದ ಯಾವುದೇ ತೀರ್ಮಾನಕ್ಕೆ ಬರಲು ನೆರವಾಗದು. ನಿರ್ದಿಷ್ಟ ವೈದ್ಯಕೀಯ ಸ್ಥಿತಿಗಳನ್ನು ಪರಿಗಣಿಸಿ ಅವುಗಳಿಗೆ ನಿರ್ದಿಷ್ಟ ವಿಭಿನ್ನ ಬಗೆಯ ಯೌಗಿಕ ಚಿಕಿತ್ಸೆ ನೀಡಿ , ದತ್ತಾಂಶಗಳನ್ನು ಸಂಗ್ರಹಿಸದ ಹೊರತು ಯೋಗ ಚಿಕಿತ್ಸೆ ನಿಜವಾಗಿಯೂ ಪ್ರಭಾವ ಬೀರುತ್ತದೆಯೇ ? ಹಾಗೆ ಬೀರಿದ್ದೇ ಆದರೆ ಅದು ಹೇಗೆ ಮತ್ತು ಅದನ್ನು ಚಿಕಿತ್ಸೆಗೆ ಬಳಸುವ ರೀತಿ ಎಂತಹುದಿರಬೇಕು ಎಂದು ಹೇಳಲು ಸಾದ್ಯ. ಮಾನಸಿಕ ನೆಮ್ಮದಿ (೧) ಯೋಗ / ಯೋಗಾಸನದಿಂದ ಯೋಗಾಸನದಿಂದ ಮೆದುಳಿನಲ್ಲಿರುವ ಗಾಮಾ-ಅಮಿನೊಬ್ಯುತೈರಿಕ್ ಆಮ್ಲದ ಪ್ರಮಾಣ ಹೆಚ್ಚುತ್ತದೆ ಇದರಿಂದ ಮಾನಸಿಕ ಭಾವನೆ, ಲಹರಿಗಳು ಉತ್ತಮಗೊಳ್ಳುತ್ತವೆ. ಈ ರಾಸಯನಿಕ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಆತಂಕ, ಉದ್ವೇಗ, ಖನ್ನತೆಗೆ ಕಾರಣ. ಆದ್ದರಿಂದ ಯೋಗಾಸನ ಖಿನ್ನತೆ ನಿವಾರಿಸುವಲ್ಲಿ ಸಹಾಯಕಾರಿ. (೨) ಯೋಗ ಮೆದುಳಿಗೆ ಸಹಾಯಕಾರಿ-ಯೋಗಾಸನ ನಿರತರಾದವರಲ್ಲಿ ಸೃಜನಶೀಲತೆಗೆ ಕಾರಣವಾದ ಮೆದುಳಿನ ಬಲಭಾಗ ಪ್ರಚೋದಿಸಲ್ಪಡುತ್ತದೆ. (೫೧೬) ಯೋಗಾಸನ ಮಾಡುವುದರಿಂದ ‘ದೇಹ ಪ್ರಜ್ಞೆ’ ಎತ್ತರದ ಮಟ್ಟಕ್ಕೆ ಏರುತ್ತದೆ ಎಂದು ಕೆಲ ಸಂಶೋದನೆಗಳಿಂದ ತಿಳಿದು ಬಂದಿದೆ. ೨೦೧೫ ರಲ್ಲಿ ಹೆಂಗಸರನ್ನು ಮೂರು ಗುಂಪುಗಳಾಗಿ ವಿಭಜಿಸಿ ಅವರಲ್ಲಿ ಅಯ್ಯಂಗಾರ್ ಮತ್ತು ಅಷ್ಟಾಂಗ ಯೋಗದಲ್ಲಿ ೪೩ ಜನ ಮತ್ತು ಏರೋಬಿಕ್ಸ್ ವ್ಯಾಯಾಮದಲ್ಲಿ ೪೫ ಜನ ತೊಡಗಿಸಿ ಹಾಗೂ ೫೧ ಜನ ಯಾವುದೇ ವ್ಯಾಯಾಮದಲ್ಲಿ ತೊಡಗದಂತೆ ಮಾಡಲಾಯಿತು. ಇವರಲ್ಲಿ ಯೋಗಾಸನದಲ್ಲಿ ತೊಡಗಿಸಿಕೊಂಡವರು ಇತರರಿಗಿಂತ ಹೆಚ್ಚು ದೈಹಿಕ ಪ್ರಜ್ಞೆ ತಮಗೆ ಮೂಡಿದೆಯೆಂದರು. ಮಾನಸಿಕ ಒತ್ತಡ ಇಳಿಸುವಲ್ಲಿ ಯೋಗಾಸನದ ಪಾತ್ರ ಕುರಿತಾಗಿ ನಡೆಸಿದ ಸಂಶೋಧನೆಗಳಿಂದ ಸಾಮಾನ್ಯ ವಿಶ್ರಾಂತಿ ಮತ್ತು ಉಲ್ಲಾಸಕರ ಪರಿಸರ ನೀಡುವ ಪರಿಣಾಮಗಳೇ ಕಂಡುಬಂದಿವೆ. ಕೆಲವು ಸಂಶೋಧನೆಗಳು ಯೋಗಾಸನಗಳಂತೆ ಮನೋ-ದೈಹಿಕ ಚಟುವಟಿಕೆಗಳನ್ನು ಒಳಗೊಂಡಿರುವ ತೈ-ಷಿ ಕೂಡ ಉತ್ತಮವಾದುದು. ತೈ—ಷಿ ಅಭ್ಯಾಸದಿಂದಲೂ ‘ದೇಹ ಪ್ರಜ್ಞೆ’ ಉನ್ನತ ಮಟ್ಟಕ್ಕೆ ಸಾಗುತ್ತದೆ ಎಂದು ತಿಳಿಸುತ್ತವೆ. ಆತಂಕ, ಖಿನ್ನತೆಯಂತಹ ಅಮೂರ್ತ ವಿಷಯಗಳನ್ನು ಕುರಿತಾಗಿ ಅಧ್ಯಯನ ನಡೆಸುವಾಗ ಭಾರಿ ಎಚ್ಚರ ಬೇಕು. ಯೋಗಾಸನಕ್ಕೆ ತೊಡಗಿಸಲ್ಪಟ್ಟವರಲ್ಲಿ ದೈಹಿಕ ಪ್ರಜ್ಞೆ ಮೊದಲೇ ಹೆಚ್ಚಿನ ಮಟ್ಟದಲ್ಲಿ ಇದ್ದಿತೋ ಅಥವಾ ಯೋಗಾಸನದಿಂದ ಬಂದಿತೋ ಅಥವಾ ಯೋಗಾಸನ ಮಾಡುತ್ತಿರುವುದರಿಂದ ಅಂತಹ ಪ್ರಜ್ಞೆ ತಮ್ಮಲ್ಲಿ ಹೆಚ್ಚುತ್ತಿದೆ ಎಂದು ಭಾವಿಸಿದರೋ ತಿಳಿಯದು. ಯೋಗಾಸನ ಮಾಡುತ್ತಿರುವುದರಿಂದ ಆತಂಕ , ಖಿನ್ನತೆಗಳು ಕಡಿಮೆಯಾಗುತ್ತಿವೆಯೋ ಅಥವಾ ಜನರೊಂದಿಗೆ ಬೆರೆಯುವುದು , ಪರಿಸರ ಬದಲಾವಣೆ, ಗಮನದ ವಿಕೇಂದ್ರೀಕರಣದಂತಹ ಇತರ ಸಂಗತಿಗಳಿಂದ ಇಂತಹ ಫಲಿತಾಂಶಗಳು ಬಂದಿವೆಯೋ ನಿರ್ಧರಿಸುವುದು ಕಠಿಣ. ಎಲ್ಲ ಬಗೆಯ ವ್ಯಾಯಾಮಗಳು , ದೈಹಿಕ ಕಸರತ್ತುಗಳು ಆತಂಕ, ಖಿನ್ನತೆಯನ್ನು ಕಡಿಮೆ ಮಾಡುತ್ತವೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ. ಆದ್ದರಿಂದ ಯೋಗಾಸನಕ್ಕೆ ಈ ದೃಷ್ಟಿಯಲ್ಲಿ ಯಾವುದೇ ವಿಶೇಷವಿಲ್ಲ. ಯೋಗಾಸನಗಳ ಅಭ್ಯಾಸದಿಂದ ದೀರ್ಘಕಾಲದ ಗುಣಾತ್ಮಕ ಪರಿಣಾಮಗಳಾಗುತ್ತವೆಯೇ ಎಂದರೆ ಈವರೆಗೆ ಅದಕ್ಕೆ ಯಾವುದೇ ನೇರ ಉತ್ತರವಾಗಲಿ , ಪುರಾವೆಗಳಾಗಲಿ ಇಲ್ಲ. ದಶಕಗಳ ಕಾಲ ಕ್ರಮಬದ್ಧವಾಗಿ ಯೋಗಾಸನ ಮಾಡುತ್ತಿರುವವರು ಇತರ ದೈಹಿಕ ಚಟುವಟಿಕೆಗಳನ್ನು ನಡೆಸುವವರಿಗಿಂತ ಉತ್ತಮ ದೈಹಿಕ, ಮಾನಸಿಕ ಆರೋಗ್ಯ ಹೊಂದಿರುತ್ತಾರೆಂದು ಯಾರೂ ಸಾಬೀತು ಮಾಡಿಲ್ಲ. ಈ ದಿಶೆಯಲ್ಲಿ ಅಧ್ಯಯನ ನಡೆಸಿರುವ ಕರೆನ್ ಪ್ಲಿಂಕಿಂಗ್’ಟನ್ ‘ ಯೊಗಾಸನ ಖಿನ್ನತೆಯನ್ನು ಕಡಿಮೆಗೊಳಿಸಬಹುದು ಎನ್ನುವ ಸೂಚನೆಗಳಿವೆ. ಆದರೆ ಈವರೆಗೆ ಕೈಗೊಂಡಿರುವ ಅಧ್ಯಯನಗಳು ಮತ್ತು ಅಧ್ಯಯನದಲ್ಲಿ ಭಾಗಿಯಾದವರ ಸಂಖ್ಯೆ ಬಹಳ ಕಡಿಮೆ. ಯೋಗಾಸನದಿಂದ ವ್ಯಕ್ತಿಯ ಭಾವನೆಗಳ ಏರು-ಪೇರಿನಲ್ಲಿ ಸ್ವಲ್ಪ ನಿಯಂತ್ರಣ ಬರಬಹುದೇನೂ. ಇದನ್ನು ಖಚಿತವಾಗಿ ಹೇಳಲಾಗದು. ಏಕೆಂದರೆ ಈವರೆಗೆ ಇದನ್ನು ಕುರಿತಾಗಿ ನಡೆಸಿದ ಎಲ್ಲ ಅಧ್ಯಯನಗಳ ವಿನ್ಯಾಸ ಅತ್ಯಂತ ಕೆಟ್ಟವಾಗಿವೆ. ಖಿನ್ನತೆ ಮತ್ತು ಆತಂಕವನ್ನು ನಿವಾರಿಸಲು ಯೋಗಾಸನ ಸಹಕಾರಿಯಾಗಿದೆ ಎಂದು ವಿಶ್ವಾಸದಲ್ಲಿ ಹೇಳಲಾಗದು. ಯೋಗಾಸನವನ್ನು ಪರೀಕ್ಷೆ ಮಾಡುವ ಸಮರ್ಕಪ ವಿಧಾನಗಳ ಹುಡುಕಾಟದಲ್ಲಿ ನಾವಿದ್ದೇವೆ ಎನ್ನುವ ತೀರ್ಮಾ ನೀಡಿದ್ದಾನೆ. ೨೦೦೭ ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಅಂಡ್ ಆಲ್ಟರ್’ನೇಟಿವ್ ಮೆಡಿಸಿನ್ ಮನವಿಗೆ ಓಗೊಟ್ಟು ಯೂನಿವರ್ಸಿಟಿ ಆಫ್ ಆಲ್ಬರ್ಟ್ ಎವಿಡೆನ್ಸ್ ಬೇಸ್ಡ್ ಪ್ರಾಕ್ಟಿಸ್ ಸೆಂಟರ್ ಮಂತ್ರ, ಧ್ಯಾನ , ಯೋಗ , ತೈ-ಷಿ ಹಾಗೂ ಕ್ವಿ ಗಾಂಗ್ ಎನ್ನುವ ಐದು ಧ್ಯಾನ ಪದ್ದತಿಗಳು ರೋಗ ಚಿಕಿತ್ಸೆಯಲ್ಲಿ ಧ್ಯಾನದ ಪ್ರಭಾವವನ್ನು ಕುರಿತಾಗಿ ನಡೆಸಿದ ಸಂಶೋಧನೆಗಳನ್ನು ಮಾಡಿ ಈ ಎಲ್ಲ ಪದ್ದತಿಗಳಲ್ಲಿ ಮಾನಸಿಕ ಹತೋಟಿ ಮತ್ತು ಚೈತನ್ಯದ ಎಚ್ಚರಗೊಳಿಸಿಕೆ ಸಾಮಾನ್ಯ ಅಂಶಗಳೆಂದು ಗುರುತಿಸಿದೆ. ಏರೊತ್ತಡ , ಹೃದ್ರೋಗ ಮತ್ತು ಪದಾರ್ಥ ದುರ್ಬಳಕೆ ನಿಯಂತ್ರಣದಲ್ಲಿ ಈ ಪದ್ದತಿಗಳು ಬೀರಬಲ್ಲ ಪ್ರಭಾವಗಳ ಬಗ್ಗೆ ನಡೆಸಿದ ೮೧೩ ಅಧ್ಯಯನಗಳ ಗುಣಮಟ್ಟ ಸರಿಯಿಲ್ಲ. ಧ್ಯಾನದ ಅಭ್ಯಾಸ ಯಾವುದು ಮತ್ತು ಹೇಗಿರುತ್ತದೆ ಎಂದು ನಿರ್ಧರಿಸಲು , ಧ್ಯಾನಕ್ಕೆ ಸಂಬಂಧಿಸಿದ ಮಾನಸಿಕ , ಬೌದ್ಧಿಕ ಸ್ಥಿತಿಗಳನ್ನು ಹೋಲಿಸಿನೋಡಲು ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಲು ಸಾಮಾನ್ಯವಾದ ಒಂದು ತಳಹದಿಯಾಗಲಿ, ಸಿದ್ಧಾಂತವಾಗಲಿ ಇಲ್ಲ. ಸ್ಪಷ್ಟತೆಯಿಲ್ಲದ , ಏನನ್ನು ಅಳೆಯುತ್ತವೆ ಎಂದು ತಿಳಿಯದ ಧ್ಯಾನದಂತಹ ಸಂಗತಿಗಳನ್ನು ಆಧರಿಸಿ ದೈಹಿಕ ಆರೋಗ್ಯ ಕುರಿತಾಗಿ ಏನನ್ನೂ ಹೇಳಲಾಗದು ಎನ್ನುವ ತೀರ್ಮಾನ ಹಾಗೂ ಧ್ಯಾನ ಕುರಿತಾಗಿ ಮುಂದೆ ನಡೆಸಬಹುದಾದ ಎಲ್ಲ ಅಧ್ಯಯನ, ಸಂಶೋಧನೆಗಳಿಗೆ ನಿರ್ದಿಷ್ಟ ವೈಜ್ಞಾನಿಕ ಕ್ರಮ ದಕ್ಕಿದ ಫಲಿತಾಂಶಗಳನ್ನು ಅರ್ಥೈಸಲು ಯಾವುದೇ ಬಗೆಯ ಒಲವುಗಳಿಗೆ ಒಳಗಾಗದ ಮಾರ್ಗ ಬೇಕೆನ್ನುವ ತೀರ್ಮಾನಕ್ಕೆ ಬಂದಿದೆ. ೨೦೧೩ ರಲ್ಲಿ ಯೋಗ , ಧ್ಯಾನ ಹಾಗೂ ಚಿಕಿತ್ಸೆ ಕುರಿತಾಗಿ ನಡೆಸಿರುವ ೨೬ ಸಂಶೋಧನೆಗಳನ್ನು ಒಳಪಡಿಸಿ ‘ಯೋಗ ಆಸ್ ಎ ಥೆರಪೆಟಿಕ್ ಇಂಟರ್’ವೆನ್ಷನ್ ಫಾರ್ ಅಡಲ್ಟ್ಸ್ ವಿಥ್ ಅಕ್ಯೂಟ್ ಅಂಡ್ ಕ್ರೋನಿಕ್ ಹೆಲ್ತ್ ಕಂಡೀಷನ್ಸ್’ ಲೇಖನ ಪ್ರಕಟವಾಗಿದೆ. ಇದರಲ್ಲಿ ಪೂರ್ಣ ವಿವರವಿರುವ ೪೧ ಸಂಶೋಧನೆಗಳು ,೨೬ ಕ್ರಮಬದ್ಧ ವಿಮರ್ಶೆಗಳು ಒಳಗೊಂಡಂತೆ ಇರುವ ೨೨೦೨ ಸಂಶೋಧನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ ೧೩ ಕ್ರಮಬದ್ದ ವಿಮರ್ಶೆಗಳಲ್ಲಿ ದತ್ತಾಂಶ ಮತ್ತು ಆರರಲ್ಲಿ ಮೆಟಾ-ವಿಶ್ಲೇಷಣೆ ಸೇರಿದ್ದು ೧೬ . ಬಗೆಯ ಆರೋಗ್ಯ/ವೈದ್ಯಕೀಯ ಸ್ಥಿತಿಗಳನ್ನು ಹೊಂದಿದ್ದವು. ಇವುಗಳಲ್ಲಿ ೧೧ ಕ್ರಮಬದ್ದ ವಿಮರ್ಶೆಗಳು ಯೋಗದಿಂದ ಗುಣಾತ್ಮಕ ಪರಿಣಾಮಗಳಾಗುತ್ತವೆ ಎಂದಿದ್ದರೆ , ೧೫ ಕ್ರಮಬದ್ದ ವಿಮರ್ಶೆಗಳು ಯೋಗದ ಪ್ರಭಾವ ಗುರುತಿಸಲು ಯಾವುದೇ ಸ್ಪಷ್ಟ ಫಲಿತಾಂಶಗಳಿಲ್ಲ ಎಂದಿದ್ದವು.ಆದರೆ ಯಾವ ವಿಮರ್ಶೆಯೂ ಯೋಗದಿಂದ ಕೆಡುಕು ಉಂಟಾಗಿದೆ ಎಂದು ಹೇಳಿರಲಿಲ್ಲ. ಯೋಗದಿಂದ ಖಿನ್ನತೆ, ನೋವು, ಉದ್ವೇಗದಲ್ಲಿ ಇಳಿಕೆ ಕಂಡುಬಂದರೂ ಇದಕ್ಕೆ ಸಮರ್ಥನೆ ಒದಗಿಸುವ ಪುರಾವೆಗಳು ಬಹಳ ಅಲ್ಪ ಮತ್ತು ದುರ್ಬಲ. ದತ್ತಾಂಶಗಳಲ್ಲಿ ಶಿಷ್ಟತೆ , ಏಕರೂಪತೆ ಇರದಿರುವುದು , ಫಲಿತಾಂಶ ನೀಡುವಲ್ಲಿ, ಅರ್ಥೈಸುವಲ್ಲಿರುವ ಅಸ್ಪಷ್ಟತೆಯಿಂದ ಯೋಗ ರೋಗ ಚಿಕಿತ್ಸೆಯಲ್ಲಿ ಉಪಯೋಗಕಾರಿ ಎಂದು ಸಾಮಾನ್ಯ ಹೇಳಿಕೆ ಕೊಡಲಾಗದು ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಯೋಗಾಸನಗಳು ಪಾಶ್ಚಾತ್ಯ ದೇಶಗಳಲ್ಲಿ ಒಂದು ಸಾಂಸ್ಕೃತಿಕ ಮಾರಾಟದ ಸರಕಾಗಿದೆ. ಎಲ್ಲ ಸರಕುಗಳಂತೆ ಅದನ್ನು ಕೂಡ ಉತ್ಪ್ರೇಕ್ಷಿಸಿ ಸಾದರಪಡಿಸಲಾಗುತ್ತಿದೆ. ಆದ್ದರಿಂದ ಅದಕ್ಕೆ ಮೊರೆ ಹೋಗುವ ಗ್ರಾಹಕರು ಮತ್ತು ಆ ಸರಕಿನ ಮೌಲ್ಯಮಾಪನ ಮಾಡಬೇಕಾದ ವೈದ್ಯರು ಇಬ್ಬರಲ್ಲಿಯೂ ಅದು ನಿಜವಾಗಿಯೂ ಏನು ಎನ್ನುವ ಗೊಂದಲಗಳಿವೆ. ಡ್ಯೂಕ್ ವಿಶ್ವವಿದ್ಯಾಲಯದ ಮೆಡಿಕಲ್ ಸೆಂಟರ್ ಫ್ರಾಂಟಿಯರ್ಸ್ ಇನ್ ಮೆಡಿಕಲ್ ಪ್ರಕಟಿಸಿರುವ ಲೇಖನ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ಯೋಗದ ಪಾತ್ರವನ್ನು ಗುರುತಿಸಲು ನಡೆಸಿದ ೧೦೦ಕ್ಕೂ ಅಧಿಕ ಅಧ್ಯಯನಗಳನ್ನು ಪಿ.ಮುರಳಿ ಮತ್ತು ದೊರೈಸ್ವಾಮಿ ಪರಿಗಣಿಸಿದ್ದಾರೆ. ಈ ಅಧ್ಯಯನಗಳಲ್ಲಿ ೧೬ ಮಾನಸಿಕ ಆರೋಗ್ಯ , ಖಿನ್ನತೆ, ಇರ್ಚಿತ್ತತೆ , ನಿದ್ರಾತೊಂದರೆ, ಆಹಾರದ ತೊಂದರೆಗಳ ಬಗ್ಗೆ ಕೇಂದ್ರಿಕರಿಸಿ ವಿಶ್ಲೇಷಣೆ ನಡೆಸಲಾಗಿದೆ. ಯೋಗಾಸನಗಳು ಮಾನಸಿಕ ತೊಂದರೆಗಳ ಚಿಕಿತ್ಸೆಯಲ್ಲಿ ನೆರವಾಗಬಲ್ಲವು , ಮೆದುಳಿನ ರಾಸಯನಿಕಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ , ಇತರ ಮನೋದೈಹಿಕ ವ್ಯಾಯಾಮಗಳಂತೆ ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ತೋರುತ್ತದೆ. ಆದರೆ ಆಹಾರದ ತೊಂದರೆ ನಿವಾರಣೆಯಲ್ಲಿ ಅದರ ಪ್ರಭಾವ ಏನೂ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಮಾನಸಿಕ ಆರೋಗ್ಯ ಚೇತರಿಕೆಯಲ್ಲಿ ಯೋಗಾಸನಗಳು ಫಲಕಾರಿ ಎಂದು ಕಂಡುಬರುತ್ತದೆ. ಕೋಟ್ಯಾಂತರ ಅಮೆರಿಕನ್ನರು ಯೋಗಾಸನ ಮಾಡಿತ್ತಾರೆ. ಅದರಂತೆ ಕೋಟ್ಯಂತರ ಜನ ಮಾನಸಿಕ ಚಿಕಿತ್ಸೆಯ ಅಂಗವಾಗಿ ಗುಳಿಗೆಗಳನ್ನು ನುಂಗುತ್ತಾರೆ. ಇಷ್ಟಿದ್ದರೂ ಯೋಗಾಸನ ನಿಜವಾಗಿಯೂ ಮಾನಸಿಕ ಆರೋಗ್ಯವನ್ನು ಸುಸ್ಥಿಯಲ್ಲಿ ಇಡಬಲ್ಲದು ಎಂದು ಖಚಿತವಾಗಿ ಸಾಧಿಸಲು ಬೇಕಾದಷ್ಟು ಅಧ್ಯಯನ , ಸಂಶೋಧನೆಗಳು ಜರುಗಿಲ್ಲ. ಇದರಿಂದ ಗುಳಿಗೆಗಳನ್ನು ತ್ಯಜಿಸಿ ಯೋಗಾಸನಗಳಿಗೆ ಮೊರೆ ಹೋಗಬೇಕು ಎಂದು ಹೇಳಲಾಗದು. ಮಾನಸಿಕವಾಗಿ ಹಗುರವಾಗಲು ಇತರ ವ್ಯಾಯಾಮಗಳಂತೆ ಯೋಗಾಸನವೂ ಸಹಾಯಕಾರಿ ಎನ್ನುತ್ತಾರೆ. ಕಳೆದ ೮೫ ವರ್ಷಗಳಲ್ಲಿ ‘ಯೋಗ ಚಿಕಿತ್ಸೆ’ ಕುರಿತಾಗಿ ೩೦೦೦ ಕ್ಕೂ ಅಧಿಕ ಸಂಶೋಧನೆಗಳಾಗಿವೆ . ಆದರೆ ಇವು ಯಾವುವೂ ನಿರ್ಧಾರವಾಗಿ ಯೋಗದ ಮೂಲಕ ನಡೆಸುವ ಇಂತಹ ಚಿಕಿತ್ಸೆ ಇಂತಹ ನಿರ್ದಿಷ್ಟ ಪರಿಣಾಮ ಬೀರುತ್ತದೆ ಎಂದು ತೋರಿಸಲು ಸಾಧ್ಯವಾಗಿಲ್ಲ. ಯೋಗಾಸನ ಮತ್ತು ದೈಹಿಕ ತೊಂದರೆಗಳು ಯೋಗ ಮತ್ತು ಯೋಗಾಸನಗಳನ್ನು ಅಧ್ಯಾತ್ಮಿಕ ಮತ್ತು ದೈವಿಕ ದೃಷ್ಟಿಯಲ್ಲಿ ನೋಡುವವರೆಗೆ ಅವು ಮಾನವ ಜನಾಂಗಕ್ಕೆ ಪ್ರಾಚೀನ ಋಷಿ , ಮುನಿಗಳಿಂದ ದಕ್ಕಿರುವ ಅನನ್ಯ ಮಾರ್ಗಗಳಾಗಿ ಕಾಣುತ್ತವೆ. ಯೋಗಾಸನ ಉಳಿದೆಲ್ಲ ವ್ಯಾಯಾಮಗಳಂತೆ ದೈಹಿಕ ಚಟುವಟಿಕೆ ಆಗಿರುವುದರಿಂದ ಅದರ ಅಭ್ಯಾಸದಲ್ಲೂ ತೊಂದರೆ ಮತ್ತು ಸಂಕಷ್ಟಗಳು ಎದುರಾಗುವುದು ಸಹಕ. ಅದೆಷ್ಟೋ ಭಾರತೀಯ ಮನಸ್ಸುಗಳಿಗೆ ಯೋಗಾಸನದದಿಂದ ತೊಂದರೆಗಳುಂಟಾಗಬಹುದು ಎನ್ನುವ ಕಲ್ಪನೆಯೇ ಮುಜುಗರ ತರಬಲ್ಲದು. ಯೋಗಾಸನಗಳಿಂದ ದೇಹಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆಯೆಂದು ಬಹು ಹಿಂದಿನಿಂದಲೂ ಹಲವಾರು ಜನ ತಿಳಿಸಿದ್ದರಾದರೂ ಯೋಗದ ಬಗ್ಗೆ ಕುರುಡು ಅಭಿಮಾನದಿಂದ ಅದರತ್ತ ಹೆಚ್ಚಿನ ಗಮನ ಹರಿದಿರಲಿಲ್ಲ. ೧೯೮೦ ರಲ್ಲಿಯೇ ಬಿ.ಕೆ.ಎಸ್ ಅಯ್ಯಂಗಾರ್ ಶಿಷ್ಯರೊಬ್ಬರು ‘ಅಟೆನ್ಷನ್ , ಲೆ ಯೋಗ ಪ್ಯುಟ್ ಎಟ್ರೆ ಡೇಂಜೆರೆಕ್ಸ್ ಪೌರ್ ವೊವುಸ್’ ( ಎಚ್ಚರ – ಯೋಗ ನಿಮಗೆ ಅಪಾಯಕಾರಿಯಾಗಬಹುದು) ಎನ್ನುವ ಪುಸ್ತಕ ಬರೆದಿದ್ದರು. ಅದನ್ನು ಪ್ಯಾರಿಸ್’ನ ಅಯ್ಯಂಗಾರ್ ಯೋಗ ಸಂಸ್ಥೆಯಿಂದ ಹಂಚಲಾಗಿದ್ದಿತು. ೨೦೦೬ ರಲ್ಲಿ ಪ್ರಾರಿಸ್’ನಲ್ಲಿದ್ದ ಜೀನ್-ಪೌಲ್ ಬೌಟೆಲೂಪ್ ‘ಯೋಗ ಸ್ಯಾನ್ಸ್ ಡೆಗಾಟ್ಸ್ ( ಧಕ್ಕೆಯಿಲ್ಲದೆ ಯೋಗ ) , ೨೦೧೧ರಲ್ಲಿ ಕೆವಿನ್ ಖಲಿಲಿ ಎನ್ನುವ ವೈದ್ಯ ‘ಎಕ್ಸ್-ಪೋಸ್ಡ್’ ಕೃತಿಯಲ್ಲಿ ಯೋಗಾಸನಗಳಿಂದಾಗಬಹುದಾದ ಶಾರೀರಿಕ ಧಕ್ಕೆಗಳ ಬಗ್ಗೆ ಎಚ್ಚರಿಸಿದ್ದರು. (೫೧೫) . ಯೋಗಾಸನಗಳು ಅಪಾಯಕಾರಿಯೆಂದು ಕೆಲವರು ವಾದಿಸಿದ್ದಾರೆ. ಆದರೆ ಈ ಅಪಾಯ ಇತರ ದೈಹಿಕ ಕಸರತ್ತುಗಳಿಗೆ ಇರುವುದಕ್ಕಿಂತ ಹೆಚ್ಚಿನದಲ್ಲ ಎಂದು ವಿಶ್ವಾಸದಿಂದ ಹೇಳಬಹುದು ಎನ್ನುವುದು ಕೆಲವು ತಜ್ಞರ ಅಭಿಮತ. ೨೦೧೦ ರಲ್ಲಿ ಯು.ಎಸ್. ಕನ್ಸ್ಯೂಮರ್ ಪ್ರಾಡಕ್ಟ್ ಸೇಫ್ಟಿ ಕಮಿಷನ್ ನಡೆಸಿದ ಒಂದು ಅಧ್ಯಯನ ಯೋಗಾಸನ ಅಭ್ಯಾಸಕ್ಕೆ ಸಂಬಂಧಿಸಿದ ೭೩೬೯ ದೈಹಿಕ ತೊಂದರೆಯ ಪ್ರಕರಣಗಳು ದಾಖಲಾಗಿರುವುದರತ್ತ ಗಮನ ಸೆಳೆದಿದೆ. ಯೋಗಾಸನದಿಂದ ಕೀಲು, ಸಂಧಿ, ಸೊಂಟ, ಕುತ್ತಿಗೆ , ಚಪ್ಪೆ, ಬೆನ್ನು , ಭುಜ, ಮೊಳಕೈ, ತೋಳು, ಮಣಿಕಟ್ಟು , ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. . ಕುತ್ತಿಗೆಯ ಮೂಲಕ ಮೆದುಳಿಗೆ ಹಲವಾರು ನರಗಳು ಸಾಗುತ್ತವೆ. ತಲೆ , ಕುತ್ತಿಗೆಯ ಮೇಲೆ ಅಗತ್ಯಕ್ಕಿಂತ ಹೆಚ್ಚಾಗಿ ಒತ್ತಡ ಹಾಕುವುದರಿಂದ ಕಣ್ಣು , ಕಿವಿ ಮತ್ತು ಕಿವಿಗಳ ಮೇಲೆ ಕೆಟ್ಟ ಪರಿಣಾಮಗಳಾಗಬಹುದು. ಕುತ್ತಿಗೆ , ಭುಜದ ಮೇಲೆ ದೇಹದ ಭಾರವನ್ನು ಹಾಕುವ ಎಲ್ಲ ಆಸನಗಳು ಅಪಾಯಕಾರಿ. ಶೀರ್ಷಾಸನ , ಭುಜದ ಮೇಲೆ ಭಾರ ಬೀಳಿಸುವ , ತಲೆಯ ಹಿಂದೆ ಎರಡೂ ಕೈ , ಕಾಲುಗಳನ್ನು ಇರಿಸುವ ಆಸನಗಳು, ಬಿಕ್ರಮ್ ಶೈಲಿ ಬಿರುಸಿನ , ಬಿಸಿಯ ವಾತವರಣ , ತೀವ್ರವಾದ ಪ್ರಾಣಾಯಾಮ ಅತ್ಯಂತ ಅಪಾಯಕಾರಿಯೆಂದು ಗುರುತಿಸಲಾಗಿದೆ. ಮಾನಸಿಕ ಕಾಯಿಲೆಗೆ ಔಷಧಿಗಳ ಮೂಲಕ ಚಿಕಿತ್ಸೆ ಪಡೆಯುವವರು ಯೋಗಾಸನ ಮಾಡಲೇಬಾರದು ಎನ್ನುತಾರೆ ಕ್ರಾಮರ್. (೫೧೮) ಬಹು ದೀರ್ಘಕಾಲ ವಜ್ರಾಸನದಲ್ಲಿ ಕುಳಿತ ಕೆಲವರಿಗೆ ನಡೆದಾಡಲು ,ಓಡಲು, ಮೆಟ್ಟಿಲುಗಳನ್ನು ಹತ್ತಲು ಆಗದಂತಾಗಿದೆ. ಈ ಆಸನ ಬೆನ್ನಿನ ಹುರಿಯಿಂದ ಇಳಿದು ಮೀನಖಂಡದ ಹಿಂಭಾಗಕ್ಕೆ ಸಾಗುವ ನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡಚಣೆಯಾಗಿ , ಅದರ ಸುತ್ತಲಿನ ಸಂವೇದಿ ನರಗಳು ಸತ್ತು ಇಂತಹ ಸ್ಥಿತಿ ಬರುತ್ತದೆ ಎಂದು ಗುರುತಿಸಲಾಗಿದೆ. ದೀರ್ಘ ಕಾಲದಿಂದ ಯೋಗಾಸನ ಮಾಡುತ್ತಿರುವ ಕೆಲವರಲ್ಲಿ ಕೀಲು ಸಂಧಿ ಸವೆತ , ಕುತ್ತಿಗೆ ತಟ್ಟೆ ಸವೆತ ಆಗುತ್ತಿದೆಯೆಂದು ಎರಡು ಅಧ್ಯಯನಗಳು ತೋರಿಸಿದರೆ ಇನ್ನು ಕೆಲವು ಅಧ್ಯಯನಗಳು ಇದಕ್ಕೆ ತದ್ವಿರುದ್ಧವಾದ ಫಲಿತಾಂಶ ನೀಡಿವೆ. ಆದ್ದರಿಂದ ಯೋಗಾಸನದ ದೀರ್ಘ ಪರಿಣಾಮಗಳ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲಾಗದು. ಹೋಲ್ಗರ್ ಕ್ರಾಮರ್ ಯೋಗಾಸನ ಇತರ ದೈಹಿಕ ವ್ಯಾಯಾಮಗಳಿಗಿಂತ ಭಿನ್ನವಲ್ಲ. ಯಾವ ವ್ಯಾಯಾಮವೂ ೧೦೦% ಸುರಕ್ಷಿತವಲ್ಲ. ಅದರಂತೆ ಮಾಡುವ ಆಸನ, ಮಾಡುವವರ ದೈಹಿಕ ಸ್ಥಿತಿಗಳನ್ನು ಅವಲಂಬಿಸಿ ಯೋಗಾಸನ ಸುರಕ್ಷಿತವೇ ಅಲ್ಲವೇ ಎಂದು ನೋಡಬೇಕು ಎನ್ನುತ್ತಾರೆ. ೨೦೧೩ ರಲ್ಲಿ ಹೋಲ್ಗರ್ ಕ್ರಾಮರ್ ’ರಿವ್ಯೂ ಆಫ್ ಕೇಸ್ ಸ್ಟಡೀಸ್’ ನಲ್ಲಿ ಯೋಗಾಸನದಿಂದಾಗುವ ಅಪರೂಪವಾದ ೭೬ ಅವಘಡದ ಸಂಗತಿಗಳನ್ನು ಗುರುತಿಸಿದ್ದಾರೆ. ಈ ಅವಘಡಗಳು ಬಹುತೇಕ ಅಸ್ತಿ-ಮಾಂಸ, ನರ ಅಥವಾ ದೃಷ್ಟಿಯ ಮೇಲೆ ಪರಿಣಾಮ ಬೀರಿವೆ ಎನ್ನುವ ಸಂಗತಿ ಬೆಳಕಿಗೆ ತಂದಿದ್ದಾರೆ. ಈ ತೊಂದರೆಗಳಿಗೆ ಒಳಗಾದವರಲ್ಲಿ ಅರ್ಧಕ್ಕಿಂತಲೂ ಅಧಿಕ ಜನ ಗುಣಮುಖರಾದರು. ಒಂದು ಪ್ರಕರಣ ಮಾತ್ರ ಸಾವಿನಲ್ಲಿ ಕೊನೆಗೊಂಡಿತು. ಎನ್ನುತ್ತಾರೆ. ಯೋಗಾಸನದಿಂದ ಉಳುಕು , ನೋವು , ಸಣ್ಣ, ಪುಟ್ಟ ಗಾಯಗಳಾಗಿವೆಯೇ ಹೊರತು ಗಂಭೀರವಾದ ಯಾವುದೇ ಪರಿಣಾಮ ಅಥವಾ ಸಾವುಗಳಾಗಿಲ್ಲ ಎನ್ನುವುದು ನಿಜ. ಆದರೆ ಇದಕ್ಕೆ ಕಾರಣ ದತ್ತಾಂಶದ ಕೊರತೆ, ವೈದ್ಯಕೀಯ ವಿಶ್ಲೇಷಣೆಗಳ ಕೊರತೆ ಇದೆ. ಯೋಗಾಸನದಿಂದ ದೇಹದ ಮೇಲಾಗುವ ಅಡ್ಡಪರಿಣಾಮಗಳು ವೈದ್ಯಕೀಯ ದಾಖಲೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವಾದಿಸುತ್ತಾರೆ ವಿಲಿಯಂ ಜೆ. ಬ್ರಾಡ್. ೨೦೧೨ ರಲ್ಲಿ ವಿಲಿಯಂ ಜೆ. ಬ್ರಾಡ್ ಬರೆದ ‘ದಿ ಸೈನ್ಸ್ ಆಫ್ ಯೋಗ - ದಿ ರಿಸ್ಕ್ಸ್ ಅಂಡ್ ದಿ ರಿಸಲ್ಟ್ಸ್ ’ ಪ್ರಕಟವಾಗಿ ಅದರ ಒಂದು ಭಾಗ ’ ಹೌ ಯೋಗ ಕ್ಯಾನ್ ರೆಕ್ ಯುವರ್ ಬಾಡಿ’ ಎನ್ನುವ ಲೇಖನ ಅಮೆರಿಕದ ಟೈಂ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಇದಾದ ನಂತರ ನೂರಾರು ಯೋಗಿಗಳು, ಯೋಗ ತರಬೇತಿದಾರರು, ಯೋಗ ಶಾಲೆಗಳು , ಯೋಗಾಭ್ಯಾಸಿಗಳು ಈ ಲೇಖನ ಸದುದ್ಧೇಶದಿಂದ ಕೂಡಿಲ್ಲ , ಉತ್ಪ್ರೇಕ್ಷಿಸಲ್ಪಟ್ಟ ಸಂಗತಿಗಳಿಂದ ತುಂಬಿದೆ ಎಂದು ಪ್ರತಿಭಟಿಸಿದರು. ಯೋಗದಿಂದ ಪಾರ್ಶ್ವವಾಯು ತಾಗಬಹುದು , ಮೆದುಳಿಗೆ ಧಕ್ಕೆಯಾಗಬಹುದು ಎನ್ನುವ ಹೇಳಿಕೆಗೆ ಅತ್ಯಂತ ತೀವ್ರವಾದ ಪ್ರತಿಭಟನೆ ಬಂದಿದ್ದಿತು. ಆದರೆ ಅದಕ್ಕಿಂತಲೂ ಹೆಚ್ಚಿನ ಜನ ಲೇಖಕನನ್ನು ಸಂಪರ್ಕಿಸಿ ಯೋಗಾಭ್ಯಾಸ ಮಾಡುವಾಗ ಕೀಲು, ಕೀಲುಸಂಧಿ, ಕುತ್ತಿಗೆ , ಬೆನ್ನುಹುರಿ, ಕುತ್ತಿಗೆ , ಭುಜ , ಮಂಡಿ ಮುಂತಾದ ಕಡೆಗಳಲ್ಲಿ ಹೇಗೆ ತಮಗೆ ತೀವ್ರ ಗಾಯಗಳಾಗಿವೆ ಎನ್ನುವುದರತ್ತಲೂ ಗಮನ ಸೆಳೆದರು. ಯೋಗಾಸನಗಳನ್ನು ಮಾಡುತ್ತಿದ್ದ , ಇತರರಿಗೆ ತರಬೇತಿಗೊಳಿಸುತ್ತಿದ್ದ ಹಲವಾರು ಜನರ ಅಕಾಲಿಕ ಸಾವಿನ ಬಗ್ಗೆ ಹೆಚ್ಚಿನ ತನಿಖೆಗಳು ನಡೆದಿಲ್ಲ. ಯೋಗಾಭ್ಯಾಸದ ತಗತಿಗಳಲ್ಲಿ ಅಭ್ಯಾಸದಲ್ಲಿದ್ದಾಗಲೆ ಕೆಲವರು ಸತ್ತಿದ್ದಾರೆ. ಅದಕ್ಕೆ ಕಾರಣಗಳು ಗೊತ್ತಿಲ್ಲ. ಅವರ ಸಾವು ಸಹಜವಾಗಿರಬಹುದು. ಹೌಸ್ಟನ್’ನಲ್ಲಿದ್ದ ಜೆಫ್ ಗುಡ್’ಮನ್ ಎನ್ನುವ ಯೋಗಾಭ್ಯಾಸಿ ರಕ್ತನಾಳದ ಗೋಡೆ ತೆಳ್ಳಗಾಗಿ , ಬಲೂನಿನಂತ್ ಊದಿ ಸಾವನ್ನು ಹೊಂದಿದ್ದನು. ಈ ಲಕ್ಷಣಗಳು ದಂಡ, ತೂಕ ಎತ್ತುವಿಕೆ ಮುಂತಾದ ಉಸಿರು ಬಿಗಿ ಹಿಡಿದು , ಹೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸುವ ಕ್ರಿಯೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಯೋಗಾಭ್ಯಾಸದಲ್ಲಿ ಇಂತಹ ಆಸನಗಳು ಹಲವಿವೆ. ಯೋಗಾಸನಕ್ಕೂ ಈ ಯೋಗಾಸನ ಪಟು ತೀರಿಕೊಂಡಿದ್ದಕ್ಕೂ ಯಾವುದಾದರೂ ಸಂಬಂಧ ಇದೆಯೋ ಇಲ್ಲವೋ ಗೊತ್ತಿಲ್ಲ. ಯೋಗಾಸನದಿಂದ ದೈಹಿಕ ತೊಂದರೆಗಳು ಉಂಟಾಗುವುದನ್ನು ಭಾರತದ ಹಲವು ವೈದ್ಯರು ಗುರುತಿಸಿದ್ದಾರೆ. ಧರ್ಮ , ನಂಬಿಕೆ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಇವುಗಳನ್ನು ಉಪೇಕ್ಷಿಸಲಾಗುತ್ತದೆ. ಒಂದು ದೊಡ್ದ ಆಸ್ಪತ್ರೆಯಲ್ಲಿರುವ ಮೂಳೆ-ಕೀಲು ತಜ್ಞರೊಬ್ಬರು ತಮ್ಮಲ್ಲಿಗೆ ಭುಜ, ಕುತ್ತಿಗೆ, ಬೆನ್ನು , ಮಂಡಿ ಮುಂತಾದ ಕೀಲು, ಸಂಧಿ ತೊಂದರೆಗಳನ್ನು ಹೊತ್ತುಕೊಂಡು ರೋಗಿಗಳು ಬರುತ್ತಾರೆ. ಅವರ ಹಿನ್ನೆಲೆಯನ್ನು ಪರಿಕ್ಷಿಸಿದಾಗ ಅವರು ತಮ್ಮ ಆಸ್ಪತೆಯಿಂದ ಎರಡು ಕಿ.ಮೀ ದೂರದ ಯೋಗ ತರಬೇತಿ ಕೇಂದ್ರದಲ್ಲಿ ಯೋಗಾಭ್ಯಾಸ ಮಾಡುತ್ತಿರುವುದು ತಿಳಿದುಬಂದಿದೆ . ವೈದ್ಯರ ಸಲಹೆಯಂತೆ ಬಾಧಿತರು ಕೆಲಕಾಲ ಯೋಗಾಸನದಿಂದ ದೂರ ಇರುತ್ತಾರೆ. ಆಗ ಅವರ ತೊಂದರೆಗಳು ಕಡಿಮೆಯಾಗುತ್ತವೆ. ಇದಾದ ನಂತರ ಮತ್ತೆ ಯೋಗಾಸನಗಳ ತರಬೇತಿಗೆ ಹೋಗುತ್ತಾರೆ. ಒಂದೆರಡು ತಿಂಗಳುಗಳ ನಂತರ ಅದೇ ತೊಂದರೆಗಳು ಮರುಕಳಿಸುತ್ತವೆ. ಆದ್ದರಿಂದ ವೈದ್ಯರು ಯೋಗಾಸನವನ್ನು ಬಿಟ್ಟು ಬೇರೆ ದೈಹಿಕ ಚಟುವಟಿಕೆಗಳನ್ನು ಅವರು ಅನುಸರಿಸಬೇಕೆಂದು ಸಲಹೆ ನೀಡುತ್ತಾರೆ. ಅವರಲ್ಲಿ ಯೋಗ / ಯೊಗಾಸನಗಳ ಬಗ್ಗೆ ಪವಿತ್ರ ಭಾವನೆ ಇಟ್ಟುಕೊಂಡಿರುವ ಬಹುತೇಕರು ಯೋಗಾಸನಗಳನ್ನು ಮಾಡುವುದೇ ತಮ್ಮ ತೊಂದರೆಗಳಿಗೆ ಮೂಲ ಎನ್ನುವುದನ್ನು ಒಪ್ಪುವುದೇ ಇಲ್ಲ ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡಿಗಳ ಜಾಲತಾಣಗಳನ್ನು ಸಂಪರ್ಕಿಸಿ- http://www.internationaljournalofcardiology.com/article/S0167-5273%2814%2900370-2/abstract http://www.ncbi.nlm.nih.gov/pubmed/24795403 http://www.biomedcentral.com/1471-2407/12/412/ http://onlinelibrary.wiley.com/doi/10.1002/da.22166/abstract https://www.researchgate.net/publication/255695344_YOGA_FOR_DEPRESSION_A_SYSTEMATIC_REVIEW_AND_META-ANALYSIS http://www.ncbi.nlm.nih.gov/pmc/articles/PMC2892348/ http://omicsonline.org/open-access/yoga-in-neuropsychiatry-2157-7595.1000e119.pdf http://www.currentpsychiatry.com/fileadmin/cp_archive/pdf/0910/0910CP_Article2.pdf http://journal.frontiersin.org/article/10.3389/fpsyt.2012.00117/full http://www.medscape.com/viewarticle/819191 http://clinical.diabetesjournals.org/content/28/4/147.full.pdf+html http://www.hindawi.com/journals/ecam/2012/124703/ http://www.hindawi.com/journals/ecam/2012/165410/ http://cpr.sagepub.com/content/early/2014/12/02/2047487314562741.full.pdf+html http://cpr.sagepub.com/content/early/2014/12/02/2047487314562741.full.pdf+html http://www.biomedcentral.com/content/pdf/1472-6882-14-328.pdf http://www.ncbi.nlm.nih.gov/pmc/articles/PMC4262105/ http://journal.frontiersin.org/article/10.3389/fpsyt.2014.00035/full http://www.hindawi.com/journals/ecam/2013/649836/ http://onlinelibrary.wiley.com/doi/10.1002/14651858.CD010072.pub2/pdf http://onlinelibrary.wiley.com/doi/10.1002/14651858.CD008250.pub2/pdf http://onlinelibrary.wiley.com/doi/10.1002/14651858.CD004998.pub2/pdf http://onlinelibrary.wiley.com/doi/10.1002/14651858.CD006507.pub2/pdf http://onlinelibrary.wiley.com/doi/10.1002/14651858.CD009506.pub3/pdf http://omicsonline.org/open-access/yoga-and-the-therapy-of-children-with-attention-deficit-hyperactivity-disorder-2157-7595.1000168.pdf http://www.ncbi.nlm.nih.gov/pubmed/22350253 http://downloads.hindawi.com/journals/ecam/2013/357108.pdf http://www.hindawi.com/journals/ecam/2011/659876/ http://gradworks.umi.com/1569658.pdf http://onlinelibrary.wiley.com/doi/10.1002/14651858.CD010146.pub2/pdf http://journals.lww.com/pedpt/Fulltext/2008/01910/Therapeutic_Effects_of_Yoga_for_Children__A.10.aspx http://www.ncbi.nlm.nih.gov/pmc/articles/PMC3903052/pdf/fnbeh-08-00017.pdf http://www.hindawi.com/journals/ecam/2013/945895/ http://neuro.psychiatryonline.org/doi/full/10.1176/appi.neuropsych.11040090 http://www.ncbi.nlm.nih.gov/pmc/articles/PMC3548360/ http://onlinelibrary.wiley.com/doi/10.1002/14651858.CD003219/pdf http://link.springer.com/article/10.1007/s10484-015-9291-z http://www.ncbi.nlm.nih.gov/pubmedhealth/PMH0033189/ http://www.japi.org/march2004/O-203.pdf http://www.hindawi.com/journals/ecam/2012/863905/ http://journals.plos.org/plosone/article?id=10.1371/journal.pone.0112414 http://www.gpscbc.ca/sites/default/files/A%20Systematic%20Review%20and%20Meta-analysis%20of%20Yoga%20for%20Low%20Back%20Pain.pdf http://www.ncbi.nlm.nih.gov/pubmed/24726198 http://www.plosone.org/article/Comments/info:doi/10.1371/journal.pone.0075515 http://www.jfponline.com/fileadmin/qhi/jfp/pdfs/6309/JFP_06309_ArticleW1.pdf http://journals.plos.org/plosone/article?id=10.1371/journal.pone.0076357 https://creativecommons.org/licenses/by/2.0/deed.en |
Comment Box is loading comments...