ಕೋವಿಡ್-19 : ಲಸಿಕೆ ತಲ್ಲಣ 8/6/2021 . ಎಡ್ವರ್ಡ್ ಜೆನ್ನರ್ 1796 ರಲ್ಲಿ ಮೊದಲ ಬಾರಿಗೆ ವೈಜ್ಞಾನಿಕ ವಿಧಾನದಲ್ಲಿ ಸಿಡುಬು ರೋಗಕ್ಕೆ ಲಸಿಕೆ ಮೂಲಕ ಚಿಕಿತ್ಸೆ ನೀಡುಬಹುದೆಂದು ತೋರಿಸಿದನು. ಇದಾದ ಎರಡು ವರ್ಷಗಳ ನಂತರ 1798 ರಲ್ಲಿ ಮೊದಲ ಸಿಡುಬು ಲಸಿಕೆ ತಯಾರಾಯಿತು. ಈ ಲಸಿಕೆಯನ್ನು ಸಾಮೂಹಿಕವಾಗಿ ನೀಡತೊಡಗಿದರ ಪರಿಣಾಮವಾಗಿ 1979ರಲ್ಲಿ ಸಿಡುಬು ಸೋಂಕು ಮಾನವ ಜಗತ್ತಿನಿಂದ ಮರೆಯಾಯಿತು. ದುರ್ಬಲಗೊಳಿಸಿದ ನಿರ್ದಿಷ್ಟ ವೈರಸ್ ದೇಹಕ್ಕೆ ಕೊಟ್ಟಾಗ ಅದಕ್ಕೆ ವಿರುದ್ಧವಾಗಿ ಹೋರಾಡಲು ದೇಹದ ರಕ್ಷಣಾ ವ್ಯವಸ್ಥೆ ಕಲಿತಿರುತ್ತದೆ. ಹಾಗಾಗಿ ಪ್ರಬಲವಾದ ಅದೇ ವೈರಸ್’ ದಾಳಿಮಾಡಿದಾಗ ಹಿಂದೆ ಕಲಿತಿದ್ದ ರಕ್ಷಣೆಯ ಆಧಾರದ ಮೇಲೆ ಹೋರಾಡಿ ಅಪಾಯದಿಂದ ಪಾರುಮಾಡುತ್ತದೆ ಎಂದು ತಿಳಿದು ಬಂದಿತು. ಈ ತಿಳಿವಳಿಕೆಯ ಆಧಾರದ ಮೇಲೆ ನಡೆದ ವೈದ್ಯಕೀಯ ಸಂಶೋಧನೆಗಳ ನೆರವಿನಿಂದ ಮಾನವನನ್ನು ಭಾರಿ ಸಂಖ್ಯೆಯಲ್ಲಿ ಸಾವಿರಾರು ವರ್ಷಗಳಿಂದ ಕಾಡಿಸಿದ್ದ ಪ್ಲೇಗ್ , ಡಿಫ್ತೀರಿಯಾ, ಪೋಲಿಯೋ ಮುಂತಾದ ರೋಗಗಳನ್ನು ಲಸಿಕೆ ನೀಡುವ ಮೂಲಕ ದೂರವಿರಿಸಲಾಯಿತು ಕೋವಿಡ್-19 ವಿರುದ್ಧ ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ರಕ್ಷಾಕವಚ ಇನ್ನೊಂದಿಲ್ಲ ಎಂದು ವಿಜ್ಞಾನಿಗಳು ಮಾತ್ರವಲ್ಲ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳನ್ನು ಹೇಗೆ ಹತೋಟಿಗೆ ತರಲಾಯಿತು ಎಂದು ಬಲ್ಲ ಪ್ರತಿಯೊಬ್ಬರಿಗೂ ತಿಳಿದಿದ್ದಿತು. ಇದಕ್ಕೆ ಭಾರತವೂ ಹೊರತಲ್ಲ. ಭಾರತಕ್ಕೆ ಇತರ ಅಭಿವೃದ್ಧಿಶೀಲ ದೇಶಗಳಿಗಿಂತ ಭಿನ್ನವಾಗಿ ತಾನಾಗಿಯೇ ಲಸಿಕೆ ಉತ್ಪಾದನೆಯು ಮಾಡುವ ಸಾಮರ್ಥ್ಯವಿದೆ ಹಾಗೂ ಜಗತ್ತಿನಾದ್ಯಂತ ಬಳಸಲ್ಪಡುವ ಸಾಂಕ್ರಾಮಿಕ ರೋಗಗಳ ಲಸಿಕೆ ಉತ್ಪಾದನೆಯಲ್ಲಿ ಭಾರತ ಇತರರಿಗಿಂತ ಮುಂದಿದ್ದು ಹೊಸ ಬಗೆಯ ಲಸಿಕೆಗಳ ಉತ್ಪಾದನೆ ಮತ್ತು ಮನುಷ್ಯರ ಮೇಲೆ ಆರಂಭಿಕ ಪರೀಕ್ಷೆಗಳನ್ನು ಮಾಡಲು ಭಾರತದ ಬಳಿ ಎಲ್ಲ ಬಗೆಯ ಮೂಲ ಸೌಕರ್ಯಗಳಿವೆ.. ಇದನ್ನು ತಿಳಿದಿದ್ದ ಕೇಂದ್ರ ಸರ್ಕಾರ ಆಗಸ್ಟ್ 2020 ರ ಹೊತ್ತಿಗೆ- ಮೊದಲ ಅಲೆ ತುದಿಮುಟ್ಟುವ ಮೊದಲು-ಸಮಗ್ರ ಲಸಿಕೆ ನೀತಿಯನ್ನು ರೂಪಿಸಲು ಲಸಿಕೆ ಕಾರ್ಯಕ್ರಮ-ರಾಷ್ಟ್ರೀಯ ತಜ್ಞರ ಗುಂಪನ್ನು (ಎನ್ಇಜಿವಿಎಸಿ- National Expert Group on Vaccine Administration -NEGVAC) ನೀತಿ ಆಯೋಗದ ಸದಸ್ಯ ವಿ,ಕೆ ಪೌಲ್ ಮುಂದಾಳತ್ವದಲ್ಲಿ 7 ಆಗಸ್ಟ್ 2020 ರಂದು ಸ್ಥಾಪಿಸಿತು..ಈ ಗುಂಪು 12 ಆಗ್ಸ್ಟ್ 2020 ರಂದು ಮೊದಲ ಸಭೆ ನಡೆಸಿತು. [1] ಆಗಸ್ಟ್ 17 ರಂದು ಈ ಗುಂಪು ಸೆರಮ್ ಇನ್’ಸ್ಟಿಟ್ಯೂಟ್ ಆಫ್ ಇಂಡಿಯಾ , ಭಾರತ ಬಯೋಟೆಕ್ , ಝೈಡಸ್ ಕ್ಯಾಡಿಲ , ಝೆನ್ನೊವ ಬಯೋಫಾರ್ಮಾಸ್ಯೂಟಿಕಲ್ಸ್ , ಬಯೋಲಜಿಕಲ್-ಇ ಸಂಸ್ಥೆಯ ಪರಿಣಿತ ಪ್ರತಿನಿಧಿಗಳೊಂದಿಗೆ ಲಸಿಕೆ ಸಂಶೋಧನೆ , ಉತ್ಪಾದನೆ ಕುರಿತಾಗಿ ಚರ್ಚಿಸಿತು. [2] ಡಿಸೆಂಬರ್-2020 ರಲ್ಲಿ ಲಸಿಕೆ ಕಾರ್ಯಕ್ರಮ-ರಾಷ್ಟ್ರೀಯ ತಜ್ಞರ ಗುಂಪು ಕುರಿತಾಗಿ ಮಾಹಿತಿ ಹಕ್ಕು ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಉತ್ತರಿಸುತ್ತ ಕೇಂದ್ರ ಆರೋಗ್ಯ ಸಚಿವಾಲಯದಡಿಯಲ್ಲಿ ಬರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇದಕ್ಕೆ ಸಂಬಂಧಿಸಿದ ದಾಖಲೆಗಳು ಎಲ್ಲಿವೆ ಎಂದು ತನಗೆ ಗೊತ್ತಿಲ್ಲ ಎಂದು ಉತ್ತರಿಸಿತು. ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿ ಈ ಮಾಹಿತಿ ಹಕ್ಕು ನಿಯಮಕ್ಕೆ ಒಳಗಾಗುವುದಿಲ್ಲ ಎಂದು ಉತ್ತರಿಸಿದ್ದರು. [3]
ಲಸಿಕೆ ನೀಡುವ ರಾಷ್ಟ್ರೀಯ ಸಾಮರ್ಥ್ಯವನ್ನು ನಿರ್ಧರಿಸುವಲ್ಲಿ ನೆರವು ನೀಡವಂತೆ ಈ ಸಂಸ್ಥೆ ಎಫ್ಐಸಿಸಿಐ (ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಫೆಡರೇಶನ್- FICCI) ಆಹ್ವಾನ ನೀಡಿತು. ಇವೈ ಎನ್ನುವ ಇನ್ನೊಂದು ಸಲಹೆಗಾರ ಸಂಸ್ಥೆಯ ನೆರವು ಪಡೆದು ಎಫ್ಐಸಿಸಿಐ ಲಸಿಕೆ ಸಾಮರ್ಥ್ಯದ ವರದಿಯೊಂದನ್ನು ಸಿದ್ಧಪಡಿಸಿ ಆಗಸ್ಟ್ 2021 ರ ವೇಳೆಗೆ ಆದ್ಯತೆಯ ಗುಂಪುಗಳಲ್ಲಿ (ಸುಮಾರು 30 ಕೋಟಿ) ಜನರಿಗೆ ಲಸಿಕೆ ಪೂರೈಸುವ ಮತ್ತು ಹಾಕುವ ಕೆಲಸಕ್ಕೆ 130,000-140,000 ಲಸಿಕೆ ಕೇಂದ್ರಗಳು, 100,000 ಆರೋಗ್ಯ ವೃತ್ತಿಪರರು ಮತ್ತು 200,000 ಬೆಂಬಲ ಸಿಬ್ಬಂದಿಗಳು ಬೇಕಾಗಬಹುದು. 2022 ರ ಕೊನೆಯ ವೇಳೆಗೆ ದೇಶದ ಎಲ್ಲ ವಯಸ್ಕ ಜನಸಂಖ್ಯೆಗೆ (ಸುಮಾರು 80 ಕೊಟಿ). ಲಸಿಕೆ ನೀಡುವ ಕೇಂದ್ರಗಳಾಗಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದ ಶೇಕಡಾ 60 ರಷ್ಟು ಅಗತ್ಯವಿರುತ್ತದೆ ಮತ್ತು ಸಾರ್ವಜನಿಕ ವಲಯವು ಇದರಲ್ಲಿ 60-70ರಷ್ಟು ಮಾತ್ರ ಪೂರೈಸಲು ಸಾಧ್ಯವಾಗುತ್ತದೆ ಹಾಗೂ ಅಗತ್ಯ ಸಂಪನ್ಮೂಲ ಸೇರಿಸಿಕೊಳ್ಳಲು ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ ಎಂದು ಅಂದಾಜು ಮಾಡಿದ ಕಾರ್ಯಸಾದ್ಯತೆ ವರದಿಯನ್ನು ಡಿಸೆಂಬಎರ್ 2020 ರ ಮೊದಲ ವಾರದಲ್ಲಿ ನೀಡಿತು. [4] ಇದಾದ ಕೆಲದಿನಗಳಲ್ಲಿಯೇ ಈ ವರದಿಯ ಶಿಫಾರಸ್ಸುಗಳು ಮೂಲೆಗೆ ತಳ್ಳಲ್ಪಟ್ಟವು. ಇದಾದ ನಂತರ ನ್ಯಾಷನಲ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕೋವಿಡ್-19 ಲಸಿಕೆ ಕಂಡುಹಿಡಿದು ತಯಾರಿಸಲು ಭಾರತ್ ಬಯೋಟೆಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದಲ್ಲದೆ ಇನ್ನೊಂದು ಭಾರತೀಯ ಕಂಪೆನಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ವಿದೇಶಿ ಮೂಲದ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡಿತು. [5] ಕೋವಿಡ್-19 ತಡೆಗಟ್ಟಲು ಹೇರಿದ್ದ ಮೊದಲ ಲಾಕ್ ಡೌನ್ ಮುಗಿದ ನಂತರ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನಗಳು ಭಾರತದಲ್ಲಿ ಸಾಗಿದ್ದವು. ಸಾಮಾನ್ಯವಾಗಿ ಯಾವುದೇ ಒಂದು ವೈಜ್ಞಾನಿಕ ಸಂಶೋಧನೆ ಅಥವಾ ಲಸಿಕೆ ತಯಾರಿಕೆಗೆ ಅವುಗಳದೇ ಆದ ಎಡರು-ತೊಡರುಗಳು ಮತ್ತು ಕಾಲಾವಧಿ ಇರುತ್ತದೆ. ಇದನ್ನು ತಿಳಿದಿದ್ದ ತಜ್ಞರು ಇನ್ನೂ ಮುಂದಿನ ಆರು ತಿಂಗಳುಗಳವೆರೆಗೆ ಸಂಶೋಧನೆ ಮತ್ತು ಲಸಿಕೆ ಅಭಿವೃದ್ಧಿ ಮತ್ತು ಮನುಷ್ಯರ ಮೇಲೆ ಸಮರ್ಪಕ ಪ್ರಯೋಗಗಳು ಕಾರ್ಯ ಸಾದ್ಯವಾಗವು ಎಂದು ಹೇಳಿದ್ದರು. ಇದೇ ಸಮಯದಲ್ಲಿ ಕೋವ್ಯಾಕ್ಸಿನ್ ಲಸಿಕೆಗಾಗಿ ಸಂಶೋಧನೆ ಮತ್ತು ಪ್ರಯೋಗಗಳನ್ನು ಮಾಡುತ್ತಿದ್ದ 12 ಸಂಸ್ಥೆಗಳಿಗೆ ಹಾಗೂ ಲಸಿಕೆ ಉತ್ಪಾದಕ ಕಂಪೆನಿ ಭಾರತ್ ಬಯೋಟೆಕ್’ಗೆ 2 ಜುಲೈ 2020 ರಂದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ನಿದೇಶಕ ಬಲರಾಮ್ ಭಾರ್ಗವ ಬರೆದ ಪತ್ರದ ಮೂಲಕ ಇನ್ನು ಮುಂದಿನ ಹದಿನೈದು ದಿನಗಳ ಒಳಗಾಗಿ , ಮಾನವರ ಮೇಲೆ ಪ್ರಯೋಗ ಸೇರಿದಂತೆ ಲಸಿಕೆಯ ಎಲ್ಲ ಕೆಲಸಗಳನ್ನು ಚುರುಕುಗೊಳಿಸಬೇಕು ಆಗಸ್ಟ್ 15 ರ ಒಳಗೆ ಲಸಿಕೆ ಜನ ಬಳಕೆಗೆ ಸಿದ್ಧವಿರಬೇಕು ಎಂದು ತಿಳಿಸಿರುವುದು ಪತ್ರಿಕೆಗಳ ಮೂಲಕ ಸೋರಿಕೆಯಾಯಿತು.. You have been chosen as a clinical trial site of the BBV152 COVID Vaccine. In view of the public health emergency due to COVID-19 pandemic and urgency, to launch the vaccine, you are strictly advised to fast track all approvals related to the initiation of the clinical trial and ensure that the subject enrollment is initiated no later than 7, July 2020 [6] ವೈಜ್ಞಾನಿಕ ಸಂಶೋಧನೆಯನ್ನು ಹೀಗೆ ದಿನಾಂಕ ಗೊತ್ತು ಪಡಿಸಿ ಮುಗಿಸಲಾಗದು ಎಂದು ಪರಿಣತರು ಹೇಳಿದರೆ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ ಸಂಪಾದಕ ವಿಜ್ಞಾನದ ಹಾದಿ ಇದಲ್ಲ. ಜಗತ್ತಿನಲ್ಲಿ ಲಸಿಕೆ ಬಿಡುಗಡೆಗೆ ಎಂದಿಗೂ ಯಾರೂ ದಿನಾಂಕ ನಿಗದಿಪಡಿಸಿಲ್ಲ’ ಎಂದು ಎಚ್ಚರಿಸಿದರು. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ನೈತಿಕ ಸಮಿತಿಯ ಸದಸ್ಯೆಯೊಬ್ಬರು ಇಂತಹ ಪ್ರಯೋಗಗಳಿಗೆ ಒಂದು ವರ್ಷವಾದರೂ ಬೇಕಾಗಬಹುದು ಎಂದರೆ , ಪ್ರಯೋಗಗಳಿಗಾಗಿ ದೇಶಾದ್ಯಂತ ಗುರುತಿಸಿದ್ದ 12 ಕೇಂದ್ರಗಳಲ್ಲಿಯೂ ಲಸಿಕೆಯನ್ನು ವೈಜ್ಞಾನಿಕವಾಗಿ ಹೊರತರಬೇಕೇ ಹೊರತು ಯಾರನ್ನೋ ಮೆಚ್ಚಿಸಲು ನಿರ್ದಿಷ್ಟ ದಿನಾಂಕದ ಒಳಗೆ ಅಲ್ಲ ಎನ್ನುವ ನಿಲುವು ತಾಳಿದರು. [7] ತನ್ನ ಮೇಲಿನ ಟೀಕೆಗಳಿಂದ ತಪ್ಪಿಸಿಕೊಳ್ಳಲು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ಇದರಲ್ಲಿ ತನ್ನದೇನೂ ತಪ್ಪಿಲ್ಲ ಎಂದು ಅಮಾಯಕತೆಯನ್ನು ತೋರಿಸಿತಾದರೂ ಆಗಸ್ಟ್ 20 ದಿನಾಂಕ ಏಕೆ ಸೂಚಿತವಾಯಿತು ಎಂದು ತಿಳಿಸಲಿಲ್ಲ. [8] 15, ಆಗಸ್ಟ್ 2020 ರಂದು ಸ್ವಾತ್ರಂತ್ರ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆಯಿಂದ ಮಾಡುವ ಭಾಷಣದಲ್ಲಿ ಭಾರತ ಕೋವಿಡ್-19 ಲಸಿಕೆಯನ್ನು ಕಂಡು ಹಿಡಿದಿರುವಂತೆ ಘೋಷಿಸಲು ಅನುಕೂಲ ಮಾಡಿಕೊಡುವುದು ಮತ್ತು ಲಸಿಕೆಯ ಮೂಲಕ ದೇಶವನ್ನು ರಕ್ಷಿಸುವ ಕೀರ್ತಿಯ ಮೂಲಕ ರಾಜಕೀಯ ಫಸಲು ತೆಗೆಯಲು ನೆರವಾಗುವ ಉದ್ದೇಶವೂ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ಉದ್ದೇಶವಾಗಿದ್ದಿತು ಎನ್ನುವುದು ಸುಲಭವಾಗಿ ಗೊತ್ತಾಗುತ್ತಿದ್ದಿತು. ಭಾರತದ ಉನ್ನತ ಸಂಸ್ಥೆಯೊಂದು ಇಂತಹ ಪ್ರಯತ್ನ ಮಾಡುತ್ತಿರುವುದಕ್ಕೆ ವಿಜ್ಞಾನಿಗಳು , ವೈದ್ಯರು ಹುಬ್ಬೇರಿಸಿದರು. ಬಿಹಾರ್ ಚುನಾವಣೆ ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ವಾಗ್ದಾನವನ್ನು ಭಾಜಪ ಸೇರಿಸಿತು. [9] ಭಾರತದ ರಾಷ್ಟ್ರೀಯ ಸಂಸ್ಥೆಯ ಸಾಧನೆಗಳನ್ನು ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತ ಘೋಷಣೆಯೊಂದಿಗೆ ತಳುಕು ಹಾಕಿ ಭಾಜಪ ಕೋವಿಡ್-19 ಲಸಿಕೆಯ ಮೂಲಕ ರಾಜಕಾರಣ ಮಾಡಲು ಹೊರಟಿದೆ , ಸ್ವಾತಂತ್ರ ದಿನದಂದು ಪ್ರಧಾನಿ ಲಸಿಕೆ ಘೋಷಣೆ ಮಾಡಿ ಜನ ಮನ ಗೆಲ್ಲುವಂತೆ ಮಾಡಲು ದೇಶದ ಸಂಸ್ಥೆಗ:ಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿತ್ತಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ಹೊರಹಾಕಿ ಹಲವು ಪ್ರಶ್ನೆಗಳನ್ನು ಹಾಕಿದವು. ಭಾರತ್ ಬಯೋಟೆಕ್’ಗೆ ನವೆಂಬರ್ ಕೊನೆಯ ವಾರದ ವೇಳೆಗೆ ಮೂರನೇ ಹಂತದ ಪ್ರಯೋಗಗಳನ್ನು ನಡೆಸಲು ಅನುಮತಿ ಕೊಡಲಾಯಿತು. ಡಿಸೆಂಬರ್ ಮಧ್ಯದವರೆಗೂ ಲಸಿಕೆಗೆ ತಮ್ಮನ್ನು ಒಡ್ಡಿಕೊಳ್ಳುವ ಸ್ವಯಂಸೇವಕರ ಕೊರತೆಯನ್ನು ಅದು ಎದುರಿಸುತ್ತಿದ್ದಿತು. 2020 ಡಿಸೆಂಬರ್ ಕೊನೆಗೆ ಲಸಿಕೆ ಅಭಿವೃದ್ಧಿ ಹಾಗೂ ಮಾನವನ ಮೇಲಿನ ಪ್ರಯೋಗಗಳು ಒಂದು ಹಂತಕ್ಕೆ ಬಂದಿದ್ದವು.. ಆದರೆ ಕೇಂದ್ರ ಸರ್ಕಾರ ಏನೋ ಕೈಚಳಕ ನಡೆಸುತ್ತಿದೆ ಎಂದು ಭಾವಿಸಿದ್ದ ಕೆಲವರು – ರಾಜಕಾರಣಿಗಳು, ಸಾರ್ವಜನಿಕರು- ಲಸಿಕೆಯ ಸಾಮರ್ಥ್ಯ ಮತ್ತು ಪರಿಣಾಮಗಳನ್ನು ಮತ್ತೊಮ್ಮೆ ಪ್ರಶ್ನಿಸಿದರು.. ಲಸಿಕೆ ಕುರಿತಾಗಿ ಮೇಲಿಂದ ಮೇಲೆ ಎರಗುತ್ತಿದ್ದ ಪ್ರಶ್ನೆ, ಆರೋಪಗಳಿಂದ ಸಿಟ್ಟಿಗೆದ್ದ ಆರೋಗ್ಯ ಸಚಿವ ಹರ್ಷವರ್ಧನ್ 5, ಜನವರಿ 2021 ರಂದು ಲಸಿಕೆಯಂತಹ ವಿಷಯವನ್ನೂ ರಾಜಕೀಯಗೊಳಿಸುವ ನಾಚಿಕೆಗೇಡಿನ ನಡವಳಿಕೆಯನ್ನು ಖಂಡಿಸಿದರು. ಐಸಿಎಂಆರ್ ಮತ್ತು ಸರ್ಕಾರದ ನಡವಳಿಕೆಗಳಿಂದಲೇ ಜನರಲ್ಲಿ ಇಂತಹ ಗುಮಾನಿ ಬಂದಿದೆ ಎನ್ನುವುದನ್ನು ಸಚಿವರು ಅರಿಯಲಿಲ್ಲ. ಇದರ ಬದಲು ಲಸಿಕೆ ಪಡೆದ ಎಲ್ಲರ ಮೇಲೂ ನಿಗಾ ಇಡಲಾಗುವುದು ಎನ್ನುವ ಸಮಜಾಯಿಷಿ ಕೊಟ್ಟರು. ಇದಕ್ಕೆ ಸ್ವಲ್ಪವೂ ಹೊಂದಾಣಿಕೆಯಾಗದಂತೆ ಭಾರತ ಬಯೋಟೆಕ್ ಸ್ಥಾಪಕ ಡಾ. ಕೃಷ್ಣ ಎಲ್ಲ , ಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಲಸಿಕೆ ಪ್ರಯೋಗ ಹಾಗೂ ಸಾರ್ವತ್ರಿಕ ನೀಡಿಕೆ ಎರಡೂ ಒಂದೇ ಹಂತದಲ್ಲಿ ಹೇಗೆ ಇರಬಲ್ಲದು ಎನ್ನುವುದು ನನಗೆ ತಿಳಿಯದು ಎಂದು ಉತ್ತರಿಸಿದರು. ಕೋವಿಷೀಲ್ಡ್ ಲಸಿಕೆಯನ್ನು ಯುನೈಟೆಡ್ ಕಿಂಗ್’ಡಂನಲ್ಲಿ ಮೂರನೇ ಹಂತದ ಪ್ರಯೋಗ ಮಾಡಿ ಶಿಫಾರಸ್ಸು ಮಾಡಿದ್ದರಿಂದ ಅದರ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಲಿಲ್ಲ. ಕೇಂದ್ರ ಸರ್ಕಾರ ‘ಆತ್ಮ ನಿರ್ಭರ’ಘೋಷಣೆಯ ಅಡಿಯಲ್ಲಿ ಕೋವ್ಯಾಕ್ಸಿನ್ ಗೆ ಅನುಮತಿ ನೀಡುವುದು ಚರ್ಚೆಯ ಮುಖ್ಯ ಅಂಶವಾಗಿದ್ದಿತು. ಇವೆಲ್ಲ ಆಕ್ಷೇಪಗಳಿಗೆ ವೈಜ್ಞಾನಿಕ ವಿಧಾನಗಳ ಮೂಲಕ ಸಮಾಧಾನ ಪಡಿಸುವ ಬದಲು ರಾಜಕೀಯ ಬಲ , ಮಾಧ್ಯಮ ಬೆಂಬಲದಿಂದ ಒಪ್ಪಿಸಲು ಸರ್ಕಾರ ಮುಂದಾದುದರಿಂದ ಅಖಿಲೇಶ್ ಯಾದವ್ ಅಂತಹವರು ಇದನ್ನು ‘ಕೋವ್ಯಾಕ್ಸಿನ್ ಭಾಜಪ ಲಸಿಕೆ’ ಎಂದು ಲೇವಡಿ ಮಾಡಿದರು. [10] ಇವೆಲ್ಲವನ್ನು ಗಮನಿಸುತ್ತಿದ್ದ ಸಾರ್ವಜನಿಕರು ಆ ಲಸಿಕೆಯ ಪರಿಣಾಮ ಮತ್ತು ಸಾಮರ್ಥ್ಯದ ಬಗ್ಗೆ ಶಂಕೆ ತಾಳಿದ್ದರು. ಆರಂಭದಲ್ಲಿ ಜನ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಲು ಇದೂ ಒಂದು ಕಾರಣವಾಗಿದ್ದಿತು. ಭಾರತ್ ಬಯೋಟೆಕ್ ಇಂಡಿಯಾ ಲಿ., ಮೊದಲ ಹಂತದ ಲಸಿಕೆ ಅಭಿಯಾನ ಮೊದಲಾಗುವ ಐದು ದಿನ ಹಿಂದೆ ಎಂದರೆ 11 ಜನವರಿ 2021 ರಂದು Restricted Use of COVAXINTM Under Clinical Trial Mode ಎನ್ನುವ ದಾಖಲೆ ಬಿಡುಗಡೆಮಾಡಿದೆ. ಇದರಲ್ಲಿ ಲಸಿಕೆ ಕುರಿತಾಗಿ ಲಸಿಕೆ ಪಡೆಯುವವರಿಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ಒದಗಿಸಿ , ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಿದ ನಂತರ ಅವರಿಂದ ಒಪ್ಪಿಗೆ ಪತ್ರ ಪಡೆದು ನಂತರ ಲಸಿಕೆ ಹಾಕಲಾಗುವುದು ಎಂದು ತಿಳಿಸಿದೆ. ಅನುಬಂಧ-2 ರಲ್ಲಿ ಈ ಒಪ್ಪಿಗೆ ಪತ್ರದ ನಮೂನೆ ಇದೆ. ಲಸಿಕೆ ಕೇಂದ್ರಗಳ ಮೂಲಕ ದಕ್ಕುತ್ತಿದ್ದ ಇದನ್ನು ಓದಿದ್ದ ವಿದ್ಯಾವಂತರಲ್ಲಿಯೂ ಈ ಲಸಿಕೆಯ ಬಗ್ಗೆ ಹಲವು ಸಂಶಯಗಳು ಉಳಿದಿದ್ದವು. [41] ತಪ್ಪು ಹೆಜ್ಜೆಗಳು ಯುನಿಸೆಫ್ ಖರೀದಿಸುವ ಮಕ್ಕಳ ರೋಗ ತಡೆಗಟ್ಟಲು ಬಡದೇಶಗಳಲ್ಲಿ ಬಳಸುವ ಲಸಿಕೆಗಳಲ್ಲಿ 60% ಭಾರತದಿಂದ ಸರಬರಾಜಾಗುತ್ತವೆ ಎನ್ನುವ ಅಂಕಿ-ಅಂಶ ನಾನಾ ರೂಪ ತಳೆದು ಜಗತ್ತಿಗೆ ಅಗತ್ಯವಾದ ಕೋವಿಡ್-19 ಲಸಿಕೆಯಲ್ಲಿ ಭಾರತದ ಕೊಡುಗೆ ಇಷ್ಟೇ ಪ್ರಮಾಣದಲ್ಲಿರುತ್ತದೆ ಎನ್ನುವ ತಪ್ಪು ಮಾಹಿತಿ ಸಾರ್ವಜನಿವಾಗಿ ಹರಿದಾಡುತ್ತಿದ್ದಿತು. ಆದರೆ ವಾಸ್ತವದಲ್ಲಿ 22 ಏಪ್ರಿಲ್ 2021 ರಂದು ಜಗತ್ತಿನಲ್ಲಿ ತಯಾರದ ಒಟ್ಟು 92.9 ಕೋಟಿ ಡೋಸ್ ಲಸಿಕೆಗಳಲ್ಲಿ ಭಾರತದ ಕೊಡುಗೆ 19.3 ಕೋಟಿ ಮಾತ್ರವಿದ್ದಿತು. (21%). [11] ಯಾವುದೇ ಲಸಿಕೆ ತಯಾರಿಕೆಯು ಬಹಳ ಸಂಕೀರ್ಣ ಮತ್ತು ತಾಂತ್ರಿಕ ಪ್ರಕ್ರಿಯೆಯಾಗಿದ್ದರೂ, ಉತ್ಪಾದನೆಯ ಸಾಮರ್ಥ್ಯವನ್ನು ಸುಲಭವಾಗಿ ತಿಳಿಯಬಹುದು . ಬೇಡಿಕೆ-ಪೂರೈಕೆ ಯೋಜನೆಗಳನ್ನು ಸರಿಯಾಗಿ ತಿಳಿಯುವುದು ಯಾವುದೇ ಪೂರೈಕೆ ಸರಪಳಿಯನ್ನು ನಿರ್ವಹಿಸುವ ಎಲ್ಲಾ ಸಿದ್ಧಾಂತಗಳಲ್ಲಿ ಅತ್ಯಂತ ಮೂಲಭೂತ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ನೋಡಿದ್ದರೆ ದೇಶದ ಅರ್ಹ ಜನರಿಗೆ ಲಸಿಕೆ ಹಾಕುವಲ್ಲಿ ಎದುರಾಗುವ ಬೃಹತ್ ಸವಾಲು ಲಸಿಕೆ ಕಾರ್ಯಕ್ರಮ. ಲಸಿಕೆ ಕಾರ್ಯಕ್ರಮ-ರಾಷ್ಟ್ರೀಯ ತಜ್ಞರ ಗುಂಪಿಗೆ (NEGVAC) ಸುಲಭವಾಗಿ ಗೊತ್ತಾಗುತ್ತಿದ್ದಿತು. ಕೋವಿಷೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗೆ ಅನುಮೋದನೆ ನೀಡಿದಾಗ ಅವುಗಳ ತಯಾರಕರ ಸಾಮರ್ಥ್ಯದ ಅಂದಾಜು ನಡೆಸಲಿಲ್ಲ. ಹಾಗೆ ನಡೆಸಿದ್ದರೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲಸಿಕೆ ತಂತ್ರಜ್ಞಾನ ವರ್ಗಾವಣೆಗೆ ಕೇನಲ ಒಂದು ಕಂಪೆನಿಗೆ –ಭಾರತ್ ಬಯೋಟೆಕ್- ಮಿತಿಗೊಳಿಸಿಕೊಳ್ಳುವ ಬದಲು ಇನ್ನೂ ಹೆಚ್ಚಿನ ಕಂಪನಿಗಳನ್ನು ತೊಡಗಿಸಿಕೊಳ್ಳುವ ಅನಿವಾರ್ಯತೆ ತಿಳಿದುಬರುತ್ತಿದ್ದಿತು. ಭಾರತವು ಸುಮಾರು 96.6 ಕೋಟಿ ವಯಸ್ಕ ವ್ಯಕ್ತಿಗಳಿಗೆ ಲಸಿಕೆ ಹಾಕಲು 193. 2 ಕೋಟಿ ಡೋಸ್ ಲಸಿಕೆಗಳು ಬೇಕು. ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ 12 ತಿಂಗಳಲ್ಲಿ ಲಸಿಕೆ ನೀಡಬೇಕಾದರೆ, ಅಗತ್ಯವಿರುವ ಪ್ರಮಾಣಗಳ ಸಂಖ್ಯೆ ದಿನಕ್ಕೆ ಕನಿಷ್ಠ 54 ಲಕ್ಷ ಆಗುತ್ತದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ನ ಉದ್ದೇಶಿತ ಸಾಮರ್ಥ್ಯ ವಿಸ್ತರಣೆಯನ್ನು ಪರಿಗಣಿಸಿದ ನಂತರವೂ, ಭಾರತದ ಒಟ್ಟು ಉತ್ಪಾದನೆ ಸಾಮರ್ಥ್ಯ ದಿನಕ್ಕೆ 38 ಲಕ್ಷ ಡೋಸ್ಗಳಿಗಿಂತ ಹೆಚ್ಚಿರಲಾರದು. ರಪ್ಥು ಮತ್ತು ಇತರ ಹೊರಗಿನ ವ್ಯಾವಹಾರಿಕ , ಮಾನವೀಯ ಬದ್ಧತೆಗಳಿಗಾಗಿ ಸಾಮರ್ಥ್ಯದ ಸುಮಾರು 15% ಅನ್ನು ಮೀಸಲಿಟ್ಟರೆ, ದೇಶಕ್ಕೆ ದಕ್ಕುವ ಲಸಿಕೆಗಳ ಪ್ರಮಾಣ ಮೇ 2021 ರಲ್ಲಿ ದಿನಕ್ಕೆ 33 ಲಕ್ಷ ಡೋಸ್ಗಳಿಗೆ ಕುಗ್ಗುತ್ತದೆ. [12]
ಅಮೆರಿಕ , ಯುನೈಟೆಡ್ ಕಿಂಗ್’ಡಂ ಮುಂತಾದ ದೇಶಗಳು ಇತರ ತಯಾರಕರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ನೋಡಿಯಾದರೂ ರಾಷ್ಟ್ರೀಯ ತಜ್ಞರ ಗುಂಪು (NEGVAC) ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಮುಂಗಡ ಕಾಯ್ದಿರಿಸಲು ಶಿಫಾರಸು ಮಾಡಿ , ಅದು ಭಾರತೀಯ ಕಂಪೆನಿಗಳಿಂದ ಪ್ರಾಯೋಗಿಕವಾಗಿ ಸಾದ್ಯವೇ ಎಂದು ಲೆಕ್ಕಮಾಡಬೇಕಾಗಿದ್ದಿತು. ಅಂತಹ ಯಾವ ಕೆಲಸವನ್ನೂ ಅದು ಮಾಡಲಿಲ್ಲ. ಹೀಗಾಗಿ ಉನ್ನತ ನೀತಿ ರೂಪಿಸುವ ಮಟ್ಟದಲ್ಲಿಯೇ ತಪ್ಪು ನುಸುಳಿತು ಸೆಪ್ಟೆಂಬರ್ 2020ರ ನಂತರ ಮೊದಲ ಅಲೆ ಕಡಿಮೆಯಾದಂತೆ ಒಂದು ಬಗೆಯ ನೆಮ್ಮದಿ ಅನುಭವಿಸುತ್ತಿದ್ದ ರಾಷ್ಟ್ರೀಯ ತಜ್ಞರ ಗುಂಪು (NEGVAC) ಭಾರತಕ್ಕೆ ಬೇಕಾದ ಎಲ್ಲ ಲಸಿಕೆಗಳನ್ನು ಭಾರತೀಯ ಸಂಸ್ಥೆಗಳೇ ಒದಗಿಸುತ್ತವೆ ಎಂದು ತಪ್ಪು ಭರವಸೆ ಇಟ್ಟಿತು. ಜನವರಿಯಲ್ಲಿ ಲಸಿಕೆ ಕಾರ್ಯಕ್ರಮ ಪ್ರಾರಂಭವಾದಗಲೂ ಮುಂದೆ ಎದುರಾಗಬಹುದಾದ ಪರಿಸ್ಥಿತಿಯನ್ನು ತಿಳಿಯಲೂ ಯತ್ನಿಸಲಿಲ್ಲ. ಲಸಿಕೆ ಕೊರತೆ ಎದುರಾಗಬಹುದೆನ್ನುವ ಕಲ್ಪನೆಯೇ ಇಲ್ಲದೆ ರಫ್ತು ಮಾಡಲು ಅವಕಾಶ ನೀಡಲಾಯಿತು. ಲಸಿಕೆ ವ್ಯವಹಾರವು ಏರಿಳಿಕೆ ಕಾಣುವುದರಿಂದ ಖಾಸಗಿ ಕಂಪೆನಿಗಳು ವಿಸ್ತರಣೆ ಮತ್ತು ತಯಾರಿಕೆಯ ಮೇಲೆ ಒಮ್ಮೆಲೆ ಹೆಚ್ಚಿನ ಬಂಡವಾಳ ಹೂಡಲು ಹೆದರುತ್ತವೆ. ಇದಕ್ಕಾಗಿ ಆಪತ್ತಿನ ಸಮಯದಲ್ಲಿ ಅನೇಕ ದೇಶಗಳು ಸಂಶೋಧನೆ ಮತ್ತು ಸಾಮರ್ಥ್ಯ ವಿಸ್ತರಣೆಗಾಗಿ ಲಸಿಕೆ ಕಂಪನಿಗಳಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಿವೆ ಮತ್ತು ಉತ್ಪಾದನೆಗೆ ಬೇಕಾದ ಹಣವನ್ನು ಖರೀದಿಯ ಮುಂಗಡವಾಗಿ ಕೊಟ್ಟಿವೆ. ಕೇಂದ್ರ ಸರ್ಕಾರ ಇವುಗಳಲ್ಲಿ ಯಾವುದನ್ನೂ ಮೊದಲಿಗೆ ಮಾಡಲಿಲ್ಲ ಹಾಗೂ ಲಸಿಕೆ ಕೊಳ್ಳುವ ಆದೇಶ ಜನವರಿ 2021 ರ ವರೆಗೆ ಕಾರ್ಯಗತಗೊಳ್ಳಲಿಲ್ಲ. ಸಾರ್ವಜನಿಕ ವಲಯದ ಲಸಿಕೆ ಕಂಪನಿಗಳ ಸಾಮರ್ಥ್ಯ ವಿಸ್ತರಣೆಯತ್ತವೂ ಗಮನ ಕೊಡಲಿಲ್ಲ [13] 2020 ರ ಡಿಸೆಂಬರ್ ವೇಳೆಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನಲ್ಲಿ ಉತ್ಪಾದನೆಯಾಗಿದ್ದ (ಎಸ್ಐಐ) 10 ಕೋಟಿ ಕೋವಿಷೀಲ್ಡ್ ಡೋಸ್’ಗಳನ್ನು ದೇಶೀಯ ಬಳಕೆಗಾಗಿ ರಿಯಾಯಿತಿ ದರದಲ್ಲಿ ಕೊಡಲು ಸಿದ್ಧವಿದ್ದಿತು. ಹೀಗಿದ್ದರೂ ಕೇಂದ್ರ ಸರ್ಕಾರ ಲಸಿಕೆಯ ಬೆಲೆ ಅಂತಿಮಗೊಳಿಸುವಲ್ಲಿ , ಮುಂಗಡ ಖರೀದಿ ಆದೇಶವನ್ನು ನೀಡುವಲ್ಲಿ ವಿಳಂಬ ನೀತಿ ಅನುಸರಿಸಿತು. ಇದರ ಪರಿಣಾಮವಾಗಿ ಈ ಸಂಸ್ಥೆ ಡಿಸೆಂಬರ್’ನಲ್ಲಿ 5 ಕೋಟಿಯಷ್ಟಿದ್ದ ಉತ್ಪಾದನೆಯ ಪ್ರಮಾಣವನ್ನು ಮಾರ್ಚ್ ತಿಂಗಳ ವೇಳೆಗೆ 10 ಕೋಟಿಗೆ ಹೆಚ್ಚಿಸುವ ಯೋಜನೆ ಹಿಂದಕ್ಕೆ ಬಿದ್ದಿತು.. [14]
ಭಾರತ ಸರ್ಕಾರ ಸ್ಥಳೀಯ ಲಸಿಕೆಯ ಬೆಲೆಯನ್ನು ಅಂತಿಮಗೊಳಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು ಹಾಗೂ ಲಸಿಕೆ ಅಭಿಯಾನವನ್ನು ಪ್ರಾರಂಭಿಸುವ ಐದು ದಿನಗಳ ಮೊದಲು ಎಂದರೆ ಜನವರಿ 11 ರಂದು ಸಣ್ಣ ಪ್ರಮಾಣದಲ್ಲಿ –1.1 ಕೋಟಿ ಡೋಸ್ ಕೋವಿಶೀಲ್ಡ್ ಮತ್ತು 55 ಲಕ್ಷ ಡೋಸ್ ಕೋವಾಕ್ಸಿನ್- ಲಸಿಕೆ ಒದಗಿಸುವ ಆದೇಶಗಳನ್ನು ಬಿಡುಗಡೆ ಮಾಡಿತು. ಅನುದಾನ ಅಥವಾ ಮುಂದಿನ ದಿನಗಳಲ್ಲಿ ಮಾಡುವ ಸರಬರಾಜುಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮುಂಗಡ ಹಣ ಬಿಡುಗಡೆ ಮಾಡಲೂ ಕೇಂದ್ರ ಸರ್ಕಾರ ಮುಂದಾಗಲಿಲ್ಲ. ಇದರಿಂದ ಲಸಿಕೆ ತಯಾರಕರು ತಮ್ಮದೇ ಆದ ಅಪಾಯದಲ್ಲಿ ಕಚ್ಛಾ ಸಾಮಗ್ರಿಗಳನ್ನು ದಾಸ್ತಾನು ಮಾಡಬೇಕಾಗಿತ್ತು. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಯಾವುದೇ ಪೂರೈಕೆ ಸರಪಳಿಯನ್ನು ಹೇಗೆ ನಿರ್ವಹಿಸಬಾರದು ಎಂಬುದರ ಪ್ರಾತ್ಯಕ್ಷಿಯೋ ಎನ್ನುವಂತೆ ಸರ್ಕಾರದ ನಡೆದುಕೊಂಡಿತು. ಭಾರತೀಯ ಕಂಪೆನಿಗಳ ಲಸಿಕೆ ಉತ್ಪಾದನೆ ಸಾಮರ್ಥ್ಯದ ಬಗ್ಗೆ ಮೊದಲಿನಿಂದಲೂ ಮಾಹಿತಿ ಇದ್ದಿತು. ವಾಸ್ತವ ಸ್ಥಿತಿಗಳನ್ನು ಪರಿಗಣಿಸದೆ ಪ್ರಧಾನಿ ನರೇಂದ್ರ ಮೋದಿಯವರ ಉತ್ಪ್ರೇಕ್ಷಿತ ‘ಆತ್ಮನಿರ್ಭರ’ ಹಾಗೂ ವಿಶ್ವರಕ್ಷಕ ಘೋಷಣೆಯನ್ನು ಜಾರಿಗೊಳಿಸುವ ಒತ್ತಡದಲ್ಲಿ , ವಾಕ್ ಚಾತುರ್ಯದ ಕುರುಡಿನಲ್ಲಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳದಂತೆ ಪರಿಣಿತರ ಮೇಲೆ ಕಾಣದ ಒತ್ತಡವಿದ್ದಿತು. [15] ಭಾರತಕ್ಕಿಂತಲೂ ಹಲವು ಪಟ್ಟು ಕಡಿಮೆ ಪ್ರಮಾಣದ ಲಸಿಕೆ ಅಗತ್ಯವಿರುವ ಮುಂದುವರೆದ ದೇಶಗಳು ವೈವಿಧ್ಯಮಯ ಲಸಿಕೆಗಳನ್ನು ಅನುಮೋದಿಸಿವೆ. ಆದರೆ ಭಾರತವು ತನ್ನ ಅಧಿಕೃತ ಅನುಮೋದನೆಗಳನ್ನು ಕೇವಲ ಎರಡು ಲಸಿಕೆಗಳಿಗೆ ಸೀಮಿತಗೊಳಿಸಿಕೊಂಡಿತು. [16] ಇದರಿಂದ ವಿದೇಶಿ ಲಸಿಕೆ ತಯಾರಕರಿಗೆ ಅವಕಾಶ ಸಿಗಲಿಲ್ಲ. ನವೆಂಬರ್ 2020 ರಲ್ಲಿ, ಆರೋಗ್ಯ ಸಚಿವ ಹರ್ಷವರ್ಧನ್ ಫೈಝರ್ ಕಂಪೆನಿ ಭಾರತದಲ್ಲಿ ಲಸಿಕೆಗಳನ್ನು ಸಾಮರ್ಥ್ಯವನ್ನು ಬಹಿರಂಗವಾಗಿ ಅನುಮಾನಿಸುತ್ತ ಅದು ಭಾರತಕ್ಕೆ ಅಗತ್ಯವಿಲ್ಲದಿರಬಹುದು ಎಂದರು. ಭಾರತ ನಿಗದಿಪಡಿಸಬಹುದಾದ ಬೆಲೆಯ ಮತ್ತು ಲಸಿಕೆಯಿಂದ ಆಗಬಹುದಾದ ಪ್ರತಿಕೂಲ ಪರಿಣಾಮಗಳ ಸಂದರ್ಭದಲ್ಲಿ ಹೊರಬೇಕಾದ ಹೊಣೆಗಾರಿಕೆಯ ಷರತ್ತುಗಳನ್ನು ಗಮನಿಸಿದ ಫೈಝರ್ ಕಂಪೆನಿ ಭಾರತದಲ್ಲಿ ತಯಾರಿಸುವ ಉತ್ಸಾಹ ತೋರಿಸಿದ ಕೆಲವೇ ವಾರಗಳ ನಂತರ, ಜನವರಿ 2021 ರಲ್ಲಿ ಅಧಿಕೃತತೆಗಾಗಿ ತನ್ನ ಅರ್ಜಿಯನ್ನು ಹಿಂಪಡೆಯಿತು. [17] 2020 ಡಿಸೆಂಬರ್ ಕೊನೆಯ ವೇಳೆಗೆ ಬಹುತೇಕ ಚಟುಟಿಕೆಗಳು ಸಾಮಾನ್ಯ ಸ್ಥಿತಿಗೆ ಬಂದಿದ್ದವು. 2021 ಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿ ಬರುವ ವೇಳೆಗೆ ಜನ ಕೋವಿಡ್-19 ಮರೆತು ಹೋಗತೊಡಗಿದ್ದರು. ಮದುವೆ , ಸಾರ್ವಜನಿಕ ಸಮಾರಂಭ , ಜಾತ್ರೆಗಳಲ್ಲಿ ಜನ ಹುಮ್ಮಸ್ಸಿನಂತೆ ಭಾಗವಹಿಸತೊಡಗಿದರು. ಗುಂಪು ಸೇರುವ ಜಗತ್ತಿನ ಎಲ್ಲ ಸಮಾರಂಭಗಳ ಚಕ್ರವರ್ತಿಯೆಂತೆ ಕುಂಭವೇಳೆ ಬರುವುದರಲ್ಲಿದ್ದಿತು. ಹೀಗಿರುವಾಗ ಕೇಂದ್ರ ಸರ್ಕಾರ ಕೋವಿಡ್-19 ಮುಂಚೂಣಿ ಕೆಲಸಗಾರರಿಗೆ ಲಸಿಕೆ ನೀಡಲು ಪ್ರಾರಂಭಿಸಿತು. ಹೀಗೆ ಎಲ್ಲವೂ ಹಸಿರಾಗಿ ಕಾಣಿಸುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಭಾರತ ಕೋವಿಡ್-19 ಗೆದ್ದು , ಜಗತ್ತಿನ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದು ತನ್ನದೇ ಆದ ದಾರಿಯನ್ನು ಗಟ್ಟಿಗೊಳಿಸಿದೆ ಎಂದು 28 ಜನವರಿ 2021 ರಂದು ಡಾವೋಸ್ ಸಮ್ಮೇಳನದ ವರ್ಚುಯಲ್ ಸಭೆಯಲ್ಲಿ ಭಾಷಣ ಮಾಡಿದರು. [18] ಭಾರತ , ಕೋವ್ಯಾಕ್ಸ್ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರ ಮೂಲಕ ಬದ್ಧತೆ ತೋರಿಸುತ್ತಿರುವುದಕ್ಕೆ ಮೆಚ್ಚುಗೆಯ ಹೊಳೆ ಹರಿದು ಬಂದಿದ್ದಿತು. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಘೆಬ್ರೆಯೆಸಸ್ನಿಂದ ಹಿಡಿದು ಕ್ರಿಕೆಟಿಂಗ್ ತಾರೆ ಕ್ರಿಸ್ ಗೇಲ್ ಸೇರಿದಂತೆ ಹಲವರು ಜಗತ್ತಿಗೆ ರೋಗನಿರೋಧಕ ಶಕ್ತಿ ನೀಡುವಲ್ಲಿ , ದಯೆ , ಪರಾನುಭೀತಿ ತೋರಿಸುವಲ್ಲಿ ಭಾರತ ವಹಿಸಿದ ನಿರ್ಣಾಯಕ ಪಾತ್ರವನ್ನು ಹೊಗಳಿದ್ದರು. ಬ್ರೆಜಿಲ್ ಪ್ರಧಾನ ಮಂತ್ರಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮೋದಿಯವರನ್ನು ತಮ್ಮ ದೇಶವಾಸಿಗಳಿಗೆ ಜೀವ ರಕ್ಷಕ ಸಂಜೀವನಿ ತಂದ ವೀರ ಹನುಮನೊಂದಿಗೆ ಹೋಲಿಸಿದ್ದರು.[19] ಆದರೆ ಇದೇ ಬ್ರೆಜಿಲ್ ದೇಶ ಭಾತರ ಮೂಲದ ಕೋವ್ಯಾಕ್ಸಿನ್ ಉತ್ಪಾದನೆಯ ಬಿಗಿ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ಲಸಿಕೆಯ ಆಮದಿನ ಮೇಲೆ ನಿರ್ಬಂಧ ಹೇರಿರುವುದು ಹೊಗಳಿಕೆಯ ಅಬ್ಬರದಲ್ಲಿ ಕಾಣದಾಗಿದ್ದಿತು..[44] ಕೋವಿಡ್-19 ಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಭಾಜಪ ಪ್ರಧಾನಿಯವರನ್ನು ಹೊಗಳಿ ಭಾರತ ‘ವಿಶ್ವ ಲಸಿಕೆ ಗುರು’ ಎಂದು ಹೆಮ್ಮೆಪಟ್ಟಿತು. ಇಂತಹ ಜಯದ ಜೋಕೆಯಲಿ , ಓಲಗದ ಮರವೆಯಲ್ಲಿ ಇರುವಾಗ ಫೆಬ್ರವರಿ ಎರಡನೇ ವಾರದಲ್ಲಿ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಮುಂದೆ ಸುನಾಮಿಯಾಗಲಿರುವ ಕೋವಿಡ್-19 ಅಲೆ ಸಣ್ಣದಾಗಿ ಏಳಲು ಪ್ರಾರಂಭವಾಗಿದ್ದಿತು. . ಈ ಸುನಾಮಿಗೆ ನರವಾಗಲು ಕುಂಭಮೇಳ , ರಾಜಕೀಯ ಪ್ರಚಾರ ಯಾತ್ರೆಗಳು ಕಾದಿದ್ದವು.. 16 ಜನವರಿ 2021 ರಂದು ಸರ್ಕಾರ ಗುರುತಿಸಿದ್ದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ವಿಡಿಯೋ ಸಭೆಯ ಮೂಲಕ ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ "ಸಾಮಾನ್ಯವಾಗಿ, ಲಸಿಕೆ ತಯಾರಿಸಲು ಹಲವು ವರ್ಷಗಳು ಬೇಕಾಗುತ್ತವೆ ಆದರೆ ಇಷ್ಟು ಕಡಿಮೆ ಅವಧಿಯಲ್ಲಿ, ಒಂದಲ್ಲ, ಎರಡು 'ಮೇಡ್ ಇನ್ ಇಂಡಿಯಾ' ಲಸಿಕೆಗಳು ಸಿದ್ಧವಾಗಿವೆ" ಎಂದು ಲೈವ್ಸ್ಟ್ರೀಮ್ ಮಾಡಿದ ಭಾಷಣದಲ್ಲಿ ಹೆಮ್ಮೆಪಟ್ಟರು. [20] ಕೋವಿಷೀಲ್ಡ್ 72 % ಪರಿಣಾಮಕಾರಿಯೆಂದು ಪ್ರಯೋಗಗಳಿಂದ ಗೊತ್ತಾಗಿದೆ ಅಂತಹ ಚಿಕಿತ್ಸೆಯ ಪ್ರಯೋಗಗಳು (ಕ್ಲಿನಿಕಲ್ ಟ್ರಯಲ್ಸ್) ಪೂರ್ಣಗೊಂಡಿರದೆ ಭಾರತ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಯ ಪರಿಣಾಮದ ಕೆಲ ಪರಿಣಿತರು ಕಳವಳ ವ್ಯಕ್ತಪಡಿಸಿದರು. ಈ ಲಸಿಕೆಯ ಪರಿಣಾಮ ದತ್ತಂಶಗಳು ಮಾರ್ಚ್ ವೇಳೆಗೆ ದಕ್ಕುವ ಅಂದಾಜು ಮಾಡಲಾಗಿದ್ದಿತು. ಭಾರತ ಸರ್ಕಾರ ಕೋವಿಷೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಮಾನ ಪರಿಣಾಮಕಾರಿಯೆಂದು ಪರಿಗಣಿಸಿದ್ದಿತು. ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಯಾವುದಾದರೂ ಗಂಭೀರ ಅಡ್ಡಪರಿಣಾಮಗಳು ಆದಲ್ಲಿ ಸರ್ಕಾರ ಅಥವಾ ಗೊತ್ತುಪಡಿಸಿದ ಅಧಿಕೃತ ಕೇಂದ್ರಗಳಲ್ಲಿ ಆರೈಕೆ ನೀಡಲಾಗುವುದು ಹಾಗೂ ಪರಿಹಾರ ನೀದಲಾಗುವುದು ಎಂದು ಲಸಿಕೆ ನೀಡುವ ಕೇಂದ್ರಗಳೊಂದಿಗೆ ಹಂಚಿಕೊಂಡಿರುವ ಒಪ್ಪಂದದಲ್ಲಿ ತಿಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿತು.[21] ಮೊದಲ ಲಸಿಕೆ ಹಾಕುವ ಕಾರ್ಯಕ್ರಮ ಆರಂಭದಲ್ಲಿ ಮಂದಗತಿಯಲ್ಲಿ ಸಾಗಿ, ಹಲವು ಕಾರಣಗಳಿಂದ ಲಸಿಕೆ ಹಿಂಜರಿಕೆಯೂ ಜನರಲ್ಲಿ ಕಾಣಿಸಿತು. 18 ಜನವರಿ ಯಂದು ದೆಹಲಿಯಲ್ಲಿ ನೋಂದಾಯಿತ ಮುಂಚೂಣಿ ಕಾರ್ಯಕರ್ತರಲ್ಲಿ ಕೇವಲ 49 & ಜನ ಮಾತ್ರ ಲಸಿಕೆ ಪಡೆದಿದ್ದರು. ಕೊವ್ಯಾಕ್ಸಿನ್ ಲಸಿಕೆ ಪಡೆಯುತ್ತಿರುವವರಿಗೆ ಆಪತ್ತು ಒಪ್ಪಿಗೆ ನಿರ್ಬಂಧ ಹಾಕಿರುವುದು , ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ತಪ್ಪು ಮಾಹಿತಿ , ವದಂತಿಗಳು ಇದಕ್ಕೆ ಕಾರಣಗಳೆಂದು ಗುರುತಿಸಲಾಗಿದ್ದಿತು. [22] 1, ಮಾರ್ಚ್ 2021 ರಿಂದ 60 ವರ್ಷ ಮೇಲ್ಪಟ್ಟ ಎಲ್ಲರಿಗೆ ಹಾಗೂ 45-60 ವರ್ಷಗಳಲ್ಲಿರುವ ಇತರ ಆರೋಗ್ಯ ತೊಂದರೆ ಇರುವವರಿಗೆ , 1, ಏಪ್ರಿಲ್ 2021 ರಿಂದ 45 ವರ್ಷ ಮೇಲ್ಪಟ್ತ ಎಲ್ಲರಿಗೆ , 1 ಮೇ 2021 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೆ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತು. ಇದನ್ನು ಗಮನಿಸಿದರೆ ಲಸಿಕೆ ಹಾಕುವುದು ಎಷ್ಟು ಯಶಸ್ವಿಯಾಗಿದೆ , ಹಾಕಿಕೊಂಡ ಗುರಿ ತಲುಪದಿರುವುದಕ್ಕೆ ಏನು ಕಾರಣಗಳು ಎಂದು ತಿಳಿಯುವುದಕ್ಕಿಂತ ದೇಶದ ಎಲ್ಲ ವಯಸ್ಕರಿಗೂ ಲಸಿಕೆ ದಕ್ಕುತ್ತದೆ ಎಂದು ತೋರಿಸಿಕೊಳ್ಳುವುದು ಮುಖ್ಯವಾಗಿದ್ದಿತೆಂದು ಭಾಸವಾಗುತ್ತದೆ. ಮಾರ್ಚ್ -ಏಪ್ರಿಲ್ ತಿಂಗಳುಗಳಲ್ಲಿ ಕೇಂದ್ರ ಸರ್ಕಾರ ಊಹಿಸಿದ್ದಕ್ಕಿಂತ ಬೇರೆಯದೇ ಆದ ಪರಿಸ್ಥಿತಿ ನಿರ್ಮಾಣವಾಗತೊಡಗಿತು. ಲಸಿಕೆ ಹಾಕಿಕೊಳ್ಳುವ ಮಂದಿ ಹೆಚ್ಚತೊಡಗಿದರು. ಮಾರ್ಚ್ ಮೂರನೆಯ ವಾರದಲ್ಲಿ ದೇಶಾದ್ಯಂತ ಲಸಿಕೆ ಕೊರತೆ ವರದಿಯಾಗತೊಡಗಿದಾಗ ಮೊದಲಿಗೆ ರಾಜ್ಯಗಳನ್ನು ದೂರಿ ನಿರ್ಲಕ್ಷಿಸಲಾಯಿತು. ನಂತರ ಕೇಂದ್ರ ಸರ್ಕಾರಕ್ಕೆ ತನ್ನಲ್ಲಿಯೇ ಏನೋ ಸಮಸ್ಯೆ ಇದೆ ಎಂದು ಮನದಟ್ಟಾಗತೊದಗಿದ್ದಿತು. ಲಸಿಕೆ ಪೂರೈಕೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಕೆಲವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿತು. ಕೋವಿಡ್-19 ದೇಶೀಯ ಲಸಿಕೆಗಳ ವರ್ಧನೆ ಸಾಮರ್ಥ್ಯವನ್ನು ಹೆಚ್ಚಿಸುವ ಮಾರ್ಗಗಳನ್ನು ಹುಡುಕಲು ಮಾರ್ಚ್ 17, 2021 ರಂದು ಆರು ಸದಸ್ಯರ ಅಂತರ-ಮಂತ್ರಿ ಸಮಿತಿಯನ್ನು ರಚಿಸಿತು. [23] ಲಸಿಕೆ ಕೊರತೆಯ ಬಿಕ್ಕಟ್ಟು ಹೆಚ್ಚು ಬಿಗಿಯಾಗುತ್ತಿರುವಾಗಲೇ ಅಮೆರಿಕದ ಭಾರತೀಯ ರಾಯಭಾರಿ ಕೆ.ನಾಗರಾಜ ನಾಯ್ಡು ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ನಮ್ಮ ಜನರಿಗೆ ಹಾಕಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ಇತರ ದೇಶಗಳಿಗೆ ರಪ್ಥು ಮಾಡಿದ್ದೇವೆ ಎಂದು 27 ಮಾರ್ಚ್ 2021 ರಂದು ಹೆಮ್ಮೆ ಪಟ್ಟಿದ್ದರು. ಭಾರತ ಬಡ ದೇಶಗಳಿಗೆ ಮಾತ್ರವಲ್ಲ ಯುನೈಟೆಡ್ ಕಿಂಗ್’ಡಮ್ , ಸೌದಿ ಅರೇಬಿಯಾ, ಕೆನಡಾದಂತಹ ದೇಶಗಳಿಗೂ ಲಸಿಕೆ ರಫ್ತು ಮಾಡುತ್ತಿದ್ದಿತು. [24] ಏಪ್ರಿಲ್ ಮೊದಲ ವಾರದಲ್ಲಿ ಲಸಿಕೆ ಕೊರತೆ ಉಂಟಾಗಿದೆಯೆಂದು ಒಂದರ ನಂತರ ಇನ್ನೊಂದು ರಾಜ್ಯಗಳು ದೂರತೊಡಗಿದವು. ಲಸಿಕೆ ಪೂರೈಕೆಯಲ್ಲಿ ಕೊರತೆ ಇರುವುದು ತಿಳಿದಿದ್ದರೂ ತನ್ನ ಅಸಮರ್ಥತೆಯನ್ನು ಒಪ್ಪಿಕೊಳ್ಳದ ಕೇಂದ್ರ ಸರ್ಕಾರ ಅದನ್ನು ರಾಜಕೀಯಗೊಳಿಸಲು ಯತ್ನಿಸಿತು. ತಮ್ಮ ಕೆಲಸವನ್ನು ಸರಿಯಾಗಿ ಮಾಡರೆ ವಿರೋಧ ಪಕ್ಷಗಳಿರುವ ರಾಜ್ಯಗಳು ರಾಜಕೀಯ ಮಾಡುತ್ತಿವೆ ಎಂದು ಬಿಂಬಿಸಲು ಯತ್ನಿಸಿತು. 7 ಏಪ್ರಿಲ್ 2021 ರಂದು ಆರೋಗ್ಯ ಸಚಿವ ಹರ್ಷವರ್ಧನ್ Deplorable attempts by some state governments to distract attention from their failures and spread panic among the people” ಎನ್ನುವ ತಲೆಬರಹದಲ್ಲಿ ನೀಡಿದ ಹೇಳಿಕೆಯಲ್ಲಿ ಲಸಿಕೆ ಕೊರತೆಯನ್ನು ಎತ್ತಿ ತೋರಿಸುತ್ತಿದ್ದ ಮಹಾರಾಷ್ಟ್ರವನ್ನು ತೆಗಳುತ್ತ ಆ ರಾಜ್ಯ ರಾಜಕೀಯ ಮಾಡುತ್ತಿದೆ, ಅದು ಅದಕ್ಷ , ಅನರ್ಹ ಎಂದು ತಮ್ಮದೇ ಆದ ಅಂಕಿ-ಅಂಶಗಳಿಂದ ತೋಳೇರಿಸಿ ಕದನಕ್ಕೆ ಹೋದರು. ‘ಕಳೆದ ವರ್ಷದುದ್ದಕ್ಕೂ, ಭಾರತದ ಆರೋಗ್ಯ ಸಚಿವನಾಗಿ, ವೈರಸ್ ವಿರುದ್ಧ ಹೋರಾಡುವಲ್ಲಿ ಮಹಾರಾಷ್ಟ್ರ ಸರ್ಕಾರದ ದುರಾಡಳಿತ ಮತ್ತು ಆಗಲಿ ಬಿಡು ಎನ್ನುವ ವಿಧಾನಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ರಾಜ್ಯ ಸರ್ಕಾರದ (ಲಸಿಕೆ) ಕೊರತೆಯ ವರ್ತನೆ ವೈರಸ್ ವಿರುದ್ಧ ಹೋರಾಡುವ ಇಡೀ ದೇಶದ ಪ್ರಯತ್ನಗಳನ್ನು ಒಂದೇ ಏಟಿಗೆ ಹಾಳುಗೆಡವಿದೆ . ಎಂದು ಗರ್ಜಿಸಿದರು. ಆದರೆ ಹರ್ಷವರ್ಧನ್ ನೀಡಿದ ಅಂಕಿ-ಅಂಶಗಳಲ್ಲಿ ಮಹಾರಾಷ್ಟ್ರಕ್ಕೆ ಎಶ್ಟು ಲಸಿಕೆ ನೀಡಲಾಗಿದೆ ಎನ್ನುವ ಮಾಹಿತಿಯೇ ಇರಲಿಲ್ಲ. [25] ಇದರ ಹಿಂದೆಯೇ ಟ್ವೀಟರ್ ಮಾಧ್ಯಮದಲ್ಲಿ ಮಹಾರಾಷ್ಟ್ರ ಸರ್ಕಾರದ ಮೇಲೆ ಸಾಮುಹಿಕ ದಾಳಿಗಳಾಗುವಂತೆ ನೋಡಿಕೊಳ್ಳಲಾಯಿತು. ಹರ್ಷವರ್ಧನ್ ಬೆಂಬಲಿಸಿ ಪ್ರಕಾಶ್ ಜಾವಡೇಕರ್ ಮಾಡಿದ್ದ ಟ್ವೀಟ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಹೇಳುತ್ತಿರುವಂತೆ ಲಸಿಕೆ ಕೊರತೆ ಇರುವುದನ್ನು ಸಾರ್ವಜನಿಕರು , ಟ್ವೀಟಿಗರು ಗಮನಿಸಿ ಪ್ರಶ್ನಿಸಿದ್ದರು. ಇದೇ ವೇಳೆ, ಇದೇ ರೀತಿಯ ಎರಡನೇ ಅಲೆಯನ್ನು ಎದುರಿಸುತ್ತಿದ್ದ ದೆಹಲಿ ಸರ್ಕಾರ ‘ ಲಸಿಕೆ ಮೈತ್ರಿ’ ನೀತಿಯಿಂದಾಗಿ ಭಾರತದಲ್ಲಿ ಕೊರತೆಯುಂಟಾಗಿದೆ ಎಂದು ಕೇಂದ್ರ ಸರ್ಕಾರದ ಮೇಲೆ ತಪ್ಪು ಹೊರಿಸಿತು. ಇಂತಹ ಆರೋಪಗಳಿಗೆ ಉತ್ತರಿಸುತ್ತ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ 7, ಏಪ್ರಿಲ್ 2021 ರಂದು ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ದೇಶದಲ್ಲಿ ಎಲ್ಲಿಯೂ ಲಸಿಕೆ ಕೊರತೆಯಿಲ್ಲ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು. [26] ಇದಾದ ಮರುದಿನವೇ – 8/ಏಪ್ರಿಲ್, 2021- ಹಲವು ರಾಜ್ಯಗಳ ವಿರುದ್ಧ ಮಾತಿನ ಬಾಣ ಎಸೆಯುತ್ತ ಆರೋಗ್ಯ ಸಚಿಮ ಹರ್ಷವರ್ಧನ್ ‘ ಸಾಮಾನ್ಯ ಚಟುವಟಿಕೆಗಳಿಗೆ ಅವಕಾಶವಿದೆ. ಜನ ಕೋವಿಡ್ ಮಾರ್ಗಸೂಚಿ ನಡವಳಿಕೆಯನ್ನು ಗೌರವಿಸುತ್ತಿಲ್ಲ ‘ ಎಂದು ಟ್ವೀಟ್ ಮೂಲಕ ಜನರ ಮೇಲೆ ಮುಗಿಬಿದ್ದರು. [27] ಕುಂಭಮೇಳ, ರಾಜಕೀಯ ಯಾತ್ರೆಗಳ ಹಲವು ಚಿತ್ರಗಳನ್ನು ಲಗತ್ತಿಸಿ ನೀವೇಕೆ ಈ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿ ಅವರಿಗೆ ಆ ತಾಕತ್ತು ಇಲ್ಲವೆಂದು ಹೇಳಿದರು. [28] ಭಾಜಪ ಅಡಳಿತದ ರಾಜ್ಯಗಳಲ್ಲಿ ಸೋಂಕು ಉಲ್ಬಣಿಸುತ್ತಿದ್ದರೂ ಅದನ್ನು ಮರೆಮಾಚಿ 9, ಏಪ್ರಿಲ್ 2021 ರಂದು ಭಾಜಪ , ಮಹಾರಾಷ್ಟ್ರ ಛತ್ತೀಸಘಡ ರಾಜ್ಯಗಳು ಕೋವಿಡ್-19 ನಿರ್ವಹಣೆಯಲ್ಲಿ ಸೋತಿವೆ ಎಂದು ಹರ್ಷವರ್ಧನ್ ದೂರಿದರು. [29] ಹರ್ಷವರ್ಧನ್ , ಮಹಾರಾಷ್ಟ್ರದ ಮೇಲೆ ಜಗಳಕ್ಕೆ ಇಳಿದಿದ್ದ ದಿನದಂದೇ - 8, ಏಪ್ರಿಲ್ 2021 – ಛತ್ತೀಸಘಡ , ಹರಿಯಾಣ , ಆಂಧ್ರಪ್ರದೇಶ, ತೆಲಂಗಾಣ ಲಸಿಕೆ ಕೊರತೆಯನ್ನು ವರದಿ ಮಾಡಿದವು. [30] ಭಾಜಪ ಆಡಳಿತದ ಉತ್ತರಪ್ರದೇಶದ ಘಾಜಿಯಾಬಾದ್’ನಲ್ಲಿ ಲಸಿಕೆ ಕೊರತೆಯ ಸೂಚನೆಗಳು ಆಸ್ಪತ್ರೆಗಳ ಮುಂದೆ ತೂಗುಹಾಕಲ್ಪಟ್ಟವು. ಹರಿಯಾಣದಲ್ಲಿ ಲಸಿಕೆ ಕೊಡುವುದನ್ನು ನಿಲ್ಲಿಸಲಾಯಿತು. [31] ದೇಶಾದ್ಯಂತ ಲಸಿಕೆ ಕೊರತೆಯಾಗಿರುವುದನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಪತ್ರಿಕಗಳು ಆಧಾರ ಸಹಿತವಾಗಿ ವರದಿ ಮಾಡತೊಡಗಿದಾಗ ಕೇಂದ್ರ ಸರ್ಕಾರ ಹರ್ಷವರ್ಧನ್ ಮೂಲಕ ಸುಳ್ಳು ಹೇಳಿಸುತ್ತಿದೆ ಎನ್ನುವ ತೀರ್ಮಾನಕ್ಕೆ ಜನ ಬರತೊಡಗಿದರು. ಇದರಿಂದ ಸರ್ಕಾರದ ಬಿಂಬಕ್ಕೆ ಹಾನಿಯಾಗುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ 8/4/2021 ರಂದು ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ “ರಾಜಕೀಯ ಮಾಡ ಬಯಸುವವರು ಮಾಡಬಹುದು, ನಾನು ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಸಾಂಕ್ರಾಮಿಕ ರೋಗವನ್ನು ಗೆಲ್ಲಲು ನಾವು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ತಮ್ಮ ಸಂಪುಟ ಸಚಿವರ ಸುಳ್ಳು ಹೇಳಿಕೆ ಆರೋಪಗಳನ್ನು ಮುಚ್ಚಿ ಹಾಕಲು ಯತ್ನಿಸಿದರು. [32] ಹೀಗಿರುವಾಗ ಮಾನವೀಯತೆ ಎಷ್ಟು ಉದಾತ್ತವಾದುಸು. ಲಸಿಕೆಯನ್ನು ರಫ್ತು ಮಾಡುವುದು ಏಕೆ ಅನಿವಾರ್ಯ ಎನ್ನುವ ನೀತಿಪಾಠದಲ್ಲಿ ಟ್ವೀಟರ್ ಮೂಲಕ ಹರ್ಷವರ್ಧನ್ ತೊಡಗಿದ್ದರು.
ಟೀಕಾ ಉತ್ಸವ್ ಜುಲೈ 2021 ರ ವೇಳೆಗೆ ಭಾರತದಲ್ಲಿ 30 ಕೊಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದ್ದಿತು. ಈ ಗುರಿ ಸಾಧಿಸಲು 60 ಕೋಟಿ ಡೋಸ್ ಅಗತ್ಯವಿದ್ದವು. ಹಾಕಿಕೊಂಡಿದ್ದ ಗುರಿ ಸಾಧಿಸಲು ಪ್ರಧಾನಿ ಮೋದಿಯವರು ಇದು ಕೋವಿಡ್-19 ಎರಡನೇ ಅಲೆ ಉಲ್ಬಣವಾಗುತ್ತಿದ್ದ ಅವಧಿಯಲ್ಲಿ ಒಂದಾಗಿದ್ದ ಏಪ್ರಿಲ್ 11 ರಿಂದ 14 ರವರೆಗಿನ ನಾಲ್ಕು ದಿನಗಳ ‘ಟೀಕಾ ಉತ್ಸವ’ಕ್ಕೆ ಕರೆ ಕೊಟ್ಟರು. ಟೀಕಾ ಉತ್ಸವಕ್ಕೆ ಕರೆ ಕೊಡುವ ಒಂದು ದಿನ ಹಿಂದೆ ಪಂಜಾಬ್ ಸರ್ಕಾರ ಲಸಿಕೆ ಕೊರತೆ ಇರುವುದರತ್ತ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಿತು. [33]
ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದ ನಾಲ್ಕು ದಿನಗಳ ಟೀಕಾ ಉತ್ಸವದಲ್ಲಿ ಲಸಿಕೆ ನೀಡಿಕೆ ಹಿಂದಿನ ಸಾಧಾರಣ ದಿನಗಳಲ್ಲಿ ನೀಡಿದ ಸಂಖ್ಯೆಯ ಕೆಳಗೆ ಕುಸಿಯಿತು. ಟೀಕಾ ಉತ್ಸವದ ನಾಲ್ಕು ದಿನಗಳಲ್ಲಿ – ಏಪ್ರಿಲ್ 11 ರಿಂದ 14- ಸರಾಸರಿ ದಿನಕ್ಕೆ 29 ಲಕ್ಷ ಲಸಿಕೆ ನೀಡಿದ್ದರೆ ಇದಕ್ಕಿಂತ ನಾಲ್ಕು ದಿನ ಮೊದಲು ಇದರ ಪ್ರಮಾಣ 33 ಲಕ್ಷವಾಗಿದ್ದು, ಏಪ್ರಿಲ್ 5 ರಂದು 45 ಲಕ್ಷ ತಲುಪಿರುವುದು ಸರ್ಕಾರಿ ದಾಖಲೆಗಳಿಂದ ತಿಳಿದುಬರುತ್ತದೆ. ರಾಜ್ಯಗಳಿಗೆ ಸಾಕಷ್ಟು ಲಸಿಕೆ ಸರಬರಾಜು ಇದೆ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳುತ್ತಿದ್ದಿತಾದರೂ ಏಪ್ರಿಲ್ 13 ರವರೆಗೆ, ರಾಜ್ಯಗಳ ಒಟ್ಟು ಲಸಿಕೆ ಸಂಗ್ರಹ 1.7 ಕೋಟಿ ಹಾಗೂ ವಿತರಿಸಲು ಯೋಜಿಸಲಾದ 2.0 ಡೋಸ್ ಇದ್ದವು. ಹಲವು ರಾಜ್ಯಗಳಲ್ಲಿ ಲಸಿಕೆ ಸಂಗ್ರಹ ಸೊನ್ನೆಗೆ ಇಳಿದಿದ್ದಿತು. [34] ಜುಲೈ 2021 ರ ಗಡುವಿಗೆ ಮೂರು ತಿಂಗಳಿಗಿಂತಲೂ ಕಡಿಮೆ ಸಮಯವಿರುವಾಗ ಭಾರತವು ತನ್ನ ಗುರಿಯ ಶೇಕಡಾ 25 ರಷ್ಟು ಮಾತ್ರ ತಲುಪಿದ್ದಿತು. . ಲಸಿಕೆಯ ಕೊರತೆಯಿಂದಾಗಿ, ಲಸಿಕೆ ನೀಡುವಿಕೆಯ ಪ್ರಮಾಣ ಏಪ್ರಿಲ್ ಮೊದಲ ವಾರದಲ್ಲಿ ಪ್ರತಿದಿನ 35 ಲಕ್ಷದಿಂದ ಏಪ್ರಿಲ್ ಕೊನೆಯ ವಾರದಲ್ಲಿ 21 ಲಕ್ಷಕ್ಕೆ ಇಳಿಯಿತು. ಮೇ ತಿಂಗಳಲ್ಲಿ ದೈನಂದಿನ ಸರಾಸರಿ ದಿನಕ್ಕೆ 16 ಲಕ್ಷ ಪ್ರಮಾಣಗಳಿಗೆ ಇಳಿಯಿತು. ಇದೆಲ್ಲದರ ಒಟ್ಟು ಪರಿಣಾಮವಾಗಿ ಟೀಕಾ ಉತ್ಸವ ಭೀಕರ ಬರಗಾಲದಲ್ಲಿ ಕಷ್ಟು ಪಟ್ಟು ನಾಮಕಾವಸ್ಥೆಗೆ ಆಚರಿಸಿದ ಊರ ಹಬ್ಬದಂತಾಗಿದ್ದಿತು. [35]
ಲಸಿಕೆ ಕೊರತೆಯಿಂದ 'ಟೀಕಾ ಉತ್ಸವ್' ಕಳೆ ಹೀನಹೀನವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದಿತು. ಏಪ್ರಿಲ್ 12 ರಂದು , ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ, ಯುನೈಟೆಡ್ ಕಿಂಗ್ಡಮ್ ಮೆಡಿಸಿನ್ಸ್ ಮತ್ತು ಹೆಲ್ತ್ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ, ಮತ್ತು ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಏಜೆನ್ಸಿ ಜಪಾನ್ ಅನುಮೋದಿಸಿದ ಎಲ್ಲಾ “ವಿದೇಶಿ” ಕೋವಿಡ್ -19 ಲಸಿಕೆಗಳನ್ನು ತುರ್ತು-ಬಳಕೆಯಾಗಿ ‘ಬ್ರಿಡ್ಜ್ ಟೆಸ್ಟ್’ ಪ್ರಯೋಗಗಳಿಲ್ಲದೆ ಭಾರತದಲ್ಲಿ ಬಳಕೆಗೆ ತರುವ ನಿರ್ಧಾರನ್ನು ತ್ವರಿತವಾಗಿ ಕೈಗೊಳ್ಳಲು ಸರ್ಕಾರ ನಿರ್ಧರಿಸಿತು ಮೂರು ತಿಂಗಳ ಹಿಂದೆ ರೆಡ್ಡೀಸ್ ಲ್ಯಾಬ್ ಪ್ರಾರಂಭಿಸಿದ ಬ್ರಿಡ್ಜ್ ಟೆಸ್ಟ್’ಗಳಿಗೆ ಕಾಯದೆ ಏಪ್ರಿಲ್ 13 ರಂದು ರಷ್ಯಾದ ಸ್ಪುಟ್ನಿಕ್-ವಿ ಎಂಬ ಮೂರನೆಯ ಲಸಿಕೆಯನ್ನು ಸರ್ಕಾರ ಅನುಮೋದಿಸಿತು . [36] ವಾಸ್ತವವಾಗಿ ಚಿಂದಿ ಉಟ್ಟಿದರೂ ಆತ್ಮನಿರ್ಭರ ಎನ್ನುವ ಆಕರ್ಷಕ ಪೋಷಾಕನ್ನು ಉಟ್ಟಿರುವ ಹೆಮ್ಮೆಯನ್ನು ಕಳಚಿ ಬತ್ತಲಾಗುವಂತೆ ಇದು ಮಾಡಿತು. ಈ ಅನುಮೋದನೆಯಿಂದ ರಷ್ಯಾದ ನೇರ ಹೂಡಿಕೆ ನಿಧಿ (ಆರ್ಡಿಐಎಫ್) ಅಡಿಯಲ್ಲಿ ಆರು ಭಾರತೀಯ ಕಂಪನಿಗಳು ಸ್ಪುಟ್ನಿಕ್- ವಿ ತಯಾರಿಸಲು ಒಪ್ಪಂದಗಳಿಗೆ ಸಹಿ ಹಾಕಿದವು. ಇದಾದ ನಂತರ ವಿಶ್ವದಾದ್ಯಂತ ವಿತರಣೆಗಾಗಿ ಭಾರತದಲ್ಲಿ ಸುಮಾರು 85 ಕೋಟಿ ಡೋಸ್ಗಳನ್ನು ಉತ್ಪಾದಿಸುವ ನಿರೀಕ್ಷೆ ಮಾಡಲಾಯಿತು. ಈ ಉತ್ಪಾದನೆಯು ಭಾರತಕ್ಕೆ ಯಾವಾಗ ಮತ್ತು ಎಷ್ಟು ಲಭ್ಯವಾಗಲಿದೆ ಎಂದು ಇನ್ನೂ ಅಂದಾಜಿಸಲಾಗಿಲ್ಲ. ಇಲ್ಲಿಗೆ ಭಾರತ ವಿಶ್ವದ ಲಸಿಕೆ ತಯಾರಕ ಹೆಮ್ಮೆಯಿಂದ ಹೊರಬಂದು ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ಹತಾಶ ಅನ್ವೇಷಕನಾಗಿ ಬದಲಾಯಿತು. 16 ಏಪ್ರಿಲ್ 2021 ರಂದು ಸರ್ಕಾರ ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ್-3.0 ಮಿಷನ್’ ದೇಶದಲ್ಲಿಯೇ ಕೋವಿಡ್-19 ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಹೆಚ್ಚಿಸುವತ್ತ ಹೆಜ್ಜೆಗಳನ್ನು ಇಡತೊಡಗಿತು. ಇದಕ್ಕಾಗಿ ಮೂರು ಸಾರ್ವಜನಿಕ ವಲಯದ ಉದ್ಯಮಗಳನ್ನು ಗುರುತಿಸಲಾಗಿದೆ ಎನ್ನುವ ಹೇಳಿಕೆ ಬಿಡುಗಡೆ ಮಾಡಿತು. ಇದರ ಅಂಗವಾಗಿ (1) ಮಹಾರಾಷ್ಟ್ರ ಸರ್ಕಾರದ ಮುಂಬೈನ ಹಾಪ್’ಕಿನ್ಸ್ ಬಯೋಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ (2) ಹೈದರಾಬಾದ್’ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಆಡಳಿತದಲ್ಲಿರುವ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (3) ಬುಲಂದ್ಶಹರ್‘ನಲ್ಲಿರುವ ಜೈವಿಕ ತಂತ್ರಜ್ಞಾನ ವಿಭಾಗದ ಭಾರತ್ ಇಮ್ಯುನೊಲಾಜಿಕಲ್ಸ್ ಅಂಡ್ ಬಯೋಲಾಜಿಕಲ್ಸ್ ಲಿಮಿಟೆಡ್ ಈ ಮೂರು ಘಟಕಗಳನ್ನು ನವೀಕರಿಸಿ ಲಸಿಕೆ ಉತ್ಪಾದಿಸಲು ಅನುದಾನ ಘೋಷಿಸಲಾಯಿತು. . ಅಮೆರಿಕ ಮತ್ತು ಚೀನಾದಲ್ಲಿ ಕೋವಿಡ್-19 ಲಸಿಕೆಗಳು ಸಾರ್ವಜನಿಕ ವಲಯದಿಂದಲೇ ಅಭಿವೃದ್ಧಿಗೊಂಡಿವೆ . ಭಾರತದಲ್ಲಿ ಸಾರ್ವಜನಿಕ ವಲಯದಲ್ಲಿರುವ ಏಳು ಲಸಿಕೆ ತಯಾರಿಕೆ ಸಂಸ್ಥೆಗಳಿದ್ದು ಅವುಗಳಲ್ಲಿ ಮೂರು ಸರಿಯಾದ ಕ್ರಮಗಳನ್ನು ಪಾಲಿಸದ ಕಾರಣಕ್ಕೆ 2008 ರಲ್ಲಿ ಮುಚ್ಚಲಾಗಿದ್ದಿತು. 2012 ರಲ್ಲಿ ಇವುಗಳಿಗೆ ಮರುಜೀವ ಕೊಡುವ ಮಾತುಕತೆಗಳಾದವಾದರೂ ಯಾವುವೂ ಕಾರ್ಯಗತವಾಗಲಿಲ್ಲ. ಮೂರು ತಯಾರಿಕೆ ಸಂಸ್ಥೆಗಳನ್ನು ಮುಚ್ಚಿದ್ದರಿಂದ ದೇಶದ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮಕ್ಕೆ ಅಗತ್ಯವಾದ ಲಸಿಕೆಗಳನ್ನು ಒದಗಿಸಲು ತಮಿಳುನಾಡಿನಲ್ಲಿ ಸ್ಥಾಪಿಸಿದ ಸಮಗ್ರ ಔಷದ ತಯಾರಿಕೆ ಕೇಂದ್ರ 2016ರಲ್ಲಿಯೇ ಪೂರ್ಣಗೊಂಡಿತಾದರೂ ಇಂದಿಗೂ ಯಾವುದೇ ಉತ್ಪಾದನೆ ಮಾಡದೆ ನಿಷ್ಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ಮೂರು ಪ್ರಮುಖ ಲಸಿಕೆ ಉತ್ಪಾದನಾ ಘಟಕಗಳು, ಗರಿಷ್ಠ ಪರಿಣತಿ ಮತ್ತು ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಲಸಿಕೆ ಉತ್ಪಾದನೆಗೆ ಗುರುತಿಸಲ್ಪಟ್ಟಿಲ್ಲ ಎನ್ನುವ ಅಂಶಗಳನ್ನು ಈ ರಂಗದ ತಜ್ಞರು ಎತ್ತಿ ತೋರಿಸಿದ್ದಾರೆ.[37] ಬೇಡಿಕೆ ಹಾಗೂ ಸರಬರಾಜು ನಡುವಿನ ಭಾರಿ ಉಂಟಾದ ಭಾರಿ ಕಂದಕವನ್ನು ಮುಚ್ಚಲು ದೇಶಿಯ ಕಂಪೆನಿಗಳ ಬಹುದಿನದ ಬೇಡಿಕೆಗೆ ಅನುಗುಣವಾಗಿ ಏಪ್ರಿಲ್ 19 ರಂದು ಸೆರೊ ಇನ್’ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಕಂಪೆನಿಗಳಿಗೆ 3,000 ಹಾಗೂ 1,500 ಕೋಟಿ ರೂ.ಗಳನ್ನು ನೀಡುವ ಮೂಲಕ ಅವುಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಮುಂದಾಯಿತು. ಏಪ್ರಿಲ್ 19 ರ ವರೆಗೆ ದೇಶೀಯ ಲಸಿಕೆ ಉತ್ಪಾದಕರು ಭಾರತ ಸರ್ಕಾರ ಹೊರತು ಪಡಿಸಿ ಬೇರೆಯವರೆಗೆ ಲಸಿಕೆಯನ್ನು ಮಾರುವಂತಿರಲಿಲ್ಲ. 19 ಏಪ್ರಿಲ್ 2021 ರಂದು ಕೇಂದ್ರ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೇ 1 ರಿಂದ ಲಸಿಕೆ ಹಾಕಲು ಅನುಮತಿ ನೀಡುವ ಮೂಲಕ "ಉದಾರೀಕೃತ ಮತ್ತು ವೇಗವರ್ಧಿತ ಹಂತ 3 ತಂತ್ರ" ವನ್ನು ಘೋಷಿಸಿತು. [38] ಇದರೊಂದಿಗೆ ಹೊರಬಿದ್ದ ಹೊಸ ನೀತಿಯಂತೆ ಲಸಿಕೆ ಉತ್ಪಾದಕರು ತಮ್ಮ ಉತ್ಪಾದನೆಯ ಅರ್ಧದಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರದೊಂದಿಗೆ ಈ ಮೊದಲೇ ಮಾಡಿಕೊಂಡ ಒಪ್ಪಂದದ ಬೆಲೆಗೆ ಕೊಡಬೇಕು. ಉಳಿದ ಅರ್ಧದಲ್ಲಿ ರಾಜ್ಯ ಸರ್ಕಾರಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಮುಕ್ತ ಮಾರುಕಟ್ಟೆ ತತ್ತ್ವಗಳಿಗೆ ಅನುಗುಣವಾಗಿ ಮಾರಲು ಅವಕಾಶ ಮಾಡಿಕೊಟ್ಟಿತು. ಕೇಂದ್ರ ಸರ್ಕಾರ ಈ ಹೊಸ ನೀತಿ ಬಹಿರಂಗಪಡಿಸಿದ ಕೇವಲ ಒಂದು ದಿನದ ನಂತರ, ಸೆರೋ ಇನ್’ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಷೀಲ್ಡ್ ಪರಿಷ್ಕೃತ ಬೆಲೆಗಳನ್ನು ಘೋಷಿಸಿ - ರಾಜ್ಯ ಸರ್ಕಾರಗಳಿಗೆ ಡೋಸ್ಗೆ 400 ರೂ., ಖಾಸಗಿ ಆಸ್ಪತ್ರೆಗಳಿಗೆ ಡೋಸ್ಗೆ 600 ರೂ. ನಿಗದಿಪಡಿಸಿತು. [39]
1/02/2021 ರಂದು ಅರ್ಥ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ 35000 ಕೋಟಿ ರೂಪಾಯಿಗಳನ್ನು ಕೋವಿಡ್-19 ಲಸಿಕೆ ಸಂಶೋಧನೆ , ತಯಾರಿಕೆ ಮತ್ತು ಹಾಕುವ ಕಾರ್ಯಕ್ರಮಗಳಿಗೆ ಮೀಸಲಿರಿಸಿ ಬಳಸಲಾಗುವುದು ಎಂದು ಘೋಷಿಸಿದ್ದರು. 100 ಕೋಟಿ ಜನಕ್ಕೆ 150 ರೂ ಲೆಕ್ಕದಲ್ಲಿ ಎರಡು ಡೋಸ್ ಲಸಿಕೆಗೆ 30000 ಕೋಟಿ ವೆಚ್ಚವಾಗುತ್ತದೆ. ಇದನ್ನು ದುಪ್ಪಟ್ಟು ಎಂದರೆ 300 ರೂ ಎಂದು ಲೆಕ್ಕಹಾಕಿದರೂ 60000 ಕೋಟಿ ವೆಚ್ಚ ತಗುಲುತ್ತದೆ. ಇದು ಒಟ್ಟು ಆಂತರಿಕ ಉತ್ಪನ್ನದ 0.35 % ಗಿಂತಲೂ ಕಡಿಮೆ . ಆದ್ದರಿಂದ ಒಕ್ಕೂಟ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು. ಬೆರಳೆಣಿಕೆಯ ಕೆಲ ದೇಶಗಳನ್ನು ಬಿಟ್ಟು ಉಳಿದೆಲ್ಲ ದೇಶಗಲ ನೀತಿಯಾಗಿದೆ ಎಂದು ಕೆಲ ಅರ್ಥಶಾಸ್ತ್ರಜ್ಞರು ವಾದಿಸಿದ್ದರು. ಒಕ್ಕೂಟ ಸರ್ಕಾರ ಮುಕ್ತ ಮಾರುಕಟ್ಟೆಗೆ ರಾಜ್ಯಗಳು ಹೋಗುವಂತೆ ಮಾಡಿದ್ದು ತನ್ನ ನೀತಿಯನ್ನು ತಾನೇ ಮುರಿದಂತಾಗಿದ್ದಿತು. ಒಕ್ಕೂಟ ಸರ್ಕಾರ ಲಸಿಕೆಯನ್ನು ಒದಗಿಸುವ ತನ್ನ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಈ ಹೊಸ ನೀತಿ ತಂದಿದೆ. ಹಾಗೆ ತರುವ ಮೊದಲು ಯಾವುದೇ ರಾಜ್ಯ ಸರ್ಕಾರದನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಎಂದು ಪಂಜಾಬ್, ಕೇರಳ, ಛತ್ತೀಸಘಡ ಸರ್ಕಾರಗಳು ಹೇಳಿದವು. ಈ ರಾಜ್ಯಗಳಿಂದ ಸ್ವಲ್ಪ ಬೇರೆಯಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು 24/022021 ರಮ್ದು ರಾಜ್ಯಗಳಿಗೆ ನೇರವಾಗಿ ಲಸಿಕೆ ಖರೀದಿಸುವ ಅಧಿಕಾರ ನೀಡಬೇಕೆಂದು ಕೇಳಿಕೊಂಡಿದ್ದರು. ಇದಾದ ನಂತರ 18/04/2021 ರಂದು ಇನ್ನೊಂದು ನೆನಪಿನ ಓಲೆ ಬರೆದು ಲಸಿಕೆ ಕೊರತೆಯಿಂದ ರಾಜ್ಯ ಹಾಕಿಕೊಂದ ಗುರಿ ಮುಟ್ಟಲು ಆಗುತ್ತಿಲ್ಲ. ಹಿಂದಿನ ಪತ್ರದಲ್ಲಿ ಕೇಳಿಕೊಂಡಂತೆ ನಮಗೆ ಅಧಿಕಾರ ಕೊಡಿ ಎಂದು ಒತ್ತಾಯಿಸಿದ್ದರು. [46] ಟೀಕಾ ಉತ್ಸವ್ ದಿಂದ ಕೇಂದ್ರ ಸರ್ಕಾರ ಯಾವ ಪಾಠ ಕಲಿತಿದ್ದಿತು ಎನ್ನುವುದಕ್ಕೆ ಅದು ಮುಂದಿನ ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಸೂಚಕಗಳಾಗಿವೆ. ಲಸಿಕೆ ಕಾರ್ಯಕ್ರಮ ರಾಷ್ಟ್ರೀಯ ತಜ್ಞರ ಗುಂಪು (NEGVAC) . ಲಸಿಕೆ ಕೊರತೆ ಇರುವುದನ್ನು ತಿಳಿದಿದ್ದರೂ 45 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಮೇ 1 ರಿಂದ ಎಲ್ಲ ವಯಸ್ಕರೂ ಲಸಿಕೆ ಪಡೆಯಬಹುದೆಂದು ಘೋಷಿಸಿತು. ಇದರ ಮೂಲಕ ಒಮ್ಮೆಲೆ 75 ಕೋಟಿ ಜನರನ್ನು ಲಸಿಕೆಯ ಸಾಲುಗಳಲ್ಲಿ ನಿಲ್ಲಿಸಲಾಯಿತು. ಇದರ ಪರಿಣಾಮವಾಗಿ ಮೇ ತಿಂಗಳ ಮೊದಲ ವಾರದಲ್ಲಿ ಮೊದಲ ಹಂತದ ಲಸಿಕೆ ಹಾಕಿಸಿಕೊಂಡವರಿಗೂ ಎರಡನೇ ಲಸಿಕೆ ಸಿಗದಂತಾಯಿತು. ದೇಶಾದ್ಯಂತ ಲಸಿಕೆಗಾಗಿ ಸರತಿ ಸಾಲುಗಳಲ್ಲಿ ನಿಂತಿದ್ದ ಕೊರತೆಯ ಕಟು ವಾಸ್ತವವನ್ನು ತಿಳಿದಾಗ ಸರ್ಕಾರಕ್ಕೆ ಹಿಡಿ ಶಾಪ ಹಾಕತೊಡಗಿದರು. ರಾಷ್ಟ್ರೀಯ ತಜ್ಞರ ಗುಂಪು ((NEGVAC) ಮಾಡಿದ ಎರಡನೇ ಎಡವಟ್ಟು ಎಂದರೆ ಸರ್ಕಾರಿ ಸೌಲಭ್ಯಗಳು ಸಾಕಷ್ಟು ಅಸಮರ್ಪಕವೆಂದು ತಿಳಿಸುವ ಲಸಿಕೆ ಕಾರ್ಯಕ್ರಮವನ್ನು ವೇಗಗೊಳಿಸಲು ಖಾಸಗಿ ವಲಯವನ್ನು ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ತನ್ನದೇ ವರದಿ ಹಾಗೂ ಪ್ರಮುಖ ಕೈಗಾರಿಕೋದ್ಯಮಿ ಅಜೀಮ್ ಪ್ರೇಮ್ಜಿ ಮಾಡಿದ ಮನವಿಗೆ ಅದು ಕುರುಡು ಮತ್ತು ಕಿವುಡಾಗಿದ್ದಿತು. ಲಸಿಕೆ ಅನುಮೋದನೆ , ಬೆಲೆ ನಿರ್ಧಾರ , ಹಂಚಿಕೆ ಹೀಗೆ ಎಲ್ಲವನ್ನು ಯಾರಿಗೂ ಕೊಡದಂತೆ ಕೇಂದ್ರ ಬಿಗಿಯಾಗಿ ತನ್ನ ಹಿಡಿತದಲ್ಲಿ ಇರಿಸಿಕೊಂಡಿದ್ದಿತು. ಅದು ಬಿಸಿಯಾಗತೊದಗಿದಂತೆ ತಾನು ಮಾಡಿದ ಎಲ್ಲ ತಪ್ಪುಗಳನ್ನು ಮುಚ್ಚಿಕೊಳ್ಳಲು , ತನ್ನನ್ನು ತಾನು ರಕ್ಷಿಕೊಳ್ಳಲು ಕೇಂದ್ರ ಸರ್ಕಾರ ಉಪಾಯವೊಂದನ್ನು ಹುಡುಕಿತು. ರಾಜ್ಯಗಳು , ಖಾಸಗಿ ವೈದ್ಯಕೀಯ ಸಂಸ್ಥೆಗಳು ಲಸಿಕೆಗಳನ್ನು ನೇರವಾಗಿ ಉತ್ಪಾದಕರಿಂದ ಮಾರುಕಟ್ಟೆ ದರದಲ್ಲಿ ಕೊಳ್ಳಬಹುದೆನ್ನುವ ನೀತಿಯನ್ನು 19 ಏಪ್ರಿಲ್ 2021 ರಿಂದ ಜಾರಿಗೊಳಿಸಿತು. ಇದು ಕೇಂದ್ರ ಸರ್ಕಾರದ ಲಸಿಕೆ ಏಕಸ್ವಾಮ್ಯವನ್ನು ಕೊನೆಗೊಳಿಸಿತಾದರೂ ಲಸಿಕೆ ಒದಗಿಸುವ ಎಲ್ಲ ಸಮಸ್ಯೆಗಳಿಗೆ ರಾಜ್ಯ ಸರ್ಕಾರಗಳನ್ನು ಹೊಣೆಮಾಡಲಾಯಿತು. ಆರಂಭದಲ್ಲಿ ಲಸಿಕೆ ರಾಷ್ಟ್ರೀಯವಾದ ಮುಂದೊಡ್ಡಿ ಕೋವಿಡ್-19 ನ್ನು ಗೆದ್ದ ಹಾಗೂ ಜಗತ್ತಿಗೆ ಲಸಿಕೆ ಒದಗಿಸಿದ ವಿಶ್ವಗುರುವಾಗುವ ಎಲ್ಲ ಕೀರ್ತಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳಲು ಯತ್ನಿಸಿದ್ದ ಕೇಂದ್ರ ಸರ್ಕಾರ ತನ್ನ ಹಿಡಿತ ತಪ್ಪಿದ ತಕ್ಷಣ ಹೊರೆಯೆಲ್ಲವನ್ನೂ ರಾಜ್ಯಗಳ ತಲೆಯ ಮೇಲೇರಿ ತನ್ನ ಕೈ ಜಾಡಿಸಿಕೊಂಡಿತು. ಆರಂಭದಲ್ಲಿ ಎಲ್ಲ ಕೀರ್ತಿ ತನಗೆ ಸಲ್ಲಬೇಕೆಂದು ಖಾಸಗಿ ವಲಯವನ್ನು ದೂರ ಇಟ್ಟಿದ್ದ ಕೇಂದ್ರ ಸರ್ಕಾರ ತಾಳಲಾರದ ಪರಿಸ್ಥಿತಿ ಬಂದಾಗ ಪ್ರತಿಯೊಬ್ಬರ ಹಣೆಬರಹವನ್ನು ಅವರ ಪಾಲಿಗೆ ಬಿಟ್ಟಿತು.. ಇದು ಮೊಸರನ್ನ ತಿಂದ ಕೋತಿ ಮೇಕೆ ಮೂತಿಗೆ ಒರೆಸಿದಂತಾಯಿತು. ಕೇಂದ್ರ ಸರ್ಕಾರದ ಈ ನೀತಿಯಿಂದ ಖಾಸಗಿ ಕಂಪೆನಿಗಳು ದರ ಏರಿಸಿ ಮೊದಲೇ ಆರ್ಥಿಕವಾಗಿ ಬಸವಳಿದಿರುವ ರಾಜ್ಯಗಳ ಮೇಲೆ ಕುಸಿದು ಬೀಳುವಂತಹ ಹೊರೆ ಹಾಕುತ್ತದೆ ಎಂದು ಹಲವು ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ತನ್ನ ಹೊಣೆಯಿಂದ ಹಾಗೆ ತಪ್ಪಿಸಿಕೊಳ್ಳಲು ಸಾದ್ಯ ಇಲ್ಲವೆಂದು ಹೇಳುತ್ತಿವೆ. [40] ಮೇ 13 ರ ವೇಳೆಗೆ ಕರ್ನಾಟಕ , ಉತ್ತರಪ್ರದೇಶ , ಮಹಾರಾಷ್ಟ್ರ , ಆಂಧ್ರಪ್ರದೇಶ , ತೆಲಂಗಾಣ್ , ತಮಿಳುನಾಡು ಮತ್ತು ದೆಹಲಿ ಲಸಿಕೆ ಸರಬರಾಜಿಗಾಗಿ ಜಾಗತಿಕ ಟೆಂಡರ್ ಕರೆದವು. ಇದರಿಂದ ಯಾವುದೇ ವಿದೇಶದೊಂದಿಗೆ ನೇರ ಸಂಪರ್ಕ ಹೊಂದದ ರಾಜ್ಯಗಳ ನಡುವೆಯೇ ಪರಸ್ಪರ ಪೈಪೋಟಿ ಹೆಚ್ಚತೊಡಗಿತು. ಇದು ಖಾಸಗಿ ಲಸಿಕೆ ಕಂಪೆನಿಗಳಿಗೆ ಹಬ್ಬವಾಗುವುದರಲ್ಲಿ ಸಂಶಯವಿಲ್ಲ. ದೇಶದ ಎಲ್ಲ ವಿದೇಶಿ ವ್ಯವಹಾರಗಳನ್ನು ಹೊಂದಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೆರವಾಗಲು ಅವುಗಳ ಪರವಾಗಿ ವಿದೇಶಿ ಕಂಪೆನಿಗಳೊಂದಿಗೆ ದರ ಚೌಕಾಸಿಗೆ ಇಳಿಯುವ ಅಥವಾ ಸರಬರಾಜು ಪೂರೈಕೆಗೆ ಅನುವಾಗುವಂತೆ ವಿಶೇಷ ರಾಜತಾಂತ್ರಿಕ ಕಸರತ್ತುಗಳನ್ನು ಮಾಡದೆ ಮೂಕ ನೋಡುಗನಂತೆ ಉಳಿದಿದೆ. ಮೇ 12 ರ ಹೊತ್ತಿಗೆ, ಕೇವಲ 10.1% ರಷ್ಟು ಭಾರತೀಯರು ಕನಿಷ್ಠ ಒಂದು ಡೋಸ್ ಪಡೆದಿದ್ದರೆ 2.8% ರಷ್ಟು ಜನ ಎರಡೂ ಲಸಿಕೆಗಳನ್ನು ಪಡೆದಿದ್ದರು. ಸಾವಿನ ಸಂಖ್ಯೆ , ಸುಡುಗಾಡುಗಳಲ್ಲಿ ಆರದೆ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆಗಳನ್ನು ಕಂಡಿದ್ದ ಜನ ಲಸಿಕೆ ಹಾಕಿಸಿಕೊಳ್ಳಲು ಕೆಂದ್ರಗಳ ಮುಂದೆ ಸಾಲುಗಟ್ಟಿ ನಿಂತರು. ಲಸಿಕೆ ಇಲ್ಲ ಎನ್ನುವ ಸುದ್ದಿ ಕೇಳಿ ಅಸಹಾಯಕತೆ , ಸಿಟ್ಟಿನಿಂದ ಕುದಿದರು. ಇದನ್ನು ಸ್ವಲ್ಪ ಕಾಲ ತಣಿಸುವ ಒಂದು ಹೊಸ ದಾರಿ ಕೇಂದ್ರ ಸರ್ಕಾರಕ್ಕೆ ಕಾಣಿಸಿದ್ದಿತು. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್'ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ಹೆಚ್ಚಿಸಲು ಸರ್ಕಾರಿ ಸಮಿತಿಯ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ) ಶಿಫಾರಸು ಮಾಡಿತು. ಇದನ್ನು ಕೇಂದ್ರ ಆರೋಗ್ಯ ಸಚಿವಾಲಯ ತಕ್ಷಣವೇ ಒಪ್ಪಿತು. ಮೊದಲು ಈ ಅಂತರ ನಾಲ್ಕು ವಾರಗಳಾಗಿದ್ದು ನಂತರ ಎಂಟು ವಾರಗಳಿಗೆ ಹಿಗ್ಗಿಸಲ್ಪಟ್ಟಿದ್ದಿತು. ಕೋವಿಷೀಲ್ಡ್ ಲಸಿಕೆ ಬಳಸುತ್ತಿರುವ ಸ್ಪೇನ್ ದೇಶ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಎರಡು ಲಸಿಕೆಗಳ ಅಂತರ 16 ವಾರ ಅಂತರವನ್ನು ನಿಗದಿ ಮಾಡಿದ್ದಿತು. ಈ ಅಂತರವು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ನಿಗದಿಪಡಿಸಿದ ಮಿತಿಗಳನ್ನು ಮೀರಿದೆಯಾದರೂ ಮಾರ್ಚ್-2021 ರಲ್ಲಿ ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಅಧ್ಯಯನದ ಫಲಿತಾಂಶಗಳಿಗೆ ಅನುಗುಣವಾಗಿದೆ .ಎಂದು ಹಲವು ತಜ್ಞರು ಒಪ್ಪಿದ್ದಾರೆ. ಆದರೆ ಇದೇ ಲ್ಯಾನ್ಸೆಟ್ ಪತ್ರಿಕೆಯಲ್ಲಿ ಈ ಶಿಫಾರಸ್ಸು ಸಂಪೂರ್ಣವಾಗಿ ತಟಸ್ಥ ಅಧ್ಯಯನದಿಂದ ಬಂದಿಲ್ಲ ಎನ್ನುವ ಅಭಿಪ್ರಾಯವನ್ನೂ ಲಗತ್ತಿಸಿದೆ. ಸ್ಪೇನ್ನ ತೆಗೆದುಕೊಂಡ ನಿರ್ಧಾರ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ ಸರಿ. ಆದರೆ ಭಾರತದ ತೆಗೆದುಕೊಂಡ ನಿಲುವು ಯಾವ ವಯಸ್ಸಿನ ಮಿತಿಯನ್ನು ತಿಳಿಸಿದೆಯೆಂದು ಈವರೆಗೆ ಸ್ಪಷ್ಟತೆಯಿಲ್ಲ. ವೈಜ್ಞಾನಿಕ ಸಂಶೋಧನೆಗಳನ್ನು ಒಪ್ಪಬಹುದಾದರೂ ಅಂತೂ , ಇಂತೂ ಲಸಿಕೆ ಕೊರತೆಯ ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಇದು ಒಂದು ಕಳ್ಳಗಂಡಿ ಒದಗಿಸಿದಂತೆ ಆಗಿದೆಯೆಂದು ತಿಳಿಸಲು ಹಲವು ವೈದ್ಯಕೀಯ ಪರಿಣಿತರು ಹಿಂಜರಿದಿಲ್ಲ. ಆರಂಭದಲ್ಲಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಲಸಿಕೆಯಲ್ಲಿ ಸತ್ತ್ವವಿಲ್ಲ ಅದು ಭಟ್ಟಿ ಇಳಿಸಿದ ನೀರು, ಹಾಕಿಸಿಕೊಂಡರೆ ಹೃದಯಾಘಾತ ಆಗುವುದು, ರಕ್ತ ಹೆಪ್ಪುಗಟ್ಟುವುದು , ಗಂಡಸುತನ ಹೋಗುವುದು ಎಂದು ಅಪಪ್ರಚಾರ ಮಾಡಿದ್ದರಿಂದ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಲಿಲ್ಲ ಎಂದು ಭಾಜಪದ ಮುಖಂಡರು ದೂರತೊಡಗಿದರು. ಇದರಲ್ಲಿ ಸ್ವಲ್ಪ ಸತ್ಯ ಮತ್ತು ಆಧಾರಗಳಿಲ್ಲದ ಹೆಚ್ಚು ಆರೋಪವಿದ್ದಿತು. ಏಕೆಂದರೆ ಕೋವ್ಯಾಕ್ಸಿನ್ ಮತ್ತು ಕೋವಿಷೀಲ್ಡ್ ಈ ಎರಡು ಲಸಿಕೆಗಳ ಕಪಾಟು ಅವಧಿ (ಷೆಲ್ಫ್ ಲೈಫ್). ತಯಾರಾದ ಆದರೆ ಬಳಕೆಯಾಗದ ಎಲ್ಲ ಲಸಿಕೆ ದೇಶದ ವಿವಿಧ ರಾಜ್ಯಗಳ ಶೈತ್ಯಾಗಾರಗಳಲ್ಲಿ ಇರಬೇಕಾಗಿದ್ದಿತು. ಜನ ಲಸಿಕೆ ಹಾಕಿಸಿಕೊಳ್ಳಲು ಬಂದಾಗ ಅದನ್ನು ನೀಡಬಹುದಿದ್ದಿತು. ಹಾಗೆ ಆಗಲಿಲ್ಲ. ಏಕೆಂದರೆ ಸರಿಯಾದ ಯೋಜನೆಯಿಲ್ಲದೆ ಲಸಿಕೆಯ ಕೊರತೆ ಉಂಟಾಗಿದ್ದಿತು. . 1, ಮೇ 2021 ರಿಂದ ಪ್ರಾರಂಭವಾದ 18-45 ವಯಸ್ಸಿನವರಿಗೆ ತೆರೆಯಲ್ಪಟ್ಟ ಲಸಿಕೆ ಅಭಿಯಾನ-3 ರ ಅಡಿಯಲ್ಲಿ ಲಸಿಕೆ ನೋಂದಣಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಭಿವೃದ್ಧಿಪಡಿಸಿದೆ.ಕೋವಿನ್ ವೆಬ್ಸೈಟ್ ಮತ್ತು ಆ್ಯಪ್ ಮೂಲಕ ಮಾಡಬೇಕಾಗಿದೆ. TRAI ಮಾಹಿತಿಯ ಪ್ರಕಾರ , ಭಾರತದ ಗ್ರಾಮೀಣ ಪ್ರದೇಶಗಳ ಟೆಲಿ-ಸಾಂದ್ರತೆಯು ಕೇವಲ 59.5% ರಷ್ಟಿದೆ. ಮತ್ತು ಭಾರತವು ಕೇವಲ 75..61 ಕೋಟಿ ಬ್ರಾಡ್ಬ್ಯಾಂಡ್ ಚಂದಾದಾರರನ್ನು ಹೊಂದಿದೆ, ಇದು ದೇಶದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಸ್ವಲ್ಪ ಹೆಚ್ಚು. ಕಡ್ಡಾಯ ಆನ್ಲೈನ್ ನೋಂದಣಿ, ಇಂಗ್ಲಿಷ್ ಭಾಷೆಯ ಮೂಲಕ ಸಂವಹನಕ್ಕೆ ಆಸ್ಪದ ಕಲ್ಪಿಸಿರುವುದು ಭಾರತದ ಲಸಿಕೆ ಅಭಿಯಾನ ಜನಸಂಖ್ಯೆಯ ಹೆಚ್ಚಿನ ಜನ ತಲುಪದಂತೆ ಮಾಡಿದೆ. ಆದ್ದರಿಂದಲೇ ಬೆಂಗಳೂರಿನಲ್ಲಿ ಲಸಿಕೆ ಅಭಿಯಾನ-3 ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡು ಸರದಿ ಸಾಲಿನಲ್ಲಿ ನಿಂತಿರುವವಲ್ಲಿ ಮಧ್ಯಮ ವರ್ಗದ ಇಂಗ್ಲಿಷ್ ಶಿಕ್ಷಿತ ಯುವಕರು, ತರುಣರು ಕಾಣುತ್ತಿರುವರೇ ಹೊರತು ಕೆಳಮಧ್ಯಮ , ಕೆಳವರ್ಗದ ಜನರಲ್ಲ. ಬೆಂಗಳೂರಿನ ವಿದ್ಯಾವಂತ ಯುವಕರು ತುಮಕೂರು , ಕನಕಪುರ , ದೇವನಹಳ್ಳಿ ಮುಂತಾದ ಊರುಗಳಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಅಧಾರ್ ಅಥವಾ ಬೇರೆ ಸರ್ಕಾರ ಗುರುತಿಸುವ ದಾಖಲೆಯ ಸಂಖ್ಯೆಗಳನ್ನು ಎಸ್.ಎಂ.ಎಸ್ ಮೂಲಕ ಕಳಿಸಿ ನೋಂದಣಿ ಮಾಡಿಸಿಕೊಳ್ಳಲು ಹಾಗೂ , ರಾಜ್ಯ ಭಾಷೆಗಳಲ್ಲಿ ಲಸಿಕೆ ನೋಂದಣಿಯ ವಿವರಗಳನ್ನು ಒದಗಿಸದಿದ್ದಲ್ಲಿ , ವಿದ್ಯಾವಂತ ವರ್ಗ ತಮಗಿಂತ ದುರ್ಬಲರಾದವರ ಅವಕಾಶವನ್ನು ಬಳಸಿಕೊಳ್ಳಲು ಆಸ್ಪದ ಒದಗಿಸಿದಂತಾಗುತ್ತದೆ. ಒಕ್ಕೂಟ ಸರ್ಕಾರದ ಮುಕ್ತ ಮಾರುಕಟ್ಟೆ ನೀತಿಯಡಿಯಲ್ಲಿ ಪಂಜಾಬ್ ಸರ್ಕಾರ ಸ್ಪುಟ್ನಿಕ್ ವಿ , ಫೈಜರ್ , ಮಾದರ್ನಾ , ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿಗಳನ್ನು ಲಸಿಕೆ ಪೂರೈಸಲು ಸಂಪರ್ಜಿಸಿದ್ದಿತು. ಇದಕ್ಕೆ ಪ್ರತಿಯಾಗಿ ಫೈಜರ್ ಕಂಪೆನಿ ದೇಶಗಳೊಂದಿಗೆ ಮಾತ್ರ ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ. ರಾಜ್ಯಗಳೊಂದಿಗೆ ಅಲ್ಲ. ಆದ್ದರಿಂದ ನಿಮ್ಮೊಂದಿಗೆ ಲಸಿಕೆ ಸರಬರಾಜು ಒಪ್ಪಂದ ಮಾಡಿಕೊಳ್ಳಲು ಸಾದ್ಯವಿಲ್ಲ ಎಂದು 23/04/2021 ರಂದು ತಿಳಿಸಿತು. [48] ಮಾಡರ್ನಾ ಕಂಪೆನಿಯಿಂದಲೂ ಇದೇ ಉತ್ತರ ದೆಹಲಿ ಸರ್ಕಾರಕ್ಕೆ ಬಂದಿದ್ದಿತು. ರಾಜ್ಯ ಸರ್ಕಾರಗಳು ಭಾರತದ ಹೊರಗಿನ ಕಂಪೆನಿಗಳಿಂದ ನೇರವಾಗಿ ಲಸಿಕೆ ಖರೀದಿಸಲು ಸಾದ್ಯವಾಗುವುದಿಲ್ಲ .https://www.business-standard.com/article/current-affairs/pfizer-says-it-will-supply-coronavirus-vaccine-only-to-central-govts-121052400950_1.html ಇದು ಹೀಗೇಕಾಯಿತು ಎನ್ನುವುದನ್ನು ತಿಳಿಯಲು ಸ್ವಲ್ಪ ಬೇರೆ ಕಡೆ ತಿರುಗಿ ನೋಡಬೇಕಾಗುತ್ತದೆ. ಯಾವುದೇ ಲಸಿಕೆ ನೀಡಿದಾಗ ಕೆಲವು ಅಡ್ದ ಪರಿಣಾಮಗಳಾಗಬಹುದು. ಇವು ಹೆಚ್ಚಿಲ್ಲದಿದ್ದರೂ ಕಾನೂನಿನಡಿಯಲ್ಲಿ ಪರಿಹಾರ ಕೋರುವ ಪ್ರಕರಣಗಳಾಗಿರುತ್ತವೆ. ಇಂತಹ ಯಾವುದೇ ಸಂದರ್ಭ ಬಂದರೆ ಕಂಪೆನಿಯನ್ನು ಕಾಪಾಡುವ ಭರವಸೆಯನ್ನು ಭಾರತ ಸರ್ಕಾರ ಯಾವುದೇ ಲಸಿಕೆ ಕಂಪೆನಿಗೆ ಕೊಟ್ಟಿಲ್ಲ. ಇಂತಹ ಬೆಂಬಲವಿಲ್ಲದೆ ಭಾರತದಂತಹ ದೇಶದಲ್ಲಿ ಲಕ್ಷಕ್ಕೆ ಒಂದರಂತೆ ಅಡ್ದ ಪರಿಣಾಮವನ್ನು ಲೆಕ್ಕಿಸಿದರೂ ಅದು ಭಾರಿ ಎಣಿಕೆಯೇ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ವಿವಿಧ ರಾಜ್ಯಗಳೊಂದಿಗೆ ಕಾನೂನಿನ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ವಿದೇಶಿ ಕಂಪೆನಿಗಳು ಬಯಸವು. ಇಂತಹ ಭರವಸೆಯನ್ನು ಯಾವುದೇ ರಾಜ್ಯ ಸರ್ಕಾರಗಳು ಕೊಡಲು ಅವುಗಳಿಗೆ ಪರಿಣಿತಿಯಾಗಲಿ, ಸಂಪನ್ಮೂಲಗಳಾಗಲಿ ಇಲ್ಲ. ತೆರೆದ ಮಾರುಕಟ್ಟೆಯಲ್ಲಿ ಲಸಿಕೆಗಳನ್ನು ಖರೀದಿಸುವುದು , ಸಂಪನ್ಮೂಲ ಒದಗಿಸಿವುದು ದೇಶದಲ್ಲಿ ಯಾವುದೇ ಗುತ್ತಿಗೆಯನ್ನು ಕರೆದಷ್ಟು ಸುಲಭವಲ್ಲ ಎಂದು ರಾಜ್ಯ ಸರ್ಕಾರಗಳಿಗೆ ಗೊತ್ತಾಗಿದ್ದಿತು. ಭಾಜಪ ಆಡಳಿತ ಸರ್ಕಾರಗಳು ಒಳಗೆ ಕಡಿಸಿಕೊಂಡರೂ ಏನೂ ಆಗದಂತೆ ಸುಮ್ಮನಿದ್ದರೆ , ವಿರೋಧ ಪಕ್ಷಗಳ ಆದಳಿತದ ಸರ್ಕಾರಗಳು ಸುಮ್ಮನಿರಲಿಲ್ಲ. 31/05/2021 ಕೇರಳ ಮುಖ್ಯಮಂತ್ರಿ ಪಿಣರಯಿ ವಿಜಯನ್ ಭಾಜಪ ಹೊರತಾದ 11 ರಾಅಜ್ಯಗಳ ಮುಖ್ಯಮಂತ್ರಿಗಳಿಗೆ ತೆರೆದ ಪತ್ರ ಬರೆದು ಒಕ್ಕೂಟ ಸರ್ಕಾರ ತನ್ನ ಹೊಣೆಯನ್ನು ಹೊರಬೇಕು. ತಾನೇ ಎಲ್ಲರ ಪರ ಕೋಂಡು , ಉಚಿತವಾಗಿ ಲಸಿಕೆ ಕೊಮ್ಡು , ರಾಜ್ಯ ಸರ್ಕಾರಳಿಗೆ ಹಾಕಲು ಕೊಡಬೇಕು ಎಂದು ಒತ್ತಾಯಿಸಿದರು. [49] ಸರಿಯಾಗಿ ಯೋಜಿಸದೆ ಮಾಡಿದ ತೀರ್ಮಾನಾಗಳು ತನಗೇ ತಿರುಗು ಬಾನವಾಗಿ ಲಸಿಕೆ ಕಾರ್ಯಕ್ರಮದ ಸಂಪೂರ್ಣ ಸೋಲು ತನ್ನ ಮೇಲೆ ಬರುತ್ತದೆ ಎನ್ನುವ ಸತ್ಯ ಒಕ್ಕೂಟ ಸರ್ಕಾರಕ್ಕೆ ಮನದಟ್ಟಾಗತೊಡಗಿತು. ಇದಕ್ಕೆ ಪುರಾವೆಯೆಂಬಂತೆ ಒಕ್ಕೂಟ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಲವ ಅಗರ್’ವಾಲ್ ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನುವ ಹೇಳಿಕೆ ನೀಡಿದರು. [50] ತಾನೇ ಹೆಣೆದಕೊಂಡಿದ್ದ ಲಸಿಕೆ ಬಲೆಯಲ್ಲಿ ಸಿಲುಕಿದ್ದ ಒಕ್ಕೂಟ ಸರ್ಕಾರ ಅದರಿಂದ ಹೇಗಾದರೂ ಹೊರಗೆ ಬರಲು ಕಳ್ಳಗಂಡಿಯೊಂದನ್ನು ಹುಡುಕುತ್ತಿದ್ದಿತು. ಸರ್ವೋಚ್ಛ ನ್ಯಾಯಾಲಯ ಲಸಿಕೆ ಕುರಿತಾಗಿ ತಾನೇ ದಾಖಲಿಸಿಕೊಂಡಿದ್ದ ವಿಚಾರಣೆಯ ಸಮಯದಲ್ಲಿ ಒಕ್ಕೂಟ ಸರ್ಕಾರಕ್ಕೆ ಕಠಿಣ ಕೇಳ್ವಿಗಳನ್ನು ಹಾಕಿದ್ದಿತು. ಈಗಿರುವ ಸ್ಥಿತಿಯಲ್ಲಿ ಅವುಗಳಿಗೆ ಉತ್ತರಿಸಿದರೆ ಸರ್ಕಾರ ಮುಜುಗರಕ್ಕೆ ಒಳಗಾಗುವುದು ಮಾತ್ರವಲ್ಲ , ತೊಂದರೆಗೂ ಸಿಲುಕಬಹುದೆಂದು ಅರಿತ ಪ್ರಧಾನಿ ಮೋದಿಯವರು 7/06/2021 ರಂದು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ 75% ಲಸಿಕೆಗಳನ್ನು ಉಚಿತವಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ 21/06/2021 ರಿಂದ ಹಾಕುವುದಾಗಿ ಹೇಳಿದರು. ರಾಜ್ಯ ಸರ್ಕಾರಗಳು ಕೇಳಿದ್ದರಿಂದಲೇ , ಅವುಗಳೊಡನೆ ಸಮಾಲೋಚಿಸಿ 19/04/2021 ರಂದು ಒಕ್ಕೂಟ ಸರ್ಕಾರ ಲಸಿಕೆಯನ್ನು ಮುಕ್ತ ಮಾರುಕಟ್ಟೆ ನೀತಿಯಡಿಯಲ್ಲಿ ತಂದಿತು. ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಸೋತಿದ್ದರಿಂದಲೇ ಒಕ್ಕೂಟ ಸರ್ಕಾರ ಮರುಪ್ರವೇಶ ಮಾಡಬೇಕಾಯಿತು ಎಂದು ಲಸಿಕೆ ಸೋಲಿನ ಎಲ್ಲ ಹೊರೆಯನ್ನು ತಮ್ಮಿಂದ ರಾಜ್ಯ ಸರ್ಕಾರಗಳಿಗೆ ಸಾಗಿಸಿದರು. ಮಮತಾ ಬ್ಯಾನರ್ಜಿಯವರ ಹೊರತಾಗಿ ಬೇರೆ ಯಾವ ರಾಜ್ಯಗಳೂ ತಾವೇ ಲಸಿಕೆ ಖರೀದಿಸಿ ಹಾಕುವುದಾಗಿ ಹೇಳಿರಲಿಲ್ಲ. ಅದರ ಬದಲು ಲಸಿಕೆಯನ್ನು ಕೊರತೆಯಾಗದಂತೆ ಸರಬರಾಜು ಮಾಡಬೇಕೆಂದು , ಅದನ್ನು ಹಾಕುವ ನೀತಿಯನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳಿಗೆ ಬಿಡಬೇಕೆಂದು ಒತ್ತಾಯಿಸಿದ್ದವು. ಆದ್ದರಿಂದ ಪ್ರಧಾನಿಯವರ ಹೇಳಿಕೆ ತಪ್ಪೆಂದು ಛತ್ತೀಸಘಡ, ಪಂಜಾಬ್, ಕೇರಳ, ಮಧ್ಯಪ್ರದೇಶ , ಬಿಹಾರ , ತೆಲಂಗಾಣ ಸರ್ಕಾರಗಳು ಸ್ಪಷ್ಟೀಕರಣ ನೀಡಿದವು. [47] ಇಷ್ಟೆಲ್ಲ ಆದ ಮೇಲೆ ಕೋವಿಡ್-19 ತಡೆಯಲು ಲಸಿಕೆ ಅಭಿಯಾನ ಗೆಲ್ಲಲು ಬೇರ ದಾರಿಗಳಿದ್ದವೇ ಎನ್ನುವ ಕೇಳ್ವಿ ಎದುರಾಗುತ್ತದೆ. ಲಸಿಕೆ ಅಭಿಯಾನ ಪ್ರಾರಂಭದಲ್ಲಿಯೇ ಲಸಿಕೆಯನ್ನು ಜಗತ್ತಿನ ಯಾವುದೇ ಮೂಲದಿಂದ ರಾಜ್ಯಗಳು ತರಿಸಿಕೊಳ್ಳುವ , ಬೆಲೆಯನ್ನು ಮುಕ್ತಮಾರುಕಟ್ಟೆಯ ನಿರ್ಧರಿಸಿಕೊಳ್ಳುವ ಅವಕಾಶ ನೀಡಬೇಕಾಗಿದ್ದಿತು. ಸಂಘಟಿತ ವಲಯದ ಸಂಸ್ಥೆ, ಉದ್ಯಮ,ಕಾರ್ಖಾನೆಗಳು ತಮ್ಮ ನೌಕರರಿಗೆ ಯಾವುದೇ ಅನುಮೋದಿತ ಮೂಲದಿಂದ ಲಸಿಕೆಯನ್ನು ಖರೀದಿಸಿ ಹಾಕಿಸುವ , ಹಂತಹಂತವಾಗಿ ಅದನ್ನು ನೌಕರರ ಸಂಬಳ ಅಥವಾ ಬೇರೆ ಇನ್ನಾವುದೋ ಮೂಲದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅಥವಾ ಸರಳ ಜೀವವಿಮೆಯ ಮೂಲಕ ಪಾವತಿಸುವ ಅವಕಾಶ ನೀಡಿದ್ದರೆ ಲಸಿಕೆಯನ್ನು ಒದಗಿಸುವ , ಹಂಚುವ , ಹಾಕುವ ಹೊರೆಯಿಂದ ಸರ್ಕಾರಗಳು ಅದೆಷ್ಟೋ ಬಿಡುಗಡೆಯಾಗುತ್ತಿದ್ದವು. ಆರೋಗ್ಯ ವಲಯದ ಮುಂಚೂಣಿ ಕಾರ್ಯಕರ್ತರಿಗೆ , ಕೊರೊನಾ-19 ಯೋಧರಿಗೆ ಹಾಗೂ ಬಡತನದ ರೇಖೆಯ ಕೆಳಗಿರುವ ಮಂದಿಗೆ ಉಚಿತ ಲಸಿಕೆ ಹಂಚಿದ್ದರೆ ಸಾಕಾಗಿದ್ದಿತು. ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿದರೆ ಆಗುತ್ತಿದ್ದ ವೆಚ್ಚ ಲಾಕ್ ಡೌನ್ ನಿಂದ ಆಗುತ್ತಿರುವ ಆರ್ಥಿಕ ನಷ್ಟ, ಆರೋಗ್ಯ ವ್ಯವಸ್ಥೆಯ ಮೇಲೆ ಬೀಳುತ್ತಿರುವ ಒತ್ತಡ ಮತ್ತು ಅದನ್ನು ನಿಭಾಯಿಸಲು ಮಾಡುತ್ತಿರುವ ವೆಚ್ಚ , ಮಂದಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದರಿಂದ ಆಗುತ್ತಿರುವ ಕೆಲಸ ನಷ್ಟದ ಶೇಕಡ 1 ನ್ನೂ ಮೀರುತ್ತಿರಲಿಲ್ಲ. ರಾಜ್ಯ ಸರ್ಕಾರ , ಸಾಮಾಜಿಕ ಸರ್ಕಾರೇತರ ಸಂಸ್ಥೆಗಳು , ದೇಶದ ಕೈಗಾರಿಕೆ ವಲಯ ಎಲ್ಲವನ್ನೂ ದೂರವಿಟ್ಟು ಪ್ರಧಾನಿ ಕಛೇರಿ ಮೂಲಕ ಕೆಂದ್ರೀಕೃತಗೊಂಡ ತೀರ್ಮಾನಗಳು ಈಗಿನ ಲಸಿಕೆ ಅವಾಂತರಕ್ಕೆ ಕಾರಣವಾದವು,. ಕೆಲ ತಿಂಗಳುಗಳ ನಂತರ ಸಾಕಷ್ಟು ಲಸಿಕೆ ದಕ್ಕತೊಡಗಿದ ನಂತರವೂ ಸರಿಯಾದ ಯೋಜನೆ ಮಾಡದಿದ್ದರೆ ಎದುರಾಗುಬಹುದಾದ ತೊಂದರೆ ಅನೂಹ್ಯವಾದುದು. ದೇಶಾದ್ಯಂತ ಸೆಕೆಂಡಿಗೆ ನೂರು ಜನರಿಗೆ ಲಸಿಕೆ ಹಾಕಿದರೂ 100 ಕೋಟಿ ಜನರನ್ನು ತಲುಪಲು 4 ತಿಂಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಆಸ್ಪತ್ರೆ ಕೇಂದ್ರಿತ ಲಸಿಕೆ ಹಾಕುವ ಕಾರ್ಯಮ್ರಮ ಮೀರಿ ಹೆಚ್ಚಿನದನ್ನು ಯೋಚಿಸಿ ಯೋಜಿಸಬೇಕಾಗಿದೆ. ನಗರ, ಹಳ್ಳಿಗಳಲ್ಲಿ ವ್ಯಾಪಕ ಲಸಿಕೆ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ನಡೆಸಲು ಒಳಹೊಕ್ಕು ಪಡೆಯುವ ಕೆಂದ್ರ (ಡ್ರೈವ್ ಇನ್ ಸೆಂಟರ್ಸ್) , ದೊಡ್ದ ಔಷದಿ ತಯಾರಕ ಕಂಪೆನಿ ಮತ್ತು ವಿತರಕರ ಮೂಲಕ ನಡೆಸಲ್ಪಡುವ ತಾತ್ಕಾಲಿಕ ಲಸಿಕೆ ಶಿಬಿರ , ಹಳ್ಳಿಗಳಲ್ಲಿ ಸಂಚಾರಿ ವಾಹನ ಲಸಿಕೆ , ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಸರಣಿ ಮುಂತಾದವುಗಳನ್ನು ಹೊಸರೀತಿಯಲ್ಲಿ ಒಳಗೊಂಡು , ಸರಿಯಾಗಿ ದಾಖಲಿಸಿ , ನಿರ್ವಹಿಸುವತ್ತ ತಕ್ಷಣವೇ ಗಮನ ಹರಿಸಬೇಕಾಗಿದೆ. ಭಾವುಕವಾಗಿ ಟೀಕಾ ಉತ್ಸವವನ್ನು ಪ್ರಚಾರ ಮಾಡುವುದು , ಮನಸೆಳೆಯುವ ಮಾತುಗಳನ್ನಾಡುವುದು , ಮೋಡಿಮಾತಿನ ಮೂಲಕ ಬೇರೆಡೆ ಗಮನ ಸೆಳೆಯುವುದು ಸಮಸ್ಯ ಇನ್ನು ಹೆಚ್ಚುವಂತೆ ಮಾಡುತ್ತವೆಯೇ ಹೊರತು ಪರಿಹರಿಸುವುದಿಲ್ಲ. ಜಗತ್ತಿನ ಹಲವಾರು ದೇಶಗಳು ಕೋವಿಡ್-19 ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡುತ್ತಿವೆ. ಇದಕ್ಕಾಗಿ ಅವು ವಿಶ್ವಆರೋಗ್ಯ ಸಂಸ್ಥೆ ಮಾನ್ಯತೆ ಮಾಡಿದ ಮಾಡೆರ್ನಾ (mRNA-1273) , ಫೈಝರ್ (BNT162b2) , ಜಾನ್ಸನ್ ಅಂಡ್ ಜಾನ್ಸನ್ (Ad26.COV2.S) , ಆಸ್ಟ್ರಾಝೆನೆಕಾ (AZD1222) , ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Covishield) ಸೈನೋಫಾರ್ಮ್ BBIBP-CorV) ಲಸಿಕೆಗಳನ್ನು ಪಡೆದವರನ್ನು ಮಾತ್ರ ಒಪ್ಪುತ್ತಿವೆ. [42] ಕೋವಿಷೀಲ್ಡ್ ಅಮೆರಿಕದಲ್ಲಿ ಇನ್ನೂ ಅನುಮೋದನೆಗೊಂಡಿಲ್ಲ. ಭಾರತೀಯರಿಗೆ ಲಸಿಕೆಯ ಆಯ್ಕೆ ಇರಲಿಲ್ಲ ಹಾಗಾಗಿ ವಿದೇಶಕ್ಕೆ ಹೋಗಬೇಕಾದ ಹಲವರು- ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ- ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ. ಭಾರತ ಹೊರತಾಗಿ ಗಯಾನ , ಇರಾನ್ , ಮೌರಿಷಸ್ , ಮೆಕ್ಸಿಕೊ, ನೇಪಾಳ , ಪರಗ್ವೆ, ಫಿಲಿಫೈನ್ಸ್ , ಜಿಂಬಾಬ್ವೆ ಈ 9 ದೇಶಗಳು ಮಾತ್ರ ಕೋವ್ಯಾಕ್ಸಿನ್’ಗೆ ಅನುಮತಿ ನೀಡಿವೆ. [43] ಆದ್ದರಿಂದ ಭಾರತ ಸರ್ಕಾರ ತಕ್ಷಣ ಎಚ್ಚೆತ್ತು ಕೋವ್ಯಾಕ್ಸಿನ್ ವಿಶ್ವ ಆರೋಗ್ಯ ಸಂಸ್ಥೆಯ ಪಟ್ಟಿಯಲ್ಲಿ ಬರುವಂತೆ ನೋಡಿಕೊಳ್ಳದಿದ್ದರೆ ಇನ್ನೊಂದು ರಾಜತಾಂತ್ರಿಕ ಗಂಡಾಂತರ ಎದುರಾಗಲಿದೆ. ********************** ಕನ್ನಡಿಗರು ಸ್ವಾಭಿಮನಿಗಳಾಗಿದ್ದರೂ ಕರ್ನಾಟಕದ ರಾಜಕಾರಣಿಗಳ ಬಗ್ಗೆ ಆ ಮಾತು ಹೇಳಲಾಗದು. ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಿಂದಲೂ ಕರ್ನಾಟಕದ ಕಾಂಗ್ರೆಸ್ ಪಕ್ಷದ ಶಾಸಕರು , ಸಂಸದರು ಮೇಲಿನಿಂದ ಬಂದ ಎಲ್ಲವನ್ನೂ ತಲೆ ತಗ್ಗಿಸಿ, ಮಂಡಿಯೂರಿ ಪ್ರಸಾದದಂತೆ ಪಡೆಯುತ್ತ ಸರಿಯಾದ , ಸಮಯೋಚಿತ , ನ್ಯಾಯಯುತ ಸಂಗತಿಗಳಿಗೂ ದನಿಯೆತ್ತದಂತಿದ್ದರು. ಈ ವಿಷಯದಲ್ಲಿ ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಯಾವುದೇ ಭೇದವಿಲ್ಲ ಎನ್ನುವುದು ಪ್ರತಿ ದಿನ ಸಾಬೀತಾಗುತ್ತಿದೆ. ರಾಜ್ಯದಿಂದ ಆರಿಸಲ್ಪಟ್ಟ 26 ಭಾಜಪ ಸಂಸದರಲ್ಲಿ ಯಾರೊಬ್ಬರೂ ಈವರೆಗೆ ಕೆಂದ್ರ ಸರ್ಕಾರ , ನರೇಂದ್ರ ಮೋದಿ ಕರ್ನಾಟಕದತ್ತ ತೋರುತ್ತಿರುವ ಮಲತಾಯಿ ಧೋರಣೆಯನ್ನು ಪ್ರಶ್ನಿಸುವ ಎದೆಗಾರಿಕೆ ಹೊಂದಿಲ್ಲ. ಕೇಂದ್ರದ ಸಂಚಿವ ಸಂಪುಟದಲ್ಲಿರುವವರು ಪ್ರತಿ ದಿನ ಟ್ವಿಟರ್ ಮೂಲಕ ಕೇಂದ್ರ ಸರ್ಕಾರದ ಅತಿ ಸಣ್ಣ ಕೆಲಸಗಳಿಗೂ ನರೇಂದ್ರ ಮೋದಿಯವರನ್ನು ಅಭಿನಂದಿಸಲು ನಾ ಮುಂದು , ತಾ ಮುಂದು ಎನ್ನುವ ಪೈಪೋಟಿಯಲ್ಲಿದ್ದಾರೆ. ಜಿಎಸ್’ಟಿ ಕೊರತೆ , ಕುಸಿದ ಆರ್ಥಿಕತೆಯ’ ಕೋವಿಡ್-19 ಸ್ಥಿತಿಯಲ್ಲಿ ಲಸಿಕೆಯ ಸರಬರಾಜಿನ ಕೊರತೆ ಮತ್ತು ಏಕಾಏಕಿ ಅದನ್ನು ಖರೀದಿಸುವ , ಹಣ ಹೊಂದಿಸುವ ಹೊಣೆಯನ್ನು ರಾಜ್ಯ ಸರ್ಕಾರದ ಮೇಲೆ ಹೇರಿರುವುದನ್ನು ಪ್ರಶ್ನಿಸದ ಸ್ಥಿತಿಯಲ್ಲಿದ್ದಾರೆ. 12 ಮೇ 2021 ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಜನ ಲಸಿಕೆಗಾಗಿ ಬೊಬ್ಬೆ ಹಾಕಬಾರದೆಂದು ತಿಳಿಸಿದ್ದಾರೆ. ತಮಗೆ ಮುಖ್ಯಂಅತ್ರಿಯಾಗಿ ಅಧಿಕಾರ ಹಸ್ತಾಂತರ ಆಗದಿದ್ದಾಗ ಯಡಿಯೂರಪ್ಪನವರು ರಾಜ್ಯಾದ್ಯಂತ ಬೊಬ್ಬೆ ಹಾಕುತ್ತ ಜನರ ಬಳಿ ಹೋಗಿದ್ದನ್ನು ಮರೆಯಬಾರದು. [1] https://pib.gov.in/PressReleasePage.aspx?PRID=1645363 [2]https://www.business-standard.com/article/current-affairs/national-expert-group-meets-covid-19-vaccine-makers-to-discuss-road-ahead-120081701522_1.html [3]https://www.indiatoday.in/coronavirus-outbreak/story/don-t-have-details-on-national-expert-group-on-vaccine-claims-health-ministry-icmr-rti-1747242-2020-12-07 [4] http://www.ficci.in/pressrelease-page.asp?nid=4038. [5]https://www.bharatbiotech.com/covaxin.html ಮತ್ತು https://scroll.in/article/991793/questioned-about-vaccine-shortages-and-export-policy-centre-responds-with-outburst-against-states [6] ttps://ehealth.eletsonline.com/2020/07/icmr-urges-bharat-biotech-to-accelerate-covaxin-trial/ ಮತ್ತು https://scroll.in/article/966815/with-demand-for-vaccine-by-august-15-has-headline-management-infected-indias-medical-research-too ಮತ್ತು https://www.firstpost.com/health/covid-19-vaccine-icmr-urges-institutes-chosen-for-bharat-biotechs-covaxin-complete-recruitment-for-human-trials-by-7-july-8553181.html [7] https://scroll.in/article/966416/its-unscientific-doctors-entrusted-with-covid-19-vaccine-trial-slam-icmrs-august-15-deadline [8] With demand for vaccine by August 15, has headline management infected India’s medical research too?, https://scroll.in/article/966815/with-demand-for-vaccine-by-august-15-has-headline-management-infected-indias-medical-research-too ಮತ್ತು https://www.livemint.com/news/india/it-s-important-to-expedite-clinical-trials-of-an-indigenous-virus-vaccine-icmr-11593861887346.html [9] https://scroll.in/article/991793/questioned-about-vaccine-shortages-and-export-policy-centre-responds-with-outburst-against-states [10] https://scroll.in/article/983084/covid-19-in-the-rush-to-declare-an-atmanirbhar-vaccine-is-india-playing-with-fire [11]https://www.thehindu.com/business/Industry/india-to-play-vital-role-in-equitable-distribution-of-covid-19-vaccines-around-the-world-pharma-industry/article33430054.ece [12]https://theprint.in/opinion/indias-covid-vaccine-policy-is-bound-to-promote-inefficiency-inequality/653836/ [13]https://theprint.in/opinion/indias-covid-vaccine-policy-is-bound-to-promote-inefficiency-inequality/653836/ [14]https://www.financialexpress.com/lifestyle/health/covid-19-why-india-is-facing-vaccine-shortage/2248748/ [15] https://theprint.in/health/as-cases-surge-modi-govt-tells-serum-bharat-biotech-to-boost-covid-vaccine-manufacturing/627370/ [16] https://theprint.in/opinion/indias-covid-vaccine-policy-is-bound-to-promote-inefficiency-inequality/653836/ [17]https://m.economictimes.com/industry/healthcare/biotech/healthcare/india-may-not-need-pfizers-vaccine-says-harsh- vardhan/articleshow/79377147. cms [18] https://pib.gov.in/PressReleseDetail.aspx?PRID=1693019 .[19]https://www.financialexpress.com/lifestyle/health/covid-19-why-india-is-facing-vaccine-shortage/2248748/ [20] https://t.co/zsWCYml5dJ?amp=1 [21] https://timesofindia.indiatimes.com/india/compensation-if-covaxin-causes-serious-adverse-effect/articleshow/80294755.cms [22]https://www.dw.com/en/india-front-line-workers-optimistic-about-vaccination-drive/a-56337826 [23] https://theprint.in/health/as-cases-surge-modi-govt-tells-serum-bharat-biotech-to-boost-covid-vaccine-manufacturing/627370/ [24]https://www.thehindu.com/news/international/we-have-supplied-more-vaccines-globally-than-having-vaccinated-our-own-people-india-tells-united-nations/article34175794.ece [25] https://pib.gov.in/PressReleseDetailm.aspx?PRID=1710190 [26]https://www.ndtv.com/india-news/no-shortage-of-vaccine-says-harsh-vardhan-as-covid-cases-surge-2408504 [27]https://twitter.com/ndtv/status/1379754658135121923ef_src=twsrc%5Etfw%7Ctwcamp%5Etweetembed%7Ctwterm%5E1379754658135121923%7Ctwgr%5E%7Ctwcon%5Es1_&ref_url=https%3A%2F%2Fscroll.in%2Farticle%2F991690%2Fharsh-vardhan-blames-ordinary-indians-for-covid-19-surge-ignoring-bjp-rally-tweets-on-his-own-feed [28] https://twitter.com/hashtag/CoronavirusPandemic?src=hashtag_click ಮತ್ತು Harsh Vardhan blames ordinary Indians for Covid-19 surge – ignoring BJP rally tweets on his own feed, https://scroll.in/article/991690/harsh-vardhan-blames-ordinary-indians-for-covid-19-surge-ignoring-bjp-rally-tweets-on-his-own-feed [29] https://indianexpress.com/article/india/harsh-vardhan-vaccine-age-shortage-maharashtra-delhi-7263168/ [30] https://scroll.in/latest/991711/coronavirus-odisha-closes-700-vaccine-centres-as-states-warn-of-shortage-amid-surge [30] https://scroll.in/latest/991711/coronavirus-odisha-closes-700-vaccine-centres-as-states-warn-of-shortage-amid-surge [31] https://www.ndtv.com/ghaziabad-news/coronavirus-vaccines-out-of-stock-notice-at-many-hospitals-in-ghaziabad-near-delhi-2408934?pfrom=home-ndtv_bigstory [32] https://scroll.in/article/991793/questioned-about-vaccine-shortages-and-export-policy-centre-responds-with-outburst-against-states [33]https://indianexpress.com/article/cities/chandigarh/tika-utsav-concludes-punjab-fails-to-hit-its-daily-target-even-once-7274165/ [34] https://www.financialexpress.com/lifestyle/health/covid-19-tika-utsav-doesnt-do-the-trick-vaccination-levels-remain-low/2233295/ [35]https://www.financialexpress.com/lifestyle/health/covid-19-why-india-is-facing-vaccine-shortage/2248748/ [36]https://www.reuters.com/world/india/india-approves-russias-sputnik-v-vaccine-economic-times-2021-04-12/ [37]https://www.downtoearth.org.in/news/health/a-dose-of-truth-the-real-story-of-india-s-covid-19-vaccination-programme-76548 [38] https://www.timesnownews.com/india/article/covid-19-vaccine-for-all-above-age-of-18-years-from-may-1-govt/747024 [39] https://www.seruminstitute.com/news_sii_media_210421.php [40]https://www.indiatoday.in/magazine/cover-story/story/20210517-india-s-covid-collapse-part-8-why-the-vaccine-rollout-is-so-slow-1800930-2021-05-10?%3F= [41] Restricted Use of COVAXINTM Under Clinical Trial Mode Implementation Plan No: BBIL/COVAXINTM/2021 Version No: 4.0; Date: 11-01-2021, [42] https://covid19.trackvaccines.org/agency/who/ [43] https://www.indiatoday.in/coronavirus-outbreak/vaccine-updates/story/coronavirus-vaccine-choice-indians-travelling-abroad-covishield-covaxin-1804782-2021-05-20 [44] https://timesofindia.indiatimes.com/india/why-brazil-has-refused-permission-to-import-covaxin-doses/articleshow/81782425.cms