ದೇಹ ಭಾವನೆ : ನುಡಿ-ನಡೆ
ರಾಮಕೃಷ್ಣ ಪರಮಹಂಸ : ಭ್ರಮೆಗಳ ತೂಗುಯ್ಯಾಲೆ ಪುಸ್ತಕದ ಆಯ್ದ ಭಾಗ
ಎಲ್ಲ ಧರ್ಮ ಗುರುಗಳು ದೈಹಿಕ-ಲೌಕಿಕ-ಮಾನಸಿಕ ಸಂಕಷ್ಟದ ಸಮಯದಲ್ಲಿ ಹೇಗಿರಬೇಕೆಂದು ಭಕ್ತರಿಗೆ ಬೋಧಿಸುತ್ತಾರೆ. ತಾವೇ ಅಂತಹ ಸಂಕಷ್ಟಗಳಿಗೆ ಒಳಗಾದಾಗ ಅವರ ನಡವಳಿಕೆ ಬೋಧಿಸಿದ್ದಕ್ಕಿಂತಲೂ ಭಿನ್ನವಾಗಿರುತ್ತದೆ. ಸ್ವಾಮಿ ವಿವೇಕಾನಂದ , ಅರವಿಂದ ಘೋಷ್ ಮಾತ್ರವಲ್ಲ ‘ಭಗವಾನ್ ರಾಮಕೃಷ್ಣ’ರೂ ಇದಕ್ಕೆ ಹೊರತಾಗಿರಲಿಲ್ಲ. ಅತಿಯಾಗಿ ತಿಂದು ಅಜೀರ್ಣದಿಂದ ನರಳುತ್ತಿದ್ದ ರಾಮಕೃಷ್ಣರಿಗೆ ಭಗವತಿಯನ್ನು ಬೇಡಿ ಗುಣಪಡಿಸಿಕೊಳ್ಳಬೇಕೆಂದು ಹೃದಯರಾಮ ಸೂಚಿಸಿದ್ದ. ಅದನ್ನು ಕೇಳಿಕೊಳ್ಳಲು ಅವರಿಗೆ ನಾಚಿಕೆಯಾಗಿದ್ದಿತು. ಇನ್ನೂ ಕೆಲಕಾಲ ನಿನ್ನ ನಾಮ ಸಂಕೀರ್ತನೆ ಮಾಡಲು ಈ ಹಿಂದೆ ನಾನು ಏಷಿಯಾಟಿಕ್ ಸೊಸೈಟಿಯಲ್ಲಿ ನೋಡಿದ ಬಿಗಿದಿರಿಸಿರುವ ಅಸ್ತಿಪಂಜರದಂತೆ ನನ್ನ ದೇಹವನ್ನೂ ಬಿಗಿದಿರಿಸು ಎಂದು ಬೇಡಿದ್ದರು. (133) ಒಮ್ಮೆ ಗಂಗಾಪ್ರಸಾದ ಚಿಕಿತ್ಸೆಯ ಭಾಗವಾಗಿ ಕೆಲ ದಿನ ನೀರನ್ನು ಕುಡಿಯಬಾರದು ಎಂದು ಹೇಳಿದ್ದರು. ನಿರ್ವಿಕಲ್ಪ ಸಮಾಧಿಯ ಮೂಲಕ ಮನಸ್ಸನ್ನು ಸಂಪೂರ್ಣ ಹತೋಟಿಗೆ ತೆಗೆದಕೊಂಡಿದ್ದ ಗುರುಗಳು ಇದು ನನಗೆ ಸಾದ್ಯವೇ ಎಂದು ಕಂಡ, ಕಂಡವರನ್ನು ಕೇಳಿದ್ದರು. (134)
ಭಾವಾವಸ್ಥೆ ತಲುಪಿ ಮೈಮೇಲಿನ ಎಚ್ಚರತಪ್ಪಿ ಬಿದ್ದಾಗ ರಾಮಕೃಷ್ಣರ ಹಲ್ಲುಗಳು ಮುರಿದಿದ್ದವು. ಇದನ್ನು ಅವರ ಫೊಟೊಗಳಲ್ಲಿ ಕಾಣಬಹುದು. ಇದೇ ರೀತಿ ೧೮೮೪ ಜನವರಿ ತಿಂಗಳಿನಲ್ಲಿ ಪಂಚವಟಿ ಸಮೀಪದ ಸರ್ವೇ ತೋಪಿನ ಬೇಲಿಯ ಹತ್ತಿರ ಎಚ್ಚರಿಕೆಯಿಲ್ಲದೆ ನಡೆದಾಡುತ್ತಿರುವಾಗ ಬಿದ್ದು ಎಡಗೈ ತೊಳಿನ ಮೂಳೆಯ ಕೀಲು ತಪ್ಪಿತು. ಇದನ್ನು ಸರಿಪಡಿಸಲು ವೈದ್ಯರು ತೋಳಿಗೆ ಕಟ್ಟು ಹಾಕಿದರು. ಶಾರದಾಮಣಿ ಜಯರಾಮಬಾಟಿಯಿಂದ ದಕ್ಷಿಣೇಶ್ವರಕ್ಕೆ ಗುರುವಾರದ ಮಧ್ಯಾಹ್ನ ಅಪವೇಳೆಯಲ್ಲಿ ಹೊರಟಿದ್ದರಿಂದ ತಮ್ಮ ಕೈತೋಳಿನ ಕೀಲು ತಪ್ಪಿತೆಂದು ಭಾವಿಸಿ , ಹೆಂಡತಿಯನ್ನು ಹಿಂದಕ್ಕೆ ಕಳಿಸಿ ಒಳ್ಳೆಯ ಗಳಿಗೆಯಲ್ಲಿ ಮತ್ತೊಮ್ಮೆ ಬರುವಂತೆ ಮಾಡಿದ್ದರು. (135) ಮೂಳೆ ಸ್ವಸ್ಥಾನದಲ್ಲಿ ಕೂರುವವರೆಗೆ ಮುಂದೆ ನಾಲ್ಕು ತಿಂಗಳುಗಳ ಕಾಲ ಈ ಪಟ್ಟಿ ಇದ್ದಿತು. ಈ ಅವಧಿಯಲ್ಲಿ ತಮಗೆ ಏಕೆ ಈ ಸ್ಥಿತಿ ಬಂದಿದೆ ಎನ್ನುವ ಹಳಹಳಿಕೆಯಲ್ಲಿಯೇ ಗುರುಗಳು ಕಾಲ ಕಳೆದರು. ‘ಅವತಾರ ಪುರುಷ’ನಿಗೆ ಒಂದು ಅಪಘಾತವನ್ನು ಸಹಜ ರೀತಿಯಲ್ಲಿ ತೆಗೆದುಕೊಳ್ಳುವುದು ಸಾದ್ಯವಾಗಿರಲಿಲ್ಲ. ತಮ್ಮನ್ನು ಕಾಣಲು ಬಂದಿದ್ದ ಮಹಿಮಚರಣನಿಗೆ ‘ ಒಳ್ಳೆಯದು ನಾನು ಯಂತ್ರ , ಭಗವಂತ ಯಂತ್ರಿ ಆಗಿದ್ದರೆ ನನಗೇಕೆ ಹೀಗಾಯಿತು’ ಎಂದು ಪ್ರಶ್ನಿಸಿದ್ದರು. ಗುರುಗಳ ಹಲವು ಸಲ ಮನುಷ್ಯನಿಗೆ ಇಚ್ಛಾ ಸ್ವಾತಂತ್ರವೇ ಇಲ್ಲ ಎಂದು ವಾದಿಸಿದ್ದರು. ಇದಕ್ಕೆ ತಕ್ಕಂತೆ ತಮ್ಮ ಸ್ಥಿತಿಯನ್ನು ಒಪ್ಪಿಕೊಳ್ಳಲು ಆಗಿರಲಿಲ್ಲ. .
ರಾಖಾಲ , ಮಹಿಮಚರಣ , ಹಾಜರಾ, ‘ಮ’ ಸುತ್ತುವರೆದಿರುವಾಗ ‘ ಹೇ , ಬ್ರಹ್ಮಮಯಿ , ನನಗೇಕೆ ಹೀಗೆ ಮಾಡಿದೆ? ತೋಳು ಬಹಳ ನೋಯುತ್ತಿದೆಯಲ್ಲ’ ಎಂದು ಮಗುವಿನಂತೆ ಅಳುತ್ತಾ ಕಣ್ಣೀರುಗರೆದರು. ಭಕ್ತರ ಕಡೆ ತಿರುಗಿ ‘ಮತ್ತೆ ಸರಿ ಹೊಗುತ್ತದೆಯೇ? ‘ ಎಂದು ಪ್ರಶ್ನಿಸಿದಾಗ ಅವರಿಂದ ‘ಖಂಡಿತ , ಬೇಗ ಸರಿಹೋಗುತ್ತದೆ ‘ ಆಶ್ವಾಸನೆ ಬಂದಿದ್ದಿತು. ಇಲ್ಲಿಗೆ ನಿಲ್ಲದೆ ಏರು ದನಿಯಲ್ಲಿ ‘ಆನಂದಮಯಿ ,ಆನಂದಮಯಿ’ ಎಂದು ಕೂಗುತ್ತ , ಅಳುಅಳುತ್ತಲೇ ‘ ವ್ಯಥೆಯೊಂದು ಕೊರೆಯುತಿದೆ ಈ ಎದೆಯನು , ನೀ ಜೊತೆಗಿದ್ದು , ನಾ ಎಚ್ಚರವಿರಲು ಕಳುವಾಯಿತೆ ಮನೆಯೊಳಗೆ’ ಎಂದು ಹಾಡಿದರು. ‘ತಾಯೆ, ನಾನು ತಪ್ಪೆಸಗಿರುವೆನೆ? ನಾನು ಯಾವುದನ್ನಾದರೂ ಸ್ವಂತ ಮಾಡುತ್ತೇನೆಯೇ ? ‘ ಎಂದು ಗಳಪಿದರು. ರಾಖಾಲಚಂದ್ರನಿಗೆ ‘ನೋಡಿಕೋ ಕೆಳಕ್ಕೆ ಬಿದ್ದುಬಿಡಬಹುದು ! ಮುನಿಸಿಕೊಂಡು ಮೋಸಹೋಗದಿರು’ ಎಂದು ಅಳುವಿನಲ್ಲೇ ನಗುತ್ತ ಎಚ್ಚರಿಸಿದರು. ಅದರ ಹಿಂದೆಯೆ ‘ತಾಯಿ , ನೋಯುತ್ತಿದೆ ಎಂದು ನಾನು ಅಳುತ್ತಿರುವೆನೇ ? ಎಂದಿಗೂ ಇಲ್ಲ ‘ ಎನ್ನುತ್ತಲೇ ಕೆಲನಿಮಿಷಗಳ ಹಿಂದೆ ಹಾಡಿದ್ದ ಹಾಡನ್ನು ಮತ್ತೊಮ್ಮೆ ಹಾಡಿದರು. ಸಾಯಂಕಾಲ ತೋಳಿಗೆ ಹೊಸ ಪಟ್ಟಿ ಕಟ್ಟಲು ಬಂದ ಡಾಕ್ಟರ್ ಮಧುಸೂದನನಿಗೆ ‘ ನನಗೆ ಕಲ್ಕತ್ತದ ವೈದ್ಯರಲ್ಲಿ ನಂಬಿಕೆಯಿಲ್ಲ. ಶಂಭುಮಲ್ಲಿಕ ಪ್ರಜ್ಞೆ ಕಳೆದುಕೊಂಡಾಗ ವೈದ್ಯ ಸರ್ವಾಧಿಕಾರಿ ‘ಅದು ಔಷಧದ ಮತ್ತು, ಎಲ್ಲ ಸರಿಹೋಗುತ್ತದೆ ಎಂದಿದ್ದ. ಆದರೆ ಆತ ಸತ್ತೇ ಹೋದ’ ಎಂದು ತಮ್ಮ ಒಳಗಿರುವ ಭಯವನ್ನು ಹೊರಹಾಕಿದ್ದರು. (136)
ಗುರುಗಳ ತೋಳಿನ ಕೀಲು ತಪ್ಪಿರುವುದನ್ನು ನೋಡಿ ಜನ ‘ಈತ ಅವತಾರ ಪುರುಷ’ ಎಂದು ಹಾಸ್ಯಮಾಡಿ ನಗಬಹುದೆನ್ನುವ ಭಯದಲ್ಲಿ ರಾಖಾಲಚಂದ್ರ ಘೋಷ್ ಅವರ ಎಡಗೈ ಕಾಣದಂತೆ ಬಟ್ಟೆ ಹೊದಿಸುತ್ತಿದ್ದನು. ಅಲ್ಲದೆ , ಗುರುಗಳು ಜನಸಾಮಾನ್ಯರಂತೆ ಎಲ್ಲರ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳದಂತೆ ಎಚ್ಚರಿಸಿದ್ದನು. ಇದಕ್ಕೆ ಒಪ್ಪದೆ ‘ತಾಯಿ ನನ್ನನ್ನು ಅಂಥ ಅವಸ್ಥೆಯಲ್ಲಿಟ್ಟಿದ್ದಾಳೆ. ನನ್ನದು ಹುಡುಗನ ಅವಸ್ಥೆ. ಏನನ್ನೂ ಬಚ್ಚಿಟ್ಟುಕೊಳ್ಳಲಾರೆ’ ಸಮರ್ಥನೆಯೊಂದಿಗೆ ತಮ್ಮನ್ನು ಕಾಣಲು ಬಂದವರಿಗೆಲ್ಲ ತೋಳು ಕೀಲು ತಪ್ಪಿದ ಸಂಗತಿ ತಿಳಿಸಿ ಅಳುತ್ತಿದ್ದರು. (137) ಅಸ್ವಸ್ಥನಾದರೆ ನನಗೆ ಅಂಜಿಕೆಯಾಗುತ್ತದೆಯಲ್ಲ ಏಕೆ ? ಒಮ್ಮೊಮ್ಮೆ ಇವನಿಗೆ (=ತಮಗೆ) ಗುಣವಾಗುವ ಬಗೆ ಹೇಗೆ ಎಂದು ಕೇಳುತ್ತಿರುತ್ತೇನೆ. ನೋಡು , ನಂಬಿಕೆಯಿಟ್ಟರೆ ಎಲ್ಲರಲ್ಲೂ ಇಡಬೇಕು. ಇಲ್ಲದಿದ್ದರೆ ಯಾರಲ್ಲೂ ಇಡಕೂಡದು- ಹೀಗೆ ರಾಮಚಂದ್ರದತ್ತ ಮುಂತಾದ ಭಕ್ತ ಮುಂದೆ ಗೋಳಾಡಿದ್ದರು. ಇದಕ್ಕೆ ಪ್ರತಿಯಾಗಿ ಶಿಷ್ಯ ರಾಮಚಂದ್ರ ದತ್ತ ‘ಭಗವಂತನೇ ವೈದ್ಯ , ಕವಿರಾಜ ಎಲ್ಲವೂ ಆಗಿದ್ದಾನೆ. ಆದ್ದರಿಂದ ಅವರೆಲ್ಲರಲ್ಲೂ ನಂಬಿಕೆ ಇಡಬೇಕು. ಅವರನ್ನು ಕೇವಲ ಮನುಷ್ಯರು ಎಂದು ಭಾವಿಸಿದರೆ ಶ್ರದ್ಧೆ ಉಂಟಾಗದು’ ಎನ್ನುವುದನ್ನು ಎಲ್ಲರಲ್ಲೂ ಭಗವಂತನನ್ನು ಕಂಡಿದ್ದ ತನ್ನ ಗುರುಗಳಿಗೆ ಮನದಟ್ಟು ಮಾಡಲು ಯತ್ನಿಸಿದ್ದನು. (138)
ಗುರುಗಳ ಮನಸ್ಸಿನಲ್ಲಿ ಭಗವತಿಯ ಬದಲು ತೋಳಿನ ಚಿಂತೆಯೇ ತುಂಬಿದ್ದಿತು. ‘ನನಗೆ ಒಮ್ಮೊಮ್ಮೆ ಈ ತೋಳಿನ ಬಗ್ಗೆ ಚಿಂತೆ ಹತ್ತುತ್ತದೆ. ಇವನಿಗೆ , ಅವನಿಗೆ ತೋರಿಸಿ ಇದು ಸರಿಯಾಗುವುದೇ ಎಂದು ಕೇಳುತ್ತಲೇ ಇರುತ್ತೇನೆ. ಇದರಿಂದ ರಾಖಾಲನಿಗೆ ಸಿಟ್ಟು. ನನ್ನ ಅವಸ್ಥೆ ಆತನಿಗೆ ಗೊತ್ತಿಲ್ಲ. ಒಮ್ಮೊಮ್ಮೆ ಆತ ಇಲ್ಲಿಂದ ಹೊರಟು ಹೋಗಲಿ ಎಂದು ಭಗವತಿಯಲ್ಲಿ ಕೇಳಿಕೊಳ್ಳುತ್ತೇನೆ. ನಂತರ ‘ಹೇ, ಅಮ್ಮಾ ಆತ ಎಲ್ಲಿಗೆ ಹೋಗುವುದು ? ಈ ಪ್ರಪಂಚವೆಂಬ ಹುರಿಯುವ ಬಾಣಲೆಯಲ್ಲಿ ಬಿದ್ದು ಬೂದಿಯಾಗಲಾರನೇ ?’ ಮುಂತಾಗಿ ತಮಗೆ ತಾವೇ ಗಟ್ಟಿಯಾಗಿ ವಿಮರ್ಶಿಸಿಕೊಂಡಿದ್ದರು. ಇದರಿಂದ ಸಮಾಧಾನವಾಗದೆ ‘ ನನಗೆ ಏಕೆ ಇಷ್ಟೊಂದು ಭಯ ? ಎಂದು ಕೇಳುತ್ತ ‘ಮ’ ಉತ್ತರಕ್ಕಾಗಿ ಕಾದಿದ್ದರು. ಗುರುಗಳ ತಕ್ಕ ಶಿಷ್ಯನಾಗಿದ್ದ ‘ಮ’ ‘ನೀವು ಯಾವಾಗಲೂ ಸಮಾಧಿಯಲ್ಲಿರುತ್ತೀರಿ. ಭಕ್ತರಿಗಾಗಿಯೇ ಮೈಮೇಲಿನ ಜ್ಞಾನ ಉಳಿಸಿಕೊಂಡಿರುವಿರಿ. ಆದ್ದರಿಂದ ನೀವು ನಿಮ್ಮ ದೇಹ ರಕ್ಷಣೆಗೆ ಭಯ ಪಡುತ್ತಿರುವಿರಿ’ ಎಂದು ನೀಡಿದ ಅಲೌಕಿಕ ಉತ್ತರ ಸಂಪೂರ್ಣ ತೃಪ್ತಿಯನ್ನೇನೂ ನೀಡಿರಲಿಲ್ಲ. (139). ಸಾಮಾನ್ಯವಾಗಿ ಯಾರಾದರೂ ತಮ್ಮನ್ನು ಚೈತನ್ಯನ ಅವತಾರ ಎಂದರೆ ಸಂತಸ ಪಡುತ್ತಿದ್ದರು. ಮಾತಿನ ನಡುವೆ ಒಬ್ಬ ಭಕ್ತ ಕೇಶವಚಂದ್ರಸೇನ ನಿಮ್ಮನ್ನು ‘ಜಾನ್ ದಿ ಬ್ಯಾಪ್ಟಿಸ್ಟ್ ‘ ‘ಹತ್ತೊಂಬತ್ತನೇ ಶತಮಾನದ ಚೈತನ್ಯ ಎಂದು ಕರೆಯುವುದನ್ನು ತಿಳಿಸಿದಾಗ ಅನ್ಯಮನಸ್ಕತೆಯಿಂದ ‘ಯಾರು ಏನು ಬೇಕಾದರೂ ಕರೆದುಕೊಳ್ಳಲಿ. ಈಗ ನನಗೆ ನನ್ನ ಕೈ ಚಿಂತೆ ಅದನ್ನು ಹೇಗೆ ಗುಣಪಡಿಸಿಕೊಳ್ಳುವುದು ಎನ್ನುವುದರ ಹೊರತು ಬೇರೆ ಚಿಂತೆ ಇಲ್ಲ’ –ಈ ಉತ್ತರ ಭಯಗೊಂಡಿದ್ದ ಗುರುಗಳಿಂದ ಬಂದಿದ್ದಿತು. (140) ಗುರುಗಳ ಕೈ ಮುರಿದದ್ದರಿಂದ ಅವರ ಹುಟ್ಟುಹಬ್ಬವನ್ನು ಭಕ್ತರು ಫಾಲ್ಗುಣ ಮಾಸದ ಶುಕ್ಲ ಬಿದಿಗೆಯ ದಿನದ ಬದಲು ೨೫/೫/೧೮೮೪ ದಿನಕ್ಕೆ ಮುಂದೂಡಿದ್ದರು. (141)
ಇದಾದ ಐದು ತಿಂಗಳ ನಂತರ ಗುರುಗಳ ಕಾಲು ಸ್ವಲ್ಪ ಊದಿದ್ದಿತು. ಆ ಬಗ್ಗೆ ಅವರು ಹುಡುಗನಂತೆ ಚಿಂತಿತರಾಗಿದ್ದರು ಎಂದು ‘ಮ’ ಬರೆಯುತ್ತಾರೆ. ತಮ್ಮನ್ನು ಕಾಣಲು ಬಂದ ಭಕ್ತರಿಗೆ ತಮ್ಮ ಕಾಲನ್ನು ಒತ್ತಿ ಏನಾಗಿದೆ ಎಂದು ಪರೀಕ್ಷಿಸಲು ಕೇಳಿಕೊಳ್ಳುತ್ತಿದ್ದರು. ನಾರಾಯಣನಿಗೆ ತಮ್ಮ ಕಾಲನ್ನು ಒತ್ತಿ ನೋಡಲು ಹೇಳಿದ್ದರು. ಮರುದಿನ ಬಂದ ಪ್ರಿಯನಾಥ ಮುಖರ್ಜಿಗೂ ಅದೇ ಅಣತಿ ಮಾಡಿದರು. ಆತ ಕಾಲನ್ನು ಒತ್ತಿದಾಗ ಕುಳಿ ಬಿದ್ದಿತು ಎಂದಾಗ ‘ ಉಸ್ಸಪ್ಪಾ ಬದುಕಿದೆ’ ಉದ್ಗಾರ ಹೊರಬಂದಿತು. ಇದನ್ನು ನೋಡುತ್ತಿದ್ದ ಮಣಿಮಲ್ಲಿಕ ‘ಇದಕ್ಕೇಕೆ ಅಷ್ಟೊಂದು ಚಿಂತೆ, ಹರಿಯುವ ನೀರಿನಲ್ಲಿ ಸ್ನಾನಮಾಡಿದರೆ ನೋವು ಹೋಗುತ್ತದೆ, ಔಷಧ ಕುಡಿಯುವುದು ಬೇಕಿಲ್ಲ’ ಎಂದಾಗ ‘ಗುರುಗಳಿಂದ ‘ಅದಾಗದು, ನಿಮ್ಮಲ್ಲಿನ್ನೂ ಬಲವಿದೆ, ಭಗವತಿ ನನ್ನನ್ನು ಹುಡಗನ ಅವಸ್ಥೆಯಲ್ಲಿಟ್ಟಿದ್ದಾಳೆ’ ಕನವರಿಕೆ ಹೊರಬಂದಿದ್ದಿತು. (142) .ಭಕ್ತರು ಕಾಲನ್ನು ಅಮುಕಿ ನೋಡಿ ಏನೂ ಆಗಿಲ್ಲವೆಂದು ಖಚಿತಪಡಿಸಿದ್ದರೂ ಅದರಲ್ಲಿ ವಿಶ್ವಾಸವಿರದ ಗುರುಗಳು. ವಿಜಯಗೋಸ್ವಾಮಿಗೆ ಸಿಂಥಿಯ ಮಹೇಂದ್ರನನ್ನು ಕರೆತಂದು ,ಅತ ಏನೂ ಆಗಿಲ್ಲ ಎಂದು ಹೇಳುವವರೆಗೆ ನನ್ನ ಮನಸ್ಸಿಗೆ ಶಾಂತಿಯಿಲ್ಲ ‘ ಎಂದು ಸ್ಪಷ್ಟವಾಗಿ ತಿಳಿಸಿದಾಗ ದೇಹದ ಕಾಯಿಲೆಯ ಭಯ ಅವರನ್ನು ಸುತ್ತುವರೆದಿದ್ದಿತು. (143)
ಕ್ಯಾನ್ಸರ್ ಕುಟುಕಿದಾಗ : ದಕ್ಷಿಣೇಶ್ವರದಲ್ಲಿ ಯಾವುದೇ ರೋಗವಿರದೆ ಸುಖವಾಗಿ ಜೀವನ ಸಾಗಿಸುತ್ತಿರುವಾಗ ರಾಮಕೃಷ್ಣರು ಮಣಿಮಲ್ಲಿಕನಿಗೆ ಬೋಧಿಸಿದ್ದು ಹೀಗೆ: ‘ಸಾವಿಗಾಗಿ ಸಿದ್ಧರಾಗಿರುವುದು ಒಳ್ಳೆಯದು. ಮಪ್ಪಿನಲ್ಲಿ ನಿರ್ಜನ ಪ್ರದೇಶದಲ್ಲಿ ವಾಸಿಸುತ್ತ ಕೇವಲ ಭಗವಂತನ ಚಿಂತನೆ , ಆತನ ನಾಮ ಸಂಕೀರ್ತನೆ ಮಾಡುತ್ತಿರಬೇಕು. ಆನೆಯ ಮೈತೊಳೆದ ನಂತರ ಅದನ್ನು ಗಜಶಾಲೆಯೊಳಗೆ ಕಟ್ಟಿದರೆ ಮತ್ತೆ ಧೂಳು , ಬೂದಿ ಹತ್ತದು’. (144) .ಇಂತಹ ಉಪದೇಶ ಮಾಡಿದ ಗುರುಗಳು ನಿಜವಾಗಿಯೂ ತಮ್ಮ ಕೊನೆಗಾಲವನ್ನು ಹೇಗೆ ಕಳೆದರು ? ಸಾವನ್ನು ನಿರ್ಲಕ್ಷಿಸಿ ಭಗವಂತನ ನಾಮ ಸಂಕೀರ್ತನೆಯಲ್ಲಿ ಕಳೆದರೇ-ಇದಕ್ಕೆ ಭಕ್ತ ಕಥಾನಕಗಳೇ ಉತ್ತರ ಕೊಡುತ್ತವೆ.
೧೮೮೫ ರಿಂದ ಭಕ್ತರು ಕಲ್ಕತ್ತದಲ್ಲಿ ಸಿಗುತ್ತಿದ್ದ ಐಸ್’ಕ್ರೀಮನ್ನು ಗುರುಗಳಿಗೆ ತಂದುಕೊಡತೊಡಗಿದರು. ಇದನ್ನು ಸಕ್ಕರೆ ಪಾನಕದೊಂದಿಗೆ ಸವಿಯುವುದು ಗುರುಗಳಿಗೂ ಇಷ್ಟವಾಗಿದ್ದಿತು. ಏಪ್ರಿಲ್ ತಿಂಗಳನಲ್ಲಿ ಗುರುಗಳಿಗೆ ಗಂಟಲು ಬೇನೆ ಪ್ರಾರಂಭವಾಯಿತು. ಇದಾದ ನಂತರ ಅವರು ಪಾಣಿಹಾಟಿ ಮಹೋತ್ಸವದಲ್ಲಿ ಭಾಗವಹಿಸಿದರು. ಜಿನುಗು ಮಳೆಯಲ್ಲಿ , ಒದ್ದೆ ನೆಲದ ಮೇಲೆ ಭಾವಾವೇಶದಿಂದ ಕುಣಿದಿದ್ದರಿಂದ ಅದು ಹೆಚ್ಚಿತು. ಕ್ಯಾಂಪ್’ಬೆಲ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಡಿಪ್ಲೊಮಾ ಮಾಡಿದ್ದ ರಾಮಚಂದ್ರದತ್ತ ಗುರುಗಳನ್ನು ಅಲ್ಲಿಗೆ ಕರೆದೊಯ್ದಿದ್ದನು. ಆತ ಪಾಣಿಹಾಟಿಗೆ ಹೋಗದಂತೆ ನನ್ನನ್ನು ತಡೆಯದೇ ಹೋದದ್ದೇ ಗಂಟಲು ಬೇನೆ ಹೆಚ್ಚಲು ಕಾರಣ ಎಂದು ಗುರುಗಳು ಹೇಳುತ್ತಿದ್ದರೆಂದು ಶಾರದಾನಂದರು ಬರೆಯುತ್ತಾರೆ. (145) ‘ಮ’ ದಿನಚರಿಯಲ್ಲಿ ಕ್ಯಾನ್ಸರ್ ಗಂಟಲು ಹುಣ್ಣಿನ ಉಲ್ಲೇಖ ಮೊದಲ ಸಲ ೨೮/೭/೧೮೮೫ ರಂದು ದಾಖಲಾಗಿದೆ. ಗುರುಗಳು ಬಲರಾಮ ಬಸು ಮನೆಯಲ್ಲಿ ರಾತ್ರಿ ವಿಶ್ರಮಿಸಿಕೊಳ್ಳುತ್ತ ‘ ನೋಡು ನನಗೆ ಗಂಟಲಿನಲ್ಲಿ ಹುಣ್ಣು ಆಗಿಬಿಟ್ಟಿದೆಯಲ್ಲ. ಅದರಲ್ಲಿ ಒಂದು ಅರ್ಥವಿದೆ. ಎಲ್ಲರೊಡನೆ ಹುಡುಗಾಟ ಆಡದಿರಲೆಂದು , ಸಿಕ್ಕ ಸಿಕ್ಕ ಕಡೆಯಲ್ಲಿ ಕುಣಿಯದಿರಲೆಂದು ಬಂದಿದೆ’ ಎನ್ನುವ ಕಾರಣ ನೀಡಿದ್ದರು. (146) . ಹಾಗೆ ಹೇಳಿದಾಗ ಅದು ಮುಂದೆ ಮಾರಣಾಂತಿಕ ರೋಗವಾಗುತ್ತದೆ ಎನ್ನುವ ಕಲ್ಪನೆಯಿರಲಿಲ್ಲ.
ಗಂಟಲು ಹುಣ್ಣು ವಾಸಿಯಾಗದ್ದರಿಂದ ‘ಅವತಾರ ವರಿಷ್ಠ’ ರಾಮಕೃಷ್ಣರು ಚಿಂತಿತರಾಗಿದ್ದು ಅದನ್ನು ಹೇಗಾದರೂ ಗುಣ ಪಡಿಸಿಕೊಳ್ಳಬೇಕೆಂದು ಸಾಮಾನ್ಯ ಮನುಷ್ಯನಿಗಿಂತಲೂ ಮಿಗಿಲಾಗಿ ಚಡಪಡಿಸುತ್ತಿದ್ದರು. ಘೋಷಪಾರಾ ಸಂಪ್ರದಾಯದವರಿಂದ ರೋಗ ನಿವಾರಿಸುವ ಮಂತ್ರವನ್ನು ಯೋಗಿನ್ ಮಾ ಕಲಿತಿದ್ದಳು. ರಾಮಕೃಷ್ಣರ ಪ್ರಭಾವದಿಂದ ಅದನ್ನು ಬಳಸುವುದನ್ನು ಆಕೆ ನಿಲ್ಲಿಸಿದ್ದಳು. ಒಂದು ದಿನ ರಾಮಕೃಷ್ಣರು ಆಕೆಯನ್ನು ಕರೆದು ತಮ್ಮ ಗಂಟಲಿನ ಮೇಲೆ ಆ ಮಂತ್ರ ಬಳಸಿ ಗಂಟಲು ಹುಣ್ಣನ್ನು ನಿವಾರಿಸಬೇಕೆಂದು ಕೇಳಿಕೊಂಡರು. ಗುರುಗಳ ಕೋರಿಕೆಯನ್ನು ತಿರಸ್ಕರಿಸಲಾಗದೆ ಆಕೆ ಅದನ್ನು ಬಳಸಿದ್ದಳು. ಭಕ್ತೆ ತನಗೆ ಆ ‘ರಹಸ್ಯ ಮಂತ್ರ’ ಗೊತ್ತಿರುವುದು ಗುರುಗಳಿಗೆ ಹೇಗೆ ತಿಳಿಯಿತೆಂದು ಸೋಜಿಗಪಟ್ಟಿದ್ದಳೆಂದು ಶಾರದಾನಂದರು ಹೆಮ್ಮೆಯಿಂದ ದಾಖಲಿಸಿದ್ದಾರೆ. (147) ಶಾರದಾನಂದರಿಗೆ ಮಂತ್ರದಿಂದ ಗಂಟಲು ಕ್ಯಾನ್ಸರ್ ವಾಸಿ ಮಾಡಬಹುದೆಂದು ತಮ್ಮ ಗುರುಗಳ ನಂಬಿಕೆ ಎಷ್ಟು ಅಸಂಬದ್ಧ ಎನ್ನುವ ಯೋಚನೆ ಸುಳಿದಿಲ್ಲದಿರವುದಕ್ಕೆ ನಾವು ಸೋಜಿಗ ಪಡಬೇಕಾಗಿಲ್ಲ. ಏಕೆಂದರೆ ಭಕ್ತ ಕಥಾನಕ ವೈಚಾರಿಕತೆಯ ಶತ್ರು. ಶಾರದಾನಂದರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಪುರುಷೋತ್ತಮಾನಂದರು ಗುರುಗಳು ಯೋಗಿನ್ ಮಾ ಅಂತಹ ಸಾಮಾನ್ಯರಿಂದ ರೋಗ ಗುಣಪಡಿಸಲು ಗುರುಗಳು ಕೇಳಿಕೊಂಡರೆ ಅವರ ಮಹಾತ್ಮೆಗೆ ಧಕ್ಕೆಯಾಗುತ್ತದೆಯೆಂದು ಭಾವಿಸುತ್ತ ಸಿದ್ಧಿಗಳನ್ನು ಬಳಸಬಾರದೆಂದು ಶಿಷ್ಯರಿಗೆ ತಿಳಿಸಲು ಹೀಗೆ ಕೇಳಿದ್ದರು ಎಂದು ಪರೋಕ್ಷವಾಗಿ ಸೂಚಿಸಲು ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ. (148)
ಮುಂದೆರಡು ತಿಂಗಳುಗಳಲ್ಲಿ ಗಂಟಲು ಹುಣ್ಣು ತೀವ್ರವಾಗಿ ಮಾತನಾಡಲು ಆಗದಂತಹ ಸ್ಥಿತಿ ಎದುರಾಯಿತು. ದಕ್ಷಿಣೇಶ್ವರದ ಕೊಠಡಿಯಲ್ಲಿ ಬೆಳಗಿನ ಎಂಟು ಗಂಟೆಯಿಂದ ಗಂಡ ಮಾತಿಲ್ಲದೆ ಕುಳಿತಿರುವುದನ್ನು ಕಂಡು ಶಾರದಾಮಣಿ , ರಾಖಾಲಚಂದ್ರ ಘೋಷ್ , ಲಾಟು ಅಳತೊಡಗಿದರು. ಅದನ್ನು ನೋಡಿದ ‘ಮ’ ತಮ್ಮ ಈ ರೋಗ ಮಾರಣಾಂತಿಕವಾದುದು. ತಾವು ಈ ಲೋಕವನ್ನು ಬೇಗನೆ ಬಿಡಬೇಕಾಗಿ ಬರುತ್ತದೆ ಎಂದು ಅವರಿಗೆ ಗೊತ್ತಿತ್ತೇನು ? ಅವರು ಮತ್ತೊಮ್ಮೆ ಜಗದಂಬೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಸನ್ನದರಾಗುತ್ತಿರುವರೇನು? ಅದಕ್ಕಾಗಿ ಈ ಮೌನವೇನು’ ಎಂದು ಬರೆದು, ಗಂಟಲು ನೋವಿನ ಭಯದಿಂದ ಮಾತನಾಡದೆ ಕುಳಿತಿರುವ ಗುರುಗಳ ಭಯದ ನಡವಳಿಕೆಗೆ ಅದ್ಭುತ ವಿವರಣೆ ಕೊಡುವ ಯತ್ನ ಮಾಡಿದ್ದಾರೆ. (149) ಇದೇ ‘ಮ’ ಇಪ್ಪತ್ತು ದಿನದ ನಂತರ ತಮ್ಮ ದಿನಚರಿಯಲ್ಲಿ ಗುರುಗಳು ಡಾಕ್ಟರ್ ಭಗವಾನ್ ರುದ್ರರು ತಾವು ಅನಾರೋಗ್ಯದಿಂದ್ದ ಇದ್ದರೂ ಏಕೆ ಬಂದಿಲ್ಲವೆಂದು ವಿಚಾರಿಸಿದ್ದನ್ನು , ಡಾಕ್ಟರ್ ನಿತಾಯಿಯನ್ನು ಕರೆದುಕೊಂಡು ಬರಲು ತಿಳಿಸಿರುವುದನ್ನು , ಅದರೊಂದಿಗೆ ‘ಅಯ್ಯೋ ! ಡಾಕ್ಟರ್’ಗಳು ಬಂದು ಏನು ಮಾಡಬಲ್ಲರು. ಕೇವಲ ನನ್ನ ಗಂಟಲನ್ನು ಹಿಸುಕಿ, ಹಿಸುಕಿ ನೋವು ಹೆಚ್ಚಿಸುತ್ತಾರೆ’ ಎಂದು ಗೊಣಗಿರುವುದನ್ನು ದಾಖಲಿಸಿದ್ದಾರೆ. (150) .
ಇದಾದ ಮರುದಿನವೇ ಚಿಕಿತ್ಸೆ ನೀಡಲು ಬೋಬಜಾರಿನಿಂದ ಬಂದಿದ್ದ ಡಾಕ್ಟರ್ ರಾಖಾಲಚಂದ್ರರಿಗೆ (ರಾಮಚಂದ್ರದತ್ತ ಈತನನ್ನು ರಾಖಾಲದಾಸ ಘೋಷ್ ಎಂದಿದ್ದಾರೆ) ಬೆದರಿದ ಹುಡುಗನಂತೆ ರಾಮಕೃಷ್ಣರು ‘ಬಾಬು ಇದೆಲ್ಲವನ್ನೂ ಗುಣಪಡಿಸಿಬಿಡಿ ‘ ಎಂದು ಅಲವತ್ತುಕೊಂಡರು. ತಕ್ಷಣವೇ ಎಚ್ಚೆತ್ತುಕೊಂಡು ಇದಕ್ಕೆ ಡಾಕ್ಟರ್ ಉತ್ತರ ಏನಿರಬಹುದೆಂದು ಊಹಿಸಿ , ಅವರು ಅದನ್ನು ಹೇಳುವ ಮೊದಲೇ ‘ನೀವು ಎಲ್ಲವನ್ನು ಭಗವಂತನೆಂದು ಕಾಣುವುದಾದರೆ ಸ್ವಲ್ಪವೂ ಗೊಣಗದೆ ಅನುಭವಿಸಿ ಎನ್ನುತ್ತೀರಿ. ಆದರೆ ನಾನು ‘ಮಾವಟಿಗ-ಭಗವಂತ’ನ ಮಾತಿಗೂ ಬೆಲೆ ಕೊಡುತ್ತೇನೆ ‘ ಎನ್ನುತ್ತ ತಮಗಿದ್ದ ರೋಗ ಭಯಕ್ಕೆ ದೃಷ್ಟಾಂತದ ಬೆಂಬಲ ಒದಗಿಸಲು ಹೆಣಗಿದ್ದರು. ತಮಗೆ ಚಿಕಿತ್ಸೆ ನೀಡಬೇಕೆಂದು ವೈದ್ಯರನ್ನು ಗೋಗರೆಯುತ್ತಿದ್ದ ರಾಮಕೃಷ್ಣರು ಗಂಟಲು ಕ್ಯಾನ್ಸರ್ ಬಂದಿರುವುದು ಗೊತ್ತಾಗುವುದಕ್ಕೆ ಒಂದು ತಿಂಗಳ ಹಿಂದೆ ಭಕ್ತನಿಗೆ ಯಾವಾಗ ತನ್ನ ಶರೀರದ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲಾಗದ ಸ್ಥಿತಿ ಬರುತ್ತದೆಯೋ ಆಗ ಭಗವಂತನೇ ಆತನ ಸಕಲ ಭಾರಗಳನ್ನು ಹೊರುತ್ತಾನೆ. ಶ್ರೀಚೈತನ್ಯನೂ ತನ್ನ ದೇಹವನ್ನು ತಾನೇ ನೋಡಿಕೊಳ್ಳದಂತಹ ಸ್ಥಿತಿಯಲ್ಲಿದ್ದ ಎನ್ನುವ ಭಾರಿ ಬೋಧನೆ ಮಾಡಿದ್ದರು. (151)
ಗಂಟಲು ಹುಣ್ಣಿನ ರೂಪದಲ್ಲಿ ಬಂದಿದ್ದ ಸಾವಿನ ಭಯ ಈ ‘ಅವತಾರ ವರಿಷ್ಠ’ನನ್ನು ಎಷ್ಟು ಕಾಡಿದ್ದಿತೆಂದರೆ ಇನ್ನೊಮ್ಮೆ ರಾಖಾಲಚಂದ್ರರ ಅಂಗಿಯನ್ನು ಹುಡುಗನಂತೆ ಎಳೆಯುತ್ತ ‘ಬಾಬು ,ಬಾಬು , ಇದನ್ನು (ಗಂಟಲನ್ನು) ಗುಣಪಡಿಸಿಬಿಡು. ಎಂದು ಗೋಳಾಡಿದರು. ಆತ ತಂದಿದ್ದ ಲ್ಯಾರಿಂಗೋ’ಸ್ಕೋಪ್ ನೋಡಿ ನಗುನಗುತ್ತ ‘ಗೊತ್ತಾಯಿತು ಇದರಲ್ಲಿ ಗಂಟಲಿನ ಪ್ರತಿಬಿಂಬ ಬೀಳುತ್ತದೆ’ ಎಂದರು. (152) ಆದರೆ ಗುರುಗಳ ಈ ನಗೆ ಸಹಜವಾಗಿರದೆ ಭಯದ ಮೂಲವಾಗಿದ್ದಿತು ಎನ್ನುವ ಟಿಪ್ಪಣಿಯನ್ನ ‘ಮ’ ಸೇರಿಸದೆ ಬಿಟ್ಟಿದ್ದಾರೆ. ವೈದ್ಯರನ್ನು ಬೇಡಿಕೊಂಡ ಇದೇ ರಾಮಕೃಷ್ಣರನ್ನು ತಾನೇ ಈಶ್ವರಚಂದ್ರರಲ್ಲಿಗೆ ಕರೆದೊಯ್ದಿದ್ದಾಗ ಗುರುಗಳು ಆತನಿಗೆ ವೈದ್ಯ ರೋಗ ಗುಣಪಡಿಸುವಾಗ ಮತ್ತು ಸೋದರರು ಅಸ್ತಿ ಹಂಚಿಕೊಳ್ಳುವಾಗ ಭಗವಂತ ನಗುತ್ತಾನೆ. ಭಗವಂತನಲ್ಲದೆ ಯಾರೂ ಏನನ್ನೂ ಸರಿಪಡಿಸಲಾರರು , ಆತನದಲ್ಲದೆ ಜಗತ್ತಿನಲ್ಲಿ ಬೇರೆ ಯಾರದು ಏನೂ ಇಲ್ಲ-ಇಂತಹ ಭಾರಿ ಉಪದೇಶ ಮಾಡಿದ್ದನ್ನು ಮತ್ತು ರೋಗಗ್ರಸ್ತ ಕೇಶವಚಂದ್ರಸೇನನನ್ನು ಕಾಣಲು ಕರೆದುಕೊಂಡು ಹೋದಾಗ ಯಾವ ವೈದ್ಯನೂ ದೇವರು ನಿಗದಿ ಪಡಿಸಿದ ಸಾವನ್ನು ತಪ್ಪಿಸಲಾರ ಎಂದು ಹೇಳಿದ್ದನ್ನು ಗುರುಗಳ ವಿಧೇಯ ಭಕ್ತ ‘ಮ’ ಮರೆತಿದ್ದರು. (153)
ಗುರುಗಳಿಗೆ ಭಗವಂತನನ್ನು ಅರಸಿ ಬರುವ , ದೈವ ಲೀಲೆ ಅರಿಯಲು ಬಯಸುವ , ಅಧ್ಯಾತ್ಮದಲ್ಲಿ ಮುಂದುವರಿಯಲು ಹೆಣಗುವ , ಪಾರಮಾರ್ಥಿಕ ವಿಚಾರಗಳನ್ನು ತಿಳಿಯಲು ಯತ್ನಿಸುವ ಭಕ್ತರನ್ನು ಕಂಡರೆ ಅಸೀಮ ಪ್ರೀತಿ. ಗಂಟಲು ಕ್ಯಾನ್ಸರ್ ಆಗಿದ್ದರೂ ಭಕ್ತರ ಏಳ್ಗೆಗಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಉಪದೇಶ, ಮಾರ್ಗದರ್ಶನ ಮಾಡುತ್ತಿದ್ದರೆಂದು ಶಾರದಾನಂದರು ಮತ್ತು ‘ಮ’ ಪ್ರತಿ ಪುಟದಲ್ಲಿಯೂ ಭರವಸೆ ನೀಡಿದ್ದಾರೆ. ಮಾಲುಗಣ್ಣಿನ ಕಾಟೋಯದ ಒಬ್ಬ ವೈಷ್ಣವನು ಗುರುಗಳಲ್ಲಿಗೆ ಬಂದು ‘ ಮಹಾಶಯರೇ ಪುನರ್ಜನ್ಮ ಉಂಟೇ?’ ಎಂದು ಪ್ರಶ್ನಿಸಿದಾಗ ‘ಭಗವದ್ಗೀತೆಯಲ್ಲಿ ಸಾಯುವಾಗ ಏನನ್ನು ನೆನೆಸಿಕೊಳ್ಳುತ್ತಾರೋ ಮುಂದಿನ ಜನ್ಮದಲ್ಲಿ ಅದೇ ಆಗಿ ಹುಟ್ಟುತ್ತಾರೆ ‘ ಎನ್ನುವ ಉತ್ತರ ನೀಡಿದರು. ಆಗ ಆತ ‘ಹೀಗಾಗುವುದನ್ನು ಯಾರಾದರೂ ಪ್ರತ್ಯಕ್ಷ ಕಂಡಿದ್ದರೆ ನಂಬಬಹುದು’ ಎಂದು ಸಂಶಯ ತಾಳಿದಾಗ . ಗುರುಗಳು ರೇಗಿ ‘ಇದರ ವಿಷಯ ನನಗೆ ಹೆಚ್ಚಿಗೆ ತಿಳಿದಿಲ್ಲ. ನನಗೆ ಬಂದಿರುವ ಕಾಯಿಲೆಯನ್ನೇ ನಾನು ಗುಣಪಡಿಸಿಕೊಳ್ಳಲಾರೆ. ಅಂಥಹವನಿಗೆ ಸತ್ತ ಮೇಲೆ ಏನಾಗುತ್ತದೆ ಎನ್ನುವ ಪ್ರಶ್ನೆ ಬೇರೆ. ಈ ಪ್ರಶ್ನೆ ನಿನ್ನ ತಿಳಿಗೇಡಿತನವನ್ನು ತೋರಿಸುತ್ತದೆ ’ ಮುಂತಾಗಿ ಆಶೀರ್ವಾದ ಮಾಡಿದರು. (154), ಹಾಗೆ ಮಾಡುವಾಗ ತಾಯಿ ಕಾಳಿಯನ್ನು ಮರೆತು ಸಾವಿನ ಅಂಜಿಕೆಯಲ್ಲಿ ಹತಾಶನಾಗಿದ್ದ ಒಬ್ಬ ಸಾಧಾರಣ ವ್ಯಕ್ತಿಯಾಗಿದ್ದರು.
ಕುಡಿದು ತೂರಾಡುತ್ತ , ಅಳುತ್ತ ಗಾಡಿಯಲ್ಲಿ ಬಂದ ಗಿರೀಶಚಂದ್ರ ಘೋಷ್ ಗುರುಗಳ ಅಡಿಯ ಮೇಲೆ ತಲೆಯಿರಿಸಿ ‘ ಹೇ ಭಗವಂತ ! ನಾನು ಒಂದು ವರ್ಷ ಇಲ್ಲಿಯೇ ನಿಮ್ಮ ಸೇವೆ ಮಾಡುವಂತೆ ಅನುಗ್ರಹಿಸಿ ಎಂದು ಪರಿಪರಿಯಾಗಿ ಬೇಡಿದನು. ಗುರುಗಳು ‘ಇಲ್ಲಿಯ ಜನ ಅಷ್ಟು ಒಳ್ಳೆಯವರಲ್ಲ ಎಂದಾಗ ಅದನ್ನು ಒಪ್ಪದೆ ‘ಯಾರೂ ನನ್ನ ಕಿರುಬೆರಳನ್ನೂ ಅಲುಗಿಸಲಾರರು. ದಯವಿಟ್ಟು ಮಾತುಕೊಡಿ’ ಎನ್ನುವುದು ಶಿಷ್ಯನ ಒತ್ತಾಯವಾಗಿದ್ದಿತು. ಆಗ ಗುರುಗಳು ‘ಭಗವಂತನ ಇಚ್ಛೆ ಇದ್ದಂತಾಗಲಿ’ ಎಂದರು. ಗಿರೀಶಚಂದ್ರ ಘೋಷ್ ಗಂಟಲು ಹುಣ್ಣಿನ ಸುದ್ದಿ ಎತ್ತಿ ‘ದಯವಿಟ್ಟು ಅದು ಗುಣವಾಗಲಿ ಎನ್ನಿ. ನಾನೇ ಅದನ್ನು ಜಜ್ಜಿ ಹಾಕುತ್ತೇನೆ. ಕಾಳಿ ! ಕಾಳಿ ! ‘ ಗಟ್ಟಿಯಾಗಿ ಗುಡುಗಿದನು. ಶಿಷ್ಯನ ಈ ಮಾತುಗಳಲ್ಲಿ ಆಕ್ರೋಶವಿದ್ದಿತು. ಗುರುಗಳು ತಮ್ಮ ಬಾಯಿಂದ ‘ಗುಣವಾಗಲಿ ‘ ಎಂದು ಒಮ್ಮೆ ಹೇಳಿದರೆ ಕ್ಯಾನ್ಸರ್ ಇಲ್ಲವಾಗುತ್ತದೆ ಎನ್ನುವುದು ಅತನ ದೃಢವಾದ ನಂಬಿಕೆಯಾಗಿದ್ದಿತು. ಉಗ್ರ ಭಕ್ತನಾಗಿ ಬದಲಾಗಿದ್ದ ಗಿರೀಶಚಂದ್ರ ಘೋಷ್’ನ ಒತ್ತಡದಿಂದ ದಿಕ್ಕು ತೋಚದಂತಾದ ರಾಮಕೃಷ್ಣರಿಂದ ‘ನನ್ನನ್ನು ಸುಮ್ಮನೆ ಬಿಡು. ನನ್ನ ಕೈಯಲ್ಲಿ ಅದೆಲ್ಲ ಸಾದ್ಯವಿಲ್ಲ. ರೋಗ ಗುಣಪಡಿಸೆಂದು ಭಗವತಿಯನ್ನು ಬೇಡಲಾರೆ. ಆಕೆಗೆ ಇಚ್ಛೆ ಇದ್ದರೆ ಗುಣವಾಗುತ್ತದೆ’ ಎನ್ನುವ ಸಿದ್ಧ ಉತ್ತರ ಬಂದಿದ್ದಿತು. ಗುರುಗಳನ್ನು ದೇವರೆಂದೇ ಭಾವಿಸಿದ್ದ ಆತ ‘ ನನ್ನ ಕಣ್ಣಿಗೆ ಮಣ್ಣು ಎರಚಬೇಡಿ. ಎಲ್ಲವೂ ನಿಮ್ಮ ಇಚ್ಛೆಯ ಮೇಲಿದೆ’ ಎಂದು ಕೂಗಾಡಿದ್ದನು. (155)
ಅವತಾರ ಪುರುಷರಾದ ತಮಗೆ ವಾಸಿಯಾಗದ ಗಂಟಲು ಹುಣ್ಣಾಗಿದ್ದು , ವಯಸ್ಸು ಅರವತ್ತಾಗಿರುವ ಡಾ. ಮಧುಸೂದನ ತನ್ನ ಉಪಪತ್ನಿಯ ಮನೆಗೆ ಅನ್ನಾಹಾರಗಳನ್ನು ಒಯ್ಯುತ್ತಿರುವುದು, ಆತನಿಗೆ ಯಾವುದೇ ಕಾಯಿಲೆ, ಕಸಾಲೆಗಳು ಇಲ್ಲದಿರುವುದು ಗುರುಗಳ ಸೋಜಿಗಕ್ಕೆ ಕಾರಣವಾಗಿದ್ದು ಅದನ್ನು ತಮ್ಮ ಭಕ್ತರ ಮುಂದೆ ತಿಳಿಸಿದ್ದರು. ಕೀರ್ತನಕಾರ ಗೋಸ್ವಾಮಿ ಗುರುಗಳನ್ನು ಸಮಾಧಾನಪಡಿಸುತ್ತ ‘ ನಿಮಗೆ ರೋಗ ಬಂದಿರುವುದು ಪರರ ಹಿತಕ್ಕೆ . ನಿಮ್ಮ ಬಳಿ ಬರುವ ಎಲ್ಲರ ಪಾಪಗಳನ್ನು ನೀವು ತೆಗೆದುಕೊಂಡು ಹೀಗಾಗಿದೆ’ ಎಂದಿದ್ದನು , ಗುರುಗಳು ತಮ್ಮ ರೋಗಕ್ಕಾಗಿ ದುಃಖಿತರಾಗಿಲ್ಲ. ಅವರದು ಶುದ್ಧ ಪಾಪರಹಿತ ದೇಹ. ಜೀವರ ಮಂಗಳಕ್ಕಾಗಿಯೇ ಅವರನ್ನು ಮುಟ್ಟುತ್ತಿದ್ದಾರೆ. ಅವರ ಪಾಪಗಳನ್ನು ಪಡದೇ ಈ ರೋಗ ಬಂದಿದೆ’ ಎನ್ನುತ್ತ ಗಿರೀಶಚಂದ್ರ ಘೋಷ್ ಗುರುಗಳ ರೋಗಕ್ಕೆ ತನ್ನದೇ ಅದ ಸಮರ್ಥನೆ ಒದಗಿಸಿದ್ದನು. (156). ಸಾಯುವ ನಾಲ್ಕು ತಿಂಗಳು ಮೊದಲು ಗುರುಗಳು ಕೂಡ ಇದೇ ಅಭಿಪ್ರಾಯಕ್ಕೆ ಬಂದಿದ್ದು , ಕಲಿಯುಗದಲ್ಲಿ ಜನರ ಪಾಪ ಹೆಚ್ಚಿದೆ. ಆತ್ಮ ಜಾಗೃತಿಯಾಗಲಿ ಎಂದು ನಾನು ಎಲ್ಲರಿಗೂ ಹೇಳಬಾರದು. ಜನರಿಗೆ ಆತ್ಮಜಾಗೃತಿ ಉಂಟು ಮಾಡಿದಾಗ ಅವರಲ್ಲಿದ್ದ ಪಾಪ ತಮಗೆ ವರ್ಗಾಂತರವಾಗಿ ಗಂಟಲು ಹುಣ್ಣಾಗಿದೆ ಎಂದು ಹೇಳಿದರು. (157) ಇದಕ್ಕೆ ಪೂರಕವಾಗಿ ಶಾರದಾನಂದರು ಶ್ಯಾಮಪುಕುರದಲ್ಲಿರುವಾಗ ಗುರುಗಳಿಗೆ ಒಂದು ಅದ್ಭುತ ದರ್ಶನವಾಯಿತು. ಅವರ ಸೂಕ್ಷ್ಮಶರೀರ ಸ್ಥೂಲಶರೀರದಿಂದ ಹೊರಬಂದು ಕೊಠಡಿಯಲ್ಲಿ ಅಲೆಯುತ್ತಿದ್ದಾಗ ಗಂಟಲಿನಲ್ಲಿ ಹುಣ್ಣಾಗಿರುವುದು ಕಂಡಿತು. ಆಗ ಜಗನ್ಮಾತೆ ಗುರುಗಳನ್ನು ಹಲವು ದುಷ್ಕರ್ಮಿಗಳು ಮುಟ್ಟಿ ಅವರ ಪುಣ್ಯವನ್ನು ತಾವು ಪಡೆದು , ತಮ್ಮ ಪಾಪವನ್ನು ಅವರಿಗೆ ವರ್ಗಾಂತರಿಸಿದ್ದರಿಂದ ಹೀಗಾಯಿತು ಎಂದು ತಿಳಿಸಿದಳು ಎನ್ನುವ ಕಾಗೆ-ಗುಬ್ಬಿಗಳ ಕಥೆ ನೀಡಿದ್ದಾರೆ.(158) ಮಥುರಮೋಹನ ಬಿಶ್ವಾಸನ ಹೆಂಡತಿ ಜಗದಂಬಾಳಿಗೆ ಬಂದಿದ್ದ ಆಮಶಂಕೆಯನ್ನು ಸ್ವೀಕರಿಸಿ ಆಕೆಯನ್ನು ಗುಣಮುಖವಾಗಿಸಿದ್ದರಿಂದ ನಾನು ಆರು ತಿಂಗಳು ಹೊಟ್ಟೆ ನೋವು , ಮತ್ತಿತರ ರೋಗಳಿಂದ ನರಳಿದೆ ಎಂದು ಗುರುಗಳು ಹೇಳಿದ್ದ ಕಥೆಯೇ ಇದಕ್ಕೆ ಆಧಾರವಾಗಿದೆ. (159) ದಕ್ಷಿಣೇಶ್ವರದಲ್ಲಿ ತಮ್ಮನ್ನು ಕಾಣಲು ಬಂದಿದ್ದ ೨೦-೨೨ ವರ್ಷ ವಯಸ್ಸಿನ ಅತ್ತಿಗೆ-ನಾದಿನಿಯರು ಮಂತ್ರೋಪದೇಶ ಮಾಡುವಂತೆ ಕೇಳಿಕೊಂಡಾಗ ‘ನಾನು ಯಾರಿಗೂ ಮಂತ್ರೋಪದೇಶ ಮಾಡುವುದಿಲ್ಲ. ಹಾಗೆ ಮಂತ್ರೋಪದೇಶ ಮಾಡಿದರೆ ಆ ಶಿಷ್ಯನ ಪಾಪಗಳನ್ನು ನಾನೇ ಹೊತ್ತುಕೊಳ್ಳಬೇಕಾಗುತ್ತದೆ . ತಾಯಿ ಸದ್ಯಕ್ಕೆ ನನ್ನನ್ನು ಹುಡುಗನ ಅವಸ್ಥೆಯಲ್ಲಿ ಇರಿಸಿದ್ದಾಳೆ’ ಎಂದಿದ್ದರು. ಇಂತಹ ರಾಮಕೃಷ್ಣರು ಜಗತ್ತಿನ ಪಾಪಿಗಳ ಉದ್ಧಾರಕ್ಕೆ ಬಂದಿರುವ ಅವತಾರ ವರಿಷ್ಠರು ! ಗಂಡನ ರೋಗ ವಾಸಿ ಮಾಡುವಂತೆ ತಾರಕೇಶ್ವರದಲ್ಲಿ ಶಿವನ ಬಳಿ ಪ್ರಾಯೋಪವೇಶ ಮಾಡಲು ಹೋಗಿ ಫಲ ಕಾಣದೆ ಮರಳಿದ್ದ ಶಾರದಾಮಣಿಗೆ ಬಿದ್ದ ಕನಸಿನಲ್ಲಿ ರಾಮಕೃಷ್ಣರಿಗೆ ಗಂಟಲ ಹುಣ್ಣಾಗಿದ್ದರಿಂದ ತಾಯಿ ಕಾಳಿ ಕತ್ತು ಬಾಗಿಸಿ ನಿಂತಿದ್ದಳು. ಇತರರ ಪಾಪ ಸ್ವೀಕರಿಸಿ ಅವರಿಗೆ ಆ ಗತಿ ಬಂದಿದ್ದಿತು ! (160)
ಪ್ರತಾಪಚಂದ್ರ ಹಾಜರಾನ ತಾಯಿ ಎಲ್ಲರನ್ನೂ ದ್ವೇಷಿಸುತ್ತಿದ್ದರಿಂದ ಆಕೆಗೆ ಅಂಗಕ್ಷಯ ರೋಗ ಬಂದು ಕಾಲು ಕೊಳೆಯಲಾರಂಭಿಸಿ, ದುರ್ವಾಸನೆ ಹೊಡೆಯುತ್ತಿದ್ದಿತು ‘ ಎಂದು ‘ಮ’ ಗೆ ತಿಳಿಸಿದ್ದ ಗುರುಗಳು ತಮಗೆ ಬಂದ ಗಂಟಲು ಕ್ಯಾನ್ಸರ್’ಗೆ ಮಾತ್ರ ಅಲೌಕಿಕ ಕಾರಣಗಳನ್ನು ನೀಡುತ್ತಿದ್ದರು. (161) ಇನ್ನೊಬ್ಬ ಭಕ್ತ ‘ಹೇ, ಅಮ್ಮಾ ನನ್ನ ರೋಗವನ್ನು ಗುಣಪಡಿಸು ‘ ಎಂದು ಒಮ್ಮೆ ನೀವು ಕೇಳಿದರೆ ನಿಮಗೆ ಗುಣವಾಗುತ್ತದೆ’ ಮುಂತಾಗಿ ಭರವಸೆ ನೀಡಿದ್ದನು. (162) ಭಕ್ತರ ಕಣ್ಣಿಗೆ ಮಂಕುಬೂದಿ ಎರಚಲು ಗುರುಗಳು ಗಂಟಲು ಹುಣ್ಣಾಗಿರುವಂತೆ ನಟಿಸುತ್ತಿದ್ದಾರೆ ಎಂದು ದೇವೇಂದ್ರ ನಂಬಿದ್ದನು. (163) .ಮಹಿಮಚರಣ ವೈದ್ಯರ ಅಹಂಕಾರ ತಣಿಸಲು ರಾಮಕೃಷ್ಣರು ಗಂಟಲು ರೋಗವನ್ನು ತಾವಾಗಿಯೇ ತರಿಸಿಕೊಂಡಿದ್ದಾರೆಂದು ಭಾವಿಸಿದ್ದನು. (164) ಇದು ಡಾ. ಮಹೇಂದ್ರಲಾಲ ಸರ್ಕಾರರಿಗೆ ತಿಳಿದಾಗ ಅವರು ಕ್ಯಾನ್ಸರ್ ಎಂದರೆ ಏನೆಂದು ವೈದ್ಯರಾದ ನಮಗೆ ಗೊತ್ತಿದೆ. ಅದರ ಬಗ್ಗೆ ಏನೂ ಗೊತ್ತಿಲ್ಲದ ರಾಮಕೃಷ್ನರು ಅದು ಹೇಗೆ ತಾನೆ ಅದನ್ನು ತಾವಾಗಿಯೇ ವಾಸಿಮಾಡಿಕೊಳ್ಳಲು ಸಾದ್ಯವೆಂದು ‘ಮ’ನನ್ನು ಪ್ರಶ್ನಿಸಿದ್ದರು. (165) ರಾಮಕೃಷ್ಣರಿಗೆ ಒಳಗಿನಿಂದ ಒಳಗೆ ತಾವು ಹೊರಗೆ ತೋರಿಸಿಕೊಳ್ಳುವಂತೆ ಭಗವಂತನಲ್ಲ , ಆತನನ್ನು ನಿಜವಾಗಿಯೂ ಕಂಡವನ್ನೂ ಅಲ್ಲ , ಭಗವತಿಯನ್ನು ಬೇಡಿಕೊಂಡರೂ ತಮ್ಮ ರೋಗ ವಾಸಿಯಾಗದು ಎನ್ನುವ ಅನಿಸಿಕೆ ಉಂಟಾಗುತ್ತಿದ್ದಿತು. ‘ಹೇ ತಾಯಿ , ಕತ್ತಿಯ ಒರೆಯನ್ನು (ನನ್ನ ದೇಹವನ್ನು) ಸ್ವಲ್ಪ ಸರಿಪಡಿಸು ‘ ಎಂದು ಪ್ರಾರ್ಥಿಸಿದ್ದರೂ ಯಾವ ಲಾಭವೂ ದಕ್ಕಿರಲಿಲ್ಲ. ಆದ್ದರಿಂದ ಈಗ ಕೆಲ ಕಾಲದಿಂದ ನನ್ನ ‘ಅಹಂ’ ಎಲ್ಲಿಗೆ ಹೋಗಿದೆಯೋ ಗೊತ್ತಿಲ್ಲ ; ಹುಡುಕಿದರೂ ಸಿಗುತ್ತಿಲ್ಲ. ಕೇವಲ ಭಗವತಿ ಮಾತ್ರ ಈ ಒರೆಯೊಳಗೆ ಇರುವುದು ಕಾಣುತ್ತಿದೆ’ ಎನ್ನುವ ಹೊಸ ರಾಗ ಪ್ರಾರಂಭಿಸಿದ್ದರು. (166)
ಆರಂಭದಲ್ಲಿ ಸಾಧಾರಣ ಊತ ಎಂದು ಭಾವಿಸಲಾಗಿದ್ದ ಗಂಟಲು ನೋವು ಕೆಲ ತಿಂಗಳುಗಳಲ್ಲಿಯೇ ಗಂಟಾಗಿ ಬದಲಾಗಿ ಘನ ಆಹಾರವನ್ನು ನುಂಗದಂತಾಯಿತು. ಕೆಲವೊಮ್ಮೆ ಗಂಟಲಿನಿಂದ ರಕ್ತ ಹೊರಬರುತ್ತಿದ್ದಿತು. ಇದನ್ನು ಗಮನಿಸಿದ್ದ ರಾಮಚಂದ್ರದತ್ತ , ಕಾಳಿಪದ ,ಗಿರೀಶಚಂದ್ರ ಘೋಷ್ , ದೇವೇಂದ್ರ ಗುರುಗಳನ್ನು ಕಲ್ಕತ್ತಕ್ಕೆ ಕರೆದೊಯ್ದು ಇಂಗ್ಲಿಷ್ ವೈದ್ಯರಿಗೆ ತೋರಿಸಬೇಕೆಂದು ನಿರ್ಧರಿಸಿ ಪಂಚಾಂಗ ನೋಡಿ ಶುಭ ಗಳಿಗೆಯನ್ನು ನಿರ್ಧರಿಸಿ ರಾಜರಘಾಟ್ ಪೂರ್ವಕ್ಕಿದ್ದ ಬಾಗಬಜಾರಿನ ಬಾಡಿಗೆ ಮನೆಗೆ ಗುರುಗಳನ್ನು ಕರೆದೊಯ್ದರು. ಈ ಮನೆ ಕಿರಿದೆಂದು ಗುರುಗಳು ಅಸಮಾಧಾನ ಪಟ್ಟು ತಮ್ಮ ನೆಲೆಯನ್ನು ಬಲರಾಮಬಸು ಮನೆಗೆ ಸ್ಥಳಾಂತರಿಸಿದರು. ಅಲ್ಲಿ ಏಳು ದಿನವದ್ದರು. ನಂತರ ಅವರ ವಸತಿಯನ್ನು ಶ್ಯಾಮಪುಕುರದ ಮನೆಗೆ ಬದಲಾಯಿಸಲಾಯಿತು. ಅಲ್ಲಿ ಎಪ್ಪತ್ತು ದಿನಗಳ ಕಾಲವದ್ದರು. ಅದರ ನಂತರ ಅವರ ವಾಸ ಕಾಶೀಪುರ ತೋಟದ ಮನೆಗೆ ಸ್ಥಳಾಂತರವಾಯತು. ಸಾಯುವವರೆಗೆ ಗುರುಗಳು ಅಲ್ಲಿಯೇ ಇದ್ದರು. ಕಲ್ಕತ್ತಕ್ಕೆ ಕರೆಅ ತಂದ ನಂತರ ಇಂಗ್ಲಿಷ್ ವೈದ್ಯರು ತಮಗೆ ಚಿಕಿತ್ಸೆ ಕೊಡುವುದನ್ನು ಗುರುಗಳು ಒಪ್ಪಲಿಲ್ಲವಾದ್ದರಿಂದ ಡಾ.ಪ್ರತಾಪಚಂದ್ರರನ್ನು ಕರೆಸಲಾಯಿತು. ಮುಂದಿನ ದಿನಗಳಲ್ಲಿ ಪ್ರತಾಪಚಂದ್ರರ ಸಲಹೆಯ ಮೇರೆಗೆ ಶಂಕರಿತೊಲಾದಲ್ಲಿದ್ದ ಖ್ಯಾತ ಹೋಮಿಯೋಪತಿ ವೈದ್ಯ ಮಹೇಂದ್ರಲಾಲ ಸರ್ಕಾರ ಮನೆಗೆ ತಪಾಸಣೆಗೆ ಕರೆದೊಯ್ಯಲಾಯಿತು. ಇದಕ್ಕಾಗಿ ಅವರ ಶುಲ್ಕ ೧೬ ರೂಗಳನ್ನು ತೆಗೆದಿರಿಸಲಾಯಿತು. ಹೆಚ್ಚಿನ ಚಿಕಿತ್ಸೆಯನ್ನು ನೀಡಲು ಮಹೇಂದ್ರಲಾಲ ಸರ್ಕಾರ ರಾಮಕೃಷ್ಣರು ನೆಲೆಸಿರುವಲ್ಲಿಗೆ ಬರುವ ವ್ಯವಸ್ಥೆಯನ್ನು ಭಕ್ತರು ಮಾಡಿದರು (167) ಡಾ. ಮಹೇಂದ್ರಲಾಲ ಸರ್ಕಾರ ಮಥುರ ಮೋಹನ ಬಿಶ್ವಾಸನಿಗೆ ಚಿಕಿತ್ಸೆ ಕೊಡುತ್ತಿದ್ದನಲ್ಲದೆ , ಸಾಧನೆಯ ಸಮಯದಲ್ಲಿಯೂ ರಾಮಕೃಷ್ಣರಿಗೆ ಚಿಕಿತ್ಸೆ ನೀಡಿದ್ದನು. (168) ತಾನು ದಶಕಗಳ ಹಿಂದೆ ಮಥುರಮೋಹನ ಬಿಶ್ವಾಸನೊಂದಿಗೆ ಕಂಡಿದ್ದ ರಾಮಕೃಷ್ಣರು ಹಲವರ ಗುರುವಾಗಿ ಬೆಳೆದಿರುವುದು ಆತನಿಗೆ ಸೋಜಿಗ ಮೂಡಿಸಿದ್ದಿತು.
೧೮/೧೦/೧೮೮೫ ರ ವೇಳೆಗೆ ರಾಮಕೃಷ್ಣರನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲು ಯತ್ನಿಸಿದ್ದ ಎಲ್ಲಾ ವೈದ್ಯರು ಅವರಿಗೆ ಬಂದಿರುವುದು ಗಂಟಲು ಕ್ಯಾನ್ಸರ್ , ಅದಕ್ಕೆ ಚಿಕಿತ್ಸೆ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದ ನಂತರ ಗುರುಗಳ ತಳಮಳಗಳು ಹೆಚ್ಚಿದವು. ಅವರು ಕೆಲವೊಮ್ಮೆ ಗಂಟಲು ಹುಣ್ಣಿನಿಂದ ವಿಚಲಿತನಾಗದ ನಿರ್ಭಾವುಕನಂತೆ ಮಾತನಾಡುತ್ತಿದ್ದರೆ , ಇನ್ನೂ ಕೆಲವೊಮ್ಮೆ ರೋಗವನ್ನು ಗುಣಪಡಿಸುವಂತೆ ಬೇಡುತ್ತಿದ್ದರು. ರವೆಪಾಯಸ ಕುಡಿದು ಬದುಕುವ ಸ್ಥಿತಿ ಬಂದಾಗಲೇ ನಿನ್ನ ಕೊನೆಗಾಲ ಸಮೀಪಿಸುತ್ತದೆ ಎಂದು ಭಗವತಿ ನನಗೆ ತಿಳಿಸಿದ್ದಾಳೆ ಎನ್ನುತ್ತಿದ್ದರು. ಒಂದು ದಿನ ಶಾರದಾಮಣಿ ರವೆ ಪಾಯಸ ಮಾಡಿಕೊಟ್ಟಾಗ ನನ್ನ ಕೊನೆಗಾಲ ಸಮೀಪಿಸಿದೆಯೇ ಎನ್ನುತ್ತ ಅತ್ತರು. (169) ಇಂತಹ ಏರುಪೇರುಗಳನ್ನು ಗಮನಿಸಿದ್ದ ಡಾ.ಮಹೇಂದ್ರಲಾಲ ಸರ್ಕಾರ ಗುರುಗಳನ್ನು ಛೇಡಿಸುತ್ತ ‘ ನನಗೆ ಬಂದಿರುವ ರೋಗವನ್ನು ಗುಣಪಡಿಸಿ’ ಎಂದು ಏಕೆ ಬೇಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದನು. ಅದಕ್ಕೆ ರಾಮಕೃಷ್ಣರು ‘ಎಲ್ಲಿಯವರೆಗೆ ‘ಅಹಂ’ ಎನ್ನುವ ಅಂಶಿಕ ಜ್ಞಾನ ಇರುತ್ತದೆಯೋ ಅಲ್ಲಿಯವರೆಗೆ ಈ ರೀತಿಯಾಗಿ ನಡೆದುಕೊಳ್ಳಬೇಕಾಗುತ್ತದೆ’ ಎಂದು ನೀಡಿದ ಉತ್ತರ ಭಕ್ತರ ದೃಷ್ಟಿಯಲ್ಲಿ ಅದ್ಭುತವಾಗಿದ್ದಿತಾದರೂ ಹಾಸ್ಯಾಸ್ಪದವಾಗಿದ್ದಿತು. (170) ಇನ್ನೊಂದು ದಿನ ಡಾ. ಮಹೇಂದ್ರಲಾಲ ಸರ್ಕಾರರಲ್ಲಿ ಈ ರೋಗದಿಂದ ನನ್ನನ್ನು ಗುಣಪಡಿಸಿಬಿಡು. ನನಗೆ ಭಗವತಿಯ ನಾಮ ,ಗುಣ ಕೀರ್ತನೆ ಮಾಡಲು ಆಗತ್ತಿಲ್ಲ ‘ ಎಂದಾಗ ಆತ ‘ಧ್ಯಾನ ಮಾಡಿದರೆ ಸಾಕಲ್ಲವೇ ? ‘ ಎಂದು ಸರಿಯಾಗಿಯೇ ತಾಗಿದ್ದನು. ಇದರಿಂದ ವಿಚಲಿತರಾಗಿ ‘ ಇದೆಂಥ ಮಾತು ? ನಾನು ಒಂದೇ ಸ್ವರ ಊದುವನು ಏಕಾಗಲಿ ? ‘ ಎಂದು ಕೇಳುತ್ತ ತಾವು ವಿವಿಧ ರೀತಿಯಲ್ಲಿ ಭಗವಂತನಲ್ಲಿ ಮುಳುಗಲೆಂದೇ ಗಂಟಲು ಹುಣ್ಣಿಗೆ ಚಿಕಿತ್ಸೆ ಪಡೆಯುತ್ತಿರುವೆ ಎನ್ನುವ ಪೊಳ್ಳು ಸಮರ್ಥನೆ ನೀಡಿದರು. (171)
ಪ್ರತಿದಿನ ಗುರುಗಳ ಆರೋಗ್ಯವನ್ನು ಅವರಿಂದಲೇ ತಿಳಿದುಕೊಂಡು ಡಾ.ಮಹೇಂದ್ರಲಾಲ ಸರ್ಕಾರನಿಗೆ ಒಪ್ಪಿಸುವ ಹೊಣೆ ‘ಮ’ ಹೆಗಲಿಗೇರಿದ್ದಿತು. ‘ಬೆಳಿಗ್ಗೆ ನನ್ನ ಬಾಯಿ ನೀರಿನಿಂದ ತುಂಬಿಹೋಗುವುದಲ್ಲದೆ , ಕೆಮ್ಮು ಕಾಡುತ್ತಿರುತ್ತದೆ’ ಎನ್ನುವುದನ್ನು ಮಹೇಂದ್ರಲಾಲ ಸರ್ಕಾರನಿಗೆ ತಿಳಿಸಲು ಹೇಳಿದ್ದರೇ ಹೊರತು ‘ ಅಮ್ಮಾ ನನಗೆ ಹೀಗೇಕೆ ಆಗುತ್ತಿದೆ’ ಎಂದು ತಾಯಿಯನ್ನು ಕೇಳಿರಲಿಲ್ಲ. (172) ಶ್ಯಾಮಬಸು ಎತ್ತಿದ್ದ ‘ಎಲ್ಲ ದೇವರೇ ಮಾಡುವಾಗ ಮನುಷ್ಯನಿಗೆ ಪಾಪದ ಹೊಣೆಯೇಕೆ? ‘ಪ್ರಶ್ನೆಗೆ ಉತ್ತರ ಗೊತ್ತಿಲ್ಲದ ಗುರುಗಳು ‘ಆತನದು ಅಕ್ಕಸಾಲಿ ಬುದ್ಧಿ’ ಎಂದು ಹೀಗಳೆದು ‘ ಭಗವಂತನಿಗೆ ವಕಾಲತ್ತು ವಹಿಸಿಬಿಡು. ನಿನ್ನ ಇಡೀ ಹೊರೆ ಆತನ ಮೇಲಿರಲಿ’ ಎಂದು ಬೋಧಿಸಿದ್ದರಾದರೂ ತಾವು ದೇವರಿಗೆ ತಮ್ಮ ವಕಾಲತ್ತನ್ನು ವಹಿಸದೆ ವೈದ್ಯರು ತಮ್ಮ ಗಂಟಲು ಹುಣ್ಣನ್ನು ವಾಸಿಪಡಿಸಬೇಕೆಂದು ಕೋರುತ್ತಿದ್ದರು. (173)
ಶ್ಯಾಮಪುಕುರದ ಮನೆಯನ್ನು ಬಾಡಿಗೆ ಕೊಟ್ಟಿದ್ದ ಅದರ ಮಾಲಿಕ ತಕ್ಷಣ ಖಾಲಿ ಮಾಡುವಂತೆ ಒತ್ತಡ ಹೇರತೊಡಗಿದನು. ಇದೇ ಸಮಯದಲ್ಲಿ ಮಹೇಂದ್ರಲಾಲ ಸರ್ಕಾರ ಕಲ್ಕತ್ತದ ಸನಿಹದ ಉತ್ತಮ ಜಾಗಕ್ಕೆ ಹೋಗುವುದು ಒಳ್ಳೆಯದೆಂದು ಸೂಚಿಸಿದರು. ಇದರ ಫಲವಾಗಿ ಕಾಶೀಪುರ ತೋಟದ ಮನೆಗೆ ಗುರುಗಳನ್ನು ಕರೆದೊಯ್ಯಲಾಯಿತು. ಇಲ್ಲಿ ಬಾಗಬಜಾರಿನ ಡಾ. ರಾಜೇಂದ್ರದತ್ತ ಚಿಕಿತ್ಸೆ ನೀಡತೊಡಗಿದರು. ಇದರಿಂದ ಯಾವುದೇ ಬದಲಾವಣೆ ಕಾಣದೆ ಹಿರಿಯ ವೈದ್ಯ ನವೀನಪಾಲರನ್ನು ಕರೆತರಲಾಯಿತು. ಇವರೊಂದಿಗೆ ಹಲವು ಜನ ಕವಿರಾಜರು ಚಿಕಿತ್ಸೆ ನೀಡುತ್ತಿದ್ದರು. ಇಂಗ್ಲಿಷ್ ವೈದ್ಯರಿಂದ ತೋರಿಸಿಕೊಳ್ಳಲು ನಿರಾಕರಿಸಿದ್ದ ಗುರುಗಳ ಮನ ಒಲಿಸಿ ಕಲ್ಕತ್ತ ಮೆಡಿಕಲ್ ಕಾಲೇಜಿನ ಮುಖ್ಯ ವೈದ್ಯ ಡಾ. ಕೋಟ್ಸ್’ರವರನ್ನು ಕರೆಸಲಾಯಿತು. ಡಾ, ಕೋಟ್ಸ್ ಹಂತ ಮೀರಿರುವ ಈ ಹುಣ್ಣಿಗೆ ಚಿಕಿತ್ಸೆ ಇಲ್ಲವೆಂದು ಕೈಚೆಲ್ಲಿದರು. ಹೀಗೆ ಸಾಂಪ್ರದಾಯಿಕ-ಆಯುರ್ವೇದ, ಪರಕೀಯ-ಹೋಮಿಯೋಪತಿ ಮತ್ತು ಆಧುನಿಕ ವೈಜ್ಞಾನಿಕ-ಅಲೋಪತಿ ಯಾವ ಪದ್ದತಿಯಲ್ಲೂ ಗಂಟಲು ಕ್ಯಾನ್ಸರ್’ಗೆ ಚಿಕಿತ್ಸೆ ಇಲ್ಲವೆಂದು ಮನದಟ್ಟಾಯಿತು. (174)
ರೋಗಪಿಡಿತನಾಗಿ ಹಾಸಿಗೆ ಹಿಡಿದಿದ್ದ ಕೇಶವಚಂದ್ರಸೇನ ಕೊನೆಗಾಲದಲ್ಲಿಯೂ ಮನೆಯಿಂದ-ಹೆಂಡತಿ , ಮಕ್ಕಳು, ಮೊಮ್ಮಕ್ಕಳಿಂದ- ದೂರ ಇರದಿರುವುದನ್ನು ಗುರುಗಳು ಟೀಕಿಸಿದ್ದರು. (175) ಮುಪ್ಪಿನಲ್ಲಿ , ರೋಗ ಪೀಡಿತರಾದಾಗ ಮನೆಯವರು , ಅದರಲ್ಲಿಯೂ ಮುಖ್ಯವಾಗಿ ಹೆಂಡತಿ ಗಂಡನನ್ನು ನೋಡಿಕೊಳ್ಳಬೇಕೆಂದು ನಮ್ಮ ಸಂಸ್ಕೃತಿ ಹೇಳುವುದನ್ನು ರಾಮಕೃಷ್ಣರು ತಿಪ್ಪೆಗೆಸೆದಿದ್ದರು. ನುಡಿದಂತೆ ನಡೆಯುವ ಗುಣ ಗುರುಗಳಲ್ಲಿ ಇರಲಿಲ್ಲ. ಕ್ಯಾನ್ಸರ್ ಪೀಡಿತರಾಗಿ ಕಲ್ಕತ್ತಕ್ಕೆ ವಾಸ ಬದಲಿಸಿದ ನಂತರ ತಮ್ಮ ಸೇವೆಗಾಗಿಯ ದಕ್ಷಿಣೇಶ್ವರದಿಂದ ಶಾರದಾಮಣಿಯನ್ನು ಕರೆಸಿಕೊಂಡರು. ಕಾಶಿಪುರ ತೋಟದ ಮನೆಯಲ್ಲಿರುವಾಗ ಗಂಡನ ಸೇವೆಗೆ ಇಳಿದ ಶಾರದಾಮಣಿಯ ಜೀವನ ಕಠಿಣತರವಾಗಿದ್ದಿತು. ರೋಗಿ ಗಂಡನ ಸೇವೆಯಯೊಂದಿಗೆ ಪ್ರತಿದಿನ ಮೂರು ಬಗೆಯ ಅಡುಗೆ -ರಾಮಕೃಷ್ಣ , ನರೇಂದ್ರನಾಥದತ್ತ ಮತ್ತು ಇತರರಿಗೆ- ಮಾಡುವ ಹೊಣೆ ಶಾರದಾಮಣಿಯದಾಗಿದ್ದಿತು. (176) ಘನ ಆಹಾರ ಬಿಟ್ಟಿದ್ದರಿಂದ ೧೦-೧೨ ದಿನಗಳಿಗೊಮ್ಮೆ ಮಲ ವಿಸರ್ಜನೆ ಮಾಡುವ ಗಂಡನನ್ನು ಸರಿಯಾದ ನಿದ್ರೆಯಿಲ್ಲದೆ ರಾತ್ರಿಯೆಲ್ಲ ನೋಡಿಕೊಳ್ಳುವ ಹೆಚ್ಚಿನ ಹೊರೆ ಶಾರದಾಮಣಿಯ ಮೇಲೆ ಬಿದ್ದಿದ್ದಿತು. (177) ಕೇಶವಚಂದ್ರಸೇನನ ಹೆಂಡತಿಗೆ ಗಂಡ, ಮಕ್ಕಳ ಪ್ರೀತಿಯಾದರೂ ದಕ್ಕಿದ್ದಿತು. ಆ ಭಾಗ್ಯ ಶಾರದಾಮಣಿಗೆ ಇರಲಿಲ್ಲ. ಕಾಶಿಪುರದ ತೋಟದ ಮನೆಯ ಮೊದಲ ಮಹಡಿಗೆ ಹೋಗುವ ಕಡಿದಾದ ಮೆಟ್ಟಿಲಗಳನ್ನು ಹತ್ತಲು ಹೋಗಿ ಕಾಲು ಉಳುಕಿಸಿಕೊಂಡಿದ್ದ ಶಾರದಾಮಣಿಯನ್ನು ಬುಟ್ಟಿಯಲ್ಲಿ ಹೊತ್ತು ತಮ್ಮಲ್ಲಿಗೆ ಮೇಲಕ್ಕೆ ಕರೆತರುವಂತೆ ಬಾಬುರಾಮನಿಗೆ (ಪ್ರೇಮಾನಂದ) ತಿಳಿಸಿದ್ದರು. (178)
ಗಂಟಲು ಹುಣ್ಣಿಗೆ ಬೆದರಿದ್ದ ರಾಮಕೃಷ್ಣರು ತಮ್ಮನ್ನು ನೋಡಲು ಬಂದವರಿಗೆಲ್ಲ ಹಾಕುತ್ತಿದ್ದ ಪ್ರಶ್ನೇ ಒಂದೇ ಆಗಿರುತ್ತಿದ್ದಿತು. ತಮ್ಮನ್ನು ಕಾಣಲು ಬಂದಿದ್ದ ಬಲರಾಮಬಸು ಅಣ್ಣನ ಮಗ ಹರಿವಲ್ಲಭ ಬಸುವಿಗೆ ‘ ಏನು ಮಾಡಿದರೆ ನನ್ನ ಗಂಟಲಿನ ಈ ರೋಗ ಗುಣವಾಗಿ ಬಿಡುತ್ತದೆ ? ಇದು ಬಹಳ ಕಠಿಣವಾದ ಕಾಯಿಲೆಯೇನು ? ‘ ಎಂದು ಪ್ರಶ್ನಿಸಿದಾಗ ಆತ ‘ಮಹಾಶಯರೇ ಇದರ ಬಗ್ಗೆ ವೈದ್ಯರಿಗೆ ಮಾತ್ರ ಹೇಳಲು ಸಾದ್ಯ’ ಎಂದು ನೀಡಿದ ಉತ್ತರ ತೃಪ್ತಿತರದೆ ಮಾತನ್ನು ಬದಲಿಸಿದ್ದರು. (179) ಕಾಶಿಪುರದಲ್ಲಿ ಒಂದು ದಿನ ‘ ಮ’ ಗೆ ‘ನನ್ನ ರೋಗ ಎಷ್ಟು ದಿನದಲ್ಲಿ ಗುಣವಾಗುತ್ತದೆ? ‘ ಎಂದು ಕೇಳಿದರು. ಸ್ವಲ್ಪ ಕೆರಳಿರುವುದರಿಂದ ಹೆಚ್ಚು ಕಾಲ ಬಹುಶಃ ೫-೬ ತಿಂಗಳು ಬೇಕಾಗಬಹುದೆಂದು ಆತ ಉತ್ತರಿಸಿದ್ದನು. ಇದರಿಂದ ಕಂಗಾಲಾಗಿದ್ದ ಅವರು. ‘ನನಗೆ ಎಷ್ಟೊಂದು ಭಗವಂತನ ದರ್ಶನಗಳಾಗಿವೆ , ಭಾವ ಸಮಾಧಿಗಳು ಬಂದಿವೆ ! ಏನು ಕತೆ ! ಆದರೂ ನನಗೆ ಇಂತಹ ರೋಗ ಬಂದಿದೆ ಏಕೆ ಎಂದು ಹೇಳಬಲ್ಲೆಯಾ ?’ ಎನ್ನುತ್ತಾ ಭಕ್ತರನ್ನು ‘ಭವರೋಗ’ದಿಂದ ಬಿಡುಗಡೆಗೊಳಿಸುವ ವೈದ್ಯ ರಾಮಕೃಷ್ಣರು ಗೋಗರೆದಿದ್ದರು. ಇದಕ್ಕೆ ತಮ್ಮೊಳಗೆ ತಾವೇ ಉತ್ತರ ಹುಡುಕುತ್ತ ಸುತ್ತ ನೆರೆದಿದ್ದ ಭಕ್ತರಿಗೆ ‘ ಇದರ ( ತಮ್ಮ ದೇಹ ತೋರಿಸುತ್ತ) ಒಳಗೆ ಇಬ್ಬರಿದ್ದಾರೆ. ಒಬ್ಬ ಭಕ್ತ, ಇನ್ನೊಬ್ಬ ಭಗವತಿ’ ಎಂದಾಗ , ಭಕ್ತನಿಗೆ ರೋಗ ತಾಗಿದೆ, ಭಗವಂತನಿಗಲ್ಲ ಎಂದು ತಮಗೆ ತಾವೇ ಮಾಡಿಕೊಂಡಿದ್ದ ಸಮಾಧಾನ ಮಾಡಿಕೊಂಡರು. (180)
ಇನ್ನೊಂದು ದಿನ ಭಗವತಿ ಭಾವದಲ್ಲಿ ನನ್ನ ಜೀವನದ ಕೊನೆಯಲ್ಲಿ ಕೇವಲ ಪಾಯಸ ಕುಡಿದು ಬದುಕಬೇಕಾಗುತ್ತದೆಯೆಂದು ತೋರಿಸಿದ್ದಾಳೆ ಎನ್ನುತ್ತ ಗಳಗಳ ಅತ್ತರು. (181) ಸಾವಿನ ಭಯದಿಂದ ‘ಭಗವತಿ ನನ್ನನ್ನು ಬಾಲಕನ ಅವಸ್ಥೆಯಲ್ಲಿ ಇಟ್ಟಿದ್ದಾಳೆ. ಒಳ್ಳೆಯದು ಈ ದೇಹ ಈಗ ಬಂದಿರುವ ರೋಗದಿಂದ ಪಾರಾಗಿ ಬದುಕಿಕೊಳ್ಳಬಹುದೇ ?’ ಎಂದು ಅಂತರಂಗದ ಶಿಷ್ಯ ‘ಮ’ನನ್ನು ಪ್ರಶ್ನಿಸಿದ್ದರ. (182) ಕ್ಯಾನ್ಸರ್ ಉಲ್ಬಣಗೊಂಡಾಗ ಹಲವು ವೈದ್ಯರು ನೀಡುತ್ತಿದ್ದ ಚಿಕಿತ್ಸೆಯ ಮೇಲೂ ನಂಬಿಕೆ ಸಡಿಲಗೊಂಡು ದಕ್ಷಿಣೇಶ್ವರಕ್ಕೆ ಹೋಗಿ ಬೋಲಾನಾಥ ಕೊಡುವ ಕರ್ಪೂರದ ಎಣ್ಣೆಯನ್ನು ಗಂಟಲಿಗೆ ತಿಕ್ಕಿಸಿಕೊಳ್ಳುವ ಕೋರಿಕೆ ಬಂದಿದ್ದಿತು. (183) ರೋಗ ವಾಸಿಯಾಗದೆಂದು ದಿನದಿಂದ ದಿನಕ್ಕೆ ಮನದಟ್ಟಾಗತೊಡಗಿದಾಗ ನಿರಾಶೆಯಲ್ಲಿ ‘ನೀವೆಲ್ಲರೂ ಮನಸ್ಸು ಮಾಡಿ ಹೇಳಿದರೆ ಇಷ್ಟೊಂದು ಕಷ್ಟಪಡುತ್ತಿದ್ದಾನೆ. ದೇಹತ್ಯಾಗ ಮಾಡಲಿ ಎಂದು ನೇವೆಲ್ಲರೂ ಮನಸ್ಸು ಮಾಡಿ ಹೇಳಿದರೆ ಒಡನೆಯೇ ದೇಹತ್ಯಾಗ ಮಾಡುತ್ತೇನೆ’ ಎಂದರು. (184) ಭಕ್ತರಿಗಾಗಿ ಬದುಕಿದ್ದೇನೆ ಎಂದು ಬಾಯಿ ಹೇಳುತ್ತಿದ್ದಿತಾದರೂ ಮನಸ್ಸಿನಲ್ಲಿದ್ದ ಒಳಸುಳಿಗಳು ಬೇರೆಯವೇ ಆಗಿದ್ದವು. ಮರುದಿನ ಬಾಹ್ಯಪ್ರಜ್ಞೆ ಕಳೆದುಕೊಂಡು ಎಚ್ಚೆತ್ತ ನಂತರ ಚಿಂತೆಯ ದನಿಯಲ್ಲಿ ‘ ಈಗ ನನಗೆ ಯಾವ ನೋವೂ ಇಲ್ಲ. ಮೊದಲಿನಂತೆ ಆಗಿದ್ದೇನೆ’ ಘೋಷಣೆ ಮಾಡಿದ್ದರು. (185)
ನೇರವಾಗಿ ಭಗವತಿಯನ್ನು ಕಾಣುವ ಗುರುಗಳು ಆಕೆಯನ್ನು ಕೇಳಿಕೊಂಡರೆ ಕ್ಷಣಾರ್ಧದಲ್ಲಿ ಗುರುಗಳ ರೋಗ ವಾಸಿಯಾಗುತ್ತದೆ ಎಂದು ಕೆಲವು ಭಾವುಕ ಭಕ್ತರು ನಂಬಿದ್ದರು. ಆದರೆ ಇದು ಸಾದ್ಯವಿಲ್ಲ ಎನ್ನುವುದು ಗುರುಗಳಿಗೆ ಚೆನ್ನಾಗಿ ಗೊತ್ತಿದ್ದಿತು. ತಮ್ಮನ್ನು ಸುತ್ತುವರೆದಿದ್ದ ಗಿರೀಶಚಂದ್ರ , ರಾಮಚಂದ್ರದತ್ತ , ನಿತ್ಯಗೋಪಾಲ , ಮಹಿಮಚಕ್ರವರ್ತಿ , ಕಿಶೋರಿ , ಶಶಧರ ತರ್ಕಚೂಡಾಮಣಿಗಳಿಗೆ ‘ ನನ್ನ ರೋಗ ಕುರಿತಾಗಿ ತಾಯಿಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ’ ಎನ್ನುವ ಸಮಜಾಯಿಷಿ ನೀಡಿದ್ದರು. (186) ಇದನ್ನು ಮೊದಲೆ ತಿಳಿದಿದ್ದ ಶಶಧರ ತರ್ಕಚೂಡಾಮಣಿ ‘ನೀವು ಸಮಾಧಿಯಲ್ಲಿರುವಾಗ ಮನಸ್ಸನ್ನು ದೇಹದ ಕಡೆ ತಿರುಗಿಸಿಬಿಡಿ. ಹಾಗೆ ಮಾಡಿದರೆ ನಿಮ್ಮ ರೋಗ ಗುಣವಾಗುತ್ತದೆ ಎನ್ನುವ ಪರ್ಯಾಯ ಸಲಹೆ ನೀಡಿದನು. ತಮ್ಮ ಭಾವಾವಸ್ಥೆ ಮತ್ತು ಸಮಾಧಿಗಳಲ್ಲಿ ತಮಗೇ ನಂಬಿಕೆ ಇರದ ಗುರುಗಳು ಶಶಧರ ತರ್ಕಚೂಡಾಮಣಿ ಹೇಳಿದ ಸಲಹೆಗೆ ಉತ್ತರಿಸಿದೆ ಮಾತನ್ನು ತಿರುಗಿಸಿ ನಾನು ತಾಯಿಯನ್ನು ರೋಗ ಗುಣಪಡಿಸುವಂತೆ ಬೇಡಲಾರೆ ಎನ್ನುತ್ತ ಬೇರೆ ಕಥೆ ಹೇಳತೊಡಗಿದರು. (187) ದೇವರ ಚಿಂತನೆಯಲ್ಲಿ ಮುಳುಗಿದರೆ ಸಾಕು ಈ ಗಂಟಲು ನೋವು ಎಲ್ಲಿಗೋ ಓಡಿಹೋಗಿರುತ್ತದೆ- ಹೀಗೆ ಬಡಾಯಿ ಕೊಚ್ಚಿದ್ದ ಗುರುಗಳು ಇನ್ನೊಂದು ದಿನ ನಂಬಿಕೆ ಚಿಕತ್ಸೆ ಕೊಡುವ ಶ್ರೀಮತಿ ಪಾಂಡೆಗೆ ತಮ್ಮ ಗಂಟಲಿನ ಮೇಲೆ ಕೈಯಾಡಿಸಿ ನೋವನ್ನು ಶಮನಗೊಳಿಸುವಂತ್ತೆ ಬೇಡಿದ್ದರಲ್ಲದೆ ಜೀವನದುದ್ದಕೂ ತಾವು ಗೇಲಿ ಮಾಡಿದ್ದ ಪ್ರತಾಮಚಂದ್ರ ಹಾಜರಾ ಜಪ ಮಾಡಿ ರೋಗ ಶಮನ ಮಾಡುವಂತೆ ಗುರುಗಳು ಇನ್ನೊಮ್ಮೆ ಕೇಳಿಕೊಂಡಿದ್ದರು. ಹಾಗೆಯೇ ಮರ್ಷಿದಾಬಾದ್’ನಿಂದ ಬಂದಿದ್ದ ವೈಷ್ಣವನ ಎದೆಯ ಮೇಲೆ ಕಾಲಿರಿಸಿ ತಾವು ದೇವರೆಂದು ತೋರಿಸಿಕೊಂಡಿದ್ದ ಗುರುಗಳು ರೋಗವನ್ನು ಗುಣಪಡಿಸುವಂತೆ ಆತನನ್ನು ಕೇಳಿಕೊಂಡರು.
ಅಣ್ಣನ ಮಗ ಅಕ್ಷಯಕುಮಾರ ಕಾಯಿಲೆಯಾಗಿ ಸಾವಿನ ಅಂಚಿನಲ್ಲಿರುವಾಗ ಆತನನ್ನು ಉಳಿಸಿಕೊಳ್ಳಲು ತಮ್ಮ , ತಮ್ಮ ಹೆಂಡತಿ ಶಾರದಾಮಣಿಯ ಪಾದಧೂಳಿಯನ್ನು ಕಾಳಿಯ ಅಭಿಷೇಕದ ನೀರಿನೊಂದಿಗೆ ಕುಡಿಸುವ ಅದ್ಭುತ ಚಿಕಿತ್ಸೆಯನ್ನು ಗುರುಗಳು ಈ ಹಿಂದೆ ಮಾಡಿಸಿದ್ದರು. (188). ಆದರೆ ಈಗ ಅವರ ಪಾದಧೂಳಿಗೆ ಅವರ ರೋಗವನ್ನು ವಾಸಿಗೊಳಿಸುವ ಶಕ್ತಿ ಇರಲಿಲ್ಲ !! (189).ಶ್ಯಾಮಪುಕುರದ ಮನೆಯಲ್ಲಿರುವಾಗ ಗುರುಗಳು ಪವಾಡಗಳ ಬಗ್ಗೆ ತಮ್ಮ ಭಕ್ತರಿಗೆ ತಿಳಿಸುತ್ತ ‘ ಜನ ಮಕ್ಕಳ ರೋಗ ಗುಣವಾಗಲೆಂದು ಹರಿಕೀರ್ತನೆ ನಡೆಯುವಲ್ಲಿ ಮಕ್ಕಳನ್ನು ಉರುಳಿಸುತ್ತಾರೆ. ಮಂತ್ರ, ತಂತ್ರಗಳಿಂದ ಗುಣಪಡಿಸಲು ಯತ್ನಿಸುತ್ತಾರೆ. ಯಾರು ಅಧ್ಯಾತ್ಮ ಜೀವನದ ಅತ್ಯಂತ ಕೆಳಹಂತದಲ್ಲಿರುವರೋ , ಕೇವಲ ಅವರು ಮಾತ್ರ ರೋಗ ಗುಣಪಡಿಸುವಂತೆ ಭಗವಂತನಲ್ಲಿ ಮೊರೆ ಇಡುತ್ತಾರೆ’ ಎನ್ನುವ ಭಾರಿ ಬೋಧನೆ ಮಾಡಿದ್ದರು. (190) . ಆದರೆ ಇದೇ ಗುರುಗಳು ಹೀಗೆ ಹೇಳಿದ ಕೇವಲ ಎರಡು ವಾರಗಳ ನಂತರ ತಮ್ಮ ರೋಗ ವಾಸಿಯಾಗುವಂತೆ ಬೇಡಿಕೊಂಡು ಢಂಢಂನಲ್ಲಿರುವ ಸಿದ್ಧೇಶ್ವರಿ ತಾಯಿಗೆ ಎಳನೀರು , ಸಕ್ಕರೆ , ಸಂದೇಶ ಅರ್ಪಿಸಿ ಬರುವಂತೆ ‘ಮ’ಗೆ ಹೇಳಿದ್ದರು. ತಮ್ಮ ಅಣತಿಯಂತೆ ಬರಿಗಾಲಿನಲ್ಲಿ ಸಿಧ್ಹೇಶ್ವರಿ ದೇವಾಲಯಕ್ಕೆ ಹೋಗಿ , ಗುರುಗಳ ಪರವಾಗಿ ಹರಕೆ ಸಲ್ಲಿಸಿ ‘ಮ’ ತಂದುಕೊಟ್ಟ ಪ್ರಸಾದ ಮತ್ತು ಹೂವನ್ನು ತಲೆಯ ಮೇಲೆ ಇಟ್ಟುಕೊಂಡಿದ್ದರು. ಕೇಶವಚಂದ್ರಸೇನ ರೋಗಗ್ರಸ್ತನಾಗಿದ್ದಾಗ , ರಾಖಾಲಚಂದ್ರ ಘೋಷ್’ಗೆ ಕುರು ಆಗಿದ್ದಾಗ ಗುರುಗಳು ಇದೇ ಹರಕೆ ಹೊತ್ತು ತೀರಿಸಿದ್ದರು. (191) ಶಶಧರ ತರ್ಕಚೂಡಾಮಣಿಗೆ ‘ನನ್ನ ರೋಗವನ್ನು ಗುಣಪಡಿಸುವಂತೆ ತಾಯಿಯಲ್ಲಿ ಬೇಡಲಾರೆ ‘ ಎಂದಿದ್ದ ಗುರುಗಳು ಹರಕೆ ಹೊತ್ತಿರುವುದು ನಗೆಪಾಟಲಿನ ಸಂಗತಿಯಾದರೂ ಭಾವುಕ ಭಕ್ತರಿಗೆ ಅದು ಕಾಣಿಸದು. ಇಷ್ಟೇ ಅಲ್ಲ , ಮೊದಲ ಸಲ ‘ಮ’ ಭೇಟಿಯಾದಾಗ ‘ಭಗವತಿಗೆ ಎಳೆನೀರು , ಸಕ್ಕರೆ ಅರ್ಪಿಸಲು ಹರಕೆ ಹೊತ್ತಿದ್ದೇನೆ. ಬೆಳಗಿನ ಜಾವ ಎಚ್ಚರವಾಗುತ್ತದೆ. ಆಗ ಅಳುತ್ತ ಭಗವತಿಗೆ ಮೊರೆ ಇಡುತ್ತೇನೆ. ‘ಹೇ ಅಮ್ಮಾ , ಕೇಶವನನ್ನು ಗುಣಮುಖವಾಗಿಸು. ಆತ ಬದುಕದಿದ್ದರೆ ಕಲ್ಕತ್ತಕ್ಕೆ ಹೋದಾಗ ನಾನು ಇನ್ನು ಬೇರೆ ಯಾರ ಸಂಗಡ ಮಾತಾಡಲಿ ? ಅದಕ್ಕಾಗಿಯೇ ಎಳೆನೀರು ಸಕ್ಕರೆ ಹರಕೆ ಹೊತ್ತಿರುವುದು’ ಎಂದು ಗೋಳಾಡಿರುವುದು ‘ಅವತಾರ ವರಿಷ್ಟ’ ಶಕ್ತಿ , ಸಾಮರ್ಥ್ಯಗಳ ಇತಿಮಿತಿಯೂ ಆಗಿದೆ. (192) .
ಅವತಾರ ಪುರುಷ ರಾಮಕೃಷ್ಣರು ತಮ್ಮ ರೋಗವನ್ನು ವಾಸಿ ಮಾಡಿವಂತೆ ತಾವಾಗಿಯೇ ಬೇಡಿಕೊಳ್ಳುವುದಿಲ್ಲ ಎಂದು ಭಾವಿಸಿದ್ದ ಕೆಲ ಭಕ್ತರು ಅವರ ಪರವಾಗಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ಹರಕೆಗಳನ್ನು ಹೊರತೊಡಗಿದರು , ವ್ರತಗಳನ್ನು , ಪೂಜೆಗಳನ್ನು ಮಾಡತೊಡಗಿದರು. ಇನ್ನೂ ಕೆಲವರು ಗುರುಗಳ ಜಾತಕ ತೋರಿಸಿ ಅದರಲ್ಲಿ ಏನಾದರು ಪರಿಹಾರ ಸಿಕ್ಕಬಹುದೇ ಎಂದು ತಡಕಾಡಿದರು. (193) ಕೆಲ ಹೆಣ್ಣು ಭಕ್ತರು ಪ್ರತಿ ಸೋಮವಾರ ತಾರಕೇಶ್ವರದಲ್ಲಿ ತುಳಸಿ ಪೂಜೆ ಮಾಡಿಸಿದರೆ , ಇನ್ನೂ ಕೆಲವರು ಅಲ್ಲಿನ ಪಾದ ತೊಳೆದ ನೀರು –ಚರಣಾಮೃತ- ತಂದು ಗುರುಗಳಿಗೆ ಬಿಲ್ವ ಪತ್ರೆಯ ಎಲೆಯಿಂದ ಕುಡಿಸಿದರು. ಇನ್ನೂ ಕೆಲವರು ತಾರಕೇಶ್ವರದಲ್ಲಿ ಹಲವು ಗಂಟೆ, ದಿನ ತಪಸ್ಸನ್ನು ಕೈಗೊಂಡರು. ಹರಕೆ , ವ್ರತಗಳು ಸಾಗಿರುವಾಗಲೇ ಬಾಹ್ಯಪ್ರಜ್ಞೆ ಕಳೆದುಕೊಂಡು ‘ ಈಗ ನನಗೆ ಯಾವ ನೋವೂ ಇಲ್ಲ. ಮೊದಲಿನಂತೆ ಆಗಿದ್ದೇನೆ’ ಎಂದು ಅಳುಕಿನಲ್ಲಿಯೇ ಘೋಷಣೆ ಮಾಡಿದರು. (194) ಹರಕೆ , ವ್ರತಗಳಿಂದ ಯಾವ ಪ್ರಯೋಜನವೂ ಆಗದಿದ್ದಾಗ ‘ನೀನು ಬಯಸದೇ ಹೊರತು ಬೇರೆ ಯಾರೂ ಅದನ್ನು ಗುಣಪಡಿಸಲಾರರು’ ಎಂದು ಅತ್ತರು (195)
ಗುರುಗಳನ್ನು ಕಾಣಲು ಬಂದಿದ್ದ ‘ಸಿಂಧ್ ಸುಧಾರ’ ಮತ್ತು ‘ಸಿಂಧ್ ಟೈಮ್ಸ್’ ಪತ್ರಿಕೆಗಳ ಸಂಪಾದಕ ಹೀರಾನಂದ ಸೌಕಿರಾಮ ಅದ್ವಾನಿ (೧೮೬೩-೧೮೯೩) ಅವರ ಪಾದಗಳನ್ನು ಒತ್ತುತ್ತ , ಅವರನ್ನು ಮಗುವಿನಂತೆ ಸಂತೈಸುತ್ತ ‘ನೀವು ರೋಗ ಕುರಿತಾಗಿ ಏಕೆ ಇಷ್ಟೊಂದು ತಲೆಗೆ ಹಚ್ಚಿಕೊಂಡಿರುವಿರಿ. ವೈದ್ಯರ ಮೇಲೆ ಎಲ್ಲಾ ಭಾರ ಹಾಕಿ ನಿಶ್ಚಿಂತರಾಗಿರಿ. ನೀವು ಒಂದು ಮಗು ಮಾತ್ರ ‘ ಎಂದು ಸಮಾಧಾನ ಪಡಿಸಲು ಯತ್ನಿಸಿದಾಗ ನಿರ್ವಿಕಾರಿಗಳಾದ ಗುರುಗಳು ‘ ವೈದ್ಯರ ಮೇಲೆ ಹೇಗೆ ಭಾರ ಹಾಕಲಿ. ಡಾ. ಮಹೇಂದ್ರಲಾಲ ಸರ್ಕಾರ ಈ ಕಾಯಿಲೆ ಗುಣವಾಗದು ಎಂದು ಈಗಾಗಲೇ ಹೇಳಿದ್ದಾನೆ ‘ ಎಂದಾಗ ಒಳಗಿದ್ದ ತಲ್ಲಣ ಹೊರಬಂದಿದ್ದಿತು. ಅದಕ್ಕೆ ಎದುರಾಗಿ ಹೀರಾನಂದ ‘ ಅದಕ್ಕಾಗಿ ನೀವೇಕೆ ಚಿಂತಿಸಬೇಕು ? ಏನಾಗಬಹುದೋ ಅದು ಆಗುತ್ತದೆ’ ಎನ್ನುವ ತಾತ್ತ್ವಿಕ ಉತ್ತರ ನೀಡಿದನು. ಇದೇ ಉತ್ತರವನ್ನು ಇತರರಿಗೆ ಹೇಳುತ್ತಿದ್ದ ಗುರುಗಳ ಬಳಿ ಹೇಳಲು ಬೇರೆ ಮಾತಿರಲಿಲ್ಲ. ಇದನ್ನು ಮನಗಂಡ ‘ಮ’ ತಕ್ಷಣ ಗುರುಗಳ ನೆರವಿಗೆ ಧಾವಿಸಿ ‘ಅವರು ತಮಗಾಗಿ ಚಿಂತಿಸುತ್ತಿಲ್ಲ, ಅವರು ತಮ್ಮ ಭಕ್ತರಿಗಾಗಿ ಶರೀರವನ್ನು ಇಟ್ಟುಗೊಂಡಿದ್ದಾರೆ’ ಎನ್ನುವ ಸಮಜಾಯಿಷಿ ನೀಡಿದ್ದನು. ಗಂಟಲು ಹುಣ್ಣು ವಾಸಿಯಾಗದು ಎಂದು ಮನಗಂಡಿದ್ದ ಗುರುಗಳು ಸಿಂಧೂ ಪ್ರದೇಶದಿಂದ ಮರೆಯದೆ ತಮಗೆ ಪೈಜಾಮಗಳನ್ನು ಕಳಿಸುವಂತೆ ಹೀರಾನಂದನಿಗೆ ನೆನಪು ಮಾಡಿದರು. (196)
ಶ್ರಾವಣದ ಕೊನೆಯ ದಿನ-ಹುಣ್ಣಿಮೆಯಂದು ಬೆಳಿಗ್ಗೆ ಗುರುಗಳು ಭಕ್ತನೊಬ್ಬನಿಂದ ಪಂಚಾಂಗ ತರಿಸಿ ಓದಿಸಿದರು. ಭಾದ್ರಪದ ಮಾಸದ ೨ನೇ ದಿನದವರೆಗೆ ಬಂದಾಗ ಓದುವುದನ್ನು ನಿಲ್ಲಿಸುವಂತೆ ತಿಳಿಸಿದರು. ಆ ದಿನ ಅಪರಾಹ್ನ ವೈದ್ಯ ನವೀನಪಾಲ ಬಂದಾಗ , ಎದೆಯ ಸಮೀಪದಲ್ಲಿದ್ದ ತಮ್ಮ ಕೈಗಳನ್ನು ಚಾಚಿ ‘ಇಂದು ನಾನು ಬಹಳ ನರಳಿದೆ. ನನ್ನ ಪಕ್ಕೆಗಳೆರಡೂ ಧಗಧಗಿಸುತ್ತಿದ್ದವು’ ಎಂದು ತಮ್ಮ ನೋವನ್ನು ತೊಡಿಕೊಂಡರು. ತಮ್ಮ ನಾಡಿಯನ್ನು ಪರೀಕ್ಷಿಸಿದ ನವೀನಪಾಲನಿಗೆ ‘ಈಗೇನು ಮಾಡಬಹುದು. ರೋಗ ಮಿತಿಮೀರಿದೆ’ ಎಂದು ಪ್ರಶ್ನಿಸಿದಾಗ ಆತನಲ್ಲಿ ಉತ್ತರವಿರದೆ ’ಹೌದು’ ಎಂದು ಉತ್ತರಿಸಿದನು. ಗುರುಗಳು ದೇವೇಂದ್ರನತ್ತ ತಿರುಗಿ ‘ಇಷ್ಟನ್ನು ಮಾತ್ರ ಅವರು ಹೇಳಬಲ್ಲರು. ನನ್ನನ್ನು ಇಲ್ಲಿಗೆ ಚಿಕಿತ್ಸೆಗಾಗಿ ಕರೆತಂದರು. ಅದಾಗದು ಎಂದರೆ ನಾನೇಕೆ ಇಷ್ಟೊಂದು ನರಳಬೇಕು ? ಎಂದಾಗ ಮುಂದೆ ಸಾವಿನ ಹೊರತು ಬೇರೆ ದಾರಿಯಿಲ್ಲ ಎನ್ನುವ ನಿರಾಶೆಯಿದ್ದಿತು. ದೇವೇಂದ್ರನಾಥ ಮಗುವನ್ನು ಸಂತೈಸುವಂತೆ ಗುರುಗಳನ್ನು ಸಂತೈಸಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. (197)
ರಾಮಕೃಷ್ಣರನ್ನು ‘ಅವತಾರ ಪುರುಷ’ ಎಂದು ಮೊದಲು ಸಾರಿದ್ದ ರಾಮಚಂದ್ರದತ್ತ ಅವರ ಸಾವನ್ನು ಜೀವನ ವೃತ್ತಾಂತದಲ್ಲಿ ಹೀಗೆ ದಾಖಲಿಸಿದ್ದಾರೆ :.. ಅಂದು ಗುರುಗಳ ಮಹಾಸಮಾಧಿಯ ಕೊನೆಯ ರಾತ್ರಿ-ಹುಣ್ಣಿಮೆಯ ದಿನ. ಚಂದ್ರನ ಸುತ್ತಲೂ ಬಣ್ಣದ ಉಂಗುರ ಕಟ್ಟಿದ್ದಿತು ; ಅದರೊಂದಿಗೆ ಆಗಸದಲ್ಲಿ ಬೇರೆ ಬಗೆಯ ಚಿತ್ರಗಳು ರಚಿಸಲ್ಪಟ್ಟಿದ್ದವು. ಕಾಶೀಪುರದಲ್ಲಿದ್ದ ಪೈಕಪಾರದ ಜಮೀನ್ದಾರನ ಗುಡಿಮನೆಯಲ್ಲಿ ದಾನ, ದಕ್ಷಿಣೆಗಳು ವಿತರಣೆಯಾಗುತ್ತಿದ್ದು , ಅದರ ಮುಂದಿನ ರಸ್ತೆ ರಾತ್ರಿಯುದ್ದಕೂ ಗಿಜಿಗುಟ್ಟುತ್ತಿದ್ದಿತು. ಆ ರಾತ್ರಿ ಬೇರೆ ರಾತ್ರಿಗಳಿಗಿಂತಲೂ ಗುರುಗಳು ಹೆಚ್ಚು ಆರಾಮದಲ್ಲಿರುವಂತೆ ಕಂಡರಲ್ಲದೆ ರವೆ ಪಾಯಸ ಮತು ಹಾಲು ಸುಲಭವಾಗಿಯೇ ಹೊಟ್ಟೆ ಸೇರಿದವು. ಅಪರಾತ್ರಿ ಒಂದು ಗಂಟೆಯ ಸುಮಾರಿಗೆ ಎಚ್ಚೆತ್ತ ಅವರು ಇನ್ನೂ ಸ್ವಲ್ಪ ರವೆ ಪಾಯಸ ಕುಡಿದರು. ಎರಡು ಗಂಟೆಯ ಸುಮಾರಿಗೆ ಮಹಾಸಮಾಧಿ ತಲುಪಿದಾಗ ಅವರನ್ನು ಸುತ್ತುವರೆದಿದ್ದ ಶಿಷ್ಯರಲ್ಲಿ ಆತಂಕ ಮೂಡಿತು. ಮನೆಯಲ್ಲಿ ಕರಿ ನೆರಳು ಕವಿದಂತಾಗಿದ್ದಿತು. ಈ ಸಲದ ಸಮಾಧಿ ಗುರುಗಳ ಅಂತಿಮ ಸಮಾಧಿಯೆಂದು ನೆರೆದಿದ್ದವರಿಗೆ ಮನದಟ್ಟಾಗತೊಡಗಿ ಹತಾಶ ಸ್ಥಿತಿ ತಲುಪಿದರು. ಈ ಸುದ್ದಿಯನ್ನು ಕಲ್ಕತ್ತ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿದ್ದ ಭಕ್ತರಿಗೆ ರಾತ್ರಿಯೇ ತಲುಪಿಸಲಾಯಿತು. ಗುರುಗಳ ಸೇವೆ ಮಾಡಿದ , ಅಂತರಂಗಕ್ಕೆ ಸೇರಿದ ಭಕ್ತ, ಶಿಷ್ಯರೆಲ್ಲರೂ ಕಾಶೀಪುರ ತೋಟದ ಮನೆಗೆ ಧಾವಿಸಿದರು. ಬೆಳಗಾಗುವುದರೊಳಗೆ ‘ಪರಮಹಂಸ ದೇವ’ ತಮ್ಮ ಲೌಕಿಕ ಲೀಲೆಯನ್ನು ಕೊನೆಗೊಳಿಸಿ , ಒರೆಯಂತಿದ್ದ ಶರೀರವನ್ನು ಬಿಸುಟೆಸೆದು ಅಖಂಡದಲ್ಲಿ ಅಂತರ್ಧಾನರಾದರೆನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಕೆಲ ಭಕ್ತರಿಗೆ ಅದು ಸಿಡಿಲಿನಾಘಾತವಾಗಿದ್ದಿತು. (198)
ಇದರ ಇನ್ನೂ ಹೆಚ್ಚಿನ ವಿವರಣೆ ಬೇರೆ ಮೂಲಗಳಿಂದ ದಕ್ಕತ್ತದೆ. ೧೫/೮/೧೮೮೬ ಅಪರಾಹ್ನ ಒಂದು ಗಂಟೆಗೆ ಗುರುಗಳ ಮೈಯೊಳಗೆ ವಿದ್ಯುತ್ ಸಂಚಾರವಾದಂತಾದಾಗ ಮೈಮೇಲಿನ ಕೂದಲುಗಳು ನಿಮಿರಿ ನಿಂತವು. ದೇಹ ಒಂದು ಮಗ್ಗುಕಿಗೆ ಹೊರಳಿತು. ಕಣ್ಣುಗಳು ಮೂಗಿನ ತುದಿಯಲ್ಲಿ ನೆಟ್ಟಿರುವಾಗಲೇ ದಿವ್ಯ ಮಂದಹಾಸ ಮುಖದಲ್ಲಿ ಬೆಳಗಿತು. ಗುರುಗಳು ಮತ್ತೊಮ್ಮೆ ಸಮಾಧಿ ಸ್ಥಿತಿ ತಲುಪಿದರು. ಇದನ್ನು ನೋಡಲಾಗದೆ ನರೇಂದ್ರನಾಥದತ್ತ ಕೈಯಲ್ಲಿ ಹಿಡಿದು ತಿಕ್ಕುತ್ತಿದ್ದ ಗುರುಗಳ ಪಾದಗಳನ್ನು ಹಾಸಿಗೆಯ ಮೇಲಿರಿಸಿ ಕೆಳಕ್ಕೆ ಓಡಿದನು. ನಾಡಿ ಬಡಿತ ಕ್ಷೀಣವಾಗಿದ್ದನ್ನು ಕಂಡು ವೈದ್ಯರು ಅಳತೊಡಗಿದರು. ‘ಮ’ ಗುರುಗಳು ನಡುಗುತ್ತಿರುವುದನ್ನು . ಅಸ್ಪಷ್ಟವಾದ ಶಬ್ದ ಬಾಯಿಯಿಂದ ಬರುತ್ತಿರುವುದನ್ನು , ಕೂದಲು ನಿಮಿರಿ , ದೇಹ ಅಲುಗದಿರುವುದನ್ನು ಕಂಡನು. ಗುರುಗಳು ಸಮಾಧಿಗೆ ಹೋಗಿದ್ದಾರೆ –ಅವರನ್ನು ಅದರಿಂದ ಕೆಳಕ್ಕೆ ಇಳಿಸಬೇಕೆಂದು ಅದಕ್ಕಾಗಿ ದೇವರ ನಾಮ ಜಪಿಸಬೇಕೆಂದು ‘ಮ’ ಹೇಳಿದ ತಕ್ಷಣ ನರೇಂದ್ರನಾಥದತ್ತ ಸೇರಿದಂತೆ ಉಳಿದ ಇತರರು ಗಟ್ಟಿಯಾಗಿ ‘ಹರಿ ಓಂ!, ಹರಿ ಓಂ? …ಓಂ ಕಾಳಿ ಓಂ ಕಾಳಿ ಎಂದು ಗಟ್ಟಯಾಗಿ ಜಪಿಸತೊಡಗಿದರು. ಇದು ಒಂದು ಗಂಟೆಯ ಕಾಲ ಸಾಗಿತು. ಅಗಲೂ ಗುರುಗಳು ಎಚ್ಚರವಾಗದಿರುವುದನ್ನು ಕಂಡು ರಾಮಲಾಲನನ್ನು ಕರೆತರಲು ಹಿರಿಯ ಗೋಪಾಲ ಮತ್ತು ಲಾಟು ದಕ್ಷಿಣೇಶ್ವರಕ್ಕೆ ಹೋದರು. (199)
ಗುರುಗಳ ಸಾವಿನ ಸುದ್ದಿ ಕೇಳಿ ನೇಪಾಳ ರಾಜರ ಪ್ರತಿನಿಧಿ ವಿಶ್ವನಾಥ ಉಪಾಧ್ಯಾಯ (ಕ್ಯಾಪ್ಟನ್) ಬೆಳಗಿನ ಜಾವ ಧಾವಿಸಿ ಬಂದು ಗುರುಗಳ ಕೂದಲುಗಳು ನಿಮಿರಿರುವುದನ್ನೂ , ಕಣ್ಣು ಗುಡ್ಡೆಗಳು ಅಲುಗದಿರುವುದನ್ನು ಕಂಡನಾದರೂ ಬೆನ್ನು ಹುರಿ ಇನ್ನೂ ಬೆಚ್ಚಗಿರುವುದನ್ನು ಗುರುತಿಸಿ ಗುರುಗಳ ಮಹಾಸಮಾಧಿ ಇನ್ನೂ ಆಗಿಲ್ಲ , ಆದರೆ ಆಗುವುದಿದೆ ಎನ್ನುವ ನಿರ್ಧಾರಕ್ಕೆ ಬಂದನು. ಆತನ ಸಲಹೆಯಂತೆ ಶಶಿಭೂಷಣ ಚಕ್ರವರ್ತಿ ಮತ್ತ ವೈಕಂಠನಾಥ ಸನ್ಯಾಲ ಗುರುಗಳ ಬೆನ್ನು ಮತ್ತು ಪಾದಗಳನ್ನು ಹಸುವಿನ ತುಪ್ಪದಿಂದ ತಿಕ್ಕಿದರು. ರಾಮಕೃಷ್ಣರು ಇನ್ನೂ ಬದುಕಿದ್ದಾರೆಂದು ನಂಬಿದ್ದ ಶಿಷ್ಯ/ಭಕ್ತರು ಮಹೇಂದ್ರಲಾಲ ಸರ್ಕಾರರನ್ನು ಕರೆಸಿದರು. ಅಗ ನಡೆದುದನ್ನು ಮಹೇಂದ್ರಲಾಲ ಸರ್ಕಾರ ತಮ್ಮ ದಿನಚರಿಯಲ್ಲಿ ಹೀಗೆ ಬರೆದಿದ್ದಾರೆ : ಊಟದ ನಂತರ ಹೋಗಬೇಕು.-ಮೊದಲುಡಫ್ ರಸ್ತೆಯ ಮಹಿಳಾ ರೋಗಯನ್ನು ನೋಡಲು , ನಂತರ ಪರಮಹಂಸರನ್ನು. ಅವರು ರಾತ್ರಿ ಒಂದು ಗಂಟೆಗ ಸಾವನ್ನಪ್ಪಿದ್ದಾರೆಂದು ತಳಿದೆ. ಅವರು ಎಡ ಮಗ್ಗುಲಿಗೆ ಕಾಲುಗಳೆತ್ತಿ ಮಲಗಿದ್ದರು, ಕಣ್ಣುಗಳು ತೆರೆದಿದ್ದವು , ಬಾಯಿ ಅರೆ ತೆರೆದಿದ್ದಿತು. ಅವರ ಕೆಲ ಶಿಷ್ಯರು ಅವರು ಸಮಾಧಿಯಲ್ಲಿ ಇರುವರೆಂದು ನಂಬಿದ್ದರು. ನಾನು ಆ ನಂಬಕೆಯನ್ನು ಅಲ್ಲಗಳೆದೆ. ನಾನು ಅವರಿಗೆ ಒಂದು ಫೋಟೊ ತೆಗೆಯಲು ಹೇಳಿ ನನ್ನ ಕಾಣಿಕೆಯಾಗಿ ರೂ.೧೦ ಕೊಟ್ಟೆ’ ಎಂದು ದಾಖಲಿಸಿದ್ದಾರೆ. (200) .ರಾಮಕೃಷ್ಣರ ಸಾವಿನ ಸುದ್ದಿಯನ್ನು ಕೋಣೆಯಲ್ಲಿದ್ದ ಶಾರದಾಮಣಿಗೆ ತಿಳಿಸಲಾಯಿತು. ಆಗ ಅವರು ಅಳುತ್ತಾ ‘ ಓ ತಾಯಿ , ಕಾಳಿ , ಹೋದರೇ ಎಂದರು. ಅವರನ್ನು ಯೋಗಿನ್ ಮಾ , ಬಾಬುರಾಮ ಸಂತೈಸಿ ಗೋಲಾಪ ಮಾ ಬಳಿ ಬಿಟ್ಟರು.
೧೬/೮/೧೮೮೬ ಬ್ರಾಹ್ಮ ಸಮಾಜದ ಪತ್ರಿಕೆಯಲ್ಲಿ ರಾಮಕೃಷ್ಣರ ನಿಧನದ ವಾರ್ತೆ ಪ್ರಕಟಗೊಂಡಿದ್ದಿತು. (201) ಆ ಕಾಲದಲ್ಲಿ ಪತ್ರಿಕೆಗಳಲ್ಲಿ ಒಂದು ವಾರ್ತೆಯನ್ನು ಪ್ರಕಟಿಸಲು ಪುಟದಲ್ಲಿ ಜಾಗ ನಿಗದಿಪಡಿಸಿ , ಮೊಳೆಗಳನ್ನು ಜೋಡಿಸಿ , ಪ್ರಕಟಿಸಲು ಸಾಕಷ್ಟು ಕಾಲ ಬೇಕಾಗುತ್ತಿದ್ದಿತು. ಪತ್ರಿಕೆಯ ವರದಿಗಾರನಿಗೆ ೧೫/೮/೧೮೬೬ ರಂದು ರಾಮಕೃಷ್ಣರು ಸತ್ತಿರುವುದು ಖಚಿತವಾಗಿ ಅದನ್ಹು ವರದಿ ಮಾಡಿದ್ದನು. ಆದರೆ ಶಿಷ್ಯ/ಭಕ್ತರು ಮಾತ್ರ ಗುರುಗಳು ಸಮಾಧಿಯಲ್ಲಿ ಇರುವರೆಂದು ನಂಬಿ ಮರುದಿನ ಡಾ. ಮಹೇಂದ್ರಲಾಲ ಸರ್ಕಾರ ಬರುವವರೆಗೆ ಕಾದಿದ್ದರು. ವೈದ್ಯರು ಜೀವ ಈಗಾಗಲೇ ಹೋಗಿದೆಯೆಂದು ಘೋಷಿಸಿದ ನಂತರ ಗೊಂದಲಕ್ಕೊಳಗಾದ ಭಕ್ತರಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಅವರ ಮನಸ್ಸು ಕಡಲಿನ ಅಲೆಗಳಿಗೆ ಸಿಕ್ಕ ದೋಣಿಯಂತಾಗಿದ್ದಿತು. ಗುರುಗಳ ಹೆಣವನ್ನು ಕೆಳಗಿನ ವಿಶಾಲ ಕೋಣೆಯಲ್ಲಿದ್ದ ಮಂಚಕ್ಕೆ ಸಾಗಿಸಿ , ಒದ್ದೆ ಬಟ್ಟೆಯಿಂದ ಒರೆಸಿ , ಮೈತುಂಬಾ ಗಂಧದ ಬಟ್ಟುಗಳನ್ನಿಟ್ಟರು , ಹಾರಗಳು ಕೊರಳನ್ನು ತುಂಬಿದವು , ಹೂವುಗಳು ಮೈಯನ್ನು ಮುಚ್ಚಿದವು. ಅಂತಿಮ ಸಂಸ್ಕಾರಕ್ಕಾಗಿ ಶವಯಾತ್ರೆ ಜಾಹ್ನವಿ ನದಿಯತ್ತ ಸಾಗಿದಾಗ ತುಂತುರು ಮಳೆ ಬಂದು ದಿವೌಕಸದಲ್ಲಿ ನೆರೆದಿದ್ದ ದೇವತೆಗಳು ಇನ್ನು ಮುಂದೆ ಪತಿತರನ್ನು ಕಾಯುವರಾರು ಎಂದು ಕಂಬನಿ ಸುರಿಸಿದರೇನೋ ಎನಿಸಿತು. (202)
ಗುರುಗಳ ಶವಯಾತ್ರೆಯಲ್ಲಿ ಕಲ್ಕತ್ತದ ಹಲವು ವ್ಯಕ್ತಿಗಳು ಸೇರಿದಂತೆ ನೂರೈವತ್ತು ಜನ ಸೇರಿದ್ದರು. ಶವಯಾತ್ರೆಯ ವರದಿಗಳನ್ನು , ವರ್ಣನೆಗಳನ್ನು ಗಮನಿಸಿದರೆ ಕಲ್ಕತ್ತದ ಯಾವ ಗಣ್ಯ ವ್ಯಕ್ತಿಯೂ ಅದರಲ್ಲಿ ಭಾಗವಹಿಸಿರುವುದು ಕಾಣುವುದಿಲ್ಲ. ಶವಯಾತ್ರೆ ಸಾಗಿದಾಗ ಕೆಲವರು ಬಾವುಟಗಳನ್ನು , ಇನ್ನೂ ಕೆಲವರು ಹಿಂದೂ, ಮುಸ್ಲಿಂ , ಕ್ರೈಸ್ತ ಧರ್ಮದ ಚಿಹ್ನೆಗಳನ್ನು ಹಿಡಿದಿದ್ದರು. ಅಂತಿಮ ವಿಧೆಗೆ ಮೊದಲು ರಾಮಕೃಷ್ಣರ ನೆಚ್ಚಿನ ಶಿಷ್ಯ ತ್ರೈಲೋಕ್ಯ ಸನ್ಯಾಲ ಆ ಸಂದರ್ಭಕ್ಕೆ ಸೂಕ್ತವೆನಿಸುವ ಮೂರು-ನಾಲ್ಕು ಹಾಡುಗಳನ್ನು ಹಾಡಿದನು. (203) . ಒಟ್ಟಿದ್ದ ಕಟ್ಟಿಗೆಯ ಮೇಲಿರಿಸಿದ್ದ ಗುರುಗಳ ಪಾರ್ಥಿವ ಶರೀರ ಧಗಧಗಿಸಿ ಉರಿಯಿತು. ಉಳಿದ ಅಸ್ತಿ ಸಂಚಯಗಳನ್ನು ತಾಮ್ರದ ಕರಂಡಕದಲ್ಲಿ ಸಂಗ್ರಹಿಸಿಕೊಳ್ಳಲಾಯಿತು. ಅದನ್ನು ಶಶಿಭೂಷಣ ಚಕ್ರವರ್ತಿ ತಲೆಯ ಮೇಲೆ ಹೊತ್ತು ಕಾಶಿಪುರದ ಮನೆಯ ರಾಮಕೃಷ್ಣರ ಕೊಣೆಯಲ್ಲಿರಿಸಿದನು. ನದಿಯಲ್ಲಿ ಶುದ್ಧಿ ಸ್ನಾನ ಮಾಡಿ ಹಿಂದಿರುಗುವಾಗ ಉಪೇಂದ್ರನಾಥ ಮುಖರ್ಜಿಯ ಕಾಲಿಗೆ ಹಾವು ಕಚ್ಚಿ ಆತ ಕುಸಿದು ಬಿದ್ದನು. ವಿಷವೇರದಂತೆ ಆತನ ಕಾಲಿಗೆ ಹಗ್ಗ ಬಿಗಿದು ಬಿಸಿ ಸಲಾಕೆಯಿಂದ ಕಚ್ಚಿದ ಭಾಗವನ್ನು ಸುಡಲಾಯಿತು. ಮುಂದಿನ ನಾಲ್ಕೈದು ತಿಂಗಳು ಆ ಭಾಗ ಹಚ್ಚಿಗೆ ಇದ್ದಿತಾದರೂ ಗುರುಗಳ ದಯೆಯಿಂದ ಆತನ ಪ್ರಾಣಕ್ಕೇನೂ ಅಪಾಯ ಆಗಲಿಲ್ಲ.
ಬ್ರಾಹ್ಮಣರಾದ ಶಾರದಾಮಣಿಗೆ ಅವೈದಿಕ/ಶೂದ್ರ ಹೆಂಗಸರಂತೆ ಗಂಡನ ಅಂತಿಮ ಸಂಸ್ಕಾರಕ್ಕೆ ಹೋಗುವ ಹಕ್ಕು ಕೂಡ ಇರಲಿಲ್ಲ. ಆ ಸಾಯಂಕಾಲ ವಿಧವೆಯಾಗಿದ್ದ ಶಾರದಾಮಣಿ ಬಳೆ ಬಿಚ್ಚಲು ಹೋದಾಗ ರಾಮಕೃಷ್ಣರು ಹೆಂಡತಿಗೆ ಕಾಣಿಸಿಕೊಂಡು ಬಳೆ ಬಿಚ್ಚದಂತೆ ತಿಳಿಸಿದ್ದರು. ಆದರೆ ಅವರು ಇದೇ ರೀತಿ ಸಂಪ್ರದಾಯ ಮೀರಿ ಶೂದ್ರರಂತೆ ತಮ್ಮ ಅಂತ್ಯ ಸಂಸ್ಕಾರಕ್ಕೆ ಬರುವ ಕ್ರಾಂತಿಕಾರಕ ಮಾರ್ಗವನ್ನು ತೋರಿಸಿರಲಿಲ್ಲ ! ಗುರುಗಳನ್ನು ಕಳೆದುಕೊಂಡಿದ್ದ ಭಕ್ತರ ಅಳಲಿಗೆ ಕೊನೆ ಮೊದಲೆಲ್ಲಿ ? ತಾ ಮಾಡಿದ ಕರ್ಮ ಅನುಭವಿಸದೇ ತೀರುವಂತಿಲ್ಲ. ಹಾಗಿದ್ದರೂ ಗುರುಗಳೇಕೆ ನಮ್ಮಂತಹ ಪತಿತರ ಪಾಪಗಳನ್ನು ಸ್ವೀಕರಿಸಿ ತಾವೇ ರೋಗಕ್ಕೆ ತುತ್ತಾದರು ? ನಾವೇಕೆ ನಮ್ಮ ಪಾಪಗಳ ಹೊರೆಯನ್ನು ನಿಮ್ಮ ಮೇಲೆ ಹೇರಿದೆವು ? ನೀವು ಆ ದಿನ ರಾತ್ರಿ ರಕ್ತವನ್ನು ಕಕ್ಕಿದ ನಂತರ , ಇಷ್ಟೊಂದು ರಕ್ತವನ್ನು ಕಕ್ಕಿಯೂ ನಾನೇಕೆ ಸಾಯುತ್ತಿಲ್ಲ ಎಂದು ಕೇಳಿದಿರಿ. ಹೃದಯಹೀನನಾಗಿದ್ದ ನಾನು ಆಗ ‘ಅದು ನಿಜವೇ ‘ ಎಂದಿದ್ದೆನು. ನಾನೆಂಥ ಮೂರ್ಖ’ ಹೀಗೆ ಬಗೆಬಗೆಯಾಗಿ ರಾಮಚಂದ್ರದತ್ತ ತಮ್ಮ ಗುರುವಿನ ಕ್ಯಾನ್ಸರ್ ರೋಗ ಮತ್ತು ಸಾವಿನ ಬಗ್ಗೆ ಹಾಡಿ ಅತ್ತಿದ್ದಾರೆ. ಭಕ್ತರ ಭಾವುಕ ಅಳಲು , ಉದ್ಗಾರ ಏನೇ ಇರಲಿ ವಾಸ್ತವಿಕ , ಲೌಕಿಕ ದೃಷ್ಟಿಯಿಂದ ರಾಮಕೃಷ್ಣರ ಕ್ಯಾನ್ಸರ್ ಮತ್ತು ಸಾವನ್ನು ನೋಡಬೇಕಾಗುತ್ತದೆ.
ರಾಮಕೃಷ್ಣರ ಗಂಟಲು ಕ್ಯಾನ್ಸರ್ ಚಿಕಿತ್ಸೆಗೆ ಕಲ್ಕತ್ತದ ಸುಪ್ರಸಿದ್ಧ ವೈದ್ಯರೆಂದು ಹೆಸರಾದ ಡಾಕ್ಟರ್ ರಾಜೇಂದ್ರದತ್ತ , ಶ್ರೀನಾಥ , ರಾಖಾಲಚಂದ್ರ , ಬಾಧುರಿ, ಮಹೇಂದ್ರಲಾಲ ಸರ್ಕಾರ , ಪ್ರತಾಪಚಂದ್ರ , ಗಂಗಾಪ್ರಸಾದ .ಗೋಪಿಮೋಹನ್ , ದ್ವಾರಕಾನಾಥ , ನವಗೋಪಾಲ ಮುಂತಾದವರು ವಿವಿಧ ಸಮಯದಲ್ಲಿ ಶ್ರಮಿಸಿದ್ದರು. ಇವರೆಲ್ಲರಿಗೂ ಅದು ವಾಸಿಪಡಿಸಲಾಗದ ರೋಗವೆಂದು ಖಚಿತವಾಗಿದ್ದಿತು. ಈ ವೈದ್ಯರಲ್ಲಿ ಹೆಚ್ಚಿನವರು ರಾಮಕೃಷ್ಣರು ದೇವರ ಅವತಾರ, ಅವರಿಗೆ ದೇವಿ ಕಾಣಿಸುತ್ತಾಳೆ, ಸಮಾಧಿ ಸ್ಥಿತಿ ತಲುಪುತ್ತಾರೆ ಎನ್ನುವ ಸಂಗತಿಗಳನ್ನು ಹೆಚ್ಚು ಪ್ರಶ್ನಿಸದೆ ಚಿಕಿತ್ಸೆ ನಡೆಸಲು ಯತ್ನಿಸಿದ್ದರು. ಆದರೆ ಇವರಿಗಿಂತ ಭಿನ್ನವಾಗಿ ಡಾ.ಮಹೇಂದ್ರಲಾಲ ಸರ್ಕಾರ ವೈಚಾರಿಕವಾಗಿ ಗುರುಗಳಿಗೆ ಮುಖಾಮುಖಿಯಾಗಿದ್ದನು. ಈ ಸಂಘರ್ಷದ ಚಿತ್ರಣ ಕೊಡುವಲ್ಲಿ ‘ಮ’ ಸಫಲರಾಗಿರುವರಾದರೂ ಅವರು ಸಂಪೂರ್ಣ ನ್ಯಾಯ ಒದಗಿಸಿಲ್ಲ. ಅವರ ಲೇಖನಿ ಯಾವಾಗಲೂ ತಾವು ನಂಬಿದ್ದ ದೈವ ರಾಮಕೃಷ್ಣರ ಕಡೆಗಿದೆಯೇ ಹೊರತು ಅವರನ್ನು ಪ್ರಶ್ನಿಸಿದ್ದ ಡಾ.ಮಹೆಂದ್ರಲಾಲ ಸರ್ಕಾರನ ಕಡೆಗಲ್ಲ ಎನ್ನುವುದು ದಾಖಲೆಗಳಿಂದಲೇ ಸ್ಪಷ್ಟ. ಶಾರದಾನಂದರು ಲೀಲಾಪ್ರಸಂಗದಲ್ಲಿ ಡಾ. ಮಹೇಂದ್ರಲಾಲ ಸರ್ಕಾರ ಕೊನೆಯಲ್ಲಿ ಗುರುಗಳಿಗೆ ಶರಣಾದರು ಎನ್ನುವ ಅರ್ಥ ಬರುವಂತೆ ಬರೆದಿದ್ದಾರೆ. ಇದಕ್ಕಿಂದ ಬೇರೆಯಾಗಿ ರಾಮಚಂದ್ರದತ್ತ , ಮಹೇಂದ್ರಲಾಲ ಸರ್ಕಾರರು ನಾಸ್ತಿಕರಲ್ಲದಿದ್ದರೂ , ಹಿಂದೂ ದೇವ-ದೇವಿ, ಸಿದ್ಧ , ಯೋಗಿ, ಅವತಾರ ಪುರುಷರನ್ನು ನಂಬುತ್ತಿರಲಿಲ್ಲ. ಇಂದಿಗೂ ಅವರ ಆ ದೃಷ್ಟಿಕೋನದಲ್ಲಿ ಬದಲಾವಣೆಯಾಗಿರುವಂತಿಲ್ಲ ಎಂದು ಬರೆಯುತ್ತಾರೆ. (204)
ಜನ ಸಾಮಾನ್ಯರು ರೋಗ, ಅಪಘಾತಗಳಿಗೆ ಒಳಗಾದಾಗ ಕೆಲಕಾಲ ತಮ್ಮ ವಿಧಿಯನ್ನು ಹಳಿದುಕೊಳ್ಳುತ್ತಾರೆ, ನಂತರ ಅದನ್ನು ಸಹಜ ರೀತಿಯಲ್ಲಿ ಪರಿಗಣಿಸುತ್ತ ಅನುಭವಿಸುತ್ತಾರೆ. ಇನ್ನೂ ಕೆಲವರು ನಿರ್ವಿಕಾರವಾಗಿ ಆಗುವುದೆಲ್ಲ ಆಗಲಿ ಎನ್ನುವ ನಿರ್ಧಾರ ತಳೆಯುತ್ತಾರೆ. ಈ ಕಾಲದಲ್ಲಿರುವ ಯಾವುದೇ ದೊಡ್ದ ಕ್ಯಾನ್ಸರ್ ಆಸ್ಪತೆಗೆ ಹೋದರೂ ಸಾವಿರಾರು ಜನ ಸಾಮಾನ್ಯರು ತಮ್ಮ ಲೌಕಿಕ ಸ್ಥಿತಿ , ಇತಿ ಮಿತಿಗಳಲ್ಲಿಯೇ ರೋಗಕ್ಕೆ ಮುಖಾಮುಖಿಯಾಗಲು ಯತ್ನಿಸುವುದು , ಹಣ ಹೊಂದಿಸಲು ಏಗುವುದು , ಸಂಸಾರದ ಸಿಕ್ಕುಗಳನ್ನು ಬಿಡಿಸಲು ಹೆಣಗುವುದು , ಎಲ್ಲ ಬಗೆಯ ಬಿಕ್ಕಟ್ಟುಗಳನ್ನು ತಮ್ಮದೇ ಆದ ರೀತಿಯಲ್ಲಿ ಎದುರಿಸುವುದು ಕಾಣುತ್ತದೆ. ಅವರಿಗೆ ಆರ್ಥಿಕ ನೆರವು ನೀಡುವ ಶ್ರೀಮಂತ ಭಕ್ತರಾಗಲಿ , ಸಂತೈಸುವ ಶಿಷ್ಯ ಗಣವಾಗಲಿ , ಕರೆದಾಗ ಬಂದು ನೋಡುವ ನುರಿತ ತಜ್ಞ ವೈದ್ಯರಾಗಲಿ ಇರುವುದಿಲ್ಲ. ಇವರಿಗೆ ಹೋಲಿಸಿದಾಗ ‘ಅವತಾರ ವರಿಷ್ಠ’ ರಾಮಕೃಷ್ಣರು ಕ್ಯಾನ್ಸರ್ ಬಂದಾಗ ಹಲುಬಿ , ಅತ್ತಿದ್ದನ್ನು , ತಮ್ಮ ರೋಗಕ್ಕೆ ಅಲೌಕಿಕ ಕಾರಣಗಳನ್ನು ಆರೋಪಿಸಿರುವುದನ್ನು ಗಮನಿಸಿದರೆ ಅವರ ‘ಅವತಾರ’ದ ಪೊಳ್ಳು ಕವಚ ಕಳಚುತ್ತದೆ. ಸಾರಾಂಶ ರೂಪದಲ್ಲಿ ‘ …… ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕೆ ದೇವರ ಹಂಗೇಕೆ? ಭಾಪು ಲದ್ದೆಯ ಸೋಮ’ ಎನ್ನುವ ಶಿವಶರಣ ಲದ್ದೆಯ ಸೋಮನ ದಿಟ್ಟ ವಚನದೊಂದಿಗೆ ರಾಮಕೃಷ್ಣರ ಹಳಹಳಿಕೆಗಳನ್ನು ಹೋಲಿಸಿ ಮುಗಿಸಬಹುದು.
ರಾಮಕೃಷ್ಣ ಪರಮಹಂಸ : ಭ್ರಮೆಗಳ ತೂಗುಯ್ಯಾಲೆ ಪುಸ್ತಕದ ಆಯ್ದ ಭಾಗ
ಎಲ್ಲ ಧರ್ಮ ಗುರುಗಳು ದೈಹಿಕ-ಲೌಕಿಕ-ಮಾನಸಿಕ ಸಂಕಷ್ಟದ ಸಮಯದಲ್ಲಿ ಹೇಗಿರಬೇಕೆಂದು ಭಕ್ತರಿಗೆ ಬೋಧಿಸುತ್ತಾರೆ. ತಾವೇ ಅಂತಹ ಸಂಕಷ್ಟಗಳಿಗೆ ಒಳಗಾದಾಗ ಅವರ ನಡವಳಿಕೆ ಬೋಧಿಸಿದ್ದಕ್ಕಿಂತಲೂ ಭಿನ್ನವಾಗಿರುತ್ತದೆ. ಸ್ವಾಮಿ ವಿವೇಕಾನಂದ , ಅರವಿಂದ ಘೋಷ್ ಮಾತ್ರವಲ್ಲ ‘ಭಗವಾನ್ ರಾಮಕೃಷ್ಣ’ರೂ ಇದಕ್ಕೆ ಹೊರತಾಗಿರಲಿಲ್ಲ. ಅತಿಯಾಗಿ ತಿಂದು ಅಜೀರ್ಣದಿಂದ ನರಳುತ್ತಿದ್ದ ರಾಮಕೃಷ್ಣರಿಗೆ ಭಗವತಿಯನ್ನು ಬೇಡಿ ಗುಣಪಡಿಸಿಕೊಳ್ಳಬೇಕೆಂದು ಹೃದಯರಾಮ ಸೂಚಿಸಿದ್ದ. ಅದನ್ನು ಕೇಳಿಕೊಳ್ಳಲು ಅವರಿಗೆ ನಾಚಿಕೆಯಾಗಿದ್ದಿತು. ಇನ್ನೂ ಕೆಲಕಾಲ ನಿನ್ನ ನಾಮ ಸಂಕೀರ್ತನೆ ಮಾಡಲು ಈ ಹಿಂದೆ ನಾನು ಏಷಿಯಾಟಿಕ್ ಸೊಸೈಟಿಯಲ್ಲಿ ನೋಡಿದ ಬಿಗಿದಿರಿಸಿರುವ ಅಸ್ತಿಪಂಜರದಂತೆ ನನ್ನ ದೇಹವನ್ನೂ ಬಿಗಿದಿರಿಸು ಎಂದು ಬೇಡಿದ್ದರು. (133) ಒಮ್ಮೆ ಗಂಗಾಪ್ರಸಾದ ಚಿಕಿತ್ಸೆಯ ಭಾಗವಾಗಿ ಕೆಲ ದಿನ ನೀರನ್ನು ಕುಡಿಯಬಾರದು ಎಂದು ಹೇಳಿದ್ದರು. ನಿರ್ವಿಕಲ್ಪ ಸಮಾಧಿಯ ಮೂಲಕ ಮನಸ್ಸನ್ನು ಸಂಪೂರ್ಣ ಹತೋಟಿಗೆ ತೆಗೆದಕೊಂಡಿದ್ದ ಗುರುಗಳು ಇದು ನನಗೆ ಸಾದ್ಯವೇ ಎಂದು ಕಂಡ, ಕಂಡವರನ್ನು ಕೇಳಿದ್ದರು. (134)
ಭಾವಾವಸ್ಥೆ ತಲುಪಿ ಮೈಮೇಲಿನ ಎಚ್ಚರತಪ್ಪಿ ಬಿದ್ದಾಗ ರಾಮಕೃಷ್ಣರ ಹಲ್ಲುಗಳು ಮುರಿದಿದ್ದವು. ಇದನ್ನು ಅವರ ಫೊಟೊಗಳಲ್ಲಿ ಕಾಣಬಹುದು. ಇದೇ ರೀತಿ ೧೮೮೪ ಜನವರಿ ತಿಂಗಳಿನಲ್ಲಿ ಪಂಚವಟಿ ಸಮೀಪದ ಸರ್ವೇ ತೋಪಿನ ಬೇಲಿಯ ಹತ್ತಿರ ಎಚ್ಚರಿಕೆಯಿಲ್ಲದೆ ನಡೆದಾಡುತ್ತಿರುವಾಗ ಬಿದ್ದು ಎಡಗೈ ತೊಳಿನ ಮೂಳೆಯ ಕೀಲು ತಪ್ಪಿತು. ಇದನ್ನು ಸರಿಪಡಿಸಲು ವೈದ್ಯರು ತೋಳಿಗೆ ಕಟ್ಟು ಹಾಕಿದರು. ಶಾರದಾಮಣಿ ಜಯರಾಮಬಾಟಿಯಿಂದ ದಕ್ಷಿಣೇಶ್ವರಕ್ಕೆ ಗುರುವಾರದ ಮಧ್ಯಾಹ್ನ ಅಪವೇಳೆಯಲ್ಲಿ ಹೊರಟಿದ್ದರಿಂದ ತಮ್ಮ ಕೈತೋಳಿನ ಕೀಲು ತಪ್ಪಿತೆಂದು ಭಾವಿಸಿ , ಹೆಂಡತಿಯನ್ನು ಹಿಂದಕ್ಕೆ ಕಳಿಸಿ ಒಳ್ಳೆಯ ಗಳಿಗೆಯಲ್ಲಿ ಮತ್ತೊಮ್ಮೆ ಬರುವಂತೆ ಮಾಡಿದ್ದರು. (135) ಮೂಳೆ ಸ್ವಸ್ಥಾನದಲ್ಲಿ ಕೂರುವವರೆಗೆ ಮುಂದೆ ನಾಲ್ಕು ತಿಂಗಳುಗಳ ಕಾಲ ಈ ಪಟ್ಟಿ ಇದ್ದಿತು. ಈ ಅವಧಿಯಲ್ಲಿ ತಮಗೆ ಏಕೆ ಈ ಸ್ಥಿತಿ ಬಂದಿದೆ ಎನ್ನುವ ಹಳಹಳಿಕೆಯಲ್ಲಿಯೇ ಗುರುಗಳು ಕಾಲ ಕಳೆದರು. ‘ಅವತಾರ ಪುರುಷ’ನಿಗೆ ಒಂದು ಅಪಘಾತವನ್ನು ಸಹಜ ರೀತಿಯಲ್ಲಿ ತೆಗೆದುಕೊಳ್ಳುವುದು ಸಾದ್ಯವಾಗಿರಲಿಲ್ಲ. ತಮ್ಮನ್ನು ಕಾಣಲು ಬಂದಿದ್ದ ಮಹಿಮಚರಣನಿಗೆ ‘ ಒಳ್ಳೆಯದು ನಾನು ಯಂತ್ರ , ಭಗವಂತ ಯಂತ್ರಿ ಆಗಿದ್ದರೆ ನನಗೇಕೆ ಹೀಗಾಯಿತು’ ಎಂದು ಪ್ರಶ್ನಿಸಿದ್ದರು. ಗುರುಗಳ ಹಲವು ಸಲ ಮನುಷ್ಯನಿಗೆ ಇಚ್ಛಾ ಸ್ವಾತಂತ್ರವೇ ಇಲ್ಲ ಎಂದು ವಾದಿಸಿದ್ದರು. ಇದಕ್ಕೆ ತಕ್ಕಂತೆ ತಮ್ಮ ಸ್ಥಿತಿಯನ್ನು ಒಪ್ಪಿಕೊಳ್ಳಲು ಆಗಿರಲಿಲ್ಲ. .
ರಾಖಾಲ , ಮಹಿಮಚರಣ , ಹಾಜರಾ, ‘ಮ’ ಸುತ್ತುವರೆದಿರುವಾಗ ‘ ಹೇ , ಬ್ರಹ್ಮಮಯಿ , ನನಗೇಕೆ ಹೀಗೆ ಮಾಡಿದೆ? ತೋಳು ಬಹಳ ನೋಯುತ್ತಿದೆಯಲ್ಲ’ ಎಂದು ಮಗುವಿನಂತೆ ಅಳುತ್ತಾ ಕಣ್ಣೀರುಗರೆದರು. ಭಕ್ತರ ಕಡೆ ತಿರುಗಿ ‘ಮತ್ತೆ ಸರಿ ಹೊಗುತ್ತದೆಯೇ? ‘ ಎಂದು ಪ್ರಶ್ನಿಸಿದಾಗ ಅವರಿಂದ ‘ಖಂಡಿತ , ಬೇಗ ಸರಿಹೋಗುತ್ತದೆ ‘ ಆಶ್ವಾಸನೆ ಬಂದಿದ್ದಿತು. ಇಲ್ಲಿಗೆ ನಿಲ್ಲದೆ ಏರು ದನಿಯಲ್ಲಿ ‘ಆನಂದಮಯಿ ,ಆನಂದಮಯಿ’ ಎಂದು ಕೂಗುತ್ತ , ಅಳುಅಳುತ್ತಲೇ ‘ ವ್ಯಥೆಯೊಂದು ಕೊರೆಯುತಿದೆ ಈ ಎದೆಯನು , ನೀ ಜೊತೆಗಿದ್ದು , ನಾ ಎಚ್ಚರವಿರಲು ಕಳುವಾಯಿತೆ ಮನೆಯೊಳಗೆ’ ಎಂದು ಹಾಡಿದರು. ‘ತಾಯೆ, ನಾನು ತಪ್ಪೆಸಗಿರುವೆನೆ? ನಾನು ಯಾವುದನ್ನಾದರೂ ಸ್ವಂತ ಮಾಡುತ್ತೇನೆಯೇ ? ‘ ಎಂದು ಗಳಪಿದರು. ರಾಖಾಲಚಂದ್ರನಿಗೆ ‘ನೋಡಿಕೋ ಕೆಳಕ್ಕೆ ಬಿದ್ದುಬಿಡಬಹುದು ! ಮುನಿಸಿಕೊಂಡು ಮೋಸಹೋಗದಿರು’ ಎಂದು ಅಳುವಿನಲ್ಲೇ ನಗುತ್ತ ಎಚ್ಚರಿಸಿದರು. ಅದರ ಹಿಂದೆಯೆ ‘ತಾಯಿ , ನೋಯುತ್ತಿದೆ ಎಂದು ನಾನು ಅಳುತ್ತಿರುವೆನೇ ? ಎಂದಿಗೂ ಇಲ್ಲ ‘ ಎನ್ನುತ್ತಲೇ ಕೆಲನಿಮಿಷಗಳ ಹಿಂದೆ ಹಾಡಿದ್ದ ಹಾಡನ್ನು ಮತ್ತೊಮ್ಮೆ ಹಾಡಿದರು. ಸಾಯಂಕಾಲ ತೋಳಿಗೆ ಹೊಸ ಪಟ್ಟಿ ಕಟ್ಟಲು ಬಂದ ಡಾಕ್ಟರ್ ಮಧುಸೂದನನಿಗೆ ‘ ನನಗೆ ಕಲ್ಕತ್ತದ ವೈದ್ಯರಲ್ಲಿ ನಂಬಿಕೆಯಿಲ್ಲ. ಶಂಭುಮಲ್ಲಿಕ ಪ್ರಜ್ಞೆ ಕಳೆದುಕೊಂಡಾಗ ವೈದ್ಯ ಸರ್ವಾಧಿಕಾರಿ ‘ಅದು ಔಷಧದ ಮತ್ತು, ಎಲ್ಲ ಸರಿಹೋಗುತ್ತದೆ ಎಂದಿದ್ದ. ಆದರೆ ಆತ ಸತ್ತೇ ಹೋದ’ ಎಂದು ತಮ್ಮ ಒಳಗಿರುವ ಭಯವನ್ನು ಹೊರಹಾಕಿದ್ದರು. (136)
ಗುರುಗಳ ತೋಳಿನ ಕೀಲು ತಪ್ಪಿರುವುದನ್ನು ನೋಡಿ ಜನ ‘ಈತ ಅವತಾರ ಪುರುಷ’ ಎಂದು ಹಾಸ್ಯಮಾಡಿ ನಗಬಹುದೆನ್ನುವ ಭಯದಲ್ಲಿ ರಾಖಾಲಚಂದ್ರ ಘೋಷ್ ಅವರ ಎಡಗೈ ಕಾಣದಂತೆ ಬಟ್ಟೆ ಹೊದಿಸುತ್ತಿದ್ದನು. ಅಲ್ಲದೆ , ಗುರುಗಳು ಜನಸಾಮಾನ್ಯರಂತೆ ಎಲ್ಲರ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳದಂತೆ ಎಚ್ಚರಿಸಿದ್ದನು. ಇದಕ್ಕೆ ಒಪ್ಪದೆ ‘ತಾಯಿ ನನ್ನನ್ನು ಅಂಥ ಅವಸ್ಥೆಯಲ್ಲಿಟ್ಟಿದ್ದಾಳೆ. ನನ್ನದು ಹುಡುಗನ ಅವಸ್ಥೆ. ಏನನ್ನೂ ಬಚ್ಚಿಟ್ಟುಕೊಳ್ಳಲಾರೆ’ ಸಮರ್ಥನೆಯೊಂದಿಗೆ ತಮ್ಮನ್ನು ಕಾಣಲು ಬಂದವರಿಗೆಲ್ಲ ತೋಳು ಕೀಲು ತಪ್ಪಿದ ಸಂಗತಿ ತಿಳಿಸಿ ಅಳುತ್ತಿದ್ದರು. (137) ಅಸ್ವಸ್ಥನಾದರೆ ನನಗೆ ಅಂಜಿಕೆಯಾಗುತ್ತದೆಯಲ್ಲ ಏಕೆ ? ಒಮ್ಮೊಮ್ಮೆ ಇವನಿಗೆ (=ತಮಗೆ) ಗುಣವಾಗುವ ಬಗೆ ಹೇಗೆ ಎಂದು ಕೇಳುತ್ತಿರುತ್ತೇನೆ. ನೋಡು , ನಂಬಿಕೆಯಿಟ್ಟರೆ ಎಲ್ಲರಲ್ಲೂ ಇಡಬೇಕು. ಇಲ್ಲದಿದ್ದರೆ ಯಾರಲ್ಲೂ ಇಡಕೂಡದು- ಹೀಗೆ ರಾಮಚಂದ್ರದತ್ತ ಮುಂತಾದ ಭಕ್ತ ಮುಂದೆ ಗೋಳಾಡಿದ್ದರು. ಇದಕ್ಕೆ ಪ್ರತಿಯಾಗಿ ಶಿಷ್ಯ ರಾಮಚಂದ್ರ ದತ್ತ ‘ಭಗವಂತನೇ ವೈದ್ಯ , ಕವಿರಾಜ ಎಲ್ಲವೂ ಆಗಿದ್ದಾನೆ. ಆದ್ದರಿಂದ ಅವರೆಲ್ಲರಲ್ಲೂ ನಂಬಿಕೆ ಇಡಬೇಕು. ಅವರನ್ನು ಕೇವಲ ಮನುಷ್ಯರು ಎಂದು ಭಾವಿಸಿದರೆ ಶ್ರದ್ಧೆ ಉಂಟಾಗದು’ ಎನ್ನುವುದನ್ನು ಎಲ್ಲರಲ್ಲೂ ಭಗವಂತನನ್ನು ಕಂಡಿದ್ದ ತನ್ನ ಗುರುಗಳಿಗೆ ಮನದಟ್ಟು ಮಾಡಲು ಯತ್ನಿಸಿದ್ದನು. (138)
ಗುರುಗಳ ಮನಸ್ಸಿನಲ್ಲಿ ಭಗವತಿಯ ಬದಲು ತೋಳಿನ ಚಿಂತೆಯೇ ತುಂಬಿದ್ದಿತು. ‘ನನಗೆ ಒಮ್ಮೊಮ್ಮೆ ಈ ತೋಳಿನ ಬಗ್ಗೆ ಚಿಂತೆ ಹತ್ತುತ್ತದೆ. ಇವನಿಗೆ , ಅವನಿಗೆ ತೋರಿಸಿ ಇದು ಸರಿಯಾಗುವುದೇ ಎಂದು ಕೇಳುತ್ತಲೇ ಇರುತ್ತೇನೆ. ಇದರಿಂದ ರಾಖಾಲನಿಗೆ ಸಿಟ್ಟು. ನನ್ನ ಅವಸ್ಥೆ ಆತನಿಗೆ ಗೊತ್ತಿಲ್ಲ. ಒಮ್ಮೊಮ್ಮೆ ಆತ ಇಲ್ಲಿಂದ ಹೊರಟು ಹೋಗಲಿ ಎಂದು ಭಗವತಿಯಲ್ಲಿ ಕೇಳಿಕೊಳ್ಳುತ್ತೇನೆ. ನಂತರ ‘ಹೇ, ಅಮ್ಮಾ ಆತ ಎಲ್ಲಿಗೆ ಹೋಗುವುದು ? ಈ ಪ್ರಪಂಚವೆಂಬ ಹುರಿಯುವ ಬಾಣಲೆಯಲ್ಲಿ ಬಿದ್ದು ಬೂದಿಯಾಗಲಾರನೇ ?’ ಮುಂತಾಗಿ ತಮಗೆ ತಾವೇ ಗಟ್ಟಿಯಾಗಿ ವಿಮರ್ಶಿಸಿಕೊಂಡಿದ್ದರು. ಇದರಿಂದ ಸಮಾಧಾನವಾಗದೆ ‘ ನನಗೆ ಏಕೆ ಇಷ್ಟೊಂದು ಭಯ ? ಎಂದು ಕೇಳುತ್ತ ‘ಮ’ ಉತ್ತರಕ್ಕಾಗಿ ಕಾದಿದ್ದರು. ಗುರುಗಳ ತಕ್ಕ ಶಿಷ್ಯನಾಗಿದ್ದ ‘ಮ’ ‘ನೀವು ಯಾವಾಗಲೂ ಸಮಾಧಿಯಲ್ಲಿರುತ್ತೀರಿ. ಭಕ್ತರಿಗಾಗಿಯೇ ಮೈಮೇಲಿನ ಜ್ಞಾನ ಉಳಿಸಿಕೊಂಡಿರುವಿರಿ. ಆದ್ದರಿಂದ ನೀವು ನಿಮ್ಮ ದೇಹ ರಕ್ಷಣೆಗೆ ಭಯ ಪಡುತ್ತಿರುವಿರಿ’ ಎಂದು ನೀಡಿದ ಅಲೌಕಿಕ ಉತ್ತರ ಸಂಪೂರ್ಣ ತೃಪ್ತಿಯನ್ನೇನೂ ನೀಡಿರಲಿಲ್ಲ. (139). ಸಾಮಾನ್ಯವಾಗಿ ಯಾರಾದರೂ ತಮ್ಮನ್ನು ಚೈತನ್ಯನ ಅವತಾರ ಎಂದರೆ ಸಂತಸ ಪಡುತ್ತಿದ್ದರು. ಮಾತಿನ ನಡುವೆ ಒಬ್ಬ ಭಕ್ತ ಕೇಶವಚಂದ್ರಸೇನ ನಿಮ್ಮನ್ನು ‘ಜಾನ್ ದಿ ಬ್ಯಾಪ್ಟಿಸ್ಟ್ ‘ ‘ಹತ್ತೊಂಬತ್ತನೇ ಶತಮಾನದ ಚೈತನ್ಯ ಎಂದು ಕರೆಯುವುದನ್ನು ತಿಳಿಸಿದಾಗ ಅನ್ಯಮನಸ್ಕತೆಯಿಂದ ‘ಯಾರು ಏನು ಬೇಕಾದರೂ ಕರೆದುಕೊಳ್ಳಲಿ. ಈಗ ನನಗೆ ನನ್ನ ಕೈ ಚಿಂತೆ ಅದನ್ನು ಹೇಗೆ ಗುಣಪಡಿಸಿಕೊಳ್ಳುವುದು ಎನ್ನುವುದರ ಹೊರತು ಬೇರೆ ಚಿಂತೆ ಇಲ್ಲ’ –ಈ ಉತ್ತರ ಭಯಗೊಂಡಿದ್ದ ಗುರುಗಳಿಂದ ಬಂದಿದ್ದಿತು. (140) ಗುರುಗಳ ಕೈ ಮುರಿದದ್ದರಿಂದ ಅವರ ಹುಟ್ಟುಹಬ್ಬವನ್ನು ಭಕ್ತರು ಫಾಲ್ಗುಣ ಮಾಸದ ಶುಕ್ಲ ಬಿದಿಗೆಯ ದಿನದ ಬದಲು ೨೫/೫/೧೮೮೪ ದಿನಕ್ಕೆ ಮುಂದೂಡಿದ್ದರು. (141)
ಇದಾದ ಐದು ತಿಂಗಳ ನಂತರ ಗುರುಗಳ ಕಾಲು ಸ್ವಲ್ಪ ಊದಿದ್ದಿತು. ಆ ಬಗ್ಗೆ ಅವರು ಹುಡುಗನಂತೆ ಚಿಂತಿತರಾಗಿದ್ದರು ಎಂದು ‘ಮ’ ಬರೆಯುತ್ತಾರೆ. ತಮ್ಮನ್ನು ಕಾಣಲು ಬಂದ ಭಕ್ತರಿಗೆ ತಮ್ಮ ಕಾಲನ್ನು ಒತ್ತಿ ಏನಾಗಿದೆ ಎಂದು ಪರೀಕ್ಷಿಸಲು ಕೇಳಿಕೊಳ್ಳುತ್ತಿದ್ದರು. ನಾರಾಯಣನಿಗೆ ತಮ್ಮ ಕಾಲನ್ನು ಒತ್ತಿ ನೋಡಲು ಹೇಳಿದ್ದರು. ಮರುದಿನ ಬಂದ ಪ್ರಿಯನಾಥ ಮುಖರ್ಜಿಗೂ ಅದೇ ಅಣತಿ ಮಾಡಿದರು. ಆತ ಕಾಲನ್ನು ಒತ್ತಿದಾಗ ಕುಳಿ ಬಿದ್ದಿತು ಎಂದಾಗ ‘ ಉಸ್ಸಪ್ಪಾ ಬದುಕಿದೆ’ ಉದ್ಗಾರ ಹೊರಬಂದಿತು. ಇದನ್ನು ನೋಡುತ್ತಿದ್ದ ಮಣಿಮಲ್ಲಿಕ ‘ಇದಕ್ಕೇಕೆ ಅಷ್ಟೊಂದು ಚಿಂತೆ, ಹರಿಯುವ ನೀರಿನಲ್ಲಿ ಸ್ನಾನಮಾಡಿದರೆ ನೋವು ಹೋಗುತ್ತದೆ, ಔಷಧ ಕುಡಿಯುವುದು ಬೇಕಿಲ್ಲ’ ಎಂದಾಗ ‘ಗುರುಗಳಿಂದ ‘ಅದಾಗದು, ನಿಮ್ಮಲ್ಲಿನ್ನೂ ಬಲವಿದೆ, ಭಗವತಿ ನನ್ನನ್ನು ಹುಡಗನ ಅವಸ್ಥೆಯಲ್ಲಿಟ್ಟಿದ್ದಾಳೆ’ ಕನವರಿಕೆ ಹೊರಬಂದಿದ್ದಿತು. (142) .ಭಕ್ತರು ಕಾಲನ್ನು ಅಮುಕಿ ನೋಡಿ ಏನೂ ಆಗಿಲ್ಲವೆಂದು ಖಚಿತಪಡಿಸಿದ್ದರೂ ಅದರಲ್ಲಿ ವಿಶ್ವಾಸವಿರದ ಗುರುಗಳು. ವಿಜಯಗೋಸ್ವಾಮಿಗೆ ಸಿಂಥಿಯ ಮಹೇಂದ್ರನನ್ನು ಕರೆತಂದು ,ಅತ ಏನೂ ಆಗಿಲ್ಲ ಎಂದು ಹೇಳುವವರೆಗೆ ನನ್ನ ಮನಸ್ಸಿಗೆ ಶಾಂತಿಯಿಲ್ಲ ‘ ಎಂದು ಸ್ಪಷ್ಟವಾಗಿ ತಿಳಿಸಿದಾಗ ದೇಹದ ಕಾಯಿಲೆಯ ಭಯ ಅವರನ್ನು ಸುತ್ತುವರೆದಿದ್ದಿತು. (143)
ಕ್ಯಾನ್ಸರ್ ಕುಟುಕಿದಾಗ : ದಕ್ಷಿಣೇಶ್ವರದಲ್ಲಿ ಯಾವುದೇ ರೋಗವಿರದೆ ಸುಖವಾಗಿ ಜೀವನ ಸಾಗಿಸುತ್ತಿರುವಾಗ ರಾಮಕೃಷ್ಣರು ಮಣಿಮಲ್ಲಿಕನಿಗೆ ಬೋಧಿಸಿದ್ದು ಹೀಗೆ: ‘ಸಾವಿಗಾಗಿ ಸಿದ್ಧರಾಗಿರುವುದು ಒಳ್ಳೆಯದು. ಮಪ್ಪಿನಲ್ಲಿ ನಿರ್ಜನ ಪ್ರದೇಶದಲ್ಲಿ ವಾಸಿಸುತ್ತ ಕೇವಲ ಭಗವಂತನ ಚಿಂತನೆ , ಆತನ ನಾಮ ಸಂಕೀರ್ತನೆ ಮಾಡುತ್ತಿರಬೇಕು. ಆನೆಯ ಮೈತೊಳೆದ ನಂತರ ಅದನ್ನು ಗಜಶಾಲೆಯೊಳಗೆ ಕಟ್ಟಿದರೆ ಮತ್ತೆ ಧೂಳು , ಬೂದಿ ಹತ್ತದು’. (144) .ಇಂತಹ ಉಪದೇಶ ಮಾಡಿದ ಗುರುಗಳು ನಿಜವಾಗಿಯೂ ತಮ್ಮ ಕೊನೆಗಾಲವನ್ನು ಹೇಗೆ ಕಳೆದರು ? ಸಾವನ್ನು ನಿರ್ಲಕ್ಷಿಸಿ ಭಗವಂತನ ನಾಮ ಸಂಕೀರ್ತನೆಯಲ್ಲಿ ಕಳೆದರೇ-ಇದಕ್ಕೆ ಭಕ್ತ ಕಥಾನಕಗಳೇ ಉತ್ತರ ಕೊಡುತ್ತವೆ.
೧೮೮೫ ರಿಂದ ಭಕ್ತರು ಕಲ್ಕತ್ತದಲ್ಲಿ ಸಿಗುತ್ತಿದ್ದ ಐಸ್’ಕ್ರೀಮನ್ನು ಗುರುಗಳಿಗೆ ತಂದುಕೊಡತೊಡಗಿದರು. ಇದನ್ನು ಸಕ್ಕರೆ ಪಾನಕದೊಂದಿಗೆ ಸವಿಯುವುದು ಗುರುಗಳಿಗೂ ಇಷ್ಟವಾಗಿದ್ದಿತು. ಏಪ್ರಿಲ್ ತಿಂಗಳನಲ್ಲಿ ಗುರುಗಳಿಗೆ ಗಂಟಲು ಬೇನೆ ಪ್ರಾರಂಭವಾಯಿತು. ಇದಾದ ನಂತರ ಅವರು ಪಾಣಿಹಾಟಿ ಮಹೋತ್ಸವದಲ್ಲಿ ಭಾಗವಹಿಸಿದರು. ಜಿನುಗು ಮಳೆಯಲ್ಲಿ , ಒದ್ದೆ ನೆಲದ ಮೇಲೆ ಭಾವಾವೇಶದಿಂದ ಕುಣಿದಿದ್ದರಿಂದ ಅದು ಹೆಚ್ಚಿತು. ಕ್ಯಾಂಪ್’ಬೆಲ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಡಿಪ್ಲೊಮಾ ಮಾಡಿದ್ದ ರಾಮಚಂದ್ರದತ್ತ ಗುರುಗಳನ್ನು ಅಲ್ಲಿಗೆ ಕರೆದೊಯ್ದಿದ್ದನು. ಆತ ಪಾಣಿಹಾಟಿಗೆ ಹೋಗದಂತೆ ನನ್ನನ್ನು ತಡೆಯದೇ ಹೋದದ್ದೇ ಗಂಟಲು ಬೇನೆ ಹೆಚ್ಚಲು ಕಾರಣ ಎಂದು ಗುರುಗಳು ಹೇಳುತ್ತಿದ್ದರೆಂದು ಶಾರದಾನಂದರು ಬರೆಯುತ್ತಾರೆ. (145) ‘ಮ’ ದಿನಚರಿಯಲ್ಲಿ ಕ್ಯಾನ್ಸರ್ ಗಂಟಲು ಹುಣ್ಣಿನ ಉಲ್ಲೇಖ ಮೊದಲ ಸಲ ೨೮/೭/೧೮೮೫ ರಂದು ದಾಖಲಾಗಿದೆ. ಗುರುಗಳು ಬಲರಾಮ ಬಸು ಮನೆಯಲ್ಲಿ ರಾತ್ರಿ ವಿಶ್ರಮಿಸಿಕೊಳ್ಳುತ್ತ ‘ ನೋಡು ನನಗೆ ಗಂಟಲಿನಲ್ಲಿ ಹುಣ್ಣು ಆಗಿಬಿಟ್ಟಿದೆಯಲ್ಲ. ಅದರಲ್ಲಿ ಒಂದು ಅರ್ಥವಿದೆ. ಎಲ್ಲರೊಡನೆ ಹುಡುಗಾಟ ಆಡದಿರಲೆಂದು , ಸಿಕ್ಕ ಸಿಕ್ಕ ಕಡೆಯಲ್ಲಿ ಕುಣಿಯದಿರಲೆಂದು ಬಂದಿದೆ’ ಎನ್ನುವ ಕಾರಣ ನೀಡಿದ್ದರು. (146) . ಹಾಗೆ ಹೇಳಿದಾಗ ಅದು ಮುಂದೆ ಮಾರಣಾಂತಿಕ ರೋಗವಾಗುತ್ತದೆ ಎನ್ನುವ ಕಲ್ಪನೆಯಿರಲಿಲ್ಲ.
ಗಂಟಲು ಹುಣ್ಣು ವಾಸಿಯಾಗದ್ದರಿಂದ ‘ಅವತಾರ ವರಿಷ್ಠ’ ರಾಮಕೃಷ್ಣರು ಚಿಂತಿತರಾಗಿದ್ದು ಅದನ್ನು ಹೇಗಾದರೂ ಗುಣ ಪಡಿಸಿಕೊಳ್ಳಬೇಕೆಂದು ಸಾಮಾನ್ಯ ಮನುಷ್ಯನಿಗಿಂತಲೂ ಮಿಗಿಲಾಗಿ ಚಡಪಡಿಸುತ್ತಿದ್ದರು. ಘೋಷಪಾರಾ ಸಂಪ್ರದಾಯದವರಿಂದ ರೋಗ ನಿವಾರಿಸುವ ಮಂತ್ರವನ್ನು ಯೋಗಿನ್ ಮಾ ಕಲಿತಿದ್ದಳು. ರಾಮಕೃಷ್ಣರ ಪ್ರಭಾವದಿಂದ ಅದನ್ನು ಬಳಸುವುದನ್ನು ಆಕೆ ನಿಲ್ಲಿಸಿದ್ದಳು. ಒಂದು ದಿನ ರಾಮಕೃಷ್ಣರು ಆಕೆಯನ್ನು ಕರೆದು ತಮ್ಮ ಗಂಟಲಿನ ಮೇಲೆ ಆ ಮಂತ್ರ ಬಳಸಿ ಗಂಟಲು ಹುಣ್ಣನ್ನು ನಿವಾರಿಸಬೇಕೆಂದು ಕೇಳಿಕೊಂಡರು. ಗುರುಗಳ ಕೋರಿಕೆಯನ್ನು ತಿರಸ್ಕರಿಸಲಾಗದೆ ಆಕೆ ಅದನ್ನು ಬಳಸಿದ್ದಳು. ಭಕ್ತೆ ತನಗೆ ಆ ‘ರಹಸ್ಯ ಮಂತ್ರ’ ಗೊತ್ತಿರುವುದು ಗುರುಗಳಿಗೆ ಹೇಗೆ ತಿಳಿಯಿತೆಂದು ಸೋಜಿಗಪಟ್ಟಿದ್ದಳೆಂದು ಶಾರದಾನಂದರು ಹೆಮ್ಮೆಯಿಂದ ದಾಖಲಿಸಿದ್ದಾರೆ. (147) ಶಾರದಾನಂದರಿಗೆ ಮಂತ್ರದಿಂದ ಗಂಟಲು ಕ್ಯಾನ್ಸರ್ ವಾಸಿ ಮಾಡಬಹುದೆಂದು ತಮ್ಮ ಗುರುಗಳ ನಂಬಿಕೆ ಎಷ್ಟು ಅಸಂಬದ್ಧ ಎನ್ನುವ ಯೋಚನೆ ಸುಳಿದಿಲ್ಲದಿರವುದಕ್ಕೆ ನಾವು ಸೋಜಿಗ ಪಡಬೇಕಾಗಿಲ್ಲ. ಏಕೆಂದರೆ ಭಕ್ತ ಕಥಾನಕ ವೈಚಾರಿಕತೆಯ ಶತ್ರು. ಶಾರದಾನಂದರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಪುರುಷೋತ್ತಮಾನಂದರು ಗುರುಗಳು ಯೋಗಿನ್ ಮಾ ಅಂತಹ ಸಾಮಾನ್ಯರಿಂದ ರೋಗ ಗುಣಪಡಿಸಲು ಗುರುಗಳು ಕೇಳಿಕೊಂಡರೆ ಅವರ ಮಹಾತ್ಮೆಗೆ ಧಕ್ಕೆಯಾಗುತ್ತದೆಯೆಂದು ಭಾವಿಸುತ್ತ ಸಿದ್ಧಿಗಳನ್ನು ಬಳಸಬಾರದೆಂದು ಶಿಷ್ಯರಿಗೆ ತಿಳಿಸಲು ಹೀಗೆ ಕೇಳಿದ್ದರು ಎಂದು ಪರೋಕ್ಷವಾಗಿ ಸೂಚಿಸಲು ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ. (148)
ಮುಂದೆರಡು ತಿಂಗಳುಗಳಲ್ಲಿ ಗಂಟಲು ಹುಣ್ಣು ತೀವ್ರವಾಗಿ ಮಾತನಾಡಲು ಆಗದಂತಹ ಸ್ಥಿತಿ ಎದುರಾಯಿತು. ದಕ್ಷಿಣೇಶ್ವರದ ಕೊಠಡಿಯಲ್ಲಿ ಬೆಳಗಿನ ಎಂಟು ಗಂಟೆಯಿಂದ ಗಂಡ ಮಾತಿಲ್ಲದೆ ಕುಳಿತಿರುವುದನ್ನು ಕಂಡು ಶಾರದಾಮಣಿ , ರಾಖಾಲಚಂದ್ರ ಘೋಷ್ , ಲಾಟು ಅಳತೊಡಗಿದರು. ಅದನ್ನು ನೋಡಿದ ‘ಮ’ ತಮ್ಮ ಈ ರೋಗ ಮಾರಣಾಂತಿಕವಾದುದು. ತಾವು ಈ ಲೋಕವನ್ನು ಬೇಗನೆ ಬಿಡಬೇಕಾಗಿ ಬರುತ್ತದೆ ಎಂದು ಅವರಿಗೆ ಗೊತ್ತಿತ್ತೇನು ? ಅವರು ಮತ್ತೊಮ್ಮೆ ಜಗದಂಬೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಸನ್ನದರಾಗುತ್ತಿರುವರೇನು? ಅದಕ್ಕಾಗಿ ಈ ಮೌನವೇನು’ ಎಂದು ಬರೆದು, ಗಂಟಲು ನೋವಿನ ಭಯದಿಂದ ಮಾತನಾಡದೆ ಕುಳಿತಿರುವ ಗುರುಗಳ ಭಯದ ನಡವಳಿಕೆಗೆ ಅದ್ಭುತ ವಿವರಣೆ ಕೊಡುವ ಯತ್ನ ಮಾಡಿದ್ದಾರೆ. (149) ಇದೇ ‘ಮ’ ಇಪ್ಪತ್ತು ದಿನದ ನಂತರ ತಮ್ಮ ದಿನಚರಿಯಲ್ಲಿ ಗುರುಗಳು ಡಾಕ್ಟರ್ ಭಗವಾನ್ ರುದ್ರರು ತಾವು ಅನಾರೋಗ್ಯದಿಂದ್ದ ಇದ್ದರೂ ಏಕೆ ಬಂದಿಲ್ಲವೆಂದು ವಿಚಾರಿಸಿದ್ದನ್ನು , ಡಾಕ್ಟರ್ ನಿತಾಯಿಯನ್ನು ಕರೆದುಕೊಂಡು ಬರಲು ತಿಳಿಸಿರುವುದನ್ನು , ಅದರೊಂದಿಗೆ ‘ಅಯ್ಯೋ ! ಡಾಕ್ಟರ್’ಗಳು ಬಂದು ಏನು ಮಾಡಬಲ್ಲರು. ಕೇವಲ ನನ್ನ ಗಂಟಲನ್ನು ಹಿಸುಕಿ, ಹಿಸುಕಿ ನೋವು ಹೆಚ್ಚಿಸುತ್ತಾರೆ’ ಎಂದು ಗೊಣಗಿರುವುದನ್ನು ದಾಖಲಿಸಿದ್ದಾರೆ. (150) .
ಇದಾದ ಮರುದಿನವೇ ಚಿಕಿತ್ಸೆ ನೀಡಲು ಬೋಬಜಾರಿನಿಂದ ಬಂದಿದ್ದ ಡಾಕ್ಟರ್ ರಾಖಾಲಚಂದ್ರರಿಗೆ (ರಾಮಚಂದ್ರದತ್ತ ಈತನನ್ನು ರಾಖಾಲದಾಸ ಘೋಷ್ ಎಂದಿದ್ದಾರೆ) ಬೆದರಿದ ಹುಡುಗನಂತೆ ರಾಮಕೃಷ್ಣರು ‘ಬಾಬು ಇದೆಲ್ಲವನ್ನೂ ಗುಣಪಡಿಸಿಬಿಡಿ ‘ ಎಂದು ಅಲವತ್ತುಕೊಂಡರು. ತಕ್ಷಣವೇ ಎಚ್ಚೆತ್ತುಕೊಂಡು ಇದಕ್ಕೆ ಡಾಕ್ಟರ್ ಉತ್ತರ ಏನಿರಬಹುದೆಂದು ಊಹಿಸಿ , ಅವರು ಅದನ್ನು ಹೇಳುವ ಮೊದಲೇ ‘ನೀವು ಎಲ್ಲವನ್ನು ಭಗವಂತನೆಂದು ಕಾಣುವುದಾದರೆ ಸ್ವಲ್ಪವೂ ಗೊಣಗದೆ ಅನುಭವಿಸಿ ಎನ್ನುತ್ತೀರಿ. ಆದರೆ ನಾನು ‘ಮಾವಟಿಗ-ಭಗವಂತ’ನ ಮಾತಿಗೂ ಬೆಲೆ ಕೊಡುತ್ತೇನೆ ‘ ಎನ್ನುತ್ತ ತಮಗಿದ್ದ ರೋಗ ಭಯಕ್ಕೆ ದೃಷ್ಟಾಂತದ ಬೆಂಬಲ ಒದಗಿಸಲು ಹೆಣಗಿದ್ದರು. ತಮಗೆ ಚಿಕಿತ್ಸೆ ನೀಡಬೇಕೆಂದು ವೈದ್ಯರನ್ನು ಗೋಗರೆಯುತ್ತಿದ್ದ ರಾಮಕೃಷ್ಣರು ಗಂಟಲು ಕ್ಯಾನ್ಸರ್ ಬಂದಿರುವುದು ಗೊತ್ತಾಗುವುದಕ್ಕೆ ಒಂದು ತಿಂಗಳ ಹಿಂದೆ ಭಕ್ತನಿಗೆ ಯಾವಾಗ ತನ್ನ ಶರೀರದ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲಾಗದ ಸ್ಥಿತಿ ಬರುತ್ತದೆಯೋ ಆಗ ಭಗವಂತನೇ ಆತನ ಸಕಲ ಭಾರಗಳನ್ನು ಹೊರುತ್ತಾನೆ. ಶ್ರೀಚೈತನ್ಯನೂ ತನ್ನ ದೇಹವನ್ನು ತಾನೇ ನೋಡಿಕೊಳ್ಳದಂತಹ ಸ್ಥಿತಿಯಲ್ಲಿದ್ದ ಎನ್ನುವ ಭಾರಿ ಬೋಧನೆ ಮಾಡಿದ್ದರು. (151)
ಗಂಟಲು ಹುಣ್ಣಿನ ರೂಪದಲ್ಲಿ ಬಂದಿದ್ದ ಸಾವಿನ ಭಯ ಈ ‘ಅವತಾರ ವರಿಷ್ಠ’ನನ್ನು ಎಷ್ಟು ಕಾಡಿದ್ದಿತೆಂದರೆ ಇನ್ನೊಮ್ಮೆ ರಾಖಾಲಚಂದ್ರರ ಅಂಗಿಯನ್ನು ಹುಡುಗನಂತೆ ಎಳೆಯುತ್ತ ‘ಬಾಬು ,ಬಾಬು , ಇದನ್ನು (ಗಂಟಲನ್ನು) ಗುಣಪಡಿಸಿಬಿಡು. ಎಂದು ಗೋಳಾಡಿದರು. ಆತ ತಂದಿದ್ದ ಲ್ಯಾರಿಂಗೋ’ಸ್ಕೋಪ್ ನೋಡಿ ನಗುನಗುತ್ತ ‘ಗೊತ್ತಾಯಿತು ಇದರಲ್ಲಿ ಗಂಟಲಿನ ಪ್ರತಿಬಿಂಬ ಬೀಳುತ್ತದೆ’ ಎಂದರು. (152) ಆದರೆ ಗುರುಗಳ ಈ ನಗೆ ಸಹಜವಾಗಿರದೆ ಭಯದ ಮೂಲವಾಗಿದ್ದಿತು ಎನ್ನುವ ಟಿಪ್ಪಣಿಯನ್ನ ‘ಮ’ ಸೇರಿಸದೆ ಬಿಟ್ಟಿದ್ದಾರೆ. ವೈದ್ಯರನ್ನು ಬೇಡಿಕೊಂಡ ಇದೇ ರಾಮಕೃಷ್ಣರನ್ನು ತಾನೇ ಈಶ್ವರಚಂದ್ರರಲ್ಲಿಗೆ ಕರೆದೊಯ್ದಿದ್ದಾಗ ಗುರುಗಳು ಆತನಿಗೆ ವೈದ್ಯ ರೋಗ ಗುಣಪಡಿಸುವಾಗ ಮತ್ತು ಸೋದರರು ಅಸ್ತಿ ಹಂಚಿಕೊಳ್ಳುವಾಗ ಭಗವಂತ ನಗುತ್ತಾನೆ. ಭಗವಂತನಲ್ಲದೆ ಯಾರೂ ಏನನ್ನೂ ಸರಿಪಡಿಸಲಾರರು , ಆತನದಲ್ಲದೆ ಜಗತ್ತಿನಲ್ಲಿ ಬೇರೆ ಯಾರದು ಏನೂ ಇಲ್ಲ-ಇಂತಹ ಭಾರಿ ಉಪದೇಶ ಮಾಡಿದ್ದನ್ನು ಮತ್ತು ರೋಗಗ್ರಸ್ತ ಕೇಶವಚಂದ್ರಸೇನನನ್ನು ಕಾಣಲು ಕರೆದುಕೊಂಡು ಹೋದಾಗ ಯಾವ ವೈದ್ಯನೂ ದೇವರು ನಿಗದಿ ಪಡಿಸಿದ ಸಾವನ್ನು ತಪ್ಪಿಸಲಾರ ಎಂದು ಹೇಳಿದ್ದನ್ನು ಗುರುಗಳ ವಿಧೇಯ ಭಕ್ತ ‘ಮ’ ಮರೆತಿದ್ದರು. (153)
ಗುರುಗಳಿಗೆ ಭಗವಂತನನ್ನು ಅರಸಿ ಬರುವ , ದೈವ ಲೀಲೆ ಅರಿಯಲು ಬಯಸುವ , ಅಧ್ಯಾತ್ಮದಲ್ಲಿ ಮುಂದುವರಿಯಲು ಹೆಣಗುವ , ಪಾರಮಾರ್ಥಿಕ ವಿಚಾರಗಳನ್ನು ತಿಳಿಯಲು ಯತ್ನಿಸುವ ಭಕ್ತರನ್ನು ಕಂಡರೆ ಅಸೀಮ ಪ್ರೀತಿ. ಗಂಟಲು ಕ್ಯಾನ್ಸರ್ ಆಗಿದ್ದರೂ ಭಕ್ತರ ಏಳ್ಗೆಗಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಉಪದೇಶ, ಮಾರ್ಗದರ್ಶನ ಮಾಡುತ್ತಿದ್ದರೆಂದು ಶಾರದಾನಂದರು ಮತ್ತು ‘ಮ’ ಪ್ರತಿ ಪುಟದಲ್ಲಿಯೂ ಭರವಸೆ ನೀಡಿದ್ದಾರೆ. ಮಾಲುಗಣ್ಣಿನ ಕಾಟೋಯದ ಒಬ್ಬ ವೈಷ್ಣವನು ಗುರುಗಳಲ್ಲಿಗೆ ಬಂದು ‘ ಮಹಾಶಯರೇ ಪುನರ್ಜನ್ಮ ಉಂಟೇ?’ ಎಂದು ಪ್ರಶ್ನಿಸಿದಾಗ ‘ಭಗವದ್ಗೀತೆಯಲ್ಲಿ ಸಾಯುವಾಗ ಏನನ್ನು ನೆನೆಸಿಕೊಳ್ಳುತ್ತಾರೋ ಮುಂದಿನ ಜನ್ಮದಲ್ಲಿ ಅದೇ ಆಗಿ ಹುಟ್ಟುತ್ತಾರೆ ‘ ಎನ್ನುವ ಉತ್ತರ ನೀಡಿದರು. ಆಗ ಆತ ‘ಹೀಗಾಗುವುದನ್ನು ಯಾರಾದರೂ ಪ್ರತ್ಯಕ್ಷ ಕಂಡಿದ್ದರೆ ನಂಬಬಹುದು’ ಎಂದು ಸಂಶಯ ತಾಳಿದಾಗ . ಗುರುಗಳು ರೇಗಿ ‘ಇದರ ವಿಷಯ ನನಗೆ ಹೆಚ್ಚಿಗೆ ತಿಳಿದಿಲ್ಲ. ನನಗೆ ಬಂದಿರುವ ಕಾಯಿಲೆಯನ್ನೇ ನಾನು ಗುಣಪಡಿಸಿಕೊಳ್ಳಲಾರೆ. ಅಂಥಹವನಿಗೆ ಸತ್ತ ಮೇಲೆ ಏನಾಗುತ್ತದೆ ಎನ್ನುವ ಪ್ರಶ್ನೆ ಬೇರೆ. ಈ ಪ್ರಶ್ನೆ ನಿನ್ನ ತಿಳಿಗೇಡಿತನವನ್ನು ತೋರಿಸುತ್ತದೆ ’ ಮುಂತಾಗಿ ಆಶೀರ್ವಾದ ಮಾಡಿದರು. (154), ಹಾಗೆ ಮಾಡುವಾಗ ತಾಯಿ ಕಾಳಿಯನ್ನು ಮರೆತು ಸಾವಿನ ಅಂಜಿಕೆಯಲ್ಲಿ ಹತಾಶನಾಗಿದ್ದ ಒಬ್ಬ ಸಾಧಾರಣ ವ್ಯಕ್ತಿಯಾಗಿದ್ದರು.
ಕುಡಿದು ತೂರಾಡುತ್ತ , ಅಳುತ್ತ ಗಾಡಿಯಲ್ಲಿ ಬಂದ ಗಿರೀಶಚಂದ್ರ ಘೋಷ್ ಗುರುಗಳ ಅಡಿಯ ಮೇಲೆ ತಲೆಯಿರಿಸಿ ‘ ಹೇ ಭಗವಂತ ! ನಾನು ಒಂದು ವರ್ಷ ಇಲ್ಲಿಯೇ ನಿಮ್ಮ ಸೇವೆ ಮಾಡುವಂತೆ ಅನುಗ್ರಹಿಸಿ ಎಂದು ಪರಿಪರಿಯಾಗಿ ಬೇಡಿದನು. ಗುರುಗಳು ‘ಇಲ್ಲಿಯ ಜನ ಅಷ್ಟು ಒಳ್ಳೆಯವರಲ್ಲ ಎಂದಾಗ ಅದನ್ನು ಒಪ್ಪದೆ ‘ಯಾರೂ ನನ್ನ ಕಿರುಬೆರಳನ್ನೂ ಅಲುಗಿಸಲಾರರು. ದಯವಿಟ್ಟು ಮಾತುಕೊಡಿ’ ಎನ್ನುವುದು ಶಿಷ್ಯನ ಒತ್ತಾಯವಾಗಿದ್ದಿತು. ಆಗ ಗುರುಗಳು ‘ಭಗವಂತನ ಇಚ್ಛೆ ಇದ್ದಂತಾಗಲಿ’ ಎಂದರು. ಗಿರೀಶಚಂದ್ರ ಘೋಷ್ ಗಂಟಲು ಹುಣ್ಣಿನ ಸುದ್ದಿ ಎತ್ತಿ ‘ದಯವಿಟ್ಟು ಅದು ಗುಣವಾಗಲಿ ಎನ್ನಿ. ನಾನೇ ಅದನ್ನು ಜಜ್ಜಿ ಹಾಕುತ್ತೇನೆ. ಕಾಳಿ ! ಕಾಳಿ ! ‘ ಗಟ್ಟಿಯಾಗಿ ಗುಡುಗಿದನು. ಶಿಷ್ಯನ ಈ ಮಾತುಗಳಲ್ಲಿ ಆಕ್ರೋಶವಿದ್ದಿತು. ಗುರುಗಳು ತಮ್ಮ ಬಾಯಿಂದ ‘ಗುಣವಾಗಲಿ ‘ ಎಂದು ಒಮ್ಮೆ ಹೇಳಿದರೆ ಕ್ಯಾನ್ಸರ್ ಇಲ್ಲವಾಗುತ್ತದೆ ಎನ್ನುವುದು ಅತನ ದೃಢವಾದ ನಂಬಿಕೆಯಾಗಿದ್ದಿತು. ಉಗ್ರ ಭಕ್ತನಾಗಿ ಬದಲಾಗಿದ್ದ ಗಿರೀಶಚಂದ್ರ ಘೋಷ್’ನ ಒತ್ತಡದಿಂದ ದಿಕ್ಕು ತೋಚದಂತಾದ ರಾಮಕೃಷ್ಣರಿಂದ ‘ನನ್ನನ್ನು ಸುಮ್ಮನೆ ಬಿಡು. ನನ್ನ ಕೈಯಲ್ಲಿ ಅದೆಲ್ಲ ಸಾದ್ಯವಿಲ್ಲ. ರೋಗ ಗುಣಪಡಿಸೆಂದು ಭಗವತಿಯನ್ನು ಬೇಡಲಾರೆ. ಆಕೆಗೆ ಇಚ್ಛೆ ಇದ್ದರೆ ಗುಣವಾಗುತ್ತದೆ’ ಎನ್ನುವ ಸಿದ್ಧ ಉತ್ತರ ಬಂದಿದ್ದಿತು. ಗುರುಗಳನ್ನು ದೇವರೆಂದೇ ಭಾವಿಸಿದ್ದ ಆತ ‘ ನನ್ನ ಕಣ್ಣಿಗೆ ಮಣ್ಣು ಎರಚಬೇಡಿ. ಎಲ್ಲವೂ ನಿಮ್ಮ ಇಚ್ಛೆಯ ಮೇಲಿದೆ’ ಎಂದು ಕೂಗಾಡಿದ್ದನು. (155)
ಅವತಾರ ಪುರುಷರಾದ ತಮಗೆ ವಾಸಿಯಾಗದ ಗಂಟಲು ಹುಣ್ಣಾಗಿದ್ದು , ವಯಸ್ಸು ಅರವತ್ತಾಗಿರುವ ಡಾ. ಮಧುಸೂದನ ತನ್ನ ಉಪಪತ್ನಿಯ ಮನೆಗೆ ಅನ್ನಾಹಾರಗಳನ್ನು ಒಯ್ಯುತ್ತಿರುವುದು, ಆತನಿಗೆ ಯಾವುದೇ ಕಾಯಿಲೆ, ಕಸಾಲೆಗಳು ಇಲ್ಲದಿರುವುದು ಗುರುಗಳ ಸೋಜಿಗಕ್ಕೆ ಕಾರಣವಾಗಿದ್ದು ಅದನ್ನು ತಮ್ಮ ಭಕ್ತರ ಮುಂದೆ ತಿಳಿಸಿದ್ದರು. ಕೀರ್ತನಕಾರ ಗೋಸ್ವಾಮಿ ಗುರುಗಳನ್ನು ಸಮಾಧಾನಪಡಿಸುತ್ತ ‘ ನಿಮಗೆ ರೋಗ ಬಂದಿರುವುದು ಪರರ ಹಿತಕ್ಕೆ . ನಿಮ್ಮ ಬಳಿ ಬರುವ ಎಲ್ಲರ ಪಾಪಗಳನ್ನು ನೀವು ತೆಗೆದುಕೊಂಡು ಹೀಗಾಗಿದೆ’ ಎಂದಿದ್ದನು , ಗುರುಗಳು ತಮ್ಮ ರೋಗಕ್ಕಾಗಿ ದುಃಖಿತರಾಗಿಲ್ಲ. ಅವರದು ಶುದ್ಧ ಪಾಪರಹಿತ ದೇಹ. ಜೀವರ ಮಂಗಳಕ್ಕಾಗಿಯೇ ಅವರನ್ನು ಮುಟ್ಟುತ್ತಿದ್ದಾರೆ. ಅವರ ಪಾಪಗಳನ್ನು ಪಡದೇ ಈ ರೋಗ ಬಂದಿದೆ’ ಎನ್ನುತ್ತ ಗಿರೀಶಚಂದ್ರ ಘೋಷ್ ಗುರುಗಳ ರೋಗಕ್ಕೆ ತನ್ನದೇ ಅದ ಸಮರ್ಥನೆ ಒದಗಿಸಿದ್ದನು. (156). ಸಾಯುವ ನಾಲ್ಕು ತಿಂಗಳು ಮೊದಲು ಗುರುಗಳು ಕೂಡ ಇದೇ ಅಭಿಪ್ರಾಯಕ್ಕೆ ಬಂದಿದ್ದು , ಕಲಿಯುಗದಲ್ಲಿ ಜನರ ಪಾಪ ಹೆಚ್ಚಿದೆ. ಆತ್ಮ ಜಾಗೃತಿಯಾಗಲಿ ಎಂದು ನಾನು ಎಲ್ಲರಿಗೂ ಹೇಳಬಾರದು. ಜನರಿಗೆ ಆತ್ಮಜಾಗೃತಿ ಉಂಟು ಮಾಡಿದಾಗ ಅವರಲ್ಲಿದ್ದ ಪಾಪ ತಮಗೆ ವರ್ಗಾಂತರವಾಗಿ ಗಂಟಲು ಹುಣ್ಣಾಗಿದೆ ಎಂದು ಹೇಳಿದರು. (157) ಇದಕ್ಕೆ ಪೂರಕವಾಗಿ ಶಾರದಾನಂದರು ಶ್ಯಾಮಪುಕುರದಲ್ಲಿರುವಾಗ ಗುರುಗಳಿಗೆ ಒಂದು ಅದ್ಭುತ ದರ್ಶನವಾಯಿತು. ಅವರ ಸೂಕ್ಷ್ಮಶರೀರ ಸ್ಥೂಲಶರೀರದಿಂದ ಹೊರಬಂದು ಕೊಠಡಿಯಲ್ಲಿ ಅಲೆಯುತ್ತಿದ್ದಾಗ ಗಂಟಲಿನಲ್ಲಿ ಹುಣ್ಣಾಗಿರುವುದು ಕಂಡಿತು. ಆಗ ಜಗನ್ಮಾತೆ ಗುರುಗಳನ್ನು ಹಲವು ದುಷ್ಕರ್ಮಿಗಳು ಮುಟ್ಟಿ ಅವರ ಪುಣ್ಯವನ್ನು ತಾವು ಪಡೆದು , ತಮ್ಮ ಪಾಪವನ್ನು ಅವರಿಗೆ ವರ್ಗಾಂತರಿಸಿದ್ದರಿಂದ ಹೀಗಾಯಿತು ಎಂದು ತಿಳಿಸಿದಳು ಎನ್ನುವ ಕಾಗೆ-ಗುಬ್ಬಿಗಳ ಕಥೆ ನೀಡಿದ್ದಾರೆ.(158) ಮಥುರಮೋಹನ ಬಿಶ್ವಾಸನ ಹೆಂಡತಿ ಜಗದಂಬಾಳಿಗೆ ಬಂದಿದ್ದ ಆಮಶಂಕೆಯನ್ನು ಸ್ವೀಕರಿಸಿ ಆಕೆಯನ್ನು ಗುಣಮುಖವಾಗಿಸಿದ್ದರಿಂದ ನಾನು ಆರು ತಿಂಗಳು ಹೊಟ್ಟೆ ನೋವು , ಮತ್ತಿತರ ರೋಗಳಿಂದ ನರಳಿದೆ ಎಂದು ಗುರುಗಳು ಹೇಳಿದ್ದ ಕಥೆಯೇ ಇದಕ್ಕೆ ಆಧಾರವಾಗಿದೆ. (159) ದಕ್ಷಿಣೇಶ್ವರದಲ್ಲಿ ತಮ್ಮನ್ನು ಕಾಣಲು ಬಂದಿದ್ದ ೨೦-೨೨ ವರ್ಷ ವಯಸ್ಸಿನ ಅತ್ತಿಗೆ-ನಾದಿನಿಯರು ಮಂತ್ರೋಪದೇಶ ಮಾಡುವಂತೆ ಕೇಳಿಕೊಂಡಾಗ ‘ನಾನು ಯಾರಿಗೂ ಮಂತ್ರೋಪದೇಶ ಮಾಡುವುದಿಲ್ಲ. ಹಾಗೆ ಮಂತ್ರೋಪದೇಶ ಮಾಡಿದರೆ ಆ ಶಿಷ್ಯನ ಪಾಪಗಳನ್ನು ನಾನೇ ಹೊತ್ತುಕೊಳ್ಳಬೇಕಾಗುತ್ತದೆ . ತಾಯಿ ಸದ್ಯಕ್ಕೆ ನನ್ನನ್ನು ಹುಡುಗನ ಅವಸ್ಥೆಯಲ್ಲಿ ಇರಿಸಿದ್ದಾಳೆ’ ಎಂದಿದ್ದರು. ಇಂತಹ ರಾಮಕೃಷ್ಣರು ಜಗತ್ತಿನ ಪಾಪಿಗಳ ಉದ್ಧಾರಕ್ಕೆ ಬಂದಿರುವ ಅವತಾರ ವರಿಷ್ಠರು ! ಗಂಡನ ರೋಗ ವಾಸಿ ಮಾಡುವಂತೆ ತಾರಕೇಶ್ವರದಲ್ಲಿ ಶಿವನ ಬಳಿ ಪ್ರಾಯೋಪವೇಶ ಮಾಡಲು ಹೋಗಿ ಫಲ ಕಾಣದೆ ಮರಳಿದ್ದ ಶಾರದಾಮಣಿಗೆ ಬಿದ್ದ ಕನಸಿನಲ್ಲಿ ರಾಮಕೃಷ್ಣರಿಗೆ ಗಂಟಲ ಹುಣ್ಣಾಗಿದ್ದರಿಂದ ತಾಯಿ ಕಾಳಿ ಕತ್ತು ಬಾಗಿಸಿ ನಿಂತಿದ್ದಳು. ಇತರರ ಪಾಪ ಸ್ವೀಕರಿಸಿ ಅವರಿಗೆ ಆ ಗತಿ ಬಂದಿದ್ದಿತು ! (160)
ಪ್ರತಾಪಚಂದ್ರ ಹಾಜರಾನ ತಾಯಿ ಎಲ್ಲರನ್ನೂ ದ್ವೇಷಿಸುತ್ತಿದ್ದರಿಂದ ಆಕೆಗೆ ಅಂಗಕ್ಷಯ ರೋಗ ಬಂದು ಕಾಲು ಕೊಳೆಯಲಾರಂಭಿಸಿ, ದುರ್ವಾಸನೆ ಹೊಡೆಯುತ್ತಿದ್ದಿತು ‘ ಎಂದು ‘ಮ’ ಗೆ ತಿಳಿಸಿದ್ದ ಗುರುಗಳು ತಮಗೆ ಬಂದ ಗಂಟಲು ಕ್ಯಾನ್ಸರ್’ಗೆ ಮಾತ್ರ ಅಲೌಕಿಕ ಕಾರಣಗಳನ್ನು ನೀಡುತ್ತಿದ್ದರು. (161) ಇನ್ನೊಬ್ಬ ಭಕ್ತ ‘ಹೇ, ಅಮ್ಮಾ ನನ್ನ ರೋಗವನ್ನು ಗುಣಪಡಿಸು ‘ ಎಂದು ಒಮ್ಮೆ ನೀವು ಕೇಳಿದರೆ ನಿಮಗೆ ಗುಣವಾಗುತ್ತದೆ’ ಮುಂತಾಗಿ ಭರವಸೆ ನೀಡಿದ್ದನು. (162) ಭಕ್ತರ ಕಣ್ಣಿಗೆ ಮಂಕುಬೂದಿ ಎರಚಲು ಗುರುಗಳು ಗಂಟಲು ಹುಣ್ಣಾಗಿರುವಂತೆ ನಟಿಸುತ್ತಿದ್ದಾರೆ ಎಂದು ದೇವೇಂದ್ರ ನಂಬಿದ್ದನು. (163) .ಮಹಿಮಚರಣ ವೈದ್ಯರ ಅಹಂಕಾರ ತಣಿಸಲು ರಾಮಕೃಷ್ಣರು ಗಂಟಲು ರೋಗವನ್ನು ತಾವಾಗಿಯೇ ತರಿಸಿಕೊಂಡಿದ್ದಾರೆಂದು ಭಾವಿಸಿದ್ದನು. (164) ಇದು ಡಾ. ಮಹೇಂದ್ರಲಾಲ ಸರ್ಕಾರರಿಗೆ ತಿಳಿದಾಗ ಅವರು ಕ್ಯಾನ್ಸರ್ ಎಂದರೆ ಏನೆಂದು ವೈದ್ಯರಾದ ನಮಗೆ ಗೊತ್ತಿದೆ. ಅದರ ಬಗ್ಗೆ ಏನೂ ಗೊತ್ತಿಲ್ಲದ ರಾಮಕೃಷ್ನರು ಅದು ಹೇಗೆ ತಾನೆ ಅದನ್ನು ತಾವಾಗಿಯೇ ವಾಸಿಮಾಡಿಕೊಳ್ಳಲು ಸಾದ್ಯವೆಂದು ‘ಮ’ನನ್ನು ಪ್ರಶ್ನಿಸಿದ್ದರು. (165) ರಾಮಕೃಷ್ಣರಿಗೆ ಒಳಗಿನಿಂದ ಒಳಗೆ ತಾವು ಹೊರಗೆ ತೋರಿಸಿಕೊಳ್ಳುವಂತೆ ಭಗವಂತನಲ್ಲ , ಆತನನ್ನು ನಿಜವಾಗಿಯೂ ಕಂಡವನ್ನೂ ಅಲ್ಲ , ಭಗವತಿಯನ್ನು ಬೇಡಿಕೊಂಡರೂ ತಮ್ಮ ರೋಗ ವಾಸಿಯಾಗದು ಎನ್ನುವ ಅನಿಸಿಕೆ ಉಂಟಾಗುತ್ತಿದ್ದಿತು. ‘ಹೇ ತಾಯಿ , ಕತ್ತಿಯ ಒರೆಯನ್ನು (ನನ್ನ ದೇಹವನ್ನು) ಸ್ವಲ್ಪ ಸರಿಪಡಿಸು ‘ ಎಂದು ಪ್ರಾರ್ಥಿಸಿದ್ದರೂ ಯಾವ ಲಾಭವೂ ದಕ್ಕಿರಲಿಲ್ಲ. ಆದ್ದರಿಂದ ಈಗ ಕೆಲ ಕಾಲದಿಂದ ನನ್ನ ‘ಅಹಂ’ ಎಲ್ಲಿಗೆ ಹೋಗಿದೆಯೋ ಗೊತ್ತಿಲ್ಲ ; ಹುಡುಕಿದರೂ ಸಿಗುತ್ತಿಲ್ಲ. ಕೇವಲ ಭಗವತಿ ಮಾತ್ರ ಈ ಒರೆಯೊಳಗೆ ಇರುವುದು ಕಾಣುತ್ತಿದೆ’ ಎನ್ನುವ ಹೊಸ ರಾಗ ಪ್ರಾರಂಭಿಸಿದ್ದರು. (166)
ಆರಂಭದಲ್ಲಿ ಸಾಧಾರಣ ಊತ ಎಂದು ಭಾವಿಸಲಾಗಿದ್ದ ಗಂಟಲು ನೋವು ಕೆಲ ತಿಂಗಳುಗಳಲ್ಲಿಯೇ ಗಂಟಾಗಿ ಬದಲಾಗಿ ಘನ ಆಹಾರವನ್ನು ನುಂಗದಂತಾಯಿತು. ಕೆಲವೊಮ್ಮೆ ಗಂಟಲಿನಿಂದ ರಕ್ತ ಹೊರಬರುತ್ತಿದ್ದಿತು. ಇದನ್ನು ಗಮನಿಸಿದ್ದ ರಾಮಚಂದ್ರದತ್ತ , ಕಾಳಿಪದ ,ಗಿರೀಶಚಂದ್ರ ಘೋಷ್ , ದೇವೇಂದ್ರ ಗುರುಗಳನ್ನು ಕಲ್ಕತ್ತಕ್ಕೆ ಕರೆದೊಯ್ದು ಇಂಗ್ಲಿಷ್ ವೈದ್ಯರಿಗೆ ತೋರಿಸಬೇಕೆಂದು ನಿರ್ಧರಿಸಿ ಪಂಚಾಂಗ ನೋಡಿ ಶುಭ ಗಳಿಗೆಯನ್ನು ನಿರ್ಧರಿಸಿ ರಾಜರಘಾಟ್ ಪೂರ್ವಕ್ಕಿದ್ದ ಬಾಗಬಜಾರಿನ ಬಾಡಿಗೆ ಮನೆಗೆ ಗುರುಗಳನ್ನು ಕರೆದೊಯ್ದರು. ಈ ಮನೆ ಕಿರಿದೆಂದು ಗುರುಗಳು ಅಸಮಾಧಾನ ಪಟ್ಟು ತಮ್ಮ ನೆಲೆಯನ್ನು ಬಲರಾಮಬಸು ಮನೆಗೆ ಸ್ಥಳಾಂತರಿಸಿದರು. ಅಲ್ಲಿ ಏಳು ದಿನವದ್ದರು. ನಂತರ ಅವರ ವಸತಿಯನ್ನು ಶ್ಯಾಮಪುಕುರದ ಮನೆಗೆ ಬದಲಾಯಿಸಲಾಯಿತು. ಅಲ್ಲಿ ಎಪ್ಪತ್ತು ದಿನಗಳ ಕಾಲವದ್ದರು. ಅದರ ನಂತರ ಅವರ ವಾಸ ಕಾಶೀಪುರ ತೋಟದ ಮನೆಗೆ ಸ್ಥಳಾಂತರವಾಯತು. ಸಾಯುವವರೆಗೆ ಗುರುಗಳು ಅಲ್ಲಿಯೇ ಇದ್ದರು. ಕಲ್ಕತ್ತಕ್ಕೆ ಕರೆಅ ತಂದ ನಂತರ ಇಂಗ್ಲಿಷ್ ವೈದ್ಯರು ತಮಗೆ ಚಿಕಿತ್ಸೆ ಕೊಡುವುದನ್ನು ಗುರುಗಳು ಒಪ್ಪಲಿಲ್ಲವಾದ್ದರಿಂದ ಡಾ.ಪ್ರತಾಪಚಂದ್ರರನ್ನು ಕರೆಸಲಾಯಿತು. ಮುಂದಿನ ದಿನಗಳಲ್ಲಿ ಪ್ರತಾಪಚಂದ್ರರ ಸಲಹೆಯ ಮೇರೆಗೆ ಶಂಕರಿತೊಲಾದಲ್ಲಿದ್ದ ಖ್ಯಾತ ಹೋಮಿಯೋಪತಿ ವೈದ್ಯ ಮಹೇಂದ್ರಲಾಲ ಸರ್ಕಾರ ಮನೆಗೆ ತಪಾಸಣೆಗೆ ಕರೆದೊಯ್ಯಲಾಯಿತು. ಇದಕ್ಕಾಗಿ ಅವರ ಶುಲ್ಕ ೧೬ ರೂಗಳನ್ನು ತೆಗೆದಿರಿಸಲಾಯಿತು. ಹೆಚ್ಚಿನ ಚಿಕಿತ್ಸೆಯನ್ನು ನೀಡಲು ಮಹೇಂದ್ರಲಾಲ ಸರ್ಕಾರ ರಾಮಕೃಷ್ಣರು ನೆಲೆಸಿರುವಲ್ಲಿಗೆ ಬರುವ ವ್ಯವಸ್ಥೆಯನ್ನು ಭಕ್ತರು ಮಾಡಿದರು (167) ಡಾ. ಮಹೇಂದ್ರಲಾಲ ಸರ್ಕಾರ ಮಥುರ ಮೋಹನ ಬಿಶ್ವಾಸನಿಗೆ ಚಿಕಿತ್ಸೆ ಕೊಡುತ್ತಿದ್ದನಲ್ಲದೆ , ಸಾಧನೆಯ ಸಮಯದಲ್ಲಿಯೂ ರಾಮಕೃಷ್ಣರಿಗೆ ಚಿಕಿತ್ಸೆ ನೀಡಿದ್ದನು. (168) ತಾನು ದಶಕಗಳ ಹಿಂದೆ ಮಥುರಮೋಹನ ಬಿಶ್ವಾಸನೊಂದಿಗೆ ಕಂಡಿದ್ದ ರಾಮಕೃಷ್ಣರು ಹಲವರ ಗುರುವಾಗಿ ಬೆಳೆದಿರುವುದು ಆತನಿಗೆ ಸೋಜಿಗ ಮೂಡಿಸಿದ್ದಿತು.
೧೮/೧೦/೧೮೮೫ ರ ವೇಳೆಗೆ ರಾಮಕೃಷ್ಣರನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲು ಯತ್ನಿಸಿದ್ದ ಎಲ್ಲಾ ವೈದ್ಯರು ಅವರಿಗೆ ಬಂದಿರುವುದು ಗಂಟಲು ಕ್ಯಾನ್ಸರ್ , ಅದಕ್ಕೆ ಚಿಕಿತ್ಸೆ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದ ನಂತರ ಗುರುಗಳ ತಳಮಳಗಳು ಹೆಚ್ಚಿದವು. ಅವರು ಕೆಲವೊಮ್ಮೆ ಗಂಟಲು ಹುಣ್ಣಿನಿಂದ ವಿಚಲಿತನಾಗದ ನಿರ್ಭಾವುಕನಂತೆ ಮಾತನಾಡುತ್ತಿದ್ದರೆ , ಇನ್ನೂ ಕೆಲವೊಮ್ಮೆ ರೋಗವನ್ನು ಗುಣಪಡಿಸುವಂತೆ ಬೇಡುತ್ತಿದ್ದರು. ರವೆಪಾಯಸ ಕುಡಿದು ಬದುಕುವ ಸ್ಥಿತಿ ಬಂದಾಗಲೇ ನಿನ್ನ ಕೊನೆಗಾಲ ಸಮೀಪಿಸುತ್ತದೆ ಎಂದು ಭಗವತಿ ನನಗೆ ತಿಳಿಸಿದ್ದಾಳೆ ಎನ್ನುತ್ತಿದ್ದರು. ಒಂದು ದಿನ ಶಾರದಾಮಣಿ ರವೆ ಪಾಯಸ ಮಾಡಿಕೊಟ್ಟಾಗ ನನ್ನ ಕೊನೆಗಾಲ ಸಮೀಪಿಸಿದೆಯೇ ಎನ್ನುತ್ತ ಅತ್ತರು. (169) ಇಂತಹ ಏರುಪೇರುಗಳನ್ನು ಗಮನಿಸಿದ್ದ ಡಾ.ಮಹೇಂದ್ರಲಾಲ ಸರ್ಕಾರ ಗುರುಗಳನ್ನು ಛೇಡಿಸುತ್ತ ‘ ನನಗೆ ಬಂದಿರುವ ರೋಗವನ್ನು ಗುಣಪಡಿಸಿ’ ಎಂದು ಏಕೆ ಬೇಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದನು. ಅದಕ್ಕೆ ರಾಮಕೃಷ್ಣರು ‘ಎಲ್ಲಿಯವರೆಗೆ ‘ಅಹಂ’ ಎನ್ನುವ ಅಂಶಿಕ ಜ್ಞಾನ ಇರುತ್ತದೆಯೋ ಅಲ್ಲಿಯವರೆಗೆ ಈ ರೀತಿಯಾಗಿ ನಡೆದುಕೊಳ್ಳಬೇಕಾಗುತ್ತದೆ’ ಎಂದು ನೀಡಿದ ಉತ್ತರ ಭಕ್ತರ ದೃಷ್ಟಿಯಲ್ಲಿ ಅದ್ಭುತವಾಗಿದ್ದಿತಾದರೂ ಹಾಸ್ಯಾಸ್ಪದವಾಗಿದ್ದಿತು. (170) ಇನ್ನೊಂದು ದಿನ ಡಾ. ಮಹೇಂದ್ರಲಾಲ ಸರ್ಕಾರರಲ್ಲಿ ಈ ರೋಗದಿಂದ ನನ್ನನ್ನು ಗುಣಪಡಿಸಿಬಿಡು. ನನಗೆ ಭಗವತಿಯ ನಾಮ ,ಗುಣ ಕೀರ್ತನೆ ಮಾಡಲು ಆಗತ್ತಿಲ್ಲ ‘ ಎಂದಾಗ ಆತ ‘ಧ್ಯಾನ ಮಾಡಿದರೆ ಸಾಕಲ್ಲವೇ ? ‘ ಎಂದು ಸರಿಯಾಗಿಯೇ ತಾಗಿದ್ದನು. ಇದರಿಂದ ವಿಚಲಿತರಾಗಿ ‘ ಇದೆಂಥ ಮಾತು ? ನಾನು ಒಂದೇ ಸ್ವರ ಊದುವನು ಏಕಾಗಲಿ ? ‘ ಎಂದು ಕೇಳುತ್ತ ತಾವು ವಿವಿಧ ರೀತಿಯಲ್ಲಿ ಭಗವಂತನಲ್ಲಿ ಮುಳುಗಲೆಂದೇ ಗಂಟಲು ಹುಣ್ಣಿಗೆ ಚಿಕಿತ್ಸೆ ಪಡೆಯುತ್ತಿರುವೆ ಎನ್ನುವ ಪೊಳ್ಳು ಸಮರ್ಥನೆ ನೀಡಿದರು. (171)
ಪ್ರತಿದಿನ ಗುರುಗಳ ಆರೋಗ್ಯವನ್ನು ಅವರಿಂದಲೇ ತಿಳಿದುಕೊಂಡು ಡಾ.ಮಹೇಂದ್ರಲಾಲ ಸರ್ಕಾರನಿಗೆ ಒಪ್ಪಿಸುವ ಹೊಣೆ ‘ಮ’ ಹೆಗಲಿಗೇರಿದ್ದಿತು. ‘ಬೆಳಿಗ್ಗೆ ನನ್ನ ಬಾಯಿ ನೀರಿನಿಂದ ತುಂಬಿಹೋಗುವುದಲ್ಲದೆ , ಕೆಮ್ಮು ಕಾಡುತ್ತಿರುತ್ತದೆ’ ಎನ್ನುವುದನ್ನು ಮಹೇಂದ್ರಲಾಲ ಸರ್ಕಾರನಿಗೆ ತಿಳಿಸಲು ಹೇಳಿದ್ದರೇ ಹೊರತು ‘ ಅಮ್ಮಾ ನನಗೆ ಹೀಗೇಕೆ ಆಗುತ್ತಿದೆ’ ಎಂದು ತಾಯಿಯನ್ನು ಕೇಳಿರಲಿಲ್ಲ. (172) ಶ್ಯಾಮಬಸು ಎತ್ತಿದ್ದ ‘ಎಲ್ಲ ದೇವರೇ ಮಾಡುವಾಗ ಮನುಷ್ಯನಿಗೆ ಪಾಪದ ಹೊಣೆಯೇಕೆ? ‘ಪ್ರಶ್ನೆಗೆ ಉತ್ತರ ಗೊತ್ತಿಲ್ಲದ ಗುರುಗಳು ‘ಆತನದು ಅಕ್ಕಸಾಲಿ ಬುದ್ಧಿ’ ಎಂದು ಹೀಗಳೆದು ‘ ಭಗವಂತನಿಗೆ ವಕಾಲತ್ತು ವಹಿಸಿಬಿಡು. ನಿನ್ನ ಇಡೀ ಹೊರೆ ಆತನ ಮೇಲಿರಲಿ’ ಎಂದು ಬೋಧಿಸಿದ್ದರಾದರೂ ತಾವು ದೇವರಿಗೆ ತಮ್ಮ ವಕಾಲತ್ತನ್ನು ವಹಿಸದೆ ವೈದ್ಯರು ತಮ್ಮ ಗಂಟಲು ಹುಣ್ಣನ್ನು ವಾಸಿಪಡಿಸಬೇಕೆಂದು ಕೋರುತ್ತಿದ್ದರು. (173)
ಶ್ಯಾಮಪುಕುರದ ಮನೆಯನ್ನು ಬಾಡಿಗೆ ಕೊಟ್ಟಿದ್ದ ಅದರ ಮಾಲಿಕ ತಕ್ಷಣ ಖಾಲಿ ಮಾಡುವಂತೆ ಒತ್ತಡ ಹೇರತೊಡಗಿದನು. ಇದೇ ಸಮಯದಲ್ಲಿ ಮಹೇಂದ್ರಲಾಲ ಸರ್ಕಾರ ಕಲ್ಕತ್ತದ ಸನಿಹದ ಉತ್ತಮ ಜಾಗಕ್ಕೆ ಹೋಗುವುದು ಒಳ್ಳೆಯದೆಂದು ಸೂಚಿಸಿದರು. ಇದರ ಫಲವಾಗಿ ಕಾಶೀಪುರ ತೋಟದ ಮನೆಗೆ ಗುರುಗಳನ್ನು ಕರೆದೊಯ್ಯಲಾಯಿತು. ಇಲ್ಲಿ ಬಾಗಬಜಾರಿನ ಡಾ. ರಾಜೇಂದ್ರದತ್ತ ಚಿಕಿತ್ಸೆ ನೀಡತೊಡಗಿದರು. ಇದರಿಂದ ಯಾವುದೇ ಬದಲಾವಣೆ ಕಾಣದೆ ಹಿರಿಯ ವೈದ್ಯ ನವೀನಪಾಲರನ್ನು ಕರೆತರಲಾಯಿತು. ಇವರೊಂದಿಗೆ ಹಲವು ಜನ ಕವಿರಾಜರು ಚಿಕಿತ್ಸೆ ನೀಡುತ್ತಿದ್ದರು. ಇಂಗ್ಲಿಷ್ ವೈದ್ಯರಿಂದ ತೋರಿಸಿಕೊಳ್ಳಲು ನಿರಾಕರಿಸಿದ್ದ ಗುರುಗಳ ಮನ ಒಲಿಸಿ ಕಲ್ಕತ್ತ ಮೆಡಿಕಲ್ ಕಾಲೇಜಿನ ಮುಖ್ಯ ವೈದ್ಯ ಡಾ. ಕೋಟ್ಸ್’ರವರನ್ನು ಕರೆಸಲಾಯಿತು. ಡಾ, ಕೋಟ್ಸ್ ಹಂತ ಮೀರಿರುವ ಈ ಹುಣ್ಣಿಗೆ ಚಿಕಿತ್ಸೆ ಇಲ್ಲವೆಂದು ಕೈಚೆಲ್ಲಿದರು. ಹೀಗೆ ಸಾಂಪ್ರದಾಯಿಕ-ಆಯುರ್ವೇದ, ಪರಕೀಯ-ಹೋಮಿಯೋಪತಿ ಮತ್ತು ಆಧುನಿಕ ವೈಜ್ಞಾನಿಕ-ಅಲೋಪತಿ ಯಾವ ಪದ್ದತಿಯಲ್ಲೂ ಗಂಟಲು ಕ್ಯಾನ್ಸರ್’ಗೆ ಚಿಕಿತ್ಸೆ ಇಲ್ಲವೆಂದು ಮನದಟ್ಟಾಯಿತು. (174)
ರೋಗಪಿಡಿತನಾಗಿ ಹಾಸಿಗೆ ಹಿಡಿದಿದ್ದ ಕೇಶವಚಂದ್ರಸೇನ ಕೊನೆಗಾಲದಲ್ಲಿಯೂ ಮನೆಯಿಂದ-ಹೆಂಡತಿ , ಮಕ್ಕಳು, ಮೊಮ್ಮಕ್ಕಳಿಂದ- ದೂರ ಇರದಿರುವುದನ್ನು ಗುರುಗಳು ಟೀಕಿಸಿದ್ದರು. (175) ಮುಪ್ಪಿನಲ್ಲಿ , ರೋಗ ಪೀಡಿತರಾದಾಗ ಮನೆಯವರು , ಅದರಲ್ಲಿಯೂ ಮುಖ್ಯವಾಗಿ ಹೆಂಡತಿ ಗಂಡನನ್ನು ನೋಡಿಕೊಳ್ಳಬೇಕೆಂದು ನಮ್ಮ ಸಂಸ್ಕೃತಿ ಹೇಳುವುದನ್ನು ರಾಮಕೃಷ್ಣರು ತಿಪ್ಪೆಗೆಸೆದಿದ್ದರು. ನುಡಿದಂತೆ ನಡೆಯುವ ಗುಣ ಗುರುಗಳಲ್ಲಿ ಇರಲಿಲ್ಲ. ಕ್ಯಾನ್ಸರ್ ಪೀಡಿತರಾಗಿ ಕಲ್ಕತ್ತಕ್ಕೆ ವಾಸ ಬದಲಿಸಿದ ನಂತರ ತಮ್ಮ ಸೇವೆಗಾಗಿಯ ದಕ್ಷಿಣೇಶ್ವರದಿಂದ ಶಾರದಾಮಣಿಯನ್ನು ಕರೆಸಿಕೊಂಡರು. ಕಾಶಿಪುರ ತೋಟದ ಮನೆಯಲ್ಲಿರುವಾಗ ಗಂಡನ ಸೇವೆಗೆ ಇಳಿದ ಶಾರದಾಮಣಿಯ ಜೀವನ ಕಠಿಣತರವಾಗಿದ್ದಿತು. ರೋಗಿ ಗಂಡನ ಸೇವೆಯಯೊಂದಿಗೆ ಪ್ರತಿದಿನ ಮೂರು ಬಗೆಯ ಅಡುಗೆ -ರಾಮಕೃಷ್ಣ , ನರೇಂದ್ರನಾಥದತ್ತ ಮತ್ತು ಇತರರಿಗೆ- ಮಾಡುವ ಹೊಣೆ ಶಾರದಾಮಣಿಯದಾಗಿದ್ದಿತು. (176) ಘನ ಆಹಾರ ಬಿಟ್ಟಿದ್ದರಿಂದ ೧೦-೧೨ ದಿನಗಳಿಗೊಮ್ಮೆ ಮಲ ವಿಸರ್ಜನೆ ಮಾಡುವ ಗಂಡನನ್ನು ಸರಿಯಾದ ನಿದ್ರೆಯಿಲ್ಲದೆ ರಾತ್ರಿಯೆಲ್ಲ ನೋಡಿಕೊಳ್ಳುವ ಹೆಚ್ಚಿನ ಹೊರೆ ಶಾರದಾಮಣಿಯ ಮೇಲೆ ಬಿದ್ದಿದ್ದಿತು. (177) ಕೇಶವಚಂದ್ರಸೇನನ ಹೆಂಡತಿಗೆ ಗಂಡ, ಮಕ್ಕಳ ಪ್ರೀತಿಯಾದರೂ ದಕ್ಕಿದ್ದಿತು. ಆ ಭಾಗ್ಯ ಶಾರದಾಮಣಿಗೆ ಇರಲಿಲ್ಲ. ಕಾಶಿಪುರದ ತೋಟದ ಮನೆಯ ಮೊದಲ ಮಹಡಿಗೆ ಹೋಗುವ ಕಡಿದಾದ ಮೆಟ್ಟಿಲಗಳನ್ನು ಹತ್ತಲು ಹೋಗಿ ಕಾಲು ಉಳುಕಿಸಿಕೊಂಡಿದ್ದ ಶಾರದಾಮಣಿಯನ್ನು ಬುಟ್ಟಿಯಲ್ಲಿ ಹೊತ್ತು ತಮ್ಮಲ್ಲಿಗೆ ಮೇಲಕ್ಕೆ ಕರೆತರುವಂತೆ ಬಾಬುರಾಮನಿಗೆ (ಪ್ರೇಮಾನಂದ) ತಿಳಿಸಿದ್ದರು. (178)
ಗಂಟಲು ಹುಣ್ಣಿಗೆ ಬೆದರಿದ್ದ ರಾಮಕೃಷ್ಣರು ತಮ್ಮನ್ನು ನೋಡಲು ಬಂದವರಿಗೆಲ್ಲ ಹಾಕುತ್ತಿದ್ದ ಪ್ರಶ್ನೇ ಒಂದೇ ಆಗಿರುತ್ತಿದ್ದಿತು. ತಮ್ಮನ್ನು ಕಾಣಲು ಬಂದಿದ್ದ ಬಲರಾಮಬಸು ಅಣ್ಣನ ಮಗ ಹರಿವಲ್ಲಭ ಬಸುವಿಗೆ ‘ ಏನು ಮಾಡಿದರೆ ನನ್ನ ಗಂಟಲಿನ ಈ ರೋಗ ಗುಣವಾಗಿ ಬಿಡುತ್ತದೆ ? ಇದು ಬಹಳ ಕಠಿಣವಾದ ಕಾಯಿಲೆಯೇನು ? ‘ ಎಂದು ಪ್ರಶ್ನಿಸಿದಾಗ ಆತ ‘ಮಹಾಶಯರೇ ಇದರ ಬಗ್ಗೆ ವೈದ್ಯರಿಗೆ ಮಾತ್ರ ಹೇಳಲು ಸಾದ್ಯ’ ಎಂದು ನೀಡಿದ ಉತ್ತರ ತೃಪ್ತಿತರದೆ ಮಾತನ್ನು ಬದಲಿಸಿದ್ದರು. (179) ಕಾಶಿಪುರದಲ್ಲಿ ಒಂದು ದಿನ ‘ ಮ’ ಗೆ ‘ನನ್ನ ರೋಗ ಎಷ್ಟು ದಿನದಲ್ಲಿ ಗುಣವಾಗುತ್ತದೆ? ‘ ಎಂದು ಕೇಳಿದರು. ಸ್ವಲ್ಪ ಕೆರಳಿರುವುದರಿಂದ ಹೆಚ್ಚು ಕಾಲ ಬಹುಶಃ ೫-೬ ತಿಂಗಳು ಬೇಕಾಗಬಹುದೆಂದು ಆತ ಉತ್ತರಿಸಿದ್ದನು. ಇದರಿಂದ ಕಂಗಾಲಾಗಿದ್ದ ಅವರು. ‘ನನಗೆ ಎಷ್ಟೊಂದು ಭಗವಂತನ ದರ್ಶನಗಳಾಗಿವೆ , ಭಾವ ಸಮಾಧಿಗಳು ಬಂದಿವೆ ! ಏನು ಕತೆ ! ಆದರೂ ನನಗೆ ಇಂತಹ ರೋಗ ಬಂದಿದೆ ಏಕೆ ಎಂದು ಹೇಳಬಲ್ಲೆಯಾ ?’ ಎನ್ನುತ್ತಾ ಭಕ್ತರನ್ನು ‘ಭವರೋಗ’ದಿಂದ ಬಿಡುಗಡೆಗೊಳಿಸುವ ವೈದ್ಯ ರಾಮಕೃಷ್ಣರು ಗೋಗರೆದಿದ್ದರು. ಇದಕ್ಕೆ ತಮ್ಮೊಳಗೆ ತಾವೇ ಉತ್ತರ ಹುಡುಕುತ್ತ ಸುತ್ತ ನೆರೆದಿದ್ದ ಭಕ್ತರಿಗೆ ‘ ಇದರ ( ತಮ್ಮ ದೇಹ ತೋರಿಸುತ್ತ) ಒಳಗೆ ಇಬ್ಬರಿದ್ದಾರೆ. ಒಬ್ಬ ಭಕ್ತ, ಇನ್ನೊಬ್ಬ ಭಗವತಿ’ ಎಂದಾಗ , ಭಕ್ತನಿಗೆ ರೋಗ ತಾಗಿದೆ, ಭಗವಂತನಿಗಲ್ಲ ಎಂದು ತಮಗೆ ತಾವೇ ಮಾಡಿಕೊಂಡಿದ್ದ ಸಮಾಧಾನ ಮಾಡಿಕೊಂಡರು. (180)
ಇನ್ನೊಂದು ದಿನ ಭಗವತಿ ಭಾವದಲ್ಲಿ ನನ್ನ ಜೀವನದ ಕೊನೆಯಲ್ಲಿ ಕೇವಲ ಪಾಯಸ ಕುಡಿದು ಬದುಕಬೇಕಾಗುತ್ತದೆಯೆಂದು ತೋರಿಸಿದ್ದಾಳೆ ಎನ್ನುತ್ತ ಗಳಗಳ ಅತ್ತರು. (181) ಸಾವಿನ ಭಯದಿಂದ ‘ಭಗವತಿ ನನ್ನನ್ನು ಬಾಲಕನ ಅವಸ್ಥೆಯಲ್ಲಿ ಇಟ್ಟಿದ್ದಾಳೆ. ಒಳ್ಳೆಯದು ಈ ದೇಹ ಈಗ ಬಂದಿರುವ ರೋಗದಿಂದ ಪಾರಾಗಿ ಬದುಕಿಕೊಳ್ಳಬಹುದೇ ?’ ಎಂದು ಅಂತರಂಗದ ಶಿಷ್ಯ ‘ಮ’ನನ್ನು ಪ್ರಶ್ನಿಸಿದ್ದರ. (182) ಕ್ಯಾನ್ಸರ್ ಉಲ್ಬಣಗೊಂಡಾಗ ಹಲವು ವೈದ್ಯರು ನೀಡುತ್ತಿದ್ದ ಚಿಕಿತ್ಸೆಯ ಮೇಲೂ ನಂಬಿಕೆ ಸಡಿಲಗೊಂಡು ದಕ್ಷಿಣೇಶ್ವರಕ್ಕೆ ಹೋಗಿ ಬೋಲಾನಾಥ ಕೊಡುವ ಕರ್ಪೂರದ ಎಣ್ಣೆಯನ್ನು ಗಂಟಲಿಗೆ ತಿಕ್ಕಿಸಿಕೊಳ್ಳುವ ಕೋರಿಕೆ ಬಂದಿದ್ದಿತು. (183) ರೋಗ ವಾಸಿಯಾಗದೆಂದು ದಿನದಿಂದ ದಿನಕ್ಕೆ ಮನದಟ್ಟಾಗತೊಡಗಿದಾಗ ನಿರಾಶೆಯಲ್ಲಿ ‘ನೀವೆಲ್ಲರೂ ಮನಸ್ಸು ಮಾಡಿ ಹೇಳಿದರೆ ಇಷ್ಟೊಂದು ಕಷ್ಟಪಡುತ್ತಿದ್ದಾನೆ. ದೇಹತ್ಯಾಗ ಮಾಡಲಿ ಎಂದು ನೇವೆಲ್ಲರೂ ಮನಸ್ಸು ಮಾಡಿ ಹೇಳಿದರೆ ಒಡನೆಯೇ ದೇಹತ್ಯಾಗ ಮಾಡುತ್ತೇನೆ’ ಎಂದರು. (184) ಭಕ್ತರಿಗಾಗಿ ಬದುಕಿದ್ದೇನೆ ಎಂದು ಬಾಯಿ ಹೇಳುತ್ತಿದ್ದಿತಾದರೂ ಮನಸ್ಸಿನಲ್ಲಿದ್ದ ಒಳಸುಳಿಗಳು ಬೇರೆಯವೇ ಆಗಿದ್ದವು. ಮರುದಿನ ಬಾಹ್ಯಪ್ರಜ್ಞೆ ಕಳೆದುಕೊಂಡು ಎಚ್ಚೆತ್ತ ನಂತರ ಚಿಂತೆಯ ದನಿಯಲ್ಲಿ ‘ ಈಗ ನನಗೆ ಯಾವ ನೋವೂ ಇಲ್ಲ. ಮೊದಲಿನಂತೆ ಆಗಿದ್ದೇನೆ’ ಘೋಷಣೆ ಮಾಡಿದ್ದರು. (185)
ನೇರವಾಗಿ ಭಗವತಿಯನ್ನು ಕಾಣುವ ಗುರುಗಳು ಆಕೆಯನ್ನು ಕೇಳಿಕೊಂಡರೆ ಕ್ಷಣಾರ್ಧದಲ್ಲಿ ಗುರುಗಳ ರೋಗ ವಾಸಿಯಾಗುತ್ತದೆ ಎಂದು ಕೆಲವು ಭಾವುಕ ಭಕ್ತರು ನಂಬಿದ್ದರು. ಆದರೆ ಇದು ಸಾದ್ಯವಿಲ್ಲ ಎನ್ನುವುದು ಗುರುಗಳಿಗೆ ಚೆನ್ನಾಗಿ ಗೊತ್ತಿದ್ದಿತು. ತಮ್ಮನ್ನು ಸುತ್ತುವರೆದಿದ್ದ ಗಿರೀಶಚಂದ್ರ , ರಾಮಚಂದ್ರದತ್ತ , ನಿತ್ಯಗೋಪಾಲ , ಮಹಿಮಚಕ್ರವರ್ತಿ , ಕಿಶೋರಿ , ಶಶಧರ ತರ್ಕಚೂಡಾಮಣಿಗಳಿಗೆ ‘ ನನ್ನ ರೋಗ ಕುರಿತಾಗಿ ತಾಯಿಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ’ ಎನ್ನುವ ಸಮಜಾಯಿಷಿ ನೀಡಿದ್ದರು. (186) ಇದನ್ನು ಮೊದಲೆ ತಿಳಿದಿದ್ದ ಶಶಧರ ತರ್ಕಚೂಡಾಮಣಿ ‘ನೀವು ಸಮಾಧಿಯಲ್ಲಿರುವಾಗ ಮನಸ್ಸನ್ನು ದೇಹದ ಕಡೆ ತಿರುಗಿಸಿಬಿಡಿ. ಹಾಗೆ ಮಾಡಿದರೆ ನಿಮ್ಮ ರೋಗ ಗುಣವಾಗುತ್ತದೆ ಎನ್ನುವ ಪರ್ಯಾಯ ಸಲಹೆ ನೀಡಿದನು. ತಮ್ಮ ಭಾವಾವಸ್ಥೆ ಮತ್ತು ಸಮಾಧಿಗಳಲ್ಲಿ ತಮಗೇ ನಂಬಿಕೆ ಇರದ ಗುರುಗಳು ಶಶಧರ ತರ್ಕಚೂಡಾಮಣಿ ಹೇಳಿದ ಸಲಹೆಗೆ ಉತ್ತರಿಸಿದೆ ಮಾತನ್ನು ತಿರುಗಿಸಿ ನಾನು ತಾಯಿಯನ್ನು ರೋಗ ಗುಣಪಡಿಸುವಂತೆ ಬೇಡಲಾರೆ ಎನ್ನುತ್ತ ಬೇರೆ ಕಥೆ ಹೇಳತೊಡಗಿದರು. (187) ದೇವರ ಚಿಂತನೆಯಲ್ಲಿ ಮುಳುಗಿದರೆ ಸಾಕು ಈ ಗಂಟಲು ನೋವು ಎಲ್ಲಿಗೋ ಓಡಿಹೋಗಿರುತ್ತದೆ- ಹೀಗೆ ಬಡಾಯಿ ಕೊಚ್ಚಿದ್ದ ಗುರುಗಳು ಇನ್ನೊಂದು ದಿನ ನಂಬಿಕೆ ಚಿಕತ್ಸೆ ಕೊಡುವ ಶ್ರೀಮತಿ ಪಾಂಡೆಗೆ ತಮ್ಮ ಗಂಟಲಿನ ಮೇಲೆ ಕೈಯಾಡಿಸಿ ನೋವನ್ನು ಶಮನಗೊಳಿಸುವಂತ್ತೆ ಬೇಡಿದ್ದರಲ್ಲದೆ ಜೀವನದುದ್ದಕೂ ತಾವು ಗೇಲಿ ಮಾಡಿದ್ದ ಪ್ರತಾಮಚಂದ್ರ ಹಾಜರಾ ಜಪ ಮಾಡಿ ರೋಗ ಶಮನ ಮಾಡುವಂತೆ ಗುರುಗಳು ಇನ್ನೊಮ್ಮೆ ಕೇಳಿಕೊಂಡಿದ್ದರು. ಹಾಗೆಯೇ ಮರ್ಷಿದಾಬಾದ್’ನಿಂದ ಬಂದಿದ್ದ ವೈಷ್ಣವನ ಎದೆಯ ಮೇಲೆ ಕಾಲಿರಿಸಿ ತಾವು ದೇವರೆಂದು ತೋರಿಸಿಕೊಂಡಿದ್ದ ಗುರುಗಳು ರೋಗವನ್ನು ಗುಣಪಡಿಸುವಂತೆ ಆತನನ್ನು ಕೇಳಿಕೊಂಡರು.
ಅಣ್ಣನ ಮಗ ಅಕ್ಷಯಕುಮಾರ ಕಾಯಿಲೆಯಾಗಿ ಸಾವಿನ ಅಂಚಿನಲ್ಲಿರುವಾಗ ಆತನನ್ನು ಉಳಿಸಿಕೊಳ್ಳಲು ತಮ್ಮ , ತಮ್ಮ ಹೆಂಡತಿ ಶಾರದಾಮಣಿಯ ಪಾದಧೂಳಿಯನ್ನು ಕಾಳಿಯ ಅಭಿಷೇಕದ ನೀರಿನೊಂದಿಗೆ ಕುಡಿಸುವ ಅದ್ಭುತ ಚಿಕಿತ್ಸೆಯನ್ನು ಗುರುಗಳು ಈ ಹಿಂದೆ ಮಾಡಿಸಿದ್ದರು. (188). ಆದರೆ ಈಗ ಅವರ ಪಾದಧೂಳಿಗೆ ಅವರ ರೋಗವನ್ನು ವಾಸಿಗೊಳಿಸುವ ಶಕ್ತಿ ಇರಲಿಲ್ಲ !! (189).ಶ್ಯಾಮಪುಕುರದ ಮನೆಯಲ್ಲಿರುವಾಗ ಗುರುಗಳು ಪವಾಡಗಳ ಬಗ್ಗೆ ತಮ್ಮ ಭಕ್ತರಿಗೆ ತಿಳಿಸುತ್ತ ‘ ಜನ ಮಕ್ಕಳ ರೋಗ ಗುಣವಾಗಲೆಂದು ಹರಿಕೀರ್ತನೆ ನಡೆಯುವಲ್ಲಿ ಮಕ್ಕಳನ್ನು ಉರುಳಿಸುತ್ತಾರೆ. ಮಂತ್ರ, ತಂತ್ರಗಳಿಂದ ಗುಣಪಡಿಸಲು ಯತ್ನಿಸುತ್ತಾರೆ. ಯಾರು ಅಧ್ಯಾತ್ಮ ಜೀವನದ ಅತ್ಯಂತ ಕೆಳಹಂತದಲ್ಲಿರುವರೋ , ಕೇವಲ ಅವರು ಮಾತ್ರ ರೋಗ ಗುಣಪಡಿಸುವಂತೆ ಭಗವಂತನಲ್ಲಿ ಮೊರೆ ಇಡುತ್ತಾರೆ’ ಎನ್ನುವ ಭಾರಿ ಬೋಧನೆ ಮಾಡಿದ್ದರು. (190) . ಆದರೆ ಇದೇ ಗುರುಗಳು ಹೀಗೆ ಹೇಳಿದ ಕೇವಲ ಎರಡು ವಾರಗಳ ನಂತರ ತಮ್ಮ ರೋಗ ವಾಸಿಯಾಗುವಂತೆ ಬೇಡಿಕೊಂಡು ಢಂಢಂನಲ್ಲಿರುವ ಸಿದ್ಧೇಶ್ವರಿ ತಾಯಿಗೆ ಎಳನೀರು , ಸಕ್ಕರೆ , ಸಂದೇಶ ಅರ್ಪಿಸಿ ಬರುವಂತೆ ‘ಮ’ಗೆ ಹೇಳಿದ್ದರು. ತಮ್ಮ ಅಣತಿಯಂತೆ ಬರಿಗಾಲಿನಲ್ಲಿ ಸಿಧ್ಹೇಶ್ವರಿ ದೇವಾಲಯಕ್ಕೆ ಹೋಗಿ , ಗುರುಗಳ ಪರವಾಗಿ ಹರಕೆ ಸಲ್ಲಿಸಿ ‘ಮ’ ತಂದುಕೊಟ್ಟ ಪ್ರಸಾದ ಮತ್ತು ಹೂವನ್ನು ತಲೆಯ ಮೇಲೆ ಇಟ್ಟುಕೊಂಡಿದ್ದರು. ಕೇಶವಚಂದ್ರಸೇನ ರೋಗಗ್ರಸ್ತನಾಗಿದ್ದಾಗ , ರಾಖಾಲಚಂದ್ರ ಘೋಷ್’ಗೆ ಕುರು ಆಗಿದ್ದಾಗ ಗುರುಗಳು ಇದೇ ಹರಕೆ ಹೊತ್ತು ತೀರಿಸಿದ್ದರು. (191) ಶಶಧರ ತರ್ಕಚೂಡಾಮಣಿಗೆ ‘ನನ್ನ ರೋಗವನ್ನು ಗುಣಪಡಿಸುವಂತೆ ತಾಯಿಯಲ್ಲಿ ಬೇಡಲಾರೆ ‘ ಎಂದಿದ್ದ ಗುರುಗಳು ಹರಕೆ ಹೊತ್ತಿರುವುದು ನಗೆಪಾಟಲಿನ ಸಂಗತಿಯಾದರೂ ಭಾವುಕ ಭಕ್ತರಿಗೆ ಅದು ಕಾಣಿಸದು. ಇಷ್ಟೇ ಅಲ್ಲ , ಮೊದಲ ಸಲ ‘ಮ’ ಭೇಟಿಯಾದಾಗ ‘ಭಗವತಿಗೆ ಎಳೆನೀರು , ಸಕ್ಕರೆ ಅರ್ಪಿಸಲು ಹರಕೆ ಹೊತ್ತಿದ್ದೇನೆ. ಬೆಳಗಿನ ಜಾವ ಎಚ್ಚರವಾಗುತ್ತದೆ. ಆಗ ಅಳುತ್ತ ಭಗವತಿಗೆ ಮೊರೆ ಇಡುತ್ತೇನೆ. ‘ಹೇ ಅಮ್ಮಾ , ಕೇಶವನನ್ನು ಗುಣಮುಖವಾಗಿಸು. ಆತ ಬದುಕದಿದ್ದರೆ ಕಲ್ಕತ್ತಕ್ಕೆ ಹೋದಾಗ ನಾನು ಇನ್ನು ಬೇರೆ ಯಾರ ಸಂಗಡ ಮಾತಾಡಲಿ ? ಅದಕ್ಕಾಗಿಯೇ ಎಳೆನೀರು ಸಕ್ಕರೆ ಹರಕೆ ಹೊತ್ತಿರುವುದು’ ಎಂದು ಗೋಳಾಡಿರುವುದು ‘ಅವತಾರ ವರಿಷ್ಟ’ ಶಕ್ತಿ , ಸಾಮರ್ಥ್ಯಗಳ ಇತಿಮಿತಿಯೂ ಆಗಿದೆ. (192) .
ಅವತಾರ ಪುರುಷ ರಾಮಕೃಷ್ಣರು ತಮ್ಮ ರೋಗವನ್ನು ವಾಸಿ ಮಾಡಿವಂತೆ ತಾವಾಗಿಯೇ ಬೇಡಿಕೊಳ್ಳುವುದಿಲ್ಲ ಎಂದು ಭಾವಿಸಿದ್ದ ಕೆಲ ಭಕ್ತರು ಅವರ ಪರವಾಗಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ಹರಕೆಗಳನ್ನು ಹೊರತೊಡಗಿದರು , ವ್ರತಗಳನ್ನು , ಪೂಜೆಗಳನ್ನು ಮಾಡತೊಡಗಿದರು. ಇನ್ನೂ ಕೆಲವರು ಗುರುಗಳ ಜಾತಕ ತೋರಿಸಿ ಅದರಲ್ಲಿ ಏನಾದರು ಪರಿಹಾರ ಸಿಕ್ಕಬಹುದೇ ಎಂದು ತಡಕಾಡಿದರು. (193) ಕೆಲ ಹೆಣ್ಣು ಭಕ್ತರು ಪ್ರತಿ ಸೋಮವಾರ ತಾರಕೇಶ್ವರದಲ್ಲಿ ತುಳಸಿ ಪೂಜೆ ಮಾಡಿಸಿದರೆ , ಇನ್ನೂ ಕೆಲವರು ಅಲ್ಲಿನ ಪಾದ ತೊಳೆದ ನೀರು –ಚರಣಾಮೃತ- ತಂದು ಗುರುಗಳಿಗೆ ಬಿಲ್ವ ಪತ್ರೆಯ ಎಲೆಯಿಂದ ಕುಡಿಸಿದರು. ಇನ್ನೂ ಕೆಲವರು ತಾರಕೇಶ್ವರದಲ್ಲಿ ಹಲವು ಗಂಟೆ, ದಿನ ತಪಸ್ಸನ್ನು ಕೈಗೊಂಡರು. ಹರಕೆ , ವ್ರತಗಳು ಸಾಗಿರುವಾಗಲೇ ಬಾಹ್ಯಪ್ರಜ್ಞೆ ಕಳೆದುಕೊಂಡು ‘ ಈಗ ನನಗೆ ಯಾವ ನೋವೂ ಇಲ್ಲ. ಮೊದಲಿನಂತೆ ಆಗಿದ್ದೇನೆ’ ಎಂದು ಅಳುಕಿನಲ್ಲಿಯೇ ಘೋಷಣೆ ಮಾಡಿದರು. (194) ಹರಕೆ , ವ್ರತಗಳಿಂದ ಯಾವ ಪ್ರಯೋಜನವೂ ಆಗದಿದ್ದಾಗ ‘ನೀನು ಬಯಸದೇ ಹೊರತು ಬೇರೆ ಯಾರೂ ಅದನ್ನು ಗುಣಪಡಿಸಲಾರರು’ ಎಂದು ಅತ್ತರು (195)
ಗುರುಗಳನ್ನು ಕಾಣಲು ಬಂದಿದ್ದ ‘ಸಿಂಧ್ ಸುಧಾರ’ ಮತ್ತು ‘ಸಿಂಧ್ ಟೈಮ್ಸ್’ ಪತ್ರಿಕೆಗಳ ಸಂಪಾದಕ ಹೀರಾನಂದ ಸೌಕಿರಾಮ ಅದ್ವಾನಿ (೧೮೬೩-೧೮೯೩) ಅವರ ಪಾದಗಳನ್ನು ಒತ್ತುತ್ತ , ಅವರನ್ನು ಮಗುವಿನಂತೆ ಸಂತೈಸುತ್ತ ‘ನೀವು ರೋಗ ಕುರಿತಾಗಿ ಏಕೆ ಇಷ್ಟೊಂದು ತಲೆಗೆ ಹಚ್ಚಿಕೊಂಡಿರುವಿರಿ. ವೈದ್ಯರ ಮೇಲೆ ಎಲ್ಲಾ ಭಾರ ಹಾಕಿ ನಿಶ್ಚಿಂತರಾಗಿರಿ. ನೀವು ಒಂದು ಮಗು ಮಾತ್ರ ‘ ಎಂದು ಸಮಾಧಾನ ಪಡಿಸಲು ಯತ್ನಿಸಿದಾಗ ನಿರ್ವಿಕಾರಿಗಳಾದ ಗುರುಗಳು ‘ ವೈದ್ಯರ ಮೇಲೆ ಹೇಗೆ ಭಾರ ಹಾಕಲಿ. ಡಾ. ಮಹೇಂದ್ರಲಾಲ ಸರ್ಕಾರ ಈ ಕಾಯಿಲೆ ಗುಣವಾಗದು ಎಂದು ಈಗಾಗಲೇ ಹೇಳಿದ್ದಾನೆ ‘ ಎಂದಾಗ ಒಳಗಿದ್ದ ತಲ್ಲಣ ಹೊರಬಂದಿದ್ದಿತು. ಅದಕ್ಕೆ ಎದುರಾಗಿ ಹೀರಾನಂದ ‘ ಅದಕ್ಕಾಗಿ ನೀವೇಕೆ ಚಿಂತಿಸಬೇಕು ? ಏನಾಗಬಹುದೋ ಅದು ಆಗುತ್ತದೆ’ ಎನ್ನುವ ತಾತ್ತ್ವಿಕ ಉತ್ತರ ನೀಡಿದನು. ಇದೇ ಉತ್ತರವನ್ನು ಇತರರಿಗೆ ಹೇಳುತ್ತಿದ್ದ ಗುರುಗಳ ಬಳಿ ಹೇಳಲು ಬೇರೆ ಮಾತಿರಲಿಲ್ಲ. ಇದನ್ನು ಮನಗಂಡ ‘ಮ’ ತಕ್ಷಣ ಗುರುಗಳ ನೆರವಿಗೆ ಧಾವಿಸಿ ‘ಅವರು ತಮಗಾಗಿ ಚಿಂತಿಸುತ್ತಿಲ್ಲ, ಅವರು ತಮ್ಮ ಭಕ್ತರಿಗಾಗಿ ಶರೀರವನ್ನು ಇಟ್ಟುಗೊಂಡಿದ್ದಾರೆ’ ಎನ್ನುವ ಸಮಜಾಯಿಷಿ ನೀಡಿದ್ದನು. ಗಂಟಲು ಹುಣ್ಣು ವಾಸಿಯಾಗದು ಎಂದು ಮನಗಂಡಿದ್ದ ಗುರುಗಳು ಸಿಂಧೂ ಪ್ರದೇಶದಿಂದ ಮರೆಯದೆ ತಮಗೆ ಪೈಜಾಮಗಳನ್ನು ಕಳಿಸುವಂತೆ ಹೀರಾನಂದನಿಗೆ ನೆನಪು ಮಾಡಿದರು. (196)
ಶ್ರಾವಣದ ಕೊನೆಯ ದಿನ-ಹುಣ್ಣಿಮೆಯಂದು ಬೆಳಿಗ್ಗೆ ಗುರುಗಳು ಭಕ್ತನೊಬ್ಬನಿಂದ ಪಂಚಾಂಗ ತರಿಸಿ ಓದಿಸಿದರು. ಭಾದ್ರಪದ ಮಾಸದ ೨ನೇ ದಿನದವರೆಗೆ ಬಂದಾಗ ಓದುವುದನ್ನು ನಿಲ್ಲಿಸುವಂತೆ ತಿಳಿಸಿದರು. ಆ ದಿನ ಅಪರಾಹ್ನ ವೈದ್ಯ ನವೀನಪಾಲ ಬಂದಾಗ , ಎದೆಯ ಸಮೀಪದಲ್ಲಿದ್ದ ತಮ್ಮ ಕೈಗಳನ್ನು ಚಾಚಿ ‘ಇಂದು ನಾನು ಬಹಳ ನರಳಿದೆ. ನನ್ನ ಪಕ್ಕೆಗಳೆರಡೂ ಧಗಧಗಿಸುತ್ತಿದ್ದವು’ ಎಂದು ತಮ್ಮ ನೋವನ್ನು ತೊಡಿಕೊಂಡರು. ತಮ್ಮ ನಾಡಿಯನ್ನು ಪರೀಕ್ಷಿಸಿದ ನವೀನಪಾಲನಿಗೆ ‘ಈಗೇನು ಮಾಡಬಹುದು. ರೋಗ ಮಿತಿಮೀರಿದೆ’ ಎಂದು ಪ್ರಶ್ನಿಸಿದಾಗ ಆತನಲ್ಲಿ ಉತ್ತರವಿರದೆ ’ಹೌದು’ ಎಂದು ಉತ್ತರಿಸಿದನು. ಗುರುಗಳು ದೇವೇಂದ್ರನತ್ತ ತಿರುಗಿ ‘ಇಷ್ಟನ್ನು ಮಾತ್ರ ಅವರು ಹೇಳಬಲ್ಲರು. ನನ್ನನ್ನು ಇಲ್ಲಿಗೆ ಚಿಕಿತ್ಸೆಗಾಗಿ ಕರೆತಂದರು. ಅದಾಗದು ಎಂದರೆ ನಾನೇಕೆ ಇಷ್ಟೊಂದು ನರಳಬೇಕು ? ಎಂದಾಗ ಮುಂದೆ ಸಾವಿನ ಹೊರತು ಬೇರೆ ದಾರಿಯಿಲ್ಲ ಎನ್ನುವ ನಿರಾಶೆಯಿದ್ದಿತು. ದೇವೇಂದ್ರನಾಥ ಮಗುವನ್ನು ಸಂತೈಸುವಂತೆ ಗುರುಗಳನ್ನು ಸಂತೈಸಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. (197)
ರಾಮಕೃಷ್ಣರನ್ನು ‘ಅವತಾರ ಪುರುಷ’ ಎಂದು ಮೊದಲು ಸಾರಿದ್ದ ರಾಮಚಂದ್ರದತ್ತ ಅವರ ಸಾವನ್ನು ಜೀವನ ವೃತ್ತಾಂತದಲ್ಲಿ ಹೀಗೆ ದಾಖಲಿಸಿದ್ದಾರೆ :.. ಅಂದು ಗುರುಗಳ ಮಹಾಸಮಾಧಿಯ ಕೊನೆಯ ರಾತ್ರಿ-ಹುಣ್ಣಿಮೆಯ ದಿನ. ಚಂದ್ರನ ಸುತ್ತಲೂ ಬಣ್ಣದ ಉಂಗುರ ಕಟ್ಟಿದ್ದಿತು ; ಅದರೊಂದಿಗೆ ಆಗಸದಲ್ಲಿ ಬೇರೆ ಬಗೆಯ ಚಿತ್ರಗಳು ರಚಿಸಲ್ಪಟ್ಟಿದ್ದವು. ಕಾಶೀಪುರದಲ್ಲಿದ್ದ ಪೈಕಪಾರದ ಜಮೀನ್ದಾರನ ಗುಡಿಮನೆಯಲ್ಲಿ ದಾನ, ದಕ್ಷಿಣೆಗಳು ವಿತರಣೆಯಾಗುತ್ತಿದ್ದು , ಅದರ ಮುಂದಿನ ರಸ್ತೆ ರಾತ್ರಿಯುದ್ದಕೂ ಗಿಜಿಗುಟ್ಟುತ್ತಿದ್ದಿತು. ಆ ರಾತ್ರಿ ಬೇರೆ ರಾತ್ರಿಗಳಿಗಿಂತಲೂ ಗುರುಗಳು ಹೆಚ್ಚು ಆರಾಮದಲ್ಲಿರುವಂತೆ ಕಂಡರಲ್ಲದೆ ರವೆ ಪಾಯಸ ಮತು ಹಾಲು ಸುಲಭವಾಗಿಯೇ ಹೊಟ್ಟೆ ಸೇರಿದವು. ಅಪರಾತ್ರಿ ಒಂದು ಗಂಟೆಯ ಸುಮಾರಿಗೆ ಎಚ್ಚೆತ್ತ ಅವರು ಇನ್ನೂ ಸ್ವಲ್ಪ ರವೆ ಪಾಯಸ ಕುಡಿದರು. ಎರಡು ಗಂಟೆಯ ಸುಮಾರಿಗೆ ಮಹಾಸಮಾಧಿ ತಲುಪಿದಾಗ ಅವರನ್ನು ಸುತ್ತುವರೆದಿದ್ದ ಶಿಷ್ಯರಲ್ಲಿ ಆತಂಕ ಮೂಡಿತು. ಮನೆಯಲ್ಲಿ ಕರಿ ನೆರಳು ಕವಿದಂತಾಗಿದ್ದಿತು. ಈ ಸಲದ ಸಮಾಧಿ ಗುರುಗಳ ಅಂತಿಮ ಸಮಾಧಿಯೆಂದು ನೆರೆದಿದ್ದವರಿಗೆ ಮನದಟ್ಟಾಗತೊಡಗಿ ಹತಾಶ ಸ್ಥಿತಿ ತಲುಪಿದರು. ಈ ಸುದ್ದಿಯನ್ನು ಕಲ್ಕತ್ತ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿದ್ದ ಭಕ್ತರಿಗೆ ರಾತ್ರಿಯೇ ತಲುಪಿಸಲಾಯಿತು. ಗುರುಗಳ ಸೇವೆ ಮಾಡಿದ , ಅಂತರಂಗಕ್ಕೆ ಸೇರಿದ ಭಕ್ತ, ಶಿಷ್ಯರೆಲ್ಲರೂ ಕಾಶೀಪುರ ತೋಟದ ಮನೆಗೆ ಧಾವಿಸಿದರು. ಬೆಳಗಾಗುವುದರೊಳಗೆ ‘ಪರಮಹಂಸ ದೇವ’ ತಮ್ಮ ಲೌಕಿಕ ಲೀಲೆಯನ್ನು ಕೊನೆಗೊಳಿಸಿ , ಒರೆಯಂತಿದ್ದ ಶರೀರವನ್ನು ಬಿಸುಟೆಸೆದು ಅಖಂಡದಲ್ಲಿ ಅಂತರ್ಧಾನರಾದರೆನ್ನುವ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಕೆಲ ಭಕ್ತರಿಗೆ ಅದು ಸಿಡಿಲಿನಾಘಾತವಾಗಿದ್ದಿತು. (198)
ಇದರ ಇನ್ನೂ ಹೆಚ್ಚಿನ ವಿವರಣೆ ಬೇರೆ ಮೂಲಗಳಿಂದ ದಕ್ಕತ್ತದೆ. ೧೫/೮/೧೮೮೬ ಅಪರಾಹ್ನ ಒಂದು ಗಂಟೆಗೆ ಗುರುಗಳ ಮೈಯೊಳಗೆ ವಿದ್ಯುತ್ ಸಂಚಾರವಾದಂತಾದಾಗ ಮೈಮೇಲಿನ ಕೂದಲುಗಳು ನಿಮಿರಿ ನಿಂತವು. ದೇಹ ಒಂದು ಮಗ್ಗುಕಿಗೆ ಹೊರಳಿತು. ಕಣ್ಣುಗಳು ಮೂಗಿನ ತುದಿಯಲ್ಲಿ ನೆಟ್ಟಿರುವಾಗಲೇ ದಿವ್ಯ ಮಂದಹಾಸ ಮುಖದಲ್ಲಿ ಬೆಳಗಿತು. ಗುರುಗಳು ಮತ್ತೊಮ್ಮೆ ಸಮಾಧಿ ಸ್ಥಿತಿ ತಲುಪಿದರು. ಇದನ್ನು ನೋಡಲಾಗದೆ ನರೇಂದ್ರನಾಥದತ್ತ ಕೈಯಲ್ಲಿ ಹಿಡಿದು ತಿಕ್ಕುತ್ತಿದ್ದ ಗುರುಗಳ ಪಾದಗಳನ್ನು ಹಾಸಿಗೆಯ ಮೇಲಿರಿಸಿ ಕೆಳಕ್ಕೆ ಓಡಿದನು. ನಾಡಿ ಬಡಿತ ಕ್ಷೀಣವಾಗಿದ್ದನ್ನು ಕಂಡು ವೈದ್ಯರು ಅಳತೊಡಗಿದರು. ‘ಮ’ ಗುರುಗಳು ನಡುಗುತ್ತಿರುವುದನ್ನು . ಅಸ್ಪಷ್ಟವಾದ ಶಬ್ದ ಬಾಯಿಯಿಂದ ಬರುತ್ತಿರುವುದನ್ನು , ಕೂದಲು ನಿಮಿರಿ , ದೇಹ ಅಲುಗದಿರುವುದನ್ನು ಕಂಡನು. ಗುರುಗಳು ಸಮಾಧಿಗೆ ಹೋಗಿದ್ದಾರೆ –ಅವರನ್ನು ಅದರಿಂದ ಕೆಳಕ್ಕೆ ಇಳಿಸಬೇಕೆಂದು ಅದಕ್ಕಾಗಿ ದೇವರ ನಾಮ ಜಪಿಸಬೇಕೆಂದು ‘ಮ’ ಹೇಳಿದ ತಕ್ಷಣ ನರೇಂದ್ರನಾಥದತ್ತ ಸೇರಿದಂತೆ ಉಳಿದ ಇತರರು ಗಟ್ಟಿಯಾಗಿ ‘ಹರಿ ಓಂ!, ಹರಿ ಓಂ? …ಓಂ ಕಾಳಿ ಓಂ ಕಾಳಿ ಎಂದು ಗಟ್ಟಯಾಗಿ ಜಪಿಸತೊಡಗಿದರು. ಇದು ಒಂದು ಗಂಟೆಯ ಕಾಲ ಸಾಗಿತು. ಅಗಲೂ ಗುರುಗಳು ಎಚ್ಚರವಾಗದಿರುವುದನ್ನು ಕಂಡು ರಾಮಲಾಲನನ್ನು ಕರೆತರಲು ಹಿರಿಯ ಗೋಪಾಲ ಮತ್ತು ಲಾಟು ದಕ್ಷಿಣೇಶ್ವರಕ್ಕೆ ಹೋದರು. (199)
ಗುರುಗಳ ಸಾವಿನ ಸುದ್ದಿ ಕೇಳಿ ನೇಪಾಳ ರಾಜರ ಪ್ರತಿನಿಧಿ ವಿಶ್ವನಾಥ ಉಪಾಧ್ಯಾಯ (ಕ್ಯಾಪ್ಟನ್) ಬೆಳಗಿನ ಜಾವ ಧಾವಿಸಿ ಬಂದು ಗುರುಗಳ ಕೂದಲುಗಳು ನಿಮಿರಿರುವುದನ್ನೂ , ಕಣ್ಣು ಗುಡ್ಡೆಗಳು ಅಲುಗದಿರುವುದನ್ನು ಕಂಡನಾದರೂ ಬೆನ್ನು ಹುರಿ ಇನ್ನೂ ಬೆಚ್ಚಗಿರುವುದನ್ನು ಗುರುತಿಸಿ ಗುರುಗಳ ಮಹಾಸಮಾಧಿ ಇನ್ನೂ ಆಗಿಲ್ಲ , ಆದರೆ ಆಗುವುದಿದೆ ಎನ್ನುವ ನಿರ್ಧಾರಕ್ಕೆ ಬಂದನು. ಆತನ ಸಲಹೆಯಂತೆ ಶಶಿಭೂಷಣ ಚಕ್ರವರ್ತಿ ಮತ್ತ ವೈಕಂಠನಾಥ ಸನ್ಯಾಲ ಗುರುಗಳ ಬೆನ್ನು ಮತ್ತು ಪಾದಗಳನ್ನು ಹಸುವಿನ ತುಪ್ಪದಿಂದ ತಿಕ್ಕಿದರು. ರಾಮಕೃಷ್ಣರು ಇನ್ನೂ ಬದುಕಿದ್ದಾರೆಂದು ನಂಬಿದ್ದ ಶಿಷ್ಯ/ಭಕ್ತರು ಮಹೇಂದ್ರಲಾಲ ಸರ್ಕಾರರನ್ನು ಕರೆಸಿದರು. ಅಗ ನಡೆದುದನ್ನು ಮಹೇಂದ್ರಲಾಲ ಸರ್ಕಾರ ತಮ್ಮ ದಿನಚರಿಯಲ್ಲಿ ಹೀಗೆ ಬರೆದಿದ್ದಾರೆ : ಊಟದ ನಂತರ ಹೋಗಬೇಕು.-ಮೊದಲುಡಫ್ ರಸ್ತೆಯ ಮಹಿಳಾ ರೋಗಯನ್ನು ನೋಡಲು , ನಂತರ ಪರಮಹಂಸರನ್ನು. ಅವರು ರಾತ್ರಿ ಒಂದು ಗಂಟೆಗ ಸಾವನ್ನಪ್ಪಿದ್ದಾರೆಂದು ತಳಿದೆ. ಅವರು ಎಡ ಮಗ್ಗುಲಿಗೆ ಕಾಲುಗಳೆತ್ತಿ ಮಲಗಿದ್ದರು, ಕಣ್ಣುಗಳು ತೆರೆದಿದ್ದವು , ಬಾಯಿ ಅರೆ ತೆರೆದಿದ್ದಿತು. ಅವರ ಕೆಲ ಶಿಷ್ಯರು ಅವರು ಸಮಾಧಿಯಲ್ಲಿ ಇರುವರೆಂದು ನಂಬಿದ್ದರು. ನಾನು ಆ ನಂಬಕೆಯನ್ನು ಅಲ್ಲಗಳೆದೆ. ನಾನು ಅವರಿಗೆ ಒಂದು ಫೋಟೊ ತೆಗೆಯಲು ಹೇಳಿ ನನ್ನ ಕಾಣಿಕೆಯಾಗಿ ರೂ.೧೦ ಕೊಟ್ಟೆ’ ಎಂದು ದಾಖಲಿಸಿದ್ದಾರೆ. (200) .ರಾಮಕೃಷ್ಣರ ಸಾವಿನ ಸುದ್ದಿಯನ್ನು ಕೋಣೆಯಲ್ಲಿದ್ದ ಶಾರದಾಮಣಿಗೆ ತಿಳಿಸಲಾಯಿತು. ಆಗ ಅವರು ಅಳುತ್ತಾ ‘ ಓ ತಾಯಿ , ಕಾಳಿ , ಹೋದರೇ ಎಂದರು. ಅವರನ್ನು ಯೋಗಿನ್ ಮಾ , ಬಾಬುರಾಮ ಸಂತೈಸಿ ಗೋಲಾಪ ಮಾ ಬಳಿ ಬಿಟ್ಟರು.
೧೬/೮/೧೮೮೬ ಬ್ರಾಹ್ಮ ಸಮಾಜದ ಪತ್ರಿಕೆಯಲ್ಲಿ ರಾಮಕೃಷ್ಣರ ನಿಧನದ ವಾರ್ತೆ ಪ್ರಕಟಗೊಂಡಿದ್ದಿತು. (201) ಆ ಕಾಲದಲ್ಲಿ ಪತ್ರಿಕೆಗಳಲ್ಲಿ ಒಂದು ವಾರ್ತೆಯನ್ನು ಪ್ರಕಟಿಸಲು ಪುಟದಲ್ಲಿ ಜಾಗ ನಿಗದಿಪಡಿಸಿ , ಮೊಳೆಗಳನ್ನು ಜೋಡಿಸಿ , ಪ್ರಕಟಿಸಲು ಸಾಕಷ್ಟು ಕಾಲ ಬೇಕಾಗುತ್ತಿದ್ದಿತು. ಪತ್ರಿಕೆಯ ವರದಿಗಾರನಿಗೆ ೧೫/೮/೧೮೬೬ ರಂದು ರಾಮಕೃಷ್ಣರು ಸತ್ತಿರುವುದು ಖಚಿತವಾಗಿ ಅದನ್ಹು ವರದಿ ಮಾಡಿದ್ದನು. ಆದರೆ ಶಿಷ್ಯ/ಭಕ್ತರು ಮಾತ್ರ ಗುರುಗಳು ಸಮಾಧಿಯಲ್ಲಿ ಇರುವರೆಂದು ನಂಬಿ ಮರುದಿನ ಡಾ. ಮಹೇಂದ್ರಲಾಲ ಸರ್ಕಾರ ಬರುವವರೆಗೆ ಕಾದಿದ್ದರು. ವೈದ್ಯರು ಜೀವ ಈಗಾಗಲೇ ಹೋಗಿದೆಯೆಂದು ಘೋಷಿಸಿದ ನಂತರ ಗೊಂದಲಕ್ಕೊಳಗಾದ ಭಕ್ತರಿಗೆ ಮುಂದೇನು ಮಾಡಬೇಕೆಂದು ತೋಚಲಿಲ್ಲ. ಅವರ ಮನಸ್ಸು ಕಡಲಿನ ಅಲೆಗಳಿಗೆ ಸಿಕ್ಕ ದೋಣಿಯಂತಾಗಿದ್ದಿತು. ಗುರುಗಳ ಹೆಣವನ್ನು ಕೆಳಗಿನ ವಿಶಾಲ ಕೋಣೆಯಲ್ಲಿದ್ದ ಮಂಚಕ್ಕೆ ಸಾಗಿಸಿ , ಒದ್ದೆ ಬಟ್ಟೆಯಿಂದ ಒರೆಸಿ , ಮೈತುಂಬಾ ಗಂಧದ ಬಟ್ಟುಗಳನ್ನಿಟ್ಟರು , ಹಾರಗಳು ಕೊರಳನ್ನು ತುಂಬಿದವು , ಹೂವುಗಳು ಮೈಯನ್ನು ಮುಚ್ಚಿದವು. ಅಂತಿಮ ಸಂಸ್ಕಾರಕ್ಕಾಗಿ ಶವಯಾತ್ರೆ ಜಾಹ್ನವಿ ನದಿಯತ್ತ ಸಾಗಿದಾಗ ತುಂತುರು ಮಳೆ ಬಂದು ದಿವೌಕಸದಲ್ಲಿ ನೆರೆದಿದ್ದ ದೇವತೆಗಳು ಇನ್ನು ಮುಂದೆ ಪತಿತರನ್ನು ಕಾಯುವರಾರು ಎಂದು ಕಂಬನಿ ಸುರಿಸಿದರೇನೋ ಎನಿಸಿತು. (202)
ಗುರುಗಳ ಶವಯಾತ್ರೆಯಲ್ಲಿ ಕಲ್ಕತ್ತದ ಹಲವು ವ್ಯಕ್ತಿಗಳು ಸೇರಿದಂತೆ ನೂರೈವತ್ತು ಜನ ಸೇರಿದ್ದರು. ಶವಯಾತ್ರೆಯ ವರದಿಗಳನ್ನು , ವರ್ಣನೆಗಳನ್ನು ಗಮನಿಸಿದರೆ ಕಲ್ಕತ್ತದ ಯಾವ ಗಣ್ಯ ವ್ಯಕ್ತಿಯೂ ಅದರಲ್ಲಿ ಭಾಗವಹಿಸಿರುವುದು ಕಾಣುವುದಿಲ್ಲ. ಶವಯಾತ್ರೆ ಸಾಗಿದಾಗ ಕೆಲವರು ಬಾವುಟಗಳನ್ನು , ಇನ್ನೂ ಕೆಲವರು ಹಿಂದೂ, ಮುಸ್ಲಿಂ , ಕ್ರೈಸ್ತ ಧರ್ಮದ ಚಿಹ್ನೆಗಳನ್ನು ಹಿಡಿದಿದ್ದರು. ಅಂತಿಮ ವಿಧೆಗೆ ಮೊದಲು ರಾಮಕೃಷ್ಣರ ನೆಚ್ಚಿನ ಶಿಷ್ಯ ತ್ರೈಲೋಕ್ಯ ಸನ್ಯಾಲ ಆ ಸಂದರ್ಭಕ್ಕೆ ಸೂಕ್ತವೆನಿಸುವ ಮೂರು-ನಾಲ್ಕು ಹಾಡುಗಳನ್ನು ಹಾಡಿದನು. (203) . ಒಟ್ಟಿದ್ದ ಕಟ್ಟಿಗೆಯ ಮೇಲಿರಿಸಿದ್ದ ಗುರುಗಳ ಪಾರ್ಥಿವ ಶರೀರ ಧಗಧಗಿಸಿ ಉರಿಯಿತು. ಉಳಿದ ಅಸ್ತಿ ಸಂಚಯಗಳನ್ನು ತಾಮ್ರದ ಕರಂಡಕದಲ್ಲಿ ಸಂಗ್ರಹಿಸಿಕೊಳ್ಳಲಾಯಿತು. ಅದನ್ನು ಶಶಿಭೂಷಣ ಚಕ್ರವರ್ತಿ ತಲೆಯ ಮೇಲೆ ಹೊತ್ತು ಕಾಶಿಪುರದ ಮನೆಯ ರಾಮಕೃಷ್ಣರ ಕೊಣೆಯಲ್ಲಿರಿಸಿದನು. ನದಿಯಲ್ಲಿ ಶುದ್ಧಿ ಸ್ನಾನ ಮಾಡಿ ಹಿಂದಿರುಗುವಾಗ ಉಪೇಂದ್ರನಾಥ ಮುಖರ್ಜಿಯ ಕಾಲಿಗೆ ಹಾವು ಕಚ್ಚಿ ಆತ ಕುಸಿದು ಬಿದ್ದನು. ವಿಷವೇರದಂತೆ ಆತನ ಕಾಲಿಗೆ ಹಗ್ಗ ಬಿಗಿದು ಬಿಸಿ ಸಲಾಕೆಯಿಂದ ಕಚ್ಚಿದ ಭಾಗವನ್ನು ಸುಡಲಾಯಿತು. ಮುಂದಿನ ನಾಲ್ಕೈದು ತಿಂಗಳು ಆ ಭಾಗ ಹಚ್ಚಿಗೆ ಇದ್ದಿತಾದರೂ ಗುರುಗಳ ದಯೆಯಿಂದ ಆತನ ಪ್ರಾಣಕ್ಕೇನೂ ಅಪಾಯ ಆಗಲಿಲ್ಲ.
ಬ್ರಾಹ್ಮಣರಾದ ಶಾರದಾಮಣಿಗೆ ಅವೈದಿಕ/ಶೂದ್ರ ಹೆಂಗಸರಂತೆ ಗಂಡನ ಅಂತಿಮ ಸಂಸ್ಕಾರಕ್ಕೆ ಹೋಗುವ ಹಕ್ಕು ಕೂಡ ಇರಲಿಲ್ಲ. ಆ ಸಾಯಂಕಾಲ ವಿಧವೆಯಾಗಿದ್ದ ಶಾರದಾಮಣಿ ಬಳೆ ಬಿಚ್ಚಲು ಹೋದಾಗ ರಾಮಕೃಷ್ಣರು ಹೆಂಡತಿಗೆ ಕಾಣಿಸಿಕೊಂಡು ಬಳೆ ಬಿಚ್ಚದಂತೆ ತಿಳಿಸಿದ್ದರು. ಆದರೆ ಅವರು ಇದೇ ರೀತಿ ಸಂಪ್ರದಾಯ ಮೀರಿ ಶೂದ್ರರಂತೆ ತಮ್ಮ ಅಂತ್ಯ ಸಂಸ್ಕಾರಕ್ಕೆ ಬರುವ ಕ್ರಾಂತಿಕಾರಕ ಮಾರ್ಗವನ್ನು ತೋರಿಸಿರಲಿಲ್ಲ ! ಗುರುಗಳನ್ನು ಕಳೆದುಕೊಂಡಿದ್ದ ಭಕ್ತರ ಅಳಲಿಗೆ ಕೊನೆ ಮೊದಲೆಲ್ಲಿ ? ತಾ ಮಾಡಿದ ಕರ್ಮ ಅನುಭವಿಸದೇ ತೀರುವಂತಿಲ್ಲ. ಹಾಗಿದ್ದರೂ ಗುರುಗಳೇಕೆ ನಮ್ಮಂತಹ ಪತಿತರ ಪಾಪಗಳನ್ನು ಸ್ವೀಕರಿಸಿ ತಾವೇ ರೋಗಕ್ಕೆ ತುತ್ತಾದರು ? ನಾವೇಕೆ ನಮ್ಮ ಪಾಪಗಳ ಹೊರೆಯನ್ನು ನಿಮ್ಮ ಮೇಲೆ ಹೇರಿದೆವು ? ನೀವು ಆ ದಿನ ರಾತ್ರಿ ರಕ್ತವನ್ನು ಕಕ್ಕಿದ ನಂತರ , ಇಷ್ಟೊಂದು ರಕ್ತವನ್ನು ಕಕ್ಕಿಯೂ ನಾನೇಕೆ ಸಾಯುತ್ತಿಲ್ಲ ಎಂದು ಕೇಳಿದಿರಿ. ಹೃದಯಹೀನನಾಗಿದ್ದ ನಾನು ಆಗ ‘ಅದು ನಿಜವೇ ‘ ಎಂದಿದ್ದೆನು. ನಾನೆಂಥ ಮೂರ್ಖ’ ಹೀಗೆ ಬಗೆಬಗೆಯಾಗಿ ರಾಮಚಂದ್ರದತ್ತ ತಮ್ಮ ಗುರುವಿನ ಕ್ಯಾನ್ಸರ್ ರೋಗ ಮತ್ತು ಸಾವಿನ ಬಗ್ಗೆ ಹಾಡಿ ಅತ್ತಿದ್ದಾರೆ. ಭಕ್ತರ ಭಾವುಕ ಅಳಲು , ಉದ್ಗಾರ ಏನೇ ಇರಲಿ ವಾಸ್ತವಿಕ , ಲೌಕಿಕ ದೃಷ್ಟಿಯಿಂದ ರಾಮಕೃಷ್ಣರ ಕ್ಯಾನ್ಸರ್ ಮತ್ತು ಸಾವನ್ನು ನೋಡಬೇಕಾಗುತ್ತದೆ.
ರಾಮಕೃಷ್ಣರ ಗಂಟಲು ಕ್ಯಾನ್ಸರ್ ಚಿಕಿತ್ಸೆಗೆ ಕಲ್ಕತ್ತದ ಸುಪ್ರಸಿದ್ಧ ವೈದ್ಯರೆಂದು ಹೆಸರಾದ ಡಾಕ್ಟರ್ ರಾಜೇಂದ್ರದತ್ತ , ಶ್ರೀನಾಥ , ರಾಖಾಲಚಂದ್ರ , ಬಾಧುರಿ, ಮಹೇಂದ್ರಲಾಲ ಸರ್ಕಾರ , ಪ್ರತಾಪಚಂದ್ರ , ಗಂಗಾಪ್ರಸಾದ .ಗೋಪಿಮೋಹನ್ , ದ್ವಾರಕಾನಾಥ , ನವಗೋಪಾಲ ಮುಂತಾದವರು ವಿವಿಧ ಸಮಯದಲ್ಲಿ ಶ್ರಮಿಸಿದ್ದರು. ಇವರೆಲ್ಲರಿಗೂ ಅದು ವಾಸಿಪಡಿಸಲಾಗದ ರೋಗವೆಂದು ಖಚಿತವಾಗಿದ್ದಿತು. ಈ ವೈದ್ಯರಲ್ಲಿ ಹೆಚ್ಚಿನವರು ರಾಮಕೃಷ್ಣರು ದೇವರ ಅವತಾರ, ಅವರಿಗೆ ದೇವಿ ಕಾಣಿಸುತ್ತಾಳೆ, ಸಮಾಧಿ ಸ್ಥಿತಿ ತಲುಪುತ್ತಾರೆ ಎನ್ನುವ ಸಂಗತಿಗಳನ್ನು ಹೆಚ್ಚು ಪ್ರಶ್ನಿಸದೆ ಚಿಕಿತ್ಸೆ ನಡೆಸಲು ಯತ್ನಿಸಿದ್ದರು. ಆದರೆ ಇವರಿಗಿಂತ ಭಿನ್ನವಾಗಿ ಡಾ.ಮಹೇಂದ್ರಲಾಲ ಸರ್ಕಾರ ವೈಚಾರಿಕವಾಗಿ ಗುರುಗಳಿಗೆ ಮುಖಾಮುಖಿಯಾಗಿದ್ದನು. ಈ ಸಂಘರ್ಷದ ಚಿತ್ರಣ ಕೊಡುವಲ್ಲಿ ‘ಮ’ ಸಫಲರಾಗಿರುವರಾದರೂ ಅವರು ಸಂಪೂರ್ಣ ನ್ಯಾಯ ಒದಗಿಸಿಲ್ಲ. ಅವರ ಲೇಖನಿ ಯಾವಾಗಲೂ ತಾವು ನಂಬಿದ್ದ ದೈವ ರಾಮಕೃಷ್ಣರ ಕಡೆಗಿದೆಯೇ ಹೊರತು ಅವರನ್ನು ಪ್ರಶ್ನಿಸಿದ್ದ ಡಾ.ಮಹೆಂದ್ರಲಾಲ ಸರ್ಕಾರನ ಕಡೆಗಲ್ಲ ಎನ್ನುವುದು ದಾಖಲೆಗಳಿಂದಲೇ ಸ್ಪಷ್ಟ. ಶಾರದಾನಂದರು ಲೀಲಾಪ್ರಸಂಗದಲ್ಲಿ ಡಾ. ಮಹೇಂದ್ರಲಾಲ ಸರ್ಕಾರ ಕೊನೆಯಲ್ಲಿ ಗುರುಗಳಿಗೆ ಶರಣಾದರು ಎನ್ನುವ ಅರ್ಥ ಬರುವಂತೆ ಬರೆದಿದ್ದಾರೆ. ಇದಕ್ಕಿಂದ ಬೇರೆಯಾಗಿ ರಾಮಚಂದ್ರದತ್ತ , ಮಹೇಂದ್ರಲಾಲ ಸರ್ಕಾರರು ನಾಸ್ತಿಕರಲ್ಲದಿದ್ದರೂ , ಹಿಂದೂ ದೇವ-ದೇವಿ, ಸಿದ್ಧ , ಯೋಗಿ, ಅವತಾರ ಪುರುಷರನ್ನು ನಂಬುತ್ತಿರಲಿಲ್ಲ. ಇಂದಿಗೂ ಅವರ ಆ ದೃಷ್ಟಿಕೋನದಲ್ಲಿ ಬದಲಾವಣೆಯಾಗಿರುವಂತಿಲ್ಲ ಎಂದು ಬರೆಯುತ್ತಾರೆ. (204)
ಜನ ಸಾಮಾನ್ಯರು ರೋಗ, ಅಪಘಾತಗಳಿಗೆ ಒಳಗಾದಾಗ ಕೆಲಕಾಲ ತಮ್ಮ ವಿಧಿಯನ್ನು ಹಳಿದುಕೊಳ್ಳುತ್ತಾರೆ, ನಂತರ ಅದನ್ನು ಸಹಜ ರೀತಿಯಲ್ಲಿ ಪರಿಗಣಿಸುತ್ತ ಅನುಭವಿಸುತ್ತಾರೆ. ಇನ್ನೂ ಕೆಲವರು ನಿರ್ವಿಕಾರವಾಗಿ ಆಗುವುದೆಲ್ಲ ಆಗಲಿ ಎನ್ನುವ ನಿರ್ಧಾರ ತಳೆಯುತ್ತಾರೆ. ಈ ಕಾಲದಲ್ಲಿರುವ ಯಾವುದೇ ದೊಡ್ದ ಕ್ಯಾನ್ಸರ್ ಆಸ್ಪತೆಗೆ ಹೋದರೂ ಸಾವಿರಾರು ಜನ ಸಾಮಾನ್ಯರು ತಮ್ಮ ಲೌಕಿಕ ಸ್ಥಿತಿ , ಇತಿ ಮಿತಿಗಳಲ್ಲಿಯೇ ರೋಗಕ್ಕೆ ಮುಖಾಮುಖಿಯಾಗಲು ಯತ್ನಿಸುವುದು , ಹಣ ಹೊಂದಿಸಲು ಏಗುವುದು , ಸಂಸಾರದ ಸಿಕ್ಕುಗಳನ್ನು ಬಿಡಿಸಲು ಹೆಣಗುವುದು , ಎಲ್ಲ ಬಗೆಯ ಬಿಕ್ಕಟ್ಟುಗಳನ್ನು ತಮ್ಮದೇ ಆದ ರೀತಿಯಲ್ಲಿ ಎದುರಿಸುವುದು ಕಾಣುತ್ತದೆ. ಅವರಿಗೆ ಆರ್ಥಿಕ ನೆರವು ನೀಡುವ ಶ್ರೀಮಂತ ಭಕ್ತರಾಗಲಿ , ಸಂತೈಸುವ ಶಿಷ್ಯ ಗಣವಾಗಲಿ , ಕರೆದಾಗ ಬಂದು ನೋಡುವ ನುರಿತ ತಜ್ಞ ವೈದ್ಯರಾಗಲಿ ಇರುವುದಿಲ್ಲ. ಇವರಿಗೆ ಹೋಲಿಸಿದಾಗ ‘ಅವತಾರ ವರಿಷ್ಠ’ ರಾಮಕೃಷ್ಣರು ಕ್ಯಾನ್ಸರ್ ಬಂದಾಗ ಹಲುಬಿ , ಅತ್ತಿದ್ದನ್ನು , ತಮ್ಮ ರೋಗಕ್ಕೆ ಅಲೌಕಿಕ ಕಾರಣಗಳನ್ನು ಆರೋಪಿಸಿರುವುದನ್ನು ಗಮನಿಸಿದರೆ ಅವರ ‘ಅವತಾರ’ದ ಪೊಳ್ಳು ಕವಚ ಕಳಚುತ್ತದೆ. ಸಾರಾಂಶ ರೂಪದಲ್ಲಿ ‘ …… ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕೆ ದೇವರ ಹಂಗೇಕೆ? ಭಾಪು ಲದ್ದೆಯ ಸೋಮ’ ಎನ್ನುವ ಶಿವಶರಣ ಲದ್ದೆಯ ಸೋಮನ ದಿಟ್ಟ ವಚನದೊಂದಿಗೆ ರಾಮಕೃಷ್ಣರ ಹಳಹಳಿಕೆಗಳನ್ನು ಹೋಲಿಸಿ ಮುಗಿಸಬಹುದು.