ಸಮದರ್ಶಿ : ಅಸಮ ನಡವಳಿಕೆಗಳು ರಾಮಕೃಷ್ಣ ಪರಮಹಂಸ : ಭ್ರಮೆಗಳ ತೂಗುಯ್ಯಾಲೆ ಪುಸ್ತಕದ ಆಯ್ದ ಭಾಗ ರಾಮಕೃಷ್ಣರು ತಮ್ಮ ಮಾತುಕತೆಗಳಲ್ಲಿ ಬ್ರಹ್ಮಜ್ಞಾನಿ ಸಮದರ್ಶಿಯಾಗಿರುತ್ತಾನೆ. ಆತನಲ್ಲಿ ದೈವೀ ಸಾತ್ತ್ವಿಕ ಗುಣಗಳು-ಕ್ಷಮೆ, ದಮೆ, ಶೌಚ ಮುಂತಾದವು- -ತುಂಬಿರುತ್ತವೆ , ಆತನಿಗೆ ನೋವು-ನಲಿವು, ಮೇಲು-ಕೀಳು, ಹೊಗಳಿಕೆ-ತೆಗಳಿಕೆ ಎನ್ನುವ ದ್ವಂದ್ವಗಳಾಗಲಿ , ಗರತಿ-ಸೂಳೆ, ಬಡವ-ಬಲ್ಲಿದ , ಕುಲಜ-ಕುಲಹೀನ ಎನ್ನುವ ಭೇದ ಭಾವಗಳಾಗಲಿ ಇರುವುದಿಲ್ಲ, ಆತ ಸತ್ಯದ ಗೆರೆ ದಾಟಲಾರ ಎಂದು ಮೇಲಿಂದ ಮೇಲೆ ತಿಳಿಸುತ್ತಿದ್ದರು. ತಾವು ಉನ್ನತ ಮಟ್ಟದ ಅಧ್ಯಾತ್ಮ ಸಾಧಕನೆಂದು ಹೇಳಿಕೊಳ್ಳುತ್ತಿದ್ದರು. ‘ಸನ್ಮಾರ್ಗಿಗಳು ಅಭಿನಯಿಸುವಾಗಲೂ ಸುಳ್ಳು ಹೇಳಬಾರದು, ಮಿಥ್ಯಾ ವ್ಯವಹಾರ ಮಾಡಬಾರದು‘– ಇದು ಗುರುಗಳು ಭಕ್ತರಿಗೆ ನೀಡಿದ ಬೋಧನೆಯಾಗಿದ್ದಿತು. (512) .ಇನ್ನೊಂದು ಸಲ ತಾಯಿ ನೀನು ಕೊಟ್ಟ ಒಳ್ಳೆಯದು , ಕೆಟ್ಟದ್ದು ಎಲ್ಲವನ್ನೂ ನೀನೇ ತಗೆದುಕೋ , ಶುದ್ಧ ಭಕ್ತಿಯನ್ನು ಮಾತ್ರ ನನಗೆ ಉಳಿಸು ಎಂದು ಕೇಳಿಕೊಂಡಿದ್ದೆ. ಆದರೆ ತಾಯಿ ಇಗೋ ತೆಗೆದುಕೋ ನಿನ್ನ ಸತ್ಯವನ್ನು , ಇಗೋ ನಿನ್ನ ಅಸತ್ಯವನ್ನು ಎಂದು ಹೇಳಲು ನನ್ನಿಂದಾಗಲಿಲ್ಲ. ಭಗವತಿಯ ಪಾದಪದ್ಮಗಳಲ್ಲಿ ಎಲ್ಲವನ್ನೂ ಅರ್ಪಿಸಿದೆ. ಆದರೆ ಸತ್ಯವೊಂದನ್ನು ಮಾತ್ರ ಅರ್ಪಿಸಲಾಗಲಿಲ್ಲ’ ಎಂದು ಹೇಳಿದಾಗ ಭಕ್ತರು ಬೆಕ್ಕಸ ಬೆರಗಾಗಿದ್ದರು. (513) ಅಧ್ಯಾತ್ಮ ಸಾಧಕ ಸತ್ಯಸಂಧ ಅಗಿರಬೇಕೆಂದು ಶಾಸ್ತ್ರಗಳು ಸಾರುತ್ತವೆ. ರಾಮಕೃಷ್ಣರು ಇದನ್ನೇ ಭಕ್ತರ ಮುಂದೆ ಹೇಳಿದ್ದರು. ಆದರೆ ಇದು ಗುರುಗಳ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಿದ್ದಿತು. ೧೮೬೧ ರಲ್ಲಿ ತೋತಾಪುರಿಯ ಹತ್ತಿರ ಸಾಧನೆ ಮಾಡುವ ಮೊದಲು ನಹಬತ್ ಖಾನೆಯಲ್ಲಿ ವಾಸಿಸತ್ತಿದ್ದ ತಾಯಿ ಚಂದ್ರಾಮಣಿಗೆ ತಿಳಿಸದೆ ವಿರಜ ಹೋಮದ ಮೂಲಕ ಸಂನ್ಯಾಸ ಸ್ವೀಕರಿಸಿದರು. (514) ಕೊನೆಯವರೆಗೂ ಈ ಗುಟ್ಟು ರಟ್ಟಾಗಲಿಲ್ಲ. ೧೮೭೬ ರಲ್ಲಿ ಚಂದ್ರಾಮಣಿ ಸತ್ತಾಗ ಸಂನ್ಯಾಸಿಯಾಗಿರುವ ತಾವು ಅಂತಿಮ ಸಂಸ್ಕಾರವನ್ನು , ಅಪರ ಕರ್ಮಗಳನ್ನು ಮಾಡಲಾಗದೆಂದು ಅಣ್ಣನ ಮಗ ರಾಮಲಾಲನ ಮೂಲಕ ಮಾಡಿಸಿದರು. (515) ಆದರೆ ಇದಕ್ಕೆ ತದ್ವಿರುದ್ಧವಾಗಿ ಗೃಹಸ್ಥರಂತೆ ಶಾರದಾಮಣಿಯಿಂದ ಎಲ್ಲ ಸೇವೆಗಳನ್ನು ಮಾಡಿಸಿಕೊಂಡರು. ನಿಜವಾದ ವಿರಾಗಿ ಹೆಣ್ಣಿನ ಪಕ್ಕದಲ್ಲಿ ಮಲಗಿದ್ದಾಗಲೂ ವಿಚಲಿತನಾಗುವುದಿಲ್ಲ ಎನ್ನುವುದನ್ನು ಶಾರದಾಮಣಿಯನ್ನು ಪಕ್ಕದಲ್ಲಿ ಮಲಗಿಸಿಕೊಂಡು ಸಾಧಿಸಿ ತೋರಿಸಿದರೆಂದು ಭಕ್ತ ಕಥಾನಕ ಹೇಳುತ್ತದೆ. ಆದರೆ ತಾನು ಈಗಾಗಲೇ ಸಂನ್ಯಾಸಿಯಾಗಿರುವುದನ್ನು ಮುಚ್ಚಿಟ್ಟ ಸುಳ್ಳು ಸಾಧಕನನ್ನಲ್ಲ. ಆದ್ದರಿಂದ ರಾಮಕೃಷ್ಣರಂತಹ ಅಧ್ಯಾತ್ಮ ಸಾಧಕರ ಹೇಳಿಕೆಗಳನ್ನು , ನಡೆ-ನುಡಿಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ.
ಸಮದರ್ಶಿಯಾದ ನನಗೆ ಮಣ್ಣು ಮತ್ತು ಹೊನ್ನು ಎರಡರಲ್ಲೂ ಭೇದವಿಲ್ಲ, ಬೀದಿಯಲ್ಲಿರುವ ಸೂಳೆ ಮತ್ತು ದೇವಾಲಯದಲ್ಲಿರುವ ಭವತಾರಿಣಿ ಒಂದೇ ಎಂದು ಸ್ವಪ್ರಶಂಸೆ ಮಾಡಿಕೊಳ್ಳುತ್ತಿದ್ದರಾದರೂ ಅವರ ನಡವಳಿಕೆ ಸಾಮಾನ್ಯ ಜನರಿಗಿಂತ ಭಿನ್ನವಾಗಿರದೆ ಸಿಟ್ಟು, ಸೆಡವು , ತನ್ನ ಬಣ್ಣನೆ , ಇದಿರ ಹಳಿಕೆಗಳು ತುಂಬಿರುತ್ತಿದ್ದವು. ತಮ್ಮನ್ನು , ತಮ್ಮ ಸಾಧನೆಗಳನ್ನು ಯಾರಾದರೂ ಪ್ರಶ್ನಿಸಿದಾಗ , ಅಥವಾ ತಾವು ಕಲ್ಪಿಸಿಕೊಂಡಂತೆ ತಮಗೆ ಗೌರವ ಕೊಡದಿದ್ದಾಗ ಒಳಗೆ ಅಸಹನೆಯಿಂದ ಕುದಿದು ತಳಮಳಕ್ಕೆ ಒಳಗಾಗಿ ಅವರ ತೇಜೋವಧೆ ಮಾಡಲು ತಮ್ಮದೇ ಆದ ಉಪಾಯಗಳನ್ನು ಹೂಡುತ್ತಿದ್ದರು. ಅದಕ್ಕಾಗಿ ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿದ್ದರು. ಪರಮಹಂಸರಿಗೆ ಪಾಪ ಪುಣ್ಯದ ತಾರತಮ್ಯ ಇರುತ್ತದೆಯೇ ಎಂದು ತಾಂತ್ರಿಕ ಸಾಧು ಪ್ರಶ್ನೆ ಹಾಕಿದಾಗ ಕೇಶವಚಂದ್ರಸೇನನೂ ಇದೇ ಪ್ರಶ್ನೆ ಹಾಕಿದ. ನಾನು ನಿನಗೆ ಅದನ್ನು ವಿವರಿಸಿದ್ದೇ ಆದರೆ ನಿನ್ನ ಸಮಾಜ ಒಂದು ನಿಮಿಷವೂ ಉಳಿಯದು ಎಂದು ಹೇಳಿದೆ. ಆಗ ಆತ ದಯವಿಟ್ಟು ಬೇಡಿ ಎಂದ'-ಈ ಉತ್ತರ ಗುರುಗಳಿಂದ ಬಂದಿತು. (516) ಇನ್ನೂ ಮುಂದುವರೆದು ಪರಮಹಂಸನಿಗೆ ಭಗವಂತನೇ ಸುಮತಿ ಮತ್ತು ದುರ್ಮತಿ ಕೊಡುತ್ತಾನೆ ಎಂದು ತಿಳಿದು ಬರುತ್ತದೆ’ ಹೇಳಿಕೆಯನ್ನು ಸೇರಿಸಿದರು. ಇದರ ನಂತರ ಇಂತಹುದೇ ಹಲವಾರು ಸಡಿಲ ಮಾತುಗಳನ್ನು ಆಡಿದರೇ ಹೊರತು ನೇರ ಸ್ಪಷ್ಟ ಉತ್ತರವನ್ನು ಕೊನೆಗೂ ಕೊಡಲಿಲ್ಲ. ಬ್ರಹ್ಮಜ್ಞಾನಿ ಸಮದರ್ಶಿಯೇ ? – ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೆ ಹೀಗೆಲ್ಲ ಮಾತಿನ ಲಾಗ ಹಾಕಿದ್ದ ರಾಮಕೃಷ್ಣರ ನಡವಳಿಕೆ ಜನಸಾಮಾನ್ಯರದಕ್ಕಿಂತ ಯಾವ ರೀತಿಯಲ್ಲೂ ಬೇರೆಯಾಗಿರಲಿಲ್ಲ. ಇದಕ್ಕೆ ನೂರಾರು ನಿದರ್ಶನಗಳು ನಮಗೆ ಸಿಗುತ್ತವೆ.
ಒಮ್ಮೆ ನವಕುಮಾರ ಎನ್ನುವಾತ ರಾಮಕೃಷ್ಣರ ಕೊಠಡಿಯ ಬಾಗಿಲಿನ ಹತ್ತಿರಕ್ಕೆ ಬಂದು ಅವರ ಸುತ್ತ ಭಕ್ತರು ಸೇರಿರುವುದನ್ನು ನೋಡಿ ಹಿಂದಿರುಗಿ ಹೋದನು. ಆಗ ರಾಮಕೃಷ್ಣರು ಆತನಿಗೆ ‘ಅಹಂಕಾರದ ಮುದ್ದೆ’ ಎನ್ನುವ ಪ್ರಶಂಸನೆ ಮಾಡಿದರು. (517) ವರ್ಧಮಾನ ರಾಜನ ಆಸ್ಥಾನ ಪಂಡಿತನಾಗಿದ್ದ ಪದ್ಮಲೋಚನನ್ನು ಕಾಣಲು ಹೋಗುವ ಮೊದಲು ಆತನಿಗೆ ಅಹಂಕಾರ ಇದೆಯೇ ಇಲ್ಲವೇ ಎಂದು ತಿಳಿಯಲು ಹೃದಯರಾಮನನ್ನು ಕಳಿಸಿದ್ದರು. (518) ಒಂದು ದಿನ ಮಧ್ಯಾಹ್ನದ ಊಟ ಮಾಡಿ ವಿಶ್ರಾಂತಿ ಪಡೆದಿದ್ದ ರಾಖಾಲಚಂದ್ರ ಘೋಷ್’ನನ್ನು ನೋಡುತ್ತ ಸಮಾಧಿ ತಲುಪಿ ಅಲ್ಲಿಂದ ಕೆಳಗಿಳಿಯುತ್ತಿರುವಾಗ ಕಾವಿ ಬಟ್ಟೆಗಳನ್ನು ಉಟ್ಟಿದ್ದ ಒಬ್ಬ ಅಪರಿಚಿತ ಅವರ ಕೊಠಡಿಯನ್ನು ಪ್ರವೇಶಿಸಿದನು. ‘ಉನ್ನತ ಪ್ರಜ್ಞೆ’ಯಿಂದ ಕೆಳಗಿಳಿಯುತ್ತಿದ್ದ ಸಮದರ್ಶಿಗಳಾಗಿದ್ದ ಅವತಾರ ಪುರುಷ ಗುರುಗಳು ಆತನನ್ನು ಕಾಣುತ್ತಲೇ ‘ಈ ಕಾಷಾಯ ವಸ್ತ್ರ ಏಕೆ? ಇದನ್ನು ಉಟ್ಟರೆ ಎಲ್ಲಾ ಮುಗಿದಂತೆಯೇ ?’ ಎಂದು ಗೊಣಗುತ್ತ ಕಪಟ ವೇಷ ಭೂಷಣಗಳ ಮೇಲೆ ಸಾಕಷ್ಟು ದೀರ್ಘ ವಿವರಣೆ ನೀಡಿದರು. (519)
ಬ್ರಾಹ್ಮಸಮಾಜದ ತ್ರೈಲೋಕ್ಯನಾಥ ಸನ್ಯಾಲ ಒಂದು ಲೇಖನದಲ್ಲಿ ಕೇಶವಚಂದ್ರಸೇನ ಪರಿಚಯವಾದ ನಂತರ ರಾಮಕೃಷ್ಣರು ಸಂಸಾರಿಗಳ ಭಕ್ತಿ ಕುರಿತಾಗಿ ತಮಗಿದ್ದ ದೃಷ್ಟಿಕೋನವನ್ನು ಬದಲಾಯಿಸಿಕೊಂಡರು ಎಂದು ಬರೆದಿದ್ದನು. ಇದನ್ನು ಬಲರಾಮಬಸು ಮನೆಗೆ ಬಂದಿದ್ದ ರಾಮಕೃಷ್ಣರ ಎದುರು ಗಿರೀಶಚಂದ್ರ ಘೋಷ್ ಚರ್ಚೆಗೆ ಎಳೆದಿದ್ದನು. ಈ ನಿಟ್ಟಿನಲ್ಲಿ ತ್ರೈಲೋಕ್ಯನಾಥ ಸನ್ಯಾಲ್ ಮತ್ತು ರಾಮಕೃಷ್ಣರ ನಡುವೆ ವಾದ–ಸಂವಾದಗಳು ಜರುಗಿದವು. ರಾಮಕೃಷ್ಣರು ತಾತ್ತ್ವಿಕವಾಗಿ ತಮ್ಮ ನಿಲುವನ್ನು ತ್ರೈಲೋಕ್ಯನಾಥ ಸನ್ಯಾಲನಿಗೆ ಮನದಟ್ಟು ಮಾಡಿಸುವಲ್ಲಿ ಸೋತರು. ತ್ರೈಲೋಕ್ಯನಾಥ ಸನ್ಯಾಲ್ ನಾಥ ತಿಂಡಿ ತಿನ್ನಲು ಒಳಗೆ ಹೋದ ನಂತರ ಗಿರೀಶಚಂದ್ರ ಘೋಷ್’ಗೆ ‘ಅವರಂತಹವರೊಡನೆ ಚರ್ಚಿಸಬೇಡ. ಅವರು ಬಾವಿ ಕಪ್ಪೆಗಳು’ ಎಂದು ಟೀಕಿಸಿ ಗುರುಗಳು ತಮ್ಮ ವಿಶಾಲ ಮನೋಭಾವವನ್ನು ಮೆರೆದರು. (520) ತಮ್ಮನ್ನು ಸಂಶಯದ ದೃಷ್ಟಿಯಿಂದ ನೋಡುವ ಅಥವಾ ಪ್ರಶ್ನಿಸುವರಂತೆ ಕಾಣುವ ಅಪರಿಚಿತರನ್ನು ಕಂಡಾಗ ಗುರುಗಳ ಮನಸ್ಸಿನಲ್ಲಿ ಕಸಿವಿಸಿಯಾಗುತ್ತಿದ್ದಿತು. ದೇವೇಂದ್ರನ ಮನೆಗೆ ಹೋಗಿದ್ದಾಗ ಪಕ್ಕದ ಮನೆಯ ಕೆಲವರು ಬಂದಿದ್ದರು. ಆಗ ಅವರ ನಡೆ, ನುಡಿ ಸರಿಯಿಲ್ಲ. ಇದೆಂತಹ ಜಾಗ ? ನನಗೆ ಒಬ್ಬ ಧಾರ್ಮಿಕನೂ ಕಣ್ಣಿಗೆ ಬೀಳುತ್ತಿಲ್ಲ ‘ ಎಂದು ‘ಮ’ ಕಿವಿಯಲ್ಲಿ ಉಸುರಿದ್ದರು. (521) ತಾವು ಬಯಸಿದಂತೆ ಹಣ ವೆಚ್ಚ ಮಾಡದ ಯದುಮಲ್ಲಿಕ ಜಿಪುಣ ಎಂದು ತಮ್ಮಲ್ಲಿಗೆ ಬರುತ್ತಿದ್ದವರಿಗೆ ಹೇಳುವುದು ರಾಮಕೃಷ್ಣರಿಗೆ ಒಂದು ಚಟವೇ ಆಗಿದ್ದಿತು. ಇದು ಯದುಮಲ್ಲಿಕನ ಕಿವಿಗೆ ಬಿದ್ದಿದ್ದು ಆತ ಗುರುಗಳತ್ತ ಮೊದಲಿನಂತೆ ಬರುವುದನ್ನು ಬಿಟ್ಟಿದ್ದನು. ಇದನ್ನು ಗಮನಿಸಿ’ ಈ ಹಿಂದೆ ಯದುಮಲ್ಲಿಕ ಭಗವಂತನ ಸಂಬಂಧ ಮಾತಾಡಲು ಮತ್ತು ಕೇಳಲು ಬಹಳ ಆಸಕ್ತಿ ತೋರಿಸುತ್ತಿದ್ದ. ಇತ್ತಿಚೆಗೆ ಅದು ಕಡಿಮೆಯಾಗಿದೆ. ಹಗಲು ಇರುಳು ಹೊಗಳುಭಟ್ಟರನ್ನು ಕಟ್ಟಿಕೊಂಡು ಪ್ರಾಪಂಚಿಕ ಸಂಗತಿಗಳ ಬಗ್ಗೆ ಮಾತನಾಡುತ್ತಾನೆ ‘ ಎಂದು ತಮ್ಮ ಹಿಂದಿನ ನಿಷ್ಠಾವಂತ ಭಕ್ತನ ಮೌಲ್ಯ ಮಾಪನ ಮಾಡಿದ್ದರು. ತಾವು ಹೇಳಿದಂತೆ ಮನೆಯಲ್ಲಿ ಚಂಡಿ ಕೀರ್ತನೆ ಏರ್ಪಡಿಸಿ ತಮ್ಮ ಭಕ್ತರನ್ನು ಸಂತೋಷಗಳಿಸದ ಯದು ಮಲ್ಲಿಕನ ಮೇಲೆ ಗುರುಗಳಿಗೆ ಸಿಟ್ಟಿದ್ದಿತು. (522)
ರಾಮಕೃಷ್ಣರನ್ನು ಜೀವಿತದ ಕೊನೆಯ ಗಳಿಗೆಯವರೆಗೆ ಕಾಡಿದ ಮೂವರು ವೈಚಾರಿಕರೆಂದರೆ ಈಶ್ವರಚಂದ್ರ ವಿದ್ಯಾಸಾಗರ , ಬಂಕಿಮಚಂದ್ರ ಚಟರ್ಜಿ ಮತ್ತು ಡಾ. ಮಹೇಂದ್ರಲಾಲ ಸರ್ಕಾರ. ಈ ಸಾಲಿನಲ್ಲಿ ಸಾಂದರ್ಭಿಕವಾಗಿ ನಂದಲಾಲ ಬಸು ಕೂಡ ಸೇರುತ್ತಾರೆ. ತಮ್ಮ ವಶಕ್ಕೆ ಸಿಗದವರ ಮೇಲೆ ಗುರುಗಳಿಗೆ ಸಿಟ್ಟಿದ್ದಿತು. ಈಶ್ವರಚಂದ್ರ ವಿದ್ಯಾಸಾಗರರು ಹಾಗೂ ಬ್ರಾಹ್ಮ ಸಮಾಜದ ಶಿವನಾಥಶಾಸ್ತ್ರಿ ವಿವಿಧ ಸಂದರ್ಭಗಳಲ್ಲಿ ದಕ್ಷಿಣೇಶ್ವರಕ್ಕೆ ಬರುವೆವೆಂದು ತಿಳಿಸಿದ್ದರಾದರೂ ಮೂರು ತಿಂಗಳಾದರೂ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದಿದ್ದ ರಾಮಕೃಷ್ಣರು ಈಶ್ವರಚಂದ್ರರನ್ನು ‘ಮಾತಿಗೆ ತಪ್ಪಿರುವ ಆತ ಪಂಡಿತನೇ ಹೊರತು , ಸಂತನಲ್ಲ ‘ ಎಂದು ಹೀಗಳೆದಿದ್ದರು. (523) ಈಶ್ವರಚಂದ್ರರು ದೇವರು ಮನುಷ್ಯರನ್ನು ಕೆಲವರು ಕಡಿಮೆ , ಕೆಲವರು ಹೆಚ್ಚು ಎಂದು ಸೃಷ್ಟಿಸಿದನೇ ಎಂದು ಪ್ರಶ್ನಿಸಿದಾಗ ರಾಮಕೃಷ್ಣರು ಹೌದೆಂದು ತಾವೇ ಸೃಷ್ಟಿಯಲ್ಲಿ ಭಾಗಿಯಾದವರಂತೆ ಉತ್ತರಿಸಿದ್ದರು. ಇದನ್ನು ನೆನಪಿಸಿಕೊಂಡು ರಾಖಾಲಚಂದ್ರ ಘೋಷ್ ತಂದೆ ಮತ್ತು ತಾತನಿಗೆ ಈಶ್ವರಚಂದ್ರರ ಬಗ್ಗೆ ತಿಳಿಸುತ್ತ ಆತ ಅಷ್ಟೊಂದು ವಿದ್ಯೆ ಗಳಿಸಿ ವಿದ್ಯಾಸಾಗರನೆಂದು ಖ್ಯಾತನಾಗಿದ್ದರೂ ಏನೂ ಅರಿಯದ ಹಸುಳೆಯಂತೆ ಮಾತನಾಡಿದ ಎಂದು ನವಿರಾಗಿ ಅಣಕಿಸಿದರು. (524) ಮೊದಲಿನಂತೆ ದಕ್ಷಿಣೇಶ್ವರಕ್ಕೆ ಮೇಲಿಂದ ಮೇಲೆ ಬಂದು ಸ್ಟೀಮರ್ ಪಾರ್ಟಿ ಏರ್ಪಡಿಸುವುದನ್ನು ತಪ್ಪಿಸಿದ್ದ ಕೇಶವಚಂದ್ರ ಸೇನನನ್ನು ಖಂಡಿಸುತ್ತ ‘ಆತ ಇಲ್ಲಿಗೆ ಬಂದ ಮೇಲೆ ನಮಸ್ಕಾರ ಮಾಡುವುದನ್ನು ಕಲಿತ…ಎಲ್ಲಾ ಚೆಕ್ಕುಗಳು ಇಲ್ಲಿಯ ಒಪ್ಪಿಗೆ ಮುದ್ರೆಯಾದ ನಂತರವೇ ಬ್ಯಾಂಕಿನಲ್ಲಿ ನಗದಾಗುತ್ತವೆ’ ಎನ್ನುತ್ತ ‘ನನಗೆ ಅಹಂಕಾರವೇ ಇಲ್ಲ‘ ಎಂದು ಸಂತ ರಾಮಕೃಷ್ಣರು ಕನಲಿದ್ದರು. (525) ಒಮ್ಮೆ ರಾಮಕೃಷ್ಣರು ಮತ್ತು ಕರ್ನಲ್ ಓಲ್ಕಾಟ್ ಭೇಟಿ ನಡೆಯಿತು. ತಮ್ಮ ಮಾಮೂಲಿ ಶೈಲಿಯಲ್ಲಿ ಆತನಿಗೆ ದೇವರ ಬಗ್ಗೆ ತಿಳಿಸಲು ಕೊಡಲು ಯತ್ನಿಸಿದಾಗ ಆತ ನನಗೆಲ್ಲಾ ಗೊತ್ತು ಎಂದಿದ್ದು ಗುರುಗಳನ್ನು ಸಿಟ್ಟಿಗೇಳಿಸಿದ್ದಿತು. (526)
ಅಧರಸೇನನ ಮನೆಯಲ್ಲಿ ತಮ್ಮ ಭಗವಂತನ ಸಿದ್ಧಾಂತಗಳನ್ನು , ತಮ್ಮ ದೈವ ಸಾಕ್ಷಾತ್ಕಾರದ ಆದ್ಯತೆಯನ್ನೂ ಎಳ್ಳಷ್ಟೂ ಲೆಕ್ಕಿಸದೆ , ಇತರ ಭಕ್ತರಂತೆ ತಾವು ಹೇಳುತ್ತಿದ್ದ ದೃಷ್ಟಾಂತಗಳಿಗೆ ಮನಸೋಲದೆ , ಭಕ್ತಿ , ದೈವ ಸಾಕ್ಷಾತ್ಕಾರ ಎನ್ನುವ ಬಡಬಡಿಕೆಗಳಿಗೆ ಸೊಪ್ಪು ಹಾಕದೆ ‘ ಮೊದಲು ಜಗತ್ತಿನ ವೈಚಿತ್ರ್ಯಗಳನ್ನು , ಜಗತ್ತನ್ನೂ ಅರಿಯಬೇಕು; ಅದನ್ನು ತಿಳಿಯದೆ ಭಗವಂತನನ್ನು ಅರಿಯಲಾಗದು. ಮೊದಲು ಪುಸ್ತಕದ ಜ್ಞಾನ ಅತ್ಯಗತ್ಯ’ ಎಂದು ಸಾರಿದ್ದ ಬಂಕಿಮಚಂದ್ರ ಚಟರ್ಜಿಯನ್ನು ದಾರಿಗೆ ತರಬೇಕೆನ್ನುವ ಬಯಕೆ ಗುರುಗಳಲ್ಲಿ ತುಂಬಿದ್ದಿತು. ಹಾಗಾಗಿ ತಮ್ಮ ಶಿಷ್ಯರ ಮೂಲಕ ಬಂಕಿಮಚಂದ್ರ ಚಟರ್ಜಿ ಬರೆದ ‘ದೇವಿ ಚೌಧುರಾಣಿ’ ಕಾದಂಬರಿಯನ್ನು ತರಿಸಿ ದಕ್ಷಿಣೇಶ್ವರದ ಪಂಚವಟಿ ಕಟ್ಟೆಯ ಮೇಲೆ ಓದಿಸಿ , ತಮ್ಮ ವಿಮರ್ಶೆಯಿಂದ ಕುಟ್ಟಿ ಅದರಲ್ಲಿ ಕಾಳಿಲ್ಲ , ಬರಿ ತೌಡು ಎಂದು ಶಿಷ್ಯರಿಗೆ ಮನವರಿಕೆ ಮಾಡಲು ಹೆಣಗಿದರು. ಪುಸ್ತಕ ಓದದೆ ಜ್ಞಾನ ಬರುವುದಿಲ್ಲ ಎಂದು ಹೇಳಿರುವ ಲೇಖಕ ಮೂರ್ಖ , ಭಕ್ತಿಯ ವಿಚಾರದಲ್ಲಿ ಆತನದು ಲೆಕ್ಕಾಚಾರದ ಬುದ್ಧಿ ಎಂದು ಘನ ವಿಮರ್ಶೆ ಮಾಡಿ ತಮ್ಮ ಸಾಧನೆಗಳ ಹಳೆಯ ಕಡತಗಳನ್ನು ಬಿಚ್ಚಿದರು. (527) ದೇವಿ ಚೌಧುರಾಣಿ ಕಾದಂಬರಿಯ ಆಶಯವನ್ನು ತಿಳಿದುಕೊಳ್ಳುವುದಕ್ಕಿಂತ ಬಂಕಿಮಚಂದ್ರ ಚಟರ್ಜಿ ಅಪೂರ್ಣ ಎಂದು ತೋರಿಸುವುದೇ ಗುರುಗಳ ಗುರಿಯಾಗಿದ್ದಿತು. ಬಂಕಿಮಚಂದ್ರ ಚಟರ್ಜಿ ‘ನವಜೀವನ’ ಎನ್ನುವ ಮಾಸ ಪತ್ರಿಕೆಯಲ್ಲಿ ಧರ್ಮದಿಂದ ಶಾರೀರಿಕ ಮಾನಸಿಕ , ಅಧ್ಯಾತ್ಮಿಕ ಪ್ರವೃತ್ತಿಗಳಿಗೆ ಸ್ಪೂರ್ತಿ ದಕ್ಕುತ್ತದೆ. ಅದೇ ಅದರ ಪ್ರಯೋಜನ. ಮನುಷ್ಯನಿಗೆ ಕಾಮ ಆವಶ್ಯಕ. ಭಗವಂತ ಕೃಷ್ಣನಾಗಿ ಅವತರಿಸಿ ಬೃಂದಾವನದಲ್ಲಿ ರಾಧೆ ಮತ್ತು ಗೋಪಿಯರೊಡನೆ ಆಡಿದ್ದು ಸುಳ್ಳು ಎಂದು ಬರೆದಿರುವುದನ್ನು ವಿಶ್ವನಾಥ ಉಪಾಧ್ಯಾಯ (ಕ್ಯಾಪ್ಟನ್) ಗಮನಕ್ಕೆ ತಂದಾಗ ಅದನ್ನು ತಾತ್ತ್ವಿಕ ದೃಷ್ಟಿಯಲ್ಲಿ ಉತ್ತರಿಸಲಾಗದ ರಾಮಕೃಷ್ಣರು ಅಂತಹ ವಿಷಯ ವಾರ್ತಾ ಪತ್ರಿಕೆಯಲ್ಲಿ ಬಂದಿಲ್ಲ , ಆದ್ದರಿಂದ ಆತ ಅವನ್ನು ನಂಬುತ್ತಿಲ್ಲ’ ಎನ್ನುವ ಬಾಲಿಶ ಉತ್ತರ ನೀಡಿದರು. (528) ಬಂಕಿಮಚಂದ್ರ ಚಟರ್ಜಿ ತನ್ನ ಮನೆಗೆ ಬರಬೇಕೆಂದು ರಾಮಕೃಷ್ಣರನ್ನು ಆಹ್ವಾನಿಸಿದ್ದನು. ಇದಾದ ಕೆಲದಿನಗಳಲ್ಲಿಯೇ ಆತನನ್ನು ಕಾಣಲು ‘ಮ’ ಮತ್ತು ಗಿರೀಶಚಂದ್ರ ಘೋಷ್ ಕಲ್ಕತ್ತದಲ್ಲಿದ್ದ ಆತನ ಮನೆಗೆ ಕಳಿಸಿದಾಗ ಬಂಕಿಮಚಂದ್ರ ಚಟರ್ಜಿ ನಾನೇ ದಕ್ಷಿಣೇಶ್ವರಕ್ಕೆ ಬರುತ್ತೇನೆ ಎಂದು ತಿಳಿಸಿದ್ದನು. ಕೊನೆಯವರೆಗೂ ಇವರಿಬ್ಬರ ಭೇಟಿ ಆಗಲಿಲ್ಲ. (529)
ತಮ್ಮನ್ನು ಅವತಾರ ಪುರುಷ ಎಂದು ಒಪ್ಪದ ಡಾ. ಮಹೇಂದ್ರಲಾಲ ಸರ್ಕಾರ ಗುರುಗಳಿಗೆ ಮಗ್ಗುಲ ಮುಳ್ಳಿನಂತೆ ಭಾಸವಾಗುತ್ತಿದ್ದನು. ಗಿರೀಶಚಂದ್ರ ಘೋಷ್ , ‘ಮ’, ರಾಮಚಂದ್ರದತ್ತ ಮುಂತಾದ ಶಿಷ್ಯರ ಮೂಲಕ ನಾನು ಅವತಾರ ಎಂದು ತಿಳಿಸಲು ಯತ್ನಿಸಿದಾಗಲೆಲ್ಲ ಡಾ. ಮಹೇಂದ್ರಲಾಲ ಸರ್ಕಾರ ತಿರಸ್ಕರಿಸುತ್ತಿದ್ದನು. ಯಾವುದೇ ಮನುಷ್ಯ ಇನ್ನೊಬ್ಬನಿಗಿಂತ ದೊಡ್ದವನಲ್ಲವಾದ್ದರಿಂದ ‘ಅವತಾರ ಪುರುಷ’ರಿಲ್ಲ. ಭಗವಂತನ ಜ್ಯೋತಿ ಪ್ರತಿಯೊಬ್ಬರಲ್ಲಿ ವ್ಯಕ್ತವಾಗುತ್ತದೆ ಎನ್ನುವುದನ್ನು ಒಪ್ಪಬಹುದು. ನನಗೆ ಅನಂತ ಉನ್ನತಿಯಲ್ಲಿ ನಂಬಿಕೆ. ಗೊಣ್ಣೆ ಸುರುಕನ ಕಾಲಿಗೆ ನಾನು ಬೀಳಲಾರೆ ಎಂದು ಸ್ಪಷ್ಟ ಪಡಿಸಿದ್ದನು. ಆತನಿಗೆ ತಾವು ಅವತಾರ ಎಂದು ಮನದಟ್ಟು ಮಾಡಿಸಲು ಗುರುಗಳು ತಾವೇ ರಂಗಕ್ಕೆ ಧುಮುಕಿದ್ದರು. ಅದಕ್ಕೆ ಎದುರಾಗಿ ಆತ ‘ಪೂರ್ಣ ಜ್ಞಾನ ಅಚ್ಚಳಿಯದೆ ಉಳಿಯುತ್ತದೆಯೇ ? ಎಲ್ಲರೂ ಭಗವಂತನೇ ! ಹಾಗಾದರೆ ನೀವೇಕೆ ಪರಮಹಂಸಗಿರಿ ಕೆಲಸ ಮಾಡುತ್ತಿದ್ದೀರಿ ? ಇವರೆಲ್ಲ ನಿಮ್ಮ ಸೇವೆ ಮಾಡುವುದೇಕೆ ? ನೀವು ಸುಮ್ಮನೆ ಗಪ್ ಚುಪ್ ಇರಬಾರದೇಕೆ ?‘ ಎಂದು ಮಹೇಂದ್ರಲಾಲ ಸರ್ಕಾರ ಸವಾಲು ಎಸೆದಿದ್ದನು. ಇದಕ್ಕೆ ತಮ್ಮದೇ ಆದ ಆನೆ-ಮಾವುತ ಎನ್ನುವ ಅಸಂಬದ್ಧ ದೃಷ್ಟಾಂತದ ಮೂಲಕ ಸಮರ್ಥಿಸಲು ಹೆಣಗಿದ್ದರು. ‘ನಾನು ಯಂತ್ರ ; ಆತ ಯಂತ್ರಿ , ಆತನೇ ಮಾವಟಿಗ , ಆತನೇ ನಾರಾಯಣ’ ಎಂದು ವಾದಿಸಿದಾಗ ಡಾಕ್ಟರ್ ‘ಹಾಗಿದ್ದರೆ ರೋಗ ಗುಣಪಡಿಸುವಂತೆ ನೀವೇಕೆ ಬೇಡುತ್ತೀರಿ’ ಎನ್ನುವ ಪ್ರಶ್ನೆಗೆ ನೈಜ ಉತ್ತರಗಳಿರಲಿಲ್ಲ. ‘ನಾನು ಹೇಳಿದುದನ್ನು ಅರಿತುಕೊಳ್ಳಲು ಯತ್ನಿಸು. ಹೆಚ್ಚಿಗೆ ತಿಳಿಯಬೇಕೆಂದಿದ್ದರೆ ಏಕಾಂತದಲ್ಲಿ ಆತನ ಪ್ರಾರ್ಥನೆ ಮಾಡು. ಜಗತ್ತು ಹೀಗೇಕೆ ಇದೆ ಎಂದು ಆತನನ್ನೇ ಕೇಳು’ ಎಂದು ಉತ್ತರಿಸಿ ‘ಅವತಾರ ಪುರುಷ’ ರಾಮಕೃಷ್ಣರು ತಾವು ಕೊಡಬೇಕಾದ ಉತ್ತರಕ್ಕೆ ಕಾಣದ ಭಗವಂತನನ್ನು ಹೊಣೆಮಾಡಿದ್ದರು. ಡಾಕ್ಟರ್ ಹೋದ ನಂತರ ‘ಮರವನ್ನು ಇನ್ನೇನು ಕತ್ತರಿಸಿದೆ ಎನ್ನುವಷ್ಟರಲ್ಲಿ ಆತ ದೂರ ನಿಂತುಕೊಳ್ಳುತ್ತಾನೆ. ಸ್ವಲ್ಪ ಹೊತ್ತಿನ ನಂತರ ಮರ ತಾನಾಗಿಯೇ ಉರುಳುತ್ತದೆ ‘ ಎಂದು ಭಕ್ತರಿಗೆ ತಿಳಿಸಿದ್ದರು. (530) ಆದರೆ ಅದು ಅವರ ಭ್ರಮೆಯಾಗಿದ್ದಿತೇ ಹೊರತು ಡಾ,ಮಹೇಂದ್ರಲಾಲ ಸರ್ಕಾರನ ಸ್ಥಿತಿಯಾಗಿರಲಿಲ್ಲ.
ಇದಾದ ನಾಲ್ಕು ದಿನಗಳ ನಂತರ ಮತ್ತೊಮ್ಮೆ ಗಂಟಲು ಹುಣ್ಣನ್ನು ಪರೀಕ್ಷಿಸಲು ಬಂದಿದ್ದ ಡಾ. ಮಹೇಂದ್ರಲಾಲ ಸರ್ಕಾರನಿಗೆ ವಿದ್ಯೆ, ಪಾಂಡಿತ್ಯ , ಧನದ ಅಹಂಕಾರ ಇರುವವರಿಗೆ ಜ್ಞಾನ ದೊರೆಯದು. ಒಬ್ಬ ದೊಡ್ದ ಸಾಧು ಇದ್ದಾನೆ ಅವರನ್ನು ನೋಡಲು ಹೋಗೋಣ ಬನ್ನಿರಿ ಎಂದರೆ ಅವರು ಬರುವುದಿಲ್ಲ, ನಾವೇ ದೊಡ್ದವರು ಅವರನ್ನೇಕೆ ನೋಡಬೇಕು ಎನ್ನುತ್ತಾರೆ ಎಂದು ಪರೋಕ್ಷವಾಗಿ ಕುಟುಕಿದರು. ಸ್ವಲ್ಪ ಕಾಲ ಡಾಕ್ಟರ್ ಜೊತೆ ಚರ್ಚಿಸಿ ನಂತರ ಈಶಾನಚಂದ್ರನಿಗೆ ‘ಈತ ಅವತಾರ ಒಪ್ಪುತ್ತಿಲ್ಲ. ನೀನೇಕೆ ನಿನಗೆ ಸರಿಯೆಂದು ತೋರಿದ್ದನ್ನು ಹೇಳಬಾರದು’ ಎಂದು ಪ್ರಚೋದಿಸಿದರು. ವಾದ ವಿವಾದಗಳ ನಂತರವೂ ಡಾಕ್ಟರ್ ಅವತಾರವನ್ನು ಒಪ್ಪದಿದ್ದಾಗ ‘ಆತನ ಸೈನ್ಸ್ ಪುಸ್ತಕದಲ್ಲಿ ಭಗವಂತ ಅವತರಿಸುತ್ತಾನೆ ಎಂದು ಬರೆದಿಲ್ಲ. ಆದ್ದರಿಂದ ಆತ ಅದನ್ನು ಒಪ್ಪುತ್ತಿಲ್ಲ’ ಎಂದು ಹಾಸ್ಯ ಮಾಡಿ ಎಲ್ಲರನ್ನೂ ನಗಿಸಿದರು. ರಾಮಕೃಷ್ಣರು ಭಕ್ತರಿಗೆ ಪಾದಧೂಳಿಯನ್ನು ಕೊಡುವುದಕ್ಕೆ ಡಾ.ಮಹೇಂದ್ರಲಾಲ ಸರ್ಕಾರ ಭಾರಿ ಆಕ್ಷೇಪಣೆ ಎತ್ತಿದಾಗ ಪರ-ವಿರೋಧದ ಚರ್ಚೆಗಳಾದವು. ಆಗ ರಾಮಕೃಷ್ಣರು ನೀಡಿದ ವಿವರಣೆಗಳು , ಕಥೆಗಳು ಸಾಂಪ್ರದಾಯಿಕವಾಗಿದ್ದು , ಪರಿಶೀಲನೆಗೆ ಒಳಪಡದ ಸಂಗತಿಗಳ ಸುತ್ತ ಗಿರಕಿ ಹೊಡೆಯುತ್ತಿದ್ದು , ಹುರುಳಿಲ್ಲವಾದರೂ ಭಕ್ತರಿಗೆ ರೋಮಾಂಚನವಾಗಿದ್ದಿತು. (531) ಮತ್ತೊಂದು ದಿನ ಡಾಕ್ಟರ್ ಬಾಧುರಿ ಇರುವಾಗಲೇ ರಾಮಕೃಷ್ಣರ ರೋಗ ತಪಾಸಣೆಗೆ ಡಾ.ಮಹೆಂದ್ರಲಾಲ ಸರ್ಕಾರ ಬಂದರು. ಆಗ ಭಕ್ತರು ನಿಮ್ಮ ಪಾದಧೂಳಿಯನ್ನು ಪಡೆಯುವುದನ್ನು ಪ್ರೋತ್ಸಾಹಿಸಬಾರದೆಂದು ತಾಕೀತು ಮಾಡಿದರು. ಅದರಿಂದ ಸಿಟ್ಟಿಗೆದ್ದ ಕರುಣಾಮಯಿ ಜಗದ್ವಂದ್ಯ ಗುರುಗಳು ‘ ನಿನ್ನ ಮಾತಿಗೆ ನಾನು ಕಿವಿಗೊಡಲೇ ? ನೀನು ಲೋಭಿ, ಕಾಮಿ , ಅಹಂಕಾರಿ’ ಎಂದು ಗುಣಗಾನ ಮಾಡಿದರು. ಇದರಿಂದ ಬೇಸತ್ತ ಡಾ.ಮಹೇಂದ್ರಲಾಲ ಸರ್ಕಾರ ‘ನೀವು ಹೀಗೆ ಮಾತನಾಡಿದರೆ ನಿಮ್ಮ ಗಂಟಲು ಪರೀಕ್ಷಿಸಿ ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದ್ದನು. (532)
ಗುರುಗಳು ಹೇಳಿದ್ದನ್ನು ಸ್ವಲ್ಪವೂ ಪ್ರಶ್ನಿಸದೆ ಒಪ್ಪುತ್ತಿದ್ದ ಭಾವುಕ ಮತ್ತು ಭಟ್ಟಂಗಿ ಭಕ್ತರಿಗೆ ಮತ್ತು ಗುರುಗಳಿಗೆ ವೈಚಾರಿಕನಾಗಿದ್ದ ಡಾ.ಮಹೇಂದ್ರಲಾಲ ಸರ್ಕಾರ ಸಮಯ ಸಿಕ್ಕಾಗಲೆಲ್ಲ ಸರಿಯಾಗಿಯೇ ಚುರುಕು ಮುಟ್ಟಿಸುತ್ತಿದ್ದನು. ತಮ್ಮ ದಿವ್ಯ ಅವಸ್ಥೆಗಳನ್ನು ಹೆಗ್ಗಳಿಸಿಕೊಂಡು ಹೇಳಿಕೊಂಡಿದ್ದ ರಾಮಕೃಷ್ಣರಿಗೆ ‘ಜನ ಸ್ವಂತ ತಾವಾಗಿಯೇ ‘ಹೇ ಭಗವಂತ ಎಲ್ಲವೂ ನೀನೆ , ಎಲ್ಲವೂ ನೀನೆ ಎನ್ನರು. ಸಂಕಟ ಬಂದಾಗ ವೆಂಕಟರಮಣ. ನಿಮ್ಮ ಗಂಟಲಿಗೆ ಹುಣ್ಣಾಗಿರುವುದರಿಂದ ನೀವು ಭಗವಂತನ ವಿಷಯ ಮಾತನಾಡುತ್ತಿರುವಿರಿ…ಆತನಿಗೇ ನಿಮ್ಮ ಕಷ್ಟ ಸುಖಗಳನ್ನೆಲ್ಲಾ ಹೇಳಿಕೊಳ್ಳಿ. ನಿಮ್ಮ ಮಂತ್ರವನ್ನು ನಿಮಗೇ ತಿರುಗಿಸುತ್ತಿದ್ದೇನೆ’ ಎಂದು ಡಾ.ಮಹೇಂದ್ರಲಾಲ ಸರ್ಕಾರ ಸವಾಲು ಎಸೆದನು. ಆಗ ‘ನಾನು ಆತನಿಗೆ ಹೇಳಿಕೊಳ್ಳಬೇಕಾದುದು ಏನೂ ಇಲ್ಲ’ ಎಂದು ಗುರುಗಳು ಸಿದ್ಧ ಉತ್ತರ ನೀಡಿದರು. ಇದನ್ನು ಒಪ್ಪದ ಆತ ‘ ಏಕೆ ಹೇಳಿಕೊಳ್ಳಬಾರದು ? ಎಲ್ಲರೂ ಆತನ ತೊಡೆಯ ಮೇಲೆ ಆಡುವ ಮಕ್ಕಳಲ್ಲವೇ ? ಎಲ್ಲಕ್ಕೂ ಆತನನ್ನು ಅವಲಂಬಿಸಿಲ್ಲವೇ? ಆದ್ದರಿಂದ ನಮಗೆ ರೋಗ ಬಂದರೆ ಆತನಿಗಲ್ಲದೆ ಬೇರೆ ಯಾರ ಮುಂದೆ ಹೇಳಿಕೊಳ್ಳಬೇಕು’ ಹೀಗೆ ಆತನಿಂದ ಹರಿತವಾದ ಪ್ರಶ್ನೆ ತೂರಿಬಂದಿದ್ದಿತು. ಇದಕ್ಕೆ ಉತ್ತರ ಗೊತ್ತಿಲ್ಲದ , ಭಗವಂತನೊಡನೆ ನೇರ ಸಂಭಾಷಣೆ ನಡೆಸಬಲ್ಲ ರಾಮಕೃಷ್ಣರು ‘ ನಿನ್ನ ಮಾತನ್ನು ಒಪ್ಪಿದೆ. ಒಮ್ಮೊಮ್ಮೆ ಹಾಗೆ ಆತನಿಗೆ ಹೇಳಿಕೊಳ್ಳಲು ಯತ್ನಿಸಿದೆ. ಆದರೆ ಅದರಲ್ಲಿ ಯಶಸ್ವಿಯಾಗುತ್ತಿಲ್ಲ’ ಎಂದು ಪೆಚ್ಚಾಗಿ ಹೇಳಿದರು. ಅಲ್ಲಿಗೆ ಬಿಡದ ಡಾ. ಸರ್ಕಾರ ‘ ಹಾಗೆ ಏಕೆ ಹೇಳಿಕೊಳ್ಳಬೇಕು ? ಅದು ಆತನಿಗೆ ಗೊತ್ತಿಲ್ಲವೇನು ?’ ಎಂದು ಮರುಪ್ರಶ್ನಿಸಿ ಗುರುಗಳನ್ನು ಮತ್ತೊಮ್ಮೆ ಬಲೆಗೆ ಕೆಡವಿದ್ದರು. ಇದರಿಂದ ಹೊರಬರಲು ಗುರುಗಳು ವಿಷಯಾಂತರ ಮಾಡಿದ್ದರು. ರಾಮಕೃಷ್ಣರು ವಿಷಯಕ್ಕೆ ಸಂಬಂಧವಿಲ್ಲದೆ ಮಾತನಾಡುತ್ತ ಗೀತಾ (ಭಗವದ್ಗೀತಾ) ಪದವನ್ನು ಹಲವು ಸಲ ಅದು ‘ತ್ಯಾಗಿ , ತ್ಯಾಗಿ ‘ ಎಂದಾಗುತ್ತದೆ. ಅದೇ ಗೀತೆಯ ಸಾರ ಎಂದಿದ್ದರು. ಇದು ಅವರು ನೂರನೇ ಒಂದು ಸಲ ಮಾಡಿದ ಬೋಧನೆಯಾಗಿದ್ದಿತು. ಯಾರೂ ಅದನ್ನು ಪ್ರಶ್ನಿಸಿರಲಿಲ್ಲ. ಆದರೆ ಡಾ.ಮಹೆಂದ್ರಲಾಲ ಸರ್ಕಾರ ‘ರಾಧೆ’ ಪದ ಅರ್ಥ ಗೊತ್ತೇ ? ಅದನ್ನು ತಿರುಗಿಸಿ ಹೇಳಿರಿ. ‘ಧೆರಾ’ ಎಂದಾಗುತ್ತದೆ. ಸದ್ಯಕ್ಕೆ ಇಲ್ಲಿಗೆ ಸಾಕು ಎಂದಿದ್ದನು. ಅಧ್ಯಾತ್ಮಿಕ ಗುರುಗಳು ಅದ್ಭುತ ರಹಸ್ಯವೆಂಬಂತೆ ಭಕ್ತರಿಗ ಹೇಳುವ ‘ ಗೀತಾ-ತ್ಯಾಗಿ’ ಮುಂತಾದ ಬೋಧನೆಗಳು ರಾಧೆ-ಧೆರಾ (ಇದೊಂದು ಅರ್ಥರಹಿತ ಪದ) ಬಡಬಡಿಕೆಗಳಿಗಿಂತ ಭಿನ್ನವಲ್ಲ ಎಂದು ಹಾಸ್ಯ ಮಾಡಿದ್ದನು. ಡಾ.ಮಹೆಂದ್ರಲಾಲ ಸರ್ಕಾರ ಮತ್ತು ‘ಮ’ ನಡುವೆ ನಡೆದ ಮಾತುಕತೆಯಲ್ಲಿ ಇದನ್ನು ನವಿರಾಗಿ ಮುಚ್ಚಿಹಾಕಲು ‘ಮ’ ಯತ್ನಿಸಿರುವುದು ಎದ್ದು ಕಾಣುತ್ತದೆ. ಕೆಲ ಸಮಯದ ನಂತರ ತಮ್ಮನ್ನು ಪ್ರಶ್ನಿಸಿದ , ತರ್ಕದ ಬಲೆಯಲ್ಲಿ ಕೆಡವಿದ ಡಾಕ್ಟರ್ ಮಹೇಂದ್ರಲಾಲ ಸರ್ಕಾರನ ಮೇಲೆ ಒಂದು ಕಣ್ಣಿಟ್ಟಿದ್ದ ಗುರುಗಳು ಭಾವಾವಿಷ್ಟರಾಗಿ ಆತನ ತೊಡೆಯ ಮೇಲೆ ಕಾಲಿಟ್ಟರು. (533) ಆಗ ಅವರ ಸುಪ್ತ ಮನಸ್ಸಿನಲ್ಲಿ ಈ ಡಾ.ಸರ್ಕಾರನಿಗೆ ಸರಿಯಾಗಿ ಬುದ್ಧಿ ಕಲಿಸಿದೆ ಎನ್ನುವ ತೃಪ್ತಿಯಿದ್ದಿತು.
ತಮಗೆ ಕ್ಯಾನ್ಸರ್ ಬರಲು ಕಾರಣ ಹೇಳಿದ್ದ ಡಾ.ಶ್ರೀನಾಥನ ಮೇಲೆ ಗುರುಗಳಿಗೆ ಕಡಕೋಪ ಬಂದಿದ್ದಿತು. ಆತ ಹೋದ ನಂತರ ಗುರುಗಳು ‘ಆತ ಎಲ್ಲಾ ಮಾಯೆ ಎನ್ನುತ್ತಾನೆ. ಆದರೆ ನ್ಯಾಯಾಲಯಕ್ಕೆ ಅಲೆಯುವುದನ್ನು ಬಿಟ್ಟಿಲ್ಲ. ಜನಾಯಿಯ ಮುಖ್ಯೋಪಾಧ್ಯಾಯನೂ ಹೀಗೆ ಜಂಬ ಪಡುತ್ತಿದ್ದ ನಂತರ ಆತನಿಗೆ ಬುದ್ಧಿ ಬಂದಿತು. ನನ್ನ ಆರೋಗ್ಯ ಸರಿಯಿದ್ದರೆ ಡಾ, ಶ್ರೀನಾಥನೊಡನೆ ಇನ್ನೂ ಸ್ವಲ್ಪ ಮಾತನಾಡಬಹುದಿದ್ದಿತು. ಜ್ಞಾನದ ಬಗ್ಗೆ ಮಾತನಾಡಿದ ತಕ್ಷಣವೇ ಜ್ಞಾನಿಯಾಗಲು ಸಾದ್ಯವಿಲ್ಲ’ ಎಂದು ಅವತಾರ ವರಿಷ್ಟರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. (534) ಬುದ್ಧನ ಮಾರ್ಗದಲ್ಲಿ ಧ್ಯಾನ ಮಾಡುತ್ತಿದ್ದ , ಆನಂದಾತೀತ ಅವಸ್ಥೆಯನ್ನು ಪ್ರತಿಪಾದಿಸುತ್ತಿದ್ದ ತಪಸ್ವಿ ಕಾಳಿಪ್ರಸಾದ ರಾಮಕೃಷ್ಣರ ಭಜನಾನಂದ , ನರ್ತನಾನಂದದ ತಳಕ್ಕೆ ಕೈ ಹಾಕಿದ್ದನು. ಆತ ಆನಂದದಿಂದ ಏನು ಪ್ರಯೋಜನ ? ಎಲ್ಲರೂ ಆನಂದಭರಿತರೇ. ಕಾಡುಜನ ಯಾವಾಗಲೂ ಹೋ, ಹೋ ಎನ್ನುತ್ತ ಹಾಡುತ್ತ , ಕುಣಿಯುತ್ತಿರುತ್ತಾರೆ……. ಭಗವಾನಂದ, ವಿಷಯಾನಂದ ಎರಡೂ ಭಗವಂತನ ಮೂಲದಿಂದ ಹುಟ್ಟಿವೆ’ ಎನ್ನುವ ವಾದ ಮುಂದೊಡ್ಡಿದಾಗ ಅದಕ್ಕೆ ಸರಿಯಾದ ಉತ್ತರ ತಿಳಿಯದೆ ಸಂತಾನಕ್ಕೆ ಮತ್ತು ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣವಾದ ಶಕ್ತಿ ಒಂದೇ ಏನು ? ಎಂದು ಚಕಿತರಾಗಿ ಪ್ರಶಿಸಿದರೇ ಹೊರತು ತಾರ್ಕಿಕ , ತಾತ್ವಿಕ ಉತ್ತರ ನೀಡಲು ಗುರುಗಳಿಂದ ಆಗಿರಲಿಲ್ಲ. (535)
ಕೈಬೆರಳೆಣಿಕೆಯ ಕಲ್ಕತ್ತದ ವಿದ್ಯಾವಂತರನ್ನು (ಈಶ್ವರಚಂದ್ರ-ಬಂಕಿಮಚಂದ್ರ-ಡಾ.ಮಹೇಂದ್ರಲಾಲ ಸರ್ಕಾರ) ಹೊರತಾಗಿ ರಾಮಕೃಷ್ಣರನ್ನು ಸರಿಯಾಗಿ ಕೆಣಕಿದವನೆಂದರೆ ಸಾಮಾನ್ಯ ಹಳ್ಳಿಗನಾಗಿದ್ದ , ದಕ್ಷಿಣೇಶ್ವರದ ಕಾಳಿ ಗುಡಿಯ ಸಂಕೀರ್ಣದಲ್ಲಿಯೇ ನೆಲೆಸಿದ್ದ ಪ್ರತಾಪಚಂದ್ರ ಹಾಜರಾ. ಈ ಹಾಜರಾನನ್ನು ರಾಮಕೃಷ್ಣ ಮಠ ಮೂಲದ ಸಾಹಿತ್ಯ ಕೀಳಾಗಿ ಚಿತ್ರಿಸಿದೆ. ದಕ್ಷಿಣೇಶ್ವರದಲ್ಲಿ ನೆಲೆಸಿದ್ದು ರಾಮಕೃಷ್ಣರನ್ನು ಸನಿಹದಿಂದ ನೋಡುತ್ತಿದ್ದ ಆತನಿಗೆ ರಾಮಕೃಷ್ಣರಲ್ಲಿ ದಕ್ಷಿಣೇಶ್ವರಕ್ಕೆ ಬರುತ್ತಿದ್ದ ಬರುತ್ತಿದ್ದ ನೂರಾರು ಸಾಧುಗಳಿಗಿಂತ ಸಾಧನೆಯಲ್ಲಾಗಲಿ ಅಥವಾ ಬೋಧನೆಯಲ್ಲಾಗಲಿ ಯಾವ ವಿಶೇಷವೂ ಕಂಡಿರಲಿಲ್ಲ. ರಾಮಕೃಷ್ಣರು ತಮ್ಮ ಭಕ್ತರಿಗೆ ಕಾಲೊತ್ತಲು , ಹುಕ್ಕ ತಯಾರಿಸಲು , ಗಾಳಿ ಬೀಸಲು ಹೇಳುತ್ತಿದ್ದರು. ಇಂತಹುದೇ ಸೇವೆಯನ್ನು ಪ್ರತಾಪಚಂದ್ರ ಹಾಜರಾನಿಂದಲೂ ನಿರೀಕ್ಷಿಸಿ ರಾಮಕೃಷ್ಣರು ನಿರಾಶರಾಗಿದ್ದರು. (536) .ದಕ್ಷಿಣೇಶ್ವರಕ್ಕೆ ಬರುತ್ತಿದ್ದ ಭಕ್ತರಿಗೆ ರಾಮಕೃಷ್ಣರಿಗಿಂತ ನಾನೇನು ಕಡಿಮೆಯಿಲ್ಲ ಎಂದು ಪ್ರತಾಪಚಂದ್ರ ಹಾಜರಾ ಯಾವ ಸಂಕೋಚವೂ ಇಲ್ಲದೆ ಹೇಳುತ್ತಿದ್ದನು. ಒಂದು ದಿನ ರಾಮಕೃಷ್ಣರು ಇಲ್ಲಿಗೆ ಬರುವವರಲ್ಲಿ ಯಾರಿಗೆ ಎಷ್ಟು ಮಟ್ಟಿಗೆ ಸತ್ತ್ವಗುಣ ಇದೆಯೆಂದು ಪ್ರತಾಪಚಂದ್ರ ಹಾಜರನನ್ನು ಪ್ರಶ್ನಿಸಿದಾಗ ಆತ ನರೇಂದ್ರನಿಗೆ ನೂರು , ನನಗೆ ನೂರಾಹತ್ತು ಮತ್ತು ನಿಮಗೆ ಎಪ್ಪತ್ತೈದು. ನಿಮ್ಮಲ್ಲಿ ಇನ್ನೂ ಸ್ವಲ್ಪ ಕೆಂಪು (ರಜೋಗುಣ) ಉಳಿದಿದೆ ಎನ್ನುವ ಉತ್ತರ ನೀಡಿ , ನಾನು ಬಹಳ ಶ್ರೇಷ್ಠನೆಂದು ಕೊಚ್ಚಿಕೊಳ್ಳುತ್ತಿದ್ದ ಗುರುಗಳಿಗೆ ಬರೆ ಹಾಕಿದ್ದನು. (537) ಹಾಜರಾನ ಇಂತಹ ನಿರ್ಭಿಢೆ ಮಾತುಗಳು ಗುರುಗಳನ್ನು ಆಗಾಗ್ಗೆ ಬೆಚ್ಚಿ ಬೀಳಿಸುತ್ತಿದ್ದವು. ಆದ್ದರಿಂದ ಹಾಜರಾನದು ಮಲಿನ ಭಕ್ತಿ. ಆತ ಕೇವಲ ತರ್ಕ ಮಾಡುತ್ತಾನೆ ಎನ್ನುವ ತೀರ್ಮಾನಕ್ಕೆ ಬಂದಿದ್ದರು. (538) .ನನ್ನಲ್ಲಿಗೆ ಬಂದರೆ ಸಾಕು , ಜಪ, ತಪ ಮಾಡಬೇಕಿಲ್ಲ – ಹೀಗೆ ಆಗಾಗ್ಗೆ ಬೋಧಿಸುತ್ತಿದ್ದ ರಾಮಕೃಷ್ಣರನ್ನು ಲೆಕ್ಕಿಸದೆ ಪ್ರತಾಪಚಂದ್ರ ಹಾಜರಾ ತನ್ನದೇ ರೀತಿಯಲ್ಲಿ ಸಾಧನೆ ಮಾಡುತ್ತಿದ್ದನು. ಅದನ್ನು ಸಹಿಸದ ಗುರುಗಳು ಆತ ಹಾಗೂ ಕಲ್ಕತ್ತೆಯ ಸೂಳೆಯರು ಮಾಡುವ ಜಪಗಳ ನಡುವೆ ವ್ಯತ್ಯಾಸವಿಲ್ಲ ಎಂದಿದ್ದರು. (539) ಇನ್ನೊಂದು ದಿನ ಮಹಿಮಚರಣನೊಂದಿಗೆ ಇದ್ದ ಹಾಜರಾನನ್ನು ಅಣಕಿಸುತ್ತ ಎಲ್ಲರ ತುಟಿಯ ಮೇಲೆ ಹಾಜರಾ ಹೆಸರು ನಲಿದಾಡುತ್ತದೆ. ನನ್ನ ಹೆಸರನ್ನು ಯಾರಾದರೂ ಎತ್ತುತ್ತಾರೆಯೇ ‘ ಮುಂತಾಗಿ ವ್ಯಂಗ್ಯಂದಿಂದ ಇರಿದರು. (540) ತೋತಾಪುರಿ ಭಾರಿ ಸಾಧು , ಅದ್ವೈತ ವೇದಾಂತಿ ; ಆತ ನಲವತ್ತು ವರ್ಷಗಳಲ್ಲಿ ಸಾಧಿಸಿದ್ದನ್ನು ನಾನು ಮೂರೇ ದಿನಗಳಲ್ಲಿ ಪಡೆದೆ –ಇದು ರಾಮಕೃಷ್ಣರು ಆಗಾಗ್ಗೆ ಹಾರಿಸಿಕೊಳ್ಳುತ್ತಿದ್ದ ಹೆಗ್ಗಳಿಕೆಯ ಬಲೂನು. ಇದನ್ನು ಸೂಜಿಯಿಂದ ಚುಚ್ಚುವಂತೆ ಪ್ರತಾಪಚಂದ್ರ ಹಾಜರಾ ತೋತಾಪುರಿ ಒಬ್ಬ ಸಾಮಾನ್ಯ ಮನುಷ್ಯ ಎಂದು ನಿರ್ಲಕ್ಷ್ಯದಿಂದ ಹೇಳುವುದು ಗುರುಗಳಿಗೆ ಸರಿ ಕಂಡಿರಲಿಲ್ಲ. (541)
ರಾಮಕೃಷ್ಣರ ಯುವ ಶಿಷ್ಯರೊಂದಿಗೆ ಹಾಜರಾ ಸಲುಗೆಯಿಂದಿದ್ದನು. ಆತನೊಂದಿಗೆ ಹುಕ್ಕ ಸೇವಿಸುವುದು ನರೇಂದ್ರನಾಥದತ್ತನಿಗೆ ಉಲ್ಲಾಸಕರ ಕಾಲಕ್ಷೇಪವಾಗಿದ್ದಿತು. ನರೇಂದ್ರನಾಥದತ್ತ ಗುರುಗಳು ಹೇಳುವುದನ್ನು ಒಪ್ಪದೆ ಹಲವಾರು ಬಾರಿ ಪ್ರತಾಪಚಂದ್ರ ಹಾಜರಾ ಪರವಾಗಿ ವಾದಿಸಿದ್ದನು. ರಾಮಕೃಷ್ಣರು ಎಳೆ ಯುವಕರತ್ತ ಹೊಂದಿದ್ದ ಸೆಳೆತವನ್ನು ಹಾಜರಾ ತೀವ್ರವಾಗಿ ಪ್ರಶ್ನಿಸಿ ಛೇಡಿಸಿದ್ದನು. (542) ನರೇಂದ್ರನಾಥ ದತ್ತ ಈಶ್ವರಕೋಟಿಗೆ ಸೇರಿದವನೆಂದು ಹೇಳಿದಾಗ ಇತರರು ಮರುಮಾತಿಲ್ಲದೆ ಒಪ್ಪಿದ್ದರೆ , ಹಾಜರಾ ಮಾತ್ರ ಅದಕ್ಕೆ ಬೆಲೆಕೊಟ್ಟಿರಲಿಲ್ಲ. ಒಂದು ಸಲ ರಾಖಾಲಚಂದ್ರ ಘೋಷ್ ಮತ್ತು ಲಾಟುವನ್ನು ಕರೆದು ಮನೆಯಲ್ಲಿರುವ ತಂದೆ ತಾಯಿಯರ ಸೇವೆ ಮಾಡದೆ ರಾಮಕೃಷ್ಣರ ಸೇವೆ ಮಾಡಿ ಫಲವಿಲ್ಲ ಎಂದು ತಿಳಿಸಿದ್ದನು. ಇದರಿಂದ ರಾಮಕೃಷ್ಣರಲ್ಲಿ ಅವರಿಗಿದ್ದ ಭಕ್ತಿ ಸಡಿಲವಾಗಿದ್ದಿತು. ಇದರಿಂದ ರಾಮಕೃಷ್ಣರಿಗೆ ಕಡು ಕೋಪ ಬಂದು ಹಾಜರಾ ಮೇಲೆ ಏರಿ ಹೋಗಿದ್ದರು. (543) ರಾಮಕೃಷ್ಣರಿಗೆ ಪ್ರತಾಪಚಂದ್ರ ಹಾಜರಾ ಇತರರ ಮನಸ್ಸಿನಲ್ಲಿಯ ತಮ್ಮ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವನೇನೋ ಎನ್ನುವ ಭಯವಿದ್ದು ಆತ ತಮಗೆ ಶರಣಾಗುವ ಕ್ಷಣವನ್ನು ಎದುರು ನೋಡುತ್ತಿದ್ದರು. ಒಂದು ದಿನ ಹಾಜರಾ ನನಗೆ ಎದೆ ನೋಯುತ್ತಿದೆ ಎಂದಾಗ ಬಹಿರಂಗವಾಗಿ ನೀನು ನನ್ನ ಭಕ್ತರನ್ನು ಬೈಯುವೆ. ಅವರ ಪಾದಧೂಳಿ ಧರಿಸಿದರೆ ಎದೆ ನೋವು ಹೋಗುತ್ತದೆ ಎನ್ನುವ ಸಲಹೆ ನೀಡಿದ್ದರು. (544) ಮೋಜಿನ ವಿಚಾರವೆಂದರೆ ರಾಮಕೃಷ್ಣರಿಗೆ ಕ್ಯಾನ್ಸರ್ ಬಂದರೆ ಅದು ದೈವಲೀಲೆ –ಹಾಜರನಿಗೆ ಎದೆ ನೋಯ್ದರೆ ಅದು ದೈವ ದಂಡನೆ !
ಬ್ರಹ್ಮಜ್ಞಾನಿ ಶ್ವಪಚನನ್ನು–ದೈವ ಬ್ರಾಹ್ಮಣನನ್ನು ಒಂದೇ ದೃಷ್ಟಿಯಲ್ಲಿ ನೋಡುತ್ತಾನೆಂದು ಬೋಧಿಸಿದ್ದ ಗುರುಗಳು ವ್ಯಭಿಚಾರ ಮುಂತಾದ ಪಂಚ ಮಹಾಪಾತಕಗಳನ್ನು ಮಾಡಿದ ದುಷ್ಟರಿಗೆ ಅನ್ನದಾನ ಮಾಡಬಾರದು. ಅವರು ಕುಳಿತ ಜಾಗದ ಸುತ್ತಲಿನ ಏಳು ಮೊಳ ಅಪವಿತ್ರವಾಗಿರುತ್ತದೆ’ ಎನ್ನುವ ರಹಸ್ಯ ತಿಳಿಸಿದ್ದರು. (545). ಶಾರದಾಮಣಿ ಒಂದು ದಿನ ಶೀಲಗೆಟ್ಟವಳೆಂದು ಗುರುತಾಗಿದ್ದ ಹೆಂಗಸಿನ ಮೂಲಕ ಊಟ ಕಳಿಸಿದ್ದನ್ನು ಆಕ್ಷೇಪಿಸುತ್ತ ಅವಳು ಮುಟ್ಟಿದ ತಟ್ಟೆಯಲ್ಲಿನ ಅನ್ನವನ್ನು ನಾನು ಹೇಗೆ ತಿನ್ನಲಿ ಎಂದು ಹೆಂಡತಿಯನ್ನು ಪ್ರಶ್ನಿಸಿದರು , ಮುಂದೆಂದೂ ಹಾಗೆ ಮಾಡುವುದಿಲ್ಲ ಎಂದು ಶಾರದಾಮಣಿಯನ್ನು ಆಣೆ , ಪ್ರಮಾಣಗಳ ಮೂಲಕ ಹತೋಟಿಗೆ ತಂದುಕೊಳ್ಳಲು ಯತ್ನಿಸಿದರು. (546) ಒಂದು ದಿನ ಕಾಮಾರಪುಕುರದಿಂದ ಒಬ್ಬ ವ್ಯಕ್ತಿ ಗುರುಗಳನ್ನು ಕಾಣಲು ಬಂದಿದ್ದನು. ಆತ ಹೋದ ಮೇಲೆ ಅವರು ಆತ ಕುಳಿತಿದ್ದ ಜಾಗದಿಂದ ಒಂದು ಬುಟ್ಟಿ ಮಣ್ಣು ಅಗೆದು ಹೊರಗೆ ಹಾಕು ಎಂದಾಗ ಯಾರೂ ಅದಕ್ಕೆ ಗಮನ ಕೊಡಲಿಲ್ಲ. ಆಗ ತಕ್ಷಣವೇ ತಾವೇ ಗುದ್ದಲಿ ತಂದು ತಾವೇ ಅಗೆದು ಮಣ್ಣನ್ನು ಹೊರಚೆಲ್ಲಿ ಬಂದರು. ನಂತರ ಅಂತಹವರು ಕುಳಿತ ನೆಲದ ಮಣ್ಣು ಕೂಡ ಅಪಶುದ್ಧವಾಗುತ್ತದೆ ಎಂದು ಎಚ್ಚರಿಸಿದರು. (547)
ನಂದಲಾಲ ಬಸು ಮನೆಯಲ್ಲಿ ಚಿತ್ರಪಟಗಳನ್ನು ನೋಡಿದ ನಂತರ ಲಘು ಉಪಾಹಾರ ಸಾಗಿತು. ಅದರ ನಂತರ ತಾಂಬೂಲದ ತಟ್ಟೆಯನ್ನು ಗುರುಗಳ ಮುಂದಿರಿಸಲಾಯಿತು. ಅವರಿಗಿಂತ ಮೊದಲು ಇತರರು ತಾಂಬೂಲ ತೆಗೆದುಕೊಂಡಿದ್ದರಿಂದ ಅದು ಮೈಲಿಗೆಯಾಗಿದೆಯೆಂದು ಪರಿಗಣಿಸಿ ರಾಮಕೃಷ್ಣರು ತೆಗೆದುಕೊಳ್ಳಲಿಲ್ಲ. ಅದನ್ನು ಗಮನಿಸಿದ ನಂದಲಾಲಬಸು ‘ನಿಮ್ಮೆಲ್ಲ ನಡವಳಿಕೆಗಳು ಸರಿಯೇ. ಆದರೆ ಇದೊಂದನ್ನು ಒಪ್ಪುವಂತಿಲ್ಲ ಎಂದು ನೇರವಾಗಿ ತಿವಿದನು. ‘ಇಷ್ಟದೇವತೆಗೆ ಅರ್ಪಿಸಿದ ನಂತರವೇ ನಾನು ತಿನ್ನುವುದು-ಗುರುಗಳ ಉತ್ತರವಾಗಿದ್ದಿತು. ‘ಈಗಲೂ ಅದನ್ನೇ ಮಾಡಿ’- ನಂದಲಾಲ ಬಸು ಮರು ಹೊಡೆತ ನೀಡಿದ್ದನು. ಬ್ರಹ್ಮಜ್ಞಾನದ ದೃಷ್ಟಿಯಿಂದ ನಾನು ಎಲ್ಲವನ್ನೂ ಸ್ವೀಕರಿಸಬಹುದು. ಆದರೆ ಭಕ್ತಿ ಮಾರ್ಗಿ ಸ್ವಲ್ಪ ತಾರತಮ್ಯ ಮಾಡಬೇಕಾಗುತ್ತದೆ’ ಎನ್ನುವ ಕುಂಟು ಸಮರ್ಥನೆ ಗುರುಗಳಿಂದ ಬಂದಿತು. ಅದನ್ನು ಒಪ್ಪದ ನಂದಲಾಲ ಬಸು ‘ಈಗಲೂ ನಿಮ್ಮ ಈ ನಡವಳಿಕೆ ಸರಿಯಿಲ್ಲ ಎನಿಸುತ್ತದೆ’ ಎಂದು ಆಕ್ಷೇಪಣೆ ಮಾಡಿದಾಗ ತಮ್ಮ ನಡವಳಿಕೆಗೆ ಶಾಸ್ತ್ರಾಧಾರವಿದೆ ಎನ್ನುತ್ತ ಮಾತನ್ನು ನಂದಲಾಲಬಸುವಿನ ಗೆಳೆಯರತ್ತ ತಿರುಗಿಸಿದರು. (548)
ಎಲ್ಲವನ್ನೂ , ಎಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದ ಗುರುಗಳಿಗೆ ಕೆಲವರು ತಂದುಕೊಟ್ಟ ಸಿಹಿ , ಊಟಗಳನ್ನು ಸೇವಿಸಲು ಆಗುತ್ತಿರಲಿಲ್ಲ ಎನ್ನುವುದೇ ಒಂದು ಅಚ್ಚರಿ. ಮಾರ್ವಾಡಿ ಭಕ್ತರು ಬಹಳ ಸುಳ್ಳು ಹೇಳಿ ದುಡ್ಡು ಸಂಪಾದನೆ ಮಾಡುತ್ತಾರೆ. ಅವರು ತರುವುದನ್ನು ನನ್ನಿಂದ ತಿನ್ನಲಾಗದು’ ಎಂದು ಆಗಾಗ ಹೇಳುತ್ತಿದ್ದರು. (549) .ಇನ್ನೊಂದು ದಿನ ರಾತ್ರಿ ಭಗವತಿ ಕಾಳಿಗೆ ಅರ್ಪಿಸಿದ್ದ ಒಂದೆರಡು ಪೂರಿ , ಸ್ವಲ್ಪ ರವೆ ಪಾಯಸ ತೆಗೆದುಕೊಳ್ಳತೊಡಗಿದರು. ಅದರೊಂದಿಗೆ ಸಂದೇಶವೂ ಇದ್ದಿತು. ಒಂದು ಚೂರು ಸಂದೇಶವನ್ನು ಮುಟ್ಟಿ ನೋಡಿ , ಲಾಟುವನ್ನು ಕರೆದು ‘ಇದನ್ನು ತಂದ ನೀಚನಾರು ? ‘ ಎಂದು ಗರ್ಜಿಸುತ್ತ ರವೆಪಾಯಸದ ಬಟ್ಟಲಿನಲ್ಲಿದ್ದ ಸಂದೇಶವನ್ನು ಹೊರಹಾಕಿದರು. ಆ ಸಂದೇಶ ತಂದವನ ವಿಷಯವೆಲ್ಲಾ ನನಗೆ ಗೊತ್ತು . ಆತನ ಶೀಲ ಸರಿಯಿಲ್ಲ’ ಎನ್ನುವ ತೀರ್ಮಾನ ನೀಡಿದರು. ನಂತರ ಕಿಶೋರಿ ತಂದ ಸಿಹಿತಿಂಡಿಯನ್ನು ಕೊಟ್ಟಾಗ ನಗುತ್ತಾ ತಿಂದರು. (550) ಇಪ್ಪತ್ತು ರೂಪಾಯಿ ಸಂಬಳಕ್ಕಿದ್ದ ಇನ್ನೊಬ್ಬಾತ ಸುಳ್ಳು ಲೆಕ್ಕ ಬರೆದು ಇನ್ನೂ ಇಪ್ಪತ್ತು ರೂಪಾಯಿಗಳನ್ನು ಸಂಪಾದಿಸುತ್ತಾನೆ ಎನ್ನುವ ಗುಮಾನಿ ಗುರುಗಳಿಗಿದ್ದಿತು. ಗುರುಗಳು ಆತನಿಗೆ ಹಾಗೆ ಮಾಡದಂತೆ ತಿಳಿಸಿ ತಿದ್ದಲಿಲ್ಲವಾದರೂ , ಆತ ತಂದ ಮಿಠಾಯಿಯನ್ನು ತಿನ್ನುವುದು ಅವರಿಂದ ಆಗುತ್ತಿರಲಿಲ್ಲ. (551)
ಭುವನಮೋಹಿನಿ ಎನ್ನುವ ಒಬ್ಬ ದಾದಿ ಮಾವಿನಹಣ್ಣು , ಸಂದೇಶ , ರಸಗುಲ್ಲ ತಂದಿದ್ದಳಲ್ಲದೆ ತಿನ್ನುತ್ತೀರಾ ಎಂದು ಗುರುಗಳನ್ನು ಕೇಳಿದ್ದಳು. ನೀನು ಕೊಟ್ಟದ್ದನ್ನು ನಾನು ತಿನ್ನುವುದಿಲ್ಲ ಎಂದು ನೇರವಾಗಿ ಹೇಳಲಾಗದೆ ‘ನನಗೆ ಹೊಟ್ಟೆ ಭಾರವಾಗಿದೆ. ನಿಜವಾಗಿಯೂ ನೋಡು , ಸ್ವಲ್ಪ ಸಿಹಿ ತಿಂಡಿ ತಿಂದೇ ಹೊಟ್ಟೆ ಉಬ್ಬರಿಸಿದೆ ‘ ಎಂದು ಸುಳ್ಳು ಹೇಳಿ ಆಕೆಯನ್ನು ಸಾಗಹಾಕಿದ್ದರು. ಇದಕ್ಕೆ ‘ಮ’ ಗುರುಗಳಿಗೆ ಎಲ್ಲರೂ-ಅದರಲ್ಲೂ ವೈದ್ಯರು , ಕವಿರಾಜರು , ದಾದಿಗಳು-ತರುವ ತಿಂಡಿ, ತೀರ್ಥಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ. ನರಳುತ್ತಿರುವ ರೋಗಿಗಳನ್ನು ನೋಡಿದ ನಂತರವೂ ಅವರಿಂದ ಹಣ ಸ್ವೀಕರಿಸುವುದರಿಂದ ಗುರುಗಳಿಗೆ ಅವರು ತಂದದ್ದನ್ನು ತಿನ್ನಲಾಗದು’ ಎನ್ನುವ ಷರಾ ಬರೆದಿದ್ದಾರೆ. (552) .ರಾಮಕೃಷ್ಣರ ಭಕ್ತ ಕೇದಾರ ಚಟ್ಟೋಪಾಧ್ಯಾಯ ಢಾಕಾದಲ್ಲಿ ಸರ್ಕಾರಿ ಕೆಲಸದಲ್ಲಿದ್ದನು. ಅಲ್ಲಿ ಆತನಿಗೂ ಭಕ್ತರಿದ್ದು , ಆತನನ್ನು ಕಾಣಲು ಬಂದಾಗ ಅವರು ತಿಂಡಿ ತೀರ್ಥಗಳನ್ನು ತರುತ್ತಿದ್ದರು. ಅವರು ತಂದ ಪದಾರ್ಥಗಳನ್ನು ತಿನ್ನಬಹುದೇ ಎನ್ನುವ ಜಿಜ್ಞಾಸೆ ಮೂಡಿ ಆತ ರಾಮಕೃಷ್ಣರ ಅಭಿಪ್ರಾಯ ಕೇಳಿದನು. ಆಗ ಅವರು ಭಗವಂತನ ಪ್ರೀತಿಗಾಗಿ ತಂದುಕೊಟ್ಟರೆ ತಿನ್ನು. ಅದರಲ್ಲಿ ದೊಷವಿಲ್ಲ. ಸ್ವಾರ್ಥ ದೃಷ್ಟಿಯಿಂದ ತಂದುಕೊಟ್ಟರೆ ಒಳ್ಳೆಯದಲ್ಲ’ ಎನ್ನುವ ಸಲಹೆ ನೀಡಿದರು. (553) . ಆದರೆ ಅದನ್ನು ತಾವು ಆಚರಣೆಗ ತಂದಿರಲಿಲ್ಲ.
ಅಧರಸೇನನ ಮನೆಯಲ್ಲಿ ದುರ್ಗಾ ಪೂಜೆ ನೋಡಲು ಬಂದಿದ್ದಾಗ ಗುರುಗಳು ‘ವಿಶೇಷ ಅವಸ್ಥೆಯಲ್ಲಿದ್ದಾಗ ಮಾತ್ರ ಸಿಕ್ಕದ್ದನ್ನು , ಯಾರೇ ಕೊಟ್ಟದ್ದನ್ನು ತಿನ್ನಬಹುದು. ಜ್ಞಾನಿಗೆ ಯಾವುದರಿಂದಲೂ ದೋಷವಿಲ್ಲ. ಗೀತೆಯ ದೃಷ್ಟಿಯಲ್ಲಿ ಆತ ತಾನು ತಿನ್ನುವುದಿಲ್ಲ. ಅದನ್ನು ಕುಂಡಲಿನಿಗೆ ಆಹುತಿ ಕೊಡುತ್ತಾನೆ ( ಭಗವದ್ಗೀತೆಯಲ್ಲಿ ಇದು ಎಲ್ಲಿಯೂ ಇಲ್ಲ) . ಈಗಿನ ಅವಸ್ಥೆಯಲ್ಲಿ ನಾನು ಬ್ರಾಹ್ಮಣ ಪೂಜಾರಿ ಅರ್ಪಿಸಿದ ನೈವೇದ್ಯವನ್ನಲ್ಲದೆ ಬೇರೆ ಏನನ್ನೂ ತಿನ್ನಲಾರೆ … ಕೇಶವಸೇನನ ಮನೆಯಲ್ಲಿ ನಡೆದ ನಾಟಕಕ್ಕೆ (ನವಬೃಂದಾವನ) ಕರೆದುಕೊಂಡು ಹೋಗಿದ್ದರು. ಅಲ್ಲಿ ಪೂರಿ ಪಲ್ಯ ತಂದುಕೊಟ್ಟರು. ತಂದವನು ಹಜಾಮನೋ , ಅಗಸನೋ….ನಾನು ಚೆನ್ನಾಗಿ ಹೊಡದೆ. ರಾಖಾಲ ಸ್ವಲ್ಪ ಕಮ್ಮಿ ತಿನ್ನಿ ಎಂದು ಹೇಳಿದ ‘ ಎನ್ನುವ ಕಥೆ ಹೇಳಿ ಎಲ್ಲರನ್ನೂ ನಗಿಸಿದರು. (554) . ವಾತ್ಸಲ್ಯ ಭಾವದಲ್ಲಿ ‘ಯಶೋಧೆ’ಯಾಗಿ ರಾಖಾಲಚಂದ್ರ ಘೋಷನಲ್ಲಿ ಗುರುಗಳು ‘ಗೋಪಾಲ’ನನ್ನು ಕಾಣುತ್ತಿದ್ದರು. ಒಂದು ದಿನ ಗುರುಗಳ ಉಪಾಹಾರಕ್ಕೆ ಇಟ್ಟ ಪದಾರ್ಥದಲ್ಲಿ ಅವರು ತಿನ್ನುವುದಕ್ಕೆ ಮೊದಲು ಸ್ವಲ್ಪ ತಿಂದು ‘ಗೋಪಾಲ’ (ರಾಖಾಲ) ರುಚಿ ನೋಡಿದ್ದನು. ಇದು ತಾಯಿ ಯಶೋಧೆಗೆ (ರಾಮಕೃಷ್ಣ) ತಿಳಿಯಿತು. ಆಗ ಆ ‘ತಾಯಿ’ ಏನು ಮಾಡಿದೆ ? ನಿನ್ನ ಮುಖವನ್ನೂ ನನಗೆ ನೋಡಲಾಗುತ್ತಿಲ್ಲ ಎಂದಳು. ಮತ್ತೊಂದು ಸಲ ಹಿರಿಯ ಗೋಪಾಲ (ಅದ್ವೈತಾನಂದ) ಗುರುಗಳ ಆಹಾರದ ಮೇಲೆ ಗಟ್ಟಿಯಾಗಿ ಉಸಿರು ಬಿಟ್ಟಿದ್ದನು. ಅದನ್ನು ನೋಡಿದ ಗುರುಗಳು ಅದನ್ನು ಹಿಂದಕ್ಕೆ ಕಳಿಸಿದ್ದರು. (555).ಕೊನೆಯ ವರ್ಷಗಳಲ್ಲಿ ತಾವು ಅವತಾರ ಎಂದು ಭಾವಿಸಿದ್ದ ರಾಮಕೃಷ್ಣರ ಆಹಾರ ಶುದ್ಧಿ ಇನ್ನೊಂದು ಹಂತ ಮೇಲೇರಿದ್ದಿತು. ಹುಟ್ಟುಹಬ್ಬದ ದಿನ ಉಟಕ್ಕೆ ಕುಳಿತ ತಕ್ಷಣ ಮನೆಯಲ್ಲಿ ಮಾಡಿದ ಎಲ್ಲ ಅಡುಗೆಗಳನ್ನು ಅವರ ಮುಂದೆ ಇರಿಸಬೇಕಾಗಿದ್ದಿತು. ಆ ಎಲ್ಲ ಆಹಾರವನ್ನು ಸ್ವಂತ ನಡುವ ಮೊದಲು ಅದನ್ನು ದೇವತೆಗಳಿಗೂ ಅರ್ಪಿಸುವಂತಿರಲಿಲ್ಲ. (556) ಅಧರಸೇನನ ಮನೆಯಲ್ಲಿ ಒಳ್ಳೆಯ ಊಟ ಮಾಡಿದ ನಂತರ ‘ಭಕ್ತ ಚಾಂಡಾಲನಾಗಿದ್ದರೂ ಆತನ ಕೈಯ ಅನ್ನ ತಿನ್ನಬಹುದು. ಏಳು ವರ್ಷ ಉನ್ಮಾದ ಅವಸ್ಥೆಯಲ್ಲಿ ಇದ್ದ ನಂತರ ಆ ದೇಶಕ್ಕೆ ಹೋದೆ (ಕಾಮಾರಪುಕುರ) ….ಆಗಿನದು ಎಂತಹ ಅವಸ್ಥೆ ; ಆಗ ಸೂಳೆ ಕೂಡ ತನ್ನ ಕೈಯಿಂದಲೇ ತಿನ್ನಿಸಿಬಿಟ್ಟಳು. ಆದರೆ ಈಗ ನನ್ನ ಕೈಯಲ್ಲಿ ಆಗುವುದಿಲ್ಲ ‘ ಎಂದು ಹಳೆಯ ನೆನಪುಗಳನ್ನು ಕೆದಕಿಕೊಂಡರು. (557) ತಮ್ಮನ್ನು ಸುತ್ತುವರೆದಿದ್ದ ಭಕ್ತರಿಗೆ ‘ಈಗಿನ ನನ್ನ ಅವಸ್ಥೆಯಲ್ಲಿ ಭಗವತಿ ಪ್ರಸಾದವಾಗಿದ್ದರೆ ಮಾತ್ರ ಸ್ವಲ್ಪ ಮೀಸು ಸಾರು ಊಟ ಮಾಡಬಲ್ಲೆ. ಮಾಂಸದ ಪ್ರಸಾದವನ್ನು (ಹಿಂದಿನಂತೆ) ತಿನ್ನಲಾಗುತ್ತಿಲ್ಲ. ಆದರೆ ಆಕೆಗೆ ಕೋಪ ಬರದಿರಲೆಂದು ಬೆರಳಿನ ತುದಿಯಿಂದ ಮುಟ್ಟಿ ಸ್ವಲ್ಪ ರುಚಿ ನೋಡುತ್ತೇನೆ ‘ ಎನ್ನುವ ಗುಟ್ಟು ಬಿಟ್ಟುಕೊಟ್ಟಿದ್ದರು. ಇನ್ನೊಮ್ಮೆ ‘ಎಲ್ಲರ ಕೈಯಲ್ಲಿ ತಿಂದ ತಕ್ಷಣ ಜ್ಞಾನ ದಕ್ಕುವುದೇ ? ನಾಯಿ ಸಿಕ್ಕದ್ದನ್ನೆಲ್ಲ ತಿನ್ನುತ್ತದೆ. ಹಾಗಾದರೆ ಅದು ಜ್ಞಾನಿಯಾಗುವುದೇ?’ ಎಂದು ಪ್ರಶ್ನಿಸಿ ತಮ್ಮ ಮಡಿ-ಮೈಲಿಗೆಯ ಭಾವಕ್ಕೆ ಸಮರ್ಥನೆ ಒದಗಿಸಿದ್ದರು. (558). ಇನ್ನೊಂದು ಸಲ ಗುರುಗಳು ‘ನವದ್ವೀಪದಲ್ಲಿ ಅಂಬಿಗರು ಮಾಡುತ್ತಿದ್ದೆ ಅಡುಗೆಯ ಸುವಾಸನೆಗೆ ಮಾರುಹೋಗಿದ್ದೆ. ನಾನು ಅವರ ಅಡುಗೆಯನ್ನು ಉಂಡು ಬಿಡಬಹುದೆಂದು ಮಥುರಮೋಹನ ಬಿಶ್ವಾಸ ಹೆದರಿದ್ದನು. ಆದರೆ ಈಗ ಅದು ನನ್ನಿಂದಾಗದು. ಈಗ ಅಡುಗೆಯನು ಬ್ರಾಹ್ಮಣನಾಗಿರಬೇಕು , ಆಚಾರವಂತನಾಗಿರಬೇಕು, ಭಗವಂತನಿಗೆ ಅರ್ಪಿತವಾಗಿರಬೇಕು. ಹಾಗಾಗಿದ್ದರೆ ಮಾತ್ರ ನನಗೆ ಉಣ್ಣಲಾಗುವುದು’ –ಹೀಗೆ ತಮ್ಮ ಊಟದ ಪರಿಶುದ್ಧತೆಯ ಭಾಷಣ ಬಿಗಿದಿದ್ದರು. (559) .ಅತ್ಯಂತ ಸೋಜಿಗದ ಸಂಗತಿಯೆಂದರೆ ಗುರುಗಳಿಗೆ ಸಾಧನೆಯ ಕಾಲದಲ್ಲಿದ್ದ ಸಮದರ್ಶಿತ್ವ , ಸಾಧಿಸಿ ಸಿದ್ಧ ಸ್ಥಿತಿಗೆ ಬಂದು ಬೋಧಿಸುವ ಸಂತನಾದ ನಂತರ ಇಲ್ಲವಾಗಿದ್ದಿತು !
ರಾಮಕೃಷ್ಣರಿಗೆ ಅಪಾತ್ರರು ತಂದ ಆಹಾರ ಮಾತ್ರವಲ್ಲ ಉಡುಗೆ-ತೊಡುಗೆಗಳನ್ನು ಬಳಸಲೂ ಆಗುತ್ತಿರಲಿಲ್ಲ , ಅಂತಹವರು ಹಾಡಿದ ಕೀರ್ತನೆಗಳು ಹಿಡಿಸುತ್ತಿರಲಿಲ್ಲ. ಸಿಕ್ಕಿದವರೆಲ್ಲ ತಂದುಕೊಟ್ಟ ಬಟ್ಟೆಗಳನ್ನು ನಾನು ಉಟ್ಟುಕೊಳ್ಳಲಾಗದು. ವಿಶ್ವನಾಥ ಉಪಾಧ್ಯಾಯನಿಗೆ (ಕ್ಯಾಪ್ಟನ್) ಬಿಳಿ ಬಟ್ಟೆಯ ಅಂಗಿಗಳನ್ನು ಹೊಲಿಸಿ ತರಲು ಹೇಳಬೇಕೆಂದಿದ್ದೆ. ಈಗ ನೀನೇ ಅವನ್ನು ಹೊಲಿಸಿ ತಾ ಎಂದು ‘ಮ’ಗೆ ಆದೇಶಿಸಿದ್ದರು. (560) .ದ್ವಾರಕಾನಾಥ ಮತ್ತು ಮಾರ್ವಾಡಿ ಭಕ್ತರು ತಂದಿದ್ದ ಶಾಲನ್ನು ತೆಗೆದುಕೊಂಡಿರಲಿಲ್ಲ . ಸಮದರ್ಶಿ ಗುರುಗಳಿಗೆ ಹೋಲಿಸಿದಾಗ ಸಾಮಾನ್ಯ ಮನುಷ್ಯನಾಗಿದ್ದ ಆದರೆ ಸ್ವಲ್ಪ ವೈಚಾರಿಕನಾದ ವಿಜಯಗೋಸ್ವಾಮಿ ನೀವು ಶಾಲನ್ನು ಏಕೆ ತೆಗೆದುಕೊಳ್ಳಲಿಲ್ಲ. ಯಾವನಾದರೂ ಒಬ್ಬನು ತಂದುಕೊಡಬೇಕಲ್ಲವೇ ? ಹಾಗೆ ತಂದು ಕೊಡುವಾತನೂ ಮನುಷ್ಯನೇ ಅಲ್ಲವೇ ? ಎಂದು ಪ್ರಶ್ನಿಸಿದ್ದನು. (561) ಇದಕ್ಕೆ ಉತ್ತರ ಗೊತ್ತಿಲ್ಲದೆ ಅಸಂಬದ್ಧ ಕತೆಗಳನ್ನು ಹೇಳಿದರು. ಗುರುಗಳು ಸಿಹೋರಿಗೆ ಹೋಗಿದ್ದಾಗ ತಮ್ಮನ್ನು ಕಾಣಲು ಬಂದಿದ್ದ ವೈಷ್ಣವನ ಶೀಲ ಸರಿ ಇಲ್ಲದ್ದರಿಂದ ಆತನ ಕಡೆಗೆ ಬೆನ್ನು ಹಾಕಿ ಕುಳಿತಿದ್ದರು. (562)
ದಕ್ಷಿಣೇಶ್ವರದ ಕಾಳಿಗುಡಿಯಲ್ಲಿ ಶ್ಯಾಮದಾಸ ಉಪಾಧ್ಯಾಯನ ಕೀರ್ತನೆ ನಡೆಯುತ್ತಿದ್ದಿತು. ಅಪರಾಹ್ನ ಒಂದು ಗಂಟೆಯ ವೇಳೆಗೆ ಊಟ ಮುಗಿಸಿ ಪಂಚವಟಿಯಲ್ಲಿ ಬಕುಳ ಮರದ ಕೆಳಗೆ ಗುರುಗಳು ಕುಳಿತಿದ್ದರು. ಅವರನ್ನು ಭಕ್ತರು ಸುತ್ತುವರೆದಿದ್ದರು. ಗೋಪಿ-ಕೃಷ್ಣರ ವಿರಹ ಕುರಿತಾಗಿ ಶ್ಯಾಮದಾಸ ಹಾಡುತ್ತಿದ್ದ ಕೀರ್ತನೆ ಗಾಳಿಯಲ್ಲಿ ತೇಲಿ ಬಂದು ಗುರುಗಳ ಕಿವಿ ತಾಗುತ್ತಿದ್ದಿತು. ಅದನ್ನು ಕೇಳಿ ಅವರು ಕೆಲಕಾಲ ಭಾವಾವಿಷ್ಟರಾದರೂ ಅದು ಆಳವಾಗಿರಲಿಲ್ಲ. ಆದ್ದರಿಂದ ಕೊನ್ನಗರದ ನವಾಯಿ ಚೈತನ್ಯನನ್ನು ಹಾಡುವಂತೆ ಕೇಳಿಕೊಂಡರು. ಕೆಲಕಾಲ ಭಾವಾವಿಷ್ಟರಾಗಿದ್ದರು. ತಮ್ಮನ್ನು ಕಾಣಲು ಬಂದಿದ್ದ ಅಧರಸೇನನಿಗೆ ಶ್ಯಾಮದಾಸನಿಂದ ಬೇಕಾದಷ್ಟು ಕೀರ್ತನೆ ನಡೆಯಿತು. ಅದೇಕೋ ನನಗೆ ಆಗ ಕುಣಿಯಲು ಮನಸ್ಸಾಗಲಿಲ್ಲ. ಆನಂತರ ಆತನ ಶೀಲದ ಬಗ್ಗೆ ತಿಳಿಯಿತು. ಆತನ ತಲೆಯಲ್ಲಿ ಕೂದಲಿರುವಷ್ಟೇ ಉಪಪತ್ನಿಯರು ಆತನಿಗಿದ್ದಾರಂತೆ’ ಎಂದು ತಿಳಿಸಿದರು. (563) ಶಶಧರ ತರ್ಕ ಚೂಡಮಣಿ ಇಳಿದುಕೊಂಡಿದ್ದ ಅತಿಥೇಯನ ಮನೆಗೆ ರಾಮಕೃಷ್ಣರನ್ನು ಅಹ್ವಾನಿಸುವ ಕುರಿತಾಗಿ ಚರ್ಚೆ ನಡೆಯುತ್ತಿರುವುದು ಕಿವಿಗೆ ಬಿದ್ದಾಗ ಗುರುಗಳು ‘ಆತನ ಸ್ವಭಾವ ಒಳ್ಳೆಯದಲ್ಲ , ಆತ ಲುಚ್ಛಾ’ ಎಂದು ಪ್ರಶಂಸಿದ್ದರು. ಅದರ ಹಿಂದೆಯೇ ಭಾರಿ ಜಾಣನಾಗಿದ್ದ ನರೇಂದ್ರನಾಥ ದತ್ತ ‘ಆದ್ದರಿಂದಲೆ ನೀವು ಆ ದಿನ ಆತ ಮುಟ್ಟಿದ ಲೋಟದಲ್ಲಿ ನೀರು ಕುಡಿಯಲಿಲ್ಲ’ ಎನ್ನುವ ಹೊಸ ಸಂಶೋಧನೆ ಮಾಡಿದ್ದನು. (564)
ಹೆಣ್ಣು-ಹೊನ್ನುಗಳತ್ತ ಹರಿಯುತ್ತಿರುವ ಮನಸ್ಸು ದೇವರತ್ತ ಎತ್ತ ಹರಿದೀತು ಎನ್ನುವುದನ್ನು ವಿವರಿಸುತ್ತ ‘ಸತ್ಪಾತ್ರರು ದೊರೆಯದೆ ಒಮ್ಮೊಮ್ಮೆ ನನ್ನ ಕೊಠಡಿಯಲ್ಲಿರುವ ಸಂದೇಶ ಹಾಳಾಗುತ್ತಿದ್ದರೂ ಅದನ್ನು ಪ್ರಾಪಂಚಿಕರಿಗೆ ಕೊಡಲು ಮನಸ್ಸಿರುತ್ತಿರಲಿಲ್ಲ. ಒಳ್ಳೆಯವರ ಕಾಲು ತಂಬಿಗೆ ನೀರನ್ನು (ಕಕ್ಕಸಿಗೆ ಹೋಗುವಾಗ ನೀರನ್ನು ಒಯ್ಯುವ ತಂಬಿಗೆ) ಸ್ವೀಕರಿಸಲು ನನಗೆ ಸಾದ್ಯವಾಗುತ್ತದೆ. ಆದರೆ ಈ ಪ್ರಾಪಂಚಿಕರ ತಂಬಿಗೆಯನ್ನೂ ಮುಟ್ಟಲಾರೆ’ ಎಂದಾಗ ಒಳಿತು-ಕೆಡುಕಿನ ದ್ವಂದ್ವವಿದ್ದಿತು. (565) ಕೀರ್ತನಕಾರನೊಬ್ಬ ತನ್ನ ತಂಡದೊಂದಿಗೆ ಗುರುಗಳ ಕೊಠಡಿಗೆ ಬರುವನಿದ್ದನು. ಆ ತಂಡ ಕುಳಿತುಕೊಳ್ಳಲು ವರಾಂಡದಲ್ಲಿ ಚಾಪೆ ಹಾಕಿದ್ದಿತು. ಆಗ ರಾಮಕೃಷ್ಣರು ‘ ಮಂದಲಿಗಳ ಮೇಲೆ ಸ್ವಲ್ಪ ಗಂಗಾಜಲ ಚಿಮುಕಿಸಿ ಅಲ್ಲಿ ವಿಷಯಾಸಕ್ತರು ಕುಳಿತಿದ್ದರು’ ಎಂದು ಶಿಷ್ಯನಿಗೆ ಆದೇಶಿಸಿದರು. (566) ಗಿರೀಶಚಂದ್ರ ಘೋಷ್ ಮನೆಗೆ ಭೇಟಿ ಕೊಟ್ಟಾಗ ಆತನ ಮನೆಯಲ್ಲಿ ತಮಗಾಗಿ ಮೀಸಲಿರಿಸಿದ್ದ ಆಸನದ ಸಮೀಪ ವಾರ್ತಾಪತ್ರಿಕೆ ಬಿದ್ದಿರುವುದನ್ನು ಕಂಡ ತಕ್ಷಣ ಅದನ್ನು ತೆಗೆದಿರಿಸಲು ಸನ್ನೆ ಮಾಡಿದರು. ಪ್ರಾಪಂಚಿಕ ವಿಷಯ , ಪರನಿಂದೆ , ಪರಚರ್ಚೆ ತುಂಬಿರುವ ವಾರ್ತಾಪತ್ರಿಕೆ ಗುರುಗಳ ದೃಷ್ಟಿಯಲ್ಲಿ ಅಪವಿತ್ರ ವಸ್ತುವಾಗಿದ್ದಿತು ಎಂದು ‘ಮ’ ಬರೆಯುತ್ತ ತಮ್ಮ ಗುರುಗಳು ಹೇಗೆ ದ್ವಂದ್ವಗಳನ್ನು ಮೀರಿದವರು ಎಂದು ಹೆಮ್ಮೆ ಪಟ್ಟಿದ್ದಾರೆ. (567) ಶಾರದಾನಂದರು ಗುರುಗಳು ವಿಷಯಾಸಕ್ತರೊಡನೆ ಮಾತನಾಡಿದ ನಂತರ ಅವರು ಸ್ವಲ್ಪ ಗಂಗಾಜಲವನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರು. ತಮ್ಮ ಶಿಷ್ಯರಿಗೂ ಹಾಗೆ ಮಾಡಲು ತಿಳಿಸುತ್ತಿದ್ದರು ಎನ್ನುವ ಅದ್ಭುತ ಶುದ್ಧಿಯ ಬಗ್ಗೆ ತಿಳಿಸಿದ್ದಾರೆ. (568) ಕಾಕುರಗಾಚಿಯ ಸುರೇಂದ್ರನ ಮನೆಗೆ ಹೋಗಿದ್ದಾಗ ಆತನ ಮನೆಯ ಪಡಸಾಲೆಯಲ್ಲಿ ಹಾಕಿದ್ದ ಒರಗು ದಿಂಬಿಗೆ ಆತು ಕುಳಿತುಕೊಳ್ಳುವ ಮೊದಲು ‘ಓಂ ತತ್ ಸತ್’ ಎಂದರು. ಅನೇಕ ಪ್ರಾಪಂಚಿಕರು ಅದನ್ನು ಉಪಯೋಗಿಸಿರುವುದರಿಂದ ಗುರುಗಳು ಆ ರೀತಿ ಶುದ್ಧಿ ಮಾಡಿರಬೇಕು ಎಂದು ‘ಮ’ ಊಹಿಸಿದ್ದಾರೆ. (569) . ಭಾವಾವಸ್ಥೆಯಲ್ಲಿದ್ದ ಗುರುಗಳನ್ನು ಚಿಕ್ಕನರೇಂದ್ರ ಮುಟ್ಟಿದಾಗ ಅವರು ಬಹಳ ನೋವನ್ನು ಅನುಭವಿಸಿದ್ದರು. ಅದಕ್ಕೆ ಕಾರಣ ತಿಳಿಯಲು ಯತ್ನಿಸಿದಾಗ ಚಿಕ್ಕನರೆಂದ್ರನ ಕಣತಲೆಯಲ್ಲಿ ಚಿಕ್ಕ ಬಾವು ಎದ್ದಿರುವುದು ಗೊತ್ತಾಯಿತು. ಶರೀರದಲ್ಲಿ ಗಾಯವಿದ್ದವರು ದೇವತಾಮೂರ್ತಿಯನ್ನು ಸ್ಪರ್ಶಿಸಬಾರದು. ಚಿಕ್ಕನರೇಂದ್ರ ಹಾಗಿದ್ದೂ ಗುರುಗಳನ್ನು ಮುಟ್ಟಿದ್ದನು. ಭಾವಾವಸ್ಥೆಯಲ್ಲಿ ಬಾಹ್ಯಜ್ಞಾನವಿರದಿದ್ದರೂ ಆಂತರ್ಯದಲ್ಲಿ ಕೆಲಸ ಮಾಡುತ್ತಿದ್ದ ದಿವ್ಯ ಶಕ್ತಿಯಿಂದಾಗಿ ಮುಟ್ಟಿದಾಗ ಗುರುಗಳು ನೋವನ್ನು ಅನುಭವಿಸಿದ್ದರು ಎನ್ನುವ ಹೊಸ ಅಂಗಕ್ರಿಯಾವಿಜ್ಞಾನವನ್ನು ಶಾರದಾನಂದರು ಸಂಶೋಧಿಸಿದ್ದಾರೆ ! (570)
ಹೆಂಗಸರಲ್ಲಿ ತಾಯಿಯನ್ನು ಹೊರತು ಬೇರೆ ಯಾವುದನ್ನು ಕಾಣುವುದಿಲ್ಲ , ಸೂಳೆಯೂ ನನಗೆ ತಾಯಿಯೇ ಎಂದು ಹೇಳುತ್ತಿದ್ದರಾದರೂ ಅವರ ಒಳಗೆ ಅವರದೇ ಆದ ಅಳುಕಿದ್ದಿತು. ತಾಂತ್ರಿಕ ಸಾಧಕ ಅಚಲಾನಂದ ನೀವೇಕೆ ತಾಂತ್ರಿಕ ವಿಧಿಗಳಲ್ಲಿರುವ ಪಂಚ’ಮ’ಗಳಲ್ಲಿ ಮೈಥುನವನ್ನು ಒಳಗೊಂಡಿರುವ ವೀರಾಚಾರದ ಸಾಧನೆಯನ್ನು ಮಾಡುವುದಿಲ್ಲ ಎಂದು ಪರಿಪರಿಯಾಗಿ ಪ್ರಶ್ನಿಸಿದ್ದನು. ನಿಜವಾದ ಸಮದರ್ಶಿ , ಬ್ರಹ್ಮಜ್ಞಾನಿಗೆ ಭಗವತಿಯ ಪೂಜೆ ಅಥವಾ ಸೂಳೆಯೊಂದಿಗೆ ಸಮಾಗಮದಲ್ಲಿ ವ್ಯತ್ಯಾಸ ಕಾಣಿಸಬಾರದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಮಕೃಷ್ಣರು ನನ್ನದು ಸಂತಾನ ಭಾವ , ಸಂತಾನ ಭಾವ ಎನ್ನುವ ಗಿಳಿ ಪಾಠ ಒಪ್ಪಿಸಿದರೇ ಹೊರತು ಲೈಂಗಿಕತೆಯ ಭಾವವಿಲ್ಲದೆಯೂ ವೀರಾಚಾರದಲ್ಲಿ ಭಾಗಿಯಾಗಬಲ್ಲೆ ಎಂದು ಹೇಳಲಿಲ್ಲ. (571) ಪಂಚವಟಿಯ ಬಕುಳ ಮರದ ಹತ್ತಿರ ನೀಲಿ ಬಣ್ಣದ ಸೀರೆ ಉಟ್ಟಿದ್ದ ಸೂಳೆಯಲ್ಲಿ ಪತಿವ್ರತೆ ಸೀತೆಯನ್ನು ಕಂಡಿದ್ದೆನು ಎಂದು ಗುರುಗಳು ತಿಳಿಸಿದ್ದರು. (572) ಸ್ಟಾರ್ ಥಿಯೇಟರ್’ಗೆ ನಾಟಕ ನೋಡಲು ಹೋಗುತ್ತಿದ್ದಾಗ ಭಕ್ತನೊಬ್ಬ ಈ ನಾಟಕದಲ್ಲಿ ಸೂಳೆಯರೂ ಚೈತನ್ಯದೇವ , ನಿತಾಯಿ ಮುಂತಾದ ಪಾತ್ರಗಳನ್ನು ಮಾಡಿದ್ದಾರೆ ಎಂದಾಗ ಅವರು ಸಾಕ್ಷಾತ್ ಆನಂದಮಯಿಯರೇ ಎಂದು ನಾನು ನೋಡುತ್ತೇನೆ’ ಎನ್ನುವ ಉತ್ತರದೊಂದಿಗೆ ತಮಗೆ ಭಾವ ಮುಖ್ಯವೇ ಹೊರತು ವ್ಯಕ್ತಿ ಅಲ್ಲ ಎನ್ನುವುದಕ್ಕೆ ಹಲವು ಸಂಗತಿಗಳನ್ನು ಎತ್ತಿ ತೋರಿಸಿದ್ದರು. (573) ಗಿರೀಶಚಂದ್ರ ಘೋಷ್ ಒಡೆತನದ ಬೀಡೆನ್ ಸ್ಟ್ರೀಟ್’ನಲ್ಲಿದ್ದ ಸ್ಟಾರ್ ಥಿಯೇಟರ್’ಗೆ ಪ್ರಹ್ಲಾದ ಚರಿತ್ರೆ ನೋಡಲು ಗುರುಗಳು ಹೋಗಿದ್ದರು. ನಾಟಕ ಮುಗಿದ ನಂತರ ಗಿರೀಶಚಂದ್ರ ಘೋಷ್ ಇಚ್ಚೆಯಂತೆ ನಟಿಯರು ಬಂದು ತಲೆಯನ್ನು ನೆಲಕ್ಕೆ ಮುಟ್ಟಿ ಗುರುಗಳಿಗೆ ವಂದಿಸಿದರು. ಅವರಲ್ಲಿ ಕೆಲವರು ಗುರುಗಳ ಪಾದವನ್ನು ಮುಟ್ಟಿದರು. ಆಗ ಗುರುಗಳು ‘ತಾಯಂದಿರೇ , ದಯವಿಟ್ಟು ಮುಟ್ಟಬೇಡಿ. ದಯವಿಟ್ಟು ಬೇಡಿ ‘ ಎಂದು ಮೆಲುವಾಗಿ ಕೇಳಿಕೊಂಡರು.(574) ನಾಟಕದಲ್ಲಿ ಭಾಗವಹಿಸುವ ಶೀಲ ಸರಿಯಿಲ್ಲದ ಹೆಂಗಸರು ತಮ್ಮ ಪಾದಗಳನ್ನು ಮುಟ್ಟಿದರೆ ಅವರು ಮಾಡಿದ ಪಾಪ ತಮಗೆ ಅಂಟಿಕೊಳ್ಳುತ್ತದೆ ಎನ್ನುವ ಗುರುಗಳ ಭಯವೇ ಹಾಗೆ ಹೇಳಿಸಿದ್ದಿತು. ಕಥಾಮೃತದಲ್ಲಿ ಇನ್ನೊಂದು ಮೂಲದಿಂದ ನಟಿಯರು ಮುಟ್ಟಿದ್ದರಿಂದ ಗುರುಗಳು ತಮ್ಮ ಪಾದವನ್ನು ನೀರಿನಿಂದ ತೊಳೆದುಕೊಂಡಿದ್ದರೆಂದು ತಿಳಿದುಬರುತ್ತದೆ. (575)
ಒಂದು ದಿನ ಹರಯದಲ್ಲಿ ಹೀನ ಜೀವನ ನಡೆಸಿದ್ದ ರಾಣಿರಾಸಮಣಿಯ ಮನೆಯ ಆಳು ಭಗವತಿದಾಸಿ ಎಂಬಾಕೆ ಗುರುಗಳನ್ನು ಕಾಣಲು ಬಂದಿದ್ದಳು. ಪತಿತಪಾವನರೂ , ದಯಾಸಾಗರರು ,ದ್ವಂದ್ವಗಳನ್ನು ಮೀರಿದವರೂ ಆದ ಗುರುಗಳು ಆಕೆಯನ್ನು ಪ್ರೀತಿಯಿಂದ ಮಾತನಾಡಿಸಿದರು. ಉಳಿದ ಜೀವನವನ್ನು ಪರಿಶುದ್ಧತೆಯಲ್ಲಿ ಸಾಗಿಸುವಂತೆ , ಗಳಿಸಿದ ಹಣವನ್ನು ಸಾಧು-ಸಂತರಿಗೆ ದಾನ ಧರ್ಮ ಮಾಡುವಂತೆ ಸೂಚಿಸಿದರು ಎಂದು ಹೆಮ್ಮೆಯಿಂದ ದಾಖಲಿಸಿರುವ ‘ಮ’ ನಂತರದ ಘಟನೆಯನ್ನೂ ನೀಡಿದ್ದಾರೆ. ಭಗವತಿ ಗುರುಗಳ ಅನುಕಂಪಿತ ಮಾತಿನಿಂದ ಉತ್ತೇಜಿತಳಾಗಿ ಎದ್ದು ಬಂದು ಅವರ ಪಾದ ಮುಟ್ಟಿ ಪ್ರಣಾಮ ಮಾಡಿದಳು. ಎಂತಹ ಪ್ರಮಾದವಾಯಿತು !! ಚೇಳು ಕುಟುಕಿಸಿಕೊಂಡವರಂತೆ ಗುರುಗಳು ಎದ್ದು ನಿಂತು ‘ಗೋವಿಂದ, ಗೋವಿಂದಾ’ ಎಂದು ಕೂಗಿಕೊಂಡರು . ಉಸಿರು ಕಟ್ಟಿದವರಂತೆ ಓಡಿ ಹೋಗಿ ತಮ್ಮ ಕೊಠಡಿಯ ಮೂಲೆಯ ಗುಡಾಣದಲ್ಲಿದ್ದ ಗಂಗಾಜಲವನ್ನು ತಂದು ದಾಸಿ ಮುಟ್ಟಿದ (ಪಾದದ) ಜಾಗವನ್ನು ತೊಳೆದುಕೊಳ್ಳತೊಡಗಿದರು. ಅದನ್ನು ಕಂಡು ಭಕ್ತರು ವಿಸ್ಮಯಗೊಂಡರೆ , ಭಗವತಿ ಸತ್ತಂತಾದಳು. ಗುರುಗಳಿಗೆ ಅದೆಷ್ಟು ಕರುಣೆ !! ತಕ್ಷಣವೇ ಆಕೆಯನ್ನು ಸಮಾಧಾನ ಪಡಿಸಿ ಇನ್ನು ಮೇಲೆ ದೂರದಿಂದಲೇ ಪ್ರಣಾಮ ಮಾಡಲು ಹೇಳಿದರು. ಆಕೆಯಿಂದ ಜಗನ್ಮಾತೆಯ ಹಾಡನ್ನು ಹೇಳಿಸಿದರು ಎಂದು ಬರೆದಿದ್ದಾರೆ. (576)
ಇದೇ ಪರಮಗುರು ರಾಮಕೃಷ್ಣರು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತ ಕಾಶಿಪುರ ತೋಟದ ಮನೆಯಲ್ಲಿರುವಾಗ ಮೇಲು-ಕೀಳುಗಳನ್ನು ನಿರಾಕರಿಸುವ ಬ್ರಹ್ಮಜ್ಞಾನಿಯ ಭಾವ ಮತ್ತು ಶಂಕರಾಚಾರ್ಯ ಹಾಗೂ ಚಾಂಡಾಲನ ನಡುವೆ ನಡೆದ ಸಂವಾದವನ್ನು ವರ್ಣಿಸಿದ್ದರು. (577) .ಆಗ ಗುರುಗಳ ಪಕ್ಕದಲ್ಲಿಯೇ ಕುಳಿತಿದ್ದ ಭಟ್ಟಂಗಿ ‘ಮ’ ಭಗವತಿ ದಾಸಿ ನಿಮ್ಮನ್ನು ಮುಟ್ಟಿದಾಗ ನೀವೇಕೆ ಹಾಗೆ ಮಾಡಿದಿರಿ ಎಂದು ಪ್ರಶ್ನಿಸಲಿಲ್ಲ. ಜಾನ ಬಜಾರಿನ ಸೂಳೆ ಹಾಗೂ ತಾಯಿ ಕಾಳಿಯರಲ್ಲಿ ನಾನು ಭೇದವನ್ನು ಕಾಣುವುದಿಲ್ಲ ಎನ್ನುವ ರಾಮಕೃಷ್ಣರ ಹೇಳಿಕೆಯಲ್ಲಿ ಬೊಗಳೆ ತುಂಬಿದ್ದಿತೇ ಹೊರತು ನಿಜವಾದ ಆಚರಣೆಯಲ್ಲ. ವಯಸ್ಸಾದ ಸೂಳೆಯೊಬ್ಬಳೊಂದಿಗೆ ಮಾತನಾಡದಂತೆ ಶಾರದಾಮಣಿಗೆ ತಾಕೀತು ಮಾಡಿ ಎಚ್ಚರಿಸಿದ್ದರು. (578) ಒಂದು ದಿನ ಚರ್ಚೆ ಹೆಂಗಸರತ್ತ ಹರಿಯಿತು. ಆಗ ಹೆಂಗಸರಲ್ಲಿ ವಿದ್ಯಾಶಕ್ತಿ , ಅವಿದ್ಯಾಶಕ್ತಿ ಎನ್ನುವ ಎರಡು ವಿಧದವರಿದ್ದಾರೆ. ಗಂಡುಬೀರಿ ಹೆಂಗಸರಿಗೆ ಬೇರೆ, ಬೇರೆ ಲಕ್ಷಣಗಳಿವೆ. ಇವು ಕೆಟ್ಟ ಲಕ್ಷಣಗಳು. ಮಾಲುಗಣ್ಣು , ಹೂತಗಣ್ಣು , ಬೆಕ್ಕಿನ ಕಣ್ಣು , ಹಸುವಿನ ಕರುವಿನಂತಹ ದವಡೆ, ಪಾರಿವಾಳದಂತಹ ಎದೆಗೂಡು ಎನ್ನುವ ನಿರರ್ಗಳ ವಿವರಣೆ ಎಲ್ಲ ಹೆಂಗಸರಲ್ಲಿ ತಾಯಿಯನ್ನು ಕಾಣುತ್ತಿದ್ದ ಗುರುಗಳಿಂದ ಬಂದಿತು. (579) . ತಮ್ಮಲ್ಲಿಗೆ ಬಂದಿದ್ದ ಒಬ್ಬಾತ ಕರಿ ಹೆಂಡತಿಯ ದಾಸ. ಆತ ಕಾಮ ಕಾಂಚನದಲ್ಲಿ ಕೊಳೆಯುತ್ತಿದ್ದಾನೆ’ ಗುರುಗಳ ಬಾಯಿಂದ ಬಂದಿದ್ದ ವರ್ಣಭೇದವಿದು. (580)
ವಿಶ್ವನಾಥ ಉಪಾಧ್ಯಾಯನನ್ನು (ಕ್ಯಾಪ್ಟನ್) ಕಾಣಲು ಕಲ್ಕತ್ತಕ್ಕೆ ಹೋಗಿದ್ದಾಗ ತಲೆಗೆ ಕ್ರಾಪು ಬಿಟ್ಟುಕೊಂಡು , ಸಿಳ್ಳೆ ಹಾಕುತ್ತಾ ಹೋಗುತ್ತಿದ್ದ ಹತ್ತೊಂಬತ್ತು-ಇಪ್ಪತ್ತು ವಯಸ್ಸಿನ ಒಬ್ಬ ಯುವಕನಲ್ಲಿ ತಮೋಗುಣಿಯನ್ನು ಕಂಡಿದ್ದರು. (581) ನಂದಲಾಲಬಸು ಮನೆಯಲ್ಲಿ ತಿಂಡಿ ತಿಂದ ನಂತರ ಕೈ ತೊಳೆದುಕೊಳ್ಳಲು ಹಿತ್ತಾಳೆ ತಂಬಿಗೆಯಲ್ಲಿ ನೀರನ್ನು ತರಲಾಯಿತು. ಹಿತ್ತಾಳೆ ಪಾತ್ರೆಯಲ್ಲಿ ಕೈ ತೊಳೆದುಕೊಳ್ಳುವವರು ರಾಜಸಿಕರು ಎಂದು ಭಾವಿಸಿದ್ದ ಗುರುಗಳು ಎದ್ದು ಹೊರ ನಡೆದು ಕೈ ತೊಳೆದುಕೊಂಡರು . (582).ಅಚ್ಚು ಮೆಚ್ಚಿನ ಬಾಲ್ಯದ ಆತ್ಮೀಯ ಗೆಳೆಯ ರಾಮಮಲ್ಲಿಕನನ್ನು ಮುಟ್ಟಲೂ ಆಗದಂತಹ ಸ್ಥಿತಿ ಗುರುಗಳಿಗೆ ಬಂದಿದ್ದಿತು. (583) ದಕ್ಷಿಣೇಶ್ವರಕ್ಕೆ ಬಂದಿದ್ದ ಒಬ್ಬಾತ ಕೆಲಕಾಲ ಗುರುಗಳ ಎದುರು ಕುಳಿತಿದ್ದು ನಂತರ ನನ್ನ ಮಗುವಿನ ಮುದ್ದಿನ ಮುಖ ನೋಡಲು ಹೋಗುತ್ತೇನೆ ಎಂದಾಗ ಅವರು ‘ ಎಲೋ ನೀಚ ಭಗವಂತನ ಮುದ್ದು ಮುಖಕ್ಕಿಂತ ನಿನ್ನ ಮಗನ ಮುಖ ನಿನಗೆ ಹೆಚ್ಚಿನದೇ , ತೊಲಗು ಇಲ್ಲಿಂದ’ ಎಂದು ಹಾರೈಸಿದ್ದರು. (584) ರಾಮಕೃಷ್ಣರನ್ನು ಆಹ್ವಾನಿಸಿದ್ದ ವೇಣಿಪಾಲ ಪತ್ರದಲ್ಲಿ ಕಣ್ತಪ್ಪಿನಿಂದ ತಪ್ಪು ದಿನಾಂಕ ಬರೆದಿದ್ದನು. ಇಂತಹ ಸಣ್ಣ ವಿಷಯಕ್ಕೂ ಚಿಂತಿತರಾಗಿದ್ದ ಗುರುಗಳು ‘ಆತ ಹೀಗೇಕೆ ಮಾಡಿದ ಎಂದು ‘ಮ’ ನನ್ನು ಪ್ರಶ್ನಿಸಿದಾಗ ಚಿಂತೆ ಮತ್ತು ಅಸಹನೆಗಳು ತುಂಬಿದ್ದವು. (585).ತಮ್ಮನ್ನು ಕಾಣಲು ಬಡೋಬಜಾರಿಗೆ ಬರದೆ ವೇಣಿಪಾಲನ ತೋಟಕ್ಕೆ ಬಂದು ಬೋಧಿಸಿದ್ದ ಬ್ರಾಹ್ಮ ಭಕ್ತನ ಮೇಲೆ ಗುರುಗಳಿಗೆ ಸಿಟ್ಟು ಬಂದಿದ್ದಿತು. (586).ಸಾಧನೆಯ ಕಾಲದಲ್ಲಿ ತಮ್ಮ ಆರೈಕೆ ಮಾಡಿ ಸಲಹಿದ್ದ ಸೋದರತ್ತೆಯ ಮೊಮ್ಮಗ ಹೃದಯರಾಮ ಬಹಳ ಬಾಲ ಬಿಚ್ಚಿದ್ದರಿಂದ ಭಗವತಿ ಆತನಿಂದ ನನ್ನನ್ನು ಬಿಡುಗಡೆಗೊಳಿಸಲು, ಹೊರಗೆ ಕಳಿಸಿದಳು ಎಂದು ನಂಬಿದ್ದರು. (587)
ರಾಮಕೃಷ್ಣರು ‘ಮ’ ಮತ್ತು ಮಣಿಲಾಲರಿಗೆ ಯಾರು ಸರಳರು , ಯಾರು ಕುಟಿಲರು ಎನ್ನುವುದನ್ನು , ಯಾವುದು ಅಪಶಕುನ ಎನ್ನುವುದನ್ನು ಪಟ್ಟಿ ಮಾಡುತ್ತ ‘ಮೂಳೆ ಬಿಟ್ಟುಕೊಂಡವರು , ಗುಳಿಗಣ್ಣಿನವರು , ಮೆಳ್ಳೆಗಣ್ಣಿನವರು ಹಾಗೂ ಇಂತಹ ಹಲವು ಲಕ್ಷಣ ಹೊಂದಿದವರಿಗೆ ಸ್ವಾಭಾವಿಕವಾಗಿ ವಿಶ್ವಾಸ ಹುಟ್ಟದು. ಎಲ್ಲ ದಿಕ್ಕುಗಳಿಂದ ಅಪಶಕುನಗಳೇ ಉಂಟಾಗುತ್ತಿದ್ದರೆ ಮನುಷ್ಯ ಏನು ತಾನೇ ಮಾಡಬಲ್ಲ’ ಎಂದಿದ್ದರು. (588) ಇನ್ನೊಂದು ದಿನ ಗುರುಗಳು ಮಿಠಾಯಿ ತೆಗೆದುಕೊಳ್ಳಲು ಬುಟ್ಟಿಗೆ ಕೈ ತಾಗಿದಾಗ ಹಲ್ಲಿಯೊಂದು ಲೊಚಗುಟ್ಟಿತು. ಅದರಿಂದ ಅಪಶಕುನವಾಯಿತೆಂದು ಗುರುಗಳು ಕೈ ಹಿಂದೆಗೆದಿದ್ದರು. ಅದನ್ನು ಕಂಡು ನಗುತ್ತಿದ್ದ ಭಕ್ತರಿಗೆ ಇಂತಹ ಸಂಗತಿಗಳಿಗೆ ಬೆಲೆ ಕೊಡಬೇಕು. ವ್ಯಕ್ತಿಯ ಶಾರೀರಿಕ ಲಕ್ಷಣಗಳೆನ್ನೆಲ್ಲ ಚೆನ್ನಾಗಿ ಗಮನಿಸಬೇಕು. ನರೇಂದ್ರನಾಥದತ್ತ ಒಬ್ಬ ಒಕ್ಕಣ್ಣಿನವನನ್ನು ಕರೆತಂದಿದ್ದ. ಆತನ ಆ ಕಣ್ಣು ಸಂಪೂರ್ಣ ಕುರುಡೇನೂ ಆಗಿರಲಿಲ್ಲ. ಆತನನ್ನು ನೋಡಿ ‘ಇದೇನಪ್ಪಾ , ಇಂದು ಯಾವ ಅನಿಷ್ಟ ಕಾದಿದೆಯೋ’ ಎಂದು ಕಳವಳಗೊಂಡಿದ್ದೆ ಎಂದು ಸಮರ್ದರ್ಶಿ ಗುರುಗಳು ಕಳವಳಗೊಂಡಿದ್ದರು. (589) ಅಣ್ಣ ರಾಮಕುಮಾರನ ಮಗ ಅಕ್ಷಯಕುಮಾರ ಮಾವನ ಮನೆಯಲ್ಲಿ ಕಾಯಿಲೆ ಬಿದ್ದಿರುವ ಸುದ್ದಿ ತಲುಪಿದಾಗ ಹೃದರರಾಮನಿಗೆ ‘ ಏಕೋ ಶಕುನ ಸರಿಯಿಲ್ಲ. ಅಕ್ಷಯನನ್ನು ಯಾವುದೋ ರಾಕ್ಷಸ ಗಣದ ಕನ್ಯೆಗೆ ಮದುವೆ ಮಾಡಿಕೊಟ್ಟಿರಬೇಕು’ ಎಂದು ತಿಳಿಸಿದ್ದರು. (590) ರಾಮಕೃಷ್ಣರಿಗೆ ಒಂದು ಸ್ಟೂಲು ಬೇಕಾಗಿದ್ದಿತು. ಅದನ್ನು ತರಲು ‘ಮ’ಗೆ ತಿಳಿಸುತ್ತ ನಾಳೆ ಗುರುವಾರ ಅಪರಾಹ್ನದ ಕೊನೆಯ ಭಾಗ ಅಮಂಗಳಕರ. ಆದ್ದರಿಂದ ೩ ಗಂಟೆಗೆ ಮೊದಲೇ ಇಲ್ಲಿಗೆ ಬಾ ಎಂದು ತಿಳಿಸಿದಾಗ ‘ಬ್ರಹ್ಮಜ್ಞಾನಿ’ಗೂ ಶುಭ-ಅಶುಭಗಳು ಬೆನ್ನೇರಿದ್ದವು. (591)
ಬ್ರಹ್ಮಜ್ಞಾನಿ ಸಮದರ್ಶಿ ರಾಮಕೃಷ್ಣ ಅಂಗಲಕ್ಷಣ ಜ್ಞಾನ ಬಹಳ ವಿಸ್ತಾರ ಮತ್ತು ಆಳವಾಗಿದ್ದು ಅದನ್ನು ತಮ್ಮನ್ನು ಸುತ್ತುವರೆದಿದ್ದ ಭಕ್ತರೆದುರು ತೆರೆದಿಟ್ಟಿದ್ದರು. ಶರೀರ ಲಕ್ಷಣದಿಂದ ಒಬ್ಬ ವ್ಯಕ್ತಿಗೆ ಭಗವಂತನ ಕೃಪೆ ದಕ್ಕುವುದೋ ಇಲ್ಲವೋ ಎಂದು ತಿಳಿಯುವುದು ಸಾದ್ಯ. ಕಪಟಿಯ ಕೈ ಭಾರವಾಗಿರುತ್ತದೆ. ಗಿಡ್ಡ ಮೂಗು ಒಳ್ಳೆಯದಲ್ಲ. ಶಂಭು ಮಲ್ಲಿಕನ ಮೂಗು ಗಿಡ್ಡ. ಆದ್ದರಿಂದ ಆತ ಎಷ್ಟು ಜಾಣನಾಗಿದ್ದರೂ ಅದಕ್ಕೆ ತಕ್ಕಂತೆ ನಿಷ್ಕಪಟಿಯಲ್ಲ. ಗಟ್ಟಿ ಎಲುಬುಗಳು , ದಪ್ಪ ಮೊಳಕೈ ಕೀಲುಗಳು ಒಳ್ಳೆಯವಲ್ಲ್ಲ….ತುಟಿ , ಮೇದರ ತುಟಿ ಇದ್ದಂತೆ ಇದ್ದರೆ ನೀಚ ಬುದ್ಧಿ ಉಂಟಾಗುತ್ತದೆ. ಒಬ್ಬ ಬ್ರಾಹ್ಮಣ ವಿಷ್ಣು ದೇವಾಲಯದ ಕಾರ್ಯಭಾರಿಯಾಗಿ ಇಲ್ಲಿಗೆ ಬಂದಿದ್ದ . ನಾನು ಆತನ ಕೈಯಿಂದ ಊಟ ಮಾಡುತ್ತಿರಲಿಲ್ಲ. ಒಂದು ದಿನ ಆಕಸ್ಮಾತ್ತಾಗಿ ಆತನಿಗೆ ‘ಎಲೋ ಮೇದ! ‘ ಎಂದೆ. ಆಗ ಅತ ಹೌದು ನಮ್ಮ ಮನೆ ಮೇದರ ಕೇರಿಯಲ್ಲಿದೆ-ನನಗೆ ಮೇದರ ಹಾಗೆ ಕುಕ್ಕೆ ಮಾಡಲು ಬರುತ್ತದೆ ಎಂದನು’ ಎನ್ನುವುದರಿಂದ ವಿವರಣೆ ಪ್ರಾರಂಭಿಸಿದರು. ನಂತರ ಅದನ್ನು ಮುಂದುವರೆಸುತ್ತ ‘ಮಾಲುಗಣ್ಣು , ಒಕ್ಕಣ್ಣು ಹೀನ ಲಕ್ಷಣಗಳು. ಒಕ್ಕಣ್ಣಿಗಿಂತ ಮಾಲುಗಣ್ಣು ಮೇಲು. ಮಾಲುಗಣ್ಣಿನವರು ಕಪಟಿಗಳು ಮತ್ತು ದುಷ್ಟರು. ಇಲ್ಲಿಗೆ ಬಂದಿದ್ದ ನ್ಯಾಯಮೂರ್ತಿ ಮಹೇಶಚಂದ್ರನ ವಿದ್ಯಾರ್ಥಿ ನಾಸ್ತಿಕ. ಆತನಿಗೆ ಬೆಕ್ಕಿನ ಕಣ್ಣಿದ್ದಿತು. ನಡಿಗೆಯ ಶೈಲಿಯಿಂದಲೇ ವ್ಯಕ್ತಿ ಒಳ್ಳೆಯವನೋ , ಕೆಟ್ಟವನೋ ಎಂದು ಗುರುತಿಸಬಹುದು. ಪುರುಷರ ಶಿಶ್ನದ ಮುಂದೊಗಲು ಮುಸಲ್ಮಾನರಂತೆ ಸನ್ನತಿಯಾಗಿದ್ದಂತೆ ಇದ್ದರೆ ಹೀನ ಲಕ್ಷಣ. (ನಗುತ್ತಿದ್ದ ‘ಮ’ ಗೆ ನೀನು ಅದನ್ನು ನೋಡಿಕೋ-ಅದು ಹೀನ ಲಕ್ಷಣ ಎಂದು ಹಾಸ್ಯ ಮಾಡಿದರು. (592) ಕಮಲ ನಯನರಲ್ಲಿ ಉತ್ತಮ ಆಲೋಚನೆಗಳು ,ಗೂಳಿ ಕಣ್ಣಿನವರಲ್ಲಿ ಕಾಮ ಹೆಚ್ಚಿರುತ್ತದೆ. ಯೋಗಿಯ ಕಣ್ಣುಗಳು ಕೆಂಪಾಗಿದ್ದು , ಮೇಲ್ಮುಖವಾಗಿರುತ್ತವೆ ; ಓರೆಗಣ್ಣಿನಿಂದ ನೋಡುವವರು ಬುದ್ಧಿವಂತರು, ಭಕ್ತನ ದೇಹ ಮೆದುವಾಗಿದ್ದು ದೇಹ ಬಡಕಲಾಗಿದ್ದರೂ ಗಂಟುಗಳು ಸಡಿಲವಾಗಿದ್ದು ಸುಲಭವಾಗಿ ಅಂಗಗಳು ತಿರುಗುತ್ತವೆ ; ಮುಂಗೈ ಯಾವ ಕಡೆ ವಾಲುತ್ತದೆ ಎನ್ನುವುದರ ಮೇಲೆ ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಎಂದು ಗುರುತಿಸಬಹುದು-ಹೀಗೆ ಗುರುಗಳ ಅಂಗ ಲಕ್ಷಣ ಪಾಂಡಿತ್ಯ ವಿಸ್ತಾರವಾಗಿದ್ದಿತು. (593)
ದಕ್ಷಿಣೇಶ್ವರದಲ್ಲಿ ಗುರುಗಳು ಕೊಠಡಿಯಲ್ಲಿರುವಾಗ ಒಬ್ಬ ಅಪರಿಚಿತ ಬಂದು ಪ್ರಣಾಮ ಮಾಡಿ ಸ್ವಲ್ಪ ಹೊತ್ತು ಕುಳಿತುಕೊಂಡಿದ್ದನು. ಆತ ಎದ್ದು ಹೋಗುತ್ತಲೇ ‘ಆತನ ಕಣ್ಣಿನ ಲಕ್ಷಣ ಒಳ್ಳೆಯದಲ್ಲ-ಅದು ಬೆಕ್ಕಿನ ಹಾಗೆ ಕಂದು , ಹಳದಿ ಬಣ್ಣದ ಕಣ್ಣು’ –ಗುರುಗಳು ತಮ್ಮ ಪರೀಕ್ಷಾ ಫಲಿತಾಂಶ ನೀಡಿದರು. ಹುಕ್ಕ ತಂದು ಕೊಟ್ಟ ಹರಿಯ ಕೈಯನ್ನು ಪರೀಕ್ಷಿಸಿ ‘ಓಹೋ , ಎಲ್ಲಾ ಇದೆ ! ಇದು ಬಹಳ ಒಳ್ಳೆಯ ಲಕ್ಷಣ. ನಿನ್ನ ಕೈ ಸ್ವಲ್ಪ ಸಡಿಲಬಿಡು ‘ಎಂದರು. ಕೈ ನೋಡಿಯೇ ವ್ಯಕ್ತಿ ಕಪಟಿ ಹೌದೋ ಅಲ್ಲವೋ ನಿರ್ಧರಿಸುವ ತಮ್ಮ ಸಾಮರ್ಥ್ಯದ ಬಗ್ಗೆ ಹೇಳಿಕೊಂಡರು. (594) ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಕೇಶವಚಂದ್ರಸೇನನನ್ನು ಕಾಣಲು ಆತನ ಮನೆಗೆ ಹೋಗಿದ್ದಾಗ ಆತನ ಕೈಯನ್ನು ಹಿಡಿದು , ಆಟವಾಡುತ್ತ ತೂಗಿ ನೋಡಿ ‘ನಿನ್ನ ಕೈ ಹಗುರವಾಗಿದೆ. ಕಪಟಿಯ ಕೈ ಬಹಳ ಭಾರವಾಗಿರುತ್ತದೆ ‘ -ಇದು ಗುರುಗಳ ಸಂಶೋಧನೆ. (595) ನರೇಂದ್ರನಾಥ ದತ್ತ ಪ್ರತಾಪಚಂದ್ರ ಹಾಜರಾನ ಪರವಾಗಿ ವಾದಿಸಿದಾಗ ಆತನ ಬಗ್ಗೆ ಅಸಹನೆ ಹೊಂದಿದ್ದ ಗುರುಗಳು ಆತನನ್ನು ಅಂಗಲಕ್ಷಣಗಳ ಮೇಲೆ ಹೀಗಳೆದಿದ್ದರು. ಗಿಡ್ಡು ಗಿಡ್ಡಾಗಿರುವ , ಗಂಟು , ಗಂಟಾಗಿರುವ ದೇಹ ಲಕ್ಷಣ ಒಳ್ಳೆಯದಲ್ಲ. ಇಂಥವರ ಆತ್ಮ ಜಾಗೃತಿ ಸಾವಕಾಶವಾಗಿ ಆಗುತ್ತದೆ’ – ಹೀಗೆ ನಿಂದಿಸಿ ಹಾಜರಾನನ್ನು ಆಷಾಢಭೂತಿ ಎಂದು ಕರೆದರು. (596)
ನಾನು ಅವತಾರ ಪುರುಷ ಎಂದು ಬಲವಾಗಿ ನಂಬಿದ್ದ ರಾಮಕೃಷ್ಣರು ಇತರರಂತೆ ತಾವು ಸಾಂಪ್ರದಾಯಿಕವಾದ ಸಂಧ್ಯಾ ವಂದನೆ ,ಪೂಜೆ, ಪುರಸ್ಕಾರಗಳನ್ನು ಮಾಡುವುದು ಬೇಕಿಲ್ಲವೆಂದು ನಂಬಿದ್ದರು. ಅರಂಭದಲ್ಲಿ ಮಾತ್ರ ಸಂಧ್ಯಾವಂದನೆ ಮುಂತಾದ ಆಚರನೆಗಳು ಬೇಕು. ಸಾಕ್ಷಾತ್ಕಾರ ಆದ ಮೇಲೆ ಅವು ಬೇಕಿಲ್ಲ. ಭಕ್ತರಿಗೆ ಭಾಗವತಿ ತನು ಉಂಟಾಗಿ , ಪ್ರೇಮ ಶರೀರ ಬಂದು ಅವರಿಗೂ ಚಿನ್ಮಯ ದರ್ಶನ ಉಂಟಾಗುತ್ತದೆ ‘ – ಗುರುಗಳು ಕಂಡುಕೊಂಡಿದ್ದ ರಹಸ್ಯವಿದು. (597) ಆದರೆ ಕಾರ್ತೀಕ ಅಮವಾಸ್ಯೆಯಂದು ದಕ್ಷಿಣೇಶ್ವರದಲ್ಲಿ ಕಾಳಿಪೂಜೆ ಏರ್ಪಾಡಾಗಿದ್ದಿತು. ರಾಮಲಾಲ ಆ ರಾತ್ರಿ ಸಿದ್ಧನಾಗಿ ಗುರುಗಳಲ್ಲಿಗೆ ಬಂದು ಪೂಜೆ ಪ್ರಾರಂಭಿಸಲು ಅಪ್ಪಣೆ ಕೇಳಿದನು. ಆಗ ಅವರು ‘ ಓಂ ಕಾಳಿ , ಓಂ ಕಾಳಿ. ಜೋಪಾನವಾಗಿ ಪೂಜೆ ಮಾಡು, ಜೊತೆಗೆ ಹೋತನ ಬಲಿ ಬೇರೆ ಕೊಡಬೇಕಾಗಿದೆ’ ಎಂದು ಎಚ್ಚರಿಸಿದರು. ಗುರುಗಳು ಪೂಜೆಯನ್ನು ನೋಡಲು ಹೋಗಿದ್ದರು. ನೀರು ಚಿಮುಕಿಸಿ ಹೋತವನ್ನು ಬಲಿ ಕೊಡಲು ವಧಾಸ್ಥಾನಕ್ಕೆ ಎಳೆದೊಯ್ಯಲಾಯಿತು. ಗುರುಗಳಿಗೆ ಅದರ ವಧೆಯನ್ನು ನೋಡಲಾಗುತ್ತಿಲ್ಲ ಎಂದು ‘ಮ’ ಬರೆದಿದ್ದಾರೆ. (598)
ಮನೋಕಾಮನೆಗಳನ್ನು ಗೆದ್ದ , ಸಮದರ್ಶಿ ರಾಮಕೃಷ್ಣರ ಮನಸ್ಸಿಗೆ ಯಾರನ್ನಾದರೂ ನೋಡಬೇಕೆನಿಸಿದರೆ, ವಸ್ತುಗಳು ಬೇಕೆನಿಸಿದರೆ ಅವರನ್ನು ನೋಡುವವರೆಗೆ , ಪಡೆಯುವವರೆಗೆ ಬಿಡುತ್ತಿರಲಿಲ್ಲ. ಕ್ಯಾನ್ಸರ್ ಪೀಡಿತರಾಗಿ ಕಾಶಿಪುರ ತೋಟದ ಮನೆಯಲ್ಲಿರುವಾಗ ಸಂತೆಯಿಂದ ತಾವು ಹೇಳಿದಂತಹ ಚೂರಿ ತರದಿದ್ದ ಭಕ್ತನನ್ನು ತಕ್ಷಣವೇ ತರುವಂತೆ ಮತ್ತೊಮ್ಮೆ ಕಳಿಸಿದ್ದರು. ತಮಗೆ ಹಾಲು ಕೊಡುತ್ತಿದ್ದ ಪಾತ್ರೆಗಳಲ್ಲಿ ಮೀನಿನ ವಾಸನೆ ಬರುತ್ತಿದೆ ಎಂದು ಭಾವಿಸಿಕೊಂಡಿದ್ದು , ಒಂದು ಪಾವು ಹಾಲು ಹಿಡಿಯುವ ಬಿಳಿ ಕಲ್ಲಿನ ಬಟ್ಟಲು ತರಲು ‘ಮ’ ಗೆ ಆದೇಶವಾಗಿದ್ದಿತು. ಆ ಬಟ್ಟಲು ಯಾವ ಆಕಾರದಲ್ಲಿರಬೇಕೆಂದು ಗಾಳಿಯಲ್ಲಿ ಬೆರಳಿನಿಂದ ಬರೆದು ತೋರಿಸಿದ್ದರು. ಮರುದಿನ ಬಂದಿದ್ದ ‘ಮ’ ಗೆ ತಾವು ಹೇಳಿದಂತಹ ಬಟ್ಟಲನ್ನು ತಂದಿರುವೆಯಾ ಎಂದು ಕೇಳಿದರು. ಆತ ಕಲ್ಕತ್ತಕ್ಕೆ ಹೋಗಿ ತಂದು ಕೊಟ್ಟ ನಂತರ ಹಲವಾರು ಬಾರಿ ತಿರುಗಿಸಿ ಪರೀಕ್ಷಿಸಿದರು. (599)
ರಾಮಕೃಷ್ಣರು ಕೆಲವು ವಸ್ತುಗಳು ತಮಗೆ ಒಗ್ಗುವುದಿಲ್ಲ ಎಂದು ಕಾಲಕಾಲಕ್ಕೆ ಕಲ್ಪಿಸಿಕೊಳ್ಳುತ್ತಿದ್ದು ಅದು ಅಧ್ಯಾತ್ಮದ ಉನ್ನತ ಹಂತ ಎನ್ನುವಂತೆ ತೋರಿಸಿಕೊಳ್ಳುತ್ತಿದ್ದರು. ಕಥಾಮೃತದಲ್ಲಿ ಇದನ್ನು ‘ಮ’ ಹಗೆ ತಿಳಿಸುತ್ತಾರೆ : ‘ಕೆಲಕಾಲದಿಂದ ಪರಮಹಂಸರಿಗೆ ಅದ್ಭುತ ಅವಸ್ಥೆ ಬಂದಿದೆ. ಯಾವ ಲೋಹವನ್ನೂ ಮುಟ್ಟಲಾಗುತ್ತಿಲ್ಲ. ಬಾಳೆ ಎಲೆಯಲ್ಲಿ ಊಟ ಮಾಡುತ್ತಿದ್ದಾರೆ. ಮಣ್ಣಿನ ಲೊಟದಲ್ಲಿ ನೀರನ್ನು ಕುಡಿಯುತ್ತಿದ್ದಾರೆ, ಮಣ್ಣಿನ ಗಡಿಗೆಗಳನ್ನು ತರಿಸುತ್ತಿದ್ದಾರೆ. ಕಾಲುತಂಬಿಗೆಯನ್ನೂ ಮುಟ್ಟಲಾಗುತ್ತಿಲ್ಲ. ಲೋಹದ ಪದಾರ್ಥಗಳನ್ನು ಮುಟ್ಟಿದರೆ ಮುಳ್ಳಿನ ಮೀನು ಕೈ ಚುಚ್ಚಿದಾಗ ಜುಮ್ ಎನ್ನುವಂತೆ ಆಗುತ್ತಿದೆ (600) ಇಂತಹ ಗುರುಗಳು ‘ಎಲ್ಲವದೂ ಮನಸ್ಸನ್ನು ಅವಲಂಬಿಸಿದೆ - ತಂದೆ , ತಾಯಿ ಪರಮ ನೀಚರಾಗಿದ್ದರೂ ಅವರನ್ನು ಕಡೆಗಣಿಸಬಾರದು , ಗುರುಪತ್ನಿ ವ್ಯಭಿಚಾರಿಯಾಗಿದ್ದರೂ ಆಕೆಯನ್ನೇ ಇಷ್ಟದೇವತೆಯೆಂದು ಶಿಷ್ಯರು ಭಾವಿಸಿಕೊಳ್ಳಬೇಕು ,ಗುರು ಕುಡುಕನಾಗಿದ್ದರು ಆತನನ್ನು ನಿತ್ಯಾನಂದನೆಂದು ಭಾವಿಸಬೇಕು ‘ – ಹೀಗೆ ನಿರರ್ಗಳವಾಗಿ ಬೋಧಿಸಿದ್ದರು. (601) ಬ್ರಹ್ಮಜ್ಞಾನಿಗಳಿಗೆ ದ್ವಂದ್ವ ಭಾವಗಳಿರುವುದಿಲ್ಲ-ಸಮದರ್ಶಿತ್ವವೇ ಅದರ ಕುರುಹು ಎನ್ನುವ ಶಾಸ್ತ್ರಗಳ ಹೇಳಿಕೆಯನ್ನು ಒಪ್ಪಿದರೆ ರಾಮಕೃಷ್ಣರು ಬ್ರಹ್ಮಜ್ಞಾನಿಯಲ್ಲ , ಸಮದರ್ಶಿಯಂತೂ ಮೊದಲೇ ಅಲ್ಲ ಎನ್ನಬಹುದು.