ವಿರೋಧಿಗಳು
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಅ ಆಯ್ದ ಭಾಗ)
ಪಾದ್ರಿಗಳು : ಸ್ವಾಮಿಗಳ ಬಹುತೇಕ ಜೀವನ ಚರಿತ್ರೆಗಳಲ್ಲಿ ರೋಮಾಂಚಕಾರಿ , ಸಾಹಸದ ಘಟ್ಟವೆಂದರೆ ಅವರು ಅಮೆರಿಕದಲ್ಲಿ ತಮ್ಮ ವಿರೋಧಿಗಳೆದುರು ಏಕಾಂಗಿಯಾಗಿ ಹೋರಾಡಿ ಜಯಗಳಿಸಿ ಹಿಂದೂ ಧರ್ಮದ ಪತಾಕೆಯನ್ನು ಎತ್ತಿ ಹಿಡಿದಿದ್ದು. ಹೆಚ್ಚಿನ ಚರಿತ್ರೆಕಾರರು ದೇಶ (ಭಾರತ) ಮತ್ತು ಧರ್ಮ (ಹಿಂದೂ) ಅಭಿಮಾನದಿಂದ ಈ ಸಂಗತಿಗಳನ್ನು ಪರಿಗಣಿಸಿದ್ದಾರೆಯೇ ಹೊರತು ಜರುಗಿದ ವಾಸ್ತವಿಕ ಸಂಗತಿಗಳ ಮೇಲಲ್ಲ. ಸ್ವಾಮಿಗಳು ಕ್ರೈಸ್ತ ಪಾದ್ರಿಗಳು , ಬ್ರಾಹ್ಮ ಸಮಾಜದ ಅದರಲ್ಲೂ ವಿಶೇಷವಾಗಿ ಪ್ರತಾಪಚಂದ್ರ ಮಜುಂದಾರ ಮತ್ತು ಥಿಯೊಸೊಫಿಸ್ಟರು ತಮ್ಮ ಕೆಲಸಗಳಿಗೆ ಅಡಚಣೆ ಉಂಟು ಮಾಡಿದರೆಂದು ಹೇಳಿದ್ದರು. ಎದುರಾಳಿಗಳ ಹೇಳಿಕೆ , ಅವರ ಚಲನವಲನ , ಚಟುವಟಿಕೆಗಳನ್ನು ಪರಿಗಣಿಸದೆ ಕೇವಲ ಸ್ವಾಮಿಗಳ ಹೇಳಿಕೆಗಳ ಆಧಾರಧ ಮೇಲೆ ಯಾವುದೇ ತೀರ್ಮಾನಕ್ಕೆ ಬರುವುದು ತಪ್ಪು. ಒಂದು ವಿವಾದದಲ್ಲಿ ಎರಡೂ ಬಣಗಳ ದೃಷ್ಟಿಕೋನ, ಅಂಶಗಳನ್ನು ಪರಿಗಣಿಸಿದಾಗ ಮಾತ್ರ ನಿಜದ ಹತ್ತಿರ ಹೋಗುವುದು ಸಾದ್ಯ.
ವಿಶ್ವ ಧರ್ಮ ಸಂಸತ್ತು ಮಹಾ ಸಮ್ಮೇಳನವಾಗಿದ್ದು ಸಮಕಾಲೀನ ಹಲವು ಧರ್ಮ , ಪಂಥ , ಮತ, ನಂಬಿಕೆಗಳ ಪ್ರತಿನಿಧಿ, ಮುಂದಾಳು , ವಿದ್ವಾಂಸ, ಚಿಂತಕರ ಸಂಗಮದಿಂದ ಒಂದು ಕಿರುಜಗತ್ತು ಮೈದಳೆದಿದ್ದಿತು. ಈ ಸಂದರ್ಭದಲ್ಲಿ ಸ್ವಾಮಿಗಳು ಹಲವು ಜನರನ್ನು ಭೇಟಿಯಾಗಿ , ಪರಿಚಯ ಮಾಡಿಕೊಂಡರು. ಅದರಲ್ಲಿ ಕೆಲವರು ಅವರ ಗೆಳೆಯರೂ ಆದರು. ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಭವಿಷ್ಯದ ದಿನಗಳಲ್ಲಿ ಸ್ವಾಮಿಗಳಿಗೆ ಇವರ ಬೆಂಬಲ ವಿವಿಧ ರೂಪದಲ್ಲಿ ದಕ್ಕಿತು. ಫ್ರೀ ರಿಲಿಜಿಯಸ್ ಅಸೋಸಿಯೇಷನ್ ಹಾಗೂ ಅದರ ಸದಸ್ಯರು ಸ್ವಾಮಿಗಳಿಗೆ ಆಪ್ತರಾದರು. ಅವರಲ್ಲಿ ಥಾಮಸ್ ವೆಂಟ್’ವರ್ಥ್ ಹಿಗ್ಗಿನ್’ಸನ್ , ಲೆವಿಸ್ ಜಿ, ಜೇನ್ಸ್ , ಫ್ರಾಂಕ್ಲಿನ್ ಸ್ಯಾನ್’ಬೋರ್ನ್ . ಫೆಲಿಕ್ಸ್ ಆಡ್ಲರ್ ಮುಂತಾದವರಿದ್ದರು. ಥಾಮಸ್ ವೆಂಟ್’ವರ್ಥ್ ಹಿಗ್ಗಿನ್’ಸನ್ ವಿಶ್ವ ಧರ್ಮ ಸಂಸತ್ತಿನಲ್ಲಿ ಗೌರವಾನ್ವಿತ ಭಾಷಣಕಾರನಾಗಿದ್ದನು. ಫ್ರಾಂಕ್ಲಿನ್ ಸ್ಯಾನ್’ಬೋರ್ನ್ ವಿಶ್ವ ಧರ್ಮ ಸಂಸತ್ತು ಪ್ರಾರಂಭವಾಗುವುದಕ್ಕೆ ಮೊದಲೆ ಸ್ವಾಮಿಗಳ ಭಾಷಣಗಳಿಗೆ ವ್ಯವಸ್ಥೆ ಮಾಡಿದ್ದರೆ , ಬ್ರೂಕ್ಲಿನ್’ನಲ್ಲಿ ಸ್ವಾಮಿಗಳಿಗೆ ಸಂಕಷ್ಟ ಎದುರಾದಾಗ ಲೆವಿಸ್ ಜಿ. ಜೇನ್ಸ್ ಸ್ವಾಮಿಗಳಿಗೆ ನೈತಿಕ , ತಾತ್ತ್ವಿಕ ಬೆಂಬಲ ನೀಡಿದನು. ಗ್ರೀನೇಕರ್ ಸಮ್ಮೆಳನಕ್ಕೆ ಬಂದಿದ್ದ ಈ ಗುಂಪಿನ ಸಹವಾಸದಿಂದ ಸ್ವಾಮಿಗಳು ಪ್ಲೈಮೌಥ್’ ನಗರದ ಹಿಗ್ಗಿನ್’ಸನ್ ಲಿಬರಲ್ ಸ್ಕೂಲ್ ಆಫ್ ಕ್ರಿಶ್ಚಿಯಾನಿಟಿಯಲ್ಲಿ ಹಲವಾರು ಭಾಷಣಗಳನ್ನು ನೀಡಲು ಸಾದ್ಯವಾಯಿತು. ಸ್ವಾಮಿಗಳು ಲಂಡನ್’ನಲ್ಲಿರುವಾಗ ಫೆಲಿಕ್ಸ್ ಆಡ್ಲರ್ ಅನುಯಾಯಿ ಸ್ಟ್ಯಾಂಟನ್ ಕೊಯಿಟ್ ಗೆಳೆತನ ದಕ್ಕಿತು. ವಿಶ್ವ ಧರ್ಮ ಸಮ್ಮಳನದಲ್ಲಿ ಗಮನ ಸೆಳೆದ ಭಾಷಣಕಾರಳಾಗಿದ್ದ ಜೂಲಿಯಾ ವಾರ್ಡ್ ಹೊವೆ ಅಧ್ಯಕ್ಷಳಾಗಿದ್ದ ನ್ಯೂ ಇಂಗ್ಲೆಂಡ್ ವುಮೆನ್ಸ್ ಕ್ಲಬ್’ನಲ್ಲಿಯೂ ಸ್ವಾಮಿಗಳ ಭಾಷಣಕ್ಕೆ ಅವಕಾಶಗಳನ್ನು ಮಾಡಿಕೊಡಲಾಗಿದ್ದಿತು.
ಅಮೆರಿಕದಲ್ಲಿ ಪಾದ್ರಿಗಳಾಗಲಿ ಅಥವಾ ಹಿಂದೂಗಳೇ ಆಗಲಿ (ಬ್ರಾಹ್ಮ ಸಮಾಜ- ಪ್ರತಾಪಚಂದ್ರ ಮಜುಂದಾರ್) ಸ್ವಾಮಿಗಳಿಗೆ ಅಡ್ದಹಾಕಲು ಪ್ರಯತ್ನಿಸಿದರೆಂದು ಯಾವ ಸಮಕಾಲೀನ ದಾಖಲೆಗಳು ,ಘಟನೆಗಳು ತಿಳಿಸುವುದಿಲ್ಲ. ೧೧/೯/೧೮೯೩ ರಲ್ಲಿ ಧರ್ಮ ಸಂಸತ್ತಿನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುವವರೆಗೆ ಸ್ವಾಮಿಗಳು ಅಜ್ಞಾತರಾಗಿದ್ದರು. ಕ್ರೈಸ್ತ ಮಿಷನರಿಗಳ ಮತಾಂತರಗೊಳಿಸುವ ಮಾರ್ಗವನ್ನು ಚೀನಾ ಮತ್ತು ಜಪಾನ್ ಪ್ರತಿನಿಧಿಗಳು ಖಂಡಿಸಿದ್ದರು. ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳು ೨೧/೯/೧೮೯೩ ರಂದು ‘ಸ್ಟೋನ್ಸ್ ವೆನ್ ದೆ ನೀಡ್ ಬ್ರೆಡ್’ ಎನ್ನುವ ಭಾಷಣ ಮಾಡಿ , ಬಡತನದಿಂದ ನರಳುತ್ತಿರುವ ಭಾರತೀಯರಿಗೆ ಅನ್ನ ಬೇಕಾಗಿದೆಯೇ ಹೊರತು ಕ್ರೈಸ್ತ ಪಾದ್ರಿಗಳ ಧರ್ಮ ಬೇಕಾಗಿಲ್ಲ ಎಂದು ತಿಳಿಸಿದರು. ಮರುದಿನ -೨೨/೯/೧೮೯೩-ವಿಶ್ವ ಧರ್ಮ ವೇದಿಕೆಯಿಂದ ದಿಟ್ಟ ಮತ್ತು ನೇರವಾಗಿ ಧರ್ಮಪಾಲ ಮತ್ತು ನರಸಿಂಹಾಚಾರ್ಯ ಅತ್ಯಂತ ಕಟು ಮಾತುಗಳಲ್ಲಿ , ನಿರ್ದಿಷ್ಟವಾಗಿ ಕ್ರೈಸ್ತ ಮಿಷನರಿಗಳನ್ನು , ಅವರು ಮತಾಂತರಗೊಳಿಸಲು ಅನುಸರಿಸುತ್ತಿರುವ ಮಾರ್ಗಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಸ್ವಾಮಿಗಳು ಹಿಂದಿನ ದಿನದ ಭಾಷಣಕ್ಕಿಂತ ಹೆಚ್ಚು ಹರಿತವಾಗಿದ್ದವು. ಇದನ್ನು ಮರುದಿನ ಷಿಕಾಗೊ ಡೈಲಿ ಓಷನ್ ವರದಿ ಮಾಡಿತು. ವಿಶ್ವ ಧರ್ಮ ಸಂಸತ್ತಿನಲ್ಲಿ ನೆರೆದಿದ್ದ ಸಾವಿರಾರು ಜನರೆದುರು ಮಾಡಿದ ಟೀಕೆಯನ್ನು ಕ್ರೈಸ್ತರು , ಕ್ರೈಸ್ತರು ಪಾದ್ರಿಗಳು ಬಹುತೇಕ ಆತ್ಮ ವಿಮರ್ಶೆಯ ದೃಷ್ಟಿಯಲ್ಲಿ ತೆಗೆದುಕೊಂಡಿದ್ದರು.
ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಸ್ವಾಮಿಗಳ ಸಂಚಾರಿ ಭಾಷಣ ಸಾಹಸಗಳು ಪ್ರಾರಂಭವಾದವು. ಈ ಅವಧಿಯಲ್ಲಿ ಸಹಜವಾಗಿ ಹಿಂದೂ ಮತ್ತು ಕ್ರೈಸ್ತ ಧರ್ಮಗಳ ಧಾರ್ಮಿಕ ಮತ್ತು ಸಾಮಾಜಿಕ ಹೋಲಿಕೆಗಳು ಅನಿವಾರ್ಯವಾಗತೊಡಗಿದವು. ತಾವು ಮತಾಂತರ ಮಾಡಲು ಬಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತ , ಹಲವು ಭಾಷಣಗಳಲ್ಲಿ ಯೇಸುವನ್ನು ಹೊಗಳುತ್ತಲೇ ಭಾರತದಲ್ಲಿ ಕ್ರೈಸ್ತ ಮಿಷನರಿಗಳು ಮಾಡುತ್ತಿರುವ ಕೆಲಸವನ್ನು ತೀವ್ರವಾಗಿ ಟೀಕಿಸತೊಡಗಿದರು. ಇದಕ್ಕೆ ಪ್ರತಿಕ್ರಿಯೆಯಾಗಿ , ರಕ್ಷಣಾತ್ಮಕವಾಗಿ ಕ್ರೈಸ್ತ ಪಾದ್ರಿಗಳು ಅಲ್ಪ ಚಲಾವಣೆಯಲ್ಲಿದ್ದ ತಮ್ಮ ಧಾರ್ಮಿಕ ಪತ್ರಿಕೆಗಳಲ್ಲಿ ಸ್ವಾಮಿಗಳನ್ನು ಪ್ರಶ್ನಿಸತೊಡಗಿದರು. ಸ್ವಾಮಿಗಳ ಮೇಲೆ ಅವರು ಮಾಡುತ್ತಿದ್ದ ಟೀಕೆ ವ್ಯಾಪಕ ಪ್ರಸಾರ ಇರುವ ಪತ್ರಿಕೆಗಳಲ್ಲಿ ಬರುತ್ತಿರಲಿಲ್ಲ ಎನ್ನುವುದನ್ನು ಸ್ವಾಮಿಗಳು ೨೪/೧/೧೮೯೪ ರಂದು ಮದ್ರಾಸಿನ ಶಿಷ್ಯರಿಗೆ ಬರೆದ ಪತ್ರವೇ ಸಾಕ್ಷಿಯಾಗಿದೆ.
ಅಮೆರಿಕದಲ್ಲಿ ಸ್ವಾಮಿಗಳು ಹಿಂದೂ ಧರ್ಮವನ್ನು ಹಾಡಿ ಹೊಗಳಿ ,ಆದರ ಆದರ್ಶಗಳನ್ನು ಕೊಂಡಾಡಿ ಭಾಷಣ ಮಾಡುತ್ತ ಊರಿನಿಂದ ಊರಿಗೆ ತಿರುಗುತ್ತಿದ್ದರು. ಅವರದೇ ದೇಶದಲ್ಲಿ , ಅವರದೇ ಚರ್ಚ್’ಗಳಲ್ಲಿ ಪಾದ್ರಿಗಳನ್ನು ಹಿಗ್ಗಾಮುಗ್ಗ ಹೀಗಳೆಯುತ್ತಿದ್ದರು. ಅದಕ್ಕೆ ಅವರು ತಿರುಗಿ ಬಿದ್ದು ಹಿಂದೂ ಧರ್ಮದ ದಯನೀಯವಾದ ಸಾಮಾಜಿಕ ವ್ಯವಸ್ಥೆ ಮತ್ತು ದುಸ್ಥಿತಿಯನ್ನು ಎತ್ತಿ ತೋರಿಸುತ್ತಿದ್ದರು. ಭಾರತದ ಹೆಣ್ಣಿನ ಆದರ್ಶ ತಾಯಿಯೇ ಹೊರತು ಅಮೆರಿಕ ಸಮಾಜ ಆರಾಧಿಸುತ್ತಿರುವ ಹರಯ ತುಂಬಿದ ಅಕರ್ಷಣೆಯ ಹೆಂಡತಿಯಲ್ಲ ಎಂದು ಗರ್ಜಿಸಿದ್ದರು. ಹಿಂದೂಗಳ ನೈತಿಕ ಮೌಲ್ಯ ಜಗತ್ತಿನಲ್ಲಿಯೇ ಅತಿ ಶ್ರೇಷ್ಟ ಎಂದು ಜಂಬ ಕೊಚ್ಚುತ್ತಿದ್ದರು. ಸರ್ವಶ್ರೇಷ್ಟವಾದ ಹಿಂದೂ ಧರ್ಮ ಪ್ರತಿನಿಧಿಸುವ ಸಮಾಜ ಏಕೆ ಹಾಗಿದೆ ಎನ್ನುವ ಪ್ರಶ್ನೆಗೆ ಅಧ್ಯಾತ್ಮವೇ ಬೇರೆ ಸಾಮಾಜಿಕ ನಡಾವಳಿಗಳೇ ಬೇರೆ ಎಂದು ಕೈತಿರುವಿದ್ದರು. ನ್ಯೂಟನ್ , ಡಾರ್ವಿನ್ ಕ್ರೈಸ್ತ ಚಿಂತನೆಯ ಫಲಗಳಲ್ಲ ಎಂದಿದ್ದರು. ಆದರೆ ತಾವು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಹಿಂದೂ ಸಮಾಜ ರೋಗಗ್ರಸ್ತವಾಗಿದೆ ,ಕ್ರೈಸ್ತ ಪಾದ್ರಿಗಳ ಧಾರ್ಮಿಕ ಉದ್ದೇಶ ಸರಿಯಿಲ್ಲದಿದ್ದರೂ ಅವರು ಮಾಡುತ್ತಿರುವ ಸಾಮಾಜಿಕ ಟೀಕೆಗಳು ನಿಜ ಎಂದು ಅವರ ಒಳ ಮನಸ್ಸಿಗೆ ಗೊತ್ತಾಗಿದ್ದವು. ಇತರ ಭಾರತೀಯ ಚಿಂತಕರು ಮತ್ತು ಪ್ರತಿನಿಧಿಗಳು ಹಿಂದೂ ಸಮಾಜದ ಕೊರತೆಗಳನ್ನು ಒಪ್ಪಿಕೊಂಡು ಆಧುನಿಕ ಭಾರತ ಅವುಗಳನ್ನು ತೊಡೆದುಹಾಕಲು ಯತ್ನಿಸುತ್ತಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಿದ್ದರು. ಸ್ವಾಮಿಗಳಿಗೆ ಈ ಪ್ರಾಮಾಣಿಕತೆ ಇರಲಿಲ್ಲ. ಸ್ವಾಮಿಗಳು ಭಾವನಾವಾದಿ ವೇದಾಂತವನ್ನು ಅದರಲ್ಲೂ ಅದ್ವೈತವನ್ನು ಹೆಗ್ಗಳಿಸಿ ಅಮೆರಿಕದಲ್ಲಿ ಪ್ರಚಾರ ಮಾಡುತ್ತಿದ್ದರು. ತಾವು ಹಾಡಿ , ಹೊಗಳುತ್ತಿರುವ ವೈದಿಕ ಮೂಲಗಳಲ್ಲಿಯೇ, ಋಷಿ , ಮುನಿಗಳೆಂದು ಕರೆಸಿಕೊಂಡವರ ಧರ್ಮ ಸೂತ್ರಗಳಲ್ಲಿಯೇ ಸಾಮಾಜಿಕ ಅಸಮಾನತೆಯ ಬೀಜವಿದೆ ಎನ್ನುವುದನ್ನು ಒಪ್ಪಿಕೊಳ್ಳುವ ತೆರೆದ ಮನಸ್ಸಿರಲಿಲ್ಲ. ಸ್ವಾಮಿಗಳ ಮನಸ್ಸು ಆದರ್ಶಗಳನ್ನು ಹೇಳುವ ಆದರೆ ಯಾವುದನ್ನೂ ಅನುಷ್ಠಾನಕ್ಕೆ ತರದ ವೈದಿಕ ಅದ್ವೈತದ ಬಂಧಿಯಾಗಿದ್ದಿತು. ಭಾರತದ ಎಲ್ಲ ಕಾಲದ ಸಮಾಜ ಸುಧಾರಕರು ಇತರರ ಮೇಲೆ ಏರಿ ಹೋಗುವದಕ್ಕಿಂತಲೂ ಆತ್ಮವಿಮರ್ಶೆ ಮತ್ತು ಬದಲಾವಣೆಗಳೇ ಸಮಾಜ ಸುಧಾರಣೆಗೆ ದಾರಿಯೆಂದು ಭಾವಿಸಿದ್ದರು. ಇದು ಸ್ವಾಮಿಗಳ ದಾರಿಯಾಗಿರಲಿಲ್ಲ.
ಸ್ವಾಮಿಗಳು ಕ್ರೈಸ್ತ ಪಾದ್ರಿಗಳ ಕೆಲಸಗಳನ್ನು ತೆಗಳುವಂತೆ ಕ್ರೈಸ್ತ ಪಾದ್ರಿಗಳು ಭಾರತದಲ್ಲಿ ಪ್ರಚಲಿತವಿದ್ದ ಹಿಂದೂ ಧರ್ಮ , ಅದರ ಜಾತೀಯತೆ , ಅಸಮಾನತೆ , ಅಜ್ಞಾನಗಳನ್ನು ತೆಗಳುವ ಹಕ್ಕು ಸಹಜ ನ್ಯಾಯವೇ ಆಗಿದ್ದಿತು. ಕ್ರೈಸ್ತ ಪಾದ್ರಿಗಳು ತೆಗಳುತ್ತಿದ್ದ ಪ್ರಚಲಿತ ಹಿಂದೂ ಸಮಾಜದಲ್ಲಿದ್ದ ನ್ಯೂನ್ಯತೆಗಳಿಗೂ ಸ್ವಾಮಿಯವರು ಹಿಂದೂ ಸಮಾಜದ ಪತನಕ್ಕೆ ಕಾರಣವೆಂದು ಗುರುತಿಸುತ್ತಿದ್ದ , ಭಾವುಕರಾಗುತ್ತಿದ್ದ ಕಾರಣಗಳಿಗೂ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಕ್ರೈಸ್ತರು ಭಾರತೀಯರಿಗೆ ಲೌಕಿಕ ಸಂಗತಿಗಳಲ್ಲಿ ನೆರವಾಗಬೇಕು , ಧಾರ್ಮಿಕ ಸಂಗತಿಗಳಲ್ಲಿ ಮೂಗು ತೂರಿಸಬಾರದು ಎನ್ನುವುದು ಸ್ವಾಮಿಗಳ ನಿಲುವಾಗಿದ್ದಿತು. ಈ ನಿಲುವು ಸ್ವಾಮಿಗಳ ಅಭಿಮಾನಿ ಹಿಂದೂಗಳಿಗೆ ಸರಿಯೆನಿದರೂ ಯಾವ ಬಣಕ್ಕೂ ಸೇರದ ಮೂರನೆಯವರಿಗೆ ಸರಿಯೆಂದು ಭಾಸವಾಗುತ್ತಿರಲಿಲ್ಲ.
೨೦/೧೧/೧೮೯೩ ರಿಂದ ೧೪/೧೨/೧೮೯೩ ರ ಅವಧಿಯಲ್ಲಿ ಸ್ವಾಮಿಗಳು ಮ್ಯಾಡಿಸನ್ , ಮಿನ್ನೆಪೊಲಿಸ್ , ಡೆ ಮೊಯಿನ್ಸ್ ಮುಂತಾದ ಮಧ್ಯಪಶ್ಚಿಮ ಪ್ರದೇಶದ ಪಟ್ಟಣಗಳಲ್ಲಿ ಉಪನ್ಯಾಸಗಳನ್ನು ಕೊಡುತ್ತಿದ್ದರು. ಈ ಅವಧಿಯಲ್ಲಿ ಸ್ವಾಮಿಗಳು ೧೧ ಸಾರ್ವಜನಿಕ , ೫ ಪಡಸಾಲೆ , ೧೩ ಚರ್ಚ್ , ೧೧ ಕೂಟ ಒಟ್ಟು ೪೦ ಕೂಟ ಭಾಷಣಗಳನ್ನು ಮಾಡಿದ್ದರು. . ಅಮೆರಿಕದಲ್ಲಿ ಸ್ವಾಮಿಗಳ ಭಾಷಣಗಳನ್ನು ಏರ್ಪಡಿಸುತ್ತಿದ್ದವರೆಲ್ಲರೂ ಕ್ರೈಸ್ತ ಧರ್ಮೀಯರು; ಅವರ ಅದೆಷ್ಟೋ ಭಾಷಣಗಳು ಚರ್ಚ್’ನಲ್ಲಿ ಸಾಗುತ್ತಿದ್ದವು. ಅಮೆರಿಕದ ಜನ ಕ್ರೈಸ್ತ ಪಾದ್ರಿಗಳ ಮಾತನ್ನು ಕೇಳುತ್ತಿರಲಿಲ್ಲ. ಹಾಗೆ ಕೇಳುವಂತಿದ್ದರೆ ಸ್ವಾಮಿಗಳು ಅಷ್ಟು ಮುಕ್ತವಾಗಿ ಮಾತನಾಡುತ್ತ ಅಮೆರಿಕದಲ್ಲಿ ಸಂಚರಿಸಲು ಆಗುತ್ತಿರಲಿಲ್ಲ, ಸ್ವಾಮಿಗಳು ಕ್ರೈಸ್ತ ಮಿಷನರಿಗಳ ಮೇಲೆ ಕಟುವಾಗಿ ದಾಳಿ ಮಾಡುತ್ತಿದ್ದಾಗ ಅತ್ಯಂತ ಮತಾಂಧ ಕ್ರೈಸ್ತ ಮಿಷನರಿಗಳು ಕೂಡ ಅದನ್ನು ಸಂವಾದದ ಮೂಲಕ ಎದುರಿಸುತ್ತಿದ್ದರೇ ಹೊರತು ಯಾವುದೇ ಬೆದರಿಕೆಯಿಂದಲ್ಲ. ಭಾರತದ ಸುತ್ತಿ ಬಂದಿದ್ದ ಕೆಲ ಮಿಷನರಿಗಳು ಸ್ವಾಮಿಗಳು ಭಾಷಣಗಳಲ್ಲಿ ಅಮೆರಿಕದ ಕೇಳುಗರಿಗೆ ಹೇಳುತ್ತಿದುದು ವಾಸ್ತವ ಸ್ಥಿತಿಗೆ ಹೊಂದಾಣಿಕೆಯೇ ಆಗುತ್ತಿಲ್ಲ ಎಂದು ಎತ್ತಿ ತೋರಿಸುತ್ತಿದ್ದರು. ಅಮೆರಿಕರನ್ನು , ಕ್ರೈಸ್ತರನ್ನು ಅವರ ತತ್ತ್ವ , ವಿಚಾರಗಳನ್ನು , ಆಚಾರ ,ರೂಢಿಗಳನ್ನು ನೆರೆದಿದ್ದ ಸಭಿಕರೆದುರು ಎತ್ತಿ ಆಡಿಕೊಳ್ಳುತ್ತಿದ್ದ ಸ್ವಾಮಿಗಳಿಗೆ ಕ್ರೈಸ್ತ ಮಿಷನರಿಗಳು ಹಿಂದೂ ಸಾಮಾಜಿಕ ದುಸ್ಥಿತಿಯನ್ನು ಎತ್ತಿ ತೋರಿಸಿದಾಗ ಸಿಡುಕುತ್ತಿದ್ದರು.
೧೮೮೪ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಬಿಷಪ್ ನಿಂಡೆ, ಸೆಂಟ್ರಲ್ ಕ್ರಿಶ್ಚಿಯನ್ ಚರ್ಚ್’ಗೆ ಸೇರಿದ್ದ ನ್ಯೂಮನ್ , ಫೋರ್ಟ್ ಸ್ಟೀಟ್ ಪ್ರೆಸ್’ಬೈಟೇರಿಯನ್ ಚರ್ಚ್’ಗೆ ಸೇರಿದ್ದ ಮಿಷನರಿ ಸೊಸೈಟಿಯ ೪೫ ವರ್ಷಗಳ ಕಾಲ ಭಾರತದಲ್ಲಿದ್ದ ರೆ. ಥ್ಯಾಕ್’ವೆಲ್ , ಭಾರತೀಯ ಸಂಜಾತ ಮದ್ರಾಸಿನ ಆರ್.ಎ ಹ್ಯೂಮ್ , ಸ್ವಾಮಿಗಳು ಪ್ರತಿಪಾದಿಸುತ್ತಿರುವ ಹಿಂದೂ ಧರ್ಮದ ವಾಸ್ತವತೆಯನ್ನು ಪ್ರಶ್ನಿಸಿದ್ದರು, ಸ್ವಾಮಿಗಳು ಕ್ರೈಸ್ತ ಧರ್ಮವನ್ನು ಟೀಕಿಸುವುದನ್ನು ಬೆಂಬಲಿಸಿ ರೆ. ರೀಡ್ ಸ್ಟುಅರ್ಟ್ , ರಬ್ಬಿ ಗ್ರಾಸ್’ಮನ್ ತಾವು ನಡೆಸುತ್ತಿದ್ದ ಕ್ರೈಸ್ತ ಸಭೆಗಳಲ್ಲಿ ಸ್ವಾಮಿಗಳ ಬಗ್ಗೆ ಒಳ್ಳೆಯ , ಬೆಂಬಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಭಾರತದ ವಿಧವೆಯರ ಕುರಿತಾದ ವಿವಾದದ ಸಮಯದಲ್ಲಿ ಡಾ. ಲೆವಿಸ್ ಜೇನ್ಸ್ ಸ್ವಾಮಿಗಳ ನೆರವಿಗೆ ಬಂದು ವಿರೋಧಿಗಳೊಂದಿಗೆ ಸೆಣಸಿದ್ದನು. ವಿಚಾರ ಸ್ವಾತಂತ್ರವನ್ನು ಬೆಂಬಲಿಸುವ ಜನ ಪತ್ರಿಕೆಗಳಲ್ಲಿ ಸ್ವಾಮಿಗಳ ಪರವಾಗಿ ಬಿಗಿಯಾಗಿ ನಿಂತಿದ್ದರು. ಯಾವುದೇ ಸಾರ್ವಜನಿಕ , ಕೂಟ, ಚರ್ಚ್ ಭಾಷಣಗಳ ನಡುವೆ ಸ್ವಾಮಿಗಳ ವಿರುದ್ಧ ಕೂಗಿದ , ಗಲಭೆ ಎಬ್ಬಿಸಿದ, ಮಾತನಾಡಲು ಅಡ್ದಿಪಡಿಸಿದ ಒಂದೇ ಒಂದು ಪ್ರಸಂಗವೂ ದಾಖಲಾಗಿರಲಿಲ್ಲ. ಸ್ವಾಮಿಗಳನ್ನು ಭಾಷಣಕ್ಕೆ ಆಹ್ವಾನಿಸಿದ ಪಾದ್ರಿಗಳಿಗೆ ಇತರ ಪಾದ್ರಿಗಳಾಗಲಿ , ಜನರಾಗಲಿ ನಿಷೇಧ ಹೇರಿರಲಿಲ್ಲ. ಆದ್ದರಿಂದ ಕ್ರೈಸ್ತ ಪಾದ್ರಿಗಳು ಸ್ವಾಮಿಗಳ ಕೆಲಸಕ್ಕೆ ಅಡ್ಡಿ ಮಾಡಿದ್ದರೆನ್ನುವುದು ಸುಳ್ಳು. ೧೯/೩/೧೮೯೪ ರಂದು ರಾಮಕೃಷ್ಣಾನಂದರಿಗೆ ‘ಇಲ್ಲಿಯ ಜನ ಆಷಾಢಭೂತಿಗಳಲ್ಲ. ಇವರಲ್ಲಿ ಅಸೂಯೆನ್ನುವುದು ಲವಲೇಶವೂ ಇಲ್ಲ….. ನಮ್ಮಂತಹ ಕೂಪಮಂಡೂಕಗಳನ್ನು ನಾನೆಲ್ಲಿಯೂ ನೋಡಿಲ್ಲ. ಪರದೇಶದಿಂದ ಏನೇ ಹೊಸದು ಬರಲಿ ಅದನ್ನು ಅಮೆರಿಕ ಮೊದಲು ಸ್ವೀಕರಿಸುವುದು. ಆದರೆ ನಾವೋ !. ನಮ್ಮ ಹಾಗೆ ಪ್ರಪಂಚದಲ್ಲಿ ಯಾರೂ ಇಲ್ಲ. ! ಆರ್ಯ ಸಂತಾನರಲ್ಲವೇ ನಾವು ! ಆ ಹುಟ್ಟುಗುಣ ಎಲ್ಲಿ ಕಾಣಿಸಿತ್ತಿದೆಯೋ ನನಗೆ ತಿಳಿಯದು. ಆದರೂ ನಾವು ಆರ್ಯ ಸಂತಾನರು ! ಈ ಪತ್ರ ಸ್ವಾಮಿಗಳು ಪಾದ್ರಿಗಳ ವಿಚಾರದಲ್ಲಿ ‘ತೋಳ ಬಂತು ತೋಳ’ ಎಂದು ಕೂಗಿದ್ದರೇ ಹೊರತು ಅಲ್ಲಿ ತೋಳ ಬಂದಿರಲಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಅಳಸಿಂಗ ಪೆರುಮಾಳ್ ಒಂದು ಪತ್ರದಲ್ಲಿ ಲಂಡ್ ಎನ್ನುವ ಒಬ್ಬ ಪಾದ್ರಿ ಸ್ವಾಮಿಗಳನ್ನು ಟೀಕಿಸಿ ಮಾಡಿದ ಉಪನ್ಯಾಸ ಯಾವುದೋ ಒಂದು ಮಿಷನರಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದರತ್ತ ಗಮನ ಸೆಳೆದಿದ್ದನು. ಇದರಿಂದ ಸ್ವಾಮಿಗಳಿಗೆ ಭಾರಿ ಸಿಟ್ಟು ಬಂದಿದ್ದು ೬/೫/೧೮೯೫ ರಂದು ಅಳಸಿಂಗ ಪೆರುಮಾಳ್’ಗೆ ಕಟುವಾಗಿ ಹಂಗಿಸಿ ಮಾರುತ್ತರ ಕಳಿಸಿದರು. ‘ ….. ….ನನ್ನ ವಿರುದ್ಧ ಅಸಭ್ಯ ಕಥೆಗಳನ್ನು ಕಟ್ಟುತ್ತಿದ್ದಾರೆ.ಇಲ್ಲಿ ನನಗೆ ಕೆಲವು ಪ್ರಭಾವಿ ಸ್ನೇಹಿತರಿರುವರು. ಅವರು ಅವುಗಳಿಗೆ ಉತ್ತರ ಕೊಡುವರು. ಈ ಸ್ವಾರ್ಥಿಗಳ ಪಾಶವಿಕ ಮತ್ತು ಹೇಡಿತನದ ಟೀಕೆಗಳನ್ನು ಸಂನ್ಯಾಸಿಯಾದ ನಾನು ಎದುರಿಸಬೇಕೇನು? ……..ಹಿಂದೂಗಳೇ ನಿದ್ದೆ ಮಾಡುವುದಕ್ಕೆ ಹೋದರೆ ನಾನೇಕೆ ಹಿಂದೂ ಧರ್ಮದ ರಕ್ಷಣೆಗ ಶಕ್ತಿಯನ್ನು ವ್ಯಯ ಮಾಡಲಿ ? ೩೦ ಕೊಟಿ ಜನ ಅಲ್ಲಿ ಎನು ಮಾಡುತ್ತಿರುವಿರಿ. ಅದರಲ್ಲೂ ವಿದ್ಯಾವಂತರೂ ಪಂಡಿತರು ಎಂದು ಹೆಮ್ಮ ಕೊಚ್ಚಿಕೊಳ್ಳತ್ತಿರುವರೇ ಆದ ನೀವು ಏತಕ್ಕ ಅದರ ರಕ್ಷಣೆಯ ಭಾಗವನ್ನು ವಹಿಸಿ , ಧರ್ಮ ಬೋಧನೆಯ ಕೆಲಸಕ್ಕೆ ನನ್ನನ್ನು ಬಿಡಬಾರದು….. ಹಗಲಿರುಳು ನಾನು ಅಪರಿಚಿತ ದೇಶದಲ್ಲಿ ದುಡಿಯುತ್ತಿರುವೆನು. ಭರತಖಂಡ ನನಗೆ ಯಾವ ಸಹಾಯವನ್ನು ಕಳಿಸುವುದು ? ನಿಮ್ಮ ಸಮರ್ಥನೆಗಳನ್ನು ಬರೆದು ಅಮೆರಿಕದ ಪತ್ರಿಕೆಗಳಿಗೆ ಏಕೆ ನೀವು ಕಳಿಸಬಾರದು ? ನಿಮ್ಮನ್ನು ತಡೆಯುವರಾರು ? ನೀವೆಲ್ಲ , ಇಡೀ ಜನಾಂಗವೇ ಭೌತಿಕ, ನೈತಿಕ, ಅಧ್ಯಾತ್ಮಿಕ ಹೇಡಿಗಳು. ಕಾಮಿನಿ ಕಾಂಚನ ಆಸಕ್ತರಾದ ನೀವು ಪಶು ಸಮಾನರು . ಅಂತಹವರಾದ ನೀವು ಸಂನ್ಯಾಸಿಯನ್ನು ಹೋರಾಡಲು ಪ್ರೇರೇಪಿಸುತ್ತಿದ್ದೀರಿ. ……ನಿಮ್ಮಲ್ಲಿ ಯಾರಾದರೊಬ್ಬರು ಉತ್ತರವನ್ನು ಬರೆದು ಬೋಸ್ಟನ್’ನ ‘ಅರೆನಾ’ ಪತ್ರಿಕೆಗೆ ಏಕೆ ಕಳಿಸಬಾರದು ? ಅವರು ಸಂತೋಷದಿಂದ ಪ್ರಕಟಿಸುತ್ತಾರೆ ಮತ್ತು ಸಾಕಷ್ಟು ಹಣವನ್ನು ಕೊಡುತ್ತಾರೆ. ….ಇಂದಿಗೂ ಪಾಶ್ಚಾತ್ಯ ದೇಶಕ್ಕೆ ಬಂದ ದುಷ್ಟ ಹಿಂದೂಗಳು ತಮ್ಮ ಕೀರ್ತಿ ಮತ್ತು ಹಣ ಸಂಪಾದನೆಗಾಗಿ ತಮ್ಮ ಧರ್ಮ ಮತ್ತು ದೇಶವನ್ನು ದೂರಿರುವರು……….ಧರ್ಮ ಬೋಧಿಸುವುದಕ್ಕಾಗಿ ಪ್ರಪಂಚವನ್ನು ತೊರೆಯಲು ಸಿದ್ಧರಾಗಿರುವವರು ಮದ್ರಾಸಿನಲ್ಲಿ ಎಲ್ಲಿದ್ದಾರೆ ? …ತನ್ನ ದೇಶದ ಮಾನವನ್ನು ಕಾಪಾಡುವುದಕ್ಕೆ ಧೈರ್ಯವಾಗಿ ನಿಂತವನು ನಾನೊಬ್ಬನೇ . ಹಿಂದೂಗಳಿಂದ ಅವರು ಎಂದಿಗೂ ನಿರೀಕ್ಷಿಸದ ಭಾವನೆಗಳನ್ನು ನಾನು ಅಮೆರಿಕನ್ನರಿಗೆ ಕೊಟ್ಟಿರುವೆನು. …ಈ ದೇಶದಲ್ಲಿ ಸಾವಿರಾರು ಮಂದಿ ನನಗೆ ಗೆಳೆಯರಾಗಿರುವರು. ನೂರಾರು ಮಂದಿ ಸಾವಿನವರೆಗೂ ನನ್ನನ್ನು ಅನುಸರಿಸುವರಿದ್ದಾರೆ. ಪ್ರತಿ ವರ್ಷವೂ ಅವರ ಸಂಖ್ಯೆ ಹೆಚ್ಚುವುದು. …..
ಥೋಬರ್ನ್ ಎನ್ನುವ ಪಾದ್ರಿ ಸ್ವಾಮಿಗಳ ಮೇಲೆ ದಾಳಿ ಮಾಡುತ್ತಿದ್ದರೂ ಸ್ವಾಮಿಗಳು ನಿರ್ಭಾವುಕರಾಗಿದ್ದರು. ಇದನ್ನು ಅಳಸಿಂಗ ಪೆರುಮಾಳ್ ಸಹಿಸಲಾಗದೆ ಸ್ವಾಮಿಗಳನ್ನು ಸಮರ್ಥಿಸಿ , ಥೋಬರ್ನ್’ನನ್ನು ಖಂಡಿಸಿ ಡೆಟ್ರಾಯಿಟ್ ಈವೆನಿಂಗ್ ನ್ಯೂಸ್ ಸಂಪಾದಕರಿಗೆ ಪ್ರಬಲವಾದ ಪತ್ರವೊಂದನ್ನು ಬರೆದನು. ಅದು ೭/೭/೧೮೯೬ ರಂದು ನ್ಯೂಸ್ ಟ್ರಿಬ್ಯೂನ್’ನಲ್ಲಿ ಪ್ರಕಟವಾಯಿತು ಎಂದು ಮಾರಿ ಲೂಯಿ ಬರ್ಕೆ ತಿಳಿಸುತ್ತಾಳೆ.(136) ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಸ್ವಾಮಿಗಳೇ ತಮ್ಮನ್ನು ಸಮರ್ಥಿಸಿ ಅಮೆರಿಕದ ಪತ್ರಿಕೆಗಳಿಗೆ ಬರೆಯಲು ಅಳಸಿಂಗನನ್ನು ಹುರಿದುಂಬಿಸುತ್ತಿದ್ದರೆಂದು ಗೊತ್ತಾಗುತ್ತದೆ.
ಅಳಸಿಂಗ ಪೆರುಮಾಳ್’ಗೆ ಬರೆದ ಮೇಲಿನ ಪತ್ರದಲ್ಲಿ ಸ್ವಾಮಿಗಳು ತೋರಿಸಿರುವ ಸಿಟ್ಟು ಸೆಡವುಗಳಿಗೆ ಯಾವುದೇ ಸಮರ್ಥನೆಯಿಲ್ಲ. ತಮ್ಮ ಮೇಲೆ ಮಾಡಿದ ವೈಯಕ್ತಿಕ ನಿಂದನೆಗೆ ತಮ್ಮ ಶಿಷ್ಯರು ಉತ್ತರ ಕೊಡದಿದ್ದುದಕ್ಕೆ ಎಲ್ಲ ಹಿಂದೂಗಳನ್ನು ಹೇಡಿಗಳು , ನಿರ್ವೀರ್ಯರು ಎಂದು ಬೈಯ್ದಿರುವುದನ್ನು ಒಪ್ಪಲಾಗದು. ಹಿಂದೂ ಧರ್ಮ ಮತ್ತು ಭಾರತ ದೇಶದ ಉದ್ಧಾರ ತಾವು ಬೋಧಿಸುತ್ತಿರುವ ವಿಷಯಗಳಲ್ಲಿ ಅಡಕವಾಗಿದೆ. ಹಿಂದೂ ಧರ್ಮವನ್ನು ಪ್ರತಿನಿಧಿಸುವಲ್ಲಿ ಮತ್ತು ಭಾರತದ ದುಸ್ಥಿತಿಯನ್ನು ಕೊನೆಗಾಣಿಸಲು ಯತ್ನಿಸುತ್ತಿರುವುದರಲ್ಲಿ ತಾವೇ ಮೊದಲಿಗರು , ತಮ್ಮ ಮಾರ್ಗವೇ ಸರಿ ಎನ್ನುವಲ್ಲಿ ಸ್ವಪ್ರಶಂಸೆಯಿದೆ. ಸ್ವಾಮಿಗಳು ತಮಗೆ ಆಪ್ತವಾದ ವೇದಾಂತದ ಅದ್ವೈತವನ್ನು ಬೋಧಿಸಲು ಹೋಗಿದ್ದರು. ಅದಕ್ಕಾಗಿ ಅವರು ಹಿಂದೂ ಧರ್ಮದ ಇತರ ಪಂಥ , ಮತಗಳ ಮುಂದಾಳುಗಳ ಅಭಿಪ್ರಾಯವನ್ನೇನೂ ಪಡೆದಿರಲಿಲ್ಲ. ಅಮೆರಿಕದಲ್ಲಿ ತಾವು ಪರಿಭಾವಿಸಿಕೊಂಡಿದ್ದ ಹಿಂದೂ ಧರ್ಮವನ್ನು ಪ್ರಚಾರ ಮಾಡಿ ಪಾಶ್ಚಾತ್ಯರಿಂದ ಲೌಕಿಕ ವಿದ್ಯೆ ಮತ್ತು ರಾಮಕೃಷ್ಣರ ಹೆಸರಿನಲ್ಲಿ ಒಂದು ಆಶ್ರಮ ಮತ್ತು ಅಧ್ಯಾತ್ಮ ತರಬೇತಿ ಕೇಂದ್ರ ಸ್ಥಾಪಸಬೇಕೆನ್ನುವುದೇ ಅವರ ಗುರಿಯಾಗಿದ್ದಿತು. ಇದಕ್ಕೆ ಅಡಚಣೆಗಳು ಎದುರಾದಾಗ ಎಲ್ಲ ಹಿಂದೂಗಳನ್ನು ಹೀಯಾಳಿಸಲು ಸ್ವಾಮಿಗಳಿಗೆ ಯಾವುದೇ ಅಧಿಕಾರ ಇರಲಿಲ್ಲ. ಹಿಂದೂ ಧರ್ಮದ ಪರವಾಗಿ ಪಂಡಿತರು ಹೋರಾಡಬೇಕೆನ್ನುವ ಕರೆ ನೀಡಿದ್ದಾರೆ. ಈ ಪಂಡಿತರು ಸಾಮಾನ್ಯ ಜನರ ಜೀವನ ವಿರೋಧಿಯಾದ ಶ್ರೌತ, ಗೃಹ್ಯ ಮತ್ತು ಧರ್ಮ ಸೂತ್ರಗಳ ಆಧಾರದ ಮೇಲೆ ಹೋರಾಟ ನಡೆಸಬೇಕಿದ್ದಿತೇ ಅಥವಾ ಅಮೆರಿಕದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೆ ಕುರುಡರಾಗಿ ಸ್ವಾಮಿಗಳ ಬೆಂಬಲಕ್ಕೆ ನಿಲ್ಲಬೇಕಾಗಿದ್ದಿತೇ ? ಹಿಂದೂ ಧರ್ಮವನ್ನು ಪ್ರಚಾರ ಮಾಡುವುದೇ ಅವರ ಗುರಿಯಾಗಿದ್ದರೆ ಕ್ರೈಸ್ತ ಮಿಷನರಿಗಳ ಮೇಲೆ ಮಿತಿ ಮೀರಿ ಏರಿ ಹೋಗುವುದು ಅಗತ್ಯವಿರಲಿಲ್ಲ.
ಕ್ರೈಸ್ತ ಪಾದ್ರಿಗಳಿಂದ ಸ್ವಾಮಿಗಳನ್ನು ವ್ಯವಸ್ಥಿತವಾಗಿ ಎದುರಿಸುವ ಎರಡು ಪ್ರಯತ್ನಗಳಾಗಿದ್ದವು. ಅದರಲ್ಲಿ ಮೊದಲನೆಯದು ಜೆ.ಮುರ್ಡೊಕ್ ‘ಸ್ವಾಮಿ ವಿವೇಕಾನಂದ ಆನ್ ಹಿಂದೂಯಿಸಂ’ ಎಂದು ಸ್ವಾಮಿಗಳನ್ನು ಟೀಕಿಸಿ ಬರೆದಿದ್ದ ಪುಸ್ತಕ. ಇದು ೧೮೯೫ ರಲ್ಲಿ ಪ್ರಕಟಗೊಂಡು ಸ್ವಾಮಿಗಳು ಥೌಸಂಡ್ ಐಲ್ಯಾಂಡ್ ಪಾರ್ಕ್’ನಲ್ಲಿ ಇರುವಾಗ ಅವರ ಕೈಸೇರಿದ್ದಿತು. ಈ ವೇಳೆಗಾಗಲೇ ಸ್ವಾಮಿಗಳಿಗೆ ಸಾಕಷ್ಟು ಕೀರ್ತಿ ಬಂದು , ಉದಾರವಾದಿ ಬೆಂಬಲಿಗರನ್ನು ಪಡೆದಿದ್ದರಿಂದ ಅದರ ಬಗ್ಗೆ ಅವರು ಚಿಂತಿತರಾಗರಲಿಲ್ಲ. ೧೮೯೭ ರಲ್ಲಿ ಸ್ವಾಮಿಗಳು ಅಮೆರಿಕವನ್ನೇ ಗೆದ್ದು ಬಂದರು ಎನ್ನುವ ಅತಿರಂಜಿತ ಚಿತ್ರಣದ ನೈಜತೆಯನ್ನು ಪ್ರಶ್ನಿಸಿ ಕಲ್ಕತ್ತ ವೈ.ಎಂ.ಸಿ.ಎ ಅಸೊಸಿಯೇಷನ್ ಕಾರ್ಯದರ್ಶಿ ಡಬ್ಲ್ಯು.ಡಬ್ಲ್ಯು.ವೈಟ್ ಪ್ರಕಟಿಸಿದ ಸ್ವಾಮಿ ವಿವೇಕಾನಂದ ಅಂಡ್ ಹಿಸ್ ಗುರು ವಿಥ್ ದಿ ಲೆಟರ್ಸ್ ಫ್ರಂ ಪ್ರಾಮಿನೆಂಟ್ ಅಮೆರಿಕನ್ಸ್ ಆನ್ ದಿ ಅಲೆಗ್ಡ್ ಪ್ರೋಗ್ರೆಸ್ ಆಫ್ ವೇದಾಂತಿಸಂ ಇನ್ ದಿ ಯುನೈಟೆಡ್ ಸ್ಟೇಟ್ಸ್ ‘ ಪುಸ್ತಕ ಪ್ರಕಟಿಸಿದನು. ಈ ಪುಸ್ತಕಗಳಲ್ಲ್ರಿವ ವಿಷಯಗಳನ್ನು ಗಮನಿಸಿದರೆ ಕ್ರ್ರೈಸ್ತ ಪಾದ್ರಿಗಳು ಸ್ವಾಮಿಗಳನ್ನು ತಾತ್ತ್ವಿಕವಾಗಿ ವಿರೋಧಿಸುತ್ತಿದ್ದರೆನ್ನುವುದು ಸ್ಪಷ್ಟವಾಗುತ್ತದೆ.
ಬ್ರಾಹ್ಮ ಸಮಾಜಿಗಳು : ಇವರಲ್ಲಿ ಪ್ರತಾಪಚಂದ್ರ ಮಜುಂದಾರ ಮೊದಲಿನ ಸಾಲಿನಲ್ಲಿ ಬರುತ್ತಾರೆ. ಸ್ವಾಮಿಗಳು ಅಮೆರಿಕದಲ್ಲಿ ಭಾಷಣ ಮಾಡುತ್ತ ಸಂಚರಿಸುತ್ತಿದ್ದ ಕಾಲದಲ್ಲಿಯೇ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ಇತರ ಭಾರತೀಯರು ಅಮೆರಿಕದಲ್ಲಿ ಭಾಷಣಗಳನ್ನು ನೀಡುತ್ತ ಸಂಚರಿಸುತ್ತಿದ್ದರು. (೨/೧೧/೧೮೯೩). ರಾಮಕೃಷ್ಣ ಪರಮಹಂಸರನ್ನು ಕುರಿತಾಗಿ ಮೊದಲ ಬಾರಿಗೆ ಇಂಗ್ಲಿಷ್’ನಲ್ಲಿ ಪ್ರತಾಪ್ ಚಂದ್ರ ಮುಜುಂದಾರ್ ಬರೆದ ಲೇಖನ ‘ಥಿಯಾಸ್ಟಿಕ್ ಕ್ವಾರ್ಟರ್ಲಿ ರಿವ್ಯೂನಲ್ಲಿ ೧೮೭೯ ರಲ್ಲಿ ಪ್ರಕಟಗೊಂಡಿತು. ಇದಾದ ನಂತರ ಪ್ರತಾಪಚಂದ್ರ ಮಜುಂದಾರ ೧೮೮೭ ರಲ್ಲಿ ರಾಮಕೃಷ್ಣ ಪರಮಹಂಸರನ್ನು ಕುರಿತಾಗಿ ಪುಸ್ತಕ ಬರೆದಿದ್ದರು. ಇದನ್ನು ಮತ್ತು ಸ್ವಾಮಿಗಳು ಒದಗಿಸಿದ ಮಾಹಿತಿಯನ್ನು ಆಧರಿಸಿ ಮ್ಯಾಕ್ಸ್ ಮುಲ್ಲರ್ ‘ರಾಮಕೃಷ್ಣ ಹಿಸ್ ಲೈಫ್ ಅಂಡ್ ಸೇಯಿಂಗ್ಸ್’ ಲೇಖನವನ್ನು ೧೮೯೮ ರಲ್ಲಿ ಪ್ರಕಟಿಸಿದರು. ವಿಶ್ವ ಧರ್ಮ ಸಮ್ಮೇಳನದಲ್ಲಿ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರೂ ಮತ್ತು ಅತ್ಯಂತ ಪ್ರೀತಿಪಾತ್ರರೂ ಆದ ಸ್ವಾಮಿ ವಿವೇಕಾನಂದರು ಖ್ಯಾತರಾದ ಮೇಲೆ ಮಜುಂದಾರರಿಗೆ ತಮ್ಮ ಸ್ಥಾನ ತಪ್ಪಿತು ಎನ್ನುವ ಹೊಟ್ಟೆಕಿಚ್ಚು ಉಂಟಾಗಿ ಸ್ವಾಮಿಗಳ ವಿರುದ್ಧ ಸಂಚು ಹೂಡಿದರು. ಇಷ್ಟಿದ್ದರೂ ಸ್ವಾಮಿಗಳು ಅವರು ರಾಮಕೃಷ್ಣರ ಬಗ್ಗೆ ಬರೆದ ಪುಸ್ತಕವನ್ನು ತರಿಸಿ ಅಮೆರಿಕದಲ್ಲಿ ಹಂಚಿದರು. ಸ್ವಾಮಿಗಳು ಹೇಳುವಂತೆ ಹೊಟ್ಟೆಕಿಚ್ಚು ಭಾರತೀಯರ ಅವಗುಣ. ಸ್ವಾಮಿಗಳ ವಿರುದ್ಧ ವಿದೇಶಿ ನೆಲದಲ್ಲಿ ಸಂಚು ಹೂಡಿದ್ದುದು ಅಕ್ಷಮ್ಯ ಅಪರಾಧ ಎಂದು ಬಹಳ ಜನ ವಾದಿಸಿದ್ದಾರೆ. ಹೀಗೆ ವಾದಿಸುವವರು ಮುಖ್ಯವಾಗಿ ಒಂದು ಸಂಗತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದ್ದಾರೆ. ರಾಮಕೃಷ್ಣ ಪರಮಹಂಸರ ಬಗ್ಗೆ ಪ್ರತಾಪಚಂದ್ರ ಮಜುಂದಾರರು ಬರೆದದ್ದು ಹೊರತಾಗಿ ಬೇರೆ ಯಾವುದೇ ಪುಸ್ತಕವಿರಲಿಲ್ಲ ಮತ್ತು ಪ್ರತಾಪಚಂದ್ರ ಮಜುಂದಾರರು ಸಂಚು ಹೂಡಿರುವುದಕ್ಕೆ ಸ್ವಾಮಿಗಳ ಹೇಳಿಕೆ ಹೊರತು ಯಾವುದೇ ಹೊರಗಿನ ಪುರಾವೆಗಳಿಲ್ಲ.
೨೮, ಸೆಪ್ಟೆಂಬರ್ ೧೮೯೩ ರಂದು ಪ್ರತಾಪಚಂದ್ರ ಮಜುಂದಾರ್ ಷಿಕಾಗೊ ಬಿಟ್ಟು ಇಂಡಿಯಾನಾ ಪೊಲಿಸ್ ಮತ್ತು ಬಫೆಲೊ ಮೂಲಕ ಸಾಗಿ ೩/೧೦/೧೮೯೩ ರಂದು ಬೋಸ್ಟನ್ ತಲುಪಿದರು. ಬಹುತೇಕ ಬೋಸ್ಟನ್’ನಲ್ಲಿ ಉಳಿದು ಡಿಸೆಂಬರ್ ೯ , ೧೮೯೩ ರಂದು ಹಡಗಿನಲ್ಲಿ ಲಿವರ್’ಪೂಲ್’ಗೆ ಹೋದರು. ಬೋಸ್ಟನ್’ನಲ್ಲಿ ಚರ್ಚ್, ಕೂಟ , ಭೋಜನಾನಂತರ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಉಪನ್ಯಾಸಗಳನ್ನು ಕೊಟ್ಟರು. ಇದಲ್ಲದೆ ‘ಸ್ಪಿರಿಟ್ ಆಫ್ ಗಾಡ್’ ಮತ್ತು ‘ಹಾರ್ಟ್ ಬೀಟ್ಸ್’ ಎನ್ನುವ ಪುಸ್ತಕಗಳನ್ನು ಬರೆಯಲು ತೊಡಗಿಕೊಂಡಿದ್ದು ಇವು ೧೮೯೪ ರಲ್ಲಿ ಬೋಸ್ಟನ್’ನಿಂದ ಪ್ರಕಟಣೆಗೊಂಡವು. ಅಮೆರಿಕದಲ್ಲಿ ಯೂನಿಟೇರಿಯನ್ ಪಂಥದದವರು ಸೇರಿದಂತೆ ಉದಾರವಾದಿ ನಿಲುವಿನ ಶಿಕ್ಷಣ ತಜ್ಞರು , ಚಿಂತಕರು , ಪಾದ್ರಿಗಳು ಪ್ರತಾಪಚಂದ್ರ ಮಜುಂದಾರರ ಗೆಳೆಯರ ಪಟ್ಟಿಯಲ್ಲಿದ್ದರು. ಬೋಸ್ಟನ್’ನ ಲೊವೆಲ್ ಇನ್’ಸ್ಟಿಟ್ಯೂಟ್’ನಲ್ಲಿ ‘ದಿ ರಿಲಿಜನ್ಸ್ ಅಂಡ್ ಸೋಷಿಯಲ್ ಲೈಫ್ ಆಫ್ ಇಂಡಿಯಾ ‘ , ಮಾಡರ್ನ್ ರಿಲಿಜನ್ಸ್ ಇನ್ ಇಂಡಿಯಾ , ‘ದಿ ರೇಸಸ್ ಇನ್ ಇಂಡಿಯಾ , ಮತ್ತು ಹಿಂದೂ ಸೊಸೈಟಿ ಎನ್ನುವ ನಾಲ್ಕು ಭಾಷಣಗಳನ್ನು ಮಾಡಿದರು. ಜನಮೆಚ್ಚುಗೆಯಿಂದಾಗಿ ಈ ಭಾಷಣಗಳನ್ನು ಪುನರಾವರ್ತಿಸಲಾಯಿತು. ಅಮೆರಿಕದ ಎಡ್ವರ್ಡ್ ಇ. ಹೇಲ್ , ಸ್ಯಾಮುಯೆಲ್ ಜೆ ಬರೋಸ್ , ವಿಲಿಯಂ ಎಚ್ ರೀಡ್ ಮತ್ತು ಹೆಬೆರ್ ನ್ಯೂಟನ್ ಒಗ್ಗೂಡಿ ಮಜುಂದಾರ್ ಮಿಷನ್ ಫಂಡ್ ಸ್ಥಾಪಿಸಿ ಅದನ್ನು ಮುಂದಿನ ಹತ್ತು ವರ್ಷಗಳ ಕಾಲ ನಿಭಾಯಿಸಿದರು. ೨೯/೧೨/೧೮೯೩ ರಂದು ಇಂಗ್ಲೆಂಡ್ ತೊರೆದು ಕೆಲ ದೇಶಗಳ ಮೂಲಕ ಸಾಗಿ ೨೪/೧/೧೮೯೪ ರಂದು ಕಲ್ಕತ್ತ ತಲುಪಿದರು.
೨/೧೦/೧೮೯೩ ರಂದು ಸ್ವಾಮಿಗಳು ಜಾನ್ ಹೆನ್ರಿ ರೈಟ್’ಗೆ ಬರೆದ ಪತ್ರದಲ್ಲಿ ‘ ನಮ್ಮ ಭಾರತದ ಪ್ರೀತಿಪಾತ್ರರಾದ ಮೃದು ಹೃದಯದ ಧರ್ಮಪಾಲ ಮತ್ತು ವಾಗ್ಮಿ ಮಜುಂದಾರರನ್ನು ನೋಡಲು ನೀವು ಇಲ್ಲಿದ್ದರೆ ಚೆನ್ನಾಗಿದ್ದಿತೆನಿಸುತ್ತದೆ’ ಎಂದು ಬರೆದಿದ್ದರು. ವಿಶ್ವಧರ್ಮ ಸಂಸತ್ತು ಮುಗಿದ ಮರುದಿನವೇ ಪ್ರತಾಪಚಂದ್ರ ಮಜುಂದಾರ ಷಿಕಾಗೊ ತೊರೆದಿದ್ದರೆ ಸ್ವಾಮಿಗಳು ಷಿಕಾಗೊ ಸುತ್ತಲಿನ ಉಪನಗರಗಳಲ್ಲಿ ಭಾಷಣಗಳನ್ನು ಮಾಡುತ್ತಿದ್ದರು. ೨೦/೧೧/೧೮೯೩ ರಂದು ಸ್ವಾಮಿಗಳು ಇಲಿನಾಯ್ ತೊರೆದು ಮ್ಯಾಡಿಸನ್ , ವಿಸ್ಕಾನ್ಸಿನ್ ಕಡೆ ಹೊರಟರು. ೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ಮಜುಂದಾರರನ್ನು ಹೊಗಳಿದ್ದರು. ಇದಾದ ನಂತರ ೧೪/೧೧/೧೮೯೩ ರಂದು ಹರಿದಾಸ ವಿಹಾರಿದಾಸ ದೇಸಾಯರಿಗೆ ಬರೆದ ಪತ್ರದಲ್ಲಿ ತಮ್ಮನ್ನು ಹೊಗಳಿಕೊಂಡಿದ್ದರಾದರೂ ಮಜುಂದಾರರ ಮೇಲೆ ದೂರನ್ನು ಹೇಳಿರಲಿಲ್ಲ. ಮಧ್ಯ ಪಶ್ಚಿಮ ಪ್ರದೇಶಗಳಲ್ಲಿ ಭಾಷಣಗಳನ್ನು ಕೊಡುತ್ತಿದ್ದ ಸ್ವಾಮಿಗಳು ಡೆ ಮೊಯಿನ್ಸ್ ಬಿಡುವ ಮೊದಲು ನೀಡಿದ ಸಂದರ್ಶನ ೧/೧೨/೧೮೯೩ ರಂದು ಅಯೋವಾ ಸ್ಟೇಟ್ ರಿಜಿಸ್ಟರ್’’ನಲ್ಲಿ ಕಾಣಿಸಿಕೊಂಡಿತು. ಅದರಲ್ಲಿ ‘… ಸ್ವಾಮಿಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ಬ್ರಾಹ್ಮ ಸಮಾಜದ ಬಗ್ಗೆ ಹಿತಕರ ಮಾತುಗಳನ್ನಾಡಿ , ಅದು ಭಾರತದಲ್ಲಿ ಹೆಂಗಸರಿಗಾಗಿ ಮಾಡುತ್ತಿರುವ ಕೆಲಸವನ್ನು , ಇಲ್ಲಿರುವ ಅದರ ಪ್ರತಿನಿಧಿಗಳನ್ನು ಹೊಗಳಿದರು ‘ ಎಂದಿದೆ. (137) ಇದೇ ಸಮಯದಲ್ಲಿ ಅದೇ ಊರಿನಲ್ಲಿದ್ದ ಬಲವಂತ ಬಾಹು ನಗರ್ಕರ್ ತಮ್ಮ ಭಾಷಣಗಳನ್ನು ಮುಗಿಸಿದ್ದರು.
೨೪/೧/೧೮೯೪ ರಂದು ಮದ್ರಾಸ್ ಶಿಷ್ಯರಿಗೆ ಬರೆದ ಪತ್ರದಲ್ಲಿ ‘ಇಂಟೀರಿಯರ್’ ಪತ್ರಿಕೆಯಲ್ಲಿ ಬಂದಿರುವ ಟೀಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲವೆಂದು ತಿಳಿಸಿದ್ದರು. ಇದಾದ ನಾಲ್ಕೇ ದಿನಗಳಲ್ಲಿ -೨೯/೧/೧೮೯೪- ಹರಿದಾಸ ವಿಹಾರಿದಾಸ ದೇಸಾಯಿಗಳಿಗೆ ಬರೆದ ಪತ್ರದಲ್ಲಿ ಮೇಧಾವಿಗಳಿರುವ ಭಾರತದ ಪತನಕ್ಕೆ ಹೊಟ್ಟೆಕಿಚ್ಚು ಕಾರಣ ಎಂದು ತಿಳಿಸಿದ್ದರು. ಈ ನಾಲ್ಕು ದಿನಗಳಲ್ಲಿ ಸ್ವಾಮಿಗಳಲ್ಲಿ ಇಂತಹ ಅಭಿಪ್ರಾಯ ಏಕೆ ಬಂದಿರಬಹುದು ಎಂದು ಊಹಿಸುವುದು ಸಾದ್ಯ. ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿ ೨೪/೧/೧೮೯೪ ರಂದು ಭಾರತಕ್ಕೆ ಮರಳಿದ್ದ ಪ್ರತಾಪಚಂದ್ರ ಮಜುಂದಾರ ವಿಶ್ವ ಧರ್ಮ ಸಂಸತ್ತಿನ ನೈಜ ಚಿತ್ರಣ ನೀಡಿ ‘ದಿ ಇಂಡಿಯನ್ ಮಿರರ್’’ ತಿಳಿಸಿದಂತೆ ಸ್ವಾಮಿಗಳು ಅದ್ಭುತ ಯಶಸ್ಸು ಗಳಿಸಿದ್ದಾರೆ ಎನ್ನುವುದನ್ನು ಒಪ್ಪಿರಲಿಲ್ಲ ಮತ್ತು ಸ್ವಾಮಿಗಳ ಜೀವನ ಶೈಲಿಯ ಬಗ್ಗೆ ಆಕ್ಷೇಪಣೆ ತಳೆದಿದ್ದರು. ಇದನ್ನು ಗುರುಭಾಯಿಗಳು ತಂತಿಯ ಮೂಲಕ ಸ್ವಾಮಿಗಳಿಗೆ ತಿಳಿಸಿದ್ದರು. ಇದಾದ ನಂತರ ಮಜುಂದಾರರ ಹೇಳಿಕೆಗಳಿಗ ಸ್ಪಷ್ಟನೆ ಬಯಸಿ ಗುರುಭಾಯಿಗಳು ಸ್ವಾಮಿಗಳಿಗೆ ಪತ್ರ ಬರೆದಿದ್ದರು. ಹಾಗಾಗಿ ೧೮/೩/೧೮೯೪ ರಂದು ಮೇರಿ ಹೇಲ್’ಗೆ ‘..ಮಜುಂದಾರ ಕಲ್ಕತ್ತಕ್ಕೆ ಹೋಗಿ ನಾನು ಇಲ್ಲ ಎಲ್ಲ ಬಗೆಯ ಪಾಪ ಕಾರ್ಯಗಳನ್ನು ಮಾಡುತ್ತಿದ್ದೇನೆ ‘ ಎನ್ನುವ ಸುದ್ದಿ ಹಬ್ಬಿಸಿದ್ದಾನೆ ಎಂದು ರೋಷದಲ್ಲಿ ಹೇಳಿದ್ದರು. ಇದಾದ ಮರುದಿನ -೧೯/೩/೧೮೯೪-ರಾಮಕೃಷ್ಣಾನಂದನಿಗೆ ಬರೆದ ಪತ್ರದಲ್ಲಿ ‘ ನನ್ನ ಜನಪ್ರಿಯತೆಯಿಂದ ಮಜುಂದಾರರಿಗೆ ಹೊಟ್ಟೆಕಿಚ್ಚು ಉಂಟಾಗಿದೆ. ಇಲ್ಲಿನ ಪಾದ್ರಿಗಳು ನನ್ನನ್ನು ಮುಗಿಸಲು ಯತ್ನಿಸಿದರು’ ಎನ್ನುತ್ತ ತಮ್ಮ ವಿರುದ್ಧದ ಸಂಚೊಂದನ್ನು ತಾವೇ ಕಲ್ಪಿಸಿಕೊಂಡಿದ್ದರು. ಅಮೆರಿಕದಲ್ಲಿರುವಾಗ ಮಜುಂದಾರ ನೇರವಾಗಿ ಪಾದ್ರಿಗಳನ್ನು ಸ್ವಾಮಿಗಳ ವಿರುದ್ಧ ಎತ್ತಿ ಕಟ್ಟಬಹುದಾಗಿತ್ತು. ಆದರೆ ಅಂತಹ ಯಾವುದೇ ಘಟನೆ ನಡೆದಿರಲಿಲ್ಲ. ಅಮೆರಿಕ ತೊರೆದ ನಂತರ ಸ್ವಾಮಿಗಳು ಏನು ಮಾಡುತ್ತಿದ್ದಾರೆ ಎನ್ನುವುದು ಪ್ರತಾಪಚಂದ್ರ ಮಜುಂದಾರರಿಗೆ ಇತರರಿಗೆ ತಿಳಿಯುವಂತೆ ಪತ್ರಿಕೆ, ಪತ್ರಗಳ ಮೂಲಕ ಮಾತ್ರ ತಿಳಿಯುತ್ತಿದ್ದಿತು. ಎಂದರೆ ಭೋಗ ಭೂಮಿಯಾದ ಅಮೆರಿಕದಲ್ಲಿ ಸ್ವಾಮಿಗಳು ಹೇಗಿದ್ದಾರೆ ಎಂದು ತಿಳಿಯಲು ಗುರುಭಾಯಿಗಳು ಒಂದು ಉಪಾಯವನ್ನು ಹುಡುಕಿದ್ದರು. ಸ್ವಾಮಿಗಳನ್ನು ನೇರವಾಗಿ ಕೇಳಿದರೆ ಅವರು ಕೆರಳಬಹುದು , ಕೊಡವಿಹಾಕಬಹುದು , ನನಗೂ ನಿಮಗೂ ಸಂಬಂಧವಿಲ್ಲ ಎನ್ನಬಹುದು. ಅದರ ಬದಲು ಮಜುಂದಾರನ ಹೆಸರನ್ನು ಬಳಸಿಕೊಂಡು ಅತ ನಿನ್ನ ಬಗ್ಗೆ ಹಾಗೆನ್ನುತ್ತಿದ್ದಾನೆ , ಹೀಗೆನ್ನುತ್ತಿದ್ದಾನೆ , ಅದು ನಿಜವೇ , ಇದು ನಿಜವೇ ಎಂದು ಕೇಳಿ ಎಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯಲು ಸಾದ್ಯ ಎಂದು ಮನಗಂಡಿದ್ದರು.
ಡೆಟ್ರಾಯಿಟ್ ಫ್ರೀ ಪ್ರೆಸ್ -೮/೪/೧೮೯೪ ಮತ್ತು ಔಟ್ ಲುಕ್ –ಏಪ್ರಿಲ್ ೧೮೯೪ ಸಂಚಿಕೆಗಳಲ್ಲಿ ಆರ್.ಎ. ಹ್ಯೂಮ್ ಆರೋಪಗಳನ್ನು ಮಾಡಿದ್ದನು. ಸ್ವಾಮಿಗಳು ಈ ವಾದ ವಿವಾದಗಳಲ್ಲಿ ಸಕ್ರಿಯವಾಗಿ ಭಾಗಿಯಾಗದಿದ್ದರೂ ಮೇ ೧೮೯೪ ರಲ್ಲಿ ಜಾನ್ ಹೆನ್ರಿ ರೈಟ್’ಗೆ ‘ ಆ ಮುದುಕ ಮಿಷನರಿ ( ಆರ್.ಎ. ಹ್ಯೂಮ್) ನನ್ನ ವಿರುದ್ಧ ಹೇಳುವುದನ್ನು ಲೆಕ್ಕಿಸುವುದಿಲ್ಲ. ಆದರೆ ಮಜುಂದಾರನಲ್ಲಿ ಹುಟ್ಟಿರುವ ಹೊಟ್ಟೆಕಿಚ್ಚು ನನಗೆ ಆಘಾತವನ್ನುಂಟು ಮಾಡಿದೆ. ಆತನಿಗೆ ದೇವರು ಒಳ್ಳೆಯ ಬುದ್ಧಿ ಕೊಡಲೆಂದು ಬೇಡುವೆ. ಆತ ಒಳ್ಳೆಯವನು ಮತ್ತು ಶ್ರೇಷ್ಟ ವ್ಯಕ್ತಿ ಅಲ್ಲದೆ ಜೀನವವಿಡೀ ಒಳಿತನ್ನು ಮಾಡಲು ಹೆಣಗಿದಾತ’ ಎಂದಿದ್ದರು. ಜಾನ್ ಹೆನ್ರಿ ರೈಟ್’ಗೆ ತಾವು ಕೇಶವಚಂದ್ರ ಸೇನರೊಂದಿಗೆ ಎಂದಿಗೂ ಗುರುತಿಸಿಕೊಂಡಿರಲಿಲ್ಲ ಎನ್ನುವ ಸ್ಪಷ್ಟನೆಯನ್ನು ನೀಡಿದ್ದರು. (೨೪/೫/೧೮೯೪). ಹರಿದಾಸ ವಿಹಾರಿದಾಸ ದೇಸಾಯರ ಮುಂದೆ ಕ್ರೈಸ್ತರು . ಬ್ರಾಹ್ಮ ಸಮಾಜಿಗಳು ಅಡ್ಡಿಯಾಗಿದ್ದಾರೆಂದು ಮನದಟ್ಟು ಮಾಡಿಸಲು ಯತ್ನಿಸಿದ್ದರು. (೨೦/೬/೧೮೯೪). ಮಜುಂದಾರ್ ಕುರಿತಾಗಿ ಸ್ವಾಮಿಗಳು ಶ್ರೀಮತಿ ಜಾರ್ಜ್ ಹೇಲ್’ಗೆ ಬರೆಯುತ್ತ ‘ಇಂಟೀರಿಯರ್ ಪತ್ರಿಕೆ ತಲುಪಿತು. ಅದರಲ್ಲಿ ನನ್ನ ಮಿತ್ರರಾದ ಮಜುಂದಾರರ ಪುಸ್ತಕವನ್ನು ಪ್ರಶಂಶಿಸಿರುವುದನ್ನು ನೋಡಿ ನನಗೆ ಸಂತೋಷವಾಯಿತು. ಮಜುಂದಾರರರು ಶ್ರೇಷ್ಟ ಮತ್ತು ಒಳ್ಳೆಯ ವ್ಯಕ್ತಿ. ಜನರಿಗೆ ಬಹಳ ಒಳ್ಳೆಯದನ್ನು ಮಾಡಿರುತ್ತಾರೆ’ ಎಂದಿದ್ದಾರೆ (೧೯/೭/೧೮೯೪). ಸ್ವಾಮಿಗಳು ಇಲ್ಲಿ ಉಲ್ಲೇಖಿಸುತ್ತಿರುವ ಪುಸ್ತಕಗಳು ಮಜುಂದಾರ ಬೋಸ್ಟನ್’ನಲ್ಲಿ ಬರೆಯುತ್ತಿದ್ದ ಎರಡು ಪುಸ್ತಕಗಳಾಗಿದ್ದವು.
ಡಾರ್ಜಿಲಿಂಗ್’ನಲ್ಲಿ ಮಾಡಿದ ಭಾಷಣದಲ್ಲಿ ಪ್ರತಾಪಚಂದ್ರ ಮಜುಂದಾರ ಅಮೆರಿಕದಲ್ಲಿ ಸ್ವಾಮಿಗಳ ಜೀವನ ಶೈಲಿಯನ್ನೂ ಸಂಕೋಚವಿಲ್ಲದೆ ತಿಳಿಸಿ , ಸ್ವಾಮಿಗಳು ಭಾರತದ ಸಾಂಪ್ರದಾಯಿಕ ಸಂನ್ಯಾಸಿಯಂತೆ ಬದುಕುತ್ತಿಲ್ಲ ಎನ್ನುವುದನ್ನು ಮುಚ್ಚುಮರೆಯಿಲ್ಲದೆ ತಿಳಿಸಿದ್ದರು. ಇದು ಯೂನಿಟಿ ಅಂಡ್ ದಿ ಮಿನಿಸ್ಟರ್ ಪತ್ರಿಕೆಯ ೪/೬/೧೮೯೪ ಸಂಚಿಕೆಯಲ್ಲಿ ಪ್ರಕಟಗೊಂಡಿತು. ಇದನ್ನು ‘ದಿ ಇಂಡಿಯನ್ ಮಿರರ್’ ಉಗ್ರವಾಗಿ ವಿರೋಧಿಸಿ ೪/೮/೧೮೯೪ ರಂದು ಲೇಖನ ಮತ್ತು ೮/೮/೧೮೯೪ ರಂದು ಸಂಪಾದಕೀಯವನ್ನು ಬರೆಯಿತು. ಇದರಲ್ಲಿ ಸ್ವಾಮಿಗಳನ್ನು ಹಾಡಿ , ಹೊಗಳಿ , ವೈಭವೀಕರಿಸಿ , ದೈವತ್ವಕ್ಕೇರಿಸಿತಲ್ಲದೆ ಹೊಟ್ಟೆಕಿಚ್ಚು ಭಾರತೀಯರ ಅವಗುಣವೆಂದು ಅಬ್ಬರಿಸಿತು. ಇದು ‘ದಿ ಇಂಡಿಯನ್ ಮಿರರ್ ‘ ಮತ್ತು ಬ್ರಾಹ್ಮಸಮಾಜದ ಪತ್ರಿಕೆಗಳ ನಡುವೆ ವಾದ ವಿವಾದಗಳ ಬಿರುಗಾಳಿಯನ್ನೇ ಎಬ್ಬಿಸಿತು.
ಪ್ರತಾಪಚಂದ್ರ ಮಜುಂದಾರರ ಗುರು ಕೇಶವಚಂದ್ರ ಸೇನ ಮತ್ತು ರಾಮಕೃಷ್ಣರು ಹೇಗೆ ಪರಸ್ಪರ ಪ್ರಭಾವಿಸಲ್ಪಟ್ಟರು ಎನ್ನುವುದನ್ನು ೧೪/೧೧/೧೮೯೩ ರಂದು ಅಮೃತ ಬಜಾರ್ ಪತ್ರಿಕೆ ಗುರುತಿಸಿ ಬರೆದಿದ್ದಿತು. ಸ್ವಾಮಿಗಳಾಗಲಿ , ಇತರ ಗುರುಭಾಯಿಗಳಾಗಲಿ ತಮ್ಮ ಗುರುಗಳನ್ನು ಕುರಿತಾಗಿ ಈವರೆಗೆ ಒಂದು ಸಾಲನ್ನೂ ಬರೆದಿರಲಿಲ್ಲ. ೨೯/೯/೧೮೯೪ ರಂದು ಸ್ವಾಮಿಗಳು ಶ್ರೀಮತಿ ಹೇಲ್’ಗೆ ಪತ್ರ ಬರೆದು ‘ ಭಾರತದಿಂದ ಎರಡು ಪಾರ್ಸಲ್'ಗಳು ಬಂದಿವೆ…. ವರ್ತಮಾನ ಪತ್ರಿಕೆಗಳು…. ಎರಡನೇ ಪಾರ್ಸೆಲ್'ನಲ್ಲಿ ಎರಡು ಪ್ರಚಾರ ಪತ್ರಿಕೆಗಳಿವೆ. ಮಜುಂದಾರ್ ಅವರಿಂದ ಪ್ರಕಟವಾದ ನನ್ನ ಗುರುಗಳ ಸಂಕ್ಷಿಪ್ತ ಚರಿತ್ರೆ ತಲುಪಿದೆ. ಕೇಶವ ಚಂದ್ರ ಸೇನ ಮತ್ತು ಪ್ರತಾಪಚಂದ್ರ ಮಜುಂದಾರ ನನ್ನ ಗುರುವಿನ ಚರಿತ್ರೆಯಿಂದ ಕದ್ದು ಅದನ್ನು ತಮ್ಮ ನವಸಿದ್ಧಾಂತಗಳೆಂದು ಸಾರಿದುದು ಹೇಗೆಂದು ತೋರಿಸುತ್ತದೆ’ ಎಂದು ದೂರಿದ್ದಾರೆ. ಪ್ರತಾಪಚಂದ್ರ ಮಜುಂದಾರರು ಹದಿನಾರು ವರ್ಷಗಳ ಹಿಂದೆ ಬರೆದ ಪುಸ್ತಕವಿದು. ರಾಮಕೃಷ್ಣರು ಇದಾದ ನಂತರ ಏಳು ವರ್ಷಗಳ ಕಾಲ ಜೀವಿಸಿದ್ದರು. ಅವರ ಧೀರ ಶಿಷ್ಯರಾಗಿ ಸ್ವಾಮಿಗಳು ಪುಸ್ತಕ ಪ್ರಕಟವಾದ ನಂತರ ೧೪ ವರ್ಷಗಳ ಕಾಲ ಭಾರತದಲ್ಲಿಯೇ ಇದ್ದರು. ಅಲ್ಲಿರುವಾಗ ಕೇಶವಚಂದ್ರ ಸೇನರು ತಮ್ಮ ಗುರುಗಳ ಬೋಧನೆಗಳನ್ನು ಕದ್ದು ತಮ್ಮವೆಂದು ಹೇಳಿಕೊಳ್ಳುತ್ತಾರೆಂದು ಹೇಳುವ ಎಲ್ಲ ಅವಕಾಶಗಳು ಸ್ವಾಮಿಗಳ ಮುಂದಿದ್ದವು. ಅದನ್ನು ಅವರು ಎಂದಿಗೂ ಮಾಡಲಿಲ್ಲ. ಅಮೆರಿಕಕ್ಕೆ ಬಂದ ನಂತರ ಅವರು ಭಾರತದಲ್ಲಿ ಖ್ಯಾತರಾಗಿದ್ದರು. ಹಾಗಾಗಿ ಅವರು ಲೇಖನವೊಂದನ್ನು ಭಾರತೀಯ ಪತ್ರಿಕೆಗಳಿಗೆ ಕಳಿಸಿ ಕೇಶವಚಂದ್ರ ಸೇನ, ಪ್ರತಾಪಚಂದ್ರ ಮಜುಂದಾರರ ಸಣ್ಣತನವನ್ನು ಬಯಲಿಗೆ ಎಳೆಯಬಹುದಿದ್ದಿತು. ಆದರ ಬದಲು ಭಾರತದ ಬಗ್ಗೆ , ರಾಮಕೃಷ್ಣರ ಬಗ್ಗೆ ಏನನ್ನೂ ತಿಳಿಯದ ಶ್ರೀಮತಿ ಹೇಲ್ ಮುಂದೆ ಸ್ವಾಮಿಗಳು ಚಾಡಿ ಹೇಳಿದ್ದರು. ಪ್ರತಾಪಚಂದ್ರ ಮಜುಂದಾರ ಬರೆದ ಇದೇ ಪುಸ್ತಕವನ್ನು ಸ್ವಾಮಿಗಳು ಹಂಚುತ್ತಿರುವುದು ಒಂದು ವ್ಯಂಗ್ಯವಾಗಿದ್ದಿತು.
ಸ್ವಾಮಿಗಳು ತಮ್ಮ ತೊಂದರೆಗಳಿಗೆ ಇತರರನ್ನು ದೂರುವುದು , ಅವರ ಮೇಲೆ ಆರೋಪ ಹೊರಿಸಿವುದು ಹೇಲ್ ಕುಟುಂಬದ ಸದಸ್ಯರಿಗೆ ಸರಿ ಕಂಡಿರಲಿಲ್ಲ. ೨೬/೨/೧೮೯೫ ರಂದು ಮೇರಿ ಹೇಲ್ ಮೂಲಕ ಶ್ರೀಮತಿ ಜಾರ್ಜ್ ಹೇಲ್ ಬರೆಸಿರುವಂತೆ ಕಾಣುವ ಪತ್ರದಲ್ಲಿ ಅದೇ ಕಥೆಯೊಂದಿಗೆ , ಅದೇ ವಾದದೊಂದಿಗೆ ಅದೇ ಹುರುಪಿನಲ್ಲಿ ಪ್ರೀತಿಯಿಲ್ಲದ ಕಡು ಹಗೆತನದಿಂದ ಕೂಡಿದ ದೂಷಣೆ ತುಂಬಿದ ಕಹಿಯಾದ ಎರಡನೆಯ ಪತ್ರ ಬಂದಿರುವುದನ್ನು ಉಲ್ಲೇಖಿಸಿ ಒಂದು ವರ್ಷದ ಹಿಂದಿದ್ದ ಮಾನವ ಪ್ರೀತಿಯ ವಿವೇಕಾನಂದನ ಜಾಗದಲ್ಲಿ ಬೇರೊಬ್ಬ ವಿವೇಕಾನಂದ ಮೈದಳೆದಿರುವುದಕ್ಕೆ ವಿಷಾದಿಸಲಾಗಿದ್ದಿತು. ಸ್ವಾಮಿಗಳು ತಮಗೆ ಎದುರಾದ ಯಾವುದೇ ಸಂಕಟಕ್ಕೆ ಹೇಲ್ ಸೋದರಿಯರು ಕಾರಣರೆಂದು ಭಾವಿಸಿ ಬರೆದ ಪತ್ರಕ್ಕೆ ಉತ್ತರವಾಗಿ ಈ ಪತ್ರವನ್ನು ಬರೆದಿರುವುದು ಸ್ಪಷ್ಟ. ಶ್ರೀಮತಿ ಜಾರ್ಜ್ ಹೇಲ್’ನಂತೆಯೇ ಸ್ವಾಮಿಗಳ ಮಹಾಪೋಷಕಳಾದ ಸಾರಾ ಬುಲ್’ಗೆ ಕೂಡ ಸ್ವಾಮಿಗಳ ತೊಂದರೆಗೆ ಕ್ರೈಸ್ತ ಪಾದ್ರಿಗಳಾಗಲಿ , ಪ್ರತಾಪಚಂದ್ರ ಮಜುಂದಾರರಾಗಲಿ ಕಾರಣವಲ್ಲ , ಅದಕ್ಕೆ ಸ್ವಾಮಿಗಳ ಅಭ್ಯಾಸ , ಜೀವನ ಶೈಲಿಗಳು ಕಾರಣವೆಂದು ಮನದಟ್ಟಾಗಿರುವುದು ಸಾರಾ ಬುಲ್ ೧೨/೮/೧೮೯೫ ರಂದು ಲೇಡಿ ಹೆನ್ರಿ ಸಾಮರ್’ಸೆಟ್’ಗೆ ಬರೆದ ಪತ್ರ ಪುರಾವೆಯಾಗಿದೆ. (138) ಈ ಪತ್ರದಲ್ಲಿ ಸಾರಾ ಬುಲ್ ‘ ನಾನು ಪ್ರತಾಪಚಂದ ಮಜುಂದಾರರಿಗೆ ಪತ್ರ ಬರೆದಿದ್ದೆ. ಅದಕ್ಕೆ ಉತ್ತರಿಸಿರುವ ಅವರು ವಿವೇಕಾನಂದರ ಗುರುಗಳ ಬಗ್ಗೆ ಹೊಂದಿರುವ ಪೂಜ್ಯ ಭಾವನೆಯನ್ನು ಮತ್ತೊಮ್ಮೆ ಧೃಢೀಕರಿಸಿರುವುದು ಮಾತ್ರವಲ್ಲದೆ ಭಾರತದಲ್ಲಿ ಸ್ವಾಮಿಗಳ ವಿರುದ್ಧ ತಾವು ಅಪಪ್ರಚಾರ ನಡೆಸುತ್ತಿದ್ದಾರೆ ಎನ್ನುವುದು ಆಧಾರರಹಿತ ಎಂದು ಸ್ಪಷ್ಟನೆ ನೀಡಿದ್ದಾರೆ. ಸ್ವಾಮಿಗಳಿಗೆ ತಮ್ಮ ವೈಯಕ್ತಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ ‘ ಎಂದು ಬರೆದಿದ್ದಾಳೆ. ಸ್ವಾಮಿಗಳು ಪ್ರತಾಪಚಂದ್ರ ಮಜುಂದಾರ ಭಾರತದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ ಎಂದು ಸಾರಾ ಬುಲ್ ಮುಂದೆ ಮೇಲಿಂದ ಮೇಲೆ ಹೇಳುತ್ತಿದ್ದುದರಿಂದ ಅದರ ಸತ್ಯಾಸತ್ಯತೆ ತಿಳಿಯಲು ಆಕೆ ನೇರವಾಗಿ ಪ್ರತಾಪಚಂದ್ರ ಮಜುಂದಾರರಿಗೆ ಪತ್ರ ಬರೆದಿದ್ದಳು. ಸಾರಾ ಬುಲ್ ಪ್ರತಾಪಚಂದ ಮಜುಂದಾರರಿಂದ ನೇರ ಉತ್ತರ ಪಡೆದ ನಂತರ ಸ್ವಾಮಿಗಳು ಅವರನ್ನು ದೂರಲು ಯಾವುದೇ ಸಾಕ್ಷ್ಯಾಧಾರಗಳಿರಲಿಲ್ಲ.
ಸ್ವಾಮಿಗಳು ೯/೯/೧೮೯೪ ಮತ್ತು ೨೭/೯/೧೮೯೪ ರಂದು ಅಳಸಿಂಗ ಪೆರುಮಾಳ್’ಗೆ ರೆ. ಕಾಳೀಚರಣ ಬ್ಯಾನರ್ಜಿ ಮತ್ತು ರೆ.ರಾಬರ್ಟ್ ಎ. ಹ್ಯೂಮ್ ಮೇಲೆ ಪತ್ರಿಕೆಗಳ ಮೂಲಕ ದಾಳಿ ಮಾಡಲು ತಿಳಿಸಿದ್ದರಾದರೂ ಪ್ರತಾಪಚಂದ್ರ ಮಜುಂದಾರರ ಮೇಲೆ ಪತ್ರಿಕೆಗಳ ಮೂಲಕ ಸಾರ್ವಜನಿಕವಾಗಿ ದಾಳಿ ಮಾಡಲು ತಿಳಿಸಿರಲಿಲ್ಲ. ಪ್ರತಾಪಚಂದ್ರ ಮಜುಂದಾರರ ಮೇಲೆ ಸ್ವಾಮಿಗಳಿಗಿದ್ದ ಸಿಟ್ಟು ಖಾಸಗಿ ಪತ್ರಗಳಿಗೆ ಸೀಮಿತವಾಗಿದ್ದಿತು ಇದು ಏಕೆ ? ಸ್ವಾಮಿಗಳು ಶ್ರೀಮತಿ ಜೆ.ಜೆ ಬ್ಯಾಗ್ಲಿಯ ಮನೆಯಲ್ಲಿರುವಾಗ ಆಕೆಯ ಹೆಣ್ಣಾಳಿನೊಂದಿಗೆ ಅನುಚಿತವಾಗಿ ನಡೆದುಕೊಂಡರೆನ್ನುವ ಗಾಳಿಸುದ್ದಿ ಹಬ್ಬಿದ್ದಿತು. ಆಗ ಡಾ. ಲೆವಿಸ್ ಜೇನ್ಸ್ ಸ್ವಾಮಿಗಳ ಪರ ನಿಂತು ದಿಟ್ಟವಾಗಿ ಹೋರಾಡಿದ್ದನು. ಅದರಂತೆ ರಮಾಬಾಯಿ ಸರ್ಕಲ್ ಸ್ವಾಮಿಗಳನ್ನು ಇಕ್ಕಟ್ಟಿಗೆ ಸಿಲುಕಿದಾಗ ಡಾ.ಲೆವಿಸ್ ಜಿ. ಜೇನ್ಸ್ ಮತ್ತು ಸಂಗಡಿಗರು ‘ಮದ್ದು ,ಗುಂಡು’ಗಳೊಂದಿಗೆ ಸ್ವಾಮಿಗಳ ಪರ ಕದನಕ್ಕೆ ಇಳಿದಿದ್ದರು. ಮಜುಂದಾರ , ನಗರ್ಕರ್ , ಜಿಯಾನ್ನೆ ಸೊರಾಬ್ಜಿ ಮತ್ತು ಥಿಯೋಸೊಫಿಸ್ಟರು ಸ್ವಾಮಿಗಳನ್ನು ಕುರಿತಾಗಿ ಅಪಪ್ರಚಾರ ನಡೆಸುತ್ತಿದ್ದರೆ ಅವರು ಸುಮ್ಮನಿದ್ದರೆ? ಸ್ವಾಮಿಗಳು ಯೂನಿಟೇರಿಯನ್ ಚರ್ಚ್’ಗಳಲ್ಲಿ ಹಲವು ಭಾಷಣಗಳನ್ನು ನೀಡಿದರು. ಈ ಭಾಷಣಗಳಿಗೆ ಕ್ರೈಸ್ತ ಪಾದ್ರಿಗಳು , ಮಿನಿಸ್ಟರ್’ಗಳು ಹಾಜರಾಗುತ್ತಿದ್ದರು. ಅವರಲ್ಲಿ ಹಲವರು ಪ್ರತಾಪಚಂದ್ರ ಮಜುಂದಾರರ ಆತ್ಮೀಯ ಗೆಳೆಯರಾಗಿದ್ದರು. ಪ್ರತಾಪಚಂದ್ರ ಮಜುಂದಾರ ಸ್ವಾಮಿಗಳ ಬಗ್ಗೆ ಹೊಟ್ಟೆಕಿಚ್ಚು ಪಟ್ಟಿದ್ದರೆ ಅವರ ಚರ್ಚ್ ವೇದಿಕೆಗಳಿಂದ ಸ್ವಾಮಿಗಳು ಭಾಷಣ ಮಾಡುವುದನ್ನು ತಡೆಯುವುದು ಸಾದ್ಯವಿದ್ದಿತು. ಮಜುಂದಾರ್ ಮಿಷನರಿ ಫಂಡ್ ಸ್ಥಾಪನೆ ಮಾಡಲು ನೆರವಾಗಿದ್ದ ಎಡ್ವರ್ಡ್ ಎವೆರೆಟ್ ಹೇಲ್ ಸ್ವಾಮಿಗಳ ಕಿರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದನು . ಆದ್ದರಿಂದ ಪಾದ್ರಿಗಳು , ಮಜುಂದಾರ ಮತ್ತು ಬ್ರಾಹ್ಮ ಸಮಾಜಿಗಳು ಹೊಟ್ಟೆಕಿಚ್ಚಿನಿಂದ ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎನ್ನುವುದು ಸ್ವಾಮಿಗಳ ತಲೆಯಲ್ಲಿ ತುಂಬಿದ್ದಿತೇ ಹೊರತು ವಾಸ್ತವದಲ್ಲಿ ಇರಲಿಲ್ಲ.
ಮ್ಯಾಕ್ಸ್ ಮುಲ್ಲರ್ ಬರೆದ ಲೇಖನಕ್ಕೆ ಪ್ರತಾಪಚಂದ್ರ ಮಜುಂದಾರ ಪ್ರತಿಕ್ರಿಯೆ ನೀಡಿರುವುದು ಬ್ರಾಹ್ಮ ಸಮಾಜದ ‘ದಿ ಇಂಟರ್’ಪ್ರೆಟರ್’ ಪತ್ರಿಕೆಯಲ್ಲಿ ಬಂದಿದ್ದಿತು. ಅದನ್ನು ಬ್ರಹ್ಮಾನಂದರ ಸ್ವಾಮಿಗಳಿಗೆ ಕಳಿಸಿದ್ದರು. ೨೦/೧೨/೧೮೯೬ ರಂದು ಅದಕ್ಕೆ ಉತ್ತರಿಸುತ್ತ ‘…ನಾನು ಲಂಡನ್ ಬಿಡುವ ಮೊದಲು ನೀನು ಕಳಿಸಿದ ಪತ್ರ ಮತ್ತು ಪತ್ರಿಕೆ ತಲುಪಿದವು. ‘ಮಜುಂದಾರನ ಹುಚ್ಚನ್ನು ಗಮನಿಸಬೇಡ. ಅವನು ಅಸೂಯೆಯಿಂದ ಹುಚ್ಚನಾಗಿ ಹೋಗಿರುವನು. ಅವನು ಬಳಸುವಂತಹ ಅಶ್ಲೀಲ ಭಾಷೆಯನ್ನು ಸುಸಂಸ್ಕೃತರು ನೋಡಿದರೆ ನಗುವರು. ಅವನು ಅಂತಹ ಅಶ್ಲೀಲ ಪದಗಳನ್ನು ಬಳಸಿ ತನ್ನ ಉದ್ದೇಶವನ್ನೇ ಕೆಡಿಸಿಕೊಂಡಿರುವನು. ಹರಮೋಹನ ಅಥವಾ ಇತರರು ಬ್ರಾಹ್ಮ ಸಮಾಜದವರೊಂದಿಗೆ ಜಗಳ ತೆಗೆಯಕೂಡದು. ನಮಗೆ ಯಾವ ಪಂಗಡದೊಂದಿಗೂ ವೈಮನಸ್ಯವಿಲ್ಲ ಎಂದು ಜನರಿಗೆ ತೋರಿಸಬೇಕು. ಯಾರಾದರೂ ಜಗಳ ತೆಗೆದರೆ ಅವರು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಮಾಡುತ್ತಿರುವರು.... ಹರಮೋಹನನಿಗೆ ನೀನು ಯಾವ ಪುಸ್ತಕವನ್ನೂ ಮುದ್ರಿಸಲು ಅವಕಾಶ ಕೊಡಬೇಡ. ಅವನು ಮಾಡುವ ಕಳಪೆ ಮದ್ರಣದಿಂದ ಸಾರ್ವಜನಿಕರಿಗೆ ಮೋಸ. ಬ್ರಹ್ಮವಾದಿನ್’ನಲ್ಲಿ ಪ್ರಕಟವಾದ ಶ್ರೀ ರಾಮಕೃಷ್ಣರ ಉಪದೇಶಗಳು ಸರಿಯಿಲ್ಲ , ಅವು ಬರಿ ಸುಳ್ಳೆಂದು ಮಜುಂದಾರ ಹೇಳುತ್ತಾನೆ. ಅದು ಹಾಗಿದ್ದರೆ ಸುರೇಶದತ್ತ ಮತ್ತು ರಾಮಬಾಬು ಆತನಿಗೆ ವಿರೋಧವಾಗಿ ಇಂಡಿಯನ್ ಮಿರರ್’’ನಲ್ಲಿ ಟೀಕೆ ಬರೆಯಲು ಹೇಳು. ನಾನು ಆ ಉಕ್ತಿಗಳನ್ನು ಸಂಗ್ರಹಿಸುವುದರಲ್ಲಿ ಯಾವ ಕೆಲಸವನ್ನೂ ಮಾಡದೇ ಇರುವುದರಿಂದ ಅವುಗಳ ವಿಷಯದಲ್ಲಿ ನಾನು ಏನನ್ನೂ ಹೇಳಲಾರೆ’ ವಿ.ಸೂ ಈ ಮೂಢನನ್ನು ಗಮನಿಸಬೇಡ .’ಹಳೆಯ ಮೂಢನಿಗಿಂತ ಬೇರೆಮೂಢನಿಲ್ಲ ‘ ಎಂಬ ಗಾದೆಯೇ ಇದೆ. ಅವರೆಲ್ಲ ಸ್ವಲ್ಪ ಬೊಗಳಲಿ. ಅವರಿದ್ದ ಕೆಲಸ ಹೋಯಿತು. ಬೊಗಳುವುದರಲ್ಲಿ ಸ್ವಲ್ಪ ತೃಪ್ತಿ ಪಡಲಿ’ ಎಂದಿದ್ದರು.
ಸ್ವಾಮಿಗಳು ಬರೆದ ಈ ಪತ್ರ ಹಲವು ನಿಟ್ಟಿನ ವಿಶ್ಲೇಷಣೆಗ ಅರ್ಹವಾಗಿದೆ. ೯/೪/೧೮೯೪ ರಂದು ಅಳಸಿಂಗ ಪೆರುಮಾಳ್’ಗೆ ‘ .. ನಾನು ಕೆಲಸ ಮಾಡದೆ ಮಾತನಾಡಲು ಇಚ್ಛಿಸುವುದಿಲ್ಲ. ಜಿ.ಸಿ ಘೋಷ್ ಮತ್ತು ಮಿತ್ರ (ಹರಮೋಹನ) ಇವರು ಹಾಗೂ ನನ್ನ ಗುರುದೇವರನ್ನು ಮೆಚ್ಚುವ ಎಲ್ಲರನ್ನೂ ಒಗ್ಗೂಡಿಸಿ ಕಲ್ಕತ್ತದಲ್ಲಿ ಇದೇ ರೀತಿ ಸಭೆ ಸೇರಿಸಬಹುದು ‘ ಎನ್ನುವ ಸೂಚನೆ ನೀಡಿದ್ದರು. ಹರಮೋಹನ ಮಿತ್ರ ಸ್ವಾಮಿಗಳನ್ನು ಕುರಿತಾಗಿ ಅಮೆರಿಕ ಪತ್ರಿಕೆಗಳು ನೀಡಿದ ಸುದ್ದಿ , ಬರೆದಿದ್ದ ವರದಿ , ಭಾರತೀಯ ಪತ್ರಿಕೆಗಳ ಸಂಪಾದಕೀಯ , ಮೆರ್ವಿನ್ ಮಾರಿ ಸ್ನೆಲ್ ಪತ್ರ ಮುಂತಾದವುಗಳನ್ನೆಲ್ಲ ಸಂಗ್ರಹಿಸಿ ಸಿದ್ಧ ಪಡಿಸಿದ್ದ ಕರಪತ್ರದ ೫೦೦೦ ಪ್ರತಿಗಳನ್ನು ಮುದ್ರಿಸಿ ಕಲ್ಕತ್ತ . ಮದ್ರಾಸ್’ನಲ್ಲಿ ಹಂಚಿದಾಗ ಸ್ವಾಮಿಗಳಿಗೆ ಆನಂದವಾಗಿದ್ದಿತು. ಇವೇ ಕರಪತ್ರಗಳನ್ನು ಅಮೆರಿಕದಲ್ಲಿ ಗೆಳೆಯರಿಗೆ ಹಂಚಿದ್ದರು. ಈಗ ಅದೇ ಹರಮೋಹನ ಮಿತ್ರ ಕಳಪೆ ಮುದ್ರಣ ಮಾಡುವ, ಸಾರ್ವಜನಿಕರಿಗೆ ಮೋಸಮಾಡುವ ವ್ಯಕ್ತಿಯಾಗಿ ಕಂಡಿದ್ದಾನೆ.
ಬ್ರಹ್ಮವಾದಿನ್ ಪತ್ರಿಕೆಯಲ್ಲಿ ರಾಮಕೃಷ್ಣರ ಹೆಸರಿನಲ್ಲಿ ಪ್ರಕಟವಾದ ಸೂಕ್ತಿಗಳು ರಾಮಕೃಷ್ಣರ ಬೋಧನೆಯಂತೆ ಇಲ್ಲ, ಅವುಗಳನ್ನು ಅವರ ಶಿಷ್ಯರು ಕಟ್ಟಿದ್ದಾರೆ ಎನ್ನುವುದು ಪ್ರತಾಪಚಂದ್ರ ಮಜುಂದಾರನ ಟೀಕೆಯಾಗಿದ್ದಿತು. ಈ ಟೀಕೆಗೆ ಪ್ರತಿಯಾಗಿ ಆ ಸೂಕ್ತಿಗಳು ರಾಮಕೃಷ್ಣರವೇ ಎಂದು ಅವರ ಭೀಮ ಶಿಷ್ಯರಾದ ಸ್ವಾಮಿಗಳು ಸಾಧಿಸಬೇಕಾಗಿದ್ದಿತು ಇಲ್ಲವೇ ತಪ್ಪುಗಳನ್ನು ತಿದ್ದಬೇಕಾಗಿದ್ದಿತು. ನಾನು ಆ ಸೂಕ್ತಿಗಳನ್ನು ಸಂಗ್ರಹಿಸಿಲ್ಲ , ಅವುಗಳ ಬಗ್ಗೆ ನಾನು ಏನನ್ನೂ ಹೇಳಲಾರೆ ಎನ್ನುವ ರಾಮಕೃಷ್ಣರ ಅವತಾರಕ್ಕೆ ಪೂರಕವಾಗಿ ಅವತಾರ ಎತ್ತಿ ಬಂದಿದ್ದ ಸ್ವಾಮಿಗಳು ನುಣುಚಿಕೊಳ್ಳುತ್ತಿದ್ದಾರೆ. ಸ್ವಾಮಿಗಳು ನೇರವಾಗಿ ಸಂಗ್ರಹಿಸದಿದ್ದರೇನಂತೆ , ಅವು ರಾಮಕೃಷ್ಣರ ಬೋಧನೆಗೆ ತಾಳೆಯಾಗುತ್ತವೆಯೋ ಇಲ್ಲವೋ ಎಂದು ಪರಿಶೀಲಿಸಲು ಯಾವುದೇ ಅಡೆತಡೆಗಳಿರಲಿಲ್ಲ. ತಮಗೇ ಗೊತ್ತಿಲ್ಲದ ಅವುಗಳನ್ನು ಸಮರ್ಥಿಸಿಕೊಳ್ಳುವಂತೆ ಇತರರನ್ನು ಪ್ರಚೋದಿಸುತ್ತಿದ್ದಾರೆ. ತಮ್ಮ ಪರವಾಗಿ ಇತರರನ್ನು ಹೋರಾಟಕ್ಕೆ ಇಳಿಸುವುದು ಸ್ವಾಮಿಗಳು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ತಂತ್ರವಾಗಿದ್ದಿತು. ಬಂಗಾಳಿ ಭಾಷಾ ಅಭಿಮಾನದ ಹಿನ್ನೆಲೆಯಲ್ಲಿ ಸ್ವಾಮಿಗಳನ್ನು ದೈವೀ ಪುರುಷರನ್ನಾಗಿಸಿದ ನರೇಂದ್ರನಾಥ ಸೇನರ ‘ದಿ ಇಂಡಿಯನ್ ಮಿರರ್’ ಗೆ ಪತ್ರ ಬರೆಯಲು ಯಾವಾಗಲೂ ಗುರುಭಾಯಿಗಳಿಗೆ , ಶಿಷ್ಯರಿಗೆ ತಿಳಿಸುತ್ತಿದ್ದರು. ಇತರ ಪತ್ರಿಕೆಗಳು ತಮ್ಮ ಪತ್ರಗಳನ್ನು ಪ್ರಕಟಿಸದಿರಬಹುದು ಅಥವಾ ಪ್ರಕಟಿಸಿದರೂ ವಿರೋಧಿಗಳು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಅವಕಾಶ ಕೊಡಬಹುದೆನ್ನುವ ಭಯವೇ ಇದಕ್ಕೆ ಕಾರಣವಾಗಿದ್ದಿತು. ನಿರ್ವಿಕಲ್ಪ ಸಮಾಧಿ ತಲುಪಿದ ಸ್ವಾಮಿಗಳು ‘ಮೂಢ , ಬೊಗಳಲಿ ‘ ಎಂದು ಬಳಸಿದ ಭಾಷೆ ಪ್ರತಾಪಚಂದ್ರ ಮಜುಂದಾರ ಭಾಷೆಗಿಂತ ಕಳಪೆಯಾಗಿದ್ದು ಸ್ವಾಮಿಗಳ ದುರ್ಬಲ ಸ್ಥಾನದಲ್ಲಿರುವುದನ್ನು ಖಚಿತಪಡಿಸುತ್ತದೆ. ತಾತ್ತ್ವಿಕ ಹೋರಾಟ ನಡೆಸಲು ಆಗದಿದ್ದಾಗ ದೂಷಣೆ , ರೋಷಗಳು ಬರುವುದು ಸಹಜವೇ ಆಗಿದೆ.
೧೮೯೭ ರಲ್ಲಿ ಸ್ವಾಮಿಗಳು ಭಾರತಕ್ಕೆ ಮರಳಿದರು. ಅದಾದ ನಂತರ ೨೪/೭/೧೯೦೨ ರಂದು ತೀರಿಕೊಳ್ಳುವವರೆಗೆ ೨೪೫ ಪತ್ರಗಳನ್ನು ಬರೆದರು. ಅವು ಯಾವುದರಲ್ಲಿಯೂ ಪ್ರತಾಪಚಂದ್ರ ಮಜುಂದಾರರ ಹೆಸರಿಲ್ಲ. ಇದಕ್ಕೆ ಕಾರಣ ಹುಡುಕುವುದು ಕಷ್ಟವಿಲ್ಲ. ಮದ್ರಾಸ್’ನಲ್ಲಿ ಆವೇಶದ ಭಾಷಣ ಮಾಡಿದ ನಂತರ ಸ್ವಾಮಿಗಳಿಗೆ ವಾಸ್ತವ ಸ್ಥಿತಿ ಮನದಟ್ಟಾಗತೊದಗಿದ್ದಿತು. ಬ್ರಾಹ್ಮ ಸಮಾಜಿಗಳು ತಮಗೆ ಅಡಚಣೆ ಉಂಟು ಮಾಡಿದರೆಂದು ತೋರಿಸಲು ಯಾವುದೇ ಪುರಾವೆ ಇರಲಿಲ್ಲ. ಬ್ರಾಹ್ಮ ಸಮಾಜಿಗಳ ಮೇಲೆ ಏರಿ ಹೋಗಿದ್ದರೆ ಭಾರತದ ನೆಲದಲ್ಲಿಯೇ ಅವರು ಸ್ವಾಮಿಗಳಿಗೆ ಸವ್ವಾ ಸೇರಿನ ಉತ್ತರ ಕೊಡುತ್ತಿದ್ದರು. ಆದ್ದರಿಂದಲೇ ಸ್ವಾಮಿಗಳು ಉಪಾಯವಾಗಿ ಅಖಾಡದಿಂದ ಹೊರ ಸರಿದಿದ್ದರು.
ಸ್ವಾಮಿ ವಿವೇಕಾನಂದರು ಬ್ರಾಹ್ಮ ಸಮಾಜದವರ ಮೇಲೆ ಅನೇಕ ವೇಳೆ ಕೆಂಡ ಕಾರಿರುವುದಕ್ಕೆ ಒಂದು ಹಿನ್ನೆಲೆಯನ್ನು ಮಹೇಂದ್ರನಾಥ ದತ್ತ ನೀಡಿದ್ದಾರೆ. ಸುರೇಶಮಿತ್ರರು ರಾಮಕೃಷ್ಣರ ರಸದ್ದಾರರಲ್ಲಿ ಒಬ್ಬರು. ಇವರ ಎರಡನೆಯ ತಮ್ಮ ಮಹೇಂದ್ರ ಮಿತ್ರ-ಶಿಯಲ್ದಾ ಮತ್ತು ಹೌರಗಳ ಕೆಳಮಟ್ಟದ ನ್ಯಾಯಾಲಯಗಳ ನ್ಯಾಯಾಧೀಶರು. ಇವರ ನೆರೆಯವರು ಮತ್ತು ಗೆಳೆಯರು ರಾಜಮೋಹನ ಬಸು. ಇವರು ನವವಿಧಾನ ಬ್ರಹ್ಮ ಸಮಾಜದ ಸದಸ್ಯರು. ಮಹೇಂದ್ರ ಮಿತ್ರ ರಾಮಕೃಷ್ಣ , ಸ್ವಾಮಿ ವಿವೇಕಾನಂದರ ಅಭಿಮಾನಿ. ರಾಜಮೋಹನ ಬಸು ಪ್ರತಾಪಚಂದ್ರ ಮಜುಂದಾರರ ಬೆಂಬಲಿಗ. ಇವರಿಬ್ಬರ ತಾತ್ವಿಕ ಸಂಘರ್ಷ ಕೆಲವೊಮ್ಮೆ ಹೊಡೆದಾಟದ ಮಟ್ಟಕ್ಕೂ ಹೋಗುತ್ತಿದ್ದಿತು. ಹರಮೋಹನ ಮಿತ್ರ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಉಗ್ರ ಅಭಿಮಾನಿ . ಸ್ವಾಮಿ ವಿವೇಕಾನಂದರನ್ನು ಕುರಿತಾದ ಎಲ್ಲ ಪತ್ರಿಕೆಯ ಮಾಹಿತಿಗಳನ್ನು ಸಂಗ್ರಹಿಸಿ ಕರಪತ್ರ ಅಚ್ಚು ಹಾಕಿಸಿ ಹಂಚಿದಾತ. ಈತನ ಮನೆ ಸ್ವಾಮಿ ವಿವೇಕಾನಂದರ ಮನೆಯ ಹತ್ತಿರ. ಸಾಧಾರಣ ಬ್ರಹ್ಮ ಸಮಾಜವೂ ಸಮೀಪದಲ್ಲಿದ್ದಿತು. ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಪರವಾಗಿ ಸಾಧಾರಣ ಬ್ರಹ್ಮ ಸಮಾಜದ ಸದಸ್ಯರೊಂದಿಗೆ ಈತ ಆಗಾಗ್ಗೆ ತಿಕ್ಕಾಟ ನಡೆಸುತ್ತಿದ್ದನು. ಇದು ಕೆಲವೊಮ್ಮೆ ದೈಹಿಕ ಹಲ್ಲೆಯ ಮಟ್ಟಕ್ಕೂ ಹೋಗುತ್ತಿದ್ದಿತು. (139) ಹರಮೋಹನ ಮಿತ್ರ ಸ್ವಾಮಿಗಳನ್ನು ಕುರಿತಾದ ಪತ್ರಿಕೆಗಳ ತುಣುಕುಗಳನ್ನು ಸಂಗ್ರಹಿಸಿ ಕರಪತ್ರಗಳನ್ನು ಸಿದ್ಧಪಡಿಸುವಾಗ ಅವರನ್ನು ಟಿಕಿಸುವ , ವಿಮರ್ಶಿಸುವ , ಪ್ರಶ್ನಿಸುವ ಇತರ ಎಲ್ಲ ಪತ್ರಿಕೆ ವರದಿಗಳನ್ನು ಕೈಬಿಟ್ಟಿದ್ದನು. ಮುಂದೆ ರಾಮಕೃಷ್ಣ ಪಂಥದವರು , ಅಭಿಮಾನಿಗಳು ಇದೇ ದಾರಿ ತುಳಿಯಲು ಇದು ನಾಂದಿಯಾಯಿತು.
ಥಿಯೊಸೊಫಿಸ್ಟರು : ಸ್ವಾಮಿಗಳ ಜೀವನ ಚರಿತ್ರೆಯಲ್ಲಿ ಬರುವ ದುಷ್ಟತ್ರಯರಲ್ಲಿ ಥಿಯೊಸೊಫಿಸ್ಟರು ಮೂರನೆಯವರು. ಸ್ವಾಮಿಗಳು ಬರೆದ ಪತ್ರಗಳು ಮತ್ತು ಮದ್ರಾಸಿನಲ್ಲಿ ಮಾಡಿದ ಭಾಷಣ ಇದಕ್ಕೆ ಹಿನ್ನೆಲೆಯೊದಗಿಸುತ್ತದೆ. ೨೮/೬/೧೮೯೪ ರಂದು ಅಳಸಿಂಗ ಪೆರುಮಾಳ್’ಗೆ ಸ್ವಾಮಿಗಳು ಕಳೆದ ಜನಗಣತಿಯಂತೆ ಅಮೆರಿಕದಲ್ಲಿ ಥಿಯೊಸೊಫಿಸ್ಟರ ಸಂಖ್ಯೆ ೬೨೫ ಎಂದು ತಿಳಿಸಿದ್ದರು. ಈ ‘ಭಾರಿ ಸಂಖ್ಯೆ’ಯ ಥಿಯೊಸೊಫಿಸ್ಟರು ಅಮೆರಿಕವನ್ನೇ ‘ಗೆದ್ದ’ ಸ್ವಾಮಿಗಳಿಗೆ ಅಡಚಣೆ ಉಂಟು ಮಾಡಿರುವುದು ಎಂತಹ ಸೋಜಿಗ !! ಸ್ವಾಮಿಗಳು ಥಿಯೊಸೊಫಿಸ್ಟರ ಬಗ್ಗೆ ಏನು ಬರೆದಿದ್ದಾರೆ ನೋಡೋಣ -
‘ಥಿಯೊಸೊಫಿಸ್ಟರೊಡನೆ ಜಗಳವಾಡುವುದರಿಂದ ಏನೂ ಪ್ರಯೋಜನವಿಲ್ಲ. ನಾನು ನಿನಗೆ ಬರೆಯುತ್ತಿರುವುದೆನ್ನೆಲ್ಲ ಅವರಿಗ ಹೇಳಬೇಡ. ಥಿಯೊಸೊಫಿಸ್ಟರು ನಮ್ಮ ಧರ್ಮ ಪ್ರಚಾರಗಳಲ್ಲಿ ಮೊದಲಿಗರು. ಗೊತ್ತೆ ? ಈ ಜಡ್ಜ್ ಹಿಂದೂವೂ , ಕರ್ನಲ್ ಬೌದ್ಧರೂ ಆಗಿರುವರು. ಇಲ್ಲಿ ಜಡ್ಜ್ ಅತ್ಯಂತ ಸಮರ್ಥ ವ್ಯಕ್ತಿ. ಜಡ್ಜ್ ಅವರಿಗೆ ಬೆಂಬಲ ನೀಡಲು ಹಿಂದೂ ಥಿಯೊಸೊಫಿಸ್ಟರಿಗೆ ಹೇಳು. ಅಮೆರಿಕದಲ್ಲಿ ಹಿಂದೂ ಧರ್ಮ ಪ್ರಚಾರಕ್ಕೆ ಅವರು ಪಟ್ಟ ಶ್ರಮಕ್ಕಾಗಿ ಒಂದು ಕೃತಜ್ಞತಾಪೂರ್ವಕ ಪತ್ರವನ್ನು ನೀನು ಅವರಿಗೆ ಬರೆಯಬಹುದು. ಅದು ಅವರ ಹೃದಯಕ್ಕೆ ಅದೆಷ್ಟೋ ತೃಪ್ತಿ ನೀಡುತ್ತದೆ. ನಾವು ಯಾವುದೊಂದು ಪಂಥಕ್ಕೂ ಸೇರಬಾರದು. ಆದರೆ ಪ್ರತಿಯೊಂದಕ್ಕೂ ಸಹಾನುಭೂತಿ ತೋರಿ ಕೆಲಸ ಮಾಡಬೇಕು’ ( ೧೧/೭/೧೮೯೪-ಅಳಸಿಂಗ ಪೆರುಮಾಳ್), ಈಗ ಇಲ್ಲಿ ಥಿಯೋಸೊಫಿಸ್ಟರು ನನ್ನನ್ನು ಇಷ್ಟ ಪಡುತ್ತಿದ್ದಾರೆ. ಆದರೆ ಅವರ ಸಂಖ್ಯೆ ೬೫೦ ಮಾತ್ರ. (೩೧/೮/೧೮೯೪-ಅಳಸಿಂಗ ಪೆರುಮಾಳ್). ಥಿಯೊಸೊಫಿ ಸೊಸೈಟಿಯನ್ನು ಸ್ಥಾಪಿಸಿದ್ದ ಮ್ಯಾಡಂ ಬ್ಲಾವಟ್ಸ್’ಕಿ ಮತ್ತು ಆಕೆಯ ಶಿಷ್ಯೆ ಆನಿ ಬೆಸೆಂಟ್ ಲಂಡನ್’ನಲ್ಲಿದ್ದರು. ಜಡ್ಜ್ ಮತ್ತು ಕರ್ನಲ್ ಓಲ್ಕಾಟ್ ಅಮೆರಿಕದಲ್ಲಿದ್ದರು ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿದ್ದ ಜಡ್ಜ್ ಮೇಲೆ ಭಾರಿ ಹಗರಣದ ಆರೋಪಗಳು ಬಂದು ಥಿಯೊಸೊಫಿಕಲ್ ಸೊಸೈಟಿ ಇಬ್ಭಾಗವಾಯಿತು.
. ‘…. ಥಿಯೊಸೊಫಿಸ್ಟರೊಡನೆ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳಬೇಡ. ನೀವೆಲ್ಲ ನನ್ನ ಪಕ್ಷ ವಹಿಸಿ. ನಿಮ್ಮ ಸಹನೆ ಕಳೆದುಕೊಳ್ಳದಿದ್ದಲ್ಲಿ ನಾವು ಇನ್ನೂ ಮಹತ್ಕಾರ್ಯಗಳನ್ನು ಮಾಡಬಲ್ಲೆವೆಂದು ನಾನು ಖಂಡಿತವಾಗಿ ಹೇಳಬಲ್ಲೆ……ಆ ಥಿಯೊಸೊಫಿಗಳ ಪ್ರಲೋಭನೆಗೆ ನೀನೆಲ್ಲಿ ಒಳಗಾಗುತ್ತೀಯೋ ಎಂದು ಅಂಜುತ್ತೇನೆ….ಗುರುಭಕ್ತ ಜಗತ್ತನೇ ಜಯಿಸಬಲ್ಲ ಎನ್ನುವುದನ್ನು ನೆನಪಿಡು …(೨೦/೧೨/೧೮೯೫-ಅಳಸಿಂಗ ಪೆರಮಾಳ್). ಸ್ವಾಮಿಗಳಿಗೆ ಏಕೆ ಅಳಸಿಂಗ ಪೆರುಮಾಳ ಥಿಯೊಸೊಫಿಸ್ಟರ ಕಡೆ ವಾಲುತ್ತಾನೆ ಎನ್ನುವ ಸಂಶಯ ಬಂದಿತು ಮತ್ತು ಅದನ್ನು ಯಾರು ಅವರಿಗೆ ತಿಳಿಸಿದರು ಎನ್ನುವುದು ಸ್ಪಷ್ಟವಿಲ್ಲವಾದರೂ ಆ ನಿಟ್ಟಿನಲ್ಲಿ ನಾವು ಒಂದು ಊಹೆಯನ್ನು ಮಾಡಬಹುದು. ಸ್ವಾಮಿಗಳು ತಮ್ಮ ಸಾಧನೆ , ಶ್ರಮ, ದೇಶಕ್ಕಾಗಿ ಹೋರಾಡುತ್ತಿರುವ ಪರಿಗಳನ್ನು ತಿಳಿಸಿ ಅಳಸಿಂಗನಿಗೆ ಹಲವಾರು ಪತ್ರಗಳನ್ನು ಬರೆದಿದ್ದರು. ಆತ ಅವುಗಳ ಸಾರಾಂಶವನ್ನು ಇತರರಿಗೆ ತಿಳಿಸಿರಬಹುದು ಅಥವಾ ಆತ್ಮೀಯರಿಗೆ ಸ್ವಾಮಿಗಳ ಪತ್ರಗಳನ್ನೇ ತೋರಿಸಿರಬಹುದು. ಇದು ಮದ್ರಾಸಿನ ಥಿಯೊಸೊಫಿಸ್ಟರ ಗಮನಕ್ಕೆ ಬಂದಿದ್ದು ಅವರ ವಾಸ್ತವಾಂಶಗಳನ್ನು ತಿಳಿಸಿರಬಹುದು. ಅಥವಾ ೧೧/೭/೧೮೯೪ ರಂದು ಸ್ವಾಮಿಗಳು ಬರೆದ ಪತ್ರ ಮತ್ತು ನೀಡಿದ ಸಲಹೆಗೆ ಅನುಗುಣವಾಗಿ ಅಳಸಿಂಗ ಪೆರುಮಾಳ್ ಥಿಯೊಸೊಫಿಸ್ಟರೊಂದಿಗೆ ಸೌಜನ್ಯದಿಂದ ಇದ್ದಿರಬಹುದು.
‘ಬ್ರಹ್ಮವಾದಿನ್ ತಲುಪಿದೆ. ನೀನು ಥಿಯೊಸೊಫಿ ಸೇರುವೆಯೇನು? ನೀನು ಪತ್ರಿಕೆಯ ಪ್ರಧಾನ ಭಾಗಗಳಲ್ಲಿ ಥಿಯೊಸೊಫಿ ಪಂಥದವರ ಭಾಷಣಗಳ ಜಾಹಿರಾತನ್ನು ಪ್ರಕಟಿಸಿರುವುದೇಕೆ ? ಥಿಯೊಸೊಫಿಯವರ ಜೊತೆ ಸಂಪರ್ಕವಿದೆ ಎಂಬ ಸಂದೇಹ ಉಂಟಾದರೆ ಸಾಕು ನನ್ನ ಅಮೆರಿಕ ಮತ್ತು ಇಂಗ್ಲೆಂಡಿನ ಕೆಲಸವೆಲ್ಲ ಸಂಪೂರ್ಣ ಹಾಳಾಗುವುದು. ವಿವೇಕ ಬುದ್ಧಿಯುಳ್ಳವರೆಲ್ಲರೂ ಈ ಪಂಥ ತಪ್ಪು ಮಾಡುತ್ತಿದೆ ಎಂದು ತಿಳಿದಿದ್ದಾರೆ. ಅದು ನಿನಗೂ ಗೊತ್ತು. ನೀನು ನನ್ನನ್ನು ತಂತ್ರದಿಂದ ಸೋಲಿಸಲು ಪ್ರಯತ್ನಿಸುತ್ತಿರುವಂತಿದೆ. ಆನಿಬೆಸೆಂಟರನ್ನು ಪ್ರಚಾರ ಮಾಡುವುದರಿಂದ ಇಂಗ್ಲೆಂಡ್'ನಲ್ಲಿ ಹೆಚ್ಚು ಚಂದಾದಾರರು ಸಿಗುವರೆಂದು ಯೋಚಿಸುತ್ತಿರವೆಯಾ? ನೀನೊಬ್ಬ ತಿಳಿಗೇಡಿ. ನನಗೆ ಥಿಯೊಸೊಫಿಸ್ಟರ ಜೊತೆ ಜಗಳವಾಡುವ ಇಚ್ಛೆ ಇಲ್ಲ. ಅವರನ್ನು ಸಂಪೂರ್ಣ ನಿರ್ಲಕ್ಷಿಸಬೇಕೆನ್ನುವುದೇ ನನ್ನ ನಿಲುವು. ಜಾಹಿರಾತಿನ ಹಣವನ್ನು ಅವರು ಕೊಟ್ಟರೆ ? ಅವರನ್ನು ಜಾಹಿರಾತು ಪಡಿಸಲು ನೀನೇಕೆ ಹೋಗಬೇಕು ? ನಾನು ಇಂಗ್ಲೆಂಡ್’ನಲ್ಲಿ ಬೇಕಾದಷ್ಟು ಚಂದಾದಾರರನ್ನು ಒದಗಿಸಿಕೊಡುತ್ತೇನೆ. ನಿನಗೆ ನಾನು ಸ್ಪಷ್ಟವಾಗಿ ಹೇಳುವುದೇನೆಂದರೆ ನನಗೆ ವಿಶ್ವಾಸ ಘಾತುಕರು ಬೇಕಿಲ್ಲ. ಯಾವ ದಗಾಕೋರರು ನನ್ನೊಂದಿಗೆ ಆಟವಾಡಲು ಬಿಡುವುದಿಲ್ಲ. ನನ್ನೊಡನೆ ಯಾವ ಬೂಟಾಟಿಕೆಯೂ ನಡೆಯಲಾರದು. ನಿನ್ನ ಬಾವುಟವನ್ನು ಮೇಲಕ್ಕೇರಿಸಿ ನಿಮ್ಮ ಪತ್ರಿಕೆಯಲ್ಲಿ ನನ್ನೊಡನೆ ನಿಮಗಾವ ಬಗೆಯ ಸಂಪರ್ಕವೂ ಇಲ್ಲವೆಂದು ಸಾರ್ವಜನಿಕವಾಗಿ ಘೋಷಿಸು. ಥಿಯೊಸೊಫಿ ಪಂಥವನ್ನು ಸೇರು. ಇಲ್ಲವೇ ಅವರೊಡನೆ ಎಲ್ಲಾ ಬಗೆಯ ವ್ಯವಹಾರವನ್ನು ನಿಲ್ಲಿಸು….ನಾನು ಇಂಗ್ಲೆಂಡ್’ನಲ್ಲಿದ್ದಾಗ ಅನಿಬೆಸೆಂಟರ ಕಡೆಯವರಲ್ಲಿ ಒಬ್ಬರಾದರೂ ನನ್ನ ಸಹಾಯಕ್ಕೆ ಬಂದರೇನು ?...........ಈ ಗುಪ್ತ ವ್ಯವಹಾರಗಳನ್ನು ನೋಡಿದಾಗ ನನಗೆ ತಾಳ್ಮೆಗೆಡುವುದು. ಯಾರನ್ನು ನೀನು ಹೆಚ್ಚು ಪ್ರೀತಿಸುವೆಯೋ ಮತ್ತು ಸಹಾಯ ಮಾಡುವಿಯೋ ಅವರೇ ನಿನ್ನನ್ನು ಮೋಸಗೊಳಿಸಲು ಯತ್ನಿಸುವರು….’ (೨೩/೧/೧೮೯೬-ಅಳಸಿಂಗ ಪೆರುಮಾಳ್)
‘ಈಗ ನಾನು ಭರತ ಖಂಡದಲ್ಲಿ ಅಧಿಕಾರವಾಣಿಯಾಗಿರುವುದರಿಂದ ಥಿಯೊಸೊಫಿಸ್ಟರು ನನ್ನನ್ನು ಹೊಗಳಲು ಮತ್ತು ಅತಿ ದೈನ್ಯವನ್ನು ತೋರಿಸಲು ಯತ್ನಿಸಿದರು. ಆದ್ದರಿಂದ ನಾನು ಕೆಲವು ದಿಟ್ಟ ಮಾತುಗಳನ್ನಾಡಿ ಆ ವಂಚಕರ ಕೆಲಸಗಳಿಗೆ ಒಪ್ಪಿಗೆಯನ್ನೀಯುವುದನ್ನು ನಿಲ್ಲಿಸುವುದು ಅಗತ್ಯವಾಗಿದ್ದಿತು....ನನಗೆ ಆರೋಗ್ಯ ಸರಿಯಿದ್ದರೆ ಈ ದುರಹಂಕಾರಿ ವಂಚಕರನ್ನೆಲ್ಲ ಭಾರತದಿಂದ ತೊಲಗಿಸುತ್ತಿದ್ದೆ ಅಥವಾ ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೆ ‘ (೫/೫/೧೮೯೭-ಸಾರಾ ಬುಲ್)
ಸ್ವಾಮಿಗಳ ಒತ್ತಾಸೆಯಿಂದ ಅಳಸಿಂಗ ಪೆರುಮಾಳ್ ಬ್ರಹ್ಮವಾದಿನ್ ಪತ್ರಿಕೆ ಪ್ರಾರಂಭಿಸಿ ಅದರ ಸಂಪಾದಕನಾಗಿದ್ದನು. ಸ್ವಾಮಿಗಳು ಆತನಿಗೆ ಬರೆದ ಪ್ರತಿಯೊಂದು ಪತ್ರದಲ್ಲಿ ಮಕ್ಕಳೇ , ನೀವು ಧೃಢರಾಗಿ , ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ. ಕ್ರಿಯಾಶೀಲರಾಗಿ , ಸ್ವತಂತ್ರ ಚಿಂತಕರಾಗಿ ಎಂದು ಬಡಿದೆಬ್ಬಿಸುತ್ತಿದ್ದರು. ಬ್ರಹ್ಮವಾದಿನ್ ಪತ್ರಿಕೆಗೆ ಚಂದಾದಾರರು ಹೆಚ್ಚಿರಲಿಲ್ಲ. ಪತ್ರಿಕೆ ನಡೆಸಲು ಜಾಹಿರಾತುಗಳನ್ನು ಅವಲಂಬಿಸಬೇಕಾಗಿದ್ದಿತು. ಆದ್ದರಿಂದ ಅಳಸಿಂಗ ಪೆರುಮಾಳ್ ಡಿಸೆಂಬರ್ ೨೧ , ೧೮೯೬ ಬ್ರಹ್ಮವಾದಿನ್ ಸಂಚಿಕೆಯಲ್ಲಿ ಥಿಯೊಸೊಫಿ ಜಾಹಿರಾತನ್ನು ಪ್ರಕಟಿಸಿದ್ದನು. ಸ್ವಾಮಿಗಳು ಹೇಳಿದ ಎಲ್ಲ ಕೆಲಸಗಳನ್ನು ಅಳಸಿಂಗ ಪೆರುಮಾಳ್ ತಲೆಯ ಮೇಲೆ ಹೊತ್ತು ಪಾಲಿಸುತ್ತಿದ್ದನು. ಸ್ವಾಮಿಗಳು ಒಮ್ಮೆ ಥಿಯಸೊಫಿಸ್ಟರೊಂದಿಗೆ ಮೆದುವಾಗಿರು ಎಂದು ಇನ್ನೊಂದು ಸಲ ಅವರ ಸಂಗ ಬೇಡವೆಂದು ವಿರೋಧಾಭಾಸದ ಆದೇಶಗಳನ್ನು ನೀಡಿದ್ದರು. ನ್ಯೂಯಾರ್ಕ್’ನಲ್ಲಿ ಲಿಯಾನ್ ಲ್ಯಾಂಡ್ಸ್’ಬರ್ಗ್ (ಕೃಪಾನಂದ) ಜೊತೆ ಥಿಯೊಸೊಫಿಕಲ್ ಸೊಸೈಟಿಯ ನಿಲಯದಲ್ಲಿ ಉಳಿದಿದ್ದರು. ಜಿ.ಜಿ , ನಂಜುಂಡರಾವ್, ಬಾಲಾಜಿ , ಕಿಡಿ ಇವರಲ್ಲಿ ಯಾರೊಬ್ಬರು ವಹಿಸಿಕೊಳ್ಳದಷ್ಟು ಮತ್ತು ವಹಿಸಿಕೊಳ್ಳದ ಜವಾಬ್ದಾರಿಗಳನ್ನು ಅಳಸಿಂಗ ಪೆರುಮಾಳ್ ವಹಿಸಿಕೊಂಡಿದ್ದನು. ಅಮಾಯಕತೆಯಿಂದ ಆತ ಥಿಯೊಸೊಫಿಯ ಜಾಹಿರಾತುಗಳನ್ನು ಹಾಕಿದ್ದನೆಂದು ಹೇಳಬಹುದೇ ಹೊರತು ಸ್ವಾಮಿಗಳು ದೂರುವಂತೆ ವಿಶ್ವಾಸಘಾತ ಮಾಡಲಲ್ಲ.
ಸ್ವಾಮಿಗಳು ಭಾರತಕ್ಕೆ ಮರಳಿದ ನಂತರ ತಮ್ಮ ಭಾಷಣಗಳಲ್ಲಿ ಥಿಯೊಸೊಫಿಸ್ಟರನ್ನು ಹೀಗಳೆದ ನಂತರ ಅವರ ಹೇಳಿಕೆಗಳನ್ನು ಖಂಡಿಸಿ ಬರೆದ ಪತ್ರಗಳು ‘ದಿ ಇಂಡಿಯನ್ ಮಿರರ್ ಪತ್ರಿಕೆಯಲ್ಲಿ ಕಾಣಿಸಿಕೊಳ್ಳತೊಡಗಿದವು. ಇದನ್ನು ಎದುರಿಸಲು ಸ್ವಾಮಿಗಳು ತಮ್ಮ ವಿದೇಶಿ ಸ್ನೇಹಿತ ಹಾಗೂ ಶಿಷ್ಯರ ನೆರವನ್ನು ಪಡೆದರು. ೨೬ ಫೆಬ್ರವರಿ ೧೮೯೭ ರಂದು ಸಾರಾ ಬುಲ್ ‘ಗೆ ಬರೆದ ಪತ್ರ ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸುತ್ತದೆ. ‘ ಕೇಂಬ್ರಿಜ್ ಸಮ್ಮೇಳನದಿಂದ ಮತ್ತು ಬ್ರೂಕಲಿನ್ ಎಥಿಕಲ್ ಸೊಸೈಟಿಯಿಂದ ನನಗೆ ಬಿನ್ನವತ್ತಳೆಗಳು ಬಂದಿವೆ. ಡಾ. ಲೆವಿಸ್ ಜಿ. ಜೇನ್ಸ್ ಪತ್ರದಲ್ಲಿ ಉಲ್ಲೇಖಿಸಿರುವ ನ್ಯೂಯಾರ್ಕ್ ವೇದಾಂತ ಸೊಸೈಟಿಯ ಬಿನ್ನವತ್ತಳೆ ನನ್ನ ಕೈ ಸೇರಿಲ್ಲ….ನಾನು ಎಷ್ಟು ಬಳಲಿರುವೆನೆಂದರೆ ನನಗೆ ಈಗ ವಿಶ್ರಾಂತಿ ಸಿಕ್ಕದಿದ್ದರೆ ಇನ್ನೂ ಆರು ತಿಂಗಳು ಬದುಕುವೆನೋ ಇಲ್ಲವೋ ತಿಳಿಯದು….ಒಂದು ಕಡೆ ದೇಶ ಹೊಟ್ಟೆಕಿಚ್ಚು ಮತ್ತು ನಿರ್ದಯರಾದ ಜನರಿಂದ ತುಂಬಿದೆ. ಅವರ ನನ್ನ ಕೆಲಸವನ್ನು ಧ್ವಂಸ ಮಾಡಲು ಎಲ್ಲ ರೀತಿಯ ಯತ್ನ ಮಾಡುವರು…ನೀವು ಚೆನ್ನಾಗಿ ಅರಿತಿರುವಂತೆ ಅಡಚಣೆ ಹೆಚ್ಚಿದಷ್ಟು ನನ್ನಲ್ಲಿ ಅತಿಮಾನುಷ ಶಕ್ತಿ ಉದ್ರೇಕಗೊಳ್ಳುವುದು’ ಜನರ ಮೇಲೆ ಹರಿಹಾಯುವುದು ಪರಿಣಾಮ ಹದಗೆಟ್ಟಾಗ ಅನುಕೂಲಕ್ಕೆ ತಕ್ಕಂತೆ ಭಾರತ ಅಥವಾ ಅಮೆರಿಕದಿಂದ ತಮ್ಮನ್ನು ಹೊಗಳುವ , ಬೆಂಬಲಿಸುವ ಗೊತ್ತುವಳಿಗಳನ್ನು ಪಡೆಯುವುದು ಸ್ವಾಮಿಗಳ ಸಾಧಾರಣ ತಂತ್ರವಾಗಿದ್ದಿತು. ಇದರ ಭಾಗವಾಗಿ ಕೇಂಬ್ರಿಜ್ ಕಾನ್ಫರೆನ್ಸ್ , ಬ್ರೂಕ್ಲಿನ್ ಎಥಿಕಲ್ ಸೊಸೈಟಿ, ನ್ಯೂಯಾರ್ಕ್ ವೇದಾಂತ ಸೊಸೈಟಿಯ ತಮ್ಮ ಗೆಳೆಯರ ಮೂಲಕ ಥಿಯೊಸೊಫಿಸ್ಟರನ್ನು ಎದುರಿಸಲು ಸಿದ್ದರಾಗಿದ್ದರು.
ಫೆಬ್ರವರಿ ೧೮೮೭ ರಂದು ಮದ್ರಾಸ್’ನ ವಿಕ್ಟೋರಿಯಾ ಹಾಲ್’ನಲ್ಲಿ ಮಾಡಿದ ಭಾಷಣದಲ್ಲಿ ಸ್ವಾಮಿಗಳು ‘….ಆಗ ನನ್ನ ಬೊಕ್ಕುಣದಲ್ಲಿ ಕೆಲವೇ ಡಾಲರ್ ಉಳಿದಿದ್ದವು. ಮದ್ರಾಸಿನ ಗೆಳೆಯರಿಗೆ ತಂತಿಯನ್ನು ಕಳಿಸಿದೆ. ಈ ಸುದ್ದಿ ಥಿಯಸೊಫಿಸ್ಟರಿಗೆ ಗೊತ್ತಾಗಿ ‘ಈಗ ಈ ಪಿಶಾಚಿ ಸಾಯುತ್ತಿದೆ. ದೇವರು ನಮ್ಮನ್ನು ಈ ಪೀಡೆಯಿಂದ ತಪ್ಪಿಸಿದ ‘ ಎಂದರೆಂದು ಹೇಳಿದರು. ಈ ಸಂಗತಿಯನ್ನು ರೋಮಾಂಡ್ ರೋಲಾ ತಿರುಚಿ ಸ್ವಾಮಿಯವರು ಹಣದ ನೆರವಿಗಾಗಿ ಮದ್ರಾಸ್ ಸ್ನೇಹಿತರಿಗೆ ತಂತಿ ಕಳಿಸಿದರು. ಅದೇ ಸಮಯಕ್ಕೆ ಒಂದು ಅಧಿಕೃತ ಧಾರ್ಮಿಕ ಸಂಘಕ್ಕೆ ಹಣವನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಆಗ ಆ ಸಂಘದ ಮುಖ್ಯಸ್ಥ ‘ ಆ ದೆವ್ವ ಚಳಿಯಲ್ಲಿ ಸಾಯಲಿ’ ಎನ್ನುವ ಉತ್ತರ ಕಳಿಸಿದನು ಎಂದು ಬರೆದಿದ್ದಾರೆ. ಸ್ವಾಮಿಗಳು ಥಿಯೋಸೋಫಿಸ್ಟರ ವಿಚಾರ ಹೇಳದಿದ್ದರೂ ರೊಮಾಂಡ್ ರೋಲಾ ಸ್ವಾಮಿಗಳು ನೆರವು ಕೇಳಿದ ಧಾರ್ಮಿಕ ಸಂಘ ಅದೇ ಆಗಿರಬೇಕೆಂದು ಅದರ ಮುಖ್ಯಸ್ಥ ಕರ್ನಲ್ ಹೆನ್ರಿ ಸ್ಟೀಲ್ ಓಲ್’ಕಾಟ್ ತಂತಿ ಕಳಿಸಿದಾತನೆಂದು ಹೇಳಿದ್ದಾರೆ. ಕರ್ನಲ್ ಸ್ಟೀಲ್ ಓಲ್’ಕಾಟ್ ಸಂದರ್ಶನ ನಡೆಸಿದ ಸಿ.ಆರ್ ಶ್ರೀನಿವಾಸ ಅಯ್ಯಂಗಾರ್ ಈ ಘಟನೆಯನ್ನು ಕುರಿತಾಗಿ ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆ. ಆಗ ಕರ್ನಲ್ ಓಲ್’ಕಾಟ್ ಸ್ವಾಮಿಗಳಾಗಲಿ , ಅವರ ಅಭಿಮಾನಿ ಶಿಷ್ಯರಾಗಲಿ ಇದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸವಾಲು ಎಸೆದಿದ್ದಾರೆ. ಈ ಸಂದರ್ಶನ ೨೧/೨/೧೮೯೭ ರಲ್ಲಿ ದಿ ಇಂಡಿಯನ್ ಮಿರರ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದಿತು. ಸ್ವಾಮಿಯವರು ಮದ್ರಾಸ್ ಭಾಷಣದಲ್ಲಿ ಒಂದು ಮುಖ್ಯವಾದ ಸಂಗತಿಯನ್ನು ಹೇಳದೆ ಮರೆಮಾಚಿದ್ದಾರೆ. ಖೇತ್ರಿ ಮಹಾರಾಜರು ಅವರಿಗೆ ಕೊಟ್ಟಿದ್ದ ರೂ ೩೦೦೦=೦೦ ರೂಗಳನ್ನು ತಮ್ಮ ಬೇಜವಾಬ್ದಾರಿಯಿಂದ ಕಳೆದುಕೊಂಡಿದ್ದನ್ನು ತಿಳಿಸಿಲ್ಲ. ಕೆ. ಸುಂದರರಾಮ ಅಯ್ಯರ್ ನೆನಪುಗಳನ್ನು ನೋಡಿದರೆ ಸ್ವಾಮಿಗಳು ಥಿಯೊಸೊಫಿಸ್ಟರ ಮೇಲೆ ಕೋಪಗೊಳ್ಳಲು ಬೇರೆಯದೇ ಆದ ಕಾರಣವಿದ್ದಿತು. ಥಿಯೊಸೊಫಿಸ್ಟರು ನಾವು ಅಮೆರಿಕದಲ್ಲಿ ಭಾರತದ ಯೋಗಿಗಳು , ಸಿದ್ಧರು , ವೇದಾಂತ , ಹಿಂದೂ ಧರ್ಮಗಳನ್ನು ಸ್ವಾಮಿಗಳಿಗಿಂತ ಮೊದಲೇ ಪರಿಚಯಿಸಿದ್ದೆವು. ಅದರಿಂದ ಅವರ ಕೆಲಸ ಸುಲಭವಾಯಿತು ಎಂದಿದ್ದರು. ಅಮೆರಿಕದಲ್ಲಿ ತಾವು ಗಳಿಸಿದ ಕೀರ್ತಿಯಲ್ಲಿ ಪಾಲದಾರರಾಗಲು ಥಿಯೊಸೊಫಿಸ್ಟರು ಹವಣಿಸುತ್ತಿದ್ದಾರೆ ಎನ್ನುವುದೇ ಸ್ವಾಮಿಗಳ ಕಡುಕೋಪಕ್ಕೆ ಕಾರಣವಾಗಿದ್ದಿತು. ಇದು ಅವರು ಮದ್ರಾಸ್’ನಲ್ಲಿ ಮಾಡಿದ ‘ನನ್ನ ಅಭಿಯಾನ’ ಭಾಷಣದಲ್ಲಿಯೂ ವ್ಯಕ್ತವಾಗಿದೆ.
ಜಾನ್ ಎಚ್ ಬರೋಸ್ : ವಿಶ್ವ ಧರ್ಮ ಸಂಸತ್ತಿನ ಕಾರ್ಯದರ್ಶಿ ಡಾ. ಜಾನ್ ಎಚ್. ಬರೋಸ್ ಪ್ರವಾಸದಲ್ಲಿದ್ದು ಭಾರತಕ್ಕೆ ಭೇಟಿ ನೀಡಲು ಬಯಸಿದ್ದು ಇದನ್ನು ಸ್ವಾಮಿಗಳಿಗೆ ತಿಳಿಸಿದ್ದನು. ‘ಡಾ. ಬರೋಸ್'ರವರನ್ನು ಹೇಗೆ ಸ್ವಾಗತಿಸಬೇಕೆಂದು ತಿಳಿಸಿ ಇಂಡಿಯನ್ ಮಿರರ್ ಪತ್ರಿಕೆಗೆ ಒಂದು ಸಣ್ಣ ಪತ್ರವೊಂದನ್ನು ಬರೆದಿದ್ದೇನೆ. ಅವರ ಬಗ್ಗೆ ಒಂದು ಒಳ್ಳೆಯ ಲೇಖನ ಬರೆದು ಸೂಕ್ತ ರೀತಿಯಲ್ಲಿ ಸ್ವಾಗತಿಸು’ ಇದು ಸ್ವಾಮಿಗಳು ಅಳಸಿಂಗ ಪೆರುಮಾಳ್’ಗೆ ನೀಡಿದ ಆದೇಶ. (೨೮/೧೦/೧೮೯೬) .
ಇಂಡಿಯನ್ ಮಿರರ್ ಪತ್ರಿಕೆಯಲ್ಲಿ ೨೮/೧೦/೧೮೯೬ ರಂದು ಪ್ರಕಟಗೊಂಡ ಸ್ವಾಮಿಗಳ ಪತ್ರದ ಭಾಗ ಹೀಗಿದೆ : ‘…… ಡಾ. ಬರೋಸ್’ರವರ ಮಹತ್ತರ ಧೈರ್ಯ , ಅವಿರತ ದುಡಿಮೆ , ತಪ್ಪದ ತಾಳ್ಮೆ ಮತ್ತು ಸೋಲದ ಸೌಜನ್ಯದಿಂದ ವಿಶ್ವ ಧರ್ಮ ಸಂಸತ್ತು ಅಷ್ಟೊಂದು ಅದ್ವಿತೀಯ ಯಶಸ್ಸನ್ನು ಪಡೆಯಿತು. ಷಿಕಾಗೊವಿನ ಆ ಅದ್ಭುತ ಸಭೆಯ ಮೂಲಕ ಭಾರತ , ಭಾರತೀಯರು ತಮ್ಮ ಆಲೋಚನೆಗಳನ್ನು ಜಗತ್ತಿನ ಮುಂದೆ ಹಿಂದೆಂದಿಗಿಂತಲೂ ಪ್ರಬಲವಾಗಿ ಎತ್ತಿ ಹಿಡಿಯಲು ಸಾದ್ಯವಾಯಿತು. ಈ ರೀತಿಯಲ್ಲಿ ನಮ್ಮ ದೇಶದ ಹಿತವನ್ನು ಸಾಧಿಸಲು ಆ ಸಭೆಯಲ್ಲಿ ಎಲ್ಲರಿಗಿಂತ ಡಾ. ಬರೋಸ್’ರವರಿಗೆ ನಾನು ಹೆಚ್ಚು ಋಣಿ. ಈ ವ್ಯಕ್ತಿಯು ಭರತ ಖಂಡಕ್ಕೆ ತರಲು ಬಯಸುತ್ತಿರುವ ಆ ಕ್ರೈಸ್ತ ಶಕ್ತಿಯು ಅಸಹನೆ , ತನ್ನದಲ್ಲದ ಬೇರೆ ಎಲ್ಲವುದನ್ನೂ ಕೀಳು ದೃಷ್ಟಿಯಲ್ಲಿ ನೋಡುವ ಅಧಿಕಾರಯುತ ದರ್ಪಕ್ಕಿಂತಲೂ ಬೇರೆಯಾದುದು ….‘
ಸ್ವಾಮಿಗಳು ಬರೋಸ್ ಬಗ್ಗೆ ತಳಿಸ್ದಿದ್ದ ಅಭಿಪ್ರಾಯಗಳನ್ನು ಅವರ ಪತ್ರಗಳಿಂದ ಉತ್ತಮವಾಗಿ ಬೇರೆ ಯಾವುದೇ ಮೂಲ ತಿಳಿಸಲಾರದು.
‘ಷಿಕಾಗೊ ವಿಶ್ವ ಧರ್ಮ ಸಂಸತ್ತು ಅದ್ಭುತವಾಗಿ ಸಾಗಿತು.! ಪ್ರಪಂಚದ ಮೂಲೆ ಮೂಲೆಯಿಂದ ಬಂದ ಜನಾಂಗಗಳು ತಮ್ಮ ಧರ್ಮಗಳನ್ನು ವ್ಯಕ್ತಪಡಿಸಿದ ಆ ಸಂಸತ್ತು ಎಂತಹ ಘಟನೆ ! ನಾನು ಕೂಡ ಬರೋಸ್ ಮತ್ತು ಬೋನಿ ಅವರ ದಯೆಯಿಂದ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾದ್ಯವಾಯಿತು. ಬೋನಿ ಒಬ್ಬ ಅದ್ಭುತ ವ್ಯಕ್ತಿ! ,.. (೩೦/೧೨/೧೮೯೪- ಖೇತ್ರಿ ರಾಜ ಅಜಿತ್ ಸಿಂಗ್)
‘ ನಾನು ಲಂಡನ್’ನಿಂದ ನನ್ನ ದೇಶದ ಜನರಿಗೆ ಡಾ. ಬರೋಸ್ 'ರವರನ್ನು ಆದರದಿಂದ ನೋಡಿಕೊಳ್ಳಬೇಕೆಂದು ಬರೆದೆ. ಅವರು ಅವರಿಗೆ ದೊಡ್ಡ ಸ್ವಾಗತ ಸಮಾರಂಭವನ್ನು ಏರ್ಪಡಿಸಿದ್ದರು. ಆದರೆ ಅದು ಆತನ ಮೇಲೆ ಯಾವುದೇ ಪ್ರಭಾವ ಉಂಟುಮಾಡದೇ ಹೋದುದು ನನ್ನ ತಪ್ಪಲ್ಲ. ಕಲ್ಕತ್ತೆಯ ಜನರೆಲ್ಲ ನಿರ್ದಾಕ್ಷಿಣ್ಯ ಸ್ವಭಾವದವರು. ಈಗ ಬರೋಸ್ ನನ್ನ ವಿಷಯವಾಗಿ ಬೇಕಾದಷ್ಟು ವಿರೋಧವಾಗಿ ಯೋಚಿಸುತ್ತಿರುವರೆಂದು ಕೇಳಿದೆ. ಇದೇ ಜಗತ್ತು ! . (೩೦’/೦೧/೧೮೯೭-ಮೇರಿ ಹೇಲ್)
‘ಬರೋಸ್ ಇಲ್ಲಿಗೆ ಮತಾಂಧ ಕ್ರೈಸ್ತ ಧರ್ಮವನ್ನು ಬೋಧಿಸಲು ಬಂದಿದ್ದನು. ಭಾರತೀಯರೇನೋ ಅತನನ್ನು ಅತ್ಯಂತ ಆದರದಿಂದ ಸ್ವಾಗತಿಸಿದರು. ಅದಕ್ಕೆ ಕಾರಣ ನಾನು ಆತನನ್ನು ಆದರದಿಂದ ಸ್ವಾಗತಿಸುವಂತೆ ಬರೆದದ್ದು. ನಾನು ಆತನ ತಲೆಗ ಬುದ್ಧಿಯನ್ನು ತುಂಬಲಾಗಲಿಲ್ಲ. ಆತ ವಿಚಿತ್ರ ಸ್ವಭಾವದ ಮನುಷ್ಯಂತ ಕಾಣುತ್ತಾನೆ. ನಾನು ತಾಯ್ನಾಡಿಗೆ ಮರಳುತ್ತಿರುವೆನೆಂದು ದೇಶವೆಲ್ಲ ಜಯಘೋಷ ಮಾಡುತ್ತಿರುವುದು ತಿಳಿದು ಆತನಿಗ ರೇಗಿ ಹೋಯಿತೆಂದು ಕೇಳಿದೆ ! ನೀವು ಹೇಗಾದರೂ ಇನ್ನೂ ಉತ್ತಮ ಮನುಷ್ಯನನ್ನು ಕಳಿಸಬೇಕಿತ್ತು. ಏಕೆಂದರೆ ಹಿಂದೂಗಳ ಮನಸ್ಸಿನಲ್ಲಿ ಈ ಡಾಕ್ಟರ್ ಬರೋಸ್'ನಿಂದ ಸರ್ವಧರ್ಮ ಸಂಸತ್ತು ಕೇವಲ ಒಂದು ತಮಾಷೆ ಎನ್ನುವ ಭಾವನೆ ಮೂಡುವಂತಾಯಿತು……. ಶಕ್ತಿಶಾಲಿಗಳು ಅನುಸರಿಸುವ ಧರ್ಮವೇ ಶ್ರೇಷ್ಟಧರ್ಮ ಎನ್ನುವ ಭಾವನೆಯಿದೆ. ಈ ಕಾರಣದಿಂದಾಗಿಯೇ ಹಿಂದೂ ಧರ್ಮವೇ ಧರ್ಮ. ಕ್ರೈಸ್ತ ಧರ್ಮ ಧರ್ಮವೇ ಅಲ್ಲ. ಏಕೆಂದರೆ ಈ ಪಾಶವೀ ಜಗತ್ತಿನಲ್ಲಿ ಕೇವಲ ದುರ್ನೀತಿ ಮಾತ್ರ ಏಳಿಗೆ ಹೊಂದುತ್ತದೆ. ವೈಜ್ಞಾನಿಕ ಸಂಸ್ಕೃತಿಯಲ್ಲಿ ಪಾಶ್ಚಾತ್ಯರು ಅದೆಷ್ಟೇ ಏಳಿಗೆ ಹೊಂದಿದ್ದರೂ ಅವರು ಭೌತಾತೀತ ಅಧ್ಯಾತ್ಮ ವಿದ್ಯೆಯಲ್ಲಿ ಶಿಶುಗಳು (೨೮/೪/೧೮೯೭- ಮೇರಿ ಹೇಲ್) .
ಸ್ವಾಮಿಗಳು ಭಾರತಕ್ಕೆ ಮರಳಿದ ನಂತರ ಅಮೆರಿಕದ ಹೆಂಗಸರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಜಾನ್ ಎಚ್. ಬರೋಸ್ ಕ್ರೋನಿಕಲ್ ಪತ್ರಿಕೆಯಲ್ಲಿ ಬರೆದಿದ್ದನು. ಇದಲ್ಲದೆ ವಿಶ್ವ ಧರ್ಮ ಸಂಸತ್ತಿನ ಮೊದಲನೆಯ ದಿನ ಊಟಕ್ಕೆ ಸ್ವಾಮಿಗಳು ದನದ ಮಾಂಸ ಕೇಳಿದ್ದರೆಂದು ಬಹಿರಂಗ ಪಡಿಸಿದ್ದನು. ಆ ಲೇಖನದ ಕೆಲವು ಅಂಶಗಳನ್ನು ‘ದಿ ಇಂಡಿಯನ್ ಮಿರರ್’ನಲ್ಲಿ ಪ್ರಕಟಿಸಿತು. ಇದಕ್ಕೆ ಶುದ್ಧಾನಂದ ಸ್ಪಷ್ಟನೆ ಬಯಸಿದ್ದರು. ಅದಕ್ಕೆ ಉತ್ತರಿಸುತ್ತ ಸ್ವಾಮಿಗಳು ‘ ಅದರ ಭಾಗವನ್ನು ಯಾರೋ ನನಗೆ ಕತ್ತರಿಸಿ ಕಳಿಸಿದ್ದಾರೆ. ಕಳಿಸಿದವರ ವಿಳಾಸವಿಲ್ಲ. ಅದಕ್ಕೆ ಏನು ಉತ್ತರ ನೀಡಬೇಕೆಂದು ಕೇಳುತ್ತಿದ್ದಾರೆ, ನನ್ನ ಉತ್ತರವನ್ನು ನಾನು ಬ್ರಹ್ಮಾನಂದರಿಗೆ ಕಳಿಸಿದ್ದೇನೆ. ಪತ್ರಿಕೆಯಲ್ಲಿ ಬರೋಸ್ ಹೇಳಿರುವುದೆಲ್ಲ ಸುಳ್ಳು’ ಎಂದು ತಿಳಿಸಿದರು. ( ೧೫/೯/೧೮೯೭-ಶುದ್ಧಾನಂದ). ಹೀಗೆ ಸ್ವಾಮಿಗಳು ಮತ್ತು ಜಾನ್ ಎಚ್ ಬರೋಸ್ ನಡುವಿನ ಸಂಬಂಧ ಹಳಸಿಹೋಯಿತು.
ಧರ್ಮಪಾಲ : ಸ್ವಾಮಿ ಮತ್ತು ಧರ್ಮಪಾಲರ ಸ್ನೇಹ ಸಿಹಿ ಕಹಿಗಳ ಸಂಗಮ. ಸ್ವಾಮಿಗಳಿಗಿಂತ ಒಂದೂವರೆ ವರ್ಷ ಕಿರಿಯರಾದ ಧರ್ಮಪಾಲ (ಹುಟ್ಟು–೧೭/೯/೧೮೬೪) ಮೇ ,೧೮೯೧ ರಲ್ಲಿಯೇ ಕಲ್ಕತ್ತದಲ್ಲಿ ‘ಮಹಾ ಬೋಧಿ ಸೊಸೈಟಿ’ಯನ್ನು ಪ್ರಾರಂಭಿಸಿದ್ದರು. ಧಾರ್ಮಿಕ ಕೇಂದ್ರ ಸ್ಥಾಪಿಸುವಲ್ಲಿ ಸ್ವಾಮಿಗಳಿಗಿಂತ ಆರು ವರ್ಷ ಮುಂದಿದ್ದರು. ಬುದ್ಧ ಗಯಾವನ್ನು ಹಿಂದೂ ಮಹಾಂತರಿಂದ ಬೌದ್ಧರ ವಶಕ್ಕೆ ಪಡೆಯಲು ಕಾನೂನಿನ ಹೋರಾಟ ನಡೆಸಿದ್ದರು. ಚಿಂತನೆ , ಶ್ರಮ , ಸಾಮಾಜಿಕ ಕಾರ್ಯಕ್ರಮ , ಗುರಿ ಮತ್ತು ಅನುಷ್ಠಾನಗಳಲ್ಲಿ ಸ್ವಾಮಿಗಳಿಗಿಂತ ಸುಮಾರು ಒಂದು ದಶಕ ಮುಂದಿದ್ದರು. ಸ್ವಾಮಿಗಳು ಧರ್ಮಪಾಲನ ಬಗ್ಗೆ ಪ್ರೀತಿ ,ಸ್ನೇಹ , ಅಭಿಮಾನಗಳನ್ನು ಹೊಂದಿರುವುದು ಅವರ ಆರಂಭಿಕ ಪತ್ರಗಳಿಂದ ತಿಳಿಯುತ್ತದೆ. ‘ಭಾರತದ ಒಳ್ಳೆಯ ವ್ಯಕ್ತಿಗಳು ಇಲ್ಲಿರುವರು. ನೀವು ಅವರನ್ನು ನೋಡಿದ್ದರೆ ಎಷ್ಟು ಚೆನ್ನಾಗಿರುತ್ತಿದ್ದಿತು !! ಮೃದು ಹೃದಯದ ಧರ್ಮಪಾಲ, ವಾಗ್ಮಿ ಪ್ರತಾಪಚಂದ್ರ ಮಜುಂದಾರ.. (೨/೧೦/೧೮೯೩-ಜಾನ್ ಹೆನ್ರಿ ರೈಟ್ ) , ಸಿಂಹಳದ ಧರ್ಮಪಾಲರು ಸಭೆಯ ಆದರಕ್ಕೆ ಪಾತ್ರರಾದವರಲ್ಲಿ ಒಬ್ಬರು ( ೨/೧೧/೧೮೯೩-ಅಳಸಿಂಗ ಪೆರುಮಾಳ್) , ಧರ್ಮಪಾಲ ಒಳ್ಳೆಯ ಹುಡುಗ. ಅಷ್ಟೇನೂ ವಿದ್ಯಾವಂತನಲ್ಲ . ಆದರೆ ಬಹಳ ಸಾಧು ಸ್ವಭಾವದವನು. ಈ ದೇಶದ ಜನರಿಗೆ ಆತನ ಮೇಲೆ ಬಹಳ ವಿಶ್ವಾಸವಿತ್ತು (?/೩/೧೮೯೪- ರಾಮಕೃಷ್ಣಾನಂದ ) , ‘ನನಗೆ ಧರ್ಮಪಾಲನ ವಿಳಾಸ ಕೊಡು. ಆತ ಶ್ರೇಷ್ಟ ಉತ್ತಮ ವ್ಯಕ್ತಿ.. ಆತ ನಮ್ಮೊಡನೆ ಚೆನ್ನಾಗಿ ಕೆಲಸ ಮಾಡುತ್ತಾರೆ (೩೧/೮/೧೮೯೪-ಅಳಸಿಂಗ ಪೆರುಮಾಳ್). ಹೀಗೆ ಹಲವು ಸಲ ಸ್ವಾಮಿಗಳು ಧರ್ಮಪಾಲನ ಬಗ್ಗೆ ಅಭಿಮಾನ , ಪ್ರೀತಿ ತೋರಿಸಿದ್ದರು. ೧೪/೫/೧೮೯೪ ರಂದ ಮಿನರ್ವ ಥಿಯೆಟರ್’ನಲ್ಲಿ ತನ್ನ ಬಗ್ಗೆ ಒಳ್ಳೆಯ ಮಾತನಾಡಿದ್ದ ಧರ್ಮಪಾಲರಿಗೆ ನಂತರದ ಪತ್ರದಲ್ಲಿ ಸ್ವಾಮಿಗಳು ಕೃತಜ್ಞತೆ ತಿಳಿಸಿದ್ದಾರೆ. ರಾಮಕೃಷ್ಣ ಮಿಷನ್ ಕೈಗೊಂಡಿದ್ದ ಬರ ಪರಿಹಾರ ಕೆಲಸಗಳಿಗೆ ಮಹಾಬೋಧಿ ಸೊಸೈಟಿ ಆರ್ಥಿಕ ಬೆಂಬಲ ನೀಡಿದ್ದಿತು. ಖಾಸಗಿ ಪತ್ರಗಳಲ್ಲಿ ಧರ್ಮಪಾಲನನ್ನು ಕೇಳುತ್ತಿದ್ದ ಸ್ವಾಮಿಗಳು ಸಾರ್ವಜನಿಕವಾಗಿ ಆತನ ವಿದ್ವತ್ , ಬೌದ್ಧ ಧರ್ಮದ ತಿಳಿವಳಿಕೆಯ ಬಗ್ಗೆ ಮಗುಮ್ಮಾಗಿರುತ್ತಿದ್ದರು. ಅನುರಾಧಪುರದಲ್ಲಿ ಬೌದ್ಧರು ಸ್ವಾಮಿಗಳಿಗೆ ಮಾತನಾಡಲು ಅವಕಾಶ ಕೊಡದಿದ್ದರಿಂದ ಸ್ವಾಮಿಗಳು ಬೌದ್ಧ ಧರ್ಮದ ಮೆಲೆ ಹರಿಹಾಯ್ದಿರುವ ಸಾಧ್ಯತೆಯಿದೆ. (140)
ಜನಪ್ರಿಯ ನಂಬಿಕೆ ಮತ್ತು ಪ್ರಚಾರ ಏನೇ ಇರಲಿ ದಾಖಲೆಗಳ ಪ್ರಕಾರ ಸ್ವಾಮಿಗಳಿಗಿಂತ ಧರ್ಮಪಾಲರು ಧರ್ಮ ಸಂಸತ್ತಿನಲ್ಲಿ ಹೆಚ್ಚು ಗುರುತಿಸಲ್ಪಟ್ಟಿದ್ದರು. ಸ್ವಾಮಿಗಳ ಮರಣಾ ನಂತರ ನಿವೇದಿತಾ ಸ್ವಾಮಿಗಳು ಧರ್ಮ ಸಂಸತ್ತಿನಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಭಾರತೀಯ ಪ್ರತಿನಿಧಿಗೆ ಭಾಷಣಗಳನ್ನು ಬರೆದುಕೊಟ್ಟರು ಎಂದು ಬರೆದರು. ಶಂಕರಿ ಪ್ರಸಾದ ಬಸುರವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಆ ಪ್ರತಿನಿಧಿ ಧರ್ಮಪಾಲ ಎಂದರು. ಸ್ವಾಮಿಗಳು ಕೆಲವೊಮ್ಮೆ ಸಲ ಸಣ್ಣ ಸಂಗತಿಗಳನ್ನು ದೊಡ್ದದು ಮಾಡಿ ಹೇಳುತ್ತಿದ್ದರು. ಅದರಂತೆಯೇ ನಿವೇದಿತಾಗೆ ಹೇಳಿರಬಹುದು. ಸ್ವಾಮಿ ವಿವೇಕಾನಂದರು ಧರ್ಮಪಾಲರಿಗೆ ಭಾಷಣಗಳನ್ನು ಬರೆದುಕೊಟ್ಟಿರಲಿಲ್ಲ ಎಂದು ಅವರ ಮೂಲದಿಂದಲೇ ಸಾಧಿಸಬಹುದು.
(೧) ೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ಧರ್ಮಪಾಲರ ಭಾಷಣದ ಅಂಶಗಳನ್ನು ಟೀಕಿಸಿ , ಅವರಿಗೆ ಬೌದ್ಧ ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲ ಎಂದಿದ್ದಾರೆ. (೨) ಬೌದ್ಧ ಧರ್ಮ ಕುರಿತಾಗಿ ಸ್ವಾಮಿಗಳು ಹೊಂದಿದ್ದ ದೃಷ್ಟಿಕೋನಗಳು ಧರ್ಮಪಾಲ ಹೇಳುತ್ತಿದ್ದವಕ್ಕಿಂತ ಬಹಳ ಭಿನ್ನವಾಗಿದ್ದವು. (೩) ಧರ್ಮ ಸಂಸತ್ತಿನ ಮೊದಲ ಭಾನುವಾರ ೧೭/೯/೧೮೯೩ ಥರ್ಡ್ ಯೂನಿಟೇರಿಯನ್ ಚರ್ಚ್’ನಲ್ಲಿ ಭಾಷಣ ಮಾಡಲು ಧರ್ಮಪಾಲರನ್ನು ಆಹ್ವಾನಿಸಲಾಯಿತು. ಈ ಭಾನುವಾರ ಯಾವ ಚರ್ಚ್’ನವರೂ ಸ್ವಾಮಿಗಳನ್ನು ಆಹ್ವಾನಿಸಲಿಲ್ಲ. ಮುಂದಿನ ಭಾನುವಾರ ೨೪/೧೧/೧೮೯೩ ರಂದು ಸ್ವಾಮಿಗಳು ಇದೇ ಚರ್ಚ್’ನಲ್ಲಿ ಭಾಷಣ ಮಾಡಿದರು. ಧರ್ಮಪಾಲರಿಗೆ ಮೂರು ಪ್ರದೇಶಗಳ ಚರ್ಚ್’ಗಳಿಂದ , ಮಜುಂದಾರರಿಗೆ ಎರಡು ಪ್ರದೇಶದ ಚರ್ಚ್’ಗಳಿಂದ , ಸ್ವಾಮಿಗಳಿಗೆ ಒಂದೇ ಪ್ರದೇಶದ ಚರ್ಚ್’ನಿಂದ ಭಾಷಣಗಳಿಗೆ ಆಹ್ವಾನಗಳು ಬಂದಿದ್ದವು. ಆದ್ದರಿಂದ ಸ್ವಾಮಿಗಳು ಭಾಷಣ ಸಿದ್ಧಪಡಿಸಲು ಧರ್ಮಪಾಲನಿಗೆ ನೆರವಾಗಿರಲಿಲ್ಲ ಎನ್ನುವುದು ಸ್ಪಷ್ಟ.
ಸ್ವಾಮಿಗಳು ಮದ್ರಾಸ್’ನಲ್ಲಿ ‘ಮೈ ಪ್ಲಾನ್ ಆಫ್ ಕ್ಯಾಂಪೇನ್’ (ನನ್ನ ಅಭಿಯಾನ) ಭಾಷಣ ಮಾಡುವವರೆಗೆ ಧರ್ಮಪಾಲ ಮತ್ತು ಸ್ವಾಮಿಗಳ ನಡುವಿನ ಸ್ನೇಹ ಮಧುರವಾಗಿದ್ದಿತು. ಮದ್ರಾಸ್’ನಲ್ಲಿ ದೊರೆತಿದ್ದ ಸ್ವಾಗತದ ಮರವೆಯಲ್ಲಿದ್ದ ಸ್ವಾಮಿಗಳು ಭಾಷಣದಲ್ಲಿ ಹಿಂದೂಧರ್ಮದ ಅವನತಿಗೆ ಬೌದ್ಧ ಧರ್ಮವೇ ಕಾರಣ ಎಂದು ಘರ್ಜಿಸಿದ್ದರು. ಮನಬಂದಂತೆ ಬೌದ್ಧ ಧರ್ಮವನ್ನು ಟೀಕಿಸಿದ್ದ ಸ್ವಾಮಿಗಳ ಧೋರಣೆ ಅಮೆರಿಕದಲ್ಲಿ ಸ್ವಾಮಿಗಳು ಸಂಕಷ್ಟ ಸ್ಥಿತಿಯಲ್ಲಿದ್ದಾಗ ಸದಾ ಅವರ ನೆರವಿಗೆ ಬರುತ್ತಿದ್ದ ಡಾ.ಲೆವಿಸ್ ಜಿ. ಜೇನ್ಸ್’ಗೆ ಸರಿಕಂಡಿರಲಿಲ್ಲ. ಇದನ್ನು ವ್ಯಕ್ತಪಡಿಸಿ ಆತ ಸ್ವಾಮಿಗಳಿಗೆ ಪತ್ರವನ್ನೂ ಬರೆದಿದ್ದನು. ಇದನ್ನು ಉಲ್ಲೇಖಿಸಿ ಸ್ವಾಮಿಗಳು ಸಾರಾ ಬುಲ್’ಗೆ ತಿಳಿಸಿದ್ದರು. ಅದರಲ್ಲಿ ‘‘ಡಾ. ಜೇನ್ಸ್’ರಿಂದ ನನಗೊಂದು ಪ್ರೀತಿಯ ಪತ್ರ ಬಂದಿತು. ಅದರಲ್ಲಿ ಅವರು ಬೌದ್ಧಮತದ ಅವನತಿಯ ವಿಚಾರವಾಗಿ ನಾನು ಸೂಚಿಸಿದ್ದನ್ನು ಟೀಕಿಸಿದ್ದಾರೆ. ನೀನೂ ಕೂಡ ಧರ್ಮಪಾಲರು ಈ ವಿಚಾರದಲ್ಲಿ ಸಿಟ್ಟಾಗಿದ್ದಾರೆಂದು ತಿಳಿಸಿರುವೆ. ಧರ್ಮಪಾಲರು ಬಹಳ ಒಳ್ಳೆಯವರು. ನಾನು ಅವರನ್ನು ಪ್ರೀತಿಸುತ್ತೇನೆ. ಆದರೆ ಅವರು ಭಾರತೀಯ ವಿಚಾರಗಳಲ್ಲಿ ಉದ್ರೇಕಗೊಳ್ಳುವುದು ಸಂಪೂರ್ಣ ತಪ್ಪು. ಅವರು ಯಾವುದನ್ನು ಅಯೋಗ್ಯ ಆಧುನಿಕ ಹಿಂದೂ ಧರ್ಮ ಎನ್ನುವರೋ ಅದು ಕೇವಲ ಅವನತಿ ಹೊಂದಿದ ಬೌದ್ಧ ಧರ್ಮ ಎನ್ನುವುದು ನನಗೆ ಸಂಪೂರ್ಣ ಖಚಿತವಾಗಿದೆ…..ಧರ್ಮಪಾಲ ಮತ್ತು ಅವರ ತಂದೆಯವರಿಗೆ ಯುರೋಪಿಯನ್ ಹೆಸರುಗಳೇ ಇದ್ದವು. ಅವರು ಅದನ್ನು ಇತ್ತೀಚೆಗೆ ಬದಲಾಯಿಸಿರುವರು. ಬೌದ್ಧಧರ್ಮ ಭಾರತದಿಂದ ಏಕೆ ಓಡಿಸಲ್ಪಟ್ಟಿತು ಎನ್ನುವುದರ ಕಾರಣ ನನಗೆ ಸ್ಪಷ್ಟವಾಗಿದೆ. …..ಸಿಂಹಳೀಯರು ಈ ಧರ್ಮದ ಭೀಕರವಾದ ಪ್ರತಿಮೆಗಳು .ಮತ್ತು ಸ್ವೇಚ್ಛಾಚಾರಿಯಾದ ಮತಾಚರಣೆಯೊಂದಿಗೆ ಉಳಿದ ಅಲ್ಪ ಸ್ವಲ್ಪ ಅವಶೇಷಗಳನ್ನು ಸಾಗಿಸಿಕೊಂಡು ಹೋದರೆ ಇನ್ನೂ ಒಳ್ಳೆಯದು…….ನಾನು ಅಮೆರಿಕದಲ್ಲಿ ಒಂದು ವ್ಯಕ್ತಿಯಾಗಿದ್ದೆ. ಇಲ್ಲಿ ಮತ್ತೊಬ್ಬ ವ್ಯಕ್ತಿಯಾಗಿದ್ದೇನೆ. ಇಡೀ ದೇಶವೇ ನಾನು ಒಂದು ಪ್ರಮಾಣ ಎಂದು ಭಾವಿಸುತ್ತದೆ. ….. ಎಂದು ಗುಡುಗಿದ್ದರು. (೫/೫/೧೮೯೭-ಸಾರಾ ಬುಲ್)
ಧರ್ಮಪಾಲರ ೩/೪/೧೮೯೭ರ ದಿನಚರಿಯಲ್ಲಿ ‘ ಸ್ವಾಮಿ ವಿವೇಕಾನಂದರು ತಮ್ಮ ಭಾಷಣಗಳಲ್ಲಿ ಬೌದ್ಧ ಧರ್ಮವನ್ನು ಹೀನಾಯವಾಗಿ ನಿಂದಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೆ. ಆತನ ಉತ್ತಮ ಗುಣಗಳಿಗಾಗಿ ಪ್ರೀತಿಸಿದ್ದೆ , ನನ್ನ ಜನಪ್ರಿಯತೆಯನ್ನು ಬದಿಗೊತ್ತಿ ಆತನ ಪರವಾಗಿ ನಿಂತಿದ್ದೆ. ಬ್ರಾಹ್ಮ ಸಮಾಜದವರು ಆತನ ವಿರುದ್ಧವಿದ್ದಾಗ ಮದ್ರಾಸಿನಲ್ಲಿ ಆತನ ಪರ ಮಾತನಾಡಿದ್ದೆ. ನ್ಯಾಷನಲ್ ಕಾಂಗ್ರೆಸ್’ನಲ್ಲಿ ೫೦೦೦ ಜನರೆದುರು ಮತ್ತು ವಿಕ್ಟೋರಿಯಾ ಹಾಲ್’ನಲ್ಲಿ ಆತನ ಬಗ್ಗೆ ಹೇಳಿದ್ದೆ. ನನ್ನ ಸಂಪೂರ್ಣ ಸಹಾನುಭೂತಿ ಆತನ ಕಡೆಗಿದ್ದಿತು. ನನಗೆ ಸಹಾಯ ಮಾಡುವ ಸರದಿ ಬಂದಾಗ ಆತ ತನ್ನ ನಿಜರೂಪವನ್ನು ತೋರಿಸುತ್ತಾನೆ. ಆತನ ಬಗ್ಗೆ ನನಗೆ ಮರುಕವಿದೆ. ಆತ ಅದ್ಭುತ ಅವಕಾಶವೊಂದನ್ನು ಕಳೆದುಕೊಂಡ. ಆತನಿಗೆ ಈಗ ಸ್ನೇಹಿತರಿದ್ದಾರೆ. ನನ್ನ ಕಡೆಯಿಂದ ನೂರು ಸಹಾನುಭೂತಿಗಳನ್ನು ಕಳೆದುಕೊಂಡ. ಸ್ವಾಮಿಯೇ ನಿನಗೆ ಶಾಂತಿಯುಂಟಾಗಲಿ ಮತ್ತು ನಿನಗೆ ನೈಜ ಬೌದ್ಧ ಧರ್ಮದ ಅರಿವಾಗಲಿ.’ ಎಂದು ಬರೆದಿದ್ದಾರೆ. (141) ಹೀಗೆ ಭ್ರಮನಿರಶನದಲ್ಲೂ ಧರ್ಮಪಾಲ ಸಹನೆಯಿಂದ ಉಳಿದಿದ್ದಾರೆ.
ಇದಾದ ನಂತರ ೭/೫/೧೮೯೮ ರಂದು ಧರ್ಮಪಾಲರು ಬೇಲೂರು ಮಠಕ್ಕೆ ಭೇಟಿ ಕೊಟ್ಟಾಗ ಕೆಸರಿನಲಿ ಜಾರಿ ಬಿದ್ದರು. ಆಗ ಸ್ವಾಮಿಗಳು ಅವರ ಕಾಲು ತೊಳೆಯಲು ಹೋದರೆಂದು ತಿಳಿದುಬರುತ್ತದೆ. ಸ್ವಾಮಿ ಮತ್ತು ಧರ್ಮಪಾಲರ ನಡುವೆ ಆತ್ಮೀಯತೆ ಕೊನೆಯವರೆಗೂ ಇದ್ದಿತಾದರೂ ತಾತ್ತ್ವಿಕ ಸಹಮತವಿರಲಿಲ್ಲ. ಸ್ವಾಮಿಗಳು ತೀರಿಕೊಂಡ ನಂತರ ಧರ್ಮಪಾಲ ‘ ಮರಣ ಸಂತಾಪ’ ಪತ್ರವನ್ನು ಬರೆದು ಓಪನ್ ಕೋರ್ಟ್ ಮ್ಯಾಗಝೈನ್’ಗೆ ಪ್ರಕಟಣೆಗೆ ಕಳಿಸಿದರು. ಅದರಲ್ಲಿದ್ದ ಅವಹೇಳನಕಾರಿ ಅಂಶಗಳನ್ನು ಗಮನಿಸಿ ಪತ್ರಿಕೆ ಸಂಪಾದಕ ಪೌಲ್ ಕ್ಯಾರಸ್ ಅದನ್ನು ಪ್ರಕಟಿಸಲಿಲ್ಲ. ಆ ಪತ್ರದ ನಕಲನ್ನು ನಾನು ನೋಡಿದ್ದೇನೆ. ಕ್ರೈಸ್ತ ಮಿಷನರಿಗಳಿಗಿಂತಲೂ ಕೀಳಾಗಿ ಧರ್ಮಪಾಲ ಬರೆದಿದ್ದಾರೆ. ಕುತೂಹಲಕ್ಕಾಗಿಯಾದರೂ ಆ ಪತ್ರ ನೋಡಲು ಯೋಗ್ಯವಾಗಿಲ್ಲ ಎಂದು ಮಾರಿ ಲೂಯಿ ಬರ್ಕೆ ತಿಳಿಸುತ್ತ , ಅದರ ವಿವರಗಳನ್ನು ಕೈಬಿಟ್ಟಿದ್ದಾರೆ. (142) ಆದರೆ ಸ್ವಾಮಿಗಳ ಹೇಳಿಕೆಗಳಲ್ಲಿ ಘನತೆ ಇದ್ದಿತೇ ಎನ್ನುವ ಚರ್ಚೆಯನ್ನು ಮಾರಿ ಲೂಯಿ ಬರ್ಕೆ ಹೊರಗಿರಿಸಿದ್ದಾಳೆ.
ಒಟ್ಟು ನೋಟ : ಭಾರತದಲ್ಲಿ ಯಾವುದೇ ವ್ಯಕ್ತಿ ಎಲ್ಲಿಯೇ ಆಗಲಿ ಮಠ , ಆಶ್ರಮ ಅಥವಾ ಅಧ್ಯಾತ್ಮ ಕೇಂದ್ರ ಕಟ್ಟಲು ಜನ ಎಂದಿಗೂ ಅಡಚಣೆ ಮಾಡುತ್ತಿರಲಿಲ್ಲ. ಅಂತಹ ಕೆಲಸಕ್ಕೆ ಹೊಟ್ಟೆಕಿಚ್ಚು ಪಡುವುದಂತೂ ಅನೂಹ್ಯವೇ ಆಗಿದ್ದಿತು. ಸ್ವಾಮಿಗಳು ತಮ್ಮ ಅಭಿಪ್ರಾಯಗಳನ್ನು ಒಪ್ಪದ , ವಿಭಿನ್ನ ವಿಚಾರದ ಎಲ್ಲರನ್ನೂ ತಮ್ಮ ವಿರೋಧಿಗಳು , ಹೊಟ್ಟೆಕಿಚ್ಚು ಪಡುವವರು , ತಮ್ಮ ಕೆಲಸಕ್ಕೆ ಅಡಚಣೆ ಮಾಡುವವರು ಎಂದು ಭಾವಿಸುವ ಮನೋಸ್ಥಿತಿಯನ್ನು ೧೮೯೪ ರಲ್ಲಿ ಏಪ್ರಿಲ್ ತಿಂಗಳಿನಿಂದಲೇ ಬೆಳೆಸಿಕೊಂಡಿದ್ದರು. ಸ್ವಾಮಿಗಳ ಪರ ವಾದಿಸುವವರು ಮುಖ್ಯವಾಗಿ ಒಂದು ಸಂಗತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದ್ದಾರೆ. ಭಾರತದಲ್ಲಿ ಒಬ್ಬ ಸಂನ್ಯಾಸಿಯ ನಡೆ , ನುಡಿ, ಆಚಾರಗಳು ಹೀಗೆಯೇ ಇರಬೇಕು. ಹಾಗೆ ಇರದಿದ್ದರೆ ಆತ ಭ್ರಷ್ಟ ಎಂದು ಪರಿಗಣಿಸುತ್ತಾರೆ. ಭಾರತದಲ್ಲಿ ಇರುವಂತೆ ವಿದೇಶದಲ್ಲಿಯೂ ಇರುವುದು ಸಾದ್ಯವಿಲ್ಲವಾದರೂ ಕೆಲವು ಮೂಲ ಸಂಗತಿಗಳು ಬದಲಾಗುವುದಿಲ್ಲ. ಹಲವು ದಿನ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿರುವ ಸಂಸಾರವೊಂದಿಗರ ಮನೆಯಲ್ಲಿ ಇರುವುದನ್ನು , ತಡರಾತ್ರಿಯವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುವುದನ್ನು, ಹತೋಟಿ ಇಲ್ಲದಂತೆ ಸಿಗರೇಟ್ ಸೇವಿಸುವುದನ್ನು ವಿದೇಶದಲ್ಲಿದ್ದಾಗಲೂ ಸನ್ಯಾಸಿಯೊಬ್ಬ ಮಾಡುವಂತಿಲ್ಲ. ಭಾರತದಲ್ಲಿ ಒಬ್ಬ ಸನ್ಯಾಸಿ ನಸ್ಯ ಏರಿಸಿದರೆ , ಬೀಡಿ ಸೇದಿದರೆ , ಕೋಣೆಯೊಳಗೆ ಕರೆಸಿ ಒಬ್ಬ ಹೆಂಗಸಿನೊಂದಿಗೆ ಮಾತನಾಡಿದರೆ ಬಹು ಕೀಳಾಗಿ ಕಾಣುವವರು ಸ್ವಾಮಿಗಳಿಗೆ ಏಕೆ ಇವೆಲ್ಲವುಗಳಿಂದ ವಿನಾಯತಿ ನೀಡುತ್ತಾರೆ ? ನಿಜವಾಗಿಯೂ ಸ್ವಾಮಿಗಳು ಭಾರತ ದುಸ್ಥಿತಿಯನ್ನು ನೆನೆದು ತಮಗೆ ಒದಗಿಸಿದ್ದ ಮೆತ್ತನೆಯ ಹಾಸಿಗೆಯನ್ನು ತೊರೆದು ಅಳುತ್ತ ನೆಲದ ಮೇಲೆ ಮಲಗಿದರೆಂಬ ಕಟ್ಟು ಕಥೆ ಎಷ್ಟು ಸತ್ಯ ? ಸ್ವಾಮಿಗಳ ಪತ್ರಗಳಿಂದ ಅವರು ಕೇಂದ್ರ ಹವಾ ನಿಯಂತ್ರಿತ , ಲಿಫ್ಟ್ ಸೌಲಭ್ಯವಿರುವ , ಉತ್ತಮ ದರ್ಜೆಯ ವಸತಿಗಳನ್ನು ಮೆಚ್ಚುತ್ತಿದ್ದರು , ಉತ್ತಮ ದರ್ಜೆಯ ಹೊಟೆಲ್’ಗಳಲ್ಲಿ ಊಟ ಮಾಡಲು ಬಯಸುತ್ತಿದ್ದರು ಎನ್ನುವುದು ಸ್ಪಷ್ಟ. ಯಾರಾದರೂ ಸ್ವಾಮಿಗಳು ಶ್ರೀಮಂತರು ಏರ್ಪಡಿಸುತ್ತಿದ್ದ ಔತಣ ಕೂಟಗಳಲ್ಲಿ ತಡರಾತ್ರಿಯವರೆಗೆ ಭಾಗವಹಿಸುತ್ತಿದುದು ತಪ್ಪು. ಅವರು ಭಾರತದ ಸಾಂಪ್ರದಾಯಿಕ ಸಂನ್ಯಾಸಿಯಂತಿಲ್ಲ ಎಂದು ಹೇಳಿದರೆ ಅದರಲ್ಲಿ ಸಂಚೇನಿದೆ ? ಭಾರತದ ಸಾಮಾಜಿಕ ಸ್ಥಿತಿಗಳ ವಾಸ್ತವವನ್ನು ಒಪ್ಪಿಕೊಂಡರೆ ದೇಶದ್ರೋಹ , ಹೊಟ್ಟೆಕಿಚ್ಚು ಹೇಗಾಗುತ್ತದೆ ?
ಧರ್ಮಪಾಲರು ಸ್ವಾಮಿಗಳು ಬೌದ್ಧ ಧರ್ಮದ ಮೇಲೆ ಮಾಡಿದ ಟೀಕೆಗೆ ಅವರ ಘನತೆಗೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದರು. ಸ್ವಾಮಿಗಳಲ್ಲಿ ತಾವು ಬೋಧಿಸುವ ಅದ್ವೈತ ವೇದಾಂತ ಬಿಂಬಿಸುತ್ತಿರುವ ಹಿಂದೂ ಧರ್ಮವೇ ನಿಜವಾದುದು. ಬೇರೆಯವರಿಗೆ ತಮ್ಮಷ್ಟು ಗೊತ್ತಿಲ್ಲ ಎನ್ನುವ ಅಹಮಿಕೆ ತುಂಬಿದ್ದಿತು. ಬೌದ್ಧ ಧರ್ಮ ಭಾರತದಿಂದ ಮರೆಯಾಗಲು ಧಾರ್ಮಿಕ , ಸಾಮಾಜಿಕ , ರಾಜಕೀಯ , ನೈತಿಕ ಸೇರಿದಂತೆ ಹಲವಾರು ಕಾರಣಗಳಿದ್ದವು. ಸ್ವಾಮಿಗಳು ಹಾಡಿ ಹೊಗಳುತ್ತಿದ್ದ ಅದ್ವೈತ ವೇದಾಂತವನ್ನು ಭಾರತೀಯ ತತ್ತಜ್ಞಾನಿಗಳಲ್ಲಿ ಅನೇಕರು ಖಂಡಿಸಿದ್ದರು. ಸ್ವಾಮಿಗಳು ವೈದಿಕ ಧರ್ಮವನ್ನೇ ಪರಿಶುದ್ಧ ಹಿಂದೂಧರ್ಮ ಎಂದು ಭಾವಿಸಿದ್ದರು. ಇಂತಹ ಪರಿಶುದ್ಧ ಹಿಂದೂ ಧರ್ಮ ನಿಜವಾಗಿಯೂ ಅಷ್ಟೊಂದು ಶ್ರೇಷ್ಟವಾಗಿದ್ದರೆ ಬೌದ್ಧ ಧರ್ಮದ ಕಳಪೆ ಆಚರಣೆಗಳಿಂದ ಹೇಗೆ ಅವನತಿ ಹೊಂದಿತು ಎನ್ನುವ ಕಾರಣಗಳನ್ನು ವಿವರಿಸಬೇಕಾಗಿದ್ದಿತು. ಸ್ವಾಮಿಗಳು ಇಂತಹ ಯಾವುದೇ ವ್ಯವಸ್ಥಿತವಾದ ಪ್ರಯತ್ನವನ್ನೂ ಮಾಡಿರಲಿಲ್ಲ, ವಾದಸರಣಿಯನ್ನೂ ಮಂಡಿಸಿರಲಿಲ್ಲ. ಬೌದ್ಧ ಧರ್ಮವನ್ನು ವಿಮರ್ಶಿಸುವುದರಿಂದ ವಿಮುಖರಾಗಿ ಧರ್ಮಪಾಲರ ತಂದೆ , ತಾತಂದಿರು ಕ್ರೈಸ್ತರಾಗಿದ್ದರು ಎನ್ನುವ ಸೂಚನೆ ನೀಡಿ ಸಂವಾದವನ್ನು ವೈಯಕ್ತಿಕ ಮಟ್ಟಕ್ಕೆ ಇಳಿಸಿದರು.
ಇಡೀ ದೇಶವೇ ನನ್ನನ್ನು ಪ್ರಮಾಣ ಎಂದು ಒಪ್ಪಿದೆ ಎನ್ನುವುದು ಆತ್ಮಪ್ರಶಂಸೆಯ ಹೊರತು ವಾಸ್ತವವಲ್ಲ ಎಂದು ಸಮಕಾಲೀನ ಸಂಗತಿಗಳು ಸ್ಪಷ್ಟಪಡಿಸುತ್ತವೆ. ಭಾರತದಲ್ಲಿದ್ದ ಸನಾತನಿಗಳಾಗಲಿ , ತ್ರಿಮತಾಚಾರರ ಮಠಗಳಾಗಲಿ , ಮಠಾಧಿಪತಿಗಳಾಗಲಿ , ಹಿಂದೂ ಸಮಾಜ ಹೇಗಿರಬೇಕೆಂದು ಪರಂಪರಾನುಗತವಾಗಿ ನಿರ್ದೇಶಿಸುತ್ತಿದ್ದ ಪುರೋಹಿತ , ಅರ್ಚಕ . ಬ್ರಾಹ್ಮಣರಲ್ಲಿ ಯಾರೊಬ್ಬರೂ ಸ್ವಾಮಿಗಳನ್ನು ಹಿಂದೂ ಧರ್ಮದ ಪ್ರಮಾಣ ಪುರುಷ ಎಂದಾಗಲಿ ಅಧಿಕಾರವಾಣಿ ಎಂದಾಗಲಿ ಎಂದಗೂ ಭಾವಿಸಿರಲಿಲ್ಲ ಮತ್ತು ಅಮೆರಿಕದ ಅವರ ಸಾಧನೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಅಮೆರಿಕದಲ್ಲಿ ಹಿಂದೂ ಧರ್ಮ ಬಹಳ ಸಹನಶೀಲ, ಅದು ಯಾರನ್ನೂ ಹೊರಗೆ ಹಾಕುವುದಿಲ್ಲ, ಎಲ್ಲರನ್ನೂ ಒಳಗೊಳ್ಳುತ್ತದೆ, ಪ್ರತಿಯೊಂದು ಪಂಥವನ್ನೂ ಅಂತಿಮ ಗುರಿಯಡೆಗೆ ಸಾಗುತ್ತಿರುವ ವಿವಿಧ ಸ್ಥಿತಿಗಳೆಂದು ಭಾವಿಸುತ್ತದೆ ಎಂದು ಕೊಚ್ಚಿಕೊಂಡಿದ್ದರು. ಭಾರತಕ್ಕೆ ಬಂದ ತಕ್ಷಣ ನನಗೆ ಆರೋಗ್ಯ ಸರಿಯಿದ್ದರೆ ಈ ದುರಹಂಕಾರಿ ವಂಚಕರನ್ನೆಲ್ಲ ಭಾರತದಿಂದ ತೊಲಗಿಸುತ್ತಿದ್ದೆ ಅಥವಾ ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೆ ‘ ಎನ್ನುವುದು ಅದಕ್ಕೆ ತದ್ವಿರುದ್ಧ ನಡೆಯಾಗಿದೆ. ಮುಂದಿನ ದಿನಗಳಲ್ಲಿ ಥಿಯೊಸೊಫಿ ಜನಮನ್ನಣೆಯಿಲ್ಲದೆ ಭಾರತದಲ್ಲಿ ನೆಲೆ ಕಳೆದುಕೊಂಡಿತೇ ಹೊರತು ಸ್ವಾಮಿಗಳ ಕಾರ್ಯಾಚರಣೆಯ ಹೆದರಿಕೆಯಿಂದಲ್ಲ.
ಸ್ವಾಮಿಗಳ ಜೀವನ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ದುಷ್ಟ ಕೂಟಗಳಿಗೆ – ಕ್ರೈಸ್ತ ಪಾದ್ರಿಗಳು , ಬ್ರಾಹ್ಮ ಸಮಾಜಿಗಳು, ಥಿಯೊಸೊಫಿಸ್ಟರು-ಸೇರದ ಅದರೆ ಸ್ವಾಮಿಗಳ ಕೋಪಕ್ಕೆ ತುತ್ತಾದವರೆಂದರೆ ಡಾ. ಜಾನ್ ಎಚ್. ಬರೋಸ್. ತಾತ್ವಿಕ ಕಾರಣಗಳಿಂದ ಸ್ವಾಮಿಗಳಿಂದ ದೂರವಾದವರು ಧರ್ಮಪಾಲ. ಸ್ವಾಮಿಗಳು ಮತ್ತು ಅವರ ವಿರೋಧಿಗಳ ಎರಡು ಬಣಗಳ ದೃಷ್ಟಿಯನ್ನು ಪರಿಗಣಿಸಿದಾಗ ಬಹುತೇಕ ವೆಳೆ ಸ್ವಾಮಿಗಳ ಆರೋಪಗಳಲ್ಲಿ ಹುರುಳಿಲ್ಲದಿರುವುದು ಸ್ಪಷ್ಟವಾಗುತ್ತದೆ. ಸ್ವಾಮಿಗಳಿಗೆ ಬಂದ ವಿರೋಧಗಳಲ್ಲಿ ಅವರ ಜೀವನ ಶೈಲಿ ಮತ್ತು ಆತ್ಮವಿಮರ್ಶೆಯಿಲ್ಲದೆ ಇತರರ ಮೇಲೆ ಏರಿಹೋಗುತ್ತಿದ್ದ ಗುಣಗಳೇ ಕಾರಣ ಎಂದು ಗುರುತಿಸಬಹುದು.
(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಅ ಆಯ್ದ ಭಾಗ)
ಪಾದ್ರಿಗಳು : ಸ್ವಾಮಿಗಳ ಬಹುತೇಕ ಜೀವನ ಚರಿತ್ರೆಗಳಲ್ಲಿ ರೋಮಾಂಚಕಾರಿ , ಸಾಹಸದ ಘಟ್ಟವೆಂದರೆ ಅವರು ಅಮೆರಿಕದಲ್ಲಿ ತಮ್ಮ ವಿರೋಧಿಗಳೆದುರು ಏಕಾಂಗಿಯಾಗಿ ಹೋರಾಡಿ ಜಯಗಳಿಸಿ ಹಿಂದೂ ಧರ್ಮದ ಪತಾಕೆಯನ್ನು ಎತ್ತಿ ಹಿಡಿದಿದ್ದು. ಹೆಚ್ಚಿನ ಚರಿತ್ರೆಕಾರರು ದೇಶ (ಭಾರತ) ಮತ್ತು ಧರ್ಮ (ಹಿಂದೂ) ಅಭಿಮಾನದಿಂದ ಈ ಸಂಗತಿಗಳನ್ನು ಪರಿಗಣಿಸಿದ್ದಾರೆಯೇ ಹೊರತು ಜರುಗಿದ ವಾಸ್ತವಿಕ ಸಂಗತಿಗಳ ಮೇಲಲ್ಲ. ಸ್ವಾಮಿಗಳು ಕ್ರೈಸ್ತ ಪಾದ್ರಿಗಳು , ಬ್ರಾಹ್ಮ ಸಮಾಜದ ಅದರಲ್ಲೂ ವಿಶೇಷವಾಗಿ ಪ್ರತಾಪಚಂದ್ರ ಮಜುಂದಾರ ಮತ್ತು ಥಿಯೊಸೊಫಿಸ್ಟರು ತಮ್ಮ ಕೆಲಸಗಳಿಗೆ ಅಡಚಣೆ ಉಂಟು ಮಾಡಿದರೆಂದು ಹೇಳಿದ್ದರು. ಎದುರಾಳಿಗಳ ಹೇಳಿಕೆ , ಅವರ ಚಲನವಲನ , ಚಟುವಟಿಕೆಗಳನ್ನು ಪರಿಗಣಿಸದೆ ಕೇವಲ ಸ್ವಾಮಿಗಳ ಹೇಳಿಕೆಗಳ ಆಧಾರಧ ಮೇಲೆ ಯಾವುದೇ ತೀರ್ಮಾನಕ್ಕೆ ಬರುವುದು ತಪ್ಪು. ಒಂದು ವಿವಾದದಲ್ಲಿ ಎರಡೂ ಬಣಗಳ ದೃಷ್ಟಿಕೋನ, ಅಂಶಗಳನ್ನು ಪರಿಗಣಿಸಿದಾಗ ಮಾತ್ರ ನಿಜದ ಹತ್ತಿರ ಹೋಗುವುದು ಸಾದ್ಯ.
ವಿಶ್ವ ಧರ್ಮ ಸಂಸತ್ತು ಮಹಾ ಸಮ್ಮೇಳನವಾಗಿದ್ದು ಸಮಕಾಲೀನ ಹಲವು ಧರ್ಮ , ಪಂಥ , ಮತ, ನಂಬಿಕೆಗಳ ಪ್ರತಿನಿಧಿ, ಮುಂದಾಳು , ವಿದ್ವಾಂಸ, ಚಿಂತಕರ ಸಂಗಮದಿಂದ ಒಂದು ಕಿರುಜಗತ್ತು ಮೈದಳೆದಿದ್ದಿತು. ಈ ಸಂದರ್ಭದಲ್ಲಿ ಸ್ವಾಮಿಗಳು ಹಲವು ಜನರನ್ನು ಭೇಟಿಯಾಗಿ , ಪರಿಚಯ ಮಾಡಿಕೊಂಡರು. ಅದರಲ್ಲಿ ಕೆಲವರು ಅವರ ಗೆಳೆಯರೂ ಆದರು. ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಭವಿಷ್ಯದ ದಿನಗಳಲ್ಲಿ ಸ್ವಾಮಿಗಳಿಗೆ ಇವರ ಬೆಂಬಲ ವಿವಿಧ ರೂಪದಲ್ಲಿ ದಕ್ಕಿತು. ಫ್ರೀ ರಿಲಿಜಿಯಸ್ ಅಸೋಸಿಯೇಷನ್ ಹಾಗೂ ಅದರ ಸದಸ್ಯರು ಸ್ವಾಮಿಗಳಿಗೆ ಆಪ್ತರಾದರು. ಅವರಲ್ಲಿ ಥಾಮಸ್ ವೆಂಟ್’ವರ್ಥ್ ಹಿಗ್ಗಿನ್’ಸನ್ , ಲೆವಿಸ್ ಜಿ, ಜೇನ್ಸ್ , ಫ್ರಾಂಕ್ಲಿನ್ ಸ್ಯಾನ್’ಬೋರ್ನ್ . ಫೆಲಿಕ್ಸ್ ಆಡ್ಲರ್ ಮುಂತಾದವರಿದ್ದರು. ಥಾಮಸ್ ವೆಂಟ್’ವರ್ಥ್ ಹಿಗ್ಗಿನ್’ಸನ್ ವಿಶ್ವ ಧರ್ಮ ಸಂಸತ್ತಿನಲ್ಲಿ ಗೌರವಾನ್ವಿತ ಭಾಷಣಕಾರನಾಗಿದ್ದನು. ಫ್ರಾಂಕ್ಲಿನ್ ಸ್ಯಾನ್’ಬೋರ್ನ್ ವಿಶ್ವ ಧರ್ಮ ಸಂಸತ್ತು ಪ್ರಾರಂಭವಾಗುವುದಕ್ಕೆ ಮೊದಲೆ ಸ್ವಾಮಿಗಳ ಭಾಷಣಗಳಿಗೆ ವ್ಯವಸ್ಥೆ ಮಾಡಿದ್ದರೆ , ಬ್ರೂಕ್ಲಿನ್’ನಲ್ಲಿ ಸ್ವಾಮಿಗಳಿಗೆ ಸಂಕಷ್ಟ ಎದುರಾದಾಗ ಲೆವಿಸ್ ಜಿ. ಜೇನ್ಸ್ ಸ್ವಾಮಿಗಳಿಗೆ ನೈತಿಕ , ತಾತ್ತ್ವಿಕ ಬೆಂಬಲ ನೀಡಿದನು. ಗ್ರೀನೇಕರ್ ಸಮ್ಮೆಳನಕ್ಕೆ ಬಂದಿದ್ದ ಈ ಗುಂಪಿನ ಸಹವಾಸದಿಂದ ಸ್ವಾಮಿಗಳು ಪ್ಲೈಮೌಥ್’ ನಗರದ ಹಿಗ್ಗಿನ್’ಸನ್ ಲಿಬರಲ್ ಸ್ಕೂಲ್ ಆಫ್ ಕ್ರಿಶ್ಚಿಯಾನಿಟಿಯಲ್ಲಿ ಹಲವಾರು ಭಾಷಣಗಳನ್ನು ನೀಡಲು ಸಾದ್ಯವಾಯಿತು. ಸ್ವಾಮಿಗಳು ಲಂಡನ್’ನಲ್ಲಿರುವಾಗ ಫೆಲಿಕ್ಸ್ ಆಡ್ಲರ್ ಅನುಯಾಯಿ ಸ್ಟ್ಯಾಂಟನ್ ಕೊಯಿಟ್ ಗೆಳೆತನ ದಕ್ಕಿತು. ವಿಶ್ವ ಧರ್ಮ ಸಮ್ಮಳನದಲ್ಲಿ ಗಮನ ಸೆಳೆದ ಭಾಷಣಕಾರಳಾಗಿದ್ದ ಜೂಲಿಯಾ ವಾರ್ಡ್ ಹೊವೆ ಅಧ್ಯಕ್ಷಳಾಗಿದ್ದ ನ್ಯೂ ಇಂಗ್ಲೆಂಡ್ ವುಮೆನ್ಸ್ ಕ್ಲಬ್’ನಲ್ಲಿಯೂ ಸ್ವಾಮಿಗಳ ಭಾಷಣಕ್ಕೆ ಅವಕಾಶಗಳನ್ನು ಮಾಡಿಕೊಡಲಾಗಿದ್ದಿತು.
ಅಮೆರಿಕದಲ್ಲಿ ಪಾದ್ರಿಗಳಾಗಲಿ ಅಥವಾ ಹಿಂದೂಗಳೇ ಆಗಲಿ (ಬ್ರಾಹ್ಮ ಸಮಾಜ- ಪ್ರತಾಪಚಂದ್ರ ಮಜುಂದಾರ್) ಸ್ವಾಮಿಗಳಿಗೆ ಅಡ್ದಹಾಕಲು ಪ್ರಯತ್ನಿಸಿದರೆಂದು ಯಾವ ಸಮಕಾಲೀನ ದಾಖಲೆಗಳು ,ಘಟನೆಗಳು ತಿಳಿಸುವುದಿಲ್ಲ. ೧೧/೯/೧೮೯೩ ರಲ್ಲಿ ಧರ್ಮ ಸಂಸತ್ತಿನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುವವರೆಗೆ ಸ್ವಾಮಿಗಳು ಅಜ್ಞಾತರಾಗಿದ್ದರು. ಕ್ರೈಸ್ತ ಮಿಷನರಿಗಳ ಮತಾಂತರಗೊಳಿಸುವ ಮಾರ್ಗವನ್ನು ಚೀನಾ ಮತ್ತು ಜಪಾನ್ ಪ್ರತಿನಿಧಿಗಳು ಖಂಡಿಸಿದ್ದರು. ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿಗಳು ೨೧/೯/೧೮೯೩ ರಂದು ‘ಸ್ಟೋನ್ಸ್ ವೆನ್ ದೆ ನೀಡ್ ಬ್ರೆಡ್’ ಎನ್ನುವ ಭಾಷಣ ಮಾಡಿ , ಬಡತನದಿಂದ ನರಳುತ್ತಿರುವ ಭಾರತೀಯರಿಗೆ ಅನ್ನ ಬೇಕಾಗಿದೆಯೇ ಹೊರತು ಕ್ರೈಸ್ತ ಪಾದ್ರಿಗಳ ಧರ್ಮ ಬೇಕಾಗಿಲ್ಲ ಎಂದು ತಿಳಿಸಿದರು. ಮರುದಿನ -೨೨/೯/೧೮೯೩-ವಿಶ್ವ ಧರ್ಮ ವೇದಿಕೆಯಿಂದ ದಿಟ್ಟ ಮತ್ತು ನೇರವಾಗಿ ಧರ್ಮಪಾಲ ಮತ್ತು ನರಸಿಂಹಾಚಾರ್ಯ ಅತ್ಯಂತ ಕಟು ಮಾತುಗಳಲ್ಲಿ , ನಿರ್ದಿಷ್ಟವಾಗಿ ಕ್ರೈಸ್ತ ಮಿಷನರಿಗಳನ್ನು , ಅವರು ಮತಾಂತರಗೊಳಿಸಲು ಅನುಸರಿಸುತ್ತಿರುವ ಮಾರ್ಗಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಸ್ವಾಮಿಗಳು ಹಿಂದಿನ ದಿನದ ಭಾಷಣಕ್ಕಿಂತ ಹೆಚ್ಚು ಹರಿತವಾಗಿದ್ದವು. ಇದನ್ನು ಮರುದಿನ ಷಿಕಾಗೊ ಡೈಲಿ ಓಷನ್ ವರದಿ ಮಾಡಿತು. ವಿಶ್ವ ಧರ್ಮ ಸಂಸತ್ತಿನಲ್ಲಿ ನೆರೆದಿದ್ದ ಸಾವಿರಾರು ಜನರೆದುರು ಮಾಡಿದ ಟೀಕೆಯನ್ನು ಕ್ರೈಸ್ತರು , ಕ್ರೈಸ್ತರು ಪಾದ್ರಿಗಳು ಬಹುತೇಕ ಆತ್ಮ ವಿಮರ್ಶೆಯ ದೃಷ್ಟಿಯಲ್ಲಿ ತೆಗೆದುಕೊಂಡಿದ್ದರು.
ವಿಶ್ವ ಧರ್ಮ ಸಂಸತ್ತು ಮುಗಿದ ನಂತರ ಸ್ವಾಮಿಗಳ ಸಂಚಾರಿ ಭಾಷಣ ಸಾಹಸಗಳು ಪ್ರಾರಂಭವಾದವು. ಈ ಅವಧಿಯಲ್ಲಿ ಸಹಜವಾಗಿ ಹಿಂದೂ ಮತ್ತು ಕ್ರೈಸ್ತ ಧರ್ಮಗಳ ಧಾರ್ಮಿಕ ಮತ್ತು ಸಾಮಾಜಿಕ ಹೋಲಿಕೆಗಳು ಅನಿವಾರ್ಯವಾಗತೊಡಗಿದವು. ತಾವು ಮತಾಂತರ ಮಾಡಲು ಬಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತ , ಹಲವು ಭಾಷಣಗಳಲ್ಲಿ ಯೇಸುವನ್ನು ಹೊಗಳುತ್ತಲೇ ಭಾರತದಲ್ಲಿ ಕ್ರೈಸ್ತ ಮಿಷನರಿಗಳು ಮಾಡುತ್ತಿರುವ ಕೆಲಸವನ್ನು ತೀವ್ರವಾಗಿ ಟೀಕಿಸತೊಡಗಿದರು. ಇದಕ್ಕೆ ಪ್ರತಿಕ್ರಿಯೆಯಾಗಿ , ರಕ್ಷಣಾತ್ಮಕವಾಗಿ ಕ್ರೈಸ್ತ ಪಾದ್ರಿಗಳು ಅಲ್ಪ ಚಲಾವಣೆಯಲ್ಲಿದ್ದ ತಮ್ಮ ಧಾರ್ಮಿಕ ಪತ್ರಿಕೆಗಳಲ್ಲಿ ಸ್ವಾಮಿಗಳನ್ನು ಪ್ರಶ್ನಿಸತೊಡಗಿದರು. ಸ್ವಾಮಿಗಳ ಮೇಲೆ ಅವರು ಮಾಡುತ್ತಿದ್ದ ಟೀಕೆ ವ್ಯಾಪಕ ಪ್ರಸಾರ ಇರುವ ಪತ್ರಿಕೆಗಳಲ್ಲಿ ಬರುತ್ತಿರಲಿಲ್ಲ ಎನ್ನುವುದನ್ನು ಸ್ವಾಮಿಗಳು ೨೪/೧/೧೮೯೪ ರಂದು ಮದ್ರಾಸಿನ ಶಿಷ್ಯರಿಗೆ ಬರೆದ ಪತ್ರವೇ ಸಾಕ್ಷಿಯಾಗಿದೆ.
ಅಮೆರಿಕದಲ್ಲಿ ಸ್ವಾಮಿಗಳು ಹಿಂದೂ ಧರ್ಮವನ್ನು ಹಾಡಿ ಹೊಗಳಿ ,ಆದರ ಆದರ್ಶಗಳನ್ನು ಕೊಂಡಾಡಿ ಭಾಷಣ ಮಾಡುತ್ತ ಊರಿನಿಂದ ಊರಿಗೆ ತಿರುಗುತ್ತಿದ್ದರು. ಅವರದೇ ದೇಶದಲ್ಲಿ , ಅವರದೇ ಚರ್ಚ್’ಗಳಲ್ಲಿ ಪಾದ್ರಿಗಳನ್ನು ಹಿಗ್ಗಾಮುಗ್ಗ ಹೀಗಳೆಯುತ್ತಿದ್ದರು. ಅದಕ್ಕೆ ಅವರು ತಿರುಗಿ ಬಿದ್ದು ಹಿಂದೂ ಧರ್ಮದ ದಯನೀಯವಾದ ಸಾಮಾಜಿಕ ವ್ಯವಸ್ಥೆ ಮತ್ತು ದುಸ್ಥಿತಿಯನ್ನು ಎತ್ತಿ ತೋರಿಸುತ್ತಿದ್ದರು. ಭಾರತದ ಹೆಣ್ಣಿನ ಆದರ್ಶ ತಾಯಿಯೇ ಹೊರತು ಅಮೆರಿಕ ಸಮಾಜ ಆರಾಧಿಸುತ್ತಿರುವ ಹರಯ ತುಂಬಿದ ಅಕರ್ಷಣೆಯ ಹೆಂಡತಿಯಲ್ಲ ಎಂದು ಗರ್ಜಿಸಿದ್ದರು. ಹಿಂದೂಗಳ ನೈತಿಕ ಮೌಲ್ಯ ಜಗತ್ತಿನಲ್ಲಿಯೇ ಅತಿ ಶ್ರೇಷ್ಟ ಎಂದು ಜಂಬ ಕೊಚ್ಚುತ್ತಿದ್ದರು. ಸರ್ವಶ್ರೇಷ್ಟವಾದ ಹಿಂದೂ ಧರ್ಮ ಪ್ರತಿನಿಧಿಸುವ ಸಮಾಜ ಏಕೆ ಹಾಗಿದೆ ಎನ್ನುವ ಪ್ರಶ್ನೆಗೆ ಅಧ್ಯಾತ್ಮವೇ ಬೇರೆ ಸಾಮಾಜಿಕ ನಡಾವಳಿಗಳೇ ಬೇರೆ ಎಂದು ಕೈತಿರುವಿದ್ದರು. ನ್ಯೂಟನ್ , ಡಾರ್ವಿನ್ ಕ್ರೈಸ್ತ ಚಿಂತನೆಯ ಫಲಗಳಲ್ಲ ಎಂದಿದ್ದರು. ಆದರೆ ತಾವು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಹಿಂದೂ ಸಮಾಜ ರೋಗಗ್ರಸ್ತವಾಗಿದೆ ,ಕ್ರೈಸ್ತ ಪಾದ್ರಿಗಳ ಧಾರ್ಮಿಕ ಉದ್ದೇಶ ಸರಿಯಿಲ್ಲದಿದ್ದರೂ ಅವರು ಮಾಡುತ್ತಿರುವ ಸಾಮಾಜಿಕ ಟೀಕೆಗಳು ನಿಜ ಎಂದು ಅವರ ಒಳ ಮನಸ್ಸಿಗೆ ಗೊತ್ತಾಗಿದ್ದವು. ಇತರ ಭಾರತೀಯ ಚಿಂತಕರು ಮತ್ತು ಪ್ರತಿನಿಧಿಗಳು ಹಿಂದೂ ಸಮಾಜದ ಕೊರತೆಗಳನ್ನು ಒಪ್ಪಿಕೊಂಡು ಆಧುನಿಕ ಭಾರತ ಅವುಗಳನ್ನು ತೊಡೆದುಹಾಕಲು ಯತ್ನಿಸುತ್ತಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಿದ್ದರು. ಸ್ವಾಮಿಗಳಿಗೆ ಈ ಪ್ರಾಮಾಣಿಕತೆ ಇರಲಿಲ್ಲ. ಸ್ವಾಮಿಗಳು ಭಾವನಾವಾದಿ ವೇದಾಂತವನ್ನು ಅದರಲ್ಲೂ ಅದ್ವೈತವನ್ನು ಹೆಗ್ಗಳಿಸಿ ಅಮೆರಿಕದಲ್ಲಿ ಪ್ರಚಾರ ಮಾಡುತ್ತಿದ್ದರು. ತಾವು ಹಾಡಿ , ಹೊಗಳುತ್ತಿರುವ ವೈದಿಕ ಮೂಲಗಳಲ್ಲಿಯೇ, ಋಷಿ , ಮುನಿಗಳೆಂದು ಕರೆಸಿಕೊಂಡವರ ಧರ್ಮ ಸೂತ್ರಗಳಲ್ಲಿಯೇ ಸಾಮಾಜಿಕ ಅಸಮಾನತೆಯ ಬೀಜವಿದೆ ಎನ್ನುವುದನ್ನು ಒಪ್ಪಿಕೊಳ್ಳುವ ತೆರೆದ ಮನಸ್ಸಿರಲಿಲ್ಲ. ಸ್ವಾಮಿಗಳ ಮನಸ್ಸು ಆದರ್ಶಗಳನ್ನು ಹೇಳುವ ಆದರೆ ಯಾವುದನ್ನೂ ಅನುಷ್ಠಾನಕ್ಕೆ ತರದ ವೈದಿಕ ಅದ್ವೈತದ ಬಂಧಿಯಾಗಿದ್ದಿತು. ಭಾರತದ ಎಲ್ಲ ಕಾಲದ ಸಮಾಜ ಸುಧಾರಕರು ಇತರರ ಮೇಲೆ ಏರಿ ಹೋಗುವದಕ್ಕಿಂತಲೂ ಆತ್ಮವಿಮರ್ಶೆ ಮತ್ತು ಬದಲಾವಣೆಗಳೇ ಸಮಾಜ ಸುಧಾರಣೆಗೆ ದಾರಿಯೆಂದು ಭಾವಿಸಿದ್ದರು. ಇದು ಸ್ವಾಮಿಗಳ ದಾರಿಯಾಗಿರಲಿಲ್ಲ.
ಸ್ವಾಮಿಗಳು ಕ್ರೈಸ್ತ ಪಾದ್ರಿಗಳ ಕೆಲಸಗಳನ್ನು ತೆಗಳುವಂತೆ ಕ್ರೈಸ್ತ ಪಾದ್ರಿಗಳು ಭಾರತದಲ್ಲಿ ಪ್ರಚಲಿತವಿದ್ದ ಹಿಂದೂ ಧರ್ಮ , ಅದರ ಜಾತೀಯತೆ , ಅಸಮಾನತೆ , ಅಜ್ಞಾನಗಳನ್ನು ತೆಗಳುವ ಹಕ್ಕು ಸಹಜ ನ್ಯಾಯವೇ ಆಗಿದ್ದಿತು. ಕ್ರೈಸ್ತ ಪಾದ್ರಿಗಳು ತೆಗಳುತ್ತಿದ್ದ ಪ್ರಚಲಿತ ಹಿಂದೂ ಸಮಾಜದಲ್ಲಿದ್ದ ನ್ಯೂನ್ಯತೆಗಳಿಗೂ ಸ್ವಾಮಿಯವರು ಹಿಂದೂ ಸಮಾಜದ ಪತನಕ್ಕೆ ಕಾರಣವೆಂದು ಗುರುತಿಸುತ್ತಿದ್ದ , ಭಾವುಕರಾಗುತ್ತಿದ್ದ ಕಾರಣಗಳಿಗೂ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಕ್ರೈಸ್ತರು ಭಾರತೀಯರಿಗೆ ಲೌಕಿಕ ಸಂಗತಿಗಳಲ್ಲಿ ನೆರವಾಗಬೇಕು , ಧಾರ್ಮಿಕ ಸಂಗತಿಗಳಲ್ಲಿ ಮೂಗು ತೂರಿಸಬಾರದು ಎನ್ನುವುದು ಸ್ವಾಮಿಗಳ ನಿಲುವಾಗಿದ್ದಿತು. ಈ ನಿಲುವು ಸ್ವಾಮಿಗಳ ಅಭಿಮಾನಿ ಹಿಂದೂಗಳಿಗೆ ಸರಿಯೆನಿದರೂ ಯಾವ ಬಣಕ್ಕೂ ಸೇರದ ಮೂರನೆಯವರಿಗೆ ಸರಿಯೆಂದು ಭಾಸವಾಗುತ್ತಿರಲಿಲ್ಲ.
೨೦/೧೧/೧೮೯೩ ರಿಂದ ೧೪/೧೨/೧೮೯೩ ರ ಅವಧಿಯಲ್ಲಿ ಸ್ವಾಮಿಗಳು ಮ್ಯಾಡಿಸನ್ , ಮಿನ್ನೆಪೊಲಿಸ್ , ಡೆ ಮೊಯಿನ್ಸ್ ಮುಂತಾದ ಮಧ್ಯಪಶ್ಚಿಮ ಪ್ರದೇಶದ ಪಟ್ಟಣಗಳಲ್ಲಿ ಉಪನ್ಯಾಸಗಳನ್ನು ಕೊಡುತ್ತಿದ್ದರು. ಈ ಅವಧಿಯಲ್ಲಿ ಸ್ವಾಮಿಗಳು ೧೧ ಸಾರ್ವಜನಿಕ , ೫ ಪಡಸಾಲೆ , ೧೩ ಚರ್ಚ್ , ೧೧ ಕೂಟ ಒಟ್ಟು ೪೦ ಕೂಟ ಭಾಷಣಗಳನ್ನು ಮಾಡಿದ್ದರು. . ಅಮೆರಿಕದಲ್ಲಿ ಸ್ವಾಮಿಗಳ ಭಾಷಣಗಳನ್ನು ಏರ್ಪಡಿಸುತ್ತಿದ್ದವರೆಲ್ಲರೂ ಕ್ರೈಸ್ತ ಧರ್ಮೀಯರು; ಅವರ ಅದೆಷ್ಟೋ ಭಾಷಣಗಳು ಚರ್ಚ್’ನಲ್ಲಿ ಸಾಗುತ್ತಿದ್ದವು. ಅಮೆರಿಕದ ಜನ ಕ್ರೈಸ್ತ ಪಾದ್ರಿಗಳ ಮಾತನ್ನು ಕೇಳುತ್ತಿರಲಿಲ್ಲ. ಹಾಗೆ ಕೇಳುವಂತಿದ್ದರೆ ಸ್ವಾಮಿಗಳು ಅಷ್ಟು ಮುಕ್ತವಾಗಿ ಮಾತನಾಡುತ್ತ ಅಮೆರಿಕದಲ್ಲಿ ಸಂಚರಿಸಲು ಆಗುತ್ತಿರಲಿಲ್ಲ, ಸ್ವಾಮಿಗಳು ಕ್ರೈಸ್ತ ಮಿಷನರಿಗಳ ಮೇಲೆ ಕಟುವಾಗಿ ದಾಳಿ ಮಾಡುತ್ತಿದ್ದಾಗ ಅತ್ಯಂತ ಮತಾಂಧ ಕ್ರೈಸ್ತ ಮಿಷನರಿಗಳು ಕೂಡ ಅದನ್ನು ಸಂವಾದದ ಮೂಲಕ ಎದುರಿಸುತ್ತಿದ್ದರೇ ಹೊರತು ಯಾವುದೇ ಬೆದರಿಕೆಯಿಂದಲ್ಲ. ಭಾರತದ ಸುತ್ತಿ ಬಂದಿದ್ದ ಕೆಲ ಮಿಷನರಿಗಳು ಸ್ವಾಮಿಗಳು ಭಾಷಣಗಳಲ್ಲಿ ಅಮೆರಿಕದ ಕೇಳುಗರಿಗೆ ಹೇಳುತ್ತಿದುದು ವಾಸ್ತವ ಸ್ಥಿತಿಗೆ ಹೊಂದಾಣಿಕೆಯೇ ಆಗುತ್ತಿಲ್ಲ ಎಂದು ಎತ್ತಿ ತೋರಿಸುತ್ತಿದ್ದರು. ಅಮೆರಿಕರನ್ನು , ಕ್ರೈಸ್ತರನ್ನು ಅವರ ತತ್ತ್ವ , ವಿಚಾರಗಳನ್ನು , ಆಚಾರ ,ರೂಢಿಗಳನ್ನು ನೆರೆದಿದ್ದ ಸಭಿಕರೆದುರು ಎತ್ತಿ ಆಡಿಕೊಳ್ಳುತ್ತಿದ್ದ ಸ್ವಾಮಿಗಳಿಗೆ ಕ್ರೈಸ್ತ ಮಿಷನರಿಗಳು ಹಿಂದೂ ಸಾಮಾಜಿಕ ದುಸ್ಥಿತಿಯನ್ನು ಎತ್ತಿ ತೋರಿಸಿದಾಗ ಸಿಡುಕುತ್ತಿದ್ದರು.
೧೮೮೪ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಬಿಷಪ್ ನಿಂಡೆ, ಸೆಂಟ್ರಲ್ ಕ್ರಿಶ್ಚಿಯನ್ ಚರ್ಚ್’ಗೆ ಸೇರಿದ್ದ ನ್ಯೂಮನ್ , ಫೋರ್ಟ್ ಸ್ಟೀಟ್ ಪ್ರೆಸ್’ಬೈಟೇರಿಯನ್ ಚರ್ಚ್’ಗೆ ಸೇರಿದ್ದ ಮಿಷನರಿ ಸೊಸೈಟಿಯ ೪೫ ವರ್ಷಗಳ ಕಾಲ ಭಾರತದಲ್ಲಿದ್ದ ರೆ. ಥ್ಯಾಕ್’ವೆಲ್ , ಭಾರತೀಯ ಸಂಜಾತ ಮದ್ರಾಸಿನ ಆರ್.ಎ ಹ್ಯೂಮ್ , ಸ್ವಾಮಿಗಳು ಪ್ರತಿಪಾದಿಸುತ್ತಿರುವ ಹಿಂದೂ ಧರ್ಮದ ವಾಸ್ತವತೆಯನ್ನು ಪ್ರಶ್ನಿಸಿದ್ದರು, ಸ್ವಾಮಿಗಳು ಕ್ರೈಸ್ತ ಧರ್ಮವನ್ನು ಟೀಕಿಸುವುದನ್ನು ಬೆಂಬಲಿಸಿ ರೆ. ರೀಡ್ ಸ್ಟುಅರ್ಟ್ , ರಬ್ಬಿ ಗ್ರಾಸ್’ಮನ್ ತಾವು ನಡೆಸುತ್ತಿದ್ದ ಕ್ರೈಸ್ತ ಸಭೆಗಳಲ್ಲಿ ಸ್ವಾಮಿಗಳ ಬಗ್ಗೆ ಒಳ್ಳೆಯ , ಬೆಂಬಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಭಾರತದ ವಿಧವೆಯರ ಕುರಿತಾದ ವಿವಾದದ ಸಮಯದಲ್ಲಿ ಡಾ. ಲೆವಿಸ್ ಜೇನ್ಸ್ ಸ್ವಾಮಿಗಳ ನೆರವಿಗೆ ಬಂದು ವಿರೋಧಿಗಳೊಂದಿಗೆ ಸೆಣಸಿದ್ದನು. ವಿಚಾರ ಸ್ವಾತಂತ್ರವನ್ನು ಬೆಂಬಲಿಸುವ ಜನ ಪತ್ರಿಕೆಗಳಲ್ಲಿ ಸ್ವಾಮಿಗಳ ಪರವಾಗಿ ಬಿಗಿಯಾಗಿ ನಿಂತಿದ್ದರು. ಯಾವುದೇ ಸಾರ್ವಜನಿಕ , ಕೂಟ, ಚರ್ಚ್ ಭಾಷಣಗಳ ನಡುವೆ ಸ್ವಾಮಿಗಳ ವಿರುದ್ಧ ಕೂಗಿದ , ಗಲಭೆ ಎಬ್ಬಿಸಿದ, ಮಾತನಾಡಲು ಅಡ್ದಿಪಡಿಸಿದ ಒಂದೇ ಒಂದು ಪ್ರಸಂಗವೂ ದಾಖಲಾಗಿರಲಿಲ್ಲ. ಸ್ವಾಮಿಗಳನ್ನು ಭಾಷಣಕ್ಕೆ ಆಹ್ವಾನಿಸಿದ ಪಾದ್ರಿಗಳಿಗೆ ಇತರ ಪಾದ್ರಿಗಳಾಗಲಿ , ಜನರಾಗಲಿ ನಿಷೇಧ ಹೇರಿರಲಿಲ್ಲ. ಆದ್ದರಿಂದ ಕ್ರೈಸ್ತ ಪಾದ್ರಿಗಳು ಸ್ವಾಮಿಗಳ ಕೆಲಸಕ್ಕೆ ಅಡ್ಡಿ ಮಾಡಿದ್ದರೆನ್ನುವುದು ಸುಳ್ಳು. ೧೯/೩/೧೮೯೪ ರಂದು ರಾಮಕೃಷ್ಣಾನಂದರಿಗೆ ‘ಇಲ್ಲಿಯ ಜನ ಆಷಾಢಭೂತಿಗಳಲ್ಲ. ಇವರಲ್ಲಿ ಅಸೂಯೆನ್ನುವುದು ಲವಲೇಶವೂ ಇಲ್ಲ….. ನಮ್ಮಂತಹ ಕೂಪಮಂಡೂಕಗಳನ್ನು ನಾನೆಲ್ಲಿಯೂ ನೋಡಿಲ್ಲ. ಪರದೇಶದಿಂದ ಏನೇ ಹೊಸದು ಬರಲಿ ಅದನ್ನು ಅಮೆರಿಕ ಮೊದಲು ಸ್ವೀಕರಿಸುವುದು. ಆದರೆ ನಾವೋ !. ನಮ್ಮ ಹಾಗೆ ಪ್ರಪಂಚದಲ್ಲಿ ಯಾರೂ ಇಲ್ಲ. ! ಆರ್ಯ ಸಂತಾನರಲ್ಲವೇ ನಾವು ! ಆ ಹುಟ್ಟುಗುಣ ಎಲ್ಲಿ ಕಾಣಿಸಿತ್ತಿದೆಯೋ ನನಗೆ ತಿಳಿಯದು. ಆದರೂ ನಾವು ಆರ್ಯ ಸಂತಾನರು ! ಈ ಪತ್ರ ಸ್ವಾಮಿಗಳು ಪಾದ್ರಿಗಳ ವಿಚಾರದಲ್ಲಿ ‘ತೋಳ ಬಂತು ತೋಳ’ ಎಂದು ಕೂಗಿದ್ದರೇ ಹೊರತು ಅಲ್ಲಿ ತೋಳ ಬಂದಿರಲಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಅಳಸಿಂಗ ಪೆರುಮಾಳ್ ಒಂದು ಪತ್ರದಲ್ಲಿ ಲಂಡ್ ಎನ್ನುವ ಒಬ್ಬ ಪಾದ್ರಿ ಸ್ವಾಮಿಗಳನ್ನು ಟೀಕಿಸಿ ಮಾಡಿದ ಉಪನ್ಯಾಸ ಯಾವುದೋ ಒಂದು ಮಿಷನರಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದರತ್ತ ಗಮನ ಸೆಳೆದಿದ್ದನು. ಇದರಿಂದ ಸ್ವಾಮಿಗಳಿಗೆ ಭಾರಿ ಸಿಟ್ಟು ಬಂದಿದ್ದು ೬/೫/೧೮೯೫ ರಂದು ಅಳಸಿಂಗ ಪೆರುಮಾಳ್’ಗೆ ಕಟುವಾಗಿ ಹಂಗಿಸಿ ಮಾರುತ್ತರ ಕಳಿಸಿದರು. ‘ ….. ….ನನ್ನ ವಿರುದ್ಧ ಅಸಭ್ಯ ಕಥೆಗಳನ್ನು ಕಟ್ಟುತ್ತಿದ್ದಾರೆ.ಇಲ್ಲಿ ನನಗೆ ಕೆಲವು ಪ್ರಭಾವಿ ಸ್ನೇಹಿತರಿರುವರು. ಅವರು ಅವುಗಳಿಗೆ ಉತ್ತರ ಕೊಡುವರು. ಈ ಸ್ವಾರ್ಥಿಗಳ ಪಾಶವಿಕ ಮತ್ತು ಹೇಡಿತನದ ಟೀಕೆಗಳನ್ನು ಸಂನ್ಯಾಸಿಯಾದ ನಾನು ಎದುರಿಸಬೇಕೇನು? ……..ಹಿಂದೂಗಳೇ ನಿದ್ದೆ ಮಾಡುವುದಕ್ಕೆ ಹೋದರೆ ನಾನೇಕೆ ಹಿಂದೂ ಧರ್ಮದ ರಕ್ಷಣೆಗ ಶಕ್ತಿಯನ್ನು ವ್ಯಯ ಮಾಡಲಿ ? ೩೦ ಕೊಟಿ ಜನ ಅಲ್ಲಿ ಎನು ಮಾಡುತ್ತಿರುವಿರಿ. ಅದರಲ್ಲೂ ವಿದ್ಯಾವಂತರೂ ಪಂಡಿತರು ಎಂದು ಹೆಮ್ಮ ಕೊಚ್ಚಿಕೊಳ್ಳತ್ತಿರುವರೇ ಆದ ನೀವು ಏತಕ್ಕ ಅದರ ರಕ್ಷಣೆಯ ಭಾಗವನ್ನು ವಹಿಸಿ , ಧರ್ಮ ಬೋಧನೆಯ ಕೆಲಸಕ್ಕೆ ನನ್ನನ್ನು ಬಿಡಬಾರದು….. ಹಗಲಿರುಳು ನಾನು ಅಪರಿಚಿತ ದೇಶದಲ್ಲಿ ದುಡಿಯುತ್ತಿರುವೆನು. ಭರತಖಂಡ ನನಗೆ ಯಾವ ಸಹಾಯವನ್ನು ಕಳಿಸುವುದು ? ನಿಮ್ಮ ಸಮರ್ಥನೆಗಳನ್ನು ಬರೆದು ಅಮೆರಿಕದ ಪತ್ರಿಕೆಗಳಿಗೆ ಏಕೆ ನೀವು ಕಳಿಸಬಾರದು ? ನಿಮ್ಮನ್ನು ತಡೆಯುವರಾರು ? ನೀವೆಲ್ಲ , ಇಡೀ ಜನಾಂಗವೇ ಭೌತಿಕ, ನೈತಿಕ, ಅಧ್ಯಾತ್ಮಿಕ ಹೇಡಿಗಳು. ಕಾಮಿನಿ ಕಾಂಚನ ಆಸಕ್ತರಾದ ನೀವು ಪಶು ಸಮಾನರು . ಅಂತಹವರಾದ ನೀವು ಸಂನ್ಯಾಸಿಯನ್ನು ಹೋರಾಡಲು ಪ್ರೇರೇಪಿಸುತ್ತಿದ್ದೀರಿ. ……ನಿಮ್ಮಲ್ಲಿ ಯಾರಾದರೊಬ್ಬರು ಉತ್ತರವನ್ನು ಬರೆದು ಬೋಸ್ಟನ್’ನ ‘ಅರೆನಾ’ ಪತ್ರಿಕೆಗೆ ಏಕೆ ಕಳಿಸಬಾರದು ? ಅವರು ಸಂತೋಷದಿಂದ ಪ್ರಕಟಿಸುತ್ತಾರೆ ಮತ್ತು ಸಾಕಷ್ಟು ಹಣವನ್ನು ಕೊಡುತ್ತಾರೆ. ….ಇಂದಿಗೂ ಪಾಶ್ಚಾತ್ಯ ದೇಶಕ್ಕೆ ಬಂದ ದುಷ್ಟ ಹಿಂದೂಗಳು ತಮ್ಮ ಕೀರ್ತಿ ಮತ್ತು ಹಣ ಸಂಪಾದನೆಗಾಗಿ ತಮ್ಮ ಧರ್ಮ ಮತ್ತು ದೇಶವನ್ನು ದೂರಿರುವರು……….ಧರ್ಮ ಬೋಧಿಸುವುದಕ್ಕಾಗಿ ಪ್ರಪಂಚವನ್ನು ತೊರೆಯಲು ಸಿದ್ಧರಾಗಿರುವವರು ಮದ್ರಾಸಿನಲ್ಲಿ ಎಲ್ಲಿದ್ದಾರೆ ? …ತನ್ನ ದೇಶದ ಮಾನವನ್ನು ಕಾಪಾಡುವುದಕ್ಕೆ ಧೈರ್ಯವಾಗಿ ನಿಂತವನು ನಾನೊಬ್ಬನೇ . ಹಿಂದೂಗಳಿಂದ ಅವರು ಎಂದಿಗೂ ನಿರೀಕ್ಷಿಸದ ಭಾವನೆಗಳನ್ನು ನಾನು ಅಮೆರಿಕನ್ನರಿಗೆ ಕೊಟ್ಟಿರುವೆನು. …ಈ ದೇಶದಲ್ಲಿ ಸಾವಿರಾರು ಮಂದಿ ನನಗೆ ಗೆಳೆಯರಾಗಿರುವರು. ನೂರಾರು ಮಂದಿ ಸಾವಿನವರೆಗೂ ನನ್ನನ್ನು ಅನುಸರಿಸುವರಿದ್ದಾರೆ. ಪ್ರತಿ ವರ್ಷವೂ ಅವರ ಸಂಖ್ಯೆ ಹೆಚ್ಚುವುದು. …..
ಥೋಬರ್ನ್ ಎನ್ನುವ ಪಾದ್ರಿ ಸ್ವಾಮಿಗಳ ಮೇಲೆ ದಾಳಿ ಮಾಡುತ್ತಿದ್ದರೂ ಸ್ವಾಮಿಗಳು ನಿರ್ಭಾವುಕರಾಗಿದ್ದರು. ಇದನ್ನು ಅಳಸಿಂಗ ಪೆರುಮಾಳ್ ಸಹಿಸಲಾಗದೆ ಸ್ವಾಮಿಗಳನ್ನು ಸಮರ್ಥಿಸಿ , ಥೋಬರ್ನ್’ನನ್ನು ಖಂಡಿಸಿ ಡೆಟ್ರಾಯಿಟ್ ಈವೆನಿಂಗ್ ನ್ಯೂಸ್ ಸಂಪಾದಕರಿಗೆ ಪ್ರಬಲವಾದ ಪತ್ರವೊಂದನ್ನು ಬರೆದನು. ಅದು ೭/೭/೧೮೯೬ ರಂದು ನ್ಯೂಸ್ ಟ್ರಿಬ್ಯೂನ್’ನಲ್ಲಿ ಪ್ರಕಟವಾಯಿತು ಎಂದು ಮಾರಿ ಲೂಯಿ ಬರ್ಕೆ ತಿಳಿಸುತ್ತಾಳೆ.(136) ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಸ್ವಾಮಿಗಳೇ ತಮ್ಮನ್ನು ಸಮರ್ಥಿಸಿ ಅಮೆರಿಕದ ಪತ್ರಿಕೆಗಳಿಗೆ ಬರೆಯಲು ಅಳಸಿಂಗನನ್ನು ಹುರಿದುಂಬಿಸುತ್ತಿದ್ದರೆಂದು ಗೊತ್ತಾಗುತ್ತದೆ.
ಅಳಸಿಂಗ ಪೆರುಮಾಳ್’ಗೆ ಬರೆದ ಮೇಲಿನ ಪತ್ರದಲ್ಲಿ ಸ್ವಾಮಿಗಳು ತೋರಿಸಿರುವ ಸಿಟ್ಟು ಸೆಡವುಗಳಿಗೆ ಯಾವುದೇ ಸಮರ್ಥನೆಯಿಲ್ಲ. ತಮ್ಮ ಮೇಲೆ ಮಾಡಿದ ವೈಯಕ್ತಿಕ ನಿಂದನೆಗೆ ತಮ್ಮ ಶಿಷ್ಯರು ಉತ್ತರ ಕೊಡದಿದ್ದುದಕ್ಕೆ ಎಲ್ಲ ಹಿಂದೂಗಳನ್ನು ಹೇಡಿಗಳು , ನಿರ್ವೀರ್ಯರು ಎಂದು ಬೈಯ್ದಿರುವುದನ್ನು ಒಪ್ಪಲಾಗದು. ಹಿಂದೂ ಧರ್ಮ ಮತ್ತು ಭಾರತ ದೇಶದ ಉದ್ಧಾರ ತಾವು ಬೋಧಿಸುತ್ತಿರುವ ವಿಷಯಗಳಲ್ಲಿ ಅಡಕವಾಗಿದೆ. ಹಿಂದೂ ಧರ್ಮವನ್ನು ಪ್ರತಿನಿಧಿಸುವಲ್ಲಿ ಮತ್ತು ಭಾರತದ ದುಸ್ಥಿತಿಯನ್ನು ಕೊನೆಗಾಣಿಸಲು ಯತ್ನಿಸುತ್ತಿರುವುದರಲ್ಲಿ ತಾವೇ ಮೊದಲಿಗರು , ತಮ್ಮ ಮಾರ್ಗವೇ ಸರಿ ಎನ್ನುವಲ್ಲಿ ಸ್ವಪ್ರಶಂಸೆಯಿದೆ. ಸ್ವಾಮಿಗಳು ತಮಗೆ ಆಪ್ತವಾದ ವೇದಾಂತದ ಅದ್ವೈತವನ್ನು ಬೋಧಿಸಲು ಹೋಗಿದ್ದರು. ಅದಕ್ಕಾಗಿ ಅವರು ಹಿಂದೂ ಧರ್ಮದ ಇತರ ಪಂಥ , ಮತಗಳ ಮುಂದಾಳುಗಳ ಅಭಿಪ್ರಾಯವನ್ನೇನೂ ಪಡೆದಿರಲಿಲ್ಲ. ಅಮೆರಿಕದಲ್ಲಿ ತಾವು ಪರಿಭಾವಿಸಿಕೊಂಡಿದ್ದ ಹಿಂದೂ ಧರ್ಮವನ್ನು ಪ್ರಚಾರ ಮಾಡಿ ಪಾಶ್ಚಾತ್ಯರಿಂದ ಲೌಕಿಕ ವಿದ್ಯೆ ಮತ್ತು ರಾಮಕೃಷ್ಣರ ಹೆಸರಿನಲ್ಲಿ ಒಂದು ಆಶ್ರಮ ಮತ್ತು ಅಧ್ಯಾತ್ಮ ತರಬೇತಿ ಕೇಂದ್ರ ಸ್ಥಾಪಸಬೇಕೆನ್ನುವುದೇ ಅವರ ಗುರಿಯಾಗಿದ್ದಿತು. ಇದಕ್ಕೆ ಅಡಚಣೆಗಳು ಎದುರಾದಾಗ ಎಲ್ಲ ಹಿಂದೂಗಳನ್ನು ಹೀಯಾಳಿಸಲು ಸ್ವಾಮಿಗಳಿಗೆ ಯಾವುದೇ ಅಧಿಕಾರ ಇರಲಿಲ್ಲ. ಹಿಂದೂ ಧರ್ಮದ ಪರವಾಗಿ ಪಂಡಿತರು ಹೋರಾಡಬೇಕೆನ್ನುವ ಕರೆ ನೀಡಿದ್ದಾರೆ. ಈ ಪಂಡಿತರು ಸಾಮಾನ್ಯ ಜನರ ಜೀವನ ವಿರೋಧಿಯಾದ ಶ್ರೌತ, ಗೃಹ್ಯ ಮತ್ತು ಧರ್ಮ ಸೂತ್ರಗಳ ಆಧಾರದ ಮೇಲೆ ಹೋರಾಟ ನಡೆಸಬೇಕಿದ್ದಿತೇ ಅಥವಾ ಅಮೆರಿಕದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೆ ಕುರುಡರಾಗಿ ಸ್ವಾಮಿಗಳ ಬೆಂಬಲಕ್ಕೆ ನಿಲ್ಲಬೇಕಾಗಿದ್ದಿತೇ ? ಹಿಂದೂ ಧರ್ಮವನ್ನು ಪ್ರಚಾರ ಮಾಡುವುದೇ ಅವರ ಗುರಿಯಾಗಿದ್ದರೆ ಕ್ರೈಸ್ತ ಮಿಷನರಿಗಳ ಮೇಲೆ ಮಿತಿ ಮೀರಿ ಏರಿ ಹೋಗುವುದು ಅಗತ್ಯವಿರಲಿಲ್ಲ.
ಕ್ರೈಸ್ತ ಪಾದ್ರಿಗಳಿಂದ ಸ್ವಾಮಿಗಳನ್ನು ವ್ಯವಸ್ಥಿತವಾಗಿ ಎದುರಿಸುವ ಎರಡು ಪ್ರಯತ್ನಗಳಾಗಿದ್ದವು. ಅದರಲ್ಲಿ ಮೊದಲನೆಯದು ಜೆ.ಮುರ್ಡೊಕ್ ‘ಸ್ವಾಮಿ ವಿವೇಕಾನಂದ ಆನ್ ಹಿಂದೂಯಿಸಂ’ ಎಂದು ಸ್ವಾಮಿಗಳನ್ನು ಟೀಕಿಸಿ ಬರೆದಿದ್ದ ಪುಸ್ತಕ. ಇದು ೧೮೯೫ ರಲ್ಲಿ ಪ್ರಕಟಗೊಂಡು ಸ್ವಾಮಿಗಳು ಥೌಸಂಡ್ ಐಲ್ಯಾಂಡ್ ಪಾರ್ಕ್’ನಲ್ಲಿ ಇರುವಾಗ ಅವರ ಕೈಸೇರಿದ್ದಿತು. ಈ ವೇಳೆಗಾಗಲೇ ಸ್ವಾಮಿಗಳಿಗೆ ಸಾಕಷ್ಟು ಕೀರ್ತಿ ಬಂದು , ಉದಾರವಾದಿ ಬೆಂಬಲಿಗರನ್ನು ಪಡೆದಿದ್ದರಿಂದ ಅದರ ಬಗ್ಗೆ ಅವರು ಚಿಂತಿತರಾಗರಲಿಲ್ಲ. ೧೮೯೭ ರಲ್ಲಿ ಸ್ವಾಮಿಗಳು ಅಮೆರಿಕವನ್ನೇ ಗೆದ್ದು ಬಂದರು ಎನ್ನುವ ಅತಿರಂಜಿತ ಚಿತ್ರಣದ ನೈಜತೆಯನ್ನು ಪ್ರಶ್ನಿಸಿ ಕಲ್ಕತ್ತ ವೈ.ಎಂ.ಸಿ.ಎ ಅಸೊಸಿಯೇಷನ್ ಕಾರ್ಯದರ್ಶಿ ಡಬ್ಲ್ಯು.ಡಬ್ಲ್ಯು.ವೈಟ್ ಪ್ರಕಟಿಸಿದ ಸ್ವಾಮಿ ವಿವೇಕಾನಂದ ಅಂಡ್ ಹಿಸ್ ಗುರು ವಿಥ್ ದಿ ಲೆಟರ್ಸ್ ಫ್ರಂ ಪ್ರಾಮಿನೆಂಟ್ ಅಮೆರಿಕನ್ಸ್ ಆನ್ ದಿ ಅಲೆಗ್ಡ್ ಪ್ರೋಗ್ರೆಸ್ ಆಫ್ ವೇದಾಂತಿಸಂ ಇನ್ ದಿ ಯುನೈಟೆಡ್ ಸ್ಟೇಟ್ಸ್ ‘ ಪುಸ್ತಕ ಪ್ರಕಟಿಸಿದನು. ಈ ಪುಸ್ತಕಗಳಲ್ಲ್ರಿವ ವಿಷಯಗಳನ್ನು ಗಮನಿಸಿದರೆ ಕ್ರ್ರೈಸ್ತ ಪಾದ್ರಿಗಳು ಸ್ವಾಮಿಗಳನ್ನು ತಾತ್ತ್ವಿಕವಾಗಿ ವಿರೋಧಿಸುತ್ತಿದ್ದರೆನ್ನುವುದು ಸ್ಪಷ್ಟವಾಗುತ್ತದೆ.
ಬ್ರಾಹ್ಮ ಸಮಾಜಿಗಳು : ಇವರಲ್ಲಿ ಪ್ರತಾಪಚಂದ್ರ ಮಜುಂದಾರ ಮೊದಲಿನ ಸಾಲಿನಲ್ಲಿ ಬರುತ್ತಾರೆ. ಸ್ವಾಮಿಗಳು ಅಮೆರಿಕದಲ್ಲಿ ಭಾಷಣ ಮಾಡುತ್ತ ಸಂಚರಿಸುತ್ತಿದ್ದ ಕಾಲದಲ್ಲಿಯೇ ವಿಶ್ವ ಧರ್ಮ ಸಂಸತ್ತಿಗೆ ಹೋಗಿದ್ದ ಇತರ ಭಾರತೀಯರು ಅಮೆರಿಕದಲ್ಲಿ ಭಾಷಣಗಳನ್ನು ನೀಡುತ್ತ ಸಂಚರಿಸುತ್ತಿದ್ದರು. (೨/೧೧/೧೮೯೩). ರಾಮಕೃಷ್ಣ ಪರಮಹಂಸರನ್ನು ಕುರಿತಾಗಿ ಮೊದಲ ಬಾರಿಗೆ ಇಂಗ್ಲಿಷ್’ನಲ್ಲಿ ಪ್ರತಾಪ್ ಚಂದ್ರ ಮುಜುಂದಾರ್ ಬರೆದ ಲೇಖನ ‘ಥಿಯಾಸ್ಟಿಕ್ ಕ್ವಾರ್ಟರ್ಲಿ ರಿವ್ಯೂನಲ್ಲಿ ೧೮೭೯ ರಲ್ಲಿ ಪ್ರಕಟಗೊಂಡಿತು. ಇದಾದ ನಂತರ ಪ್ರತಾಪಚಂದ್ರ ಮಜುಂದಾರ ೧೮೮೭ ರಲ್ಲಿ ರಾಮಕೃಷ್ಣ ಪರಮಹಂಸರನ್ನು ಕುರಿತಾಗಿ ಪುಸ್ತಕ ಬರೆದಿದ್ದರು. ಇದನ್ನು ಮತ್ತು ಸ್ವಾಮಿಗಳು ಒದಗಿಸಿದ ಮಾಹಿತಿಯನ್ನು ಆಧರಿಸಿ ಮ್ಯಾಕ್ಸ್ ಮುಲ್ಲರ್ ‘ರಾಮಕೃಷ್ಣ ಹಿಸ್ ಲೈಫ್ ಅಂಡ್ ಸೇಯಿಂಗ್ಸ್’ ಲೇಖನವನ್ನು ೧೮೯೮ ರಲ್ಲಿ ಪ್ರಕಟಿಸಿದರು. ವಿಶ್ವ ಧರ್ಮ ಸಮ್ಮೇಳನದಲ್ಲಿ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರೂ ಮತ್ತು ಅತ್ಯಂತ ಪ್ರೀತಿಪಾತ್ರರೂ ಆದ ಸ್ವಾಮಿ ವಿವೇಕಾನಂದರು ಖ್ಯಾತರಾದ ಮೇಲೆ ಮಜುಂದಾರರಿಗೆ ತಮ್ಮ ಸ್ಥಾನ ತಪ್ಪಿತು ಎನ್ನುವ ಹೊಟ್ಟೆಕಿಚ್ಚು ಉಂಟಾಗಿ ಸ್ವಾಮಿಗಳ ವಿರುದ್ಧ ಸಂಚು ಹೂಡಿದರು. ಇಷ್ಟಿದ್ದರೂ ಸ್ವಾಮಿಗಳು ಅವರು ರಾಮಕೃಷ್ಣರ ಬಗ್ಗೆ ಬರೆದ ಪುಸ್ತಕವನ್ನು ತರಿಸಿ ಅಮೆರಿಕದಲ್ಲಿ ಹಂಚಿದರು. ಸ್ವಾಮಿಗಳು ಹೇಳುವಂತೆ ಹೊಟ್ಟೆಕಿಚ್ಚು ಭಾರತೀಯರ ಅವಗುಣ. ಸ್ವಾಮಿಗಳ ವಿರುದ್ಧ ವಿದೇಶಿ ನೆಲದಲ್ಲಿ ಸಂಚು ಹೂಡಿದ್ದುದು ಅಕ್ಷಮ್ಯ ಅಪರಾಧ ಎಂದು ಬಹಳ ಜನ ವಾದಿಸಿದ್ದಾರೆ. ಹೀಗೆ ವಾದಿಸುವವರು ಮುಖ್ಯವಾಗಿ ಒಂದು ಸಂಗತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದ್ದಾರೆ. ರಾಮಕೃಷ್ಣ ಪರಮಹಂಸರ ಬಗ್ಗೆ ಪ್ರತಾಪಚಂದ್ರ ಮಜುಂದಾರರು ಬರೆದದ್ದು ಹೊರತಾಗಿ ಬೇರೆ ಯಾವುದೇ ಪುಸ್ತಕವಿರಲಿಲ್ಲ ಮತ್ತು ಪ್ರತಾಪಚಂದ್ರ ಮಜುಂದಾರರು ಸಂಚು ಹೂಡಿರುವುದಕ್ಕೆ ಸ್ವಾಮಿಗಳ ಹೇಳಿಕೆ ಹೊರತು ಯಾವುದೇ ಹೊರಗಿನ ಪುರಾವೆಗಳಿಲ್ಲ.
೨೮, ಸೆಪ್ಟೆಂಬರ್ ೧೮೯೩ ರಂದು ಪ್ರತಾಪಚಂದ್ರ ಮಜುಂದಾರ್ ಷಿಕಾಗೊ ಬಿಟ್ಟು ಇಂಡಿಯಾನಾ ಪೊಲಿಸ್ ಮತ್ತು ಬಫೆಲೊ ಮೂಲಕ ಸಾಗಿ ೩/೧೦/೧೮೯೩ ರಂದು ಬೋಸ್ಟನ್ ತಲುಪಿದರು. ಬಹುತೇಕ ಬೋಸ್ಟನ್’ನಲ್ಲಿ ಉಳಿದು ಡಿಸೆಂಬರ್ ೯ , ೧೮೯೩ ರಂದು ಹಡಗಿನಲ್ಲಿ ಲಿವರ್’ಪೂಲ್’ಗೆ ಹೋದರು. ಬೋಸ್ಟನ್’ನಲ್ಲಿ ಚರ್ಚ್, ಕೂಟ , ಭೋಜನಾನಂತರ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಉಪನ್ಯಾಸಗಳನ್ನು ಕೊಟ್ಟರು. ಇದಲ್ಲದೆ ‘ಸ್ಪಿರಿಟ್ ಆಫ್ ಗಾಡ್’ ಮತ್ತು ‘ಹಾರ್ಟ್ ಬೀಟ್ಸ್’ ಎನ್ನುವ ಪುಸ್ತಕಗಳನ್ನು ಬರೆಯಲು ತೊಡಗಿಕೊಂಡಿದ್ದು ಇವು ೧೮೯೪ ರಲ್ಲಿ ಬೋಸ್ಟನ್’ನಿಂದ ಪ್ರಕಟಣೆಗೊಂಡವು. ಅಮೆರಿಕದಲ್ಲಿ ಯೂನಿಟೇರಿಯನ್ ಪಂಥದದವರು ಸೇರಿದಂತೆ ಉದಾರವಾದಿ ನಿಲುವಿನ ಶಿಕ್ಷಣ ತಜ್ಞರು , ಚಿಂತಕರು , ಪಾದ್ರಿಗಳು ಪ್ರತಾಪಚಂದ್ರ ಮಜುಂದಾರರ ಗೆಳೆಯರ ಪಟ್ಟಿಯಲ್ಲಿದ್ದರು. ಬೋಸ್ಟನ್’ನ ಲೊವೆಲ್ ಇನ್’ಸ್ಟಿಟ್ಯೂಟ್’ನಲ್ಲಿ ‘ದಿ ರಿಲಿಜನ್ಸ್ ಅಂಡ್ ಸೋಷಿಯಲ್ ಲೈಫ್ ಆಫ್ ಇಂಡಿಯಾ ‘ , ಮಾಡರ್ನ್ ರಿಲಿಜನ್ಸ್ ಇನ್ ಇಂಡಿಯಾ , ‘ದಿ ರೇಸಸ್ ಇನ್ ಇಂಡಿಯಾ , ಮತ್ತು ಹಿಂದೂ ಸೊಸೈಟಿ ಎನ್ನುವ ನಾಲ್ಕು ಭಾಷಣಗಳನ್ನು ಮಾಡಿದರು. ಜನಮೆಚ್ಚುಗೆಯಿಂದಾಗಿ ಈ ಭಾಷಣಗಳನ್ನು ಪುನರಾವರ್ತಿಸಲಾಯಿತು. ಅಮೆರಿಕದ ಎಡ್ವರ್ಡ್ ಇ. ಹೇಲ್ , ಸ್ಯಾಮುಯೆಲ್ ಜೆ ಬರೋಸ್ , ವಿಲಿಯಂ ಎಚ್ ರೀಡ್ ಮತ್ತು ಹೆಬೆರ್ ನ್ಯೂಟನ್ ಒಗ್ಗೂಡಿ ಮಜುಂದಾರ್ ಮಿಷನ್ ಫಂಡ್ ಸ್ಥಾಪಿಸಿ ಅದನ್ನು ಮುಂದಿನ ಹತ್ತು ವರ್ಷಗಳ ಕಾಲ ನಿಭಾಯಿಸಿದರು. ೨೯/೧೨/೧೮೯೩ ರಂದು ಇಂಗ್ಲೆಂಡ್ ತೊರೆದು ಕೆಲ ದೇಶಗಳ ಮೂಲಕ ಸಾಗಿ ೨೪/೧/೧೮೯೪ ರಂದು ಕಲ್ಕತ್ತ ತಲುಪಿದರು.
೨/೧೦/೧೮೯೩ ರಂದು ಸ್ವಾಮಿಗಳು ಜಾನ್ ಹೆನ್ರಿ ರೈಟ್’ಗೆ ಬರೆದ ಪತ್ರದಲ್ಲಿ ‘ ನಮ್ಮ ಭಾರತದ ಪ್ರೀತಿಪಾತ್ರರಾದ ಮೃದು ಹೃದಯದ ಧರ್ಮಪಾಲ ಮತ್ತು ವಾಗ್ಮಿ ಮಜುಂದಾರರನ್ನು ನೋಡಲು ನೀವು ಇಲ್ಲಿದ್ದರೆ ಚೆನ್ನಾಗಿದ್ದಿತೆನಿಸುತ್ತದೆ’ ಎಂದು ಬರೆದಿದ್ದರು. ವಿಶ್ವಧರ್ಮ ಸಂಸತ್ತು ಮುಗಿದ ಮರುದಿನವೇ ಪ್ರತಾಪಚಂದ್ರ ಮಜುಂದಾರ ಷಿಕಾಗೊ ತೊರೆದಿದ್ದರೆ ಸ್ವಾಮಿಗಳು ಷಿಕಾಗೊ ಸುತ್ತಲಿನ ಉಪನಗರಗಳಲ್ಲಿ ಭಾಷಣಗಳನ್ನು ಮಾಡುತ್ತಿದ್ದರು. ೨೦/೧೧/೧೮೯೩ ರಂದು ಸ್ವಾಮಿಗಳು ಇಲಿನಾಯ್ ತೊರೆದು ಮ್ಯಾಡಿಸನ್ , ವಿಸ್ಕಾನ್ಸಿನ್ ಕಡೆ ಹೊರಟರು. ೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ಮಜುಂದಾರರನ್ನು ಹೊಗಳಿದ್ದರು. ಇದಾದ ನಂತರ ೧೪/೧೧/೧೮೯೩ ರಂದು ಹರಿದಾಸ ವಿಹಾರಿದಾಸ ದೇಸಾಯರಿಗೆ ಬರೆದ ಪತ್ರದಲ್ಲಿ ತಮ್ಮನ್ನು ಹೊಗಳಿಕೊಂಡಿದ್ದರಾದರೂ ಮಜುಂದಾರರ ಮೇಲೆ ದೂರನ್ನು ಹೇಳಿರಲಿಲ್ಲ. ಮಧ್ಯ ಪಶ್ಚಿಮ ಪ್ರದೇಶಗಳಲ್ಲಿ ಭಾಷಣಗಳನ್ನು ಕೊಡುತ್ತಿದ್ದ ಸ್ವಾಮಿಗಳು ಡೆ ಮೊಯಿನ್ಸ್ ಬಿಡುವ ಮೊದಲು ನೀಡಿದ ಸಂದರ್ಶನ ೧/೧೨/೧೮೯೩ ರಂದು ಅಯೋವಾ ಸ್ಟೇಟ್ ರಿಜಿಸ್ಟರ್’’ನಲ್ಲಿ ಕಾಣಿಸಿಕೊಂಡಿತು. ಅದರಲ್ಲಿ ‘… ಸ್ವಾಮಿಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ಬ್ರಾಹ್ಮ ಸಮಾಜದ ಬಗ್ಗೆ ಹಿತಕರ ಮಾತುಗಳನ್ನಾಡಿ , ಅದು ಭಾರತದಲ್ಲಿ ಹೆಂಗಸರಿಗಾಗಿ ಮಾಡುತ್ತಿರುವ ಕೆಲಸವನ್ನು , ಇಲ್ಲಿರುವ ಅದರ ಪ್ರತಿನಿಧಿಗಳನ್ನು ಹೊಗಳಿದರು ‘ ಎಂದಿದೆ. (137) ಇದೇ ಸಮಯದಲ್ಲಿ ಅದೇ ಊರಿನಲ್ಲಿದ್ದ ಬಲವಂತ ಬಾಹು ನಗರ್ಕರ್ ತಮ್ಮ ಭಾಷಣಗಳನ್ನು ಮುಗಿಸಿದ್ದರು.
೨೪/೧/೧೮೯೪ ರಂದು ಮದ್ರಾಸ್ ಶಿಷ್ಯರಿಗೆ ಬರೆದ ಪತ್ರದಲ್ಲಿ ‘ಇಂಟೀರಿಯರ್’ ಪತ್ರಿಕೆಯಲ್ಲಿ ಬಂದಿರುವ ಟೀಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲವೆಂದು ತಿಳಿಸಿದ್ದರು. ಇದಾದ ನಾಲ್ಕೇ ದಿನಗಳಲ್ಲಿ -೨೯/೧/೧೮೯೪- ಹರಿದಾಸ ವಿಹಾರಿದಾಸ ದೇಸಾಯಿಗಳಿಗೆ ಬರೆದ ಪತ್ರದಲ್ಲಿ ಮೇಧಾವಿಗಳಿರುವ ಭಾರತದ ಪತನಕ್ಕೆ ಹೊಟ್ಟೆಕಿಚ್ಚು ಕಾರಣ ಎಂದು ತಿಳಿಸಿದ್ದರು. ಈ ನಾಲ್ಕು ದಿನಗಳಲ್ಲಿ ಸ್ವಾಮಿಗಳಲ್ಲಿ ಇಂತಹ ಅಭಿಪ್ರಾಯ ಏಕೆ ಬಂದಿರಬಹುದು ಎಂದು ಊಹಿಸುವುದು ಸಾದ್ಯ. ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿ ೨೪/೧/೧೮೯೪ ರಂದು ಭಾರತಕ್ಕೆ ಮರಳಿದ್ದ ಪ್ರತಾಪಚಂದ್ರ ಮಜುಂದಾರ ವಿಶ್ವ ಧರ್ಮ ಸಂಸತ್ತಿನ ನೈಜ ಚಿತ್ರಣ ನೀಡಿ ‘ದಿ ಇಂಡಿಯನ್ ಮಿರರ್’’ ತಿಳಿಸಿದಂತೆ ಸ್ವಾಮಿಗಳು ಅದ್ಭುತ ಯಶಸ್ಸು ಗಳಿಸಿದ್ದಾರೆ ಎನ್ನುವುದನ್ನು ಒಪ್ಪಿರಲಿಲ್ಲ ಮತ್ತು ಸ್ವಾಮಿಗಳ ಜೀವನ ಶೈಲಿಯ ಬಗ್ಗೆ ಆಕ್ಷೇಪಣೆ ತಳೆದಿದ್ದರು. ಇದನ್ನು ಗುರುಭಾಯಿಗಳು ತಂತಿಯ ಮೂಲಕ ಸ್ವಾಮಿಗಳಿಗೆ ತಿಳಿಸಿದ್ದರು. ಇದಾದ ನಂತರ ಮಜುಂದಾರರ ಹೇಳಿಕೆಗಳಿಗ ಸ್ಪಷ್ಟನೆ ಬಯಸಿ ಗುರುಭಾಯಿಗಳು ಸ್ವಾಮಿಗಳಿಗೆ ಪತ್ರ ಬರೆದಿದ್ದರು. ಹಾಗಾಗಿ ೧೮/೩/೧೮೯೪ ರಂದು ಮೇರಿ ಹೇಲ್’ಗೆ ‘..ಮಜುಂದಾರ ಕಲ್ಕತ್ತಕ್ಕೆ ಹೋಗಿ ನಾನು ಇಲ್ಲ ಎಲ್ಲ ಬಗೆಯ ಪಾಪ ಕಾರ್ಯಗಳನ್ನು ಮಾಡುತ್ತಿದ್ದೇನೆ ‘ ಎನ್ನುವ ಸುದ್ದಿ ಹಬ್ಬಿಸಿದ್ದಾನೆ ಎಂದು ರೋಷದಲ್ಲಿ ಹೇಳಿದ್ದರು. ಇದಾದ ಮರುದಿನ -೧೯/೩/೧೮೯೪-ರಾಮಕೃಷ್ಣಾನಂದನಿಗೆ ಬರೆದ ಪತ್ರದಲ್ಲಿ ‘ ನನ್ನ ಜನಪ್ರಿಯತೆಯಿಂದ ಮಜುಂದಾರರಿಗೆ ಹೊಟ್ಟೆಕಿಚ್ಚು ಉಂಟಾಗಿದೆ. ಇಲ್ಲಿನ ಪಾದ್ರಿಗಳು ನನ್ನನ್ನು ಮುಗಿಸಲು ಯತ್ನಿಸಿದರು’ ಎನ್ನುತ್ತ ತಮ್ಮ ವಿರುದ್ಧದ ಸಂಚೊಂದನ್ನು ತಾವೇ ಕಲ್ಪಿಸಿಕೊಂಡಿದ್ದರು. ಅಮೆರಿಕದಲ್ಲಿರುವಾಗ ಮಜುಂದಾರ ನೇರವಾಗಿ ಪಾದ್ರಿಗಳನ್ನು ಸ್ವಾಮಿಗಳ ವಿರುದ್ಧ ಎತ್ತಿ ಕಟ್ಟಬಹುದಾಗಿತ್ತು. ಆದರೆ ಅಂತಹ ಯಾವುದೇ ಘಟನೆ ನಡೆದಿರಲಿಲ್ಲ. ಅಮೆರಿಕ ತೊರೆದ ನಂತರ ಸ್ವಾಮಿಗಳು ಏನು ಮಾಡುತ್ತಿದ್ದಾರೆ ಎನ್ನುವುದು ಪ್ರತಾಪಚಂದ್ರ ಮಜುಂದಾರರಿಗೆ ಇತರರಿಗೆ ತಿಳಿಯುವಂತೆ ಪತ್ರಿಕೆ, ಪತ್ರಗಳ ಮೂಲಕ ಮಾತ್ರ ತಿಳಿಯುತ್ತಿದ್ದಿತು. ಎಂದರೆ ಭೋಗ ಭೂಮಿಯಾದ ಅಮೆರಿಕದಲ್ಲಿ ಸ್ವಾಮಿಗಳು ಹೇಗಿದ್ದಾರೆ ಎಂದು ತಿಳಿಯಲು ಗುರುಭಾಯಿಗಳು ಒಂದು ಉಪಾಯವನ್ನು ಹುಡುಕಿದ್ದರು. ಸ್ವಾಮಿಗಳನ್ನು ನೇರವಾಗಿ ಕೇಳಿದರೆ ಅವರು ಕೆರಳಬಹುದು , ಕೊಡವಿಹಾಕಬಹುದು , ನನಗೂ ನಿಮಗೂ ಸಂಬಂಧವಿಲ್ಲ ಎನ್ನಬಹುದು. ಅದರ ಬದಲು ಮಜುಂದಾರನ ಹೆಸರನ್ನು ಬಳಸಿಕೊಂಡು ಅತ ನಿನ್ನ ಬಗ್ಗೆ ಹಾಗೆನ್ನುತ್ತಿದ್ದಾನೆ , ಹೀಗೆನ್ನುತ್ತಿದ್ದಾನೆ , ಅದು ನಿಜವೇ , ಇದು ನಿಜವೇ ಎಂದು ಕೇಳಿ ಎಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯಲು ಸಾದ್ಯ ಎಂದು ಮನಗಂಡಿದ್ದರು.
ಡೆಟ್ರಾಯಿಟ್ ಫ್ರೀ ಪ್ರೆಸ್ -೮/೪/೧೮೯೪ ಮತ್ತು ಔಟ್ ಲುಕ್ –ಏಪ್ರಿಲ್ ೧೮೯೪ ಸಂಚಿಕೆಗಳಲ್ಲಿ ಆರ್.ಎ. ಹ್ಯೂಮ್ ಆರೋಪಗಳನ್ನು ಮಾಡಿದ್ದನು. ಸ್ವಾಮಿಗಳು ಈ ವಾದ ವಿವಾದಗಳಲ್ಲಿ ಸಕ್ರಿಯವಾಗಿ ಭಾಗಿಯಾಗದಿದ್ದರೂ ಮೇ ೧೮೯೪ ರಲ್ಲಿ ಜಾನ್ ಹೆನ್ರಿ ರೈಟ್’ಗೆ ‘ ಆ ಮುದುಕ ಮಿಷನರಿ ( ಆರ್.ಎ. ಹ್ಯೂಮ್) ನನ್ನ ವಿರುದ್ಧ ಹೇಳುವುದನ್ನು ಲೆಕ್ಕಿಸುವುದಿಲ್ಲ. ಆದರೆ ಮಜುಂದಾರನಲ್ಲಿ ಹುಟ್ಟಿರುವ ಹೊಟ್ಟೆಕಿಚ್ಚು ನನಗೆ ಆಘಾತವನ್ನುಂಟು ಮಾಡಿದೆ. ಆತನಿಗೆ ದೇವರು ಒಳ್ಳೆಯ ಬುದ್ಧಿ ಕೊಡಲೆಂದು ಬೇಡುವೆ. ಆತ ಒಳ್ಳೆಯವನು ಮತ್ತು ಶ್ರೇಷ್ಟ ವ್ಯಕ್ತಿ ಅಲ್ಲದೆ ಜೀನವವಿಡೀ ಒಳಿತನ್ನು ಮಾಡಲು ಹೆಣಗಿದಾತ’ ಎಂದಿದ್ದರು. ಜಾನ್ ಹೆನ್ರಿ ರೈಟ್’ಗೆ ತಾವು ಕೇಶವಚಂದ್ರ ಸೇನರೊಂದಿಗೆ ಎಂದಿಗೂ ಗುರುತಿಸಿಕೊಂಡಿರಲಿಲ್ಲ ಎನ್ನುವ ಸ್ಪಷ್ಟನೆಯನ್ನು ನೀಡಿದ್ದರು. (೨೪/೫/೧೮೯೪). ಹರಿದಾಸ ವಿಹಾರಿದಾಸ ದೇಸಾಯರ ಮುಂದೆ ಕ್ರೈಸ್ತರು . ಬ್ರಾಹ್ಮ ಸಮಾಜಿಗಳು ಅಡ್ಡಿಯಾಗಿದ್ದಾರೆಂದು ಮನದಟ್ಟು ಮಾಡಿಸಲು ಯತ್ನಿಸಿದ್ದರು. (೨೦/೬/೧೮೯೪). ಮಜುಂದಾರ್ ಕುರಿತಾಗಿ ಸ್ವಾಮಿಗಳು ಶ್ರೀಮತಿ ಜಾರ್ಜ್ ಹೇಲ್’ಗೆ ಬರೆಯುತ್ತ ‘ಇಂಟೀರಿಯರ್ ಪತ್ರಿಕೆ ತಲುಪಿತು. ಅದರಲ್ಲಿ ನನ್ನ ಮಿತ್ರರಾದ ಮಜುಂದಾರರ ಪುಸ್ತಕವನ್ನು ಪ್ರಶಂಶಿಸಿರುವುದನ್ನು ನೋಡಿ ನನಗೆ ಸಂತೋಷವಾಯಿತು. ಮಜುಂದಾರರರು ಶ್ರೇಷ್ಟ ಮತ್ತು ಒಳ್ಳೆಯ ವ್ಯಕ್ತಿ. ಜನರಿಗೆ ಬಹಳ ಒಳ್ಳೆಯದನ್ನು ಮಾಡಿರುತ್ತಾರೆ’ ಎಂದಿದ್ದಾರೆ (೧೯/೭/೧೮೯೪). ಸ್ವಾಮಿಗಳು ಇಲ್ಲಿ ಉಲ್ಲೇಖಿಸುತ್ತಿರುವ ಪುಸ್ತಕಗಳು ಮಜುಂದಾರ ಬೋಸ್ಟನ್’ನಲ್ಲಿ ಬರೆಯುತ್ತಿದ್ದ ಎರಡು ಪುಸ್ತಕಗಳಾಗಿದ್ದವು.
ಡಾರ್ಜಿಲಿಂಗ್’ನಲ್ಲಿ ಮಾಡಿದ ಭಾಷಣದಲ್ಲಿ ಪ್ರತಾಪಚಂದ್ರ ಮಜುಂದಾರ ಅಮೆರಿಕದಲ್ಲಿ ಸ್ವಾಮಿಗಳ ಜೀವನ ಶೈಲಿಯನ್ನೂ ಸಂಕೋಚವಿಲ್ಲದೆ ತಿಳಿಸಿ , ಸ್ವಾಮಿಗಳು ಭಾರತದ ಸಾಂಪ್ರದಾಯಿಕ ಸಂನ್ಯಾಸಿಯಂತೆ ಬದುಕುತ್ತಿಲ್ಲ ಎನ್ನುವುದನ್ನು ಮುಚ್ಚುಮರೆಯಿಲ್ಲದೆ ತಿಳಿಸಿದ್ದರು. ಇದು ಯೂನಿಟಿ ಅಂಡ್ ದಿ ಮಿನಿಸ್ಟರ್ ಪತ್ರಿಕೆಯ ೪/೬/೧೮೯೪ ಸಂಚಿಕೆಯಲ್ಲಿ ಪ್ರಕಟಗೊಂಡಿತು. ಇದನ್ನು ‘ದಿ ಇಂಡಿಯನ್ ಮಿರರ್’ ಉಗ್ರವಾಗಿ ವಿರೋಧಿಸಿ ೪/೮/೧೮೯೪ ರಂದು ಲೇಖನ ಮತ್ತು ೮/೮/೧೮೯೪ ರಂದು ಸಂಪಾದಕೀಯವನ್ನು ಬರೆಯಿತು. ಇದರಲ್ಲಿ ಸ್ವಾಮಿಗಳನ್ನು ಹಾಡಿ , ಹೊಗಳಿ , ವೈಭವೀಕರಿಸಿ , ದೈವತ್ವಕ್ಕೇರಿಸಿತಲ್ಲದೆ ಹೊಟ್ಟೆಕಿಚ್ಚು ಭಾರತೀಯರ ಅವಗುಣವೆಂದು ಅಬ್ಬರಿಸಿತು. ಇದು ‘ದಿ ಇಂಡಿಯನ್ ಮಿರರ್ ‘ ಮತ್ತು ಬ್ರಾಹ್ಮಸಮಾಜದ ಪತ್ರಿಕೆಗಳ ನಡುವೆ ವಾದ ವಿವಾದಗಳ ಬಿರುಗಾಳಿಯನ್ನೇ ಎಬ್ಬಿಸಿತು.
ಪ್ರತಾಪಚಂದ್ರ ಮಜುಂದಾರರ ಗುರು ಕೇಶವಚಂದ್ರ ಸೇನ ಮತ್ತು ರಾಮಕೃಷ್ಣರು ಹೇಗೆ ಪರಸ್ಪರ ಪ್ರಭಾವಿಸಲ್ಪಟ್ಟರು ಎನ್ನುವುದನ್ನು ೧೪/೧೧/೧೮೯೩ ರಂದು ಅಮೃತ ಬಜಾರ್ ಪತ್ರಿಕೆ ಗುರುತಿಸಿ ಬರೆದಿದ್ದಿತು. ಸ್ವಾಮಿಗಳಾಗಲಿ , ಇತರ ಗುರುಭಾಯಿಗಳಾಗಲಿ ತಮ್ಮ ಗುರುಗಳನ್ನು ಕುರಿತಾಗಿ ಈವರೆಗೆ ಒಂದು ಸಾಲನ್ನೂ ಬರೆದಿರಲಿಲ್ಲ. ೨೯/೯/೧೮೯೪ ರಂದು ಸ್ವಾಮಿಗಳು ಶ್ರೀಮತಿ ಹೇಲ್’ಗೆ ಪತ್ರ ಬರೆದು ‘ ಭಾರತದಿಂದ ಎರಡು ಪಾರ್ಸಲ್'ಗಳು ಬಂದಿವೆ…. ವರ್ತಮಾನ ಪತ್ರಿಕೆಗಳು…. ಎರಡನೇ ಪಾರ್ಸೆಲ್'ನಲ್ಲಿ ಎರಡು ಪ್ರಚಾರ ಪತ್ರಿಕೆಗಳಿವೆ. ಮಜುಂದಾರ್ ಅವರಿಂದ ಪ್ರಕಟವಾದ ನನ್ನ ಗುರುಗಳ ಸಂಕ್ಷಿಪ್ತ ಚರಿತ್ರೆ ತಲುಪಿದೆ. ಕೇಶವ ಚಂದ್ರ ಸೇನ ಮತ್ತು ಪ್ರತಾಪಚಂದ್ರ ಮಜುಂದಾರ ನನ್ನ ಗುರುವಿನ ಚರಿತ್ರೆಯಿಂದ ಕದ್ದು ಅದನ್ನು ತಮ್ಮ ನವಸಿದ್ಧಾಂತಗಳೆಂದು ಸಾರಿದುದು ಹೇಗೆಂದು ತೋರಿಸುತ್ತದೆ’ ಎಂದು ದೂರಿದ್ದಾರೆ. ಪ್ರತಾಪಚಂದ್ರ ಮಜುಂದಾರರು ಹದಿನಾರು ವರ್ಷಗಳ ಹಿಂದೆ ಬರೆದ ಪುಸ್ತಕವಿದು. ರಾಮಕೃಷ್ಣರು ಇದಾದ ನಂತರ ಏಳು ವರ್ಷಗಳ ಕಾಲ ಜೀವಿಸಿದ್ದರು. ಅವರ ಧೀರ ಶಿಷ್ಯರಾಗಿ ಸ್ವಾಮಿಗಳು ಪುಸ್ತಕ ಪ್ರಕಟವಾದ ನಂತರ ೧೪ ವರ್ಷಗಳ ಕಾಲ ಭಾರತದಲ್ಲಿಯೇ ಇದ್ದರು. ಅಲ್ಲಿರುವಾಗ ಕೇಶವಚಂದ್ರ ಸೇನರು ತಮ್ಮ ಗುರುಗಳ ಬೋಧನೆಗಳನ್ನು ಕದ್ದು ತಮ್ಮವೆಂದು ಹೇಳಿಕೊಳ್ಳುತ್ತಾರೆಂದು ಹೇಳುವ ಎಲ್ಲ ಅವಕಾಶಗಳು ಸ್ವಾಮಿಗಳ ಮುಂದಿದ್ದವು. ಅದನ್ನು ಅವರು ಎಂದಿಗೂ ಮಾಡಲಿಲ್ಲ. ಅಮೆರಿಕಕ್ಕೆ ಬಂದ ನಂತರ ಅವರು ಭಾರತದಲ್ಲಿ ಖ್ಯಾತರಾಗಿದ್ದರು. ಹಾಗಾಗಿ ಅವರು ಲೇಖನವೊಂದನ್ನು ಭಾರತೀಯ ಪತ್ರಿಕೆಗಳಿಗೆ ಕಳಿಸಿ ಕೇಶವಚಂದ್ರ ಸೇನ, ಪ್ರತಾಪಚಂದ್ರ ಮಜುಂದಾರರ ಸಣ್ಣತನವನ್ನು ಬಯಲಿಗೆ ಎಳೆಯಬಹುದಿದ್ದಿತು. ಆದರ ಬದಲು ಭಾರತದ ಬಗ್ಗೆ , ರಾಮಕೃಷ್ಣರ ಬಗ್ಗೆ ಏನನ್ನೂ ತಿಳಿಯದ ಶ್ರೀಮತಿ ಹೇಲ್ ಮುಂದೆ ಸ್ವಾಮಿಗಳು ಚಾಡಿ ಹೇಳಿದ್ದರು. ಪ್ರತಾಪಚಂದ್ರ ಮಜುಂದಾರ ಬರೆದ ಇದೇ ಪುಸ್ತಕವನ್ನು ಸ್ವಾಮಿಗಳು ಹಂಚುತ್ತಿರುವುದು ಒಂದು ವ್ಯಂಗ್ಯವಾಗಿದ್ದಿತು.
ಸ್ವಾಮಿಗಳು ತಮ್ಮ ತೊಂದರೆಗಳಿಗೆ ಇತರರನ್ನು ದೂರುವುದು , ಅವರ ಮೇಲೆ ಆರೋಪ ಹೊರಿಸಿವುದು ಹೇಲ್ ಕುಟುಂಬದ ಸದಸ್ಯರಿಗೆ ಸರಿ ಕಂಡಿರಲಿಲ್ಲ. ೨೬/೨/೧೮೯೫ ರಂದು ಮೇರಿ ಹೇಲ್ ಮೂಲಕ ಶ್ರೀಮತಿ ಜಾರ್ಜ್ ಹೇಲ್ ಬರೆಸಿರುವಂತೆ ಕಾಣುವ ಪತ್ರದಲ್ಲಿ ಅದೇ ಕಥೆಯೊಂದಿಗೆ , ಅದೇ ವಾದದೊಂದಿಗೆ ಅದೇ ಹುರುಪಿನಲ್ಲಿ ಪ್ರೀತಿಯಿಲ್ಲದ ಕಡು ಹಗೆತನದಿಂದ ಕೂಡಿದ ದೂಷಣೆ ತುಂಬಿದ ಕಹಿಯಾದ ಎರಡನೆಯ ಪತ್ರ ಬಂದಿರುವುದನ್ನು ಉಲ್ಲೇಖಿಸಿ ಒಂದು ವರ್ಷದ ಹಿಂದಿದ್ದ ಮಾನವ ಪ್ರೀತಿಯ ವಿವೇಕಾನಂದನ ಜಾಗದಲ್ಲಿ ಬೇರೊಬ್ಬ ವಿವೇಕಾನಂದ ಮೈದಳೆದಿರುವುದಕ್ಕೆ ವಿಷಾದಿಸಲಾಗಿದ್ದಿತು. ಸ್ವಾಮಿಗಳು ತಮಗೆ ಎದುರಾದ ಯಾವುದೇ ಸಂಕಟಕ್ಕೆ ಹೇಲ್ ಸೋದರಿಯರು ಕಾರಣರೆಂದು ಭಾವಿಸಿ ಬರೆದ ಪತ್ರಕ್ಕೆ ಉತ್ತರವಾಗಿ ಈ ಪತ್ರವನ್ನು ಬರೆದಿರುವುದು ಸ್ಪಷ್ಟ. ಶ್ರೀಮತಿ ಜಾರ್ಜ್ ಹೇಲ್’ನಂತೆಯೇ ಸ್ವಾಮಿಗಳ ಮಹಾಪೋಷಕಳಾದ ಸಾರಾ ಬುಲ್’ಗೆ ಕೂಡ ಸ್ವಾಮಿಗಳ ತೊಂದರೆಗೆ ಕ್ರೈಸ್ತ ಪಾದ್ರಿಗಳಾಗಲಿ , ಪ್ರತಾಪಚಂದ್ರ ಮಜುಂದಾರರಾಗಲಿ ಕಾರಣವಲ್ಲ , ಅದಕ್ಕೆ ಸ್ವಾಮಿಗಳ ಅಭ್ಯಾಸ , ಜೀವನ ಶೈಲಿಗಳು ಕಾರಣವೆಂದು ಮನದಟ್ಟಾಗಿರುವುದು ಸಾರಾ ಬುಲ್ ೧೨/೮/೧೮೯೫ ರಂದು ಲೇಡಿ ಹೆನ್ರಿ ಸಾಮರ್’ಸೆಟ್’ಗೆ ಬರೆದ ಪತ್ರ ಪುರಾವೆಯಾಗಿದೆ. (138) ಈ ಪತ್ರದಲ್ಲಿ ಸಾರಾ ಬುಲ್ ‘ ನಾನು ಪ್ರತಾಪಚಂದ ಮಜುಂದಾರರಿಗೆ ಪತ್ರ ಬರೆದಿದ್ದೆ. ಅದಕ್ಕೆ ಉತ್ತರಿಸಿರುವ ಅವರು ವಿವೇಕಾನಂದರ ಗುರುಗಳ ಬಗ್ಗೆ ಹೊಂದಿರುವ ಪೂಜ್ಯ ಭಾವನೆಯನ್ನು ಮತ್ತೊಮ್ಮೆ ಧೃಢೀಕರಿಸಿರುವುದು ಮಾತ್ರವಲ್ಲದೆ ಭಾರತದಲ್ಲಿ ಸ್ವಾಮಿಗಳ ವಿರುದ್ಧ ತಾವು ಅಪಪ್ರಚಾರ ನಡೆಸುತ್ತಿದ್ದಾರೆ ಎನ್ನುವುದು ಆಧಾರರಹಿತ ಎಂದು ಸ್ಪಷ್ಟನೆ ನೀಡಿದ್ದಾರೆ. ಸ್ವಾಮಿಗಳಿಗೆ ತಮ್ಮ ವೈಯಕ್ತಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ ‘ ಎಂದು ಬರೆದಿದ್ದಾಳೆ. ಸ್ವಾಮಿಗಳು ಪ್ರತಾಪಚಂದ್ರ ಮಜುಂದಾರ ಭಾರತದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ ಎಂದು ಸಾರಾ ಬುಲ್ ಮುಂದೆ ಮೇಲಿಂದ ಮೇಲೆ ಹೇಳುತ್ತಿದ್ದುದರಿಂದ ಅದರ ಸತ್ಯಾಸತ್ಯತೆ ತಿಳಿಯಲು ಆಕೆ ನೇರವಾಗಿ ಪ್ರತಾಪಚಂದ್ರ ಮಜುಂದಾರರಿಗೆ ಪತ್ರ ಬರೆದಿದ್ದಳು. ಸಾರಾ ಬುಲ್ ಪ್ರತಾಪಚಂದ ಮಜುಂದಾರರಿಂದ ನೇರ ಉತ್ತರ ಪಡೆದ ನಂತರ ಸ್ವಾಮಿಗಳು ಅವರನ್ನು ದೂರಲು ಯಾವುದೇ ಸಾಕ್ಷ್ಯಾಧಾರಗಳಿರಲಿಲ್ಲ.
ಸ್ವಾಮಿಗಳು ೯/೯/೧೮೯೪ ಮತ್ತು ೨೭/೯/೧೮೯೪ ರಂದು ಅಳಸಿಂಗ ಪೆರುಮಾಳ್’ಗೆ ರೆ. ಕಾಳೀಚರಣ ಬ್ಯಾನರ್ಜಿ ಮತ್ತು ರೆ.ರಾಬರ್ಟ್ ಎ. ಹ್ಯೂಮ್ ಮೇಲೆ ಪತ್ರಿಕೆಗಳ ಮೂಲಕ ದಾಳಿ ಮಾಡಲು ತಿಳಿಸಿದ್ದರಾದರೂ ಪ್ರತಾಪಚಂದ್ರ ಮಜುಂದಾರರ ಮೇಲೆ ಪತ್ರಿಕೆಗಳ ಮೂಲಕ ಸಾರ್ವಜನಿಕವಾಗಿ ದಾಳಿ ಮಾಡಲು ತಿಳಿಸಿರಲಿಲ್ಲ. ಪ್ರತಾಪಚಂದ್ರ ಮಜುಂದಾರರ ಮೇಲೆ ಸ್ವಾಮಿಗಳಿಗಿದ್ದ ಸಿಟ್ಟು ಖಾಸಗಿ ಪತ್ರಗಳಿಗೆ ಸೀಮಿತವಾಗಿದ್ದಿತು ಇದು ಏಕೆ ? ಸ್ವಾಮಿಗಳು ಶ್ರೀಮತಿ ಜೆ.ಜೆ ಬ್ಯಾಗ್ಲಿಯ ಮನೆಯಲ್ಲಿರುವಾಗ ಆಕೆಯ ಹೆಣ್ಣಾಳಿನೊಂದಿಗೆ ಅನುಚಿತವಾಗಿ ನಡೆದುಕೊಂಡರೆನ್ನುವ ಗಾಳಿಸುದ್ದಿ ಹಬ್ಬಿದ್ದಿತು. ಆಗ ಡಾ. ಲೆವಿಸ್ ಜೇನ್ಸ್ ಸ್ವಾಮಿಗಳ ಪರ ನಿಂತು ದಿಟ್ಟವಾಗಿ ಹೋರಾಡಿದ್ದನು. ಅದರಂತೆ ರಮಾಬಾಯಿ ಸರ್ಕಲ್ ಸ್ವಾಮಿಗಳನ್ನು ಇಕ್ಕಟ್ಟಿಗೆ ಸಿಲುಕಿದಾಗ ಡಾ.ಲೆವಿಸ್ ಜಿ. ಜೇನ್ಸ್ ಮತ್ತು ಸಂಗಡಿಗರು ‘ಮದ್ದು ,ಗುಂಡು’ಗಳೊಂದಿಗೆ ಸ್ವಾಮಿಗಳ ಪರ ಕದನಕ್ಕೆ ಇಳಿದಿದ್ದರು. ಮಜುಂದಾರ , ನಗರ್ಕರ್ , ಜಿಯಾನ್ನೆ ಸೊರಾಬ್ಜಿ ಮತ್ತು ಥಿಯೋಸೊಫಿಸ್ಟರು ಸ್ವಾಮಿಗಳನ್ನು ಕುರಿತಾಗಿ ಅಪಪ್ರಚಾರ ನಡೆಸುತ್ತಿದ್ದರೆ ಅವರು ಸುಮ್ಮನಿದ್ದರೆ? ಸ್ವಾಮಿಗಳು ಯೂನಿಟೇರಿಯನ್ ಚರ್ಚ್’ಗಳಲ್ಲಿ ಹಲವು ಭಾಷಣಗಳನ್ನು ನೀಡಿದರು. ಈ ಭಾಷಣಗಳಿಗೆ ಕ್ರೈಸ್ತ ಪಾದ್ರಿಗಳು , ಮಿನಿಸ್ಟರ್’ಗಳು ಹಾಜರಾಗುತ್ತಿದ್ದರು. ಅವರಲ್ಲಿ ಹಲವರು ಪ್ರತಾಪಚಂದ್ರ ಮಜುಂದಾರರ ಆತ್ಮೀಯ ಗೆಳೆಯರಾಗಿದ್ದರು. ಪ್ರತಾಪಚಂದ್ರ ಮಜುಂದಾರ ಸ್ವಾಮಿಗಳ ಬಗ್ಗೆ ಹೊಟ್ಟೆಕಿಚ್ಚು ಪಟ್ಟಿದ್ದರೆ ಅವರ ಚರ್ಚ್ ವೇದಿಕೆಗಳಿಂದ ಸ್ವಾಮಿಗಳು ಭಾಷಣ ಮಾಡುವುದನ್ನು ತಡೆಯುವುದು ಸಾದ್ಯವಿದ್ದಿತು. ಮಜುಂದಾರ್ ಮಿಷನರಿ ಫಂಡ್ ಸ್ಥಾಪನೆ ಮಾಡಲು ನೆರವಾಗಿದ್ದ ಎಡ್ವರ್ಡ್ ಎವೆರೆಟ್ ಹೇಲ್ ಸ್ವಾಮಿಗಳ ಕಿರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದನು . ಆದ್ದರಿಂದ ಪಾದ್ರಿಗಳು , ಮಜುಂದಾರ ಮತ್ತು ಬ್ರಾಹ್ಮ ಸಮಾಜಿಗಳು ಹೊಟ್ಟೆಕಿಚ್ಚಿನಿಂದ ತಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎನ್ನುವುದು ಸ್ವಾಮಿಗಳ ತಲೆಯಲ್ಲಿ ತುಂಬಿದ್ದಿತೇ ಹೊರತು ವಾಸ್ತವದಲ್ಲಿ ಇರಲಿಲ್ಲ.
ಮ್ಯಾಕ್ಸ್ ಮುಲ್ಲರ್ ಬರೆದ ಲೇಖನಕ್ಕೆ ಪ್ರತಾಪಚಂದ್ರ ಮಜುಂದಾರ ಪ್ರತಿಕ್ರಿಯೆ ನೀಡಿರುವುದು ಬ್ರಾಹ್ಮ ಸಮಾಜದ ‘ದಿ ಇಂಟರ್’ಪ್ರೆಟರ್’ ಪತ್ರಿಕೆಯಲ್ಲಿ ಬಂದಿದ್ದಿತು. ಅದನ್ನು ಬ್ರಹ್ಮಾನಂದರ ಸ್ವಾಮಿಗಳಿಗೆ ಕಳಿಸಿದ್ದರು. ೨೦/೧೨/೧೮೯೬ ರಂದು ಅದಕ್ಕೆ ಉತ್ತರಿಸುತ್ತ ‘…ನಾನು ಲಂಡನ್ ಬಿಡುವ ಮೊದಲು ನೀನು ಕಳಿಸಿದ ಪತ್ರ ಮತ್ತು ಪತ್ರಿಕೆ ತಲುಪಿದವು. ‘ಮಜುಂದಾರನ ಹುಚ್ಚನ್ನು ಗಮನಿಸಬೇಡ. ಅವನು ಅಸೂಯೆಯಿಂದ ಹುಚ್ಚನಾಗಿ ಹೋಗಿರುವನು. ಅವನು ಬಳಸುವಂತಹ ಅಶ್ಲೀಲ ಭಾಷೆಯನ್ನು ಸುಸಂಸ್ಕೃತರು ನೋಡಿದರೆ ನಗುವರು. ಅವನು ಅಂತಹ ಅಶ್ಲೀಲ ಪದಗಳನ್ನು ಬಳಸಿ ತನ್ನ ಉದ್ದೇಶವನ್ನೇ ಕೆಡಿಸಿಕೊಂಡಿರುವನು. ಹರಮೋಹನ ಅಥವಾ ಇತರರು ಬ್ರಾಹ್ಮ ಸಮಾಜದವರೊಂದಿಗೆ ಜಗಳ ತೆಗೆಯಕೂಡದು. ನಮಗೆ ಯಾವ ಪಂಗಡದೊಂದಿಗೂ ವೈಮನಸ್ಯವಿಲ್ಲ ಎಂದು ಜನರಿಗೆ ತೋರಿಸಬೇಕು. ಯಾರಾದರೂ ಜಗಳ ತೆಗೆದರೆ ಅವರು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಮಾಡುತ್ತಿರುವರು.... ಹರಮೋಹನನಿಗೆ ನೀನು ಯಾವ ಪುಸ್ತಕವನ್ನೂ ಮುದ್ರಿಸಲು ಅವಕಾಶ ಕೊಡಬೇಡ. ಅವನು ಮಾಡುವ ಕಳಪೆ ಮದ್ರಣದಿಂದ ಸಾರ್ವಜನಿಕರಿಗೆ ಮೋಸ. ಬ್ರಹ್ಮವಾದಿನ್’ನಲ್ಲಿ ಪ್ರಕಟವಾದ ಶ್ರೀ ರಾಮಕೃಷ್ಣರ ಉಪದೇಶಗಳು ಸರಿಯಿಲ್ಲ , ಅವು ಬರಿ ಸುಳ್ಳೆಂದು ಮಜುಂದಾರ ಹೇಳುತ್ತಾನೆ. ಅದು ಹಾಗಿದ್ದರೆ ಸುರೇಶದತ್ತ ಮತ್ತು ರಾಮಬಾಬು ಆತನಿಗೆ ವಿರೋಧವಾಗಿ ಇಂಡಿಯನ್ ಮಿರರ್’’ನಲ್ಲಿ ಟೀಕೆ ಬರೆಯಲು ಹೇಳು. ನಾನು ಆ ಉಕ್ತಿಗಳನ್ನು ಸಂಗ್ರಹಿಸುವುದರಲ್ಲಿ ಯಾವ ಕೆಲಸವನ್ನೂ ಮಾಡದೇ ಇರುವುದರಿಂದ ಅವುಗಳ ವಿಷಯದಲ್ಲಿ ನಾನು ಏನನ್ನೂ ಹೇಳಲಾರೆ’ ವಿ.ಸೂ ಈ ಮೂಢನನ್ನು ಗಮನಿಸಬೇಡ .’ಹಳೆಯ ಮೂಢನಿಗಿಂತ ಬೇರೆಮೂಢನಿಲ್ಲ ‘ ಎಂಬ ಗಾದೆಯೇ ಇದೆ. ಅವರೆಲ್ಲ ಸ್ವಲ್ಪ ಬೊಗಳಲಿ. ಅವರಿದ್ದ ಕೆಲಸ ಹೋಯಿತು. ಬೊಗಳುವುದರಲ್ಲಿ ಸ್ವಲ್ಪ ತೃಪ್ತಿ ಪಡಲಿ’ ಎಂದಿದ್ದರು.
ಸ್ವಾಮಿಗಳು ಬರೆದ ಈ ಪತ್ರ ಹಲವು ನಿಟ್ಟಿನ ವಿಶ್ಲೇಷಣೆಗ ಅರ್ಹವಾಗಿದೆ. ೯/೪/೧೮೯೪ ರಂದು ಅಳಸಿಂಗ ಪೆರುಮಾಳ್’ಗೆ ‘ .. ನಾನು ಕೆಲಸ ಮಾಡದೆ ಮಾತನಾಡಲು ಇಚ್ಛಿಸುವುದಿಲ್ಲ. ಜಿ.ಸಿ ಘೋಷ್ ಮತ್ತು ಮಿತ್ರ (ಹರಮೋಹನ) ಇವರು ಹಾಗೂ ನನ್ನ ಗುರುದೇವರನ್ನು ಮೆಚ್ಚುವ ಎಲ್ಲರನ್ನೂ ಒಗ್ಗೂಡಿಸಿ ಕಲ್ಕತ್ತದಲ್ಲಿ ಇದೇ ರೀತಿ ಸಭೆ ಸೇರಿಸಬಹುದು ‘ ಎನ್ನುವ ಸೂಚನೆ ನೀಡಿದ್ದರು. ಹರಮೋಹನ ಮಿತ್ರ ಸ್ವಾಮಿಗಳನ್ನು ಕುರಿತಾಗಿ ಅಮೆರಿಕ ಪತ್ರಿಕೆಗಳು ನೀಡಿದ ಸುದ್ದಿ , ಬರೆದಿದ್ದ ವರದಿ , ಭಾರತೀಯ ಪತ್ರಿಕೆಗಳ ಸಂಪಾದಕೀಯ , ಮೆರ್ವಿನ್ ಮಾರಿ ಸ್ನೆಲ್ ಪತ್ರ ಮುಂತಾದವುಗಳನ್ನೆಲ್ಲ ಸಂಗ್ರಹಿಸಿ ಸಿದ್ಧ ಪಡಿಸಿದ್ದ ಕರಪತ್ರದ ೫೦೦೦ ಪ್ರತಿಗಳನ್ನು ಮುದ್ರಿಸಿ ಕಲ್ಕತ್ತ . ಮದ್ರಾಸ್’ನಲ್ಲಿ ಹಂಚಿದಾಗ ಸ್ವಾಮಿಗಳಿಗೆ ಆನಂದವಾಗಿದ್ದಿತು. ಇವೇ ಕರಪತ್ರಗಳನ್ನು ಅಮೆರಿಕದಲ್ಲಿ ಗೆಳೆಯರಿಗೆ ಹಂಚಿದ್ದರು. ಈಗ ಅದೇ ಹರಮೋಹನ ಮಿತ್ರ ಕಳಪೆ ಮುದ್ರಣ ಮಾಡುವ, ಸಾರ್ವಜನಿಕರಿಗೆ ಮೋಸಮಾಡುವ ವ್ಯಕ್ತಿಯಾಗಿ ಕಂಡಿದ್ದಾನೆ.
ಬ್ರಹ್ಮವಾದಿನ್ ಪತ್ರಿಕೆಯಲ್ಲಿ ರಾಮಕೃಷ್ಣರ ಹೆಸರಿನಲ್ಲಿ ಪ್ರಕಟವಾದ ಸೂಕ್ತಿಗಳು ರಾಮಕೃಷ್ಣರ ಬೋಧನೆಯಂತೆ ಇಲ್ಲ, ಅವುಗಳನ್ನು ಅವರ ಶಿಷ್ಯರು ಕಟ್ಟಿದ್ದಾರೆ ಎನ್ನುವುದು ಪ್ರತಾಪಚಂದ್ರ ಮಜುಂದಾರನ ಟೀಕೆಯಾಗಿದ್ದಿತು. ಈ ಟೀಕೆಗೆ ಪ್ರತಿಯಾಗಿ ಆ ಸೂಕ್ತಿಗಳು ರಾಮಕೃಷ್ಣರವೇ ಎಂದು ಅವರ ಭೀಮ ಶಿಷ್ಯರಾದ ಸ್ವಾಮಿಗಳು ಸಾಧಿಸಬೇಕಾಗಿದ್ದಿತು ಇಲ್ಲವೇ ತಪ್ಪುಗಳನ್ನು ತಿದ್ದಬೇಕಾಗಿದ್ದಿತು. ನಾನು ಆ ಸೂಕ್ತಿಗಳನ್ನು ಸಂಗ್ರಹಿಸಿಲ್ಲ , ಅವುಗಳ ಬಗ್ಗೆ ನಾನು ಏನನ್ನೂ ಹೇಳಲಾರೆ ಎನ್ನುವ ರಾಮಕೃಷ್ಣರ ಅವತಾರಕ್ಕೆ ಪೂರಕವಾಗಿ ಅವತಾರ ಎತ್ತಿ ಬಂದಿದ್ದ ಸ್ವಾಮಿಗಳು ನುಣುಚಿಕೊಳ್ಳುತ್ತಿದ್ದಾರೆ. ಸ್ವಾಮಿಗಳು ನೇರವಾಗಿ ಸಂಗ್ರಹಿಸದಿದ್ದರೇನಂತೆ , ಅವು ರಾಮಕೃಷ್ಣರ ಬೋಧನೆಗೆ ತಾಳೆಯಾಗುತ್ತವೆಯೋ ಇಲ್ಲವೋ ಎಂದು ಪರಿಶೀಲಿಸಲು ಯಾವುದೇ ಅಡೆತಡೆಗಳಿರಲಿಲ್ಲ. ತಮಗೇ ಗೊತ್ತಿಲ್ಲದ ಅವುಗಳನ್ನು ಸಮರ್ಥಿಸಿಕೊಳ್ಳುವಂತೆ ಇತರರನ್ನು ಪ್ರಚೋದಿಸುತ್ತಿದ್ದಾರೆ. ತಮ್ಮ ಪರವಾಗಿ ಇತರರನ್ನು ಹೋರಾಟಕ್ಕೆ ಇಳಿಸುವುದು ಸ್ವಾಮಿಗಳು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ತಂತ್ರವಾಗಿದ್ದಿತು. ಬಂಗಾಳಿ ಭಾಷಾ ಅಭಿಮಾನದ ಹಿನ್ನೆಲೆಯಲ್ಲಿ ಸ್ವಾಮಿಗಳನ್ನು ದೈವೀ ಪುರುಷರನ್ನಾಗಿಸಿದ ನರೇಂದ್ರನಾಥ ಸೇನರ ‘ದಿ ಇಂಡಿಯನ್ ಮಿರರ್’ ಗೆ ಪತ್ರ ಬರೆಯಲು ಯಾವಾಗಲೂ ಗುರುಭಾಯಿಗಳಿಗೆ , ಶಿಷ್ಯರಿಗೆ ತಿಳಿಸುತ್ತಿದ್ದರು. ಇತರ ಪತ್ರಿಕೆಗಳು ತಮ್ಮ ಪತ್ರಗಳನ್ನು ಪ್ರಕಟಿಸದಿರಬಹುದು ಅಥವಾ ಪ್ರಕಟಿಸಿದರೂ ವಿರೋಧಿಗಳು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಅವಕಾಶ ಕೊಡಬಹುದೆನ್ನುವ ಭಯವೇ ಇದಕ್ಕೆ ಕಾರಣವಾಗಿದ್ದಿತು. ನಿರ್ವಿಕಲ್ಪ ಸಮಾಧಿ ತಲುಪಿದ ಸ್ವಾಮಿಗಳು ‘ಮೂಢ , ಬೊಗಳಲಿ ‘ ಎಂದು ಬಳಸಿದ ಭಾಷೆ ಪ್ರತಾಪಚಂದ್ರ ಮಜುಂದಾರ ಭಾಷೆಗಿಂತ ಕಳಪೆಯಾಗಿದ್ದು ಸ್ವಾಮಿಗಳ ದುರ್ಬಲ ಸ್ಥಾನದಲ್ಲಿರುವುದನ್ನು ಖಚಿತಪಡಿಸುತ್ತದೆ. ತಾತ್ತ್ವಿಕ ಹೋರಾಟ ನಡೆಸಲು ಆಗದಿದ್ದಾಗ ದೂಷಣೆ , ರೋಷಗಳು ಬರುವುದು ಸಹಜವೇ ಆಗಿದೆ.
೧೮೯೭ ರಲ್ಲಿ ಸ್ವಾಮಿಗಳು ಭಾರತಕ್ಕೆ ಮರಳಿದರು. ಅದಾದ ನಂತರ ೨೪/೭/೧೯೦೨ ರಂದು ತೀರಿಕೊಳ್ಳುವವರೆಗೆ ೨೪೫ ಪತ್ರಗಳನ್ನು ಬರೆದರು. ಅವು ಯಾವುದರಲ್ಲಿಯೂ ಪ್ರತಾಪಚಂದ್ರ ಮಜುಂದಾರರ ಹೆಸರಿಲ್ಲ. ಇದಕ್ಕೆ ಕಾರಣ ಹುಡುಕುವುದು ಕಷ್ಟವಿಲ್ಲ. ಮದ್ರಾಸ್’ನಲ್ಲಿ ಆವೇಶದ ಭಾಷಣ ಮಾಡಿದ ನಂತರ ಸ್ವಾಮಿಗಳಿಗೆ ವಾಸ್ತವ ಸ್ಥಿತಿ ಮನದಟ್ಟಾಗತೊದಗಿದ್ದಿತು. ಬ್ರಾಹ್ಮ ಸಮಾಜಿಗಳು ತಮಗೆ ಅಡಚಣೆ ಉಂಟು ಮಾಡಿದರೆಂದು ತೋರಿಸಲು ಯಾವುದೇ ಪುರಾವೆ ಇರಲಿಲ್ಲ. ಬ್ರಾಹ್ಮ ಸಮಾಜಿಗಳ ಮೇಲೆ ಏರಿ ಹೋಗಿದ್ದರೆ ಭಾರತದ ನೆಲದಲ್ಲಿಯೇ ಅವರು ಸ್ವಾಮಿಗಳಿಗೆ ಸವ್ವಾ ಸೇರಿನ ಉತ್ತರ ಕೊಡುತ್ತಿದ್ದರು. ಆದ್ದರಿಂದಲೇ ಸ್ವಾಮಿಗಳು ಉಪಾಯವಾಗಿ ಅಖಾಡದಿಂದ ಹೊರ ಸರಿದಿದ್ದರು.
ಸ್ವಾಮಿ ವಿವೇಕಾನಂದರು ಬ್ರಾಹ್ಮ ಸಮಾಜದವರ ಮೇಲೆ ಅನೇಕ ವೇಳೆ ಕೆಂಡ ಕಾರಿರುವುದಕ್ಕೆ ಒಂದು ಹಿನ್ನೆಲೆಯನ್ನು ಮಹೇಂದ್ರನಾಥ ದತ್ತ ನೀಡಿದ್ದಾರೆ. ಸುರೇಶಮಿತ್ರರು ರಾಮಕೃಷ್ಣರ ರಸದ್ದಾರರಲ್ಲಿ ಒಬ್ಬರು. ಇವರ ಎರಡನೆಯ ತಮ್ಮ ಮಹೇಂದ್ರ ಮಿತ್ರ-ಶಿಯಲ್ದಾ ಮತ್ತು ಹೌರಗಳ ಕೆಳಮಟ್ಟದ ನ್ಯಾಯಾಲಯಗಳ ನ್ಯಾಯಾಧೀಶರು. ಇವರ ನೆರೆಯವರು ಮತ್ತು ಗೆಳೆಯರು ರಾಜಮೋಹನ ಬಸು. ಇವರು ನವವಿಧಾನ ಬ್ರಹ್ಮ ಸಮಾಜದ ಸದಸ್ಯರು. ಮಹೇಂದ್ರ ಮಿತ್ರ ರಾಮಕೃಷ್ಣ , ಸ್ವಾಮಿ ವಿವೇಕಾನಂದರ ಅಭಿಮಾನಿ. ರಾಜಮೋಹನ ಬಸು ಪ್ರತಾಪಚಂದ್ರ ಮಜುಂದಾರರ ಬೆಂಬಲಿಗ. ಇವರಿಬ್ಬರ ತಾತ್ವಿಕ ಸಂಘರ್ಷ ಕೆಲವೊಮ್ಮೆ ಹೊಡೆದಾಟದ ಮಟ್ಟಕ್ಕೂ ಹೋಗುತ್ತಿದ್ದಿತು. ಹರಮೋಹನ ಮಿತ್ರ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಉಗ್ರ ಅಭಿಮಾನಿ . ಸ್ವಾಮಿ ವಿವೇಕಾನಂದರನ್ನು ಕುರಿತಾದ ಎಲ್ಲ ಪತ್ರಿಕೆಯ ಮಾಹಿತಿಗಳನ್ನು ಸಂಗ್ರಹಿಸಿ ಕರಪತ್ರ ಅಚ್ಚು ಹಾಕಿಸಿ ಹಂಚಿದಾತ. ಈತನ ಮನೆ ಸ್ವಾಮಿ ವಿವೇಕಾನಂದರ ಮನೆಯ ಹತ್ತಿರ. ಸಾಧಾರಣ ಬ್ರಹ್ಮ ಸಮಾಜವೂ ಸಮೀಪದಲ್ಲಿದ್ದಿತು. ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಪರವಾಗಿ ಸಾಧಾರಣ ಬ್ರಹ್ಮ ಸಮಾಜದ ಸದಸ್ಯರೊಂದಿಗೆ ಈತ ಆಗಾಗ್ಗೆ ತಿಕ್ಕಾಟ ನಡೆಸುತ್ತಿದ್ದನು. ಇದು ಕೆಲವೊಮ್ಮೆ ದೈಹಿಕ ಹಲ್ಲೆಯ ಮಟ್ಟಕ್ಕೂ ಹೋಗುತ್ತಿದ್ದಿತು. (139) ಹರಮೋಹನ ಮಿತ್ರ ಸ್ವಾಮಿಗಳನ್ನು ಕುರಿತಾದ ಪತ್ರಿಕೆಗಳ ತುಣುಕುಗಳನ್ನು ಸಂಗ್ರಹಿಸಿ ಕರಪತ್ರಗಳನ್ನು ಸಿದ್ಧಪಡಿಸುವಾಗ ಅವರನ್ನು ಟಿಕಿಸುವ , ವಿಮರ್ಶಿಸುವ , ಪ್ರಶ್ನಿಸುವ ಇತರ ಎಲ್ಲ ಪತ್ರಿಕೆ ವರದಿಗಳನ್ನು ಕೈಬಿಟ್ಟಿದ್ದನು. ಮುಂದೆ ರಾಮಕೃಷ್ಣ ಪಂಥದವರು , ಅಭಿಮಾನಿಗಳು ಇದೇ ದಾರಿ ತುಳಿಯಲು ಇದು ನಾಂದಿಯಾಯಿತು.
ಥಿಯೊಸೊಫಿಸ್ಟರು : ಸ್ವಾಮಿಗಳ ಜೀವನ ಚರಿತ್ರೆಯಲ್ಲಿ ಬರುವ ದುಷ್ಟತ್ರಯರಲ್ಲಿ ಥಿಯೊಸೊಫಿಸ್ಟರು ಮೂರನೆಯವರು. ಸ್ವಾಮಿಗಳು ಬರೆದ ಪತ್ರಗಳು ಮತ್ತು ಮದ್ರಾಸಿನಲ್ಲಿ ಮಾಡಿದ ಭಾಷಣ ಇದಕ್ಕೆ ಹಿನ್ನೆಲೆಯೊದಗಿಸುತ್ತದೆ. ೨೮/೬/೧೮೯೪ ರಂದು ಅಳಸಿಂಗ ಪೆರುಮಾಳ್’ಗೆ ಸ್ವಾಮಿಗಳು ಕಳೆದ ಜನಗಣತಿಯಂತೆ ಅಮೆರಿಕದಲ್ಲಿ ಥಿಯೊಸೊಫಿಸ್ಟರ ಸಂಖ್ಯೆ ೬೨೫ ಎಂದು ತಿಳಿಸಿದ್ದರು. ಈ ‘ಭಾರಿ ಸಂಖ್ಯೆ’ಯ ಥಿಯೊಸೊಫಿಸ್ಟರು ಅಮೆರಿಕವನ್ನೇ ‘ಗೆದ್ದ’ ಸ್ವಾಮಿಗಳಿಗೆ ಅಡಚಣೆ ಉಂಟು ಮಾಡಿರುವುದು ಎಂತಹ ಸೋಜಿಗ !! ಸ್ವಾಮಿಗಳು ಥಿಯೊಸೊಫಿಸ್ಟರ ಬಗ್ಗೆ ಏನು ಬರೆದಿದ್ದಾರೆ ನೋಡೋಣ -
‘ಥಿಯೊಸೊಫಿಸ್ಟರೊಡನೆ ಜಗಳವಾಡುವುದರಿಂದ ಏನೂ ಪ್ರಯೋಜನವಿಲ್ಲ. ನಾನು ನಿನಗೆ ಬರೆಯುತ್ತಿರುವುದೆನ್ನೆಲ್ಲ ಅವರಿಗ ಹೇಳಬೇಡ. ಥಿಯೊಸೊಫಿಸ್ಟರು ನಮ್ಮ ಧರ್ಮ ಪ್ರಚಾರಗಳಲ್ಲಿ ಮೊದಲಿಗರು. ಗೊತ್ತೆ ? ಈ ಜಡ್ಜ್ ಹಿಂದೂವೂ , ಕರ್ನಲ್ ಬೌದ್ಧರೂ ಆಗಿರುವರು. ಇಲ್ಲಿ ಜಡ್ಜ್ ಅತ್ಯಂತ ಸಮರ್ಥ ವ್ಯಕ್ತಿ. ಜಡ್ಜ್ ಅವರಿಗೆ ಬೆಂಬಲ ನೀಡಲು ಹಿಂದೂ ಥಿಯೊಸೊಫಿಸ್ಟರಿಗೆ ಹೇಳು. ಅಮೆರಿಕದಲ್ಲಿ ಹಿಂದೂ ಧರ್ಮ ಪ್ರಚಾರಕ್ಕೆ ಅವರು ಪಟ್ಟ ಶ್ರಮಕ್ಕಾಗಿ ಒಂದು ಕೃತಜ್ಞತಾಪೂರ್ವಕ ಪತ್ರವನ್ನು ನೀನು ಅವರಿಗೆ ಬರೆಯಬಹುದು. ಅದು ಅವರ ಹೃದಯಕ್ಕೆ ಅದೆಷ್ಟೋ ತೃಪ್ತಿ ನೀಡುತ್ತದೆ. ನಾವು ಯಾವುದೊಂದು ಪಂಥಕ್ಕೂ ಸೇರಬಾರದು. ಆದರೆ ಪ್ರತಿಯೊಂದಕ್ಕೂ ಸಹಾನುಭೂತಿ ತೋರಿ ಕೆಲಸ ಮಾಡಬೇಕು’ ( ೧೧/೭/೧೮೯೪-ಅಳಸಿಂಗ ಪೆರುಮಾಳ್), ಈಗ ಇಲ್ಲಿ ಥಿಯೋಸೊಫಿಸ್ಟರು ನನ್ನನ್ನು ಇಷ್ಟ ಪಡುತ್ತಿದ್ದಾರೆ. ಆದರೆ ಅವರ ಸಂಖ್ಯೆ ೬೫೦ ಮಾತ್ರ. (೩೧/೮/೧೮೯೪-ಅಳಸಿಂಗ ಪೆರುಮಾಳ್). ಥಿಯೊಸೊಫಿ ಸೊಸೈಟಿಯನ್ನು ಸ್ಥಾಪಿಸಿದ್ದ ಮ್ಯಾಡಂ ಬ್ಲಾವಟ್ಸ್’ಕಿ ಮತ್ತು ಆಕೆಯ ಶಿಷ್ಯೆ ಆನಿ ಬೆಸೆಂಟ್ ಲಂಡನ್’ನಲ್ಲಿದ್ದರು. ಜಡ್ಜ್ ಮತ್ತು ಕರ್ನಲ್ ಓಲ್ಕಾಟ್ ಅಮೆರಿಕದಲ್ಲಿದ್ದರು ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿದ್ದ ಜಡ್ಜ್ ಮೇಲೆ ಭಾರಿ ಹಗರಣದ ಆರೋಪಗಳು ಬಂದು ಥಿಯೊಸೊಫಿಕಲ್ ಸೊಸೈಟಿ ಇಬ್ಭಾಗವಾಯಿತು.
. ‘…. ಥಿಯೊಸೊಫಿಸ್ಟರೊಡನೆ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳಬೇಡ. ನೀವೆಲ್ಲ ನನ್ನ ಪಕ್ಷ ವಹಿಸಿ. ನಿಮ್ಮ ಸಹನೆ ಕಳೆದುಕೊಳ್ಳದಿದ್ದಲ್ಲಿ ನಾವು ಇನ್ನೂ ಮಹತ್ಕಾರ್ಯಗಳನ್ನು ಮಾಡಬಲ್ಲೆವೆಂದು ನಾನು ಖಂಡಿತವಾಗಿ ಹೇಳಬಲ್ಲೆ……ಆ ಥಿಯೊಸೊಫಿಗಳ ಪ್ರಲೋಭನೆಗೆ ನೀನೆಲ್ಲಿ ಒಳಗಾಗುತ್ತೀಯೋ ಎಂದು ಅಂಜುತ್ತೇನೆ….ಗುರುಭಕ್ತ ಜಗತ್ತನೇ ಜಯಿಸಬಲ್ಲ ಎನ್ನುವುದನ್ನು ನೆನಪಿಡು …(೨೦/೧೨/೧೮೯೫-ಅಳಸಿಂಗ ಪೆರಮಾಳ್). ಸ್ವಾಮಿಗಳಿಗೆ ಏಕೆ ಅಳಸಿಂಗ ಪೆರುಮಾಳ ಥಿಯೊಸೊಫಿಸ್ಟರ ಕಡೆ ವಾಲುತ್ತಾನೆ ಎನ್ನುವ ಸಂಶಯ ಬಂದಿತು ಮತ್ತು ಅದನ್ನು ಯಾರು ಅವರಿಗೆ ತಿಳಿಸಿದರು ಎನ್ನುವುದು ಸ್ಪಷ್ಟವಿಲ್ಲವಾದರೂ ಆ ನಿಟ್ಟಿನಲ್ಲಿ ನಾವು ಒಂದು ಊಹೆಯನ್ನು ಮಾಡಬಹುದು. ಸ್ವಾಮಿಗಳು ತಮ್ಮ ಸಾಧನೆ , ಶ್ರಮ, ದೇಶಕ್ಕಾಗಿ ಹೋರಾಡುತ್ತಿರುವ ಪರಿಗಳನ್ನು ತಿಳಿಸಿ ಅಳಸಿಂಗನಿಗೆ ಹಲವಾರು ಪತ್ರಗಳನ್ನು ಬರೆದಿದ್ದರು. ಆತ ಅವುಗಳ ಸಾರಾಂಶವನ್ನು ಇತರರಿಗೆ ತಿಳಿಸಿರಬಹುದು ಅಥವಾ ಆತ್ಮೀಯರಿಗೆ ಸ್ವಾಮಿಗಳ ಪತ್ರಗಳನ್ನೇ ತೋರಿಸಿರಬಹುದು. ಇದು ಮದ್ರಾಸಿನ ಥಿಯೊಸೊಫಿಸ್ಟರ ಗಮನಕ್ಕೆ ಬಂದಿದ್ದು ಅವರ ವಾಸ್ತವಾಂಶಗಳನ್ನು ತಿಳಿಸಿರಬಹುದು. ಅಥವಾ ೧೧/೭/೧೮೯೪ ರಂದು ಸ್ವಾಮಿಗಳು ಬರೆದ ಪತ್ರ ಮತ್ತು ನೀಡಿದ ಸಲಹೆಗೆ ಅನುಗುಣವಾಗಿ ಅಳಸಿಂಗ ಪೆರುಮಾಳ್ ಥಿಯೊಸೊಫಿಸ್ಟರೊಂದಿಗೆ ಸೌಜನ್ಯದಿಂದ ಇದ್ದಿರಬಹುದು.
‘ಬ್ರಹ್ಮವಾದಿನ್ ತಲುಪಿದೆ. ನೀನು ಥಿಯೊಸೊಫಿ ಸೇರುವೆಯೇನು? ನೀನು ಪತ್ರಿಕೆಯ ಪ್ರಧಾನ ಭಾಗಗಳಲ್ಲಿ ಥಿಯೊಸೊಫಿ ಪಂಥದವರ ಭಾಷಣಗಳ ಜಾಹಿರಾತನ್ನು ಪ್ರಕಟಿಸಿರುವುದೇಕೆ ? ಥಿಯೊಸೊಫಿಯವರ ಜೊತೆ ಸಂಪರ್ಕವಿದೆ ಎಂಬ ಸಂದೇಹ ಉಂಟಾದರೆ ಸಾಕು ನನ್ನ ಅಮೆರಿಕ ಮತ್ತು ಇಂಗ್ಲೆಂಡಿನ ಕೆಲಸವೆಲ್ಲ ಸಂಪೂರ್ಣ ಹಾಳಾಗುವುದು. ವಿವೇಕ ಬುದ್ಧಿಯುಳ್ಳವರೆಲ್ಲರೂ ಈ ಪಂಥ ತಪ್ಪು ಮಾಡುತ್ತಿದೆ ಎಂದು ತಿಳಿದಿದ್ದಾರೆ. ಅದು ನಿನಗೂ ಗೊತ್ತು. ನೀನು ನನ್ನನ್ನು ತಂತ್ರದಿಂದ ಸೋಲಿಸಲು ಪ್ರಯತ್ನಿಸುತ್ತಿರುವಂತಿದೆ. ಆನಿಬೆಸೆಂಟರನ್ನು ಪ್ರಚಾರ ಮಾಡುವುದರಿಂದ ಇಂಗ್ಲೆಂಡ್'ನಲ್ಲಿ ಹೆಚ್ಚು ಚಂದಾದಾರರು ಸಿಗುವರೆಂದು ಯೋಚಿಸುತ್ತಿರವೆಯಾ? ನೀನೊಬ್ಬ ತಿಳಿಗೇಡಿ. ನನಗೆ ಥಿಯೊಸೊಫಿಸ್ಟರ ಜೊತೆ ಜಗಳವಾಡುವ ಇಚ್ಛೆ ಇಲ್ಲ. ಅವರನ್ನು ಸಂಪೂರ್ಣ ನಿರ್ಲಕ್ಷಿಸಬೇಕೆನ್ನುವುದೇ ನನ್ನ ನಿಲುವು. ಜಾಹಿರಾತಿನ ಹಣವನ್ನು ಅವರು ಕೊಟ್ಟರೆ ? ಅವರನ್ನು ಜಾಹಿರಾತು ಪಡಿಸಲು ನೀನೇಕೆ ಹೋಗಬೇಕು ? ನಾನು ಇಂಗ್ಲೆಂಡ್’ನಲ್ಲಿ ಬೇಕಾದಷ್ಟು ಚಂದಾದಾರರನ್ನು ಒದಗಿಸಿಕೊಡುತ್ತೇನೆ. ನಿನಗೆ ನಾನು ಸ್ಪಷ್ಟವಾಗಿ ಹೇಳುವುದೇನೆಂದರೆ ನನಗೆ ವಿಶ್ವಾಸ ಘಾತುಕರು ಬೇಕಿಲ್ಲ. ಯಾವ ದಗಾಕೋರರು ನನ್ನೊಂದಿಗೆ ಆಟವಾಡಲು ಬಿಡುವುದಿಲ್ಲ. ನನ್ನೊಡನೆ ಯಾವ ಬೂಟಾಟಿಕೆಯೂ ನಡೆಯಲಾರದು. ನಿನ್ನ ಬಾವುಟವನ್ನು ಮೇಲಕ್ಕೇರಿಸಿ ನಿಮ್ಮ ಪತ್ರಿಕೆಯಲ್ಲಿ ನನ್ನೊಡನೆ ನಿಮಗಾವ ಬಗೆಯ ಸಂಪರ್ಕವೂ ಇಲ್ಲವೆಂದು ಸಾರ್ವಜನಿಕವಾಗಿ ಘೋಷಿಸು. ಥಿಯೊಸೊಫಿ ಪಂಥವನ್ನು ಸೇರು. ಇಲ್ಲವೇ ಅವರೊಡನೆ ಎಲ್ಲಾ ಬಗೆಯ ವ್ಯವಹಾರವನ್ನು ನಿಲ್ಲಿಸು….ನಾನು ಇಂಗ್ಲೆಂಡ್’ನಲ್ಲಿದ್ದಾಗ ಅನಿಬೆಸೆಂಟರ ಕಡೆಯವರಲ್ಲಿ ಒಬ್ಬರಾದರೂ ನನ್ನ ಸಹಾಯಕ್ಕೆ ಬಂದರೇನು ?...........ಈ ಗುಪ್ತ ವ್ಯವಹಾರಗಳನ್ನು ನೋಡಿದಾಗ ನನಗೆ ತಾಳ್ಮೆಗೆಡುವುದು. ಯಾರನ್ನು ನೀನು ಹೆಚ್ಚು ಪ್ರೀತಿಸುವೆಯೋ ಮತ್ತು ಸಹಾಯ ಮಾಡುವಿಯೋ ಅವರೇ ನಿನ್ನನ್ನು ಮೋಸಗೊಳಿಸಲು ಯತ್ನಿಸುವರು….’ (೨೩/೧/೧೮೯೬-ಅಳಸಿಂಗ ಪೆರುಮಾಳ್)
‘ಈಗ ನಾನು ಭರತ ಖಂಡದಲ್ಲಿ ಅಧಿಕಾರವಾಣಿಯಾಗಿರುವುದರಿಂದ ಥಿಯೊಸೊಫಿಸ್ಟರು ನನ್ನನ್ನು ಹೊಗಳಲು ಮತ್ತು ಅತಿ ದೈನ್ಯವನ್ನು ತೋರಿಸಲು ಯತ್ನಿಸಿದರು. ಆದ್ದರಿಂದ ನಾನು ಕೆಲವು ದಿಟ್ಟ ಮಾತುಗಳನ್ನಾಡಿ ಆ ವಂಚಕರ ಕೆಲಸಗಳಿಗೆ ಒಪ್ಪಿಗೆಯನ್ನೀಯುವುದನ್ನು ನಿಲ್ಲಿಸುವುದು ಅಗತ್ಯವಾಗಿದ್ದಿತು....ನನಗೆ ಆರೋಗ್ಯ ಸರಿಯಿದ್ದರೆ ಈ ದುರಹಂಕಾರಿ ವಂಚಕರನ್ನೆಲ್ಲ ಭಾರತದಿಂದ ತೊಲಗಿಸುತ್ತಿದ್ದೆ ಅಥವಾ ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೆ ‘ (೫/೫/೧೮೯೭-ಸಾರಾ ಬುಲ್)
ಸ್ವಾಮಿಗಳ ಒತ್ತಾಸೆಯಿಂದ ಅಳಸಿಂಗ ಪೆರುಮಾಳ್ ಬ್ರಹ್ಮವಾದಿನ್ ಪತ್ರಿಕೆ ಪ್ರಾರಂಭಿಸಿ ಅದರ ಸಂಪಾದಕನಾಗಿದ್ದನು. ಸ್ವಾಮಿಗಳು ಆತನಿಗೆ ಬರೆದ ಪ್ರತಿಯೊಂದು ಪತ್ರದಲ್ಲಿ ಮಕ್ಕಳೇ , ನೀವು ಧೃಢರಾಗಿ , ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ. ಕ್ರಿಯಾಶೀಲರಾಗಿ , ಸ್ವತಂತ್ರ ಚಿಂತಕರಾಗಿ ಎಂದು ಬಡಿದೆಬ್ಬಿಸುತ್ತಿದ್ದರು. ಬ್ರಹ್ಮವಾದಿನ್ ಪತ್ರಿಕೆಗೆ ಚಂದಾದಾರರು ಹೆಚ್ಚಿರಲಿಲ್ಲ. ಪತ್ರಿಕೆ ನಡೆಸಲು ಜಾಹಿರಾತುಗಳನ್ನು ಅವಲಂಬಿಸಬೇಕಾಗಿದ್ದಿತು. ಆದ್ದರಿಂದ ಅಳಸಿಂಗ ಪೆರುಮಾಳ್ ಡಿಸೆಂಬರ್ ೨೧ , ೧೮೯೬ ಬ್ರಹ್ಮವಾದಿನ್ ಸಂಚಿಕೆಯಲ್ಲಿ ಥಿಯೊಸೊಫಿ ಜಾಹಿರಾತನ್ನು ಪ್ರಕಟಿಸಿದ್ದನು. ಸ್ವಾಮಿಗಳು ಹೇಳಿದ ಎಲ್ಲ ಕೆಲಸಗಳನ್ನು ಅಳಸಿಂಗ ಪೆರುಮಾಳ್ ತಲೆಯ ಮೇಲೆ ಹೊತ್ತು ಪಾಲಿಸುತ್ತಿದ್ದನು. ಸ್ವಾಮಿಗಳು ಒಮ್ಮೆ ಥಿಯಸೊಫಿಸ್ಟರೊಂದಿಗೆ ಮೆದುವಾಗಿರು ಎಂದು ಇನ್ನೊಂದು ಸಲ ಅವರ ಸಂಗ ಬೇಡವೆಂದು ವಿರೋಧಾಭಾಸದ ಆದೇಶಗಳನ್ನು ನೀಡಿದ್ದರು. ನ್ಯೂಯಾರ್ಕ್’ನಲ್ಲಿ ಲಿಯಾನ್ ಲ್ಯಾಂಡ್ಸ್’ಬರ್ಗ್ (ಕೃಪಾನಂದ) ಜೊತೆ ಥಿಯೊಸೊಫಿಕಲ್ ಸೊಸೈಟಿಯ ನಿಲಯದಲ್ಲಿ ಉಳಿದಿದ್ದರು. ಜಿ.ಜಿ , ನಂಜುಂಡರಾವ್, ಬಾಲಾಜಿ , ಕಿಡಿ ಇವರಲ್ಲಿ ಯಾರೊಬ್ಬರು ವಹಿಸಿಕೊಳ್ಳದಷ್ಟು ಮತ್ತು ವಹಿಸಿಕೊಳ್ಳದ ಜವಾಬ್ದಾರಿಗಳನ್ನು ಅಳಸಿಂಗ ಪೆರುಮಾಳ್ ವಹಿಸಿಕೊಂಡಿದ್ದನು. ಅಮಾಯಕತೆಯಿಂದ ಆತ ಥಿಯೊಸೊಫಿಯ ಜಾಹಿರಾತುಗಳನ್ನು ಹಾಕಿದ್ದನೆಂದು ಹೇಳಬಹುದೇ ಹೊರತು ಸ್ವಾಮಿಗಳು ದೂರುವಂತೆ ವಿಶ್ವಾಸಘಾತ ಮಾಡಲಲ್ಲ.
ಸ್ವಾಮಿಗಳು ಭಾರತಕ್ಕೆ ಮರಳಿದ ನಂತರ ತಮ್ಮ ಭಾಷಣಗಳಲ್ಲಿ ಥಿಯೊಸೊಫಿಸ್ಟರನ್ನು ಹೀಗಳೆದ ನಂತರ ಅವರ ಹೇಳಿಕೆಗಳನ್ನು ಖಂಡಿಸಿ ಬರೆದ ಪತ್ರಗಳು ‘ದಿ ಇಂಡಿಯನ್ ಮಿರರ್ ಪತ್ರಿಕೆಯಲ್ಲಿ ಕಾಣಿಸಿಕೊಳ್ಳತೊಡಗಿದವು. ಇದನ್ನು ಎದುರಿಸಲು ಸ್ವಾಮಿಗಳು ತಮ್ಮ ವಿದೇಶಿ ಸ್ನೇಹಿತ ಹಾಗೂ ಶಿಷ್ಯರ ನೆರವನ್ನು ಪಡೆದರು. ೨೬ ಫೆಬ್ರವರಿ ೧೮೯೭ ರಂದು ಸಾರಾ ಬುಲ್ ‘ಗೆ ಬರೆದ ಪತ್ರ ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸುತ್ತದೆ. ‘ ಕೇಂಬ್ರಿಜ್ ಸಮ್ಮೇಳನದಿಂದ ಮತ್ತು ಬ್ರೂಕಲಿನ್ ಎಥಿಕಲ್ ಸೊಸೈಟಿಯಿಂದ ನನಗೆ ಬಿನ್ನವತ್ತಳೆಗಳು ಬಂದಿವೆ. ಡಾ. ಲೆವಿಸ್ ಜಿ. ಜೇನ್ಸ್ ಪತ್ರದಲ್ಲಿ ಉಲ್ಲೇಖಿಸಿರುವ ನ್ಯೂಯಾರ್ಕ್ ವೇದಾಂತ ಸೊಸೈಟಿಯ ಬಿನ್ನವತ್ತಳೆ ನನ್ನ ಕೈ ಸೇರಿಲ್ಲ….ನಾನು ಎಷ್ಟು ಬಳಲಿರುವೆನೆಂದರೆ ನನಗೆ ಈಗ ವಿಶ್ರಾಂತಿ ಸಿಕ್ಕದಿದ್ದರೆ ಇನ್ನೂ ಆರು ತಿಂಗಳು ಬದುಕುವೆನೋ ಇಲ್ಲವೋ ತಿಳಿಯದು….ಒಂದು ಕಡೆ ದೇಶ ಹೊಟ್ಟೆಕಿಚ್ಚು ಮತ್ತು ನಿರ್ದಯರಾದ ಜನರಿಂದ ತುಂಬಿದೆ. ಅವರ ನನ್ನ ಕೆಲಸವನ್ನು ಧ್ವಂಸ ಮಾಡಲು ಎಲ್ಲ ರೀತಿಯ ಯತ್ನ ಮಾಡುವರು…ನೀವು ಚೆನ್ನಾಗಿ ಅರಿತಿರುವಂತೆ ಅಡಚಣೆ ಹೆಚ್ಚಿದಷ್ಟು ನನ್ನಲ್ಲಿ ಅತಿಮಾನುಷ ಶಕ್ತಿ ಉದ್ರೇಕಗೊಳ್ಳುವುದು’ ಜನರ ಮೇಲೆ ಹರಿಹಾಯುವುದು ಪರಿಣಾಮ ಹದಗೆಟ್ಟಾಗ ಅನುಕೂಲಕ್ಕೆ ತಕ್ಕಂತೆ ಭಾರತ ಅಥವಾ ಅಮೆರಿಕದಿಂದ ತಮ್ಮನ್ನು ಹೊಗಳುವ , ಬೆಂಬಲಿಸುವ ಗೊತ್ತುವಳಿಗಳನ್ನು ಪಡೆಯುವುದು ಸ್ವಾಮಿಗಳ ಸಾಧಾರಣ ತಂತ್ರವಾಗಿದ್ದಿತು. ಇದರ ಭಾಗವಾಗಿ ಕೇಂಬ್ರಿಜ್ ಕಾನ್ಫರೆನ್ಸ್ , ಬ್ರೂಕ್ಲಿನ್ ಎಥಿಕಲ್ ಸೊಸೈಟಿ, ನ್ಯೂಯಾರ್ಕ್ ವೇದಾಂತ ಸೊಸೈಟಿಯ ತಮ್ಮ ಗೆಳೆಯರ ಮೂಲಕ ಥಿಯೊಸೊಫಿಸ್ಟರನ್ನು ಎದುರಿಸಲು ಸಿದ್ದರಾಗಿದ್ದರು.
ಫೆಬ್ರವರಿ ೧೮೮೭ ರಂದು ಮದ್ರಾಸ್’ನ ವಿಕ್ಟೋರಿಯಾ ಹಾಲ್’ನಲ್ಲಿ ಮಾಡಿದ ಭಾಷಣದಲ್ಲಿ ಸ್ವಾಮಿಗಳು ‘….ಆಗ ನನ್ನ ಬೊಕ್ಕುಣದಲ್ಲಿ ಕೆಲವೇ ಡಾಲರ್ ಉಳಿದಿದ್ದವು. ಮದ್ರಾಸಿನ ಗೆಳೆಯರಿಗೆ ತಂತಿಯನ್ನು ಕಳಿಸಿದೆ. ಈ ಸುದ್ದಿ ಥಿಯಸೊಫಿಸ್ಟರಿಗೆ ಗೊತ್ತಾಗಿ ‘ಈಗ ಈ ಪಿಶಾಚಿ ಸಾಯುತ್ತಿದೆ. ದೇವರು ನಮ್ಮನ್ನು ಈ ಪೀಡೆಯಿಂದ ತಪ್ಪಿಸಿದ ‘ ಎಂದರೆಂದು ಹೇಳಿದರು. ಈ ಸಂಗತಿಯನ್ನು ರೋಮಾಂಡ್ ರೋಲಾ ತಿರುಚಿ ಸ್ವಾಮಿಯವರು ಹಣದ ನೆರವಿಗಾಗಿ ಮದ್ರಾಸ್ ಸ್ನೇಹಿತರಿಗೆ ತಂತಿ ಕಳಿಸಿದರು. ಅದೇ ಸಮಯಕ್ಕೆ ಒಂದು ಅಧಿಕೃತ ಧಾರ್ಮಿಕ ಸಂಘಕ್ಕೆ ಹಣವನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಆಗ ಆ ಸಂಘದ ಮುಖ್ಯಸ್ಥ ‘ ಆ ದೆವ್ವ ಚಳಿಯಲ್ಲಿ ಸಾಯಲಿ’ ಎನ್ನುವ ಉತ್ತರ ಕಳಿಸಿದನು ಎಂದು ಬರೆದಿದ್ದಾರೆ. ಸ್ವಾಮಿಗಳು ಥಿಯೋಸೋಫಿಸ್ಟರ ವಿಚಾರ ಹೇಳದಿದ್ದರೂ ರೊಮಾಂಡ್ ರೋಲಾ ಸ್ವಾಮಿಗಳು ನೆರವು ಕೇಳಿದ ಧಾರ್ಮಿಕ ಸಂಘ ಅದೇ ಆಗಿರಬೇಕೆಂದು ಅದರ ಮುಖ್ಯಸ್ಥ ಕರ್ನಲ್ ಹೆನ್ರಿ ಸ್ಟೀಲ್ ಓಲ್’ಕಾಟ್ ತಂತಿ ಕಳಿಸಿದಾತನೆಂದು ಹೇಳಿದ್ದಾರೆ. ಕರ್ನಲ್ ಸ್ಟೀಲ್ ಓಲ್’ಕಾಟ್ ಸಂದರ್ಶನ ನಡೆಸಿದ ಸಿ.ಆರ್ ಶ್ರೀನಿವಾಸ ಅಯ್ಯಂಗಾರ್ ಈ ಘಟನೆಯನ್ನು ಕುರಿತಾಗಿ ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆ. ಆಗ ಕರ್ನಲ್ ಓಲ್’ಕಾಟ್ ಸ್ವಾಮಿಗಳಾಗಲಿ , ಅವರ ಅಭಿಮಾನಿ ಶಿಷ್ಯರಾಗಲಿ ಇದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸವಾಲು ಎಸೆದಿದ್ದಾರೆ. ಈ ಸಂದರ್ಶನ ೨೧/೨/೧೮೯೭ ರಲ್ಲಿ ದಿ ಇಂಡಿಯನ್ ಮಿರರ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದಿತು. ಸ್ವಾಮಿಯವರು ಮದ್ರಾಸ್ ಭಾಷಣದಲ್ಲಿ ಒಂದು ಮುಖ್ಯವಾದ ಸಂಗತಿಯನ್ನು ಹೇಳದೆ ಮರೆಮಾಚಿದ್ದಾರೆ. ಖೇತ್ರಿ ಮಹಾರಾಜರು ಅವರಿಗೆ ಕೊಟ್ಟಿದ್ದ ರೂ ೩೦೦೦=೦೦ ರೂಗಳನ್ನು ತಮ್ಮ ಬೇಜವಾಬ್ದಾರಿಯಿಂದ ಕಳೆದುಕೊಂಡಿದ್ದನ್ನು ತಿಳಿಸಿಲ್ಲ. ಕೆ. ಸುಂದರರಾಮ ಅಯ್ಯರ್ ನೆನಪುಗಳನ್ನು ನೋಡಿದರೆ ಸ್ವಾಮಿಗಳು ಥಿಯೊಸೊಫಿಸ್ಟರ ಮೇಲೆ ಕೋಪಗೊಳ್ಳಲು ಬೇರೆಯದೇ ಆದ ಕಾರಣವಿದ್ದಿತು. ಥಿಯೊಸೊಫಿಸ್ಟರು ನಾವು ಅಮೆರಿಕದಲ್ಲಿ ಭಾರತದ ಯೋಗಿಗಳು , ಸಿದ್ಧರು , ವೇದಾಂತ , ಹಿಂದೂ ಧರ್ಮಗಳನ್ನು ಸ್ವಾಮಿಗಳಿಗಿಂತ ಮೊದಲೇ ಪರಿಚಯಿಸಿದ್ದೆವು. ಅದರಿಂದ ಅವರ ಕೆಲಸ ಸುಲಭವಾಯಿತು ಎಂದಿದ್ದರು. ಅಮೆರಿಕದಲ್ಲಿ ತಾವು ಗಳಿಸಿದ ಕೀರ್ತಿಯಲ್ಲಿ ಪಾಲದಾರರಾಗಲು ಥಿಯೊಸೊಫಿಸ್ಟರು ಹವಣಿಸುತ್ತಿದ್ದಾರೆ ಎನ್ನುವುದೇ ಸ್ವಾಮಿಗಳ ಕಡುಕೋಪಕ್ಕೆ ಕಾರಣವಾಗಿದ್ದಿತು. ಇದು ಅವರು ಮದ್ರಾಸ್’ನಲ್ಲಿ ಮಾಡಿದ ‘ನನ್ನ ಅಭಿಯಾನ’ ಭಾಷಣದಲ್ಲಿಯೂ ವ್ಯಕ್ತವಾಗಿದೆ.
ಜಾನ್ ಎಚ್ ಬರೋಸ್ : ವಿಶ್ವ ಧರ್ಮ ಸಂಸತ್ತಿನ ಕಾರ್ಯದರ್ಶಿ ಡಾ. ಜಾನ್ ಎಚ್. ಬರೋಸ್ ಪ್ರವಾಸದಲ್ಲಿದ್ದು ಭಾರತಕ್ಕೆ ಭೇಟಿ ನೀಡಲು ಬಯಸಿದ್ದು ಇದನ್ನು ಸ್ವಾಮಿಗಳಿಗೆ ತಿಳಿಸಿದ್ದನು. ‘ಡಾ. ಬರೋಸ್'ರವರನ್ನು ಹೇಗೆ ಸ್ವಾಗತಿಸಬೇಕೆಂದು ತಿಳಿಸಿ ಇಂಡಿಯನ್ ಮಿರರ್ ಪತ್ರಿಕೆಗೆ ಒಂದು ಸಣ್ಣ ಪತ್ರವೊಂದನ್ನು ಬರೆದಿದ್ದೇನೆ. ಅವರ ಬಗ್ಗೆ ಒಂದು ಒಳ್ಳೆಯ ಲೇಖನ ಬರೆದು ಸೂಕ್ತ ರೀತಿಯಲ್ಲಿ ಸ್ವಾಗತಿಸು’ ಇದು ಸ್ವಾಮಿಗಳು ಅಳಸಿಂಗ ಪೆರುಮಾಳ್’ಗೆ ನೀಡಿದ ಆದೇಶ. (೨೮/೧೦/೧೮೯೬) .
ಇಂಡಿಯನ್ ಮಿರರ್ ಪತ್ರಿಕೆಯಲ್ಲಿ ೨೮/೧೦/೧೮೯೬ ರಂದು ಪ್ರಕಟಗೊಂಡ ಸ್ವಾಮಿಗಳ ಪತ್ರದ ಭಾಗ ಹೀಗಿದೆ : ‘…… ಡಾ. ಬರೋಸ್’ರವರ ಮಹತ್ತರ ಧೈರ್ಯ , ಅವಿರತ ದುಡಿಮೆ , ತಪ್ಪದ ತಾಳ್ಮೆ ಮತ್ತು ಸೋಲದ ಸೌಜನ್ಯದಿಂದ ವಿಶ್ವ ಧರ್ಮ ಸಂಸತ್ತು ಅಷ್ಟೊಂದು ಅದ್ವಿತೀಯ ಯಶಸ್ಸನ್ನು ಪಡೆಯಿತು. ಷಿಕಾಗೊವಿನ ಆ ಅದ್ಭುತ ಸಭೆಯ ಮೂಲಕ ಭಾರತ , ಭಾರತೀಯರು ತಮ್ಮ ಆಲೋಚನೆಗಳನ್ನು ಜಗತ್ತಿನ ಮುಂದೆ ಹಿಂದೆಂದಿಗಿಂತಲೂ ಪ್ರಬಲವಾಗಿ ಎತ್ತಿ ಹಿಡಿಯಲು ಸಾದ್ಯವಾಯಿತು. ಈ ರೀತಿಯಲ್ಲಿ ನಮ್ಮ ದೇಶದ ಹಿತವನ್ನು ಸಾಧಿಸಲು ಆ ಸಭೆಯಲ್ಲಿ ಎಲ್ಲರಿಗಿಂತ ಡಾ. ಬರೋಸ್’ರವರಿಗೆ ನಾನು ಹೆಚ್ಚು ಋಣಿ. ಈ ವ್ಯಕ್ತಿಯು ಭರತ ಖಂಡಕ್ಕೆ ತರಲು ಬಯಸುತ್ತಿರುವ ಆ ಕ್ರೈಸ್ತ ಶಕ್ತಿಯು ಅಸಹನೆ , ತನ್ನದಲ್ಲದ ಬೇರೆ ಎಲ್ಲವುದನ್ನೂ ಕೀಳು ದೃಷ್ಟಿಯಲ್ಲಿ ನೋಡುವ ಅಧಿಕಾರಯುತ ದರ್ಪಕ್ಕಿಂತಲೂ ಬೇರೆಯಾದುದು ….‘
ಸ್ವಾಮಿಗಳು ಬರೋಸ್ ಬಗ್ಗೆ ತಳಿಸ್ದಿದ್ದ ಅಭಿಪ್ರಾಯಗಳನ್ನು ಅವರ ಪತ್ರಗಳಿಂದ ಉತ್ತಮವಾಗಿ ಬೇರೆ ಯಾವುದೇ ಮೂಲ ತಿಳಿಸಲಾರದು.
‘ಷಿಕಾಗೊ ವಿಶ್ವ ಧರ್ಮ ಸಂಸತ್ತು ಅದ್ಭುತವಾಗಿ ಸಾಗಿತು.! ಪ್ರಪಂಚದ ಮೂಲೆ ಮೂಲೆಯಿಂದ ಬಂದ ಜನಾಂಗಗಳು ತಮ್ಮ ಧರ್ಮಗಳನ್ನು ವ್ಯಕ್ತಪಡಿಸಿದ ಆ ಸಂಸತ್ತು ಎಂತಹ ಘಟನೆ ! ನಾನು ಕೂಡ ಬರೋಸ್ ಮತ್ತು ಬೋನಿ ಅವರ ದಯೆಯಿಂದ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾದ್ಯವಾಯಿತು. ಬೋನಿ ಒಬ್ಬ ಅದ್ಭುತ ವ್ಯಕ್ತಿ! ,.. (೩೦/೧೨/೧೮೯೪- ಖೇತ್ರಿ ರಾಜ ಅಜಿತ್ ಸಿಂಗ್)
‘ ನಾನು ಲಂಡನ್’ನಿಂದ ನನ್ನ ದೇಶದ ಜನರಿಗೆ ಡಾ. ಬರೋಸ್ 'ರವರನ್ನು ಆದರದಿಂದ ನೋಡಿಕೊಳ್ಳಬೇಕೆಂದು ಬರೆದೆ. ಅವರು ಅವರಿಗೆ ದೊಡ್ಡ ಸ್ವಾಗತ ಸಮಾರಂಭವನ್ನು ಏರ್ಪಡಿಸಿದ್ದರು. ಆದರೆ ಅದು ಆತನ ಮೇಲೆ ಯಾವುದೇ ಪ್ರಭಾವ ಉಂಟುಮಾಡದೇ ಹೋದುದು ನನ್ನ ತಪ್ಪಲ್ಲ. ಕಲ್ಕತ್ತೆಯ ಜನರೆಲ್ಲ ನಿರ್ದಾಕ್ಷಿಣ್ಯ ಸ್ವಭಾವದವರು. ಈಗ ಬರೋಸ್ ನನ್ನ ವಿಷಯವಾಗಿ ಬೇಕಾದಷ್ಟು ವಿರೋಧವಾಗಿ ಯೋಚಿಸುತ್ತಿರುವರೆಂದು ಕೇಳಿದೆ. ಇದೇ ಜಗತ್ತು ! . (೩೦’/೦೧/೧೮೯೭-ಮೇರಿ ಹೇಲ್)
‘ಬರೋಸ್ ಇಲ್ಲಿಗೆ ಮತಾಂಧ ಕ್ರೈಸ್ತ ಧರ್ಮವನ್ನು ಬೋಧಿಸಲು ಬಂದಿದ್ದನು. ಭಾರತೀಯರೇನೋ ಅತನನ್ನು ಅತ್ಯಂತ ಆದರದಿಂದ ಸ್ವಾಗತಿಸಿದರು. ಅದಕ್ಕೆ ಕಾರಣ ನಾನು ಆತನನ್ನು ಆದರದಿಂದ ಸ್ವಾಗತಿಸುವಂತೆ ಬರೆದದ್ದು. ನಾನು ಆತನ ತಲೆಗ ಬುದ್ಧಿಯನ್ನು ತುಂಬಲಾಗಲಿಲ್ಲ. ಆತ ವಿಚಿತ್ರ ಸ್ವಭಾವದ ಮನುಷ್ಯಂತ ಕಾಣುತ್ತಾನೆ. ನಾನು ತಾಯ್ನಾಡಿಗೆ ಮರಳುತ್ತಿರುವೆನೆಂದು ದೇಶವೆಲ್ಲ ಜಯಘೋಷ ಮಾಡುತ್ತಿರುವುದು ತಿಳಿದು ಆತನಿಗ ರೇಗಿ ಹೋಯಿತೆಂದು ಕೇಳಿದೆ ! ನೀವು ಹೇಗಾದರೂ ಇನ್ನೂ ಉತ್ತಮ ಮನುಷ್ಯನನ್ನು ಕಳಿಸಬೇಕಿತ್ತು. ಏಕೆಂದರೆ ಹಿಂದೂಗಳ ಮನಸ್ಸಿನಲ್ಲಿ ಈ ಡಾಕ್ಟರ್ ಬರೋಸ್'ನಿಂದ ಸರ್ವಧರ್ಮ ಸಂಸತ್ತು ಕೇವಲ ಒಂದು ತಮಾಷೆ ಎನ್ನುವ ಭಾವನೆ ಮೂಡುವಂತಾಯಿತು……. ಶಕ್ತಿಶಾಲಿಗಳು ಅನುಸರಿಸುವ ಧರ್ಮವೇ ಶ್ರೇಷ್ಟಧರ್ಮ ಎನ್ನುವ ಭಾವನೆಯಿದೆ. ಈ ಕಾರಣದಿಂದಾಗಿಯೇ ಹಿಂದೂ ಧರ್ಮವೇ ಧರ್ಮ. ಕ್ರೈಸ್ತ ಧರ್ಮ ಧರ್ಮವೇ ಅಲ್ಲ. ಏಕೆಂದರೆ ಈ ಪಾಶವೀ ಜಗತ್ತಿನಲ್ಲಿ ಕೇವಲ ದುರ್ನೀತಿ ಮಾತ್ರ ಏಳಿಗೆ ಹೊಂದುತ್ತದೆ. ವೈಜ್ಞಾನಿಕ ಸಂಸ್ಕೃತಿಯಲ್ಲಿ ಪಾಶ್ಚಾತ್ಯರು ಅದೆಷ್ಟೇ ಏಳಿಗೆ ಹೊಂದಿದ್ದರೂ ಅವರು ಭೌತಾತೀತ ಅಧ್ಯಾತ್ಮ ವಿದ್ಯೆಯಲ್ಲಿ ಶಿಶುಗಳು (೨೮/೪/೧೮೯೭- ಮೇರಿ ಹೇಲ್) .
ಸ್ವಾಮಿಗಳು ಭಾರತಕ್ಕೆ ಮರಳಿದ ನಂತರ ಅಮೆರಿಕದ ಹೆಂಗಸರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಜಾನ್ ಎಚ್. ಬರೋಸ್ ಕ್ರೋನಿಕಲ್ ಪತ್ರಿಕೆಯಲ್ಲಿ ಬರೆದಿದ್ದನು. ಇದಲ್ಲದೆ ವಿಶ್ವ ಧರ್ಮ ಸಂಸತ್ತಿನ ಮೊದಲನೆಯ ದಿನ ಊಟಕ್ಕೆ ಸ್ವಾಮಿಗಳು ದನದ ಮಾಂಸ ಕೇಳಿದ್ದರೆಂದು ಬಹಿರಂಗ ಪಡಿಸಿದ್ದನು. ಆ ಲೇಖನದ ಕೆಲವು ಅಂಶಗಳನ್ನು ‘ದಿ ಇಂಡಿಯನ್ ಮಿರರ್’ನಲ್ಲಿ ಪ್ರಕಟಿಸಿತು. ಇದಕ್ಕೆ ಶುದ್ಧಾನಂದ ಸ್ಪಷ್ಟನೆ ಬಯಸಿದ್ದರು. ಅದಕ್ಕೆ ಉತ್ತರಿಸುತ್ತ ಸ್ವಾಮಿಗಳು ‘ ಅದರ ಭಾಗವನ್ನು ಯಾರೋ ನನಗೆ ಕತ್ತರಿಸಿ ಕಳಿಸಿದ್ದಾರೆ. ಕಳಿಸಿದವರ ವಿಳಾಸವಿಲ್ಲ. ಅದಕ್ಕೆ ಏನು ಉತ್ತರ ನೀಡಬೇಕೆಂದು ಕೇಳುತ್ತಿದ್ದಾರೆ, ನನ್ನ ಉತ್ತರವನ್ನು ನಾನು ಬ್ರಹ್ಮಾನಂದರಿಗೆ ಕಳಿಸಿದ್ದೇನೆ. ಪತ್ರಿಕೆಯಲ್ಲಿ ಬರೋಸ್ ಹೇಳಿರುವುದೆಲ್ಲ ಸುಳ್ಳು’ ಎಂದು ತಿಳಿಸಿದರು. ( ೧೫/೯/೧೮೯೭-ಶುದ್ಧಾನಂದ). ಹೀಗೆ ಸ್ವಾಮಿಗಳು ಮತ್ತು ಜಾನ್ ಎಚ್ ಬರೋಸ್ ನಡುವಿನ ಸಂಬಂಧ ಹಳಸಿಹೋಯಿತು.
ಧರ್ಮಪಾಲ : ಸ್ವಾಮಿ ಮತ್ತು ಧರ್ಮಪಾಲರ ಸ್ನೇಹ ಸಿಹಿ ಕಹಿಗಳ ಸಂಗಮ. ಸ್ವಾಮಿಗಳಿಗಿಂತ ಒಂದೂವರೆ ವರ್ಷ ಕಿರಿಯರಾದ ಧರ್ಮಪಾಲ (ಹುಟ್ಟು–೧೭/೯/೧೮೬೪) ಮೇ ,೧೮೯೧ ರಲ್ಲಿಯೇ ಕಲ್ಕತ್ತದಲ್ಲಿ ‘ಮಹಾ ಬೋಧಿ ಸೊಸೈಟಿ’ಯನ್ನು ಪ್ರಾರಂಭಿಸಿದ್ದರು. ಧಾರ್ಮಿಕ ಕೇಂದ್ರ ಸ್ಥಾಪಿಸುವಲ್ಲಿ ಸ್ವಾಮಿಗಳಿಗಿಂತ ಆರು ವರ್ಷ ಮುಂದಿದ್ದರು. ಬುದ್ಧ ಗಯಾವನ್ನು ಹಿಂದೂ ಮಹಾಂತರಿಂದ ಬೌದ್ಧರ ವಶಕ್ಕೆ ಪಡೆಯಲು ಕಾನೂನಿನ ಹೋರಾಟ ನಡೆಸಿದ್ದರು. ಚಿಂತನೆ , ಶ್ರಮ , ಸಾಮಾಜಿಕ ಕಾರ್ಯಕ್ರಮ , ಗುರಿ ಮತ್ತು ಅನುಷ್ಠಾನಗಳಲ್ಲಿ ಸ್ವಾಮಿಗಳಿಗಿಂತ ಸುಮಾರು ಒಂದು ದಶಕ ಮುಂದಿದ್ದರು. ಸ್ವಾಮಿಗಳು ಧರ್ಮಪಾಲನ ಬಗ್ಗೆ ಪ್ರೀತಿ ,ಸ್ನೇಹ , ಅಭಿಮಾನಗಳನ್ನು ಹೊಂದಿರುವುದು ಅವರ ಆರಂಭಿಕ ಪತ್ರಗಳಿಂದ ತಿಳಿಯುತ್ತದೆ. ‘ಭಾರತದ ಒಳ್ಳೆಯ ವ್ಯಕ್ತಿಗಳು ಇಲ್ಲಿರುವರು. ನೀವು ಅವರನ್ನು ನೋಡಿದ್ದರೆ ಎಷ್ಟು ಚೆನ್ನಾಗಿರುತ್ತಿದ್ದಿತು !! ಮೃದು ಹೃದಯದ ಧರ್ಮಪಾಲ, ವಾಗ್ಮಿ ಪ್ರತಾಪಚಂದ್ರ ಮಜುಂದಾರ.. (೨/೧೦/೧೮೯೩-ಜಾನ್ ಹೆನ್ರಿ ರೈಟ್ ) , ಸಿಂಹಳದ ಧರ್ಮಪಾಲರು ಸಭೆಯ ಆದರಕ್ಕೆ ಪಾತ್ರರಾದವರಲ್ಲಿ ಒಬ್ಬರು ( ೨/೧೧/೧೮೯೩-ಅಳಸಿಂಗ ಪೆರುಮಾಳ್) , ಧರ್ಮಪಾಲ ಒಳ್ಳೆಯ ಹುಡುಗ. ಅಷ್ಟೇನೂ ವಿದ್ಯಾವಂತನಲ್ಲ . ಆದರೆ ಬಹಳ ಸಾಧು ಸ್ವಭಾವದವನು. ಈ ದೇಶದ ಜನರಿಗೆ ಆತನ ಮೇಲೆ ಬಹಳ ವಿಶ್ವಾಸವಿತ್ತು (?/೩/೧೮೯೪- ರಾಮಕೃಷ್ಣಾನಂದ ) , ‘ನನಗೆ ಧರ್ಮಪಾಲನ ವಿಳಾಸ ಕೊಡು. ಆತ ಶ್ರೇಷ್ಟ ಉತ್ತಮ ವ್ಯಕ್ತಿ.. ಆತ ನಮ್ಮೊಡನೆ ಚೆನ್ನಾಗಿ ಕೆಲಸ ಮಾಡುತ್ತಾರೆ (೩೧/೮/೧೮೯೪-ಅಳಸಿಂಗ ಪೆರುಮಾಳ್). ಹೀಗೆ ಹಲವು ಸಲ ಸ್ವಾಮಿಗಳು ಧರ್ಮಪಾಲನ ಬಗ್ಗೆ ಅಭಿಮಾನ , ಪ್ರೀತಿ ತೋರಿಸಿದ್ದರು. ೧೪/೫/೧೮೯೪ ರಂದ ಮಿನರ್ವ ಥಿಯೆಟರ್’ನಲ್ಲಿ ತನ್ನ ಬಗ್ಗೆ ಒಳ್ಳೆಯ ಮಾತನಾಡಿದ್ದ ಧರ್ಮಪಾಲರಿಗೆ ನಂತರದ ಪತ್ರದಲ್ಲಿ ಸ್ವಾಮಿಗಳು ಕೃತಜ್ಞತೆ ತಿಳಿಸಿದ್ದಾರೆ. ರಾಮಕೃಷ್ಣ ಮಿಷನ್ ಕೈಗೊಂಡಿದ್ದ ಬರ ಪರಿಹಾರ ಕೆಲಸಗಳಿಗೆ ಮಹಾಬೋಧಿ ಸೊಸೈಟಿ ಆರ್ಥಿಕ ಬೆಂಬಲ ನೀಡಿದ್ದಿತು. ಖಾಸಗಿ ಪತ್ರಗಳಲ್ಲಿ ಧರ್ಮಪಾಲನನ್ನು ಕೇಳುತ್ತಿದ್ದ ಸ್ವಾಮಿಗಳು ಸಾರ್ವಜನಿಕವಾಗಿ ಆತನ ವಿದ್ವತ್ , ಬೌದ್ಧ ಧರ್ಮದ ತಿಳಿವಳಿಕೆಯ ಬಗ್ಗೆ ಮಗುಮ್ಮಾಗಿರುತ್ತಿದ್ದರು. ಅನುರಾಧಪುರದಲ್ಲಿ ಬೌದ್ಧರು ಸ್ವಾಮಿಗಳಿಗೆ ಮಾತನಾಡಲು ಅವಕಾಶ ಕೊಡದಿದ್ದರಿಂದ ಸ್ವಾಮಿಗಳು ಬೌದ್ಧ ಧರ್ಮದ ಮೆಲೆ ಹರಿಹಾಯ್ದಿರುವ ಸಾಧ್ಯತೆಯಿದೆ. (140)
ಜನಪ್ರಿಯ ನಂಬಿಕೆ ಮತ್ತು ಪ್ರಚಾರ ಏನೇ ಇರಲಿ ದಾಖಲೆಗಳ ಪ್ರಕಾರ ಸ್ವಾಮಿಗಳಿಗಿಂತ ಧರ್ಮಪಾಲರು ಧರ್ಮ ಸಂಸತ್ತಿನಲ್ಲಿ ಹೆಚ್ಚು ಗುರುತಿಸಲ್ಪಟ್ಟಿದ್ದರು. ಸ್ವಾಮಿಗಳ ಮರಣಾ ನಂತರ ನಿವೇದಿತಾ ಸ್ವಾಮಿಗಳು ಧರ್ಮ ಸಂಸತ್ತಿನಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಭಾರತೀಯ ಪ್ರತಿನಿಧಿಗೆ ಭಾಷಣಗಳನ್ನು ಬರೆದುಕೊಟ್ಟರು ಎಂದು ಬರೆದರು. ಶಂಕರಿ ಪ್ರಸಾದ ಬಸುರವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಆ ಪ್ರತಿನಿಧಿ ಧರ್ಮಪಾಲ ಎಂದರು. ಸ್ವಾಮಿಗಳು ಕೆಲವೊಮ್ಮೆ ಸಲ ಸಣ್ಣ ಸಂಗತಿಗಳನ್ನು ದೊಡ್ದದು ಮಾಡಿ ಹೇಳುತ್ತಿದ್ದರು. ಅದರಂತೆಯೇ ನಿವೇದಿತಾಗೆ ಹೇಳಿರಬಹುದು. ಸ್ವಾಮಿ ವಿವೇಕಾನಂದರು ಧರ್ಮಪಾಲರಿಗೆ ಭಾಷಣಗಳನ್ನು ಬರೆದುಕೊಟ್ಟಿರಲಿಲ್ಲ ಎಂದು ಅವರ ಮೂಲದಿಂದಲೇ ಸಾಧಿಸಬಹುದು.
(೧) ೨/೧೧/೧೮೯೩ ರಂದು ಅಳಸಿಂಗ ಪೆರುಮಾಳ್’ಗೆ ಬರೆದ ಪತ್ರದಲ್ಲಿ ಧರ್ಮಪಾಲರ ಭಾಷಣದ ಅಂಶಗಳನ್ನು ಟೀಕಿಸಿ , ಅವರಿಗೆ ಬೌದ್ಧ ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲ ಎಂದಿದ್ದಾರೆ. (೨) ಬೌದ್ಧ ಧರ್ಮ ಕುರಿತಾಗಿ ಸ್ವಾಮಿಗಳು ಹೊಂದಿದ್ದ ದೃಷ್ಟಿಕೋನಗಳು ಧರ್ಮಪಾಲ ಹೇಳುತ್ತಿದ್ದವಕ್ಕಿಂತ ಬಹಳ ಭಿನ್ನವಾಗಿದ್ದವು. (೩) ಧರ್ಮ ಸಂಸತ್ತಿನ ಮೊದಲ ಭಾನುವಾರ ೧೭/೯/೧೮೯೩ ಥರ್ಡ್ ಯೂನಿಟೇರಿಯನ್ ಚರ್ಚ್’ನಲ್ಲಿ ಭಾಷಣ ಮಾಡಲು ಧರ್ಮಪಾಲರನ್ನು ಆಹ್ವಾನಿಸಲಾಯಿತು. ಈ ಭಾನುವಾರ ಯಾವ ಚರ್ಚ್’ನವರೂ ಸ್ವಾಮಿಗಳನ್ನು ಆಹ್ವಾನಿಸಲಿಲ್ಲ. ಮುಂದಿನ ಭಾನುವಾರ ೨೪/೧೧/೧೮೯೩ ರಂದು ಸ್ವಾಮಿಗಳು ಇದೇ ಚರ್ಚ್’ನಲ್ಲಿ ಭಾಷಣ ಮಾಡಿದರು. ಧರ್ಮಪಾಲರಿಗೆ ಮೂರು ಪ್ರದೇಶಗಳ ಚರ್ಚ್’ಗಳಿಂದ , ಮಜುಂದಾರರಿಗೆ ಎರಡು ಪ್ರದೇಶದ ಚರ್ಚ್’ಗಳಿಂದ , ಸ್ವಾಮಿಗಳಿಗೆ ಒಂದೇ ಪ್ರದೇಶದ ಚರ್ಚ್’ನಿಂದ ಭಾಷಣಗಳಿಗೆ ಆಹ್ವಾನಗಳು ಬಂದಿದ್ದವು. ಆದ್ದರಿಂದ ಸ್ವಾಮಿಗಳು ಭಾಷಣ ಸಿದ್ಧಪಡಿಸಲು ಧರ್ಮಪಾಲನಿಗೆ ನೆರವಾಗಿರಲಿಲ್ಲ ಎನ್ನುವುದು ಸ್ಪಷ್ಟ.
ಸ್ವಾಮಿಗಳು ಮದ್ರಾಸ್’ನಲ್ಲಿ ‘ಮೈ ಪ್ಲಾನ್ ಆಫ್ ಕ್ಯಾಂಪೇನ್’ (ನನ್ನ ಅಭಿಯಾನ) ಭಾಷಣ ಮಾಡುವವರೆಗೆ ಧರ್ಮಪಾಲ ಮತ್ತು ಸ್ವಾಮಿಗಳ ನಡುವಿನ ಸ್ನೇಹ ಮಧುರವಾಗಿದ್ದಿತು. ಮದ್ರಾಸ್’ನಲ್ಲಿ ದೊರೆತಿದ್ದ ಸ್ವಾಗತದ ಮರವೆಯಲ್ಲಿದ್ದ ಸ್ವಾಮಿಗಳು ಭಾಷಣದಲ್ಲಿ ಹಿಂದೂಧರ್ಮದ ಅವನತಿಗೆ ಬೌದ್ಧ ಧರ್ಮವೇ ಕಾರಣ ಎಂದು ಘರ್ಜಿಸಿದ್ದರು. ಮನಬಂದಂತೆ ಬೌದ್ಧ ಧರ್ಮವನ್ನು ಟೀಕಿಸಿದ್ದ ಸ್ವಾಮಿಗಳ ಧೋರಣೆ ಅಮೆರಿಕದಲ್ಲಿ ಸ್ವಾಮಿಗಳು ಸಂಕಷ್ಟ ಸ್ಥಿತಿಯಲ್ಲಿದ್ದಾಗ ಸದಾ ಅವರ ನೆರವಿಗೆ ಬರುತ್ತಿದ್ದ ಡಾ.ಲೆವಿಸ್ ಜಿ. ಜೇನ್ಸ್’ಗೆ ಸರಿಕಂಡಿರಲಿಲ್ಲ. ಇದನ್ನು ವ್ಯಕ್ತಪಡಿಸಿ ಆತ ಸ್ವಾಮಿಗಳಿಗೆ ಪತ್ರವನ್ನೂ ಬರೆದಿದ್ದನು. ಇದನ್ನು ಉಲ್ಲೇಖಿಸಿ ಸ್ವಾಮಿಗಳು ಸಾರಾ ಬುಲ್’ಗೆ ತಿಳಿಸಿದ್ದರು. ಅದರಲ್ಲಿ ‘‘ಡಾ. ಜೇನ್ಸ್’ರಿಂದ ನನಗೊಂದು ಪ್ರೀತಿಯ ಪತ್ರ ಬಂದಿತು. ಅದರಲ್ಲಿ ಅವರು ಬೌದ್ಧಮತದ ಅವನತಿಯ ವಿಚಾರವಾಗಿ ನಾನು ಸೂಚಿಸಿದ್ದನ್ನು ಟೀಕಿಸಿದ್ದಾರೆ. ನೀನೂ ಕೂಡ ಧರ್ಮಪಾಲರು ಈ ವಿಚಾರದಲ್ಲಿ ಸಿಟ್ಟಾಗಿದ್ದಾರೆಂದು ತಿಳಿಸಿರುವೆ. ಧರ್ಮಪಾಲರು ಬಹಳ ಒಳ್ಳೆಯವರು. ನಾನು ಅವರನ್ನು ಪ್ರೀತಿಸುತ್ತೇನೆ. ಆದರೆ ಅವರು ಭಾರತೀಯ ವಿಚಾರಗಳಲ್ಲಿ ಉದ್ರೇಕಗೊಳ್ಳುವುದು ಸಂಪೂರ್ಣ ತಪ್ಪು. ಅವರು ಯಾವುದನ್ನು ಅಯೋಗ್ಯ ಆಧುನಿಕ ಹಿಂದೂ ಧರ್ಮ ಎನ್ನುವರೋ ಅದು ಕೇವಲ ಅವನತಿ ಹೊಂದಿದ ಬೌದ್ಧ ಧರ್ಮ ಎನ್ನುವುದು ನನಗೆ ಸಂಪೂರ್ಣ ಖಚಿತವಾಗಿದೆ…..ಧರ್ಮಪಾಲ ಮತ್ತು ಅವರ ತಂದೆಯವರಿಗೆ ಯುರೋಪಿಯನ್ ಹೆಸರುಗಳೇ ಇದ್ದವು. ಅವರು ಅದನ್ನು ಇತ್ತೀಚೆಗೆ ಬದಲಾಯಿಸಿರುವರು. ಬೌದ್ಧಧರ್ಮ ಭಾರತದಿಂದ ಏಕೆ ಓಡಿಸಲ್ಪಟ್ಟಿತು ಎನ್ನುವುದರ ಕಾರಣ ನನಗೆ ಸ್ಪಷ್ಟವಾಗಿದೆ. …..ಸಿಂಹಳೀಯರು ಈ ಧರ್ಮದ ಭೀಕರವಾದ ಪ್ರತಿಮೆಗಳು .ಮತ್ತು ಸ್ವೇಚ್ಛಾಚಾರಿಯಾದ ಮತಾಚರಣೆಯೊಂದಿಗೆ ಉಳಿದ ಅಲ್ಪ ಸ್ವಲ್ಪ ಅವಶೇಷಗಳನ್ನು ಸಾಗಿಸಿಕೊಂಡು ಹೋದರೆ ಇನ್ನೂ ಒಳ್ಳೆಯದು…….ನಾನು ಅಮೆರಿಕದಲ್ಲಿ ಒಂದು ವ್ಯಕ್ತಿಯಾಗಿದ್ದೆ. ಇಲ್ಲಿ ಮತ್ತೊಬ್ಬ ವ್ಯಕ್ತಿಯಾಗಿದ್ದೇನೆ. ಇಡೀ ದೇಶವೇ ನಾನು ಒಂದು ಪ್ರಮಾಣ ಎಂದು ಭಾವಿಸುತ್ತದೆ. ….. ಎಂದು ಗುಡುಗಿದ್ದರು. (೫/೫/೧೮೯೭-ಸಾರಾ ಬುಲ್)
ಧರ್ಮಪಾಲರ ೩/೪/೧೮೯೭ರ ದಿನಚರಿಯಲ್ಲಿ ‘ ಸ್ವಾಮಿ ವಿವೇಕಾನಂದರು ತಮ್ಮ ಭಾಷಣಗಳಲ್ಲಿ ಬೌದ್ಧ ಧರ್ಮವನ್ನು ಹೀನಾಯವಾಗಿ ನಿಂದಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೆ. ಆತನ ಉತ್ತಮ ಗುಣಗಳಿಗಾಗಿ ಪ್ರೀತಿಸಿದ್ದೆ , ನನ್ನ ಜನಪ್ರಿಯತೆಯನ್ನು ಬದಿಗೊತ್ತಿ ಆತನ ಪರವಾಗಿ ನಿಂತಿದ್ದೆ. ಬ್ರಾಹ್ಮ ಸಮಾಜದವರು ಆತನ ವಿರುದ್ಧವಿದ್ದಾಗ ಮದ್ರಾಸಿನಲ್ಲಿ ಆತನ ಪರ ಮಾತನಾಡಿದ್ದೆ. ನ್ಯಾಷನಲ್ ಕಾಂಗ್ರೆಸ್’ನಲ್ಲಿ ೫೦೦೦ ಜನರೆದುರು ಮತ್ತು ವಿಕ್ಟೋರಿಯಾ ಹಾಲ್’ನಲ್ಲಿ ಆತನ ಬಗ್ಗೆ ಹೇಳಿದ್ದೆ. ನನ್ನ ಸಂಪೂರ್ಣ ಸಹಾನುಭೂತಿ ಆತನ ಕಡೆಗಿದ್ದಿತು. ನನಗೆ ಸಹಾಯ ಮಾಡುವ ಸರದಿ ಬಂದಾಗ ಆತ ತನ್ನ ನಿಜರೂಪವನ್ನು ತೋರಿಸುತ್ತಾನೆ. ಆತನ ಬಗ್ಗೆ ನನಗೆ ಮರುಕವಿದೆ. ಆತ ಅದ್ಭುತ ಅವಕಾಶವೊಂದನ್ನು ಕಳೆದುಕೊಂಡ. ಆತನಿಗೆ ಈಗ ಸ್ನೇಹಿತರಿದ್ದಾರೆ. ನನ್ನ ಕಡೆಯಿಂದ ನೂರು ಸಹಾನುಭೂತಿಗಳನ್ನು ಕಳೆದುಕೊಂಡ. ಸ್ವಾಮಿಯೇ ನಿನಗೆ ಶಾಂತಿಯುಂಟಾಗಲಿ ಮತ್ತು ನಿನಗೆ ನೈಜ ಬೌದ್ಧ ಧರ್ಮದ ಅರಿವಾಗಲಿ.’ ಎಂದು ಬರೆದಿದ್ದಾರೆ. (141) ಹೀಗೆ ಭ್ರಮನಿರಶನದಲ್ಲೂ ಧರ್ಮಪಾಲ ಸಹನೆಯಿಂದ ಉಳಿದಿದ್ದಾರೆ.
ಇದಾದ ನಂತರ ೭/೫/೧೮೯೮ ರಂದು ಧರ್ಮಪಾಲರು ಬೇಲೂರು ಮಠಕ್ಕೆ ಭೇಟಿ ಕೊಟ್ಟಾಗ ಕೆಸರಿನಲಿ ಜಾರಿ ಬಿದ್ದರು. ಆಗ ಸ್ವಾಮಿಗಳು ಅವರ ಕಾಲು ತೊಳೆಯಲು ಹೋದರೆಂದು ತಿಳಿದುಬರುತ್ತದೆ. ಸ್ವಾಮಿ ಮತ್ತು ಧರ್ಮಪಾಲರ ನಡುವೆ ಆತ್ಮೀಯತೆ ಕೊನೆಯವರೆಗೂ ಇದ್ದಿತಾದರೂ ತಾತ್ತ್ವಿಕ ಸಹಮತವಿರಲಿಲ್ಲ. ಸ್ವಾಮಿಗಳು ತೀರಿಕೊಂಡ ನಂತರ ಧರ್ಮಪಾಲ ‘ ಮರಣ ಸಂತಾಪ’ ಪತ್ರವನ್ನು ಬರೆದು ಓಪನ್ ಕೋರ್ಟ್ ಮ್ಯಾಗಝೈನ್’ಗೆ ಪ್ರಕಟಣೆಗೆ ಕಳಿಸಿದರು. ಅದರಲ್ಲಿದ್ದ ಅವಹೇಳನಕಾರಿ ಅಂಶಗಳನ್ನು ಗಮನಿಸಿ ಪತ್ರಿಕೆ ಸಂಪಾದಕ ಪೌಲ್ ಕ್ಯಾರಸ್ ಅದನ್ನು ಪ್ರಕಟಿಸಲಿಲ್ಲ. ಆ ಪತ್ರದ ನಕಲನ್ನು ನಾನು ನೋಡಿದ್ದೇನೆ. ಕ್ರೈಸ್ತ ಮಿಷನರಿಗಳಿಗಿಂತಲೂ ಕೀಳಾಗಿ ಧರ್ಮಪಾಲ ಬರೆದಿದ್ದಾರೆ. ಕುತೂಹಲಕ್ಕಾಗಿಯಾದರೂ ಆ ಪತ್ರ ನೋಡಲು ಯೋಗ್ಯವಾಗಿಲ್ಲ ಎಂದು ಮಾರಿ ಲೂಯಿ ಬರ್ಕೆ ತಿಳಿಸುತ್ತ , ಅದರ ವಿವರಗಳನ್ನು ಕೈಬಿಟ್ಟಿದ್ದಾರೆ. (142) ಆದರೆ ಸ್ವಾಮಿಗಳ ಹೇಳಿಕೆಗಳಲ್ಲಿ ಘನತೆ ಇದ್ದಿತೇ ಎನ್ನುವ ಚರ್ಚೆಯನ್ನು ಮಾರಿ ಲೂಯಿ ಬರ್ಕೆ ಹೊರಗಿರಿಸಿದ್ದಾಳೆ.
ಒಟ್ಟು ನೋಟ : ಭಾರತದಲ್ಲಿ ಯಾವುದೇ ವ್ಯಕ್ತಿ ಎಲ್ಲಿಯೇ ಆಗಲಿ ಮಠ , ಆಶ್ರಮ ಅಥವಾ ಅಧ್ಯಾತ್ಮ ಕೇಂದ್ರ ಕಟ್ಟಲು ಜನ ಎಂದಿಗೂ ಅಡಚಣೆ ಮಾಡುತ್ತಿರಲಿಲ್ಲ. ಅಂತಹ ಕೆಲಸಕ್ಕೆ ಹೊಟ್ಟೆಕಿಚ್ಚು ಪಡುವುದಂತೂ ಅನೂಹ್ಯವೇ ಆಗಿದ್ದಿತು. ಸ್ವಾಮಿಗಳು ತಮ್ಮ ಅಭಿಪ್ರಾಯಗಳನ್ನು ಒಪ್ಪದ , ವಿಭಿನ್ನ ವಿಚಾರದ ಎಲ್ಲರನ್ನೂ ತಮ್ಮ ವಿರೋಧಿಗಳು , ಹೊಟ್ಟೆಕಿಚ್ಚು ಪಡುವವರು , ತಮ್ಮ ಕೆಲಸಕ್ಕೆ ಅಡಚಣೆ ಮಾಡುವವರು ಎಂದು ಭಾವಿಸುವ ಮನೋಸ್ಥಿತಿಯನ್ನು ೧೮೯೪ ರಲ್ಲಿ ಏಪ್ರಿಲ್ ತಿಂಗಳಿನಿಂದಲೇ ಬೆಳೆಸಿಕೊಂಡಿದ್ದರು. ಸ್ವಾಮಿಗಳ ಪರ ವಾದಿಸುವವರು ಮುಖ್ಯವಾಗಿ ಒಂದು ಸಂಗತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದ್ದಾರೆ. ಭಾರತದಲ್ಲಿ ಒಬ್ಬ ಸಂನ್ಯಾಸಿಯ ನಡೆ , ನುಡಿ, ಆಚಾರಗಳು ಹೀಗೆಯೇ ಇರಬೇಕು. ಹಾಗೆ ಇರದಿದ್ದರೆ ಆತ ಭ್ರಷ್ಟ ಎಂದು ಪರಿಗಣಿಸುತ್ತಾರೆ. ಭಾರತದಲ್ಲಿ ಇರುವಂತೆ ವಿದೇಶದಲ್ಲಿಯೂ ಇರುವುದು ಸಾದ್ಯವಿಲ್ಲವಾದರೂ ಕೆಲವು ಮೂಲ ಸಂಗತಿಗಳು ಬದಲಾಗುವುದಿಲ್ಲ. ಹಲವು ದಿನ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿರುವ ಸಂಸಾರವೊಂದಿಗರ ಮನೆಯಲ್ಲಿ ಇರುವುದನ್ನು , ತಡರಾತ್ರಿಯವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುವುದನ್ನು, ಹತೋಟಿ ಇಲ್ಲದಂತೆ ಸಿಗರೇಟ್ ಸೇವಿಸುವುದನ್ನು ವಿದೇಶದಲ್ಲಿದ್ದಾಗಲೂ ಸನ್ಯಾಸಿಯೊಬ್ಬ ಮಾಡುವಂತಿಲ್ಲ. ಭಾರತದಲ್ಲಿ ಒಬ್ಬ ಸನ್ಯಾಸಿ ನಸ್ಯ ಏರಿಸಿದರೆ , ಬೀಡಿ ಸೇದಿದರೆ , ಕೋಣೆಯೊಳಗೆ ಕರೆಸಿ ಒಬ್ಬ ಹೆಂಗಸಿನೊಂದಿಗೆ ಮಾತನಾಡಿದರೆ ಬಹು ಕೀಳಾಗಿ ಕಾಣುವವರು ಸ್ವಾಮಿಗಳಿಗೆ ಏಕೆ ಇವೆಲ್ಲವುಗಳಿಂದ ವಿನಾಯತಿ ನೀಡುತ್ತಾರೆ ? ನಿಜವಾಗಿಯೂ ಸ್ವಾಮಿಗಳು ಭಾರತ ದುಸ್ಥಿತಿಯನ್ನು ನೆನೆದು ತಮಗೆ ಒದಗಿಸಿದ್ದ ಮೆತ್ತನೆಯ ಹಾಸಿಗೆಯನ್ನು ತೊರೆದು ಅಳುತ್ತ ನೆಲದ ಮೇಲೆ ಮಲಗಿದರೆಂಬ ಕಟ್ಟು ಕಥೆ ಎಷ್ಟು ಸತ್ಯ ? ಸ್ವಾಮಿಗಳ ಪತ್ರಗಳಿಂದ ಅವರು ಕೇಂದ್ರ ಹವಾ ನಿಯಂತ್ರಿತ , ಲಿಫ್ಟ್ ಸೌಲಭ್ಯವಿರುವ , ಉತ್ತಮ ದರ್ಜೆಯ ವಸತಿಗಳನ್ನು ಮೆಚ್ಚುತ್ತಿದ್ದರು , ಉತ್ತಮ ದರ್ಜೆಯ ಹೊಟೆಲ್’ಗಳಲ್ಲಿ ಊಟ ಮಾಡಲು ಬಯಸುತ್ತಿದ್ದರು ಎನ್ನುವುದು ಸ್ಪಷ್ಟ. ಯಾರಾದರೂ ಸ್ವಾಮಿಗಳು ಶ್ರೀಮಂತರು ಏರ್ಪಡಿಸುತ್ತಿದ್ದ ಔತಣ ಕೂಟಗಳಲ್ಲಿ ತಡರಾತ್ರಿಯವರೆಗೆ ಭಾಗವಹಿಸುತ್ತಿದುದು ತಪ್ಪು. ಅವರು ಭಾರತದ ಸಾಂಪ್ರದಾಯಿಕ ಸಂನ್ಯಾಸಿಯಂತಿಲ್ಲ ಎಂದು ಹೇಳಿದರೆ ಅದರಲ್ಲಿ ಸಂಚೇನಿದೆ ? ಭಾರತದ ಸಾಮಾಜಿಕ ಸ್ಥಿತಿಗಳ ವಾಸ್ತವವನ್ನು ಒಪ್ಪಿಕೊಂಡರೆ ದೇಶದ್ರೋಹ , ಹೊಟ್ಟೆಕಿಚ್ಚು ಹೇಗಾಗುತ್ತದೆ ?
ಧರ್ಮಪಾಲರು ಸ್ವಾಮಿಗಳು ಬೌದ್ಧ ಧರ್ಮದ ಮೇಲೆ ಮಾಡಿದ ಟೀಕೆಗೆ ಅವರ ಘನತೆಗೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದರು. ಸ್ವಾಮಿಗಳಲ್ಲಿ ತಾವು ಬೋಧಿಸುವ ಅದ್ವೈತ ವೇದಾಂತ ಬಿಂಬಿಸುತ್ತಿರುವ ಹಿಂದೂ ಧರ್ಮವೇ ನಿಜವಾದುದು. ಬೇರೆಯವರಿಗೆ ತಮ್ಮಷ್ಟು ಗೊತ್ತಿಲ್ಲ ಎನ್ನುವ ಅಹಮಿಕೆ ತುಂಬಿದ್ದಿತು. ಬೌದ್ಧ ಧರ್ಮ ಭಾರತದಿಂದ ಮರೆಯಾಗಲು ಧಾರ್ಮಿಕ , ಸಾಮಾಜಿಕ , ರಾಜಕೀಯ , ನೈತಿಕ ಸೇರಿದಂತೆ ಹಲವಾರು ಕಾರಣಗಳಿದ್ದವು. ಸ್ವಾಮಿಗಳು ಹಾಡಿ ಹೊಗಳುತ್ತಿದ್ದ ಅದ್ವೈತ ವೇದಾಂತವನ್ನು ಭಾರತೀಯ ತತ್ತಜ್ಞಾನಿಗಳಲ್ಲಿ ಅನೇಕರು ಖಂಡಿಸಿದ್ದರು. ಸ್ವಾಮಿಗಳು ವೈದಿಕ ಧರ್ಮವನ್ನೇ ಪರಿಶುದ್ಧ ಹಿಂದೂಧರ್ಮ ಎಂದು ಭಾವಿಸಿದ್ದರು. ಇಂತಹ ಪರಿಶುದ್ಧ ಹಿಂದೂ ಧರ್ಮ ನಿಜವಾಗಿಯೂ ಅಷ್ಟೊಂದು ಶ್ರೇಷ್ಟವಾಗಿದ್ದರೆ ಬೌದ್ಧ ಧರ್ಮದ ಕಳಪೆ ಆಚರಣೆಗಳಿಂದ ಹೇಗೆ ಅವನತಿ ಹೊಂದಿತು ಎನ್ನುವ ಕಾರಣಗಳನ್ನು ವಿವರಿಸಬೇಕಾಗಿದ್ದಿತು. ಸ್ವಾಮಿಗಳು ಇಂತಹ ಯಾವುದೇ ವ್ಯವಸ್ಥಿತವಾದ ಪ್ರಯತ್ನವನ್ನೂ ಮಾಡಿರಲಿಲ್ಲ, ವಾದಸರಣಿಯನ್ನೂ ಮಂಡಿಸಿರಲಿಲ್ಲ. ಬೌದ್ಧ ಧರ್ಮವನ್ನು ವಿಮರ್ಶಿಸುವುದರಿಂದ ವಿಮುಖರಾಗಿ ಧರ್ಮಪಾಲರ ತಂದೆ , ತಾತಂದಿರು ಕ್ರೈಸ್ತರಾಗಿದ್ದರು ಎನ್ನುವ ಸೂಚನೆ ನೀಡಿ ಸಂವಾದವನ್ನು ವೈಯಕ್ತಿಕ ಮಟ್ಟಕ್ಕೆ ಇಳಿಸಿದರು.
ಇಡೀ ದೇಶವೇ ನನ್ನನ್ನು ಪ್ರಮಾಣ ಎಂದು ಒಪ್ಪಿದೆ ಎನ್ನುವುದು ಆತ್ಮಪ್ರಶಂಸೆಯ ಹೊರತು ವಾಸ್ತವವಲ್ಲ ಎಂದು ಸಮಕಾಲೀನ ಸಂಗತಿಗಳು ಸ್ಪಷ್ಟಪಡಿಸುತ್ತವೆ. ಭಾರತದಲ್ಲಿದ್ದ ಸನಾತನಿಗಳಾಗಲಿ , ತ್ರಿಮತಾಚಾರರ ಮಠಗಳಾಗಲಿ , ಮಠಾಧಿಪತಿಗಳಾಗಲಿ , ಹಿಂದೂ ಸಮಾಜ ಹೇಗಿರಬೇಕೆಂದು ಪರಂಪರಾನುಗತವಾಗಿ ನಿರ್ದೇಶಿಸುತ್ತಿದ್ದ ಪುರೋಹಿತ , ಅರ್ಚಕ . ಬ್ರಾಹ್ಮಣರಲ್ಲಿ ಯಾರೊಬ್ಬರೂ ಸ್ವಾಮಿಗಳನ್ನು ಹಿಂದೂ ಧರ್ಮದ ಪ್ರಮಾಣ ಪುರುಷ ಎಂದಾಗಲಿ ಅಧಿಕಾರವಾಣಿ ಎಂದಾಗಲಿ ಎಂದಗೂ ಭಾವಿಸಿರಲಿಲ್ಲ ಮತ್ತು ಅಮೆರಿಕದ ಅವರ ಸಾಧನೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಅಮೆರಿಕದಲ್ಲಿ ಹಿಂದೂ ಧರ್ಮ ಬಹಳ ಸಹನಶೀಲ, ಅದು ಯಾರನ್ನೂ ಹೊರಗೆ ಹಾಕುವುದಿಲ್ಲ, ಎಲ್ಲರನ್ನೂ ಒಳಗೊಳ್ಳುತ್ತದೆ, ಪ್ರತಿಯೊಂದು ಪಂಥವನ್ನೂ ಅಂತಿಮ ಗುರಿಯಡೆಗೆ ಸಾಗುತ್ತಿರುವ ವಿವಿಧ ಸ್ಥಿತಿಗಳೆಂದು ಭಾವಿಸುತ್ತದೆ ಎಂದು ಕೊಚ್ಚಿಕೊಂಡಿದ್ದರು. ಭಾರತಕ್ಕೆ ಬಂದ ತಕ್ಷಣ ನನಗೆ ಆರೋಗ್ಯ ಸರಿಯಿದ್ದರೆ ಈ ದುರಹಂಕಾರಿ ವಂಚಕರನ್ನೆಲ್ಲ ಭಾರತದಿಂದ ತೊಲಗಿಸುತ್ತಿದ್ದೆ ಅಥವಾ ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೆ ‘ ಎನ್ನುವುದು ಅದಕ್ಕೆ ತದ್ವಿರುದ್ಧ ನಡೆಯಾಗಿದೆ. ಮುಂದಿನ ದಿನಗಳಲ್ಲಿ ಥಿಯೊಸೊಫಿ ಜನಮನ್ನಣೆಯಿಲ್ಲದೆ ಭಾರತದಲ್ಲಿ ನೆಲೆ ಕಳೆದುಕೊಂಡಿತೇ ಹೊರತು ಸ್ವಾಮಿಗಳ ಕಾರ್ಯಾಚರಣೆಯ ಹೆದರಿಕೆಯಿಂದಲ್ಲ.
ಸ್ವಾಮಿಗಳ ಜೀವನ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ದುಷ್ಟ ಕೂಟಗಳಿಗೆ – ಕ್ರೈಸ್ತ ಪಾದ್ರಿಗಳು , ಬ್ರಾಹ್ಮ ಸಮಾಜಿಗಳು, ಥಿಯೊಸೊಫಿಸ್ಟರು-ಸೇರದ ಅದರೆ ಸ್ವಾಮಿಗಳ ಕೋಪಕ್ಕೆ ತುತ್ತಾದವರೆಂದರೆ ಡಾ. ಜಾನ್ ಎಚ್. ಬರೋಸ್. ತಾತ್ವಿಕ ಕಾರಣಗಳಿಂದ ಸ್ವಾಮಿಗಳಿಂದ ದೂರವಾದವರು ಧರ್ಮಪಾಲ. ಸ್ವಾಮಿಗಳು ಮತ್ತು ಅವರ ವಿರೋಧಿಗಳ ಎರಡು ಬಣಗಳ ದೃಷ್ಟಿಯನ್ನು ಪರಿಗಣಿಸಿದಾಗ ಬಹುತೇಕ ವೆಳೆ ಸ್ವಾಮಿಗಳ ಆರೋಪಗಳಲ್ಲಿ ಹುರುಳಿಲ್ಲದಿರುವುದು ಸ್ಪಷ್ಟವಾಗುತ್ತದೆ. ಸ್ವಾಮಿಗಳಿಗೆ ಬಂದ ವಿರೋಧಗಳಲ್ಲಿ ಅವರ ಜೀವನ ಶೈಲಿ ಮತ್ತು ಆತ್ಮವಿಮರ್ಶೆಯಿಲ್ಲದೆ ಇತರರ ಮೇಲೆ ಏರಿಹೋಗುತ್ತಿದ್ದ ಗುಣಗಳೇ ಕಾರಣ ಎಂದು ಗುರುತಿಸಬಹುದು.
Comment Box is loading comments...